ಸೆನ್ಸೆಕ್ಸ್, ನಿಫ್ಟಿ ಕುಸಿತದ ನಡುವೆ ಪತಂಜಲಿ ಷೇರುಗಳಿಗೆ 3 ದಿನ ಹೆಚ್ಚಿದ ಬೇಡಿಕೆ; ಹೂಡಿಕೆದಾರರಿಗೆ ಸಾವಿರ ಕೋಟಿ ರೂ ಲಾಭ – Kannada News | Patanjali Foods shares gain for 3 days, while Nifty and Sensex see downtrend

ಷೇರು ಮಾರುಕಟ್ಟೆ (Share Market) ನಿರಂತರ ಹಿನ್ನಡೆ ಅನುಭವಿಸುತ್ತಿದ್ದರೂ, ಕಳೆದ ವಾರ ಸತತ ಮೂರು ವಹಿವಾಟು ದಿನಗಳಲ್ಲಿ ಪತಂಜಲಿ ಫುಡ್ಸ್ (Patanjali Foods) ಸಂಸ್ಥೆಯ ಷೇರುಗಳು ಲಾಭ ಕಂಡವು. ಕಂಪನಿಯ ಷೇರುಗಳು ಮೂರು ವಹಿವಾಟು ದಿನಗಳಲ್ಲಿ ಸರಿಸುಮಾರು ಶೇ. 2 ರಷ್ಟು ಏರಿಕೆಯಾದರೆ, ಅದೇ ವೇಳೆ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ. 0.70 ರಷ್ಟು ಕುಸಿದಿವೆ. ಒಂದೆಡೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಮೂರು ದಿನಗಳಲ್ಲಿ ಒಟ್ಟಾರೆ ನಷ್ಟ ಅನುಭವಿಸಿದ್ದಾರೆ. ಮತ್ತೊಂದೆಡೆ, ಪತಂಜಲಿ ತನ್ನ ಹೂಡಿಕೆದಾರರಿಗೆ 1,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಲಾಭ ದಕ್ಕಿಸಿದೆ. ಪತಂಜಲಿಯ ಷೇರುಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಕಾಣಬಹುದು ಎಂಬುದು ತಜ್ಞರ ಎಣಿಕೆ. ಕುಸಿತ ಕಾಣುತ್ತಿರುವ ಷೇರು ಮಾರುಕಟ್ಟೆಯಲ್ಲಿ ಪತಂಜಲಿ ಫುಡ್ಸ್ ಷೇರುಗಳು ಹೇಗೆ ಕಾರ್ಯನಿರ್ವಹಿಸಿದವು ಎಂಬುದರ ವಿವರ ಇಲ್ಲಿದೆ.

ಪತಂಜಲಿ ಷೇರು ಬೆಲೆ ಏರಿಕೆ

ಈ ವಾರದ ಕೊನೆಯ ಮೂರು ವಹಿವಾಟು ದಿನಗಳಲ್ಲಿ ಪತಂಜಲಿ ಫುಡ್ಸ್ ಷೇರುಗಳು ಏರಿಕೆ ಕಂಡವು. ಜನವರಿ 20 ರಂದು ಕಂಪನಿಯ ಷೇರುಗಳು ₹502 ಇತ್ತು ಎಂದು ಡೇಟಾ ತೋರಿಸುತ್ತದೆ. ನಂತರ, ಜನವರಿ 21, 22 ಮತ್ತು 23 ರಂದು ಕಂಪನಿಯ ಷೇರುಬೆಲೆ ₹511.80 ಕ್ಕೆ ಏರಿವೆ. ಅಂದರೆ ಶೇ. 1.95 ರಷ್ಟು ಮೌಲ್ಯ ಏರಿಕೆಯಾಗಿದೆ. ಅಷ್ಟಕ್ಕೆ ನಿಲ್ಲದ ಪತಂಜಲಿ ಷೇರುಬೆಲೆ ಶುಕ್ರವಾರ ₹515 ರ ಗರಿಷ್ಠ ಮಟ್ಟವನ್ನು ತಲುಪಿವೆ. ಶುಕ್ರವಾರ ಷೇರು ಮಾರುಕಟ್ಟೆ ವಹಿವಾಟು ಮುಚ್ಚುವ ಹೊತ್ತಿಗೆ ಕಂಪನಿಯ ಷೇರುಗಳು ಸ್ವಲ್ಪ ಲಾಭದೊಂದಿಗೆ ಮುಕ್ತಾಯಗೊಂಡಿದ್ದವು.

ಮೂರು ದಿನಗಳಲ್ಲಿ ಪತಂಜಲಿ ಷೇರು ಹೂಡಿಕೆದಾರರಿಗೆ ಸಿಕ್ಕ ಲಾಭ?

ಸತತ ಮೂರು ವಹಿವಾಟು ದಿನಗಳ ಲಾಭದಿಂದಾಗಿ ಕಂಪನಿಯ ವ್ಯಾಲ್ಯುಯೇಶನ್ ಹೆಚ್ಚಾಗಿದೆ. ಜನವರಿ 20 ರಂದು ಕಂಪನಿಯ ಮಾರುಕಟ್ಟೆ ಬಂಡವಾಳ ₹54,608.98 ಕೋಟಿ ತಲುಪಿತ್ತು. ಜನವರಿ 23 ರಂದು (ಶುಕ್ರವಾರ) ಮಾರುಕಟ್ಟೆ ಮುಕ್ತಾಯದ ವೇಳೆಗೆ ಕಂಪನಿಯ ಮಾರ್ಕೆಟ್ ಕ್ಯಾಪಿಟಲ್ ₹55,675.05 ಕೋಟಿಗೆ ತಲುಪಿದೆ. ಅಂದರೆ, ಪತಂಜಲಿ ಫುಡ್ಸ್​ನ ವ್ಯಾಲ್ಯುಯೇಶನ್ ಈ ಮೂರು ದಿನಗಳಲ್ಲಿ ಒಟ್ಟು ₹1,066.07 ಕೋಟಿ ಹೆಚ್ಚಾದಂತಾಗಿದೆ.

ಇದನ್ನೂ ಓದಿ: ಸಾಮಾನ್ಯ ಹೂಡಿಕೆದಾರರು ಈ ಬಾರಿಯ ಬಜೆಟ್​ನಲ್ಲಿ ಗಮನಿಸಬೇಕಾದ ಸಂಗತಿಗಳಿವು

ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ

ಪತಂಜಲಿ ಏರಿಕೆ ಕಾಣುತ್ತಿರುವ ಹೊತ್ತಲ್ಲೇ ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ಕಂಡಿದ್ದು ಗಮನಾರ್ಹ. ಜನವರಿ 20 ರಂದು ಸೆನ್ಸೆಕ್ಸ್ 82,180.47 ಅಂಕಗಳಲ್ಲಿತ್ತು, ಜನವರಿ 23 ರಂದು 81,537.70 ಕ್ಕೆ ಇಳಿದಿದೆ ಎಂದು ಡೇಟಾ ತೋರಿಸುತ್ತದೆ. ಇದರರ್ಥ ಈ ಅವಧಿಯಲ್ಲಿ ಸೆನ್ಸೆಕ್ಸ್ ಶೇಕಡಾ 0.78 ರಷ್ಟು ಕುಸಿದಿದೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್​ನ ಪ್ರಮುಖ ಸೂಚ್ಯಂಕವಾದ ನಿಫ್ಟಿ ಜನವರಿ 20 ರಂದು 25,232.50 ಕ್ಕೆ ತಲುಪಿತ್ತು ಮತ್ತು ಜನವರಿ 23 ರಂದು ಶೇಕಡಾ 0.73 ರಷ್ಟು ಕುಸಿತದೊಂದಿಗೆ 25,048.65 ಕ್ಕೆ ಮುಕ್ತಾಯವಾಯಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಧೋಬಿ ಘಾಟ್‌ಗೆ ತೆರಳಿ ತನ್ನ ಮಕ್ಕಳಿಗೆ ಜೀವನ ಪಾಠ ಹೇಳಿಕೊಟ್ಟ ತಾಯಿ – Kannada News | Mumbai: Korean mother takes her children to Dhobi Ghat to show the hard work of a worker

ಮುಂಬೈ, ಜನವರಿ : ಮನೆಯೇ ಮೊದಲ ಪಾಠ ಶಾಲೆ, ತಾಯಿ (mother) ತಾನೇ ಮೊದಲು ಗುರು ಎನ್ನುವ ಮಾತಿದೆ. ಹೀಗಾಗಿ ಏನೇ ಒಳ್ಳೆಯದನ್ನು ಹಾಗೂ ಕೆಟ್ಟದನ್ನು ಕಲಿತರೂ ಅದು ಮನೆಯಿಂದಲೇ. ಮಕ್ಕಳಿಗೆ ಜೀವನ ಪಾಠ ಕಲಿಸುವಲ್ಲಿ ತಾಯಿ ಪ್ರಮುಖ ಪಾತ್ರ ವಹಿಸುತ್ತಾಳೆ. ಇದಕ್ಕೆ ಉದಾಹರಣೆಯಂತಿದೆ ಈ ವಿಡಿಯೋ. ತನ್ನ ಮಕ್ಕಳಿಗೆ ಜೀವನ ಪಾಠ ಕಲಿಸಲು ಅವರನ್ನು ಮುಂಬೈನ (Mumbai) ಧೋಬಿ ಘಾಟ್‌ಗೆ ಕರೆದುಕೊಂಡು ಹೋಗಿದ್ದಾಳೆ.  ಕೊರಿಯನ್‌ ತಾಯಿ ಅಲ್ಲಿ ಕೆಲಸಗಾರರು ಪಡುವ ಕಷ್ಟವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟಿದ್ದಾಳೆ. ಮಕ್ಕಳು ಕೆಲಸ ಮಾಡಿ ವಿಸೇಷ ಅನುಭವ ಪಡೆದುಕೊಂಡಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಕ್ಕಳಿಗೆ ಇಂತಹ ಪಾಠಗಳು ಅವಶ್ಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

@wonny_brothers ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಬದುಕಿನ ಪಾಠಗಳನ್ನು ಕಲಿಸುವಂತಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಕೊರಿಯನ್ ಮಕ್ಕಳು ಧೋಬಿ ಘಾಟ್‌ನಲ್ಲಿ ನಿಜವಾದ ಭಾರತೀಯ ಜೀವನವನ್ನು ಅನುಭವಿಸುತ್ತಿದ್ದಾರೆ. ನಿಜವಾದ ಕೆಲಸ, ನಿಜವಾದ ಗೌರವ ಎಂದು ಬರೆಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಕಳೆದ ಕೆಲವು ವರ್ಷಗಳಿಂದ ಈ ಕೊರಿಯನ್ ಕುಟುಂಬದ ಭಾರತದಲ್ಲಿ ನೆಲೆಸಿದೆ. ಈ ಮಹಿಳೆ ತನ್ನ ಮಕ್ಕಳಿಗೆ ಜೀವನ ಪಾಠ ಕಲಿಸಿ ಕೊಡಲು ಧೋಬಿ ಘಾಟ್‌ಗೆ ಕರೆದುಕೊಂಡು ಹೋಗಿದ್ದಾಳೆ. ಇಲ್ಲಿ ಕೆಲಸ ಮಾಡುವ ಕಾರ್ಮಿಕರು ಬಟ್ಟೆಗಳನ್ನು ಒಗೆಯುವುದು, ಹಿಂಡುವುದು ಹೇಗೆಂದು ಹತ್ತಿರದಲ್ಲೇ ಮಕ್ಕಳುಿ ಗಮನಿಸಿದ್ದಾರೆ. ಇಬ್ಬರೂ ಮಕ್ಕಳು ಬಟ್ಟೆ ಹಿಡಿದು ಒಗೆಯುತ್ತಿರುವುದನ್ನು ಕಾಣಬಹುದು. ಕಾರ್ಮಿಕರು ಬೆವರು ಸುರಿಸಿ ದುಡಿಯುವುದನ್ನು ತೋರಿಸುವ ಚಿತ್ರಣ ಇದಾಗಿದೆ.

ಇದನ್ನೂ ಓದಿ:ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದ ಪುಟ್ಟ ಬಾಲಕನನ್ನು ಎತ್ಕೊಂಡು ಹೋದ ತಾಯಿ

ಈ ವಿಡಿಯೋ ಇದುವರೆಗೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಬದುಕಿನ ನಿಜವಾದ ಪಾಠ ಇಲ್ಲೇ ಅಡಗಿರುವುದು ಎಂದಿದ್ದಾರೆ. ಮತ್ತೊಬ್ಬರು, ಇಂದಿನ ಮಕ್ಕಳಿಗೆ ಇಂತಹ ಪಾಠಗಳು ಅತ್ಯಗತ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಪ್ರತಿಯೊಬ್ಬ ತಾಯಿಯೂ ಮಕ್ಕಳಿಗೆ ಜೀವನ ಮೌಲ್ಯಗಳನ್ನು ಕಲಿಸಿ ಕೊಡಬೇಕು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Padma Awards 2026: ಪದ್ಮ ಪ್ರಶಸ್ತಿಗೆ ಯಾರೆಲ್ಲ ಭಾಜನ? ಇಲ್ಲಿದೆ ಮಾಹಿತಿ – Kannada News | 2026 Padma Awards: Full List of Winners and Honorees Announced

ನವದೆಹಲಿ, ಜನವರಿ 25: 2026ನೇ ಸಾಲಿನ ಪದ್ಮ ಪ್ರಶಸ್ತಿಯ ಪಟ್ಟಿ ಲಭ್ಯವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಈ ವರ್ಷ ಪದ್ಮ ಪ್ರಶಸ್ತಿಗೆ ಭಾಜನರಾದವರ ಪಟ್ಟಿಯಲ್ಲಿ ‘ಪುಸ್ತಕ ಮನೆ’ ಗ್ರಂಥಾಲಯ ನಿರ್ಮಿಸಿರುವ ಕರ್ನಾಟಕದ 75 ವರ್ಷದ ಅಂಕೇಗೌಡ, ನಿವೃತ್ತ ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿ) ಇಂದರ್ಜಿತ್ ಸಿಂಗ್ ಸಿಧು ಸೇರಿದಂತೆ ದಶಕಗಳ ಕಾಲ ವಿವಿಧ ಕ್ಷೇತ್ರಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಿ ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದ ಅನೇಕ ಅನಾಮಧೇಯ ಹೀರೋಗಳ ಹೆಸರಿವೆ.

ಪದ್ಮ ಪ್ರಶಸ್ತಿ ಪಡೆದವರ ಪಟ್ಟಿ (ಮೂಲಗಳ ಪ್ರಕಾರ):

  1. ಅಂಕೇಗೌಡ
  2. ಆರ್ಮಿಡಾ ಫರ್ನಾಂಡೆಸ್
  3. ಭಗವಾನದಾಸ್ ರೈಕ್ವಾರ್
  4. ಭಿಕ್ಲ್ಯಾ ಲಡಕ್ಯಾ ಧಿಂಡಾ
  5. ಬೃಜ್ ಲಾಲ್ ಭಟ್
  6. ಬುಧ್ರಿ ತಾತಿ
  7. ಚಾರಣ್ ಹೆಂಬ್ರಮ್
  8. ಚಿರಂಜೀವಿ ಲಾಲ್ ಯಾದವ್
  9. ಧರ್ಮಿಕ್‌ಲಾಲ್ ಚುನಿಲಾಲ್ ಪಾಂಡ್ಯ
  10. ಗಫ್ರುದ್ದೀನ್ ಮೇವಾತಿ ಜೋಗಿ
  11. ಹ್ಯಾಲಿ ವಾರ್
  12. ಇಂದರ್‌ಜಿತ್ ಸಿಂಗ್ ಸಿದ್ಧು
  13. ಕೆ. ಪಜನಿವೇಲ್
  14. ಕೈಲಾಸ್ ಚಂದ್ರ ಪಂತ್
  15. ಖೇಮ್ ರಾಜ್ ಸುಂದ್ರಿಯಾಲ್
  16. ಕೊಲ್ಲಕ್ಕಯಿಲ್ ದೇವಕಿ ಅಮ್ಮ ಜಿ
  17. ಕುಮಾರಸ್ವಾಮಿ ತಂಗರಾಜ್
  18. ಮಹೇಂದ್ರ ಕುಮಾರ್ ಮಿಶ್ರಾ
  19. ಮೀರ್ ಹಾಜಿಭಾಯ್ ಕಸಂಭಾಯ್
  20. ಮೋಹನ್ ನಗರ್
  21. ನರೇಶ್ ಚಂದ್ರ ದೇವ್ ವರ್ಮಾ
  22. ನಿಲೇಶ್ ವಿನೋದ್‌ಚಂದ್ರ ಮಂಡಲೇವಾಲಾ
  23. ನೂರುದ್ದೀನ್ ಅಹ್ಮದ್
  24. ಓಥುವಾರ್ ತಿರುತ್ತನಿ ಸ್ವಾಮಿನಾಥನ್
  25. ಪದ್ಮ ಗುರ್ಮೆಟ್
  26. ಪೊಖಿಲಾ ಲೆಕ್ತೆಪಿ
  27. ಪುನ್ನಿಯಮೂರ್ತಿ ನಟೇಸನ್
  28. ಆರ್. ಕೃಷ್ಣನ್
  29. ರಘುಪತ್ ಸಿಂಗ್
  30. ರಘುವೀರ್ ತುಕಾರಾಮ್ ಖೇಡ್ಕರ್
  31. ರಾಜಸ್ತಾಪತಿ ಕಳಿಯಪ್ಪ ಗೌಂಡರ್
  32. ರಾಮಾ ರೆಡ್ಡಿ ಮಾಮಿಡಿ
  33. ರಾಮಚಂದ್ರ ಗೋಡಬೋಲೆ ಮತ್ತು ಸುನೀತಾ ಗೋಡಬೋಲೆ
  34. ಎಸ್. ಜಿ. ಸುಶೀಲಮ್ಮ
  35. ಸಂಗ್ಯುಸಂಗ್ ಎಸ್ ಪೊಂಗೆನರ್
  36. ಶಫಿ ಶೌಕ್
  37. ಶ್ರೀರಂಗ್ ದೇವಬಾ ಲಾಡ್
  38. ಶ್ಯಾಮ್ ಸುಂದರ್
  39. ಸಿಮಂಚಲ್ ಪಾತ್ರೋ
  40. ಸುರೇಶ್ ಹಣಗವಾಡಿ
  41. ತಾಗಾ ರಾಮ್ ಭೀಲ್
  42. ತೆಚಿ ಗುಬಿನ್
  43. ತಿರುವಾರೂರ್ ಬಕ್ತವತ್ಸಲಂ
  44. ವಿಶ್ವ ಬಂಧು
  45. ಯುಮ್ನಾಂ ಜತ್ರಾ ಸಿಂಗ್

(ಮಾಹಿತಿ ಅಪ್ಡೇಟ್​​ ಆಗುತ್ತಿದೆ)

Published On – 3:56 pm, Sun, 25 January 26

Source link

T20 World Cup 2026: ಟೀಂ ಇಂಡಿಯಾ ಪಾಕಿಸ್ತಾನ ತಂಡಕ್ಕಿಂತ ಬಲಿಷ್ಠವಾಗಿದೆ; ಕಮ್ರಾನ್ ಅಕ್ಮಲ್ – Kannada News | T20 World Cup 2026: Pakistan Squad Announced; Kamran Akmal Calls India Stronger

ಎಲ್ಲಾ ಊಹಾಪೋಹಗಳ ನಡುವೆ 2026 ರ ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ತನ್ನ ತಂಡವನ್ನು ಪ್ರಕಟಿಸಿದೆ. ನಿನ್ನೆಯಷ್ಟೇ ಪಿಸಿಬಿ ಅಧ್ಯಕ್ಷರು ಪಾಕ್ ತಂಡ ಟಿ20 ವಿಶ್ವಕಪ್​ನಲ್ಲಿ ಭಾಗವಹಿಸುವುದು ಇನ್ನು ಖಚಿತವಾಗಿಲ್ಲ ಎಂದಿದ್ದರು. ಆದರೆ ಇಂದು ಈ ಟೂರ್ನಿಗೆ ತಂಡವನ್ನು ಪ್ರಕಟಿಸಿದ್ದಾರೆ. ಫೆಬ್ರವರಿ 9 ರಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಫೆಬ್ರವರಿ 15 ರಂದು ಮುಖಾಮುಖಿಯಾಗಲಿವೆ. ಆದರೆ ಇದಕ್ಕೂ ಮುನ್ನ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಮಹತ್ವದ ಹೇಳಿಕೆ ನೀಡಿದ್ದಾರೆ. ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಭಾರತ ತಂಡ ಪಾಕಿಸ್ತಾನ ತಂಡಕ್ಕಿಂತ ಉತ್ತಮವಾಗಿದೆ ಎಂದಿದ್ದಾರೆ.

ಭಾರತ ತಂಡ ಬಲಿಷ್ಠವಾಗಿದೆ; ಕಮ್ರಾನ್ ಅಕ್ಮಲ್

ಸಾಜಿಯಾ ಅಬ್ಬಾಸ್ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಕಮ್ರಾನ್ ಅಕ್ಮಲ್, ‘ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕಿಂತ ಬಲಿಷ್ಠ ಮತ್ತು ಅಪಾಯಕಾರಿಯಾಗಿದೆ. ಹೀಗಾಗಿ ಪಾಕಿಸ್ತಾನ ತಂಡ, ಭಾರತವನ್ನು ಸೋಲಿಸಲು ಉತ್ತಮ ಆಟ ಮಾತ್ರವಲ್ಲದೆ ಉತ್ತಮ ಯೋಜನೆಯನ್ನು ಮಾಡಬೇಕಾಗುತ್ತದೆ. ಅಲ್ಲದೆ ಪಾಕಿಸ್ತಾನ ತಂಡವು ಅಭಿಷೇಕ್ ಶರ್ಮಾಗಾಗಿ ಮಾತ್ರವಲ್ಲದೆ ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರನಿಗಾಗಿಯೂ ಯೋಜನೆ ರೂಪಿಸಬೇಕಾಗುತ್ತದೆ.

ಹೀಗಾದ್ರೆ ಮಾತ್ರ ಭಾರತವನ್ನು ಸೋಲಿಸಲು ಸಾಧ್ಯ

ಕಾಗದದ ಮೇಲೆ ಭಾರತ ತಂಡ ಪಾಕಿಸ್ತಾನಕ್ಕಿಂತ ಉತ್ತಮ ಮತ್ತು ಬಲಿಷ್ಠವಾಗಿ ಕಾಣುತ್ತದೆ. ಭಾರತ ಖಂಡಿತವಾಗಿಯೂ ಮೇಲುಗೈ ಸಾಧಿಸಿದೆ, ಆದರೆ ಪಾಕಿಸ್ತಾನವು ತನ್ನ ದಿನದಂದು ಪಂದ್ಯವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಪಾಕಿಸ್ತಾನವು ಉತ್ತಮವಾಗಿ ಯೋಜಿತ ತಂತ್ರದೊಂದಿಗೆ ಮೈದಾನಕ್ಕೆ ಇಳಿದರೆ ಮಾತ್ರ ಭಾರತದ ವಿರುದ್ಧ ಗೆಲ್ಲಲು ಸಾಧ್ಯ ಎಂದು ಕಮ್ರಾನ್ ಅಕ್ಮಲ್ ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20ಪಂದ್ಯದಲ್ಲಿ ಇಶಾನ್ ಮತ್ತು ಸೂರ್ಯ ಅವರ ಪ್ರದರ್ಶನವನ್ನು ಕಮ್ರಾನ್ ಶ್ಲಾಘಿಸಿದ್ದಾರೆ. ಟೀಂ ಇಂಡಿಯಾದ ದೃಷ್ಟಿಕೋನದಿಂದ, ನಾಯಕ ಸೂರ್ಯಕುಮಾರ್ ಯಾದವ್ ಅವರ ದೊಡ್ಡ ಸ್ಕೋರ್ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಉತ್ತಮ ಸಂಕೇತವಾಗಿದೆ. ಇದಲ್ಲದೆ, ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಎರಡು ವರ್ಷಗಳ ಅನುಪಸ್ಥಿತಿಯ ನಂತರ ಇಶಾನ್ ಕಿಶನ್ ಅವರ ಪುನರಾಗಮನವು ಸಹ ಗಮನಾರ್ಹವಾಗಿದೆ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರ್​ಜೆಡಿ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿ ತೇಜಸ್ವಿ ಯಾದವ್ ನೇಮಕ – Kannada News | Tejashwi Yadav appointed as RJD national working president in presence of Lalu and Rabri Yadav

ಪಟ್ನಾ, ಜನವರಿ 25: ಲಾಲೂ ಪ್ರಸಾದ್ ಯಾದವ್ ಅವರ ಕಿರಿಯ ಮಗ ಹಾಗು ಮಾಜಿ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ಅವರು ರಾಷ್ಟ್ರೀಯ ಜನತಾ ದಳದ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಆರ್​ಜೆಡಿಯ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಲಾಲೂಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ಅವರ ಉಪಸ್ಥಿತಿಯಲ್ಲಿ ತೇಜಸ್ವಿ ಯಾದವ್ ಅವರಿಗೆ ಪಕ್ಷದ ಪರಮೋಚ್ಚ ಅಧಿಕಾರ ಕೊಡಲಾಗಿದೆ.

ತೇಜಸ್ವಿ ಯಾದವ್ ಅವರು ಆರ್​ಜೆಡಿಯ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕವಾಗಿರುವ ವಿಚಾರವನ್ನು ಎಕ್ಸ್ ಪೋಸ್ಟ್​ನಲ್ಲಿ ಹಂಚಿಕೊಂಡಿರುವ ರಾಷ್ಟ್ರೀಯ ಜನತಾ ದಳ, ‘ಹೊಸ ಯುಗದ ಉದಯವಾಗಿದೆ’ ಎಂದು ಬಣ್ಣಿಸಿದೆ.

ಇದನ್ನೂ ಓದಿ: Mann Ki Baat: ಭಾರತೀಯ ಉತ್ಪನ್ನಗಳು ಅತ್ಯುತ್ತಮ ಗುಣಮಟ್ಟದ ಪ್ರತೀಕವಾಗಬೇಕು: ಪ್ರಧಾನಿ ಮೋದಿ

ತೇಜಸ್ವಿ ಯಾದವ್ ಅವರು ಅಧ್ಯಕ್ಷರಾಗಿ ನೇಮಕವಾಗುವ ಮುನ್ನವೇ ಪಕ್ಷದಲ್ಲಿ ಅಮೂಲಾಗ್ರವಾಗಿ ಬದಲಾವಣೆ ಮಾಡುವ ನಿಟ್ಟಿನಲ್ಲಿ ಕಾರ್ಯವಹಿಸಿದ್ದರು. ಬೂತ್ ಮಟ್ಟದಲ್ಲಿ ಪಕ್ಷದ ಸ್ವರೂಪದಲ್ಲಿ ಬದಲಾವಣೆ ಮಾಡಲು ಯೋಜಿಸಿರುವುದಾಗಿ ಆರ್​ಜೆಡಿ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಯಾದವ್ ಹೇಳಿದ್ದರು. ಅದಾಗಲೇ ಅವರಿಗೆ ಪಕ್ಷಾಧ್ಯಕ್ಷ ಪಟ್ಟ ದಕ್ಕುವುದು ನಿಶ್ಚಿತವಾಗಿದ್ದಂತಿತ್ತು.

ಪಕ್ಷದ ಸಂಕಷ್ಟ ಕಾಲಘಟ್ಟದಲ್ಲಿ ಜವಾಬ್ದಾರಿ…

ಇತ್ತೀಚಿನ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್​ಜೆಡಿ ಪಕ್ಷ ಹೀನಾಯವಾಗಿ ಸೋತಿತ್ತು. ಜೆಡಿಯು ನೇತಾರ ನಿತೀಶ್ ಕುಮಾರ್ ಹಲವು ವರ್ಷಗಳ ಕಾಲ ಸತತವಾಗಿ ಬಿಹಾರ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಲಾಲೂ ಪ್ರಸಾದ್ ಯಾದವ್ ಸಂಸ್ಥಾಪಿತ ಆರ್​ಜೆಡಿ ಪಕ್ಷದ ಶಕ್ತಿ ವರ್ಷದಿಂದ ವರ್ಷಕ್ಕೆ ಕುಂದುತ್ತಾ ಬರುತ್ತಿದೆ. ಈ ಪರಿಸ್ಥಿತಿಯಲ್ಲಿ ಮಾಜಿ ಉಪಮುಖ್ಯಮಂತ್ರಿಯೂ ಆದ ತೇಜಸ್ವಿ ಯಾದವ್ ಅವರು ಪಕ್ಷದ ಹೊಸ ಜೀವ ಕೊಡಲು ಕ್ರಮ ತೆಗೆದುಕೊಳ್ಳುತ್ತಾರಾ ಎಂಬುದು ಕುತೂಹಲದ ಸಂಗತಿ.

ಇದನ್ನೂ ಓದಿ: ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ, ಭುಗಿಲೆದ್ದ ಆಕ್ರೋಶ

ರೋಹಿಣಿ ಆಚಾರ್ಯ ಟೀಕೆ

ಲಾಲೂ ಪ್ರಸಾದ್ ಯಾದವ್ ಅವರ ಮಗಳು ರೋಹಿಣಿ ಆಚಾರ್ಯ ಅವರು ತೇಜಸ್ವಿ ಯಾದವ್ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಆರ್​ಜೆಡಿ ಪಕ್ಷದ ನಿಯಂತ್ರಣವು ನುಸುಳುಕೋರರ ಕೈಗೆ ಸಿಕ್ಕಿದೆ. ಲಾಲೂವಾದವನ್ನು ನಾಶ ಮಾಡುವುದೇ ಈ ಸಂಚುಕೋರರ ಏಕೈಕ ಗುರಿ ಎಂದು ರೋಹಿಣಿ ಆಚಾರ್ಯ ಟ್ವೀಟ್ ಮಾಡಿ ಸಿಡಿಗುಟ್ಟಿದ್ದಾರೆ.

ರೋಹಿಣಿ ಅವರನ್ನು ಇತ್ತೀಚೆಗಷ್ಟೇ ಲಾಲೂ ಅವರ ಮನೆಯಿಂದ ಹಾಗೂ ಕುಟುಂಬದಿಂದ ಹೊರಹಾಕಲಾಗಿತ್ತು. ರೋಹಿಣಿ ಅವರು ತಮ್ಮ ತಂದೆ ಲಾಲೂ ಅವರ ಅನಾರಾಗ್ಯವನ್ನು ತೇಜಸ್ವಿ ಯಾದವ್ ದುರುಪಯೋಗಪಡಿಸಿಕೊಂಡು ಪಕ್ಷ ಹಾಗು ಕುಟುಂಬವನ್ನು ಹಾಳು ಮಾಡುತ್ತಿದ್ದಾನೆ ಎಂದು ಬಾರಿ ಬಾರಿ ಆರೋಪಿಸುತ್ತಲೇ ಬಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಜೂ ಎನ್​​ಟಿಆರ್ ಸಿನಿಮಾಕ್ಕೆ ಬಾಲಿವುಡ್​​ ನಟನ ಕರೆತಂದ ಪ್ರಶಾಂತ್ ನೀಲ್: ಯಾರದು? – Kannada News | Anil Kapoor joined Jr NTR starrer Dragon movie

ಕೆಜಿಎಫ್’ (KGF) ಸಿನಿಮಾ ಸರಣಿಯಿಂದಾಗಿ ಪ್ಯಾನ್ ಇಂಡಿಯಾ ಸ್ಟಾರ್ ನಿರ್ದೇಶಕ ಎನಿಸಿಕೊಂಡಿರುವ ಪ್ರಶಾಂತ್ ನೀಲ್, ‘ಸಲಾರ್’ ಸಿನಿಮಾ ಮೂಲಕ, ‘ಕೆಜಿಎಫ್’ ಗೆಲುವು ಅದೃಷ್ಟವಲ್ಲ ಎಂದು ಸಾಭೀತುಪಡಿಸಿದ್ದಾರೆ. ಇದೀಗ ಪ್ರಶಾಂತ್ ನೀಲ್, ಜೂ ಎನ್​​ಟಿಆರ್ ನಟನೆಯ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ‘ಡ್ರ್ಯಾಗನ್’ ಎಂದು ಹೆಸರಿಡಲಾಗಿದೆ. ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದು, ಕೆಲವು ಕನ್ನಡದ ನಟರೂ ಸಹ ಸಿನಿಮಾನಲ್ಲಿದ್ದಾರೆ. ಇದೀಗ ಪ್ರಶಾಂತ್ ನೀಲ್ ಅವರು ‘ಡ್ರ್ಯಾಗನ್’ ಸಿನಿಮಾಕ್ಕಾಗಿ ಬಾಲಿವುಡ್​ನ ಸ್ಟಾರ್ ನಟರೊಬ್ಬರನ್ನು ಕರೆ ತಂದದ್ದಾರೆ.

ಜೂ ಎನ್​​ಟಿಆರ್ ಸಿನಿಮಾನಲ್ಲಿ ಬಾಲಿವುಡ್​ನ ಹಿರಿಯ ಸ್ಟಾರ್ ನಟರುಗಳಲ್ಲಿ ಒಬ್ಬರಾಗಿರುವ ಅನಿಲ್ ಕಪೂರ್ ನಟಿಸುತ್ತಿದ್ದಾರೆ. ಸ್ವತಃ ಅನಿಲ್ ಕಪೂರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ಡ್ರ್ಯಾಗನ್’ ಸಿನಿಮಾದ ಐಎಂಡಿಬಿ ಪೋಸ್ಟರ್ ಹಂಚಿಕೊಂಡಿದ್ದಾರೆ. ಅನಿಲ್ ಕಪೂರ್ ಅವರು ಈ ಹಿಂದೆ ಸಂದೀಪ್ ರೆಡ್ಡಿ ವಂಗಾ ನಟನೆಯ ‘ಅನಿಮಲ್’ ಸಿನಿಮಾನಲ್ಲಿ ನಟಿಸಿದ್ದು ಅದು ಭಾರಿ ಯಶಸ್ವಿ ಆಗಿತ್ತು, ಆ ಸಿನಿಮಾವನ್ನು ದಕ್ಷಿಣದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿದ್ದರು. ಈಗ ಮತ್ತೊಮ್ಮೆ ದಕ್ಷಿಣದ ನಿರ್ದೇಶಕನ ಸಿನಿಮಾನಲ್ಲಿ ಅನಿಲ್ ಕಪೂರ್ ನಟಿಸುತ್ತಿದ್ದು, ನೀಲ್ ಅವರು ಅನಿಲ್ ಅವರಿಗಾಗಿ ಪವರ್​ಫುಲ್ ಪಾತ್ರವನ್ನೇ ರೆಡಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇನ್ನು ‘ಡ್ರ್ಯಾಗನ್’ ಸಿನಿಮಾದ ಮೂಲಕ ನೀಲ್ ಮೊದಲ ಬಾರಿಗೆ ಭಾರತದ ಗಡಿ ದಾಟುತ್ತಿದ್ದಾರೆ. ನೀಲ್, ಈ ವರೆಗೆ ಕೇವಲ ಭಾರತದಲ್ಲಿ ಮಾತ್ರವೇ ಸಿನಿಮಾ ಶೂಟಿಂಗ್ ಮಾಡಿದ್ದರು. ಆದರೆ ‘ಡ್ರ್ಯಾಗನ್’ ಸಿನಿಮಾಕ್ಕಾಗಿ ವಿದೇಶಕ್ಕೆ ಕಾಲಿರಿಸಿದ್ದಾರೆ. ಆಫ್ರಿಕಾನಲ್ಲಿ ‘ಡ್ರ್ಯಾಗನ್’ ಸಿನಿಮಾದ ಆಕ್ಷನ್ ದೃಶ್ಯಗಳ ಶೂಟಿಂಗ್ ಮಾಡಲಿದ್ದಾರೆ.

ಇದನ್ನೂ ಓದಿ:‘ವಾರ್ 2’ ಸೋತರೂ ಜೂ ಎನ್​ಟಿಆರ್​​ಗೆ ಮತ್ತೊಂದು ಅವಕಾಶ ಕೊಟ್ಟ ವೈಆರ್​ಎಫ್

‘ಡ್ರ್ಯಾಗನ್’ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿ. ಈಗಾಗಲೇ ಶೂಟಿಂಗ್​​ನಲ್ಲಿ ರುಕ್ಮಿಣಿ ಭಾಗವಹಿಸಿದ್ದಾರೆ. ಮಲಯಾಳಂನ ಸ್ಟಾರ್ ನಟ ಟೊವಿನೋ ಥಾಮಸ್ ಸಹ ‘ಡ್ರ್ಯಾಗನ್’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಟೊವಿನೊ ಥಾಮಸ್ ಅವರಿಗೆ ಇದು ಮೊದಲ ತೆಲುಗು ಸಿನಿಮಾ ಆಗಿದೆ. ಈ ಹಿಂದೆ ಎರಡು ತಮಿಳು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಆದರೆ ಇದು ಅವರಿಗೆ ಮೊದಲ ತೆಲುಗು ಸಿನಿಮಾ ಆಗಿದೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಸಿನಿಮಾ ಇದೇ ವರ್ಷದ ಅಂತ್ಯದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಾನು ಇರೋದೇ ಬೋಡ ಕಣೇ: ಬಾಲಕಿ ಜತೆ ರಾಜ್ ಬಿ. ಶೆಟ್ಟಿ ಕ್ಯೂಟ್ ಮಾತುಕಥೆ – Kannada News | Raj B Shetty shares the cute video from Landlord movie shooting

ರಾಜ್ ಬಿ. ಶೆಟ್ಟಿ ಅವರು ಅಭಿನಯಿಸಿದ ‘ಲ್ಯಾಂಡ್​ಲಾರ್ಡ್’ (Landlord) ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಅವರು ವಿಲನ್ ಪಾತ್ರ ಮಾಡಿದ್ದಾರೆ. ಈ ಚಿತ್ರದ ಶೂಟಿಂಗ್ ವೇಳೆ ಬಾಲಕಿ ಜೊತೆ ಮಾತನಾಡಿದ ಒಂದು ವಿಡಿಯೋವನ್ನು ರಾಜ್ ಬಿ. ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ 10 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ‘ಅಣ್ಣ.. ನೀನು ಯಾವಾಗಲಾದರೂ ಬೋಡ ಮಾಡಿಸಿಕೊಂಡಿದ್ದೀಯಾ’ ಎಂದು ಬಾಲಕಿ ಕೇಳಿದ್ದಾಳೆ. ‘ನಾನು ಇರುವುದೇ ಬೋಡ ಕಣೆ. ಕೂದಲು ಅಂಟಿಸಿಕೊಂಡಿದ್ದೇನೆ’ ಎಂದು ರಾಜ್ ಬಿ. ಶೆಟ್ಟಿ (Raj B Shetty) ಅವರು ನಕ್ಕಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ‘ಲ್ಯಾಂಡ್​ಲಾರ್ಡ್’ ಸಿನಿಮಾದಲ್ಲಿನ ಅವರ ಅಭಿನಯಕ್ಕೆ ಸಖತ್ ಪ್ರಶಂಸೆ ಸಿಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಜೀವ್​​ ಗೌಡಗೆ ಮತ್ತಷ್ಟು ಸಂಕಷ್ಟ: ಖಾಕಿ ನಡೆಗೆ ಸ್ವತಃ ಸಿಎಂ ಸಿದ್ದರಾಮಯ್ಯ ಗರಂ – Kannada News | Shidlaghatta Case: CM Siddaramaiah Expresses Displeasure Over Police Handling

ಚಿಕ್ಕಬಳ್ಳಾಪುರ, ಜನವರಿ 25: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಧಮ್ಕಿ ಪ್ರಕರಣ ಸಂಬಂಧ ಆರೋಪಿ ರಾಜೀವ್​​ ಗೌಡನ ಬಂಧನ ಇನ್ನೂ ಆಗದ ಕಾರಣ ಪೊಲೀಸರ ಕಾರ್ಯವೈಖರಿ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯನವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಬಳಿ ಮಾಹಿತಿ ಪಡೆದಿರುವ ಮುಖ್ಯಮಂತ್ರಿಗಳು, ನ್ಯಾಯಾಲಯಗಳಲ್ಲಿ ಜಾಮೀನು ಅರ್ಜಿ ವಜಾ ಆಗಿದ್ದರೂ ಯಾಕೆ ಆತನನ್ನು ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

‘ಶೀಘ್ರವೇ ಆರೋಪಿಯ ಬಂಧನ’

ಕಾಂಗ್ರೆಸ್​ ಮುಖಂಡ ರಾಜೀವ್ ಗೌಡ ಬಂಧನ ವಿಳಂಬ ವಿಚಾರ ಸಂಬಂಧ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕೂಡ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಪೊಲೀಸರಿಗೆ ಬಹಳ ಕಠಿಣವಾಗಿ ಸೂಚನೆ ನೀಡಿದ್ದೇನೆ. ಎಲ್ಲಿಗೆ ಎಷ್ಟು ದಿನ ಅಂತಾ ರಾಜೀವ್ ತಪ್ಪಿಸಿಕೊಂಡು ಹೋಗ್ತಾರೆ? ದೂರು ಬಂದ ಮೊದಲ ದಿನವೇ, ಆತನ ಅರೆಸ್ಟ್ ಮಾಡಿ ಎಂದಿದ್ದೆ. ಆದರೆ ಅಷ್ಟರಲ್ಲಿ ಮುಖಂಡ ರಾಜೀವ್ ಗೌಡ ತಪ್ಪಿಸಿಕೊಂಡು ಹೋಗಿದ್ದಾರೆ. ಯಾರ ಒತ್ತಡ, ಕಾಂಪ್ರಮೈಸ್ ಇಲ್ಲ, ಆದಷ್ಟು ಬೇಗ ಆರೋಪಿಯನ್ನು ಹಿಡಿಯುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  ಶಿಡ್ಲಘಟ್ಟ ಮಹಿಳಾಧಿಕಾರಿಗೆ ಬೆದರಿಕೆ; ರಾಜೀವ್ ಗೌಡ ಜಾಮೀನು ಅರ್ಜಿ ವಜಾ

ರಾಜೀವ್​​ ಸಹೋದರಿಯ ವಿಚಾರಣೆ

ಇನ್ನು ತನ್ಮ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿರುವ ರಾಜೀವ್​​ ಗೌಡ ಮಂಗಳೂರಿನಿಂದ ಬೆಂಗಳೂರಿನಲ್ಲಿರುವ ಸಹೋದರಿಗೆ ಕರೆ ಮಾಡಿದ್ದ. ಕಳೆದ 3 ದಿನಗಳಿಂದ ರಾಜೀವ್ ಗೌಡ ಮಂಗಳೂರಲ್ಲಿದ್ದ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆ ಆತನ ಸಹೋದರಿಯನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ರಾಜೀವ್​​ ಗೌಡ ಅದಾಗಲೇ ಮಂಗಳೂರಿನಿಂದಲೂ ಪರಾರಿಯಾಗಿದ್ದಾನೆ. ರೈಲ್ವೆ ಸ್ಟೇಷನ್​ನಲ್ಲಿ ಕಾರು ಬಿಟ್ಟು ಎಸ್ಕೇಪ್​ ಆಗಿರುವ ಬಗ್ಗೆ ಮಾಹಿತಿ ದೊರೆತಿದೆ. ಹೀಗಾಗಿ ಕಾರು ಬಂದಿರುವ ಮಾರ್ಗ ಆಧರಿಸಿ ಮಂಗಳೂರು ರೈಲ್ವೇ, ಬಸ್ ನಿಲ್ದಾಣ ಸೇರಿದಂತೆ ಹಲವು ಕಡೆಯ ಸಿಸಿ ಟಿವಿಗಳ ಪರಿಶೀಲನೆ ನಡೆಸಲಾಗಿದೆ. ಹೋಟೆಲ್, ರೆಸಾರ್ಟ್​​ಗಳಲ್ಲಿಯೂ ರಾಜೀವ್ ಗೌಡನ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸ ನಡೆದಿದೆ.

ಮನೆಗಳಲ್ಲಿ ಖಾಕಿ ತಲಾಶ್​

ಮತ್ತೊಂದೆಡೆ ಆರೋಪಿ ರಾಜೀವ್ ಗೌಡ ಪತ್ನಿ ಸಹನಾ ಪೊಲೀಸರ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗಿದ್ದು, ಮನೆ ಕೆಲಸದವರ ಸಮ್ಮುಖದಲ್ಲಿ ಆರೋಪಿ ಮನೆಯಲ್ಲಿ ಶೋಧ ನಡೆಸಲಾಗಿದೆ. ಬೆಂಗಳೂರಿನ ಸಂಜಯ್​ ನಗರ, ಡಾಲರ್ಸ್​ ಕಾಲೋನಿಯಲ್ಲಿರುವ ಮನೆಗಳಲ್ಲಿನ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಪೊಲೀಸರು ಜಾಲಾಡಿದ್ದಾರೆ. ಸರ್ಚ್‌ ವಾರಂಟ್ ಪಡೆದು ಮನೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Viral News: ಹೆಂಗಸರ ಒಳಉಡುಪು ಕದಿಯುತ್ತಿದ್ದ ಪತಿ; 30 ವರ್ಷಗಳ ಬಳಿಕ ಅಸಹ್ಯಕರ ಅಭ್ಯಾಸ ತಿಳಿದು ವಿಚ್ಛೇದನ ನೀಡಿದ ಪತ್ನಿ – Kannada News | 30 Year Marriage Ends: Husband’s Secret Underwear Theft Habit Revealed

ಇತ್ತೀಚಿನ ದಿನಗಳಲ್ಲಿ ವಿಚ್ಛೇದನದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ಹಲವು ಕಾರಣಗಳಿವೆ. ಮದುವೆಯಾದ ಪ್ರಾರಂಭದ 2ರಿಂದ 5ವರ್ಷಗಳ ನಡುವೆ ಹೆಚ್ಚಾಗಿ ವಿಚ್ಛೇದನಗಳು ನಡೆಯುತ್ತವೆ. ಆದರೆ ಇಲ್ಲೊಬ್ಬಳು ಬರೋಬ್ಬರೀ 30 ವರ್ಷಗಳ ದಾಂಪತ್ಯಕ್ಕೆ ವಿಚ್ಛೇದನ ನೀಡಿದ್ದಾಳೆ. ಹೌದು 30 ವರ್ಷಗಳ ಸುಖಿ ದಾಂಪತ್ಯ ನಡೆಸಿಕೊಂಡು ಬಂದಿದ್ದ ಮಹಿಳೆಯೊಬ್ಬಳು, ತನ್ನ ಪತಿಯ ಅಸಹ್ಯಕರ ಅಭ್ಯಾಸ ತಿಳಿದ ನಂತರ, ಆ ಸಂಬಂಧಕ್ಕೆ ಅಂತ್ಯ ಹಾಡಿದ್ದಾರೆ.

ದಿ ಮಿರರ್ ವರದಿಯ ಪ್ರಕಾರ, ಮಹಿಳೆಗೆ ತನ್ನ ಪತಿ ಹಲವು ವರ್ಷಗಳಿಂದ ತನ್ನ ಸ್ನೇಹಿತರು, ನೆರೆಹೊರೆಯವರು ಮತ್ತು ಸಂಬಂಧಿಕ ಮಹಿಳೆಯರು ಬಳಸಿದ ಒಳಉಡುಪುಗಳನ್ನು ಗುಪ್ತವಾಗಿ ಕದಿಯುತ್ತಿದ್ದಾನೆ ಎಂಬುದು ತಿಳಿದುಬಂದಿದೆ. ಅಚ್ಚರಿಯ ಸಂಗತಿ ಏನೆಂದರೆ, ಈ ಸಂಗತಿ 30 ವರ್ಷಗಳ ದಾಂಪತ್ಯ ಜೀವನದ ನಂತರ ಬಹಿರಂಗವಾಗಿದೆ. ಈ ಸತ್ಯ ತಿಳಿದ ಕ್ಷಣವೇ ಮಹಿಳೆ ಮಾನಸಿಕವಾಗಿ ಸಂಪೂರ್ಣ ಕುಸಿದಿದ್ದಾಳೆ.

ಸತ್ಯ ಹೊರಬಂದದ್ದು ಹೇಗೆ?

ಈ ಪ್ರಕರಣದ ಅತ್ಯಂತ ಆಘಾತಕಾರಿ ವಿಷಯವೆಂದರೆ ಪತಿ ಯಾವುದೇ ಅಪರಿಚಿತ ಮಹಿಳೆಯರನ್ನು ಗುರಿಯಾಗಿಸಿಕೊಂಡಿರಲಿಲ್ಲ, ಬದಲಾಗಿ ತನ್ನದೇ ಆದ ಸಾಮಾಜಿಕ ವಲಯದಲ್ಲಿರುವ ಮಹಿಳೆಯರ ಮೇಲೆ ಕಣ್ಣಿಟ್ಟಿದ್ದ. ಅಪರಿಚಿತ ವ್ಯಕ್ತಿಯೊಬ್ಬರು ಈ ಘಟನೆಯನ್ನು ಬಹಿರಂಗಪಡಿಸಿದ ನಂತರ, ಪತ್ನಿ ನೇರವಾಗಿ ತನ್ನ ಗಂಡನನ್ನೇ ಪ್ರಶ್ನಿಸಿದ್ದಾಳೆ. ಆರಂಭದಲ್ಲಿ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ಕೊನೆಗೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಈ ಹೋಟೆಲ್​​​ಗೆ ಗೋಡೆ ಇಲ್ಲ, ಛಾವಣಿಯೂ ಇಲ್ಲ, ಎಲ್ಲ ಓಪನ್​; ಆದ್ರೂ ಕೂಡ ಪ್ರೇಮಿಗಳ ನೆಚ್ಚಿನ ತಾಣವಿದು

ಮಹಿಳೆ ಹೇಳುವಂತೆ, “ನನ್ನ ಗಂಡನಿಗೆ ಮಹಿಳೆಯರ ಒಳಉಡುಪುಗಳ ಬಗ್ಗೆ ವಿಚಿತ್ರ ಆಸಕ್ತಿ ಇದೆ ಎಂಬುದು ಸ್ವಲ್ಪ ಮಟ್ಟಿಗೆ ನನಗೆ ಗೊತ್ತಿತ್ತು. ಆದರೆ ಅದು ಇಷ್ಟೊಂದು ಗಂಭೀರವಾಗಿದ್ದು, ಇತರರ ಗೌಪ್ಯತೆಯನ್ನು ಉಲ್ಲಂಘಿಸುವ ಮಟ್ಟಕ್ಕೆ ಹೋಗಿದೆ ಎಂದು ನಾನು ಕನಸಲ್ಲೂ ಊಹಿಸಿರಲಿಲ್ಲ.” ಈ ಬಗ್ಗೆ ಮಹಿಳೆ ಒಂದು ಕೌನ್ಸೆಲಿಂಗ್ ವೆಬ್‌ಸೈಟ್‌ನಲ್ಲಿ ತನ್ನ ನೋವನ್ನು ಹಂಚಿಕೊಂಡಿದ್ದಾಳೆ. “ಈಗ ನನಗೆ ನನ್ನ ಗಂಡನ ಬಗ್ಗೆ ನಾಚಿಕೆ ಮತ್ತು ಅಸಹ್ಯ ಎರಡೂ ಆಗುತ್ತಿದೆ. ಇದು ಕೇವಲ ವಿಚಿತ್ರ ಅಭ್ಯಾಸವಲ್ಲ, ನನ್ನ ನಂಬಿಕೆ, ಗೌರವ ಮತ್ತು ಭಾವನೆಗಳ ಮೇಲೆ ಮಾಡಿದ ಗಂಭೀರ ದ್ರೋಹ,” ಎಂದು ಆಕೆ ಬರೆದುಕೊಂಡಿದ್ದಾಳೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಶ್ವಿನಿ, ಸತೀಶ್ ಮೇಲೆ ದ್ವೇಷ ಇಲ್ಲ: ಬಿಗ್ ಬಾಸ್ ಮುಗಿದ ಮೇಲೂ ಜನರ ಮನ ಗೆಲ್ಲುತ್ತಿರುವ ಗಿಲ್ಲಿ – Kannada News | Gilli Nata interview goes viral after Bigg Boss Kannada Season 12 Win

‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ (Bigg Boss Kannada Season 12 Winner) ಗಿಲ್ಲಿ ನಟ ಅವರು ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಅಕ್ಕಪಕ್ಕದ ರಾಜ್ಯಗಳಲ್ಲಿ ಕೂಡ ಗಿಲ್ಲಿ ನಟ ಫೇಮಸ್ ಆಗಿದ್ದಾರೆ. ಅವರ ರೀಲ್ಸ್ ಎಲ್ಲ ಕಡೆಗಳಲ್ಲಿ ವೈರಲ್ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಕಾಮಿಡಿ ಮೂಲಕ ಗಿಲ್ಲಿ ನಟ (Gilli Nata) ಅವರು ವೀಕ್ಷಕರ ಮನ ಗೆದ್ದಿದ್ದರು. ಬಿಗ್ ಬಾಸ್ ಮುಗಿದ ಮೇಲೂ ಕೂಡ ಅವರು ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರ ಆಗುತ್ತಿದ್ದಾರೆ. ತಮ್ಮ ಜೊತೆ ಸ್ಪರ್ಧಿಸಿದ್ದ ಅಶ್ವಿನಿ ಗೌಡ, ಸತೀಶ್ ಮುಂತಾದವರ ಮೇಲೆ ಕಿಂಚಿತ್ತೂ ದ್ವೇಷ ಇಲ್ಲ ಎಂದು ಗಿಲ್ಲಿ ನಟ ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಜಗಳಗಳು ಸಹಜ. ಟಾಸ್ಕ್ ಗೆಲ್ಲಬೇಕು ಎಂಬ ಸಲುವಾಗಿ ಪರಸ್ಪರ ಕಿತ್ತಾಟ ಇದ್ದೇ ಇರುತ್ತದೆ. ನಾಮಿನೇಷನ್ ಸಮಯದಲ್ಲಿ ಒಬ್ಬರಿಗೊಬ್ಬರು ಕೆಸರು ಎರಚಿಕೊಳ್ಳುವುದು ಕೂಡ ನಡೆಯುತ್ತದೆ. ಆದರೆ ಅದೆಲ್ಲವೂ ಆಟದ ಸಲುವಾಗಿ ಮಾತ್ರ. ಬಿಗ್ ಬಾಸ್ ಮುಗಿದ ಮೇಲೆ ಗಿಲ್ಲಿ ನಟ ಅವರು ಆ ಯಾವ ವಿಚಾರಗಳನ್ನೂ ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲ.

ಈ ಸೀಸನ್​​ನಲ್ಲಿ ಸ್ಪರ್ಧಿಸಿ ಹೊರಬಂದ ಅನೇಕ ಸ್ಪರ್ಧಿಗಳು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಡಾಗ್ ಸತೀಶ್ ಅವರು ಗಿಲ್ಲಿ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದರು. ಅಶ್ವಿನಿ ಗೌಡ ಅವರು ಗಿಲ್ಲಿ ಗೆಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಆ ಯಾವ ವಿಷಯಕ್ಕೂ ಗಿಲ್ಲಿ ನಟ ಅವರು ದ್ವೇಷ ಸಾಧಿಸುತ್ತಿಲ್ಲ. ಯಾರ ಮೇಲೂ ತಮಗೆ ದ್ವೇಷ ಎಲ್ಲ ಎಂದು ಅವರು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ‘ಒಪ್ಪಿದೆ ಕಣಯ್ಯ.. ನಿನ್ನ ಮನಸ್ಸು ಎಷ್ಟು ಪರಿಶುದ್ಧವಾಗಿದೆಯೋ ಅಷ್ಟು ಚೆನ್ನಾಗಿ ನೀನು ಬದುಕುತ್ತೀಯ’ ಎಂದು ಸೂರ್ಯವಂಶ ಸಿನಿಮಾದ ಸ್ಟೈಲ್​​ನಲ್ಲಿ ಗಿಲ್ಲಿಗೆ ಅಭಿಮಾನಿಗಳು ಹಾರೈಸುತ್ತಿದ್ದಾರೆ. ನಿಷ್ಕಲ್ಮಶವಾದ ಮಾತುಗಳ ಮೂಲಕ ಗಿಲ್ಲಿ ನಟ ಅವರು ಜನರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಗಿಲ್ಲಿಗೆ ಅಭಿನಂದನೆ ತಿಳಿಸಿದ್ದಾರೆ.

ಇದನ್ನೂ ಓದಿ: ‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ

ಗಿಲ್ಲಿ ನಟ ಅವರು ತುಂಬಾ ಕಷ್ಟಪಟ್ಟು ಈ ಮಟ್ಟಕ್ಕೆ ಬಂದಿದ್ದಾರೆ. ಕಾಮಿಡಿ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದಾರೆ. ಈಗ ಅವರಿಗೆ ಸಿನಿಮಾ ಅವಕಾಶಗಳು ಹೆಚ್ಚಾಗಿವೆ. ಅಲ್ಲದೇ ಅನೇಕ ಕಾರ್ಯಕ್ರಮಗಳಿಗೆ ಅತಿಥಿ ಆಗಿಯೂ ಅವರು ತೆರಳುತ್ತಿದ್ದಾರೆ. ಇನ್​ಸ್ಟಾಗ್ರಾಮ್​​ನಲ್ಲಿ ಗಿಲ್ಲಿ ನಟ ಅವರನ್ನು 2 ಮಿಲಿಯನ್​ಗಿಂತಲೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version