CM DK Shivakumar Profile: ವಿದ್ಯಾರ್ಥಿ ನಾಯಕನಿಂದ ಸಿಎಂ ಗದ್ದುಗೆಯವರೆಗೆ: ಕನಕಪುರ ಬಂಡೆ ಡಿಕೆ ಶಿವಕುಮಾರ್ ರಾಜಕೀಯ ಪಯಣದ ಹಿನ್ನೋಟ – Kannada News

ವಿದ್ಯಾರ್ಥಿ ನಾಯಕನಿಂದ ಸಿಎಂ ಗದ್ದುಗೆಯವರೆಗೆ: ಕನಕಪುರ ಬಂಡೆ ಡಿಕೆ ಶಿವಕುಮಾರ್ ರಾಜಕೀಯ ಪಯಣದ ಹಿನ್ನೋಟ

ಕನಕಪುರದ ಬಂಡೆ, ಕಾಂಗ್ರೆಸ್​ನ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿಕೆ ಶಿವಕುಮಾರ್ (DK Shivakumar), ಇದೀಗ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಬರೆದಿದ್ದಾರೆ. ಕಾಲೇಜಿನಲ್ಲೇ ರಾಜಕೀಯ ರಂಗಕ್ಕೆ ಧುಮುಕಿದ ಇವರ 45 ವರ್ಷಗಳ ಸುದೀರ್ಘ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಉದ್ಯಮ ಹಾಗೂ ರಾಜಕಾರಣ ಎರಡರಲ್ಲೂ ಕಠಿಣ ಪರಿಶ್ರಮದಿಂದಲೇ ಸಾಮ್ರಾಜ್ಯ ಕಟ್ಟಿದ ಡಿಕೆಶಿ, ಇಂದು ರಾಜ್ಯದ ಮುಖ್ಯಮಂತ್ರಿ ಗದ್ದುಗೆಯನ್ನು ಅಲಂಕರಿಸುವ ಮೂಲಕ ಕಾಂಗ್ರೆಸ್‌ನ ಧೀಮಂತ ನಾಯಕನಾಗಿ ಹೊರಹೊಮ್ಮಿದ್ದಾರೆ. ಡಿ.ಕೆ ಶಿವಕುಮಾರ್ ಜೀವನ ಜೀವನದ ಸಣ್ಣ ಚಿತ್ರಣ ಇಲ್ಲಿದೆ.

ಕೌಟುಂಬಿಕ ಹಿನ್ನೆಲೆ

ಕನಕಪುರ ತಾಲೂಕಿನ ದೊಡ್ಡಆಲಹಳ್ಳಿಯಲ್ಲಿ ಮೇ 15, 1962 ರಂದು ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಪುತ್ರನಾಗಿ ಜನಿಸಿದ ಡಿ.ಕೆ. ಶಿವಕುಮಾರ್ ಅವರು ಸದ್ಯ ಸ್ನಾತಕೋತ್ತರ ಪದವೀಧರರಾಗಿದ್ದು, ರಾಜಕಾರಣ ಹಾಗೂ ಉದ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಇವರ ಕೌಟುಂಬಿಕ ಹಿನ್ನೆಲೆಯನ್ನು ನೋಡುವುದಾದರೆ, ಇವರಿಗೆ ಡಿ.ಕೆ.ಸುರೇಶ್ ಎಂಬ ಓರ್ವ ಸಹೋದರ ಮತ್ತು ಒಬ್ಬರು ಸಹೋದರಿ ಇದ್ದಾರೆ. ಇನ್ನು ಶಿವಕುಮಾರ್ ಅವರಿಗೆ ಐಶ್ವರ್ಯ, ಆಭರಣಾ ಹಾಗೂ ಆಕಾಶ್ ಎಂಬ ಮೂವರು ಮಕ್ಕಳಿದ್ದಾರೆ.

ರಾಮನಗರದಿಂದ ಮುಖ್ಯಮಂತ್ರಿಯಾದವರಲ್ಲಿ ನಾಲ್ಕನೇಯವರು ಡಿಕೆಶಿ

ರಾಜಕೀಯ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ರಾಮನಗರ ಜಿಲ್ಲೆಗೆ ಒಂದು ವಿಶೇಷ ಹೆಮ್ಮೆಯಿದೆ. ಈ ಹಿಂದೆ ಇದೇ ಜಿಲ್ಲೆಯಿಂದ ನಾಲ್ವರು ನಾಯಕರು ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರು. ಕೆಂಗಲ್ ಹನುಮಂತಯ್ಯ ಮೊದಲ ಮುಖ್ಯಮಂತ್ರಿ, ದೇವೇಗೌಡ ದ್ವಿತೀಯ ಹಾಗೂ ಕುಮಾರ ಸ್ವಾಮಿ ಮೂರನೇಯವರಾಗಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು.  ಇದೀಗ ಡಿ.ಕೆ.ಶಿವಕುಮಾರ್ ಅವರು ಆ ಸಾಲಿಗೆ ಸೇರ್ಪಡೆಯಾಗುವ ಮೂಲಕ ಜಿಲ್ಲೆಯಿಂದ ಸಿಎಂ ಗದ್ದುಗೆಗೇರಿದ ನಾಲ್ಕನೇ ಮುಖ್ಯಮಂತ್ರಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿದ್ಯಾರ್ಥಿ ದೆಸೆಯಲ್ಲೇ ರಾಜಕೀಯ ಚಟುವಟಿಕೆ

ಡಿಕೆಶಿ ಅವರು ತಮ್ಮ 18ನೇ ವಯಸ್ಸಿನಲ್ಲಿಯೇ ಎನ್‌ಎಸ್‌ಯುಐ ಸೇರಿ 1981-83ರ ತನಕ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಂದಿನಿಂದಲೇ ರಾಜಕೀಯದ ಕಡೆಗೆ ಆಸಕ್ತಿ ಬೆಳೆಸಿಕೊಂಡಿದ್ದ ಡಿಕೆಶಿ, ಬೆಂಗಳೂರಿನ ಆರ್.ಸಿ.ಕಾಲೇಜಿನಲ್ಲಿ ಓದುವಾಗ ಯುವ ಕಾಂಗ್ರೆಸ್ ರಾಜ್ಯ ಘಟಕದ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ದೇವೇಗೌಡರ ವಿರುದ್ಧ ಮೊದಲ ಫೈಟ್

1985ರಲ್ಲಿ ಮೊದಲ ಬಾರಿಗೆ ಸಾತನೂರು ಕ್ಷೇತ್ರದಲ್ಲಿ ಜೆಡಿಎಸ್‌ನ ಎಚ್.ಡಿ.ದೇವೇಗೌಡರ ವಿರುದ್ಧ ಚುನಾವಣಾ ಕಣಕ್ಕಿಳಿದರು. ಪ್ರಬಲ ಪೈಪೋಟಿ ನೀಡಿದ ಡಿ.ಕೆ.ಶಿವಕುಮಾರ್, ದೇವೇಗೌಡರು ಪ್ರಯಾಸದ ಗೆಲುವು ಪಡೆಯುವಂತೆ ಮಾಡಿದರು. 1987ರಲ್ಲಿ ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದರು. 1989ರಲ್ಲಿ ಸಾತನೂರು ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ದ್ದ ಜೆಡಿಎಸ್ ಪ್ರಭಾವವನ್ನು ಕಡಿಮೆಗೊಳಿಸಿದರು.

ಬಂಗಾರಪ್ಪ ಸಂಪುಟದಿಂದ ಎಸ್.ಎಂ. ಕೃಷ್ಣ ಸರ್ಕಾರದವರೆಗಿನ ಪಯಣ

1991ರಲ್ಲಿ ಎಸ್.ಬಂಗಾರಪ್ಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವಲ್ಲಿ ಡಿ.ಕೆ.ಶಿವಕುಮಾರ್ ಮಹತ್ವದ ಪಾತ್ರವಹಿಸಿದ್ದರು. ಬಂಗಾರಪ್ಪ ಸಂಪುಟದಲ್ಲಿ ಬಂಧಿಖಾನೆ ಖಾತೆ ಹೊಣೆಯನ್ನು ಅವರಿಗೆ ನೀಡಲಾಯಿತು. 1994ರ ಚುನಾವಣೆಯಲ್ಲಿ ಕೆಲವು ನಾಯಕರ ಪಿತೂರಿ ಕಾರಣ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿತು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದರು. 1999ರ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಿಂದ ಆಯ್ಕೆಯಾದರು. ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಹಕಾರ ಸಚಿವರಾದರು. 2002ರಲ್ಲಿ ನಗರಾಭಿವೃದ್ಧಿ ಖಾತೆ ಸಚಿವರಾದರು.

2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಸಾತನೂರು ಕ್ಷೇತ್ರ ಇಲ್ಲವಾಯಿತು. ಆಗ ಕನಕಪುರ ಕ್ಷೇತ್ರಕ್ಕೆ ಬಂದರು. 2008, 2013 ಮತ್ತು 2018ರ ಚುನಾವಣೆಯಲ್ಲಿ ಕನಕಪುರದಿಂದ ಗೆಲುವು ಸಾಧಿಸಿದ್ದಾರೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೂ ಡಿ.ಕೆ.ಶಿವಕುಮಾರ್‌ಗೆ ಸುಲಭವಾಗಿ ಸಚಿವ ಸ್ಥಾನ ಸಿಗಲಿಲ್ಲ. ಅಂತಿಮವಾಗಿ ಹೈಕಮಾಂಡ್ ಒಪ್ಪಿದ ಮೇಲೆ ಸಂಪುಟ ಸೇರಿ ಇಂಧನ ಖಾತೆ ವಹಿಸಿಕೊಂಡರು. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಜಲಸಂಪನ್ಮೂಲ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದರು. 2023 ಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷರೊಂದಿಗೆ ಜಲ ಸಂಪನ್ಮೂಲ ಇಲಾಖೆ ಸಚಿವರಾಗಿದ್ದರು.

ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ

ಸುಮಾರು 35 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿರುವ ಡಿ.ಕೆ.ಶಿವಕುಮಾರ್ ಪಕ್ಷ ವಹಿಸಿದ ಎಲ್ಲಾ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಾರೆ. 2020 ಮಾರ್ಚ್ 11ರಂದು ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ವಿಲಾಸ್ ರಾವ್ ದೇಶ್‌ಮುಖ್ ಸರ್ಕಾರ ಅಲ್ಪಮತಕ್ಕೆ ಕುಸಿಯುವ ಭೀತಿ ಎದುರಾದಾಗ ಶಾಸಕರನ್ನು ರಕ್ಷಣೆ ಮಾಡಿ ಬೆಂಗಳೂರಿಗೆ ಕರೆದುಕೊಂಡು ಬಂದು ಕುದುರೆ ವ್ಯಾಪಾರ ನಡೆಯದಂತೆ ನೋಡಿಕೊಂಡರು. 2017ರಲ್ಲಿ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆ ಚುನಾವಣೆ ನಡೆಯುವಾಗ ಪಕ್ಷದ ಸೂಚನೆಯಂತೆ ಪಕ್ಷದ ಶಾಸಕರನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಕುದುರೆ ವ್ಯಾಪಾರ ತಪ್ಪಿಸಿದರು. ಜಾರಿ ನಿರ್ದೇಶನಾಲಯದ ದಾಳಿ ಬಳಿಕ ಡಿ.ಕೆ.ಶಿವಕುಮಾರ್ ಬಂಧನವಾಯಿತು. ದೆಹಲಿಯ ತಿಹಾರ್ ಜೈಲಿನಲ್ಲಿದ್ದ ಅವರನ್ನು ನೋಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಗಮಿಸಿದ್ದರು ಎಂಬುದು ವಿಶೇಷ.

ಎಂಟನೇ ಗೆಲುವು

ವಿಧಾನಸಭೆ ಚುನಾವಣೆಯಲ್ಲಿ ಶಿವಕುಮಾರ್ ಇದು ಸತತ ಎಂಟನೇ ಗೆಲುವು. 1985ರಲ್ಲಿ ಸಾತನೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಚ್.ಡಿ.ದೇವೇಗೌಡರ ಎದುರು ಸೋಲು ಕಂಡಿದ್ದ ಡಿಕೆಶಿ 1989ರಿಂದ 2004ರವರೆಗೆ ಅದೇ ಕ್ಷೇತ್ರದಿಂದ ನಾಲ್ಕು ಬಾರಿ ಸತತವಾಗಿ ಆಯ್ಕೆ ಆಗಿದ್ದಾರೆ. 2008ರ ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭ ಸಾತನೂರು ಕ್ಷೇತ್ರವು ಕನಕಪುರ ಕ್ಷೇತ್ರದಲ್ಲಿ ವಿಲೀನ ಆಗಿದ್ದು, ಕನಕಪುರಕ್ಕೆ ವಲಸೆ ಬಂದ ಶಿವಕುಮಾರ್ ಇಲ್ಲೂ ಗೆಲುವಿನ ಓಟ ಮುಂದುವರಿಸಿದ್ದಾರೆ. 2008ರಿಂದ ಈವರೆಗೆ ಕನಕಪುರದಲ್ಲಿ ಅವರನ್ನು ಮಣಿಸಲು ಯಾರಿಗೂ ಸಾಧ್ಯವಾಗಿಲ್ಲ.

ವಿರೋಧಿಗಳೇ ಇಲ್ಲ

ಇನ್ನು ಕನಕಪುರ ಕ್ಷೇತ್ರದಲ್ಲಿ ಡಿಕೆಶಿಗೆ ವಿರೋಧಿಗಳೇ ಇಲ್ಲವಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿರುವ ಶಿವಕುಮಾರ್ ಅವರನ್ನು ತವರಿನಲ್ಲಿ ಕಟ್ಟಿಹಾಕಬೇಕು ಎನ್ನುವ ಬಿಜೆಪಿಯ ತಂತ್ರ ಫಲ ನೀಡಿಲ್ಲ. ಅರುಣ್ ಸಿಂಗ್, ಬಿ.ಎಲ್.ಸಂತೋಷ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಪಕ್ಷದ ರಾಷ್ಟ್ರೀಯ ರಾಜ್ಯ ಮಟ್ಟದ ನಾಯಕರು ಬಂದು ಪ್ರಚಾರ-ತಂತ್ರಗಾರಿಕೆ ನಡೆಸಿದರೂ ಗೆಲುವಿನ ಸಮೀಪಕ್ಕೆ ಹೋಗಲು ಆಗಿಲ್ಲ. ನಾಮಪತ್ರ ಸಲ್ಲಿಸಿ ಪ್ರಚಾರವನ್ನೇ ಮಾಡದೇ ಭಾರಿ ಅಂತರದಲ್ಲಿ ಗೆಲ್ಲುವ ಮೂಲಕ ಶಿವಕುಮಾರ್ ಎದುರಾಳಿಗಳಿಗೆ ಸ್ಪಷ್ಟ ಸಂದೇಶ ರವಾನಿಸುವ ಮೂಲಕ ಕಾಂಗ್ರೆಸ್ ಒಳಗೂ ಅವರ ಪ್ರತಿಷ್ಠೆ ಹೆಚ್ಚಾಗುವಂತೆ ಮಾಡಿದೆ. ಪಿಜಿಆರ್ ಸಿಂಧ್ಯಾ, ಡಿ.ಎಂ.ವಿಶ್ವನಾಥ್, ನಾರಾಯಣ ಗೌಡ ಸೇರಿದಂತೆ ಹಿಂದಿನ ಚುನಾವಣೆಗಳಲ್ಲಿ ತಮ್ಮ ವಿರುದ್ಧ ಸ್ಪರ್ಧೆ ಮಾಡಿದ್ದ ಜೆಡಿಎಸ್ ಅಭ್ಯರ್ಥಿಗಳನ್ನೆಲ್ಲ ಕಾಂಗ್ರೆಸ್‌ಗೆ ಸೆಳೆದು ಕ್ಷೇತ್ರದಲ್ಲಿ ವಿರೋಧ ಪಕ್ಷಗಳಿಗೆ ಅಸ್ತಿತ್ವವೇ ಇಲ್ಲದಂತೆ ನೋಡಿಕೊಂಡಿದ್ದಾರೆ.

ಸಾವಿರ ಕೋಟಿ ಒಡೆಯ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕುಟುಂಬದ ಆಸ್ತಿ 1,413.78 ಕೋಟಿ ಆಸ್ತಿ ಚುನಾವಣೆಯ ಘೋಷಣೆ ಮಾಡಿಕೊಂಡಿದ್ದಾರೆ. ಸಾವಿರ ಕೋಟಿ ಸರದಾರನಾದರೂ ಅವರ ಬಳಿ ಇರುವುದು ಒಂದೇ ಕಾರಾಗಿದೆ. ರಾಜ್ಯ ಮಾತ್ರವಲ್ಲ ದೇಶದ ಶ್ರೀಮಂತ ಶಾಸಕರಲ್ಲಿ ಒಬ್ಬರಾಗಿರುವ ಡಿ.ಕೆ.ಶಿ ಬಳಿ ಇರುವುದು ಒಂದೇ ಕಾರು ಎಂಬುದು ಮತ್ತೊಂದು ವಿಶೇಷವಾಗಿದೆ. 2018ರ ವಿಧಾನಸಭಾ ಚುನಾವಣೆ ವೇಳೆ ಒಟ್ಟು 840.08 ಕೋಟಿ ರೂಪಾಯಿ ಆಸ್ತಿ ಹೊಂದಿರುವುದಾಗಿ ಡಿಕೆ ಶಿವಕುಮಾರ್ ಅವರು ಘೋಷಿಸಿಕೊಂಡಿದ್ದರು. ಅದು 2023ರ ಚುನಾವಣೆಯಲ್ಲಿ 1,413.78 ಕೋಟಿಗೆ ಏರಿಕೆಯಾಗಿದೆ. ಡಿಕೆಶಿ ಕಳೆದ ಐದು ವರ್ಷಗಳಲ್ಲಿ ಶೇ 68.29 ರಷ್ಟು ಹೆಚ್ಚಳವಾಗಿದೆ.

ಇಷ್ಟೊಂದು ಕೇಸ್‌ಗಳು

ಆದಾಯ ತೆರಿಗೆಗೆ ಸಂಬಂಧಿಸಿದ ನಾಲ್ಕು ಪ್ರಕರಣ, ಜಾರಿ ನಿರ್ದೇಶನಾಲಯದ ಎರಡು ಪ್ರಕರಣ ಮತ್ತು ಒಂದು ಸಿಬಿಐ ಪ್ರಕರಣ ಸೇರಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಒಟ್ಟು 19 ಪ್ರಕರಣಗಳು ದಾಖಲಾಗಿವೆ.

ಪಾದಯಾತ್ರೆ

ಡಿಕೆಶಿ ಅವರ ರಾಜ್ಯದಲ್ಲಿ ಭರತ್ ಜೋಡೋ ಹಾಗೂ ಮೇಕೆದಾಟು ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಚುನಾವಣಾ ಪೂರ್ವವೇ ಪಕ್ಷಕ್ಕೆ ವರ್ಚಸ್ಸು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅದರಲ್ಲೂ ಕುಡಿಯುವ ನೀರಿಗಾಗಿ ಹಮ್ಮಿಕೊಳ್ಳಲಾಗಿದ್ದ ಮೇಕೆದಾಟು ಯಾತ್ರೆಯು ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ 136 ಸೀಟು ಪಡೆಯುವ ಹಿಂದೆ ಡಿಕೆಶಿ ಅವರ ಪಾತ್ರ ಹೆಚ್ಚಾಗಿದೆ. ತಮ್ಮ ಗಡಸುತನ, ನೇರ ಮಾತಿನಿಂದಲೇ ಪಕ್ಷವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಮುಖರಾಗಿ ದುಡಿದಿದ್ದಾರೆ.

ಉದ್ಯಮಿ, ವಿದ್ಯಾಸಂಸ್ಥೆ

ರಾಜಕಾರಣಿಯ ಜೊತೆಗೆ, ಡಿ.ಕೆ.ಶಿವಕುಮಾರ್ ಉದ್ಯಮಿಯಾಗಿದ್ದಾರೆ. ಜೊತೆಗೆ, ಹಲವು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದಾರೆ.

ಡಿಕೆಶಿ ಗೆಲುವು, ಸೋಲಿನ ಹಾದಿ

ತ್ರಿವಿಕ್ರಮ ಸಾಧಿಸುತ್ತಾರಾ ಡಿಕೆಶಿ?

ಜಿಲ್ಲೆಯಿಂದ ಈವರೆಗೆ ನಾಲ್ವರು ಮುಖ್ಯಮಂತ್ರಿ ಹುದ್ದೆಗೇರಿದ್ದರೂ ಇದುವರೆಗೆ ಯಾರೂ ಅಧಿಕಾರ ಪೂರ್ಣಗೊಳಿಸಿಲ್ಲ. ಕೆಂಗಲ್ ಹನುಮಂತಯ್ಯ ಅವರು 4 ವರ್ಷ 5 ತಿಂಗಳು ಮತ್ತು ರಾಮಕೃಷ್ಣ ಹೆಗಡೆ ಕೇವಲ 1 ವರ್ಷ ಮಾತ್ರ ಮುಖ್ಯಮಂತ್ರಿಯಾಗಿದ್ದರು. ಹೆಚ್‌.ಡಿ. ದೇವೇಗೌಡ ಅವರು 17 ತಿಂಗಳ ಆಡಳಿತ ನಡೆಸಿದ್ದರು. ಅವರ ಪುತ್ರ ಹೆಚ್‌.ಡಿ. ಕುಮಾರಸ್ವಾಮಿ ಮೊದಲ ಅವಧಿಯಲ್ಲಿ 20 ತಿಂಗಳು ಹಾಗೂ ಎರಡನೇ ಅವಧಿಯಲ್ಲಿ 14 ತಿಂಗಳು ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಇದೀಗ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದು, 24 ತಿಂಗಳು ಅಧಿಕಾರ ನಡೆಸಲಿದ್ದಾರೆ.  ಅದಾದ ಬಳಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಮತ್ತೆ ಮುಖ್ಯಮಂತ್ರಿ ಆಗುತ್ತಾರಾ ಎಂಬ ಕತೂಹಲ ಎಲ್ಲರಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:02 pm, Wed, 3 June 26

Source link

ಬೆಂಗಳೂರಿನಲ್ಲಿ ದೇಶದ ಮೊದಲ ‘ಡಬಲ್ ಡೆಕ್ಕರ್’ ಸಾರಿಗೆ: ಒಂದೇ ಮಾರ್ಗದಲ್ಲಿ ಮೆಟ್ರೋ ಮತ್ತು ಸಬರ್ಬನ್ ರೈಲು; 169 ಕೋಟಿ ರೂ. ಉಳಿತಾಯ! – Kannada News

ಬೆಂಗಳೂರು, ಜೂ.3: ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ಜಾರಿಯಾಗುತ್ತಿರುವ ಎರಡು ಪ್ರಮುಖ ಸಾರಿಗೆ ಯೋಜನೆಗಳಾದ ‘ನಮ್ಮ ಮೆಟ್ರೋ’ (Namma Metro) ಮತ್ತು ‘ಬೆಂಗಳೂರು ಉಪನಗರ ರೈಲು’ (Suburban Rail) ಪೂರ್ವ ಬೆಂಗಳೂರಿನ ಬೆನ್ನಿಗಾನಹಳ್ಳಿಯಲ್ಲಿ ಸಂಪರ್ಕ ಸಾಧಿಸಲಿದೆ. ನಗರದ ಸಾರಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ, ಈ ಎರಡು ಬೃಹತ್ ಸಾರಿಗೆ ವ್ಯವಸ್ಥೆಗಳು ಒಂದೇ ಮಾರ್ಗದಲ್ಲಿ (Shared Alignment), ಒಂದರ ಕೆಳಗೆ ಮತ್ತೊಂದರಂತೆ ಸಂಚರಿಸುವ ಅತ್ಯಂತ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಇದು ಭೂಸ್ವಾಧೀನದ ವೆಚ್ಚ ಮತ್ತು ಯೋಜನಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.

ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಬೆನ್ನಿಗಾನಹಳ್ಳಿ ಫ್ಲೈಓವರ್ ಬಳಿ ಸುಮಾರು 500 ಮೀಟರ್‌ಗಳವರೆಗೆ ಉಪನಗರ ರೈಲಿನ ‘ಕನಕ ಲೈನ್’ ಮೇಲ್ಸೇತುವೆಯು, ನಮ್ಮ ಮೆಟ್ರೋದ ‘ಬ್ಲೂ ಲೈನ್’ ಮೇಲ್ಸೇತುವೆಯ ಕೆಳಭಾಗದಲ್ಲೇ ನೇರವಾಗಿ ಹಾದುಹೋಗಲಿದೆ. ಹೀಗಾಗಿ ಒಂದೇ ಪಿಲ್ಲರ್ ಬೇಸ್‌ನ ಮೇಲ್ಭಾಗದಲ್ಲಿ ಮೆಟ್ರೋ ಹಾಗೂ ಅದರ ಕೆಳಭಾಗದಲ್ಲಿ ಸಬರ್ಬನ್ ರೈಲು ಸಂಚರಿಸಲಿವೆ. ಕನಕ ಲೈನ್ ಹೀಲಳಿಗೆಯಿಂದ ರಾಜಾನುಕುಂಟೆಯನ್ನು (46 ಕಿ.ಮೀ) ಸಂಪರ್ಕಿಸಿದರೆ, ಮೆಟ್ರೋ ಬ್ಲೂ ಲೈನ್ ಕೆ.ಆರ್. ಪುರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುತ್ತದೆ.

ಈ ಮಾದರಿಯಿಂದಾಗಿ ಬೆಂಗಳೂರಿನ ಅತ್ಯಂತ ದುಬಾರಿ ವಸತಿ ಪ್ರದೇಶದ ಸುಮಾರು 1.65 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡಲಾಗಿದೆ. ಇದರಿಂದಾಗಿ ಆ ಭಾಗದಲ್ಲಿ ವಾಸವಿದ್ದ ಸುಮಾರು 600 ಕ್ಕೂ ಹೆಚ್ಚು ನಿವಾಸಿಗಳು ತಮ್ಮ ಮನೆಗಳನ್ನು ಕಳೆದುಕೊಂಡು ಸ್ಥಳಾಂತರಗೊಳ್ಳುವ ದೊಡ್ಡ ಆಪತ್ತಿನಿಂದ ಪಾರಾಗಿದ್ದಾರೆ. ಈ ಅತ್ಯಾಧುನಿಕ ಕಲ್ಪನೆಯಿಂದ ಯೋಜನೆಗೆ ಅಂದಾಜು 150 ಕೋಟಿ ರೂಪಾಯಿಯಿಂದ 169 ಕೋಟಿ ರೂಪಾಯಿಗಳಷ್ಟು ಸಾರ್ವಜನಿಕ ಹಣ ಉಳಿತಾಯವಾಗಿದೆ ಎಂದು ಕೆ-ರೈಡ್ ಹೇಳಿದೆ.

ಇದನ್ನೂ ಓದಿ: “ಕೈ-ಕಾಲು ಕತ್ತರಿಸಿದಾಗಷ್ಟೇ ಜನಕ್ಕೆ ಕಾನೂನಿನ ಭಯ ಬರತ್ತೆ”: ಲೈಂಗಿಕ ದೌರ್ಜನ್ಯ ಆರೋಪಿ ಜಾಮೀನು ಅರ್ಜಿ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಆಕ್ರೋಶ!

ಈ ಯೋಜನೆಯಲ್ಲಿ ಎರಡು ವಿಭಿನ್ನ ವಿದ್ಯುತ್ ಶಕ್ತಿ ವ್ಯವಸ್ಥೆಗಳನ್ನು ಸಂಯೋಜಿಸುವುದು ಎಂಜಿನಿಯರ್‌ಗಳಿಗೆ ದೊಡ್ಡ ಸವಾಲಾಗಿತ್ತು. ಉಪನಗರ ರೈಲು ಆಲ್ಟರ್ನೇಟಿಂಗ್ ಕರೆಂಟ್ (AC) ಬಳಸಿದರೆ, ಮೆಟ್ರೋ ಡೈರೆಕ್ಟ್ ಕರೆಂಟ್ (DC) ತಂತ್ರಜ್ಞಾನದಲ್ಲಿ ಚಲಿಸುತ್ತದೆ. ಈ ಎರಡೂ ವಿಭಿನ್ನ ತಾಂತ್ರಿಕ ಸುರಕ್ಷತೆಯನ್ನು ಭಾರತೀಯ ವಿಜ್ಞಾನ ಸಂಸ್ಥೆಯು ಕೂಲಂಕಷವಾಗಿ ಮೌಲ್ಯಮಾಪನ ಮಾಡಿ ಗ್ರೀನ್ ಸಿಗ್ನಲ್ ನೀಡಿದೆ. ಜಾಗದ ಅಭಾವವಿರುವ ಭಾರತದ ಇತರೆ ಮೆಟ್ರೋ ಸಿಟಿಗಳಿಗೆ ಬೆಂಗಳೂರಿನ ಈ ಮಾದರಿಯನ್ನೇ ತರಲಾಗುವುದು ಎಂದು ಹೇಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್’ ಬಳಿಕ ಬುದ್ಧಿ ಕಲಿತ ಯಶ್ ರಾಜ್ ಫಿಲಮ್ಸ್, ಚಿತ್ರಕತೆ ಬದಲು – Kannada News

ಬಾಲಿವುಡ್ (Bollywood) ಸ್ಪೈ ಸಿನಿಮಾಗಳೆಂದರೆ ಅವುಗಳಲ್ಲಿ ಮಾಸ್ ಸೀನ್​​ಗಳು, ಎಲಿವೇಷನ್​​ ಸೀನ್​​ಗಳು, ಓವರ್ ದಿ ಟಾಪ್ ಆಕ್ಷನ್, ಕಾಮಿಡಿ, ಐಟಂ ಹಾಡುಗಳು, ನಾಯಕನ ಥರಹೇವಾರಿ ಡ್ರೆಸ್ಸುಗಳು, ನಾಯಕಿಯ ಬಿಕಿನಿ ಸೀನ್ ಇರಲೇ ಬೇಕು ಎಂಬ ಸಂಪ್ರದಾಯ ಇತ್ತು. ಇವುಗಳ ಜೊತೆಗೆ ಭಾರತ ಮತ್ತು ಪಾಕಿಸ್ತಾನದ ಸ್ಪೈಗಳು ಒಟ್ಟಾಗಿ ಮತ್ತೊಬ್ಬ ವಿದೇಶಿ ವಿಲನ್ ವಿರುದ್ಧ ಹೊಡೆದಾಡುವ ಕತೆ ಇರುತ್ತಿತ್ತು. ಈ ಹಿಂದೆ ಬಂದಿದ್ದ ಸ್ಪೈ ಆಕ್ಷನ್ ಸಿನಿಮಾಗಳಾದ ‘ಟೈಗರ್’, ‘ಪಠಾಣ್’, ‘ವಾರ್’, ‘ಬ್ಯಾಂಗ್ ಬ್ಯಾಂಗ್’ ಇವೆಲ್ಲ ಸಿನಿಮಾಗಳಲ್ಲಿ ಮೇಲೆ ಹೇಳಿರುವ ಸೂತ್ರವೇ ಇತ್ತು. ಆದರೆ ‘ಧುರಂಧರ್’ ಸಿನಿಮಾ, ಭಾರತದಲ್ಲಿ ಸ್ಪೈ ಥ್ರಿಲ್ಲರ್ ವ್ಯಾಕರಣವನ್ನೇ ಬದಲಾಯಿಸಿದೆ. ದಶಕಗಳಿಂದಲೂ ಸ್ಪೈ ಆಕ್ಷನ್ ಸಿನಿಮಾ ಜಾನರ್​​ ಮೇಲೆ ಗಟ್ಟಿ ಹಿಡಿತ ಹೊಂದಿದ್ದ ಯಶ್ ರಾಜ್ ಫಿಲಮ್ಸ್ ಇದೀಗ ತನ್ನ ಮುಂಬರುವ ಸಿನಿಮಾಗಳ ಚಿತ್ರಕತೆಯನ್ನು ಸಂಪೂರ್ಣ ಬದಲಾಯಿಸುತ್ತಿದೆ.

ಯಶ್ ರಾಜ್ ಫಿಲಮ್ಸ್​, ಭಾರತದ ಅತಿ ದೊಡ್ಡ ನಿರ್ಮಾಣ ಸಂಸ್ಥೆಯಾಗಿದ್ದು, ಸ್ಪೈ ಆಕ್ಷನ್ ಸಿನಿಮಾಗಳನ್ನು ದಶಕಗಳಿಂದಲೂ ನಿರ್ಮಿಸುತ್ತಾ ಬರುತ್ತಿರುವುದು ಮಾತ್ರವಲ್ಲದೆ ಭಾರಿ ಯಶಸ್ಸನ್ನೂ ಗಳಿಸುತ್ತಿದೆ. ಈ ನಿರ್ಮಾಣ ಸಂಸ್ಥೆಯು ಒಂದು ಸಿದ್ಧ ಸೂತ್ರ ಇಟ್ಟುಕೊಂಡೇ ಸ್ಪೈ ಸಿನಿಮಾಗಳನ್ನು ನಿರ್ಮಿಸುತ್ತಾ ಬಂದಿದೆ. ಆದರೆ ಈಗ ‘ಧುರಂಧರ್’ ದೆಸೆಯಿಂದಾಗಿ ಯಶ್ ರಾಜ್ ಫಿಲಮ್ಸ್ ಸಹ ಸ್ಪೈ ಸಿನಿಮಾಗಳ ತಮ್ಮ ಸಿದ್ಧ ಸೂತ್ರದಲ್ಲಿ ಮಾರ್ಪಾಡು ಮಾಡುತ್ತಿದೆ.

ಯಶ್ ರಾಜ್ ಫಿಲಮ್ಸ್ ನಿರ್ಮಿಸಿರುವ ಹೊಸ ಸ್ಪೈ ಆಕ್ಷನ್ ಸಿನಿಮಾ ‘ಆಲ್ಫಾ’ ಬಿಡುಗಡೆ ಹಂತದಲ್ಲಿದೆ. ಈ ಸಿನಿಮಾನಲ್ಲಿ ಆಲಿಯಾ ಭಟ್ ಮತ್ತು ಶರ್ವರಿ ವಾಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಈಗ ‘ಧುರಂಧರ್’ ಸಿನಿಮಾ, ಸ್ಪೈ ಸಿನಿಮಾಗಳ ರೂಪವನ್ನೇ ಬದಲಿಸಿರುವ ಕಾರಣ, ಇದೀಗ ‘ಆಲ್ಫಾ’ ಸಿನಿಮಾನಲ್ಲಿಯೂ ಚಿತ್ರಕತೆಯನ್ನು ಬದಲಾಯಿಸಿ, ಕೆಲ ದೃಶ್ಯಗಳ ಮರುಚಿತ್ರೀಕರಣವನ್ನು ಸಹ ಮಾಡಲಾಗುತ್ತಿದೆ ಎಂಬ ಸುದ್ದಿ ಇದೆ.

ಇದನ್ನೂ ಓದಿ:ಹಾಲಿವುಡ್​ಗೆ ರೀಮೇಕ್ ಆದ ಭಾರತೀಯ ಸಿನಿಮಾಗಳಿವು

‘ಆಲ್ಫಾ’ ಸಿನಿಮಾನಲ್ಲಿಯೂ ಭಾರತ ಮತ್ತು ಪಾಕಿಸ್ತಾನದ ಸ್ಪೈಗಳು ಒಂದಾಗಿ ವಿಲನ್ ಎದುರು ಹೊಡೆದಾಡುವ ಕತೆಯನ್ನು ಮಾಡಲಾಗಿತ್ತಂತೆ. ಆದರೆ ‘ಧುರಂಧರ್’ ಸಿನಿಮಾವು, ಭಾರತದ ವಿರೋಧಿ ರಾಷ್ಟ್ರ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಭಯೋತ್ಪಾದನೆಯನ್ನು ಮಟ್ಟ ಹಾಕುವ ಕತೆ ಹೊಂದಿದ್ದು, ಆ ಸಿನಿಮಾಕ್ಕೆ ಭಾರಿ ಜನಮನ್ನಣೆ ವ್ಯಕ್ತವಾಗಿರುವ ಕಾರಣ, ಇದೀಗ ‘ಆಲ್ಫಾ’ ಕತೆಯನ್ನು ಬದಲಾಯಿಸಿ, ಪಾಕಿಸ್ತಾನದ ಏಜೆಂಟ್ ಜೊತೆ ಸೇರಿ ಮಿಷನ್ ನಡೆಸುವ ಕತೆಯನ್ನೇ ಕೈಬಿಡಲಾಗಿದೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ ‘ಆಲ್ಫಾ’ ಸಿನಿಮಾದ ಇಬ್ಬರು ನಾಯಕಿಯರಲ್ಲಿ ಒಬ್ಬರು ಪಾಕಿಸ್ತಾನದ ಏಜೆಂಟ್, ಒಬ್ಬರು ಭಾರತದ ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ ಈಗ ಆ ಕತೆಯನ್ನೇ ಬದಲಾಯಿಸಿ, ಇಬ್ಬರೂ ಭಾರತೀಯ ಏಜೆಂಟರುಗಳ ಪಾತ್ರವನ್ನು ಸೃಷ್ಟಿಸಲಾಗಿದೆಯಂತೆ. ಇದೇ ಕಾರಣಕ್ಕೆ ಕೆಲವು ದೃಶ್ಯಗಳ ಮರು ಚಿತ್ರೀಕರಣವನ್ನೂ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಕಾರಣದಿಂದಲೇ ‘ಆಲ್ಫಾ’ ಸಿನಿಮಾದ ಬಿಡುಗಡೆ ಸಹ ತಡವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ ಅಪ್​​ಡೇಟ್? ಆ ದಿನಕ್ಕಿರುವ ವಿಶೇಷತೆ ಏನು? – Kannada News

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ, ಜಾಗತಿಕ ಮಟ್ಟದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ‘ಟಾಕ್ಸಿಕ್’ ಸಿನಿಮಾದ ಅಪ್‌ಡೇಟ್‌ಗಾಗಿ ಇಡೀ ಭಾರತೀಯ ಚಿತ್ರರಂಗ ಕಾದು ಕುಳಿತಿದೆ. ‘ಕೆಜಿಎಫ್’ ಸರಣಿಯ ಅದ್ದೂರಿ ಸಕ್ಸಸ್ ನಂತರ ಯಶ್ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ಕನ್ನಡ ಚಿತ್ರರಂಗವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ದೊಡ್ಡ ಯೋಜನೆಯೊಂದಿಗೆ ‘ಟಾಕ್ಸಿಕ್’ ಚಿತ್ರವನ್ನು ಸಿದ್ಧಪಡಿಸಲಾಗುತ್ತಿದೆ. ಈಗ ಎಲ್ಲರ ಗಮನ ಜೂನ್ 8ರ ಮೇಲಿದೆ.

ಸದ್ಯ ‘ಟಾಕ್ಸಿಕ್’ ಚಿತ್ರದ ಕೆಲಸಗಳು ಬಿರುಸಿನಿಂದ ಸಾಗುತ್ತಿದೆ. ಮತ್ತೊಂದೆಡೆ ಸಿನಿಮಾದ ರಿಲೀಸ್ ದಿನಾಂಕ ಪದೇ ಪದೇ ಮುಂದಕ್ಕೆ ಹೋಗುತ್ತಿದೆ. ಸಿನಿಮಾದ ಅಧಿಕೃತ ಬಿಡುಗಡೆ ದಿನಾಂಕದ ಬಗ್ಗೆ ಚಿತ್ರತಂಡ ಇನ್ನು ಯಾವುದೇ ಸ್ಪಷ್ಟ ಘೋಷಣೆ ಮಾಡಿಲ್ಲ. ಆದರೆ, ಈಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ಜೂನ್ 8ರಂದು ‘ಟಾಕ್ಸಿಕ್’ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗುವ ದಟ್ಟ ಸಾಧ್ಯತೆಗಳಿವೆ ಎನ್ನಲಾಗಿದೆ.

ಜೂನ್ 8ರಂದು ‘ಟಾಕ್ಸಿಕ್’ ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಜನ್ಮದಿನ. ಈ ವಿಶೇಷ ಸಂದರ್ಭವನ್ನು ಮತ್ತಷ್ಟು ಅದ್ದೂರಿಯಾಗಿಸಲು ಚಿತ್ರತಂಡ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಅಂದೇ ಸಿನಿಮಾದ ಹೊಸ ಪೋಸ್ಟರ್ ಅಥವಾ ಖಚಿತ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಅನೌನ್ಸ್ ಮಾಡುವ ಮೂಲಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ಗಿಫ್ಟ್ ನೀಡಲು ಮೇಕರ್ಸ್ ಸಜ್ಜಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ‘ಟಾಕ್ಸಿಕ್ ಸೆಟ್​​ನಲ್ಲಿ ಹಾಯ್, ಹೆಲೋ ಹೇಳೋಕೆ ಅವಕಾಶವೇ ಇರಲಿಲ್ಲ’; ಕಿಯಾರಾ

ಮೊದಲ ಪ್ಲ್ಯಾನ್ ಪ್ರಕಾರ ಸಿನಿಮಾ ಈ ಹಿಂದೆಯೇ ಬರಬೇಕಿತ್ತಾದರೂ, ವಿಶ್ವ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಬೇಕಿರುವುದರಿಂದ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಯಶ್ ಅವರ ಮಾಸ್ ಲುಕ್ ಮತ್ತು ಗೀತು ಮೋಹನ್‌ದಾಸ್ ಅವರ ವಿಭಿನ್ನ ಮೇಕಿಂಗ್ ಶೈಲಿ ಎರಡು ಒಟ್ಟಿಗೆ ಸೇರಿರುವುದರಿಂದ ಈ ಚಿತ್ರದ ಮೇಲಿನ ನಿರೀಕ್ಷೆಗಳು ಆಕಾಶ ಮುಟ್ಟಿವೆ. ಸಿನಿಮಾ ಅನೌನ್ಸ್ ಆದ ದಿನದಿಂದಲೂ ಅಭಿಮಾನಿಗಳು ಈ ಚಿತ್ರದ ರಿಲೀಸ್ ದಿನಕ್ಕಾಗಿ ಕಾಯುತ್ತಿದ್ದಾರೆ. ಈಗ ಜೂನ್ 8ರಂದು ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಹುಟ್ಟುಹಬ್ಬದ ದಿನ ಬಿಗ್ ಅಪ್​​ಡೇಟ್ ಸಿಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 1:20 pm, Wed, 3 June 26

Source link

ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ – Kannada News

R. PraggnanandhaaImage Credit source: Rediff

ನಾರ್ವೆ ಚೆಸ್ 2026 ಟೂರ್ನಮೆಂಟ್‌ನಲ್ಲಿ ಭಾರತದ ಯುವ ಚೆಸ್ ತಾರೆ, 20 ವರ್ಷದ ಆರ್. ಪ್ರಜ್ಞಾನಂದ (R Praggnanandhaa) ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ (Magnus Carlsen) ಅವರನ್ನೇ ಅವರ ತವರಿನಲ್ಲಿ ಎರಡು ಬಾರಿ ಸೋಲಿಸುವ ಮೂಲಕ, ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ಐತಿಹಾಸಿಕ ದಾಖಲೆಯನ್ನು ಪ್ರಜ್ಞಾನಂದ ಸರಿಗಟ್ಟಿದ್ದಾರೆ.

ಈ ಮೂಲಕ ಒಂದೇ ಕ್ಲಾಸಿಕಲ್ ಟೂರ್ನಮೆಂಟ್‌ನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಎರಡು ಬಾರಿ ಮಣಿಸಿದ ವಿಶ್ವದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪ್ರಜ್ಞಾನಂದ ಪಾತ್ರರಾಗಿದ್ದಾರೆ.

  • ಮೇ 27 ರಂದು ಪ್ರಜ್ಞಾನಂದ ಬಿಳಿ ದಾಳಗಳೊಂದಿಗೆ ಆಡಿ ಕಾರ್ಲ್‌ಸನ್‌ಗೆ ಮೊದಲ ಆಘಾತ ನೀಡಿದ್ದರು.
  • ಜೂನ್ 2, 2026 ರಂದು ನಡೆದ ಪಂದ್ಯದಲ್ಲಿ ಕಪ್ಪು ದಾಳಗಳೊಂದಿಗೆ  ಅದ್ಭುತ ಪ್ರದರ್ಶನ ನೀಡಿ ಕಾರ್ಲ್‌ಸನ್ ಅವರನ್ನು ಎರಡನೇ ಬಾರಿಗೆ ಮಣಿಸಿದರು.
  • ಈ ಮೂಲಕ ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್​ಗೆ ಒಂದೇ ಕ್ಲಾಸಿಕಲ್ ಟೂರ್ನಮೆಂಟ್​ನಲ್ಲಿ ಎರಡು ಸೋಲುಣಿಸಿದ ಸಾಧನೆ ಮಾಡಿದ್ದಾರೆ.

 ವಿಶಿ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ:

ಇದಕ್ಕೂ ಮುನ್ನ 2007ರಲ್ಲಿ ನಡೆದಿದ್ದ ಲಿನಾರೆಸ್ ಇಂಟರ್ನ್ಯಾಷನಲ್ ಚೆಸ್ ಟೂರ್ನಮೆಂಟ್‌ನಲ್ಲಿ ವಿಶ್ವನಾಥನ್ ಆನಂದ್ ಅವರು ಅಂದಿನ ಯುವ ಆಟಗಾರ ಕಾರ್ಲ್‌ಸನ್ ಅವರನ್ನು ಒಂದೇ ಟೂರ್ನಿಯಲ್ಲಿ ಎರಡು ಬಾರಿ ಸೋಲಿಸಿದ್ದರು.

ಆ ಬಳಿಕ ಕಾರ್ಲ್‌ಸನ್ ಅವರನ್ನು ಒಂದೇ ಕ್ಲಾಸಿಕಲ್ ಟೂರ್ನಿಯಲ್ಲಿ ಎರಡು ಬಾರಿ ಸೋಲಿಸಲು ಯಾರಿಗೂ ಸಾಧ್ಯವಾಗಿರಲಿಲ್ಲ. ಇದೀಗ ಬರೋಬ್ಬರಿ 19 ವರ್ಷಗಳ ನಂತರ ಪ್ರಜ್ಞಾನಂದ ಈ ಸಾಧನೆ ಮಾಡಿದ್ದಾರೆ.

ಈ ಗೆಲುವಿನೊಂದಿಗೆ, ಕ್ಲಾಸಿಕಲ್ ಚೆಸ್‌ನಲ್ಲಿ ಕಾರ್ಲ್‌ಸನ್ ಅವರನ್ನು ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸೋಲಿಸಿದ ವಿಶ್ವದ ಅತ್ಯಂತ ಪ್ರಮುಖ ಗ್ರ್ಯಾಂಡ್‌ಮಾಸ್ಟರ್‌ಗಳ ಗಣ್ಯರ ಪಟ್ಟಿಗೆ ಪ್ರಜ್ಞಾನಂದ ಸೇರಿದ್ದಾರೆ.

ಹಾಗೆಯೇ ಜಯದೊಂದಿಗೆ ನಾರ್ವೆ ಚೆಸ್ 2026 ರ ಪ್ರಶಸ್ತಿ ರೇಸ್ ಮತ್ತಷ್ಟು ರೋಚಕ ಹಂತ ತಲುಪಿದೆ. ಪ್ರಜ್ಞಾನಂದ ಅವರ ಅಂಕಗಳ ಪಟ್ಟಿ ಮೇಲೇರಿದ್ದರೆ, ಕಾರ್ಲ್‌ಸನ್ ಅವರಿಗೆ ತವರಿನಲ್ಲೇ ಭಾರಿ ಹಿನ್ನಡೆಯಾಗಿದೆ.

ಪ್ರಜ್ಞಾನಂದ ಮುಂದಿನ ಸವಾಲು:

ನಾರ್ವೆ ಚೆಸ್ 2026 ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಪ್ರಜ್ಞಾನಂದ ಪಾಲಿಗೆ ಇನ್ನುಳಿದ ಕೊನೆಯ 2 ಸುತ್ತುಗಳು (Round 9 & Round 10) ಅತ್ಯಂತ ನಿರ್ಣಾಯಕವಾಗಿವೆ. ಸದ್ಯದ ಅಂಕಗಳ ಪಟ್ಟಿಯಲ್ಲಿ ಅವರು 12 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿರುವ ಪ್ರಜ್ಞಾನಂದ ಅಮೆರಿಕದ ವೆಸ್ಲಿ ಸೋ (14 ಅಂಕ) ಹಾಗೂ  ಫ್ರಾನ್ಸ್‌ನ ಅಲಿರೆಜಾ ಫಿರೂಜ್ಜಾ (13 ಅಂಕ) ಅವರನ್ನು ಹಿಂದಿಕ್ಕಬೇಕು.

ಇದನ್ನೂ ಓದಿ: 8 ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಎದುರಾಳಿ!

ಇದಕ್ಕಾಗಿ ಪ್ರಜ್ಞಾನಂದ ಕೊನೆಯ ಎರಡು ಸುತ್ತುಗಳಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ಮತ್ತು ಡಿ. ಗುಕೇಶ್ ವಿರುದ್ಧ ಗೆಲ್ಲಬೇಕಾಗಿದೆ. ಈ ಗೆಲುವುಗಳ ಮೂಲಕ ಪೂರ್ಣ 6 ಅಂಕಗಳನ್ನು (ಒಟ್ಟು 18 ಅಂಕಗಳು) ಗಳಿಸಿದರೂ ಸಹ, ಪ್ರಶಸ್ತಿ ಅವರ ಕೈಸೇರಲು ವೆಸ್ಲಿ ಸೋ ಮತ್ತು ಅಲಿರೆಜಾ ಫಿರೂಜ್ಜಾ ಅವರ ಪಂದ್ಯಗಳ ಫಲಿತಾಂಶಗಳನ್ನು ಎದುರು ನೋಡಬೇಕಿದೆ.

Source link

Video: ನೀರು ಕೇಳಿದ್ರೆ ಊಟ ಹಾಕಿದ್ರು; ಜಪಾನಿನ ವೃದ್ಧ ದಂಪತಿಯ ಒಳ್ಳೆತನ ಮೆಚ್ಚಿಕೊಂಡ ಭಾರತೀಯ – Kannada News

ಈಗಿನ ಕಾಲದಲ್ಲಿ ಗುರುತು ಪರಿಚಯವಿಲ್ಲದ ವ್ಯಕ್ತಿಗಳ ಜತೆಗೆ ಮಾತನಾಡಲು ಹಿಂದೇಟು ಹಾಕುತ್ತಾರೆ. ಅಂತಹದರಲ್ಲಿ ಈ ಜಪಾನಿನ ವೃದ್ಧ ದಂಪತಿ ಭಾರತೀಯ ವ್ಯಕ್ತಿಯನ್ನು ಊಟಕ್ಕೆ ಆಹ್ವಾನಿಸಿದ್ದಾರಂತೆ. ಹೌದು, ಜಪಾನ್‌ನಲ್ಲಿ(Japan) ಟ್ರಕ್ಕಿಂಗ್ ಮಾಡುತ್ತಿದ್ದ ವೇಳೆ ಬಾಟಲಿಯಲ್ಲಿದ್ದ ನೀರು ಖಾಲಿಯಾಗಿದೆ. ಈ ವೇಳೆ ಅಲ್ಲೇ ಇದ್ದ ಸ್ಥಳೀಯ ವೃದ್ಧ ದಂಪತಿ (Elderly couple) ಭಾರತೀಯನಿಗೆ ನೀರಿನ ಬದಲು ಜ್ಯೂಸ್ ನೀಡಿದಲ್ಲದೇ, ತಮ್ಮ ಮನೆಗೆ ಊಟಕ್ಕೂ ಕರೆದಿದ್ದಾರಂತೆ. ಈ ವೃದ್ಧ ದಂಪತಿಯ ಒಳ್ಳೆಯ ಮನಸ್ಸನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಆದಿತ್ಯ ಪಾರ್ಖಿ ಎಂಬ ಭಾರತೀಯ ವ್ಯಕ್ತಿ ತಮ್ಮ ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಕ್ಲಿಪ್‌ನಲ್ಲಿ, ಭಾರತೀಯ ವ್ಯಕ್ತಿ ಜಪಾನ್‌ನ ಅಮಾಮಿ ಎಂಬ ಹಳ್ಳಿಯಲ್ಲಿ ಪರ್ವತದಲ್ಲಿ ಟ್ರಕ್ಕಿಂಗ್ ಮಾಡುತ್ತಿದ್ದ ವೇಳೆ ನೀರು ಖಾಲಿಯಾಯಿತು. ಸಹಾಯಕ್ಕಾಗಿ ಹುಡುಕುತ್ತಾ, ಹತ್ತಿರದ ಮನೆಯೊಂದಕ್ಕೆ ಹೋಗಿ ನೀರು ಖರೀದಿಸಲು ಕೆಫೆ ಇದೆಯೇ ಎಂದು ಕೇಳಿರುವುದನ್ನು ನೀವು ನೋಡಬಹುದು. ಆದರೆ ನೀರಿನ ಬದಲು ವೃದ್ಧ ವ್ಯಕ್ತಿ ಜ್ಯೂಸ್ ಕೊಟ್ಟಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ಮಾತುಕತೆ ಶೀಘ್ರದಲ್ಲೇ ಸ್ನೇಹಪರ ಸಂಭಾಷಣೆಯಾಗಿ ಬದಲಾಗಿದೆ. ಈ ವೃದ್ಧ ವ್ಯಕ್ತಿ ಭಾರತೀಯ ವ್ಯಕ್ತಿಯ ಬಳಿ, ನೀವು ಕೆಲಸದಲ್ಲಿ ಜಪಾನೀಸ್ ಬಳಸುತ್ತೀರಾ? ಎಂದು ಕೇಳಿದ್ದಾರೆ. ಹೌದು, ಜಪಾನೀಸ್. ನನ್ನದು ಕಂಪ್ಯೂಟರ್ ಸಂಬಂಧಿತ ಕೆಲಸ. ನಾನು ಐಟಿ ಅಧ್ಯಯನ ಮಾಡಿದ್ದೇನೆ. ಐಟಿ ಕೆಲಸ ಎಂದು ಭಾರತೀಯ ವ್ಯಕ್ತಿ ಉತ್ತರಿಸಿದ್ದಾರೆ.

ಆ ಬಳಿಕ ವೃದ್ಧ ಮಹಿಳೆ ಭಾರತೀಯ ಆಹಾರದ ಬಗ್ಗೆ ಮಾತನಾಡಿದ್ದು, ನಾನು ಮೊದಲು ಕರಿ ತಿಂದಿದ್ದೇನೆ. ನನಗೆ ಕರಿ ಇಷ್ಟ. ನಾನು ಬಿರಿಯಾನಿ ತಿಂದಿದ್ದೇನೆ, ಬಹಳ ರುಚಿಕರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ನೀವು ಕಾಣಬಹುದು. ಕೊನೆಗೆ ಈ ವೃದ್ಧ ದಂಪತಿ ಊಟ ಮಾಡುವಂತೆ ಈ ವ್ಯಕ್ತಿಯನ್ನು ಒತ್ತಾಯಿಸಿದ್ದು, ಎಲ್ಲರೂ ಜತೆಗೆ ಕುಳಿತು ಊಟ ಮಾಡಿದ್ದಾರೆ. ತಮಾಷೆ ಭರಿತ ಮಾತುಕತೆ ಮುಗಿದ ಬಳಿಕ  ಭಾರತೀಯ ವ್ಯಕ್ತಿ ಹೊರಟು ನಿಂತಿದ್ದು, ಜಾಗರೂಕರಾಗಿರಿ ಎನ್ನುತ್ತಾ ಈ ವೃದ್ಧ ಮಹಿಳೆ ಕಳುಹಿಸಿ ಕೊಡುವುದರೊಂದಿಗೆ ಈ ವಿಡಿಯೋ ಕೊನೆಗೊಂಡಿದೆ.

ಇದನ್ನೂ ಓದಿ: 87ರ ವಯಸ್ಸಿನಲ್ಲಿ ಮೊದಲ ಬಾರಿ ಸಮುದ್ರ ತೀರಕ್ಕೆ ಹೋದ ಅಜ್ಜಿ, ರಿಯಾಕ್ಷನ್ ಹೇಗಿತ್ತು ನೋಡಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಜಪಾನೀಸ್ ಸಂಸ್ಕೃತಿ ನಿಜವಾಗಿಯೂ ಅದ್ಭುತವಾಗಿದೆ, ಮತ್ತು ಆತಿಥ್ಯವು ಅಷ್ಟೇ ಪ್ರಭಾವಶಾಲಿಯಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಜಪಾನೀಸ್ ಜನರು ತುಂಬಾ ಒಳ್ಳೆಯವ್ರು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಒಳ್ಳೆಯ ಅದ್ಭುತ ಮನಸ್ಸಿನ ವ್ಯಕ್ತಿಗಳನ್ನು ಕಂಡಾಗ ಖುಷಿಯಾಗುತ್ತದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾಲಿವುಡ್​ಗೆ ರೀಮೇಕ್ ಆದ ಭಾರತೀಯ ಸಿನಿಮಾಗಳಿವು

Source link

ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಸಿಎಂಗಳನ್ನು ಆಹ್ವಾನಿಸಿದ ಡಿಕೆಶಿ: ದೇವೇಗೌಡರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ನಿಯೋಜಿತ ಮುಖ್ಯಮಂತ್ರಿ – Kannada News

ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಸಿಎಂಗಳಿಗೆ ಡಿಕೆಶಿ ಆಹ್ವಾನImage Credit source: Tv9 Kannada

ಬೆಂಗಳೂರು, ಜೂನ್​​, 03: ಕರ್ನಾಟಕದ ನೂತನ ಸಿಎಂ ಆಗಿ ಇಂದು ಸಂಜೆ ಪ್ರಮಾಣವಚನ ಹಿನ್ನೆಲೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳ ಮನೆಗಳಿಗೆ ಖುದ್ದಾಗಿ ತೆರಳಿ ಡಿ.ಕೆ. ಶಿವಕುಮಾರ್ (DK Shivakumar)​​ ಆಹ್ವಾನ ನೀಡಿದ್ದಾರೆ. ಸಂಜೆ 4 ಗಂಟೆ 05 ನಿಮಿಷಕ್ಕೆ ನಡೆಯಲಿರುವ ಪದಗ್ರಹಣಕ್ಕೆ ಆಗಮಿಸುವಂತೆ ಸಿದ್ದರಾಮಯ್ಯ, ಬಿ.ಎಸ್​​. ಯಡಿಯೂರಪ್ಪ ಮತ್ತು ಮಾಜಿ ಪ್ರಧಾನಿ ದೇವೇಗೌಡರನ್ನು ಡಿಕೆಶಿ ಆಮಂತ್ರಿಸಿದ್ದಾರೆ. ಮೊದಲು ಸಿದ್ದರಾಮಯ್ಯ ನಿವಾಸಕ್ಕೆ ನಿಯೋಜಿತ ಸಿಎಂ ತೆರಳಿದ್ದು, ಈ ವೇಳೆ ಪರಮೇಶ್ವರ್​​ ಅವರ ಜೊತೆ ಉಪಸ್ಥಿತರಿದ್ದರು.

ಮುಖ್ಯಾಂಶಗಳು

  • ಪ್ರಮಾಣವಚನ ಕಾರ್ಯಕ್ರಮಕ್ಕೆ ಮಾಜಿ ಸಿಎಂಗಳಿಗೆ ಡಿಕೆಶಿ ಆಹ್ವಾನ
  • ಸಿದ್ದರಾಮಯ್ಯ, ಯಡಿಯೂರಪ್ಪ ಮತ್ತು ದೇವೇಗೌಡರಿಗೆ ಆಹ್ವಾನ
  • ನಿಯೋಜಿತ ಸಿಎಂರನ್ನು ಈ ವೇಳೆ ಅಭಿನಂದಿಸಿರುವ ನಾಯಕರು

ಬಿಎಸ್​​ವೈ ಆಶೀರ್ವಾದ ಪಡೆದ ಡಿಕೆಶಿ

ಬೆಂಗಳೂರಿನ ಡಾಲರ್ಸ್​ ಕಾಲೋನಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್​​. ಯಡಿಯೂರಪ್ಪ ಅವರ ಮನೆಗೂ ಡಿಕೆಶಿ ತೆರಳಿದ್ದು, ಈ ವೇಳೆ ಮನೆಯಿಂದ ಹೊರಬಂದು ನಿಯೋಜಿತ ಸಿಎಂರನ್ನು ಬಿಎಸ್​ವೈ ಆಲಂಗಿಸಿ ಸ್ವಾಗತಿಸಿದ್ದಾರೆ. ಬಳಿಕ ಮನೆಯ ದೇವರ ಕೋಣೆಗೆ ತೆರಳಿ ಡಿಕೆಶಿ ನಮಸ್ಕರಿಸಿದ್ದು, ಈ ವೇಳೆ ಶಾಲು ಹೊದಿಸಿ ಶಿವಕುಮಾರ್​​ ಅವರನ್ನು ಯಡಿಯೂರಪ್ಪ ಅಭಿನಂದಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿ ನಾಯಕನಿಂದ ಸಿಎಂ ಗದ್ದುಗೆಯವರೆಗೆ; ಕನಕಪುರ ಬಂಡೆ ಡಿಕೆ ಶಿವಕುಮಾರ್ ರಾಜಕೀಯ ಪಯಣದ ಹಿನ್ನೋಟ

ದೇವೇಗೌಡರ ಕಾಲಿಗೆ ನಮಸ್ಕರಿಸಿದ ಶಿವಕುಮಾರ್​

ಇನ್ನು ರಾಜಕೀಯ ವೈರತ್ವ ಮರೆತು ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ನಿವಾಸಕ್ಕೂ ತೆರಳಿ ಅವರನ್ನು ಕಾರ್ಯಕ್ರಮಕ್ಕೆ ಡಿಕೆಶಿ ಆಹ್ವಾನಿಸಿದ್ದಾರೆ. ಈ ವೇಳೆ ದೇವೇಗೌಡರ ಕಾಲಿಗೆ ಶಿವಕುಮಾರ್​​ ನಮಿಸಿದ್ದು, ನಿಯೋಜಿತ ಸಿಎಂರನ್ನು ಹೆಚ್​ಡಿಡಿ ಈ ವೇಳೆ ಅಭಿನಂದಿಸಿದ್ದಾರೆ.

ಬಳಿಕ ಮಾತನಾಡಿದ ಡಿಕೆಶಿ, ದೇವೇಗೌಡರು ಮತ್ತು ಯಡಿಯೂರಪ್ಪ ರಾಜ್ಯಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಸೇವೆ ಸಲ್ಲಿಸಿರುವ ಬೇರೆ ಮುಖ್ಯಮಂತ್ರಿಗಳನ್ನೂ ಸಹ ಭೇಟಿ ಮಾಡುತ್ತೇನೆ. ಹೆಚ್​.ಡಿ.ದೇವೇಗೌಡರು ನನಗೆ ಹಲವು ಸಲಹೆ ನೀಡಿದ್ದಾರೆ.
ನನ್ನ ತಾಳ್ಮೆಯನ್ನೂ ಸಹ ಮೆಚ್ಚಿಕೊಂಡಿದ್ದಾರೆ. ರಾಜ್ಯಕ್ಕೆ ಒಳ್ಳೆಯದು ಮಾಡುತ್ತೇನೆ ಎಂದು ಅವರಿಗೆ ನಂಬಿಕೆ. ಮುಂದೆಯೂ ಸಹ ಬಂದು ಅವರ ಮಾರ್ಗದರ್ಶನ ಪಡೆಯುವೆ. ಬೆಳಗ್ಗೆ ಸೋನಿಯಾ ಗಾಂಧಿ ಕೂಡ ಕರೆ ಮಾಡಿ ವಿಶ್​ ಮಾಡಿದ್ದಾರೆ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ ಎಂದು ಹೇಳಿರೋದಾಗಿ ಈ ವೇಳೆ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:58 pm, Wed, 3 June 26

Source link

8 ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಎದುರಾಳಿ! – Kannada News

ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿಸಿರುವ ಟೀಮ್ ಇಂಡಿಯಾ ಆಟಗಾರರು ಇದೀಗ ತವರಿನಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಅದು ಕೂಡ 8 ಸುದೀರ್ಘ 8 ವರ್ಷಗಳ ಬಳಿಕ. ಅಂದರೆ ಉಭಯ ತಂಡಗಳು ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿ ಬರೋಬ್ಬರಿ 8 ವರ್ಷಗಳು ಕಳೆದಿವೆ.

ಭಾರತ ಮತ್ತು ಅಫ್ಘಾನಿಸ್ತಾನ್ ತಂಡ ಈವರೆಗೆ ಏಕೈಕ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿದೆ. ಅದು ಸಹ 2018 ರಲ್ಲಿ. ಈ ಪಂದ್ಯವನ್ನು ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 262 ರನ್​ಗಳ ಜಯ ಸಾಧಿಸಿತ್ತು.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಅಂದಿನ ಟೀಮ್ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆಯ್ದುಕೊಂಡಿದ್ದರು.

  • ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 474 ರನ್​ ಕಲೆಹಾಕಿದ್ದರು.
  • ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಅಫ್ಘಾನಿಸ್ತಾನ್ ತಂಡ 109 ರನ್​ಗಳಿಗೆ ಆಲೌಟ್ ಆಗಿದ್ದರು.
  • ಟೀಮ್ ಇಂಡಿಯಾ ಫಾಲೋಆನ್ ಹೇರಿದ ಹಿನ್ನಲೆ ಅಫ್ಘಾನಿಸ್ತಾನ್ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದರು.
  • ದ್ವಿತೀಯ ಇನಿಂಗ್ಸ್​ನಲ್ಲಿ ಅಫ್ಘಾನಿಸ್ತಾನ್ ತಂಡವು ಕೇವಲ 103 ರನ್​ಗಳಿಸಿ ಆಲೌಟ್ ಆಯಿತು.
  • ಈ ಮೂಲಕ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 262 ರನ್​ಗಳ ಭರ್ಜರಿ ಜಯ ಸಾಧಿಸಿದ್ದರು.

ಇದೀಗ ಬರೋಬ್ಬರಿ 8 ವರ್ಷಗಳ ಬಳಿಕ ಮತ್ತೊಮ್ಮೆ ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಟೆಸ್ಟ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ವಿಶೇಷ ಎಂದರೆ ಈ ಪಂದ್ಯ ನಡೆಯಲಿರುವುದು ಚಂಡೀಗಢ್​ನ ಮುಲ್ಲನ್​ಪುರ್ ಸ್ಟೇಡಿಯಂನಲ್ಲಿ.

ಅಂದರೆ ಇದೇ ಮೊದಲ ಬಾರಿಗೆ ಚಂಡೀಗಢ್​ ಟೆಸ್ಟ್ ಪಂದ್ಯಕ್ಕೆ ಆತಿಥ್ಯವಹಿಸಲಿದೆ. ಮುಲ್ಲನ್​ಪುರ್​ನಲ್ಲಿರುವ ಎಂವೈಎಸ್ ಸ್ಟೇಡಿಯಂನಲ್ಲಿ ಈವರೆಗೆ ಐಪಿಎಲ್ ಪಂದ್ಯಗಳು, ಒಂದು ಪುರುಷರ ಟಿ20 ಪಂದ್ಯ ಮತ್ತು ಎರಡು ಮಹಿಳಾ ಏಕದಿನ ಪಂದ್ಯಗಳನ್ನು ಆಯೋಜಿಸಲಾಗಿದೆ. ಇದೀಗ ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಟೆಸ್ಟ್ ಪಂದ್ಯಕ್ಕೆ ಆತಿಥ್ಯವಹಿಸಲು ಸಜ್ಜಾಗಿದೆ. ಈ ಪಂದ್ಯದಲ್ಲಾದರೂ ಅಫ್ಘಾನಿಸ್ತಾನ್ ಪಡೆ ಯಂಗ್ ಇಂಡಿಯಾಗೆ ಸವಾಲೆಸೆಯಲಿದೆಯಾ ಕಾದು ನೋಡಬೇಕಿದೆ.

ಭಾರತ ಟೆಸ್ಟ್ ತಂಡ: ಶುಭ್​ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ (ಉಪ ನಾಯಕ), ಸಾಯಿ ಸುದರ್ಶನ್, ರಿಷಭ್ ಪಂತ್, ದೇವದತ್ ಪಡಿಕ್ಕಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಧ್ರುವ್ ಜುರೆಲ್, ಹರ್ಷ್ ದುಬೆ.

ಇದನ್ನೂ ಓದಿ: FIFA World cup 2026: ಫುಟ್‌ಬಾಲ್ ಆಟವನ್ನೇ ಬದಲಿಸಲಿದೆ ಹೊಸ ನಿಯಮಗಳು!

ಅಫ್ಘಾನಿಸ್ತಾನ್ ಟೆಸ್ಟ್ ತಂಡ: ಹಶ್ಮತುಲ್ಲಾ ಶಾಹಿದಿ (ನಾಯಕ), ಅಬ್ದುಲ್ ಮಲಿಕ್, ಸೇದಿಕುಲ್ಲಾ ಅಟಲ್, ರಹಮತ್ ಷಾ, ರಹಮಾನುಲ್ಲಾ ಗುರ್ಬಾಝ್, ರಹಮಾನುಲ್ಲಾ ಝದ್ರಾನ್, ಅಫ್ಸರ್ ಝಜೈ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮಝಾಹಿ, ಶರಫುದಿನ್ ಅಶ್ರಫ್, ನಂಗಿಯಾಲೈ ಖರೋಟಿ, ಖೈಸ್ ಅಹ್ಮದ್, ಬಿಲಾಲ್ ಸಮಿ, ಜಿಯಾ ಶರೀಫಿ, ಸಲೀಂ ಸಫಿ.

Source link

ಅಮೆರಿಕ ಹೊಸ ‘ವರಸೆ’; ಫೋರ್ಸ್ಡ್ ಲೇಬರ್ ಹೆಸರಲ್ಲಿ ಭಾರತ ಸೇರಿ 60 ದೇಶಗಳ ಮೇಲೆ ಶೇ. 12.5 ಹೆಚ್ಚುವರಿ ಸುಂಕಕ್ಕೆ ಯೋಜನೆ – Kannada News

ವಾಷಿಂಗ್ಟನ್, ಜೂನ್ 3: ಭಾರತ ಮತ್ತು ಅಮೆರಿಕ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗಳು ಪುನರಾರಂಭಗೊಂಡ ಬೆನ್ನಲ್ಲೇ, ಭಾರತಕ್ಕೆ ಅಮೆರಿಕ ಹೊಸದೊಂದು ಆಘಾತ ನೀಡಿದೆ. ಬಲವಂತದ ಕಾರ್ಮಿಕ ಕ್ರಮ ಮೂಲಕ ತಯಾರಾದ ಸರಕುಗಳಿಗೆ ನಿರ್ಬಂಧ ಹಾಕಿಲ್ಲ ಎನ್ನುವ ಕಾರಣವೊಡ್ಡಿ 60 ದೇಶಗಳಿಗೆ ಅಮೆರಿಕ ಶೇ. 12.5ರಷ್ಟು ಹೆಚ್ಚುವರಿ ಸುಂಕವನ್ನು (Tariff) ವಿಧಿಸಲು ಯೋಜಿಸಿದೆ. ಅಮೆರಿಕದ ವ್ಯಾಪಾರ ಪ್ರತಿನಿಧಿ (ಯುಎಸ್ ಟ್ರೇಡ್ ರೆಪ್ರೆಸೆಂಟೇಟಿವ್) ಇಂಥದ್ದೊಂದು ಪ್ರಸ್ತಾಪ ಮಾಡಿದ್ದಾರೆ. ಈ 60 ದೇಶಗಳ ಪಟ್ಟಿಯಲ್ಲಿ ಭಾರತ, ಚೀನಾ, ರಷ್ಯಾ ಮೊದಲಾದವು ಇವೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ (supply chains) ‘ಬಲವಂತದ ಕಾರ್ಮಿಕ ಪದ್ಧತಿ’ಯನ್ನು (Forced Labour) ತಡೆಯುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಅಮೆರಿಕದ 1974ರ ವ್ಯಾಪಾರ ಕಾಯ್ದೆಯ ‘ಸೆಕ್ಷನ್ 301’ ರ ಅಡಿಯಲ್ಲಿ USTR ಹಲವು ತಿಂಗಳುಗಳಿಂದ ತನಿಖೆ ನಡೆಸುತ್ತಿತ್ತು. ತನ್ನ ಪ್ರಮುಖ ವ್ಯಾಪಾರ ಪಾಲುದಾರ ದೇಶಗಳು ತಮ್ಮ ಪೂರೈಕೆ ಸರಪಳಿಯಲ್ಲಿ ಬಲವಂತದ ಕಾರ್ಮಿಕರಿಂದ ತಯಾರಾಗುವ ಸರಕುಗಳ ಆಮದನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿವೆಯೇ ಇಲ್ಲವೇ ಎಂಬುದನ್ನು ಈ ತನಿಖೆ ಪರಿಶೀಲಿಸಿದೆ. ಜೂನ್ 3ರಂದು ಪ್ರಕಟವಾದ ವರದಿಯ ಪ್ರಕಾರ, ಭಾರತ ಸೇರಿದಂತೆ ವಿಶ್ವದ ಒಟ್ಟು 60 ದೇಶಗಳು ಜಾಗತಿಕ ಪೂರೈಕೆ ಸರಪಳಿಯಲ್ಲಿ ಬಲವಂತದ ಕಾರ್ಮಿಕರ ಸಮಸ್ಯೆಯನ್ನು ನಿರ್ವಹಿಸುವಲ್ಲಿ ವಿಫಲವಾಗಿವೆ. ಇಂತಹ ವೈಫಲ್ಯಗಳು ಅಮೆರಿಕದ ಸ್ಥಳೀಯ ಉತ್ಪಾದಕರು ಮತ್ತು ಕಾರ್ಮಿಕರಿಗೆ ಅನ್ಯಾಯದ ಸ್ಪರ್ಧೆಯನ್ನು ಉಂಟುಮಾಡುತ್ತವೆ ಎಂದು ಟ್ರಂಪ್ ಆಡಳಿತ ವಾದಿಸಿದೆ.

ಇತರ ದೇಶಗಳಿಗೆ 10%, ಭಾರತಕ್ಕೇಕೆ 12.5% ಸುಂಕ?

ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಹೆಚ್ಚು ಸುಂಕ ವಿಧಿಸಲು USTR ಮಾಡಿರುವ ದೇಶಗಳ ವರ್ಗೀಕರಣವೇ ಮುಖ್ಯ ಕಾರಣವಾಗಿದೆ.

10% ಸುಂಕದ ವರ್ಗ: ಕೆನಡಾ, ಯುರೋಪಿಯನ್ ಯೂನಿಯನ್ (EU), ಮೆಕ್ಸಿಕೋ, ಇಂಡೋನೇಷ್ಯಾ, ಮಲೇಷ್ಯಾ, ತೈವಾನ್ ಮತ್ತು ಯುನೈಟೆಡ್ ಕಿಂಗ್‌ಡಮ್ (UK) ಮುಂತಾದ ದೇಶಗಳಿಗೆ ಶೇ. 10 ರಷ್ಟು ಸುಂಕ ವಿಧಿಸಲಾಗಿದೆ. ಏಕೆಂದರೆ ಈ ದೇಶಗಳು ಬಲವಂತದ ಕಾರ್ಮಿಕರಿಂದ ತಯಾರಾದ ಸರಕುಗಳ ಆಮದಿನ ವಿರುದ್ಧ ಸಂಪೂರ್ಣ ಅಥವಾ ಭಾಗಶಃ ನಿಷೇಧವನ್ನು ಹೊಂದಿವೆ.

ಇದನ್ನೂ ಓದಿ: ಆದಾಯ ತೆರಿಗೆ ಅಪ್​ಡೇಟ್; ಐಟಿಆರ್-1 ನಮೂನೆ ಭರ್ತಿ ಮಾಡಿ, ಸಲ್ಲಿಸುವ ಕ್ರಮ; 16 ಹಂತಗಳ ವಿವರಣೆ

12.5% ಸುಂಕದ ವರ್ಗ (ಭಾರತ): ಭಾರತವನ್ನು ಚೀನಾ, ಜಪಾನ್, ದಕ್ಷಿಣ ಕೊರಿಯಾ, ಬ್ರೆಜಿಲ್ ಮತ್ತು ಸ್ವಿಟ್ಜರ್ಲೆಂಡ್ ದೇಶಗಳ ಜೊತೆಗೆ ಉನ್ನತ ಸುಂಕದ ವರ್ಗದಲ್ಲಿ ಇರಿಸಲಾಗಿದೆ. USTR ಪ್ರಕಾರ, ಈ ದೇಶಗಳಲ್ಲಿ ಬಲವಂತದ ಕಾರ್ಮಿಕರ ಸಂಪರ್ಕ ಹೊಂದಿರುವ ಸರಕುಗಳು ಪೂರೈಕೆ ಸರಪಳಿಯನ್ನು ಪ್ರವೇಶಿಸದಂತೆ ತಡೆಯಲು ಸಾಕಷ್ಟು ಬಲವಾದ ನಿಷೇಧಗಳು ಅಥವಾ ಕಟ್ಟುನಿಟ್ಟಾದ ಜಾರಿ ಕಾರ್ಯವಿಧಾನಗಳು ಇಲ್ಲ.

ವಿಶೇಷವೆಂದರೆ, ಈ ಬಾರಿ ಅಮೆರಿಕವು ವ್ಯಾಪಾರ ಕೊರತೆ (trade deficits) ಅಥವಾ ಪರಸ್ಪರ ಸುಂಕದ ದರಗಳ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡಿಲ್ಲ, ಬದಲಿಗೆ ಕೇವಲ ಕಾರ್ಮಿಕ ಕಾಯ್ದೆಗಳ ಜಾರಿಯ ಗುಣಮಟ್ಟವನ್ನು ಆಧರಿಸಿ ಈ ಸುಂಕ ವಿಧಿಸಿದೆ.

ಪ್ರಸ್ತುತ ಇರುವ 10% ಮೂಲ ಸುಂಕಕ್ಕೂ ಇದಕ್ಕೂ ಏನು ಸಂಬಂಧ?

ಅಮೆರಿಕದ ಸುಪ್ರೀಂ ಕೋರ್ಟ್ ಹಳೆಯ ತುರ್ತು ಸುಂಕದ ವ್ಯವಸ್ಥೆಯನ್ನು ರದ್ದುಗೊಳಿಸಿದ ನಂತರ, ಅಮೆರಿಕವು ಸದ್ಯಕ್ಕೆ ತನ್ನ ಎಲ್ಲಾ ವ್ಯಾಪಾರ ಪಾಲುದಾರ ದೇಶಗಳ ಮೇಲೆ ತಾತ್ಕಾಲಿಕವಾಗಿ ಶೇ. 10 ರಷ್ಟು ಮೂಲ ಸುಂಕವನ್ನು (baseline tariff) ಹೇರಿದೆ. ಈ ನಿಯಮವು ಜುಲೈ 24 ರವರೆಗೆ ಜಾರಿಯಲ್ಲಿರಲಿದೆ.

ಆದರೆ, ಈಗ ಪ್ರಸ್ತಾಪಿಸಲಾಗಿರುವ ಶೇ. 12.5 ರಷ್ಟು ಸುಂಕವು ಸಂಪೂರ್ಣವಾಗಿ ವಿಭಿನ್ನವಾದ ಕಾನೂನು ಮಾರ್ಗದ (ಸೆಕ್ಷನ್ 301) ಅಡಿಯಲ್ಲಿ ಬರುತ್ತದೆ. ಆದ್ದರಿಂದ ಇದು ಪ್ರಸ್ತುತ ಇರುವ ಮೂಲ ಸುಂಕದ ಚೌಕಟ್ಟಿಗಿಂತ ಭಿನ್ನವಾಗಿದೆ ಮತ್ತು ಪ್ರತ್ಯೇಕವಾಗಿದೆ.

ಭಾರತ ಈ ಸುಂಕದಿಂದ ಪಾರಾಗಲು ಸಾಧ್ಯವೇ?

ಈ ಹೊಸ ಸುಂಕದ ಪ್ರಸ್ತಾಪ ಇನ್ನೂ ಅಂತಿಮಗೊಂಡಿಲ್ಲ. USTR ಈ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಜುಲೈ 6 ರವರೆಗೆ ಕಾಲಾವಕಾಶ ನೀಡಿದೆ ಮತ್ತು ಜುಲೈ 7 ರಂದು ವಿಚಾರಣೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಪ್ರಸ್ತುತ ಭಾರತ ಮತ್ತು ಅಮೆರಿಕ ನಡುವೆ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸುವ ಮತ್ತು ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡುವ ಕುರಿತು ದ್ವಿಪಕ್ಷೀಯ ಮಾತುಕತೆಗಳು ನಡೆಯುತ್ತಿವೆ. ಸೆಕ್ಷನ್ 301 ರ ಅಡಿಯ ಸುಂಕಗಳಿಂದ ವಿನಾಯಿತಿ ಪಡೆಯುವುದು ಭಾರತದ ಪ್ರಮುಖ ಉದ್ದೇಶವಾಗಿದೆ. ಜುಲೈ ಗಡುವಿನ ಒಳಗಾಗಿ ಉಭಯ ದೇಶಗಳ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದ ಏರ್ಪಟ್ಟರೆ, ವಾಷಿಂಗ್ಟನ್ ಈ ಹೆಚ್ಚುವರಿ ಸುಂಕವನ್ನು ಕೈಬಿಡುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: ಅಗತ್ಯ ಸಂದರ್ಭದಲ್ಲೇ ಹೆಲ್ತ್ ಇನ್ಷೂರೆನ್ಸ್ ಕ್ಯಾಷ್​ಲೆಸ್ ಕೈಕೊಡಬಹುದು; ಇಲ್ಲಿವೆ ಪ್ರಮುಖ ಕಾರಣಗಳು

ಬಲವಂತದ ಕಾರ್ಮಿಕ ಪದ್ಧತಿ ಎಂದರೇನು?

ಜೀತಗಾರಿಕೆ, ಬಲವಂತವಾಗಿ ಕೆಲಸ ಮಾಡಿಸುವುದು, ಮಾನವ ಕಳ್ಳಸಾಗಣೆ ಮೂಲಕ ಜನರನ್ನು ಕರೆತಂದು ಕೆಲಸ ಮಾಡಿಸುವುದು, ಇವೇ ಮುಂತಾದ ವ್ಯವಸ್ಥೆ ಅನ್ನು ಫೋರ್ಸ್ ಲೇಬರ್ ಎಂದು ಅಮೆರಿಕದ ಕಾನೂನು ವರ್ಗೀಕರಿಸುತ್ತದೆ.

ಭಾರತದ ಮೇಲಾಗುವ ಪರಿಣಾಮಗಳೇನು?

ಭಾರತದ ರಫ್ತುದಾರರ (exporters) ಮೇಲಾಗುವ ತಕ್ಷಣದ ಪರಿಣಾಮಗಳು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಅಮೆರಿಕದ ಈ ನಿರ್ಧಾರವು ಭಾರತಕ್ಕೆ ತೀವ್ರ ಮುಜುಗರ ಮತ್ತು ಆರ್ಥಿಕ ಒತ್ತಡವನ್ನು ತಂದಿದೆ. ಅಮೆರಿಕದ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳ ಬೆಲೆ ಹೆಚ್ಚಾಗುವ ಭೀತಿ ಎದುರಾಗಿದೆ. ವಾಷಿಂಗ್ಟನ್‌ನ ವಾಣಿಜ್ಯ ಕಾರ್ಯಸೂಚಿಯಲ್ಲಿ ಇನ್ನು ಮುಂದೆ ‘ಕಾರ್ಮಿಕರ ಹಕ್ಕುಗಳ ಅನುಸರಣೆ’ ಮತ್ತು ‘ಪೂರೈಕೆ ಸರಪಳಿಯ ಪಾರದರ್ಶಕತೆ’ ಅತ್ಯಂತ ಪ್ರಮುಖ ವಿಷಯಗಳಾಗಲಿವೆ ಎಂಬ ಸ್ಪಷ್ಟ ಸಂದೇಶವನ್ನು ಈ ನಿರ್ಧಾರ ನೀಡಿದೆ. ಮುಂಬರುವ ಕೆಲವು ವಾರಗಳ ಮಾತುಕತೆಯು ಭಾರತಕ್ಕೆ ಈ ಸುಂಕದಿಂದ ವಿನಾಯಿತಿ ಸಿಗಲಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version