ISRO Recruitment 2026: ಇಸ್ರೋದಲ್ಲಿ 460 ಅಪ್ರೆಂಟಿಸ್ ಹುದ್ದೆಗಳ ಭರ್ತಿ; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ! – Kannada News | VSSC ISRO Apprentice Recruitment 2026 27: 460 Vacancies, Walk in Interview for Engineers

Isro ಇಂಟರ್ನ್‌ಶಿಪ್‌ ಅವಕಾಶImage Credit source: Getty Images

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವ್ಯಾಪ್ತಿಗೆ ಒಳಪಡುವ ತಿರುವನಂತಪುರಂನ ಪ್ರತಿಷ್ಠಿತ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರವು (VSSC) ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸುವರ್ಣಾವಕಾಶವನ್ನು ನೀಡಿದೆ. 2026-27ನೇ ಸಾಲಿನ ಅಪ್ರೆಂಟಿಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಒಟ್ಟು 460 ಹುದ್ದೆಗಳನ್ನು ಈ ನೇಮಕಾತಿ ಅಡಿಯಲ್ಲಿ ಭರ್ತಿ ಮಾಡಲಾಗುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಆರಂಭಿಸಲು ಬಯಸುವ ಎಂಜಿನಿಯರಿಂಗ್, ಡಿಪ್ಲೊಮಾ ಹಾಗೂ ವಿವಿಧ ಪದವೀಧರರಿಗೆ ಇಸ್ರೋದಂತಹ ಹೆಮ್ಮೆಯ ಸಂಸ್ಥೆಯಲ್ಲಿ ತರಬೇತಿ ಪಡೆಯಲು ಇದು ಅತ್ಯುತ್ತಮ ವೇದಿಕೆಯಾಗಿದೆ.

ಯಾವುದೇ ಆನ್‌ಲೈನ್ ಅರ್ಜಿ ಇಲ್ಲ, ನೇರ ವಾಕ್-ಇನ್ ಸಂದರ್ಶನ:

ಈ ನೇಮಕಾತಿಯ ಅತ್ಯಂತ ಪ್ರಮುಖ ವಿಶೇಷತೆಯೆಂದರೆ, ಅಭ್ಯರ್ಥಿಗಳು ಯಾವುದೇ ಮುಂಗಡ ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ. ಬದಲಾಗಿ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನೇರವಾಗಿ ಜುಲೈ 25 ಶನಿವಾರದಂದು ನಡೆಯಲಿರುವ ವಾಕ್-ಇನ್ ಸಂದರ್ಶನದಲ್ಲಿ ಭಾಗವಹಿಸಬೇಕಾಗುತ್ತದೆ. ಅಂದು ಬೆಳಗ್ಗೆ 9:30 ರಿಂದ ಸಂಜೆ 5:00 ರವರೆಗೆ ಸಂದರ್ಶನ ಪ್ರಕ್ರಿಯೆಗಳು ನಡೆಯಲಿದ್ದು, ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳೊಂದಿಗೆ ನಿಗದಿತ ಸ್ಥಳದಲ್ಲಿ ಹಾಜರಿರಬೇಕಾಗುತ್ತದೆ. 1 ವರ್ಷದ ಅವಧಿಯ ಈ ತರಬೇತಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳು ಮತ್ತು ವಾಕ್-ಇನ್ ಸಂದರ್ಶನದ ಪ್ರದರ್ಶನದ ಆಧಾರದ ಮೇಲೆ ನೇರ ಆಯ್ಕೆ ಮಾಡಲಾಗುತ್ತದೆ.

ಇಲಾಖಾವಾರು ಹುದ್ದೆಗಳ ವಿವರ ಮತ್ತು ಮಾಸಿಕ ಸ್ಟೈಫಂಡ್:

ಪ್ರಸ್ತುತ ಬಿಡುಗಡೆಯಾಗಿರುವ ಅಧಿಸೂಚನೆಯ ಪ್ರಕಾರ, ಒಟ್ಟು 460 ಹುದ್ದೆಗಳಲ್ಲಿ ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳ ಸಂಖ್ಯೆ 273 ಆಗಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 12,300 ರೂ. ಸ್ಟೈಫಂಡ್ (ಭತ್ಯೆ) ನೀಡಲಾಗುತ್ತದೆ. ಇನ್ನುಳಿದ 187 ಹುದ್ದೆಗಳನ್ನು ಟೆಕ್ನಿಷಿಯನ್ ಅಪ್ರೆಂಟಿಸ್ ವಿಭಾಗದಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಇವರಿಗೆ ಮಾಸಿಕ 10,900ರೂ. ಸ್ಟೈಫಂಡ್ ಲಭ್ಯವಾಗಲಿದೆ. ಈ ತರಬೇತಿಯು ಅಭ್ಯರ್ಥಿಗಳ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸುವುದಲ್ಲದೆ, ಭವಿಷ್ಯದ ಉತ್ತಮ ಉದ್ಯೋಗಾವಕಾಶಗಳಿಗೆ ಭದ್ರ ಬುನಾದಿ ಹಾಕಿಕೊಡುತ್ತದೆ.

ಶೈಕ್ಷಣಿಕ ಅರ್ಹತೆ ಮತ್ತು ಅರ್ಹ ವಿಭಾಗಗಳು:

ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯಲ್ಲಿ ಬಿಇ (BE) ಅಥವಾ ಬಿ.ಟೆಕ್ (B.Tech) ಪದವಿ ಮುಗಿಸಿರಬೇಕು. ಹೋಟೆಲ್ ಮ್ಯಾನೇಜ್‌ಮೆಂಟ್ ಅಥವಾ ಕ್ಯಾಟರಿಂಗ್ ಟೆಕ್ನಾಲಜಿಯಲ್ಲಿ ಪ್ರಥಮ ದರ್ಜೆ ಪದವಿ ಪಡೆದವರೂ ಸಹ ಈ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ. ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಮಾನ್ಯತೆ ಪಡೆದ ತಾಂತ್ರಿಕ ಮಂಡಳಿಯಿಂದ ಎಂಜಿನಿಯರಿಂಗ್ ಡಿಪ್ಲೊಮಾ (Diploma) ಉತ್ತೀರ್ಣರಾಗಿರಬೇಕು. ಏರೋನಾಟಿಕಲ್/ಏರೋಸ್ಪೇಸ್ ಎಂಜಿನಿಯರಿಂಗ್, ಕೆಮಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಹಾಗೂ ಕಮರ್ಷಿಯಲ್ ಪ್ರಾಕ್ಟೀಸ್ ವಿಭಾಗದ ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉದ್ಯೋಗವಕಾಶ; 253 ಪಿಎಸ್‌ಐ ಹುದ್ದೆಗೆ ನೇರ ನೇಮಕಾತಿ!

ವಯೋಮಿತಿ ಮತ್ತು ಮೀಸಲಾತಿ ಸಡಿಲಿಕೆ:

ಜುಲೈ 31, 2026 ಕ್ಕೆ ಅನ್ವಯಿಸುವಂತೆ ಸಾಮಾನ್ಯ (UR) ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 28 ರಿಂದ ಗರಿಷ್ಠ 30 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ (ಹುದ್ದೆಗಳಿಗೆ ಅನುಗುಣವಾಗಿ ಮಾರ್ಪಾಡಾಗುತ್ತದೆ). ಆದರೆ, ಸರ್ಕಾರದ ನಿಯಮಾವಳಿಗಳ ಪ್ರಕಾರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (SC/ST) ಮತ್ತು ಇತರ ಹಿಂದುಳಿದ ವರ್ಗಗಳ (OBC) ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದ್ದು, ಮೀಸಲು ವರ್ಗದ ಅಭ್ಯರ್ಥಿಗಳು 28 ರಿಂದ 35 ವರ್ಷಗಳವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಂದರ್ಶನ ನಡೆಯುವ ಸ್ಥಳ ಮತ್ತು ಪ್ರಮುಖ ಸೂಚನೆ:

ವಾಕ್-ಇನ್ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಎಲ್ಲಾ ಮೂಲ ದಾಖಲೆಗಳು ಹಾಗೂ ಸ್ವಯಂ ದೃಢೀಕರಿಸಿದ (Self-Attested) ಜೆರಾಕ್ಸ್ ಪ್ರತಿಗಳೊಂದಿಗೆ ಕೇರಳದ ತಿರುವನಂತಪುರಂ ಜಿಲ್ಲೆಯ ಮಣಕಾಡುವಿನಲ್ಲಿರುವ “ಕಾರ್ತಿಕ ತಿರುನಾಳ್ ಸರ್ಕಾರಿ ವೃತ್ತಿಪರ ಮತ್ತು ಪ್ರೌಢಶಾಲೆ (KTCT GVHSS – ಬಾಲಕಿಯರ ಶಾಲೆ), VSSC ಪೆವಿಲಿಯನ್” ವಿಳಾಸಕ್ಕೆ ಜುಲೈ 25 ರಂದು ಹಾಜರಾಗಬೇಕು. ಸಂದರ್ಶನದ ಸ್ಥಳದಲ್ಲೇ ನಿಗದಿತ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಸ್ರೋ VSSC ಅಧಿಕೃತ ವೆಬ್‌ಸೈಟ್ ಆದ www.vssc.gov.in ಅನ್ನು ಪರಿಶೀಲಿಸಲು ಕೋರಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

Auto Tips: ಕಾರ್ ಸನ್‌ಶೇಡ್ ನಿಜವಾಗಿಯೂ ಕೆಲಸ ಮಾಡುತ್ತದೆಯೇ? – Kannada News | Car sunshade benefits does it really reduce car heat and protect interior

ಬೇಸಿಗೆಯಲ್ಲಿ ಕಾರನ್ನು (Car) ಕೆಲವೇ ಗಂಟೆಗಳ ಕಾಲ ಬಿಸಿಲಿನಲ್ಲಿ ನಿಲ್ಲಿಸಿದರೂ ಅದರೊಳಗೆ ಕುಳಿತುಕೊಳ್ಳುವುದು ಕಷ್ಟವಾಗುತ್ತದೆ. ಸ್ಟೀರಿಂಗ್, ಸೀಟ್‌ಗಳು ಮತ್ತು ಡ್ಯಾಶ್‌ಬೋರ್ಡ್ ಅತಿಯಾಗಿ ಬಿಸಿಯಾಗಿರುವುದರಿಂದ ಚಾಲನೆ ಆರಂಭಿಸುವ ಮುನ್ನವೇ ಎಸಿ ಆನ್ ಮಾಡಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಅನೇಕರು ಕಾರಿನ ಮುಂಭಾಗದ ಗಾಜಿಗೆ ಸನ್‌ಶೇಡ್ ಅಳವಡಿಸುತ್ತಾರೆ. ಆದರೆ ಇದು ಕೇವಲ ಬಿಸಿಲು ತಡೆಯುವ ಪರಿಕರವೋ ಅಥವಾ ನಿಜವಾಗಿಯೂ ಪರಿಣಾಮಕಾರಿಯೇ ಎಂಬ ಪ್ರಶ್ನೆ ಹಲವರಲ್ಲಿ ಇರುತ್ತದೆ. ತಜ್ಞರ ಪ್ರಕಾರ, ಉತ್ತಮ ಗುಣಮಟ್ಟದ ಸನ್‌ಶೇಡ್ ಅನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅದು ಕಾರಿನ ಒಳಗಿನ ಉಷ್ಣತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುವುದರ ಜೊತೆಗೆ ಕಾರಿನ ಒಳಾಂಗಣಕ್ಕೂ ಉತ್ತಮ ರಕ್ಷಣೆ ನೀಡುತ್ತದೆ.

ಸನ್‌ಶೇಡ್‌ನ ಮುಖ್ಯ ಕೆಲಸವೆಂದರೆ ಸೂರ್ಯನ ಕಿರಣಗಳನ್ನು ನೇರವಾಗಿ ಕಾರಿನೊಳಗೆ ಪ್ರವೇಶಿಸದಂತೆ ತಡೆಯುವುದು. ಸಾಮಾನ್ಯವಾಗಿ ಸನ್‌ಶೇಡ್‌ನ ಹೊರಭಾಗದಲ್ಲಿ ಪ್ರತಿಫಲಿತ (Reflective) ಪದರವಿರುತ್ತದೆ. ಇದು ಸೂರ್ಯನ ಶಾಖವನ್ನು ಪ್ರತಿಫಲಿಸಿ ಹೊರಕ್ಕೆ ತಳ್ಳುವುದರಿಂದ ಕಾರಿನ ಒಳಭಾಗ ಹೆಚ್ಚು ಬಿಸಿಯಾಗುವುದನ್ನು ತಡೆಯುತ್ತದೆ. ಇದರ ಪರಿಣಾಮವಾಗಿ ಸ್ಟೀರಿಂಗ್, ಡ್ಯಾಶ್‌ಬೋರ್ಡ್, ಸೀಟ್‌ಗಳು ಮತ್ತು ಇತರ ಪ್ಲಾಸ್ಟಿಕ್ ಭಾಗಗಳು ಅತಿಯಾದ ಉಷ್ಣತೆಗೆ ಒಳಗಾಗುವುದಿಲ್ಲ.

ವಿವಿಧ ಪರೀಕ್ಷೆಗಳ ಪ್ರಕಾರ, ಉತ್ತಮ ಸನ್‌ಶೇಡ್ ಬಳಸಿದರೆ ಕಾರಿನ ಒಳಗಿನ ತಾಪಮಾನವು ಸುಮಾರು 10ರಿಂದ 20 ಡಿಗ್ರಿ ಸೆಲ್ಸಿಯಸ್‌ವರೆಗೆ ಕಡಿಮೆಯಾಗಬಹುದು. ವಿಶೇಷವಾಗಿ ಡ್ಯಾಶ್‌ಬೋರ್ಡ್‌ನ ಮೇಲ್ಮೈ ಉಷ್ಣತೆಯನ್ನು ಗಣನೀಯವಾಗಿ ಇಳಿಸಲು ಇದು ಸಹಕಾರಿಯಾಗಿದೆ. ಇದರಿಂದ ಕಾರಿನ ಎಸಿ ಬೇಗನೆ ತಂಪು ಮಾಡುತ್ತದೆ ಮತ್ತು ವಾಹನವನ್ನು ಓಡಿಸಲು ಹೆಚ್ಚು ಆರಾಮದಾಯಕ ಅನುಭವ ಸಿಗುತ್ತದೆ.

ಸನ್‌ಶೇಡ್‌ನ ಮತ್ತೊಂದು ಪ್ರಮುಖ ಲಾಭವೆಂದರೆ ಅದು ಕಾರಿನ ಒಳಾಂಗಣವನ್ನು ದೀರ್ಘಕಾಲ ಸುರಕ್ಷಿತವಾಗಿರಿಸುತ್ತದೆ. ನಿರಂತರವಾಗಿ ಬಿಸಿಲಿಗೆ ಒಡ್ಡಿದರೆ ಡ್ಯಾಶ್‌ಬೋರ್ಡ್ ಬಣ್ಣ ಕಳೆದುಕೊಳ್ಳುವುದು, ಪ್ಲಾಸ್ಟಿಕ್ ಭಾಗಗಳಲ್ಲಿ ಬಿರುಕು ಕಾಣಿಸಿಕೊಳ್ಳುವುದು ಮತ್ತು ಸೀಟ್‌ಗಳ ಗುಣಮಟ್ಟ ಕುಸಿಯುವ ಸಾಧ್ಯತೆ ಇರುತ್ತದೆ. ಸನ್‌ಶೇಡ್ ಬಳಸುವುದರಿಂದ ಇಂತಹ ಹಾನಿಯನ್ನು ಬಹುತೇಕ ಕಡಿಮೆ ಮಾಡಬಹುದು. ಜೊತೆಗೆ ಕಾರಿನ ಒಳಗೆ ಇರಿಸುವ ಮೊಬೈಲ್ ಹೋಲ್ಡರ್, ಸುಗಂಧ ದ್ರವ್ಯ, ಪ್ಲಾಸ್ಟಿಕ್ ವಸ್ತುಗಳು ಹಾಗೂ ಇತರ ಪರಿಕರಗಳೂ ಅತಿಯಾದ ಬಿಸಿಯಿಂದ ರಕ್ಷಣೆ ಪಡೆಯುತ್ತವೆ.

Auto Tips: ಆನ್‌ಲೈನ್‌ನಲ್ಲಿ ಹೆಲ್ಮೆಟ್ ಖರೀದಿಸುತ್ತಿದ್ದೀರಾ? ಈ 5 ವಿಷಯಗಳನ್ನು ಕಡ್ಡಾಯವಾಗಿ ಪರಿಶೀಲಿಸಿ

ಬೇಸಿಗೆಯಲ್ಲಿ ಸನ್‌ಶೇಡ್ ಬಳಸುವಾಗ ಒಂದು ವಿಷಯವನ್ನು ತಪ್ಪದೇ ಗಮನಿಸಬೇಕು. ಅದರ ಹೊಳೆಯುವ ಅಥವಾ ಬೆಳ್ಳಿ ಬಣ್ಣದ ಭಾಗವು ಹೊರಭಾಗದತ್ತ, ಅಂದರೆ ಸೂರ್ಯನತ್ತ ಮುಖ ಮಾಡಿರಬೇಕು. ಇದರಿಂದ ಸೂರ್ಯನ ಕಿರಣಗಳು ನೇರವಾಗಿ ಪ್ರತಿಫಲಿಸುತ್ತವೆ. ಅಲ್ಲದೆ ಸನ್‌ಶೇಡ್ ಸಂಪೂರ್ಣವಾಗಿ ಮುಂಭಾಗದ ಗಾಜನ್ನು ಮುಚ್ಚುವಂತೆ ಅಳವಡಿಸಿ, ಕಾರಿನ ಸನ್‌ವೈಸರ್ ಸಹಾಯದಿಂದ ಅದನ್ನು ಸ್ಥಿರವಾಗಿ ಹಿಡಿದಿಡುವುದು ಉತ್ತಮ.

ಹೆಚ್ಚಿನವರಿಗೆ ತಿಳಿದಿರದ ಮತ್ತೊಂದು ಸಂಗತಿಯೆಂದರೆ, ಕೆಲವು ಡಬಲ್-ಸೈಡ್ ಸನ್‌ಶೇಡ್‌ಗಳನ್ನು ಚಳಿಗಾಲದಲ್ಲೂ ಬಳಸಬಹುದು. ಈ ವೇಳೆ ಸನ್‌ಶೇಡ್ ಅನ್ನು ತಿರುಗಿಸಿ ಅಳವಡಿಸಿದರೆ ಕಾರಿನೊಳಗಿನ ಉಷ್ಣತೆ ಹೆಚ್ಚು ಸಮಯ ಉಳಿಯಲು ಸಹಾಯವಾಗುತ್ತದೆ. ಹೀಗಾಗಿ ಚಳಿಯ ವಾತಾವರಣದಲ್ಲೂ ಕಾರಿನ ಒಳಭಾಗ ಬೇಗ ತಂಪಾಗುವುದನ್ನು ತಪ್ಪಿಸಬಹುದು.

ಸನ್‌ಶೇಡ್ ಖರೀದಿಸುವಾಗ ನಿಮ್ಮ ಕಾರಿನ ಮಾದರಿಗೆ ಸರಿಯಾಗಿ ಹೊಂದುವ ಗಾತ್ರವನ್ನು ಆಯ್ಕೆ ಮಾಡುವುದು ಮುಖ್ಯ. ಉತ್ತಮ ಗುಣಮಟ್ಟದ ಪ್ರತಿಫಲಿತ ಪದರ ಹೊಂದಿರುವ ಸನ್‌ಶೇಡ್ ಹೆಚ್ಚು ಪರಿಣಾಮಕಾರಿ. ಸಾಧ್ಯವಾದರೆ ಕಾರನ್ನು ನೆರಳಿನಲ್ಲೇ ನಿಲ್ಲಿಸುವ ಅಭ್ಯಾಸ ಬೆಳೆಸಿದರೆ ಅದರ ಪ್ರಯೋಜನ ಇನ್ನಷ್ಟು ಹೆಚ್ಚಾಗುತ್ತದೆ.

ಒಟ್ಟಾರೆ, ಕಾರ್ ಸನ್‌ಶೇಡ್ ಕೇವಲ ಒಂದು ಸಾಮಾನ್ಯ ಆಕ್ಸೆಸರಿ ಅಲ್ಲ. ಕಡಿಮೆ ವೆಚ್ಚದಲ್ಲಿ ಕಾರಿನ ಒಳಗಿನ ತಾಪಮಾನವನ್ನು ನಿಯಂತ್ರಿಸಲು, ಒಳಾಂಗಣವನ್ನು ಬಿಸಿಲಿನ ಹಾನಿಯಿಂದ ರಕ್ಷಿಸಲು ಮತ್ತು ಬೇಸಿಗೆಯಲ್ಲಿ ಆರಾಮದಾಯಕ ಚಾಲನಾ ಅನುಭವ ಪಡೆಯಲು ಇದು ಅತ್ಯಂತ ಉಪಯುಕ್ತ ಸಾಧನವಾಗಿದೆ. ಸರಿಯಾದ ರೀತಿಯಲ್ಲಿ ಬಳಸಿದರೆ ಬೇಸಿಗೆಯಲ್ಲಷ್ಟೇ ಅಲ್ಲ, ಚಳಿಗಾಲದಲ್ಲೂ ಇದರ ಲಾಭವನ್ನು ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 3:39 pm, Sun, 19 July 26

Source link

ದೇವೇಗೌಡ ಪತ್ನಿ ಚೆನ್ನಮ್ಮ ನಿಧನ: ಎರಡು ದಿನ ಮದ್ಯ ಮಾರಾಟ ನಿಷೇಧ – Kannada News | Liquor sale banned across hassan district On July 20 And 21 Over HD Devegowda Wife chennamma funeral

ಹಾಸನ, (ಜುಲೈ 19): ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ (Chennamma Deve Gowda) ಅವರ ಅಂತ್ಯಕ್ರಿಯೆ ನಾಳೆ (ಜುಲೈ 20) ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದ ಸಮೀಪವಿರುವ ಕ್ಯಾತನಹಳ್ಳಿ ಗ್ರಾಮದ ಜಮೀನಿನಲ್ಲಿ ನಡೆಯಲಿದೆ. ಸಕಲ ಗೌರವಗೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ಈಗಾಗಲೇ ಹಾಸನ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇನ್ನು ಈ ಬಗ್ಗೆ ಹಾಸನ ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ ,ಸೋಮವಾರ ಮಧ್ಯಾಹ್ನ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದ ಸಮೀಪವಿರುವ ಕ್ಯಾತನಹಳ್ಳಿ ಗ್ರಾಮದ ಜಮೀನಿನಲ್ಲಿ ಚೆನ್ನಮ್ಮ ಅಂತ್ಯಕ್ರಿಯೆ ನಡೆಯಲಿದ್ದು, ಜನ ಹೆಚ್ಚು ಸೇರುವ ನಿರೀಕ್ಷೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಇಂದು (ಜುಲೈ 19) ಹಾಗೂ ಸೋಮವಾರ (ಜುಲೈ 20) ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಗಣ್ಯಾತಿ ಗಣ್ಯರು ಭಾಗಿ ಹಿನ್ನೆಲೆಯಲ್ಲಿ 5 ಹೆಲಿಪ್ಯಾಡ್‌ ನಿರ್ಮಿಸಲಾಗಿದೆ. ಹರದನಹಳ್ಳಿಯಲ್ಲಿ 2, ಹೊಳೆನರಸೀಪುರದಲ್ಲಿ 3 ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಇನ್ನು ಸಿಎಂ ಡಿ.ಕೆ.ಶಿವಕುಮಾರ್‌ ನಾಳೆ ಮಧ್ಯಾಹ್ನ 3 ಗಂಟೆಗೆ ಆಗಮಿಸುತ್ತಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪತ್ನಿಯ ಪಾರ್ಥಿವ ಶರೀರವನ್ನ ಮನೆಯಿಂದ ಕೊಂಡೊಯ್ಯುವಾಗ ಬಿಕ್ಕಿ ಬಿಕ್ಕಿ ಅತ್ತ ದೇವೇಗೌಡ್ರು – Kannada News | H.D. Deve Gowda Grieves as Wife Chennamma Embarks on Final Journey

ಬೆಂಗಳೂರು, ಜುಲೈ 19: ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಮನೆಯಿಂದ ಅಂತಿಮ ಯಾತ್ರೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ಹೆಚ್​.ಡಿ. ದೇವೇಗೌಡರು ತೀವ್ರವಾಗಿ ಭಾವುಕರಾದರು. ಪತ್ನಿ ಅಗಲಿಕೆಯ ನೋವು ತಾಳಲಾರದೆ ಅವರು ಬಿಕ್ಕಿ ಬಿಕ್ಕಿ ಅತ್ತ ದೃಶ್ಯಗಳು ಎಲ್ಲರ ಮನಸ್ಸನ್ನು ಕಲಕಿದವು. ಶೈತ್ಯಾಗಾರ ಪೆಟ್ಟಿಗೆಯ ಮೇಲೆ ಕೈಯಿಟ್ಟು ಕಣ್ಣೀರಿಟ್ಟ ದೇವೇಗೌಡರು, ತಮ್ಮ ಜೀವನ ಸಂಗಾತಿಯನ್ನು ಕಳೆದುಕೊಂಡ ದುಃಖವನ್ನು ವ್ಯಕ್ತಪಡಿಸಿದರು. ಅವರ ಪುತ್ರಿ ಹಾಗೂ ಇತರ ಕುಟುಂಬ ಸದಸ್ಯರು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.

ಈ ನೋವಿನ ಸಂದರ್ಭದಲ್ಲಿ, ಮಾಜಿ ಪ್ರಧಾನಮಂತ್ರಿಯವರ ಪತ್ನಿಯ ನಿಧನಕ್ಕೆ ಅನೇಕ ಗಣ್ಯರು ಮತ್ತು ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ. ಚೆನ್ನಮ್ಮ ಅವರ ಅಂತಿಮ ಯಾತ್ರೆಯು ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಬೆಂಬಲಿಗರ ಸಮ್ಮುಖದಲ್ಲಿ ನಡೆಯಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿಎಂಸಿ ಬಂಡಾಯ ಸಂಸದರಿಗೂ ಆಹ್ವಾನ ವಿರೋಧಿಸಿ ಸರ್ವಪಕ್ಷ ಸಭೆಯಿಂದ ಹೊರನಡೆದ ವಿರೋಧ ಪಕ್ಷಗಳು – Kannada News | Opposition walks out of All Party Meet Over Invite To TMC Rebels to Meeting

ನವದೆಹಲಿ, ಜುಲೈ 19: ಸಂಸತ್ತಿನ ಮುಂಗಾರು ಅಧಿವೇಶನದ (Parliament Monsoon Session) ಮುನ್ನಾದಿನವಾದ ಇಂದು (ಭಾನುವಾರ) ಆಯೋಜಿಸಲಾಗಿದ್ದ ಸರ್ವಪಕ್ಷ ಸಭೆಯಿಂದ ವಿರೋಧ ಪಕ್ಷಗಳ ನಾಯಕರು ವಾಕ್‌ಔಟ್ ನಡೆಸಿದರು. ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಹಲವು ಬಂಡಾಯ ಸಂಸದರನ್ನು ಒಳಗೊಂಡ ಹೊಸದಾಗಿ ರೂಪುಗೊಂಡಿರುವ ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (NCPI) ಪಕ್ಷವು ಸಭೆಯಲ್ಲಿ ಭಾಗವಹಿಸುವುದನ್ನು ವಿರೋಧಿಸಿ ಈ ಪ್ರತಿಭಟನೆ ನಡೆಸಲಾಯಿತು. ಆದರೆ, ಕೆಲವೇ ನಿಮಿಷಗಳಲ್ಲಿ ಪ್ರತಿಪಕ್ಷಗಳ ಸಂಸದರು ಸಭೆಗೆ ಮರಳಿದರು.

ಕಳೆದ ತಿಂಗಳು ಸುಮಾರು 20 ಬಂಡಾಯ ಟಿಎಂಸಿ ಸಂಸದರು ಎನ್‌ಸಿಪಿಐ (NCPI) ಪಕ್ಷದೊಂದಿಗೆ ವಿಲೀನಗೊಂಡಿದ್ದರು. ಆದರೆ ಈ ವಿಲೀನಕ್ಕೆ ಇನ್ನೂ ಅಧಿಕೃತವಾಗಿ ಅನುಮೋದನೆ ಸಿಗದ ಕಾರಣ, ಆ ಪಕ್ಷವನ್ನು ಸಭೆಗೆ ಸೇರಿಸಿಕೊಂಡಿರುವುದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು. ಸಂಸತ್ತಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ 20 ಬಂಡಾಯ ಸಂಸದರನ್ನು ಇಂದಿಗೂ ತೃಣಮೂಲ ಕಾಂಗ್ರೆಸ್‌ನ ಸದಸ್ಯರು ಎಂದೇ ತೋರಿಸಲಾಗುತ್ತಿದೆ. ಹೀಗಾಗಿ ವಿರೋಧ ಪಕ್ಷಗಳ ಈ ವಾಕ್‌ಔಟ್ ಕೇವಲ ಸಾಂಕೇತಿಕ ಪ್ರತಿಭಟನೆಯಾಗಿತ್ತು.

ಇದನ್ನೂ ಓದಿ: Parliament Monsoon Session: ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ

ಟಿಎಂಸಿ ನಾಯಕರ ಆಕ್ಷೇಪ:

ಈ ವೇಳೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮಾತನಾಡಿ, “ಸಂಸತ್ತಿನಲ್ಲಿ ತೃಣಮೂಲ ಕಾಂಗ್ರೆಸ್‌ನ ಬಲ ಇನ್ನೂ 28 ಎಂದೇ ತೋರಿಸುತ್ತಿದೆ. ಹೀಗಿರುವಾಗ ಯಾವ ಆಧಾರದ ಮೇಲೆ ಸಂಸದೀಯ ವ್ಯವಹಾರಗಳ ಸಚಿವರು ಬಂಡಾಯಗಾರರ ಪಕ್ಷವನ್ನು ಸರ್ವಪಕ್ಷ ಸಭೆಗೆ ಆಹ್ವಾನಿಸಿದ್ದಾರೆ?” ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಬಂಗಾಳದಲ್ಲಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಕಚೇರಿ ನೆಲಸಮ

ಬಂಡಾಯ ನಾಯಕರ ಸ್ಪಷ್ಟನೆ:

ಇದೇ ವೇಳೆ, ಎನ್‌ಸಿಪಿಐ (ಬಂಡಾಯ ಬಣ) ಬಣದ ನಾಯಕಿಯಾಗಿರುವ ಕಾಕೊಲಿ ಘೋಷ್ ದಸ್ತಿದಾರ್ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕಾಗಿ ಸಂಸದೀಯ ವ್ಯವಹಾರಗಳ ಸಚಿವರಿಗೆ ಧನ್ಯವಾದ ಅರ್ಪಿಸಿದರು. ಟಿಎಂಸಿ ಬಂಡಾಯ ಸಂಸದ ಸುದೀಪ್ ಬಂದೋಪಾಧ್ಯಾಯ ಮಾತನಾಡಿ, “20 ಸಂಸದರನ್ನು ಹೊಂದಿರುವ ನಮ್ಮ ಹೊಸ ಪಕ್ಷವನ್ನು ಆಹ್ವಾನಿಸಲಾಗಿತ್ತು. ನಾವು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದೇವೆ. ಸದನವು ವಿರೋಧ ಪಕ್ಷಗಳಿಗೂ ಸೇರಿದ್ದು ಎಂಬುದನ್ನು ಒಪ್ಪಿಕೊಳ್ಳಬೇಕು. ಸದನ ಸುಗಮವಾಗಿ ನಡೆಯಲು ಸರ್ಕಾರವೇ ಜವಾಬ್ದಾರಿ ಹೊರಬೇಕು. ನಮ್ಮ ಪಕ್ಷವು ಜಾತ್ಯತೀತತೆ, ಕೋಮು ಸೌಹಾರ್ದತೆ ಮತ್ತು ರಾಷ್ಟ್ರೀಯ ಐಕ್ಯತೆಗೆ ಬದ್ಧವಾಗಿದೆ. ನಮ್ಮ ಪಕ್ಷದ 20 ಸಂಸದರಲ್ಲಿ ಮೂವರು ಮುಸ್ಲಿಂ ಸಂಸದರಿದ್ದಾರೆ” ಎಂದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ:

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯ ಮುನ್ನ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಮುಂಗಾರು ಅಧಿವೇಶನವನ್ನು ಸುಗಮವಾಗಿ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಿದರು. “ಸಂಸತ್ತಿನ ಮುಂಗಾರು ಅಧಿವೇಶನ ನಾಳೆಯಿಂದ ಆರಂಭವಾಗುತ್ತಿದ್ದು, ಇಂದು ಎಲ್ಲಾ ಪಕ್ಷಗಳ ನಾಯಕರ ಸಭೆ ಕರೆಯಲಾಗಿದೆ. ಸಂಸತ್ತು ಎಲ್ಲರಿಗೂ ಸೇರಿದ್ದಾಗಿದ್ದು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಒಟ್ಟಾಗಿ ಶಾಸಕಾಂಗ ವ್ಯವಹಾರಗಳನ್ನು ಸುಗಮವಾಗಿ ನಡೆಸಲು ಸಹಕರಿಸುವ ನಿರೀಕ್ಷೆಯಿದೆ. ಸಂಸತ್ತು ಎಷ್ಟು ಚೆನ್ನಾಗಿ ಕಾರ್ಯನಿರ್ವಹಿಸುತ್ತದೆಯೋ, ದೇಶಕ್ಕೆ ಅಷ್ಟೇ ಹೆಚ್ವು ಪ್ರಯೋಜನವಾಗುತ್ತದೆ. ನಾವು ವಿರೋಧ ಪಕ್ಷಗಳ ಮಾತುಗಳನ್ನು ಕೇಳುತ್ತೇವೆ, ಅವರು ಕೂಡ ನಮ್ಮ ಮಾತನ್ನು ಕೇಳುತ್ತಾರೆ ಎಂಬ ಭರವಸೆ ನಮಗಿದೆ” ಎಂದು ಕಿರಣ್ ರಿಜಿಜು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ENG: 3 ಪಂದ್ಯಗಳಲ್ಲೂ ಟಾಸ್ ಸೋತ ಗಿಲ್; ಭಾರತ ತಂಡದಲ್ಲಿ 3 ಬದಲಾವಣೆ – Kannada News | IND vs ENG 3rd ODI: Lords Series Decider Preview, Playing XI and India’s 22 Year Wait

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಪ್ರಸ್ತುತ 1-1 ರಲ್ಲಿ ಸಮಬಲಗೊಂಡಿದೆ. ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಏತನ್ಮಧ್ಯೆ, ಕಾರ್ಡಿಫ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ 4 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಸರಣಿಯನ್ನು ಜೀವಂತವಾಗಿರಿಸಿತು. ಇದೀಗ ಲಾರ್ಡ್ಸ್‌ನಲ್ಲಿ ಉಭಯ ತಂಡಗಳ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಸರಣಿ ಕೈಸೇರಲಿದೆ. ಈಗಾಗಲೇ ಟಿ20 ಸರಣಿ ಸೋತಿರುವ ಟೀಂ ಇಂಡಿಯಾ ಏಕದಿನ ಸರಣಿ ಗೆಲುವಿನೊಂದಿಗೆ ಈ ಪ್ರವಾಸಕ್ಕೆ ಅಂತ್ಯ ಹಾಡಲು ನೋಡುತ್ತಿದೆ.

ಟಾಸ್ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್‌ ಆಯ್ಕೆ

ಈ ಸರಣಿ ನಿರ್ಧಾರಕ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್‌ ಮೊದಲು ಬ್ಯಾಟಿಂಗ್‌ ಮಾಡುತ್ತಿದೆ. ಇದರ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಇಂಗ್ಲೆಂಡ್‌ ತಂಡದಲ್ಲಿ 1 ಬದಲಾವಣೆಯಾಗಿದ್ದರೆ, ಟೀಂ ಇಂಡಿಯಾದಲ್ಲಿ ಮೂರು ಬದಲಾವಣೆಗಳಾಗಿವೆ. ಜಸ್ಪ್ರೀತ್ ಬುಮ್ರಾ ಗಾಯದ ಕಾರಣದಿಂದಾಗಿ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಹಾಗೆಯೇ ವಾಷಿಂಗ್ಟನ್ ಸುಂದರ್ ಕೂಡ ಈ ಮೊದಲೇ ಗಾಯಗೊಂಡು ಪಂದ್ಯದಿಂದ ಹೊರಬಿದ್ದಿದ್ದರು. ಇವರಿಬ್ಬರ ಜೊತೆಗೆ ಶಿವಂ ದುಬೆ ಅವರನ್ನು ಈ ಪಂದ್ಯದಿಂದ ಕೈಬಿಡಲಾಗಿದೆ. ಈ ಮೂವರ ಬದಲಿಗೆ ಕೆಎಲ್ ರಾಹುಲ್, ಪ್ರಿನ್ಸ್ ಯಾದವ್ ಹಾಗೂ ಅರ್ಷದೀಪ್ ಸಿಂಗ್​ರನ್ನು ಆಡಿಸಲಾಗುತ್ತಿದೆ.

22 ವರ್ಷಗಳಿಂದ ಗೆಲುವಿನ ಬರ

ವಾಸ್ತವವಾಗಿ ಟೀಂ ಇಂಡಿಯಾಗೆ ಲಾರ್ಡ್ಸ್ ಮೈದಾನವು 1983 ರ ವಿಶ್ವಕಪ್ ಪ್ರಶಸ್ತಿ ಗೆಲುವು ಮತ್ತು 2002 ರ ನ್ಯಾಟ್‌ವೆಸ್ಟ್ ಟ್ರೋಫಿ ಫೈನಲ್‌ನಂತಹ ಸ್ಮರಣೀಯ ನೆನಪುಗಳಿಗೆ ಹೆಸರುವಾಸಿಯಾಗಿದೆ. ಆದರೆ ಕಟು ವಾಸ್ತವವೆಂದರೆ 2004 ರಿಂದ ಟೀಂ ಇಂಡಿಯಾ ಈ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಒಂದೇ ಒಂದು ಏಕದಿನ ಪಂದ್ಯವನ್ನು ಗೆದ್ದಿಲ್ಲ. ಲಾರ್ಡ್ಸ್‌ನಲ್ಲಿ ಭಾರತದ ಕೊನೆಯ ಏಕದಿನ ಗೆಲುವು ಸೆಪ್ಟೆಂಬರ್ 5, 2004 ರಂದು ಬಂದಿತು, ಆ ಪಂದ್ಯದಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ತಂಡವು ಇಂಗ್ಲೆಂಡ್ ತಂಡವನ್ನು 23 ರನ್‌ಗಳಿಂದ ಸೋಲಿಸಿತು. ಆ ಐತಿಹಾಸಿಕ ವಿಜಯದ ನಂತರ ಈಗ ಪೂರ್ಣ 22 ವರ್ಷಗಳು ಕಳೆದಿವೆ, ಆದರೆ ಟೀಂ ಇಂಡಿಯಾ ಇನ್ನೂ ಇಲ್ಲಿ ವಿಜಯವನ್ನು ಸವಿದಿಲ್ಲ.

ಉಭಯ ತಂಡಗಳ ಪ್ಲೇಯಿಂಗ್ 11

ಭಾರತ ತಂಡ: ಶುಭ್​ಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್.

ಇಂಗ್ಲೆಂಡ್‌ ತಂಡ: ಜಾಕೋಬ್ ಬೆಥೆಲ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜೋಶ್ ಟಂಗ್, ಆದಿಲ್ ರಶೀದ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Life Style: ನಿಮ್ಮ ಚಿನ್ನದ ಆಭರಣಗಳು ಕಪ್ಪಾಗಿವೆಯೇ?, ನಿಮಿಷಗಳಲ್ಲಿ ಹೊಳೆಯುವಂತೆ ಮಾಡಲು ಇಲ್ಲಿದೆ ಟಿಪ್ಸ್ – Kannada News | How to clean gold jewellery at home Here is the easy method tips

ಚಿನ್ನದ (Gold) ಆಭರಣಗಳು ಪ್ರತಿಯೊಬ್ಬರಿಗೂ ಅಮೂಲ್ಯವಾದ ಆಸ್ತಿ. ಮದುವೆ, ಹಬ್ಬ ಅಥವಾ ವಿಶೇಷ ಕಾರ್ಯಕ್ರಮಗಳಲ್ಲಿ ಧರಿಸುವ ಈ ಆಭರಣಗಳು ಪ್ರತಿದಿನದ ಬಳಕೆಯಿಂದ ನಿಧಾನವಾಗಿ ತಮ್ಮ ಹೊಳಪನ್ನು ಕಳೆದುಕೊಳ್ಳುತ್ತವೆ. ಬೆವರು, ಧೂಳು, ಮೇಕಪ್ ಉತ್ಪನ್ನಗಳು ಮತ್ತು ಪರಿಸರದ ಕಸ ಆಭರಣದ ಮೇಲೆ ಅಂಟಿಕೊಂಡು ಅದರ ಕಾಂತಿಯನ್ನು ಕಡಿಮೆ ಮಾಡಬಹುದು. ಆದರೆ ಇದಕ್ಕಾಗಿ ಪ್ರತಿ ಬಾರಿ ಜ್ಯುವೆಲ್ಲರ್ ಬಳಿ ಹೋಗಬೇಕೆಂದಿಲ್ಲ. ಮನೆಯಲ್ಲೇ ಸುಲಭವಾಗಿ ಸಿಗುವ ಕೆಲವು ವಸ್ತುಗಳ ಸಹಾಯದಿಂದ ಚಿನ್ನದ ಆಭರಣಗಳನ್ನು ಸುರಕ್ಷಿತವಾಗಿ ಸ್ವಚ್ಛಗೊಳಿಸಿ ಮತ್ತೆ ಹೊಸದಿನಂತೆ ಹೊಳೆಯುವಂತೆ ಮಾಡಬಹುದು.

ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸಲು ಅತ್ಯಂತ ಸುರಕ್ಷಿತ ವಿಧಾನವೆಂದರೆ ಉಗುರುಬೆಚ್ಚಗಿನ ನೀರು ಮತ್ತು ಮೃದುವಾದ ಲಿಕ್ವಿಡ್ ಸೋಪ್ ಬಳಸುವುದು. ಒಂದು ಪಾತ್ರೆಯಲ್ಲಿ ಉಗುರುಬೆಚ್ಚಗಿನ ನೀರಿಗೆ ಕೆಲವು ಹನಿಗಳಷ್ಟು ಲಿಕ್ವಿಡ್ ಸೋಪ್ ಸೇರಿಸಿ, ಆಭರಣಗಳನ್ನು ಸುಮಾರು 15 ರಿಂದ 20 ನಿಮಿಷಗಳ ಕಾಲ ಅದರಲ್ಲಿ ನೆನೆಸಿಡಿ. ನಂತರ ಮೃದುವಾದ ಟೂತ್‌ಬ್ರಶ್‌ನಿಂದ ನಿಧಾನವಾಗಿ ಉಜ್ಜಿ, ಶುದ್ಧ ನೀರಿನಲ್ಲಿ ತೊಳೆದು ಮೃದುವಾದ ಬಟ್ಟೆಯಿಂದ ಒರೆಸಿದರೆ ಆಭರಣದ ಮೇಲಿನ ಕೊಳೆ ದೂರವಾಗಿ ಹೊಳಪು ಮರಳುತ್ತದೆ.

ಆಭರಣದ ಮೇಲೆ ಸ್ವಲ್ಪ ಹೆಚ್ಚು ಕಲೆ ಅಥವಾ ಕೊಳೆ ಇದ್ದರೆ ಬೇಕಿಂಗ್ ಸೋಡಾವನ್ನು ಬಳಸಬಹುದು. ಒಂದು ಚಮಚ ಬೇಕಿಂಗ್ ಸೋಡಾಕ್ಕೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ತಯಾರಿಸಿ, ಅದನ್ನು ಆಭರಣದ ಮೇಲೆ ನಿಧಾನವಾಗಿ ಹಚ್ಚಿ ಎರಡು-ಮೂರು ನಿಮಿಷಗಳ ನಂತರ ತೊಳೆದು ಒಣಗಿಸಬಹುದು. ಆದರೆ ಈ ವಿಧಾನವನ್ನು ಮುತ್ತು, ಪಚ್ಚೆ, ಓಪಲ್ ಅಥವಾ ಇತರ ಅಮೂಲ್ಯ ಕಲ್ಲುಗಳಿರುವ ಆಭರಣಗಳಿಗೆ ಬಳಸಬಾರದು. ಏಕೆಂದರೆ ಇದರಿಂದ ರತ್ನಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.

ಕೆಲವು ಸಂದರ್ಭಗಳಲ್ಲಿ ನಾನ್-ಜೆಲ್ ಟೂತ್‌ಪೇಸ್ಟ್ ಕೂಡ ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸಲು ಸಹಕಾರಿ. ಅಲ್ಪ ಪ್ರಮಾಣದ ಟೂತ್‌ಪೇಸ್ಟ್ ಹಚ್ಚಿ ಮೃದುವಾದ ಬ್ರಶ್‌ನಿಂದ ನಿಧಾನವಾಗಿ ಸ್ವಚ್ಛಗೊಳಿಸಿ ನಂತರ ನೀರಿನಲ್ಲಿ ತೊಳೆದು ಒಣ ಬಟ್ಟೆಯಿಂದ ಒರೆಸಿದರೆ ಸಣ್ಣ ಕಲೆಗಳು ಮಾಯವಾಗುತ್ತವೆ. ಆದರೆ ಹೆಚ್ಚು ಒತ್ತಡದಿಂದ ಉಜ್ಜುವುದನ್ನು ತಪ್ಪಿಸಬೇಕು.

Hair Wash During Periods: ಪಿರಿಯಡ್ಸ್ ಸಮಯದಲ್ಲಿ ತಲೆಸ್ನಾನ ಮಾಡಿದರೆ ರಕ್ತಸ್ರಾವ ಹೆಚ್ಚಾಗುತ್ತದೆಯೇ?

ತುಂಬಾ ಹಳೆಯದಾಗಿರುವ ಅಥವಾ ಗಟ್ಟಿಯಾದ ಕಲೆ ಹಿಡಿದಿರುವ ಚಿನ್ನದ ಆಭರಣಗಳಿಗೆ ಅಮೋನಿಯಾ ದ್ರಾವಣವನ್ನು ಕೆಲವೊಮ್ಮೆ ಮಾತ್ರ ಬಳಸಬಹುದು. ಒಂದು ಭಾಗ ಅಮೋನಿಯಾಕ್ಕೆ ಆರು ಭಾಗ ನೀರು ಸೇರಿಸಿ ದ್ರಾವಣ ತಯಾರಿಸಿ, ಆಭರಣವನ್ನು ಅದರಲ್ಲಿ ಒಂದು ನಿಮಿಷಕ್ಕಿಂತ ಹೆಚ್ಚು ಸಮಯ ಇಡಬಾರದು. ಬಳಿಕ ತಕ್ಷಣ ಶುದ್ಧ ನೀರಿನಲ್ಲಿ ತೊಳೆದು ಒಣಗಿಸಬೇಕು. ಈ ವಿಧಾನವನ್ನು ಆಗಾಗ ಬಳಸುವುದರಿಂದ ಆಭರಣದ ಫಿನಿಷ್ ಹಾಳಾಗುವ ಸಾಧ್ಯತೆ ಇರುವುದರಿಂದ ಅಗತ್ಯವಿದ್ದಾಗ ಮಾತ್ರ ಬಳಸುವುದು ಉತ್ತಮ.

ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ಮುಖ್ಯ. ಗಟ್ಟಿಯಾದ ಬ್ರಶ್ ಅಥವಾ ಸ್ಕ್ರಬ್ಬರ್ ಬಳಸಬಾರದು. ಬ್ಲೀಚ್, ಆಮ್ಲ ಅಥವಾ ತೀವ್ರ ರಾಸಾಯನಿಕ ಕ್ಲೀನರ್‌ಗಳನ್ನು ಬಳಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ವಜ್ರ ಅಥವಾ ಇತರ ಅಮೂಲ್ಯ ಕಲ್ಲುಗಳಿರುವ ಆಭರಣಗಳಿಗೆ ಮನೆಮದ್ದು ಪ್ರಯೋಗಿಸುವ ಮೊದಲು ಜ್ಯುವೆಲ್ಲರ್ ಸಲಹೆ ಪಡೆಯುವುದು ಉತ್ತಮ. ಸ್ವಚ್ಛಗೊಳಿಸಿದ ನಂತರ ಆಭರಣಗಳನ್ನು ಸಂಪೂರ್ಣವಾಗಿ ಒಣಗಿದ ಬಳಿಕವೇ ಬಾಕ್ಸ್ ಅಥವಾ ಪೌಚ್‌ನಲ್ಲಿ ಇಡಬೇಕು.

ಇದರ ಜೊತೆಗೆ ಚಿನ್ನದ ಆಭರಣಗಳ ಹೊಳಪು ಹೆಚ್ಚು ದಿನ ಉಳಿಯಬೇಕಾದರೆ ಕೆಲವು ಸರಳ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಮೇಕಪ್, ಸುಗಂಧ ದ್ರವ್ಯ ಅಥವಾ ಹೇರ್ ಸ್ಪ್ರೇ ಬಳಸಿದ ಬಳಿಕವೇ ಆಭರಣ ಧರಿಸುವುದು ಉತ್ತಮ. ಸ್ನಾನ ಮಾಡುವಾಗ ಅಥವಾ ಈಜುಕೊಳಕ್ಕೆ ಹೋಗುವ ಮೊದಲು ಆಭರಣಗಳನ್ನು ತೆಗೆದು ಇಡಬೇಕು. ಪ್ರತಿಯೊಂದು ಆಭರಣವನ್ನೂ ಪ್ರತ್ಯೇಕ ಮೃದುವಾದ ಬಟ್ಟೆ ಅಥವಾ ಪೌಚ್‌ನಲ್ಲಿ ಸಂಗ್ರಹಿಸಿದರೆ ಗೀರು ಬೀಳುವುದನ್ನು ತಪ್ಪಿಸಬಹುದು. ಕಾಲಕಾಲಕ್ಕೆ ಮೈಕ್ರೋಫೈಬರ್ ಬಟ್ಟೆಯಿಂದ ಒರೆಸುವುದರಿಂದ ಚಿನ್ನದ ಆಭರಣಗಳು ಹೆಚ್ಚು ದಿನ ಹೊಸದಿನಂತೆ ಹೊಳೆಯುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:06 pm, Sun, 19 July 26

Source link

FIFA World Cup 2026: ಫಿಫಾ ಫೈನಲ್ ಹಿನ್ನೆಲೆಯಲ್ಲಿ ಜು. 20 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಕೇರಳ ಸರ್ಕಾರ! – Kannada News | Kerala Declares Holiday for FIFA World Cup 2026 Final: Schools and Colleges Off

ಕೇರಳಿಗರಲ್ಲಿ ಫುಟ್‌ಬಾಲ್ ಆಟದ ಮೇಲಿರುವ ಜಾಗತಿಕ ಮಟ್ಟದ ಕ್ರೇಜ್ ಮತ್ತೊಮ್ಮೆ ಸಾಬೀತಾಗಿದೆ. ಇಂದು ಮಧ್ಯರಾತ್ರಿ ನಡೆಯಲಿರುವ ಫಿಫಾ ವಿಶ್ವಕಪ್ 2026ರ (FIFA World Cup 2026) ಮಹಾ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ, ಕೇರಳ ಸರ್ಕಾರವು ಜುಲೈ 20 ರ ಸೋಮವಾರದಂದು ರಾಜ್ಯದ ಎಲ್ಲಾ ಶಾಲೆಗಳು ಹಾಗೂ ಕಾಲೇಜುಗಳು ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳಿಗೆ ಅಧಿಕೃತ ರಜೆ ಘೋಷಿಸಿದೆ. ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಈ ಹೈ-ವೋಲ್ಟೇಜ್ ಪಂದ್ಯವನ್ನು ವೀಕ್ಷಿಸಲು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಈ ವಿಶಿಷ್ಟ ನಿರ್ಧಾರ ಕೈಗೊಳ್ಳಲಾಗಿದೆ.

ಮಕ್ಕಳ ನಿದ್ದೆಗೆಡಿಸಲಿರುವ ‘ಮೆಸ್ಸಿ ವರ್ಸಸ್ ಸ್ಪೇನ್’ ಕದನ:

ಹಾಲಿ ಚಾಂಪಿಯನ್ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಹಾಗೂ ಯುರೋಪ್ ಚಾಂಪಿಯನ್ ಸ್ಪೇನ್ ನಡುವಿನ ಪ್ರಶಸ್ತಿ ಸಮರವು ಭಾರತೀಯ ಕಾಲಮಾನ (IST) ಭಾನುವಾರ ಮಧ್ಯರಾತ್ರಿ 12:30 ಕ್ಕೆ ಆರಂಭವಾಗಲಿದೆ. ಈ ರೋಮಾಂಚಕ ಪಂದ್ಯ ಮುಕ್ತಾಯಗೊಳ್ಳಲು ಮುಂಜಾನೆವರೆಗೂ ಸಮಯ ಹಿಡಿಯಲಿದ್ದು, ಆ ಬಳಿಕ ವಿಜೇತ ತಂಡದ ಅಭಿಮಾನಿಗಳು ರಸ್ತೆಗಳಲ್ಲಿ ಸಂಭ್ರಮಾಚರಣೆ ನಡೆಸಲಿದ್ದಾರೆ. ಪಂದ್ಯದ ಪ್ರಸಾರದ ಸಮಯದಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ತಡರಾತ್ರಿಯವರೆಗೆ ಎಚ್ಚರವಿರಬೇಕಾಗುತ್ತದೆ. ಇದರಿಂದ ಸೋಮವಾರದ ದಿನಚರಿಗೆ ತೊಂದರೆಯಾಗಲಿದೆ ಎಂಬುದನ್ನು ಮನಗಂಡು ಈ ರಜೆ ನೀಡಲಾಗಿದೆ.

“ಖುಷಿನಾ ಮಕ್ಕಳೇ?” – ಸೋಷಿಯಲ್ ಮೀಡಿಯಾದಲ್ಲಿ ಸಚಿವರ ಪೋಸ್ಟ್:

ಸಾರ್ವಜನಿಕ ಶಿಕ್ಷಣ ಇಲಾಖೆಯ ಸಚಿವ ಎನ್. ಶಂಶುದ್ದೀನ್ ಅವರು ಈ ನಿರ್ಧಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ, “ಈಗ ಖುಷಿನಾ ಮಕ್ಕಳೇ?” ಎಂದು ಪ್ರೀತಿಯಿಂದ ಪ್ರಶ್ನಿಸಿದ್ದಾರೆ. ಫುಟ್‌ಬಾಲ್ ಪ್ರೇಮಿಗಳಾದ ವಿದ್ಯಾರ್ಥಿಗಳು, ಪೋಷಕರು ಹಾಗೂ ವಿವಿಧ ಸಂಘಟನೆಗಳಿಂದ ಬಂದ ವ್ಯಾಪಕ ಮನವಿಗಳನ್ನು ಪುರಸ್ಕರಿಸಿ ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರ ಕಚೇರಿಯು ಈ ಆದೇಶ ಹೊರಡಿಸಿದೆ. ಮಾಜಿ ಶಿಕ್ಷಣ ಸಚಿವರಾದ ವಿ. ಶಿವನ್‌ಕುಟ್ಟಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಸಹ ತಡರಾತ್ರಿಯ ಪಂದ್ಯದ ನಂತರ ಮಕ್ಕಳಿಗೆ ತರಗತಿಗಳಿಗೆ ಹಾಜರಾಗಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ರಜೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು.

ಇದನ್ನೂ ಓದಿ: ಫಿಫಾ ವಿಶ್ವಕಪ್ ಫೈನಲ್​ನ 21 ರೋಚಕ ಸಂಗತಿಗಳು ನಿಮಗೆ ಗೊತ್ತೇ?

ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ:

ಸರ್ಕಾರವು ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಿದ್ದರೂ, ಸೋಮವಾರ (ಜುಲೈ 20) ಮೊದಲೇ ನಿಗದಿಯಾಗಿರುವ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಗಳ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮುಖ್ಯಮಂತ್ರಿ ಕಚೇರಿ (CMO) ಸ್ಪಷ್ಟಪಡಿಸಿದೆ. ಪರೀಕ್ಷೆಗಳು ಎಂದಿನಂತೆ ಜರುಗಲಿವೆ. ರಜೆಯಿಂದಾಗಿ ನಷ್ಟವಾಗುವ ಶೈಕ್ಷಣಿಕ ದಿನವನ್ನು ಸರಿದೂಗಿಸಲು ಮುಂದಿನ ಯಾವುದಾದರೊಂದು ಶನಿವಾರವನ್ನು ಕೆಲಸದ ದಿನವನ್ನಾಗಿ ಪರಿವರ್ತಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

ಕೇರಳದಾದ್ಯಂತ ಹಬ್ಬದ ವಾತಾವರಣ:

ಕೇರಳದಲ್ಲಿ ಫುಟ್‌ಬಾಲ್ ಜ್ವರ ನೆತ್ತಿಗೇರಿದ್ದು, ಇಡೀ ರಾಜ್ಯದಲ್ಲಿ ಹಬ್ಬದ ಸಡಗರ ಮನೆಮಾಡಿದೆ. ವಿವಿಧ ಸ್ಪೋರ್ಟ್ಸ್ ಕ್ಲಬ್‌ಗಳು ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಸಾರ್ವಜನಿಕ ಮೈದಾನಗಳು ಹಾಗೂ ಪಾರ್ಕ್‌ಗಳಲ್ಲಿ ಪಂದ್ಯದ ನೇರ ಪ್ರಸಾರ ವೀಕ್ಷಣೆಗಾಗಿ ಬೃಹತ್ ಗಾತ್ರದ ಎಲ್‌ಇಡಿ (LED) ಪರದೆಗಳನ್ನು ಅಳವಡಿಸಿವೆ. ತಿರುವನಂತಪುರಂ ಹಾಗೂ ಕೊಚ್ಚಿಯಂತಹ ನಗರಗಳಲ್ಲಿ ಅಭಿಮಾನಿಗಳ ಬೃಹತ್ ಕಟೌಟ್‌ಗಳು ರಾರಾಜಿಸುತ್ತಿವೆ. ಅಭಿಮಾನಿಗಳ ಸಾಗರವೇ ಹರಿದುಬರುವ ನಿರೀಕ್ಷೆ ಇರುವುದರಿಂದ ಮತ್ತು ಭದ್ರತೆಯ ದೃಷ್ಟಿಯಿಂದ ಕೇರಳ ಪೊಲೀಸರು ಕಟ್ಟುನಿಟ್ಟಿನ ಕಣ್ಗಾವಲು ಹಾಗೂ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:50 pm, Sun, 19 July 26

Source link

ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾಗಳನ್ನು ಎಲ್ಲಿ ವೀಕ್ಷಿಸಬಹುದು? – Kannada News | Where to watch 72 national award winning movies on OTT

ನಿನ್ನೆಯಷ್ಟೆ (ಜುಲೈ 18) 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ. ಕನ್ನಡದ ‘ಮಿಥ್ಯ’ ಸಿನಿಮಾ ಸೇರಿದಂತೆ ಹಲವಾರು ಸಿನಿಮಾಗಳು ಬೇರೆ ಬೇರೆ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿವೆ. ಕೆಲವು ಬಹಳ ಜನಪ್ರಿಯ, ಕಮರ್ಶಿಯಲ್ ಸಿನಿಮಾಗಳ ಜೊತೆಗೆ ಚಿತ್ರಮಂದಿರಗಳಲ್ಲಿ ಹೆಚ್ಚು ಗಮನ ಸೆಳೆದ ಆದರೆ ಒಳ್ಳೆಯ ಸಿನಿಮಾಗಳು ಎನಿಸಿಕೊಂಡಿರುವ ಸಿನಿಮಾಗಳಿಗೂ ಸಹ ಪ್ರಶಸ್ತಿ ಸಿಕ್ಕಿವೆ. ಇಂಥಹಾ ಸಿನಿಮಾಗಳನ್ನೆಲ್ಲ ಎಲ್ಲಿ ನೋಡಬಹುದು? ಇಲ್ಲಿದೆ ಮಾಹಿತಿ….

ಮಿಥ್ಯ

ಕನ್ನಡದ ಸಿನಿಮಾ ‘ಮಿಥ್ಯ’ಗೆ ಒಟ್ಟು ಮೂರು ಪ್ರಶಸ್ತಿಗಳು ದೊರಕಿದ್ದು, ಅವುಗಳಲ್ಲಿ ಒಂದು ಪ್ರಾದೇಶಿಕ ಭಾಷೆ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಧಕ್ಕಿದೆ. ಅದಾದ ಬಳಿಕ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ರೂಪಾ ಅವರಿಗೆ ಹಾಗೂ ಅತ್ಯುತ್ತಮ ಬಾಲನಟ ಪ್ರಶಸ್ತಿ ಅತೀಶ್ ಶೆಟ್ಟಿಗೆ ಲಭಿಸಿದೆ. ಈ ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ವೀಕ್ಷಿಸಬಹುದಾಗಿದೆ.

ಪ್ರಶಸ್ತಿ ಪಡೆದ ಸಿನಿಮಾಗಳು ಮತ್ತು ಅವರು ಲಭ್ಯವಿರುವ ಒಟಿಟಿ

ತೀರ್ಪುಗಾರರ ವಿಶೇಷ ಆಯ್ಕೆ-ಮೇಯಳಗನ್- ನಟ್​​ಫ್ಲಿಕ್ಸ್

ಅತ್ಯುತ್ತಮ ನಟ ತೀರ್ಪುಗಾರರ ಆಯ್ಕೆ- ಕ್ಯಾಪ್ಟನ್ ಮಿಲ್ಲರ್ (ಧನುಶ್)

ಅತ್ಯುತ್ತಮ ಆಕ್ಷನ್ -ಮಹಾರಾಜ- ನೆಟ್​​ಫ್ಲಿಕ್ಸ್

ಅತ್ಯುತ್ತಮ ಕೊರಿಯೋಗ್ರಫಿ- ಸ್ತ್ರೀ 2- ಅಮೆಜಾನ್ ಪ್ರೈಂ ವಿಡಿಯೋ

ಅತ್ಯುತ್ತಮ ಸಂಗೀತ- ಅಮರನ್ (ತಮಿಳು)- ನೆಟ್​​ಫ್ಲಿಕ್ಸ್​​

ಅತ್ಯುತ್ತಮ ಹಾಡು- ಆರ್ಟಿಕಲ್ 370 (ಹಿಂದಿ)- ನೆಟ್​​ಫ್ಲಿಕ್ಸ್​​ ಮತ್ತು ಜಿ5

ಅತ್ಯುತ್ತಮ ಪ್ರಸಾಧನ- ಕಮಿಟಿ ಕುರ್ರೋಳ್ಳು – ಇಟಿವಿ ವಿನ್

ಅತ್ಯುತ್ತಮ ವಸ್ತ್ರವಿನ್ಯಾಸ- ಪುಷ್ಪ 2- ನೆಟ್​​ಫ್ಲಿಕ್ಸ್​

ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್- ಕಲ್ಕಿ 2898 ಎಡಿ ( ತೆಲುಗು)- ಅಮೆಜಾನ್ ಪ್ರೈಂ ವಿಡಿಯೋ

ಅತ್ಯುತ್ತಮ ಸಂಕಲನ- ಅಮರನ್ (ತಮಿಳು)- ನೆಟ್​​ಫ್ಲಿಕ್ಸ್

ಅತ್ಯುತ್ತಮ ಧ್ವನಿ ವಿನ್ಯಾಸ- ಭೂಲ ಭುಲಯ್ಯ (ಹಿಂದಿ)- ನೆಟ್​​ಫ್ಲಿಕ್ಸ್​​

ಅತ್ಯುತ್ತಮ ಸಂಭಾಷಣೆ- ಲಕ್ಕಿ ಭಾಸ್ಕರ್ (ತೆಲುಗು)- ನೆಟ್​​ಫ್ಲಿಕ್ಸ್​​

ಅತ್ಯುತ್ತಮ ಅಡಾಪ್ಟೆಡ್ ಚಿತ್ರಕತೆ -ಸ್ವರಗಂಧರ್ವ (ಮರಾಠಿ)- ಅಮೆಜಾನ್ ಪ್ರೈಂ ವಿಡಿಯೋ

ಅತ್ಯುತ್ತಮ ಚಿತ್ರಕತೆ-ಪುಷ್ಪ 2 (ಸುಕುಮಾರ್)- ನೆಟ್​​ಫ್ಲಿಕ್ಸ್​​

ಅತ್ಯುತ್ತಮ ಸಿನಿಮಾಟೊಗ್ರಫಿ- ಬ್ರಮಯುಗಂ (ಮಲಯಾಳಂ)- ಸೋನಿ ಲಿವ್

ಅತ್ಯುತ್ತಮ ಗಾಯಕಿ- ಎಆರ್ಎಂ (ವೈಕೋಂ ವಿಜಯಲಕ್ಷ್ಮಿ)- ಜಿಯೋ ಹಾಟ್​​ಸ್ಟಾರ್​​

ಪೋಷಕ ನಟ- ಭಕ್ಷಕ್-ಸಂಜಯ್ ಮಿಶ್ರಾ- ನೆಟ್​​ಫ್ಲಿಕ್ಸ್​​

ಅತ್ಯುತ್ತಮ ನಟಿ- ಆರ್ಟಿಕಲ್ 370-ಯಾಮಿ ಗೌತಮ್- ನೆಟ್​​ಫ್ಲಿಕ್ಸ್​ ಮತ್ತು ಜೀ6

ಅತ್ಯುತ್ತಮ ನಟ- ಚಂದು ಚಾಂಪಿಯನ್ (ಕಾರ್ತಿಕ್ ಆರ್ಯನ್)- ಅಮೆಜಾನ್ ಪ್ರೈಂ ವಿಡಿಯೋ

ಅತ್ಯುತ್ತಮ ನಿರ್ದೇಶಕ- ಅಮರನ್ (ರಾಜಕುಮಾರ ಪೆರ್ರಿಸ್ವಾಮಿ)- ನೆಟ್​​ಫ್ಲಿಕ್ಸ್

ಅತ್ಯುತ್ತಮ ಮಕ್ಕಳ ಸಿನಿಮಾ- 35 ಚಿನ್ನ ಕದು ಕಾದು-ಅಮೆಜಾನ್ ಪ್ರೈಂ ಮತ್ತು ಆಹಾ

ಅತ್ಯುತ್ತಮ ಸಾಮಾಜಿಕ ಮೌಲ್ಯ ಸಿನಿಮಾ- ಕ್ಯಾಪ್ಟನ್ ಮಿಲ್ಲರ್- ಅಮೆಜಾನ್ ಪ್ರೈಂ

ಅತ್ಯುತ್ತಮ ಮನೊರಂಜನಾ ಸಿನಿಮಾ- ಕಲ್ಕಿ 2898 ಎಡಿ- ಪ್ರೈಂ ವಿಡಿಯೋ

ಅತ್ಯುತ್ತಮ ಡೆಬ್ಯೂ ಸಿನಿಮಾ- ಸ್ವಾತಂತ್ರ್ಯ ವೀರ ಸಾವರ್ಕರ್- ಜೀ5 ಮತ್ತು ಜಿಯೋ ಟಿವಿ

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:53 pm, Sun, 19 July 26

Source link

ಮೊಬೈಲ್ ವಾಪಸ್ ನೀಡಿಲ್ಲವೆಂದು ದೇವಸ್ಥಾನದಲ್ಲೇ ಗೆಳೆಯನ ಕೊಲೆ! ಆರೋಪಿ ಅರೆಸ್ಟ್ – Kannada News | Belagavi Crime News: Man unalived by Friend in Temple Over Mobile Phone Dispute

ಬೆಳಗಾವಿ, ಜುಲೈ 19: ಇತ್ತೀಚೆಗೆ ಸಮಾಜದಲ್ಲಿ ಕ್ಷುಲ್ಲಕ ಕಾರಣಕ್ಕೆ ಕೊಲೆ ಸುಲಿಗೆಗಳಂತಹ ಹೇಯ ಕೃತ್ಯಗಳೇ ನಡೆದು ಹೋಗುತ್ತವೆ. ಅಂತದ್ದೇ ಒಂದು ಅಮಾನವೀಯ ಕೃತ್ಯ ಬೆಳಗಾವಿ ಜಿಲ್ಲೆಯಲ್ಲಿ ಸಂಭವಿಸಿದ್ದು, ಕೇವಲ ಒಂದು ಮೊಬೈಲ್ ಫೋನ್‌ಗಾಗಿ ಸ್ನೇಹಿತರಿಬ್ಬರ ನಡುವೆ ನಡೆದ ಜಗಳವೊಂದು ಭೀಕರ ದುರಂತದಲ್ಲಿ ಅಂತ್ಯಗೊಂಡಿದೆ. ಮೊಬೈಲ್ ಮರಳಿ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ದೇವಸ್ಥಾನದ ಆವರಣದಲ್ಲೇ ಮಲಗಿದ್ದ ವ್ಯಕ್ತಿಯೊಬ್ಬರ ಜೀವ ತೆಗೆದಿರುವ ಘಟನೆ ಸವದತ್ತಿ ತಾಲೂಕಿನ ಚಿಕ್ಕಬೂದನೂರ ಗ್ರಾಮದಲ್ಲಿ ನಡೆದಿದೆ.

ಪ್ರಕರಣದ ಹಿನ್ನೆಲೆ

ಗ್ರಾಮದ ನಿವಾಸಿಯಾದ ಫಕ್ಕೀರಪ್ಪ ಪಿಡ್ಡೆನ್ನವರ್ (40) ಎಂಬುವವರೇ ಈ ದುರಂತದಲ್ಲಿ ಜೀವ ಕಳೆದುಕೊಂಡ ದುರ್ದೈವಿ. ಇವರ ಸ್ನೇಹಿತ ಮಲ್ಲಿಕಾರ್ಜುನ ಪೂಜೇರಿ ಎಂಬಾತನೇ ಈ ಕೃತ್ಯ ಎಸಗಿರುವ ಆರೋಪಿಯಾಗಿದ್ದಾನೆ. ಮೂಲಗಳ ಪ್ರಕಾರ, ಕಳೆದ ಎರಡು ದಿನಗಳ ಹಿಂದೆ ಮಲ್ಲಿಕಾರ್ಜುನನ ಮೊಬೈಲ್ ಫೋನ್ ಅನ್ನು ಫಕ್ಕೀರಪ್ಪ ಪಡೆದುಕೊಂಡಿದ್ದರು. ಆದರೆ, ಕೆಲಸ ಮುಗಿದ ನಂತರವೂ ಅದನ್ನು ಮರಳಿ ನೀಡದೆ ಎರಡು ದಿನಗಳಿಂದ ಸತಾಯಿಸುತ್ತಿದ್ದರು ಎನ್ನಲಾಗಿದೆ.

ತನ್ನ ಫೋನ್ ಪಡೆಯಲು ಮಲ್ಲಿಕಾರ್ಜುನ ಹಲವು ಬಾರಿ ಕೇಳಿದ್ದರೂ ಫಕ್ಕೀರಪ್ಪ ನಿರ್ಲಕ್ಷ್ಯ ವಹಿಸಿದ್ದ. ಕೊನೆಗೆ ಬೇಸತ್ತ ಮಲ್ಲಿಕಾರ್ಜುನ, ಫಕ್ಕೀರಪ್ಪನ ಮನೆವರೆಗೂ ಹೋಗಿ ಮೊಬೈಲ್ ನೀಡುವಂತೆ ಒತ್ತಾಯ ಮಾಡಿದ್ದ. ಈ ವೇಳೆ ಫಕ್ಕೀರಪ್ಪ, ಸಂಜೆ ವೇಳೆಗೆ ನಿನ್ನ ಮೊಬೈಲ್ ಮರಳಿ ಕೊಡುತ್ತೇನೆ ಎಂದು ಹೇಳಿ ಅಲ್ಲಿಂದ ಕಳುಹಿಸಿದ್ದ.

ದೇವಸ್ಥಾನದಲ್ಲಿ ನಡೆದ ಘೋರ ಕೃತ್ಯ

ಶನಿವಾರ ಸಂಜೆ ಫಕ್ಕೀರಪ್ಪ ಗ್ರಾಮದ ಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಮಲಗಿದ್ದ. ಇದನ್ನು ಗಮನಿಸಿದ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಬಂದು ಮತ್ತೊಮ್ಮೆ ತನ್ನ ಮೊಬೈಲ್ ನೀಡುವಂತೆ ಕೇಳಿದ್ದ. ಆದರೆ, ಫಕ್ಕೀರಪ್ಪ ಈ ಬಾರಿಯೂ ತಕ್ಷಣಕ್ಕೆ ಮೊಬೈಲ್ ನೀಡದೆ, ರಾತ್ರಿ ಕೊಡುತ್ತೇನೆ ಎಂದು ಮತ್ತೆ ಸಬೂಬು ಹೇಳಿದ್ದ. ಇದರಿಂದ ವಿಪರೀತ ಕೋಪಗೊಂಡ ಮಲ್ಲಿಕಾರ್ಜುನ, ದೇವಸ್ಥಾನದ ಆವರಣದಲ್ಲೇ ಇದ್ದ ಭಸ್ಮ (ವಿಭೂತಿ) ಅರೆಯುವ ದೊಡ್ಡ ಕಲ್ಲನ್ನು ಎತ್ತಿ, ಮಲಗಿದ್ದ ಫಕ್ಕೀರಪ್ಪನ ತಲೆಯ ಮೇಲೆ ಜೋರಾಗಿ ಹಾಕಿದ್ದಾನೆ. ಕಲ್ಲಿನ ಭಾರಿ ಏಟಿಗೆ ಫಕ್ಕೀರಪ್ಪ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೃತ್ಯ ಎಸಗಿದ ತಕ್ಷಣ ಆರೋಪಿ ಮಲ್ಲಿಕಾರ್ಜುನ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಆರೋಪಿ ಬಂಧನ

ದೇವಸ್ಥಾನದಲ್ಲಿ ರಕ್ತದ ಮಡುವಿನಲ್ಲಿ ಶವ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಮುರಗೋಡ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಮುರಗೋಡ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಮಹಜರು ನಡೆಸಿದ ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಮುರಗೋಡ ಪೊಲೀಸರು, ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿ ಮಲ್ಲಿಕಾರ್ಜುನನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version