ಹಾಲಿವುಡ್ ಖ್ಯಾತ ನಟಿಗೆ ಪ್ರಭಾಸ್ ಸಿನಿಮಾ ಬಲು ಇಷ್ಟವಂತೆ

ಭಾರತೀಯ ನಟ-ನಟಿಯರು ಹಾಲಿವುಡ್ (Hollywood)​ ಸಿನಿಮಾಗಳಲ್ಲಿ ನಟಿಸಲು, ಹಾಲಿವುಡ್ ಸ್ಟಾರ್​​ಗಳನ್ನು ಭೇಟಿ ಆಗಲು ಉತ್ಸುಕರಾಗಿರುತ್ತಿದ್ದ ಸಮಯ ಇತ್ತು. ಆದರೆ ಈಗ ಸಾಕಷ್ಟು ಬದಲಾಗಿದೆ. ಹಾಲಿವುಡ್​ ಸ್ಟಾರ್ ನಟ-ನಟಿಯರು ಭಾರತೀಯ ಸಿನಿಮಾಗಳತ್ತೆ ಮೆಚ್ಚುಗೆ ಮತ್ತು ಗೌರವದಿಂದ ನೋಡುತ್ತಿದ್ದಾರೆ. ಹಲವು ಹಾಲಿವುಡ್​​ ಸ್ಟಾರ್ ನಟ-ನಟಿಯರು ಭಾರತೀಯ ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇದೀಗ ಖ್ಯಾತ ಹಾಲಿವುಡ್ ನಟಿಯೊಬ್ಬರು ತಮಗೆ ಪ್ರಭಾಸ್ ಹಾಗೂ ಆಮಿರ್ ಖಾನ್ ಎಂದರೆ ಇಷ್ಟ ಅವರು ನಟಿಸಿರುವ ಸಿನಿಮಾಗಳನ್ನು ತಾವು ಪದೇ ಪದೇ ನೋಡುವುದಾಗಿ ಹೇಳಿಕೊಂಡಿದ್ದಾರೆ.

ಹಾಲಿವುಡ್​​ನ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದಾಗಿರುವ ‘ವೆಡ್​​ನೆಸ್​ ಡೇ’ ಭಾರತದಲ್ಲಿಯೂ ಬಲು ಜನಪ್ರಿಯ. ಈ ವೆಬ್ ಸರಣಿಯ ಮುಖ್ಯ ಪೋಷಕ ಪಾತ್ರದಲ್ಲಿ ನಟಿಸಿರುವ ನಟಿ ಎಮ್ಮಾ ಮೈಯರ್ಸ್​​ ಇದೀಗ ಭಾರತೀಯ ಸಿನಿಮಾಗಳ ಬಗ್ಗೆ ಮಾತನಾಡಿದ್ದು, ತಮಗೆ ಭಾರತೀಯ ಸಿನಿಮಾಗಳೆಂದರೆ ಬಲು ಇಷ್ಟ ಎಂದಿದ್ದಾರೆ. ಅದರಲ್ಲೂ ತಮಗೆ ಪ್ರಭಾಸ್ ನಟಿಸಿರುವ ‘ಬಾಹುಬಲಿ’ ಮತ್ತು ‘ಬಾಹುಬಲಿ 2’ ಸಿನಿಮಾಗಳು ಬಹಳ ಇಷ್ಟ, ನನ್ನ ಗೆಳೆಯರಿಗೆ ಅದನ್ನು ನೋಡುವಂತೆ ರೆಕೆಮೆಂಡ್ ಮಾಡುತ್ತಿರುತ್ತೇನೆ’ ಎಂದಿದ್ದಾರೆ.

ತಮ್ಮ ಹೊಸ ಸಿನಿಮಾ ‘ಎ ಮೈನ್‌ಕ್ರಾಫ್ಟ್ ಮೂವಿ’ ಪ್ರಚಾರದ ಸಂದರ್ಭದಲ್ಲಿ ಮಾತನಾಡಿರುವ ಎಮ್ಮಾ, ಅಮೀರ್ ಖಾನ್ ನಟನೆಯ ‘3 ಇಡಿಯಟ್ಸ್’ ಮತ್ತು ಎಸ್‌ಎಸ್‌ ರಾಜಮೌಳಿ ನಿರ್ದೇಶನದ, ಪ್ರಭಾಸ್ ನಟನೆಯ ‘ಬಾಹುಬಲಿ’ ಚಿತ್ರಗಳು ತಮ್ಮ ಆಲ್-ಟೈಮ್ ಫೇವರಿಟ್ ಎಂದು ಅವರು ತಿಳಿಸಿದ್ದಾರೆ. ‘ನಾನು ಬಾಲಿವುಡ್ ಸಿನಿಮಾಗಳ ದೊಡ್ಡ ಅಭಿಮಾನಿ. ನಾನು ಮೊದಲ ಬಾರಿಗೆ ನೋಡಿದ ಭಾರತೀಯ ಸಿನಿಮಾ ‘3 ಇಡಿಯಟ್ಸ್’. ಆ ಚಿತ್ರ ನನಗೆ ಎಷ್ಟು ಇಷ್ಟವಾಯಿತೆಂದರೆ, ಅಲ್ಲಿಂದ ನಾನು ಭಾರತೀಯ ಚಿತ್ರಗಳನ್ನು ಹುಡುಕಿ ನೋಡಲು ಆರಂಭಿಸಿದೆ. ಅದರ ಕಥೆ, ಭಾವನೆಗಳು ಮತ್ತು ಹಾಡುಗಳು ನನ್ನನ್ನು ಸಂಪೂರ್ಣವಾಗಿ ಸೆಳೆದವು’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಹಾಲಿವುಡ್​​ನಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ಈ ಮಲಯಾಳಿಯ ಬಗ್ಗೆ ನಿಮಗೆ ಗೊತ್ತೆ?

‘ನಾನು ‘ಬಾಹುಬಲಿ’ ಚಿತ್ರವನ್ನೂ ನೋಡಿದ್ದೇನೆ ಮತ್ತು ಅದು ನಿಜಕ್ಕೂ ಅದ್ಭುತವಾಗಿತ್ತು. ಅದರ ಮೇಕಿಂಗ್, ಆಕ್ಷನ್ ದೃಶ್ಯಗಳು ಮತ್ತು ಕಲ್ಪನೆ ಬೆರಗುಗೊಳಿಸುವಂತಿತ್ತು. ಪ್ರಭಾಸ್ ಅವರ ನಟನೆ ನನಗೆ ತುಂಬಾ ಇಷ್ಟವಾಯಿತು’ ಎಂದು ಎಮ್ಮಾ ಮೈಯರ್ಸ್ ಭಾರತೀಯ ಚಿತ್ರರಂಗದ ಮೇಲಿರುವ ತಮ್ಮ ಕ್ರೇಜ್ ಅನ್ನು ಬಿಚ್ಚಿಟ್ಟಿದ್ದಾರೆ.

ಸದ್ಯಕ್ಕೆ ಎಮ್ಮಾ ಮೈಯರ್ಸ್ ಜನಪ್ರಿಯ ವಿಡಿಯೋ ಗೇಮ್ ಆಧಾರಿತ ಲೈವ್-ಆಕ್ಷನ್ ಚಿತ್ರ ‘ಎ ಮೈನ್‌ಕ್ರಾಫ್ಟ್ ಮೂವಿ’ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಇದರಲ್ಲಿ ಅವರು ಜ್ಯಾಕ್ ಬ್ಲಾಕ್ ಮತ್ತು ಜೇಸನ್ ಮೊಮೊವಾ ಅವರಂತಹ ಪ್ರಮುಖ ಹಾಲಿವುಡ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಇದರ ಜೊತೆಗೆ, ಜಗತ್ತಿನಾದ್ಯಂತ ಕೋಟ್ಯಂತರ ವೀಕ್ಷಕರು ಕಾತರದಿಂದ ಕಾಯುತ್ತಿರುವ ‘ವೆಡ್ನೆಸ್‌ಡೇ ಸೀಸನ್ 3’ ರಲ್ಲೂ ಅವರು ಮರಳಿ ಎನಿಡ್ ಸಿಂಕ್ಲೇರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಚಿವರೊಂದಿಗೆ ಉಪಹಾರ ಸಭೆಯಲ್ಲಿ ಸಿಎಂ ಭಾವುಕ: ಕಣ್ಣೀರು ಹಾಕಿದ ಸಿದ್ದರಾಮಯ್ಯ

ಬೆಂಗಳೂರು, ಮೇ 28: ಸಚಿವರೊಂದಿಗಿನ ಉಪಹಾರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಕಣ್ಣೀರಿಟ್ಟಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮತ್ತು ಮುಂದಿನ ಎರಡು ವರ್ಷಗಳ ಕಾಲ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಪ್ರಕಟಿಸುವ ವೇಳೆ ಸಿದ್ದರಾಮಯ್ಯ ಭಾವುಕರಾದ ಪ್ರಸಂಗ ನಡೆದಿದೆ. ಈ ಸಂದರ್ಭ ಸಿದ್ದರಾಮಯ್ಯ ಅವರು ತಮ್ಮ ಆಡಳಿತಾವಧಿಯಲ್ಲಿ ನೀಡಿದ ಜನಪರ ಯೋಜನೆಗಳು ಮತ್ತು ಉತ್ತಮ ಕಾರ್ಯಗಳನ್ನು ಸ್ಮರಿಸಿದ್ದು, ಮುಂಬರುವ ದಿನಗಳಲ್ಲಿ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸಂಪೂರ್ಣ ಸಹಕಾರ ನೀಡಿ. ಜನಪರ ಆಡಳಿತವನ್ನು ಮುಂದುವರಿಸಿ ಎಂದು ತಮ್ಮ ಸಚಿವ ಸಂಪುಟದ ಸದಸ್ಯರಿಗೆ ಕರೆ ನೀಡಿದ್ದಾರೆ. ಅಲ್ಲದೆ, ಬಿಜೆಪಿಯ ರಾಜಕಾರಣದ ಬಗ್ಗೆ ಎಚ್ಚರಿಕೆ ವಹಿಸುವಂತೆಯೂ ಸೂಚಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Shakuna Shastra: ಮನೆಯಿಂದ ಹೊರಡುವಾಗ ಶವಯಾತ್ರೆ ಕಂಡರೆ ಹೆದರಬೇಡಿ;ನಿಮ್ಮ ಅದೃಷ್ಟವನ್ನೇ ಬದಲಾಯಿಸಬಹುದು ಈ ಶುಭ ಸಂಕೇತ!

ರಸ್ತೆಯಲ್ಲಿ ಶವಯಾತ್ರೆ Image Credit source: Pinterest

ಹುಟ್ಟಿದ ಪ್ರತಿಯೊಬ್ಬ ಜೀವಿಯೂ ಒಂದಲ್ಲ ಒಂದು ದಿನ ಸಾಯಲೇಬೇಕು. ಹಿಂದೂ ಧರ್ಮದಲ್ಲಿ ಮನುಷ್ಯನ ಜೀವನಕ್ಕೆ ಸಂಬಂಧಿಸಿದಂತೆ 16 ಸಂಸ್ಕಾರಗಳನ್ನು ಹೇಳಲಾಗಿದ್ದು, ಅದರಲ್ಲಿ ಕೊನೆಯದೇ ‘ಅಂತ್ಯ ಸಂಸ್ಕಾರ‘ (ಅಂತಿಮ ಯಾತ್ರೆ). ಸಾಮಾನ್ಯವಾಗಿ ಕೆಲಸದ ನಿಮಿತ್ತ ಮನೆಯಿಂದ ಹೊರಗಡೆ ಹೋದಾಗ ಅಥವಾ ಪ್ರಯಾಣ ಮಾಡುವಾಗ ರಸ್ತೆಯಲ್ಲಿ ಯಾರದ್ದಾದರೂ ಶವಯಾತ್ರೆ (ಅಂತಿಮಯಾತ್ರೆ) ಸಾಗುತ್ತಿರುವುದನ್ನು ಕಾಣುತ್ತೇವೆ. ಇಂತಹ ಸಂದರ್ಭದಲ್ಲಿ ಅನೇಕರ ಮನಸ್ಸಿನಲ್ಲಿ ಒಂದು ರೀತಿಯ ಭಯ ಅಥವಾ ಆತಂಕ ಮೂಡುತ್ತದೆ. ಆದರೆ, ಶಕುನ ಶಾಸ್ತ್ರ ಮತ್ತು ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ರಸ್ತೆಯಲ್ಲಿ ಶವಯಾತ್ರೆ ಕಾಣಿಸುವುದು ಅಶುಭವಲ್ಲ, ಬದಲಿಗೆ ಅತ್ಯಂತ ಶುಭ ಸಂಕೇತವಾಗಿದೆ.

ರಸ್ತೆಯಲ್ಲಿ ಶವಯಾತ್ರೆ ಕಂಡರೆ ಯಾವ ರೀತಿಯ ಶುಭ ಫಲಗಳು ಸಿಗುತ್ತವೆ ಮತ್ತು ಆ ಸಮಯದಲ್ಲಿ ನಾವು ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ:

ಅರೆಕ್ಷಣ ನಿಂತು ‘ರಾಮ ನಾಮ’ ಜಪಿಸಿ:

ಧಾರ್ಮಿಕ ನಂಬಿಕೆಗಳ ಪ್ರಕಾರ, ಮರಣದ ನಂತರ ಆತ್ಮವು ಪರಮಾತ್ಮನ ಪಾದಗಳನ್ನು ಸೇರುತ್ತದೆ. ಆದ್ದರಿಂದ ರಸ್ತೆಯಲ್ಲಿ ಶವಯಾತ್ರೆ ಕಾಣಿಸಿಕೊಂಡಾಗ, ಅಲ್ಲಿಯೇ ಎರಡು ನಿಮಿಷಗಳ ಕಾಲ ಶಾಂತವಾಗಿ ನಿಂತು, ಕೈಮುಗಿದು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಬೇಕು. ಮನಸ್ಸಿನಲ್ಲಿಯೇ ‘ರಾಮ ನಾಮ’ ಅಥವಾ ಭಗವಂತನ ನಾಮಸ್ಮರಣೆ ಮಾಡಬೇಕು. ಹೀಗೆ ಮಾಡುವುದರಿಂದ ಮೃತ ಆತ್ಮಕ್ಕೆ ಸದ್ಗತಿ ಸಿಗುವುದಲ್ಲದೆ, ಪ್ರಾರ್ಥಿಸಿದ ವ್ಯಕ್ತಿಗೂ ಅಪಾರ ಪುಣ್ಯ ಲಭಿಸುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

ನಿಮ್ಮ ಮನದ ಆಸೆಗಳು ಈಡೇರುತ್ತವೆ:

ಜ್ಯೋತಿಷ್ಯ ಮತ್ತು ಶಕುನ ಶಾಸ್ತ್ರದ ಪ್ರಕಾರ, ಮನೆಯಿಂದ ಹೊರಡುವಾಗ ಶವಯಾತ್ರೆ ಎದುರಾದರೆ, ನೀವು ಹಮ್ಮಿಕೊಂಡಿರುವ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗುತ್ತವೆ. ಮೃತ ವ್ಯಕ್ತಿಯು ತನ್ನೊಂದಿಗೆ ನಿಮ್ಮ ಜೀವನದ ಎಲ್ಲಾ ಕಷ್ಟ, ನಷ್ಟ ಮತ್ತು ನಕಾರಾತ್ಮಕ ಶಕ್ತಿಗಳನ್ನು ತೆಗೆದುಕೊಂಡು ಹೋಗುತ್ತಾನೆ ಎಂಬ ನಂಬಿಕೆಯಿದೆ. ಆ ಸಮಯದಲ್ಲಿ ಮನಸ್ಸಿನಲ್ಲಿ ಅಂದುಕೊಂಡ ಕಾರ್ಯಗಳು ಶೀಘ್ರದಲ್ಲೇ ನೆರವೇರುತ್ತವೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ಮುತ್ತೈದೆಯ (ಸೌಭಾಗ್ಯವತಿ) ಶವಯಾತ್ರೆ ಕಂಡರೆ ಮಹಾ ಲಕ್ಷ್ಮಿಯ ಕೃಪೆ:

ಒಂದು ವೇಳೆ ರಸ್ತೆಯಲ್ಲಿ ಸಾಗುತ್ತಿರುವಾಗ ಯಾವುದೇ ಸುಮಂಗಲಿ ಅಥವಾ ಸೌಭಾಗ್ಯವತಿ ಸ್ತ್ರೀಯ ಅಂತಿಮ ಯಾತ್ರೆ ಕಂಡುಬಂದರೆ, ಅದನ್ನು ಸಾಕ್ಷಾತ್ ಮಹಾಲಕ್ಷ್ಮಿಯ ಆಗಮನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂತಹ ದೃಶ್ಯ ಕಂಡಾಗ ಮಹಿಳೆಯರು ತಮ್ಮ ಅಖಂಡ ಸೌಭಾಗ್ಯಕ್ಕಾಗಿ ಮತ್ತು ಉತ್ತಮ ಭವಿಷ್ಯಕ್ಕಾಗಿ ಆ ದಿವ್ಯ ಆತ್ಮಕ್ಕೆ ಮನಸ್ಸಿನಲ್ಲಿಯೇ ನಮಸ್ಕರಿಸಬೇಕು. ಸಾಧ್ಯವಾದರೆ, ಅಂತಹ ಸಂದರ್ಭದ ನೆನಪಿಗಾಗಿ ದೇವಸ್ಥಾನಕ್ಕೆ ಸಿಂಧೂರ ಅಥವಾ ಕೆಂಪು ವಸ್ತ್ರವನ್ನು ದಾನ ಮಾಡುವುದು ಅತ್ಯಂತ ಶ್ರೇಯಸ್ಕರ.

ಶವಯಾತ್ರೆ ಕಂಡಾಗ ಪಾಲಿಸಬೇಕಾದ ನಿಯಮಗಳು:

ಶವಯಾತ್ರೆ ಸಾಗುವಾಗ ಜೋರಾಗಿ ಮಾತನಾಡುವುದು, ನಗುವುದು ಅಥವಾ ಅಹಂಕಾರದ ಮಾತುಗಳನ್ನು ಆಡಬಾರದು.
ನೀವು ವಾಹನದಲ್ಲಿದ್ದರೆ, ಅಂತಿಮ ಯಾತ್ರೆಗೆ ದಾರಿ ಮಾಡಿಕೊಟ್ಟು ಗೌರವ ಸೂಚಿಸುವುದು ಧರ್ಮದ ಲಕ್ಷಣವಾಗಿದೆ.

ಆದ್ದರಿಂದ, ಇನ್ಮುಂದೆ ರಸ್ತೆಯಲ್ಲಿ ಶವಯಾತ್ರೆ ಕಂಡರೆ ಭಯ ಪಡಬೇಡಿ. ಅದನ್ನು ಪ್ರಕೃತಿಯ ನಿಯಮವೆಂದು ಸ್ವೀಕರಿಸಿ, ಮೃತ ಆತ್ಮಕ್ಕೆ ಗೌರವ ಸಲ್ಲಿಸಿ ನಿಮ್ಮ ದಿನವನ್ನು ಧನಾತ್ಮಕವಾಗಿ ಆರಂಭಿಸಿ.

(ಗಮನಿಸಿ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಶಕುನ ಶಾಸ್ತ್ರ ಮತ್ತು ಹಿಂದೂ ಧರ್ಮದ ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ.)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಯಲ್ಲಿ ಹೇಳಿದ್ದು 7,000 ಕೋಟಿ ರೂ, ಅಕೌಂಟ್​ಗೆ ಬಿದ್ದದ್ದು ಸೊನ್ನೆ; ಇದು ಟ್ರಂಪ್ ಪೀಸ್ ಫಂಡ್​ನ 4 ತಿಂಗಳ ಕಥೆ

ವಾಷಿಂಗ್ಟನ್, ಮೇ 28: ಯುದ್ಧಪೀಡಿತ ಗಾಜಾ ಪಟ್ಟಿಯ ಪುನರ್ನಿರ್ಮಾಣಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರಿ ಸದ್ದುಗದ್ದಲದೊಂದಿಗೆ ಆರಂಭಿಸಿದ್ದ ‘ಬೋರ್ಡ್ ಆಫ್ ಪೀಸ್’ (Board of Peace) ಯೋಜನೆ ಸದ್ಯಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಜಾಗತಿಕ ನಾಯಕರು ಈ ನಿಧಿಗೆ ಬಿಲಿಯನ್ ಗಟ್ಟಲೆ ಡಾಲರ್ ನೆರವು ನೀಡುವುದಾಗಿ ಭರವಸೆ ನೀಡಿಯೂ ಇದ್ದರು. ಯೋಜನೆ ಆರಂಭವಾಗಿ ನಾಲ್ಕು ತಿಂಗಳು ಕಳೆದರೂ ಇದರ ಅಧಿಕೃತ ಖಾತೆಗೆ ಕೇವಲ ‘ಶೂನ್ಯ’ (Zero) ಹಣ ಜಮೆಯಾಗಿದೆ ಎಂದು ‘ಫೈನಾನ್ಷಿಯಲ್ ಟೈಮ್ಸ್’ (FT) ವರದಿ ಮಾಡಿದೆ.

ವಿಶ್ವ ಬ್ಯಾಂಕ್ ಖಾತೆಯಲ್ಲಿ ಹಣವೇ ಇಲ್ಲ!

ಗಾಜಾ ಪುನರ್ನಿರ್ಮಾಣ ಕಾರ್ಯಕ್ಕಾಗಿ ವಿಶ್ವ ಬ್ಯಾಂಕ್ (World Bank) ಉಸ್ತುವಾರಿಯಲ್ಲಿ ಮತ್ತು ವಿಶ್ವಸಂಸ್ಥೆಯ (UN) ಅನುಮೋದನೆಯೊಂದಿಗೆ ಈ ಅಧಿಕೃತ ನಿಧಿಯನ್ನು ಸ್ಥಾಪಿಸಲಾಗಿತ್ತು. ಈ ನಿಧಿಗೆ ಸದಸ್ಯ ರಾಷ್ಟ್ರಗಳು ಒಟ್ಟು 7 ಬಿಲಿಯನ್ ಡಾಲರ್ ನೆರವು ಘೋಷಿಸಿದ್ದವು. ಆದರೆ, ಈ ಅಧಿಕೃತ ಖಾತೆಗೆ ಇದುವರೆಗೆ ಒಂದೇ ಒಂದು ಡಾಲರ್ ಕೂಡ ಬಂದಿಲ್ಲ ಎಂದು ಈ ವ್ಯವಹಾರದ ನಿಕಟವರ್ತಿಗಳು ತಿಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಜೆಪಿ ಮೋರ್ಗನ್ ಖಾತೆಗೆ ಹಣ ವರ್ಗಾವಣೆ: ಪಾರದರ್ಶಕತೆಯ ಕೊರತೆ

ವಿಶ್ವ ಬ್ಯಾಂಕ್‌ನ ಕಠಿಣ ನಿಯಮಾವಳಿಗಳಿರುವ ಖಾತೆಯನ್ನು ಬಳಸುವ ಬದಲಿಗೆ, ಬೋರ್ಡ್ ಆಫ್ ಪೀಸ್ ಸಂಸ್ಥೆಗೆ ಬರುತ್ತಿರುವ ದೇಣಿಗೆಗಳನ್ನು ನೇರವಾಗಿ ಜೆಪಿಮೋರ್ಗನ್ (JPMorgan) ಖಾಸಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತಿದೆಯಂತೆ. ಹಾಗಂತ ಬೋರ್ಡ್​ನ ವಕ್ತಾರರು ಒಪ್ಪಿಕೊಂಡಿದ್ದಾರೆಂದು ಎಫ್​ಟಿ ವರದಿಯಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ: ಶಾಂತಿ ಮಾತುಕತೆ ನಡುವೆಯೇ ಇರಾನ್​​ನಲ್ಲಿ ಅಮೆರಿಕ ದಾಳಿ, ಕ್ಷಿಪಣಿ ಉಡಾವಣಾ ತಾಣ, ಮೈನ್ ಬೋಟ್​ಗಳೇ ಟಾರ್ಗೆಟ್

ವಿಶ್ವ ಬ್ಯಾಂಕ್ ಖಾತೆಯಲ್ಲಾದರೆ ಪ್ರತಿಯೊಂದು ಪೈಸೆಗೂ ಲೆಕ್ಕ ಕೊಡಬೇಕಾಗುತ್ತದೆ. ಆದರೆ ಜೆಪಿಮೋರ್ಗನ್‌ನಂತಹ ಖಾಸಗಿ ಖಾತೆಗಳಿಗೆ ಇಂತಹ ಯಾವುದೇ ಸ್ವತಂತ್ರ ಪಾರದರ್ಶಕತೆಯ ನಿಯಮಗಳು ಅನ್ವಯಿಸುವುದಿಲ್ಲ.

“ಹಣವನ್ನು ಸ್ವೀಕರಿಸಲು ಹಲವು ಆಯ್ಕೆಗಳನ್ನು ನೀಡಲಾಗಿತ್ತು, ದಾನಿಗಳು ತಮ್ಮ ಇಷ್ಟದಂತೆ ಇತರ ಆಯ್ಕೆಗಳನ್ನು (ಜೆಪಿಮೋರ್ಗನ್) ಆರಿಸಿಕೊಂಡಿದ್ದಾರೆ. ಸೂಕ್ತ ಸಮಯದಲ್ಲಿ ಆಡಳಿತ ಮಂಡಳಿಗೆ ಇದರ ಆರ್ಥಿಕ ವರದಿಯನ್ನು ಸಲ್ಲಿಸಲಾಗುವುದು” ಎಂದು ಮಂಡಳಿಯ ಅಧಿಕಾರಿಯೊಬ್ಬರು ಸಮರ್ಥಿಸಿಕೊಂಡಿದ್ದಾರೆ.

ಭಾರಿ ಆರ್ಥಿಕ ಕೊರತೆ ಮತ್ತು ಸ್ಥಗಿತಗೊಂಡ ಯೋಜನೆಗಳು

ಟ್ರಂಪ್ ಅವರ ಈ ಮಹತ್ವಾಕಾಂಕ್ಷೆಯ ಯೋಜನೆ ಸದ್ಯಕ್ಕೆ ಕೇವಲ ಕಾಗದದ ಮೇಲಷ್ಟೇ ಉಳಿಯುವಂತಾಗಿದೆ. ಗಾಜಾದಲ್ಲಿ ಸದ್ಯಕ್ಕೆ ಯಾವುದೇ ಪುನರ್ನಿರ್ಮಾಣ ಕಾರ್ಯಗಳು ಆರಂಭವಾಗಿಲ್ಲ.

ಗಾಜಾದಲ್ಲಿ ಹೊಸ ಪೊಲೀಸ್ ಪಡೆಗೆ ತರಬೇತಿ ನೀಡಲು ಯುಎಇ (UAE) 100 ಮಿಲಿಯನ್ ಡಾಲರ್ ನೀಡಿತ್ತಾದರೂ, ಆ ಹಣ ಸದ್ಯಕ್ಕೆ ಫ್ರೀಜ್ ಆಗಿದ್ದು ಯೋಜನೆ ಇನ್ನು ಆರಂಭವಾಗಿಲ್ಲ.

ಅಮೆರಿಕದ ವಿದೇಶಾಂಗ ಇಲಾಖೆಯು ಈ ಯೋಜನೆಗೆ ಸಂಬಂಧಿಸಿದಂತೆ 1.2 ಬಿಲಿಯನ್ ಡಾಲರ್ ನೆರವು ನೀಡಲು ಉದ್ದೇಶಿಸಿದೆಯಾದರೂ, ಆ ಹಣವನ್ನು ಈ ಬೋರ್ಡ್ ಆಫ್ ಪೀಸ್ ನಿರ್ವಹಣೆ ಮಾಡುತ್ತಿಲ್ಲ. ಕಟ್ಟುನಿಟ್ಟಾದ ಹಣಕಾಸು ನಿಯಂತ್ರಣ ವ್ಯವಸ್ಥೆ ಜಾರಿಗೆ ಬರುವವರೆಗೂ ಈ ನಿಧಿಯನ್ನು ಬಿಡುಗಡೆ ಮಾಡದಂತೆ ಅಮೆರಿಕದ ಕಾಂಗ್ರೆಸ್ ಅಧಿಕಾರಿಗಳು ತಡೆಹಿಡಿದಿದ್ದಾರೆ.

ಇದನ್ನೂ ಓದಿ: ಅಮೆರಿಕ ಸೇನಾ ನೆಲೆ ಮೇಲೆ ಇರಾನ್ ಪ್ರತಿ ದಾಳಿ

ಹಣದ ತೀವ್ರ ಕೊರತೆಯಿಂದಾಗಿ ಮತ್ತು ಹಮಾಸ್ ಶಸ್ತ್ರಾಸ್ತ್ರ ತ್ಯಜಿಸದ ಕಾರಣ, ಗಾಜಾವನ್ನು ಆಳಲು ರಚಿಸಲಾಗಿದ್ದ ಪ್ಯಾಲೆಸ್ತೀನ್ ತಂತ್ರಜ್ಞರ ಸಮಿತಿಗೆ (NCAG) ಇನ್ನು ಕೂಡ ಅಲ್ಲಿಗೆ ಪ್ರವೇಶಿಸಲು ಸಾಧ್ಯವಾಗಿಲ್ಲ.

ಈ ಪ್ರಕರಣದ ಹಿನ್ನೆಲೆ ಇದು

ಕಳೆದ ವರ್ಷ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಏರ್ಪಟ್ಟ ನಂತರ ಗಾಜಾವನ್ನು ಪುನರ್ನಿರ್ಮಿಸಲು ಈ ಬೋರ್ಡ್ ಆಫ್ ಪೀಸ್ ಅನ್ನು ಟ್ರಂಪ್ ನೇತೃತ್ವದಲ್ಲಿ ಜನವರಿಯಲ್ಲಿ ಸ್ಥಾಪಿಸಲಾಯಿತು. ಈ ಮಂಡಳಿಯಲ್ಲಿ ಕಾಯಂ ಸ್ಥಾನ ಪಡೆಯಲು ಪ್ರತಿಯೊಂದು ಸದಸ್ಯ ರಾಷ್ಟ್ರವೂ 1 ಬಿಲಿಯನ್ ಡಾಲರ್ ನೀಡಬೇಕೆಂಬ ನಿಯಮವಿದೆ. ಟ್ರಂಪ್ ಸ್ವತಃ ಅಮೆರಿಕದಿಂದ 10 ಬಿಲಿಯನ್ ಡಾಲರ್ ನೀಡುವುದಾಗಿ ಹೇಳಿದ್ದರು ಮತ್ತು ಕತಾರ್, ಸೌದಿ ಅರೇಬಿಯಾ ಹಾಗೂ ಯುಎಇ ತಲಾ 1 ಬಿಲಿಯನ್ ಡಾಲರ್ ನೀಡುವುದಾಗಿ ಭರವಸೆ ನೀಡಿದ್ದವು. ಆದರೆ, ಇತ್ತೀಚಿನ ವರದಿಯ ಪ್ರಕಾರ ಮುಂದಿನ ದಶಕದಲ್ಲಿ ಗಾಜಾ ಪುನರ್ನಿರ್ಮಾಣಕ್ಕೆ 71 ಬಿಲಿಯನ್ ಡಾಲರ್‌ಗಿಂತಲೂ ಅಧಿಕ ಹಣದ ಅಗತ್ಯವಿದ್ದು, ಸದ್ಯದ ಪರಿಸ್ಥಿತಿ ಟ್ರಂಪ್ ಯೋಜನೆಗೆ ಭಾರಿ ಹಿನ್ನಡೆ ತಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಂದು, ಇಂದು, ಎಂದೆಂದಿಗೂ ಒಗ್ಗಟ್ಟೇ ನಮ್ಮ ಶಕ್ತಿ!: ನಾಯಕತ್ವ ಬದಲಾವಣೆ ಬೆನ್ನಲ್ಲೇ ಕಾಂಗ್ರೆಸ್ ಟ್ವೀಟ್

ಬೆಂಗಳೂರು, ಮೇ 28: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಮತ್ತು ನಾಯಕತ್ವ ಬದಲಾವಣೆಯ ಭಾರಿ ಬೆಳವಣಿಗೆಗಳ ಬೆನ್ನಲ್ಲೇ, ಕರ್ನಾಟಕ ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಹತ್ವದ ಪೋಸ್ಟ್ ಒಂದನ್ನು ಹಂಚಿಕೊಂಡಿದೆ.

“ಅಂದು, ಇಂದು, ಎಂದೆಂದಿಗೂ ಒಗ್ಗಟ್ಟೇ ನಮ್ಮ ಶಕ್ತಿ. ಜನಸೇವೆಯೇ ನಮ್ಮ ಬದ್ಧತೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬ ಸಂದೇಶ ರವಾನಿಸಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಪರಸ್ಪರ ಆಲಿಂಗಿಸಿಕೊಂಡಿರುವ ಫೋಟೋಗಳ ಹಿನ್ನೆಲೆಯಲ್ಲಿ ಈ ಟ್ವೀಟ್ ಹೊರಬಿದ್ದಿದೆ.

ಕೇಂದ್ರದ ತನಿಖಾ ಸಂಸ್ಥೆಗಳ ದಾಳಿ, ಜೈಲು ವಾಸ ಸೇರಿದಂತೆ ಹಲವು ಸವಾಲುಗಳ ನಡುವೆಯೂ ಚಲ ಬಿಡದೆ ಹೋರಾಡಿದ ಡಿ.ಕೆ. ಶಿವಕುಮಾರ್ ಅವರ ಕನಸು ನನಸಾಗುವ ಸಮಯ ಹತ್ತಿರವಾಗಿದ್ದು, ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಅತ್ಯಂತ ಸ್ಮೂತ್ ಆಗಿ ಮುಗಿಸಲು ಕಾಂಗ್ರೆಸ್ ಸಜ್ಜಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಹಾರ: ಗಂಗಾ ನದಿಯಲ್ಲಿ ದೋಣಿ ಮುಳುಗಿ ಹಲವು ಮಂದಿ ಸಾವು

ಪಾಟ್ನಾ, ಮೇ 28: ಉಮಾನಾಥ್ ಗಂಗಾ ಘಾಟ್ ಬಳಿ ಗಂಗಾ ನದಿಯಲ್ಲಿ ದೋಣಿ ಮುಳುಗಿ ಹಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.ಈಗಾಗಲೇ ಇಬ್ಬರ ಶವ ಸಿಕ್ಕಿದೆ. ದೋಣಿಯಲ್ಲಿ ಸುಮಾರು 14 ರಿಂದ 15 ಜನರಿದ್ದರು.ಸುಮಾರು ಏಳು ಜನರು ಮುಳುಗಿ ಹೋಗಿರುವ ಶಂಕೆ ಇದೆ. ಇತರರನ್ನು ಮತ್ತೊಂದು ದೋಣಿ ಬಳಸಿ ರಕ್ಷಿಸಲಾಗಿದೆ. ಇಲ್ಲಿಯವರೆಗೆ, ಎಷ್ಟು ಜನರು ಮುಳುಗಿದ್ದಾರೆಂದು ದೃಢಪಟ್ಟಿಲ್ಲ. ಬಲವಾದ ಗಾಳಿಯಿಂದಾಗಿ ಸಣ್ಣ ದೋಣಿ ಪಲ್ಟಿಯಾಗಿದೆ.ಎಸ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸುತ್ತಿದ್ದು, ಶೋಧ ಕಾರ್ಯ ಆರಂಭವಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ದಯವಿಟ್ಟು ದೃಷ್ಟಿ ತೆಗೆಯಿರಿ’; ಸೂರ್ಯವಂಶಿ ಪಾಲಕರಿಗೆ ಆರ್​​. ಅಶ್ವಿನ್ ಕೋರಿಕೆ

ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅಕ್ಷರಶಃ ಅಬ್ಬರಿಸಿದ್ದಾರೆ. ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 12 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 97 ರನ್ ಸಿಡಿಸಿದ ವೈಭವ್, ಎಸ್‌ಆರ್‌ಹೆಚ್ ಬೌಲಿಂಗ್ ಪಡೆಯನ್ನು ಧೂಳೀಪಟ ಮಾಡಿದರು. ಕೇವಲ 3 ರನ್‌ಗಳಿಂದ ಐಪಿಎಲ್ ಇತಿಹಾಸದ ಅತ್ಯಂತ ವೇಗದ ಶತಕದ ದಾಖಲೆಯನ್ನು ಮಿಸ್ ಮಾಡಿಕೊಂಡರೂ, ಈ ಹುಡುಗನ ಆಟಕ್ಕೆ ಇಡೀ ಕ್ರಿಕೆಟ್ ಜಗತ್ತೇ ಫಿದಾ ಆಗಿದೆ. ಭಾರತದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ವೈಭವ್ ಅವರ ಆಟವನ್ನು ಕೊಂಡಾಡಿದ್ದು, ಆತನ ಪೋಷಕರಿಗೆ ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ.

ವೈಭವ್ ಆಟದ ಬಗ್ಗೆ ಮಾತನಾಡಿರುವ ಆರ್. ಅಶ್ವಿನ್, ‘ನಾನು ಇಲ್ಲಿ 15 ವರ್ಷದ ಹುಡುಗ ಎಂಬ ಕಾರ್ಡ್ ಬಳಸಿ ಮಾತನಾಡಲು ಬಯಸುವುದಿಲ್ಲ. ಆದರೆ ಈ ವಯಸ್ಸಿನಲ್ಲಿ ಇಷ್ಟು ಅದ್ಭುತವಾದ ಮಾನಸಿಕ ಪಕ್ವತೆ ಬರಬೇಕಾದರೆ ಆತ ಎಷ್ಟು ಪಂದ್ಯಗಳನ್ನು ಆಡಿರಬಹುದು ನೀವೇ ಹೇಳಿ’ ಎಂದು ಅವರು ಕೇಳಿದ್ದಾರೆ.

‘ಸೀಸನ್ ಆರಂಭದಲ್ಲಿ ಇದೇ ರೀತಿಯ ಎಸೆತಗಳನ್ನು ನೇರವಾಗಿ ಹೊಡೆಯಲು ಹೋಗಿ ಟಾಪ್ ಎಡ್ಜ್ ಆಗುತ್ತಿತ್ತು. ಆದರೆ ಒಂದೇ ಸೀಸನ್‌ನಲ್ಲಿ ಆತ ತನ್ನ ತಪ್ಪುಗಳನ್ನು ತಿದ್ದಿಕೊಂಡು ಥರ್ಡ್ ಮ್ಯಾನ್ ಮೇಲೆ ಸಿಕ್ಸರ್ ಬಾರಿಸುವ ಮಟ್ಟಿಗೆ ಬದಲಾಗಿದ್ದಾನೆ. ಆತ ಸಾಮಾನ್ಯ ಆಟಗಾರನಲ್ಲ. ಅವನ ತಂದೆ-ತಾಯಿ ಏನು ಬೇಕಾದರೂ ಮಾಡಲಿ, ಆದರೆ ಮೊದಲು ಅವನಿಗೆ ತಗುಲಿರುವ ಕೆಟ್ಟ ದೃಷ್ಟಿಯನ್ನು (Evil Eye) ತೆಗೆಯಲಿ’ ಎಂದು ಹೇಳಿದ್ದಾರೆ.

ಪಂದ್ಯದ ನಂತರ ವೈಭವ್ ಆಡಿದ ಮಾತುಗಳು ಅಶ್ವಿನ್ ಅವರ ಮನಗೆದ್ದಿವೆ. ಈ ಬಗ್ಗೆ ಉಲ್ಲೇಖಿಸಿದ ಅಶ್ವಿನ್, ‘ಪಂದ್ಯ ಮುಗಿದ ಬಳಿಕ ಆ ಹುಡುಗ, ಶತಕಗಳು ಆಮೇಲೆಯೂ ಬರುತ್ತವೆ, ಇವತ್ತಿನ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸುವುದು ನನ್ನ ಗುರಿಯಾಗಿತ್ತು’ ಎಂದು ಹೇಳಿದ್ದಾನೆ. ಅವನ ಬ್ಯಾಟಿಂಗ್ ಶೈಲಿ ನೋಡಿದರೆ ಆತನಿಗೆ 100 ರನ್ ಗಳಿಸುವ ಬಗ್ಗೆ ಚಿಂತೆಯಿಲ್ಲ, ಅದು ಎಂದಾದರೂ ಬಂದೇ ಬರುತ್ತದೆ ಎಂಬ ನಂಬಿಕೆ ಅವನಲ್ಲಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಒತ್ತಡದ ಪರಿಸ್ಥಿತಿಯನ್ನು ಆತ ನಿಭಾಯಿಸಿದ ರೀತಿ ನಿಜಕ್ಕೂ ಅದ್ಭುತ,” ಎಂದು ಶ್ಲಾಘಿಸಿದ್ದಾರೆ.

ಬುಧವಾರ ನಡೆದ ಹೈವೋಲ್ಟೇಜ್ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸಿಕ್ಸರ್‌ಗಳ ಮಳೆ ಹರಿಸಿದರು. ಹೈದರಾಬಾದ್ ನಾಯಕ ಹಾಗೂ ವಿಶ್ವದ ಶ್ರೇಷ್ಠ ಬೌಲರ್ ಪ್ಯಾಟ್ ಕಮ್ಮಿನ್ಸ್ ಓವರ್‌ನಲ್ಲೇ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಅಬ್ಬರಿಸಿದ ವೈಭವ್, ಕಮ್ಮಿನ್ಸ್ ಅವರ ಬೌಲಿಂಗ್ ಲಯವನ್ನೇ ತಪ್ಪಿಸಿದರು.

ಕ್ರಿಸ್ ಗೇಲ್ ದಾಖಲೆ ಬ್ರೇಕ್: ಒಂದೇ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕ್ರಿಸ್ ಗೇಲ್ (59 ಸಿಕ್ಸರ್) ಅವರ 14 ವರ್ಷಗಳ ಹಳೆಯ ದಾಖಲೆಯನ್ನು ವೈಭವ್ (65 ಸಿಕ್ಸರ್) ಮುರಿದಿದ್ದಾರೆ.

ವೇಗದ ಅರ್ಧಶತಕ: ಕೇವಲ 16 ಎಸೆತಗಳಲ್ಲಿ ಫಿಫ್ಟಿ ಬಾರಿಸುವ ಮೂಲಕ ಐಪಿಎಲ್ ಪ್ಲೇಆಫ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕದ ದಾಖಲೆ ಬರೆದರು.

ಇದನ್ನೂ ಓದಿ: ಡೆಲ್ಲಿ ಡೇರ್​​ಡೆವಿಲ್ಸ್​​ಗಿತ್ತು ವೈಭವ್ ಸೂರ್ಯವಂಶಿ ಪಡೆಯೋ ಅವಕಾಶ

ವಾರ್ನರ್ ದಾಖಲೆ ಉಡೀಸ್: ಪವರ್‌ಪ್ಲೇ ಓವರ್‌ಗಳಲ್ಲಿ ಭರ್ಜರಿ 490 ರನ್ ಗಳಿಸುವ ಮೂಲಕ ಒಂದೇ ಸೀಸನ್‌ನ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಡೇವಿಡ್ ವಾರ್ನರ್ ದಾಖಲೆಯನ್ನೂ ಧೂಳೀಪಟ ಮಾಡಿದರು. ವೈಭವ್ ನೀಡಿದ ಈ ಆಘಾತದಿಂದ ಚೇತರಿಸಿಕೊಳ್ಳದ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ 47 ರನ್‌ಗಳ ಸೋಲು ಕಂಡು ಐಪಿಎಲ್ 2026ರ ಟೂರ್ನಿಯಿಂದ ಹೊರಬಿದ್ದಿದೆ. ರಾಜಸ್ಥಾನ್ ರಾಯಲ್ಸ್ ಭರ್ಜರಿಯಾಗಿ ಕ್ವಾಲಿಫೈಯರ್ 2 ಹಂತಕ್ಕೇರಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಾರುಖ್ ಖಾನ್, ಅಕ್ಷಯ್ ಕುಮಾರ್ ನನಗೆ ಎಚ್ಚರಿಕೆ ನೀಡಿದ್ದರು: ಹನಿ ಸಿಂಗ್

ಭಾರತದ ಸ್ಟಾರ್ ರ್ಯಾಪ್ ಗಾಯಕ ಹನಿ ಸಿಂಗ್ (Honey Singh) ಇತ್ತೀಚೆಗಷ್ಟೆ ರಾಷ್ಟ್ರೀಯ ಬಿಜೆಪಿ ಕಾರ್ಯದರ್ಶಿ ತರುಣ್ ಚಾಗ್ ಅವರನ್ನು ಭೇಟಿ ಆಗಿದ್ದರು. ಈ ವೇಳೆ ಅವರು ಮಾದಕ ವಸ್ತು ಬಳಕೆ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಯ್ತು. ಖುದ್ದು ಹನಿಸಿಂಗ್ ತಮ್ಮ ಹಾಡುಗಳಲ್ಲಿ ಡ್ರಗ್ಸ್ ಬಳಕೆಯನ್ನು ಗ್ಲಾಮರಸೈಸ್ ಮಾಡಿ ತೋರಿಸುತ್ತಾರೆ ಈಗ ಅವರೇ ಮಾದಕ ವಸ್ತು ವಿರುದ್ಧ ಜಾಗೃತಿ ರಾಯಭಾರಿ ಆಗಿದ್ದಾರೆ ಎಂದು ಹಲವರು ಟೀಕೆ ಮಾಡಿದ್ದಾರೆ. ಇದೀಗ ಹನಿಸಿಂಗ್, ತಾವು ಖುದ್ದು ಮಾದಕ ವ್ಯಸನಿ ಆಗಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ ಆ ಸಮಯದಲ್ಲಿ ಕೆಲ ಸ್ಟಾರ್ ನಟರು ತಮಗೆ ಎಚ್ಚರಿಕೆ ನೀಡಿದ್ದರು ಎಂದು ಸಹ ಹೇಳಿದ್ದಾರೆ.

ಪಾಡ್‌ಕಾಸ್ಟ್‌ ಒಂದರಲ್ಲಿ ಮಾತನಾಡಿರುವ ಹನಿ ಸಿಂಗ್, ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ತಮಗೆ ಡ್ರಗ್ಸ್ ಬಗ್ಗೆ ಎಚ್ಚರಿಕೆ ನೀಡಿದ್ದ ದಿನಗಳನ್ನು ನೆನಪಿಸಿಕೊಂಡರು. 2011 ಮತ್ತು 2014 ರ ನಡುವೆ ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ, ಯಶಸ್ಸು, ಹಣ ವಿಪರೀತ ಬಂದಿತ್ತು. ಅದು ನನ್ನ ತಲೆಗೆ ಹತ್ತಿತ್ತು ಆ ಸಮಯದಲ್ಲಿ ನಾನು ಮಾದಕ ದ್ರವ್ಯ ವ್ಯಸನದಲ್ಲಿ ತಾವು ಸಂಪೂರ್ಣವಾಗಿ ಕಳೆದುಹೋಗಿದ್ದೆ ಎಂದು ಹನಿ ಸಿಂಗ್ ಹೇಳಿಕೊಂಡಿದ್ದಾರೆ.

‘ಆ ಸಮಯದಲ್ಲಿ ನಾನು ಸಂತೋಷವಾಗಿರಲಿಲ್ಲ. 2013 ಮತ್ತು 2014 ರಲ್ಲಿ ನಾನು ಯಶಸ್ಸಿನ ಉತ್ತುಂಗದಲ್ಲಿದ್ದೆ. ನನಗೆ ಪ್ರಜ್ಞೆಯೇ ಇರಲಿಲ್ಲ. ಆ ಸಮಯದಲ್ಲಿ ನನ್ನ ಸಿದ್ಧಾಂತವೇ ಬೇರೆಯಾಗಿತ್ತು. ನನಗೆ ಯಶಸ್ಸು ಸಿಕ್ಕಾಗ, ನಾನು ನಡೆಯುವ ರೀತಿ, ಮಾತನಾಡುವ ರೀತಿ ಬದಲಾಯಿತು ಮತ್ತು ನಾನು ಯಾರನ್ನೂ ಗೌರವಿಸುತ್ತಿರಲಿಲ್ಲ. ನಾನು ಮಹಾನ್ ಎಂಬ ಭ್ರಮೆ ಮೂಡಿತ್ತು. ಅಷ್ಟೇ ಅಲ್ಲ, ನನ್ನನ್ನು ನಾನೇ ದೇವರು ಎಂದು ಕರೆದುಕೊಳ್ಳುತ್ತಿದ್ದೆ. ಆ ಸಮಯದಲ್ಲಿ ನಾನು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದೆ. ರಾಕ್ಷಸೀಯವಾಗಿ ವರ್ತಿಸುತ್ತಿದ್ದೆ’ ಎಂದಿದ್ದಾರೆ ಹನಿ ಸಿಂಗ್.

ಇದನ್ನೂ ಓದಿ:ಮಗನ ಸಿನಿಮಾಕ್ಕಿದ್ದ ಸಮಸ್ಯೆ ಪರಿಹರಿಸಿದ ಮೆಗಾಸ್ಟಾರ್ ಚಿರಂಜೀವಿ

ಆ ಸಮಯದಲ್ಲಿ ಬಾಲಿವುಡ್​​ ಸ್ಟಾರ್ ನಟರುಗಳಾದ ಶಾರುಖ್ ಖಾನ್, ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ ಅವರೊಂದಿಗೆ ಕೆಲಸ ಮಾಡಿದ್ದೆ. ಮನೊರಂಜನಾ ಕ್ಷೇತ್ರದಿಂದ ನಾನು ಹೀಗಾದೆ ಎಂದು ಒಪ್ಪಲಾರೆ, ಆದರೆ ಯಶಸ್ಸು ನನ್ನ ತಲೆಗೇರಿತ್ತು. ಆ ಸಮಯದಲ್ಲಿ ವಿಶೇಷವಾಗಿ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ನನಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿದರು. ಶಾರುಖ್ ಖಾನ್ ನನಗೆ ಹಲವು ಬಾರಿ ಹೇಳಿದ್ದರು, ‘ಇದು ನಿನ್ನನ್ನು ಹಾಳು ಮಾಡುತ್ತದೆ, ನಿನ್ನನ್ನು ಕೊನೆಗೊಳಿಸುತ್ತದೆ ಮತ್ತು ನಿನ್ನನ್ನು ನಾಶಪಡಿಸುತ್ತದೆ’ ಎಂದಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ.

ಪಾಡ್​​ಕಾಸ್ಟ್​ನಲ್ಲಿ ಮಾತನಾಡಿದ ಹನಿಸಿಂಗ್, ‘ನಾನು ಡ್ರಗ್ಸ್ ಮತ್ತು ಮದ್ಯದಲ್ಲಿ ಮುಳುಗಿದ್ದೆ, ದಿನಕ್ಕೆ 12-15 ಜಾಯಿಂಟ್‌ಗಳನ್ನು (ಗಾಂಜಾ) ಸೇದುತ್ತಿದ್ದೆ ಮತ್ತು ಮದ್ಯದ ಬಾಟಲಿಗಳನ್ನು ಖಾಲಿ ಮಾಡುತ್ತಿದ್ದೆ. ನಾನು ನನ್ನ ಕುಟುಂಬವನ್ನು ತ್ಯಜಿಸಿದ್ದೆ, ನನ್ನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡೆ. ಒಂದು ಬಾರಿ ನಾನು ಎಷ್ಟು ಅಮಲಿನಲ್ಲಿದ್ದೆ ಎಂದರೆ, ನನ್ನ ಸ್ನೇಹಿತನ ಹೊಟ್ಟೆಗೆ ಎಂಟು ಬಾರಿ ಕಚ್ಚಿದ್ದೆ’ ಎಂದು ಅವರು ಈ ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಹನಿ ಸಿಂಗ್ ಬೈಪೋಲಾರ್ ಡಿಸಾರ್ಡರ್ ಇರುವುದು ಪತ್ತೆಯಾಯಿತು ಮತ್ತು ಅವರು ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗಿದ್ದರು. 2017 ರಲ್ಲಿ, ಹನಿ ಸಿಂಗ್ ತಮ್ಮ ಪ್ರವಾಸದ ಮಧ್ಯದಲ್ಲೇ ಕುಸಿದು ಬಿದ್ದರು. ಬಳಿಕ ಅವರು ದೆಹಲಿಗೆ ಮರಳಿ, ವೈದ್ಯರು ಮತ್ತು ಥೆರಪಿಸ್ಟ್‌ಗಳ ತಂಡದೊಂದಿಗೆ ಚಿಕಿತ್ಸೆ ಪಡೆಯಲು ಪ್ರಾರಂಭಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ, ಒಂದೇ ಕುಟುಂಬದ ನಾಲ್ವರು ಸಜೀವದಹನ

ಅಜ್ಮೀರ್, ಮೇ 28: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕುಟುಂಬದ ನಾಲ್ವರು ಸಜೀವದಹನವಾಗಿರುವ ಘಟನೆ ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಬೊರಾಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗುರುವಾರ ಬೆಳಗ್ಗೆ, ಗ್ರಾಮದ ಮಾಜಿ ಮುಖ್ಯಸ್ಥ, ಅವರ ಕುಟುಂಬ ಸದಸ್ಯರು ಮತ್ತು ಸ್ಥಳೀಯ ಜಿಲ್ಲಾ ಪರಿಷತ್ ಸದಸ್ಯರೊಬ್ಬರು ಪ್ರಯಾಣಿಸುತ್ತಿದ್ದ ಕಾರಿಗೆ ಹಠಾತ್ತನೆ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ. ಮಾಜಿ ಸರಪಂಚ್ ರಾಮಸಿಂಗ್ ಚೌಧರಿ ಅವರು ತಮ್ಮ ಅನಾರೋಗ್ಯ ಪೀಡಿತ ತಾಯಿ ಮತ್ತು ಜಿಲ್ಲಾ ಪರಿಷತ್ ಸದಸ್ಯೆ ಪುಸಿ ದೇವಿ ಅವರಿಗೆ ಎದೆ ನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರು ಮೆಟ್ರೋಗೆ ‘ಬಂಗಾಳ ಎಲೆಕ್ಷನ್ ಶಾಕ್’: 10 ಸಾವಿರ ಕಾರ್ಮಿಕರು ನಾಪತ್ತೆ, ಪಿಂಕ್-ಬ್ಲೂ ಲೈನ್ ಕಾಮಗಾರಿ ಬಂದ್!

ಬೆಂಗಳೂರು, ಮೇ 28: ನಗರದ ಜನತೆಯ ಬಹುನಿರೀಕ್ಷಿತ ನಮ್ಮ ಮೆಟ್ರೋ (BMRCL) ಪಿಂಕ್ ಮತ್ತು ಬ್ಲೂ ಲೈನ್ ಮಾರ್ಗಗಳ ಉದ್ಘಾಟನೆಗೆ ಪಶ್ಚಿಮ ಬಂಗಾಳದ ಚುನಾವಣೆ ದೊಡ್ಡ ಮಟ್ಟದ ಬ್ರೇಕ್ ಹಾಕಿದೆ. ಮತದಾನ ಮಾಡಲು ಸ್ವಗ್ರಾಮಗಳಿಗೆ ತೆರಳಿದ ಸುಮಾರು 10 ಸಾವಿರಕ್ಕೂ ಹೆಚ್ಚು ಬಂಗಾಳಿ ಕಾರ್ಮಿಕರು ಇನ್ನು ಬೆಂಗಳೂರಿಗೆ ಮರಳಿ ಬಾರದ ಹಿನ್ನೆಲೆಯಲ್ಲಿ ಮೆಟ್ರೋ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿವೆ.

ಮುಖ್ಯಾಂಶಗಳು

  • ಬಂಗಾಳ ಎಲೆಕ್ಷನ್‌ಗೆ ಹೋದ ಹತ್ತು ಸಾವಿರ ಮೆಟ್ರೋ ಕಾರ್ಮಿಕರು ಮರಳಿ ಬಂದಿಲ್ಲ.
  • ಕೆಲಸಗಾರರಿಲ್ಲದೆ ಪಿಂಕ್ ಮತ್ತು ಬ್ಲೂ ಲೈನ್ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿವೆ.
  • ಜೂನ್ ಮತ್ತು ಡಿಸೆಂಬರ್ ತಿಂಗಳ ಮೆಟ್ರೋ ಉದ್ಘಾಟನೆ ಮತ್ತಷ್ಟು ವಿಳಂಬವಾಗುವ ಆತಂಕವಿದೆ.

ವೋಟ್ ಹಾಕಲು ಹೋದವರು ಬರಲೇ ಇಲ್ಲ!

ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ವಿಧಾನಸೌಧ ಚುನಾವಣೆ ನಡೆದು, ಮೇ 4 ರಂದು ಫಲಿತಾಂಶ ಕೂಡ ಪ್ರಕಟವಾಗಿದೆ. ನಮ್ಮ ಮೆಟ್ರೋ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ಕಾರ್ಮಿಕರು ಪಶ್ಚಿಮ ಬಂಗಾಳದವರಾಗಿದ್ದಾರೆ. ಚುನಾವಣೆಯಲ್ಲಿ ಮತ ಚಲಾಯಿಸಲು ಬೆಂಗಳೂರಿನಿಂದ ಹೋದ ಸಾವಿರಾರು ಕಾರ್ಮಿಕರು ವಾರಗಳು ಕಳೆದರೂ ಇನ್ನು ಕೆಲಸಕ್ಕೆ ಹಾಜರಾಗಿಲ್ಲ. ಪರಿಣಾಮವಾಗಿ, ಮೆಟ್ರೋ ನಿಲ್ದಾಣಗಳು ಹಾಗೂ ಹಳಿ ಅಳವಡಿಸುವ ಆಯಕಟ್ಟಿನ ಜಾಗಗಳಲ್ಲಿ ಕೆಲಸ ಮಾಡಲು ಆಳುಗಳಿಲ್ಲದೆ ಬಿಎಂಆರ್‌ಸಿಎಲ್ ಪರದಾಡುತ್ತಿದೆ.

ಯಾವ ಮಾರ್ಗಗಳಿಗೆ ಅಡ್ಡಿ?

ಬಿಎಂಆರ್‌ಸಿಎಲ್ ಯೋಜನೆ ಪ್ರಕಾರ ಮುಂಬರುವ ಜೂನ್ ಮತ್ತು ಡಿಸೆಂಬರ್ ತಿಂಗಳಲ್ಲಿ ಪ್ರಮುಖ ಮಾರ್ಗಗಳನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಸಿದ್ಧತೆ ನಡೆದಿತ್ತು.ಈ ವರ್ಷದ ಜೂನ್ ತಿಂಗಳೊಳಗೆ ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್‌ಗಳನ್ನು (ಪಿಂಕ್ ಲೈನ್) ಓಪನ್ ಮಾಡಲು ಪ್ಲಾನ್ ಮಾಡಲಾಗಿತ್ತು. ಈ ವರ್ಷದ ಡಿಸೆಂಬರ್ ವೇಳೆಗೆ ಮೊದಲ ಹಂತದ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂ ವರೆಗಿನ 19.75 ಕಿ.ಮೀ ಮಾರ್ಗವನ್ನು ( ಬ್ಲೂ ಲೈನ್) ಸಾರ್ವಜನಿಕರಿಗೆ ಮುಕ್ತಗೊಳಿಸಲು ಗಡುವು ವಿಧಿಸಲಾಗಿತ್ತು.

ಆದರೆ ಕಾರ್ಮಿಕರ ಕೊರತೆಯಿಂದಾಗಿ ಈ ಎರಡೂ ಮಾರ್ಗಗಳ ಗಡುವು ಅಸಾಧ್ಯವೆಂಬಂತಾಗಿದೆ. ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಪರ್ಯಾಯ ಕಾರ್ಮಿಕರ ವ್ಯವಸ್ಥೆ ಮಾಡಬೇಕು, ಇಲ್ಲದಿದ್ದರೆ ನಿಗದಿತ ಸಮಯಕ್ಕೆ ಮೆಟ್ರೋ ಸಿಗುವುದು ಕಷ್ಟ ಎಂದು ಸ್ಥಳೀಯ ನಿವಾಸಿ ರಘುರಾಮ್ ಹಾಗೂ ಮೆಟ್ರೋ ಪ್ರಯಾಣಿಕ ರಾಘವೇಂದ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ, ಬಂಗಾಳ ಚುನಾವಣೆಯ ಬಿಸಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ತಟ್ಟಿದ್ದು, ನಮ್ಮ ಮೆಟ್ರೋದ ಪಿಂಕ್ ಮತ್ತು ಬ್ಲೂ ಲೈನ್ ಕಾಮಗಾರಿಗಳು ಮತ್ತಷ್ಟು ವಿಳಂಬವಾಗುವುದರಲ್ಲಿ ಯಾವುದೇ ಅನುಮಾನವಿಲ್ಲದಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version