ತಮನ್ನಾ ಜೊತೆ ಹಾಡು ಬೇಕು ಎಂದ ಶಿವಣ್ಣ; ಗೀತಕ್ಕನ ಬಳಿ ಪಿಟ್ಟಿಂಗ್ ಇಟ್ಟ ಶ್ರೀನಿ – Kannada News | Dr Shivarajkumar A For Anand Promo Released: Hilarious Birthday Banter Goes Viral

ಕನ್ನಡ ಚಿತ್ರರಂಗದ ಖ್ಯಾತ ನಟ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ‘A For ಆನಂದ್’ ಚಿತ್ರದ ವಿಶೇಷ ಪ್ರೋಮೋ ವಿಡಿಯೋ ಬಿಡುಗಡೆಯಾಗಿದೆ. ಈ ವಿಡಿಯೋದಲ್ಲಿ ನಿರ್ದೇಶಕ ಶ್ರೀನಿ, ಶಿವಣ್ಣ ಮತ್ತು ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ನಡುವಿನ ಸಂಭಾಷಣೆ ಸಖತ್ ಫನ್ ಆಗಿದೆ. ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

ವಿಡಿಯೋದಲ್ಲೇನಿದೆ?

ವಿಡಿಯೋದ ಆರಂಭದಲ್ಲಿ ಶಿವಣ್ಣ ಫೋನ್ ಮೂಲಕ ನಿರ್ದೇಶಕ ಶ್ರೀನಿಗೆ ಸ್ಕ್ರಿಪ್ಟ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಸೂಚಿಸುತ್ತಾರೆ. ಶಿವಣ್ಣ ಅವರ ಮನೆಗೆ ಬರೋ ಶ್ರೀನಿ ಅವರು, ಗೀತಾ ಶಿವರಾಜ್‌ಕುಮಾರ್ ಅವರ ಸಮ್ಮುಖದಲ್ಲೇ ಎಲ್ಲಾ ಬದಲಾವಣೆ ಓಕೆ ಎನ್ನುತ್ತಾರೆ. ಆದರೆ ಶ್ರೀನಿ, ಶಿವಣ್ಣ ಅವರಿಗೆ ಬಿಗ್ ಶಾಕ್ ನೀಡುತ್ತಾರೆ!
‘ಅಕ್ಕ, ಶಿವಣ್ಣ ಅವರು ತಮನ್ನಾ ಭಾಟಿಯಾ ಅವರ ಜೊತೆ ಒಂದು ಇಂಟೆನ್ಸ್ ಸಾಂಗ್ ಇಡಬೇಕು ಅಂತ ವಾಟ್ಸಾಪ್ ಗ್ರೂಪ್‌ನಲ್ಲಿ ಮೆಸೇಜ್ ಹಾಕಿದ್ದಾರೆ’ ಎಂದು ಗೀತಕ್ಕನ ಮುಂದೆ ಗುಟ್ಟು ರಟ್ಟು ಮಾಡುತ್ತಾರೆ. ಇದನ್ನು ಕೇಳಿ ಶಿವಣ್ಣ ತಬ್ಬಿಬ್ಬಾಗುತ್ತಾರೆ. ‘ಅದು ತಮನ್ನಾ ಅಲ್ಲ, ಪಬ್ ಸಾಂಗ್ ಅಂತ ಬರೆಯಲು ಹೋಗಿ ಆಟೋಕರೆಕ್ಟ್ ಆಗಿ ತಮನ್ನಾ ಅಂತ ಬಂದಿದೆ’ ಎಂದು ತಮಾಷೆಯಾಗಿ ಮ್ಯಾನೇಜ್ ಮಾಡಲು ಪ್ರಯತ್ನಿಸುತ್ತಾರೆ.

ಅಷ್ಟಕ್ಕೇ ನಿಲ್ಲದ ಶ್ರೀನಿ, ‘ಶಿವಣ್ಣ ಪ್ರತಿಯೊಂದು ಸಿನಿಮಾದಲ್ಲೂ ಒಬ್ಬರೇ ಹೀರೋಯಿನ್ ಇರ್ತಾರೆ, ಈ ಸಿನಿಮಾದಲ್ಲಿ ಇಬ್ಬರು ಹೀರೋಯಿನ್ ಬೇಕು ಅಂದಿದ್ದಾರೆ, ರವಿಚಂದ್ರನ್ ಬಳಿ ಸಾಂಗ್ ಕೊರಿಯೋಗ್ರಫಿ ಮಾಡುವ ಬದಲಾವಣೆಯನ್ನು ಅವರು ಸೂಚಿಸಿದ್ದಾರೆ ಎಂದು ಎಂದು ಸಾಲು ಸಾಲು ಪಿಟ್ಟಿಂಗ್ ಇಡುತ್ತಾರೆ. ಗೀತಕ್ಕನ ಎದುರೇ ಶ್ರೀನಿ ಸತ್ಯ ಬಿಚ್ಚಿಡುತ್ತಿದ್ದಂತೆ ಶಿವಣ್ಣ ಬೆವತು ಹೋಗುವ ದೃಶ್ಯ ಕಾಮಿಡಿಯಾಗಿ ಮೂಡಿಬಂದಿದೆ. ನಂತರ ಈ ಚಿತ್ರದಲ್ಲಿ ಅವರ ಪಾತ್ರ ಮಾಸ್ ಲೀಡರ್ ಅಲ್ಲ,ಕ್ಲಾಸ್ ಲೀಡರ್  ಎಂದು ಬರುತ್ತದೆ.

ಇದನ್ನೂ ಓದಿ: ಶಿವರಾಜ್​ಕುಮಾರ್ ಹುಟ್ಟುಹಬ್ಬ ಫ್ಯಾನ್ಸ್​ಗೆ ವಿಶೇಷ ಆಹ್ವಾನ

ಕೊನೆಯಲ್ಲಿ ಶಿವಣ್ಣ ಅವರ ಖಡಕ್ ಲುಕ್ ರಿವೀಲ್ ಆಗುತ್ತೆ. ಈ ಚಿತ್ರಕ್ಕೆ ‘A For ಆನಂದ್’ ಎಂದು ಶೀರ್ಷಿಕೆ ಇಡಲಾಗಿದೆ. ಚಿತ್ರದ ಶೂಟಿಂಗ್ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ. ಶಿವಣ್ಣ ಅವರ ಹುಟ್ಟುಹಬ್ಬಕ್ಕೆ ಸಿಕ್ಕ ಈ ಪ್ರೋಮೋ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿಗೆ ಎರಡು ಬುಲೆಟ್ ರೈಲುಗಳು; ಭಾರತದಲ್ಲಿ ಉದ್ದೇಶಿತ ಹೈಸ್ಪೀಡ್ ರೈಲುಗಳ ಪಟ್ಟಿ – Kannada News | India’s first bullet train in 2027, list of proposed high speed rail projects

ನವದೆಹಲಿ, ಜುಲೈ 13: ವಂದೇ ಭಾರತ್ ರೈಲುಗಳಿಗಿಂತಲೂ ಎರಡು ಮೂರು ಪಟ್ಟು ಹೆಚ್ಚು ವೇಗವಾಗಿ ಚಲಿಸಬಲ್ಲ ಬುಲೆಟ್ ರೈಲು ಭಾರತದಲ್ಲಿ ಸಂಚರಿಸುವ ಕಾಲ ಸಮೀಪಿಸುತ್ತಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ನೀಡಿರುವ ಮಾಹಿತಿ ಪ್ರಕಾರ ಮುಂದಿನ ಸ್ವಾತಂತ್ರ್ಯೋತ್ಸವದಂದು ಭಾರತದಲ್ಲಿ ಮೊದಲ ಬುಲೆಟ್ ರೈಲು ಸಂಚಾರ ಆರಂಭವಾಗಬಹುದು. ಅಂದರೆ, 2027ರ ಆಗಸ್ಟ್ 15ರಂದು ಮುಂಬೈ ಮತ್ತು ಅಹ್ಮದಾಬಾದ್ ನಡುವೆ ಹೈ ಸ್ಪೀಡ್ ರೈಲು ಕಾರ್ಯಾಚರಣೆ ಹಂತ ಹಂತವಾಗಿ ಶುರುವಾಗಬಹುದು.

ಮುಂಬೈ-ಅಹ್ಮದಾಬಾದ್ ನಡುವಿನ 508 ಕಿಮೀ ಹೈಸ್ಪೀಡ್ ಕಾರಿಡಾರ್​ನಲ್ಲಿ ಮೊದಲಿಗೆ ಸೂರತ್-ಬಿಲಿಮೋರಾ ಮಾರ್ಗ ಮೊದಲಿಗೆ ಸಿದ್ಧವಾಗಲಿದೆ. 2027ರ ಆಗಸ್ಟ್ 15ರಂದು ಇಲ್ಲಿ ಸಂಚಾರ ಶುರುವಾಗಲಿದೆ. ಬಳಿಕ ವಾಪಿ-ಸೂರತ್, ವಾಪಿ-ಅಹ್ಮದಾಬಾದ್, ಅಹ್ಮದಾಬಾದ್-ಠಾಣೆ ಮಾರ್ಗಗಳನ್ನು ಹಂತ ಹಂತವಾಗಿ ಸಂಚಾರಕ್ಕೆ ಸಿದ್ಧಪಡಿಸಲಾಗುತ್ತದೆ. ಈ ಮೂಲಕ ಮುಂಬೈ-ಅಹಮದಾಬಾದ್ ಪೂರ್ಣಗೊಳ್ಳುತ್ತದೆ. ಇದು 2029ರ ವೇಳೆ ಆಗುವ ನಿರೀಕ್ಷೆ ಇದೆ. ಈ ಹೈಸ್ಪೀಡ್ ಬುಲೆಟ್ ರೈಲು 320 ಕಿಮೀ ವೇಗದಲ್ಲಿ ಚಲಿಸಬಲ್ಲುದು. ಮುಂಬೈ ಮತ್ತು ಅಹ್ಮದಾಬಾದ್ ನಡುವಿನ 508 ಕಿಮೀ ದೂರವನ್ನು ಈ ರೈಲು ಕೇವಲ 2 ಗಂಟೆಯಲ್ಲಿ ಕ್ರಮಿಸಬಲ್ಲುದು.

ಭಾರತದಲ್ಲಿ ಇತರ ಬುಲೆಟ್ ರೈಲು ಯೋಜನೆಗಳು ಯಾವಾಗ ಜಾರಿ?

ಭಾರತದಲ್ಲಿ ಪ್ರಸ್ತುತ ಹೈಸ್ಪೀಡ್ ರೈಲು (High-Speed Rail – HSR) ಯೋಜನೆಗಳನ್ನು ದೇಶದ ವಿವಿಧ ವಲಯಗಳಲ್ಲಿ ಆರ್ಥಿಕ ಮತ್ತು ಪ್ರವಾಸೋದ್ಯಮ ಪ್ರಗತಿಗಾಗಿ ಯೋಜಿಸಲಾಗಿದೆ. ಸದ್ಯ ಜಾರಿ ಹಂತದಲ್ಲಿರುವುದು ಮುಂಬೈ-ಅಹ್ಮದಾಬಾದ್ ಕಾರಿಡಾರ್. ಇದರ ಶೇ. 80 ಕಾಮಗಾರಿ ಮುಗಿದಿದೆ. ಜಪಾನ್​ನ ಶಿಂಕೆನ್ಸೆನ್ ತಂತ್ರಜ್ಞಾನದ ನೆರವಿನೊಂದಿಗೆ ಈ ಕಾರಿಡಾರ್ ನಿರ್ಮಿಸಲಾಗುತ್ತಿದೆ.

ಅನುಮೋದನೆ ಪಡೆದು, ಡಿಪಿಆರ್ ಹಂತದಲ್ಲಿರುವ ಬುಲೆಟ್ ರೈಲು ಯೋಜನೆಗಳು

ಇತ್ತೀಚಿನ ಕೇಂದ್ರ ಬಜೆಟ್‌ಗಳಲ್ಲಿ ಸರ್ಕಾರವು ದೇಶಾದ್ಯಂತ ಹೊಸ ಕಾರಿಡಾರ್‌ಗಳಿಗೆ ಅನುಮೋದನೆ ನೀಡಿದ್ದು, ಇವುಗಳ ವಿವರವಾದ ಯೋಜನಾ ವರದಿ (DPR – Detailed Project Report) ಸಿದ್ಧತೆ ಅಥವಾ ಅಂತಿಮ ಪರಿಶೀಲನೆಯ ವಿವಿಧ ಹಂತಗಳಲ್ಲಿವೆ. ಇದರಲ್ಲಿ ಬೆಂಗಳೂರಿನ ಎರಡು ಬುಲೆಟ್ ರೈಲು ಯೋಜನೆಗಳು ಸೇರಿವೆ.

ಚೆನ್ನೈ – ಬೆಂಗಳೂರು ಕಾರಿಡಾರ್: 306 ಕಿಮೀ

ಹೈದರಾಬಾದ್ – ಬೆಂಗಳೂರು ಕಾರಿಡಾರ್: 618 ಕಿಮೀ

ದಿಲ್ಲಿ – ವಾರಣಾಸಿ ಕಾರಿಡಾರ್: 865 ಕಿಮೀ

ಮುಂಬೈ – ಪುಣೆ ಕಾರಿಡಾರ್: 150 ಕಿಮೀ

ಪುಣೆ – ಹೈದರಾಬಾದ್ ಕಾರಿಡಾರ್: 650 ಕಿಮೀ

ಹೈದರಾಬಾದ್ – ಚೆನ್ನೈ ಕಾರಿಡಾರ್: 744 ಕಿಮೀ

ವಾರಣಾಸಿ – ಹೌರಾ (ಕೊಲ್ಕತ್ತಾ): 711 ಕಿಮೀ

ವಾರಣಾಸಿ – ಸಿಲಿಗುರಿ: 1,705 ಕಿಮೀ

ಪ್ರಸ್ತಾವನೆ ಮತ್ತು ಸಮೀಕ್ಷೆ ಹಂತದಲ್ಲಿರುವ ಬುಲೆಟ್ ರೈಲು ಯೋಜನೆಗಳು

ಈ ಕೆಳಗಿನ ಮಾರ್ಗಗಳನ್ನು ರೈಲ್ವೆಯ ದೀರ್ಘಾವಧಿ ರಾಷ್ಟ್ರೀಯ ರೈಲು ಯೋಜನೆ (National Rail Plan) ಅಡಿಯಲ್ಲಿ ಪ್ರಸ್ತಾಪಿಸಲಾಗಿದ್ದು, ಇವುಗಳು ಪ್ರಾಥಮಿಕ ಹಂತದಲ್ಲಿವೆ:

ದಿಲ್ಲಿ – ಅಹಮದಾಬಾದ್ ಕಾರಿಡಾರ್ (886 ಕಿಮೀ)

ಮುಂಬೈ – ನಾಗ್ಪುರ ಕಾರಿಡಾರ್ (736 ಕಿಮೀ)

ದಿಲ್ಲಿ – ಅಮೃತಸರ ಕಾರಿಡಾರ್ (480 ಕಿಮೀ)

ತಿರುವನಂತಪುರಂ – ಕಣ್ಣೂರು (ಸಿಲ್ವರ್ ಲೈನ್ – 430 ಕಿಮೀ)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ವರ್ಲ್ಡ್ ಕ್ಲಬ್ ಟಿ20 ಚಾಂಪಿಯನ್‌ಶಿಪ್’ ಆರಂಭಿಸಲು ಐಸಿಸಿ ಮಾಸ್ಟರ್ ಪ್ಲ್ಯಾನ್! – Kannada News | ICC’s Master Plan: World Club T20 Championship on the Way

ಫ್ರಾಂಚೈಸಿ ಲೀಗ್ ತಂಡಗಳನ್ನು ಒಂದುಗೂಡಿಸಿ ಹೊಸ ಟಿ20 ಚಾಂಪಿಯನ್​ಶಿಪ್ ಆಯೋಜಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಭರ್ಜರಿ ಪ್ಲ್ಯಾನ್ ರೂಪಿಸುತ್ತಿದೆ.  ಜಾಗತಿಕ ಕ್ರಿಕೆಟ್‌ನಲ್ಲಿ ಫ್ರಾಂಚೈಸಿ ಲೀಗ್‌ಗಳ ಹಾವಳಿ ಮತ್ತು ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇದಕ್ಕೆ ಪೂರಕವಾಗಿ ಐಸಿಸಿ ಕ್ರಿಕೆಟ್ ಕ್ಯಾಲೆಂಡರ್ ಅನ್ನು ಸಂಪೂರ್ಣವಾಗಿ ನವೀಕರಿಸಲು ಮುಂದಾಗಿದೆ. ಈ ಮಹತ್ತರ ಬದಲಾವಣೆಯ ಭಾಗವಾಗಿ ವಿಶ್ವದ ಅತ್ಯುತ್ತಮ ಟಿ20 ಫ್ರಾಂಚೈಸಿ ತಂಡಗಳನ್ನು ಒಳಗೊಂಡ ‘ವರ್ಲ್ಡ್ ಕ್ಲಬ್ ಟಿ20 ಚಾಂಪಿಯನ್‌ಶಿಪ್’ ಅನ್ನು ಪುನರಾರಂಭಿಸಲು ಐಸಿಸಿ ಗಂಭೀರ ಚಿಂತನೆ ನಡೆಸಿದೆ.

‘ವರ್ಲ್ಡ್ ಕ್ಲಬ್ ಟಿ20 ಚಾಂಪಿಯನ್‌ಶಿಪ್’

ಈ ಹಿಂದೆ ಭಾರತ (BCCI), ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿಗಳು ಜಂಟಿಯಾಗಿ ಆಯೋಜಿಸುತ್ತಿದ್ದ ‘ಚಾಂಪಿಯನ್ಸ್ ಲೀಗ್ ಟಿ20’ (CLT20) ಟೂರ್ನಮೆಂಟ್ ವಾಣಿಜ್ಯದ ಕೊರತೆಯಿಂದಾಗಿ 2014 ರಲ್ಲಿ ಸ್ಥಗಿತಗೊಂಡಿತ್ತು. ಈಗ ಅದೇ ಮಾದರಿಯಲ್ಲಿ, ಆದರೆ ಅದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ವಿಶ್ವದ ಪ್ರಮುಖ ಲೀಗ್‌ಗಳ ಚಾಂಪಿಯನ್ ತಂಡಗಳನ್ನು ಒಂದೇ ವೇದಿಕೆಗೆ ತರಲು ಐಸಿಸಿ ಸಜ್ಜಾಗುತ್ತಿದೆ. ಅಲ್ಲದೆ ಚಾಂಪಿಯನ್​ ತಂಡಗಳ ಈ ಲೀಗ್​ಗೆ ‘ವರ್ಲ್ಡ್ ಕ್ಲಬ್ ಟಿ20 ಚಾಂಪಿಯನ್‌ಶಿಪ್’ ಎಂದು ಹೆಸರಿಡಲು ನಿರ್ಧರಿಸಲಾಗಿದೆ.

ಯಾವೆಲ್ಲಾ ಲೀಗ್‌ಗಳು ಭಾಗಿ?

ಭಾರತದ IPL, ಆಸ್ಟ್ರೇಲಿಯಾದ BBL, ಪಾಕಿಸ್ತಾನದ PSL, ಸೌತ್ ಆಫ್ರಿಕಾದ SA20 ಮತ್ತು ಇಂಗ್ಲೆಂಡ್‌ನ The Hundred ಸೇರಿದಂತೆ ಜಗತ್ತಿನ ಮುಂಚೂಣಿ ಟಿ20 ಲೀಗ್‌ಗಳ ಚಾಂಪಿಯನ್​ ತಂಡಗಳು ‘ವರ್ಲ್ಡ್ ಕ್ಲಬ್ ಟಿ20 ಚಾಂಪಿಯನ್‌ಶಿಪ್’ ಸಮರದಲ್ಲಿ ಸೆಣಸಾಡಲಿವೆ.

ಈ ಟೂರ್ನಿಗೆ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳು ಅಡ್ಡಿಯಾಗದಂತೆ ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ಪ್ರತ್ಯೇಕ ಸಮಯವನ್ನು ನಿಗದಿಪಡಿಸಲು ಐಸಿಸಿ ಪ್ಲ್ಯಾನ್ ರೂಪಿಸುತ್ತಿದೆ.

ಕೇವಲ ಕ್ಲಬ್ ಚಾಂಪಿಯನ್ಸ್ ಲೀಗ್ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರೂ ಸ್ವರೂಪಗಳನ್ನು (ಟೆಸ್ಟ್, ಏಕದಿನ, ಟಿ20) ಉಳಿಸಿಕೊಳ್ಳಲು ಐಸಿಸಿ ಮತ್ತಷ್ಟು ಬದಲಾವಣೆಗಳನ್ನು ಚರ್ಚಿಸುತ್ತಿದೆ.

ಐಸಿಸಿ ಮುಂದಿರುವ ಸವಾಲುಗಳೇನು?

ಐಸಿಸಿಯ ಈ ಯೋಜನೆ ಅತ್ಯಂತ ಆಕರ್ಷಕವಾಗಿದ್ದರೂ, ಇದನ್ನು ಕಾರ್ಯಗತಗೊಳಿಸುವುದು ಸುಲಭವಲ್ಲ. ಸದ್ಯ ಐಸಿಸಿಯ ಭವಿಷ್ಯದ ಪ್ರವಾಸ ಕಾರ್ಯಕ್ರಮ (FTP) 2031 ರವರೆಗೆ ನಿಗದಿಯಾಗಿದೆ. ಹಾಗಾಗಿ ಯಾವುದೇ ದೊಡ್ಡ ಬದಲಾವಣೆ ತರಬೇಕಾದರೂ ಬಿಸಿಸಿಐ, ಇಸಿಬಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದಂತಹ ಪ್ರಭಾವಿ ಮಂಡಳಿಗಳ ಒಪ್ಪಿಗೆ ಮತ್ತು ಆಟಗಾರರ ಲಭ್ಯತೆಯ ಭರವಸೆ ಅತ್ಯಗತ್ಯವಾಗಿದೆ.

ಇದಾಗ್ಯೂ ‘ವರ್ಲ್ಡ್ ಕ್ಲಬ್ ಟಿ20 ಚಾಂಪಿಯನ್‌ಶಿಪ್’ ಆಯೋಜಿಸಲು ಐಸಿಸಿ ಹೆಚ್ಚಿನ ಆಸಕ್ತಿ ತೋರಿರುವುದರಿಂದ ಮುಂಬರುವ ಕ್ರಿಕೆಟ್ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ.

ಇದನ್ನೂ ಓದಿ: ತಪ್ಪುಗಳು ಸಹಜ, ನಮ್ಮ ಗುರಿ ವಿಶ್ವಕಪ್​: ಶ್ರೇಯಸ್ ಅಯ್ಯರ್

ಒಟ್ಟಾರೆಯಾಗಿ ಹೇಳುವುದಾದರೆ, ‘ವರ್ಲ್ಡ್ ಕ್ಲಬ್ ಟಿ20 ಚಾಂಪಿಯನ್‌ಶಿಪ್’ ಅಧಿಕೃತವಾಗಿ ಜಾರಿಗೆ ಬಂದರೆ, ಅದು ಕ್ರಿಕೆಟ್ ಇತಿಹಾಸದಲ್ಲೇ ಹೊಸ ಸುವರ್ಣ ಯುಗಕ್ಕೆ ನಾಂದಿ ಹಾಡಲಿದೆ. ಫುಟ್‌ಬಾಲ್‌ನ ‘ಕ್ಲಬ್ ವರ್ಲ್ಡ್ ಕಪ್’ ಮಾದರಿಯಲ್ಲಿ ಜಗತ್ತಿನ ಮೂಲೆ ಮೂಲೆಗಳ ಕ್ರಿಕೆಟ್ ಫ್ರಾಂಚೈಸಿಗಳೂ ಸಹ ಜಾಗತಿಕ ಮಟ್ಟದ ಅತ್ಯುನ್ನತ ಕಿರೀಟಕ್ಕಾಗಿ ಮೈದಾನದಲ್ಲಿ ಹೋರಾಟ ನಡೆಸುವುದನ್ನು ಕಣ್ಣುಂಬಿಕೊಳ್ಳುವ ಕಾಲ ದೂರವಿಲ್ಲ ಎಂದೇ ಹೇಳಬಹುದು.

Source link

ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಆಪ್ತ, ಮಾಜಿ ರಾಜ್ಯಸಭಾ ಸದಸ್ಯ ಹೆಚ್. ಹನುಮಂತಪ್ಪ ವಿಧಿವಶ – Kannada News | Former Rajya Sabha MP and Congress Leader H Hanumanthappa Passes Away in Chitradurga; Close Aide to Indira Gandhi, Rajiv Gandhi, and Sonia Gandhi

ಚಿತ್ರದುರ್ಗ, ಜುಲೈ 13: ಇಂದಿರಾಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರೊಂದಿಗೆ ಅತ್ಯಂತ ನಿಕಟ ಸಂಪರ್ಕ ಹೊಂದಿದ್ದ, ಕಾಂಗ್ರೆಸ್‌ನ ಹಿರಿಯ ರಾಷ್ಟ್ರೀಯ ನಾಯಕ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಹೆಚ್. ಹನುಮಂತಪ್ಪ (95) ಅವರು ವಯೋಸಹಜ ಅನಾರೋಗ್ಯದಿಂದ ನಿನ್ನೆ (ಭಾನುವಾರ) ಮಧ್ಯಾಹ್ನ ವಿಧಿವಶರಾಗಿದ್ದಾರೆ. ಗಾಂಧಿ ಪರಿವಾರಕ್ಕೆ ಅತ್ಯಂತ ಆಪ್ತರಾಗಿದ್ದ ಹನುಮಂತಪ್ಪ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಮತ್ತು ಎರಡು ಬಾರಿ ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷರಾಗಿ ದೇಶ ಹಾಗೂ ರಾಜ್ಯಕ್ಕೆ ಗಣನೀಯ ಸೇವೆ ಸಲ್ಲಿಸಿದ್ದರು. ಅವರ ನಿಧನಕ್ಕೆ ರಾಜಕೀಯ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.

ಇಂದು ಮಧ್ಯಾಹ್ನ ಅಂತ್ಯಸಂಸ್ಕಾರ; ಸಿಎಂ, ಡಿಸಿಎಂ ಭೇಟಿ

ಮೃತರ ಅಂತ್ಯಸಂಸ್ಕಾರವು ಇಂದು ಮಧ್ಯಾಹ್ನ 4 ಗಂಟೆಗೆ ಚಿತ್ರದುರ್ಗದ ಮುಕ್ತಿಧಾಮದಲ್ಲಿ ನೆರವೇರಲಿದೆ. ಗಣ್ಯರ ಅಂತಿಮ ದರ್ಶನಕ್ಕಾಗಿ ನಗರದ ವಿವಿಧೆಡೆ ಸಾರ್ವಜನಿಕ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10 ಗಂಟೆಯವರೆಗೆ ನೆಹರು ನಗರದ ಅವರ ನಿವಾಸದ ಬಳಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 10 ರಿಂದ 11 ಗಂಟೆಯವರೆಗೆ ಸರಸ್ವತಿ ಕಾನೂನು ಕಾಲೇಜು ಆವರಣ, 11:30ರವರೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿ, ನಂತರ ಜಯದೇವ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಗಣ್ಯರ ಆಗಮನ ಮತ್ತು ಬಂದೋಬಸ್ತ್

ರಾಷ್ಟ್ರೀಯ ನಾಯಕರಾಗಿದ್ದ ಹನುಮಂತಪ್ಪ ಅವರಿಗೆ ಅಂತಿಮ ನಮನ ಸಲ್ಲಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಮಧ್ಯಾಹ್ನ 2:15ಕ್ಕೆ ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆ. ಸಿಎಂ ಮತ್ತು ಡಿಸಿಎಂ ಭೇಟಿಯ ಹಿನ್ನೆಲೆಯಲ್ಲಿ ಜಯದೇವ ಕ್ರೀಡಾಂಗಣ ಹಾಗೂ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಡೆತಡೆ ಮೀರಿ 100 ಕೋಟಿ ಕ್ಲಬ್ ಸೇರಿದ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ – Kannada News | Samantha Maa Inti Bangaram Hits 100 Cr: A Triumph for Female Led Films

ನಟಿ ಸಮಂತಾ ರುತ್ ಪ್ರಭು (Samantha) ಈಗ ಖುಷಿಯಲ್ಲಿದ್ದಾರೆ. ಅವರ ಮುಖ್ಯ ಭೂಮಿಕೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಸಿದೆ. ಈ ಭರ್ಜರಿ ಯಶಸ್ಸನ್ನು ಸಮಂತಾ ತಮ್ಮ ಮನೆಯಲ್ಲೇ ಆಚರಿಸಿದ್ದಾರೆ. ಇತ್ತೀಚೆಗೆ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದ ಅವರು ಈ ಚಿತ್ರದ ಮೂಲಕ ದೊಡ್ಡ ಕಂಬ್ಯಾಕ್ ಮಾಡಿದಂತೆ ಆಗಿದೆ. ಪ್ರೆಗ್ನೆನ್ಸಿ ಸಮಯದಲ್ಲೇ ಅವರಿಗೆ ಈ ಖುಷಿ ಸಿಕ್ಕಿದೆ.

ಖುಷಿ ಹಂಚಿಕೊಂಡ ನಟಿ

ಸಮಂತಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತು ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಮಂತಾ ಬಿಳಿ ಪೈಜಾಮ ಧರಿಸಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ವೇಳೆ ರಾಜ್ ನಿಡಿಮೋರು ಅವರು ಸಮಂತಾಗೆ ಟ್ಯಾಬ್ಲೆಟ್ ತೋರಿಸಿ ಸುದ್ದಿಯನ್ನು ತಿಳಿಸುತ್ತಾರೆ. ಸಿನಿಮಾ 100 ಕೋಟಿ ಗಳಿಸಿದ್ದನ್ನು ಕಂಡು ಸಮಂತಾ ಅಚ್ಚರಿ ಪಡುತ್ತಾರೆ. ನಂತರ ಮುಗುಳ್ನಕ್ಕು ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾರೆ. ಪ್ರೇಕ್ಷಕರು ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ಅವರು ಧನ್ಯವಾದ ತಿಳಿಸಿದ್ದಾರೆ.

ಸಮಂತಾಗೆ ಇತ್ತು ಆತಂಕ

ಸಿನಿಮಾ ಬಿಡುಗಡೆಗೂ ಮುನ್ನ ಇದ್ದ ಆತಂಕವನ್ನು ಸಮಂತಾ ನೆನಪಿಸಿಕೊಂಡಿದ್ದಾರೆ. ‘ಮಹಿಳಾ ಪ್ರಧಾನ ಸಿನಿಮಾವನ್ನು ನೋಡಲು ಜನರು ಬರುತ್ತಾರಾ ಎಂಬ ಸಂದೇಹ ಹಲವರಿಗಿತ್ತು. ಸಮಂತಾ ಅವರ ಸ್ನೇಹಿತರೊಬ್ಬರು ಚಿತ್ರಮಂದಿರದ ಮಾಲೀಕರಿಗೆ ಫೋನ್ ಮಾಡಿದ್ದರು. ಆಗ ಆ ಮಾಲೀಕರು ಮಹಿಳಾ ಪ್ರಧಾನ ಸಿನಿಮಾಗಳನ್ನು ಯಾರು ನೋಡುತ್ತಾರೆ ಎಂದು ಕೀಳಾಗಿ ಮಾತನಾಡಿದ್ದರು. ಕಮರ್ಷಿಯಲ್ ಸಿನಿಮಾಗಳಲ್ಲಿ ಗ್ಲಾಮರ್‌ಗೆ ಮಾತ್ರ ನಟಿಯರನ್ನು ಇಷ್ಟಪಡುತ್ತಾರೆ ಎಂದು ಹೇಳಿದ್ದರು’ ಎಂದಿದ್ದಾರೆ.

ಬದಲಾಗುತ್ತಿದೆ ಸಿನಿಮಾ ಟ್ರೆಂಡ್

ಈ ಯಶಸ್ಸು ಚಿತ್ರರಂಗದಲ್ಲಿ ದೊಡ್ಡ ಬದಲಾವಣೆಯ ಆರಂಭ ಎಂದು ಸಮಂತಾ ನಂಬಿದ್ದಾರೆ. ರಿಸ್ಕ್ ತಗೊಂಡಾಗ ಮಾತ್ರ ಬದಲಾವಣೆ ಸಾಧ್ಯ ಎಂದು ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಿಗೆ ಇಂತಹ ಒಳ್ಳೆಯ ಪ್ರತಿಕ್ರಿಯೆ ಸಿಗಲಿ ಎಂದು ಅವರು ಆಶಿಸಿದ್ದಾರೆ.

ಇದನ್ನೂ ಓದಿ: ಸಮಂತಾ 100 ಕೋಟಿ ಕ್ಲಬ್ ಕನಸಿಗೆ ಮಾಜಿ ಭಾವ ಅಖಿಲ್ ಅಕ್ಕಿನೇನಿ ಅಡ್ಡಿ? ಬಾಕ್ಸ್ ಆಫೀಸ್‌ನಲ್ಲಿ ಜಿದ್ದಾಜಿದ್ದಿ

ಸಿನಿಮಾ ಕುರಿತು ಮಾಹಿತಿ

‘ಮಾ ಇಂಟಿ ಬಂಗಾರಂ’ ತೆಲುಗು ಆ್ಯಕ್ಷನ್ ಕಾಮಿಡಿ ಸಿನಿಮಾ ಆಗಿದೆ. ಇದನ್ನು ಬಿ. ವಿ. ನಂದಿನಿ ರೆಡ್ಡಿ ನಿರ್ದೇಶಿಸಿದ್ದಾರೆ. ಸಮಂತಾ, ರಾಜ್ ನಿಡಿಮೋರು ಮತ್ತು ಹಿಮಾಂಕ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಸಮಂತಾ ಜೊತೆಗೆ ಗುಲ್ಶನ್ ದೇವಯ್ಯ ಮತ್ತು ದಿಗಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ತೆಲುಗಿನ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಮಹಿಳಾ ಪ್ರಧಾನ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಸಂಜಯ್ ದತ್ ಮನಸ್ಸು ಮಾಡಿದ್ದರೆ ಮುಂಬೈ ಬಾಂಬ್ ಸ್ಫೋಟ ತಡೆಯಬಹುದಿತ್ತು’; ಹಿರಿಯ ವಕೀಲ – Kannada News | Why Ujjwal Nikam Said Sanjay Dutt Could Have Prevented 1993 Mumbai Blasts

1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣ ದೇಶದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಸರ್ಕಾರಿ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಅವರು ಬಾಲಿವುಡ್ ನಟ ಸಂಜಯ್ ದತ್ ಕುರಿತು ನೀಡಿರುವ ಒಂದು ಸ್ಫೋಟಕ ಹೇಳಿಕೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ‘ಸಂಜಯ್ ದತ್ ಅಂದು ಸಮಯಪ್ರಜ್ಞೆ ಮೆರೆದಿದ್ದರೆ ಮುಂಬೈ ಬಾಂಬ್ ಸ್ಫೋಟವನ್ನು ತಡೆಯಬಹುದಿತ್ತು. ನೂರಾರು ಅಮಾಯಕ ಜೀವಗಳನ್ನು ಉಳಿಸಬಹುದಿತ್ತು’ ಎಂದು ಅವರು ಹೇಳಿದ್ದಾರೆ. ಖ್ಯಾತ ಮಾಧ್ಯಮ ಸಂಸ್ಥೆ ‘ದಿ ಲಲ್ಲಂಟಾಪ್’ಗೆ ನೀಡಿದ ಸಂದರ್ಶನದಲ್ಲಿ ಉಜ್ವಲ್ ನಿಕಮ್ ಅವರು ಈ ಅಚ್ಚರಿಯ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಶಸ್ತ್ರಾಸ್ತ್ರಗಳ ಬಗ್ಗೆ ಮೊದಲೇ ತಿಳಿದಿತ್ತು

ಅಂದು ನಿಖರವಾಗಿ ಏನಾಗಿತ್ತು ಎಂಬುದನ್ನು ವಿವರಿಸಿದ ಉಜ್ವಲ್ ನಿಕಮ್, ‘ಬಾಂಬ್ ಸ್ಫೋಟಕ್ಕೂ ಮೊದಲು ಭೂಗತ ಪಾತಕಿ ಅಬು ಸಲೇಂ ದೊಡ್ಡ ಪ್ರಮಾಣದ ಮಾರಕಾಸ್ತ್ರಗಳನ್ನು ಹೊತ್ತು ಟೆಂಪೋದಲ್ಲಿ ಬಂದಿದ್ದ. ಆ ವಾಹನದಲ್ಲಿ ಹ್ಯಾಂಡ್ ಗ್ರೆನೇಡ್‌ಗಳು ಹಾಗೂ ಎಕೆ-47 ರೈಫಲ್‌ಗಳಿದ್ದವು. ಆ ಮಾರಕಾಸ್ತ್ರಗಳಲ್ಲಿ ಕೆಲವನ್ನು ಸಂಜಯ್ ದತ್ ತನ್ನ ಬಳಿ ಇಟ್ಟುಕೊಂಡಿದ್ದರು. ಆ ಬಳಿಕ ಕೆಲವು ಹ್ಯಾಂಡ್ ಗ್ರೆನೇಡ್‌ಗಳನ್ನು ವಾಪಸ್ ಮಾಡಿದ್ದರು’ ಎಂದಿದ್ದಾರೆ.

ಪೊಲೀಸರಿಗೆ ಮಾಹಿತಿ ನೀಡಿದ್ದರೆ ದೃಶ್ಯವೇ ಬೇರೆಯಾಗುತ್ತಿತ್ತು

‘ತಮ್ಮ ಬಳಿಗೆ ಬಂದಿದ್ದ ಶಸ್ತ್ರಾಸ್ತ್ರಗಳ ಅಕ್ರಮ ಸಾಗಾಟದ ಬಗ್ಗೆ ಸಂಜಯ್ ದತ್ ಅವರಿಗೆ ಮೊದಲೇ ಮಾಹಿತಿ ಇತ್ತು. ಅವರು ತಕ್ಷಣವೇ ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದರೆ, ಚಿತ್ರಣವೇ ಬದಲಾಗುತ್ತಿತ್ತು. ಪೊಲೀಸರು ತಕ್ಷಣ ಅಲರ್ಟ್ ಆಗಿ ಕಠಿಣ ಕ್ರಮ ಕೈಗೊಳ್ಳುತ್ತಿದ್ದರು. ಇದರಿಂದ ಬಾಂಬ್ ಸ್ಫೋಟದ ಇಡೀ ಪಿತೂರಿ ಮೊದಲೇ ಬಯಲಾಗುತ್ತಿತ್ತು ಮತ್ತು ಸ್ಫೋಟವನ್ನು ತಡೆಯಲು ಸಾಧ್ಯವಾಗುತ್ತಿತ್ತು’ ಎಂದು ನಿಕಮ್ ಅಭಿಪ್ರಾಯಪಟ್ಟಿದ್ದಾರೆ.

ಸಂಜಯ್ ದತ್ ಭಯೋತ್ಪಾದಕನಲ್ಲ

ಇದೇ ವೇಳೆ ಸಂಜಯ್ ದತ್ ಪರವಾಗಿಯೂ ಮಾತನಾಡಿದ ಉಜ್ವಲ್ ನಿಕಮ್, ‘ಸಂಜಯ್ ದತ್ ಅವರಿಗೆ ಸ್ಫೋಟವನ್ನು ತಡೆಯುವ ಅವಕಾಶವಿತ್ತು ಎಂದು ನಾನು ಹೇಳುತ್ತಿರುವುದರ ಅರ್ಥ ಅವರು ಭಯೋತ್ಪಾದಕ ಎಂದಲ್ಲ. ಮುಂಬೈನಲ್ಲಿ ದಾಳಿ ನಡೆಸಬೇಕು ಅಥವಾ ವಿಧ್ವಂಸಕ ಕೃತ್ಯ ಎಸಗಬೇಕು ಎಂಬ ಯಾವುದೇ ಕೆಟ್ಟ ಉದ್ದೇಶ ಸಂಜಯ್ ದತ್ ಅವರಿಗೆ ಇರಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಅವರ ಮುಂಬರುವ ‘ಪ್ರಹಾರ್’ ಚಿತ್ರದ ಕಾರಣಕ್ಕಾಗಿ ಉಜ್ವಲ್ ನಿಕಮ್ ಅವರ ಹೆಸರು ಮುಂಚೂಣಿಯಲ್ಲಿದೆ. ಈ ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್ ಅವರು ಖ್ಯಾತ ವಕೀಲ ಉಜ್ವಲ್ ನಿಕಮ್ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚರ್ಚೆಗಳ ನಡುವೆಯೇ ನಿಕಮ್ ಅವರ ಸಂದರ್ಶನದ ಹೇಳಿಕೆಗಳು ವೈರಲ್ ಆಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:15 am, Mon, 13 July 26

Source link

Video: ಮುಂಬೈ ನಿಲ್ದಾಣದಲ್ಲಿ ಹೈಡ್ರಾಮಾ: ಯುವತಿಯ ಕಾಲು ಹಿಡಿದು ಹಠ ಮಾಡುತ್ತಾ ಪ್ಲಾಟ್‌ಫಾರ್ಮ್ ಮೇಲೆ ಮಲಗಿದ ಯುವಕ – Kannada News | Mumbai Borivali Viral: Man Holds Woman’s Leg at Station Love Drama or Stunt

ಮುಂಬೈ, ಜುಲೈ 13: ಅದು ಸದಾ ಜನರಿಂದ ಗಿಜಿಗುಡುತ್ತಿರುವ ಮುಂಬೈನ ಬೊರಿವಾಲಿ ರೈಲು ನಿಲ್ದಾಣ(Railway Station). ಅಲ್ಲಿಗೆ ಬಂದ ಪ್ರಯಾಣಿಕರೆಲ್ಲಾ ಒಂದು ಕ್ಷಣ ತಮ್ಮ ರೈಲು ಹತ್ತುವುದನ್ನು ಮರೆತು, ಪ್ಲಾಟ್‌ಫಾರ್ಮ್ ಮೇಲೆಯೇ ನಡೆಯುತ್ತಿದ್ದ ಹೈಡ್ರಾಮಾವನ್ನು ಕಣ್ಣು ಅರಳಿಸಿ ನೋಡುತ್ತಿದ್ದರು. ಕಾರಣ, ಅಲ್ಲಿ ಯುವಕನೊಬ್ಬ ಯುವತಿಯ ಕಾಲು ಹಿಡಿದು ಪ್ಲಾಟ್​ಫಾರ್ಮ್​ ಮೇಲೆ ಮಲಗಿದ್ದಾನೆ. ಸದ್ಯ ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರಿ ಸಂಚಲನ ಮೂಡಿಸಿದ್ದು, ಬರೋಬ್ಬರಿ 6 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

ಪ್ಲಾಟ್‌ಫಾರ್ಮ್ ಮೇಲೆಯೇ ಕಾಲು ಹಿಡಿದು ಹಠ

ವೈರಲ್ ಆಗಿರುವ ವಿಡಿಯೋದಲ್ಲಿ, ತಿಳಿ ನೀಲಿ ಬಣ್ಣದ ಶರ್ಟ್ ಧರಿಸಿರುವ ಯುವಕನೊಬ್ಬ ರೈಲ್ವೆ ಪ್ಲಾಟ್‌ಫಾರ್ಮ್‌ನ ನೆಲದ ಮೇಲೆಯೇ ಮಲಗಿಕೊಂಡಿದ್ದಾನೆ. ಅಲ್ಲಿ ನಿಂತಿರುವ ಮುಖ ಮುಚ್ಚಿಕೊಂಡಿರುವ ಯುವತಿಯ ಕಾಲನ್ನು ಆತ ಬಿಗಿಯಾಗಿ ಹಿಡಿದುಕೊಂಡಿದ್ದಾನೆ.

ಬೆನ್ನಿಗೆ ಬ್ಯಾಗ್ ಧರಿಸಿರುವ ಆ ಯುವತಿ, ಆತನ ಹಿಡಿತದಿಂದ ತನ್ನ ಕಾಲನ್ನು ಬಿಡಿಸಿಕೊಳ್ಳಲು ಪದೇ ಪದೇ ಒದ್ದಾಡುತ್ತಿದ್ದರೂ, ಆ ಯುವಕ ಮಾತ್ರ ಆಕೆಯನ್ನು ಹೋಗಲು ಬಿಡದೆ ಹಠ ಹಿಡಿದು ಕಾಲನ್ನೇ ಹಿಡಿದು ಮಲಗಿದ್ದ.

ಮಧ್ಯಪ್ರವೇಶಿಸಿದ ಮುಂಬೈ ರೈಲ್ವೆ ಪೊಲೀಸ್

ನಿಲ್ದಾಣದಲ್ಲಿ ಜನಸಮೂಹ ಹೆಚ್ಚಾಗುತ್ತಿದ್ದಂತೆ ಮತ್ತು ದಂಪತಿಗಳ ನಡುವಿನ ನಾಟಕ ಜೋರಾಗುತ್ತಿದ್ದಂತೆ ಸ್ಥಳದಲ್ಲಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿದ್ದಾರೆ. ವಿಡಿಯೋದಲ್ಲಿ ಪೊಲೀಸರು ಆ ಯುವಕನನ್ನು ನೆಲದಿಂದ ಎಬ್ಬಿಸಿ ಪ್ರಶ್ನಿಸುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಸುತ್ತಲೂ ನೆರೆದು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದ ಕುತೂಹಲಕಾರಿ ಜನಸಮೂಹವನ್ನು ಪೊಲೀಸರು ಅಲ್ಲಿಂದ ದೂರ ಸರಿಯುವಂತೆ ಜಾಗ ಖಾಲಿ ಮಾಡಿಸಿದ್ದಾರೆ.

ಮತ್ತಷ್ಟು ಓದಿ: ದಶಕಗಳ ಕನಸು ನನಸು: ಮೆಜೆಸ್ಟಿಕ್‌ TO ಏರ್‌ಪೋರ್ಟ್‌ ಸಬ್​ಅರ್ಬನ್ ರೈಲು ಯೋಜನೆಗೆ ಗ್ರೀನ್ ಸಿಗ್ನಲ್

ಇದು ನಿಜವಾದ ಪ್ರೀತಿಯೋ ಅಥವಾ ನಾಟಕವೋ

ಈ ವಿಡಿಯೋಗೆ ಜಾಲತಾಣಗಳಲ್ಲಿ ‘ಟ್ರೂ ಲವ್’ ಎಂಬ ಶೀರ್ಷಿಕೆ ನೀಡಲಾಗಿದೆಯಾದರೂ, ನೆಟ್ಟಿಗರು ಮಾತ್ರ ಇಬ್ಬಾಗವಾಗಿದ್ದಾರೆ. ಕೆಲವು ಬಳಕೆದಾರರು ಆ ಯುವಕನ ಪರಿಸ್ಥಿತಿ ಕಂಡು ಮರುಗಿದ್ದು, ಇತ್ತೀಚಿನ ದಿನಗಳಲ್ಲಿ ಇಷ್ಟು ಗಾಢವಾಗಿ ಪ್ರೀತಿಸುವವರು ಎಲ್ಲಿ ಸಿಗುತ್ತಾರೆ? ಎಂದು ಕಾಮೆಂಟ್ ಮಾಡಿದ್ದಾರೆ.

ಟೀಕೆ ಮತ್ತು ಅಪಹಾಸ್ಯ: ಇನ್ನು ಹಲವರು ಸಾರ್ವಜನಿಕ ಸ್ಥಳದಲ್ಲಿ ಇಂತಹ ನಾಟಕದ ಅಗತ್ಯವಿರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಒಬ್ಬ ಬಳಕೆದಾರರಂತೂ, ಇಷ್ಟೊಂದು ಬಿದ್ದು ಬಿದ್ದು ಬೇಡಿಕೊಳ್ಳುವ ಬದಲು, ಹೆತ್ತ ತಂದೆ-ತಾಯಿಯ ಪಾದ ಮುಟ್ಟಿ ಆಶೀರ್ವಾದ ತಗೋ , ಜೀವನದಲ್ಲಿ ಉದ್ಧಾರ ಆಗ್ತೀಯಾ, ಎಂದು ಉಚಿತ ಸಲಹೆ ನೀಡಿದ್ದಾರೆ.

ವಿಡಿಯೋ

ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ವರ್ತನೆಗೆ ಕಾನೂನು ಏನು ಹೇಳುತ್ತದೆ?

ಹಲವರು ಇದನ್ನು ವೈಯಕ್ತಿಕ ವಿಷಯ ಎಂದು ಭಾವಿಸಿದರೂ, ಭಾರತೀಯ ರೈಲ್ವೆ ಕಾಯ್ದೆಯಡಿ ಸಾರ್ವಜನಿಕ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುವುದು ಕಾನೂನುಬಾಹಿರವಾಗಿದೆ.

ಕಾನೂನು ಕ್ರಮ: ರೈಲ್ವೆ ಕಾಯ್ದೆಯ ಸೆಕ್ಷನ್ 145 ರ ಪ್ರಕಾರ, ರೈಲ್ವೆ ಆವರಣದಲ್ಲಿ ಸಾರ್ವಜನಿಕ ನೆಮ್ಮದಿಗೆ ಭಂಗ ತರುವುದು, ಅಸಭ್ಯವಾಗಿ ವರ್ತಿಸುವುದು ಅಥವಾ ಜನಸಂಚಾರಕ್ಕೆ ಅಡ್ಡಿಪಡಿಸುವುದು ಅಪರಾಧವಾಗಿದೆ. ಇದಕ್ಕಾಗಿ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲು ರೈಲ್ವೆ ಪೊಲೀಸರಿಗೆ ಅಧಿಕಾರವಿದೆ.

ಮುಂಬೈ ಮತ್ತು ದೆಹಲಿಯಂತಹ ಮೆಟ್ರೋ ನಗರಗಳ ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ರೀಲ್ಸ್ ಮಾಡಲು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆಯಲು ಇಂತಹ ನಕಲಿ ನಾಟಕಗಳನ್ನು ಸೃಷ್ಟಿಸುವ ಗ್ಯಾಂಗ್‌ಗಳೂ ಸಕ್ರಿಯವಾಗಿವೆ.

ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರಾಗಲಿ ಅಥವಾ ರೈಲ್ವೆ ಅಧಿಕಾರಿಗಳಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಬೊರಿವಾಲಿ ನಿಲ್ದಾಣದ ಈ ‘ಲವ್ ಡ್ರಾಮಾ’ ಮಾತ್ರ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗ್ತಾ ಇದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ತಪ್ಪುಗಳು ಸಹಜ, ನಮ್ಮ ಗುರಿ ವಿಶ್ವಕಪ್​: ಶ್ರೇಯಸ್ ಅಯ್ಯರ್ – Kannada News | Captain Shreyas Iyer Backs Youth After England Sweep

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು 4-0 ಅಂತರದಿಂದ ಹೀನಾಯವಾಗಿ ಸೋತ ಟೀಮ್ ಇಂಡಿಯಾ ಇದೀಗ ಏಕದಿನ ಸರಣಿಗಾಗಿ ಸಜ್ಜಾಗುತ್ತಿದೆ. ಇದರ ನಡುವೆ ಭಾರತ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರು ತಂಡದ ಭವಿಷ್ಯ ಹಾಗೂ ಆಟಗಾರರ ಮನೋಭಾವದ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.

ವಿದೇಶದಲ್ಲಿ ಕಠಿಣ ಸವಾಲು:

ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಪಡೆಯನ್ನು ಮುನ್ನಡೆಸಿದ್ದ ಅಯ್ಯರ್, ಈ ಪ್ರವಾಸವನ್ನು ಒಂದು ದೊಡ್ಡ ಕಲಿಕೆಯ ಹಂತ ಎಂದು ಕರೆದಿದ್ದಾರೆ. ಐರ್ಲೆಂಡ್ ವಿರುದ್ಧ 2-0 ಮತ್ತು ಇಂಗ್ಲೆಂಡ್ ವಿರುದ್ಧ 4-0 ಅಂತರದಿಂದ ಸೋತರೂ, ತಂಡದ ಮೇಲೆ ಭರವಸೆ ಕಳೆದುಕೊಳ್ಳದ ಅವರು, ಮುಂದಿನ ದಿನಗಳಲ್ಲಿ ನನ್ನ ಸುತ್ತ ಆಡುವ ಪ್ರತಿಯೊಬ್ಬ ಆಟಗಾರನನ್ನು ಬೆಳೆಸಲು ನಾನು ಅತ್ಯಂತ ಸಕಾರಾತ್ಮಕವಾಗಿ ಇರಬೇಕಾಗಿದೆ. ವಿಶೇಷವಾಗಿ ವಿದೇಶಿ ಪರಿಸ್ಥಿತಿಗಳಲ್ಲಿ ಇದು ತುಂಬಾ ಮುಖ್ಯ ಎಂದು ಹೇಳಿದ್ದಾರೆ.

ವಿಶ್ವಕಪ್ ಮೇಲೆ ಕಣ್ಣು:

ಮುಂದಿನ ಪ್ರಮುಖ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿದ ಶ್ರೇಯಸ್ ಅಯ್ಯರ್, ನಾವು ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ (2028) ಆಡಲಿದ್ದೇವೆ. ಅದಕ್ಕೂ ಮುನ್ನ ಹಲವು ಸರಣಿಗಳನ್ನು ಆಡಬೇಕಾಗಿದೆ. ಆದ್ದರಿಂದ ಇಂತಹ ಕಠಿಣ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ತಂಡದಲ್ಲಿ ಅತ್ಯುತ್ತಮ ಒಗ್ಗಟ್ಟು ಮತ್ತು ಸೌಹಾರ್ದತೆಯ ಅಗತ್ಯವಿದೆ” ಎಂದು ಪ್ರತಿಪಾದಿಸಿದರು.

ವಿಮರ್ಶೆಗಿಂತ ಭವಿಷ್ಯದತ್ತ ಗಮನ:

ಸಾರ್ವಜನಿಕ ಮತ್ತು ಸಾಮಾಜಿಕ ಜಾಲತಾಣಗಳ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಶ್ರೇಯಸ್, ಇದು ತಂಡದ ಪರಿವರ್ತನೆಯ ಅವಧಿಯಾಗಿದ್ದು ತಪ್ಪುಗಳು ಸಹಜ ಎಂದಿದ್ದಾರೆ. ಆಸ್ಟ್ರೇಲಿಯಾದಂತಹ ಬೌನ್ಸಿ ಪಿಚ್‌ಗಳನ್ನು ಎದುರಿಸಲು ಯುವ ಆಟಗಾರರಿಗೆ ಮಾನಸಿಕ ಧೈರ್ಯ ತುಂಬುವುದೇ ತಮ್ಮ ಮೊದಲ ಆದ್ಯತೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಯಾರೋ ಒಬ್ಬರ ಮೇಲೆ ತಪ್ಪು ಹೊರಿಸಲ್ಲ:

ಸರಣಿ ಸೋತಿದ್ದಕ್ಕೆ ತಂಡದ ಒಳಗಿನ ಯಾವುದೇ ಒಬ್ಬ ನಿರ್ದಿಷ್ಟ ಆಟಗಾರನನ್ನು ಹೊಣೆ ಮಾಡುವುದಿಲ್ಲ ಎಂದು ಅಯ್ಯರ್ ಸ್ಪಷ್ಟಪಡಿಸಿದ್ದಾರೆ. ನಾವು ಎಲ್ಲಿ ತಪ್ಪು ಮಾಡಿದ್ದೇವೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ನಾನು ಯಾರೊಬ್ಬರ ಕಡೆಗೂ ಬೆರಳು ತೋರಿಸುವುದಿಲ್ಲ. ನಾವೆಲ್ಲರೂ ಒಟ್ಟಾಗಿ ಸೋತಿದ್ದೇವೆ ಮತ್ತು ಒಟ್ಟಾಗಿಯೇ ಇದರಿಂದ ಕಲಿಯುತ್ತೇವೆ ಎಂದು ತಂಡಕ್ಕೆ ಬೆಂಬಲ ನೀಡಿದ್ದಾರೆ.

ಇದನ್ನೂ ಓದಿ: ಯಾನಿಕ್ ಸಿನ್ನರ್ ವಿಂಬಲ್ಡನ್ ಚಾಂಪಿಯನ್

ಒಟ್ಟಾರೆಯಾಗಿ, ಐಸಿಸಿ ಟಿ20 ತಂಡಗಳ ಅಂಕ ಪಟ್ಟಿಯಲ್ಲಿ ಅಗ್ರ ಶ್ರೇಯಾಂಕವನ್ನು ಕಳೆದುಕೊಂಡಿರುವುದು ದೊಡ್ಡ ಹಿನ್ನಡೆಯಾದರೂ, ಟೀಮ್ ಇಂಡಿಯಾ ಕಠಿಣ ಪರಿಶ್ರಮದೊಂದಿಗೆ ಬಲಿಷ್ಠವಾಗಿ ಪುನರಾಗಮನ ಮಾಡಲಿದೆ ಎಂಬ ಭರವಸೆಯನ್ನು ಶ್ರೇಯಸ್ ಅಯ್ಯರ್ ವ್ಯಕ್ತಪಡಿಸಿದ್ದಾರೆ.

Source link

ಯಾನಿಕ್ ಸಿನ್ನರ್ ವಿಂಬಲ್ಡನ್ ಚಾಂಪಿಯನ್ – Kannada News | Jannik sinner wimbledon champion in 2026

2026ರ ವಿಂಬಲ್ಡನ್​ ಟೆನಿಸ್ ಚಾಂಪಿಯನ್​​ಶಿಪ್​ನಲ್ಲಿ ವಿಶ್ವದ ನಂ. 1 ಟೆನಿಸ್ ಆಟಗಾರ ಇಟಲಿಯ ಯಾನಿಕ್ ಸಿನ್ನರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಆಲ್ ಇಂಗ್ಲೆಂಡ್ ಕ್ಲಬ್‌​ ಕೋರ್ಟ್​ನಲ್ಲಿ​ ಭಾನುವಾರ (ಜುಲೈ 12, 2026) ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆಫ್ ಅವರನ್ನು ಮಣಿಸಿ, ಸತತ ಎರಡನೇ ಬಾರಿಗೆ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ನಾಲ್ಕು ಸೆಟ್​​ಗಳಲ್ಲಿ ಪಂದ್ಯ ಅಂತ್ಯ:

ನಾಲ್ಕು ಸೆಟ್‌ಗಳ ಕಾಲ ನಡೆದ ಈ ರೋಚಕ ಹೋರಾಟದಲ್ಲಿ ಯಾನಿಕ್ ಸಿನ್ನರ್ 6–7(7), 7–6(2), 6–3, 6–4 ಸೆಟ್‌ಗಳಿಂದ ಝ್ವೆರೆಫ್ ವಿರುದ್ಧ ಜಯಭೇರಿ ಬಾರಿಸಿದರು.

ಸುಮಾರು 3 ಗಂಟೆ 46 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ, ಮೊದಲ ಸೆಟ್ ಸೋತರೂ ಅದ್ಭುತವಾಗಿ ಪುನರಾಗಮನ ಮಾಡಿದ ಸಿನ್ನರ್, ಝ್ವೆರೆಫ್ ವಿರುದ್ಧ ಸತತ 10ನೇ ಜಯ ದಾಖಲಿಸಿದರು.

  • ಮೊದಲ ಸೆಟ್: 6–7(7)- ಅಲೆಕ್ಸಾಂಡರ್ ಝ್ವೆರೆಫ್​ಗೆ ಜಯ
  • ಎರಡನೇ ಸೆಟ್: 7–6(2)- ಯಾನಿಕ್ ಸಿನ್ನರ್​ಗೆ ಜಯ
  • ಮೂರನೇ ಸೆಟ್: 6–3- ಯಾನಿಕ್ ಸಿನ್ನರ್​ಗೆ ಜಯ
  • ನಾಲ್ಕನೇ ಸೆಟ್: 6–4- ಯಾನಿಕ್ ಸಿನ್ನರ್​ಗೆ ಜಯ

ಸಿನ್ನರ್ ಸಾಧನೆ:

  • ಸತತ ಎರಡನೇ ಪ್ರಶಸ್ತಿ: ವಿಂಬಲ್ಡನ್ ಇತಿಹಾಸದಲ್ಲಿ (ಓಪನ್ ಎರಾ) ಸತತವಾಗಿ ಎರಡು ಬಾರಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಕೇವಲ 10ನೇ ಆಟಗಾರ ಎಂಬ ಹೆಗ್ಗಳಿಕೆಗೆ ಸಿನ್ನರ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ 2025 ರಲ್ಲಿ ಸಿನ್ನರ್ ವಿಂಬಲ್ಡನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
  • 5ನೇ ಗ್ರಾಂಡ್ ಸ್ಲಾಮ್: ಇದು ಸಿನ್ನರ್ ವೃತ್ತಿಜೀವನದ 5ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿಯಾಗಿದ್ದು, 2026ರ ಸಾಲಿನ ಅವರ ಮೊದಲ ಮೇಜರ್ ಪ್ರಶಸ್ತಿಯಾಗಿದೆ.
  •  100ನೇ ಜಯದ ಸಂಭ್ರಮ: ಈ ಗೆಲುವಿನೊಂದಿಗೆ ಯಾನಿಕ್ ಸಿನ್ನರ್ ಗ್ರಾಂಡ್ ಸ್ಲಾಮ್ ಇತಿಹಾಸದಲ್ಲಿ ತಮ್ಮ 100ನೇ ಪಂದ್ಯದ ಗೆಲುವು ಸಾಧಿಸಿದ್ದಾರೆ.

ಚಾಂಪಿಯನ್ ಕಂಬ್ಯಾಕ್:

ಫ್ರೆಂಚ್ ಓಪನ್‌ನಲ್ಲಿ ಬೇಗನೆ ಹೊರಬಿದ್ದಿದ್ದ ಯಾನಿಕ್ ಸಿನ್ನರ್, ಈ ಬಾರಿ ಯಾವುದೇ ಗ್ರಾಸ್-ಕೋರ್ಟ್ ಅಭ್ಯಾಸ ಪಂದ್ಯಗಳನ್ನು ಆಡದೆ ನೇರವಾಗಿ ವಿಂಬಲ್ಡನ್‌ಗೆ ಬಂದಿದ್ದರು. ಆರಂಭಿಕ ಸುತ್ತಿನಲ್ಲಿ ಮಿಯೋಮಿರ್ ಕೆಕ್ಮನೋವಿಕ್ ವಿರುದ್ಧ 5 ಸೆಟ್‌ಗಳ ಕಠಿಣ ಹೋರಾಟ ಎದುರಿಸಿದ ಅವರು, ಸೆಮಿಫೈನಲ್‌ನಲ್ಲಿ 7 ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಚ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದರು.

ಇದನ್ನೂ ಓದಿ: ಗೆಳೆತಿಯನ್ನು ಸೋಲಿಸಿ ವಿಂಬಲ್ಡನ್ ಕಿರೀಟ ಗೆದ್ದ ಲಿಂಡಾ ನೊಸ್ಕೋವಾ!

ಇತ್ತ ನೊವಾಕ್ ಜೊಕೊವಿಚ್ ಅವರಿಗೆ ಸೋಲುಣಿಸಿದ ಉತ್ಸಾಹದಲ್ಲೇ ಕಣಕ್ಕಿಳಿದಿದ್ದ ಯಾನಿಕ್ ಸಿನ್ನರ್ ಮೊದಲ ಸೆಟ್​ ಅನ್ನು ಹೊರತುಪಡಿಸಿ, ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಪರಿಣಾಮ ಮೊದಲ ಸೆಟ್ ಸೋತರೂ, ಆ ಬಳಿಕ ಬ್ಯಾಕ್ ಟು ಬ್ಯಾಕ್ 3 ಸೆಟ್​ಗಳನ್ನು ಗೆದ್ದು 2ನೇ ಬಾರಿ ವಿಂಬಲ್ಡನ್ ಅಂಗಳದಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.

Published On – 7:37 am, Mon, 13 July 26

Source link

ನಾಗಾರ್ಜುನ ಫಿಟ್‌ನೆಸ್ ರಹಸ್ಯ: 35 ವರ್ಷಗಳಿಂದ ಚಾಚೂ ತಪ್ಪದೆ ಪಾಲಿಸುತ್ತಿರುವ ರೂಲ್ಸ್ ಇದು – Kannada News | Nagarjuna Fitness Secrets: Age Defying Diet and Workout for Evergreen Look

ಟಾಲಿವುಡ್‌ನ ನಟ ಅಕ್ಕಿನೇನಿ ನಾಗಾರ್ಜುನ ಅವರ ಫಿಟ್‌ನೆಸ್ ಮತ್ತು ಎವರ್‌ಗ್ರೀನ್ ಲುಕ್ ಯಾವಾಗಲೂ ಪ್ರೇಕ್ಷಕರನ್ನು ಬೆರಗುಗೊಳಿಸುತ್ತದೆ. ಅರವತ್ತರ ಹರೆಯದಲ್ಲೂ ಯುವಕರಿಗೂ ಪೈಪೋಟಿ ನೀಡುವಂತೆ ಕಾಣುವ ಅವರ ಸೌಂದರ್ಯದ ರಹಸ್ಯ ಮಾತ್ರ ಅದ್ಭುತ. ಹಿಂದೆ ತಮ್ಮ ‘ನಾ ಸಾಮಿ ರಂಗ’ ಸಿನಿಮಾದ ಪ್ರಚಾರದ ವೇಳೆ ನಾಗಾರ್ಜುನ ಅವರು ಹಂಚಿಕೊಂಡಿದ್ದ ಫಿಟ್‌ನೆಸ್ ಮತ್ತು ಡಯಟ್ ರಹಸ್ಯಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ವೈರಲ್ ಆಗುತ್ತಿವೆ.

ಕೇವಲ ಸಿನಿಮಾದಲ್ಲಿ ಚೆಂದ ಕಾಣಲು ಮಾತ್ರವಲ್ಲದೆ, ದೈನಂದಿನ ಕೆಲಸಗಳನ್ನು ಸಕ್ರಿಯವಾಗಿ ಮಾಡಲು ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ ಎಂದು ನಾಗಾರ್ಜುನ ನಂಬುತ್ತಾರೆ. ಅದಕ್ಕಾಗಿ ಅವರು ಕಳೆದ 35 ವರ್ಷಗಳಿಂದ ಪಾಲಿಸುತ್ತಿರುವ ನಿಯಮಗಳು ಇಲ್ಲಿವೆ:

ಡಯಟ್ ಹೆಸರಲ್ಲಿ ಹೊಟ್ಟೆ ಹಸಿದುಕೊಳ್ಳಲ್ಲ

ತಮ್ಮ ಆಹಾರ ಪದ್ಧತಿಯ ಬಗ್ಗೆ ಮಾತನಾಡಿರುವ ನಾಗಾರ್ಜುನ, ‘ನಾನು ಡಯಟ್ ಹೆಸರಿನಲ್ಲಿ ಎಂದಿಗೂ ಉಪವಾಸ ಇರಲ್ಲ. ಹೊಟ್ಟೆ ತುಂಬುವಷ್ಟು ಚೆನ್ನಾಗಿ ಊಟ ಮಾಡುತ್ತೇನೆ. ಆದರೆ ನಾನು ತಿನ್ನುವ ಆಹಾರ ಸಮತೋಲಿತವಾಗಿರುತ್ತದೆ’ ಎಂದಿದ್ದಾರೆ. ಅವರ ಮಧ್ಯಾಹ್ನದ ಊಟದಲ್ಲಿ ಬಿಳಿ ಅನ್ನದ ಬದಲು ಬ್ರೌನ್ ರೈಸ್ , ಸ್ವಲ್ಪ ತುಪ್ಪ, ಮೂರು ಬಗೆಯ ತರಕಾರಿಗಳು, ಚಿಕನ್ ಅಥವಾ ಫಿಶ್, ಮೊಸರು ಮತ್ತು ಚಟ್ನಿ ಖಡ್ಡಾಯವಾಗಿ ಇರುತ್ತವೆ.

ಸಂಜೆ 7 ಗಂಟೆಗೇ ಡಿನ್ನರ್ ಮುಕ್ತಾಯ

ನಾಗಾರ್ಜುನ ಅವರ ಫಿಟ್‌ನೆಸ್‌ನ ಅತಿ ದೊಡ್ಡ ಸೂತ್ರವೆಂದರೆ ಅವರ ರಾತ್ರಿಯ ಊಟದ ಸಮಯ. ಕಳೆದ ಹಲವು ವರ್ಷಗಳಿಂದ ಅವರು ಪ್ರತಿದಿನ ಸಂಜೆ 7 ಗಂಟೆಯ ಒಳಗಾಗಿ ತಮ್ಮ ರಾತ್ರಿಯ ಭೋಜನವನ್ನು ಮುಗಿಸುತ್ತಾರೆ. ಇದು ಅವರ ಜೀರ್ಣಕ್ರಿಯೆಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ.

ಚಯಾಪಚಯ ಕ್ರಿಯೆ ಹೆಚ್ಚಿಸುವ ಮಾರ್ಗ

ಆಹಾರದ ಜೊತೆಗೆ ನಿಯಮಿತ ವ್ಯಾಯಾಮಕ್ಕೂ ನಾಗಾರ್ಜುನ ಅಷ್ಟೇ ಮಹತ್ವ ನೀಡುತ್ತಾರೆ. ‘ಬೆಳಗ್ಗೆ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಚಯಾಪಚಯ ಕ್ರಿಯೆ (ಮೆಟಬಾಲಿಸಂ) ಹೆಚ್ಚುತ್ತದೆ. ಇದರಿಂದಾಗಿ ನಾವು ಸುಮ್ಮನೆ ಕುಳಿತಿದ್ದರೂ ದೇಹದಲ್ಲಿ ಕ್ಯಾಲೊರಿಗಳು ಕರಗುತ್ತಿರುತ್ತವೆ’ ಎನ್ನುತ್ತಾರೆ ನಾಗಾರ್ಜುನ. ಈ ಫಿಟ್‌ನೆಸ್ ಸೂತ್ರವನ್ನು ಅವರು ಕಳೆದ 35 ವರ್ಷಗಳಿಂದ ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದಾರೆ.

ನಾಗಾರ್ಜುನ ಅವರಿಗಿರುವ ಆ ಒಂದು ವಿಚಿತ್ರ ಅಭ್ಯಾಸ

ಇಷ್ಟೆಲ್ಲಾ ಕಟ್ಟುನಿಟ್ಟಿನ ಡಯಟ್ ಪಾಲಿಸುವ ಕಿಂಗ್ ನಾಗಾರ್ಜುನ ಅವರಿಗೆ ಒಂದು ಕೌತುಕದ ಅಭ್ಯಾಸವೂ ಇದೆ. ರಾತ್ರಿ ಮಲಗುವ ಮುನ್ನ ಅವರಿಗೆ ಸ್ವಲ್ಪ ಸಿಹಿ ತಿನ್ನುವ ಹಂಬಲವಿರುತ್ತದೆಯಂತೆ. ‘ನನಗೆ ರಾತ್ರಿ ಮಲಗುವ ಮುನ್ನ ಸ್ವಲ್ಪ ಸಿಹಿ ತಿನ್ನದಿದ್ದರೆ ನಿದ್ದೆಯೇ ಬರುವುದಿಲ್ಲ’ ಎಂದು ಅವರು ತಮ್ಮ ಈ ವಿಚಿತ್ರ ಅಭ್ಯಾಸವನ್ನು ಹಂಚಿಕೊಂಡಿದ್ದಾರೆ.

ಗಮನಿಸಿ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಮತ್ತು ಸಲಹೆಗಳು ನಟನ ಹೇಳಿಕೆ ಆಧರಿಸಿವೆ. ಪ್ರತಿಯೊಬ್ಬರ ದೇಹದ ಪ್ರಕೃತಿ ಮತ್ತು ಆರೋಗ್ಯ ಸ್ಥಿತಿ ಭಿನ್ನವಾಗಿರುತ್ತದೆ. ಹಾಗಾಗಿ, ಯಾವುದೇ ಹೊಸ ಡಯಟ್ ಅಥವಾ ಫಿಟ್‌ನೆಸ್ ನಿಯಮಗಳನ್ನು ಅಳವಡಿಸಿಕೊಳ್ಳುವ ಮುನ್ನ ತಜ್ಞ ವೈದ್ಯರು ಅಥವಾ ಪ್ರಮಾಣೀಕೃತ ಡಯಟೀಷಿಯನ್ ಅವರ ಸಲಹೆ ಪಡೆಯುವುದು ಕಡ್ಡಾಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version