ಯಾರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ?: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೊಟ್ರು ಬಿಗ್​​ ಅಪ್ಡೇಟ್​​

ಕಲಬುರಗಿ, ಮೇ 31: ಹಾಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ. ಶಿವಕುಮಾರ್​​ ಸಿಎಂ ಆಗಿ ಆಯ್ಕೆಯಾಗುತ್ತಿದ್ದಂತೆ ಪಕ್ಷದ ಅಧ್ಯಕ್ಷ ಸ್ಥಾನಕ್ಕಾಗಿ ರಾಜ್ಯ ಕಾಂಗ್ರೆಸ್​​ನಲ್ಲಿ ಪೈಪೋಟಿ ಶುರುವಾಗಿದೆ. ಈ ಬಗ್ಗೆ ಕಲಬುರಗಿಯಲ್ಲಿ ಮಾಹಿತಿ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ ಸಿಎಂ ಆದ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಹಜವಾಗಿ ಬದಲಾವಣೆ ಆಗುತ್ತೆ. ಜನ ಬೆಂಬಲ ಇರುವ ಸೂಕ್ತ ವ್ಯಕ್ತಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡುತ್ತೇವೆ. ಸಿಎಂಗೆ ಉತ್ತಮ ಸಮನ್ವಯ ಇರಬೇಕು, ಅಂತಹವರನ್ನು ಆಯ್ಕೆ ಮಾಡ್ತೇವೆ. ವಿಧಾನಸಭಾ ಚುನಾವಣೆಗೆ ಕೇವಲ 24 ತಿಂಗಳು ಮಾತ್ರ ಬಾಕಿಯಿರುವ ಕಾರಣ ಎಲೆಕ್ಷನ್​​ ಮತ್ತು ಪಕ್ಷ ಕಟ್ಟುವ ದೃಷ್ಟಿಯಿಂದ ಆಯ್ಕೆ ಮಾಡಬೇಕಾಗುತ್ತೆ. ಸ್ಪೀಡ್ ಆಗಿ, ಕಲೆಕ್ಟಿವ್ ಆಗಿ ಎಲ್ಲರನ್ನೂ ಒಗ್ಗಟ್ಟಾಗಿ ತಗೊಂಡು ಹೋಗುವ ನಾಯಕನನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾವು ಹುಡುಕಬೇಕಿದೆ. ಜೊತೆಗೆ ಅವರಿಗೆ ಕೋ-ಆಪರೇಟ್ ಮಾಡುವ ಜನರೂ ಇರಬೇಕಾಗುತ್ತದೆ. ಇವೆಲ್ಲವೂ ವಿಚಾರ ಮಾಡಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿಶ್ವ ತಂಬಾಕು ರಹಿತ ದಿನ: ಧೂಮಪಾನಕ್ಕಿಂತಲೂ ಧೂಮರಹಿತ ತಂಬಾಕು ಹೆಚ್ಚು ಅಪಾಯಕಾರಿ ಏಕೆ?

ವಿಶ್ವ ತಂಬಾಕು ರಹಿತ ದಿನImage Credit source: Pinterest

ವಿಶ್ವದಾದ್ಯಂತ ತಡೆಗಟ್ಟಬಹುದಾದ ಸಾವುಗಳಿಗೆ ತಂಬಾಕು ಅತ್ಯಂತ ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ತಂಬಾಕಿನ ಹಾನಿಯ ಬಗ್ಗೆ ಮಾತನಾಡುವಾಗ ಸಿಗರೇಟ್ ಮತ್ತು ಬೀಡಿ ಧೂಮಪಾನಕ್ಕೆ ಮಾತ್ರ ಹೆಚ್ಚಿನ ಗಮನ ನೀಡಲಾಗುತ್ತದೆ. ಆದರೆ ವಾಸ್ತವದಲ್ಲಿ, ಭಾರತದಲ್ಲಿ ಗುಟ್ಕಾ, ಖೈನಿ, ಪಾನ್, ಜರ್ದಾ ಮತ್ತು ಇತರೆ ಧೂಮರಹಿತ ತಂಬಾಕು ಉತ್ಪನ್ನಗಳು ಧೂಮಪಾನಕ್ಕಿಂತಲೂ ಮೌನವಾಗಿ, ತೀವ್ರವಾಗಿ ಸಮಾಜದ ಆರೋಗ್ಯವನ್ನು ನುಂಗಿ ನೀರು ಕುಡಿಯುತ್ತಿವೆ.

ಬಾಯಿಯ ಕೋಶಗಳ ಮೇಲೆ ನೇರ ಮತ್ತು ನಿರಂತರ ದಾಳಿ:

ಧೂಮಪಾನದಲ್ಲಿ ಹೊಗೆಯೂ ಶ್ವಾಸಕೋಶದ ಮೂಲಕ ದೇಹವನ್ನು ಪ್ರವೇಶಿಸಿದರೆ, ಧೂಮರಹಿತ ತಂಬಾಕು ನೇರವಾಗಿ ಬಾಯಿ, ಕೆನ್ನೆ, ಒಸಡು ಮತ್ತು ನಾಲಿಗೆಯ ಮೇಲ್ಮೈಗೆ ಅಂಟಿಕೊಂಡಿರುತ್ತದೆ. ಭಕ್ತರು ಅಥವಾ ಬಳಕೆದಾರರು ಹಲವು ನಿಮಿಷಗಳಿಂದ ಗಂಟೆಗಳ ಕಾಲ ಇದನ್ನು ಬಾಯಿಯಲ್ಲೇ ಇಟ್ಟುಕೊಳ್ಳುವುದರಿಂದ, ಅದರಲ್ಲಿರುವ ಕ್ಯಾನ್ಸರ್ ಉಂಟುಮಾಡುವ ಭೀಕರ ರಾಸಾಯನಿಕಗಳು ನೇರವಾಗಿ ಬಾಯಿಯ ಕೋಶಗಳನ್ನು ಹಾನಿಗೊಳಿಸುತ್ತವೆ. ಇದೇ ಕಾರಣಕ್ಕೆ ಭಾರತದಲ್ಲಿ ಪ್ರತಿವರ್ಷ ಪತ್ತೆಯಾಗುವ ಸುಮಾರು ಒಂದು ಲಕ್ಷ ಹೊಸ ಬಾಯಿ ಕ್ಯಾನ್ಸರ್ ಪ್ರಕರಣಗಳಲ್ಲಿ ಬಹುಪಾಲು ಧೂಮರಹಿತ ತಂಬಾಕು ಬಳಕೆಯಿಂದಲೇ ಸಂಭವಿಸುತ್ತಿವೆ.

ಗಾಢ ವ್ಯಸನಕ್ಕೆ ತಳ್ಳುವ ನಿಕೋಟಿನ್ ಪ್ರಮಾಣ:

ಅನೇಕರು ಧೂಮರಹಿತ ತಂಬಾಕನ್ನು ಲಘುವಾಗಿ ಪರಿಗಣಿಸುತ್ತಾರೆ, ಆದರೆ ಇದು ಧೂಮಪಾನಕ್ಕಿಂತಲೂ ಹೆಚ್ಚು ವ್ಯಸನಕಾರಿಯಾಗಿದೆ. ಕೇವಲ ಒಂದು ಚಿಟಿಕೆ ಖೈನಿ ಅಥವಾ ಗುಟ್ಕಾದಿಂದ ದೇಹವನ್ನು ಸೇರುವ ನಿಕೋಟಿನ್ ಪ್ರಮಾಣವು ಮೂರರಿಂದ ನಾಲ್ಕು ಸಿಗರೇಟುಗಳಿಗೆ ಸಮಾನವಾಗಿರುತ್ತದೆ. ರಕ್ತದಲ್ಲಿ ನಿಕೋಟಿನ್ ಮಟ್ಟವು ದೀರ್ಘಕಾಲದವರೆಗೆ ಇರುವುದರಿಂದ, ಮೆದುಳು ಈ ವ್ಯಸನಕ್ಕೆ ದಾಸವಾಗುತ್ತದೆ. ಪರಿಣಾಮವಾಗಿ, ಧೂಮರಹಿತ ತಂಬಾಕಿನ ಅಭ್ಯಾಸವನ್ನು ಬಿಡುವುದು ಧೂಮಪಾನವನ್ನು ಬಿಡುವುದಕ್ಕಿಂತಲೂ ಅತ್ಯಂತ ಕಷ್ಟಕರವಾದ ಸವಾಲಾಗಿ ಪರಿಣಮಿಸುತ್ತದೆ.

ಬಾಯಿಯ ಆರೋಗ್ಯಕ್ಕೆ ಶಾಶ್ವತ ಕಂಟಕ:

ಈ ಉತ್ಪನ್ನಗಳ ನಿರಂತರ ಬಳಕೆಯು ಬಾಯಿಯ ಒಳಭಾಗಕ್ಕೆ ಸರಿಪಡಿಸಲಾಗದಂತಹ ಹಾನಿಯನ್ನು ಉಂಟುಮಾಡುತ್ತದೆ. ಇದು ಒಸಡುಗಳ ರೋಗಗಳು, ಹಲ್ಲುಗಳ ಸಡಿಲಿಕೆ, ಹಲ್ಲುಗಳು ಬೇಗನೆ ಉದುರುವುದು ಮತ್ತು ಬಾಯಿಯಲ್ಲಿ ಮರುಮರು ಬರುವ ಹುಣ್ಣುಗಳಿಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ, ಇದು ರುಚಿ ಗ್ರಹಣ ಶಕ್ತಿಯನ್ನು ಕುಂಠಿತಗೊಳಿಸಿ ಆಹಾರ ಸೇವನೆಗೆ ತೊಂದರೆ ಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ‘ಓರಲ್ ಸಬ್‌ಮ್ಯೂಕಸ್ ಫೈಬ್ರೋಸಿಸ್’ ಎಂಬ ರೋಗಕ್ಕೆ ತುತ್ತಾಗಿ ಬಾಯಿ ನಿಧಾನವಾಗಿ ತೆರೆಯುವ ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತದೆ, ಇದು ಮುಂದೆ ನೇರವಾಗಿ ಕ್ಯಾನ್ಸರ್ ಆಗಿ ಬದಲಾಗುತ್ತದೆ.

ಹೃದಯ ಮತ್ತು ಒಳಾಂಗಾಂಗಗಳ ಮೇಲಾಗುವ ಗಂಭೀರ ಪರಿಣಾಮಗಳು:

ಧೂಮರಹಿತ ತಂಬಾಕು ಕೇವಲ ಬಾಯಿಯ ಆರೋಗ್ಯವನ್ನು ಮಾತ್ರವಲ್ಲದೆ ಇಡೀ ದೇಹದ ಒಳಾಂಗಾಂಗಗಳನ್ನು ದಂಡಿಸುತ್ತದೆ. ಇದು ರಕ್ತದೊತ್ತಡವನ್ನು ಕ್ಷಣಾರ್ಧದಲ್ಲಿ ಹೆಚ್ಚಿಸಿ ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯು (Stroke) ಉಂಟಾಗುವ ಅಪಾಯವನ್ನು ಬಹುವಾಗಿ ಹೆಚ್ಚಿಸುತ್ತದೆ. ಇದರೊಂದಿಗೆ, ತಂಬಾಕಿನ ರಸವು ಹೊಟ್ಟೆಯನ್ನು ಸೇರುವುದರಿಂದ ಅನ್ನನಾಳದ ಕ್ಯಾನ್ಸರ್, ಅಗ್ನ್ಯಾಶಯದ (Pancreas) ಕ್ಯಾನ್ಸರ್ ಹಾಗೂ ಜೀರ್ಣಾಂಗ ವ್ಯವಸ್ಥೆಯ ಇತರೆ ಗಂಭೀರ ಕಾಯಿಲೆಗಳಿಗೆ ದಾರಿಯಾಗುತ್ತದೆ.

ಗರ್ಭಿಣಿಯರು ಮತ್ತು ಗರ್ಭಸ್ಥ ಶಿಶುವಿಗೆ ಕಾಯ್ದಿಟ್ಟ ಗಂಡಾಂತರ:

ಗರ್ಭಾವಸ್ಥೆಯಲ್ಲಿ ಮಹಿಳೆಯರು ಧೂಮರಹಿತ ತಂಬಾಕನ್ನು ಬಳಸುವುದರಿಂದ ಅದರಲ್ಲಿರುವ ವಿಷಕಾರಿ ರಾಸಾಯನಿಕಗಳು ರಕ್ತದ ಮೂಲಕ ನೇರವಾಗಿ ಬೆಳೆಯುತ್ತಿರುವ ಮಗುವಿನ ದೇಹವನ್ನು ತಲುಪುತ್ತವೆ. ಇದು ಹುಟ್ಟುವ ಮಗುವಿನ ತೂಕ ಕಡಿಮೆಯಾಗಲು (Low Birth Weight), ಜನ್ಮಜಾತ ಅಂಗವೈಕಲ್ಯಗಳಿಗೆ ಮತ್ತು ಮಗುವಿನ ಒಟ್ಟಾರೆ ಬೆಳವಣಿಗೆ ಕುಂಠಿತಗೊಳ್ಳಲು ಕಾರಣವಾಗುತ್ತದೆ. ಕೆಲವು ದುರದೃಷ್ಟಕರ ಸಂದರ್ಭಗಳಲ್ಲಿ ಇದು ಗರ್ಭಪಾತ ಅಥವಾ ಸತ್ತ ಮಗು ಜನಿಸುವ (Stillbirth) ಭೀಕರ ಪರಿಸ್ಥಿತಿಗೂ ಕಾರಣವಾಗಬಹುದು.

ಉಗುಳುವ ಅಭ್ಯಾಸ ಮತ್ತು ಸಾರ್ವಜನಿಕ ಆರೋಗ್ಯದ ದುರಂತ:

ಧೂಮರಹಿತ ತಂಬಾಕು ಸೇವಿಸುವವರು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಉಗುಳುವುದು ಕೇವಲ ಅಸ್ವಚ್ಛತೆಯನ್ನಷ್ಟೇ ಸೃಷ್ಟಿಸುವುದಿಲ್ಲ, ಬದಲಿಗೆ ಇದೊಂದು ದೊಡ್ಡ ಆರೋಗ್ಯ ತುರ್ತುಸ್ಥಿತಿಯಾಗಿದೆ. ಈ ಲಾಲಾರಸದ ಮೂಲಕ ಕ್ಷಯರೋಗ (TB) ಸೇರಿದಂತೆ ಹಲವು ಮಾರಕ ಸಾಂಕ್ರಾಮಿಕ ರೋಗಾಣುಗಳು ಗಾಳಿಯಲ್ಲಿ ಹರಡಿ ಸಾರ್ವಜನಿಕರಿಗೆ ಹರಡುತ್ತವೆ. ಇದು ರಸ್ತೆ, ಗೋಡೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾಳುಗೆಡವುದರ ಜೊತೆಗೆ ಇಡೀ ಪರಿಸರವನ್ನು ದುರ್ವಾಸನೆ ಹಾಗೂ ರೋಗಗಳ ತಾಣವನ್ನಾಗಿ ಮಾರ್ಪಡಿಸುತ್ತದೆ.

ಇದನ್ನೂ ಓದಿ ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಭೀತಿ, ವೈದ್ಯರ ಎಚ್ಚರಿಕೆ!

ಸಾಮಾಜಿಕ ಸ್ವೀಕಾರಾರ್ಹತೆ ಹೆಮ್ಮಾರಿಯ ಅಡಗಿರುವ ಶಕ್ತಿ:

ಧೂಮರಹಿತ ತಂಬಾಕಿನ ಅತ್ಯಂತ ದೊಡ್ಡ ದುರಂತವೆಂದರೆ ಅದಕ್ಕೆ ಸಿಕ್ಕಿರುವ ಸಾಮಾಜಿಕ ಸ್ವೀಕಾರ. ಅನೇಕ ಕಡೆಗಳಲ್ಲಿ ಊಟದ ನಂತರ, ಮದುವೆ ಸಮಾರಂಭಗಳಲ್ಲಿ ಅಥವಾ ಹಬ್ಬ ಹರಿದಿನಗಳಲ್ಲಿ ಇದನ್ನು ವೀಳ್ಯದೆಲೆಯ ಜೊತೆ ಗೌರವದ ಸಂಕೇತವಾಗಿ ಬಳಸಲಾಗುತ್ತದೆ. ಬಣ್ಣಬಣ್ಣದ ಪ್ಯಾಕೆಟ್‌ಗಳು, ಆಕರ್ಷಕ ಸುಗಂಧಗಳು ಮತ್ತು ಸುಲಭ ಲಭ್ಯತೆಯು ಇದರ ಹಿಂದಿರುವ ಸಾವಿನ ಮುಖವನ್ನು ಜನರು ಮರೆಯುವಂತೆ ಮಾಡಿದೆ. ಈ ಕಾರಣದಿಂದಲೇ, ಅನೇಕರು ರೋಗವು ತೀವ್ರ ಹಂತಕ್ಕೆ ತಲುಪಿದಾಗ ಮಾತ್ರ ವೈದ್ಯರನ್ನು ಸಂಪರ್ಕಿಸುತ್ತಾರೆ.

ಧೂಮರಹಿತ ತಂಬಾಕು ಕಣ್ಣಿಗೆ ಕಾಣುವ ಹೊಗೆಯನ್ನು ಉತ್ಪಾದಿಸದೇ ಇರಬಹುದು, ಆದರೆ ದೇಹದ ಒಳಗಡೆ ಅದು ಉಂಟುಮಾಡುವ ವಿನಾಶ ಧೂಮಪಾನಕ್ಕಿಂತಲೂ ಭಯಾನಕವಾಗಿದೆ. ವಿಶ್ವ ತಂಬಾಕು ರಹಿತ ದಿನದ ಸಂದೇಶ ಸ್ಪಷ್ಟವಾಗಿದೆ – ತಂಬಾಕಿನ ಯಾವುದೇ ರೂಪವೂ ಸುರಕ್ಷಿತವಲ್ಲ. ಸುಳ್ಳು ಪ್ರತಿಷ್ಠೆ ಮತ್ತು ಕ್ಷಣಿಕ ಸುಖವನ್ನು ಬದಿಗೊತ್ತಿ, ಜಾಗೃತಿಯನ್ನು ಮೂಡಿಸುವ ಮೂಲಕ ವ್ಯಸನಮುಕ್ತ ಜೀವನ ನಡೆಸುವುದು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಇಂದಿನ ತುರ್ತು ಅಗತ್ಯವಾಗಿದೆ.

ಲೇಖನ: ಡಾ. ರವಿಕಿರಣ ಪಟವರ್ಧನ (ಪಟವರ್ಧನ ಆಯುರ್ವೇದ ಕ್ಲಿನಿಕ್, ಶಿರಸಿ. 08384225836)

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026 Final: ಫೈನಲ್ ವೇಳೆ ಮಳೆ ಬಂದರೆ ಫಲಿತಾಂಶ ನಿರ್ಧರಿಸುವುದು ಹೇಗೆ?

IPL 2026 Final: ಇಂಡಿಯನ್ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಅಹಮದಾಬಾದ್​ನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಗುಜರಾತ್ ಟೈಟಾನ್ಸ್​ (GT) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದ ವೇಳೆ ಮಳೆ ಬಂದರೆ ಪಂದ್ಯ ಆಯೋಜಿಸುವುದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ…

ಫೈನಲ್ ಪಂದ್ಯವನ್ನು ಪೂರ್ಣಗೊಳಿಸಲು ಐಪಿಎಲ್ ರೈನ್ ರೂಲ್ಸ್ ಅನ್ನು ಪರಿಚಯಿಸಲಾಗಿದೆ. ಈ ನಿಯಮಗಳ ಮೂಲಕ ಐಪಿಎಲ್​ನ ಅಂತಿಮ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ. ಹಾಗಿದ್ರೆ ಫೈನಲ್ ಪಂದ್ಯಕ್ಕೆ ಮಳೆ ಅಡಚಣೆಯನ್ನು ಉಂಟು ಮಾಡಿದರೆ ಯಾವೆಲ್ಲಾ ನಿಯಮಗಳು ಅನ್ವಯವಾಗಲಿದೆ ಎಂದು ನೋಡೋಣ…

  • ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯವು ರಾತ್ರಿ 7.30 ಕ್ಕೆ ಶುರುವಾಗಲಿದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ಶುರುವಾಗುವುದು ವಿಳಂಬವಾದರೆ ಹೆಚ್ಚುವರಿ 120 ನಿಮಿಷಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದರಂತೆ ರಾತ್ರಿ 9.40 ರೊಳಗೆ ಪಂದ್ಯ ಶುರುವಾದರೆ ಯಾವುದೇ ಓವರ್​ ಕಡಿತ ಇರುವುದಿಲ್ಲ. 2 ತಂಡಗಳು 20 ಓವರ್​ಗಳನ್ನು ಆಡಲಿದೆ.
  • ಮಳೆಯಿಂದ ಅಥವಾ ಇನ್ನಿತರೆ ಕಾರಣಗಳಿಂದ ವಿಳಂಬವಾಗಿ ರಾತ್ರಿ 9.40 ರ ಬಳಿಕ ಪಂದ್ಯ ಆರಂಭವಾಗುವುದಾರೆ, ಓವರ್​ಗಳ ಕಡಿತ ಮಾಡಲಾಗುತ್ತದೆ. ಅಲ್ಲದೆ ಆ ಬಳಿಕ ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಬೇಕಿದ್ದರೆ ಉಭಯ ತಂಡಗಳು ಕನಿಷ್ಠ 5 ಓವರ್​ಗಳನ್ನು ಆಡಿರಬೇಕು.
  • ಇನ್ನು ನಿಗದಿತ ಸಮಯದೊಳಗೆ ಪಂದ್ಯ ನಡೆಯದಿದ್ದರೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ 5 ಓವರ್​ಗಳ ಪಂದ್ಯವನ್ನು ಆಯೋಜಿಸಲಿದೆ. ಅದರಂತೆ ಮಧ್ಯರಾತ್ರಿ 1.30 ರೊಳಗೆ 5 ಓವರ್​ಗಳ ಪಂದ್ಯವನ್ನು ಆಯೋಜಿಸಲು ಮುಂದಾಗಲಿದ್ದಾರೆ.
  • ಒಂದು ವೇಳೆ ಮಧ್ಯರಾತ್ರಿ 1.30 ರೊಳಗೆ 5 ಓವರ್​ಗಳ ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ ಮಾತ್ರ ಪಂದ್ಯವನ್ನು ಮೀಸಲು ದಿನದಾಟಕ್ಕೆ ಮುಂದೂಡಲಾಗುತ್ತದೆ. ಅದರಂತೆ ಸೋಮವಾರ ಫೈನಲ್ ಪಂದ್ಯವನ್ನು ಮರು ಆಯೋಜಿಸಲಿದ್ದಾರೆ.
  • ಒಂದು ವೇಳೆ ಮಳೆಯಿಂದಾಗಿ ಮೀಸಲು ದಿನದಾಟದಲ್ಲೂ ಕನಿಷ್ಠ 5 ಓವರ್​ಗಳ ಪಂದ್ಯ ನಡೆಸಲು ಸಾಧ್ಯವಾಗದೇ ಇದ್ದರೆ ಮಾತ್ರ ಫೈನಲ್ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಅಲ್ಲದೆ ಲೀಗ್​ ಹಂತದ 70 ಪಂದ್ಯಗಳ ನಂತರ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸಿದ ತಂಡವನ್ನು ಚಾಂಪಿಯನ್ಸ್ ಎಂದು ಘೋಷಿಸಲಾಗುತ್ತದೆ.

ಇದನ್ನೂ ಓದಿ: ಐಪಿಎಲ್​ನಲ್ಲಿ ಈ 3 ನಿಯಮ ಬದಲಿಸಿ: ಸಚಿನ್ ತೆಂಡೂಲ್ಕರ್ ಸಲಹೆ!

ಅಂದರೆ ಮೀಸಲು ದಿನದಾಟದಲ್ಲೂ ಪಂದ್ಯ ನಡೆಯದಿದ್ದರೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಚಾಂಪಿಯನ್ ಆಗಲಿದೆ. ಏಕೆಂದರೆ ಈ ಬಾರಿಯ ಐಪಿಎಲ್​ನ ಅಂಕ ಪಟ್ಟಿಯಲ್ಲಿ ಆರ್​ಸಿಬಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದರೆ, ಗುಜರಾತ್ ಟೈಟಾನ್ಸ್ ತಂಡ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಮಳೆಯಿಂದಾಗಿ ಅಥವಾ ಇನ್ನಿತರೆ ಕಾರಣಗಳಿಂದಾಗಿ ಮೀಸಲು ದಿನದಾಟದಲ್ಲೂ ಪಂದ್ಯ ರದ್ದಾದರೆ ಆರ್​ಸಿಬಿ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.

Source link

‘ನಾಚಿಕೆಗೇಡಿನ ಕುಟುಂಬ’: ಕೊಲೆ ಆರೋಪಿಯ ಸಂಭ್ರಮ ನೋಡಿ ಗರಂ ಆದ ನಟ ವಿಶಾಲ್

ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ 2024ರ ಪುಣೆ ಪೋರ್ಷೆ ಕಾರ್ ಅಪಘಾತದ (Pune Porsche Case) ಪ್ರಮುಖ ಆರೋಪಿ ವೇದಾಂತ್ ಅಗರ್ವಾಲ್ ಕುಟುಂಬವು ಜೈಲಿನಿಂದ ಬೇಲ್ ಸಿಕ್ಕಿದ್ದಕ್ಕೆ ಪಾರ್ಟಿ ಮಾಡಿ ಸಂಭ್ರಮಿಸಿದೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಸುಪ್ರೀಂ ಕೋರ್ಟ್‌ನಿಂದ ಕಠಿಣ ಷರತ್ತುಗಳೊಂದಿಗೆ ಇತ್ತೀಚೆಗೆ ಜಾಮೀನು ಪಡೆದ ಬಳಿಕ, ಇಡೀ ಕುಟುಂಬ ಹೋಟೆಲ್ ಒಂದರಲ್ಲಿ ನೃತ್ಯ ಮಾಡುತ್ತಾ ಸಂಭ್ರಮಿಸುತ್ತಿರುವ ಈ ದೃಶ್ಯ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕಾಲಿವುಡ್ ನಟ ವಿಶಾಲ್ (Actor Vishal) ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಪಿ ಕುಟುಂಬದ ವಿರುದ್ಧ ಹರಿಹಾಯ್ದಿರುವ ವಿಶಾಲ್, ‘ನೀವೇನು ಒಲಿಂಪಿಕ್ಸ್‌ನಲ್ಲಿ ಮೆಡಲ್ ಗೆದ್ದಿಲ್ಲ ಅಥವಾ ಕಾಲೇಜು ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗಿಲ್ಲ. ನಿಮ್ಮ ನಾಚಿಕೆಗೇಡಿನ ಅಗರ್ವಾಲ್ ಕುಟುಂಬ ಹೆಮ್ಮೆ ಪಡುವಂತಹ ಯಾವುದೇ ಕೆಲಸವನ್ನೂ ನೀವು ಮಾಡಿಲ್ಲ. ಮೂರ್ಖ ವೇದಾಂತ್ ಅಗರ್ವಾಲ್, ನಿನ್ನ ಮದ್ಯದ ಅಮಲಿನ ಡ್ರೈವಿಂಗ್‌ನಿಂದಾಗಿ ಇಬ್ಬರು ಉದಯೋನ್ಮುಖ ಐಟಿ ಇಂಜಿನಿಯರ್‌ಗಳನ್ನು ಕೊಂದಿದ್ದೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇಲ್ಲಿನ ಸಿಸ್ಟಮ್ ಭ್ರಷ್ಟವಾಗಿರಬಹುದು. ನೀನು ಮಾಡಿದ ತಪ್ಪಿಗೆ ನಿನ್ನ ಹಣದ ಬಲ ಹಾಗೂ ಪ್ರಭಾವ ಬಳಸಿ ಬೇಲ್ ಪಡೆದಿರಬಹುದು. ನಿನ್ನ ನಾಚಿಕೆಯಿಲ್ಲದ ಕುಟುಂಬದ ಜೊತೆ ಸಮಾಜದಲ್ಲಿ ಬಹಿರಂಗವಾಗಿ ಸಂಭ್ರಮಿಸುತ್ತಿರಬಹುದು. ಆದರೆ ನೆನಪಿರಲಿ, ಕರ್ಮ ಅನ್ನೋದು ತುಂಬಾ ಡೇಂಜರ್. ನಾವು ಏನು ಬಿತ್ತುತ್ತೇವೋ ಅದನ್ನೇ ಉಣ್ಣಬೇಕಾಗುತ್ತದೆ. ನಾನು ನಿನಗೆ ಶಾಪ ಹಾಕುತ್ತಿಲ್ಲ. ಆದರೆ ನಿನ್ನ ತಂದೆ ಕಾನೂನಿನ ಎಲ್ಲಾ ಲೋಪದೋಷಗಳನ್ನು ಮುಚ್ಚಿ ನಿನ್ನನ್ನು ಹೊರಗೆ ತಂದಿದ್ದರೂ, ನೀನು ಈ ರೀತಿ ಸಂಭ್ರಮಿಸಲು ಖಂಡಿತ ಅರ್ಹನಲ್ಲ’ ಎಂದು ವಿಶಾಲ್ ಖಾರವಾಗಿ ಬರೆದಿದ್ದಾರೆ.

ಈ ವಿಡಿಯೋ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ಆರೋಪಿ ವೇದಾಂತ್ ಅಗರ್ವಾಲ್ ತಂದೆ ವಿಶಾಲ್ ಅಗರ್ವಾಲ್ ಸ್ಪಷ್ಟನೆ ನೀಡಿದ್ದಾರೆ. ‘ಈ ವಿಡಿಯೋವನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ. ಇದು ನಮ್ಮ 25ನೇ ಮದುವೆಯ ವಾರ್ಷಿಕೋತ್ಸವದ ಅಂಗವಾಗಿ 2023ರ ಸೆಪ್ಟೆಂಬರ್ 2ರಂದು ಗೋವಾದಲ್ಲಿ ಶೂಟ್ ಮಾಡಲಾದ ವಿಡಿಯೋ ಆಗಿದೆ. ಅಪಘಾತಕ್ಕೂ ಇದಕ್ಕೂ ಸಂಬಂಧವಿಲ್ಲ. ಜೈಲಿನಿಂದ ಬಿಡುಗಡೆಯಾಗಿದ್ದಕ್ಕೆ ಸಂಭ್ರಮಿಸುತ್ತಿದ್ದೇವೆ ಎಂಬ ವರದಿಗಳು ಸುಳ್ಳು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ನಟಿ ಸಾಯಿ ಧನ್ಷಿಕಾ ಜೊತೆಗೆ ತಮಿಳು ನಟ ವಿಶಾಲ್ ನಿಶ್ಚಿತಾರ್ಥ: ಚಿತ್ರಗಳು ಇಲ್ಲಿವೆ

ಏನಿದು ಪುಣೆ ಪೋರ್ಷೆ ಕಾರ್ ಘಟನೆ?

ಮೇ 2024ರಲ್ಲಿ ಪುಣೆಯಲ್ಲಿ ಅಪ್ರಾಪ್ತ ಬಾಲಕ ವೇದಾಂತ್ ಅಗರ್ವಾಲ್ ಮದ್ಯದ ಅಮಲಿನಲ್ಲಿ ಅತಿ ವೇಗವಾಗಿ ಪೋರ್ಷೆ ಕಾರನ್ನು ಚಲಾಯಿಸಿ ಇಬ್ಬರು ಐಟಿ ಇಂಜಿನಿಯರ್‌ಗಳ ಸಾವಿಗೆ ಕಾರಣವಾಗಿದ್ದನು. ಈ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆರೋಪದ ಮೇಲೆ ಪೋಷಕರನ್ನು ಬಂಧಿಸಲಾಗಿತ್ತು. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಇವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಿಎಂ ಡಿಕೆ ಶಿವಕುಮಾರ್​​ ಜೊತೆ ಸಚಿವರಾಗಿ ಎಷ್ಟು ಮಂದಿ ಪ್ರಮಾಣವಚನ?: ಇಲ್ಲಿದೆ ಮಾಹಿತಿ

ಬೆಂಗಳೂರು, ಮೇ 31: ಕರ್ನಾಟಕದ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಜೂ. 3ರಂದು ಮಾಣವಚನ ಸ್ವೀಕರಿಸಲಿದ್ದು, ಇದೀಗ ಡಿಸಿಎಂ ಹುದ್ದೆಗಳ ಸೃಷ್ಟಿ, ಕೆಪಿಸಿಸಿ ಅಧ್ಯಕ್ಷ ಗಾದಿ ಹಾಗೂ ಸಚಿವ ಸಂಪುಟ ರಚನೆ ಕುರಿತು ಕಸರತ್ತು ಮುಂದುವರೆದಿದೆ. ಜಾತಿ ಲೆಕ್ಕಾಚಾರಗಳು ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿವೆ. ಡಿಕೆಶಿ ಜೊತೆ 14 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಸಚಿವ ಸಂಪುಟದಲ್ಲಿ ನಾಲ್ಕು ಡಿಸಿಎಂ ಹುದ್ದೆಗಳ ಸೃಷ್ಟಿಯ ಬಗ್ಗೆ ತೆರೆಮರೆಯಲ್ಲಿ ಚರ್ಚೆ ನಡೆದಿದ್ದು, ಜಾತಿವಾರು ಸಮೀಕರಣ ಹಾಗೂ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳುವುದು ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ಸವಾಲಾಗಿದೆ. ಉಮ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಲವು ನಾಯಕರು ಲಾಬಿ ನಡೆಸುತ್ತಿದ್ದು,  ಯತೀಂದ್ರ, ಎಂ.ಬಿ. ಪಾಟೀಲ್, ಜಮೀರ್, ಖಾದರ್, ಪರಮೇಶ್ವರ ಮತ್ತು ಪ್ರಿಯಾಂಕ್​​ ಸೇರಿದಂತೆ ಹಲವರ ಹೆಸರುಗಳು ಡಿಸಿಎಂ ರೇಸ್‌ನಲ್ಲಿವೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಮತ್ತು ಬಿ.ಕೆ. ಹರಿಪ್ರಸಾದ್ ಹೆಸರುಗಳು ಮುಂಚೂಣಿಯಲ್ಲಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಜರ್ಮನಿಯಲ್ಲಿ ಭಾರತೀಯ ಸಂಘಟನೆಗಳ ಹೊಸ ಒಕ್ಕೂಟ; ಎರಡು ದೇಶಗಳ ಬಾಂಧವ್ಯ ಹೆಚ್ಚಿಸಲು ಒಗ್ಗೂಡಿದ ಭಾರತೀಯರು

ಜರ್ಮನಿಯಲ್ಲಿರುವ ಭಾರತೀಯ ಸಮುದಾಯImage Credit source: https://www.linkedin.com/in/chitra-viswanath

ನವದೆಹಲಿ, ಮೇ 31: ಭಾರತ ಮತ್ತು ಜರ್ಮನಿ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಜರ್ಮನಿಯಲ್ಲಿ ನೆಲೆಸಿರುವ ಭಾರತೀಯ ಮೂಲದ ಸಮುದಾಯ ಅತ್ಯಂತ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಜರ್ಮನಿಯ ಸ್ಟಟ್‌ಗಾರ್ಟ್‌ನಲ್ಲಿ (Stuttgart) ವಾಸಿಸುತ್ತಿರುವ ಪ್ರಮುಖ ಆವಿಷ್ಕಾರಕಿ ಹಾಗೂ ನೈತಿಕ ಎಐ (Ethical AI) ತಜ್ಞೆ ಚಿತ್ರಾ ವಿಶ್ವನಾಥ್ ಮತ್ತು ಜರ್ಮನಿಯ ಭಾರತೀಯ ಸಮುದಾಯದ ಮುಖಂಡರು ಸೇರಿ ‘ಇಂಡಿಯಾ ಫೆಡರೇಶನ್ ಆಫ್ ಜರ್ಮನಿ’ (India Federation of Germany – IFG) ಸಂಸ್ಥೆಯನ್ನು ಅಧಿಕೃತವಾಗಿ ಪ್ರಾರಂಭಿಸಿದ್ದಾರೆ.

ಜರ್ಮನಿಯಲ್ಲಿರುವ 16 ಫೆಡರಲ್ ರಾಜ್ಯಗಳ 100ಕ್ಕೂ ಹೆಚ್ಚು ಭಾರತೀಯ ಸಂಘಟನೆಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಈ ಒಕ್ಕೂಟವನ್ನು (Bundesverband der Indischen Vereinigungen e.V.) ಸ್ಥಾಪಿಸಲಾಗಿದೆ. ಪ್ರಸ್ತುತ ಜರ್ಮನಿಯಲ್ಲಿ 3 ಲಕ್ಷಕ್ಕೂ ಅಧಿಕ ಭಾರತೀಯ ಮೂಲದ ಜನರಿದ್ದು, ಅಲ್ಲಿನ ಆರ್ಥಿಕತೆಗೆ ವಾರ್ಷಿಕ ಸುಮಾರು 15 ಬಿಲಿಯನ್ ಯುರೋ (ಸುಮಾರು 1.66 ಲಕ್ಷ ಕೋಟಿ ರೂಗೂ ಹೆಚ್ಚು) ಕೊಡುಗೆ ನೀಡುತ್ತಿದ್ದಾರೆ. ಈ ಬೃಹತ್ ಸಮುದಾಯದ ಸಾಮೂಹಿಕ ಧ್ವನಿಯಾಗಿ ‘ಇಂಡಿಯಾ ಫೆಡರೇಶನ್ ಆಫ್ ಜರ್ಮನಿ’ ಕೆಲಸ ಮಾಡಲಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಜರ್ಮನಿಯ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ (Friedrich Merz) ಅವರ ನಾಯಕತ್ವದಲ್ಲಿ ಉಭಯ ದೇಶಗಳ ನಡುವೆ ಆರ್ಥಿಕ ಮತ್ತು ಕಾರ್ಯತಂತ್ರದ ಸಹಕಾರ ಆಳವಾಗುತ್ತಿರುವ ಈ ಸಂದರ್ಭದಲ್ಲಿ, ಈ ಒಕ್ಕೂಟವು ಎರಡು ದೇಶಗಳ ನಡುವೆ ಸಾಂಸ್ಕೃತಿಕ ಹಾಗೂ ಆರ್ಥಿಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ: ಸಿಂಧೂ ನದಿ ಒಪ್ಪಂದದ ಬಿಕ್ಕಟ್ಟು: ಪಾಕಿಸ್ತಾನದ ಕರಾಚಿಯಲ್ಲಿ ತೀವ್ರ ಜಲಕ್ಷಾಮ, ರಾಜಕೀಯ ಕೆಸರೆರಚಾಟ

28 ವರ್ಷಗಳ ರೋಚಕ ಪಯಣ: ಚಿತ್ರಾ ವಿಶ್ವನಾಥ್ ಅವರ ವೈಯಕ್ತಿಕ ಯಶೋಗಾಥೆ

ಈ ಐತಿಹಾಸಿಕ ಕ್ಷಣವನ್ನು ತಮ್ಮ ಲಿಂಕ್ಡ್​ಇನ್ ತಾಣದಲ್ಲಿ ಹಂಚಿಕೊಳ್ಳುತ್ತಾ ಚಿತ್ರಾ ವಿಶ್ವನಾಥ್ ಅವರು ಜರ್ಮನಿಯ ಜೀವನದ ನೆನಪುಗಳನ್ನು ಮೆಲುಕು ಹಾಕಿದ್ದಾರೆ:

28 ವರ್ಷಗಳ ಹಿಂದೆ, ನವೆಂಬರ್ ತಿಂಗಳ ಕೊರೆಯುವ ಚಳಿಯಲ್ಲಿ ಕೇವಲ ಆತ್ಮವಿಶ್ವಾಸ ಮತ್ತು ‘ಭಾರತೀಯ ಮೌಲ್ಯಗಳನ್ನು’ ಹೊತ್ತು ಒಬ್ಬ ಸಾಮಾನ್ಯ ಯುವತಿಯಾಗಿ ತಾನು ಜರ್ಮನಿಗೆ ಕಾಲಿಟ್ಟಿದ್ದು, ಅಲ್ಲಿ ಅಂತರರಾಷ್ಟ್ರೀಯ ಮಾಸ್ಟರ್ಸ್ ಪದವಿಯ ಮೊದಲ ಬ್ಯಾಚ್‌ನಲ್ಲಿ ವಿದ್ಯಾರ್ಥಿಯಾಗಿ ತಮ್ಮ ವಿದ್ಯಾಭ್ಯಾಸ ಆರಂಭಿಸಿದ್ದನ್ನು ಚಿತ್ರಾ ಸ್ಮರಿಸಿದ್ದಾರೆ.

ಚಿತ್ರಾ ಅವರು ಜರ್ಮನಿಯ ಪ್ರಸಿದ್ಧ ‘ಬಾಷ್’ (Bosch) ಕಂಪನಿಯಲ್ಲಿ 25 ವರ್ಷಗಳ ಕಾಲ ಸುದೀರ್ಘ ಹಾಗೂ ಯಶಸ್ವಿ ವೃತ್ತಿಜೀವನವನ್ನು ಪೂರೈಸಿದ್ದಾರೆ. ತಮ್ಮ ಪತಿ ಮಂಜುನಾಥ್ ಗುಬ್ಬಿ ಅವರೊಂದಿಗೆ ಕಳೆದ 27 ವರ್ಷಗಳಿಂದ ಜರ್ಮನಿಯಲ್ಲಿ ಸುಭದ್ರ ಕುಟುಂಬವನ್ನು ಕಟ್ಟಿದ್ದಾರೆ. ತಮ್ಮ ಹೆಣ್ಣುಮಕ್ಕಳನ್ನು ಜರ್ಮನ್ ಶಿಕ್ಷಣ ವ್ಯವಸ್ಥೆಯಲ್ಲಿ ಯಶಸ್ವಿಯಾಗಿ ಬೆಳೆಸುತ್ತಲೇ, ತಮ್ಮ ಸನಾತನ ಧರ್ಮದ ಮೂಲ ಮೌಲ್ಯಗಳನ್ನು ಅವರು ಕಾಪಾಡಿಕೊಂಡು ಬಂದಿದ್ದಾರೆ.

ಚಿತ್ರಾ ವಿಶ್ವನಾಥ್ ಅವರ ಲಿಂಕ್ಡ್​ಇನ್ ಪೋಸ್ಟ್

ಇದೀಗ ತಮ್ಮ ಎರಡೂ ತಾಯ್ನಾಡುಗಳ (ಭಾರತ ಮತ್ತು ಜರ್ಮನಿ) ಸೇವೆಗಾಗಿ ಮಾರ್ಚ್ ತಿಂಗಳಿನಿಂದ ಅವರು ಈ ಹೊಸ ಸಾಮಾಜಿಕ ಜವಾಬ್ದಾರಿಗೆ ಧುಮುಕಿದ್ದಾರೆ. ಸಿದ್ಧಾರ್ಥ್ ಮುದ್ಗಲ್ ನೇತೃತ್ವದ ತಂಡದೊಂದಿಗೆ ಸೇರಿ ಜರ್ಮನಿಯಲ್ಲಿರುವ ಭಾರತೀಯ ಸಮುದಾಯವನ್ನು ಒಗ್ಗೂಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಒಂದಾ ನೀವು ಭಯೋತ್ಪಾನೆ ನಾಶ ಮಾಡಬೇಕು, ಇಲ್ಲವೇ ಸಿಂಧೂ ನೀರಿನ ಆಸೆ ಬಿಡಬೇಕು, ವಿಶ್ವಸಂಸ್ಥೆಯಲ್ಲಿ ಪಾಕ್​​​ಗೆ ಭಾರತ ಎಚ್ಚರಿಕೆ

“ಇದು ಕೇವಲ ಒಂದು ಸಂಸ್ಥೆಯಲ್ಲ, ಇದೊಂದು ಚಳುವಳಿ. ಜಾಗತಿಕ ಮಟ್ಟದಲ್ಲಿ ಭವಿಷ್ಯವು ಸಹಭಾಗಿತ್ವ ಮತ್ತು ಪರಸ್ಪರ ಸಂಪರ್ಕದ ಮೇಲೆಯೇ ನಿಂತಿದೆ. ಇದರಲ್ಲಿ ಅನಿವಾಸಿ ಭಾರತೀಯರು (Diaspora) ಅತ್ಯಂತ ಪ್ರಮುಖ ಪಾತ್ರ ವಹಿಸಲಿದ್ದಾರೆ” ಎಂದು ಹೇಳುತ್ತಾರೆ ಚಿತ್ರಾ ವಿಶ್ವನಾಥ್.

ಈ ಒಕ್ಕೂಟದ ಸ್ಥಾಪನೆಯು ಜರ್ಮನಿಯಲ್ಲಿ ಭಾರತದ ಹೆಮ್ಮೆಯನ್ನು ಮತ್ತಷ್ಟು ಎತ್ತಿಹಿಡಿಯುವುದಲ್ಲದೆ, ಮುಂದಿನ ದಿನಗಳಲ್ಲಿ ಭಾರತ-ಜರ್ಮನಿ ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನೆರವಾಗುವ ನಿರೀಕ್ಷೆಯಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮೊಬೈಲ್‌ನಲ್ಲಿ ಸದಾ ಸ್ಕ್ರೋಲಿಂಗ್ ಮಾಡ್ತೀರಾ? ಹಾಗಿದ್ರೆ ನಿಮಗೂ ಬರತ್ತೆ ಈ ಕಾಯಿಲೆ!

ಬೆಂಗಳೂರು, ಮೇ 31: ಈಗಿನ ಯುವ ಜನತೆ ತಮ್ಮ ಮೊಬೈಲ್  (Mobile) ಇಲ್ಲದಿದ್ದರೆ ಬದುಕುವುದೇ ಕಷ್ಟ ಎನ್ನುವಷ್ಟರ ಮಟ್ಟಕ್ಕೆ ಇಳಿದಿದ್ದಾರೆ. ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆ ಮತ್ತು ನಿರಂತರವಾಗಿ ಸ್ಕ್ರೀನ್‌ಗಳನ್ನು ನೋಡುತ್ತಾ ಕಾಲ ಕಳೆಯುವವರಲ್ಲಿ ‘ಟೆಕ್ಸ್ಟ್ ನೆಕ್’ (Text Neck) ಅಥವಾ ಟೆಕ್ ನೆಕ್ ಕಾಯಿಲೆಯ ಪ್ರಕರಣಗಳು ಬೆಂಗಳೂರಿನಲ್ಲಿ ತೀವ್ರವಾಗಿ ಹೆಚ್ಚುತ್ತಿವೆ. ಸದಾ ತಲೆ ತಗ್ಗಿಸಿ ಮೊಬೈಲ್ ನೋಡುವುದರಿಂದ ಕುತ್ತಿಗೆಯ ನರಗಳಿಗೆ ಗಂಭೀರ ಹಾನಿಯಾಗುತ್ತಿದ್ದು, ಇದು ಯುವ ಪೀಳಿಗೆಯಲ್ಲಿ ಒಂದು ಸಾಂಕ್ರಾಮಿಕದಂತೆ ಹರಡುತ್ತಿದೆ ಎಂದು ರಾಜಧಾನಿಯ ತಜ್ಞ ವೈದ್ಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು

  • ತಲೆ ತಗ್ಗಿಸಿ ಸದಾ ಮೊಬೈಲ್ ಬಳಸುವುದರಿಂದ ಕುತ್ತಿಗೆಯ ನರಗಳಿಗೆ ಹಾನಿಯಾಗುತ್ತಿದೆ.
  • ಬೆಂಗಳೂರಿನ ಒಪಿಡಿಗಳಲ್ಲಿ ದಿನಕ್ಕೆ 2-3 ಟೆಕ್ಸ್ಟ್ ನೆಕ್ ಪ್ರಕರಣಗಳು ದಾಖಲಾಗುತ್ತಿವೆ.
  • ನರಗಳ ಮೇಲಿನ ಒತ್ತಡ ಹೆಚ್ಚಾದರೆ ಕೈಗಳ ದೌರ್ಬಲ್ಯಕ್ಕೆ ಕಾರಣವಾಗಬಹುದು.

ಹಿಂದೆ ಈ ಸಮಸ್ಯೆ ಹೆಚ್ಚಾಗಿ ಕಂಪ್ಯೂಟರ್ ಮುಂದೆ ದೀರ್ಘಕಾಲ ಕೂರುವ ಡೆಸ್ಕ್ ಉದ್ಯೋಗಿಗಳಲ್ಲಿ ಅಥವಾ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಹದಿಹರೆಯದವರು ಮತ್ತು ಕಾಲೇಜು ವಿದ್ಯಾರ್ಥಿಗಳು ಒಪಿಡಿ (OPD) ದಿನಕ್ಕೆ ಕನಿಷ್ಠ 2 ರಿಂದ 3 ಪ್ರಕರಣಗಳಂತೆ ಈ ಕಾಯಿಲೆಯ ಲಕ್ಷಣಗಳೊಂದಿಗೆ ಚಿಕಿತ್ಸೆಗೆ ಬರುತ್ತಿದ್ದಾರೆ. ಸಾಂಕ್ರಾಮಿಕ ರೋಗದ (Pandemic) ನಂತರ ಶಿಕ್ಷಣ, ಉದ್ಯೋಗ ಮತ್ತು ಮನರಂಜನೆ ಎಲ್ಲವೂ ಆನ್‌ಲೈನ್ ಆಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೊಸ್ಮತ್ ಆಸ್ಪತ್ರೆಯ ಹಿರಿಯ ಮೂಳೆರೋಗ ತಜ್ಞರಾದ ಡಾ. ವಿಜಯ್ ಗಿರೀಶ್ ಹೇಳಿದ್ದಾರೆ.

ನರಗಳ ಮೇಲಿನ ಒತ್ತಡ ಮತ್ತು ಲಕ್ಷಣಗಳು

ಪ್ರಕೃತಿ ಆಸ್ಪತ್ರೆಯ ಮೂಳೆರೋಗ ತಜ್ಞ ಡಾ. ಅಕ್ಷಯ್ ಟಿ.ಎಂ. ಅವರು ವಿವರಿಸುವಂತೆ, ಸ್ಮಾರ್ಟ್‌ಫೋನ್ ಬಳಸುವಾಗ ತಲೆಯನ್ನು ಮುಂಭಾಗಕ್ಕೆ ಬಾಗಿಸುವುದರಿಂದ ಕುತ್ತಿಗೆಯ ಭಾಗದ ಬೆನ್ನುಮೂಳೆಯ (Cervical Spine) ಮೇಲಿನ ಒತ್ತಡವು ಗಣನೀಯವಾಗಿ ಹೆಚ್ಚುತ್ತದೆ. ಇದು ಕುತ್ತಿಗೆಯ ಸ್ನಾಯುಗಳು, ಅಸ್ಥಿರಜ್ಜುಗಳು (Ligaments) ಮತ್ತು ಕೀಲುಗಳ ತೀವ್ರ ಆಯಾಸಕ್ಕೆ ಕಾರಣವಾಗುತ್ತದೆ.

ಆರಂಭದಲ್ಲಿ ಕುತ್ತಿಗೆ ನೋವು ಮತ್ತು ಬಿಗಿತದಿಂದ ಶುರುವಾಗುವ ಈ ಸಮಸ್ಯೆ, ಕ್ರಮೇಣ ಭುಜದ ಮಧ್ಯಭಾಗಕ್ಕೆ ಹರಡುತ್ತದೆ. ನಂತರ ತಲೆನೋವು ಮತ್ತು ಆಯಾಸ ಕಾಣಿಸಿಕೊಳ್ಳುತ್ತದೆ. ಪರಿಸ್ಥಿತಿ ತೀವ್ರಗೊಂಡಾಗ ಕುತ್ತಿಗೆಯ ನರಗಳು ಹಾನಿಗೊಳಗಾಗಿ, ಕೈಗಳಿಗೆ ತೀವ್ರವಾದ ಶೂಟಿಂಗ್ ನೋವು (Shooting Pain) ದಾಟುತ್ತದೆ ಮತ್ತು ಕೈಗಳಲ್ಲಿ ದೌರ್ಬಲ್ಯ ಅಥವಾ ಮರಗಟ್ಟುವಿಕೆ ಉಂಟಾಗುತ್ತದೆ. ಉದಾಹರಣೆಗೆ, ಬೆಂಗಳೂರಿನ 28 ವರ್ಷದ ಐಟಿ ಉದ್ಯೋಗಿಯೊಬ್ಬರು ನಿರಂತರ ಸ್ಕ್ರೀನ್ ಸಮಯ ಮತ್ತು ತಪ್ಪು ಭಂಗಿಯಿಂದಾಗಿ ಕೈಗಳ ಸಂಪೂರ್ಣ ಶಕ್ತಿ ಕಳೆದುಕೊಂಡು, ಕೊನೆಗೆ ಜಟಿಲವಾದ ಸರ್ಜರಿಗೆ ಒಳಗಾಗಬೇಕಾಯಿತು ಎಂದು ಅಪೊಲೊ ಕ್ಲಿನಿಕ್‌ನ ತಜ್ಞರಾದ ಡಾ. ಅರ್ನವ್ ಪಿ. ಉರ್ಸ್ ಹೇಳಿದ್ದಾರೆ.

ಇದನ್ನೂ ಓದಿ ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಭೀತಿ, ವೈದ್ಯರ ಎಚ್ಚರಿಕೆ!

ನೋಮೋಫೋಬಿಯಾ ಮತ್ತು ಡೂಮ್‌ಸ್ಕ್ರೋಲಿಂಗ್

ವೈದ್ಯರ ಪ್ರಕಾರ, ಆರಂಭಿಕ ಹಂತದಲ್ಲಿ ಸೂಕ್ತ ಭಂಗಿ ತಿದ್ದುಪಡಿ, ಎರ್ಗೋನಾಮಿಕ್ ಬದಲಾವಣೆಗಳು ಮತ್ತು ಕುತ್ತಿಗೆಯ ಸ್ನಾಯುಗಳನ್ನು ಬಲಪಡಿಸುವ ಫಿಸಿಯೋಥೆರಪಿ (Physiotherapy) ಮೂಲಕ ಇದಕ್ಕೆ ಚಿಕಿತ್ಸೆ ನೀಡಬಹುದು. ಆದರೆ, ಮೊಬೈಲ್ ಇಲ್ಲದೆ ಇರಲು ಸಾಧ್ಯವೇ ಇಲ್ಲ ಎನ್ನುವ ‘ನೋಮೋಫೋಬಿಯಾ’ (Nomophobia) ಮತ್ತು ಬೆಡ್ ಮೇಲೆ ಮಲಗಿ ಗಂಟೆಗಟ್ಟಲೆ ರೀಲ್ಸ್ ವೀಕ್ಷಿಸುವ ‘ಡೂಮ್‌ಸ್ಕ್ರೋಲಿಂಗ್’ (Doomscrolling) ಚಟದಿಂದಾಗಿ ಜನರು ಸ್ಕ್ರೀನ್ ಸಮಯವನ್ನು ಕಡಿಮೆ ಮಾಡುತ್ತಿಲ್ಲ. ಇದು ಚಿಕಿತ್ಸೆಗೆ ದೊಡ್ಡ ಅಡ್ಡಿಯಾಗಿದೆ. ಮೊಬೈಲ್ ಫೋನ್‌ಗಳನ್ನು ಕಣ್ಣಿನ ನೇರ ಮಟ್ಟದಲ್ಲಿಟ್ಟುಕೊಳ್ಳುವುದು ಮತ್ತು ಪ್ರತಿ 20 ನಿಮಿಷಗಳಿಗೊಮ್ಮೆ ಕುತ್ತಿಗೆಗೆ ವಿರಾಮ ನೀಡುವುದು ಅತ್ಯಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಟನ್​​ ಎಂದು ಗ್ರಾಹಕರಿಗೆ ಬೀಫ್​​ ನೀಡುತ್ತಿದ್ದ ​ಬೆಂಗಳೂರಿನ ಹೋಟೆಲ್​​ ಮಾಲೀಕರ ಬಂಧನ

ಬೆಂಗಳೂರು, ಮೇ 31: ಮಟನ್ ಎಂದು ಹೇಳಿ ಗ್ರಾಹಕರಿಗೆ ಗೋಮಾಂಸ (ಬೀಫ್) ನೀಡುತ್ತಿದ್ದ ಆರೋಪದ ಮೇಲೆ ಪೊಲೀಸರು ಇಬ್ಬರು ಹೋಟೆಲ್​​ ಮಾಲೀಕರನ್ನು ಬಂಧಿಸಿರುವ ಘಟನೆ ಬೆಂಗಳೂರಲ್ಲಿ (Bengaluru) ನಡೆದಿದೆ. ಬಂಧಿತರನ್ನು ಬ್ಯಾರತಿ ಗ್ರಾಮದ ಜಿಜೂ ಅಲೆಕ್ಸಾಂಡರ್ ಹಾಗೂ ಟಿಪ್ಪಣ್ಣ ಲೇಔಟ್‌ನ ಶಿಬು ಕೆ.ಬಿ. ಎಂದು ಗುರುತಿಸಲಾಗಿದೆ. ಕೇರಳ ಮೂಲದವರಾದ ಇವರು ಭೈರತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಆರೋಪಿಗಳು ಬೊಮ್ಮನಹಳ್ಳಿಯಲ್ಲಿರುವ ಐಸಿರಿ ಹಬ್ ಕಾಯಲೋರಂ ರೆಸ್ಟೋರೆಂಟ್‌ನ ಮಾಲೀಕರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಕಾಯಲೋರಂ ರೆಸ್ಟೋರೆಂಟ್‌ನಲ್ಲಿ ಮಟನ್ ಎಂದು ಹೇಳಿ ಬೀಫ್ ನೀಡಲಾಗುತ್ತಿದೆ ಎಂಬ ಆರೋಪದ ಕುರಿತು ಗ್ರಾಹಕರಿಂದ ಹಲವು ದೂರುಗಳು ಬಂದಿದ್ದವು. ರೆಸ್ಟೋರೆಂಟ್‌ನ ಮೆನು ಕಾರ್ಡ್‌ನಲ್ಲಿ ಎಲ್ಲಿಯೂ ಬೀಫ್ ಉಲ್ಲೇಖಿಸಿರಲಿಲ್ಲ. ಆದರೆ ಮಟನ್ ಖಾದ್ಯಗಳನ್ನು ಆರ್ಡರ್ ಮಾಡಿದಾಗ ಗೋಮಾಂಸವನ್ನು ನೀಡಲಾಗುತ್ತಿದೆ ಎಂದು ಅನೇಕರು ದೂರಿದ್ದರು. ಈ ದೂರುಗಳ ಆಧಾರದ ಮೇಲೆ ಸಿವಿಲ್ ಉಡುಪಿನಲ್ಲಿದ್ದ ಪೊಲೀಸ್ ಅಧಿಕಾರಿಯನ್ನು ಗ್ರಾಹಕರ ಸೋಗಿನಲ್ಲಿ ಕಳುಹಿಸಲಾಗಿತ್ತು. ಅವರು ಖರೀದಿಸಿ ತಂದಿದ್ದ ಮಟನ್​​ ಖಾದ್ಯಗಳನ್ನು ಪರಿಶೀಲಿಸಿದಾಗ ಅದು ಮಟನ್ ಅಲ್ಲ, ಗೋಮಾಂಸ ಎಂಬುದು ದೃಢಪಟ್ಟಿತ್ತು.

ಇದನ್ನೂ ಓದಿ: ಬೆಂಗಳೂರಿನ ಬಹುತೇಕ ಕೆರೆಗಳ ನೀರಲ್ಲಿ ಯುರೇನಿಯಂ ಪತ್ತೆ; ಆತಂಕಕಾರಿ ಸತ್ಯ ಬಿಚ್ಚಿಟ್ಟ ಐಐಎಸ್ಸಿ ವರದಿ

ಆರೋಪಿಗಳ ವಿರುದ್ಧ ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ-2020 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಪ್ರಕರಣದ ಮತ್ತೊಬ್ಬ ಪಾಲುದಾರ ಅಭಿಲಾಶ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Weekly Horoscope: ವಾರ ಭವಿಷ್ಯ; ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ

2026ರ ಮೇ 31ರಿಂದ ಜೂನ್ 06ರವರೆಗೆ ಮೊದಲ ವಾರವಾಗಿದ್ದು ಗ್ರಹಗತಿಗಳ ಆಧಾರ ಮೇಲೆ ಬಾಂಧವ್ಯದಲ್ಲಿ ಸುಧಾರಣೆ, ಆರ್ಥಿಕತೆಯಲ್ಲಿ ಅಸ್ತವ್ಯಸ್ತ, ನಿಷ್ಠುರಗಳು ಇವೆಲ್ಲ ಈ ವಾರದಲ್ಲಿ ಇರಲಿದೆ.

ಮೇಷ ರಾಶಿ :

​ನಿಮ್ಮ ರಾಶಿಯಲ್ಲಿ ಮಂಗಳನಿರುವುದರಿಂದ ಧೈರ್ಯ, ಉತ್ಸಾಹ ಹೆಚ್ಚಿರುತ್ತದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬಂದರೂ ಆತುರದ ನಿರ್ಧಾರಗಳು ಬೇಡ. ಆಸ್ತಿ ಮತ್ತು ವಾಹನ ಖರೀದಿಯ ಯೋಗವಿದೆ. ಆರೋಗ್ಯದ ಕಡೆಗೆ ಸ್ವಲ್ಪ ಗಮನವಿರಲಿ, ಕೋಪವನ್ನು ನಿಯಂತ್ರಿಸಿ.

ವೃಷಭ ರಾಶಿ :

​ರಾಶಿಯಲ್ಲಿ ಸೂರ್ಯನಿರುವುದರಿಂದ ಸಮಾಜದಲ್ಲಿ ಗೌರವ ಹೆಚ್ಚಲಿದೆ. ಸರ್ಕಾರಿ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ಕೌಟುಂಬಿಕವಾಗಿ ತಂದೆಯ ಬೆಂಬಲ ಸಿಗಲಿದೆ. ಆದರೆ ಅಹಂಕಾರದ ಮಾತುಗಳಿಂದ ದೂರವಿರಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದ್ದು, ಹೂಡಿಕೆಗೆ ಸಕಾಲ.

ಮಿಥುನ ರಾಶಿ:

ಬುಧ ಮತ್ತು ಶುಕ್ರರ ಯುತಿಯಿಂದ ಬುದ್ಧಿಶಕ್ತಿ ಹಾಗೂ ಸೌಂದರ್ಯ ವೃದ್ಧಿಸಲಿದೆ. ವ್ಯಾಪಾರಿಗಳಿಗೆ ಭರಪೂರ ಲಾಭ ಸಿಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ ಮತ್ತು ಶುಭ ಸಮಾರಂಭಗಳಲ್ಲಿ ಭಾಗವಹಿಸುವಿರಿ. ಕಮ್ಯುನಿಕೇಶನ್ ವಲಯದವರಿಗೆ ಅತ್ಯಂತ ಶುಭ ವಾರವಿದು.

ಕರ್ಕಾಟಕ ರಾಶಿ :

​ಗುರು ಉಚ್ಛಸ್ಥಿತಿಯಲ್ಲಿರುವುದರಿಂದ ಭಾಗ್ಯೋದಯವಾಗಲಿದೆ. ಆಧ್ಯಾತ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದ್ದು, ಗುರು-ಹಿರಿಯರ ಆಶೀರ್ವಾದ ಸಿಗಲಿದೆ. ಆರ್ಥಿಕವಾಗಿ ದೊಡ್ಡ ಲಾಭ ಹಾಗೂ ಉದ್ಯೋಗದಲ್ಲಿ ಉನ್ನತಿ ಇರಲಿದೆ. ಕೀರ್ತಿ ಮತ್ತು ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರಲಿವೆ.

ಸಿಂಹ ರಾಶಿ :

​ಕೇತುವಿನ ಪ್ರಭಾವದಿಂದ ಮನಸ್ಸಿನಲ್ಲಿ ಅಸ್ಥಿರತೆ ಅಥವಾ ಗೊಂದಲ ಮೂಡಬಹುದು. ಯಾರಿಗೂ ಸಾಲ ನೀಡಲು ಹೋಗಬೇಡಿ. ಅನಗತ್ಯ ಪ್ರಯಾಣದಿಂದ ಆಯಾಸವಾಗಬಹುದು. ವಾರಾಂತ್ಯದಲ್ಲಿ ಧಾರ್ಮಿಕ ಚಿಂತನೆ ಹಾಗೂ ಈಶ್ವರ ಆರಾಧನೆಯಿಂದ ಮಾನಸಿಕ ಶಾಂತಿ ಮತ್ತು ನೆಮ್ಮದಿ ಸಿಗಲಿದೆ.

ಕನ್ಯಾ ರಾಶಿ :

​ಈ ವಾರ ನಿಮಗೆ ಮಿಶ್ರಫಲ ದೊರೆಯಲಿದೆ. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ವಿಶೇಷವಾಗಿ ಸಾಲದ ವ್ಯವಹಾರಗಳಿಂದ ದೂರವಿರಿ. ಸಹೋದರರೊಂದಿಗೆ ಸೌಹಾರ್ದತೆಯಿಂದ ವರ್ತಿಸಿದರೆ ಕೌಟುಂಬಿಕ ಸಮಸ್ಯೆಗಳು ಬಗೆಹರಿಯಲಿವೆ.

ತುಲಾ ರಾಶಿ :

ಭಾಗ್ಯಸ್ಥಾನದ ಬಲದಿಂದ ದೀರ್ಘಾವಧಿ ಯೋಜನೆಗಳು ಯಶಸ್ವಿಯಾಗಲಿವೆ. ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ ಹಾಗೂ ಪ್ರವಾಸದ ಯೋಗವಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದ್ದು, ಹೊಸ ಆರ್ಥಿಕ ಮೂಲಗಳು ಸೃಷ್ಟಿಯಾಗಲಿವೆ. ನೆಮ್ಮದಿಯ ವಾರವಿದು.

ವೃಶ್ಚಿಕ ರಾಶಿ :

​ಕೆಲಸದ ಒತ್ತಡವಿದ್ದರೂ ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಶತ್ರುಗಳ ಮೇಲೆ ಜಯ ಸಿಗಲಿದೆ. ಹಳೆಯ ಸಾಲಗಳಿಂದ ಮುಕ್ತಿ ಪಡೆಯುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಹಠಾತ್ ಧನಲಾಭದ ಸಾಧ್ಯತೆಯಿದ್ದು, ಕೌಟುಂಬಿಕವಾಗಿ ನೆಮ್ಮದಿ ಇರಲಿದೆ.

ಧನು ರಾಶಿ :

ಲಗ್ನಸ್ಥ ನಕ್ಷತ್ರದ ಬಲದಿಂದ ಆತ್ಮವಿಶ್ವಾಸ ಹೆಚ್ಚಿರಲಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಕಂಡುಬರಲಿದ್ದು, ಉನ್ನತ ಶಿಕ್ಷಣಕ್ಕೆ ದಾರಿ ಸುಗಮವಾಗಲಿದೆ. ಮಕ್ಕಳ ಕಡೆಯಿಂದ ಶುಭ ವಾರ್ತೆ ಕೇಳುವಿರಿ. ಹೊಸ ಕಾರ್ಯವನ್ನು ಆರಂಭಿಸಲು ಅತ್ಯಂತ ಯೋಗ್ಯವಾದ ಸಮಯವಿದು.

ಮಕರ ರಾಶಿ :

​ಮಾನಸಿಕವಾಗಿ ಸ್ವಲ್ಪ ಆತಂಕ ಮೂಡಬಹುದು. ತಾಯಿಯ ಆರೋಗ್ಯದ ಕಡೆ ಗಮನವಿರಲಿ. ಭೂಮಿ ಅಥವಾ ವಾಹನದ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಸಾರ್ವಜನಿಕವಾಗಿ ಮಾತನಾಡುವಾಗ ಜಾಗ್ರತೆ ವಹಿಸಿ. ತಾಳ್ಮೆಯಿಂದ ವರ್ತಿಸಿದರೆ ವಾರಾಂತ್ಯಕ್ಕೆ ಎಲ್ಲಾ ಸವಾಲುಗಳು ದೂರವಾಗಲಿವೆ.

​ಕುಂಭ ರಾಶಿ :

​ರಾಶಿಯಲ್ಲಿ ಚಂದ್ರ ಮತ್ತು ರಾಹು ಇರುವುದರಿಂದ ಅತಿಯಾದ ಯೋಚನೆಗಳು ಮೂಡಬಹುದು. ಧೈರ್ಯದಿಂದ ಕೆಲಸ ಮಾಡಿ, ಸಹೋದರರ ಬೆಂಬಲ ಸಿಗಲಿದೆ. ಸಣ್ಣ ಪ್ರಯಾಣಗಳಿಂದ ಲಾಭವಾಗಲಿದೆ. ಭ್ರಮೆಯಿಂದ ಹೊರಬಂದು ವಾಸ್ತವದಲ್ಲಿ ಬದುಕಿದರೆ ನೆಮ್ಮದಿ ಹಾಗೂ ಪ್ರಗತಿ ನಿಶ್ಚಿತ.

ಮೀನ ರಾಶಿ :

ರಾಶಿಯಲ್ಲಿ ಶನಿ ಇರುವುದರಿಂದ ಶಿಸ್ತು ಮತ್ತು ಪರಿಶ್ರಮ ಬಹಳ ಮುಖ್ಯ. ಆರ್ಥಿಕವಾಗಿ ಧನ ಹರಿವು ಚೆನ್ನಾಗಿದ್ದರೂ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಕಣ್ಣು ಅಥವಾ ಹಲ್ಲಿನ ಸಮಸ್ಯೆ ಕಾಡಬಹುದು. ತಾಳ್ಮೆಯ ಮಾತುಗಳು ಕುಟುಂಬದಲ್ಲಿ ಸಾಮರಸ್ಯವನ್ನು ಕಾಪಾಡಲಿವೆ.

– ಲೋಹಿತ ಹೆಬ್ಬಾರ್

Source link

Gold Rate: ವಾರಾಂತ್ಯದಲ್ಲಿ ತಗ್ಗಿದ ಚಿನ್ನದ ಬೆಲೆ; ಇಲ್ಲಿದೆ ದರಪಟ್ಟಿ

ನವದೆಹಲಿ, ಮೇ 31: ಚಿನ್ನದ ಬೆಲೆ (Gold Rate) ಮತ್ತೆ ಇಳಿಕೆಯ ಹಾದಿಗೆ ಬಂದಿದೆ. ಈ ವಾರದ ಬಹುತೇಕ ದಿನ ಇಳಿಕೆಯಾಗಿದ್ದ ಚಿನ್ನದ ಬೆಲೆ ಶುಕ್ರವಾರ 145 ರೂಗಳಷ್ಟು ಹೆಚ್ಚಳಗೊಂಡಿತ್ತು. ಈಗ ವಾರಾಂತ್ಯದಲ್ಲಿ 55 ರೂ ತಗ್ಗಿದೆ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಕಡೆ ಇದರ ಬೆಲೆ ಹೆಚ್ಚಿದೆ. ಇನ್ನು, ಬೆಳ್ಳಿ ಬೆಲೆ ಮತ್ತೊಮ್ಮೆ ಯಾವ ಬದಲಾವಣೆ ಇಲ್ಲದೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,44,500 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,57,640 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,44,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 31ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,704 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,395 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,778 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,704 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,395 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,395 ರೂ
  • ಚೆನ್ನೈ: 14,630 ರೂ
  • ಮುಂಬೈ: 14,395 ರೂ
  • ದೆಹಲಿ: 14,410 ರೂ
  • ಕೋಲ್ಕತಾ: 14,395 ರೂ
  • ಕೇರಳ: 14,395 ರೂ
  • ಅಹ್ಮದಾಬಾದ್: 14,400 ರೂ
  • ಜೈಪುರ್: 14,410 ರೂ
  • ಲಕ್ನೋ: 14,410 ರೂ
  • ಭುವನೇಶ್ವರ್: 14,395 ರೂ

ಇದನ್ನೂ ಓದಿ: ಚಿನ್ನಕ್ಕಿಂತಲೂ ಬಿಟ್​ಕಾಯಿನ್ ಒಂದು ಕೈ ಮೇಲೆ ಎನ್ನುತ್ತಿದ್ದ ಮಾರ್ಕ್ ಕ್ಯೂಬನ್ ಈಗ ಕೈಚೆಲ್ಲಿ ಕೂತ ಕಥೆ..!

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 589 ರಿಂಗಿಟ್ (14,110 ರುಪಾಯಿ)
  • ದುಬೈ: 550 ಡಿರಾಮ್ (14,220 ರುಪಾಯಿ)
  • ಅಮೆರಿಕ: 151 ಡಾಲರ್ (14,340 ರುಪಾಯಿ)
  • ಸಿಂಗಾಪುರ: 197.60 ಸಿಂಗಾಪುರ್ ಡಾಲರ್ (14,698 ರುಪಾಯಿ)
  • ಕತಾರ್: 551 ಕತಾರಿ ರಿಯಾಲ್ (14,356 ರೂ)
  • ಸೌದಿ ಅರೇಬಿಯಾ: 566 ಸೌದಿ ರಿಯಾಲ್ (14,323 ರುಪಾಯಿ)
  • ಓಮನ್: 58.20 ಒಮಾನಿ ರಿಯಾಲ್ (14,355 ರುಪಾಯಿ)
  • ಕುವೇತ್: 46.34 ಕುವೇತಿ ದಿನಾರ್ (14,221 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 280 ರೂ
  • ಚೆನ್ನೈ: 290 ರೂ
  • ಮುಂಬೈ: 280 ರೂ
  • ದೆಹಲಿ: 280 ರೂ
  • ಕೋಲ್ಕತಾ: 280 ರೂ
  • ಕೇರಳ: 290 ರೂ
  • ಅಹ್ಮದಾಬಾದ್: 280 ರೂ
  • ಜೈಪುರ್: 280 ರೂ
  • ಲಕ್ನೋ: 280 ರೂ
  • ಭುವನೇಶ್ವರ್: 290 ರೂ
  • ಪುಣೆ: 280

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version