ಸೂಪರ್ ಹಿಟ್ ‘ಭಾಗ್ಯವಂತರು’ ಶೀರ್ಷಿಕೆಯಲ್ಲಿ ಹೊಸ ಸೀರಿಯಲ್; ಜುಲೈ 6ರಿಂದ ಪ್ರಸಾರ – Kannada News | Sun Udaya TV New Kannada Serial Bhagyavantaru on Air Date Cast Crew

ಧಾರಾವಾಹಿಗಳಿಗೆ ‘ಸನ್ ಉದಯ’ (Sun Udaya) ವಾಹಿನಿ ಮೊದಲಿನಿಂದಲೂ ಫೇಮಸ್. ಇತ್ತೀಚೆಗಷ್ಟೇ ‘ಮೂಗುತಿ ಮಲ್ಲಿ’, ‘ಮಹಾಲಕ್ಷ್ಮೀ ಮದುವೆ’ ರೀತಿಯ ವಿನೂತನ ಧಾರಾವಾಹಿಯನ್ನು ನೀಡಿ ನೋಡುಗರಿಂದ ಮೆಚ್ಚುಗೆ ಪಡೆದ ಈ ವಾಹಿನಿಯು ಈಗ ‘ಭಾಗ್ಯವಂತರು’ (Bhagyavantaru) ಶೀರ್ಷಿಕೆಯಲ್ಲಿ ಹೊಸ ಸೀರಿಯಲ್ ಆರಂಭಿಸುತ್ತಿದೆ. ಪವರ್​ಫುಲ್ ಶೀರ್ಷಿಕೆಯಿಂದ ಗಮನ ಸೆಳೆಯುತ್ತಿರುವ ಈ ಧಾರಾವಾಹಿ (Kannada Serial) ಜುಲೈ 6ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7.30ಕ್ಕೆ ಪ್ರಸಾರ ಆಗಲಿದೆ.

ಎ.ಎಸ್.ಎಮ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಆಗುತ್ತಿರುವ ‘ಭಾಗ್ಯವಂತರು’ ಧಾರಾವಾಹಿಗೆ ಸಂಪೃಥ್ವಿ ನಿರ್ದೇಶನ ಮಾಡುತ್ತಿದ್ದಾರೆ. ರಮಣ ಬಂಗಾರು ಅವರು ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶುಭ್ರ ಪುತ್ರಕಳ ಅವರು ಕಥೆ-ಚಿತ್ರಕಥೆ ಬರೆದಿದ್ದಾರೆ. ಸುಮಾ ಶಿಂಗ್ನಳ್ಳಿ ಅವರು ಸಂಭಾಷಣೆ ಬರೆಯುತ್ತಿದ್ದಾರೆ. ಛಾಯಾಗ್ರಾಹಕರಾಗಿ ಗೌತಮ್ ಕೃಷ್ಣನ್ ಕೆಲಸ ಮಾಡುತ್ತಿದ್ದಾರೆ.

‘ಭಾಗ್ಯವಂತರು’ ಸೀರಿಯಲ್ ಕಥೆ ಏನು ?

ಈ ಧಾರಾವಾಹಿಯ ಕಥೆಯ ಕೇಂದ್ರಬಿಂದು ಆಗಿರುವುದು ಜನನಿ. ಅಪ್ಪನ ಮುದ್ದಿನ ಮಗಳು ಈಕೆ. ತನ್ನ ತಂದೆ ಶ್ಯಾಮಸುಂದರ್ ಅವರ ಕನಸನ್ನು ನನಸಾಗಿಸಲು ಶಿಕ್ಷಣವನ್ನೇ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡಿರುವ ಜನನಿ, ಭವಿಷ್ಯದಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗುವ ಕನಸು ಕಾಣುತ್ತಾಳೆ. ತಂದೆಯ ಆಶಯದಂತೆ ವಿದ್ಯಾಭ್ಯಾಸಕ್ಕೆ ಸಂಪೂರ್ಣ ಒತ್ತು ನೀಡಿದ ಜನನಿಯನ್ನು, ಉತ್ತಮ ಭವಿಷ್ಯಕ್ಕಾಗಿ ಮಂಡ್ಯದ ಶ್ರೀಮಂತ ಕುಟುಂಬದ ಶಕ್ತಿ ನಾಯಕ್ ಅವರೊಂದಿಗೆ ವಿವಾಹ ಮಾಡಲಾಗುತ್ತದೆ.

ಜನನಿಗೆ ಎದುರಾಗುತ್ತದೆ ಒಂದು ಸವಾಲು:

ಸಾಕಷ್ಟು ಸಂಪತ್ತನ್ನು ಗಳಿಸಿರುವ ಗುಣಶೇಖರ್ ನಾಯಕ್ ಅವರ ಕೊನೆಯ ಸಹೋದರ ಶಕ್ತಿ ನಾಯಕ್. ಗುಣಶೇಖರನ ಮನೆಯಲ್ಲಿ ಈಗಾಗಲೇ ಡಬಲ್ ಡಿಗ್ರಿ ಮಾಡಿರುವ ಮೂವರು ಸೊಸೆಯಂದಿರಿದ್ದು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿರುತ್ತಾರೆ. ಇವರ ಜೊತೆಗೆ ನಾಲ್ಕನೇ ವಿದ್ಯಾವಂತ ಸೊಸೆಯಾಗಿ ಈ ಮನೆಗೆ ಕಾಲಿಡುತ್ತಾಳೆ ಜನನಿ. ಆದರೆ ಗಂಡನ ಮನೆ ಮತ್ತು ತಾನು ಮಾಡುವ ಕೆಲಸವನ್ನು ಸರಿಯಾಗಿ ಮುನ್ನಡೆಸುವುದು ಜನನಿಗೆ ಒಂದು ಸವಾಲ್. ಈ ಸವಾಲಿನಲ್ಲಿ ಜನನಿ ಯಾವ ರೀತಿ ಯಶಸ್ವಿಯಾಗುತ್ತಾಳೆ ಎಂಬುದು ಈ ಧಾರಾವಾಹಿಯ ಕಥಾ ಹಂದರ.

ಇದನ್ನೂ ಓದಿ: ‘ಸನ್‌ ಉದಯ’ ಟಿವಿಯಲ್ಲಿ ಅಮೂಲ್ಯ ಗೌಡ ಹೊಸ ಧಾರಾವಾಹಿ ‘ಮಹಾಲಕ್ಷ್ಮೀ ಮದುವೆ’

ಪಾತ್ರವರ್ಗದಲ್ಲಿ ಯಾರೆಲ್ಲ ಇದ್ದಾರೆ?

ಈ ಧಾರಾವಾಹಿಯ ನಾಯಕಿ ಪಾತ್ರದಲ್ಲಿ ತನ್ವಿ ರಾವ್ ನಟಿಸುತ್ತಿದ್ದಾರೆ. ನಾಯಕನಾಗಿ ವಿಕಾಸ್ ಅವರು ನಟಿಸುತ್ತಿದ್ದಾರೆ. ಹೆಸರಾಂತ ಕಲಾವಿದರಾದ ಸುಚೇಂದ್ರ ಪ್ರಸಾದ್, ಆರ್.ಕೆ. ಚಂದನ್, ಶೋಭರಾಜ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ. ಸುರೇಶ್ ರೈ, ಶಾಲನಿ, ಧನ್ಯಾ, ಸಮೀಕ್ಷಾ, ವರ್ಷಾ, ಮಧುಸಾಗರ, ಲಕ್ಷ್ಮೀ ಹೆಗ್ಡೆ, ಶ್ರೀವಾಯು, ರಿಷಾ, ವಿಠಲ್ ಕಾಮತ್, ಪ್ರಕೃತಿ ಪಾಟೀಲ್, ಜಯಲಕ್ಷ್ಮೀ ಪಟೇಲ್ ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೆದುಳಿನ ಆರೋಗ್ಯ ಕಾಪಾಡಲು ಡಬ್ಲ್ಯೂಎಚ್ಓ ಶಿಫಾರಸು ಮಾಡಿರುವ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ – Kannada News | WHO Tips for Brain Health: Daily Habits That May Protect Your Memory

ವಯಸ್ಸು ಹೆಚ್ಚಾದಂತೆ ದೇಹದ ಜೊತೆಗೆ ಮೆದುಳಿನ ಆರೋಗ್ಯದ ಮೇಲೂ ಗಮನ ಹರಿಸುವುದು ಅಗತ್ಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ನೆನಪಿನ ಶಕ್ತಿ ಕುಂದುವುದು, ಏಕಾಗ್ರತೆ ಕಡಿಮೆಯಾಗುವುದು ಮತ್ತು ಯೋಚನಾ ಸಾಮರ್ಥ್ಯದಲ್ಲಿ ಬದಲಾವಣೆ ಕಾಣುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಮೆದುಳಿನ ಆರೋಗ್ಯವನ್ನು (Brain Health) ದೀರ್ಘಕಾಲ ಕಾಪಾಡಿಕೊಳ್ಳಲು ಕೆಲವು ಪ್ರಮುಖ ಜೀವನಶೈಲಿ ಸಲಹೆಗಳನ್ನು ನೀಡಿದೆ. ಇದನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡಿದಲ್ಲಿ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಬಹುದು. ಹಾಗಾದರೆ ಡಬ್ಲ್ಯೂಎಚ್ಓ ಪ್ರಕಾರ ಮೆದುಳು ಆರೋಗ್ಯವಾಗಿರಲು ಯಾವ ರೀತಿಯ ಅಭ್ಯಾಸಗಳನ್ನು ಪಾಲಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಡಬ್ಲ್ಯೂಎಚ್ಓ ಶಿಫಾರಸು ಮಾಡಿರುವ ಆರೋಗ್ಯಕರ ಅಭ್ಯಾಸಗಳು:

ಮೆದುಳು ಆರೋಗ್ಯವಾಗಿರಲು ಪ್ರತಿದಿನ ನಿಯಮಿತವಾಗಿ ದೈಹಿಕ ಚಟುವಟಿಕೆ ಅಥವಾ ವ್ಯಾಯಾಮ ಮಾಡಬೇಕು. ಪೌಷ್ಟಿಕ ಮತ್ತು ಸಮತೋಲಿತ ಆಹಾರ ಸೇವಿಸಬೇಕು. ಧೂಮಪಾನದಿಂದ ದೂರವಿದ್ದು, ಮದ್ಯಪಾನವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಉತ್ತಮ. ಜೊತೆಗೆ ಹೊಸ ವಿಷಯಗಳನ್ನು ಕಲಿಯುವುದು, ಪುಸ್ತಕ ಓದುವುದು, ಒಗಟುಗಳನ್ನು ಬಿಡಿಸುವುದು ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸುವ ಚಟುವಟಿಕೆಗಳಲ್ಲಿ ತೊಡಗುವುದು ಮೆದುಳಿನ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಕಾರಿಯಾಗಿದೆ.

ಇದನ್ನೂ ಓದಿ: ಪ್ರತಿ ಸಣ್ಣ ಆರೋಗ್ಯ ಸಮಸ್ಯೆಗೂ ಔಷಧಿ ಸೇವಿಸುತ್ತೀರಾ? ಈ ಅಭ್ಯಾಸ ಎಷ್ಟು ಅಪಾಯಕಾರಿ ಗೊತ್ತಾ?

ಈ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡಿ:

ಡಬ್ಲ್ಯೂಎಚ್ಓ ಪ್ರಕಾರ, ಅಧಿಕ ರಕ್ತದೊತ್ತಡ, ಮಧುಮೇಹ, ಹೆಚ್ಚಿದ ಕೊಲೆಸ್ಟ್ರಾಲ್, ಅಧಿಕ ತೂಕ, ಶ್ರವಣ ಸಮಸ್ಯೆ ಮತ್ತು ಖಿನ್ನತೆ (ಡಿಪ್ರೆಶನ್) ಮುಂತಾದ ಸಮಸ್ಯೆಗಳನ್ನು ನಿಯಂತ್ರಣದಲ್ಲಿ ಇಡುವುದು ಅಗತ್ಯ. ಇವುಗಳನ್ನು ನಿರ್ಲಕ್ಷಿಸಿದರೆ ಮೆದುಳಿನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಆದ್ದರಿಂದ ನಿಯಮಿತ ಆರೋಗ್ಯ ತಪಾಸಣೆ ಮತ್ತು ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುವುದು ಮುಖ್ಯ.

ಈ ಕೆಟ್ಟ ಅಭ್ಯಾಸಗಳಿಂದ ದೂರವಿರಿ;

ಧೂಮಪಾನ, ಅತಿಯಾದ ಮದ್ಯಪಾನ, ದೈಹಿಕ ಚಟುವಟಿಕೆಯ ಕೊರತೆ, ಅನಾರೋಗ್ಯಕರ ಆಹಾರ ಪದ್ಧತಿ ಹಾಗೂ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಮೆದುಳಿನ ಕಾರ್ಯಕ್ಷಮತೆಯನ್ನು ಕುಗ್ಗಿಸಬಹುದು. ಆದ್ದರಿಂದ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಮತ್ತು ವೈದ್ಯರ ಸಲಹೆಗಳನ್ನು ಪಾಲಿಸುವುದು ದೀರ್ಘಕಾಲ ಮೆದುಳನ್ನು ಆರೋಗ್ಯವಾಗಿಡಲು ನೆರವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅವರೆಲ್ಲರ ಪ್ಯಾಂಟ್ ಬಿಚ್ಚಿಸುತ್ತಿದ್ದ’; ವೈಭವ್​ಗೆ ಅವಕಾಶ ನೀಡದ್ದಕ್ಕೆ ರವಿಶಾಸ್ತ್ರಿ ಗರಂ – Kannada News | Ravi Shastri Demands Vaibhav Suryavanshi in Team India T20 vs England Amidst Sanju Samson Form

ಟೀಂ ಇಂಡಿಯಾ ಪ್ರಸ್ತುತ 5 ಪಂದ್ಯಗಳ ಟಿ20 ಸರಣಿಗಾಗಿ ಇಂಗ್ಲೆಂಡ್​ನಲ್ಲಿದೆ (India vs England). ಉಭಯ ತಂಡಗಳ ನಡುವೆ ನಡೆದ ಮೊದಲ ಟಿ20 ಪಂದ್ಯ ಮಳೆಗಾಹುತಿಯಾಯಿತು. ಆದಾಗ್ಯೂ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪೂರ್ಣ 20 ಓವರ್​ಗಳನ್ನು ಆಡಿ 189 ರನ್ ಕಲೆಹಾಕಿತು. ಆದರೆ ಇಂಗ್ಲೆಂಡ್‌ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಮಳೆ ಬಂದ ಕಾರಣ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಐರ್ಲೆಂಡ್ ವಿರುದ್ಧದ ಸರಣಿಗೆ ಹೋಲಿಸಿಕೊಂಡರೆ, ಇಂಗ್ಲೆಂಡ್‌ ವಿರುದ್ಧ ಟೀಂ ಇಂಡಿಯಾದ ಬ್ಯಾಟಿಂಗ್‌ ವಿಭಾಗ ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡಂತೆ ಕಾಣುತ್ತಿತ್ತು. ಆದರೆ ಈ ಪಂದ್ಯದಲ್ಲೂ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಸಂಜು ಸ್ಯಾಮ್ಸನ್ ತಮ್ಮ ಕಳಪೆ ಫಾರ್ಮ್​ ಮುಂದುವರೆಸಿ ಈ ಪಂದ್ಯದಲ್ಲೂ ಕೇವಲ 1 ರನ್ ಬಾರಿಸಿ ಔಟಾದರು. ಹೀಗಾಗಿ ಸಂಜು ಸ್ಯಾಮ್ಸನ್​ ಕೈಬಿಟ್ಟು ಫಾರ್ಮ್​ನಲ್ಲಿರುವ ವೈಭವ್ ಸೂರ್ಯವಂಶಿಗೆ (Vaibhav Sooryavanshi) ಅವಕಾಶ ನೀಡಬೇಕೆಂಬ ಕೂಗು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇದರ ನಡುವೆ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ (Ravi Shastri), ವೈಭವ್ ಸೂರ್ಯವಂಶಿಗೆ ಅವಕಾಶ ನೀಡದಿರುವುದಕ್ಕೆ ಅಸಮಾಧಾನ ಹೊರಹಾಕಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರವಿಶಾಸ್ತ್ರಿ ಹೇಳಿಕೆ ವೈರಲ್

ಪ್ರಸ್ತುತ ಅದ್ಭುತ ಫಾರ್ಮ್​ನಲ್ಲಿರುವ ವೈಭವ್ ಸೂರ್ಯವಂಶಿಯನ್ನ ಐರ್ಲೆಂಡ್ ಹಾಗೂ ಇಂಗ್ಲೆಂಡ್‌ ಎರಡೂ ಪ್ರವಾಸಕ್ಕೂ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಆದರೆ ವೈಭವ್​​ಗೆ ಐರ್ಲೆಂಡ್ ವಿರುದ್ಧ ಆಡಲು ಅವಕಾಶ ಸಿಗಲಿಲ್ಲ. ಹೀಗಾಗಿ ಇಂಗ್ಲೆಂಡ್‌ ವಿರುದ್ಧವಾದರೂ ವೈಭವ್​ಗೆ ಅವಕಾಶ ಸಿಗಬಹುದು ಎಂದು ಎಲ್ಲರೂ ಕಾದಿದ್ದರು. ಆದರೆ ಮೊದಲ ಪಂದ್ಯದಲ್ಲಿ ವೈಭವ್​ಗೆ ಆಡುವ ಅವಕಾಶ ಸಿಗಲಿಲ್ಲ. ಇದರ ನಡುವೆ ವೈಭವ್ ಬಗ್ಗೆ ರವಿಶಾಸ್ತ್ರಿ ಆಡಿರುವ ಮಾತುಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಐರ್ಲೆಂಡ್ ಬೌಲರ್​ಗಳ ಪ್ಯಾಂಟ್ ಬಿಚ್ಚಿಸುತ್ತಿದ್ದ

ಟಿ20 ಸರಣಿ ಪ್ರಸಾರಕ ಸೋನಿ ಸ್ಫೋರ್ಟ್ಸ್ ಜೊತೆಗಿನ ಮಾತುಕತೆ ವೇಳೆ ರವಿಶಾಸ್ತ್ರಿ, ‘ವೈಭವ್ ಸೂರ್ಯವಂಶಿಯನ್ನು ಐರ್ಲೆಂಡ್ ವಿರುದ್ಧ ಆಡಿಸಬೇಕಿತ್ತು. ಐರ್ಲೆಂಡ್ ಪಿಚ್​ನಲ್ಲಿ ವೈಭವ್ ಅಪಾಯಕಾರಿಯಾಗುತ್ತಿದ್ದರು. ಅಲ್ಲಿನ ಮೈದಾನಗಳು ಚಿಕ್ಕದ್ದಾಗಿದ್ದರಿಂದ ವೈಭವ್​ ಕ್ರೀಡಾಂಗಣದ ಹೊರಕ್ಕೆ ಚೆಂಡನ್ನು ಕಳುಹಿಸುತ್ತಿದ್ದರು. ಒಂದು ವೇಳೆ ವೈಭವ್​ಗೆ ಐರ್ಲೆಂಡ್ ವಿರುದ್ಧ ಆಡುವ ಅವಕಾಶ ಸಿಕ್ಕಿದ್ದರೆ, ಅವರು ಐರ್ಲೆಂಡ್ ಬೌಲರ್​ಗಳ ಪ್ಯಾಂಟ್ ಬಿಚ್ಚಿಸುತ್ತಿದ್ದರು(ಐರ್ಲೆಂಡ್ ಬೌಲರ್​ಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು).

ಬೇಗ ಅವಕಾಶ ನೀಡಬೇಕು

ಹೀಗಾಗಿ ವೈಭವ್​ನ ಇಂಗ್ಲೆಂಡ್‌ ವಿರುದ್ಧವಾದರೂ ಆಡಿಸಬೇಕು. ವೈಭವ್ ಐಪಿಎಲ್‌ನಲ್ಲಿ ವಿಶ್ವದ ಎಲ್ಲಾ ಸ್ಟಾರ್ ಬೌಲರ್​ಗಳ ವಿರುದ್ಧ ಅಬ್ಬರಿಸಿದ್ದರು. ಅವರು ಯಾವ ಬೌಲರ್​ ವಿರುದ್ಧ ರನ್ ಗಳಿಸಲಿಲ್ಲ ಹೇಳಿ? ಅಂತಹ ಬ್ಯಾಟರ್​ನ ನೀವು ಬೆಂಚ್ ಕಾಯಿಸುವುದು ಸರಿಯಲ್ಲ. ಆದ್ದರಿಂದ ವೈಭವ್​ಗೆ ಇಂಗ್ಲೆಂಡ್‌ ಸರಣಿಯಲ್ಲಿ ಆಡುವ ಅವಕಾಶ ನೀಡಿದರೆ ತಂಡಕ್ಕೆ ಒಳಿತು. ವೈಭವ್ ಸೂರ್ಯವಂಶಿಯ ದೊಡ್ಡ ಶಕ್ತಿ ಎಂದರೆ ಅವರು ಯಾವುದೇ ಮಾನಸಿಕ ಒತ್ತಡವನ್ನು ಅನುಭವಿಸುವುದಿಲ್ಲ. ಮೊದಲ ಎರಡು-ಮೂರು ಓವರ್‌ಗಳಲ್ಲಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುವ ವೈಭವ್​ಗೆ ತಂಡದ ಆಡಳಿತ ಶಾಶ್ವತ ಸ್ಥಾನವನ್ನು ಕಲ್ಪಿಸಬೇಕಾಗುತ್ತದೆ. ಅದಕ್ಕಾಗಿಯೇ ಅವರಿಗೆ ಸಾಧ್ಯವಾದಷ್ಟು ಬೇಗ ಅವಕಾಶ ನೀಡಬೇಕು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:48 pm, Thu, 2 July 26

Source link

ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ – Kannada News | Multi Storey Building Tilts Onto Road in cottonpete at Bengaluru

ಬೆಂಗಳೂರು, (ಜುಲೈ 02) : ನಗರದ ಕಾಟನ್‌ ಪೇಟೆಯಲ್ಲಿರುವ ಸುಮಾರು 50 ವರ್ಷಗಳ ಹಳೆಯ 2 ಅಂತಸ್ತಿನ ಕಟ್ಟಡವೊಂದು ಒಂದು ಬದಿ ವಾಲಿದ್ದು , ಅದರಲ್ಲಿ ಸಿಲುಕಿದ್ದವರು ಹಾಗೂ ಕಟ್ಟಡದ ಸುತ್ತಮುತ್ತಲಿನ ನಿವಾಸಿಗಳು ಆತಂಕಗೊಂಡಿದ್ದಾರೆ. ವಿಷಯ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ, ಕಾಟನ್​ಪೇಟೆ ಪೊಲೀಸರು ದೌಡಾಯಿಸಿ ವಾಲಿದ್ದ ಕಟ್ಟಡದೊಳಗೆ ಸಿಲುಕಿದ್ದ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ವಾಲಿದ ಕಟ್ಟಡದಲ್ಲಿ ನಟೇಶ್ ಕ್ಲಿನಿಕ್, ಜನ ವಾಸಮಾಡುತ್ತಿದ್ದರು. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.20X30 ವಿಸ್ತೀರ್ಣದಲ್ಲಿದ್ದ 50 ವರ್ಷಗಳ ಹಿಂದೆ ನಿರ್ಮಿಸಿದ್ದು, ಸ್ಥಳದಲ್ಲೇ ಜಿಬಿಎ ಅಧಿಕಾರಿಗಳು, ಪೊಲೀಸರು ಮೊಕ್ಕಾಂ ಹೂಡಿ 2 ಜೆಸಿಬಿ ಮೂಲಕ ಕಟ್ಟಡ ತೆರವು ಮಾಡಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೋದಿ ಉದ್ಘಾಟನೆಗೂ ಮುನ್ನವೇ ಸೆಮಿಕಂಡಕ್ಟರ್ ಚಿಪ್​ಗಳ ರಫ್ತು ಆರಂಭಿಸಿದ ಮುರುಗಪ್ಪ ಗ್ರೂಪ್ ಕಂಪನಿ – Kannada News | India’s CG Semi begins commercial chip exports ahead of official launch by PM Modi

ಸೆಮಿಕಂಡಕ್ಟರ್ ಚಿಪ್Image Credit source: Getty Images

ಅಹ್ಮದಾಬಾದ್, ಜುಲೈ 2: ಭಾರತದ ಸೆಮಿಕಂಡಕ್ಟರ್ (Semiconductor Chip) ಉತ್ಪಾದನಾ ವಲಯದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿತವಾಗಿದೆ. ಮುರುಗಪ್ಪ ಗ್ರೂಪ್ ಒಡೆತನದ ಸಿಜಿ ಸೆಮಿ (CG Semi) ಸಂಸ್ಥೆಯು ಗುಜರಾತ್‌ನ ಸಾನಂದ್‌ನಲ್ಲಿರುವ ತನ್ನ ಸೆಮಿಕಂಡಕ್ಟರ್ ಘಟಕದಲ್ಲಿ ಮೊದಲ ವಾಣಿಜ್ಯ ಚಿಪ್‌ಗಳ ರಫ್ತನ್ನು (Chips Export) ಅಧಿಕೃತವಾಗಿ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟಕದ ಕಮರ್ಷಿಯಲ್ ಪ್ರೊಡಕ್ಷನ್​ಗೆ ಜುಲೈ 4ರಂದು ಚಾಲನೆ ನೀಡುವ ಮುನ್ನವೇ ಸಂಸ್ಥೆಯು ವಿದೇಶಕ್ಕೆ ಚಿಪ್‌ಗಳ ಮೊದಲ ರವಾನೆಯನ್ನು ಕಳುಹಿಸಿಕೊಟ್ಟಿರುವುದು ವಿಶೇಷ.

ಮಲೇಷ್ಯಾಗೆ ಮೊದಲ ರಫ್ತು

ವರದಿಗಳ ಪ್ರಕಾರ, ಸಾನಂದ್‌ನಲ್ಲಿರುವ ತನ್ನ ಓಸಾಟ್ (OSAT – Outsourced Semiconductor Assembly and Test) ಘಟಕದಲ್ಲಿ ಸಿದ್ಧಪಡಿಸಲಾದ ಕಮರ್ಷಿಯಲ್ ಸೆಮಿಕಂಡಕ್ಟರ್ ಚಿಪ್‌ಗಳ ಮೊದಲ ಬ್ಯಾಚ್ ಅನ್ನು ಜೂನ್ 19 ರಂದೇ ಮಲೇಷ್ಯಾದ ಕೌಲಾಲಂಪುರಕ್ಕೆ ಯಶಸ್ವಿಯಾಗಿ ರಫ್ತು ಮಾಡಿದೆ.

ಜಪಾನ್​ನ ರೆನೆಸಾಸ್ ಎಲೆಕ್ಟ್ರಾನಿಕ್ಸ್​ನ ಗ್ರಾಹಕರಿಗೆ ಈ ಚಿಪ್​ಗಳನ್ನು ಪೂರೈಸಲಾಗುತ್ತಿದೆ. ಈ ಸೆಮಿಕಂಡಕ್ಟರ್ ಘಟಕ ನಿರ್ವಹಣೆಯಲ್ಲಿ ರೆನೆಸಾಸ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಸಿಜಿ ಸೆಮಿಯೊಂದಿಗೆ ಸಹಭಾಗಿತ್ವ ಮತ್ತು ಪ್ರಮುಖ ಪಾಲುದಾರಿಕೆ ಹೊಂದಿದೆ.

ಜಪಾನ್​ನ ಸೆಮಿಕಂಡಕ್ಟರ್ ಸಂಸ್ಥೆಯಾದ ರೆನೆಸಾಸ್ ಎಲೆಕ್ಟ್ರಾನಿಕ್ಸ್ (Renesas Electronics) ಮತ್ತು ಮುರುಗಪ್ಪ ಗ್ರೂಪ್​ನ ಸಿಜಿ ಸೆಮಿ ಸಂಸ್ಥೆಗಳು ಜಂಟಿಯಾಗಿ ಈ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ ಘಟಕವನ್ನು ನಡೆಸುತ್ತಿವೆ. ಹತ್ತು ತಿಂಗಳ ಹಿಂದಷ್ಟೇ (2025ರ ಆಗಸ್ಟ್) ಈ ಘಟಕ ಆರಂಭವಾಗಿದ್ದು. ಪ್ರಧಾನಿ ಮೋದಿ ಅವರೇ ಖುದ್ದಾಗಿ ಈ ಘಟಕವನ್ನು 2025ರ ಆಗಸ್ಟ್​ನಲ್ಲಿ ಉದ್ಘಾಟಿಸಿದ್ದರು. ಬಹಳ ವೇಗವಾಗಿ ರೂಪುಗೊಂಡು ಈಗ ಜಾಗತಿಕ ಪೂರೈಕೆ ಸರಪಳಿಯ ಭಾಗವಾಗಿರುವುದು ಗಮನಾರ್ಹ.

ಇದನ್ನೂ ಓದಿ: ಹೊಸ ಇನ್ಕಮ್ ಟ್ಯಾಕ್ಸ್ ಕಾಯ್ದೆ; 2 ಐಟಿಆರ್​ಗಳನ್ನು ಸಲ್ಲಿಸಬೇಕಾ ಎನ್ನುವ ಗೊಂದಲ ಕೆಲವರಲ್ಲಿ; ಇಲಾಖೆ ಸ್ಪಷ್ಟನೆ ಇದು

ಸಿಜಿ ಸೆಮಿ ಯೋಜನೆ ಮತ್ತು ಬಂಡವಾಳ ಹೂಡಿಕೆ

ಮುರುಗಪ್ಪ ಸಮೂಹದ ಅಂಗಸಂಸ್ಥೆಯಾದ ಸಿಜಿ ಪವರ್ (CG Power), ಜಪಾನ್‌ನ ರೆನೆಸಾಸ್ ಮತ್ತು ಥೈಲ್ಯಾಂಡ್‌ನ ಸ್ಟಾರ್ಸ್ ಮೈಕ್ರೋ ಎಲೆಕ್ಟ್ರಾನಿಕ್ಸ್ ಸಂಸ್ಥೆಗಳು ಒಟ್ಟಾಗಿ ಈ ಜಂಟಿ ಉದ್ಯಮವನ್ನು ಮುನ್ನಡೆಸುತ್ತಿವೆ.

ಮುಂದಿನ 5 ವರ್ಷಗಳಲ್ಲಿ ಈ ಯೋಜನೆಗಾಗಿ ಒಟ್ಟು 7,600 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗುತ್ತಿದೆ. ಸಾನಂದ್‌ನಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ G1 ಘಟಕವು ಪ್ರತಿದಿನ ಸುಮಾರು 5 ಲಕ್ಷ ಚಿಪ್‌ಗಳನ್ನು ಅಸೆಂಬ್ಲಿ, ಪ್ಯಾಕೇಜಿಂಗ್ ಮತ್ತು ಟೆಸ್ಟಿಂಗ್ ಮಾಡುವ ಸಾಮರ್ಥ್ಯ ಹೊಂದಿದೆ. ಇನ್ನು ನಿರ್ಮಾಣ ಹಂತದಲ್ಲಿರುವ ದೊಡ್ಡದಾದ G2 ಘಟಕವು 2026ರ ಕೊನೆಯ ವೇಳೆಗೆ ಕಾರ್ಯಾರಂಭ ಮಾಡಲಿದ್ದು, ದಿನಕ್ಕೆ ಬರೋಬ್ಬರಿ 1.45 ಕೋಟಿ ಚಿಪ್‌ಗಳನ್ನು ಉತ್ಪಾದಿಸಲಿದೆ.

ಸದ್ಯ ಮಲೇಷ್ಯಾದ ಕೌಲಾಲಂಪುರಕ್ಕೆ ರಫ್ತಾಗಿರುವ ಸಿಜಿ ಸೆಮಿ ಚಿಪ್​ಗಳು ವಾಹನ, ಕನ್ಸೂಮರ್ ಎಲೆಕ್ಟ್ರಾನಿಕ್ಸ್, 5ಜಿ ತಂತ್ರಜ್ಞಾನ ಮತ್ತು ಐಒಟಿ (IoT- Internet of Things) ಅಪ್ಲಿಕೇಶನ್​ಗಳಿಗೆ ಬಳಕೆಯಾಗಲಿವೆ. ಈ ಘಟಕದಿಂದ ಮುಂಬರುವ ವರ್ಷಗಳಲ್ಲಿ 5,000ಕ್ಕೂ ಅಧಿಕ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ನಿಮ್ಮ ಕುಟುಂಬದವರ ಕಾಲ್ ಡೀಟೇಲ್ಸ್ ತೆಗೆಸಲು ಅವಕಾಶ ಇದೆಯಾ? ಸಿಡಿಆರ್ ರಿಪೋರ್ಟ್ ಯಾರಿಗೆಲ್ಲಾ ಸಿಗುತ್ತೆ?

ಸಾನಂದ್ ಈಗ ಚಿಪ್ ಹಬ್

ಗುಜರಾತ್‌ನ ಸಾನಂದ್ ಕೈಗಾರಿಕಾ ಪ್ರದೇಶವು ಭಾರತದ ಸಿಲಿಕಾನ್ ಹಬ್ ಆಗಿ ಬದಲಾಗುತ್ತಿದೆ. ಮೈಕ್ರಾನ್ ಟೆಕ್ನಾಲಜಿ (Micron), ಕೇನ್ಸ್ ಸೆಮಿಕಾನ್ (Kaynes Semicon) ಮತ್ತು ಸಿಜಿ ಸೆಮಿ (CG Semi) ಸಂಸ್ಥೆಗಳ ಬೃಹತ್ ಘಟಕಗಳು ಇಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಭಾರತವನ್ನು ಸೆಮಿಕಂಡಕ್ಟರ್ ವಲಯದಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ವೇಗವಾಗಿ ಹೆಜ್ಜೆ ಇಡುತ್ತಿವೆ.

ಭಾರತದಲ್ಲಿ ಕೇವಲ ನಾಲ್ಕು ವರ್ಷಗಳ ಹಿಂದೆ ಆರಂಭವಾದ ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್’ (ISM) ಯೋಜನೆಯು ಇಂದು ಜಾಗತಿಕ ಮಟ್ಟದಲ್ಲಿ ವಾಣಿಜ್ಯ ಚಿಪ್‌ಗಳನ್ನು ರಫ್ತು ಮಾಡುವ ಹಂತಕ್ಕೆ ತಲುಪಿರುವುದು ದೇಶದ ತಾಂತ್ರಿಕ ಸಾರ್ವಭೌಮತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 5:54 pm, Thu, 2 July 26

Source link

Video: ಚಲಿಸುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್‌ನಲ್ಲಿದ್ದ ನಾಗರಹಾವು, ಮುಂದೇನಾಯ್ತು ನೋಡಿ – Kannada News | Uttara Pradesh: A cobra was found on the dashboard of a car in Ghaziabad elevated road.

ಉತ್ತರ ಪ್ರದೇಶ, ಜುಲೈ 02: ಮಳೆಗಾಲ ಶುರುವಾಯಿತೆಂದರೆ ಹಾವುಗಳ ಉಪಟಳ ಅಷ್ಟಿಷ್ಟಲ್ಲ. ಈ ನಾಗರಹಾವು (Indian Cobra) ಸೇರಿದಂತೆ ವಿಷಕಾರಿ ಸರ್ಪಗಳು ಬೆಚ್ಚಗಿನ ಸ್ಥಳವನ್ನೇ ತನ್ನ ವಾಸಸ್ಥಾನವನ್ನಾಗಿ ಮಾಡಿಕೊಳ್ಳುತ್ತವೆ. ಆದರೆ ಇದೀಗ ಗಾಜಿಯಾಬಾದ್ ಎಲಿವೇಟೆಡ್ ರಸ್ತೆಯಲ್ಲಿ (Ghaziabad elevated road) ಚಲಿಸುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ನಾಗರಹಾವೊಂದು ಪತ್ತೆಯಾಗಿದೆ. ಈ ಹಾವು ಪ್ರತ್ಯಕ್ಷವಾಗುತ್ತಿದ್ದಂತೆ ಕಾರು ಚಲಾಯಿಸುತ್ತಿದ್ದ ಮಹಿಳೆ ತಕ್ಷಣ ತನ್ನ ಕಾರನ್ನು ನಿಲ್ಲಿಸಿ ಹೊರಗೆ ಓಡಿ ಬಂದಿದ್ದಾರೆ. ಗಾಜಿಯಾಬಾದ್ ಸಂಚಾರ ಪೊಲೀಸ್ ಮುಖ್ಯ ಕಾನ್‌ಸ್ಟೆಬಲ್ ರೊಬ್ಬರು ಹಾವನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಈ ರಕ್ಷಣಾ ಕಾರ್ಯದ ವೀಡಿಯೊ ವೈರಲ್ ಆಗಿದ್ದು, ಅಧಿಕಾರಿಯ ಧೈರ್ಯವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಹೌದು, ರಾಜ್ ನಗರ ವಿಸ್ತರಣೆಯ ವಸತಿ ಸೊಸೈಟಿಯಲ್ಲಿ ವಾಸವಿರುವ ಮೀನಾಕ್ಷಿ ಎಂಬ ಮಹಿಳೆ ಎಂದಿನಂತೆ ಮುಂಜಾನೆ ನೋಯ್ಡಾದಲ್ಲಿರುವ ತನ್ನ ಕಚೇರಿಯ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದರು. ಇದೇ ವೇಳೆ ಕಾರಿನ ಡ್ಯಾಶ್ ಬೋರ್ಡ್‌ನಲ್ಲಿ ಇದ್ದಕ್ಕಿದ್ದಂತೆ ನಾಗರಹಾವು ಕಾಣಿಸಿಕೊಂಡಿದೆ. ಡ್ಯಾಶ್‌ಬೋರ್ಡ್‌ನಲ್ಲಿ ಹಾವನ್ನು ಗಮನಿಸಿದ ಮಹಿಳೆ ತಕ್ಷಣವೇ ತನ್ನ ವಾಹನವನ್ನು ನಿಲ್ಲಿಸಿ ಹೊರಗೆ ಬಂದಿದ್ದಾರೆ.

 ವೈರಲ್‌ ಪೋಸ್ಟ್‌ ಇಲ್ಲಿದೆ

ಗಾಜಿಯಾಬಾದ್ ರಕ್ಷಣಾ ಪೊಲೀಸರು (Ghaziabad Traffic Police) ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಇದ್ದಕ್ಕಿದ್ದಂತೆ ನಾಗರಹಾವನ್ನು ಹಿಡಿದು, ಅರಣ್ಯ ಇಲಾಖೆಗೆ ಹಸ್ತಾಂತರಿಸುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಹಾವನ್ನು ಹಿಡಿದು ಚೀಲ ತುಂಬುವ ಬದಲು ಅದರೊಂದಿಗೆ ಆಟವಾಡಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ

ಇದೇ ವೇಳೆ ಗಾಜಿಯಾಬಾದ್ ಸಂಚಾರ ಪೊಲೀಸರ ಸಮೀಪದಲ್ಲಿ ವಿವಿಐಪಿ ಕ್ರೇನ್ ಕರ್ತವ್ಯದಲ್ಲಿದ್ದ ಹೆಡ್ ಕಾನ್‌ಸ್ಟೆಬಲ್ ಓಂ ಪ್ರಕಾಶ್ ಭಯಭೀತರಾದ ಮಹಿಳೆಯನ್ನು ಕಂಡು ವಾಹನ ನಿಲ್ಲಿಸಿದ್ದಾರೆ. ಈ ವಿಷಕಾರಿ ಹಾವನ್ನು ಖಾಲಿ ನೀರಿನ ಬಾಟಲಿಯನ್ನು ಬಳಸಿ ಸುರಕ್ಷಿತವಾಗಿ ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾನ್‌ಸ್ಟೆಬಲ್ ಓಂ ಪ್ರಕಾಶ್ ಹಾಗೂ ಗೃಹರಕ್ಷಕ ದಳದ ದೀಪಕ್ ಅವರ ಧೈರ್ಯವನ್ನು ಸ್ಥಳದಲ್ಲಿದ್ದ ಸ್ಥಳೀಯರು ಶ್ಲಾಘಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:54 pm, Thu, 2 July 26

Source link

ತಂದೆ-ತಾಯಿ ತಮ್ಮ ಮಗಳಿಗೆ ಕಲಿಸಲೇಬೇಕಾದ ಜೀವನ ಪಾಠಗಳಿವು – Kannada News | Every parent should teach these things to their daughters

ಹಿಂದಿನ ಕಾಲದಲ್ಲಿ ಇದ್ದಂತೆ, ಈಗ ಹೆಣ್ಣು ಮತ್ತು ಗಂಡು ಮಕ್ಕಳ ನಡುವೆ ಯಾವುದೇ ತಾರತಮ್ಯವಿಲ್ಲ. ಹೆಣ್ಣು ಗಂಡು ಇಬ್ಬರನ್ನೂ ಸಮಾನಾಗಿ ಬೆಳೆಸಲಾಗುತ್ತದೆ. ಈಗಂತೂ ಪ್ರತಿಯೊಬ್ಬ ಪೋಷಕರು ತಮ್ಮ ಮಗಳು (daughter) ಆತ್ಮವಿಶ್ವಾಸ, ಬುದ್ಧಿವಂತ ಮತ್ತು ಬಲಶಾಲಿಯಾಗಿರಬೇಕೆಂದು ಬಯಸುತ್ತಾರೆ. ಇದಕ್ಕೆ ಕೇವಲ ಉತ್ತಮ ಶಿಕ್ಷಣ ನೀಡಿದರೆ ಸಾಕಾಗುವುದಿಲ್ಲ ಕೆಲವೊಂದು ಜೀವನ ಪಾಠಗಳನ್ನು ಸಹ ಕಲಿಸಬೇಕಾಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳಿಗೆ ಈ ಕೆಲವೊಂದು ಜೀವನ ಪಾಠಗಳನ್ನು ಅಗತ್ಯವಾಗಿ ಕಲಿಸಲೇಬೇಕು. ಇವೆಲ್ಲವೂ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು, ಯಶಸ್ವಿ ಮಹಿಳೆಯಾಗಿ ರೂಪುಗೊಳ್ಳಲು ಸಹಾಯ ಮಾಡುತ್ತದೆ. ಪೋಷಕರು ತಮ್ಮ ಮಗಳಿಗೆ ಕಲಿಸಲೇಬೇಕಾದ ಆ ಜೀವನ ಪಾಠಗಳು ಯಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಪೋಷಕರು ತಮ್ಮ ಮಗಳಿಗೆ ಕಲಿಸಬೇಕಾದ ಪಾಠಗಳೇನು?

ಸ್ವಾವಲಂಬಿಯಾಗುವುದು ಬದುಕುವುದು: ಸ್ವಾವಲಂಬಿಯಾಗಿ ಬದುಕುವುದು ಎಷ್ಟು ಮುಖ್ಯ ಎಂಬುದನ್ನು ಮಗಳಿಗೆ ಕಲಿಸಬೇಕು. ಮದುವೆಯ ನಂತರ ಗಂಡನ ಮೇಲೆ ಮತ್ತು ಮದುವೆಗೆ ಮೊದಲು ತಂದೆಯ ಮೇಲೆ ಅವಲಂಬಿತರಾಗುವುದು ಸರಿಯಲ್ಲ, ಹಾಗಾಗಿ ಆರ್ಥಿಕವಾಗಿ ಸಬಲರಾಗಲು ಉತ್ತಮ ಶಿಕ್ಷಣ, ಸರಿಯಾದ ತರಬೇತಿಯನ್ನು ಪಡೆಯಬೇಕು ಎಂಬುದನ್ನು ಚಿಕ್ಕ ವಯಸ್ಸಿನಿಂದಲೇ ಕಲಿಸಿ. ಸ್ವಾವಲಂಬಿ ಜೀವನದ ಮಹತ್ವವನ್ನು ತಿಳಿಸಿಕೊಡಿ. ಖಂಡಿತವಾಗಿಯೂ ಇದರಿಂದ ನಿಮ್ಮ ಮಗಳು ಶಿಕ್ಷಣದ ಮಹತ್ವ ಹಾಗೂ ಸ್ವಾವಲಂಬಿ ಜೀವನ ನಡೆಸುವುದು ಬಹಳ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾಳೆ.

ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಕಲಿಸಿ: ಪ್ರತಿಯೊಂದು ವಿಚಾರಕ್ಕೂ ಗದರುವುದು ಅಥವಾ ಕಂಟ್ರೋಲ್‌ ಮಾಡುವ ಬದಲು ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಚಿಕ್ಕ ವಯಸ್ಸಿನಿಂದಲೇ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಬೇಕು. ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಪೋಷಕರು ಅವರಿಗೆ ಮಾರ್ಗದರ್ಶನ ನೀಡಬೇಕು ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹೇಗೆ ಎಂಬುದನ್ನು ಕಲಿಸಬೇಕು. ಇದು  ಅವರಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ.

ಎಲ್ಲರೂ ನಿಮ್ಮನ್ನು ಇಷ್ಟಪಡುವುದಿಲ್ಲ: ಹೆಣ್ಣುಮಕ್ಕಳಿಗೆ ಈ ಸಂಗತಿಯನ್ನು ಕಲಿಸುವುದು ಮುಖ್ಯ. ಕೆಲವರು ನಮ್ಮನ್ನು ಹೊಗಳುತ್ತಾರೆ, ಇನ್ನು ಕೆಲವರು ಬೇಕು ಬೇಕಂತಲೇ  ಟೀಕಿಸುತ್ತಾರೆ. ಆದರೆ ಅದರರ್ಥ ನಾವು ಸರಿಯಿಲ್ಲ ಎಂದರ್ಥವಲ್ಲ, ಇತರರ ಮಾತುಗಳನ್ನು ಕೇಳಿ ನಮ್ಮನ್ನು ನಾವು ಕಡಿಮೆ ಅಂದಾಜು ಮಾಡಬಾರದು.ಇದು ನಮ್ಮನ್ನೇ ಕುಗ್ಗಿಸುತ್ತದೆ. ಹಾಗಾಗಿ ನಮಗಾಗಿ ನಾವು ಬದುಕಬೇಕು, ಇತರರ ಕೊಂಕು ಮಾತುಗಳಿಗೆ ತಲೆ ಕೆಡಿಸುವ ಅವಶ್ಯಕತೆಯಿಲ್ಲ ಎಂಬುದನ್ನು ಕಲಿಸಬೇಕು. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಯೌವನಲ್ಲಿ ಕಲಿಯುವ ವಿಷಯಗಳು ನಿಮ್ಮ ಭವಿಷ್ಯದ ದಿಕ್ಕನ್ನು ನಿರ್ಧರಿಸುತ್ತದೆ

ಸ್ವಾತಂತ್ರ್ಯವಾಗಿ ಬದುಕುವುದನ್ನು ಕಲಿಸಿ: ಹೆಣ್ಣು ಮಕ್ಕಳಿಗೆ ಸ್ವತಂತ್ರವಾಗಿ ಬದುಕುವುದರ ನಿಜವಾದ ಅರ್ಥವನ್ನು ಕಲಿಸಿ. ಬೇರೆಯವರು ತಮ್ಮ ಜೀವನವನ್ನು ನಿಯಂತ್ರಿಸಲು ಬಿಡುವುದು ತಪ್ಪು, ಸಹಾಯಕ್ಕಾಗಿ ಇತರರನ್ನು ಕಾಯುವ ಯಾವುದೇ ಅವಶ್ಯಕತೆಯಿಲ್ಲ ಎಂದು ಸ್ವಂತಂತ್ರವಾಗಿ ಬದುಕುವ ಬಗ್ಗೆ ಕಲಿಸಿ. ಮತ್ತು ಎಲ್ಲದಕ್ಕೂ ತಲೆಯಾಡಿಸದೆ ಇಲ್ಲ ಎಂದು ಧೈರ್ಯದಿಂದ ಹೇಳಲು ಕಲಿಸಿ. ಇದು ನಿಮ್ಮ ಮಗಳು ಇತರರ ಪ್ರಭಾವಕ್ಕೊಳಗಾಗುವುದನ್ನು ತಡೆಯುತ್ತದೆ. ಜೊತೆಗೆ ಇದು ಆತ್ಮವಿಶ್ವಾಸದ ಸಂಕೇತವೂ ಹೌದು.

ನಿಮ್ಮ ಮೇಲೆ ನಂಬಿಕೆ ಇಡಿ:  ನಮ್ಮಲ್ಲಿ ನಮಗೆ ವಿಶ್ವಾಸವಿದ್ದರೆ ಜೀವನದಲ್ಲಿ ಎಂತಹದ್ದೇ ಕಷ್ಟಗಳನ್ನು ಎದುರಿಸಲು, ಜಯಿಸಲು ಸಾಧ್ಯ. ಆದ್ದರಿಂದ ನಿಮ್ಮ ಹೆಣ್ಣುಮಕ್ಕಳಿಗೆ ತಮ್ಮನ್ನು ತಾವು ಪ್ರೀತಿಸಲು ಮತ್ತು ತಮ್ಮಲ್ಲಿ ವಿಶ್ವಾಸ ಹೊಂದಲು ಕಲಿಸಿ. ಇತರರಿಗಿಂತ ದುರ್ಬಲರು ಎಂದು ತಮ್ಮ ಬಗ್ಗೆ ತಾವೇ ಕೀಳರಿಮೆ ಹೊಂದಿದ್ದರೆ, ಇದರಿಂದ ಅವರ ಆತ್ಮವಿಶ್ವಾಸವು ಹಾಳಾಗುತ್ತದೆ. ಹಾಗಾಗಿ ಸಕಾರಾತ್ಮಕವಾಗಿ ಯೋಚಿಸುವುದನ್ನು, ನಮ್ಮ ಮೇಲೆ ನಾವು ನಂಬಿಕೆ ಇಡುವುದು ಎಷ್ಟು ಮುಖ್ಯ ಎಂಬುದನ್ನು ಕಲಿಸಿ.

ಪೋಷಕರು ಕಲಿಸುವ  ಈ ಸಣ್ಣ ಪಾಠಗಳು ಹೆಣ್ಣುಮಕ್ಕಳನ್ನು ಮಾನಸಿಕವಾಗಿ ಬಲಶಾಲಿಗಳನ್ನಾಗಿ ಮಾಡುತ್ತವೆ.ಜೀವನದ ಸವಾಲುಗಳನ್ನು ಸುಲಭವಾಗಿ ಎದುರಿಸಲು, ಸಮಾಜದಲ್ಲಿ ಯಶಸ್ವಿ ಮಹಿಳೆಯಾಗಿ ರೂಪುಗೊಳ್ಳಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್ – Kannada News | Kannada actor Golden Star Ganesh visits Tirupati temple on his birthday

ನಟ ‘ಗೋಲ್ಡನ್ ಸ್ಟಾರ್’ ಗಣೇಶ್ (Golden Star Ganesh) ಅವರಿಗೆ ಇಂದು (ಜುಲೈ 2) ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ಪ್ರಯುಕ್ತ ಅವರು ತಿರುಪತಿಗೆ ಭೇಟಿ ನೀಡಿದ್ದಾರೆ. ತಿರುಪತಿಯಲ್ಲಿ ದೇವರ ದರ್ಶನ ಪಡೆದಿದ್ದಾರೆ. 48ನೇ ವಸಂತಕ್ಕೆ ಕಾಲಿಟ್ಟಿರುವ ಗಣೇಶ್ ಅವರಿಗೆ ಅಭಿಮಾನಿಗಳು ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ. ಇನ್ನು, ಗಣೇಶ್ ಅವರ ಬರ್ತ್​ಡೇ ಪ್ರಯುಕ್ತ ಅಭಿಮಾನಿಗಳಿಗೆ ಡಬಲ್ ಗಿಫ್ಟ್ ಸಿಕ್ಕಿದೆ. ಹೌದು, ಗಣೇಶ್ ನಟಿಸಿರುವ 2 ಸಿನಿಮಾಗಳ ರಿಲೀಸ್ ದಿನಾಂಕ ಘೋಷಣೆ ಆಗಿದೆ. ಅಕ್ಟೋಬರ್ 2ರಂದು ‘ಪಿನಾಕ’ ಸಿನಿಮಾ ತೆರೆಕಾಣಲಿದೆ. ಅಕ್ಟೋಬರ್ 16ಕ್ಕೆ ‘ಬೃಂದಾವಿಹಾರಿ’ ಸಿನಿಮಾ ರಿಲೀಸ್ ಆಗಲಿದೆ. ಹೀಗೆ ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳು ಬಿಡುಗಡೆ ಆಗಲಿರುವ ಸುದ್ದಿ ತಿಳಿದು ಅಭಿಮಾನಿಗಳಿಗೆ ಖುಷಿ ಆಗಿದೆ. ಕೇವಲ 14 ದಿನಗಳ ಅಂತರದಲ್ಲಿ ಗಣೇಶ್ ಅಭಿನಯಿಸಿರುವ ಎರಡು ಸಿನಿಮಾಗಳನ್ನು ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎಸ್​ಐಆರ್​ ಪ್ರಕ್ರಿಯೆಯಲ್ಲಿ ಅಕ್ರಮ, ಬಾಂಗ್ಲಾದೇಶದಿಂದ ಬಂದವರ ಪೋಷಣೆ: ಕುಮಾರಸ್ವಾಮಿ ಗಂಭೀರ ಆರೋಪ – Kannada News | HD Kumaraswamy Alleges SIR Process Irregularities; Accuses Karnataka Govt of Enrolling Bangladeshi Migrants as Voters

ಬೆಂಗಳೂರು, ಜುಲೈ 2: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್​ಐಆರ್​ ಪ್ರಕ್ರಿಯೆ ಬಗ್ಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಗುರುವಾರ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ​ ಚುನಾವಣಾ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಅಕ್ರಮಗಳಿಗೆ ಪ್ರೇರಣೆ ನೀಡುತ್ತಿದೆ ಎಂದು ಅವರು ನೇರ ಆರೋಪ ಮಾಡಿದ್ದಾರೆ. ಬಾಂಗ್ಲಾದೇಶದಿಂದ ಬಂದವರನ್ನು ಪೋಷಿಸಿ, ಅವರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ. ರಾಮನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇಂತಹ ಅಕ್ರಮ ಮತದಾರರಿದ್ದು, ಕಳ್ಳ ಮತದಾರರನ್ನು ಅರ್ಹರನ್ನಾಗಿ ಪರಿವರ್ತಿಸಲು ಯತ್ನಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್​ಓಗಳು) ಮನೆ ಮನೆಗೆ ಹೋಗಿ ಪರಿಶೀಲನೆ ನಡೆಸುವ ಬದಲು, ಚೌಲ್ಟ್ರಿಗಳಲ್ಲಿ ಜನರನ್ನು ಕೂರಿಸಿ ಎಸ್​ಐಆರ್​ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ರಾಮನಗರ ಮತ್ತು ಚನ್ನಪಟ್ಟಣ ಭಾಗದಲ್ಲಿ 8 ರಿಂದ 10 ಸಾವಿರಕ್ಕೂ ಹೆಚ್ಚು ಬಾಂಗ್ಲಾದೇಶ ಮೂಲದ ನಿವಾಸಿಗಳನ್ನು ರಕ್ಷಿಸಲಾಗಿದ್ದು, ಫೇಕ್ ಐಡಿಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಈ ಎಲ್ಲಾ ಅಕ್ರಮಗಳ ಬಗ್ಗೆ ಚುನಾವಣಾ ಆಯೋಗ ಗಮನಹರಿಸಬೇಕು ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯ ಸಾರಿಗೆ ನೌಕರರ ವೇತನ ಹೆಚ್ಚಿಸಿ ಸರ್ಕಾರ ಆದೇಶ, ಎಷ್ಟು ಹೆಚ್ಚಳ? ಯಾವಾಗಿನಿಂದ ಜಾರಿಗೆ? – Kannada News | Karnataka Government Hikes transport employees Salary, Effect From July 2026

ಬೆಂಗಳೂರು,ಜುಲೈ 02): ರಾಜ್ಯ ಸರ್ಕಾರ (Karnataka Government) ಸಾರಿಗೆ ನೌಕರರಿಗೆ (Transport Employees) ಸಿಹಿ ಸುದ್ದಿ ನೀಡಿದ್ದು, ಕೊನೆಗೂ ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಈ ತಿಂಗಳಿನಿಂದಲೇ KSRTC, BMTC, NWKRTC, KKRTC ಸಿಬ್ಬಂದಿಯ ಮೂಲ ವೇತನವನ್ನು 12.5%ರಷ್ಟು ಹೆಚ್ಚಿಸಿದ್ದು, 2025ರ ಮಾರ್ಚ್ 31ರ ಮೂಲ ವೇತನದ ಮೇಲೆ ಅನ್ವಯವಾಗಲಿದೆ. ಇನ್ನು 2026ರ ಜುಲೈ 1ರ ವೇತನದಲ್ಲಿ ಜಾರಿಗೆ ಬರುವಂತೆ ಆದೇಶಿಸಿದೆ. ಇದು 1.05 ಲಕ್ಷ ಸಿಬ್ಬಂದಿಗೆ ಅನುಕೂಲವಾಗಲಿದ್ದು, ಇದರಿಂದ ಸರ್ಕಾರಕ್ಕೆ ತಿಂಗಳಿಗೆ ಹೆಚ್ಚುವರಿಯಾಗಿ 72.80 ಕೋಟಿ ರೂಪಾಯಿ ಹೊರೆಯಾಗಲಿದೆ.

1.05 ಲಕ್ಷ ನೌಕರರಿಗೆ ಪ್ರಯೋಜನ

ರಾಜ್ಯದ ಸಾರಿಗೆ ನಿಗಮಗಳಲ್ಲಿ ಒಟ್ಟು ಸುಮಾರು 1.05 ಲಕ್ಷ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ವೇತನ ಹೆಚ್ಚಳದಿಂದ ಅವರೆಲ್ಲರಿಗೂ ಪ್ರಯೋಜನವಾಗಲಿದೆ. ಚಾಲಕರು, ಕಾರ್ಯನಿರ್ವಾಹಕರು ಮತ್ತು ಆಡಳಿತಾಧಿಕಾರಿಗಳು ಸೇರಿದಂತೆ ಎಲ್ಲಾ ವಿಭಾಗದ ನೌಕರರು ಈ ವೇತನ ಪರಿಷ್ಕರಣೆಯ ವ್ಯಾಪ್ತಿಗೆ ಒಳಪಡುತ್ತಾರೆ.

ಇದನ್ನೂ ಓದಿ: ಹಿರಿಯ IAS ಅಧಿಕಾರಿಗಳ ವರ್ಗಾವಣೆ: ಹೊಸ ಪ್ರಜಾಸೇವೆ ಇಲಾಖೆಗೆ ಪ್ರಧಾನ ಕಾರ್ಯದರ್ಶಿ ನೇಮಕ

ಹಿಂಬಾಕಿ ಹಣದ ಮೊದಲ ಕಂತು ಬಿಡುಗಡೆ

ಈಗಾಗಲೇ ನೌಕರರಿಗೆ ಪಾವತಿಸಬೇಕಾಗಿದ್ದ ಹಳೆಯ ವೇತನದ ಹಿಂಬಾಕಿ ಮೊತ್ತದ ಮೊದಲ ಕಂತಿನ ಹಣವನ್ನು ಸರ್ಕಾರವು ಬಿಡುಗಡೆ ಮಾಡಿದೆ. ಉಳಿದ ಹಿಂಬಾಕಿ ಮೊತ್ತವನ್ನು ಮುಂದಿನ ಕೆಲವೇ ತಿಂಗಳುಗಳಲ್ಲಿ ಹಂತ ಹಂತವಾಗಿ ಪಾವತಿಸಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ ತಿಂಗಳ ವೇತನದಲ್ಲಿ ಪರಿಷ್ಕೃತ ವೇತನ ಜಾರಿಗೆ ಬರುವಂತೆ ಪಾವತಿಸಲು ಸರ್ಕಾರವು ಆದೇಶ ಹೊರಡಿಸಿದ್ದು, ಈ ತಿಂಗಳಿಂದ ನೌಕರರ ಖಾತೆಗಳಿಗೆ ಪರಿಷ್ಕೃತ ವೇತನ ಜಮೆಯಾಗಲಿದೆ.

ಸಾರಿಗೆ ಕಾರ್ಮಿಕರು ಕಳೆದ ಹಲವು ತಿಂಗಳುಗಳಿಂದ ವೇತನ ಹೆಚ್ಚಳಕ್ಕಾಗಿ ಹೋರಾಟ ನಡೆಸುತ್ತಿದ್ದರು. ವಿವಿಧ ಸಾರಿಗೆ ಸಂಘಗಳು ಮತ್ತು ಒಕ್ಕೂಟಗಳು ಸರ್ಕಾರದ ಮೇಲೆ ಒತ್ತಡ ಹೇರಲು ಮುಷ್ಕರಗ ನಡೆಸಿದ್ದವು. ಅಂತಿಮವಾಗಿ ಸರ್ಕಾರವು ಅವರ ಬೇಡಿಕೆಗೆ ಮಣಿದು, ಈ ಐತಿಹಾಸಿಕ ವೇತನ ಪರಿಷ್ಕರಣೆಗೆ ಅನುಮೋದನೆ ನೀಡಿದೆ. ರಾಮಲಿಂಗಾರೆಡ್ಡಿ ಅವರು ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸಾರಿಕೆ ಸಚಿವರಾಗಿದ್ದಾಗ ನೌಕರರ ವೇತನ ಹೆಚ್ಚಳಕ್ಕೆ ಆದೇಶಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:03 pm, Thu, 2 July 26

Source link

Exit mobile version