ಸ್ಮೃತಿ ಸ್ನೇಹಿತನ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಪಲಾಶ್ – Kannada News | Smriti Mandhana Palash Muchhal Wedding Row: Fraud, Cheating Allegations and ₹10 Cr Defamation

ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ (Smriti Mandhana) ಹಾಗೂ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ (Palash Muchhal) ಅವರ ವಿವಾಹ ರದ್ದಾಗಿದ್ದು ಹಳೆಯ ವಿಚಾರ. ಮಾಜಿ ಪ್ರೇಮಿಗಳಿಬ್ಬರು ಕಳೆದ ಡಿಸೆಂಬರ್​ನಲ್ಲೇ ಮದುವೆ ರದ್ದಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಯಾವ ಕಾರಣಕ್ಕೆ ರದ್ದಾಯಿತು ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಎರಡು ದಿನಗಳ ಹಿಂದೆ ಇವರಿಬ್ಬರ ಮದುವೆ ರದ್ದತಿಯ ಬಗ್ಗೆ ಆಘಾತಕ್ಕಾರಿ ಹೇಳಿಕೆ ನೀಡಿದ್ದ ಮರಾಠಿ ನಟ ಮತ್ತು ನಿರ್ಮಾಪಕ ವಿದ್ಯಾನ್ ಮಾನೆ (Vidnyan Mane) ಪಲಾಶ್ ಅವರ ನಡವಳಿಕೆಯೇ ಮದುವೆ ರದ್ದತಿಗೆ ಕಾರಣ ಎಂದಿದ್ದರು. ಇದು ಮಾತ್ರವಲ್ಲದೆ ಪಲಾಶ್ ಚಿತ್ರದ ನಿರ್ಮಾಣದ ಹೆಸರಿನಲ್ಲಿ ತಮ್ಮಿಂದ 40 ಲಕ್ಷ ರೂ. ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಅವರು ಸಾಂಗ್ಲಿ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಪಲಾಶ್, ಇದೆಲ್ಲವೂ ತಮ್ಮ ಖ್ಯಾತಿಗೆ ಕಳಂಕ ತರುವ ಪಿತೂರಿ ಎಂದಿದ್ದು, ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ

ಅಷ್ಟಕ್ಕೂ ಇವರಿಬ್ಬರ ಮದುವೆ ರದ್ದತಿಗೆ ಕಾರಣ ಏನು ಎಂಬುದನ್ನು ಬಹಿರಂಗಪಡಿಸಿದ್ದ ವಿದ್ಯಾನ್ ಮಾನೆ, ‘ಸ್ಮೃತಿ ಹಾಗೂ ಪಲಾಶ್ ಅವರ ಮದುವೆ ಸಮಾರಂಭದಲ್ಲಿ ನಾನು ಕೂಡ ಹಾಜರಿದ್ದೆ. ಅಂದು ಪಲಾಶ್ ಒಬ್ಬ ಮಹಿಳೆಯೊಂದಿಗೆ ಹಾಸಿಗೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ. ಅದು ಭಯಾನಕ ದೃಶ್ಯವಾಗಿತ್ತು. ಇದಾದ ಬಳಿಕ ಪರಿಸ್ಥಿತಿ ತುಂಬಾ ಉದ್ವಿಗ್ನವಾಯಿತು, ಭಾರತೀಯ ಮಹಿಳಾ ಕ್ರಿಕೆಟಿಗರು ಪಲಾಶ್ ಅವರನ್ನು ಥಳಿಸಿದರು. ಇದಾದ ಬಳಿಕ ಮದುವೆ ಮುರಿದುಬಿದ್ದಿತು’ ಎಂದಿದ್ದರು.

40 ಲಕ್ಷ ರೂಪಾಯಿಗಳ ಹೂಡಿಕೆ

ಇನ್ನು ಪಲಾಶ್ ವಿರುದ್ಧ ವಂಚನೆ ಮತ್ತು ಆರ್ಥಿಕ ದುರುಪಯೋಗದ ಗಂಭೀರ ಆರೋಪಗಳನ್ನು ಹೊರಿಸಿದ್ದ ವಿದ್ಯಾನ್ ಮಾನೆ, ‘ಪಲಾಶ್ ಸಿನಿಮಾದ ಹೆಸರಿನಲ್ಲಿ ತನ್ನಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದಿದ್ದರು, ಆದರೆ ಆ ಚಿತ್ರವನ್ನು ನಿರ್ಮಿಸಲಾಗಿಲ್ಲ ಅಥವಾ ಹಣವನ್ನು ಹಿಂತಿರುಗಿಸಲಾಗಿಲ್ಲ. ನಾನು ಸ್ಮೃತಿಯ ಕುಟುಂಬದ ಮೂಲಕ ಪಲಾಶ್ ಅವರನ್ನು ಭೇಟಿಯಾಗಿದ್ದೆ. ಈ ಸಮಯದಲ್ಲಿ ಪಲಾಶ್ ನನ್ನ ಬಳಿ ಸಿನಿಮಾ ನಿರ್ದೇಶನದ ಬಗ್ಗೆ ಮಾತನಾಡಿದರು. ಅಲ್ಲದೆ ಆರು ತಿಂಗಳೊಳಗೆ ಸಿನಿಮಾವನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ಹೀಗಾಗಿ ನಾನು ಪಾಲಾಶ್ ಸಿನಿಮಾದ ಮೇಲೆ ಸುಮಾರು 40 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದೆ. ಆದಾಗ್ಯೂ, ಮದುವೆ ರದ್ದಾದ ನಂತರ ಪಲಾಶ್ ನನ್ನ ಫೋನ್​ ರಿಸೀವ್ ಮಾಡುತ್ತಿಲ್ಲ ಎಂದಿದ್ದರು.

ಮದುವೆ ಮನೆಯಲ್ಲೇ ಮಹಿಳೆಯೊಂದಿಗೆ ಹಾಸಿಗೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಪಲಾಶ್ ಮುಚ್ಚಲ್

10 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ

ಇದೀಗ ವಿದ್ಯಾನ್ ಮಾನೆ ಅವರ ಆರೋಪಗಳನ್ನು ಸುಳ್ಳು ಎಂದಿರುವ ಪಲಾಶ್ ಮುಚ್ಚಲ್, ‘ನಾನು ತಮ್ಮ ವಕೀಲ ಶ್ರೇಯಂಶ್ ಮಿಥಾರೆ ಮೂಲಕ ವಿದ್ಯಾನ್ ಮಾನೆ ಅವರ ವಿರುದ್ಧ 10 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ನೋಟಿಸ್ ಕಳುಹಿಸಿದ್ದೇನೆ. ವಿದ್ಯಾನ್ ಮಾನೆ ತಮ್ಮ ಹೆಸರು ಮತ್ತು ಪಾತ್ರಕ್ಕೆ ಹಾನಿ ಮಾಡುವ ಉದ್ದೇಶದಿಂದ ಮಾತ್ರ ಇಂತಹ ಸುಳ್ಳುಗಳನ್ನು ಹರಡುತ್ತಿದ್ದಾರೆ. ತಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಪರ ವೃತ್ತಿಜೀವನವನ್ನು ನಾಶಮಾಡಲು ಪ್ರಯತ್ನಿಸುವವರನ್ನು ತಾವು ಬಿಡುವುದಿಲ್ಲ ಎಂದು ಪಲಾಶ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:59 pm, Sun, 25 January 26

Source link

Republic Day 2026: ಜನವರಿ 26 ರಂದೇ ಏಕೆ ಗಣರಾಜ್ಯೋತ್ಸವವನ್ನು ಆಚರಿಸುವುದು? ಈ ಕುರಿತ ಇಂಟರೆಸ್ಟಿಂಗ್‌ ಸಂಗತಿ ಇಲ್ಲಿದೆ – Kannada News | Republic Day 2026: Know about the history and significance of Republic Day

ಜನವರಿ 26 ರಂದು ಆಚರಿಸಲಾಗುವ ಗಣರಾಜ್ಯೋತ್ಸವ ದಿನ (Republic Day) ಪ್ರತಿಯೊಬ್ಬ ಭಾರತೀಯನ ಪಾಲಿಗೆ ಹೆಮ್ಮೆಯ ದಿನವಾಗಿದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಎಷ್ಟು ಸಂಭ್ರಮ ಮತ್ತು ದೇಶಭಕ್ತಿಯಿಂದ ಆಚರಿಸುತ್ತೇವೆಯೋ ಅಷ್ಟೇ ಸಂಭ್ರಮದಿಂದ ಗಣರಾಜ್ಯೋತ್ಸವ ದಿನವನ್ನೂ ಆಚರಿಸಲಾಗುತ್ತದೆ. ಗಣರಾಜ್ಯೋತ್ಸವವು ಅಧಿಕಾರವು ಯಾವುದೇ ವ್ಯಕ್ತಿ, ರಾಜ ಅಥವಾ ಸರ್ಕಾರಕ್ಕೆ ಸೇರಿಲ್ಲ, ಬದಲಾಗಿ ಸಂವಿಧಾನ ಮತ್ತು ಜನರಿಗೆ ಸೇರಿದೆ ಎಂಬುದನ್ನು ನಮಗೆ ನೆನಪಿಸುತ್ತದೆ. ಈ ದಿನವು ಹಕ್ಕುಗಳನ್ನು ಆಚರಿಸುತ್ತದೆ, ಜೊತೆಗೆ ನಮ್ಮ ಕರ್ತವ್ಯಗಳನ್ನು ಸಹ ನೆನಪಿಸುತ್ತದೆ. ಜನವರಿ 26 ರಂದು ಗಣರಾಜ್ಯೋತ್ಸವವನ್ನು ಏಕೆ ಆಚರಿಸಲಾಗುತ್ತದೆ? ಗಣರಾಜ್ಯೋತ್ಸವದ ಇತಿಹಾಸ ಮತ್ತು ಮಹತ್ವವವೇನು ಎಂಬುದನ್ನು ತಿಳಿಯೋಣ ಬನ್ನಿ.

ಜನವರಿ 26 ರಂದೇ ಏಕೆ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತದೆ?

ಜನವರಿ 26 ಭಾರತವು ತನ್ನನ್ನು ತಾನು ಸಂಪೂರ್ಣ ಪ್ರಜಾಪ್ರಭುತ್ವ ರಾಷ್ಟ್ರವೆಂದು ಘೋಷಿಸಿಕೊಂಡ ದಿನವಾಗಿದೆ. ಆಗಸ್ಟ್ 15, 1947 ರಂದು ದೇಶವು ಸ್ವಾತಂತ್ರ್ಯ ಪಡೆದರೂ, ಅದಕ್ಕೆ ಸಂವಿಧಾನದ ಕೊರತೆಯಿತ್ತು. ದೇಶವು ತನ್ನದೇ ಆದ ಕಾನೂನುಗಳ ಅಡಿಯಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದಾಗ ನಿಜವಾದ ಸ್ವಾತಂತ್ರ್ಯವನ್ನು ಸಾಧಿಸಲಾಯಿತು. ಅದಕ್ಕಾಗಿಯೇ, ಜನವರಿ 26, 1950 ರಂದು, ಭಾರತವು ಸಂವಿಧಾನವನ್ನು ಅಂಗೀಕರಿಸಿತು ಮತ್ತು ತನ್ನನ್ನು ತಾನು ಸಾರ್ವಭೌಮ, ಪ್ರಜಾಪ್ರಭುತ್ವ ಗಣರಾಜ್ಯವೆಂದು ಘೋಷಿಸಿತು.ಭಾರತವು ಜನವರಿ 26, 1950 ರಂದು ಗಣರಾಜ್ಯವಾಯಿತು. ಈ ದಿನ ಭಾರತೀಯ ಸಂವಿಧಾನ ಜಾರಿಗೆ ಬಂದಿತು. ಡಾ. ರಾಜೇಂದ್ರ ಪ್ರಸಾದ್ ಭಾರತದ ಮೊದಲ ರಾಷ್ಟ್ರಪತಿಯಾದರು. 1937 ರ ಭಾರತ ಸರ್ಕಾರ ಕಾಯ್ದೆ ಕೊನೆಗೊಂಡಿತು. ಇಲ್ಲಿಂದ ಭಾರತವು ತನ್ನನ್ನು ಕಾನೂನಿನಿಂದ ನಿಯಂತ್ರಿಸಲ್ಪಡುವ ರಾಷ್ಟ್ರವೆಂದು ಘೋಷಿಸಿಕೊಂಡಿತು ಮತ್ತು ಜನರೇ ದೇಶದ ಸರ್ವೋಚ್ಚ ಶಕ್ತಿಯಾದರು.

ಗಣರಾಜ್ಯೋತ್ಸವ ದಿನದ ಇತಿಹಾಸವೇನು?

ಭಾರತವು ಆಗಸ್ಟ್ 15, 1947 ರಂದು ಸ್ವಾತಂತ್ರ್ಯ ಗಳಿಸಿತು, ಆದರೆ ಸಂವಿಧಾನ ಜಾರಿಗೆ ಬಂದ ನಂತರವೇ ಅದು ಪ್ರಜಾಪ್ರಭುತ್ವ ರಾಷ್ಟ್ರವಾಯಿತು. ಭಾರತದ ಸಂವಿಧಾನವನ್ನು ನವೆಂಬರ್ 26, 1949 ರಂದು ರಚಿಸಲಾಯಿತು, ಆದರೆ ಅದು ಜನವರಿ 26, 1950 ರಂದು ಜಾರಿಗೆ ಬಂದಿತು. ಈ ದಿನದಂದು, ಭಾರತವು ತನ್ನನ್ನು ತಾನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯವೆಂದು ಘೋಷಿಸಿಕೊಂಡಿತು. ಈ ದಿನವನ್ನು ಭಾರತದ ಗಣರಾಜ್ಯ ದಿನವೆಂದು ಗುರುತಿಸಲಾಯಿತು ಮತ್ತು ಈ ಕಾರಣಕ್ಕಾಗಿಯೇ ಭಾರತವು ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸುತ್ತದೆ.

ಗಣರಾಜ್ಯೋತ್ಸವದ ಮಹತ್ವವೇನು?

  • ಪ್ರಜಾಪ್ರಭುತ್ವವನ್ನು ಆಚರಿಸುವುದು: ಗಣರಾಜ್ಯೋತ್ಸವವು ಭಾರತದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಆಚರಿಸುತ್ತದೆ. ಈ ದಿನವು ನಾವೆಲ್ಲರೂ ಸಮಾನರು ಮತ್ತು ನಮ್ಮ ದೇಶದ ಆಡಳಿತದಲ್ಲಿ ನಮಗೆ ಪಾಲು ಇದೆ ಎಂಬುದನ್ನು ನೆನಪಿಸುತ್ತದೆ.
  • ರಾಷ್ಟ್ರೀಯ ಏಕತೆ: ಈ ದಿನವು ದೇಶದ ವಿವಿಧ ಜಾತಿಗಳು, ಧರ್ಮಗಳು ಮತ್ತು ಸಂಸ್ಕೃತಿಗಳನ್ನು ಒಂದುಗೂಡಿಸಲು ಅವಕಾಶವನ್ನು ಒದಗಿಸುತ್ತದೆ.
  • ಸಂವಿಧಾನದ ಮಹತ್ವ: ಗಣರಾಜ್ಯೋತ್ಸವವು ನಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ವ್ಯಾಖ್ಯಾನಿಸುವ ನಮ್ಮ ಸಂವಿಧಾನದ ಮಹತ್ವವನ್ನು ನೆನಪಿಸುತ್ತದೆ.

ಇದನ್ನೂ ಓದಿ: ಗಣರಾಜ್ಯೋತ್ಸವದಂದು ಮನೆಯಲ್ಲಿ ಮಾಡಿ ತ್ರಿವರ್ಣ ಬಣ್ಣದ ರುಚಿಕರ ಭಕ್ಷ್ಯ

ಗಣರಾಜ್ಯೋತ್ಸವವನ್ನು ಹೇಗೆ ಆಚರಿಸಲಾಗುತ್ತದೆ?

ಪ್ರತಿ ವರ್ಷ, ದೇಶಾದ್ಯಂತ ಗಣರಾಜ್ಯೋತ್ಸವವನ್ನು ಪ್ರಜಾಪ್ರಭುತ್ವದ ಆಚರಣೆಯಾಗಿ ಆಚರಿಸಲಾಗುತ್ತದೆ. ಈ ದಿನದಂದು, ದೆಹಲಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭವ್ಯ ಮೆರವಣಿಗೆ, ಟ್ಯಾಬ್ಲೋಗಳು, ಮಿಲಿಟರಿ ಶಕ್ತಿಯ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು 21-ಗನ್ ಸೆಲ್ಯೂಟ್ ಕಾರ್ಯಕ್ರಮ ನಡೆಯುತ್ತದೆ. ಇದು ಕೇವಲ ಮಿಲಿಟರಿ ಶಕ್ತಿಯ ಪ್ರದರ್ಶನವಲ್ಲ, ಇದು ರಾಷ್ಟ್ರದ ಆತ್ಮ ವಿಶ್ವಾಸದ ಸಂಕೇತವಾಗಿದೆ. ಅಲ್ಲದೆ ಈ ದಿನ ನವದೆಹಲಿಯ ಇಂಡಿಯಾ ಗೇಟ್‌ನಲ್ಲಿ ಭಾರತದ ರಾಷ್ಟ್ರಪತಿಗಳಿಂದ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ.  ಈ ವಿಶೇಷ ದಿನದಂದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರಿಗೆ ಗೌರವ ಸಲ್ಲಿಸಲಾಗುತ್ತದೆ. ಶಾಲಾ-ಕಾಲೇಜು ಮತ್ತು ಸರ್ಕಾರಿ ಕಚೇರಿಗಳು ಸೇರಿದಂತೆ ಹಲವೆಡೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಒಟ್ಟಾರೆಯಾಗಿ ಈ ವಿಶೇಷ ದಿನವನ್ನು ಭಾರತದಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Padma Awards 2026: ಕರ್ನಾಟಕದ ಮೂವರಿಗೆ 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ; ಮಾಹಿತಿ ಇಲ್ಲಿದೆ – Kannada News | Three from Karnataka Honoured with Padma Shri Awards 2026: Here’s the Details

ಬೆಂಗಳೂರು, ಜನವರಿ 25: 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಗಿದ್ದು, ಕರ್ನಾಟಕದ ಮೂವರು ಸೇರಿ ಒಟ್ಟು 54 ಮಂದಿ ಕೇಂದ್ರ ಸರ್ಕಾರದಿಂದ ನೀಡಲ್ಪಡುವ ಪ್ರತಿಷ್ಠಿತ ಗೌರವಕ್ಕೆ ಭಾಜನರಾಗಿದ್ದಾರೆ. ರಾಜ್ಯದ ಅಂಕೇಗೌಡ, ಡಾ.ಸುರೇಶ್ ಹನಗವಾಡಿಮತ್ತು ಸುಶೀಲಮ್ಮ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಬಾರಿಯೂ ಕೇಂದ್ರ ಸರ್ಕಾರ ತೆರೆ ಮರೆಯ ಸಾಧಕರನ್ನೇ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ವಿಶೇಷ.

ಹಿಮೊಫಿಲಿಯಾ ಪೀಡಿತ ಮಕ್ಕಳ ಸೇವಕ ಡಾ.ಸುರೇಶ್ ಹನಗವಾಡಿ

JJM ಮೆಡಿಕಲ್ ಕಾಲೇಜು ಪ್ರಾಧ್ಯಾಪಕ ಡಾ.ಸುರೇಶ್ ಹನಗವಾಡಿ ಅವರು, ದಾವಣಗೆರೆಯ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಸಂಸ್ಥಾಪಕರು ಕೂಡ ಆಗಿದ್ದಾರೆ. ಸ್ವತಃ ಹಿಮೋಫಿಲಿಯಾ ಪೀಡಿತರಾಗಿರುವ ಇವರು ಕಳೆದ ನಾಲ್ಕು ದಶಕಗಳಿಂದ ಈ ಕಾಯಿಲೆ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ. ರಾಜ್ಯದ ಬಹುತೇಕ ಭಾಗದ ಹಿಮೋಫಿಲಿಯಾ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಸುರೇಶ್,  ಖ್ಯಾತ ಹಿನ್ನೆಲೆ ಗಾಯಕ ದಿವಂಗತ ಎಸ್ಪಿ ಬಾಲಸುಬ್ರಹ್ಮಣ್ಯಂ ಸಹಕಾರದಿಂದ‌ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಕಟ್ಟಿ ಬೆಳೆಸಿದ್ದಾರೆ.

ಇದನ್ನೂ ಓದಿ: Padma Awards 2026: ಪದ್ಮ ಪ್ರಶಸ್ತಿಗೆ ಯಾರೆಲ್ಲ ಭಾಜನ? ಇಲ್ಲಿದೆ ಮಾಹಿತಿ

ಸಮಾಜ ಸೇವೆಗೆ ಜೀವನವನ್ನೇ ಮುಡಿಪಿಟ್ಟ ಸುಶೀಲಮ್ಮ

1975ರಿಂದ ಮಹಿಳೆಯರು ಮತ್ತು ಮಕ್ಕಳ ಸೇವೆ ಮಾಡುತ್ತಿರುವ ಡಾ. ಎಸ್.ಜಿ. ಸುಶೀಲಮ್ಮ, ಸಮಾಜ ಸೇವೆಗೆ ತಮ್ಮ ಜೀವನವನ್ನೇ ಮುಡಿಪಿಟ್ಟಿದ್ದಾರೆ. ಸುಮಂಗಲಿ ಸೇವಾಶ್ರಮ ಸ್ಥಾಪಿಸಿರುವ ಇವರು ಮಕ್ಕಳಿಗೆ ಲೈಬ್ರರಿ, ಮಹಿಳಾ ಮತ್ತು ಮಕ್ಕಳ ಆಧ್ಯಾತ್ಮಿಕ ತರಬೇತಿ, ನಿರ್ಗತಿಕ ಮಹಿಳೆಯರ ಸಬಲೀಕರಣ, ಸ್ವಯಂ ಉದ್ಯೋಗ, ಸಮುದಾಯದ ಅಭಿವೃದ್ಧಿ, ಮದ್ಯಸೇವನೆ ವಿರುದ್ಧ ಹೋರಾಟ, ಹೆಣ್ಣು ಭ್ರೂಣ ಹತ್ಯೆ ವಿರೋಧಿಸಿ ಹೋರಾಟ ಸೇರಿ ಮುಂತಾದವುಗಳಲ್ಲಿ ಗುರುತಿಸಿಕೊಂಡವರು. 1987ರಲ್ಲಿ ಮಕ್ಕಳ ಒಕ್ಕೂಟವನ್ನು ಆರಂಭಿಸಿರುವ ಇವರಿಗೆ ಅದಾಗಲೇ ಎರಡು ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಸಂದಿವೆ. ಪರಿಸರ ಸಂರಕ್ಷಣೆಗಾಗಿ ಇವರ ಕೊಡುಗೆ ಗಮನಿಸಿ ಜಪಾನ್ ದೇಶದ ಪುರಸ್ಕಾರವೂ ಲಭಿಸಿದೆ.

‘ಪುಸ್ತಕ ಮನೆ’ ಗ್ರಂಥಾಲಯ ನಿರ್ಮಾತೃ ಅಂಕೇಗೌಡರು

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಅಂಕೇಗೌಡರು, 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸುವ ಮೂಲಕ ಗಮನ ಸೇಳೆದ ವ್ಯಕ್ತಿ. 20ನೇ ವಯಸ್ಸಿನಲ್ಲೇ ಪುಸ್ತಕ ಸಂಗ್ರಹ ಆರಂಭಿಸಿದ್ದ ಅಂಕೇಗೌಡರು, ಸ್ವಂತ ಮನೆ ಮಾರಿ ‘ಪುಸ್ತಕ ಮನೆ’ ಗ್ರಂಥಾಲಯ ನಿರ್ಮಿಸಿದ್ದಾರೆ. ಪಾಂಡವಪುರದ ಹರಳಹಳ್ಳಿಯಲ್ಲಿನ 22 ಗುಂಟೆ ಜಾಗದಲ್ಲಿ ಪುಸ್ತಕ ಮನೆ ನಿರ್ಮಾಣವಾಗಿದ್ದು, ವಿವಿಧ ಭಾಷೆಯ 20 ಲಕ್ಷಕ್ಕೂ ಅಧಿಕ ಪುಸ್ತಗಳ ಸಂಗ್ರಹ ಇಲ್ಲಿವೆ. ಇಲ್ಲಿ ವಿದ್ಯಾರ್ಥಿಗಳಿಗೆ, ಸಂಶೋಕಧಕರಿಗೆ ಮತ್ತು ಸಾರ್ವಜನಿಕರಿಗೆ ಇಲ್ಲಿ ಉಚಿತ ಪ್ರವೇಶ ಇದ್ದು, ಇವರ ಈ ಅಸಾಧಾರಣ ಸಾಧನೆ ಲಿಮ್ಕಾ ಬುಕ್ ಆಫ್​​ ರೆಕಾರ್ಡ್ಸ್ ಕೂಡ ಸೇರಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

BBL: ಸಿಡ್ನಿ ಸಿಕ್ಸರ್ಸ್ ಮಣಿಸಿ ಚಾಂಪಿಯನ್​ ಪಟ್ಟಕ್ಕೇರಿದ ಪರ್ತ್​; ಸಿಎಸ್​ಕೆ, ಮುಂಬೈ ದಾಖಲೆ ಧ್ವಂಸ – Kannada News | Perth Scorchers Dominate BBL 2025 26 Final, Clinch Record 6th Title and Most T20 Wins

2025-26 ರ ಬಿಗ್ ಬ್ಯಾಷ್ ಲೀಗ್‌ನ ಅಂತಿಮ ಪಂದ್ಯವು ಪರ್ತ್ ಸ್ಕಾರ್ಚರ್ಸ್ ಮತ್ತು ಸಿಡ್ನಿ ಸಿಕ್ಸರ್ಸ್ ನಡುವೆ ಪರ್ತ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಫೈನಲ್ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿದ ಪರ್ತ್ ಸ್ಕಾರ್ಚರ್ಸ್ ದಾಖಲೆಯ ಆರನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಮೂಲಕ ಟಿ20 ಲೀಗ್‌ನಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ತಂಡ ಎನಿಸಿಕೊಂಡಿದೆ. ಈ ವಿಚಾರದಲ್ಲಿ ಐಪಿಎಲ್ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಸಿಪಿಎಲ್​ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವನ್ನು ಹಿಂದಿಕ್ಕಿದೆ. ಈ ತಂಡಗಳು ತಲಾ 5 ಬಾರಿ ಪ್ರಶಸ್ತಿಗೆ ಮುತ್ತಿಟ್ಟಿವೆ.

ಈ ಪಂದ್ಯದಲ್ಲಿ, ಪರ್ತ್ ಸ್ಕಾರ್ಚರ್ಸ್ ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಸಿಡ್ನಿ ಸಿಕ್ಸರ್ಸ್ ತಂಡವು 20 ಓವರ್‌ಗಳಲ್ಲಿ ಕೇವಲ 132 ರನ್ ಗಳಿಸಿ ಆಲ್ ಔಟ್ ಆಯಿತು. ಸಿಡ್ನಿ ಸಿಕ್ಸರ್ಸ್ ತಂಡದ ಯಾವುದೇ ಬ್ಯಾಟ್ಸ್‌ಮನ್ 25 ರನ್‌ಗಳ ಗಡಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಕಳೆದ ಕೆಲವು ಪಂದ್ಯಗಳಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಕೇವಲ 24 ರನ್‌ಗಳಷ್ಟೇ ಗಳಿಸಿದರು. ಜೋಶ್ ಫಿಲಿಪ್ ಮತ್ತು ಮೊಯಿಸಸ್ ಹೆನ್ರಿಕ್ಸ್ ಕೂಡ ತಲಾ 24 ರನ್‌ಗಳಿಗೆ ಸುಸ್ತಾದರು. ಸ್ಕಾರ್ಚರ್ಸ್ ತಂಡದ ಪರ ಯುವ ವೇಗಿ ಮಹ್ಲಿ ಬಿಯರ್ಡ್‌ಮನ್ 29 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದು ಪಂದ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರೆ, ಜೇ ರಿಚರ್ಡ್‌ಸನ್ ಮತ್ತು ಡೇವಿಡ್ ಪೇನ್ ತಲಾ ಮೂರು ವಿಕೆಟ್‌ಗಳನ್ನು ಪಡೆದರು.

ಇದಕ್ಕೆ ಉತ್ತರವಾಗಿ, ಪರ್ತ್ ಸ್ಕಾರ್ಚರ್ಸ್ ತಂಡವು 133 ರನ್‌ಗಳ ಗುರಿಯನ್ನು ಬೆನ್ನಟ್ಟಿ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು. ತಂಡದ ಪರ ಮಿಚೆಲ್ ಮಾರ್ಷ್ 44 ರನ್‌ಗಳ ಇನ್ನಿಂಗ್ಸ್ ಆಡಿದರೆ, ಫಿನ್ ಅಲೆನ್ ಕೂಡ 36 ರನ್‌ಗಳ ಕೊಡುಗೆ ನೀಡಿದರು, ಮತ್ತು ಇಬ್ಬರೂ ಮೊದಲ ವಿಕೆಟ್‌ಗೆ 80 ರನ್‌ಗಳನ್ನು ಸೇರಿಸಿದರು. ನಂತರ ಜೋಶ್ ಇಂಗ್ಲಿಸ್ ಅಜೇಯ 29 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುಜರಾತ್ ಸಿಎಂ ಆಗುವ ಮುನ್ನ ನರೇಂದ್ರ ಮೋದಿ ಹೇಗಿದ್ದರು? ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಪತ್ರಕರ್ತರೊಬ್ಬರು ಕಣ್ಣಾರೆ ಕಂಡಿದ್ದು ಇದು – Kannada News | How was narendra modi before becoming gujarat cm congress leader rajeev shukla recollects memory

ನರೇಂದ್ರ ಮೋದಿ ಅವರ ಹಳೆಯ ದಿನಗಳ ಒಂದು ಫೋಟೋ (ಸಾಂದರ್ಭಿಕ)

ನವದೆಹಲಿ, ಜನವರಿ 25: ಪ್ರಧಾನಿ ನರೇಂದ್ರ ಮೋದಿ (Narendra Modi) ಹೊಸ ತಂತ್ರಜ್ಞಾನಗಳ ಬಳಕೆಗೆ ಆಸಕ್ತಿ ಹೊಂದಿರುವಂತಹ ವ್ಯಕ್ತಿ. ಮೋದಿ ಅವರು ಪ್ರಧಾನಿಯಾಗುವುದಕ್ಕೆ ಮುಂದೆ ದಶಕಕ್ಕೂ ಹೆಚ್ಚು ಕಾಲ ಗುಜರಾತ್​ನ ಮುಖ್ಯಮಂತ್ರಿ ಆಗಿದ್ದವರು. ಸಿಎಂ ಆಗಿದ್ದಾಗಲೂ ಅವರು ಟೆಕ್ ಸವ್ವಿ ಎಂದೆನಿಸಿದ್ದರು. ಆದರೆ, ಮುಖ್ಯಮಂತ್ರಿ ಆಗುವ ಮುನ್ನ ನರೇಂದ್ರ ಮೋದಿ ಆರೆಸ್ಸೆಸ್ ಮತ್ತು ಬಿಜೆಪಿ ಸಂಘಟನೆಗಳೊಳಗೆ ಬಿಟ್ಟರೆ ಬೇರೆಲ್ಲೂ ಪರಿಚಿತರಿದ್ದವರಲ್ಲ. ಹೆಚ್ಚೂಕಡಿಮೆ ಸಾಮಾನ್ಯ ಕಾರ್ಯಕರ್ತನಂತೆಯೇ ಲೋ ಪ್ರೊಫೈಲ್​ನಲ್ಲಿ ಇದ್ದವರು. ಆದರೂ ಕೂಡ ಮೋದಿ ಅವರ ವೈಯಕ್ತಿಕ ಟೆಕ್ ಅಭಿರುಚಿ ಈಗಿನಂತೆ ಹಿಂದೆಯೂ ಇತ್ತು. ಹಿರಿಯ ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲ 2001ಕ್ಕೆ ಮುಂಚಿನ ಮೋದಿಯನ್ನು ಸ್ಮರಿಸಿಕೊಂಡಿದ್ದಾರೆ.

ನರೇಂದ್ರ ಮೋದಿ ಅವರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ದಿನಗಳಲ್ಲಿ ಕಂಪ್ಯೂಟರ್ ಇಟ್ಟುಕೊಳ್ಳುತ್ತಿದ್ದುದನ್ನು ತಾನು ಕಂಡಿದ್ದೇನೆ ಎಂದು ಆಗ ಪತ್ರಕರ್ತರಾಗಿದ್ದ ರಾಜೀವ್ ಶುಕ್ಲಾ ಹೇಳಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಆ್ಯಪಲ್​ನಂತಹ ಮೊಬೈಲ್ ಕಂಪನಿ ಸದ್ಯದಲ್ಲೇ ಶುರುವಾಗುತ್ತಾ? ಡಾವೊಸ್​ನಲ್ಲಿ ಸುಳಿವು ಕೊಟ್ಟ ಸಚಿವರು

ಅರುಣ್ ಜೇಟ್ಲಿ ಅವರ ನಿವಾಸದಲ್ಲಿ ತಾನು ಮೊದಲ ಬಾರಿಗೆ ಮೋದಿ ಅವರನ್ನು ನೋಡಿದೆ. ಪತ್ರಕರ್ತನಾಗಿದ್ದ ತಾನು ‘ರುಬ್ರು’ ಎನ್ನುವ ಕಾರ್ಯಕ್ರಮದ ಸಲುವಾಗಿ ಮೋದಿ ಅವರನ್ನು ಸಂದರ್ಶಿಸಿದ್ದಾಗಿ ಶುಕ್ಲಾ ಮಾಹಿತಿ ಹಂಚಿಕೊಂಡಿದ್ದಾರೆ.

‘ರುಬ್ರು ಕಾರ್ಯಕ್ರಮ ಬಹಳ ಜನಪ್ರಿಯವಾಗಿತ್ತು. ಮೋದಿ ಅವರು ಆ ಕಾರ್ಯಕ್ರಮಕ್ಕೆ ಬಂದಿದ್ದರು. ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದುದು ಅದೇ ಮೊದಲಿರಬೇಕು. ನಾವು ಜೇಟ್ಲಿ ನಿವಾಸದಲ್ಲಿ ಸಂಧಿಸುತ್ತಿದ್ದೆವು. ಸಂದರ್ಶನದ ವೇಳೆ ಅವರು ತಮ್ಮೊಂದಿಗೆ ಒಂದು ಸಣ್ಣ ಕಂಪ್ಯೂಟರ್ ಕೂಡ ತಂದಿದ್ದನ್ನು ಕಂಡಿದ್ದೆ. ಮೋದಿ ಆ ಸಂದರ್ಭದಲ್ಲೂ ದೊಡ್ಡ ವ್ಯಕ್ತಿತ್ವದವರಂತೆ ಭಾಸವಾಗುತ್ತಿತ್ತು’ ಎಂದು ಹಿರಿಯ ಕಾಂಗ್ರೆಸ್ ಮುಖಂಡರಾದ ಅವರು ಎಎನ್​ಐಗೆ ಮಾಹಿತಿ ನೀಡಿದ್ದಾರೆ.

ಮೋದಿ ಸಿಎಂ ಆಗ್ತಾರೆ ಅಂತ ಅನಿಸಿತ್ತಾ?

ಅಂದು ಮೋದಿ ಕಂಡಿದ್ದಾಗ, ಈ ವ್ಯಕ್ತಿ ಮುಂದೆ ಸಿಎಂ ಮತ್ತು ಪಿಎಂ ಆಗಬಹುದು ಎನ್ನುವ ಕಲ್ಪನೆ ಮನಸ್ಸಿಗೆ ಬಂದಿತ್ತಾ ಎನ್ನುವ ಪ್ರಶ್ನೆಗೆ ರಾಜೀವ್ ಶುಕ್ಲ ಅವರು ಇಲ್ಲ ಎಂದಿದ್ದಾರೆ. ‘ಅವರಿಗೆ ಚುನಾವಣಾ ರಾಜಕೀಯ ಪ್ರವೇಶಿಸುವ ಭಾವನೆ ಇರಲಿಲ್ಲ. ಸಂಘಟನಾತ್ಮಕ ಕೆಲಸ ಬಯಸುತ್ತಿದ್ದರು. ಅವರು ಸಂಘಟನಾತ್ಮಕ ವ್ಯಕ್ತಿ. ಪಕ್ಷದ ಸಂಘಟನೆ ಬೆಳೆಸುವುದು, ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣೆಗಳನ್ನು ಗೆಲ್ಲಲು ಆಸಕ್ತರಾಗಿದ್ದರು’ ಎಂದು ಬಿಸಿಸಿಐನ ಉಪಾಧ್ಯಕ್ಷರೂ ಆದ ಶುಕ್ಲಾ ತಿಳಿಸಿದ್ದಾರೆ.

ಇದನ್ನೂ ಓದಿ: ಎಐ ಕ್ಷೇತ್ರದಲ್ಲಿ ಭಾರತದ ಹೆಜ್ಜೆಗಳನ್ನು ಶ್ಲಾಘಿಸಿದ ಐಎಂಎಫ್ ಮುಖ್ಯಸ್ಥೆ

ನರೇಂದ್ರ ಮೋದಿ ಅವರು 2001ರಲ್ಲಿ ಗುಜರಾತ್ ಮುಖ್ಯಮಂತ್ರಿ ಆಗುವುದಕ್ಕೂಮುನ್ನ 1995ರಿಂದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದರು. ಹರ್ಯಾಣ ಮತ್ತು ಹಿಮಾಚಲಪ್ರದೇಶದಲ್ಲಿ ಪಕ್ಷದ ಸಂಘಟನೆಯನ್ನು ಬೆಳೆಸುವ ಕೆಲಸ ಮಾಡುತ್ತಿದ್ದರು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 2001ರಲ್ಲಿ ನರೇಂದ್ರ ಮೋದಿ ಅವರಿಗೆ ಗುಜರಾತ್ ಮುಖ್ಯಮಂತ್ರಿ ಜವಾಬ್ದಾರಿ ಕೊಟ್ಟರು. ಅದಾಗಿನಿಂದ ಮೋದಿ ಹಿಂದಿರುಗಿ ನೋಡಿದ್ದೇ ಇಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮುರಿದು ಬಿತ್ತು ‘ರಾಧಾ ರಮಣ’ ಧಾರಾವಾಹಿ ನಟಿ ಅನುಷಾ ಹೆಗಡೆ ದಾಂಪತ್ಯ – Kannada News | Actress Anusha Hegde announce divorce with husband Prathap Singh

ಸಿನಿಮಾ ರಂಗದಲ್ಲಿ (Sandalwood) ದಾಂಪತ್ಯ ವಿಚ್ಛೇದನ ಎಂಬುದು ಸಾಮಾನ್ಯ ಆಗಿಬಿಟ್ಟಿದೆ. ಇತ್ತೀಚೆಗೆ ಟಿವಿ ಲೋಕದಲ್ಲೂ ಸಹ ಇದು ಸಾಮಾನ್ಯ ಎನಿಸಿಕೊಳ್ಳುತ್ತಿದೆ. ಕಳೆದ ವರ್ಷ ಕೆಲವಾರು ಕಿರುತೆರೆ ನಟ-ನಟಿಯರು ವಿಚ್ಛೇದನ ಪಡೆದಿದ್ದು ಸುದ್ದಿ ಆಗಿತ್ತು. ಇದೀಗ ನಟಿ ಅನುಷಾ ಹೆಗಡೆ ಸಹ ಅದೇ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. ಅನುಷಾ ಅವರ ವಿವಾಹ ಭಾರಿ ಸದ್ದು ಮತ್ತು ಸುದ್ದಿ ಆಗಿತ್ತು. ಆದರೆ ಅವರ ದಾಂಪತ್ಯ ಆರೇ ವರ್ಷಕ್ಕೆ ಮುರಿದು ಬಿದ್ದಿದೆ. ಅನುಷಾ ಹೆಗಡೆ ಅವರು ಈ ಬಗ್ಗೆ ಇನ್​​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ರಾಧಾ ರಮಣ’ ಧಾರಾವಾಹಿಯ ದೀಪಿಕಾ ಪಾತ್ರದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಅನುಷಾ ಹೆಗಡೆ ಆ ಬಳಿಕ ಕೆಲವು ತೆಲುಗು ಧಾರಾವಾಹಿ ಹಾಗೂ ಕೆಲ ಕನ್ನಡ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ತೆಲುಗಿನ ‘ನಿನ್ನೆ ಪೆಳ್ಳಾಡತಾ’ ಧಾರಾವಾಹಿಯಲ್ಲಿ ನಟಿಸುವಾಗ ಸಹನಟರಾದ ಪ್ರತಾಪ್ ಸಿಂಗ್ ಅವರೊಟ್ಟಿಗೆ ಪ್ರೀತಿಯಲ್ಲಿದ್ದ ಅನುಷಾ ಹೆಗಡೆ, ಬಳಿಕ ಅವರನ್ನೇ ವಿವಾಹವಾದರು.

ಅನುಷಾ ಹೆಗಡೆ ಮತ್ತು ಪ್ರತಾಪ್ ಸಿಂಗ್ ವಿವಾಹ ಆಗ ಬಲು ಸುದ್ದಿಯಾಗಿತ್ತು. 2020ರ ಫೆಬ್ರವರಿ ತಿಂಗಳಲ್ಲಿ ಇವರ ವಿವಾಹ ಹೈದರಾಬಾದ್​​ನ ತಾರಮತಿ ಬಾರಾದಾರಿ ಅರಮನೆಯಲ್ಲಿ ಬಲು ಅದ್ಧೂರಿಯಾಗಿ ನೆರವೇರಿತ್ತು. ಟಿವಿ ಹಾಗೂ ಚಿತ್ರರಂಗದ ಹಲವು ಗಣ್ಯರು ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಸುಮಾರು 5 ಗಂಟೆಗಳ ಕಾಲ ಇವರ ವಿವಾಹ ಶಾಸ್ತ್ರಗಳು ನಡೆದಿದ್ದು ವಿಶೇಷವಾಗಿತ್ತು. ಐದು ಗಂಟೆಗಳ ಶಾಸ್ತ್ರ ನಡೆದ ಹೊರತಾಗಿಯೂ ಇವರ ವಿವಾಹ ಆರೇ ವರ್ಷಕ್ಕೆ ಮುರಿದು ಬಿದ್ದಿದೆ.

2023ರಲ್ಲೇ ಈ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿರುವ ಸುದ್ದಿಗಳು ಹರಿದಾಡಲು ಆರಂಭಿಸಿದ್ದವು. ಆದರೆ ಅನುಷಾ ಅವರು ಇದನ್ನು ಒಪ್ಪಿಕೊಂಡಿರಲಿಲ್ಲ. ಆದರೆ ಇದೀಗ ಅಧಿಕೃತವಾಗಿ ಅನುಷಾ ಅವರೇ ವಿಚ್ಛೇದನವನ್ನು ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಟಿ ಅನುಷಾ, ‘2023ರಿಂದಲೂ ದಾಂಪತ್ಯದಲ್ಲಿ ಏರಿಳಿತಗಳನ್ನು ಅನುಭವಿಸುತ್ತಿರುವುದು ಹಲವರಿಗೆ ಗೊತ್ತಿದೆ. ಇದೀಗ 2025 ರಲ್ಲಿ ನಾವು ಅಧಿಕೃತವಾಗಿ, ಕಾನೂನಾತ್ಮಕವಾಗಿ ದೂರಾಗಿದ್ದೇವೆ’ ಎಂದಿದ್ದಾರೆ. ಅಲ್ಲದೆ ಈ ಬಗ್ಗೆ ಹೆಚ್ಚು ಚರ್ಚಿಸುವುದಕ್ಕೆ ತಮಗೆ ಇಷ್ಟವಿಲ್ಲ ಎಂದು ಸಹ ಹೇಳಿದ್ದಾರೆ.

ಅನುಷಾ ಹೆಗಡೆ ಅವರು ‘ಎನ್​​ಎಚ್ 37’ ಸಿನಿಮಾನಲ್ಲಿ 2016 ನಟಿಸಿದ್ದರು, ಒಳ್ಳೆಯ ನೃತ್ಯಗಾರ್ತಿ ಆಗಿದ್ದ ಅನುಷಾ, ‘ಬಣ್ಣ ಬಣ್ಣದ ಬದುಕು’ ಸಿನಿಮಾಕ್ಕೆ ನೃತ್ಯ ನಿರ್ದೇಶನ ಮಾಡಿದ್ದರು. 2017ರಲ್ಲಿ ಪ್ರಸಾರವಾದ ‘ರಾಧಾ ರಮಣ’ ಧಾರಾವಾಹಿಯಲ್ಲಿ ನಟಿಸಿದ್ದರು. 2018ರಲ್ಲಿ ತೆಲುಗಿನ ‘ನಿನ್ನೇ ಪೆಲ್ಲಾಡುತಾ’ ಧಾರಾವಾಹಿಯಲ್ಲಿ ನಟಿಸಿದರು. 2019 ರಲ್ಲಿ ತೆಲುಗಿನ ‘ಸೂರ್ಯಕಾಂತಂ’, 2022 ರಲ್ಲಿ ತಮಿಳಿನ ‘ಆನಂದ ರಾಗಂ’ ಧಾರಾವಾಹಿಗಳಲ್ಲಿ ನಟಿಸಿದರು. ಇದೀಗ ಕನ್ನಡದ ‘ಅನು ಪಲ್ಲವಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು: ಸ್ವಿಮ್ಮಿಂಗ್​​ ಪೂಲ್​​ನಲ್ಲಿ ತೇಲುತ್ತಿತ್ತು ಮೃತದೇಹ – Kannada News | Kanakapura Suspicious Death: Housewife Found in Pool

ರಾಮನಗರ, ಜನವರಿ 25: ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿಯೋರ್ವರು ಮೃತಪಟ್ಟಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಬೆಟ್ಟೆಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಪ್ರತಿಭಾ(32) ಮೃತ ದುರ್ದೈವಿಯಾಗಿದ್ದು, ಮನೆಯ ಸ್ವಿಮ್ಮಿಂಗ್​​ ಪೂಲ್​​ನಲ್ಲಿ ಮೃತದೇಹ ಪತ್ತೆಯಾಗಿದೆ. ಪತಿ ನಂಜೇಗೌಡನೇ ಆಕೆಯನ್ನು ಕೊಲೆ ಮಾಡಿರೋದಾಗಿ ಪ್ರತಿಭಾ ಕುಟುಂಬಸ್ಥರು ಆರೋಪಿಸಿದ್ದರೆ, ಅನಾರೋಗ್ಯದ ಹಿನ್ನೆಲೆ ಆಕೆಯೇ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ನಂಜೇಗೌಡ ತಿಳಿಸಿದ್ದಾರೆ.

ಪರಸ್ಪರ ಪ್ರೀತಿಸಿದ್ದ ನಂಜೇಗೌಡ ಮತ್ತು ಪ್ರತಿಭಾ ಹದಿನಾಲ್ಕು ವರ್ಷದ ಹಿಂದೆ ವಿವಾಹವಾಗಿದ್ರು. ಇಬ್ಬರಿಗೂ ಮುದ್ದಾದ ಎರಡು ಗಂಡು ಮಕ್ಕಳು ಕೂಡ ಇದ್ದಾರೆ. ಇನ್ನು ನಂಜೇಗೌಡ ಕೋಡಿಗಳ್ಳಿ ಗ್ರಾಮದಲ್ಲಿ ತನ್ನದೇ ಆದ ಸಿಮೆಂಟ್ ಅಂಗಡಿಯೊಂದನ್ನು ಇಟ್ಟುಕೊಂಡಿದ್ದು, ಸಾಕಷ್ಟು ಸಿರಿವಂತ ಸಹ ಹೌದು. ಹೀಗಿರುವಾಗ ಇವತ್ತು ಬೆಳಿಗ್ಗೆ ಮೃತ ಪ್ರತಿಭಾಳ ಅಕ್ಕನ ಮನೆಯ ಬಳಿ ಬಂದು ಹೆಂಡತಿ ರೂಮ್ ಬಾಗಿಲು ತೆಗೆಯುತ್ತಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ತಕ್ಷಣ ಪ್ರತಿಭಾ ಸಹೋದರ ಪರಮೇಶ್, ಮನೆಗೆ ಹೋಗಿ ಮನೆಯನ್ನಲ್ಲ ಚೆಕ್ ಮಾಡಿದ್ದಾನೆ. ಈ ವೇಳೆ ಎಲ್ಲಿಯೂ ಆಕೆ ಕಂಡುಬಂದಿಲ್ಲ. ತಕ್ಷಣ ಮನೆಯ ಆವರಣದಲ್ಲಿ ಇದ್ದ ಸ್ವಿಮ್ಮಿಂಗ್​​ ಪೂಲ್​​ನಲ್ಲಿ ನೋಡಿದಾಗ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ: ಪಿಯುಸಿ ಯುವಕನಿಗೆ ಲೈಂಗಿಕ ಕಿರುಕುಳ ನೀಡಿದ ಪೊಲೀಸಪ್ಪ ಅರೆಸ್ಟ್​​

ಅಂದಹಾಗೆ ನಂಜೇಗೌಡಗೆ ಪ್ರತಿಭಾ ಎರಡನೇ ಹೆಂಡತಿ. ಪ್ರಾರಂಭದಲ್ಲಿ ಇಬ್ಬರ ಸಂಸಾರ ಚೆನ್ನಾಗಿಯೇ ಇತ್ತು. ಎರಡನೇ ಪತ್ನಿ ಪ್ರತಿಭಾಗಾಗಿ ಗ್ರಾಮದ ಹೊರವಲಯದಲ್ಲಿ ಸುಂದರವಾದ ಮನೆಯೊಂದನ್ನೂ ನಂಜೇಗೌ ಕಟ್ಟಿಸಿಕೊಟ್ಟಿದ್ದರು. ಆದರೆ ಮೊದಲ ಹೆಂಡತಿ ವಿಚಾರವಾಗಿ ಇಬ್ಬರ ನಡುವೆ ಆಗಾಗ ಗಲಾಟೆ ಕೂಡ ನಡೆಯುತ್ತಿತ್ತು. ಈ ನಡುವೆ ನಿನ್ನೆ ರಾತ್ರಿ ಅದ್ಯಾವುದೋ ಕಾರಣಕ್ಕೆ ಮನೆಗೆ ಬಂದಿದ್ದ ತನ್ನ ಕುಟುಂಬಸ್ಥರನ್ನು ಕೂಡ ಪ್ರತಿಭಾ ಮನೆಗೆ ವಾಪಸ್​​ ಕಳುಹಿಸಿದ್ದರು. ಆನಂತರ ಏನು ನಡೆದಿದೆ ಎಂಬುದು ಗೊತ್ತಿಲ್ಲ. ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಪ್ರತಿಭಾ ಮೃತದೇಹ ಸ್ವಿಮ್ಮಿಂಗ್ ಪೂಲ್​​ನಲ್ಲಿ ಪತ್ತೆಯಾಗಿದೆ.

ಇನ್ನು ಪ್ರತಿಭಾ ಪತಿ ನಂಜೇಗೌಡ ಆಕೆ ಹೊಟ್ಟೆನೋವು ಎನ್ನುತ್ತಿದ್ದಳು, ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುತ್ತಿದ್ದಾರೆ. ಆದರೆ ಕುಟುಂಬಸ್ಥರು ಮಾತ್ರ ಇದು ಕೊಲೆ ಎಂದು ಆರೋಪಿಸಿದ್ದಾರೆ. ಒಟ್ಟಾರೆ ಪ್ರತಿಭಾ ಸಾವು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸತ್ಯಾಂಶ ತಿಳಿಯಲಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕೋಡಿಹಳ್ಳಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Yantra India Recruitment 2026: ಯಂತ್ರ ಇಂಡಿಯಾ ಲಿಮಿಟೆಡ್‌ನಲ್ಲಿ 3,979 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ – Kannada News | Yantra India Apprentice Recruitment 2026: 3979 Government Trade Opportunities

ಸರ್ಕಾರಿ ವಲಯದಲ್ಲಿ ತಾಂತ್ರಿಕ ತರಬೇತಿ ಹಾಗೂ ಉದ್ಯೋಗದ ಅವಕಾಶವನ್ನು ಹುಡುಕುತ್ತಿರುವ ಯುವಜನರಿಗೆ ಖುಷಿಯ ಸುದ್ದಿ ಇಲ್ಲಿದೆ. ಯಂತ್ರ ಇಂಡಿಯಾ ಲಿಮಿಟೆಡ್ (YIL) 2026ರ ಸಾಲಿಗೆ ಟ್ರೇಡ್ ಅಪ್ರೆಂಟಿಸ್‌ಶಿಪ್ ನೇಮಕಾತಿಯನ್ನು ಘೋಷಿಸಿದೆ. ಈ ನೇಮಕಾತಿ ಮೂಲಕ ದೇಶಾದ್ಯಂತ ಇರುವ ಶಸ್ತ್ರಾಸ್ತ್ರ ಉಪಕರಣ ಕಾರ್ಖಾನೆಗಳಲ್ಲಿ ಒಟ್ಟು 3,979 ಅಪ್ರೆಂಟಿಸ್‌ಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಐಟಿಐ ಉತ್ತೀರ್ಣರು ಹಾಗೂ ಐಟಿಐ ಅಲ್ಲದ ಅಭ್ಯರ್ಥಿಗಳಿಗೂ ಈ ಅವಕಾಶ ಲಭ್ಯವಿದೆ.

ಈ ನೇಮಕಾತಿ 59ನೇ ಬ್ಯಾಚ್ ಅಡಿಯಲ್ಲಿ ನಡೆಯಲಿದ್ದು, ಅಭ್ಯರ್ಥಿಗಳಿಗೆ 1961ರ ಅಪ್ರೆಂಟಿಸ್‌ಶಿಪ್ ಕಾಯ್ದೆಯಡಿ ಕೌಶಲ್ಯ ಆಧಾರಿತ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಮಾಸಿಕ ಸ್ಟೈಫಂಡ್ ಕೂಡ ದೊರೆಯುವುದರಿಂದ ಯುವಕರಿಗೆ ಆರ್ಥಿಕ ಬೆಂಬಲವೂ ಸಿಗಲಿದೆ.

ಅರ್ಜಿ ಪ್ರಕ್ರಿಯೆ ಮತ್ತು ದಿನಾಂಕ:

ಯಂತ್ರ ಇಂಡಿಯಾದ ಟ್ರೇಡ್ ಅಪ್ರೆಂಟಿಸ್ ನೇಮಕಾತಿಗೆ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಫೆಬ್ರವರಿ 1, 2026ರಂದು ಆರಂಭವಾಗಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 3, ರಾತ್ರಿ 11:59ರ ವರೆಗೆ ಅವಕಾಶವಿದೆ. ಆಸಕ್ತ ಅಭ್ಯರ್ಥಿಗಳು ಯಂತ್ರ ಇಂಡಿಯಾದ ಅಧಿಕೃತ ನೇಮಕಾತಿ ವೆಬ್‌ಸೈಟ್‌ಗೆ ಭೇಟಿ ನೀಡಿ ಮೊದಲು ನೋಂದಣಿ ಮಾಡಬೇಕು. ನಂತರ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ಫೋಟೋ, ಸಹಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.

ಹುದ್ದೆಗಳ ವಿವರ:

ಈ ನೇಮಕಾತಿಗೆ ಒಟ್ಟು 3,979 ಹುದ್ದೆಗಳು ನಿಗದಿಪಡಿಸಲಾಗಿದೆ. ಇದರಲ್ಲಿ 2,843 ಹುದ್ದೆಗಳು ಮಾಜಿ ಐಟಿಐ ಟ್ರೇಡ್ ಅಪ್ರೆಂಟಿಸ್‌ಗಳಿಗೆ, 1,136 ಹುದ್ದೆಗಳು ಐಟಿಐ ಅಲ್ಲದ ಅಭ್ಯರ್ಥಿಗಳಿಗೆ ಮೀಸಲಾಗಿವೆ. ತರಬೇತಿ ದೇಶದ ವಿವಿಧ ರಾಜ್ಯಗಳಲ್ಲಿರುವ ಯಂತ್ರ ಇಂಡಿಯಾ ಕಾರ್ಖಾನೆಗಳಲ್ಲಿ ನಡೆಯಲಿದೆ.

ಶೈಕ್ಷಣಿಕ ಅರ್ಹತೆ:

ಐಟಿಐ ಅಲ್ಲದ ಅಭ್ಯರ್ಥಿಗಳು 10ನೇ ತರಗತಿಯನ್ನು ಒಟ್ಟಾರೆಯಾಗಿ ಕನಿಷ್ಠ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಜೊತೆಗೆ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಕನಿಷ್ಠ ಶೇ.40 ಅಂಕಗಳು ಕಡ್ಡಾಯ. ಮಾಜಿ ಐಟಿಐ ಅಭ್ಯರ್ಥಿಗಳು NCVT ಅಥವಾ SCVT ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ವ್ಯಾಪಾರದಲ್ಲಿ ಐಟಿಐ ಉತ್ತೀರ್ಣರಾಗಿರಬೇಕು. 10ನೇ ತರಗತಿಯಲ್ಲಿ ಹಾಗೂ ಐಟಿಐನಲ್ಲಿ ಎರಡೂ ಕಡೆ ಕನಿಷ್ಠ ಶೇ.50 ಅಂಕಗಳು ಇರಬೇಕು.

ಅರ್ಜಿ ಶುಲ್ಕ ಮತ್ತು ಸ್ಟೈಫಂಡ್:

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು 200 ರೂ. + ಜಿಎಸ್‌ಟಿ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಎಸ್‌ಸಿ, ಎಸ್‌ಟಿ, ಮಹಿಳೆಯರು, ಅಂಗವಿಕಲರು ಹಾಗೂ ಟ್ರಾನ್ಸ್‌ಜೆಂಡರ್ ಅಭ್ಯರ್ಥಿಗಳಿಗೆ 100 ರೂ. + ಜಿಎಸ್‌ಟಿ ಮಾತ್ರ ಶುಲ್ಕವಿದೆ. ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಆಯ್ಕೆಯಾದ ಅಪ್ರೆಂಟಿಸ್‌ಗಳಿಗೆ ತಿಂಗಳಿಗೆ8,200 ರಿಂದ 9,600 ರೂ. ವರೆಗೆ ಸ್ಟೈಫಂಡ್ ನೀಡಲಾಗುತ್ತದೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್​​ನಲ್ಲಿ 90 ಕಾನೂನು ಗುಮಾಸ್ತ ಹುದ್ದೆಗೆ ಅರ್ಜಿ ಆಹ್ವಾನ

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳ ಆಯ್ಕೆ ಅಂಕಗಳ ಆಧಾರದ ಮೇಲೆ ತಯಾರಿಸಲಾದ ಮೆರಿಟ್ ಪಟ್ಟಿಯ ಮೂಲಕ ನಡೆಯಲಿದೆ. ಆಯ್ಕೆಯು ಕಾರ್ಖಾನೆವಾರು ಮತ್ತು ವ್ಯಾಪಾರವಾರು ಆಗಿರುತ್ತದೆ. ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.

ಯುವಕರಿಗೆ ಉತ್ತಮ ಅವಕಾಶ:

ಸರ್ಕಾರಿ ವಲಯದಲ್ಲಿ ತರಬೇತಿಯೊಂದಿಗೆ ವೃತ್ತಿಜೀವನವನ್ನು ಆರಂಭಿಸಲು ಬಯಸುವ ಯುವಜನರಿಗೆ ಯಂತ್ರ ಇಂಡಿಯಾ ಲಿಮಿಟೆಡ್‌ನ ಈ ಟ್ರೇಡ್ ಅಪ್ರೆಂಟಿಸ್ ನೇಮಕಾತಿ ಅತ್ಯುತ್ತಮ ಅವಕಾಶವಾಗಿದ್ದು, ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಲಾಗಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:53 pm, Sun, 25 January 26

Source link

T20 World Cup 2026: ಪಾಕ್ ವಿಶ್ವಕಪ್‌ ತಂಡದಿಂದ 7 ಆಟಗಾರರು ಔಟ್ – Kannada News | Pakistan T20 World Cup 2026 Squad: Who’s In, Who’s Out After Last WC Performance

2026 ರ ಟಿ20 ವಿಶ್ವಕಪ್ (T20 World Cup 2026) ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ 20 ತಂಡಗಳು ಭಾಗವಹಿಸಲಿವೆ. ವಿಶ್ವಕಪ್ ಟೂರ್ನಿಗಾಗಿ 20 ತಂಡಗಳಲ್ಲಿ 15 ತಂಡಗಳನ್ನು ಪ್ರಕಟಿಸಲಾಗಿತ್ತು. ಇದೀಗ ಜನವರಿ 25 ರಂದು ಪಾಕಿಸ್ತಾನ ವಿಶ್ವಕಪ್ ಟೂರ್ನಿಗಾಗಿ ತನ್ನ ತಂಡವನ್ನು ಸಹ ಪ್ರಕಟಿಸಿದೆ. ಈ ಟೂರ್ನಿಗಾಗಿ ತಂಡವನ್ನು ಘೋಷಿಸಿದ 16 ನೇ ದೇಶ ಪಾಕಿಸ್ತಾನ. ಕಳೆದ ವಿಶ್ವಕಪ್‌ ತಂಡಕ್ಕೆ ಹೋಲಿಸಿದರೆ ಈ ಬಾರಿ ಪಾಕಿಸ್ತಾನ ತಂಡದಲ್ಲಿ 7 ಬದಲಾವಣೆಗಳನ್ನು ಮಾಡಲಾಗಿದೆ. ಗಮನಾರ್ಹವಾಗಿ ನಾಯಕನೂ ಸಹ ಬದಲಾಗಿದ್ದಾನೆ. ಹೀಗಾಗಿ ಪಾಕಿಸ್ತಾನ ತಂಡದಿಂದ ಯಾರನ್ನು ಹೊರಹಾಕಲಾಗಿದೆ ಮತ್ತು ಯಾರಿಗೆ ಅವಕಾಶ ನೀಡಲಾಗಿದೆ? ಎಂಬುದನ್ನು ನೋಡುವುದಾದರೆ..

ಕಳೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಬಾಬರ್ ಆಝಂ ನಾಯಕತ್ವದಲ್ಲಿ, ಪಾಕಿಸ್ತಾನ ಗುಂಪು ಹಂತದಲ್ಲಿಯೇ ತನ್ನ ಪ್ರಯಾಣ ಮುಗಿಸಿತ್ತು. ಅಲ್ಲದೆ ಯುಎಸ್ಎಯಂತಹ ದುರ್ಬಲ ತಂಡದ ವಿರುದ್ಧವೂ ಸೋತಿತ್ತು. ಆದ್ದರಿಂದ, ಈಗ ಪಿಸಿಬಿ ತನ್ನ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಆಯ್ಕೆ ಸಮಿತಿಯು ಅನುಭವಿ ಬ್ಯಾಟ್ಸ್‌ಮನ್ ಬಾಬರ್ ಆಝಂ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆಯಾದರೂ, ಅನುಭವಿ ಆಟಗಾರರಾದ ಮೊಹಮ್ಮದ್ ರಿಜ್ವಾನ್ ಮತ್ತು ಹ್ಯಾರಿಸ್ ರೌಫ್‌ಗೆ ತಂಡದಿಂದ ಗೇಟ್​ಪಾಸ್ ನೀಡಿದೆ.

7 ಆಟಗಾರರು ಔಟ್

ಅಜಮ್ ಖಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಮ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್ ಮತ್ತು ಮೊಹಮ್ಮದ್ ರಿಜ್ವಾನ್ ಈ ಬಾರಿಯ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿಲ್ಲ. ಈ 7 ಆಟಗಾರರು ಕಳೆದ ವಿಶ್ವಕಪ್‌ನಲ್ಲಿ ತಂಡದ ಭಾಗವಾಗಿದ್ದರು.

7 ಆಟಗಾರರಿಗೆ ಮೊದಲ ಅವಕಾಶ

ಫಹೀಮ್ ಅಶ್ರಫ್, ಖ್ವಾಜಾ ಮೊಹಮ್ಮದ್ ನಫೆ, ಮೊಹಮ್ಮದ್ ನವಾಜ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ಸಾಹಿಬ್ಜಾದಾ ಫರ್ಹಾನ್ ಮತ್ತು ಉಸ್ಮಾನ್ ತಾರಿಕ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಈ ಎಲ್ಲಾ ಏಳು ಆಟಗಾರರು ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವುದು ಇದೇ ಮೊದಲು.

ಕಳೆದ ಟಿ20ವಿಶ್ವಕಪ್‌ನಲ್ಲಿ ಪಾಕ್ ಪ್ರದರ್ಶನ

ಕಳೆದ ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲಿ ಪಾಕಿಸ್ತಾನ ತಂಡ ಒಟ್ಟು 4 ಪಂದ್ಯಗಳನ್ನು ಆಡಿತ್ತು. ಈ 4 ಪಂದ್ಯಗಳಲ್ಲಿ ಪಾಕಿಸ್ತಾನ ಕೇವಲ 2 ಪಂದ್ಯಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಅಮೆರಿಕ ಮತ್ತು ಟೀಂ ಇಂಡಿಯಾ ಪಾಕಿಸ್ತಾನವನ್ನು ಸೋಲಿಸಿದ್ದವು. ಇತ್ತ ಪಾಕಿಸ್ತಾನ ದುರ್ಬಲ ಕೆನಡಾ ಮತ್ತು ಐರ್ಲೆಂಡ್ ತಂಡದ ವಿರುದ್ಧ ಗೆಲುವು ಸಾಧಿಸಿತ್ತು.

T20 World Cup 2026: ಟೀಂ ಇಂಡಿಯಾ ಪಾಕಿಸ್ತಾನ ತಂಡಕ್ಕಿಂತ ಬಲಿಷ್ಠವಾಗಿದೆ; ಕಮ್ರಾನ್ ಅಕ್ಮಲ್

ಟಿ20 ವಿಶ್ವಕಪ್​ಗೆ ಪಾಕ್ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಆಝಂ, ಫಹೀಮ್ ಅಶ್ರಫ್, ಫಖರ್ ಝಮಾನ್, ಖ್ವಾಜಾ ಮೊಹಮ್ಮದ್ ನಫಾಯ್ (ವಿಕೆಟ್ ಕೀಪರ್), ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ಸಲ್ಮಾನ್ ಮಿರ್ಝ, ನಸೀಮ್ ಶಾ, ಸಾಹಿಬ್​ಝಾದ ಫರ್ಹಾನ್ (ವಿಕೆಟ್ ಕೀಪರ್), ಸೈಮ್ ಅಯ್ಯೂಬ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ತಾರಿಖ್, ಶಾದಾಬ್​ ಖಾನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RRB Recruitment 2026: ರೈಲ್ವೆ ಇಲಾಖೆಯಲ್ಲಿ 312 ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವೀಧರರು ಅರ್ಹರು – Kannada News | RRB Recruitment 2026: 312 Isolated Category Posts Open – Apply by Jan 31!

ರೈಲ್ವೆಯಲ್ಲಿ ಕೆಲಸ ಮಾಡುವ ಕನಸು ಹೊಂದಿರುವ ಯುವಕರಿಗೆ ಸಂತಸದ ಸುದ್ದಿ. ರೈಲ್ವೆ ನೇಮಕಾತಿ ಮಂಡಳಿ (RRB) ಐಸೊಲೇಟೆಡ್ ವರ್ಗದ ಅಡಿಯಲ್ಲಿ ಒಟ್ಟು 312 ಖಾಲಿ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯಲ್ಲಿ ಜೂನಿಯರ್ ಹಿಂದಿ ಅನುವಾದಕ, ಮುಖ್ಯ ಕಾನೂನು ಸಹಾಯಕ, ಸಿಬ್ಬಂದಿ ಹಾಗೂ ಕಲ್ಯಾಣ ನಿರೀಕ್ಷಕರು ಸೇರಿದಂತೆ ಹಲವು ಪ್ರಮುಖ ಹುದ್ದೆಗಳು ಸೇರಿವೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜನವರಿ 31 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:

ಆರ್‌ಆರ್‌ಬಿ ಪ್ರಕಟಿಸಿರುವ ಮಾಹಿತಿ ಪ್ರಕಾರ, ಈ ನೇಮಕಾತಿಯಲ್ಲಿ ಅತಿಹೆಚ್ಚು ಹುದ್ದೆಗಳು ಜೂನಿಯರ್ ಹಿಂದಿ ಅನುವಾದಕರಿಗೆ ಮೀಸಲಾಗಿದ್ದು, ಒಟ್ಟು 202 ಹುದ್ದೆಗಳು ಲಭ್ಯವಿವೆ. ಜೊತೆಗೆ, ಮುಖ್ಯ ಕಾನೂನು ಸಹಾಯಕ ಹುದ್ದೆಗಳಿಗೆ 22, ಸಾರ್ವಜನಿಕ ಅಭಿಯೋಜಕರಿಗೆ 7, ಸೀನಿಯರ್ ಪಬ್ಲಿಕ್ ಇನ್ಸ್‌ಪೆಕ್ಟರ್‌ಗಳಿಗೆ 15 ಹಾಗೂ ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕರಿಗೆ 24 ಹುದ್ದೆಗಳಿವೆ.

ತಾಂತ್ರಿಕ ಮತ್ತು ವೈಜ್ಞಾನಿಕ ವಿಭಾಗದಲ್ಲೂ ನೇಮಕಾತಿ ನಡೆಯುತ್ತಿದ್ದು, ವೈಜ್ಞಾನಿಕ ಸಹಾಯಕ (ತರಬೇತಿ) 2, ಲ್ಯಾಬ್ ಅಸಿಸ್ಟೆಂಟ್ ಗ್ರೇಡ್–3 (ರಸಾಯನಶಾಸ್ತ್ರ ಮತ್ತು ಲೋಹಶಾಸ್ತ್ರ) 39 ಹಾಗೂ ವೈಜ್ಞಾನಿಕ ಮೇಲ್ವಿಚಾರಕರಿಗೆ 1 ಹುದ್ದೆ ಲಭ್ಯವಿದೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಪ್ರತಿ ಹುದ್ದೆಗೆ ವಿಭಿನ್ನ ಶೈಕ್ಷಣಿಕ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಜೂನಿಯರ್ ಹಿಂದಿ ಅನುವಾದಕ ಹುದ್ದೆಗೆ ಸಂಬಂಧಿತ ವಿಷಯದಲ್ಲಿ ಪದವಿ ಅಗತ್ಯವಿದೆ. ಮುಖ್ಯ ಕಾನೂನು ಸಹಾಯಕ ಹಾಗೂ ಸಾರ್ವಜನಿಕ ಅಭಿಯೋಜಕ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ (ಕಾನೂನು ಪದವಿ) ಕಡ್ಡಾಯವಾಗಿದೆ. ತಾಂತ್ರಿಕ ಮತ್ತು ವೈಜ್ಞಾನಿಕ ಹುದ್ದೆಗಳಿಗೆ ವಿಜ್ಞಾನದಲ್ಲಿ ಪದವಿ ಅಥವಾ ಡಿಪ್ಲೊಮಾ ಹೊಂದಿರಬೇಕು.

ವಯೋಮಿತಿಯ ವಿಚಾರಕ್ಕೆ ಬಂದರೆ, ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸು ಹೊಂದಿರಬೇಕು. ಹುದ್ದೆ ಅನುಗುಣವಾಗಿ ಗರಿಷ್ಠ ವಯೋಮಿತಿ 30 ರಿಂದ 40 ವರ್ಷಗಳವರೆಗೆ ನಿಗದಿಯಾಗಿದೆ. ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಇತರ ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳಂತೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್​​ನಲ್ಲಿ 90 ಕಾನೂನು ಗುಮಾಸ್ತ ಹುದ್ದೆಗೆ ಅರ್ಜಿ ಆಹ್ವಾನ

ವೇತನ ಮತ್ತು ಸೌಲಭ್ಯಗಳು:

ಈ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆ ಅನುಗುಣವಾಗಿ ಆಕರ್ಷಕ ವೇತನ ನೀಡಲಾಗುತ್ತದೆ. ಹಲವಾರು ಹುದ್ದೆಗಳಿಗೆ ತಿಂಗಳಿಗೆ ರೂ. 35,400 ಮೂಲ ವೇತನವಿದ್ದರೆ, ಮುಖ್ಯ ಕಾನೂನು ಸಹಾಯಕ ಸೇರಿದಂತೆ ಹಿರಿಯ ಹುದ್ದೆಗಳಿಗೆ ತಿಂಗಳಿಗೆ ರೂ. 44,900 ವರೆಗೆ ವೇತನ ಲಭ್ಯವಿದೆ. ಇದಲ್ಲದೆ, ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ಪ್ರಯಾಣ ಭತ್ಯೆ ಸೇರಿದಂತೆ ಇತರೆ ಸರ್ಕಾರಿ ಸೌಲಭ್ಯಗಳು ಸಹ ದೊರೆಯುತ್ತವೆ.

ಅರ್ಜಿ ಶುಲ್ಕ:

ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 500, ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ರೂ. 250 ನಿಗದಿಪಡಿಸಲಾಗಿದೆ. ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.

ರೈಲ್ವೆ ಕ್ಷೇತ್ರದಲ್ಲಿ ಭದ್ರ ಮತ್ತು ಗೌರವಾನ್ವಿತ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಅರ್ಹರು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ರೈಲ್ವೆ ನೇಮಕಾತಿ ಮಂಡಳಿ ಸಲಹೆ ನೀಡಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:25 pm, Sun, 25 January 26

Source link

Exit mobile version