ಕುತ್ತಿಗೆಯ ಭಾಗದಲ್ಲಿ ಕಪ್ಪಾಗುವುದಕ್ಕೆ ಕಾರಣವೇನು? ಇದು ಯಾವ ಕಾಯಿಲೆಯ ಮುನ್ಸೂಚನೆ?

ಕುತ್ತಿಗೆಯ ಭಾಗದಲ್ಲಿ ಕಪ್ಪಾಗುವುದಕ್ಕೆ ಕಾರಣವೇನು? ಇದು ಯಾವ ಕಾಯಿಲೆಯ ಮುನ್ಸೂಚನೆ?

ನೀವು ಗಮನಿಸಿರಬಹುದು ಬಹಳಷ್ಟು ಜನರಿಗೆ ಗಲ್ಲ ಮತ್ತು ಕುತ್ತಿಗೆ ಭಾಗದಲ್ಲಿ ಕಪ್ಪಾಗುತ್ತದೆ (Dark Neck). ಆರಂಭದಲ್ಲಿ ಇದು ಅಷ್ಟು ಗಾಢವಾಗಿ ಕಂಡುಬರದಿರಬಹುದು ಆದರೆ ಮುಂದೆ ಅದು ಕಪ್ಪಾಗಿರುವುದು ಎಲ್ಲರಿಗೂ ಕಂಡುಬರಬಹುದು. ಇದನ್ನು ಸಾಮಾನ್ಯವಾಗಿ ಸೂರ್ಯನ ಬೆಳಕಿನಿಂದ ಆಗುವಂತದ್ದು ಅಥವಾ ಕೊಳೆ ಇದ್ದ ಪರಿಣಾಮ ಈ ರೀತಿ ಆಗುತ್ತಿರಬಹುದು ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಈ ರೀತಿ ಸಮಸ್ಯೆಯಾದಾಗ ಅದನ್ನು ಅಸಡ್ಡೆ ಮಾಡಬಾರದು. ಏಕೆಂದರೆ ಇದು ಕೆಲವೊಮ್ಮೆ ಚರ್ಮದ ಸಮಸ್ಯೆ ಅಥವಾ ದೇಹದ ಒಳಗಿನ ಕಾಯಿಲೆಯ ಸೂಚನೆಯಾಗಿರಬಹುದು. ಈ ಸಮಸ್ಯೆಯೊಂದಿಗೆ ಕೆಲವು ಸಾಮಾನ್ಯ ಲಕ್ಷಣಗಳು ಕೂಡ ಕಾಣಿಸಬಹುದು. ಉದಾಹರಣೆಗೆ, ಚರ್ಮ ದಪ್ಪವಾಗುವುದು, ಒರಟಾಗುವುದು, ಸ್ವಲ್ಪ ತುರಿಕೆ ಉಂಟಾಗುವುದು. ಕೆಲವು ಸಂದರ್ಭಗಳಲ್ಲಿ ಚರ್ಮದಲ್ಲಿ ಉರಿ, ಹೆಚ್ಚು ಬೆವರುವುದು ಕೂಡ ಕಂಡುಬರುತ್ತದೆ. ಅಷ್ಟು ಮಾತ್ರವಲ್ಲ, ಚರ್ಮವನ್ನು ಸ್ವಚ್ಛಗೊಳಿಸಿದ ನಂತರವೂ ಈ ರೀತಿ ಕಪ್ಪು ಬಣ್ಣ ಕಂಡುಬಂದಾಗ ಅದನ್ನು ನಿರ್ಲಕ್ಷ್ಯ ಮಾಡಬೇಡಿ, ಅದರ ಬದಲು ಈ ರೀತಿಯಾಗುವುದಕ್ಕೆ ಕಾರಣವೇನು, ಹೇಗೆ ತಡೆಗಟ್ಟಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಿ. ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಕುತ್ತಿಗೆ ಅಥವಾ ಗಲ್ಲದ ಕೆಳಭಾಗದಲ್ಲಿ ಕಪ್ಪಾಗುವುದಕ್ಕೆ ಕಾರಣವೇನು?

ತಜ್ಞರ ಪ್ರಕಾರ, ಕುತ್ತಿಗೆ ಮತ್ತು ಗಲ್ಲದ ಕೆಳ ಭಾಗದಲ್ಲಿ ಕಪ್ಪಾಗುವುದು ಯಾವಾಗಲೂ ಚರ್ಮ ಸಂಬಂಧಿ ಕಾಯಿಲೆಯ ಲಕ್ಷಣವಲ್ಲ. ಆದರೆ ಕೆಲವೊಮ್ಮೆ ಇದು ದೇಹದ ಒಳಗಿನ ಬದಲಾವಣೆಗಳ ಸೂಚನೆಯಾಗಿರಬಹುದು. ಇದು ಪಿಗ್ಮೆಂಟೇಶನ್ ಅಥವಾ ಇತರ ಚರ್ಮದ ಸಮಸ್ಯೆಗಳ ಕಾರಣವಾಗಿರಬಹುದು, ಜೊತೆಗೆ ಹಾರ್ಮೋನ್ ಬದಲಾವಣೆಗಳು, ಮೆಟಾಬಾಲಿಸಂ ಸಮಸ್ಯೆ ಅಥವಾ ಜೀವನಶೈಲಿಯೂ ಇದಕ್ಕೆ ಕಾರಣವಾಗಬಹುದು. ಈ ರೀತಿ ಕಪ್ಪಾಗುವಿಕೆ ಒಮ್ಮೆಲೇ ಹೆಚ್ಚಾದರೆ ಅಥವಾ ಜೊತೆಗೆ ತೂಕ ಹೆಚ್ಚಳ, ದೌರ್ಬಲ್ಯ ಮುಂತಾದ ಲಕ್ಷಣಗಳು ಕಂಡುಬಂದರೆ, ದೇಹದ ಒಳಗಿನ ಸಮತೋಲನದಲ್ಲಿ ವ್ಯತ್ಯಾಸ ಉಂಟಾಗಿದೆ ಎಂಬುದರ ಸೂಚನೆಯಾಗಬಹುದು. ಆದ್ದರಿಂದ, ಇದನ್ನು ಕೇವಲ ಹೊರಗಿನ ಸಮಸ್ಯೆ ಎಂದುಕೊಂಡು ಕ್ರೀಮ್ ಅಥವಾ ಮನೆಮದ್ದುಗಳಿಂದ ಮಾತ್ರ ಚಿಕಿತ್ಸೆ ಮಾಡಲು ಪ್ರಯತ್ನಿಸುವುದು ಸರಿಯಲ್ಲ. ಮೂಲ ಕಾರಣವನ್ನು ಗುರುತಿಸಿ ಸರಿಯಾದ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ.

ಇವು ಕೂಡ ಕಾರಣವಾಗಿರಬಹುದು!

  • ದೀರ್ಘಕಾಲ ಸೂರ್ಯನ ಬೆಳಕಿನಲ್ಲಿ ಇರುವಿಕೆ
  • ಚರ್ಮವನ್ನು ಸರಿಯಾಗಿ ಆರೈಕೆ ಮಾಡದಿರುವುದು
  • ಹೆಚ್ಚು ರಾಸಾಯನಿಕಗಳಿರುವ ಉತ್ಪನ್ನಗಳ ಬಳಕೆ
  • ಚರ್ಮದ ಮೇಲೆ ಕೊಳಕಿರುವುದು
  • ಅಸ್ವಸ್ಥ ಜೀವನಶೈಲಿ
  • ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು
  • ನಿದ್ರೆಯ ಕೊರತೆ ಮತ್ತು ಅಧಿಕ ಒತ್ತಡ

ಕೆಲವರಲ್ಲಿ ಇದು ಅನುವಂಶಿಕವಾಗಿಯೂ (ಜೆನೆಟಿಕ್) ಇರಬಹುದು. ಜೊತೆಗೆ, ದೇಹದಲ್ಲಿ ಪೋಷಕಾಂಶಗಳ ಕೊರತೆ ಅಥವಾ ಹಾರ್ಮೋನ್ ಅಸಮತೋಲನ ಕೂಡ ಈ ಸಮಸ್ಯೆಯನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಸಣ್ಣ ವಯಸ್ಸಿನ ವರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಈ ಅಭ್ಯಾಸಗಳು ಕಾರಣ!

ಹೇಗೆ ತಡೆಗಟ್ಟಬೇಕು?

  • ದಿನನಿತ್ಯ ಚರ್ಮವನ್ನು ಸ್ವಚ್ಛಗೊಳಿಸಿಕೊಳ್ಳಿ
  • ಹೊರಗೆ ಹೋಗುವಾಗ ಸನ್‌ಸ್ಕ್ರೀನ್ ಬಳಸಿ
  • ಸೂರ್ಯನ ತೀವ್ರ ಬೆಳಕಿನಿಂದ ರಕ್ಷಣೆ ಪಡೆಯಿರಿ
  • ಆರೋಗ್ಯಕರ ಆಹಾರ ಸೇವಿಸಿ (ಹಣ್ಣು, ತರಕಾರಿಗಳು, ಸಾಕಷ್ಟು ನೀರು)
  • ಹೆಚ್ಚು ರಾಸಾಯನಿಕಗಳಿರುವ ಉತ್ಪನ್ನಗಳನ್ನು ಬಳಕೆ ಮಾಡಬೇಡಿ
  • ನಿಮ್ಮ ಚರ್ಮಕ್ಕೆ ಹೊಂದುವ ಉತ್ಪನ್ನಗಳನ್ನು ಮಾತ್ರ ಬಳಸಿ
  • ಸರಿಯಾಗಿ ನಿದ್ರೆ ಮಾಡಿ
  • ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ

ಈ ಸಮಸ್ಯೆ ಮುಂದುವರಿದರೆ ಅಥವಾ ಹೆಚ್ಚಾದರೆ, ಸಮಯಕ್ಕೆ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಗ್ಯಾಂಗ್ಸ್ ಆಫ್ ಯುಕೆ’ ಸಿನಿಮಾದಲ್ಲಿ ರಕ್ತದ ಹೊಳೆ; ಟ್ರೇಲರ್ ತೋರಿಸಿ ಸ್ಪಷ್ಟನೆ ನೀಡಿದ ಚಿತ್ರತಂಡ

‘ಡೆಡ್ಲಿ ಸೋಮ’, ‘ಮಾದೇಶ’ ರೀತಿಯ ಮಾಸ್ ಸಿನಿಮಾಗಳನ್ನು ಮಾಡಿದ ನಿರ್ದೇಶಕ ರವಿ ಶ್ರೀವತ್ಸ ಅವರು ಈ ಬಾರಿ ಇನ್ನಷ್ಟು ಗಂಭೀರವಾದ ಕತೆಯನ್ನು ಪ್ರೇಕ್ಷಕರಿಗೆ ತೋರಿಸಲು ಬರುತ್ತಿದ್ದಾರೆ. ಅವರ ನಿರ್ದೇಶನದಲ್ಲಿ ‘ಗ್ಯಾಂಗ್ಸ್ ಆಫ್ ಯುಕೆ’ (Gangs Of UK) ಸಿನಿಮಾ ಮೂಡಿಬಂದಿದೆ. ಈ ಸಿನಿಮಾ ಹೇಗಿರಲಿದೆ ಎಂಬುದರ ಝಲಕ್ ತೋರಿಸಲು ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ಟ್ರೇಲರ್ ರಿಲೀಸ್ ಕಾರ್ಯಕ್ರಮ ನಡೆಯಿತು. ಆ ವೇಳೆ ರವಿ ಶ್ರೀವತ್ಸ (Ravi Srivatsa) ಹಾಗೂ ಚಿತ್ರತಂಡದವರು ಸಿನಿಮಾ ಬಗ್ಗೆ ಮಾಹಿತಿ ನೀಡಿದರು.

ಏಪ್ರಿಲ್ 10ರಂದು ರಿಲೀಸ್ ಆಗಲಿರುವ ‘ಗ್ಯಾಂಗ್ಸ್ ಆಫ್ ಯುಕೆ’ ಸಿನಿಮಾವನ್ನು ಚಂದನ್‍ ಸುರೇಶ್‍ ಅವರು ರಾಜ್ಯಾದ್ಯಂತ ವಿತರಣೆ ಮಾಡುತ್ತಿದ್ದಾರೆ. ಸೂರಪ್ಪ ಬಾಬು, ಕೆ. ಮಂಜು ಮುಂತಾದವರು ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಹಾಜರಿದ್ದರು. ‘ಒಂದು ಸಣ್ಣ ಜಗಳದಿಂದ ಶುರುವಾದ ಕಥೆಯಲ್ಲಿ ರಕ್ತ ನಿರಂತರವಾಗಿ ಹರಿಯುತ್ತದೆ. ಇದಕ್ಕೂ ಭೀಮಾತೀರದ ಹಂತಕರ ಕಥೆಗೂ ಸಂಬಂಧವಿಲ್ಲ’ ಎಂದು ರವಿ ಶ್ರೀವತ್ಸ ಅವರು ಹೇಳಿದ್ದಾರೆ.

Gangs Of Uk Movie Team

‘ನಾನೊಬ್ಬನೇ ಈ ಸಿನಿಮಾ ಮಾಡಿದ್ದರೆ ಇನ್ನಷ್ಟು ಕ್ರೌರ್ಯ ಹೆಚ್ಚಾಗುತ್ತಿತ್ತು. ಬಹುಶಃ ಆಗ ಚಿತ್ರದ ಸೆನ್ಸಾರ್ ಆಗುತ್ತಿರಲಿಲ್ಲವೇನೋ. ಅದೇ ಕಾರಣಕ್ಕೆ ಗುರುಗಳಾದ ಎಂ.ಎಸ್. ರಮೇಶ್‍ ಅವರನ್ನು ಇಟ್ಟುಕೊಂಡು ಹೋದೆ. ಅವರು ಮತ್ತು ಇಡೀ ಚಿತ್ರತಂಡದ ಸಹಕಾರ ಮತ್ತು ಪ್ರೋತ್ಸಾಹದಿಂದ ಸಿನಿಮಾ ಚೆನ್ನಾಗಿ ರೂಪುಗೊಂಡಿದೆ’ ಎಂದಿದ್ದಾರೆ ನಿರ್ದೇಶಕ ರವಿ ಶ್ರೀವತ್ಸ.

‘ಗ್ಯಾಂಗ್ಸ್ ಆಫ್ ಯುಕೆ’ ಟ್ರೇಲರ್:

ಈ ಸಿನಿಮಾವನ್ನು ರವಿ ಶ್ರೀವತ್ಸ ಅವರು ‘ಡೆಡ್ಲಿ ಆರ್ಟ್ಸ್’ ಸಂಸ್ಥೆಯ ಮೂಲಕ ನಿರ್ಮಿಸಿದ್ದಾರೆ. ಸಿನಿಮಾದಲ್ಲಿ ಒರಟ ಪ್ರಶಾಂತ್‍, ಮುನಿ, ಪದ್ಮಾ ವಾಸಂತಿ, ಪ್ರವೀಣ್, ಸೋನು ಉಪಾಧ್ಯ, ಉಗ್ರಂ ರೆಡ್ಡಿ, ಸತ್ಯ, ಧಿಲ್ಲಾನ್, ಪ್ರಜ್ವಲ್ ಮಸ್ಕಿ, ನವೀನ್, ಉಮೇಶ್, ವಿಕಾಸ್, ಅಮೋಘ್‍ ಮುಂತಾದವರು ಅಭಿನಯಿಸಿದ್ದಾರೆ. ಆರ್‍. ಗಿರಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಇದನ್ನೂ ಓದಿ: ಈಡೇರಲೇ ಇಲ್ಲ ಮುತ್ತಪ್ಪ ರೈ ಬಯೋಪಿಕ್ ಆಸೆ: ಆ ದಿನಗಳನ್ನು ವಿವರಿಸಿದ ರವಿ ಶ್ರೀವತ್ಸ

‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರಕ್ಕೆ ಎಂ.ಎಸ್. ರಮೇಶ್ ಅವರು ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಬಹಳಷ್ಟು ಜನರು ಚಿತ್ರದ ಟ್ರೇಲರ್ ನೋಡಿ ತುಂಬಾ ಕ್ರೌರ್ಯವಿದೆ ಎಂದರು. ಟ್ರೇಲರ್‍ ನೋಡಿದವರೆಲ್ಲರೂ ನನಗೆ ಮತ್ತು ರವಿಗೆ ಬೈದಿದ್ದಾರೆ. 2 ನಿಮಿಷದ ಟ್ರೇಲರ್‍ ನೋಡಿ, 2 ಗಂಟೆಯ ಚಿತ್ರದ ಬಗ್ಗೆ ಮಾತನಾಡುವುದು ಕಷ್ಟ. ಶಾಂತಿ ಬೇಕು ಎಂದರೆ ಕ್ರಾಂತಿ ಆಗಲೇಬೇಕು ಎನ್ನುವ ಮಾತಿದೆ. ಆ ತಿರುಳು ಈ ಕಥೆಯಲ್ಲಿದೆ’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಲಯಾಳಂಗೆ ಭರ್ಜರಿ ಎಂಟ್ರಿ ಕೊಟ್ಟ ನಟಿ ಅನುಷ್ಕಾ ಶೆಟ್ಟಿ

ಕರ್ನಾಟಕ ಮೂಲದ ನಟಿ ಅನುಷ್ಕಾ ಶೆಟ್ಟಿ (Anushka Shetty) ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ದಶಕದ ಕಾಲ ಸ್ಟಾರ್ ನಟಿಯಾಗಿ ಮೆರೆದವರು. ಅದರಲ್ಲೂ ತೆಲುಗು ರಾಜ್ಯಗಳಲ್ಲಿ ದೊಡ್ಡ ಅಭಿಮಾನಿ ವರ್ಗವನ್ನು ಅನುಷ್ಕಾ ಹೊಂದಿದ್ದಾರೆ. ‘ಅರುಂಧತಿ’ ಸೇರಿದಂತೆ ಕೆಲವು ಮಹಿಳಾ ಪ್ರಧಾನ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಇತ್ತೀಚೆಗೆ ಸಿನಿಮಾಗಳಿಂದ ದೂರ ಉಳಿದಿರುವ ಅನುಷ್ಕಾ ಶೆಟ್ಟಿ, ಒಂದು ಭರ್ಜರಿ ಕಮ್​​ಬ್ಯಾಕ್​​ಗಾಗಿ ಪ್ರಯತ್ನಿಸುತ್ತಿದ್ದಾರೆ. ಅನುಷ್ಕಾರ ಈ ಹಿಂದಿನ ಸಿನಿಮಾ ‘ಘಾಟಿ’ ಸಿನಿಮಾ ನಿರೀಕ್ಷೆ ಮೂಡಿಸಿತ್ತಾದರೂ ಬಾಕ್ಸ್ ಆಫೀಸ್​​ನಲ್ಲಿ ಧಾರುಣ ಸೋಲು ಕಂಡಿತು, ಇದೀಗ ಮಲಯಾಳಂ ಚಿತ್ರರಂಗಕ್ಕೆ ಅನುಷ್ಕಾ ಎಂಟ್ರಿ ಕೊಟ್ಟಿದ್ದು, ಸಿನಿಮಾದ ಟ್ರೈಲರ್ ಭರವಸೆ ಮೂಡಿಸಿದೆ.

ಅನುಷ್ಕಾ ಶೆಟ್ಟಿ ಇದೇ ಮೊದಲ ಬಾರಿಗೆ ಮಲಯಾಳಂ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಹೆಸರು ‘ಕಥನಾರ್’. ಫ್ಯಾಂಟಸಿ ಶೈಲಿಯ ಕತೆಯನ್ನು ಹೊಂದಿರುವ ಈ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸುಮಾರು 2 ನಿಮಿಷ 58 ಸೆಕೆಂಡ್‌ಗಳ ಈ ಟ್ರೈಲರ್ ಪ್ರೇಕ್ಷಕರನ್ನು ಒಂದು ವಿಭಿನ್ನ ಲೋಕಕ್ಕೆ ಕರೆದೊಯ್ಯುತ್ತದೆ. ಕೇರಳದ ಜಾನಪದ ಕಥೆಗಳಲ್ಲಿ ಬರುವ ಪ್ರಸಿದ್ಧ ಮಾಂತ್ರಿಕ ಪಾದ್ರಿ ‘ಕಡಮತ್ತತ್ತು ಕಥನಾರ್’ ಜೀವನ ಆಧರಿಸಿ ಈ ಸಿನಿಮಾ ರೂಪಿಸಲಾಗಿದೆ. ಆದರೆ, ಇದು ಸಾಮಾನ್ಯ ಜಾನಪದ ಕಥೆಯಂತಿರದೆ, ಹಾರರ್ ಮತ್ತು ಫ್ಯಾಂಟಸಿ ಶೈಲಿಯ ಪ್ರಭಾವವನ್ನು ಹೊಂದಿದೆ.

ಸಿನಿಮಾನಲ್ಲಿ ದೃಶ್ಯ ವೈಭವಕ್ಕೆ ಹೆಚ್ಚಿನ ಒತ್ತು ನೀಡಲಾಗಿರುವುದು ಟ್ರೈಲರ್​​ನಿಂದ ತಿಳಿಯುತ್ತಿದೆ. ಸಿಜಿಐ ಮತ್ತು ವಿಎಫ್‌ಎಕ್ಸ್ ತಂತ್ರಜ್ಞಾನವನ್ನು ಸಮೃದ್ಧವಾಗಿ ಸಿನಿಮಾನಲ್ಲಿ ಬಳಸಲಾಗಿದೆ. ರೋಜನ್ ಥಾಮಸ್ ನಿರ್ದೇಶನದ ಈ ಚಿತ್ರಕ್ಕೆ ರಾಹುಲ್ ಸುಬ್ರಮಣಿಯನ್ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ:ವಿವಾಹ ವದಂತಿಗೆ ಸ್ಪಷ್ಟನೆ ಕೊಟ್ಟ ಅನುಷ್ಕಾ ಶೆಟ್ಟಿ

ಸಿನಿಮಾನಲ್ಲಿ ಜಯಸೂರ್ಯ ನಾಯಕನಾಗಿ ನಟಿಸಿದ್ದಾರೆ. ಅನುಷ್ಕಾ ಶೆಟ್ಟಿ, ನೀಲಿ ಹೆಸರಿನ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಭುದೇವ, ವಿನೀತ್ ಮತ್ತು ಸಂದೀಪ್ ಮಾಸ್ಟರ್ ಅವರಂತಹ ಅನುಭವಿ ಕಲಾವಿದರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

‘ಶ್ರೀ ಗೋಕುಲಂ ಮೂವೀಸ್’ ಬ್ಯಾನರ್ ಅಡಿಯಲ್ಲಿ ಗೋಕುಲಂ ಗೋಪಾಲನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮಲಯಾಳಂ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿಯೂ ಈ ಸಿನಿಮಾ ಬಿಡುಗಡೆಯಾಗಲಿದೆ. ಕೇರಳದ 9ನೇ ಶತಮಾನದ ದಂತಕಥೆಯಾದ ಕಥನಾರ್, ತನ್ನ ಮಾಂತ್ರಿಕ ಶಕ್ತಿಯಿಂದ ಜನಸಾಮಾನ್ಯರ ಕಷ್ಟಗಳನ್ನು ನಿವಾರಿಸುತ್ತಿದ್ದ ಎಂಬ ಜನಪದ ಕತೆಗಳಿದ್ದು, ಅವುಗಳನ್ನೇ ಮೂಲವಾಗಿರಿಸಿಕೊಂಡು ಸಿನಿಮಾದ ಕತೆ ಮಾಡಲಾಗಿದೆ. ಇದು ಅನುಷ್ಕಾ ಶೆಟ್ಟಿ ಅವರ ಮೊದಲ ಮಲಯಾಳಂ ಸಿನಿಮಾ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಕ್ರಮ ಆಸ್ತಿ ಗಳಿಸಿದ ಮಾಜಿ ಎಂ.ಡಿಗೆ ಶಾಕ್: ವಿ. ಮುನಿಯಪ್ಪಗೆ 3 ವರ್ಷ ಜೈಲು, 4.5 ಕೋಟಿ ರೂ. ದಂಡ ವಿಧಿಸಿದ ಲೋಕಾಯುಕ್ತ ಕೋರ್ಟ್!

ಬೆಂಗಳೂರು, ಮಾ.31: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕ ಕೌನ್ಸಿಲ್ ಫಾರ್ ಟೆಕ್ನಿಕಲ್ ವ್ಯವಸ್ಥಾಪಕ ನಿರ್ದೇಶಕ (MD) ವಿ. ಮುನಿಯಪ್ಪ ದೋಷಿ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಬರೋಬ್ಬರಿ 12 ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ಈ ತೀರ್ಪು ಹೊರಬಿದ್ದಿದೆ.

ಬೆಂಗಳೂರಿನ ಬಸವ ಭವನದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವಿ. ಮುನಿಯಪ್ಪ ವಿರುದ್ಧ 2014ರಲ್ಲಿ ಭ್ರಷ್ಟಾಚಾರ ಮತ್ತು ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಲೋಕಾಯುಕ್ತ ಪೊಲೀಸರು ನಡೆಸಿದ ತನಿಖೆಯಲ್ಲಿ ಮುನಿಯಪ್ಪ ಅವರು ತಮ್ಮ ಅಧಿಕೃತ ಆದಾಯದ ಮೂಲಗಳಿಗಿಂತ ಅಕ್ರಮವಾಗಿ ಕೋಟ್ಯಾಂತರ ರೂಪಾಯಿ ಸಂಪಾದಿಸಿರುವುದು ಸಾಬೀತಾಗಿತ್ತು.

ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ಗೆ ಮಾಟ ಮಂತ್ರ ಕೇಸಿಗೆ ಟ್ವಿಸ್ಟ್: ಸ್ವಯಂ ಘೋಷಿತ ಬಾಬಾ ಅರೆಸ್ಟ್!

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಮುನಿಯಪ್ಪ ಅವರಿಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 4.5 ಕೋಟಿ ರೂಪಾಯಿ ದಂಡ ವಿಧಿಸಿದೆ. ಒಂದು ವೇಳೆ ವಿಧಿಸಲಾದ ದಂಡದ ಮೊತ್ತವನ್ನು ಪಾವತಿಸಲು ವಿಫಲವಾದರೆ, ಆರೋಪಿಯು ಹೆಚ್ಚುವರಿಯಾಗಿ 6 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2014ರಲ್ಲಿ ದಾಖಲಾಗಿದ್ದ ಈ ಭ್ರಷ್ಟಾಚಾರದ ಕಲೆಗೆ 2026ರಲ್ಲಿ ಅಂತಿಮವಾಗಿ ಶಿಕ್ಷೆಯ ಮುದ್ರೆ ಬಿದ್ದಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಾಳೆಯ ಹವಾಮಾನ: ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ; ಉತ್ತರ ಒಳನಾಡಿನ ಹಲವೆಡೆ ಸುಡು ಬಿಸಲು

ಬೆಂಗಳೂರು, ಮಾರ್ಚ್​​ 31: ತೀವ್ರ ಬಿಸಿಲಿನ ವಾತಾವರಣದ ನಡುವೆಯೂ ನಾಳೆ (ಏಪ್ರಿಲ್​​ 1) ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆ ಇದೆ. ಸುಮಾರು 12 ಜಿಲ್ಲೆಗಳಲ್ಲಿ ವರುಣನ ಆಗಮನದ ನಿರೀಕ್ಷೆ ಇದ್ದು, ರಾಜ್ಯದಲ್ಲಿ ಬಿಸಿಲು ಮತ್ತು ಮಳೆಯ ಮಿಶ್ರ ಹವಾಮಾನ ಕಂಡುಬರಲಿದೆ. ಕೆಲವು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿದರೆ, ಮತ್ತೆ ಕೆಲವು ಕಡೆ  ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಯಾವ್ಯಾವ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ?

ದಕ್ಷಿಣ ಒಳನಾಡು ಭಾಗದ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ. ಈ ವೇಳೆ ಗಾಳಿಯ ವೇಗ ಗಂಟೆಗೆ 30-40 ಕಿಲೋ ಮೀಟರ್​​ ಇರಬಹುದೆಂದು ಅಂದಾಜಿಸಲಾಗಿದೆ. ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಕಂಡುಬರಲಿದ್ದರೂ, ಬಳ್ಳಾರಿ, ದಾವಣಗೆರೆ, ವಿಜಯನಗರ ಮತ್ತು ಚಿತ್ರದುರ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಹಾಗೆಯೇ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಹಗುರ ಮಳೆಯಾಗುವ ನಿರೀಕ್ಷೆಯಿದೆ. ಶಿವಮೊಗ್ಗ, ಹಾಸನ ಮತ್ತು ಕೊಡಗು ಜಿಲ್ಲೆಗಳ ಕೆಲವು ಭಾಗಗಳಲ್ಲಿಯೂ ಸಾಧಾರಣ ಮಳೆಯನ್ನು ಹವಾಮಾನ ಇಲಾಖೆ ಅಂದಾಜಿಸಿದೆ. ಮುಂದಿನ ಕೆಲ ದಿನಗಳವರೆಗೂ ರಾಜ್ಯದ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಆತಂಕಕಾರಿ ಮಟ್ಟದಲ್ಲಿದೆ ಮೈಸೂರಿನ ಏರ್ ಕ್ವಾಲಿಟಿ!

ಬೆಂಗಳೂರಲ್ಲೂ ವರುಣನ ಅಬ್ಬರ

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ಸಮಯದಲ್ಲಿ ಹಗುರ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ನಗರದ ಗರಿಷ್ಠ ಗರಿಷ್ಠ ತಾಪಮಾನ 34ರಿಂದ 36 ಡಿಗ್ರಿ ಸೆಲ್ಸಿಯಸ್​​ ಮತ್ತು ಕನಿಷ್ಠ ತಾಪಮಾನ 21ರಿಂದ 22 ಡಿಗ್ರಿ ಸೆಲ್ಸಿಯಸ್​​ ಇರಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಮೆರಿಕದಿಂದ ತೈಲ ಪಡೆಯಿರಿ, ಇಲ್ಲವೇ ಹಾರ್ಮುಜ್​ಗೆ ಹೋಗಿ ಪಡೆದುಕೊಳ್ಳಿ: ಬ್ರಿಟನ್ ಮತ್ತಿತರ ರಾಷ್ಟ್ರಗಳನ್ನು ಚುಚ್ಚಿದ ಟ್ರಂಪ್

ವಾಷಿಂಗ್ಟನ್, ಮಾರ್ಚ್ 31: ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ಮತ್ತು ಇಸ್ರೇಲ್​ಗೆ ನೆರವಾಗದ ಇತರ ಪಾಶ್ಚಿಮಾತ್ಯ ದೇಶಗಳ ವಿರುದ್ಧ ಡೊನಾಲ್ಡ್ ಟ್ರಂಪ್ (Donald Trump) ಕೆಂಡಕಾರುವುದು ಮುಂದುವರಿದಿದೆ. ತಮ್ಮ ಟ್ರೂತ್ ಸೋಷಿಯಲ್ ಪೋಸ್ಟ್​ನಲ್ಲಿ ಬ್ರಿಟನ್ ಮತ್ತಿತರ ದೇಶಗಳನ್ನು ತರಾಟೆಗೆ ತೆಗೆದುಕೊಂಡ ಟ್ರಂಪ್, ಒಂದೋ ನೀವು ಅಮೆರಿಕದ ತೈಲ ಖರೀದಿಸಿ, ಇಲ್ಲವೇ ಹಾರ್ಮುಜ್ ಜಲಸಂಧಿಗೆ ಹೋಗಿ ತೈಲ ಪಡೆದುಕೊಳ್ಳಿ ಎಂದು ತಾಕೀತು ಮಾಡಿದ್ದಾರೆ.

‘ಇರಾನ್ ಯುದ್ಧದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ ಬ್ರಿಟನ್​ನಂತಹ ದೇಶಗಳು ಹಾರ್ಮುಜ್ ಜಲಸಂಧಿ ತಡೆದಿರುವ ಕಾರಣಕ್ಕೆ ತೈಲ ಸಿಗದೇ ಪರದಾಡುತ್ತಿವೆ. ಈ ದೇಶಗಳಿಗೆ ನನ್ನ ಸಲಹೆ ಹೀಗಿದೆ: ಒಂದು, ನೀವು ಅಮೆರಿಕದಿಂದ ತೈಲ ಖರೀದಿಸಿ. ನಮ್ಮಲ್ಲಿ ಸಾಕಷ್ಟು ತೈಲ ಇದೆ. ಎರಡನೆಯದು, ಧೈರ್ಯ ಇದ್ದರೆ ಜಲಸಂಧಿಗೆ ಹೋಗಿ ತೈಲ ತೆಗೆದುಕೊಳ್ಳಿ’ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ತಾಹಿರ್ ಅನ್ವರ್ ಯಾರು? ಪಾಕಿಸ್ತಾನದಲ್ಲಿ ಮಸೂದ್ ಅಜರ್ ಸಹೋದರ ಅನುಮಾನಾಸ್ಪದವಾಗಿ ಸಾವು

ನೀವೇ ಹೋರಾಡುವುದನ್ನು ಕಲಿಯಿರಿ

‘ನಿಮಗಾಗಿ ಹೋರಾಡುವುದು ಹೇಗೆಂದು ಕಲಿಯಲು ಆರಂಭಿಸಬೇಕಾಗಬಹುದು. ಹೇಗೆ ನೀವು ಅಮೆರಿಕದ ಸಹಾಯಕ್ಕೆ ನಿಂತಿಲ್ಲವೋ, ಹಾಗೆ ನಿಮಗೆ ಸಹಾಯ ಮಾಡಲು ಅಮೆರಿಕ ಇರುವುದಿಲ್ಲ. ಇರಾನ್ ಅನ್ನು ನೆಲಸಮ ಮಾಡಿದ್ದೇವೆ. ಕಷ್ಟದ ಭಾಗ ಮುಗಿದಿದೆ. ಈಗ ನಿಮ್ಮ ತೈಲವನ್ನು ಪಡೆದುಕೊಳ್ಳಿ ಹೋಗಿ’ ಎಂದು ತಮ್ಮ ಮಿತ್ರ ದೇಶಗಳನ್ನು ಟ್ರಂಪ್ ಟಾಂಟ್ ಮಾಡಿದ್ದಾರೆ.

ಫೆಬ್ರುವರಿ 28ರಂದು ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಯುದ್ಧ ಆರಂಭಿಸಿವೆ. ಸಾವಿರಾರು ಮಿಸೈಲ್, ಡ್ರೋನ್​ಗಳಿಂದ ದಾಳಿಗಳಾಗಿವೆ. ಇರಾನ್ ದೇಶವೂ ಕೂಡ ಸಮರ್ಪಕವಾಗಿ ಪ್ರತಿರೋಧ ಮತ್ತು ಪ್ರತಿದಾಳಿಗಳನ್ನು ಮಾಡುತ್ತಿದೆ. ತಿಂಗಳು ಉರುಳಿದರೂ ಯುದ್ಧ ಮುಗಿಯುತ್ತಿಲ್ಲ. ವಿಶ್ವದ ಪ್ರಮುಖ ತೈಲ ಸಾಗಣೆ ದಾರಿಯಲ್ಲಿರುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ತಡೆದು ನಿಲ್ಲಿಸಿದೆ. ಭಾರತ ಸೇರಿದಂತೆ ಹಲವು ದೇಶಗಳಿಗೆ ಇದರಿಂದ ಪೆಟ್ರೋಲ್, ಎಲ್​ಪಿಜಿ ಬಿಕ್ಕಟ್ಟು ಸ್ಥಿತಿ ಉದ್ಭವಿಸಿದೆ.

ಇದನ್ನೂ ಓದಿ: ಭಾರತದ ವಿರುದ್ಧದ ಭಯೋತ್ಪಾದನಾ ಸಂಘಟನೆಗೆ ಪಾಕಿಸ್ತಾನ ಆಶ್ರಯ ನೀಡುತ್ತಲೇ ಇದೆ; ಅಮೆರಿಕದ ಸಂಶೋಧನಾ ವರದಿ

ಇದೇ ವೇಳೆ, ಇರಾನ್​ನ ಅಳಿದುಳಿದ ನಾಯಕರೊಂದಿಗೆ ಅಮೆರಿಕ ಸಂಧಾನ ನಡೆಸಲು ಯತ್ನಿಸಿದೆ. ಸಂಧಾನ ಏರ್ಪಡದಿದ್ದರೆ ಇರಾನ್ ಮೇಲೆ ಇನ್ನೂ ದೊಡ್ಡ ಪ್ರಹಾರ ಆಗುತ್ತದೆ. ಆ ದೇಶದ ಇಂಧನ ಸೌಕರ್ಯಗಳನ್ನು ನಾಶ ಮಾಡುತ್ತೇವೆ ಎಂದು ಅಮೆರಿಕ ಬೆದರಿಕೆ ಹಾಕುತ್ತಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

PBKS vs GT Playing XI: ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 4ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದೆ. ಮುಲ್ಲನ್​ಪುರ್​ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದಾರೆ. ಇನ್ನು ಈ ಪಂದ್ಯದ ಮೂಲಕ ಉಭಯ ತಂಡಗಳು ಐಪಿಎಲ್ ಅಭಿಯಾನ ಆರಂಭಿಸುತ್ತಿದ್ದು, ಹೀಗಾಗಿ ಎರಡೂ ತಂಡಗಳು ಶುಭಾರಂಭ ಮಾಡುವ ಇರಾದೆಯಲ್ಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…

ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಸಾಯಿ ಸುದರ್ಶನ್, ಶುಭ್​ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡ, ಅಶೋಕ್ ಶರ್ಮಾ, ಮೊಹಮ್ಮದ್ ಸಿರಾಜ್.

ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಪ್ರಭ್​ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಯಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವೈಶಾಕ್ ವಿಜಯಕುಮಾರ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್.

ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ ಮುಖಾಮುಖಿ:

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಈವರೆಗೆ 6 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಪಂಜಾಬ್ ಕಿಂಗ್ಸ್ ತಂಡ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಗುಜರಾತ್ ಟೈಟಾನ್ಸ್ 3 ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಉಭಯ ತಂಡಗಳಿಂದ ಸಮಬಲದ ಪೈಪೋಟಿಯನ್ನು ನಿರೀಕ್ಷಿಸಬಹುದು.

ಗುಜರಾತ್ ಟೈಟಾನ್ಸ್ ತಂಡ: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಕುಮಾರ್ ಕುಶಾಗ್ರಾ, ಅನುಜ್ ರಾವತ್, ಜೋಸ್ ಬಟ್ಲರ್, ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಅರ್ಷದ್ ಖಾನ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ, ಗುರ್ನೂರ್ ಸಿಂಗ್ ಬ್ರಾರ್, ರಶೀದ್ ಖಾನ್, ಮಾನವ್ ಸುತಾರ್, ಸಾಯಿ ಕಿಶೋರ್, ಜಯಂತ್ ಯಾದವ್, ಅಶೋಕ್ ಶರ್ಮಾ, ಜೇಸನ್ ಹೋಲ್ಡರ್, ಟಾಮ್ ಬ್ಯಾಂಟನ್, ಪೃಥ್ವಿ ರಾಜ್ ಯಾರ್ರಾ, ಲ್ಯೂಕ್ ವುಡ್.

ಪಂಜಾಬ್ ಕಿಂಗ್ಸ್ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಪ್ರಭ್​ಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ, ಶಶಾಂಕ್ ಸಿಂಗ್, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಅಝ್ಮತುಲ್ಲಾ ಒಮರ್​ಝಾಹಿ, ಮಾರ್ಕೊ ಯಾನ್ಸೆನ್, ಹರ್ಪ್ರೀತ್ ಬ್ರಾರ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮುಶೀರ್ ಖಾನ್, ಪ್ಯಾಲಾ ಅವಿನಾಶ್, ಹರ್ನೂರ್ ಪನ್ನು, ಸೂರ್ಯಾಂಶ್ ಶೆಡ್ಗೆ, ಮಿಚೆಲ್ ಓವನ್, ಕ್ಸೇವಿಯರ್ ಬಾರ್ಟ್ಲೆಟ್, ಲಾಕಿ ಫರ್ಗುಸನ್, ವೈಶಾಕ್ ವಿಜಯ್‌ಕುಮಾರ್, ಯಶ್ ಠಾಕೂರ್, ವಿಷ್ಣು ವಿನೋದ್, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ಪ್ರವೀಣ್ ದುಬೆ, ವಿಶಾಲ್ ನಿಶಾದ್.

 

Source link

ರಾಜ್ಯ ಸರ್ಕಾರಿ ಕಚೇರಿ ಸಮಯ ಬದಲಾವಣೆ: ಬೇಸಿಗೆಯಲ್ಲಿ ನೌಕರರಿಗೆ ರಿಲೀಫ್

ಬೆಂಗಳೂರು, (ಮಾರ್ಚ್ 31): ರಾಜ್ಯದಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಮಾನವನ್ನು ಪರಿಗಣಿಸಿ, ಕರ್ನಾಟಕ ಸರ್ಕಾರ (Karnataka Government)  ಮಹತ್ವದ ನಿರ್ಧಾರ ಕೈಗೊಂಡಿದೆ.  ಹೌದು…ಬಿಸಿಲಿನ ತಾಪಮಾನದ  (summer temperature) ಹೆಚ್ಚಳ ಹಿನ್ನೆಲೆ ಕಿತ್ತೂರು ಕರ್ನಾಟಕದ (Kittur Karnataka) ಎರಡು ಜಿಲ್ಲೆ, ಕಲ್ಯಾಣ ಕರ್ನಾಟಕದ (Kalyana Karnataka) 7 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯವನ್ನು ಬದಲಾವಣೆ ಮಾಡಲಾಗಿದೆ. 2026ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರಸ್ತುತ ಇರುವ ಕಚೇರಿ ವೇಳಾಪಟ್ಟಿಯ ಬದಲಾಗಿ ಬೆಳಿಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 1.30 ನಿಗದಿ ಮಾಡಿ ಇಂದು (ಮಾರ್ಚ್ 31) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರ ಹಿತ ದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ.

2 ತಿಂಗಳು ಸರ್ಕಾರಿ ಕಚೇರಿ ಸಮಯ ಚೇಂಜ್

ಬೆಳಗಾವಿ ವಿಭಾಗದ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ ಮಾಡಲಾಗಿದೆ. ಇನ್ನು ಕಲಬುರಗಿ ವಿಭಾಗಕ್ಕೆ ಒಳಪಡುವ ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ  ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಸಮಯವನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 1:30ರ ತನಕ ನಿಗದಿ ಮಾಡಿದ್ದು, ಏಪ್ರಿಲ್, ಮೇ ತಿಂಗಳ ಅಂತ್ಯದವರೆಗೆ ಸರ್ಕಾರಿ ಕಚೇರಿ ಸಮಯ ಬದಲಾವಣೆ ಜಾರಿಯಲ್ಲಿ ಇರಲಿದೆ.

ಇದನ್ನೂ ಓದಿ: ಏಪ್ರಿಲ್ 1 ರಿಂದ ವಿದ್ಯುತ್ ದರ ಏರಿಕೆ ಶಾಕ್​​: ಎಸ್ಕಾಂಗಳಿಂದ ಹಳೆ ಬಾಕಿ ವಸೂಲಿ; ಯಾವ ವರ್ಗಕ್ಕೆ ಎಷ್ಟು ದರ ಏರಿಕೆ?

ಆದೇಶದಲ್ಲೇನಿದೆ?

ಬೆಳಗಾವಿ ವಿಭಾಗದ ವಿಜಯಪುರ, ಬಾಗಲಕೋಟೆ ಹಾಗೂ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವುದಿಂದ ನೌಕರರು ಕರ್ತವ್ಯ ನಿರ್ವಹಿಸುವಲ್ಲಿ ಎದುರಿಸುತ್ತಿರುವ ತೊಂದರೆಯನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಿ, ಏಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಕಚೇರಿ ಕೆಲಸದ ಸಮಯವನ್ನು ಬೆಳಿಗ್ಗೆ, 8.00 ರಿಂದ 1.30 ರವರೆಗೆ ನಿಗದಿಪಡಿಸಿ ಆದೇಶ ಹೊರಡಿಸುವಂತೆ ಕೋರಲಾಗಿದೆ. ಪ್ರಸ್ತಾಪಿಸಿದ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವುದನ್ನು ಪರಿಗಣಿಸಿ, ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಗಿನಂತೆ ಆದೇಶಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2026ನೇ ಸಾಲಿನ ಏಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಹೆಚ್ಚಿನ ಬಿಸಿಲಿನ ತಾಪಮಾನದ ಹಿನ್ನೆಲೆಯಲ್ಲಿ ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಹಾಗೂ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಿಗೆ ಪ್ರಸ್ತುತ ಜಾರಿಯಲ್ಲಿರುವ ಸರ್ಕಾರಿ ಕಚೇರಿಗಳ ವೇಳಾಪಟ್ಟಿಯ ಬದಲಾಗಿ ಏಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಬೆಳಿಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಬದಲಾವಣೆ ಮಾಡಿ ಆದೇಶಿಸಿದೆ.

ಇನ್ನು ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಹಾಗೂ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿನ ಸರ್ಕಾರಿ ನೌಕರರು ಬದಲಾದ ಸಮಯದಲ್ಲಿ ಎಂದಿನಂತೆ ಯಾವುದೇ ಲೋಪ, ಅಡೆತಡೆಯಿಲ್ಲದೆ ತಮ್ಮ ಕರ್ತವ್ಯವನ್ನು ನಿರ್ವಹಿಸತಕ್ಕದ್ದು, ಸಾರ್ವಜನಿಕರಿಗೆ ಯಾವುದೇ ಅನಾನುಕೂಲತೆಯಾಗದಂತೆ ಮತ್ತು ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತುರ್ತು ಸಂದರ್ಭದಲ್ಲಿ ಯಾವುದೇ ಕಾರ್ಯವನ್ನು ನಿರ್ವಹಿಸಲು ನಿರ್ದೇಶಿಸಿದಲ್ಲಿ ಸಮಯದ ಪರಿಮಿತಿಯಿಲ್ಲದೆ ಕರ್ತವ್ಯ ನಿರ್ವಹಿಸತಕ್ಕದ್ದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಏಪ್ರಿಲ್​​​​​​​​​​​​ನಲ್ಲಿ ಈ ರಾಶಿಯವರ ಜೀವನದಲ್ಲಿ ಗುರು, ಶುಕ್ರ, ಮಂಗಳನ ಆಗಮನ; ಆದರೆ ಇವನ ಬಲ ಇಲ್ಲ

ಕರ್ಕಾಟಕ ರಾಶಿಯವರಿಗೆ 2026 ಏಪ್ರಿಲ್ ನಲ್ಲಿ ಗ್ರಹಗತಿಗಳ ದೃಷ್ಟಿಯಿಂದ ಮತ್ತು ಸಂಚಾರದಿಂದ ವಿಶೇಷ ಬದಲಾವಣೆಯಾಗಲಿದೆ. ಈ ತಿಂಗಳು ನಿಮ್ಮ ರಾಶ್ಯಾಧಿಪತಿ ಚಂದ್ರನ ಸಂಚಾರದೊಂದಿಗೆ, ಗುರುವಿನಿಂದ ದ್ವಿತೀಯ, ಶುಕ್ರನಿಂದ ತೃತೀಯ, ಸೂರ್ಯ ಮತ್ತು ಬುಧನಿಂದ ಚತುರ್ಥ, ಮಂಗಳ ಹಾಗೂ ಶನಿಯಿಂದ ಪಂಚಮದಲ್ಲಿರುವ ಕಾರಣ ಎಲ್ಲ ಗ್ರಹರ ಪ್ರಭಾವವೂ ಈ ರಾಶಿಯ ಮೇಲೆ ಇರಲಿದೆ. ಮಾನಸಿಕ ಒತ್ತಡವನ್ನು ಎಲ್ಲ ಕಾರ್ಯದಲ್ಲಿಯೂ ಅನುಭವಿಸಬೇಕಾಗುವುದು.

ಉದ್ಯೋಗ ಮತ್ತು ವೃತ್ತಿ ಜೀವನ:

​ಉದ್ಯೋಗಿಗಳಿಗೆ ಈ ತಿಂಗಳು ಪ್ರಗತಿದಾಯಕವಾಗಿದೆ. ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ದೊರೆಯುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ವರ್ಗಾವಣೆ ಅಥವಾ ಬಡ್ತಿಯ ನಿರೀಕ್ಷೆಯಲ್ಲಿದ್ದವರಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ. ಅತಿಯಾದ ಆತ್ಮವಿಶ್ವಾಸದಿಂದ ಸಹೋದ್ಯೋಗಿಗಳೊಂದಿಗೆ ಘರ್ಷಣೆ ಮಾಡಿಕೊಳ್ಳಬೇಡಿ. ಸಮಾಧಾನದಿಂದ ಕೆಲಸ ನಿರ್ವಹಿಸುವುದು ಉತ್ತಮ.

ವಿದ್ಯಾಭ್ಯಾಸ:

​ವಿದ್ಯಾರ್ಥಿಗಳಿಗೆ ಈ ತಿಂಗಳು ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆರಂಭದಲ್ಲಿ ಸ್ವಲ್ಪ ಗಮನ ಹರಿಯುವ ಸಾಧ್ಯತೆ ಇದ್ದರೂ, ದ್ವಿತೀಯಾರ್ಧದಲ್ಲಿ ಪಠ್ಯದ ಮೇಲೆ ಹಿಡಿತ ಸಾಧಿಸುವಿರಿ. ಉನ್ನತ ವ್ಯಾಸಂಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಉತ್ತಮ ಮಾರ್ಗದರ್ಶನ ಸಿಗಲಿದೆ. ನಿರಂತರ ಅಭ್ಯಾಸವೊಂದೇ ನಿಮ್ಮ ಯಶಸ್ಸಿನ ಸೂತ್ರ.

ಹಣಕಾಸು ಸ್ಥಿತಿ:

​ಆರ್ಥಿಕವಾಗಿ ಈ ತಿಂಗಳು ಸಬಲರಾಗುವಿರಿ. ಹಳೆಯ ಹೂಡಿಕೆಗಳಿಂದ ಲಾಭ ಬರುವ ಸಾಧ್ಯತೆ ಇದೆ. ಆದಾಯದ ಮೂಲಗಳು ಹೆಚ್ಚಾಗಲಿವೆ. ಭೂಮಿ ಅಥವಾ ಸ್ಥಿರಾಸ್ತಿಯಲ್ಲಿ ಹೂಡಿಕೆ ಮಾಡಲು ಇದು ಸಕಾಲ. ಹಣದ ಹರಿವು ಚೆನ್ನಾಗಿದ್ದರೂ, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಅನಿವಾರ್ಯ.

ವಿವಾಹ ಮತ್ತು ಕೌಟುಂಬಿಕ ಜೀವನ:

​ಕುಟುಂಬದಲ್ಲಿ ಮಂಗಳ ಕಾರ್ಯಗಳು ಜರುಗುವ ಸೂಚನೆ ಇದೆ. ಕಂಕಣ ಬಲ ಕೂಡಿ ಬರಲಿದೆ. ಸೂಕ್ತ ಸಂಬಂಧಗಳು ಹುಡುಕಿಕೊಂಡು ಬರಬಹುದು. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ.

ವಿದೇಶ ಪ್ರವಾಸ:

​ವಿದೇಶಕ್ಕೆ ಹೋಗುವ ಹಂಬಲ ಇರುವವರಿಗೆ ಈ ತಿಂಗಳು ಶುಭ ಸುದ್ದಿಯೊಂದು ಕಾಯುತ್ತಿದೆ. ತಾಂತ್ರಿಕ ಕಾರಣಗಳಿಂದ ನಿಂತುಹೋಗಿದ್ದ ವೀಸಾ ಅಥವಾ ಪಾಸ್‌ಪೋರ್ಟ್ ಕೆಲಸಗಳು ವೇಗ ಪಡೆದುಕೊಳ್ಳಲಿವೆ. ಉದ್ಯೋಗದ ನಿಮಿತ್ತ ಅಲ್ಪಾವಧಿಯ ವಿದೇಶ ಪ್ರವಾಸದ ಯೋಗವಿದೆ.

ಸಾಲದ ಬಾಧೆ:

​ಸಾಲದ ಸುಳಿಯಲ್ಲಿ ಸಿಲುಕಿರುವವರಿಗೆ ಸ್ವಲ್ಪ ಸಮಾಧಾನಕರ ಸುದ್ದಿ ಸಿಗಲಿದೆ. ಆದಾಯ ಹೆಚ್ಚಾಗುವುದರಿಂದ ಹಳೆಯ ಸಾಲಗಳನ್ನು ತೀರಿಸಲು ಯೋಜನೆ ರೂಪಿಸುವಿರಿ. ಸದ್ಯಕ್ಕೆ ಹೊಸದಾಗಿ ದೊಡ್ಡ ಮೊತ್ತದ ಸಾಲ ಮಾಡುವುದು ಬೇಡ. ಜಾಮಿನು ಹಾಕುವ ಮುನ್ನ ಎಚ್ಚರಿಕೆ ವಹಿಸಿ.

​ಈ ತಿಂಗಳು ನೀವು ಮಾನಸಿಕ ಶಾಂತಿಗಾಗಿ ಶಿವನ ಆರಾಧನೆ ಅಥವಾ ನಮಃ ಶಿವಾಯ ಮಂತ್ರ ಜಪ ಮಾಡುವುದು ಉತ್ತಮ. ಸೋಮವಾರದಂದು ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡುವುದರಿಂದ ಶುಭ ಫಲಗಳು ಹೆಚ್ಚಾಗಲಿವೆ.

– ಲೋಹಿತ ಹೆಬ್ಬಾರ್

Source link

ವಿಮಾನ ನಿಲ್ದಾಣದಲ್ಲೇ ಧೂಮಪಾನ; ಸಿಬ್ಬಂದಿ ಎಚ್ಚರಿಸಿದರೂ ಡೋಂಟ್ ಕೇರ್! ವೀಡಿಯೋ ವೈರಲ್

ಬೆಂಗಳೂರು, ಮಾರ್ಚ್​ 31: ವಿಮಾನ ನಿಲ್ದಾಣದಲ್ಲಿ ಧೂಮಪಾನ ಮಾಡಿರುವ ವೈರಲ್ ವೀಡಿಯೋ (Airport Smoking Video) ಒಂದು ತೀವ್ರ ಆಕ್ರೋಶ ಹುಟ್ಟುಹಾಕಿದೆ. ವಿಡಿಯೋದಲ್ಲಿ ಒಬ್ಬ ವ್ಯಕ್ತಿ ವಿಮಾನ ನಿಲ್ದಾಣದ ಟರ್ಮಿನಲ್ ಪ್ರದೇಶದಲ್ಲಿ ಅಸಡ್ಡೆಯಿಂದ ಧೂಮಪಾನ ಮಾಡುತ್ತಿರುವುದು ಕಾಣಿಸಿಕೊಂಡಿದೆ. ಈ ಘಟನೆ ಮಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎಂದು ಹೇಳಲಾಗಿದ್ದು, ಇನ್ನೂ ದೃಢಪಟ್ಟಿಲ್ಲ. ಈ ವೀಡಿಯೋ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿತ್ರಿಸಲಾಗಿದೆ ಎಂಬ ಊಹಾಪೋಹಗಳು ಹರಿದಾಡಿತ್ತು. ಆದರೆ ಈ ವೀಡಿಯೋ ಬೆಂಗಳೂರಿನಲ್ಲಿ ನಡೆದಿದ್ದಲ್ಲ ಎಂದು ತಿಳಿದು ಬಂದಿದೆ.

ಸಿಬ್ಬಂದಿ ಎಚ್ಚರಿಸಿದರೂ ಕೇಳದ ವ್ಯಕ್ತಿ

ವೈರಲ್ ವೀಡಿಯೋದಲ್ಲಿರುವ ವ್ಯಕ್ತಿಯನ್ನು ಉತ್ತಕರ್ಷ್ ಗೌತಮ್ ಎಂದು ಗುರುತಿಸಲಾಗಿದ್ದು, ವಿಡಿಯೋದಲ್ಲಿ ಆತ ಟಾರ್ಮಾಕ್ ಪ್ರದೇಶದಲ್ಲಿ ವಿಮಾನದ ಹತ್ತಿರವೇ ಧೂಮಪಾನ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಏರ್‌ಲೈನ್ ಕಚೇರಿ ಒಳಗಿನಿಂದ ಚಿತ್ರೀಕರಿಸಲ್ಪಟ್ಟ ದೃಶ್ಯದಲ್ಲಿ, ಗಾಜಿನ ಕಿಟಕಿಯ ಮೂಲಕ ಸಿಬ್ಬಂದಿಯ ಮುಖದತ್ತಲೇ ಧೂಮವನ್ನು ಹೊರಬಿಡುತ್ತಿರುವುದು ಕಂಡುಬಂದಿದೆ. ಸಿಬ್ಬಂದಿ ಇಲ್ಲಿ ಧೂಮಪಾನ ಮಾಡಬಾರದು ಎಂದು ಎಚ್ಚರಿಸಿದರೂ, ಆತ ನಿಯಮಗಳನ್ನು ಲೆಕ್ಕಿಸದೇ ವರ್ತಿಸಿದ್ದಾನೆ ಎನ್ನಲಾಗಿದೆ.

ಇನ್ನೊಂದು ದೃಶ್ಯದಲ್ಲಿ, ಆ ವ್ಯಕ್ತಿ ಏರ್‌ಲೈನ್ ಸಿಬ್ಬಂದಿಯ ಕಡೆಗೆ ಹಣ ಎಸೆದು ಅಸಭ್ಯವಾಗಿ ನಡೆದುಕೊಂಡಿರುವುದು ಕಂಡುಬಂದಿದೆ. ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ. ಕೆಲವರು ಆ ವ್ಯಕ್ತಿ ಗೂಗಲ್ ಉದ್ಯೋಗಿ ಎಂದು ಹೇಳಿಕೊಂಡಿದ್ದು, ಈ ಆರೋಪ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ನೆಟ್ಟಿಗರು ವಿಮಾನ ನಿಲ್ದಾಣಗಳು ಅತ್ಯಂತ ಭದ್ರತಾ ವಲಯವಾಗಿರುವುದರಿಂದ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ್ದಲ್ಲದೆ, ಬಿಟ್ಟುಕಳುಹಿಸಿದ ಪೊಲೀಸರನ್ನೇ ನಿಂದಿಸಿದಾತನ ವಿರುದ್ಧ ಎಫ್​ಐಆರ್

ಹಾರುತ್ತಿದ್ದ ವಿಮಾನದ ತುರ್ತು ಬಾಗಿಲನ್ನು ತೆಗೆದಿದ್ದವನೂ ಇವನೇ!

ಇದಲ್ಲದೆ, ಲೈಟರ್‌ನ್ನು ಆತ ವಿಮಾನ ನಿಲ್ದಾಣದೊಳಗೆ ಹೇಗೆ ತಂದನು ಎಂಬ ಪ್ರಶ್ನೆಯೂ ಉದ್ಭವಿಸಿದೆ. ಈ ವ್ಯಕ್ತಿ ಹಲವು ಕಡೆ ಇದೇ ರೀತಿ ವರ್ತಿಸಿದ್ದಾನೆಂಬ ಆರೋಪವೂ ಕೇಳಿ ಬರುತ್ತಿದೆ. ಮಾರ್ಚ್​ 22ರಂದು ಜೈಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿಯೂ ಸಹ ಇದೇ ವ್ಯಕ್ತಿ ಹಾರುತ್ತಿದ್ದ ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನಿಸಿದ್ದ ಎನ್ನಲಾಗಿದೆ. ಹೋಗಲಿ ಎಂದು ಬಿಟ್ಟು ಕಳುಹಿಸಿದ ಬೆಂಗಳೂರು ಪೊಲೀಸರನ್ನೇ ‘ಬಸ್ಟರ್ಡ್ಸ್’ ಎಂದು ನಿಂದಿಸಿದ್ದಲ್ಲದೆ, ಎಕ್ಸ್ (X) ಖಾತೆಯಲ್ಲಿ ಪೊಲೀಸರ ವಿರುದ್ಧ ಸುಳ್ಳು ಆರೋಪ ಮಾಡಿ ಪೋಸ್ಟ್ ಕೂಡ ಹಾಕಿದ್ದ ಆರೋಪಿಯ ವಿರುದ್ಧ ಕೆಂಪೇಗೌಡ ಏರ್‌ಪೋರ್ಟ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version