ಬೆಂಗಳೂರು, ಜನವರಿ 24: ವಿಶ್ವದ ಅತಿ ಹೆಚ್ಚು ಟ್ರಾಫಿಕ್ ಹೊಂದಿರುವ ನಗರಗಳಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ ಎಂಬ ಟಾಮ್ಟಾಮ್ ವರದಿ ಬೆನ್ನಲ್ಲೇ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಪೊಲೀಸರು ಹೊಸ ಪ್ಲ್ಯಾನ್ಗೆ ಮುಂದಾಗಿದ್ದಾರೆ. ಪ್ರಮುಖವಾಗಿ ಕೆ.ಆರ್. ಪುರಂನಿಂದ ಇಬ್ಬಲೂರುವರೆಗಿನ 17 ಕಿ.ಮೀ ವ್ಯಾಪ್ತಿಯಲ್ಲಿರುವ ಸುಮಾರು 500 ಕಂಪನಿಗಳಲ್ಲಿ ಕೆಲಸ ಮಾಡುವ 12 ಲಕ್ಷ ಉದ್ಯೋಗಿಗಳ ಓಡಾಟವನ್ನು ಸಾರ್ವಜನಿಕ ಸಾರಿಗೆಯತ್ತ ತಿರುಗಿಸುವ ಕುರಿತು ಸಭೆ ನಡೆದಿದೆ. ಅಲ್ಲದೆ, ಪೀಕ್ ಅವರ್ನಲ್ಲಿ ಓಡಾಡುವ ಸುಮಾರು 35-40 ಸಾವಿರ ಡೆಲಿವರಿ ವಾಹನಗಳಿಗಾಗಿ ಪರ್ಯಾಯ ಮಾರ್ಗಗಳನ್ನು ಗುರುತಿಸಲು ಗೂಗಲ್ ಜೊತೆ ಚರ್ಚಿಸುವ ಆಲೋಚನೆಯೂ ಇದೆ. ರಸ್ತೆ ಅಗೆತದಂತಹ ಮೂಲಭೂತ ಸಮಸ್ಯೆಗಳ ಮೇಲೂ ಗಮನ ಹರಿಸಲು ಸಂಚಾರ ವಿಭಾಗ ಮುಂದಾಗಿದೆ.
ಕೋಲಾರ, (ಜನವರಿ 24): ಗ್ರಾಮ ಪಂಚಾಯಿತಿ (Gram Panchayat ) ಸ್ವಚ್ಛತಾ ವಾಹನ ಇರುವುದು ವಾರ್ಡ್ ವಾರ್ಡ್ಗಳಲ್ಲಿ ಸಂಚರಿಸಿ ಕಸ ಸಂಗ್ರಹಿಸಲು. ಆದ್ರೆ, ಕೋಲಾರ (Kolar) ಜಿಲ್ಲೆ ಬಂಗಾರಪೇಟೆ ತಾಲ್ಲುಕು ಗುಲ್ಲಹಳ್ಳಿ ಗ್ರಾಮದ ಪಂಚಾಯ್ತಿ ಸ್ವಚ್ಛತಾ ವಾಹನ ಧರ್ಮ ಪ್ರಚಾರ ನಡೆಸಿದ ಎನ್ನುವ ಆರೋಪ ಕೇಳಿಬಂದಿದೆ. ಹೌದು…ಗುಲ್ಲಹಳ್ಳಿ ಗ್ರಾಮ ಪಂಚಾಯಿತಿಯ ಸ್ಚಚ್ಛತಾ ವಾಹನದಲ್ಲಿ ಕ್ರಿಶ್ಚಿಯನ್ ಧರ್ಮ ಪ್ರಚಾರದ ಕರಪತ್ರಗಳು ಪತ್ತೆಯಾಗಿದ್ದು, ಸಿಬ್ಬಂದಿಗಳೇ ಕಸ ಸಂಗ್ರಹಿಸುತ್ತಾ ಮನೆ ಮನೆಗೆ ಕರಪತ್ರ ಹಂಚಿಕೆ ಮಾಡಿ ಕ್ರಿಶ್ಚಿಯನ್ ಧರ್ಮ ಪ್ರಚಾರ ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಚಚ್ಚತಾ ಸಿಬ್ಬಂದಿ ಶಶಿಕಲಾ, ನಾಗವೇಣಿ, ವೆಂಕಟರತ್ನ ವಿರುದ್ಧ ಕರಪತ್ರ ಹಂಚಿಕೆ ಆರೋಪ ಕೇಳಿಬಂದಿದ್ದು, ಇವರು ಮನೆ ಮನೆಯ ಕಸ ಸಂಗ್ರಹಿಸಿ ಜತೆ ಕರಪತ್ರ ಹಂಚಿಕೆ ಮಾಡಿದ್ದಾರೆ ಎಂದು ಜನವರು ವಾಹನವನ್ನು ತಡೆದು ತರಾಟಗೆ ತೆಗೆದುಕೊಂಡಿದ್ದಾರೆ.
ತ್ರಿವರ್ಣ ಬಣ್ಣದ ಖಾದ್ಯImage Credit source: Pinterest
77ನೇ ಗಣರಾಜ್ಯೋತ್ಸವವನ್ನು (Republic Day) ಆಚರಿಸಲು ದೇಶಾದ್ಯಂತ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಭಾರತದಲ್ಲಿ ಪ್ರಜಾಪ್ರಭುತ್ವ ಉದಯವಾದ ಐತಿಹಾಸಿಕ ದಿನವಾದ ಜನವರಿ ಜನವರಿ 26 ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ದಿನ. ಸ್ವಾತಂತ್ರ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಿಸುವಂತೆ ಗಣರಾಜ್ಯೋತ್ಸವ ದಿನವನ್ನು ಸಹ ದೇಶಾದ್ಯಂತ ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಹೌದು ಶಾಲಾ ಕಾಲೇಜುಗಳಲ್ಲಿ, ಕಚೇರಿಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ, ಮುಖ್ಯವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಐತಿಹಾಸಿಕ ಪರೇಡ್ ಕೂಡ ನಡೆಯುತ್ತದೆ. ಈ ಸಂದರ್ಭದಲ್ಲಿ ನೀವು ಕೂಡ ತ್ರಿವರ್ಣ ಬಣ್ಣದ ವಿವಿಧ ಭಕ್ಷ್ಯಗಳನ್ನು ತಯಾರಿಸಿ ಮನೆ ಮಂದಿಗೆಲ್ಲಾ ಬಡಿಸುವ ಮೂಲಕ ಗಣರಾಜ್ಯೋತ್ಸವ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಬಹುದು. ನೀವು ಮನೆಯಲ್ಲಿಯೇ ತಯಾರಿಸಬಹುದಾದ ತ್ರಿವರ್ಣ ಬಣ್ಣದ ಸುಲಭ ರೆಸಿಪಿ ಇಲ್ಲಿವೆ.
ತ್ರಿವರ್ಣ ಬಣ್ಣದ ರುಚಿಕರ ಭಕ್ಷ್ಯಗಳು:
ತ್ರಿವರ್ಣ ಸ್ಯಾಂಡ್ವಿಚ್:
ಇದು ಮಕ್ಕಳು ಮತ್ತು ವಯಸ್ಕರಿಗೆ ಇಷ್ಟವಾದ ತಿಂಡಿಯಾಗಿದ್ದು, ಇದನ್ನು ತಯಾರಿಸುವುದು ತುಂಬಾ ಸುಲಭ. ನಿಮಗೆ ಮೂರು ಬ್ರೆಡ್ ಸ್ಲೈಸ್ಗಳು ಬೇಕಾಗುತ್ತವೆ. ಸ್ಯಾಂಡ್ವಿಚ್ ತಯಾರಿಸಲು, ಮೊದಲು ಬ್ರೆಡ್ ಹೋಳುಗಳ ಅಂಚುಗಳನ್ನು ಕತ್ತರಿಸಿ ಲಘುವಾಗಿ ಬೆಣ್ಣೆ ಹಚ್ಚಿ. ನಂತರ, ತುರಿದ ಕ್ಯಾರೆಟ್ ಅನ್ನು ಸ್ವಲ್ಪ ಚೀಸ್ ನೊಂದಿಗೆ ಬೆರೆಸಿ ಬ್ರೆಡ್ನ ಮೊದಲ ಪದರಕ್ಕೆ ಸಮವಾಗಿ ಹಚ್ಚಿ. ನಂತರ, ಮೇಯನೇಸ್ ಮತ್ತು ಬೇಯಿಸಿದ ಆಲೂಗಡ್ಡೆಯ ಪೇಸ್ಟ್ ತಯಾರಿಸಿ ಬ್ರೆಡ್ನ ಎರಡನೇ ಪದರಕ್ಕೆ ಹಚ್ಚಿ. ಈಗ, ಮೂರನೇ ಪದರದ ಬ್ರೆಡ್ ಮೇಲೆ ಪಾಲಕ್ ಪ್ಯೂರಿ ಅಥವಾ ಕೊತ್ತಂಬರಿ ಚಟ್ನಿಯನ್ನು ಹರಡಿ. ಸ್ಯಾಂಡ್ವಿಚ್ನ ಎಲ್ಲಾ ಮೂರು ಲೇಯರ್ಗಳು ಸಿದ್ಧವಾದ ನಂತರ, ಈ ಸ್ಯಾಂಡ್ವಿಚ್ ಅನ್ನು ಒಂದರ ಮೇಲೊಂದು ತ್ರಿವರ್ಣ ಅನುಕ್ರಮದಲ್ಲಿ ಜೋಡಿಸಿ. ಮನೆ ಮಂದಿಗೆ ಬಡಿಸಿ.
ತ್ರಿವರ್ಣ ಬಣ್ಣದ ಇಡ್ಲಿ:
ತ್ರಿವರ್ಣ ಇಡ್ಲಿ ಉತ್ತಮ ಮತ್ತು ಆರೋಗ್ಯಕರ ಉಪಹಾರ ಆಯ್ಕೆಯಾಗಿದೆ. ಮೊದಲಿಗೆ ಇಡ್ಲಿ ಹಿಟ್ಟನ್ನು ತಯಾರಿಸಿ ಮೂರು ಭಾಗಗಳಾಗಿ ವಿಂಗಡಿಸಿ. ಒಂದು ಭಾಗಕ್ಕೆ ಪಾಲಕ್ ಪ್ಯೂರಿ (ಹಸಿರು) ಸೇರಿಸಿ. ಎರಡನೇ ಭಾಗವನ್ನು ಸಾದಾ (ಬಿಳಿ) ಬಿಡಿ. ಮೂರನೇ ಭಾಗಕ್ಕೆ ತುರಿದ ಕ್ಯಾರೆಟ್ ಅಥವಾ ಕ್ಯಾರೆಟ್ ಪ್ಯೂರಿ ಸೇರಿಸಿ. ನಂತರ ಇದನ್ನು ತ್ರಿವರ್ಣ ಪದರದಲ್ಲಿ ಹಾಕಿ ಸ್ಟೀಮರ್ನಲ್ಲಿ ಬೇಯಿಸಬಹುದು, ಅಥವಾ ಮೂರು ಬಣ್ಣದ ಇಡ್ಲಿಯನ್ನು ಪ್ರತ್ಯೇಕವಾಗಿಯೂ ಬೇಯಿಸಬಹುದು. ಇದೇ ವಿಧಾನದಲ್ಲಿ ತ್ರಿವರ್ಣ ದೋಸೆಯನ್ನೂ ತಯಾರಿಸಬಹುದು.
ತ್ರಿವರ್ಣ ಪಲಾವ್:
ಗಣರಾಜ್ಯೋತ್ಸವ ದಿನದಂದು ತ್ರಿವರ್ಣ ಬಣ್ಣದ ಪಲಾವ್ ತಯಾರಿಸಬಹುದು. ಅದಕ್ಕಾಗಿ ಅನ್ನವನ್ನು ಮೂರು ಪ್ರತ್ಯೇಕ ಪಾತ್ರೆಗಳಲ್ಲಿ ಬೇಯಿಸಿ. ಒಂದು ಭಾಗಕ್ಕೆ ಕೇಸರಿ ಪ್ಯೂರಿ, ಇನ್ನೊಂದು ಭಾಗವನ್ನು ಪಾಲಕ್ ಪ್ಯೂರಿಯೊಂದಿಗೆ ಬೇಯಿಸಿ, ಇನ್ನೊಂದು ಭಾಗ ಬಿಳಿಯಾಗಿಯೇ ಇರಲಿ. ಅನ್ನ ಬೆಂದ ನಂತರ ಒಂದರ ಮೇಲೊಂದರೆಂತೆ ಪದರದ ರೀತಿಯಲ್ಲಿ ಹರಡಿದರೆ ತ್ರಿವರ್ಣ ಬಣ್ಣದ ಪಲಾವ್ ಸಿದ್ಧ.
ಯಾವುದೇ ಭಾರತೀಯ ಹಬ್ಬವು ಸಿಹಿತಿಂಡಿಗಳಿಲ್ಲದೆ ಅಪೂರ್ಣ. ಹಾಗಾಗಿ ಗಣರಾಜ್ಯೋತ್ಸವ ದಿನದಂದು ನೀವು ತೆಂಗಿನಕಾಯಿ ಬರ್ಫಿಯನ್ನು ಮಾಡಬಹುದು. ತ್ರಿವರ್ಣ ಬರ್ಫಿ ತಯಾರಿಸಲು, ದಪ್ಪ ತಳವಿರುವ ಬಾಣಲೆಯಲ್ಲಿ ಹಾಲನ್ನು ಕುದಿಸಿ. ಹಾಲು ಕುದಿಯಲು ಪ್ರಾರಂಭಿಸಿದ ನಂತರ, ಖೋಯಾ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಬೇಯಿಸಿ ನಂತರ ಸಕ್ಕರೆ ಸೇರಿಸಿ ಮಿಶ್ರಣ ದಪ್ಪವಾಗುವವರೆಗೆ ಬೇಯಿಸಿ. ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವು ಸಂಪೂರ್ಣವಾಗಿ ದಪ್ಪ ಹದಕ್ಕೆ ಬಂದ ನಂತರ ಗ್ಯಾಸ್ ಆಫ್ ಮಾಡಿ ಮೂರು ಭಾಗಗಳಾಗಿ ವಿಂಗಡಿಸಿ, ಮೊದಲ ಭಾಗಕ್ಕೆ ಕೇಸರಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎರಡನೇ ಭಾಗವನ್ನು ಹಾಗೆಯೇ ಬಿಡಿ. ಮೂರನೇ ಭಾಗಕ್ಕೆ ರುಬ್ಬಿದ ಪಿಸ್ತಾವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಅಚ್ಚು ಅಥವಾ ತಟ್ಟೆಯ ಮೇಲೆ ಈ ಮೂರು ಬಣ್ಣದ ಮಿಶ್ರಣವನ್ನು ಹರಡಿ, ಲಘುವಾಗಿ ಒತ್ತಿದರೆ ಬರ್ಫಿ ಸಿದ್ಧ.
ಕಲಬುರಗಿ, ಜನವರಿ 24: ಅನ್ಯಜಾತಿಯವನನ್ನು ಪ್ರೀತಿಸಿ (love) ಮದುವೆಯಾಗಿದ್ದಕ್ಕೆ ಯುವತಿ ಮನೆಯರಿಂದ ಯುವಕನಿಗೆ ಜೀವ ಬೆದರಿಕೆ (Death Threat) ಹಾಲಾಗಿದ್ದು, ಇದೀಗ ನವಜೋಡಿ ಪೊಲೀಸರ ಮೊರೆಹೋಗಿದ್ದಾರೆ. ಜಿಲ್ಲೆಯ ಯಡ್ರಾಮಿ ತಾಲೂಕಿನ ಕೋಣಸಿರಸಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರಭು(23) ಹಾಗೂ ಸಂಗೀತ(19) ಪ್ರೀತಿಸಿ ಮದುವೆಯಾದ ಜೋಡಿ. ಯುವತಿ ಕುಟುಂಬಕ್ಕೆ ಹೆದರಿ ಸದ್ಯ ದಂಪತಿ ಊರು ಬಿಟ್ಟಿದ್ದು, ನಮಗೆ ರಕ್ಷಣೆ ನೀಡಿ ಎಂದು ಎಸ್ಪಿಗೆ ಮನವಿ ಮಾಡಿದ್ದಾರೆ.
ನಡೆದದ್ದೇನು?
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕೋಣಸಿರಸಗಿ ಗ್ರಾಮದ ಪ್ರಭು ಮತ್ತು ಸಂಗೀತ ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಒಂದು ವಾರದ ಹಿಂದಷ್ಟೇ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದಾರೆ.
ಪ್ರೀತಿ ವಿಚಾರ ಯುವತಿ ಮನೆಯವರಿಗೆ ತಿಳಿದು ಯುವಕನಿಗೆ ಬೆದರಿಕೆ ಹಾಕಿದ್ದಾರೆ. ಹಲವು ಬಾರಿ ಹಲ್ಲೆಗೆ ಯತ್ನಿಸಿರುವುದಾಗಿಯೂ ಆರೋಪ ಕೇಳಿಬಂದಿದೆ. ಯುವತಿ ಕುಟುಂಬಕ್ಕೆ ಹೆದರಿ ನವ ದಂಪತಿ ಸದ್ಯ ಊರು ಬಿಟ್ಟಿದ್ದು, ರಕ್ಷಣೆ ಕೋರಿ ಪೊಲೀಸ್ ಮೆಟ್ಟಿಲೇರಿದ್ದಾರೆ.
ಪ್ರಿಯಕರನಿಂದಲೇ ಪ್ರಿಯತಮೆಯ ಹತ್ಯೆ
ಕೋಲಾರ ಹೊರವಲಯದ ಬಂಗಾರಪೇಟೆ ವೃತ್ತದಲ್ಲಿ ಚಿರಂಜೀವಿ ಎಂಬಾತ ತನ್ನ ಪ್ರಿಯತಮೆ ಸುಜಾತ ಎಂಬಾಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಘಟನೆ ಇತ್ತೀಚೆಗೆ ನಡೆದಿದೆ. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸುಜಾತ ಕೆಲಸಕ್ಕೆ ಹೋಗಲು ತಮ್ಮೂರು ಬಂಗಾರಪೇಟೆ ತಾಲ್ಲೂಕು ಕತ್ತಹಳ್ಳಿ ಗ್ರಾಮದಿಂದ ಕೋಲಾರಕ್ಕೆ ಬಂದಿದ್ದರು. ಈ ವೇಳೆ ತನ್ನ ಜೊತೆಗೆಯಲ್ಲೇ ಬಂದಿದ್ದ ಬಂಗಾರಪೇಟೆ ತಾಲೂಕಿನ ಯಳಬುರ್ಗಿ ಗ್ರಾಮದ ಚಿರಂಜೀವಿ ಕೋಲಾರದ ಹೊರವಲಯದ ಬಂಗಾರಪೇಟೆ ರಸ್ತೆಯಲ್ಲಿ ಏಕಾಏಕಿ ತನ್ನ ಕೀಚೈನಿನಲ್ಲಿದ್ದ ಚಾಕುವೊಂದನ್ನು ಬಳಸಿ ಸುಜಾತ ಕತ್ತು ಕೊಯ್ದಿದ್ದ, ನೋಡನೋಡುತ್ತಿದ್ದಂತೆ ಸುಜಾತ ಸಾವನ್ನಪ್ಪಿದ್ದರು.
ಇದನ್ನು ನೋಡುತ್ತಿದ್ದ ಸ್ಥಳೀಯರು ಕೊಲೆ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಚಿರಂಜೀವಿಯನ್ನು ಹಿಡಿದು ತಳಿಸಿದ್ದಾರೆ. ನಂತರ ಕೊಲಾರ ನಗರ ಠಾಣಾ ಪೊಲೀಸರಿಗೆ ಫೋನ್ ಮಾಡಿ ತಿಳಿಸಿ ಆರೋಪಿಯನ್ನು ಅವರಿಗೆ ಒಪ್ಪಿಸಿದ್ದಾರೆ. ಇನ್ನು ಸ್ಥಳಕ್ಕೆ ಬಂದಿದ್ದ ಕೋಲಾರ ನಗರ ಠಾಣಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಎಸ್ಪಿ ಕನ್ನಿಕಾಸುಕ್ರಿವಾಲ್ ಹಾಗೂ ಸೋಕೋ ಟೀಂ ಪರಿಶೀಲನೆ ನಡೆಸಿ ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದಾರೆ.
ಛತ್ತೀಸ್ಗಢ, ಜ.24: ನಾರಾಯಣಪುರ-ದಂತೇವಾಡ ಗಡಿಭಾಗದ ಅಬುಜ್ಮಡ್ (Abujhmad) ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಬಹುದೊಡ್ಡ ಕಾರ್ಯಚರಣೆಯನ್ನು ಮಾಡಿದೆ. ಇದು ‘ಆಪರೇಷನ್ ಮೇಘಬೂರು’ (Operation Meghburu)ನ ಭಾಗವಾಗಿದ್ದು, ಇದೀಗ ಈ ಮೂಲಕ ನಕ್ಸಲ್ ನಿಗ್ರಹ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಜಂಟಿ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಒಟ್ಟು 17 ನಕ್ಸಲರನ್ನು ಹೊಡೆದುರುಳಿಸಿವೆ. ಇದರಲ್ಲಿ 5 ಮಂದಿ ಮಹಿಳಾ ನಕ್ಸಲರು ಸೇರಿದ್ದಾರೆ ಎಂದು ಹೇಳಲಾಗಿದೆ. ಡಿಆರ್ಜಿ (DRG), ಎಸ್ಟಿಎಫ್ (STF) ಮತ್ತು ಸಿಆರ್ಪಿಎಫ್ (CRPF) ನ ಕೋಬ್ರಾ ಘಟಕದ ಸುಮಾರು 1,500 ಕ್ಕೂ ಹೆಚ್ಚು ಜವಾನರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ದಟ್ಟವಾದ ಅರಣ್ಯ ಮತ್ತು ಬೆಟ್ಟಗುಡ್ಡಗಳಿಂದ ಕೂಡಿದ ಅಬುಜ್ಮಡ್ ಪ್ರದೇಶ. ಇದು ನಕ್ಸಲರ ಪ್ರಮುಖ ತರಬೇತಿ ಕೇಂದ್ರ ಮತ್ತು ಅಡಗುತಾಣವಾಗಿದೆ.
ಈ ಎನ್ಕೌಂಟರ್ ನಡೆದ ಸ್ಥಳದಲ್ಲಿ ಎಕೆ-47 ರೈಫಲ್ಗಳು, ಎಸ್ಎಲ್ಆರ್ (SLR) ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ನಕ್ಸಲ್ ಬರಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೃತಪಟ್ಟ ನಕ್ಸಲರಲ್ಲಿ ಹಲವರು ಲಕ್ಷಾಂತರ ರೂಪಾಯಿ ಬಹುಮಾನ ಹೊಂದಿದ್ದ ಕುಖ್ಯಾತ ಕಮಾಂಡರ್ಗಳಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದಟ್ಟ ಅರಣ್ಯದಲ್ಲಿ ನಕ್ಸಲರ ಚಲನವಲನ ಪತ್ತೆಹಚ್ಚಲು ಡ್ರೋನ್ ಮತ್ತು ಸುಧಾರಿತ ಸ್ಯಾಟಲೈಟ್ ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸಲಾಗಿದೆ. ಈ ಕಾರ್ಯಾಚರಣೆಯು ಛತ್ತೀಸ್ಗಢದ ಬಸ್ತಾರ್ ವಲಯದಲ್ಲಿ ನಕ್ಸಲರ ನೆಟ್ವರ್ಕ್ಗೆ ದೊಡ್ಡ ಹೊಡೆತ ನೀಡಿದೆ. ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಸರಣಿ ಕಾರ್ಯಾಚರಣೆಗಳಲ್ಲಿ ಇದು ಅತಿ ಹೆಚ್ಚು ನಕ್ಸಲರು ಮೃತಪಟ್ಟ ಘಟನೆಯಾಗಿದೆ. ಸರ್ಕಾರವು “ನಕ್ಸಲ್ ಮುಕ್ತ ಭಾರತ” ಗುರಿಯೊಂದಿಗೆ ಇಂತಹ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದ್ದು, ನಕ್ಸಲರಿಗೆ ಶರಣಾಗಲು ಅವಕಾಶವನ್ನು ಕೂಡ ನೀಡಿದೆ.
ರಾಮ್ಲಾಲ್ (DVC ಸದಸ್ಯ): ಇವನು ದಂತೇವಾಡ-ನಾರಾಯಣಪುರ ಡಿವಿಜನಲ್ ಕಮಿಟಿಯ ಪ್ರಭಾವಿ ನಾಯಕನಾಗಿದ್ದು, ಇವನ ಹತ್ಯೆಗೆ 8 ಲಕ್ಷ ರೂ. ಬಹುಮಾನವಿತ್ತು. ಹಲವು ಐಇಡಿ (IED) ಸ್ಫೋಟಗಳ ಮಾಸ್ಟರ್ ಮೈಂಡ್
ಸುಮತಿ (ಮಹಿಳಾ ಕಮಾಂಡರ್): ಐವರು ಮೃತ ಮಹಿಳೆಯರಲ್ಲಿ ಈಕೆ ಪ್ರಮುಖಳು. ಈಕೆ ನಕ್ಸಲರ ಮಹಿಳಾ ಘಟಕದ ತರಬೇತಿ ವಿಭಾಗವನ್ನು ನೋಡಿಕೊಳ್ಳುತ್ತಿದ್ದಳು. ಈಕೆಯ ಹತ್ಯೆಗೆ 5 ಲಕ್ಷ ರೂ. ಬಹುಮಾನವಿತ್ತು.
ಸುಮತಿ (ಮಹಿಳಾ ಕಮಾಂಡರ್): ಐವರು ಮೃತ ಮಹಿಳೆಯರಲ್ಲಿ ಈಕೆ ಪ್ರಮುಖಳು. ಈಕೆ ನಕ್ಸಲರ ಮಹಿಳಾ ಘಟಕದ ತರಬೇತಿ ವಿಭಾಗವನ್ನು ನೋಡಿಕೊಳ್ಳುತ್ತಿದ್ದಳು. ಈಕೆಯ ಮೇಲೆ 5 ಲಕ್ಷ ರೂ. ಬಹುಮಾನವಿತ್ತು.
ಸುರೇಶ್ ಬೋಗಾಮಿ: ಬಸ್ತಾರ್ ವಲಯದ ಪ್ರಮುಖ ಸದಸ್ಯ. ಭದ್ರತಾ ಪಡೆಗಳ ಮೇಲಿನ ಅನಿರೀಕ್ಷಿತ ದಾಳಿಗಳನ್ನು ಸಂಘಟಿಸುವುದರಲ್ಲಿ ಇವನು ನಿಸ್ಸೀಮನಾಗಿದ್ದನು.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಜವಾನರ ಹೆಲ್ಮೆಟ್ ಕ್ಯಾಮೆರಾಗಳಲ್ಲಿ (Bodycam) ಸೆರೆಯಾದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಭೀಕರ ಗುಂಡಿನ ಚಕಮಕಿ ಮತ್ತು ಜವಾನರು ಶತ್ರುಗಳನ್ನು ಸುತ್ತುವರೆಯುವ ತಂತ್ರಗಾರಿಕೆಯನ್ನು ಕಾಣಬಹುದು.ನಕ್ಸಲರು ಅಡಗಿದ್ದ ಬಂಕರ್ಗಳನ್ನು ಡ್ರೋನ್ ಮೂಲಕ ಪತ್ತೆಹಚ್ಚಿ ಲೇಸರ್ ಸಹಾಯದಿಂದ ದಾಳಿ ಮಾಡಿರುವುದನ್ನು ವಿಡಿಯೋ ತುಣುಕುಗಳು ತೋರಿಸುತ್ತವೆ. ಕಾರ್ಯಾಚರಣೆ ಮುಗಿಸಿ ಹಿಂತಿರುಗಿದ ಜವಾನರನ್ನು ಸ್ಥಳೀಯ ಗ್ರಾಮಸ್ಥರು ಹೂಮಳೆ ಸುರಿಸುವ ಮೂಲಕ ಬರಮಾಡಿಕೊಂಡ ದೃಶ್ಯಗಳು ಇಂಟರ್ನೆಟ್ನಲ್ಲಿ ವೈರಲ್ ಆಗಿವೆ.
ಫೆಬ್ರವರಿ 13 ರಿಂದ ಆರಂಭವಾಗಲಿರುವ2026 ರ ಮಹಿಳಾ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಮೆಂಟ್ಗಾಗಿ ಬಿಸಿಸಿಐ ಭಾರತ ಎ ತಂಡವನ್ನು ಪ್ರಕಟಿಸಿದೆ. ಈ ಟೂರ್ನಮೆಂಟ್ಗಾಗಿ ಆಯ್ಕೆ ಸಮಿತಿಯು 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಭಾರತೀಯ ಸೀನಿಯರ್ ತಂಡದ ಆಟಗಾರರ್ತಿಯರಿಗೂ ಆಯ್ಕೆ ಸಮಿತಿ ಅವಕಾಶ ನೀಡಿದೆ. ಮುಂಬೈಕರ್ ರಾಧಾ ಯಾದವ್ ಈ ಟೂರ್ನಮೆಂಟ್ನಲ್ಲಿ ಭಾರತ ಎ ತಂಡವನ್ನು ಮುನ್ನಡೆಸಲಿದ್ದಾರೆ. ಇವರಲ್ಲದೆ, ತೇಜಲ್ ಹಸನ್ಬಿಸ್, ಮಿನ್ನು ಮಣಿ ಮತ್ತು ಸೈಮಾ ಠಾಕೋರ್ ಅವರಂತಹ ಸೀನಿಯರ್ ತಂಡದ ಆಟಗಾರರ್ತಿಯರು ಕೂಡ ಈ ತಂಡದಲ್ಲಿದ್ದಾರೆ.
ಏಷ್ಯಾಕಪ್ ಬಗ್ಗೆ ಪ್ರಮುಖ ಮಾಹಿತಿ
ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಮೆಂಟ್ನಲ್ಲಿ ಒಟ್ಟು 8 ತಂಡಗಳು ಸ್ಪರ್ಧಿಸಲಿವೆ. ಈ ಟೂರ್ನಮೆಂಟ್ ಫೆಬ್ರವರಿ 13 ರಿಂದ 22 ರವರೆಗೆ ನಡೆಯಲಿದೆ. ಈ 8 ತಂಡಗಳನ್ನು ತಲಾ 4 ರ ಪ್ರಕಾರ ಎ ಮತ್ತು ಬಿ ಎಂಬ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಟೂರ್ನಮೆಂಟ್ನಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಅಲ್ಲದೆ, ಪ್ರತಿ ತಂಡಕ್ಕೆ ಗುಂಪು ಹಂತದಲ್ಲಿ 3 ಪಂದ್ಯಗಳನ್ನು ಆಡುವ ಅವಕಾಶ ಸಿಗುತ್ತದೆ. ಭಾರತ ಎ ತಂಡವನ್ನು ಗುಂಪು ಎ ನಲ್ಲಿ ಸೇರಿಸಲಾಗಿದೆ. ಭಾರತದ ಜೊತೆಗೆ, ಈ ಗುಂಪಿನಲ್ಲಿ ಪಾಕಿಸ್ತಾನ ಮಹಿಳಾ ಎ, ಯುಎಇ ಮತ್ತು ನೇಪಾಳ ಮಹಿಳಾ ತಂಡಗಳು ಸೇರಿವೆ.
🚨 News 🚨#TeamIndia’s squad for Test against Australia Women & India A squad for ACC Rising Stars Asia Cup announced.
ಇತ್ತೀಚಿನ ದಿನಗಳಲ್ಲಿ, ಹಾಲು ಸೇವನೆ ಮಾಡುವುದರಿಂದ ಅಲರ್ಜಿ ಉಂಟಾಗುವ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಅನೇಕರು ಹಾಲು (Milk) ಕುಡಿದ ನಂತರ ಹೊಟ್ಟೆ ನೋವು, ವಾಂತಿ, ಚರ್ಮದ ದದ್ದುಗಳು ಅಥವಾ ಉಸಿರಾಟದ ತೊಂದರೆ, ಹೀಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ. ಇಂತಹ ಸಂದರ್ಭಗಳಲ್ಲಿ, ಹಾಲು ಸೇವನೆ ಮಾಡುವುದರಿಂದ ಅಲರ್ಜಿ ಉಂಟಾಗುತ್ತಿದ್ದರೆ ಮೊಸರು ತಿನ್ನುವುದನ್ನು ಕೂಡ ನಿಲ್ಲಿಸಬೇಕೇ ಎಂಬ ಗೊಂದಲ ಕೆಲವರಲ್ಲಿರುತ್ತದೆ. ವಾಸ್ತವವಾಗಿ, ಮೊಸರನ್ನು ಹಾಲಿನಿಂದ ತಯಾರಿಸಲಾಗುತ್ತದೆಯಾದರೂ ಅದನ್ನು ತಯಾರಿಸುವ ಪ್ರಕ್ರಿಯೆಯು ವಿಭಿನ್ನವಾಗಿರುತ್ತದೆ. ಆದರೂ ಕೂಡ ಹಾಲಿನಿಂದ ಅಲರ್ಜಿ ಇರುವವರು ಮೊಸರು ಸೇವನೆ ಮಾಡುವುದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತದೆ, ಮೊಸರು ತಿನ್ನುವುದನ್ನು ಬಿಡಬೇಕೇ ಎಂಬ ಮಾಹಿತಿಯನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಆರ್ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ಹೇಳುವ ಪ್ರಕಾರ, ಈ ಪ್ರಶ್ನೆಗೆ ಉತ್ತರ ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಏಕೆಂದರೆ ಹಾಲಿನ ಅಲರ್ಜಿ ಸಾಮಾನ್ಯವಾಗಿ ಹಾಲಿನಲ್ಲಿರುವ ಪ್ರೋಟೀನ್ಗಳಿಂದ ಉಂಟಾಗುತ್ತದೆ, ಆದರೆ ಮೊಸರು ಸೇವನೆ ಮಾಡುವುದರಿಂದ ಹಾಗಾಗಬೇಕು ಎಂಬುದಿಲ್ಲ. ಅದಕ್ಕಾಗಿಯೇ ಅನೇಕರಿಗೆ ಹಾಲು ಕುಡಿಯುವುದರಿಂದ ಸಮಸ್ಯೆಯಾಗುತ್ತದೆ, ಆದರೆ ಮೊಸರು ಸೇವನೆಯಿಂದ ದೇಹದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಆಗವುದಿಲ್ಲ. ಆದರೆ ಕೆಲವು ಸಂದರ್ಭದಲ್ಲಿ ಹಾಲಿನ ಪ್ರೋಟೀನ್ಗಳಿಂದ ತೀವ್ರ ಅಲರ್ಜಿ ಇರುವವರಿಗೆ, ಮೊಸರು ತಿನ್ನುವುದರಿಂದ ಅಲರ್ಜಿಯ ಪ್ರತಿಕ್ರಿಯೆಗಳು ಕಂಡುಬರಬಹುದು. ಹೊಟ್ಟೆ ನೋವು, ತುರಿಕೆ, ಊತ ಅಥವಾ ಉಸಿರಾಟದ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ, ಹಾಲಿಗೆ ಅಲರ್ಜಿ ಇರುವ ಎಲ್ಲರಿಗೂ ಮೊಸರು ಸುರಕ್ಷಿತ ಎಂದು ಹೇಳುವುದು ತಪ್ಪು. ಮೊಸರು ಸೇವಿಸುವುದು ಪ್ರಯೋಜನಕಾರಿಯೇ ಅಥವಾ ಇಲ್ಲವೇ ಎಂಬುದನ್ನು ದೇಹದ ಪ್ರತಿಕ್ರಿಯೆಯನ್ನು ಗಮನಿಸುವ ಮೂಲಕ ಮಾತ್ರ ನಿರ್ಧರಿಸಬಹುದು.
ಹಾಲಿನ ಅಲರ್ಜಿ ಇದ್ದರೆ, ನಿಮ್ಮ ಆಹಾರದಲ್ಲಿ ಮೊಸರನ್ನು ನೇರವಾಗಿ ಸೇವನೆ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಮೊದಲ ಬಾರಿಗೆ, ಮೊಸರನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಸೇವಿಸಿ, ಆ ಬಳಿಕ ದೇಹದ ಪ್ರತಿಕ್ರಿಯೆಯನ್ನು ಗಮನಿಸಿ. ಅಸ್ವಸ್ಥತೆ ಕಂಡುಬಂದರೆ, ತಕ್ಷಣ ಮೊಸರು ಸೇವನೆ ಮಾಡುವುದನ್ನು ನಿಲ್ಲಿಸಿ. ಸೋಯಾ ಅಥವಾ ತೆಂಗಿನಕಾಯಿಯಿಂದ ತಯಾರಿಸಿದ ಮೊಸರುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಅದನ್ನು ಕೂಡ ಸೇವನೆ ಮಾಡಬಹುದು. ಹಾಲು ಅಥವಾ ಮೊಸರಿಗೆ ಸಂಬಂಧಿಸಿದ ಅಲರ್ಜಿಯನ್ನು ಲಘುವಾಗಿ ಪರಿಗಣಿಸಬಾರದು. ಹಾಗಾಗಿ ಸರಿಯಾದ ರೋಗನಿರ್ಣಯಕ್ಕೆ ಅಲರ್ಜಿ ಪರೀಕ್ಷೆ ಮತ್ತು ವೈದ್ಯರ ಸಲಹೆ ಅಗತ್ಯ. ವೈದ್ಯರು ನಿಮ್ಮ ಅಲರ್ಜಿಯ ಪ್ರಕಾರವನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಸರಿಯಾದ ಆಹಾರ ಸೇವನೆಯ ಬಗ್ಗೆ ಸಲಹೆ ನೀಡಬಹುದು.
ಬಿಗ್ಬಾಸ್ ಗೆದ್ದಿರುವ ಗಿಲ್ಲಿ, ಗೆದ್ದಾಗಿನಿಂದಲೂ ನಿಂತ ಕಡೆ ನಿಲ್ಲುತ್ತಿಲ್ಲ. ಹಲವು ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳನ್ನು ಭೇಟಿ ಮಾಡುತ್ತಾ ಅವರುಗಳ ಆಶೀರ್ವಾದ, ಹಾರೈಕೆಗಳನ್ನು ಪಡೆಯುತ್ತಿದ್ದಾರೆ.
ಇದೀಗ ಗಿಲ್ಲಿ ತಮ್ಮ ಶಾಲೆಗೆ ಭೇಟಿ ನೀಡಿದ್ದು, ಹಳೆ ನೆನಪುಗಳನ್ನು ಮೆಲಕು ಹಾಕಿದ್ದಾರೆ. ಶಾಲೆಯ ಮಕ್ಕಳು, ಶಿಕ್ಷಕರುಗಳೊಟ್ಟಿಗೆ ಫೋಟೊಗಳನ್ನು ಸಹ ತೆಗೆಸಿಕೊಂಡಿದ್ದಾರೆ.
ಮಳವಳ್ಳಿ ತಾಲ್ಲೂಕಿನ ಬಂಡೂರಿನ ಪ್ರೌಢಶಾಲೆಯಲ್ಲಿ ಗಿಲ್ಲಿ ನಟ ವಿದ್ಯಾಭ್ಯಾಸ ಮಾಡಿದ್ದು, ಇಂದು (ಜನವರಿ 24) ಗಿಲ್ಲಿ ನಟ ತಮ್ಮ ಹಳೆಯ ಶಾಲೆಗೆ ಭೇಟಿ ನೀಡಿದ್ದಾರೆ.
ವಿದ್ಯಾರ್ಥಿ ದೆಸೆಯಲ್ಲಿ ಶಾಲೆಯಲ್ಲಿ ತಾವು ಕೂರುತ್ತಿದ್ದ ತರಗತಿಯಲ್ಲಿ ಬೆಂಚಿನ ಮೇಲೆ ಕೂತು ಹಳೆಯ ದಿನಗಳನ್ನು ಗಿಲ್ಲಿ ನಟ ಮೆಲುಕು ಹಾಕಿದ್ದಾರೆ. ತಾವು ಬೆಂಚಿನ ಮೇಲೆ ಬರೆದ ಹೆಸರುಗಳನ್ನು ನೋಡಿ ಖುಷಿ ಪಟ್ಟಿದ್ದಾರೆ.
ಗಿಲ್ಲಿಯನ್ನು ಬಂಡೂರಿನ ಪ್ರೌಢಶಾಲೆ ಸಿಬ್ಬಂದಿ ಹಾರ, ಶಾಲು ಹಾಕಿ ಸನ್ಮಾನ ಸಹ ಮಾಡಿದ್ದಾರೆ. ಮಾತ್ರವಲ್ಲದೆ, ಅದೇ ಶಾಲೆಯಲ್ಲಿ ಶಿಕ್ಷಕರೊಟ್ಟಿಗೆ ಸೇರಿ ಊಟ ಸಹ ಮಾಡಿದ್ದಾರೆ.
ಗಿಲ್ಲಿಯೊಟ್ಟಿಗೆ ಬಂಡೂರಿನ ಪ್ರೌಢಶಾಲೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಲವು ಫೋಟೊಗಳನ್ನು ತೆಗೆಸಿಕೊಂಡಿದ್ದಾರೆ. ಕೆಲ ಗ್ರಾಮಸ್ಥರು ಸಹ ಗಿಲ್ಲಿಯೊಟ್ಟಿಗೆ ಫೋಟೊಗಳನ್ನು ತೆಗೆಸಿಕೊಂಡಿದ್ದಾರೆ.
ನವದೆಹಲಿ/ಬೆಂಗಳೂರು,(ಜನವರಿ 24): ದೇಶದ 77ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಈ ಬಾರಿ ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ಸಿಕ್ಕಿಲ್ಲ. ಈ ಬಾರಿ ಕರ್ನಾಟಕದಿಂದ ‘ಮಿಲೆಟ್ಸ್ ಟು ಮೈಕ್ರೋಚಿಪ್’ (ಸಿರಿಧಾನ್ಯದಿಂದ ಮೈಕ್ರೋಚಿಪ್ವರೆಗೆ) ಎಂಬ ಪರಿಕಲ್ಪನೆಯ ಸ್ತಬ್ಧಚಿತ್ರವನ್ನ ಸಿದ್ಧಪಡಿಸಲಾಗಿತ್ತು. ಆದ್ರೆ, ಕೊನೆ ಕ್ಷಣದಲ್ಲಿ ಕರ್ನಾಟಕದ ಟ್ಯಾಬ್ಲೋಗೆ ಪರೇಡ್ನಿಂದ ಹೊರಬಿದ್ದಿದೆ. ಈ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಆರೋಪ ಪ್ರತ್ಯಾರೋಪ ಜೋರಾಗಿದೆ.
ಮಿಲೆಟ್ಸ್ ಟು ಮೈಕ್ರೋ ಚಿಪ್’ ವಿಷಯಾಧಾರಿತ ಸ್ತಬ್ಧ ಚಿತ್ರ
ಆತ್ಮನಿರ್ಭರ ಭಾರತಕ್ಕೆ ಸಿರಿಧಾನ್ಯದಿಂದ ತಂತ್ರಜ್ಞಾನದವರೆಗೆ ರಾಜ್ಯದ ಸಮಗ್ರ ಕೊಡುಗೆಯ ಸಂಕೇತವಾಗಿ ಗಣರಾಜ್ಯೋತ್ಸವದ ಪರೇಡ್ನಲ್ಲಿ ‘ಮಿಲೆಟ್ಸ್ ಟು ಮೈಕ್ರೋ ಚಿಪ್’ ವಿಷಯಾಧಾರಿತ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಸಿದ್ಧಪಡಿಸಲಾಗಿತ್ತು. ಮಿಲೆಟ್ಸ್ ಟು ಮೈಕ್ರೋಚಿಪ್ ಸ್ತಬ್ಧಚಿತ್ರದ ಮೂಲಕ ಕರ್ನಾಟಕದ ಬೆಳೆಗಳಾದ ರಾಗಿ, ಜೋಳ, ನವಣೆ, ಸಜ್ಜೆ ಬೆಳೆ ಹಾಗೂ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಬೆಳವಣಿಗೆ ಬಗ್ಗೆಯೂ ಟ್ಯಾಬ್ಲೋದಲ್ಲಿ ನಿರ್ಮಿಸಲಾಗಿತ್ತು.
ಕರ್ನಾಟಕವು ಕೃಷಿ ಕೈಗಾರಿಕೆ, ನಾವೀನ್ಯತೆ ಮತ್ತು ಸಂಸ್ಕೃತಿಯಲ್ಲಿ ಸಮತೋಲಿತ ಪ್ರಗತಿ ಮೂಲಕ ರಾಷ್ಟ್ರವನ್ನು ಸಮೃದ್ಧ ಮತ್ತು ಸುಸ್ಥಿರ ಭವಿಷ್ಯದತ್ತ ಕೊಂಡೊಯ್ಯುತ್ತಿದೆ. ಆತ್ಮನಿರ್ಭರ ಭಾರತದ ದೃಷ್ಟಿಗೆ ಕರ್ನಾಟಕ ಸಮಗ್ರ ಕೊಡುಗೆ ನೀಡುತ್ತಿದೆ ಎಂಬುದು ಈ ಸ್ತಬ್ಧಚಿತ್ರದ ಸಂಕೇತವಾಗಿತ್ತು. ಆದ್ರೆ, ಕೊನೆ ಕ್ಷಣದಲ್ಲಿ ಈ ಸ್ತಬ್ಧಚಿತ್ರ ಪ್ರದರ್ಶಿಸುವ ಪ್ರಸ್ತಾಪ ಅಂಗೀಕೃತವಾಗದ ಹಿನ್ನೆಲೆಯಲ್ಲಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ವರ್ಣರಂಜಿತ ಗಣರಾಜ್ಯೋತ್ಸವ ಪರೇಡ್ನಲ್ಲಿ ಪ್ರದರ್ಶನಕ್ಕೆ ಅವಕಾಶ ಸಿಕ್ಕಿಲ್ಲ ಎನ್ನುವುದು ದುರದೃಷ್ಟಕರ ಸಂಗತಿ.
ಅವಕಾಶ ಸಿಗದಿರುವುದಕ್ಕೆ ಕಾರಣ ಕೊಟ್ಟ ಎಂಪಿ
ಈ ಬಗ್ಗೆ ಮೈಸೂರು ಬಿಜೆಪಿ ಸಂಸದ ಯದುವೀರ್ ಒಡೆಯರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಗಣರಾಜ್ಯೋತ್ಸವ ಪರೇಡ್ನಲ್ಲಿ ರಾಜ್ಯದ ಸ್ತಬ್ಧಚಿತ್ರ ಭಾಗವಹಿಸುತ್ತಿಲ್ಲ. ಸರಿಯಾಗಿ ಪತ್ರ ವ್ಯವಹಾರ ನಡೆದಿಲ್ಲ, ಹಾಗಾಗಿ ಗೊಂದಲ ಆಗಿತ್ತು. ಈ ಬಾರಿ ಗಣರಾಜ್ಯೋತ್ಸವದಲ್ಲಿ ರಾಜ್ಯದ ಸ್ತಬ್ಧಚಿತ್ರ ಇರುವುದಿಲ್ಲ ಎಂದು ಕಾರಣ ಕೊಟ್ಟಿದ್ದಾರೆ.
ಶಾಸಕ ಪ್ರದೀಪ್ ಈಶ್ವರ್ ಆಕ್ರೋಶ
ಕರ್ನಾಟಕದ ಪ್ರತಿಯೊಬ್ಬ ಮತದಾರು ಸೂಕ್ಷ್ಮವಾಗಿ ಯೋಚಿಸಬೇಕು. ಬಿಜೆಪಿಗೆ ಮತ ಹಾಕಿದವರು ಯೋಚನೆ ಮಾಡಿ. ನಾಲಾಯಕ್ ಸಂಸದರು ನೋಡಬೇಕಿದೆ. ರಾಜ್ಯದ ಪರ ಧ್ವನಿ ಎತ್ತದ ಸಂಸದರು ನೋಡಿ ಜನವರಿ 26 ರಂದು ರಿಪಬ್ಲಿಕ್ ಡೇ ನಡೆಯುತ್ತೆ. 30 ಟ್ಯಾಬ್ಲೋಗಳಿಗೆ ಅವಕಾಶ ನೀಡಲಾಗಿದೆ. 17 ಟ್ಯಾಬ್ಲೋ ಕರ್ತವ್ಯ ಪಥದಲ್ಲಿ ಹೋಗುತ್ತವೆ. ಕೇರಳದ ಟ್ಯಾಬ್ಲೋ ಹೋಗ್ತಿದೆ. ಯಾಕಂದ್ರೆ ಚುನಾವಣೆ ಇದೆ.ತಮಿಳುನಾಡಿನಲ್ಲಿ ಚುನಾವಣೆ ಇದೆ ಅದರದ್ದು ಸಹ ಹೋಗುತ್ತಿದೆ. ಪುದುಚೇರಿಯಲ್ಲು ಚುನಾವಣೆ ಇದೆ. ಅಲ್ಲಿ ಚುನಾವಣೆಗಳು ಇರುವುದಿರಂದ ಈ ರಾಜ್ಯಗಳ ಸ್ತಬ್ಧಚಿತ್ರಗಳಿಗೆ ಅವಕಾಶ ನೀಡಲಾಗಿದೆ. ಆದರೆ ನಮ್ಮ ಟ್ಯಾಬ್ಲೋ ಸಿಕ್ಕಿಲ್ಲ. ಇದಾ ನೀವು ರಾಜ್ಯಕ್ಕೆಕೊಡುವ ಗೌರವ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಿಲೆಟ್ಸ್ ಟು ಮೈಕ್ರೋ ಚಿಪ್ ಟ್ಯಾಬ್ಲೋ ಇದೆ. ನಮ್ಮ ಕರ್ನಾಟಕದ್ದು,ಅದಕ್ಕೆ ಬಿಜೆಪಿಯವರು ಅಪಮಾನ ಮಾಡುತ್ತಿದ್ದಾರೆ. ಸೋಮಣ್ಣ ಬಿಜೆಪಿ ಅಧ್ಯಕ್ಷರಾಗೋಕೆ ನೋಡುತ್ತಿದ್ದಾರೆ. ಯತ್ನಾಳ್ ಅವರೇ ಓ ಅಂತ ಮಾತನಾಡುತ್ತೀರಲ್ಲ. ಇದರ ಬಗ್ಗೆ ನೀವು ಮಾತನಾಡಿ. ಅಶೋಕಣ್ಣ ನೀವು ಇದರ ಬಗ್ಗೆ ಮಾತನಾಡಿ. ತೇಜಸ್ವಿ ಸೂರ್ಯ ರನ್ನಿಂಗ್ ರೇಸ್ ನಲ್ಲಿದ್ದೀರ. ನಮ್ಮ ಟ್ಯಾಬ್ಲೋ ಬಗ್ಗೆ ಹೇಳಿ. ಇದರ ಬಗ್ಗೆ ನಾಲಾಯಕ್ ಎಂಪಿಗಳು ಹೇಳಲಿ ಎಂದು ಕಿರಿಕಾರಿದರು.
ಬೆಂಗಳೂರು, (ಜನವರಿ 24): ಪೊಲೀಸ್ ಕಾನ್ಸ್ಟೇಬಲ್ (Police Constable) ಕಾಲೇಜು ವಿದ್ಯಾರ್ಥಿನಿಗೆ (College Student) ಲೈಂಗಿಕ ಕಿರುಕುಳ ನೀಡಿದ ಆರೋಪ ಬೆಳಕಿಗೆ ಬಂದಿದೆ. ಬೆಂಗಳೂರಿನ (Bengaluru) ಫ್ರೀಡಂ ಪಾರ್ಕ್ನಲ್ಲಿ ಕರ್ತವ್ಯದಲ್ಲಿದ್ದ ವೇಳೆ R.T.ನಗರ ಠಾಣೆಯ ಕಾನ್ಸ್ಟೇಬಲ್ ಯಮುನಾ ನಾಯಕ್ ಎನ್ನುವಾತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಸದ್ಯ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಾರಪೇಟೆ ಪೊಲೀಸರು, ಯಮುನಾ ನಾಯಕ್ ನನ್ನು ಬಂಧಿಸಿದ್ದಾರೆ.
ಫ್ರೀಡಂಪಾರ್ಕ್ನಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ವೇಳೆ ಯಮುನಾ ನಾಯಕ್, ಪ್ರಥಮ ಪಿಯು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ಸಂಬಂಧ ವಿದ್ಯಾರ್ಥಿನಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ದೂರಿನ ಮೇರೆಗೆ ಉಪ್ಪಾರಪೇಟೆ ಪೊಲೀಸರು, ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಅರೋಪಿ ಪೇದೆ ಯಮುನಾ ನಾಯಕ್ ನನ್ನು ಬಂಧಿಸಿದ್ದಾರೆ.
ಕರ್ನಾಟಕದ ಪೊಲೀಸರು ತಮ್ಮ ದಕ್ಷತೆ ಮತ್ತು ವೃತ್ತಿಪರತೆಗೆ ದೇಶದಲ್ಲೇ ಹೆಸರಾಗಿದ್ದರು. ಕಾನೂನು ಮೀರಿದವರನ್ನು ಕ್ಷಿಪ್ರವಾಗಿ ಬಂಧಿಸಿ ಜೈಲಿಗೆ ಕಳುಹಿಸುತ್ತಿದ್ದರು. ಆದ್ರೆ, ಈಗ ಪರಿಸ್ಥಿತಿ ಬದಲಾಗಿದ್ದು, ಪೊಲೀಸರೇ ಕೋರ್ಟ್ ಕಟಕಟೆಯಲ್ಲಿ ನಿಲ್ಲುತ್ತಿದ್ದಾರೆ. ಕೊಲೆ, ಸುಲಿಗೆ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಭೂ ಮಾಫೀಯಾ, ಲಂಚ, ಹೀಗೆ ಅನೇಕ ಅಪರಾಧ ಚಟುವಟಿಕೆಗಳಲ್ಲಿ ಪೊಲೀಸರು ತೊಡಗಿಸಿಕೊಂಡು ಆರೋಪಿಗಳಾಗುವ ಸ್ಥಾನದಲ್ಲಿ ನಿಲ್ಲುವ ಪರಿಸ್ಥಿತಿ ತಂದುಕೊಳ್ಳುತ್ತಿದ್ದಾರೆ.
ಅದರಲ್ಲೂ ಇತ್ತೀಚಗೆ ಬೆಂಗಳೂರಿನಲ್ಲಿ ಪೊಲೀಸರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡುವ ಸಾಕಷ್ಟು ಪ್ರಕರಣಗಳು ಬಹಿರಂಗವಾಗಿದ್ದು, ಈ ಸಂಬಂಧ ಅನೇಕ ಪೊಲೀಸ್ ಪೇದೆಗಳು, ಇನ್ಸ್ಪೆಕ್ಟರ್ಗಳು ಕೆಲಸದಿಂದ ಅಮಾನತುಗೊಂಡಿದ್ದಾರೆ. ಇದರಿಂದಾಗಿ ಸಾರ್ವಜನಿಕರಲ್ಲಿ ಪೊಲೀಸರ ಮೇಲೆ ನಂಬಿಕೆ ಕಡಿಮೆಯಾಗುತ್ತಿದೆ. ಪೊಲೀಸರೇ ಅನ್ಯಾಯದ ಹಾದಿಯಲ್ಲಿ ನಡೆಯುತ್ತಿರುವಾಗ ನ್ಯಾಯ ಎಲ್ಲಿದೆ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.