Weekly Horoscope: ನಿಮ್ಮ ರಾಶಿಗನುಗುಣವಾಗಿ ಜೂನ್ 1 ರಿಂದ 7ರ ವರೆಗಿನ ವಾರ ಭವಿಷ್ಯ ತಿಳಿಯಿರಿ

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿಯವರು ಜೂನ್ 1 ರಿಂದ ಜೂನ್ 7, 2026 ರವರೆಗಿನ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಸಿದ್ದಾರೆ. ಈ ವಾರದಲ್ಲಿ ಆಗುವ ಆಗುಹೋಗುಗಳು, ತಿಥಿಗಳ ಮಹತ್ವ, ಮತ್ತು ದಿನಗಳ ವಿಶೇಷಗಳ ಕುರಿತು ವಿವರಣೆ ನೀಡಲಾಗಿದೆ. ಈ ವಾರದಲ್ಲಿ ಪರಾಭವನಾಮ ಸಂವತ್ಸರ, ಉತ್ತರಾಯಣ, ಅಧಿಕ ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಗ್ರೀಷ್ಮ ಋತು ಇರಲಿದ್ದು, ಪಾಡ್ಯದಿಂದ ಸಪ್ತಮಿ ತಿಥಿಗಳ ಮಹತ್ವವನ್ನು ಹೇಳಲಾಗಿದೆ. ಸಂಕಷ್ಟ ಚತುರ್ಥಿ, ಕಾಂಚಿ ವರದರಾಜ ಸ್ವಾಮಿಗಳ ರಥೋತ್ಸವ, ಮಾರೇನಹಳ್ಳಿಯಲ್ಲಿ ನರಸಿಂಹ ಜಾತ್ರಾ ಮಹೋತ್ಸವಗಳು ಈ ವಾರದಲ್ಲಿ ನಡೆಯಲಿವೆ. ವಿಶ್ವ ಪರಿಸರ ದಿನ, ವಿಶ್ವ ಆಹಾರ ಸಂರಕ್ಷಣಾ ದಿನ, ಪೋಷಕರ ಜಾಗತಿಕ ದಿನ ಮತ್ತು ವಿಶ್ವ ಹಾಲಿನ ದಿನವೂ ಸಹ ಈ ವಾರದಲ್ಲಿ ಬರುತ್ತದೆ. ಗುರು ಗ್ರಹದ ಬದಲಾವಣೆಯು ಈ ವಾರದ ಪ್ರಮುಖ ಆಕರ್ಷಣೆಯಾಗಿದೆ. ಶನಿ ಮೀನ ರಾಶಿಯಲ್ಲಿ, ಕುಜ ಮೇಷದಲ್ಲಿ, ರವಿ ವೃಷಭದಲ್ಲಿ, ಬುಧ, ಶುಕ್ರ, ಗುರು ಮಿಥುನ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ. ಕೇತು ಸಿಂಹದಲ್ಲಿ ಮತ್ತು ರಾಹು ಕುಂಭದಲ್ಲಿ ಸಂಚರಿಸುತ್ತಾನೆ.

ಪ್ರತಿಯೊಂದು ರಾಶಿಗೂ ಅನುಗುಣವಾಗಿ ಶುಭಫಲಗಳು, ಆರ್ಥಿಕ ಪ್ರಗತಿ, ವೈವಾಹಿಕ ವಿಷಯಗಳು, ಆರೋಗ್ಯದ ಬಗ್ಗೆ ಎಚ್ಚರಿಕೆ, ವೃತ್ತಿಜೀವನದ ಬದಲಾವಣೆಗಳು ಮತ್ತು ಇಷ್ಟದೇವತಾ ಆರಾಧನೆಯ ಬಗ್ಗೆ ಗುರೂಜಿ ಅವರು ಮಾರ್ಗದರ್ಶನ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Hindu Rituals: ಅಧಿಕ ಮಾಸದ ಹುಣ್ಣಿಮೆ; ಆರ್ಥಿಕ ಸಮೃದ್ಧಿ ಮತ್ತು ಯಶಸ್ಸಿಗಾಗಿ ವಿಶೇಷ ಆಚರಣೆ ಇಲ್ಲಿದೆ

ಹಿಂದೂ ಸಂಪ್ರದಾಯದಲ್ಲಿ ಅಧಿಕ ಮಾಸಕ್ಕೆ ಅತ್ಯಂತ ವಿಶೇಷವಾದ ಆಧ್ಯಾತ್ಮಿಕ ಮಹತ್ವವಿದೆ. ಈ ಮಾಸವನ್ನು ವಿಷ್ಣುವಿಗೆ ಸಮರ್ಪಿತವಾದ ‘ಪುರುಷೋತ್ತಮ ಮಾಸ’ ಎಂದೂ ಕರೆಯಲಾಗುತ್ತದೆ. ಭಕ್ತರ ನಂಬಿಕೆಯ ಪ್ರಕಾರ, ಅಧಿಕ ಮಾಸದಲ್ಲಿ ಮಾಡುವ ಪೂಜೆ, ಜಪ ಮತ್ತು ದಾನಗಳು ಸಾಮಾನ್ಯ ದಿನಗಳಿಗಿಂತ ನೂರು ಪಟ್ಟು ಹೆಚ್ಚು ಪುಣ್ಯ ಫಲಗಳನ್ನು ನೀಡುತ್ತವೆ ಎಂಬ ನಂಬಿಕೆಯಿದೆ.

ವಿಶೇಷವಾಗಿ, ಈ ಮಾಸದ ಹುಣ್ಣಿಮೆಯ ದಿನದಂದು ಲಕ್ಷ್ಮಿ-ನಾರಾಯಣರನ್ನು ಪೂಜಿಸುವುದರಿಂದ ಆರ್ಥಿಕ ಸ್ಥಿರತೆ ಮತ್ತು ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ. ಸಮುದ್ರ ಮಂಥನದ ಸಮಯದಲ್ಲಿ ಲಕ್ಷ್ಮಿ ದೇವಿಯೊಂದಿಗೆ ಸಮುದ್ರದ ಚಿಪ್ಪುಗಳು (ಕವಡೆಗಳು) ಸಹ ಜನಿಸಿದವು ಎಂಬ ಪೌರಾಣಿಕ ಹಿನ್ನೆಲೆ ಇರುವುದರಿಂದ, ಲಕ್ಷ್ಮಿ ಪೂಜೆಯಲ್ಲಿ ಚಿಪ್ಪುಗಳಿಗೆ ವಿಶೇಷ ಸ್ಥಾನವಿದೆ.

ನಿಮ್ಮ ಜೀವನದಲ್ಲಿ ಆರ್ಥಿಕ ಪ್ರಗತಿ, ಉದ್ಯೋಗ ಯಶಸ್ಸು ಮತ್ತು ಧನಾತ್ಮಕ ಶಕ್ತಿಯನ್ನು ಆಕರ್ಷಿಸಲು ಈ ಹುಣ್ಣಿಮೆಯಂದು ಮಾಡಬಹುದಾದ ಕೆಲವು ಸರಳ ಮತ್ತು ಪರಿಣಾಮಕಾರಿ ಆಚರಣೆಗಳು ಇಲ್ಲಿವೆ:

ಧನ ಲಾಭಕ್ಕಾಗಿ 11 ಕವಡೆಗಳ ಪೂಜೆ:

ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ದೂರವಾಗಿ, ಲಕ್ಷ್ಮಿ ದೇವಿಯ ಕೃಪೆ ಸದಾ ಇರಲು ಈ ಕ್ರಮವನ್ನು ಅನುಸರಿಸಿ. ಹುಣ್ಣಿಮೆಯ ದಿನದಂದು ಮಹಾಲಕ್ಷ್ಮಿ ಪೂಜೆಯ ಸಮಯದಲ್ಲಿ 11 ಕವಡೆಗಳನ್ನು ದೇವಿಯ ಪಾದಗಳ ಬಳಿ ಇಟ್ಟು ಭಕ್ತಿಯಿಂದ ಪೂಜಿಸಿ. ಪೂಜೆಯ ನಂತರ ಅವುಗಳನ್ನು ಒಂದು ಕೆಂಪು ಅಥವಾ ಹಳದಿ ಬಟ್ಟೆಯಲ್ಲಿ ಕಟ್ಟಿ, ರಾತ್ರಿಯಿಡೀ ಪೂಜಾ ಮಂಟಪದಲ್ಲೇ ಇರಲು ಬಿಡಿ. ಮರುದಿನ ಬೆಳಗ್ಗೆ ಆ ಬಟ್ಟೆಯ ಗಂಟನ್ನು ನಿಮ್ಮ ಮನೆಯ ತಜೋರಿ (ಬೀರು) ಅಥವಾ ಹಣ ಇಡುವ ಸ್ಥಳದಲ್ಲಿ ಸುರಕ್ಷಿತವಾಗಿ ಇಡಿ.

ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ 7 ಕವಡೆ ರಹಸ್ಯ:

ನಿಮ್ಮ ವೃತ್ತಿಜೀವನ ಅಥವಾ ವ್ಯಾಪಾರದಲ್ಲಿ ಅಡೆತಡೆಗಳಿದ್ದರೆ ಮತ್ತು ನಿರೀಕ್ಷಿತ ಲಾಭ ಸಿಗುತ್ತಿಲ್ಲವೆಂದಾದರೆ ಈ ಆಚರಣೆ ಮಾಡಿ. ಹುಣ್ಣಿಮೆಯಂದು 7 ಕವಡೆಗಳನ್ನು ತೆಗೆದುಕೊಂಡು, ಕೆಳಗಿನ ಮಹಾಲಕ್ಷ್ಮಿ ಮಂತ್ರವನ್ನು ಪಠಿಸುತ್ತಾ ಪೂಜಿಸಿ. “ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ ಸಿದ್ಧ ಲಕ್ಷ್ಮ್ಯೈ ನಮಃ”. ಪೂಜೆಯ ನಂತರ, ವ್ಯಾಪಾರಿಗಳು ಈ ಕವಡೆಗಳನ್ನು ತಮ್ಮ ಗಲ್ಲಾಪೆಟ್ಟಿಗೆ (ಕ್ಯಾಶ್ ಬಾಕ್ಸ್) ಅಥವಾ ಲಾಕರ್‌ನಲ್ಲಿ ಇಡಬಹುದು. ಉದ್ಯೋಗಸ್ಥರು ಇವುಗಳನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ತಮ್ಮ ಆಫೀಸ್ ಟೇಬಲ್‌ನ ಡ್ರಾಯರ್‌ನಲ್ಲಿ ಇಟ್ಟುಕೊಳ್ಳಬಹುದು. ಇದು ಉದ್ಯೋಗದಲ್ಲಿ ಬಡ್ತಿ ಮತ್ತು ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ನಕಾರಾತ್ಮಕತೆ ದೂರ ಮಾಡಲು ಮುಖ್ಯ ದ್ವಾರದಲ್ಲಿ 9 ಕವಡೆಗಳು:

ಮನೆಯಲ್ಲಿ ಸದಾ ಜಗಳ, ಅಶಾಂತಿ ಅಥವಾ ನಕಾರಾತ್ಮಕ ವಾತಾವರಣ ಇದೆ ಅನಿಸಿದರೆ ಈ ವಾಸ್ತು ಪರಿಹಾರವನ್ನು ಪ್ರಯತ್ನಿಸಿ. 9 ಕವಡೆಗಳನ್ನು ಅರಿಶಿನ ಮತ್ತು ಕುಂಕುಮ ಬೆರೆಸಿದ ನೀರಿನಲ್ಲಿ ಸ್ವಲ್ಪ ಸಮಯ ನೆನೆಸಿಡಿ. ನಂತರ ಅವುಗಳನ್ನು ಒಂದು ಶುದ್ಧವಾದ ಬಿಳಿ ಬಟ್ಟೆಯಲ್ಲಿ ಕಟ್ಟಿ, ಮನೆಯ ಮುಖ್ಯ ಪ್ರವೇಶದ್ವಾರದ (Main Door) ಮೇಲೆ ನೇತುಹಾಕಿ. ಇದು ಮನೆಗೆ ಬರುವ ನಕಾರಾತ್ಮಕ ಶಕ್ತಿಯನ್ನು ತಡೆದು, ಕುಟುಂಬ ಸದಸ್ಯರ ನಡುವೆ ಪ್ರೀತಿ ಮತ್ತು ಬಾಂಧವ್ಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಸಂಪತ್ತನ್ನು ಆಕರ್ಷಿಸಲು ‘ಕಲಶ ಪೂಜೆ’:

ಹುಣ್ಣಿಮೆಯ ಸಂಜೆ, ಮನೆಯ ಈಶಾನ್ಯ (North-East) ದಿಕ್ಕಿನಲ್ಲಿ ಒಂದು ಸಣ್ಣ ಮಣ್ಣಿನ ಪಾತ್ರೆ ಅಥವಾ ಕಲಶವನ್ನು ಇರಿಸಿ. ಅದರಲ್ಲಿ 11 ಕವಡೆಗಳು, ಸ್ವಲ್ಪ ಅಕ್ಕಿ (ಅಕ್ಷತೆ), ಒಂದು ಅರಿಶಿನದ ಕೊಂಬು ಇದನ್ನು ಶುದ್ಧವಾದ ಜಾಗದಲ್ಲಿ ಇಡುವುದರಿಂದ, ಅದು ಮನೆಯಲ್ಲಿ ಧನಾತ್ಮಕ ಶಕ್ತಿ, ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುವ ಪ್ರಬಲ ಸಂಕೇತವಾಗಿ ಕೆಲಸ ಮಾಡುತ್ತದೆ.

ಲಕ್ಷ್ಮಿ-ನಾರಾಯಣರ ಜಂಟಿ ಆರಾಧನೆ:

ಹುಣ್ಣಿಮೆಯ ದಿನದಂದು ಲಕ್ಷ್ಮಿ ಮತ್ತು ನಾರಾಯಣ ದೇವರಿಗೆ ಬಿಳಿ ಬಣ್ಣದ ಹೂವುಗಳನ್ನು ಅರ್ಪಿಸಿ ಪೂಜಿಸುವುದು ಅತ್ಯಂತ ಶ್ರೇಷ್ಠ. ಪೂಜೆಯ ನಂತರ ದೇವರಿಗೆ ಬಿಳಿ ಬಣ್ಣದ ಸಿಹಿ ಪದಾರ್ಥಗಳನ್ನು (ಖೀರ್ ಅಥವಾ ಹಾಲಿನ ಸಿಹಿ ತಿಂಡಿ) ನೈವೇದ್ಯವಾಗಿ ಅರ್ಪಿಸಿ. ಈ ಪ್ರಸಾದವನ್ನು ಕುಟುಂಬದವರೆಲ್ಲರೂ ಒಟ್ಟಿಗೆ ಹಂಚಿಕೊಂಡು ಸೇವಿಸುವುದರಿಂದ ಮನೆಯಲ್ಲಿ ಏಕತೆ, ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ.

ಗಮನಿಸಿ: ಯಾವುದೇ ಆಚರಣೆಯನ್ನು ಮಾಡುವಾಗ ಧನಲಾಭದ ಆಸೆಗಿಂತಲೂ, ದೇವಿಯ ಮೇಲಿನ ಸಂಪೂರ್ಣ ಭಕ್ತಿ ಮತ್ತು ಸಕಾರಾತ್ಮಕ ನಂಬಿಕೆ ಮುಖ್ಯವಾಗಿರುತ್ತದೆ. ನಿಮ್ಮ ನಂಬಿಕೆಯೇ ನಿಮ್ಮ ಯಶಸ್ಸಿನ ಮೊದಲ ಹೆಜ್ಜೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಕನಸಿನ ಮನೆ ಮತ್ತು ವಾಹನ ಖರೀದಿಗೆ ಅಡೆತಡೆಯೇ? ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಾರಣ ತಿಳಿಯಿರಿ

ಮನೆ ಮತ್ತು ಕಾರು ಹೊಂದುವ ಯೋಗImage Credit source: Pinterest

ಪ್ರತಿಯೊಬ್ಬರಿಗೂ ಇರುವ ಪ್ರಮುಖ ಆಸೆಗಳಲ್ಲಿ ಒಂದು ಮನೆಯನ್ನು ಹೊಂದುವುದು ಮತ್ತು ಒಂದು ಕಾರನ್ನು ಹೊಂದುವುದು. ಅನೇಕ ಜನರು ಈ ಕನಸನ್ನು ನನಸು ಮಾಡಲು ಕಠಿಣ ಪರಿಶ್ರಮ ಪಡುತ್ತಾರೆ. ಆದರೂ ಸಹ, ಕೆಲವೊಮ್ಮೆ ಅವರು ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣಗಳು ಮತ್ತು ಪರಿಹಾರಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಜ್ಯೋತಿಷ್ಯದ ಪ್ರಕಾರ, ಮನುಷ್ಯ ಆಶಾಜೀವಿ. “ಋಣಾನುಬಂಧ ರೂಪೇಣ ಪಶು ಪತ್ನಿ ಸುತ ಆಲಯಹ” ಎಂಬುದು ಪ್ರಚಲಿತ ವಾಕ್ಯ. ಮನೆ ಮತ್ತು ಕಾರು ಹೊಂದುವ ಯೋಗವು ರಾಶಿ ಚಕ್ರದಲ್ಲಿ ನಾಲ್ಕನೇ ಮನೆಯ ಸ್ಥಿತಿಗತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಮನೆ ಮತ್ತು ವಾಹನಕ್ಕೆ ಸಂಬಂಧಿಸಿದಂತೆ ನಾಲ್ಕನೇ ಮನೆಯನ್ನು ಪರಿಗಣಿಸಲಾಗುತ್ತದೆ. ಈ ಮನೆಯಲ್ಲಿರುವ ಗ್ರಹಗಳು, ಅದರ ದೃಷ್ಟಿ, ಅಧಿಪತಿ ಮತ್ತು ಕಾರಕತ್ವ ಹೊಂದಿರುವ ಗ್ರಹಗಳು ವ್ಯಕ್ತಿಯ ಅದೃಷ್ಟದ ಮೇಲೆ ಪ್ರಭಾವ ಬೀರುತ್ತವೆ. ಮಂಗಳ ಗ್ರಹವು ಭೂಮಿ, ಆಸ್ತಿ ಮತ್ತು ಸ್ಥಿರಾಸ್ತಿಗಳಿಗೆ ಕಾರಕವಾಗಿದ್ದರೆ, ಶುಕ್ರ ಗ್ರಹವು ವಾಹನ, ಐಷಾರಾಮಿ ಜೀವನ, ವಸ್ತ್ರಗಳು ಮತ್ತು ಆಭರಣಗಳಿಗೆ ಕಾರಕವಾಗಿದೆ.

ಕೆಲವರಿಗೆ ಮನೆ ಮತ್ತು ಕಾರು ಎರಡೂ ಇದ್ದರೂ, ಕೆಲವೇ ದಿನಗಳಲ್ಲಿ ಅವು ಕೈ ತಪ್ಪಿ ಹೋಗುವ ಅನುಭವ ಆಗಿರುತ್ತದೆ. ಇನ್ನು ಕೆಲವರಿಗೆ ಎಷ್ಟೇ ದುಡಿದರೂ ಮನೆ ಕಟ್ಟಿಸಿಕೊಳ್ಳಲು ಅಥವಾ ಕಾರು ಖರೀದಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ ನಾಲ್ಕನೇ ಮನೆಯ ಅಧಿಪತಿ (ಚತುರ್ಥೇಶ) ದುರ್ಬಲನಾಗಿರುವುದು, ನೀಚ ಸ್ಥಿತಿಯಲ್ಲಿ ಇರುವುದು, ದುಷ್ಟ ಸ್ಥಾನಗಳಲ್ಲಿರುವುದು ಅಥವಾ ದುಷ್ಟ ಗ್ರಹಗಳ ಜೊತೆ ಸೇರಿಕೊಂಡಿರುವುದು. ಇಂತಹ ಗ್ರಹಗತಿಗಳು ಮನೆ-ಕಾರು ಯೋಗಕ್ಕೆ ಅಡ್ಡಿಯಾಗುತ್ತವೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ಆದರೆ ಇದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರಗಳು ಸೂಚಿಸಲ್ಪಟ್ಟಿವೆ. ಈ ಸುಖಸ್ಥಾನದಲ್ಲಿರುವ ಗ್ರಹಗಳು ಮತ್ತು ಅದರ ದೃಷ್ಟಿಯನ್ನು ಗಮನಿಸಿ, ಕೆಲವು ಪರಿಹಾರಗಳನ್ನು ಅನುಸರಿಸಬಹುದು. ಅವುಗಳಲ್ಲಿ ಪ್ರಮುಖವಾದವುಗಳು:

  • ಹಿರಿಯರಿಗೆ ಗೌರವ: ತಾಯಿ ಅಥವಾ ತಾಯಿಗೆ ಸಮಾನರಾದ ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವುದು, ವಿಶೇಷವಾಗಿ ಪ್ರತಿ ಮಂಗಳವಾರದಂದು ಹಿರಿಯರಿಗೆ ಸಹಾಯ ಮಾಡುವುದು ಸ್ಥಿರತೆಗೆ ಕಾರಣವಾಗುತ್ತದೆ.
  • ಗಣಪತಿ ಆರಾಧನೆ: ಬುಧವಾರದಂದು ತಪ್ಪದೆ ಗಣಪತಿಗೆ ದುರ್ವೆಯನ್ನು ಅರ್ಪಿಸುವುದು. ಐದು ಬುಧವಾರಗಳ ಕಾಲ ಗಣಪತಿಗೆ ಬೆಲ್ಲ ಮತ್ತು ತುಪ್ಪವನ್ನು ನೈವೇದ್ಯವಾಗಿ ಅರ್ಪಿಸುವುದರಿಂದ ಮನೆ ಯೋಗ ಪ್ರಾಪ್ತಿಯಾಗುವ ಸಾಧ್ಯತೆ ಇರುತ್ತದೆ.
  • ಮಂಗಳವಾರದ ದರ್ಶನ: ಮಂಗಳವಾರದಂದು ಹನುಮಂತ ಅಥವಾ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಮಾಡುವುದು ಶುಭ ಫಲಗಳನ್ನು ನೀಡುತ್ತದೆ.
  • ಮಾನಸಿಕ ಸ್ಥಿರತೆ ಮತ್ತು ಸದ್ಗುಣ: ಮನಸ್ಸಿನಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಮತ್ತು “ಆಚಾರವೇ ಸ್ವರ್ಗ, ಅನಾಚಾರವೇ ನರಕ”, “ಧರ್ಮೋ ರಕ್ಷತಿ ರಕ್ಷಿತಹ” ಎಂಬ ತತ್ವದಂತೆ ಧರ್ಮ ಮಾರ್ಗದಲ್ಲಿ ನಡೆದುಕೊಳ್ಳುವುದು ಮನೆ ಮತ್ತು ಕಾರು ಹೊಂದುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫೈನಲ್ ಪಂದ್ಯಕ್ಕೂ ಮುನ್ನ ಸಂಕಷ್ಟಕ್ಕೆ ಸಿಲುಕಿದ ಗುಜರಾತ್ ಟೈಟಾನ್ಸ್​!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯಕ್ಕೂ ಮುನ್ನ ಗುಜರಾತ್ ಟೈಟಾನ್ಸ್​ ತಂಡವು ಭಾರೀ ಸಂಕಷ್ಟಕ್ಕೆ ಸಿಲುಕಿದೆ. ವಾಯುವ್ಯ ಭಾರತದಲ್ಲಿ ಎದ್ದಿರುವ ಧೂಳಿನ ಬಿರುಗಾಗಿ ಹಾಗೂ ಭಾರೀ ಮಳೆಯಿಂದಾಗಿ ಶುಭ್​ಮನ್ ಗಿಲ್ ನೇತೃತ್ವದ ಜಿಟಿ ಪಡೆಯ ವಿಮಾನ ಪ್ರಯಾಣ ಗಂಟೆಗಟ್ಟಲೆ ವಿಳಂಬವಾಗಿದೆ. ಇದರಿಂದ ಶನಿವಾರದ ಅಭ್ಯಾಸವನ್ನು ತಪ್ಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಫೈನಲ್ ಪಂದ್ಯಕ್ಕೆ 24 ಗಂಟೆಗಳಿಗಿಂತ ಕಡಿಮೆ ಸಮಯ ಬಾಕಿ ಇರುವಾಗ ಗುಜರಾತ್ ಟೈಟಾನ್ಸ್ ಅಹಮದಾಬಾದ್​ಗೆ ಬಂದಿಳಿದಿದೆ.

ಎಷ್ಟು ಗಂಟೆಗೆ ಬರಬೇಕಿತ್ತು?

ಶುಕ್ರವಾರ ನಡೆದ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ನ್ಯೂ ಚಂಡೀಗಢ್​ನಿಂದ ಶನಿವಾರ ಮಧ್ಯಾಹ್ನದೊಳಗೆ ಅಹಮದಾಬಾದ್​ಗೆ ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ಬಂದಿಳಿಯಬೇಕಿತ್ತು. ಆದರೆ ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಆವರಿಸಿದ ಭೀಕರ ಚಂಡಮಾರುತ ಮತ್ತು ಮಳೆಯಿಂದಾಗಿ ವಿಮಾನದ ಟೇಕ್ ಆಫ್​ ಅನುಮತಿಯನ್ನು ನಿರಾಕರಿಸಲಾಯಿತು.

ಹೀಗಾಗಿ ಗುಜರಾತ್ ಟೈಟಾನ್ಸ್ ಆಟಗಾರರು ನ್ಯೂ ಚಂಡೀಗಢ್​ನಲ್ಲೇ ಉಳಿದಿದ್ದರು. ಅಲ್ಲದೆ ಸುದೀರ್ಘ ಕಾಯುವಿಕೆಯ ನಂತರ ಶನಿವಾರ ತಡರಾತ್ರಿ (10 ಗಂಟೆಯ ನಂತರ) ಗುಜರಾತ್ ಟೈಟಾನ್ಸ್ ಆಟಗಾರರು ಅಹಮದಾಬಾದ್​ಗೆ ಬಂದಿಳಿದಿದ್ದಾರೆ. ಅಲ್ಲದೆ ಅಲ್ಲಿಂದ ಟೀಮ್ ಹೊಟೇಲ್ ತಲುಪುವಷ್ಟರಲ್ಲಿ ಮಧ್ಯ ರಾತ್ರಿಯಾಗಿತ್ತು ಎಂದು ತಿಳಿದು ಬಂದಿದೆ.

ತಂಡದ ಮೇಲೆ ಪರಿಣಾಮ:

ಗುಜರಾತ್ ಟೈಟಾನ್ಸ್ ತಂಡವು ಶನಿವಾರ ಮಧ್ಯರಾತ್ರಿ ಅಹಮದಾಬಾದ್​ ತಲುಪಿದ ಕಾರಣ ಅಭ್ಯಾಸ ನಡೆಸಲು ಸಾಧ್ಯವಾಗಿಲ್ಲ. ಇದು ತಂಡದ ಸಿದ್ಧತೆಯ ಮೇಲೆ ಪರಿಣಾಮ ಬೀರಲಿದೆ. ಏಕೆಂದರೆ ಕಳೆದ ಮಧ್ಯ ರಾತ್ರಿ ಅಹಮದಾಬಾದ್​ಗೆ ತಲುಪಿರುವ ಆಟಗಾರರು ಹೆಚ್ಚಿನ ಸಮಯ ವಿಶ್ರಾಂತಿ ಪಡೆಯಲಿದ್ದಾರೆ.

ಅಲ್ಲದೆ ಇಂದು ಹೊಟೇಲ್ ರೂಮ್​ನಿಂದ ಪಂದ್ಯದ ಆರಂಭಕ್ಕೂ ಮುನ್ನ ಮೈದಾನಕ್ಕೆ ಬರಲಿದ್ದಾರೆ. ಅಂದರೆ ಫೈನಲ್ ಪಂದ್ಯಕ್ಕಾಗಿ ಹೆಚ್ಚಿನ ಅಭ್ಯಾಸ ನಡೆಸಲು ಗುಜರಾತ್ ಟೈಟಾನ್ಸ್ ತಂಡಕ್ಕೆ ಸಮಯ ಸಿಗಲ್ಲ ಎಂದೇ ಹೇಳಬಹುದು.

ಆರ್​ಸಿಬಿ ನಿರಾಳ:

ಇತ್ತ ಗುಜರಾತ್ ಟೈಟಾನ್ಸ್ ತಂಡವು ವಿಮಾನ ಪ್ರಯಾಣ ವಿಳಂಬ, ದಣಿವು ಹಾಗೂ ಅಭ್ಯಾಸ ಕೈ ತಪ್ಪಿದ ಚಿಂತೆಯಲ್ಲಿದ್ದರೆ ಅತ್ತ ಆರ್​ಸಿಬಿ ತಂಡವು ನಿರಾಳವಾಗಿದೆ. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಕ್ವಾಲಿಫೈಯರ್ ಪಂದ್ಯ ಗೆದ್ದ ಬೆನ್ನಲ್ಲೇ ಅಹಮದಾಬಾದ್​ಗೆ ಆಗಮಿಸಿದ್ದರು.

ಆರ್​ಸಿಬಿ ತಂಡಕ್ಕೆ ಎರಡು ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಸಿಕ್ಕಿದ್ದು, ಇದರ ಜೊತೆಗೆ ತಾಲೀಮು ನಡೆಸಲು ಸಾಕಷ್ಟು ಸಮಯ ಕೂಡ ದಕ್ಕಿದೆ. ಹೀಗಾಗಿ ಫೈನಲ್ ಪಂದ್ಯಕ್ಕಾಗಿ ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ.

ಇದನ್ನೂ ಓದಿ: RCB vs GT: ಯಾರೇ ಗೆದ್ದರೂ 2ನೇ ಬಾರಿ ಚಾಂಪಿಯನ್!

ಅತ್ತ ಫ್ಲೈಟ್ ಡಿಲೇಯಿಂದಾಗಿ ಗುಜರಾತ್ ಟೈಟಾನ್ಸ್ ತಂಡವು ಸಂಕಷ್ಟಕ್ಕೆ ಸಿಲುಕಿದ್ದು, ಇದಾಗ್ಯೂ ಭಾನುವಾರ ಸಂಜೆ ಮೈದಾನಕ್ಕಿಳಿಯುವ ಮೂಲಕ ಶುಭ್​ಮನ್ ಗಿಲ್ ಪಡೆ ಫೈನಲ್ ಪಂದ್ಯಕ್ಕಾಗಿ ಬೇಕಾದ ಸಿದ್ಧತೆಗಳನ್ನು ನಡೆಸುವ ನಿರೀಕ್ಷೆಯಿದೆ. ಈ ಅಲ್ಪಾವಧಿಯ ಸಿದ್ಧತೆಗಳೊಂದಿಗೆ ಗುಜರಾತ್ ಟೈಟಾನ್ಸ್ ಆರ್​ಸಿಬಿ ವಿರುದ್ಧ ಹೇಗೆ ಹೋರಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Source link

ತ್ರಿಶಾ ಜೊತೆಯಲ್ಲೇ ಬಂದು ಅಜಿತ್ ತಾಯಿಯ ಅಂತಿಮ ದರ್ಶನ ಪಡೆದ ಸಿಎಂ ವಿಜಯ್

ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ (Ajith Kumar) ಅವರ ತಾಯಿ ಮೋಹಿನಿ ಮಣಿ (89) ಶನಿವಾರ (ಮೇ 30) ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ತಾಯಿಯನ್ನು ಕಳೆದುಕೊಂಡು ದುಃಖದಲ್ಲಿರುವ ಅಜಿತ್ ಕುಮಾರ್ ಅವರ ನಿವಾಸಕ್ಕೆ ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ದಳಪತಿ ವಿಜಯ್ (CM Vijay) ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ. ಈ ವೇಳೆ ವಿಜಯ್ ಅವರೊಂದಿಗೆ ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಕೂಡ ಸಾಂತ್ವನ ಹೇಳಲು ಆಗಮಿಸಿದ್ದು ವಿಶೇಷವಾಗಿ ಗಮನ ಸೆಳೆದಿದೆ. ಈ ಸಂದರ್ಭದ ವಿಡಿಯೋ ಈಗ ವೈರಲ್ ಆಗಿದೆ.

ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕವೂ ತಮ್ಮ ಹಳೇ ಗೆಳೆಯ ಹಾಗೂ ಚಿತ್ರರಂಗದ ಸಹೋದ್ಯೋಗಿ ಅಜಿತ್ ಕುಮಾರ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದ ಸಿಎಂ ವಿಜಯ್ ಅವರು ಅಜಿತ್ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡು ದುಃಖವನ್ನು ಹಂಚಿಕೊಂಡಿದ್ದಾರೆ. ವಿಜಯ್ ಅವರ ಜೊತೆಯಲ್ಲೇ ಆಗಮಿಸಿದ ತ್ರಿಶಾ ಕೂಡ ಅಜಿತ್ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಬಿಗಿ ಭದ್ರತೆಯ ನಡುವೆ ಇಬ್ಬರೂ ತಾರೆಯರು ಅಜಿತ್ ಮನೆಗೆ ಭೇಟಿ ನೀಡುತ್ತಿರುವ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿವೆ.

ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೇ ಪೈಪೋಟಿ ಇದ್ದರೂ, ವಿಜಯ್ ಮತ್ತು ಅಜಿತ್ ಕುಮಾರ್ ನಡುವೆ ಮೊದಲಿನಿಂದಲೂ ಉತ್ತಮ ಬಾಂಧವ್ಯವಿದೆ. ತಮ್ಮ ವೃತ್ತಿಜೀವನದ ಆರಂಭದಲ್ಲಿ ‘ರಾಜಾತಿನ್ ಪಾರ್ವಯಿಲೆ’ ಸಿನಿಮಾದಲ್ಲಿ ಅವರಿಬ್ಬರೂ ಒಟ್ಟಿಗೆ ನಟಿಸಿದ್ದರು. ಇದು ಇವರಿಬ್ಬರೂ ಒಟ್ಟಿಗೆ ತೆರೆ ಹಂಚಿಕೊಂಡ ಏಕೈಕ ಚಿತ್ರವಾಗಿದೆ. ಇತ್ತೀಚೆಗಷ್ಟೇ ತಮಿಳುನಾಡು ಚುನಾವಣೆಯಲ್ಲಿ ವಿಜಯ್ ಭರ್ಜರಿ ಜಯ ಸಾಧಿಸಿದಾಗ ಅಜಿತ್ ಕುಮಾರ್ ಖುದ್ದಾಗಿ ಫೋನ್ ಮಾಡಿ ಶುಭ ಕೋರಿದ್ದರು ಎಂದು ವರದಿಯಾಗಿತ್ತು.

ಇನ್ನು ನಟಿ ತ್ರಿಶಾ ಕೂಡ ಅಜಿತ್ ಕುಮಾರ್ ಅವರೊಂದಿಗೆ ಸುದೀರ್ಘ ವೃತ್ತಿಪರ ಸಂಬಂಧ ಹೊಂದಿದ್ದಾರೆ. ‘ಜಿ’, ‘ಎನ್ನೈ ಅರಿಂದಾಲ್’ ಹಾಗೂ ಇತ್ತೀಚಿನ ‘ವಿಡಾಮುಯರ್ಚಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಜಿತ್‌ಗೆ ಜೋಡಿಯಾಗಿ ತ್ರಿಶಾ ನಟಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ ಅದರ ಆಚೆಗೂ ಅವರಿಬ್ಬರ ನಡುವೆ ಉತ್ತಮ ಸ್ನೇಹವಿದೆ.

ಇದನ್ನೂ ಓದಿ: ಸಿಎಂ ದಳಪತಿ ವಿಜಯ್ ಭೇಟಿಯಾದ ಲೋಕೇಶ್ ಕನಗರಾಜ್: ‘ಲಿಯೋ 2’ ನಿರೀಕ್ಷೆಯಲ್ಲಿ ಅಭಿಮಾನಿಗಳು

ಅಜಿತ್ ಕುಮಾರ್ ಅವರ ತಾಯಿ ಮೋಹಿನಿ ಮಣಿ ಶನಿವಾರ ಮುಂಜಾನೆ ನಿದ್ದೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‘ಕಳೆದ ಕೆಲವು ವರ್ಷಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಮ್ಮ ತಾಯಿ ನಿದ್ದೆಯಲ್ಲೇ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ಮತ್ತು ಕಾಳಜಿ ನೀಡಿದ ವೈದ್ಯಕೀಯ ಸಿಬ್ಬಂದಿಗೆ ನಾವು ಕೃತಜ್ಞರಾಗಿದ್ದೇವೆ’ ಎಂದು ಅಜಿತ್ ಸಹೋದರ ಅನಿಲ್ ಕುಮಾರ್ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವರುಣಾರ್ಭಟಕ್ಕೆ ಮನೆಗಳಿಗೆ ನುಗ್ಗಿದ ನೀರು: ದವಸ ಧಾನ್ಯಗಳು ಸೇರಿ ಗೃಹೋಪಯೋಗಿ ವಸ್ತುಗಳು ಜಲಾಹುತಿ

ಚಾಮರಾಜನಗರ, ಮೇ 31: ಜಿಲ್ಲೆಯ ಹಲವೆಡೆ ಮಳೆ ಆರ್ಭಟ ಮುಂದುವರಿದಿದ್ದು, ವರುಣನ ಅವಾಂತರಕ್ಕೆ ಪೊನ್ನಾಚಿ ಗ್ರಾಮದಲ್ಲಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದ ಘಟನೆ ನಡೆದಿದೆ. ಮನೆಗಳ ಪಕ್ಕದ ಕಾಲುವೆಯಿಂದ ನದಿಯಂತೆ ಮಳೆ ನೀರು ಹರಿದು ಬಂದ ಪರಿಣಾಮ ಮನೆಯಲ್ಲಿದ್ದ ದವಸ ಧಾನ್ಯಗಳು ಸೇರಿ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ಪೊನ್ನಾಚಿ ಗ್ರಾಮದ ಶಂಕರ, ಶಿವಮ್ಮ ಎಂಬುವರ ಮನೆಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿದ್ದವರು ಕಂಗಾಲಾಗಿದ್ದಾರೆ. ಕಾಲುವೆ ಸ್ವಚ್ಛಗೊಳಿಸದ ಗ್ರಾಮ ಪಂಚಾಯಿತಿ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Bengaluru Air Quality: ಬೆಂಗಳೂರಿಗರಿಗೆ ಗುಡ್ ನ್ಯೂಸ್: ಇಂದು ರಾಜಧಾನಿಯಲ್ಲಿ ವಾಯು ಗುಣಮಟ್ಟ ಮತ್ತಷ್ಟು ಉತ್ತಮ!

ಇಂದು ರಾಜಧಾನಿಯಲ್ಲಿ ವಾಯು ಗುಣಮಟ್ಟ ಮತ್ತಷ್ಟು ಉತ್ತಮ!

ಬೆಂಗಳೂರು, ಮೇ 31: ಇಂದು ಕರ್ನಾಟಕದಾದ್ಯಂತ ವಾಯು ಗುಣಮಟ್ಟವು (Air Quality) ಬಹುತೇಕ ನಗರಗಳಲ್ಲಿ ತೃಪ್ತಿದಾಯಕ ಮತ್ತು ಉತ್ತಮ ಮಟ್ಟದಲ್ಲಿದೆ. ಇತ್ತೀಚೆಗೆ ರಾಜ್ಯದ ವಿವಿಧೆಡೆ ಸುರಿದ ಮುಂಗಾರು ಪೂರ್ವ ಮಳೆ ಹಾಗೂ ಬಲವಾದ ಬಿರುಗಾಳಿಯ ಕಾರಣದಿಂದಾಗಿ ವಾತಾವರಣದಲ್ಲಿದ್ದ ಧೂಳಿನ ಕಣಗಳು ಕಡಿಮೆಯಾಗಿದ್ದು, ಗಾಳಿಯ ಶುದ್ಧತೆ ಹೆಚ್ಚಾಗಿದೆ.

ಮುಖ್ಯಾಂಶಗಳು

  • ಇತ್ತೀಚಿನ ಮಳೆಯಿಂದಾಗಿ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಉತ್ತಮ ಮಟ್ಟದಲ್ಲಿ ದಾಖಲಾಗಿದೆ.
  • ಸಿಲಿಕಾನ್ ಸಿಟಿಯಲ್ಲಿ ಇಂದು ಸರಾಸರಿ AQI 34 ರಿಂದ 60ರಷ್ಟಿದೆ.
  • ಮೈಸೂರು ಮತ್ತು ಮಂಗಳೂರು ಸೇರಿದಂತೆ ರಾಜ್ಯದಾದ್ಯಂತ ಶುದ್ಧ ಗಾಳಿ ಮುಂದುವರಿದಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು (AQI) 34 ರಿಂದ 60 ರ ಆಸುಪಾಸಿನಲ್ಲಿ ದಾಖಲಾಗಿದ್ದು, ಇದು ಉತ್ತಮ (Good) ಹಾಗೂ ಸಾಧಾರಣ (Moderate) ಶ್ರೇಣಿಗೆ ಸೇರುತ್ತದೆ. ವಾತಾವರಣದಲ್ಲಿ ಪ್ರಮುಖ ಮಾಲಿನ್ಯಕಾರಕಗಳಾದ PM2.5 ಮತ್ತು PM10 ಮಟ್ಟಗಳು ನಿಯಂತ್ರಣದಲ್ಲಿವೆ. ಓಜೋನ್ (O3) ಮತ್ತು ಕಾರ್ಬನ್ ಮಾನಾಕ್ಸೈಡ್ (CO) ಪ್ರಮಾಣವೂ ಸಹ ಸುರಕ್ಷಿತ ಮಿತಿಯಲ್ಲೇ ಇರುವುದರಿಂದ ಬೆಂಗಳೂರಿಗರು ಯಾವುದೇ ಆರೋಗ್ಯದ ಆತಂಕವಿಲ್ಲದೆ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದಾಗಿದೆ.

ರಾಜ್ಯದ ಪ್ರಮುಖ ನಗರಗಳ AQI ವಿವರ

ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ಇತರ ಪ್ರಮುಖ ನಗರಗಳಲ್ಲೂ ಇಂದಿನ ವಾಯು ಗುಣಮಟ್ಟವು ಉತ್ತಮವಾಗಿಯೇ ಮುಂದುವರಿದಿದೆ. ಕೈಗಾರಿಕಾ ಪ್ರದೇಶಗಳು ಮತ್ತು ಹೆಚ್ಚು ವಾಹನ ದಟ್ಟಣೆ ಇರುವ ನಗರಗಳಲ್ಲೂ ಮಾಲಿನ್ಯದ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ.

  • ಬೆಂಗಳೂರು: 34 – 60 (ಉತ್ತಮ/ಸಾಧಾರಣ – ಪ್ರದೇಶಗಳಿಗೆ ಅನುಗುಣವಾಗಿ ಮಾರ್ಪಾಡಾಗಿದೆ)
  • ಮೈಸೂರು: 28 (ಉತ್ತಮ – ಸಾಂಸ್ಕೃತಿಕ ನಗರಿಯ ಗಾಳಿ ಅತ್ಯಂತ ಶುದ್ಧವಾಗಿದೆ)
  • ಮಂಗಳೂರು ಹಾಗೂ ಉಡುಪಿ: 32 (ಉತ್ತಮ – ಕರಾವಳಿ ಭಾಗದಲ್ಲಿ ಮಳೆಯಿಂದಾಗಿ ಶುದ್ಧ ಗಾಳಿ ಇದೆ)
  • ಬೆಳಗಾವಿ ಮತ್ತು ಧಾರವಾಡ: 42 (ಉತ್ತಮ – ಉತ್ತರ ಒಳನಾಡಿನ ಈ ಭಾಗಗಳಲ್ಲಿ ಹವಾಮಾನ ಆಹ್ಲಾದಕರವಾಗಿದೆ)
  • ಕಲಬುರಗಿ ಮತ್ತು ಬಳ್ಳಾರಿ: 55 (ಸಾಧಾರಣ – ಇಲ್ಲಿನ ಶುಷ್ಕ ಹವಾಮಾನದ ನಡುವೆಯೂ ಮಾಲಿನ್ಯ ನಿಯಂತ್ರಣದಲ್ಲಿದೆ)

AQI ಪ್ರಮಾಣವು 0-50 ರಷ್ಟಿದ್ದರೆ ಅದನ್ನು ‘ಉತ್ತಮ’ ಎಂದು, 51-100 ರಷ್ಟಿದ್ದರೆ ‘ಸಾಧಾರಣ’ ಎಂದು ಪರಿಗಣಿಸಲಾಗುತ್ತದೆ. ಸದ್ಯ ಕರ್ನಾಟಕದ ಬಹುತೇಕ ನಗರಗಳು ಇದೇ ಸುರಕ್ಷಿತ ವಲಯದಲ್ಲಿವೆ. ಉಸಿರಾಟದ ತೊಂದರೆ ಇರುವವರು ಮತ್ತು ಮಕ್ಕಳು ಯಾವುದೇ ಆತಂಕವಿಲ್ಲದೆ ನಿಶ್ಚಿಂತೆಯಿಂದ ಇರಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮೆಟ್ರೋ ಪ್ರಯಾಣಿಕರೇ ಗಮನಿಸಿ: ನೇರಳೆ ಮಾರ್ಗ ಸಂಬಂಧ ಮಹತ್ವದ ಮಾಹಿತಿ ಹಂಚಿಕೊಂಡ BMRCL

ಬೆಂಗಳೂರು, ಮೇ 31: ನಿರ್ವಹಣಾ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಂಡಿರುವುದರಿಂದ, ನೇರಳೆ ಮಾರ್ಗದ ಮೆಟ್ರೋ ರೈಲು ಸೇವೆಗಳು ಇಂದು (ಮೇ 31) ಬೆಳಿಗ್ಗೆ 7 ಗಂಟೆಯಿಂದಲೇ ಸಂಪೂರ್ಣವಾಗಿ ಲಭ್ಯವಿರುತ್ತವೆ. ಹೀಗಾಗಿ ಪ್ರಯಾಣಿಕರು ಮೆಟ್ರೋ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಬಿಎಂಆರ್​​ಸಿಎಲ್​​ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ನೇರಳೆ ಮಾರ್ಗದ ಕೆಲ ನಿಲ್ದಾಣಗಳ ನಡುವೆ ಇಂದು ಸಂಚಾರ ವ್ಯತ್ಯಯದ ಬಗ್ಗೆ ಈ ಹಿಂದೆಯೇ BMRCL ಮಾಹಿತಿ ನೀಡಿತ್ತು.

BMRCL ಪ್ರಕಟಣೆಯಲ್ಲಿ ಏನಿದೆ?

ನೇರಳೆ ಮಾರ್ಗದಲ್ಲಿರುವ ಅತ್ತಿಗುಪ್ಪೆ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವಿನ ಭಾಗದಲ್ಲಿ ಅತ್ಯಗತ್ಯ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಕಾಮಗಾರಿಗಳನ್ನು ಸುಗಮವಾಗಿ ಮತ್ತು ಸುರಕ್ಷಿತವಾಗಿ ನಿರ್ವಹಿಸುವ ಉದ್ದೇಶದಿಂದ ರೈಲು ಸಂಚಾರದ ವೇಳಾಪಟ್ಟಿಯಲ್ಲಿ ಮೇ 31ರಂದು ಬದಲಾವಣೆ ಮಾಡಲಾಗಿದೆ. ದೀಪಾಂಜಲಿನಗರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್ ಮೆಜೆಸ್ಟಿಕ್) ಮೆಟ್ರೋ ನಿಲ್ದಾಣಗಳ ನಡುವೆ ಬೆಳಿಗ್ಗೆ 7 ಗಂಟೆಯಿಂದ 9ರ ವರೆಗೆ ಮೆಟ್ರೋ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ. ಬೆಳಿಗ್ಗೆ 9 ಗಂಟೆಯ ನಂತರ ಇಡೀ ನೇರಳೆ ಮಾರ್ಗದಲ್ಲಿ ಎಂದಿನಂತೆ ಸಾಮಾನ್ಯ ಸೇವೆಗಳು ಪುನರಾರಂಭಗೊಳ್ಳಲಿವೆ ಎಂದು ಮೇ 29ರಂದು ಪ್ರಕಟಣೆ ಮೂಲಕ ಬಿಎಂಆರ್​​ಸಿಎಲ್​​ ತಿಳಿಸಿತ್ತು. ಆದರೆ ನಿರ್ವಹಣಾ ಕಾಮಗಾರಿಗಳು ನಿಗದಿತ ಸಮಯಕ್ಕೂ ಮೊದಲೇ ಮುಗಿದಿರುವ ಕಾರಣ ಬೆಳಿಗ್ಗೆ 9 ಗಂಟೆಯ ಬದಲು 7 ಗಂಟೆಯಿಂದಲೇ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರ ಸಹಜ ಸ್ಥಿತಿಗೆ ಮರಳಿದೆ.

ಇದನ್ನೂ ಓದಿ: ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳ ಕೊರತೆ ಹಿನ್ನೆಲೆ ನಿತ್ಯ ಪರದಾಟ; BMRCL ವಿರುದ್ಧ ಪ್ರಯಾಣಿಕರ ಆಕ್ರೋಶ

ವಾರಾಂತ್ಯ ಪ್ರಯಾಣಿಕರು ನಿರಾಳ

ರಜೆಯ ದಿನವಾದ ಭಾನುವಾರವೇ ಮೆಟ್ರೋ ಸೇವೆಯಲ್ಲಿ ವ್ಯತ್ಯಯದ ಬಗ್ಗೆ ಈ ಹಿಂದೆ ಬಿಎಂಆರ್​​ಸಿಎಲ್​​ ತಿಳಿಸಿದ್ದ ಕಾರಣ ಪ್ರಯಾಣಿಕರು ಕೊಂಚ ನಿರಾಸೆಗೊಂಡಿದ್ದರು. ಆದರೆ ಅವರಿಗೀಗ ಬಿಎಂಆರ್​​ಸಿಎಲ್​​ ನೀಡಿರುವ ಸುದ್ದಿ ನಿರಾಳರಾಗುವಂತೆ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:54 am, Sun, 31 May 26

Source link

RCB vs GT: ಯಾರೇ ಗೆದ್ದರೂ 2ನೇ ಬಾರಿ ಚಾಂಪಿಯನ್!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19ರ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಯಾರೇ ಗೆದ್ದರೂ 2ನೇ ಬಾರಿ ಚಾಂಪಿಯನ್ ಆಗಲಿದೆ.

  • ಗುಜರಾತ್ ಟೈಟಾನ್ಸ್ ತಂಡವು 2022 ರಲ್ಲಿ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2025 ರಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತ್ತು.

ಇದೀಗ ಒಂದು ಬಾರಿ ಟ್ರೋಫಿ ಗೆದ್ದಿರುವ ಎರಡು ತಂಡಗಳು ಫೈನಲ್​ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ಯಾರೇ ಗೆದ್ದರೂ ಎರಡು ಬಾರಿ ಟ್ರೋಫಿ ಗೆದ್ದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇನ್ನು ಫೈನಲ್ ಪಂದ್ಯದ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ…

ಫೈನಲ್ ಪಂದ್ಯ ಯಾವಾಗ?

  • ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಐಪಿಎಲ್​ ಫೈನಲ್ ಪಂದ್ಯವು ಮೇ 31  ರಂದು, ಅಂದರೆ ಇಂದು ನಡೆಯಲಿದೆ.

ಫೈನಲ್ ಮ್ಯಾಚ್ ನಡೆಯುವುದು ಎಲ್ಲಿ?

  • ಈ ಬಾರಿಯ ಫೈನಲ್ ಪಂದ್ಯವು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿದೆ. ಅಂದರೆ ಗುಜರಾತ್ ಟೈಟಾನ್ಸ್ ತಂಡದ ತವರು ಮೈದಾನದಲ್ಲಿಅಂತಿಮ ಪಂದ್ಯ ನಡೆಯುತ್ತಿರುವುದು ವಿಶೇಷ.

ಎಷ್ಟು ಗಂಟೆಗೆ ಮ್ಯಾಚ್ ಶುರು?

  • ಫೈನಲ್ ಪಂದ್ಯವು ರಾತ್ರಿ 7.30 ರಿಂದ ಶುರುವಾಗಲಿದೆ. ಹಾಗೆಯೇ ಟಾಸ್ ಪ್ರಕ್ರಿಯೆ 7 ಗಂಟೆಗೆ ನಡೆಯಲಿದೆ.

ಉಭಯ ತಂಡಗಳು ಈ ಕೆಳಗಿನಂತಿದೆ:

ಗುಜರಾತ್ ಟೈಟಾನ್ಸ್ ತಂಡ: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಕುಮಾರ್ ಕುಶಾಗ್ರಾ, ಅನುಜ್ ರಾವತ್, ಜೋಸ್ ಬಟ್ಲರ್, ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಅರ್ಷದ್ ಖಾನ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ, ಗುರ್ನೂರ್ ಸಿಂಗ್ ಬ್ರಾರ್, ರಶೀದ್ ಖಾನ್, ಮಾನವ್ ಸುತಾರ್, ಸಾಯಿ ಕಿಶೋರ್, ಜಯಂತ್ ಯಾದವ್, ಅಶೋಕ್ ಶರ್ಮಾ, ಜೇಸನ್ ಹೋಲ್ಡರ್, ಟಾಮ್ ಬ್ಯಾಂಟನ್, ಪೃಥ್ವಿ ರಾಜ್ ಯಾರ್ರಾ, ಲ್ಯೂಕ್ ವುಡ್.

ಇದನ್ನೂ ಓದಿ: 20 ಓವರ್ ಆಡಿಯೂ ಸೋತ ಟೀಮ್ ಇಂಡಿಯಾ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್, ರಿಚರ್ಡ್ ಗ್ಲೀಸನ್.

Published On – 7:48 am, Sun, 31 May 26

Source link

Karnataka Weather Forecast: ಬೆಂಗಳೂರಿನಲ್ಲಿಂದು ಭಾರೀ ಮಳೆ! 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಬೆಂಗಳೂರು, ಮೇ 31: ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆ ಚುರುಕಾಗಿದ್ದು, ರಾಜ್ಯದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (Weather) ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ‘ಯೆಲ್ಲೋ ಅಲರ್ಟ್’ (Yellow Alert) ಘೋಷಿಸಿದೆ.

ಮುಖ್ಯಾಂಶಗಳು

  • ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಿಗೆ ಭಾರಿ ಮಳೆಯ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
  • ದಕ್ಷಿಣ ಒಳನಾಡಿನಲ್ಲಿ ಗಂಟೆಗೆ 40-50 ಕಿಮೀ ವೇಗದ ಬಿರುಗಾಳಿ ಸಹಿತ ಮಳೆಯಾಗಲಿದೆ.
  • ಕರಾವಳಿ ಮತ್ತು ಉತ್ತರ ಒಳನಾಡಿನ ಹಲವೆಡೆ ಗುಡುಗು ಸಹಿತ ಹಗುರ ಮ ಮುನ್ಸೂಚನೆ.

ಭಾರಿ ಮಳೆಯ ಮುನ್ನೆಚ್ಚರಿಕೆ

ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವರುಣನ ಆರ್ಭಟ ಹೆಚ್ಚಿರಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ಕೊಡಗು, ಮೈಸೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ಈ ಭಾಗಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸಲಿದ್ದು, ಗುಡುಗು ಸಹಿತ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದೆ. ಇದರೊಂದಿಗೆ ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಬಳ್ಳಾರಿ, ವಿಜಯನಗರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲೂ ಗಾಳಿ ಸಹಿತ ಸಾಧಾರಣ ಜಿಟಿಜಿಟಿ ಮಳೆಯಾಗಬಹುದು.

ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳ ಸ್ಥಿತಿ

ಕರಾವಳಿ ತೀರದ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯ ಕೆಲವು ಕಡೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಹಗುರವಾದ ಮಳೆಯಾಗಲಿದೆ.

ಉತ್ತರ ಒಳನಾಡಿನ ಜಿಲ್ಲೆಗಳಾದ ಹಾವೇರಿ, ಗದಗ, ಕೊಪ್ಪಳ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಗುಡುಗು ಸಹಿತ ಹಗುರ ಮಳೆಯಾಗುವ ಮುನ್ಸೂಚನೆ ಇದೆ. ಆದರೆ, ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಾರ್ವಜನಿಕರಿಗೆ ಸೂಚನೆ

ಬಿರುಗಾಳಿ ಮತ್ತು ಗುಡುಗು ಮುನ್ಸೂಚನೆ ಇರುವುದರಿಂದ ಮರದ ಕೆಳಗೆ ಅಥವಾ ದುರ್ಬಲ ಕಟ್ಟಡಗಳ ಬಳಿ ಆಶ್ರಯ ಪಡೆಯಬೇಡಿ. ವಾಹನ ಸವಾರರು ಜಾಗರೂಕರಾಗಿರಲು ಹವಾಮಾನ ಇಲಾಖೆ ಕೋರಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version