ಮಲಗಿದ್ದ ನಾಯಿ ಮೇಲೆ ದಾಳಿ ಮಾಡಿದ ಚಿರತೆ! ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ಮಲಗಿದ್ದ ನಾಯಿ ಮೇಲೆ ದಾಳಿ ಮಾಡಿದ ಚಿರತೆ! ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ಚಾಮರಾಜನಗರ, ಏಪ್ರಿಲ್ 05: ಗಡಿ ಜಿಲ್ಲೆಯಲ್ಲಿ ವನ್ಯ ಜೀವಿಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇತ್ತೀಚೆಗೆ ಜಿಲ್ಲೆಯ ಪಾಲಾರ್ ಚೆಕ್ ಪೋಸ್ಟ್ ಬಳಿ ರಾತ್ರಿ ವೇಳೆ ಕಾಡಾನೆ ಓಡಾಟ ಕಂಡುಬಂದಿತ್ತು. ಅದರ ಬೆನ್ನಲ್ಲೇ ಈಗ ಗುಂಡ್ಲುಪೇಟೆ ತಾಲೂಕಿನ ಶಿವಪುರದಲ್ಲಿ ಚಿರತೆ ಉಪಟಳ ಮುಂದುವರಿದಿದೆ. ನಾಯಿ ಮೇಲೆ ದಾಳಿ ನಡೆಸಿದ ಚಿರತೆ, ಜನರು ಬರುತ್ತಿದ್ದಂತೆ ಕಾಡಿಗೆ ಓಡಿದೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಚಿರತೆ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಸ್ಥಳೀಯರು ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

iPhone 18 Pro Max: ಡಿಎಸ್ಎಲ್ಆರ್ ತರಹದ ಕ್ಯಾಮೆರಾ: ಐಫೋನ್ 18 ಬಗ್ಗೆ ಹೊರಬಿತ್ತು ಶಾಕಿಂಗ್ ಮಾಹಿತಿ

ಬೆಂಗಳೂರು (ಏ. 05): ವಿಶ್ವಪ್ರಸಿದ್ಧ ಟೆಕ್ ದೈತ್ಯ ಆಪಲ್‌ನಿಂದ (Apple) ಮುಂಬರುವ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಮಾದರಿಗಳ ಬಗ್ಗೆ ಒಂದೊಂದೆ ಸೋರಿಕೆಗಳು ಹೊರಬರುತ್ತಿವೆ. ಈ ಬಾರಿ ಕಂಪನಿಯು ಛಾಯಾಗ್ರಹಣ ಸಾಮರ್ಥ್ಯಗಳ ಮೇಲೆ ಕೇಂದ್ರೀಕರಿಸಿದೆ ಎಂದು ವರದಿಯಾಗಿದೆ. ಹೊಸ ಕ್ಯಾಮೆರಾ ತಂತ್ರಜ್ಞಾನಗಳು ಮತ್ತು ಡಿಎಸ್‌ಎಲ್‌ಆರ್ ತರಹದ ವೈಶಿಷ್ಟ್ಯಗಳು ಬಳಕೆದಾರರಿಗೆ ನೀಡಲು ಆಪಲ್ ಮುಂದಾಗಿದೆಯಂತೆ. ವರದಿಗಳ ಪ್ರಕಾರ, ಐಫೋನ್ 18 ಪ್ರೊ ಸರಣಿಯು ಹೊಸ 48-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸಂವೇದಕವನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಸದ್ಯ ಐಫೋನ್ 18 ಪ್ರೊ ಸರಣಿಯ ಕ್ಯಾಮೆರಾ ವಿಚಾರ ಎಲ್ಲೆಡೆ ಸದ್ದು ಮಾಡುತ್ತಿದೆ. ಇಲ್ಲಿಯವರೆಗೆ ಸೋನಿ ಸಂವೇದಕಗಳನ್ನು ಬಳಸುತ್ತಿದ್ದ ಆಪಲ್, ಸ್ಯಾಮ್‌ಸಂಗ್ ಸಹಯೋಗದೊಂದಿಗೆ ಈ ಬಾರಿ ಕಸ್ಟಮ್ ಸಂವೇದಕವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಈ ಸಂವೇದಕವು ಮೂರು-ಪದರದ ಸ್ಟ್ಯಾಕ್ಡ್ ವಿನ್ಯಾಸವನ್ನು ಆಧರಿಸಿರುತ್ತದೆ. ಇದು ವಿಶೇಷವಾಗಿ ಕಡಿಮೆ-ಬೆಳಕಿನ ಛಾಯಾಗ್ರಹಣದಲ್ಲಿ ಗಮನಾರ್ಹ ಸುಧಾರಣೆಗಳನ್ನು ತರಬಹುದು.

ಈ ಸರಣಿಯು DSLR-ತರಹದ ಅನುಭವವನ್ನು ಒದಗಿಸಲು ವೇರಿಯಬಲ್ ಅಪರ್ಚರ್ ವ್ಯವಸ್ಥೆಯನ್ನು ಪರಿಚಯಿಸಬಹುದು ಎಂದು ಸೋರಿಕೆಗಳು ಸೂಚಿಸುತ್ತವೆ. ಇದು ಕ್ಯಾಮೆರಾವನ್ನು ಪ್ರವೇಶಿಸುವ ಬೆಳಕನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಫೋಟೋಗಳಲ್ಲಿನ ಡೆಪ್ತ್ ಅನ್ನು ಸುಧಾರಿಸುತ್ತದೆ. ಟೆಲಿಫೋಟೋ ಕ್ಯಾಮೆರಾವು ದೊಡ್ಡ ಅಪರ್ಚರ್ ಮತ್ತು ಉತ್ತಮ ಜೂಮ್ ಕಾರ್ಯಕ್ಷಮತೆಯಂತಹ ವೈಶಿಷ್ಟ್ಯಗಳನ್ನು ಹೊಂದಿರಬಹುದು ಎಂದು ಹೇಳಲಾಗಿದೆ.

Vivo T5 Pro: ಭಾರತಕ್ಕೆ ಬರುತ್ತಿದೆ 9020mAh ಬ್ಯಾಟರಿಯ ಹೊಸ ಸ್ಮಾರ್ಟ್​ಫೋನ್: ಫಸ್ಟ್ ಲುಕ್ ಫುಲ್ ವೈರಲ್

ಮುಂಭಾಗದ ಕ್ಯಾಮೆರಾದಲ್ಲಿಯೂ ಅಪ್‌ಗ್ರೇಡ್‌ಗಳು ನಡೆಯುವ ಸಾಧ್ಯತೆಯಿದೆ. ಹೆಚ್ಚಿನ ರೆಸಲ್ಯೂಶನ್​ನ ಸೆಲ್ಫಿ ಮತ್ತು ವಿಡಿಯೋ ಕರೆಗಳನ್ನು ನೀಡಲಿದೆ ಎಂದು ವರದಿಯಾಗಿದೆ. ಇದರ ಜೊತೆಗೆ, ಕಂಪನಿಯು ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯಗಳನ್ನು ಸುಧಾರಿಸುವ ಕೆಲಸವನ್ನೂ ಮಾಡುತ್ತಿದೆ.

ಇದರ ಜೊತೆಗೆ ಆಪಲ್ ಐಫೋನ್ 18 ಪ್ರೊ ಮತ್ತು 18 ಪ್ರೊ ಮ್ಯಾಕ್ಸ್‌ಗೆ ಹಲವಾರು ಪ್ರಮುಖ ಅಪ್‌ಗ್ರೇಡ್‌ಗಳನ್ನು ನೀಡುವ ನಿರೀಕ್ಷೆಯಿದೆ, ಇದರಲ್ಲಿ 2nm ಪ್ರಕ್ರಿಯೆಯಲ್ಲಿ ನಿರ್ಮಿಸಲಾದ ಹೊಸ ಪ್ರೊಸೆಸರ್, ಪ್ರೊ ಮ್ಯಾಕ್ಸ್ ಮಾದರಿಯಲ್ಲಿ ಇದುವರೆಗಿನ ಅತಿದೊಡ್ಡ ಬ್ಯಾಟರಿ ಸೇರಿವೆ. ಡೈನಾಮಿಕ್ ಐಲ್ಯಾಂಡ್ ಗಾತ್ರದಲ್ಲಿಯೂ ಚಿಕ್ಕದಾಗಿರುತ್ತದೆ. ಇದನ್ನು ಸರಿಹೊಂದಿಸಲು, ಕೆಲವು ಫೇಸ್‌ಐಡಿ ಘಟಕಗಳನ್ನು ಡಿಸ್​ಪ್ಲೇಯ ಕೆಳಗೆ ಸ್ಥಳಾಂತರಿಸಲಾಗುತ್ತದೆ.

ಆಪಲ್‌ನ ಸಾಮಾನ್ಯ ವೇಳಾಪಟ್ಟಿಯ ಪ್ರಕಾರ ಈ ಮಾದರಿಗಳು ಸೆಪ್ಟೆಂಬರ್ 2026 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಆದಾಗ್ಯೂ, ಇದೆಲ್ಲವೂ ಪ್ರಸ್ತುತ ಸೋರಿಕೆಯನ್ನು ಆಧರಿಸಿರುವುದರಿಂದ, ಬಳಕೆದಾರರು ಅಧಿಕೃತ ಘೋಷಣೆಗಾಗಿ ಕಾಯಬೇಕಾಗುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಪ್ರಾಪ್ತರ ಜೀವಕ್ಕೆ ಕುತ್ತು ತರುತ್ತಿರುವ ಬೈಕ್​​ ಸ್ಟಂಟ್​​: ಮೂರು ವರ್ಷಗಳಲ್ಲಿ 27 ಮಂದಿ ಸಾವು

ಬೆಂಗಳೂರು, ಏಪ್ರಿಲ್​​ 05: ಇತ್ತೀಚೆಗೆ ಯುವಕರು ಬೈಕ್​​ ಸ್ಟಂಟ್, ಅಪಾಯಕಾರಿ ರೀತಿ ವಾಹನ ಚಾಲನೆ​​ ಮಾಡುವಂತಹ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದಾಗಿ ಅದೆಷ್ಟೋ ಸಾವು-ನೋವುಗಳೂ ಸಂಭವಿಸುತ್ತಿವೆ. ಈ ನಡುವೆ ಬಹಿರಂಗಗೊಂಡಿರುವ ಅಂಕಿ-ಅಂಶಗಳು ಬೆಚ್ಚಿಬೀಳಿಸುವಂತಿದೆ. ಇಂತಹ ದುಸ್ಸಾಹಸ ಮಾಡಲು ತೆರಳಿ ಅಪ್ತಾಪ್ತರೇ ಹೆಚ್ಚಾಗಿ ಬಲಿಯಾಗುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ರಾಜ್ಯದಾದ್ಯಂತ ವಾಹನಗಳಿಂದ ಸಂಭವಿಸಿದ ಅಪಘಾತಗಳಲ್ಲಿ 27 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇಂತಹ ಘಟನೆಗಳ ಸಂಬಂಧ ಅಪ್ರಾಪ್ತರು ಹಾಗೂ ಅವರ ಪೋಷಕರ ವಿರುದ್ಧ 1,805 ಪ್ರಕರಣಗಳನ್ನು ದಾಖಲಿಸಲಾಗಿದ್ದು 1.77 ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಅಕ್ರಮ ಚಾಲನೆ ಪ್ರಕರಣಗಳಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದ್ದರೆ, ಮೈಸೂರು, ತುಮಕೂರು, ಕೊಡಗು ಸೇರಿದಂತೆ ಇತರೆ ಜಿಲ್ಲೆಗಳು ನಂತರ ಸ್ಥಾನಗಳಲ್ಲಿ ಬರಲಿವೆ.

ಇದನ್ನೂ ಓದಿ: ಬೆಂಗಳೂರಲ್ಲಿ 2BHK ಮನೆಗೆ 70 ಸಾವಿರ ರೂ. ಬಾಡಿಗೆ!, ಭಯಾನಕ ಅನುಭವ ಬಿಚ್ಚಿಟ್ಟ ವ್ಯಕ್ತಿ

ಅಂಕಿ-ಅಂಶ

ಬೆಂಗಳೂರು

  • 2023ರಲ್ಲಿ 240 ಪ್ರಕರಣಗಳು – ₹18.31 ಲಕ್ಷ ದಂಡ
  • 2024ರಲ್ಲಿ 378 ಪ್ರಕರಣಗಳು – ₹16.99 ಲಕ್ಷ ದಂಡ
  • 2025ರಲ್ಲಿ 632 ಪ್ರಕರಣಗಳು – ₹15.65 ಲಕ್ಷ ದಂಡ

ಮೈಸೂರು

  • 2023ರಲ್ಲಿ ಅಪ್ರಾಪ್ತರ ವಿರುದ್ಧ 21 ಹಾಗೂ ಪೋಷಕರ ವಿರುದ್ಧ 15 ಪ್ರಕರಣ – ₹13.55 ಲಕ್ಷ ದಂಡ
  • 2024ರಲ್ಲಿ ಅಪ್ರಾಪ್ತರ ವಿರುದ್ಧ 27 ಹಾಗೂ ಪೋಷಕರ ವಿರುದ್ಧ 33 ಪ್ರಕರಣ – ₹1.21 ಲಕ್ಷ ದಂಡ
  • 2025ರಲ್ಲಿ ಅಪ್ರಾಪ್ತರ ವಿರುದ್ಧ 19 ಹಾಗೂ ಪೋಷಕರ ವಿರುದ್ಧ 34 ಪ್ರಕರಣ – ₹1.37 ಲಕ್ಷ ದಂಡ

ತುಮಕೂರು

  • 2023ರಲ್ಲಿ 21 ಪ್ರಕರಣಗಳು (ಪೋಷಕರ ವಿರುದ್ಧ 8) – ₹78,000 ದಂಡ
  • 2024ರಲ್ಲಿ 35 ಪ್ರಕರಣಗಳು (ಪೋಷಕರ ವಿರುದ್ಧ 13) – ₹95,500 ದಂಡ
  • 2025ರಲ್ಲಿ 21 ಪ್ರಕರಣಗಳು (ಪೋಷಕರ ವಿರುದ್ಧ 6) – ₹1.50 ಲಕ್ಷ ದಂಡ

ಅಪ್ರಾಪ್ತ ಚಾಲನೆಯನ್ನು ತಡೆಯಲು ಭಾರತೀಯ ನ್ಯಾಯ ಸಂಹಿತೆ ಮತ್ತು ಮೋಟಾರ್ ವಾಹನ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ, ವಾಹನಗಳನ್ನು ಜಪ್ತಿ ಮಾಡಲಾಗುತ್ತಿದೆ. ಸಂಬಂಧಿಸಿದ ವಾಹನಗಳ ನೋಂದಣಿ ರದ್ದುಗೊಳಿಸಲು ಪ್ರಾದೇಶಿಕ ಸಾರಿಗೆ ಕಚೇರಿಗೆ ಶಿಫಾರಸುಗಳನ್ನು ಕಳುಹಿಸಲಾಗುತ್ತಿದೆ. ಪ್ರತಿವರ್ಷ ಜನವರಿಯಲ್ಲಿ ರಸ್ತೆ ಸುರಕ್ಷತಾ ತಿಂಗಳಂದು ವಿಶೇಷ ಅಭಿಯಾನಗಳು ಮತ್ತು ಜಾಗೃತಿ ಕಾರ್ಯಕ್ರಮಗಳು ನಡೆಸಲಾಗುತ್ತಿವೆ. ವೀಲೀ ಸ್ಟಂಟ್‌ಗಳನ್ನು ತಡೆಯಲು ಬೆಂಗಳೂರು ನಗರದಲ್ಲಿ 37 ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ, ಕಠಿಣ ನಿಗಾ ವಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಿಹ್ಯಾಬ್‌ನಿಂದ ತಪ್ಪಿಸಿಕೊಂಡ ಯುವಕರಿಂದ ಆಟೋ ಚಾಲಕನ ದರೋಡೆ; ಮದ್ಯ ಮತ್ತು ಸಿಗರೆಟ್​​ಗಾಗಿ ಕೃತ್ಯ!

ಬೆಂಗಳೂರು, ಏಪ್ರಿಲ್ 05: ನಗರದ ಹೊರವಲಯದಲ್ಲಿ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಿದ್ದ ಇಬ್ಬರು ಯುವಕರು ಅಪರಾಧ (Crime) ಕೃತ್ಯಕ್ಕೆ ಮುಂದಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 21 ವರ್ಷದ ಯುವಕ ಹಾಗೂ 17 ವರ್ಷದ ಅಪ್ರಾಪ್ತ ಸಹಚರನು ಸುಮಾರು ಒಂದು ತಿಂಗಳ ಹಿಂದೆ ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡು, ವ್ಯಸನದ ಬೇಸರದಿಂದ ದರೋಡೆ ಮಾಡಲು ಮುಂದಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆನ್​ಲೈನ್​ನಲ್ಲಿ ಆಟೋ ಬುಕ್ ಮಾಡಿ, ಗಂಟೆಗಳ ಕಾಲ ಅಲೆದಾಟ

ಈ ಪ್ರಕರಣವು ಮಾರ್ಚ್ 5ರಂದು ಬಾಗಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಎಲೆಕ್ಟ್ರಾನಿಕ್ಸ್ ಸಿಟಿಯ ರಾಯಸಂದ್ರ ನಿವಾಸಿಯಾದ ಆಟೋ ಚಾಲಕ ದರ್ಶನ ಸಿ.ಆರ್ ಅವರು ನೀಡಿದ ದೂರಿನ ಪ್ರಕಾರ, ಮಾರ್ಚ್ 1ರಂದು ಆರೋಪಿಗಳಿಬ್ಬರೂ ಆ್ಯಪ್​ ಮೂಲಕ ಆಟೋವನ್ನು ಬುಕ್ ಮಾಡಿದ್ದರು. ಅದನ್ನು ಸ್ವೀಕರಿಸಿದ ಚಾಲಕ ಹುಸ್ಕೂರಿನಿಂದ ಇಬ್ಬರು ಪ್ರಯಾಣಿಕರನ್ನು ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿಂಭಾಗದ ಗೇಟ್ ಕಡೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಬುದಿಗೆರೆ ಕ್ರಾಸ್ ಬಳಿ ಅವರು ಮಾರ್ಗ ಬದಲಾಯಿಸಲು ಹೇಳಿ, ಸ್ನೇಹಿತನ ಮನೆಗೆ ಹೋಗಬೇಕೆಂದು ತಿಳಿಸಿದ್ದಾರೆ. ಕೆಲವು ಗಂಟೆಗಳ ಕಾಲ ಅಲೆದಾಡಿದ ಬಳಿಕ, ಜನರ ಸಂಚಾರವಿಲ್ಲದ ಪ್ರದೇಶದಲ್ಲಿ ವಾಹನ ನಿಲ್ಲಿಸಲು ಸೂಚಿಸಿದ್ದಾರೆ.

ನಂತರ ಚಾಲಕ 1,080 ರೂ. ಪ್ರಯಾಣ ದರ ಕೇಳಿದಾಗ ಸ್ನೇಹಿತನು ಹಣ ಕೊಡುತ್ತಾನೆ ಎಂದು ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಚಾಲಕ ಹಣಕ್ಕಾಗಿ ಒತ್ತಾಯಿಸಿದರು. ಈ ವೇಳೆ ಅಪ್ರಾಪ್ತ ಬಾಲಕ ಮಾತಿಗಿಳಿದು ಗಮನ ಬೇರೆಡೆಗೆ ಸೆಳೆದಾಗ, ಕನೀಶ್ ಕಲ್ಲಿನಿಂದ ದರ್ಶನ್ ತಲೆಗೆ ಹೊಡೆದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ನಿರಂತರವಾಗಿ ಹಲ್ಲೆ ನಡೆಸಿ ಅವರ ನಾಲ್ಕು ಹಲ್ಲುಗಳನ್ನು ಮುರಿದಿದ್ದಾನೆ. ನಂತರ ಇಬ್ಬರೂ ಆಟೋದಲ್ಲಿದ್ದ 28,000 ರೂ. ನಗದು, ಎರಡು ಮೊಬೈಲ್ ಫೋನ್‌ಗಳು ಹಾಗೂ ಆಟೋವನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಆರೀಪಿಸಲಾಗಿದೆ.

ಈ ಹಿನ್ನೆಲೆ ಇನ್ಸ್‌ಪೆಕ್ಟರ್ ಅಶೋಕ್ ನೇತೃತ್ವದ ತನಿಖಾ ತಂಡ ಮಾರ್ಚ್ 25ರಂದು ಹಾರ್ಲೂರು ಸಮೀಪದ ಪುನರ್ವಸತಿ ಕೇಂದ್ರದಲ್ಲಿ ಕನೀಶ್ನನ್ನು ಬಂಧಿಸಿದೆ. ತನಿಖೆ ವೇಳೆಪುನರ್ವಸತಿ ಕೇಂದ್ರದ ಮಾಲೀಕರ ಮೊಬೈಲ್ ಕದ್ದುಕೊಂಡು ಅದರಿಂದಲೇ ಆಟೋ ಬುಕ್ ಮಾಡಿದ್ದಾಗಿ ಕನೀಶ್ ಒಪ್ಪಿಕೊಂಡಿದ್ದಾನೆ. ಹಣವಿಲ್ಲದ ಕಾರಣ ಚಾಲಕನನ್ನು ದರೋಡೆ ಮಾಡುವ ನಿರ್ಧಾರಕ್ಕೆ ಬಂದಿದ್ದಾಗಿ ಹೇಳಿದ್ದಾನೆ.

ಇದನ್ನೂ ಓದಿ ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್​​: ಪ್ರೀತಿ ಹೆಸರಲ್ಲಿ ಯುವತಿ ಮೇಲೆ ಅತ್ಯಾಚಾರ ಆರೋಪ; ದೂರು ದಾಖಲು

ಮದ್ಯ, ಸಿಗರೇಟಿಗೆ ಹಣ ವ್ಯಯ

ಕದ್ದ ಆಟೋವನ್ನು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ 5,000 ರೂ.ಗೆ ಮಾರಾಟ ಮಾಡಿದ್ದ ಆರೋಪಿ, ಅದು ತನ್ನ ತಂದೆಯದ್ದು ಎಂದು ಸುಳ್ಳು ಹೇಳಿ, ತಂದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ನಂಬಿಸಿದ್ದ. ಇಂಟರ್ನೆಟ್‌ನಿಂದ ಡೌನ್‌ಲೋಡ್ ಮಾಡಿದ ರೋಗಿಯ ಫೋಟೋವನ್ನೂ ತೋರಿಸಿ ತುರ್ತು ಪರಿಸ್ಥಿತಿ ಎಂದು ಹೇಳಿ ದಾಖಲೆಗಳನ್ನು ನಂತರ ನೀಡುವುದಾಗಿ ಭರವಸೆ ನೀಡಿದ್ದ. ನಂತರ ಕದ್ದ ಹಣ ಮತ್ತು ಆಟೋ ಮಾರಾಟದ ಹಣವನ್ನು ಆರೋಪಿಗಳಿಬ್ಬರೂ ಮದ್ಯ ಹಾಗೂ ಸಿಗರೇಟುಗಳಿಗೆ ಖರ್ಚು ಮಾಡಿದ್ದಾರೆ ಎಂದು ಹೇಳಲಾಗಿದೆ.

ಸಿಸಿಟಿವಿ ದೃಶ್ಯಗಳು ಹಾಗೂ ಡಿಜಿಟಲ್ ಟ್ರ್ಯಾಕಿಂಗ್ ಆಧಾರವಾಗಿ ತನಿಖೆ ನಡೆಸಿದ ಪೊಲೀಸರು, ಕನೀಶ್ ಪುನಃ ರಿಹ್ಯಾಬ್ ಕೇಂದ್ರಕ್ಕೆ ಮರಳಿದ್ದನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಅಪ್ರಾಪ್ತ ಸಹಚರ ಇನ್ನೂ ಪರಾರಿಯಾಗಿದ್ದಾನೆ. ವ್ಯಾಪಾರಿಯ ಮಗನಾದ ಕನೀಶ್ ವ್ಯಸನದ ಕಾರಣ ಕಾಲೇಜು ಬಿಟ್ಟಿದ್ದ. ದಿನಕ್ಕೆ ಕನಿಷ್ಠ ಒಂದು ಸಿಗರೇಟು ಬೇಕು ಎಂಬ ಬೇಡಿಕೆಯನ್ನೂ ಇಟ್ಟಿದ್ದ. ರಿಹ್ಯಾಬ್ ಕೇಂದ್ರದಲ್ಲಿ ಸಿಗರೇಟು ಸೇವನೆಗೆ ಅವಕಾಶ ನೀಡದ ಕಾರಣ, ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕದ್ದು ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪ್ರೇಮಿಯ ಕೈಯಲ್ಲಿ ಗಂಡನ ಹತ್ಯೆ ಮಾಡಿಸಿದ ಮಹಿಳೆ, ಕೈಯಲ್ಲಿದ್ದ ಹಚ್ಚೆಯಿಂದ ಪ್ರಕರಣ ಭೇದಿಸಿದ ಪೊಲೀಸರು

ಆಗ್ರಾ, ಏಪ್ರಿಲ್ 05: ಮಹಿಳೆಯೊಬ್ಬಳು ಪ್ರೇಮಿಯ ಜತೆ ಸೇರಿ ಗಂಡನನ್ನು ಹತ್ಯೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಏಪ್ರಿಲ್ 1 ರ ರಾತ್ರಿ ಆಗ್ರಾದ ಸೈಯಾನ್ ಪ್ರದೇಶದಲ್ಲಿ ಅರ್ಧ ಸುಟ್ಟ ಶವ ಪತ್ತೆಯಾಗಿತ್ತು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿತ್ತು.ಮುಖ ಗುರುತಿಸಲಾಗದಷ್ಟು ಸುಟ್ಟು ಹೋಗಿದ್ದರಿಂದ ಶವವನ್ನು ಗುರುತಿಸುವುದು ಒಂದು ಸವಾಲಾಗಿತ್ತು, ಆದರೆ ಮುಂಗೈ ಮೇಲಿನ ಹಚ್ಚೆ ಉಳಿದುಕೊಂಡಿತ್ತು ಬಳಿಕ ಆತ ಲೋಕೇಂದ್ರನ ಶವ ಎಂದು ತಿಳಿದುಬಂದಿತ್ತು.

ಲೋಕೇಂದ್ರ ಅವರ ಸಹೋದರ ಪೊಲೀಸರಿಗೆ ನಾಪತ್ತೆಯಾದವರ ದೂರು ದಾಖಲಿಸಿದ್ದರು, ಲೋಕೇಂದ್ರ ರಾತ್ರಿ ಮನೆಗೆ ಹಿಂತಿರುಗಲಿಲ್ಲ ಮತ್ತು ಕೊನೆಯ ಬಾರಿಗೆ ಮಹೇಶ್ ಪ್ರಜಾಪತಿಯೊಂದಿಗೆ ಕಾಣಿಸಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಆಘಾತಕಾರಿ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರು ಐದು ತಂಡಗಳನ್ನು ರಚಿಸಿದರು.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಯಿತು. ಅಪರಾಧದ ಸ್ಥಳದ ಬಳಿ ಪೊಲೀಸರು ಮದ್ಯದ ಬಾಟಲಿಗಳು ಮತ್ತು ಕೆಲವು ಕಾಗದದ ತುಂಡುಗಳನ್ನು ವಶಪಡಿಸಿಕೊಂಡರು.ಅದರಲ್ಲಿ  ಕೆಲವು ಪುರಾವೆಗಳು ದೊರೆತ ಬಳಿಕ ಲೋಕೇಂದ್ರನ ಪತ್ನಿ ಆಕೆಯ ಪ್ರಿಯಕರ ಮಹೇಶ್ ಪ್ರಜಾಪತಿ ಮತ್ತು ಆತನ ಸ್ನೇಹಿತ ಧರ್ಮವೀರ್ ಅವರನ್ನು ವಶಕ್ಕೆ ಪಡೆಯಲಾಗಿದೆ.

ವಿಚಾರಣೆಯಲ್ಲಿ ಲೋಕೇಂದ್ರನ ಕೊಲೆಗೆ ಕಾರಣವಾದ ಕರಾಳ ರಹಸ್ಯ ಬಯಲಾಯಿತು.ಲೋಕೇಂದ್ರನ ಪತ್ನಿಯೊಂದಿಗೆ ತಾನು ಬಹಳ ದಿನಗಳಿಂದ ಸಂಬಂಧ ಹೊಂದಿದ್ದಾಗಿ ಮಹೇಶ್ ಪೊಲೀಸರಿಗೆ ತಿಳಿಸಿದ್ದಾನೆ. ಇತ್ತೀಚೆಗೆ, ಲೋಕೇಂದ್ರನಿಗೆ ಅವರಿಬ್ಬರ ನಡುವಿನ ಸಂಬಂಧದ ಬಗ್ಗೆ ತಿಳಿದುಕೊಂಡು ತನ್ನ ಹೆಂಡತಿಯ ಗದರಿಸಿದ್ದ, ನಂತರ ಇಬ್ಬರು ಲೋಕೇಂದ್ರನ ಕೊಲೆಗೆ ಸಂಚು ರೂಪಿಸಿದ್ದರು.

ಮತ್ತಷ್ಟು ಓದಿ: ಹೋಟೆಲ್​ ಮಾಲೀಕನಿಂದಲೇ ಕಾರ್ಮಿಕನ ಹತ್ಯೆ: ಕೊಲೆ ಮಾಡುವಷ್ಟು ಆಗಿದ್ದೇನು?

ಲೋಕೇಂದ್ರ ಮನೆಯಿಂದ ಹೊರಟುಹೋದಾಗ, ಅವರ ಪತ್ನಿ ಮಹೇಶ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ದಾರಿಯಲ್ಲಿ ಮಹೇಶ್ ಲೋಕೇಂದ್ರನನ್ನು ಭೇಟಿಯಾಗಿ ಕರೆದೊಯ್ದಿದ್ದ. ಧರ್ಮವೀರ್ ಕೂಡ ಅವರೊಂದಿಗೆ ಸೇರಿಕೊಂಡಿದ್ದ. ಅವರು ಮದ್ಯ ಮತ್ತು ಊಟವನ್ನು ತೆಗೆದುಕೊಂಡು ಹೋಗಿ ಹೊಲದಲ್ಲಿ ಕುಡಿಯಲು ಪ್ರಾರಂಭಿಸಿದ್ದರು. ಮಹೇಶ್ ಮತ್ತು ಧರ್ಮವೀರ್ ಲೋಕೇಂದ್ರನನ್ನು ಉಸಿರುಗಟ್ಟಿಸಿದ್ದರು, ಕೂಡಲೇ ಲೋಕೇಂದ್ರ ಪ್ರಜ್ಞೆ ತಪ್ಪಿ ಬಿದ್ದಿದ್ದ. ನಂತರ ಅವರು ಲೋಕೇಂದ್ರಮ ದೇಹದ ಮೇಲೆ ಪೆಟ್ರೋಲ್ ಸುರಿದು, ಗೋಧಿಯ ಮೂಟೆಗಳಿಂದ ಮುಚ್ಚಿ ಬೆಂಕಿ ಹಚ್ಚಿದ್ದರು ಎಂದು ಮಹೇಶ್ ಪೊಲೀಸರಿಗೆ ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Vivo T5 Pro: ಭಾರತಕ್ಕೆ ಬರುತ್ತಿದೆ 9020mAh ಬ್ಯಾಟರಿಯ ಹೊಸ ಸ್ಮಾರ್ಟ್​ಫೋನ್: ಫಸ್ಟ್ ಲುಕ್ ಫುಲ್ ವೈರಲ್

ಬೆಂಗಳೂರು (ಏ. 05): ಇಂದು ಅಧಿಕ ಬ್ಯಾಟರಿ ಹೊಂದಿರುವ ಸ್ಮಾರ್ಟ್​ಫೋನ್​ಗಳ ಬೇಡಿಕೆ ಹೆಚ್ಚುತ್ತಿದೆ. ಇದನ್ನ ಗಮನದಲ್ಲಿಟ್ಟುಕೊಂಡು ಅನೇಕ ಮೊಬೈಲ್ ಬ್ರ್ಯಾಂಡ್ ಬಿಗ್ ಬ್ಯಾಟರಿ ಬ್ಯಾಕಪ್​ನ ಫೋನನ್ನು ಅನಾವರಣ ಮಾಡುತ್ತಿದೆ. ಈ ಸಾಲಿನಲ್ಲಿ ಪ್ರಸಿದ್ಧ ವಿವೋ (Vivo) ಕಂಪನಿ ಒಂದು ಹೆಜ್ಜೆ ಮುಂದೆ ಹೋಗಿದ್ದು, ಶೀಘ್ರದಲ್ಲೇ ಭಾರತದಲ್ಲಿ 9020mAh ಬ್ಯಾಟರಿ ಹೊಂದಿರುವ ಫೋನ್ ಅನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದೆ. ಚೀನಾದ ಬ್ರ್ಯಾಂಡ್ ಈ ಫೋನ್ ಅನ್ನು ಅಧಿಕೃತವಾಗಿ ಟೀಸರ್ ಮಾಡಿದೆ. ಫೋನ್‌ನ ಕೆಲವು ವೈಶಿಷ್ಟ್ಯಗಳು ಸಹ ಸೋರಿಕೆಯಾಗಿವೆ. ಹೆಚ್ಚುವರಿಯಾಗಿ, ಫೋನ್‌ನ ಬೆಲೆ ಆನ್‌ಲೈನ್‌ನಲ್ಲಿಯೂ ಕಾಣಿಸಿಕೊಂಡಿದೆ. ಈ ವಿವೋ ಸ್ಮಾರ್ಟ್‌ಫೋನ್ ಅನ್ನು T5 ಪ್ರೊ ಎಂದು ಕರೆಯುವ ನಿರೀಕ್ಷೆಯಿದೆ.

ಕಂಪನಿಯು ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ವಿವೋ ಟಿ5 ಪ್ರೊ ಅನ್ನು ಪಟ್ಟಿ ಮಾಡಿದೆ. ಇ-ಕಾಮರ್ಸ್ ವೆಬ್‌ಸೈಟ್ ಫೋನ್‌ಗಾಗಿ ಮೀಸಲಾದ ಮೈಕ್ರೋ-ಪುಟವನ್ನು ಸಹ ರಚಿಸಿದೆ. ವಿವೋ ಇಂಡಿಯಾ, ತನ್ನ ಎಕ್ಸ್ ಹ್ಯಾಂಡಲ್ ಮೂಲಕ, 9020mAh ಬ್ಯಾಟರಿಯನ್ನು ತೋರಿಸುವ ಪೋಸ್ಟರ್‌ನೊಂದಿಗೆ ಫೋನ್ ಅನ್ನು ಟೀಸರ್ ಮಾಡಿದೆ. ಹೆಚ್ಚುವರಿಯಾಗಿ, ಫೋನ್ ಐಫೋನ್‌ನಂತೆಯೇ ಹಿಂಭಾಗದಲ್ಲಿ ಲಂಬವಾಗಿ ಜೋಡಿಸಲಾದ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.

ಬೆಲೆ ಎಷ್ಟು?

ಈ ವಿವೋ ಫೋನ್ ಅನ್ನು ಭಾರತದಲ್ಲಿ ₹20,000 ಕ್ಕಿಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಬಹುದು. ಕಂಪನಿಯು ವಿಸ್ತರಣಾ ಕಿಟ್ ಅನ್ನು ಸಹ ನೀಡಬಹುದು, ಇದು ಬ್ಯಾಟರಿ ಅವಧಿಯನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ವಿವೋ ಟಿ5 ಪ್ರೊ ಈ ಸರಣಿಯಲ್ಲಿ ಇಷ್ಟು ದೊಡ್ಡ ಬ್ಯಾಟರಿಯನ್ನು ಹೊಂದಿರುವ ಅತ್ಯಂತ ತೆಳುವಾದ ಫೋನ್ ಆಗಿರಲಿದೆ.

ವಿವೋ ಇಂಡಿಯಾ ಮಾಡಿರುವ ಟ್ವೀಟ್:

 

ವೈಶಿಷ್ಟ್ಯಗಳು ಏನಿರುತ್ತವೆ?

ವಿವೋ ಟಿ5 ಪ್ರೊ ಸಂಭಾವ್ಯ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು 6.8-ಇಂಚಿನ AMOLED ಡಿಸ್ಪ್ಲೇಯೊಂದಿಗೆ ಬರುವ ನಿರೀಕ್ಷೆಯಿದೆ. ಫೋನ್‌ನ ಡಿಸ್ಪ್ಲೇ ರೆಸಲ್ಯೂಶನ್ 1.5K ಆಗಿರುತ್ತದೆ ಮತ್ತು ಇದು 144Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ವಿವೋದ ಈ ಬಜೆಟ್ ಫೋನ್ ಸೈಡ್-ಮೌಂಟೆಡ್ ಫಿಸಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್‌ನೊಂದಿಗೆ ಬರಬಹುದು.

Tech Utility: ಭಾರತದಲ್ಲಿ ಹೈ-ಸ್ಪೀಡ್ ಇಂಟರ್ನೆಟ್ ಹೊಂದಿರುವ ಟಾಪ್ 3 ನಗರಗಳು: ಬೆಂಗಳೂರಿಗೆ ಎಷ್ಟನೇ ಸ್ಥಾನ?

ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s Gen 4 ಚಿಪ್‌ಸೆಟ್‌ನಿಂದ ಚಾಲಿತವಾಗುವ ನಿರೀಕ್ಷೆಯಿದೆ. ಇದು 8GB ವರೆಗೆ RAM ಮತ್ತು 256GB ಸಂಗ್ರಹಣೆಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು 90W ವೈರ್ಡ್ ಫಾಸ್ಟ್ ಚಾರ್ಜಿಂಗ್‌ನೊಂದಿಗೆ 9020mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಹೆಚ್ಚುವರಿಯಾಗಿ, ಫೋನ್ ಆಂಡ್ರಾಯ್ಡ್ 16 ಆಧಾರಿತ ಒರಿಜಿನ್ ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಈ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವ ನಿರೀಕ್ಷೆಯಿದೆ. ಇದು OIS ಹೊಂದಿರುವ 50MP ಪ್ರಾಥಮಿಕ ಕ್ಯಾಮೆರಾ ಮತ್ತು 2MP ದ್ವಿತೀಯ ಕ್ಯಾಮೆರಾವನ್ನು ಒಳಗೊಂಡಿರಬಹುದು. ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ 16MP ಮುಂಭಾಗದ ಕ್ಯಾಮೆರಾವನ್ನು ನಿರೀಕ್ಷಿಸಲಾಗಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Suryakumar Yadav: ನಮ್ಮ ಸೋಲಿಗೆ ಇದುವೇ ಅಸಲಿ ಕಾರಣ..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 8ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 162 ರನ್ ಕಲೆಹಾಕಿದ್ದರು. ಈ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 18.1 ಓವರ್​ಗಳಲ್ಲಿ ಚೇಸ್ ಮಾಡಿ 6 ವಿಕೆಟ್​ಗಳ ಜಯ ಸಾಧಿಸಿದೆ.

ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್​ ತಂಡದ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್, ತಂಡದ ಬ್ಯಾಟಿಂಗ್ ವೈಫಲ್ಯ ಮತ್ತು ಎದುರಾಳಿ ತಂಡದ ಯುವ ಆಟಗಾರ ಸಮೀರ್ ರಿಝ್ವಿ ಅವರ ಸ್ಫೋಟಕ ಆಟವೇ ಸೋಲಿಗೆ ಪ್ರಮುಖ ಕಾರಣ ಎಂದು ಒಪ್ಪಿಕೊಂಡಿದ್ದಾರೆ.

ನಮ್ಮ ಬ್ಯಾಟಿಂಗ್ ದೃಷ್ಟಿಯಿಂದ ನಾವು 15-20 ರನ್ ಕಡಿಮೆ ಗಳಿಸಿದೆವು ಎಂದು ನಾನು ಭಾವಿಸುತ್ತೇನೆ. 180-185 ರನ್ ಇಲ್ಲಿ ಉತ್ತಮ ಮೊತ್ತವಾಗಿತ್ತು, ಆದರೆ ನಾವು ಈ ಸ್ಕೋರ್​ ತಲುಪಲು ವಿಫಲರಾದೆವು ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಇದಾಗ್ಯೂ ನಮ್ಮ ಬೌಲರ್​ಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದರು. ಡೆಲ್ಲಿ ತಂಡ ಕೇವಲ 7 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಬಂದ ಸಮೀರ್ ರಿಝ್ವಿ (90 ರನ್, 51 ಎಸೆತ) ಆಡಿದ ರೀತಿ ಅದ್ಭುತವಾಗಿತ್ತು. ರಿಝ್ವಿ ಪಂದ್ಯದ ಮೇಲೆ ನಮಗೆ ಹಿಡಿತ ಸಾಧಿಸಲು ಅವಕಾಶವನ್ನೇ ನೀಡಲಿಲ್ಲ.

ಒಂದು ವೇಳೆ ಸಮೀರ್ ರಿಝ್ವಿ ಅವರ ವಿಕೆಟ್ ಬೇಗನೆ ಸಿಕ್ಕಿದ್ದರೆ ನಮಗೆ ಕಂಬ್ಯಾಕ್ ಮಾಡಲು ಅವಕಾಶ ದೊರೆಯುತ್ತಿತ್ತು. ಆದರೆ ರಿಝ್ವಿ ಅವರ ಬ್ಯಾಟಿಂಗ್ ವೈಖರಿ ಮುಂದೆ ನಮ್ಮ ಬೌಲರ್​ಗಳು ಮಂಕಾದರು ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಇದನ್ನೂ ಓದಿ: ತಂದೆ-ಮಗನನ್ನು ಔಟ್ ಮಾಡಿ ವಿಶ್ವ ದಾಖಲೆ ಬರೆದ ಜೇಮ್ಸ್ ಅ್ಯಂಡರ್ಸನ್

ಈ ಸೋಲಿನ ಹೊರತಾಗಿಯೂ ಮುಂದಿನ ಪಂದ್ಯಕ್ಕೆ ಬಲವಾಗಿ ಮರಳಲು ತಂಡವು ಮತ್ತೆ ತರಬೇತಿ ಮೈದಾನಕ್ಕೆ ತೆರಳಲಿದೆ. ಈ ಮೂಲಕ ಮತ್ತೆ ಗೆಲುವಿನ ಲಯಕ್ಕೆ ಮರಳಲಿದ್ದೇವೆ ಎಂದು ಮುಂಬೈ ಇಂಡಿಯನ್ಸ್ ತಂಡದ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.

ಪಂದ್ಯದ ಸ್ಕೋರ್ ವಿವರ:

  • ಮುಂಬೈ ಇಂಡಿಯನ್ಸ್: 162/6 (20 ಓವರ್) – ಸೂರ್ಯಕುಮಾರ್ ಯಾದವ್ 51 (36).
  • ಡೆಲ್ಲಿ ಕ್ಯಾಪಿಟಲ್ಸ್: 164/4 (18.1 ಓವರ್) – ಸಮೀರ್ ರಿಝ್ವಿ 90 (51).
  • ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 6 ವಿಕೆಟ್ ಜಯ.

 

Source link

‘ಧುರಂಧರ್’, ‘ಕೇರಳ ಸ್ಟೋರಿ’ ಸುಳ್ಳು ಎಂದವರ ವಿರುದ್ಧ ನರೇಂದ್ರ ಮೋದಿ ಗರಂ

ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಮತ್ತು ‘ಧುರಂಧರ್ 2’ (Dhurandhar 2) ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿವೆ. ಈ ಸಿನಿಮಾಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಪರ-ವಿರೋಧದ ಚರ್ಚೆ ಆಗಿದೆ. ಅನೇಕರು ಈ ಸಿನಿಮಾಗಳನ್ನು ‘ಪ್ರೊಪಗಾಂಡ’ ಎಂದು ಟೀಕಿಸಿದ್ದಾರೆ. ಈ ಸಿನಿಮಾಗಳ ಬಗ್ಗೆ ಈಗ ನರೇಂದ್ರ ಮೋದಿ (Narendra Modi) ಕೂಡ ಮಾತನಾಡಿದ್ದಾರೆ. ಕೇರಳದಲ್ಲಿ ಮಾತನಾಡುವಾಗ ‘ಧುರಂಧರ್’, ‘ದಿ ಕೇರಳ ಸ್ಟೋರಿ’, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗಳನ್ನು ಅವರು ಪ್ರಸ್ತಾಪಿಸಿದ್ದಾರೆ.

‘ಕೇರಳ ಸ್ಟೋರಿ ಬಂತು. ಅದರಲ್ಲಿ ಇರುವುದು ಎಲ್ಲವೂ ಸುಳ್ಳು ಅಂತ ಕೇಳಲು ಶುರು ಮಾಡಿದರು. ಕಾಶ್ಮೀರ್ ಫೈಲ್ಸ್ ಬಂದಾಗಲೂ ಸುಳ್ಳು ಎಂದರು. ಧುರಂಧರ್ ಸಿನಿಮಾ ಬಂದಾಗಲೂ ಸುಳ್ಳು ಎಂದರು. ಎಫ್​ಸಿಆರ್​ಎ ಕಾಯ್ದೆ ಬಗ್ಗೆಯೂ ಇದೇ ರೀತಿ ಸುಳ್ಳು ಹಬ್ಬಿಸಿದರು. ಯುಸಿಸಿ ಬಗ್ಗೆ ಕೂಡ ಸುಳ್ಳು ಹಬ್ಬಿಸುತ್ತಿದ್ದಾರೆ’ ಎಂದು ನರೇಂದ್ರ ಮೋದಿ ಹೇಳಿದರು.

ನರೇಂದ್ರ ಮೋದಿ ಅವರು ಮಾತನಾಡಿರುವ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದರಿಂದಾಗಿ ‘ಧುರಂಧರ್’, ‘ದಿ ಕೇರಳ ಸ್ಟೋರಿ’, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗಳ ಬಗ್ಗೆ ಮತ್ತೆ ಚರ್ಚೆ ಜಾಸ್ತಿ ಆಗಿದೆ. ಈ ವಿಡಿಯೋಗೆ ಕಮೆಂಟ್ ಮಾಡಿದ ಅನೇಕರು ತಮ್ಮ ಅನಿಸಿಕೆಗಳನ್ನು ನೇರವಾಗಿ ಹಂಚಿಕೊಂಡಿದ್ದಾರೆ.

‘ಹಾಗಾದ್ರೆ ಪ್ರಧಾನಿಯವರು ಈ ಸಿನಿಮಾಗಳಲ್ಲಿ ಇರುವುದು ಶೇಕಡ 100ರಷ್ಟು ಸತ್ಯ ಎಂದು ನಂಬುತ್ತಾರಾ? ಈ ಸಿನಿಮಾಗಳ ಜೊತೆ ಅವರು ಗುರುತಿಸಿಕೊಳ್ಳುತ್ತಾರಾ’ ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ. ‘ಇಷ್ಟು ದಿನ ಈ ಸಿನಿಮಾಗಳನ್ನು ವಿಮರ್ಶಕರು ಪ್ರೊಪಗಾಂಡ ಅಂತ ಯಾಕೆ ಟೀಕಿಸಿದರು ಎಂಬುದು ಈಗ ಅರ್ಥ ಆಯಿತು’ ಎಂಬ ಕಮೆಂಟ್ ಕೂಡ ಬಂದಿದೆ.

ಇದನ್ನೂ ಓದಿ: ಸಾಮಾನ್ಯ ಪ್ರೇಕ್ಷಕನಂತೆ ಥಿಯೇಟರ್‌ಗೆ ಬಂದು ‘ಧುರಂಧರ್ 2’ ನೋಡಿದ ಆರ್. ಮಾಧವನ್

‘ಮೋದಿ ಅವರು ತಮ್ಮ ಭಾಷಣದಲ್ಲಿ ನಿರುದ್ಯೋಗ ಮುಂತಾದ ದೇಶದ ಸಮಸ್ಯೆಗಳ ಬಗ್ಗೆ ಮಾತನಾಡಬೇಕಿತ್ತು. ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಮತ ಕೇಳಬೇಕಿತ್ತು’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಸಿನಿಮಾದಲ್ಲಿ ತೋರಿಸಿರುವುದು ಎಷ್ಟು ನಿಜ, ಎಷ್ಟು ಕಾಲ್ಪನಿಕ ಎಂಬುದರ ಬಗ್ಗೆ ಚರ್ಚೆ ಇನ್ನಷ್ಟು ಜಾಸ್ತಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶತ್ರುಗಳ ನೆಲದಲ್ಲಿ ಬಿದ್ದಿದ್ದ ತನ್ನ ಪೈಲಟ್​ನನ್ನು ಅಮೆರಿಕ ರಕ್ಷಿಸಿಕೊಂಡಿದ್ದು ಹೇಗೆ?

ಟೆಹ್ರಾನ್, ಏಪ್ರಿಲ್ 05: ಇರಾನ್(Iran) ಸೇನೆಯು ಅಮೆರಿಕದ ಯುದ್ಧ ವಿಮಾನವನ್ನು ಹೊಡೆದುರುಳಿಸಿತ್ತು. ಈ ಘಟನೆಯಲ್ಲಿ ಮಿಲಿಟರಿ ವಿಮಾನದ ಪೈಲಟ್ ನಾಪತ್ತೆಯಾಗಿದ್ದರು. ಒಂದೆಡೆ ಅಮೆರಿಕ ಮತ್ತೊಂದೆಡೆ ಇರಾನ್ ಎರಡೂ ಕಡೆಯವರು ಪೈಲಟ್​ಗಾಗಿ ಹುಡುಕಾಡುತ್ತಿದ್ದರು. ಆದರೆ ಅಮೆರಿಕವು ತನ್ನ ಪೈಲಟ್ ಅನ್ನು ರಕ್ಷಿಸುವಲ್ಲಿ ವಿಫಲವಾಗಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿದ್ದಾರೆ.

ಹಾಗಾದರೆ ರಕ್ಷಣಾ ಕಾರ್ಯಾಚರಣೆ ಹೇಗೆ ನಡೆಯುತು ಎನ್ನುವ ಕುತೂಹಲ ಎಲ್ಲರಲ್ಲಿರಬಹುದು ಅದಕ್ಕೆ ಉತ್ತರ ಇಲ್ಲಿದೆ.ಅಮೆರಿಕ ಇರಾನ್ ಮೇಲೆ 13,000 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದೆ, ಇದರಲ್ಲಿ ವಿಮಾನ ಅಪಘಾತಕ್ಕೀಡಾಗಿದ್ದು ಇದೇ ಮೊದಲು.

ಇರಾನ್ ವಿರುದ್ಧದ ಈ ಕಾರ್ಯಾಚರಣೆಯಲ್ಲಿ, ಅಮೆರಿಕ ಆರಂಭದಲ್ಲಿ ಬಿ -2 ಮತ್ತು ಎಫ್ -35 ನಂತಹ ರಹಸ್ಯ ವಿಮಾನಗಳನ್ನು ಬಳಸಿತು. ಈ ವಿಮಾನಗಳು ರಾಡಾರ್‌ನಿಂದ ಪತ್ತೆಯಾಗುವುದಿಲ್ಲ, ಶತ್ರುಗಳಿಗೆ ಪ್ರತಿಕ್ರಿಯಿಸಲು ಸ್ವಲ್ಪ ಸಮಯ ಸಿಗುತ್ತದೆ. ಆದಾಗ್ಯೂ, ಯುದ್ಧ ಮುಂದುವರೆದಂತೆ ಮತ್ತು ಗುರಿಗಳು ಬದಲಾದಂತೆ, ಅಮೆರಿಕವು ಒಂದುF-15E ಸ್ಟ್ರೈಕ್ ಈಗಲ್ಅವರು ಮಾರಕ ವಿಮಾನಗಳನ್ನು ಬಳಸಲು ಪ್ರಾರಂಭಿಸಿದರು. ಈ ವಿಮಾನಗಳು ಅತ್ಯಂತ ಶಕ್ತಿಶಾಲಿಯಾಗಿವೆ, ಆದರೆ ಅವುಗಳಿಗೆ ರಹಸ್ಯ ತಂತ್ರಜ್ಞಾನವಿಲ್ಲ.

ಅಮೆರಿಕದ ಸೈನಿಕರು ಈಗ ಇರಾನ್ ಒಳಗೆ ಪ್ರವೇಶಿಸಿ ಪೈಲಟ್​​ನನ್ನು ವಾಪಸ್ ಕರೆತಂದಿದ್ದಾರೆ.ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಇರಾನಿನ ಪಡೆಗಳೊಂದಿಗೆ ಭಾರೀ ಗುಂಡಿನ ಚಕಮಕಿ ನಡೆದಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿರುವುದಾಗಿ ಕತಾರ್ ಮಾಧ್ಯಮ ಸಂಸ್ಥೆ ಅಲ್-ಜಜೀರಾ ವರದಿ ಮಾಡಿದೆ.

ಮತ್ತಷ್ಟು ಓದಿ: 48 ಗಂಟೆಗಳಲ್ಲಿ ಒಪ್ಪಂದವಾಗದಿದ್ದರೆ ನರಕ ನೋಡುತ್ತೀರಿ; ಇರಾನ್‌ಗೆ ಟ್ರಂಪ್ ಹೊಸ ಎಚ್ಚರಿಕೆ

ನಾವು ಅವರನ್ನು ಉಳಿಸಿದ್ದೇವೆ, ನ್ನ ಪ್ರೀತಿಯ ಅಮೆರಿಕನ್ನರೇ, ಕಳೆದ ಕೆಲವು ಗಂಟೆಗಳಲ್ಲಿ, ನಮ್ಮ ಅತ್ಯುತ್ತಮ ಸಿಬ್ಬಂದಿಗಳಲ್ಲಿ ಒಬ್ಬರಾದ, ಅತ್ಯಂತ ಗೌರವಾನ್ವಿತ ಕರ್ನಲ್‌ಗಾಗಿ ಅಮೆರಿಕದ ಮಿಲಿಟರಿ ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಧೈರ್ಯಶಾಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ. ಅವರು ಈಗ ಸಂಪೂರ್ಣವಾಗಿ ಸುರಕ್ಷಿತ ಮತ್ತು ಸದೃಢರಾಗಿದ್ದಾರೆ ಎಂದು ನಿಮಗೆ ತಿಳಿಸಲು ನನಗೆ ತುಂಬಾ ಖುಷಿಯಾಗುತ್ತಿದೆ ಎಂದು ಬರೆದಿದ್ದರು.

ಶುಕ್ರವಾರ ಮಧ್ಯ ಇರಾನ್ ಮೇಲೆ ಇರಾನಿನ ಭದ್ರತಾ ಪಡೆಗಳು ಯುಎಸ್ ಎಫ್ -15 ಇ ಸ್ಟ್ರೈಕ್ ಈಗಲ್ ವಿಮಾನವನ್ನು ಹೊಡೆದುರುಳಿಸಿದವು. ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿ ಜಿಗಿದಿದ್ದಾರೆ. ಅದೇ ದಿನ ಒಬ್ಬ ಪೈಲಟ್‌ನನ್ನು ಯುಎಸ್ ಪಡೆಗಳು ರಕ್ಷಿಸಿವೆ. ಇನ್ನೊಬ್ಬರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿತ್ತು.

ತನ್ನ ನಿರ್ದೇಶನದ ಮೇರೆಗೆ, ಯುಎಸ್ ಮಿಲಿಟರಿ ವಿಶ್ವದ ಅತ್ಯಂತ ಮಾರಕ ಆಯುಧಗಳನ್ನು ಹೊಂದಿರುವ ಡಜನ್ಗಟ್ಟಲೆ ವಿಮಾನಗಳನ್ನು ಅವರನ್ನು ಮರಳಿ ತರಲು ಕಳುಹಿಸಿತು. ಅವರಿಗೆ ಗಾಯಗಳಾಗಿದ್ದವು, ಆದರೆ ಅವರು ಸಂಪೂರ್ಣವಾಗಿ ಗುಣಮುಖರಾಗುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ.

ಈ ರಕ್ಷಣಾ ಕಾರ್ಯದಲ್ಲಿ ನೂರಾರು ವಿಶೇಷ ಕಾರ್ಯಾಚರಣೆ ಪಡೆಗಳು ಭಾಗಿಯಾಗಿದ್ದವು ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಅಲ್ ಜಜೀರಾ ವರದಿ ಮಾಡಿದೆ . ಪಡೆಗಳು ಇರಾನಿನ ಪ್ರದೇಶಕ್ಕೆ ಹೋಗಿ ಆ ವಾಯುಪಡೆಯ ಸಿಬ್ಬಂದಿಯನ್ನು ರಕ್ಷಿಸಿದವು, ಅವರನ್ನು ದೇಶದಿಂದ ಹೊರಗೆ ಕರೆದೊಯ್ಯಲಾಯಿತು ಮತ್ತು ಈಗ ಸುರಕ್ಷಿತವಾಗಿದ್ದಾರೆ. ಪೈಲಟ್ ಪರ್ವತಗಳ ಹಿಂದೆ ಅಡಗಿದ್ದರು, ಶತ್ರುಗಳು ಕೂಡ ಅವರಿಗೆ ಹತ್ತಿರವಾಗುತ್ತಿದ್ದರು, ಅವರನ್ನು ರಕ್ಷಿಸುವುದು ಕೂಡ ದೊಡ್ಡ ಸವಾಲೇ ಆಗಿತ್ತು ಎಂದಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Gold Rates: ಆಭರಣ ಚಿನ್ನದ ಬೆಲೆ 13,835 ರೂ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಏಪ್ರಿಲ್ 5: ಸಾಕಷ್ಟು ಪ್ರಕ್ಷುಬ್ಧತೆಯನ್ನು ಹೊಂದಿರುವ ಚಿನ್ನ ಮತ್ತು ಬೆಳ್ಳಿ ಬೆಲೆಗಳು ವಾರಾಂತ್ಯದಲ್ಲಿ ಶಾಂತಗೊಂಡಿವೆ. ಈ ವಾರ ಚಿನ್ನದ ಬೆಲೆಯಲ್ಲಿ (Gold Rates) ಗ್ರಾಮ್​ಗೆ 260 ರೂ ಏರಿಕೆಯಾಗಿದೆ. ವಿದೇಶಗಳಲ್ಲಿ ಕೆಲವೆಡೆ ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ ಆಗಿದೆ. ಉಳಿದಂತೆ ಯಥಾಸ್ಥಿತಿಯಲ್ಲಿವೆ. ಬೆಳ್ಳಿ ಬೆಲೆಗಳಲ್ಲೂ (Silver Rates) ಯಾವ ಬದಲಾವಣೆ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,38,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,50,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,38,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 5ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,093 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,835 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,320 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,093 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,835 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,835 ರೂ
  • ಚೆನ್ನೈ: 13,850 ರೂ
  • ಮುಂಬೈ: 13,835 ರೂ
  • ದೆಹಲಿ: 13,850 ರೂ
  • ಕೋಲ್ಕತಾ: 13,835 ರೂ
  • ಕೇರಳ: 13,835 ರೂ
  • ಅಹ್ಮದಾಬಾದ್: 13,840 ರೂ
  • ಜೈಪುರ್: 13,850 ರೂ
  • ಲಕ್ನೋ: 13,850 ರೂ
  • ಭುವನೇಶ್ವರ್: 13,835 ರೂ

ಇದನ್ನೂ ಓದಿ: ಏಪ್ರಿಲ್​ನಲ್ಲಿ ಚಿನ್ನ ಸಖತ್ ದುಬಾರಿ? ಕಳೆದ 45 ವರ್ಷದಲ್ಲೆ ಬಂಗಾರಕ್ಕೆ ಗರಿಷ್ಠ ಡಿಮ್ಯಾಂಡ್; 20,000 ರೂಗೆ ಏರುತ್ತಾ ಬೆಲೆ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 586 ರಿಂಗಿಟ್ (13,473 ರುಪಾಯಿ)
  • ದುಬೈ: 521.75 ಡಿರಾಮ್ (13,169 ರುಪಾಯಿ)
  • ಅಮೆರಿಕ: 146 ಡಾಲರ್ (13,536 ರುಪಾಯಿ)
  • ಸಿಂಗಾಪುರ: 187.60 ಸಿಂಗಾಪುರ್ ಡಾಲರ್ (13,514 ರುಪಾಯಿ)
  • ಕತಾರ್: 518.50 ಕತಾರಿ ರಿಯಾಲ್ (13,184 ರೂ)
  • ಸೌದಿ ಅರೇಬಿಯಾ: 531 ಸೌದಿ ರಿಯಾಲ್ (13,111 ರುಪಾಯಿ)
  • ಓಮನ್: 55.35 ಒಮಾನಿ ರಿಯಾಲ್ (13,329 ರುಪಾಯಿ)
  • ಕುವೇತ್: 42.91 ಕುವೇತಿ ದಿನಾರ್ (12,965 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 250 ರೂ
  • ಚೆನ್ನೈ: 255 ರೂ
  • ಮುಂಬೈ: 250 ರೂ
  • ದೆಹಲಿ: 250 ರೂ
  • ಕೋಲ್ಕತಾ: 250 ರೂ
  • ಕೇರಳ: 255 ರೂ
  • ಅಹ್ಮದಾಬಾದ್: 250 ರೂ
  • ಜೈಪುರ್: 250 ರೂ
  • ಲಕ್ನೋ: 250 ರೂ
  • ಭುವನೇಶ್ವರ್: 255 ರೂ
  • ಪುಣೆ: 250

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version