Padma Awards 2026: ರೋಹಿತ್, ಹರ್ಮನ್​ಪ್ರೀತ್ ಸೇರಿದಂತೆ 9 ಕ್ರೀಡಾ ಸಾಧಕರಿಗೆ ಪದ್ಮ ಪ್ರಶಸ್ತಿ – Kannada News | 2026 Padma Awards: Rohit Sharma among 9 others sports persons Honored Padma Awards

2026 ರ ಗಣರಾಜ್ಯೋತ್ಸವಕ್ಕೆ ಒಂದು ದಿನ ಮೊದಲು ಭಾರತ ಸರ್ಕಾರವು ಪ್ರತಿ ವರ್ಷದಂತೆ ಈ ವರ್ಷವೂ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಆ ಪ್ರಕಾರ ಕ್ರೀಡಾ ವಿಭಾಗದಲ್ಲೂ ವಿವಿದ ಸಾಧಕರಿಗೆ ಈ ಗೌರವ ಸಂದಿದೆ. ಅದರಲ್ಲೂ ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಐಸಿಸಿ ಟ್ರೋಫಿಗೆ ಮುನ್ನಡೆಸಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಪುರುಷರ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಇಬ್ಬರ ಜೊತೆಗೆ ದೇಶದ ಅತ್ಯಂತ ಯಶಸ್ವಿ ಟೆನಿಸ್ ಆಟಗಾರರಲ್ಲಿ ಒಬ್ಬರಾದ ವಿಜಯ್ ಅಮೃತರಾಜ್ ಅವರು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜನವರಿ 25 ರ ಭಾನುವಾರದಂದು, ಸರ್ಕಾರವು ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಸೇರಿದಂತೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಿತು. ಈ ವರ್ಷ, ಸರ್ಕಾರವು ಒಟ್ಟು 131 ವ್ಯಕ್ತಿಗಳಿಗೆ ಪದ್ಮ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಿದೆ, ಅದರಲ್ಲಿ ಐವರಿಗೆ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮವಿಭೂಷಣವೂ ಸೇರಿದೆ. ಹದಿಮೂರು ಜನರಿಗೆ ಪದ್ಮಭೂಷಣ ಮತ್ತು ಒಟ್ಟು 113 ಜನರಿಗೆ ಪದ್ಮಶ್ರೀ ನೀಡಲಾಗಿದೆ. ಕ್ರೀಡಾ ವಿಭಾಗದಲ್ಲಿ ಒಬ್ಬರಿಗೆ ಪದ್ಮಭೂಷಣ ಮತ್ತು ಎಂಟು ಮಂದಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಲಾಗಿದೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ, ಭಾರತ ತಂಡ ಕಳೆದ ವರ್ಷ 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ಹೀಗೆ ರೋಹಿತ್ ಶರ್ಮಾ ಎರಡು ವರ್ಷಗಳಲ್ಲಿ ಭಾರತ ತಂಡವನ್ನು ಎರಡನೇ ಐಸಿಸಿ ಟ್ರೋಫಿಗೆ ಮುನ್ನಡೆಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಇತ್ತ ಕಳೆದ ನವೆಂಬರ್‌ನಲ್ಲಿ, ಹರ್ಮನ್‌ಪ್ರೀತ್ ಕೌರ್ ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಹಿಂದೆಂದೂ ಕಾಣದ ಸಾಧನೆ ಮಾಡಿದ್ದರು. ಹರ್ಮನ್‌ಪ್ರೀತ್ ನಾಯಕತ್ವದಲ್ಲಿ ಭಾರತೀಯ ಮಹಿಳಾ ತಂಡವು ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಇದು ಮಹಿಳಾ ಕ್ರಿಕೆಟ್‌ನಲ್ಲಿ ಭಾರತದ ಮೊದಲ ಐಸಿಸಿ ಟ್ರೋಫಿಯಾಗಿದೆ. ಇದೀಗ ಈ ಸಾಧನೆಗಳಿಗಾಗಿ, ಈ ಇಬ್ಬರು ದಿಗ್ಗಜರನ್ನು ಗೌರವಿಸಲಾಗಿದೆ.

ಪದ್ಮ ಪ್ರಶಸ್ತಿಗೆ ಭಾಜನರಾದವರ ಪಟ್ಟಿ

  1. ವಿಜಯ್ ಅಮೃತರಾಜ್ (ಟೆನಿಸ್) – ಪದ್ಮಭೂಷಣ
  2. ರೋಹಿತ್ ಶರ್ಮಾ (ಕ್ರಿಕೆಟ್) – ಪದ್ಮಶ್ರೀ
  3. ಹರ್ಮನ್ಪ್ರೀತ್ ಕೌರ್ (ಕ್ರಿಕೆಟ್) – ಪದ್ಮಶ್ರೀ
  4. ಪ್ರವೀಣ್ ಕುಮಾರ್ (ಪ್ಯಾರಾ-ಅಥ್ಲೆಟಿಕ್ಸ್) – ಪದ್ಮಶ್ರೀ
  5. ಬಲದೇವ್ ಸಿಂಗ್ (ಹಾಕಿ) – ಪದ್ಮಶ್ರೀ
  6. ಭಗವಾನ್‌ದಾಸ್ ರಾಯ್ಕ್ವಾರ್ (ಸಾಂಪ್ರದಾಯಿಕ ಸಮರ ಕಲೆಗಳು) – ಪದ್ಮಶ್ರೀ
  7. ಕೆ.ಪಜನಿವೇಲ್ (ಸಿಲಂಬಂ)- ಪದ್ಮಶ್ರೀ
  8. ಸವಿತಾ ಪುನಿಯಾ (ಹಾಕಿ)- ಪದ್ಮಶ್ರೀ
  9. ವ್ಲಾಡಿಮಿರ್ ಮೆಸ್ಟ್ವಿರಿಶ್ವಿಲಿ (ನಿಧನ) – ಪದ್ಮಶ್ರೀ (ಕುಸ್ತಿ ತರಬೇತುದಾರ)

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Belagavi: ಚೋರ್ಲಾ ಘಾಟ್‌ ರಾಬರಿ ರಹಸ್ಯ ಬಿಚ್ಚಿಟ್ಟ ಪೊಲೀಸ್​​ ವರಿಷ್ಠಾಧಿಕಾರಿ – Kannada News | Chorla Ghat 400 Crore Robbery: Karnataka Police Seeks Maharashtra Cooperation Amidst Probe

ಬೆಳಗಾವಿ, ಜನವರಿ 25: ಕರ್ನಾಟಕ-ಗೋವಾ ಗಡಿಯಲ್ಲಿ 400 ಕೋಟಿ ರಾಬರಿ ಪ್ರಕರಣ ಸಂಬಂಧ ಬೆಳಗಾವಿ ಎಸ್ಪಿ ಕೆ. ರಾಮರಾಜನ್ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಜ.6ರಂದು ನಾಸಿಕ್ ಜಿಲ್ಲಾ ವರಿಷ್ಠಾಧಿಕಾರಿಯಿಂದ ನಮಗೆ ಪತ್ರ ಬಂದಿದ್ದು, ಚೋರ್ಲಾ ಘಾಟ್​​ನಲ್ಲಿ ರಾಬರಿಯಾಗಿರುವ ವಿಷಯ ಅದರಲ್ಲಿ ತಿಳಿಸಲಾಗಿತ್ತು. ರಾಬರಿ ಆದ ಹಣದ ಮೊತ್ತ ನಾಲ್ಕನೂರು ಕೋಟಿ ಆಗಿರಬಹುದು ಅಂತಾ ಪತ್ರದಲ್ಲಿ ಇತ್ತು. ಈ ಕಾರಣಕ್ಕೆ ನಮ್ಮ ಖಾನಾಪುರದ ಸಬ್ ಇನ್ಸ್ಪೆಕ್ಟರ್ ಸೇರಿ ಒಂದು ತಂಡವನ್ನ ಕಳುಹಿಸಿದ್ದೇವೆ. ಎಸ್ಐಟಿ ತಂಡ ಕೂಡ ರಚನೆ ಆಗಿದೆ. ಘಟನೆ ಬಗ್ಗೆ ಯಾರು ದೂರು ನೀಡಿದರೂ ಪಡೆಯುತ್ತೇವೆ.  ಈ ಬಗ್ಗೆ ಮಹಾರಾಷ್ಟ್ರ ಪೊಲೀಸರು ತನಿಖೆ ಮಾಡುತ್ತಿದ್ದುಮ ನಾವು ಸಹಕಾರ ಕೊಡುತ್ತೇವೆ. ಚೋರ್ಲಾ ಘಾಟ್ ಮೂರು ರಾಜ್ಯಗಳ ವ್ಯಾಪ್ತಿಯಲ್ಲಿ ಬರಲಿದೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪದ್ಮ ಪ್ರಶಸ್ತಿ: ಚಿತ್ರರಂಗದ ಯಾವೆಲ್ಲ ಸಾಧಕರಿಗೆ ಸಿಕ್ಕಿತು ಗೌರವ? – Kannada News | Here is the list of entertainment industry people who got Padma awards 2026

ಭಾರತದ ಅತ್ಯುತ್ತಮ ನಾಗರೀಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಪದ್ಮಶ್ರೀ, ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರವು ಘೋಷಣೆ ಮಾಡಿದೆ. ಕಲೆ, ಸಮಾಜ ಸೇವೆ, ಸಾಹಿತ್ಯ, ಶಿಕ್ಷಣ, ಆಡಳಿತ, ವಿಜ್ಞಾನ, ಕ್ರೀಡೆ, ಉದ್ಯಮ, ವೈದ್ಯಕೀಯ ಕ್ಷೇತ್ರ ಹೀಗೆ ಹಲವು ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡಿರುವ ವ್ಯಕ್ತಿಗೆ ಈ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ನೀಡುತ್ತಾ ಬಂದಿದೆ. 2026ರ ಸಾಲಿನ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಕಲಾ ವಿಭಾಗದಲ್ಲಿ ಈ ಬಾರಿ ಹಲವು ಸಿನಿಮಾ ನಟ, ನಟಿಯರಿಗೆ ಪದ್ಮ ಪ್ರಶಸ್ತಿಗಳು ದೊರಕಿವೆ, ಇಲ್ಲಿದೆ ನೋಡಿ ಪಟ್ಟಿ…

ನಟ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ ಪದ್ಮ ವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಧರ್ಮೇಂದ್ರ ಅವರು 2025ರ ನವೆಂಬರ್​​ನಲ್ಲಿ ನಿಧನ ಹೊಂದಿದರು. ತಮಿಳುನಾಡು ಮೂಲಕ ವೈಯಲಿನ್ ವಾದಕಿ ಎನ್ ರಾಜನ್ ಅವರಿಗೂ ಸಹ ಪದ್ಮ ವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಪದ್ಮ ವಿಭೂಷಣ ದೊರಕಿರುವ ಐವರಲ್ಲಿ ಕಲಾ ಕ್ಷೇತ್ರಕ್ಕೆ ಎರಡು ಪ್ರಶಸ್ತಿ ಬಂದಿರುವುದು ವಿಶೇಷ.

ಇದನ್ನೂ ಓದಿ:ರಾಜ್ಯ ಕಡಲೆ ಬೆಳೆಗಾರರ ಬೆನ್ನಿಗೆ ನಿಂತ ಕೇಂದ್ರ ಸರ್ಕಾರ, ಬೆಂಬಲ ಬೆಲೆ ಎಷ್ಟು?

ಒಟ್ಟು 13 ಪದ್ಮ ಭೂಷಣ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಅವುಗಳಲ್ಲಿ ನಾಲ್ಕು ಕಲಾ ವಿಭಾಗಕ್ಕೆ ನೀಡಲಾಗಿದೆ. ಹಿಂದಿ, ಕನ್ನಡ ಸೇರಿದಂತೆ ದೇಶದ ಹಲವಾರು ಭಾಷೆಗಳಲ್ಲಿ ಹಾಡಿರುವ ಗಾಯಕಿ ಅಲ್ಕಾ ಯಾಗ್ನಿಕ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಲಾಗಿದೆ. ದೇಶದ ಅತ್ಯುತ್ತಮ ನಟ ಮತ್ತು ಅಪರೂಪದ ಸೂಪರ್ ಸ್ಟಾರ್ ಆಗಿರುವ ಮಲಯಾಳಂನ ಖ್ಯಾತ ನಟ ಮಮ್ಮುಟಿ ಅವರಿಗೆ ಪದ್ಮ ಭೂಷಣ ಗೌರವ ಧಕ್ಕಿದೆ. ಭಾರತದ ಜಾಹೀರಾತು ಕ್ಷೇತ್ರದ ದಿಗ್ಗಜ ಪಿಯೂಷ್ ಪಾಂಡೆ ಅವರಿಗೆ ಮರಣೋತ್ತರವಾಗಿ ಪದ್ಮ ಭೂಷಣ ಗೌರವ ಧಕ್ಕಿದೆ. ಇನ್ನು ಕರ್ನಾಟಕದ ಶತಾವಧಾನಿ ಗಣೇಶ್ ಅವರಿಗೆ ಕಲಾ ಕ್ಷೇತ್ರದ ಸಾಧನೆಗಾಗಿ ಪದ್ಮ ಭೂಷಣ ಪ್ರಶಸ್ತಿ ಘೋಷಿಸಲಾಗಿದೆ.

ತೆಲುಗಿನ ಹಿರಿಯ ನಟ ರಾಜೇಂದ್ರ ಪ್ರಸಾದ್ ಹಾಗೂ ಮಾಗಂಟಿ ಮುರಳಿ ಮೋಹನ್ ಸೇರಿದಂತೆ ಇನ್ನೂ ಕೆಲವು ಕಲಾವಿದರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಕಳೆದ ವರ್ಷ ಹಠಾತ್ತಾಗಿ ನಿಧನ ಹೊಂದಿದ ಬಾಲಿವುಡ್​ನ ಖ್ಯಾತ ನಟ, ನಿರ್ದೇಶಕ ಸತೀಶ್ ಶಾ ಅವರಿಗೂ ಸಹ ಮರೋಣತ್ತರ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:10 pm, Sun, 25 January 26

Source link

ವೀರ ಪ್ರಶಸ್ತಿ ವಿಜೇತರಿಂದ ಹಿಡಿದು ಸ್ತಬ್ಧಚಿತ್ರಗಳ ಮೆರವಣಿಗೆ, ಈ ಬಾರಿಯ ರಿಪಬ್ಲಿಕ್ ಪೆರೇಡ್ ಅದ್ಭುತ – Kannada News | 77th Republic Day Parade: Kartavya Path set to unveil unique mix of 150 years of ‘Vande Mataram’ and the nation’s progress & military might, immersed in rich cultural diversity and Jan Bhagidari

ನವದೆಹಲಿ, ಜನವರಿ 25: ನಾಳೆ ಸೋಮವಾರ ಭಾರತದ 77ನೇ ಗಣತಂತ್ರ ದಿನ (Republic Day). ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿನ ಕರ್ತವ್ಯ ಪಥದಲ್ಲಿ ರಾಷ್ಟ್ರೀಯ ಸಂಭ್ರಮ. ರಾಷ್ಟ್ರಪತಿ ದ್ರೌಪದಿ ಮುರ್ಮು ನೇತೃತ್ವದಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯಲಿವೆ. ದೇಶದ ಮಿಲಿಟರಿ ಶಕ್ತಿಯ ದೈತ್ಯ ದರ್ಶನಾಗಲಿದೆ. ಯುವಜನರು, ಕಲಾವಿದರು, ಕ್ರೀಡಾಪಟುಗಳು, ಕಾರ್ಮಿಕರು, ಮಹಿಳೆಯರು ಈ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ, ಸಾಕ್ಷಿಯೂ ಆಗಲಿದ್ದಾರೆ. ಯೂರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವೋನ್ ಡರ್ ಲೆಯೆನ್ (Ursula Von Der Leyen) ಮತ್ತು ಯೂರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೋ ಕೋಸ್ಟ ಅವರು ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದಾರೆ. ಭಾರತದ ಈ ಮಹೋನ್ನತ ಸಂಭ್ರಮದಲ್ಲಿ ಏನೆಲ್ಲಾ ಇರಲಿದೆ? ಇಲ್ಲಿದೆ ಒಂದಷ್ಟು ಮಾಹಿತಿ…

ಗಣರಾಜ್ಯೋತ್ಸವ ಪೆರೇಡ್…

ಜನವರಿ 26ರಂದು ಬೆಳಗ್ಗೆ 10:30ಕ್ಕೆ ಕಾರ್ಯಕ್ರಮ ಶುರುವಾಗುತ್ತದೆ. ಪ್ರಧಾನಿ ಮೋದಿ ಅವರು ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಹುತಾತ್ಮ ಸೈನಿಕರಿಗೆ ನಮನ ಸಲ್ಲಿಸುತ್ತಾರೆ. ನಂತರ ಕರ್ತವ್ಯ ಪಥಕ್ಕೆ ತೆರಳುತ್ತಾರೆ. ನಂತರ ರಾಷ್ಟ್ರಪತಿಗಳು ಹಾಗೂ ಮುಖ್ಯ ಅತಿಥಿಗಳನ್ನು ಬರಮಾಡಿಕೊಳ್ಳಲಾಗುತ್ತದೆ.

ಪೆರೇಡ್​ಗೆ ಮುನ್ನ ನೂರು ಸಾಂಸ್ಕೃತಿಕ ಕಲಾವಿದರಿಂದ ವಿವಿಧತೆಯಲ್ಲಿ ಏಕತೆ ಥೀಮ್​ನಲ್ಲಿ ಪ್ರದರ್ಶನ ಇರುತ್ತದೆ. ನಂತರ ಪೆರೇಡ್ ಮೊದಲುಗೊಳ್ಳುತ್ತದೆ. ಪೆರೇಡ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಭವನೀಶ್ ಕುಮಾರ್ ನೇತೃತ್ವದಲ್ಲಿ ಮೊದಲ ಪೆರೇಡ್ ನಡೆಯುತ್ತದೆ. ರಾಷ್ಟ್ರಪತಿಗಳು ವಂದನೆ ಸ್ವೀಕರಿಸುತ್ತಾರೆ.

ಇದನ್ನೂ ಓದಿ: ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ, ಭುಗಿಲೆದ್ದ ಆಕ್ರೋಶ

ಪರಮವೀರ್ ಚಕ್ರ ಇತ್ಯಾದಿ ಪ್ರಶಸ್ತಿ ವಿಜೇತರಿಂದ ಪೆರೇಡ್ ಇರುತ್ತದೆ. ಐರೋಪ್ಯ ಒಕ್ಕೂಟ, ಭಾರತೀಯ ಭೂಸೇನಾ ಪಡೆ, ವಾಯುಪಡೆ, ನೌಕಾಪಡೆ, ಕರಾವಳಿ ಕಾವಲುಪಡೆ, ಡಿಆರ್​ಡಿಒ ಮೊದಲಾದವರ ಪೆರೇಡ್​ಗಳು ನಡೆಯುತ್ತವೆ. ಧ್ರುವ್, ರುದ್ರ ಹೆಲಿಕಾಪ್ಟರ್​ಗಳು, ಭೀಷ್ಮಾ ಟ್ಯಾಂಕ್, ಅರ್ಜುನ್ ಟ್ಯಾಂಕ್, ಅಪಾಚೆ ಎಎಚ್-64ಇ, ಪ್ರಚಂಡ್ ಹೆಲಿಕಾಪ್ಟರ್, ನಾಗ್ ಮಿಸೈಲ್ ಸಿಸ್ಟಂ, ಅಜಯಕೇತು, ಧ್ವಂಸಕ್, ಆಕಾಶ್ ಮಿಸೈಲ್, ಬ್ರಹ್ಮೋಸ್ ಇತ್ಯಾದಿ ಭಾರತೀಯ ಸೇನೆಗಳ ಪ್ರಬಲ ಶಸ್ತ್ರಾಸ್ತ್ರಗಳ ಪ್ರದರ್ಶನ ಈ ಸಂದರ್ಭದಲ್ಲಿ ಕಾಣಬಹುದು.

ಮುಧೋಳ ನಾಯಿ ಸೇರಿದಂತೆ ಭಾರತೀಯ ತಳಿಯ ಹಾಗೂ ವಿಶೇಷ ತರಬೇತಿ ಪಡೆದ, ಹಾಗೂ ಜಿಪಿಎಸ್, ರೇಡಿಯೋ ಇತ್ಯಾದಿ ಉಪಕರಣಗಳನ್ನು ತೊಟ್ಟ ಶ್ವಾನಗಳ ಪಡೆಯೂ ಪೆರೇಡ್ ಮಾಡಲಿದೆ.

30 ಸ್ವಬ್ದ ಚಿತ್ರಗಳ ಮೆರವಣಿಗೆ

ಈ ಬಾರಿಯ ರಿಪಬ್ಲಿಕ್ ಪೆರೇಡ್​ನಲ್ಲಿ 30 ಸ್ತಬ್ದಚಿತ್ರಗಳ (Tableau) ಮೆರವಣಿಗೆ ನಡೆಯಲಿದೆ. ಇದರಲ್ಲಿ 17 ರಾಜ್ಯಗಳದ್ದು ಇರುತ್ತದೆ. ಇನ್ನುಳಿದ 13 ಸ್ತಬ್ದಚಿತ್ರಗಳು ವಿವಿಧ ಇಲಾಖೆಗಳದ್ದಾಗಿರುತ್ತವೆ.

ಇದನ್ನೂ ಓದಿ: ಈ ಬಾರಿ ಗಣರಾಜ್ಯೋತ್ಸವದಲ್ಲಿ ಕೇವಲ ಮಿಲಿಟರಿ ಮೆರವಣಿಗೆಯಲ್ಲ, ಇರಲಿದೆ ಯುದ್ಧಭೂಮಿ

ವಂದೇ ಮಾತರಂ 150 ವರ್ಷ

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ವತಿಯಿಂದ 150 ವರ್ಷಗಳ ವಂದೇ ಮಾತರಂ ಸಂಸ್ಮರಣಾರ್ಥ ಸ್ತಬ್ದಚಿತ್ರದ ಮೆರವಣಿಗೆ ಇರುತ್ತದೆ. ಕರ್ನಾಟಕವೂ ಸೇರಿದಂತೆ ಎಲ್ಲಾ ರಾಜ್ಯಗಳಿಂದ ಆಯ್ದ 2,500 ಕಲಾವಿದರರಿಂದ ವಂದೇ ಮಾತರಂ ಥೀಮ್​ನಲ್ಲಿ ಸಾಂಸ್ಕೃತಿಕ ಪ್ರದರ್ಶನ ಇರಲಿದೆ.

10,000 ವಿಶೇಷ ಅತಿಥಿಗಳು…

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು, ಸೇವೆ ಸಲ್ಲಿಸಿದವರನ್ನು ರಿಪಬ್ಲಿಕ್ ಪೆರೇಡ್​ಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಪ್ಯಾರಾ ಅಥ್ಲೀಟ್ ವಿಶ್ವ ಚಾಂಪಿಯನ್​ಶಿಪ್ ವಿಜೇತರು, ನೈಸರ್ಗಿಕ ಕೃಷಿಕರು, ಅತ್ಯುತ್ತಮ ಕೃಷಿ ಸಾಧಕರು, ಸರ್ಕಾರಿ ಸ್ಕೀಮ್​ಗಳ ಆಯ್ದ ಫಲಾನುಭವಿಗಳು, ಸಂಶೋಧಕರು, ವಿಜ್ಞಾನಿಗಳು, ಅಟಲ್ ಇನ್ನೋವೇಶನ್ ಮಿಷನ್​ನ ಅತ್ಯುತ್ತಮ ವಿದ್ಯಾರ್ಥಿಗಳು, ವಿವಿಧ ಟೂರ್ನಿಗಳ ವಿಜೇತರು, ಅತ್ಯುತ್ತಮ ಸ್ಟಾರ್ಟಪ್​ಗಳು, ಅತ್ಯುತ್ತಮ ಎಂಎಸ್​ಎಂಇಗಳು, ವೀರ್ ಗಾಥ ಪ್ರಾಜೆಕ್ಟ್ ವಿಜೇತರು, ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತರು, ಪಿಎಂ ಸ್ವನಿಧಿ ಯೋಜನೆಯ ಫಲಾನುಭವಿ ಅಂಗಡಿ ಮಾಲೀಕರು, ಪಿಎಂ ಇಂಟರ್ನ್ಶಿಪ್ ಸ್ಕೀಮ್​ನ ಅತ್ಯುತ್ತಮ ಇಂಟರ್ನ್​ಗಳು, ನ್ಯಾಷನಲ್ ಬ್ಯಾಂಡ್ ಕಾಂಪಿಟೀಶನ್ ವಿಜೇತ ಮಕ್ಕಳು, ಮನ್ ಕೀ ಬಾತ್ ಭಾಗಿದಾರರು ಹೀಗೆ ಜನರು ವಿಶೇಷ ಅತಿಥಿಗಳಾಗಿ ಇರುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ; ತಂಡದಲ್ಲಿ 2 ಬದಲಾವಣೆ – Kannada News | IND vs NZ 3rd T20: India Aims to Seal Series in Guwahati; Playing XI and Match Preview

ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವು ಇದುವರೆಗೆ ಭರ್ಜರಿ ಪ್ರದರ್ಶನ ನೀಡುವ ಮೂಲಕ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿದೆ. ಇದೀಗ ಸರಣಿಯ ಮೂರನೇ ಪಂದ್ಯ ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಅಜೇಯ ಮುನ್ನಡೆ ಸಾಧಿಸುವುದರೊಂದಿಗೆ ಸರಣಿಯನ್ನು ವಶಪಡಿಸಿಕೊಳ್ಳುವ ಇರಾದೆಯಲ್ಲಿದೆ. ಇತ್ತ ಸರಣಿಯಲ್ಲಿ ಉಳಿಯಲು ನ್ಯೂಜಿಲೆಂಡ್ ಯಾವುದೇ ಬೆಲೆ ತೆತ್ತಾದರೂ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.

ಟಾಸ್ ಗೆದ್ದ ಟೀಂ ಇಂಡಿಯಾ

ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್‌ ಮಾಡುತ್ತಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್‌ ಮಾಡುವ ತಂಡಕ್ಕೆ ಇಬ್ಬನಿಯ ನೆರವು ಸಿಗುವುದರಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸೂರ್ಯ ಹೇಳಿದ್ದಾರೆ. ಇದರೊಂದಿಗೆ ಉಭಯ ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದ್ದು, ಭಾರತ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದೆ.ಅರ್ಷದೀಪ್ ಸಿಂಗ್ ಹಾಗೂ ವರುಣ್ ಚಕ್ರವರ್ತಿ ಈ ಪಂದ್ಯದಿಂದ ಹೊರಗುಳಿದಿದ್ದು, ಅವರ ಸ್ಥಾನದಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ರವಿ ಬಿಷ್ಣೋಯಿ ಆಡಲಿದ್ದಾರೆ.

ಗುವಾಹಟಿಯಲ್ಲಿ ಟೀಂ ಇಂಡಿಯಾ ದಾಖಲೆ

ಭಾರತವು ಇಲ್ಲಿಯವರೆಗೆ ಗುವಾಹಟಿಯಲ್ಲಿ ನಾಲ್ಕು ಟಿ20ಪಂದ್ಯಗಳನ್ನು ಆಡಿದೆ. ಈ ಅವಧಿಯಲ್ಲಿ ಟೀಂ ಇಂಡಿಯಾ ಕೇವಲ ಒಂದು ಪಂದ್ಯವನ್ನು ಗೆದ್ದಿದ್ದು, ಎರಡರಲ್ಲಿ ಸೋತಿದೆ ಮತ್ತು ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಭಾರತ ಕೊನೆಯದಾಗಿ 2023 ರಲ್ಲಿ ಗುವಾಹಟಿಯಲ್ಲಿ ಟಿ20ಪಂದ್ಯವನ್ನು ಆಡಿತ್ತು, ಆ ಸಮಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. 222 ರನ್ ಬಾರಿಸಿದ್ದರೂ, ಟೀಂ ಇಂಡಿಯಾಕ್ಕೆ ಆಸ್ಟ್ರೇಲಿಯಾವನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ.

ಉಭಯ ತಂಡಗಳು

ಭಾರತ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಹರ್ಷಿತ್ ರಾಣಾ, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಮತ್ತು ಜಸ್ಪ್ರೀತ್ ಬುಮ್ರಾ.

ನ್ಯೂಜಿಲೆಂಡ್ ತಂಡ: ಡೆವೊನ್ ಕಾನ್ವೇ, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಕೈಲ್ ಜೇಮಿಸನ್, ಮ್ಯಾಟ್ ಹೆನ್ರಿ, ಇಶ್ ಸೋಧಿ ಮತ್ತು ಜಾಕೋಬ್ ಡಫ್ಫಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಬಿಎಫ್​​ಸಿ ಸಮಸ್ಯೆ, ಸಿಬಿಐ ವಿಚಾರಣೆ: ಅಭಿಮಾನಿಗಳಿಗೆ ವಿಜಯ್ ಹೇಳಿದ್ದೇನು? – Kannada News | Thalapahy Vijay indirectly talks about political pressure on him

ರಾಜಕೀಯಕ್ಕೆ ಧುಮುಕಿದ ಮೇಲೆ ದಳಪತಿ ವಿಜಯ್ (Thalapathy Vijay) ಅವರಿಗೆ ಒಂದರ ಹಿಂದೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ರಾಜಕೀಯದಲ್ಲಿ ಅವೆಲ್ಲ ಸಹಜವೂ ಹೌದು. ಮೊದಲಿಗೆ ಕರೂರು ಕಾಲ್ತುಳಿತ, ಈಗ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ಗೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಲು ಹಿಂದೇಟು, ಇದರ ಜೊತೆಗೆ ಸಿಬಿಐ ವಿಚಾರಣೆಗಳು ಒಂದರ ಹಿಂದೊಂದು ವಿಜಯ್ ಅವರನ್ನು ಕಾಡುತ್ತಿವೆ. ಇತ್ತೀಚೆಗಷ್ಟೆ ವಿಜಯ್ ಅವರಿಗೆ ಕೇಂದ್ರ ಚುನಾವಣಾ ಆಯೋಗವು ‘ವಿಶಲ್’ ಅನ್ನು ಚುನಾವಣೆ ಚಿಹ್ನೆಯಾಗಿ ನೀಡಿದೆ. ಚುನಾವಣಾ ಚಿಹ್ನೆಯ ಪ್ರಚಾರಕ್ಕಾಗಿ ಆಯೋಜಿಸಿದ್ದ ಬೃಹತ್ ಸಭೆಯಲ್ಲಿ ಮಾತನಾಡಿದ ವಿಜಯ್, ತಮ್ಮನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಲ್ಲದೆ, ಅಭಿಮಾನಿಗಳಿಗೆ ಭರವಸೆಯನ್ನು ಸಹ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್, ‘ಕಳೆದ 30 ವರ್ಷಗಳಲ್ಲಿ ಈ ರಾಜಕೀಯ ಪಕ್ಷಗಳು ಜನರನ್ನು ನಿರ್ಲಕ್ಷ್ಯ ಮಾಡಿವೆ. ನನ್ನ ವೃತ್ತಿ ಜೀವನದ ಪೀಕ್​​ನಲ್ಲಿದ್ದಾಗಲೇ ಜನಗೆ ಈ ಸ್ಥಾನ ನೀಡಿದ್ದಾರೆ. ಅದನ್ನು ನಾನು ಸದುಪಯೋಗ ಪಡಿಸಿಕೊಳ್ಳುತ್ತೇನೆ’ ಎಂದ ವಿಜಯ್, ತಮ್ಮ ಮೇಲೆ ಬೀಳುತ್ತಿರುವ ರಾಜಕೀಯ ಒತ್ತಡಗಳ ಬಗ್ಗೆ ಮಾತನಾಡಿ, ‘ನಾನು ಯಾರಿಗೂ ಬಗ್ಗುವುದಿಲ್ಲ, ಯಾವ ಒತ್ತಡಕ್ಕೂ ಮಣಿಯುವುದಿಲ್ಲ’ ಎಂದಿದ್ದಾರೆ. ಅಲ್ಲದೆ, ತಮ್ಮ ಅಭಿಮಾನಿಗಳನ್ನುದ್ದೇಶಿಸಿ, ‘ನನ್ನ ಮುಖ ನೋಡಿ, ಈ ಮುಖ ದಣಿದಂತೆ, ಒತ್ತಡದಲ್ಲಿ ಇರುವಂತೆ ನಿಮಗೆ ಕಾಣುತ್ತದೆಯೇ’ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:ಕಾಲ್ತುಳಿತ ದುರಂತದ ಬಳಿಕವೂ ಮತ್ತೆ ದಾಖಲೆ ಪ್ರಮಾಣದಲ್ಲಿ ಜನ ಸೇರಿಸಲು ಸಜ್ಜಾದ ದಳಪತಿ ವಿಜಯ್

ಆ ಮೂಲಕ ತಾವು ಯಾವುದೇ ಒತ್ತಡಗಳಿಗೂ ಬಗ್ಗುವುದಿಲ್ಲ ಮತ್ತು ಈಗ ಬರುತ್ತಿರುವ ಸತತ ರಾಜಕೀಯ ಒತ್ತಡಗಳಿಂದ ತಾವು ಅಧೀರರಾಗಿಲ್ಲ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ರಾಜಕೀಯ ಒತ್ತಡಗಳಿಂದಾಗಿ ವಿಜಯ್​​ ಅಧೀರರಾಗಿದ್ದಾರೆ, ಅವರು ರಾಜಕೀಯದಿಂದ ಹೆಜ್ಜೆ ಹಿಂದಿಡುವ ಅಥವಾ ಬೇರೊಂದು ಪಕ್ಷದೊಂದಿಗೆ ಸಂಧಾನ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ಸುದ್ದಿಗಳು ಇತ್ತೀಚೆಗೆ ಹರಿದಾಡಿದ್ದವು. ಅದೇ ಕಾರಣಕ್ಕೆ ವಿಜಯ್ ಅವರು ಮೇಲ್ಕಂಡಂತೆ ಮಾತುಗಳನ್ನಾಡಿದ್ದಾರೆ.

‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನಿರಾಕರಿಸಿದೆ. ನಿರ್ಮಾಪಕರು ನ್ಯಾಯಾಲಯದಲ್ಲಿ ಹೋರಾಟದಲ್ಲಿ ಜಾರಿಯಲ್ಲಿಟ್ಟಿದ್ದಾರೆ. ಆದರೆ ನ್ಯಾಯಾಲಯದಲ್ಲಿಯೂ ಸಹ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಜನವರಿ 27ರಂದು ಸಿನಿಮಾದ ಸಿಬಿಎಫ್​​ಸಿ ಪ್ರಮಾಣ ಪತ್ರದ ಬಗೆಗಿನ ತೀರ್ಪು ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿದೆ. ಅಂದು ‘ಜನ ನಾಯಗನ್’ ಭವಿಷ್ಯ ಏನಾಗಲಿದೆಯೋ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Republic Day 2026: ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜ ಹಾರಿಸುವಾಗ ಪಾಲಿಸಬೇಕಾದ ನಿಯಮಗಳೇನು? – Kannada News | Republic Day 2026: What are the rules to be followed while hoisting the flag on Republic Day?

ದೇಶದಲ್ಲಿ ಸ್ವಾತಂತ್ರ್ಯ ದಿನವನ್ನು ಹೇಗೆ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆಯೋ ಅದೇ ರೀತಿ ಜನವರಿ 26 ರಂದು ಗಣರಾಜ್ಯೋತ್ಸವ ದಿನವನ್ನು (Republic Day) ಸಹ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಬಾರಿಯ 77 ನೇ ಗಣರಾಜ್ಯೋತ್ಸವದ ಆಚರಣೆಗೂ ದೇಶಾದ್ಯಂತ ಸಿದ್ಧತೆಗಳು ನಡೆಯುತ್ತಿವೆ. ಈ ದಿನದಂದು, ಶಾಲಾ ಕಾಲೇಜುಗಳಲ್ಲಿ ಹಾಗೂ ವಿವಿಧ ಸರ್ಕಾರಿ ಕಚೇರಿಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಧ್ವಜಾರೋಹಣ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.  ಆದ್ದರಿಂದ, ತ್ರಿವರ್ಣ ಧ್ವಜಕ್ಕೆ ಅವಮಾನವಾಗದಂತೆ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಬೇಕಾಗುತ್ತದೆ. ಮತ್ತು ಮುಖ್ಯವಾಗಿ ದೇಶದ ಪ್ರತಿಯೊಬ್ಬರೂ ಸಹ ತ್ರಿವರ್ಣ ಧ್ವಜವನ್ನು ಹಾರಿಸುವಾಗ ಮತ್ತು ಇಳಿಸುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿಯಲೇಬೇಕು.

ತ್ರಿವರ್ಣ ಧ್ವಜವನ್ನು ಹಾರಿಸುವಾಗ, ಇಳಿಸುವಾಗ ಪಾಲಿಸಬೇಕಾದ ನಿಯಮಗಳೇನು?

  • ಧ್ವಜವನ್ನು ಯಾವಾಗಲೂ ಗೌರವಯುತವಾಗಿ ಹಾರಿಸಬೇಕು ಮತ್ತು ಘನತೆಯಿಂದ ನಿಧಾನವಾಗಿ ಕೆಳಗಿಳಿಸಬೇಕು. ಕೆಳಗಿಳಿಸಿದ ನಂತರ ಅದನ್ನು ಮಡಚಿ ಸುರಕ್ಷಿತ ಸ್ಥಳದಲ್ಲಿಡಬೇಕು.
  •  ತ್ರಿವರ್ಣ ಧ್ವಜವನ್ನು ಎಂದಿಗೂ ತಲೆ ಕೆಳಗಾಗಿ ಪ್ರದರ್ಶಿಸಬಾರದು. ಮೇಲಿನ ಫಲಕದ ಬಣ್ಣವು ಕೇಸರಿ, ಮಧ್ಯ ಬಿಳಿ ಮತ್ತು ಕೆಳಗಿನ ಫಲಕವು ಹಸಿರು ಬಣ್ಣದ್ದಾಗಿರಬೇಕು.
  • ಪ್ರದರ್ಶನದಲ್ಲಿರುವ ತ್ರಿವರ್ಣ ಧ್ವಜವು ಗೌರವದ ಸ್ಥಾನದಲ್ಲಿರುವಂತೆ ನೋಡಿಕೊಳ್ಳಿ.
  • ಹಾನಿಗೊಳಗಾದ ಅಥವಾ ಸ್ವಚ್ಛವಾಗಿರದ ಧ್ವಜವನ್ನು ಎಂದಿಗೂ ಪ್ರದರ್ಶಿಸಬಾರದು. ನೀವು ಹಾರಿಸುವ ರಾಷ್ಟ್ರ ಧ್ವಜ ಪರಿಪೂರ್ಣ ಸ್ಥಿತಿಯಲ್ಲಿ ಇರಬೇಕು.
  • ಧ್ವಜ ಸಂಹಿತೆಯ ಪ್ರಕಾರ, ಕೈಯಿಂದ ನೇಯ್ದ, ಯಂತ್ರದಿಂದ ತಯಾರಿಸಿದ ಹತ್ತಿ, ಪಾಲಿಯೆಸ್ಟರ್, ಉಣ್ಣೆ ಅಥವಾ ರೇಷ್ಮೆ ಖಾದಿ ಬಂಟಿಂಗ್‌ನಿಂದ ತಯಾರಿಸಿದ ರಾಷ್ಟ್ರ ಧ್ವಜಗಳನ್ನು ಹಾರಿಸಬಹುದು.
  • ಧ್ವಜದ ಗಾತ್ರ ಏನೇ ಇರಲಿ ಧ್ವಜ ಸಂಹಿತೆಯ ಪ್ರಕಾರ ತ್ರಿವರ್ಣ ಧ್ವಜ 3:2 ಅನುಪಾತದಲ್ಲಿರಬೇಕು. ಮತ್ತು ಧ್ವಜದ ಮಧ್ಯ ಭಾಗವು 24 ಸಮಾನ ಅಂತರದ ಗೆರೆಗಳೊಂದಿಗೆ ಕಡು ನೀಲಿ ಬಣ್ಣದಲ್ಲಿನ ಅಶೋಕ ಚಕ್ರವನ್ನು ಹೊಂದಿರಬೇಕು.
  • ಮನೆಯಲ್ಲಾಗಲಿ ಅಥವಾ ಕಚೇರಿಯಲ್ಲಾಗಿರಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದರೆ, ಧ್ವಜ ವಾಲದಂತೆ ಮತ್ತು ನೆಲ ಅಥವಾ ನೀರನ್ನು ಮುಟ್ಟದಂತೆ ನೋಡಿಕೊಳ್ಳಿ.
  • ಒಂದು ವೇಳೆ ತ್ರಿವರ್ಣ ಧ್ವಜ ಹಾನಿಗೊಳಗಾದರೆ ಅದನ್ನು ಕಸದ ಬುಟ್ಟಿ ಅಥವಾ ಇನ್ನಾವುದೇ ಸ್ಥಳದಲ್ಲಿ ಎಸೆಯಬಾರದು ಬದಲಿಗೆ ಗೌರವಯುತವಾಗಿ ಸುಡಬೇಕು ಅಥವಾ ಹೂಳಬೇಕು. ಸುಟ್ಟ ನಂತರ ಆ ಬೂದಿಯನ್ನು ನದಿ ನೀರಿನಲ್ಲಿ ಬಿಡಬೇಕು.
  • ಧ್ವಜವನ್ನು ಸಾರ್ವಜನಿಕವಾಗಿ ಉದ್ದೇಶಪೂರ್ವಕವಾಗಿ ಹರಿದು ಹಾಕಬಾರದು, ಸುಡಬಾರದು ಅಥವಾ ವಿರೂಪಗೊಳಿಸಬಾರದು, ಏಕೆಂದರೆ ಇದು ಅಪರಾಧವಾಗಿದೆ.

ಇದನ್ನೂ ಓದಿ: ಜನವರಿ 26 ರಂದೇ ಏಕೆ ಗಣರಾಜ್ಯೋತ್ಸವವನ್ನು ಆಚರಿಸುವುದು? ಕುರಿತ ಇಂಟರೆಸ್ಟಿಂಗ್‌ ಸಂಗತಿ ಇಲ್ಲಿದೆ

ಗಣರಾಜ್ಯೋತ್ಸವದ ದಿನ ಜವಾಬ್ದಾರಿಯುತ ಪ್ರಜೆಯಾಗಿ ನೀವು ಏನು ಮಾಡಬೇಕು?

  • ತ್ರಿವರ್ಣ ಧ್ವಜಕ್ಕೆ ಅಗೌರವ ತೋರಬೇಡಿ.
  • ದೇಶಭಕ್ತಿಯನ್ನು ಅಣಕಿಸಬೇಡಿ. ನಕಲಿ ಸುದ್ದಿ, ಪ್ರಚೋದನಕಾರಿ ಪೋಸ್ಟ್‌ಗಳು ಅಥವಾ ರಾಜಕೀಯ ವಿಡಂಬನೆಯನ್ನು ತಪ್ಪಿಸಿ.
  • ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಬೇಡಿ. ಏಕೆಂದರೆ ರ್ಯಾಲಿ ಅಥವಾ ಆಚರಣೆಯ ಹೆಸರಿನಲ್ಲಿ ಧ್ವಂಸ ಮಾಡುವುದು ದೇಶಭಕ್ತಿಯಲ್ಲ.
  • ಇದು ಕೇವಲ ರಜಾದಿನ ಎಂದು ಭಾವಿಸಿ ದಿನವನ್ನು ವ್ಯರ್ಥ ಮಾಡಬೇಡಿ. ಇದು ರಾಷ್ಟ್ರೀಯ ಪ್ರಜ್ಞೆಯ ದಿನ. ಆದ್ದರಿಂದ ಮಕ್ಕಳಿಗೆ ದೇಶಭಕ್ತಿಯ ವಿಚಾರಗಳ ಬಗ್ಗೆ ತಿಳಿಸಿಕೊಡಿ.
  • ಮದ್ಯಪಾನ ಅಥವಾ ಅವ್ಯವಸ್ಥೆಯ ನಡವಳಿಕೆಯನ್ನು ತಪ್ಪಿಸಿ. ಏಕೆಂದರೆ ಈ ದಿನವು ಸಂಯಮ, ಘನತೆ ಮತ್ತು ಶಿಸ್ತನ್ನು ಸಂಕೇತಿಸುತ್ತದೆ.
  • ಸಾಮಾಜಿಕ ಮಾಧ್ಯಮದಲ್ಲಿ ದೇಶಭಕ್ತಿಯ ವಿಷಯವನ್ನು ಚಿಂತನಶೀಲವಾಗಿ ಹಂಚಿಕೊಳ್ಳಿ. ಸ್ಪೂರ್ತಿದಾಯಕ ಆಲೋಚನೆಗಳು, ಸಾಂವಿಧಾನಿಕ ಸಂಗತಿಗಳು ಅಥವಾ ಐತಿಹಾಸಿಕ ಮಾಹಿತಿಯನ್ನು ಹಂಚಿಕೊಳ್ಳಿ.
  • ಕನಿಷ್ಠ ಪಕ್ಷ ಭಾರತೀಯ ಸಂವಿಧಾನದ ಪೀಠಿಕೆಯನ್ನು ಓದಿ. ಮಕ್ಕಳು ಮತ್ತು ಯುವಕರಿಗೆ ಅದರ ಅರ್ಥ ಮತ್ತು ಮಹತ್ವವನ್ನು ಸರಳ ಭಾಷೆಯಲ್ಲಿ ವಿವರಿಸಿ, ಇದರಿಂದ ಅವರಿಗೆ ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳು ತಿಳಿಯುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪದ್ಮ ಪ್ರಶಸ್ತಿ ಪ್ರಕಟ: ರಾಜ್ಯದ ಶತಾವಧಾನಿ ಆರ್​​. ಗಣೇಶ್​​ಗೆ​​ ಪದ್ಮ ಭೂಷಣ, 7 ಮಂದಿಗೆ ಪದ್ಮಶ್ರೀ ಅವಾರ್ಡ್​​ – Kannada News | Padma Awards 2026: Shatavadhani R Ganesh Gets Padma Bhushan, Seven from Karnataka Honoured with Padma Shri

ನವದೆಹಲಿ, ಜನವರಿ 25: ಪ್ರತಿ ವರ್ಷ ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ, ಇಂಜಿನಿಯರಿಂಗ್, ವ್ಯಾಪಾರ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ ಭಾರತೀಯ ನಾಗರಿಕರಿಗೆ ಭಾರತ ಸರ್ಕಾರದಿಂದ ನೀಡಲ್ಪಡುವ ಪದ್ಮ ಪ್ರಶಸ್ತಿಗಳ 2026ನೇ ಸಾಲಿನ ಪಟ್ಟಿ ಪ್ರಕಟಗೊಂಡಿದೆ. ಈ ಬಾರಿ ಒಟ್ಟು 5 ಜನರು ಪದ್ಮ ವಿಭೂಷಣ, 13 ಜನ ಪದ್ಮ ಭೂಷಣ ಮತ್ತು 113 ಮಂದಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪೈಕಿ ಕಲಾ ಕ್ಷೇತ್ರದಲ್ಲಿನ ಸೇವೆಗಾಗಿ ಕರ್ನಾಟಕದ ಶತಾವಧಾನಿ ಆರ್​​. ಗಣೇಶ್​​ ಪದ್ಮ ಭೂಷಣ ಪ್ರಶಸ್ತಿ ಪಡೆದಿದ್ದಾರೆ. ರಾಜ್ಯದ 7 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ.

(ಮಾಹಿತಿ ಅಪ್​​ಡೇಟ್​​ ಆಗುತ್ತಿದೆ.)

Source link

Vastu Tips: ಸ್ನಾನಗೃಹದಲ್ಲಿ ಕನ್ನಡಿ ಇಡಬಾರದೇ? ವಾಸ್ತು ಶಾಸ್ತ್ರ ಹೇಳುವುದೇನು? – Kannada News | Vastu Tips for Bathroom Mirrors: Proper Placement for Positive Energy

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪ್ರತಿಯೊಂದು ಭಾಗವೂ ನಮ್ಮ ಜೀವನದ ಮೇಲೆ ಯಾವುದೋ ರೀತಿಯ ಪ್ರಭಾವ ಬೀರುತ್ತದೆ. ಅದರಲ್ಲಿ ಸ್ನಾನಗೃಹವೂ ಪ್ರಮುಖವಾದ ಸ್ಥಳ ಎಂದು ಪರಿಗಣಿಸಲಾಗುತ್ತದೆ. ಸ್ನಾನಗೃಹದ ಸ್ವಚ್ಛತೆಯ ಜೊತೆಗೆ, ಅಲ್ಲಿ ಇರಿಸಲಾಗುವ ವಸ್ತುಗಳ ವ್ಯವಸ್ಥೆಯೂ ಅಷ್ಟೇ ಮಹತ್ವದ್ದಾಗಿದೆ. ವಿಶೇಷವಾಗಿ, ಸ್ನಾನಗೃಹದಲ್ಲಿ ಇಡುವ ಕನ್ನಡಿಯ ಬಗ್ಗೆ ವಾಸ್ತು ಮತ್ತು ಜ್ಯೋತಿಷ್ಯದಲ್ಲಿ ಕೆಲವು ಪ್ರಮುಖ ನಿಯಮಗಳನ್ನು ಹೇಳಲಾಗಿದೆ. ಸರಿಯಾದ ರೀತಿಯಲ್ಲಿ ಇಡಲಾದ ಕನ್ನಡಿ ಸಕಾರಾತ್ಮಕ ಶಕ್ತಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂಬ ನಂಬಿಕೆಯಿದೆ.

ಕನ್ನಡಿಯನ್ನು ಇಡುವ ಸರಿಯಾದ ದಿಕ್ಕು:

ಸ್ನಾನಗೃಹದಲ್ಲಿ ಕನ್ನಡಿ ಇಡುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ಅದರ ದಿಕ್ಕು ಬಹಳ ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನಗೃಹದ ಬಾಗಿಲಿನ ಎದುರು ನೇರವಾಗಿ ಕನ್ನಡಿಯನ್ನು ಇಡುವುದನ್ನು ತಪ್ಪಿಸುವುದು ಉತ್ತಮ. ಒಳಗೆ ಪ್ರವೇಶಿಸಿದಾಗ ಕಣ್ಣುಗಳು ನೇರವಾಗಿ ಕನ್ನಡಿಯ ಮೇಲೆ ಬೀಳುವಂತೆ ಇದ್ದರೆ, ಅದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗುತ್ತದೆ. ಸ್ನಾನಗೃಹದ ಉತ್ತರ ಅಥವಾ ಪೂರ್ವ ಗೋಡೆಯ ಮೇಲೆ ಕನ್ನಡಿ ಇಡುವುದು ಶುಭ ಎಂದು ಪರಿಗಣಿಸಲಾಗಿದೆ. ಇದರಿಂದ ಮನೆಯಲ್ಲಿ ಸಕಾರಾತ್ಮಕತೆ ಉಳಿಯುತ್ತದೆ.

ಕನ್ನಡಿಯ ಆಕಾರವೂ ಮುಖ್ಯ:

ವಾಸ್ತು ಮತ್ತು ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಆಯತಾಕಾರದ ಅಥವಾ ಚೌಕಾಕಾರದ ಕನ್ನಡಿಗಳು ಶುಭಕರ. ಇವು ಸಕಾರಾತ್ಮಕ ಚಿಂತನೆ ಮತ್ತು ಸಮತೋಲನವನ್ನು ಉತ್ತೇಜಿಸುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಹೊಸ ಕನ್ನಡಿ ಖರೀದಿಸುವಾಗ ಅದರ ಆಕಾರಕ್ಕೆ ವಿಶೇಷ ಗಮನ ಕೊಡುವುದು ಒಳಿತು.

ಇದನ್ನೂ ಓದಿ: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ

ಮುರಿದ ಅಥವಾ ಕೊಳಕಾದ ಕನ್ನಡಿಯಿಂದ ದೂರವಿರಿ:

ಮುರಿದ, ಬಿರುಕು ಬಿಟ್ಟ ಅಥವಾ ತುಂಬಾ ಕೊಳಕಾದ ಕನ್ನಡಿಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇಂತಹ ಕನ್ನಡಿಗಳು ಮನೆಯಲ್ಲಿ ಒತ್ತಡ, ನಕಾರಾತ್ಮಕತೆ ಮತ್ತು ಮಾನಸಿಕ ಅಶಾಂತಿಯನ್ನು ಹೆಚ್ಚಿಸಬಹುದು ಎಂಬ ನಂಬಿಕೆ ಇದೆ. ಆದ್ದರಿಂದ, ಸ್ನಾನಗೃಹದ ಕನ್ನಡಿ ಸದಾ ಸ್ವಚ್ಛವಾಗಿರಬೇಕು ಮತ್ತು ಉತ್ತಮ ಸ್ಥಿತಿಯಲ್ಲಿರಬೇಕು. ಕನ್ನಡಿ ಹಾನಿಗೊಂಡಿದ್ದರೆ, ಅದನ್ನು ತಕ್ಷಣ ಬದಲಾಯಿಸುವುದು ಉತ್ತಮ.

ಸರಿಯಾದ ಆಯ್ಕೆಯಿಂದ ಯಾವುದೇ ತೊಂದರೆ ಇಲ್ಲ:

ಜ್ಯೋತಿಷ್ಯ ತಜ್ಞರ ಪ್ರಕಾರ, ಸ್ನಾನಗೃಹದಲ್ಲಿ ಕನ್ನಡಿ ಇಡುವುದರಿಂದಲೇ ಕೆಟ್ಟ ಪರಿಣಾಮ ಬರುತ್ತದೆ ಎನ್ನುವುದು ತಪ್ಪು. ಸರಿಯಾದ ದಿಕ್ಕು, ಸೂಕ್ತ ಗಾತ್ರ ಮತ್ತು ಸ್ವಚ್ಛವಾದ ಕನ್ನಡಿಯನ್ನು ಆಯ್ಕೆ ಮಾಡಿದರೆ, ಅದು ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಮೃತಿ ಸ್ನೇಹಿತನ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಪಲಾಶ್ – Kannada News | Smriti Mandhana Palash Muchhal Wedding Row: Fraud, Cheating Allegations and ₹10 Cr Defamation

ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ (Smriti Mandhana) ಹಾಗೂ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ (Palash Muchhal) ಅವರ ವಿವಾಹ ರದ್ದಾಗಿದ್ದು ಹಳೆಯ ವಿಚಾರ. ಮಾಜಿ ಪ್ರೇಮಿಗಳಿಬ್ಬರು ಕಳೆದ ಡಿಸೆಂಬರ್​ನಲ್ಲೇ ಮದುವೆ ರದ್ದಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಯಾವ ಕಾರಣಕ್ಕೆ ರದ್ದಾಯಿತು ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಎರಡು ದಿನಗಳ ಹಿಂದೆ ಇವರಿಬ್ಬರ ಮದುವೆ ರದ್ದತಿಯ ಬಗ್ಗೆ ಆಘಾತಕ್ಕಾರಿ ಹೇಳಿಕೆ ನೀಡಿದ್ದ ಮರಾಠಿ ನಟ ಮತ್ತು ನಿರ್ಮಾಪಕ ವಿದ್ಯಾನ್ ಮಾನೆ (Vidnyan Mane) ಪಲಾಶ್ ಅವರ ನಡವಳಿಕೆಯೇ ಮದುವೆ ರದ್ದತಿಗೆ ಕಾರಣ ಎಂದಿದ್ದರು. ಇದು ಮಾತ್ರವಲ್ಲದೆ ಪಲಾಶ್ ಚಿತ್ರದ ನಿರ್ಮಾಣದ ಹೆಸರಿನಲ್ಲಿ ತಮ್ಮಿಂದ 40 ಲಕ್ಷ ರೂ. ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಅವರು ಸಾಂಗ್ಲಿ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಪಲಾಶ್, ಇದೆಲ್ಲವೂ ತಮ್ಮ ಖ್ಯಾತಿಗೆ ಕಳಂಕ ತರುವ ಪಿತೂರಿ ಎಂದಿದ್ದು, ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ

ಅಷ್ಟಕ್ಕೂ ಇವರಿಬ್ಬರ ಮದುವೆ ರದ್ದತಿಗೆ ಕಾರಣ ಏನು ಎಂಬುದನ್ನು ಬಹಿರಂಗಪಡಿಸಿದ್ದ ವಿದ್ಯಾನ್ ಮಾನೆ, ‘ಸ್ಮೃತಿ ಹಾಗೂ ಪಲಾಶ್ ಅವರ ಮದುವೆ ಸಮಾರಂಭದಲ್ಲಿ ನಾನು ಕೂಡ ಹಾಜರಿದ್ದೆ. ಅಂದು ಪಲಾಶ್ ಒಬ್ಬ ಮಹಿಳೆಯೊಂದಿಗೆ ಹಾಸಿಗೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ. ಅದು ಭಯಾನಕ ದೃಶ್ಯವಾಗಿತ್ತು. ಇದಾದ ಬಳಿಕ ಪರಿಸ್ಥಿತಿ ತುಂಬಾ ಉದ್ವಿಗ್ನವಾಯಿತು, ಭಾರತೀಯ ಮಹಿಳಾ ಕ್ರಿಕೆಟಿಗರು ಪಲಾಶ್ ಅವರನ್ನು ಥಳಿಸಿದರು. ಇದಾದ ಬಳಿಕ ಮದುವೆ ಮುರಿದುಬಿದ್ದಿತು’ ಎಂದಿದ್ದರು.

40 ಲಕ್ಷ ರೂಪಾಯಿಗಳ ಹೂಡಿಕೆ

ಇನ್ನು ಪಲಾಶ್ ವಿರುದ್ಧ ವಂಚನೆ ಮತ್ತು ಆರ್ಥಿಕ ದುರುಪಯೋಗದ ಗಂಭೀರ ಆರೋಪಗಳನ್ನು ಹೊರಿಸಿದ್ದ ವಿದ್ಯಾನ್ ಮಾನೆ, ‘ಪಲಾಶ್ ಸಿನಿಮಾದ ಹೆಸರಿನಲ್ಲಿ ತನ್ನಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದಿದ್ದರು, ಆದರೆ ಆ ಚಿತ್ರವನ್ನು ನಿರ್ಮಿಸಲಾಗಿಲ್ಲ ಅಥವಾ ಹಣವನ್ನು ಹಿಂತಿರುಗಿಸಲಾಗಿಲ್ಲ. ನಾನು ಸ್ಮೃತಿಯ ಕುಟುಂಬದ ಮೂಲಕ ಪಲಾಶ್ ಅವರನ್ನು ಭೇಟಿಯಾಗಿದ್ದೆ. ಈ ಸಮಯದಲ್ಲಿ ಪಲಾಶ್ ನನ್ನ ಬಳಿ ಸಿನಿಮಾ ನಿರ್ದೇಶನದ ಬಗ್ಗೆ ಮಾತನಾಡಿದರು. ಅಲ್ಲದೆ ಆರು ತಿಂಗಳೊಳಗೆ ಸಿನಿಮಾವನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ಹೀಗಾಗಿ ನಾನು ಪಾಲಾಶ್ ಸಿನಿಮಾದ ಮೇಲೆ ಸುಮಾರು 40 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದೆ. ಆದಾಗ್ಯೂ, ಮದುವೆ ರದ್ದಾದ ನಂತರ ಪಲಾಶ್ ನನ್ನ ಫೋನ್​ ರಿಸೀವ್ ಮಾಡುತ್ತಿಲ್ಲ ಎಂದಿದ್ದರು.

ಮದುವೆ ಮನೆಯಲ್ಲೇ ಮಹಿಳೆಯೊಂದಿಗೆ ಹಾಸಿಗೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಪಲಾಶ್ ಮುಚ್ಚಲ್

10 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ

ಇದೀಗ ವಿದ್ಯಾನ್ ಮಾನೆ ಅವರ ಆರೋಪಗಳನ್ನು ಸುಳ್ಳು ಎಂದಿರುವ ಪಲಾಶ್ ಮುಚ್ಚಲ್, ‘ನಾನು ತಮ್ಮ ವಕೀಲ ಶ್ರೇಯಂಶ್ ಮಿಥಾರೆ ಮೂಲಕ ವಿದ್ಯಾನ್ ಮಾನೆ ಅವರ ವಿರುದ್ಧ 10 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ನೋಟಿಸ್ ಕಳುಹಿಸಿದ್ದೇನೆ. ವಿದ್ಯಾನ್ ಮಾನೆ ತಮ್ಮ ಹೆಸರು ಮತ್ತು ಪಾತ್ರಕ್ಕೆ ಹಾನಿ ಮಾಡುವ ಉದ್ದೇಶದಿಂದ ಮಾತ್ರ ಇಂತಹ ಸುಳ್ಳುಗಳನ್ನು ಹರಡುತ್ತಿದ್ದಾರೆ. ತಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಪರ ವೃತ್ತಿಜೀವನವನ್ನು ನಾಶಮಾಡಲು ಪ್ರಯತ್ನಿಸುವವರನ್ನು ತಾವು ಬಿಡುವುದಿಲ್ಲ ಎಂದು ಪಲಾಶ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:59 pm, Sun, 25 January 26

Source link

Exit mobile version