ಉಡುಪಿ ಜಿಲ್ಲೆಯಲ್ಲಿ ಮೊಬೈಲ್ ನೆಟ್‌ವರ್ಕ್ ಟೆಸ್ಟ್: ಏರ್‌ಟೆಲ್, ಜಿಯೋ ಮುಂದು; ತೀರಾ ಹಿಂದಿರುವ ಬಿಎಸ್‌ಎನ್‌ಎಲ್! – Kannada News | TRAI Network Test in Udupi: Jio and Airtel Lead in Data Speed; BSNL Lagging Way Behind with High Call Drops

ಉಡುಪಿ, ಜುಲೈ 1: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್), ಮಾರ್ಚ್ 2026ರಲ್ಲಿ ಕರ್ನಾಟಕ ʻಎಲ್ಎಸ್ಎʼ ವ್ಯಾಪ್ತಿಯ ಉಡುಪಿ ಜಿಲ್ಲೆಯಾದ್ಯಂತ ನಡೆಸಿದ ‘ಇಂಡಿಪೆಂಡೆಂಟ್ ಡ್ರೈವ್ ಟೆಸ್ಟ್’ (ಐಡಿಟಿ) ವರದಿ ಬಿಡುಗಡೆಯಾಗಿದ್ದು, ಜಿಲ್ಲೆಯ ಮೊಬೈಲ್ ನೆಟ್‌ವರ್ಕ್ ಸೇವೆಗಳ ನೈಜ ಚಿತ್ರಣ ಹೊರಬಿದ್ದಿದೆ. ಈ ವರದಿಯ ಪ್ರಕಾರ, ಖಾಸಗಿ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್ ಮತ್ತು ಜಿಯೋ ಉತ್ತಮ ನೆಟ್‌ವರ್ಕ್ ಹಾಗೂ ಇಂಟರ್ನೆಟ್ ವೇಗ ಒದಗಿಸುತ್ತಿದ್ದರೆ, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸೇವೆ ತೀರಾ ಕಳಪೆಯಾಗಿರುವುದು ಕಂಡುಬಂದಿದೆ.

ಟೆಲಿಕಾಂ ಸಂಸ್ಥೆಗಳು ನೀಡುವ ಸೇವೆಗಳ (ಧ್ವನಿ ಕರೆ ಮತ್ತು ಇಂಟರ್ನೆಟ್ ಡೇಟಾ) ನೈಜ ಗುಣಮಟ್ಟವನ್ನು ಅಳೆಯಲು ಮಾರ್ಚ್ 17 ರಿಂದ 20 ರವರೆಗೆ ಉಡುಪಿ ಜಿಲ್ಲೆಯಾದ್ಯಂತ ಟ್ರಾಯ್ ಈ ಪರೀಕ್ಷೆ ನಡೆಸಿತ್ತು. ನಗರ, ಗ್ರಾಮೀಣ, ಹೆದ್ದಾರಿ ಹಾಗೂ ಜನನಿಬಿಡ ಪ್ರದೇಶಗಳು ಸೇರಿದಂತೆ ವಿವಿಧ ಕಡೆಗಳಲ್ಲಿ 2ಜಿ, 3ಜಿ, 4ಜಿ ಮತ್ತು 5ಜಿ ನೆಟ್‌ವರ್ಕ್‌ಗಳ ಕಾರ್ಯಾಚರಣೆಯನ್ನು ಆಧುನಿಕ ಸಾಧನಗಳ ಮೂಲಕ ಪರಿಶೀಲಿಸಲಾಗಿತ್ತು.

ಇದನ್ನೂ ಓದಿ: 11 ವರ್ಷ ಮಕ್ಕಳಿಲ್ಲದ ದಂಪತಿಗೆ ನಕಲಿ ದಾಖಲೆ ಸೃಷ್ಟಿಸಿ ಮಗು ಮಾರಿದ್ದ ಖ್ಯಾತ ವೈದ್ಯ ಅರೆಸ್ಟ್!

ಟ್ರಾಯ್ ಪರೀಕ್ಷೆಯಲ್ಲಿ ಬಹಿರಂಗವಾದ ಪ್ರಮುಖ ಅಂಶಗಳು

ಕಾಲ್ ಡ್ರಾಪ್ (ಕರೆ ಕಡಿತ) ಸಮಸ್ಯೆ: ಕರೆ ಮಾಡುವಾಗ ಅಥವಾ ಮಾತನಾಡುವಾಗ ಕರೆ ಕಡಿತಗೊಳ್ಳುವ ಸಮಸ್ಯೆಯು ಬಿಎಸ್‌ಎನ್‌ಎಲ್ ಮತ್ತು ವೊಡಾಫೋನ್ ಐಡಿಯಾ (Vi) ನೆಟ್‌ವರ್ಕ್‌ಗಳಲ್ಲಿ ಹೆಚ್ಚಾಗಿ ಕಂಡುಬಂದಿದೆ. ಏರ್‌ಟೆಲ್ ಮತ್ತು ಜಿಯೋ ಈ ವಿಚಾರದಲ್ಲಿ ಉತ್ತಮ ಕಾರ್ಯಕ್ಷಮತೆ ತೋರಿವೆ.

ಡೌನ್‌ಲೋಡ್ ವೇಗ: ಇಂಟರ್ನೆಟ್ ವೇಗದಲ್ಲಿ ಜಿಯೋ ಎಲ್ಲರಿಗಿಂತ ಮುಂದಿದೆ. ಜಿಯೋ ಸರಾಸರಿ 197.40 ಎಮ್‌ಬಿಪಿಎಸ್ ವೇಗ ನೀಡುತ್ತಿದ್ದರೆ, ಏರ್‌ಟೆಲ್ 96.45 ಎಮ್‌ಬಿಪಿಎಸ್, ವೊಡಾಫೋನ್ ಐಡಿಯಾ 23.09 ಎಮ್‌ಬಿಪಿಎಸ್ ವೇಗ ನೀಡುತ್ತಿವೆ. ಆದರೆ, ಬಿಎಸ್‌ಎನ್‌ಎಲ್ ಕೇವಲ 5.65 ಎಮ್‌ಬಿಪಿಎಸ್ ವೇಗದೊಂದಿಗೆ ತೀರಾ ಹಿಂದಿದೆ.

ಅಪ್‌ಲೋಡ್ ವೇಗ: ಫೈಲ್ ಅಥವಾ ವಿಡಿಯೋಗಳನ್ನು ಅಪ್‌ಲೋಡ್ ಮಾಡುವ ವೇಗದಲ್ಲಿ ಏರ್‌ಟೆಲ್ (17.00 ಎಮ್‌ಬಿಪಿಎಸ್) ಮುಂದಿದ್ದು, ಜಿಯೋ (14.78 ಎಮ್‌ಬಿಪಿಎಸ್) ಎರಡನೇ ಸ್ಥಾನದಲ್ಲಿದೆ. ಇಲ್ಲೂ ಕೂಡ ಬಿಎಸ್‌ಎನ್‌ಎಲ್ ಕೇವಲ 1.76 ಎಮ್‌ಬಿಪಿಎಸ್ ವೇಗ ದಾಖಲಿಸಿದೆ.

ಕಾಲ್ ಸೈಲೆನ್ಸ್: ಮಾತನಾಡುವಾಗ ಮೂರು ಸೆಕೆಂಡ್‌ಗಳಿಗಿಂತ ಹೆಚ್ಚು ಕಾಲ ಧ್ವನಿ ಕೇಳಿಸದ (ಕಾಲ್ ಸೈಲೆನ್ಸ್) ಸಮಸ್ಯೆ ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್ ನೆಟ್‌ವರ್ಕ್‌ಗಳಲ್ಲಿ ಹೆಚ್ಚು ವರದಿಯಾಗಿದೆ.

ಪರೀಕ್ಷೆ ನಡೆದ ಪ್ರಮುಖ ಸ್ಥಳಗಳು

ಟ್ರಾಯ್ ತಂಡವು ಪಡುಬಿದ್ರಿ, ಸಂತೆಕಟ್ಟೆ, ಕೋಟ, ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ ಮುಂತಾದ ನಗರ ಪ್ರದೇಶಗಳು; ಮಲ್ಪೆ ಬೀಚ್, ಸೇಂಟ್ ಮೇರಿಸ್ ದ್ವೀಪದಂತಹ ಕರಾವಳಿ ತೀರಗಳು ಮತ್ತು ಉಡುಪಿ ಕೃಷ್ಣ ಮಠ, ಜಿಲ್ಲಾಸ್ಪತ್ರೆ, ಮಣಿಪಾಲ ಕೆಎಂಸಿ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಈ ಪರೀಕ್ಷೆಗಳನ್ನು ನಡೆಸಿದೆ. ಈ ವರದಿಯನ್ನು ಎಲ್ಲಾ ಟೆಲಿಕಾಂ ಸಂಸ್ಥೆಗಳೊಂದಿಗೆ ಟ್ರಾಯ್ ಹಂಚಿಕೊಂಡಿದ್ದು, ಸೇವೆ ಸುಧಾರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಗ್ರಾಹಕರು ಈ ವರದಿಯ ಸಂಪೂರ್ಣ ವಿವರಗಳನ್ನು ಟ್ರಾಯ್‌ನ ಅಧಿಕೃತ ವೆಬ್‌ಸೈಟ್‌ (www.trai.gov.in) ನಲ್ಲಿ ವೀಕ್ಷಿಸಬಹುದು ಎಂದು ಸಂವಹನ ಸಚಿವಾಲಯ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:23 pm, Wed, 1 July 26

Source link

ಖಮೇನಿ ಅಂತ್ಯಕ್ರಿಯೆಗೆ ಇರಾನ್​ನಿಂದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್, ಕಾಂಗ್ರೆಸ್ ಅಧ್ಯಕ್ಷ ಖರ್ಗೆಗೆ ಆಹ್ವಾನ – Kannada News | BJP president Nitin Nabin, Congress president Mallikarjun Kharge invited for Ayatollah Ali Khamenei funeral in Iran

ನವದೆಹಲಿ, ಜುಲೈ 1: ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ಅಂತ್ಯಕ್ರಿಯೆಗೆ ಭಾರತದ ಪ್ರಮುಖ ರಾಜಕೀಯ ಮುಖಂಡರಿಗೆ ಆಹ್ವಾನ ಬಂದಿದೆ. ಇರಾನ್‌ನ ದಿವಂಗತ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭಾರತದ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇರಾನ್ ಸರ್ಕಾರ ಅಧಿಕೃತ ಆಹ್ವಾನ ನೀಡಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹತರಾಗಿದ್ದ ಖಮೇನಿ ಅವರ ಅಂತಿಮ ಸಂಸ್ಕಾರದ ವಿಧಿವಿಧಾನಗಳು ಮುಂದಿನ ವಾರ ಇರಾನ್‌ನಲ್ಲಿ ಜರುಗಲಿವೆ.

ಭಾರತ ಸರ್ಕಾರದ ಪರವಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪವಿತ್ರ ಮಾರ್ಗರಿಟಾ ಮತ್ತು ಬಿಹಾರದ ರಾಜ್ಯಪಾಲರಾದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರು ಈ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸುವ ಸಾಧ್ಯತೆಯಿದೆ. ಭಾರತದಲ್ಲಿ ಸದ್ಯ ಸಾಂವಿಧಾನಿಕ ಹುದ್ದೆಯಲ್ಲಿರುವ ಶಿಯಾ ಸಮುದಾಯದ ಕೆಲವೇ ಕೆಲವು ಗಣ್ಯರಲ್ಲಿ ಒಬ್ಬರಾಗಿರುವ ಬಿಹಾರದ ರಾಜ್ಯಪಾಲ ಹಸ್ನೈನ್ ಮತ್ತು ಸಚಿವ ಮಾರ್ಗರಿಟಾ ಅವರು ಜುಲೈ 4ರಂದು ಟೆಹ್ರಾನ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಕಳೆದ ವಾರವಷ್ಟೇ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರು ಪ್ರಧಾನಿ ನರೇಂದ್ರ ಮೋದಿಗೂ ಈ ಅಂತ್ಯಕ್ರಿಯೆಯ ಆಹ್ವಾನ ಪತ್ರಿಕೆಯನ್ನು ಕಳುಹಿಸಿದ್ದರು. ಭಾರತದ ವತಿಯಿಂದ ಯಾರು ಭಾಗವಹಿಸಲಿದ್ದಾರೆ ಎಂಬ ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲವಾದರೂ, ಪ್ರಧಾನಿ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಇರಾನ್ ಮನವಿ ಮಾಡಿದ್ದರಿಂದ ನಾಳೆ ದೋಹಾದಲ್ಲಿ ಮಾತುಕತೆ; ಅಮೆರಿಕ ಅಧ್ಯಕ್ಷ ಟ್ರಂಪ್ ಮಾಹಿತಿ

ಭಾರತ ಮಾತ್ರವಲ್ಲದೆ ಚೀನಾ, ರಷ್ಯಾ, ಪಾಕಿಸ್ತಾನ ಮತ್ತು ಕತಾರ್ ದೇಶಗಳ ಪ್ರಮುಖ ನಾಯಕರಿಗೂ ಇರಾನ್ ಆಹ್ವಾನ ನೀಡಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ತಮ್ಮ ದೇಶದ ಅಧಿಕೃತ ನಿಯೋಗವೊಂದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದೆ ಎಂದು ಈಗಾಗಲೇ ಖಚಿತಪಡಿಸಿದ್ದಾರೆ.

ಫೆಬ್ರವರಿಯಲ್ಲಿ ಖಮೇನಿ ಮೃತಪಟ್ಟ ನಂತರ ಇರಾನ್ ಸರ್ಕಾರವು ಅಂತ್ಯಕ್ರಿಯೆಯ ದಿನಾಂಕವನ್ನು ಹಲವು ಬಾರಿ ಬದಲಾಯಿಸಿತ್ತು. ಆದರೆ ಜೂನ್ ತಿಂಗಳಲ್ಲಿ ಅಂತಿಮ ನಿರ್ಧಾರಕ್ಕೆ ಬಂದಿರುವ ಇರಾನ್ ಅಧಿಕಾರಿಗಳು, ಖಮೇನಿ ಅವರ ಅಂತ್ಯಸಂಸ್ಕಾರದ ಸಂಪೂರ್ಣ ವಿವರಗಳನ್ನು ಬಿಡುಗಡೆ ಮಾಡಿದ್ದಾರೆ.

ಇರಾನ್ ಸರ್ಕಾರಿ ಮಾಧ್ಯಮಗಳ ಪ್ರಕಾರ, ಜುಲೈ 6ರಂದು ಟೆಹ್ರಾನ್, ಜುಲೈ 7ರಂದು ಕೋಮ್ ಮತ್ತು ಜುಲೈ 9ರಂದು ಮಶಾದ್ ನಗರಗಳಲ್ಲಿ ಅಂತಿಮ ದರ್ಶನ ಹಾಗೂ ಶೋಕಾಚರಣೆ ಸಭೆಗಳು ನಡೆಯಲಿವೆ. ನಂತರ ಜುಲೈ 9ರಂದು ಇಮಾಮ್ ರೆಜಾ ಅವರ ಪವಿತ್ರ ದರ್ಗಾದಲ್ಲಿ ಖಮೇನಿಯ ಪಾರ್ಥಿವ ಶರೀರವನ್ನು ದಫನ ಮಾಡಲಾಗುವುದು.

ಇದನ್ನೂ ಓದಿ: ಇರಾನ್‌ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಗೆ ಪ್ರಧಾನಿ ಮೋದಿಗೆ ಆಹ್ವಾನ

1989ರಿಂದ 2026ರವರೆಗೆ ದೀರ್ಘಕಾಲದವರೆಗೆ ಇರಾನ್ ದೇಶವನ್ನು ಮುನ್ನಡೆಸಿದ್ದ ಅಲಿ ಖಮೇನಿ ಅವರ ಅಂತ್ಯಕ್ರಿಯೆಯನ್ನು ಶಿಯಾ ಮುಸ್ಲಿಮರ ಪವಿತ್ರ ಶೋಕಾಚರಣೆಯ ಮಾಸವಾದ ‘ಮೊಹರಂ’ ಸಮಯದಲ್ಲಿ ಆಯೋಜಿಸಲಾಗಿದೆ. ಆರಂಭದಲ್ಲಿ ಮಾರ್ಚ್ 4ರಂದೇ ಅಂತ್ಯಕ್ರಿಯೆ ನಡೆಸಲು ಯೋಜಿಸಲಾಗಿತ್ತು. ಆದರೆ ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿದ ನಂತರ ಇರಾನ್-ಅಮೆರಿಕ ಯುದ್ಧ ಆರಂಭವಾಗಿದ್ದರಿಂದ ಅಂತ್ಯಕ್ರಿಯೆಯನ್ನು ಮುಂದೂಡಲಾಗಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ವಾರಣಾಸಿ’ ಚಿತ್ರದ ಬಿಗ್ ಅಪ್ಡೇಟ್ ನೀಡಿದ ರಾಜಮೌಳಿ: ಶೂಟಿಂಗ್ ಮುಗಿಯಲು ಇನ್ನು ಎಷ್ಟು ದಿನ ಬಾಕಿ? – Kannada News | Rajamouli Varanasi Update: Action Filmed, 80 Days for Talkie Portions Remaining

‘ಆರ್‌ಆರ್‌ಆರ್’ ಚಿತ್ರದ ಜಾಗತಿಕ ಯಶಸ್ಸಿನ ಬಳಿಕ ನಿರ್ದೇಶಕ ಎಸ್‌ಎಸ್ ರಾಜಮೌಳಿ (SS Rajamouli) ಮುಂದಿನ ಸಿನಿಮಾ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ‘ವಾರಣಾಸಿ’ ಎಂದು ಹೆಸರಿಡಲಾಗಿದೆ. ಈ ಬಹುನಿರೀಕ್ಷಿತ ಚಿತ್ರದ ಅಪ್ಡೇಟ್ ತಿಳಿಯಲು ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿದೆ. ಇತ್ತೀಚೆಗೆ ನಡೆದ ‘ಆರ್‌ಆರ್‌ಆರ್’ ಚಿತ್ರದ ವಿಶೇಷ ಪ್ರದರ್ಶನದ ವೇಳೆ ರಾಜಮೌಳಿ ಅವರು ಈ ಚಿತ್ರದ ಶೂಟಿಂಗ್ ಪ್ರಗತಿಯ ಬಗ್ಗೆ ಅತ್ಯಂತ ಪ್ರಮುಖವಾದ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ.

ಮುಖ್ಯ ಆ್ಯಕ್ಷನ್ ಸನ್ನಿವೇಶಗಳು ಕಂಪ್ಲೀಟ್

ಚಿತ್ರದ ಪ್ರಮುಖ ಭಾಗಗಳ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದೆ ಎಂದು ರಾಜಮೌಳಿ ತಿಳಿಸಿದ್ದಾರೆ. ಸಿನಿಮಾದ ಅತಿ ದೊಡ್ಡ ಹೈಲೈಟ್ ಆಗಿರುವ ಭೀಕರ ಸಾಹಸ ಸನ್ನಿವೇಶಗಳ ಶೂಟಿಂಗ್ ಅನ್ನು ಸಂಪೂರ್ಣವಾಗಿ ಮುಗಿಸಲಾಗಿದೆ. ಸದ್ಯಕ್ಕೆ ಚಿತ್ರದ ಕೇವಲ ಟಾಕಿ ಭಾಗಗಳು ಮಾತ್ರ ಬಾಕಿ ಉಳಿದಿವೆ. ಈ ಟಾಕಿ ಭಾಗದ ಚಿತ್ರೀಕರಣವನ್ನು ಮುಗಿಸಲು ಇನ್ನು ಕೇವಲ 80 ದಿನಗಳು ಬೇಕಾಗಬಹುದು ಎಂದು ಅವರು ಹೇಳಿದ್ದಾರೆ. ಇದಾದ ಬಳಿಕ ಇಡೀ ಚಿತ್ರತಂಡವು ಸುದೀರ್ಘವಾದ ಪೋಸ್ಟ್ ಪ್ರೊಡಕ್ಷನ್ ಮತ್ತು ಗ್ರಾಫಿಕ್ಸ್ ಕೆಲಸಗಳಲ್ಲಿ ನಿರತವಾಗಲಿದೆ.

ಮತ್ತೊಂದು ಹೊಸ ಸಿನಿಮಾ ಮಾಡಬಹುದಾದ ಅವಧಿ

ವಿಶೇಷವೆಂದರೆ ‘ವಾರಣಾಸಿ’ ಚಿತ್ರಕ್ಕಾಗಿ ಈಗಾಗಲೇ ಸಾಕಷ್ಟು ವರ್ಷಗಳ ಕಾಲ ಸುದೀರ್ಘ ಚಿತ್ರೀಕರಣ ನಡೆಸಲಾಗಿದೆ. ಈಗ ಬಾಕಿ ಉಳಿದಿದೆ ಎಂದು ಹೇಳಲಾಗಿರುವ 80 ದಿನಗಳ ಅವಧಿಯಲ್ಲೇ ಇಂದಿನ ದಿನಗಳಲ್ಲಿ ಮತ್ತೊಂದು ಇಡೀ ದೊಡ್ಡ ಸಿನಿಮಾವನ್ನು ಆರಾಮವಾಗಿ ಶೂಟ್ ಮಾಡಿ ಮುಗಿಸಬಹುದಾಗಿದೆ.

ಇದನ್ನೂ ಓದಿ: ಪ್ಯಾರಿಸ್‌ನಲ್ಲಿ ಸುದೀಪ್ ಈಗ ಚಿತ್ರಕ್ಕೆ ಭಾರಿ ಪ್ರಶಂಸೆ; ರಾಜಮೌಳಿಗೆ ಸಿಕ್ಕಿತು ಅಪರೂಪದ ಗೌರವ

ಹೌದು, ಅನೇಕ ಸ್ಟಾರ್ ನಟರ ಬಿಗ್ ಬಜೆಟ್ ಸಿನಿಮಾಗಳು ಕೇವಲ 60 ರಿಂದ 70 ದಿನಗಳಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿಕೊಳ್ಳುತ್ತವೆ. ಆದರೆ ರಾಜಮೌಳಿ ಅವರು ಕೇವಲ ಬಾಕಿ ಉಳಿದಿರುವ ಟಾಕಿ ಭಾಗಕ್ಕಾಗಿಯೇ ಬರೋಬ್ಬರಿ 80 ದಿನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು ಅವರ ಸಿನಿಮಾದ ಭವ್ಯತೆ ಮತ್ತು ಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮಹೇಶ್ ಬಾಬು ಅವರನ್ನು ಈ ಹಿಂದೆ ಎಂದೂ ಕಾಣದ ರಗಡ್ ಅವತಾರದಲ್ಲಿ ತೆರೆಗೆ ತರಲು ರಾಜಮೌಳಿ ಸಜ್ಜಾಗಿದ್ದಾರೆ. ಈ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸುವುದು ಖಚಿತ ಎಂದು ಸಿನಿಪ್ರಿಯರು ನಂಬಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಾಲದ ಗೋಳು ಹೇಳಿಕೊಂಡ ಮಾಜಿ ಬಿಗ್​​ಬಾಸ್ ಸ್ಪರ್ಧಿ ಸೋನು ಗೌಡ – Kannada News | Sonu Gowda talks about her personal life finance problems

ಸೋನು ಗೌಡ (Sonu Gowda), ನಾನಾ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವರು. ಬಳಿಕ ಯೂಟ್ಯೂಬ್, ಇನ್​​ಸ್ಟಾಗ್ರಾಂ ರೀಲುಗಳ ಮುಖಾಂತರ ಸಾಕಷ್ಟು ಫಾಲೋವರ್​​ಗಳನ್ನು ಸಹ ಗಳಿಸಿಕೊಂಡಿದ್ದರು. ಬಿಗ್​​ಬಾಸ್ ಮನೆಗೂ ಹೋಗಿದ್ದ ಸೋನು ಗೌಡ ಅಲ್ಲಿಯೂ ಒಂದು ಹಂತಕ್ಕೆ ಗಮನ ಸೆಳೆದಿದ್ದರು. ಇದೀಗ ಸೋನು ಗೌಡ ಅವರು ಸಿನಿಮಾ ಒಂದರಲ್ಲಿ ನಟಿಸಿದ್ದು, ಅದಕ್ಕಾಗಿ ಮತ್ತೆ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಈ ವೇಳೆ ಟಿವಿ9 ಜೊತೆಗೆ ಮಾತನಾಡಿದ ಸೋನು ಗೌಡ, ತಮ್ಮ ಜೀವನದ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಮಾಡಿಕೊಂಡಿರುವ ಸಾಲಗಳು, ಕಟ್ಟಬೇಕಾಗಿರುವ ಇಎಂಐ ಇನ್ನೂ ಹಲವು ವಿಷಯಗಳ ಬಗ್ಗೆ ಸೋನು ಗೌಡ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

Karnataka Weather Forecast: ಕರಾವಳಿ ಜಿಲ್ಲೆಗಳಿಗೆ ನಾಳೆ ರೆಡ್​​ ಅಲರ್ಟ್​​; ದಕ್ಷಿಣ ಒಳನಾಡಲ್ಲೂ ಮಳೆ ಅಬ್ಬರ – Kannada News | Karnataka Weather Forecast: Red Alert Issued for Coastal Districts; Heavy Monsoon Rains to Lash South Interior Parts till July 7

ಬೆಂಗಳೂರು, ಜುಲೈ 01: ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಕಳೆದ ಕೆಲ ದಿನಗಳಿಂದ ಕರಾವಳಿ ಮತ್ತು ಮಲೆನಾಡು ಸೇರಿ ಹಲವು ಜಿಲ್ಲೆಗಳಲ್ಲಿ ಉತ್ತಮ ವರ್ಷಧಾರೆಯಾಗುತ್ತಿದೆ. ಈ ನಡುವೆ ಜುಲೈ 7ರ ವರೆಗೂ ಕರ್ನಾಟಕದಲ್ಲಿ ಮಳೆಯ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಕೆಲ ಜಿಲ್ಲೆಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದ್ದು, ಜುಲೈ 5ರಂದು ದಕ್ಷಿಣ ಒಳನಾಡು ಭಾಗಕ್ಕೆ ಆರೆಂಜ್​​ ಅಲರ್ಟ್​​ ಮತ್ತು ಕರಾವಳಿ ಕರ್ನಾಟಕ ಭಾಗಕ್ಕೆ ರೆಡ್​​ ಅಲರ್ಟ್​​ ಘೋಷಿಸಲಾಗಿದೆ.

ಕರಾವಳಿಯ ಮೂರು ಜಿಲ್ಲೆಗಳಲ್ಲಿ ನಾಳೆ ರೆಡ್​​ ಅಲರ್ಟ್​​

ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಾಳೆ ವಿಪರೀತ ಮಳೆ ಸುರಿಯಲಿದ್ದು, ಗಾಳಿಯ ವೇಗ ಗಂಟೆಗೆ ಸುಮಾರು 30-40 ಕಿಲೋ ಮೀಟರ್​​ ಇರಲಿದೆ. ಹೀಗಾಗಿ ಈ ಭಾಗಕ್ಕೆ ನಾಳೆ ರೆಡ್​​ ಅಲರ್ಟ್​​ ನೀಡಲಾಗಿದೆ. ಹಾಗೆಯೇ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ, ವಿಜಯನಗರ ಮತ್ತು ರಾಯಚೂರು ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗಬಹುದೆಂದು ಅಂದಾಜಿಸಲಾಗಿದೆ. ಈ ಪೈಕಿ ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಸೇರಿ ಕೊಡಗಿನಲ್ಲಿ ಗಾಳಿ ಸಹಿತ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಇದನ್ನೂ ಓದಿ: ಮಳೆಗಾಗಿ ಕಠಿಣ ನಿರ್ಧಾರ ಕೈಗೊಂಡ ಅನ್ನದಾತ; ಕೃಪೆ ತೋರುವನೇ ವರುಣ ದೇವ?

ಬೆಂಗಳೂರಲ್ಲಿ ಹೇಗಿರಲಿದೆ ವಾತಾವರಣ?

ಮುಂದಿನ 24 ಗಂಟೆಯ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಹೆಚ್ಚಾಗಿ ಕಂಡುಬರಲಿದೆ. ಗಾಳಿಯ ಜೊತೆಗೆ ಅಲ್ಪ ಪ್ರಮಾಣದ ಮಳೆಯೂ ಆಗುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹುಬ್ಬಳ್ಳಿಯಲ್ಲಿ ಗೃಹಜ್ಯೋತಿ ಪುನರ್ ಪರಿಶೀಲನೆ ಆರಂಭ: ಹೆಸ್ಕಾಂ ಸಿಬ್ಬಂದಿ ಮನೆ-ಮನೆಗೆ ಭೇಟಿ – Kannada News | HESCOM Begins Door to Door Re Inspection of Household Electricity Connections in Hubballi

ಹುಬ್ಬಳ್ಳಿ, ಜುಲೈ 01: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪೈಕಿ ರಾಜ್ಯದಲ್ಲಿ ಮೊದಲು ಜಾರಿಯಾಗಿದ್ದು ಗೃಹಜೋತಿ ಗ್ಯಾರಂಟಿ (gruha jyothi scheme). ಪ್ರತಿಯೊಬ್ಬರ ಮನೆಗೆ 200 ಯೂನಿಟ್ ಉಚಿತ ವಿದ್ಯುತ ನೀಡುವ ಈ ಗೃಹಜೋತಿ ಗ್ಯಾರಂಟಿಯ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ. ಅನರ್ಹ ಫಲಾನುಭವಿಗಳನ್ನು ತೆಗೆದು ಹಾಕುವ ಉದ್ದೇಶದಿಂದ ಇಂದಿನಿಂದ ಪುನರ್ ಪರಿಶೀಲನೆ ಆರಂಭವಾಗಿದೆ. ಇತ್ತ ಹುಬ್ಬಳ್ಳಿ (Hubballi) ವಿದ್ಯುತ್ ಸರಬರಾಜು ಕಂಪನಿಯ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ ಪುನರ್ ಪರಿಶೀಲನೆ ಕಾರ್ಯ ಆರಂಭವಾಗಿದೆ.

ಗೃಹಜೋತಿ ಯೋಜನೆಯ ಪುನರ್ ಪರಿಶೀಲನೆಗೆ ಮುಂದಾದ ಸರ್ಕಾರ

ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷ ಹತ್ತು ತಿಂಗಳ ನಂತರ, ತಾನು ನೀಡಿದ್ದ ಮೊದಲ ಗ್ಯಾರಂಟಿ ಗೃಹಜೋತಿ ಯೋಜನೆಯ ಪುನರ್ ಪರಿಶೀಲನೆಗೆ ಸರ್ಕಾರ ಮುಂದಾಗಿದೆ. ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಸದುಪಯೋಗ ಸಿಗಬೇಕು. ರಾಜ್ಯದ ಫಲಾನುಭವಿಗಳಿಗೆ ಮಾತ್ರ ಲಾಭ ಸಿಗಬೇಕು, ಅನರ್ಹ ಫಲಾನುಭವಿಗಳನ್ನು ಕೈಬಿಡುವ ಉದ್ದೇಶದಿಂದ ಗೃಹಜೋತಿ ಪುನರ್ ಪರಿಶೀಲನೆ ಕಾರ್ಯಕ್ಕೆ ಇಂಧನ ಇಲಾಖೆ ಮುಂದಾಗಿದೆ.

ಇದನ್ನೂ ಓದಿ: ಗೃಹ ಜ್ಯೋತಿ ಯೋಜನೆ ಪರಿಷ್ಕರಣೆ ಬಗ್ಗೆ ಜೆಡಿಎಸ್​​ ಕಿಡಿ: ವಿಪಕ್ಷಗಳ ಆರೋಪಕ್ಕೆ ಇಂಧನ ಸಚಿವರಿಂದಲೇ ಸ್ಪಷ್ಟನೆ

ರಾಜ್ಯದ ಎಲ್ಲಾ ಹೆಸ್ಕಾಂಗಳಲ್ಲಿ ಪುನರ್ ಪರಿಶೀಲನೆ ಕಾರ್ಯ ಆರಂಭವಾಗಿದೆ. ಅದೇ ರೀತಿ ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ ಇಂದಿನಿಂದ ಗೃಹಜೋತಿ ಪುನರ್​ ಪರಿಶೀಲನೆ ಕಾರ್ಯ ಆರಂಭವಾಗಿದೆ. 7 ಜಿಲ್ಲೆಯ ವ್ಯಾಪ್ತಿಯಲ್ಲಿರುವ ಎರಡುವರೆ ಸಾವಿರ ಮೀಟರ್ ರೀಡರ್​ಗಳು ಮನೆಮನೆಗೆ ಹೋಗಿ, ಮಾಹಿತಿ ಸಂಗ್ರಹಿಸುವ ಕೆಲಸ ಆರಂಭಿಸಿದ್ದಾರೆ.

ಆರಂಭದಲ್ಲೇ ತಾಂತ್ರಿಕ ತೊಂದರೆ

ಇಂದು ಮುಂಜಾನೆ ಕೇಂದ್ರ ಕಚೇರಿಯಿಂದ ಆ್ಯಪ್ ಅಳವಡಿಕೆ ಬಗ್ಗೆ ಮಾಹಿತಿ ಬಂದ ನಂತರ್ ಆ್ಯಪ್ ಅಳವಡಿಕೆ ಮಾಡಿಕೊಂಡ ಸಿಬ್ಬಂದಿ ಆರಂಭದಲ್ಲಿ ಕೆಲ ತಾಂತ್ರಿಕ ತೊಂದರೆಗಳು ಎದುರಾಗಿದ್ದವು. ಸರ್ವರ್ ಡೌನ್ ಸಮಸ್ಯೆ ಸೇರಿದಂತೆ ಆ್ಯಪ್ ಇನ್ಸ್ಟಾಲ್ ಆಗದೇ ಇರುವ ತೊಂದರೆಗಳು ಕಂಡುಬಂದವು. ಅನೇಕ ಪ್ರಯತ್ನಗಳ ನಂತರ ಮುಂಜಾನೆ 11 ಗಂಟೆ ನಂತರ ಸಿಬ್ಬಂದಿ ಯೋಜನೆಯ ಪುನರ್ ಪರಿಶೀಲನೆ ಆರಂಭಿಸಿದರು. ಹುಬ್ಬಳ್ಳಿ ನಗರದ ವಿವಿಧೆಡೆ ಮನೆಗಳಿಗೆ ಭೇಟಿ ನೀಡಿದ ಸಿಬ್ಬಂದಿ ಮಾಹಿತಿ ಸಂಗ್ರಹಿಸಿದರು.

ಹೆಸ್ಕಾಂ ಎಂಡಿ ವೈಶಾಲಿ ಹೇಳಿದ್ದಿಷ್ಟು

ಸ್ವತಃ ಹೆಸ್ಕಾಂ ಎಂಡಿ ವೈಶಾಲಿ ಅವರು ಅನೇಕ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಬಗ್ಗೆ ಮಾತನಾಡಿದ ಅವರು, ಇಂದಿನಿಂದ ಪುನರ್ ಪರಿಶೀಲನೆ ಕಾರ್ಯ ಆರಂಭವಾಗಿದೆ. ಆರಂಭದಲ್ಲಿ ಸ್ವಲ್ಪ ತಾಂತ್ರಿಕ ತೊಂದರೆ ಆಗಿತ್ತು. ಆದರೆ ಎಲ್ಲಾ ತೊಂದರೆ ನಿವಾರಣೆಯಾಗಿದ್ದು ಸಿಬ್ಬಂದಿ ಮನೆ ಮನೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಯಾವೆಲ್ಲಾ ಮಾಹಿತಿ ಸಂಗ್ರಹ?

ಇನ್ನು ಪ್ರತಿಯೊಬ್ಬರ ಮನೆಗೆ ಹೋಗುತ್ತಿರುವ ಮೀಟರ್ ರೀಡರ್​ಗಳು, ಫಲಾನುಭವಿಗಳ ಮಾಹಿತಿ ಸಂಗ್ರಹಿಸಿದರು. ಫಲಾನುಭವಿಯ ಹೆಸರು, ಲಿಂಕ್ ಆಗಿರುವ ಮೊಬೈಲ್ ನಂಬರ್, ಆಧಾರ ಕಾರ್ಡ್ ನಂಬರ್, ಓಟರ್ ಕಾರ್ಡ್ ನಂಬರ್, ಪ್ಯಾನ್ ಕಾರ್ಡ್ ನಂಬರ್​, ಜಾತಿ, ಆದಾಯ ತೆರಿಗೆ ಪಾವತಿದಾರರಾ ಇಲ್ವಾ ಅನ್ನೋದನ್ನು ಚೆಕ್ ಮಾಡಿದರು. ಪ್ರತಿಯೊಬ್ಬ ಫಲಾನುಭವಿಗಳ ಭಾವಚಿತ್ರ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಆ್ಯಪ್​ನಲ್ಲಿ ನಮೂದಿಸುವುದರ ಜೊತೆಗೆ ಒಂದು ಪ್ರತಿಯನ್ನು ಫಲಾನುಭವಿಗಳಿಗೆ ಕೂಡ ನೀಡುತ್ತಿದ್ದಾರೆ. ಸದ್ಯ ಪುನರ್ ಪರಿಶೀಲನೆಗೆ ಸಂಬಂಧಿಸಿದಂತೆ ಫಲಾನುಭವಿಗಳು ಬೇಕಾಗಿರುವ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಂಡರೆ, ಮೀಟರ್ ರೀಡರ್ ಬಂದಾಗ ನೀಡಬೇಕು. ಇದರಿಂದ ಕೆಲವೇ ನಿಮಿಷಗಳಲ್ಲಿ ಪುನರ್ ಪರಿಶೀಲನೆ ಕಾರ್ಯ ಮುಗಿಯಲಿದೆ ಎಂದು ಹೆಸ್ಕಾಂ ಸಹಾಯಕ ಇಂಜಿನಿಯರ್ ದೀಪಕ್ ಹೇಳಿದರು.

ಇದನ್ನೂ ಓದಿ: ಜು.1ರಿಂದ ಗೃಹ ಜ್ಯೋತಿ ಯೋಜನೆ ಪರಿಶೀಲನೆ: ನಿಮ್ಮ ಮನೆಗೆ ಬರುವ ಸಿಬ್ಬಂದಿಗೆ ಯಾವೆಲ್ಲಾ ದಾಖಲೆ ತೋರಿಸ್ಬೇಕು?

ಸರ್ಕಾರದ ಗ್ಯಾರಂಟಿ ಯೋಜನೆಗಳ ಪುನರ್ ಪರಿಶೀಲನೆ ಕಾರ್ಯ ಆರಂಭವಾಗಿದೆ. ಇದು ಎಷ್ಟರ ಮಟ್ಟಿಗೆ ಅನರ್ಹ ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಡಲು ಸಹಾಯಕವಾಗುತ್ತದೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಇಂದು mAadhaar ನಿರ್ಗಮನ, ಹೊಸ ಆಧಾರ್ ಆ್ಯಪ್ ಆಗಮನ; ನೂತನ ಆ್ಯಪ್​ನಲ್ಲಿನ ವಿಶೇಷತೆಗಳೇನು? – Kannada News | MAadhaar retires on June 30th, new Aadhaar app to take over

ನವದೆಹಲಿ, ಜುಲೈ 1: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಈ ಹಿಂದೆ ಅಭಿವೃದ್ದಿಪಡಿಸಿದ್ದ mAadhaar ಆಪ್ ಜೂನ್ 30ಕ್ಕೆ ಕೊನೆಗೊಂಡಿದೆ. ಜುಲೈ 1, 2026 ರಿಂದ, ಅಂದರೆ ಇಂದಿನಿಂದ ಎಂಆಧಾರ್ ಆಪ್ ಅಲಭ್ಯ ಇರುತ್ತದೆ. ಇತ್ತೀಚೆಗೆ ಅಭಿವೃದ್ಧಿಪಡಿಸಿದ ಮತ್ತು ಹೊಸ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ‘Aadhaar App’ ಅನ್ನು ಬಳಸುವಂತೆ ಸರ್ಕಾರ ಮನವಿ ಮಾಡಿದೆ. ಯುಐಡಿಎಐ ಈ ಸಂಬಂಧ ನಿನ್ನೆ ಟ್ವೀಟ್ ಮಾಡಿದೆ.

‘mAadhaar ಆಪ್ ನಾಳೆ ಕೊನೆಗೊಳ್ಳುತ್ತಿದೆ. ಹೆಚ್ಚು ಉತ್ತಮ ಅನುಭವಕ್ಕಾಗಿ ಆಧಾರ್ ಆಪ್ ಅನ್ನು ಡೌನ್​ಲೋಡ್ ಮಾಡಿ’ ಎಂದು ಆಧಾರ್ ಪ್ರಾಧಿಕಾರವು ತಿಳಿಸಿದೆ.

ಯುಐಡಿಎಐ ಮಾಡಿದ ಟ್ವೀಟ್

ಹಳೆಯ ದಾಖಲೆಗಳು ಡಿಲೀಟ್ ಆಗುತ್ತವೆಯೇ?

ಹಳೆಯ ‘mAadhaar’ ಆ್ಯಪ್ ಸ್ಥಗಿತಗೊಳ್ಳುವುದರಿಂದ ನಿಮ್ಮ ಯಾವುದೇ ಆಧಾರ್ ದಾಖಲೆಗಳು ಅಥವಾ ಡೇಟಾಬೇಸ್ ಡಿಲೀಟ್ ಆಗುವುದಿಲ್ಲ. ಆ್ಯಪ್ ಕೇವಲ ಸೇವೆಗಳನ್ನು ಬಳಸಿಕೊಳ್ಳಲು ಇರುವ ಒಂದು ಡಿಜಿಟಲ್ ಮಾಧ್ಯಮವಷ್ಟೇ ಆಗಿದೆ. ನಿಮ್ಮ ಆಧಾರ್ ಸಂಖ್ಯೆ ಮತ್ತು ವಿವರಗಳು UIDAI ಸರ್ವರ್‌ನಲ್ಲಿ ಎಂದಿನಂತೆ ಸುರಕ್ಷಿತವಾಗಿರುತ್ತವೆ.

ಇದನ್ನೂ ಓದಿ: ಜೂನ್ ತಿಂಗಳ ಜಿಎಸ್​ಟಿ ಸಂಗ್ರಹ ಶೇ. 14ರಷ್ಟು ಹೆಚ್ಚಳ; ಅತಿಹೆಚ್ಚು ತೆರಿಗೆ ಕಲೆಕ್ಷನ್​ನಲ್ಲಿ ಕರ್ನಾಟಕ ನಂ. 2

ಹೊಸ ಆಧಾರ್ ಆ್ಯಪ್‌ನ ಪ್ರಮುಖ ಫೀಚರ್​ಗಳು

ಹೊಸ ಆ್ಯಪ್ ಬಳಕೆದಾರರಿಗೆ ಹೆಚ್ಚು ಸುರಕ್ಷಿತ ಮತ್ತು ಸುಲಭವಾದ ಅನುಭವ ನೀಡಲು ಹಲವು ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿದೆ:

  • ಒಂದೇ ಕ್ಲಿಕ್‌ನಲ್ಲಿ ಬಯೋಮೆಟ್ರಿಕ್ ಲಾಕ್: ಬಳಕೆದಾರರು ತಮ್ಮ ಬಯೋಮೆಟ್ರಿಕ್ ವಿವರಗಳನ್ನು (ಬೆರಳಚ್ಚು/ಕಣ್ಣಿನ ಸ್ಕ್ಯಾನ್) ಒಂದೇ ಕ್ಲಿಕ್ ಮೂಲಕ ಲಾಕ್ ಅಥವಾ ಅನ್‌ಲಾಕ್ ಮಾಡಬಹುದು.
  • ಫೇಸ್ ಅಥೆಂಟಿಕೇಷನ್ (Face Authentication): ಮುಖದ ಗುರುತಿನ ಮೂಲಕ ಆ್ಯಪ್‌ಗೆ ಲಾಗಿನ್ ಆಗುವ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ವ್ಯವಸ್ಥೆ ಇದೆ.
  • ಕ್ಯೂಆರ್ ಕೋಡ್ ಆಧಾರಿತ ಕಾಂಟ್ಯಾಕ್ಟ್ ಕಾರ್ಡ್: ಭೌತಿಕ ವಿಸಿಟಿಂಗ್ ಕಾರ್ಡ್‌ಗಳ ಬದಲಾಗಿ ಸುಲಭವಾಗಿ ವಿವರಗಳನ್ನು ಹಂಚಿಕೊಳ್ಳಲು ಎಡಿಟ್ ಮಾಡಬಹುದಾದ QR ಕೋಡ್ ಕಾರ್ಡ್ ಸೌಲಭ್ಯವಿದೆ.
  • ಇತರೆ ಸೇವೆಗಳು: ಇ-ಆಧಾರ್ ಡೌನ್‌ಲೋಡ್ ಮಾಡುವುದು, ಆಧಾರ್ ಸೇವಾ ಕೇಂದ್ರಗಳಿಗೆ (ASK) ಆನ್‌ಲೈನ್ ಅಪಾಯಿಂಟ್‌ಮೆಂಟ್ ಬುಕ್ ಮಾಡುವುದು ಮತ್ತು ಅಥೆಂಟಿಕೇಷನ್ ಹಿಸ್ಟರಿಯನ್ನು ಇದರಲ್ಲಿ ನೋಡಬಹುದು.

ಇದನ್ನೂ ಓದಿ: ಹಳೆಯ ಸ್ಮಾರ್ಟ್​ಫೋನ್​ಗಳನ್ನು ಬಳಸಿ ಡೇಟಾ ಸೆಂಟರ್? ಗೂಗಲ್ ಮತ್ತು ಕ್ಯಾಲಿಫೋರ್ನಿಯಾ ವಿವಿ ಸಂಶೋಧಕರಿಂದ ಹೊಸ ಪ್ರಯೋಗ

ಹೊಸ ಆ್ಯಪ್‌ನಲ್ಲಿ ರಿಜಿಸ್ಟರ್ ಮಾಡಿಕೊಳ್ಳುವುದು ಹೇಗೆ?

  • ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ಹೊಸ Aadhaar App ಡೌನ್‌ಲೋಡ್ ಮಾಡಿ.
  • ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆ ಮಾಡಿ.
  • ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ.
  • ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ಒಪ್ಪಿಕೊಳ್ಳಿ (Accept Terms & Conditions).
  • ನಿಮ್ಮ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಿಮ್ ಕಾರ್ಡ್ ಅನ್ನು ಆಯ್ಕೆ ಮಾಡಿ.
  • ಫೇಸ್ ಅಥೆಂಟಿಕೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಆ್ಯಪ್ ಸುರಕ್ಷತೆಗಾಗಿ 6-ಅಂಕಿಯ PIN ಸೆಟ್ ಮಾಡಿ.

ಗಮನಿಸಿ: ಹೊಸ ಆ್ಯಪ್ ಮೂಲಕ ಮೊಬೈಲ್ ಸಂಖ್ಯೆ ಅಥವಾ ವಿಳಾಸ ಬದಲಾವಣೆಯಂತಹ ವಿವರಗಳನ್ನು ನವೀಕರಿಸಿದರೆ (Update), ಅದು ಆ್ಯಪ್‌ನಲ್ಲಿ ಕಾಣಿಸಿಕೊಳ್ಳಲು 30 ದಿನಗಳವರೆಗೆ ಸಮಯ ತೆಗೆದುಕೊಳ್ಳಬಹುದು. ಆದರೆ, ನಿಮ್ಮ ಫೋಟೋ, ಬೆರಳಚ್ಚು ಅಥವಾ ಕಣ್ಣಿನ ಗುರುತಿನಂತಹ (Iris) ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಲು ಕಡ್ಡಾಯವಾಗಿ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೇ ಭೇಟಿ ನೀಡಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರೆಸ್ಟೋರೆಂಟ್‌ಗಳಲ್ಲಿ ಫುಡ್‌ ಆರ್ಡರ್‌ ಮಾಡುವ ಮುನ್ನ ಒಂದು ಗ್ಲಾಸ್‌ ನೀರು ನೀಡುವುದೇಕೆ? – Kannada News | Know the reason behind serving water first in restaurants

ಪ್ರತಿಯೊಬ್ಬರೂ ಸಹ ಫ್ರೆಂಡ್ಸ್‌ ಅಥವಾ ಫ್ಯಾಮಿಲಿಯ ಜೊತೆಗೆ ಆಗಾಗ್ಗೆ ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ (restaurants) ಹೋಗ್ತಾರೆ. ನಿಮಗೂ ಸಹ ಆಗ್ಗಾಗೆ ರೆಸ್ಟೋರೆಂಟ್‌ಗಳಿಗೆ ಹೋಗುವ ಅಭ್ಯಾಸ ಇರಬಹುದಲ್ವಾ, ಹೀಗೆ ರೆಸ್ಟೋರೆಂಟ್‌ಗೆ ಹೋದಾಗ ಫುಡ್‌ ಆರ್ಡರ್‌ ಮಾಡುವ ಮೊದಲೇ ವೈಟರ್‌ ಟೇಬಲ್‌ ಮೇಲೆ ಒಂದು ಗ್ಲಾಸ್‌ ನೀರು ತಂದಿಡುವುದನ್ನು ನೀವು ಗಮನಿಸಿರುತ್ತೀರಿ ಅಲ್ವಾ. ಹೆಚ್ಚಿನವರು ಇದನ್ನು ಆತಿಥ್ಯದ ಒಂದು ಭಾಗವೆಂದು ಭಾವಿಸುತ್ತಾರೆ. ಇದು ಕೇವಲ ಆತಿಥ್ಯದ ಸೂಚಕವಲ್ಲ, ಬದಲಾಗಿ ಮನೋವಿಜ್ಞಾನ ಮತ್ತು ಸ್ಮಾರ್ಟ್ ವ್ಯವಹಾರ ತಂತ್ರವೂ ಆಗಿದೆ. ಹಾಗಾದರೆ ಇದರ ಹಿಂದಿನ ಆಸಕ್ತಿದಾಯಕ ಕಾರಣಗಳೇನು ಎಂಬುದನ್ನು ಅನ್ವೇಷಿಸೋಣ.

ರೆಸ್ಟೋರೆಂಟ್‌ಗಳಲ್ಲಿ ಮೊದಲು ಒಂದು ಗ್ಲಾಸ್‌ ನೀರು ನೀಡುವುದೇಕೆ?

ಆತಿಥ್ಯದ ಸಂಕೇತ: ಅತಿಥಿ ದೇವೋಭವ ಎನ್ನುವ ಸಂಸ್ಕೃತಿ ನಮ್ಮದು. ಭಾರತದಲ್ಲಿ, ಅತಿಥಿಗೆ ಮೊದಲು ನೀರು ನೀಡುವುದನ್ನು ಗೌರವದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಸಂಪ್ರದಾಯವನ್ನು ರೆಸ್ಟೋರೆಂಟ್‌ಗಳಲ್ಲಿಯೂ ಆಚರಿಸಲಾಗುತ್ತದೆ. ನೀರು ನೀಡಿದ ತಕ್ಷಣ, ನಮ್ಮಲ್ಲಿ ಸ್ವಾಗತ ಮತ್ತು ಕಾಳಜಿಯ ಭಾವನೆ ಉಂಟಾಗುತ್ತದೆ. ಇದು ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ನಮಗೆ ಆರಾಮದಾಯಕ ಭಾವನೆಯನ್ನು ನೀಡುತ್ತದೆ. ಅದಕ್ಕಾಗಿಯೇ ರೆಸ್ಟೋರೆಂಟ್‌ಗಳಲ್ಲಿ ಮೊದಲು ನೀರು ನೀಡುವುದು.

ಆಯಾಸ ಮತ್ತು ಬಾಯಾರಿಕೆಯನ್ನು ನಿವಾರಿಸುತ್ತದೆ: ಅನೇಕ ಜನರು ಕೆಲಸ, ಶಾಪಿಂಗ್ ಅಥವಾ ಪ್ರಯಾಣದಿಂದ ನೇರವಾಗಿ ರೆಸ್ಟೋರೆಂಟ್‌ಗೆ ಬರುತ್ತಾರೆ. ಆಗ ಆಯಾಸ ಮತ್ತು ವಿಪರೀತ ಬಾಯಾರಿಕೆ ಉಂಟಾಗುತ್ತದೆ. ಆ ಸಂದರ್ಭದಲ್ಲಿ ಒಂದು ಲೋಟ ನೀರು ಕುಡಿಯುವುದರಿಂದ ದೇಹ ಉಲ್ಲಾಸಗೊಳ್ಳುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ.  ಮನಸ್ಸು ಶಾಂತವಾಗಿದ್ದಾಗ, ನಾವು ನಿಧಾನವಾಗಿ ಮೆನುವನ್ನು ಬ್ರೌಸ್ ಮಾಡಬಹುದು ಮತ್ತು ಯಾವುದೇ ಆತುರವಿಲ್ಲದೆ ನೆಚ್ಚಿನ ಆಹಾರವನ್ನು ಆರ್ಡರ್ ಮಾಡಬಹುದು. ಈ ಕಾರಣಕ್ಕೂ ರೆಸ್ಟೋರೆಂಟ್‌ಗಳಲ್ಲಿ ಮೊದಲು ನೀರನ್ನು ನೀಡಲಾಗುತ್ತದೆ.

ಹಸಿವನ್ನು ಹೆಚ್ಚಿಸುವ ತಂತ್ರಗಳು: ಕೆಲವು ತಜ್ಞರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಮ್ಮ ಹೊಟ್ಟೆಯ ಜೀರ್ಣಾಂಗ ವ್ಯವಸ್ಥೆಯು ಸಕ್ರಿಯಗೊಳ್ಳುತ್ತದೆ, ಇದು ನಮಗೆ ಇನ್ನಷ್ಟು ಹಸಿವನ್ನುಂಟು ಮಾಡುತ್ತದೆ. ಹೀಗೆ ತುಂಬಾ ಹಸಿವಾದಾಗ,  ಸೂಪ್, ಸ್ಟಾರ್ಟರ್, ಮುಖ್ಯ ಖಾದ್ಯ  ಎಲ್ಲವನ್ನು ಆರ್ಡರ್ ಮಾಡುತ್ತೇವೆ. ಇದು ಕೂಡ ರೆಸ್ಟೋರೆಂಟ್‌ಗಳಲ್ಲಿ ಫುಡ್‌ ಆರ್ಡರ್‌ ಮಾಡುವ ಮುನ್ನ ನೀರು ನೀಡುವುದರ  ಹಿಂದಿನ ಕಾರಣ.

ಇದನ್ನೂ ಓದಿ: ಮಾತ್ರೆಗಳ ಮಧ್ಯೆ ಗೆರೆ ಏಕಿರುತ್ತವೆ? ಲೈನ್‌ಮಹತ್ವವೇನು?

ಕಾಯುವಿಕೆಯನ್ನು ಸುಲಭಗೊಳಿಸುವುದು: ರೆಸ್ಟೋರೆಂಟ್‌ನಲ್ಲಿ ಆರ್ಡರ್ ಮಾಡಿದ ನಂತರ, ಆಹಾರವು ಟೇಬಲ್‌ಗೆ ಬರಲು 15 ರಿಂದ 20 ನಿಮಿಷಗಳು ತೆಗೆದುಕೊಳ್ಳಬಹುದು. ಸುಮ್ಮನೆ ಕುಳಿತಾಗ, ಈ ಕಾಯುವಿಕೆ ತುಂಬಾ ದೀರ್ಘ ಮತ್ತು ನೀರಸವೆನಿಸಬಹುದು. ಆದರೆ ಮೇಜಿನ ಮೇಲೆ ಒಂದು ಲೋಟ ನೀರು ಇದ್ದಾಗ, ಫ್ರೆಂಡ್ಸ್‌, ಫ್ಯಾಮಿಲಿಯೊಂದಿಗೆ ಚಿಟ್‌ಚಾಟ್‌ ಮಾಡುತ್ತಾ  ನಿಧಾನವಾಗಿನೀರು ಕುಡಿಯುತ್ತೇವೆ. ಇದರಿಂದ ಆ 15 ರಿಂದ 20 ನಿಮಿಷಗಳು ಹೇಗೆ ಕಳೆದವು ಎಂಬುದೇ ಗೊತ್ತಾಗುವುದಿಲ್ಲ.

ವ್ಯವಹಾರವನ್ನು ಬೆಳೆಸುವ ಒಂದು ಬುದ್ಧಿವಂತ ತಂತ್ರ: ರೆಸ್ಟೋರೆಂಟ್ ವ್ಯವಹಾರಕ್ಕೆ ಆರಂಭದಲ್ಲಿ ಉಚಿತ ನೀರು ನೀಡುವುದು ತುಂಬಾ ಪ್ರಯೋಜನಕಾರಿ. ಗ್ರಾಹಕರು ಉತ್ತಮ ಸೇವೆ ಮತ್ತು ಗೌರವವನ್ನು ಪಡೆದಾಗ, ಅವರು ಹೆಚ್ಚು ಖರ್ಚು ಮಾಡುವ ಸಾಧ್ಯತೆ ಹೆಚ್ಚು. ಸಕಾರಾತ್ಮಕ ಅನುಭವವು ಅವರು ಅದೇ ರೆಸ್ಟೋರೆಂಟ್‌ಗೆ ಪದೇ ಪದೇ ಬರುವಂತೆ ಮಾಡುತ್ತದೆ. ಹೀಗೆ ವ್ಯವಹಾರವನ್ನು ಹೆಚ್ಚಿಸುವ ಸಲುವಾಗಿಯೂ ಉತ್ತಮ ಆಥಿತ್ಯದ ಭಾಗವಾಗಿ ನೀರನ್ನು ನೀಡಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:52 pm, Wed, 1 July 26

Source link

ವಾರಕ್ಕೆ 150 ನಿಮಿಷ ವ್ಯಾಯಾಮ ಮಾಡಿದರೆ ಹೃದಯ ಮತ್ತು ಮೆದುಳು ಆರೋಗ್ಯವಾಗಿರುತ್ತದೆಯೇ? – Kannada News | How 150 Minutes Of Exercise Every Week Boosts Heart And Brain Health

ಇಂದಿನ ಜೀವನಶೈಲಿಯಲ್ಲಿ ದೀರ್ಘಕಾಲ ಕುಳಿತು ಕೆಲಸ ಮಾಡುವುದು ಮತ್ತು ದೈಹಿಕ ಚಟುವಟಿಕೆ ಕಡಿಮೆಯಾಗಿರುವುದು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಆರೋಗ್ಯ ತಜ್ಞರ ಪ್ರಕಾರ, ವಾರಕ್ಕೆ 150 ನಿಮಿಷ ವ್ಯಾಯಾಮ (Exercise) ಮಾಡುವುದು ಹೃದಯ (Heart) ಹಾಗೂ ಮೆದುಳಿನ ಆರೋಗ್ಯವನ್ನು ಕಾಪಾಡಲು ಸಹಕಾರಿ. ಈ 150 ನಿಮಿಷವನ್ನು ಒಂದೇ ದಿನ ಮಾಡಬೇಕಾಗಿಲ್ಲ. ವಾರದ ವಿವಿಧ ದಿನಗಳಲ್ಲಿ 30 ನಿಮಿಷಗಳಂತೆ ಹಂಚಿಕೊಂಡು ಮಾಡಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಈ ರೀತಿ ಮಾಡುವುದರಿಂದ ಸಿಗುವ ಪ್ರಯೋಜನಗಳೇನು, ಈ ಸಮಯದಲ್ಲಿ ವ್ಯಾಯಾಮ ಮಾಡಬಹುದು ಮತ್ತು ಅದನ್ನು ಮಾಡುವಾಗ ಯಾವ ರೀತಿ ಸಲಹೆಯನ್ನು ಅನುಸರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಹೃದಯ ಮತ್ತು ಮೆದುಳಿಗೆ ಪ್ರಯೋಜನಗಳು:

ಅಧ್ಯಯನಗಳ ಪ್ರಕಾರ, ನಿಯಮಿತ ವ್ಯಾಯಾಮ ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ರಕ್ತಸಂಚಾರವನ್ನು ಸುಧಾರಿಸುತ್ತದೆ. ಇದರಿಂದ ದೇಹದ ಎಲ್ಲ ಭಾಗಗಳಿಗೆ ಆಮ್ಲಜನಕ ಸಮರ್ಪಕವಾಗಿ ತಲುಪುತ್ತದೆ. ಜೊತೆಗೆ ವ್ಯಾಯಾಮವು ಒತ್ತಡವನ್ನು ಕಡಿಮೆ ಮಾಡಿ, ಮನಸ್ಥಿತಿಯನ್ನು ಉತ್ತಮಗೊಳಿಸುವುದರೊಂದಿಗೆ ನೆನಪಿನ ಶಕ್ತಿ ಮತ್ತು ಮೆದುಳಿನ ಕಾರ್ಯಕ್ಷಮತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಬೆಳಗ್ಗೆ ಎದ್ದ ತಕ್ಷಣ ಏನ್ ಮಾಡ್ಬೇಕು? ನಿಮ್ಮ ದಿನಚರಿ ಆರೋಗ್ಯಕರವಾಗಿ ಆರಂಭವಾಗಲು ಈ 7 ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ಯಾವ ವ್ಯಾಯಾಮಗಳನ್ನು ಮಾಡಬಹುದು?

ವಾರಕ್ಕೆ 150 ನಿಮಿಷಗಳ ಗುರಿಯನ್ನು ತಲುಪಲು ವೇಗವಾಗಿ ನಡೆಯುವುದು, ಸೈಕ್ಲಿಂಗ್, ಈಜು, ಲಘು ಜಾಗಿಂಗ್, ನೃತ್ಯ, ಮೆಟ್ಟಿಲು ಹತ್ತುವುದು, ತೋಟಗಾರಿಕೆ ಅಥವಾ ಮನೆಯ ಸಕ್ರಿಯ ಕೆಲಸಗಳನ್ನು ಮಾಡಬಹುದು. ವಾರದಲ್ಲಿ ಐದು ದಿನ, ದಿನಕ್ಕೆ ಸುಮಾರು 30 ನಿಮಿಷ ವ್ಯಾಯಾಮ ಮಾಡಿದರೆ ಸಾಕಾಗುತ್ತದೆ.

ವ್ಯಾಯಾಮ ಮಾಡುವಾಗ ಗಮನಿಸಬೇಕಾದ ವಿಷಯಗಳು

ವ್ಯಾಯಾಮ ಆರಂಭಿಸುವ ಮೊದಲು ವಾರ್ಮ್- ಅಪ್ ಮಾಡಿ, ಕೊನೆಯಲ್ಲಿ ಕೂಲ್- ಡೌನ್ ಮಾಡುವುದು ಉತ್ತಮ. ನಿಧಾನವಾಗಿ ಆರಂಭಿಸಿ, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಮಯ ಮತ್ತು ತೀವ್ರತೆಯನ್ನು ಹೆಚ್ಚಿಸಿ. ಸಾಕಷ್ಟು ನೀರು ಕುಡಿಯಿರಿ ಹಾಗೂ ಆರಾಮದಾಯಕ ಉಡುಪು ಮತ್ತು ಶೂಗಳನ್ನು ಧರಿಸಿ. ವ್ಯಾಯಾಮದ ವೇಳೆ ಎದೆನೋವು, ಉಸಿರಾಟದ ತೊಂದರೆ, ತಲೆಸುತ್ತು ಅಥವಾ ಅತಿಯಾದ ಆಯಾಸ ಕಂಡುಬಂದರೆ ತಕ್ಷಣ ನಿಲ್ಲಿಸಿ ವೈದ್ಯರನ್ನು ಸಂಪರ್ಕಿಸಿ. ಈಗಾಗಲೇ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ, ಹೊಸ ವ್ಯಾಯಾಮ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೇಘಾಲಯ ಹನಿಮೂನ್ ಕೊಲೆ ಪ್ರಕರಣ; ಸೋನಂ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ ಮೊರೆಹೋದ ಮೃತನ ಕುಟುಂಬಸ್ಥರು! – Kannada News | Raja Raghuvanshi family decided to move Supreme Court against Bail to Sonam

ಇಂದೋರ್, ಜುಲೈ 1: ಕಳೆದ ವರ್ಷ ಮೇಘಾಲಯದಲ್ಲಿ ತಮ್ಮ ಹನಿಮೂನ್ ಪ್ರವಾಸದ ವೇಳೆ ನಿಗೂಢವಾಗಿ ಕೊಲೆಯಾಗಿದ್ದ ಉದ್ಯಮಿ ರಾಜಾ ರಘುವಂಶಿ (Raja Raghuvanshi) ಅವರ ಕುಟುಂಬಸ್ಥರು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ತೀರ್ಮಾನಿಸಿದ್ದಾರೆ. ರಾಜಾ ರಘುವಂಶಿಯ ಕೊಲೆಯ ಪ್ರಮುಖ ಆರೋಪಿಯಾಗಿರುವ ಆತನ ಪತ್ನಿ ಸೋನಂ ರಘುವಂಶಿಗೆ ಮಂಜೂರಾಗಿರುವ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಅವರು ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ. ಮಧ್ಯಪ್ರದೇಶದ ಇಂದೋರ್ ನಿವಾಸಿಯಾದ ಸೋನಂ ರಘುವಂಶಿಯನ್ನು ಕಳೆದ ವರ್ಷ ಜೂನ್‌ನಲ್ಲಿ ಪತಿಯ ಕೊಲೆಗೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.

ಕಳೆದ ಏಪ್ರಿಲ್ 27ರಂದು ಕೆಳ ನ್ಯಾಯಾಲಯವು ಸೋನಂಗೆ ಮಂಜೂರು ಮಾಡಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಮೇಘಾಲಯ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಮೇಘಾಲಯ ಹೈಕೋರ್ಟ್ ಸೋಮವಾರ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ತೀರ್ಪಿನ ಕುರಿತು ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ರಾಜಾ ಅವರ ಅಣ್ಣ ವಿಪಿನ್ ರಘುವಂಶಿ, “ಸೋನಂಗೆ ಸಿಕ್ಕಿರುವ ಜಾಮೀನನ್ನು ರದ್ದುಗೊಳಿಸಲು ನಾವು ಸುಪ್ರೀಂ ಕೋರ್ಟ್‌ನಲ್ಲಿ ಅಪೀಲು ಸಲ್ಲಿಸಲಿದ್ದೇವೆ ಮತ್ತು ಶೀಘ್ರದಲ್ಲೇ ಅರ್ಜಿಯನ್ನು ದಾಖಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ” ಎಂದು ತಿಳಿಸಿದ್ದಾರೆ.

ಈ ಪ್ರಕರಣವನ್ನು ಸರ್ಕಾರಿ ಅಭಿಯೋಜಕರು ನಿರ್ವಹಿಸಿದ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ನ್ಯಾಯಕ್ಕಾಗಿ ತಮ್ಮ ಕುಟುಂಬವು ಸ್ವತಂತ್ರವಾಗಿ ಕಾನೂನು ಹೋರಾಟ ನಡೆಸಲಿದ್ದು, ಖಾಸಗಿ ವಕೀಲರನ್ನು ನೇಮಿಸಿಕೊಳ್ಳಲಿದೆ ಎಂದು ಹೇಳಿದರು. ಅಲ್ಲದೆ, ಸೋನಂಳನ್ನು ಬಂಧಿಸುವಾಗ ಆಕೆಗೆ ಬಂಧನದ ಸರಿಯಾದ ಕಾರಣಗಳನ್ನು ತಿಳಿಸದೇ ಮೇಘಾಲಯ ಪೊಲೀಸರು ಇಂತಹ ದೊಡ್ಡ ಕಾನೂನು ಲೋಪವನ್ನು ಹೇಗೆ ಎಸಗಿದರು ಎಂಬುದು ತಮಗೆ ಇನ್ನೂ ಅರ್ಥವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕುಟುಂಬಸ್ಥರ ಭೇಟಿಯಿಲ್ಲ, ಪಶ್ಚಾತ್ತಾಪವೂ ಇಲ್ಲ; ಗಂಡನನ್ನು ಕೊಂದು ಜೈಲಿನಲ್ಲಿ 1 ತಿಂಗಳು ಕಳೆದ ಸೋನಂ ರಘುವಂಶಿ

ಜಾಮೀನು ಎತ್ತಿಹಿಡಿದ ಹೈಕೋರ್ಟ್:

ಮೇಘಾಲಯಕ್ಕೆ ಹನಿಮೂನ್‌ಗೆ ಬಂದಿದ್ದಾಗ 2025 ರಲ್ಲಿ ನಡೆದ ಪತಿಯ ಕೊಲೆ ಪ್ರಕರಣದ ಮುಖ್ಯ ಆರೋಪಿ ಸೋನಂ ರಘುವಂಶಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನನ್ನು ಮೇಘಾಲಯ ಹೈಕೋರ್ಟ್ ಸೋಮವಾರ ಎತ್ತಿಹಿಡಿದಿದೆ. ವಿಚಾರಣಾ ನ್ಯಾಯಾಲಯವು ಏಪ್ರಿಲ್ 27ರಂದು ನೀಡಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಡಬ್ಲ್ಯೂ. ಡಿಯೆಂಗ್ಡೋಹ್ ಅವರ ಏಕಸದಸ್ಯ ಪೀಠವು ವಜಾಗೊಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಹೈಕೋರ್ಟ್, “ಬಂಧನದ ಕಾರಣಗಳನ್ನು ಆರೋಪಿಗೆ ತಿಳಿಸಿರುವ ವಿಧಾನವನ್ನು ನೋಡಿದರೆ, ಅದು ಬಂಧಿಸುವ ತನಿಖಾ ಸಂಸ್ಥೆಯ ನ್ಯಾಯಾಂಗ ಮನಸ್ಥಿತಿಯ ಸಂಪೂರ್ಣ ಕೊರತೆಯನ್ನು ತೋರಿಸುತ್ತದೆ. ಇದು ಆರೋಪಿಯ ಬಂಧನದ ಪ್ರಕ್ರಿಯೆಗೇ ಪೆಟ್ಟು ನೀಡುತ್ತದೆ. ಹೀಗಾಗಿ, ಬಂಧನದ ಆರಂಭಿಕ ಹಂತದಲ್ಲಿ ತನಗೆ ಯಾವುದೇ ಸೂಕ್ತ ಕಾರಣಗಳನ್ನು ತಿಳಿಸಿಲ್ಲ ಎಂದು ವಾದಿಸಲು ಆರೋಪಿಗೆ ಬಲವಾದ ಅವಕಾಶವಿದೆ” ಎಂದು ಹೈಕೋರ್ಟ್ ಹೇಳಿತ್ತು.

ಇದನ್ನೂ ಓದಿ: ಹನಿಮೂನ್ ವೇಳೆ ಗಂಡ ರಾಜ ರಘುವಂಶಿಯನ್ನು ಕೊಂದಿದ್ದ ಸೋನಮ್ ರಘುವಂಶಿಗೆ ಸಿಕ್ಕೇ ಬಿಟ್ಟಿತು ಜಾಮೀನು

ಏನಿದು ಘಟನೆ?:

ರಾಜಾ ರಘುವಂಶಿ ಮತ್ತು ಸೋನಂ ತಮ್ಮ ಮದುವೆಯ ನಂತರ ಹನಿಮೂನ್‌ಗಾಗಿ 2025ರ ಮೇ 21ರಂದು ಶಿಲ್ಲಾಂಗ್‌ಗೆ ಹೋಗಿದ್ದರು. ಮೇ 26ರಂದು ಅವರು ನಾಪತ್ತೆಯಾಗಿರುವ ವರದಿಗಳು ಹೊರಬಂದವು. ಸ್ಥಳೀಯ ನಿವಾಸಿಗಳೊಂದಿಗೆ ಅಧಿಕಾರಿಗಳು ವ್ಯಾಪಕ ಹುಡುಕಾಟ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ದಿನಗಟ್ಟಲೆ ಹುಡುಕಾಟ ನಡೆಸಿದ ನಂತರ, ಜೂನ್ 2ರಂದು ಸೋಹ್ರಾದ ಪ್ರಸಿದ್ಧ ವೇ ಸಾವ್ಡಾಂಗ್ ಜಲಪಾತದ ಸಮೀಪವಿರುವ ಉಂಬ್ಲಾಯ್‌ನ ಅರ್ಲಿಯಾಂಗ್ ರಿಯಾಟ್ ಕುನಾಂಗ್ರಿಮ್ ಎಂಬಲ್ಲಿನ ಆಳವಾದ ಕಂದಕದಲ್ಲಿ ರಾಜಾ ಅವರ ಮೃತದೇಹ ಪತ್ತೆಯಾಗಿತ್ತು.

ಪೊಲೀಸ್ ತನಿಖೆಯ ಪ್ರಕಾರ, ಸೋನಂ ರಘುವಂಶಿ ಅವರು ರಾಜ್ ಕುಶ್ವಾಹ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇವರಿಬ್ಬರು ರಾಜಾನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಮತ್ತು ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ಈ ಹನಿಮೂನ್ ಪ್ರವಾಸವನ್ನು ಒಂದು ನೆಪವಾಗಿ ಬಳಸಿಕೊಂಡಿದ್ದರು. ಸೋನಂ ಸಮ್ಮುಖದಲ್ಲೇ ಆಕಾಶ್ ಸಿಂಗ್ ರಜಪೂತ್, ವಿಶಾಲ್ ಸಿಂಗ್ ಚೌಹಾಣ್ ಮತ್ತು ಆನಂದ್ ಕುರ್ಮಿ ಎಂಬುವವರು ರಾಜಾನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 8 ಜನರನ್ನು ಬಂಧಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version