1.8 ಕೋಟಿ ರೂ. ಬಾಕಿ ಉಳಿಸಿಕೊಂಡ ಆರೋಪ; ನಟ ಆರ್ಯ ವಿರುದ್ಧ ಕೇಸ್ – Kannada News | Actor Arya Faces Fraud Case: Unpaid Film Equipment Rentals, Hyderabad Police Probe

ತಮಿಳು ಚಿತ್ರರಂಗದ ಪ್ರಸಿದ್ಧ ನಟ ಆರ್ಯ ವಿರುದ್ಧ ಹೈದರಾಬಾದ್‌ನಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಶೂಟಿಂಗ್ ಉಪಕರಣಗಳನ್ನು ಬಾಡಿಗೆಗೆ ಪಡೆದು ಹಣ ಪಾವತಿಸದ ಆರೋಪ ಇವರ ಮೇಲಿದೆ. ಹೈದರಾಬಾದ್ ಮೂಲದ ಸಂಸ್ಥೆಯೊಂದಕ್ಕೆ 1.8 ಕೋಟಿ ರೂಪಾಯಿಗೂ ಅಧಿಕ ಬಾಕಿ ಹಣ ನೀಡಬೇಕಾಗಿದೆ. ಈ ಸಂಬಂಧ ಸಂಸ್ಥೆಯು ಪೊಲೀಸರಿಗೆ ದೂರು ನೀಡಿದೆ.

ಭರವಸೆ ನೀಡಿದ್ದ ಆರ್ಯ

‘ತಾಹರ್ ಸಿನಿ ಟೆಕ್ನಿಕ್’ ಸಂಸ್ಥೆಯು ಜುಲೈ 10 ರಂದು ಪೊಲೀಸರಿಗೆ ಈ ದೂರು ನೀಡಿದೆ. ಆರ್ಯ ನಟನೆಯ ‘ಅನಂತನ್ ಕಾಡು’ ಸಿನಿಮಾದ ಶೂಟಿಂಗ್‌ಗಾಗಿ ಉಪಕರಣಗಳನ್ನು ಪಡೆಯಲಾಗಿತ್ತು. ಈ ವೇಳೆ ಚಿತ್ರದ ನಾಯಕ ನಟ ಆರ್ಯ ಪ್ರೊಡಕ್ಷನ್ ಹೌಸ್ ಎಲ್ಲಾ ಹಣವನ್ನು ಚುಕ್ತಾ ಮಾಡುತ್ತದೆ ಎಂದು ಭರವಸೆ ಕೊಟ್ಟಿದ್ದರು.

ಒಪ್ಪಂದ ಮುರಿದ ಚಿತ್ರತಂಡ

ಈ ಭರವಸೆಯ ಮೇರೆಗೆ 2025ರ ಫೆಬ್ರವರಿಯಲ್ಲಿ ಎರಡೂ ಸಂಸ್ಥೆಗಳ ನಡುವೆ ಒಪ್ಪಂದವಾಗಿತ್ತು. ಹೈದರಾಬಾದ್‌ನಿಂದ ಕೇರಳಕ್ಕೆ ಡಿಜಿಟಲ್ ಕ್ಯಾಮೆರಾಗಳು ಮತ್ತು ಲೈಟಿಂಗ್ ಉಪಕರಣಗಳನ್ನು ಸರಬರಾಜು ಮಾಡಲಾಗಿತ್ತು. ಒಟ್ಟು ಒಪ್ಪಂದದ ಮೊತ್ತ 2.12 ಕೋಟಿ ರೂಪಾಯಿ ಆಗಿತ್ತು. ಆದರೆ ಉಪಕರಣಗಳನ್ನು ಬಳಸಿಕೊಂಡ ನಂತರ ಚಿತ್ರತಂಡ ಹಣ ನೀಡದೆ ವಂಚಿಸಿದೆ. 32 ಲಕ್ಷ ರೂಪಾಯಿ ನೀಡಿ ಇನ್ನುಳಿದ 1.8 ಕೋಟಿ ರೂಪಾಯಿಯನ್ನು ಬಾಕಿ ಉಳಿಸಿಕೊಂಡಿದೆ.

ಇದನ್ನೂ ಓದಿ: ಅಪ್ರಾಪ್ತೆ ಜೊತೆ ಕಾರ್ತಿಕ್ ಆರ್ಯನ್ ಡೇಟಿಂಗ್? ಇಬ್ಬರ ಮಧ್ಯೆ 18 ವರ್ಷ ವಯಸ್ಸಿನ ಅಂತರ

ಮ್ಯಾನೇಜರ್‌ಗೆ ಬೆದರಿಕೆ ಹಾಕಿದ ನಟ

ಸಿನಿಮಾ ಬಿಡುಗಡೆಗೆ ಮುನ್ನ ಎಲ್ಲಾ ಬಾಕಿ ಹಣವನ್ನು ತೀರಿಸುವುದಾಗಿ ಚಿತ್ರತಂಡ ಹೇಳಿತ್ತು. ಹಣ ಪಾವತಿಸಿದ ನಂತರವೇ ಸಂಸ್ಥೆಯಿಂದ ‘ನೋ ಡ್ಯೂಸ್ ಸರ್ಟಿಫಿಕೇಟ್’ ಪಡೆಯುವುದಾಗಿ ಒಪ್ಪಿಕೊಂಡಿತ್ತು. ಆದರೆ ಹಲವು ಬಾರಿ ನೆನಪಿಸಿದರೂ ಚಿತ್ರತಂಡ ಹಣ ನೀಡಿಲ್ಲ. ಬಾಕಿ ಹಣ ಕೇಳಲು ಹೋದ ಸಂಸ್ಥೆಯ ಮ್ಯಾನೇಜರ್‌ಗೆ ನಟ ಆರ್ಯ ಮತ್ತು ನಿರ್ಮಾಪಕರು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸೆನ್ಸಾರ್ ಕಟ್ ಇಲ್ಲದೆ ‘ಜನ ನಾಯಗನ್’ ಸಿನಿಮಾ ನೋಡಲು ವಿಜಯ್ ಅಭಿಮಾನಿಗಳಿಗೆ ಸುವರ್ಣಾವಕಾಶ – Kannada News | Thalapathy Vijay Fans Can Watch Jana Nayagan Without CBFC Cuts, Here is How

ತಮಿಳುನಾಡು ಮುಖ್ಯಮಂತ್ರಿ ಹಾಗೂ ಸ್ಟಾರ್ ನಟ ವಿಜಯ್ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ ಬಿಡುಗಡೆಗೆ ಸಜ್ಜಾಗಿದೆ. ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ನೀಡಿದೆ. ಸುಮಾರು 7 ತಿಂಗಳ ವಿಳಂಬದ ನಂತರ ಸಿನಿಮಾ ಥಿಯೇಟರ್‌ಗೆ ಬರುತ್ತಿದೆ. ಭಾರತದಲ್ಲಿ ರಿಲೀಸ್ ಆಗುವ ಸಿನಿಮಾಗೆ ಸೆನ್ಸಾರ್ ಮಂಡಳಿ ಹಲವು ಕಟ್‌ಗಳನ್ನು ಮಾಡಿದೆ. ಆದರೆ ವಿದೇಶಗಳಲ್ಲಿ ಯಾವುದೇ ಕಟ್ ಇಲ್ಲದೆ ಒರಿಜಿನಲ್ ಸಿನಿಮಾ ಬಿಡುಗಡೆಯಾಗುತ್ತಿದೆ. ವಿದೇಶದಲ್ಲಿರುವ ವಿಜಯ್ ಅಭಿಮಾನಿಗಳು ಚಿತ್ರದ ರಾ ಮತ್ತು ಅನ್‌ಕಟ್ ವರ್ಷನ್ ನೋಡಬಹುದು.

ವಿದೇಶಿ ವಿತರಕರಿಂದ ಅಧಿಕೃತ ಪ್ರಕಟಣೆ

ಯುಕೆಯಲ್ಲಿ ಈ ಚಿತ್ರವನ್ನು ‘ಅಹಿಂಸಾ ಎಂಟರ್‌ಟೈನ್‌ಮೆಂಟ್’ ಸಂಸ್ಥೆ ವಿತರಣೆ ಮಾಡುತ್ತಿದೆ. ಜುಲೈ 24 ರಂದು ಯುಕೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ವಿತರಕರು ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ. ಅಲ್ಲಿ ಈ ಚಿತ್ರಕ್ಕೆ 15+ ರೇಟಿಂಗ್ ಸಿಕ್ಕಿದೆ. ಯಾವುದೇ ಸೀನ್ ಅಥವಾ ಡೈಲಾಗ್‌ಗೆ ಕತ್ತರಿ ಹಾಕಲಾಗಿಲ್ಲ. ವಿಜಯ್ ಅವರ ಮಾಸ್ ಆಕ್ಷನ್ ಇಡೀ ಸಿನಿಮಾವನ್ನು ಒರಿಜಿನಲ್ ಆಗಿಯೇ ನೋಡಬಹುದು ಎಂದು ವಿತರಕರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಜನ ನಾಯಗನ್’ ಸೆನ್ಸಾರ್ ಪ್ರಕ್ರಿಯೆ ಪೂರ್ಣ: ಸಿಎಂ ವಿಜಯ್ ಚಿತ್ರಕ್ಕೆ ‘A’ ಪ್ರಮಾಣಪತ್ರ

ಭಾರತದ ವರ್ಷನ್‌ನಲ್ಲಿ ಆದ ಪ್ರಮುಖ ಬದಲಾವಣೆಗಳು

ಈ ಸಿನಿಮಾದಲ್ಲಿ ವಿಜಯ್ ಅವರ ಪಾತ್ರದ ಹೆಸರು ‘ದಳಪತಿ ವೆಟ್ರಿ ಕೊಂಡಾನ್’. ಇದರ ಮೊದಲ ಅಕ್ಷರಗಳನ್ನು ಸೇರಿಸಿದರೆ ‘TVK’ ಎಂದಾಗುತ್ತದೆ. ಇದು ವಿಜಯ್ ಅವರ ರಾಜಕೀಯ ಪಕ್ಷದ (ತಮಿಳಗ ವೆಟ್ರಿ ಕಳಗಂ) ಹೆಸರೂ ಹೌದು. ಸಿನಿಮಾದಲ್ಲಿದ್ದ ‘ಅಂಬೇಡ್ಕರ್ ಸಟಮ್… ಟು… TVK ಸಟಮ್’ ಎಂಬ ಡೈಲಾಗ್‌ ಅನ್ನು ಸೆನ್ಸಾರ್ ಮಂಡಳಿ ತೆಗೆದುಹಾಕಿದೆ. ಆಡಿಯೋ ಮತ್ತು ವಿಡಿಯೋ ಎರಡರಲ್ಲೂ ಈ ಬದಲಾವಣೆ ಮಾಡಲಾಗಿದೆ.

ಸೆನ್ಸಾರ್ ಕತ್ತರಿಗೆ ಸಿಲುಕಿದ ಇತರ ದೃಶ್ಯಗಳು

ಸಿನಿಮಾದಲ್ಲಿ ಬರುವ ‘ಓಂ’ ಮತ್ತು ‘ನ್ಯೂ ಇಂಡಿಯಾ’ ಎಂಬ ಪದಗಳನ್ನು ಮ್ಯೂಟ್ ಮಾಡಲಾಗಿದೆ. ಸದ್ದಾಂ ಹುಸೇನ್ ಗಲ್ಲು ಶಿಕ್ಷೆಗೆ ಸಂಬಂಧಿಸಿದ ಡೈಲಾಗ್‌ಗಳನ್ನು ಬದಲಾಯಿಸಲಾಗಿದೆ. ಪೊಲೀಸ್ ಅಧಿಕಾರಿಯ ಬ್ಯಾಡ್ಜ್‌ಗೆ ಗೌರವ ನೀಡದ ದೃಶ್ಯವನ್ನು ತೆಗೆಯಲಾಗಿದೆ. ‘ಭಾಗವತಂ’ ಮತ್ತು ‘ರಂಗನಾಥರ್’ ಎಂಬ ಪದಗಳನ್ನು ಕೂಡ ಸೈಲೆನ್ಸ್ ಮಾಡಲಾಗಿದೆ. ಕೆಲವು ಅಶ್ಲೀಲ ಬೈಗುಳದ ಪದಗಳನ್ನು ಮ್ಯೂಟ್ ಮಾಡಲಾಗಿದೆ. ಮಗುವನ್ನು ಸುಡುವ ದೃಶ್ಯ ಮತ್ತು ಭಾರತದ ರಾಷ್ಟ್ರಧ್ವಜ ನೆಲಕ್ಕೆ ಬೀಳುವ ದೃಶ್ಯಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅರ್ಹತೆ ಪಡೆದರೂ ಏಷ್ಯನ್ ಗೇಮ್ಸ್​ನಿಂದ ಭಾರತ ಫುಟ್‌ಬಾಲ್ ತಂಡ ಹೊರಕ್ಕೆ! – Kannada News | Indian football teams will not play in the Asian Games 2026

ಭಾರತದ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ಫುಟ್‌ಬಾಲ್ ತಂಡಗಳು ಮುಂಬರುವ ಏಷ್ಯನ್ ಗೇಮ್ಸ್ 2026 ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿವೆ. ಇದಕ್ಕೆ ಮುಖ್ಯ ಕಾರಣ ಕ್ರೀಡಾ ಸಚಿವಾಲಯದ ಕಠಿಣ ನಿಯಮಾವಳಿಗಳು. ಅಂದರೆ ಭಾರತ ಸರ್ಕಾರದ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಬಹು-ಕ್ರೀಡಾಕೂಟಗಳಿಗೆ ಕಳುಹಿಸುವ ತಂಡಗಳಿಗೆ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತಂದಿದೆ.

ಏಷ್ಯನ್ ಗೇಮ್ಸ್ ಕೇವಲ ಅನುಭವ ಪಡೆಯುವ ಪ್ರವಾಸವಲ್ಲ. ಅದು ಪದಕ ಗೆಲ್ಲುವ ವೇದಿಕೆ ಎಂದು ಕೇಂದ್ರ ಕೀಡಾ ಸಚಿವಾಲಯ ಸ್ಪಷ್ಟಪಡಿಸಿದೆ. ಅಲ್ಲದೆ ಇದಕ್ಕಾಗಿಯೇ ಸರ್ಕಾರ ಕೆಲ ಮಾನದಂಡಗಳನ್ನು ಪರಿಚಯಿಸಿದೆ.

ಭಾರತ ಸರ್ಕಾರದ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಧಿಕೃತ ಪಾಲಿಸಿಯ ಪ್ರಕಾರ, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಂತಹ ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೆ ಕ್ರೀಡಾಪಟುಗಳು ಮತ್ತು ತಂಡಗಳನ್ನು ಆಯ್ಕೆ ಮಾಡಲು ಕಟ್ಟುನಿಟ್ಟಾದ “ಮೆಡಲ್ ಪ್ರೊಫೈಲ್” ಮಾನದಂಡಗಳನ್ನು ನಿಗದಿಪಡಿಸಲಾಗಿದೆ.

ಕ್ರೀಡಾ ಸಚಿವಾಲಯದ ಪ್ರಮುಖ ನಿಯಮಗಳು ಇಲ್ಲಿವೆ:

ಫುಟ್‌ಬಾಲ್, ಹಾಕಿ, ಕ್ರಿಕೆಟ್, ಬ್ಯಾಸ್ಕೆಟ್‌ಬಾಲ್‌ನಂತಹ ತಂಡಗಳು ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯಬೇಕಾದರೆ ಈ ಕೆಳಗಿನ ಮಾನದಂಡವನ್ನು ತಲುಪಿರಬೇಕು.

  • ಏಷ್ಯನ್ ಕ್ರೀಡಾ ಒಕ್ಕೂಟಗಳ ಅಧಿಕೃತ ಶ್ರೇಯಾಂಕದ ಪ್ರಕಾರ ಆ ತಂಡ ಏಷ್ಯಾದಲ್ಲಿ ಮೊದಲ 8 ಸ್ಥಾನಗಳ ಒಳಗೆ ಇರಬೇಕು.
  • ಕಳೆದ ಒಂದು ವರ್ಷದಲ್ಲಿ ತಂಡದ ಪ್ರದರ್ಶನವು ಪದಕ ಗೆಲ್ಲುವ ಮಟ್ಟದಲ್ಲಿರಬೇಕು.

ಈ ಎರಡು ನಿಯಮಗಳ ಕಾರಣವೇ ಇದೀಗ ಭಾರತ ಫುಟ್‌ಬಾಲ್ ತಂಡ ಏಷ್ಯನ್ ಗೇಮ್ಸ್ 2026 ರಿಂದ ಹೊರಗುಳಿಯಬೇಕಾಗಿ ಬಂದಿದೆ.

  • ಟಾಪ್-8 ನಿಯಮದ ಅಡ್ಡಿ: ಕ್ರೀಡಾ ಸಚಿವಾಲಯದ ನಿಯಮದ ಪ್ರಕಾರ, ಯಾವುದೇ ತಂಡವು ಏಷ್ಯನ್ ಗೇಮ್ಸ್‌ಗೆ ಹೋಗಬೇಕಾದರೆ ಅದು ಏಷ್ಯಾದಲ್ಲಿ ಮೊದಲ 8 ಶ್ರೇಯಾಂಕಗಳ ಒಳಗೆ ಇರಬೇಕು.
  • ಕಡಿಮೆ ಶ್ರೇಯಾಂಕ: ಭಾರತ ಪುರುಷರ ಫುಟ್‌ಬಾಲ್ ತಂಡವು ಸದ್ಯ ಏಷ್ಯಾದಲ್ಲಿ 26ನೇ ಸ್ಥಾನದಲ್ಲಿದೆ ಮತ್ತು ಮಹಿಳಾ ತಂಡವು 13ನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಸರ್ಕಾರದ ‘ಟಾಪ್-8’ ಮಾನದಂಡವನ್ನು ತಲುಪಲು ವಿಫಲವಾಗಿವೆ.

ವಿಶೇಷ ವಿನಾಯಿತಿ ನಿರಾಕರಣೆ:

ಕಳೆದ ಬಾರಿ (2023ರ ಏಷ್ಯನ್ ಗೇಮ್ಸ್‌ನಲ್ಲಿ) ಸರ್ಕಾರವು ಕೊನೆಯ ಕ್ಷಣದಲ್ಲಿ ನಿಯಮ ಸಡಿಲಿಸಿ ಫುಟ್‌ಬಾಲ್ ತಂಡಕ್ಕೆ ಅನುಮತಿ ನೀಡಿತ್ತು. ಆದರೆ ಈ ಬಾರಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (AIFF) ಮಾಡಿದ ವಿಶೇಷ ಮನವಿಯನ್ನು ಕ್ರೀಡಾ ಸಚಿವಾಲಯ ತಿರಸ್ಕರಿಸಿದೆ.

ಅರ್ಹತೆ ಪಡೆದು ಹೊರಬಿದ್ದ ಭಾರತ:

ಪುರುಷರ ತಂಡ: ಪುರುಷರ ವಿಭಾಗದಲ್ಲಿ, 2026ರ AFC U-23 ಏಷ್ಯನ್ ಕಪ್ ಟೂರ್ನಿಗೆ ಅರ್ಹತೆ ಪಡೆದ ಅಗ್ರ 16 ತಂಡಗಳ ಪೈಕಿ 15 ತಂಡಗಳಿಗೆ ಏಷ್ಯನ್ ಗೇಮ್ಸ್‌ನಲ್ಲಿ ಆಡುವ ಅವಕಾಶ ನೀಡಲಾಗಿತ್ತು (ಆಸ್ಟ್ರೇಲಿಯಾವನ್ನು ಹೊರತುಪಡಿಸಿ). ಭಾರತ ತಂಡವು ಈ ಕಠಿಣ ಅರ್ಹತಾ ಸುತ್ತಿನ ಮಾನದಂಡಗಳನ್ನು ಯಶಸ್ವಿಯಾಗಿ ಪೂರೈಸಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು.

ಮಹಿಳಾ ತಂಡ: ಮಹಿಳಾ ವಿಭಾಗದಲ್ಲಿ, ಪ್ರಮುಖ ಕಾಂಟಿನೆಂಟಲ್ ಟೂರ್ನಿಯಾದ 2026ರ AFC ಮಹಿಳಾ ಏಷ್ಯನ್ ಕಪ್ ಒಟ್ಟು 12 ತಂಡಗಳ ಟೂರ್ನಿಯಾಗಿದೆ. ಈ ಪ್ರತಿಷ್ಠಿತ ಟೂರ್ನಿಗೆ ಅಧಿಕೃತವಾಗಿ ಅರ್ಹತೆ ಗಿಟ್ಟಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಭಾರತ ಮಹಿಳಾ ತಂಡಕ್ಕೂ ಏಷ್ಯನ್ ಗೇಮ್ಸ್‌ನಲ್ಲಿ ಅವಕಾಶ ಲಭಿಸಿತ್ತು.

ಹೀಗೆ ಏಷ್ಯನ್ ಕ್ರೀಡಾ ಸಂಸ್ಥೆಗಳು ನಿಗದಿಪಡಿಸಿದ್ದ ಕ್ರೀಡಾ ನಿಯಮಾವಳಿಗಳ ಅಡಿಯಲ್ಲಿ ಭಾರತದ ಎರಡೂ ತಂಡಗಳು ನ್ಯಾಯಯುತವಾಗಿಯೇ ಟೂರ್ನಿಗೆ ಆಯ್ಕೆಯಾಗಿದ್ದವು. ಇದಾಗ್ಯೂ ಭಾರತ ಸರ್ಕಾರದ ಕ್ರೀಡಾ ಸಚಿವಾಲಯದ ಆಂತರಿಕ ಶ್ರೇಯಾಂಕದ ನಿಯಮಗಳ ಕಾರಣದಿಂದಾಗಿ ಇದೀಗ ಭಾರತ ಏಷ್ಯನ್ ಗೇಮ್ಸ್ ಫುಟ್​ಬಾಲ್ ಟೂರ್ನಿಯಿಂದ ಹೊರಗುಳಿಯಬೇಕಾಗಿ ಬಂದಿದೆ.

ಇದನ್ನೂ ಓದಿ: ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ರಾಹುಲ್ ದ್ರಾವಿಡ್ ಹೊಸ ಕೋಚ್? 

ಖುಲಾಯಿಸಿದ ಅದೃಷ್ಟ:

ಭಾರತ ಪುರುಷರ ತಂಡವು ಏಷ್ಯನ್ ಗೇಮ್ಸ್​ನಿಂದ ಹೊರಗುಳಿಯುತ್ತಿರುವ ಪರಿಣಾಮ ಫಿಲಿಪೈನ್ಸ್ ದೇಶಕ್ಕೆ ಅವಕಾಶ ಸಿಕ್ಕಿದೆ. ಇನ್ನು ಮಹಿಳಾ ಫುಟ್‌ಬಾಲ್ ವಿಭಾಗದಲ್ಲಿ ಭಾರತ, ಇರಾನ್ ಹಾಗೂ ಆಸ್ಟ್ರೇಲಿಯಾ ಹೊರಗುಳಿದಿದ್ದು, ಈ ತಂಡಗಳ ಬದಲಿಗೆ ಹಾಂಗ್ ಕಾಂಗ್, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ತಂಡಗಳನ್ನು ಅಂತಿಮ ಪಟ್ಟಿಗೆ ಸೇರಿಸಿಕೊಳ್ಳಲಾಗಿದೆ.

Published On – 11:00 am, Mon, 13 July 26

Source link

Video: ಅಗಲಿದ ಪತ್ನಿಯ ಫೋಟೋ ಆಟೋದಲ್ಲಿಟ್ಟು ದಿನನಿತ್ಯ ಪೂಜಿಸುವ ಬೆಂಗಳೂರಿನ ಆಟೋ ಚಾಲಕ – Kannada News | Bengaluru auto driver worships a photo of his late wife kept in his auto.

ಬೆಂಗಳೂರು, ಜುಲೈ 13: ಪ್ರೀತಿಯೇ ಹಾಗೆ, ಸುಂದರವಾದ ಭಾವನೆ. ಒಬ್ಬೊಬ್ಬರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ವಿಭಿನ್ನವಾಗಿರುತ್ತದೆ. ಕೆಲವರು ತಮ್ಮ ಸಂಗಾತಿಗೆ ಕಾರು, ಒಡವೆ ಹೀಗೆ ದುಬಾರಿ ಬೆಲೆಯ ಗಿಫ್ಟ್ ಗಳನ್ನು ಕೊಡುತ್ತಾರೆ. ಆದರೆ ಬೆಂಗಳೂರಿನ (Bengaluru) ಆಟೋಚಾಲಕನು ಅಗಲಿದ ಮಡದಿಯನ್ನು ಮನಸ್ಸಿನಲ್ಲಿಟ್ಟು ಆರಾಧಿಸುತ್ತಿದ್ದೇನೆ. ಮಡದಿಯ ಫೋಟೋವನ್ನು ತನ್ನ ಆಟೋದಲ್ಲಿಟ್ಟು ಪೂಜಿಸುತ್ತಿದ್ದಾನೆ. ಈ ಹೃದಯಸ್ಪರ್ಶಿ ಕ್ಷಣದ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

ಆಶೀಶ್ (asishmatthew) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಆಟೋ ಚಾಲಕನೊಬ್ಬ ತನ್ನ ಆಟೋದಲ್ಲಿ ಅಗಲಿದ ಮಡದಿ ಫೋಟೋ ಇಟ್ಟುಕೊಂಡಿದ್ದು, ಹೂವು ಇಟ್ಟು ದಿನ ನಿತ್ಯ  ಪೂಜೆ ಮಾಡುತ್ತಿರುವುದನ್ನು ಕಾಣಬಹುದು. ಆಶಿಶ್ ಬೆಂಗಳೂರಿನ ಈ  ಆಟೋಚಾಲಕನನ್ನು ಮಾತನಾಡಿಸಿದ್ದಾನೆ. ಇದೇ ವೇಳೆ ಆಟೋ ಚಾಲಕ ನನ್ನ ಮಡದಿ, ನಮ್ಮನ್ನೆಲ್ಲಾ ಅಗಲಿ 8 ವರ್ಷ ಆಯ್ತು. ನನಗೆ ಮಗ, ಸೊಸೆ ಆರು ಜನ ಮೊಮ್ಮಕ್ಕಳು ಹಾಗೂ ನನ್ನ ಜತೆಗೆ ದೊಡ್ಡ ಕುಟುಂಬವೇ ಇದೆ. ಆದರೆ ನನ್ನ ಹೆಂಡ್ತಿನಾ ಮರೆಯೋಕೆ ಆಗಲ್ಲ ಎಂದಿದ್ದಾನೆ.

ನನ್ನ ಮಗ ಮನೆಯಲ್ಲಿರು, ಕೆಲಸ ಮಾಡ್ಬೇಡ ಎಂದು ಹೇಳ್ತಾನೆ. ಆದರೆ ಮನೆಯಲ್ಲಿದ್ರೆ ನಂಗೆ ಟೆನ್ಶನ್ ಜಾಸ್ತಿ ಆಗ್ತದೆ. ಹೊರಗಡೆ ಬಂದ್ರೆ ಹೊಸ ಜನರ ಜತೆಗೆ ಮಾತಾಡ್ತಾ ಇದ್ರೆ ಮೈಂಡ್ ಫ್ರೀ ಆಗುತ್ತೆ ಎಂದು ಹೇಳಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ‘ಬೆಂಗಳೂರು ಭಾರತದ ಯುರೋಪ್ ಇದ್ದಂತೆ! ಸಿಲಿಕಾನ್ ಸಿಟಿಗೆ ಫಿದಾ ಆದ ಯುವತಿಯ ವಿಡಿಯೋ ವೈರಲ್

ಈ ವಿಡಿಯೋ 2.7 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಖುಷಿನೂ ಆಯ್ತು, ಬೇಜಾರ್ ಕೂಡ ಆಯ್ತು ಎಂದಿದ್ದಾರೆ. ಇನ್ನೊಬ್ಬರು, ಪರಿಶುದ್ಧ ಪ್ರೀತಿ ಎಷ್ಟು ಚಂದ ಎಂದು ಹೇಳಿದ್ದಾರೆ. ಮತ್ತೊಬ್ಬರು, ಸಾವು ಅವಳನ್ನು ಅವನಿಂದ ದೂರ ಮಾಡಿರಬಹುದು.. ಆದರೆ ಪ್ರೀತಿ ಮಾತ್ರ ಸದಾ ಜೀವಂತ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:00 am, Mon, 13 July 26

Source link

ರಾಮ ಮಂದಿರದ ಕಾಣಿಕೆಗೆ ‘AI’ ಕಾವಲು: ಪ್ರತಿ ರೂಪಾಯಿಯನ್ನೂ ಟ್ರ್ಯಾಕ್ ಮಾಡಲು ಎಸ್‌ಐಟಿ ಮಾಸ್ಟರ್ ಪ್ಲ್ಯಾನ್ – Kannada News | Ram Mandir AI Security: SIT Recommends Advanced Surveillance to Prevent Donation Theft

ಅಯೋಧ್ಯೆ, ಜುಲೈ 13: ಕೇವಲ 40 ದಿನಗಳಲ್ಲಿ 70 ಬಾರಿ ದೇಣಿಗೆ ಹಣವನ್ನು ಲೂಟಿ ಮಾಡಿದ ರಾಮ ಮಂದಿರ(Ram Mandir)ದ ಸಿಬ್ಬಂದಿ ಕೃತ್ಯದಿಂದ ಎಚ್ಚೆತ್ತಿರುವ ವಿಶೇಷ ತನಿಖಾ ತಂಡ, ಭವಿಷ್ಯದಲ್ಲಿ ಇಂತಹ ಕಳ್ಳತನಗಳಿಗೆ ಸಂಪೂರ್ಣ ಬ್ರೇಕ್ ಹಾಕಲು ಜಗತ್ತಿನ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಆಧಾರಿತ ಕಣ್ಗಾವಲು ವ್ಯವಸ್ಥೆಯನ್ನು ತರಲು ಶಿಫಾರಸು ಮಾಡಿದೆ. ಜುಲೈ 15 ರೊಳಗೆ ಉತ್ತರ ಪ್ರದೇಶ ಸರ್ಕಾರಕ್ಕೆ ಸಲ್ಲಿಕೆಯಾಗಲಿರುವ ಎಸ್‌ಐಟಿಯ ಅಂತಿಮ ವರದಿಯಲ್ಲಿ ಈ ಮಹತ್ವದ ತಂತ್ರಜ್ಞಾನದ ಅಳವಡಿಕೆಗೆ ಪ್ರಮುಖ ಆದ್ಯತೆ ನೀಡಲಾಗಿದೆ.

ಏನಿದು ‘ಎಐ’ ಆಧಾರಿತ ಕಾವಲು ತಂತ್ರಜ್ಞಾನ?

ಪ್ರಸ್ತುತ ಇರುವ ಸಾಧಾರಣ ಸಿಸಿಟಿವಿಗಳು ಕೇವಲ ದೃಶ್ಯಗಳನ್ನು ರೆಕಾರ್ಡ್ ಮಾಡುತ್ತವೆ. ಆದರೆ ಪ್ರಸ್ತಾವಿತ ಎಐ ಕಣ್ಗಾವಲು ವ್ಯವಸ್ಥೆಯು ಅತ್ಯಂತ ಹೈಟೆಕ್ ಆಗಿರಲಿದೆ.
ಅನುಮಾನಾಸ್ಪದ ಚಲನವಲನ ಪತ್ತೆ: ದೇಣಿಗೆ ಹಣ ಎಣಿಸುವಾಗ ನೌಕರರು ಕೈಗಳನ್ನು ಬಟ್ಟೆಯೊಳಗೆ ಹಾಕಿಕೊಳ್ಳುವುದು, ನೋಟುಗಳನ್ನು ಅಸಹಜವಾಗಿ ಮಡಿಚುವುದು ಅಥವಾ ಕ್ಯಾಮೆರಾದ ಕಣ್ಣು ತಪ್ಪಿಸಲು ಯತ್ನಿಸಿದರೆ ಈ ಎಐ ಸಾಫ್ಟ್‌ವೇರ್ ತಕ್ಷಣವೇ ‘ರೆಡ್ ಅಲರ್ಟ್’ ಸಂದೇಶವನ್ನು ಭದ್ರತಾ ಕೊಠಡಿಗೆ ರವಾನಿಸುತ್ತದೆ.

ನಗದು ಸ್ಕ್ಯಾನಿಂಗ್: ಕೌಂಟರ್‌ಗೆ ಬರುವ ಪ್ರತಿ ನೋಟು ಹಾಗೂ ಬೆಲೆಬಾಳುವ ಆಭರಣಗಳ ಡಿಜಿಟಲ್ ಟ್ರ್ಯಾಕಿಂಗ್ ಈ ತಂತ್ರಜ್ಞಾನದ ಮೂಲಕ ಸಾಧ್ಯವಾಗಲಿದ್ದು, ಎಣಿಕೆ ಪ್ರಕ್ರಿಯೆಯಲ್ಲಿ ಶೇ.100 ಪಾರದರ್ಶಕತೆ ಬರಲಿದೆ.

ಮತ್ತಷ್ಟು ಒದಿ: ರಾಮ ಮಂದಿರ ದೇಣಿಗೆ ಹಗರಣ:ಬೆಳಗ್ಗೆ ಫೋನ್ ಕಾಲ್, ಮಧ್ಯಾಹ್ನ ಕೋಟಿ ಕಳ್ಳತನ, ಏನೇನೆಲ್ಲಾ ನಡೀತು?

ಬ್ಯಾಂಕ್ ಬದಲಾವಣೆಗೆ ಟ್ರಸ್ಟ್ ಮುಂದು, ಎಸ್‌ಬಿಐ ವಿರುದ್ಧ ಚಂಪತ್ ರೈ ಆಕ್ರೋಶ

ಪ್ರಸ್ತುತ ರಾಮ ಮಂದಿರದ ಎಲ್ಲಾ ಕಾಣಿಕೆ ಹಣವನ್ನು ಅಯೋಧ್ಯೆಯ ನಯಾ ಘಾಟ್‌ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಟಿಯಾ (SBI) ಶಾಖೆಯಲ್ಲಿ ಜಮಾ ಮಾಡಲಾಗುತ್ತಿತ್ತು. ಆದರೆ, ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಕಳ್ಳತನಕ್ಕೆ ಕಾರಣ ಎಂದು ಎಸ್‌ಐಟಿ ಮುಂದೆ ಗಂಭೀರ ಆರೋಪ ಮಾಡಿದ್ದಾರೆ.

ಹಣ ಎಣಿಸುವ ಸಿಬ್ಬಂದಿಗಳಿಗೆ ಜೇಬಿಲ್ಲದ ಸಮವಸ್ತ್ರ ನೀಡುವುದು ಹಾಗೂ ಕಡ್ಡಾಯ ದೈಹಿಕ ತಪಾಸಣೆಯಂತಹ ಕನಿಷ್ಠ ಸುರಕ್ಷತಾ ನಿಯಮಗಳನ್ನು ಜಾರಿಗೆ ತರಲು ಎಸ್‌ಬಿಐ ವಿಫಲವಾಗಿದೆ ಎಂದು ಅವರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರಸ್ಟ್ ಖಜಾಂಚಿ ಗೋವಿಂದ್ ದೇವ್ ಗಿರಿ ಅವರು ಖಾಸಗಿ ವಲಯದ ಪ್ರಮುಖ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಇನ್ಮುಂದೆ ಕಾಣಿಕೆ ಹಣವನ್ನು ಬೇರೆ ಬ್ಯಾಂಕ್‌ಗೆ ವರ್ಗಾಯಿಸಲು ಅಥವಾ ಹಲವು ಬ್ಯಾಂಕುಗಳಲ್ಲಿ ಹಂಚಿಕೆ ಮಾಡಲು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ.

ಆರೋಪಿಗಳ ಇಡೀ ಆಸ್ತಿ ಜಪ್ತಿಗೆ ಮುಹೂರ್ತ

ಈ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಂದಿರದ ನೌಕರರು ಸೇರಿದಂತೆ 8 ಜನರನ್ನು ಬಂಧಿಸಲಾಗಿದೆ. ಅವರಿಂದ ಸುಮಾರು 80 ಲಕ್ಷ ರೂ. ನಗದು ಮತ್ತು ಭಾರಿ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಳ್ಳತನದ ವ್ಯಾಪ್ತಿ ದೊಡ್ಡದಿರುವುದರಿಂದ, ಆರೋಪಿಗಳು ಕದ್ದ ಹಣದಿಂದ ಅಯೋಧ್ಯೆಯ ಹೊರಗೆ ಅಥವಾ ತಮ್ಮ ಸಂಬಂಧಿಕರ ಹೆಸರಿನಲ್ಲಿ ಬೇರೆಲ್ಲೂ ಆಸ್ತಿ ಖರೀದಿಸಿದ್ದಾರೆಯೇ ಎಂದು ಪತ್ತೆಹಚ್ಚಲು ಆದಾಯ ತೆರಿಗೆ ಇಲಾಖೆ , ಬ್ಯಾಂಕುಗಳು ಮತ್ತು ಸಬ್-ರೆಜಿಸ್ಟ್ರಾರ್ ಕಚೇರಿಗಳಿಂದ ಚರ-ಸ್ಥಿರ ಆಸ್ತಿಗಳ ಸಂಪೂರ್ಣ ವಿವರವನ್ನು ಎಸ್‌ಐಟಿ ಪಡೆದುಕೊಂಡಿದೆ. ತಪ್ಪಿತಸ್ಥರ ಇಡೀ ಆಸ್ತಿಯನ್ನು ಜಪ್ತಿ ಮಾಡಲು ಸರ್ಕಾರ ಸಜ್ಜಾಗಿದೆ.

ಜೈಲಿನಲ್ಲಿರುವ ಇಬ್ಬರು ಪ್ರಮುಖ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 7 ದಿನಗಳ ಪೊಲೀಸ್ ಕಸ್ಟಡಿಗೆ ಕೋರಲಾಗಿದ್ದು, ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವು ಜುಲೈ 14 ರಂದು ಇದರ ತೀರ್ಪು ನೀಡಲಿದೆ.

ವಿಐಪಿ ಪಾಸ್ ದಂಧೆಗೂ ಬಿತ್ತು ಬೀಗ

ಮಂದಿರದ ದೇಣಿಗೆ ಕಳ್ಳತನದ ತನಿಖೆ ನಡೆಯುತ್ತಿರುವ ಬೆನ್ನಲ್ಲೇ, ಟ್ರಸ್ಟ್‌ನ ಒಳಗಿದ್ದ ಮತ್ತೊಂದು ದೊಡ್ಡ ದಂಧೆಯನ್ನು ಮುಚ್ಚಿಹಾಕಲಾಗಿದೆ.

ಐಡಿ ಕಾರ್ಡ್‌ಗಳ ರದ್ದು: ಮಂದಿರದ ಮಾಜಿ ಪದಾಧಿಕಾರಿಗಳಾದ ಚಂಪತ್ ರಾಯ್, ಗೋಪಾಲ್ ರಾವ್ ಮತ್ತು ಅನಿಲ್ ಮಿಶ್ರಾ ಅವರ ಹೆಸರಿನಲ್ಲಿದ್ದ ಹಳೆಯ ಗುರುತಿನ ಚೀಟಿಗಳನ್ನು ಟ್ರಸ್ಟ್ ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿದೆ.

ನಕಲಿ ಪಾಸ್‌ಗಳಿಗೆ ಬ್ರೇಕ್: ಈ ಹಿಂದೆ ಇವರ ರುಜುವಾತುಗಳನ್ನು ಬಳಸಿ ವಿಐಪಿ ಪ್ರವೇಶಕ್ಕಾಗಿ ಅಕ್ರಮವಾಗಿ ಇಶ್ಯೂ ಮಾಡಲಾಗುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಿಐಪಿ ಪಾಸ್‌ಗಳು ಇಂದಿನಿಂದ ಸಂಪೂರ್ಣ ಅಮಾನ್ಯವಾಗಿವೆ. ಮಂದಿರದ ಆಡಳಿತವನ್ನು ಸಂಪೂರ್ಣವಾಗಿ ಕಾರ್ಪೊರೇಟ್ ಮಾದರಿಯಲ್ಲಿ ಹೈಟೆಕ್ ಮಾಡಲು ಟ್ರಸ್ಟ್ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ತಿರುಪತಿ ತಿಮ್ಮಪ್ಪನ ಮೊದಲ ಆರತಿಯಲ್ಲಿ ಇನ್ಮುಂದೆ ಕರ್ನಾಟಕದ ಸಚಿವರು, ಶಾಸಕರಿಗೂ ಅವಕಾಶ: ಸಿಎಂ ಮಹತ್ವದ ಘೋಷಣೆ! – Kannada News | Tirupati Temple VIP Darshan: Karnataka CM DK Shivakumar Announces First Aarti Access for Ministers and MLAs

ಬೆಂಗಳೂರು, ಜುಲೈ 13: ಆಂಧ್ರಪ್ರದೇಶದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿದಿನ ನೆರವೇರಿಸಲಾಗುವ ಮೊದಲ ಆರತಿಯಲ್ಲಿ (First Aarti) ಇನ್ನು ಮುಂದೆ ಕರ್ನಾಟಕದ ಸಚಿವರು, ಶಾಸಕರು, ನ್ಯಾಯಾಧೀಶರು ಹಾಗೂ ಹಿರಿಯ ಅಧಿಕಾರಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ಭಾಗವಹಿಸಲು ಶಿಷ್ಟಾಚಾರದ (Protocol) ಅನ್ವಯ ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ.

ಬೆಂಗಳೂರಿನ ಬನಶಂಕರಿಯಲ್ಲಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಈ ಕುರಿತು ರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ ಅಧಿಕೃತ ಪ್ರೋಟೋಕಾಲ್ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.

ಇದುವರೆಗೆ ಕೇವಲ ಮುಖ್ಯಮಂತ್ರಿಗಳಿಗಷ್ಟೇ ಇತ್ತು ಅವಕಾಶ!

ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ಕರ್ನಾಟಕದ ಪರವಾಗಿ ಮೊದಲ ಆರತಿಯನ್ನು ಸಲ್ಲಿಸಲಾಗುತ್ತದೆ. ಈ ಸಂಪ್ರದಾಯಕ್ಕೆ 400 ವರ್ಷಗಳ ಇತಿಹಾಸವಿದೆ. ಹಂಪಿಯ ವಿಜಯನಗರ ಸಾಮ್ರಾಜ್ಯದ ಅರಸರು ಹಾಗೂ ಅವರ ನಂತರ ಮೈಸೂರಿನ ಒಡೆಯರ್ ರಾಜವಂಶದವರು (ವಿಶೇಷವಾಗಿ ಒಂದನೇ ರಾಜ ಒಡೆಯರ್) ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಅಪಾರ ಪ್ರಮಾಣದ ಚಿನ್ನಾಭರಣ, ಭೂಮಿ ಹಾಗೂ ನಿತ್ಯ ಪೂಜಾ ಕೈಂಕರ್ಯಗಳಿಗೆ ಬೇಕಾದ ಸಾಮಗ್ರಿಗಳನ್ನು ದಾನವಾಗಿ ನೀಡುತ್ತಿದ್ದರು. ಮೈಸೂರು ಸಂಸ್ಥಾನವು ದೇವಸ್ಥಾನದ ದೈನಂದಿನ ಪೂಜಾ ವೆಚ್ಚಗಳನ್ನು ಭರಿಸುತ್ತಿದ್ದರಿಂದ ಮತ್ತು ಸಾಮಗ್ರಿಗಳನ್ನು ಪೂರೈಸುತ್ತಿದ್ದರಿಂದ, ಪ್ರತಿದಿನ ಬೆಳಿಗ್ಗೆ ದೇವರಿಗೆ ಬೆಳಗುವ ಪ್ರಥಮ ಆರತಿಯನ್ನು ಸ್ವೀಕರಿಸುವ ಗೌರವ ಮತ್ತು ಹಕ್ಕು ಮೈಸೂರು ರಾಜರಿಗೆ ಲಭಿಸಿತು.

ಸ್ವಾತಂತ್ರ್ಯಾನಂತರ ಈ ರಾಜಪ್ರಭುತ್ವದ ಹಕ್ಕನ್ನು ಕರ್ನಾಟಕ ಸರ್ಕಾರವು ಕಾನೂನುಬದ್ಧವಾಗಿ ಮುಂದುವರಿಸಿಕೊಂಡು ಬಂದಿದೆ. ಶಿಷ್ಟಾಚಾರದ ಪ್ರಕಾರ ಪ್ರತಿ ಮುಂಜಾನೆ ಗರ್ಭಗುಡಿಯ ಮುಂಭಾಗದಲ್ಲಿ (ಕುಲಶೇಖರ ಪಡಿ) ನಿಂತು ಇಡೀ ಕರ್ನಾಟಕದ ಪರವಾಗಿ ಈ ಮೊದಲ ಆರತಿಯನ್ನು ಹಾಗೂ ದೇವರ ಪ್ರಸಾದವನ್ನು ಕರ್ನಾಟಕದ ಮುಖ್ಯಮಂತ್ರಿಗಳು ಸ್ವೀಕರಿಸಬೇಕು. ಇಲ್ಲಿಯವರೆಗೆ ಅವರ ಅನುಪಸ್ಥಿತಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ನೇಮಕಗೊಂಡ ವಿಶೇಷ ಅಧಿಕಾರಿಯೊಬ್ಬರು ಸ್ವೀಕರಿಸುತ್ತಿದ್ದರು.

ನನ್ನ ಅಧಿಕಾರಾವಧಿಯ ಅತಿ ದೊಡ್ಡ ಘೋಷಣೆ ಇದು ಎಂದ ಸಿಎಂ

ಇನ್ನು ಮುಂದೆ ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸಿ ತಿರುಮಲಕ್ಕೆ ಭೇಟಿ ನೀಡುವ ಸಚಿವರು, ಶಾಸಕರು, ಸಂಸದರು, ನ್ಯಾಯಾಧೀಶರು ಹಾಗೂ ಹಿರಿಯ ಐಎಎಸ್-ಐಪಿಎಸ್ ಅಧಿಕಾರಿಗಳಿಗೂ ಈ ಪವಿತ್ರ ಆರತಿ ವೀಕ್ಷಿಸುವ ಮತ್ತು ದೇವರ ದರ್ಶನ ಪಡೆಯುವ ಸೌಲಭ್ಯ ಸಿಗುವಂತೆ ಆದೇಶ ಹೊರಡಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್, ನಮ್ಮ ರಾಜ್ಯದ ಅನೇಕ ಜನಪ್ರತಿನಿಧಿಗಳು ಮತ್ತು ಶಾಸಕರು ತಿರುಪತಿಗೆ ಹೋದಾಗ ಸೂಕ್ತ ದರ್ಶನ ಸಿಗದೆ ಬರಿಗೈಲಿ ವಾಪಸ್ ಬಂದ ಉದಾಹರಣೆಗಳಿವೆ. ಇನ್ಮುಂದೆ ಕರ್ನಾಟಕದ ಪರವಾಗಿ ಸೇವೆ ಸಲ್ಲಿಸುವ ಎಲ್ಲ ಗಣ್ಯರಿಗೂ ತಿಮ್ಮಪ್ಪನ ಎದುರು ನಿಂತು ಪ್ರಾರ್ಥಿಸುವ ಈ ಪರಮ ಸೌಭಾಗ್ಯ ಸಿಗಲಿದೆ. ಇದು ನನ್ನ ಮುಖ್ಯಮಂತ್ರಿ ಅಧಿಕಾರಾವಧಿಯ ಅತ್ಯಂತ ಪ್ರಮುಖ ಮತ್ತು ಮಹತ್ವದ ಘೋಷಣೆಯಾಗಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.

ಇದನ್ನೂ ಓದಿ ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಇದೇ ವೇಳೆ ತಮ್ಮ ವೈಯಕ್ತಿಕ ಭಾವನೆ ಹಂಚಿಕೊಂಡ ಸಿಎಂ, ತಿರುಪತಿ ವೆಂಕಟೇಶ್ವರ ಸ್ವಾಮಿ ತಮ್ಮ ಮನೆದೇವರಾಗಿದ್ದರೂ, ಜೈಲಿನಿಂದ ಬಿಡುಗಡೆಯಾದ ನಂತರ ಇತ್ತೀಚಿನವರೆಗೂ ತಮಗೆ ತಿರುಮಲಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಇತ್ತೀಚಿನ ಭೇಟಿಯ ಸಂದರ್ಭದಲ್ಲಿ ಈ ಮಹತ್ವದ ಆಲೋಚನೆ ಬಂತು ಎಂದು ನೆನಪಿಸಿಕೊಂಡರು. ಅಲ್ಲದೆ, ಹಿಂದೆ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ತಿರುಪತಿಯಲ್ಲಿ ಕರ್ನಾಟಕ ಟ್ರಸ್ಟ್ ರಚಿಸಿ ನನಗೆ ಅದರ ಜವಾಬ್ದಾರಿ ನೀಡಿದ್ದರು. ಆಗ ಈ ಜವಾಬ್ದಾರಿ ಹೊರುವುದರ ಒಳಗೆ ನಮ್ಮ ಆಡಳಿತಾವಧಿ ಮುಗಿದಿತ್ತು. ಈಗ ಸಮಯ ಕೂಡಿಬಂದಿದೆ ಎಂದು ಸಿಎಂ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:28 am, Mon, 13 July 26

Source link

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: ರಾಜ್ಯಾದ್ಯಂತ 72,000 ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳ ಭರ್ತಿ, ಕೇವಲ 2 ವಾರಗಳಲ್ಲಿ 15 ಪ್ರಮುಖ ಅಧಿಸೂಚನೆಗಳು ಪ್ರಕಟ – Kannada News | Mega Recruitment Drive: Karnataka Government Announces 72,000 Job Notifications

ಬೆಂಗಳೂರು, ಜು.13: ಸರ್ಕಾರಿ ಕೆಲಸದ ಆಕಾಂಕ್ಷಿಗಳಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ರಾಜ್ಯದಲ್ಲಿ ಸರ್ಕಾರಿ ಉದ್ಯೋಗಕ್ಕೆ ಹಾಗೂ ಸರಿಯಾಗಿ ನೇಮಕಾತಿ ಮಾಡುತ್ತಿಲ್ಲ ಎಂಬ ಗದ್ದಲದ ನಡುವೆ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 72,000 ಕ್ಕೂ ಅಧಿಕ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಆದೇಶ ಹೊರಡಿಸಿದ ಕೇವಲ ಎರಡು ವಾರಗಳಲ್ಲೇ, ಸರ್ಕಾರವು ವಿವಿಧ ಇಲಾಖೆಗಳ ಭರ್ತಿಗಾಗಿ ಉದ್ಯೋಗ ಅಧಿಸೂಚನೆಗಳನ್ನು (Job Notifications) ಹೊರಡಿಸುವ ಮೂಲಕ ದಾಖಲೆಯ ನೇಮಕಾತಿ ಅಭಿಯಾನಕ್ಕೆ ಮುಂದಾಗಿದೆ. ಕಳೆದ 15 ದಿನಗಳಲ್ಲಿ ಕೇವಲ ಕೆಇಎ (KEA) ಸೇರಿದಂತೆ ವಿವಿಧ ಮಂಡಳಿಗಳಿಂದ ಕನಿಷ್ಠ 15 ಭಿನ್ನ ನೇಮಕಾತಿ ಪ್ರಕಟಣೆಗಳು ಹೊರಬಿದ್ದಿವೆ.

ರಾಜ್ಯ ಸರ್ಕಾರವು ನಿರುದ್ಯೋಗಿ ಯುವಕ-ಯುವತಿಯರನ್ನು ಸೆಳೆಯಲು ಹೊರಡಿಸಿರುವ ಪ್ರಮುಖ ಹುದ್ದೆಗಳ ಅಧಿಸೂಚನೆಯ ಪಟ್ಟಿ ಇಲ್ಲಿದೆ.

ವಸತಿ ಶಾಲೆಗಳ ಶಿಕ್ಷಕರು (320 ಹುದ್ದೆಗಳು): ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ ಮತ್ತು ಇಂದಿರಾ ಗಾಂಧಿ ವಸತಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿನ 320 ಬೋಧಕ ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

ಭೂಮಾಪಕರು / ಲ್ಯಾಂಡ್ ಸರ್ವೇಯರ್ (560 ಹುದ್ದೆಗಳು): ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ ಉಳಿಕೆ ಮೂಲ ವೃಂದದ (RPC) ಅಡಿಯಲ್ಲಿ 560 ಭೂಮಾಪಕರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಗ್ರಾಮ ಆಡಳಿತ ಅಧಿಕಾರಿ – VAO (505 ಹುದ್ದೆಗಳು): ಕಂದಾಯ ಇಲಾಖೆಯು 505 ಕಲ್ಯಾಣ ಕರ್ನಾಟಕ (ಹೈದರಾಬಾದ್-ಕರ್ನಾಟಕ) ಕೋಟಾದ 67 ಹುದ್ದೆಗಳು ಸೇರಿದಂತೆ ಒಟ್ಟು 505 ವಿಎಒ ಹುದ್ದೆಗಳ ಭರ್ತಿಗೆ ಚಾಲನೆ ನೀಡಿದೆ.

ಅಬಕಾರಿ ಇಲಾಖೆ (1,207 ಹುದ್ದೆಗಳು): ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ 1,207 ಅಬಕಾರಿ ಕಾನ್ಸ್‌ಟೇಬಲ್ ಹಾಗೂ ಅಬಕಾರಿ ಉಪನಿರೀಕ್ಷಕರ (ESI) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರಣ್ಯ ವೀಕ್ಷಕರು (750 ಹುದ್ದೆಗಳು): ಅರಣ್ಯ ಇಲಾಖೆಯು ಒಟ್ಟು 750 ಫಾರೆಸ್ಟ್ ಅಬ್ಸರ್ವರ್ ಹುದ್ದೆಗಳ ಭರ್ತಿಗೆ ಮುಂದಾಗಿದೆ.

ಪೊಲೀಸ್ ಕಾನ್ಸ್‌ಟೇಬಲ್ (3,395 ಹುದ್ದೆಗಳು): ಕೆಇಎ ಈಗಾಗಲೇ 3,395 ಕರ್ನಾಟಕ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಿದೆ.

ಚುರುಕಾದ ಪ್ರಕ್ರಿಯೆ: ಉಸ್ತುವಾರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇಮಕ

ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬವಾಗದಂತೆ ತಡೆಯಲು ಸರ್ಕಾರವು ಹಿರಿಯ ಐಎಎಸ್ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದೆ. 17 ಪ್ರಮುಖ ಇಲಾಖೆಗಳ ನೇಮಕಾತಿಯನ್ನು ತ್ವರಿತಗೊಳಿಸುವ ಹೊಣೆಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ಉಮಾ ಮಹಾದೇವನ್ ಅವರಿಗೆ ವಹಿಸಲಾಗಿದೆ. ಮತ್ತೊಬ್ಬ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಇನ್ನುಳಿದ 34 ಇಲಾಖೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ನಡೆಸಿ, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಆದೇಶಿಸಲಾಗಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ಉದ್ಯೋಗವಕಾಶ; 450 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ 

ವಯೋಮಿತಿ ಸಡಿಲಿಕೆ:

ಮೀಸಲಾತಿ ಮತ್ತು ನ್ಯಾಯಾಲಯಗಳಲ್ಲಿನ ಕಾನೂನು ಹೋರಾಟಗಳಿಂದಾಗಿ 2023 ರಿಂದ ರಾಜ್ಯದಲ್ಲಿ ಸರ್ಕಾರಿ ನೇಮಕಾತಿಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಅಲ್ಲದೆ ಕೋವಿಡ್-19 ಕಾರಣದಿಂದಾಗಿ 2019 ರಿಂದ ಉಂಟಾದ ವಿಳಂಬವನ್ನು ಸರಿದೂಗಿಸಲು ಸರ್ಕಾರವು ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ (Age Relaxation) ನೀಡಿದೆ. ಪ್ರಸ್ತುತ ವಿವಿಧ ಇಲಾಖೆಗಳಲ್ಲಿ ಸುಮಾರು 2.5 ಲಕ್ಷ ಹುದ್ದೆಗಳು ಖಾಲಿ ಇವೆ.

ಈ ಬಗ್ಗೆ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಪ್ರತಿಕ್ರಿಯಿಸಿ, “2023ರ ಜಂಟಿ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ಹಾಗೂ ಮೀಸಲಾತಿ ಗೊಂದಲಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಸರ್ಕಾರದ ಅಧಿಕಾರಾವಧಿ ಮುಗಿಯಲು ಕೇವಲ 2 ವರ್ಷ ಬಾಕಿ ಇರುವುದರಿಂದ ಹಾಗೂ ನಿರುದ್ಯೋಗಿಗಳಿಂದ ತೀವ್ರ ಪ್ರತಿಭಟನೆಗಳು ವ್ಯಕ್ತವಾಗುತ್ತಿರುವುದರಿಂದ ಈ ನೇಮಕಾತಿ ಪ್ರಕ್ರಿಯೆಗೆ ವೇಗ ನೀಡಲಾಗಿದೆ,” ಎಂದು ಒಪ್ಪಿಕೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಿಂಗಳಿಗೆ ಕೇವಲ 5,000 ರೂ ಹೂಡಿಕೆಯಿಂದ 21 ವರ್ಷದಲ್ಲಿ 1 ಕೋಟಿ ಸಂಪತ್ತು ಸೃಷ್ಟಿ ಸಾಧ್ಯ – Kannada News | Monthly SIP of Rs 5,000 and 5pc step up, know how many years it take to get Rs 1 crore wealth

ಹಣದ ಸಾಂದರ್ಭಿಕ ಚಿತ್ರImage Credit source: Getty Images

ಸಂಪತ್ತು ಗಳಿಸುವ ಇರುವ ಸಿದ್ಧ ಸೂತ್ರವೆಂದರೆ ಹಣ ಗಳಿಕೆ, ಹಣ ಉಳಿಸುವಿಕೆ ಮತ್ತು ಹಣ ಹೂಡಿಕೆ. ಈ ಮೂರೂ ಸೇರಿದರೆ ಮಾತ್ರ ಹಣವಂತರಾಗಲು ಸಾಧ್ಯ. ಹಣ ಎಷ್ಟೇ ಉಳಿಸಿದರೂ ಆ ಹಣವನ್ನು ಉತ್ತಮ ಆದಾಯ ತರಬಲ್ಲ ಕಡೆ ಹೂಡಿಕೆ ಮಾಡುವುದು ಬಹಳ ಮುಖ್ಯ. ಹಲವು ಹೂಡಿಕೆ ಮಾರ್ಗಗಳಲ್ಲಿ ಮ್ಯೂಚುವಲ್ ಫಂಡ್ ಎಸ್​ಐಪಿಯೂ ಒಂದು. ದೀರ್ಘಾವಧಿಯಲ್ಲಿ ಮ್ಯೂಚುವಲ್ ಫಂಡ್​ಗಳು ಉತ್ತಮ ಆದಾಯ ನೀಡಬಲ್ಲುವು. ವಾರ್ಷಿಕ ಶೇ. 8ರಿಂದ 14ರಷ್ಟು ರಿಟರ್ನ್ಸ್ ನಿರೀಕ್ಷಿಸಬಹುದು. ನೀವು ಪ್ರತಿ ತಿಂಗಳು ನಿಯಮಿತವಾಗಿ ಎಸ್​ಐಪಿ (SIP) ಮಾಡುವ ಮೂಲಕ 1 ಕೋಟಿ ರೂ. ಗಳಿಸುವ ಗುರಿ ಹೊಂದಿರುವುದು ಉತ್ತಮ ಆರ್ಥಿಕ ಯೋಜನೆಯಾಗಿದೆ. 10% ವಾರ್ಷಿಕ ಆದಾಯ ಮತ್ತು 5% ಸ್ಟೆಪ್-ಅಪ್ (ಪ್ರತಿ ವರ್ಷ ಹೂಡಿಕೆ ಮೊತ್ತ ಹೆಚ್ಚಿಸುವುದು) ಅನ್ವಯಿಸಿದರೆ ಗುರಿ ತಲುಪಲು ಎಷ್ಟು ವರ್ಷ ಬೇಕು ಮತ್ತು ಭಾರತದಲ್ಲಿ ಮ್ಯೂಚುವಲ್ ಫಂಡ್‌ಗಳ ಇತಿಹಾಸ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

₹1 ಕೋಟಿ ತಲುಪಲು ಎಷ್ಟು ವರ್ಷ ಬೇಕು?

ನೀವು ಆರಂಭದಲ್ಲಿ ತಿಂಗಳಿಗೆ ₹5,000 ಹೂಡಿಕೆ ಮಾಡಿ, ಪ್ರತಿ ವರ್ಷ ಆ ಮೊತ್ತವನ್ನು 5% ಹೆಚ್ಚಿಸುತ್ತಾ (Step-up) ಹೋದರೆ, ವಾರ್ಷಿಕ 10% ಆದಾಯದ (Returns) ಲೆಕ್ಕಾಚಾರದಲ್ಲಿ ನಿಮಗೆ 1 ಕೋಟಿ ರೂ ಗಳಿಸಲು ಅಂದಾಜು 23 ರಿಂದ 24 ವರ್ಷಗಳು ಬೇಕಾಗುತ್ತವೆ.

ಸ್ಟೆಪಪ್ ಹೂಡಿಕೆ ಹೀಗಿರುತ್ತೆ: SIP ಆರಂಭಗೊಂಡ ವರ್ಷದಲ್ಲಿ ತಿಂಗಳಿಗೆ ₹5,000 ಹೂಡಿಕೆ ಮಾಡುತ್ತೀರಿ. ಮೊದಲ ವರ್ಷ ಒಟ್ಟು ಹೂಡಿಕೆ ₹60,000 ಮಾಡುತ್ತೀರಿ. ಎರಡನೇ ವರ್ಷ ಶೇ. 5 ಸ್ಟೆಪಪ್ ಮಾಡುತ್ತೀರಿ. ಅಂದರೆ, ಶೇ. 5ರಷ್ಟು ಹೂಡಿಕೆ ಹೆಚ್ಚಿಸುತ್ತೀರಿ. ಅಂದರೆ ತಿಂಗಳಿಗೆ ₹5,250 ನಂತೆ ಹೂಡಿಕೆ ಮಾಡುತ್ತೀರಿ. ಮೂರನೇ ವರ್ಷದಲ್ಲಿ ಶೇ. 5 ಸ್ಟೆಪಪ್ ಅನ್ವಯಿಸಿದರೆ ನಿಮ್ಮ ತಿಂಗಳ ಹೂಡಿಕೆ ₹5,512.50 ಆಗುತ್ತದೆ. ಹೀಗೆ, ವರ್ಷದಿಂದ ವರ್ಷಕ್ಕೆ ನೀವು ಮಾಡುವ ಹೂಡಿಕೆಯನ್ನು ಹೆಚ್ಚಿಸುತ್ತಾ ಹೋಗಬೇಕು.

ಇದೇ ರೀತಿ ಹೂಡಿಕೆ ಮುಂದುವರಿಸುತ್ತಾ ಹೋದಲ್ಲಿ, ಮತ್ತು ಆ ಎಸ್​ಐಪಿ ಫಂಡ್ ವಾರ್ಷಿಕ ಶೇ. 10ರ ದರದಲ್ಲಿ ಬೆಳವಣಿಗೆ ಹೊಂದುತ್ತಿದ್ದಲ್ಲಿ, 23 ವರ್ಷದಲ್ಲಿ ನಿಮ್ಮ ಹೂಡಿಕೆಯ ಮೌಲ್ಯ 91 ಲಕ್ಷ ದಾಟಿರುತ್ತದೆ. 24 ವರ್ಷದ ಕೊನೆಯಲ್ಲಿ ನಿಮ್ಮ ಆ ಹೂಡಿಕೆ ಸಂಪತ್ತು ಒಂದು ಕೋಟಿ ರೂ ದಾಟಿ ಹೋಗುತ್ತದೆ.

ಇದನ್ನೂ ಓದಿ: ಮಲ್ಟಿ ಅಸೆಟ್ ಫಂಡ್​ಗಳಿಗೆ ಹೂಡಿಕೆ ಒಳಹರಿವು ಶೇ. 22 ಹೆಚ್ಚಳ; ಏನಿದು ಈ ರೀತಿಯ ಫಂಡ್?

ಚಕ್ರಬಡ್ಡಿಯ ಮಜಾ ಇದು…

ಹೂಡಿಕೆ ಬೆಳವಣಿಗೆಯಲ್ಲಿ ಮಜ ತರುವ ಅಂಶವೆಂದರೆ ಅದು ಚಕ್ರ ಬಡ್ಡಿಯದ್ದು. ನಿಮ್ಮ ಹೂಡಿಕೆ ಅವಧಿ ದೀರ್ಘವಾದಷ್ಟೂ ಚಕ್ರಬಡ್ಡಿಯಿಂದಾಗಿ ಸಂಪತ್ತು ಬಹಳ ವೇಗವಾಗಿ ಹೆಚ್ಚುತ್ತಾ ಹೋಗುತ್ತದೆ. ಚಕ್ರಬಡ್ಡಿಯ ನಿಜವಾದ ತಮಾಷೆ ಕೊನೆಯ ವರ್ಷಗಳಲ್ಲಿ ತಿಳಿಯುತ್ತದೆ. 20ನೇ ವರ್ಷದಲ್ಲಿ ₹65 ಲಕ್ಷ ಇರುವ ನಿಮ್ಮ ನಿಧಿ, ಕೇವಲ ಮುಂದಿನ 4 ವರ್ಷಗಳಲ್ಲಿ ₹1 ಕೋಟಿಯ ಗಡಿ ದಾಟುತ್ತದೆ!

ಒಂದು ವೇಳೆ ನಿಮಗೆ 12% ಆದಾಯ ಬಂದರೆ ಏನಾಗುತ್ತದೆ?

ಮಾರುಕಟ್ಟೆಯ ಇತಿಹಾಸದಂತೆ ಒಂದು ವೇಳೆ ನಿಮಗೆ 10% ಬದಲಿಗೆ **12% ವಾರ್ಷಿಕ ಆದಾಯ ಸಿಕ್ಕರೆ, ಅದೇ ₹5,000 ಹಾಗೂ 5% ಸ್ಟೆಪ್-ಅಪ್ ಹೂಡಿಕೆಯೊಂದಿಗೆ ನೀವು ಕೇವಲ 21 ವರ್ಷಗಳಲ್ಲಿಯೇ ₹1 ಕೋಟಿ ಗುರಿಯನ್ನು ತಲುಪಬಹುದು (ಅಂದರೆ 3 ವರ್ಷ ಮುಂಚಿತವಾಗಿ!).

ಕಳೆದ 20-30 ವರ್ಷಗಳಲ್ಲಿ ಮ್ಯೂಚುವಲ್ ಫಂಡ್‌ಗಳು ನೀಡಿರುವ ಸರಾಸರಿ ಆದಾಯ ಎಷ್ಟು?

ಭಾರತೀಯ ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್‌ಗಳ ಕಳೆದ 20 ರಿಂದ 30 ವರ್ಷಗಳ ಇತಿಹಾಸವನ್ನು ಗಮನಿಸಿದರೆ, ದೀರ್ಘಾವಧಿಯಲ್ಲಿ ಅವು ಹೂಡಿಕೆದಾರರಿಗೆ ಅತ್ಯುತ್ತಮ ಆದಾಯವನ್ನು ನೀಡಿವೆ. ನೀವು ಅಂದುಕೊಂಡಿರುವ 10% ಆದಾಯಕ್ಕಿಂತ ಹೆಚ್ಚಿನ ರಿಟರ್ನ್ಸ್ ಅನ್ನೇ ಇವು ಐತಿಹಾಸಿಕವಾಗಿ ದಾಖಲಿಸಿವೆ.

  • ಇಕ್ವಿಟಿ ಮ್ಯೂಚುವಲ್ ಫಂಡ್‌ಗಳು (Equity Funds): ಕಳೆದ 20-30 ವರ್ಷಗಳಲ್ಲಿ ಭಾರತದ ವೈವಿಧ್ಯಮಯ ಇಕ್ವಿಟಿ ಫಂಡ್‌ಗಳು (Diversified Equity Funds) ಸರಾಸರಿ 12% ರಿಂದ 15% ವಾರ್ಷಿಕ ಆದಾಯವನ್ನು (CAGR/XIRR) ನೀಡಿವೆ.
  • ಲಾರ್ಜ್ ಕ್ಯಾಪ್ ಫಂಡ್‌ಗಳು (Large Cap) / ನಿಫ್ಟಿ 50 (Nifty 50): ಭಾರತದ ಪ್ರಮುಖ 50 ಕಂಪನಿಗಳ ಸೂಚ್ಯಂಕವಾದ ‘ನಿಫ್ಟಿ 50’ ಕಳೆದ 20 ವರ್ಷಗಳಲ್ಲಿ ಸರಾಸರಿ 11% ರಿಂದ 13% ವಾರ್ಷಿಕ ಆದಾಯ ನೀಡಿದೆ.
  • ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಫಂಡ್‌ಗಳು (Mid & Small Cap): ಇವುಗಳಲ್ಲಿ ರಿಸ್ಕ್ ಹೆಚ್ಚಿರುತ್ತದೆಯಾದರೂ, ಕಳೆದ 15-20 ವರ್ಷಗಳಲ್ಲಿ ಇವು ವಾರ್ಷಿಕ 14% ರಿಂದ 18% ಕ್ಕಿಂತ ಹೆಚ್ಚು ಆದಾಯ ತಂದುಕೊಟ್ಟಿವೆ.

ಇದನ್ನೂ ಓದಿ: ರೈಲ್ವೆ ಟಿಕೆಟ್ ನಿಯಮಗಳ ಪರಿಷ್ಕರಣೆ; ಟಿಕೆಟ್​ನ ವಾಟ್ಸಾಪ್ ಸ್ಕ್ರೀನ್​ಶಾಟ್, ಫೋಟೋ, ಪಿಡಿಎಫ್ ಕಾಪಿಗಳು ಮಾನ್ಯವಾ?

ಹೂಡಿಕೆದಾರರಿಗೆ ಪ್ರಮುಖ ಸಲಹೆಗಳು

  • ಶಿಸ್ತುಬದ್ಧ ಹೂಡಿಕೆ: ಮಾರುಕಟ್ಟೆಯ ಏರಿಳಿತಗಳ ನಡುವೆಯೂ ನಿಮ್ಮ ಎಸ್‌ಐಪಿ (SIP) ಅನ್ನು ಅರ್ಧಕ್ಕೆ ನಿಲ್ಲಿಸಬೇಡಿ.
  • ಹಣದುಬ್ಬರ (Inflation): ಇಂದು 1 ಕೋಟಿ ರೂಪಾಯಿಗೆ ಇರುವ ಮೌಲ್ಯವು 24 ವರ್ಷಗಳ ನಂತರ ಇರುವುದಿಲ್ಲ. ಹಾಗಾಗಿ ಸಾಧ್ಯವಾದರೆ ನಿಮ್ಮ 5% ಸ್ಟೆಪ್-ಅಪ್ ಅನ್ನು 10% ಗೆ ಹೆಚ್ಚಿಸಿದರೆ ಇನ್ನೂ ಬೇಗನೆ ದೊಡ್ಡ ನಿಧಿ ಸೃಷ್ಟಿಸಬಹುದು.
  • ಡೈರೆಕ್ಟ್ ಪ್ಲಾನ್ (Direct Plans): ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ‘ಡೈರೆಕ್ಟ್ ಪ್ಲಾನ್’ ಆಯ್ದುಕೊಳ್ಳಿ, ಇದರಿಂದ ಕಮಿಷನ್ ವೆಚ್ಚ ಉಳಿದು ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭ ಸಿಗುತ್ತದೆ.

(ಗಮನಿಸಿ: ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಐತಿಹಾಸಿಕ ಆದಾಯವು ಭವಿಷ್ಯದ ಆದಾಯದ ಭರವಸೆಯಲ್ಲ. ಹೂಡಿಕೆ ಮಾಡುವ ಮುನ್ನ ತಜ್ಞರ ಆಲೋಚನೆ ಪಡೆಯುವುದು ಸೂಕ್ತ.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತುಗೊಳಿಸಿ ರಾಜ್ಯಪಾಲರಿಂದ ಆದೇಶ: ತನಿಖೆಗೆ ಶಿಫಾರಸು – Kannada News | KPSC Chairman Shivashankarappa Sahukar Suspended by Karnataka Governor Amid Nepotism Allegations

ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹಾಗೂ ಅವರ ಆದೇಶದ ಕುರಿತ ಲೋಕಭವನದ ಪ್ರಕಟಣೆಯ ಪ್ರತಿImage Credit source: tv9

ಬೆಂಗಳೂರು, ಜುಲೈ 13: ಕೆಪಿಎಸ್‌ಸಿ (KPSC) ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ (Shivashankarappa Sahukar) ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಶಿವಶಂಕರಪ್ಪ ಸಾಹುಕಾರ್ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಿ ಸೋಮವಾರ ಬೆಳಿಗ್ಗೆ ಆದೇಶ ಹೊರಡಿಸಲಾಗಿದೆ. ಅಲ್ಲದೆ, ಶಿವಶಂಕರಪ್ಪ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಲು ಶಿಫಾರಸು ಮಾಡಲಾಗಿದೆ.

ಇದರ ಜೊತೆಗೆ, ಪ್ರಕರಣವನ್ನು ಸುಪ್ರೀಂ ಕೋರ್ಟ್‌ಗೆ ಉಲ್ಲೇಖಿಸುವ ಸಂಬಂಧ ರಾಷ್ಟ್ರಪತಿಗಳಿಗೆ ರಾಜ್ಯಪಾಲರು ಶಿಫಾರಸು ಮಾಡಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ಅಥವಾ ಮುಂದಿನ ಆದೇಶ ಹೊರಬೀಳುವವರೆಗೆ ಕೆಪಿಎಸ್‌ಸಿಯ ಹಿರಿಯ ಸದಸ್ಯರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಶಿವಶಂಕರಪ್ಪ ಸಾಹುಕಾರ್ ವಿರುದ್ಧದ ಆರೋಪವೇನು?

ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಸ್ವಜನಪಕ್ಷಪಾತ ಸೇರಿದಂತೆ ವಿವಿಧ ಆರೋಪಗಳು ಕೇಳಿಬಂದಿದ್ದವು. ಈ ಆರೋಪಗಳ ಕುರಿತು ಸಲ್ಲಿಕೆಯಾಗಿದ್ದ ದೂರಿನ ಆಧಾರದ ಮೇಲೆ ರಾಜ್ಯಪಾಲರು ಈ ಕ್ರಮ ಕೈಗೊಂಡಿದ್ದಾರೆ. ಇತ್ತೀಚೆಗೆ ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿ ಸುಮಾ ಎಸ್. ಸಾಹುಕಾರ್ ವಿರುದ್ಧವೂ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ವೇಳೆ ನಕಲಿ ಆದಾಯ ಮತ್ತು ಜಾತಿ ಪ್ರಮಾಣಪತ್ರಗಳನ್ನು ಸಲ್ಲಿಸಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದ್ದು, ದಾಖಲೆಗಳ ಪರಿಶೀಲನೆ ವೇಳೆ ಅಕ್ರಮ ಬೆಳಕಿಗೆ ಬಂದಿತ್ತು.

ರಾಜ್ಯಪಾಲರ ಆದೇಶದಲ್ಲೇನಿದೆ?

‘ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿರುವ ಆರೋಪಗಳು ಕೇಳಿಬಂದಿವೆ. ವಿಶೇಷವಾಗಿ ತಮ್ಮ ಪುತ್ರಿ ಸುಮಾ ಎಸ್. ಸಾಹುಕಾರ್ ಅವರಿಗೆ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆ ಪಡೆಯಲು ಅನುಕೂಲವಾಗುವಂತೆ ಸುಳ್ಳು ಆದಾಯ ಮತ್ತು ಜಾತಿ ಪ್ರಮಾಣಪತ್ರಗಳನ್ನು ಬಳಸಿಕೊಂಡು ಮೀಸಲಾತಿಯ ಲಾಭ ಪಡೆಯಲು ಅವಕಾಶ ಮಾಡಿಕೊಟ್ಟಿರುವ ಆರೋಪವೂ ಉಲ್ಲೇಖಿಸಲಾಗಿದೆ. ಈ ಆರೋಪಗಳು ಗಂಭೀರ ಸ್ವರೂಪದ್ದಾಗಿರುವ ಹಿನ್ನೆಲೆಯಲ್ಲಿ ಅವುಗಳ ಬಗ್ಗೆ ಸಮಗ್ರ ತನಿಖೆ ನಡೆಸುವುದು ಅಗತ್ಯ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ. ಸಂವಿಧಾನದ 317(1) ನೇ ವಿಧಿಯ ಅನ್ವಯ ಪ್ರಕರಣವನ್ನು ರಾಷ್ಟ್ರಪತಿಗಳಿಗೆ ಉಲ್ಲೇಖಿಸಲು ಶಿಫಾರಸು ಮಾಡಲಾಗಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಶಿವಶಂಕರಪ್ಪ ಸಾಹುಕಾರ್ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ’ ಎಂದು ರಾಜ್ಯಪಾಲರ ಆದೇಶದ ಕುರಿತು ಲೋಕಭವನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಕೆಪಿಎಸ್​ಸಿ ಚೀಫ್ ಶಿವಶಂಕರಪ್ಪ ಪುತ್ರಿ ವಿರುದ್ಧ FIR ದಾಖಲು!

ಕೆಪಿಎಸ್‌ಸಿಯ ಕಾರ್ಯನಿರ್ವಹಣೆ, ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆ ಹಾಗೂ ಆರೋಪಗಳ ತನಿಖೆ ಯಾವ ಹಂತಕ್ಕೆ ಸಾಗಲಿದೆ ಎಂಬುದರ ಮೇಲೆ ಈಗ ಎಲ್ಲರ ಗಮನ ನೆಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:22 am, Mon, 13 July 26

Source link

ಜ್ಞಾನವಾಪಿ, ಮಥುರಾ, ಸಂಭಾಲ್ ಬಿಕ್ಕಟ್ಟಿಗೆ ಕೋರ್ಟ್ ಹೊರಗೆ ಸಂಧಾನ, ಆಗಸ್ಟ್‌ನಲ್ಲಿ ಸುಪ್ರೀಂ ಅಂಗಳದಲ್ಲೇ ಲೋಕ ಅದಾಲತ್ – Kannada News | Supreme Court Lok Adalat: Resolving Gyanvapi, Mathura, Sambhal Religious Disputes

ನವದೆಹಲಿ, ಜುಲೈ 13: ಭಾರತದ ಸಾಮಾಜಿಕ ಮತ್ತು ರಾಜಕೀಯ ವಲಯಗಳಲ್ಲಿ ದಶಕಗಳಿಂದ ತೀವ್ರ ಸಂಚಲನ ಮೂಡಿಸುತ್ತಿರುವ ಮೂರು ಅತ್ಯಂತ ಸೂಕ್ಷ್ಮ ಧಾರ್ಮಿಕ ಜಾಗದ ವಿವಾದಗಳಿಗೆ ಕೋರ್ಟ್​ ಕೊಠಡಿಯ ಹೊರಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಸುಪ್ರೀಂಕೋರ್ಟ್(Supreme Court)​ ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ವಾರಾಣಸಿಯ ಜ್ಞಾನವಾಪಿ ಮಸೀದಿ ಪ್ರಕರಣ, ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ಮತ್ತು ಸಂಭಾಲ್‌ನ ಹರಿಹರ ಮಂದಿರ-ಜಾಮಾ ಮಸೀದಿ ವಿವಾದಗಳನ್ನು ಸುಪ್ರೀಂ ಕೋರ್ಟ್ ಆವರಣದಲ್ಲಿ ನಡೆಯಲಿರುವ ವಿಶೇಷ ‘ಲೋಕ ಅದಾಲತ್’ ಮೂಲಕ ಇತ್ಯರ್ಥಪಡಿಸಲು ಉಲ್ಲೇಖಿಸಲಾಗಿದೆ.

ವರ್ಷಗಟ್ಟಲೆ ಎಳೆಯುವ ಕಾನೂನು ಹೋರಾಟದ ಬದಲಿಗೆ ಸೌಹಾರ್ದಯುತ ಸಂವಾದದ ಮೂಲಕ ಒಮ್ಮತದ ತೀರ್ಮಾನಕ್ಕೆ ಬರುವ ಪ್ರಯತ್ನವಾಗಿ “ಸಮಾಧಾನ್ ಸಮರೋಹ್” ಎಂಬ ಶೀರ್ಷಿಕೆಯಡಿ ಆಗಸ್ಟ್ 21 ರಿಂದ 23 ರವರೆಗೆ ಈ ವಿಶೇಷ ಸಂಧಾನ ಪ್ರಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಮೂರೂ ಪ್ರಕರಣಗಳಿಗೆ ಸಂಬಂಧಿಸಿದ ಹಿಂದೂ ಮತ್ತು ಮುಸ್ಲಿಂ ಎರಡೂ ಜಂಟಿ ಪಕ್ಷಗಳಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದೆ.

ತೆರೆಮರೆಯಲ್ಲಿ ಸಾಗುತ್ತಿದೆ ಪೂರ್ವ ಸಂಧಾನ ಪ್ರಕ್ರಿಯೆ

ಲೋಕ ಅದಾಲತ್‌ನಲ್ಲಿ ಅಂತಿಮ ತೀರ್ಮಾನಕ್ಕೆ ಬರುವ ಮುನ್ನವೇ ಕೆಳ ನ್ಯಾಯಾಲಯಗಳ ಮಟ್ಟದಲ್ಲಿ ಕಳೆದ ಏಪ್ರಿಲ್ 21 ರಿಂದಲೇ ತಜ್ಞರ ನೇತೃತ್ವದಲ್ಲಿ ಮಧ್ಯಸ್ಥಿಕೆ ಪ್ರಯತ್ನಗಳು ನಡೆಯುತ್ತಿವೆ.

ಮುಂದಿನ ದಿನಗಳ ವೇಳಾಪಟ್ಟಿ: ಆಗಸ್ಟ್‌ನಲ್ಲಿ ನಡೆಯುವ ಮುಖ್ಯ ಕಾರ್ಯಕ್ರಮಕ್ಕೂ ಮುನ್ನ, ಜುಲೈ 14 ರಂದು ವಾರಾಣಸಿಯಲ್ಲಿ ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಪೂರ್ವ-ಸಂಧಾನ ವಿಚಾರಣೆ’ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.

ಮಥುರಾ ಪ್ರಕರಣದ ಹಿನ್ನಡೆ: ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಜುಲೈ 5 ರಂದು ನಡೆದಿದ್ದ ಸಂಧಾನದ ಮೊದಲ ಪ್ರಯತ್ನಗಳು ವಿಫಲವಾಗಿದ್ದವು. ಇದೇ ಕಾರಣಕ್ಕೆ ಸುಪ್ರೀಂ ಕೋರ್ಟ್ ಈಗ ಇದನ್ನು ದೇಶದ ಅತ್ಯುನ್ನತ ಲೋಕ ಅದಾಲತ್ ಉಪಕ್ರಮದ ಅಡಿಯಲ್ಲಿ ತಂದು ಮತ್ತೊಂದು ಗಂಭೀರ ಅವಕಾಶ ನೀಡಿದೆ.

ಜ್ಞಾನವಾಪಿ ಮಸೀದಿ ಪ್ರಕರಣ ( ವಾರಾಣಸಿ)

ಮೊಘಲರ ಆಡಳಿತಾವಧಿಯಲ್ಲಿ ಮೂಲ ಕಾಶಿ ವಿಶ್ವನಾಥ ದೇವಾಲಯದ ಒಂದು ಭಾಗವನ್ನು ಕೆಡವಿ ಈ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದು ಹಿಂದೂ ಅರ್ಜಿದಾರರ ವಾದ. ಮಸೀದಿ ಸಂಕೀರ್ಣದ ಒಳಗೆ ಪೂಜೆ ಮಾಡುವ ಹಕ್ಕನ್ನು ನೀಡಬೇಕೆಂದು ಹಿಂದೂಗಳು ಕೋರಿದ್ದಾರೆ. ಆದರೆ, ಮುಸ್ಲಿಂ ಪರ ಪ್ರತಿನಿಧಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು, 1991ರ ಪೂಜಾ ಸ್ಥಳಗಳ ಕಾಯ್ದೆಯ ಪ್ರಕಾರ ಆಗಸ್ಟ್ 15, 1947 ರಲ್ಲಿದ್ದ ಧಾರ್ಮಿಕ ಸ್ವರೂಪವನ್ನು ಬದಲಾಯಿಸುವಂತಿಲ್ಲ, ಹೀಗಾಗಿ ಈ ಅರ್ಜಿಗಳು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎಂದು ವಿರೋಧಿಸುತ್ತಿದೆ.

ಶ್ರೀ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದ (ಮಥುರಾ):

ಮೊಘಲ್ ದೊರೆ ಔರಂಗಜೇಬನ ಆದೇಶದ ಮೇರೆಗೆ ಮಥುರಾದಲ್ಲಿ ಶ್ರೀಕೃಷ್ಣನ ಜನ್ಮಸ್ಥಳದಲ್ಲಿದ್ದ ಪ್ರಾಚೀನ ದೇವಸ್ಥಾನವನ್ನು ಧ್ವಂಸಗೊಳಿಸಿ ಈ ಶಾಹಿ ಈದ್ಗಾ ಮಸೀದಿಯನ್ನು ಕಟ್ಟಲಾಗಿದೆ ಎಂದು ಹಿಂದೂ ದಾವೆದಾರರು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಜಾಗವನ್ನು ಮರುಪಡೆಯಲು ಹಲವು ಮೊಕದ್ದಮೆಗಳು ದಾಖಲಾಗಿವೆ. ಮಸೀದಿ ಸಮಿತಿಯು ಇಲ್ಲೂ ಸಹ 1991ರ ಕಾಯ್ದೆಯನ್ನೇ ಅಸ್ತ್ರವಾಗಿಸಿಕೊಂಡು ತನ್ನ ಹಕ್ಕನ್ನು ಪ್ರತಿಪಾದಿಸುತ್ತಿದೆ.

ಶಾಹಿ ಜಾಮಾ ಮಸೀದಿ ವಿವಾದ (ಸಂಭಾಲ್)

ಉತ್ತರ ಪ್ರದೇಶದ ಸಂಭಾಲ್‌ನಲ್ಲಿರುವ ಮೊಘಲ್ ಯುಗದ ಶಾಹಿ ಜಾಮಾ ಮಸೀದಿಯು ಮೂಲತಃ ‘ಹರಿಹರ ದೇವಸ್ಥಾನ’ ಆಗಿತ್ತು ಎಂಬ ಅರ್ಜಿಯ ಆಧಾರದ ಮೇಲೆ ಸಿವಿಲ್ ನ್ಯಾಯಾಲಯವು ಜಾಗದ ಸಮೀಕ್ಷೆಗೆ  ಆದೇಶಿಸಿತ್ತು. ಈ ನ್ಯಾಯಾಲಯದ ಆದೇಶದ ಮೇರೆಗೆ ಕಳೆದ ವರ್ಷದ ನವೆಂಬರ್‌ನಲ್ಲಿ ಸಮೀಕ್ಷೆ ನಡೆಸುವಾಗ ಸಂಭಾಲ್‌ನಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದು, ಸಾವು-ನೋವುಗಳು ಸಂಭವಿಸಿದ್ದವು.

ಏನಿದು 1991ರ ಕಾಯ್ದೆ? ಲೋಕ ಅದಾಲತ್ ಮಹತ್ವವೇನು?

ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ, 1991: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನವಾದ ಆಗಸ್ಟ್ 15, 1947 ರಂದು ದೇಶದ ಯಾವುದೇ ಆರಾಧನಾ ಮಂದಿರಗಳು (ದೇವಸ್ಥಾನ, ಮಸೀದಿ, ಚರ್ಚ್ ಇತ್ಯಾದಿ) ಯಾವ ಧಾರ್ಮಿಕ ಸ್ವರೂಪದಲ್ಲಿದ್ದವೋ, ಅದನ್ನು ಹಾಗೆಯೇ ಮುಂದುವರಿಸಬೇಕು ಮತ್ತು ಅದರ ಸ್ವರೂಪವನ್ನು ಬದಲಾಯಿಸಲು ಯಾವುದೇ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವಂತಿಲ್ಲ ಎಂದು ಈ ಕಾಯ್ದೆ ಹೇಳುತ್ತದೆ (ಅಯೋಧ್ಯೆಯ ಬಾಬ್ರಿ ಮಸೀದಿ ಪ್ರಕರಣಕ್ಕೆ ಮಾತ್ರ ಇದರಿಂದ ವಿನಾಯಿತಿ ನೀಡಲಾಗಿತ್ತು). ಪ್ರಸ್ತುತ ಈ ಮೂರೂ ಪ್ರಕರಣಗಳಲ್ಲಿ ಈ ಕಾಯ್ದೆಯ ವ್ಯಾಖ್ಯಾನವೇ ಅತ್ಯಂತ ಪ್ರಮುಖ ಕಾನೂನು ಚರ್ಚೆಯಾಗಿದೆ.

ಲೋಕ ಅದಾಲತ್‌ನಲ್ಲಿ ತೀರ್ಪು ಬಂದರೆ ಏನಾಗುತ್ತದೆ?

ಲೋಕ ಅದಾಲತ್‌ನಲ್ಲಿ ನ್ಯಾಯಮೂತರ್ತಗಳು ತೀರ್ಪು ನೀಡುವುದಿಲ್ಲ, ಬದಲಿಗೆ ಉಭಯ ಪಕ್ಷಗಳನ್ನು ಒಟ್ಟಿಗೆ ಕೂರಿಸಿ ಒಪ್ಪಂದಕ್ಕೆ ತರಲಾಗುತ್ತದೆ. ಒಂದು ವೇಳೆ ಈ ‘ಸಮಾಧಾನ್ ಸಮರೋಹ್’ನಲ್ಲಿ ಎರಡೂ ಕಡೆಯವರು ಸಹಿ ಹಾಕಿ ರಾಜಿ ಮಾಡಿಕೊಂಡರೆ, ಆ ತೀರ್ಪನ್ನು ಸಿವಿಲ್ ನ್ಯಾಯಾಲಯದ ಅಂತಿಮ ತೀರ್ಪಿಗೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಇದರ ವಿರುದ್ಧ ಮತ್ತೊಮ್ಮೆ ಯಾವುದೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಭಾರತದ ಕೋಮು ಸೌಹಾರ್ದತೆ ಮತ್ತು ಭವಿಷ್ಯದ ದೃಷ್ಟಿಯಿಂದ ಆಗಸ್ಟ್ 21 ರ ಸುಪ್ರೀಂ ಕೋರ್ಟ್‌ನ ಈ ಸಂಧಾನ ಪ್ರಕ್ರಿಯೆ ಇಡೀ ಜಗತ್ತಿನ ಗಮನ ಸೆಳೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version