ಜಿಬಿಎ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಿಜೆಪಿ ಮುಖಂಡನ ಕಾಲು ಮುರಿತ: 6 ಅಡಿ ಆಳದ ಚರಂಡಿಗೆ ಬಿದ್ದ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ – Kannada News | Sanjayanagar Safety Scandal: Open Drain Injures BJP Leader, Exposing GBA’s Public Peril

ಬೆಂಗಳೂರು, ಜು.18: ರಾಜಧಾನಿಯ ಸಂಜಯನಗರದಲ್ಲಿ ಮಹಾನಗರ ಜಂಟಿ ಆಡಳಿತ (ಜಿಬಿಎ) ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಮತ್ತೊಂದು ಸಾರ್ವಜನಿಕ ಅವಘಡ ಸಂಭವಿಸಿದೆ. ಚರಂಡಿಯ ಹೂಳು ಎತ್ತಿದ ಬಳಿಕ ಚೇಂಬರ್ ಅನ್ನು ಮುಚ್ಚದೇ ಹಾಗೇ ಬಿಟ್ಟಿದ್ದರಿಂದಾಗಿ, ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ಕರ್ನಾಟಕ ರಾಜ್ಯ ಕರಕುಶಲ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಬೇಳೂರು ರಾಘವೇಂದ್ರ ಶೆಟ್ಟಿ ಅವರು ಆರು ಅಡಿ ಆಳದ ಚರಂಡಿಗೆ ಬಿದ್ದು ಕಾಲು ಮುರಿದುಕೊಂಡಿದ್ದಾರೆ. ನಿನ್ನೆ ರಾತ್ರಿ ಸಂಜಯನಗರದ ಡಾಲರ್ಸ್ ಕಾಲೋನಿ ಬಳಿ ಈ ಆಘಾತಕಾರಿ ಘಟನೆ ನಡೆದಿದ್ದು, ರಾಘವೇಂದ್ರ ಶೆಟ್ಟಿ ಅವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಿಬಿಎ ಸಿಬ್ಬಂದಿಗಳು ಇತ್ತೀಚೆಗೆ ಚರಂಡಿಯ ಹೂಳು ಎತ್ತಿ ಸ್ವಚ್ಛಗೊಳಿಸಿದ್ದರು. ಆದರೆ, ನಿಯಮದ ಪ್ರಕಾರ ಚೇಂಬರ್ ಅನ್ನು ಸರಿಯಾಗಿ ಮುಚ್ಚದೇ ಉದಾಸೀನತೆ ತೋರಿದ್ದರು. ನಿನ್ನೆ ರಾತ್ರಿ ಡಾಲರ್ಸ್ ಕಾಲೋನಿ ಮುಖ್ಯರಸ್ತೆಯ ಫುಟ್‌ಪಾತ್ ಮೇಲೆ ಬೇಳೂರು ರಾಘವೇಂದ್ರ ಶೆಟ್ಟಿ ಅವರು ನಡೆದುಕೊಂಡು ಹೋಗುತ್ತಿದ್ದಾಗ, ಕತ್ತಲಲ್ಲಿ ತೆರೆದಿದ್ದ ಚರಂಡಿ ಕಾಣದೇ ನೇರವಾಗಿ ಒಳಗೆ ಬಿದ್ದಿದ್ದಾರೆ.

ಸುಮಾರು 6 ಅಡಿ ಆಳದ ಚರಂಡಿಗೆ ಬಿದ್ದ ರಭಸಕ್ಕೆ ರಾಘವೇಂದ್ರ ಶೆಟ್ಟಿ ಅವರ ಕಾಲಿನ ಮೂಳೆ ಮುರಿದಿದ್ದು, ತೀವ್ರ ರಕ್ತಸ್ರಾವವಾಗಿದೆ. ತಕ್ಷಣವೇ ಅವರನ್ನು ಸ್ಥಳೀಯರು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರು ತುರ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಬಿಎ ಅಧಿಕಾರಿಗಳ ಜೀವವಿರೋಧಿ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬೇಳೂರು ರಾಘವೇಂದ್ರ ಶೆಟ್ಟಿ ಅವರು ಸಂಜಯನಗರ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ.

ಸಾರ್ವಜನಿಕರ ಪ್ರಾಣಕ್ಕೆ ಕುತ್ತು ತರುತ್ತಿರುವ ಜಿಬಿಎ ಕಮಿಷನರ್, ಸಂಬಂಧಪಟ್ಟ ಇಲಾಖೆಯ ಮುಖ್ಯ ಎಂಜಿನಿಯರ್, ಕಾಮಗಾರಿ ನಡೆಸಿದ ಕಂಟ್ರಾಕ್ಟರ್ ಹಾಗೂ ನಿರ್ಲಕ್ಷ್ಯಕ್ಕೆ ಕಾರಣರಾದ ನಗರಾಭಿವೃದ್ಧಿ ಸಚಿವರ ಮೇಲೂ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: “ಬಟ್ಟೆ ಗಂಟು ಬಿಚ್ಚಿದರೆ ರಕ್ತ ವಾಂತಿ ಮಾಡಿ ಸಾಯ್ತೀಯಾ” ಎಂದು ಹೆದರಿಸಿ ಬಂಗಾರ, ನಗದು ದೋಚಿದ ಬೆಂಗಳೂರಿನ ನಕಲಿ ಸ್ವಾಮೀಜಿ

ಸಾರ್ವಜನಿಕರ ತೀವ್ರ ಆಕ್ರೋಶ:

ರಾಜಧಾನಿಯ ಫುಟ್‌ಪಾತ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಜಿಬಿಎ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ. ಸಾರ್ವಜನಿಕರು ಓಡಾಡುವ ಫುಟ್‌ಪಾತ್‌ಗಳ ಮೇಲೆ ಬೀದಿ ವ್ಯಾಪಾರಿಗಳು ಅಕ್ರಮವಾಗಿ ಜಾಗ ಆಕ್ರಮಿಸಿಕೊಳ್ಳುತ್ತಿದ್ದಾರೆ, ಮತ್ತೊಂದೆಡೆ ಅಧಿಕಾರಿಗಳು ಇಂತಹ ಅಪಾಯಕಾರಿ ಚರಂಡಿಗಳನ್ನು ತೆರೆದಿಟ್ಟು ಪಾದಚಾರಿಗಳ ಪ್ರಾಣದ ಜೊತೆ ಆಟವಾಡುತ್ತಿದ್ದಾರೆ. ಕೂಡಲೇ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಿ, ಇಡೀ ನಗರದಾದ್ಯಂತ ಫುಟ್‌ಪಾತ್‌ಗಳನ್ನು ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ: ವಿಕಾಸ್ ಟಿವಿ9 ಕನ್ನಡ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

T20 World Cup 2028: ಟಿ20 ವಿಶ್ವಕಪ್​ಗೆ 12 ತಂಡಗಳು ನೇರ ಆಯ್ಕೆ – Kannada News | ICC Confirms 12 Direct Qualifiers and New Format for 2028 T20 World Cup

ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ಜಂಟಿಯಾಗಿ ಆಯೋಜಿಸಲಿರುವ 2028ರ ಟಿ20 ವಿಶ್ವಕಪ್  ಟೂರ್ನಿಗೆ ಒಟ್ಟು 12 ತಂಡಗಳು ಈಗಾಗಲೇ ನೇರವಾಗಿ ಅರ್ಹತೆ ಪಡೆದುಕೊಂಡಿವೆ. ಇನ್ನುಳಿದ 8 ತಂಡಗಳ ಸ್ಥಾನಗಳಿಗಾಗಿ ಅರ್ಹತಾ ಸುತ್ತು ನಡೆಸುವುದಾಗಿ ಐಸಿಸಿ ತಿಳಿಸಿದೆ. ಅದರಂತೆ 2028ರ ಟಿ20 ವಿಶ್ವಕಪ್​ಗೆ ನೇರ ಅರ್ಹತೆ ಪಡೆದ 12 ತಂಡಗಳ ಪಟ್ಟಿ ಈ ಕೆಳಗಿನಂತಿದೆ… (PC: ICC)

Source link

FIFA World Cup 2026: ಯಾರಿಗೆ ಸಿಗಲಿದೆ ಗೋಲ್ಡನ್ ಬೂಟ್? – Kannada News | FIFA World Cup 2026 Golden Boot Contenders

FIFA World Cup 2026: ಫಿಫಾ ವಿಶ್ವಕಪ್ ಮುಕ್ತಾಯದ ಹಂತಕ್ಕೆ ತಲುಪಿದೆ. ಇನ್ನುಳಿದಿರುವುದು ಕೇವಲ 2 ಪಂದ್ಯಗಳು ಮಾತ್ರ. ಈ ಪಂದ್ಯಗಳ ಮೂಲಕ ಈ ಬಾರಿಯ ಗೋಲ್ಡನ್ ಬೂಟ್ ಯಾರಿಗೆ ಸಿಗಲಿದೆ ಎಂಬುದು ನಿರ್ಧಾರವಾಗಲಿದೆ. ಸದ್ಯ ಈ ಪ್ರಶಸ್ತಿಗಾಗಿ ಐವರು ಆಟಗಾರರ ನಡುವೆ ಪೈಪೋಟಿಯಿದ್ದು, ಇವರಲ್ಲಿ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಮತ್ತು ಫ್ರಾನ್ಸ್‌ನ ಕಿಲಿಯನ್ ಎಂಬಾಪೆ ಮುಂಚೂಣಿಯಲ್ಲಿದ್ದಾರೆ.

ಏನಿದು ಗೋಲ್ಡನ್ ಬೂಟ್?

ಗೋಲ್ಡನ್ ಬೂಟ್ ಎಂಬುದು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ಗೋಲುಗಳನ್ನು ಗಳಿಸಿದ ಆಟಗಾರನಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯಾಗಿದೆ.

ಇಡೀ ವಿಶ್ವಕಪ್ ಟೂರ್ನಿಯಲ್ಲಿ ಯಾವ ಆಟಗಾರ ಅತಿ ಹೆಚ್ಚು ಗೋಲು ಬಾರಿಸುತ್ತಾರೋ ಅವರಿಗೆ ಈ ಚಿನ್ನದ ಬೂಟ್ ಆಕಾರದ ಟ್ರೋಫಿ ಸಿಗುತ್ತದೆ.

ಇಬ್ಬರು ಆಟಗಾರರು ಸಮಾನ ಗೋಲು ಹೊಡೆದರೆ, ಯಾರು ಹೆಚ್ಚು ಅಸಿಸ್ಟ್ (ಗೋಲು ಹೊಡೆಯಲು ಸಹಾಯ) ಮಾಡಿದ್ದಾರೋ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಅದೂ ಸಮನಾಗಿದ್ದರೆ, ಮೈದಾನದಲ್ಲಿ ಅತಿ ಕಡಿಮೆ ನಿಮಿಷ ಆಡಿದವರಿಗೆ ಈ ಪ್ರಶಸ್ತಿ ಒಲಿಯುತ್ತದೆ.

ಐವರ ನಡುವೆ ಪೈಪೋಟಿ:

2026ರ ಫಿಫಾ ವಿಶ್ವಕಪ್‌ನ ಅತ್ಯುನ್ನತ ಸ್ಕೋರರ್ ಪ್ರಶಸ್ತಿಯಾದ ‘ಗೋಲ್ಡನ್ ಬೂಟ್’ ರೇಸ್ ಸದ್ಯ ಐವರು ಆಟಗಾರರ ನಡುವೆ ಪೈಪೋಟಿ ಇದೆ. ಆ ಐವರೆಂದರೆ…

ಸ್ಥಾನ ಆಟಗಾರ ದೇಶ ಗೋಲು ಅಸಿಸ್ಟ್ ಮುಂದಿನ ಪಂದ್ಯ
1 ಲಿಯೋನೆಲ್ ಮೆಸ್ಸಿ ಅರ್ಜೆಂಟೀನಾ 8 4 ಫೈನಲ್ (ಸ್ಪೇನ್ ವಿರುದ್ಧ)
2 ಕಿಲಿಯನ್ ಎಂಬಾಪೆ ಫ್ರಾನ್ಸ್ 8 3 3ನೇ ಸ್ಥಾನದ ಪಂದ್ಯ (ಇಂಗ್ಲೆಂಡ್ ವಿರುದ್ಧ)
3 ಹ್ಯಾರಿ ಕೇನ್ ಇಂಗ್ಲೆಂಡ್ 6 1 3ನೇ ಸ್ಥಾನದ ಪಂದ್ಯ (ಫ್ರಾನ್ಸ್ ವಿರುದ್ಧ)
4 ಜೂಡ್ ಬೆಲ್ಲಿಂಗ್‌ಹ್ಯಾಮ್ ಇಂಗ್ಲೆಂಡ್ 6 1 3ನೇ ಸ್ಥಾನದ ಪಂದ್ಯ (ಫ್ರಾನ್ಸ್ ವಿರುದ್ಧ)
5 ಉಸ್ಮಾನೆ ಡೆಂಬೆಲೆ ಫ್ರಾನ್ಸ್ 5 2 3ನೇ ಸ್ಥಾನದ ಪಂದ್ಯ (ಇಂಗ್ಲೆಂಡ್ ವಿರುದ್ಧ)

ಮೆಸ್ಸಿ vs ಎಂಬಾಪೆ:

ಲಿಯೋನೆಲ್ ಮೆಸ್ಸಿ ಮತ್ತು ಕಿಲಿಯನ್ ಎಂಬಾಪೆ ನಡುವಿನ ಗೋಲ್ಡನ್ ಬೂಟ್ ಪೈಪೋಟಿ ಅತ್ಯಂತ ರೋಮಾಂಚಕ ಘಟ್ಟವನ್ನು ತಲುಪಿದೆ. 2022ರ ಖತಾರ್ ವಿಶ್ವಕಪ್ ಫೈನಲ್‌ನ ಅದ್ಭುತ ಮುಖಾಮುಖಿಯ ನಂತರ, ಈಗ 2026ರ ವಿಶ್ವಕಪ್‌ನಲ್ಲೂ ಇವರಿಬ್ಬರೇ ಗೋಲ್ಡನ್ ಬೂಟ್ ರೇಸ್‌ನ ಅಗ್ರಸ್ಥಾನದಲ್ಲಿದ್ದಾರೆ.

ಸದ್ಯ ಮೆಸ್ಸಿ ಮತ್ತು ಎಂಬಾಪೆ ಇಬ್ಬರೂ ಪ್ರಸ್ತುತ ತಲಾ 8 ಗೋಲುಗಳನ್ನು ಗಳಿಸಿ ಜಂಟಿ ಮುನ್ನಡೆಯಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮೆಸ್ಸಿ ಎರಡು ಅದ್ಭುತ ಅಸಿಸ್ಟ್‌ಗಳನ್ನು ಮಾಡುವ ಮೂಲಕ ಒಟ್ಟು 4 ಅಸಿಸ್ಟ್‌ಗಳನ್ನು ಹೊಂದಿದ್ದಾರೆ. ಎಂಬಾಪೆ 3 ಅಸಿಸ್ಟ್‌ಗಳನ್ನು ಹೊಂದಿದ್ದು, ಹೀಗಾಗಿ ಮೆಸ್ಸಿ ರೇಸ್‌ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ಎನ್ನಬಹುದು.

  • ಕಿಲಿಯನ್ ಎಂಬಾಪೆ: ಜುಲೈ 19 ರಂದು ಇಂಗ್ಲೆಂಡ್ ವಿರುದ್ಧ ನಡೆಯಲಿರುವ 3ನೇ ಸ್ಥಾನದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.
  • ಲಿಯೋನೆಲ್ ಮೆಸ್ಸಿ: ಜುಲೈ 20 ರಂದು ಸ್ಪೇನ್ ವಿರುದ್ಧದ ಮಹಾ ಫೈನಲ್ ಪಂದ್ಯದಲ್ಲಿ ಮೆಸ್ಸಿ ಕಣಕ್ಕಿಳಿಯಲಿದ್ದಾರೆ.

ಪ್ರಸ್ತುತ ಇಬ್ಬರೂ ದಿಗ್ಗಜರು ಗೋಲ್ಡನ್ ಬೂಟ್ ರೇಸ್‌ನಲ್ಲಿ ಮುನ್ನಡೆಯಲ್ಲಿದ್ದಾರೆ. ಫ್ರಾನ್ಸ್‌ನ ಕಿಲಿಯನ್ ಎಂಬಾಪೆ ಇಂಗ್ಲೆಂಡ್ ವಿರುದ್ಧದ ಮೂರನೇ ಸ್ಥಾನದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು, ಇಲ್ಲಿ ಗೋಲು ಗಳಿಸಿ ರೇಸ್‌ನಲ್ಲಿ ಮುನ್ನಡೆ ಸಾಧಿಸಲು ಅವರಿಗೆ ಮತ್ತೊಂದು ಸುವರ್ಣ ಅವಕಾಶವಿದೆ.

ಇದನ್ನೂ ಓದಿ: T20 World Cup 2028: ಟಿ20 ವಿಶ್ವಕಪ್​ಗೆ 12 ತಂಡಗಳು ನೇರ ಆಯ್ಕೆ

ಮತ್ತೊಂದೆಡೆ, ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಸ್ಪೇನ್ ವಿರುದ್ಧದ ಫೈನಲ್ ಪಂದ್ಯದ ಮೂಲಕ ಎಂಬಾಪೆ ಅವರನ್ನು ಹಿಂದಿಕ್ಕಿ ಗೋಲ್ಡನ್ ಬೂಟ್ ಅನ್ನು ತಮ್ಮದಾಗಿಸಿಕೊಳ್ಳಬಹುದು. ಹೀಗಾಗಿ, ಈ ಮುಂದಿನ ಎರಡು ಪಂದ್ಯಗಳ ರೋಮಾಂಚಕ ಪ್ರದರ್ಶನದ ಆಧಾರದ ಮೇಲೆಯೇ ಈ ಬಾರಿಯ ಗೋಲ್ಡನ್ ಬೂಟ್ ಯಾರ ಪಾಲಾಗಲಿದೆ ಎಂಬುದು ಅಂತಿಮವಾಗಿ ನಿರ್ಧಾರವಾಗಲಿದೆ.

Source link

PSI Recruitment 2026: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉದ್ಯೋಗವಕಾಶ; 253 ಪಿಎಸ್‌ಐ ಹುದ್ದೆಗೆ ನೇರ ನೇಮಕಾತಿ! – Kannada News | Karnataka PSI Recruitment 2026: 253 Civil Sub Inspector Vacancies Announced

ಬೆಂಗಳೂರು: ಪೊಲೀಸ್ ಇಲಾಖೆಗೆ ಸೇರಬಯಸುವ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಪ್ರಮುಖ ಸಿಹಿ ಸುದ್ದಿ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಸಿವಿಲ್ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (PSI) ಹುದ್ದೆಗಳ ಭರ್ತಿಗೆ ಭರ್ಜರಿ ಚಾಲನೆ ನೀಡಿದೆ. ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ತುಂಬಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಒಟ್ಟು 600 ಹುದ್ದೆಗಳಿಗೆ ಅನುಮತಿ, 253 ಹುದ್ದೆಗಳ ಭರ್ತಿ:

ರಾಜ್ಯ ಪೊಲೀಸ್ ಇಲಾಖೆಯಿಂದ ಒಟ್ಟು 600 ಪಿಎಸ್‌ಐ (ಸಿವಿಲ್) ಹುದ್ದೆಗಳ ನೇಮಕಾತಿಗೆ ಅಧಿಕೃತವಾಗಿ ಅನುಮತಿ ದೊರೆತಿದೆ. ಈ ಮಂಜೂರಾದ ಹುದ್ದೆಗಳ ಪೈಕಿ ಪ್ರಸ್ತುತ 253 ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಮೊದಲ ಹಂತದಲ್ಲಿ ನೇರ ನೇಮಕಾತಿ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಲು ಇಲಾಖೆಯು ಮುಂದಾಗಿದೆ.

ಡಿಜಿ ಮತ್ತು ಐಜಿಪಿ ಕಚೇರಿಯಿಂದ ಅಧಿಕೃತ ಆದೇಶ:

ಈ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (DG & IGP) ಕಚೇರಿಯಿಂದ ಮಹತ್ವದ ಆದೇಶ ಪತ್ರವೊಂದು ಹೊರಬಿದ್ದಿದೆ. ಕೆಸಿಎಸ್ ನಿಯಮ-32ರ ಅಡಿಯಲ್ಲಿ ಸದ್ಯ ಸ್ವತಂತ್ರ ಪ್ರಭಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳನ್ನು ಪರಿಗಣನೆಗೆ ತೆಗೆದುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಉದ್ಯೋಗ 2026: 10ನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗದ ಅವಕಾಶ

ಮುಂದಿನ ವರ್ಷದ ಹುದ್ದೆಗಳೂ ಸೇರ್ಪಡೆ:

ವರದಿಯ ಪ್ರಕಾರ, ಪ್ರಸ್ತುತ ಖಾಲಿ ಇರುವ ಹುದ್ದೆಗಳಷ್ಟೇ ಅಲ್ಲದೆ, ಮುಂದಿನ ವರ್ಷದಲ್ಲಿ ನೇರ ನೇಮಕಾತಿ ಅಡಿಯಲ್ಲಿ ಖಾಲಿಯಾಗಲಿರುವ ಹುದ್ದೆಗಳನ್ನೂ ಸಹ ಈಗಲೇ ಮುಂಚಿತವಾಗಿ ಗುರುತಿಸಲಾಗುತ್ತಿದೆ. ಆ ಹುದ್ದೆಗಳನ್ನೂ ಸಹ ಒಟ್ಟಿಗೆ ಸೇರಿಸಿಕೊಂಡು ಪಿಎಸ್‌ಐ (ಸಿವಿಲ್) ಹುದ್ದೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಲು ಜವಾಬ್ದಾರಿಯುತ ಅಧಿಕಾರಿಗಳಿಗೆ ಕಚೇರಿಯಿಂದ ಸೂಕ್ತ ಸೂಚನೆ ನೀಡಲಾಗಿದೆ. ಇಲಾಖೆಯ ಈ ಕ್ರಮದಿಂದಾಗಿ ಮುಂಬರುವ ದಿನಗಳಲ್ಲಿ ಪಿಎಸ್‌ಐ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ದೊಡ್ಡ ಮಟ್ಟದ ಉದ್ಯೋಗಾವಕಾಶ ಸಿಗುವಂತಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 12:43 pm, Sat, 18 July 26

Source link

Protest Against Kambala: ಮೈಸೂರು ದಸರಾದಲ್ಲಿ ಕಂಬಳಕ್ಕೆ ವಿರೋಧಿಸ್ತಿರೋ ಪ್ರತಿಭಟನಾಕಾರರು ಹೇಳಿದ್ದೇನು?

ಮೈಸೂರು, ಜುಲೈ 18: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಕಂಬಳ ಆಯೋಜಿಸುವ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಪರಿಸರವಾದಿಗಳು, ರೈತ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳು ಕಂಬಳ ನಡೆಯುವ ಸ್ಥಳದಲ್ಲೇ ತೀವ್ರ ಪ್ರತಿಭಟನೆ ನಡೆಸಿವೆ.

ಪ್ರತಿಭಟನಾಕಾರರು ಕರಾವಳಿ ಭಾಗದಿಂದ 300 ಕಿಲೋಮೀಟರ್ ದೂರದಿಂದ ಕೋಣಗಳನ್ನು ಕರೆತರುವುದು, ಜಾಗವನ್ನು ಹಾಳು ಮಾಡುವುದು ಮತ್ತು ಮರಗಳನ್ನು ಕಡಿಯುವುದು ಪರಿಸರಕ್ಕೆ ಮಾರಕ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಂಬಳದ ಹೆಸರಿನಲ್ಲಿ ನೂರಕ್ಕೂ ಹೆಚ್ಚು ಮರಗಳನ್ನು ಕಡಿಯಲು ಪರಿಸರ ಇಲಾಖೆಯಿಂದ ಅನುಮತಿ ಕೇಳಿರುವುದು ಆಘಾತಕಾರಿ ಎಂದು ಅವರು ಹೇಳಿದ್ದಾರೆ. ಮೈಸೂರು ದಸರಾದ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸುವ ಬದಲು, ಸರ್ಕಾರವೇ ಅದನ್ನು ಹಾಳು ಮಾಡಲು ಹೊರಟಿದೆ ಎಂದು ಆರೋಪಿಸಿದ್ದಾರೆ.

ಕನ್ನಡ ಕ್ರಿಯಾ ಸಮಿತಿಯ ಮೈನಾ ಲೋಕೇಶ್ ಮತ್ತು ಕುಸುಮ ಐಯ್ಯಂಗಾರ್ ಅವರು ಮಾತನಾಡಿ, ಸರ್ಕಾರದ ಈ ನಿರ್ಧಾರವು ಹಣ ಮಾಡುವ ಉದ್ದೇಶದಿಂದ ಕೂಡಿದೆ ಎಂದು ಟೀಕಿಸಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಟಿಕೆಟ್ ದರ ಏರಿಸಿದಂತೆ, ಇದೂ ಒಂದು ವ್ಯವಹಾರಿಕ ನಡೆ ಎಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮದರ್ ಪ್ರಾಮಿಸ್’ ಸಿನಿಮಾ ನೋಡಿದ ಶಿವಣ್ಣ, ಹೇಳಿದ್ದೇನು? – Kannada News | Shiva Rajkumar watched and praised Mother Promise movie

ಡಾಲಿ ಧನಂಜಯ್ (Daali Dhananjaya) ನಿರ್ಮಿಸಿ, ನಟನೆ ಸಹ ಮಾಡಿರುವ ‘ಮದರ್ ಪ್ರಾಮಿಸ್’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ವಿಮರ್ಶಕರು ಸಹ ಸಿನಿಮಾದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಸ್ಯ ಪ್ರಧಾನ ಕೌಟುಂಬಿಕ ಸಿನಿಮಾ ಆಗಿರುವ ‘ಮದರ್ ಪ್ರಾಮಿಸ್’ ಅನ್ನು ಕುಟುಂಬಗಳು ಒಟ್ಟಿಗೆ ಹೋಗಿ ವೀಕ್ಷಿಸುತ್ತಿವೆ. ಆದರೆ ಕೆಲವರು ಸಿನಿಮಾಕ್ಕೆ ಉದ್ದೇಶಪೂರ್ವಕವಾಗಿ ಹಾನಿ ಮಾಡುವ ಯತ್ನಗಳನ್ನು ಮಾಡುತ್ತಿದ್ದಾರೆಂದು ಚಿತ್ರತಂಡ ಆರೋಪಿಸಿದೆ. ಇದರ ನಡುವೆ ಸಿನಿಮಾಕ್ಕೆ ಶಿವರಾಜ್ ಕುಮಾರ್ ಅವರ ಬೆಂಬಲ ದೊರೆತಿದೆ. ‘ಮದರ್ ಪ್ರಾಮಿಸ್’ ನೋಡಿರುವ ಶಿವರಾಜ್ ಕುಮಾರ್, ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿವರಾಜ್ ಕುಮಾರ್ ಅವರು ‘ಮದರ್ ಪ್ರಾಮಿಸ್’ ವೀಕ್ಷಿಸಿದ್ದು ಸಿನಿಮಾದ ಬಗ್ಗೆ ಟ್ವಿಟ್ಟರ್​​ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಮದರ್ ಪ್ರಾಮಿಸ್’ ತುಂಬ ಒಳ್ಳೆಯ ಚಿತ್ರ. ತುಂಬಾ ಜನರ ಮೆಚ್ಚುಗೆ ಪಡೆದ ಚಿತ್ರ. ಎಷ್ಟೇ ಒಳ್ಳೆಯ ಚಿತ್ರಗಳು ಬಂದರೂ ಪ್ರೇಕ್ಷಕರು ಥಿಯೇಟರ್‌ಗೆ ಬಂದು ಬೆಂಬಲಿಸಿದರೆ ಮಾತ್ರ ಚಿತ್ರಗಳು ಉಳಿಯುವುದಕ್ಕೆ ಸಾಧ್ಯ. ಧನಂಜಯ, ಅವರು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತ ಬಂದಿದ್ದಾರೆ. ಡಾಲಿ ಪಿಚ್ಚರ್ಸ್‌ನಿಂದ ಇಂತಹ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರಬೇಕು ಎಂಬುದು ನನ್ನ ಆಶಯ’ ಎಂದಿದ್ದಾರೆ.

ಡಾಲಿ ಧನಂಜಯ್ ಅವರ ಪ್ರಯತ್ನಗಳಿಗೆ ಮೊದಲಿನಿಂದಲೂ ಶಿವರಾಜ್ ಕುಮಾರ್ ಅವರು ಬೆಂಬಲ ನೀಡುತ್ತಲೇ ಬಂದಿದ್ದಾರೆ. ಧನಂಜಯ್ ಸಹ ಶಿವರಾಜ್ ಕುಮಾರ್ ಅವರನ್ನು ಹಿರಿಯ ಸಹೋದರನಂತೆ ಕಾಣುತ್ತಾರೆ. ಇಬ್ಬರ ನಡುವೆ ಪರಸ್ಪರ ಪ್ರೀತಿ, ಗೌರವಗಳಿವೆ. ಈಗ ಧನಂಜಯ್ ಸಿನಿಮಾಕ್ಕೆ ಕೆಲವರು ಸಮಸ್ಯೆ ಮಾಡುತ್ತಿದ್ದಾರೆ ಎನ್ನುವ ಸಮಯದಲ್ಲಿ ಶಿವರಾಜ್ ಕುಮಾರ್ ಅವರು ಸಿನಿಮಾದ ಪರವಾಗಿ ನಿಂತಿದ್ದಾರೆ. ಖುದ್ದು ಸಿನಿಮಾ ವೀಕ್ಷಿಸಿ ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ:ಶಿವರಾಜ್ ಕುಮಾರ್ ಸ್ಟೈಲ್​ ನೋಡಿ, ಊಟಕ್ಕೆ ಹೋದಾಗಲೂ ತಮಾಷೆ ಬಿಡರು

ಮುಖ್ಯವಾಗಿ, ಇತ್ತೀಚೆಗೆ ಡಾಲಿ ಧನಂಜಯ್ ನಡೆಸಿದ ಸುದ್ದಿಗೋಷ್ಠಿಯಲ್ಲಿ, ‘ಇದು ನಿರ್ಮಾಪಕನಾಗಿ ನನ್ನ ಕೊನೆಯ ಸಿನಿಮಾ’ ಎಂದು ಬೇಸರದಿಂದ ನುಡಿದಿದ್ದರು. ಒಳ್ಳೆಯ ಸಿನಿಮಾ ಅನ್ನು ಕೊಲ್ಲಲು ನಡೆಸಲಾಗುತ್ತಿರುವ ಪ್ರಯತ್ನದ ಬಗ್ಗೆ ತಮಗೆ ಸಬೇಸರವಾಗಿದ್ದು, ಇದೇ ಕಾರಣಕ್ಕೆ ತಾವು ಸಿನಿಮಾ ನಿರ್ಮಾಣವನ್ನೇ ನಿಲ್ಲಿಸುವ ಯೋಚನೆ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದರು. ಇದೀಗ ಶಿವರಾಜ್ ಕುಮಾರ್ ಅವರು ಸಿನಿಮಾ ನೋಡಿದ ಬಳಿಕ ‘ಡಾಲಿ ಪಿಚ್ಚರ್ಸ್‌ನಿಂದ ಇಂತಹ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರಬೇಕು ಎಂಬುದು ನನ್ನ ಆಶಯ’ ಎಂದಿದ್ದಾರೆ. ಆ ಮೂಲಕ ಧನಂಜಯ್ ಅವರು ಸಿನಿಮಾ ನಿರ್ಮಾಣ ನಿಲ್ಲಿಸಬಾರದು’ ಎಂದಿದ್ದಾರೆ.

‘ಮದರ್ ಪ್ರಾಮಿಸ್’ ಸಿನಿಮಾ ಅನ್ನು ಮೈಸೂರು ಪೂರ್ಣ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಡಾಲಿ ಧನಂಜಯ್, ಮೈಸೂರು ಪೂರ್ಣ, ನಾಗಭೂಷಣ್, ವಿನಯಾ ಪ್ರಸಾದ್, ಗೀತಾ, ಚಿ ಗುರುದತ್ ಇನ್ನೂ ಹಲವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವೈಷ್ಣೋದೇವಿ ದೇವಾಲಯದಲ್ಲಿ 500 ಕೋಟಿ ರೂ. ದೇಣಿಗೆ ಹಗರಣ, 70 ಕೆಜಿಯಲ್ಲಿ ಕೇವಲ 3 ಕೆಜಿ ಮಾತ್ರ ನಿಜವಾದ ಬೆಳ್ಳಿ – Kannada News | Vaishno Devi Temple: Rs500 Crore Silver Donation Scam Exposed, 70kg Yields Only 3kg Real

ಮ್ಮು, ಜುಲೈ 18: ಜಮ್ಮುವಿನಲ್ಲಿರುವ ಅತ್ಯಂತ ಶ್ರೀಮಂತ ಮತ್ತು ಕೋಟ್ಯಂತರ ಭಕ್ತರು ಭೇಟಿ ನೀಡುವ ವೈಷ್ಣೋದೇವಿ ಮಂದಿರದಲ್ಲಿ ರಾಮ ಮಂದಿರದಂತೆಯೇ ದೇಣಿಗೆ ಹಗರಣ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ. ಶ್ರೀ ಮಾತಾ ವೈಷ್ಣೋದೇವಿ ದೇವಾಲಯ ಮಂಡಳಿ’ (SMVDSB) ಈಗ ಭಾರಿ ವಿವಾದದ ಕೇಂದ್ರಬಿಂದುವಾಗಿದೆ. ಭಕ್ತರು ವರ್ಷಗಳಿಂದ ದೇವಿಗೆ ಅರ್ಪಿಸಿದ ಸುಮಾರು 500 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿಯು ನಾಪತ್ತೆಯಾಗಿದೆ ಅಥವಾ ಕಳಪೆ ಲೋಹಕ್ಕೆ ಬದಲಾಯಿಸಲ್ಪಟ್ಟಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಮಹಾ ವಂಚನೆ ಪ್ರಕರಣ ಈಗ ನ್ಯಾಯಾಲಯದ ಮೆಟ್ಟಿಲೇರಿದ್ದು, ದೇವಾಲಯದ ಆಡಳಿತ ಮಂಡಳಿಯಲ್ಲಿ ತಲ್ಲಣ ಸೃಷ್ಟಿಸಿದೆ.

20 ಟನ್ ಬೆಳ್ಳಿಯ ತಪಾಸಣೆ ವೇಳೆ ಬಯಲಾಯ್ತು ಮಹಾ ಮೋಸ
ಕಳೆದ 5-6 ವರ್ಷಗಳಲ್ಲಿ ಭಕ್ತರು ದೇವಿಗೆ ಅರ್ಪಿಸಿದ್ದ ಸುಮಾರು 20 ಟನ್ ಬೆಳ್ಳಿಯ ಆಭರಣಗಳು, ನಾಣ್ಯಗಳು ಮತ್ತು ಛತ್ರಿಗಳನ್ನು (ಛಾತ್ರ್) ಕರಗಿಸಿ, ಶುದ್ಧೀಕರಿಸಲು ಜಮ್ಮು ಮತ್ತು ಕಾಶ್ಮೀರದ ಹೊರಗಿನ ಸರ್ಕಾರಿ ಟಂಕಸಾಲೆಗೆ ಕಳುಹಿಸಲಾಗಿತ್ತು. ಆದರೆ ಅಲ್ಲಿ ಲೋಹದ ಶುದ್ಧತೆಯನ್ನು ಪರೀಕ್ಷಿಸಿದಾಗ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.

ಕೇವಲ ಶೇ.5 ಮಾತ್ರ ನಿಜವಾದ ಬೆಳ್ಳಿ: ಕರಗಿಸಿದ ಒಟ್ಟು ಲೋಹದಲ್ಲಿ ಕೇವಲ ಶೇಕಡಾ 5 ರಿಂದ 6 ರಷ್ಟು ಮಾತ್ರ ನಿಜವಾದ ಬೆಳ್ಳಿ ಇರುವುದು ಪತ್ತೆಯಾಗಿದೆ. ಇನ್ನುಳಿದ ಭಾಗದಲ್ಲಿ ಕಬ್ಬಿಣ, ಕ್ಯಾಡ್ಮಿಯಮ್ ಮತ್ತು ಇತರೆ ಅಗ್ಗದ ಲೋಹಗಳನ್ನು ಮಿಶ್ರಣ ಮಾಡಲಾಗಿತ್ತು.

70 ಕೆಜಿಯಲ್ಲಿ ಕೇವಲ 3 ಕೆಜಿ ಅಸಲಿ: ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ದೇವಾಲಯದ ದಾಖಲೆಗಳಲ್ಲಿದ್ದ 70 ಕೆಜಿ ತೂಕದ ಬೆಳ್ಳಿಯ ವಸ್ತುವೊಂದನ್ನು ಕರಗಿಸಿದಾಗ ಅದರಲ್ಲಿ ಸಿಕ್ಕಿದ್ದು ಕೇವಲ 3 ಕೆಜಿ ನಿಜವಾದ ಬೆಳ್ಳಿ ಮಾತ್ರ.

550 ಕೋಟಿ ರೂ. ನಷ್ಟ: ಒಂದು ವೇಳೆ ಭಕ್ತರು ನೀಡಿದ ಆ 20 ಟನ್ ಲೋಹವು ಶುದ್ಧ ಬೆಳ್ಳಿಯಾಗಿದ್ದಿದ್ದರೆ ಇಂದಿನ ಮಾರುಕಟ್ಟೆ ದರದಲ್ಲಿ ಅದರ ಮೌಲ್ಯ 550 ಕೋಟಿ ರೂ.ಗೂ ಅಧಿಕವಾಗಿರುತ್ತಿತ್ತು. ಆದರೆ ಈಗ ಸಿಕ್ಕಿರುವುದು ಕೇವಲ ಅದರ ಒಂದು ಸಣ್ಣ ಭಾಗ ಮಾತ್ರ.

ಮತ್ತಷ್ಟು ಓದಿ: ದೇಣಿಗೆ ಕಳ್ಳತನಕ್ಕೆ ಪ್ರಾಯಶ್ಚಿತ್ತ; ರಾಮ ಮಂದಿರದಲ್ಲಿ 10 ದಿನದ ಶುದ್ಧೀಕರಣ ಆರಂಭ

ಭಕ್ತರಿಗೆ ವಂಚನೆಯೋ ಅಥವಾ ಒಳಗಿನವರ ಕೈವಾಡವೋ? ತನಿಖೆಗೆ ಆದೇಶ
ಮೇ 9, 2026 ರಂದು ವಕೀಲ ದೀಪಕ್ ಶರ್ಮಾ ಅವರು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಪರಾಧ ಶಾಖೆಗೆ ದೂರು ಸಲ್ಲಿಸಿದ ನಂತರ ಈ ಹಗರಣ ಅಧಿಕೃತವಾಗಿ ಬಯಲಿಗೆ ಬಂತು. ಈ ವಂಚನೆಯ ಹಿಂದೆ ಎರಡು ಮುಖ್ಯ ಶಂಕೆಗಳಿವೆ:

ಭಕ್ತರು ದೇವಾಲಯಕ್ಕೆ ಬರುವ ಮುನ್ನ ಕತ್ರಾ ಬೇಸ್ ಕ್ಯಾಂಪ್‌ನ ಸ್ಥಳೀಯ ವ್ಯಾಪಾರಿಗಳು ಮತ್ತು ಚಿನ್ನದ ಆಭರಣಗಾರರು ಭಕ್ತರಿಗೆ ಮೋಸ ಮಾಡಿ ನಕಲಿ ಅಥವಾ ಕಲಬೆರಕೆ ಬೆಳ್ಳಿ ವಸ್ತುಗಳನ್ನು ಮಾರಾಟ ಮಾಡಿದ್ದಾರೆಯೇ? ಅಥವಾ, ಭಕ್ತರು ಅಸಲಿ ಬೆಳ್ಳಿಯನ್ನೇ ನೀಡಿದ್ದರೂ, ದೇವಾಲಯದ ಭದ್ರತಾ ಕೊಠಡಿಯಲ್ಲಿ ಅದನ್ನು ಸ್ವೀಕರಿಸಿದ ನಂತರ ಒಳಗಿನ ಸಿಬ್ಬಂದಿಯೇ ಅದನ್ನು ಕದ್ದು, ನಕಲಿ ಲೋಹಕ್ಕೆ ಬದಲಾಯಿಸಿದ್ದಾರೆಯೇ ಎಂಬುದು ಪ್ರಶ್ನೆಯಾಗಿದೆ.

ಈ ಗಂಭೀರ ದೂರಿಗೆ ಸಂಬಂಧಿಸಿದಂತೆ ಜಮ್ಮು ನ್ಯಾಯಾಲಯವು ತನಿಖಾ ಅಧಿಕಾರಿಗೆ ಎಲ್ಲಾ ಅಸಲಿ ದಾಖಲೆಗಳೊಂದಿಗೆ ಖುದ್ದಾಗಿ ಹಾಜರಾಗುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದು, ಮುಂದಿನ ಪ್ರಮುಖ ವಿಚಾರಣೆಯನ್ನು ಜುಲೈ 29, 2026 ಕ್ಕೆ ನಿಗದಿಪಡಿಸಿದೆ.

ಕ್ಯಾನ್ಸರ್ ಕಾರಕ ಲೋಹ: ನಕಲಿ ಬೆಳ್ಳಿಯಲ್ಲಿ ಪತ್ತೆಯಾಗಿರುವ ಪ್ರಮುಖ ಮಿಶ್ರಣ ಲೋಹವಾದ ‘ಕ್ಯಾಡ್ಮಿಯಮ್’ ಅತ್ಯಂತ ವಿಷಕಾರಿಯಾಗಿದೆ. ಇದನ್ನು ಜಾಗತಿಕವಾಗಿ ಕ್ಯಾನ್ಸರ್ ಕಾರಕ ಲೋಹ ಎಂದು ವರ್ಗೀಕರಿಸಲಾಗಿದೆ. ದೇವಾಲಯದ ಕೊಠಡಿಗಳಲ್ಲಿ ಇವುಗಳನ್ನು ನಿರ್ವಹಿಸುವ ಕಾರ್ಮಿಕರು ಮತ್ತು ಟಂಕಸಾಲೆಯಲ್ಲಿ ಇವುಗಳನ್ನು ಕರಗಿಸುವ ಸಿಬ್ಬಂದಿಯ ಆರೋಗ್ಯದ ಮೇಲೆ ಇದು ತೀವ್ರ ದುಷ್ಪರಿಣಾಮ ಬೀರುವ ಆತಂಕ ಎದುರಾಗಿದೆ.

ವಿವಾದ ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ (LG) ಮನೋಜ್ ಸಿನ್ಹಾ ಅವರು ದೇವಾಲಯ ಮಂಡಳಿಯ ತುರ್ತು ಸಮೀಕ್ಷಾ ಸಭೆ ನಡೆಸಿದ್ದಾರೆ. ಇನ್ಮುಂದೆ ದೇವಾಲಯಕ್ಕೆ ಬರುವ ಪ್ರತಿಯೊಂದು ಕೊಡುಗೆಯನ್ನು ಆರ್‌ಬಿಐ (RBI) ಮಾರ್ಗಸೂಚಿಗಳು ಮತ್ತು ತಂತ್ರಜ್ಞಾನದ ಆಧಾರದ ಮೇಲೆ ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಹಾಗೂ ದೇಣಿಗೆ ನಿರ್ವಹಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಂಡೂರಿನ ಅಂತಾಪುರದಲ್ಲಿ ವಿಜಯನಗರ ಕಾಲದ ಅಪರೂಪದ ಜೈನ ದಾನಶಾಸನ ಪತ್ತೆ! – Kannada News | Rare Vijayanagara Era Jain Inscription Discovered in Ballari Sandur

ಬಳ್ಳಾರಿ, ಜುಲೈ 18: ಜಿಲ್ಲೆಯ ಸಂಡೂರು ತಾಲ್ಲೂಕಿನ ಡಿ. ಅಂತಾಪುರ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ ಇತಿಹಾಸ ಹಾಗೂ ಜೈನ ಧರ್ಮದ ಬೆಳವಣಿಗೆಯ ಮೇಲೆ ಬೆಳಕು ಚೆಲ್ಲುವ ಅತ್ಯಂತ ಅಪರೂಪದ ಜೈನ ದಾನಶಾಸನವೊಂದು ಪತ್ತೆಯಾಗಿದೆ. ‘ವಿಜಯನಗರ ತಿರುಗಾಟ’ ಸಂಶೋಧನಾ ತಂಡವು ಈ ಮಹತ್ವದ ಐತಿಹಾಸಿಕ ಸಾಕ್ಷ್ಯವನ್ನು ಶೋಧಿಸಿದೆ.

ಪ್ರೊ. ಎಚ್. ತಿಪ್ಪೇಸ್ವಾಮಿ ನೇತೃತ್ವದ ಸಂಶೋಧನಾ ತಂಡವು ಡಿ. ಅಂತಾಪುರ ಗ್ರಾಮದ ನಿವಾಸಿ ಗ್ಯಾನಪ್ಪ ಎಂಬುವವರ ಹೊಲದಲ್ಲಿ ಈ ಗ್ರಾನೈಟ್ (ಕಣಶಿಲೆ) ಶಾಸನವನ್ನು ಪತ್ತೆಹಚ್ಚಿದೆ. ಈ ಶಾಸನವು ಕ್ರಿ.ಶ. 1395ರ ವಿಜಯನಗರದ ಪ್ರಸಿದ್ಧ ದೊರೆ ಎರಡನೇ ಹರಿಹರರಾಯರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಜೈನ ಧರ್ಮದ 17ನೇ ತೀರ್ಥಂಕರರಾದ ಕುಂಥುನಾಥರಿಗೆ ಭೂಮಿಯನ್ನು ಸಂಪೂರ್ಣ ತೆರಿಗೆ ವಿನಾಯಿತಿಯೊಂದಿಗೆ (ಸರ್ವಮಾನ್ಯವಾಗಿ) ದಾನವಾಗಿ ನೀಡಿದ ಅಮೂಲ್ಯ ವಿಚಾರವನ್ನು ಈ ಶಾಸನದಲ್ಲಿ ದಾಖಲಿಸಲಾಗಿದೆ. ವಿಶೇಷವೆಂದರೆ, ಈ ಶಿಲೆಯಲ್ಲಿ ಸೂರ್ಯ, ಚಂದ್ರ ಹಾಗೂ ಜಿನಮೂರ್ತಿಯ ಸುಂದರ ಶಿಲ್ಪಗಳನ್ನು ಕೆತ್ತಲಾಗಿದೆ.

ಇದೇ ಜಾಗದಲ್ಲಿ ಕುಂಥುನಾಥರಿಗೆ ಸಂಬಂಧಿಸಿದ ಇನ್ನೂ ಎರಡು ಶಾಸನಗಳನ್ನು ಸಂಶೋಧಕರು ಗುರುತಿಸಿದ್ದಾರೆ. ವಾತಾವರಣದ ಏರುಪೇರುಗಳಿಂದ ಹಾಳಾಗುತ್ತಿರುವ ಈ ಐತಿಹಾಸಿಕ ಸ್ಮಾರಕಗಳನ್ನು ಮುಂದಿನ ಪೀಳಿಗೆಗಾಗಿ ತಕ್ಷಣವೇ ಸಂರಕ್ಷಿಸಬೇಕು ಎಂದು ಸಂಶೋಧನಾ ತಂಡವು ಸಂಬಂಧಪಟ್ಟ ಪುರಾತತ್ವ ಇಲಾಖೆಗೆ ಮನವಿ ಮಾಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಡಿಮೆ ವೆಚ್ಚದಲ್ಲಿ ವಿಶ್ವಪ್ರಸಿದ್ಧ ಜೋಗ ಜಲಪಾತ ಕಣ್ತುಂಬಿಕೊಳ್ಳಿ: ಪ್ರವಾಸಿಗರಿಗಾಗಿ KSTDC ಬಿಡುಗಡೆ ಮಾಡಿದೆ ಅತ್ಯಾಕರ್ಷಕ ಟೂರ್ ಪ್ಯಾಕೇಜ್ – Kannada News | Karnataka KSTDC Package: Explore Jog Falls and Sigandur Temple with LTC Option

ಬೆಂಗಳೂರು, ಜು.18: ವೀಕೆಂಡ್‌ನಲ್ಲಿ ಎಲ್ಲಾದರೂ ಸುಂದರ ಪ್ರಕೃತಿಯ ಮಡಿಲಿಗೆ ಸಾಗಬೇಕು, ಜೊತೆಗೆ ದೇವರ ದರ್ಶನ ಪಡೆಯಬೇಕು ಎಂದು ಯೋಜಿಸುತ್ತಿರುವ ಪ್ರವಾಸಿಗರಿಗೆ ಸುವರ್ಣಾವಕಾಶವೊಂದು ಇಲ್ಲಿದೆ ನೋಡಿ. ಭಾರತದ ಎರಡನೇ ಅತಿ ಎತ್ತರದ ಜಲಪಾತವಾದ ವಿಶ್ವಪ್ರಸಿದ್ಧ ಜೋಗ ಜಲಪಾತ (Jog Falls) ಹಾಗೂ ಶರಾವತಿಯ ಹಿನ್ನೀರಿನ ನಡುವೆ ಕಂಗೊಳಿಸುವ ಸಿಗಂದೂರು (Siganduru) ಕ್ಷೇತ್ರಕ್ಕೆ ಅತ್ಯಾಕರ್ಷಕ ಪ್ರವಾಸ ಪ್ಯಾಕೇಜ್​​ನ್ನು kstdc ಘೋಷಣೆ ಮಾಡಿದೆ.

ಭೇಟಿ ನೀಡುವ ಪ್ರಮುಖ ಪ್ರವಾಸಿ ತಾಣಗಳು:

ಜೋಗ ಜಲಪಾತ: ಶರಾವತಿ ನದಿಯು ಬರೋಬ್ಬರಿ 830 ಅಡಿ ಎತ್ತರದಿಂದ ಧುಮುಕುವ ಮೂಲಕ ಸೃಷ್ಟಿಯಾಗಿರುವ ಜೋಗ ಜಲಪಾತವು ದೇಶದ ಪ್ರಮುಖ ಆಕರ್ಷಣೆಯಾಗಿದೆ. ಇದನ್ನು ‘ಗೇರುಸೊಪ್ಪೆ ಜಲಪಾತ’ ಹಾಗೂ ‘ಜೋಗದ ಗುಂಡಿ’ ಎಂದೂ ಕರೆಯಲಾಗುತ್ತದೆ.

ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನ, ಸಿಗಂದೂರು: ಶರಾವತಿ ನದಿಗೆ ನಿರ್ಮಿಸಲಾದ ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನೀರಿನಿಂದ ಮೂರು ಕಡೆ ಆವೃತವಾಗಿರುವ ಸಿಗಂದೂರು ಗ್ರಾಮವು ಅತ್ಯಂತ ಸುಂದರ ಪ್ರಕೃತಿಯನ್ನು ಹೊಂದಿದೆ. ಇಲ್ಲಿನ ಪ್ರಸಿದ್ಧ ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ನಿತ್ಯ ಸಹಸ್ರಾರು ಭಕ್ತರು ಆಗಮಿಸುತ್ತಾರೆ.

ಪ್ಯಾಕೇಜ್‌ನ ಪ್ರಮುಖ ಸೌಲಭ್ಯಗಳು:

ಸಾರಿಗೆ ವ್ಯವಸ್ಥೆ: ಸುಖಕರ ಪ್ರಯಾಣಕ್ಕಾಗಿ ಅತ್ಯಾಧುನಿಕ ಎಸಿ ಐಷಾರಾಮಿ ಕೋಚ್ (A/c Deluxe Coach) ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ವಸತಿ ಸೌಲಭ್ಯ: ಪ್ರವಾಸಿಗರು ಫ್ರೆಶ್ ಅಪ್ ಆಗಲು ಪ್ರಸಿದ್ಧ ‘ಜೀವನ್ ಲಾಡ್ಜ್’ ನಲ್ಲಿ ವಾಸ್ತವ್ಯದ ವ್ಯವಸ್ಥೆ ಇರಲಿದೆ.

ವೃತ್ತಿಪರ ಗೈಡ್: ಪ್ರವಾಸಿ ತಾಣಗಳ ಸಂಪೂರ್ಣ ಮಾಹಿತಿ ಹಾಗೂ ಇತಿಹಾಸವನ್ನು ತಿಳಿಸಿಕೊಡಲು ಪರಿಣಿತ ಗೈಡ್ ಸೌಲಭ್ಯ ಲಭ್ಯವಿರಲಿದೆ.

LTC ಸೌಲಭ್ಯ: ರಾಜ್ಯ, ಕೇಂದ್ರ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕ ವಲಯದ ಉದ್ಯಮಗಳ ನೌಕರರಿಗೆ ಇಲಾಖಾ ನಿಯಮಾವಳಿಗಳ ಅನ್ವಯ ಎಲ್‌ಟಿಸಿ (LTC) ಸೌಲಭ್ಯ ಒದಗಿಸಲಾಗುವುದು.

ಇದನ್ನೂ ಓದಿ: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ KSTDC 2 ದಿನಗಳ ಪ್ರೀಮಿಯಂ ಪ್ಯಾಕೇಜ್; ಕಡಿಮೆ ದರದಲ್ಲಿ ವಿಐಪಿ ದರ್ಶನ, ರೂಮ್ ಸೌಲಭ್ಯದ ಕಂಪ್ಲೀಟ್ ವಿವರ ಇಲ್ಲಿದೆ

ಪ್ರವಾಸ ಪ್ಯಾಕೇಜ್ ದರ ಪಟ್ಟಿ:

ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ರೂಮ್ ಹಂಚಿಕೆಯ ಆಧಾರದ ಮೇಲೆ ದರವನ್ನು ನಿಗದಿಪಡಿಸಲಾಗಿದೆ. ಕಡಿಮೆ ವೆಚ್ಚದಲ್ಲಿ ಜೋಗದ ಸಿರಿ ಹಾಗೂ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನ ಪಡೆಯಲು ಇಚ್ಛಿಸುವ ಸಾರ್ವಜನಿಕರು ಈ ಪ್ರವಾಸ ಪ್ಯಾಕೇಜ್‌ನ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನನ್ನ ಗಮನಕ್ಕೆ ತರದೆ ಪತಿಗೆ ಯಾವುದೇ ಇಂಜೆಕ್ಷನ್, ಔಷಧಿ ಕೊಡಬೇಡಿ: ಸೋನಮ್ ವಾಂಗ್ಚುಕ್ ಪತ್ನಿ ಎಚ್ಚರಿಕೆ – Kannada News | Sonam Wangchuk’s Wife Warns Hospital: No Meds Without Consent Amidst Ladakh Protest

ನವದೆಹಲಿ, ಜುಲೈ 18: ಕಳೆದ 20 ದಿನಗಳಿಂದ ದೆಹಲಿಯ ಜಂತರ್ ಮಂತರ್​ನಲ್ಲಿ ನಿರಂತರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ (59)(Sonam Wangchuk) ಅವರನ್ನು ದೆಹಲಿ ಪೊಲೀಸರು ಶನಿವಾರ ಬಲವಂತವಾಗಿ ಸಫ್ದರ್ಜಂಗ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ, ವಾಂಗ್‌ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಅವರು ಆಸ್ಪತ್ರೆ ಆಡಳಿತ ಮಂಡಳಿಗೆ ಸಾರ್ವಜನಿಕವಾಗಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡುವ ಮೂಲಕ ಈ ಹೋರಾಟಕ್ಕೆ ಹೊಸ ತಿರುವು ನೀಡಿದ್ದಾರೆ.

ನನ್ನ ಪತಿ ಚೆನ್ನಾಗಿದ್ದರು, ಅವರನ್ನು ಕರೆತರುವ ಅಗತ್ಯವಿರಲಿಲ್ಲ

ತಮ್ಮ ಪತಿಯ ಆರೋಗ್ಯದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿ ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಗೀತಾಂಜಲಿ, “ನಾನು ಈಗ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲೇ ಇದ್ದೇನೆ. ಕಳೆದ 20 ದಿನಗಳಿಂದ ನನ್ನ ಪತಿಯ ಆರೋಗ್ಯವನ್ನು ನೋಡಿಕೊಳ್ಳುತ್ತಿರುವ ನಮ್ಮ ವೈದ್ಯರು ಮತ್ತು ಕುಟುಂಬದ ಲಿಖಿತ ಒಪ್ಪಿಗೆಯಿಲ್ಲದೆ ಆಸ್ಪತ್ರೆಯವರು ಅವರಿಗೆ ಮಾತ್ರೆ ಅಥವಾ ಡ್ರಿಪ್ಸ್​ ಹಾಕಬಾರದು.

ನನ್ನ ಗಮನಕ್ಕೆ ತರದೆ ಯಾವುದೇ ಔಷಧಿ ಕೊಡುವಂತಿಲ್ಲ, ಸಂವಿಧಾನದ ಆರ್ಟಿಕಲ್ 32 ರ ಅಡಿಯಲ್ಲಿ ನನ್ನ ಪತಿಯ ಆರೋಗ್ಯದ ಹಕ್ಕನ್ನು ರಕ್ಷಿಸಲು ನನಗೆ ಅಧಿಕಾರವಿದೆ ಎಂದು ಬರೆದುಕೊಂಡಿದ್ದಾರೆ.

ನಿನ್ನೆ ರಾತ್ರಿಯವರೆಗೂ ನನ್ನ ಪತಿ ಆರೋಗ್ಯವಾಗಿಯೇ ಇದ್ದರು. ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಕರೆತರುವ ಯಾವುದೇ ತುರ್ತು ಅಗತ್ಯವಿರಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೇ. 20 ರಷ್ಟು ತೂಕ ಇಳಿಕೆ: ಹೋರಾಟಗಾರನ ಗಟ್ಟಿ ಮನಸ್ಸು

ಜೂನ್ 28 ರಿಂದ ಲಡಾಖ್‌ಗೆ ವಿಶೇಷ ಸಾಂವಿಧಾನಿಕ ಸ್ಥಾನಮಾನ (6ನೇ ವೇಳಾಪಟ್ಟಿ) ಕೋರಿ ಸೋನಮ್ ವಾಂಗ್‌ಚುಕ್ ಅವರು ಅನ್ನಾಹಾರ ತ್ಯಜಿಸಿ ಕಠಿಣ ಉಪವಾಸ ನಡೆಸುತ್ತಿದ್ದಾರೆ. ಆಸ್ಪತ್ರೆಗೆ ಸೇರುವ ಮುನ್ನಾ ದಿನ ಮಾತನಾಡಿದ್ದ ವಾಂಗ್ಚುಕ್, “ನಿರಂತರ ಉಪವಾಸದಿಂದಾಗಿ ನನ್ನ ದೇಹದ ತೂಕ ಶೇಕಡಾ 20 ರಷ್ಟು ಕಡಿಮೆಯಾಗಿದೆ. ನನ್ನ ದೇಹ ಕೃಶವಾಗುತ್ತಿದ್ದರೂ, ಲಡಾಖ್‌ನ ಮಣ್ಣು ಮತ್ತು ಪರಿಸರ ರಕ್ಷಣೆಗಾಗಿ ನನ್ನ ಜೀವ ಹೋದರೂ ಉಪವಾಸ ಸತ್ಯಾಗ್ರಹವನ್ನು ಕೈಬಿಡುವುದಿಲ್ಲ” ಎಂದು ದೃಢವಾಗಿ ಹೇಳಿದ್ದರು.

ಕೋರ್ಟ್ ಆದೇಶದಂತೆ ಕ್ರಮ ಎಂದ ಪೊಲೀಸರು

ಇನ್ನೊಂದೆಡೆ ಈ ಕುರಿತು ಸ್ಪಷ್ಟನೆ ನೀಡಿರುವ ದೆಹಲಿ ಪೊಲೀಸರು, “ದೆಹಲಿ ಹೈಕೋರ್ಟ್ ನೀಡಿರುವ ನಿರ್ದೇಶನಗಳು ಮತ್ತು ಹಿರಿಯ ತಜ್ಞ ವೈದ್ಯರ ತುರ್ತು ಸಲಹೆಯ ಮೇರೆಗೇ ವಾಂಗ್‌ಚುಕ್ ಅವರಿಗೆ ಅಗತ್ಯ ವೈದ್ಯಕೀಯ ಆರೈಕೆ ನೀಡಲು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪೊಲೀಸರು ಜಂತರ್ ಮಂತರ್‌ನಿಂದ ಅವರನ್ನು ಕರೆದೊಯ್ಯುವಾಗ ಪ್ರತಿಭಟನಾಕಾರರು ತಡೆಯೊಡ್ಡಿ ಗದ್ದಲ ಸೃಷ್ಟಿಸಲು ಯತ್ನಿಸಿದರು. ಆದರೆ ಪೊಲೀಸರು ಸಂಯಮದಿಂದ ಪರಿಸ್ಥಿತಿ ನಿಭಾಯಿಸಿದ್ದಾರೆ” ಎಂದು ತಿಳಿಸಿದ್ದಾರೆ.

ಸೋನಮ್ ವಾಂಗ್ಚುಕ್ ಹೋರಾಟವೇಕೆ?

ಸೋನಮ್ ವಾಂಗ್ಚುಕ್ ಅವರು ಕಳೆದ ಕೆಲವು ವರ್ಷಗಳಿಂದ ಲಡಾಖ್‌ನ ಹಿಮನದಿಗಳು ಕರಗುತ್ತಿರುವುದರ ವಿರುದ್ಧ ಜಾಗತಿಕ ಆಂದೋಲನ ನಡೆಸುತ್ತಿದ್ದಾರೆ. ಲಡಾಖ್‌ನ ಸೂಕ್ಷ್ಮ ಪರಿಸರವನ್ನು ಕಾರ್ಪೊರೇಟ್ ಕಂಪನಿಗಳ ಗಣಿಗಾರಿಕೆಯಿಂದ ಮುಕ್ತಗೊಳಿಸಲು ಮತ್ತು ಅಲ್ಲಿನ ಸ್ಥಳೀಯ ಬುಡಕಟ್ಟು ಜನರಿಗೆ ಸಂವಿಧಾನದ 6ನೇ ವೇಳಾಪಟ್ಟಿಯಡಿ ಸ್ವಾಯತ್ತತೆ ನೀಡಬೇಕೆಂದು ಆಗ್ರಹಿಸಿ ಅವರು ದೆಹಲಿಯ ಚಳಿಯಲ್ಲಿ ಸುದೀರ್ಘ ಪಾದಯಾತ್ರೆ ನಡೆಸಿ ಜಂತರ್ ಮಂತರ್ ತಲುಪಿದ್ದರು. ಸದ್ಯ ಆಸ್ಪತ್ರೆಯ ಕೋಣೆಯಲ್ಲೇ ಈ ಪರಿಸರ ಯೋಧನ ಹೋರಾಟ ಮುಂದುವರೆದಿದೆ.ನೀಟ್ ಪರೀಕ್ಷೆಯ ಅಕ್ರಮದ ವಿರುದ್ಧವೂ ಧ್ವನಿ ಎತ್ತಿದ್ದಾರೆ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕೆಂಬುದು ಕೂಡ ಅವರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ.

Published On – 10:57 am, Sat, 18 July 26

Source link

Exit mobile version