ತಮಿಳುನಾಡು ಸಿಎಂ ವಿಜಯ್​ ಸಾಧನೆ ಕೊಂಡಾಡಿದ ರಾಮ್ ಚರಣ್: ಹೇಳಿದ್ದೇನು?

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಭರ್ಜರಿ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ರಾಮ್ ಚರಣ್. ದೇಶದ ಪ್ರಮುಖ ನಗರಗಳಲ್ಲಿ ಸುತ್ತಾಡಿ ಪ್ರಚಾರ ಮಾಡುತ್ತಿರುವ ರಾಮ್ ಚರಣ್ ಇಂದು (ಮೇ 30) ಚೆನ್ನೈಗೆ ಭೇಟಿ ನೀಡಿದ್ದರು. ಚೆನ್ನೈನಲ್ಲಿ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಮಾತನಾಡಿದ ನಟ ರಾಮ್ ಚರಣ್, ತಮ್ಮ ‘ಪೆದ್ದಿ’ ಸಿನಿಮಾದ ಬಗ್ಗೆ ಮಾತನಾಡುವ ಜೊತೆಗೆ ಸಿನಿಮಾರಂಗದಿಂದ ರಾಜಕೀಯಕ್ಕೆ ಪ್ರವೇಶಿಸಿ ಇತ್ತೀಚೆಗಷ್ಟೆ ತಮಿಳುನಾಡಿನ ಸಿಎಂ ಸಹ ಆಗಿರುವ ವಿಜಯ್ ಅವರ ಸಾಧನೆಯನ್ನು ಕೊಂಡಾಡಿದರು.

‘ವಿಜಯ್ ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಿನಿಮಾರಂಗದಿಂದ ದೂರ ಸರಿದಿದ್ದಾರೆ. ಚಲನಚಿತ್ರ ರಂಗದ ವ್ಯಕ್ತಿಯಾಗಿ ತಮಗೆ ಅವರ ಬಗ್ಗೆ ಹೆಮ್ಮೆ ಇದೆ. ಸಾರ್ವಜನಿಕ ಸೇವೆಗೆ ಮಾಡಲೆಂದು ನೀವು (ವಿಜಯ್) ನಿಮ್ಮ ಯಶಸ್ಸಿನ ಉತ್ತುಂಗದಲ್ಲಿದ್ದಾಗ ನಿಮ್ಮ ತಾರಾ ಪಟ್ಟ (ಸ್ಟಾರ್‌ಡಮ್) ಮತ್ತು ವೃತ್ತಿಜೀವನವನ್ನು ತ್ಯಜಿಸಿದ್ದೀರಿ. ಚಿತ್ರರಂಗದ ಒಬ್ಬ ವ್ಯಕ್ತಿಯಾಗಿ ನನಗೆ ಇದು ತುಂಬಾ ತುಂಬಾ ಹೆಮ್ಮೆಯ ವಿಷಯವಾಗಿದೆ, ಮತ್ತು ನಾನು ತಮಿಳುನಾಡಿನ ಜನತೆಗೆ ಹಾಗೂ ವಿಜಯ್ ಸರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ’ ಎಂದಿದ್ದಾರೆ.

ಇದಕ್ಕೂ ಮುನ್ನ, ಚರಣ್ ಅವರು ಟ್ವಿಟರ್ ನಲ್ಲೂ ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ತಮ್ಮ ಪೋಸ್ಟ್‌ನಲ್ಲಿ ಅವರು, ‘ತಮಿಳುನಾಡು ಚುನಾವಣೆಯಲ್ಲಿ ಅತ್ಯದ್ಭುತ ಜಯ ಸಾಧಿಸಿದ ವಿಜಯ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ದೂರದೃಷ್ಟಿ ಮತ್ತು ಜನರೊಂದಿಗಿನ ಒಡನಾಟವು ನಿಜವಾಗಿಯೂ ಮನ ಮುಟ್ಟಿದೆ. ತಮಿಳುನಾಡನ್ನು ನಿರಂತರ ಪ್ರಗತಿಯತ್ತ ಮುನ್ನಡೆಸುವಲ್ಲಿ ನಿಮಗೆ ಉತ್ತಮ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ’ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ:ರಾಮ್ ಚರಣ್ ಹೊಸ ಬಾಡಿಗಾರ್ಡ್ ಯಾರು ಗೊತ್ತಾ? ದಿನದ ಸಂಬಳ ಎಷ್ಟು?

ರಾಮ್ ಚರಣ್ ಅವರ ತಂದೆ ಮೆಗಾಸ್ಟಾರ್ ಚಿರಂಜೀವಿ ಸಹ ಕೆಲ ದಿನಗಳ ಹಿಂದೆ ಖುದ್ದು ಸಿಎಂ ವಿಜಯ್ ಅವರಿಗೆ ಕರೆ ಮಾಡಿ ಮಾತನಾಡಿದ್ದರು. ವಿಜಯ್ ಅವರ ಅಭೂತಪೂರ್ವ ಚುನಾವಣಾ ಗೆಲುವಿಗೆ ಅವರು ಅಭಿನಂದಿಸಿದ್ದರು. ಅಲ್ಲದೆ, ಅದಕ್ಕೂ ಮುಂಚೆ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಲೀಕ್ ಆದಾಗಲೂ ಸಹ ಅದನ್ನು ತೀವ್ರವಾಗಿ ಖಂಡಿಸಿ, ವಿಜಯ್ ಪರ ಧ್ವನಿ ಎತ್ತಿದ್ದರು.

ಇನ್ನು ರಾಮ್ ಚರಣ್ ಅವರ ಚಿಕ್ಕಪ್ಪ, ಪ್ರಸ್ತುತ ಆಂಧ್ರ ಪ್ರದೇಶ ಡಿಸಿಎಂ ಸಹ ಇತ್ತೀಚೆಗೆ ವಿಜಯ್ ಅವರ ಗೆಲುವಿನ ಬಗ್ಗೆ ಮಾತನಾಡಿದ್ದರು, ‘ವಿಜಯ್ ಗೆಲುವು ತಮಗೆ ಅಸೂಯೆ ತಂದಿದೆ’ ಎಂದಿದ್ದರು. ವಿಜಯ್ ಬಲು ಸುಲಭವಾಗಿ ಸಿಎಂ ಆಗಿಬಿಟ್ಟರು. ಪೋಸ್ಟರ್​​ಗಳನ್ನು ಹಾಕಿ ಜನರನ್ನು ಸೆಳೆದರು. ಆದರೆ ನನ್ನನ್ನು ನಮ್ಮ ಜನ ಕಳೆದ 15 ವರ್ಷಗಳಿಂದಲೂ ಅಲೆಸಿದರು’ ಎಂದು ಹೇಳಿ ನಕ್ಕಿದ್ದರು ಪವನ್ ಕಲ್ಯಾಣ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 8:33 pm, Sat, 30 May 26

Source link

IPL 2026 Final: ಸತತ 2ನೇ ಬಾರಿಗೆ ಚಾಂಪಿಯನ್; ಮತ್ತೊಂದು ದಾಖಲೆ ಸೃಷ್ಟಿಸುವ ಸನಿಹದಲ್ಲಿ ಆರ್​ಸಿಬಿ

ಐಪಿಎಲ್ 2026 (IPL 2026) ರ 74ನೇ ಮತ್ತು ಕೊನೆಯ ಪಂದ್ಯ ಮೇ 31 ರಂದು ನಡೆಯಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ (RCB vs GT) ತಂಡಗಳ ಪ್ರಶಸ್ತಿಗಾಗಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಈ ಹಿಂದೆ ಟೂರ್ನಿಯಲ್ಲಿ ತಲಾ ಒಂದೊಂದು ಪ್ರಶಸ್ತಿಯನ್ನು ಗೆದ್ದಿವೆ. ಆದ್ದರಿಂದ, ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಅವಕಾಶ ಉಭಯ ತಂಡಗಳಿಗಿದೆ. ಇತ್ತ ರಜತ್ ಪಾಟಿದಾರ್ ನೇತೃತ್ವದಲ್ಲಿ, ಆರ್‌ಸಿಬಿ ತಂಡವು ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದೆ. ಕಳೆದ ಆವೃತ್ತಿಯಲ್ಲಿ ಟ್ರೋಫಿ ಎತ್ತಿಹಿಡಿದಿದ್ದ ಆರ್‌ಸಿಬಿಗೆ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಅವಕಾಶವಿದೆ. ಇದು ಸಾಧ್ಯವಾದರೆ ಆರ್‌ಸಿಬಿ ಐಪಿಎಲ್​ನಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಲಿದೆ.

ಮುಂಬೈ , ಸಿಎಸ್​ಕೆ ಗುಂಪಿಗೆ ಸೇರಲಿದೆ ಆರ್​ಸಿಬಿ

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮಾತ್ರ ಸತತ ಎರಡು ಬಾರಿ ಪ್ರಶಸ್ತಿ ಗೆದ್ದಿವೆ. ಇದೀಗ ಆರ್‌ಸಿಬಿಗೆ ಈ ಅವಕಾಶ ಸಿಕ್ಕಿದೆ. ಇದು ಸಾಧ್ಯವಾದರೆ, ಐಪಿಎಲ್‌ನಲ್ಲಿ ಸತತ ಎರಡು ಟ್ರೋಫಿಗಳನ್ನು ಗೆದ್ದ ಮೂರನೇ ತಂಡ ಎಂಬ ದಾಖಲೆ ಆರ್​ಸಿಬಿ ಪಾಲಾಗಲಿದೆ. ಚೆನ್ನೈ ಸೂಪರ್ ಕಿಂಗ್ಸ್ 2010 ಮತ್ತು 2011 ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಪ್ರಶಸ್ತಿ ಗೆದ್ದಿತ್ತು. ಹಾಗೆಯೇ ಮುಂಬೈ ಇಂಡಿಯನ್ಸ್ 2019 ಮತ್ತು 2020 ರಲ್ಲಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಇದೀಗ 2025 ರಲ್ಲಿ ಟ್ರೋಫಿ ಗೆದ್ದಿರುವ ಆರ್‌ಸಿಬಿ, ಸತತ ಎರಡನೇ ಬಾರಿಗೆ ಚಾಂಪಿಯನ್ ಆಗುವ ಅವಕಾಶ ಹೊಂದಿದೆ.

IPL 2026 Final: ಆರ್​ಸಿಬಿ- ಗುಜರಾತ್ ನಡುವೆ ಫೈನಲ್ ಫೈಟ್; ಮುಖಾಮುಖಿ ದಾಖಲೆ ಹೇಗಿದೆ?

3ನೇ ಬಾರಿಗೆ ಫೈನಲ್​ಗೇರಿದ ಗುಜರಾತ್

ಗುಜರಾತ್ ಟೈಟಾನ್ಸ್ ತಂಡ ಕೂಡ ಎರಡನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಗುಜರಾತ್ ಟೈಟಾನ್ಸ್ 2022 ರಲ್ಲಿ ಪ್ರಶಸ್ತಿ ಗೆದ್ದಿತ್ತು. ಅದಾದ ನಂತರ, 2023 ರಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶವಿತ್ತಾದರೂ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿತ್ತು. ಇದರಿಂದಾಗಿ ಗುಜರಾತ್, ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಂತೆ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಅವಕಾಶದಿಂದ ವಂಚಿತವಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೇಹದಲ್ಲಿ ಹೆಚ್ಚುತ್ತಿದೆ ಒಬೆಸಿಟಿ ಮತ್ತು ಡಯಾಬಿಟಿಸ್ ಸಮಸ್ಯೆ: ಹೊಸ ಸಮೀಕ್ಷೆಯಿಂದ ಹೆಚ್ಚಾಗಿದೆ ಆತಂಕ

ದೇಶದಲ್ಲಿ ಸ್ಥೂಲಕಾಯತೆ (Obesity) ಮತ್ತು ಮಧುಮೇಹ (Diabetes) ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ಆರೋಗ್ಯ ಸಮೀಕ್ಷೆಯ ವರದಿ ತಜ್ಞರಲ್ಲಿ ಆತಂಕ ಮೂಡಿಸಿದೆ. 2019ರ ನಂತರ ಈ ಎರಡೂ ಆರೋಗ್ಯ ಸಮಸ್ಯೆಗಳ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-6 (NFHS-6) ವರದಿ ಪ್ರಕಾರ, 15 ರಿಂದ 49 ವರ್ಷದೊಳಗಿನ ಪುರುಷರು ಮತ್ತು ಮಹಿಳೆಯರಲ್ಲಿ ಅಧಿಕ ತೂಕ ಹಾಗೂ ಸ್ಥೂಲಕಾಯದ ಪ್ರಮಾಣ ಕಳೆದ ಐದು ವರ್ಷಗಳಲ್ಲಿ ಹೆಚ್ಚಾಗಿದೆ. ಪುರುಷರಲ್ಲಿ ಶೇಕಡಾ 4.4ರಷ್ಟು ಮತ್ತು ಮಹಿಳೆಯರಲ್ಲಿ ಶೇಕಡಾ 6.7ರಷ್ಟು ಏರಿಕೆ ದಾಖಲಾಗಿದೆ.

2019-21ರಲ್ಲಿ ಶೇಕಡಾ 24ರಷ್ಟು ಮಹಿಳೆಯರು ಅಧಿಕ ತೂಕ ಅಥವಾ ಸ್ಥೂಲಕಾಯದಿಂದ ಬಳಲುತ್ತಿದ್ದರು. ಆದರೆ 2023-24ರಲ್ಲಿ ಈ ಪ್ರಮಾಣ ಶೇಕಡಾ 30.7ಕ್ಕೆ ಏರಿಕೆಯಾಗಿದೆ. ಅಂದರೆ, ಪ್ರತಿ ಮೂವರು ಮಹಿಳೆಯರಲ್ಲಿ ಒಬ್ಬರು ಈಗ ಸ್ಥೂಲಕಾಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಸಮೀಕ್ಷೆಯನ್ನುದೇಶದ 715 ಜಿಲ್ಲೆಗಳಲ್ಲಿ ನಡೆಸಲಾಗಿದ್ದು, ಸುಮಾರು 6.79 ಲಕ್ಷ ಕುಟುಂಬಗಳನ್ನು ಒಳಗೊಂಡಿತ್ತು. ನಗರ ಪ್ರದೇಶಗಳಲ್ಲಿ ಸಮಸ್ಯೆ ಹೆಚ್ಚು ಗಂಭೀರವಾಗಿದ್ದು, ಶೇಕಡಾ 42.8ರಷ್ಟು ಮಹಿಳೆಯರು ಅಧಿಕ ತೂಕ ಅಥವಾ ಸ್ಥೂಲಕಾಯದಿಂದ ಬಳಲುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಮಾಣ ಶೇಕಡಾ 25.5ರಷ್ಟಿದೆ. ಜಂಕ್ ಫುಡ್ ಸೇವನೆ, ಕುಳಿತು ಕೆಲಸ ಮಾಡುವ ಅಭ್ಯಾಸ ಹಾಗೂ ವ್ಯಾಯಾಮದ ಕೊರತೆ ಪ್ರಮುಖ ಕಾರಣಗಳಾಗಿವೆ.

ಮಧುಮೇಹದ ಅಪಾಯವೂ ಹೆಚ್ಚಳ

ಅಷ್ಟೇಅಲ್ಲ, ಇತ್ತೀಚಿಗೆ ಮಧುಮೇಹದ ಅಪಾಯವೂ ಹೆಚ್ಚುತ್ತಿದೆ.15 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿರುವವರ ಸಂಖ್ಯೆ 2019-21ರ ಶೇಕಡಾ 15.6ರಿಂದ 2023-24ರಲ್ಲಿ ಶೇಕಡಾ 20.9ಕ್ಕೆ ಏರಿಕೆಯಾಗಿದೆ. ಮಹಿಳೆಯರಲ್ಲೂ ಮಧುಮೇಹದ ಪ್ರಕರಣಗಳು ಹೆಚ್ಚುತ್ತಿದ್ದು, ವಿಶೇಷವಾಗಿ ನಗರ ಪ್ರದೇಶದ ಮಹಿಳೆಯರಲ್ಲಿ ಈ ಪ್ರವೃತ್ತಿ ಹೆಚ್ಚು ಕಂಡುಬರುತ್ತಿದೆ.

ಇದನ್ನೂ ಓದಿ: ಪಿತ್ತಕೋಶದಲ್ಲಿ ಕಲ್ಲು ಕಂಡುಬರುವುದಕ್ಕೆ ಕಾರಣವೇನು? ಇದು ಬರದಂತೆ ತಡೆಯಲು ಏನು ಮಾಡಬೇಕು?

ಈ ರೀತಿಯ ಸಮಸ್ಯೆ ತಡೆಗಟ್ಟಲು ವೈದ್ಯರು ನೀಡಿರುವ ಸಲಹೆ:

  • ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಿ.
  • ಜಂಕ್ ಫುಡ್ ಮತ್ತು ಸಕ್ಕರೆಯುಕ್ತ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ.
  • ಹಣ್ಣು, ತರಕಾರಿ ಹಾಗೂ ನಾರಿನಾಂಶಯುಕ್ತ ಆಹಾರ ಹೆಚ್ಚಿಸಿ.
  • ಸರಿಯಾಗಿ ನಿದ್ರೆ ಮಾಡಿ.
  • ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ.

ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದೇ ಸ್ಥೂಲಕಾಯ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುವ ಅತ್ಯುತ್ತಮ ಮಾರ್ಗವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೈಭವ್ ಸೂರ್ಯವಂಶಿ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳುವುದು ಯಾವಾಗ?

2026 ರ ಐಪಿಎಲ್ (IPL 2026) ಮುಗಿಯುವ ಹಂತಕ್ಕೆ ಬಂದಿದೆ. ಆರ್​ಸಿಬಿ ಹಾಗೂ ಗುಜರಾತ್ ನಡುವಿನ ಫೈನಲ್ ಪಂದ್ಯದೊಂದಿಗೆ ಈ ಸೀಸನ್​ಗೆ ತೆರೆ ಬೀಳಲಿದೆ. ಆ ಬಳಿಕ ಟೀಂ ಇಂಡಿಯಾ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಡೆ ಮುಖ ಮಾಡಲಿದೆ. ಆದಾಗ್ಯೂ ಐಪಿಎಲ್‌ನಲ್ಲಿ ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆ ಸುರಿಸುವುದರ ಜೊತೆಗೆ ರನ್​ಗಳ ಶಿಖರ ಕಟ್ಟಿದ ವೈಭವ್ ಸೂರ್ಯವಂಶಿಗೆ (Vaibhav Sooryavanshi) ಅಭಿಮಾನಿಗಳ ಬಳಗ ಗಣನೀಯವಾಗಿ ಹೆಚ್ಚಾಗಿದೆ. ಅವರ ಆಟವನ್ನು ನೋಡುವ ಸಲುವಾಗಿಯೇ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರುತ್ತಿದ್ದರು. ಇದೀಗ ರಾಜಸ್ಥಾನ್ ತಂಡ ಐಪಿಎಲ್​ನಿಂದ ಹೊರಬಿದ್ದಿರುವ ಕಾರಣದಿಂದಾಗಿ ವೈಭವ್ ಸೂರ್ಯವಂಶಿ ಮತ್ತೆ ಯಾವಾಗ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಹಲವರ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರ ಇಲ್ಲಿದೆ.

ವೈಭವ್ ಮತ್ತೆ ಕಣಕ್ಕಿಳಿಯುವುದು ಯಾವಾಗ?

ವೈಭವ್ ಆಟವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿರುವ ಅಭಿಮಾನಿಗಳು ಇನ್ನು 10 ದಿನ ಕಾಯಬೇಕಾಗಿದೆ. ವಾಸ್ತವವಾಗಿ ಭಾರತ, ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ಎ ತಂಡಗಳ ನಡುವೆ ತ್ರಿಕೋನ ಸರಣಿ ನಡೆಯಲಿದೆ. ಶ್ರೀಲಂಕಾದಲ್ಲಿ ನಡೆಯಲಿರುವ ಈ ಸರಣಿಗೆ ಭಾರತ ಎ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿದೆ. ಈ ತಂಡದಲ್ಲಿ ವೈಭವ್ ಸೂರ್ಯವಂಶಿ ಕೂಡ ಸ್ಥಾನ ಪಡೆದಿದ್ದಾರೆ. ಹೀಗಾಗಿ ಆ ಸರಣಿಯಲ್ಲಿ ವೈಭವ್ ಆಡುವುದನ್ನು ನಾವು ಕಾಣಬಹುದು.

ತ್ರಿಕೋನ ಸರಣಿ

ಬಿಸಿಸಿಐ, ತಿಲಕ್ ವರ್ಮಾ ನೇತೃತ್ವದಲ್ಲಿ ಭಾರತ ಎ ತಂಡವನ್ನು ಶ್ರೀಲಂಕಾ ಪ್ರವಾಸಕ್ಕೆ ಕಳುಹಿಸುತ್ತಿದೆ. ಈ ಪ್ರವಾಸದಲ್ಲಿ, ಶ್ರೀಲಂಕಾ ಎ ಮತ್ತು ಅಫ್ಘಾನಿಸ್ತಾನ ಎ ಜೊತೆ ತ್ರಿಕೋನ ಏಕದಿನ ಸರಣಿ ನಡೆಯಲಿದೆ. ಈ ಸರಣಿಯಲ್ಲಿ ಭಾರತದ ಮೊದಲ ಪಂದ್ಯ ಜೂನ್ 9 ರಂದು ನಡೆಯಲಿದೆ. ಅದರ ನಂತರ, ಜೂನ್ 11 ರಂದು ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಆ ಬಳಿಕ ಜೂನ್ 15 ರಂದು ಶ್ರೀಲಂಕಾ ಎ ವಿರುದ್ಧ ಮತ್ತು ಜೂನ್ 17 ರಂದು ಅಫ್ಘಾನಿಸ್ತಾನ ಎ ವಿರುದ್ಧ ಪಂದ್ಯವನ್ನಾಡಲಿದೆ. ಅದರ ನಂತರ, ಜೂನ್ 21 ರಂದು ಫೈನಲ್ ಪಂದ್ಯ ನಡೆಯಲಿದೆ.

ವೈಭವ್ ಸೂರ್ಯವಂಶಿ ಮತ್ತು ಪ್ರಿಯಾಂಶ್ ಆರ್ಯ ಶ್ರೀಲಂಕಾ ಪ್ರವಾಸದಲ್ಲಿ ಭಾರತದ ಪರ ಇನ್ನಿಂಗ್ಸ್ ಆರಂಭಿಸುವುದು ಖಚಿತವಾಗಿದೆ. ಈ ಇಬ್ಬರೂ ಈ ಹಿಂದೆ ಏಷ್ಯಾಕಪ್ ರೈಸಿಂಗ್ ಸ್ಟಾರ್ ಟೂರ್ನಮೆಂಟ್‌ನಲ್ಲಿ ಭಾರತ ಎ ಪರ ಆರಂಭಿಕರಾಗಿ ಆಡಿದ್ದರು. ವೈಭವ್ ಸೂರ್ಯವಂಶಿ ತಮ್ಮ ಆಕ್ರಮಣಕಾರಿ ಆಟದ ಮೂಲಕವೂ ಗಮನ ಸೆಳೆದಿದ್ದಾರೆ. ಈ ಕಾರಣದಿಂದಾಗಿ, ಈ ಸ್ಫೋಟಕ ಜೋಡಿಯ ಆಟವನ್ನು ನೋಡುವ ಕುತೂಹಲ ಹೆಚ್ಚಾಗಿದೆ.

IPL 2026: ‘ನಿನ್ನ ವಯಸ್ಸಲ್ಲಿ ನಮಗೆ..’; ವೈಭವ್ ಆಟವನ್ನು ಕೊಂಡಾಡಿದ ಅಮಿತಾಬ್ ಬಚ್ಚನ್‌

ಐಪಿಎಲ್​ನಲ್ಲಿ ವೈಭವ್ ಪ್ರದರ್ಶನ

ವೈಭವ್ ಸೂರ್ಯವಂಶಿ 2026 ರ ಐಪಿಎಲ್ ಪಂದ್ಯಾವಳಿಯಲ್ಲಿ 16 ಪಂದ್ಯಗಳನ್ನು ಆಡಿದ್ದು 48.50 ರ ಸರಾಸರಿಯಲ್ಲಿ 776 ರನ್ ಗಳಿಸಿದ್ದಾರೆ. ಈ ಮೂಲಕ ವೈಭವ್ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಅನ್‌ಕ್ಯಾಪ್ಡ್ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಇದರ ಫಲವಾಗಿ ಆರೆಂಜ್ ಕ್ಯಾಪ್ ಕೂಡ ವೈಭವ್ ಬಳಿ ಇದೆ. ಇದೀಗ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಫೈನಲ್ ಪಂದ್ಯದಲ್ಲಿ ರನ್ ಗಳಿಸಲು ವಿಫಲವಾದರೆ, ವೈಭವ್ ಸೂರ್ಯವಂಶಿ ಆರೆಂಜ್ ಕ್ಯಾಪ್ ವಿಜೇತರಾಗುತ್ತಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆ ಶಿವಕುಮಾರ್ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ

ಬೆಂಗಳೂರು, (ಮೇ 30):  ವಿಧಾನಸೌಧದಲ್ಲಿ ಇಂದು (ಮೇ 30) ನಡೆದ ಸಿಎಲ್‌ಪಿ ಸಭೆಯಲ್ಲಿ (CLP Meeing) ಡಿ.ಕೆ.ಶಿವಕುಮಾರ್‌ (DK Shivakumar) ಅವರನ್ನು  ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನಾಗಿ  ಆಯ್ಕೆ ಮಾಡಲಾಗಿದ್ದು, ಇದಾದ ಬಳಿಕ ಡಿ.ಕೆ.ಶಿವಕುಮಾರ್‌ ಅವರು ಕಾಂಗ್ರೆಸ್‌ ನಾಯಕರೊಂದಿಗೆ ಲೋಕಭವನಕ್ಕೆ ತೆರಳಿ, ಸರ್ಕಾರ ರಚಿಸಲು ರಾಜ್ಯಪಾಲರ ಬಳಿ ಹಕ್ಕು ಮಂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸರ್ಕಾರ ರಚನೆಗೆ ಗವರ್ನರ್‌ ಆಹ್ವಾನಿಸಿದ್ದಾರೆ. ಈ ಬಗ್ಗೆ ಡಿ.ಕೆ.ಶಿವಕುಮಾರ್‌ ಅವರಿಗೆ ರಾಜ್ಯಪಾಲರಿಂದ ಅಧಿಕೃತ ಪತ್ರ ಕಳುಹಿಸಲಾಗಿದೆ. ಲೋಕಭವನದಲ್ಲಿ ಜೂನ್‌ 3ರಂದು ಸಂಜೆ 4.05 ಗಂಟೆಗೆ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ, ತಾವು ತಮ್ಮ ತಂಡದೊಂದಿಗೆ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಬೇಕು ಎಂದು ಪತ್ರದಲ್ಲಿ ರಾಜ್ಯಪಾಲರು ಕೋರಿದ್ದಾರೆ.

ಈ ಮೊದಲು ಸಂಜೆ 5ಕ್ಕೆ ಅಷ್ಟಕ್ಕೆ ಇಷ್ಟಕ್ಕೆ ಅಂತೆ ಕಂತೆ ಸುದ್ದಿ ಕೇಳಿಬರುತ್ತಿದ್ದವು. ಆದರೆ, ಇದೀಗ ರಾಜ್ಯಪಾಲರ ಅಧಿಕೃತ ಪತ್ರದ ಪ್ರಕಾರ ಜೂನ್ 3ರ ಸಂಜೆ 4.5ಕ್ಕೆ ಲೋಕಭವನದ ಗಾಜಿನ ಮನೆಯಲ್ಲಿ ಡಿಕೆ ಶಿವಕುಮಾರ್ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Source link

ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್: ಅಕ್ರಮ ಅದಿರು ಸಾಗಾಟದ ಎರಡು ಕೇಸ್​​ ಕೈಬಿಟ್ಟ ಕೋರ್ಟ್

ಶಾಸಕ ಜನಾರ್ದನ ರೆಡ್ಡಿImage Credit source: tv9 kannada

ಬೆಂಗಳೂರು, ಮೇ 30: ಅಕ್ರಮ ಅದಿರು ಸಾಗಾಟ ಪ್ರಕರಣಕ್ಕೆ (Illegal Mining Case) ಸಂಬಂಧಿಸಿದಂತೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ (Gali Janardhan Reddy) ದೊಡ್ಡ ರಿಲೀಫ್ ಸಿಕ್ಕಿದೆ. ಲೋಕಾಯುಕ್ತ ಎಸ್‌ಐಟಿ ದಾಖಲಿಸಿದ್ದ ಎರಡು ಪ್ರಮುಖ ಪ್ರಕರಣಗಳಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ ಹಲವರನ್ನು ಕೈಬಿಟ್ಟು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಆದೇಶ ಹೊರಡಿಸಿದೆ.

ಮುಖ್ಯಾಂಶಗಳು

  • ಶಾಸಕ ಜನಾರ್ದನ ರೆಡ್ಡಿ ವಿರುದ್ಧದ ಅಕ್ರಮ‌ ಅದಿರು ಸಾಗಾಟ ಪ್ರಕರಣ
  • ಪ್ರಕರಣದಿಂದ ಕೈಬಿಟ್ಟು ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಆದೇಶ
  • ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್

ಮಾಜಿ ಸಚಿವ, ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ವಿರುದ್ಧದ ಅಕ್ರಮ ಅದಿರು ಸಾಗಾಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಲೋಕಾಯುಕ್ತ ವಿಶೇಷ ತನಿಖಾ ದಳ ದಾಖಲಿಸಿದ್ದ ಎರಡು ಪ್ರಮುಖ ಕೇಸ್‌ಗಳಲ್ಲಿ ಜನಾರ್ದನ ರೆಡ್ಡಿಗೆ ರಿಲೀಫ್ ಸಿಕ್ಕಿದೆ. ಪ್ರಕರಣದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಜನಾರ್ದನ ರೆಡ್ಡಿ ಸೇರಿದಂತೆ ಇತರ ಆರೋಪಿಗಳನ್ನು ಪ್ರಕರಣದಿಂದ ಕೈಬಿಟ್ಟು ಮಹತ್ವದ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಅಂಗಲಾಚಿದರೂ ಕೇಳದ ಕೋರ್ಟ್: ಜನಾರ್ದನ ರೆಡ್ಡಿಗೆ ಮತ್ತೆ ಜೈಲು ಫಿಕ್ಸ್, ಶಾಸಕ ಸ್ಥಾನಕ್ಕೂ ಕುತ್ತು!

ಜನಾರ್ದನ ರೆಡ್ಡಿ ಅವರೊಂದಿಗೆ ಮೆಹಫೂಜ್ ಅಲಿ ಖಾನ್, ಉದ್ಯಮಿಗಳಾದ ಹೊತ್ತೂರ್ ಅಬ್ದುಲ್ ವಹಾಬ್, ಹೊತ್ತೂರ್ ನೂರ್ ಅಹಮದ್, ಹೊತ್ತೂರ್ ಮೊಹಮ್ಮದ್ ಇಕ್ಬಾಲ್ ಹಾಗೂ ಟ್ರೈಡೆಂಟ್ ಮೈನಿಂಗ್ ಕಂಪನಿ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನೂ ಸಹ ಕೋರ್ಟ್ ವಜಾಗೊಳಿಸಿದೆ.

ಈ ಹಿಂದೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಮತ್ತು ಅದಿರು ಸಾಗಾಟಕ್ಕೆ ಪಿತೂರಿ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಆರ್‌ಪಿಸಿ ಸೆಕ್ಷನ್ 227 ಅಡಿಯಲ್ಲಿ ಪ್ರಕರಣದಿಂದ ಕೈಬಿಡುವಂತೆ ಆರೋಪಿಗಳ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದ್ದರು. ವಾದ-ಪ್ರತಿವಾದ ಆಲಿಸಿದ ವಿಶೇಷ ನ್ಯಾಯಾಲಯವು ಇದೀಗ ಇವರೆಲ್ಲರಿಗೂ ಕ್ಲೀನ್ ಚೀಟ್ ನೀಡಿದೆ.

ಪ್ರಕರಣದ ಹಿನ್ನೆಲೆ

ಆಂಧ್ರಪ್ರದೇಶದಲ್ಲಿ ವೈ.ಎಸ್. ರಾಜಶೇಖರ ರೆಡ್ಡಿ ಹಾಗೂ ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದ ಓಬಳಾಪುರಂ ಅಕ್ರಮ ಗಣಿಗಾರಿಕೆ ಹಗರಣ ಬೆಳಕಿಗೆ ಬಂದಿತ್ತು. ಆಂಧ್ರ ಮತ್ತು ಕರ್ನಾಟಕದ ಗಡಿಭಾಗಕ್ಕೆ ಹೊಂದಿಕೊಂಡಿರುವ ಓಬಳಾಪುರಂ ಬೆಟ್ಟ ಪ್ರದೇಶದಲ್ಲಿ ವ್ಯಾಪಕವಾಗಿ ಅದಿರು ಲೂಟಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಗಣಿಗಾರಿಕೆ ಮಂಜೂರಾತಿ ಪ್ರಕ್ರಿಯೆಯಲ್ಲಿ ಉಭಯ ರಾಜ್ಯಗಳ ಅರಣ್ಯ ಮತ್ತು ಗಣಿ ಇಲಾಖೆಗಳ ಉನ್ನತ ಅಧಿಕಾರಿಗಳು ಶಾಮೀಲಾಗಿ ಕೋಟ್ಯಂತರ ರೂ ಅಕ್ರಮ ಎಸಗಿದ್ದಾರೆ ಎಂದು ತನಿಖೆಯಿಂದ ಬಹಿರಂಗವಾಗಿತ್ತು.

ಇದನ್ನೂ ಓದಿ: ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅಪರಾಧಿ: ಸಿಬಿಐ ಕೋರ್ಟ್ ತೀರ್ಪು

ಈ ಹಗರಣದಲ್ಲಿ ಒಟ್ಟು 29 ಲಕ್ಷ ಟನ್ ಅದಿರನ್ನು ಕಾನೂನುಬಾಹಿರವಾಗಿ ಲೂಟಿ ಮಾಡಲಾಗಿದ್ದು, ಬರೋಬ್ಬರಿ 884 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಗರಣ ನಡೆದಿರುವುದು ಸಾಬೀತಾಗಿತ್ತು. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಇದೇ ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸಿದ್ದರು. ಬಳಿಕ ಜಾಮೀನು ಪಡೆದು ಹೊರಬಂದಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

2027ಕ್ಕೆ ಅಬ್ಬರಿಸಲು ಸಜ್ಜಾಗುತ್ತಿದೆ ‘ಬಾಹುಬಲಿ’, ಇದು ರೀ ರಿಲೀಸ್ ಅಲ್ಲ

ಬಾಹುಬಲಿ’ (Bahubali) ಮತ್ತು ‘ಬಾಹುಬಲಿ 2’ ಸಿನಿಮಾಗಳು ವಿಶ್ವ ಸಿನಿಮಾ ರಂಗದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಬಹು ಎತ್ತರಕ್ಕೆ ಹಾರಿಸಿದ ಸಿನಿಮಾಗಳು. ಭಾರತೀಯ ಸಿನಿಮಾ ರಂಗದ ಇತಿಹಾಸ ಬರೆದರೆ ‘ಬಾಹುಬಲಿ’ಗೆ ಮುಂಚೆ ಮತ್ತು ನಂತರ ಎಂದು ಬರೆಯಬೇಕಾಗುತ್ತದೆ, ಅಷ್ಟು ದೊಡ್ಡ ಪರಿಣಾಮವನ್ನು ಭಾರತೀಯ ಸಿನಿಮಾಗಳ ಮೇಲೆ ಮೂಡಿಸಿದ ಸಿನಿಮಾ ‘ಬಾಹುಬಲಿ’ ಮತ್ತು ‘ಬಾಹುಬಲಿ 2’ನದ್ದು. ಇದೀಗ ಮತ್ತೊಮ್ಮೆ ‘ಬಾಹುಬಲಿ’ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾನೆ, ಹಾಗೆಂದು ಇದು ರೀ-ರಿಲೀಸ್ ಅಲ್ಲ ಬದಲಿಗೆ ಅನಿಮೇಟೆಡ್ ರೂಪದಲ್ಲಿ ಬರಲಿದ್ದಾನೆ ‘ಬಾಹುಬಲಿ’.

‘ಬಾಹುಬಲಿ’ ಸಿನಿಮಾಗಳ ಎಲ್ಲ ಪಾತ್ರಗಳು ಬಹಳ ಜನಪ್ರಿಯಗೊಂಡಿದ್ದವು. ಇದೇ ಕಾರಣಕ್ಕೆ ‘ಬಾಹುಬಲಿ’ ಪಾತ್ರಗಳನ್ನು ಇರಿಸಿಕೊಂಡು ಆ ಕತೆಯನ್ನು ಮುಂದುವರೆಸಿಕೊಂಡು ಹೋಗಲು ನಿಶ್ಚಯಿಸಿ ಅನಿಮೇಟೆಡ್ ಮಾದರಿಯಲ್ಲಿ ಸಿನಿಮಾವನ್ನು ಹೊರತರಲು ನಿರ್ಣಯಿಸಲಾಯ್ತು. ಈ ಹಿಂದೆ ಒಂದು ಆವೃತ್ತಿ ಸಿದ್ಧವಾಗಿತ್ತಾದರೂ ಅದು ಗುಣಮಟ್ಟದಿಂದ ಕೂಡಿರಲಿಲ್ಲವೆಂದು ರಾಜಮೌಳಿ, ನಿರ್ಮಾಣ ಸಂಸ್ಥೆ ಮತ್ತು ನೆಟ್​​ಫ್ಲಿಕ್ಸ್ ತಿರಸ್ಕರಿಸಿತು. ಆದರೆ ಇದೀಗ ಮತ್ತೊಂದು ಆವೃತ್ತಿ ತಯಾರಾಗುತ್ತಿದ್ದು, ಅನಿಮೇಟೆಡ್ ಸಿನಿಮಾ ಅಂತಿಮಗೊಳ್ಳುವ ಮೊದಲೇ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ:‘ಬಾಹುಬಲಿ 2’ ದಾಖಲೆ ಉಡೀಸ್: ಹೊಸ ಇತಿಹಾಸ ಬರೆಯಲು ಸಜ್ಜಾದ ‘ಧುರಂಧರ್ 2’

‘ಬಾಹುಬಲಿ: ಎಟರ್ನಲ್ ವಾರ್’ ಹೆಸರಿನಲ್ಲಿ ಅನಿಮೇಟೆಡ್ ಸಿನಿಮಾ ರೆಡಿಯಾಗುತ್ತಿದೆ. ಕೆಲ ತಿಂಗಳ ಹಿಂದೆ ಈ ಸಿನಿಮಾದ ಒಂದು ಆಕ್ಷನ್ ದೃಶ್ಯವನ್ನು ಯೂಟ್ಯೂಬ್​​ನಲ್ಲಿ ಹಂಚಿಕೊಳ್ಳಲಾಗಿತ್ತು. ಬಾಹುಬಲಿಯ ಪರವಾಗಿ ಇಂದ್ರನ ಜೊತೆಗೆ ಯಮರಾಜ ಯುದ್ಧ ಮಾಡುವ ದೃಶ್ಯ ಅದಾಗಿತ್ತು. ಇತ್ತೀಚೆಗಷ್ಟೆ ಇದೇ ಸಿನಿಮಾದ ಇನ್ನೂ ಕೆಲ ದೃಶ್ಯಗಳನ್ನು ದೆಹಲಿಯಲ್ಲಿ ನಡೆದ ‘ಅನಿಮೆ ಇಂಡಿಯಾ’ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ್ದು, ಅಲ್ಲಿ ಈ ಸಿನಿಮಾ ತೀವ್ರ ಗಮನ ಸೆಳೆದಿದೆ.

‘ಬಾಹುಬಲಿ: ಎಟರ್ನಲ್ ವಾರ್’ ಸಿನಿಮಾವು ಬಾಹುಬಲಿ ಸತ್ತ ನಂತರ ಸ್ವರ್ಗಕ್ಕೆ ಹೋದ ಬಳಿಕದ ಕತೆಯನ್ನು ಒಳಗೊಂಡಿದೆಯಂತೆ. 14 ಲೋಕಗಳ ಆಧಿಪತ್ಯಕ್ಕಾಗಿ ನಡೆಯುವ ಹೋರಾಟ ಮತ್ತು ಅದರಲ್ಲಿ ‘ಬಾಹುಬಲಿ’ ವಹಿಸುವ ಪಾತ್ರದ ಕುರಿತಾದ ಕತೆಯನ್ನು ಈ ‘ಎಟರ್ನಲ್ ವಾರ್’ ಸಿನಿಮಾ ಒಳಗೊಂಡಿರಲಿದೆ. ಈ ಸಿನಿಮಾಕ್ಕೆ ಈ ವರೆಗೆ 120 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ಈ ಅನಿಮೇಟೆಡ್ ಸಿನಿಮಾ 3ಡಿ ಮತ್ತು ಇನ್ನಿತೆರ ಆಧುನಿಕ ತಂತ್ರಜ್ಞಾನಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದ ಕಾರ್ಯ ಚಾಲ್ತಿಯಲ್ಲಿದ್ದು, ಸಿನಿಮಾ 2027ಕ್ಕೆ ತೆರೆಗೆ ಬರಲಿದೆಯಂತೆ. ಈ ಸಿನಿಮಾನಲ್ಲಿ ಬಾಹುಬಲಿ ಪಾತ್ರಕ್ಕೆ ಖುದ್ದು ಪ್ರಭಾಸ್ ಧ್ವನಿ ನೀಡಿದ್ದಾರೆ. ನಟಿ ರಮ್ಯಾಕೃಷ್ಣ ಸಹ ಧ್ವನಿ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Personality Test: ಜೂನ್‌ನಲ್ಲಿ ಜನಿಸಿದವರ ವ್ಯಕ್ತಿತ್ವ ಹೇಗಿರುತ್ತೆ ಗೊತ್ತಾ?

ವ್ಯಕ್ತಿತ್ವ ಪರೀಕ್ಷೆImage Credit source: Unsplash

ಸಾಮಾನ್ಯವಾಗಿ ಸಂಖ್ಯಾಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಗಿಣಿ ಶಾಸ್ತ್ರದ ಮೂಲಕ ವ್ಯಕ್ತಿಯ ಗುಣ ಸ್ವಭಾವ, ಭವಿಷ್ಯವನ್ನು ತಿಳಿದುಕೊಳ್ಳಲಾಗುತ್ತದೆ. ಇದಲ್ಲದೆ ಸಾಮುದ್ರಿಕ ಶಾಸ್ತ್ರದಲ್ಲಿ ಕಣ್ಣು, ಮೂಗು, ಕೂದಲು, ಪಾದ ಸೇರಿದಂತೆ ವ್ಯಕ್ತಿಯ ದೇಹಾಕಾರ ಹೇಗಿದೆ ಎಂಬುದರ ಮೂಲಕವೂ ಆತನ ವ್ಯಕ್ತಿತ್ವವನ್ನು (personality) ತಿಳಿಯಬಹುದಾಗಿದೆ. ಅದೇ ರೀತಿ ಹುಟ್ಟಿದ ತಿಂಗಳ ಆಧಾರದ ಮೇಲೂ  ನಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದು. ಇನ್ನೇನೂ ಜೂನ್‌ ತಿಂಗಳು ಆರಂಭವಾಗುತ್ತಿದ್ದು, ಈ ಸಂದರ್ಭದಲ್ಲಿ ಜೂನ್‌ ತಿಂಗಳಲ್ಲಿ ಜನಿಸಿದವರ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯೋಣ ಬನ್ನಿ.

ಜೂನ್‌ ತಿಂಗಳಲ್ಲಿ ಜನಿಸಿದವರ ವ್ಯಕ್ತಿತ್ವ ಹೇಗಿರುತ್ತದೆ?

ಅದ್ಭುತ ಹಾಸ್ಯಪ್ರಜ್ಞೆ: ಜೂನ್‌ನಲ್ಲಿ ಜನಿಸಿದ ಜನರು ಗಮನಾರ್ಹವಾದ ಹಾಸ್ಯಪ್ರಜ್ಞೆಯನ್ನು ಹೊಂದಿರುತ್ತಾರೆ, ಈ ಹಾಸ್ಯ ಪ್ರಜ್ಞೆಯ ಕಾರಣ ಇತರರು ಇವರತ್ತ ಬಹು ಬೇಗನೆ ಆಕರ್ಷಿತರಾಗುತ್ತಾರೆ. ಅಲ್ಲದೆ ಇವರ ಸಂಭಾಷಣೆ ಶೈಲಿಯೂ ಉತ್ತಮವಾಗಿದೆ. ಇವರು ಖುಷಿಯಾಗಿರುತ್ತಾರೆ ಜೊತೆಗೆ ಇವರೊಂದಿಗಿರುವವರನ್ನೂ ಇವರು ಸಂತೋಷದಿಂದ ನೋಡಿಕೊಳ್ಳುತ್ತಾರೆ.

ಸ್ನೇಹಪರ ಸ್ವಭಾವ: ಜೂನ್‌ನಲ್ಲಿ ಜನಿಸಿದವರು ಇತರರರೊಂದಿಗೆ ತುಂಬಾ ಬೆರೆಯುವವರು. ಅವರು ಹೊಸ ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಬಹಳ ಇಷ್ಟಪಡುತ್ತಾರೆ. ಅದಕ್ಕಾಗಿಯೇ ಅವರ ಫ್ರೆಂಡ್ಸ್‌ ಸರ್ಕಲ್‌ ಯಾವಾಗಲೂ ದೊಡ್ಡದಾಗಿರುತ್ತದೆ. ಅಲ್ಲದೆ ಜೂನ್‌ನಲ್ಲಿ ಜನಿಸಿದವರು ಸ್ವಭಾವತಃ ತುಂಬಾ ದಯಾಳುಗಳು ಮತ್ತು ಇವರು ಇತರರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಿರುತ್ತಾರೆ.

ಹೊಸ ವಿಷಯಗಳನ್ನು ಕಲಿಯುವ ಹವ್ಯಾಸ: ಜೂನ್ ತಿಂಗಳಲ್ಲಿ ಜನಿಸಿದ ಜನರು ಹೊಸ ಹೊಸ ವಿಷಯಗಳನ್ನು ಕಲಿಯುವಲ್ಲಿ ತುಂಬಾನೇ ಆಸಕ್ತಿಯನ್ನು ಹೊಂದಿರುತ್ತಾರೆ. ಅವರು ತುಂಬಾ ಸೃಜನಶೀಲರು. ಅವರು ಎಲ್ಲದರ ಬಗ್ಗೆಯೂ ಜ್ಞಾನವನ್ನು ಹೊಂದಲು ಇಷ್ಟಪಡುತ್ತಾರೆ. ಅವರು ಓದುವುದು ಮತ್ತು ಬರೆಯುವುದನ್ನು ಆನಂದಿಸುತ್ತಾರೆ.

ಪರಿಶುದ್ಧ ಹೃದಯದವರು: ಜೂನ್ ತಿಂಗಳಲ್ಲಿ ಜನಿಸಿದ ಜನರು ಪರಿಶುದ್ಧ ಹೃದಯದವರಾಗಿರುತ್ತಾರೆ. ಅವರ ಮನಸ್ಸಿನಲ್ಲಿ ಏನಿದೆಯೋ ಅದನ್ನು ಅಲ್ಲೇ ಹೇಳಿಬಿಡುತ್ತಾರೆ. ಅವರು ಬೆನ್ನ ಹಿಂದೆ ಮಾತನಾಡುವುದಿಲ್ಲ, ಜೊತೆಗೆ ಬೆನ್ನಿಗೆ ಚೂರಿ ಕೂಡ ಹಾಕುವುದಿಲ್ಲ.  ಅವರು ಏನೇ ಮಾಡಿದರೂ ಅದನ್ನು ಧೈರ್ಯದಿಂದ ಮಾಡುತ್ತಾರೆ. ಅವರು ತಮ್ಮ ಸಂಬಂಧಗಳಲ್ಲಿ ಸಂಪೂರ್ಣ ಪ್ರಾಮಾಣಿಕತೆಯನ್ನು ಕಾಯ್ದುಕೊಳ್ಳುತ್ತಾರೆ ಮತ್ತು ತಮ್ಮ ಪ್ರೀತಿಪಾತ್ರರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ.

ಆಕರ್ಷಕ ವ್ಯಕ್ತಿತ್ವ: ಜೂನ್ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ, ಅವರು ಗಮನಾರ್ಹವಾದ ಆತ್ಮವಿಶ್ವಾಸವನ್ನು ಸಹ ಹೊಂದಿರುತ್ತಾರೆ. ಅವರು ತಮ್ಮ ಮೊದಲ ಭೇಟಿಯಲ್ಲೇ ಇತರರ ಮೇಲೆ ವಿಶಿಷ್ಟವಾದ ಪ್ರಭಾವ ಬೀರುತ್ತಾರೆ.

ಇದನ್ನೂ ಓದಿ: ಚಿತ್ರದಲ್ಲಿರುವ ಒಂದು ತರಕಾರಿಯನ್ನು ಆರಿಸಿ, ನಿಮ್ಮ ಮಾನಸಿಕ ಶಕ್ತಿ ಹೇಗಿದೆ ಪರೀಕ್ಷಿಸಿ

ಕಲಾ ಪ್ರೇಮಿಗಳು:  ಜೂನ್ ತಿಂಗಳಲ್ಲಿ ಜನಿಸಿದವರು ಕಲಾ ಪ್ರೇಮಿಗಳು. ಅವರು ಹಾಡುಗಾರಿಕೆ, ನೃತ್ಯ, ಕ್ರೀಡೆ, ಚಿತ್ರಕಲೆ ಮತ್ತು ಇನ್ನೂ ಅನೇಕ ಪ್ರತಿಭೆಗಳನ್ನು ಹೊಂದಿರುತ್ತಾರೆ.

ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ: ಜೂನ್‌ನಲ್ಲಿ ಜನಿಸಿದ ಜನರ ಒಂದು ನಕಾರಾತ್ಮಕ ಅಂಶವೆಂದರೆ ಅವರು ತಮ್ಮ ಭಾವನೆಗಳನ್ನು ಇತರರಿಗೆ ವ್ಯಕ್ತಪಡಿಸುವುದಿಲ್ಲ. ಅವರು ತಮ್ಮ ಭಾವನೆಗಳನ್ನು ಮರೆಮಾಡುತ್ತಾರೆ.

ಪ್ರೇಮ ಜೀವನ:  ಜೂನ್ ತಿಂಗಳಲ್ಲಿ ಜನಿಸಿದವರು ತುಂಬಾನೇ ರೊಮ್ಯಾಂಟಿಕ್‌ ಆಗಿದ್ದು, ಅವರು ಪ್ರೀತಿಯಲ್ಲಿ ಬೇಗನೆ ಬೀಳುತ್ತಾರೆ, ಆದರೆ ಆ ಪ್ರೀತಿಯನ್ನು, ಭಾವನೆಯನ್ನು ವ್ಯಕ್ತಪಡಿಸಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಸಂಬಂಧಗಳ ಬಗ್ಗೆ ತುಂಬಾನೇ ಉತ್ಸುಕರಾಗಿರುವ ಇವರು ಪ್ರೀತಿಯಲ್ಲಿ ಮೋಸ ಮಾಡುವ ಸಾಧ್ಯತೆ ತುಂಬಾ ಕಡಿಮೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:44 pm, Sat, 30 May 26

Source link

ಶಾಸಕಾಂಗ ಸಭೆಯಲ್ಲಿ ಅಚ್ಚರಿ ಬೆಳವಣಿಗೆ, ಒಂದು ಕ್ಷಣ ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ

ಬೆಂಗಳೂರು, (ಮೇ 30): ಕಾಂಗ್ರೆಸ್ (Congress) ಶಾಸಕಾಂಗ ಸಭೆ ಅಂತ್ಯವಾಗಿದ್ದು,ನೂತನ ಶಾಸಕಾಂಗ ಪಕ್ಷದ ನಾಯಕನಾಗಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಆದ್ರೆ, ಸಭೆಯಲ್ಲಿ ಗೊಂದಲ, ಅಚ್ಚರಿ ವಿದ್ಯಮಾನವೊಂದು ನಡೆದಿದೆ. ಹೌದು.. ಸಭೆ ಆರಂಭದಲ್ಲಿ ಸಿದ್ದರಾಮಯ್ಯನವರು ಡಿಕೆ ಶಿವಕುಮಾರ್ ಅವರ ಹೆಸರು ಪ್ರಸ್ತಾಪಿಸಿ ಒನ್ ಲೈನ್ ನಿರ್ಣಯ ಮಂಡಿಸಿದರು. ಇದಕ್ಕೆ ಪರಮೇಶ್ವರ್ ಅವರು ಅನುಮೋದನೆ ನೀಡಿದರು. ಆದ್ರೆ, ಶಾಸಕರು ಒಪ್ಪಿಗೆ ಸೂಚಿಸಿದೇ, ಎಐಸಿಸಿ ಹೇಳಿದವರಿಗೆ ನಮ್ಮ ಬೆಂಬಲ ಎಂದಿದ್ದಾರೆ. ಇದರಿಂದ ಕೆಲ ಕಾಲ ಗೊಂದಲ ಉಂಟಾಗಿದ್ದು, ಸಭೆಗೆ ಐದು ನಿಮಿಷ ಬ್ರೇಕ್ ನೀಡಲಾಯ್ತು.

ಶಾಸಕರು ಹೈಕಮಾಂಡ್ ಹೆಗಲಿ ಹಾಕುತ್ತಿದ್ದಂತೆಯೇ ಸಂಪ್ರದಾಯದಂತೆ ಸಿದ್ದರಾಮಯ್ಯನವರು ಸಭೆಯಿಂದ ನೇರವಾಗಿ ಮುಖ್ಯಮಂತ್ರಿ ಕಚೇರಿಗೆ ತೆರಳಿ ಸುರ್ಜೆವಾಲ ಜತೆ ಮಾತುಕತೆ ನಡೆಸಿ ಬಳಿಕ ಸಭೆಗೆ ಆಗಮಿಸಿದ್ದು, ಈ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಇಲ್ಲೇ ಮತ್ತು ಇಂದೇ ಆಯ್ಕೆ ಪ್ರಕ್ರಿಯೆ ಮಾಡುವಂತೆ ಸಿದ್ದರಾಮಯ್ಯನವರನ್ನು ಮನವೊಲಿಸಿದರು. ಬಳಿಕ ಹೈಕಮಾಂಡ್, ಸಿದ್ದರಾಮಯ್ಯ ಮೂಲಕವೇ ಡಿಕೆ ಶಿವಕುಮಾರ್ ಅವರ ಹೆಸರು ಸೂಚಿಸಿತು. ಇದರೊಂದಿಗೆ ಸಿದ್ದರಾಮಯ್ಯ ಮನವೊಲಿಕೆ ನಂತರ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿತು.

2023ರ ಚುನಾವಣೆ ನಂತರ ಸರ್ಕಾರ ರಚನೆ ವೇಳೆ ಡಿಕೆ ಶಿವಕುಮಾರ್ ಅವರು CLP ನಾಯಕನ ಹೆಸರು ಹೇಳದೆ ಹೈಕಮಾಂಡ್ ಹೆಸರೇಳಿ ನಿರ್ಗಮಿಸಿದ್ದರು. ಇದೀಗ ಸಿದ್ದರಾಮಯ್ಯನವರು ಸಹ ಅದೇ ಮಾದರಿ ಅನುಸರಿಸಿ ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ.

Source link

ಜೈಲರ್ 2: ಶಾರುಖ್ ಬದಲು ಮತ್ತೊಬ್ಬ ಬಾಲಿವುಡ್ ಸ್ಟಾರ್, ರಜನಿಗೆ ಹಳೆ ಪರಿಚಯ

ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಬಹು ನಿರೀಕ್ಷಿತ ‘ಜೈಲರ್ 2’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರದಲ್ಲಿದೆ. 2023 ರಲ್ಲಿ ಬಿಡುಗಡೆ ಆಗಿದ್ದ ‘ಜೈಲರ್’ ಚಿತ್ರ ದೊಡ್ಡ ಹಿಟ್ ಆಗಿತ್ತು. ಆ ಸಿನಿಮಾನಲ್ಲಿ ರಜನೀಕಾಂತ್ ಅವರಷ್ಟೆ ಇತರೆ ಅತಿಥಿ ಪಾತ್ರಗಳು ಸಹ ಸಖತ್ ಆಗಿ ಮಿಂಚಿದ್ದವು. ಶಿವರಾಜ್ ಕುಮಾರ್, ಮೋಹನ್​​ಲಾಲ್, ಜಾಕಿ ಶ್ರಾಫ್ ಇನ್ನೂ ಕೆಲವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಈ ಬಾರಿಯೂ ಸಹ ಅದೇ ಅತಿಥಿ ಪಾತ್ರದ ಹವಾ ಮುಂದುವರೆಸಲಾಗಿದ್ದು, ಇನ್ನೂ ಒಂದು ಹೆಜ್ಜೆ ಮುಂದು ಹೋಗಲೆಂದು, ಬಾಲಿವುಡ್ ಬಾದ್​ಶಾ ಶಾರುಖ್ ಖಾನ್ ಅವರನ್ನು ಅತಿಥಿ ಪಾತ್ರಕ್ಕೆ ಕೇಳಲಾಗಿತ್ತು. ಆದರೆ ಅವರು ನಿರಾಕರಿಸಿದ್ದರು. ಇದೀಗ ಶಾರುಖ್ ಖಾನ್ ಬದಲು ಮತ್ತೊಬ್ಬ ಬಾಲಿವುಡ್ ಸೂಪರ್ ಸ್ಟಾರ್ ಅವರನ್ನು ಕರೆತರಲಾಗಿದೆ. ಆದರೆ ರಜನೀಕಾಂತ್​​ ಜೊತೆಗೆ ಅವರದ್ದು ಹಳೆಯ ಪರಿಚಯ.

ಶಾರುಖ್ ಖಾನ್ ನಿರಾಕರಿಸಿದ ಅತಿಥಿ ಪಾತ್ರದಲ್ಲಿ ಬಾಲಿವುಡ್​​ನ ಸೂಪರ್ ಸ್ಟಾರ್ ಹೃತಿಕ್ ರೋಷನ್ ಅವರು ನಟಿಸಲಿದ್ದಾರೆ. ಹೃತಿಕ್ ರೋಷನ್ ಅವರು ಕಳೆದ ವರ್ಷ, ತೆಲುಗಿನ ಸ್ಟಾರ್ ನಟ ಜೂ ಎನ್​​ಟಿಆರ್ ಜೊತೆಗೆ ‘ವಾರ್ 2’ ಸಿನಿಮಾನಲ್ಲಿ ನಟಿಸಿದ್ದರು. ಇದೀಗ ರಜನೀಕಾಂತ್ ಅವರ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. ಅಂದಹಾಗೆ ರಜನೀಕಾಂತ್ ಮತ್ತು ಹೃತಿಕ್ ರೋಷನ್ ಒಟ್ಟಿಗೆ ನಟಿಸಲಿರುವುದು ಇದು ಮೊದಲೇನೂ ಅಲ್ಲ. ದಶಕಗಳ ಹಿಂದೆಯೇ ಈ ಜೋಡಿ ಒಟ್ಟಿಗೆ ನಟಿಸಿತ್ತು ಎಂಬುದು ಹಲವರಿಗೆ ಗೊತ್ತಿಲ್ಲ.

ಇದನ್ನೂ ಓದಿ:ಸಿಎಂ ಅನ್ನೇ ರಸ್ತೆಯಲ್ಲಿ ನಿಲ್ಲಿಸಿದ್ದ ರಜನೀಕಾಂತ್: ಯಾವ ಸಿನಿಮಾ ಸೀನ್​​ಗೂ ಕಮ್ಮಿ ಇಲ್ಲ

ರಜನಿಕಾಂತ್ ಮತ್ತು ಹೃತಿಕ್ ರೋಷನ್ ಈ ಹಿಂದೆಯೂ ಒಟ್ಟಿಗೆ ಸಿನೆಮಾದಲ್ಲಿ ನಟಿಸಿದ್ದಾರೆ. ಹೃತಿಕ್ ರೋಷನ್ ಅವರು ಬಾಲನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು 1986 ರ ‘ಭಗವಾನ್ ದಾದಾ’ ಎಂಬ ಹಿಂದಿ ಚಿತ್ರದ ಮೂಲಕ. ಆ ಸಿನಿಮಾನಲ್ಲಿ ರಜನಿಕಾಂತ್ ನಾಯಕ. ಆ ಸಿನಿಮಾದಲ್ಲಿ ಹೃತಿಕ್ ರೋಷನ್, ರಜನಿಕಾಂತ್ ಅವರ ಸಾಕು ಮಗನಾಗಿ ನಟಿಸಿದ್ದರು ಮತ್ತು ಹೃತಿಕ್ ತಮ್ಮ ಸಂದರ್ಶನಗಳಲ್ಲಿ ಆ ನೆನಪುಗಳ ಬಗ್ಗೆ ಆಗಾಗ ಅತ್ಯಂತ ಪ್ರೀತಿಯಿಂದ ಮಾತನಾಡಿದ್ದಾರೆ. ಈಗ 40 ವರ್ಷಗಳ ಬಳಿಕ ರಜನೀಕಾಂತ್ ಮತ್ತು ಹೃತಿಕ್ ರೋಷನ್ ಒಟ್ಟಿಗೆ ನಟಿಸುತ್ತಿದ್ದಾರೆ. ವಿಶೇಷವೆಂದರೆ ‘ಜೈಲರ್ 2’ ಸಿನಿಮಾನಲ್ಲೂ ಹೃತಿಕ್ ಅವರು ರಜನೀಕಾಂತ್ ಅವರ ಸಾಕು ಮಗನಾಗಿಯೇ ನಟಿಸಲಿದ್ದಾರಂತೆ.

ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಮತ್ತು ಸನ್ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಚಿತ್ರವು ಈಗಾಗಲೇ ಗೋವಾ, ಕೇರಳ ಮತ್ತು ಚೆನ್ನೈನಲ್ಲಿ ಪ್ರಮುಖ ಶೂಟಿಂಗ್ ಹಂತಗಳನ್ನು ಪೂರ್ಣಗೊಳಿಸಿದೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ನಿರ್ದೇಶನವಿರುವ ಈ ಸಿನಿಮಾನಲ್ಲಿ ಶಿವರಾಜ್ ಕುಮಾರ್, ಮೋಹನ್​​ಲಾಲ್ ಇನ್ನೂ ಕೆಲವರು ಅತಿಥಿ ಪಾತ್ರಗಳಲ್ಲಿ ಮುಂದುವರೆದಿದ್ದಾರೆ. ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version