ಪದತ್ಯಾಗಕ್ಕೆ ಬಂಪರ್ ಗಿಫ್ಟ್​​: ಸಿದ್ದರಾಮಯ್ಯಗೆ ಮಹತ್ವದ ಸ್ಥಾನಮಾನ ನೀಡಿದ ಹೈಕಮಾಂಡ್ – Kannada News

ನವದೆಹಲಿ, (ಜೂನ್ 02): ರಾಹುಲ್ ಗಾಂಧಿ ನೀಡಿದ್ದ ರಾಜ್ಯಸಭೆ ಆಫರ್ ತಿರಸ್ಕರಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿದ್ದರಾಮಯ್ಯಗೆ (Siddaramaiah) ಹೈಕಮಾಂಡ್ ಮಹತ್ವದ ಹುದ್ದೆಯನ್ನು ನೀಡಿದೆ. ಉದಾರ ಅಂತಕರಣದಿಂದ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಮೂಲಕ ಮುತ್ಸದ್ದಿತನ ತೋರಿದ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (congress working committee )ಸದಸ್ಯ ಸ್ಥಾನ ನೀಡಲಾಗಿದೆ. ಹೌದು… ಸಿದ್ದರಾಮಯ್ಯನವರನ್ನು CWC ಸದಸ್ಯರಾಗಿ ನೇಮಕ ಮಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆದೇಶ ಹೊರಡಿಸಿದ್ದಾರೆ. ಈ ಕಾರ್ಯಕಾರಿ ಸಮಿತಿ ಪಕ್ಷದ ಪರಮೋಚ್ಚ ನೀತಿ ನಿರೂಪಣಾ ಮಂಡಳಿಯಾಗಿದ್ದು, ಪಕ್ಷದ ಪ್ರಮುಖ ರಾಜಕೀಯ ಕಾರ್ಯತಂತ್ರಗಳ ಅಂತಿಮ ನಿರ್ಧಾರ ಈ ಸಮಿತಿ ಸಭೆಯಲ್ಲಿ ಆಗಲಿದೆ. ಹೀಗಾಗಿ ಸಿದ್ದರಾಮಯ್ಯನವರಿಗೆ ಮಹತ್ವದ ಸ್ಥಾನಮಾನ ಸಿಕ್ಕಂತಾಗಿದೆ.

ಮುಖ್ಯಾಂಶಗಳು

  • ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯರಾಗಿ ಸಿದ್ದರಾಮಯ್ಯ ನೇಮಕ
  • CWC ಸದಸ್ಯರಾಗಿ ಸಿದ್ದರಾಮಯ್ಯರನ್ನು ನೇಮಕ ಮಾಡಿದ ಎಐಸಿಸಿ
  • ಕಾಂಗ್ರೆಸ್​ ವರ್ಕಿಂಗ್ ಕಮಿಟಿ ಸದಸ್ಯರಾಗಿ ಸಿದ್ದರಾಮಯ್ಯ ನೇಮಕ ಮಾಡಿ ಎಐಸಿಸಿ ಅಧ್ಯಕ್ಷ ಖರ್ಗೆ ಆದೇಶ

ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಿದ್ದರಾಮಯ್ಯ ಅವರನ್ನು ನೇಮಿಸಲಾಗಿದ್ದು, ಕಾಂಗ್ರೆಸ್‌ನ ಅತ್ಯುನ್ನತ ಕಾರ್ಯಕಾರಿ ಸಮಿತಿ ಇದಾಗಿದ್ದು, ರಾಷ್ಟ್ರಮಟ್ಟದಲ್ಲಿ ಪಕ್ಷದ ನೀತಿ, ಸಂಘಟನೆ, ಪ್ರಚಾರದ ಕುರಿತು ಕೆಲಸ ಮಾಡಲಿದೆ.

Source link

ಆರೋಗ್ಯ ಕಾಪಾಡಿಕೊಳ್ಳಲು ಎಸಿ ಟೆಂಪರೇಚರ್ ಎಷ್ಟಿರಬೇಕು ಗೊತ್ತಾ? – Kannada News

ಬಿಸಿಲಿರಲಿ, ಮಳೆಯಿರಲಿ ಅಥವಾ ಚಳಿ ಇರಲಿ ಹೆಚ್ಚಿನವರಿಗೆ ಎಸಿ ಬೇಕೇ ಬೇಕು. ಆದರೆ ಅತಿಯಾಗಿ ಏರ್ ಕಂಡೀಷನರ್ (AC) ಬಳಕೆ ಮಾಡಿದರೆ ಮತ್ತು ಎಸಿಯ ತಾಪಮಾನವನ್ನು ಅತಿ ಕಡಿಮೆಯಲ್ಲಿಟ್ಟು ಬಳಕೆ ಮಾಡುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ನಿಮಗೆ ಅರಿವಿಲ್ಲದನಂತೆ ನಾನಾ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾಗಿ ದೇಹಕ್ಕೆ ಆರಾಮ ನೀಡುವುದರ ಜೊತೆಗೆ ಆರೋಗ್ಯವನ್ನು ಕಾಪಾಡಲು ಸರಿಯಾದ ತಾಪಮಾನವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಹಾಗಾದರೆ ಆರೋಗ್ಯ ಕಾಪಾಡಲು ಎಸಿಯ ಸರಿಯಾದ ತಾಪಮಾನ ಎಷ್ಟಿರಬೇಕು, ತುಂಬಾ ಕಡಿಮೆ ತಾಪಮಾನದಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಎಸಿಯ ಸರಿಯಾದ ತಾಪಮಾನ ಎಷ್ಟು?

ಭಾರತದ ವಿದ್ಯುತ್ ಸಚಿವಾಲಯ ಹಾಗೂ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (BEE) ಪ್ರಕಾರ, ಎಸಿಯನ್ನು 24°C ರಿಂದ 25°C ನಡುವೆ ಇಡುವುದು ಆರಾಮದಾಯಕ ಮತ್ತು ಆರೋಗ್ಯಕರ ಎಂದು ಪರಿಗಣಿಸಲಾಗಿದೆ. ಈ ತಾಪಮಾನ ದೇಹಕ್ಕೆ ತಂಪು ನೀಡುವುದರ ಜೊತೆಗೆ ವಿದ್ಯುತ್ ಉಳಿತಾಯಕ್ಕೂ ಸಹಕಾರಿಯಾಗುತ್ತದೆ. ಹೊರಗಿನ ಉಷ್ಣತೆ ಮತ್ತು ಒಳಗಿನ ತಾಪಮಾನ ನಡುವಿನ ಅಂತರ ಹೆಚ್ಚು ಇರದಂತೆ ನೋಡಿಕೊಳ್ಳುವುದು ಮುಖ್ಯ. ಇದರಿಂದ ದೇಹವು ತಾಪಮಾನಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತದೆ.

ತುಂಬಾ ಕಡಿಮೆ ತಾಪಮಾನದಿಂದ ಯಾವ ರೀತಿಯ ಸಮಸ್ಯೆಗಳಾಗುತ್ತದೆ?

  • ದೇಹದಲ್ಲಿ ಬಿಗಿತ ಅಥವಾ ಸ್ನಾಯು ನೋವು
  • ಚರ್ಮ ಒಣಗುವುದು
  • ಗಂಟಲು ಕೆರಕು ಅಥವಾ ನೋವು
  • ತಲೆನೋವು
  • ಮೂಗು ಮುಚ್ಚಿಕೊಳ್ಳುವುದು
  • ಅತಿಯಾದ ಚಳಿ ಅನುಭವ

ಹೊರಗಿನ ಬಿಸಿಲಿನಿಂದ ನೇರವಾಗಿ ಅತೀ ತಂಪಾದ ಕೊಠಡಿಗೆ ಹೋಗುವುದು ದೇಹಕ್ಕೆ ಅಸಹಜತೆಯನ್ನು ಉಂಟುಮಾಡಬಹುದು.

ಯಾರಿಗೆ ಹೆಚ್ಚಿನ ಎಚ್ಚರಿಕೆಯ ಅವಶ್ಯಕತೆ ಇದೆ?

ಮಕ್ಕಳು, ಹಿರಿಯರು, ಅಸ್ತಮಾ ಅಥವಾ ಅಲರ್ಜಿ ಸಮಸ್ಯೆ ಇರುವವರು ಎಸಿ ಬಳಕೆಯಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ದೀರ್ಘಕಾಲ ತಂಪಾದ ವಾತಾವರಣದಲ್ಲಿ ಇರುವುದು ಕೆಲವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಇದನ್ನೂ ಓದಿ: ನೀವು ಪದೇ ಪದೇ ಎಸಿ ಆನ್, ಆಫ್ ಮಾಡುತ್ತಿದ್ದರೆ ಏನಾಗುತ್ತದೆ?

ಎಸಿ ಬಳಸುವಾಗ ಗಮನಿಸಬೇಕಾದ ಅಂಶಗಳು:

ಸರಿಯಾದ ತಾಪಮಾನ ಇಡಿ: 24°C–25°C ನಡುವೆ ಎಸಿಯನ್ನು ಹೊಂದಿಸುವುದು ಉತ್ತಮ.

ಫಿಲ್ಟರ್ ಸ್ವಚ್ಛವಾಗಿರಲಿ: ಎಸಿ ಫಿಲ್ಟರ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿದರೆ ಗಾಳಿಯ ಗುಣಮಟ್ಟ ಉತ್ತಮವಾಗಿರುತ್ತದೆ.

ಸಾಕಷ್ಟು ನೀರು ಕುಡಿಯಿರಿ: ಎಸಿ ಕೊಠಡಿಯಲ್ಲಿ ಹೆಚ್ಚು ಸಮಯ ಕಳೆದರೆ ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು.

ನೇರ ಗಾಳಿ ತಗುಲದಂತೆ ನೋಡಿಕೊಳ್ಳಿ: ಎಸಿಯ ಗಾಳಿ ನೇರವಾಗಿ ಮುಖ ಅಥವಾ ದೇಹದ ಮೇಲೆ ಬೀಳದಂತೆ ವ್ಯವಸ್ಥೆ ಮಾಡಿಕೊಳ್ಳಿ.

ತಾಜಾ ಗಾಳಿಗೂ ಅವಕಾಶ ನೀಡಿ: ಕೊಠಡಿಯಲ್ಲಿ ಕೆಲಕಾಲ ಕಿಟಕಿ ಅಥವಾ ಬಾಗಿಲು ತೆರೆಯುವುದರಿಂದ ಗಾಳಿಯ ಸಂಚಾರ ಸುಧಾರಿಸುತ್ತದೆ.

ಬೇಸಿಗೆಯಲ್ಲಿ ಎಸಿ ಬಳಕೆ ಅಗತ್ಯವಾದರೂ, ಅದರ ತಾಪಮಾನವನ್ನು ಸರಿಯಾಗಿ ನಿರ್ವಹಿಸುವುದು ಆರೋಗ್ಯಕ್ಕೆ ಅತ್ಯಂತ ಮುಖ್ಯ. 24°C ರಿಂದ 25°C ನಡುವಿನ ತಾಪಮಾನ ದೇಹಕ್ಕೆ ಆರಾಮ ನೀಡುವುದರ ಜೊತೆಗೆ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಬಿಎಸ್‌ಇ ನೂತನ ಅಧ್ಯಕ್ಷರಾಗಿ ಐಎಎಸ್​ ಅಧಿಕಾರಿ ಲೋಖಂಡೆ ಸೀತಾರಾಮ್ ನೇಮಕ – Kannada News

ನವದೆಹಲಿ, ಜೂನ್ 2: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) ಗೆ ಹೊಸ ಮುಖ್ಯಸ್ಥರ ನೇಮಕವಾಗಿದ್ದು, ಹಿರಿಯ ಐಎಎಸ್​ ಅಧಿಕಾರಿಯಾದ ಲೋಖಂಡೆ ಪ್ರಶಾಂತ್ ಸೀತಾರಾಮ್ ಅವರನ್ನು ಸಿಬಿಎಸ್‌ಇ ನೂತನ ಅಧ್ಯಕ್ಷರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ದೇಶಾದ್ಯಂತ ಸಾವಿರಾರು ಶಾಲೆಗಳನ್ನು ನಿಯಂತ್ರಿಸುವ ಮತ್ತು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಸಿಬಿಎಸ್‌ಇ ಮಂಡಳಿಗೆ ಈ ನೇಮಕಾತಿ ಅತ್ಯಂತ ಮಹತ್ವದ್ದಾಗಿದೆ.

ಇತ್ತೀಚಿನ ದಿನಗಳಲ್ಲಿ 9ನೇ ತರಗತಿಯ ‘ತ್ರಿಭಾಷಾ ಸೂತ್ರ’ ಸೇರಿದಂತೆ ಹಲವು ಹೊಸ ಶೈಕ್ಷಣಿಕ ನೀತಿಗಳು ಚರ್ಚೆಯಲ್ಲಿರುವ ಬೆನ್ನಲ್ಲೇ ಈ ಹೊಸ ನೇಮಕಾತಿ ನಡೆದಿದೆ. ದೇಶಾದ್ಯಂತ ಸಿಬಿಎಸ್‌ಇ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವ್ಯವಸ್ಥಿತವಾಗಿ ಜಾರಿಗೆ ತರುವುದು ಲೋಖಂಡೆ ಪ್ರಶಾಂತ್ ಸೀತಾರಾಮ್ ಅವರ ಮುಂದಿರುವ ಸವಾಲಾಗಿದೆ. ಮುಂಬರುವ ಶೈಕ್ಷಣಿಕ ವರ್ಷದ ಬೋರ್ಡ್ ಪರೀಕ್ಷೆಗಳನ್ನು ಪಾರದರ್ಶಕವಾಗಿ ಮತ್ತು ಡಿಜಿಟಲ್ ತಂತ್ರಜ್ಞಾನದ ನೆರವಿನೊಂದಿಗೆ ಸುಗಮವಾಗಿ ನಡೆಸುವುದು, ಆಧುನಿಕ ತಂತ್ರಜ್ಞಾನ ಹಾಗೂ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಪಠ್ಯಕ್ರಮದಲ್ಲಿ ಹೆಚ್ಚಿನ ಒತ್ತು ನೀಡುವುದು ಕೂಡ ಅವರ ಮುಂದಿರುವ ಸವಾಲುಗಳಾಗಿವೆ.

ಇದನ್ನೂ ಓದಿ: ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಹೊಸ ರೂಲ್ಸ್: 9ನೇ ತರಗತಿಯಿಂದ 3 ಭಾಷೆಗಳ ಅಧ್ಯಯನ ಕಡ್ಡಾಯ; ಕನಿಷ್ಠ 2 ಭಾರತೀಯ ಭಾಷೆಗಳಿರಬೇಕು!

ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಮುಖ ಇಲಾಖೆಗಳಲ್ಲಿ ಜವಾಬ್ದಾರಿಯುತ ಹುದ್ದೆಗಳನ್ನು ನಿಭಾಯಿಸಿದ ಕೀರ್ತಿ ಇವರಿಗಿದೆ. ಬಿಕ್ಕಟ್ಟಿನ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಇವರು ನಿಪುಣರೆಂದು ಹೆಸರು ಪಡೆದಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಶಿಸ್ತು ಮತ್ತು ಪಾರದರ್ಶಕತೆ ತರಲು ಇವರು ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಒಎಸ್‌ಎಂ (OSM) ವಿವಾದ:

ಇತ್ತೀಚೆಗೆ ಸಿಬಿಎಸ್‌ಇ ಜಾರಿಗೆ ತಂದಿದ್ದ ಒಎಸ್‌ಎಂ (ಆನ್‌-ಸ್ಕ್ರೀನ್ ಮಾರ್ಕಿಂಗ್ / ಡಿಜಿಟಲ್ ಮೌಲ್ಯಮಾಪನ) ಪದ್ಧತಿಯು ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರ ವಲಯದಲ್ಲಿ ಭಾರಿ ಚರ್ಚೆಗೆ ಹಾಗೂ ಗೊಂದಲಕ್ಕೆ ಕಾರಣವಾಗಿತ್ತು. ಪರೀಕ್ಷಾ ಪೇಪರ್‌ಗಳ ಡಿಜಿಟಲ್ ಮೌಲ್ಯಮಾಪನದಲ್ಲಿ ಕೆಲವು ತಾಂತ್ರಿಕ ದೋಷಗಳು ಮತ್ತು ಮೌಲ್ಯಮಾಪನದ ನಿಖರತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿದ್ದವು. ಈ ವಿವಾದಾತ್ಮಕ ಪರಿಸ್ಥಿತಿಯ ನಡುವೆಯೇ ಸಿಬಿಎಸ್‌ಇ ಮಂಡಳಿಗೆ ಹೊಸ ದಿಕ್ಸೂಚಿ ನೀಡಲು ಕೇಂದ್ರ ಸರ್ಕಾರ ಲೋಖಂಡೆ ಸೀತಾರಾಮ್ ಅವರನ್ನು ನೇಮಿಸಿದೆ.

ಇದನ್ನೂ ಓದಿ: ಸಿಬಿಎಸ್​ಇ ಮರುಮೌಲ್ಯಮಾಪನ ಪೋರ್ಟಲ್ ತಾಂತ್ರಿಕ ದೋಷ ನಿವಾರಣೆ: ಅಂಕ ಪರಿಶೀಲನೆಗೆ ಜೂನ್ 6 ಕೊನೆಯ ದಿನಾಂಕ

ಸಿಬಿಎಸ್‌ಇ ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಅತ್ಯುನ್ನತ ಶೈಕ್ಷಣಿಕ ಮಂಡಳಿಯಾಗಿದೆ. ಇದು ದೇಶದಾದ್ಯಂತ ಇರುವ ಎಲ್ಲಾ ಕೇಂದ್ರೀಯ ವಿದ್ಯಾಲಯಗಳು (KVs), ಜವಾಹರ್ ನವೋದಯ ವಿದ್ಯಾಲಯಗಳು (JNVs) ಹಾಗೂ ಸಾವಿರಾರು ಖಾಸಗಿ ಶಾಲೆಗಳ ಪಠ್ಯಕ್ರಮ ಮತ್ತು ಪರೀಕ್ಷೆಗಳನ್ನು ನಿಯಂತ್ರಿಸುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಳೆಯಲ್ಲಿ ನೆನೆಯುತ್ತಲೇ ಚರಂಡಿ ಕ್ಲೀನ್ ಮಾಡಿದ ಬೆಂಗಳೂರು ಟ್ರಾಫಿಕ್ ಪೊಲೀಸರು​​; ವಿಡಿಯೋ ವೈರಲ್ – Kannada News

ಬೆಂಗಳೂರು, ಜೂ.2: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ, ಪ್ರವಾಹದಂತಹ ಪರಿಸ್ಥಿತಿ ಮತ್ತು ಮೈಲಿಗಟ್ಟಲೆ ಸಾಲುಗಟ್ಟಿ ನಿಂತಿದ್ದ ಟ್ರಾಫಿಕ್ ಜ್ಯಾಮ್‌ನಿಂದಾಗಿ ಇಡೀ ನಗರವೇ ಕಂಗೆಟ್ಟಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಾರ್ವಜನಿಕರ ರಕ್ಷಣೆಗೆ ಧಾವಿಸಿದ ಬೆಂಗಳೂರು ಸಂಚಾರಿ ಪೊಲೀಸರು (BTP), ಕೇವಲ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿಯಂತ್ರಿಸುವುದಷ್ಟೇ ಅಲ್ಲದೆ, ತಮ್ಮ ಕರ್ತವ್ಯದ ವ್ಯಾಪ್ತಿಯನ್ನೂ ಮೀರಿ ನಗರವನ್ನು ಯಥಾಸ್ಥಿತಿಗೆ ತರಲು ಶ್ರಮಿಸುತ್ತಿರುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಅಪಾರ ಪ್ರಶಂಸೆಗೆ ಪಾತ್ರವಾಗಿವೆ. ಇದೀಗ ಬಗ್ಗೆ ವಿಡಿಯೋವೊಂದನ್ನು ಬೆಂಗಳೂರು ಪೋಸ್ಟ್​ (Bengaluru Post) ಎಂಬ ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ರಸ್ತೆಗಳ ಮೇಲೆ ಮೊಣಕಾಲಿನವರೆಗೆ ನೀರು ನಿಂತು ವಾಹನ ಸವಾರರು ಪರದಾಡುತ್ತಿದ್ದಾಗ, ಸಂಚಾರಿ ಪೊಲೀಸರು ಕೇವಲ ಮೂಕಪ್ರೇಕ್ಷಕರಾಗಿ ನಿಲ್ಲಲಿಲ್ಲ. ಮಳೆನೀರು ಸರಾಗವಾಗಿ ಹರಿದು ಹೋಗಲು ರಸ್ತೆ ಬದಿಯ ಚರಂಡಿಗಳಲ್ಲಿ ಸಿಲುಕಿಕೊಂಡಿದ್ದ ಪ್ಲಾಸ್ಟಿಕ್, ಕಸ ಹಾಗೂ ತ್ಯಾಜ್ಯಗಳನ್ನು ಪೊಲೀಸರು ತಮ್ಮ ಕೈಗಳಿಂದಲೇ ಸ್ವಚ್ಛಗೊಳಿಸಿದರು. ತಾವೇ ಖುದ್ದಾಗಿ ನಿಂತು ನೀರು ಬರಿದಾಗುವಂತೆ ಮಾಡುವ ಮೂಲಕ ರಸ್ತೆಗಳ ಮೇಲಿನ ಪ್ರವಾಹದ ತೀವ್ರತೆಯನ್ನು ಕಡಿಮೆ ಮಾಡಲು ಶ್ರಮಿಸಿದರು.

ಇದನ್ನೂ ಓದಿ: ಧಾರಾಕಾರ ಮಳೆಗೆ ಹೊಳೆಯಂತಾದ ಬೆಂಗಳೂರಿನ ರಸ್ತೆಗಳು: ಲ್ಯಾಂಡಿಂಗ್​​ ಸಾಧ್ಯವಾಗದೆ ಆಗಸದಲ್ಲೇ ಸುತ್ತಿದ ವಿಮಾನ!

ಇಲ್ಲಿದೆ ನೋಡಿ ವಿಡಿಯೋ:

ಭಾರಿ ಗಾಳಿ-ಮಳೆಗೆ ನಗರದ ಪ್ರಮುಖ ರಸ್ತೆಗಳ ಮೇಲೆ ಬಿದ್ದಿದ್ದ ಮರದ ಬೃಹತ್ ರೆಂಬೆ-ಕೊಂಬೆಗಳನ್ನು ಟ್ರಾಫಿಕ್ ಪೊಲೀಸರು ಸ್ವತಃ ತಾವೇ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಷ್ಟೇ ಅಲ್ಲದೆ, ನೀರಿನಲ್ಲಿ ಸಿಲುಕಿ ಕೆಟ್ಟು ನಿಂತಿದ್ದ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ತಳ್ಳಿ ಸವಾರರಿಗೆ ನೆರವಾದರು. ಮಳೆ ಮತ್ತು ಟ್ರಾಫಿಕ್ ಅಸ್ತವ್ಯಸ್ತತೆಯ ನಡುವೆಯೂ ಇಡೀ ಬೆಂಗಳೂರು ನಗರದ ರಸ್ತೆಗಳು ಸದಾ ಚಲನಶೀಲವಾಗಿರುವಂತೆ (Keeping the city moving) ಮಾಡಲು ಹಗಲಿರುಳು ಶ್ರಮಿಸಿದ ಬಿಟಿಪಿ ಸಿಬ್ಬಂದಿಯ ಈ ನಿಸ್ವಾರ್ಥ ಸೇವೆಗೆ ಸಾರ್ವಜನಿಕರು ಹಾಗೂ ನೆಟ್ಟಿಗರು ಸಾಲ್ಯೂಟ್ ಹೊಡೆಯುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆ ಶಿವಕುಮಾರ್​ ಪ್ರಮಾಣವಚನ: ಸಮಾರಂಭಕ್ಕೆ ಆಗಮಿಸುವವರಿಗೆ ಕೆಲ ಸೂಚನೆಗಳು ಪೊಲೀಸ್ರು – Kannada News

ಬೆಂಗಳೂರು, (ಜೂನ್ 02): ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್  (DK Shivakumar) ಅವರ ಪ್ರಮಾಣವಚನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ. ನಗರದ ಎಲ್ಲಾ ಜಂಟಿ ಪೊಲೀಸ್ ಆಯುಕ್ತರು, ಲಾ ಅಂಡ್ ಆರ್ಡರ್ ಡಿಸಿಪಿಗಳು ಹಾಗೂ ಟ್ರಾಫಿಕ್ ಡಿಸಿಪಿಗಳ ಜೊತೆ ಸಭೆ ನಡೆಸಿ ಬಂದೋಬಸ್ತ್ ಹಾಗೂ ಸಂಚಾರ ವ್ಯವಸ್ಥೆ ಕುರಿತು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ಜೂನ್ 03ರ ಸಂಜೆ 4.05ಕ್ಕೆ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಭಾರಿ ಪ್ರಮಾಣದ ಭದ್ರತೆ ನಿಯೋಜನೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಕೆಲ ಸಲಹೆ ಸೂಚೆನಗಳನ್ನ ನೀಡಲಾಗಿದೆ.

ಮುಖ್ಯಾಂಶಗಳು

  • ಜೂನ್ 3ರಂದು ಸಿಎಂ ಆಗಿ ಡಿ.ಕೆ.ಶಿವಕುಮಾರ್​ ಪ್ರಮಾಣವಚನ ಸ್ವೀಕಾರ
  • ಲೋಕಭವನದ ಗಾಜಿನಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮ
  • ಸಮಾರಂಭಕ್ಕೆ ಆಗಮಿಸುವವರಿಗೆ ಕೆಲವು ಸಲಹೆ ಮತ್ತು ಸೂಚನೆಗಳು ನೀಡಿದ ಪೊಲೀಸ್ರು
  • ಪಾಸ್ ಹೊಂದಿರುವವರು ಮಾತ್ರ ಲೋಕಭವನ ಪ್ರವೇಶಕ್ಕೆ ಅವಕಾಶ

ಪ್ರಮಾಣವಚನ ಕಾರ್ಯಕ್ರಮಕ್ಕೆ ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶ ಅವಕಾಶ ಕಲ್ಪಿಸಲಾಗಿದೆ.ಆಗಮಿಸುವ ಅತಿಥಿಗಳಿಗೆ ಪ್ರತ್ಯೇಕ ಪಾಸ್‌ಗಳನ್ನು ವಿತರಿಸಲಾಗಿದ್ದು, ಅದರ ಸಂಪೂರ್ಣ ಮಾಹಿತಿ ಪೊಲೀಸ್ ಇಲಾಖೆ ಪಡೆದುಕೊಂಡಿದೆ. ಹೊರ ರಾಜ್ಯಗಳಿಂದಲೂ ಹಲವು ಗಣ್ಯರು ಹಾಗೂ ವಿಐಪಿಗಳು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಅವರ ಭದ್ರತೆಗೂ ವಿಶೇಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ಡಿ.ಕೆ. ಶಿವಕುಮಾರ್ ಪ್ರಮಾಣ ವಚನಕ್ಕೆ ಬರುವ ಅತಿಥಿಗಳ ಮೆಗಾ ಲಿಸ್ಟ್ ಇಲ್ಲಿದೆ! ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರು ಯಾರು ಗೊತ್ತಾ?

ಸಲಹೆ -ಸೂಚನೆಗಳೇನು?

  • ಪಾಸ್ ಹೊಂದಿರುವವರು ಮಾತ್ರ ಲೋಕಭವನ ಪ್ರವೇಶಕ್ಕೆ ಅವಕಾಶ
  • ಪ್ರತಿ ಪಾಸ್‌ಗೆ ಒಬ್ಬರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇರುತ್ತದೆ
  • ಪಾಸ್ ಹೊಂದಿರುವವರು ಮಧ್ಯಾಹ್ನ 2 ಗಂಟೆಯೊಳಗೆ ಆಸೀನರಾಗಬೇಕು
  • ಲೋಕಭವನಕ್ಕೆ ಆಗಮಿಸುವವರು ಗೋಪಾಲಗೌಡ ವೃತ್ತದಿಂದ ಪೊಲೀಸ್ ತಿಮ್ಮಯ್ಯ ವೃತ್ತದ ಮೂಲಕ ಲೋಕಭವನ ಪ್ರವೇಶಿಸಬೇಕು.
  • ಕಾರ್ಯಕ್ರಮಕ್ಕೆ ಆಹ್ವಾನ ಹೊಂದಿರುವ ವಾಹನಗಳನ್ನು ಹೊರತುಪಡಿಸಿ ಗೋಪಾಲಗೌಡ ವೃತ್ತ ದಾಟಿ ಮುಂದೆ ಹೋಗಲು ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
  • ಕಾರಿನ ಪಾಸ್ ಹೊಂದಿರುವ ವಾಹನಗಳನ್ನು ಹೊರತುಪಡಿಸಿ ಪೊಲೀಸ್ ತಿಮ್ಮಯ್ಯ ವೃತ್ತ ದಾಟಿ ಯಾವುದೇ ವಾಹನಗಳಿಗೆ ಪ್ರವೇಶ ಇರಲ್ಲ.
  • ಯಾವುದೇ ಕಾರಣಕ್ಕೂ ಪಾಸ್‌ಗಳು ದುರುಪಯೋಗಪಡಿಸಿಕೊಳ್ಳಬಾರದು. ದುರುಪಯೋಗ ಪಡಿಸಿಕೊಂಡಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ.

ಭಾರಿ ವಾಹನಗಳ ಸಂಚಾರ ನಿಷೇಧ

ಜೂನ್ 3ರ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರು ನಿರ್ಬಂಧಿತ ರಸ್ತೆಗಳನ್ನು ತಪ್ಪಿಸಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.ನೂತನ ಮುಖ್ಯಮಂತ್ರಿ ಪ್ರಮಾಣವಚನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತೆ ಹಾಗೂ ಸಂಚಾರ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿರುವ ಪೊಲೀಸರು, ಸಾರ್ವಜನಿಕರ ಸಹಕಾರವನ್ನು ಕೋರಿದ್ದಾರೆ.

Source link

‘ಕಾಕ್‌ಟೇಲ್ 2’ ಚಿತ್ರದಲ್ಲಿ ಸಲಿಂಗಿಗಳ ಪಾತ್ರ ಮಾಡಿದ್ದಾರಾ ರಶ್ಮಿಕಾ ಮಂದಣ್ಣ, ಕೃತಿ ಸನನ್?

ಶಾಹಿದ್ ಕಪೂರ್, ಕೃತಿ ಸನನ್ (Kriti Sanon) ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಕಾಕ್‌ಟೇಲ್ 2’ (Cocktail 2) ಸಿನಿಮಾ ಸದ್ಯ ಭಾರಿ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಈ ಮೂವರು ಈ ಕಾಲದ ತ್ರಿಕೋನ ಪ್ರೇಮಕಥೆಯನ್ನು ಹೇಳಲಿದ್ದಾರೆ. ಆದರೆ, ಈ ಚಿತ್ರದ ಕಥೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಚಿತ್ರ ಗಾಸಿಪ್ ಹರಿದಾಡುತ್ತಿತ್ತು. ಚಿತ್ರದಲ್ಲಿ ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಸಲಿಂಗಪ್ರೇಮಿ ಜೋಡಿಯಾಗಿ ನಟಿಸುತ್ತಿದ್ದಾರೆ ಹಾಗೂ ಅವರ ಸಂಬಂಧದ ಮಧ್ಯೆ ಶಾಹಿದ್ ಕಪೂರ್ ಎಂಟ್ರಿ ಕೊಡುತ್ತಾರೆ ಎನ್ನುವುದೇ ಆ ಗಾಸಿಪ್.

ಆದರೆ ಈ ಗಾಸಿಪ್ ನಿಜವೇ ಎಂಬುದು ಪ್ರಶ್ನೆ. ಮಂಗಳವಾರ (ಜೂನ್ 2) ನಡೆದ ‘ಕಾಕ್‌ಟೇಲ್ 2’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರದ ನಾಯಕ-ನಾಯಕಿಯರು, ನಿರ್ದೇಶಕ ಹೋಮಿ ಅದಾಜಾನಿಯಾ ಹಾಗೂ ನಿರ್ಮಾಪಕರಾದ ದಿನೇಶ್ ವಿಜನ್ ಮತ್ತು ಲವ್ ರಂಜನ್ ಅವರು ಈ ವದಂತಿಗಳಿಗೆ ಸಂಪೂರ್ಣ ಬ್ರೇಕ್ ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಶ್ಮಿಕಾ ಮತ್ತು ಕೃತಿ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆ ಎದುರಾದಾಗ, ಕೃತಿ ತಮಾಷೆಯಾಗಿ ಶಾಹಿದ್ ಕಪೂರ್ ಕಡೆಗೆ ನೋಡಿ, ‘ಈ ಎಲ್ಲಾ ವದಂತಿಗಳು ಒಂದೇ ಜಾಗದಿಂದ ಹುಟ್ಟಿಕೊಳ್ಳುತ್ತಿವೆ ಅನಿಸುತ್ತೆ’ ಎಂದರು. ಇದಕ್ಕೆ ಆಶ್ಚರ್ಯಗೊಂಡಂತೆ ನಟಿಸಿದ ಶಾಹಿದ್, ‘ನಾನೇನೂ ಹೇಳಿಲ್ಲಪ್ಪಾ, ಕಥೆ ಹಾಗಿದ್ದರೆ ನನಗೇನು ಲಾಭ? ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ನಕ್ಕರು.

ಕೊನೆಗೆ ನಿರ್ದೇಶಕ ಹೋಮಿ ಅದಾಜಾನಿಯಾ ಈ ಗಾಸಿಪ್‌ನ ಅಸಲಿ ಕಥೆಯನ್ನು ಬಿಚ್ಚಿಟ್ಟರು. ‘ಚಿತ್ರೀಕರಣದ ಸೆಟ್‌ನಲ್ಲಿ ನಾವೆಲ್ಲಾ ಒಟ್ಟಿಗೆ ಕುಳಿತಿದ್ದೆವು. ಕೃತಿ ಮತ್ತು ರಶ್ಮಿಕಾ ಇಬ್ಬರೂ ಆಪ್ತ ಗೆಳತಿಯರಾದ್ದರಿಂದ ಸೆಟ್‌ನಲ್ಲಿ ತುಂಬಾ ಆತ್ಮೀಯವಾಗಿ ಇರುತ್ತಿದ್ದರು. ಆಗ ನಾವು ಸುಮ್ಮನೆ ತಮಾಷೆಗೆ, ಒಂದು ವೇಳೆ ಇವರಿಬ್ಬರದ್ದೇ ಲವ್ ಸ್ಟೋರಿ ಆಗಿದ್ದು, ಶಾಹಿದ್ ಮೂರನೇ ವ್ಯಕ್ತಿಯಾಗಿ ಬಂದರೆ ಹೇಗೆ ಎಂದು ಯೋಚಿಸಿದೆವು. ಅಂತಹ ಸಿನಿಮಾ ಮಾಡಲು ನನಗೇನೂ ಅಭ್ಯಂತರವಿಲ್ಲ ಎಂದಿದ್ದೆ. ಅಲ್ಲಿಂದ ಈ ವದಂತಿ ಹಬ್ಬಿದೆ’ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಮದುವೆಗೆ ಮಂಗಳಸೂತ್ರವನ್ನು ತಾವೇ ವಿನ್ಯಾಸಗೊಳಿಸಿದ್ದ ನಟಿ ರಶ್ಮಿಕಾ ಮಂದಣ್ಣ

ವೇದಿಕೆಯ ಮೇಲೆ ಕೃತಿ ಮತ್ತು ರಶ್ಮಿಕಾ ಅವರು ತಮ್ಮ ಗೆಳತನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಜಿಮ್‌ನಲ್ಲಿ ಒಟ್ಟಿಗೆ ವರ್ಕೌಟ್ ಮಾಡುವಾಗ ಶುರುವಾದ ಸ್ನೇಹ, ಶೂಟಿಂಗ್ ವೇಳೆ ತುಂಬಾ ಸುಲಭ ಮತ್ತು ಆರಾಮದಾಯಕವಾಗಿತ್ತು ಎಂದರು. ಆಗ ಶಾಹಿದ್ ಕಪೂರ್ ತಮಾಷೆ ಮಾಡುತ್ತಾ, ‘ನಿಮ್ಮಿಬ್ಬರ ನಡುವಿನ ಈ ನ್ಯಾಚುರಲ್ ಕೆಮಿಸ್ಟ್ರಿಯೇ ಜನ ನಿಮ್ಮನ್ನು ಲೆಸ್ಬಿಯನ್ ಜೋಡಿ ಅಂದುಕೊಳ್ಳಲು ಕಾರಣವಿರಬಹುದು’ ಎಂದರು.

ಇದಕ್ಕೆ ತೀಕ್ಷ್ಣವಾಗಿ ಉತ್ತರಿಸಿದ ಕೃತಿ ಸನನ್, ‘ಇದು ನಮ್ಮ ಸಮಾಜದ ಬೇಸರ ತರಿಸುವ ಯೋಚನೆ. ಇಬ್ಬರು ಹುಡುಗರು ಒಟ್ಟಿಗಿದ್ದರೆ ಅದನ್ನು ಬ್ರೋಮ್ಯಾನ್ಸ್ ಎನ್ನುತ್ತಾರೆ. ಅದೇ ಇಬ್ಬರು ಹುಡುಗಿಯರು ಆತ್ಮೀಯವಾಗಿದ್ದರೆ ಅವರು ಕೇವಲ ಸ್ನೇಹಿತರಾಗಿರಲು ಸಾಧ್ಯವೇ ಇಲ್ಲ ಎಂದು ಜನ ಅಂದುಕೊಳ್ಳುತ್ತಾರೆ. ಅವರ ಮಧ್ಯೆ ಬೇರೇನೋ ಇರಬೇಕು ಅಂತ ಯೋಚಿಸುತ್ತಾರೆ’ ಎಂದು ಸಮಾಜದ ಮನಸ್ಥಿತಿಯನ್ನು ಟೀಕಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗಂಡನ ಮನೆಗೆ ಹೋದ ತಕ್ಷಣ ಹೆತ್ತವರ ಬಾಂಧವ್ಯ ಮುಗಿಯಲ್ಲ!: ಸರ್ಕಾರದ ನಿಯಮ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ – Kannada News

ದೆಹಲಿ, ಜೂ,2: ವಿವಾಹಿತ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ (ಜೂ.2) ಒಂದು ಮಹತ್ವದ ಮತ್ತು ಐತಿಹಾಸಿಕ ತೀರ್ಪನ್ನು ನೀಡಿದೆ. “ಕೇವಲ ವಿವಾಹಿತ ಎಂಬ ಕಾರಣಕ್ಕಾಗಿ ಮಗಳನ್ನು ಯಾವುದೇ ಸರ್ಕಾರಿ ಕಲ್ಯಾಣ ಯೋಜನೆಯ (Welfare Scheme) ಸೌಲಭ್ಯಗಳಿಂದ ವಂಚಿಸುವಂತಿಲ್ಲ” ಎಂದು ಸುಪ್ರೀಂ ಕೋರ್ಟ್​​ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆಲೋಕ್ ಅರಾಧೆ ಅವರಿದ್ದ ಪೀಠವು, ಕಲ್ಯಾಣ ಯೋಜನೆಗಳಿಂದ ವಿವಾಹಿತ ಮಗಳನ್ನು ಹೊರಗಿಡುವುದು ಸಂವಿಧಾನಬಾಹಿರ ಹಾಗೂ ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು) ಮತ್ತು ವಿಧಿ 15 (ತಾರತಮ್ಯದ ನಿಷೇಧ) ರ ಉಲ್ಲಂಘನೆಯಾಗಿದೆ ಎಂದು ತೀವ್ರವಾಗಿ ಆಕ್ಷೇಪಿಸಿದೆ.

“ಮದುವೆಯಾದ ತಕ್ಷಣ ಮಗಳು ತನ್ನ ತಂದೆ-ತಾಯಿಯ ಕುಟುಂಬದ ಸದಸ್ಯಳಾಗಿ ಉಳಿಯುವುದಿಲ್ಲ ಅಥವಾ ಅವರ ಮೇಲೆ ಅವಲಂಬಿತಳಾಗಿರುವುದಿಲ್ಲ ಎಂಬ ಊಹೆ ಸಂವಿಧಾನಾತ್ಮಕವಾಗಿ ಒಪ್ಪಲು ಸಾಧ್ಯವಿಲ್ಲ. ವಿವಾಹವು ಮಗಳು ಮತ್ತು ಆಕೆಯ ಹೆತ್ತವರ ಕುಟುಂಬದ ನಡುವಿನ ಬಾಂಧವ್ಯವನ್ನು ಕೊನೆಗೊಳಿಸುವುದಿಲ್ಲ” ಎಂದು ನ್ಯಾಯಪೀಠವು ಹೇಳಿದೆ. ಇದೇ ವೇಳೆ, ಮಗನಿಗೆ ಮದುವೆಯಾದರೂ ಆತ ಕುಟುಂಬದ ಭಾಗವಾಗಿಯೇ ಇರುತ್ತಾನೆ, ಆದರೆ ಮಗಳಿಗೆ ಮದುವೆಯಾದರೆ ಆಕೆಯನ್ನು ಕುಟುಂಬದಿಂದ ಹೊರಗಿಡುವ ಲಿಂಗ ಆಧಾರಿತ ರೂಢಿಗತ ಸಿದ್ಧಾಂತಗಳನ್ನು ಸಂವಿಧಾನವು ಸಂಪೂರ್ಣವಾಗಿ ತಿರಸ್ಕರಿಸುತ್ತದೆ ಎಂದು ಕೋರ್ಟ್ ಹೇಳಿದೆ.

ಉತ್ತರ ಪ್ರದೇಶದ ಕುಲ್ಸುಮ್ ನಿಶಾ ಎಂಬ ಮಹಿಳೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ ಕೋರ್ಟ್ ಈ ತೀರ್ಪು ನೀಡಿದೆ. ನ್ಯಾಯಬೆಲೆ ಅಂಗಡಿ ಮಾಲೀಕರಾಗಿದ್ದ ನಿಶಾ ಅವರ ತಾಯಿ ಮಾರ್ಚ್ 2024 ರಲ್ಲಿ ನಿಧನರಾಗಿದ್ದರು. ಮದುವೆಯಾಗಿದ್ದರೂ ನಿಶಾ ಅವರು ತಮ್ಮ ತಾಯಿ ಮತ್ತು ಸಹೋದರಿಯರೊಂದಿಗೆ ವಾಸಿಸುತ್ತಿದ್ದರು ಮತ್ತು ಅಂಗಡಿ ನಡೆಸಲು ನೆರವಾಗುತ್ತಿದ್ದರು. ತಾಯಿಯ ನಿಧನದ ನಂತರ ಅನುಕಂಪದ ಆಧಾರದ ಮೇಲೆ ತಮಗೆ ಅಂಗಡಿಯನ್ನು ನೀಡಬೇಕು ಎಂದು ಅವರು ಅರ್ಜಿ ಸಲ್ಲಿಸಿದ್ದರು. ಆದರೆ, ಉತ್ತರ ಪ್ರದೇಶ ಸರ್ಕಾರದ ನಿಯಮಾವಳಿಗಳ ಪ್ರಕಾರ “ಮದುವೆಯಾದ ಮಗಳು ಕುಟುಂಬದ ವ್ಯಾಖ್ಯಾನಕ್ಕೆ ಬರುವುದಿಲ್ಲ” ಎಂಬ ಕಾರಣ ನೀಡಿ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ (SDM) ಮತ್ತು ಅಲಹಾಬಾದ್ ಹೈಕೋರ್ಟ್ ಆಕೆಯ ಅರ್ಜಿಯನ್ನು ತಿರಸ್ಕರಿಸಿದ್ದವು. ಇದನ್ನು ಪ್ರಶ್ನಿಸಿ ನಿಶಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: 87ರ ವಯಸ್ಸಿನಲ್ಲಿ ಮೊದಲ ಬಾರಿ ಸಮುದ್ರ ತೀರಕ್ಕೆ ಹೋದ ಅಜ್ಜಿ, ರಿಯಾಕ್ಷನ್ ಹೇಗಿತ್ತು ನೋಡಿ

ವಿವಾಹಿತ ಮಹಿಳೆಯರು ಸಾಮಾನ್ಯವಾಗಿ ಗಂಡನ ಮನೆಗೆ ಹೋಗುವುದರಿಂದ ಸ್ಥಳೀಯ ನಿವಾಸದ ನಿಯಮ ಪಾಲನೆಯಾಗುವುದಿಲ್ಲ ಎಂಬ ಸರ್ಕಾರದ ವಾದವನ್ನು ತಳ್ಳಿಹಾಕಿದ ಕೋರ್ಟ್, “ಪ್ರತಿಯೊಬ್ಬ ವಿವಾಹಿತ ಮಗಳು ಬೇರೆಡೆಯೇ ವಾಸಿಸುತ್ತಾಳೆ ಎಂಬ ಕಲ್ಪನೆಯ ಆಧಾರದ ಮೇಲೆ ಇಡೀ ಮಹಿಳಾ ಸಮುದಾಯವನ್ನು ಯೋಜನೆಯಿಂದ ಹೊರಗಿಡುವುದು ತಪ್ಪು” ಎಂದಿದೆ. ಅನುಕಂಪದ ಆಧಾರದ ಹಂಚಿಕೆಯ ಉದ್ದೇಶವು ಕುಟುಂಬಕ್ಕೆ ತಕ್ಷಣದ ಆರ್ಥಿಕ ಪರಿಹಾರ ನೀಡುವುದಾಗಿದೆ. ಅಧಿಕಾರಿಗಳು ನಿಶಾ ಅವರು ಅದೇ ಹಳ್ಳಿಯಲ್ಲಿ ವಾಸಿಸುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ, ಕೇವಲ ‘ಮದುವೆಯಾಗಿದೆ’ ಎಂಬ ಕಾರಣಕ್ಕೆ ಆಕೆಗೆ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ, 4 ವಾರಗಳ ಒಳಗಾಗಿ ಕುಲ್ಸುಮ್ ನಿಶಾ ಪರವಾಗಿ ನ್ಯಾಯಬೆಲೆ ಅಂಗಡಿ ಹಂಚಿಕೆ ಆದೇಶ ಹೊರಡಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್, ಬುಧವಾರದಿಂದ 2 ಹೆಚ್ಚುವರಿ ರೈಲು ಸೇರ್ಪಡೆ – Kannada News

ಬೆಂಗಳೂರು, (ಜೂನ್ 02): ಯೆಲ್ಲೋ ಲೈನ್ ಮೆಟ್ರೋ (Yellow Line Metro) ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಗುಡ್‌ನ್ಯೂಸ್ ಕೊಟ್ಟಿದ್ದು, ನಾಳೆಯಿಂದ ಅಂದರೆ ಜೂನ್ 03ರಿಂದ ಹಳದಿ ಮಾರ್ಗದಲ್ಲಿ (ಯೆಲ್ಲೋ ಲೈನ್ ) ಹೆಚ್ಚುವರಿ 2 ರೈಲುಗಳು ಸೇರ್ಪಡೆಗೊಳ್ಳಲಿವೆ. ಹೀಗಾಗಿ ಪ್ರಯಾಣಿಕರು ರೈಲಿಗಾಗಿ ಕಾಯುವ ಸಮಯ ತಗ್ಗಲಿದೆ. ಹೌದು… ಹಳದಿ ಮಾರ್ಗದಲ್ಲಿ 10ನೇ ರೈಲು ಆರಂಭ ಆಗುವುದರಿಂದ 19.75 ಕಿಲೋ ಮೀಟರ್ ದೂರದ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ಮೆಟ್ರೋ ಮಾರ್ಗದಲ್ಲಿ, ಅದರಲ್ಲೂ ಪೀಕ್‌ ಅವರ್ಸ್‌ನಲ್ಲಿ (Peak Hours) 7 ನಿಮಿಷಕ್ಕೊಂದು ಒಂದು ರೈಲು ಸಂಚಾರಿಸಲಿದೆ.

ಮುಖ್ಯಾಂಶಗಳು

  • ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್
  • ಯೆಲ್ಲೋ ಲೈನ್​ಗೆ ಹೆಚ್ಚುವರಿ ಮೆಟ್ರೋ ರೈಲುಗಳ ಸೇರ್ಪಡೆ
  • ನಾಳೆಯಿಂದ(ಜೂನ್ 03) ಆರ್​​ವಿ ರಸ್ತೆ-ಬೊಮ್ಮಸಂದ್ರಕ್ಕೆ ಸಂಚಾರ
  • ಇನ್ಮುಂದೆ 7 ನಿಮಿಷಗಳ ಅಂತರದಲ್ಲಿ ರೈಲು ಸಂಚರಿಸಲಿವೆ

ಪೀಕ್ ಅವರ್‌ನಲ್ಲಿ ಇನ್ಮುಂದೆ 7 ನಿಮಿಷಕ್ಕೊಂದು ರೈಲು ಓಡಾಡಲಿದೆ. ಇಲ್ಲಿ ತನಕ ಪೀಕ್ ಅವರ್‌ನಲ್ಲಿ 9 ನಿಮಿಷಕ್ಕೊಂದು ರೈಲು ಸಂಚಾರ ಇತ್ತು. ಸಾಮಾನ್ಯ ಸಮಯದಲ್ಲಿ ಪ್ರತಿ ರೈಲಿನ ನಡುವಿನ ಓಡಾಟದ ಅವಧಿ 14 ನಿಮಿಷದಿಂದ 10 ನಿಮಿಷಕ್ಕೆ ಇಳಿಕೆ ಮಾಡಲಾಗಿದೆ.

ಇದನ್ನೂ ಓದಿ: 1ಕಿ.ಮೀ ಚಾಲೆಂಜ್ ಹಾಕಿ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡ ಜಿಬಿಎ!

ವಾರಾಂತ್ಯದಲ್ಲಿ ದಿನವಿಡೀ 10 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಎರಡು ಹೆಚ್ಚುವರಿ ರೈಲುಗಳ ಸೇರ್ಪಡೆಯೊಂದಿಗೆ ಪ್ರತಿದಿನ ಒಟ್ಟು 10 ರೈಲುಗಳು ಕಾರ್ಯನಿರ್ವಹಿಸಲಿದ್ದು, ಇದರಿಂದ ಸೇವಾ ಆವರ್ತನೆಯನ್ನು ಮತ್ತಷ್ಟು ಹೆಚ್ಚಿಸಲು ಹಾಗೂ ನಿರೀಕ್ಷಾ ಸಮಯವನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.

ಬಿಎಂಆರ್‌ಸಿಎಲ್ (BMRCL) ಹಳದಿ ಮಾರ್ಗದ 10ನೇ ರೈಲನ್ನು ಕಳೆದ ಏಪ್ರಿಲ್‌ ತಿಂಗಳ ಕೊನೆಯಲ್ಲಿ ಪಡೆದುಕೊಂಡಿತ್ತು. ಈ ರೈಲು ಸಂಚಾರಕ್ಕೆ ಸೇರ್ಪಡೆಗೊಂಡ ನಂತರ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.

ಇನ್ನು ಫೆಬ್ರವರಿಯಲ್ಲಿ ಹಳದಿ ಮಾರ್ಗಕ್ಕೆ 8ನೇ ರೈಲಿನ ಸೇರ್ಪಡೆಯಾಗಿತ್ತು. ಇದರೊಂದಿಗೆ ರೈಲುಗಳ ನಡುವಿನ ಸಮಯ 9 ನಿಮಿಷಕ್ಕೆ ಇಳಿಕೆಯಾಗಿತ್ತು. ಭಾನುವಾರ ಮಾತ್ರ 14 ನಿಮಿಷಕ್ಕೆ ಒಂದರಂತೆ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಮಾಡುತ್ತಿದ್ದವು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಡುಗೆ ಮಾಡುವಾಗ ಎಲ್​ಪಿಜಿ ಉಳಿಸಬೇಕಾ? ಹೀಗೆ ಮಾಡಿದರೆ 15 ದಿನ ಹೆಚ್ಚು ಗ್ಯಾಸ್ ಬಳಸಬಹುದು! – Kannada News

ನವದೆಹಲಿ, ಜೂನ್ 2: ಇತ್ತೀಚಿನ ದಿನಗಳಲ್ಲಿ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೂ ತಕ್ಷಣ ಸಿಗುತ್ತದೆ ಎಂದು ಹೇಳಲಾಗದಂತಹ ಸ್ಥಿತಿಯಿದೆ. ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ಬಳಸುತ್ತಾರೆ. ಆದರೆ, ಗ್ಯಾಸ್ ಸಿಲಿಂಡರ್ ಹೆಚ್ಚು ಕಾಲ ಬಾಳಿಕೆ ಬರಬೇಕೆಂದು ನೀವು ಬಯಸಿದರೆ, ನೀವು ಕೆಲವು ಸಲಹೆಗಳನ್ನು ಅನುಸರಿಸಬೇಕು. ಅನೇಕ ಜನರು ಗ್ಯಾಸ್ ಅನ್ನು ವ್ಯರ್ಥ ಮಾಡುತ್ತಾರೆ. ನಿಮ್ಮ ಅಡುಗೆ ಅನಿಲ ಸಿಲಿಂಡರ್ ಬಳಕೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಕೆಲವು ಪ್ರಮುಖ ಮಾರ್ಗಗಳಿವೆ. ಈ ಸರಳ ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ಸಾಮಾನ್ಯವಾಗಿ ಒಂದು ತಿಂಗಳವರೆಗೆ ಬಳಸುವ ಸಿಲಿಂಡರ್ ಅನ್ನು 45 ದಿನಗಳವರೆಗೆ ಬಳಸಬಹುದು. ಅಂದರೆ, ನೀವು 15 ದಿನಗಳ ಕಾಲ ಹೆಚ್ಚು ಗ್ಯಾಸ್ ಬಳಸಬಹುದು.

ಗ್ಯಾಸ್ ಉಳಿಸಲು ಏನು ಮಾಡಬೇಕು?:

ಬೆಂಕಿಯ ಬಣ್ಣ ಗಮನಿಸಿ:

ನೀವು ಮೊದಲು ಒಲೆ ಹಚ್ಚಿದಾಗ, ಜ್ವಾಲೆಯು ಯಾವಾಗಲೂ ನೀಲಿ ಬಣ್ಣದ್ದಾಗಿರಬೇಕು. ಜ್ವಾಲೆಯು ಕೆಂಪು ಅಥವಾ ಹಳದಿ ಬಣ್ಣದಲ್ಲಿದ್ದರೆ ಬರ್ನರ್ ರಂಧ್ರಗಳು ಮುಚ್ಚಿಹೋಗಿವೆ ಎಂದರ್ಥ. ಅಂತಹ ಸಮಯದಲ್ಲಿ ಅನಿಲವನ್ನು ಹೆಚ್ಚು ಬಳಸಲಾಗುತ್ತದೆ. ಇದು ನಿಮ್ಮ ಅಡುಗೆ ಗ್ಯಾಸ್ ಅನ್ನು ಬಹಳಷ್ಟು ವ್ಯರ್ಥ ಮಾಡುತ್ತದೆ. ಅದಕ್ಕಾಗಿಯೇ ನೀವು ಬರ್ನರ್‌ಗಳನ್ನು ತಕ್ಷಣ ಸ್ವಚ್ಛಗೊಳಿಸಬೇಕು.

ಪಾತ್ರೆಯ ಮುಚ್ಚಳ ಮುಚ್ಚಿ:

ಅಡುಗೆ ಮಾಡುವಾಗ ಪಾತ್ರೆಯ ಮೇಲೆ ಮುಚ್ಚಳವನ್ನು ಹಾಕುವುದು ಅತ್ಯಗತ್ಯ ಎಂಬುದನ್ನು ನೆನಪಿಡಿ. ಪಾತ್ರೆಯ ಮೇಲೆ ಮುಚ್ಚಳವನ್ನು ಹಾಕುವುದರಿಂದ, ಉಗಿ ಹೊರಹೋಗುವುದಿಲ್ಲ ಮತ್ತು ಆಹಾರವು ವೇಗವಾಗಿ ಬೇಯುತ್ತದೆ. ಇದು 30% ಅನಿಲವನ್ನು ಉಳಿಸುತ್ತದೆ.

ಇದನ್ನೂ ಓದಿ: ಎಲ್‌ಪಿಜಿ ಕೊರತೆ, ದರ ಏರಿಕೆಗೆ ಸೆಡ್ಡು: ಹೋಟೆಲ್ ಕಸ ನೀಡಿ ಬಯೋಗ್ಯಾಸ್ ಪಡೆಯಲು ಮುಂದಾದ ಬೆಂಗಳೂರಿನ ಹೋಟೆಲ್‌ಗಳು!

ಪಾತ್ರೆ ಒಣಗಿರಲಿ:

ಅಡುಗೆ ಪಾತ್ರೆಗಳನ್ನು ಒಲೆಯ ಮೇಲೆ ಇಡುವ ಮೊದಲು, ಅದು ಒದ್ದೆಯಾಗಿರಬಾರದು. ಅದು ಒಣಗಿರಬೇಕು. ಅದು ಒದ್ದೆಯಾಗಿದ್ದರೆ ಬಿಸಿಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಏಕೆಂದರೆ ಅದರಲ್ಲಿರುವ ನೀರು ಆವಿಯಾಗಬೇಕಾಗುತ್ತದೆ. ಆಗ ಅಡುಗೆ ಮಾಡುವ ಅವಕಾಶವಿರುತ್ತದೆ. ಇದು ಅನಿಲವನ್ನು ವ್ಯರ್ಥ ಮಾಡುತ್ತದೆ. ಅದಕ್ಕಾಗಿಯೇ ಅಡುಗೆ ಪಾತ್ರೆಗಳಲ್ಲಿ ಯಾವುದೇ ನೀರಿನ ಹನಿಗಳು ಇರಬಾರದು.

ಅಡುಗೆಗೆ ತಯಾರಿ ಇರಲಿ:

ಗ್ಯಾಸ್ ಸ್ಟವ್ ಆನ್ ಮಾಡುವ ಮುನ್ನವೇ ಅಡುಗೆಗೆ ಬೇಕಾದ ತರಕಾರಿ ಹೆಚ್ಚುವುದು, ಮಸಾಲೆ ಅರೆಯುವುದು, ಬೇಳೆ-ಅಕ್ಕಿ ತೊಳೆಯುವುದನ್ನು ಮುಗಿಸಿಕೊಳ್ಳಿ. ಸ್ಟವ್ ಆನ್ ಮಾಡಿದ ನಂತರ ತರಕಾರಿ ಹುಡುಕುವುದು ಅಥವಾ ಹೆಚ್ಚಲು ಕುಳಿತರೆ ಸಾಕಷ್ಟು ಗ್ಯಾಸ್ ವ್ಯರ್ಥವಾಗುತ್ತದೆ.

ನೆನೆಸಿಟ್ಟು ಅಡುಗೆ ಮಾಡಿ:

ಬೇಳೆ, ಅಕ್ಕಿ ಅಥವಾ ಕಡಲೆ ಬೇಳೆ ಬೇಯಿಸುವ ಮೊದಲು ಕನಿಷ್ಠ ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ಇದರಿಂದ ಅವು ಬೇಗ ಬೇಯುತ್ತವೆ. ಅಡುಗೆ ಮಾಡಲು ಸಮಯವೂ ಕಡಿಮೆ ಸಾಕಾಗುತ್ತದೆ ಮತ್ತು ಅನಿಲ ಉಳಿತಾಯವಾಗುತ್ತದೆ.

ಕುಕ್ಕರ್ ಬಳಸಿ:

ಪ್ರೆಶರ್ ಕುಕ್ಕರ್‌ನಲ್ಲಿ ಸಾಧ್ಯವಾದಷ್ಟು ಆಹಾರವನ್ನು ಬೇಯಿಸುವುದು ಉತ್ತಮ. ಇದರಿಂದ ಅಡುಗೆ ಬೇಗ ಆಗುತ್ತದೆ. ಸಾಮಾನ್ಯ ಪಾತ್ರೆಗಳಿಗಿಂತ ಕುಕ್ಕರ್‌ನಲ್ಲಿ ಅಡುಗೆ ವೇಗವಾಗಿ ಆಗುತ್ತದೆ. ಅನಿಲ ಬಳಕೆ ಕಡಿಮೆಯಾಗುತ್ತದೆ. ಇದು ಸಾಮಾನ್ಯ ಪಾತ್ರೆಗಳಿಗಿಂತ ಶೇ. 20ರಷ್ಟು ಗ್ಯಾಸ್ ಮತ್ತು ಸಮಯ ಎರಡನ್ನೂ ಉಳಿಸುತ್ತದೆ. ಸಾಧ್ಯವಾದರೆ ಒಂದೇ ಕುಕ್ಕರ್‌ನಲ್ಲಿ ಕೆಳಗೆ ಅನ್ನ, ಮೇಲೆ ಬೇಳೆ ಅಥವಾ ತರಕಾರಿ ಇಟ್ಟು ‘ಮಲ್ಟಿ-ಟಾಸ್ಕಿಂಗ್’ ಅಡುಗೆ ಮಾಡಿ.

ಇದನ್ನೂ ಓದಿ: ಕಮರ್ಷಿಯಲ್ ಅಡುಗೆ ಅನಿಲವಾಗಿ ಎಥನಾಲ್ ಬಳಕೆ? ಎಲ್​ಪಿಜಿ ಅವಲಂಬನೆ ತಗ್ಗಿಸಲು ಸರ್ಕಾರದಿಂದ ಹೊಸ ಮಾರ್ಗೋಪಾಯ

ಬರ್ನರ್​ ಬಳಕೆ ಬಗ್ಗೆ ಗಮನವಿರಲಿ:

ದೊಡ್ಡ ಬರ್ನರ್ ನಲ್ಲಿ ಸಣ್ಣ ಪಾತ್ರೆ ಇಟ್ಟು ಅಡುಗೆ ಮಾಡಬಾರದು ಎಂಬುದನ್ನು ನೆನಪಿಡಿ. ಜ್ವಾಲೆ ಪಾತ್ರೆಯ ಆಚೆ ಹೋದರೆ ಗ್ಯಾಸ್ ವ್ಯರ್ಥವಾಗುತ್ತದೆ. ಆದ್ದರಿಂದ, ಮಧ್ಯಮ ಉರಿಯಲ್ಲಿ ಅಡುಗೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಈ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಗ್ಯಾಸ್ ಬಳಕೆಯನ್ನು ಕಡಿಮೆ ಮಾಡಬಹುದು.

ಸಣ್ಣ ಉರಿಯಲ್ಲಿ ಅಡುಗೆ ಮಾಡಿ:

ನೀರು ಅಥವಾ ಅಡುಗೆ ಕುದಿಯಲು ಆರಂಭಿಸಿದ ತಕ್ಷಣ ಗ್ಯಾಸ್ ಉರಿಯನ್ನು ಸಣ್ಣದಾಗಿಸಿ. ನೀರು ಕುದಿಯಲು ಆರಂಭಿಸಿದ ಮೇಲೆ ಉರಿ ದೊಡ್ಡದಾಗಿದ್ದರೂ ತಾಪಮಾನ ಹೆಚ್ಚಾಗುವುದಿಲ್ಲ, ಕೇವಲ ಗ್ಯಾಸ್ ವ್ಯರ್ಥವಾಗುತ್ತದೆ. ಹೀಗಾಗಿ, ಆ ಸಮಯದಲ್ಲಿ ಸಿಮ್​ನಲ್ಲಿಟ್ಟು ಅಡುಗೆ ಮಾಡಿ.

ಫ್ರಿಡ್ಜ್​ನಲ್ಲಿಟ್ಟ ಪದಾರ್ಥಗಳನ್ನು ನೇರವಾಗಿ ಬಿಸಿ ಮಾಡಬೇಡಿ:

ಫ್ರಿಡ್ಜ್‌ನಲ್ಲಿಟ್ಟ ಹಾಲು, ತರಕಾರಿ ಅಥವಾ ಉಳಿದ ಅಡುಗೆಯನ್ನು ಹೊರಗೆ ತೆಗೆದ ತಕ್ಷಣ ಗ್ಯಾಸ್ ಮೇಲೆ ಇಡಬೇಡಿ. ಅದನ್ನು ಕನಿಷ್ಠ 1-2 ಗಂಟೆಗಳ ಕಾಲ ಹೊರಗಿಟ್ಟು, ಅದು ಕೋಣೆಯ ತಾಪಮಾನಕ್ಕೆ ಬಂದ ನಂತರ ಬಿಸಿ ಮಾಡಿ. ಇದರಿಂದ ಆ ಪದಾರ್ಥಗಳು ಬಿಸಿಯಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ.

ಸರಿಯಾದ ಪಾತ್ರೆಗಳ ಆಯ್ಕೆ:

ಅಡುಗೆಗೆ ಬಳಸುವ ಪಾತ್ರೆಯ ತಳಭಾಗವು ಅಗಲವಾಗಿ ಮತ್ತು ಸಮತಟ್ಟಾಗಿರಲಿ. ತುಂಬಾ ದಪ್ಪವಿರುವ ಪಾತ್ರೆಗಳು ಬಿಸಿಯಾಗಲು ಹೆಚ್ಚು ಗ್ಯಾಸ್ ಬೇಕಾಗುತ್ತದೆ. ಹಾಗೆಯೇ ತಳ ಸಣ್ಣಗಿರುವ ಪಾತ್ರೆಗಳಿಂದ ಉsರಿ ಆಚೆ ಹೋಗಿ ಗ್ಯಾಸ್ ವ್ಯರ್ಥವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಲಿಬಾಗ್​ನಲ್ಲಿ 24 ಕೋಟಿ ರೂಪಾಯಿ ಆಸ್ತಿ ಖರೀದಿಸಿದ ಯಶ್, ರಾಧಿಕಾ ಪಂಡಿತ್ – Kannada News

ಕನ್ನಡ ಚಿತ್ರರಂಗದ ತಾರಾ ದಂಪತಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ (Radhika Pandit) ಅವರು ರಿಯಲ್ ಎಸ್ಟೇಟ್ ವಲಯದಲ್ಲಿ ಭಾರಿ ಹೂಡಿಕೆ ಮಾಡಿದ್ದಾರೆ. ಮಹಾರಾಷ್ಟ್ರದ ಅತ್ಯಂತ ಪ್ರಸಿದ್ಧ ಹಾಗೂ ಐಷಾರಾಮಿ ಪ್ರವಾಸಿ ತಾಣಗಳಲ್ಲಿ ಒಂದಾದ ಅಲಿಬಾಗ್‌ನಲ್ಲಿ (Alibag) ಅವರು ಕಡಲತೀರದ ಪ್ರೀಮಿಯಂ ಜಾಗವನ್ನು ಬರೋಬ್ಬರಿ 24 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿದೆ. ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಗೆ ಸಜ್ಜಾಗುತ್ತಿರುವ ಯಶ್ (Yash) ಅವರು ಈ ಆಸ್ತಿಯ ಕಾರಣದಿಂದಲೂ ಸುದ್ದಿ ಆಗಿದ್ದಾರೆ.

ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಸಂಸ್ಥೆಯಾದ ‘ಲಿಯಾಸಿಸ್ ಫೋರಸ್’ ಪಡೆದುಕೊಂಡಿರುವ ಆಸ್ತಿ ನೋಂದಣಿ ದಾಖಲೆಗಳ ಪ್ರಕಾರ, ರಾಯಗಢ ಜಿಲ್ಲೆಯ ಅಲಿಬಾಗ್ ತಾಲ್ಲೂಕಿನ ಕಾಮತ್ ಗ್ರಾಮದಲ್ಲಿ ಕೃಷಿ ಭೂಮಿಯನ್ನು ಯಶ್-ರಾಧಿಕಾ ದಂಪತಿ ಖರೀದಿಸಿದ್ದಾರೆ. ಮೇ 18ರಂದು ಅಲಿಬಾಗ್‌ನ ಉಪ-ನೋಂದಣಾಧಿಕಾರಿ ಕಚೇರಿಯಲ್ಲಿ ಈ ಹಸ್ತಾಂತರ ಪ್ರಕ್ರಿಯೆ ಅಧಿಕೃತವಾಗಿ ನೋಂದಣಿಯಾಗಿದೆ.

ಸಮುದ್ರಕ್ಕೆ ಮುಖ ಮಾಡಿರುವ ಸುಂದರ ತಾಣ ಇದಾಗಿದೆ. ಈ ಆಸ್ತಿಯು ಒಟ್ಟು 5,289 ಚದರ ಮೀಟರ್ (ಸುಮಾರು 0.5289 ಹೆಕ್ಟೇರ್) ವಿಸ್ತೀರ್ಣದ ಕೃಷಿ ಭೂಮಿಯನ್ನು ಒಳಗೊಂಡಿದೆ. ಜಾಗದ ಜೊತೆಗೆ ಇಲ್ಲೊಂದು ಸುಂದರವಾದ ವಸತಿ ಕಟ್ಟಡವೂ ಇದೆ ಎನ್ನಲಾಗಿದೆ. ದಾಖಲೆಗಳ ಪ್ರಕಾರ, ಈ ಜಾಗವು ಕಿಹಿಮ್ ಬೀಚ್ ಪಕ್ಕದಲ್ಲೇ ಇದೆ. ಅತ್ಯಂತ ಆಕರ್ಷಕ ಜಾಗ ಇದಾಗಿದೆ.

ಈ ಆಸ್ತಿಯ ಪೂರ್ವ ಭಾಗದಲ್ಲಿ ಹಳ್ಳಿಯ ರಸ್ತೆಯಿದ್ದರೆ, ಪಶ್ಚಿಮ ಭಾಗದಲ್ಲಿ ವಿಶಾಲವಾದ ಸಮುದ್ರವಿದೆ. ಇನ್ನು, ಉತ್ತರದ ಗಡಿಯಲ್ಲಿರುವ ಸಣ್ಣ ಗಲ್ಲಿಯೊಂದು ನೇರವಾಗಿ ಬೀಚ್‌ಗೆ ದಾರಿ ಕಲ್ಪಿಸುತ್ತದೆ. ಸೆಲೆಬ್ರಿಟಿಗಳ ನೆಚ್ಚಿನ ತಾಣವಾಗಿರುವ ಅಲಿಬಾಗ್‌ನಲ್ಲಿ ಯಶ್ ದಂಪತಿ ತಮ್ಮ ಎರಡನೇ ಮನೆಗಾಗಿ ಈ ಜಾಗ ಖರೀದಿಸಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಕೇಳಿ ಅಭಿಮಾನಿಗಳಿಗೆ ಹೆಮ್ಮೆ ಆಗಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಟೀಸರ್​ನಲ್ಲಿ ಅಂಥ ದೃಶ್ಯ ಇದೆ ಎಂದು ಟೀಕಿಸಿದವರಿಗೆ ಉತ್ತರ ನೀಡಿದ ಯಶ್

ಈ ಭಾರಿ ಮೊತ್ತದ ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ ಯಶ್ ಮತ್ತು ರಾಧಿಕಾ ಅವರು 1.44 ಕೋಟಿ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ಪಾವತಿಸಿದ್ದಾರೆ. ಇದರೊಂದಿಗೆ 60 ಸಾವಿರ ರೂಪಾಯಿ ನೋಂದಣಿ ಶುಲ್ಕ ಮತ್ತು 5,200 ರೂಪಾಯಿ ದಾಖಲೆ ನಿರ್ವಹಣಾ ವೆಚ್ಚವನ್ನು ಪಾವತಿಸಲಾಗಿದೆ. ಸೆಕ್ಷನ್ 7ರ ಅಡಿಯಲ್ಲಿ ಈ ಭೂಮಿಯನ್ನು ಕೃಷಿ ಭೂಮಿ ಎಂದು ವರ್ಗೀಕರಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version