ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸಿಕ್ಸರ್ಗಳ ಮಳೆ ಸುರಿಸಿ 29 ಎಸೆತಗಳಲ್ಲಿ 97 ರನ್ಗಳ ಇನ್ನಿಂಗ್ಸ್ ಆಡಿದರು. ತಮ್ಮ ಇನ್ನಿಂಗ್ಸ್ನಲ್ಲಿ 12 ಸಿಕ್ಸರ್ಗಳು ಮತ್ತು 5 ಬೌಂಡರಿಗಳನ್ನು ಬಾರಿಸಿದರು, ಆದರೆ ಸೂರ್ಯವಂಶಿ ಕೇವಲ 3 ರನ್ಗಳಿಂದ ಶತಕ ವಂಚಿತರಾದರು. ಅಬ್ಬರದ ಬ್ಯಾಟಿಂಗ್ ಮಾಡಿ ಸನ್ರೈಸರ್ಸ್ ಬೌಲರ್ಗಳನ್ನು ಹೈರಾಣಾಗಿಸಿದ ವೈಭವ್ ಔಟಾದ ಕೂಡಲೇ ಒಂದೆಡೆ ಸನ್ರೈಸರ್ಸ್ ಪಾಳಯದಲ್ಲಿ ಸಂತಸ ಮನೆ ಮಾಡಿದರೆ, ಇತ್ತ ರಾಜಸ್ಥಾನ್ ತಂಡದ ಅಭಿಮಾನಿಗಳ ಮುಖದಲ್ಲಿ ಬೇಸರ ಎದ್ದು ಕಾಣಿಸುತ್ತಿತ್ತು.
ವೈಭವ್ ಸೂರ್ಯವಂಶಿ 97 ರನ್ ಗಳಿಸಿ ಪ್ರಫುಲ್ ಹಿಂಗೇಗೆ ವಿಕೆಟ್ ಒಪ್ಪಿಸಿದಾಗ ಇಡೇ ಕ್ರೀಡಾಂಗಣವೇ ನಿರಾಶೆಗೊಂಡಿತು. ಇತ್ತ ಅಭಿಷೇಕ್ ಶರ್ಮಾ ಸೇರಿದಂತೆ ಕೆಲವು ಸನ್ರೈಸರ್ಸ್ ಹೈದರಾಬಾದ್ ಆಟಗಾರರು ವೈಭವ್ ಅವರ ಉತ್ತಮ ಇನ್ನಿಂಗ್ಸ್ಗಾಗಿ ಅವರನ್ನು ಅಭಿನಂದಿಸಿದರು. ಹಾಗೆಯೇ ಸ್ಟ್ಯಾಂಡ್ನಲ್ಲಿ ಕುಳಿತಿದ್ದ ಸನ್ರೈಸರ್ಸ್ ತಂಡದ ಮಾಲೀಕಿ ಕಾವ್ಯ ಮಾರನ್ ಕೂಡ ತಮ್ಮ ಆಸನದಿಂದಲೇ ಬೇಸರದ ಮುಖದಲ್ಲಿ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದರು. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ಗಳನ್ನು ನೋಡಿದಾಗ, ‘ವ್ಹಾ, ನಮಗೂ ಇಲ್ಲೆಲ್ಲಿಯಾದರೂ ಒಂದು ಅಡಿ ಜಾಗವಾದರೂ ಬರಬಾರದಾ’ ಎಂದು ಜನಸಾಮಾನ್ಯರು ಅಂದುಕೊಳ್ಳಬಹುದು. ಆದರೆ, ಅಲ್ಲೆಲ್ಲಾ ಚದರಡಿಗೆ ಹಲವು ಸಾವಿರ ರೂಗಳೇ ಆಗುತ್ತವೆ. ಒಂದು ಮನೆ ಖರೀದಿಸಲು ಕೋಟಿ ರೂ ಕೊಟ್ಟರೂ ಸಾಲದು. ಅಷ್ಟೆಲ್ಲಾ ಇನ್ವೆಸ್ಟ್ ಮಾಡಲು ಸಾಮಾನ್ಯರ ಇಡೀ ಜೀವಮಾನದ ಸಂಪಾದನೆ ಬೇಕಾಗುತ್ತದೆ. ಆದರೆ, ಕೆಲ ಹೂಡಿಕೆ ಯಂತ್ರಗಳು ಬಹಳ ಸುಲಭವಾಗಿ ರಿಯಲ್ ಎಸ್ಟೇಟ್ ಮತ್ತು ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ಗಳಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುತ್ತವೆ. ನೀವು ಷೇರು ಖರೀದಿಸಿದಷ್ಟೇ ಸುಲಭವಾ ಮತ್ತು ಸರಳವಾಗಿ ಆಸ್ತಿಯ ಒಂದು ಭಾಗವನ್ನು ಪಡೆಯಬಹುದು. ಈ ಹಣಕಾಸು ಯಂತ್ರಗಳೆಂದರೆ REITs (Real Estate Investment Trusts) ಮತ್ತು InvITs (Infrastructure Investment Trusts). ಇವುಗಳಲ್ಲಿ 10,000 ರೂ ಹೂಡಿಕೆ ಮಾಡಿ ಆಸ್ತಿಯಲ್ಲಿ ಒಂದು ಪಾಲು ಪಡೆಯಬಹುದು.
ಇವು ಮ್ಯೂಚುವಲ್ ಫಂಡ್ಗಳಂತೆಯೇ ಕಾರ್ಯನಿರ್ವಹಿಸುತ್ತವೆ. ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿ, ಅದನ್ನು ದೊಡ್ಡ ಮಟ್ಟದ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ (ಇನ್ಫ್ರಾಸ್ಟ್ರಕ್ಚರ್) ಯೋಜನೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಪ್ರಸ್ತುತ ಭಾರತೀಯ ಷೇರು ಮತ್ತು ವಿನಿಮಯ ಮಂಡಳಿ (SEBI) ಯಲ್ಲಿ 6 REITs ಮತ್ತು 28 InvITs ನೋಂದಾಯಿಸಲ್ಪಟ್ಟಿವೆ.
REITs ಮತ್ತು InvITs ನಡುವಿನ ಪ್ರಮುಖ ವ್ಯತ್ಯಾಸಗಳು
ಕಚೇರಿಗಳು, ಮಾಲ್ಗಳು, ಐಟಿ ಪಾರ್ಕ್ಗಳು ಮತ್ತು ಅಪಾರ್ಟ್ಮೆಂಟ್ಗಳಂತಹ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ REITಗಳು ಹೂಡಿಕೆ ಮಾಡುತ್ತವೆ. ಇನ್ನೊಂದೆಡೆ, InvIT ಗಳು ರಸ್ತೆಗಳು, ಹೆದ್ದಾರಿಗಳು, ವಿದ್ಯುತ್ ತಂತಿಗಳು (ಮಾರ್ಗಗಳು) ಅಥವಾ ಪೈಪ್ಲೈನ್ ಪ್ರಾಜೆಕ್ಟ್ಗಳಲ್ಲಿ ಹೂಡಿಕೆ ಮಾಡುತ್ತವೆ.
REIT ಗಳಿಗೆ ಪ್ರಮುಖ ಆದಾಯ ಮೂಲವೆಂದರೆ ಕಟ್ಟಡಗಳಿಂದ ಬರುವ ತಿಂಗಳ ಬಾಡಿಗೆ (Rent) ಅಥವಾ ಗುತ್ತಿಗೆ ಹಣ. InvIT ಗಳ ಆದಾಯ ಮೂಲಗಳು ಹೆದ್ದಾರಿಗಳ ಟೋಲ್ ಸಂಗ್ರಹ, ವಿದ್ಯುತ್ ದರ ಅಥವಾ ಸೇವಾ ಶುಲ್ಕಗಳಾಗಿರುತ್ತವೆ.
ಇವು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಆದಾಯ ಹೇಗೆ ಬರುತ್ತದೆ?
ಮೂರು ಹಂತದ ವ್ಯವಸ್ಥೆ: ಪ್ರವರ್ತಕರು (Sponsors) ಈ ಟ್ರಸ್ಟ್ಗಳನ್ನು ಸ್ಥಾಪಿಸುತ್ತಾರೆ ಮತ್ತು ಆಸ್ತಿಗಳನ್ನು ಟ್ರಸ್ಟ್ಗೆ ವರ್ಗಾಯಿಸುತ್ತಾರೆ. ಉದ್ಯಮವನ್ನು ನೋಡಿಕೊಳ್ಳಲು ಮ್ಯಾನೇಜ್ಮೆಂಟ್ ಕಂಪನಿ ಇರುತ್ತದೆ ಹಾಗೂ ಹೂಡಿಕೆದಾರರ ಹಿತರಕ್ಷಣೆಗಾಗಿ ಟ್ರಸ್ಟಿಗಳು ಇರುತ್ತಾರೆ.
ಸೆಬಿ (SEBI) ನಿಯಮಗಳ ಪ್ರಕಾರ, ಈ ಟ್ರಸ್ಟ್ಗಳು ತಮಗೆ ಬರುವ ಒಟ್ಟಾರೆ ತೆರಿಗೆಗೆ ಒಳಪಡುವ ಆದಾಯದಲ್ಲಿ ಕನಿಷ್ಠ ಶೇ. 90 ರಷ್ಟನ್ನು ಕಡ್ಡಾಯವಾಗಿ ಹೂಡಿಕೆದಾರರಿಗೆ ಡಿವಿಡೆಂಡ್ (ಲಾಭಾಂಶ) ರೂಪದಲ್ಲಿ ನಿಯಮಿತವಾಗಿ (ಸಾಮಾನ್ಯವಾಗಿ ಪ್ರತಿ ತ್ರೈಮಾಸಿಕಕ್ಕೊಮ್ಮೆ) ಹಂಚಬೇಕಾಗುತ್ತದೆ.
ಹೂಡಿಕೆದಾರರಿಗೆ ಇದರಿಂದ ಎರಡು ರೀತಿಯಲ್ಲಿ ಲಾಭ ಸಿಗುತ್ತದೆ — ಒಂದು ನಿಯಮಿತವಾಗಿ ಬರುವ ಬಾಡಿಗೆ/ಡಿವಿಡೆಂಡ್ ಆದಾಯ ಮತ್ತು ಎರಡನೆಯದು ಕಾಲಕ್ರಮೇಣ ಆಸ್ತಿಯ ಮೌಲ್ಯ ಹೆಚ್ಚಾದಾಗ ಷೇರು ಬೆಲೆ ಏರಿಕೆಯಾಗುವ ಮೂಲಕ ಸಿಗುವ ಲಾಭ (Capital Appreciation).
ಇವುಗಳ ಪ್ರಮುಖ ವೈಶಿಷ್ಟ್ಯಗಳು
ರಿಯಲ್ ಎಸ್ಟೇಟ್ನಲ್ಲಿ ನೇರವಾಗಿ ಕೋಟ್ಯಂತರ ರೂಪಾಯಿ ಹೂಡುವ ಬದಲಿಗೆ, ಕೇವಲ ₹10,000 ರಿಂದ ₹15,000 ದೊಂದಿಗೆ ಹೂಡಿಕೆ ಆರಂಭಿಸಬಹುದು. ಇವು ಷೇರು ಮಾರುಕಟ್ಟೆಯಲ್ಲಿ (NSE/BSE) ಲಿಸ್ಟ್ ಆಗಿರುವುದರಿಂದ, ಸಾಮಾನ್ಯ ಶೇರುಗಳಂತೆಯೇ ಇವುಗಳನ್ನು ಸುಲಭವಾಗಿ ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು. ಹೆಚ್ಚಿನ ನಗದೀಕರಣ ಅಥವಾ ಲಿಕ್ವಿಡಿಟಿ ಅವಕಾಶ ಇರುತ್ತದೆ. ಭೌತಿಕವಾಗಿ ಜಾಗ ಅಥವಾ ಮನೆ ಮಾರುವುದಕ್ಕಿಂತ ಇದು ತೀರಾ ಸುಲಭ.
ಅನುಭವಿ ಫಂಡ್ ಮ್ಯಾನೇಜರ್ಗಳು ಈ ಆಸ್ತಿಗಳನ್ನು ನಿರ್ವಹಿಸುವುದರಿಂದ ಉತ್ತಮ ಆದಾಯದ ಸಾಧ್ಯತೆಯೂ ಹೆಚ್ಚು ಇರುತ್ತದೆ.
REITs ಮತ್ತು InvITs ಗಳನ್ನು ಆದಾಯ ತೆರಿಗೆ ಕಾಯ್ದೆಯಡಿ ‘ಪಾಸ್-ಥ್ರೂ’ (Pass-through) ಘಟಕಗಳಾಗಿ ಪರಿಗಣಿಸಲಾಗುತ್ತದೆ. ಅಂದರೆ ಟ್ರಸ್ಟ್ ಮಟ್ಟದಲ್ಲಿ ತೆರಿಗೆ ಮುರಿಯದೆ ನೇರವಾಗಿ ಹೂಡಿಕೆದಾರರಿಗೆ ಆದಾಯ ವರ್ಗಾವಣೆಯಾಗುತ್ತದೆ. ಹೂಡಿಕೆದಾರರ ಕೈಗೆ ಸಿಗುವ ಆದಾಯದ ಮೇಲೆ ಈ ಕೆಳಗಿನಂತೆ ತೆರಿಗೆ ಅನ್ವಯಿಸುತ್ತದೆ:
ನಿಯಮಿತ ಆದಾಯ (ಡಿವಿಡೆಂಡ್/ಬಾಡಿಗೆ): ಹೂಡಿಕೆದಾರರು ಪಡೆಯುವ ಡಿವಿಡೆಂಡ್, ಬಡ್ಡಿ ಅಥವಾ ಬಾಡಿಗೆ ಆದಾಯವನ್ನು ಅವರ ವೈಯಕ್ತಿಕ ಆದಾಯ ತೆರಿಗೆ ಸ್ಲ್ಯಾಬ್ ದರಗಳ (Slab Rates) ಪ್ರಕಾರವೇ ತೆರಿಗೆಗೆ ಒಳಪಡಿಸಲಾಗುತ್ತದೆ.
ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ಸ್ (STCG): ಹೂಡಿಕೆ ಮಾಡಿದ 12 ತಿಂಗಳ ಒಳಗಾಗಿ ಒಂದು ವೇಳೆ ನೀವು REIT ಅಥವಾ InvIT ಯೂನಿಟ್ಗಳನ್ನು ಲಾಭಕ್ಕೆ ಮಾರಾಟ ಮಾಡಿದರೆ, ಆ ಲಾಭದ ಮೇಲೆ ಶೇ. 20 ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ (LTCG): 12 ತಿಂಗಳ ನಂತರ (ಒಂದು ವರ್ಷದ ಬಳಿಕ) ಯೂನಿಟ್ಗಳನ್ನು ಮಾರಾಟ ಮಾಡಿ ಲಾಭ ಗಳಿಸಿದರೆ, ಅದನ್ನು ದೀರ್ಘಾವಧಿ ಲಾಭ ಎಂದು ಪರಿಗಣಿಸಿ ಶೇ. 12.5 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಆದರೆ, ಒಂದು ಹಣಕಾಸು ವರ್ಷದಲ್ಲಿ ₹1.25 ಲಕ್ಷದವರೆಗಿನ ಇಂತಹ ಲಾಭಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ.
ವರ್ಷದ ಆರನೇ ತಿಂಗಳಾದ ಜೂನ್ (June) ಮಾನ್ಸೂನ್ ಋತುವಿನ ಆರಂಭವನ್ನು ಸೂಚಿಸುವ ತಿಂಗಳು. ಅಲ್ಲದೆ ಇದು ಅನೇಕ ಪ್ರಮುಖ ದಿನಗಳು ಮತ್ತು ಜಾಗತಿಕ ಆಚರಣೆಗಳಿಂದ ತುಂಬಿರುವ ತಿಂಗಳು. ಹೌದು ತಿಂಗಳಿನಲ್ಲಿ ಸಾಮಾಜಿಕ, ಆರೋಗ್ಯ, ಪರಿಸರ ಮತ್ತು ಸಾಂಸ್ಕೃತಿಕ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನದಿಂದ ಹಿಡಿದು ಅಂತಾರಾಷ್ಟ್ರೀಯ ಯೋಗ ದಿನದವರೆಗೆ ಜೂನ್ ತಿಂಗಳಲ್ಲಿ ಯಾವೆಲ್ಲಾ ಪ್ರಮುಖ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಜೂನ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ದಿನಾಚರಣೆಗಳ ಪಟ್ಟಿ:
ಜೂನ್ 1 – ವಿಶ್ವ ಹಾಲು ದಿನ
ಜೂನ್ 1 – ಜಾಗತಿಕ ಪೋಷಕರ ದಿನ
ಜೂನ್ 2 – ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತೆಯರ ದಿನ
ಜೂನ್ 3 – ವಿಶ್ವ ಬೈಸಿಕಲ್ ದಿನ
ಜೂನ್ 5 – ವಿಶ್ವ ಪರಿಸರ ದಿನ
ಜೂನ್ 7 – ವಿಶ್ವ ಆಹಾರ ಸುರಕ್ಷತಾ ದಿನ
ಜೂನ್ 8 – ವಿಶ್ವ ಸಾಗರ ದಿನ
ಜೂನ್ 8 – ವಿಶ್ವ ಮಿದುಳಿನ ಗೆಡ್ಡೆ ದಿನ
ಜೂನ್ 8 – ರಾಷ್ಟ್ರೀಯ ಆತ್ಮೀಯ ಸ್ನೇಹಿತರ ದಿನ
ಜೂನ್ 12 – ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ
ಜೂನ್ 14 – ವಿಶ್ವ ರಕ್ತದಾನಿಗಳ ದಿನ
ಜೂನ್ 15 – ಜಾಗತಿಕ ಪವನ ದಿನ
ಜೂನ್ 15 – ವಿಶ್ವ ಹಿರಿಯರ ಮೇಲಿನ ದೌರ್ಜನ್ಯ ಜಾಗೃತಿ ದಿನ
ಜೂನ್ 18 – ಅಂತರರಾಷ್ಟ್ರೀಯ ಪಿಕ್ನಿಕ್ ದಿನ
ಜೂನ್ 20 – ವಿಶ್ವ ನಿರಾಶ್ರಿತರ ದಿನ
ಜೂನ್ 21 – ಅಂತರರಾಷ್ಟ್ರೀಯ ಯೋಗ ದಿನ
ಜೂನ್ 21 – ವಿಶ್ವ ಸಂಗೀತ
ಜೂನ್ 21 – ವಿಶ್ವ ಹೈಡ್ರೋಗ್ರಫಿ ದಿನ
ಜೂನ್ 21 – ತಂದೆಯಂದಿರ ದಿನ
ಜೂನ್ 22 – ವಿಶ್ವ ಮಳೆಕಾಡು ದಿನ
ಜೂನ್ 23 – ಅಂತರರಾಷ್ಟ್ರೀಯ ಒಲಿಂಪಿಕ್ ದಿನ
ಜೂನ್ 23 – ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನ
ಜೂನ್ 23 – ಅಂತರರಾಷ್ಟ್ರೀಯ ವಿಧವೆಯರ ದಿನ
ಜೂನ್ 26 – ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ
ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್ (Fatty Liver) ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಅಸ್ವಸ್ಥ ಆಹಾರ ಪದ್ಧತಿ, ಅತಿಯಾದ ತೂಕ, ವ್ಯಾಯಾಮದ ಕೊರತೆ ಮತ್ತು ಕುಳಿತುಕೊಂಡೇ ಕೆಲಸ ಮಾಡುವ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಸಾಮಾನ್ಯವಾಗಿ ಜನರು ಇದನ್ನು ಕೇವಲ ಲಿವರ್ಗೆ ಸಂಬಂಧಿಸಿದ ಸಮಸ್ಯೆ ಎಂದು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಫ್ಯಾಟಿ ಲಿವರ್ ದೇಹದ ಇತರೆ ಅಂಗಾಂಗಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅದರಲ್ಲೂ ಕಿಡ್ನಿ ಆರೋಗ್ಯದ ಮೇಲೆ ಇದರ ಪ್ರಭಾವ ಹೆಚ್ಚಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಹಾಗಾದರೆ ಯಾವ ರೀತಿ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು, ಲಿವರ್ ಮತ್ತು ಕಿಡ್ನಿ ಆರೋಗ್ಯವಾಗಿರಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ವೈದ್ಯಕೀಯ ಅಧ್ಯಯನಗಳ ಪ್ರಕಾರ, ದೀರ್ಘಕಾಲ ಫ್ಯಾಟಿ ಲಿವರ್ ಇದ್ದರೆ ದೇಹದಲ್ಲಿ ಉರಿಯೂತ (Inflammation) ಮತ್ತು ಮೆಟಾಬಾಲಿಕ್ ಅಸಮತೋಲನ ಹೆಚ್ಚಾಗುತ್ತದೆ. ಇದು ನಿಧಾನವಾಗಿ ಕಿಡ್ನಿಯ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರಬಹುದು. ಫ್ಯಾಟಿ ಲಿವರ್ ಸಾಮಾನ್ಯವಾಗಿ ಮಧುಮೇಹ, ಹೈ ಬಿಪಿ ಮತ್ತು ಅತಿಯಾದ ತೂಕದ ಸಮಸ್ಯೆಗಳೊಂದಿಗೆ ಸಂಪರ್ಕ ಹೊಂದಿದ್ದು, ಇವುಗಳೆಲ್ಲವೂ ಕಿಡ್ನಿ ಕಾಯಿಲೆಯ ಅಪಾಯವನ್ನು ಹೆಚ್ಚಿಸುವ ಅಂಶಗಳಾಗಿವೆ.
ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು?
ತಜ್ಞರ ಪ್ರಕಾರ, ನಿರಂತರ ದಣಿವು, ಹೊಟ್ಟೆ ಭಾರವಾಗಿರುವ ಅನುಭವ, ಹಸಿವು ಕಡಿಮೆಯಾಗುವುದು, ದೇಹದಲ್ಲಿ ಊತ, ತೂಕದಲ್ಲಿ ಏಕಾಏಕಿ ಬದಲಾವಣೆ ಕಾಣುವುದು ಇತ್ಯಾದಿ ಲಕ್ಷಣಗಳನ್ನು ಕಡೆಗಣಿಸಬಾರದು. ಕೆಲವರಲ್ಲಿ ಮೂತ್ರದ ಪ್ರಮಾಣದಲ್ಲಿ ಬದಲಾವಣೆ, ಕಾಲುಗಳಲ್ಲಿ ಊತ ಅಥವಾ ದೌರ್ಬಲ್ಯ ಕೂಡ ಕಾಣಿಸಬಹುದು.
ಆರೋಗ್ಯಕರ ಜೀವನಶೈಲಿ ಅನುಸರಿಸುವುದು ಬಹಳ ಮುಖ್ಯ. ಹೆಚ್ಚು ಎಣ್ಣೆ, ಕರಿದ ಆಹಾರ ಮತ್ತು ಪ್ರೊಸೆಸ್ಡ್ ಫುಡ್ಗಳ ಸೇವನೆಯನ್ನು ಕಡಿಮೆ ಮಾಡಬೇಕು. ಪ್ರತಿದಿನ ನಿಯಮಿತ ವ್ಯಾಯಾಮ, ತೂಕ ನಿಯಂತ್ರಣ ಮತ್ತು ಸಾಕಷ್ಟು ನೀರು ಕುಡಿಯುವುದು ಲಿವರ್ ಹಾಗೂ ಕಿಡ್ನಿ ಎರಡಕ್ಕೂ ಲಾಭಕಾರಿ. ಮದ್ಯಪಾನ ಮತ್ತು ಧೂಮಪಾನದಿಂದ ದೂರವಿರುವುದು ಅಗತ್ಯ. ಜೊತೆಗೆ, ಡಯಾಬಿಟೀಸ್ ಅಥವಾ ಹೈ ಬಿಪಿ ಇರುವವರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಸಮಯಕ್ಕೆ ಸರಿಯಾದ ಪರೀಕ್ಷೆಗಳು ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಹಾಯ ಮಾಡುತ್ತವೆ.
ಬೆಂಗಳೂರು, ಮೇ.28: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಅವರ ಹುಟ್ಟೂರು ಸಿದ್ದರಾಮನಹುಂಡಿ ಗ್ರಾಮದಲ್ಲಿ ತೀವ್ರ ನೋವು ಮತ್ತು ಮೌನಕ್ಕೆ ಕಾರಣವಾಗಿದೆ. ಗ್ರಾಮಸ್ಥರು ಬೆಳಗ್ಗಿನಿಂದಲೂ ತಮ್ಮ ಎಲ್ಲ ಕೆಲಸಗಳನ್ನು ಬದಿಗಿಟ್ಟು ಟಿವಿಯ ಮುಂದೆ ಕುಳಿತು ರಾಜೀನಾಮೆ ಪ್ರಕ್ರಿಯೆ ಮತ್ತು ಮುಖ್ಯಮಂತ್ರಿ ಸ್ಥಾನದ ಬದಲಾವಣೆಯ ಎಲ್ಲಾ ಬೆಳವಣಿಗೆಗಳನ್ನು ವೀಕ್ಷಿಸಿದ್ದಾರೆ. ತಮ್ಮ ಊರಿನ ಹೆಮ್ಮೆಯ ಪುತ್ರನಾಗಿದ್ದ ಸಿದ್ದರಾಮಯ್ಯನವರು ಸಿಎಂ ಆಗಿ ರಾಜ್ಯಕ್ಕೆ, ದೇಶಕ್ಕೆ ಸಿದ್ದರಾಮನಹುಂಡಿಯ ಹೆಸರನ್ನು ಪರಿಚಯಿಸಿದ್ದರು ಎಂದು ಗ್ರಾಮಸ್ಥರು ಭಾವಿಸಿದ್ದಾರೆ. ಸಿದ್ದರಾಮಯ್ಯನವರ ದಕ್ಷ ಆಡಳಿತ ಮತ್ತು ಬಡವರ ಪರ ಕಾಳಜಿಯನ್ನು ಸ್ಮರಿಸಿರುವ ಗ್ರಾಮಸ್ಥರು, ಅವರು ಇನ್ನೂ ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕಿತ್ತು ಎಂದು ಆಶಿಸಿದ್ದಾರೆ. ಹೈಕಮಾಂಡ್ನ ಅನಿರೀಕ್ಷಿತ ನಿರ್ಧಾರದಿಂದ ತಮಗೆ ನೋವಾಗಿದೆ ಎಂದು ಅವರು ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದರೂ, ಸಿದ್ದರಾಮಯ್ಯನವರ ನಿರ್ಗಮನವನ್ನು ಗ್ರಾಮಸ್ಥರು ಅರಗಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಸಿದ್ದರಾಮಯ್ಯನವರ ಮೇಲಿದ್ದ ವೈಯಕ್ತಿಕ ಪ್ರೀತಿ ಮತ್ತು ಅವರ ಸರಳ ಸ್ವಭಾವವನ್ನು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಿದ್ದಾರೆ.
ಐಪಿಎಲ್ 2026 (IPL 2026) ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು, ಸನ್ರೈಸರ್ಸ್ ಹೈದರಾಬಾದ್ (RR vs SRH) ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿತು. ರಾಜಸ್ಥಾನ್ ತಂಡದ ಈ ಗೆಲುವಿನಲ್ಲಿ ಯುವ ಪ್ರತಿಭೆ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ಪಾತ್ರ ಅಪಾರವಾಗಿತ್ತು. ಸನ್ರೈಸರ್ಸ್ ವಿರುದ್ಧದ ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 12 ಸಿಕ್ಸರ್ಗಳು ಮತ್ತು 5 ಬೌಂಡರಿಗಳನ್ನು ಒಳಗೊಂಡಂತೆ 97 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ವೈಭವ್ ಅವರ ಇನ್ನಿಂಗ್ಸ್ನಿಂದಾಗಿ ರಾಜಸ್ಥಾನ್ ರಾಯಲ್ಸ್, ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 47 ರನ್ಗಳಿಂದ ಸೋಲಿಸಿ ಕ್ವಾಲಿಫೈಯರ್ 2 ಕ್ಕೆ ಅರ್ಹತೆ ಪಡೆಯಿತು.
ಗೇಲ್ ದಾಖಲೆ ಮುರಿದ ವೈಭವ್
ವೈಭವ್ ಅವರ ಈ ಅಮೋಘ ಪ್ರದರ್ಶನಕ್ಕೆ ಇಡೀ ಕ್ರಿಕೆಟ್ ಜಗತ್ತೇ ಸಲಾಂ ಹೊಡೆದಿದೆ. ವೈಭವ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸುವುದರ ಜೊತೆಗೆ ಹಲವು ದಾಖಲೆಗಳನ್ನು ಮುರಿದರು. ಇದರಲ್ಲಿ ಕ್ರಿಸ್ ಗೇಲ್ ಅವರ ಅತಿ ಹೆಚ್ಚು ಸಿಕ್ಸರ್ಗಳ ದಾಖಲೆಯೂ ಸೇರಿದೆ. ಹಾಗೆಯೇ ಕೇವಲ 3 ರನ್ಗಳಿಂದ ಶತಕ ವಂಚಿತರಾದ ವೈಭವ್, ಐಪಿಎಲ್ನಲ್ಲಿ ಅತಿ ವೇಗದ ಶತಕ ಬಾರಿಸಿದ ದಾಖಲೆಯಿಂದಲೂ ವಂಚಿತರಾದರು. ಈ ದಾಖಲೆ ಕೂಡ ಕ್ರಿಸ್ ಗೇಲ್ ಅವರ ಹೆಸರಿನಲ್ಲೇ ಇದೆ.
ವೈಭವ್ ಆಟಕ್ಕೆ ಗೇಲ್ ಮೆಚ್ಚುಗೆ
ಗೇಲ್ ಅವರ ಎರಡು ಪ್ರಮುಖ ದಾಖಲೆಗಳಲ್ಲಿ ಒಂದು ದಾಖಲೆಯನ್ನು ಮುರಿದು, ಮತ್ತೊಂದು ದಾಖಲೆಯನ್ನು ಮುರಿಯುವಲ್ಲಿ ವಿಫಲರಾದ ಕ್ರಿಸ್ ಗೇಲ್ ಅವರ ಆಟದ ಬಗ್ಗೆ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈಭವ್ ಸೂರ್ಯವಂಶಿ ಅವರ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಗೇಲ್, ವೈಭವ್ ಎಂತಹ ಅಸಾಧಾರಣ ಮತ್ತು ಅದ್ಭುತ ಆಟಗಾರ. ಯುವ ಆಟಗಾರ, ಹೊಸ ಸಿಕ್ಸರ್ ಮೆಷಿನ್!. ಆದಾಗ್ಯೂ ವೇಗದ ಶತಕದ ದಾಖಲೆಯನ್ನು ಮುರಿಯದಿರುವುದು ಬೇಸರದ ಸಂಗತಿ’ ಎಂದು ಬರೆದುಕೊಂಡಿದ್ದಾರೆ.
ಐಪಿಎಲ್ನ 19 ನೇ ಸೀಸನ್ನಲ್ಲಿ ಇಲ್ಲಿಯವರೆಗೆ ವೈಭವ್ 15 ಇನ್ನಿಂಗ್ಸ್ಗಳಲ್ಲಿ 680 ರನ್ ಗಳಿಸಿದ್ದಾರೆ. ಅವರ ಸರಾಸರಿ 45.33 ಮತ್ತು ಸ್ಟ್ರೈಕ್ ರೇಟ್ 242.85 ಆಗಿದೆ. ಇದರಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳು ಸೇರಿವೆ. ಅವರ ಅತ್ಯಧಿಕ ಸ್ಕೋರ್ 103 ರನ್ಗಳಾಗಿದ್ದು, ಇದರಲ್ಲಿ ಅವರು ಕೇವಲ 280 ಎಸೆತಗಳಲ್ಲಿ 55 ಬೌಂಡರಿ ಮತ್ತು 65 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಳಗಾವಿ, ಮೇ 28: ಕಳೆದ 13 ವರ್ಷಗಳಿಂದ ರಾಜ್ಯ ವಿಪತ್ತು ನಿರ್ವಹಣಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದ ಸಿಪಿಐಯೊಬ್ಬರು ನಿಗೂಢವಾಗಿ ಮೃತಪಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಶ್ರೀಶೈಲ್ ಚೌಗುಲಾ ಮೃತರಾಗಿದ್ದು, ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಮನೆಯಲ್ಲಿಯೇ ಕಂಡುಬಂದಿದೆ. ಅವರ ಸಾವಿಗೆ ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿದ್ದು, ಈ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ. ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಶವನ್ನು ಹಸ್ತಾಂತರ ಮಾಡಲಾಗಿದ್ದು, ಬಳಿಕ ಅಥಣಿ ತಾಲೂಕಿನ ಕವಟಕೊಪ್ಪ ಗ್ರಾಮದಲ್ಲಿ ಶ್ರೀಶೈಲ್ ಅಂತ್ಯಕ್ರಿಯೆ ನಡೆಸಲಾಗಿದೆ.
ಇನ್ನು 2-3 ತಿಂಗಳಲ್ಲಿಯೇ ಡಿವೈಎಸ್ಪಿ ಆಗಿ ಭಡ್ತಿ ಹೊಂದಬೇಕಿದ್ದ ಶ್ರೀಶೈಲ್ ನಿನ್ನೆ ಕೆಲಸ ಮುಗಿಸಿ ಸಂಜೆ ಮನೆಗೆ ವಾಪಾಸ್ ಆಗಿದ್ದರು. ಪತ್ನಿ ಜೊತೆಗೆ ಮಾತಾಡಿದ್ದ ಬಳಿಕ ಊಟಕ್ಕೆ ಕರೆಯುವಂತೆ ತಿಳಿಸಿ ರೂಮ್ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಬಳಿಕ ಹೊರ ಬಂದು ರಾತ್ರಿ ಊಟ ಮಾಡಿ ಮತ್ತೆ ರೂಮಿಗೆ ಹೋದ ಶ್ರೀಶೈಲ್ ನೇಣು ಬೀಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಯಲ್ಲೇ ಇದ್ದ ಪತ್ನಿ ಸ್ವಲ್ಪ ಹೊತ್ತಿನ ಬಳಿಕ ರೂಮ್ ಬಳಿ ಹೋದಾಗ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಆಕೆ ಕಚೇರಿಯ ಸಿಬ್ಬಂದಿಗೆ ಕರೆ ಮಾಡಿದ್ದು, ಶ್ರೀಶೈಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಿಯೇ ಶ್ರೀಶೈಲ್ ಮೃತಪಟ್ಟಿರೋದಾಗಿ ವೈದ್ಯರು ತಿಳಿಸಿದ್ದಾರೆ.
ಶ್ರೀಶೈಲ ಚೌಗುಲಾ ಮೂಲತಃ ಕೃಷಿಕ ಕುಟುಂಬದವರಾಗಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪಡೆಯಲ್ಲಿ ಕೆಲಸಕ್ಕೆ ಸೇರ್ಪಡೆಯಾಗಿ ಅಲ್ಲಿ ಉತ್ತಮ ಹೆಸರು ಗಳಿಸಿದ್ದರು. ಇವರಿಗೆ ಕಳೆದ ಹತ್ತು ವರ್ಷಗಳ ಹಿಂದೆ ಚೇತನಾ ಎಂಬುವವರ ಜೊತೆಗೆ ಮದುವೆಯಾಗಿತ್ತು. ದಂಪತಿಗೆ 8 ವರ್ಷದ ಅಕ್ಷಯ, 5 ವರ್ಷದ ಅನ್ವಿ ಎಂಬ ಮಕ್ಕಳೂ ಇದ್ದಾರೆ. ಇನ್ನು ಆನ್ಲೈನ್ ಗೇಮ್ ಗೀಳಿಗೆ ಒಳಗಾಗಿದ್ದ ಶ್ರೀಶೈಲ್ ಸಾಲ ಮಾಡಿಕೊಂಡು ಈ ರೀತಿ ಸಾವಿಗೀಡಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮತ್ತೊಂದು ಕಡೆ ಕೌಟುಂಬಿಕ ಕಲಹವೂ ಕಾರಣವಾಗಿರಬಹುದೆಂಬ ಅನುಮಾನವೂ ಇದೆ. ಈ ಸಂಬಂಧ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸ್ ತನಿಖೆ ಬಳಿಕವೇ ಸಾವಿಗೆ ಅಸಲಿ ಕಾರಣ ಏನೆಂಬುದು ಗೊತ್ತಾಗಬೇಕಿದೆ.
ಫ್ಲಾಟ್ ಮತ್ತು ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುವವರು ತಮ್ಮ ಬಾಲ್ಕನಿಗಳಲ್ಲಿ (balcony) ಬಗೆಬಗೆಯ ಹೂವಿನ ಗಿಡಗಳು, ಟೊಮೆಟೊ ಸೇರಿದಂತೆ ಒಂದಷ್ಟು ತರಕಾರಿಗಳ ಗಿಡಗಳನ್ನು ಬೆಳೆಯುತ್ತಾರೆ. ಆದರೆ ಬಾಲ್ಕನಿಯಲ್ಲಿರುವ ಪುಟ್ಟ ಜಾಗದಲ್ಲಿ ಹಣ್ಣುಗಳನ್ನು ಬೆಳೆಯಲು ಸಾಧ್ಯವಿಲ್ಲ ಎಂದು ಅನೇಕರು ಭಾವಿಸುತ್ತಾರೆ. ಏನ್ ಗೊತ್ತಾ ಬಾಲ್ಕನಿ ಮತ್ತು ಟೆರೇಸ್ನಲ್ಲಿರುವ ಸ್ವಲ್ಪ ಜಾಗದಲ್ಲಿ ಹಣ್ಣುಗಳನ್ನೂ ಬೆಳೆಯಬಹುದು. ಹೌದು ಬಾಲ್ಕನಿಯಲ್ಲಿರುವ ಸಣ್ಣ ಜಾಗ ಮತ್ತು ಉತ್ತಮ ಸೂರ್ಯನ ಬೆಳಕು ಇದ್ದರೆ ಯಾವುದೇ ರಾಸಾಯನಿಕಗಳನ್ನು ಬಳಸದೆ ಫ್ರೆಶ್ ಹಣ್ಣುಗಳನ್ನು ಬೆಳೆಯಬಹುದು. ಈ ಸುಲಭ ಸಲಹೆಗಳನ್ನು ಪಾಲಿಸುವ ಮೂಲಕ ನೀವು ಸಹ ನಿಮ್ಮ ಮನೆಯ ಬಾಲ್ಕನಿಯಲ್ಲಿ ಈ ಕೆಲವು ಹಣ್ಣುಗಳನ್ನು ಬೆಳೆಯಿರಿ.
ಬಾಲ್ಕನಿಯ ಚಿಕ್ಕ ಜಾಗದಲ್ಲಿಯೂ ಈ ಹಣ್ಣುಗಳನ್ನು ಬೆಳೆಯಬಹುದು:
ನಿಂಬೆ ಗಿಡ: ಬಾಲ್ಕನಿ ಮತ್ತು ಟೆರೇಸ್ನಲ್ಲಿ ಬಲು ಸುಲಭವಾಗಿ ನಿಂಬೆ ಗಿಡ ಬೆಳೆಸಬಹುದು. ಬೇರುಗಳಿಗೆ ಸಾಕಷ್ಟು ಸ್ಥಳಾವಕಾಶ ಕಲ್ಪಿಸಲು 12 ರಿಂದ 16 ಇಂಚಿನ ದೊಡ್ಡ ಪಾಟ್ಗಳಲ್ಲಿ ನೀವು ನಿಂಬೆ ಗಿಡ ನೆಡಬಹುದು. ತೋಟದ ಮಣ್ಣು, ಕೊಕೊಪೀಟ್ ಮತ್ತು ಸಾವಯವ ಗೊಬ್ಬರವನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡಿ ಹಾಕಿ ಜೊತೆಗೆ ತಿಂಗಳಿಗೊಮ್ಮೆ ವರ್ಮಿಕಾಂಪೋಸ್ಟ್ ಸೇರಿಸಿ.ಈ ಗಿಡಕ್ಕೆ ಪ್ರತಿದಿನ ಕನಿಷ್ಠ 4–6 ಗಂಟೆಗಳ ಸೂರ್ಯನ ಬೆಳಕು ಬೇಕಾಗುತ್ತದೆ. ಬೇಸಿಗೆಯಲ್ಲಿ ಪ್ರತಿ 1–2 ದಿನಗಳಿಗೊಮ್ಮೆ ನೀರು ಹಾಕಿ ಸರಿಯಾಗಿ ಕಾಳಜಿ ವಹಿಸಿದರೆ ಈ ಗಿಡ 6 ರಿಂದ 8 ತಿಂಗಳಲ್ಲಿ ಹಣ್ಣು ಬಿಡಲು ಪ್ರಾರಂಭಿಸುತ್ತದೆ.
ಸ್ಟ್ರಾಬೆರಿ ಗಿಡ: ನಿಮ್ಮ ಬಾಲ್ಕನಿಯನ್ನು ಸುಂದರ ಮತ್ತು ಫಲಪ್ರದವಾಗಿಸಲು ನೀವು ಬಯಸಿದರೆ, ಸ್ಟ್ರಾಬೆರಿ ಗಿಡವನ್ನು ನೆಡಿ. ಪುಟ್ಟ ಪಾಟ್ ಅಥವಾ ಹ್ಯಾಂಗಿಂಗ್ ಪ್ಲಾಂಟರ್ನಲ್ಲಿ ಸ್ಟ್ರಾಬೆರಿ ಗಿಡವನ್ನು ಸುಲಭವಾಗಿ ಬೆಳೆಯಬಹುದು. ಮಣ್ಣು ಹಗುರವಾಗಿರಬೇಕು ಮತ್ತು ಮೃದುವಾಗಿರಬೇಕು. ತಿಳಿ ನೆರಳು ಬೀಳುವ ಸ್ಥಳದಲ್ಲಿ ಈ ಗಿಡವನ್ನು ಇರಿಸಿ ಹಾಗೂ ಸೂರ್ಯನ ಪ್ರಕರ ಬೆಳಕು ಬೀಳುವ ಸ್ಥಳದಲ್ಲಿ ಈ ಗಿಡ ಇಡುವುದನ್ನು ತಪ್ಪಿಸಿ, ಸರಿಯಾದ ಆರೈಕೆ ವಹಿಸಿದರೆ 2 ರಿಂದ 3 ತಿಂಗಳಲ್ಲಿ ಈ ಗಿಡ ಹಣ್ಣು ಬಿಡಲು ಪ್ರಾರಂಭಿಸುತ್ತದೆ.
ಪೇರಳೆ ಗಿಡ: ಪೇರಳೆ ಗಿಡ ಬೆಳೆಯಲು ಸಾಕಷ್ಟು ಸ್ಥಳಾವಕಾಶ ಬೇಕಾಗುತ್ತದೆ ಎಂದು ನೀವು ಭಾವಿಸಬಹುದು, ಆದರೆ ಇತ್ತೀಚಿನ ದಿನಗಳಲ್ಲಿ ನರ್ಸರಿಗಳಲ್ಲಿ ಕುಂಡಗಳಲ್ಲಿ ಸುಲಭವಾಗಿ ಬೆಳೆಯಬಹುದಾದ ಸಾಕಷ್ಟು ಪ್ರಕಾರದ ಪೇರಳೆ ಗಿಡಗಳಿವೆ. ಇಂತಹ ಗಿಡಗಳನ್ನು 20 ರಿಂದ 24 ಇಂಚು ಆಳದ ದೊಡ್ಡ ಪಾಟ್ಗಳಲ್ಲಿ ನೆಟ್ಟು, ಬಾಲ್ಕನಿಯಲ್ಲಿ ಆರಮದಾಯಕವಾಗಿ ಬೆಳಯಬಹುದು. ಇದರ ನಿರ್ವಹಣೆಯೂ ಕಡಿಮೆ ಜೊತೆಗೆ ಈ ಸಸ್ಯ ನಿಮ್ಮ ಬಾಲ್ಕನಿಗೆ ಸುಂದರ ಲುಕ್ ಕೂಡ ನೀಡುತ್ತದೆ. ಇದು ಒಂದು ವರ್ಷದೊಳಗೆ ಫಲ ನೀಡಲು ಪ್ರಾರಂಭಿಸಬಹುದು.
ಪಪ್ಪಾಯಿ: ಕುಬ್ಜ ತಳಿಯ ಪಪ್ಪಾಯಿ ಗಿಡಗಳನ್ನು ನೀವು ಬಾಲ್ಕನಿಯನ್ನು ಸುಲಭವಾಗಿ ಬೆಳೆಯಬಹುದು. 20 ರಿಂದ 24 ಇಂಚಿನ ಪಾಟ್ಗಳಲ್ಲಿ ಈ ಪಪ್ಪಾಯಿ ಗಿಡಗಳನ್ನು ನೆಡಿ, ಜೊತೆಗೆ ಇದನ್ನು ಬಾಲ್ಕನಿಯಲ್ಲಿ ಉತ್ತಮ ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಇರಿಸಿ. ನಿಯಮಿತವಾಗಿ ನೀರು ಹಾಕಿ ಜೊತೆಗೆ ಸಾವಯವ ಗೊಬ್ಬರವನ್ನು ಹಾಕಿ ಪೋಷಿಸಿ. ಅವು 6-8 ತಿಂಗಳೊಳಗೆ ಫಲ ನೀಡಲು ಪ್ರಾರಂಭಿಸುತ್ತವೆ.
ದಾಳಿಂಬೆ ಗಿಡ: ದಾಳಿಂಬೆ ಸಸ್ಯಗಳು ನಿಮಗೆ ಆರೋಗ್ಯಕರ ಹಣ್ಣುಗಳನ್ನು ಒದಗಿಸುವುದಲ್ಲದೆ, ಅವುಗಳ ಪ್ರಕಾಶಮಾನವಾದ ಕೆಂಪು ಹೂವುಗಳು ನಿಮ್ಮ ಬಾಲ್ಕನಿಯನ್ನು ಸುಂದರವಾದ ಉದ್ಯಾನವನ್ನಾಗಿ ಪರಿವರ್ತಿಸಬಹುದು. ಕುಬ್ಜ ತಳಿಯ ದಾಳಿಂಬೆ ಪ್ರಭೇದಗಳು ಪಾಟ್ನಲ್ಲಿ ನೆಡಲು ಉತ್ತಮ ಆಯ್ಕೆಯಾಗಿದೆ. ಅವುಗಳಿಗೆ ಪೂರ್ಣ ಸೂರ್ಯ ಮತ್ತು ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣು ಬೇಕಾಗುತ್ತದೆ.
ಬಾಳೆಗಿಡ: ಕುಬ್ಜ ತಳಿಯ ಬಾಳೆಗಿಡಗಳು ನರ್ಸರಿಗಳಲ್ಲಿ ಸುಲಭವಾಗಿ ಲಭ್ಯವಿದೆ. ದೊಡ್ಡ ಪಾಟ್ಗಳಲ್ಲಿಟ್ಟು ಇವುಗಳನ್ನು ಬಾಲ್ಕನಿಯಲ್ಲಿ ಸುಲಭವಾಗಿ ಬೆಳೆಸಬಹುದು. ಅವುಗಳಿಗೆ ಸೂರ್ಯನ ಬೆಳಕು, ತೇವಾಂಶ ಮತ್ತು ಸಾವಯವ ಗೊಬ್ಬರವನ್ನು ಒದಗಿಸಿ. ಈ ರೀತಿ ಉತ್ತಮ ಆರೈಕೆ ವಹಿಸಿದರೆ ಈ ಗಿಡ ಉತ್ತಮ ಫಲ ನೀಡುತ್ತದೆ.
ಕನ್ನಡದ ನಟ-ನಟಿಯರು ಬಾಲಿವುಡ್ (Bollywood) ಸಿನಿಮಾಗಳಲ್ಲಿ ಕೆಲಸ ಮಾಡಿರುವುದು ತುಸು ಕಡಿಮೆ. ಬಾಲಿವುಡ್ನ ಹಲವು ನಟ-ನಟಿಯರು ಕನ್ನಡ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇದೀಗ ಕನ್ನಡದ ಜನಪ್ರಿಯ ನಟ ಮತ್ತು ನಿರ್ದೇಶಕ ರಾಜ್ ಬಿ ಶೆಟ್ಟಿ ಹಿಂದಿ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಹಾಡೊಂದು ಇದೀಗ ಬಿಡುಗಡೆ ಆಗಿದೆ. ಈ ಹಾಡು ವಿಶೇಷವಾಗಿ ರಾಜ್ ಬಿ ಶೆಟ್ಟಿಯ ಮೇಲೆ ಚಿತ್ರಿತಗೊಂಡಿರುವುದು ವಿಶೇಷ. ಹಾಡಿನಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಮತ್ತೊಬ್ಬ ಕನ್ನಡದ ನಿರ್ದೇಶಕರೂ ಇದ್ದಾರೆ.
‘ಗ್ಯಾಂಗ್ಸ್ ಆಫ್ ವಸೇಪುರ್’, ‘ದೇವ್ ಡಿ’, ‘ನೋ ಸ್ಮೋಕಿಂಗ್’ ಇನ್ನೂ ಹಲವು ಕಲ್ಟ್ ಸಿನಿಮಾಗಳ ನಿರ್ದೇಶಕ ಅನುರಾಗ್ ಕಶ್ಯಪ್ ಇದೀಗ ‘ಬಂದರ್’ ಹೆಸರಿನ ಹೊಸ ಹಿಂದಿ ಸಿನಿಮಾ ನಿರ್ದೇಶಿಸಿದ್ದು, ಸಿನಿಮಾನಲ್ಲಿ ಬಾಬಿ ಡಿಯೋಲ್ ನಾಯಕ. ಇದೇ ಸಿನಿಮಾನಲ್ಲಿ ರಾಜ್ ಬಿ ಶೆಟ್ಟಿ ಸಹ ವಿಶೇಷವಾದ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ‘ಬಂದರ್’ ಸಿನಿಮಾದ ‘ಪಿಂಜರಾ’ ಹೆಸರಿನ ಹಾಡೊಂದು ಬಿಡುಗಡೆ ಆಗಿದ್ದು, ಹಾಡಿನಲ್ಲಿ ರಾಜ್ ಬಿ ಶೆಟ್ಟಿ ಪಾತ್ರವೇ ಪ್ರಧಾನ.
ಜೈಲಿನಲ್ಲಿ ಚಿತ್ರೀಕರಣಗೊಂಡಿರುವ ಹಾಡು ಇದಾಗಿದ್ದು, ಜೈಲಿನ ಕೈದಿ ಆಗಿರುವ ರಾಜ್ ಬಿ ಶೆಟ್ಟಿ ಚಿತ್ರ ವಿಚಿತ್ರವಾಗಿ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾರೆ, ರಾಜ್ ಬಿ ಶೆಟ್ಟಿಯ ಜೊತೆಗೆ ಕನ್ನಡದ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕ ನಟೇಶ್ ಹೆಗ್ಡೆ ಸಹ ಡ್ಯಾನ್ಸ್ ಮಾಡಿದ್ದಾರೆ. ಇಬ್ಬರೂ ಸಹ ಕೈದಿಗಳ ಪಾತ್ರದಲ್ಲಿ ನಟಿಸಿದ್ದು, ಇಬ್ಬರೂ ಸೇರಿ ಇತರೆ ಕೆಲ ಕೈದಿಗಳ ಜೊತೆಗೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ.
‘ಪಿಂಜರಾ’ ಹಾಡು ಸಹ ಬಹಳ ಭಿನ್ನವಾಗಿದ್ದು, ಪಿಂಜರಾ ಎಂದರೆ ಹಿಂದಿಯಲ್ಲಿ ಪಂಜರ ಅಥವಾ ಜೈಲು. ಹಾಡಿನಲ್ಲಿ ಸಂಸಾರ ಎಂಬುದು ಪಂಜರ ಎಂಬ ಸಾಲುಗಳಿವೆ. ‘ಪತ್ನಿ ಪಂಜರ, ಗರ್ಲ್ಫ್ರೆಂಡ್ ಪಂಜರ, ಮೊಬೈಲ್ ಪಂಜರ, ಟ್ಯಾಕ್ಸ್ ಪಂಜರ, ಇಎಂಐ ಪಂಜರ, ಧರ್ಮ ಪಂಜರ, ಜಾತಿ ಪಂಜರ’ ಹೀಗೆ ಸಾಗುತ್ತದೆ ಹಾಡು. ಹಾಡಿಗೆ ಬಳಸಲಾಗಿರುವ ಸಂಗೀತವೂ ಭಿನ್ನವಾಗಿದೆ. ಯಾವುದೇ ಶುದ್ಧ ಸಂಗೀತ ವಾದ್ಯಗಳಲ್ಲದೆ ಜೈಲಿನಲ್ಲಿ ಸಿಗುವ ವಸ್ತುಗಳನ್ನೇ ಬಳಸಿ ಹಾಡಿಗೆ ಸಂಗೀತ ನೀಡಲಾಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಅದಾಗಲೇ ಪಂಜರದಲ್ಲಿರುವ ಕೈದಿಗಳು ಹೊರಗಿನ ಪ್ರಪಂಚದವರು ತಮಗೆ ಗೊತ್ತಿಲ್ಲದೇ ಪಂಜರದಲ್ಲಿ ಬದುಕುತ್ತಿದ್ದಾರೆಂಬುದನ್ನು ಹಾಡು ಹೇಳುತ್ತಿದೆ.
‘ಬಂದರ್’ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಕತೆ ಆಗಿದ್ದು, ನಿಜ ಘಟನೆಯೊಂದರ ಮೇಲೆ ಆಧರಿತವಾಗಿದೆ. ಸೆಲೆಬ್ರಿಟಿ ವ್ಯಕ್ತಿಯೊಬ್ಬ ಸುಳ್ಳು ಅತ್ಯಾಚಾರದ ಕೇಸಿನಲ್ಲಿ ಜೈಲಿಗೆ ಹೋಗುವುದು ಅಲ್ಲಿಂದ ಹೇಗೆ ಬಿಡಿಸಿಕೊಳ್ಳುತ್ತಾನೆ. ಜೈಲಿನಲ್ಲಿ ಆತ ಎದುರಿಸುವ ಸಮಸ್ಯೆಗಳು ಯಾವುವು ಎಂಬಿತ್ಯಾದಿ ವಿಷಯಗಳನ್ನು ಸಿನಿಮಾದ ಕತೆ ಒಳಗೊಂಡಿದೆ. ಜೂನ್ 5 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.
ಮುಂಬೈ, ಮೇ 28: ರಿಲಾಯನ್ಸ್ ಇಂಡಸ್ಟ್ರೀಸ್ ಭಾರತದಲ್ಲಿ ಅತಿಹೆಚ್ಚು ಆದಾಯ ಹೊಂದಿರುವ ಕಂಪನಿ ಎನ್ನುವ ಗರಿ ಪಡೆದಿದೆ. ಆದರೆ, ಅದರ ಮುಖ್ಯಸ್ಥರು ತಮಗೆ ಸಂಬಳ ಇಲ್ಲದೇ ಕಂಪನಿಯನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಗ್ರೂಪ್ನ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಅವರು ಸತತ ಆರನೇ ವರ್ಷವೂ ತಮ್ಮ ಕಂಪನಿಯಿಂದ ಯಾವುದೇ ರೀತಿಯ ಸಂಬಳ ಅಥವಾ ಸಂಭಾವನೆಯನ್ನು (Remuneration) ಪಡೆದಿಲ್ಲ. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಉದ್ಯಮ ವಲಯದಲ್ಲಾದ ಆರ್ಥಿಕ ಏರಿಳಿತಗಳ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತರಾಗಿ ಸಂಬಳ ತ್ಯಜಿಸಲು ನಿರ್ಧರಿಸಿದ್ದ ಅವರು, ಪ್ರಸ್ತುತ ಆರ್ಥಿಕ ವರ್ಷದಲ್ಲೂ ಅದನ್ನೇ ಮುಂದುವರಿಸಿದ್ದಾರೆ. ವಿಶೇಷವೆಂದರೆ, ಮುಕೇಶ್ ಅಂಬಾನಿ ಅವರು ಸಂಬಳ ಪಡೆಯದೇ ಇದ್ದರೂ, ಅವರ ನೇತೃತ್ವದ ರಿಲಯನ್ಸ್ ಸಂಸ್ಥೆಯು ಇತ್ತೀಚಿನ ಹಣಕಾಸು ವರ್ಷದಲ್ಲಿ ಅತ್ಯುನ್ನತ ಮತ್ತು ದಾಖಲೆಯ ಲಾಭವನ್ನು ಗಳಿಸಿದೆ.
ಕೋವಿಡ್ ವೇಳೆ ತೆಗೆದುಕೊಂಡಿದ್ದ ನಿರ್ಧಾರ
ಕಳೆದ 2020ರ ಜೂನ್ ತಿಂಗಳಲ್ಲಿ ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕವು ಭಾರಿ ಆರ್ಥಿಕ ಸಂಕಷ್ಟವನ್ನು ತಂದೊಡ್ಡಿದಾಗ, ಮುಕೇಶ್ ಅಂಬಾನಿ ಅವರು ಸಮಾಜ ಹಾಗೂ ಉದ್ಯಮದ ಹಿತದೃಷ್ಟಿಯಿಂದ ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದರು. ರಿಲಯನ್ಸ್ ಉದ್ಯಮ ಸಮೂಹದ ಒಟ್ಟಾರೆ ಆರ್ಥಿಕ ಆರೋಗ್ಯವನ್ನು ಕಾಯ್ದುಕೊಳ್ಳುವ ಸಲುವಾಗಿ, ಪರಿಸ್ಥಿತಿ ತಿಳಿಯಾಗುವವರೆಗೂ ತಾವು ಕಂಪನಿಯಿಂದ ಯಾವುದೇ ಸಂಬಳ, ಭತ್ಯೆ ಅಥವಾ ಕಮಿಷನ್ ಪಡೆಯುವುದಿಲ್ಲ ಎಂದು ಅವರು ಘೋಷಿಸಿದ್ದರು. ಅಂದಿನಿಂದ ಇಂದಿನವರೆಗೂ (ಸತತ 6 ವರ್ಷಗಳು) ಅವರು ತಮ್ಮ ಈ ಬದ್ಧತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ.
ಈ ನಿರ್ಧಾರಕ್ಕೂ ಮುನ್ನ, ಅಂದರೆ 2008-09ರ ಹಣಕಾಸು ವರ್ಷದಿಂದ 2019-20ರವರೆಗೆ ಮುಕೇಶ್ ಅಂಬಾನಿ ಅವರ ವಾರ್ಷಿಕ ಸಂಬಳವು 15 ಕೋಟಿ ರೂಗೆ ಸೀಮಿತವಾಗಿತ್ತು. ಭಾರತದ ಪ್ರಮುಖ ಕಾರ್ಪೊರೇಟ್ ಮುಖ್ಯಸ್ಥರ ಸಂಬಳಕ್ಕೆ ಹೋಲಿಸಿದರೆ ಇದು ಅತ್ಯಂತ ಮಿತವಾದ ಮೊತ್ತವಾಗಿತ್ತು.
ಮುಕೇಶ್ ಅಂಬಾನಿ ಅವರು ಸಂಬಳ ನಿರಾಕರಿಸಿದ ಅವಧಿಯಲ್ಲೇ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ವ್ಯಾಪಾರ ಸಾಮ್ರಾಜ್ಯವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ವಿಸ್ತರಿಸಿದೆ. ಡಿಜಿಟಲ್ ಸೇವೆಗಳ ವಿಭಾಗವಾದ ‘ಜಿಯೋ’ (Jio), ರಿಟೇಲ್ ಉದ್ಯಮ ಮತ್ತು ಹಸಿರು ಇಂಧನ (Green Energy) ವಲಯಗಳಲ್ಲಿ ಕಂಪನಿಯು ಭಾರಿ ಹೂಡಿಕೆ ಮಾಡಿದ್ದು, ನಿರಂತರವಾಗಿ ದಾಖಲೆಯ ನಿವ್ವಳ ಲಾಭವನ್ನು (Net Profit) ದಾಖಲಿಸುತ್ತಾ ಬಂದಿದೆ.
ಇತರ ಪ್ರಮುಖ ಅಧಿಕಾರಿಗಳ ಸಂಬಳ ವಿವರ
ಮುಕೇಶ್ ಅಂಬಾನಿ ಅವರು ಯಾವುದೇ ಸಂಭಾವನೆ ಪಡೆಯದಿದ್ದರೂ, ಕಂಪನಿಯ ಇತರ ಪ್ರಮುಖ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಉನ್ನತ ಅಧಿಕಾರಿಗಳ ಸಂಬಳ ಹಾಗೂ ಭತ್ಯೆಗಳು ಮಾರುಕಟ್ಟೆಯ ನಿಯಮಾವಳಿಗಳಿಗೆ ಅನುಗುಣವಾಗಿ ಪರಿಷ್ಕರಣೆಗೊಂಡಿವೆ. ಕಂಪನಿಯ ವಾರ್ಷಿಕ ವರದಿಯ ಪ್ರಕಾರ, ಉದ್ಯಮದ ಬೆಳವಣಿಗೆಗೆ ಶ್ರಮಿಸುತ್ತಿರುವ ಇತರ ನಿರ್ದೇಶಕರಿಗೆ ನಿಯಮಬದ್ಧ ಸಂಬಳ ಮತ್ತು ಕಮಿಷನ್ಗಳನ್ನು ವಿತರಿಸಲಾಗಿದೆ.
ಜಗತ್ತಿನ ಟೆಕ್ ದೈತ್ಯ ಕಂಪನಿಗಳಾದ ಆಪಲ್, ಗೂಗಲ್ ಅಥವಾ ಫೇಸ್ಬುಕ್ ಸಂಸ್ಥೆಗಳ ಮುಖ್ಯಸ್ಥರು ಸಾಂಕೇತಿಕವಾಗಿ 1 ಡಾಲರ್ ಸಂಬಳ ಪಡೆಯುವ ಉದಾಹರಣೆಗಳು ಜಾಗತಿಕವಾಗಿವೆ. ಅದೇ ಮಾದರಿಯಲ್ಲಿ, ಭಾರತದ ಅತಿ ದೊಡ್ಡ ಖಾಸಗಿ ಕಂಪನಿಯ ಮುಖ್ಯಸ್ಥರಾದ ಮುಕೇಶ್ ಅಂಬಾನಿ ಅವರು ಸತತ ಆರು ವರ್ಷಗಳಿಂದ ನಯಾಪೈಸೆ ಸಂಬಳ ಪಡೆಯದೆ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ಭಾರತೀಯ ಕಾರ್ಪೊರೇಟ್ ವಲಯದಲ್ಲಿ ವಿಶಿಷ್ಟ ನಾಯಕತ್ವಕ್ಕೆ ಸಾಕ್ಷಿಯಾಗಿದೆ.
ಜಾಗತಿಕವಾಗಿ ಹಲವು ವಾಣಿಜ್ಯೋದ್ಯಮಿಗಳು ಸಂಬಳ ಪಡೆಯದೇ ಹೋದರೂ ಅವರಿಗೆ ಇತರ ಮೂಲಗಳಿಂದ ಹಣ ಸಿಗುತ್ತದೆ. ಅವರ ಪ್ರಮುಖ ಆದಾಯ ಮೂಲ ಷೇರುಗಳಾಗಿರುತ್ತವೆ. ಷೇರುಗಳ ಡಿವಿಡೆಂಡ್ ಅಥವಾ ಲಾಭಾಂಶವು ಉದ್ಯಮಿಗಳ ಜೇಬು ತುಂಬಿಸುತ್ತದೆ.
ರಿಲಾಯನ್ಸ್ ಇಂಡಸ್ಟ್ರೀಸ್ನಲ್ಲಿ ಮುಕೇಶ್ ಅಂಬಾನಿ ವೈಯಕ್ತಿಕವಾಗಿ 1.61 ಕೋಟಿ ಸಂಖ್ಯೆಯಷ್ಟು ಷೇರುಗಳನ್ನು ಹೊಂದಿದ್ದಾರೆ. 2024-25ರಲ್ಲಿ ಕಂಪನಿಯು ಒಂದು ಷೇರಿಗೆ 6 ರೂ ಡಿವಿಡೆಂಡ್ (Share dividend) ಘೋಷಿಸಿತ್ತು. ಇದರಿಂದ ಅಂಬಾನಿಗೆ ಆ ವರ್ಷ 9 ಕೋಟಿ ರೂಗೂ ಅಧಿಕ ಆದಾಯ ಬಂದಿತ್ತು. ಇನ್ನು, ಅಂಬಾನಿ ನಿಯಂತ್ರಣ ಹೊಂದಿರುವ ಪ್ರೊಮೋಟರ್ ಗ್ರೂಪ್ ಸಂಸ್ಥೆಗಳು ರಿಲಾಯನ್ಸ್ ಇಂಡಸ್ಟ್ರೀಸ್ನಲ್ಲಿ ಶೇ. 50ಕ್ಕಿಂತಲೂ ಅಧಿಕ ಷೇರುಪಾಲು ಹೊಂದಿವೆ. ಈ ಪ್ರೊಮೋಟರ್ ಕಂಪನಿಗಳಿಗೆ 3,987 ಕೋಟಿ ರೂ ಡಿವಿಡೆಂಡ್ ಸಿಕ್ಕಿತ್ತು.