ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ: ಊಟ-ತಿಂಡಿ, ಕಾಫಿ-ಚಹಾ ದರ ಹೆಚ್ಚಳಕ್ಕೆ ಹೋಟೆಲ್ ಮಾಲೀಕರ ಸಿದ್ಧತೆ – Kannada News

ಬೆಂಗಳೂರು, ಜೂನ್ 3: ಮಧ್ಯಪ್ರಾಚ್ಯ ಸಂಘರ್ಷ, ಯುದ್ಧದ ಭೀತಿಯ ಪರಿಣಾಮ ನೇರವಾಗಿ ಸಾಮಾನ್ಯ ಜನರ ಅಡುಗೆ ಮನೆ ಹಾಗೂ ಹೋಟೆಲ್ ಉದ್ಯಮದ ಮೇಲೆ ತಟ್ಟಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ (Commercial LPG) ಸಿಲಿಂಡರ್ ದರ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಬೆಂಗಳೂರಿನ (Bengaluru) ಬಹುತೇಕ ಹೋಟೆಲ್‌ಗಳಲ್ಲಿ ಊಟ, ತಿಂಡಿ, ಕಾಫಿ ಮತ್ತು ಟೀ ದರಗಳನ್ನು ಹೆಚ್ಚಿಸಲು ಮಾಲೀಕರು ಸಜ್ಜಾಗಿದ್ದಾರೆ. ಈಗಾಗಲೇ ಕೆಲವು ಹೋಟೆಲ್‌ಗಳು ದರ ಏರಿಕೆ ಮಾಡಿದ್ದರೆ, ಇನ್ನುಳಿದ ಹೋಟೆಲ್‌ಗಳು ಈ ವಾರದಿಂದಲೇ ಹೊಸ ದರ ಪಟ್ಟಿಯನ್ನು ಜಾರಿಗೆ ತರಲು ಮುಂದಾಗಿವೆ.

ಮುಖ್ಯಾಂಶಗಳು

  • ವಾಣಿಜ್ಯ ಸಿಲಿಂಡರ್ ದರ ಮೂರೇ ತಿಂಗಳಲ್ಲಿ ₹1,240 ಏರಿಕೆ
  • ]ಸದ್ಯ ₹3,198 ಇರುವ ಸಿಲಿಂಡರ್ ಬೆಲೆ ಶೀಘ್ರದಲ್ಲೇ ₹4,000 ಮುಟ್ಟುವ ಭೀತಿ.
  • ಬೆಂಗಳೂರಿನ ಹೋಟೆಲ್‌ಗಳಲ್ಲಿ ಇಡ್ಲಿ, ವಡೆ, ದೋಸೆ ಹಾಗೂ ರೈಸ್ ಐಟಂಗಳ ಮೇಲೆ ₹5 ರಿಂದ ₹20 ಹಾಗೂ ಕಾಫಿ-ಟೀ ಮೇಲೆ ₹2 ರಿಂದ ₹3 ಹೆಚ್ಚಳ.

ಗಗನಕ್ಕೇರಿದ ಕಮರ್ಷಿಯಲ್ ಗ್ಯಾಸ್ ದರ

ಕಳೆದ ಮೂರು ತಿಂಗಳ ಅವಧಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಬರೋಬ್ಬರಿ 1,240 ರೂ. ಏರಿಕೆಯಾಗಿದೆ. ಕಳೆದ ತಿಂಗಳು 991 ರೂ. ಹೆಚ್ಚಳವಾಗಿದ್ದರೆ, ಜೂನ್ 1 ರಂದು ಮತ್ತೆ 46 ರೂ. ಏರಿಕೆ ಮಾಡಲಾಗಿದೆ. ಇಷ್ಟಕ್ಕೇ ನಿಲ್ಲದ ಬೆಲೆ ಏರಿಕೆ ಮುಂಬರುವ ದಿನಗಳಲ್ಲಿ ಮತ್ತೆ 800 ರೂ. ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ 3,198 ರೂ.ಗೆ ಮಾರಾಟವಾಗುತ್ತಿರುವ ಸಿಲಿಂಡರ್ ಬೆಲೆ 4,000 ರೂ. ತಲುಪುವ ಮುನ್ಸೂಚನೆ ಸಿಕ್ಕಿರುವುದರಿಂದ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಗ್ರಾಹಕರ ಮೇಲೆ ಆರ್ಥಿಕ ಹೊರೆ ಹೊರಿಸಲು ಮುಂದಾಗಿದ್ದಾರೆ.

ದರ ಏರಿಕೆ ಅನಿವಾರ್ಯತೆ ಬಗ್ಗೆ ಹೋಟೆಲ್ ಮಾಲೀಕರು ಏನಂತಾರೆ?

ಈ ಕುರಿತು ಮಾತನಾಡಿರುವ ವಿಲ್ಸನ್ ಗಾರ್ಡನ್ ಟಿಫಿನ್ ಸೆಂಟರ್ ಮಾಲೀಕ ಶ್ರೀನಿವಾಸ್ ಹಾಗೂ ದೋಸೆ ಕ್ಯಾಂಪ್ ಮಾಲೀಕ ಧನುಷ್, ‘ಗ್ಯಾಸ್ ಬಳಸದೇ ಅಡುಗೆ ಮಾಡಲು ಸಾಧ್ಯವಿಲ್ಲ. ಈಗಾಗಲೇ ರೈಸ್ ಬಾತ್ ದರವನ್ನು 30 ರೂ.ನಿಂದ 40 ರೂ.ಗೆ ಏರಿಸಲಾಗಿದೆ. ಕಮರ್ಷಿಯಲ್ ಗ್ಯಾಸ್ ಬೆಲೆ ಹೀಗೇ ಏರುತ್ತಿದ್ದರೆ ಹೋಟೆಲ್ ಉದ್ಯಮ ನಡೆಸುವುದು ಕಷ್ಟವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಅನಿವಾರ್ಯವಾಗಿ ಪ್ರತಿ ತಿಂಡಿಯ ಮೇಲೆ 5 ರಿಂದ 10 ರೂ.ವರೆಗೆ ದರ ಏರಿಕೆ ಮಾಡಲೇಬೇಕಾದ ಕಠಿಣ ಪರಿಸ್ಥಿತಿಯಲ್ಲಿದ್ದೇವೆ’ ಎಂದು ಅಳಲು ತೋಡಿಕೊಂಡಿದ್ದಾರೆ. ಸಾನಿಧ್ಯ ಹೋಟೆಲ್ ಮ್ಯಾನೇಜರ್ ಯೋಗೇಶ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಗ್ಯಾಸ್ ದರ ನೋಡಿಕೊಂಡು ಮತ್ತಷ್ಟು ಬೆಲೆ ಹೆಚ್ಚಳ ಮಾಡುವ ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆ

ಹೋಟೆಲ್ ತಿಂಡಿಗಳ ದರ ಏರಿಕೆಯಿಂದಾಗಿ ಕಚೇರಿ ನೌಕರರು, ಮಧ್ಯಮ ವರ್ಗದ ಕುಟುಂಬಗಳು ಹಾಗೂ ಬ್ಯಾಚುಲರ್‌ಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದ ಬಹುತೇಕ ಹೋಟೆಲ್‌ಗಳಲ್ಲಿ ಇಡ್ಲಿ-ವಡೆ, ದೋಸೆ ಮೇಲೆ 5 ರಿಂದ 10 ರೂ. ಹಾಗೂ ಊಟದ ಮೇಲೆ 10 ರಿಂದ 20 ರೂ. ವರೆಗೆ ದರ ಹೆಚ್ಚಿಸಲಾಗಿದೆ. ಕಾಫಿ-ಟೀ ಬೆಲೆಯೂ 2 ರಿಂದ 3 ರೂ. ದುಬಾರಿಯಾಗಿದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಗ್ರಾಹಕ ಶಿವಕುಮಾರ್, ‘ಹಿಂದೆ 40 ರೂ. ಇದ್ದ ಇಡ್ಲಿ ಈಗ 50 ರೂ. ಆಗಿದೆ. ನಮ್ಮ ಸಂಬಳ ಮಾತ್ರ ಹೆಚ್ಚುತ್ತಿಲ್ಲ, ನಿತ್ಯ ಊಟ-ತಿಂಡಿಗೆ 60 ರೂ. ಹೆಚ್ಚುವರಿ ಖರ್ಚಾಗುತ್ತಿರುವುದರಿಂದ ಒಂದು ಹೊತ್ತಿನ ಊಟ ಬಿಡುವ ಸ್ಥಿತಿ ಬಂದಿದೆ’ ಎಂದಿದ್ದಾರೆ. ಒಟ್ಟಾರೆಯಾಗಿ ಜಾಗತಿಕ ಯುದ್ಧದ ಎಫೆಕ್ಟ್ ಸಿಟಿ ಜನರ ಹಸಿವಿನ ಮೇಲೆ ಬರೆ ಎಳೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊಜ್ತಬಾ ಖಮೇನಿ ಬದುಕಿದ್ದಾರಾ? ಶಾಂತಿ ಮಾತುಕತೆ ಯಾವ ಹಾದಿಯಲ್ಲಿದೆ, ಮಾರ್ಕೊ ರುಬಿಯೊ ಹೇಳಿದ್ದೇನು ಇಲ್ಲಿದೆ ಮಾಹಿತಿ – Kannada News

ವಾಷಿಂಗ್ಟನ್, ಜೂನ್ 03: ಅಮೆರಿಕ ಹಾಗೂ ಇರಾನ್ ನಡುವಿನ ಸಂಘರ್ಷ ಬೂದಿ ಮುಚ್ಚಿದ ಕೆಂಡದಂತಾಗಿದೆ. ಒಂದೆಡೆ ಯುದ್ಧವೂ ಇಲ್ಲ, ಮತ್ತೊಂದೆಡೆ ಶಾಂತಿಯೂ ಇಲ್ಲ. ಪಶ್ಚಿಮ ಏಷ್ಯಾದಲ್ಲಿ ದೀರ್ಘಕಾಲದ ಉದ್ವಿಗ್ನತೆಯನ್ನು ಕೊನೆಗಾಣಿಸಿ ಶಾಂತಿ ಪುನಃಸ್ಥಾಪಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಬೆಳವಣಿಗೆಯೊಂದು ಕಂಡುಬಂದಿದೆ. ಇರಾನ್ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ (Mojtaba Khamenei) ಜೀವಂತವಾಗಿದ್ದಾರೆ ಮತ್ತು ದೇಶದ ವ್ಯವಹಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಅಮೆರಿಮ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಹೇಳಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ನಡೆದ ಮಿಲಿಟರಿ ದಾಳಿಯ ನಂತರ ಅವರ ಆರೋಗ್ಯದ ಕುರಿತು ಸಾಕಷ್ಟು ವದಂತಿಗಳು ಹರಡಿದ್ದವು, ಅವರು ಚೇತರಿಸಿಕೊಂಡು ಮತ್ತೆ ಆಡಳಿತಕ್ಕೆ ಮರಳಿರುವುದು ಮಾತುಕತೆಯ ಹೊಸ ಹಾದಿಯನ್ನೇ ತೆರೆದಿದೆ ಎನ್ನಬಹುದು.

ಜಾಗತಿಕ ಮಾರುಕಟ್ಟೆ ಮತ್ತು ಹಾರ್ಮುಜ್ ಜಲಸಂಧಿ ಮುಕ್ತ ಮುನ್ಸೂಚನೆ

ಮಾರ್ಕೊ ರುಬಿಯೊ ಮಾತನಾಡಿ, ಅಮೆರಿಕ ಮತ್ತು ಇರಾನ್ ನಡುವೆ ಶೀಘ್ರದಲ್ಲೇ ಐತಿಹಾಸಿಕ ಒಪ್ಪಂದವೊಂದು ಏರ್ಪಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಒಪ್ಪಂದದ ಭಾಗವಾಗಿ ಜಾಗತಿಕ ತೈಲ ಮತ್ತು ಅನಿಲ ಸಾರಿಗೆಯ ಪ್ರಮುಖ ಮಾರ್ಗವಾಗಿರುವ ‘ಹಾರ್ಮುಜ್ ಜಲಸಂಧಿ’ಯನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಇರಾನ್ ಸಜ್ಜಾಗುತ್ತಿದೆ.

ನಿರ್ಬಂಧಗಳಿಗೆ ಮುಕ್ತಿ

ಇರಾನ್ ಮೇಲಿನ ಆರ್ಥಿಕ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಅಮೆರಿಕ ಸಿದ್ಧವಿದ್ದು, ಇದಕ್ಕೆ ಪ್ರತಿಯಾಗಿ ಇರಾನ್ ತನ್ನ ಯುರೇನಿಯಂ ಪುಷ್ಟೀಕರಣದ ಚಟುವಟಿಕೆಗಳನ್ನು ತೀವ್ರವಾಗಿ ಮಿತಿಗೊಳಿಸಲು ಅಥವಾ ರದ್ದುಗೊಳಿಸಲು ಮಾತುಕತೆ ನಡೆಸುತ್ತಿದೆ.

ಮತ್ತಷ್ಟು ಓದಿ: ಸತ್ತಿರಬಹುದು ಅಥವಾ ಕೆಟ್ಟ ಸ್ಥಿತಿಯಲ್ಲಿರಬಹುದು; ಇರಾನ್‌ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಬಗ್ಗೆ ಟ್ರಂಪ್ ಶಾಕಿಂಗ್ ಹೇಳಿಕೆ

ಮಾರ್ಕೊ ರುಬಿಯೊ ಹೇಳಿಕೆ: ಈ ಶಾಂತಿ ಒಪ್ಪಂದ ಇಂದು, ನಾಳೆ ಅಥವಾ ಮುಂದಿನ ವಾರದಲ್ಲೇ ಯಶಸ್ವಿಯಾಗಬಹುದು. ಇರಾನ್ ತನ್ನ ಪರಮಾಣು ಚಟುವಟಿಕೆಗಳನ್ನು ಮಿತಿಗೊಳಿಸಲು ಒಪ್ಪಿದರೆ, ಅವರ ಮೇಲಿರುವ ಎಲ್ಲಾ ಆರ್ಥಿಕ ನಿರ್ಬಂಧಗಳಿಗೆ ದೊಡ್ಡ ಪರಿಹಾರ ಸಿಗಲಿದೆ.

ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದಿರುವ ಕದನ ವಿರಾಮದ ಪ್ರಯತ್ನಗಳ ನಡುವೆ, ಅಮೆರಿಕವು ಇರಾನ್ ಜೊತೆಗೆ ಸೌಹಾರ್ದಯುತ ಒಪ್ಪಂದ ಮಾಡಿಕೊಳ್ಳಲು ತೋರಿರುವ ಈ ರಾಜತಾಂತ್ರಿಕ ಆಸಕ್ತಿಯು ಜಾಗತಿಕ ತೈಲ ಮಾರುಕಟ್ಟೆ ಹಾಗೂ ವಿಶ್ವ ಶಾಂತಿಯ ದೃಷ್ಟಿಯಿಂದ ಅತ್ಯಂತ ಆಶಾದಾಯಕ ಸುದ್ದಿಯಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕ್ಯಾಪ್ಸಿ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ

ಟೌಂಟನ್​ನ ಕೂಪರ್ ಅಸೋಸಿಯೇಟ್ಸ್ ಕೌಂಟಿ ಮೈದಾನದಲ್ಲಿ ನಡೆದ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ ಸೋಲನುಭವಿಸಿದೆ. ಸರಣಿ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕಿ ಷಾರ್ಲೆಟ್ ಡೀನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂಧಾನ (8) ಹಾಗೂ ಶಫಾಲಿ ವರ್ಮಾ (11) ಪವರ್​ಪ್ಲೇನಲ್ಲೇ ವಿಕೆಟ್ ಒಪ್ಪಿಸಿದ್ದರು. ಆ ಬಳಿಕ ಬಂದ ಯಾಸ್ತಿಕಾ ಭಾಟಿಯಾ 18 ಎಸೆತಗಳಲ್ಲಿ 32 ರನ್ ಬಾರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಮತ್ತೊಂದೆಡೆ ಜೆಮಿಮಾ ರೊಡ್ರಿಗಸ್ 29 ರನ್​ಗಳ ಕೊಡುಗೆ ನೀಡಿದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಹರ್ಮನ್​ಪ್ರೀತ್ ಕೌರ್ 40 ಎಸೆತಗಳಲ್ಲಿ ಕಲೆಹಾಕಿದ್ದು 56 ರನ್​ಗಳು ಮಾತ್ರ. ಹಾಗೆಯೇ 24 ಎಸೆತಗಳನ್ನು ಎದುರಿಸಿದ ದೀಪ್ತಿ ಶರ್ಮಾ ಗಳಿಸಿದ್ದು 32 ರನ್​ಗಳು. ಈ ಇಬ್ಬರ ನಿಧಾನಗತಿಯ ಬ್ಯಾಟಿಂಗ್​ ಹೊರತಾಗಿಯೂ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 180 ರನ್​ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಟೀಮ್ ಇಂಡಿಯಾ ಬೌಲರ್​ಗಳು ಯಶಸ್ವಿಯಾಗಿದ್ದರು. 2ನೇ ಓವರ್​ನಲ್ಲಿ ಕ್ರಾಂತಿ ಗೌಡ್​, ವ್ಯಾಟ್ ಹಾಡ್ಜ್​ (6) ವಿಕೆಟ್ ಉರುಳಿಸಿದರು. ಇದರ ಬೆನ್ನಲ್ಲೇ ಆರುಂಧತಿ ರೆಡ್ಡಿ ಸೋಫಿಯಾ ಡಂಕಿ (16) ವಿಕೆಟ್ ಕಬಳಿಸಿದರು. ಇನ್ನು ಆ್ಯಮಿ ಜೋನ್ಸ್ (3) ರನ್ನು ಬೇಗನೆ ಔಟ್ ಮಾಡುವಲ್ಲಿ ಕ್ರಾಂತಿ ಗೌಡ್ ಯಶಸ್ವಿಯಾದರು.

ಆದರೆ ಈ ಹಂತದಲ್ಲಿ ಕಣಕ್ಕಿಳಿದ ಅಲಿಸ್ ಕ್ಯಾಪ್ಸಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಟೀಮ್ ಇಂಡಿಯಾ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ ಕ್ಯಾಪ್ಟಿ ಮೈದಾನದ ಮೂಲೆ ಮೂಲೆಗೆ ಫೋರ್​ಗಳನ್ನು ಬಾರಿಸಿದರು. ಕ್ಯಾಪ್ಟಿಗೆ ಉತ್ತಮ ಸಾಥ್ ನೀಡಿದ ಹೀದರ್ ನೈಟ್ ಕೂಡ ಅಬ್ಬರಿಸಲಾರಂಭಿಸಿದರು.

ಪರಿಣಾಮ ಅಲಿಸ್ ಕ್ಯಾಪ್ಸಿ ಬ್ಯಾಟ್​ನಿಂದ ಕೇವಲ 43 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ 82 ರನ್​ಗಳು ಮೂಡಿಬಂತು ಇನ್ನು ಹೀದರ್ ನೈಟ್ 42 ಎಸೆತಗಳಲ್ಲಿ 70 ರನ್ ಚಚ್ಚಿದರು. ಈ ಮೂಲಕ ಇಂಗ್ಲೆಂಡ್ ತಂಡವು 18.4 ಓವರ್​ಗಳಲ್ಲಿ 184 ರನ್​​ ಬಾರಿಸಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಇಂಗ್ಲೆಂಡ್ ತಂಡವು ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

Source link

‘ನಿಮ್ಮ ಲೈಫ್ ನೋಡಿಕೊಳ್ಳಿ’; ಕ್ಯಾನ್ಸರ್ ಪೀಡಿತ ಅಭಿಮಾನಿ ಜೊತೆ ಮಾತನಾಡಿದ ಯಶ್ – Kannada News

ರಾಕಿಂಗ್ ಸ್ಟಾರ್ ಯಶ್ ಅವರು (ಯಶ್) ಕೇವಲ ಹೀರೋ ಆಗಿ ಮಾತ್ರವಲ್ಲ, ಮಾನವೀಯತೆ ತೋರುವ ವ್ಯಕ್ತಿಯಾಗಿಯೂ ಇಷ್ಟ ಆಗುತ್ತಾರೆ. ಅಭಿಮಾನಿಗಳು ಕೊಟ್ಟಷ್ಟೇ ಪ್ರೀತಿಯನ್ನು ಇವರು ಕೊಡುತ್ತಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಈಗಾಗಲೇ ಸಿಕ್ಕಿವೆ. ಇತ್ತೀಚೆಗೆ ಕ್ಯಾನ್ಸರ್ ಪೀಡಿತ ಅಭಿಮಾನಿ ಜೊತೆ ಯಶ್ ಅವರು ವಿಡಿಯೋ ಕಾಲ್​​ ಮೂಲಕ ಮಾತನಾಡಿದ್ದಾರೆ. ಅಭಿಮಾನಿಗೆ ಅವರು ಧೈರ್ಯ ತುಂಬಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಪ್ರಶಂಸೆಗೆ ಕಾರಣವಾಗಿದೆ.

ಯಶ್ ಅವರು ‘ಕೆಜಿಎಫ್’, ‘ಕೆಜಿಎಫ್ 2’ ಬಳಿಕ ಪ್ಯಾನ್ ಇಂಡಿಯಾ ಮಟ್ಟಕ್ಕೆ ತೆರಳಿದ್ದಾರೆ. ‘ಟಾಕ್ಸಿಕ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ವಿಶ್ವದರ್ಜೆ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಯೋಜನೆ ಅವರಿಗೆ ಇದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ. ಈ ಸಿನಿಮಾ ರಿಲೀಸ್ ಆದರೆ ಹಬ್ಬ ಮಾಡಬೇಕು ಎಂದು ಕಾದು ಕುಳಿತ ಅಭಿಮಾನಿಯೊಬ್ಬರ ಆರೋಗ್ಯ ಹದಗೆಟ್ಟಿದೆ. ಕ್ಯಾನ್ಸರ್ ಇರುವ ವಿಷಯ ಗೊತ್ತಾಗಿದೆ.

ಇದನ್ನೂ ಓದಿ: ಅಲಿಬಾಗ್​ನಲ್ಲಿ 24 ಕೋಟಿ ರೂಪಾಯಿ ಆಸ್ತಿ ಖರೀದಿಸಿದ ಯಶ್, ರಾಧಿಕಾ ಪಂಡಿತ್

ಅಭಿಮಾನಿಗೆ ಕ್ಯಾನ್ಸರ್ ಇರುವ ವಿಷಯ ಗೊತ್ತಾಗುತ್ತಿದ್ದಂತೆ ರಾಕಿಂಗ್ ಸ್ಟಾರ್ ಯಶ್ ಅವರು ವಿಡಿಯೋ ಕಾಲ್ ಮೂಲಕ 10 ನಿಮಿಷಕ್ಕೂ ಹೆಚ್ಚು ಸಮಯ ಮಾತನಾಡಿದ್ದಾರೆ. ಮೊದಲು ಏನಾಯಿತು? ಕ್ಯಾನ್ಸರ್ ಇದೆ ಎಂಬುದು ಏಕೆ ಗೊತ್ತಾಗಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಆ ಬಳಿಕ ಯಶ್ ಅವರು ಒಂದು ಪ್ರಮುಖವಾದ ಕಿವಿಮಾತು ಹೇಳಿದ್ದಾರೆ.

ಅಭಿಮಾನಿ ಜೊತೆ ಮಾತನಾಡಿದ ಯಶ್

‘ನಿಮ್ಮ ಸಿನಿಮಾ ಟಾಕ್ಸಿಕ್​​ನ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಬೇಕು ಎಂದು ಪ್ಲ್ಯಾನ್ ಮಾಡಿದ್ದೆವು’ ಎಂದು ಕ್ಯಾನ್ಸರ್ ಪೀಡಿತ ಅಭಿಮಾನಿ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಯಶ್, ‘ನಿಮ್ಮ ಲೈಫ್ ನೋಡಿಕೊಳ್ಳಿ. ಸಿನಿಮಾ ಬರುತ್ತೆ, ಹೋಗುತ್ತೆ. ನಿಮ್ಮ ಆರೋಗ್ಯವನ್ನು ಮೊದಲು ನೋಡಿಕೊಳ್ಳಬೇಕು’ ಎಂದು ಯಶ್ ಕಿವಿಮಾತು ಹೇಳಿದ್ದಾರೆ. ‘ಏನ್ ಮಾತನಾಡಬೇಕು ಎಂದು ಗೊತ್ತಾಗುತ್ತಿಲ್ಲ ಚಿನ್ನ. ಮಿರಾಕಲ್​​ಗಳು ಆಗುತ್ತೆ. ಹೋಪ್ ಇರಲಿ’ ಎಂದು ಯಶ್ ಹೇಳಿದ್ದಾರೆ. ಕೊನೆಯಲ್ಲಿ ಅಭಿಮಾನಿಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಮನೆ ಗೋಡೆಗಳಲ್ಲಿ ಅರಳಿ ಗಿಡ ಚಿಗುರಿದರೆ ಅಪಾಯ ಖಂಡಿತ! – Kannada News

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮನೆ ಗೋಡೆಗಳಲ್ಲಿ ಅರಳಿ ಗಿಡ ಚಿಗುರಿದರೆ ಅಪಾಯ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಮರಗಳು ನಮಗೆ ಉಸಿರಾಡಲು, ಆಯುಷ್ಯ ವೃದ್ಧಿಸಲು ಸಹಕರಿಸುತ್ತವೆ. ಆದರೆ, ಕೆಲವು ನಿರ್ದಿಷ್ಟ ವೃಕ್ಷಗಳು ಮನೆಯ ಗೋಡೆ, ಕಾಂಪೌಂಡ್ ಅಥವಾ ಚಾವಣಿಯ ಮೇಲೆ ಬೆಳೆದಾಗ ಅದು ಶುಭವೋ ಅಶುಭವೋ ಎಂಬ ಪ್ರಶ್ನೆ ಮೂಡುತ್ತದೆ. ಧರ್ಮಶಾಸ್ತ್ರ ಮತ್ತು ವಾಸ್ತು ಪ್ರಕಾರ, ಈ ರೀತಿಯಾಗಿ ಬೆಳೆಯುವ ಅಶ್ವತ್ಥ (ಅರಳಿ), ಬೇವಿನ ಮತ್ತು ನಿಂಬೆ ಮರಗಳು ಅಷ್ಟು ಶುಭಸೂಚಕವಲ್ಲ.

ವಿಶೇಷವಾಗಿ ಅಶ್ವತ್ಥ ವೃಕ್ಷವು ಮನೆಯ ಗೋಡೆ ಅಥವಾ ಚಾವಣಿಯ ಮೇಲೆ ತಾನಾಗಿಯೇ ಬೆಳೆದರೆ, ಇದನ್ನು ಶುಭಕರವೆಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ, ಇಂತಹ ವೃಕ್ಷಗಳಿಗೆ ದೇವರ ಲಹರಿಗಳು ಆವಾಹನೆ ಆಗುವ ಸಾಧ್ಯತೆ ಇರುತ್ತದೆ. ಸಂಸಾರಿಗಳಾದ ನಾವು ಆ ಶಕ್ತಿಯನ್ನು ತಡೆದುಕೊಳ್ಳಲು ಸದಾ ಪೂಜೆ, ಶುದ್ಧತೆ ಕಾಯ್ದುಕೊಳ್ಳುವುದು ಕಷ್ಟಸಾಧ್ಯ. ಇದರಿಂದ ಮನೆಯಲ್ಲಿ ಹಣದ ಒಳಹರಿವಿಗೆ ಅಡ್ಡಿ, ಕೆಲಸಕಾರ್ಯಗಳಲ್ಲಿ ಸ್ಥಗಿತ, ಆರೋಗ್ಯ ಸಮಸ್ಯೆಗಳು ಮತ್ತು ಮನಸ್ಸಿನ ಭಾವನೆಗಳಲ್ಲಿ ನೆಮ್ಮದಿ ಇರುವುದಿಲ್ಲ ಎಂದು ಗುರೂಜಿ ತಿಳಿಸಿದ್ದಾರೆ.

 

 

 

Source link

DK Shivakumar Oath Taking: 25ನೇ ಮುಖ್ಯಮಂತ್ರಿಯಾಗಿ ಇಂದು ಡಿಕೆ ಶಿವಕುಮಾರ್ ಪ್ರಮಾಣವಚನ: ಲೋಕಭವನದಲ್ಲಿ ಸಂಭ್ರಮ – Kannada News

ಡಿಕೆ ಶಿವಕುಮಾರ್ ಪ್ರಮಾಣವಚನಕ್ಕೆ ಲೋಕಭವನದಲ್ಲಿ ಸಿದ್ಧತೆImage Credit source: tv9

ಬೆಂಗಳೂರು, ಜೂನ್ 3: ರಾಜ್ಯ ರಾಜಕಾರಣದ ಅತ್ಯಂತ ಮಹತ್ವದ ಘಟ್ಟಕ್ಕೆ ರಾಜಧಾನಿ ಬೆಂಗಳೂರು ಸಾಕ್ಷಿಯಾಗುತ್ತಿದ್ದು, ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಅವರು ಅಧಿಕಾರ ಸ್ವೀಕರಿಸಲು ಕ್ಷಣಗಣನೆ ಶುರುವಾಗಿದೆ. ಬೆಂಗಳೂರಿನ ಲೋಕಭವನದ ಗಾಜಿನ ಮನೆ (ಗ್ಲಾಸ್ ಹೌಸ್) ಮದುವಣಗಿತ್ತಿಯಂತೆ ಕಂಗೊಳಿಸುತ್ತಿದ್ದು, ಇಂದು (ಜೂನ್ 3) ಸಂಜೆ ಸರಿಯಾಗಿ 4 ಗಂಟೆ 5 ನಿಮಿಷದ ಶುಭ ಮುಹೂರ್ತದಲ್ಲಿ ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ನೂತನ ಸಿಎಂಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಆಡಂಬರವಿಲ್ಲದೆ, ಅತ್ಯಂತ ಶಿಸ್ತುಬದ್ಧವಾಗಿ ಈ ಐತಿಹಾಸಿಕ ಸಮಾರಂಭ ನೆರವೇರಲಿದ್ದು, ಬೆಂಗಳೂರಿನಾದ್ಯಂತ ನಿಯೋಜಿತ ಸಿಎಂ ಅವರ ಬೃಹತ್ ಕಟೌಟ್‌ ಹಾಗೂ ಬ್ಯಾನರ್‌ಗಳು ರಾರಾಜಿಸುತ್ತಿವೆ.

ಮುಖ್ಯಾಂಶಗಳು

  • ಇಂದು ಸಂಜೆ 4:05ಕ್ಕೆ ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್.
  • ಜ್ಯೋತಿಷಿ ಸಲಹೆಯಂತೆ ಇದೇ ಮೊದಲ ಬಾರಿಗೆ ಪೂರ್ವಾಭಿಮುಖವಾಗಿ ಸಜ್ಜಾದ ಲೋಕಭವನದ ವೇದಿಕೆ.
  • ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರಲು ಆದಿಚುಂಚನಗಿರಿ ಸರ್ವಧರ್ಮದ 55 ಪ್ರಮುಖ ಧರ್ಮಗುರುಗಳಿಗೆ ಆಹ್ವಾನ

ಪರಿಶ್ರಮಕ್ಕೆ ಸಿಕ್ಕ ಫಲ, ಜಂಟಿ ಆಡಳಿತದ ಭರವಸೆ

ಮುಖ್ಯಮಂತ್ರಿ ಸ್ಥಾನಕ್ಕೆ ತಲುಪುವುದು ಬರೀ ಕನಸಾಗಿರಲಿಲ್ಲ, ಇದು ಕಠಿಣ ಪರಿಶ್ರಮದೊಂದಿಗಿನ ಸಮರ್ಪಣೆಯಾಗಿದೆ. ಸಮಯ ಜಟಿಲವಾಗಿತ್ತು, ವಿಳಂಬವಾಗಿರಬಹುದು ಆದರೆ ಹೈಕಮಾಂಡ್ ನನ್ನನ್ನು ನಿರಾಕರಿಸಿಲ್ಲ. ಇದು ಕೇವಲ ಶಿವಕುಮಾರ್ ಒಬ್ಬನ ಸಾಧನೆಯಲ್ಲ. ಕಾಂಗ್ರೆಸ್ ಇತಿಹಾಸ ಹಾಗೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಟ್ಟಿರುವ ಸಾವಿರಾರು ಕಾರ್ಯಕರ್ತರ ಶ್ರಮದ ಫಲ ಎಂದು ಡಿಕೆ ಶಿವಕುಮಾರ್ ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಗಾಂಧಿ-ನೆಹರು ಕುಟುಂಬಕ್ಕೆ ನಿಷ್ಠರಾಗಿರುವುದು ತಮ್ಮ ಕರ್ತವ್ಯ ಎಂದಿರುವ ಅವರು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ತ್ಯಾಗವನ್ನು ಕೊಂಡಾಡಿದ್ದಾರೆ. ಅಲ್ಲದೆ, ರೈತರು, ಮಹಿಳೆಯರು ಹಾಗೂ ಯುವ ಪೀಳಿಗೆ ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮೂಲಕ ರಾಜ್ಯದಲ್ಲಿ ಹೊಸ ‘ಯುವಯುಗ’ ಹಾಗೂ ‘ನವಯುಗ’ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ.

ವೇದಿಕೆಗೆ ವಾಸ್ತು ಟಚ್ ಮತ್ತು ಸರ್ವಧರ್ಮ ಸಮನ್ವಯತೆ

ಈ ಬಾರಿಯ ಪದಗ್ರಹಣ ಕಾರ್ಯಕ್ರಮಕ್ಕೆ ವಿಶೇಷವಾಗಿ ವಾಸ್ತು ಸ್ಪರ್ಶ ನೀಡಲಾಗಿದೆ. ಈ ಹಿಂದೆ ಲೋಕಭವನದಲ್ಲಿ ನಡೆಯುತ್ತಿದ್ದ ಕಲಾಪಗಳ ವೇದಿಕೆ ಪಶ್ಚಿಮಾಭಿಮುಖವಾಗಿ ಇರುತ್ತಿತ್ತು. ಆದರೆ, ಈ ಬಾರಿ ಜ್ಯೋತಿಷಿ ಆರಾಧ್ಯ ಅವರ ಸಲಹೆಯ ಮೇರೆಗೆ ವೇದಿಕೆಯನ್ನು ಪೂರ್ವಾಭಿಮುಖವಾಗಿ ಅತ್ಯಂತ ಆಕರ್ಷಕವಾಗಿ ಸಿದ್ಧಪಡಿಸಲಾಗಿದೆ. ಇಡೀ ಕಾರ್ಯಕ್ರಮದ ಜವಾಬ್ದಾರಿಯನ್ನು ಸಂಸದ ಡಿ.ಕೆ.ಸುರೇಶ್ ಹೊತ್ತುಕೊಂಡಿದ್ದು, ಪ್ರತಿಯೊಂದು ಸಿದ್ಧತೆಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಮತ್ತೊಂದೆಡೆ, ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರಲು ಸರ್ವಧರ್ಮ ಸಮನ್ವಯತೆಗೆ ಆದ್ಯತೆ ನೀಡಲಾಗಿದೆ. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಸುತ್ತೂರು ಶ್ರೀಗಳು, ತರಳುಬಾಳು ಶ್ರೀಗಳು, ಪೇಜಾವರ ಶ್ರೀಗಳು, ರಂಭಾಪುರಿ ಶ್ರೀಗಳು ಹಾಗೂ ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ಸೇರಿದಂತೆ ವಿವಿಧ ಮಠಾಧೀಶರು, ಚರ್ಚ್‌ನ ಆರ್ಚ್ ಬಿಷಪ್ ಡಾ. ಪೀಟರ್ ಮಚಾಡೋ ಮತ್ತು ಮೌಲ್ವಿಗಳು ಸೇರಿದಂತೆ ಒಟ್ಟು 55 ಸರ್ವಧರ್ಮದ ಪ್ರಮುಖ ಗುರುಗಳಿಗೆ ಗೌರವಪೂರ್ವಕ ಆಹ್ವಾನ ನೀಡಲಾಗಿದೆ.

ಇದನ್ನೂ ಓದಿ: ಪದತ್ಯಾಗಕ್ಕೆ ಬಂಪರ್ ಗಿಫ್ಟ್​​: ಸಿದ್ದರಾಮಯ್ಯಗೆ ಮಹತ್ವದ ಸ್ಥಾನಮಾನ ನೀಡಿದ ಹೈಕಮಾಂಡ್

ಬೃಹತ್ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ. ವೇಣುಗೋಪಾಲ್ ಹಾಗೂ ಕಾಂಗ್ರೆಸ್ ಆಡಳಿತವಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಾರೆ. ಸಿನಿಮಾ ತಾರೆಯರು ಸೇರಿದಂತೆ ವಿವಿಧ ರಂಗದ ಗಣ್ಯರಿಗಾಗಿ ಲೋಕಭವನದಲ್ಲಿ 1,100 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, 3 ಹಂತದ ಪ್ರತ್ಯೇಕ ಪಾಸ್‌ಗಳನ್ನು ವಿತರಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ವಸಂತನಗರದ ಶಾಂಗ್ರೀಲಾ ಹೋಟೆಲ್ ಹಾಗೂ ಕೆಪಿಸಿಸಿ ಕಚೇರಿಯ 1 ಕಿ.ಮೀ ವ್ಯಾಪ್ತಿಯಲ್ಲಿ ‘ನೋ-ಫ್ಲೈ ಝೋನ್’ ಘೋಷಿಸಲಾಗಿದೆ. ಭದ್ರತೆ ಹಾಗೂ ಟ್ರಾಫಿಕ್ ದಟ್ಟಣೆ ನಿಯಂತ್ರಿಸುವ ಸಲುವಾಗಿ ವಿಧಾನಸೌಧ, ವಿಕಾಸಸೌಧ ಮತ್ತು ಎಂ.ಎಸ್. ಬಿಲ್ಡಿಂಗ್ ಸಿಬ್ಬಂದಿಗೆ ಇಂದು ಅರ್ಧ ದಿನ ರಜೆ ಘೋಷಿಸಿ ಆದೇಶ ಹೊರಡಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today: ಇಂದು ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು!

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಜೂನ್ 3, ಬುಧವಾರದ ದ್ವಾದಶ ರಾಶಿಗಳ ಸಮಗ್ರ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಪರಾಭವನಾಮ ಸಂವತ್ಸರ, ಉತ್ತರಾಯಣ, ಅಧಿಕ ಜ್ಯೇಷ್ಠ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ತದಿಗೆ, ಶುಭಯೋಗ, ಭದ್ರಕರ್ಣ ಮತ್ತು ಪೂರ್ವಾಷಾಡ ನಕ್ಷತ್ರಗಳೊಂದಿಗೆ ಈ ದಿನದ ಆಸ್ಟ್ರೋಲಾಜಿಕಲ್ ವಿವರಗಳನ್ನು ನೀಡಿದ್ದಾರೆ. ರಾಹುಕಾಲವು ಮಧ್ಯಾಹ್ನ 12:17 ರಿಂದ 1:53 ರವರೆಗೆ ಇದ್ದರೆ, ಸರ್ವಸಿದ್ಧಿ ಸಂಕಲ್ಪ ಕಾಲವು ಬೆಳಗ್ಗೆ 10:41 ರಿಂದ 12:17 ರವರೆಗೆ ಇರುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.

 

 

 

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ತಮ್ಮವರಿಂದ ದೂರಾಗುವ ಭೀತಿ… – Kannada News

ಮೇಷ ರಾಶಿ:

ನಿಮ್ಮ ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಕಾಣಿಸಿಕೊಳ್ಳುವುದು. ಸ್ನೇಹಿತನ ಸಹಾಯದಿಂದ ಸಮಸ್ಯೆ ಬಗೆಹರಿಸಬಹುದು. ಆರೋಗ್ಯ ಚೆನ್ನಾಗಿರಲು ನಿಗಾ ಇಡಿ. ಶುಭ ಸಂಕೇತಗಳು ಅಚ್ಚರಿಯನ್ನು ಉಂಟುಮಾಡಬಹುದು. ಇಟ್ಟ ಹೆಜ್ಜೆಯನ್ನು ಹಿಡೆಯುವ ಯಾವ ವಿಚಾರವನ್ನೂ ಮಾಡಲಾರಿರಿ. ಅಡೆತಡೆಗಳು ಕೊನೆಗೊಳ್ಳುತ್ತವೆ. ಯೋಜನೆಯ ಪ್ರಕಾರ ಕೆಲಸ ಮಾಡಲು ಸಾಧ್ಯವಾಗುತ್ತದೆ. ಯಾವುದೋ ಸಮಯಕ್ಕೆ ಆಹಾರವನ್ನು ಸ್ವೀಕರಿಸಬೇಕಾದೀತು. ನಿಮ್ಮ ಚೌಕಟ್ಟಿನಲ್ಲಿ ಎಲ್ಲವೂ ಇರಬೇಕು ಎನ್ನುವುದು ಅಸಾಧ್ಯದ ಮಾತು.

ವೃಷಭ ರಾಶಿ :

ಕೆಲಸದ ಒತ್ತಡ ಹೆಚ್ಚಾದರೂ, ನಿಮಗೆ ನಿರ್ವಹಣಾ ಶಕ್ತಿ ಇದೆ. ಹಣಕಾಸಿನಲ್ಲಿ ಖರ್ಚುಗಳಿಂದ ದೂರವಿರಿ. ಎಷ್ಟೇ ಹಣವಿದ್ದರೂ ಸಾಲದಂತೆ ಕಾಣಿಸುವುದು. ಕುಟುಂಬದ ಜೊತೆ ಸಮಯ ಕಳೆಯುವುದು ಸಂತೋಷ ತರಲಿದೆ. ಸ್ನೇಹಿತರೊಂದಿಗೆ ಉತ್ತಮ ಮಾತುಕತೆ ಸಾಧ್ಯ. ಹೊಸ ಯೋಜನೆ ನಿಮ್ಮ ದಿಕ್ಕು ಬದಲಾಯಿಸಬಹುದು. ದ್ವೇಷವನ್ನು ಕಟ್ಟಿಕೊಳ್ಳುವ ಸಾಧ್ಯತೆ ಇದೆ. ಅಮೂಲ್ಯ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ.

ಮಿಥುನ ರಾಶಿ :

ಬಹಳ ದಿನಗಳಿಂದ ಉಳಿದ‌ ಕಾರ್ಯಕ್ಕೆ ನಿಮ್ಮ ಪೂರ್ಣ ಪರಿಶ್ರಮ ಬೇಕಾಗಲಿದೆ. ನಿಮ್ಮ ಮಾತುಕತೆಗಳು ಪ್ರಾಮಾಣಿಕರಾಗಿರಲಿ. ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಪರ್ಕ ಸಾಧಿಸುವಿರಿ. ಹಣಕಾಸಿನಲ್ಲಿ ಬದಲಾವಣೆ ಬೇಕಾದರೆ ಹೊಸ ಯೋಚನೆ ಮಾಡಿ. ಕುಟುಂಬದ ವಿಷಯದಲ್ಲಿ ನಿಮ್ಮ ಮಾತಿಗೆ ಬೆಲೆ ಇರುತ್ತದೆ. ಊಹಿಸದ ಕೆಲವು ಸಂದರ್ಭಗಳು ಇಂದು ಬರಬಹುದು. ಮಕ್ಕಳ ವಿಚಾರದಲ್ಲಿ ನೀವು ಬಹಳ ಮಾರ್ದವವನ್ನು ತೋರಿಸುವಿರಿ.

ಕರ್ಕಾಟಕ ರಾಶಿ :

ಸಂಗಾತಿಯ ಪ್ರೀತಿ ಇಂದು ನಿಮಗೆ ಸಂತೋಷವನ್ನು ತರಬಹುದು. ಕೆಲಸದಲ್ಲಿ ಉತ್ಪಾದಕ ದಿನವನ್ನು ನಿರೀಕ್ಷಿಸಿ. ಹೊಸ ಕೆಲಸ ಮಾಡಲು ಅವಕಾಶಗಳು ಸಿಗಲಿವೆ. ಸಮಯ ಸ್ವಲ್ಪ ತೊಂದರೆ ಉಂಟುಮಾಡುತ್ತದೆ. ಆದರೆ ನಿಮಗೆ ಅವಕಾಶ ಸಿಗುತ್ತದೆ ಮತ್ತು ಆರ್ಥಿಕ ಲಾಭವು ತೃಪ್ತಿಕರವಾಗಿರುತ್ತದೆ. ದಿನದ ಅಂತ್ಯವನ್ನು ನಿಮ್ಮ ಮಕ್ಕಳೊಂದಿಗೆ ಕಳೆಯುತ್ತೀರಿ. ಹೊಸ ವೃತ್ತಿಯಲ್ಲಿ ಪೂರ್ಣ ತೊಡಗಿಕೊಳ್ಳುವುದು ನಿಮಗೆ ಇಷ್ಟವಾಗುವುದು.

ಸಿಂಹ ರಾಶಿ :

ಹಣವನ್ನು ಉಳಿಸುವ ನಿಮ್ಮ ಪ್ರಯತ್ನಕ್ಕೆ ಇಂದು ಅಡೆತಡೆಗಳನ್ನು ಬರಬಹುದು. ಹೊಸ ವ್ಯವಹಾರ ಒಪ್ಪಂದಗಳು ಮತ್ತು ನಿರುದ್ಯೋಗಿಗಳಿಗೆ ಯಶಸ್ಸು ಸಿಗುತ್ತದೆ. ಲಾಭದ ಸ್ಥಿತಿ ಉಳಿಯುತ್ತದೆ. ನಿಮ್ಮ ಮಾತನ್ನು ನಿಯಂತ್ರಿಸಿ, ಕೋಪವು ವಿವಾದಗಳಿಗೆ ಕಾರಣವಾಗಬಹುದು. ವೈವಾಹಿಕ ಜೀವನವು ಆಹ್ಲಾದಕರವಾಗಿರುವುದು. ಸ್ವಂತ ವಾಹನದ ದುರಸ್ತಿಗೆ ಖರ್ಚಾಗಬಹುದು. ಇಂದು ಸ್ಥೈರ್ಯವನ್ನು ಕಳೆದುಕೊಳ್ಳುವಿರಿ. ನಿಷ್ಠೆಯನ್ನು ಉಳಿಸಿಕೊಳ್ಳುವುದು ಕಷ್ಟವಾದೀತು.

ಕನ್ಯಾ ರಾಶಿ :

ನಿಮ್ಮ ದೌರ್ಬಲ್ಯಗಳನ್ನು ಹತೋಟಿ ತರುವುದು ಕಷ್ಟವಾಗುವುದು. ಇದೇ ಕಾರಣಕ್ಕೆ ಅಪಮಾನವನ್ನು ಎದುರಿಸಬೇಕಾಗುವುದು. ಭೂಮಿ ಮಾರಾಟದ ಬಗ್ಗೆ ಯೋಚಿಸುತ್ತಿದ್ದರೆ ಇಂದು ಉತ್ತಮವಾಗಿರುವುದು. ಯಾವುದೇ ರೀತಿಯ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದಿಲ್ಲ. ಮನಸ್ಸು ಸಂತೋಷವಾಗಿರುತ್ತದೆ ಮತ್ತು ಕುಟುಂಬದೊಂದಿಗೆ ಸಮಯ ಕಳೆಯುತ್ತೀರಿ. ಸಾಮರಸ್ಯದ ಕೊರತೆ ಎದ್ದು ಕಾಣಿಸುವುದು. ಅತಿಯಾದ ಕೋಪದಿಂದ ನಿಮ್ಮ ವ್ಯವಹಾರವು ಬುಡಮೇಲಾದೀತು.

ತುಲಾ ರಾಶಿ :

ನಿಮ್ಮ ನಿರ್ಧಾರಗಳು ಇಂದು ಹೆಚ್ಚುವರಿ ಹಣಕಾಸಿನ ಲಾಭವನ್ನು ತರಬಹುದು. ನಿಮ್ಮ ಸಂಗಾತಿಯ ಜೊತೆ ಗುಣಮಟ್ಟದ ಸಮಯವನ್ನು ಕಳೆಯಲು ಹಾಗೂ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ದೊರೆಯಲಿದೆ. ಕೆಲಸದಲ್ಲಿ ನಿಮಗೆ ಮುಖ್ಯ ಪಾತ್ರ ಲಭ್ಯವಾಗುವ ಸಾಧ್ಯತೆ ಇದೆ. ಹಣಕಾಸಿನಲ್ಲಿ ನಿಯಂತ್ರಣ ಕಾಪಾಡಿ. ಬೆಳಗಿನಿಂದಲೇ ಮನಸ್ಸು ಸರಿ ಇಲ್ಲದ ಕಾರಣ ಎಲ್ಲದಕ್ಕೂ ಸಿಟ್ಟು ಮಾಡುವಿರಿ. ಮಕ್ಕಳಿಗಾಗಿ ಹಣವನ್ನು ಇಡುವಿರಿ.

ವೃಶ್ಚಿಕ ರಾಶಿ :

ನಿಮ್ಮ ಸಂಗಾತಿಯಿಂದ ನಿಮಗೆ ಸಂತೋಷವು ಬೇಕೆನಿಸುವುದು. ಇಂದು ಎದುರಾಗುವ ಸವಾಲುಗಳು ನಿಮಗೆ  ಉದ್ಯೋಗದಲ್ಲಿ ಸ್ಥಿರತೆಯನ್ನು ತೋರಿಸುತ್ತದೆ. ನಿರೀಕ್ಷೆಗಿಂತ ಹೆಚ್ಚಾಗಿ ಇತರರು ಸಹಾಯ ಮಾಡುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯುವುದು ನಿಮ್ಮ ಮನಸ್ಸಿಗೆ ನೆಮ್ಮದಿ ತರಲಿದೆ. ಅವಶ್ಯಕವಿರುವದನ್ನು ಇಟ್ಟುಕೊಂಡು ಇನ್ನೊಬ್ಬರಿಗೂ ಕೊಡಿ. ಅವರ ಬಗ್ಗೆ ಅತಿಯಾದ ಕಾಳಜಿ ಬೇಕು.

ಧನು ರಾಶಿ :

ನಿಮ್ಮವರ ಆರೋಗ್ಯಕ್ಕೆ ಸಂಬಂಧಿಸಿದಂತೆ ವೆಚ್ಚಗಳು ಹೆಚ್ಚಾಗಬಹುದು. ಇದು ನಿಮ್ಮ ಹಣಕಾಸಿನ ಸ್ಥಿತಿಯ ಮೇಲೆ ಪರಿಣಾಮವನ್ನು ಬೀರಬಹುದು. ಸಮಯವು ಹಣದ ಕೊರತೆಯನ್ನು ನಿವಾರಿಸುತ್ತದೆ. ಹಣಕ್ಕೆ ಸಂಬಂಧಿಸಿದ ಚಿಂತೆಗಳು ಕೊನೆಗೊಳ್ಳುತ್ತವೆ. ಉದ್ವೇಗದಿಂದ ಏನನ್ನಾದರೂ ಮಾಡಲು ಅನೀತಿ ಮಾರ್ಗದಲ್ಲಿ ಹೋಬೇಕಾದೀತು. ಕೋಪದಿಂದ ಕೆಲವು ಸುಂದರ ಕ್ಷಣವನ್ನು ಕಳೆದುಕೊಳ್ಳುವಿರಿ. ಸಂಗಾತಿಯ ಆಗಮನವನ್ನು ನಿರೀಕ್ಷಿಸುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು.

ಮಕರ ರಾಶಿ :

ಕೆಲಸ ಮೇಲೆ ನಿಮ್ಮ ಗಮನವಿದೆಯೇ ಎಂದು ಖಚಿತಪಡಿಸಿಕೊಳ್ಳಿ. ವ್ಯಾಪಾರದ ಆದ ಸ್ವಲ್ಪ ಅಜಾಗರೂಕತೆಯೂ ಭಾರೀ ನಷ್ಟವನ್ನು ಉಂಟುಮಾಡಬಹುದು. ಕೆಲವರ ಮಾತುಗಳಿಂದ ಮನಸ್ಸಿಗೆ ದುಃಖಿತವಾಗಬಹುದು, ಆದರೆ ಉತ್ತರ ಸೌಮ್ಯವಾಗಿರಲಿ. ಅನಗತ್ಯ ಸಮಸ್ಯೆಗಳು ಮತ್ತು ತೊಡಕುಗಳು ಉಂಟಾಗುತ್ತವೆ. ಎಂತಹ ಒತ್ತಡವಿದ್ದರೂ ತಾಳ್ಮೆಯಿಂದ ಕೆಲಸ ಮಾಡಿ. ಕಾರ್ಯಕ್ರಮದಲ್ಲಿ ದುಂದುವೆಚ್ಚದಂತೆ ಕೆಲವು ತೋರೀತು. ವಿವಾದಗಳನ್ನು ಮಾಡುವ ಸಂದರ್ಭವು ಬಂದರೂ ಅದರಿಂದ ದೂರವಿರಿ.

ಕುಂಭ ರಾಶಿ :

ನಿಮ್ಮ ಸ್ನೇಹಿತರು ಸಹಾಯಕ್ಕೆ ಬರಬಹುದೆಂಬ ನಿರೀಕ್ಷೆ. ತೀರ್ಮಾನಗಳ ಹಿಂದೆ ತಾಳ್ಮೆ ಇರಲಿ. ಹಣದ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಜವಾಬ್ದಾರಿಯುತರಾಗಿರಿ. ಕುಟುಂಬದಲ್ಲಿ ಹಿರಿಯರ ಸಲಹೆ ನಿಮ್ಮ ಸಮಸ್ಯೆಗೆ ಪರಿಹಾರವಾಗಬಹುದು. ಯಶಸ್ಸಿನ ಹಾದಿಯನ್ನು ತೆರೆಯುವ ಹೊಸ ಅವಕಾಶಗಳು ನಿಮಗೆ ಸಿಗುತ್ತವೆ. ಕೋಪವನ್ನು ಕಡಿಮೆ ಮಾಡಿಕೊಳ್ಳಲು ನಿಮ್ಮ ಸತತ ಪ್ರಯತ್ನವು ಫಲಿಸೀತು. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಣಲು ಸಾಧ್ಯ.

ಮೀನ ರಾಶಿ :

ನೀವು ಜನರ ಆಸೆಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದು, ವ್ಯವಹಾರದಲ್ಲಿ ಅದನ್ನು ಪ್ರಯೋಗಿಸುವಿರಿ. ಇಂದು ಅತಿಯಾಗಿ ಖರ್ಚು ಮಾಡದಿರುವುದು ಒಳ್ಳೆಯದು. ಹೊಸ ಅವಕಾಶಗಳು ಕಾಣಿಸುತ್ತವೆ. ಆದರೆ ಎಲ್ಲವನ್ನೂ ತಕ್ಷಣ ಸ್ವೀಕರಿಸದಿರಿ. ಕೆಲಸದ ಕಡೆ ಕೆಲ ಒತ್ತಡಗಳು ಬರಬಹುದು. ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಸರಕಾರದಿಂದ ಅರ್ಥಿಕ ಬೆಂಬಲ ದೊರೆಯಬಹುದು. ದೂರದ ಮಿತ್ರರ ಸಂಪರ್ಕದಿಂದ ಕೆಲವು ಸಮಸ್ಯೆಗಳು ಬಗೆಹರಿಯಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ರೋಹಿಣೀ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ಸಾಧ್ಯ, ಕರಣ : ಭದ್ರ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:23 – 13:59, ಯಮಗಂಡ ಕಾಲ 07:33 – 09:09, ಗುಳಿಕ ಕಾಲ 10:46 – 12:23

-ಲೋಹಿತ್ ಹೆಬ್ಬಾರ್ – 8762924271 (what’s app only)

Source link

ಭಾರತದಲ್ಲಿ ಫಲವತ್ತತೆ ದರ ಕುಸಿತ; ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲೇನಿದೆ? – Kannada News

ನವದೆಹಲಿ, ಜೂನ್ 2: ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬಿಡುಗಡೆಯಾಗಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಮತ್ತು ಮಾದರಿ ನೋಂದಣಿ ವ್ಯವಸ್ಥೆಯ (SRS) ಇತ್ತೀಚಿನ ವರದಿಗಳ ಪ್ರಕಾರ, ಭಾರತದಲ್ಲಿ ಮಹಿಳೆಯರ ಒಟ್ಟು ಫಲವತ್ತತೆ ದರವು (TFR) ನಿರಂತರವಾಗಿ ಕುಸಿಯುತ್ತಿದೆ. ಮಹಿಳೆ ತನ್ನ ಒಟ್ಟು ಫಲವತ್ತಾದ ಅವಧಿಯಲ್ಲಿ (ಅಂದರೆ 15ರಿಂದ 49 ವರ್ಷದವರೆಗೆ) ಜನ್ಮ ನೀಡುವ ಸರಾಸರಿ ಮಕ್ಕಳ ಸಂಖ್ಯೆಯನ್ನು ‘ಒಟ್ಟು ಫಲವತ್ತತೆ ದರ’ ಅಥವಾ TFR ಎನ್ನಲಾಗುತ್ತದೆ. ಜನಸಂಖ್ಯೆಯು ಹೆಚ್ಚಾಗದೆ ಅಥವಾ ಕಡಿಮೆಯಾಗದೆ ಸ್ಥಿರವಾಗಿರಲು ಈ ದರವು ಕನಿಷ್ಠ 2.1 ಇರಬೇಕು. ಆದರೆ, ಭಾರತದಲ್ಲಿ ಇದು ಈಗ 2.1ಕ್ಕಿಂತ ಕಡಿಮೆಯಾಗಿದೆ. ಇದು ದೇಶದ ಜನಸಂಖ್ಯಾ ಬೆಳವಣಿಗೆಯ ವೇಗ ತಗ್ಗುತ್ತಿರುವುದನ್ನು ಸೂಚಿಸುತ್ತದೆ.

ಮಾದರಿ ನೋಂದಣಿ ವ್ಯವಸ್ಥೆಯ (SRS) ವರದಿಯ ಪ್ರಕಾರ, ಭಾರತೀಯ ಮಹಿಳೆಯರಲ್ಲಿ ಫಲವತ್ತತೆ ದರವು ವರ್ಷದಿಂದ ವರ್ಷಕ್ಕೆ ಸತತವಾಗಿ ಕಡಿಮೆಯಾಗುತ್ತಾ ಸಾಗುತ್ತಿದೆ. ದೇಶದ ಒಟ್ಟಾರೆ ದರ ಕುಸಿದಿದ್ದರೂ, ಕೆಲವು ರಾಜ್ಯಗಳಲ್ಲಿ ಇಂದಿಗೂ ಹೆಚ್ಚಿನ ಫಲವತ್ತತೆ ದರ ಕಂಡುಬಂದಿದೆ. ಈ ಪೈಕಿ ಬಿಹಾರ ರಾಜ್ಯವು ಮುಂಚೂಣಿಯಲ್ಲಿದ್ದು, ಅಲ್ಲಿ ಪ್ರತಿ ಮಹಿಳೆಗೆ ಸರಾಸರಿ ಮಕ್ಕಳ ಸಂಖ್ಯೆ ಸುಮಾರು 3 ಎಂದು ಅಂದಾಜಿಸಲಾಗಿದೆ. ಬಿಹಾರದ ಜೊತೆಗೆ ಉತ್ತರ ಪ್ರದೇಶ ರಾಜ್ಯವು ಕೂಡ ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಉತ್ತಮ ಮತ್ತು ಹೆಚ್ಚಿನ ಫಲವತ್ತತೆ ದರವನ್ನು ಕಾಯ್ದುಕೊಂಡಿದೆ.

ಇದನ್ನೂ ಓದಿ: ನಿದ್ರೆಯ ಕೊರತೆಯು ಫಲವತ್ತತೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ?

ಆದರೆ, ದಕ್ಷಿಣ ಭಾರತದ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಈ ಅಂಕಿ ಅಂಶ ಗಮನಾರ್ಹವಾಗಿ ಕುಸಿದಿದೆ. ವರದಿಯ ಪ್ರಕಾರ, ತಮಿಳುನಾಡಿನಲ್ಲಿ ಫಲವತ್ತತೆ ದರ 1.6 ಆಗಿದೆ. ಭಾರತದ ಒಟ್ಟು ಫಲವತ್ತತೆ ದರ (TFR) 2024ರಲ್ಲಿ 1.9 ಆಗಿತ್ತು. ಇದು 2.1ರ ಬದಲಿ ಮಟ್ಟಕ್ಕಿಂತ ಕಡಿಮೆಯಾಗಿದೆ ಎಂಬುದನ್ನು ಗಮನಿಸಬೇಕು. 1971 ಮತ್ತು 1981ರ ನಡುವೆ, TFR 5.2 ರಿಂದ 4.5ರವರೆಗೆ ಇತ್ತು. 1991 ಮತ್ತು 2024ರ ನಡುವೆ ಇದು 3.6ರಿಂದ 1.9ಕ್ಕೆ ಇಳಿದಿದೆ. 1971ರಿಂದ 2024ರವರೆಗಿನ ದತ್ತಾಂಶದ ಪ್ರಕಾರ, ಇದು 5.4ರಿಂದ 2.1ಕ್ಕೆ ಇಳಿದಿದೆ.

ಭಾರತದಲ್ಲಿ ಒಬ್ಬ ಮಹಿಳೆ ಈಗ ತನ್ನ ಫಲವತ್ತಾದ ಅವಧಿಯಲ್ಲಿ ಕೇವಲ ಎರಡು ಮಕ್ಕಳಿಗೆ ಮಾತ್ರ ಜನ್ಮ ನೀಡುತ್ತಿದ್ದಾಳೆ. ಯಾವುದೇ ದೇಶ, ರಾಜ್ಯ ಅಥವಾ ಸಮಾಜವು ತನ್ನ ಜನಸಂಖ್ಯೆಯನ್ನು ಕಾಪಾಡಿಕೊಳ್ಳಲು ಕನಿಷ್ಠ 2.1ರ ಫಲವತ್ತತೆ ದರದ ಅಗತ್ಯವಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ, ಇಡೀ ದೇಶಕ್ಕೆ ಈ ಅಂಕಿ ಅಂಶವು 1.9 ತಲುಪಿದೆ.

ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ ವೃದ್ಧರ ಸಂಖ್ಯೆ ಹೆಚ್ಚಳ, ಕುಗ್ಗಿದ ಫಲವತ್ತತೆ ದರ, ಹೆಚ್ಚು ಮಕ್ಕಳನ್ನು ಹೊಂದುವಂತೆ ಸಲಹೆ

ದಕ್ಷಿಣ ಭಾರತದ 5 ರಾಜ್ಯಗಳ ಫಲವತ್ತತೆ ದರವನ್ನು ನೋಡಿದರೆ, ತಮಿಳುನಾಡು ಮತ್ತು ಆಂಧ್ರಪ್ರದೇಶದ ನಗರ ಪ್ರದೇಶಗಳಲ್ಲಿ ಒಬ್ಬ ಮಹಿಳೆ ಸರಾಸರಿ 1.6 ಮಕ್ಕಳಿಗೆ ಜನ್ಮ ನೀಡುತ್ತಾರೆ. ಆದರೆ ಆಂಧ್ರ (2.0) ಮತ್ತು ತಮಿಳುನಾಡಿನ (1.8) ಗ್ರಾಮೀಣ ಪ್ರದೇಶಗಳಲ್ಲಿ ಅಂಕಿಅಂಶಗಳು ಹೊರಬಂದಿವೆ. ಆಂಧ್ರಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಫಲವತ್ತತೆ ದರವು ಉತ್ತಮವಾಗಿದೆ ಎಂದು ಅಂದಾಜಿಸಲಾಗಿದೆ. ತೆಲಂಗಾಣದ ನಗರ ಪ್ರದೇಶಗಳಲ್ಲಿ ಈ ದರವು ಕೇವಲ 1.7 ರಷ್ಟಿದೆ. ಕರ್ನಾಟಕ ಮತ್ತು ತೆಲಂಗಾಣದ ನಗರ ಪ್ರದೇಶಗಳಲ್ಲಿ ಫಲವತ್ತತೆ ದರವು 1.7ರಷ್ಟಿದೆ. ಕೇರಳದಲ್ಲಿ, ನಗರ ದರವು 1.8 ಮತ್ತು ಗ್ರಾಮೀಣ ದರವು 1.9 ರಷ್ಟಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ವಿಜಯ್ ಭೇಟಿ ಮಾಡಿದ ‘ಕರುಪ್ಪು’ ಸಿನಿಮಾದ ನಿರ್ದೇಶಕ ಆರ್.ಜೆ. ಬಾಲಾಜಿ – Kannada News

ಆರ್.ಜೆ. ಬಾಲಾಜಿ (RJ Balaji) ನಿರ್ದೇಶನದ, ಸೂರ್ಯ ಮತ್ತು ತ್ರಿಶಾ ಕೃಷ್ಣನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಕರುಪ್ಪು’ (Karuppu) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ಮೇ 15ರಂದು ಬಿಡುಗಡೆಯಾಗಿದ್ದ ಈ ಚಿತ್ರವು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ, ವಿಶ್ವಾದ್ಯಂತ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ. ಈ ದೊಡ್ಡ ಯಶಸ್ಸಿನ ನಡುವೆ, ನಿರ್ದೇಶಕ ಆರ್.ಜೆ. ಬಾಲಾಜಿ ಅವರು ಮಂಗಳವಾರ (ಜೂನ್ 2) ತಮಿಳುನಾಡಿನ ನೂತನ ಮುಖ್ಯಮಂತ್ರಿ ಮತ್ತು ಸ್ಟಾರ್ ನಟ ಸಿ. ಜೋಸೆಫ್ ವಿಜಯ್ (CM Vijay) ಅವರನ್ನು ಭೇಟಿ ಮಾಡಿದ್ದಾರೆ.

ವಿಜಯ್ ಅವರನ್ನು ಸಿಎಂ ಸ್ಥಾನದಲ್ಲಿ ನೋಡಿ ಖುಷಿಪಟ್ಟ ಬಾಲಾಜಿ, ಆ ಕ್ಷಣವನ್ನು ‘ಅದ್ಭುತ ’ ಎಂದು ಬಣ್ಣಿಸಿದ್ದಾರೆ. ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ವಿಜಯ್ ಜೊತೆಗಿನ ಎರಡು ಸುಂದರ ಫೋಟೋಗಳನ್ನು ಹಂಚಿಕೊಂಡಿರುವ ಅವರು, ಭೇಟಿಯ ಸಂತಸವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ‘ಕರುಪ್ಪು ಚಿತ್ರಕ್ಕೆ ಎಲ್ಲವನ್ನೂ ಮೊದಲಿಗೆ ಆರಂಭಿಸಿಕೊಟ್ಟ ವ್ಯಕ್ತಿಯ ಜೊತೆ! ವಾವ್… ಅವರನ್ನು ಈಗ ತಮಿಳುನಾಡಿನ ಗೌರವಾನ್ವಿತ ಮುಖ್ಯಮಂತ್ರಿಯಾಗಿ ಭೇಟಿ ಮಾಡುತ್ತಿರುವುದು ನಂಬಲು ಸಾಧ್ಯವಾಗುತ್ತಿಲ್ಲ. ಅದೇ ಪ್ರೀತಿ, ಆತ್ಮೀಯತೆ, ದಯೆ ಮತ್ತು ಶಾಂತತೆ. ಎಲ್ಲದಕ್ಕೂ ಧನ್ಯವಾದಗಳು ಪ್ರೀತಿಯ ವಿಜಯ್ ಸರ್’ ಎಂದು ಬಾಲಾಜಿ ಪೋಸ್ಟ್ ಮಾಡಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರ್.ಜೆ. ಬಾಲಾಜಿ ಅವರು ಒಂದು ಆಸಕ್ತಿದಾಯಕ ವಿಷಯವನ್ನು ಬಹಿರಂಗಪಡಿಸಿದ್ದರು. ‘ಕರುಪ್ಪು’ ಚಿತ್ರದ ಕಥೆಯನ್ನು ಅವರು ಮೊದಲು ಸಿದ್ಧಪಡಿಸಿದ್ದು ನಟ ವಿಜಯ್ ಅವರಿಗಾಗಿ! ವಿಜಯ್ ಅವರು ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ನಟಿಸಬೇಕಿದ್ದ ಕೊನೆಯ ಸಿನಿಮಾ ಇದಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ.

ಆರ್.ಜೆ. ಬಾಲಾಜಿ ಪೋಸ್ಟ್:

‘ಇದು ಅವರ ಕೊನೆಯ ಚಿತ್ರವಾಗಬೇಕಿದ್ದರಿಂದ, ಅವರ ರಾಜಕೀಯ ಪ್ರವೇಶ ಮತ್ತು ಕೊನೆಯ ಪ್ರಾಜೆಕ್ಟ್ ಯಾವ ರೀತಿಯಲ್ಲಿ ಇರಬೇಕು ಎಂಬುದರ ಕುರಿತು ನಾವು ಎರಡು-ಮೂರು ಬಾರಿ ಸುದೀರ್ಘ ಸಭೆ ನಡೆಸಿ ಚರ್ಚಿಸಿದ್ದೆವು’ ಎಂದು ಬಾಲಾಜಿ ತಿಳಿಸಿದ್ದಾರೆ. ಆದರೆ, ಕೆಲವು ರಾಜಕೀಯ ನಿರ್ಧಾರಗಳಿಂದಾಗಿ ವಿಜಯ್ ಈ ಪ್ರಾಜೆಕ್ಟ್‌ನಿಂದ ಹೊರಗುಳಿಯಬೇಕಾಯಿತು.

ಇದನ್ನೂ ಓದಿ: ಸಿಎಂ ದಳಪತಿ ವಿಜಯ್ ಭೇಟಿಯಾದ ಲೋಕೇಶ್ ಕನಗರಾಜ್: ‘ಲಿಯೋ 2’ ನಿರೀಕ್ಷೆಯಲ್ಲಿ ಅಭಿಮಾನಿಗಳು

‘ಅವರು ಚಿತ್ರದಿಂದ ಹಿಂದೆ ಸರಿಯಲು ನೀಡಿದ ಕಾರಣಗಳು ಸಂಪೂರ್ಣವಾಗಿ ನ್ಯಾಯಸಮ್ಮತವಾಗಿದ್ದವು. ನಾನು ಅವರ ನಿರ್ಧಾರವನ್ನು ಗೌರವಿಸಿದೆ. ಅವರು ಸ್ವತಃ ನನ್ನ ಬಳಿ ಕಥೆ ಕೇಳಿ, ನನ್ನ ಕ್ರಿಯೇಟಿವಿಟಿಗೆ ಅಷ್ಟೊಂದು ಗೌರವ ನೀಡಿದ್ದೇ ನನಗೆ ದೊಡ್ಡ ವಿಷಯವಾಗಿತ್ತು’ ಎಂದು ಬಾಲಾಜಿ ಹೇಳಿದ್ದಾರೆ. ಮತ್ತೆ ವಿಜಯ್ ಅವರು ಸಿನಿಮಾ ಮಾಡುವುದಿಲ್ಲ. ಈಗ ಅವರು ಫುಲ್ ಟೈಮ್ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version