ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಯಾವ ಹುತ್ತಕ್ಕೆ ಹಾಲೆರೆಯಬೇಕು, ಯಾವ ಹುತ್ತಕ್ಕೆ ಪೂಜೆ ಮಾಡಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ.ಹುತ್ತಕ್ಕೆ ಹಾಲೆರೆಯುವುದು, ನೈವೇದ್ಯ ಅರ್ಪಿಸುವುದು ಸಾಮಾನ್ಯ ಆಚರಣೆಗಳು. ಹುತ್ತಗಳಲ್ಲಿ ಎರಡು ಮುಖ್ಯ ವಿಧಗಳಿವೆ: ದೊಡ್ಡ ಕಿಂಡಿಗಳನ್ನು ಹೊಂದಿರುವ ಹುತ್ತಗಳನ್ನು ಹೆಣ್ಣು ಹುತ್ತ ಎಂದೂ, ಗೋಪುರದ ಆಕಾರದಲ್ಲಿ ಬೆಳೆಯುವ ಹುತ್ತಗಳನ್ನು ಗಂಡು ಹುತ್ತ ಎಂದೂ ಪರಿಗಣಿಸಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಹುತ್ತದಲ್ಲಿ ತಪಸ್ಸು ಮಾಡಿದ ಕಾರಣ ಅವರಿಗೆ ವಾಲ್ಮೀಕಿ ಎಂಬ ಹೆಸರು ಬಂತು ಎಂಬ ನಂಬಿಕೆಯಿದೆ.
ನಾಗದೋಷ ನಿವಾರಣೆ, ಸಂತಾನ ಪ್ರಾಪ್ತಿ, ಚರ್ಮ ಮತ್ತು ಕಣ್ಣಿನ ತೊಂದರೆಗಳು, ಕುಜದೋಷ ನಿವಾರಣೆ ಹಾಗೂ ಸುಖ ಶಾಂತಿ ನೆಮ್ಮದಿಗಾಗಿ ಹುತ್ತ ಪೂಜೆ ಮಾಡಲಾಗುತ್ತದೆ. ಪೂರ್ವಜರು ಹುತ್ತಗಳನ್ನು ಶಕ್ತಿ ಕೇಂದ್ರಗಳೆಂದು ಕರೆದಿದ್ದಾರೆ. ಇವುಗಳಲ್ಲಿ ತ್ರಿಶಕ್ತಿಗಳ ಸಂಗಮವಿರುತ್ತದೆ ಎಂದು ನಂಬಲಾಗಿದೆ. ಅರಳಿ ಮರದ ಬಳಿ, ದೇವಾಲಯದ ಸನಿಹ, ನವಗ್ರಹಗಳ ಪಕ್ಕ, ಮತ್ತು ನಾಗರ ಕಲ್ಲುಗಳ ಹತ್ತಿರ ಇರುವ ಹುತ್ತಗಳು ಅತ್ಯಂತ ಪವಿತ್ರ ಮತ್ತು ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಈ ಜಾಗಗಳಲ್ಲಿ ಸುಬ್ರಹ್ಮಣ್ಯ ಮತ್ತು ಆದಿಶಕ್ತಿಯ ಆವಾಸ ಇರುತ್ತದೆ ಎಂಬ ನಂಬಿಕೆಯಿದೆ. ಮಂಗಳವಾರ, ಶುಕ್ರವಾರ, ನಾಗರ ಪಂಚಮಿ, ಷಷ್ಠಿ, ಸುಬ್ರಹ್ಮಣ್ಯ ಷಷ್ಠಿ, ಸಂಕಷ್ಟಹರ ಚತುರ್ಥಿ ದಿನಗಳಂದು ಹುತ್ತ ಪೂಜೆ ಮಾಡಲಾಗುತ್ತದೆ. ಎಂದು ಗುರೂಜಿ ಹೇಳಿದ್ದಾರೆ.
ಬೆಂಗಳೂರು, ಏ.6: ದೇಶದಲ್ಲಿ ಗ್ಯಾಸ್ ಕೊರತೆಗಳು ಹೆಚ್ಚಾಗಿದೆ. ಇರಾನ್, ಇಸ್ರೇಲ್, ಅಮೆರಿಕ ಯುದ್ದದಿಂದ ಜಗತ್ತು ಸಂಕಷ್ಟಕ್ಕೆ ಸಿಲುಕಿದೆ. ಇದರ ಪರಿಣಾಮ ಭಾರತದಲ್ಲೂ ಕಂಡು ಬಂದಿದೆ. ಇನ್ನು ಬೆಂಗಳೂರಿನಲ್ಲಿ ಈ ಸಮಸ್ಯೆಯ ಬಗ್ಗೆ ಕೇಳುವುದೇ ಬೇಡ. ಅದರಲ್ಲೂ ಆಟೋ ಚಾಲಕರು ಇದರಿಂದ ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ. ದಿನ ಪೂರ್ತಿ, ಆಟೋಗೆ ಗ್ಯಾಸ್ ಹಾಕಲು ಕ್ಯೂ ನಿಲ್ಲಬೇಕು. ಅದು ಕೂಡ ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ. ಬೆಂಗಳೂರಿನ ಜೀವನನಾಡಿ ಎನಿಸಿರುವ ಆಟೋ ರಿಕ್ಷಾ ಚಾಲಕರು ಇದೀಗ ಭೀಕರ ಎಲ್ಪಿಜಿ ಅಭಾವದಿಂದ ಕಂಗಾಲಾಗಿದ್ದಾರೆ. ಇಂಧನ ಕೇಂದ್ರಗಳಲ್ಲಿ ಕಿಲೋಮೀಟರ್ಗಟ್ಟಲೆ ಉದ್ದದ ಸಾಲು ಮತ್ತು ಅನಿಶ್ಚಿತ ಪೂರೈಕೆಯಿಂದಾಗಿ ದೈನಂದಿನ ಜೀವನ ನಡೆಸುವುದು ಕಷ್ಟವಾಗಿದೆ.
ಈ ಬಿಕ್ಕಟ್ಟು ಈಗ ಅನೇಕ ಚಾಲಕರು ಎಲೆಕ್ಟ್ರಿಕ್ ಆಟೋಗಳ ಬಗ್ಗೆ ಗಂಭೀರವಾಗಿ ಆಲೋಚಿಸುವಂತೆ ಮಾಡಿದೆ. ಬನಶಂಕರಿಯ ಇಕ್ಬಾಲ್ ಸಾಬ್ ಎಂಬ ಎಲೆಕ್ಟ್ರಿಕ್ ಆಟೋ ಚಾಲಕನ ಪ್ರಕಾರ, ಪ್ರತಿದಿನ ಅನೇಕ ಎಲ್ಪಿಜಿ ಆಟೋ ಚಾಲಕರು ಬಂದು ಇವಿ ಆಟೋದ ಬೆಲೆ, ಚಾರ್ಜಿಂಗ್ ಸಮಯ ಮತ್ತು ಮೈಲೇಜ್ ಬಗ್ಗೆ ವಿಚಾರಿಸುತ್ತಿದ್ದಾರೆ. ಒಮ್ಮೆ ಚಾರ್ಜ್ ಮಾಡಿದರೆ 5 ಗಂಟೆಗಳಿಗೂ ಹೆಚ್ಚು ಕಾಲ ಓಡಿಸಬಹುದು ಮತ್ತು ಕಿಲೋಮೀಟರ್ಗೆ ಕೇವಲ 50 ಪೈಸೆ ಖರ್ಚಾಗುತ್ತದೆ ಎಂದು ಅವರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಈ ಎಲೆಕ್ಟ್ರಿಕ್ ಆಟೋಗಳು ತಿಂಗಳಿಗೆ ಕೇವಲ 500 ರೂಪಾಯಿಗಿಂತ ಕಡಿಮೆ ಮೇಂಟೆನೆನ್ಸ್ ಖರ್ಚು. ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಏರುತ್ತಿರುವ ಇಂಧನ ಬೆಲೆಗಳಿಂದ ಇದು ಮುಕ್ತಿ ನೀಡುತ್ತದೆ ಎಂಬುದು ಅನೇಕರ ಯೋಚನೆ ಆಗಿದೆ. ಶಬ್ದರಹಿತ, ಹೆಚ್ಚು ಸ್ಥಳಾವಕಾಶ ಮತ್ತು ಉತ್ತಮ ಸಸ್ಪೆನ್ಷನ್ ಇರುವುದರಿಂದ ಪ್ರಯಾಣಿಕರಿಗೂ ಇದು ಇಷ್ಟವಾಗುತ್ತಿದೆ. ಎಲೆಕ್ಟ್ರಿಕ್ ಆಟೋಗಳ ಬಗ್ಗೆ ಆಸಕ್ತಿ ಹೆಚ್ಚಿದ್ದರೂ, ಅದರ ಬೆಲೆ ದೊಡ್ಡ ಹೊರೆಯಾಗಿದೆ.
ಎಲೆಕ್ಟ್ರಿಕ್ ಆಟೋ ಬೆಲೆಯೂ 3.33 ಲಕ್ಷ ರೂ.ಯಿಂದ 3.47 ಲಕ್ಷ ರೂ ವರೆಗೆ ಇದೆ. ಎಲ್ಪಿಜಿ ಆಟೋ ಬೆಲೆ 2.22 ಲಕ್ಷದಿಂದ, 2.53 ಲಕ್ಷ ರೂ. ವರೆಗೆ ಇದೆ. ಸುಮಾರು 80 ಸಾವಿರದಿಂದ 1.25 ಲಕ್ಷ ರೂಪಾಯಿಗಳ ವ್ಯತ್ಯಾಸವು ಸಾಮಾನ್ಯ ಚಾಲಕರಿಗೆ ಭರಿಸಲಾಗದ ಮೊತ್ತವಾಗಿದೆ. ಹಳೆಯ ಆಟೋಗಳನ್ನು ಮಾರಿ ಹೊಸದನ್ನು ಕೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಸವಾಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಕೆಲವು ಟೀಕೆಗಳೂ ಇವೆ. ಚಾರ್ಜಿಂಗ್ ಸ್ಟೇಷನ್ಗಳ ಕೊರತೆ, ಬ್ಯಾಟರಿ ಬಾಳಿಕೆ ಮತ್ತು ಮೆಕಾನಿಕ್ಗಳ ಅಲಭ್ಯತೆ ಚಾಲಕರನ್ನು ಕಾಡುತ್ತಿದೆ. ಅಲ್ಲದೆ, ಭಾರತದಲ್ಲಿ ಹೆಚ್ಚಿನ ವಿದ್ಯುತ್ ಕಲ್ಲಿದ್ದಲಿನಿಂದ ತಯಾರಾಗುವುದರಿಂದ ಪರಿಸರಕ್ಕೆ ಆಗುವ ಲಾಭ ತೀರಾ ಕಡಿಮೆ ಎಂಬ ವಾದವೂ ಇದೆ.
ಹುಬ್ಬಳ್ಳಿ, ಏ.6: ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಮೀರ್ ಲೀಲೆಗಳು ಒಂದೊಂದಾಗಿ ಬಯಲು ಆಗುತ್ತಿದೆ. ಜಿಮ್ ಟ್ರೈನರ್ ಮಾಡಿದ ಒಂದೊಂದು ಕಹಾನಿಯ ಬಗ್ಗೆ ದಿನಕ್ಕೊಂದು ಹುಡುಗಿಯರು ಬಂದು ದೂರು ನೀಡುತ್ತಿದ್ದಾರೆ. ಇದೀಗ ಮತ್ತೊಂದು ಹುಡುಗಿ ಬಂದು ದೂರು ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ ನೋಡಿ. ಇದರ ಜತೆಗೆ ಈಗಾಗಲೇ ದೂರು ನೀಡಿರುವ ಸಂತ್ರಸ್ತ ಯುವತಿಯನ್ನು ತನ್ನ ಐಷಾರಾಮಿ ಜೀವನಕ್ಕಾಗಿ ‘ಎಟಿಎಂ’ ತರಹ ಬಳಸಿಕೊಂಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಆರೋಪಿ ಸಮೀರ್ ಮುಲ್ಲಾ ಸಂತ್ರಸ್ತ ಯುವತಿಯಿಂದ ಕಳೆದ ಎರಡು ವರ್ಷಗಳಲ್ಲಿ ಸಾವಿರಾರು ರೂಪಾಯಿಗಳನ್ನು ಹಣ ಪಡೆದಿದ್ದಾನೆ. 30 ರೂಪಾಯಿಯಿಂದ ಹಿಡಿದು 25 ಸಾವಿರ ರೂಪಾಯಿವರೆಗೆ ಫೋನ್ ಪೇ (PhonePe) ಮೂಲಕ ಹಣ ಹಾಕಿಸಿಕೊಂಡಿರುವ ಸ್ಕ್ರೀನ್ಶಾಟ್ಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. “ನಿನ್ನ ವಿಡಿಯೋಗಳನ್ನು ವೈರಲ್ ಮಾಡುತ್ತೇನೆ” ಎಂದು ಬೆದರಿಸಿ ಯುವತಿಯಿಂದ ಹಣ ಕೀಳುತ್ತಿದ್ದ ಎನ್ನಲಾಗಿದೆ. ಬ್ರ್ಯಾಂಡೆಡ್ ಬಟ್ಟೆಗಳನ್ನು ಧರಿಸಲು ಮತ್ತು ಹೈಫೈ ಜೀವನ ನಡೆಸಲು ಯುವತಿಯ ಹಣವನ್ನೇ ಈತ ಬಳಸುತ್ತಿದ್ದನು.
ಕೇವಲ ಈ ಸಂತ್ರಸ್ತ ಯುವತಿ ಮಾತ್ರವಲ್ಲದೆ, ಜಿಮ್ಗೆ ಬರುತ್ತಿದ್ದ ಇನ್ನೋರ್ವ ಹಿಂದೂ ಧರ್ಮದ ಯುವತಿಯೊಂದಿಗೂ ಸಮೀರ್ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಆಕೆಯ ಮೇಲೆಯೂ ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೋ ಮಾಡಿಟ್ಟುಕೊಂಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಶ್ರೀರಾಮಸೇನೆ ಸಂಘಟನೆ ದೌರ್ಜನ್ಯಕ್ಕೊಳಗಾದ ಇನ್ನೊಬ್ಬ ಯುವತಿಯನ್ನು ಭೇಟಿಯಾಗಲು ಸಂಘಟನೆಯ ಕಾರ್ಯಕರ್ತರು ಯತ್ನಿಸುತ್ತಿದ್ದಾರೆ. “ಧೈರ್ಯವಾಗಿ ಮುಂದೆ ಬಂದು ದೂರು ನೀಡಿ, ನಾವು ನಿಮ್ಮ ಜೊತೆಗಿದ್ದೇವೆ” ಎಂದು ಸಂಘಟನೆಯ ಮುಖಂಡರು ಯುವತಿಯ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.
ರೋಮ್, ಏ.6: ಭವಿಷ್ಯದ ಕನಸು ಹೊತ್ತು ಸಮುದ್ರ ಮಾರ್ಗದ ಮೂಲಕ ಯುರೋಪ್ ತಲುಪಲು ಯತ್ನಿಸುತ್ತಿದ್ದ ವಲಸಿಗರಿಗೆ ಮಹಾಮೃತ್ಯು ಎದುರಾಗಿದೆ. ಇಟಲಿ ಕರಾವಳಿಯಲ್ಲಿ ಸಂಭವಿಸಿದ ಭೀಕರ ಬೋಟ್ ದುರಂತದಲ್ಲಿ 71 ವಲಸಿಗರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಆತಂಕ ಎದುರಾಗಿದೆ.
ಲಿಬಿಯಾದಿಂದ ಯುರೋಪ್ಗೆ ಹೊರಟಿದ್ದ ಈ ಬೋಟ್ನಲ್ಲಿ ಒಟ್ಟು 105 ಜನರಿದ್ದರು ಎಂದು ಬದುಕುಳಿದವರು ತಿಳಿಸಿದ್ದಾರೆ. ಈಸ್ಟರ್ ರಜಾದಿನಗಳ ಸಂದರ್ಭದಲ್ಲಿ ಈ ಪ್ರಯಾಣವನ್ನು ಮಾಡಲಾತ್ತು. ಸಂತೋಷದಿಂದ ರಜೆ ದಿನವನ್ನು ಕಳೆಯುವ ಎಂದವರಿಗೆ ದೊಡ್ಡ ಅಘಾತವೇ ಕಾಯುತ್ತಿತ್ತು.ಆದರೆ, ಮೆಡಿಟರೇನಿಯನ್ ಸಮುದ್ರದ ಭೀಕರ ಅಲೆಗಳು ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಬೋಟ್ ಭಾಗಶಃ ಮುಳುಗಿದೆ ಎಂದು ಹೇಳಲಾಗಿದೆ
ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿ 32 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿವೆ. ದುರದೃಷ್ಟವಶಾತ್ ಇಬ್ಬರ ಶವಗಳು ಪತ್ತೆಯಾಗಿದ್ದು, ಇನ್ನುಳಿದ 71 ಜನರ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯುಂಟಾಗುತ್ತಿದೆ ಎಂದು ಇಟಲಿ ಅಧಿಕಾರಿಗಳು ತಿಳಿಸಿದ್ದಾರೆ.
ಮೆಡಿಟರೇನಿಯನ್ ಸಮುದ್ರವು ವಿಶ್ವದ ಅತ್ಯಂತ ಅಪಾಯಕಾರಿ ಪ್ರದೇಶವಾಗಿ ಮಾರ್ಪಟ್ಟಿದೆ. ಹಳೆಯ ಮತ್ತು ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಿದ ಬೋಟ್ಗಳ ಮೂಲಕ ನಡೆಯುವ ಇಂತಹ ಪ್ರಯಾಣಗಳು ಪದೇ ಪದೇ ಇಂತಹ ದುರಂತಗಳಿಗೆ ಕಾರಣವಾಗುತ್ತಿವೆ. ಅಕ್ರಮ ವಲಸೆಯನ್ನು ತಡೆಗಟ್ಟಲು ಮತ್ತು ಸುರಕ್ಷಿತ ಮಾರ್ಗಗಳನ್ನು ಕಲ್ಪಿಸಲು ಅಂತರಾಷ್ಟ್ರೀಯ ಸಮುದಾಯವು ತಕ್ಷಣ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ.
ಕೆಲಸದಲ್ಲಿರುವ ಅಧಿಕಾರಿಗಳಿಗೆ ನಿಮ್ಮ ಸಲಹೆಯನ್ನು ಕೊಡಲು ಹೋಗಬೇಡಿ. ನೀವು ಸುಲಭವಾಗಿ ಜನರ ವಿಶ್ವಾಸವನ್ನು ಗಳಿಸುವಿರಿ. ನಿಮ್ಮ ಪ್ರಗತಿಗೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ನೀವು ವಹಿಸಿಕೊಂಡ ಕಾಮಗಾರಿಯ ವೇಗ ಹೆಚ್ಚಳ. ಆದರೆ ಅದರ ಬಗ್ಗೆ ಸಾಕಷ್ಟು ಯೋಚಿಸಿ ಮುಂದುವರಿಯಿರಿ. ಸ್ವಭಾವವು ಬಹಳ ತೀವ್ರವಾಗಿ ಇರಲಿದೆ. ಯಾರ ಮಾತನ್ನೂ ಕೇಳವ ಸಹನೆ ಇರದು. ಪ್ರತಿಸ್ಪರ್ಧಿಗಳಿಗೆ ಸರಿಯಾದ ಸ್ಪರ್ಧೆಯನ್ನು ಕೊಡುವಿರಿ. ನಿಮ್ಮ ನಿರ್ಧಾರಗಳೇ ಅಂತಿಮವಾಗಬೇಕು ಎನ್ನುವ ಮನಃಸ್ಥಿತಿ ಇರುವುದು.
ವೃಷಭ ರಾಶಿ:
ಕಛೇರಿಯಲ್ಲಿ ನಿಮ್ಮ ಕೆಲಸಗಳನ್ನು ಕಂಡು ನಿಮ್ಮನ್ನು ಪ್ರಶಂಸಿಸುವರು. ಹೊಸ ಕೆಲಸವನ್ನು ಆರಂಭಿಸುವ ಹುನ್ನಾರ ನಡೆಸುವಿರಿ. ನಿಮ್ಮ ಒತ್ತಡವನ್ನು ಅನ್ಯರ ಮೇಲೆ ಹಾಕುವಿರಿ. ನಿಮ್ಮನ್ನು ಇಷ್ಟಪಟ್ಟವರೊಡನೆ ಸಮಯವನ್ನು ಕಳೆಯಿರಿ. ನಿಮ್ಮ ಕೆಲಸದ ಮೇಲೆ ನೀವು ಸಂಪೂರ್ಣ ಗಮನವಿಲ್ಲದೇ ಯಾವುದೋ ಯೋಚನೆಯಲ್ಲಿ ಎಡವಟ್ಟು ಮಾಡಿಕೊಳ್ಳುವಿರಿ. ನಿಮ್ಮ ಪ್ರತಿಭೆಗೆ ಯೋಗ್ಯವಾದ ಕಾರ್ಯವು ಸಿಗುವುದು. ಭೂಮಿಯ ವ್ಯವಹಾರವನ್ನು ಒಂಟಿಯಾಗಿ ನಿರ್ವಹಿಸುವಿರಿ.
ಮಿಥುನ ರಾಶಿ:
ಒಂದಿಲ್ಲೊಂದು ವಿಷಯಗಳಿಂದ ಸುಖವನ್ನು ಪಡೆಯುವ ನಿಮಗೆ ಮುಂಬರುವ ವಿಷಯಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ಸ್ಪಷ್ಟತೆಯನ್ನು ಇಟ್ಟುಕೊಂಡಿರುತ್ತೀರಿ. ಶತ್ರುಗಳಿಂದ ಎಚ್ಚರವಾಗಿರಿ. ಇಂದು ನಿಮ್ಮ ಪ್ರಮುಖ ಕೆಲಸಗಳು ವೇಗದಿಂದ ಸಾಗುವುದು. ನಿಮಗೆ ಅಯಾಚಿತವಾಗಿ ಬರುವ ಶುಭಸಂದರ್ಭವನ್ನು ಸಂತೋಷಿಸುವಿರಿ. ಹಳೆಯ ಯೋಜನೆಗಳಿಗೆ ಪುನಶ್ಚೇತನವನ್ನು ನೀಡುವಿರಿ. ಪ್ರಭಾವೀ ಶತ್ರುಗಳನ್ನು ನೀವು ಸೋಲಿಸುವಿರಿ.
ಕರ್ಕಾಟಕ ರಾಶಿ:
ಉದ್ಯಮಿಗಳಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಅನಿರೀಕ್ಷಿತ ಪ್ರಯಾಣವು ಬರಲಿದೆ. ಯಾರಿಗಾದರೂ ಕಾದು ಸಮಯವು ಹಾಳಾಗುವುದು. ನಿಮಗೆ ಸಂಬಂಧಗಳಲ್ಲಿ ಗೌರವವನ್ನು ಕಾಪಾಡಿಕೊಳ್ಳುವುದು ಕಷ್ಟವಾದೀತು. ನ್ಯಾಯಾಂಗದ ವಿಷಯಗಳಲ್ಲಿ ನೀವು ತಾಳ್ಮೆಯನ್ನು ಕಾಪಾಡಿಕೊಳ್ಳಬೇಕು. ಜಾಣ್ಮೆಯಿಂದ ನಿಮ್ಮ ಕೆಲಸವನ್ನು ಬೇಗ ಪೂರ್ಣಮಾಡುವಿರಿ. ಉದ್ಯೋಗದಲ್ಲಿ ಹೊಸ ವಿಚಾರಗಳನ್ನು ನೀವು ಕಲಿಯಬೇಕಾಗುವುದು. ಕಳೆದುಕೊಂಡಷ್ಟು ವೇಗವಾಗಿ ಉಳಿಸಿಕೊಳ್ಳುವುದು ಕಷ್ಟವೆನಿಸುವುದು.
ಸಿಂಹ ರಾಶಿ:
ಮದದಲ್ಲಿ ಬುದ್ಧಿಯನ್ನೂ ಸ್ಥಳವನ್ನೂ ಸಂದರ್ಭವನ್ನೂ ವ್ಯಕ್ತಿಯನ್ನೂ ನಗಣ್ಯಗೊಳಿಸಬೇಡಿ. ನಿಮ್ಮ ನೇರ ಮಾತಿನಿಂದ ತೊಂದರೆ ಆಗಬಹುದು. ಪ್ರೇಮದಲ್ಲಿ ಯಾರನ್ನಾದರೂ ನಿಮ್ಮವರನ್ನಾಗಿ ಮಾಡಿಕೊಳ್ಳುವ ಕಲೆ ನಿಮಗೆ ತಿಳಿದುಬರುವುದು. ನಿಮ್ಮ ಕುಟುಂಬದ ಬಗ್ಗೆ ಹೆಮ್ಮೆಯ ಭಾವ ಮೂಡುತ್ತದೆ. ಮನೆಯಲ್ಲಿಯೇ ವಾಸಿಸುವವರು ಸಣ್ಣ ಆದಾಯದ ಬಗ್ಗೆ ಆಲೋಚಿಸುವಿರಿ. ಯಾರಾದರೂ ಮುಖಸ್ತುತಿಯನ್ನು ಮಾಡಬಹುದು. ಮುಜುಗರವೂ ನಿಮಗೆ ಆದೀತು. ಅತಿಯಾದ ನಂಬಿಕೆಯು ನಿಮ್ಮ ಮೌಲ್ಯಯುತ ವಸ್ತುಗಳನ್ನು ಕಳೆದುಕೊಳ್ಳುವಂತೆ ಮಾಡುವುದು.
ಕನ್ಯಾ ರಾಶಿ:
ಮಾನಸಿಕ ಸ್ಥಿತಿ ಬಲಾಢ್ಯವಾಗಿರಲಿ. ಅಲ್ಲಿಯ ತನಕ ತಾಳ್ಮೆಯಿಂದ ಇರಬೇಕಾದ ಕರ್ತವ್ಯವಿದೆ. ಒಳ್ಳೆಯವರ ಸಂಗ ಸಿಗಬಹುದು. ಸಿಗದಿದ್ದರೆ ನೀವೇ ಹೋಗಿ. ಒಳ್ಳೆಯ ಪುಸ್ತಕವನ್ನು ತಂದು ಓದಿ. ಸ್ನೇಹಿತನ ಕೆಲಸವನ್ನು ಅದು ಮಾಡುವುದು. ಇಂದು ನಿಮ್ಮ ಭಾವನೆಗಳನ್ನು ನಿಯಂತ್ರಿಸಲಾಗದೇ ಎಲ್ಲವನ್ನೂ ಹೊರಹಾಕುವಿರಿ. ನೀವು ಮನೆಯ ಸೌಂದರ್ಯದ ಬಗ್ಗೆ ಹೆಚ್ಚು ಗಮನ ಇರಲಿದೆ. ಉದ್ಯೋಗದ ಕಾರಣ ದೂರ ಪ್ರಯಾಣ ಮಾಡಲು ಇಷ್ಟವಾಗದು. ರಾಜಕೀಯವಾಗಿ ಹಿನ್ನಡೆಯಾಗಬಹುದು. ನಿಮ್ಮದಾದ ದ್ವೀಪವನ್ನು ಮಾಡಿಕೊಂಡು ನೀವಿರುವಿರಿ.
ತುಲಾ ರಾಶಿ:
ಇಷ್ಟಮಿತ್ರರ ಭೇಟಿಯಿಂದ ಖುಷಿಯು ಹೆಚ್ಚಾಗುವುದು. ವಿಶ್ವಾಸಘಾತಕ ಕಾರ್ಯಗಳಿಗೆ ಮುನ್ನುಗ್ಗಲು ಯಾರಿಂದಲಾದರೂ ಪ್ರೇರಣೆ ಸಿಕ್ಕೀತು. ಪೆಟ್ಟು ತಿಂದರೆ ಮತ್ತೇಳುವುದು ಕಷ್ಟ. ಯಾವುದೇ ಕಾರಣಕ್ಕೂ ಬಿಟ್ಟುಕೊಡಲು ಇಷ್ಟಪಡಲಾರಿರಿ. ಎಲ್ಲರ ಜೊತೆ ಬೆರೆಯುವುದು ನಿಮಗೆ ಖುಷಿಯ ವಿಚಾರವಾಗಲಿದೆ. ಪ್ರಯಾಣದಲ್ಲಿ ಯಾವುದೇ ತೊಂದರೆಗಳು ಬಾರದು. ಕೆಲವು ಜನರ ಭೇಟಿಯು ನಿಮಗೆ ಖುಷಿ ಕೊಡುವುದು. ಹೂಡಿಕೆಯ ವಿಚಾರದಲ್ಲಿ ಸಮಸ್ಯೆಯಾಗಬಹುದು.
ವೃಶ್ಚಿಕ ರಾಶಿ:
ಸದ್ದಿಲ್ಲದೇ ಮಾಡುವ ಸಾಮಾಜಿಕ ಕಾರ್ಯಕ್ಕೆ ಪ್ರಶಂಸೆ. ಕಲಾವಿದರಿಗೆ ವಿಶೇಷ ಗೌರವ. ಸಿಟ್ಟಿನ ಮೂಟೆಯನ್ನು ಕೆಳಗಿಳಿಸಿ. ಆಗ ಸಿಗುವ ಆನಂದಕ್ಕೆ ಬೆಲೆಯೆಷ್ಟು? ನಿಮ್ಮ ಆಲೋಚನೆಗಳನ್ನು ಇತರ ಜೊತೆ ಹಂಚಿಕೊಂಡರೆ ನಿಮ್ಮ ಸ್ಥಾನಕ್ಕೆ ಚ್ಯುತಿ ಬಂದೀತು. ನಿಮ್ಮ ಕಾರ್ಯಗಳಿಂದ ಪ್ರೀತಿಪಾತ್ರರ ಹೃದಯವನ್ನು ಗೆಲ್ಲಲು ಸಫಲರಾಗುವಿರಿ. ಬಹಳ ದಿನಗಳ ಅನಂತರ ನಿಮ್ಮ ಸಂಗಾತಿಯ ಜೊತೆ ಸ್ವಲ್ಪ ಸಮಯ ಕುಳಿತು ಆಪ್ತವಾಗಿ ಮಾತನಾಡುವಿರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿ ಹಣವನ್ನು ವ್ಯಯ ಮಾಡುವಿರಿ. ನಿಮಗೆ ಆಗಬೇಕಾದ ಕೆಲಸವನ್ನು ವಿವಾದ ಇಲ್ಲದೇ ಮಾಡಿಕೊಳ್ಳಿ.
ಧನು ರಾಶಿ:
ಬಹಳ ಉತ್ಸಾಹದಿಂದ ಉತ್ಸವಗಳಲ್ಲಿ ಭಾಗವಹಿಸುವಿರಿ. ದಿನಚರಿಯ ವ್ಯತ್ಯಾಸದಿಂದ ಆರೋಗ್ಯ ಕೆಡಬಹುದು. ಅನಿರೀಕ್ಷಿತ ಸಂಪತ್ತು ಸಿಗುವ ಸಾಧ್ಯತೆ ಇದೆ. ಮೇಲಧಿಕಾರಿಗಳಿಂದ ಪ್ರಗತಿ ಪರಿಶೀಲನೆ. ಬದಲಾವಣೆಗೆ ಸಲಹೆ. ಇಂದು ಬಂದ ಅತಿಥಿಯ ಜೊತೆ ಹರಟೆಯನ್ನು ಹೊಡೆಯುತ್ತೀರಿ. ಅವಿವಾಹಿತರ ಜೀವನದಲ್ಲಿ ಹೊಸ ಅತಿಥಿಯ ಆಗಮನದ ನಿರೀಕ್ಷೆಯು ಇರುವುದು. ವಾಹನ ಚಾಲನೆಯಲ್ಲಿ ಜಾಗರೂಕತೆ ಬೇಕು. ಆಧ್ಯಾತ್ಮದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ.
ಮಕರ ರಾಶಿ:
ನ್ಯಾಯಾಲಯದಲ್ಲಿ ಇರುವ ಪ್ರಕರಣವು ನಿಮಗೆ ಸಮಾಧಾನ ನೀಡುವುದು. ಹಣದ ತೊಂದರೆಗೆ ಮನೆಯಿಂದ ಸಹಾಯ ದೊರೆಯಬಹುದು. ನಿಮಗೆ ಕಲಿಸಿದವರ ಒಡನಾಟವು ಬೆಳೆಯುವುದು. ಸಂಬಂಧಿಕರ ಜೊತೆ ವ್ಯವಹಾರವನ್ನು ಮಾಡಬೇಡಿ. ನಿಮ್ಮ ಆದಾಯ ಮತ್ತು ಖರ್ಚುಗಳನ್ನು ನೀವು ಸಮವಲ್ಲದಿದ್ದರೂ ತೊಂದರೆಯಾಗದಂತೆ ನಿಭಾಯಿಸುವಿರಿ. ಸಹೋದ್ಯೋಗಿಗಳ ಕಿರಿಕಿರಿಯಿಂದ ಉದ್ಯೋಗವನ್ನು ಬದಲಿಸುವಿರಿ. ಇಂದು ಸ್ತ್ರೀಯರಿಗೆ ಅನಿರೀಕ್ಷಿತ ತೊಂದರೆಗಳು ಇರಲಿದೆ.
ಕುಂಭ ರಾಶಿ:
ಇಂದು ಕುಟುಂಬದ ಅಪರೂಪದ ವ್ಯಕ್ತಿಗಳನ್ನು ಭೇಟಿಯಾಗುವ ಸಂದರ್ಭ ಬರಬಹುದು. ಆಪ್ತರನ್ನು ಕಳೆದುಕೊಳ್ಳುವ ಭೀತಿ. ಎಷ್ಟೋ ದಿನದ ಸಾಲ ಇಂದು ಮುಕ್ತಾಯಗೊಳ್ಳುವುದು. ಕಛೇರಿಯಲ್ಲಿ ಅನಿರೀಕ್ಷಿತ ಒತ್ತಡಗಳು ಕಾಣಿಸಿಕೊಳ್ಳುವುದು. ನೀವು ಯಾವುದೇ ಅವಲಂಬನೆ ಇಲ್ಲದೆ ಕೆಲಸ ಮಾಡಲು ಬಯಸುವುದಿಲ್ಲ. ವ್ಯಾಪಾರ ಮಾಡುವ ಜನರ ಜೊತೆ ಸೇರಿ ಕೆಲವು ಕೆಲಸಗಳನ್ನು ಮಾಡಲು ಅವಕಾಶವಿದೆ. ನೀವು ಎಣಿಸಿದ್ದನ್ನು ಬಂಧುಗಳು ಮಾಡಿಕೊಡುವರು.
ಮೀನ ರಾಶಿ:
ಬಹು ದಿನದಿಂದ ಸಿಗಬೇಕಿದ್ದ ಆಸ್ತಿ ಕೈ ತಪ್ಪಬಹುದು. ಹಿರಿಯ ಹಾಗೂ ಪ್ರಮುಖವ್ಯಕ್ತಿಗಳನ್ನು ಇಂದು ಭೇಟಿಯಾಗುತ್ತೀರಿ. ನೀವು ಮಾಡುವ ಕಾರ್ಯಕ್ಕೆ ಇತರರ ಸಹಾಯವೂ ಲಭ್ಯವಾಗಲಿದೆ. ನೀವು ಕ್ರಿಯಾ ಯೋಜನೆಯನ್ನು ತಯಾರಿಸಿದರೆ ಯಶಸ್ಸಿಗೆ ಸಮೀಪವಾಗುವಿರಿ. ಬಂಧುಗಳು ಮನೆಗೆ ಬಂದ ಕಾರಣ ಖರ್ಚು ಹೆಚ್ಚಾದೀತು. ನಿಮ್ಮ ಸಣ್ಣ ಮನಸ್ಸನ್ನು ಅವರಿಗೆ ತೋರಿಸಬೇಡಿ. ಉನ್ನತ ಅಧ್ಯಯನವನ್ನು ಬಯಸಿ ಬೇರೆ ಕಡೆಗೆ ತೆರಳುವಿರಿ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಅನುರಾಧಾ, ಯೋಗ : ವಜ್ರ, ಕರಣ : ಗರಜ, ಸೂರ್ಯೋದಯ – 06 – 18 am, ಸೂರ್ಯಾಸ್ತ – 06 – 35 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:50 – 09:22, ಯಮಗಂಡ ಕಾಲ 10:55 – 12:27, ಗುಳಿಕ ಕಾಲ 13:59 – 15:31
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 11ನೇ ಪಂದ್ಯದಲ್ಲಿ ಆರ್ಸಿಬಿ ಅಭಿಮಾನಿಗಳು ಯಾವ ಫಲಿತಾಂಶವನ್ನು ನಿರೀಕ್ಷಿಸಿದ್ದರೋ ಅದೇ ಫಲಿತಾಂಶ ಹೊರಬಿದ್ದಿದೆ. ಹೈವೋಲ್ಟೇಜ್ ಕದನದಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿದ್ದ ಹಾಲಿ ಚಾಂಪಿಯನ್ ಆರ್ಸಿಬಿ, 43 ರನ್ಗಳ ಭಾರಿ ಅಂತರದ ಗೆಲುವು ದಾಖಲಿಸಿತು. ಪಂದ್ಯದ ಆರಂಭದಿಂದ ಅಂತ್ಯದವರೆಗೆ ಎಲ್ಲಿಯೂ ಸಿಎಸ್ಕೆ ಮೇಲುಗೈ ಸಾಧಿಸದಂತೆ ನೋಡಿಕೊಂಡ ಆರ್ಸಿಬಿ, ಸಿಎಸ್ಕೆ ತಂಡಕ್ಕೆ ಹ್ಯಾಟ್ರಿಕ್ ಸೋಲಿನ ಆಘಾತ ನೀಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 250 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸಿಎಸ್ಕೆ 207 ರನ್ ಕಲೆಹಾಕಲಷ್ಟೇ ಶಕ್ತವಾಗಿ ಹೀನಾಯ ಸೋಲು ಅನುಭವಿಸಿತು.
ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿಯ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಐಪಿಎಲ್ನಲ್ಲಿ ಇತಿಹಾಸಿಕ ಮೈಲಿಗಲ್ಲು ದಾಟಿದ್ದಾರೆ. ಐಪಿಎಲ್ನಲ್ಲಿ 200 ವಿಕೆಟ್ಗಳ ಗಡಿ ದಾಟಿರುವ ಭುವನೇಶ್ವರ್ ಈ ಸಾಧನೆ ಮಾಡಿದ ವಿಶ್ವದ ಮೊದಲ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಭುವನೇಶ್ವರ್ ಕುಮಾರ್ ಅವರಿಗೂ ಮೊದಲು, ಐಪಿಎಲ್ ಇತಿಹಾಸದಲ್ಲಿ ಯಾವುದೇ ವೇಗದ ಬೌಲರ್ 200 ವಿಕೆಟ್ಗಳನ್ನು ಪಡೆದಿರಲಿಲ್ಲ. ಇದೀಗ ಆ ದಾಖಲೆ ಭುವಿ ಪಾಲಾಗಿದೆ. ಇದರ ಜೊತೆಗೆ ಐಪಿಎಲ್ನಲ್ಲಿ ವಿಕೆಟ್ಗಳ ದ್ವಿಶತಕ ಪೂರೈಸಿದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೂ ಭುವಿ ಪಾತ್ರರಾಗಿದ್ದಾರೆ.
ಭುವನೇಶ್ವರ್ ಕುಮಾರ್ ಈ ಪಂದ್ಯದಲ್ಲಿ ತಮ್ಮ ಮೊದಲ ಓವರ್ನಲ್ಲಿಯೇ ಆಯುಷ್ ಮ್ಹಾತ್ರೆ ಅವರ ವಿಕೆಟ್ ಉರುಳಿಸುವ ಮೂಲಕ ಐಪಿಎಲ್ನಲ್ಲಿ 200 ವಿಕೆಟ್ಗಳನ್ನು ಪೂರ್ಣಗೊಳಿಸಿದರು. ಈ ಮೂಲಕ ಐಪಿಎಲ್ನಲ್ಲಿ 200 ಕ್ಕೂ ಅಧಿಕ ವಿಕೆಟ್ ಉರುಳಿಸಿದ ಬೌಲರ್ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರು. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ 224 ವಿಕೆಟ್ಗಳನ್ನು ಕಬಳಿಸಿದ್ದಾರೆ. ಭುವಿ ಈಗ 200 ವಿಕೆಟ್ಗಳೊಂದಿಗೆ ಈ ಕ್ಲಬ್ಗೆ ಸೇರಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಐಪಿಎಲ್ 11ನೇ ಪಂದ್ಯದಲ್ಲಿ ಆರ್ಸಿಬಿ ತಂಡದ ಸ್ಫೋಟಕ ದಾಂಡಿಗ ಟಿಮ್ ಡೇವಿಡ್ ಕೇವಲ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 70 ರನ್ ಬಾರಿಸಿದರು. ಇವರ ಈ ಅಬ್ಬರದ ಬ್ಯಾಟಿಂಗ್ನಿಂದ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ ಬರೋಬ್ಬರಿ 250 ರನ್ ಕಲೆಹಾಕಿತು. ಮಾತ್ರವಲ್ಲದೆ ತಂಡ ಕೊನೆಯ 5 ಓವರ್ಗಳಲ್ಲಿ 90 ಕ್ಕೂ ಅಧಿಕ ರನ್ ಪೇರಿಸಿತು.
ವಾಸ್ತವವಾಗಿ ಟಿಮ್ ಡೇವಿಡ್ ಕೇವಲ 26 ರನ್ ಕಲೆಹಾಕಿದ್ದಾಗ ವಿಕೆಟ್ ಕೈಚೆಲ್ಲಿದ್ದರು. ಸಿಎಸ್ಕೆ ವೇಗಿ ಅನ್ಶುಲ್ ಕಾಂಬೋಜ್ ಮಾಡಿದ 18ನೇ ಓವರ್ನಲ್ಲಿ ಡೇವಿಡ್ ಕ್ಲೀನ್ ಬೌಲ್ಡ್ ಆಗಿದ್ದರು. ಆಗ ತಂಡದ ಮೊತ್ತ 199 ರನ್ಗಳಾಗಿತ್ತು. ಆದರೆ ಕಾಂಬೋಜ್ ಮಾಡಿದ 18ನೇ ಓವರ್ನ 5ನೇ ಎಸೆತ ನೋ ಬಾಲ್ ಆಗಿತ್ತು. ಇದರಿಂದ ಡೇವಿಡ್ ಔಟಾಗುವುದರಿಂದ ಪಾರಾದರು.
ಈ ಜೀವದಾನದ ಲಾಭ ಪಡೆದ ಡೇವಿಡ್ 19ನೇ ಓವರ್ನಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 30 ರನ್ ಕಲೆಹಾಕಿದರು. ಇದರ ಜೊತೆಗೆ ತಮ್ಮ ಅರ್ಧಶತಕವನ್ನು ಪೂರೈಸಿದರು. ಹಾಗೆಯೇ 20ನೇ ಓವರ್ನಲ್ಲೂ ಬೌಂಡರಿ ಬಾರಿಸಿದರು. ಅಂದರೆ ಕಾಂಬೋಜ್ ಮಾಡಿದ ಅದೊಂದು ನೋ ಬಾಲ್ ಸಿಎಸ್ಕೆಗೆ 50 ಕ್ಕೂ ಅಧಿಕ ರನ್ಗಳ ದಂಡ ವಿಧಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಕನ್ನಡದ ನಟಿಯಾದರೂ ಈಗ ಮಿಂಚುತ್ತಿರುವುದು ಪರಭಾಷೆ ಸಿನಿಮಾಗಳಲ್ಲಿಯೇ. ತೆಲುಗಿನಲ್ಲಿ ಸ್ಟಾರ್ ನಟಿಯಾಗಿ ಮೆರೆದು, ತಮಿಳಿನಲ್ಲೂ ಬೇಡಿಕೆಯ ನಟಿ ಎನಿಸಿಕೊಂಡು ಬಳಿಕ ಬಾಲಿವುಡ್ಗೆ ಪದಾರ್ಪಣೆ ಮಾಡಿ, ಅಲ್ಲಿಯೂ ಸಹ ಸಾವಿರಾರು ಕೋಟಿ ಗಳಿಕೆಯ ಸಿನಿಮಾಗಳ ಭಾಗವಾಗಿ ಈಗ ಬಾಲಿವುಡ್ನ ಬ್ಯುಸಿ ನಟಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ ರಶ್ಮಿಕಾ. ಇತ್ತೀಚೆಗಷ್ಟೆ ವಿಜಯ್ ದೇವರಕೊಂಡ ಜೊತೆಗೆ ವಿವಾಹವಾದ ನಟಿ ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬ ಇಂದು (ಏಪ್ರಿಲ್ 05). ಅಂದಹಾಗೆ ಈ ಬ್ಯುಸಿ ನಟಿ ರಶ್ಮಿಕಾ ಮಂದಣ್ಣ ಕೈಯಲ್ಲಿ ಇರುವ ಸಿನಿಮಾಗಳೆಷ್ಟು?
ರಶ್ಮಿಕಾ ಮಂದಣ್ಣ ಭಾರತದ ಬಲು ಬ್ಯುಸಿ ನಟಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಅವರ ಕೈಯಲ್ಲಿ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಯ ಹಲವು ಸಿನಿಮಾಗಳಿವೆ. ಪ್ರಸ್ತುತ ಅವರ ಒಂದು ಹಿಂದಿ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಅದುವೇ ‘ಕಾಕ್ಟೇಲ್ 2’. ಶಾಹಿದ್ ಕಪೂರ್ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಕೃತಿ ಸನೋನ್ ಅವರುಗಳೊಟ್ಟಿಗೆ ರಶ್ಮಿಕಾ ಮಂದಣ್ಣ ‘ಕಾಕ್ಟೇಲ್ 2’ ಸಿನಿಮಾನಲ್ಲಿ ನಟಿಸಿದ್ದು, ಈ ಸಿನಿಮಾ ಏಪ್ರಿಲ್ 8ಕ್ಕೆ ಬಿಡುಗಡೆ ಆಗಲಿದೆ.
ಇದೀಗ ಪತಿ ವಿಜಯ್ ದೇವರಕೊಂಡ ಜೊತೆಗೆ ‘ರಣಬಾಲಿ’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈ ಸಿನಿಮಾನಲ್ಲಿ ಅವರದ್ದು ‘ಜಯಮ್ಮ’ ಹೆಸರಿನ ಪಾತ್ರ. ಹಲವು ವರ್ಷಗಳ ಬಳಿಕ ಮತ್ತೆ ವಿಜಯ್ ದೇವರಕೊಂಡ ಜೊತೆಗೆ ನಟಿಸುತ್ತಿದ್ದಾರೆ ರಶ್ಮಿಕಾ. ಇದರ ಜೊತೆಗೆ ‘ಮೈಸಾ’ ಹೆಸರಿನ ಆಕ್ಷನ್ ಸಿನಿಮಾನಲ್ಲಿ ರಶ್ಮಿಕಾ ನಟಿಸುತ್ತಿದ್ದು, ಇದು ಮಹಿಳಾ ಪ್ರಧಾನ ಸಿನಿಮಾ ಎಂಬುದು ವಿಶೇಷ. ಇದು ಅವರ ಮೊದಲ ಸೋಲೊ ಆಕ್ಷನ್ ಸಿನಿಮಾ ಆಗಿರಲಿದೆ.
ವಿಜಯ್ ದೇವರಕೊಂಡ ಜೊತೆಗೆ ‘ಗೀತಾ ಗೋವಿಂದಂ 2’ ಸಿನಿಮಾ ಸಹ ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದಾರೆ. ಸಿನಿಮಾವನ್ನು ದಿಲ್ ರಾಜು ನಿರ್ಮಿಸಲಿದ್ದು, ಸಿನಿಮಾದ ಘೋಷಣೆ ಸಹ ಈಗಾಗಲೇ ಆಗಿದೆ. ಅಲ್ಲು ಅರ್ಜುನ್ ನಟಿಸಿ ಅಟ್ಲಿ ನಿರ್ದೇಶನ ಮಾಡುತ್ತಿರುವ ಫ್ಯೂಚರಿಸ್ಟಿಕ್ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಗಟ್ಟಿಯಾಗಿ ಓಡಾಡುತ್ತಿದೆ. ಅಂದಹಾಗೆ ‘ಪುಷ್ಪ 3’ ಸಿನಿಮಾನಲ್ಲಿಯೂ ರಶ್ಮಿಕಾ ಇರುವುದು ಖಾತ್ರಿ.
ಇವುಗಳ ಜೊತೆಗೆ ತಮಿಳಿನಲ್ಲಿ ಅಜಿತ್ ನಟಿಸಲಿರುವ ಹೊಸ ಸಿನಿಮಾಕ್ಕೆ ರಶ್ಮಿಕಾ ನಾಯಕಿ ಎನ್ನಲಾಗುತ್ತಿದೆ. ಹಿಂದಿಯಲ್ಲಿ ಸಹ ಕೆಲ ಹೊಸ ಸಿನಿಮಾಗಳನ್ನು ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದಾರೆ. ಟೈಗರ್ ಶ್ರಾಫ್ ಜೊತೆಗೆ ಹೊಸ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕೆಲ ಸಿನಿಮಾಗಳ ಘೋಷಣೆ ಆಗಿದೆ, ಕೆಲ ಸಿನಿಮಾಗಳ ಘೋಷಣೆ ಆಗಬೇಕಿದೆ. ಒಟ್ಟಾರೆ ರಶ್ಮಿಕಾರ ವೃತ್ತಿ ಜೀವನ ಬಲು ಜೋರಾಗಿಯೇ ನಡೆಯುತ್ತಿದೆ.