ಮೊದಲ ಬಾರಿ ಮಗನನ್ನು ಪರಿಚಯಿಸಿದ ಕತ್ರಿನಾ ಕೈಫ್‌, ವಿಕ್ಕಿ ಕೌಶಲ್: ಆದರೆ ಒಂದು ಷರತ್ತು

ಬಾಲಿವುಡ್‌ನ ಸ್ಟಾರ್ ಜೋಡಿ ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ ತಮ್ಮ ಮುದ್ದಾದ ಮಗನ ಪ್ರೈವೆಸಿ ವಿಷಯದಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ಸಿದ್ದಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ದಂಪತಿಯ ಹಾದಿಯನ್ನೇ ತುಳಿದಿದ್ದಾರೆ. ಇತ್ತೀಚೆಗಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ತಮ್ಮ ನವಜಾತ ಶಿಶು ವಿಹಾನ್​ನನ್ನು (Vihaan Kaushal) ಪಾಪರಾಜಿಗಳಿಗೆ ಪರಿಚಯಿಸಿರುವ ಈ ದಂಪತಿ, ಮಗನ ಫೋಟೋಗಳನ್ನು ಕ್ಲಿಕ್ಕಿಸದಂತೆ ಮತ್ತು ಸಾರ್ವಜನಿಕವಾಗಿ ಹಂಚಿಕೊಳ್ಳದಂತೆ ಮನವಿ ಮಾಡಿದ್ದಾರೆ.

ಏರ್‌ಪೋರ್ಟ್‌ನಲ್ಲಿ ವಿಕ್ಕಿ ಕೌಶಲ್ ಫೋಟೋಗಳಿಗೆ ಪೋಸ್ ನೀಡಿದರು. ಮಗ ವಿಹಾನ್‌ನನ್ನು ಎದೆಗೆ ಅಪ್ಪಿಕೊಂಡಿದ್ದ ಕತ್ರಿನಾ ಕೈಫ್ ಮಾತ್ರ ತಮ್ಮ ಹಾಗೂ ಮಗನ ಫೋಟೋ ಕ್ಲಿಕ್ಕಿಸದಂತೆ ವಿನಂತಿಸಿದರು. ಫೋಟೋ ತೆಗೆಯಲು ನಿರಾಕರಿಸಿದರೂ, ಈ ತಾರಾ ದಂಪತಿ ತಮ್ಮ ಮಗನನ್ನು ಮೊದಲ ಬಾರಿಗೆ ಮಾಧ್ಯಮದವರಿಗೆ ಹತ್ತಿರದಿಂದ ತೋರಿಸಿ ಪರಿಚಯಿಸಿದರು. ‘ಕತ್ರಿನಾ ಅವರು ವಿಕ್ಕಿ ಜೊತೆಯಲ್ಲೇ ಇದ್ದರು. ಆದರೆ ಮಗನೊಂದಿಗೆ ಫೋಟೋ ತೆಗೆಯದಂತೆ ವಿನಂತಿಸಿದರು. ಇದೇ ವೇಳೆ ಅವರು ಮಗನನ್ನು ನಮಗೆ ಪರಿಚಯಿಸಿದರು’ ಎಂದು ಏರ್‌ಪೋರ್ಟ್‌ನಲ್ಲಿದ್ದ ಪಾಪರಾಜಿಗಳು ತಿಳಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಯಾವಾಗಲೂ ತಮ್ಮ ವೈಯಕ್ತಿಕ ಜೀವನವನ್ನುಮಾಧ್ಯಮದ ಕ್ಯಾಮೆರಾಗಳಿಂದ ದೂರ ಇಡಲು ಇಷ್ಟಪಡುವ ಕತ್ರಿನಾ ಮತ್ತು ವಿಕ್ಕಿ, ಈ ಬಾರಿ ಮಗನನ್ನು ಮಾಧ್ಯಮಗಳಿಗೆ ಪರಿಚಯಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಜೊತೆಗೆ ವಿಹಾನ್ ಫೋಟೋಗಳನ್ನು ಎಲ್ಲೂ ಪ್ರಕಟಿಸಬಾರದು ಎಂಬ ಸ್ಪಷ್ಟ ನಿಯಮವನ್ನು ತಿಳಿಸುವ ಮೂಲಕ ಮಗನ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಮುಂದಾಗಿದ್ದಾರೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಕತ್ರಿನಾ ಮತ್ತು ವಿಕ್ಕಿ ದಂಪತಿ ಗಂಡು ಮಗುವನ್ನು ಬರಮಾಡಿಕೊಂಡಿದ್ದರು. ‘ನಮ್ಮ ಸಂತೋಷದ ಗುಚ್ಛ ಬಂದಿದೆ. ಅಪಾರ ಪ್ರೀತಿ ಮತ್ತು ಕೃತಜ್ಞತೆಯೊಂದಿಗೆ ನಮ್ಮ ಮುದ್ದಾದ ಮಗನನ್ನು ಸ್ವಾಗತಿಸುತ್ತಿದ್ದೇವೆ’ ಎಂದು ಪೋಸ್ಟ್‌ ಹಂಚಿಕೊಂಡಿದ್ದರು. ತದನಂತರ ಜನವರಿ 7ರಂದು ತಮ್ಮ ಮಗನಿಗೆ ವಿಹಾನ್ ಕೌಶಲ್ ಎಂದು ಹೆಸರಿಟ್ಟಿರುವುದಾಗಿ ಅಧಿಕೃತವಾಗಿ ತಿಳಿಸಿದ್ದರು.

ಇದನ್ನೂ ಓದಿ: ಕತ್ರಿನಾ ಕೈಫ್ ಜತೆಗಿನ ಸಂಸಾರ ವಿಕ್ಕಿ ಕೌಶಲ್​ಗೆ ಬೋರ್ ಆಯ್ತಾ? ವಿಡಿಯೋ ವೈರಲ್

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ 2021ರ ಡಿಸೆಂಬರ್ 9ರಂದು ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರಾದಲ್ಲಿ ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಮದುವೆಯಾಗುವವರೆಗೂ ತಮ್ಮ ಪ್ರೀತಿಯ ವಿಚಾರವನ್ನು ಈ ಜೋಡಿ ರಹಸ್ಯವಾಗಿಟ್ಟಿತ್ತು. ಅದೇ ರೀತಿ ಈಗ ಮಗನ ಫೋಟೋವನ್ನು ಕೂಡ ಅವರು ಬಹಿರಂಗಪಡಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 4:04 pm, Thu, 28 May 26

Source link

IND vs ENG: ಭಾರತ- ಇಂಗ್ಲೆಂಡ್‌ ನಡುವೆ ಟಿ20 ಸರಣಿ; ಮೊದಲ ಪಂದ್ಯ ಎಷ್ಟು ಗಂಟೆಗೆ ಆರಂಭ?

ಮಹಿಳಾ ಟಿ20 ವಿಶ್ವಕಪ್ (Women’s T20 World Cup) ಇದೇ ಜೂನ್ 12 ರಿಂದ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಭಾರತ ವನಿತಾ ಪಡೆ ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿಯನ್ನು (India vs England T20 series) ಆಡಲಿದೆ. ಟಿ20 ವಿಶ್ವಕಪ್‌ಗೆ ತಯಾರಿ ದೃಷ್ಟಿಯಿಂದ ಈ ಸರಣಿ ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಅದರಲ್ಲೂ ಏಕದಿನ ಕ್ರಿಕೆಟ್​ನಲ್ಲಿ ಹಾಲಿ ಚಾಂಪಿಯನ್ ಆಗಿರುವ ಹರ್ಮನ್​ಪ್ರೀತ್ ಕೌರ್ ಪಡೆ, ಇದೀಗ ಟಿ20 ವಿಶ್ವಕಪ್​ನಲ್ಲೂ ಟ್ರೋಫಿ ಎತ್ತಿಹಿಡಿಯುವ ಇರಾದೆಯಲ್ಲಿದೆ. ಅದು ಸಾಧ್ಯವಾಗಬೇಕಾದರೆ ಭಾರತ ತಂಡ, ಇಂಗ್ಲೆಂಡ್‌ ವಿರುದ್ಧ ಭರ್ಜರಿ ಪ್ರದರ್ಶನ ನೀಡುವ ಮೂಲಕ ತನ್ನ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಂಡು ಚುಟುಕು ವಿಶ್ವಸಮರಕ್ಕೆ ಕಾಲಿಡಬೇಕಿದೆ.

ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ 4 ಪಂದ್ಯಗಳ ಟಿ20 ಸರಣಿ ಮತ್ತು ಒಂದು ಟೆಸ್ಟ್ ಪಂದ್ಯವನ್ನು ಆಡಲಿದೆ. ಟೀಂ ಇಂಡಿಯಾದ ಪ್ರವಾಸವು ಮೇ 28 ರ ಗುರುವಾರದಿಂದ ಪ್ರಾರಂಭವಾಗಲಿದೆ. ಈ ಟಿ2 ಸರಣಿಯಲ್ಲಿ ಹರ್ಮನ್ಪ್ರೀತ್ ಕೌರ್ ತಂಡವನ್ನು ಮುನ್ನಡೆಸಲಿದ್ದು, ಸ್ಮೃತಿ ಮಂಧಾನ ಉಪನಾಯಕಿಯಾಗಿರುತ್ತಾರೆ. ಅಲ್ಲದೆ, ಷಾರ್ಲೆಟ್ ಡೀನ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದು, ಈ ಸರಣಿಯ ಮೊದಲ ಟಿ20 ಪಂದ್ಯದ ಪೂರ್ಣ ವಿವರ ಇಂತಿದೆ.

ಇಂಗ್ಲೆಂಡ್ ಮತ್ತು ಭಾರತ ಮಹಿಳಾ ತಂಡದ ನಡುವಿನ ಮೊದಲ ಟಿ20 ಪಂದ್ಯ ಯಾವಾಗ ನಡೆಯಲಿದೆ?

ಇಂಗ್ಲೆಂಡ್ ಮತ್ತು ಭಾರತ ಮಹಿಳಾ ತಂಡಗಳ ನಡುವಿನ ಮೊದಲ ಟಿ20 ಪಂದ್ಯವು ಮೇ 28 ರ ಗುರುವಾರ ನಡೆಯಲಿದೆ.

ಇಂಗ್ಲೆಂಡ್ ಮತ್ತು ಭಾರತ ಮಹಿಳಾ ತಂಡದ ನಡುವಿನ ಮೊದಲ ಟಿ20 ಪಂದ್ಯ ಎಲ್ಲಿ ನಡೆಯುತ್ತದೆ?

ಚೆಲ್ಮ್ಸ್‌ಫೋರ್ಡ್‌ನ ಕೌಂಟಿ ಮೈದಾನದಲ್ಲಿ ಇಂಗ್ಲೆಂಡ್ ಮತ್ತು ಭಾರತ ಮಹಿಳಾ ತಂಡದ ನಡುವಿನ ಮೊದಲ ಟಿ20 ಪಂದ್ಯ ನಡೆಯುತ್ತಿದೆ.

ಇಂಗ್ಲೆಂಡ್ ಮತ್ತು ಭಾರತ ಮಹಿಳಾ ತಂಡದ ನಡುವಿನ ಮೊದಲ ಟಿ20 ಪಂದ್ಯ ಯಾವಾಗ ಪ್ರಾರಂಭವಾಗುತ್ತದೆ?

ಇಂಗ್ಲೆಂಡ್ ಮತ್ತು ಭಾರತ ಮಹಿಳಾ ತಂಡದ ನಡುವಿನ ಮೊದಲ ಟಿ20 ಪಂದ್ಯವು ಭಾರತೀಯ ಕಾಲಮಾನ ರಾತ್ರಿ 11 ಗಂಟೆಗೆ ಪ್ರಾರಂಭವಾಗಲಿದೆ.

ಇಂಗ್ಲೆಂಡ್ ಮತ್ತು ಭಾರತ ಮಹಿಳಾ ತಂಡದ ನಡುವಿನ ಮೊದಲ ಟಿ20 ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಇಂಗ್ಲೆಂಡ್ ಮತ್ತು ಭಾರತ ಮಹಿಳಾ ತಂಡದ ನಡುವಿನ ಮೊದಲ ಟಿ20 ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಸೋನಿ ಲಿವ್ ಅಪ್ಲಿಕೇಶನ್‌ನಲ್ಲಿಯೂ ಪಂದ್ಯವನ್ನು ನೇರಪ್ರಸಾರ ವೀಕ್ಷಿಸಬಹುದು.

Womens T20 World Cup 2026: ಮಹಿಳಾ ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಕಟ

ಹೆಡ್ ಟು ಹೆಡ್ ದಾಖಲೆ

ಇಲ್ಲಿಯವರೆಗೆ, ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವೆ 35 ಟಿ20 ಪಂದ್ಯಗಳು ನಡೆದಿವೆ. ಈ 35 ಪಂದ್ಯಗಳಲ್ಲಿ ಇಂಗ್ಲೆಂಡ್ ಮಹಿಳಾ ತಂಡವು 24 ಪಂದ್ಯಗಳನ್ನು ಗೆದ್ದಿದ್ದರೆ, ಟೀಂ ಇಂಡಿಯಾ ಕೇವಲ 11 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಆದಾಗ್ಯೂ ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡ ಟಿ20 ಸರಣಿಯನ್ನು ಗೆದ್ದುಕೊಂಡಿರುವುದು ತಂಡದ ಮನೋಬಲವನ್ನು ಹೆಚ್ಚಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:56 pm, Thu, 28 May 26

Source link

ಸಿಎಂ ಸ್ಥಾನಕ್ಕೆ ರಾಜೀನಾಮೆ ಬಳಿಕ ಸಿದ್ದರಾಮಯ್ಯ ಫಸ್ಟ್​​ ರಿಯಾಕ್ಷನ್; ಇಲ್ಲಿದೆ ಮಾಹಿತಿ

ಬೆಂಗಳೂರು, ಮೇ 28: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ಮಾಹಿತಿ ಹಂಚಿಕೊಂಡಿದ್ದಾರೆ. ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಲೋಕಭವನಕ್ಕೆ ತೆರಳಿ ರಾಜೀನಾಮೆ ಪತ್ರ ನೀಡಿದ್ದೇನೆ. ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಬೆಂಗಳೂರಿನಲ್ಲಿ ಇಲ್ಲ. ಹಾಗಾಗಿ ಅವರ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ಮೊನ್ನೆ ಹೈಕಮಾಂಡ್​ನವರು ರಾಜೀನಾಮೆ ಕೊಡಿ ಎಂದು ಹೇಳಿದ್ದರು. ಹೈಕಮಾಂಡ್​ ಸೂಚಿಸಿದಾಗ ಅದಕ್ಕೆ ಸಮ್ಮತಿ ಸೂಚಿಸಿದ್ದೆ. ನಾಡಿದ್ದು ರಾಜೀನಾಮೆ ಕೊಡುತ್ತೇನೆ ಎಂದು ಅವರಿಗೆ ತಿಳಿಸಿದ್ದೆ. ಹಾಗಾಗಿ ಇಂದು ಸಿಎಂ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸಿದ್ದೇನೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಿರ್ದೇಶಕನಾದ ಹಿರಿಯ ನಟ ಮೂಗು ಸುರೇಶ್; ‘ಕ್ಷಮೆಯಿರಲಿ ತಂದೆ’ ಬಿಡುಗಡೆಗೆ ಸಿದ್ಧ

ಹಿರಿಯ ನಟ ಮೂಗು ಸುರೇಶ್ (ಎಂ.ಎನ್. ಸುರೇಶ್) ಅವರು ಹಲವು ವರ್ಷಗಳಿಂದ  ಕನ್ನಡ ಚಿತ್ರರಂಗದಲ್ಲಿ (Kannada Film Industry) ಸಕ್ರಿಯರಾಗಿದ್ದಾರೆ. ಹಾಸ್ಯನಟನಾಗಿ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಇಷ್ಟು ವರ್ಷಗಳ ಅನುಭವದಿಂದ ಅವರು ಈಗ ಹೊಸ ಹೆಜ್ಜೆ ಇಟ್ಟಿದ್ದಾರೆ. ಹೌದು, ಇದೇ ಮೊದಲ ಬಾರಿಗೆ ಅವರು ನಿರ್ದೇಶಕನಾಗಿ, ನಿರ್ಮಾಪಕನಾಗಿ ಬಡ್ತಿ ಪಡೆದಿದ್ದಾರೆ. ‘ಕ್ಷಮೆಯಿರಲಿ ತಂದೆ’ ಸಿನಿಮಾಗೆ ಮೂಗು ಸುರೇಶ್ (Moogu Suresh) ಅವರು ನಿರ್ದೇಶನ ಮಾಡುವುದರ ಜೊತೆಗೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಶೀರ್ಷಿಕೆಯೇ ಗಮನ ಸೆಳೆಯುತ್ತಿದೆ.

ಎಂ.ಎನ್. ಸುರೇಶ್ ಅವರು ರಂಗಭೂಮಿ, ಕಿರುತೆರೆ, ಹಿರಿತೆರೆ ಕಲಾವಿದರಾಗಿ ಕಳೆದ ಮೂರು ದಶಕಗಳಿಂದ ಜನಪ್ರಿಯರಾಗಿದ್ದಾರೆ. ‘ಕ್ಷಮೆಯಿರಲಿ ತಂದೆ’ ಸಿನಿಮಾಗೆ ಅವರು ಈಗಾಗಲೇ ಶೂಟಿಂಗ್ ಮುಗಿಸಿದ್ದಾರೆ. ಜೂನ್ 12ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈಗ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಮೋಷನ್ ಪೋಸ್ಟರ್ ಹಾಗೂ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲಾಯಿತು.

ಚಂದನವನದ ಹೆಸರಾಂತ ನಿರ್ದೇಶಕರಾದ ಟಿ.ಎಸ್. ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ನಿರ್ಮಾಪಕ ಉಮೇಶ್ ಬಣಕಾರ್ ಹಾಗೂ ಮೇಕಪ್ ರಾಮಕೃಷ್ಣ ಅವರು ‘ಕ್ಷಮೆಯಿರಲಿ ತಂದೆ’ ಚಿತ್ರದ ಸುದ್ದಿಗೋಷ್ಠಿಗೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮೋಷನ್ ಪೋಸ್ಟರ್, ಲಿರಿಕಲ್ ವಿಡಿಯೋ ಅನಾವರಣ ಮಾಡಿದರು. ಟ್ರೇಲರ್ ನೋಡಿದ ಅವರು ಸಿನಿಮಾಗೆ ಶುಭ ಹಾರೈಸಿದರು.

‘ಕ್ಷಮೆಯಿರಲಿ ತಂದೆ’ ಸಿನಿಮಾದ ಪೋಷನ್ ಪೋಸ್ಟರ್:

ಎಂ.ಎನ್. ಸುರೇಶ್ ಅವರು ನಿರ್ಮಾಪಕನಾಗಿ ಹಾಗೂ ನಿರ್ದೇಶಕರಾಗಿ ಗೆಲುವು ಪಡೆಯಲಿ ಎಂದು ಎಲ್ಲರೂ ಹಾರೈಸಿದರು. ಈ ವೇಳೆ ಸುರೇಶ್ ಅವರು ಮಾತನಾಡಿದರು. ‘ನಾನು ಕೆಲವು ಸಿನಿಮಾಗಳಿಗೆ ಸಹ-ನಿರ್ಮಾಪಕನಾಗಿದ್ದೆ. ಪೂರ್ಣ‌ಪ್ರಮಾಣದ ನಿರ್ಮಾಪಕನಾಗಿರುವುದು ಈ ಸಿನಿಮಾದಿಂದ. ನಾನು ನಿರ್ದೇಶನ ಮಾಡಬೇಕೆಂದುಕೊಂಡಿರಲಿಲ್ಲ. ನನ್ನ ಕಾರ್ಯವೈಖರಿಯನ್ನು ಹತ್ತಿರದಿಂದ ಬಲ್ಲ ಸ್ನೇಹಿತರು ನೀವೇ ನಿರ್ದೇಶನ ಮಾಡಿ ಅಂತ ಹೇಳಿದರು’ ಎಂದಿದ್ದಾರೆ ಸುರೇಶ್.

ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ 93ರ ಸಂಭ್ರಮ: ಒಂದೇ ವೇದಿಕೆಯಲ್ಲಿ ಸೇರಿದ ಸೆಲೆಬ್ರಿಟಿಗಳು

‘ಇದು ನನ್ನ ಮೊದಲ ನಿರ್ದೇಶನದ ಸಿನಿಮಾ ಆದ್ದರಿಂದ ಬೇರೆಯವರು ದುಡ್ಡು ಹಾಕುವುದು ಬೇಡ ಅಂತ ನಾನು ಕೂಡಿಟ್ಟಿದ್ದ ಹಣವನ್ನೇ ಈ ಸಿನಿಮಾಗೆ ಹಾಕಿ ನಿರ್ಮಾಣ ಮಾಡಿದ್ದೇನೆ. ಇದಕ್ಕೆ ನನ್ನ ಕುಟುಂಬದ ಸಹಕಾರವೂ ಇದೆ. ಶೀರ್ಷಿಕೆಯೇ ತಿಳಿಸುವಂತೆ ಇದೊಂದು ತಂದೆ-ಮಗನ ಬಾಂಧವ್ಯದ ಸಿನಿಮಾ. ಹರೀಶ್ ಅವರು ಕಥೆ ಬರೆದಿದ್ದಾರೆ’ ಎಂದು ಎಂ.ಎನ್. ಸುರೇಶ್ ಅವರು ಮಾಹಿತಿ ನೀಡಿದರು. ಸೂರ್ಯಕಾಂತ್ ಅವರ ಛಾಯಾಗ್ರಹಣ, ಮುತ್ತುರಾಜ್ ಅವರ ಸಂಕಲನ, ಪುಣ್ಯೇಶ್ ಕುಮಾರ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IAS Vandana Meena: ಕೋಚಿಂಗ್ ಸೆಂಟರ್ ಮುಖವೇ ನೋಡದೇ, ಕೇವಲ ಯೂಟ್ಯೂಬ್ ನೋಡಿ ಓದಿದ ಹಳ್ಳಿ ಹುಡುಗಿ ಇಂದು IAS ಆಫೀಸರ್!

ಹಳ್ಳಿ ಹುಡುಗಿ ಇಂದು IAS ಆಫೀಸರ್Image Credit source: Instagram/ias_vandanameen

ದೇಶದ ಲಕ್ಷಾಂತರ ಯುವ ಜನತೆ ‘ಯುಪಿಎಸ್‌ಸಿ’ (UPSC) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ IAS ಅಥವಾ IPS ಅಧಿಕಾರಿಗಳಾಗಬೇಕೆಂದು ಕನಸು ಕಾಣುತ್ತಾರೆ. ಆದರೆ, ಈ ಪರೀಕ್ಷೆಯು ದೇಶದಲ್ಲೇ ಅತ್ಯಂತ ಕಠಿಣ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅತ್ಯಂತ ದುಬಾರಿ ಕೋಚಿಂಗ್ ಸೆಂಟರ್‌ಗಳು, ದೊಡ್ಡ ದೊಡ್ಡ ಇನ್‌ಸ್ಟಿಟ್ಯೂಟ್‌ಗಳಿಗೆ ಹೋದರೆ ಮಾತ್ರ ಯುಪಿಎಸ್‌ಸಿ ಪಾಸ್ ಆಗಲು ಸಾಧ್ಯ ಎಂದು ಹೇಳಲಾಗುತ್ತದೆ. ಆದರೆ, ಯಾವುದೇ ಕೋಚಿಂಗ್ ಇಲ್ಲದೆ, ಕೇವಲ ಸ್ವಯಂ ಅಧ್ಯಯನ (Self Study) ಮತ್ತು ಯೂಟ್ಯೂಬ್ ಸಹಾಯದಿಂದ ಮೊದಲ ಪ್ರಯತ್ನದಲ್ಲೇ ದೇಶದ ಅತ್ಯುನ್ನತ ಪರೀಕ್ಷೆ ಪಾಸ್ ಮಾಡಿದ ಸಾಧಕಿಯೊಬ್ಬರಿದ್ದಾರೆ. ಅವರೇ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸುತ್ತಿರುವ ಐಎಎಸ್ ವಂದನಾ ಮೀನಾ.

ರಾಜಸ್ಥಾನದ ಹಳ್ಳಿಯೊಂದರಿಂದ ಬಂದು, ಸೀಮಿತ ಸಂಪನ್ಮೂಲಗಳ ನಡುವೆಯೇ ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಕನಸನ್ನು ನನಸಾಗಿಸಿಕೊಂಡ ವಂದನಾ ಅವರ ಯಶೋಗಾಥೆ ನಿಜಕ್ಕೂ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ.

ಹಳ್ಳಿಯಿಂದ ದಿಲ್ಲಿಯವರೆಗೆ ವಂದನಾ ಅವರ ಆರಂಭಿಕ ದಿನಗಳು:

ಐಎಎಸ್ ವಂದನಾ ಮೀನಾ ಮೂಲತಃ ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯವರು. ಬಾಲ್ಯದ ಕೆಲವು ವರ್ಷಗಳನ್ನು ಹಳ್ಳಿಯಲ್ಲೇ ಕಳೆದ ನಂತರ, ಇವರ ಕುಟುಂಬ ದಿಲ್ಲಿಗೆ ಸ್ಥಳಾಂತರಗೊಂಡಿತು. ವಂದನಾ ಅವರ ತಂದೆ ಪೃಥ್ವಿರಾಜ್ ಮೀನಾ ಅವರು ದಿಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕುಟುಂಬ ದಿಲ್ಲಿಗೆ ಬಂದ ನಂತರ ವಂದನಾ ಅವರ ಶಿಕ್ಷಣ ಶರವೇಗದಲ್ಲಿ ಸಾಗಿತು.

ಕಾನ್ವೆಂಟ್ ಶಾಲೆಯಿಂದ ದಿಲ್ಲಿ ವಿವಿಯವರೆಗೆ ಶಿಕ್ಷಣ:

ವಂದನಾ ದಿಲ್ಲಿಯ ಪ್ರಸಿದ್ಧ ಸೇಂಟ್ ಕೊಲಂಬಸ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಪ್ರತಿಷ್ಠಿತ ದಿಲ್ಲಿ ವಿಶ್ವವಿದ್ಯಾಲಯದಿಂದ ‘ಗಣಿತ ಗೌರವ’ (Mathematics Honours) ಪದವಿ ಪಡೆದರು. ಬಾಲ್ಯದಿಂದಲೇ ದೇಶ ಸೇವೆ ಮಾಡಬೇಕೆಂಬ ಹಂಬಲ ಹೊಂದಿದ್ದ ವಂದನಾ, ಪದವಿ ಮುಗಿಯುತ್ತಿದ್ದಂತೆಯೇ ನಾಗರಿಕ ಸೇವೆಗೆ (Civil Services) ಸೇರಲು ಗಂಭೀರ ಸಿದ್ಧತೆ ಆರಂಭಿಸಿದರು.

ದುಬಾರಿ ಕೋಚಿಂಗ್ ಇಲ್ಲ, ಯೂಟ್ಯೂಬ್‌ ಅತ್ಯುತ್ತಮ ಗುರು:

ಪದವಿ ಮುಗಿದ ನಂತರ ವಂದನಾ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿದಾಗ, ಅವರು ಲಕ್ಷಾಂತರ ರೂಪಾಯಿ ವೆಚ್ಚದ ಯಾವುದೇ ಕೋಚಿಂಗ್ ಸಂಸ್ಥೆಗಳಿಗೆ ಸೇರಲಿಲ್ಲ. ಬದಲಿಗೆ ಮನೆಯನ್ನೇ ಓದುವ ಕೋಣೆಯನ್ನಾಗಿ ಮಾಡಿಕೊಂಡರು. ಇಂಟರ್ನೆಟ್‌ನಲ್ಲಿ ಸಿಗುವ ಉಚಿತ ಮಾಹಿತಿಯನ್ನು ಬಳಸಿಕೊಂಡರು. ಯೂಟ್ಯೂಬ್‌ನಲ್ಲಿ ಲಭ್ಯವಿರುವ ಪ್ರಮುಖ ಅಕಾಡೆಮಿಕ್ ಉಪನ್ಯಾಸಗಳನ್ನು ವೀಕ್ಷಿಸುತ್ತಿದ್ದರು. ಆನ್‌ಲೈನ್ ಇ-ಪುಸ್ತಕಗಳು ಹಾಗೂ ಪಿಡಿಎಫ್ ಮೆಟೀರಿಯಲ್‌ಗಳ ಮೂಲಕ ನೋಟ್ಸ್ ಮಾಡಿಕೊಳ್ಳುತ್ತಿದ್ದರು.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ದಿನಕ್ಕೆ 15-16 ಗಂಟೆಗಳ ಕಠಿಣ ಅಧ್ಯಯನ:

ಮಾಧ್ಯಮ ವರದಿಗಳ ಪ್ರಕಾರ, ಪರೀಕ್ಷೆಯ ಸಿದ್ಧತೆಯ ಸಮಯದಲ್ಲಿ ವಂದನಾ ದಿನಕ್ಕೆ ಸುಮಾರು 15 ರಿಂದ 16 ಗಂಟೆಗಳ ಕಾಲ ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದರು. ಸರಿಯಾದ ಸ್ಟ್ರಾಟಜಿ ಮತ್ತು ಕಠಿಣ ಪರಿಶ್ರಮವೇ ಅವರ ಯಶಸ್ಸಿನ ಸೀಕ್ರೆಟ್.

ಮೊದಲ ಪ್ರಯತ್ನದಲ್ಲೇ 330ನೇ ರ‍್ಯಾಂಕ್, ಈಗ ಗುಜರಾತ್‌ನಲ್ಲಿ SDM:

ನಿರಂತರ ಪರಿಶ್ರಮಕ್ಕೆ ಕೊನೆಗೂ ಫಲ ಸಿಕ್ಕಿತು. 2021ರ ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶ ಬಂದಾಗ ವಂದನಾ ಅವರ ಹೆಸರು ಸಾಧಕರ ಪಟ್ಟಿಯಲ್ಲಿತ್ತು. ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಅಖಿಲ ಭಾರತ ಮಟ್ಟದಲ್ಲಿ 330ನೇ ರ‍್ಯಾಂಕ್ ಪಡೆಯುವ ಮೂಲಕ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು.

ಪ್ರಸ್ತುತ ವಂದನಾ ಮೀನಾ ಅವರು ಗುಜರಾತ್‌ನ ಜುನಾಗಢ ಜಿಲ್ಲೆಯ ಕೆಸೋಡ್ ಪ್ರದೇಶದಲ್ಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಆಗಿ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಫೀಸ್ ಕೊಡಲು ಸಾಧ್ಯವಿಲ್ಲ ಎಂದು ಕಂಗೆಡುವ ಗ್ರಾಮೀಣ ಭಾಗದ ಮತ್ತು ಬಡ ವಿದ್ಯಾರ್ಥಿಗಳಿಗೆ ವಂದನಾ ಮೀನಾ ಅವರ ಈ ಸಾಧನೆ ಒಂದು ಬೆಳಕಿನ ಕಿಂಡಿಯಾಗಿದೆ. ಸಾಧಿಸುವ ಛಲವಿದ್ದರೆ ಸೌಲಭ್ಯಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ ಎಂಬುದಕ್ಕೆ ಇವರೇ ಸಾಕ್ಷಿ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಹುದ್ದೆ ತೊರೆದ ಸಿದ್ದರಾಮಯ್ಯ: ರಾಜ್ಯಪಾಲರ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಕೆ

ಬೆಂಗಳೂರು, ಮೇ 28: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ತಮ್ಮ ರಾಜೀನಾಮೆ ಪತ್ರವನ್ನು ಅಧಿಕೃತವಾಗಿ ಸಲ್ಲಿಸಿದ್ದಾರೆ. ರಾಜ್ಯಪಾಲರು ಪ್ರಸ್ತುತ ಅಲಭ್ಯವಾಗಿರುವುದರಿಂದ, ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಕಾರ್ಯದರ್ಶಿಗೆ ಸಲ್ಲಿಕೆ ಮಾಡಲಾಗಿದೆ. ಈ ಕಾರಣದಿಂದಾಗಿ ರಾಜೀನಾಮೆ ತಕ್ಷಣಕ್ಕೆ ಅಂಗೀಕಾರವಾಗುವುದಿಲ್ಲವಾದರೂ, ಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ 2902 ದಿನಗಳ ಸುದೀರ್ಘ ಅವಧಿಗೆ ಆಡಳಿತ ನಡೆಸಿದ್ದು, ಈ ಮೂಲಕ ದೇವರಾಜ ಅರಸರ (2792 ದಿನಗಳು) ದಾಖಲೆಯನ್ನು ಮೀರಿ ರಾಜ್ಯ ಕಂಡ ಏಕೈಕ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಸಿದ್ದರಾಮಯ್ಯ ಅವರು, ಈ ಮೂಲಕ ಮುಖ್ಯಮಂತ್ರಿ ಗಾದಿಗೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ಅವರ ರಾಜಕೀಯ ಮುಂದಿನ ಹಾದಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

10ನೇ ಕ್ಲಾಸ್ ಓದಿದ್ರೆ ಸಾಕು, ಹೆಣ್ಮಕ್ಕಳಿಗೆ ಎಲ್​ಐಸಿ ಬಿಮಾ ಸಖಿ ಯೋಜನೆಯಿಂದ ಮಾಸಿಕ ಆದಾಯ ಮತ್ತು ವೃತ್ತಿಜೀವನ

ಭಾರತದ ಅತಿದೊಡ್ಡ ಜನರಲ್ ಇನ್ಷೂರೆನ್ಸ್ ಕಂಪನಿಯಾದ ಭಾರತೀಯ ಜೀವ ವಿಮಾ ನಿಗಮ (LIC) ಕೋಟ್ಯಂತರ ಜನರಿಗೆ ಜೀವ ವಿಮೆ ರಕ್ಷಣೆ ಕೊಟ್ಟಿದೆ. ಲಕ್ಷಾಂತರ ಕುಟುಂಬಗಳಿಗೆ ಉದ್ಯೋಗ ಮತ್ತು ರೆಗ್ಯುಲರ್ ಇನ್ಕಮ್ ಕೊಟ್ಟಿದೆ. ಸಾಕಷ್ಟು ಸಂಖ್ಯೆಯ ಏಜೆಂಟ್​ಗಳ ಬಲ ಎಲ್​ಐಸಿಗೆ ಇದೆ. ಇದೇ ವೇಳೆ, ಎಲ್​ಐಸಿಯಲ್ಲಿ ಬಿಮಾ ಸಖಿ ಯೋಜನೆ (LIC Bima Sakhi Yojana) ಮೂಲಕ ಆರ್ಥಿಕ ಅನನುಕೂಲದ ಮಹಿಳೆಯರಿಗೆ ನಿಯಮಿತ ಆದಾಯ ಕೊಡುತ್ತಿದೆ ಮತ್ತು ವೃತ್ತಿ ಆಯ್ಕೆ ಒದಗಿಸಿದೆ.

ಏನಿದು ಎಲ್​ಐಸಿ ಬಿಮಾ ಸಖಿ ಯೋಜನೆ?

ಬಿಮಾ ಸಖಿ ಯೋಜನೆಯಲ್ಲಿ ಎಲ್​ಐಸಿ ಏಜೆಂಟ್ ಆಗಿ ಅಣಿಯಾಗಲು ತರಬೇತಿ ಕೊಡಲಾಗುತ್ತದೆ. ಇದಕ್ಕೆ 10ನೇ ಕ್ಲಾಸ್ ಪಾಸಾದ ಮತ್ತು 18 ವರ್ಷ ಮೇಲ್ಪಟ್ಟ ಹಾಗೂ 70 ವರ್ಷ ಕೆಳಪಟ್ಟ ಮಹಿಳೆಯರು ಅರ್ಹರಾಗಿರುತ್ತಾರೆ. ಈ ತರಬೇತಿ ಅವಧಿ ಮೂರು ವರ್ಷ ಇರುತ್ತದೆ. ಈ ವೇಳೆ, ಅಭ್ಯರ್ಥಿಗಳಿಗೆ ತಿಂಗಳಿಗೆ 7,000 ರೂವರೆಗೂ ಸ್ಟೈಪೆಂಡ್ ಕೊಡಲಾಗುತ್ತದೆ.

ಇದನ್ನೂ ಓದಿ: ಮಾರುಕಟ್ಟೆ ಕುಸಿದಾಗ ಹೆದರಿಬಿಟ್ಟರೆ ಲಕ್ಷ್ಮೀಕಟಾಕ್ಷ ತಪ್ಪಿ ಹೋದೀತು ಜೋಕೆ..! ಶೆಲ್ಬಿ ಡೇವಿಸ್ ಸಲಹೆ ಕೇಳಿ

ಅಭ್ಯರ್ಥಿಗಳಿಗೆ ಏನು ತರಬೇತಿ ಕೊಡಲಾಗುತ್ತದೆ?

ಎಲ್​ಐಸಿ ಬಿಮಾ ಸಖಿ ಯೋಜನೆಗೆ ಆಯ್ಕೆಯಾದ ಮಹಿಳೆಯರಿಗೆ ಇನ್ಷೂರೆನ್ಸ್ ಸರ್ವಿಸ್​ಗಳು, ಹಣಕಾಸು ಸಾಕ್ಷರತೆಯ ವಿಚಾರವಾಗಿ ತಿಳಿವಳಿಕೆ ಮೂಡಿಸಲಾಗುತ್ತದೆ. ಎಲ್​ಐಸಿಯ ಎಲ್ಲಾ ಉತ್ಪನ್ನಗಳನ್ನು ಪರಿಚಯಿಸಲಾಗುತ್ತದೆ.

ಈ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮಹಿಳೆಯರು ಪೂರ್ಣ ಪ್ರಮಾಣದ ಎಲ್​ಐಸಿ ಏಜೆಂಟ್​ಗಳಾಗಿ ಕೆಲಸ ಮಾಡಲು ಆರಂಭಿಸಬಹುದು. ಎಲ್​ಐಸಿ ಏಜೆಂಟ್ ಆದರೆ ಕಮಿಷನ್ ಮೂಲಕ ಆದಾಯ ಸಿಗುತ್ತದೆ. ಪಾಲಿಸಿ ಪ್ರೀಮಿಯಮ್ ಮೊತ್ತದ ಮೇಲೆ ಆದಾಯ ನಿಂತಿರುತ್ತದೆ.

ಎಲ್​ಐಸಿ ಬಿಮಾ ಸಖಿ ಯೋಜನೆಯಲ್ಲಿ ಮೂರು ವರ್ಷದ ಸ್ಟೈಪೆಂಡ್ ಇರುತ್ತದೆ. ಮೊದಲ ವರ್ಷ ತಿಂಗಳಿಗೆ 7,000 ರೂ ಸ್ಟೈಪೆಂಡ್ ಕೊಡಲಾಗುತ್ತದೆ. ಎರಡನೇ ಮತ್ತು ಮೂರನೇ ವರ್ಷದಲ್ಲಿ ಕ್ರಮವಾಗಿ 6,000 ರೂ ಮತ್ತು 5,000 ರೂ ಸ್ಟೈಪೆಂಡ್ ಕೊಡಲಾಗುತ್ತದೆ. ಆದರೆ, ಈ ಅವಧಿಯಲ್ಲಿ ಅಭ್ಯರ್ಥಿಗಳು ನಿರ್ದಿಷ್ಟ ಮೊತ್ತದ ಪಾಲಿಸಿಗಳನ್ನು ಮಾರಾಟ ಮಾಡಬೇಕು. ಆ ಪಾಲಿಸಿಗಳಿಂದ ಕಮಿಷನ್ ಕೂಡ ಸಿಗುತ್ತದೆ.

ಇದನ್ನೂ ಓದಿ: ವಿಚಿತ್ರ ಕಾರಣ..! ಅನುಭವಿ ಗೂಗಲ್ ಉದ್ಯೋಗಿಯ ಅರ್ಜಿ ತಿರಸ್ಕಾರ; ಕಾಲೇಜು ಗ್ರೇಡ್ ಕಡಿಮೆ ಬಂದಿದ್ದಕ್ಕೆ ರಿಜೆಕ್ಟ್

ಮೂರು ವರ್ಷದ ತರಬೇತಿ ಮುಗಿಸಿದ ಮಾತ್ರಕ್ಕೆ ಎಲ್​ಐಸಿ ಏಜೆಂಟ್ ಕೆಲಸ ಸಿಕ್ಕೋದಿಲ್ಲ. ಐಆರ್​ಡಿಎಐನ ವಿಮಾ ಪರೀಕ್ಷೆ ಬರೆದು ಪಾಸಾಗಬೇಕು.

ಎಲ್​ಐಸಿ ಏಜೆಂಟ್ ಆದರೆ ಒಂದು ಪ್ರಮುಖ ಅನುಕೂಲವೆಂದರೆ ಫ್ಲೆಕ್ಸಿಬಲ್ ವರ್ಕಿಂಗ್ ಅವರ್. ದಿನವೆಲ್ಲಾ ಕೆಲಸ ಮಾಡುವ ಅಗತ್ಯ ಇರುವುದಿಲ್ಲ. ಮಧ್ಯ ಮಧ್ಯೆ ಸಾಕಷ್ಟು ಬಿಡುವು ಮಾಡಿಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಎನ್​​ಟಿಆರ್ ಸಮಾಧಿಗೆ ಜೂ ಎನ್​​ಟಿಆರ್ ಭೇಟಿ, ಕಾಲಿಗೆ ಬಿದ್ದ ಅಭಿಮಾನಿಯ ಸಂತೈಸಿದ ನಟ

ತೆಲುಗು ಚಿತ್ರರಂಗದ ದಿಗ್ಗಜ ನಟ, ಮಾಜಿ ಸಿಎಂ ದಿವಂಗತ ಎನ್​ಟಿಆರ್ (NTR) (ನಂದಮೂರಿ ತಾರಕರಾಮಾ ರಾವ್) ಅವರ 104ನೇ ಜಯಂತಿ. ಹಲವಾರು ಗಣ್ಯರು, ಸಿನಿಮಾ ತಾರೆಯರು ಎನ್​​ಟಿಆರ್ ಅವರ ಪುಣ್ಯಭೂಮಿಗೆ ಭೇಟಿ ನೀಡಿದ್ದಾರೆ. ಇದೇ ದಿನ ಎನ್​​ಟಿಆರ್ ಅವರ ಮೊಮ್ಮಗ, ಸ್ಟಾರ್ ನಟ ಜೂ ಎನ್​​ಟಿಆರ್ ಅವರು ತಾತನ ಸಮಾಧಿಗೆ ಭೇಟಿ ನೀಡಿದ್ದು, ಹೂಮಾಲೆ ಅರ್ಪಿಸಿ ಕೈಮುಗಿದರು. ಕೆಲ ಸಮಯ ಸಮಾಧಿ ಆವರಣದಲ್ಲಿ ಕೂತಿದ್ದು ತೆರಳಿದರು. ಜೂ ಎನ್​​ಟಿಆರ್ ಭೇಟಿ ವೇಳೆ ಅಭಿಮಾನಿಗಳಿಂದ ಸಾಕಷ್ಟು ನೂಕು ನುಗ್ಗಲು ಉಂಟಾಯ್ತು. ತಮ್ಮ ಕಾಲಿಗೆ ಬಿದ್ದ ಅಭಿಮಾನಿಯ ಮೇಲೆತ್ತಿ ಹಸ್ತಲಾಘವ ಮಾಡಿದ್ದಾರೆ. ಈ ವಿಡಿಯೋ ಇದೀಗ ಟ್ರೆಂಡ್ ಆಗುತ್ತಿದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

Siddaramaiah Political Life: ಪಕ್ಷೇತರ ಶಾಸಕನಿಂದ ಎರಡು ಬಾರಿ ಸಿಎಂ ಹುದ್ದೆಯವರೆಗೆ; ಸಿದ್ದರಾಮಯ್ಯನವರ ಸುದೀರ್ಘ ರಾಜಕಾರಣದ ಹಾದಿ ಇಲ್ಲಿದೆ

ಬೆಂಗಳೂರು, ಮೇ 28: ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಎರಡನೇ ಅವಧಿಗೆ ಸಿಎಂ ಆಗಿದ್ದ ಸಿದದ್ದರಾಮಯ್ಯ ಒಟ್ಟು 8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿರುವ ದಾಖಲೆ ಬರೆದಿದ್ದಾರೆ. 1983ರಲ್ಲಿ ವಿಧಾನಸಭೆಗೆ ಪ್ರವೇಶಿಸಿದ್ದ ಇವರು, ಎರಡು ಬಾರಿ ಉಪಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯ ‘ಅಹಿಂದ’ ವರ್ಗಗಳ ಪ್ರಮುಖ ನಾಯಕರಾಗಿ ಗುರುತಿಸಿಕೊಂಡವರು.

ಸಿದ್ದರಾಮಯ್ಯ ರಾಜಕೀಯದ ಹಾದಿ

  • ಮೈಸೂರಿನ ಸಿದ್ದರಾಮನಹುಂಡಿಯವರಾದ ಸಿದ್ದರಾಮಯ್ಯನವರು, 1983ರಲ್ಲಿ ಮೊದಲ ಬಾರಿಗೆ ಪಕ್ಷೇತರರಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
  • ಜನತಾ ಪಕ್ಷದ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ, ಪಶುಸಂಗೋಪನೆ ಮುಂತಾದ ಖಾತೆಗಳನ್ನು ನಿರ್ವಹಿಸಿದ್ದರು.
  • ಜೆ.ಎಚ್. ಪಟೇಲ್ (1996 ರಿಂದ 1999) ಮತ್ತು ಧರಂಸಿಂಗ್​​ (2004 ರಿಂದ 2005) ಅವರ ಸರ್ಕಾರಗಳಲ್ಲಿ ರಾಜ್ಯದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
  • 2008-2013 ಮತ್ತು 2019-2023ರ ಅವಧಿಯಲ್ಲಿದ್ದ ಬಿಜೆಪಿ ಸರ್ಕಾರಗಳ ಅವಧಿಯಲ್ಲಿ ವಿಪಕ್ಷ ನಾಯಕನಾಗಿ ಕೆಲಸ.
  • 2013-2018 ಮತ್ತು 2023ರಿಂದ ಇಂದಿನವರೆಗೆ ಕಾಂಗ್ರೆಸ್​​ ನೇತೃತ್ವದ ರಾಜ್ಯ ಸರ್ಕಾರದ ಮುಖ್ಯಮಂತ್ರಿಯಾಗಿ ಸುದೀರ್ಘ ಸೇವೆ.

9 ಬಾರಿ ವಿಧಾನ ಸಭೆಗೆ ಪ್ರವೇಶ

ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದಲ್ಲಿ ಒಟ್ಟು 9 ಬಾರಿ ಕರ್ನಾಟಕ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರ (ಪಕ್ಷೇತರ), 1985ರಲ್ಲಿ ಚಾಮುಂಡೇಶ್ವರಿ ಕ್ಷೇತ್ರ (ಜನತಾ ಪಕ್ಷ), 1994ರಲ್ಲಿ ಚಾಮುಂಡೇಶ್ವರಿ ಕ್ಷೇತ್ರ (ಜನತಾ ದಳ), 2004ರಲ್ಲಿ ಚಾಮುಂಡೇಶ್ವರಿ ಕ್ಷೇತ್ರ (ಜೆಡಿಎಸ್), 2006ರ ಉಚ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲುವು, 2008, 2013 ವರುಣಾ ಕ್ಷೇತ್ರ (ಕಾಂಗ್ರೆಸ್), 2018ರಲ್ಲಿ ಬಾದಾಮಿ ಕ್ಷೇತ್ರ (ಕಾಂಗ್ರೆಸ್), 2023ರಲ್ಲಿ ಪುನಃ ವರುಣಾ ಕ್ಷೇತ್ರದಿಂದ ಕಾಂಗ್ರೆಸ್​​ನಿಂದಲೇ ಸ್ಪರ್ಧಿಸಿ ಗೆದ್ದಿದ್ದರು.

ಇದನ್ನೂ ಓದಿ: ರಾಜೀನಾಮೆಗೂ ಮುನ್ನವೇ ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ, ವಿಶೇಷ ಕರ್ತವ್ಯಾಧಿಕಾರಿಗಳ ವರ್ಗಾವಣೆ

ರಾಜಕೀಯ ತಿರುವು

ಜೆಡಿಎಸ್​​ನಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದ ಸಿದ್ದರಾಮಯ್ಯ, ಹೆಚ್​​.ಡಿ. ದೇವೇಗೌಡರ ಜೊತೆಗಿನ ಭಿನ್ನಾಭಿಪ್ರಾಯದ ಕಾರಣ 2005ರಲ್ಲಿ ಅವರನ್ನು ಪಕ್ಷದಿಂದ ಹೊರ ಹಾಕಲಾಗಿತ್ತು. ಆ ಬಳಿಕ ಬೆಂಗಳೂರಲ್ಲಿ ಸೋನಿಯಾ ಗಾಂಧಿ ಸಮ್ಮುಖದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್​​ ಸೇರಿದ್ದರು. 2006ರ ಉಪಚುನಾವಣೆ ಕಾಂಗ್ರೆಸ್​​ನಿಂದ ವರುಣಾ ಕ್ಷೇತ್ರದಲ್ಲಿ ಸ್ಫರ್ಧಿಸಿದ್ದ ಇವರು ಜೆಡಿಎಸ್​​ ಅಭ್ಯರ್ಥಿ ವಿರುದ್ಧ ಗೆದ್ದು ಬೀಗಿದ್ದರು. 2008ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿಯೂ ಮರು ಆಯ್ಕೆಯಾದರು. 2013ರಲ್ಲಿಯೂ ಇದೇ ಕ್ಷೇತ್ರದಿಂದ ಗೆದ್ದು ರಾಜ್ಯದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು. ಆ ಬಳಿಕ 2018ರಲ್ಲಿ ಸ್ಪರ್ಧಿಸಿದ್ದ ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರಗಳ ಪೈಕಿ ಬಾದಾಮಿಯಲ್ಲಿ ಬಿಜೆಪಿಯ ಶ್ರೀರಾಮುಲು ವಿರುದ್ಧ ಅಲ್ಪ ಅಂತರದ ಗೆಲುವು ದಾಖಲಿಸಿದ್ದರು. ಬಳಿಕ 2023ರ ಚುನಾವಣೆಯಲ್ಲಿ ಪುನಃ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಿ ಗೆಲುವಿನ ನಗೆ ಬೀರುವ ಮೂಲಕ ರಾಜ್ಯದಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದ ಕಾಂಗ್ರೆಸ್​​ ನೇತೃತ್ವದ ರಾಜದಯ ಸರ್ಕಾರದ ಮುಖ್ಯಮಂತ್ರಿಯಾಗಿ ಮೇ 20ರಂದು ಪ್ರಮಾಣವಚನ ಸ್ವೀಕರಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

RR vs GT: ರಾಜಸ್ಥಾನ್- ಗುಜರಾತ್ ನಡುವೆ ಕ್ವಾಲಿಫೈಯರ್ 2 ಫೈಟ್; ಪಂದ್ಯ ಎಷ್ಟು ಗಂಟೆಗೆ ಆರಂಭ?

ರಾಜಸ್ಥಾನ ರಾಯಲ್ಸ್ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ 2026 ರ ಐಪಿಎಲ್‌ನ ಕ್ವಾಲಿಫೈಯರ್ 2 (IPL Qualifier 2) ಪ್ರವೇಶಿಸುವ ಮೂಲಕ ಟ್ರೋಫಿಯತ್ತ ಹೆಜ್ಜೆ ಇಟ್ಟಿದೆ. ವೈಭವ್ ಸೂರ್ಯವಂಶಿ ಮತ್ತು ಧ್ರುವ್ ಜುರೆಲ್ ಅವರ ಸ್ಫೋಟಕ ಇನ್ನಿಂಗ್ಸ್‌ನ ಬಲದಿಂದ ರಾಜಸ್ಥಾನ ರಾಯಲ್ಸ್ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್​ಗೆ 244 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಹೈದರಾಬಾದ್ 20 ಓವರ್‌ಗಳನ್ನು ಸಹ ಆಡಲು ಸಾಧ್ಯವಾಗದೆ 19.2 ಓವರ್‌ಗಳಲ್ಲಿ 196 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ರಾಜಸ್ಥಾನಕ್ಕೆ ಕ್ವಾಲಿಫೈಯರ್ 2 ಗೆ ಟಿಕೆಟ್ ಪಡೆದುಕೊಂಡಿತು. ಇದೀಗ ಕ್ವಾಲಿಫೈಯರ್ 2 ರಲ್ಲಿ ರಾಜಸ್ಥಾನ್ ರಾಯಲ್ಸ್, ಗುಜರಾತ್ ಟೈಟಾನ್ಸ್ (Rajasthan Royals vs Gujarat Titans) ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್​ನಲ್ಲಿ ಆರ್​ಸಿಬಿ ತಂಡವನ್ನು ಎದುರಿಸಲಿದೆ.

ರಾಜಸ್ಥಾನ್ ಹಾಗೂ ಗುಜರಾತ್ ನಡುವಿನ ಕ್ವಾಲಿಫೈಯರ್ 2 ಪಂದ್ಯ ಯಾವಾಗ ನಡೆಯಲಿದೆ?

ರಾಜಸ್ಥಾನ್ ಹಾಗೂ ಗುಜರಾತ್ ನಡುವಿನ ಕ್ವಾಲಿಫೈಯರ್ 2 ಪಂದ್ಯ ಮೇ 29 ರಂದು ನಡೆಯಲಿದೆ.

ರಾಜಸ್ಥಾನ್ ಹಾಗೂ ಗುಜರಾತ್ ನಡುವಿನ ಕ್ವಾಲಿಫೈಯರ್ 2 ಪಂದ್ಯ ಎಲ್ಲಿ ನಡೆಯಲಿದೆ?

ರಾಜಸ್ಥಾನ್ ಹಾಗೂ ಗುಜರಾತ್ ನಡುವಿನ ಕ್ವಾಲಿಫೈಯರ್ 2 ಪಂದ್ಯ ಪಂಜಾಬ್​ನ ಮಹಾರಾಜ ಯಾದವೀಂದ್ರ ಸಿಂಗ್ ಪಿಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ.

ರಾಜಸ್ಥಾನ್ ಹಾಗೂ ಗುಜರಾತ್ ನಡುವಿನ ಕ್ವಾಲಿಫೈಯರ್ 2 ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ರಾಜಸ್ಥಾನ್ ಹಾಗೂ ಗುಜರಾತ್ ನಡುವಿನ ಕ್ವಾಲಿಫೈಯರ್ 2 ಪಂದ್ಯ ಸಂಜೆ 7:30 ಕ್ಕೆ ಆರಂಭವಾಗಲಿದೆ. ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.

ರಾಜಸ್ಥಾನ್ ಹಾಗೂ ಗುಜರಾತ್ ನಡುವಿನ ಕ್ವಾಲಿಫೈಯರ್ 2 ಪಂದ್ಯವನ್ನು ವೀಕ್ಷಿಸುವುದು ಹೇಗೆ?

ರಾಜಸ್ಥಾನ್ ಹಾಗೂ ಗುಜರಾತ್ ನಡುವಿನ ಕ್ವಾಲಿಫೈಯರ್ 2 ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.

SRH vs RR: ರಾಜಸ್ಥಾನ್ ವಿರುದ್ಧ ಸೋತು ಐಪಿಎಲ್​ನಿಂದ ಹೊರಬಿದ್ದ ಸನ್‌ರೈಸರ್ಸ್

ಉಭಯ ತಂಡಗಳು

ಗುಜರಾತ್ ಟೈಟಾನ್ಸ್ ತಂಡ: ಶುಭ್​ಮನ್ ಗಿಲ್, ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್, ಇಶಾಂತ್ ಶರ್ಮಾ, ಜಯಂತ್ ಯಾದವ್, ಕಗಿಸೊ ರಬಾಡ, ರಾಹುಲ್ ತೆವಾಟಿಯಾ, ಲ್ಯೂಕ್ ವುಡ್, ಶಾರುಖ್ ಖಾನ್ , ಸಾಯಿ ಕಿಶೋರ್, ವಾಷಿಂಗ್ಟನ್ ಸುಂದರ್, ರಶೀದ್ ಖಾನ್, ಮೊಹಮ್ಮದ್ ಸಿರಾಜ್, ಗ್ಲೆನ್ ಫಿಲಿಪ್ಸ್, ಕೆ. ರಾವತ್ (ವಿಕೆಟ್ ಕೀಪರ್), ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್), ಮಾನವ್ ಸುತಾರ್, ಕಾನರ್ ಎಸ್ಟರ್‌ಹುಯಿಜೆನ್, ಗುರ್ನೂರ್ ಬ್ರಾರ್, ನಿಶಾಂತ್ ಸಿಂಧು, ಅರ್ಷದ್ ಖಾನ್, ಅಶೋಕ್ ಶರ್ಮಾ.

ರಾಜಸ್ಥಾನ್ ರಾಯಲ್ಸ್ ತಂಡ: ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್(ವಿಕೆಟ್ ಕೀಪರ್), ರಿಯಾನ್ ಪರಾಗ್(ನಾಯಕ), ಡೊನೊವನ್ ಫೆರೇರಾ, ಶುಭಂ ದುಬೆ, ದಸುನ್ ಶನಕ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಯಶ್ ರಾಜ್ ಪುಂಜಾ, ಬ್ರಿಜೇಶ್ ಶರ್ಮಾ, ರವೀಂದ್ರ ಜಡೇಜಾ, ಸುಶಾಂತ್ ರಾವ್ ಪೆರ್ರಾಲ, ಅಮಾನು ರಾವ್, ಅಮಾನು ರಾವ್, ಮಿಲ್ನೆ, ಸಂದೀಪ್ ಶರ್ಮಾ, ಶಿಮ್ರೋನ್ ಹೆಟ್ಮೆಯರ್, ಕುಲದೀಪ್ ಸೇನ್, ಯುದ್ವೀರ್ ಸಿಂಗ್ ಚರಕ್, ಕ್ವೆನಾ ಮಫಕಾ, ಲುವಾನ್-ಡ್ರೆ ಪ್ರಿಟೋರಿಯಸ್, ಎಮಾನ್ಜೋತ್ ಸಿಂಗ್ ಚಾಹಲ್, ವಿಘ್ನೇಶ್ ಪುತ್ತೂರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:03 pm, Thu, 28 May 26

Source link

Exit mobile version