ದಿನ ಭವಿಷ್ಯ: ಇಂದು ಈ ರಾಶಿಯವರು ದೊಡ್ಡ ವಿಚಾರದಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳಲು ಇಚ್ಛಿಸರು… – Kannada News | Daily Horoscope for July 16, 2026: Uttarayan Greeshma season, Ashada Masa shukla Paksha Thursday astrology Prediction

ಮೇಷ ರಾಶಿ:

ಏಕತಾನತೆಯನ್ನು ತಪ್ಪಿಸಲು ಹೊಸತನ್ನು ರೂಪಿಸಿಕೊಳ್ಳಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ನಿದ್ರಾಭಂಗವಾಗಿ ಕಾರ್ಯದಲ್ಲಿ ಅನಾಸಕ್ತಿ ಕಾಣಿಸುವುದು. ವಿದ್ಯಾರ್ಥಿಗಳು ಆತ್ಮವಿಶ್ವಾಸ ತುಂಬಿಕೊಳ್ಳುವರು. ದೀರ್ಘಾವಧಿಯ ಯೋಜನೆಗೆ ಒಪ್ಪಂದ ಮಾಡಿಕೊಳ್ಳುವಿರಿ. ನಿಮ್ಮವರ ಬಗ್ಗೆ ದೂರು ಬರಬಹುದು. ನಗಣ್ಯ ಮಾಡದೇ ವಿಚಾರಿಸುವಿರಿ. ಉದ್ಯಮದ ವಿಚಾರದಲ್ಲಿ ನೌಕರರಿಂದ ಹಿನ್ನಡೆಯಾಗಲಿದೆ. ಅವಶ್ಯಕತೆ ಇರುವಷ್ಟನ್ನು ಮಾತ್ರ ಖರೀದಿಸಿ.

ವೃಷಭ ರಾಶಿ:

ಉದ್ಯಮಿಗಳಿಗೆ ಮಾರುಕಟ್ಟೆ ಸ್ಪರ್ಧೆಯು ಹೆಚ್ಚಿರಬಹುದು. ಉದ್ವಿಗ್ನವು ಉಂಟಾಗ ಸಂದರ್ಭಗಳಲ್ಲಿ, ನಿಮ್ಮ ಕೋಪವನ್ನು ನಿಯಂತ್ರಿಸಿ. ಅವಿವಾಹಿತರು ಸರಿಯಾದ ಅನುರೂಪ ಸಂಗಾತಿಯನ್ನು ಕಂಡುಕೊಳ್ಳುವರು. ಕುಟುಂಬ ಬಂಧನದಿಂದ ಬಿಡುಗಡೆ ಅನಿಸುವುದು. ಕೃಷಿಯಲ್ಲಿ ಏನಾದರೂ ಮಾಡುವ ಕನಸು ಕಂಡು ಕಾರ್ಯಪ್ರವೃತ್ತರಾಗುವಿರಿ. ವಿದೇಶಪ್ರಯಾಣದ ಮಾನಸಿಕತೆಯಲ್ಲಿ ನೀವು ಇರುವಿರಿ. ನಿಮ್ಮ ಮೇಲೆ ವಿರೋಧಿಗಳ ಆಕ್ರಮಣವು ಆಗಬಹುದು.

ಮಿಥುನ ರಾಶಿ:

ಯಾರನ್ನೇ ಆದರೂ ಅವರನ್ನು ಒಂದು ಹಂತದವರಗೆ ಮಾತ್ರ ಒಳಗೆ ಕರೆಯುವುದು ಸೂಕ್ತ. ನಿಮ್ಮ ಪ್ರಣಯ ಜೀವನವು ಉತ್ತಮವಾಗಿ ಬದಲಾಗಬಹುದು. ನಿಮ್ಮ ಪ್ರಣಯವು ಸಂಗಾತಿಯ ಜೊತೆ ಅಭಿವ್ಯಕ್ತವಾಗುವ ಸಾಧ್ಯತೆ ಇದೆ. ಪ್ರೀತಿಸುವವರಿಗೆ ಸ್ವಲ್ಪ ಸಮಯ ಕೊಡಬೇಕಾಗುವುದು. ಸುಮ್ಮನೇ ಮಾತನಾಡುವ ಚಪಲವು ಅಧಿಕವಾಗುವುದು. ವಿದೇಶಿ ಕಂಪೆನಿ ಉದ್ಯೋಗವನ್ನು ಬಯಸುವಿರಿ. ಸಣ್ಣ ವಿಚಾರಕ್ಕೆ ದ್ವೇಷ ಸಾಧಿಸುವುದು ಸರಿಯಾಗದು.

ಕರ್ಕಾಟಕ ರಾಶಿ:

ಕೆಲಸದ ಸ್ಥಳದಲ್ಲಿ ನಿಮ್ಮ ಮೇಲಿನವರ ಮಾರ್ಗದರ್ಶನ ಪಡೆಯಿರಿ. ಸಹೋದರರ ಸಹಾಯದಿಂದ ನಿಮ್ಮ ವೃತ್ತಿಪರ ಯಶಸ್ಸಿಗೆ ಕಾರಣವಾಗುವುದು. ವಿದೇಶದಿಂದ ಆಗಮನವಾಗಲಿದ್ದು ವಾತಾವರಣದ ಹೊಂದಾಣಿಕೆ ಕಷ್ಟವಾಗುವುದು. ಹಠದಿಂದ ಯಾವ ಕಾರ್ಯವನ್ನೂ ಮಾಡಲು ಹೋಗವುದು ಬೇಡ. ಇಲ್ಲವಾದರೆ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ವೃತ್ತಿ, ಹಣಕಾಸು ಮತ್ತು ಸಂಬಂಧಕ್ಕೆ ಬಂದಾಗ ವಿಷಯಗಳನ್ನು ಹೆಚ್ಚು ಯೋಚಿಸಬೇಡಿ. ಚಿತ್ತವೃತ್ತಿಗಳು ನಿಮ್ಮನ್ನು ಸುಮ್ಮನೆ ಇರಲು ಬಿಡದು.

ಸಿಂಹ ರಾಶಿ:

ಇಂದು ನೀವು ಉತ್ತಮ ಆರ್ಥಿಕ ಪ್ರಗತಿಯನ್ನು ಹೊಂದಿದ್ದು ನೀವು ಹೇಳಿದ ರೀತಿಯಲ್ಲಿಯೇ ಎಲ್ಲವೂ ನಡೆಯುವುದು. ನಿಮ್ಮ ಪ್ರಯತ್ನಗಳು ನಿಮ್ಮ ಆತ್ಮ ವಿಶ್ವಾಸವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಹಣದ ವ್ಯವಹಾರವು ಸಂಬಂಧವನ್ನು ದೂರ ಮಾಡುವುದು. ದಾಖಲೆಗಳ ನವೀಕರಣ ವಿಚಾರದ ಕಡೆ ಗಮನ ಹೆಚ್ಚು ಇರಲಿ. ಔಷಧದ ವ್ಯಾಪಾರದಿಂದ ನಿಮಗೆ ಅಧಿಕ ಲಾಭವಾಗಬಹುದು. ಧೈರ್ಯದಿಂದ ಮುನ್ನಡೆಯುವ ಇಚ್ಛಾಶಕ್ತಿಯನ್ನು ರೂಢಿಸಿಕೊಳ್ಳಿ.

ಕನ್ಯಾ ರಾಶಿ:

ದಿನದ ಆರಂಭದಲ್ಲಿ ಗಮನಾರ್ಹ ಹಣಕಾಸಿನ ಸಮಸ್ಯೆಗಳಿಂದ ನೀವು ತೊಂದರೆಗೊಳಗಾಗಬಹುದು. ಬಹಳ ಸಮಯ ಒಂದೆ ಕಡೆ ಕುಳಿತಿರಲಾಗದು. ಅಪರಿಚಿರ ಒಡನಾಟವು ಹೊಸ ದಿಕ್ಕಿನ ಕಡೆ ಕರೆದೊಯ್ಯುವುದು. ನಿಮ್ಮ ವೃತ್ತಿಜೀವನವು ಉತ್ತಮವಾದ ಆರಂಭವನ್ನು ಪಡೆಯಬಹುದು. ಬೇಕಾದಷ್ಟು ಸಂಪತ್ತಿದ್ದರೂ ಅದನ್ನು ಖರ್ಚು ಮಾಡುವ ಮನಸ್ಸು ಬಾರದು. ಒಮ್ಮೆಲೆ ಕಷ್ಟಗಳು ಬರುವುದರಿಂದ ಧೃತಿಗೆಡುವ ಅವಶ್ಯಕತೆ ಇರುವುದಿಲ್ಲ. ಉದ್ವೇಗದಿಂದ ಸಿಟ್ಟುಗೊಂಡು ಅಪ್ರಿಯರಾಗುವಿರಿ.

ತುಲಾ ರಾಶಿ:

ವ್ಯಾಪಾರದಲ್ಲಿ ಅಜ್ಞಾನದಿಂದ ನಷ್ಟವಾಗುತ್ತದೆ. ಹೇಳದೇ ಪರರ ವಸ್ತುವನ್ನು ಪಡೆಯುವಿರಿ. ಮಕ್ಕಳಿಂದ ನೆಮ್ಮದಿಯು ನಿಮಗೆ ಸಿಗುತಗತದೆ. ಇಂದು ವ್ಯಾಪಾರಸ್ಥರಿಗೆ ಸ್ವಲ್ಪ ನಷ್ಟವಾಗುವ ಸಾಧ್ಯತೆ ಇದೆ. ನಿಮ್ಮ ಸುಧಾರಿತ ಆರ್ಥಿಕ ಸ್ಥಿತಿಯು ನಿಮಗೆ ಹೆಚ್ಚು ಸುಖವನ್ನು ಉಂಟುಮಾಡುತ್ತದೆ. ಇದು ನಿಮ್ಮನ್ನು ನಕಾರಾತ್ಮಕ ಭಾವನೆಗಳಿಂದ ಹೊರಬರಲು ಸಹಾಯ ಮಾಡುತ್ತದೆ. ಅಧಿಕ ಆದಾಯದಿಂದ ನಿಮ್ಮ ನೆಮ್ಮದಿಯ ಹರಣವಾಗಿದೆ ಎಂದು ಅನ್ನಿಸಲೂಬಹುದು.

ವೃಶ್ಚಿಕ ರಾಶಿ:

ಅನಿರೀಕ್ಷಿತವಾಗಿ ಬಂದ ಜವಾಬ್ದಾರಿಗಳು ನೀವು ನಿರ್ವಹಿಸಬೇಕಾಗುವುದು. ಆದಾಯವನ್ನು ಉತ್ತಮ ಮಾಡಿಕೊಳ್ಳುವಿರಿ. ಒತ್ತಡದ ತರುವ ಕೆಲಸದಿಂದ ವಿರಾಮವನ್ನು ಪಡೆಯಬೇಕಾದೀತು. ಇತ್ತೀಚಿನ ಹೂಡಿಕೆಯ ಜೊತೆ ಹಳೆಯ ಹೂಡಿಕೆಯ ಲಾಭವನ್ನು ಪಡೆಯುವಿರಿ. ವಿದೇಶದ ಉದ್ಯೋಗದಲ್ಲಿ ನಿಮಗೆ ಕಷ್ಟ ಬರುವ ಸಾಧ್ಯತೆ ಇಧೆ. ನಿಮ್ಮ ವೃತ್ತಿಪರ ಜೀವನದಲ್ಲಿ ಅದೃಷ್ಟವು ನಿಮ್ಮ ಪರವಾಗಿರಬಹುದು. ಸೃಜನಾತ್ಮಕವಾಗಿ ಏನನ್ನಾದರೂ ಮಾಡಲು ಹೋಗಿ ಎಡವುವಿರಿ.

ಧನು ರಾಶಿ:

ಅತಿಯಾದ ಚಂಚಲ ಮನಸ್ಸಿನಿಂದ ಕಾರ್ಯವನ್ನು ಸಾಧಿಸಲಾಗದು. ನಿಮ್ಮ ಅಜ್ಞಾನದಿಂದ ನಷ್ಟವಾಗದಂತೆ ಎಚ್ಚರ ವಹಿಸಿ. ಹಿಂದಿನ ಕೆಲವು ಹಣಕಾಸಿನ ಸಮಸ್ಯೆಗಳು ಮತ್ತೆ ಕಾಣಿಸಿಕೊಳ್ಳಬಹುದು ಮತ್ತು ನಿಮ್ಮ ಗಮನವನ್ನು ಕೋರಬಹುದು. ನಿಮ್ಮ ಸಾಧನೆಯು ಕಠಿಣ ಪರಿಶ್ರಮದ ಫಲಿತಾಂಶವಾಗಿದೆ. ನಿಮ್ಮ ಜೀವನವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವಿರಿ. ವ್ಯವಹಾರದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅನಗತ್ಯ ವಾದ ವಿವಾದಗಳಿಂದ ದೂರವಿರಿ.

ಮಕರ ರಾಶಿ:

ನಿಮ್ಮ ಕೆಲಸ ಮತ್ತು ವೈಯಕ್ತಿಕ ಜೀವನದಲ್ಲಿ ಏರಿಳಿತದ ಜೊತೆ, ಅಸ್ತವ್ಯಸ್ತವಾಗಬಹುದು. ಭವಿಷ್ಯದ ಬಗ್ಗೆ ಈ ದಿನವನ್ನು ಆನಂದಿಸಲು, ನೀವು ಮೊದಲು ಜವಾಬ್ದಾರಿಗಳನ್ನು ಪೂರೈಸುವತ್ತ ಗಮನ ಹರಿಸಬೇಕು. ಸಂಗಾತಿಗೆ ನೇರವಾಗಿ ಹೇಳದೇ ಹೇಳಬೇಕಾದುದನ್ನು ಹೇಳುವಿರಿ. ಜೊತೆಗೆ, ವ್ಯಕ್ತಿಗತ ಸಂಬಂಧಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ನಿಮ್ಮ ವಿವಾಹವು ಕಾನೂನು ವಿವಾದದ ವಿಷಯವಾಗಿದ್ದರೆ, ಅದು ಕೊನೆಗೊಳ್ಳುವ ಸಾಧ್ಯತೆಯಿದೆ. ಪ್ರಯೋಗ ವಿಭಾಗದಲ್ಲಿ ಕೆಲಸ ಮಾಡುವರು.

ಕುಂಭ ರಾಶಿ:

ಇದ್ದಕಿದ್ದಂತೆ ಹಳೆಯ ರೋಗವು‌ ಮರುಕಳಿಸಬಹುದು. ನಿಮ್ಮ ಹಾಗೂ ಸಂಗಾತಿಯ ನಡುವೆ ಉತ್ತಮ ಸಂಬಂಧಗಳು ಇರಲಿದೆ. ನಿಂದನೆಯನ್ನು ಅತಿಯಾಗಿ ಸಹಿಸುವಿಕೆ ನಿಮ್ಮಲ್ಲಿ‌ ಇರದು. ನಿಮ್ಮ ಸಂವಹನಕ್ಕೆ ವಿವಿಧ ಮಾರ್ಗಗಳನ್ನು ಹುಡುಕುವಿರಿ. ಉದ್ಯಮದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು, ವ್ಯಾಪಾರದ ವಿಸ್ತರಣೆಯನ್ನು ಮಾಡುವಿರಿ. ನಿಮ್ಮ ಪ್ರಯತ್ನಗಳಿಂದ ಉತ್ತಮ ಫಲಿತಾಂಶವನ್ನು ಕಾರಣವಾಗಬಹುದು. ದುಸ್ಸಾಹಸಕ್ಕೆ ಹೋಗಿ ಕೈ ಸುಟ್ಟುಕೊಳ್ಳುವಿರಿ.

ಮೀನ ರಾಶಿ:

ನಿಮಗೆ ವ್ಯವಹಾರವು ಅಂದುಕೊಂಡಷ್ಟು ಸಾಧಿಸಲಾಗದೇ ಇಂದು ಬೇಸರವಾಗಬಹುದು. ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ನೀವು ಸರಿಯಾದ ವಿಧಾನವನ್ನು ಆಯ್ಕೆ ಮಾಡುವಿರಿ. ಉಜ್ವಲ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು, ನೀವು ಉಪಕ್ರಮವನ್ನು ತೆಗೆದುಕೊಳ್ಳಬಹುದು. ಮನೆ ಹಿರಿಯರ ಆರೋಗ್ಯದ ಕಡೆ ಗಮನ ನೀಡಿ. ಎಲ್ಲ ಕಾರ್ಯದಲ್ಲಿಯೂ ಶ್ರದ್ಧೆಯು ಕಡಿಮೆಯಾಗುವುದು. ಮಂದಗತಿಯಲ್ಲಿ ಸಾಗುವ ಕೆಲಸಗಳಿಗೆ ವೇಗವನ್ನು ಕೊಡುವಿರಿ. ನಿಮಗೆ ಆತ್ಮತೃಪ್ತಿಯು ಇರುವುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಪುನರ್ವಸು, ವಾರ : ಗುರು ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಆಶ್ಲೇಷಾ, ಯೋಗ : ವರಿಯಾನ್, ಕರಣ : ಬವ, ಸೂರ್ಯೋದಯ – 06 – 02 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:01 – 15:37, ಯಮಗಂಡ ಕಾಲ 06:02 – 07:38, ಗುಳಿಕ ಕಾಲ 09:14 – 10:50

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:25 am, Thu, 16 July 26

Source link

ಒಟಿಟಿ ಸಿನಿಮಾಗಳಿಗೂ ಸೆನ್ಸಾರ್ ಪ್ರಮಾಣಪತ್ರ ಕಡ್ಡಾಯ? ‘ಸತ್ಲುಜ್’ ವಿವಾದದ ಬೆನ್ನಲ್ಲೇ ಕೇಂದ್ರದ ಚಿಂತನೆ – Kannada News | Central Government mulls mandatory CBFC Censor Certificate for OTT after Satluj Controversy

ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳಿಗೆ ಸೆನ್ಸಾರ್ ಮಂಡಳಿಯ (CBFC) ಪ್ರಮಾಣಪತ್ರ ಕಡ್ಡಾಯವಾಗಿರುವಂತೆ, ಇನ್ನು ಮುಂದೆ ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳಲ್ಲಿ ನೇರವಾಗಿ ಬಿಡುಗಡೆಯಾಗುವ ಚಿತ್ರಗಳಿಗೂ ಸೆನ್ಸಾರ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಖ್ಯಾತ ನಟ ದಿಲ್ಜಿತ್ ದೋಸಾಂಜ್ ಅಭಿನಯದ ‘ಸತ್ಲುಜ್’ (Satluj) ಸಿನಿಮಾ ವಿವಾದದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ‘ಇಂಡಿಯಾ ಟುಡೇ’ ವರದಿ ಮಾಡಿದೆ.

‘ಸತ್ಲುಜ್’ ಚಿತ್ರದಿಂದ ಶುರುವಾದ ವಿವಾದ:

ಮೂಲಗಳ ಪ್ರಕಾರ, ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ಜೀವನ ಆಧರಿತ ‘ಸತ್ಲುಜ್’ ಚಿತ್ರವನ್ನು ಯಾವುದೇ ಸೆನ್ಸಾರ್ ಪ್ರಮಾಣಪತ್ರ ಇಲ್ಲದೇ ಒಟಿಟಿಯಲ್ಲಿ ಪ್ರಸಾರ ಮಾಡಲಾಗಿತ್ತು. ಇದು ಕಾನೂನುಬಾಹಿರವಾಗಿದ್ದು, ಈ ಹಿನ್ನೆಲೆಯಲ್ಲಿ 2021ರ ಐಟಿ ನಿಯಮಗಳಿಗೆ (IT Rules, 2021) ಅಗತ್ಯ ತಿದ್ದುಪಡಿ ತರಲು ಸರ್ಕಾರ ಯೋಚಿಸುತ್ತಿದೆ.

ಜೀ5 ವಿರುದ್ಧ ಕ್ರಮದ ಸಾಧ್ಯತೆ:

ಜುಲೈ 3ರಂದು ಪ್ರಸಾರ ಆರಂಭಿಸಿದ್ದ ‘ಸತ್ಲುಜ್’ ಸಿನಿಮಾವನ್ನು ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಕೇವಲ 48 ಗಂಟೆಗಳಲ್ಲೇ ಜೀ5 ಒಟಿಟಿಯಿಂದ ತೆಗೆದುಹಾಕಲಾಗಿತ್ತು. ಸೆನ್ಸಾರ್ ಮಂಡಳಿಯು ಈ ಚಿತ್ರಕ್ಕೆ ಬರೋಬ್ಬರಿ 127 ಕಟ್‌ಗಳನ್ನು ಸೂಚಿಸಿತ್ತಾದರೂ, ಯಾವುದೇ ಕಟ್‌ಗಳಿಲ್ಲದ ಆವೃತ್ತಿಯನ್ನು ಜೀ5 ಪ್ರಸಾರ ಮಾಡಿತ್ತು ಎನ್ನಲಾಗಿದೆ. ಹೀಗಾಗಿ ನಿಯಮ ಉಲ್ಲಂಘಿಸಿ ಸಿನಿಮಾ ಪ್ರಸಾರ ಮಾಡಿದ ಒಟಿಟಿ ಸಂಸ್ಥೆ ‘ಜೀ5’ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಮುಂದಾಗಿದೆ.

ಕ್ರಿಮಿನಲ್ ಮೊಕದ್ದಮೆಗೆ ಸೂಚನೆ:

ಮತ್ತೊಂದೆಡೆ, ಒಟಿಟಿಯಿಂದ ಬ್ಯಾನ್ ಆದ ಬಳಿಕವೂ ಪಂಜಾಬ್‌ನ ವಿವಿಧ ಗುರುದ್ವಾರಗಳು ಮತ್ತು ಖಾಸಗಿ ಸಮುದಾಯ ಕಾರ್ಯಕ್ರಮಗಳಲ್ಲಿ ಈ ಚಿತ್ರವನ್ನು ಅನಧಿಕೃತವಾಗಿ ಪ್ರದರ್ಶಿಸಲಾಗುತ್ತಿದೆ. ಇಂತಹ ಅಕ್ರಮ ಪ್ರದರ್ಶನಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕೇಂದ್ರ ಸರ್ಕಾರವು ಆಯಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಸದ್ಯಕ್ಕೆ ಈ ಒಟಿಟಿ ಸೆನ್ಸಾರ್ ನಿಯಮದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲವಾದರೂ, ಶೀಘ್ರದಲ್ಲೇ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ.

ಇದನ್ನೂ ಓದಿ: ‘ಸತ್ಲುಜ್’ ಸಿನಿಮಾ ವಿವಾದ; ಒಟಿಟಿ ಬ್ಯಾನ್ ಬೆನ್ನಲ್ಲೇ ಐಎಂಡಿಬಿ ರೇಟಿಂಗ್ ಮಾಯ

ಸಾಮಾನ್ಯವಾಗಿ ಭಾರತದಲ್ಲಿ ಸಿನಿಮಾಗಳ ಪ್ರಮಾಣೀಕರಣಕ್ಕೆ ‘ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ’ ಪ್ರಮುಖ ಸಂಸ್ಥೆಯಾಗಿದೆ. ಚಿತ್ರಮಂದಿರಗಳಲ್ಲಿ ಯಾವುದೇ ಸಿನಿಮಾ ಬಿಡುಗಡೆಯಾಗಲು ಈ ಮಂಡಳಿಯ ಅನುಮೋದನೆ ಕಡ್ಡಾಯ. ಆದರೆ, ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸದ್ಯಕ್ಕೆ ಸಿಬಿಎಫ್‌ಸಿ ವ್ಯಾಪ್ತಿಯಿಂದ ಹೊರಗಿವೆ. ಇದು ವೆಬ್ ಸರಣಿ ಮತ್ತು ಸಿನಿಮಾ ನಿರ್ಮಾಪಕರಿಗೆ ಯಾವುದೇ ಸೆನ್ಸಾರ್ ತಪಾಸಣೆ ಇಲ್ಲದೇ ತಮ್ಮ ಕಂಟೆಂಟ್​ಗಳನ್ನು ನೇರವಾಗಿ ಬಿಡುಗಡೆ ಮಾಡುವ ಸ್ವಾತಂತ್ರ್ಯ ನೀಡಿದೆ. ಆ ಕಾರಣದಿಂದಲೇ ‘ಸತ್ಲುಜ್’ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಆದ ಬಳಿಕ ಅದನ್ನು ಡಿಲೀಟ್ ಮಾಡಿಸಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ನೀನು ಮುಸ್ಲಿಮನಾ?’; ಅಮೆರಿಕದ ಮಾಲ್‌ನಲ್ಲಿ ಧರ್ಮ ಕೇಳಿ ಭಾರತೀಯ ಮೂಲದ ವ್ಯಕ್ತಿಗೆ 15 ಬಾರಿ ಚಾಕು ಇರಿತ – Kannada News | Are You Muslim? Indian Man Stabbed 15 Times In United States Shopping Mall

ವಾಷಿಂಗ್ಟನ್, ಜುಲೈ 15: ಅಮೆರಿಕದ (United States) ಯೂಟಾ ರಾಜ್ಯದ ಶಾಪಿಂಗ್ ಮಾಲ್‌ ಒಂದರಲ್ಲಿ ಅತ್ಯಂತ ಆಘಾತಕಾರಿ ಘಟನೆ ನಡೆದಿದೆ. ಭಾರತೀಯ ಮೂಲದ ಉದ್ಯೋಗಿಯೊಬ್ಬರ ಧರ್ಮವನ್ನು ಕೇಳಿ ಅವರ ಮೇಲೆ ಜನಾಂಗೀಯ ದ್ವೇಷದಿಂದ ಚಾಕುವಿನಿಂದ ಇರಿಯಲಾಗಿದೆ. ದಾಳಿ ನಡೆಸಲು ಬಂದವನು ಮೊದಲು ಆ ವ್ಯಕ್ತಿಯ ಬಳಿ “ನೀನು ಮುಸ್ಲಿಮನಾ?” ಎಂದು ಪ್ರಶ್ನೆ ಮಾಡಿದ್ದಾನೆ. ಅದಕ್ಕೆ ಅವರು “ಹೌದು, ನಾನು ಮುಸ್ಲಿಂ” ಎಂದಿದ್ದಾರೆ. ಆ ವ್ಯಕ್ತಿ ಮುಸ್ಲಿಂ ಎಂದು ಖಚಿತವಾದ ನಂತರ ಕೊಲ್ಲುವ ಉದ್ದೇಶದಿಂದಲೇ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ನಡೆದಿದ್ದು ಹೇಗೆ?:

ವೆಸ್ಟ್ ವ್ಯಾಲಿ ಸಿಟಿಯ ‘ವ್ಯಾಲಿ ಫೇರ್ ಮಾಲ್’ನಲ್ಲಿ ಸೋಮವಾರ ಈ ಘಟನೆ ನಡೆದಿದೆ. ಮಾಲ್‌ನ ಸಣ್ಣ ಮಳಿಗೆ ಒಂದರಲ್ಲಿ ಭಾರತೀಯ ಮೂಲದ ಸೊಹೈಲ್ ಎಂಬುವವರು ಕೆಲಸ ಮಾಡುತ್ತಿದ್ದರು. 48 ವರ್ಷದ ಪೀಟರ್ ಮೈಕೇಲ್ ಲಾರ್ಸೆನ್ ಎಂಬ ಆರೋಪಿ ಸೊಹೈಲ್ ಅವರ ಬಳಿ ಬಂದು ಮೊದಲು ಕುಡಿಯಲು ಒಂದು ಬಾಟಲಿ ನೀರು ಕೇಳಿದ್ದಾನೆ. ಆಗ ಅವರಿಬ್ಬರ ನಡುವೆ ಮಾತುಕತೆ ನಡೆದಿದೆ.

ಇದನ್ನೂ ಓದಿ: ದೆಹಲಿ ಜೈಲಿನಲ್ಲಿ ಅಮೆರಿಕನ್ ಸ್ಟೈಲ್ ಡಯಟ್ ಕೇಳಿ ಕೋರ್ಟ್ ಮೆಟ್ಟಿಲೇರಿದ ವಿದೇಶಿ ಕೈದಿ!

ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಸತ್ಯ:

ಆ ಅಂಗಡಿಯ ಪಕ್ಕದ ಜ್ಯುವೆಲ್ಲರಿ ಅಂಗಡಿಯ ಪ್ರತ್ಯಕ್ಷದರ್ಶಿ ಉದ್ಯೋಗಿ ಲೂನಾ ನುನೆಜ್ ತಿಳಿಸಿರುವಂತೆ, “ಆರೋಪಿ ಲಾರ್ಸೆನ್ ಸೊಹೈಲ್ ಬಳಿ ಬಂದು ‘ನೀನು ಎಲ್ಲಿಂದ ಬಂದಿದ್ದೀಯಾ?’ ಎಂದು ಕೇಳಿದನು. ಅದಕ್ಕೆ ಸೊಹೈಲ್, ‘ನಾನು ಭಾರತದವನು, ನನ್ನ ಹೆಸರು ಸೊಹೈಲ್’ ಎಂದರು. ತಕ್ಷಣ ಲಾರ್ಸೆನ್ ‘ನೀನು ಮುಸ್ಲಿಮನಾ?’ ಎಂದು ಪ್ರಶ್ನಿಸಿದಾಗ ಸೊಹೈಲ್ ‘ಹೌದು’ ಎಂದರು. ಸೊಹೈಲ್ ನೀರಿನ ಬಾಟಲಿ ನೀಡಲು ತಿರುಗುತ್ತಿದ್ದಂತೆಯೇ, ಲಾರ್ಸೆನ್ ಚಾಕು ತೆಗೆದು ಅವರ ಮೇಲೆ ಮನಬಂದಂತೆ ದಾಳಿ ನಡೆಸಿದ್ದಾನೆ” ಎಂದು ಅವರು ತಿಳಿಸಿದ್ದಾರೆ. ಲೂನಾ ನುನೆಜ್ ಅವರು ಸೊಹೈಲ್ ರಕ್ಷಣೆಗಾಗಿ ಚಪ್ಪಲಿ, ಕುರ್ಚಿ ಸೇರಿದಂತೆ ಕೈಗೆ ಸಿಕ್ಕಿದ್ದನ್ನೆಲ್ಲ ಆರೋಪಿಯ ಮೇಲೆ ಎಸೆದಿದ್ದಾರೆ.

ಇದನ್ನೂ ಓದಿ: ಜನಾಂಗೀಯ ಹಿಂಸಾಚಾರಕ್ಕೆ ಕಾರಣವಾದ ವಿವಾದಾತ್ಮಕ ಆದೇಶ ತಿದ್ದುಪಡಿ ಮಾಡಿದ ಮಣಿಪುರ ಹೈಕೋರ್ಟ್

ಸೊಹೈಲ್ ಅವರ ದೇಹಕ್ಕೆ ಬರೋಬ್ಬರಿ 15 ಬಾರಿ ಚಾಕು ಇರಿಯಲಾಗಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಹಲವು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದಾರೆ. ಸೊಹೈಲ್ ಮೇಲೆ ದಾಳಿ ನಡೆಯುತ್ತಿದ್ದಾಗ, ಮಾಲ್‌ನಲ್ಲಿದ್ದ ಸಾರ್ವಜನಿಕರು ತಕ್ಷಣವೇ ಸಹಾಯಕ್ಕೆ ಬಂದಿದ್ದಾರೆ. ನಂತರ ಅಲ್ಲಿದ್ದ ಇತರರು ಆರೋಪಿಯನ್ನು ಹಿಡಿದು ಕೆಳಕ್ಕೆ ತಳ್ಳಿ, ಪೊಲೀಸರು ಬರುವವರೆಗೂ ಆತನನ್ನು ಹಿಡಿದಿಟ್ಟುಕೊಂಡಿದ್ದಾರೆ.

ಮುಸ್ಲಿಮರನ್ನು ಕೊಲ್ಲುವುದೇ ನನ್ನ ಉದ್ದೇಶ:

ಬಂಧಿತ ಆರೋಪಿ ಪೀಟರ್ ಮೈಕೇಲ್ ಲಾರ್ಸೆನ್ ತನಿಖಾಧಿಕಾರಿಗಳ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ತಾನು ಮುಸ್ಲಿಮರನ್ನು ಕೊಲ್ಲುವ ಉದ್ದೇಶದಿಂದಾಗಿಯೇ ಸೊಹೈಲ್ ಮುಸ್ಲಿಂ ಎಂದು ಖಚಿತಪಡಿಸಿಕೊಂಡು ದಾಳಿ ಮಾಡಿದ್ದಾಗಿ ಹೇಳಿದ್ದಾನೆ. ಆತನ ಮೇಲೆ ಕೊಲೆ ಯತ್ನ ಹಾಗೂ ನಿಷೇಧಿತ ಮಾರಕಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸಾಲ್ಟ್ ಲೇಕ್ ಕೌಂಟಿ ಜೈಲಿನಲ್ಲಿ ಇಡಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಉತ್ತರ ಭಾರತಕ್ಕೂ ವಿಸ್ತರಿಸಿದ ಇಶಾ ಗ್ರಾಮೋತ್ಸವ; 10 ರಾಜ್ಯಗಳಲ್ಲಿ ನಡೆಯಲಿದೆ ಗ್ರಾಮೀಣ ಕ್ರೀಡಾ ಹಬ್ಬ – Kannada News | Sadhgurus Isha Gramotsavam expands to 10 states and 40000 Villages in India

ನವದೆಹಲಿ, ಜುಲೈ 15: ಸದ್ಗುರು ಜಗ್ಗಿ ವಾಸುದೇವ್ ಅವರ ‘ಇಶಾ ಔಟ್‌ರೀಚ್’ ಸಂಸ್ಥೆ ಆಯೋಜಿಸುವ ಪ್ರಸಿದ್ಧ ಗ್ರಾಮೀಣ ಕ್ರೀಡಾ ಹಬ್ಬ ‘ಇಶಾ ಗ್ರಾಮೋತ್ಸವ’ (Isha Gramotsavam) ಈ ಬಾರಿ ಉತ್ತರ ಭಾರತಕ್ಕೂ ಕಾಲಿಟ್ಟಿದೆ. ತನ್ನ 18ನೇ ಆವೃತ್ತಿಯಲ್ಲಿ ಬರೋಬ್ಬರಿ 10 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ವಿಸ್ತರಣೆಯಾಗಿದ್ದು, ಇದು ಇದುವರೆಗಿನ ಅತ್ಯಂತ ಬೃಹತ್ ಕ್ರೀಡಾಕೂಟವಾಗಿರಲಿದೆ. ಈ ಬೃಹತ್ ಹಬ್ಬದಲ್ಲಿ 40,000ಕ್ಕೂ ಹೆಚ್ಚು ಹಳ್ಳಿಗಳ 80,000ಕ್ಕೂ ಹೆಚ್ಚು ಆಟಗಾರರು ಭಾಗವಹಿಸಲಿದ್ದಾರೆ.

ಇದುವರೆಗೆ ದಕ್ಷಿಣ ಭಾರತದ ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಪುದುಚೇರಿಗಳಿಗಷ್ಟೇ ಸೀಮಿತವಾಗಿದ್ದ ಈ ಉತ್ಸವ, ಈಗ ಮೊದಲ ಬಾರಿಗೆ ಉತ್ತರ ಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ, ಒಡಿಶಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೂ ವಿಸ್ತರಿಸಿದೆ. ಇಡೀ ದೇಶಾದ್ಯಂತ ಒಟ್ಟು 250ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಸ್ಪರ್ಧೆಗಳು ನಡೆಯಲಿವೆ.

ಕ್ರೀಡಾಕೂಟದ ವಿಶೇಷತೆಗಳು:

ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಇಶಾ ಫೌಂಡೇಶನ್‌ನ ಸ್ವಾಮಿ ಪುಲಕ, ಪುರುಷರಿಗೆ ವಾಲಿಬಾಲ್ ಮತ್ತು ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾವಳಿಗಳು ನಡೆಯಲಿವೆ ಎಂದಿದ್ದಾರೆ. ಆದರೆ, ಪ್ರತಿ ತಂಡದಲ್ಲಿ ಆಡುವ ಎಲ್ಲಾ ಆಟಗಾರರು ಕಡ್ಡಾಯವಾಗಿ ಒಂದೇ ಗ್ರಾಮ ಪಂಚಾಯಿತಿಗೆ ಸೇರಿದವರಾಗಿರಬೇಕು.

ಇದನ್ನೂ ಓದಿ: ಪ್ರಚಾರಕ್ಕಾಗಿ ಸದ್ಗುರುವಿನ ನಕಲಿ ಫೋಟೋ, ವಿಡಿಯೋ ಬಳಸದಿರಲು ದೆಹಲಿ ಹೈಕೋರ್ಟ್ ಆದೇಶ

ವೃತ್ತಿಪರ ಆಟಗಾರರಿಗೆ ನಿರ್ಬಂಧ:

ಕೇವಲ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶ ಇರುವುದರಿಂದ ಯಾವುದೇ ವೃತ್ತಿಪರ ಆಟಗಾರರಿಗೆ ಇಲ್ಲಿ ಆಡಲು ಅವಕಾಶವಿಲ್ಲ. ಒಟ್ಟು 7,000 ತಂಡಗಳು ಕಣಕ್ಕಿಳಿಯಲಿದ್ದು, ಇದರಲ್ಲಿ ಸುಮಾರು 15,000 ಮಹಿಳಾ ಆಟಗಾರರು ಇರಲಿದ್ದಾರೆ. ಒಟ್ಟು ನಗದು ಬಹುಮಾನದ ಮೊತ್ತ 1 ಕೋಟಿ ರೂ.ಗೂ ಅಧಿಕವಾಗಿದೆ.

Isha Gramotsavam

ಕ್ರೀಡಾಕೂಟದ ವೇಳಾಪಟ್ಟಿ:

ಜುಲೈ ಎರಡನೇ ವಾರದಿಂದ ಕ್ಲಸ್ಟರ್ ಮಟ್ಟದ ಪಂದ್ಯಗಳು ಆರಂಭವಾಗಲಿದ್ದು, ನಂತರ ವಿಭಾಗೀಯ ಮತ್ತು ರಾಜ್ಯ ಮಟ್ಟದ ಫೈನಲ್ಸ್ ನಡೆಯಲಿವೆ. ಸೆಪ್ಟೆಂಬರ್‌ನಲ್ಲಿ ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಸದ್ಗುರುಗಳ ಸಮ್ಮುಖದಲ್ಲಿ ಮಹಾ ಫೈನಲ್ಸ್ ನಡೆಯಲಿದೆ.

ಎಲ್ಲಿ, ಯಾವಾಗ ಪಂದ್ಯ ನಡೆಯಲಿದೆ?:

ಉತ್ತರ ಪ್ರದೇಶ: ಲಕ್ನೋ, ವಾರಾಣಸಿ, ಮೀರತ್ ಮುಂತಾದೆಡೆ ಕ್ಲಸ್ಟರ್ ಪಂದ್ಯಗಳು ನಡೆದು, ಆಗಸ್ಟ್ 9ರಂದು ಲಕ್ನೋದಲ್ಲಿ ರಾಜ್ಯ ಮಟ್ಟದ ಫೈನಲ್ ನಡೆಯಲಿದೆ.

ಹರಿಯಾಣ: ಕರ್ನಾಲ್, ಅಂಬಾಲಾ ಮುಂತಾದೆಡೆ ಪಂದ್ಯಗಳು ನಡೆದು, ಆಗಸ್ಟ್ 9ರಂದು ಕರ್ನಾಲ್‌ನಲ್ಲಿ ರಾಜ್ಯ ಮಟ್ಟದ ಫೈನಲ್ ನಡೆಯಲಿದೆ.

Isha Gramotsavam

ಇದನ್ನೂ ಓದಿ: 79ನೇ ವರ್ಷದ ಸ್ವತಂತ್ರ ಭಾರತ; ಉದಾರೀಕರಣ ಮಾತ್ರವಲ್ಲ, ಮುಕ್ತಗೊಳಿಸುವ ಸಮಯ ಇದು: ಸದ್ಗುರು

ಕಳೆದ ಎರಡು ದಶಕಗಳಲ್ಲಿ ಈ ಗ್ರಾಮೋತ್ಸವವು 35,000ಕ್ಕೂ ಹೆಚ್ಚು ಹಳ್ಳಿಗಳ 2.6 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಕ್ರೀಡಾಪಟುಗಳನ್ನು ತಲುಪಿದೆ. ಕ್ರೀಡೆಯೊಂದಿಗೆ ಗ್ರಾಮೀಣ ಭಾರತದ ಸಂಸ್ಕೃತಿ, ಜಾನಪದ ಕಲೆ ಮತ್ತು ವಿಭಿನ್ನ ಪ್ರಾದೇಶಿಕ ಖಾದ್ಯಗಳ ಪ್ರದರ್ಶನಕ್ಕೂ ಇದು ಸಾಕ್ಷಿಯಾಗಲಿದೆ.

ಇಶಾ ಫೌಂಡೇಶನ್‌ನ ಈ ಉಪಕ್ರಮವು ಗ್ರಾಮೀಣ ಭಾಗದಲ್ಲಿ ದೈಹಿಕ ಸದೃಢತೆಯನ್ನು ಉತ್ತೇಜಿಸುವುದು ಮಾತ್ರವಲ್ಲದೆ, ಕ್ರೀಡೆಯ ಮೂಲಕ ಹಳ್ಳಿಗಳಲ್ಲಿ ಸಮುದಾಯದ ಐಕ್ಯತೆಯನ್ನು ಸಾಧಿಸುವ ಗುರಿ ಹೊಂದಿದೆ. ದೈನಂದಿನ ಕಷ್ಟದ ಜೀವನ ಮತ್ತು ಜಡತ್ವದಿಂದ ಗ್ರಾಮೀಣ ಜನರನ್ನು ಹೊರತಂದು, ಅವರಲ್ಲಿ ಹೊಸ ಉತ್ಸಾಹ, ಕ್ರೀಡಾ ಮನೋಭಾವ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಮೂಡಿಸುವುದು ಇದರ ಮುಖ್ಯ ಆಶಯವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಚಿವ ಸಂಪುಟ ವಿಸ್ತರಣೆ ಜಟಾಪಟಿ: ದೆಹಲಿಗೆ ತೆರಳುವ ಮುನ್ನ ಬಿಕೆ ಹರಿಪ್ರಸಾದ್ ಏನಂದ್ರು ನೋಡಿ​​ – Kannada News | Karnataka Cabinet Expansion: BK Hariprasad’s Remarks Before Leaving for Delhi

ದೇವನಹಳ್ಳಿ, ಜುಲೈ 15: ಸಿಎಂ ಡಿಕೆ ಶಿವಕುಮಾರ್​ ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ಕೌಂಟ್​ಡೌನ್ ಶುರುವಾಗಿದೆ. ಈಗಾಗಲೇ ಹಲವು ಸಚಿವಾಕಾಂಕ್ಷಿಗಳು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಇನ್ನು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್​​​ ಇಂದು 5:20ರ ವಿಮಾನದಲ್ಲಿ ಕೆಂಪೇಗೌಡ ಏರ್ ಪೋರ್ಟ್​ನಿಂದ ದೆಹಲಿಗೆ ಪ್ರಯಾಣ ಬೆಳೆಸಿದರು. ಅದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘‘ಎಲ್ಲಾ ಶಾಸಕರಿಗೂ, ಕೇಳಲಿಕ್ಕೆ, ಹೇಳುವುದಕ್ಕೆ ಹಕ್ಕಿದೆ. ಅದರ ತೀರ್ಮಾನವನ್ನ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಆ ವಿಚಾರವನ್ನ ಬಹಳಕೂಲಂಕಷವಾಗಿ ನೋಡಿ ತೀರ್ಮಾನ ಮಾಡುತ್ತದೆ. ಎಲ್ಲಾ ವಿಚಾರಗಳು ಕೂಡ ಉಸ್ತುವಾರಿ ಸುರ್ಜೇವಾಲ ಅವರ ಬಳಿ ಇದೆ, ಅವರು ಚರ್ಚೆ ಮಾಡಿದಾಗ ಗೊತ್ತಾಗುತ್ತದೆ’’ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಮನೆಯಲ್ಲೇ ಅನಸ್ತೇಶಿಯಾ ತಜ್ಞನ ಭೀಕರ ಕೊಲೆ: ಪತ್ನಿಯಿಂದಲೇ ದುರಂತ ಅಂತ್ಯ ಕಂಡ ವೈದ್ಯ? – Kannada News | Dharwad Shocker: Renowned Anaesthetist Found Dead at Apartment; Doctor Wife Detained, 10 Year Old Son Assaulted

ಮೃತ ವೈದ್ಯ ಕಿರಣ್ ಹೊನ್ನಣ್ಣನವರ್Image Credit source: Tv9 Kannada

ಧಾರವಾಡ, ಜುಲೈ 15: ಚಿರಾಯು ಆಸ್ಪತ್ರೆಯ ವೈದ್ಯ ಕಿರಣ್ ಹೊನ್ನಣ್ಣನವರ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ರಸ್ತೆಯ ರನ್ಕಾಸ್ಟೆಲ್ಲೋ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಅವರ 10 ವರ್ಷದ ಮಗನ ಮೇಲೂ ಹಲ್ಲೆ ನಡೆಸಲಾಗಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಾರ್ಟ್​ಮೆಂಟ್​ಗೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿದ್ದು, ಘಟನೆ ಸಂಬಂಧ ಡಾ.ಕಿರಣ್ ಪತ್ನಿ ಡಾ.ಪ್ರಿಯಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪತ್ನಿಯಿಂದಲೇ ಹತ್ಯೆ ಶಂಕೆ

ಡಾ.ಕಿರಣ್ ಅವರನ್ನು ಪತ್ನಿ ಪ್ರಿಯಾಳೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ರಾತ್ರಿಯೇ ಘಟನೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಪತಿ ಕೊಂದ ಬಳಿಕ ಮಗನ ಮೇಲೂ ಹಲ್ಲೆ ನಡೆದಿದೆ. ಬಳಿಕ ಡಾ.ಪ್ರಿಯಾ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಅನುಮಾನಗಳ ವ್ಯಕ್ತವಾಗಿವೆ.

ಇದನ್ನೂ ಓದಿ: 14 ವರ್ಷದ ಬಾಲಕಿಗೆ ಹೆರಿಗೆ: ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ; ಅಚ್ಚರಿಯ ಹೇಳಿಕೆ ನೀಡಿದ ಹುಬ್ಬಳ್ಳಿ ಕಿಮ್ಸ್‌ ವೈದ್ಯರು

‘ಹೊರಗಿನವರ ಕೃತ್ಯ ಅಲ್ಲ’

ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಸಂಬಂಧಿಕರು ಫೋನ್ ಮಾಡಿದಾಗ ಪತಿ ರೆಸ್ಟ್ ಮಾಡುತ್ತಿದ್ದಾರೆ ಎಂದು ಪತ್ನಿ ಪ್ರಿಯಾ ಹೇಳಿದ್ದಾರೆ. ಡಾ.ಕಿರಣ್ ಚಿರಾಯು ಆಸ್ಪತ್ತೆಯಲ್ಲಿ ಅನಸ್ತೇಶಿಯಾ ತಜ್ಞರಾಗಿದ್ದರೆ, ಪತ್ನಿ ನೇತ್ರ ವೈದ್ಯೆಯಾಗಿದ್ದರು. ಸಂಜೆಯವರೆಗೂ ಫೋನ್ ಸ್ವೀಕರಿಸದೇ ಇದ್ದಾಗ ಅನುಮಾನದಿಂದ ಸಂಬಂಧಿಕರು ಮನೆಗೆ ಬಂದು ನೋಡಿದಾಗ, ರಕ್ತದ ಮಡುವಿನಲ್ಲಿ ಅವರು ಬಿದ್ದಿರೋದು ಕಂಡಿದೆ. ಗಾಯಗೊಂಡಿರುವ ಬಾಲಕನಿಗೆ ಜೀವ ಇದ್ದ ಕಾರಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಾರ್ಟ್​​ಮೆಂಟ್​​ಗೆ ಭದ್ರತೆ ಇರುವ ಕಾರಣ ಇಲ್ಲಿ ಬೇರೆಯವರು ಬಂದು ಕೊಲೆ ಮಾಡೋದು ಸಾಧ್ಯವಿಲ್ಲ. ಘಟನೆಗೆ ಸರಿಯಾದ ಕಾರಣ ಕೂಡ ಇನ್ನೂ ಗೊತ್ತಾಗಿಲ್ಲ. ಪ್ರಿಯಾ ಆಘಾತದಲ್ಲಿ ಏನೇನೋ ಹೇಳುತ್ತಿದ್ದು, ಅಸಲಿಗೆ ಏನಾಗಿದೆ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 9:22 pm, Wed, 15 July 26

Source link

ಓದಲು ವಯಸ್ಸಿನ ಮಿತಿಯಿಲ್ಲ; ಐಐಟಿ ಮದ್ರಾಸ್​​ನಲ್ಲಿ ಒಟ್ಟಿಗೇ ಪದವಿ ಪಡೆದ ತಾಯಿ-ಮಗ! – Kannada News | Inspirational Story: Mother and son graduated together from IIT Madras at 45 and 21 age

ನವದೆಹಲಿ, ಜುಲೈ 15: ಇತ್ತೀಚೆಗೆ ನಡೆದ ಪ್ರತಿಷ್ಠಿತ ಐಐಟಿ ಮದ್ರಾಸ್ (IIT Madras) ಘಟಿಕೋತ್ಸವದಲ್ಲಿ ಅತ್ಯಂತ ಅಪರೂಪದ ಘಟನೆಯೊಂದು ನಡೆದಿದೆ. 45 ವರ್ಷದ ತಾಯಿ ಜಿಗೀಷಾ ಟೇಲರ್ (Jigisha Tailor) ಮತ್ತು ಅವರ 21 ವರ್ಷದ ಮಗ ಆದಿತ್ಯ ಕಪಾಡಿಯಾ (Aditya Kapadia) ಇಬ್ಬರೂ ಒಟ್ಟಿಗೆ ಒಂದೇ ವೇದಿಕೆಯ ಮೇಲೆ ಐಐಟಿ ಪದವಿ ಪಡೆದು ಇತಿಹಾಸ ನಿರ್ಮಿಸಿದ್ದಾರೆ. ಇಬ್ಬರೂ ಒಟ್ಟಿಗೇ ಐಐಟಿ ಪದವಿ ಪಡೆಯುತ್ತಿರುವ ಫೋಟೋಗಳನ್ನು ಐಐಟಿ ಮದ್ರಾಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಈ ಘಟನೆ ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದೆ. ಅಮ್ಮ-ಮಗನ ಈ ಸಾಧನೆ ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಗುಜರಾತ್‌ನ ಭರೂಚ್ ಮೂಲದವರಾದ ಜಿಗೀಷಾ ಟೇಲರ್ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಸುಮಾರು 16 ವರ್ಷಗಳ ಕಾಲ ಎಲೆಕ್ಟ್ರಾನಿಕ್ಸ್ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದರು. ಆದರೆ, ಕುಟುಂಬದ ಜವಾಬ್ದಾರಿಗಳ ಕಾರಣದಿಂದಾಗಿ ಅವರು 2019ರಲ್ಲಿ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಬೇಕಾಯಿತು. 3 ವರ್ಷಗಳ ಕಾಲ ಮನೆಯಲ್ಲೇ ಇದ್ದ ಜಿಗೀಷಾ ಅವರಿಗೆ ಅವರ ಮಗ ಆದಿತ್ಯನೇ ಮತ್ತೆ ಓದಲು ದೊಡ್ಡ ಪ್ರೇರಣೆಯಾದನು ಎಂಬುದು ಮತ್ತೊಂದು ವಿಶೇಷ.

ಮಗನೇ ತಾಯಿಗೆ ಪ್ರೇರಣೆ:

ಜಿಗೀಷಾ ಅವರ ಮಗ ಆದಿತ್ಯ ಕಪಾಡಿಯಾ 2021ರ ಕೊವಿಡ್ ಸಾಂಕ್ರಾಮಿಕದ ಸಮಯದಲ್ಲಿ ಐಐಟಿ ಮದ್ರಾಸ್‌ನ ‘ಆನ್‌ಲೈನ್ ಬಿಎಸ್ ಇನ್ ಡೇಟಾ ಸೈನ್ಸ್ ಆ್ಯಂಡ್ ಅಪ್ಲಿಕೇಷನ್ಸ್’ ಕೋರ್ಸ್‌ಗೆ ಪ್ರವೇಶ ಪಡೆದಿದ್ದರು. ಮಗ ಮನೆಯಲ್ಲೇ ಕುಳಿತು ಸಂಖ್ಯಾಶಾಸ್ತ್ರ ಹಾಗೂ ಕಂಪ್ಯೂಟರ್ ಸಿಸ್ಟಮ್ಸ್ ಓದುವುದನ್ನು ನೋಡಿದ ಜಿಗೀಷಾ ಅವರಿಗೂ ಆ ವಿಷಯದ ಮೇಲೆ ಆಸಕ್ತಿ ಮೂಡಿತು. ಅಮ್ಮನೂ ಆ ವಿಷಯ ಕಲಿಯಲಿ ಎಂದು ಮಗ ಆದಿತ್ಯ ಕೂಡ ಅವರಿಗೆ ಬೆಂಬಲ ನೀಡಿದ್ದರು. ಮಗನ ನಿರಂತರ ಪ್ರೋತ್ಸಾಹದಿಂದಾಗಿ ಜಿಗೀಷಾ ಕೂಡ 2022ರ ಕೊನೆಯಲ್ಲಿ ಅದೇ ಕೋರ್ಸ್‌ಗೆ ಸೇರಿದರು.

ಇದನ್ನೂ ಓದಿ: ಕನಸ್ಸಲ್ಲಿ ಕಂಡಿದ್ದು ನಿಜವಾಯ್ತು, ಬರೋಬ್ಬರಿ 27 ಕೆಜಿ ಚಿನ್ನ ಸಿಕ್ತು, ಏನಿದು ಘಟನೆ?

ಬಹಳ ವರ್ಷಗಳ ನಂತರ ಮತ್ತೆ ವಿದ್ಯಾರ್ಥಿಯಾಗಿ ಓದುವುದು ಜಿಗೀಷಾ ಅವರಿಗೆ ಸುಲಭವಾಗಿರಲಿಲ್ಲ. ಮನೆಯ ಜವಾಬ್ದಾರಿಗಳ ನಡುವೆಯೇ ಅವರು ಕಠಿಣ ದಿನಚರಿ ರೂಢಿಸಿಕೊಂಡರು. ಪ್ರತಿದಿನ ಮುಂಜಾನೆ 4.30ಕ್ಕೆ ಎದ್ದು 7 ಗಂಟೆಯವರೆಗೆ ಓದುತ್ತಿದ್ದರು. ನಂತರ ಮನೆಗೆಲಸ ಮುಗಿಸಿ ಮಧ್ಯಾಹ್ನ ಮತ್ತೆ ಕಂಪ್ಯೂಟರ್ ಮುಂದೆ ಕುಳಿತು ಅಸೈನ್‌ಮೆಂಟ್‌ಗಳನ್ನು ಮಾಡುತ್ತಿದ್ದರು. ಕಾಲೇಜು ಪ್ರೊಫೆಸರ್ ಆಗಿರುವ ಅವರ ಪತಿ ಮತ್ತು ಮನೆಯವರು ಜಿಗೀಷಾ ಅವರ ಈ ಪ್ರಯತ್ನಕ್ಕೆ ಸಂಪೂರ್ಣ ಬೆಂಬಲ ನೀಡಿದರು.

ಇದನ್ನೂ ಓದಿ: ಗರ್ಭದಲ್ಲಿರುವಾಗಲೇ ಅಮ್ಮನ ಆಕಳಿಕೆಯನ್ನು ಕಾಪಿ ಮಾಡುತ್ತಂತೆ ಮಗು!

ತಾಯಿ-ಮಗ ಇಬ್ಬರೂ ಕ್ಲಾಸ್‌ಮೇಟ್ಸ್:

ಆದಿತ್ಯ 2024ರಲ್ಲಿ ತನ್ನ ಬಿಎಸ್ (BS) ಪದವಿ ಪೂರ್ಣಗೊಳಿಸಿದರೆ, ಜಿಗೀಷಾ ಅವರು ಡಿಪ್ಲೊಮಾ ಪೂರ್ಣಗೊಳಿಸಿದರು. ಐಐಟಿ ಮದ್ರಾಸ್ ಘಟಿಕೋತ್ಸವ ಸಮಾರಂಭದಲ್ಲಿ ಇಬ್ಬರಿಗೂ ಬೇರೆ ಬೇರೆ ಸಾಲುಗಳಲ್ಲಿ ಆಸನ ನಿಗದಿಪಡಿಸಲಾಗಿತ್ತು. ಆದರೆ, ಘಟಿಕೋತ್ಸವದ ಹಿಂದಿನ ದಿನ ನಡೆದ ರಾತ್ರಿ ಔತಣಕೂಟದಲ್ಲಿ ಇವರ ಅಪರೂಪದ ಕಥೆಯನ್ನು ತಿಳಿದ ಸಹಪಾಠಿಯೊಬ್ಬರು ಐಐಟಿ ಮಂಡಳಿಗೆ ವಿಶೇಷ ಮನವಿ ಸಲ್ಲಿಸಿದ್ದರು. ಇದರ ಫಲವಾಗಿ, ಘಟಿಕೋತ್ಸವದ ವೇದಿಕೆಯ ಮೇಲೆ ತಾಯಿ ಮತ್ತು ಮಗನನ್ನು ಒಟ್ಟಿಗೆ ಕರೆದು ಪದವಿ ಪ್ರದಾನ ಮಾಡಲಾಯಿತು.

ಪ್ರಸ್ತುತ ಆದಿತ್ಯ ಅವರು ಡೇಟಾ ಸೈನ್ಸ್ ಇಂಟರ್ನ್ ಆಗಿ ಕೆಲಸ ಗಿಟ್ಟಿಸಿಕೊಂಡಿದ್ದು, ಜಿಗೀಷಾ ಅವರು ತಮ್ಮ ಕಿರಿಯ ಮಗನ ದ್ವಿತೀಯ ಪಿಯುಸಿ ಓದಿಗೆ ಬೆಂಬಲ ನೀಡಲು ಸದ್ಯ ಉದ್ಯೋಗದ ಹುಡುಕಾಟವನ್ನು ನಿಲ್ಲಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಡಿಜಿಟಲ್ ಹೋರ್ಡಿಂಗ್ಸ್‌ಗಳ ಹಾವಳಿ: ಹೊಸ ಜಾಹೀರಾತು ನೀತಿ ಹೆಸರಲ್ಲಿ ಕೋಟ್ಯಂತರ ರೂ ತೆರಿಗೆ ವಂಚನೆ – Kannada News | Bengaluru’s Illegal Digital Hoardings: Tax Evasion and Road Safety Concerns

ಡಿಜಿಟಲ್ ಹೋರ್ಡಿಂಗ್ಸ್‌Image Credit source: tv9 kannada

ಬೆಂಗಳೂರು, ಜುಲೈ 15: ನಗರವನ್ನು ‘ಫ್ಲೆಕ್ಸ್ ಮುಕ್ತ’ ಮಾಡುವುದಾಗಿ ಹೊರಟಿರುವ ಬೆಂಗಳೂರು (bengaluru) ನಗರ ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡರಿಗೆ ಇದೀಗ ಅನಧಿಕೃತ ಡಿಜಿಟಲ್ ಹೋರ್ಡಿಂಗ್ಸ್ (illegal hoardings) ಹೊಸ ತಲೆನೋವಾಗಿ ಪರಿಣಮಿಸಿದೆ. ಸಿಲಿಕಾನ್ ಸಿಟಿಯಲ್ಲಿ ಹೊಸ ಜಾಹೀರಾತು ನೀತಿಯನ್ನು ಬಂಡವಾಳ ಮಾಡಿಕೊಂಡು ದೊಡ್ಡ ದಂಧೆಯೇ ಆರಂಭವಾಗಿದ್ದು, ನಿಯಮಗಳನ್ನು ಗಾಳಿಗೆ ತೂರಿ ರಸ್ತೆ ರಸ್ತೆಗಳಲ್ಲೂ ಅನಧಿಕೃತ ಡಿಜಿಟಲ್ ಸ್ಕ್ರೀನ್‌ಗಳು ತಲೆಎತ್ತುತ್ತಿವೆ. ತೆರಿಗೆ ಪಾವತಿಸಿ, ಲೈಸೆನ್ಸ್ ಪಡೆದು ಅಧಿಕೃತವಾಗಿ ಹೋರ್ಡಿಂಗ್ಸ್ ಅಳವಡಿಸಬೇಕು ಎಂಬ ನಿಯಮ ಕೇವಲ ಕಾಗದದ ಮೇಲಷ್ಟೇ ಉಳಿದಿದ್ದು, ಎಲ್ಲೆಂದರಲ್ಲಿ ಭಾರೀ ಗಾತ್ರದ ಡಿಜಿಟಲ್ ಬೋರ್ಡ್‌ಗಳು ರಾರಾಜಿಸುತ್ತಿವೆ.

ಜಿಬಿಎ ಬೊಕ್ಕಸಕ್ಕೆ ಕೋಟ್ಯಂತರ ರೂ ತೆರಿಗೆ ವಂಚನೆ

ನಗರದ ಪ್ರಮುಖ ರಸ್ತೆಗಳು, ಜಂಕ್ಷನ್‌ಗಳು ಹಾಗೂ ಫ್ಲೈ ಓವರ್‌ಗಳ ಪಕ್ಕದಲ್ಲಿ ತಲೆಎತ್ತಿರುವ ಈ ಡಿಜಿಟಲ್ ಹೋರ್ಡಿಂಗ್ಸ್‌ಗಳಲ್ಲಿ ಬಹುತೇಕ ಬೋರ್ಡ್‌ಗಳಿಗೆ ಯಾವುದೇ ಅಧಿಕೃತ ಅನುಮತಿ ಇಲ್ಲ. ಈ ಅಕ್ರಮ ದಂಧೆಯಿಂದಾಗಿ ಜಿಬಿಎ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆಯಾಗುತ್ತಿದೆ. ಇಷ್ಟೇ ಅಲ್ಲದೆ, ನಿಯಮಗಳ ಪ್ರಕಾರ ಹೆದ್ದಾರಿ ಹಾಗೂ ಪ್ರಮುಖ ಜಂಕ್ಷನ್‌ಗಳಲ್ಲಿ ವಾಹನ ಸವಾರರ ಗಮನ ಕದಡುವಂತಹ ಸ್ಕ್ರೀನ್‌ಗಳನ್ನು ಹಾಕುವಂತಿಲ್ಲ. ಆದರೆ, ರಾತ್ರಿ ವೇಳೆ ಕಣ್ಣು ಕೋರೈಸುವ ಈ ಸ್ಕ್ರೀನ್‌ಗಳಿಂದಾಗಿ ವಾಹನ ಸವಾರರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗುವ ಭೀತಿ ಎದುರಾಗಿದ್ದು, ಸಾರ್ವಜನಿಕರ ಪ್ರಾಣದ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಟ್ರಾಫಿಕ್​​ ಸಮಸ್ಯೆ ನಿವಾರಣೆಗೆ ಕ್ರಮ: ಸಿಗ್ನಲ್​​ ಸಮೀಪವಿರುವ ಬಸ್​​ ನಿಲ್ದಾಣಗಳ ತೆರವಿಗೆ ಸಚಿವ ಕೃಷ್ಣ ಭೈರೇಗೌಡ ಸೂಚನೆ

ಮತ್ತೊಂದೆಡೆ, ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿರುವ ಹಾಗೂ ಪಾಲಿಕೆಗೆ ನಷ್ಟ ಉಂಟುಮಾಡುತ್ತಿರುವ ಈ ಅನಧಿಕೃತ ಹೋರ್ಡಿಂಗ್ಸ್‌ಗಳಿಗೆ ಬ್ರೇಕ್ ಹಾಕಲು ಜಿಬಿಎ ಅಧಿಕಾರಿಗಳು ಕಣಕ್ಕಿಳಿಯಲಿದ್ದಾರೆ. ಹೊಸ ನಿಯಮಾವಳಿಗಳ ಪ್ರಕಾರ ಅಧಿಕೃತ ಪರವಾನಗಿ ಪಡೆದು, ನಿಯಮಿತ ತೆರಿಗೆ ಪಾವತಿಸಿ ಮಾತ್ರ ಡಿಜಿಟಲ್ ಸ್ಕ್ರೀನ್ ಅಳವಡಿಸಬೇಕಾಗುತ್ತದೆ.

ಅಕ್ರಮ ಬೋರ್ಡ್‌ಗಳನ್ನು ಕಿತ್ತೆಸೆಯಲು ಮುಂದಾದ ಜಿಬಿಎ 

ಇದನ್ನು ಮೀರಿ ರಾತ್ರೋರಾತ್ರಿ ತಲೆಎತ್ತುವ ಅಕ್ರಮ ಬೋರ್ಡ್‌ಗಳನ್ನು ಕಿತ್ತೆಸೆಯಲು ಪಾಲಿಕೆ ಸಜ್ಜಾಗುತ್ತಿದೆ. ಆದರೆ, ಅನಧಿಕೃತ ಹೋರ್ಡಿಂಗ್ಸ್‌ಗಳ ವಿರುದ್ಧ ಜಿಬಿಎ ಯುದ್ಧ ಸಾರುತ್ತಾ ಅಥವಾ ಹೊಸ ಅಡ್ವರ್ಟೈಸ್‌ಮೆಂಟ್ ಪಾಲಿಸಿಯ ಹೆಸರಲ್ಲಿ ಈ ದಂಧೆಗೆ ಮತ್ತಷ್ಟು ರಹದಾರಿ ಮಾಡಿಕೊಡುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಜಯನಗರದಲ್ಲಿ ಪೊಲೀಸರಿಂದಲೇ ನಿಯಮ ಉಲ್ಲಂಘನೆ: ಸೀಜ್ ವಾಹನಗಳಿಂದ ಅರ್ಧ ರಸ್ತೆ ಬ್ಲಾಕ್!

ರಸ್ತೆ ನಿಯಮ ಪಾಲಿಸುವಂತೆ ಸಾರ್ವಜನಿಕರಿಗೆ ಪಾಠ ಹೇಳುವ ಪೊಲೀಸರೇ ಜಯನಗರದಲ್ಲಿ ನಿಯಮ ಉಲ್ಲಂಘಿಸುತ್ತಿದ್ದಾರೆ. ಜಯನಗರದ ಪ್ರಮುಖ ರಸ್ತೆಯೊಂದರಲ್ಲಿ ಪೊಲೀಸರು ಸೀಜ್ ಮಾಡಿರುವ ನೂರಾರು ವಾಹನಗಳು ವರ್ಷಗಳಿಂದ ಧೂಳು ಹಿಡಿದು ರಸ್ತೆ ಬದಿಯಲ್ಲೇ ನಿಂತಿವೆ. ಇವುಗಳಿಂದಾಗಿ ಅರ್ಧ ರಸ್ತೆಯೇ ಆಕ್ರಮಣಗೊಂಡಿದ್ದು, ನಿತ್ಯ ವಾಹನ ಸಂಚಾರಕ್ಕೆ ತೀವ್ರ ಕಿರಿಕಿರಿ ಉಂಟಾಗಿದೆ.

ಇದನ್ನೂ ಓದಿ: ರಸ್ತೆ ಬದಿಯಲ್ಲಿ ಬಿಡಾಡಿ ವಾಹನಗಳ ತೆರವು ಮಧ್ಯೆ ಪೊಲೀಸರಿಂದಲೇ ನಿಯಮ ಉಲ್ಲಂಘನೆ

ಒಂದು ಕಡೆ ರಸ್ತೆ ಬದಿಯಲ್ಲಿ ದೀರ್ಘಕಾಲ ನಿಲ್ಲಿಸುವ ಸಾಮಾನ್ಯರ ವಾಹನಗಳಿಗೆ ಪೊಲೀಸರು ಸ್ಟಿಕ್ಕರ್ ಅಂಟಿಸಿ ತೆರವುಗೊಳಿಸುತ್ತಿದ್ದಾರೆ. ಆದರೆ, ಇಲಾಖೆಯ ವಶದಲ್ಲಿರುವ ಸೀಜ್ ವಾಹನಗಳ ತೆರವಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. “ಸಾಮಾನ್ಯರಿಗೊಂದು ನ್ಯಾಯ, ಸರ್ಕಾರಿ ಇಲಾಖೆಗೊಂದು ನ್ಯಾಯವೇ?” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಗ್ ಬಾಸ್ ಬೆಡಗಿ ಮೋಕ್ಷಿತಾ ಪೈ ಪಾಲಿಗೆ ರಾಧಾ ಪಾತ್ರ ಒಲಿದು ಬಂದಿದ್ದು ಹೇಗೆ? – Kannada News | Bigg Boss Kannada fame Mokshitha Pai on playing Radha Character in Rukmini Radha Krishna movie

‘ಪಾರು’ ಸೀರಿಯಲ್ ಮತ್ತು ‘ಬಿಗ್ ಬಾಸ್’ ರಿಯಾಲಿಟಿ ಶೋ ಖ್ಯಾತಿಯ ನಟಿ ಮೋಕ್ಷಿತಾ ಪೈ (Mokshitha Pai) ಅವರು ‘ರುಕ್ಮಿಣಿ ರಾಧಾಕೃಷ್ಣ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಅವರು ರಾಧಾ ಎಂಬ ಪಾತ್ರ ಮಾಡಿದ್ದಾರೆ. ಆ ಕುರಿತು ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ಈ ರೀತಿಯ ಪಾತ್ರಗಳು ನನ್ನನ್ನು ಅರಸಿ ಬರುತ್ತಿವೆ. ಜನರು ನನ್ನನ್ನು ಅದೇ ರೀತಿ ನೋಡಲು ಇಷ್ಟಪಡುತ್ತಿದ್ದಾರೆ ಎನಿಸುತ್ತದೆ. ರುಕ್ಮಿಣಿ ಮತ್ತು ರಾಧಾ ಪಾತ್ರಗಳಲ್ಲಿ ನನಗೆ ಯಾವುದು ಇಷ್ಟವೋ ಅದನ್ನೇ ಆಯ್ಕೆ ಮಾಡಿಕೊಳ್ಳಲು ನಿರ್ದೇಶಕರು ಅವಕಾಶ ನೀಡಿದರು. ನಾನು ರಾಧಾ ಪಾತ್ರವನ್ನು ಆಯ್ಕೆ ಮಾಡಿಕೊಂಡೆ. ವೈಯಕ್ತಿಕವಾಗಿ ನನಗೆ ಆ ಪಾತ್ರ ಕನೆಕ್ಟ್ ಆಗುತ್ತದೆ. ರಾಧೆಯ ಪ್ರೀತಿ ನಿಷ್ಕಲ್ಮಶವಾದದ್ದು. ಆ ರೀತಿಯ ಪ್ರೀತಿ ನಮಗೆ ಅಮ್ಮಂದಿರ ಮೇಲೆ ಬರುತ್ತದೆ’ ಎಂದು ಮೋಕ್ಷಿತಾ ಪೈ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟೊಮೆಟೊ, ದಾಳಿಂಬೆ ಬೆನ್ನಲ್ಲೇ ದ್ರಾಕ್ಷಿ ಮೇಲೆ ಕಳ್ಳರ ಕಣ್ಣು: ರಾತ್ರೋರಾತ್ರಿ ಕೈಚಳಕ ತೋರಿಸಿದ ಖದೀಮರು! – Kannada News | Grape Theft: Red Globe Grapes Stolen Amid Price Surge

ಚಿಕ್ಕಬಳ್ಳಾಪುರ, ಜುಲೈ 15: ಚಿನ್ನ, ಬೆಳ್ಳಿ, ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳ ಕಳ್ಳತನ ಸಾಮಾನ್ಯ. ಆದರೆ ಇದೀಗ ಕಳ್ಳರ ಕಣ್ಣು ರೈತರ ತೋಟಗಳ ಮೇಲೆ ಬಿದ್ದಿದೆ. ಟೊಮೆಟೊ, ದಾಳಿಂಬೆ ಬಳಿಕ ದ್ರಾಕ್ಷಿ (grape theft) ತೋಟಕ್ಕೆ ನುಗ್ಗಿರುವ ಕಳ್ಳರು ರಾತ್ರೋರಾತ್ರಿ ಲಕ್ಷಾಂತರ ರೂ ಮೌಲ್ಯದ ದ್ರಾಕ್ಷಿಯನ್ನು ಕದ್ದೊಯ್ದಿರುವಂತಹ ಘಟನೆ ಚಿಕ್ಕಬಳ್ಳಾಪುರ (chikkaballapur) ತಾಲೂಕಿನ ಕೊಳವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸದ್ಯ ಇದರಿಂದ ಆತಂಕಗೊಂಡಿರುವ ರೈತರು, ಕಳ್ಳರ ಪತ್ತೆಗೆ ಪೊಲೀಸರ ಮೊರೆ ಹೋಗಿದ್ದಾರೆ.

ನಡೆದಿದ್ದೇನು?

ಚಿಕ್ಕಬಳ್ಳಾಪುರ ತಾಲೂಕಿನ ಕೊಳವನಹಳ್ಳಿ ಗ್ರಾಮದ ಬಸವರಾಜ್ ಎಂಬುವವರಿಗೆ ಸೇರಿದ ತೋಟದಲ್ಲಿ ನಿನ್ನೆ ಕಳ್ಳತನ ನಡೆದಿದೆ. ಬಸವರಾಜ್ ಅವರು ತಮ್ಮ ತೋಟದಲ್ಲಿ ರೆಡ್ ಗ್ಲೋಬ್ ತಳಿಯ ದ್ರಾಕ್ಷಿಯನ್ನು ಬೆಳೆದಿದ್ದರು. ಪ್ರಸ್ತುತ ಮಾರುಕಟ್ಟೆಯಲ್ಲಿ 1 ಕೆಜಿ ರೆಡ್ ಗ್ಲೋಬ್ ದ್ರಾಕ್ಷಿಗೆ ಬರೋಬ್ಬರಿ 150 ರೂ ಬಂಪರ್ ಬೆಲೆ ಹಾಗೂ ಭಾರೀ ಬೇಡಿಕೆ ಇದೆ. ದ್ರಾಕ್ಷಿಯ ಒಂದೊಂದು ಗೊಂಚಲು ಒಂದೂವರೆಯಿಂದ ಎರಡೂವರೆ ಕೆಜಿಯಷ್ಟು ತೂಕ ಬರುವಂತೆ ನಳನಳಿಸುತ್ತಿದ್ದವು. ಈ ದ್ರಾಕ್ಷಿಯನ್ನು ಖರೀದಿಸಲು ವರ್ತಕರು ರೈತರು ಕೇಳಿದಷ್ಟು ಬೆಲೆ ನೀಡಿ ತೋಟದಲ್ಲೇ ಕಟಾವು ಮಾಡಿಕೊಂಡು ಹೋಗುತ್ತಿದ್ದರು. ಆದರೆ, ನಿನ್ನೆ ರಾತ್ರಿ ಬಸವರಾಜ್ ಅವರ ತೋಟಕ್ಕೆ ನುಗ್ಗಿದ ಕಳ್ಳರು ರಾತ್ರೋರಾತ್ರಿ ಸುಮಾರು ಮೂರು ಟನ್ ದ್ರಾಕ್ಷಿಯನ್ನು ಕಟಾವು ಮಾಡಿಕೊಂಡು ಪರಾರಿಯಾಗಿದ್ದಾರೆ.

ಕಳ್ಳರ ವಿರುದ್ಧ ಕಠಿಣ ಕ್ರಮಕೈ ಒತ್ತಾಯ

ಈ ಬಾರಿ ದ್ರಾಕ್ಷಿಗೆ ಎಲ್ಲಿಲ್ಲದ ಬೆಲೆ ಬಂದಿದೆ. ಈ ಹಿಂದೆ ಟೊಮೆಟೊ ಹಾಗೂ ದಾಳಿಂಬೆ ಬೆಲೆ ಏರಿಕೆಯಾದ ಸಂದರ್ಭದಲ್ಲೂ ಕಳ್ಳರು ತೋಟಗಳಿಗೆ ನುಗ್ಗಿ ತಮ್ಮ ಕೈಚಳಕ ತೋರಿಸಿದ್ದರು. ಆದರೆ ದ್ರಾಕ್ಷಿ ತೋಟದ ಮೇಲೆ ದಾಳಿ ನಡೆದಿರುವುದು ಇದೇ ಮೊದಲ ಬಾರಿ ಎನ್ನಲಾಗುತ್ತಿದೆ. ಇದರಿಂದ ರೈತರು ತೀವ್ರ ಆತಂಕಕ್ಕೀಡಾಗಿದ್ದು, ತೋಟಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮತ್ತು ಕಳ್ಳರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಸುಮಾರು 3 ಲಕ್ಷ ರೂ ಮೌಲ್ಯದ ದ್ರಾಕ್ಷಿ ಕಳುವು

ಕಳುವಾದ ದ್ರಾಕ್ಷಿಯ ಒಟ್ಟು ಮೌಲ್ಯ ಸುಮಾರು 3 ಲಕ್ಷ ರೂ ಎಂದು ಅಂದಾಜಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ನಂದಿಗಿರಿಧಾಮ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ತೋಟದ ಹಿಂಭಾಗದಲ್ಲಿರುವ ಕೆರೆಯ ಬಳಿ, ವಾಹನ ನಿಲ್ಲಿಸಿ ಅಲ್ಲಿಂದಲೇ ದ್ರಾಕ್ಷಿಯನ್ನು ಸಾಗಿಸಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಬರದ ಛಾಯೆ: ಕುರಿಗಳಿಗೆ ಮೇವು, ನೀರು ಸಿಗದೇ ಕುರಿಗಾಹಿಗಳು ಕಂಗಾಲು

ಒಂದೇ ರಾತ್ರಿಯಲ್ಲಿ ಲಕ್ಷಾಂತರ ರೂ ಮೌಲ್ಯದ ದ್ರಾಕ್ಷಿ ಬೆಳೆ ಕಳುವಾಗಿರುವುದು ಜಿಲ್ಲೆಯ ರೈತರನ್ನು ಬೆಚ್ಚಿಬೀಳಿಸಿದೆ. ತೋಟಗಾರಿಕಾ ಬೆಳೆಗಳ ಮೇಲೆ ನಿರಂತರವಾಗಿ ಕಳ್ಳರ ಕಣ್ಣು ಬೀಳುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದ್ದು, ಪೊಲೀಸರು ಶೀಘ್ರವಾಗಿ ಕಳ್ಳರನ್ನು ಬಂಧಿಸಿ ತಮಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಸ್ಥಳೀಯ ರೈತರಾದ ಮಂಜುನಾಥ್ ಸೇರಿದಂತೆ ಹಲವರು ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version