ಅಪಾರ್ಟ್​ಮೆಂಟ್ ನಿರ್ವಹಣೆಗೆ ಬರಲಿದೆ ಹೊಸ ಕಾನೂನು: ನಿವಾಸಿಗಳ ಜತೆ ಸಮಾಲೋಚನೆ ನಡೆಸಲಿರುವ ಸಿಎಂ ಡಿಕೆ ಶಿವಕುಮಾರ್ – Kannada News | Karnataka New Apartment Law: CM DK Shivakumar to Hold Consultation with Apartment Owners and Residents on July 17

ಬೆಂಗಳೂರು, ಜುಲೈ 14: ಅಪಾರ್ಟ್​ಮೆಂಟ್ ನಿರ್ವಹಣೆ ಮತ್ತು ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಹೊಸ, ಸುಧಾರಿತ ಕಾನೂನನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಬೆಂಗಳೂರಿನ ಅಪಾರ್ಟ್​ಮೆಂಟ್ ಮಾಲೀಕರು ಹಲವು ವರ್ಷಗಳಿಂದ ಈ ಕುರಿತು ಒತ್ತಾಯಿಸುತ್ತಿದ್ದರು. ಅವರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ಸರ್ಕಾರವು ಹೊಸ ಕಾನೂನನ್ನು ರೂಪಿಸುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ. ಈ ಹೊಸ ಕಾನೂನನ್ನು ವಿಧಾನ ಮಂಡಲದಲ್ಲಿ ಮಂಡಿಸುವ ಮೊದಲು, ಎಲ್ಲಾ ಪಾಲುದಾರರ ಅಭಿಪ್ರಾಯಗಳನ್ನು ಸಂಗ್ರಹಿಸಲು ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆಯಂತೆ ರೂಪಿಸಲಾದ ಈ ಕಾನೂನಿನ ಬಗ್ಗೆ ಚರ್ಚಿಸಲು, ಜುಲೈ 17ರ ಬುಧವಾರ ಬೆಳಗ್ಗೆ 11:00 ಗಂಟೆಗೆ ಬೆಂಗಳೂರಿನ ಜವಾಹರ ಲಾಲ್ ನೆಹರು ತಾರಾಲಯದ ಸಭಾಭವನದಲ್ಲಿ ಸಭೆ ನಡೆಯಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಅಪಾರ್ಟ್​ಮೆಂಟ್ ನಿವಾಸಿಗಳು, ಮಾಲೀಕರು ಮತ್ತು ಸಂಬಂಧಿತ ಪಾಲುದಾರರು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಸರ್ಕಾರ ಮನವಿ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಿರಿಯ ಬಿಜೆಪಿ ನಾಯಕ, ಮಾಜಿ ಸಚಿವ ರಾಮಚಂದ್ರ ಗೌಡ ನಿಧನ: ಬಿ.ಎಸ್. ಯಡಿಯೂರಪ್ಪ ಸಂತಾಪ – Kannada News | Senior BJP Leader and Former Karnataka Minister Ramachandra Gowda Passes Away at 88

ಬೆಂಗಳೂರು, ಜುಲೈ 14: ಬಿಜೆಪಿಯ ಹಿರಿಯ ನಾಯಕ ಹಾಗೂ ಕರ್ನಾಟಕದ ಮಾಜಿ ಸಚಿವ ರಾಮಚಂದ್ರ ಗೌಡ (88) ಅವರು ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದ ರಾಮಚಂದ್ರ ಗೌಡ ಅವರು ಜನಸಂಘದ ಕಾಲದಿಂದಲೂ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಬಿ.ಎಸ್. ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿಯೂ ಅವರು ಜವಾಬ್ದಾರಿ ನಿರ್ವಹಿಸಿದ್ದರು.

ಜನಸಂಘದ ಕಾಲದ ಧೀಮಂತ ನಾಯಕ

ರಾಮಚಂದ್ರ ಗೌಡ ಅವರು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು. ಕರ್ನಾಟಕದಲ್ಲಿ ಬಿಜೆಪಿ ಪಕ್ಷವು ಇಂದಿನ ಬಲಿಷ್ಠ ಸ್ಥಿತಿಗೆ ತಲುಪುವಲ್ಲಿ ಇವರ ಕೊಡುಗೆ ಅಪಾರ. ಮುಂಚಿನ ಜನಸಂಘದ ಅವಧಿಯಿಂದಲೇ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡಿದ್ದ ಅವರು, ತಳಮಟ್ಟದಿಂದ ಸಂಘಟನೆಯನ್ನು ಬಲಪಡಿಸಿದ್ದರು. ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದ ಗೌಡರು, ತಮ್ಮ ಆಡಳಿತ ಚಾತುರ್ಯ ಮತ್ತು ದಕ್ಷತೆಯಿಂದ ಗುರುತಿಸಿಕೊಂಡಿದ್ದರು. ಉನ್ನತ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾಗಿ ಅವರು ಸಲ್ಲಿಸಿದ ಸೇವೆ ಸ್ಮರಣೀಯವಾದುದು.

ಭಾವನಾತ್ಮಕವಾಗಿ ಸ್ಮರಿಸಿದ ಬಿಎಸ್ ವೈ

ರಾಮಚಂದ್ರ ಗೌಡ ಅವರ ಅಗಲಿಕೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ತಮ್ಮ ಒಡನಾಟವನ್ನು ನೆನೆದು ಕಂಬನಿ ಮಿಡಿದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ ಅವರು, ನನ್ನ ದಶಕಗಳ ಕಾಲದ ಆತ್ಮೀಯ ಒಡನಾಡಿ, ಹಿರಿಯ ನಾಯಕ ರಾಮಚಂದ್ರ ಗೌಡರ ನಿಧನದ ಸುದ್ದಿ ತೀವ್ರ ದುಃಖ ತಂದಿದೆ. ನಾನು ನನ್ನ ಮತ್ತೊಬ್ಬ ಸಹೋದರನನ್ನು ಕಳೆದುಕೊಂಡಂತಾಗಿದೆ. ಜನಸಂಘದ ದಿನಗಳಿಂದ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ ದಿನಗಳು, ಹಗಲಿರುಳು ಶ್ರಮಿಸಿ ರಾಜ್ಯಾದ್ಯಂತ ಪಕ್ಷ ಕಟ್ಟಿದ ನೆನಪುಗಳು ಕಣ್ಣಮುಂದೆ ಸುಳಿಯುತ್ತಿವೆ. ನನ್ನ ಸಂಪುಟದ ಸಹೋದ್ಯೋಗಿಯಾಗಿ ಅವರ ಆಡಳಿತ ಚಾತುರ್ಯ ಹಾಗೂ ಬದ್ಧತೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಭಗವಂತನು ಅವರ ಆತ್ಮಕ್ಕೆ ಸದ್ಗತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ರಾಮಚಂದ್ರ ಗೌಡರ ನಿಧನವು ರಾಜ್ಯ ರಾಜಕಾರಣಕ್ಕೆ ಹಾಗೂ ವಿಶೇಷವಾಗಿ ಬಿಜೆಪಿ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರು ಸೇರಿದಂತೆ ವಿವಿಧ ಪಕ್ಷಗಳ ಪ್ರಮುಖ ನಾಯಕರು ಮೃತರ ಆತ್ಮಕ್ಕೆ ಶಾಂತಿ ಕೋರಿ, ಅವರ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

POCSO ಪ್ರಕರಣಗಳಿಗೆ ಬ್ರೇಕ್: ದೇಶದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಲೈಂಗಿಕ ಶಿಕ್ಷಣ’ ಕಡ್ಡಾಯ, ಕೇಂದ್ರದ ಪ್ಲ್ಯಾನ್ – Kannada News | Centre Tells Supreme Court Age Appropriate Health Education Will Be Integrated Into Curriculum

ನವದೆಹಲಿ, ಜುಲೈ 14: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಲು ಹಾಗೂ ಹದಿಹರೆಯದವರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಒಂದು ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ದೇಶಾದ್ಯಂತ ಇರುವ ಎಲ್ಲಾ ಶಾಲೆ ಮತ್ತು ಕಾಲೇಜುಗಳ ಪಠ್ಯಕ್ರಮದಲ್ಲಿ ‘ಸಮಗ್ರ ದೈಹಿಕ ಹಾಗೂ ಲೈಂಗಿಕ ಶಿಕ್ಷಣ’ವನ್ನು ಅಧಿಕೃತ ವಿಷಯವಾಗಿ ಪರಿಚಯಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಅಧಿಕೃತವಾಗಿ ತಿಳಿಸಿದೆ.

ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠದ ಮುಂದೆ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು, ರಾಷ್ಟ್ರೀಯ ತಜ್ಞರ ಸಮಿತಿ ನೀಡಿರುವ ಈ ಕ್ರಾಂತಿಕಾರಿ ವರದಿಯನ್ನು ಸರ್ಕಾರ ಸಂಪೂರ್ಣವಾಗಿ ಒಪ್ಪಿಕೊಂಡಿದ್ದು, ಸುಪ್ರೀಂ ಕೋರ್ಟ್ ಹಸಿರು ನಿಶಾನೆ ನೀಡಿದ ತಕ್ಷಣವೇ ದೇಶಾದ್ಯಂತ ಇದನ್ನು ಜಾರಿಗೆ ತರಲು ಸಿದ್ಧವಾಗಿದೆ ಎಂದು  ತಿಳಿಸಿದ್ದಾರೆ.

ಪಠ್ಯಕ್ರಮದಲ್ಲಿ ಏನಿರಲಿದೆ? ವಾರಕ್ಕೆ 2 ಕ್ಲಾಸ್ ಕಡ್ಡಾಯ

ರಾಷ್ಟ್ರೀಯ ಶಿಕ್ಷಣ ನೀತಿ-2020 (NEP-2020) ರ ಉದ್ದೇಶಗಳಿಗೆ ಅನುಗುಣವಾಗಿ ಎನ್‌ಸಿಇಆರ್‌ಟಿ (NCERT) ಈ ಹೊಸ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲಿದೆ. ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳ ವಯಸ್ಸಿಗೆ ತಕ್ಕಂತೆ ಈ ಕೆಳಗಿನ ಪ್ರಮುಖ ವಿಷಯಗಳನ್ನು ಬೋಧಿಸಲಾಗುತ್ತದೆ.

ಮತ್ತಷ್ಟು ಓದಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಉತ್ತೇಜಿಸುವ ಇನ್​ಸ್ಟಾ ಜಾಹೀರಾತುಗಳು; ಮೆಟಾಗೆ ನೋಟೀಸ್

ಗುಡ್ ಟಚ್ ಮತ್ತು ಬ್ಯಾಡ್ ಟಚ್: ಮಕ್ಕಳಿಗೆ ಯಾವುದು ಸುರಕ್ಷಿತ ಸ್ಪರ್ಶ ಮತ್ತು ಯಾವುದು ಅಸುರಕ್ಷಿತ ಸ್ಪರ್ಶ ಎಂಬುದನ್ನು ಸರಳವಾಗಿ ಕಲಿಸುವುದು.

ದೌರ್ಜನ್ಯದ ವಿರುದ್ಧ ಜಾಗೃತಿ: ಲೈಂಗಿಕ ದೌರ್ಜನ್ಯದ ಸಂದರ್ಭದಲ್ಲಿ ಮಕ್ಕಳು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಮತ್ತು ಯಾರಿಗೆ ದೂರು ನೀಡಬೇಕು ಎಂಬ ಅರಿವು ಮೂಡಿಸುವುದು.

ದೇಹದ ತಿಳಿವಳಿಕೆ ಮತ್ತು ನೈರ್ಮಲ್ಯ: ವೈಯಕ್ತಿಕ ನೈರ್ಮಲ್ಯ ಹಾಗೂ ಮಾನವ ದೇಹದ ಭಾಗಗಳ ಮೂಲಭೂತ ಮತ್ತು ವೈಜ್ಞಾನಿಕ ಜ್ಞಾನವನ್ನು ನೀಡುವುದು.

ವಿಶೇಷ ತರಬೇತಿ ಪಡೆದ ಶಿಕ್ಷಕರು: ಈ ವಿಷಯವನ್ನು ಬೋಧಿಸಲು ಪ್ರಾಥಮಿಕ ಹಂತದಿಂದಲೇ ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಲಾಗುತ್ತದೆ. ಪ್ರತಿ ವಾರಕ್ಕೆ ಕನಿಷ್ಠ ಎರಡು ಬಾರಿ 15 ರಿಂದ 20 ನಿಮಿಷಗಳ ಕಾಲ ಈ ಜಾಗೃತಿ ತರಗತಿಗಳನ್ನು ನಡೆಸುವುದು ಕಡ್ಡಾಯವಾಗಲಿದೆ.

ಈ ಸಮಿತಿಯನ್ನು ರಚಿಸಿದ್ದು ಏಕೆ?

ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಹದಿಹರೆಯದ ಯುವಕ-ಯುವತಿಯರು ಪರಸ್ಪರ ಒಪ್ಪಿಗೆಯಿಂದ ದೈಹಿಕ ಸಂಬಂಧ ಹೊಂದಿದ್ದರೂ ಸಹ, ಭಾರತೀಯ ಕಾನೂನಿನ ಪ್ರಕಾರ 18 ವರ್ಷ ತುಂಬದ ಕಾರಣ ಅವರ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಕಠಿಣ ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತಿವೆ. ಇದು ಯುವಜನರ ಇಡೀ ಭವಿಷ್ಯವನ್ನೇ ಹಾಳುಮಾಡುತ್ತಿದೆ.

ಅಪ್ರಾಪ್ತ ವಯಸ್ಸಿನ ಗರ್ಭಧಾರಣೆ ಹಾಗೂ ಇಂತಹ ಪ್ರಕರಣಗಳನ್ನು ತಡೆಯಲು ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನದ ಮೇರೆಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 26 ಸದಸ್ಯರ ರಾಷ್ಟ್ರೀಯ ತಜ್ಞರ ಸಮಿತಿಯನ್ನು ರಚಿಸಿತ್ತು. ಇದರಲ್ಲಿ ಪ್ರಸಿದ್ಧ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (TISS), ಮಕ್ಕಳ ಮನಶ್ಶಾಸ್ತ್ರಜ್ಞರು ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (NCPCR) ತಜ್ಞರು ಪಾಲ್ಗೊಂಡು ಈ ವರದಿಯನ್ನು ಸಿದ್ಧಪಡಿಸಿದ್ದಾರೆ.

ಪೋಷಕರಿಗೂ ಇರಲಿದೆ ವಿಶೇಷ ತರಗತಿ

ಪೋಷಕರು-ಶಿಕ್ಷಕರ ಸಭೆ: ಕೇವಲ ಮಕ್ಕಳಿಗೆ ಮಾತ್ರವಲ್ಲದೆ, ಹದಿಹರೆಯಕ್ಕೆ ಕಾಲಿಡುತ್ತಿರುವ ಮಕ್ಕಳಲ್ಲಿ ಆಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಪೋಷಕರು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ತಂದೆ-ತಾಯಂದಿರಿಗೂ ವಿಶೇಷ ಸಭೆಗಳ ಮೂಲಕ ಕೌನ್ಸಿಲಿಂಗ್ ನೀಡಲು ಸಮಿತಿ ಶಿಫಾರಸು ಮಾಡಿದೆ.

ಹಿರಿಯ ವಕೀಲರಾದ ಮಾಧವಿ ದಿವಾನ್ ಅವರು ಈ ವರದಿಯನ್ನು ಸ್ವಾಗತಿಸಿದ್ದಾರಾದರೂ, ಭಾರತೀಯ ಸಮಾಜ ಮತ್ತು ಸಂಸ್ಕೃತಿಗೆ ತಕ್ಕಂತೆ ‘ಸಮಗ್ರ ಲೈಂಗಿಕ ಶಿಕ್ಷಣ’ ಎಂಬ ಪದವನ್ನು ಹೆಚ್ಚು ಸ್ಪಷ್ಟವಾಗಿ ಮತ್ತು ಸೂಕ್ಷ್ಮವಾಗಿ ಪಠ್ಯದಲ್ಲಿ ವ್ಯಾಖ್ಯಾನಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂ ಕೋರ್ಟ್ ಇಡೀ ವರದಿಯನ್ನು ಪೂರ್ಣವಾಗಿ ಅಧ್ಯಯನ ಮಾಡಿದ ನಂತರ ತನ್ನ ಅಂತಿಮ ಆದೇಶವನ್ನು ಪ್ರಕಟಿಸಲಿದೆ. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಇದೊಂದು ಅತ್ಯಂತ ಮಹತ್ವದ ಮೈಲಿಗಲ್ಲಾಗುವ ಮುನ್ಸೂಚನೆ ಸಿಕ್ಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ತಂದೆಯ ಅಗಲುವಿಕೆಯ ನೋವಿನಲ್ಲಿದ್ದ ಯುವಕನಿಗೆ ಸಾಂತ್ವನ ನೀಡಿದ ಶ್ವಾನ – Kannada News | A dog showed affection to a young man grieving the loss of his father

ಸ್ವಾಮಿ ನಿಷ್ಠೆಗೆ ಮತ್ತೊಂದು ಹೆಸರೇ ಈ ಶ್ವಾನ (Dog). ಈ ಶ್ವಾನಗಳ ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿ ಯಾವುದು ಇಲ್ಲ. ಈ ಮೂಕಪ್ರಾಣಿಗಳು ಮನುಷ್ಯನ ಆಪ್ತ ಸ್ನೇಹಿತ ಅಂತಾನೇ ಹೇಳಬಹುದು. ಮನೆ ಮಾಲೀಕ ದುಃಖದಲ್ಲಿದ್ದರೆ ತನ್ನದೇ ರೀತಿ ಕಾಳಜಿ ವಹಿಸುತ್ತದೆ, ಸಮಾಧಾನ ಮಾಡುತ್ತದೆ. ಇದೀಗ ಇಂತಹದ್ದೇ ಕ್ಷಣದ ವಿಡಿಯೋ ವೈರಲ್ ಆಗಿದೆ. ಶ್ವಾನವೊಂದು ಯುವಕನಿಗೆ ಸಮಾಧಾನ ಮಾಡಿದೆ. ತಂದೆಯನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದ ಯುವಕನಿಗೆ ಧೈರ್ಯ ತುಂಬಿದೆ. ಈ ವಿಡಿಯೋ ಸದ್ಯ ನೆಟ್ಟಿಗರ ಗಮನ ಸೆಳೆದಿದೆ.

ಲಕ್ಕಿ (Lucky) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಯುವಕನೊಬ್ಬ ತನ್ನ ತಂದೆಯನ್ನು ಕಳೆದುಕೊಂಡ ನೋವಿನಲ್ಲಿ ಕಣ್ಣೀರು ಹಾಕುತ್ತಿದ್ದಾನೆ. ಮಲಗಿರುವ ಯುವಕನ ಪಕ್ಕದಲ್ಲಿ ಕುಳಿತುಕೊಂಡಿರುವ ಶ್ವಾನವು ಆತನ ಮುಖವನ್ನು ನೆಕ್ಕುತ್ತ ಪ್ರೀತಿ ತೋರಿಸಿದೆ. ಈ ದೃಶ್ಯವು ಯುವಕನಿಗೆ ಸಾಂತ್ವನ ನೀಡುವಂತಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಿನಗೆ ಬಿಸ್ಕೆಟ್ ಬೇಕಾ, ಇರು ತಂದು ಕೊಡ್ತೇನೆ: ಶ್ವಾನದ ಜತೆಗೆ ಪುಟಾಣಿಯ ಕ್ಯೂಟ್‌ ಸಂಭಾಷಣೆ

ಈ ಕ್ಲಿಪಿಂಗ್ ನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದು ಪ್ರಾಮಾಣಿಕ ಪ್ರೀತಿ ಎಂದರೆ, ಮತ್ತೊಬ್ಬರು, ಈ ದೃಶ್ಯ ನೋಡಲು ಎರಡು ಕಣ್ಣು ಸಾಲದು ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಷ್ಠೆಗೆ ಮತ್ತೊಂದು ಹೆಸರೇ ಈ ಶ್ವಾನ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:27 am, Tue, 14 July 26

Source link

‘ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು? – Kannada News | Jodi No 1 Season 3: Kote Prabhakar and Malathi Crowned as Winners

ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಜೋಡಿ ನಂ 1 ಸೀಸನ್ 3’ ರ ರೋಮಾಂಚಕ ಗ್ರ್ಯಾಂಡ್ ಫಿನಾಲೆ ಮುಕ್ತಾಯಗೊಂಡಿದ್ದು, ಕೋಟೆ ಪ್ರಭಾಕರ್ ಮತ್ತು ಮಾಲತಿ ದಂಪತಿ ವಿನ್ನರ್ಸ್ ಆಗಿ ಹೊರಹೊಮ್ಮಿದ್ದಾರೆ. ವೇದಿಕೆಯ ಮೇಲಿದ್ದ ಪ್ರಬಲ ಎಂಟು ಜೋಡಿಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಅಂತಿಮವಾಗಿ ಲವ್ಲಿ ಸ್ಟಾರ್ ಪ್ರೇಮ್ ಮತ್ತು ಮಾಳವಿಕಾ ಅವರು ವಿಜೇತರ ಹೆಸರನ್ನು ಘೋಷಿಸುತ್ತಿದ್ದಂತೆ ಇಡೀ ವೇದಿಕೆಯಲ್ಲಿ ಸಂಭ್ರಮ ಮನೆಮಾಡಿತು. ವಿಜೇತ ಜೋಡಿಗೆ ಜೀ ಕನ್ನಡ ವಾಹಿನಿಯ ವತಿಯಿಂದ ಆಕರ್ಷಕ ವಿನ್ನರ್ಸ್ ಟ್ರೋಫಿ ಹಾಗೂ 5 ಲಕ್ಷ ರೂಪಾಯಿಗಳ ನಗದು ಬಹುಮಾನದ ಚೆಕ್ ನೀಡಿ ಗೌರವಿಸಲಾಯಿತು.

ಈ ಮಹೋನ್ನತ ಗೆಲುವಿನ ನಂತರ ವೇದಿಕೆಯ ಮೇಲೆ ಮಾತನಾಡಿದ ನಟ ಕೋಟೆ ಪ್ರಭಾಕರ್ ಅತ್ಯಂತ ಭಾವುಕರಾದರು. ‘ಸಾಮಾನ್ಯವಾಗಿ ಎಲ್ಲರೂ ಬೆಳ್ಳಿತೆರೆಯಿಂದ ಕಿರುತೆರೆಗೆ ಬರುತ್ತಾರೆ, ಆದರೆ ನಾನು ಕಿರುತೆರೆಯ ಈ ವೇದಿಕೆಯ ಮೂಲಕ ನನ್ನ ಪತ್ನಿಗಾಗಿ ಹೊಸ ಇತಿಹಾಸ ಸೃಷ್ಟಿಸಿದ್ದೇನೆ. ನನ್ನ ಹೆಂಡತಿಗಾಗಿ ಈ ವೇದಿಕೆಗೆ ಬಂದಿದ್ದು ಸಾರ್ಥಕವಾಯಿತು’ ಎಂದು ಕಣ್ಣೀರು ಹಾಕಿದರು. ಅವರ ಪತ್ನಿ ಮಾಲತಿ ಮಾತನಾಡಿ, ‘ನಮ್ಮ ಮಗಳು ನೀಡಿದ ಪ್ರೋತ್ಸಾಹದಿಂದಲೇ ನಾವು ಈ ಸ್ಪರ್ಧೆಗೆ ಬರಲು ಸಾಧ್ಯವಾಯಿತು, ಇಲ್ಲದಿದ್ದರೆ ನಾನು ಬರುತ್ತಲೇ ಇರಲಿಲ್ಲ’ ಎಂದು ನೆನೆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗೃಹ ಸಚಿವರ ತವರಲ್ಲೇ ಮತ್ತೆ ಮತ್ತೆ ಪರಾರಿಯಾಗ್ತಿದ್ದಾರೆ ಕೈದಿಗಳು! ಕಲಬುರಗಿ ಜೈಲಿನಿಂದ ಮೂವರು ಸಜಾ ಕೈದಿಗಳು ಎಸ್ಕೇಪ್ – Kannada News | Kalaburagi Jail Escape: Three Convicted Prisoners Flee Central Prison by Scaling Compound Wall

ಕಲಬುರಗಿ ಜೈಲಿನಿಂದ ಪರಾರಿಯಾಗಿರುವ ಸಜಾ ಕೈದಿಗಳುImage Credit source: tv9

ಕಲಬುರಗಿ, ಜುಲೈ 14: ಕಲಬುರಗಿ (Kalaburagi) ಕೇಂದ್ರ ಕಾರಾಗೃಹದಿಂದ ಮೂವರು ಸಜಾ ಕೈದಿಗಳು ಪರಾರಿಯಾಗಿದ್ದು, ಈ ಘಟನೆ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಮಂಗಳವಾರ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಜೈಲಿನ ಸುಮಾರು 15 ರಿಂದ 20 ಅಡಿ ಎತ್ತರದ ಕಾಂಪೌಂಡ್ ಗೋಡೆ ಹಾರಿ ಕೈದಿಗಳು ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪರಾರಿಯಾದ ಕೈದಿಗಳನ್ನು ಮಸ್ತಾನ್, ಸಂತೋಷ್ ಹಾಗೂ ಸಾಗರ್ ಎಂದು ಗುರುತಿಸಲಾಗಿದೆ. ಇವರು ಬೀದರ್ ಜಿಲ್ಲೆಯ ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆಗೆ ಒಳಗಾಗಿ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಘಟನೆ ಸಂಬಂಧ ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಕೈದಿಗಳ ಕರೆದೊಯ್ಯಲು ಮೊದಲೇ ಸಿದ್ಧವಾಗಿತ್ತೇ ಕಾರು?

ಪ್ರಾಥಮಿಕ ಮಾಹಿತಿಯ ಪ್ರಕಾರ, ಕೈದಿಗಳು ಬ್ಯಾರಕ್‌ನ ಕಬ್ಬಿಣದ ಕಂಬಿಗಳನ್ನು ಕತ್ತರಿಸಿ, ಟವೆಲ್ ಹಾಗೂ ಹಾಸಿಗೆಯನ್ನು ಬಳಸಿಕೊಂಡು ಕಾಂಪೌಂಡ್ ಗೋಡೆ ದಾಟಿದ್ದಾರೆ ಎನ್ನಲಾಗಿದೆ. ಅಲ್ಲದೆ, ಜೈಲಿನ ಹೊರಭಾಗದಲ್ಲಿ ಕಾರೊಂದು ಮೊದಲೇ ಸಿದ್ಧವಾಗಿದ್ದು, ಅದರಲ್ಲಿ ಪರಾರಿಯಾಗಿರುವ ಶಂಕೆಯೂ ವ್ಯಕ್ತವಾಗಿದೆ.

ಜೈಲು ಭದ್ರತೆ ಬಗ್ಗೆ ಅನುಮಾನ

ಈ ಬೆಳವಣಿಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೈದಿಗಳು ಹಲವು ದಿನಗಳಿಂದಲೇ ಯೋಜನೆ ರೂಪಿಸಿ ಪರಾರಿಯಾಗಿದ್ದಾರೆಯೇ? ಜೈಲಿನೊಳಗೆ ಇಷ್ಟೊಂದು ಸಿದ್ಧತೆ ನಡೆದರೂ ಸಿಬ್ಬಂದಿಗೆ ಮಾಹಿತಿ ಇರಲಿಲ್ಲವೇ? ಅಥವಾ ಭದ್ರತಾ ಲೋಪ ಸಂಭವಿಸಿದ್ದೇ? ಎಂಬ ಅನುಮಾನಗಳು ಮೂಡಿವೆ.

ಕಲಬುರಗಿ ನಗರ ಪೊಲೀಸ್ ಆಯುಕ್ತ ಜೈಲಿಗೆ ಭೇಟಿ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ನೇತೃತ್ವದ ತಂಡ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜೈಲಿನ ವಿವಿಧ ಬ್ಯಾರಕ್‌ಗಳು, ಕಾಂಪೌಂಡ್ ಗೋಡೆ ಹಾಗೂ ಭದ್ರತಾ ವ್ಯವಸ್ಥೆಯನ್ನು ಅಧಿಕಾರಿಗಳು ಪರಿಶೀಲಿಸಿದ್ದು, ಪರಾರಿಯಾದ ಕೈದಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಆರಂಭಿಸಲಾಗಿದೆ.

ಪ್ರಿಯಾಂಕ್ ಖರ್ಗೆ ಇರಾನ್-ಅಮೆರಿಕ ಯುದ್ಧದಲ್ಲಿ ಬ್ಯುಸಿ: ವಿಜಯೇಂದ್ರ ವ್ಯಂಗ್ಯ

ಈ ಘಟನೆ ಸದ್ಯ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಕಲಬುರಗಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ‘ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸದ್ಯ ಇರಾನ್-ಅಮೆರಿಕ ಯುದ್ಧದಲ್ಲಿ ವ್ಯಸ್ತರಾಗಿದ್ದಾರೆ. ಅದನ್ನು ಮುಗಿಸಿ ಇಲ್ಲಿಗೆ ಬರುತ್ತಾರೆ’ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಗೃಹ ಸಚಿವರ ತವರಲ್ಲೇ ಮೈ ಮರೆತ್ರಾ ಪೊಲೀಸರು? ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!

ಗಮನಾರ್ಹ ಸಂಗತಿಯೆಂದರೆ, ಇತ್ತೀಚೆಗಷ್ಟೇ ಜುಲೈ 3ರಂದು ಅಫಜಲಪುರ ಪೊಲೀಸ್ ಠಾಣೆಯಿಂದ ಪೋಕ್ಸೋ ಪ್ರಕರಣದ ಆರೋಪಿ ಕೈಕೋಳವನ್ನು ಬಿಚ್ಚಿಕೊಂಡು ಪರಾರಿಯಾಗಿದ್ದ ಘಟನೆ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಇದೀಗ ಕೇಂದ್ರ ಕಾರಾಗೃಹದಿಂದಲೇ ಮೂವರು ಶಿಕ್ಷಿತ ಕೈದಿಗಳು ತಪ್ಪಿಸಿಕೊಂಡಿರುವುದು ಜಿಲ್ಲೆಯಲ್ಲಿ ಭದ್ರತಾ ವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಸದ್ಯ ಪರಾರಿಯಾದ ಕೈದಿಗಳ ಬಂಧನಕ್ಕೆ ಪೊಲೀಸರು ರಾಜ್ಯದ ವಿವಿಧ ಭಾಗಗಳಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯಕ್ ತ್ರಿಷಾ ಹೆಸರಲ್ಲಿ ಇದೆ ಹಳ್ಳಿ; ಫೋಟೋ ವೈರಲ್ – Kannada News | Trisha Krishnan: Ladakh Village Named Trisha Fans Thrilled

ನಟಿ ತ್ರಿಶಾ ಕೃಷ್ಣನ್ ಹೆಸರನ್ನು ಹಳ್ಳಿಗೆ ಇಡಲಾಗಿದೆ ಎಂದರೆ ನೀವು ನಂಬಲೇಬೇಕು. ಹೌದು, ನಟಿ ತ್ರಿಶಾ ಕಳೆದ ಎರಡು ದಶಕಗಳಿಂದ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಹಿರೋಯಿನ್ ಆಗಿ ಮಿಂಚುತ್ತಿದ್ದಾರೆ. ಪ್ರಸ್ತುತ 40 ವರ್ಷ ವಯಸ್ಸು ದಾಟಿದ್ದರೂ ಸಹ, ಅವರು ಇಂದಿನ ಯುವ ನಾಯಕಿಯರಿಗೆ ಕಠಿಣ ಪೈಪೋಟಿ ನೀಡುತ್ತಾ ಸಖತ್ ಬ್ಯುಸಿಯಾಗಿದ್ದಾರೆ. ಅವರು ಈಗ ಪ್ರತಿ ಸಿನಿಮಾಗೆ ಬರೋಬ್ಬರಿ 12 ಕೋಟಿ ರೂಪಾಯಿವರೆಗೆ ಸಂಭಾವನೆ ಪಡೆಯುವ ಮೂಲಕ ದಕ್ಷಿಣ ಭಾರತದ ಅತಿ ಹೆಚ್ಚು ಬೇಡಿಕೆಯ ನಟಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ನಟಿ ತ್ರಿಶಾ ಅವರ ಅಭಿಮಾನಿಗಳು ಅತ್ಯಂತ ರೋಚಕ ವಿಷಯವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪತ್ತೆ ಹಚ್ಚಿದ್ದಾರೆ. ಭಾರತದ ಉತ್ತರದ ತುದಿಯಲ್ಲಿರುವ ಲಡಾಖ್‌ನ ಪ್ರಸಿದ್ಧ ಪ್ರವಾಸಿ ತಾಣವಾದ ನುಬ್ರಾ ಕಣಿವೆಯಿಂದ ವಿಶ್ವದ ಅತಿ ಎತ್ತರದ ಮಿಲಿಟರಿ ಬೇಸ್ ಕ್ಯಾಂಪ್ ಎನಿಸಿಕೊಂಡಿರುವ ಸಿಯಾಚಿನ್ ಬೇಸ್ ಕ್ಯಾಂಪ್‌ಗೆ ಹೋಗುವ ದಾರಿಯಲ್ಲಿ ಒಂದು ಸುಂದರವಾದ ಗ್ರಾಮವಿದೆ. ಈ ಗ್ರಾಮಕ್ಕೆ ನಟಿಯ ಹೆಸರನ್ನೇ ಇಡಲಾಗಿದ್ದು, ಆ ಹಳ್ಳಿಯ ಹೆಸರು ‘ವಿಜಯಕ್ ತ್ರಿಶಾ’ (Vijayank Trisha) ಎಂದಾಗಿದೆ. ಇತ್ತೀಚೆಗೆ ಈ ಹಳ್ಳಿಯ ದಾರಿಯಾಗಿ ಪ್ರಯಾಣಿಸುತ್ತಿದ್ದ ಅಭಿಮಾನಿಯೊಬ್ಬರು, ಅಲ್ಲಿನ ಗ್ರಾಮದ ಹೆಸರಿನ ಬೋರ್ಡ್ ಮುಂದೆ ನಿಂತು ಒಂದು ವಿಶೇಷವಾದ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ.

ಇದನ್ನೂ ಓದಿ: ಎಸ್. ಜಾನಕಿ ನಿಧನ: ಶಿವಣ್ಣ, ಜಗ್ಗೇಶ್, ತ್ರಿಶಾ ಸೇರಿ ಹಲವು ಸೆಲೆಬ್ರಿಟಿಗಳ ಸಂತಾಪ

ಅಭಿಮಾನಿ ಚಿತ್ರೀಕರಿಸಿದ ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ತಕ್ಷಣವೇ ಅದು ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ. ದಕ್ಷಿಣ ಭಾರತದ ನಟಿಯೊಬ್ಬರ ಹೆಸರು ಲಡಾಖ್‌ನ ಗಡಿ ಭಾಗದಲ್ಲಿರುವ ಹಳ್ಳಿಯೊಂದಕ್ಕೆ ಇಟ್ಟಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ತ್ರಿಶಾ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸುತ್ತಿದ್ದಾರೆ. ಈ ವೀಡಿಯೊಗೆ ಪ್ರಪಂಚದಾದ್ಯಂತ ಇರುವ ಲಕ್ಷಾಂತರ ಸಿನಿಮಾ ಪ್ರೇಕ್ಷಕರು ಲೈಕ್ಸ್ ಒತ್ತುತ್ತಿದ್ದು, ಕಮೆಂಟ್‌ಗಳ ಮೂಲಕ ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ನಟಿ ತ್ರಿಶಾ ಅವರ ಜನಪ್ರಿಯತೆ ಕೇವಲ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ಅದು ದೇಶದ ಗಡಿ ಭಾಗದವರೆಗೂ ಹಬ್ಬಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಸದ್ಯ ನಟಿ ತ್ರಿಶಾ ತಮಿಳು ಮತ್ತು ತೆಲುಗಿನ ಸಾಲು ಸಾಲು ದೊಡ್ಡ ಬಜೆಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಶೂಟಿಂಗ್‌ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ಇಳಯದಳಪತಿ ವಿಜಯ್ ಹಾಗೂ ಅಜಿತ್ ಕುಮಾರ್ ಅವರಂತಹ ಸ್ಟಾರ್ ನಟರ ಚಿತ್ರಗಳಲ್ಲಿ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಇಷ್ಟೊಂದು ಬ್ಯುಸಿ ಶೆಡ್ಯೂಲ್ ನಡುವೆಯೂ ಅವರ ಹೆಸರಿನ ಹಳ್ಳಿ ಇರುವ ಸುದ್ದಿ ಹೊರಬಿದ್ದಿರುವುದು ಚಿತ್ರರಂಗದಲ್ಲಿ ಮತ್ತೊಮ್ಮೆ ಅವರ ಸ್ಟಾರ್ ಗಿರಿಯನ್ನು ಎತ್ತಿ ತೋರಿಸಿದೆ. ಲಡಾಖ್‌ನ ಆ ಗಡಿಯ ಹಳ್ಳಿಗೆ ನಿಜಕ್ಕೂ ನಟಿ ತ್ರಿಶಾ ಅವರ ಹೆಸರನ್ನೇ ಇಡಲಾಗಿದೆಯೇ ಅಥವಾ ಅದರ ಹಿಂದೆ ಬೇರೆ ಏನಾದರೂ ಮಿಲಿಟರಿ ಇತಿಹಾಸವಿದೆಯೇ ಎಂಬ ಕುರಿತು ಈಗ ಇಂಟರ್ನೆಟ್‌ನಲ್ಲಿ ದೊಡ್ಡ ಮಟ್ಟದ ಚರ್ಚೆಗಳು ಆರಂಭವಾಗಿವೆ. ಪ್ರಭಾಸ್ ಅವರ ಹೆಸರು ಕೂಡ ಹಳ್ಳಿಗೆ ಇಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:05 am, Tue, 14 July 26

Source link

ಸಮಂತಾರನ್ನು ಹಿಂದಿಕ್ಕಿ ‘ತುಂಬಾಡ್’ ಪ್ರಪಂಚ ಪ್ರವೇಶಿಸಿದ ಆಲಿಯಾ ಭಟ್ – Kannada News | Alia Bhatt officially joined Tumbbad 2 movie

‘ತುಂಬಾಡ್’ (Tumbbad) ಭಾರತೀಯ ಚಿತ್ರರಂಗದ ಕಲ್ಟ್ ಕ್ಲಾಸಿಕ್ ಸಿನಿಮಾ. ನಾನಾ ಅಡೆತಡೆಗಳು, ಸಮಸ್ಯೆಗಳ ಬಳಿಕ 2018 ರಲ್ಲಿ ಬಿಡುಗಡೆ ಆದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣಲಿಲ್ಲ, ಆದರೆ ಕಾಲ ಸರಿದಂತೆ ಸಿನಿಮಾ ತಮ್ಮ ನಿಜವಾದ ಪ್ರೇಕ್ಷಕರನ್ನು ಹುಡುಕಿಕೊಂಡಿತು. ಒಟಿಟಿಗಳಲ್ಲಿ, ಪೈರಸಿ ಸೈಟ್​​ಗಳ ಮೂಲಕ ಹೆಚ್ಚು-ಹೆಚ್ಚು ಜನರಿಗೆ ತಲುಪಿ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿತು. ಇತ್ತೀಚೆಗಷ್ಟೆ ಸಿನಿಮಾ ಮರು ಬಿಡುಗಡೆ ಆಗಿ, ದಾಖಲೆ ಮೊತ್ತದ ಗಳಿಕೆ ಮಾಡಿತು. ಇದೀಗ ಸಿನಿಮಾದ ಸೀಕ್ವೆಲ್ ನಿರ್ಮಾಣ ಆಗುತ್ತಿದ್ದು, ನಟಿ ಆಲಿಯಾ ಭಟ್ ಮುಖ್ಯ ಪಾತ್ರಕ್ಕೆ ಆಯ್ಕೆ ಆಗಿರುವುದು ವಿಶೇಷ.

‘ತುಂಬಾಡ್ 2’ ನಿರ್ಮಾಣ ಆಗಲಿರುವ ಸುದ್ದಿ ಹಳತೇ ಆಗಿದೆ. ಆದರೆ ಸಿನಿಮಾನಲ್ಲಿ ನಟಿಸಲಿರುವ ನಟಿ ಯಾರೆಂಬುದರ ಬಗ್ಗೆ ಸಾಕಷ್ಟು ಗೊಂದಲುಗಳು ಸೃಷ್ಟಿ ಆಗಿದ್ದವು. ಸಮಂತಾ ಋತ್ ಪ್ರಭು ಹೆಸರು ಮುಖ್ಯವಾಗಿ ಕೇಳಿ ಬಂದಿತ್ತು. ಸಮಂತಾರ ಪತಿಯೇ ‘ತುಂಬಾಡ್ 2’ ನಿರ್ಮಾಣ ಮಾಡಲಿದ್ದಾರೆ ಎಂಬ ಸುದ್ದಿಯೂ ಗಟ್ಟಿಯಾಗಿ ಹರಿದಾಡಿತ್ತು. ಈ ನಡುವೆ ನಟಿ ಜಾನ್ಹವಿ ಕಪೂರ್ ಹೆಸರು ಸಹ ಕೇಳಿ ಬಂದಿತ್ತು. ಆದರೆ ಇದೀಗ ಆಲಿಯಾ ಭಟ್ ಅವರು ಅಧಿಕೃತವಾಗಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಜನಪ್ರಿಯ ಹಾರರ್ ಚಿತ್ರ ‘ತುಂಬಾಡ್’ನ ಬಹುನಿರೀಕ್ಷಿತ ಮುಂದುವರಿದ ಭಾಗದಲ್ಲಿ ಆಲಿಯಾ ನಟಿಸುತ್ತಿರುವುದನ್ನು ಚಿತ್ರದ ನಾಯಕ ನಟ ಮತ್ತು ನಿರ್ಮಾಪಕ ಸೋಹಮ್ ಶಾ ಖಚಿತಪಡಿಸಿದ್ದಾರೆ. ಸೋಹಮ್ ಶಾ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಆಲಿಯಾ ಅವರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅವರನ್ನು ಈ ಚಿತ್ರಕ್ಕೆ ಸ್ವಾಗತಿಸಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸೋಹಮ್ ಶಾ, ‘ಒಂದು ಹೊಸ ಅಧ್ಯಾಯ ತೆರೆದುಕೊಳ್ಳುತ್ತಿದೆ. ‘ತುಂಬಾಡ್ 2’ಗೆ ಸ್ವಾಗತ ಆಲಿಯಾ ಭಟ್ ‘ಪ್ರಳಯ ಬರುತ್ತದೆ’. ಚಿತ್ರಮಂದಿರಗಳಲ್ಲಿ ಭೇಟಿಯಾಗೋಣ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:‘ಆಲ್ಫಾ’ ಸಿನಿಮಾ ಶೂಟಿಂಗ್ ವಿಡಿಯೋ ಹಂಚಿಕೊಂಡ ಆಲಿಯಾ ಭಟ್

‘ತುಂಬಾಡ್ 2’ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಕ್ಕೆ ಕಾರಣವನ್ನು ವಿವರಿಸಿದ ಆಲಿಯಾ ಭಟ್, ತಾವು ಮೊದಲ ಭಾಗದ ಸಿನಿಮಾವನ್ನು ನೋಡಿ ಬಹಳ ಪ್ರಭಾವಿತರಾಗಿದ್ದಾಗಿ ತಿಳಿಸಿದ್ದಾರೆ. ‘ನಾನು ‘ತುಂಬಾಡ್’ ನೋಡಿದಾಗಿನಿಂದಲೂ ಅದು ನನ್ನ ಮನಸ್ಸಿನಲ್ಲೇ ಉಳಿದುಕೊಂಡಿದೆ. ಇಷ್ಟು ಅದ್ಭುತ ಪ್ರಪಂಚವನ್ನು ಸೃಷ್ಟಿಸುವ ಚಲನಚಿತ್ರಗಳು ತುಂಬಾ ಕಡಿಮೆ, ಸಿನಿಮಾ ಬಿಡುಗಡೆಯಾದ ವರ್ಷಗಳ ಬಳಿಕವೂ ಜನರ ಸ್ಮೃತಿಯಲ್ಲಿ ಉಳಿದುಕೊಂಡಿದೆ ಆ ಸಿನಿಮಾ. ಅದೇ ಕಾರಣಕ್ಕೆ ಈ ಅವಕಾಶ ನನಗೆ ತುಂಬಾ ರೋಚಕವಾಗಿ ಕಂಡಿತು, ಹಾಗಾಗಿ ಒಪ್ಪಿಕೊಂಡೆ’ ಎಂದು ಅವರು ಹೇಳಿದ್ದಾರೆ.

ಆದೇಶ್ ಪ್ರಸಾದ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಆಲಿಯಾ ಭಟ್ ಜೊತೆಗೆ ಸೋಹಮ್ ಶಾ ಮತ್ತು ನವಾಜುದ್ದೀನ್ ಸಿದ್ದಿಕಿ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೋಹಮ್ ಶಾ ಫಿಲ್ಮ್ಸ್ ಮತ್ತು ಪೆನ್ ಸ್ಟುಡಿಯೋಸ್ ನಿರ್ಮಿಸುತ್ತಿರುವ ಈ ಚಿತ್ರವು ಡಿಸೆಂಬರ್ 3, 2027 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಂದಹಾಗೆ, ‘ತುಂಬಾಡ್’ ನಿರ್ದೇಶಿಸಿದ್ದ ರಾಹಿ ಅನಿಲ್ ಈ ಸಿನಿಮಾದಿಂದ ಹೊರಗೆ ಉಳಿದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Shani Retrograde 2026: ಶನಿ ವಕ್ರ ಚಲನೆ ಆರಂಭ; ಜುಲೈ 27 ರಿಂದ ಈ 2 ರಾಶಿಗೆ ಶುರುವಾಗಲಿದೆ ಕಷ್ಟದ ಕಾಲ! – Kannada News | Shani Retrograde 2026: Major Impact on Zodiac Signs for 138 Days

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನಿಗೆ ವಿಶೇಷ ಸ್ಥಾನವಿದೆ. ಶನಿಯನ್ನು ‘ಕರ್ಮಫಲ ದಾತ’ ಮತ್ತು ‘ನ್ಯಾಯಾಧೀಶ’ ಎಂದು ಕರೆಯಲಾಗುತ್ತದೆ. ಅಂದರೆ, ವ್ಯಕ್ತಿಯು ಮಾಡುವ ಒಳ್ಳೆಯ ಮತ್ತು ಕೆಟ್ಟ ಕರ್ಮಗಳಿಗೆ ಅನುಗುಣವಾಗಿ ಶನಿಯು ಫಲವನ್ನು ನೀಡುತ್ತಾನೆ. ಇದೀಗ 2026 ರ ಜುಲೈ ತಿಂಗಳಿನಲ್ಲಿ ಶನಿ ಗ್ರಹದ ಚಲನೆಯಲ್ಲಿ ದೊಡ್ಡ ಬದಲಾವಣೆಯಾಗುತ್ತಿದ್ದು, ಇದು ಕೆಲವು ರಾಶಿಗಳ ಮೇಲೆ ತೀವ್ರ ಪ್ರಭಾವ ಬೀರಲಿದೆ.

138 ದಿನಗಳ ಕಾಲ ಶನಿಯ ವಕ್ರ ನಡೆ:

ವಿದ್ವಾಂಸರ ಪ್ರಕಾರ, ಜುಲೈ 27 ರಿಂದ ಡಿಸೆಂಬರ್ ರವರೆಗೆ ಶನಿಯು ವಕ್ರ ಮಾರ್ಗದಲ್ಲಿ (ಹಿಮ್ಮುಖ ಚಲನೆ) ಪ್ರಯಾಣಿಸಲಿದ್ದಾನೆ. ಒಟ್ಟು 138 ದಿನಗಳ ಕಾಲ ಮುಂದುವರಿಯುವ ಶನಿಯ ಈ ವಕ್ರ ಚಲನೆಯು ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರಿದರೂ, ವಿಶೇಷವಾಗಿ ಎರಡು ರಾಶಿಯವರು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಸಾಡೇ ಸಾತಿ (ಶನಿ ದೆಸೆ) ಪ್ರಭಾವದಲ್ಲಿರುವವರು ಹೆಚ್ಚು ಜಾಗರೂಕರಾಗಿರಬೇಕು.

ಈ ಅವಧಿಯಲ್ಲಿ ಯಶಸ್ಸು ಸಿಗಬೇಕಾದರೆ ಜನರು ತಮ್ಮ ಸೋಮಾರಿತನವನ್ನು ಬಿಟ್ಟು ಶಿಸ್ತುಬದ್ಧವಾಗಿ ಕೆಲಸ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ದೊಡ್ಡ ಮಟ್ಟದ ತೊಂದರೆಗಳನ್ನು ಎದುರಿಸಬೇಕಾಗಬಹುದು ಎಂದು ಜ್ಯೋತಿಷಿಗಳು ಎಚ್ಚರಿಸಿದ್ದಾರೆ. ಆ ಎರಡು ರಾಶಿಗಳು ಯಾವುವು ಮತ್ತು ಅವುಗಳ ಮೇಲಾಗುವ ಪ್ರಭಾವಗಳೇನು ಎಂಬ ವಿವರ ಇಲ್ಲಿದೆ:

ಕುಂಭ ರಾಶಿ:

ಶನಿಯ ಹಿಮ್ಮುಖ ಚಲನೆಯು ಕುಂಭ ರಾಶಿಯವರ ತಾಳ್ಮೆಯನ್ನು ಪರೀಕ್ಷಿಸಲಿದೆ. ಈ 138 ದಿನಗಳ ಕಾಲ ನೀವು ಪ್ರತಿಯೊಂದು ಹೆಜ್ಜೆಯನ್ನೂ ಯೋಚಿಸಿ ಇಡಬೇಕಾಗುತ್ತದೆ. ನೀವು ಕೆಲಸ ಮಾಡುವ ಸ್ಥಳದಲ್ಲಿ ಸಹೋದ್ಯೋಗಿಗಳು ಅಥವಾ ಮೇಲಧಿಕಾರಿಗಳೊಂದಿಗೆ ಜಾಗರೂಕರಾಗಿ ನಡೆದುಕೊಳ್ಳಿ. ಅನಗತ್ಯ ವಾದವಿವಾದಗಳಿಂದ ದೂರವಿರುವುದು ಬಹಳ ಮುಖ್ಯ. ಕೋಪದ ಭರದಲ್ಲಿ ಆಡುವ ಮಾತುಗಳು ನಿಮಗೆ ದೊಡ್ಡ ಸಂಕಷ್ಟ ತರಬಹುದು. ನಿಮ್ಮ ಅನಗತ್ಯ ಖರ್ಚುಗಳಿಗೆ ತಡೆ ಹಾಕುವುದು ಒಳ್ಳೆಯದು. ಆದರೆ, ಈ ಅವಧಿಯಲ್ಲಿ ಮಾಡುವ ಸರಿಯಾದ ಹೂಡಿಕೆಗಳು ನಿಮಗೆ ಭವಿಷ್ಯದಲ್ಲಿ ಲಾಭ ತಂದುಕೊಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಮೀನ ರಾಶಿ:

ಮೀನ ರಾಶಿಯವರಿಗೆ ಈ ಸಮಯವು ಅತ್ಯಂತ ಸವಾಲಿನಿಂದ ಕೂಡಿರಲಿದ್ದು, ಹೆಚ್ಚಿನ ಜಾಗರೂಕತೆಯ ಅಗತ್ಯವಿದೆ. ಉದ್ಯೋಗಸ್ಥರಿಗೆ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಯಾವುದೇ ಹೊಸ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎರಡು ಬಾರಿ ಯೋಚಿಸಿ. ಈ ಅವಧಿಯಲ್ಲಿ ಆದಾಯವು ತೀವ್ರವಾಗಿ ಕಡಿಮೆಯಾಗಿ, ವೆಚ್ಚಗಳು ದುಪ್ಪಟ್ಟಾಗಲಿವೆ. ಇದರಿಂದಾಗಿ ಆರ್ಥಿಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಹಣದ ವ್ಯವಹಾರದಲ್ಲಿ ಎಚ್ಚರವಿರಲಿ. ಮಾನಸಿಕ ಒತ್ತಡದ ಜೊತೆಗೆ ದೈಹಿಕ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಆರೋಗ್ಯದ ಕಡೆಗೆ ನಿರ್ಲಕ್ಷ್ಯ ಬೇಡ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:36 am, Tue, 14 July 26

Source link

ಅತ್ತೆ ಮಾತು ಕೇಳಿ ಅಮ್ಮನಿಗೆ ವಿಷವುಣಿಸಿದ ಮಗ, ಏನಿದು ಘಟನೆ? – Kannada News | Agra Son Poisons Mother for Wife UP Domestic Violence and Legal Action

ಆಗ್ರಾ, ಜುಲೈ 14: ಸಂಸಾರದ ಒಳಗಿನ ಜಗಳಗಳಿಂದಾಗಿ, ಮನೆ ಬಿಟ್ಟು ಹೋಗಿದ್ದ ಹೆಂಡತಿ(Wife) ವಾಪಸ್ ಬರಬೇಕಾದರೆ “ಹೆತ್ತ ತಾಯಿಯನ್ನೇ ಕೊಲ್ಲಬೇಕು” ಎಂಬ ಅತ್ತೆಯ ಮಾತನ್ನು ಕೇಳಿ ಮಗನೊಬ್ಬ ತನ್ನ ತಾಯಿಗೆ ವಿಷವುಣಿಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ತಾಯಿಗೆ ವಿಷವಿಕ್ಕಿ ಕೊಲ್ಲಲು ಯತ್ನಿಸಿರುವ ಅತ್ಯಂತ ಅಮಾನವೀಯ ಘಟನೆ ಆಗ್ರಾದ ಬಾರ್ಪುರ ಗ್ರಾಮದಲ್ಲಿ ನಡೆದಿದೆ. ಮಹಿಳೆ ಈಗ ರಾಮಮೂರ್ತಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಘಟನೆಯ ಹಿನ್ನೆಲೆ
ಆರೋಪಿ ರವೀಂದ್ರ ತನ್ನ ಸಹೋದರ ಮುಖೇಶ್ ಜೊತೆ ಭೂಮಿ ವಿಚಾರವಾಗಿ ಭಿನ್ನಾಭಿಪ್ರಾಯ ಹೊಂದಿದ್ದರು. ಈ ಕೌಟುಂಬಿಕ ಕಲಹದಿಂದ ಬೇಸತ್ತು ಆತನ ಪತ್ನಿ ಗಂಡನ ಮನೆ ತೊರೆದು ತವರು ಮನೆಗೆ ಹೋಗಿದ್ದಳು. ಜುಲೈ 9 ರಂದು ರವೀಂದ್ರ ತನ್ನ ಹೆಂಡತಿಯನ್ನು ವಾಪಸ್ ಕರೆಯಲು ಅತ್ತೆಯ ಮನೆಗೆ ಹೋದಾಗ, ಅತ್ತೆ ಫೂಲ್ವತಿ ನಿನ್ನ ಹೆಂಡತಿ ನಿನಗೆ ಬೇಕಾದರೆ, ಮೊದಲು ನಿನ್ನ ತಾಯಿಯನ್ನು ಕೊಲೆ ಮಾಡು ಎಂದು ಷರತ್ತು ವಿಧಿಸಿದ್ದಳು.

ಹೆಂಡತಿಯ ವ್ಯಾಮೋಹಕ್ಕೆ ಕಟ್ಟುಬಿದ್ದು ರವೀಂದ್ರ, ಮನೆಗೆ ಬಂದು ತಾಯಿ ತಿನ್ನುವ ಊಟಕ್ಕೆ ವಿಷ ಬೆರೆಸಿದ್ದಾನೆ. ಸದ್ಯ ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದು, ಪ್ರಚೋದನೆ ನೀಡಿದ ಅತ್ತೆ ಫೂಲ್ವತಿ ಪರಾರಿಯಾಗಿದ್ದಾಳೆ.

ಮತ್ತೊಂದು ಘೋರ ಕೃತ್ಯ: ಹೆಂಡತಿಯನ್ನು ಕತ್ತು ಹಿಸುಕಿ ಕೊಂದ ಗಂಡ
ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, 26 ವರ್ಷದ ಸತ್ಯವತಿ ಯಾದವ್ ಎಂಬ ಮಹಿಳೆಯನ್ನು ಆಕೆಯ ಪತಿ ಮತ್ತು ಸಂಬಂಧಿಕರು ಸೇರಿ ಕತ್ತು ಹಿಸುಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಮತ್ತಷ್ಟು ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲೇ ದುರಂತ: ಮಸ್ಸೂರಿ ಹೋಂಸ್ಟೇಯಲ್ಲಿ ಮಹಿಳೆ ನಿಗೂಢ ಸಾವು, ತಿಂಗಳ ಬಳಿಕ ಟೆಕ್ಕಿ ಪತಿ ಅರೆಸ್ಟ್

ಜೂನ್ 1-2ರ ರಾತ್ರಿ ಕೊಲೆ ಮಾಡಿದ ನಂತರ, ಸಿಕ್ಕಿಬೀಳಬಾರದೆಂದು ಪತಿಯೇ ಪೊಲೀಸ್ ಠಾಣೆಗೆ ಹೋಗಿ “ನನ್ನ ಹೆಂಡತಿ ಕಾಣೆಯಾಗಿದ್ದಾಳೆ” ಎಂದು ದೂರು ನೀಡಿ ನಾಟಕವಾಡಿದ್ದ. ಆರೋಪಿಗಳು ಮಹಿಳೆಯ ಶವವನ್ನು ಹಲವು ದಿನಗಳ ಕಾಲ ನೀರಿನ ತೊಟ್ಟಿಯಲ್ಲಿ ಅಡಗಿಸಿಟ್ಟಿದ್ದ. ನಂತರ ಯಾರಿಗೂ ತಿಳಿಯದಂತೆ ಸ್ಮಶಾನದಲ್ಲಿ ಸುಟ್ಟು, ಅರ್ಧ ಬೆಂದ ಅಸ್ಥಿಪಂಜರ ಹಾಗೂ ಬೂದಿಯನ್ನು ಸೋಟ್ ನದಿಗೆ ಎಸೆದಿದ್ದರು. ಸದ್ಯ ತನಿಖೆ ನಡೆಸಿದ ಪೊಲೀಸರು ಪತಿ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಕೌಟುಂಬಿಕ ಹಿಂಸಾಚಾರಕ್ಕೆ ಕಾನೂನು ಏನ ಹೇಳುತ್ತದೆ?
ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಲಹಗಳು ಕೇವಲ ಜಗಳಕ್ಕೆ ಸೀಮಿತವಾಗದೆ ಇಂತಹ ಭೀಕರ ಕೊಲೆಗಳಲ್ಲಿ ಅಂತ್ಯವಾಗುತ್ತಿರುವುದು ಸಮಾಜದ ಕ್ರೂರ ಮುಖವನ್ನು ಪರಿಚಯಿಸುತ್ತಿದೆ.

ಕಠಿಣ ಸೆಕ್ಷನ್‌ಗಳ ಅಡಿ ಕೇಸ್: ಹೆತ್ತ ತಾಯಿಗೆ ವಿಷ ನೀಡಿದ ರವೇಂದ್ರ ಹಾಗೂ ಪ್ರಚೋದನೆ ನೀಡಿದ ಅತ್ತೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿ ಕೊಲೆ ಯತ್ನ ಹಾಗೂ ಅಪರಾಧ ಸಂಚಿನ ಗಂಭೀರ ಪ್ರಕರಣ ದಾಖಲಾಗಿದೆ.

ಬದೌನ್ ಪ್ರಕರಣದಲ್ಲಿ ಶವವನ್ನು ಬಚ್ಚಿಟ್ಟು, ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಪತಿಗೆ ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆಯಾಗುವ ಸಾಧ್ಯತೆಯಿದೆ. ಕೌಟುಂಬಿಕ ಸಮಸ್ಯೆಗಳಿದ್ದಾಗ ಕೋಪ ಅಥವಾ ಪ್ರಚೋದನೆಗೆ ಒಳಗಾಗುವ ಬದಲು ಕಾನೂನಾತ್ಮಕ ಕೌನ್ಸಿಲಿಂಗ್ ಪಡೆದುಕೊಳ್ಳುವುದು ಇಂತಹ ಹತ್ತಾರು ಜೀವಗಳು ಬಲಿಯಾಗುವುದನ್ನು ತಪ್ಪಿಸುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version