ತೆಲಂಗಾಣದಲ್ಲೂ ಜನಸೇನಾ ಚುನಾವಣೆಗೆ ಸ್ಪರ್ಧಿಸಲಿದೆ; ಕಾಂಗ್ರೆಸ್​​ಗೆ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಸವಾಲು

ಹೈದರಾಬಾದ್, ಜೂನ್ 2: ಜನ ಸೇನಾ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಅವರ ಹೇಳಿಕೆಗಳು ತೆಲಂಗಾಣ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ. “ತೆಲಂಗಾಣದಲ್ಲಿ ಕಾಲಿಡಲು ಬಿಡುವುದಿಲ್ಲ ಎಂದು ಕಾಂಗ್ರೆಸ್​​ನವರು ನನಗೆ ಬೆದರಿಕೆ ಹಾಕುತ್ತಿದ್ದಾರೆ. ತೆಲಂಗಾಣ ನಿಮ್ಮ ಕುಟುಂಬದ ಭೂಮಿಯೇ? ತೆಲಂಗಾಣದಲ್ಲೂ ಜನಸೇನಾ ಪಕ್ಷ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳಲಿದೆ. ನಾವು ಮುಂದಿನ ಚುನಾವಣೆಯಲ್ಲಿ ತೆಲಂಗಾಣದಲ್ಲೂ ಸ್ಪರ್ಧಿಸುತ್ತೇವೆ. ನಾನೇ ತೆಲಂಗಾಣದಲ್ಲಿ ಸಂಚಾರ ಮಾಡಿ ಜನರನ್ನು ತಲುಪುತ್ತೇನೆ” ಎಂದು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡ ಅವರು, ಜನ ಸೈನಿಕರು ಹೊಡೆತ ಮತ್ತು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ದಕ್ಷಿಣ ಭಾರತಕ್ಕೆ ಬಂದು ಸ್ಪರ್ಧಿಸುವಾಗ ನಾವು ತೆಲಂಗಾಣದಲ್ಲಿ ಏಕೆ ಸ್ಪರ್ಧಿಸಬಾರದು? ಎಂದು ಪವನ್ ಕಲ್ಯಾಣ್ ಪ್ರಶ್ನಿಸಿದ್ದಾರೆ. “ನನ್ನ ವಿರುದ್ಧ ಮೊದಲ ಪ್ರಕರಣ ತೆಲಂಗಾಣದಲ್ಲಿ ದಾಖಲಾಗಿತ್ತು. ನಾಲಿಗೆ ಕತ್ತರಿಸುವ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ನಾನು ಹೇಳುತ್ತಿದ್ದೇನೆ. ಇಲ್ಲಿಗೆ ಯಾರೇ ಬಂದರೂ ಬನ್ನಿ, ನಾನು ನನ್ನ ನಾಲಿಗೆ ತೋರಿಸುತ್ತೇನೆ” ಎಂದು ಅವರು ಸವಾಲು ಹಾಕಿದ್ದಾರೆ. ಜನಸೇನಾ ತೆಲಂಗಾಣದ ಹೃದಯಭಾಗದಲ್ಲಿ ಹುಟ್ಟಿಕೊಂಡಿದ್ದು, ಇಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನಸೇನಾ ಸೈನಿಕರಿದ್ದಾರೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿ.ಕೆ. ಶಿವಕುಮಾರ್ ಪ್ರಮಾಣ ವಚನಕ್ಕೆ ಬರುವ ಅತಿಥಿಗಳ ಮೆಗಾ ಲಿಸ್ಟ್ ಇಲ್ಲಿದೆ! ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರು ಯಾರು ಗೊತ್ತಾ? – Kannada News

ಸಿದ್ದರಾಮಯ್ಯ, ಖರ್ಗೆ, ರಾಹುಲ್​​ ಗಾಂಧಿ, ಡಿಕೆಶಿImage Credit source: Tv9 kannada

ಬೆಂಗಳೂರು, ಜೂ.2: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಪ್ರಮಾಣ ವಚನ ಸ್ವೀಕರಿಸಲಿರುವ ಐತಿಹಾಸಿಕ ಸಮಾರಂಭಕ್ಕೆ ರಾಜಧಾನಿ ಬೆಂಗಳೂರು ಸಜ್ಜಾಗುತ್ತಿದ್ದು, ಇಡೀ ದೇಶದ ಗಮನ ಸೆಳೆಯುವಂತಹ ವಿವಿಐಪಿ (VVIP) ಹಾಗೂ ಜನಸಾಮಾನ್ಯರನ್ನೊಳಗೊಂಡ ಆಹ್ವಾನಿತರ ಭವ್ಯ ಪಟ್ಟಿ ಸಿದ್ಧವಾಗಿದೆ. ರಾಜಕೀಯ ದೈತ್ಯರ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಈ ಸಮಾರಂಭದಲ್ಲಿ ಭಾಗವಹಿಸಲು ವಿಶೇಷ ಆಹ್ವಾನ ನೀಡಿರುವುದು ಈ ಕಾರ್ಯಕ್ರಮದ ವಿಶೇಷವಾಗಿದೆ.

ಈ ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್‌ನ ಪ್ರಮುಖ ನಾಯಕರು ಸಾಕ್ಷಿಯಾಗಲಿದ್ದಾರೆ. ಇವರೊಂದಿಗೆ ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ವಿವಿಧ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರುಗಳು (PCC Presidents) ಮತ್ತು ಪ್ರಮುಖ ಸಂಸದರು ಪಾಲ್ಗೊಳ್ಳಲಿದ್ದಾರೆ. ಸಮಾರಂಭಕ್ಕೆ ಮಂಗಳಕರ ಚಾಲನೆ ನೀಡಲು ಸರ್ವಧರ್ಮ ಗುರುಗಳನ್ನು ಆಹ್ವಾನಿಸಲಾಗಿದೆ.

ಮುಖ್ಯಾಂಶಗಳು

  • ಡಿ.ಕೆ. ಶಿವಕುಮಾರ್ ಅವರು ಪ್ರಮಾಣ ವಚನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಆಹ್ವಾನ
  • ಕೂಲಿ ಕಾರ್ಮಿಕರು, ಪೌರ ಕಾರ್ಮಿಕರು, ರೈತ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿ
  • ಮಾಧ್ಯಮ ಕ್ಷೇತ್ರ, ಚಿತ್ರರಂಗ, ನ್ಯಾಯಾಂಗ, ಕ್ರೀಡಾಕ್ಷೇತ್ರ, ನಾಟಕ ರಂಗದ ದಿಗ್ಗಜರಿಗೂ ಆಹ್ವಾನ

ಈ ಆಹ್ವಾನಿತರ ಪಟ್ಟಿಯಲ್ಲಿ ಅತ್ಯಂತ ವಿಶೇಷ ಅಂಶವೆಂದರೆ, ಡಿ.ಕೆ. ಶಿವಕುಮಾರ್ ಅವರ ತವರೂರಾದ ಕನಕಪುರದ ದೊಡ್ಡಾಲಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಅವರೊಂದಿಗೆ ಸಮಾಜದ ಬೆನ್ನೆಲುಬಾಗಿರುವ ಕೂಲಿ ಕಾರ್ಮಿಕರು, ಪೌರ ಕಾರ್ಮಿಕರು, ರೈತ ಮುಖಂಡರು, ದಲಿತ ಸಂಘಟನೆಗಳ ನಾಯಕರು, ಹಿಂದುಳಿದ ವರ್ಗಗಳ ಮುಖಂಡರು, ಸ್ತ್ರೀ ಶಕ್ತಿ ಸಂಘಗಳ ಪ್ರತಿನಿಧಿಗಳು ಹಾಗೂ ಮಹಿಳಾ ಮುಖಂಡರನ್ನು ಅತ್ಯಂತ ಗೌರವದಿಂದ ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಸರ್ವ ಧರ್ಮ ಸ್ವಾಮೀಜಿಗಳ ಸಮ್ಮುಖದಲ್ಲಿ ಪೂರ್ವಾಭಿಮುಖವಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿಕೆಶಿ

ಕೇವಲ ರಾಜಕೀಯಕ್ಕಷ್ಟೇ ಸೀಮಿತವಾಗದೆ ಮಾಧ್ಯಮ ಕ್ಷೇತ್ರ, ಚಿತ್ರರಂಗ, ನ್ಯಾಯಾಂಗ, ಕ್ರೀಡಾಕ್ಷೇತ್ರ, ನಾಟಕ ರಂಗದ ದಿಗ್ಗಜರು, ಪ್ರಮುಖ ಸಾಹಿತಿಗಳು ಹಾಗೂ ಕಲಾವಿದರು ಈ ಸಮಾರಂಭಕ್ಕೆ ಬರಲಿದ್ದಾರೆ. ಆರ್ಥಿಕ ವಲಯದಿಂದ ಪ್ರಮುಖ ಕೈಗರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು, ಹೋಟೆಲ್ ಉದ್ಯಮಿಗಳು ಹಾಗೂ ದೇಶದ ಭವಿಷ್ಯವಾಗಿರುವ ಯುವ ಮುಖಂಡರಿಗೆ ಸಾಕ್ಷಿಯಾಗಲು ವೇದಿಕೆ ಸಜ್ಜಾಗಿದೆ. ಒಟ್ಟಾರೆಯಾಗಿ ರಾಜಕೀಯ ಗಣ್ಯರು ಮತ್ತು ಜನಸಾಮಾನ್ಯರ ಅಪೂರ್ವ ಸಂಗಮಕ್ಕೆ ಈ ಪ್ರಮಾಣ ವಚನ ಕಾರ್ಯಕ್ರಮ ಸಾಕ್ಷಿಯಾಗಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾತ್ರಿ ಪದೇ ಪದೇ ಎಚ್ಚರವಾಗಿ ನಿದ್ರೆ ಸರಿಯಾಗಿ ಬರದಿದ್ದರೆ ತಪ್ಪದೆ ಈ ವಿಟಮಿನ್ ಕೊರತೆಯಾಗಿದೆಯೇ ಪರೀಕ್ಷಿಸಿಕೊಳ್ಳಿ! – Kannada News

ಇತ್ತೀಚಿನ ದಿನಗಳಲ್ಲಿ ಅನೇಕರು ರಾತ್ರಿ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಇದು ಕೂಡ ಒಂದು ಸಮಸ್ಯೆಯಾಗಿದ್ದು ಹಲವರು ಇದರಿಂದ ಬಳಲುತ್ತಿದ್ದಾರೆ. ನಿದ್ರೆ ತಡವಾಗಿ ಬರುವುದು, ಮಧ್ಯರಾತ್ರಿ ಪದೇ ಪದೇ ಎಚ್ಚರವಾಗುವುದು ಅಥವಾ ಸಾಕಷ್ಟು ಸಮಯ ಮಲಗಿದರೂ ವಿಶ್ರಾಂತಿ ಸಿಗದಿರುವುದು ಸಾಮಾನ್ಯವಾಗಿದೆ. ಹೆಚ್ಚಿನವರು ಇದನ್ನು ಒತ್ತಡ ಅಥವಾ ಬ್ಯುಸಿ ಜೀವನಶೈಲಿಯ ಪರಿಣಾಮ ಎಂದು ಭಾವಿಸುತ್ತಾರೆ. ಆದರೆ ಕೆಲವೊಮ್ಮೆ ದೇಹದಲ್ಲಿನ ಕೆಲವು ಅಗತ್ಯ ವಿಟಮಿನ್‌ಗಳು ಮತ್ತು ಪೋಷಕಾಂಶಗಳ ಕೊರತೆ ಕೂಡ ನಿದ್ರೆಯ ಗುಣಮಟ್ಟವನ್ನು ಹಾಳು ಮಾಡಬಹುದು. ಹೌದು, ನಿದ್ರೆ (Sleep) ಬರದಿರುವುದಕ್ಕೆ ಇದು ಒಂದು ಕಾರಣವಾಗಿರಬಹುದು. ಹಾಗಾದರೆ ಯಾವ ವಿಟಮಿನ್ ಕೊರತೆಯಾದಾಗ ಈ ರೀತಿಯ ಸಮಸ್ಯೆಯಾಗುತ್ತದೆ, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿದ್ರೆಯ ಸರಿಯಾಗಿ ಬರದಿರಲು ಯಾವ ಪೋಷಕಾಂಶಗಳ ಕೊರತೆ ಕಾರಣವಾಗುತ್ತದೆ?

ತಜ್ಞರ ಪ್ರಕಾರ, ವಿಟಮಿನ್ ಡಿ, ವಿಟಮಿನ್ ಬಿ12, ಮ್ಯಾಗ್ನೀಶಿಯಂ ಮತ್ತು ಐರನ್ ದೇಹದ ನಿದ್ರೆ ಸಂಬಂಧಿತ ಪ್ರಕ್ರಿಯೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇವುಗಳ ಕೊರತೆಯಿಂದ ಕೆಲವರಲ್ಲಿ ನಿದ್ರೆ ಸರಿಯಾಗಿ ಬಾರದಿರುವುದು, ದಣಿವು ಮತ್ತು ಮಾನಸಿಕ ಅಸ್ವಸ್ಥತೆಗಳಂತಹ ಸಮಸ್ಯೆಗಳು ಕಾಣಿಸಬಹುದು.

ವಿಟಮಿನ್ ಡಿ

ಸಾಮಾನ್ಯವಾಗಿ ವಿಟಮಿನ್ ಡಿ ಕೊರತೆಯು ನಿದ್ರೆಯ ಅವಧಿ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಇದರ ಕೊರತೆಯಿಂದ ದೇಹದಲ್ಲಿ ಆಯಾಸ ಮತ್ತು ನಿದ್ರಾಹೀನತೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ವಿಟಮಿನ್ ಬಿ12

ವಿಟಮಿನ್ ಬಿ12 ನರಮಂಡಲದ ಆರೋಗ್ಯಕ್ಕೆ ಅಗತ್ಯ. ಇದರ ಕೊರತೆಯಿಂದ ನಿದ್ರೆ ಸರಿಯಾಗಿ ಬರದಿರಬಹುದು. ಅಥವಾ ಪದೇ ಪದೇ ಎಚ್ಚರವಾಗಿ ನಿದ್ರೆಗೆ ಭಂಗ ಉಂಟಾಗಬಹುದು.

ಮ್ಯಾಗ್ನೀಶಿಯಂ

ಮ್ಯಾಗ್ನೀಶಿಯಂ ದೇಹ ಮತ್ತು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಇದರ ಕೊರತೆಯಿಂದ ಆತಂಕ, ಸ್ನಾಯು ಸೆಳೆತ ಮತ್ತು ನಿದ್ರಾಹೀನತೆ ಕಾಣಿಸಬಹುದು.

ಐರನ್

ಐರನ್ ಕೊರತೆಯಿಂದ ದೇಹದಲ್ಲಿ ಆಮ್ಲಜನಕದ ಸರಬರಾಜು ಕಡಿಮೆಯಾಗಬಹುದು. ಇದರಿಂದ ದಣಿವು, ಅಶಾಂತಿ ಮತ್ತು ನಿದ್ರೆಗೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ನಿಮ್ಮ ಹಾಸಿಗೆ ಮೇಲೊಂದು ಟೈಮ್ ಬಾಂಬ್; ಮೊಬೈಲ್ ಪಕ್ಕದಲ್ಲಿಟ್ಟುಕೊಂಡು ನಿದ್ರೆ ಮಾಡುತ್ತೀರಾ?

ಈ ಲಕ್ಷಣ ಕಂಡುಬಂದಾಗ ಪರೀಕ್ಷೆ ಮಾಡಿಸಿ:

  • ನಿರಂತರ ದಣಿವು ಮತ್ತು ದುರ್ಬಲತೆ
  • ಗಮನ ಕೇಂದ್ರೀಕರಿಸಲು ಕಷ್ಟವಾಗುವುದು
  • ಮನಸ್ಥಿತಿಯಲ್ಲಿ ಬದಲಾವಣೆ
  • ತಲೆನೋವು ಅಥವಾ ಸ್ನಾಯು ನೋವು
  • ಸಾಮಾನ್ಯ ಕೆಲಸ ಮಾಡಿದರೂ ಆಯಾಸವಾಗುವುದು
  • ರಾತ್ರಿ ಸರಿಯಾಗಿ ನಿದ್ರೆ ಬಾರದಿರುವುದು

ಈ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ವೈದ್ಯರ ಸಲಹೆಯೊಂದಿಗೆ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ.

ಚೆನ್ನಾಗಿ ನಿದ್ರೆ ಬರಲು ಏನು ಮಾಡಬೇಕು?

ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಮತ್ತು ಏಳುವ ಅಭ್ಯಾಸ ಬೆಳೆಸಿಕೊಳ್ಳಿ. ಮಲಗುವ ಮುನ್ನ ಮೊಬೈಲ್, ಲ್ಯಾಪ್‌ಟಾಪ್ ಬಳಕೆಯನ್ನು ಕಡಿಮೆ ಮಾಡಿ. ಸಮತೋಲಿತ ಆಹಾರ ಸೇವನೆ ಮಾಡಿ, ಸಾಕಷ್ಟು ನೀರು ಕುಡಿಯಿರಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಿ. ಜೊತೆಗೆ ಯೋಗ, ಧ್ಯಾನ ಮತ್ತು ಒತ್ತಡ ನಿಯಂತ್ರಣ ಕ್ರಮಗಳನ್ನು ಅನುಸರಿಸುವುದು ಉತ್ತಮ. ಇವು ನಿದ್ರೆ ಹಾಗೂ ಒಟ್ಟಾರೆ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿಎಂಸಿ ವಲಸಿಗರಿಗೆ ಮುಚ್ಚಿತು ಬಿಜೆಪಿ ಬಾಗಿಲು; ತೃಣಮೂಲೀಕರಣ ತಡೆಯಲು ಬಂಗಾಳದ ಬಿಜೆಪಿ ಶಪಥ – Kannada News

ಕೊಲ್ಕತ್ತಾ, ಜೂನ್ 2: ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಆಡಳಿತಾರೂಢ ಬಿಜೆಪಿ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಬಂಡಾಯ ನಾಯಕರು ಮತ್ತು ಕಾರ್ಯಕರ್ತರಿಗೆ ದೊಡ್ಡ ಶಾಕ್ ನೀಡಿದೆ. ಟಿಎಂಸಿಯಿಂದ ಹೊರಬರಲು ಕಾಯುತ್ತಿರುವ ನಾಯಕರಿಗೆ ತನ್ನ ಬಾಗಿಲುಗಳನ್ನು ಸಂಪೂರ್ಣವಾಗಿ ಮುಚ್ಚಿರುವುದಾಗಿ ಘೋಷಿಸಿರುವ ಬಿಜೆಪಿ ಯಾವುದೇ ಕಾರಣಕ್ಕೂ ತನ್ನ ಪಕ್ಷವು ‘ತೃಣಮೂಲೀಕರಣ’ ಆಗಲು ಬಿಡುವುದಿಲ್ಲ ಎಂದು ಶಪಥ ಮಾಡಿದೆ.

ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಗಳಿಗೂ ಮುನ್ನ ಹಾಗೂ ನಂತರ ಟಿಎಂಸಿ ಪಕ್ಷದ ಹಲವು ನಾಯಕರು ಬಿಜೆಪಿಗೆ ಜಿಗಿಯಲು ಸಿದ್ಧವಾಗಿದ್ದರು. ಆದರೆ, ಇದರಿಂದ ಪಕ್ಷದ ಮೂಲ ಸಿದ್ಧಾಂತಕ್ಕೆ ಮತ್ತು ನಿಷ್ಠಾವಂತ ಕಾರ್ಯಕರ್ತರಿಗೆ ಧಕ್ಕೆಯಾಗುತ್ತಿದೆ ಎಂಬ ಅಭಿಪ್ರಾಯ ಬಿಜೆಪಿ ವಲಯದಲ್ಲಿ ತೀವ್ರವಾಗಿ ಕೇಳಿಬಂದಿತ್ತು. ಪಶ್ಚಿಮ ಬಂಗಾಳದಲ್ಲಿ ಆರಂಭದಿಂದಲೂ ಬಿಜೆಪಿ ಟಿಎಂಸಿಯ ಭ್ರಷ್ಟಾಚಾರ ಮತ್ತು ಹಿಂಸಾಚಾರದ ಸಂಸ್ಕೃತಿಯನ್ನು ವಿರೋಧಿಸುತ್ತಲೇ ಬಂದಿದೆ. ಈಗ ಅದೇ ಪಕ್ಷದ ನಾಯಕರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಂಡರೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದು ರಾಜ್ಯ ನಾಯಕತ್ವ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದೆ ಎನ್ನಲಾಗಿದೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಟಿಎಂಸಿ ನಾಯಕರಿಂದಲೇ ಮುಖಭಂಗ; ಪ್ರತಿಭಟನೆಯಲ್ಲಿ ಕೇವಲ 5 ಶಾಸಕರು, 3 ಸಂಸದರು ಭಾಗಿ!

ತಳಮಟ್ಟದಲ್ಲಿ ಟಿಎಂಸಿ ದೌರ್ಜನ್ಯದ ವಿರುದ್ಧ ಹೋರಾಡಿದ ಬಿಜೆಪಿ ಕಾರ್ಯಕರ್ತರು, ಟಿಎಂಸಿ ನಾಯಕರ ಸೇರ್ಪಡೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಹೀಗಾಗಿ, ಅವರ ಭಾವನೆಗಳಿಗೆ ಗೌರವ ನೀಡಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಬಿಜೆಪಿಯ ಹಿರಿಯ ನಾಯಕರ ಪ್ರಕಾರ, ಬೇರೆ ಪಕ್ಷದ ನಾಯಕರು ಸದಾ ಅಧಿಕಾರಕ್ಕಾಗಿ ವಲಸೆ ಬರುತ್ತಾರೆ. ಅವರು ಬಂದಾಗ ತಮ್ಮ ಹಳೆಯ ಪಕ್ಷದ ಸಂಸ್ಕೃತಿಯನ್ನೂ ಹೊತ್ತು ತರುತ್ತಾರೆ. ಬಿಜೆಪಿ ತನ್ನ ಶಿಸ್ತು ಮತ್ತು ರಾಷ್ಟ್ರೀಯತಾವಾದಿ ಸಿದ್ಧಾಂತಕ್ಕೆ ಹೆಸರಾಗಿದೆಯೇ ಹೊರತು, ಟಿಎಂಸಿಯಂತೆ ಗುಂಪುಗಾರಿಕೆ ರಾಜಕಾರಣಕ್ಕಲ್ಲ. ಹೀಗಾಗಿ, ಪಕ್ಷದೊಳಗೆ ಟಿಎಂಸಿ ಸಂಸ್ಕೃತಿ ಹರಡುವುದನ್ನು ತಡೆಯುವುದೇ ಈ ‘ಮುಚ್ಚಿದ ಬಾಗಿಲು’ ನೀತಿಯ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಬಂಗಾಳದಲ್ಲಿ ಮಮತಾ ಕಾಲದ ನಿಯಮಕ್ಕೆ ಬಿಜೆಪಿ ಬ್ರೇಕ್!: ಬಕ್ರೀದ್ ರಜೆ 1 ದಿನಕ್ಕೆ ಕಡಿತ, ಪ್ರಾಣಿ ವಧೆಗೂ ಕಠಿಣ ನಿಯಮ 

ಇನ್ಮುಂದೆ ಪಶ್ಚಿಮ ಬಂಗಾಳದಲ್ಲಿ ಬೇರೆ ಪಕ್ಷದ ಪ್ರಭಾವಿ ನಾಯಕರನ್ನು ನಂಬಿ ಚುನಾವಣೆ ಎದುರಿಸುವ ಬದಲು, ಸ್ವಂತ ಬಲದ ಮೇಲೆ ಪಕ್ಷ ಸಂಘಟನೆ ಮಾಡಲು ನಿರ್ಧರಿಸಲಾಗಿದೆ. ಬಿಜೆಪಿಯಲ್ಲಿ ಮೊದಲಿನಿಂದಲೂ ದುಡಿದ ನಿಷ್ಠಾವಂತ ಮತ್ತು ಯುವ ಮುಖಗಳಿಗೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಜವಾಬ್ದಾರಿ ಹಾಗೂ ಟಿಕೆಟ್ ನೀಡಲು ಪಕ್ಷ ಆದ್ಯತೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

13 ವರ್ಷಗಳ ನಂತರ ಸ್ವಂತ ಮನೆ ಬಿಟ್ಟು ಬೆಂಗಳೂರಿನ ಬಾಡಿಗೆ ಮನೆಗೆ ಬಂದ ಮಹಿಳೆ!: ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಯ್ತು ‘ನಮ್ಮ ಬೆಂಗಳೂರು’ ಜರ್ನಿ – Kannada News

ಬೆಂಗಳೂರು, ಜೂ,2: ದಶಕಗಳ ಕಾಲ ಬದುಕಿದ ಮನೆಯನ್ನು ಬಿಟ್ಟು ಹೊಸ ನಗರಕ್ಕೆ, ಹೊಸ ವಾತಾವರಣಕ್ಕೆ ಸ್ಥಳಾಂತರಗೊಳ್ಳುವುದು ಯಾರಿಗಾದರೂ ಭಾವುಕ ಕ್ಷಣವೇ ಸರಿ. ಇಂತಹದ್ದೇ ಒಂದು ಸನ್ನಿವೇಶವನ್ನು ಎದುರಿಸಿದ ಕರಿಷ್ಮಾ ಕೌಲ್ (Karishma Koul) ಎಂಬ ಮಹಿಳೆ, ಗುರಗಾಂವ್‌ನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ತಮ್ಮ ಅನುಭವ ಮತ್ತು ಹೊಸ ಬಾಡಿಗೆ ಮನೆಯ ಝಲಕ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಗಮನ ಸೆಳೆದಿದೆ. ಕರಿಷ್ಮಾ ಕೌಲ್ ತಮ್ಮ ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ ಪ್ರೀತಿಯಿಂದ ನೆಟ್ಟಿಗರನ್ನು ಸ್ವಾಗತಿಸಿದ್ದಾರೆ. “ಹಾಯ್, ಬೆಂಗಳೂರಿನಲ್ಲಿರುವ ನಮ್ಮ ಬಾಡಿಗೆ ಮನೆಗೆ ನಿಮಗೆ ಸ್ವಾಗತ. ಗುರಗಾಂವ್‌ನಲ್ಲಿ ಬರೋಬ್ಬರಿ 13 ವರ್ಷಗಳ ಕಾಲ ವಾಸವಿದ್ದ ನಂತರ, ನಾವು ನಮ್ಮ ಮೊದಲ ಸ್ವಂತ ಮನೆಯನ್ನು ತೊರೆದು ಬೆಂಗಳೂರಿಗೆ ಬರಲು ನಿರ್ಧರಿಸಿದೆವು” ಎಂದು ಹೇಳಿದ್ದಾರೆ.

ಸ್ವಂತ ಮನೆಯಿಂದ ಬಾಡಿಗೆ ಮನೆಗೆ ಬಂದಿದ್ದಕ್ಕಿಂತ, ದೊಡ್ಡ ಜಾಗದಿಂದ ಸಣ್ಣ ಜಾಗಕ್ಕೆ ಹೊಂದಿಕೊಳ್ಳುವುದೇ ತಮಗೆ ಎದುರಾದ ದೊಡ್ಡ ಸವಾಲು ಎಂದು ಅವರು ಬಿಚ್ಚಿಟ್ಟಿದ್ದಾರೆ. “ಸಮಸ್ಯೆ ಸ್ವಂತ ಮನೆಯಿಂದ ಬಾಡಿಗೆ ಮನೆಗೆ ಬಂದಿದ್ದಲ್ಲ, ಬದಲಿಗೆ ಪ್ರತಿ ಮಲಗುವ ಕೋಣೆಯಲ್ಲೂ ವಾರ್ಡ್‌ರೋಬ್‌ಗಳಿದ್ದ ನಮ್ಮ 4 BHK ಮನೆಯಲ್ಲಿದ್ದ ವಸ್ತುಗಳನ್ನು, ಕೇವಲ ಎರಡು ಬೆಡ್‌ರೂಮ್‌ಗಳಲ್ಲಿ ಮಾತ್ರ ವಾರ್ಡ್‌ರೋಬ್‌ಗಳಿರುವ ಈ 3 BHK ಮನೆಗೆ ಹೊಂದಿಸುವುದು ನಮಗೆ ದೊಡ್ಡ ತಲೆನೋವಾಗಿತ್ತು” ಎಂದಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಜಾಗದ ಅಭಾವದಿಂದಾಗಿ ಬೆಂಗಳೂರಿಗೆ ಬರುವ ಮುನ್ನ ತಮ್ಮ ಅನೇಕ ವಸ್ತುಗಳನ್ನು ಅಲ್ಲಿ ಬಿಟ್ಟ ಬರಬೇಕಾಗಿತ್ತು ಎಂದು ಕರಿಷ್ಮಾ ಹೇಳಿದ್ದಾರೆ. “ಹೀಗಾಗಿಯೇ ನಮ್ಮಲ್ಲಿದ್ದ ಹೆಚ್ಚಿನ ವಸ್ತುಗಳನ್ನು ಗುರಗಾಂವ್‌ನಲ್ಲಿದ್ದ ನಮ್ಮ ಮನೆಗೆಲಸದವರಿಗೆ ಮತ್ತು ಸೆಕ್ಯೂರಿಟಿ ವಾಚ್‌ಮ್ಯಾನ್‌ಗೆ ನೀಡಿ ಬಂದೆವು” ಎಂದು ಅವರು ತಿಳಿಸಿದ್ದಾರೆ. ಸ್ಥಳ ಬದಲಾವಣೆಯಾಗಿದ್ದರೂ, ಈ ಹೊಸ ಬಾಡಿಗೆ ಮನೆಯನ್ನು ತಮ್ಮದೇ ಸ್ವಂತ ಮನೆಯಂತೆ ಆತ್ಮೀಯವಾಗಿ ಅಲಂಕರಿಸಲು ಕರಿಷ್ಮಾ ನಿರ್ಧರಿಸಿದ್ದಾರೆ. “ಮನೆ ಸ್ವಂತದ್ದಾಗಿರಲಿ ಅಥವಾ ಬಾಡಿಗೆಯದ್ದಾಗಿರಲಿ, ಅದು ಮನಸ್ಸಿಗೆ ಶಾಂತಿ ನೀಡಬೇಕು ಮತ್ತು ಅದು ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸಬೇಕು ಎಂದು ನಾನು ನಂಬುತ್ತೇನೆ. ಸದ್ಯಕ್ಕೆ ನಮ್ಮ ಡ್ರಾಯಿಂಗ್ ರೂಮ್ (ವರಾಂಡ) ಮಾತ್ರ ಸಿದ್ಧವಾಗಿದೆ, ಉಳಿದ ಕೋಣೆಗಳಲ್ಲಿ ಇನ್ನೂ ಬಾಕ್ಸ್‌ಗಳು ಹಾಗೇ ಇವೆ. ಆದರೂ ಈ ಮನೆ ಇರುವ ರೀತಿ ನನಗೆ ತುಂಬಾ ಸಂತೋಷ ತಂದಿದೆ” ಎಂದು ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಗರ್ಭಿಣಿ ಪತ್ನಿ ಇದ್ದಾಳೆಂದು ನಡುರಸ್ತೆಯಲ್ಲಿ ಯುವಕನ ಹೈಡ್ರಾಮಾ: ಪೊಲೀಸರ ವಿಚಾರಣೆಯಲ್ಲಿ ಬಯಲಾಯ್ತು ಸತ್ಯ!

ತಮ್ಮ ಪೋಸ್ಟ್​ನಲ್ಲಿ ಬೆಂಗಳೂರಿನ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿರುವ ಕರಿಷ್ಮಾ, “ನಮ್ಮ ಬೆಂಗಳೂರು, ನಮ್ಮ ಜೀವನದ ಮುಂದಿನ ತಾಣ. ಭವಿಷ್ಯದಲ್ಲಿ ಏನೆಲ್ಲಾ ಕಾದಿದೆ ಎಂದು ನೋಡಲು, ಇಲ್ಲಿನ ಹೊಸ ಕೆಫೆಗಳಿಗೆ ಭೇಟಿ ನೀಡಲು, ಅದ್ಭುತ ಹವಾಮಾನವನ್ನು ಆನಂದಿಸಲು, ಹೊಸ ಜನರನ್ನು ಭೇಟಿಯಾಗಲು ಮತ್ತು ಹೊಸ ನೆನಪುಗಳನ್ನು ಸೃಷ್ಟಿಸಲು ನಾನು ತುಂಬಾ ಉತ್ಸುಕಳಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:52 pm, Tue, 2 June 26

Source link

ಕಿಚನ್‌ ಸಿಂಕ್‌ನಿಂದ ಬರುವ ದುರ್ವಾಸನೆಯನ್ನು ತೊಡೆದು ಹಾಕಲು ಈ ಸರಳ ಸಲಹೆಯನ್ನು ಅನುಸರಿಸಿ – Kannada News

ಸಿಂಕ್ (sink) ಅಡುಗೆ ಮನೆಯ ಪ್ರಮುಖ ಭಾಗವಾಗಿದ್ದು, ಪಾತ್ರೆ ತೊಳೆಯಲು, ಆಹಾರ ಪದಾರ್ಥಗಳನ್ನು ತೊಳೆಯಲು, ಕೈ ತೊಳೆಯಲು ಹೀಗೆ ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಸಿಂಕ್‌ ಉಪಯೋಗಿಸುತ್ತೇವೆ. ಹೀಗಾಗಿ ಸಿಂಕ್‌ನಲ್ಲಿ  ವಿವಿಧ ರೀತಿಯ ಕೊಳಕು, ಪಾಚಿ ಸಂಗ್ರಹಗೊಳ್ಳುತ್ತದೆ. ಇದರಿಂದಾಗಿ ಸಿಂಕ್‌ನಿಂದ ವಾಸನೆ ಬರಲು ಪ್ರಾರಂಭಿಸುತ್ತದೆ. ಹಾಗಾಗಿ ಹೆಚ್ಚಿನವರು ದುಬಾರಿ ಕ್ಲೀನರ್‌ಗಳನ್ನು ಬಳಸಿ  ಪದೇ ಪದೇ ಸಿಂಕ್‌ ಕ್ಲೀನ್‌ ಮಾಡುತ್ತಿರುತ್ತಾರೆ. ಹೀಗಿದ್ದರೂ ಸಹ ಕೆಲವೊಂದು ಬಾರಿ ಕಿಚನ್‌ ಸಿಂಕ್‌ನಿಂದ ದುರ್ವಾಸನೆ ಬರುತ್ತದೆ. ಹೀಗಿರುವಾಗ ಈ ಕೆಲವೊಂದು ಮನೆಮದ್ದುಗಳ ಸಹಾಯದಿಂದ ಕಿಚನ್‌ ಸಿಂಕ್‌ನಿಂದ ಬರುವ ದುರ್ವಾಸನೆಯನ್ನು ಸುಲಭವಾಗಿ ತೊಡೆದುಹಾಕಬಹುದು.

ಕಿಚನ್‌ ಸಿಂಕ್‌ನಿಂದ ಬರುವ ವಾಸನೆಯನ್ನು ತೊಡೆದು ಹಾಕುವುದೇಗೆ?

ಅಡಿಗೆ ಸೋಡಾ : ಅಡುಗೆಮನೆಯ ಸಿಂಕ್‌ನ ವಾಸನೆಯನ್ನು ಹೋಗಲಾಡಿಸಲು ನೀವು ಅಡುಗೆ ಸೋಡಾವನ್ನು ಬಳಸಬಹುದು. ಸಿಂಕ್ ಮೇಲೆ ಅಡಿಗೆ ಸೋಡಾ ಸಿಂಪಡಿಸಿ ಮತ್ತು 5 ನಿಮಿಷಗಳ ನಂತರ ಅದನ್ನು ಸ್ಕ್ರಬ್ ಮಾಡಿ. ಇದು ಸಿಂಕ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ ಮತ್ತು ಸಿಂಕ್‌ನಿಂದ ಬರುವ ದುರ್ವಾಸನೆಯನ್ನು ಹೋಗಲಾಡಿಸುತ್ತದೆ.

ಅಡಿಗೆ ಸೋಡಾ ಮತ್ತು ವಿನೆಗರ್: ಅಡುಗೆ ಸೋಡಾ ಮತ್ತು ವಿನೆಗರ್  ಸಿಂಕ್‌ ಅನ್ನು ಸ್ವಚ್ಛಗೊಳಿಸುವುದಲ್ಲದೆ ವಾಸನೆಯನ್ನು ಬುಡದಿಂದ ನಿವಾರಿಸುತ್ತದೆ. ಅದಕ್ಕಾಗಿ ಮೊದಲು ಅರ್ಧ ಕಪ್ ಅಡಿಗೆ ಸೋಡಾವನ್ನು ಸಿಂಕ್ ಡ್ರೈನ್‌ಗೆ ಸುರಿಯಿರಿ. 5 ನಿಮಿಷಗಳ ನಂತರ, ಒಂದು ಕಪ್ ಬಿಳಿ ವಿನೆಗರ್ ಕೂಡ ಅದಕ್ಕೆ ಸೇರಿಸಿ ಅದನ್ನು 30 ನಿಮಿಷದಿಂದ 1 ಗಂಟೆಯವರೆಗೆ ಹಾಗೆಯೇ ಬಿಡಿ. ನಂತರ,  ಬಿಸಿ ನೀರನ್ನು ಸುರಿದು ಚೆನ್ನಾಗಿ ಸ್ವಚ್ಛಗೊಳಿಸಿ. ಅಡುಗೆ ಸೋಡಾ ಕೊಳೆಯನ್ನು ಸಡಿಲಗೊಳಿಸುತ್ತದೆ ಮತ್ತು ವಿನೆಗರ್ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಇದರಿಂದ ವಾಸನೆಯೂ ನಿವಾರಣೆಯಾಗುತ್ತದೆ.

ನಿಂಬೆ ರಸ: ನಿಂಬೆ ರಸವು ಅಡುಗೆಮನೆಯ ಸಿಂಕ್‌ನಿಂದ ವಾಸನೆಯನ್ನು ತೆಗೆದುಹಾಕಲು ಕೆಲಸ ಮಾಡುತ್ತದೆ. ಇದಕ್ಕಾಗಿ ಮೊದಲಿಗೆ ನಿಂಬೆ ರಸವನ್ನು ಸಿಂಕ್‌ಗೆ ಸುರಿದು ಬ್ರಷ್ ಅಥವಾ ಸ್ಕ್ರಬ್ಬರ್‌ನಿಂದ ಚೆನ್ನಾಗಿ ಸ್ವಚ್ಛಗೊಳಿಸಿ.

ಇದನ್ನೂ ಓದಿ: ಕೆಲವು ವಸ್ತುಗಳನ್ನು ತಪ್ಪಿಯೂ ಬಾತ್‌ರೂಮ್‌ನಲ್ಲಿ ಇಡಬೇಡಿ

ನಿಂಬೆ ಸಿಪ್ಪೆ ಮತ್ತು ಅಡಿಗೆ ಸೋಡಾ: ಈ ಎರಡು ವಸ್ತುಗಳು ಸಹ ಸಿಂಕ್‌ನಿಂದ ಬರುವ ವಾಸನೆಯನ್ನು ತೊಡೆದು ಹಾಕುತ್ತದೆ. ಇದಕ್ಕಾಗಿ ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ ಅದರ ಮೇಲೆ ಸ್ವಲ್ಪ ಅಡಿಗೆ ಸೋಡಾ ಸಿಂಪಡಿಸಿ ಅದರಿಂದ ಸಿಂಕ್‌ ಅನ್ನು ಸ್ಕ್ರಬ್‌ ಮಾಡಿ.  ಇದು ಕೊಳೆಯನ್ನು ತೆಗೆದುಹಾಕುವುದಲ್ಲದೆ, ವಾಸನೆಯನ್ನು ತೆಗೆದುಹಾಕುತ್ತದೆ.

ಉಪ್ಪು: ನಿಮ್ಮ ಅಡುಗೆಮನೆಯ ಸಿಂಕ್‌ನಿಂದ ಬರುವ ವಾಸನೆಯನ್ನು ತೊಡೆದುಹಾಕಲು ನೀವು ಉಪ್ಪನ್ನು ಸಹ ಬಳಸಬಹುದು. ಬೆಚ್ಚಗಿನ ನೀರಿನೊಂದಿಗೆ ಉಪ್ಪನ್ನು ಬೆರೆಸಿ ದ್ರಾವಣವನ್ನು ತಯಾರಿಸಿ ನಂತರ ಅದನ್ನು ಸಿಂಕ್ ಸುತ್ತಲೂ ಹರಡಿ ಸ್ವಚ್ಛಗೊಳಿಸಿ. ಇದು ವಾಸನೆಯನ್ನು ಸಂಪೂರ್ಣವಾಗಿ ಹೋಗಲಾಡಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಗು ಮುಖದಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಬಂದ ಖಾದರ್,ಸಚಿವ ಸ್ಥಾನ ಫಿಕ್ಸಾ? – Kannada News

ಬೆಂಗಳೂರು, (ಜೂನ್ 02): ಡಿಕೆ ಶಿವಕುಮಾರ್ ಅವರು ನಾಳೆ (ಜೂನ್ 03) ಸಂಜೆ 4.05ಕ್ಕೆ ಲೋಕಭವನದ ಗಾಜಿನಮನೆಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಾಗೇ ಇವರ ಜೊತೆ 10 ರಿಂದ 12 ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಸಚಿವರಾಗುವವರು ಯಾರು ಎನ್ನುವುದೇ ನಿಗೂಢವಾಗಿದೆ. ಈ ಬಗ್ಗೆ ದೆಹಲಿಯಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೇರಿ ಹೈಕಮಾಂಡ್ ನಾಯಕರೊಂದಿಗೆ ಮ್ಯಾರಥಾನ್ ಸಭೆ ನಡೆಸಿದ್ದು, ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗಳ ನಡುವೆ ಸ್ಪೀಕರ್ ಯುಟಿ ಖಾದರ್ ಅವರು ದಿಢೀರ್ ಮಂಗಳೂರಿನಿಂದ ಬೆಂಗಳೂರಿಗೆ ದೌಡಾಯಿಸಿದ್ದು, ಅವರು ಮಂತ್ರಿಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಮುಖ್ಯಾಂಶಗಳು

  • ಮಂಗಳೂರಿನಿಂದ ಕೆಂಪೇಗೌಡ ಏರ್ಪೊಟ್ ಗೆ ಆಗಮಿಸಿದ ಸ್ಪೀಕರ್ ಯುಟಿ ಖಾದರ್
  • ನಗು ಮುಖದಲ್ಲಿ ಏರ್ಪೊಟ್ ಗೆ ಬಂದ ಯುಟಿ ಖಾದರ್ ಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ
  • ಸಹಕಾರ ಕೊಟ್ಟ ಕಾರಣ ನಾನು ಡಿನ್ನರ್ ಇಟ್ಟುಕೊಂಡಿದ್ದೇನೆ ಎಂದ ಖಾದರ್.

ಹೌದು…2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ಖಾದರ್ ಅವರಿಗೆ ಕೊನೆ ಕ್ಷಣದಲ್ಲಿ ಸ್ಪೀಕರ್ ಹುದ್ದೆ ನೀಡಲಾಗಿತ್ತು. ಆಗಲೇ ಭವಿಷ್ಯದಲ್ಲಿ ಸಚಿವ ಸಂಪುಟ ಪುನಾರಚನೆ ವೇಳೆ ಅವಕಾಶ ನೀಡುವ ಭರವಸೆ ನೀಡಲಾಗಿತ್ತು ಎನ್ನಲಾಗುತ್ತಿದೆ. ಇದೀಗ ಡಿಕೆ ಶಿವಕುಮಾರ್ ಅವರ ಸಂಪುಟದಲ್ಲಿ ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಿದ್ದು, ಇದರಿಂದ ಖಾದರ್ ಅವರು ನಗು ನಗುತ್ತಲೇ ಇಂದು (ಜೂನ್ 02) ಸಂಜೆ ಮಂಗಳೂರಿನಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಮಂತ್ರಿ, ಡಿನ್ನರ್ ಬಗ್ಗೆ ಖಾದರ್ ಹೇಳಿದ್ದೇನು?

ಮಂಗಳೂರಿನಿಂದ ಕೆಂಪೇಗೌಡ ಏರ್ಪೊಟ್ ಗೆ ಆಗಮಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯಸಿದ ಖಾದರ್, ನನಗೆ ಸಚಿವ ಸ್ಥಾನದ ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲ. ಸದ್ಯಕ್ಕೆ ನಾನು ಸ್ವೀಕರ್ ಆಗಿ ಇದ್ದೇನೆ. ಬಂದ ತಕ್ಷಣ ಮಾಹಿತಿ ಕೊಡುತ್ತೇನೆ. ಅಧಿಕಾರ ಹುಡಿಕಿಕೊಂಡು‌ ಹೋಗಬಾರದು, ನಮ್ಮನ್ನ ಹುಡುಕಿಕೊಂಡು ಬರಬೇಕು ಎಂದರು.

ಇನ್ನು ಸಿಬ್ಬಂದಿಗಳಿಗೆ ಡಿನ್ನರ್ ಆಯೋಜನೆ ಬಗ್ಗೆ ಮಾತನಾಡಿದ ಅವರು, ಸೌಹಾರ್ದವಾಗಿ ನಾನು ಊಟ ಅರೆಂಜ್ ಮಾಡಿದ್ದೇನೆ. ಮೂರು ವರ್ಷಗಳಿಂದ ನಮ್ಮ ಸಿಬ್ಬಂದಿ ಬೇರೆ ಬೇರೆ ಕೆಲಸಗಳನ್ನ ಅಸೆಂಬ್ಲಿಯಲ್ಲಿ ಮಾಡಿದ್ದಾರೆ. ತಳ ಮಟ್ಟದಿಂದ ಐಪಿಎಸ್ ಆಫೀಸರ್ ನನಗೆ ಸಹಕಾರ ಕೊಟ್ಟಿದ್ದಾರೆ. ಸಹಕಾರ ಕೊಟ್ಟ ಕಾರಣ ಡಿನ್ನರ್ ಇಟ್ಟುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಖಾದರ್​​​​​ಗೆ ಮಂತ್ರಿ ಸ್ಥಾನ ಫಿಕ್ಸ್?

ಖಾದರ್ ಅವರಿಗೆ ಮಂತ್ರಿ ಸ್ಥಾನ ಫಿಕ್ಸ್ ಆಗಿದ್ದರಿಂದಲೇ ಮಂಗಳವಾರ ಸಂಜೆ ವಿಧಾನಸೌಧದ ಸಿಬ್ಬಂದಿಗೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಭೋಜನ ಕೂಟ ಆಯೋಜನೆ ಮಾಡಿದ್ದಾರೆ ಎನ್ನುವ ಚರ್ಚೆ ನಡೆದಿದೆ. ಒಂದು ವೇಳೆ ಖಾದರ್ ಗೆ ಮಂತ್ರಿ ಸ್ಥಾನ ಖಚಿತವಾದರೆ ಅವರು ಸ್ಪೀಕರ್ ಹುದ್ದೆಗೆ ರಾಜೀನಾಮೆಯನ್ನು ನೀಡಲಿದ್ದಾರೆ. ಬಳಿಕ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಮರಳಿ ಪಡೆದುಕೊಳ್ಳಲಿದ್ದಾರೆ.

ಸ್ಪೀಕರ್ ಯುಟಿ ಖಾದರ್ ಅವರು ಕರ್ನಾಟಕದ ಮೊದಲ ಮುಸ್ಲಿಂ ಸಮುದಾಯದಿಂದ ಈ ಹುದ್ದೆಗೇರಿರುವ ಹೆಗ್ಗಳಿಕೆ ಹೊಂದಿದ್ದಾರೆ. ಈ ಮೊದಲು ಅಂದರೆ ಈ 2013ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದರು. ಇನ್ನು 2023ರಿಂದ 3 ವರ್ಷಗಳ ಕಾಲ ಸ್ಫೀಕರ್ ಆಗಿ ಸದನವನ್ನು ನಡೆಸಿದ್ದಾರೆ. ಇದೀಗ ಅವರು ಡಿಕೆ ಶಿವಕುಮಾರ್ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ.

ಕರ್ನಾಟಕದ ಮ್ತತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:15 pm, Tue, 2 June 26

Source link

ಕೃಷ್ಣಮೃಗ ಬೇಟೆ ಕುರಿತ ‘ಕಾಲಾ ಹಿರನ್’ ಸಿನಿಮಾ ಸಲ್ಮಾನ್ ಖಾನ್ ಬಯೋಪಿಕ್ ಅಲ್ಲ: ನಿರ್ಮಾಪಕರ ಸ್ಪಷ್ಟನೆ – Kannada News

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ 1998ರ ಕೃಷ್ಣಮೃಗ ಬೇಟೆ ಪ್ರಕರಣದಿಂದ ಪ್ರೇರಿತವಾಗಿದೆ ಎನ್ನಲಾದ ‘ಕಾಲಾ ಹಿರನ್’ (Kala Hiran) ಸಿನಿಮಾ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಚಿತ್ರದ ವಿರುದ್ಧ ಸಲ್ಮಾನ್ ಖಾನ್ ಅವರ ಕಾನೂನು ತಂಡವು ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದೆ. ಈ ನೋಟಿಸ್ ಪ್ರತಿಯನ್ನು ಚಿತ್ರದ ನಿರ್ಮಾಪಕ ಅಮಿತ್ ಜಾನಿ ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾವು ‘ವ್ಯಕ್ತಿತ್ವದ ಹಕ್ಕುಗಳ ಉಲ್ಲಂಘನೆ’ ಎಂದು ಸಲ್ಮಾನ್ ಖಾನ್ (Salman Khan) ಅವರ ತಂಡ ಆರೋಪಿಸಿದೆ. ಅದಕ್ಕೆ ನಿರ್ಮಾಪಕರು ತಿರುಗೇಟು ನೀಡಿದ್ದಾರೆ.

ಈ ಕಾನೂನು ಹೋರಾಟದ ಕುರಿತು ‘ಇಂಡಿಯಾ ಟುಡೇ’ ಜೊತೆ ಮಾತನಾಡಿರುವ ನಿರ್ಮಾಪಕ ಅಮಿತ್ ಜಾನಿ ಅವರು ಸಲ್ಮಾನ್ ಖಾನ್ ಅವರ ಈ ಕಾನೂನು ಕ್ರಮ ಅತ್ಯಂತ ಆತುರದ್ದು ಮತ್ತು ಅನಗತ್ಯ ಎಂದು ಹೇಳಿದ್ದಾರೆ. ‘ಇದು ಸಲ್ಮಾನ್ ಖಾನ್ ಅವರ ಬಯೋಪಿಕ್ ಖಂಡಿತಾ ಅಲ್ಲ. ಈ ಚಿತ್ರವು ಸಾರ್ವಜನಿಕ ವಲಯದಲ್ಲಿರುವ ನೈಜ ಘಟನೆಗಳಿಂದ ಪ್ರೇರಿತವಾಗಿದೆ. ವನ್ಯಜೀವಿಗಳನ್ನು ರಕ್ಷಿಸಲು ಬಿಷ್ಣೋಯ್ ಸಮುದಾಯದವರು ನಡೆಸಿದ ಹೋರಾಟ ಮತ್ತು ಇತಿಹಾಸವನ್ನು ನಾವು ತೆರೆಯ ಮೇಲೆ ತರಲು ಪ್ರಯತ್ನಿಸಿದ್ದೇವೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಕಾಲಾ ಹಿರನ್ ಚಿತ್ರದಿಂದ ಸದ್ಯಕ್ಕೆ ಕೇವಲ ಪೋಸ್ಟರ್ ಮಾತ್ರ ಬಿಡುಗಡೆಯಾಗಿದೆ. ಸಿನಿಮಾ ಬಗ್ಗೆ ಇನ್ಯಾವ ಮಾಹಿತಿಯೂ ಹೊರಬಿದ್ದಿಲ್ಲ. ಜೂನ್ 20ರಂದು ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಯಾವುದೇ ಚರ್ಚೆ ಮಾಡದೇ ಈ ಹಂತದಲ್ಲೇ ಲೀಗಲ್ ನೋಟಿಸ್ ಕಳುಹಿಸಿರುವುದು ಸರಿಯಲ್ಲ’ ಎಂದು ನಿರ್ಮಾಪಕ ಅಮಿತ್ ಜಾನಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ನಿರ್ಮಾಪಕ ಅಮಿತ್ ಜಾನಿ ಸ್ಪಷ್ಟನೆ:

ಚಿತ್ರದಲ್ಲಿ ಸಲ್ಮಾನ್ ಖಾನ್ ಅವರನ್ನು ನೆಗೆಟಿವ್ ಆಗಿ ಬಿಂಬಿಸಿಲ್ಲ ಅಥವಾ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್‌ನನ್ನು ವೈಭವೀಕರಿಸಿಲ್ಲ ಎಂದು ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ. ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದ ಘಟನೆಗಳು ಈಗಾಗಲೇ ಸಾರ್ವಜನಿಕವಾಗಿ ಎಲ್ಲರಿಗೂ ತಿಳಿದಿರುವ ವಿಷಯಗಳಾಗಿದ್ದು, ಅದನ್ನು ತೆರೆಯ ಮೇಲೆ ತೋರಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಅವರು ವಾದಿಸಿದ್ದಾರೆ.

ಇದನ್ನೂ ಓದಿ: ಕೃಷ್ಣಮೃಗ ಬೇಟೆ ಕೇಸ್ ಕುರಿತು ಸಿನಿಮಾ: ಚಿತ್ರತಂಡಕ್ಕೆ ನೋಟಿಸ್ ಕಳಿಸಿದ ಸಲ್ಮಾನ್ ಖಾನ್

ಒಂದು ವೇಳೆ ಈ ವಿಷಯವಾಗಿ ನ್ಯಾಯಾಲಯದಿಂದ ನಮಗೆ ಕರೆ ಬಂದರೆ, ನಾವು ಖಂಡಿತಾ ಕೋರ್ಟ್‌ಗೆ ಹಾಜರಾಗಿ ನಮ್ಮ ನಿಲುವನ್ನು ಸ್ಪಷ್ಟಪಡಿಸುತ್ತೇವೆ. ಈ ಹಿಂದಿನ ಪ್ರಕರಣಗಳಲ್ಲೂ ನಾವು ಕಾನೂನು ಪ್ರಕ್ರಿಯೆಯನ್ನು ಗೌರವಿಸಿದ್ದೇವೆ, ಈಗಲೂ ಅದನ್ನೇ ಪಾಲಿಸುತ್ತೇವೆ ಎಂದು ಅಮಿತ್ ಜಾನಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಶ್ಮಿಕಾ ಮಂದಣ್ಣರ ಹೊಸ ಸಿನಿಮಾ ಹಿಂದಿ ಸಿನಿಮಾ ಟ್ರೈಲರ್ ರಿಲೀಸ್ – Kannada News

ರಶ್ಮಿಕಾ ಮಂದಣ್ಣ (Rashmika Mandanna), ಕೃತಿ ಸನೋನ್ ಮತ್ತು ಶಾಹಿದ್ ಕಪೂರ್ ನಟಿಸಿರುವ ತ್ರಿಕೋನ ಪ್ರೇಮಕತೆಯುಳ್ಳ ಹೊಸ ಸಿನಿಮಾ ‘ಕಾಕ್​​ಟೇಲ್ 2’ನ ಟ್ರೈಲರ್ ಇಂದು (ಜೂನ್ 2) ಬಿಡುಗಡೆ ಆಗಿದೆ. 14 ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ನಟನೆಯ ‘ಕಾಕ್​​ಟೇಲ್’ ಸಿನಿಮಾದ ಕತಾ ಮಾದರಿಯನ್ನೇ ಇರಿಸಿಕೊಂಡಿರುವ ‘ಕಾಕ್​​ಟೇಲ್ 2’ ಸಿನಿಮಾ ಹೊಸ ಪ್ರೇಕ್ಷಕರಿಗೆ ಮುದವಾಗುವ ರೀತಿಯಲ್ಲಿ ಪ್ರೇಮ ಹಾಗೂ ಗೆಳೆತನದ ಮಹತ್ವ ಸಾರುವ ಉದ್ದೇಶ ಇರಿಸಿಕೊಂಡು ಚಿತ್ರಮಂದಿರಗಳಿಗೆ ಬರುತ್ತಿದೆ.

2012 ರಲ್ಲಿ ಬಿಡುಗಡೆ ಆಗಿದ್ದ ‘ಕಾಕ್​​ಟೇಲ್’ ಸಿನಿಮಾನಲ್ಲಿ ಮಾಡರ್ನ್ ಯುವತಿ, ಸಾಂಪ್ರದಾಯಿಕ ಯುವತಿಯ ನಡುವೆ ಒಬ್ಬಾಕೆಯನ್ನು ನಾಯಕ ಸೈಫ್ ಅಲಿ ಖಾನ್ ಆಯ್ಕೆ ಮಾಡಬೇಕಿತ್ತು. ಈ ಹೊಸ ಕಾಕ್​​ಟೇಲ್​ ನಲ್ಲಿಯೂ ಕತೆ ತುಸು ಹಾಗೆಯೇ ಇದೆ. ಇಲ್ಲಿ ಕೃತಿ ಸನೋನ್ ಮಾಡರ್ನ್ ಹುಡುಗಿ ಅಲಿ ಆಗಿದ್ದರೆ ರಶ್ಮಿಕಾ ಮಂದಣ್ಣ ತುಸು ಸಾಂಪ್ರದಾಯಿಕ ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ. ಶಾಹಿದ್ ಕಪೂರ್ ಯಾರೊಟ್ಟಿಗೆ ಮದುವೆ ಆಗಬೇಕು ಎಂದು ಆಯ್ಕೆ ಕೊಳ್ಳಬೇಕಿದೆ.

ಇದನ್ನೂ ಓದಿ:‘ಪುಷ್ಪ’ ತೆರಳಿದ್ದ ಜಾಗಕ್ಕೆ ಹೋದ ನಟಿ ರಶ್ಮಿಕಾ ಮಂದಣ್ಣ

ಸಿನಿಮಾದ ಟ್ರೈಲರ್​​ನಲ್ಲಿ ತೋರಿಸಿರುವಂತೆ ‘ಕಾಕ್​​ಟೇಲ್ 2’ ಸಿನಿಮಾವು ಒಂದೊಳ್ಳೆ ಹಾಸ್ಯಭರಿತ ಪ್ರೇಮಕತೆಯಾಗಿದ್ದು, ಸಿನಿಮಾನಲ್ಲಿ ಹಾಸ್ಯದ ಜೊತೆಗೆ ಎಮೋಷನ್ಸ್ ಸಹ ಇದೆ. ಜೊತೆಗೆ ಒಂದು ಸುಂದರ ಪ್ರಯಾಣವೂ ಇದೆ. ಗೆಳೆತನ ಮತ್ತು ಪ್ರೀತಿಯ ಬಗ್ಗೆ ಸಂದೇಶವನ್ನು ‘ಕಾಕ್​​ಟೇಲ್ 2’ ಸಿನಿಮಾ ಹೊಂದಿದೆ. ಸಿನಿಮಾನಲ್ಲಿ ಕೃತಿ ಸನೋನ್ ಸಖತ್ ಗ್ಲಾಮರಸ್ ಆಗಿ ಮತ್ತು ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು ಕಂಡು ಬರುತ್ತಿದೆ. ಹಾಗೆಯೇ ರಶ್ಮಿಕಾ ಸಹ ತುಸು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಎಮೋಷನಲ್ ದೃಶ್ಯಗಳು ಸಹ ರಶ್ಮಿಕಾ ಅವರಿಗೆ ಇದೆ.

2012ರ ‘ಕಾಕ್​​ಟೇಲ್’ ಸಿನಿಮಾನಲ್ಲಿದ್ದ ಬ್ಲಾಕ್ ಬಸ್ಟರ್ ಹಾಡಾದ ‘ತುಹು ದಿನ್ ಜಲೆ’ ಹಾಡು ‘ಕಾಕ್​​ಟೇಲ್ 2’ ಸಿನಿಮಾನಲ್ಲಿಯೂ ಉಳಿಸಿಕೊಳ್ಳಲಾಗಿದೆ. ಸಿನಿಮಾವನ್ನು ಹೋಮಿ ಅದಾಜಾನಿಯಾ ನಿರ್ದೇಶನ ಮಾಡಿದ್ದಾರೆ. ಲವ್ ರಂಜನ್ ಈ ಸಿನಿಮಾಕ್ಕೆ ಕತೆ ಮತ್ತು ಚಿತ್ರಕತೆ ಬರೆದಿದ್ದಾರೆ. ನಿರ್ಮಾಣ ಮಾಡಿರುವುದು ದಿನೇಶ್ ವಿಜನ್. ಸಿನಿಮಾ ಜೂನ್ 19ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಧಾರಾಕಾರ ಮಳೆಗೆ ಹೊಳೆಯಂತಾದ ಬೆಂಗಳೂರಿನ ರಸ್ತೆಗಳು: ಲ್ಯಾಂಡಿಂಗ್​​ ಸಾಧ್ಯವಾಗದೆ ಆಗಸದಲ್ಲೇ ಸುತ್ತಿದ ವಿಮಾನ! – Kannada News

ಮಳೆ ನೀರು ತುಂಬಿ ಹೊಳೆಯಂತಾದ ರಸ್ತೆಗಳುImage Credit source: BTP X Account

ಬೆಂಗಳೂರು, ಜೂನ್​​ 02: ನಗರದ ಹಲವೆಡೆ ಮಳೆ (Rain) ಸುರಿದಿದ್ದು, ಏಕಾಏಕಿ ವರುಣನ ಆಗಮನದಿಂದ ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ. ಕಚೇರಿಗಳಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರು ದಿಢೀರ್​​ ಸುರಿದ ಮಳೆಗೆ ಪರದಾಟ ನಡೆಸಿದ್ದು, ಬಸ್​​ ನಿಲ್ದಾಣಗಳು ಮತ್ತು ಅಂಗಡಿ ಮುಗಟ್ಟುಗಳ ಬಳಿ ನಿಂತ ದೃಶ್ಯಗಳು ಸರ್ವೇ ಸಾಮಾನ್ಯವಾಗಿ ಕಂಡುಬಂದಿವೆ. ಮೆಜೆಸ್ಟಿಕ್, ವಸಂತನಗರ, ಕೆ.ಆರ್.ಸರ್ಕಲ್, ಕೆ.ಆರ್​.ಮಾರ್ಕೆಟ್, ವಿಜಯನಗರ, ಜಯನಗರ, ಬನಶಂಕರಿ, ಕೆಂಗೇರಿ, ನಾಯಂಡಹಳ್ಳಿ, ಬಸವೇಶ್ವರ ನಗರ, ರಾಜಾಜಿನಗರ, ಶಿವಾಜಿನಗರ, ಮಲ್ಲೇಶ್ವರಂ, ಬಸವನಗುಡಿ, ಗಿರಿನಗರ, ಜ್ಞಾನಭಾರತಿ, ಆರ್.ಆರ್.ನಗರ, ಶಾಂತಿನಗರ, ಕೋರಮಂಗಲ, ಹೆಚ್​ಎಸ್​ಆರ್ ಲೇಔಟ್, ಆಡುಗೋಡಿ, ಮಡಿವಾಳ, ಬಿಟಿಎಂ ಲೇಔಟ್, ಹೆಬ್ಬಾಳ, ಕಾಮಾಕ್ಷಿಪಾಳ್ಯ, ಬ್ಯಾಟರಾಯನಪುರ, ಸಹಕಾರನಗರ, ಯಲಹಂಕ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ.

ಮುಖ್ಯಾಂಶಗಳು

  • ಬೆಂಗಳೂರು ನಗರದ ವಿವಿಧೆಡೆ ಗುಡುಗು-ಮಿಂಚು ಸಹಿತ ಅಬ್ಬರಿಸಿದ ವರುಣ
  • ಹಲವೆಡೆ ರಸ್ತೆಯಲ್ಲೇ ನೀರು ನಿಂತು ವಾಹನ ಸವಾರರ ತೀವ್ರ ಪರದಾಟ
  • ಏರ್​​ಪೋರ್ಟ್​​ನಲ್ಲಿ ಲ್ಯಾಂಡಿಂಗ್​​ ಸಾಧ್ಯವಾಗದೇ ಆಗಸದಲ್ಲೇ ಸುತ್ತಿದ ವಿಮಾನ

ಮಳೆ ನೀರು ತುಂಬಿ ಹೊಳೆಯಂತಾದ ರಸ್ತೆಗಳು

ನಗರದ ಕೆಲವು ಏರಿಯಾಗಳಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ರಸ್ತೆಯಲ್ಲೇ ನೀರು ನಿಂತು ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಬಾಗ್ಮನೆ ಟೆಕ್​​ ಪಾರ್ಕ್​​, ಮಾರತಹಳ್ಳಿ ಸೇರಿ ಹಲವೆಡೆ ರಸ್ತೆಗಳು ಹೊಳೆಯಂತಾಗಿದ್ದು, ದೇವರಬೀಸನಹಳ್ಳಿ ಮೇಲ್ಸೇತುವೆ ರ್ಯಾಂಪ್‌ನಲ್ಲಿ ನೀರು ನಿಂತಿರುವ ಕಾರಣ ಕಡುಬೀಸನಹಳ್ಳಿಯಿಂದ ಬೆಳ್ಳಂದೂರು ಕಡೆಗೆ ವಾಹನಗಳ ಸಂಚಾರ ಕೂಡ ಅಸ್ತವ್ಯಸ್ತಗೊಂಡಿದೆ.

ಇದನ್ನೂ ಓದಿ: ಇಡೀ ರಾಜ್ಯದಲ್ಲಿಂದು ಭಾರೀ ಮಳೆ! 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಲ್ಯಾಂಡಿಂಗ್​​ ಸಾಧ್ಯವಾಗದೆ ಆಕಾಶದಲ್ಲೇ ಸುತ್ತಿದ ವಿಮಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​ಪೋರ್ಟ್​ನ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಗುಡುಗು ಸಹಿತ ವರುಣನ ಆರ್ಭಟದ ಹಿನ್ನೆಲೆ ನವದೆಹಲಿಯಿಂದ ಆಗಮಿಸಿದ್ದ ಇಂಡಿಗೋ ಫ್ಲೈಟ್ ಲ್ಯಾಂಡಿಂಗ್​​ ಸಾಧ್ಯವಾಗದೆ ಕೆಲ ಕಾಲ ಆಕಾಶದಲ್ಲೇ ಸುತ್ತಾಡಿದ ಪ್ರಸಂಗವೂ ನಡೆದಿದೆ. ವಿಮಾನ ನಿಲ್ದಾಣದಿಂದ ನಗರದ ಕಡೆ ಆಗಮಿಸಬೇಕಿದ್ದ ಪ್ರಯಾಣಿಕರು ಕೂಡ ಮಳೆಯಿಂದ ತೀವ್ರ ತೊಂದರೆ ಅನುಭವಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version