ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ

ಇಂದು (ಜೂನ್ 03) ಡಿಕೆ ಶಿವಕುಮಾರ್ (DK Shivakumar) ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಹಲವು ಕಾಂಗ್ರೆಸ್ ಮುಖಂಡರು, ಸ್ವಾಮೀಜಿಗಳು, ಕೆಲ ಸಾಹಿತಿಗಳು, ಜೊತೆಗೆ ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಸಹ ಭಾಗಿ ಆಗಿದ್ದರು. ನಟಿ ರಮ್ಯಾ, ನಟ ಪ್ರೇಮ್, ಶಿವರಾಜ್ ಕುಮಾರ್ ಇನ್ನೂ ಹಲವರು ಪದಗ್ರಹಣಕ್ಕೆ ಸಾಕ್ಷಿಯಾದರು. ಕಾರ್ಯಕ್ರಮದ ಬಳಿಕ ಟಿವಿ9 ಜೊತೆಗೆ ಮಾತನಾಡಿದ ನಟ ಶಿವರಾಜ್ ಕುಮಾರ್, ಡಿಕೆ ಶಿವಕುಮಾರ್ ಅವರು ಸಿಎಂ ಆಗಿರುವುದು ಸಂತಸ, ಹೊಸ ಸಿಎಂ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಅವರಿಗೆ ಒಳಿತಾಗಲಿ ಎಂದರು. ಶಿವರಾಜ್ ಕುಮಾರ್ ಹೇಳಿದ್ದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

‘ಪೆದ್ದಿ’ ಪ್ರೀಮಿಯರ್ ಶೋಗೆ ಬೆಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ: ಕಾರಣ? – Kannada News

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ನಾಳೆ (ಜೂನ್ 4) ಅಧಿಕೃತವಾಗಿ ಬಿಡುಗಡೆ ಆಗುತ್ತಿದೆ. ಆದರೆ ಇಂದೇ (ಜೂನ್ 3) ಹಲವೆಡೆ ಸಿನಿಮಾದ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಬೆಂಗಳೂರಿನ ಹಲವಾರು ಚಿತ್ರಮಂದಿರಗಳಲ್ಲಿ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಆದರೆ ಬೆಂಗಳೂರಿನ ಪ್ರೀಮಿಯರ್ ಶೋಗಳಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ಪ್ರೀಮಿಯರ್ ಶೋ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು, ಹಲವೆಡೆ ಟಿಕೆಟ್ ಬಿಕರಿ ಆಗಿಲ್ಲ.

‘ಪೆದ್ದಿ’ ಸಿನಿಮಾದ ಪ್ರೀಮಿಯರ್ ಶೋ ಇಂದು ರಾತ್ರಿ 8 ಗಂಟೆಗೆ ಆರಂಭವಾಗುತ್ತಿದೆ. ನಗರದ ಹಲವು ಮಲ್ಟಿಪ್ಲೆಕ್ಸ್ ಮತ್ತು ಸಿಂಗಲ್ ಸ್ಕ್ರೀನ್​​ಗಳಲ್ಲಿ ಪ್ರೀಮಿಯರ್ ಶೋ ಪ್ರದರ್ಶಿಸಲಾಗುತ್ತಿದೆ. ಆದರೆ ಬುಕ್ ಮೈ ಶೋ ಮಾಹಿತಿ ಪ್ರಕಾರ ಹಲವು ಚಿತ್ರಮಂದಿರಗಳಲ್ಲಿ ಟಿಕೆಟ್ ಸೂಕ್ತವಾಗಿ ಬಿಕರಿ ಆಗಿಲ್ಲ. ಬಹುತೇಕ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರೀಮಿಯರ್ ಶೋನ ಬುಕಿಂಗ್ ಅನ್ನು ಬಹು ತಡವಾಗಿ ಆರಂಭಿಸಿದ್ದು, ಈ ನೀರಸ ಪ್ರತಿಕ್ರಿಯೆಗೆ ಮುಖ್ಯ ಕಾರಣ. ಮೊದಲಿಗೆ ಜೂನ್ 4 ರ ಶೋನ ಟಿಕೆಟ್​​ಗಳ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಗಿತ್ತು. ಹಾಗಾಗಿ ಹೆಚ್ಚಿನ ಅಭಿಮಾನಿಗಳು ಜೂನ್ 4 ರ ಮುಂಜಾನೆಯ ಶೋ ಅಂದರೆ 6:30 ಶೋಗೆ ಟಿಕೆಟ್ ಬುಕ್ ಮಾಡಿಕೊಂಡಿದ್ದರು. ಅದಾದ ಬಳಿಕ ಬಹಳ ತಡವಾಗಿ ಇಂದು (ಜೂನ್ 3) ರಾತ್ರಿಯ ಪ್ರೀಮಿಯರ್ ಶೋಗೆ ಅಡ್ವಾನ್ಸ್ ಬುಕಿಂಗ್ ತೆರೆಯಲಾಗಿದೆ. ಜೂನ್ 4 ರ ಶೋಗೆ ಹೆಚ್ಚಿನ ಜನ ಬುಕಿಂಗ್ ಮಾಡಿಕೊಂಡಿರುವ ಕಾರಣ ಇಂದು ರಾತ್ರಿಯ ಶೋಗಳಿಗೆ ಹೆಚ್ಚು ಬುಕಿಂಗ್ ಆಗಿಲ್ಲ.

ಇದನ್ನೂ ಓದಿ:ರಾಮ್ ಚರಣ್ ಬಾಡಿಗಾರ್ಡ್ ಸಾಮಾನ್ಯ ಮನುಷ್ಯ ಅಲ್ಲ

ಅದು ಮಾತ್ರವೇ ಅಲ್ಲದೆ, ಇಂದು ರಾತ್ರಿಯ ಶೋಗೆ ಭಾರಿ ಮೊತ್ತದ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಇಂದು ರಾತ್ರಿಯ ಶೋಗಳಿಗೆ ಸಿಂಗಲ್ ಸ್ಕ್ರೀನ್​​ನಲ್ಲಿ 500 ರಿಂದ 300 ಹಾಗೂ ಮಲ್ಟಿಪ್ಲೆಕ್ಸ್​​ನಗಳಲ್ಲಿ 600 ರಿಂದ 1200 ರೂ ವರೆಗೆ ಟಿಕೆಟ್ ನಿಗದಿಪಡಿಸಲಾಗಿದೆ. ಅದೇ ನಾಳೆಯ ಅಂದರೆ ಜೂನ್ 4 ರ ಬೆಳಿಗಿನ ಶೋಗಳಿಗೆ ಇದರ ಅರ್ಧದಷ್ಟು ಟಿಕೆಟ್ ಬೆಲೆ ಇದೆ. ಹಾಗಾಗಿ ಹೆಚ್ಚಿನ ಜನ ಜೂನ್ 4 ರಂದೇ ಸಿನಿಮಾಕ್ಕೆ ಟಿಕೆಟ್​​ಗಳನ್ನು ಮುಂಗಡವಾಗಿ ಬುಕ್ ಮಾಡಿಕೊಂಡಿದ್ದು, ಸಿನಿಮಾ ನೋಡಲು ಕಾತರರಾಗಿದ್ದಾರೆ. ಒಟ್ಟಾರೆಯಾಗಿ ಕೆಟ್ಟ ಪ್ಲಾನಿಂಗ್​​ ಇಂದಾಗಿ ಇಂದಿನ ಪ್ರೀಮಿಯರ್ ಶೋಗೆ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ಪಡೆಯಲು ‘ಪೆದ್ದಿ’ ವಿಫಲವಾಗಿದೆ.

‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್ ಜೊತೆಗೆ ಶಿವರಾಜ್ ಕುಮಾರ್ ಸಹ ನಟಿಸಿದ್ದು, ಕರ್ನಾಟಕದಲ್ಲಿಯೂ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಅನ್ನು ಬುಚ್ಚಿಬಾಬು ಸನಾ ನಿರ್ದೇಶಿಸಿದ್ದಾರೆ. ಎಆರ್ ರೆಹಮಾನ್ ಸಂಗೀತವಿದೆ. ಸಿನಿಮಾ ನಿರ್ಮಾಣ ಮಾಡಿರುವುದು ಮೈತ್ರಿ ಮೂವಿ ಮೇಕರ್ಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಈ ಐಪಿಎಲ್​ನಲ್ಲೂ ಈ 5 ದಾಖಲೆಗಳನ್ನು ಮುರಿಯಲಾಗಲಿಲ್ಲ..!

Source link

ಕರ್ನಾಟಕದಲ್ಲಿ ಶುರುವಾಯ್ತು ಡಿಕೆ ಶಿವಕುಮಾರ್​​ ರಾಜ್ಯಭಾರ: ಡಿಕೆ ಸೈನ್ಯ ಹೀಗಿದೆ

Source link

ಡಿಕೆಶಿ ಸಂಪುಟದಲ್ಲಿ ಅನುಭವಿ ನಾಯಕರು: ಸಚಿವರಾಗಿ ಮುನಿಯಪ್ಪ, ಎಂ.ಬಿ. ಪಾಟೀಲ್​​, ಜಾರ್ಜ್​​ ಪ್ರಮಾಣ – Kannada News

ಸಚಿವರಾಗಿ ಪ್ರಮಾಣವಚನImage Credit source: Tv9 Kannada

ಬೆಂಗಳೂರು, ಜೂನ್​​ 03: ನೂತನ ಸಿಎಂ ಡಿ.ಕೆ. ಶಿವಕುಮಾರ್ (DK Shivakumar)​​ ಜೊತೆಗೆ ಡಿಸಿಎಂ ಪರಮೇಶ್ವರ್​​ ಸೇರಿ 12 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಂಪುಟ ದರ್ಜೆ ಸಚಿವರಾಗಿ ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್ ಮತ್ತುಎಂ.ಬಿ. ಪಾಟೀಲ್​​ರಿ ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ರಾಜ್ಯಪಾಲರು ಉಪಸ್ಥಿತರಿದ್ದು, ಪ್ರಮಾಣ ವಚನ ಸ್ವೀಕರಿಸಿದ ಸಚಿವರಿಗೆ ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸಿದರು.

7 ಬಾರಿ ಸಂಸದ, ಮೊದಲಬಾರಿ ಶಾಸಕರಾಗಿರುವ ಮುನಿಯಪ್ಪ

ಕರ್ನಾಟಕದ ಅತ್ಯಂತ ಹಿರಿಯ ಮತ್ತು ಪ್ರಭಾವಿ ದಲಿತ ನಾಯಕರಲ್ಲಿ ಒಬ್ಬರಾಗಿರುವ ಕೆ.ಎಚ್. ಮುನಿಯಪ್ಪ ಅವರು 1991 ರಿಂದ 2019 ರವರೆಗೆ ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಏಳು ಬಾರಿ ಸಂಸದರಾಗಿ ಆಯ್ಕೆಯಾದ್ದರು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಎಸ್. ಮುನಿಸ್ವಾಮಿ ಅವರ ವಿರುದ್ಧ ಮೊದಲ ಬಾರಿಗೆ ಪರಾಭವಗೊಂಡ ಬಳಿಕ 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ (SC) ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.

ಇದನ್ನೂ ಓದಿ: ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್​​; ಅಷ್ಟಕ್ಕೂ ಯಾರು ಈ ಅಜ್ಜಯ್ಯ?

3ನೇ ಬಾರಿ ಸಚಿವರಾದ ಎಂ.ಬಿ. ಪಾಟೀಲ್​​

ಇನ್ನು ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿರುವ ಎಂಬಿ ಪಾಟೀಲ್​​ ಹಾಲಿ ಬಬಲೇಶ್ವರ ಕ್ಷೇತ್ರದ ಶಾಸಕರು. ಐದು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಎಂ.ಬಿ.ಪಾಟೀಲ್, ಮೊದಲಬಾರಿಗೆ ವಿಧಾನಸಭೆ ಪ್ರವೇಶಿಸಿದ್ದು, 1991ರಲ್ಲಿ.
1998ರಲ್ಲಿ ವಿಜಯಪುರ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದ ಇವರು, 2013ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವ , 2018ರಲ್ಲಿಕುಮಾರಸ್ವಾಮಿ ಸಂಪುಟದಲ್ಲಿ ಗೃಹ ಸಚಿವರಾಗಿ ಮತ್ತು 2023-26ರವರೆಗೆ ಸಿದ್ದರಾಮಯ್ಯನವರ ಸಂಪುಟದಲ್ಲಿ ಬೃಹತ್ ಕೈಗಾರಿಕಾ ಸಚಿವರಾಗಿದ್ದರು.

ಕಾಂಗ್ರೆಸ್‌ನ ಹಿರಿಯ ನಾಯಕ ಜಾರ್ಜ್​​ಗೆ ಮತ್ತೊಮ್ಮೆ ಮಂತ್ರಿಗಿರಿ

ಸರ್ವಜ್ಞನಗರ ಕ್ಷೇತ್ರದ ಶಾಸಕರಾಗಿರುವ ಕೆ.ಜೆ.ಜಾರ್ಜ್ ಕರ್ನಾಟಕ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಒಬ್ಬರು. ಆರು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಕೆ.ಜೆ.ಜಾರ್ಜ್ , 1985ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶ ಮಾಡಿದ್ದರು. ವೀರೇಂದ್ರ ಪಾಟೀಲ್‌, ಎಸ್‌.ಬಂಗಾರಪ್ಪ ಸರ್ಕಾರದಲ್ಲೂ ಸಂಪುಟ ದರ್ಜೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2013ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಗೃಹಇಲಾಖೆ ಸಚಿವರಾಗಿದ್ದರು. 2018ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಬೃಹತ್‌ & ಮಧ್ಯಮ ಕೈಗಾರಿಕೆ ಸಚಿವರಾಗಿದ್ದ ಇವರು 2023ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಇಂಧನ ಖಾತೆ ನಿರ್ವಹಣೆ ಮಾಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:53 pm, Wed, 3 June 26

Source link

ಜೊಹೊ ಮುಖ್ಯ ವಿಜ್ಞಾನಿ ಶ್ರೀಧರ್ ವೆಂಬು ಅವರ ಕರುವಿಯಿಂದ ಚೀನೀ ಪವರ್ ಟೂಲ್ಸ್​ಗೆ ಪೈಪೋಟಿ – Kannada News

ಚೆನ್ನೈ, ಜೂನ್ 3: ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಕ್ರಾಂತಿ ಮಾಡಿರುವ ಭಾರತದ ಪ್ರಮುಖ ಸಾಸ್ (SaaS) ಯೂನಿಕಾರ್ನ್ ಸಂಸ್ಥೆ ‘ಜೊಹೊ’ನ (Zoho) ಸಹ-ಸಂಸ್ಥಾಪಕ ಮತ್ತು ಮುಖ್ಯ ವಿಜ್ಞಾನಿ ಹಾಗು ಮಾಜಿ ಸಿಇಒ ಶ್ರೀಧರ್ ವೆಂಬು, ಈಗ ಉತ್ಪಾದನಾ (Manufacturing) ಕ್ಷೇತ್ರದಲ್ಲೂ ಭಾರತದ ಹೆಜ್ಜೆಯನ್ನು ಗಟ್ಟಿಗೊಳಿಸಲು ಮುಂದಾಗಿದ್ದಾರೆ. ಇವರ ಕರುವಿ ಎನ್ನುವ ಪವರ್ ಟೂಲ್ಸ್ ಉತ್ಪಾದನಾ ಸಂಸ್ಥೆ ಸದ್ದು ಮಾಡತೊಡಗಿದೆ. ಚೀನೀ ಕಂಪನಿಗಳ ಪ್ರಾಬಲ್ಯ ಇರುವ ಪವರ್ ಟೂಲ್ಸ್ ಕ್ಷೇತ್ರದಲ್ಲಿ ಕರುವಿ (Karuvi) ಗಟ್ಟಿ ಹೆಜ್ಜೆ ಊರಲು ಅಣಿಯಾಗಿದೆ. ಈ ಬಗ್ಗೆ ಶ್ರೀಧರ್ ವೆಂಬು ಅವರು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ಮೆಕಾಟ್ರಾನಿಕ್ಸ್ ಸ್ಟಾರ್ಟಪ್ ಆದ ಕರುವಿಯ ಮೊದಲ ಉತ್ಪನ್ನ ತಯಾರಾಗಿ ಪ್ರಾಯೋಗಿಕವಾಗಿ ಗ್ರಾಹಕರಿಗೆ ತಲುಪಿಸಲಾಗಿರುವ ವಿಚಾರವನ್ನು ವೆಂಬು ಹಂಚಿಕೊಂಡಿದ್ದಾರೆ. ಚೀನಾ ಉತ್ಪನ್ನಗಳನ್ನು ಎದುರಿಸಬೇಕಾದರೆ ಕೇವಲ ಬೆಲೆ ಮಾತ್ರವಲ್ಲ, ಜಾಗತಿಕ ಗುಣಮಟ್ಟವನ್ನು ಸರಿಗಟ್ಟುವುದು (Matching Global Quality) ಅತ್ಯಂತ ಪ್ರಮುಖ ಸವಾಲಾಗಿತ್ತು ಎಂದು ಅವರು ವಿವರಿಸಿದ್ದಾರೆ.

Karuvi ಸ್ಟಾರ್ಟ್-ಅಪ್‌ನ ಉಗಮ ಮತ್ತು ತಂತ್ರಜ್ಞಾನ

ತಮಿಳು ಭಾಷೆಯಲ್ಲಿ ‘ಕರುವಿ’ ಎಂದರೆ ಉಪಕರಣ ಅಥವಾ ಸಾಧನ (Instrument/Tool) ಎಂದರ್ಥ. ಸುಮಾರು ಎರಡು ವರ್ಷಗಳ ಹಿಂದೆ ತಮಿಳುನಾಡಿನ ಗ್ರಾಮೀಣ ಪ್ರದೇಶವಾದ ತೆನ್ಕಾಸಿಯಲ್ಲಿ ಒಂದು ಸಣ್ಣ ಇಂಜಿನಿಯರಿಂಗ್ ತಂಡದೊಂದಿಗೆ ಈ ಸಾಹಸವನ್ನು ಪ್ರಾರಂಭಿಸಲಾಯಿತು. ಶ್ರೀಧರ್ ವೆಂಬು ಮತ್ತು ಟೋನಿ ಥಾಮಾಸ್ ಇದರ ಸಹ-ಸಂಸ್ಥಾಪಕರು.

ಕರುವಿ ಉತ್ಪನ್ನಗಳ ಶ್ರೇಣಿ

‘ಕರುವಿ’ ಬ್ರ್ಯಾಂಡ್ ಅಡಿಯಲ್ಲಿ ಕೈಗಾರಿಕಾ ಮತ್ತು ಗ್ರಾಹಕ ಬಳಕೆಯ ರೋಟರಿ ಡ್ರಿಲ್ಸ್, ಹ್ಯಾಮರ್ ಡ್ರಿಲ್ಸ್, ಆಂಗಲ್ ಗ್ರೈಂಡರ್ಸ್, ಡೆಮೋಲಿಷನ್ ಹ್ಯಾಮರ್ಸ್ ಮತ್ತು ಗರಗಸಗಳಂತಹ (Saws) ಪ್ರಮುಖ ಪವರ್ ಟೂಲ್‌ಗಳನ್ನು ವಾಣಿಜ್ಯ ಉತ್ಪಾದನೆಗೆ ಸಿದ್ಧಪಡಿಸಲಾಗಿದೆ.

ಈ ಉಪಕರಣಗಳನ್ನು ಕೇವಲ ಸಾಮಾನ್ಯ ಯಂತ್ರಗಳಾಗಿ ಮಾಡದೆ, ಮೋಟಾರ್ ತಂತ್ರಜ್ಞಾನ (Motor Technology), ಮೆಟೀರಿಯಲ್ ಸೈನ್ಸ್ (ವಸ್ತು ವಿಜ್ಞಾನ) ಮತ್ತು ಎಲೆಕ್ಟ್ರಾನಿಕ್ಸ್ ವಲಯದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಅತ್ಯಂತ ನಿಖರವಾಗಿ (Precise) ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: ಚೀನಾ ಔಟ್, ಭಾರತ ಇನ್: ಜಾಗತಿಕ ಮಾರುಕಟ್ಟೆಯಲ್ಲಿ ಜಪಾನ್ ಹೂಡಿಕೆದಾರರ ಭರ್ಜರಿ ದಿಕ್ಕು ಬದಲಾವಣೆ

ಚೀನಾ ಆಮದುಗಳ ವಿರುದ್ಧ ವೆಂಬು ಕಾರ್ಯತಂತ್ರಗಳು

ಭಾರತೀಯ ಪವರ್ ಟೂಲ್ಸ್ ಮಾರುಕಟ್ಟೆಯಲ್ಲಿ ಸದ್ಯ ಚೀನಾ ಉತ್ಪನ್ನಗಳದ್ದೇ ಮೇಲುಗೈಯಾಗಿದೆ. ಇದನ್ನು ಮೆಟ್ಟಿನಿಲ್ಲಲು ಶ್ರೀಧರ್ ವೆಂಬು ಮೂರು ಪ್ರಮುಖ ಸೂತ್ರಗಳನ್ನು ಮುಂದಿಟ್ಟಿದ್ದಾರೆ:

  • ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ: ಭಾರತೀಯ ಗ್ರಾಹಕರು ಕೇವಲ ಕಡಿಮೆ ಬೆಲೆಯ ವಸ್ತುಗಳನ್ನು ಹುಡುಕುವುದಿಲ್ಲ, ಬದಲಿಗೆ ಬಾಳಿಕೆ ಬರುವ ಗುಣಮಟ್ಟವನ್ನು ಬಯಸುತ್ತಾರೆ. ಚೀನಾದ ಅಗ್ಗದ ಆಮದುಗಳಿಗೆ ತಕ್ಕ ಟಕ್ಕರ್ ನೀಡಬೇಕಾದರೆ ಜಾಗತಿಕ ಗುಣಮಟ್ಟದ ಮಾನದಂಡಗಳಿಗೆ ಸರಿಸಮಾನವಾದ ಅತ್ಯುತ್ತಮ ಫಿನಿಷಿಂಗ್, ವಿನ್ಯಾಸ ಮತ್ತು ದಕ್ಷತೆಯನ್ನು ಕರುವಿ ಉತ್ಪನ್ನಗಳಲ್ಲಿ ತರಲಾಗಿದೆ.
  • ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ: ಜೊಹೊ ಸಂಸ್ಥೆಯಂತೆಯೇ ‘ಕರುವಿ’ ಉತ್ಪಾದನಾ ಘಟಕವನ್ನೂ ಗ್ರಾಮೀಣ ಭಾಗದಲ್ಲೇ (ತೆನ್ಕಾಸಿ) ಸ್ಥಾಪಿಸಲಾಗುತ್ತಿದೆ. ಚೀನಾ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದರ ಜೊತೆಗೆ, ಭಾರತದ ಗ್ರಾಮೀಣ ಯುವಕರಿಗೆ ಅತ್ಯಾಧುನಿಕ ಹಾರ್ಡ್‌ವೇರ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಉದ್ಯೋಗ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.
  • ಕೈಗೆಟುಕುವ ಬೆಲೆ: ಜಾಗತಿಕ ಗುಣಮಟ್ಟವನ್ನು ಹೊಂದಿದ್ದರೂ, ಈ ಉತ್ಪನ್ನಗಳನ್ನು ಮಧ್ಯಮ ವರ್ಗದ ಕಾರ್ಮಿಕರು ಮತ್ತು ಕೈಗಾರಿಕೆಗಳಿಗೆ ಸುಲಭವಾಗಿ ಸಿಗುವಂತಹ ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ತರಲು ಯೋಜನೆ ರೂಪಿಸಲಾಗಿದೆ.

ಇದನ್ನೂ ಓದಿ: ಭಾರತದ ಸೇವಾ ಕ್ಷೇತ್ರದಲ್ಲಿ ಹೊಸ ಹುರುಪು; ಮೇ ತಿಂಗಳ ಸರ್ವಿಸ್ ಸೆಕ್ಟರ್ ಪಿಎಂಐ 6 ತಿಂಗಳ ಗರಿಷ್ಠ ಮಟ್ಟಕ್ಕೆ

ವೆಂಬು ಈ ಕ್ಷೇತ್ರಕ್ಕೆ ಬಂದಿದ್ದು ಹೇಗೆ?

ಟ್ವಿಟರ್ (X) ನಲ್ಲಿ ಈ ಕುರಿತು ಬರೆದುಕೊಂಡಿದ್ದ ಶ್ರೀಧರ್ ವೆಂಬು, “ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮಿಡಲ್ ಈಸ್ಟ್‌ನ ಪ್ರಮುಖ ಎಲೆಕ್ಟ್ರಾನಿಕ್ಸ್ ವಿತರಕರಾದ ಅಬ್ದುಲ್ ಗಫೂರ್ ಅವರು ನನ್ನನ್ನು ಭೇಟಿಯಾಗಿ, ಹ್ಯಾಂಡ್ ಟೂಲ್‌ಗಳ ಬಾಕ್ಸ್ ತೋರಿಸಿ ಇವುಗಳನ್ನು ಜೊಹೊ ತಯಾರಿಸಬೇಕು, ನಾನು ಜಾಗತಿಕವಾಗಿ ವಿತರಣೆ ಮಾಡುತ್ತೇನೆ ಎಂದಿದ್ದರು. ಆಗ ನಮಗೆ ಇದರ ಬಗ್ಗೆ ಏನೂ ತಿಳಿದಿರಲಿಲ್ಲ. ಆದರೆ ಇದು ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುತ್ತದೆ ಎಂದು ಅವರು ಹೇಳಿದಾಗ ನಾನು ಈ ಸವಾಲನ್ನು ಸ್ವೀಕರಿಸಿದೆ,” ಎಂದು ಕರುವಿ ಹುಟ್ಟಿನ ಹಿಂದಿನ ಸ್ವಾರಸ್ಯಕರ ಕಥೆಯನ್ನು ಹಂಚಿಕೊಂಡಿದ್ದಾರೆ.

ಭಾರತವು ಸಾಫ್ಟ್‌ವೇರ್‌ನಲ್ಲಿ ಸಾಧಿಸಿರುವ ಯಶಸ್ಸನ್ನು ಈಗ ಹಾರ್ಡ್‌ವೇರ್ ಮತ್ತು ಮೆಕ್ಯಾನಿಕಲ್ ಉತ್ಪಾದನಾ ವಲಯದಲ್ಲೂ ಸಾಧಿಸಬಹುದು ಎಂಬುದಕ್ಕೆ ಶ್ರೀಧರ್ ವೆಂಬು ಅವರ ಈ ‘ಕರುವಿ’ ಪ್ರಮುಖ ಉದಾಹರಣೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ದಾಳಿ; ಭಾರತೀಯ ಪ್ರಜೆಯ ದುರಂತ ಸಾವು – Kannada News

ಕುವೈತ್, ಜೂನ್ 3: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು ಮತ್ತಷ್ಟು ತಾರಕಕ್ಕೇರಿದೆ. ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ (Iran Attack) ನಡೆಸಿರುವ ಭೀಕರ ಡ್ರೋನ್ ದಾಳಿಯಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ. ಈ ಘಟನೆಯು ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಲಕ್ಷಾಂತರ ಭಾರತೀಯರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಕುವೈತ್ ವಿಮಾನ ನಿಲ್ದಾಣದ ಆವರಣದ ಮೇಲೆ ಏಕಕಾಲದಲ್ಲಿ ಹಲವು ಡ್ರೋನ್‌ಗಳು ಅಪ್ಪಳಿಸಿದ್ದು, ಭಾರಿ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಇರಾನ್ ಸೇನೆಯು ಕುವೈತ್ ವಿಮಾನ ನಿಲ್ದಾಣದ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದೆ. ಡ್ರೋನ್‌ಗಳು ಅಪ್ಪಳಿಸುತ್ತಿದ್ದಂತೆ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು. ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಯಿತು.

ಇದನ್ನೂ ಓದಿ: ಕುವೈತ್, ಬಹ್ರೇನ್‌ನಲ್ಲಿರುವ ಅಮೆರಿಕ ನೆಲೆಗಳ ಮೇಲೆ ಇರಾನ್ ದಾಳಿ

ಈ ದಾಳಿಯ ಸಮಯದಲ್ಲಿ ವಿಮಾನ ನಿಲ್ದಾಣದ ತಾಂತ್ರಿಕ ಅಥವಾ ನಿರ್ವಹಣಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತೀಯ ಪ್ರಜೆಯೊಬ್ಬರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ವಿವರ ಇನ್ನೂ ಬಹಿರಂಗವಾಗಿಲ್ಲ.

ಇತ್ತೀಚಿನ ದಿನಗಳಲ್ಲಿ ಇರಾನ್ ಮತ್ತು ಅಮೆರಿಕ ಬೆಂಬಲಿತ ಗಲ್ಫ್ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಹಾಗೂ ಸೇನಾ ಸಂಘರ್ಷ ತೀವ್ರಗೊಂಡಿದೆ. ಅಮೆರಿಕದ ಮಿಲಿಟರಿ ಬೇಸ್‌ಗಳು ಅಥವಾ ಪಾಶ್ಚಿಮಾತ್ಯ ದೇಶಗಳಿಗೆ ಸಹಕರಿಸುತ್ತಿರುವ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಇರಾನ್ ಈ ದಾಳಿ ನಡೆಸಿದೆ ಎಂದು ರಕ್ಷಣಾ ವಲಯದ ತಜ್ಞರು ವಿಶ್ಲೇಷಿಸಿದ್ದಾರೆ. ಆದರೆ, ಕುವೈತ್‌ನಂತಹ ಶಾಂತಿಯುತ ರಾಷ್ಟ್ರದ ನಾಗರಿಕ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ಖಂಡನೆಗೆ ಒಳಗಾಗಿದೆ.

ಇದನ್ನೂ ಓದಿ: ಇರಾನ್ ಮೇಲೆ ಮತ್ತೆ ಅಮೆರಿಕದ ‘ಆತ್ಮರಕ್ಷಣಾ ದಾಳಿ’: ಸೈನಿಕರು ಸುರಕ್ಷಿತ

ಈ ಘಟನೆಯ ಬೆನ್ನಲ್ಲೇ ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಲರ್ಟ್ ಆಗಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಮೃತಪಟ್ಟ ಭಾರತೀಯ ಪ್ರಜೆಯ ಮೃತದೇಹವನ್ನು ಶೀಘ್ರವಾಗಿ ಭಾರತಕ್ಕೆ ತರಲು ರಾಯಭಾರ ಕಚೇರಿ ಅಧಿಕಾರಿಗಳು ಕುವೈತ್ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಕುವೈತ್‌ನಲ್ಲಿರುವ ಉಳಿದ ಭಾರತೀಯ ನಾಗರಿಕರು ಸುರಕ್ಷಿತ ಸ್ಥಳಗಳಲ್ಲೇ ಇರುವಂತೆ ಮತ್ತು ಸ್ಥಳೀಯ ಸರ್ಕಾರದ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 5:54 pm, Wed, 3 June 26

Source link

ಡಿಕೆಶಿಗೆ ಪ್ರಧಾನಿ ಮೋದಿ ವಿಶೇಷ ಅಭಿನಂದನೆ!: ಕರ್ನಾಟಕದ ಜನರ ಕಲ್ಯಾಣಕ್ಕಾಗಿ ಕೈಜೋಡಿಸಲಿದೆ ಕೇಂದ್ರ ಸರ್ಕಾರ! – Kannada News

ದೆಹಲಿ, ಜೂ.3: ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿಪ್ರಮಾಣವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಟ್ವಿಟರ್ ಮೂಲಕ ನೂತನ ಮುಖ್ಯಮಂತ್ರಿಗಳಿಗೆ ಶುಭ ಹಾರೈಸಿರುವ ಪ್ರಧಾನಿ ಮೋದಿ ಅವರು, “ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆಗಳು. ಅವರ ಅಧಿಕಾರಾವಧಿ ಯಶಸ್ವಿಯಾಗಲಿ ಎಂದು ಶುಭ ಹಾರೈಸುತ್ತೇನೆ” ಎಂದು ಬರೆದಿದ್ದಾರೆ.

ತಮ್ಮ ಶುಭಾಶಯ ಸಂದೇಶದಲ್ಲಿ ಒಕ್ಕೂಟ ವ್ಯವಸ್ಥೆಯ ಗೌರವವನ್ನು ಎತ್ತಿಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ, “ಕರ್ನಾಟಕದ ಸಾರ್ವಜನಿಕರ ಏಳಿಗೆ ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಮುಂಬರುವ ದಿನಗಳಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಅತ್ಯಂತ ನಿಕಟವಾಗಿ ಮತ್ತು ಜಂಟಿಯಾಗಿ ಕಾರ್ಯನಿರ್ವಹಿಸಲಿದೆ” ಎಂದು ಭರವಸೆ ನೀಡಿದ್ದಾರೆ. ಪ್ರಧಾನಿಯವರ ಈ ಸಕಾರಾತ್ಮಕ ಸಂದೇಶವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಆರೋಗ್ಯಕರ ರಾಜಕೀಯ ಬಾಂಧವ್ಯಕ್ಕೆ ದಿಕ್ಸೂಚಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜಕೀಯ ವೈರತ್ವ ಬದಿಗಿಟ್ಟು ಸಿಎಂ ಡಿಕೆಶಿಗೆ  ವಿಶ್ ಮಾಡಿದ ಹೆಚ್.ಡಿ. ದೇವೇಗೌಡ

ಡಿ.ಕೆ. ಶಿವಕುಮಾರ್ ಅವರಿಗೆ ದೇಶದ ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡ ಅವರು ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಟ್ವಿಟರ್ (X) ಮೂಲಕ ನೂತನ ಮುಖ್ಯಮಂತ್ರಿಗಳಿಗೆ ರಾಜಕೀಯ ಸೌಹಾರ್ದತೆಯ ಸಂದೇಶ ಕಳುಹಿಸಿರುವ ದೊಡ್ಡಗೌಡರು, “ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ಸ್ವೀಕರಿಸಿರುವ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಶುಭಾಶಯಗಳು ಮತ್ತು ಅಭಿನಂದನೆಗಳು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್​​: ಅಷ್ಟಕ್ಕೂ ಯಾರು ಈ ಅಜ್ಜಯ್ಯ?

ಸಿಎಂ ಡಿ.ಕೆ. ಶಿವಕುಮಾರ್ ಗೆ ಬಿ.ಎಸ್. ಯಡಿಯೂರಪ್ಪ ಅಭಿನಂದನೆ

ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕರಾದ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳನ್ನು ಸಲ್ಲಿಸಿದ್ದಾರೆ. ಟ್ವಿಟರ್ (X) ಮೂಲಕ ನೂತನ ಮುಖ್ಯಮಂತ್ರಿಗಳಿಗೆ ರಾಜಕೀಯ ಸೌಹಾರ್ದತೆಯ ಸಂದೇಶ ಕಳುಹಿಸಿರುವ ಬಿಎಸ್‌ವೈ, “ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು” ಎಂದು ತಿಳಿಸಿದ್ದಾರೆ.

ಸಿಕ್ಕ ಅವಕಾಶವನ್ನು ರಾಜ್ಯದ ಅಭಿವೃದ್ಧಿಗೆ ಬಳಸಿ: ಡಿಕೆಶಿಗೆ ಹೆಚ್​​.ಡಿ.ಕುಮಾರಸ್ವಾಮಿ ಹಾರೈಕೆ

ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳನ್ನು ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ನೂತನ ಮುಖ್ಯಮಂತ್ರಿಗಳಿಗೆ ರಾಜಕೀಯ ಸೌಹಾರ್ದತೆಯ ಸಂದೇಶ ಕಳುಹಿಸಿರುವ ಹೆಚ್‌ಡಿಕೆ, “ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು” ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಿಯಾಂಕ್ ಖರ್ಗೆ, UT ಖಾದರ್, ಈಶ್ವರ್ ಖಂಡ್ರೆ ಪರಿಚಯ – Kannada News

ಬೆಂಗಳೂರು, ಜೂನ್ 03): ಕರ್ನಾಟಕದ (karnataka) 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಪ್ರಮಾಣವಚನವನ್ನು ಸ್ವೀಕರಿಸಿದರು. ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರು ಸಿಎಂ ಪ್ರತಿಜ್ಞಾವಿಧಿ ಬೋಧಿಸಿದರು. ಡಿ.ಕೆ. ಶಿವಕುಮಾರ್ ಅವರೊಂದಿಗೆ ಉಪಮುಖ್ಯಮಂತ್ರಿಯಾಗಿ ಡಾ.ಜಿ. ಪರಮೇಶ್ವರ ಸ್ವೀಕರಿಸಿದರೆ, ಯುಟಿ ಖಾದರ್, ಈಶ್ವರ್ ಖಂಡ್ರೆ ಹಾಗೂ ಪ್ರಿಯಾಂಕ್ ಖರ್ಗೆ ಅವರು ಸಂಪುಟ ದರ್ಜೆ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದರು. ವಿಶೇಷ ಅಂದ್ರೆ ಖಂಡ್ರೆ ಹಾಗೂ ಖರ್ಗೆ ಮೂರನೇ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಮುಖ್ಯಾಂಶಗಳು

  • ಮೂರನೇ ಬಾರಿಗೆ ಸಚಿವರಾದ ಈಶ್ವರ್ ಖಂಡ್ರೆ
  • ಕ್ಯಾಬಿನೆಟ್ ಸಚಿವರಾಗಿ ಪ್ರಿಯಾಂಕ್ ಖರ್ಗೆ ಪ್ರಮಾಣವಚನ
  • ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಯುಟಿ ಖಾದರ್ ಸಚಿವರಾಗಿ ಅಧಿಕಾರ ಸ್ವೀಕಾರ

ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ಕ್ಷೇತ್ರದ ಶಾಸಕರಾಗಿರುವ ಯು.ಟಿ.ಖಾದರ್ ದೇವರ ಹೆಸರಿನಲ್ಲಿ ಸಚಿವರಾಗಿ ಪ್ರಮಣವಚನ ಸ್ವೀಕರಿಸಿದರೆ, ಭಾಲ್ಕಿ ಕ್ಷೇತ್ರದ ಈಶ್ವರ ಖಂಡ್ರೆ ಅವರು ದೇವರು, ಚನ್ನಬಸವ ಪಟ್ಟದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. ಇನ್ನು ಕಲಬುರಗಿ ಜಿಲ್ಲೆ ಚಿತ್ತಾಪುರ ಕ್ಷೇತ್ರದ ಶಾಸಕರಾಗಿರುವ ಪ್ರಿಯಾಂಕ್ ಖರ್ಗೆ ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ ಎಂದು ಅಧಿಕಾರ ಸ್ವೀಕರಿಸಿದರು.

5 ಬಾರಿ ಶಾಸಕರಾಗಿ ಯು.ಟಿ.ಖಾದರ್‌ ಬಗ್ಗೆ

ಈವರೆಗೆ 5 ಬಾರಿ ಶಾಸಕರಾಗಿ ಯು.ಟಿ.ಖಾದರ್‌ ಆಯ್ಕೆಯಾಗಿದ್ದಾರೆ. 2007ರಲ್ಲಿ ಮೊದಲ ಸಲ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ರು. 2013ರಲ್ಲಿ ಆರೋಗ್ಯ & ಕುಟುಂಬ ಕಲ್ಯಾಣ ಸಚಿವರಾಗಿದ್ದರು. 2016ರಲ್ಲಿ ಆಹಾರ, ನಾಗರಿಕ ಪೂರೈಕೆ ಖಾತೆ ನಿರ್ವಹಣೆ ಮಾಡಿದ್ರು. 2018ರಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಖಾತೆ ನಿಭಾಯಿಸಿದ್ದರು. ಚಾಮರಾಜನಗರ, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ್ರು. 2022ರಲ್ಲಿ ವಿಧಾನಸಭೆ ಪ್ರತಿಪಕ್ಷ ಉಪನಾಯಕರಾಗಿದ್ದರು. 2023ರಲ್ಲಿ ಸಿದ್ದರಾಮಯ್ಯ ಅವಧಿಯಲ್ಲಿ ವಿಧಾನಸಭೆ ಸ್ಪೀಕರ್‌ ಆಗಿ ಆಯ್ಕೆಯಾಗಿದ್ರು.

ಪ್ರಿಯಾಂಕ್ ಖರ್ಗೆ ರಾಜಕೀಯ ಜರ್ನಿ

ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಪ್ರಿಯಾಂಕ್ ಖರ್ಗೆ, 2013ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶ ಮಾಡಿದ್ದರು. 2016 ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಪದಾರ್ಪಣೆ ಮಾಡೋ ಮೂಲಕ ಐಟಿ, ಬಿಟಿ ಮತ್ತು ಪ್ರವಾಸೋದ್ಯಮ ಸಚಿವರಾಗಿ ಪ್ರಿಯಾಂಕ್ ಸೇವೆ ಸಲ್ಲಿಸಿದ್ದರು. ಇನ್ನು 2018ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಬಾರಿಗೆ ಗೆದ್ದು ಬೀಗಿದ್ದರು. ಆಗಲೂ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ಸಮಾಜ ಕಲ್ಯಾಣ ಇಲಾಖೆ ನಿರ್ವಹಿಸಿದ್ದರು. 2023ರಲ್ಲಿ ಚಿತ್ತಾಪುರ ಕ್ಷೇತ್ರದಿಂದ 3ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ, ಸಿದ್ದರಾಮಯ್ಯ ಸಂಪುಟದಲ್ಲಿ ಐಟಿ-ಬಿಟಿ ಸಚಿವರಾಗಿದ್ದ ಪ್ರಿಯಾಂಕ್, ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಗಳನ್ನು ನಿರ್ವಹಣೆ ಮಾಡಿದ್ದಾರೆ.

3ನೇ ಬಾರಿಗೆ ಸಚಿವರಾದ ಈಶ್ವರ್ ಖಂಡ್ರೆ

ಬೀದರ್ ಜಿಲ್ಲೆಯ ಭಾಲ್ಕಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಈಶ್ವರ ಖಂಡ್ರೆ ಈ ವರೆಗೆ ಅವರು ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. 2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾಗಿದ್ದ ಖಂಡ್ರೆ, ಬಳಿಕ 2023ರ ಮತ್ತೊಮ್ಮೆ ಸಿದ್ದರಾಮಯ್ಯ ಸಂಪುಟದಲ್ಲಿ ಅರಣ್ಯ ಸಚಿವರಾಗಿದ್ದರು. ಇದೀಗ ಡಿಕೆ ಶಿವಕುಮಾರ್ ಸಂಪುಟದಲ್ಲೂ ಸಹ ಕ್ಯಾಬಿನೆಟ್ ಸಚಿವರಾಗಿದ್ದಾರೆ. ಅಲ್ಲದೇ ಈ ಹಿಂದೆ ಕೆಪಿಸಿಸಿ ಕಾರ್ಯಧ್ಯಕ್ಷರಾಗಿದ್ದರು. ಅಲ್ಲದೇ ಇದೀಗ ಅವರು ರಾಷ್ಟ್ರೀಯ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾಗಿದ್ದಾರೆ.

Source link

ಒಟಿಟಿಗಳ ಮೇಲೆ ಆಸೆ ಬಿಟ್ಟು ಬಿಡಿ: ಅಲ್ಲು ಅರ್ಜುನ್ ತಂದೆ ಸಲಹೆ – Kannada News

ಕೋವಿಡ್ (Covid) ಬಳಿಕ ಚಿತ್ರರಂಗದಲ್ಲಿ ಭಾರಿ ದೊಡ್ಡ ಬದಲಾವಣೆಗಳನ್ನು ಈ ಒಟಿಟಿಗಳು (OTT) ತಂದಿವೆ. ಸಿನಿಮಾ ನಿರ್ಮಾಪಕರಿಗೆ ಭಾರಿ ದೊಡ್ಡ ನಿರಾಳತೆಯನ್ನು ಒಟಿಟಿಗಳು ನೀಡಿದ್ದು, ಕೇವಲ ಬಾಕ್ಸ್ ಆಫೀಸ್, ಆಡಿಯೋ ರೈಟ್ಸ್ ಮತ್ತು ಟಿವಿ ರೈಟ್ಸ್ ಮೇಲೆ ನಿರ್ಭರವಾಗಿದ್ದ ನಿರ್ಮಾಪಕರಿಗೆ ಮತ್ತೊಂದು ದೊಡ್ಡ ಆದಾಯದ ದಾರಿಯನ್ನು ಈ ಒಟಿಟಿಗಳು ತೆರೆದು ಕೊಟ್ಟಿವೆ. ಈಗಂತೂ ಹಲವು ಸಿನಿಮಾಗಳು ಒಟಿಟಿ ಆದಾಯವೊಂದನ್ನೇ ನಂಬಿಕೊಂಡು ನಿರ್ಮಾಣ ಆಗುತ್ತಿವೆ. ಆದರೆ ಇದೀಗ ತೆಲುಗು ಚಿತ್ರರಂಗದ ಬಲು ಹಿರಿಯ ಮತ್ತು ಯಶಸ್ವಿ ನಿರ್ಮಾಪಕರಾಗಿರುವ ಅಲ್ಲು ಅರವಿಂದ್ ಅವರು, ಒಟಿಟಿಗಳ ಮೇಲಿನ ನಂಬಿಕೆಯನ್ನು ಬಿಟ್ಟುಬಿಡಿ ಎಂದು ಕರೆ ನೀಡಿದ್ದಾರೆ.

ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ದಶಕಗಳಿಂದಲೂ ಚಿತ್ರರಂಗದಲ್ಲಿರುವವರು. ತೆಲುಗು ಚಿತ್ರರಂಗದ ವೃತ್ತಿಪರ ಸಿನಿಮಾ ನಿರ್ಮಾಪಕ ಎಂದು ಹೆಸರಾಗಿರುವವರು. ತೆಲುಗು ಮಾತ್ರವಲ್ಲದೆ ಬಾಲಿವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಅಲ್ಲು ಅರವಿಂದ್ ನೀಡಿದ್ದಾರೆ. ಲೆಕ್ಕಾಚಾರದಲ್ಲಿ ಮಾಸ್ಟರ್ ಎನಿಸಿಕೊಂಡಿರುವ ಅಲ್ಲು ಅರವಿಂದ್ ಇದೀಗ ಒಟಿಟಿಗಳ ಬಗ್ಗೆ ನೆಗೆಟಿವ್ ಆಗಿ ಮಾತನಾಡಿರುವುದು ಗಮನ ಸೆಳೆದಿದೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅಲ್ಲು ಅರವಿಂದ್, ‘ಒಟಿಟಿಗಳಿಂದ ಸಿನಿಮಾ ನಿರ್ಮಾಣ ವೆಚ್ಚದ ಅರ್ಧ ಹಣ ಬಂದುಬಿಡುತ್ತದೆ ಎಂಬ ಆಸೆ ಇಟ್ಟುಕೊಳ್ಳುವುದು ಬೇಡ. ಈಗ ಕಾಲ ಬದಲಾಗಿದೆ. ಒಟಿಟಿಗಳ ಕಾಲ ಮುಗಿದಿದೆ. ಒಟಿಟಿಗಳು ಈಗ ಬಹಳ ಚ್ಯೂಸಿ ಆಗಿಬಿಟ್ಟಿವೆ. ನಿರ್ಮಾಪಕರು ಕೇಳಿದಷ್ಟು ಹಣ ಕೊಡಲು ಅವರು ತಯಾರಿಲ್ಲ. ಅವರು ಅಳೆದು ತೂಗಿ ಸಿನಿಮಾಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಹಾಗಾಗಿ ಒಟಿಟಿಗಳ ಮೇಲೆ ಆಸೆಯನ್ನು ಬಿಟ್ಟುಬಿಡುವುದು ಒಳ್ಳೆಯದು’ ಎಂದಿದ್ದಾರೆ ಅಲ್ಲು ಅರವಿಂದ್.

ಇದನ್ನೂ ಓದಿ:ಈ ವಾರ ಒಟಿಟಿಯಲ್ಲಿ ಭರ್ಜರಿ ಸಿನಿಮಾಗಳು, ತಪ್ಪದೇ ನೋಡಿ

‘ಯಾರೋ ಕೆಲವು ನಿರ್ದೇಶಕರು ಮತ್ತು ಕೆಲವು ನಟರ ಸಿನಿಮಾಗಳನ್ನಷ್ಟೆ ಒಟಿಟಿಗಳು ಹಿಂದೆ-ಮುಂದೆ ನೋಡದೆ ಖರೀದಿ ಮಾಡುತ್ತಿದೆ. ಆದರೆ ಮುಂಚಿನಂತೆ ಎಲ್ಲ ಸಿನಿಮಾಗಳಿಗೂ ಉತ್ತಮ ಮೌಲ್ಯವನ್ನು ಅವು ನೀಡುತ್ತಿಲ್ಲ. ಈಗ ಒಟಿಟಿಗಳು ಸಾಕಷ್ಟು ಬದಲಾಗಿವೆ. ನಾನು ಸಹ ಈಗ ನನ್ನ ನಿರ್ಮಾಣ ಸಂಸ್ಥೆಯ ಕ್ರಿಯೇಟಿವ್ ಹೆಡ್ ಹಾಗೂ ಇತರೆ ಎಕ್ಸಿಕ್ಯೂಟಿವ್​​ಗಳಿಗೆ ಈ ಬಗ್ಗೆ ಎಚ್ಚರಿಸಿಬಿಟ್ಟಿದ್ದೇನೆ. ಚಿತ್ರಮಂದಿರದಲ್ಲಿ ಹಿಟ್ ಆಗುವ ನಿರ್ದೇಶಕ-ನಟರ ಕಾಂಬಿನೇಷನ್​​ನ ಸಿನಿಮಾಗಳ ಮೇಲೆ ಮಾತ್ರವೇ ಬಂಡವಾಳ ಹೂಡುವಂತೆ ಹೇಳಿದ್ದೇನೆ’ ಎಂದಿದ್ದಾರೆ ಅಲ್ಲು ಅರವಿಂದ್.

‘ಚಿತ್ರಮಂದಿರಗಳಲ್ಲಿ ವರ್ಕೌಟ್ ಆಗದ ಸಿನಿಮಾಗಳು ಇನ್ಯಾವುದೇ ಫ್ಲ್ಯಾಟ್​​ಫಾರ್ಮ್​​ನಲ್ಲಿ ಸಹ ವರ್ಕೌಟ್ ಆಗುವುದಿಲ್ಲ. ಅದು ಖಾತ್ರಿ. ಚಿತ್ರಮಂದಿರದಲ್ಲಿ ಹಿಟ್ ಆದರೆ ಬೇರೆಲ್ಲ ಫ್ಲ್ಯಾಟ್​​ಫಾರ್ಮ್​​ನಲ್ಲೂ ಸಿನಿಮಾ ವರ್ಕೌಟ್ ಆಗುತ್ತದೆ. ಒಟಿಟಿ, ಟಿವಿ ಏನೇ ಇದ್ದರು, ಮೊದಲು ಚಿತ್ರಮಂದಿರದಲ್ಲಿ ಸಿನಿಮಾ ಹಿಟ್ ಆಗುವುದು ಕಡ್ಡಾಯ’ ಎಂದಿದ್ದಾರೆ ಅವರು.

ಅಂದಹಾಗೆ ಅಲ್ಲು ಅರವಿಂದ್ ಅವರು ಖುದ್ದು ಒಂದು ಒಟಿಟಿಯ ಮಾಲೀಕರಾಗಿದ್ದಾರೆ. ಅವರು ತೆಲುಗಿನ ‘ಆಹಾ’ ಒಟಿಟಿಯ ಮಾಲೀಕರಾಗಿದ್ದು, ಆಹಾ ಒಟಿಟಿಯಲ್ಲಿ ಕೆಲವು ಒಳ್ಳೆಯ ತೆಲುಗು ಶೋಗಳನ್ನು ನಡೆಸುತ್ತಾರೆ. ಆ ಒಟಿಟಿ ಕೇವಲ ತೆಲುಗು ಕಂಟೆಂಟ್ ಅನ್ನು ಮಾತ್ರವೇ ಪ್ರಮೋಟ್ ಮಾಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version