ಭಾರತದಲ್ಲಿ ಫಲವತ್ತತೆ ದರ ಕುಸಿತ; ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲೇನಿದೆ? – Kannada News

ನವದೆಹಲಿ, ಜೂನ್ 2: ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬಿಡುಗಡೆಯಾಗಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಮತ್ತು ಮಾದರಿ ನೋಂದಣಿ ವ್ಯವಸ್ಥೆಯ (SRS) ಇತ್ತೀಚಿನ ವರದಿಗಳ ಪ್ರಕಾರ, ಭಾರತದಲ್ಲಿ ಮಹಿಳೆಯರ ಒಟ್ಟು ಫಲವತ್ತತೆ ದರವು (TFR) ನಿರಂತರವಾಗಿ ಕುಸಿಯುತ್ತಿದೆ. ಮಹಿಳೆ ತನ್ನ ಒಟ್ಟು ಫಲವತ್ತಾದ ಅವಧಿಯಲ್ಲಿ (ಅಂದರೆ 15ರಿಂದ 49 ವರ್ಷದವರೆಗೆ) ಜನ್ಮ ನೀಡುವ ಸರಾಸರಿ ಮಕ್ಕಳ ಸಂಖ್ಯೆಯನ್ನು ‘ಒಟ್ಟು ಫಲವತ್ತತೆ ದರ’ ಅಥವಾ TFR ಎನ್ನಲಾಗುತ್ತದೆ. ಜನಸಂಖ್ಯೆಯು ಹೆಚ್ಚಾಗದೆ ಅಥವಾ ಕಡಿಮೆಯಾಗದೆ ಸ್ಥಿರವಾಗಿರಲು ಈ ದರವು ಕನಿಷ್ಠ 2.1 ಇರಬೇಕು. ಆದರೆ, ಭಾರತದಲ್ಲಿ ಇದು ಈಗ 2.1ಕ್ಕಿಂತ ಕಡಿಮೆಯಾಗಿದೆ. ಇದು ದೇಶದ ಜನಸಂಖ್ಯಾ ಬೆಳವಣಿಗೆಯ ವೇಗ ತಗ್ಗುತ್ತಿರುವುದನ್ನು ಸೂಚಿಸುತ್ತದೆ.

ಮಾದರಿ ನೋಂದಣಿ ವ್ಯವಸ್ಥೆಯ (SRS) ವರದಿಯ ಪ್ರಕಾರ, ಭಾರತೀಯ ಮಹಿಳೆಯರಲ್ಲಿ ಫಲವತ್ತತೆ ದರವು ವರ್ಷದಿಂದ ವರ್ಷಕ್ಕೆ ಸತತವಾಗಿ ಕಡಿಮೆಯಾಗುತ್ತಾ ಸಾಗುತ್ತಿದೆ. ದೇಶದ ಒಟ್ಟಾರೆ ದರ ಕುಸಿದಿದ್ದರೂ, ಕೆಲವು ರಾಜ್ಯಗಳಲ್ಲಿ ಇಂದಿಗೂ ಹೆಚ್ಚಿನ ಫಲವತ್ತತೆ ದರ ಕಂಡುಬಂದಿದೆ. ಈ ಪೈಕಿ ಬಿಹಾರ ರಾಜ್ಯವು ಮುಂಚೂಣಿಯಲ್ಲಿದ್ದು, ಅಲ್ಲಿ ಪ್ರತಿ ಮಹಿಳೆಗೆ ಸರಾಸರಿ ಮಕ್ಕಳ ಸಂಖ್ಯೆ ಸುಮಾರು 3 ಎಂದು ಅಂದಾಜಿಸಲಾಗಿದೆ. ಬಿಹಾರದ ಜೊತೆಗೆ ಉತ್ತರ ಪ್ರದೇಶ ರಾಜ್ಯವು ಕೂಡ ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಉತ್ತಮ ಮತ್ತು ಹೆಚ್ಚಿನ ಫಲವತ್ತತೆ ದರವನ್ನು ಕಾಯ್ದುಕೊಂಡಿದೆ.

ಇದನ್ನೂ ಓದಿ: ನಿದ್ರೆಯ ಕೊರತೆಯು ಫಲವತ್ತತೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ?

ಆದರೆ, ದಕ್ಷಿಣ ಭಾರತದ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಈ ಅಂಕಿ ಅಂಶ ಗಮನಾರ್ಹವಾಗಿ ಕುಸಿದಿದೆ. ವರದಿಯ ಪ್ರಕಾರ, ತಮಿಳುನಾಡಿನಲ್ಲಿ ಫಲವತ್ತತೆ ದರ 1.6 ಆಗಿದೆ. ಭಾರತದ ಒಟ್ಟು ಫಲವತ್ತತೆ ದರ (TFR) 2024ರಲ್ಲಿ 1.9 ಆಗಿತ್ತು. ಇದು 2.1ರ ಬದಲಿ ಮಟ್ಟಕ್ಕಿಂತ ಕಡಿಮೆಯಾಗಿದೆ ಎಂಬುದನ್ನು ಗಮನಿಸಬೇಕು. 1971 ಮತ್ತು 1981ರ ನಡುವೆ, TFR 5.2 ರಿಂದ 4.5ರವರೆಗೆ ಇತ್ತು. 1991 ಮತ್ತು 2024ರ ನಡುವೆ ಇದು 3.6ರಿಂದ 1.9ಕ್ಕೆ ಇಳಿದಿದೆ. 1971ರಿಂದ 2024ರವರೆಗಿನ ದತ್ತಾಂಶದ ಪ್ರಕಾರ, ಇದು 5.4ರಿಂದ 2.1ಕ್ಕೆ ಇಳಿದಿದೆ.

ಭಾರತದಲ್ಲಿ ಒಬ್ಬ ಮಹಿಳೆ ಈಗ ತನ್ನ ಫಲವತ್ತಾದ ಅವಧಿಯಲ್ಲಿ ಕೇವಲ ಎರಡು ಮಕ್ಕಳಿಗೆ ಮಾತ್ರ ಜನ್ಮ ನೀಡುತ್ತಿದ್ದಾಳೆ. ಯಾವುದೇ ದೇಶ, ರಾಜ್ಯ ಅಥವಾ ಸಮಾಜವು ತನ್ನ ಜನಸಂಖ್ಯೆಯನ್ನು ಕಾಪಾಡಿಕೊಳ್ಳಲು ಕನಿಷ್ಠ 2.1ರ ಫಲವತ್ತತೆ ದರದ ಅಗತ್ಯವಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ, ಇಡೀ ದೇಶಕ್ಕೆ ಈ ಅಂಕಿ ಅಂಶವು 1.9 ತಲುಪಿದೆ.

ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ ವೃದ್ಧರ ಸಂಖ್ಯೆ ಹೆಚ್ಚಳ, ಕುಗ್ಗಿದ ಫಲವತ್ತತೆ ದರ, ಹೆಚ್ಚು ಮಕ್ಕಳನ್ನು ಹೊಂದುವಂತೆ ಸಲಹೆ

ದಕ್ಷಿಣ ಭಾರತದ 5 ರಾಜ್ಯಗಳ ಫಲವತ್ತತೆ ದರವನ್ನು ನೋಡಿದರೆ, ತಮಿಳುನಾಡು ಮತ್ತು ಆಂಧ್ರಪ್ರದೇಶದ ನಗರ ಪ್ರದೇಶಗಳಲ್ಲಿ ಒಬ್ಬ ಮಹಿಳೆ ಸರಾಸರಿ 1.6 ಮಕ್ಕಳಿಗೆ ಜನ್ಮ ನೀಡುತ್ತಾರೆ. ಆದರೆ ಆಂಧ್ರ (2.0) ಮತ್ತು ತಮಿಳುನಾಡಿನ (1.8) ಗ್ರಾಮೀಣ ಪ್ರದೇಶಗಳಲ್ಲಿ ಅಂಕಿಅಂಶಗಳು ಹೊರಬಂದಿವೆ. ಆಂಧ್ರಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಫಲವತ್ತತೆ ದರವು ಉತ್ತಮವಾಗಿದೆ ಎಂದು ಅಂದಾಜಿಸಲಾಗಿದೆ. ತೆಲಂಗಾಣದ ನಗರ ಪ್ರದೇಶಗಳಲ್ಲಿ ಈ ದರವು ಕೇವಲ 1.7 ರಷ್ಟಿದೆ. ಕರ್ನಾಟಕ ಮತ್ತು ತೆಲಂಗಾಣದ ನಗರ ಪ್ರದೇಶಗಳಲ್ಲಿ ಫಲವತ್ತತೆ ದರವು 1.7ರಷ್ಟಿದೆ. ಕೇರಳದಲ್ಲಿ, ನಗರ ದರವು 1.8 ಮತ್ತು ಗ್ರಾಮೀಣ ದರವು 1.9 ರಷ್ಟಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ವಿಜಯ್ ಭೇಟಿ ಮಾಡಿದ ‘ಕರುಪ್ಪು’ ಸಿನಿಮಾದ ನಿರ್ದೇಶಕ ಆರ್.ಜೆ. ಬಾಲಾಜಿ – Kannada News

ಆರ್.ಜೆ. ಬಾಲಾಜಿ (RJ Balaji) ನಿರ್ದೇಶನದ, ಸೂರ್ಯ ಮತ್ತು ತ್ರಿಶಾ ಕೃಷ್ಣನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಕರುಪ್ಪು’ (Karuppu) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ಮೇ 15ರಂದು ಬಿಡುಗಡೆಯಾಗಿದ್ದ ಈ ಚಿತ್ರವು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ, ವಿಶ್ವಾದ್ಯಂತ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ. ಈ ದೊಡ್ಡ ಯಶಸ್ಸಿನ ನಡುವೆ, ನಿರ್ದೇಶಕ ಆರ್.ಜೆ. ಬಾಲಾಜಿ ಅವರು ಮಂಗಳವಾರ (ಜೂನ್ 2) ತಮಿಳುನಾಡಿನ ನೂತನ ಮುಖ್ಯಮಂತ್ರಿ ಮತ್ತು ಸ್ಟಾರ್ ನಟ ಸಿ. ಜೋಸೆಫ್ ವಿಜಯ್ (CM Vijay) ಅವರನ್ನು ಭೇಟಿ ಮಾಡಿದ್ದಾರೆ.

ವಿಜಯ್ ಅವರನ್ನು ಸಿಎಂ ಸ್ಥಾನದಲ್ಲಿ ನೋಡಿ ಖುಷಿಪಟ್ಟ ಬಾಲಾಜಿ, ಆ ಕ್ಷಣವನ್ನು ‘ಅದ್ಭುತ ’ ಎಂದು ಬಣ್ಣಿಸಿದ್ದಾರೆ. ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ವಿಜಯ್ ಜೊತೆಗಿನ ಎರಡು ಸುಂದರ ಫೋಟೋಗಳನ್ನು ಹಂಚಿಕೊಂಡಿರುವ ಅವರು, ಭೇಟಿಯ ಸಂತಸವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ‘ಕರುಪ್ಪು ಚಿತ್ರಕ್ಕೆ ಎಲ್ಲವನ್ನೂ ಮೊದಲಿಗೆ ಆರಂಭಿಸಿಕೊಟ್ಟ ವ್ಯಕ್ತಿಯ ಜೊತೆ! ವಾವ್… ಅವರನ್ನು ಈಗ ತಮಿಳುನಾಡಿನ ಗೌರವಾನ್ವಿತ ಮುಖ್ಯಮಂತ್ರಿಯಾಗಿ ಭೇಟಿ ಮಾಡುತ್ತಿರುವುದು ನಂಬಲು ಸಾಧ್ಯವಾಗುತ್ತಿಲ್ಲ. ಅದೇ ಪ್ರೀತಿ, ಆತ್ಮೀಯತೆ, ದಯೆ ಮತ್ತು ಶಾಂತತೆ. ಎಲ್ಲದಕ್ಕೂ ಧನ್ಯವಾದಗಳು ಪ್ರೀತಿಯ ವಿಜಯ್ ಸರ್’ ಎಂದು ಬಾಲಾಜಿ ಪೋಸ್ಟ್ ಮಾಡಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರ್.ಜೆ. ಬಾಲಾಜಿ ಅವರು ಒಂದು ಆಸಕ್ತಿದಾಯಕ ವಿಷಯವನ್ನು ಬಹಿರಂಗಪಡಿಸಿದ್ದರು. ‘ಕರುಪ್ಪು’ ಚಿತ್ರದ ಕಥೆಯನ್ನು ಅವರು ಮೊದಲು ಸಿದ್ಧಪಡಿಸಿದ್ದು ನಟ ವಿಜಯ್ ಅವರಿಗಾಗಿ! ವಿಜಯ್ ಅವರು ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ನಟಿಸಬೇಕಿದ್ದ ಕೊನೆಯ ಸಿನಿಮಾ ಇದಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ.

ಆರ್.ಜೆ. ಬಾಲಾಜಿ ಪೋಸ್ಟ್:

‘ಇದು ಅವರ ಕೊನೆಯ ಚಿತ್ರವಾಗಬೇಕಿದ್ದರಿಂದ, ಅವರ ರಾಜಕೀಯ ಪ್ರವೇಶ ಮತ್ತು ಕೊನೆಯ ಪ್ರಾಜೆಕ್ಟ್ ಯಾವ ರೀತಿಯಲ್ಲಿ ಇರಬೇಕು ಎಂಬುದರ ಕುರಿತು ನಾವು ಎರಡು-ಮೂರು ಬಾರಿ ಸುದೀರ್ಘ ಸಭೆ ನಡೆಸಿ ಚರ್ಚಿಸಿದ್ದೆವು’ ಎಂದು ಬಾಲಾಜಿ ತಿಳಿಸಿದ್ದಾರೆ. ಆದರೆ, ಕೆಲವು ರಾಜಕೀಯ ನಿರ್ಧಾರಗಳಿಂದಾಗಿ ವಿಜಯ್ ಈ ಪ್ರಾಜೆಕ್ಟ್‌ನಿಂದ ಹೊರಗುಳಿಯಬೇಕಾಯಿತು.

ಇದನ್ನೂ ಓದಿ: ಸಿಎಂ ದಳಪತಿ ವಿಜಯ್ ಭೇಟಿಯಾದ ಲೋಕೇಶ್ ಕನಗರಾಜ್: ‘ಲಿಯೋ 2’ ನಿರೀಕ್ಷೆಯಲ್ಲಿ ಅಭಿಮಾನಿಗಳು

‘ಅವರು ಚಿತ್ರದಿಂದ ಹಿಂದೆ ಸರಿಯಲು ನೀಡಿದ ಕಾರಣಗಳು ಸಂಪೂರ್ಣವಾಗಿ ನ್ಯಾಯಸಮ್ಮತವಾಗಿದ್ದವು. ನಾನು ಅವರ ನಿರ್ಧಾರವನ್ನು ಗೌರವಿಸಿದೆ. ಅವರು ಸ್ವತಃ ನನ್ನ ಬಳಿ ಕಥೆ ಕೇಳಿ, ನನ್ನ ಕ್ರಿಯೇಟಿವಿಟಿಗೆ ಅಷ್ಟೊಂದು ಗೌರವ ನೀಡಿದ್ದೇ ನನಗೆ ದೊಡ್ಡ ವಿಷಯವಾಗಿತ್ತು’ ಎಂದು ಬಾಲಾಜಿ ಹೇಳಿದ್ದಾರೆ. ಮತ್ತೆ ವಿಜಯ್ ಅವರು ಸಿನಿಮಾ ಮಾಡುವುದಿಲ್ಲ. ಈಗ ಅವರು ಫುಲ್ ಟೈಮ್ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

“ಕೈ-ಕಾಲು ಕತ್ತರಿಸಿದಾಗಷ್ಟೇ ಜನಕ್ಕೆ ಕಾನೂನಿನ ಭಯ ಬರತ್ತೆ”: ಲೈಂಗಿಕ ದೌರ್ಜನ್ಯ ಆರೋಪಿ ಜಾಮೀನು ಅರ್ಜಿ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಆಕ್ರೋಶ! – Kannada News

ಬೆಂಗಳೂರು, ಜೂ.2: ಜನರು ಅತ್ಯಂತ ಸುಲಭವಾಗಿ ಅಪರಾಧಗಳನ್ನು ಎಸಗುತ್ತಿದ್ದಾರೆ. ಬಹುಶಃ ನೀವು ಯಾರಾದರೂ ತಪ್ಪು ಮಾಡಿದಾಗ ಕೈ ಅಥವಾ ಕಾಲು ಕತ್ತರಿಸಿದಾಗ ಮಾತ್ರ ಜನರಿಗೆ ಕಾನೂನನ್ನು ಹೇಗೆ ಪಾಲಿಸಬೇಕು ಎಂಬುದು ಅರಿವಾಗಬಹುದು” ಎಂದು ಕರ್ನಾಟಕ ಹೈಕೋರ್ಟ್ ಅತ್ಯಂತ ಗಂಭೀರ ಹಾಗೂ ಆಕ್ರೋಶದ ಹೇಳಿಕೆಯನ್ನು ನೀಡಿದೆ. ಇದೀಗ ಈ ಬಗ್ಗೆ ಭಾರೀ ಚರ್ಚೆಗೂ ಕಾರಣವಾಗಿದೆ. ಅತ್ಯಾಚಾರ, ಕೊಲೆ, ಇನ್ನೂ ಇಂತಹ ಅನೇಕ ಅಪರಾಧಗಳು ನಮಲ್ಲಿ ನಡೆಯುತ್ತಿರುವುದಕ್ಕೆ ಕಾರಣ, ಜನರಿಗೆ ಕಾನೂನಿನ ಭಯ ಇಲ್ಲದಿರುವುದು ಎಂದು ಹೇಳಿದೆ.

ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನ ಮೇಲಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ಜಾಮೀನು ಅರ್ಜಿಯ ವಿಚಾರಣೆಯನ್ನು ಮೇ 29 ರಂದು ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕಸದಸ್ಯ ಪೀಠವು ಈ ಹೇಳಿಕೆಯನ್ನು ನೀಡಿದೆ. “ನಮ್ಮಲ್ಲಿ ಪ್ರಜಾಪ್ರಭುತ್ವ ಇರುವುದರಿಂದ ಪ್ರತಿಯೊಬ್ಬರೂ ಕಾನೂನನ್ನು ತೀರಾ ಲಘುವಾಗಿ ತೆಗೆದುಕೊಳ್ಳುತ್ತಿದ್ದಾರೆ” ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.

ವಿಚಾರಣೆ ವೇಳೆ ಕಾನೂನು ವ್ಯವಸ್ಥೆಯ ಸಡಿಲತೆಯ ಬಗ್ಗೆ ಅಸಮಾಧಾನ ಹೊರಹಾಕಿದ ನ್ಯಾಯಮೂರ್ತಿಗಳು, “ನಾವು ಅಪರಾಧಿಗಳನ್ನು ಕಠಿಣವಾಗಿ ನಡೆಸಿಕೊಳ್ಳದ ಕಾರಣ ಕಾನೂನು ತನ್ನ ಪ್ರಭಾವವನ್ನು ಕಳೆದುಕೊಂಡಿದೆ. ಅದಕ್ಕಾಗಿಯೇ ಇಲ್ಲಿ ಅಪರಾಧ ಮಾಡುವುದು ತುಂಬಾ ಸುಲಭವಾಗಿದೆ. ಆದರೆ ಮಧ್ಯಪ್ರಾಚ್ಯ ದೇಶಗಳಲ್ಲಿ ಈ ಪರಿಸ್ಥಿತಿ ಇಲ್ಲ” ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ, ಆರೋಪಿ ಪರ ವಕೀಲರು ವಾದ ಮಂಡಿಸಿ, “ನನ್ನ ಕಕ್ಷಿದಾರ ಯಾವುದೇ ತಪ್ಪು ಮಾಡಿಲ್ಲ. ಈಗಾಗಲೇ ಎರಡು ತಿಂಗಳಿನಿಂದ ಜೈಲಿನಲ್ಲಿದ್ದು, ಇದು ಆತನ ವೃತ್ತಿಪರ ಜೀವನಕ್ಕೆ ಧಕ್ಕೆ ತರುತ್ತದೆ” ಎಂದು ಜಾಮೀನಿಗೆ ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, “ಆತ ಇನ್ನು ಕೆಲವು ದಿನಗಳ ಕಾಲ ಜೈಲಿನಲ್ಲೇ ಇರಲಿ… ಒಂದು ವೇಳೆ ವಿಚಾರಣಾ ನ್ಯಾಯಾಲಯವು ಆತನನ್ನು ಅಪರಾಧಿ ಎಂದು ಘೋಷಿಸಿದರೆ, ಆತ ಮತ್ತೆ ಜೈಲಿಗೇ ಹೋಗಬೇಕಾಗುತ್ತದೆ” ಎಂದು ಮೌಖಿಕವಾಗಿ ಹೇಳಿ, ಅರ್ಜಿಯ ಮುಂದಿನ ವಿಚಾರಣೆಯನ್ನು ಜೂನ್ 8 ಕ್ಕೆ ಮುಂದೂಡಿದೆ.

ಇದನ್ನೂ ಓದಿ: ಗಂಡನ ಮನೆಗೆ ಹೋದ ತಕ್ಷಣ ಹೆತ್ತವರ ಬಾಂಧವ್ಯ ಮುಗಿಯಲ್ಲ!: ಸರ್ಕಾರದ ನಿಯಮ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಪ್ರಕರಣದ ಹಿನ್ನೆಲೆ ಏನು?:

ಸಹಪಾಠಿಯಾಗಿದ್ದ ಸಂತ್ರಸ್ತೆ ನೀಡಿರುವ ದೂರಿನ ಪ್ರಕಾರ, ಆರೋಪಿಯು ಜುಲೈ 2023 ರಲ್ಲಿ ತನ್ನ ಪ್ರೀತಿಯನ್ನು ನಿವೇದಿಸಿಕೊಂಡಿದ್ದನು. ನಂತರ ಸೆಪ್ಟೆಂಬರ್ 12, 2023 ರಂದು ಮನವೊಲಿಸುವ ನೆಪದಲ್ಲಿ ಆಕೆಯನ್ನು ತನ್ನ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಇದರಿಂದ ತೀವ್ರ ಆಘಾತಕ್ಕೊಳಗಾದ ಸಂತ್ರಸ್ತೆ ಖಿನ್ನತೆಗೆ ಒಳಗಾಗಿ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಬೆಂಗಳೂರಿಗೆ ಸ್ಥಳಾಂತರಗೊಂಡು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.

ಪ್ರಕರಣವು ಪೋಲಿಸ್ ಮೆಟ್ಟಿಲೇರಿದ ನಂತರ, ಆರೋಪಿಯು ಮಾರ್ಚ್ 20, 2026 ರಂದು ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಿ ಮನೆಗೆ ಮರಳಿದ್ದನು. ಆದರೆ, ಏಪ್ರಿಲ್ 4 ರಂದು ಮಹಿಳೆ ಮತ್ತೆ ಅತ್ಯಾಚಾರದ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿತ್ತು. ಮೇ 14 ರಂದು ವಿಚಾರಣಾ ನ್ಯಾಯಾಲಯವು ಆತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಕಾರಣ, ಆತ ಹೈಕೋರ್ಟ್ ಮೆಟ್ಟಿಲೇರಿದ್ದನು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:53 pm, Tue, 2 June 26

Source link

ಪದತ್ಯಾಗಕ್ಕೆ ಬಂಪರ್ ಗಿಫ್ಟ್​​: ಸಿದ್ದರಾಮಯ್ಯಗೆ ಮಹತ್ವದ ಸ್ಥಾನಮಾನ ನೀಡಿದ ಹೈಕಮಾಂಡ್ – Kannada News

ನವದೆಹಲಿ, (ಜೂನ್ 02): ರಾಹುಲ್ ಗಾಂಧಿ ನೀಡಿದ್ದ ರಾಜ್ಯಸಭೆ ಆಫರ್ ತಿರಸ್ಕರಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿದ್ದರಾಮಯ್ಯಗೆ (Siddaramaiah) ಹೈಕಮಾಂಡ್ ಮಹತ್ವದ ಹುದ್ದೆಯನ್ನು ನೀಡಿದೆ. ಉದಾರ ಅಂತಕರಣದಿಂದ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಮೂಲಕ ಮುತ್ಸದ್ದಿತನ ತೋರಿದ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (congress working committee )ಸದಸ್ಯ ಸ್ಥಾನ ನೀಡಲಾಗಿದೆ. ಹೌದು… ಸಿದ್ದರಾಮಯ್ಯನವರನ್ನು CWC ಸದಸ್ಯರಾಗಿ ನೇಮಕ ಮಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆದೇಶ ಹೊರಡಿಸಿದ್ದಾರೆ. ಈ ಕಾರ್ಯಕಾರಿ ಸಮಿತಿ ಪಕ್ಷದ ಪರಮೋಚ್ಚ ನೀತಿ ನಿರೂಪಣಾ ಮಂಡಳಿಯಾಗಿದ್ದು, ಪಕ್ಷದ ಪ್ರಮುಖ ರಾಜಕೀಯ ಕಾರ್ಯತಂತ್ರಗಳ ಅಂತಿಮ ನಿರ್ಧಾರ ಈ ಸಮಿತಿ ಸಭೆಯಲ್ಲಿ ಆಗಲಿದೆ. ಹೀಗಾಗಿ ಸಿದ್ದರಾಮಯ್ಯನವರಿಗೆ ಮಹತ್ವದ ಸ್ಥಾನಮಾನ ಸಿಕ್ಕಂತಾಗಿದೆ.

ಮುಖ್ಯಾಂಶಗಳು

  • ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯರಾಗಿ ಸಿದ್ದರಾಮಯ್ಯ ನೇಮಕ
  • CWC ಸದಸ್ಯರಾಗಿ ಸಿದ್ದರಾಮಯ್ಯರನ್ನು ನೇಮಕ ಮಾಡಿದ ಎಐಸಿಸಿ
  • ಕಾಂಗ್ರೆಸ್​ ವರ್ಕಿಂಗ್ ಕಮಿಟಿ ಸದಸ್ಯರಾಗಿ ಸಿದ್ದರಾಮಯ್ಯ ನೇಮಕ ಮಾಡಿ ಎಐಸಿಸಿ ಅಧ್ಯಕ್ಷ ಖರ್ಗೆ ಆದೇಶ

ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಿದ್ದರಾಮಯ್ಯ ಅವರನ್ನು ನೇಮಿಸಲಾಗಿದ್ದು, ಕಾಂಗ್ರೆಸ್‌ನ ಅತ್ಯುನ್ನತ ಕಾರ್ಯಕಾರಿ ಸಮಿತಿ ಇದಾಗಿದ್ದು, ರಾಷ್ಟ್ರಮಟ್ಟದಲ್ಲಿ ಪಕ್ಷದ ನೀತಿ, ಸಂಘಟನೆ, ಪ್ರಚಾರದ ಕುರಿತು ಕೆಲಸ ಮಾಡಲಿದೆ.

Source link

ಆರೋಗ್ಯ ಕಾಪಾಡಿಕೊಳ್ಳಲು ಎಸಿ ಟೆಂಪರೇಚರ್ ಎಷ್ಟಿರಬೇಕು ಗೊತ್ತಾ? – Kannada News

ಬಿಸಿಲಿರಲಿ, ಮಳೆಯಿರಲಿ ಅಥವಾ ಚಳಿ ಇರಲಿ ಹೆಚ್ಚಿನವರಿಗೆ ಎಸಿ ಬೇಕೇ ಬೇಕು. ಆದರೆ ಅತಿಯಾಗಿ ಏರ್ ಕಂಡೀಷನರ್ (AC) ಬಳಕೆ ಮಾಡಿದರೆ ಮತ್ತು ಎಸಿಯ ತಾಪಮಾನವನ್ನು ಅತಿ ಕಡಿಮೆಯಲ್ಲಿಟ್ಟು ಬಳಕೆ ಮಾಡುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ನಿಮಗೆ ಅರಿವಿಲ್ಲದನಂತೆ ನಾನಾ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾಗಿ ದೇಹಕ್ಕೆ ಆರಾಮ ನೀಡುವುದರ ಜೊತೆಗೆ ಆರೋಗ್ಯವನ್ನು ಕಾಪಾಡಲು ಸರಿಯಾದ ತಾಪಮಾನವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಹಾಗಾದರೆ ಆರೋಗ್ಯ ಕಾಪಾಡಲು ಎಸಿಯ ಸರಿಯಾದ ತಾಪಮಾನ ಎಷ್ಟಿರಬೇಕು, ತುಂಬಾ ಕಡಿಮೆ ತಾಪಮಾನದಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಎಸಿಯ ಸರಿಯಾದ ತಾಪಮಾನ ಎಷ್ಟು?

ಭಾರತದ ವಿದ್ಯುತ್ ಸಚಿವಾಲಯ ಹಾಗೂ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (BEE) ಪ್ರಕಾರ, ಎಸಿಯನ್ನು 24°C ರಿಂದ 25°C ನಡುವೆ ಇಡುವುದು ಆರಾಮದಾಯಕ ಮತ್ತು ಆರೋಗ್ಯಕರ ಎಂದು ಪರಿಗಣಿಸಲಾಗಿದೆ. ಈ ತಾಪಮಾನ ದೇಹಕ್ಕೆ ತಂಪು ನೀಡುವುದರ ಜೊತೆಗೆ ವಿದ್ಯುತ್ ಉಳಿತಾಯಕ್ಕೂ ಸಹಕಾರಿಯಾಗುತ್ತದೆ. ಹೊರಗಿನ ಉಷ್ಣತೆ ಮತ್ತು ಒಳಗಿನ ತಾಪಮಾನ ನಡುವಿನ ಅಂತರ ಹೆಚ್ಚು ಇರದಂತೆ ನೋಡಿಕೊಳ್ಳುವುದು ಮುಖ್ಯ. ಇದರಿಂದ ದೇಹವು ತಾಪಮಾನಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತದೆ.

ತುಂಬಾ ಕಡಿಮೆ ತಾಪಮಾನದಿಂದ ಯಾವ ರೀತಿಯ ಸಮಸ್ಯೆಗಳಾಗುತ್ತದೆ?

  • ದೇಹದಲ್ಲಿ ಬಿಗಿತ ಅಥವಾ ಸ್ನಾಯು ನೋವು
  • ಚರ್ಮ ಒಣಗುವುದು
  • ಗಂಟಲು ಕೆರಕು ಅಥವಾ ನೋವು
  • ತಲೆನೋವು
  • ಮೂಗು ಮುಚ್ಚಿಕೊಳ್ಳುವುದು
  • ಅತಿಯಾದ ಚಳಿ ಅನುಭವ

ಹೊರಗಿನ ಬಿಸಿಲಿನಿಂದ ನೇರವಾಗಿ ಅತೀ ತಂಪಾದ ಕೊಠಡಿಗೆ ಹೋಗುವುದು ದೇಹಕ್ಕೆ ಅಸಹಜತೆಯನ್ನು ಉಂಟುಮಾಡಬಹುದು.

ಯಾರಿಗೆ ಹೆಚ್ಚಿನ ಎಚ್ಚರಿಕೆಯ ಅವಶ್ಯಕತೆ ಇದೆ?

ಮಕ್ಕಳು, ಹಿರಿಯರು, ಅಸ್ತಮಾ ಅಥವಾ ಅಲರ್ಜಿ ಸಮಸ್ಯೆ ಇರುವವರು ಎಸಿ ಬಳಕೆಯಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ದೀರ್ಘಕಾಲ ತಂಪಾದ ವಾತಾವರಣದಲ್ಲಿ ಇರುವುದು ಕೆಲವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಇದನ್ನೂ ಓದಿ: ನೀವು ಪದೇ ಪದೇ ಎಸಿ ಆನ್, ಆಫ್ ಮಾಡುತ್ತಿದ್ದರೆ ಏನಾಗುತ್ತದೆ?

ಎಸಿ ಬಳಸುವಾಗ ಗಮನಿಸಬೇಕಾದ ಅಂಶಗಳು:

ಸರಿಯಾದ ತಾಪಮಾನ ಇಡಿ: 24°C–25°C ನಡುವೆ ಎಸಿಯನ್ನು ಹೊಂದಿಸುವುದು ಉತ್ತಮ.

ಫಿಲ್ಟರ್ ಸ್ವಚ್ಛವಾಗಿರಲಿ: ಎಸಿ ಫಿಲ್ಟರ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿದರೆ ಗಾಳಿಯ ಗುಣಮಟ್ಟ ಉತ್ತಮವಾಗಿರುತ್ತದೆ.

ಸಾಕಷ್ಟು ನೀರು ಕುಡಿಯಿರಿ: ಎಸಿ ಕೊಠಡಿಯಲ್ಲಿ ಹೆಚ್ಚು ಸಮಯ ಕಳೆದರೆ ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು.

ನೇರ ಗಾಳಿ ತಗುಲದಂತೆ ನೋಡಿಕೊಳ್ಳಿ: ಎಸಿಯ ಗಾಳಿ ನೇರವಾಗಿ ಮುಖ ಅಥವಾ ದೇಹದ ಮೇಲೆ ಬೀಳದಂತೆ ವ್ಯವಸ್ಥೆ ಮಾಡಿಕೊಳ್ಳಿ.

ತಾಜಾ ಗಾಳಿಗೂ ಅವಕಾಶ ನೀಡಿ: ಕೊಠಡಿಯಲ್ಲಿ ಕೆಲಕಾಲ ಕಿಟಕಿ ಅಥವಾ ಬಾಗಿಲು ತೆರೆಯುವುದರಿಂದ ಗಾಳಿಯ ಸಂಚಾರ ಸುಧಾರಿಸುತ್ತದೆ.

ಬೇಸಿಗೆಯಲ್ಲಿ ಎಸಿ ಬಳಕೆ ಅಗತ್ಯವಾದರೂ, ಅದರ ತಾಪಮಾನವನ್ನು ಸರಿಯಾಗಿ ನಿರ್ವಹಿಸುವುದು ಆರೋಗ್ಯಕ್ಕೆ ಅತ್ಯಂತ ಮುಖ್ಯ. 24°C ರಿಂದ 25°C ನಡುವಿನ ತಾಪಮಾನ ದೇಹಕ್ಕೆ ಆರಾಮ ನೀಡುವುದರ ಜೊತೆಗೆ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಬಿಎಸ್‌ಇ ನೂತನ ಅಧ್ಯಕ್ಷರಾಗಿ ಐಎಎಸ್​ ಅಧಿಕಾರಿ ಲೋಖಂಡೆ ಸೀತಾರಾಮ್ ನೇಮಕ – Kannada News

ನವದೆಹಲಿ, ಜೂನ್ 2: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) ಗೆ ಹೊಸ ಮುಖ್ಯಸ್ಥರ ನೇಮಕವಾಗಿದ್ದು, ಹಿರಿಯ ಐಎಎಸ್​ ಅಧಿಕಾರಿಯಾದ ಲೋಖಂಡೆ ಪ್ರಶಾಂತ್ ಸೀತಾರಾಮ್ ಅವರನ್ನು ಸಿಬಿಎಸ್‌ಇ ನೂತನ ಅಧ್ಯಕ್ಷರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ದೇಶಾದ್ಯಂತ ಸಾವಿರಾರು ಶಾಲೆಗಳನ್ನು ನಿಯಂತ್ರಿಸುವ ಮತ್ತು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಸಿಬಿಎಸ್‌ಇ ಮಂಡಳಿಗೆ ಈ ನೇಮಕಾತಿ ಅತ್ಯಂತ ಮಹತ್ವದ್ದಾಗಿದೆ.

ಇತ್ತೀಚಿನ ದಿನಗಳಲ್ಲಿ 9ನೇ ತರಗತಿಯ ‘ತ್ರಿಭಾಷಾ ಸೂತ್ರ’ ಸೇರಿದಂತೆ ಹಲವು ಹೊಸ ಶೈಕ್ಷಣಿಕ ನೀತಿಗಳು ಚರ್ಚೆಯಲ್ಲಿರುವ ಬೆನ್ನಲ್ಲೇ ಈ ಹೊಸ ನೇಮಕಾತಿ ನಡೆದಿದೆ. ದೇಶಾದ್ಯಂತ ಸಿಬಿಎಸ್‌ಇ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವ್ಯವಸ್ಥಿತವಾಗಿ ಜಾರಿಗೆ ತರುವುದು ಲೋಖಂಡೆ ಪ್ರಶಾಂತ್ ಸೀತಾರಾಮ್ ಅವರ ಮುಂದಿರುವ ಸವಾಲಾಗಿದೆ. ಮುಂಬರುವ ಶೈಕ್ಷಣಿಕ ವರ್ಷದ ಬೋರ್ಡ್ ಪರೀಕ್ಷೆಗಳನ್ನು ಪಾರದರ್ಶಕವಾಗಿ ಮತ್ತು ಡಿಜಿಟಲ್ ತಂತ್ರಜ್ಞಾನದ ನೆರವಿನೊಂದಿಗೆ ಸುಗಮವಾಗಿ ನಡೆಸುವುದು, ಆಧುನಿಕ ತಂತ್ರಜ್ಞಾನ ಹಾಗೂ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಪಠ್ಯಕ್ರಮದಲ್ಲಿ ಹೆಚ್ಚಿನ ಒತ್ತು ನೀಡುವುದು ಕೂಡ ಅವರ ಮುಂದಿರುವ ಸವಾಲುಗಳಾಗಿವೆ.

ಇದನ್ನೂ ಓದಿ: ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಹೊಸ ರೂಲ್ಸ್: 9ನೇ ತರಗತಿಯಿಂದ 3 ಭಾಷೆಗಳ ಅಧ್ಯಯನ ಕಡ್ಡಾಯ; ಕನಿಷ್ಠ 2 ಭಾರತೀಯ ಭಾಷೆಗಳಿರಬೇಕು!

ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಮುಖ ಇಲಾಖೆಗಳಲ್ಲಿ ಜವಾಬ್ದಾರಿಯುತ ಹುದ್ದೆಗಳನ್ನು ನಿಭಾಯಿಸಿದ ಕೀರ್ತಿ ಇವರಿಗಿದೆ. ಬಿಕ್ಕಟ್ಟಿನ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಇವರು ನಿಪುಣರೆಂದು ಹೆಸರು ಪಡೆದಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಶಿಸ್ತು ಮತ್ತು ಪಾರದರ್ಶಕತೆ ತರಲು ಇವರು ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಒಎಸ್‌ಎಂ (OSM) ವಿವಾದ:

ಇತ್ತೀಚೆಗೆ ಸಿಬಿಎಸ್‌ಇ ಜಾರಿಗೆ ತಂದಿದ್ದ ಒಎಸ್‌ಎಂ (ಆನ್‌-ಸ್ಕ್ರೀನ್ ಮಾರ್ಕಿಂಗ್ / ಡಿಜಿಟಲ್ ಮೌಲ್ಯಮಾಪನ) ಪದ್ಧತಿಯು ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರ ವಲಯದಲ್ಲಿ ಭಾರಿ ಚರ್ಚೆಗೆ ಹಾಗೂ ಗೊಂದಲಕ್ಕೆ ಕಾರಣವಾಗಿತ್ತು. ಪರೀಕ್ಷಾ ಪೇಪರ್‌ಗಳ ಡಿಜಿಟಲ್ ಮೌಲ್ಯಮಾಪನದಲ್ಲಿ ಕೆಲವು ತಾಂತ್ರಿಕ ದೋಷಗಳು ಮತ್ತು ಮೌಲ್ಯಮಾಪನದ ನಿಖರತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿದ್ದವು. ಈ ವಿವಾದಾತ್ಮಕ ಪರಿಸ್ಥಿತಿಯ ನಡುವೆಯೇ ಸಿಬಿಎಸ್‌ಇ ಮಂಡಳಿಗೆ ಹೊಸ ದಿಕ್ಸೂಚಿ ನೀಡಲು ಕೇಂದ್ರ ಸರ್ಕಾರ ಲೋಖಂಡೆ ಸೀತಾರಾಮ್ ಅವರನ್ನು ನೇಮಿಸಿದೆ.

ಇದನ್ನೂ ಓದಿ: ಸಿಬಿಎಸ್​ಇ ಮರುಮೌಲ್ಯಮಾಪನ ಪೋರ್ಟಲ್ ತಾಂತ್ರಿಕ ದೋಷ ನಿವಾರಣೆ: ಅಂಕ ಪರಿಶೀಲನೆಗೆ ಜೂನ್ 6 ಕೊನೆಯ ದಿನಾಂಕ

ಸಿಬಿಎಸ್‌ಇ ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಅತ್ಯುನ್ನತ ಶೈಕ್ಷಣಿಕ ಮಂಡಳಿಯಾಗಿದೆ. ಇದು ದೇಶದಾದ್ಯಂತ ಇರುವ ಎಲ್ಲಾ ಕೇಂದ್ರೀಯ ವಿದ್ಯಾಲಯಗಳು (KVs), ಜವಾಹರ್ ನವೋದಯ ವಿದ್ಯಾಲಯಗಳು (JNVs) ಹಾಗೂ ಸಾವಿರಾರು ಖಾಸಗಿ ಶಾಲೆಗಳ ಪಠ್ಯಕ್ರಮ ಮತ್ತು ಪರೀಕ್ಷೆಗಳನ್ನು ನಿಯಂತ್ರಿಸುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಳೆಯಲ್ಲಿ ನೆನೆಯುತ್ತಲೇ ಚರಂಡಿ ಕ್ಲೀನ್ ಮಾಡಿದ ಬೆಂಗಳೂರು ಟ್ರಾಫಿಕ್ ಪೊಲೀಸರು​​; ವಿಡಿಯೋ ವೈರಲ್ – Kannada News

ಬೆಂಗಳೂರು, ಜೂ.2: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ, ಪ್ರವಾಹದಂತಹ ಪರಿಸ್ಥಿತಿ ಮತ್ತು ಮೈಲಿಗಟ್ಟಲೆ ಸಾಲುಗಟ್ಟಿ ನಿಂತಿದ್ದ ಟ್ರಾಫಿಕ್ ಜ್ಯಾಮ್‌ನಿಂದಾಗಿ ಇಡೀ ನಗರವೇ ಕಂಗೆಟ್ಟಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಾರ್ವಜನಿಕರ ರಕ್ಷಣೆಗೆ ಧಾವಿಸಿದ ಬೆಂಗಳೂರು ಸಂಚಾರಿ ಪೊಲೀಸರು (BTP), ಕೇವಲ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿಯಂತ್ರಿಸುವುದಷ್ಟೇ ಅಲ್ಲದೆ, ತಮ್ಮ ಕರ್ತವ್ಯದ ವ್ಯಾಪ್ತಿಯನ್ನೂ ಮೀರಿ ನಗರವನ್ನು ಯಥಾಸ್ಥಿತಿಗೆ ತರಲು ಶ್ರಮಿಸುತ್ತಿರುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಅಪಾರ ಪ್ರಶಂಸೆಗೆ ಪಾತ್ರವಾಗಿವೆ. ಇದೀಗ ಬಗ್ಗೆ ವಿಡಿಯೋವೊಂದನ್ನು ಬೆಂಗಳೂರು ಪೋಸ್ಟ್​ (Bengaluru Post) ಎಂಬ ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ರಸ್ತೆಗಳ ಮೇಲೆ ಮೊಣಕಾಲಿನವರೆಗೆ ನೀರು ನಿಂತು ವಾಹನ ಸವಾರರು ಪರದಾಡುತ್ತಿದ್ದಾಗ, ಸಂಚಾರಿ ಪೊಲೀಸರು ಕೇವಲ ಮೂಕಪ್ರೇಕ್ಷಕರಾಗಿ ನಿಲ್ಲಲಿಲ್ಲ. ಮಳೆನೀರು ಸರಾಗವಾಗಿ ಹರಿದು ಹೋಗಲು ರಸ್ತೆ ಬದಿಯ ಚರಂಡಿಗಳಲ್ಲಿ ಸಿಲುಕಿಕೊಂಡಿದ್ದ ಪ್ಲಾಸ್ಟಿಕ್, ಕಸ ಹಾಗೂ ತ್ಯಾಜ್ಯಗಳನ್ನು ಪೊಲೀಸರು ತಮ್ಮ ಕೈಗಳಿಂದಲೇ ಸ್ವಚ್ಛಗೊಳಿಸಿದರು. ತಾವೇ ಖುದ್ದಾಗಿ ನಿಂತು ನೀರು ಬರಿದಾಗುವಂತೆ ಮಾಡುವ ಮೂಲಕ ರಸ್ತೆಗಳ ಮೇಲಿನ ಪ್ರವಾಹದ ತೀವ್ರತೆಯನ್ನು ಕಡಿಮೆ ಮಾಡಲು ಶ್ರಮಿಸಿದರು.

ಇದನ್ನೂ ಓದಿ: ಧಾರಾಕಾರ ಮಳೆಗೆ ಹೊಳೆಯಂತಾದ ಬೆಂಗಳೂರಿನ ರಸ್ತೆಗಳು: ಲ್ಯಾಂಡಿಂಗ್​​ ಸಾಧ್ಯವಾಗದೆ ಆಗಸದಲ್ಲೇ ಸುತ್ತಿದ ವಿಮಾನ!

ಇಲ್ಲಿದೆ ನೋಡಿ ವಿಡಿಯೋ:

ಭಾರಿ ಗಾಳಿ-ಮಳೆಗೆ ನಗರದ ಪ್ರಮುಖ ರಸ್ತೆಗಳ ಮೇಲೆ ಬಿದ್ದಿದ್ದ ಮರದ ಬೃಹತ್ ರೆಂಬೆ-ಕೊಂಬೆಗಳನ್ನು ಟ್ರಾಫಿಕ್ ಪೊಲೀಸರು ಸ್ವತಃ ತಾವೇ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಷ್ಟೇ ಅಲ್ಲದೆ, ನೀರಿನಲ್ಲಿ ಸಿಲುಕಿ ಕೆಟ್ಟು ನಿಂತಿದ್ದ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ತಳ್ಳಿ ಸವಾರರಿಗೆ ನೆರವಾದರು. ಮಳೆ ಮತ್ತು ಟ್ರಾಫಿಕ್ ಅಸ್ತವ್ಯಸ್ತತೆಯ ನಡುವೆಯೂ ಇಡೀ ಬೆಂಗಳೂರು ನಗರದ ರಸ್ತೆಗಳು ಸದಾ ಚಲನಶೀಲವಾಗಿರುವಂತೆ (Keeping the city moving) ಮಾಡಲು ಹಗಲಿರುಳು ಶ್ರಮಿಸಿದ ಬಿಟಿಪಿ ಸಿಬ್ಬಂದಿಯ ಈ ನಿಸ್ವಾರ್ಥ ಸೇವೆಗೆ ಸಾರ್ವಜನಿಕರು ಹಾಗೂ ನೆಟ್ಟಿಗರು ಸಾಲ್ಯೂಟ್ ಹೊಡೆಯುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆ ಶಿವಕುಮಾರ್​ ಪ್ರಮಾಣವಚನ: ಸಮಾರಂಭಕ್ಕೆ ಆಗಮಿಸುವವರಿಗೆ ಕೆಲ ಸೂಚನೆಗಳು ಪೊಲೀಸ್ರು – Kannada News

ಬೆಂಗಳೂರು, (ಜೂನ್ 02): ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್  (DK Shivakumar) ಅವರ ಪ್ರಮಾಣವಚನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ. ನಗರದ ಎಲ್ಲಾ ಜಂಟಿ ಪೊಲೀಸ್ ಆಯುಕ್ತರು, ಲಾ ಅಂಡ್ ಆರ್ಡರ್ ಡಿಸಿಪಿಗಳು ಹಾಗೂ ಟ್ರಾಫಿಕ್ ಡಿಸಿಪಿಗಳ ಜೊತೆ ಸಭೆ ನಡೆಸಿ ಬಂದೋಬಸ್ತ್ ಹಾಗೂ ಸಂಚಾರ ವ್ಯವಸ್ಥೆ ಕುರಿತು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ಜೂನ್ 03ರ ಸಂಜೆ 4.05ಕ್ಕೆ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಭಾರಿ ಪ್ರಮಾಣದ ಭದ್ರತೆ ನಿಯೋಜನೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಕೆಲ ಸಲಹೆ ಸೂಚೆನಗಳನ್ನ ನೀಡಲಾಗಿದೆ.

ಮುಖ್ಯಾಂಶಗಳು

  • ಜೂನ್ 3ರಂದು ಸಿಎಂ ಆಗಿ ಡಿ.ಕೆ.ಶಿವಕುಮಾರ್​ ಪ್ರಮಾಣವಚನ ಸ್ವೀಕಾರ
  • ಲೋಕಭವನದ ಗಾಜಿನಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮ
  • ಸಮಾರಂಭಕ್ಕೆ ಆಗಮಿಸುವವರಿಗೆ ಕೆಲವು ಸಲಹೆ ಮತ್ತು ಸೂಚನೆಗಳು ನೀಡಿದ ಪೊಲೀಸ್ರು
  • ಪಾಸ್ ಹೊಂದಿರುವವರು ಮಾತ್ರ ಲೋಕಭವನ ಪ್ರವೇಶಕ್ಕೆ ಅವಕಾಶ

ಪ್ರಮಾಣವಚನ ಕಾರ್ಯಕ್ರಮಕ್ಕೆ ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶ ಅವಕಾಶ ಕಲ್ಪಿಸಲಾಗಿದೆ.ಆಗಮಿಸುವ ಅತಿಥಿಗಳಿಗೆ ಪ್ರತ್ಯೇಕ ಪಾಸ್‌ಗಳನ್ನು ವಿತರಿಸಲಾಗಿದ್ದು, ಅದರ ಸಂಪೂರ್ಣ ಮಾಹಿತಿ ಪೊಲೀಸ್ ಇಲಾಖೆ ಪಡೆದುಕೊಂಡಿದೆ. ಹೊರ ರಾಜ್ಯಗಳಿಂದಲೂ ಹಲವು ಗಣ್ಯರು ಹಾಗೂ ವಿಐಪಿಗಳು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಅವರ ಭದ್ರತೆಗೂ ವಿಶೇಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ಡಿ.ಕೆ. ಶಿವಕುಮಾರ್ ಪ್ರಮಾಣ ವಚನಕ್ಕೆ ಬರುವ ಅತಿಥಿಗಳ ಮೆಗಾ ಲಿಸ್ಟ್ ಇಲ್ಲಿದೆ! ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರು ಯಾರು ಗೊತ್ತಾ?

ಸಲಹೆ -ಸೂಚನೆಗಳೇನು?

  • ಪಾಸ್ ಹೊಂದಿರುವವರು ಮಾತ್ರ ಲೋಕಭವನ ಪ್ರವೇಶಕ್ಕೆ ಅವಕಾಶ
  • ಪ್ರತಿ ಪಾಸ್‌ಗೆ ಒಬ್ಬರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇರುತ್ತದೆ
  • ಪಾಸ್ ಹೊಂದಿರುವವರು ಮಧ್ಯಾಹ್ನ 2 ಗಂಟೆಯೊಳಗೆ ಆಸೀನರಾಗಬೇಕು
  • ಲೋಕಭವನಕ್ಕೆ ಆಗಮಿಸುವವರು ಗೋಪಾಲಗೌಡ ವೃತ್ತದಿಂದ ಪೊಲೀಸ್ ತಿಮ್ಮಯ್ಯ ವೃತ್ತದ ಮೂಲಕ ಲೋಕಭವನ ಪ್ರವೇಶಿಸಬೇಕು.
  • ಕಾರ್ಯಕ್ರಮಕ್ಕೆ ಆಹ್ವಾನ ಹೊಂದಿರುವ ವಾಹನಗಳನ್ನು ಹೊರತುಪಡಿಸಿ ಗೋಪಾಲಗೌಡ ವೃತ್ತ ದಾಟಿ ಮುಂದೆ ಹೋಗಲು ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
  • ಕಾರಿನ ಪಾಸ್ ಹೊಂದಿರುವ ವಾಹನಗಳನ್ನು ಹೊರತುಪಡಿಸಿ ಪೊಲೀಸ್ ತಿಮ್ಮಯ್ಯ ವೃತ್ತ ದಾಟಿ ಯಾವುದೇ ವಾಹನಗಳಿಗೆ ಪ್ರವೇಶ ಇರಲ್ಲ.
  • ಯಾವುದೇ ಕಾರಣಕ್ಕೂ ಪಾಸ್‌ಗಳು ದುರುಪಯೋಗಪಡಿಸಿಕೊಳ್ಳಬಾರದು. ದುರುಪಯೋಗ ಪಡಿಸಿಕೊಂಡಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ.

ಭಾರಿ ವಾಹನಗಳ ಸಂಚಾರ ನಿಷೇಧ

ಜೂನ್ 3ರ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರು ನಿರ್ಬಂಧಿತ ರಸ್ತೆಗಳನ್ನು ತಪ್ಪಿಸಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.ನೂತನ ಮುಖ್ಯಮಂತ್ರಿ ಪ್ರಮಾಣವಚನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತೆ ಹಾಗೂ ಸಂಚಾರ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿರುವ ಪೊಲೀಸರು, ಸಾರ್ವಜನಿಕರ ಸಹಕಾರವನ್ನು ಕೋರಿದ್ದಾರೆ.

Source link

‘ಕಾಕ್‌ಟೇಲ್ 2’ ಚಿತ್ರದಲ್ಲಿ ಸಲಿಂಗಿಗಳ ಪಾತ್ರ ಮಾಡಿದ್ದಾರಾ ರಶ್ಮಿಕಾ ಮಂದಣ್ಣ, ಕೃತಿ ಸನನ್?

ಶಾಹಿದ್ ಕಪೂರ್, ಕೃತಿ ಸನನ್ (Kriti Sanon) ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಕಾಕ್‌ಟೇಲ್ 2’ (Cocktail 2) ಸಿನಿಮಾ ಸದ್ಯ ಭಾರಿ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಈ ಮೂವರು ಈ ಕಾಲದ ತ್ರಿಕೋನ ಪ್ರೇಮಕಥೆಯನ್ನು ಹೇಳಲಿದ್ದಾರೆ. ಆದರೆ, ಈ ಚಿತ್ರದ ಕಥೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಚಿತ್ರ ಗಾಸಿಪ್ ಹರಿದಾಡುತ್ತಿತ್ತು. ಚಿತ್ರದಲ್ಲಿ ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಸಲಿಂಗಪ್ರೇಮಿ ಜೋಡಿಯಾಗಿ ನಟಿಸುತ್ತಿದ್ದಾರೆ ಹಾಗೂ ಅವರ ಸಂಬಂಧದ ಮಧ್ಯೆ ಶಾಹಿದ್ ಕಪೂರ್ ಎಂಟ್ರಿ ಕೊಡುತ್ತಾರೆ ಎನ್ನುವುದೇ ಆ ಗಾಸಿಪ್.

ಆದರೆ ಈ ಗಾಸಿಪ್ ನಿಜವೇ ಎಂಬುದು ಪ್ರಶ್ನೆ. ಮಂಗಳವಾರ (ಜೂನ್ 2) ನಡೆದ ‘ಕಾಕ್‌ಟೇಲ್ 2’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರದ ನಾಯಕ-ನಾಯಕಿಯರು, ನಿರ್ದೇಶಕ ಹೋಮಿ ಅದಾಜಾನಿಯಾ ಹಾಗೂ ನಿರ್ಮಾಪಕರಾದ ದಿನೇಶ್ ವಿಜನ್ ಮತ್ತು ಲವ್ ರಂಜನ್ ಅವರು ಈ ವದಂತಿಗಳಿಗೆ ಸಂಪೂರ್ಣ ಬ್ರೇಕ್ ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಶ್ಮಿಕಾ ಮತ್ತು ಕೃತಿ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆ ಎದುರಾದಾಗ, ಕೃತಿ ತಮಾಷೆಯಾಗಿ ಶಾಹಿದ್ ಕಪೂರ್ ಕಡೆಗೆ ನೋಡಿ, ‘ಈ ಎಲ್ಲಾ ವದಂತಿಗಳು ಒಂದೇ ಜಾಗದಿಂದ ಹುಟ್ಟಿಕೊಳ್ಳುತ್ತಿವೆ ಅನಿಸುತ್ತೆ’ ಎಂದರು. ಇದಕ್ಕೆ ಆಶ್ಚರ್ಯಗೊಂಡಂತೆ ನಟಿಸಿದ ಶಾಹಿದ್, ‘ನಾನೇನೂ ಹೇಳಿಲ್ಲಪ್ಪಾ, ಕಥೆ ಹಾಗಿದ್ದರೆ ನನಗೇನು ಲಾಭ? ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ನಕ್ಕರು.

ಕೊನೆಗೆ ನಿರ್ದೇಶಕ ಹೋಮಿ ಅದಾಜಾನಿಯಾ ಈ ಗಾಸಿಪ್‌ನ ಅಸಲಿ ಕಥೆಯನ್ನು ಬಿಚ್ಚಿಟ್ಟರು. ‘ಚಿತ್ರೀಕರಣದ ಸೆಟ್‌ನಲ್ಲಿ ನಾವೆಲ್ಲಾ ಒಟ್ಟಿಗೆ ಕುಳಿತಿದ್ದೆವು. ಕೃತಿ ಮತ್ತು ರಶ್ಮಿಕಾ ಇಬ್ಬರೂ ಆಪ್ತ ಗೆಳತಿಯರಾದ್ದರಿಂದ ಸೆಟ್‌ನಲ್ಲಿ ತುಂಬಾ ಆತ್ಮೀಯವಾಗಿ ಇರುತ್ತಿದ್ದರು. ಆಗ ನಾವು ಸುಮ್ಮನೆ ತಮಾಷೆಗೆ, ಒಂದು ವೇಳೆ ಇವರಿಬ್ಬರದ್ದೇ ಲವ್ ಸ್ಟೋರಿ ಆಗಿದ್ದು, ಶಾಹಿದ್ ಮೂರನೇ ವ್ಯಕ್ತಿಯಾಗಿ ಬಂದರೆ ಹೇಗೆ ಎಂದು ಯೋಚಿಸಿದೆವು. ಅಂತಹ ಸಿನಿಮಾ ಮಾಡಲು ನನಗೇನೂ ಅಭ್ಯಂತರವಿಲ್ಲ ಎಂದಿದ್ದೆ. ಅಲ್ಲಿಂದ ಈ ವದಂತಿ ಹಬ್ಬಿದೆ’ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಮದುವೆಗೆ ಮಂಗಳಸೂತ್ರವನ್ನು ತಾವೇ ವಿನ್ಯಾಸಗೊಳಿಸಿದ್ದ ನಟಿ ರಶ್ಮಿಕಾ ಮಂದಣ್ಣ

ವೇದಿಕೆಯ ಮೇಲೆ ಕೃತಿ ಮತ್ತು ರಶ್ಮಿಕಾ ಅವರು ತಮ್ಮ ಗೆಳತನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಜಿಮ್‌ನಲ್ಲಿ ಒಟ್ಟಿಗೆ ವರ್ಕೌಟ್ ಮಾಡುವಾಗ ಶುರುವಾದ ಸ್ನೇಹ, ಶೂಟಿಂಗ್ ವೇಳೆ ತುಂಬಾ ಸುಲಭ ಮತ್ತು ಆರಾಮದಾಯಕವಾಗಿತ್ತು ಎಂದರು. ಆಗ ಶಾಹಿದ್ ಕಪೂರ್ ತಮಾಷೆ ಮಾಡುತ್ತಾ, ‘ನಿಮ್ಮಿಬ್ಬರ ನಡುವಿನ ಈ ನ್ಯಾಚುರಲ್ ಕೆಮಿಸ್ಟ್ರಿಯೇ ಜನ ನಿಮ್ಮನ್ನು ಲೆಸ್ಬಿಯನ್ ಜೋಡಿ ಅಂದುಕೊಳ್ಳಲು ಕಾರಣವಿರಬಹುದು’ ಎಂದರು.

ಇದಕ್ಕೆ ತೀಕ್ಷ್ಣವಾಗಿ ಉತ್ತರಿಸಿದ ಕೃತಿ ಸನನ್, ‘ಇದು ನಮ್ಮ ಸಮಾಜದ ಬೇಸರ ತರಿಸುವ ಯೋಚನೆ. ಇಬ್ಬರು ಹುಡುಗರು ಒಟ್ಟಿಗಿದ್ದರೆ ಅದನ್ನು ಬ್ರೋಮ್ಯಾನ್ಸ್ ಎನ್ನುತ್ತಾರೆ. ಅದೇ ಇಬ್ಬರು ಹುಡುಗಿಯರು ಆತ್ಮೀಯವಾಗಿದ್ದರೆ ಅವರು ಕೇವಲ ಸ್ನೇಹಿತರಾಗಿರಲು ಸಾಧ್ಯವೇ ಇಲ್ಲ ಎಂದು ಜನ ಅಂದುಕೊಳ್ಳುತ್ತಾರೆ. ಅವರ ಮಧ್ಯೆ ಬೇರೇನೋ ಇರಬೇಕು ಅಂತ ಯೋಚಿಸುತ್ತಾರೆ’ ಎಂದು ಸಮಾಜದ ಮನಸ್ಥಿತಿಯನ್ನು ಟೀಕಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗಂಡನ ಮನೆಗೆ ಹೋದ ತಕ್ಷಣ ಹೆತ್ತವರ ಬಾಂಧವ್ಯ ಮುಗಿಯಲ್ಲ!: ಸರ್ಕಾರದ ನಿಯಮ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ – Kannada News

ದೆಹಲಿ, ಜೂ,2: ವಿವಾಹಿತ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ (ಜೂ.2) ಒಂದು ಮಹತ್ವದ ಮತ್ತು ಐತಿಹಾಸಿಕ ತೀರ್ಪನ್ನು ನೀಡಿದೆ. “ಕೇವಲ ವಿವಾಹಿತ ಎಂಬ ಕಾರಣಕ್ಕಾಗಿ ಮಗಳನ್ನು ಯಾವುದೇ ಸರ್ಕಾರಿ ಕಲ್ಯಾಣ ಯೋಜನೆಯ (Welfare Scheme) ಸೌಲಭ್ಯಗಳಿಂದ ವಂಚಿಸುವಂತಿಲ್ಲ” ಎಂದು ಸುಪ್ರೀಂ ಕೋರ್ಟ್​​ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆಲೋಕ್ ಅರಾಧೆ ಅವರಿದ್ದ ಪೀಠವು, ಕಲ್ಯಾಣ ಯೋಜನೆಗಳಿಂದ ವಿವಾಹಿತ ಮಗಳನ್ನು ಹೊರಗಿಡುವುದು ಸಂವಿಧಾನಬಾಹಿರ ಹಾಗೂ ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು) ಮತ್ತು ವಿಧಿ 15 (ತಾರತಮ್ಯದ ನಿಷೇಧ) ರ ಉಲ್ಲಂಘನೆಯಾಗಿದೆ ಎಂದು ತೀವ್ರವಾಗಿ ಆಕ್ಷೇಪಿಸಿದೆ.

“ಮದುವೆಯಾದ ತಕ್ಷಣ ಮಗಳು ತನ್ನ ತಂದೆ-ತಾಯಿಯ ಕುಟುಂಬದ ಸದಸ್ಯಳಾಗಿ ಉಳಿಯುವುದಿಲ್ಲ ಅಥವಾ ಅವರ ಮೇಲೆ ಅವಲಂಬಿತಳಾಗಿರುವುದಿಲ್ಲ ಎಂಬ ಊಹೆ ಸಂವಿಧಾನಾತ್ಮಕವಾಗಿ ಒಪ್ಪಲು ಸಾಧ್ಯವಿಲ್ಲ. ವಿವಾಹವು ಮಗಳು ಮತ್ತು ಆಕೆಯ ಹೆತ್ತವರ ಕುಟುಂಬದ ನಡುವಿನ ಬಾಂಧವ್ಯವನ್ನು ಕೊನೆಗೊಳಿಸುವುದಿಲ್ಲ” ಎಂದು ನ್ಯಾಯಪೀಠವು ಹೇಳಿದೆ. ಇದೇ ವೇಳೆ, ಮಗನಿಗೆ ಮದುವೆಯಾದರೂ ಆತ ಕುಟುಂಬದ ಭಾಗವಾಗಿಯೇ ಇರುತ್ತಾನೆ, ಆದರೆ ಮಗಳಿಗೆ ಮದುವೆಯಾದರೆ ಆಕೆಯನ್ನು ಕುಟುಂಬದಿಂದ ಹೊರಗಿಡುವ ಲಿಂಗ ಆಧಾರಿತ ರೂಢಿಗತ ಸಿದ್ಧಾಂತಗಳನ್ನು ಸಂವಿಧಾನವು ಸಂಪೂರ್ಣವಾಗಿ ತಿರಸ್ಕರಿಸುತ್ತದೆ ಎಂದು ಕೋರ್ಟ್ ಹೇಳಿದೆ.

ಉತ್ತರ ಪ್ರದೇಶದ ಕುಲ್ಸುಮ್ ನಿಶಾ ಎಂಬ ಮಹಿಳೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ ಕೋರ್ಟ್ ಈ ತೀರ್ಪು ನೀಡಿದೆ. ನ್ಯಾಯಬೆಲೆ ಅಂಗಡಿ ಮಾಲೀಕರಾಗಿದ್ದ ನಿಶಾ ಅವರ ತಾಯಿ ಮಾರ್ಚ್ 2024 ರಲ್ಲಿ ನಿಧನರಾಗಿದ್ದರು. ಮದುವೆಯಾಗಿದ್ದರೂ ನಿಶಾ ಅವರು ತಮ್ಮ ತಾಯಿ ಮತ್ತು ಸಹೋದರಿಯರೊಂದಿಗೆ ವಾಸಿಸುತ್ತಿದ್ದರು ಮತ್ತು ಅಂಗಡಿ ನಡೆಸಲು ನೆರವಾಗುತ್ತಿದ್ದರು. ತಾಯಿಯ ನಿಧನದ ನಂತರ ಅನುಕಂಪದ ಆಧಾರದ ಮೇಲೆ ತಮಗೆ ಅಂಗಡಿಯನ್ನು ನೀಡಬೇಕು ಎಂದು ಅವರು ಅರ್ಜಿ ಸಲ್ಲಿಸಿದ್ದರು. ಆದರೆ, ಉತ್ತರ ಪ್ರದೇಶ ಸರ್ಕಾರದ ನಿಯಮಾವಳಿಗಳ ಪ್ರಕಾರ “ಮದುವೆಯಾದ ಮಗಳು ಕುಟುಂಬದ ವ್ಯಾಖ್ಯಾನಕ್ಕೆ ಬರುವುದಿಲ್ಲ” ಎಂಬ ಕಾರಣ ನೀಡಿ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ (SDM) ಮತ್ತು ಅಲಹಾಬಾದ್ ಹೈಕೋರ್ಟ್ ಆಕೆಯ ಅರ್ಜಿಯನ್ನು ತಿರಸ್ಕರಿಸಿದ್ದವು. ಇದನ್ನು ಪ್ರಶ್ನಿಸಿ ನಿಶಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: 87ರ ವಯಸ್ಸಿನಲ್ಲಿ ಮೊದಲ ಬಾರಿ ಸಮುದ್ರ ತೀರಕ್ಕೆ ಹೋದ ಅಜ್ಜಿ, ರಿಯಾಕ್ಷನ್ ಹೇಗಿತ್ತು ನೋಡಿ

ವಿವಾಹಿತ ಮಹಿಳೆಯರು ಸಾಮಾನ್ಯವಾಗಿ ಗಂಡನ ಮನೆಗೆ ಹೋಗುವುದರಿಂದ ಸ್ಥಳೀಯ ನಿವಾಸದ ನಿಯಮ ಪಾಲನೆಯಾಗುವುದಿಲ್ಲ ಎಂಬ ಸರ್ಕಾರದ ವಾದವನ್ನು ತಳ್ಳಿಹಾಕಿದ ಕೋರ್ಟ್, “ಪ್ರತಿಯೊಬ್ಬ ವಿವಾಹಿತ ಮಗಳು ಬೇರೆಡೆಯೇ ವಾಸಿಸುತ್ತಾಳೆ ಎಂಬ ಕಲ್ಪನೆಯ ಆಧಾರದ ಮೇಲೆ ಇಡೀ ಮಹಿಳಾ ಸಮುದಾಯವನ್ನು ಯೋಜನೆಯಿಂದ ಹೊರಗಿಡುವುದು ತಪ್ಪು” ಎಂದಿದೆ. ಅನುಕಂಪದ ಆಧಾರದ ಹಂಚಿಕೆಯ ಉದ್ದೇಶವು ಕುಟುಂಬಕ್ಕೆ ತಕ್ಷಣದ ಆರ್ಥಿಕ ಪರಿಹಾರ ನೀಡುವುದಾಗಿದೆ. ಅಧಿಕಾರಿಗಳು ನಿಶಾ ಅವರು ಅದೇ ಹಳ್ಳಿಯಲ್ಲಿ ವಾಸಿಸುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ, ಕೇವಲ ‘ಮದುವೆಯಾಗಿದೆ’ ಎಂಬ ಕಾರಣಕ್ಕೆ ಆಕೆಗೆ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ, 4 ವಾರಗಳ ಒಳಗಾಗಿ ಕುಲ್ಸುಮ್ ನಿಶಾ ಪರವಾಗಿ ನ್ಯಾಯಬೆಲೆ ಅಂಗಡಿ ಹಂಚಿಕೆ ಆದೇಶ ಹೊರಡಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version