National Maritime day 2026: ಏಪ್ರಿಲ್‌ 5ರಂದೇ ರಾಷ್ಟ್ರೀಯ ಕಡಲ ದಿನವನ್ನು ಆಚರಿಸುವುದು ಏಕೆ?

National Maritime day 2026: ಏಪ್ರಿಲ್‌ 5ರಂದೇ ರಾಷ್ಟ್ರೀಯ ಕಡಲ ದಿನವನ್ನು ಆಚರಿಸುವುದು ಏಕೆ?

ಬಹುತೇಕ ದೇಶಗಳು ಅಗತ್ಯ ಸರಕುಗಳನ್ನು ಆಮದು ಹಾಗೂ ರಫ್ತು ಮಾಡಿಕೊಳ್ಳಲು ಸಮುದ್ರಯಾನಯನ್ನೇ ಅವಲಂಬಿಸಿದೆ. ಸಮುದ್ರಯಾನವು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಾಚೀನ ಕಾಲದಿಂದಲೂ, ನಮ್ಮ ದಕ್ಷಿಣದ ರಾಜ್ಯಗಳು, ಪೂರ್ವ ಏಷ್ಯಾ ಹಾಗೂ ಆಫ್ರಿಕಾದ ದೇಶಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ಹೊಂದಿವೆ. ಈ ಎಲ್ಲಾ ಕಾರಣಕ್ಕಾಗಿ ಭಾರತ ಆರ್ಥಿಕತೆಗೆ ಸಮುದ್ರಯಾನದ ಕೊಡುಗೆ ಅಗಾಧವಾದದ್ದು. ಹೀಗಾಗಿ ದೇಶದ ಆರ್ಥಿಕತೆಗೆ ಈ ನೌಕಾಯಾನದ ಕೊಡುಗೆ ಹಾಗೂ ಈ ಕಡಲ ವ್ಯಾಪಾರದ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಈ ಒಂದು ದಿನವನ್ನು ಮೀಸಲಿಡಲಾಗಿದೆ. ಅದುವೇ ರಾಷ್ಟ್ರೀಯ ಕಡಲ ದಿನ. ಪ್ರತಿ ವರ್ಷ ಏಪ್ರಿಲ್ 5 ರಂದು ರಾಷ್ಟ್ರೀಯ ಕಡಲ ದಿನವನ್ನು (National Maritime day) ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಹಾಗೂ ಮಹತ್ವದ ಕುರಿತಾದ ಮಾಹಿತಿ ತಿಳಿದುಕೊಳ್ಳಿ.

ರಾಷ್ಟ್ರೀಯ ಕಡಲ ದಿನದ ಇತಿಹಾಸವೇನು?

ಭಾರತೀಯ ಉದ್ಯಮಿಗಳ ದಿ ಸಿಂಧಿಯಾ ಸ್ಟೀಮ್‌ ನ್ಯಾವಿಗೇಶನ್‌ ಲಿ ಈ ಹಡಗು ಕಂಪೆನಿಯ ಮೊದಲ ಹಡಗು ಎಸ್‌ಎಸ್‌ ಲಾಯಲ್ಟಿ ಬಾಂಬೆಯಿಂದ (ಮುಂಬಯಿ) ಯುನೈಟೆಡ್‌ ಕಿಂಗ್‌ಡಮ್‌ ಈ ಸವಿನೆನಪಿಗೆ ರಾಷ್ಟ್ರೀಯ ಕಡಲ ದಿನವನ್ನು 1964ರಿಂದ ಆಚರಿಸಲಾಯಿತು. ಅಂದಿನಿಂದ ಪ್ರತೀ ವರ್ಷ ಎಪ್ರಿಲ್‌ 5ರಂದು ಭಾರತದಲ್ಲಿ ರಾಷ್ಟ್ರೀಯ ಕಡಲ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಏಪ್ರಿಲ್‌ ಫೂಲ್‌ ಆಚರಣೆ ಆರಂಭವಾದ್ದು ಹೇಗೆ? ಈ ದಿನದ ವಿಶೇಷತೆಯೇನು ತಿಳಿಯಿರಿ

ರಾಷ್ಟ್ರೀಯ ಕಡಲ ದಿನದ ಮಹತ್ವವೇನು?

ಸಮುದ್ರಯಾನವು ಸರಕುಗಳನ್ನು ಸಾಗಿಸುವ ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದು. ಅಂತಾರಾಷ್ಟ್ರೀಯ ದೇಶದ ಆರ್ಥಿಕತೆಗೆ ಈ ನೌಕಾಯಾನದ ಕೊಡುಗೆ ಹಾಗೂ ಈ ಕಡಲ ವ್ಯಾಪಾರದ ಮಹತ್ವವನ್ನು ತಿಳಿಸುವ ಉದ್ದೇಶವನ್ನು ಹೊಂದಿದೆ. ಭಾರತೀಯ ಕಡಲ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿದವರನ್ನು ವರುಣ್’ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಹಾಗೂ ಈ ವಿಶೇಷ ದಿನದಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Vasthu Tips: ಮನೆಯ ಈ ದಿಕ್ಕಿನಲ್ಲಿ ಎಂದಿಗೂ ಕಸ ರಾಶಿ ಹಾಕಬೇಡಿ; ಕಷ್ಟ ತಪ್ಪಿದ್ದಲ್ಲ!

ಪುರಾಣಗಳು ಲಕ್ಷ್ಮಿ ದೇವಿಯು ಸ್ವಚ್ಛ ಮತ್ತು ಕ್ರಮಬದ್ಧವಾದ ಮನೆಯಲ್ಲಿ ವಾಸಿಸುತ್ತಾಳೆ ಎಂದು ಹೇಳುತ್ತವೆ. ಅನಗತ್ಯ ವಸ್ತುಗಳಿಂದ ತುಂಬಿದ ಮನೆಯು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಮತ್ತು ಆದಾಯವು ಸ್ಥಿರವಾಗಿರುವುದಿಲ್ಲ. ಈ ಗೊಂದಲವು ಅನಗತ್ಯ ಖರ್ಚುಗಳು ಮತ್ತು ಸಾಲಕ್ಕೆ ಸಿಲುಕುವಂತಹ ಆರ್ಥಿಕ ತೊಂದರೆಗಳಿಗೆ ಕಾರಣವಾಗುತ್ತದೆ.

ಹಳೆಯ ಪೀಠೋಪಕರಣಗಳು ಮತ್ತು ಮುರಿದ ವಸ್ತುಗಳ ಮೇಲೆ ಧೂಳು, ಕೊಳಕು ಮತ್ತು ಬ್ಯಾಕ್ಟೀರಿಯಾಗಳು ಬೇಗನೆ ಸಂಗ್ರಹವಾಗುತ್ತವೆ. ವಾಸ್ತು ಪ್ರಕಾರ, ಮನೆ ಹೆಚ್ಚು ವಿಶಾಲ ಮತ್ತು ಗಾಳಿಯಾಡುತ್ತಿದ್ದರೆ, ಆರೋಗ್ಯವು ಉತ್ತಮವಾಗಿರುತ್ತದೆ. ಹಳೆಯ ಪೀಠೋಪಕರಣಗಳು ಮನೆಯಲ್ಲಿನ ಗಾಳಿಯನ್ನು ಕಲುಷಿತಗೊಳಿಸಬಹುದು, ಇದರಿಂದಾಗಿ ಕುಟುಂಬ ಸದಸ್ಯರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಮನೆಯಲ್ಲಿ ವಾತಾವರಣ ಅಸ್ತವ್ಯಸ್ತವಾಗಿದ್ದರೆ, ಅದು ನಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಇದು ಸಣ್ಣ ವಿಷಯಗಳಿಗೆ ಕಿರಿಕಿರಿ, ಅನಗತ್ಯ ವಾದಗಳು ಮತ್ತು ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಬಹುದು. ಶಾಂತಿಯುತ ವಾತಾವರಣವಿಲ್ಲದಿದ್ದಾಗ, ಬಂಧಗಳು ದುರ್ಬಲಗೊಳ್ಳುತ್ತವೆ.

ಈಶಾನ್ಯ ಮೂಲೆ – ಅತ್ಯಂತ ಅಪಾಯಕಾರಿ:

ವಾಸ್ತು ಶಾಸ್ತ್ರದಲ್ಲಿ, ಈಶಾನ್ಯ ದಿಕ್ಕನ್ನು ದೈವಿಕ ಮೂಲೆ ಎಂದು ಪರಿಗಣಿಸಲಾಗುತ್ತದೆ. ಈ ಮೂಲೆಯಲ್ಲಿ ಹಳೆಯ ಚಪ್ಪಲಿ, ಭಾರವಾದ ವಸ್ತುಗಳು, ಮುರಿದ ಪಾತ್ರೆಗಳು ಅಥವಾ ಕಸವನ್ನು ತಪ್ಪಾಗಿ ಇಡಬಾರದು. ಇಲ್ಲಿ ಕೊಳಕು ಇದ್ದರೆ, ಗಂಭೀರ ನಕಾರಾತ್ಮಕತೆಯು ಮನೆಗೆ ಪ್ರವೇಶಿಸುತ್ತದೆ. ಇದು ಮಕ್ಕಳ ಸಮಸ್ಯೆಗಳು ಮತ್ತು ಗಂಭೀರ ಆರ್ಥಿಕ ನಷ್ಟಗಳಿಗೆ ಕಾರಣವಾಗಬಹುದು. ಈ ಮೂಲೆಯನ್ನು ಯಾವಾಗಲೂ ಖಾಲಿ ಮತ್ತು ಸ್ವಚ್ಛವಾಗಿಡಬೇಕು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB vs CSK: ಗೆಲ್ಲೋರು ಯಾರು? ಹೀಗಿದೆ ಲೆಕ್ಕಾಚಾರ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಇಂದು (ಏ.5) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್​ನ 11ನೇ ಪಂದ್ಯದಲ್ಲಿ ಬದ್ಧವೈರಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಮುಖಾಮುಖಿಯಾಗಲಿದೆ. ಸೌತ್ ಡರ್ಬಿ ಪಂದ್ಯ ಎಂದೇ ಬಿಂಬಿತವಾಗಿರುವ ಈ ಮ್ಯಾಚ್​ನಲ್ಲಿ ಗೆಲ್ಲೋರು ಯಾರು ಎಂಬುದೇ ಈಗ ಕುತೂಹಲ. ಈ ಕುತೂಹಲವನ್ನು ತಣ್ಣಿಸುವಂತಹ ಲೆಕ್ಕಾಚಾರ ಇಲ್ಲಿದೆ…

ಗೆಲುವಿನ ಮುನ್ಸೂಚನೆ: ಯಾರ ಕೈ ಮೇಲು?

ಪ್ರಸ್ತುತ ಫಾರ್ಮ್ ಮತ್ತು ಅಂಕಿಅಂಶಗಳನ್ನು ಗಮನಿಸಿದರೆ, ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲುವ ಸಾಧ್ಯತೆ 60.9% ರಷ್ಟಿದೆ. ಕಳೆದ ಸಾಲಿನ ಚಾಂಪಿಯನ್ ಆಗಿರುವ ಆರ್​ಸಿಬಿ ತಂಡ, ತನ್ನ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದೇ ಗೆಲುವಿನ ಲಯವನ್ನು ಇಂದು ಸಹ ಮುಂದುವರೆಸುವ ವಿಶ್ವಾಸದಲ್ಲಿದೆ.

ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಆರಂಭಿಕ ಎರಡು ಪಂದ್ಯಗಳಲ್ಲಿ (ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ) ಸೋಲನುಭವಿಸಿ ಒತ್ತಡದಲ್ಲಿದೆ. ಇದೀಗ ಬಲಿಷ್ಠ ಆರ್​ಸಿಬಿ ತಂಡವನ್ನು ಅವರ ತವರಿನಲ್ಲೇ ಮಣಿಸುವುದು ಸಿಎಸ್​ಕೆ ತಂಡಕ್ಕೆ ಅಂದು ಕೊಂಡಷ್ಟು ಸುಲಭವಲ್ಲ.

ಮುಖಾಮುಖಿ ದಾಖಲೆ:

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೇಲುಗೈ ಸಾಧಿಸಿದ್ದರೂ, ಬೆಂಗಳೂರಿನ ಮೈದಾನದಲ್ಲಿ ಇಬ್ಬರ ನಡುವೆ ಸಮಬಲದ ಹೋರಾಟ ನಡೆದಿದೆ:

  • ಒಟ್ಟು ಪಂದ್ಯಗಳು: 35
  • CSK ಜಯ: 21
  • RCB ಜಯ: 13
  • 1 ಪಂದ್ಯ ಕಾರಣಾಂತರಗಳಿಂದ ರದ್ದಾಗಿತ್ತು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಭಯ ತಂಡಗಳು ಒಟ್ಟು 11 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ಬಾರಿ ಗೆದ್ದಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ಸಲ ಜಯ ಸಾಧಿಸಿದೆ. ಅಂದರೆ ಆರ್​ಸಿಬಿ ತಂಡದ ತವರು ಮೈದಾನದಲ್ಲಿ ಸಿಎಸ್​ಕೆ ಸಮಬಲದ ಹೋರಾಟ ನೀಡಿದೆ.

ಪಿಚ್ ವರದಿ:

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಪಿಚ್ ಬ್ಯಾಟರ್‌ಗಳ ಪಾಲಿಗೆ ಸ್ವರ್ಗ. ಚಿಕ್ಕ ಬೌಂಡರಿಗಳಿರುವುದರಿಂದ ರನ್ ಮಳೆ ಗ್ಯಾರಂಟಿ. ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ದುಕೊಂಡು, ನಂತರ ಗುರಿ ಬೆನ್ನಟ್ಟುವುದು ಇಲ್ಲಿನ ಯಶಸ್ಸಿನ ಸೂತ್ರ.

ಪ್ರಮುಖ ವಿಷಯಗಳು:

  • ಧೋನಿ ಅಲಭ್ಯತೆ: ಗಾಯದ ಸಮಸ್ಯೆಯಿಂದಾಗಿ ಎಂ.ಎಸ್. ಧೋನಿ ಇಂದಿನ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಇದು ಸಿ.ಎಸ್.ಕೆ ತಂಡದ ಆತ್ಮವಿಶ್ವಾಸಕ್ಕೆ ದೊಡ್ಡ ಹೊಡೆತ ನೀಡಬಹುದು.
  • ಕೊಹ್ಲಿ ಅಬ್ಬರ: ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲಿ ಅಜೇಯ 50+ ರನ್ ಬಾರಿಸಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಹೊಸ ಆಟಗಾರ ಜೇಕಬ್ ಡಫಿ ಪವರ್‌ಪ್ಲೇನಲ್ಲಿ ವಿಕೆಟ್ ಪಡೆಯುವ ಜವಾಬ್ದಾರಿ ಹೊತ್ತಿದ್ದಾರೆ.

ಉಭಯ ತಂಡಗಳ ಕೀ ಪ್ಲೇಯರ್ಸ್​:

  • RCB: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಟಿಮ್ ಡೇವಿಡ್ ಮತ್ತು ಜೇಕಬ್ ಡಫಿ.
  • CSK: ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ ಶಿವಂ ದುಬೆ ಮತ್ತು ನೂರ್ ಅಹಮದ್.

ಇದನ್ನೂ ಓದಿ: ತಂದೆ-ಮಗನನ್ನು ಔಟ್ ಮಾಡಿ ವಿಶ್ವ ದಾಖಲೆ ಬರೆದ ಜೇಮ್ಸ್ ಅ್ಯಂಡರ್ಸನ್

ಗೆಲ್ಲೋದು ಯಾರು?

ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲಯ ಹಾಗೂ ತವರು ಮೈದಾನದಲ್ಲಿನ ಅಭಿಮಾನಿಗಳ ಬೆಂಬಲವನ್ನು ಗಣನೆಗೆ ತೆಗೆದುಕೊಂಡರೆ, ಇಂದಿನ ಮ್ಯಾಚ್​ನಲ್ಲೂ ಆರ್​ಸಿಬಿ ತಂಡವೇ ಜಯಭೇರಿ ಬಾರಿಸಲಿದೆ.

 

Source link

ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್​​: ಪ್ರೀತಿ ಹೆಸರಲ್ಲಿ ಯುವತಿ ಮೇಲೆ ಅತ್ಯಾಚಾರ ಆರೋಪ; ದೂರು ದಾಖಲು

ಹುಬ್ಬಳ್ಳಿ, ಏಪ್ರಿಲ್​​ 05: ಜಿಮ್​​ಗೆ ಬರುವ ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಅದನ್ನು ವಿಡಿಯೋ ಮಾಡಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪ ಸಂಬಂಧ ಹುಬ್ಬಳ್ಳಿಯ ಜಿಮ್​ ಟ್ರೈನರ್ ಸಮೀರ್​ ವಿರುದ್ಧ ಪ್ರಕರಣ ದಾಖಲಾಗಿರೋದು ಈಗಾಗಲೇ ದೇಶಾದ್ಯಂತ ಸುದ್ದಿಯಾಗಿದೆ. ಘಟನೆ ಬಗ್ಗೆ ಹಿಂದೂಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ಹುಬ್ಬಳ್ಳಿಯಲ್ಲಿಯೇ ಮತ್ತೊಂದು ಲವ್ ಜಿಹಾದ್ ಆರೋಪ ಪ್ರಕರಣ ಬಯಲಾಗಿದೆ. ಪ್ರೀತಿಸುವ ನಾಟಕವಾಡಿ ಹಿಂದೂ ಯುವತಿಯ ಮೇಲೆ ಮುಫೀಸ್ ಮಿಯಾನ್ನವರ್ ಎಂಬಾತನಿಂದ ಅತ್ಯಾಚಾರ ನಡೆದಿದೆ, ಬ್ಲ್ಯಾಕ್​​ಮೇಲ್​​‌ ಮಾಡಿ ನಿರಂತರ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದ 5 ವರ್ಷಗಳ ಹಿಂದೆ ಕಾಲೇಜು ವಿದ್ಯಾರ್ಥಿನಿಯಾಗಿದ್ದ ಸಂತ್ರಸ್ತ ಯುವತಿಗೆ ಮತ್ತೊಂದು ಕಾಲೇಜಿನ ಸ್ಟೂಡೆಂಟ್​​ ಆಗಿದ್ದ ಕಮರಿಪೇಟೆಯ ಗವಿ ಓಣಿ ನಿವಾಸಿ ಮುಫೀಸ್ ಮಿಯಾನ್ನವರ್ ಪರಿಚಯ ಕಾರ್ಯಕ್ರಮವೊಂದರಲ್ಲಿ ಆಗಿತ್ತು. ಆ ಬಳಿಕ ಇಬ್ಬರೂ ಪರಸ್ಪರ ಸಂಪರ್ಕದಲ್ಲಿದ್ದು, ಯುವತಿಯ ಜೊತೆ ಹಲವು ಪ್ರದೇಶಗಳಲ್ಲಿ ಆರೋಪಿ ಓಡಾಡಿದ್ದ. ಇಬ್ಬರ ನಡುವೆ ಸಲುಗೆ ಬೆಳೆದ ಕಾರಣ ಒಂದು ದಿನ ಸಂತ್ರಸ್ತೆಯನ್ನು ಗದಗ ರಸ್ತೆಯ ಸೇತುವೆಯ ಬಳಿ ಕರೆದುಕೊಂಡು ಹೋಗಿದ್ದ ಮುಫೀಸ್, ಯುವತಿಯ ವಿರೋಧದ ನಡುವೆಯೂ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಅಲ್ಲದೆ ಆ ದೃಶ್ಯಗಳನ್ನು ಸೆರೆ ಹಿಡಿದಿದ್ದ. ಬಳಿಕ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನ ಉಳಿಸುವುದಿಲ್ಲ. ತಾನು ಕರೆದಾಗಲೆಲ್ಲ ಬರಬೇಕು ಎಂದು ಬೆದರಿಕೆ ಹಾಕಿದ್ದ ಎಂದು ಯುವತಿ ದೂರಲ್ಲಿ ಆರೋಪಿಸಿದ್ದಾಳೆ.

ಇದನ್ನೂ ಓದಿ: ಹುಬ್ಬಳ್ಳಿ ಲವ್ ಜಿಹಾದ್ ಕೇಸ್‌; ಯುವತಿಯನ್ನು ಮಾಡೆಲ್ ಮಾಡ್ತೇನೆಂದು ನಂಬಿಸಿ ಗರ್ಭಿಣಿ ಮಾಡಿದ್ನಾ ಸಮೀರ್?

ಆ ಬಳಿಕ 2025ರಲ್ಲಿ ಯುವತಿಯನ್ನು ಬ್ಲ್ಯಾಕ್​​ಮೇಲ್​​ ಮಾಡಿ ಧಾರವಾಡದಲ್ಲಿ ರಿಜಿಸ್ಟರ್ ಮದುವೆ ಆಗಲು ಮುಫೀಸ್ ಸಿದ್ಧತೆ ನಡೆಸಿದ್ದ. ಆದರೆ ವಿಷಯ ತಿಳಿದು ವಿಯುವತಿ ಕುಟುಂಬಸ್ಥರು ಮದುವೆ ನಿಲ್ಲಿಸಿದ್ದರು. ಯುವತಿ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಆರೋಪಿ ಸುಮಾರು 10-15 ಬಾರಿ ಭೇಟಿ ನೀಡಿದ್ದ. ಈ ನಡುವೆ 2025ರ ನವೆಂಬರ್​​ ಮೂರನೇ ವಾರ ಯುವತಿ ಮನೆಗೆ ಮತ್ತೆ ಮುಫೀಸ್ ಬಂದಿದ್ದು, ಆ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಇದನ್ನೇ ದುರುಪಯೋಗ ಮಾಡಿಕೊಂಡು ಯುವತಿ ಮೇಲೆ ಅತ್ಯಾಚಾರ ಮಾಡಿರುವ ಆರೋಪಿ, ವಿಷಯ ಯಾರಿಗಾದರೂ ಹೇಳಿದರೆ ನಿನ್ನ ತಂದೆ-ತಾಯಿಯನ್ನ ಸುಮ್ಮನೆ ಬಿಡುವುದಿಲ್ಲ ಎಂದು ಮತ್ತೆ ಬೆದರಿಸಿದ್ದ. ಹೀಗಾಗಿ ಹೆದರಿ ವಿಷಯವನ್ನು ಯುವತಿ ಆರಂಭದಲ್ಲಿ ಯಾರಿಗೂ ತಿಳಿಸಿರಲಿಲ್ಲ. ಆದರೆ ಈಗ ಸಮೀರ್ ಮುಲ್ಲಾನ ಲವ್ ಜಿಹಾದ್ ಪ್ರಕರಣ ಹೊರ ಬಂದ‌ ಬಳಿಕ ದೈರ್ಯದಿಂದ ಯುವತಿ ದೂರು ನೀಡಿದ್ದಾಳೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಇರಾನ್​ನಲ್ಲಿ ನಾಪತ್ತೆಯಾಗಿದ್ದ ಅಮೆರಿಕ ಯುದ್ಧ ವಿಮಾನದ ಪೈಲಟ್ ಸಿಕ್ಕಿದ್ದಾರೆ: ಡೊನಾಲ್ಡ್​ ಟ್ರಂಪ್

ಟೆಹ್ರಾನ್, ಮಾರ್ಚ್​ 05: ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧವು ಹೆಚ್ಚು ಗಂಭೀರವಾಗುತ್ತಿದೆ. ಇತ್ತೀಚೆಗೆ, ಎರಡು ಯುಎಸ್ ಮಿಲಿಟರಿ ವಿಮಾನಗಳು ಇರಾನ್​ನಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಅಪಘಾತಕ್ಕೀಡಾಗಿದ್ದು, ಆ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಪೈಲಟ್ ಸಿಕ್ಕಿರುವುದಾಗಿ ಡೊನಾಲ್ಡ್​ ಟ್ರಂಪ್(Donald Trump) ಹೇಳಿದ್ದಾರೆ. ಟ್ರೂತ್‌ಸೋಶಿಯಲ್‌ನಲ್ಲಿನ ಪೋಸ್ಟ್‌ನಲ್ಲಿ, ಟ್ರಂಪ್ ಮಾಹಿತಿ ನೀಡಿದ್ದು, ಈ ಕಾರ್ಯಾಚರಣೆಯನ್ನು ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಧೈರ್ಯಶಾಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದೆಂದು ಬಣ್ಣಿಸಿದ್ದಾರೆ.

ಪೈಲಟ್ ಇರಾನ್‌ನ ಪರ್ವತಗಳ ಹಿಂದೆ ಇದ್ದರು, ಅವರನ್ನು ಇಸ್ರೇಲಿ ಪಡೆಗಳು ಹಿಂಬಾಲಿಸುತ್ತಿದ್ದವು. ಒಬ್ಬನೇ ಒಬ್ಬ ಅಮೆರಿಕನ್ನನ ಸಾವು ಅಥವಾ ಗಾಯಗೊಳ್ಳದೆ ನಾವು ಈ ಎರಡೂ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಯಿತು. ಎರಡು ದಿನಗಳಿಂದ ಪೈಲಟ್ ನಾಪತ್ತೆಯಾಗಿದ್ದರು, ಭಾರೀ ಹೋರಾಟದ ಬಳಿಕ ಅವರನ್ನು ರಕ್ಷಿಸಲಾಗಿದೆ ಎಂದು ಯುಎಸ್ ಅಧಿಕಾರಿಗಳು ಹೇಳಿರುವುದಾಗಿ ಅಲ್​ ಜಜೀರಾ ವರದಿ ಮಾಡಿದೆ.

ಅಮೆರಿಕದ ಎಫ್-15ಇ ಸ್ಟ್ರೈಕ್ ಈಗಲ್ ವಿಮಾನವು ಒಬ್ಬ ಪೈಲಟ್ ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಯ ಅಧಿಕಾರಿಯನ್ನು ಹೊತ್ತೊಯ್ದಿತ್ತು.ಅವರಲ್ಲಿ ಒಬ್ಬರನ್ನು ತಕ್ಷಣವೇ ರಕ್ಷಿಸಲಾಗಿದ್ದರೆ, ಮತ್ತೊಬ್ಬರು ಕಾಣೆಯಾಗಿದ್ದರು. ಇರಾನ್ ಅಮೆರಿಕ, ಇಸ್ರೇಲಿ ಮತ್ತು ಪ್ರಾದೇಶಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಮುಂದುವರೆಸಿದೆ.

ಮತ್ತಷ್ಟು ಓದಿ: ​ಇರಾನ್ ಕದನವಿರಾಮಕ್ಕೆ ಮನವಿ ಮಾಡಿದೆ; ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ

ಬುಶೆಹ್ರ್ ಪರಮಾಣು ಸೌಲಭ್ಯದ ಬಳಿ ಶನಿವಾರ ನಡೆದ ವೈಮಾನಿಕ ದಾಳಿಯಲ್ಲಿ ಒಬ್ಬ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದರು ಮತ್ತು ಬೆಂಬಲ ಕಟ್ಟಡಕ್ಕೆ ಹಾನಿಯಾಗಿತ್ತು. ಮಧ್ಯ ಇರಾನ್ ಮೇಲೆ F-15E ಯುದ್ಧ ವಿಮಾನವನ್ನು ಗುರಿಯಾಗಿರಿಸಿಕೊಂಡು ಹಾರಿಸಲಾಗಿತ್ತು ಮತ್ತು ಅದು ಕೊಹ್ಗಿಲುಯೆ ಮತ್ತು ಬೋಯರ್-ಅಹ್ಮದ್ ಪ್ರಾಂತ್ಯದಲ್ಲಿ ಪತನಗೊಂಡಿರಬಹುದು ಎಂದು ಇರಾನಿನ ಮಾಧ್ಯಮವೊಂದು ತಿಳಿಸಿದೆ.
ಇರಾನ್ ಸೇನೆಯು ಅಮೆರಿಕದ ಜೆಟ್ ಸಿಬ್ಬಂದಿಗಾಗಿ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಸದಸ್ಯನ ಇರುವಿಕೆಯ ಬಗ್ಗೆ ಮಾಹಿತಿ ನೀಡುವ ಯಾವುದೇ ನಾಗರಿಕನಿಗೆ ಅದು 60,000 ಡಾಲರ್ ಬಹುಮಾನವನ್ನು ಘೋಷಿಸಿತ್ತು.

ನೈಋತ್ಯ ಇರಾನ್‌ನ ಅನೇಕ ಜನರು ಅಮೆರಿಕನ್ ಯುದ್ಧ ವಿಮಾನ ಪತನಗೊಂಡ ಪ್ರದೇಶದ ಸುತ್ತಮುತ್ತ ಖಾಸಗಿ ಕಾರುಗಳಲ್ಲಿ ತೆರಳಿ ಅಮೆರಿಕನ್ ಪೈಲಟ್‌ನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಪೈಲಟ್‌ ಜೊತೆ ಯಾರೂ ಅನುಚಿತವಾಗಿ ವರ್ತಿಸಬಾರದು ಎಂದು ಇರಾನ್ ಸಶಸ್ತ್ರ ಪಡೆಗಳು ಜನರಿಗೆ ಮನವಿ ಮಾಡಿದ್ದವು ಎಂದು ಮಾಧ್ಯಮಗಳು ವರದಿ ಪ್ರಕಟಿಸಿವೆ.

ಬ್ರಿಟನ್‌ನ ಆರ್‌ಎಎಫ್ ಲೇಕನ್‌ಹೀತ್ ತಾಣದಲ್ಲಿ ನೆಲೆಯೂರಿರುವ 494ನೇ ಫೈಟರ್ ಸ್ಕ್ವಾಡ್ರನ್‌ಗೆ ಸೇರಿದ F-15E ಸ್ಟ್ರೈಕ್ ಈಗಲ್ ವಿಮಾನವನ್ನೂ ಹೊಡೆದುರುಳಿಸಲಾಗಿದೆ ಎಂದು ಹೇಳಿದೆ. ಫೆಬ್ರವರಿ 28ರಂದು ಸಂಘರ್ಷ ಆರಂಭವಾದ ನಂತರ ಇರಾನ್ ಮೂರನೇ ಬಾರಿ F-35 ಅನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳುತ್ತಿದೆ.

ಮಾರ್ಚ್ 23 ಮತ್ತು ಏಪ್ರಿಲ್ 2ರಂದು ಟೆಹ್ರಾನ್ ಇದೇ ರೀತಿಯ ಹೇಳಿಕೆ ನೀಡಿತ್ತು. ಆ ಎರಡೂ ಬಾರಿ ಅಮೆರಿಕದ ಸೆಂಟ್ರಲ್ ಕಮಾಂಡ್ ಆ ಆರೋಪಗಳನ್ನು ತಳ್ಳಿ ಹಾಕಿತ್ತು. ಕೇಶ್ಮ್ ದ್ವೀಪದ ಸಮೀಪ ಸಂಭವಿಸಿದೆ ಎಂದು ಹೇಳಲಾದ ಒಂದು ಅಪಘಾತದ ಕುರಿತ ಇರಾನಿಯನ್ ವಿಡಿಯೋಗೆ ಪ್ರತಿಕ್ರಿಯಿಸಿದ ಸೆಂಟ್ಕಾಂ ಅಧಿಕೃತ ಎಕ್ಸ್ ಖಾತೆ, ಎಲ್ಲಾ ಅಮೆರಿಕನ್ ಯುದ್ಧ ವಿಮಾನಗಳು ಸರಿ ಇವೆ ಯಾವ ಹಾನಿಯೂ ಆಗಿಲ್ಲ ಎಂದಿದ್ದವು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ತಂದೆ-ಮಗನನ್ನು ಔಟ್ ಮಾಡಿ ವಿಶ್ವ ದಾಖಲೆ ಬರೆದ ಜೇಮ್ಸ್ ಅ್ಯಂಡರ್ಸನ್

ವಯಸ್ಸು ಜಸ್ಟ್ ನಂಬರ್  ಎಂಬುದನ್ನು ಇಂಗ್ಲೆಂಡ್‌ನ ದಿಗ್ಗಜ ವೇಗಿ ಜೇಮ್ಸ್ ಅ್ಯಂಡರ್ಸನ್ (James Anderson) ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. 43ನೇ ವಯಸ್ಸಿನಲ್ಲೂ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಬೆಚ್ಚಿಬೀಳಿಸುತ್ತಿರುವ ಅ್ಯಂಡರ್ಸನ್, 2026ರ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಒಂದು ಅದ್ಭುತ ಮತ್ತು ಅಪರೂಪದ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.

21 ವರ್ಷಗಳಲ್ಲಿ ವಿಶೇಷ ದಾಖಲೆ:

ಲಂಕಾಶೈರ್ ಪರ ಆಡುತ್ತಿರುವ ಅ್ಯಂಡರ್ಸನ್, ನಾರ್ಥಾಂಪ್ಟನ್‌ಶೈರ್ ತಂಡದ ಯುವ ಬ್ಯಾಟರ್ ಜೇಮ್ಸ್ ಸೇಲ್ಸ್ (James Sales) ಅವರನ್ನು ಔಟ್ ಮಾಡುವ ಮೂಲಕ ಇತಿಹಾಸ ಬರೆದಿದ್ದಾರೆ.

ವಿಶೇಷವೆಂದರೆ, ಬರೋಬ್ಬರಿ 21 ವರ್ಷಗಳ ಹಿಂದೆ ಅಂದರೆ 2005ರಲ್ಲಿ, ಅ್ಯಂಡರ್ಸನ್ ಇದೇ ಜೇಮ್ಸ್ ಸೇಲ್ಸ್ ಅವರ ತಂದೆ ಡೇವಿಡ್ ಸೇಲ್ಸ್ (David Sales) ಅವರನ್ನು ಸಹ ಔಟ್ ಮಾಡಿದ್ದರು.

ಒಬ್ಬನೇ ಬೌಲರ್ ತಂದೆ ಮತ್ತು ಮಗ ಇಬ್ಬರನ್ನೂ ವೃತ್ತಿಪರ ಕ್ರಿಕೆಟ್‌ನಲ್ಲಿ ಔಟ್ ಮಾಡುವುದು ಅತ್ಯಂತ ವಿರಳ. ಜೇಮ್ಸ್ ಅ್ಯಂಡರ್ಸನ್ ಅವರ ಸುದೀರ್ಘ ವೃತ್ತಿಜೀವನ ಮತ್ತು ಫಿಟ್‌ನೆಸ್‌ಗೆ ಇದು ಹಿಡಿದ ಕನ್ನಡಿಯಾಗಿದೆ.

ಐದು ವಿಕೆಟ್​ಗಳ ಸಾಧನೆ:

ನಾರ್ಥಾಂಪ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಅ್ಯಂಡರ್ಸನ್ ಕೇವಲ ಈ ದಾಖಲೆಗೆ ಸೀಮಿತವಾಗಲಿಲ್ಲ. ಅವರು ಅಮೋಘ ಬೌಲಿಂಗ್ ಪ್ರದರ್ಶನ ನೀಡಿ 64 ರನ್‌ಗಳಿಗೆ 5 ವಿಕೆಟ್ ಪಡೆಯುವ ಮೂಲಕ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದ 56ನೇ ‘ಫೈಫರ್’ (ಐದು ವಿಕೆಟ್ ಗೊಂಚಲು) ಪೂರ್ಣಗೊಳಿಸಿದರು.

ತಂದೆ-ಮಗನ ಔಟ್ ಮಾಡಿದವರು:

ಜೇಮ್ಸ್ ಅ್ಯಂಡರ್ಸನ್ ಕ್ರಿಕೆಟ್ ಇತಿಹಾಸದಲ್ಲಿ ತಂದೆ-ಮಗನನ್ನು ಔಟ್ ಮಾಡಿದ ಮೊದಲ ಬೌಲರ್ ಅಲ್ಲ. ಈ ಹಿಂದೆ ತಂದೆ ಮತ್ತು ಮಗ ಇಬ್ಬರನ್ನೂ ಔಟ್ ಮಾಡಿದ ವಿಶೇಷ ದಾಖಲೆಯನ್ನು ಐವರು ಬೌಲರ್​ಗಳು ನಿರ್ಮಿಸಿದ್ದಾರೆ.  ಆದರೆ, ಅ್ಯಂಡರ್ಸನ್ ಅವರ ಈ ಸಾಧನೆ ವಿಶೇಷವಾಗಿರುವುದು ಏಕೆಂದರೆ, ಅವರು 21 ವರ್ಷಗಳ ಸುದೀರ್ಘ ಅಂತರದಲ್ಲಿ (2005 ಮತ್ತು 2026) ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ತಂದೆ-ಮಗನನ್ನು ಔಟ್ ಮಾಡಿದ ಬೌಲರ್​ಗಳ ಪಟ್ಟಿ ಈ ಕೆಳಗಿನಂತಿದೆ…

  • ಇಯಾನ್ ಬೋಥಮ್ (ಇಂಗ್ಲೆಂಡ್):  ಇಂಗ್ಲೆಂಡ್ ವೇಗಿ ಇಯಾನ್ ಬೋಥಮ್ ಅವರು ಆಸ್ಟ್ರೇಲಿಯಾ ಕ್ರಿಕೆಟಿಗ ಲಾನ್ ಬಾರ್ಲಿ (ತಂದೆ) ಮತ್ತು ಮಗ ಜೆಫ್ ಬಾರ್ಲಿ ಇಬ್ಬರನ್ನೂ ಔಟ್ ಮಾಡಿದ ಮೊದಲ ಬೌಲರ್.
  • ವಾಸಿಂ ಅಕ್ರಮ್ (ಪಾಕಿಸ್ತಾನ್): ಪಾಕಿಸ್ತಾನದ ದಿಗ್ಗಜ ವೇಗಿ ವಾಸಿಂ ಅಕ್ರಮ್ ಅವರು ನ್ಯೂಝಿಲೆಂಡ್‌ನ ಪ್ರಸಿದ್ಧ ತಂದೆ-ಮಗನ ಜೋಡಿಯಾದ ಲಾನ್ಸ್ ಕೈರ್ನ್ಸ್ ಮತ್ತು ಕ್ರಿಸ್ ಕೈರ್ನ್ಸ್ ಇಬ್ಬರನ್ನೂ ಔಟ್ ಮಾಡುವ ಮೂಲಕ ಈ ಅಪರೂಪದ ಸಾಧನೆ ಮಾಡಿದ್ದರು.
  • ರವಿಚಂದ್ರನ್ ಅಶ್ವಿನ್ (ಭಾರತ): ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್‌ನ ಶಿವನರೈನ್ ಚಂದ್ರಪಾಲ್ ಮತ್ತು ಅವರ ಮಗ ತೇಜ್​ನರೈನ್ ಚಂದ್ರಪಾಲ್ ಇಬ್ಬರನ್ನೂ ಔಟ್ ಮಾಡಿದ ದಾಖಲೆ ಅಶ್ವಿನ್ ಹೆಸರಲ್ಲಿದೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್ ಇವರು.
  • ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ): ಆಸ್ಟ್ರೇಲಿಯನ್ ವೇಗಿ ಮಿಚೆಲ್ ಸ್ಟಾರ್ಕ್​ ಕೂಡ ಶಿವನರೈನ್ ಚಂದ್ರಪಾಲ್ ಮತ್ತು ತೇಜ್​ನರೈನ್ ಚಂದ್ರಪಾಲ್ ಜೋಡಿಯನ್ನು ಔಟ್ ಮಾಡಿದ್ದಾರೆ.

ಇದನ್ನೂ ಓದಿ: James Anderson: 3 ವಿಶ್ವ ದಾಖಲೆಗಳನ್ನು ಬದಿಗಿಟ್ಟು ನಿವೃತ್ತಿ ಘೋಷಿಸಿದ ಜೇಮ್ಸ್ ಅ್ಯಂಡರ್ಸನ್

ಹೆಚ್ಚಿನ ಬೌಲರ್‌ಗಳು ಒಂದೇ ದಶಕದಲ್ಲಿ ಅಥವಾ ಅಲ್ಪ ಅವಧಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಆದರೆ ಜೇಮ್ಸ್ ಅ್ಯಂಡರ್ಸನ್ 2005ರಲ್ಲಿ ತಂದೆಯನ್ನು ಔಟ್ ಮಾಡಿ, 2026ರಲ್ಲಿ ಮಗನನ್ನು ಔಟ್ ಮಾಡಿರುವುದು ಅವರ ಅಸಾಧಾರಣ ಫಿಟ್‌ನೆಸ್ ಮತ್ತು ಸುದೀರ್ಘ ವೃತ್ತಿಜೀವನಕ್ಕೆ ಸಾಕ್ಷಿಯಾಗಿದೆ.

 

Source link

ಕೈದಿಗಳ ಕಳ್ಳಾಟಕ್ಕಿಲ್ಲ ಬ್ರೇಕ್​: ಪರಪ್ಪನ ಅಗ್ರಹಾರದ ಬಳಿಕ ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿಯೂ ಮೊಬೈಲ್​​ಗಳು ಪತ್ತೆ

ಹುಬ್ಬಳ್ಳಿ, ಏಪ್ರಿಲ್​​ 05: ರಾಜ್ಯದ ಜೈಲುಗಳಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣ ಭಾರಿ ಸದ್ದು ಮಾಡಿದ್ದ ಹಿನ್ನೆಲೆ ಕಟಿಣ ಕ್ರಮಗಳನ್ನ ಕೈಗೊಳ್ಳಲಾಗಿತ್ತು. ಹೀಗಿದ್ದರೂ ಕಳ್ಳಾಟಕ್ಕೆ ಮಾತ್ರ ಸಂಪೂರ್ಣವಾಗಿ ಬ್ರೇಕ್​​ ಬಿದ್ದಿಲ್ಲ. ಇದಕ್ಕೆ ಪೂರಕವೆಂಬಂತೆ ಧಾರವಾಡ ಜಿಲ್ಲೆಯ ಜೈಲುಗಳಲ್ಲಿ ಒಂದೊಂದೇ ಕರ್ಮಕಾಂಡ ಬಯಲಾಗುತ್ತಿದೆ. ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ ಜೈಲಿನ ಬ್ಯಾರಕ್ ತಪಾಸಣೆ ವೇಳೆ ಸ್ಮಾರ್ಟ್​ ಫೋನ್​ಗಳು ಪತ್ತೆಯಾಗಿವೆ. ಬ್ಯಾರಕ್ ಸಂಖ್ಯೆ 8ರಲ್ಲಿ ಸಿಬ್ಬಂದಿ ಪರೀಕ್ಷೆ ವೇಳೆ ಮೊಬೈಲ್​ಗಳು, ಚಾರ್ಜರ್​, ಕನೆಕ್ಟರ್​ಗಳು ಸಿಕ್ಕಿವೆ.

ಇನ್ನು ಪತ್ತೆಯಾಗಿರುವ ಈ ಮೊಬೈಲ್​​ಗಳನ್ನು ಯಾರು ಬಳಸುತ್ತಿದ್ದರು ಎಂಬುದು ಈವರೆಗೆ ಖಾತ್ರಿಯಾಗಿಲ್ಲ. ಇವು ಯಾರಿಗೆ ಸೇರಿದ್ದೆಂದು ಯಾವೊಬ್ಬ ಕೈದಿಯೂ ಒಪ್ಪಿಕೊಳ್ಳದ ಕಾರಣ, ಬ್ಯಾರಕ್‌ನಲ್ಲಿದ್ದ ವಿನೋದ್, ದೀಪಕ್, ನಟರಾಜ, ಅಖೀಬ್, ಕಿರಣ್, ಸಾದಿಕ್, ಮೇಘರ್, ಭಗವಾನ್​ ದಾಸ್, ಚರಣಪ್ರಸಾದ್​, ವಂಶ, ಮಲ್ಲಿಕ್‌ಜಾನ್, ಅಶೋಕ ಹಾಗೂ ಮಹಾಂತೇಶ ಎಂಬ 13 ವಿಚಾರಣಾಧೀನ ಕೈದಿಗಳ ವಿರುದ್ಧ FIR ದಾಖಲಾಗಿದೆ. ಜೈಲು ಅಧೀಕ್ಷಕ ಶಹಾಬುದ್ದೀನ್ ಕಾಲೇಖಾನ್‌ ದೂರು ಆಧಿರಿಸಿ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕೇಸ್​​ ಆಗಿದೆ.

ಇದನ್ನೂ ಓದಿ: ‘ಸ್ಮಶಾನಕ್ಕೆ ಕಳುಹಿಸುತ್ತೇವೆ’; ಮೊಬೈಲ್ ವಶಕ್ಕೆ ಪಡೆಯಲು ಬಂದ ಜೈಲು ಸಿಬ್ಬಂದಿಗೆ ಕೈದಿಗಳ ಜೀವ ಬೆದರಿಕೆ!

ಇತ್ತೀಚೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಬಹುತೇಕ ಫೋನ್‌ಗಳನ್ನು ಹಾಲಿನ ಕವರ್‌ಗಳಲ್ಲಿ ಮೊಬೈಲ್‌ಗಳನ್ನು ಪ್ಯಾಕ್ ಮಾಡಿ ಕೊಳಚೆ ನೀರು ಹರಿಯುವ ಪೈಪ್‌ಗಳಲ್ಲಿ ಖದೀಮರು ಮರೆಮಾಚಿ ಇಟ್ಟಿದ್ದರು. ಇವನ್ನು ವಶಪಡಿಸಿಕೊಳ್ಳಲು ಮುಂದಾದ ಸಿಬ್ಬಂದಿಗೆ ಜೀವ ಬೆದರಿಕೆಯನ್ನೂ ಹಾಕಿದ್ದರು. ಆ ಬೆನ್ನಲ್ಲೇ ಜೈಲಿನೊಳಗೆ ಜಾಮರ್ ವ್ಯವಸ್ಥೆ ಇದ್ದರೂ ನೆಟ್‌ವರ್ಕ್ ಸಿಗುತ್ತಿರುವುದರ ಬಗ್ಗೆ ಡಿಜಿಪಿ ಅಲೋಕ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದರಲ್ಲಿ ಜೈಲರ್‌ಗಳು ಹಾಗೂ ವಾರ್ಡರ್‌ಗಳ ಶಾಮೀಲು ಇರುವ ಶಂಕೆ ವ್ಯಕ್ತವಾಗಿತ್ತು. ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಸೂಚಿಸಲಾಗಿತ್ತು. ಆ ಘಟನೆ ಮಾಸುವ ಮುನ್ನವೇ ರಾಜ್ಯದ ಮತ್ತೊಂದು ಜೈಲಿನಲ್ಲಿ ಈಗ ಮೊಬೈಲ್​​ಗಳು ಸಿಕ್ಕಿರೋದು, ಜೈಲುಗಳಲ್ಲಿ ಕೈದಿಗಳಿಗೆ ರಾಜಾತಿಥ್ಯ ಮುಂದುವರಿದಿರುವುದಕ್ಕೆ ಸ್ಪಷ್ಟ ಉದಾಹರಣೆ ಎಂಬಂತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

RCB vs CSK IPL 2026: ಹೈವೋಲ್ಟೇಜ್ ಪಂದ್ಯದ ಹಿನ್ನೆಲೆ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಪೊಲೀಸ್ ಬಿಗಿ ಭದ್ರತೆ!

ಬೆಂಗಳೂರು, ಏಪ್ರಿಲ್ 05: ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಐಪಿಎಲ್ 2026 ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) vs ಚೆನ್ನೈ ಸೂಪರ್ ಕಿಂಗ್ಸ್ (CSK) ಪಂದ್ಯದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ವಿಶೇಷವಾಗಿ ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನದು ಹೈವೋಲ್ಟೇಜ್ ಪಂದ್ಯವಾಗಿರುವುದರಿಂದ ಅಭಿಮಾನಿಗಳು ಕಿಕ್ಕಿರಿದು ಸೇರಲಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸುಮಾರು 2,300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಕಳೆದ ಬಾರಿ ಸ್ಟೇಡಿಯಂನಲ್ಲಿ 70ಕ್ಕೂ ಹೆಚ್ಚು ಮೊಬೈಲ್​ ಕಳ್ಳತನವಾದ ಹಿನ್ನೆಲೆ ಈ ಬಾರಿ ಯಾವುದೆ ಅವ್ಯವಸ್ಥೆಗೆ ಆಸ್ಪದ ಕೊಡಬಾರದೆಂಬ ಉದ್ದೇಶದಿಂದ ಎರಡು ಬ್ಯಾಗೇಜ್ ಕೌಂಟರ್‌ಗಳನ್ನು ನಿರ್ಮಿಸಲಾಗಿದೆ. ಸ್ಟೇಡಿಯಂ ಸುತ್ತಮುತ್ತ ಮೊಬೈಲ್ ಕಳ್ಳತನದ ಬಗ್ಗೆ ಹೆಚ್ಚು ಜಾಗೃತಿ ವಹಿಸಲು ಅಭಿಮಾನಿಗಳಿಗೆ ಸೂಚಿಸಲಾಗಿದೆ.

ಇದನ್ನೂ ಓದಿ RCB vs CSK ಪಂದ್ಯಕ್ಕೆ 6 ಆಟಗಾರರು ಅಲಭ್ಯ

ವಿಶೇಷ ಬಸ್ ಮತ್ತು ಪಾರ್ಕಿಂಗ್ ವ್ಯವಸ್ಥೆ

ಜನಸಂದಣಿ ನಿಯಂತ್ರಣಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ವ್ಯವಸ್ಥೆ ಹಾಗೂ ಮೆಟ್ರೋ ಸೇವೆಯ ಅವಧಿಯೂ ಹಿಂದಿನಂತೆ ವಿಸ್ತರಿಸಲಾಗುತ್ತದೆ. ಇನ್ನೊಂದೆಡೆ, ಟಿಕೆಟ್ ಇಲ್ಲದವರು ಸ್ಟೇಡಿಯಂ ಸುತ್ತಮುತ್ತ ಬಾರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಕಲಿ ಟಿಕೆಟ್ ಮಾರಾಟ ಮತ್ತು ಬೆಟ್ಟಿಂಗ್ ಚಟುವಟಿಕೆಗಳ ಮೇಲೂ ಸಿಸಿಬಿ ಅಧಿಕಾರಿಗಳು ನಿಗಾವಹಿಸಿದ್ದಾರೆ. ಸಾರ್ವಜನಿಕರು ಎಚ್ಚರಿಕೆಯಿಂದಿದ್ದು ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

RCB vs CSK Weather Report: ಆರ್​ಸಿಬಿ-ಸಿಎಸ್​ಕೆ ಹೈವೋಲ್ಟೇಕ್ ಕದನಕ್ಕೆ ಮಳೆ ಅಡ್ಡಿ?: ಇಲ್ಲಿದೆ ಬೆಂಗಳೂರು ಹವಾಮಾನ ವರದಿ

ಬೆಂಗಳೂರು (ಏ. 05): ಇಂಡಿಯನ್ ಪ್ರೀಮಿಯರ್ ಲೀಗ್ 2026ರಲ್ಲಿ ಇಂದು ಡಬಲ್ ಹೆಡ್ಡರ್ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಸನ್​ರೈಸರ್ಸ್ ಹಾಗೂ ಲಕ್ನೋ ಮುಖಾಮುಖಿ ಆಗುತ್ತಿದ್ದರೆ, ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣವು ಈ ಪಂದ್ಯವನ್ನು ಆಯೋಜಿಸಲಿದೆ. ಆರ್​ಸಿಬಿ ಗೆಲುವಿನೊಂದಿಗೆ ಪಂದ್ಯಾವಳಿಯನ್ನು ಆರಂಭಿಸಿದರೆ, ಸಿಎಸ್​​ಕೆ ತನ್ನ ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತಿದೆ. ಚೆನ್ನೈಗೆ ಗೆಲುವು ಅನಿವಾರ್ಯವಾದರೆ ಇತ್ತ ಬೆಂಗಳೂರು ತವರಿನಲ್ಲಿ ಜಯದ ನಿರೀಕ್ಷೆ ಹೊಂದಿದೆ.

ಎರಡೂ ತಂಡಗಳ ನಡುವೆ ಒಟ್ಟು 35 ಪಂದ್ಯಗಳು ನಡೆದಿದ್ದು, ಅದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 21 ಪಂದ್ಯಗಳನ್ನು ಗೆದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 13 ಪಂದ್ಯಗಳನ್ನು ಗೆದ್ದರೆ, ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಈ ಪೈಪೋಟಿಯಲ್ಲಿ ಸಿಎಸ್‌ಕೆ ಮೇಲುಗೈ ಸಾಧಿಸಿದೆ. ಆದಾಗ್ಯೂ, ಕಳೆದ ಕೆಲವು ಋತುಗಳಲ್ಲಿ ಚಿತ್ರಣ ಬದಲಾಗಿದೆ. ಇತ್ತೀಚಿನ 5 ಪಂದ್ಯಗಳಲ್ಲಿ, ಆರ್‌ಸಿಬಿ 3 ಗೆಲುವುಗಳನ್ನು ದಾಖಲಿಸುವ ಮೂಲಕ ಸಿಎಸ್‌ಕೆಗೆ ಕಠಿಣ ಹೋರಾಟ ನೀಡಿದೆ.

ಅಂಕಿಅಂಶಗಳ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹೆಡ್-ಟು-ಹೆಡ್ ದಾಖಲೆಯಲ್ಲಿ ಸ್ಪಷ್ಟವಾಗಿ ಪ್ರಾಬಲ್ಯ ಹೊಂದಿದೆ, ಆದರೆ ಅವರ ಇತ್ತೀಚಿನ ಪ್ರದರ್ಶನಗಳನ್ನು ಪರಿಗಣಿಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಅಂತರವನ್ನು ಸದ್ಯದಲ್ಲೇ ಕಡಿಮೆ ಮಾಡಬಹುದು. ದುರ್ಬಲ ಬೌಲಿಂಗ್ ವಿಭಾಗವು ಸಿಎಸ್‌ಕೆಗೆ ಕಳವಳಕಾರಿಯಾಗಿದೆ. ಆದರೆ, ಗೆಲುವು ಅನಿವಾರ್ಯ ಆಗಿರುವುದರಿಂದ ಬೆಂಗಳೂರಿನಲ್ಲಿ ಇಂದು ರಣರೋಚಕ ಕದನ ನಿರೀಕ್ಷಿಸಲಾಗಿದೆ.

IPL 2026: ನಾಯಕತ್ವದಿಂದ ಅಜಿಂಕ್ಯಾ ರಹಾನೆ ಹೊರಕ್ಕೆ?, ಕೆಕೆಆರ್​ನಿಂದ ಶಾಕಿಂಗ್ ನಿರ್ಧಾರ?

ಆರ್​​ಸಿಬಿ-ಸಿಎಸ್​ಕೆ ಹೈವೋಲ್ಟೇಕ್ ಕದನಕ್ಕೆ ಮಳೆ ಅಡ್ಡಿ:

ಎಂ. ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣವನ್ನು ಬ್ಯಾಟಿಂಗ್ ಸ್ನೇಹಿ ಸ್ಥಳವೆಂದು ಪರಿಗಣಿಸಲಾಗಿದೆ. ಸಣ್ಣ ಬೌಂಡರಿಗಳಿರುವ ಕಾರಣ ರನ್ ಮಳೆ ನಿರೀಕ್ಷಿಸಲಾಗಿದೆ. ಈ ಮೈದಾನದಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 141 ಆಗಿದ್ದರೆ, ಎರಡನೇ ಇನ್ನಿಂಗ್ಸ್‌ನ ಸರಾಸರಿ 136 ಆಗಿದೆ. ಬೆಂಗಳೂರಿನಲ್ಲಿ ಭಾನುವಾರ ಮಳೆಯಾಗುವ ಸಾಧ್ಯತೆ ಶೇ. 25 ರಷ್ಟು ಇದೆ ಎಂದು ಅಕ್ಯೂವೆದರ್ ವರದಿ ಮಾಡಿದೆ. ಮೈದಾನದ ಸುತ್ತಲೂ ಮೋಡಗಳು ಆವರಿಸುವ ನಿರೀಕ್ಷೆಯಿದೆ. ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಕಡಿಮೆ ಎನ್ನಬಹುದು.

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಹೇಗಿದೆ?

ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಸಮತಟ್ಟಾಗಿರುತ್ತದೆ, ಇದು ಬ್ಯಾಟಿಂಗ್ ಸ್ನೇಹಿ. ಚೆಂಡು ಉತ್ತಮ ಬೌನ್ಸ್ ಮತ್ತು ವೇಗದೊಂದಿಗೆ ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ. ಮೈದಾನವು ತುಂಬಾ ಚಿಕ್ಕದಾಗಿರುವುದರ ಜೊತೆಗೆ ಔಟ್‌ಫೀಲ್ಡ್ ವೇಗವಾಗಿರುತ್ತದೆ. ಹೀಗಾಗಿ ಈ ಮೈದಾನದಲ್ಲಿ ರನ್ ಮಳೆ ಹರಿಯುವುದು ಖಚಿತ. ಆದಾಗ್ಯೂ, ಈ ಮೈದಾನದಲ್ಲಿ ಇಬ್ಬನಿ ಫಲಿತಾಂಶದ ಮೇಲೆ ಪ್ರಮುಖ ಪಾತ್ರವಹಿಸುತ್ತದೆ. ಸಂಜೆಯ ಇಬ್ಬನಿಯು ಚೇಸಿಂಗ್ ತಂಡಕ್ಕೆ ಅನುಕೂಲಕರವಾಗಿರುತ್ತದೆ, ಆದ್ದರಿಂದ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Source link

ಹಲ್ಲಿಲ್ಲದ, ವಯಸ್ಸಾದ ನಾಯಿಗಳಿಗೇಕೆ ಸಂತಾನ ಹರಣ ಚಿಕಿತ್ಸೆ, ಶ್ವಾನ ಪ್ರಿಯರ ಆಕ್ರೋಶ

ನವದೆಹಲಿ, ಏಪ್ರಿಲ್ 05: ಹಲ್ಲಿಲ್ಲದ, ವಯಸ್ಸಾದ ನಾಯಿಗಳಿಗೂ ಸಂತಾನ ಹರಣ, ರೇಬಿಸ್ ಚುಚ್ಚುಮದ್ದು ನೀಡಿ ದೆಹಲಿ ವಿಮಾನ ನಿಲ್ದಾಣದ ಪ್ರದೇಶದಿಂದ ಬೇರೆ ಕಡೆ ಸ್ಥಳಾಂತರಿಸಿದ್ದಕ್ಕೆ ಪ್ರಾಣಿಪ್ರಿಯರು ಆಕ್ರೋಶಗೊಂಡಿದ್ದಾರೆ. ಕಳೆದ 13,14 ವರ್ಷಗಳಿಂದ ಆ ಕೆಲವು ನಾಯಿಗಳು ಅಲ್ಲೇ ಇವೆ. ಯಾರಿಗೂ ಏನೂ ತೊಂದರೆ ಮಾಡಿಲ್ಲ ಈಗಂತೂ ಅವುಗಳಿಗೂ ಹಲ್ಲುಗಳು ಕೂಡ ಇಲ್ಲ, ಶಕ್ತಿಯೂ ಇಲ್ಲ ಅಂಥಾ ನಾಯಿಗಳಿಂದ ಅಪಾಯವಾದರೂ ಏನಿದೆ, ಸಂತಾನ ಹರಣ ಚಿಕಿತ್ಸೆಯ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

ವಿಮಾನ ನಿಲ್ದಾಣದ ಆವರಣದಲ್ಲಿ ವಾಸಿಸುವ ಹಲವಾರು ಬೀದಿ ನಾಯಿಗಳನ್ನು ಬಲವಂತವಾಗಿ ಸ್ಥಳಾಂತರಿಸಲಾಗಿದೆ. ಕ್ರಿಮಿನಾಶಕ ಮತ್ತು ಲಸಿಕೆ ಹಾಕಿ ಬೀದಿ ನಾಯಿಗಳನ್ನು ಸಾಮಾನ್ಯವಾಗಿ ಚಿಕಿತ್ಸೆಯ ನಂತರ ಅದೇ ಸ್ಥಳಕ್ಕೆ ಹಿಂತಿರುಗಿಸಲಾಗುತ್ತದೆ, ಏಕೆಂದರೆ ಸ್ಥಳಾಂತರವು ಪ್ರಾದೇಶಿಕ ಸಂಘರ್ಷಗಳಿಗೆ ಕಾರಣವಾಗಬಹುದು. ಅದರ ಜೀವಕ್ಕೂ ಅಪಾಯ ಹೆಚ್ಚಿರುತ್ತದೆ ಎಂದು ಹೇಳಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Exit mobile version