ಕನಕಗಿರಿಯಲ್ಲಿ ಅಕ್ರಮ ಮದ್ಯ ಮಾರಾಟ ಹಾವಳಿ: ನೆಮ್ಮದಿ ಕಳೆದುಕೊಂಡು ಬೀದಿಗಿಳಿದು ಕಣ್ಣೀರು ಹಾಕಿದ ಮಹಿಳೆಯರು! – Kannada News | Koppal: Women Protest in Kanakagiri Against Rampant Illegal Liquor Sales in Residential Areas

ನೆಮ್ಮದಿ ಕಳೆದುಕೊಂಡು ಬೀದಿಗಿಳಿದು ಕಣ್ಣೀರು ಹಾಕಿದ ಮಹಿಳೆಯರು

ಕೊಪ್ಪಳ, ಜುಲೈ 15: ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಅಕ್ರಮ ಮದ್ಯ ಮಾರಾಟ ಜಾಲ ಹೆಮ್ಮರವಾಗಿ ಬೆಳೆದಿದ್ದು, ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಬದುಕು ನಡೆಸುವುದೇ ದುಸ್ತರವಾಗಿದೆ. ಪಟ್ಟಣದ 16 ನೇ ವಾರ್ಡ್‌ನಲ್ಲಿ ಅಕ್ರಮ ಮದ್ಯ ಮಾರಾಟ ಮಿತಿಮೀರಿದ್ದು, ಸಣ್ಣ ಪುಟ್ಟ ಕಿರಾಣಿ ಅಂಗಡಿಗಳು, ಹೋಟೆಲ್‌ಗಳು ಹಾಗೂ ಮನೆಗಳೇ ಈಗ ಮದ್ಯದ ಅಡ್ಡೆಗಳಾಗಿ ಮಾರ್ಪಟ್ಟಿವೆ. ಇದರಿಂದ ರೋಸಿಹೋದ ಸ್ಥಳೀಯ ಮಹಿಳೆಯರು ಇಂದು ಬೀದಿಗಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಗಲ್ಲಿ ಗಲ್ಲಿಗಳಲ್ಲೂ ರಾಜಾರೋಷವಾಗಿ ದಂಧೆ

ಕನಕಗಿರಿಯಲ್ಲಿ ಲೈಸೆನ್ಸ್ ಇಲ್ಲದಿದ್ದರೂ ಪ್ರತಿಯೊಂದು ಗಲ್ಲಿಗಳಲ್ಲಿ, ಸಣ್ಣ ಪುಟ್ಟ ಡಾಬಾಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಅಕ್ರಮ ದಂಧೆಯ ದೃಶ್ಯಗಳನ್ನು ಸ್ಥಳೀಯ ನಿವಾಸಿಗಳು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದು, ಸಾರ್ವಜನಿಕವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಾನೂನಿನ ಯಾವುದೇ ಭಯವಿಲ್ಲದೆ ಸಣ್ಣ ಮಕ್ಕಳ ಕೈಯಲ್ಲೂ ಮದ್ಯ ಸಿಗುವಂತಹ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮನೆಗಳಲ್ಲಿ ಊಟಕ್ಕೂ ಗತಿಯಿಲ್ಲ

ಸ್ಥಳೀಯ ಮಹಿಳೆಯರು ಕಣ್ಣೀರು ಹಾಕುತ್ತಾ, ನಮ್ಮ ವಾರ್ಡ್‌ನಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಮನೆ ಮನೆಗಳಲ್ಲೂ ಮದ್ಯ ಸಿಗುತ್ತಿರುವುದರಿಂದ ಪುರುಷರು ದುಡಿದ ಹಣವನ್ನೆಲ್ಲಾ ಕುಡಿತಕ್ಕೆ ಸುರಿಯುತ್ತಿದ್ದಾರೆ. ಇತ್ತ ಮನೆಯಲ್ಲಿ ಊಟಕ್ಕೂ ಗತಿಯಿಲ್ಲದಂತಾಗಿದೆ. ಸಂಜೆ ವೇಳೆಗೆ ಹೆಣ್ಣುಮಕ್ಕಳು, ವಿದ್ಯಾರ್ಥಿನಿಯರು ರಸ್ತೆಯಲ್ಲಿ ಓಡಾಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಈ ಅಕ್ರಮ ಮಾರಾಟವನ್ನು ಬಂದ್ ಮಾಡಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಪವಿತ್ರ ದೇವಸ್ಥಾನದ ಸುತ್ತಮುತ್ತಲಿನ ಪರಿಸರದಲ್ಲೇ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.

ಪ್ರತಿಭಟನೆಯಲ್ಲಿ ಸ್ಥಳೀಯ ನಿವಾಸಿಗಳಾದ ಶಿಲ್ಪಾ, ಪದಮ್ಮ, ಸಿದ್ದಲಿಂಗಮ್ಮ, ಅಯ್ಯಮ್ಮ, ಗೌರಮ್ಮ, ಚಾಂದಿನಿಬೇಗಂ, ಸಾವಿತ್ರಮ್ಮ, ಶಿವಮ್ಮ, ಲಕ್ಷ್ಮೀ, ದೂಡ್ಡಲಕ್ಷ್ಮೀ, ದುರಗಮ್ಮ, ರೇಣುಕಾ, ದೀಪಮ್ಮ, ಹುಲಿಗೆಮ್ಮ ಸೇರಿದಂತೆ ಹಲವರು ಭಾಗಿಯಾಗಿದ್ದರು. ಅಕ್ರಮ ಮದ್ಯದ ಅಡ್ಡೆಗಳ ಮೇಲೆ ತಕ್ಷಣ ದಾಳಿ ನಡೆಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ವಾರ್ಡ್‌ಗಳಲ್ಲಿ ಸೂಕ್ತ ಪೊಲೀಸ್ ಗಸ್ತು ವ್ಯವಸ್ಥೆ ಜಾರಿಗೊಳಿಸಬೇಕು ಎನ್ನುವುದು ಇವರ ಮುಖ್ಯ ಬೇಡಿಕೆಯಾಗಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಈ ಅಕ್ರಮ ದಂಧೆಗೆ ಬ್ರೇಕ್ ಹಾಕುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಮ ಮಂದಿರಕ್ಕೆ ಬೇಕಾಗಿದ್ದಾರೆ ಬಾಸ್: ಸಿಇಒ ಹುದ್ದೆಗೆ 1,000 ಮಂದಿಯಿಂದ ಅರ್ಜಿ, ಜುಲೈ 22ಕ್ಕೆ ಅಂತಿಮ ಮುದ್ರೆ – Kannada News | Ram Mandir Ayodhya CEO: Over 1000 Applications for Key Role, Selection by July 22

ಅಯೋಧ್ಯೆ, ಜುಲೈ 15: ಜಗತ್ಪ್ರಸಿದ್ಧ ಅಯೋಧ್ಯೆಯ ರಾಮ ಮಂದಿರ(Ram Mandir)ದಲ್ಲಿ ಇತ್ತೀಚೆಗೆ ಕೇಳಿಬಂದಿದ್ದ ದೇಣಿಗೆ ದುರುಪಯೋಗದ ಆರೋಪಗಳಿಗೆ ಶಾಶ್ವತ ಬ್ರೇಕ್ ಹಾಕಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾಸ್ಟರ್ ಪ್ಲಾನ್ ಮಾಡಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಮಂದಿರದ ದೈನಂದಿನ ನಿರ್ವಹಣೆಗಾಗಿ ‘ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ’ (CEO) ಹುದ್ದೆಯನ್ನು ಸೃಷ್ಟಿಸಲಾಗಿದ್ದು, ಈ ಉನ್ನತ ಹುದ್ದೆಗಾಗಿ ಕೇವಲ 5 ದಿನಗಳಲ್ಲಿ ಬರೋಬ್ಬರಿ 1,000 ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದವರಲ್ಲಿ ದೇಶದ ಹಿರಿಯ ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು, ಮಾಜಿ ಸೇನಾ ಅಧಿಕಾರಿಗಳು, ಪ್ರಸಿದ್ಧ ರಾಜಕಾರಣಿಗಳು ಹಾಗೂ ಪ್ರಭಾವಿ ಕಾರ್ಪೊರೇಟ್ ವಲಯದ ತಜ್ಞರು ಸೇರಿದ್ದಾರೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಜುಲೈ 18, 2026

ಅರ್ಜಿಗಳ ಪರಿಶೀಲನೆ ಆರಂಭ: ಜುಲೈ 19, 2026

ಅಂತಿಮ ಆಯ್ಕೆ ಪ್ರಕಟಣೆ: ಜುಲೈ 22, 2026 (ಟ್ರಸ್ಟ್‌ನ ಮಹತ್ವದ ಸಭೆಯಲ್ಲಿ ನಿರ್ಧಾರ)

ಅರ್ಹತೆಗಳೇನು? ‘ರಾಮಭಕ್ತ’ ಆಗಿರುವುದು ಕಡ್ಡಾಯ
ರಾಮ ಮಂದಿರದ ಸಿಇಒ ಹುದ್ದೆ ಸುಮ್ಮನೆ ಸಿಗುವಂತದ್ದಲ್ಲ. ಇದಕ್ಕೆ ಟ್ರಸ್ಟ್ ಅತ್ಯಂತ ಕಠಿಣ ಮತ್ತು ಕಟ್ಟುನಿಟ್ಟಾದ ನಿಯಮಗಳನ್ನು ರೂಪಿಸಿದೆ.

ವಯಸ್ಸು ಮತ್ತು ಅನುಭವ: ಅಭ್ಯರ್ಥಿಗೆ 50 ರಿಂದ 70 ವರ್ಷ ವಯಸ್ಸಾಗಿರಬೇಕು. ಯಾವುದೇ ದೊಡ್ಡ ಸರ್ಕಾರಿ ಇಲಾಖೆ, ಸಂಸ್ಥೆ ಅಥವಾ ಕಂಪನಿಯಲ್ಲಿ ಕನಿಷ್ಠ 20 ವರ್ಷಗಳ ಉನ್ನತ ವ್ಯವಸ್ಥಾಪಕ ಅನುಭವ ಇರಬೇಕು.

ಧಾರ್ಮಿಕ ಹಿನ್ನೆಲೆ: ಅಭ್ಯರ್ಥಿಯು ಕಡ್ಡಾಯವಾಗಿ ಹಿಂದೂ ಧರ್ಮವನ್ನು ಪಾಲಿಸುವವರಾಗಿರಬೇಕು ಮತ್ತು ‘ಶ್ರೀರಾಮನ ಪರಮ ಭಕ್ತ’ ಆಗಿರಬೇಕು. ಅದರಲ್ಲೂ ವೈಷ್ಣವ ಸಂಪ್ರದಾಯಕ್ಕೆ ಸೇರಿದವರಾಗಿದ್ದರೆ ಮೊದಲ ಆದ್ಯತೆ ನೀಡಲಾಗುತ್ತದೆ.

ಭಾಷಾ ಜ್ಞಾನ: ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಮತ್ತು ಬರೆಯುವ ಜ್ಞಾನವಿರಬೇಕು.

ಮತ್ತಷ್ಟು ಓದಿ: ರಾಮ ಮಂದಿರ ಹಗರಣ: ಸಂತೋಷ್ ದುಬೆ ವಿಚಾರಣೆ, ಮಹತ್ವದ ಸಾಕ್ಷಿ ಸಲ್ಲಿಕೆಗೆ ಇಂದೇ ಗಡುವು

ಆಯ್ಕೆಯಾಗುವ ಸಿಇಒ ಅವರನ್ನು ಆರಂಭದಲ್ಲಿ 3 ವರ್ಷಗಳ ಒಪ್ಪಂದದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅವರ ಕೆಲಸದ ದಕ್ಷತೆಯನ್ನು ನೋಡಿ ಅವಧಿಯನ್ನು ವಿಸ್ತರಿಸಲಾಗುತ್ತದೆ. ಇವರ ಕಚೇರಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲೇ ಇರಲಿದ್ದು, ವೇತನವನ್ನು ಚರ್ಚೆಯ ಮೂಲಕ ನಿಗದಿಪಡಿಸಲಾಗುತ್ತದೆ.

ಆಯ್ಕೆ ಮಾಡುವುದು ಯಾರು? ಸಾವಿರಾರು ಅರ್ಜಿಗಳ ಪೈಕಿ ಅತ್ಯಂತ ಪ್ರಾಮಾಣಿಕ ಮತ್ತು ದಕ್ಷ ವ್ಯಕ್ತಿಯನ್ನು ಹುಡುಕಲು ಟ್ರಸ್ಟ್ ಮೂವರು ಸದಸ್ಯರ ಹೈ-ಪ್ರೊಫೈಲ್ ಸಮಿತಿಯನ್ನು ರಚಿಸಿದೆ.

ನ್ಯಾ. ಪ್ರಮೋದ್ ಕೊಹ್ಲಿ

ಲೆಫ್ಟಿನೆಂಟ್ ಜನರಲ್ ವಿಷ್ಣುಕಾಂತ್ ಚತುರ್ವೇದಿ (ನಿವೃತ್ತ ಸೇನಾ ಅಧಿಕಾರಿ)

ಸುರೇಶ್ ಹವಾರೆ (ಖ್ಯಾತ ಟ್ರಸ್ಟಿ)

ತಿರುಪತಿ ಮಾದರಿಯಲ್ಲಿ ಅಯೋಧ್ಯೆ ನಿರ್ವಹಣೆ
ರಾಮ ಮಂದಿರಕ್ಕೆ ಕೋಟ್ಯಂತರ ರೂಪಾಯಿ ದೇಣಿಗೆ ಹರಿದು ಬರುತ್ತಿದ್ದು, ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದಾರೆ. ಇಷ್ಟೊಂದು ದೊಡ್ಡ ವ್ಯವಸ್ಥೆಯನ್ನು ಕೇವಲ ಅರ್ಚಕರು ಅಥವಾ ಟ್ರಸ್ಟಿಗಳು ಮಾತ್ರ ನಿರ್ವಹಿಸುವುದು ಕಷ್ಟಸಾಧ್ಯ.

ತಿರುಪತಿ ಮಾದರಿ ಆಡಳಿತ: ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನವನ್ನು (TTD) ಐಎಎಸ್ ಅಧಿಕಾರಿಗಳು ಐಎಎಸ್ ಮಾದರಿಯಲ್ಲೇ ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸುತ್ತಾರೆ. ಅದೇ ಮಾದರಿಯನ್ನು ಈಗ ಅಯೋಧ್ಯೆಯಲ್ಲೂ ತರಲಾಗುತ್ತಿದ್ದು, ಆಡಳಿತ, ಹಣಕಾಸು, ಭದ್ರತೆ, ಮಾನವ ಸಂಪನ್ಮೂಲ (HR) ಮತ್ತು ಐಟಿ (IT) ವಿಭಾಗಗಳನ್ನು ಈ ಹೊಸ ಸಿಇಒ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಪಾರದರ್ಶಕತೆಗೆ ಆದ್ಯತೆ: ಇತ್ತೀಚಿನ ವಿವಾದಗಳಿಂದ ಟ್ರಸ್ಟ್‌ನ ಇಮೇಜ್‌ಗೆ ಧಕ್ಕೆಯಾಗಿತ್ತು. ಈಗ ಹೊಸ ಸಿಇಒ ನೇಮಕದಿಂದ ಇಡೀ ಮಂದಿರದ ಆರ್ಥಿಕ ವಹಿವಾಟು ಅತ್ಯಂತ ಪಾರದರ್ಶಕವಾಗಲಿದ್ದು, ಭಕ್ತರ ಪ್ರತಿಯೊಂದು ರೂಪಾಯಿ ಕಾಣಿಕೆಗೂ ಲೆಕ್ಕ ಸಿಗಲಿದೆ. ಇದು ದೇಶದ ಅತಿ ದೊಡ್ಡ ಧಾರ್ಮಿಕ ಕೇಂದ್ರದ ಇತಿಹಾಸದಲ್ಲೇ ಅತ್ಯಂತ ಕ್ರಾಂತಿಕಾರಿ ಆಡಳಿತಾತ್ಮಕ ಬದಲಾವಣೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಎಂಟಿಸಿ ಪ್ರಯಾಣಿಕರೇ ಎಚ್ಚರ: ಪ್ರಯಾಣಿಕರ ಸೋಗಿನಲ್ಲಿ ಬಂದು ಕಂಡಕ್ಟರ್ ಬ್ಯಾಗನ್ನೇ ಎಗಿರಿಸಿದ ಮಹಿಳೆ, ವಿಡಿಯೋ ವೈರಲ್

ಬೆಂಗಳೂರು, ಜುಲೈ 15: ಬೆಂಗಳೂರು ನಗರದಲ್ಲಿ KA 57F 6331 ಸಂಖ್ಯೆಯ ಬಿಎಂಟಿಸಿ ಬಸ್‌ಗೆ ಪ್ರಯಾಣಿಕಳಂತೆ ಹತ್ತಿದ್ದ ಮಹಿಳೆಯೊಬ್ಬಳು ನಿರ್ವಾಹಕರ ಗಮನ ಬೇರೆಡೆ ಇದ್ದಾಗ ಹಣದ ಬ್ಯಾಗ್ ಅನ್ನು ತನ್ನ ಚೀಲದಲ್ಲಿ ಇಟ್ಟುಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ಕಳ್ಳತನದ ಬಳಿಕ ಬಸ್‌ನಲ್ಲೇ ಅಮಾಯಕಳಂತೆ ವರ್ತಿಸುತ್ತಿದ್ದ ವೇಳೆ ನಿರ್ವಾಹಕರಿಗೆ ಅನುಮಾನ ಬಂದಿದೆ. ಬಳಿಕ ಮಹಿಳೆಯನ್ನು ಪ್ರಶ್ನಿಸಿದಾಗ ಆಕೆ ಪರಾರಿಯಾಗಲು ಯತ್ನಿಸಿದ್ದಾಳೆ. ಈ ವೇಳೆ ಸ್ಥಳಕ್ಕೆ ಬಂದ ಮಹಿಳಾ ಪೊಲೀಸ್ ಸಿಬ್ಬಂದಿ ವಿಚಾರಣೆ ನಡೆಸಿದ್ದಾಗ, ‘ನಾನು ಮನೆಗೆ ಹೋಗಬೇಕು, ನನ್ನ ಗಂಡನಿಗೆ ಆರೋಗ್ಯ ಸರಿಯಿಲ್ಲ’ ಎಂದು ಹೇಳುತ್ತಾ ಹೈಡ್ರಾಮಾ ನಡೆಸಿದ್ದಾಳೆ. ಆದರೆ, ಆಕೆಯ ಚೀಲ ಪರಿಶೀಲಿಸಿದಾಗ ನಿರ್ವಾಹಕರ ಹಣದ ಬ್ಯಾಗ್ ಪತ್ತೆಯಾಗಿದೆ.

ಬಸ್ ನಿರ್ವಾಹಕರು ಮಹಿಳೆಯನ್ನು ಪೊಲೀಸರಿಗೆ ಒಪ್ಪಿಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ. ಇತ್ತೀಚಿನ ದಿನಗಳಲ್ಲಿ ಬಸ್ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಸರಗಳ್ಳತನ ಮತ್ತು ಪಿಕ್‌ಪಾಕೆಟ್ ಪ್ರಕರಣಗಳಲ್ಲಿ ಮಹಿಳೆಯರ ಶಾಮೀಲಾಗುವಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಶ್ ಒಬ್ಬ ಕವಿ, ಮುಂಚೆ ಕವಿತೆ ಬರೀತಿದ್ದ: ಯೋಗರಾಜ್ ಭಟ್ – Kannada News | Yogaraj Bhatt said Yash also a poet he used write poems

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇವೆ. ಸಿನಿಮಾದ ‘ತಬಾಹಿ’ ಹಾಡು ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ‘ತಬಾಹಿ’ ಹಾಡನ್ನು ಯೋಗರಾಜ್ ಭಟ್ ಬರೆದಿದ್ದಾರೆ. ಸಿನಿಮಾದ ಹಾಡು ಬರೆದ ಅನುಭವದ ಬಗ್ಗೆ ಅವರು ಟಿವಿ9 ಜೊತೆಗೆ ಮಾತನಾಡಿದ್ದಾರೆ. ಖುದ್ದು ಯಶ್ ಸಹ ಒಬ್ಬ ಕವಿ. ಮುಂಚೆ ಅವರು ಧಾರಾವಾಹಿಗಳಲ್ಲಿ ನಟಿಸುವ ಸಂದರ್ಭದಲ್ಲಿ ಅವರು ಕವಿತೆಗಳನ್ನು ಬರೆಯುತ್ತಿದ್ದರು. ಅವರ ಕವಿತೆಗಳನ್ನು ಆಗ ನಾನೂ ಸಹ ಓದಿದ್ದೆ’ ಎಂದಿದ್ದಾರೆ. ‘ತಬಾಹಿ‘ ಹಾಡು ಬರೆಯುವಾಗ ಸಹ ಯಶ್ ಸಾಕಷ್ಟು ಮೌಲ್ವಿಕ ಸಲಹೆಗಳನ್ನು ನೀಡಿದರು’ ಎಂದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

‘‘ನನ್ನ ಮಗ ಬಾತ್​ರೂಮ್​ನಲ್ಲಿ ಹೆಚ್ಚು ಸಮಯ ಕಳೆಯುತ್ತಾನೆ’’ ಎಂದ ತಾಯಿಗೆ ಮನೋವೈದ್ಯರ ಉತ್ತರವೇನು ನೋಡಿ – Kannada News | Child Spending too much time in bathroom parents psychologist advice

ಮಕ್ಕಳು (Children) ಬೆಳೆದಂತೆ ಅವರ ದೇಹ ಮತ್ತು ಮನಸ್ಸಿನಲ್ಲಿ ಸಹಜವಾಗಿ ಹಲವು ಬದಲಾವಣೆಗಳು ಆರಂಭವಾಗುತ್ತವೆ. ಈ ಸಮಯದಲ್ಲಿ ಅವರ ಕೆಲವು ವರ್ತನೆಗಳು ಪೋಷಕರಲ್ಲಿ ಆತಂಕ ಉಂಟುಮಾಡಬಹುದು. ಅದರಲ್ಲೂ, ಮಗು ಬಾತ್‌ರೂಮ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರೆ “ಯಾವುದಾದರೂ ತಪ್ಪು ಅಭ್ಯಾಸ ಬೆಳೆಸಿಕೊಂಡಿದ್ದಾರೆಯೇ?” ಎಂಬ ಅನುಮಾನ ಹಲವರಿಗೆ ಬರುತ್ತದೆ. ಆದರೆ ಮನೋವೈದ್ಯರು ಹೇಳುವಂತೆ, ಇಂತಹ ಸಂದರ್ಭಗಳಲ್ಲಿ ಆತಂಕ ಅಥವಾ ಗದರಿಕೆಗಿಂತ ತಿಳುವಳಿಕೆಯಿಂದ ನಡೆದುಕೊಳ್ಳುವುದು ಅತ್ಯಂತ ಮುಖ್ಯ.

ಇತ್ತೀಚೆಗೆ ಒಬ್ಬ ತಾಯಿ ತಮ್ಮ 9 ವರ್ಷದ ಮಗ ಬಾತ್‌ರೂಮ್‌ನಲ್ಲಿ ತುಂಬಾ ಹೊತ್ತು ಕಳೆಯುತ್ತಾನೆ ಎಂದು ಮನೋವೈದ್ಯೆ ಕೋಮಲ್ ಬಕ್ಷಿ ಅವರ ಬಳಿ ಆತಂಕ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಮಕ್ಕಳು 8-9 ವರ್ಷದ ವಯಸ್ಸಿನಿಂದ ತಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಕುತೂಹಲ ಹೊಂದುವುದು ಸಹಜ ಎಂದು ಹೇಳಿದ್ದಾರೆ. ಈ ವಯಸ್ಸಿನಲ್ಲಿ ಮಕ್ಕಳು ತಮ್ಮ ದೇಹವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಇದನ್ನು “ಕೆಟ್ಟ ಅಭ್ಯಾಸ” ಎಂದು ಪರಿಗಣಿಸಬಾರದು ಎಂದು ಅವರು ಸಲಹೆ ನೀಡಿದ್ದಾರೆ.

ತಜ್ಞರ ಪ್ರಕಾರ, ದೇಹದ ಬಗ್ಗೆ ಕುತೂಹಲ ಇರುವುದು ಹುಡುಗರಲ್ಲಷ್ಟೇ ಅಲ್ಲ, ಹುಡುಗಿಯರಲ್ಲಿಯೂ ಸಾಮಾನ್ಯ. ತಮ್ಮ ದೇಹದ ರಚನೆ, ಬೆಳವಣಿಗೆ ಮತ್ತು ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಮಕ್ಕಳು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಆದ್ದರಿಂದ ಪೋಷಕರು ಮಕ್ಕಳನ್ನು ಬೈಯಿವುದು, ಗದರಿಸುವುದು ಅಥವಾ “ಇದು ತಪ್ಪು” ಎಂದು ಭಯ ಹುಟ್ಟಿಸುವುದು ಅವರ ಮಾನಸಿಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಇಂತಹ ಸಂದರ್ಭಗಳಲ್ಲಿ ಪೋಷಕರು ಮಾಡಬೇಕಾದ ಮೊದಲ ಕೆಲಸ ಎಂದರೆ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡುವುದು. ದೇಹದಲ್ಲಿ ಆಗುವ ಬದಲಾವಣೆಗಳು ಸಹಜ ಎಂಬುದನ್ನು ಅವರ ವಯಸ್ಸಿಗೆ ತಕ್ಕ ಸರಳ ಭಾಷೆಯಲ್ಲಿ ವಿವರಿಸಬೇಕು. ಮಕ್ಕಳು ಯಾವುದೇ ಪ್ರಶ್ನೆ ಕೇಳಲು ಹಿಂಜರಿಯದಂತಹ ವಾತಾವರಣವನ್ನು ಮನೆಯಲ್ಲಿ ನಿರ್ಮಿಸಬೇಕು. ಹೀಗೆ ಮಾಡಿದರೆ ಅವರು ತಪ್ಪು ಮಾಹಿತಿಯಿಂದ ದೂರವಿರುತ್ತಾರೆ ಮತ್ತು ದೇಹದ ಬಗ್ಗೆ ಆರೋಗ್ಯಕರ ತಿಳುವಳಿಕೆಯನ್ನು ಬೆಳೆಸಿಕೊಳ್ಳುತ್ತಾರೆ.

ಸಂಪೂರ್ಣ ವಿಡಿಯೋವನ್ನು ಇಲ್ಲಿ ವೀಕ್ಷಿಸಿ:

ಇದರ ಜೊತೆಗೆ, ಇಂಟರ್ನೆಟ್‌ನಲ್ಲಿ ಲಭ್ಯವಿರುವ ಅಶ್ಲೀಲ ಅಥವಾ ವಯಸ್ಸಿಗೆ ಸೂಕ್ತವಲ್ಲದ ವಿಷಯಗಳಿಂದ ಮಕ್ಕಳನ್ನು ಸಾಧ್ಯವಾದಷ್ಟು ದೂರವಿಡಬೇಕು. ಮೊಬೈಲ್ ಮತ್ತು ಇಂಟರ್ನೆಟ್ ಬಳಕೆಯ ಮೇಲೆ ಸೂಕ್ತ ನಿಗಾ ಇರಿಸುವುದೂ ಅಗತ್ಯ. ಆದರೆ ಇದು ಮಕ್ಕಳ ಖಾಸಗಿತನಕ್ಕೆ ಧಕ್ಕೆಯಾಗದ ರೀತಿಯಲ್ಲಿರಬೇಕು ಎಂದು ತಜ್ಞರು ಸೂಚಿಸುತ್ತಾರೆ.

ಹೊಳೆಯುವ ತ್ವಚೆ ನಿಮ್ಮದಾಗಲು ಬೆಳಗಿನ ದಿನಚರಿಯಲ್ಲಿ ತಪ್ಪದೇ ಈ ಕಾರ್ಯಗಳನ್ನು ಮಾಡಿ

ಮಕ್ಕಳು ದಿನವಿಡೀ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಆಟ, ಕ್ರೀಡೆ, ಓದು, ಹವ್ಯಾಸಗಳು ಮತ್ತು ಸೃಜನಾತ್ಮಕ ಚಟುವಟಿಕೆಗಳಲ್ಲಿ ನಿರತರಾಗಿದ್ದರೆ ಅವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಉತ್ತಮವಾಗಿರುತ್ತದೆ.

ಅತ್ಯಂತ ಮುಖ್ಯವಾಗಿ, ಮಗು ಬಾತ್‌ರೂಮ್‌ನಲ್ಲಿ ಹೆಚ್ಚು ಸಮಯ ಕಳೆದಿದೆ ಎಂಬ ಕಾರಣಕ್ಕೆ ಅವನನ್ನು ಅಥವಾ ಅವಳನ್ನು ವಿಚಾರಣೆ ಮಾಡುವುದು, ನಾಚಿಕೆಪಡಿಸುವುದು ಅಥವಾ ಹಾಸ್ಯ ಮಾಡುವುದು ತಪ್ಪು. ಇಂತಹ ವರ್ತನೆಯಿಂದ ಮಕ್ಕಳು ಪೋಷಕರಿಂದ ದೂರವಾಗುವ ಸಾಧ್ಯತೆ ಇದೆ. ಬದಲಿಗೆ, ಅವರ ಭಾವನೆಗಳನ್ನು ಅರ್ಥಮಾಡಿಕೊಂಡು ವಿಶ್ವಾಸದೊಂದಿಗೆ ಮಾತನಾಡಿದರೆ, ಬೆಳವಣಿಗೆಯ ಈ ಹಂತವನ್ನು ಅವರು ಆತ್ಮವಿಶ್ವಾಸದಿಂದ ಎದುರಿಸಲು ಸಾಧ್ಯವಾಗುತ್ತದೆ ಎಂದು ಮನೋವೈದ್ಯರು ಸಲಹೆ ನೀಡಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:27 pm, Wed, 15 July 26

Source link

ಸೋಲರಿಯದ ಸರದಾರರು: 37 ಪಂದ್ಯಗಳ ‘ಸ್ಪೇನ್’ ಸಾಮ್ರಾಜ್ಯ! – Kannada News | Spain’s Unstoppable 37 Match Invincible Strea

ಫುಟ್‌ಬಾಲ್ ಕೇವಲ ಒಂದು ಆಟವಲ್ಲ, ಅದೊಂದು ನಿರಂತರ ಹೋರಾಟ. ಅಲ್ಲಿ ದಾಖಲೆಗಳು ಹುಟ್ಟುವುದೇ ಮುರಿಯುವುದಕ್ಕೆ. ಆದರೆ, ಕೆಲವು ದಾಖಲೆಗಳು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿಯುತ್ತವೆ. ಅಂತಹದೊಂದು ಅಪರೂಪದ ಇತಿಹಾಸಕ್ಕೆ ಈಗ ಸ್ಪೇನ್ ಫುಟ್‌ಬಾಲ್ ತಂಡ ಸಾಕ್ಷಿಯಾಗಿದೆ. ಕೋಚ್ ಲುಯಿಸ್ ಡಿ ಲಾ ಫ್ಯುಯೆಂಟೆ ಅವರ ಸಾರಥ್ಯದಲ್ಲಿ ಕಲಾತ್ಮಕ ಫುಟ್‌ಬಾಲ್ ಆಡುತ್ತಿರುವ ಸ್ಪೇನ್, ಸತತ 37 ಪಂದ್ಯಗಳಲ್ಲಿ ಸೋಲನ್ನೇ ಕಾಣದೆ ಜಾಗತಿಕ ಫುಟ್‌ಬಾಲ್ ಜಗತ್ತನ್ನು ತನ್ನ ಅಂಗೈಯಲ್ಲಿಟ್ಟುಕೊಂಡಿದೆ. ಅಂದರೆ ಸ್ಪೇನ್ ತಂಡವು ಕಳೆದ 37 ಪಂದ್ಯಗಳಲ್ಲಿ ಸೋಲನ್ನೇ ಕಂಡಿಲ್ಲ!

ವಿಶ್ವಕಪ್ ಸೆಮಿಫೈನಲ್‌ನಲ್ಲಿ ಫ್ರಾನ್ಸ್ ತಂಡವನ್ನು 2-0 ಅಂತರದಿಂದ ಮಣಿಸಿದ ಸ್ಪೇನ್, ಈಗ ಇಟಲಿಯ ಸಾರ್ವಕಾಲಿಕ ಅಜೇಯ ದಾಖಲೆಯನ್ನು ಸಮಗಟ್ಟಿ ನಿಂತಿದ್ದಾರೆ. ಈ ಮೂಲಕ ಫುಟ್‌ಬಾಲ್ ಸಾಮ್ರಾಜ್ಯದ ಸರ್ವಾಧಿಕಾರಿಯಾಗಲು ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.

ಇಟಲಿಯ ಕೋಟೆಗೆ ಲಗ್ಗೆಯಿಟ್ಟ ಸ್ಪೇನ್ ಪಡೆ:

ಸ್ಪೇನ್ ತಂಡದ್ದು ಕೇವಲ ಗೆಲುವಲ್ಲ, ಇತಿಹಾಸದ ಪುನರಾವರ್ತನೆ. 2018 ರಿಂದ 2021ರ ನಡುವೆ ಇಟಲಿ ತಂಡ ಸೃಷ್ಟಿಸಿದ್ದ ಯುರೋಪಿನ ಸಾರ್ವಕಾಲಿಕ ಸುದೀರ್ಘ ಅಜೇಯ (37 ಪಂದ್ಯಗಳು) ದಾಖಲೆಯನ್ನು ಸ್ಪೇನ್ ಈಗ ಸಮಗಟ್ಟಿದೆ. ಈ ಭವ್ಯ ಅಜೇಯ ಹಾದಿಯಲ್ಲಿ ಸ್ಪೇನ್ ತಂಡದ ಅಂಕಿ-ಅಂಶಗಳು ಹೀಗಿವೆ..

  • 28 ಪಂದ್ಯಗಳಲ್ಲಿ ಸ್ಪೇನ್ ತಂಡಕ್ಕೆ ಜಯ
  •  9 ಪಂದ್ಯಗಳು ಡ್ರಾ
  • ಸೋಲಿಲ್ಲದೆ ಸತತ 37 ಪಂದ್ಯ ಮುಗಿಸಿರುವ ಸ್ಪೇನ್.

ಸ್ಪೇನ್ ತಂಡವು ಮಾರ್ಚ್ 22, 2024 ರಂದು ಕೊಲಂಬಿಯಾ ವಿರುದ್ಧ (1-0) ಸೋತ ನಂತರ, ಇದುವರೆಗೆ ಆಡಿದ ಸತತ 37 ಪಂದ್ಯಗಳಲ್ಲಿ ಒಂದೂ ಪಂದ್ಯವನ್ನು ಸೋತಿಲ್ಲ ಎಂಬುದು ವಿಶೇಷ.

ನೇಷನ್ಸ್ ಲೀಗ್ ಫೈನಲ್​ನಲ್ಲಿ ಸೋತಿತ್ತಲ್ಲವೇ?

ಜೂನ್ 8, 2025 ರಂದು ನಡೆದ 2025 UEFA ನೇಷನ್ಸ್ ಲೀಗ್ ಫೈನಲ್ ಪಂದ್ಯದಲ್ಲಿ ನಿಗದಿತ ಅವಧಿಗೆ ಉಭಯ ತಂಡಗಳು 2-2 ಗೋಲುಗಳ ಸಮಬಲ ಸಾಧಿಸಿದ್ದವು. ಆ ಬಳಿಕ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಪೋರ್ಚುಗಲ್ 5-3 ಗೋಲುಗಳಿಂದ ಸ್ಪೇನ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಫುಟ್‌ಬಾಲ್ ನಿಯಮಗಳ ಪ್ರಕಾರ, ಪೆನಾಲ್ಟಿ ಶೂಟೌಟ್‌ನಲ್ಲಿ ಸೋತರೂ ಅದನ್ನು ಅಧಿಕೃತವಾಗಿ ‘ಡ್ರಾ’ ಎಂದೇ ಪರಿಗಣಿಸಲಾಗುತ್ತದೆ, ‘ಸೋಲು’ ಎಂದು ಲೆಕ್ಕ ಹಾಕುವುದಿಲ್ಲ. ಅಂದರೆ ಪಂದ್ಯದ ಅವಧಿಯಲ್ಲಿ ಸೋತರೆ ಮಾತ್ರ ಅದನ್ನು ಅಧಿಕೃತ ಸೋಲು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ನೇಷನ್ ಲೀಗ್​ ಫೈನಲ್​ನಲ್ಲಿ ಪೆನಾಲ್ಟಿ ಶೂಟೌಟ್ ಸೋಲು ಪರಾಜಯದ ಪಟ್ಟಿಗೆ ಸೇರ್ಪಡೆಯಾಗುವುದಿಲ್ಲ.

ಫ್ಯುಯೆಂಟೆ ಮಾಸ್ಟರ್ ಮೈಂಡ್:

ಸ್ಪೇನ್ ತಂಡದ ಈ ಸತತ ಗೆಲುವಿನ ಹಿಂದಿರುವುದು ಕೋಚ್ ಲುಯಿಸ್ ಡಿ ಲಾ ಫ್ಯುಯೆಂಟೆ.  ಫ್ಯುಯೆಂಟೆ ಅವರ ಮಾರ್ಗದರ್ಶನದಲ್ಲಿ ಸ್ಪೇನ್ ತಂಡ ಒಂದು ಸುಂದರ ಕಾವ್ಯದಂತೆ ಆಡುತ್ತಿದೆ.

ಯುವ ಆಟಗಾರರ ವೇಗ ಮತ್ತು ಅನುಭವಿಗಳ ಜಾಣ್ಮೆಯ ಅದ್ಭುತ ಮಿಶ್ರಣವೇ ಈ ತಂಡದ ಶಕ್ತಿ. ಮೈದಾನದ ಪ್ರತಿಯೊಂದು ಮೂಲೆಯಲ್ಲೂ ಚೆಂಡಿನ ಮೇಲೆ ಸಂಪೂರ್ಣ ಹತೋಟಿ ಸಾಧಿಸುವ ಇವರ ಶೈಲಿ, ಅಭಿಮಾನಿಗಳ ಕಣ್ಣಿಗೆ ಹಬ್ಬದಂತಿದೆ. ಫ್ರಾನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪೇನ್ ಆಟಗಾರರು ತೋರಿದ ಚಾಕಚಕ್ಯತೆ ಇದಕ್ಕೆ ಸಾಕ್ಷಿ.

ಇತಿಹಾಸದ ಹೊಸ್ತಿಲಲ್ಲಿ ಸ್ಪೇನ್ ಪಡೆ:

ಈಗ ಇಡೀ ವಿಶ್ವದ ಕಣ್ಣು ಭಾನುವಾರ ನಡೆಯಲಿರುವ ಫಿಫಾ ವಿಶ್ವಕಪ್‌ನ ಮಹಾ ಫೈನಲ್ ಪಂದ್ಯದ ಮೇಲಿದೆ. ಏಕೆಂದರೆ ಫೈನಲ್ ಪಂದ್ಯದಲ್ಲಿ ಸ್ಪೇನ್ ಗೆದ್ದರೆ ಅಥವಾ ಡ್ರಾ ಸಾಧಿಸಿದರೆ, 38 ಪಂದ್ಯಗಳ ಅಜೇಯ ಓಟದೊಂದಿಗೆ ಇಟಲಿಯ ದಾಖಲೆಯನ್ನು ಮುರಿಯಲಿದೆ. ಒಂದು ವೇಳೆ ಫೈನಲ್ ಮ್ಯಾಚ್​ನಲ್ಲಿ ಜಯ ಸಾಧಿಸಿದರೆ ಸತತ 38 ಪಂದ್ಯಗಳನ್ನು ಗೆದ್ದು ವಿಶ್ವಕಪ್ ಎತ್ತಿ ಹಿಡಿದ ಮೊದಲ ತಂಡವೆಂಬ ವಿಶ್ವ ದಾಖಲೆ ಸ್ಪೇನ್ ಪಾಲಾಗಲಿದೆ.

ಇದನ್ನೂ ಓದಿ: ಸಚಿನ್ ದಾಖಲೆ ಧೂಳೀಪಟ: ಕಿಂಗ್ ಕೊಹ್ಲಿ ಹೆಸರಿಗೆ ವಿಶ್ವ ದಾಖಲೆ

ಒಟ್ಟಾರೆಯಾಗಿ ಹೇಳಬೇಕೆಂದರೆ, ಸ್ಪೇನ್ ತಂಡದ ಈ ವಿಜಯಯಾತ್ರೆ ಕೇವಲ ಒಂದು ಅಂಕಿ-ಅಂಶಗಳ ದಾಖಲೆಯಲ್ಲ, ಅದೊಂದು ಆಧುನಿಕ ಫುಟ್‌ಬಾಲ್ ಕ್ರಾಂತಿ. ಸತತ 37 ಪಂದ್ಯಗಳಲ್ಲಿ ಸೋಲೆಂಬುದನ್ನೇ ಕಾಣದೆ ಮುನ್ನುಗ್ಗುತ್ತಿರುವ ‘ಸ್ಪ್ಯಾನಿಷ್’ ಪಡೆ, ಈಗ ಇತಿಹಾಸದ ಅತ್ಯಂತ ಪ್ರಮುಖ ಘಟ್ಟದಲ್ಲಿ ಬಂದು ನಿಂತಿದೆ. ಭಾನುವಾರ ನಡೆಯಲಿರುವ ಫಿಫಾ ವಿಶ್ವಕಪ್‌ನ ಮಹಾ ಫೈನಲ್ ಕೇವಲ ಟ್ರೋಫಿಗಾಗಿ ನಡೆಯುವ ಹೋರಾಟವಲ್ಲ. ಅದು ಸ್ಪೇನ್ ತಂಡವನ್ನು ಫುಟ್‌ಬಾಲ್ ಸಾಮ್ರಾಜ್ಯದ ಅತ್ಯುನ್ನತ ಸಿಂಹಾಸನದಲ್ಲಿ ಕೂರಿಸುವ ಮಹಾ ಪಟ್ಟಾಭಿಷೇಕ ಎಂದೇ ಹೇಳಬಹುದು.

Published On – 12:19 pm, Wed, 15 July 26

Source link

ಹ್ಯಾಂಗ್ ಆಗಲ್ಲ, ಪಾವತಿ ವಿಫಲಗೊಳ್ಳಲ್ಲ,ಇನ್ಮುಂದೆ ರೈಲಿನಲ್ಲಿ ನೀವೇ ಆರಿಸಿಕೊಳ್ಳಿ ನಿಮ್ಮಿಷ್ಟದ ಸೀಟು, ಹೊಸ ವೆಬ್​ಸೈಟ್ ಬಿಡುಗಡೆ ಮಾಡಿದ ಐಆರ್​ಸಿಟಿಸಿ – Kannada News | IRCTC New Website: Faster Train Ticket Booking, Choose Your Seat and More

ನವದೆಹಲಿ, ಜುಲೈ 15: ರೈಲು ಟಿಕೆಟ್(Railway Ticket) ಬುಕ್ ಮಾಡುವಾಗ, ಅದರಲ್ಲೂ ವಿಶೇಷವಾಗಿ ಬೆಳಗ್ಗೆ 10 ಮತ್ತು 11 ಗಂಟೆಯ ‘ತತ್ಕಾಲ್’ ಸಮಯದಲ್ಲಿ ವೆಬ್‌ಸೈಟ್ ಹ್ಯಾಂಗ್ ಆಗಿ, ಪಾವತಿ ವಿಫಲಗೊಂಡು ಕೋಪಗೊಂಡ ಉದಾಹರಣೆಗಳು ನಿಮ್ಮ ಜೀವನದಲ್ಲಿ ನೂರಾರು ಇರಬಹುದು. ಆದರೆ ಇನ್ಮುಂದೆ ಆ ಕಿರಿಕಿರಿ ಇರುವುದಿಲ್ಲ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಇಂದು ತನ್ನ ಸಂಪೂರ್ಣ ಹೊಸ ವಿನ್ಯಾಸದ, ಅಲ್ಟ್ರಾ-ಫಾಸ್ಟ್ ಟಿಕೆಟ್ ಬುಕಿಂಗ್ ವೆಬ್‌ಸೈಟ್ ಅನ್ನು ದೇಶಕ್ಕೆ ಸಮರ್ಪಿಸಿದೆ. ಹೊಸ ಪ್ಲಾಟ್‌ಫಾರ್ಮ್ ಕೇವಲ ನೋಡಲು ಸುಂದರವಾಗಿರದೆ, ಗರಿಷ್ಠ ದಟ್ಟಣೆಯ ಸಮಯದಲ್ಲಿಯೂ ಜಿಟಿ ಜಿಟಿ ಎನ್ನದೆ ಸೂಪರ್ ಫಾಸ್ಟ್ ಆಗಿ ಕೆಲಸ ಮಾಡುವ ಬಲಿಷ್ಠ ತಂತ್ರಜ್ಞಾನವನ್ನು ಹೊಂದಿದೆ.

ನಿಮಿಷಕ್ಕೆ 1.5 ಲಕ್ಷ ಟಿಕೆಟ್ ಬುಕಿಂಗ್ ಸಾಮರ್ಥ್ಯ

ಇದುವರೆಗೆ ಇದ್ದ ಹಳೆಯ ವೆಬ್‌ಸೈಟ್ ವ್ಯವಸ್ಥೆಯಲ್ಲಿ ಪ್ರತಿ ನಿಮಿಷಕ್ಕೆ ಕೇವಲ 32,000 ಟಿಕೆಟ್‌ಗಳನ್ನು ಮಾತ್ರ ಪ್ರಕ್ರಿಯೆಗೊಳಿಸಲು ಸಾಧ್ಯವಾಗುತ್ತಿತ್ತು. ಆದರೆ ಇಂದಿನಿಂದ ಜಾರಿಗೆ ಬಂದಿರುವ ಹೊಸ ಇಂಟರ್ಫೇಸ್ ಪ್ರತಿ ನಿಮಿಷಕ್ಕೆ ಬರೋಬ್ಬರಿ 1.5 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಬುಕ್ ಮಾಡುವ ಬೃಹತ್ ಸಾಮರ್ಥ್ಯ ಹೊಂದಿದೆ.

ಅಷ್ಟೇ ಅಲ್ಲದೆ, ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ (PRS) ಬ್ಯಾಕೆಂಡ್ ಅನ್ನು ನವೀಕರಿಸಲಾಗಿದ್ದು, ಹಿಂದೆ ನಿಮಿಷಕ್ಕೆ 4 ಲಕ್ಷ ಜನರು ಸರ್ಚ್ ಮಾಡಬಹುದಿತ್ತು, ಆದರೆ ಈಗ ನಿಮಿಷಕ್ಕೆ 40 ಲಕ್ಷಕ್ಕೂ ಹೆಚ್ಚು ಜನರು ಒಟ್ಟಿಗೆ ರೈಲುಗಳ ಸೀಟುಗಳ ಲಭ್ಯತೆಯನ್ನು ಪರಿಶೀಲಿಸಿದರೂ ವೆಬ್‌ಸೈಟ್ ಕಿಂಚಿತ್ತೂ ನಿಧಾನವಾಗುವುದಿಲ್ಲ.

ಪ್ರಯಾಣಿಕರ ಮನಗೆಲ್ಲಲಿರುವ 4 ಅದ್ಭುತ ಹೊಸ ಫೀಚರ್‌ಗಳು

ಕೇವಲ ವೇಗವಷ್ಟೇ ಅಲ್ಲ, ಪ್ರಯಾಣಿಕರ ಅನುಕೂಲಕ್ಕಾಗಿ ಈ ಕೆಳಗಿನ ಸೂಪರ್ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ.

ಮತ್ತಷ್ಟು ಓದಿ: Train Ticket Booking: IRCTCಯಲ್ಲಿ ರೈಲು ಟಿಕೆಟ್ ಬುಕ್ ಮಾಡುವಾಗ ಎಚ್ಚರಿಕೆ!​

ನಿಮ್ಮಿಷ್ಟದ ಸೀಟು ಆಯ್ಕೆ: ಇದುವರೆಗೆ ಸೀಟುಗಳನ್ನು ಕಂಪ್ಯೂಟರ್ ತಾನಾಗಿಯೇ ಹಂಚುತ್ತಿತ್ತು . ಆದರೆ ಇನ್ಮುಂದೆ ನೀವು ಫ್ಲೈಟ್ ಟಿಕೆಟ್ ಬುಕ್ ಮಾಡುವ ಮಾದರಿಯಲ್ಲೇ, ಲಭ್ಯವಿರುವ ಸೀಟುಗಳ ಪೈಕಿ ನಿಮ್ಮ ನೆಚ್ಚಿನ ಸೀಟನ್ನು ನೀವೇ ಕ್ಲಿಕ್ ಮಾಡಿ ಆಯ್ಕೆ ಮಾಡಿಕೊಳ್ಳಬಹುದು.

ಸಿಂಗಲ್ ಸ್ಕ್ರೀನ್ ಡಿಸ್ಪ್ಲೇ: ಹಿಂದೆ ಸ್ಲೀಪರ್, ಎಸಿ 3-ಟೈರ್, ಎಸಿ 2-ಟೈರ್ ಸೀಟುಗಳನ್ನು ನೋಡಲು ಪ್ರತ್ಯೇಕ ಟ್ಯಾಬ್‌ಗಳನ್ನು ಕ್ಲಿಕ್ ಮಾಡಬೇಕಿತ್ತು. ಈಗ ಒಂದೇ ಪರದೆಯ ಮೇಲೆ ಎಲ್ಲಾ ತರಗತಿಗಳ ಸೀಟುಗಳ ಲಭ್ಯತೆ ಕಾಣಿಸಲಿದೆ.

ಫೇರ್ ಕ್ಯಾಲೆಂಡರ್: ಒಂದು ವೇಳೆ ನಿಮ್ಮ ಪ್ರಯಾಣದ ದಿನಾಂಕ ಫ್ಲೆಕ್ಸಿಬಲ್ ಆಗಿದ್ದರೆ, ಯಾವ ದಿನದಂದು ಟಿಕೆಟ್ ದರ ಕಡಿಮೆ ಇದೆ ಅಥವಾ ಯಾವ ದಿನ ಸೀಟುಗಳು ಖಾಲಿ ಇವೆ ಎಂಬುದನ್ನು ಹೋಲಿಕೆ ಮಾಡಲು ‘ಫೇರ್ ಕ್ಯಾಲೆಂಡರ್’ ನೆರವಾಗಲಿದೆ.

ಕ್ಯಾಪ್ಚಾ ಕಿರಿಕಿರಿ ಮುಕ್ತಿ: ಪದೇ ಪದೇ ಬರುತ್ತಿದ್ದ ಅನಗತ್ಯ ಪಾಪ್-ಅಪ್‌ಗಳು, ಕಣ್ಣಿಗೆ ತೊಂದರೆ ಕೊಡುತ್ತಿದ್ದ ಜಾಹೀರಾತು ಬ್ಯಾನರ್‌ಗಳು ಮತ್ತು ಕಿರಿಕಿರಿ ಉಂಟುಮಾಡುತ್ತಿದ್ದ ಪುನರಾವರ್ತಿತ ‘ಕ್ಯಾಪ್ಚಾ (ಪರಿಶೀಲನೆ’ಯನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ.

ಪ್ರಾದೇಶಿಕ ಭಾಷೆಗಳ ಬೆಂಬಲ

ಹೊಸ ವೆಬ್‌ಸೈಟ್‌ನಲ್ಲಿ ಕನ್ನಡ ಸೇರಿದಂತೆ ಭಾರತದ ಪ್ರಮುಖ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇನ್ನು ಮುಂದೆ ವಿದ್ಯಾರ್ಥಿಗಳು, ದಿವ್ಯಾಂಗ ಪ್ರಯಾಣಿಕರು ಮತ್ತು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ತಮ್ಮ ರಿಯಾಯಿತಿ ಟಿಕೆಟ್‌ಗಳನ್ನು ಯಾವುದೇ ಕಚೇರಿಗೆ ಅಲೆಯದೆ ಇದೇ ಏಕೀಕೃತ ಡಿಜಿಟಲ್ ವ್ಯವಸ್ಥೆಯ ಮೂಲಕ ಸುಲಭವಾಗಿ ಪಡೆಯಬಹುದು.

ಡಿಜಿಟಲ್ ರೈಲ್ವೆಯತ್ತ ಭಾರತದ ಹೆಜ್ಜೆ

ಈ ವೆಬ್‌ಸೈಟ್ ಉದ್ಘಾಟನೆಯು ಭಾರತೀಯ ರೈಲ್ವೆಯಲ್ಲಿ ನಡೆಯುತ್ತಿರುವ ಬೃಹತ್ ಡಿಜಿಟಲ್ ರೂಪಾಂತರದ ಒಂದು ಭಾಗವಾಗಿದೆ.

ಸೂಪರ್ ಆ್ಯಪ್ ಸದ್ಯದಲ್ಲೇ?: ರೈಲ್ವೆ ಇಲಾಖೆಯ ಆಂತರಿಕ ಮೂಲಗಳ ಪ್ರಕಾರ, ವೆಬ್‌ಸೈಟ್ ನವೀಕರಣದ ಬೆನ್ನಲ್ಲೇ ಐಆರ್‌ಸಿಟಿಸಿ, ಇನ್ಮುಂದೆ ಟಿಕೆಟ್ ಬುಕಿಂಗ್, ಲೈವ್ ಟ್ರೈನ್ ಸ್ಟೇಟಸ್, ಪಿಎನ್ಆರ್ ಚೆಕಿಂಗ್ ಮತ್ತು ರೈಲಿಗೆ ಆಹಾರ ಆರ್ಡರ್ ಮಾಡುವ ಎಲ್ಲಾ ಸೇವೆಗಳನ್ನೊಳಗೊಂಡ ಒಂದೇ ಒಂದು ‘ಸೂಪರ್ ಆ್ಯಪ್’ ಅನ್ನು ಸಹ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಒಟ್ಟಾರೆಯಾಗಿ, ಹಬ್ಬದ ಸೀಸನ್‌ಗಳಲ್ಲಿ ಊರಿಗೆ ಹೋಗಲು ಟಿಕೆಟ್ ಸಿಗದೆ ಪರದಾಡುತ್ತಿದ್ದ ಭಾರತೀಯ ಮಧ್ಯಮ ವರ್ಗದ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಇಂದಿನಿಂದ ಅತ್ಯಂತ ಸುಲಭ ಹಾಗೂ ವಿಶ್ವಾಸಾರ್ಹ ಡಿಜಿಟಲ್ ಹೆದ್ದಾರಿಯನ್ನು ನಿರ್ಮಿಸಿಕೊಟ್ಟಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:10 pm, Wed, 15 July 26

Source link

‘ಮೈಸೂರು ದಸರಾದಲ್ಲಿ ಕಂಬಳ ಬೇಡ’: ಯಾಕೆಂಬ ಕಾರಣ ನೀಡಿದ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್! – Kannada News | Mysuru Dasara 2026: Historian Dr. Shelvapillai Iyengar Opposes Kambala Event, Explains Why

ಮೈಸೂರು, ಜುಲೈ 15: ಮೈಸೂರು ದಸರಾದಲ್ಲಿ ಕಂಬಳ ಆಚರಣೆ ಕುರಿತು ಪರ-ವಿರೋಧ ಚರ್ಚೆ ಜೋರಾಗಿರುವ ಸಂದರ್ಭದಲ್ಲೇ, ಇತಿಹಾಸ ತಜ್ಞ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್ ಅವರು ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸಿದ್ದಾರೆ. 2026ರ ಮೈಸೂರು ದಸರಾದಲ್ಲಿ ಕಂಬಳ ಆಚರಣೆ ಮಾಡುವ ಪ್ರಸ್ತಾಪಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ‘ಟಿವಿ9’ ಜತೆ ಮಾತನಾಡಿದ ಅವರು, ಕಂಬಳವು ಕರಾವಳಿ ಪ್ರದೇಶದ ವಿಶಿಷ್ಟ ಕ್ರೀಡೆಯಾಗಿದ್ದು, ಮೈಸೂರಿನ ಐತಿಹಾಸಿಕ ದಸರಾ ಮಹೋತ್ಸವದ ಭಾಗವಾಗಿರಬಾರದು. ಭಾರತದ ಪ್ರತಿಯೊಂದು ಪ್ರದೇಶವೂ ತನ್ನದೇ ಆದ ಅನನ್ಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೊಂದಿದೆ. ಉದಾಹರಣೆಗೆ, ದೆಹಲಿಯಲ್ಲಿ ರಾಮಲೀಲಾ, ಬಂಗಾಳದಲ್ಲಿ ದುರ್ಗಾಪೂಜೆ, ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಡೆಯುವಂತೆ, ಮೈಸೂರು ದಸರಾ ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ಹೊಂದಿದೆ. 1610ರಲ್ಲಿ ವಿಜಯನಗರ ಸಾಮ್ರಾಜ್ಯದಿಂದ ಅಳವಡಿಸಿಕೊಂಡು ಮೈಸೂರು ದಸರಾವನ್ನು ವೈಭವೀಕರಿಸಲಾಗಿದ್ದು, ಇದು ಮೈಸೂರಿನ ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಕಂಬಳ ಆಯೋಜಿಸಲು 20-30 ಎಕರೆ ಜಮೀನು, ಅರಣ್ಯನಾಶ ಮತ್ತು ಬಯಲು ಸೀಮೆಯನ್ನು ಗದ್ದೆಯನ್ನಾಗಿ ಪರಿವರ್ತಿಸುವಂತಹ ಪರಿಸರ ಸಮಸ್ಯೆಗಳು ಉಂಟಾಗುತ್ತವೆ. ಅಲ್ಲದೆ, ಸಾರ್ವಜನಿಕ ಹಣವನ್ನು ಬಳಸಿ ಕೇವಲ ಎರಡು ದಿನಗಳ ಕ್ರೀಡೆಗೆ ಇಷ್ಟು ದೊಡ್ಡ ಪ್ರಮಾಣದ ಸಂಪನ್ಮೂಲಗಳನ್ನು ವ್ಯಯಿಸುವುದು ಸೂಕ್ತವಲ್ಲ. ಕಂಬಳವನ್ನು ಜಾಗತಿಕವಾಗಿ ಪ್ರಚಾರ ಮಾಡಲು ಕರಾವಳಿ ಪ್ರದೇಶದಲ್ಲೇ ಅದನ್ನು ಆಯೋಜಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಪ್ರತಿಯೊಂದು ಆಚರಣೆಯೂ ಅದರ ಮೂಲ ಸ್ಥಳದಲ್ಲಿಯೇ ಹೆಚ್ಚು ಅರ್ಥಪೂರ್ಣ ಎಂದು ಡಾ. ಅಯ್ಯಂಗಾರ್ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Prasada in Hinduism: ಪೂಜೆಯ ನಂತರ ಪ್ರಸಾದ ವಿತರಿಸುವುದು ಏಕೆ ಮುಖ್ಯ? ಇಲ್ಲಿದೆ ಭಗವದ್ಗೀತೆ ಸಾರುವ ಅಸಲಿ ಮಹತ್ವ! – Kannada News | Prasada in Hinduism: Spiritual Significance and Benefits of Divine Offerings

ಪೂಜೆಯ ನಂತರ ಪ್ರಸಾದ ವಿತರಿಸುವುದು ಏಕೆ ಮುಖ್ಯ?Image Credit source: Getty Images

ಹಿಂದೂ ಧರ್ಮದಲ್ಲಿ ಪೂಜೆ-ಪುನಸ್ಕಾರಗಳಿಗೆ ತನ್ನದೇ ಆದ ಕಟ್ಟುನಿಟ್ಟಿನ ನಿಯಮಗಳಿವೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಪೂಜೆಯ ಕೊನೆಯಲ್ಲಿ ದೇವರಿಗೆ ನೈವೇದ್ಯವನ್ನು ಅರ್ಪಿಸುವುದು ಮತ್ತು ನಂತರ ಅದನ್ನು ‘ಪ್ರಸಾದ’ದ ರೂಪದಲ್ಲಿ ಎಲ್ಲರಿಗೂ ವಿತರಿಸುವುದು. ಪೂಜೆ ಮುಗಿದ ನಂತರ ಪ್ರಸಾದವನ್ನು ಇತರರಿಗೆ ಹಂಚಿ, ತಾವೂ ಸೇವಿಸಿದಾಗ ಮಾತ್ರ ಆ ಪೂಜೆಯು ಸಂಪೂರ್ಣ ಫಲವನ್ನು ನೀಡುತ್ತದೆ ಎಂದು ನಂಬಲಾಗಿದೆ. ಪ್ರಸಾದದ ಸ್ವೀಕಾರದಿಂದ ಮಾನಸಿಕ ಶಾಂತಿ ಮಾತ್ರವಲ್ಲದೆ, ದೈಹಿಕ ಕಾಯಿಲೆಗಳೂ ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ. ಶ್ರೀಮದ್ ಭಗವದ್ಗೀತೆಯಲ್ಲೂ ಪ್ರಸಾದದ ಮಹತ್ವವನ್ನು ವಿಶೇಷವಾಗಿ ಒತ್ತಿಹೇಳಲಾಗಿದೆ. ಅಷ್ಟಕ್ಕೂ ಪ್ರಸಾದ ಎಂದರೇನು? ಅದರ ಆಧ್ಯಾತ್ಮಿಕ ಹಿನ್ನೆಲೆ ಏನು? ಎಂಬ ಸಂಪೂರ್ಣ ವಿವರ ಇಲ್ಲಿದೆ.

ಹಿಂದೂ ಸಂಪ್ರದಾಯದಲ್ಲಿ ‘ಪ್ರಸಾದ’ ಎಂದರೇನು?

ಸನಾತನ ಸಂಪ್ರದಾಯದಲ್ಲಿ, ಭಕ್ತರು ದೇವರಿಗೆ ಸಂಪೂರ್ಣ ಭಕ್ತಿ, ಪ್ರೀತಿ ಮತ್ತು ಶುದ್ಧತೆಯಿಂದ ಅರ್ಪಿಸುವ ಪವಿತ್ರ ಆಹಾರವನ್ನು ‘ನೈವೇದ್ಯ’ ಎನ್ನಲಾಗುತ್ತದೆ. ದೇವರಿಗೆ ಅರ್ಪಿಸಿದ ನಂತರ ಅದೇ ಆಹಾರವು ದೇವರ ಆಶೀರ್ವಾದವಾಗಿ ಬದಲಾಗುತ್ತದೆ, ಅದನ್ನೇ ‘ಪ್ರಸಾದ’ ಎನ್ನಲಾಗುತ್ತದೆ. ಧಾರ್ಮಿಕ ನಿಯಮಗಳನ್ನು ಪಾಲಿಸಿ ಅತ್ಯಂತ ಮಡಿ ಹಾಗೂ ಭಕ್ತಿಯಿಂದ ಸಿದ್ಧಪಡಿಸಿದ ನೈವೇದ್ಯವನ್ನು ಮಾತ್ರ ದೇವರು ಪ್ರೀತಿಯಿಂದ ಸ್ವೀಕರಿಸುತ್ತಾನೆ.

ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಶಕ್ತಿಯ ಮೂಲ:

ಪೂಜೆಯ ಸಮಯದಲ್ಲಿ ದೇವರಿಗೆ ನೈವೇದ್ಯ ಅರ್ಪಿಸುವಾಗ ಪಠಿಸುವ ಮಂತ್ರಗಳು ಆ ಆಹಾರದಲ್ಲಿ ಸಕಾರಾತ್ಮಕ ಕಂಪನಗಳನ್ನು ತುಂಬುತ್ತವೆ. ಇದರಿಂದಾಗಿ ಪ್ರಸಾದವು ಕೇವಲ ಸಾಮಾನ್ಯ ಆಹಾರವಾಗಿರದೆ, ಆಧ್ಯಾತ್ಮಿಕ ಶಕ್ತಿಯ ಕೇಂದ್ರವಾಗುತ್ತದೆ. ಇದನ್ನು ಸ್ವೀಕರಿಸುವುದರಿಂದ ಮನಸ್ಸಿನಲ್ಲಿರುವ ನಕಾರಾತ್ಮಕ ಆಲೋಚನೆಗಳು ದೂರವಾಗಿ, ಅಪಾರ ಮಾನಸಿಕ ಶಾಂತಿ ದೊರೆಯುತ್ತದೆ ಹಾಗೂ ವ್ಯಕ್ತಿಯ ಆಧ್ಯಾತ್ಮಿಕ ಬೆಳವಣಿಗೆಗೆ ದಾರಿಯಾಗುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಭಗವದ್ಗೀತೆ ಸಾರುವ ಪ್ರಸಾದದ ಮಹಿಮೆ:

ಶ್ರೀಮದ್ ಭಗವದ್ಗೀತೆಯ ಮೂರನೇ ಅಧ್ಯಾಯದ ೧೩ನೇ ಶ್ಲೋಕದಲ್ಲಿ ಭಗವಾನ್ ಶ್ರೀಕೃಷ್ಣನು ಪ್ರಸಾದದ ಮಹತ್ವವನ್ನು ಹೀಗೆ ವಿವರಿಸಿದ್ದಾನೆ:

“ಯಜ್ಞಶಿಷ್ಟಾಶಿನಃ ಸಂತೋ ಮುಚ್ಯಂತೇ ಸರ್ವಕಿಲ್ಬಿಷೈಃ |
ಭುಂಜತೇ ತೇ ತ್ವಘಂ ಪಾಪ ಯೇ ಪಚಂತ್ಯಾತ್ಮಕಾರಣಾತ್ ||”

ಈ ಶ್ಲೋಕದ ಅರ್ಥ: ಯಜ್ಞ ಅಥವಾ ಪೂಜೆಯ ಮೂಲಕ ದೇವರಿಗೆ ಮೊದಲು ಅರ್ಪಿಸಿ, ನಂತರ ಉಳಿದ ಆಹಾರವನ್ನು (ಪ್ರಸಾದ) ಸೇವಿಸುವ ಸಜ್ಜನರು ಎಲ್ಲಾ ರೀತಿಯ ಪಾಪಗಳಿಂದ ಮುಕ್ತರಾಗುತ್ತಾರೆ. ಆದರೆ, ಯಾರು ದೇವರಿಗೆ ಅರ್ಪಿಸದೆ ಕೇವಲ ತಮ್ಮ ಸ್ವಾರ್ಥಕ್ಕಾಗಿ ಅಥವಾ ತಮಗೋಸ್ಕರ ಮಾತ್ರ ಆಹಾರವನ್ನು ಬೇಯಿಸಿ ತಿನ್ನುತ್ತಾರೋ, ಅವರು ಪಾಪವನ್ನೇ ಉಣ್ಣುತ್ತಾರೆ ಎಂದರ್ಥ.

ಪ್ರಸಾದ ವಿತರಣೆಯು ನಮ್ಮಲ್ಲಿರುವ ಸ್ವಾರ್ಥವನ್ನು ದೂರ ಮಾಡಿ, ಹಂಚಿ ಉಣ್ಣುವ ಉದಾತ್ತ ಗುಣವನ್ನು ಕಲಿಸುತ್ತದೆ. ಆದ್ದರಿಂದಲೇ, ಯಾವುದೇ ಪೂಜೆಯ ನಂತರ ಪ್ರಸಾದವನ್ನು ಮರೆಯದೇ ಇತರರಿಗೆ ವಿತರಿಸಿ, ತಾವೂ ಭಕ್ತಿಯಿಂದ ಸ್ವೀಕರಿಸುವುದು ಧರ್ಮದ ದೃಷ್ಟಿಯಿಂದ ಅತ್ಯಗತ್ಯವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:30 am, Wed, 15 July 26

Source link

‘ಪ್ಯಾರಡೈಸ್’ ಸಿನಿಮಾ ಮುಂದೂಡಿಕೆ, ‘ಟಾಕ್ಸಿಕ್’ ಕಾರಣವಾ? – Kannada News | Nani’s The Pradise movie avoids clash with Toxic

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಜಾಗತಿಕ ಮಟ್ಟದಲ್ಲಿಯೂ ಸಹ ಬಲು ಅದ್ಧೂರಿಯಾಗಿ ಈ ಸಿನಿಮಾ ಬಿಡುಗಡೆ ಆಗಲಿದೆ. ಭಾರತದಲ್ಲಿ ಕನ್ನಡ ಸೇರಿದಂತೆ ಇನ್ನೂ ಕೆಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದ್ದು, ಪ್ರೇಕ್ಷಕರು ಸಿನಿಮಾಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಸಿನಿಮಾದ ಟೀಸರ್, ಹಾಡು, ಪೋಸ್ಟರ್​​ಗಳು ವೈರಲ್ ಆಗಿದ್ದು, ಸಿನಿಮಾ ಸಹ ಭರ್ಜರಿ ಹಿಟ್ ಆಗುವ ನಿರೀಕ್ಷೆ ಅಭಿಮಾನಿಗಳಿಗಿದೆ. ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿರುವ ಕಾರಣ, ‘ಟಾಕ್ಸಿಕ್’ ಸಿನಿಮಾಕ್ಕೆ ಎದುರಾಗಿ ಹೋಗಲು ಬೇರೆ ಸಿನಿಮಾಗಳು ಹಿಂದೇಟು ಹಾಕುತ್ತಿವೆ.

ಆಗಸ್ಟ್ 24 ರಂದು ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆಗಲಿದೆ. ಅದೇ ಸಮಯದಲ್ಲಿ ಬಿಡುಗಡೆಗೆ ನಿರ್ಧರಿಸಿದ್ದ ಕೆಲ ಸಿನಿಮಾಗಳು ಇದೀಗ ತಮ್ಮ ಸಿನಿಮಾಗಳ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಳ್ಳುತ್ತಿವೆ. ತೆಲುಗಿನ ಸ್ಟಾರ್ ನಟ ನಾನಿ ನಟನೆಯ ‘ಪ್ಯಾರಡೈಸ್’ ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಲಿಕ್ಕಿತ್ತು. ಆದರೆ ಇದೀಗ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ.

ನಾನಿಯ ಬಹು ನಿರೀಕ್ಷಿತ ಸಿನಿಮಾ ಆಗಿರುವ ‘ಪ್ಯಾರಡೈಸ್’ ಭಿನ್ನ ಕತೆ, ಭಿನ್ನ ನಿರೂಪಣೆ ಮತ್ತು ಮೇಕಿಂಗ್ ಅನ್ನು ಒಳಗೊಂಡಿದ್ದು, ‘ದಿ ಪ್ಯಾರಡೈಸ್’ ಸಹ ತೆಲುಗಿನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಮಾರ್ಚ್ ತಿಂಗಳಲ್ಲೇ ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿರದ ಕಾರಣ ಬಿಡುಗಡೆ ಮುಂದೂಡಲ್ಪಟ್ಟಿತ್ತು. ಬಳಕ ಆಗಸ್ಟ್ 21 ರಂದು ಸಿನಿಮಾ ಬಿಡುಗಡೆ ಆಗಲಿದೆ ಎಂದು ಘೋಷಿಸಲಾಗಿತ್ತು. ಈಗ ಮತ್ತೊಮ್ಮೆ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದೆ.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾ ಪ್ರಚಾರಕ್ಕೆ ಯಶ್ ಭರ್ಜರಿ ಯೋಜನೆ

ಆಗಸ್ಟ್ 21ರ ಬದಲಿಗೆ ಸಿನಿಮಾ ಅನ್ನು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆದ ಬರೋಬ್ಬರಿ ಒಂದು ತಿಂಗಳ ಬಳಿಕ ಅಂದರೆ ಸೆಪ್ಟೆಂಬರ್ 24 ರಂದು ‘ಪ್ಯಾರಡೈಸ್’ ಸಿನಿಮಾ ರಿಲೀಸ್ ಆಗಲಿದೆ. ‘ಟಾಕ್ಸಿಕ್’ ಎದುರು ಸ್ಪರ್ಧೆ ತಪ್ಪಿಸಿಕೊಂಡಿರುವುದು ಒಂದು ಜಾಣ ನಿರ್ಧಾರ ಎಂದೇ ಹೇಳಬೇಕು.

ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಅವರುಗಳು ನಟಿಸಿರುವ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 24 ರಂದು ಭಾರಿ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದು, ಕೆವಿಎನ್ ನಿರ್ಮಾಣ ಮಾಡಿದ್ದಾರೆ. ಯಶ್ ಸಹ ನಿರ್ಮಾಣವೂ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version