ವೈಭವ್ ಸೂರ್ಯವಂಶಿಯಿಂದ ರಾಜಸ್ಥಾನ್ ರಾಯಲ್ಸ್​ಗೆ 33.87 ಕೋಟಿ ರೂ. ಲಾಭ! – Kannada News

ವೈಭವ್ ಸೂರ್ಯವಂಶಿ… ವಯಸ್ಸು ಕೇವಲ 15, ಹರಾಜಿನಲ್ಲಿ ಸಿಕ್ಕಿದ್ದು 1.10 ಕೋಟಿ ರೂ, ಆದರೆ ಮೈದಾನದಲ್ಲಿ ಸೃಷ್ಟಿಸಿದ ಸಿಸಿಲಬ್ಬರದ ಮೌಲ್ಯ ಬರೋಬ್ಬರಿ 34.97 ಕೋಟಿ ರೂ.! ಹೌದು, ಇದು ಇಡೀ ಜಗತ್ತೇ ನಿಬ್ಬೆರಗಾಗಿ ನೋಡುತ್ತಿರುವ ವೈಭವ್ ಸೂರ್ಯವಂಶಿಯ ಈ ಬಾರಿ ಐಪಿಎಲ್​ ಮೌಲ್ಯ.

2025 ರಲ್ಲಿ 14 ವರ್ಷ ವರ್ಷದ ಅನ್‌ಕ್ಯಾಪ್ಡ್ ಆಟಗಾರ ವೈಭವ್ ಸೂರ್ಯವಂಶಿಯನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ 1.1 ಕೋಟಿ ರೂ.ಗೆ ಖರೀದಿಸಿದಾಗ ಇದೊಂದು ಸಾಮಾನ್ಯ ಹೂಡಿಕೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಇತ್ತೀಚೆಗೆ ಮುಕ್ತಾಯಗೊಂಡ ಈ ಸೀಸನ್‌ನಲ್ಲಿ ವೈಭವ್ ಸೃಷ್ಟಿಸಿದ ಸುನಾಮಿ, ಕ್ರಿಕೆಟ್ ಜಗತ್ತಿನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹರಾಜು ಲಾಭವಾಗಿ ದಾಖಲಾಗಿದೆ.

ಅಂದರೆ ಸ್ಪೋರ್ಟ್ಸ್ ಡೇಟಾ ಅನಾಲಿಟಿಕ್ಸ್ ಮತ್ತು ಬಾಲ್-ಬೈ-ಬಾಲ್ ಇಂಪ್ಯಾಕ್ಟ್ ಮಾಡೆಲ್ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ವೈಭವ್ ಈ ಸೀಸನ್‌ನಲ್ಲಿ ನೀಡಿದ ಆನ್-ಫೀಲ್ಡ್ ಪ್ರದರ್ಶನದ ನಿಜವಾದ ಮೌಲ್ಯ ಬರೋಬ್ಬರಿ ₹34.97 ಕೋಟಿ ರೂ. ಅಂದರೆ, ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಹೂಡಿದ ಹಣಕ್ಕಿಂತ ಶೇ. 3000ಕ್ಕೂ ಹೆಚ್ಚು ಲಾಭವನ್ನು ಈ ಯುವ ಆಟಗಾರ ತಂದುಕೊಟ್ಟಿದ್ದಾನೆ.

ಕೋಟಿಗೆ ಕೋಟಿಗಳ ಲಾಭ:

  • ಈ ಬಾರಿಯ ಐಪಿಎಲ್​ನಲ್ಲಿ 16 ಇನಿಂಗ್ಸ್ ಆಡಿರುವ ವೈಭವ್ ಸೂರ್ಯವಂಶಿ ಬರೀಬ್ಬರಿ 776 ರನ್ ಚಚ್ಚಿದ್ದರು.
  • ವೈಭವ್ ಸೂರ್ಯವಂಶಿ ಈ ಬಾರಿ ಆರ್ಭಟಿಸಿದ್ದು 237.30ರ ಸ್ಟ್ರೈಕ್ ರೇಟ್​ನಲ್ಲಿ ಎಂಬುದು ವಿಶೇಷ.
  • 237.30 ರ ಸ್ಟ್ರೈಕ್ ರೇಟ್​ನಲ್ಲಿ 700+ ರನ್ ಕಲೆಹಾಕಿದ ಆರೆಂಜ್ ಕ್ಯಾಪ್ ಗೆದ್ದ ಮೊದಲ ಆಟಗಾರ ವೈಭವ್.
  • ಕೇವಲ 16 ಇನಿಂಗ್ಸ್​ಗಳಲ್ಲಿ ವೈಭವ್ ಬ್ಯಾಟ್​ನಿಂದ ಸಿಡಿದ ಸಿಕ್ಸರ್​ ಸಂಖ್ಯೆ ಬರೋಬ್ಬರಿ 72

ಇವೆಲ್ಲಾ ರಾಜಸ್ಥಾನ್ ರಾಯಲ್ಸ್ ಪಾಲಿಗೆ ಕೋಟಿ ಲೆಕ್ಕದಲ್ಲಿ ಲಾಭ ತಂದು ಕೊಟ್ಟಿದೆ. ಅಂದರೆ ರಿಟರ್ನ್ ಇಂಪ್ಯಾಕ್ಟ್ ಮಾಡೆಲ್ ಪ್ರಕಾರ, ವೈಭವ್​ನಿಂದ ಆರ್​ಆರ್ ಫ್ರಾಂಚೈಸಿ ಬರೋಬ್ಬರಿ ಶೇ 3000 ದಷ್ಟು ಲಾಭ ಪಡೆದುಕೊಂಡಿದೆ.

ಏನಿದು ಇಂಪ್ಯಾಕ್ಟ್ ಮಾಡೆಲ್?

‘ರಿಟರ್ನ್ ಇಂಪ್ಯಾಕ್ಟ್ ಮಾಡೆಲ್’  ಅಥವಾ ‘ಪ್ಲೇಯರ್ ಇಂಪ್ಯಾಕ್ಟ್ ಮೆಟ್ರಿಕ್’ ಎನ್ನುವುದು ಐಪಿಎಲ್ ಮುಗಿದ ತಕ್ಷಣ ಆಟಗಾರರ ಪ್ರದರ್ಶನವನ್ನು ಮುಂದಿಟ್ಟು ಮಾಡುವ ಮೌಲ್ಯಧಾರಿತ ಲೆಕ್ಕಾಚಾರ. ಅಂದರೆ ಇಲ್ಲಿ ಆಟಗಾರ ಕಲೆಹಾಕಿದ ರನ್ ಅಥವಾ ಪಡೆದ ವಿಕೆಟ್‌ಗಳ ಆಧಾರದ ಮೇಲಲ್ಲದೆ, ಆತ ಮೈದಾನದಲ್ಲಿ ಆಡಿದ ಪ್ರತಿ ಚೆಂಡಿನ ಮೂಲಕ ಪಂದ್ಯದ ಮೇಲೆ ಬೀರಿದ ನೈಜ ಪ್ರಭಾವವನ್ನು ಹಣದ ಮೌಲ್ಯಕ್ಕೆ ಪರಿವರ್ತಿಸಿ ಲೆಕ್ಕಾಚಾರ ಮಾಡಲಾಗುತ್ತದೆ.

ಇದರೊಂದು ಸುಧಾರಿತ ಸ್ಪೋರ್ಟ್ಸ್ ಡೇಟಾ ಅನಾಲಿಟಿಕ್ಸ್ ವ್ಯವಸ್ಥೆಯಾಗಿದ್ದು, ಈ ಮೂಲಕ ಪ್ರತಿ ಸೀಸನ್​ನಲ್ಲಿ ಆಟಗಾರನಿಗೆ ನೀಡಲಾದ ಮೊತ್ತ ಹಾಗೂ ಆತನಿದಂದ ಫ್ರಾಂಚೈಸಿಗೆ ಆದ ಲಾಭವನ್ನು ಲೆಕ್ಕ ಮಾಡಲಾಗುತ್ತದೆ. ಬ್ಯಾಟರ್​ಗಳ ವಿಚಾರದಲ್ಲಿ ಇದನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ ಎಂದರೆ…

  • ಗೆಲುವಿನ ಸಂಭವನೀಯತೆ: ಒಬ್ಬ ಬ್ಯಾಟರ್ ಕ್ರೀಸ್‌ಗೆ ಬಂದಾಗ ತಂಡದ ಗೆಲುವಿನ ಶೇಕಡಾವಾರು ಎಷ್ಟಿತ್ತು? ಅವರು ಔಟಾಗಿ ಹೋಗುವಾಗ ಅಥವಾ ಪಂದ್ಯ ಮುಗಿಸುವಾಗ ಆ ಗೆಲುವಿನ ಅವಕಾಶ ಎಷ್ಟು ಹೆಚ್ಚಾಯಿತು? ಎಂಬುದನ್ನು ಪ್ರತಿ ಬಾಲ್‌ನಲ್ಲೂ ಲೆಕ್ಕ ಹಾಕಲಾಗುತ್ತದೆ.
  • ರನ್ ಗಳಿಸಿದ ವೇಗ: ಕಠಿಣ ಓವರ್‌ಗಳಲ್ಲಿ ಅಥವಾ ಪವರ್‌ಪ್ಲೇ ಅವಧಿಯಲ್ಲಿ ಎಷ್ಟು ವೇಗವಾಗಿ ರನ್ ಗಳಿಸಿದರು? ಎಂಬುದನ್ನು ಇಲ್ಲಿ ಪರಿಗಣಿಸಲಾಗುತ್ತದೆ.
  • ಪರಿಸ್ಥಿತಿಯ ಗಂಭೀರತೆ: ವಿಕೆಟ್‌ಗಳು ಬಿದ್ದಾಗ ಅಥವಾ ಒತ್ತಡದ ನಾಕೌಟ್ ಪಂದ್ಯಗಳಲ್ಲಿ ರನ್ ಬಂದಿವೆಯೇ? ಎಂಬುದನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
  • ಬೌಂಡರಿಗಳ ಕೊಡುಗೆ: ಎಷ್ಟು ಎಸೆತರಗಳಲ್ಲಿ ಬೌಂಡರಿ ಬಾರಿಸಿದ್ದಾರೆ, ಎಷ್ಟು ಡಾಟ್ ಬಾಲ್‌ಗಳನ್ನು ಆಡಿದ್ದಾರೆ ಎಂಬುದು ಕೂಡ ಪರಿಗಣನೆ ಬರುತ್ತದೆ.

ವೈಭವ್​ ಸೂರ್ಯವಂಶಿಯಿಂದ ಸಿಕ್ಕ ಲಾಭವೇನು?

ವೈಭವ್ ಸೂರ್ಯವಂಶಿಗೆ ರಾಜಸ್ಥಾನ್ ರಾಯಲ್ಸ್ ಹೂಡಿಕೆ ಮಾಡಿರುವುದು 1.1 ಕೋಟಿ ರೂ. ಅಂದರೆ ಅವರಿಗೆ ಈ ಬಾರಿ ಆರ್​ಆರ್ ಫ್ರಾಂಚೈಸಿ ನೀಡಿರುವ ಸಂಭಾವನೆ ಎಷ್ಟು ಎಂಬುದು ಇಲ್ಲಿ ಮುಖ್ಯವಾಗುತ್ತದೆ.

ಈ ಸಂಭಾವನೆಯನ್ನು ವೈಭವ್ ಆಡಿದ 16 ಪಂದ್ಯಗಳಿಗೆ ಹಂಚಿದರೆ, ಪ್ರತಿ ಪಂದ್ಯಕ್ಕೆ ಅವರ ಮೇಲೆ ಫ್ರಾಂಚೈಸಿ ಮಾಡಿದ ಖರ್ಚು ₹6.88 ಲಕ್ಷ.ಗಳಿಸಿದ ಮೌಲ್ಯ. ಆದರೆ ಅದೇ ವೈಭವ್ ಆಡಿದ ಇನಿಂಗ್ಸ್​ಗಳ ಮೌಲ್ಯ ಫ್ರಾಂಚೈಸಿ ಮಾಡಿದ ಖರ್ಚಿಗಿಂತ ಹೆಚ್ಚಿತ್ತು.

ಉದಾಹರಣೆಗೆ, ಸನ್​ರೈಸರ್ಸ್​​ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 97 ರನ್ ಚಚ್ಚಿದ್ದರು. ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದಲೇ ರಾಜಸ್ಥಾನ್ ರಾಯಲ್ಸ್ ತಂಡ ಪಂದ್ಯ ಗೆಲ್ಲಲು ಸಾಧ್ಯವಾಯಿತು. ಇಂಪ್ಯಾಕ್ಟ್ ಮಾಡೆಲ್ ಪ್ರಕಾರ, ಆ 29 ಎಸೆತಗಳ ಒಂದೇ ಇನಿಂಗ್ಸ್‌ನ ಮೌಲ್ಯ ಬರೋಬ್ಬರಿ ₹5.22 ಕೋಟಿ ಎಂದು ಅಂದಾಜಿಸಲಾಯಿತು!

ಅಂದರೆ ಆಟಗಾರನಿಗೆ ನೀಡುತ್ತಿರುವ ಸಂಭಾವನೆ ಹಾಗೂ ಆತ ಆಡುತ್ತಿರುವ ಆಟ, ಪಂದ್ಯದ ಮೇಲೆ ಬೀರುತ್ತಿರುವ ಪ್ರಭಾವ, ಗೆಲುವಿನ ಕೊಡುಗೆಗಳಲ್ಲೆವೂ ಇಂಪ್ಯಾಕ್ಟ್ ಮಾಡೆಲ್​ನಲ್ಲಿ ಅಳೆಯಲಾಗುತ್ತದೆ. ಹೀಗೆ ಪ್ರತಿಯೊಂದನ್ನು ಪರಿಗಣಿಸುವ ಮೂಲಕ ಆತನ ಒಟ್ಟು ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಅದರಂತೆ ವೈಭವ್ ಸೂರ್ಯವಂಶಿಯ ಇಂಪ್ಯಾಕ್ಟ್ ಮಾಡೆಲ್​ ಅನ್ನು ಈ ಕೆಳಗಿನಂತೆ ಲೆಕ್ಕಹಾಕಲಾಗಿದೆ…

  • ವೈಭವ್ ಸೂರ್ಯವಂಶಿಗೆ ಹೂಡಿಕೆ ಮಾಡಲಾದ ಒಟ್ಟು ಮೊತ್ತ ₹1.1 ಕೋಟಿ  (ಹರಾಜು ಮೊತ್ತ).
  • ವೈಭವ್ ಸೂರ್ಯವಂಶಿ ಪ್ರದರ್ಶನದ ಮೌಲ್ಯ ₹34.97 ಕೋಟಿ
  • ಫ್ರಾಂಚೈಸಿಗೆ ಸಿಕ್ಕ ನಿವ್ವಳ ಲಾಭ: ₹34.80 ಕೋಟಿ – ₹1.10 ಕೋಟಿ = ₹33.87 ಕೋಟಿ

ಅಂದರೆ ವೈಭವ್ ಸೂರ್ಯವಂಶಿ ₹30 ಕೋಟಿಗೂ ಅಧಿಕ ಮೌಲ್ಯದ ಪ್ರದರ್ಶನ ನೀಡಿದ್ದಾರೆ. ಅಂದರೆ ₹30 ಕೋಟಿ ಸಂಭಾವನೆ ಪಡೆಯುವ ಆಟಗಾರನಿಂದ ಸಿಗುವ ಪ್ರದರ್ಶನವನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗೆ ಕೇವಲ ₹1.10 ಕೋಟಿಯ ಹೂಡಿಕೆಯಲ್ಲೇ ಪಡೆದು ಕೊಂಡಿದೆ.

ಇಂಪ್ಯಾಕ್ಟ್ ಮಾಡೆಲ್ ಪ್ರಕಾರ, ರಾಜಸ್ಥಾನ್ ರಾಯಲ್ಸ್ ವೈಭವ್​ ಮೇಲೆ ಹೂಡಿದ ಪ್ರತಿ 1 ರೂಪಾಯಿಗೆ ₹31.79 ರಷ್ಟು ಮೌಲ್ಯದ ಆಟ ಮರಳಿ ಸಿಕ್ಕಿದೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ₹1.1 ಕೋಟಿ ಹೂಡಿಕೆಯಿಂದ ಬರೋಬ್ಬರಿ ₹33.87 ಕೋಟಿ ಮೌಲ್ಯಾಧಾರಿತ ಲಾಭ ಪಡೆದುಕೊಂಡಿದೆ.

ಇದನ್ನೂ ಓದಿ: ವೈಭವ್ ಸೂರ್ಯವಂಶಿಗೆ 12 ಕೋಟಿ ರೂ. ಆಫರ್..!

ಇನ್ನೂ ಸರಳವಾಗಿ ಹೇಳಬೇಕೆಂದರೆ ಈ ಬಾರಿಯ ಐಪಿಎಲ್​ನಲ್ಲಿ ವೈಭವ್ ಸೂರ್ಯವಂಶಿ ನೀಡಿದ ಪ್ರದರ್ಶನದ ಮೌಲ್ಯ 34.97 ಕೋಟಿ ರೂ.  ಇದನ್ನು ಬಿಡ್ಡಿಂಗ್ ಲೆಕ್ಕಾಚಾರದಲ್ಲಿ  ಪರಿಗಣಿಸಿದರೆ ವೈಭವ್ ಕನಿಷ್ಠ 30 ಕೋಟಿ ರೂ.ಗೆ ಹರಾಜಾಗಬಹುದಾದ ಆಟಗಾರ. ಹೀಗಾಗಿ ವೈಭವ್ ಸೂರ್ಯವಂಶಿ ಮುಂಬರುವ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡರೆ ಅವರ ಖರೀದಿಗಾಗಿ ಕೋಟಿಗಳ ಸುರಿಮಳೆಯಾಗುವುದು ಖಚಿತ ಎಂದೇ ಹೇಳಬಹುದು.

Source link

Karnataka Weather Forecast: ಬೆಂಗಳೂರು, ಹಾಸನ ಸೇರಿದಂತೆ ಹಲವೆಡೆ ವರುಣಾರ್ಭಟ! 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ – Kannada News

ಬೆಂಗಳೂರು, ಜೂನ್ 03: ಕರ್ನಾಟಕದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ವರುಣನ ಅಬ್ಬರ ಜೋರಾಗಲಿದ್ದು, ಪ್ರಮುಖ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ (Weather) ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಪ್ರಮುಖ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ (Yellow Alert) ಘೋಷಿಸಲಾಗಿದೆ.

ಮುಖ್ಯಾಂಶಗಳು

  • ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
  • ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
  • ಮೈಸೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ.

ಎಲ್ಲೆಲ್ಲಿ ಯೆಲ್ಲೋ ಅಲರ್ಟ್​?

ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಚಾಮರಾಜನಗರ, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಭಾರಿ ಮಳೆಯ ಮುನ್ಸೂಚನೆ

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆ ಹಾಗೂ ಗುಡುಗು ಸಹಿತ ಸಿಡಿಲು ಸಂಭವಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಈ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ.

ಉತ್ತರ ಒಳನಾಡಿನ ಜಿಲ್ಲೆಗಳಾದ ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬೀಸಲಿರುವ ಬಲವಾದ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಾಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ ಹಲವೆಡೆ ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

ಬೆಂಗಳೂರಿನಲ್ಲೂ ಭಾರೀ ಮಳೆ

ದಕ್ಷಿಣ ಒಳನಾಡಿನ ಪ್ರಮುಖ ಜಿಲ್ಲೆಗಳಾದ ಕೊಡಗು, ಮೈಸೂರು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹಾಗೂ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಇಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಯೆಲ್ಲೋ ಅಲರ್ಟ್ ಘೋಷಿಸಲಾಗಿರುವ ಜಿಲ್ಲೆಗಳ ಸಾರ್ವಜನಿಕರು ಹಾಗೂ ರೈತರು ಗುಡುಗು-ಸಿಡಿಲಿನ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು ಮತ್ತು ಮರದ ಕೆಳಗೆ ನಿಲ್ಲುವುದನ್ನು ತಪ್ಪಿಸಬೇಕು ಎಂದು ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಜಗದ್ಧಾತ್ರಿ’ ಧಾರಾವಾಹಿಗೆ ಸ್ಟಾರ್ ಹೀರೋನ ಎಂಟ್ರಿ?

ಕನ್ನಡ ಕಿರುತೆರೆಯಲ್ಲಿ ಸದಾ ಹೊಸ ಬಗೆಯ ಕಥೆಗಳಿಗೆ ಭಾರಿ ಬೇಡಿಕೆ ಇರುತ್ತದೆ. ಇತ್ತೀಚೆಗಷ್ಟೇ ‘ಪಾರು’ ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ಮುಖ್ಯ ಭೂಮಿಕೆಯಲ್ಲಿ ನಟಿಸಲಿರುವ ‘ಜಗದ್ಧಾತ್ರಿ’ ಎಂಬ ಹೊಸ ಸೀರಿಯಲ್ ಅನೌನ್ಸ್ ಆಗಿ ಕಿರುತೆರೆ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಈಗ ಈ ಬಹುನಿರೀಕ್ಷಿತ ಪ್ರೊಜೆಕ್ಟ್‌ನಿಂದ ಮತ್ತೊಂದು ದೊಡ್ಡ ಸುದ್ದಿ ಹೊರ ಬಿದ್ದಿದೆ. ಈ ಧಾರಾವಾಹಿಗೆ ನಾಯಕನಾಗಿ ಹ್ಯಾಂಡ್ಸಮ್ ಸ್ಟಾರ್ ವಿಜಯ್ ಸೂರ್ಯ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಾ ಇದೆ.

ಮೆಗಾ ಹಿಟ್ ‘ಅಗ್ನಿಸಾಕ್ಷಿ’ ಧಾರಾವಾಹಿಯ ಸಿದ್ಧಾರ್ಥ್ ಪಾತ್ರದ ಮೂಲಕ ಇಡೀ ಕರ್ನಾಟಕದ ಮನೆಮಾತಾಗಿದ್ದ ವಿಜಯ್ ಸೂರ್ಯ, ತಮ್ಮ ರೊಮ್ಯಾಂಟಿಕ್ ಲುಕ್ ಹಾಗೂ ನಟನೆಯಿಂದಲೇ ಅಪಾರ ಮಹಿಳಾ ಅಭಿಮಾನಿಗಳನ್ನು ಗಳಿಸಿಕೊಂಡವರು. ಇದೀಗ ಅವರು ‘ಜಗದ್ಧಾತ್ರಿ’ ತಂಡವನ್ನು ಸೇರಿಕೊಂಡಿರುವುದು ಸೀರಿಯಲ್ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಮೂಲಗಳ ಪ್ರಕಾರ, ಈ ಧಾರಾವಾಹಿಯಲ್ಲಿ ವಿಜಯ್ ಸೂರ್ಯ ಮತ್ತು ಮೋಕ್ಷಿತಾ ಪೈ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಇವರಿಬ್ಬರ ಫ್ರೆಶ್ ಕಾಂಬಿನೇಷನ್ ಪರದೆ ಮೇಲೆ ಮೋಡಿ ಮಾಡಲು ಸಜ್ಜಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಕೌಟುಂಬಿಕ ಡ್ರಾಮಾದಲ್ಲಿ ಇಬ್ಬರ ಪಾತ್ರಗಳೂ ಸಖತ್ ಪವರ್‌ಫುಲ್ ಆಗಿರಲಿವೆ ಎನ್ನಲಾಗಿದೆ.

ಇದನ್ನೂ ಓದಿ: ಹೊಸ ಸೀರಿಯಲ್ ಮೂಲಕ ಕಿರುತೆರೆಗೆ ಕವಿತಾ ಗೌಡ ಕಂಬ್ಯಾಕ್?

ಈಗಾಗಲೇ ಸೀರಿಯಲ್‌ನ ಪ್ರಿ-ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಶೀಘ್ರದಲ್ಲೇ ಅಧಿಕೃತ ಟೆಲಿಕಾಸ್ಟ್ ದಿನಾಂಕ ಹೊರಬೀಳಲಿದೆ. ‘ಅಗ್ನಿಸಾಕ್ಷಿ’ ಬಳಿಕ ವಿಜಯ್ ಸೂರ್ಯ ಹಾಗೂ ‘ಪಾರು’ ನಂತರ ಮೋಕ್ಷಿತಾ ಪೈ ಅವರನ್ನು ಮತ್ತೆ ವಿಭಿನ್ನ ಲುಕ್‌ನಲ್ಲಿ ನೋಡಲು ಕಾಯುತ್ತಿದ್ದ ಕಿರುತೆರೆ ಪ್ರೇಕ್ಷಕರಿಗೆ ಈ ಸುದ್ದಿ ನಿಜಕ್ಕೂ ದೊಡ್ಡ ಹಬ್ಬದ ಸಂಭ್ರಮ ತಂದಿದೆ. ಇವರಿಬ್ಬರ ಕೆಮಿಸ್ಟ್ರಿ ಹಾಗೂ ಈ ‘ಜಗದ್ಧಾತ್ರಿ’ಯ ಹೊಸ ಜರ್ನಿ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ ಹೊಸ ದಾಖಲೆ ಬರೆಯುತ್ತಾ ಎಂಬುದನ್ನು ಕಾದುನೋಡಬೇಕಿದೆ. ಈ ಧಾರಾವಾಹಿಯಲ್ಲಿ ಕವಿತಾ ಗೌಡ ಕೂಡ ಇದ್ದಾರೆ ಎಂದು ಹೇಳಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಇಂದಿನಿಂದ ಡಿಕೆ ಶಿವಕುಮಾರ್ ಸಿಎಂ: ಬೆಂಗಳೂರು ಟನಲ್ ರೋಡ್ ಯೋಜನೆಗೆ ಸಿಗುತ್ತಾ ಗ್ರೀನ್ ಸಿಗ್ನಲ್? ಹೆಚ್ಚಿದ ಕುತೂಹಲ – Kannada News

ಬೆಂಗಳೂರು, ಜೂನ್ 3: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಅವರು ಇಂದು ಅಧಿಕಾರ ವಹಿಸಿಕೊಳ್ಳುತ್ತಿರುವುದರಿಂದ, ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಬಲ್ಲ ಅವರ ಕನಸಿನ ‘ಟನಲ್ ರೋಡ್’ (ಸುರಂಗ ರಸ್ತೆ) ಯೋಜನೆಗೆ ಕೊನೆಗೂ ಚಾಲನೆ ಸಿಗಲಿದೆಯೇ ಎಂಬ ಭಾರಿ ಕುತೂಹಲ ಮೂಡಿದೆ. ಈ ಹಿಂದೆ ಬೆಂಗಳೂರು ನಗರಾಭಿವೃದ್ಧಿ ಮತ್ತು ಉಸ್ತುವಾರಿ ಸಚಿವರಾಗಿದ್ದಾಗಿನಿಂದಲೂ ಡಿಕೆ ಶಿವಕುಮಾರ್ ಅವರು ಈ ಬೃಹತ್ ಯೋಜನೆಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಸಾರ್ವಜನಿಕ ವಲಯದ ತೀವ್ರ ವಿರೋಧ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಬ್ರೇಕ್ ಬಿದ್ದಿದ್ದ ಈ ಮಹತ್ವಾಕಾಂಕ್ಷಿ ಯೋಜನೆಗೆ, ಈಗ ಅವರೇ ಮುಖ್ಯಮಂತ್ರಿಯಾಗುತ್ತಿರುವುದರಿಂದ ಹೊಸ ವೇಗ ಸಿಗುವ ಭರವಸೆ ಮೂಡಿದೆ.

ಮುಖ್ಯಾಂಶಗಳು

  • ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಸುಮಾರು 16.75 ಕಿಲೋಮೀಟರ್ ಉದ್ದದ ಸುರಂಗ ರಸ್ತೆ.
  • ಸರ್ಕಾರದ ಅಂದಾಜು ವೆಚ್ಚಕ್ಕಿಂತ ₹4,569 ಕೋಟಿ ಹೆಚ್ಚುವರಿ ಮೊತ್ತಕ್ಕೆ ಬಿಡ್ ಮಾಡಿದ್ದ ಅದಾನಿ ಗ್ರೂಪ್.
  • ಈ ಎರಡು ಕಾರಣಕ್ಕೆ ನೆನೆಗುದಿಗೆ ಬಿದ್ದಿದ್ದ ಯೋಜನೆ.

ಅದಾನಿ ಗ್ರೂಪ್ ಬಿಡ್ ಮತ್ತು ಬಜೆಟ್ ಲೆಕ್ಕಾಚಾರ

ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗಿನ 16.75 ಕಿಲೋಮೀಟರ್ ಉದ್ದದ ಈ ಸುರಂಗ ರಸ್ತೆ ಯೋಜನೆಗೆ ಮೊದಲ ಬಾರಿ ಟೆಂಡರ್ ಕರೆದಾಗ ಕಠಿಣ ಷರತ್ತುಗಳ ಕಾರಣಕ್ಕೆ ಯಾವುದೇ ಕಂಪನಿಗಳು ಮುಂದೆ ಬಂದಿರಲಿಲ್ಲ. ತದನಂತರ ಷರತ್ತುಗಳನ್ನು ಸಡಿಲಗೊಳಿಸಿ ಎರಡನೇ ಬಾರಿ ಮರು ಟೆಂಡರ್ ಕರೆದಾಗ ಅದಾನಿ ಗ್ರೂಪ್ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳು ಬಿಡ್ ಸಲ್ಲಿಸಿದ್ದವು. ಆದರೆ, ಸರ್ಕಾರದ ಅಂದಾಜು ವೆಚ್ಚಕ್ಕಿಂತ ಅದಾನಿ ಗ್ರೂಪ್ ಸಲ್ಲಿಸಿದ ಬಿಡ್ ಮೊತ್ತ ಭಾರಿ ಹೆಚ್ಚಾಗಿತ್ತು.

  • ಯೋಜನೆಯ ಒಟ್ಟು ಉದ್ದ: 16.75 ಕಿಲೋಮೀಟರ್ (ಹೆಬ್ಬಾಳ ಟು ಸಿಲ್ಕ್ ಬೋರ್ಡ್)
  • ಸರ್ಕಾರದ ಅಂದಾಜು ವೆಚ್ಚ: 17,698 ಕೋಟಿ ರೂ.
  • ಅದಾನಿ ಗ್ರೂಪ್ ಸಲ್ಲಿಸಿದ ಬಿಡ್: 22,267 ಕೋಟಿ ರೂ.
  • ಹೆಚ್ಚುವರಿ ವೆಚ್ಚದ: 4,569 ಕೋಟಿ ರೂ.

ಸಚಿವ ಸಂಪುಟದ ಒಪ್ಪಿಗೆ ಸಿಗುತ್ತಾ? ಅಥವಾ ಮರು ಟೆಂಡರ್?

ಸರ್ಕಾರದ ನಿಗದಿಪಡಿಸಿದ್ದಕ್ಕಿಂತ ಸುಮಾರು ನಾಲ್ಕೂವರೆ ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಮೊತ್ತದ ಬಿಡ್ ಆಗಿದ್ದರಿಂದ, ಈ ಯೋಜನೆಗೆ ಕಳೆದ ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟ (ಕ್ಯಾಬಿನೆಟ್) ಸಭೆಯಲ್ಲಿ ಅನುಮತಿ ಸಿಕ್ಕಿರಲಿಲ್ಲ. ಕಳೆದ ಡಿಸೆಂಬರ್‌ನಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಇದುವರೆಗೆ ಹಸಿರು ನಿಶಾನೆ ಸಿಕ್ಕಿರಲಿಲ್ಲ. ಇದರ ನಡುವೆ, ಕೆಲವು ನಾಗರಿಕ ಸಂಘಟನೆಗಳು ಹಾಗೂ ತಜ್ಞರು ಇಷ್ಟು ದೊಡ್ಡ ಮೊತ್ತವನ್ನು ಸುರಂಗ ರಸ್ತೆಗೆ ವ್ಯಯಿಸುವ ಬದಲು ಮೆಟ್ರೋ, ಸಬ್ ಅರ್ಬನ್ ರೈಲು ಮುಂತಾದ ಸಾರ್ವಜನಿಕ ಸಾರಿಗೆಗಳ ಅಭಿವೃದ್ಧಿಗೆ ಬಳಸುವಂತೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ಇದನ್ನೂ ಓದಿ: ಲಾಲ್ ಬಾಗ್ ಮಾತ್ರವಲ್ಲ, ಸ್ಯಾಂಕಿ ಟ್ಯಾಂಕ್ ಕೆರೆಗೂ ಸುರಂಗ ರಸ್ತೆಯಿಂದ ಹಾನಿ ಎಂದ ತಜ್ಞರು

ಆದರೆ, ಈ ಸುರಂಗ ಮಾರ್ಗವೊಂದೇ ಬೆಂಗಳೂರಿನ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಎಂಬುದು ಡಿ.ಕೆ.ಶಿವಕುಮಾರ್ ಅವರ ವಾದವಾಗಿದೆ. ಈಗ ಅವರೇ ಮುಖ್ಯಮಂತ್ರಿಯಾಗಿ ಸಚಿವ ಸಂಪುಟದ ನೇತೃತ್ವ ವಹಿಸಲಿರುವುದರಿಂದ, ಈ ಯೋಜನೆಗೆ ನೇರ ಒಪ್ಪಿಗೆ ಸಿಗಲಿದೆಯೇ ಅಥವಾ ಸರ್ಕಾರ ಹೊಸದಾಗಿ ಮರು ಟೆಂಡರ್ ಪ್ರಕ್ರಿಯೆಗೆ ಮುಂದಾಗಲಿದೆಯೇ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಪಾನ್​​ನಲ್ಲಿ ಮಸೀದಿ ನಿರ್ಮಿಸಿದ ಪಾಕಿಸ್ತಾನ, ಇದು ಕಾನೂನು ಬಾಹಿರ ಎಂದ ದೇಶ – Kannada News

ಟೋಕಿಯೊ, ಜೂನ್ 03: ಜಪಾನ್​ನ ಸೈತಾಮಾ ಪ್ರಾಂತ್ಯದ ಕವಾಗೋ ನಗರದಲ್ಲಿ ಪಾಕಿಸ್ತಾನ(Pakistan) ಮಸೀದಿ ನಿರ್ಮಿಸಿದೆ. ಸ್ಥಳೀಯ ನಗರಾಭಿವೃದ್ಧಿ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಜಪಾನ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಟೋಕಿಯೊದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯು ಕವಾಗೋ ಮಸೀದಿ ಯೋಜನೆಯಿಂದ ಅಧಿಕೃತವಾಗಿ ದೂರ ಉಳಿದಿದ್ದು, ಜಪಾನ್‌ನಲ್ಲಿರುವ ತನ್ನ ದೇಶದ ನಾಗರಿಕರು ಸ್ಥಳೀಯ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ.

ಘಟನೆ ಹಿನ್ನೆಲೆ ಏನು?
ಕವಾಗೋದಲ್ಲಿರುವ ಈ ಮಸೀದಿಯನ್ನು 4,500 ಚದರ ಮೀಟರ್‌ನ ಭೂಮಿಯಲ್ಲಿ ನಿರ್ಮಿಸಲಾಗಿದೆ. ಇದು ‘ನಗರೀಕರಣ ನಿಯಂತ್ರಣ ಪ್ರದೇಶ’ದೊಳಗೆ ಬರುವುದರಿಂದ, ಸ್ಥಳೀಯ ಪುರಸಭೆಯ ವಿಶೇಷ ಅನುಮತಿ ಇಲ್ಲದೆ ಇಲ್ಲಿ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಕವಾಗೋ ನಗರ ಅಧಿಕಾರಿಗಳ ಪ್ರಕಾರ, ಈ ಮಸೀದಿಯನ್ನು ಅಗತ್ಯ ಅನುಮತಿಗಳನ್ನು ಪಡೆಯದೆಯೇ ನಿರ್ಮಿಸಲಾಗಿದೆ.

ರಾಯಭಾರ ಕಚೇರಿ ನೀಡಿದ ಸ್ಪಷ್ಟನೆ
ಈ ವರ್ಷದ ಏಪ್ರಿಲ್ 3 ರಂದು ನಡೆದ ಮಸೀದಿಯ ಉದ್ಘಾಟನಾ ಸಮಾರಂಭದಲ್ಲಿ ಜಪಾನ್‌ಗೆ ಪಾಕಿಸ್ತಾನದ ರಾಯಭಾರಿಯಾದ ಅಬ್ದುಲ್ ಹಮೀದ್ ಭಾಗವಹಿಸಿದ್ದರು. ಅಗತ್ಯವಿರುವ ಎಲ್ಲಾ ಸರ್ಕಾರಿ ಪರವಾನಗಿಗಳನ್ನು ಪಡೆಯಲಾಗಿದೆ ಎಂದು ಸಂಘಟಕರು ಭರವಸೆ ನೀಡಿದ ಕಾರಣಕ್ಕಾಗಿಯೇ ರಾಯಭಾರಿ ಉದ್ಘಾಟನೆಗೆ ಹೋಗಿದ್ದರು. ಸ್ಥಳೀಯ ಕಾನೂನುಗಳನ್ನು ಉಲ್ಲಂಘಿಸುವ ಯಾವುದೇ ಯೋಜನೆಗಳನ್ನು ರಾಯಭಾರ ಕಚೇರಿ ಬೆಂಬಲಿಸುವುದಿಲ್ಲ.

ಮತ್ತಷ್ಟು ಓದಿ: ಭಯೋತ್ಪಾದನೆ ನಿಲ್ಲಿಸದಿದ್ದರೆ ಇತಿಹಾಸ, ಭೂಪಟದಿಂದ ಪಾಕಿಸ್ತಾನ ಮರೆಯಾಗಲಿದೆ: ಭಾರತೀಯ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!

ಜಪಾನ್‌ನಲ್ಲಿ ವಾಸಿಸುವ ಪಾಕಿಸ್ತಾನಿ ಸಮುದಾಯವು ಮಸೀದಿ ನಿರ್ಮಾಣ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಜಪಾನಿನ ಕಾನೂನುಗಳನ್ನು ಸಂಪೂರ್ಣವಾಗಿ ಗೌರವಿಸಬೇಕು. ಅಗತ್ಯ ಪರವಾನಗಿ ಇಲ್ಲದೆ ಯಾವುದೇ ನಿರ್ಮಾಣ ಮಾಡಬಾರದು ಮತ್ತು ಜಪಾನ್ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು.

ಜಪಾನ್‌ನಲ್ಲಿ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಯಾಶಿಯೋ ಮಸೀದಿಯ ಪ್ರತಿನಿಧಿ ಶಕೀಲ್ ಶೇಖ್ ಮೊಹಮ್ಮದ್ ಕೂಡ ಕವಾಗೋ ಯೋಜನೆಯನ್ನು ಟೀಕಿಸಿದ್ದಾರೆ. ಸ್ಥಳೀಯ ನಿಯಮಗಳನ್ನು ಪಾಲಿಸಿ, ಅಲ್ಲಿನ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದುವುದರಿಂದ ಮಾತ್ರ ಪೂಜಾ ಸ್ಥಳಗಳಿಗೆ ಗೌರವ ಸಿಗುತ್ತದೆ, ಎಂದು ಅವರು ಹೇಳಿದ್ದಾರೆ. 2000 ಇಸವಿಯಿಂದ ಜಪಾನ್‌ನಲ್ಲಿರುವ ಯಾಶಿಯೋ ಮಸೀದಿಯು ಸ್ಥಳೀಯ ನೆರೆಹೊರೆಯವರೊಂದಿಗೆ ಹಬ್ಬಗಳನ್ನು ಆಚರಿಸುತ್ತಾ, ಸ್ವಚ್ಛತಾ ಆಂದೋಲನಗಳಲ್ಲಿ ಭಾಗವಹಿಸುತ್ತಾ ಜಪಾನಿ ಸಮಾಜದೊಂದಿಗೆ ಅತ್ಯುತ್ತಮ ಸೌಹಾರ್ದಯುತ ಸಂಬಂಧವನ್ನು ಹೊಂದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಣವೀರ್ ಸಿಂಗ್ ಪರ ಬ್ಯಾಟ್ ಬೀಸಿದ ಕಂಗನಾ ರಣಾವತ್; ‘ನನಗೂ ಹೀಗೇ ಆಗಿತ್ತು’ ಎಂದ ನಟಿ – Kannada News

ಬಾಲಿವುಡ್ ಅಂಗಳದಲ್ಲಿ ಈಗ ‘ಡಾನ್ 3’ ಸಿನಿಮಾ (Don 3 Movie) ಮತ್ತು ನಟ ರಣವೀರ್ ಸಿಂಗ್ ಸುತ್ತಲಿನ ವಿವಾದವೇ ದೊಡ್ಡ ಚರ್ಚೆಯ ವಿಷಯವಾಗಿದೆ ಎಂಬುದು ಗೊತ್ತೇ ಇದೆ. ಕೇವಲ ಸಂಭಾವನೆ ಅಥವಾ ಸ್ಕ್ರಿಪ್ಟ್ ಭಿನ್ನಾಭಿಪ್ರಾಯದಿಂದ ಆರಂಭವಾದ ಈ ಜಗಳ, ಈಗ ಕಾನೂನು ಮತ್ತು ಚಿತ್ರರಂಗದ ಸಂಘಟನೆಗಳ ಮಟ್ಟಕ್ಕೆ ಹೋಗಿ ತಲುಪಿದೆ. ನಟ ರಣವೀರ್ ಸಿಂಗ್ ವಿರುದ್ಧ ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ಅಸಹಕಾರದ ಆದೇಶ ಹೊರಡಿಸಿದ್ದು, ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಈ ಇಡೀ ವಿವಾದದ ಬೆನ್ನಲ್ಲೇ, ಬಾಲಿವುಡ್‌ನ ವಿವಾದಿತ ಹಾಗೂ ನೇರ ನುಡಿಯ ನಟಿ ಕಂಗನಾ ರಣಾವತ್ ಅವರು ರಣವೀರ್ ಸಿಂಗ್ ಬೆಂಬಲಕ್ಕೆ ನಿಂತಿದ್ದಾರೆ.

ತಮ್ಮ ಮುಂಬರುವ ‘ಭಾರತ್ ಭಾಗ್ಯ ವಿಧಾತಾ’ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಕಂಗನಾ, ರಣವೀರ್ ಸಿಂಗ್ ಮೇಲಿನ ಬ್ಯಾನ್ ಕುರಿತು ಪ್ರತಿಕ್ರಿಯಿಸಿದರು. ‘ಬದುಕಿನಲ್ಲಿ ನಮ್ಮ ಅರ್ಹತೆ ಮತ್ತು ಸ್ಥಾನಮಾನ ಬೆಳೆದಂತೆ ಶತ್ರುಗಳ ಸಂಖ್ಯೆಯೂ ಹೆಚ್ಚಾಗುವುದು ಸಹಜ. ರಣವೀರ್ ಸಿಂಗ್ ತಮಗೆ ಇಷ್ಟೊಂದು ಜನ ವಿರೋಧಿಗಳಿದ್ದಾರೆ ಎಂದರೆ ತಮ್ಮ ಯೋಗ್ಯತೆ ಎಷ್ಟು ದೊಡ್ಡದಿದೆ ಎಂದು ಯೋಚಿಸಬೇಕು. ಇದು ಒಳ್ಳೆಯದೇ. ಜೀವನದಲ್ಲಿ ಮುಂದೆ ಸಾಗುವಾಗ ಇಂತಹ ಹತ್ತಾರು ಅಡೆತಡೆಗಳು ಬರುತ್ತವೆ. ರಸ್ತೆ ಯಾವಾಗಲೂ ಸರಳವಾಗಿರಲು ಸಾಧ್ಯವಿಲ್ಲ. ನನ್ನ ಜೀವನದಲ್ಲೂ ಇಂತಹ ಘಟನೆಗಳು ತುಂಬಾ ನಡೆದಿವೆ. ಆದರೆ ನೋಡಿ, ಇವತ್ತು ನಾನು ಚೆನ್ನಾಗಿಯೇ ಇದ್ದೇನೆ, ನನ್ನ ಸಿನಿಮಾಗಳೂ ಓಡುತ್ತಿವೆ. ಇದರಿಂದ ಏನೂ ಫರಕ್ ಬೀಳಲ್ಲ (ಬದಲಾವಣೆ ಆಗಲ್ಲ). ಕಾಲಕ್ರಮೇಣ ಎಲ್ಲವೂ ಸರಿಯಾಗುತ್ತದೆ,’ ಎಂದು ಕಂಗನಾ ರಣವೀರ್‌ಗೆ ಧೈರ್ಯ ತುಂಬಿದ್ದಾರೆ.

‘ಡಾನ್ 3’ ಚಿತ್ರದಿಂದ ರಣವೀರ್ ಸಿಂಗ್ ಅವರು ದಿಢೀರನೆ ಹೊರನಡೆದಿದ್ದೇ ಈ ಎಲ್ಲಾ ರಾದ್ಧಾಂತಕ್ಕೆ ಕಾರಣ. ಮೇ 25 ರಂದು FWICE ಸಂಘಟನೆಯು ರಣವೀರ್ ವಿರುದ್ಧ ಅಸಹಕಾರದ ನಿರ್ದೇಶನವನ್ನು ಜಾರಿಗೊಳಿಸಿತು. ಸಿನಿಮಾ ಸಂಸ್ಥೆಯ ಪ್ರಕಾರ, ಚಿತ್ರದಿಂದ ಹೊರನಡೆಯುವ ಮುನ್ನ ರಣವೀರ್ ತಮ್ಮ ಕಡೆಯ ವಿವರಣೆ ನೀಡಲು ಖುದ್ದಾಗಿ ಹಾಜರಾಗಬೇಕಿತ್ತು. ಆದರೆ ಸಂಘಟನೆ ನೀಡಿದ ಹಲವು ನೋಟಿಸ್‌ಗಳಿಗೆ ರಣವೀರ್ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮತ್ತೊಂದೆಡೆ, ‘ಡಾನ್ 3’ ಚಿತ್ರದ ನಿರ್ಮಾಪಕ ಫರ್ಹಾನ್ ಅಖ್ತರ್ ಅವರ ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ಸಂಸ್ಥೆಯು, ರಣವೀರ್ ಸಿನಿಮಾದಲ್ಲಿದ್ದಾರೆ ಎಂಬ ಕಾರಣಕ್ಕೆ ಪ್ರೀ-ಪ್ರೊಡಕ್ಷನ್ ಕೆಲಸಗಳಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿತ್ತು. ಈಗ ನಟ ಅರ್ಧದಲ್ಲೇ ಕೈಕೊಟ್ಟಿರುವುದರಿಂದ ತಮಗೆ ನಷ್ಟವಾಗಿದೆ ಎಂದು ಆರೋಪಿಸಿ, 45 ಕೋಟಿ ರೂ. ಪರಿಹಾರ ನೀಡುವಂತೆ ರಣವೀರ್‌ಗೆ ಬೇಡಿಕೆ ಇಟ್ಟಿದೆ.

ಇದನ್ನೂ ಓದಿ: ‘ಡಾನ್ 3’ ಮಾತ್ರವಲ್ಲ, ನಿಂತು ಹೋದ ರಣ್ವೀರ್ ಸಿಂಗ್ ಸಿನಿಮಾಗಳಿವು 

ಕೆಲವು ದಿನಗಳ ಹಿಂದಷ್ಟೇ ‘ಡಾನ್ 3’ ಚಿತ್ರದ ಸ್ಕ್ರಿಪ್ಟ್ ಬದಲಾವಣೆ ಹಾಗೂ ಸಂಭಾವನೆ ವಿಚಾರದಲ್ಲಿ ರಣವೀರ್ ಮತ್ತು ನಿರ್ದೇಶಕ ಫರ್ಹಾನ್ ಅಖ್ತರ್ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿತ್ತು. ರಣವೀರ್ ಸಿಂಗ್ ಭಾರಿ ಮೊತ್ತದ ಸಂಭಾವನೆ ಮತ್ತು ಚಿತ್ರದ ಲಾಭದಲ್ಲಿ ಪಾಲು ಕೇಳಿದ್ದರು ಎನ್ನಲಾಗಿದೆ. ಆದರೆ ರಣವೀರ್ ಅವರ ಇತ್ತೀಚಿನ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸರಣಿ ಸೋಲು ಕಂಡಿದ್ದರಿಂದ ನಿರ್ಮಾಪಕರು ಅಷ್ಟು ದೊಡ್ಡ ಮೊತ್ತ ನೀಡಲು ಒಪ್ಪಲಿಲ್ಲ. ಮಾತುಕತೆ ಮುರಿದುಬಿದ್ದಾಗ ರಣವೀರ್ ಚಿತ್ರದಿಂದ ಹೊರನಡೆದರು. ಇದೇ ಈಗ ದೊಡ್ಡ ಮಟ್ಟದ ವಿವಾದವಾಗಿ ರೂಪಾಂತರಗೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಸಿಲ್ಕ್ ಬೋರ್ಡ್​ ಸೇರಿದಂತೆ ಬೆಂಗಳೂರಿನ ಹಲವೆಡೆ ಉತ್ತಮ ವಾಯು ಗುಣಮಟ್ಟ – Kannada News

ಬೆಂಗಳೂರಿನ ಜೊತೆಗೆ ಚಿಕ್ಕಮಗಳೂರಿನ ವಾಯು ಗುಣಮಟ್ಟವೂ ಅತ್ಯುತ್ತಮ

ಬೆಂಗಳೂರು, ಜೂನ್ 03: ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಬಹುತೇಕ ಉತ್ತಮ ಹಾಗೂ ಸಾಧಾರಣ ಮಟ್ಟದಲ್ಲಿದೆ. ಇತ್ತೀಚೆಗೆ ಸುರಿದ ಮಳೆಯ ಕಾರಣದಿಂದಾಗಿ ಗಾಳಿಯಲ್ಲಿನ ಧೂಳಿನ ಕಣಗಳು ಕಡಿಮೆಯಾಗಿದ್ದು, ಜನತೆಗೆ ನಿರಾಳತೆ ತಂದಿದೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಇಂದಿನ ವಾಯು ಗುಣಮಟ್ಟ ಸೂಚ್ಯಂಕ ಸಾಧಾರಣ ಮಟ್ಟದಲ್ಲಿದೆ.
  • ಗದಗ ಮತ್ತು ಮಂಗಳೂರು ನಗರಗಳು ಅತ್ಯಂತ ಸ್ವಚ್ಛ ಗಾಳಿಯನ್ನು ಹೊಂದಿವೆ.
  • ಪೀಣ್ಯ ಮತ್ತು ಸಿಲ್ಕ್ ಬೋರ್ಡ್‌ಗಳಲ್ಲಿ ಮಾಲಿನ್ಯ ಪ್ರಮಾಣ ಕೊಂಚ ಹೆಚ್ಚಾಗಿದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ

ಬೆಂಗಳೂರಿನಲ್ಲಿ ಇಂದು ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 39 ರಿಂದ 64ರ ಆಸುಪಾಸಿನಲ್ಲಿದ್ದು, ಇದನ್ನು ಉತ್ತಮ ಮತ್ತು ಸಾಧಾರಣ ಶ್ರೇಣಿಯಲ್ಲಿ ವರ್ಗೀಕರಿಸಲಾಗಿದೆ. ನಗರದ ವಿವಿಧ ವಲಯಗಳ ವಿವರ ಹೀಗಿದೆ:

  • ಬಿಟಿಎಂ ಲೇಔಟ್ – 64
  • ಪೀಣ್ಯ – 59-70
  • ಸಿಲ್ಕ್ ಬೋರ್ಡ್- 75
  • ಹೆಬ್ಬಾಳ – 65
  • ಜಯನಗರ – 69

ಬೆಂಗಳೂರಿನ ಗಾಳಿಯಲ್ಲಿ ಪ್ರಮುಖವಾಗಿ PM2.5 ಮತ್ತು PM10 ಕಣಗಳ ಪ್ರಮಾಣ ನಿಯಂತ್ರಣದಲ್ಲಿದೆ. ಈ ಮಟ್ಟದ ಗಾಳಿಯು ಬಹುತೇಕ ಜನರಿಗೆ ಆರೋಗ್ಯಕರವಾಗಿದ್ದು, ಯಾವುದೇ ಆತಂಕವಿಲ್ಲದೆ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ಆದಾಗ್ಯೂ, ತೀವ್ರ ಉಸಿರಾಟದ ಸಮಸ್ಯೆ ಇರುವವರು ಪೀಣ್ಯ ಮತ್ತು ಸಿಲ್ಕ್ ಬೋರ್ಡ್‌ನಂತಹ ದಟ್ಟಣೆಯ ಪ್ರದೇಶಗಳಲ್ಲಿ ಸ್ವಲ್ಪ ಎಚ್ಚರ ವಹಿಸುವುದು ಸೂಕ್ತ.

ಕರ್ನಾಟಕದ ಇತರೆ ನಗರಗಳಲ್ಲಿ ಹೇಗಿದೆ AQI?

ರಾಜ್ಯದ ಇತರೆ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟವು ಅತ್ಯುತ್ತಮ ದಾಖಲೆಯಲ್ಲಿದೆ.

  • ಗದಗ – 11
  • ಮಂಗಳೂರು – 13-18
  • ಕೊಪ್ಪಳ – 38
  • ಚಿಕ್ಕಬಳ್ಳಾಪುರ – 42

ಹಾಸನದ ಕೆಲವು ಭಾಗಗಳ ಕೈಗಾರಿಕಾ ಕೇಂದ್ರಗಳಲ್ಲಿ ಸ್ಥಳೀಯ ತಾಂತ್ರಿಕ ಕಾರಣಗಳಿಂದಾಗಿ ವಾಯು ಮಾಲಿನ್ಯ ಸೂಚ್ಯಂಕದಲ್ಲಿ ಏರಿಳಿತಗಳು ದಾಖಲಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಡೈಪರ್ ಚೇಂಜ್ ಮಾಡೋದು ಅಂದ್ರೆ ಆಗಲ್ಲ, ಅಲ್ಲಿಂದ ಜಾರಿಕೊಳ್ತೀನಿ; ರಾಮ್ ಚರಣ್ – Kannada News

ರಾಮ್ ಚರಣ್ ಸದ್ಯ ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ ‘ಪೆದ್ದಿ’ (Peddi) ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ವಿವಿಧ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ತಮ್ಮ ವೈಯಕ್ತಿಕ ಜೀವನ ಹಾಗೂ ಮೂವರು ಮಕ್ಕಳ ತಂದೆಯಾಗಿರುವ ಜವಾಬ್ದಾರಿಯ ಬಗ್ಗೆ ಕೆಲವು ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಾವೊಬ್ಬ ಜವಾಬ್ದಾರಿಯುತ ತಂದೆ ಹೌದಾದರೂ, ಮಕ್ಕಳ ಡೈಪರ್ ಬದಲಾಯಿಸುವ ವಿಷಯ ಬಂದಾಗ ಅಲ್ಲಿಂದ ಕಾಲ್ಕಿಳುತ್ತಿರುವುದಾಗಿ ರಾಮ್ ಚರಣ್ ಒಪ್ಪಿಕೊಂಡಿದ್ದಾರೆ.

ಸಂದರ್ಶನ ಒಂದರಲ್ಲಿ ಮಾತನಾಡಿದ ರಾಮ್ ಚರಣ್, ‘ನಾನು ಒಳ್ಳೆಯ ತಂದೆಯೋ ಅಥವಾ ಸಾಮಾನ್ಯ ತಂದೆಯೋ ಗೊತ್ತಿಲ್ಲ. ಆದರೆ ಮಕ್ಕಳ ಎಲ್ಲಾ ಜವಾಬ್ದಾರಿಗಳಲ್ಲೂ ನಾನು ಭಾಗಿಯಾಗುತ್ತೇನೆ. ಅವರಿಗೆ ಊಟ ಮಾಡಿಸುವುದು, ಮಲಗಿಸುವುದು ಎಲ್ಲವನ್ನೂ ಮಾಡುತ್ತೇನೆ.  ಮಗಳು ಕಾರಾ ಪ್ರತಿ ರಾತ್ರಿಯೂ ನನ್ನ ಜೊತೆಯಲ್ಲೇ ಮಲಗುತ್ತಾಳೆ. ಒಬ್ಬ ಸಾಮಾನ್ಯ ತಂದೆ ಮಾಡುವ ಎಲ್ಲಾ ಕೆಲಸಗಳನ್ನೂ ನಾನು ಮಾಡುತ್ತೇನೆ. ಆದರೆ, ಡೈಪರ್ ಬದಲಾಯಿಸುವ ಕೆಲಸ ಮಾತ್ರ ನನ್ನ ಕೈಲಿ ಆಗಲ್ಲ. ಆ ಸಮಯ ಬಂದಾಗ ಸದ್ದಿಲ್ಲದೆ ರೂಮ್‌ನಿಂದ ಹೊರಟುಬಿಡುತ್ತೇನೆ’ ಎಂದು ನಗುತ್ತಾ ಹೇಳಿದ್ದಾರೆ.

ಕೆಲವೇ ವಾರಗಳ ಹಿಂದೆ ಬಾಲಿವುಡ್ ನಟ ವಿಕ್ಕಿ ಕೌಶಲ್ ಕೂಡ ತಮ್ಮ ಮಗುವಿನ ವಿಷಯದಲ್ಲಿ ಇಂತಹುದೇ ಹೇಳಿಕೆ ನೀಡಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಕಳೆದ ವರ್ಷ ತಂದೆಯಾಗಿದ್ದ ವಿಕ್ಕಿ ಕೌಶಲ್, ‘ಮಗುವಿಗೆ ಈಗ ಮೂರು ತಿಂಗಳು. ಇಷ್ಟು ಸಣ್ಣ ಮಗುವಿದ್ದಾಗ ತಂದೆಯಾಗಿ ಮಾಡಲು ಹೆಚ್ಚಿನ ಕೆಲಸ ಇರುವುದಿಲ್ಲ. ನಾನು ಕೇವಲ ಚೀರ್ ಲೀಡರ್ ತರಹ ಇದ್ದು, ಮಗು ಸ್ವಲ್ಪ ದೊಡ್ಡದಾಗಲಿ ಎಂದು ಕಾಯುತ್ತಿದ್ದೇನೆ. ಆಗ ನಾನು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬಹುದು’ ಎಂದಿದ್ದರು.

ಜೊತೆಗೆ ಪತ್ನಿ ಕತ್ರಿನಾ ಕೈಫ್ ಅವರನ್ನು ಹೊಗಳುತ್ತಾ, ‘ಸದ್ಯಕ್ಕೆ ತಾಯಿಯೇ ಸೂಪರ್ ಹೀರೋ. ಪ್ರೆಗ್ನೆನ್ಸಿ ಹಾಗೂ ಮಗುವಿನ ಪಾಲನೆಯಲ್ಲಿ ಆಕೆ ಒಬ್ಬ ಯೋಧನಂತೆ ಶ್ರಮಿಸುತ್ತಿದ್ದಾಳೆ. ಆಕೆಯ ಬಗ್ಗೆ ನನಗೆ ಹೆಮ್ಮೆಯಿದೆ’ ಎಂದು ಹೇಳಿದ್ದರು.

ಇದನ್ನೂ ಓದಿ: ಜಾನ್ವಿ ಕಪೂರ್ ಮೈಮೇಲೆ ಬೀಳಲು ಬಂದ ರಾಮ್ ಚರಣ್ ಅಭಿಮಾನಿ; ವಿಡಿಯೋ ವೈರಲ್

ವಿಕ್ಕಿ ಕೌಶಲ್ ಅವರ ಈ ಹೇಳಿಕೆ ಹಲವರಿಗೆ ಇಷ್ಟವಾಗಿರಲಿಲ್ಲ. ರೆಡ್ಡಿಟ್​ನಲ್ಲಿ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, ‘ಮಗುವಿಗೆ ಹಾಲುಣಿಸುವುದನ್ನು ಬಿಟ್ಟರೆ ತಾಯಿ ಮಾಡುವ ಯಾವ ಕೆಲಸವನ್ನು ತಂದೆ ಮಾಡಲು ಸಾಧ್ಯವಿಲ್ಲ ಹೇಳಿ? ವಿಕ್ಕಿ ಅವರ ಈ ಹೇಳಿಕೆ 20ನೇ ಶತಮಾನದ ಚಿಂತನೆಯನ್ನು ನೆನಪಿಸುತ್ತದೆ’ ಎಂದು ಆಕ್ರೋಶ ಹೊರಹಾಕಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ: ಊಟ-ತಿಂಡಿ, ಕಾಫಿ-ಚಹಾ ದರ ಹೆಚ್ಚಳಕ್ಕೆ ಹೋಟೆಲ್ ಮಾಲೀಕರ ಸಿದ್ಧತೆ – Kannada News

ಬೆಂಗಳೂರು, ಜೂನ್ 3: ಮಧ್ಯಪ್ರಾಚ್ಯ ಸಂಘರ್ಷ, ಯುದ್ಧದ ಭೀತಿಯ ಪರಿಣಾಮ ನೇರವಾಗಿ ಸಾಮಾನ್ಯ ಜನರ ಅಡುಗೆ ಮನೆ ಹಾಗೂ ಹೋಟೆಲ್ ಉದ್ಯಮದ ಮೇಲೆ ತಟ್ಟಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ (Commercial LPG) ಸಿಲಿಂಡರ್ ದರ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಬೆಂಗಳೂರಿನ (Bengaluru) ಬಹುತೇಕ ಹೋಟೆಲ್‌ಗಳಲ್ಲಿ ಊಟ, ತಿಂಡಿ, ಕಾಫಿ ಮತ್ತು ಟೀ ದರಗಳನ್ನು ಹೆಚ್ಚಿಸಲು ಮಾಲೀಕರು ಸಜ್ಜಾಗಿದ್ದಾರೆ. ಈಗಾಗಲೇ ಕೆಲವು ಹೋಟೆಲ್‌ಗಳು ದರ ಏರಿಕೆ ಮಾಡಿದ್ದರೆ, ಇನ್ನುಳಿದ ಹೋಟೆಲ್‌ಗಳು ಈ ವಾರದಿಂದಲೇ ಹೊಸ ದರ ಪಟ್ಟಿಯನ್ನು ಜಾರಿಗೆ ತರಲು ಮುಂದಾಗಿವೆ.

ಮುಖ್ಯಾಂಶಗಳು

  • ವಾಣಿಜ್ಯ ಸಿಲಿಂಡರ್ ದರ ಮೂರೇ ತಿಂಗಳಲ್ಲಿ ₹1,240 ಏರಿಕೆ
  • ]ಸದ್ಯ ₹3,198 ಇರುವ ಸಿಲಿಂಡರ್ ಬೆಲೆ ಶೀಘ್ರದಲ್ಲೇ ₹4,000 ಮುಟ್ಟುವ ಭೀತಿ.
  • ಬೆಂಗಳೂರಿನ ಹೋಟೆಲ್‌ಗಳಲ್ಲಿ ಇಡ್ಲಿ, ವಡೆ, ದೋಸೆ ಹಾಗೂ ರೈಸ್ ಐಟಂಗಳ ಮೇಲೆ ₹5 ರಿಂದ ₹20 ಹಾಗೂ ಕಾಫಿ-ಟೀ ಮೇಲೆ ₹2 ರಿಂದ ₹3 ಹೆಚ್ಚಳ.

ಗಗನಕ್ಕೇರಿದ ಕಮರ್ಷಿಯಲ್ ಗ್ಯಾಸ್ ದರ

ಕಳೆದ ಮೂರು ತಿಂಗಳ ಅವಧಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಬರೋಬ್ಬರಿ 1,240 ರೂ. ಏರಿಕೆಯಾಗಿದೆ. ಕಳೆದ ತಿಂಗಳು 991 ರೂ. ಹೆಚ್ಚಳವಾಗಿದ್ದರೆ, ಜೂನ್ 1 ರಂದು ಮತ್ತೆ 46 ರೂ. ಏರಿಕೆ ಮಾಡಲಾಗಿದೆ. ಇಷ್ಟಕ್ಕೇ ನಿಲ್ಲದ ಬೆಲೆ ಏರಿಕೆ ಮುಂಬರುವ ದಿನಗಳಲ್ಲಿ ಮತ್ತೆ 800 ರೂ. ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ 3,198 ರೂ.ಗೆ ಮಾರಾಟವಾಗುತ್ತಿರುವ ಸಿಲಿಂಡರ್ ಬೆಲೆ 4,000 ರೂ. ತಲುಪುವ ಮುನ್ಸೂಚನೆ ಸಿಕ್ಕಿರುವುದರಿಂದ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಗ್ರಾಹಕರ ಮೇಲೆ ಆರ್ಥಿಕ ಹೊರೆ ಹೊರಿಸಲು ಮುಂದಾಗಿದ್ದಾರೆ.

ದರ ಏರಿಕೆ ಅನಿವಾರ್ಯತೆ ಬಗ್ಗೆ ಹೋಟೆಲ್ ಮಾಲೀಕರು ಏನಂತಾರೆ?

ಈ ಕುರಿತು ಮಾತನಾಡಿರುವ ವಿಲ್ಸನ್ ಗಾರ್ಡನ್ ಟಿಫಿನ್ ಸೆಂಟರ್ ಮಾಲೀಕ ಶ್ರೀನಿವಾಸ್ ಹಾಗೂ ದೋಸೆ ಕ್ಯಾಂಪ್ ಮಾಲೀಕ ಧನುಷ್, ‘ಗ್ಯಾಸ್ ಬಳಸದೇ ಅಡುಗೆ ಮಾಡಲು ಸಾಧ್ಯವಿಲ್ಲ. ಈಗಾಗಲೇ ರೈಸ್ ಬಾತ್ ದರವನ್ನು 30 ರೂ.ನಿಂದ 40 ರೂ.ಗೆ ಏರಿಸಲಾಗಿದೆ. ಕಮರ್ಷಿಯಲ್ ಗ್ಯಾಸ್ ಬೆಲೆ ಹೀಗೇ ಏರುತ್ತಿದ್ದರೆ ಹೋಟೆಲ್ ಉದ್ಯಮ ನಡೆಸುವುದು ಕಷ್ಟವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಅನಿವಾರ್ಯವಾಗಿ ಪ್ರತಿ ತಿಂಡಿಯ ಮೇಲೆ 5 ರಿಂದ 10 ರೂ.ವರೆಗೆ ದರ ಏರಿಕೆ ಮಾಡಲೇಬೇಕಾದ ಕಠಿಣ ಪರಿಸ್ಥಿತಿಯಲ್ಲಿದ್ದೇವೆ’ ಎಂದು ಅಳಲು ತೋಡಿಕೊಂಡಿದ್ದಾರೆ. ಸಾನಿಧ್ಯ ಹೋಟೆಲ್ ಮ್ಯಾನೇಜರ್ ಯೋಗೇಶ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಗ್ಯಾಸ್ ದರ ನೋಡಿಕೊಂಡು ಮತ್ತಷ್ಟು ಬೆಲೆ ಹೆಚ್ಚಳ ಮಾಡುವ ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆ

ಹೋಟೆಲ್ ತಿಂಡಿಗಳ ದರ ಏರಿಕೆಯಿಂದಾಗಿ ಕಚೇರಿ ನೌಕರರು, ಮಧ್ಯಮ ವರ್ಗದ ಕುಟುಂಬಗಳು ಹಾಗೂ ಬ್ಯಾಚುಲರ್‌ಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದ ಬಹುತೇಕ ಹೋಟೆಲ್‌ಗಳಲ್ಲಿ ಇಡ್ಲಿ-ವಡೆ, ದೋಸೆ ಮೇಲೆ 5 ರಿಂದ 10 ರೂ. ಹಾಗೂ ಊಟದ ಮೇಲೆ 10 ರಿಂದ 20 ರೂ. ವರೆಗೆ ದರ ಹೆಚ್ಚಿಸಲಾಗಿದೆ. ಕಾಫಿ-ಟೀ ಬೆಲೆಯೂ 2 ರಿಂದ 3 ರೂ. ದುಬಾರಿಯಾಗಿದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಗ್ರಾಹಕ ಶಿವಕುಮಾರ್, ‘ಹಿಂದೆ 40 ರೂ. ಇದ್ದ ಇಡ್ಲಿ ಈಗ 50 ರೂ. ಆಗಿದೆ. ನಮ್ಮ ಸಂಬಳ ಮಾತ್ರ ಹೆಚ್ಚುತ್ತಿಲ್ಲ, ನಿತ್ಯ ಊಟ-ತಿಂಡಿಗೆ 60 ರೂ. ಹೆಚ್ಚುವರಿ ಖರ್ಚಾಗುತ್ತಿರುವುದರಿಂದ ಒಂದು ಹೊತ್ತಿನ ಊಟ ಬಿಡುವ ಸ್ಥಿತಿ ಬಂದಿದೆ’ ಎಂದಿದ್ದಾರೆ. ಒಟ್ಟಾರೆಯಾಗಿ ಜಾಗತಿಕ ಯುದ್ಧದ ಎಫೆಕ್ಟ್ ಸಿಟಿ ಜನರ ಹಸಿವಿನ ಮೇಲೆ ಬರೆ ಎಳೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊಜ್ತಬಾ ಖಮೇನಿ ಬದುಕಿದ್ದಾರಾ? ಶಾಂತಿ ಮಾತುಕತೆ ಯಾವ ಹಾದಿಯಲ್ಲಿದೆ, ಮಾರ್ಕೊ ರುಬಿಯೊ ಹೇಳಿದ್ದೇನು ಇಲ್ಲಿದೆ ಮಾಹಿತಿ – Kannada News

ವಾಷಿಂಗ್ಟನ್, ಜೂನ್ 03: ಅಮೆರಿಕ ಹಾಗೂ ಇರಾನ್ ನಡುವಿನ ಸಂಘರ್ಷ ಬೂದಿ ಮುಚ್ಚಿದ ಕೆಂಡದಂತಾಗಿದೆ. ಒಂದೆಡೆ ಯುದ್ಧವೂ ಇಲ್ಲ, ಮತ್ತೊಂದೆಡೆ ಶಾಂತಿಯೂ ಇಲ್ಲ. ಪಶ್ಚಿಮ ಏಷ್ಯಾದಲ್ಲಿ ದೀರ್ಘಕಾಲದ ಉದ್ವಿಗ್ನತೆಯನ್ನು ಕೊನೆಗಾಣಿಸಿ ಶಾಂತಿ ಪುನಃಸ್ಥಾಪಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಬೆಳವಣಿಗೆಯೊಂದು ಕಂಡುಬಂದಿದೆ. ಇರಾನ್ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ (Mojtaba Khamenei) ಜೀವಂತವಾಗಿದ್ದಾರೆ ಮತ್ತು ದೇಶದ ವ್ಯವಹಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಅಮೆರಿಮ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಹೇಳಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ನಡೆದ ಮಿಲಿಟರಿ ದಾಳಿಯ ನಂತರ ಅವರ ಆರೋಗ್ಯದ ಕುರಿತು ಸಾಕಷ್ಟು ವದಂತಿಗಳು ಹರಡಿದ್ದವು, ಅವರು ಚೇತರಿಸಿಕೊಂಡು ಮತ್ತೆ ಆಡಳಿತಕ್ಕೆ ಮರಳಿರುವುದು ಮಾತುಕತೆಯ ಹೊಸ ಹಾದಿಯನ್ನೇ ತೆರೆದಿದೆ ಎನ್ನಬಹುದು.

ಜಾಗತಿಕ ಮಾರುಕಟ್ಟೆ ಮತ್ತು ಹಾರ್ಮುಜ್ ಜಲಸಂಧಿ ಮುಕ್ತ ಮುನ್ಸೂಚನೆ

ಮಾರ್ಕೊ ರುಬಿಯೊ ಮಾತನಾಡಿ, ಅಮೆರಿಕ ಮತ್ತು ಇರಾನ್ ನಡುವೆ ಶೀಘ್ರದಲ್ಲೇ ಐತಿಹಾಸಿಕ ಒಪ್ಪಂದವೊಂದು ಏರ್ಪಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಒಪ್ಪಂದದ ಭಾಗವಾಗಿ ಜಾಗತಿಕ ತೈಲ ಮತ್ತು ಅನಿಲ ಸಾರಿಗೆಯ ಪ್ರಮುಖ ಮಾರ್ಗವಾಗಿರುವ ‘ಹಾರ್ಮುಜ್ ಜಲಸಂಧಿ’ಯನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಇರಾನ್ ಸಜ್ಜಾಗುತ್ತಿದೆ.

ನಿರ್ಬಂಧಗಳಿಗೆ ಮುಕ್ತಿ

ಇರಾನ್ ಮೇಲಿನ ಆರ್ಥಿಕ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಅಮೆರಿಕ ಸಿದ್ಧವಿದ್ದು, ಇದಕ್ಕೆ ಪ್ರತಿಯಾಗಿ ಇರಾನ್ ತನ್ನ ಯುರೇನಿಯಂ ಪುಷ್ಟೀಕರಣದ ಚಟುವಟಿಕೆಗಳನ್ನು ತೀವ್ರವಾಗಿ ಮಿತಿಗೊಳಿಸಲು ಅಥವಾ ರದ್ದುಗೊಳಿಸಲು ಮಾತುಕತೆ ನಡೆಸುತ್ತಿದೆ.

ಮತ್ತಷ್ಟು ಓದಿ: ಸತ್ತಿರಬಹುದು ಅಥವಾ ಕೆಟ್ಟ ಸ್ಥಿತಿಯಲ್ಲಿರಬಹುದು; ಇರಾನ್‌ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಬಗ್ಗೆ ಟ್ರಂಪ್ ಶಾಕಿಂಗ್ ಹೇಳಿಕೆ

ಮಾರ್ಕೊ ರುಬಿಯೊ ಹೇಳಿಕೆ: ಈ ಶಾಂತಿ ಒಪ್ಪಂದ ಇಂದು, ನಾಳೆ ಅಥವಾ ಮುಂದಿನ ವಾರದಲ್ಲೇ ಯಶಸ್ವಿಯಾಗಬಹುದು. ಇರಾನ್ ತನ್ನ ಪರಮಾಣು ಚಟುವಟಿಕೆಗಳನ್ನು ಮಿತಿಗೊಳಿಸಲು ಒಪ್ಪಿದರೆ, ಅವರ ಮೇಲಿರುವ ಎಲ್ಲಾ ಆರ್ಥಿಕ ನಿರ್ಬಂಧಗಳಿಗೆ ದೊಡ್ಡ ಪರಿಹಾರ ಸಿಗಲಿದೆ.

ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದಿರುವ ಕದನ ವಿರಾಮದ ಪ್ರಯತ್ನಗಳ ನಡುವೆ, ಅಮೆರಿಕವು ಇರಾನ್ ಜೊತೆಗೆ ಸೌಹಾರ್ದಯುತ ಒಪ್ಪಂದ ಮಾಡಿಕೊಳ್ಳಲು ತೋರಿರುವ ಈ ರಾಜತಾಂತ್ರಿಕ ಆಸಕ್ತಿಯು ಜಾಗತಿಕ ತೈಲ ಮಾರುಕಟ್ಟೆ ಹಾಗೂ ವಿಶ್ವ ಶಾಂತಿಯ ದೃಷ್ಟಿಯಿಂದ ಅತ್ಯಂತ ಆಶಾದಾಯಕ ಸುದ್ದಿಯಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version