IPL 2026 Final: ಫೈನಲ್ ಪಂದ್ಯ ರದ್ದಾದರೆ ಯಾರಿಗೆ ಸಿಗಲಿದೆ ಟ್ರೋಫಿ?

ಐಪಿಎಲ್ 2026 (IPL 2026) ರ ಚಾಂಪಿಯನ್‌ ಪಟ್ಟಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ (RCB vs GT) ತಂಡಗಳು ಸೆಣಸಲಿವೆ. ಮೇ 31 ರ ಭಾನುವಾರದಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಈ ಫೈನಲ್ ಪಂದ್ಯಕ್ಕೆ ಆತಿಥ್ಯವಹಿಸುತ್ತಿದೆ. ಎರಡೂ ತಂಡಗಳು ಸೀಸನ್ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿ, ಚಾಂಪಿಯನ್ ಆಗುವತ್ತ ಅಂತಿಮ ಹೆಜ್ಜೆ ಇಟ್ಟಿವೆ. ಆದರೆ ಫೈನಲ್ ಪಂದ್ಯದ ದಿನದಂದು ಮಳೆ ಬಂದು ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಅಥವಾ ಇತರೆ ಕಾರಣದಿಂದಾಗಿ ಪಂದ್ಯ ನಡೆಯದಿದ್ದರೆ ಯಾವ ತಂಡಕ್ಕೆ ಚಾಂಪಿಯನ್ ಪಟ್ಟ ಸಿಗಲಿದೆ? ಹಾಗೆಯೇ ಫೈನಲ್ ಪಂದ್ಯಕ್ಕೆ ಮೀಸಲು ದಿನವಿದೆಯೇ ಎಂಬ ಪ್ರಶ್ನೆ ಮೂಡಿದೆ. ಅದಕ್ಕೆ ಉತ್ತರ ಇಲ್ಲಿದೆ.

ಫೈನಲ್ ಪಂದ್ಯಕ್ಕಿದೆ ಮೀಸಲು ದಿನ

ಐಪಿಎಲ್‌ನಲ್ಲಿ ಲೀಗ್ ಹಂತ ಹಾಗೂ ಪ್ಲೇಆಫ್‌ ಸುತ್ತಿಗೆ ಯಾವುದೇ ಮೀಸಲು ದಿನವನ್ನು ನಿಗದಿಪಡಿಸಿರಲಿಲ್ಲ. ಲೀಗ್ ಹಂತದಲ್ಲಿ ಪಂದ್ಯ ರದ್ದಾದರೆ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗುತಿತ್ತು. ಆದರೆ ಪ್ಲೇಆಫ್‌ ಸುತ್ತಿಗೆ ಆ ನಿಯಮ ಅನ್ವಯವಾಗುತ್ತಿರಲಿಲ್ಲ. ಹೀಗಾಗಿ ಪ್ಲೇಆಫ್‌ ಸುತ್ತಿನಲ್ಲಿ ಪಂದ್ಯ ರದ್ದಾದರೆ ಅಂಕಪಟ್ಟಿಯಲ್ಲಿ ಯಾವ ತಂಡ ಮೇಲಿರುತ್ತದೋ ಆ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತಿತ್ತು. ಏಕೆಂದರೆ ಪ್ಲೇಆಫ್‌ಗೂ ಮೀಸಲು ದಿನವನ್ನು ನಿಗದಿಪಡಿಸಿರಲಿಲ್ಲ. ಆದರೆ ಫೈನಲ್ ಪಂದ್ಯಕ್ಕೆ ಈ ನಿಯಮ ಅನ್ವಯವಾಗುವುದಿಲ್ಲ. ಏಕೆಂದರೆ ಫೈನಲ್ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿದೆ.

ಮೀಸಲು ದಿನದಂದು ಪಂದ್ಯ ನಡೆಯದಿದ್ದರೆ?

ಫೈನಲ್ ಪಂದ್ಯವನ್ನು ಮೇ 31 ರಂದೇ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. ಆದಾಗ್ಯೂ ನಿರಂತರವಾಗಿ ಮಳೆ ಬಂದರೆ, ಓವರ್‌ಗಳನ್ನು ಕಡಿಮೆ ಮಾಡಲಾಗುತ್ತದೆ. ಮಳೆ ಮುಂದುವರಿದರೆ, ಹೆಚ್ಚುವರಿಯಾಗಿ 120 ನಿಮಿಷಗಳನ್ನು ಸಹ ನೀಡಲಾಗುತ್ತದೆ. ಹಾಗೆಯೇ ವಿಜೇತರನ್ನು ನಿರ್ಧರಿಸಲು ಪ್ರತಿ ಇನ್ನಿಂಗ್ಸ್‌ನಲ್ಲಿ ಕನಿಷ್ಠ ಐದು ಓವರ್‌ಗಳನ್ನು ಆಡಲಾಗುತ್ತದೆ. ಅದಾಗ್ಯೂ ಪಂದ್ಯವನ್ನು ನಡೆಸಲು ಸಾಧ್ಯವಾಗದಿದ್ದರೆ, ಜೂನ್ 1 ರಂದು ಪಂದ್ಯವನ್ನು ನಡೆಸಲಾಗುವುದು. ಏಕೆಂದರೆ ಜೂನ್ 1 ಅನ್ನು ಮೀಸಲು ದಿನವಾಗಿ ನಿಗದಿಪಡಿಸಲಾಗಿದೆ.

IPL 2026 Final: ಸತತ 2ನೇ ಬಾರಿಗೆ ಚಾಂಪಿಯನ್; ಮತ್ತೊಂದು ದಾಖಲೆ ಸೃಷ್ಟಿಸುವ ಸನಿಹದಲ್ಲಿ ಆರ್​ಸಿಬಿ

ಜೂನ್ 1 ರಂದು ಸಹ ಮಳೆಯಿಂದಾಗಿ ಪಂದ್ಯ ಆರಂಭವಾಗದಿದ್ದರೆ, ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡ ಅಗ್ರಸ್ಥಾನ ಪಡೆದಿರುತ್ತದೋ ಆ ತಂಡವನ್ನು ಚಾಂಪಿಯನ್‌ ಎಂದು ಘೋಷಿಸಲಾಗುತ್ತದೆ. ಇದರರ್ಥ ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಆರ್​ಸಿಬಿ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಇತ್ತ ಎರಡನೇ ಸ್ಥಾನ ಪಡೆದುಕೊಂಡಿದ್ದ ಗುಜರಾತ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಿಯ ಶಿವಕುಮಾರ್..ಚುನಾವಣೆಯಲ್ಲಿ ಸೋಲಬಹುದು, ಸೈದ್ಧಾಂತಿಕವಾಗಿ ಸೋಲಬೇಡಿ: ಡಿಕೆಶಿಗೆ ಸಿದ್ದರಾಮಯ್ಯ ಭಾವುಕ ಪತ್ರ

ಬೆಂಗಳೂರು, (ಮೇ 30): ಡಿಕೆ ಶಿವಕುಮಾರ್ (dk shivakumar) ಅವರು ಇಂದು (ಮೇ 30) ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ಜೂನ್ 3 ಸಂಜೆ 4.5ಕ್ಕೆ ಲೋಕಭವನದ ಗಾಜಿನಮನೆಯಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದಕ್ಕೂ ಮುನ್ನ ಸಿದ್ದರಾಮಯ್ಯ (siddaramaiah), ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳು ತಿಳಿಸುತ್ತಾ ಭಾವನಾತ್ಮಕ ಪತ್ರವೊಂದು ಬರೆದಿದ್ದು, ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ದೇಶದ ಏಕತೆ, ಸಮಗ್ರತೆಯನ್ನು ಉಳಿಸಲು ಸಂವಿಧಾನದ ಗೌರವವನ್ನು ಕಾಪಾಡಲು 2ನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹೋರಾಟದಲ್ಲಿ ಇಡೀ ಶಾಸಕಾಂಗ ಪಕ್ಷ ಮಾತ್ರವಲ್ಲ ರಾಜ್ಯದ ಏಳುಕೋಟಿ ಜನತೆ ನಿಮ್ಮ ಜೊತೆಯಲ್ಲಿರುತ್ತದೆ ಎಂದು ಡಿಕೆಶಿಗೆ ಅಭಯ ನೀಡಿದ್ದಾರೆ.

ಮುಖ್ಯಾಂಶಗಳು

  • ಹೊಸ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಡಿ ಕೆ ಶಿವಕುಮಾರ್
  • ಕರ್ನಾಟಕದ ನಿಯೋಜಿತ ಸಿಎಂ ಡಿ.ಕೆ.ಶಿವಕುಮಾರ್​ಗೆ ಅಭಿನಂದನೆ ತಿಳಿಸಿದ ಸಿದ್ದರಾಮಯ್ಯ
  • ಭಾವನಾತ್ಮ ಪತ್ರದ ಮೂಲಕ ಅಭಿನಂದನೆ ತಿಳಿಸಿದ ಹಂಗಾಮಿ ಸಿಎಂ
  • ಜೊತೆಗೆ ಡಿಕೆ ಶಿವಕುಮಾರ್​​​ಗೆ ಕೆಲ ಸಲಹೆ ಸೂಚನೆಗಳನ್ನ ನೀಡಿದ ಸಿದ್ದರಾಮಯ್ಯ

ಸಿದ್ದರಾಮಯ್ಯನವರ ಪತ್ರದಲ್ಲೇನಿದೆ?

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸಂಗಾತಿ ಡಿ.ಕೆ.ಶಿವಕುಮಾರ್ ಅವರಿಗೆ ಹಾರ್ದಿಕವಾದ ಅಭಿನಂದನೆಗಳು.

ಪ್ರಿಯ ಶಿವಕುಮಾರ್, ನಿಮ್ಮಲ್ಲಿರುವ ಅದಮ್ಯವಾದ ಕ್ರಿಯಾಶೀಲತೆ, ಸಂಘಟನಾ ಚಾತುರ್ಯ ಮತ್ತು ಕಾಂಗ್ರೆಸ್ ಪಕ್ಷದ ಮೇಲಿನ ಸಂಶಾಯತೀತ ನಿಷ್ಠೆಯನ್ನು ಒಬ್ಬ ಸಹದ್ಯೋಗಿಯಾಗಿ ನಾನು ಸಮೀಪದಿಂದ ಗಮನಿಸಿದ್ದೇನೆ. ಇವೆಲ್ಲದರ ಸದುಪಯೋಗ ರಾಜ್ಯದ ಜನತೆಗೆ ಆಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸುವೆ.ಇಂದು ಕರ್ನಾಟಕ ತಲಾವಾರು ಆದಾಯದಲ್ಲಿ ದೇಶದಲ್ಲಿ ಮೊದಲನೇ ಸ್ಥಾನದಲ್ಲಿರುವುದು ಮಾತ್ರವಲ್ಲ ಸಂಪತ್ತು, ಅಧಿಕಾರ ಮತ್ತು ಅವಕಾಶಗಳ ಸಮಾನ ಹಂಚಿಕೆಯಲ್ಲಿಯೂ ದೇಶಕ್ಕೆ ಮಾದರಿಯಾಗಿದೆ. ನಾವು ಪ್ರಾರಂಭಿಸಿರುವ ಪ್ರತಿಯೊಂದು ಯೋಜನೆಯನ್ನೂ ಉಳಿದ ರಾಜ್ಯಗಳು ಮಾದರಿಯಾಗಿ ಸ್ವೀಕರಿಸಿ ಅನುಷ‍್ಠಾನಕ್ಕೆ ತರುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗಾತಿಯಾಗಿದೆ ಎಂದಿದ್ದಾರೆ.

ಇದನ್ನೂ ನೋಡಿ: ಶಾಸಕಾಂಗ ಸಭೆಯಲ್ಲಿ ಅಚ್ಚರಿ ಬೆಳವಣಿಗೆ, ಒಂದು ಕ್ಷಣ ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ

ಒಟ್ಟು ಎಂಟು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಕನ್ನಡಿಗರ ಸೇವೆಯನ್ನು ಮಾಡಲು ಒದಗಿಬಂದಿದ್ದ ಅವಕಾಶವನ್ನು ಬಳಸಿಕೊಂಡು ಕರ್ನಾಟಕವನ್ನು ಸಮೃದ್ಧ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ರಾಜ್ಯವನ್ನಾಗಿ ಅಭಿವೃದ್ಧಿ ಪಡಿಸಿದ ಹೆಮ್ಮೆ ನನ್ನದಾಗಿದೆ. ಈ ಅಭಿವೃದ್ಧಿಯ ಬಂಡಿಯನ್ನು ಮುಂದಕ್ಕೆ ಎಳೆದೊಯ್ಯವ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ. ಅದಕ್ಕೆ ಬೇಕಾಗಿರುವ ಬದ್ದತೆ, ಸಾಮರ್ಥ್ಯ ಮತ್ತು ಮುನ್ನೋಟ ನಿಮ್ಮಲ್ಲಿದೆ ಎನ್ನುವ ನಂಬಿಕೆ ನನ್ನದು.

ಇಡೀ ದೇಶ ಇಂದು ಆರ್ಥಿಕ ಅಭದ್ರತೆಯಲ್ಲಿ ಭೀತಿಗೊಳಗಾಗಿರುವ ಸ್ಥಿತಿಯಲ್ಲಿ ರಾಜ್ಯದ ಜನತೆ ಕೂಡಾ ಭವಿಷ್ಯದ ಬಗ್ಗೆ ಆತಂಕಿತರಾಗಿದ್ದಾರೆ. ಸಮರ್ಥ ಆಡಳಿತದ ಮೂಲಕ ಅವರಲ್ಲಿ ಭರವಸೆಯನ್ನು ಹುಟ್ಟಿಸುವ ಜೊತೆಯಲ್ಲಿ ರಾಜ್ಯವನ್ನು ಅಭಿವೃದ್ದಿಯ ಪಥದಲ್ಲಿ ಮುನ್ನಡೆಸುವ ಜವಾಬ್ದಾರಿ ನಿಮ್ಮ ಮೇಲಿದೆ.

ಚುನಾವಣೆಯಲ್ಲಿ ಸೋಲಬಹುದು, ಸೈದ್ಧಾಂತಿಕವಾಗಿ ಸೋಲಬೇಡಿ

ಇತ್ತೀಚಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ಸ್ವಲ್ಪ ಹಿನ್ನಡೆಯಾಗಿದೆ. ನಾವು ಚುನಾವಣೆಯಲ್ಲಿ ಸೋಲಬಹುದು, ಗೆಲ್ಲಬಹುದು. ಆದರೆ ಸೈದ್ಧಾಂತಿಕವಾಗಿ ಎಂದೂ ಸೋಲಬಾರದು. ಒಂದು ರಾಜಕೀಯ ಪಕ್ಷ ಸೈದ್ಧಾಂತಿಕವಾಗಿ ಸೋತರೆ ಆ ಪಕ್ಷ ಚುನಾವಣೆಯನ್ನು ಗೆಲ್ಲಲಾಗದೆ ನಾಶವಾಗುತ್ತದೆ ಎಂದು ನಂಬಿದವನು ನಾನು.

ರಾಜ್ಯದ ಅಭಿವೃದ್ಧಿಯ ಜೊತೆಯಲ್ಲಿ ನಮ್ಮೆಲ್ಲರ ಮಾತೃಸ್ವರೂಪಿಯಾಗಿರುವ ಕಾಂಗ್ರೆಸ್ ಪಕ್ಷದ ಗತವೈಭವವನ್ನು ಮರಳಿ ಸ್ಥಾಪಿಸುವ ಹೊಣೆಗಾರಿಕೆ ಕೂಡಾ ನಮ್ಮೆಲ್ಲರ ಮೇಲಿದೆ. ಕಾಂಗ್ರೆಸ್ ಪಕ್ಷ ಇಂತಹ ಸವಾಲಿನ ಅನೇಕ ಅಗ್ನಿದಿವ್ಯಗಳನ್ನು ಯಶಸ್ವಿಯಾಗಿ ದಾಟಿ ಬಂದಿರುವ ಇತಿಹಾಸ ನಮಗೆಲ್ಲರಿಗೂ ಪ್ರೇರಣೆಯಾಗಲಿ. ನಿಮ್ಮ ನಾಯಕತ್ವ ಬಲ ಈ ಪ್ರಯತ್ನವನ್ನು ಸಫಲಗೊಳಿಸಲಿ.

ಕಾಂಗ್ರೆಸ್ ಪಕ್ಷದ ಹಿರಿಯರು ತ್ಯಾಗ-ಬಲಿದಾನಗಳ ಮೂಲಕ ಕಟ್ಟಿದ ಸೌಹಾರ್ದ ಭಾರತವನ್ನು ಜಾತಿ-ಧರ್ಮಗಳ ಹೆಸರಲ್ಲಿ ಒಡೆದು ಹಾಕಲಾಗುತ್ತಿದೆ. ಸಂವಿಧಾನವನ್ನೇ ಪ್ರಶ್ನಿಸಲಾಗುತ್ತಿದೆ. ಪ್ರಭುತ್ವವನ್ನು ಪ್ರಶ್ನಿಸುವವರ ದಮನ ಮಾಡಲಾಗುತ್ತಿದೆ. ಗಾಂಧಿಯವರನ್ನು ಕೊಂದವರು ಇಂದು ಗೋಡ್ಸೆಯನ್ನು ಮೆರೆಸಲು ಹೊರಟಿದ್ದಾರೆ.

2ನೇ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿದ್ದೇವೆ

ಸಂವಿಧಾನದ ಆಶಯಗಳಾದ ಸಮಾನತೆ, ಸೌಹಾರ್ದತೆ, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ಮೌಲ್ಯಗಳನ್ನೇ ತನ್ನ ಸಿದ್ಧಾಂತವಾಗಿ ಸ್ವೀಕರಿಸಿರುವ ಕಾಂಗ್ರೆಸ್ ಪಕ್ಷವನ್ನು ಸೈದ್ಧಾಂತಿಕವಾಗಿ ತಳಮಟ್ಟದಿಂದಲೇ ಗಟ್ಟಿಗೊಳಿಸಲು ಮುಂದಾಗುವುದೇ ದೇಶವನ್ನು ಉಳಿಸಲು ನಮಗೆ ಇರುವ ಏಕೈಕ ಮತ್ತು ಸರಿಯಾದ ದಾರಿಯಾಗಿದೆ. ದೇಶದ ಏಕತೆ, ಸಮಗ್ರತೆಯನ್ನು ಉಳಿಸಲು ಸಂವಿಧಾನದ ಗೌರವವನ್ನು ಕಾಪಾಡಲು ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹೋರಾಟದಲ್ಲಿ ಇಡೀ ಶಾಸಕಾಂಗ ಪಕ್ಷ ಮಾತ್ರವಲ್ಲ ರಾಜ್ಯದ ಏಳುಕೋಟಿ ಜನತೆ ನಿಮ್ಮ ಜೊತೆಯಲ್ಲಿರುತ್ತದೆ.

ನಿಮಗೆ ಸದಾ ಯಶಸ್ಸು ಸಿಗಲಿ ಎಂದು ಡಿಕೆ ಶಿವಕುಮಾರ್​​​ಗೆ ಟ್ಯಾಗ್ ಮಾಡಿದ್ದಾರೆ.

Source link

ಪ್ರಮಾಣವಚನಕ್ಕೂ ಮುನ್ನವೇ ಡಿಕೆ ಶಿವಕುಮಾರ್​​​ ನಿವಾಸಕ್ಕೆ ಭದ್ರತೆ ಹೇಗಿದೆ ನೋಡಿ

ಬೆಂಗಳೂರು, ಮೇ 30: ಕರ್ನಾಟಕದ ಮುಖ್ಯಮಂತ್ರಿ ಆಗಿ ಡಿ.ಕೆ.ಶಿವಕುಮಾರ್ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ನಡೆದ ಸಿಎಲ್​ಪಿ ಸಭೆಯಲ್ಲಿ, ಅಧಿಕೃತವಾಗಿ ಡಿಕೆ ಶಿವಕುಮಾರ್​ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಆಗಿದ್ದಾರೆ. ಜೂನ್ 3 ರಂದು ಅಂದ್ರೆ ಬುಧವಾರ ಸಂಜೆ ಡಿಕೆ ಪದಗ್ರಹಣ ನಡೆಯಲಿದೆ. ಇನ್ನು ಡಿ.ಕೆ. ಶಿವಕುಮಾರ್​ಗೆ ರಾಜ್ಯಪಾಲರು ಸರ್ಕಾರ ರಚಿಸಲು ಅಧಿಕೃತ ಆಹ್ವಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಬೆಂಗಳೂರಿನ ಸದಾಶಿವನಗರದಲ್ಲಿರುವ ನಿಯೋಜಿತ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭಾರೀ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅವರ ನಿವಾಸದ ಮುಖ್ಯದ್ವಾರದಲ್ಲಿ ಪ್ರವೇಶಿಸುವವರಿಗಾಗಿ ಮೆಟಲ್ ಡಿಟೆಕ್ಟರ್‌ಗಳನ್ನು ಅಳವಡಿಸಲಾಗಿದ್ದು, ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿಯೇ ಒಳಗೆ ಬಿಡಲಾಗುತ್ತಿದೆ.

ವರದಿ: ಈರಣ್ಣ ಬಸವ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ

ಬೆಂಗಳೂರು, (ಮೇ 30): ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಡಿ.ಕೆ.ಶಿವಕುಮಾರ್ ಅವರು ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ನೂತನ ಆಯ್ಕೆ ನಡೆಯಿತು. ಹೊಸ ಶಾಸಕಾಂಗ ಪಕ್ಷದ ನಾಯಕರಾಗಿ ಡಿ ಕೆ ಶಿವಕುಮಾರ್ ಅವರ ಹೆಸರನ್ನು ಸಿಎಂ ಸಿದ್ದರಾಮಯ್ಯ ಅವರು ಸೂಚಿಸಿದರು. ಡಾ. ಜಿ ಪರಮೇಶ್ವರ್ ಅವರು ಅನುಮೋದಿಸಿದರು. ಇದನ್ನು ಸಭೆಯು ಒಕ್ಕೊರಲಿನಿಂದ ಬೆಂಬಲಿಸಿತು. ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ , ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಡಿ.ಕೆ.ಶಿವಕುಮಾರ್​ ಆಯ್ಕೆಯಾಗಿದ್ದಾರೆ ಎಂದು ಅವರು ಘೋಷಿಸಿದರು. ಇನ್ನು ಸಿಎಲ್​​ಪಿ ಸಭೆಯಲ್ಲಿ ಏನೆಲ್ಲಾ ಆಯ್ತು ಎನ್ನುವ ವಿಡಿಯೋ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಇಂಧನ ದರ ಏರಿಕೆ ಎಫೆಕ್ಟ್​​: ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ‘ಇವಿ’ ವಾಹನಗಳ ಧಮಾಕಾ!

ಬೆಂಗಳೂರು, ಮೇ 30: ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಮತ್ತು ಎಲ್‌ಪಿಜಿ ದರಗಳು ನಿರಂತರವಾಗಿ ಏರಿಕೆ ಆಗುತ್ತಿರುವುದರಿಂದ ಕಂಗೆಟ್ಟಿರುವ ಬೆಂಗಳೂರಿಗರು (Bangaluru) ಈಗ ಇವಿ ಅಂದರೆ ಎಲೆಕ್ಟ್ರಿಕ್ ವಾಹನಗಳ (Electric Vehicles) ಮೊರೆ ಹೋಗುತ್ತಿದ್ದಾರೆ. ನಗರದಲ್ಲಿ ಇವಿ ವಾಹನಗಳಿಗೆ ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಪ್ರತಿ ತಿಂಗಳು ನೂರಾರು ವಾಹನಗಳು ಮಾರಾಟವಾಗುತ್ತಿವೆ. ಇತ್ತ ವಾಹನ ಮಾಲೀಕರು ಮತ್ತೆ ಡೀಸೆಲ್ ದರ ಹೆಚ್ಚಾಗುತ್ತದೆ, ಹಾಗಾಗಿ ಇವಿ ಮೊರೆ ಹೋಗುತ್ತಿದ್ದೇವೆ ಎನ್ನುತ್ತಿದ್ದಾರೆ.

ಮುಖ್ಯಾಂಶಗಳು

  • ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಕಂಗೆಟ್ಟು ಇವಿ ಮೊರೆ ಹೋದ ಬೆಂಗಳೂರಿಗರು
  • ಶೋರೂಂಗಳಲ್ಲಿ ಖಾಲಿಯಾದ ಎಲೆಕ್ಟ್ರಿಕ್ ವಾಹನಗಳ ಸ್ಟಾಕ್!
  • ಇವಿ ಸ್ಕೂಟರ್, ಕಾರ್ ಬುಕ್ ಮಾಡಿದ್ರೆ 2 ರಿಂದ 3 ತಿಂಗಳು ವೇಟಿಂಗ್ ಪಿರಿಯಡ್!

ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡಿದ ಜನ

ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ನಡೆಸುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ದೇಶಾದ್ಯಂತ ಇಂಧನ ದರಗಳು ಗಗನಕ್ಕೇರುತ್ತಿವೆ. ಈಗಾಗಲೇ ದೇಶದಲ್ಲಿ ನಾಲ್ಕು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದ್ದು, ಇತ್ತ ಸಿಎನ್‌ಜಿ ಮತ್ತು ಎಲ್‌ಪಿಜಿ ಬೆಲೆಯೂ ಗ್ರಾಹಕರ ಕೈ ಸುಡುತ್ತಿದೆ. ಇಂಧನ ದರ ಏರಿಕೆಯ ಈ ಶಾಕ್‌ನಿಂದಾಗಿ ಹೊಸದಾಗಿ ವಾಹನ ಖರೀದಿಸಲು ಮುಂದಾಗುತ್ತಿರುವ ಸಿಲಿಕಾನ್ ಸಿಟಿ ಮಂದಿ, ಪೆಟ್ರೋಲ್-ಡೀಸೆಲ್ ಸಹವಾಸವೇ ಬೇಡ ಎಂದು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ಕಿರಿಕಿರಿ, ದುಬಾರಿ ಬಾಡಿಗೆ ಇದ್ರೂ ಬೆಂಗಳೂರು ಬಿಡಲ್ಲ ಜನ! ಬಿಹಾರಿ ಯುವಕನ ವಿಡಿಯೋ ವೈರಲ್

ಇದಕ್ಕೆ ಸಾಕ್ಷಿ ಎಂಬಂತೆ ನಗರದ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂಗಳಲ್ಲಿ ವಾಹನಗಳ ಮಾರಾಟದ ಗ್ರಾಫ್ ದಿಢೀರ್ ಏರಿಕೆಯಾಗಿದೆ. ಕಳೆದ ತಿಂಗಳಷ್ಟೇ ಕೇವಲ 40 ಇವಿ ಸ್ಕೂಟರ್‌ಗಳನ್ನು ಮಾರಾಟ ಮಾಡಿದ್ದ ಶೋರೂಂ ಮಾಲೀಕರು, ಇಂಧನ ದರ ಹೆಚ್ಚಳವಾದ ಈ ಒಂದೇ ತಿಂಗಳಿನಲ್ಲಿ ಬರೋಬ್ಬರಿ 70ಕ್ಕೂ ಹೆಚ್ಚು ಸ್ಕೂಟರ್‌ಗಳನ್ನು ಸೇಲ್ ಮಾಡಿದ್ದಾರೆ. ದಿನದಿಂದ ದಿನಕ್ಕೆ ಇಂಧನ ದರ ಹೆಚ್ಚಾಗುತ್ತಿರುವುದರಿಂದ ಇವಿ ಸ್ಕೂಟರ್‌ಗಳೇ ಬೆಸ್ಟ್ ಆಪ್ಷನ್ ಎಂದು ಗ್ರಾಹಕರಾದ ಶಶಿಕಾಂತ್ ರಾಣೆ ಅವರ ಮಾತು.

ಇವಿ ಕ್ರಾಂತಿಗೆ ಸೈ ಎಂದ ಚಾಲಕರು

ಇನ್ನು ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಸರಿಸುಮಾರು 8 ರೂಪಾಯಿಯಷ್ಟು ಭಾರಿ ಏರಿಕೆಯಾಗಿರುವ ಕಾರಣ, ಹೊಸ ಕಾರು ಖರೀದಿಸಲು ಪ್ಲ್ಯಾನ್ ಮಾಡಿದ್ದ ಮಧ್ಯಮ ವರ್ಗದ ಜನರೆಲ್ಲಾ ಇವಿ ಕಾರುಗಳನ್ನೇ ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಇದರ ನಡುವೆ ಯುದ್ಧದ ಎಫೆಕ್ಟ್‌ನಿಂದಾಗಿ ಎಲ್‌ಪಿಜಿ ಸಿಗದೆ ಪರದಾಡಿದ್ದ ಆಟೋ ಚಾಲಕರು ಸಹ ಈಗ ಇವಿ ಕ್ರಾಂತಿಗೆ ಸೈ ಎಂದಿದ್ದಾರೆ. ಹಿಂದೆ ಲೀಟರ್‌ಗೆ 55 ರೂ. ಇದ್ದ ಎಲ್‌ಪಿಜಿ ದರ ಈಗ ಬರೋಬ್ಬರಿ 95 ರೂಪಾಯಿಗೆ ತಲುಪಿರುವುದರಿಂದ, ನಿರಂತರ ದರ ಏರಿಕೆಗೆ ಬ್ರೇಕ್ ಹಾಕಲು ಎಲೆಕ್ಟ್ರಿಕ್ ಆಟೋಗಳ ಖರೀದಿಗೆ ಮುಂದಾಗುತ್ತಿದ್ದಾರೆ.

ಭಾರಿ ಬೇಡಿಕೆ ಮಧ್ಯೆ ಸಪ್ಲೈ ಕೊರತೆ

ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರಿ ಪ್ರಮಾಣದ ಬೇಡಿಕೆ ಸೃಷ್ಟಿಯಾಗಿದ್ದು, ಶೋರೂಂ ಮಾಲೀಕರು ಗ್ರಾಹಕರಿಗೆ ವಾಹನಗಳನ್ನು ಸಪ್ಲೈ ಮಾಡಲು ಹೈರಾಣಾಗುತ್ತಿದ್ದಾರೆ. ಸದ್ಯ ಇವಿ ವಾಹನಗಳನ್ನು ಬುಕ್ ಮಾಡಿದರೆ ವಿತರಣೆಗಾಗಿ ಕನಿಷ್ಟ ಎರಡರಿಂದ ಮೂರು ತಿಂಗಳು ಕಾಯಬೇಕು ಎಂದು ಸ್ಕೂಟರ್ ಶೋರೂಂನ ಸೇಲ್ಸ್ ಎಕ್ಸಿಕ್ಯುಟಿವ್ ಹರ್ಷಿತ್​ ಹೇಳಿದ್ದಾರೆ.

ಇದನ್ನೂ ಓದಿ: ಇಂಧನ ದರ ಏರಿಕೆ ಬರೆ: ಸರಕು ಸಾಗಣೆ ದರ ಹೆಚ್ಚಳಕ್ಕೆ ಲಾರಿ ಮಾಲೀಕರ ನಿರ್ಧಾರ, ಪ್ರಧಾನಿ ಮೋದಿಗೆ ಸಿಮ್ಟಾ ಪತ್ರ

ಒಟ್ಟಿನಲ್ಲಿ, ಜಾಗತಿಕ ಯುದ್ಧದ ಪರಿಣಾಮವಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಹಾಗೂ ಎಲ್‌ಪಿಜಿ ದರಗಳು ದಿನ ನಿತ್ಯವೂ ಏರಿಕೆ ಆಗ್ತಿದ್ದಂತೆ, ಇತ್ತ ಜನರು ಮಾತ್ರ ಸ್ಮಾರ್ಟ್ ಆಗಿ ಇವಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ಆದರೆ ಬೇಡಿಕೆ ಹೆಚ್ಚಾಗಿರುವ ಕಾರಣ ಮಾರುಕಟ್ಟೆಯಲ್ಲಿ ವಾಹನಗಳ ಕೊರತೆ ಎದುರಾಗಿರುವುದಂತೂ ಸತ್ಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಾಲಿಗೆ ಬಿದ್ದ ಧೋನಿ ಪತ್ನಿ, ಗಾಬರಿಯಾದ ನಟ, ನಿಜಕ್ಕೂ ಆಗಿದ್ದೇನು?

ಎಂಎಸ್ ಧೋನಿ (MS Dhoni), ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟಿಗ. ಐಪಿಎಲ್ ಸಮಯದಲ್ಲಿ ಧೋನಿಯ ಪತ್ನಿ ಮತ್ತು ಮಗಳು ಸಹ ಕ್ರೀಡಾಂಗಣಕ್ಕೆ ಬಂದು ಧೋನಿಯ ಬೆಂಬಲಿಸುತ್ತಾರೆ. ಐಪಿಎಲ್ ವೇಳೆ ಸಾಕಷ್ಟು ಸಿನಿಮಾ ಸೆಲೆಬ್ರಿಟಿಗಳು ಸಹ ಕ್ರೀಡಾಂಗಣಕ್ಕೆ ಬಂದಿರುತ್ತಾರೆ. ಈ ವೇಳೆ ಕ್ರಿಕೆಟಿಗರು ಮತ್ತು ಸಿನಿಮಾ ತಾರೆಯರ ನಡುವೆ ಮಾತುಕತೆ, ಭೇಟಿ, ಪರಿಚಯಗಳು ಆಗುತ್ತವೆ. ಹಾಗೆಯೇ ಇತ್ತೀಚೆಗೆ ಒಬ್ಬ ದಕ್ಷಿಣ ಭಾರತದ ಹಿರಿಯ ನಟ ಹೇಳಿಕೊಂಡಿರುವಂತೆ, ಅವರು ಐಪಿಎಲ್ ನೋಡಲು ಹೋಗಿದ್ದಾಗ ಇದ್ದಕ್ಕಿದ್ದಂತೆ ಧೋನಿಯ ಪತ್ನಿ ಸಾಕ್ಷಿ ಬಂದು ಅವರ ಕಾಲಿಗೆ ನಮಸ್ಕರಿಸಿದರಂತೆ. ಇದು ನೋಡಿ ಖುದ್ದು ಆ ನಟನೇ ಗಾಬರಿಯಾಗಿ ಗೊಂದಲಕ್ಕೆ ಒಳಗಾಗಿದ್ದರಂತೆ. ಏನದು ಕತೆ? ಇಲ್ಲಿದೆ ಮಾಹಿತಿ…

‘ಕಾಂತಾರ 2’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ಮಲಯಾಳಂ ನಟ ಜಯರಾಂ ಇತ್ತೀಚೆಗೆ ತಮ್ಮ ಹೊಸ ಸಿನಿಮಾ ‘ಪರಿಮಳ ಆಂಡ್ ಕೋ’ ಸಿನಿಮಾದ ಪ್ರಚಾರದಲ್ಲಿರುವಾಗ, ಅಭಿಮಾನಿಯೊಬ್ಬರು ಜಯರಾಮ್ ಅವರಿಗೆ ಯಾವ ಅಭಿಮಾನಿಗಳ ಭೇಟಿ ನಿಮಗೆ ಅತ್ಯಂತ ಸಂತೋಷ ನೀಡಿತು ಎಂದು ಕೇಳಿದರು. ಅದಕ್ಕೆ ಅವರು, ಸಾಕ್ಷಿ ಧೋನಿಯ ಕತೆ ವಿವರಿಸಿದರು. ‘ಕೇವಲ ಒಂದು ವಾರದ ಹಿಂದೆ, ನಾನು ಚೆನ್ನೈನಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯ ನೋಡಲು ಹೋಗಿದ್ದೆ. ಅಲ್ಲಿ ಧೋನಿಯ ಪತ್ನಿ ಸಾಕ್ಷಿ ಸಹ ಇದ್ದರು. ಆದರೆ ಹಠಾತ್ತನೆ, ಸಾಕ್ಷಿ ಧೋನಿ ನನ್ನ ಬಳಿ ಬಂದು, ನನ್ನ ಪಾದ ಮುಟ್ಟಿ ತಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಹೇಳಿದರು. ನಾನು ದಿಗ್ಭ್ರಮೆಗೊಂಡೆ, ಗೊಂದಲಕ್ಕೂ ಒಳಗಾದೆ. ಅವರು ನನ್ನನ್ನು ಬೇರೆಯವರೆಂದು ತಪ್ಪಾಗಿ ಭಾವಿಸಿದ್ದಾರೆಯೇ ಎಂದು ಅನಿಸಿತು’ ಎಂದರು.

ಖುದ್ದು ಜಯರಾಮ್ ಅವರು ಸಾಕ್ಷಿಯನ್ನುದ್ದೇಶಿಸಿ, ‘ನೀವು ತಪ್ಪಾಗಿ ತಿಳಿದಂತಿದ್ದೀರಿ, ನೀವು ಖಂಡಿತವಾಗಿಯೂ ನನ್ನ ಅಭಿಮಾನಿಯೇನಾ?’ ಎಂದು ಕೇಳಿದರಂತೆ. ಅದಕ್ಕೆ ಸಾಕ್ಷಿ, ‘ನನಗೆ ನೀವು ಯಾರೆಂದು ಚೆನ್ನಾಗಿ ಗೊತ್ತು’ ಎಂದರಂತೆ. ಸಾಕ್ಷಿ ಮತ್ತು ಧೋನಿಯ ಮಗಳು ಜೀವಾಳ ಕೇರ್‌ಟೇಕರ್ (ನಾನ್ನಿ) ಮಲಯಾಳಿಯಾಗಿದ್ದರಂತೆ. ಜೀವಾ ಚಿಕ್ಕವಳಿದ್ದಾಗ, ಅವಳಿಗೆ ನಿದ್ದೆ ಬರಿಸಲು ಜಯರಾಮ್ ಅವರ ‘ಅಂಬಲಪ್ಪುಳ ಉಣ್ಣಿಕಣ್ಣನೋಡು’ ಹಾಡನ್ನು ಹಾಡುತ್ತಿದ್ದರಂತೆ ಎಂದು ಜಯರಾಮ್ ವಿವರಿಸಿದ್ದಾರೆ.

ಇದನ್ನೂ ಓದಿ:ಅಭಿಮಾನಿಗಳಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಮುಂದಾದ ಧೋನಿ

2017 ರಲ್ಲಿ, ಜೀವಾಗೆ ಕೇವಲ ಎರಡು ವರ್ಷ ವಯಸ್ಸಾಗಿದ್ದಾಗ, ತನ್ನ ಕೇರ್‌ಟೇಕರ್ ‘ಶೀಲಾ ಆಂಟಿ’ಯಿಂದ ಕಲಿತ ಮಲಯಾಳಿ ಹಾಡನ್ನು ಹಾಡುವ ಮೂಲಕ ಅವಳು ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡಿದ್ದಳು. ಅವಳು ಹಾಡಿದ್ದ ಹಾಡು ಪ್ರಿಯದರ್ಶನ್ ಅವರ ‘ಅದ್ವೈತಂ’ ಚಿತ್ರದ ‘ಅಂಬಲಪ್ಪುಳ ಉಣ್ಣಿಕಣ್ಣನೋಡು’ ಆಗಿತ್ತು. 1991 ರ ಈ ಚಿತ್ರದಲ್ಲಿ ಮೋಹನ್‌ಲಾಲ್, ಜಯರಾಮ್ ಮತ್ತು ರೇವತಿ ನಟಿಸಿದ್ದರು. ಜೀವಾ ಹಾಡುತ್ತಿರುವ ಆ ವಿಡಿಯೋ ಆಗ ವೈರಲ್ ಆಗಿತ್ತು. ಅದೇ ಕಾರಣಕ್ಕೆ ಸಾಕ್ಷಿ ಅವರು ಜಯರಾಂ ಅವರ ಬಗ್ಗೆ ತಿಳಿದುಕೊಂಡು ಅವರ ಅಭಿಮಾನಿ ಆಗಿದ್ದಾರೆ.

ಜಯರಾಮ್ ಅವರು ಮಲಯಾಳಂ ಚಿತ್ರರಂಗದ ಹಿರಿಯ ನಟ. ಅವರು ಮಲಯಾಳಂ ಮಾತ್ರವೇ ಅಲ್ಲದೆ ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದಾರೆ. 1988 ರ ‘ಅಪರನ್‘ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, 1993 ರ ‘ಮೇಲೆಪರಂಬಿಲ್ ಆಣ್ವೀಡು’ ಚಿತ್ರದ ಮೂಲಕ ಪ್ರಸಿದ್ಧಿ ಪಡೆದರು. ಅವರು ನುರಿತ ಚೆಂಡೆ (Chenda) ಕಲಾವಿದರೂ ಆಗಿದ್ದು, ಕೇರಳದ ದೇವಸ್ಥಾನಗಳ ಹಬ್ಬಗಳಲ್ಲಿ ಹೆಚ್ಚಾಗಿ ಪ್ರದರ್ಶನ ನೀಡುತ್ತಾರೆ. ಕೆಲ ವರ್ಷದ ಹಿಂದೆ ಕಾರ್ಯಕ್ರಮವೊಂದರಲ್ಲಿ ಪುನೀತ್ ರಾಜ್​​ಕುಮಾರ್ ಅವರ ನೆನೆದು ಕನ್ನಡ ಹಾಡು ಹಾಡಿದ್ದರು. ಆ ವಿಡಿಯೋ ಸಖತ್ ವೈರಲ್ ಆಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026 Final: ಅಹಮದಾಬಾದ್‌ ಪಿಚ್ ಯಾರಿಗೆ ಸಹಕಾರಿ? ಫೈನಲ್ ದಿನದಂದು ಹವಾಮಾನ ಹೇಗಿರಲಿದೆ?

ಐಪಿಎಲ್ 2026 ರ ಫೈನಲ್ (IPL 2026 Final) ಪಂದ್ಯ ಇದೇ ಭಾನುವಾರ ಸಂಜೆ 7:30 ಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ (RCB vs GT) ನಡುವೆ ನಡೆಯಲಿದೆ. ಎರಡೂ ತಂಡಗಳು ತಮ್ಮ ಎರಡನೇ ಐಪಿಎಲ್ ಟ್ರೋಫಿಯನ್ನು ಎತ್ತುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿವೆ. ಲೀಗ್ ಹಂತದಲ್ಲಿ ಅಗ್ರಸ್ಥಾನದಲ್ಲಿದ್ದ ಆರ್‌ಸಿಬಿ ಕ್ವಾಲಿಫೈಯರ್ -1 ರಲ್ಲಿ ಗುಜರಾತ್ ಮಣಿಸಿ ಫೈನಲ್​ಗೇರಿತ್ತು. ಇತ್ತ ಗುಜರಾತ್ ಕ್ವಾಲಿಫೈಯರ್ -2 ರಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದೆ. ಈ ಆವೃತ್ತಿಯಲ್ಲಿ ಎರಡೂ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ನಾಲ್ಕನೇ ಬಾರಿ. ಕಳೆದ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ಎರಡು ಬಾರಿ ಗೆದ್ದಿದ್ದರೆ, ಗುಜರಾತ್ ಒಂದು ಪಂದ್ಯವನ್ನು ಗೆದ್ದಿದೆ. ಇನ್ನು ಫೈನಲ್ ಪಂದ್ಯವನ್ನು ಆಯೋಜಿಸುತ್ತಿರುವ ಅಹಮದಾಬಾದ್​ನ ಮೋದಿ ಮೈದಾನದ ಪಿಚ್ ಯಾರಿಗೆ ಸಹಕಾರಿಯಾಗಲಿದೆ? ಪಂದ್ಯದ ದಿನದಂದು ಹವಾಮಾನ ಹೇಗಿರಲಿದೆ ಎಂಬುದನ್ನು ನೋಡುವುದಾದರೆ..

ಅಹಮದಾಬಾದ್​ನಲ್ಲಿ ಸತತ ಎರಡನೇ ಫೈನಲ್

  • ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವು ಸತತ ಎರಡನೇ ಬಾರಿಗೆ ಐಪಿಎಲ್ ಫೈನಲ್ ಪಂದ್ಯವನ್ನು ಆಯೋಜಿಸಲಿದೆ.
  • ಇದಕ್ಕೂ ಮೊದಲು 2025 ರಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
  • ಈಗ ಮತ್ತೊಮ್ಮೆ ಆರ್‌ಸಿಬಿ ಈ ಮೈದಾನದಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಕಣಕ್ಕಿಳಿಯಲಿದೆ.
  • ಮತ್ತೊಂದೆಡೆ, ಗುಜರಾತ್ ಟೈಟಾನ್ಸ್ ತಂಡವು ತಮ್ಮ ತವರು ನೆಲದಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಹೊಂದಿದೆ.

ಅಹಮದಾಬಾದ್ ಪಿಚ್ ಯಾರಿಗೆ ಸಹಕಾರಿ?

ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವಾಗಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದೆ. ಈ ಆವೃತ್ತಿಯಲ್ಲೇ ಈ ಮೈದಾನದಲ್ಲಿ ದೊಡ್ಡ ಸ್ಕೋರಿಂಗ್ ಪಂದ್ಯಗಳು ನಡೆದಿವೆ. ಆದಾಗ್ಯೂ ಆರಂಭದಲ್ಲಿ ವೇಗದ ಬೌಲರ್‌ಗಳು ಸ್ವಲ್ಪ ಬೌನ್ಸ್ ಪಡೆಯಬಹುದು. ಹಾಗೆಯೇ ದೊಡ್ಡ ಬೌಂಡರಿಗಳಿಂದಾಗಿ ಸ್ಪಿನ್ನರ್‌ಗಳು ಮಧ್ಯಮ ಓವರ್‌ಗಳಲ್ಲಿ ಸ್ವಲ್ಪ ಸಹಾಯವನ್ನು ಪಡೆಯಬಹುದು. ಒಟ್ಟಾರೆಯಾಗಿ, ಇದು ಹೆಚ್ಚಿನ ಸ್ಕೋರಿಂಗ್ ಪಂದ್ಯವಾಗಬಹುದು. ಆದರೆ ಸಂಜೆಯಾಗುತ್ತಿದ್ದಂತೆ ಇಬ್ಬನಿ ಪ್ರಮುಖ ಪಾತ್ರ ವಹಿಸುವುದರಿಂದ ಇದು ಚೇಸಿಂಗ್ ತಂಡಕ್ಕೆ ಅನುಕೂಲಕರವಾಗಬಹುದು. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಬಹುದು.

IPL 2026 Final: ಆರ್​ಸಿಬಿ- ಗುಜರಾತ್ ನಡುವೆ ಫೈನಲ್ ಫೈಟ್; ಮುಖಾಮುಖಿ ದಾಖಲೆ ಹೇಗಿದೆ?

ಅಹಮದಾಬಾದ್‌ನ ಹವಾಮಾನ ವರದಿ

ಭಾನುವಾರ ಅಹಮದಾಬಾದ್‌ನಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ. ಹವಾಮಾನ ಮುನ್ಸೂಚನೆಯ ಪ್ರಕಾರ, ಅಹಮದಾಬಾದ್‌ನಲ್ಲಿ ಸ್ಪಷ್ಟ ಹವಾಮಾನವಿರುತ್ತದೆ, ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದೆ. ಇದರರ್ಥ ಪಂದ್ಯದ ದಿನದಂದು ಮಳೆ ಬರುವ ಸಾಧ್ಯತೆಯೇ ಇಲ್ಲ. ಆದ್ದರಿಂದ, ಅಭಿಮಾನಿಗಳು ಸಂಪೂರ್ಣ ಪಂದ್ಯವನ್ನು ಆನಂದಿಸಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ಬಿಚ್ಚಿಟ್ಟ ಯತೀಂದ್ರ

ಬೆಂಗಳೂರು, (ಮೇ 30): ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕರ್ನಾಟಕದ ಮುಂದಿನ ಸಿಎಂ ಆಗಿ ಡಿಕೆ ಶಿವಕುಮಾರ್ ಅವರು ಜೂನ್ 3ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇನ್ನು ರಾಹುಲ್ ಗಾಂಧಿ ನೀಡಿದ ಒಂದೇ ಒಂದು ಸೂಚನೆ ಯಾವುದೇ ತಂಟೆ ತಗಾದೆ ತಗೆಯದೇ ಸಿದ್ದರಾಂಯ್ಯನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾದರಿಯಾಗಿದ್ದಾರೆ. ಇನ್ನು ಹೈಕಮಾಂಡ್ ಸಹ ಸಿದ್ದರಾಮಯ್ಯನವರ ನಡೆಗೆ ಶ್ಲಾಘಿಸಿದ್ದು, ಖುದ್ದು ರಾಹುಲ್ ಗಾಂಧಿಯವರೇ ಸಿದ್ದರಾಮಯ್ಯನವರನ್ನ ದೆಹಲಿಗೆ ಕರೆಯಿಸಿಕೊಂಡು ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಇದೇ ವೇಳೆ ನಿಮ್ಮ ತ್ಯಾಗಕ್ಕೆ ಪುತ್ರ ಯತೀಂದ್ರ ಸಿದ್ದರಾಮಯ್ಯನವರಿಗೆ ಒಂದು ಒಳ್ಳೆಯ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಯತೀಂದ್ರ ಅವರು ಡಿಸಿಎಂ ಆಗಲಿದ್ದಾರೆ ಎನ್ನುವ ಚರ್ಚೆಗಳು ಶುರುವಾಗಿವೆ. ಆದ್ರೆ, ಡಿಸಿಎಂ ಆಗುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಡಿಕೆಶಿ ಸಚಿವ ಸಂಪುಟದಲ್ಲಿ ಯತೀಂದ್ರ ಅವರಿಗೆ ಒಂದು ಸ್ಥಾನ ಖಚಿತ. ಈ ಬಗ್ಗೆ ಹೈಕಮಾಂಡ್ ಕೊಟ್ಟ ಭರವಸೆಯನ್ನು ಸ್ವತಃ ಯತೀಂದ್ರ ಅವರೇ ಬಹಿರಂಗಪಡಿಸಿದ್ದಾರೆ.

Source link

ಗೃಹಲಕ್ಷ್ಮಿ- ವಿಧವಾ ವೇತನದ ಹಣ ಸಾಲದ ಖಾತೆಗೆ ಜಮೆ: ಬಡ ಮಹಿಳೆಯ ಹೊಟ್ಟೆ ಮೇಲೆ ಹೊಡೆದ ಬ್ಯಾಂಕ್

ಬ್ಯಾಂಕ್​​ ಎಡವಟ್ಟಿಗೆ ತಾಯಿ-ಮಗ ಪರದಾಟImage Credit source: tv9 kannada

ಹಾವೇರಿ, ಮೇ 30: ಬಡವರಿಗೆ ಮತ್ತು ಮಹಿಳೆಯರಿಗೆ ಆಸರೆಯಾಗಲಿ ಎಂದು ಸರ್ಕಾರ ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಹಾಗೂ ವಿಧವಾ ವೇತನದ ಹಣಕ್ಕೆ ಬ್ಯಾಂಕೊಂದು ಕೈ ಹಾಕಿದೆ. ಹಾವೇರಿಯಲ್ಲಿ (haveri) ಬ್ಯಾಂಕ್ ಮ್ಯಾನೇಜರ್ ಮತ್ತು ಸಿಬ್ಬಂದಿ ದರ್ಪಕ್ಕೆ ತಾಯಿ ಮತ್ತು ಮಗ ಬೀದಿಗೆ ಬೀಳುವಂತಾಗಿದೆ. ನಿಯಮಗಳನ್ನು ಗಾಳಿಗೆ ತೂರಿ, ಮಹಿಳೆಯ ಖಾತೆಯಲ್ಲಿದ್ದ ಹಣವನ್ನು ಸಾಲದ ಖಾತೆಗೆ ಜಮೆ ಮಾಡಿಕೊಂಡಿರುವ ಕೆವಿಜಿ ಬ್ಯಾಂಕ್ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮುಖ್ಯಾಂಶಗಳು

  • ಗೃಹಲಕ್ಷ್ಮಿ, ವಿಧವಾ ವೇತನ ಹಣ ದುರ್ಬಳಕೆ
  • ಸಾಲದ ಹೆಸರಿನಲ್ಲಿ ಸರ್ಕಾರಿ ಯೋಜನೆಗಳ ಹಣ ಕಡಿತ
  • ಬ್ಯಾಂಕ್ ಎಡವಟ್ಟಿಗೆ ಸಾರ್ವಜನಿಕರು ಆಕ್ರೋಶ

ನಡೆದಿದ್ದೇನು? 

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದಿದೆ. ಈ ಅವಧಿಯಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂ ಹಣ ಕೋಟ್ಯಂತರ ಮಹಿಳೆಯರಿಗೆ ಆಸರೆಯಾಗಿದೆ. ಆದರೆ, ಹಾವೇರಿಯ ನಾಗೇಂದ್ರಮಟ್ಟಿಯಲ್ಲಿರುವ ಕೆವಿಜಿ ಬ್ಯಾಂಕ್ ಮಾತ್ರ ಸರ್ಕಾರದ ನಿಯಮಗಳನ್ನೇ ಗಾಳಿಗೆ ತೂರಿದೆ. ಬಡ ಮಹಿಳೆಯೊಬ್ಬರ ಗೃಹಲಕ್ಷ್ಮಿ ಯೋಜನೆ ಮತ್ತು ವಿಧವಾ ವೇತನದ ಬರೋಬ್ಬರಿ 20 ಸಾವಿರಕ್ಕೂ ಅಧಿಕ ಹಣವನ್ನು ಬ್ಯಾಂಕ್ ಸಿಬ್ಬಂದಿ ಸಾಲದ ಖಾತೆಗೆ ಕಟ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಬ್ಯಾಂಕ್​ ಕ್ಯಾಶಿಯರ್​ನಿಂದ ಅಸಭ್ಯ ವರ್ತನೆ: ಗ್ರಾಹಕರ ಎದುರೇ ಕ್ಲಾಸ್​​ ತೆಗೆದುಕೊಂಡ ಮಹಿಳಾ ಸಿಬ್ಬಂದಿ

ನಾಗೇಂದ್ರಮಟ್ಟಿ ನಿವಾಸಿ ಜುಲೇಕಾಬಿ ಸೋಮನಕಟ್ಟಿ ಎಂಬುವವರ ಖಾತೆಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಮತ್ತು ವಿಧವಾ ವೇತನ ಸೇರಿ 2,800 ರೂ ಜಮೆಯಾಗುತ್ತಿತ್ತು. ತಮಗೆ ವಯಸ್ಸಾಗಿದ್ದರಿಂದ, ಆರೋಗ್ಯ ಕೈಕೊಟ್ಟಾಗ ಆಸ್ಪತ್ರೆ ಖರ್ಚಿಗೆ ನೆರವಾಗಲಿ ಎಂದು ಜುಲೇಕಾಬಿ ಆ ಹಣವನ್ನು ಖಾತೆಯಲ್ಲೇ ಬಿಟ್ಟಿದ್ದಾರೆ. ಆದರೆ, ಈ ಹಿಂದೆ ಜುಲೇಕಾಬಿ ಅವರು ಐದು ಜನ ಮಹಿಳೆಯರ ಜೊತೆ ಸೇರಿ ಬ್ಯಾಂಕ್‌ನಲ್ಲಿ ಗ್ರೂಪ್ ಲೋನ್ ಪಡೆದಿದ್ದರು. ಅದರಲ್ಲಿ ತಮ್ಮ ಪಾಲಿನ ಸಾಲದ ಹಣವನ್ನು ಇವರು ಸಂಪೂರ್ಣವಾಗಿ ಮರುಪಾವತಿಸಿದ್ದರು. ಆದರೆ, ಗುಂಪಿನ ಉಳಿದ ಮಹಿಳೆಯರು ಸಾಲದ ಕಂತು ಕಟ್ಟದ ಕಾರಣ, ಬ್ಯಾಂಕ್ ಸಿಬ್ಬಂದಿ ಜುಲೇಕಾಬಿ ಅವರ ವೈಯಕ್ತಿಕ ಖಾತೆಯಲ್ಲಿದ್ದ ಗೃಹಲಕ್ಷ್ಮಿ ಮತ್ತು ವಿಧವಾ ವೇತನದ ಎರಡು ತಿಂಗಳ ಹಣಕ್ಕೆ ಕತ್ತರಿ ಹಾಕಿದ್ದಾರೆ.

ಮಗ ಶೂರಿಟಿಯಾಗಿದ್ದಕ್ಕೆ ತಾಯಿ ಖಾತೆಯಿಂದಲೇ ಹಣ ಕಟ್​

ಬ್ಯಾಂಕ್ ಸಿಬ್ಬಂದಿಯ ಎಡವಟ್ಟು ಇಷ್ಟಕ್ಕೇ ನಿಂತಿಲ್ಲ. ಜುಲೇಕಾಬಿ ಅವರ ಮಗ ಇಮಾಮ್ ಹುಸೇನ್ ತನ್ನ ಗೆಳೆಯನೊಬ್ಬ ಬ್ಯಾಂಕ್‌ನಲ್ಲಿ ಪಡೆದಿದ್ದ 50 ಸಾವಿರ ರೂ ಸಾಲಕ್ಕೆ ಶೂರಿಟಿ ಆಗಿದ್ದ. ಆ ಗೆಳೆಯ ಕೂಡ ಸರಿಯಾಗಿ ಸಾಲದ ಕಂತು ಪಾವತಿಸಿರಲಿಲ್ಲ. ಇದನ್ನೇ ನೆಪವಾಗಿಸಿಕೊಂಡ ಬ್ಯಾಂಕ್ ಸಿಬ್ಬಂದಿ, ಮಗ ಶೂರಿಟಿಯಾಗಿದ್ದಕ್ಕೆ ತಾಯಿಯ ಖಾತೆಯಿಂದಲೇ ಹಂತ ಹಂತವಾಗಿ 5ರಿಂದ 6 ಸಾವಿರ ರೂ ಹಣ (ಎರಡು ತಿಂಗಳ) ಕಟ್ ಮಾಡಿದ್ದಾರೆ.

ಬ್ಯಾಂಕ್ ಮ್ಯಾನೇಜರ್ ದರ್ಪ

ಸರ್ಕಾರ ಬಡವರ ಹೊಟ್ಟೆ ತುಂಬಿಸಲು ನೀಡಿದ ಹಣವನ್ನು ಈ ರೀತಿ ಕಟ್ ಮಾಡಿಕೊಂಡಿದ್ದರ ಬಗ್ಗೆ ಪ್ರಶ್ನಿಸಲು ಹೋದರೆ, ಬ್ಯಾಂಕ್ ಮ್ಯಾನೇಜರ್ ದರ್ಪ ಪ್ರದರ್ಶಿಸಿದ್ದಾರೆ. ಬ್ಯಾಂಕ್‌ನಲ್ಲಿ ಸಾಲ ಬಾಕಿ ಇಟ್ಟುಕೊಂಡಿದ್ದಕ್ಕೆ ಕಟ್ ಮಾಡಿದ್ದೇವೆ. ಸರ್ಕಾರದ ಆದೇಶ ನಮಗೂ ಗೊತ್ತು, ಹಾಗಿದ್ದರೆ ಸಾಲ ಏಕೆ ಮಾಡಬೇಕಿತ್ತು? ಎಂದು ತಾಯಿ-ಮಗನಿಗೆ ದರ್ಪದಲ್ಲಿ ಉತ್ತರಿಸಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಹಣ ದುರ್ಬಳಕೆ ಆರೋಪ: ಡಿಸಿಎಂ ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆ

ಒಟ್ಟಿನಲ್ಲಿ ಸರ್ಕಾರ ನೀಡುವ ಗೃಹಲಕ್ಷ್ಮಿ ಮತ್ತು ವಿಧವಾ ವೇತನ ಹಣವನ್ನು ಸಾಲದ ಖಾತೆಗೆ ಜಮೆ ಮಾಡಿದ್ದು, ಸ್ಥಳೀಯರ ಆಕ್ರೋಶ ಕಾರಣವಾಗಿದೆ. ಬ್ಯಾಂಕ್ ಸಿಬ್ಬಂದಿ ಎಡವಟ್ಟಿನಿಂದ ತಾಯಿ-ಮಗ ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ 9 ಹಾವೇರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತಮಿಳುನಾಡು ಸಿಎಂ ವಿಜಯ್​ ಸಾಧನೆ ಕೊಂಡಾಡಿದ ರಾಮ್ ಚರಣ್: ಹೇಳಿದ್ದೇನು?

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಭರ್ಜರಿ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ರಾಮ್ ಚರಣ್. ದೇಶದ ಪ್ರಮುಖ ನಗರಗಳಲ್ಲಿ ಸುತ್ತಾಡಿ ಪ್ರಚಾರ ಮಾಡುತ್ತಿರುವ ರಾಮ್ ಚರಣ್ ಇಂದು (ಮೇ 30) ಚೆನ್ನೈಗೆ ಭೇಟಿ ನೀಡಿದ್ದರು. ಚೆನ್ನೈನಲ್ಲಿ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಮಾತನಾಡಿದ ನಟ ರಾಮ್ ಚರಣ್, ತಮ್ಮ ‘ಪೆದ್ದಿ’ ಸಿನಿಮಾದ ಬಗ್ಗೆ ಮಾತನಾಡುವ ಜೊತೆಗೆ ಸಿನಿಮಾರಂಗದಿಂದ ರಾಜಕೀಯಕ್ಕೆ ಪ್ರವೇಶಿಸಿ ಇತ್ತೀಚೆಗಷ್ಟೆ ತಮಿಳುನಾಡಿನ ಸಿಎಂ ಸಹ ಆಗಿರುವ ವಿಜಯ್ ಅವರ ಸಾಧನೆಯನ್ನು ಕೊಂಡಾಡಿದರು.

‘ವಿಜಯ್ ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಿನಿಮಾರಂಗದಿಂದ ದೂರ ಸರಿದಿದ್ದಾರೆ. ಚಲನಚಿತ್ರ ರಂಗದ ವ್ಯಕ್ತಿಯಾಗಿ ತಮಗೆ ಅವರ ಬಗ್ಗೆ ಹೆಮ್ಮೆ ಇದೆ. ಸಾರ್ವಜನಿಕ ಸೇವೆಗೆ ಮಾಡಲೆಂದು ನೀವು (ವಿಜಯ್) ನಿಮ್ಮ ಯಶಸ್ಸಿನ ಉತ್ತುಂಗದಲ್ಲಿದ್ದಾಗ ನಿಮ್ಮ ತಾರಾ ಪಟ್ಟ (ಸ್ಟಾರ್‌ಡಮ್) ಮತ್ತು ವೃತ್ತಿಜೀವನವನ್ನು ತ್ಯಜಿಸಿದ್ದೀರಿ. ಚಿತ್ರರಂಗದ ಒಬ್ಬ ವ್ಯಕ್ತಿಯಾಗಿ ನನಗೆ ಇದು ತುಂಬಾ ತುಂಬಾ ಹೆಮ್ಮೆಯ ವಿಷಯವಾಗಿದೆ, ಮತ್ತು ನಾನು ತಮಿಳುನಾಡಿನ ಜನತೆಗೆ ಹಾಗೂ ವಿಜಯ್ ಸರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ’ ಎಂದಿದ್ದಾರೆ.

ಇದಕ್ಕೂ ಮುನ್ನ, ಚರಣ್ ಅವರು ಟ್ವಿಟರ್ ನಲ್ಲೂ ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ತಮ್ಮ ಪೋಸ್ಟ್‌ನಲ್ಲಿ ಅವರು, ‘ತಮಿಳುನಾಡು ಚುನಾವಣೆಯಲ್ಲಿ ಅತ್ಯದ್ಭುತ ಜಯ ಸಾಧಿಸಿದ ವಿಜಯ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ದೂರದೃಷ್ಟಿ ಮತ್ತು ಜನರೊಂದಿಗಿನ ಒಡನಾಟವು ನಿಜವಾಗಿಯೂ ಮನ ಮುಟ್ಟಿದೆ. ತಮಿಳುನಾಡನ್ನು ನಿರಂತರ ಪ್ರಗತಿಯತ್ತ ಮುನ್ನಡೆಸುವಲ್ಲಿ ನಿಮಗೆ ಉತ್ತಮ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ’ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ:ರಾಮ್ ಚರಣ್ ಹೊಸ ಬಾಡಿಗಾರ್ಡ್ ಯಾರು ಗೊತ್ತಾ? ದಿನದ ಸಂಬಳ ಎಷ್ಟು?

ರಾಮ್ ಚರಣ್ ಅವರ ತಂದೆ ಮೆಗಾಸ್ಟಾರ್ ಚಿರಂಜೀವಿ ಸಹ ಕೆಲ ದಿನಗಳ ಹಿಂದೆ ಖುದ್ದು ಸಿಎಂ ವಿಜಯ್ ಅವರಿಗೆ ಕರೆ ಮಾಡಿ ಮಾತನಾಡಿದ್ದರು. ವಿಜಯ್ ಅವರ ಅಭೂತಪೂರ್ವ ಚುನಾವಣಾ ಗೆಲುವಿಗೆ ಅವರು ಅಭಿನಂದಿಸಿದ್ದರು. ಅಲ್ಲದೆ, ಅದಕ್ಕೂ ಮುಂಚೆ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಲೀಕ್ ಆದಾಗಲೂ ಸಹ ಅದನ್ನು ತೀವ್ರವಾಗಿ ಖಂಡಿಸಿ, ವಿಜಯ್ ಪರ ಧ್ವನಿ ಎತ್ತಿದ್ದರು.

ಇನ್ನು ರಾಮ್ ಚರಣ್ ಅವರ ಚಿಕ್ಕಪ್ಪ, ಪ್ರಸ್ತುತ ಆಂಧ್ರ ಪ್ರದೇಶ ಡಿಸಿಎಂ ಸಹ ಇತ್ತೀಚೆಗೆ ವಿಜಯ್ ಅವರ ಗೆಲುವಿನ ಬಗ್ಗೆ ಮಾತನಾಡಿದ್ದರು, ‘ವಿಜಯ್ ಗೆಲುವು ತಮಗೆ ಅಸೂಯೆ ತಂದಿದೆ’ ಎಂದಿದ್ದರು. ವಿಜಯ್ ಬಲು ಸುಲಭವಾಗಿ ಸಿಎಂ ಆಗಿಬಿಟ್ಟರು. ಪೋಸ್ಟರ್​​ಗಳನ್ನು ಹಾಕಿ ಜನರನ್ನು ಸೆಳೆದರು. ಆದರೆ ನನ್ನನ್ನು ನಮ್ಮ ಜನ ಕಳೆದ 15 ವರ್ಷಗಳಿಂದಲೂ ಅಲೆಸಿದರು’ ಎಂದು ಹೇಳಿ ನಕ್ಕಿದ್ದರು ಪವನ್ ಕಲ್ಯಾಣ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 8:33 pm, Sat, 30 May 26

Source link

Exit mobile version