ಅಡುಗೆ ಮಾಡುವಾಗ ಎಲ್​ಪಿಜಿ ಉಳಿಸಬೇಕಾ? ಹೀಗೆ ಮಾಡಿದರೆ 15 ದಿನ ಹೆಚ್ಚು ಗ್ಯಾಸ್ ಬಳಸಬಹುದು! – Kannada News

ನವದೆಹಲಿ, ಜೂನ್ 2: ಇತ್ತೀಚಿನ ದಿನಗಳಲ್ಲಿ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೂ ತಕ್ಷಣ ಸಿಗುತ್ತದೆ ಎಂದು ಹೇಳಲಾಗದಂತಹ ಸ್ಥಿತಿಯಿದೆ. ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ಬಳಸುತ್ತಾರೆ. ಆದರೆ, ಗ್ಯಾಸ್ ಸಿಲಿಂಡರ್ ಹೆಚ್ಚು ಕಾಲ ಬಾಳಿಕೆ ಬರಬೇಕೆಂದು ನೀವು ಬಯಸಿದರೆ, ನೀವು ಕೆಲವು ಸಲಹೆಗಳನ್ನು ಅನುಸರಿಸಬೇಕು. ಅನೇಕ ಜನರು ಗ್ಯಾಸ್ ಅನ್ನು ವ್ಯರ್ಥ ಮಾಡುತ್ತಾರೆ. ನಿಮ್ಮ ಅಡುಗೆ ಅನಿಲ ಸಿಲಿಂಡರ್ ಬಳಕೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಕೆಲವು ಪ್ರಮುಖ ಮಾರ್ಗಗಳಿವೆ. ಈ ಸರಳ ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ಸಾಮಾನ್ಯವಾಗಿ ಒಂದು ತಿಂಗಳವರೆಗೆ ಬಳಸುವ ಸಿಲಿಂಡರ್ ಅನ್ನು 45 ದಿನಗಳವರೆಗೆ ಬಳಸಬಹುದು. ಅಂದರೆ, ನೀವು 15 ದಿನಗಳ ಕಾಲ ಹೆಚ್ಚು ಗ್ಯಾಸ್ ಬಳಸಬಹುದು.

ಗ್ಯಾಸ್ ಉಳಿಸಲು ಏನು ಮಾಡಬೇಕು?:

ಬೆಂಕಿಯ ಬಣ್ಣ ಗಮನಿಸಿ:

ನೀವು ಮೊದಲು ಒಲೆ ಹಚ್ಚಿದಾಗ, ಜ್ವಾಲೆಯು ಯಾವಾಗಲೂ ನೀಲಿ ಬಣ್ಣದ್ದಾಗಿರಬೇಕು. ಜ್ವಾಲೆಯು ಕೆಂಪು ಅಥವಾ ಹಳದಿ ಬಣ್ಣದಲ್ಲಿದ್ದರೆ ಬರ್ನರ್ ರಂಧ್ರಗಳು ಮುಚ್ಚಿಹೋಗಿವೆ ಎಂದರ್ಥ. ಅಂತಹ ಸಮಯದಲ್ಲಿ ಅನಿಲವನ್ನು ಹೆಚ್ಚು ಬಳಸಲಾಗುತ್ತದೆ. ಇದು ನಿಮ್ಮ ಅಡುಗೆ ಗ್ಯಾಸ್ ಅನ್ನು ಬಹಳಷ್ಟು ವ್ಯರ್ಥ ಮಾಡುತ್ತದೆ. ಅದಕ್ಕಾಗಿಯೇ ನೀವು ಬರ್ನರ್‌ಗಳನ್ನು ತಕ್ಷಣ ಸ್ವಚ್ಛಗೊಳಿಸಬೇಕು.

ಪಾತ್ರೆಯ ಮುಚ್ಚಳ ಮುಚ್ಚಿ:

ಅಡುಗೆ ಮಾಡುವಾಗ ಪಾತ್ರೆಯ ಮೇಲೆ ಮುಚ್ಚಳವನ್ನು ಹಾಕುವುದು ಅತ್ಯಗತ್ಯ ಎಂಬುದನ್ನು ನೆನಪಿಡಿ. ಪಾತ್ರೆಯ ಮೇಲೆ ಮುಚ್ಚಳವನ್ನು ಹಾಕುವುದರಿಂದ, ಉಗಿ ಹೊರಹೋಗುವುದಿಲ್ಲ ಮತ್ತು ಆಹಾರವು ವೇಗವಾಗಿ ಬೇಯುತ್ತದೆ. ಇದು 30% ಅನಿಲವನ್ನು ಉಳಿಸುತ್ತದೆ.

ಇದನ್ನೂ ಓದಿ: ಎಲ್‌ಪಿಜಿ ಕೊರತೆ, ದರ ಏರಿಕೆಗೆ ಸೆಡ್ಡು: ಹೋಟೆಲ್ ಕಸ ನೀಡಿ ಬಯೋಗ್ಯಾಸ್ ಪಡೆಯಲು ಮುಂದಾದ ಬೆಂಗಳೂರಿನ ಹೋಟೆಲ್‌ಗಳು!

ಪಾತ್ರೆ ಒಣಗಿರಲಿ:

ಅಡುಗೆ ಪಾತ್ರೆಗಳನ್ನು ಒಲೆಯ ಮೇಲೆ ಇಡುವ ಮೊದಲು, ಅದು ಒದ್ದೆಯಾಗಿರಬಾರದು. ಅದು ಒಣಗಿರಬೇಕು. ಅದು ಒದ್ದೆಯಾಗಿದ್ದರೆ ಬಿಸಿಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಏಕೆಂದರೆ ಅದರಲ್ಲಿರುವ ನೀರು ಆವಿಯಾಗಬೇಕಾಗುತ್ತದೆ. ಆಗ ಅಡುಗೆ ಮಾಡುವ ಅವಕಾಶವಿರುತ್ತದೆ. ಇದು ಅನಿಲವನ್ನು ವ್ಯರ್ಥ ಮಾಡುತ್ತದೆ. ಅದಕ್ಕಾಗಿಯೇ ಅಡುಗೆ ಪಾತ್ರೆಗಳಲ್ಲಿ ಯಾವುದೇ ನೀರಿನ ಹನಿಗಳು ಇರಬಾರದು.

ಅಡುಗೆಗೆ ತಯಾರಿ ಇರಲಿ:

ಗ್ಯಾಸ್ ಸ್ಟವ್ ಆನ್ ಮಾಡುವ ಮುನ್ನವೇ ಅಡುಗೆಗೆ ಬೇಕಾದ ತರಕಾರಿ ಹೆಚ್ಚುವುದು, ಮಸಾಲೆ ಅರೆಯುವುದು, ಬೇಳೆ-ಅಕ್ಕಿ ತೊಳೆಯುವುದನ್ನು ಮುಗಿಸಿಕೊಳ್ಳಿ. ಸ್ಟವ್ ಆನ್ ಮಾಡಿದ ನಂತರ ತರಕಾರಿ ಹುಡುಕುವುದು ಅಥವಾ ಹೆಚ್ಚಲು ಕುಳಿತರೆ ಸಾಕಷ್ಟು ಗ್ಯಾಸ್ ವ್ಯರ್ಥವಾಗುತ್ತದೆ.

ನೆನೆಸಿಟ್ಟು ಅಡುಗೆ ಮಾಡಿ:

ಬೇಳೆ, ಅಕ್ಕಿ ಅಥವಾ ಕಡಲೆ ಬೇಳೆ ಬೇಯಿಸುವ ಮೊದಲು ಕನಿಷ್ಠ ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ಇದರಿಂದ ಅವು ಬೇಗ ಬೇಯುತ್ತವೆ. ಅಡುಗೆ ಮಾಡಲು ಸಮಯವೂ ಕಡಿಮೆ ಸಾಕಾಗುತ್ತದೆ ಮತ್ತು ಅನಿಲ ಉಳಿತಾಯವಾಗುತ್ತದೆ.

ಕುಕ್ಕರ್ ಬಳಸಿ:

ಪ್ರೆಶರ್ ಕುಕ್ಕರ್‌ನಲ್ಲಿ ಸಾಧ್ಯವಾದಷ್ಟು ಆಹಾರವನ್ನು ಬೇಯಿಸುವುದು ಉತ್ತಮ. ಇದರಿಂದ ಅಡುಗೆ ಬೇಗ ಆಗುತ್ತದೆ. ಸಾಮಾನ್ಯ ಪಾತ್ರೆಗಳಿಗಿಂತ ಕುಕ್ಕರ್‌ನಲ್ಲಿ ಅಡುಗೆ ವೇಗವಾಗಿ ಆಗುತ್ತದೆ. ಅನಿಲ ಬಳಕೆ ಕಡಿಮೆಯಾಗುತ್ತದೆ. ಇದು ಸಾಮಾನ್ಯ ಪಾತ್ರೆಗಳಿಗಿಂತ ಶೇ. 20ರಷ್ಟು ಗ್ಯಾಸ್ ಮತ್ತು ಸಮಯ ಎರಡನ್ನೂ ಉಳಿಸುತ್ತದೆ. ಸಾಧ್ಯವಾದರೆ ಒಂದೇ ಕುಕ್ಕರ್‌ನಲ್ಲಿ ಕೆಳಗೆ ಅನ್ನ, ಮೇಲೆ ಬೇಳೆ ಅಥವಾ ತರಕಾರಿ ಇಟ್ಟು ‘ಮಲ್ಟಿ-ಟಾಸ್ಕಿಂಗ್’ ಅಡುಗೆ ಮಾಡಿ.

ಇದನ್ನೂ ಓದಿ: ಕಮರ್ಷಿಯಲ್ ಅಡುಗೆ ಅನಿಲವಾಗಿ ಎಥನಾಲ್ ಬಳಕೆ? ಎಲ್​ಪಿಜಿ ಅವಲಂಬನೆ ತಗ್ಗಿಸಲು ಸರ್ಕಾರದಿಂದ ಹೊಸ ಮಾರ್ಗೋಪಾಯ

ಬರ್ನರ್​ ಬಳಕೆ ಬಗ್ಗೆ ಗಮನವಿರಲಿ:

ದೊಡ್ಡ ಬರ್ನರ್ ನಲ್ಲಿ ಸಣ್ಣ ಪಾತ್ರೆ ಇಟ್ಟು ಅಡುಗೆ ಮಾಡಬಾರದು ಎಂಬುದನ್ನು ನೆನಪಿಡಿ. ಜ್ವಾಲೆ ಪಾತ್ರೆಯ ಆಚೆ ಹೋದರೆ ಗ್ಯಾಸ್ ವ್ಯರ್ಥವಾಗುತ್ತದೆ. ಆದ್ದರಿಂದ, ಮಧ್ಯಮ ಉರಿಯಲ್ಲಿ ಅಡುಗೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಈ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಗ್ಯಾಸ್ ಬಳಕೆಯನ್ನು ಕಡಿಮೆ ಮಾಡಬಹುದು.

ಸಣ್ಣ ಉರಿಯಲ್ಲಿ ಅಡುಗೆ ಮಾಡಿ:

ನೀರು ಅಥವಾ ಅಡುಗೆ ಕುದಿಯಲು ಆರಂಭಿಸಿದ ತಕ್ಷಣ ಗ್ಯಾಸ್ ಉರಿಯನ್ನು ಸಣ್ಣದಾಗಿಸಿ. ನೀರು ಕುದಿಯಲು ಆರಂಭಿಸಿದ ಮೇಲೆ ಉರಿ ದೊಡ್ಡದಾಗಿದ್ದರೂ ತಾಪಮಾನ ಹೆಚ್ಚಾಗುವುದಿಲ್ಲ, ಕೇವಲ ಗ್ಯಾಸ್ ವ್ಯರ್ಥವಾಗುತ್ತದೆ. ಹೀಗಾಗಿ, ಆ ಸಮಯದಲ್ಲಿ ಸಿಮ್​ನಲ್ಲಿಟ್ಟು ಅಡುಗೆ ಮಾಡಿ.

ಫ್ರಿಡ್ಜ್​ನಲ್ಲಿಟ್ಟ ಪದಾರ್ಥಗಳನ್ನು ನೇರವಾಗಿ ಬಿಸಿ ಮಾಡಬೇಡಿ:

ಫ್ರಿಡ್ಜ್‌ನಲ್ಲಿಟ್ಟ ಹಾಲು, ತರಕಾರಿ ಅಥವಾ ಉಳಿದ ಅಡುಗೆಯನ್ನು ಹೊರಗೆ ತೆಗೆದ ತಕ್ಷಣ ಗ್ಯಾಸ್ ಮೇಲೆ ಇಡಬೇಡಿ. ಅದನ್ನು ಕನಿಷ್ಠ 1-2 ಗಂಟೆಗಳ ಕಾಲ ಹೊರಗಿಟ್ಟು, ಅದು ಕೋಣೆಯ ತಾಪಮಾನಕ್ಕೆ ಬಂದ ನಂತರ ಬಿಸಿ ಮಾಡಿ. ಇದರಿಂದ ಆ ಪದಾರ್ಥಗಳು ಬಿಸಿಯಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ.

ಸರಿಯಾದ ಪಾತ್ರೆಗಳ ಆಯ್ಕೆ:

ಅಡುಗೆಗೆ ಬಳಸುವ ಪಾತ್ರೆಯ ತಳಭಾಗವು ಅಗಲವಾಗಿ ಮತ್ತು ಸಮತಟ್ಟಾಗಿರಲಿ. ತುಂಬಾ ದಪ್ಪವಿರುವ ಪಾತ್ರೆಗಳು ಬಿಸಿಯಾಗಲು ಹೆಚ್ಚು ಗ್ಯಾಸ್ ಬೇಕಾಗುತ್ತದೆ. ಹಾಗೆಯೇ ತಳ ಸಣ್ಣಗಿರುವ ಪಾತ್ರೆಗಳಿಂದ ಉsರಿ ಆಚೆ ಹೋಗಿ ಗ್ಯಾಸ್ ವ್ಯರ್ಥವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಲಿಬಾಗ್​ನಲ್ಲಿ 24 ಕೋಟಿ ರೂಪಾಯಿ ಆಸ್ತಿ ಖರೀದಿಸಿದ ಯಶ್, ರಾಧಿಕಾ ಪಂಡಿತ್ – Kannada News

ಕನ್ನಡ ಚಿತ್ರರಂಗದ ತಾರಾ ದಂಪತಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ (Radhika Pandit) ಅವರು ರಿಯಲ್ ಎಸ್ಟೇಟ್ ವಲಯದಲ್ಲಿ ಭಾರಿ ಹೂಡಿಕೆ ಮಾಡಿದ್ದಾರೆ. ಮಹಾರಾಷ್ಟ್ರದ ಅತ್ಯಂತ ಪ್ರಸಿದ್ಧ ಹಾಗೂ ಐಷಾರಾಮಿ ಪ್ರವಾಸಿ ತಾಣಗಳಲ್ಲಿ ಒಂದಾದ ಅಲಿಬಾಗ್‌ನಲ್ಲಿ (Alibag) ಅವರು ಕಡಲತೀರದ ಪ್ರೀಮಿಯಂ ಜಾಗವನ್ನು ಬರೋಬ್ಬರಿ 24 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿದೆ. ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಗೆ ಸಜ್ಜಾಗುತ್ತಿರುವ ಯಶ್ (Yash) ಅವರು ಈ ಆಸ್ತಿಯ ಕಾರಣದಿಂದಲೂ ಸುದ್ದಿ ಆಗಿದ್ದಾರೆ.

ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಸಂಸ್ಥೆಯಾದ ‘ಲಿಯಾಸಿಸ್ ಫೋರಸ್’ ಪಡೆದುಕೊಂಡಿರುವ ಆಸ್ತಿ ನೋಂದಣಿ ದಾಖಲೆಗಳ ಪ್ರಕಾರ, ರಾಯಗಢ ಜಿಲ್ಲೆಯ ಅಲಿಬಾಗ್ ತಾಲ್ಲೂಕಿನ ಕಾಮತ್ ಗ್ರಾಮದಲ್ಲಿ ಕೃಷಿ ಭೂಮಿಯನ್ನು ಯಶ್-ರಾಧಿಕಾ ದಂಪತಿ ಖರೀದಿಸಿದ್ದಾರೆ. ಮೇ 18ರಂದು ಅಲಿಬಾಗ್‌ನ ಉಪ-ನೋಂದಣಾಧಿಕಾರಿ ಕಚೇರಿಯಲ್ಲಿ ಈ ಹಸ್ತಾಂತರ ಪ್ರಕ್ರಿಯೆ ಅಧಿಕೃತವಾಗಿ ನೋಂದಣಿಯಾಗಿದೆ.

ಸಮುದ್ರಕ್ಕೆ ಮುಖ ಮಾಡಿರುವ ಸುಂದರ ತಾಣ ಇದಾಗಿದೆ. ಈ ಆಸ್ತಿಯು ಒಟ್ಟು 5,289 ಚದರ ಮೀಟರ್ (ಸುಮಾರು 0.5289 ಹೆಕ್ಟೇರ್) ವಿಸ್ತೀರ್ಣದ ಕೃಷಿ ಭೂಮಿಯನ್ನು ಒಳಗೊಂಡಿದೆ. ಜಾಗದ ಜೊತೆಗೆ ಇಲ್ಲೊಂದು ಸುಂದರವಾದ ವಸತಿ ಕಟ್ಟಡವೂ ಇದೆ ಎನ್ನಲಾಗಿದೆ. ದಾಖಲೆಗಳ ಪ್ರಕಾರ, ಈ ಜಾಗವು ಕಿಹಿಮ್ ಬೀಚ್ ಪಕ್ಕದಲ್ಲೇ ಇದೆ. ಅತ್ಯಂತ ಆಕರ್ಷಕ ಜಾಗ ಇದಾಗಿದೆ.

ಈ ಆಸ್ತಿಯ ಪೂರ್ವ ಭಾಗದಲ್ಲಿ ಹಳ್ಳಿಯ ರಸ್ತೆಯಿದ್ದರೆ, ಪಶ್ಚಿಮ ಭಾಗದಲ್ಲಿ ವಿಶಾಲವಾದ ಸಮುದ್ರವಿದೆ. ಇನ್ನು, ಉತ್ತರದ ಗಡಿಯಲ್ಲಿರುವ ಸಣ್ಣ ಗಲ್ಲಿಯೊಂದು ನೇರವಾಗಿ ಬೀಚ್‌ಗೆ ದಾರಿ ಕಲ್ಪಿಸುತ್ತದೆ. ಸೆಲೆಬ್ರಿಟಿಗಳ ನೆಚ್ಚಿನ ತಾಣವಾಗಿರುವ ಅಲಿಬಾಗ್‌ನಲ್ಲಿ ಯಶ್ ದಂಪತಿ ತಮ್ಮ ಎರಡನೇ ಮನೆಗಾಗಿ ಈ ಜಾಗ ಖರೀದಿಸಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಕೇಳಿ ಅಭಿಮಾನಿಗಳಿಗೆ ಹೆಮ್ಮೆ ಆಗಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಟೀಸರ್​ನಲ್ಲಿ ಅಂಥ ದೃಶ್ಯ ಇದೆ ಎಂದು ಟೀಕಿಸಿದವರಿಗೆ ಉತ್ತರ ನೀಡಿದ ಯಶ್

ಈ ಭಾರಿ ಮೊತ್ತದ ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ ಯಶ್ ಮತ್ತು ರಾಧಿಕಾ ಅವರು 1.44 ಕೋಟಿ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ಪಾವತಿಸಿದ್ದಾರೆ. ಇದರೊಂದಿಗೆ 60 ಸಾವಿರ ರೂಪಾಯಿ ನೋಂದಣಿ ಶುಲ್ಕ ಮತ್ತು 5,200 ರೂಪಾಯಿ ದಾಖಲೆ ನಿರ್ವಹಣಾ ವೆಚ್ಚವನ್ನು ಪಾವತಿಸಲಾಗಿದೆ. ಸೆಕ್ಷನ್ 7ರ ಅಡಿಯಲ್ಲಿ ಈ ಭೂಮಿಯನ್ನು ಕೃಷಿ ಭೂಮಿ ಎಂದು ವರ್ಗೀಕರಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜೂನ್ ತಿಂಗಳಲ್ಲಿ ನಿಮ್ಮ ರಾಶಿಯ ಫಲ ಬದಲಾಯಿಸಲಿದ್ದಾನೆ ‘ಆತ್ಮಕಾರಕ’ ರವಿ; ಯಾರಿಗೆ ಶುಭ? – Kannada News

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನು ಆತ್ಮಕಾರಕ, ಅಧಿಕಾರ ಮತ್ತು ಆರೋಗ್ಯದ ಸಂಕೇತ. ರವಿಯು ಬುಧನ ಮನೆಯಾದ ಮಿಥುನ ರಾಶಿಗೆ ಪ್ರವೇಶಿಸುವಾಗ ಅತ್ಯಂತ ವಿಶಿಷ್ಟ ಹಾಗೂ ಪ್ರಭಾವಶಾಲಿಯಾಗುವನು.

ಜೂನ್ ತಿಂಗಳಲ್ಲಿ ರವಿಯು ಮಿಥುನ ರಾಶಿಯಲ್ಲಿದ್ದು, ಶುಕ್ರನ ದ್ರೇಕ್ಕಾಣದಲ್ಲಿ ಕಲಾತ್ಮಕತೆ, ಆಕರ್ಷಣೆ ಮತ್ತು ಸಂಬಂಧಗಳ ಮೇಲೆ ಪ್ರಭಾವವನ್ನೂ, ರವಿಯ ಹೋರೆಯಲ್ಲಿ ಆತ್ಮವಿಶ್ವಾಸ, ತೇಜಸ್ಸು ಮತ್ತು ನಾಯಕತ್ವದ ವೃದ್ಧಿಯನ್ನೂ ಶನಿಯ ನವಾಂಶದಲ್ಲಿ ಶಿಸ್ತು, ತಾಳ್ಮೆ ಮತ್ತು ಕಠಿಣ ಪರಿಶ್ರಮದ ಅಗತ್ಯತೆಯನ್ನೂ ಗುರುವಿನ ತ್ರಿಂಶಾಂಶದಲ್ಲಿ ಜ್ಞಾನ, ಧಾರ್ಮಿಕತೆ ಮತ್ತು ಸದ್ಬುದ್ಧಿಯ ರಕ್ಷಣೆಯನ್ನೂ, ಕುಜನ ದ್ವಾದಶಾಂಶದಲ್ಲಿ ಸಾಹಸಪ್ರವೃತ್ತಿ, ಆತುರ ಮತ್ತು ಭೌತಿಕ ಶಕ್ತಿಯನ್ನೂ ನೀಡುವನು.

​ಮೇಷ ರಾಶಿ

​ರವಿಯು ನಿಮ್ಮ ರಾಶಿಯಿಂದ ತೃತೀಯ ಭಾವದಲ್ಲಿ ಸಂಚರಿಸಲಿದ್ದಾನೆ. ಕುಜನ ದ್ವಾದಶಾಂಶವಿರುವುದರಿಂದ ನಿಮ್ಮ ಧೈರ್ಯ ಮತ್ತು ಸಾಹಸ ಪ್ರವೃತ್ತಿ ಹೆಚ್ಚಾಗಲಿದೆ. ಶುಕ್ರನ ದ್ರೇಕ್ಕಾಣವು ಒಡಹುಟ್ಟಿದವರೊಂದಿಗೆ ಸೌಹಾರ್ದತೆಯನ್ನು ನೀಡಿದರೆ, ಶನಿಯ ನವಾಂಶವು ಕಾರ್ಯಕ್ಷೇತ್ರದಲ್ಲಿ ಕಠಿಣ ಪರಿಶ್ರಮಕ್ಕೆ ತಕ್ಕ ಫಲವನ್ನು ತಂದುಕೊಡುತ್ತದೆ. ಉದ್ಯೋಗದಲ್ಲಿ ಸಣ್ಣ ಪ್ರಯಾಣಗಳು ಲಾಭದಾಯಕವಾಗಲಿವೆ. ಆತುರದ ನಿರ್ಧಾರಗಳನ್ನು ತಪ್ಪಿಸಿ.

​ವೃಷಭ ರಾಶಿ

​ದ್ವಿತೀಯ ಭಾವದಲ್ಲಿ ರವಿಯ ಸ್ಥಿತಿಯಿದೆ. ಶುಕ್ರನ ದ್ರೇಕ್ಕಾಣವಿರುವುದರಿಂದ ಆರ್ಥಿಕವಾಗಿ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ. ಆದರೆ ರವಿಯ ಹೋರೆ ಮತ್ತು ಶನಿಯ ನವಾಂಶದ ಕಾರಣದಿಂದಾಗಿ ಕುಟುಂಬದಲ್ಲಿ ಮಾತಿನ ಚಕಮಕಿ ಅಥವಾ ಕಠಿಣ ಮಾತುಗಳು ಬರುವ ಸಾಧ್ಯತೆಯಿದೆ. ಗುರುವಿನ ತ್ರಿಂಶಾಂಶವು ನಿಮ್ಮನ್ನು ಆರ್ಥಿಕ ಸಂಕಷ್ಟಗಳಿಂದ ರಕ್ಷಿಸುತ್ತದೆ. ಹೂಡಿಕೆಯಲ್ಲಿ ಜಾಗ್ರತೆ ಇರಲಿ.

​ಮಿಥುನ ರಾಶಿ

​ನಿಮ್ಮದೇ ರಾಶಿಯಲ್ಲಿ ರವಿ ಇರಲಿದ್ದಾನೆ. ರವಿಯ ಹೋರೆಯ ಪ್ರಭಾವದಿಂದ ನಿಮ್ಮ ಗೌರವ, ಪ್ರತಿಷ್ಠೆ ಮತ್ತು ನಾಯಕತ್ವದ ಗುಣಗಳು ವೃದ್ಧಿಯಾಗಲಿವೆ. ಆದರೆ ಶನಿಯ ನವಾಂಶ ಮತ್ತು ಕುಜನ ದ್ವಾದಶಾಂಶವು ಮಾನಸಿಕ ಒತ್ತಡ, ಅಹಂಕಾರ ಮತ್ತು ತಲೆನೋವಿನಂತಹ ಆರೋಗ್ಯ ಸಮಸ್ಯೆಗಳನ್ನು ನೀಡಬಹುದು. ಶುಕ್ರನ ದ್ರೇಕ್ಕಾಣವಿರುವುದರಿಂದ ವೈವಾಹಿಕ ಜೀವನದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.

​ಕರ್ಕಾಟಕ ರಾಶಿ

​ನಿಮ್ಮ ರಾಶಿಯಿಂದ ದ್ವಾದಶ ಭಾವದಲ್ಲಿ ರವಿಯ ಸಂಚಾರವಿದೆ. ವಿದೇಶಿ ಮೂಲಗಳಿಂದ ಅಥವಾ ದೂರದ ಪ್ರಯಾಣದಿಂದ ಲಾಭವಾಗುವ ಸಾಧ್ಯತೆಯಿದೆ. ಆದರೆ ಕೋರ್ಟು-ಕಚೇರಿ ವ್ಯವಹಾರಗಳಲ್ಲಿ ಜಾಗ್ರತೆ ಅಗತ್ಯ. ಕುಜನ ದ್ವಾದಶಾಂಶ ಮತ್ತು ಶನಿಯ ನವಾಂಶವು ಅನಗತ್ಯ ಖರ್ಚುಗಳನ್ನು ಮತ್ತು ನಿದ್ರಾಹೀನತೆಯನ್ನು ಉಂಟುಮಾಡಬಹುದು. ಗುರುವಿನ ತ್ರಿಂಶಾಂಶದ ಪ್ರಭಾವದಿಂದ ಆಧ್ಯಾತ್ಮಿಕ ಚಿಂತನೆಗಳು ನೆಮ್ಮದಿ ನೀಡಲಿವೆ.

​ಸಿಂಹ ರಾಶಿ

​ನಿಮ್ಮ ರಾಶ್ಯಾಧಿಪತಿಯಾದ ರವಿಯು ಏಕಾದಶ ಭಾವದಲ್ಲಿರುವುದು ಅತ್ಯಂತ ಶುಭದಾಯಕ. ಶುಕ್ರನ ದ್ರೇಕ್ಕಾಣ ಮತ್ತು ರವಿಯ ಹೋರೆಗಳು ಸಮಾಜದಲ್ಲಿ ಉತ್ತಮ ಕೀರ್ತಿ, ಧನಲಾಭ ಮತ್ತು ಮಿತ್ರರಿಂದ ಸಹಕಾರವನ್ನು ತಂದುಕೊಡುತ್ತವೆ. ಶನಿಯ ನವಾಂಶವು ಹಿರಿಯ ಸಹೋದರರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ತರಬಹುದು, ಆದರೆ ಗುರುವಿನ ತ್ರಿಂಶಾಂಶದ ಶುಭ ದೃಷ್ಟಿಯಿಂದಾಗಿ ವ್ಯಾಪಾರ ಮತ್ತು ಉದ್ಯೋಗದಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಯ್ದಿರಿಸಿದೆ.

​ಕನ್ಯಾ ರಾಶಿ

​ದಶಮ ಭಾವದಲ್ಲಿ ರವಿಯು ದಿಗ್ದರ್ಶನವನ್ನು ಹೊಂದುತ್ತಾನೆ. ಉದ್ಯೋಗ ರಂಗದಲ್ಲಿ ಪ್ರಗತಿ, ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆಯಿದೆ. ಕುಜನ ದ್ವಾದಶಾಂಶವಿರುವುದರಿಂದ ಮೇಲಧಿಕಾರಿಗಳೊಂದಿಗೆ ವಾದವಿವಾದಗಳಿಗೆ ಇಳಿಯಬೇಡಿ. ಶನಿಯ ನವಾಂಶವು ಕೆಲಸದಲ್ಲಿ ವಿಳಂಬವನ್ನು ಉಂಟುಮಾಡಿದರೂ, ಅಂತಿಮವಾಗಿ ಯಶಸ್ಸು ನಿಮ್ಮದಾಗಲಿದೆ. ಶುಕ್ರನ ದ್ರೇಕ್ಕಾಣವು ಕೆಲಸದ ವಾತಾವರಣವನ್ನು ಆಹ್ಲಾದಕರವಾಗಿಸುತ್ತದೆ.

​ತುಲಾ ರಾಶಿ

​ಭಾಗ್ಯ ಭಾವದಲ್ಲಿ ರವಿಯ ಸಂಚಾರವಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಗುರುವಿನ ತ್ರಿಂಶಾಂಶದ ಪ್ರಭಾವದಿಂದ ಪಿತೃ ಹಾಗೂ ಗುರುವಿನ ಆಶೀರ್ವಾದ ಲಭಿಸಲಿದೆ. ಶನಿಯ ನವಾಂಶವು ಉನ್ನತ ಶಿಕ್ಷಣ ಅಥವಾ ಭಾಗ್ಯೋದಯದಲ್ಲಿ ಕೆಲವು ಅಡೆತಡೆಗಳನ್ನು ತಂದರೂ, ಶುಕ್ರನ ದ್ರೇಕ್ಕಾಣವು ಕಲಾತ್ಮಕ ಹಾಗೂ ಸೃಜನಶೀಲ ರಂಗದಲ್ಲಿ ಇರುವವರಿಗೆ ಅಪಾರ ಕೀರ್ತಿಯನ್ನು ತಂದುಕೊಡುತ್ತದೆ. ಲಾಭದಾಯಕ ಪ್ರಯಾಣಗಳು ಒದಗಿಬರಲಿವೆ.

​ವೃಶ್ಚಿಕ ರಾಶಿ

​ಅಷ್ಟಮ ಭಾವದಲ್ಲಿ ರವಿಯ ಸ್ಥಿತಿಯಿದೆ. ಆರೋಗ್ಯದ ಕಡೆಗೆ ವಿಶೇಷ ಗಮನಹರಿಸಬೇಕು. ಅದರಲ್ಲೂ ಕುಜನ ದ್ವಾದಶಾಂಶ ಮತ್ತು ಶನಿಯ ನವಾಂಶ ಇರುವುದರಿಂದ ರಕ್ತದೊತ್ತಡ, ಉಷ್ಣಬಾಧೆ ಅಥವಾ ವಾಹನ ಚಾಲನೆಯಲ್ಲಿ ಅಪಘಾತಗಳ ಬಗ್ಗೆ ಎಚ್ಚರಿಕೆ ಅಗತ್ಯ. ಗುರುವಿನ ತ್ರಿಂಶಾಂಶವು ವಿಮೆ ಅಥವಾ ಹಠಾತ್ ಧನಲಾಭದ ಮೂಲಕ ಆರ್ಥಿಕ ನೆರವು ನೀಡುತ್ತದೆ. ಸಾರ್ವಜನಿಕವಾಗಿ ವಾದವಿವಾದಗಳಿಂದ ದೂರವಿರಿ.

​ಧನು ರಾಶಿ

​ಸಪ್ತಮ ಭಾವದಲ್ಲಿ ರವಿ ಇರಲಿದ್ದಾನೆ. ವೈವಾಹಿಕ ಜೀವನದಲ್ಲಿ ಅಥವಾ ಪಾಲುದಾರಿಕೆ ವ್ಯವಹಾರದಲ್ಲಿ ರವಿಯ ಹೋರೆ ಮತ್ತು ಕುಜನ ದ್ವಾದಶಾಂಶದ ಕಾರಣದಿಂದಾಗಿ ಸಣ್ಣಪುಟ್ಟ ಅಹಂನ ಸಂಘರ್ಷಗಳು ಬರಬಹುದು. ಆದರೆ ಶುಕ್ರನ ದ್ರೇಕ್ಕಾಣ ಮತ್ತು ಗುರುವಿನ ತ್ರಿಂಶಾಂಶವು ಸಂಗಾತಿಯ ನಡುವಿನ ಪ್ರೀತಿಯನ್ನು ಕಾಪಾಡುತ್ತದೆ. ಸಾಮಾಜಿಕವಾಗಿ ನಿಮ್ಮ ಗೌರವಕ್ಕೆ ಯಾವುದೇ ಚ್ಯುತಿ ಬರುವುದಿಲ್ಲ.

​ಮಕರ ರಾಶಿ

​ಷಷ್ಠ ಭಾವದಲ್ಲಿ ರವಿ ಸಂಚರಿಸಲಿದ್ದಾನೆ. ಶತ್ರುಗಳ ಮೇಲೆ ಜಯ ಸಿಗಲಿದೆ. ಕೋರ್ಟ್ ವ್ಯವಹಾರಗಳಲ್ಲಿ ಸಫಲತೆ ಕಾಣುವಿರಿ. ಶನಿಯ ನವಾಂಶವು ನಿಮ್ಮ ಸ್ವಂತ ರಾಶ್ಯಾಧಿಪತಿಯದ್ದೇ ಆಗಿರುವುದರಿಂದ ಕಠಿಣ ಸವಾಲುಗಳನ್ನು ಎದುರಿಸುವ ಶಕ್ತಿ ಸಿಗುತ್ತದೆ. ಕುಜನ ದ್ವಾದಶಾಂಶವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ನೀಡುತ್ತದೆ. ಆದರೆ ಸಣ್ಣಪುಟ್ಟ ಸಾಲ ಅಥವಾ ಆರೋಗ್ಯದ ಏರುಪೇರುಗಳ ಬಗ್ಗೆ ಜಾಗ್ರತೆ ಇರಲಿ.

ಕುಂಭ ರಾಶಿ

​ಪಂಚಮ ಭಾವದಲ್ಲಿ ರವಿಯ ಸಂಚಾರವಿದೆ. ಶನಿಯ ನವಾಂಶದ ಪ್ರಭಾವದಿಂದಾಗಿ ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಾಡಬಹುದು. ಆದಾಗ್ಯೂ, ಗುರುವಿನ ತ್ರಿಂಶಾಂಶದ ಬಲವಿರುವುದರಿಂದ ಜ್ಞಾನಾರ್ಜನೆಗೆ ಧಕ್ಕೆಯಾಗುವುದಿಲ್ಲ. ಶುಕ್ರನ ದ್ರೇಕ್ಕಾಣವು ಪ್ರೇಮ ಜೀವನದಲ್ಲಿ ಸುಧಾರಣೆಯನ್ನು ತರಲಿದೆ. ಷೇರು ಮಾರುಕಟ್ಟೆ ಅಥವಾ ಜೂಜಾಟಗಳಲ್ಲಿ ದೊಡ್ಡ ಮೊತ್ತದ ಹೂಡಿಕೆ ಮಾಡುವಾಗ ಆತುರ ಬೇಡ.

ಇದನ್ನೂ ಓದಿ: ಜೂನ್‌ನಲ್ಲಿ ಕುಜ ವೃಷಭ ರಾಶಿಯಲ್ಲಿ ಸಂಚಾರ; 12ರಾಶಿಗಳಲ್ಲಿ ಯಾರಿಗೆ ಶುಭ, ಯಾರಿಗೆ ಅಶುಭ?

​ಮೀನ ರಾಶಿ

​ಚತುರ್ಥ ಭಾವದಲ್ಲಿ ರವಿ ಇರಲಿದ್ದಾನೆ. ರವಿಯ ಹೋರೆ ಮತ್ತು ಕುಜನ ದ್ವಾದಶಾಂಶದ ಪ್ರಭಾವದಿಂದಾಗಿ ಮನೆಯಲ್ಲಿ ಅಥವಾ ಆಸ್ತಿ ವಿಚಾರದಲ್ಲಿ ಸಣ್ಣಪುಟ್ಟ ಅಶಾಂತಿ ಉಂಟಾಗಬಹುದು. ತಾಯಿಯ ಆರೋಗ್ಯದ ಕಡೆಗೆ ಗಮನಹರಿಸಿ. ಆದರೆ ಗುರುವಿನ ತ್ರಿಂಶಾಂಶವು ನಿಮ್ಮ ರಾಶ್ಯಾಧಿಪತಿಯದ್ದೇ ಆಗಿರುವುದರಿಂದ ವಾಹನ ಅಥವಾ ಭೂಮಿ ಖರೀದಿಗೆ ಯೋಗ ಒದಗಿಬರಲಿದೆ. ಉದ್ಯೋಗದಲ್ಲಿ ಸ್ಥಿರತೆ ಇರಲಿದೆ.

ಜಾತಕದಲ್ಲಿ ರವಿಯ ಬಲ ಕಡಿಮೆ ಇರುವವರು ಪ್ರತಿದಿನ ಆದಿತ್ಯ ಹೃದಯ ಸ್ತೋತ್ರ ಪಠಿಸಿದರೆ ಮಾನಸಿಕ ಶಾಂತಿ ಮತ್ತು ಸಕಲ ಕಾರ್ಯ ಸಿದ್ಧಿಯಾಗಲಿದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:34 pm, Tue, 2 June 26

Source link

ಬೆಲೆ ಏರಿಕೆಯ ಬಿಸಿ: ಗೋಲ್ಡ್ ಸ್ಕೀಮ್ ಗಳಿಂದ ಹಿಂದೆ ಸರಿಯುತ್ತಿರುವ ಸಿಟಿ ಮಂದಿ – Kannada News

ಬೆಂಗಳೂರು, (ಜೂನ್ 02): ಸಾಮಾನ್ಯ ವರ್ಗದವರಿಗೆ (middle class People) ಲಕ್ಷಗಟ್ಟಲೆ ಹಣ ಕೊಟ್ಟು ಚಿನ್ನವನ್ನ ಒಮ್ಮೇಲೆ ಖರೀದಿ ಮಾಡೋದಕ್ಕೆ ಸಾಧ್ಯವಾಗೋದಿಲ್ಲ. ಯಾಕೆಂದ್ರೆ ಅಷ್ಟು ಹಣ ಅವರ ಬಳಿ ಇರುವುದಿಲ್ಲ. ಇಂಥವರಿಗಾಗಿಯೇ ಚಿನ್ನದ ವ್ಯಾಪಾರಿಗಳು ಕೆಲ ರಿಯಾಯಿತಿಗಳನ್ನ ನೀಡಿ, ತಿಂಗಳಿಗೆ ಎಷ್ಟು ಹಣವಾಗುತ್ತೋ ಅಷ್ಟು ಹಣವನ್ನ ಸ್ಕೀಂನಲ್ಲಿ ಹೂಡಿಕೆ (invest schemes) ಮಾಡಿ ಅಷ್ಟು ಚಿನ್ನ ತೆಗೆದುಕೊಳ್ಳುವಂತಹದನ್ನು ಮಾಡುತ್ತಿದ್ದಾರೆ. ಸಾವಿರಾರು ಮಂದಿ ಈ ಸ್ಕೀಂಗಳಿಂದಲೇ ಚಿನ್ನ ಖರೀದಿ ಮಾಡುತ್ತಿದ್ದರು. ಆದ್ರೆ, ಇದಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಹೌದು.. ಎಲ್ಲದರ ಬೆಲೆ ಏರಿಕೆಯ ಬಿಸಿಯಿಂದ ಚಿನ್ನದ ಮೇಲೆ ಆಸೆಯಿದ್ರೂ ಕೂಡಾ, ಜನರು ಗೋಲ್ಡ್ ಸ್ಕೀಂನಿಂದ (gold schemes) ಹಿಂದೆ ಸರಿಯುತ್ತಿದ್ದಾರೆ.

ಬೆಲೆ ಏರಿಕೆಯ ಬಿಸಿ

ತಿಂಗಳು ಇಂತಿಷ್ಟು ಅಂತ ಹೂಡಿಕೆ ಮಾಡುತ್ತಿದ್ದ ಗೋಲ್ಡ್ ಸ್ಕೀಮ್ ಕ್ಯಾನ್ಸಲ್ ಮಾಡಿಕಂಡು ಹಣ ಪಡೆಯುತ್ತಿದ್ದಾರೆ. ಸದ್ಯ ಗೋಲ್ಡ್ ರೇಟ್ ಕಡಿಮೆಯಾದ್ರೂ ಚಿನ್ನ ಖರೀದಿಗೆ ಮುಂದಾಗುತ್ತಿಲ್ಲ. ವಾಣಿಜ್ಯ ಸಿಲಿಂಡರ್ , ಪೆಟ್ರೋಲ್ ಡೀಸೆಲ್, ಹೋಟೆಲ್ ತಿಂಡಿ ದರ ಏರಿಕೆಯಿಂದ ಮಧ್ಯಮ ವರ್ಗ ಕಂಗೆಟ್ಟಿದೆ. ಇದರ ಜೊತೆಗೆ ಕಂಪನಿಗಳ ಲೇ ಆಫ್ , ಹಾಗೂ ಮಕ್ಕಳ ಶಾಲಾ ಶುಲ್ಕದ ಎಫೆಕ್ಟ್ ನಿಂದ ಜನರಿಗೆ ಎಲ್ಲಿಲ್ಲದ ಸಂಕಷ್ಟ ಶುರುವಾಗಿದೆ.   ಗೋಲ್ಡ್ ಮೇಲೆ ಹೂಡಿಕೆ ಮಾಡುತ್ತಿದ್ದವರಿಗೆ ಈಗ ಕಮಿಟ್ ಮೆಂಟ್ ಚಿಂತೆಯಾಗಿದೆ. ಕೆಲವರು ಚಿನ್ನ ಖರೀದಿಯಿಂದ ಹಿಂದೆ ಸರಿದರೆ, ಮತ್ತೆ ಕೆಲವರು ಹಾಕಿರುವ ಸ್ಕೀಂಗಳನ್ನ ವಾಪಸ್ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಮೊದಲ ಬಾರಿ ಇನ್ವೆಸ್ಟ್​ಮೆಂಟ್​ಗೆ ಪ್ರಯತ್ನಿಸುತ್ತಿದ್ದೀರಾ? ಹೇಗೆ ಆರಂಭಿಸೋದು, ಎಲ್ಲಿ ಹೂಡಿಕೆ ಮಾಡೋದು? ಇಲ್ಲಿದೆ ಟಿಪ್ಸ್

ಉಳಿತಾಯದ ಹಣವನ್ನೇ ಈ ರೀತಿ ಸ್ಕೀಂಗಳಲ್ಲಿ ಹೂಡಿಕೆ ಮಾಡುತ್ತಿದ್ದರು. ಆದ್ರೆ, ಇದೀಗ ಪ್ರತಿನಿತ್ಯದ ವಸ್ತುಗಳು ದುಬಾರಿ ಆಗುತ್ತಿದ್ದರೆ ಉಳಿತ ಮಾಡಲು ಹೇಗೆ ಸಾಧ್ಯ?  ಬೆಲೆ ಏರಿಕೆಯಿಂದ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಧ್ಯಮ ವರ್ಗದ ಜನರಿಗೆ ಈ ರೀತಿ ಸ್ಕೀಂಗಳಲ್ಲಿ ಹೂಡಿಕೆ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ.

ಇತ್ತ ಗ್ರಾಹಕರಿಲ್ಲದೆ ಚಿನ್ನದ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಗೋಲ್ಡ್ ರೇಟ್ ಏರಿಕೆಯಾದಾಗಲೂ ಗ್ರಾಹಕರು ಅಂಗಡಿಗೆ ಬರ್ತಿಲ್ಲ. ಈಗ ಕಡಿಮೆಯಾದ್ರೂ ದಿನನಿತ್ಯದ ಕಮಿಟ್ಮೆಂಟ್ ಗಳಿಂದ ಜನರು ಚಿನ್ನದ ಖರೀದಿಯಿಂದ ದೂರ ಸರಿಯುತ್ತಿದ್ದಾರೆ. ಈ ರೀತಿ ಆದ್ರೆ ನಮ್ಮ ಕಥೆ ಏನು ಅಂತಿದ್ದಾರೆ.

ಒಟ್ನಲ್ಲಿ ಮಧ್ಯಮ ವರ್ಗಕ್ಕೆ ಬಂಗಾರ ಖರೀದಿಗೆ ಇದ್ದ ಸ್ಕೀಂಗಳನ್ನೇ ಬೆಲೆ ಏರಿಕೆಯಿಂದ ಬಿಡಬೇಕಾದ ಪರಿಸ್ಥಿತಿ ಎದುರಾಗಿದ್ದು, ಜನರ ಸ್ಥಿತಿ ಮುಂದಿನ ದಿನಗಳಲ್ಲಿ ಸುಧಾರಿಸುತ್ತಾ ಅನ್ನೋದನ್ನ ಕಾದು ನೋಡ್ಬೇಕಿದೆ.

Source link

ಮತ್ತೊಂದು ರಾಷ್ಟ್ರ ಪ್ರಶಸ್ತಿ ಗ್ಯಾರಂಟಿ; ಕಂಗನಾ ಹೊಸ ಸಿನಿಮಾ ಟ್ರೇಲರ್ ನೋಡಿ ಫ್ಯಾನ್ಸ್ ಫಿದಾ – Kannada News

ಬಾಲಿವುಡ್ ನಟಿ ಮತ್ತು ಸಂಸದೆ ಕಂಗನಾ ರಣಾವತ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಭಾರತ್ ಭಾಗ್ಯ ವಿಧಾತ’ (Bharat Bhhagya Viddhaata) ಸಿನಿಮಾದ ಟ್ರೇಲರ್ ಮಂಗಳವಾರ (ಜೂನ್ 2) ಬಿಡುಗಡೆಯಾಗಿದೆ. 26/11 ಮುಂಬೈ ಭೀಕರ ಭಯೋತ್ಪಾದನಾ ದಾಳಿಯ ಸಮಯದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನೂರಾರು ರೋಗಿಗಳನ್ನು ರಕ್ಷಿಸಿದ ಮುಂಬೈನ ‘ಕಾಮಾ ಮತ್ತು ಅಲ್ಬ್ಲೆಸ್’ ಆಸ್ಪತ್ರೆಯ ಧೀರ ನರ್ಸ್‌ಗಳು ಹಾಗೂ ವೈದ್ಯಕೀಯ ಸಿಬ್ಬಂದಿಯ ನೈಜ ಶೌರ್ಯದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಮನೋಜ್ ತಪಾಡಿಯಾ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಕಂಗನಾ ರಣಾವತ್ (Kangana Ranaut) ಅವರು ನರ್ಸ್ ಪಾತ್ರವನ್ನು ಮಾಡಿದ್ದಾರೆ.

ಬಿಡುಗಡೆಯಾಗಿರುವ 2 ನಿಮಿಷ 24 ಸೆಕೆಂಡುಗಳ ಟ್ರೇಲರ್​ನಲ್ಲಿ ಭೀಕರ ಗುಂಡಿನ ಸದ್ದು, ಪೊಲೀಸ್ ಸೈರನ್ ಮತ್ತು 26/11ರ ಮುಂಬೈ ದಾಳಿಯ ಸುದ್ದಿ ಪ್ರಸಾರದ ತುಣುಕು ಹೈಲೈಟ್ ಆಗಿದೆ. ಇವುಗಳೊಂದಿಗೆ ಟ್ರೇಲರ್ ರೋಚಕವಾಗಿ ಆರಂಭವಾಗುತ್ತದೆ. ಬಳಿಕ ಆಸ್ಪತ್ರೆಯ ನರ್ಸ್‌ಗಳ ದೈನಂದಿನ ಶಾಂತಿಯುತ ಜೀವನವನ್ನು ತೋರಿಸಲಾಗುತ್ತದೆ. ಆದರೆ ಉಗ್ರರ ದಾಳಿ ಆಸ್ಪತ್ರೆಯ ಮೇಲೆ ನಡೆದಾಗ ಇಡೀ ಪರಿಸ್ಥಿತಿಯೇ ಬದಲಾಗಿಹೋಗುತ್ತದೆ.

‘ಭಾರತ್ ಭಾಗ್ಯ ವಿಧಾತ’ ಸಿನಿಮಾ ಟ್ರೇಲರ್:

ಆಸ್ಪತ್ರೆಯೊಳಗೆ ಉಗ್ರರು ನುಗ್ಗಿ ದಾಳಿ ನಡೆಸುತ್ತಿರುವಾಗ, ಕಂಗನಾ ಅವರ ಪಾತ್ರವು ತನ್ನ ಪ್ರಾಣದ ಹಂಗು ತೊರೆದು ಒಳಗೆ ಸಿಲುಕಿರುವ ರೋಗಿಗಳನ್ನು ರಕ್ಷಿಸಲು ಮುಂದಾಗುತ್ತದೆ. ತೀವ್ರವಾದ ಅಪಾಯ ಮತ್ತು ಸಾವಿನ ಭಯದ ನಡುವೆಯೂ ಹೆಲ್ತ್‌ಕೇರ್ ಸಿಬ್ಬಂದಿ ತೋರಿದ ಧೈರ್ಯ ಹಾಗೂ ನಿಸ್ವಾರ್ಥ ಸೇವೆಗೆ ಈ ಟ್ರೇಲರ್ ಕನ್ನಡಿ ಹಿಡಿದಿದೆ. ಟ್ರೇಲರ್ ನೋಡಿದ ಅಭಿಮಾನಿಗಳು ‘ಈ ಚಿತ್ರದಿಂದ ಕಂಗನಾ ಅವರಿಗೆ ಮತ್ತೊಂದು ನ್ಯಾಷನಲ್ ಅವಾರ್ಡ್ ಗ್ಯಾರಂಟಿ’ ಎಂದು ಕಮಂಟ್ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಇತಿಹಾಸದ ಪುಟಗಳಲ್ಲಿ ಮರೆತುಹೋಗುವ ಇಂತಹ ನರ್ಸ್‌ಗಳ ಮತ್ತು ವೈದ್ಯಕೀಯ ಸಿಬ್ಬಂದಿಯ ಮಹತ್ವದ ಕೊಡುಗೆಯನ್ನು ಜಗತ್ತಿಗೆ ಸಾರುವ ಉದ್ದೇಶವನ್ನು ಈ ಸಿನಿಮಾ ಹೊಂದಿದೆ. ಮುಂಬೈ ದಾಳಿಯ ಕರಾಳ ರಾತ್ರಿಯಲ್ಲಿ ಆಸ್ಪತ್ರೆಯಲ್ಲಿದ್ದ ಸುಮಾರು 400 ರೋಗಿಗಳನ್ನು ಸುರಕ್ಷಿತವಾಗಿ ಕಾಪಾಡಿದ ವೈದ್ಯಕೀಯ ಸಿಬ್ಬಂದಿಗೆ ಈ ಚಿತ್ರದ ಮೂಲಕ ಗೌರವ ಸಲ್ಲಿಸಲಾಗಿದೆ.

ಇದನ್ನೂ ಓದಿ: 8 ಗಂಟೆ ಕೆಲಸದ ಶಿಫ್ಟ್ ವಿವಾದ: ದೀಪಿಕಾ ಪಡುಕೋಣೆ ಪರ ನಿಂತ ಕಂಗನಾ ರಣಾವತ್

‘ಭಾರತ್ ಭಾಗ್ಯ ವಿಧಾತ’ ಚಿತ್ರದಲ್ಲಿ ಕಂಗನಾ ರಣಾವತ್ ಅವರೊಂದಿಗೆ ಗಿರಿಜಾ ಓಕ್ ಪ್ರಮುಖ ಪಾತ್ರದಲ್ಲಿದ್ದಾರೆ. ಉಳಿದಂತೆ ಸ್ಮಿತಾ ತಾಂಬೆ, ಅಮೃತಾ ನಾಮದೇವ್, ಈಶಾ ಡೇ, ಪ್ರಿಯಾ ಬೆರ್ಡೆ, ಆಶಾ ಶೆಲಾರ್, ಸುಹಿತಾ ಥಟ್ಟೆ, ರಸಿಕಾ ಆಗಾಶೆ, ಆದಿತ್ಯ ಮಿಶ್ರಾ ಮತ್ತು ಜಾಹಿದ್ ಖಾನ್ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಜೂನ್ 12ರಂದು ಈ ಸಿನಿಮಾ ದೇಶಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Chanakya Niti: ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಚಾಣಕ್ಯರ ಮಾತುಗಳನ್ನು ಪಾಲಿಸಿ – Kannada News

ಪ್ರತಿಯೊಬ್ಬರ ಜೀವನದಲ್ಲೂ ಆರ್ಥಿಕ ಸಮಸ್ಯೆಗಳು  (financial problems) ಎದುರಾಗುತ್ತಲೇ ಇರುತ್ತವೆ. ಆದರೆ ಅನೇಕರಿಗೆ ಈ ಆರ್ಥಿಕ ಸಮಸ್ಯೆಯಿಂದ ಮುಕ್ತಿ ಪಡೆಯೋದು ಹೇಗೆ, ಹಣಕಾಸನ್ನು ಸರಿಯಾಗಿ ನಿರ್ವಹಿಸುವುದು ಹೇಗೆ ಎಂಬುದೇ ಗೊತ್ತಿಲ್ಲ. ಇದರಿಂದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ದುರ್ಬಲಗೊಳ್ಳುತ್ತದೆ. ಹೀಗಿರುವಾಗ ಆಚಾರ್ಯ ಚಾಣಕ್ಯರು ಹೇಳಿರುವ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ  ಗಳಿಕೆ, ಉಳಿತಾಯ ಮತ್ತು ಸಂಪತ್ತನ್ನು ಹೆಚ್ಚಿಸಲು ಅನೇಕ ಸಲಹೆಗಳನ್ನು ನೀಡಿದ್ದಾರೆ ಅದೇ ರೀತಿ ಆರ್ಥಿಕ ಸಮಸ್ಯೆಯಿಂದ ಮುಕ್ತಿ ಪಡೆಯುವ ದಾರಿಯ ಬಗ್ಗೆಯೂ ಹೇಳಿದ್ದಾರೆ.  ಅವು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಆರ್ಥಿಕ ಸಮಸ್ಯೆಯಿಂದ ಮುಕ್ತಿ ಪಡೆಯುವುದು ಹೇಗೆ?

ಹಣ ಉಳಿತಾಯ ಅತ್ಯಗತ್ಯ: ಚಾಣಕ್ಯ ನೀತಿಯ ಪ್ರಕಾರ, ಚಾಣಕ್ಯ ನೀತಿಯ ಪ್ರಕಾರ, ಕೇವಲ ಹಣ ಗಳಿಸಿದರೆ ಸಾಲದು, ಅದನ್ನು ಸರಿಯಾಗಿ ನಿರ್ವಹಿಸುವುದು, ಉಳಿತಾಯ ಮಾಡುವುದು ಸಹ ಮುಖ್ಯವಾಗಿದೆ. ಪ್ರತಿಯೊಬ್ಬರೂ ಹಣವನ್ನು ಉಳಿಸಬೇಕು. ಚಾಣಕ್ಯನ ಪ್ರಕಾರ, ಹಣವನ್ನು ಉಳಿಸದ ವ್ಯಕ್ತಿಯು ಕಷ್ಟದ ಸಮಯದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅದೇ ಉಳಿತಾಯ ಮತ್ತು ಸರಿಯಾದ ಹೂಡಿಕೆ ಆರ್ಥಿಕ ಬಿಕ್ಕಟ್ಟುಗಳನ್ನು ಸಮರ್ಥವಾಗಿ ಎದುರಿಸಲು ನಿಮಗೆ ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಆದಾಯದ ಸ್ವಲ್ಪ ಭಾಗವನ್ನು ಉಳಿತಾಯ ಮಾಡಬೇಕು.

ಕೆಟ್ಟ ವಿಷಯಗಳಿಗೆ ಹಣ ಖರ್ಚು ಮಾಡಬೇಡಿ: ಚಾಣಕ್ಯನ ಪ್ರಕಾರ, ಜನರು ಎಂದಿಗೂ ಕೆಟ್ಟ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡಬಾರದು ಏಕೆಂದರೆ ಅಂತಹ ಉದ್ದೇಶಗಳಿಗಾಗಿ ಹಣವನ್ನು ಬಳಸುವುದು ಅದರ ನಾಶಕ್ಕೆ ಕಾರಣವಾಗುತ್ತದೆ ಮತ್ತು ಜನರು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಅನಗತ್ಯ ಖರ್ಚು ಮತ್ತು ಆಡಂಬರವನ್ನು ತಪ್ಪಿಸುವುದು ಬಹಳ ಮುಖ್ಯ. ಬುದ್ಧಿವಂತಿಕೆಯಿಂದ ಖರ್ಚು ಮಾಡಿದರೆ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ.

ಆದಾಯದ ಮೂಲಗಳು ಹೆಚ್ಚಿರಲಿ: ಚಾಣಕ್ಯರ ಪ್ರಕಾರ, ಒಂದೇ ಆದಾಯದ ಮೂಲವನ್ನು ಅವಲಂಬಿಸುವುದರಿಂದ ಹಣ ಗಳಿಸಲು ಸಾಧ್ಯವಿಲ್ಲ. ಅದೇ ಹೊಸ ಕೌಶಲ್ಯಗಳನ್ನು ಕಲಿಯುವ ಮೂಲಕ ಅಥವಾ ಹೆಚ್ಚುವರಿ ಕೆಲಸ ಮಾಡುವ ಮೂಲಕ ಹೆಚ್ಚುವರಿ ಆದಾಯದ ಮೂಲಗಳನ್ನು ಸೃಷ್ಟಿಸುವುದು ಭವಿಷ್ಯಕ್ಕೆ ಪ್ರಯೋಜನಕಾರಿ.

ಇದನ್ನೂ ಓದಿ:  ಐದು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಪಡುವುದು ತರವಲ್ಲ

ನಿಮ್ಮ ಆದಾಯಕ್ಕಿಂತ ಹೆಚ್ಚು ಹಣ ಖರ್ಚು ಮಾಡಬೇಡಿ: ಚಾಣಕ್ಯ ನೀತಿಯ ಪ್ರಕಾರ, ಯಾರೂ ತಮ್ಮ ಆದಾಯಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡಬಾರದು. ಹಾಗೆ ಮಾಡುವುದರಿಂದ ವ್ಯಕ್ತಿಯು ಭವಿಷ್ಯದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಸಮಯದ ಬಳಕೆ:  ಚಾಣಕ್ಯನ ಪ್ರಕಾರ, ಸಮಯ ಮತ್ತು ಹಣ ಎರಡರ ಮೌಲ್ಯವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಸಮಯದ ಸರಿಯಾದ ಬಳಕೆಯು ನಿಮ್ಮನ್ನು ನಿಮ್ಮ ಗುರಿಗಳಿಗೆ ಹತ್ತಿರಕ್ಕೆ ಕೊಂಡೊಯ್ಯುತ್ತದೆ ಮತ್ತು ಯಶಸ್ಸಿಗೆ ಕಾರಣವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

1ಕಿ.ಮೀ ಚಾಲೆಂಜ್ ಹಾಕಿ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡ ಜಿಬಿಎ! – Kannada News

ಬೆಂಗಳೂರು, (ಜೂನ್ 02): ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bengaluru Authority) ನಾಗರಿಕರಿಗೆ 1 ಕಿಲೋಮೀಟರ್ ಚಾಲೆಂಜ್ ನೀಡಿ, 1 ಕಿಲೋಮೀಟರ್ ವರೆಗಿನ ದೂರ ಕ್ರಮಿಸಲು ವಾಹನಗಳ ಬದಲು ಕಾಲ್ನಡಿಗೆಯನ್ನು ಆಯ್ಕೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿತ್ತು. ಫುಟ್‌ಪಾತ್‌ಗಳನ್ನು ಬಳಸಿಕೊಂಡು ಪರಿಸರ ಸ್ನೇಹಿಯಾಗಿ ನಡೆದುಕೊಳ್ಳಿ ಎಂಬ ಸಂದೇಶವನ್ನು ನೀಡಿದ್ದ GBA, ಈ ಅಭಿಯಾನದ ಮೂಲಕ ವಾಹನ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸಂರಕ್ಷಣೆಗೆ ಉತ್ತೇಜನ ನೀಡುವ ಉದ್ದೇಶ ಹೊಂದಿತ್ತು. ಆದರೆ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿ, ನಾಗರಿಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ.

ಮುಖ್ಯಾಂಶಗಳು

  • ನಾಗರಿಕರಿಗೆ ಚಾಲೆಂಜ್ ಹಾಕಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಯಡವಟ್ಟು
  • ಫುಟ್ ಪಾತ್ ಬಳಸುವಂತೆ 1ಕಿ.ಮೀ ಚಾಲೆಂಜ್
  • ಜಿಬಿಎ ಪೋಸ್ಟ್ ವಿರುದ್ಧ ಛೀಮಾರಿ ಹಾಕಿದ ಜನ

ಹೌದು.. GBA ನೀಡಿದ ಸಲಹೆಗೆ ಪ್ರತಿಕ್ರಿಯಿಸಿದ ಸಾರ್ವಜನಿಕರು, “ಮೊದಲು ನಡೆಯಲು ಯೋಗ್ಯವಾದ ಫುಟ್‌ಪಾತ್‌ಗಳನ್ನು ನಿರ್ಮಿಸಿ, ನಂತರ ಇಂತಹ ಚಾಲೆಂಜ್‌ಗಳನ್ನ ನೀಡಿ ಎಂದು ಪ್ರಶ್ನಿಸಿದರು. ನಗರದಲ್ಲಿ ನೆಟ್ಟಗೆ 100 ಮೀಟರ್ ಕೂಡ ಸುರಕ್ಷಿತವಾಗಿ ನಡೆಯಬಹುದಾದ ಫುಟ್‌ಪಾತ್ ಸಿಗದ ಪರಿಸ್ಥಿತಿ ಇದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಟಿವಿ9 ಕನ್ನಡ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ನಗರದ ಹಲವು ಭಾಗಗಳ ಫುಟ್‌ಪಾತ್‌ಗಳ ದುಸ್ಥಿತಿ ಬಯಲಾಗಿದ್ದು, ಜೆ.ಸಿ ರಸ್ತೆ ಬಳಿ ಕೂಡ ಪಾದಾಚಾರಿ ಮಾರ್ಗ ಹಾಳಾಗಿದೆ.

ಇದನ್ನೂ ಓದಿ: ಧಾರಾಕಾರ ಮಳೆಗೆ ಹೊಳೆಯಂತಾದ ಬೆಂಗಳೂರಿನ ರಸ್ತೆಗಳು: ಲ್ಯಾಂಡಿಂಗ್​​ ಸಾಧ್ಯವಾಗದೆ ಆಗಸದಲ್ಲೇ ಸುತ್ತಿದ ವಿಮಾನ!

ಕೆಲವೆಡೆ ಪಾದಚಾರಿಗಳು ರಸ್ತೆ ಮೇಲೆ ನಡೆದು ಜೀವ ಪಣಕ್ಕಿಡುವ ಪರಿಸ್ಥಿತಿ ಕಂಡುಬಂದರೆ, ಇನ್ನೂ ಕೆಲವು ಕಡೆಗಳಲ್ಲಿ ಫುಟ್‌ಪಾತ್‌ಗಳು ಅಪಾಯಕಾರಿಯಾಗಿ ಮಾರ್ಪಟ್ಟಿರುವುದು ಬೆಳಕಿಗೆ ಬಂದಿದೆ. ನಾಗರಿಕರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸದೇ ಬಿಟ್ಟಿ ಸಲಹೆ ನೀಡುವುದಕ್ಕಿಂತ ಮೊದಲು ಸುರಕ್ಷಿತ ಮತ್ತು ಸುಗಮ ಪಾದಚಾರಿ ಮಾರ್ಗಗಳನ್ನು ಕಲ್ಪಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಗಟ್ಟಿಯಾಗುತ್ತಿದೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 8:52 pm, Tue, 2 June 26

Source link

ತೆಲಂಗಾಣದಲ್ಲೂ ಜನಸೇನಾ ಚುನಾವಣೆಗೆ ಸ್ಪರ್ಧಿಸಲಿದೆ; ಕಾಂಗ್ರೆಸ್​​ಗೆ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಸವಾಲು

ಹೈದರಾಬಾದ್, ಜೂನ್ 2: ಜನ ಸೇನಾ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಅವರ ಹೇಳಿಕೆಗಳು ತೆಲಂಗಾಣ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ. “ತೆಲಂಗಾಣದಲ್ಲಿ ಕಾಲಿಡಲು ಬಿಡುವುದಿಲ್ಲ ಎಂದು ಕಾಂಗ್ರೆಸ್​​ನವರು ನನಗೆ ಬೆದರಿಕೆ ಹಾಕುತ್ತಿದ್ದಾರೆ. ತೆಲಂಗಾಣ ನಿಮ್ಮ ಕುಟುಂಬದ ಭೂಮಿಯೇ? ತೆಲಂಗಾಣದಲ್ಲೂ ಜನಸೇನಾ ಪಕ್ಷ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳಲಿದೆ. ನಾವು ಮುಂದಿನ ಚುನಾವಣೆಯಲ್ಲಿ ತೆಲಂಗಾಣದಲ್ಲೂ ಸ್ಪರ್ಧಿಸುತ್ತೇವೆ. ನಾನೇ ತೆಲಂಗಾಣದಲ್ಲಿ ಸಂಚಾರ ಮಾಡಿ ಜನರನ್ನು ತಲುಪುತ್ತೇನೆ” ಎಂದು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡ ಅವರು, ಜನ ಸೈನಿಕರು ಹೊಡೆತ ಮತ್ತು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ದಕ್ಷಿಣ ಭಾರತಕ್ಕೆ ಬಂದು ಸ್ಪರ್ಧಿಸುವಾಗ ನಾವು ತೆಲಂಗಾಣದಲ್ಲಿ ಏಕೆ ಸ್ಪರ್ಧಿಸಬಾರದು? ಎಂದು ಪವನ್ ಕಲ್ಯಾಣ್ ಪ್ರಶ್ನಿಸಿದ್ದಾರೆ. “ನನ್ನ ವಿರುದ್ಧ ಮೊದಲ ಪ್ರಕರಣ ತೆಲಂಗಾಣದಲ್ಲಿ ದಾಖಲಾಗಿತ್ತು. ನಾಲಿಗೆ ಕತ್ತರಿಸುವ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ನಾನು ಹೇಳುತ್ತಿದ್ದೇನೆ. ಇಲ್ಲಿಗೆ ಯಾರೇ ಬಂದರೂ ಬನ್ನಿ, ನಾನು ನನ್ನ ನಾಲಿಗೆ ತೋರಿಸುತ್ತೇನೆ” ಎಂದು ಅವರು ಸವಾಲು ಹಾಕಿದ್ದಾರೆ. ಜನಸೇನಾ ತೆಲಂಗಾಣದ ಹೃದಯಭಾಗದಲ್ಲಿ ಹುಟ್ಟಿಕೊಂಡಿದ್ದು, ಇಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನಸೇನಾ ಸೈನಿಕರಿದ್ದಾರೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿ.ಕೆ. ಶಿವಕುಮಾರ್ ಪ್ರಮಾಣ ವಚನಕ್ಕೆ ಬರುವ ಅತಿಥಿಗಳ ಮೆಗಾ ಲಿಸ್ಟ್ ಇಲ್ಲಿದೆ! ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರು ಯಾರು ಗೊತ್ತಾ? – Kannada News

ಸಿದ್ದರಾಮಯ್ಯ, ಖರ್ಗೆ, ರಾಹುಲ್​​ ಗಾಂಧಿ, ಡಿಕೆಶಿImage Credit source: Tv9 kannada

ಬೆಂಗಳೂರು, ಜೂ.2: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಪ್ರಮಾಣ ವಚನ ಸ್ವೀಕರಿಸಲಿರುವ ಐತಿಹಾಸಿಕ ಸಮಾರಂಭಕ್ಕೆ ರಾಜಧಾನಿ ಬೆಂಗಳೂರು ಸಜ್ಜಾಗುತ್ತಿದ್ದು, ಇಡೀ ದೇಶದ ಗಮನ ಸೆಳೆಯುವಂತಹ ವಿವಿಐಪಿ (VVIP) ಹಾಗೂ ಜನಸಾಮಾನ್ಯರನ್ನೊಳಗೊಂಡ ಆಹ್ವಾನಿತರ ಭವ್ಯ ಪಟ್ಟಿ ಸಿದ್ಧವಾಗಿದೆ. ರಾಜಕೀಯ ದೈತ್ಯರ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಈ ಸಮಾರಂಭದಲ್ಲಿ ಭಾಗವಹಿಸಲು ವಿಶೇಷ ಆಹ್ವಾನ ನೀಡಿರುವುದು ಈ ಕಾರ್ಯಕ್ರಮದ ವಿಶೇಷವಾಗಿದೆ.

ಈ ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್‌ನ ಪ್ರಮುಖ ನಾಯಕರು ಸಾಕ್ಷಿಯಾಗಲಿದ್ದಾರೆ. ಇವರೊಂದಿಗೆ ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ವಿವಿಧ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರುಗಳು (PCC Presidents) ಮತ್ತು ಪ್ರಮುಖ ಸಂಸದರು ಪಾಲ್ಗೊಳ್ಳಲಿದ್ದಾರೆ. ಸಮಾರಂಭಕ್ಕೆ ಮಂಗಳಕರ ಚಾಲನೆ ನೀಡಲು ಸರ್ವಧರ್ಮ ಗುರುಗಳನ್ನು ಆಹ್ವಾನಿಸಲಾಗಿದೆ.

ಮುಖ್ಯಾಂಶಗಳು

  • ಡಿ.ಕೆ. ಶಿವಕುಮಾರ್ ಅವರು ಪ್ರಮಾಣ ವಚನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಆಹ್ವಾನ
  • ಕೂಲಿ ಕಾರ್ಮಿಕರು, ಪೌರ ಕಾರ್ಮಿಕರು, ರೈತ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿ
  • ಮಾಧ್ಯಮ ಕ್ಷೇತ್ರ, ಚಿತ್ರರಂಗ, ನ್ಯಾಯಾಂಗ, ಕ್ರೀಡಾಕ್ಷೇತ್ರ, ನಾಟಕ ರಂಗದ ದಿಗ್ಗಜರಿಗೂ ಆಹ್ವಾನ

ಈ ಆಹ್ವಾನಿತರ ಪಟ್ಟಿಯಲ್ಲಿ ಅತ್ಯಂತ ವಿಶೇಷ ಅಂಶವೆಂದರೆ, ಡಿ.ಕೆ. ಶಿವಕುಮಾರ್ ಅವರ ತವರೂರಾದ ಕನಕಪುರದ ದೊಡ್ಡಾಲಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಅವರೊಂದಿಗೆ ಸಮಾಜದ ಬೆನ್ನೆಲುಬಾಗಿರುವ ಕೂಲಿ ಕಾರ್ಮಿಕರು, ಪೌರ ಕಾರ್ಮಿಕರು, ರೈತ ಮುಖಂಡರು, ದಲಿತ ಸಂಘಟನೆಗಳ ನಾಯಕರು, ಹಿಂದುಳಿದ ವರ್ಗಗಳ ಮುಖಂಡರು, ಸ್ತ್ರೀ ಶಕ್ತಿ ಸಂಘಗಳ ಪ್ರತಿನಿಧಿಗಳು ಹಾಗೂ ಮಹಿಳಾ ಮುಖಂಡರನ್ನು ಅತ್ಯಂತ ಗೌರವದಿಂದ ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಸರ್ವ ಧರ್ಮ ಸ್ವಾಮೀಜಿಗಳ ಸಮ್ಮುಖದಲ್ಲಿ ಪೂರ್ವಾಭಿಮುಖವಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿಕೆಶಿ

ಕೇವಲ ರಾಜಕೀಯಕ್ಕಷ್ಟೇ ಸೀಮಿತವಾಗದೆ ಮಾಧ್ಯಮ ಕ್ಷೇತ್ರ, ಚಿತ್ರರಂಗ, ನ್ಯಾಯಾಂಗ, ಕ್ರೀಡಾಕ್ಷೇತ್ರ, ನಾಟಕ ರಂಗದ ದಿಗ್ಗಜರು, ಪ್ರಮುಖ ಸಾಹಿತಿಗಳು ಹಾಗೂ ಕಲಾವಿದರು ಈ ಸಮಾರಂಭಕ್ಕೆ ಬರಲಿದ್ದಾರೆ. ಆರ್ಥಿಕ ವಲಯದಿಂದ ಪ್ರಮುಖ ಕೈಗರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು, ಹೋಟೆಲ್ ಉದ್ಯಮಿಗಳು ಹಾಗೂ ದೇಶದ ಭವಿಷ್ಯವಾಗಿರುವ ಯುವ ಮುಖಂಡರಿಗೆ ಸಾಕ್ಷಿಯಾಗಲು ವೇದಿಕೆ ಸಜ್ಜಾಗಿದೆ. ಒಟ್ಟಾರೆಯಾಗಿ ರಾಜಕೀಯ ಗಣ್ಯರು ಮತ್ತು ಜನಸಾಮಾನ್ಯರ ಅಪೂರ್ವ ಸಂಗಮಕ್ಕೆ ಈ ಪ್ರಮಾಣ ವಚನ ಕಾರ್ಯಕ್ರಮ ಸಾಕ್ಷಿಯಾಗಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾತ್ರಿ ಪದೇ ಪದೇ ಎಚ್ಚರವಾಗಿ ನಿದ್ರೆ ಸರಿಯಾಗಿ ಬರದಿದ್ದರೆ ತಪ್ಪದೆ ಈ ವಿಟಮಿನ್ ಕೊರತೆಯಾಗಿದೆಯೇ ಪರೀಕ್ಷಿಸಿಕೊಳ್ಳಿ! – Kannada News

ಇತ್ತೀಚಿನ ದಿನಗಳಲ್ಲಿ ಅನೇಕರು ರಾತ್ರಿ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಇದು ಕೂಡ ಒಂದು ಸಮಸ್ಯೆಯಾಗಿದ್ದು ಹಲವರು ಇದರಿಂದ ಬಳಲುತ್ತಿದ್ದಾರೆ. ನಿದ್ರೆ ತಡವಾಗಿ ಬರುವುದು, ಮಧ್ಯರಾತ್ರಿ ಪದೇ ಪದೇ ಎಚ್ಚರವಾಗುವುದು ಅಥವಾ ಸಾಕಷ್ಟು ಸಮಯ ಮಲಗಿದರೂ ವಿಶ್ರಾಂತಿ ಸಿಗದಿರುವುದು ಸಾಮಾನ್ಯವಾಗಿದೆ. ಹೆಚ್ಚಿನವರು ಇದನ್ನು ಒತ್ತಡ ಅಥವಾ ಬ್ಯುಸಿ ಜೀವನಶೈಲಿಯ ಪರಿಣಾಮ ಎಂದು ಭಾವಿಸುತ್ತಾರೆ. ಆದರೆ ಕೆಲವೊಮ್ಮೆ ದೇಹದಲ್ಲಿನ ಕೆಲವು ಅಗತ್ಯ ವಿಟಮಿನ್‌ಗಳು ಮತ್ತು ಪೋಷಕಾಂಶಗಳ ಕೊರತೆ ಕೂಡ ನಿದ್ರೆಯ ಗುಣಮಟ್ಟವನ್ನು ಹಾಳು ಮಾಡಬಹುದು. ಹೌದು, ನಿದ್ರೆ (Sleep) ಬರದಿರುವುದಕ್ಕೆ ಇದು ಒಂದು ಕಾರಣವಾಗಿರಬಹುದು. ಹಾಗಾದರೆ ಯಾವ ವಿಟಮಿನ್ ಕೊರತೆಯಾದಾಗ ಈ ರೀತಿಯ ಸಮಸ್ಯೆಯಾಗುತ್ತದೆ, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿದ್ರೆಯ ಸರಿಯಾಗಿ ಬರದಿರಲು ಯಾವ ಪೋಷಕಾಂಶಗಳ ಕೊರತೆ ಕಾರಣವಾಗುತ್ತದೆ?

ತಜ್ಞರ ಪ್ರಕಾರ, ವಿಟಮಿನ್ ಡಿ, ವಿಟಮಿನ್ ಬಿ12, ಮ್ಯಾಗ್ನೀಶಿಯಂ ಮತ್ತು ಐರನ್ ದೇಹದ ನಿದ್ರೆ ಸಂಬಂಧಿತ ಪ್ರಕ್ರಿಯೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇವುಗಳ ಕೊರತೆಯಿಂದ ಕೆಲವರಲ್ಲಿ ನಿದ್ರೆ ಸರಿಯಾಗಿ ಬಾರದಿರುವುದು, ದಣಿವು ಮತ್ತು ಮಾನಸಿಕ ಅಸ್ವಸ್ಥತೆಗಳಂತಹ ಸಮಸ್ಯೆಗಳು ಕಾಣಿಸಬಹುದು.

ವಿಟಮಿನ್ ಡಿ

ಸಾಮಾನ್ಯವಾಗಿ ವಿಟಮಿನ್ ಡಿ ಕೊರತೆಯು ನಿದ್ರೆಯ ಅವಧಿ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಇದರ ಕೊರತೆಯಿಂದ ದೇಹದಲ್ಲಿ ಆಯಾಸ ಮತ್ತು ನಿದ್ರಾಹೀನತೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ವಿಟಮಿನ್ ಬಿ12

ವಿಟಮಿನ್ ಬಿ12 ನರಮಂಡಲದ ಆರೋಗ್ಯಕ್ಕೆ ಅಗತ್ಯ. ಇದರ ಕೊರತೆಯಿಂದ ನಿದ್ರೆ ಸರಿಯಾಗಿ ಬರದಿರಬಹುದು. ಅಥವಾ ಪದೇ ಪದೇ ಎಚ್ಚರವಾಗಿ ನಿದ್ರೆಗೆ ಭಂಗ ಉಂಟಾಗಬಹುದು.

ಮ್ಯಾಗ್ನೀಶಿಯಂ

ಮ್ಯಾಗ್ನೀಶಿಯಂ ದೇಹ ಮತ್ತು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಇದರ ಕೊರತೆಯಿಂದ ಆತಂಕ, ಸ್ನಾಯು ಸೆಳೆತ ಮತ್ತು ನಿದ್ರಾಹೀನತೆ ಕಾಣಿಸಬಹುದು.

ಐರನ್

ಐರನ್ ಕೊರತೆಯಿಂದ ದೇಹದಲ್ಲಿ ಆಮ್ಲಜನಕದ ಸರಬರಾಜು ಕಡಿಮೆಯಾಗಬಹುದು. ಇದರಿಂದ ದಣಿವು, ಅಶಾಂತಿ ಮತ್ತು ನಿದ್ರೆಗೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ನಿಮ್ಮ ಹಾಸಿಗೆ ಮೇಲೊಂದು ಟೈಮ್ ಬಾಂಬ್; ಮೊಬೈಲ್ ಪಕ್ಕದಲ್ಲಿಟ್ಟುಕೊಂಡು ನಿದ್ರೆ ಮಾಡುತ್ತೀರಾ?

ಈ ಲಕ್ಷಣ ಕಂಡುಬಂದಾಗ ಪರೀಕ್ಷೆ ಮಾಡಿಸಿ:

  • ನಿರಂತರ ದಣಿವು ಮತ್ತು ದುರ್ಬಲತೆ
  • ಗಮನ ಕೇಂದ್ರೀಕರಿಸಲು ಕಷ್ಟವಾಗುವುದು
  • ಮನಸ್ಥಿತಿಯಲ್ಲಿ ಬದಲಾವಣೆ
  • ತಲೆನೋವು ಅಥವಾ ಸ್ನಾಯು ನೋವು
  • ಸಾಮಾನ್ಯ ಕೆಲಸ ಮಾಡಿದರೂ ಆಯಾಸವಾಗುವುದು
  • ರಾತ್ರಿ ಸರಿಯಾಗಿ ನಿದ್ರೆ ಬಾರದಿರುವುದು

ಈ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ವೈದ್ಯರ ಸಲಹೆಯೊಂದಿಗೆ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ.

ಚೆನ್ನಾಗಿ ನಿದ್ರೆ ಬರಲು ಏನು ಮಾಡಬೇಕು?

ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಮತ್ತು ಏಳುವ ಅಭ್ಯಾಸ ಬೆಳೆಸಿಕೊಳ್ಳಿ. ಮಲಗುವ ಮುನ್ನ ಮೊಬೈಲ್, ಲ್ಯಾಪ್‌ಟಾಪ್ ಬಳಕೆಯನ್ನು ಕಡಿಮೆ ಮಾಡಿ. ಸಮತೋಲಿತ ಆಹಾರ ಸೇವನೆ ಮಾಡಿ, ಸಾಕಷ್ಟು ನೀರು ಕುಡಿಯಿರಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಿ. ಜೊತೆಗೆ ಯೋಗ, ಧ್ಯಾನ ಮತ್ತು ಒತ್ತಡ ನಿಯಂತ್ರಣ ಕ್ರಮಗಳನ್ನು ಅನುಸರಿಸುವುದು ಉತ್ತಮ. ಇವು ನಿದ್ರೆ ಹಾಗೂ ಒಟ್ಟಾರೆ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version