ಹೀನಾಯ ಸೋಲಿನ ಬಳಿಕ ಶ್ರೇಯಸ್ ಅಯ್ಯರ್ ಹೇಳಿದ್ದೇನು? – Kannada News | Shreyas iyer Post match interview after IND vs IRE Match

ಟೀಮ್ ಇಂಡಿಯಾ ಎಂದೂ ಕಾಣದ ಆಘಾತಕಾರಿ ಫಲಿತಾಂಶವೊಂದಕ್ಕೆ ಬೆಲ್​ಫಾಸ್ಟ್​ನ ಸಿಎಸ್​ ಕ್ರಿಕೆಟ್ ಕ್ಲಬ್ ಗ್ರೌಂಡ್ ಸಾಕ್ಷಿಯಾಗಿದೆ. ಐರ್ಲೆಂಡ್ ಪ್ರವಾಸ ಕೈಗೊಂಡಿದ್ದ ಶ್ರೇಯಸ್ ಅಯ್ಯರ್ ನೇತೃತ್ವದ ಯುವ ಭಾರತ ತಂಡ, 2 ಪಂದ್ಯಗಳ ಟಿ20 ಸರಣಿಯಲ್ಲಿ 0-2 ಅಂತರದಿಂದ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿದೆ.  ಮೊದಲ ಪಂದ್ಯದಲ್ಲಿ 34 ರನ್‌ಗಳಿಂದ ಸೋತಿದ್ದ ಭಾರತ, ಎರಡನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಕೇವಲ 1 ರನ್‌ನಿಂದ ರೋಮಾಂಚಕವಾಗಿ ಸೋಲೊಪ್ಪಿಕೊಂಡಿತು.

ಈ ಐತಿಹಾಸಿಕ ಸೋಲಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ತಮ್ಮ ತಂಡದ ತಪ್ಪುಗಳನ್ನು ಒಪ್ಪಿಕೊಳ್ಳುತ್ತಲೇ, ಐರ್ಲೆಂಡ್ ತಂಡದ ಆಟವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ಖಂಡಿತವಾಗಿಯೂ ನಮಗೆ ಒಳ್ಳೆಯ ಸರಣಿಯಲ್ಲ. ಆದರೆ ಐರ್ಲೆಂಡ್ ಆಡಿದ ರೀತಿ ಅದ್ಭುತವಾಗಿತ್ತು, ಅವರಿಗೆ ಅಭಿನಂದನೆಗಳು. ಅವರು ಮೈದಾನದಲ್ಲಿ ತೋರಿದ ವೃತ್ತಿಪರತೆ ಮತ್ತು ಪಿಚ್ ಹೇಗೆ ವರ್ತಿಸಲಿದೆ ಎಂಬುದರ ಕುರಿತು ಅವರಿಗಿದ್ದ ಸ್ಪಷ್ಟ ಕಲ್ಪನೆ ನಿಜಕ್ಕೂ ಅಪಾರ. ಅವರ ಫೀಲ್ಡಿಂಗ್ ಕೂಡ ಅತ್ಯುತ್ತಮವಾಗಿತ್ತು. ಇದು ಅವರಿಗೆ ಸಂದ ಅರ್ಹ ಗೆಲುವು ಎಂದು ಶ್ರೇಯಸ್ ಅಯ್ಯರ್ ಎದುರಾಳಿ ತಂಡವನ್ನು ಕೊಂಡಾಡಿದ್ದಾರೆ.

ಮೊದಲ ಪಂದ್ಯದ ಬಳಿಕ ತಂಡದ ತಂತ್ರಗಾರಿಕೆ ಹಾಗೂ ಹೊಂದಾಣಿಕೆಯ ಬಗ್ಗೆ ಮಾತನಾಡಿದ ಅಯ್ಯರ್, ಎರಡನೇ ಪಂದ್ಯದಲ್ಲಿ ಬೌಲರ್‌ಗಳ ಪ್ರದರ್ಶನಕ್ಕೆ ತೃಪ್ತಿ ವ್ಯಕ್ತಪಡಿಸಿದರು.

ಇವತ್ತಿನ ಪಂದ್ಯದಲ್ಲಿ ನಮ್ಮ ಬೌಲರ್‌ಗಳು ಯೋಜನೆಗಳನ್ನು ಅದ್ಭುತವಾಗಿ ಕಾರ್ಯರೂಪಕ್ಕೆ ತಂದರು. ಆದರೆ ನಮ್ಮ ಬ್ಯಾಟಿಂಗ್‌ನಲ್ಲಿ ನಾವು ಎಡವಿದೆವು. ಪಿಚ್ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿ ಮತ್ತು ಸಿಂಗಲ್ಸ್ ಅನ್ನು ಡಬಲ್ಸ್ ಆಗಿ ಪರಿವರ್ತಿಸುವ ಓಟದ ವೇಗದಲ್ಲಿ ನಾವು ಹಿಂದೆ ಬಿದ್ದೆವು. ಈ ವಿಭಾಗದಲ್ಲಿ ಐರ್ಲೆಂಡ್ ನಮಗಿಂತ ಹೆಚ್ಚು ಚಾಣಾಕ್ಷತನ ಪ್ರದರ್ಶಿಸಿತು ಎಂದು ಅಯ್ಯರ್ ಟೀಮ್ ಇಂಡಿಯಾ ಬ್ಯಾಟಿಂಗ್ ವೈಫಲ್ಯವನ್ನು ಒಪ್ಪಿಕೊಂಡರು.

ಈ ಪಂದ್ಯದ ಮೂಲಕ ಪ್ರಿನ್ಸ್ ಯಾದವ್ ಮತ್ತು ಸೂರ್ಯಂಶ್ ಶೇಡ್ಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಶ್ರೇಯಸ್, ಪ್ರಿನ್ಸ್ ಯಾದವ್ ಐಪಿಎಲ್‌ನಲ್ಲಿ ಉತ್ತಮ ಅನುಭವ ಹೊಂದಿದ್ದಾರೆ. ಅದೇ ಲಯವನ್ನು ಇಲ್ಲೂ ಮುಂದುವರಿಸಿದ್ದಾರೆ. ಬೌಲಿಂಗ್ ಮಾಡುವಾಗ ಅವರದೇ ಆದ ಯೋಜನೆಗಳನ್ನು ಅವರು ಹೊಂದಿದ್ದಾರೆ. ಅವರ ಸಕಾರಾತ್ಮಕ ಆಟದ ಶೈಲಿ ನನಗೆ ಇಷ್ಟವಾಯಿತು. ಸೂರ್ಯಂಶ್ ಅವರಿಗೆ ಇದು ಮೊದಲ ಪಂದ್ಯ. ಈ ಸೋಲಿನಿಂದ ಅವರು  ಖಂಡಿತವಾಗಿಯೂ ಸಾಕಷ್ಟು ಪಾಠಗಳನ್ನು ಕಲಿಯಲಿದ್ದಾರೆ ಎಂದರು.

ಈ ಸರಣಿ ಸೋಲಿನ ತೀವ್ರ ನಿರಾಶೆಯ ನಡುವೆಯೂ ಐರ್ಲೆಂಡ್ ಪ್ರವಾಸದ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದ ಶ್ರೇಯಸ್ ಅಯ್ಯರ್, ಇಲ್ಲಿಗೆ ಬಂದು ಕ್ರಿಕೆಟ್ ಆಡಿದ್ದು ನಮಗೆ ಸಿಕ್ಕ ದೊಡ್ಡ ಗೌರವ ಮತ್ತು ಹೆಮ್ಮೆ. ಇಲ್ಲಿನ ಆತಿಥ್ಯಕ್ಕೆ ಧನ್ಯವಾದಗಳು ಎಂದು ಮಾತು ಮುಗಿಸಿದರು.

ಇದನ್ನೂ ಓದಿ: ಮಹಿಳಾ ಟಿ20 ವಿಶ್ವಕಪ್​ ಸೆಮಿಫೈನಲ್ ವೇಳಾಪಟ್ಟಿ ಪ್ರಕಟ

ಒಟ್ಟಾರೆಯಾಗಿ ಐರ್ಲೆಂಡ್ ವಿರುದ್ಧದ 0-2 ಸರಣಿ ಸೋಲು ಭಾರತೀಯ ಯುವ ಪಡೆಗೆ ಪಾಠವಾಗಿದ್ದು, ಆತಿಥೇಯ ತಂಡವು ಎಲ್ಲಾ ವಿಭಾಗಗಳಲ್ಲಿ ಚಾಣಾಕ್ಷತನ ಪ್ರದರ್ಶಿಸಿ ಐತಿಹಾಸಿಕ ಜಯ ಸಾಧಿಸಿದೆ. ಈ ಸೋಲಿನ ಹೊರತಾಗಿಯೂ ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ಟೀಮ್ ಇಂಡಿಯಾ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿದೆ.

Source link

‘ನಾವಿಬ್ಬರೂ ಒಟ್ಟಿಗೆ ಊಟ ಮಾಡಿದ್ದೆವು’; ಭಾವುಕಾರದ ನಟಿ ತ್ರಿಶಾ – Kannada News | Actress Trisha Remember K Bhagyaraj After His Death

ಹಿರಿಯ ತಮಿಳು ನಿರ್ದೇಶಕ, ನಟ ಮತ್ತು ಚಿತ್ರಕಥೆಗಾರ ಕೆ. ಭಾಗ್ಯರಾಜ್ ಶನಿವಾರ ತಮ್ಮ 73 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಹೃದಯಾಘಾತದಿಂದ ನಿಧನರಾದರು. ಕೆ. ಭಾಗ್ಯರಾಜ್ ಅವರ ಸಾವು ತಮಿಳು ಚಲನಚಿತ್ರೋದ್ಯಮಕ್ಕೆ ದೊಡ್ಡ ಹೊಡೆತವಾಗಿದೆ. ಅವರ ಚಲನಚಿತ್ರಗಳು ಪೀಳಿಗೆಯ ವೀಕ್ಷಕರ ಜೀವನದ ಭಾಗವಾಗಿದ್ದವು. ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಜನರು ಭಾವನಾತ್ಮಕ ಪೋಸ್ಟ್‌ಗಳನ್ನು ಬರೆಯುವ ಮೂಲಕ ಅವರಿಗೆ ಗೌರವ ಸಲ್ಲಿಸಿದರು. ಇದರಲ್ಲಿ ನಟಿ ತ್ರಿಶಾ ಕೃಷ್ಣನ್ ಕೂಡ ಸೇರಿದ್ದಾರೆ. ಮತ್ತೊಂದೆಡೆ, ನಟ ಮತ್ತು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಕೆ. ಭಾಗ್ಯರಾಜ್ ಅವರ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

‘ಪ್ರಿಯ ಭಾಗ್ಯರಾಜ್ ಸರ್, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ತ್ರಿಶಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ. ನಿನ್ನೆಯಷ್ಟೇ ನಾವು ಒಟ್ಟಿಗೆ ಊಟ ಮಾಡುತ್ತಿದ್ದೆವು ಮತ್ತು ಇಂದು ಈ ಹೃದಯವಿದ್ರಾವಕ ಸುದ್ದಿ ನನಗೆ ತಿಳಿಯಿತು. ಪೂರ್ಣಿಮಾ ಮೇಡಂ, ಶಾಂತನು, ಆಮ್ಲು ಮತ್ತು ಕಿಕಿ ಈ ದುಃಖವನ್ನು ಹೋಗಲಾಡಿಸುವ ಶಕ್ತಿಯನ್ನು ಪಡೆಯಲಿ’ ಎಂದು ತ್ರಿಷಾ ಬರೆದುಕೊಂಡಿದ್ದಾರೆ. ಭಾಗ್ಯರಾಜ್ ಇತ್ತೀಚೆಗೆ ನಟಿ ಮತ್ತು ರಾಜಕಾರಣಿ ಖುಷ್ಬೂ ಸುಂದರ್ ಅವರ ಮಗಳ ವಿವಾಹದಲ್ಲಿ ಭಾಗವಹಿಸಲು ಗೋವಾಕ್ಕೆ ಹೋಗಿದ್ದರು. ತ್ರಿಶಾ ಸಹ ಚಿತ್ರರಂಗದ ಇತರ ಅನೇಕರೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊದಲ್ಲಿ, ಭಾಗ್ಯರಾಜ್ ನಟ ಚಿರಂಜೀವಿಯನ್ನು ಸ್ವಾಗತಿಸುತ್ತಿರುವುದು ಕಂಡುಬಂದಿದೆ.

ಹೃದಯಾಘಾತದ ಬಳಿಕ ಕೆ. ಭಾಗ್ಯರಾಜ್ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದರು. ಅವರ ಪುತ್ರ ಶಾಂತನು, ಪುತ್ರಿ ಶರಣ್ಯ ಮತ್ತು ಪತ್ನಿ ಪೂರ್ಣಿಮಾ ಅವರನ್ನು ಅಗಲಿದ್ದಾರೆ. ತಮಿಳು ಚಲನಚಿತ್ರೋದ್ಯಮಕ್ಕೆ ಕೆ. ಭಾಗ್ಯರಾಜ್ ಅವರ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿದೆ.

ಇದನ್ನೂ ಓದಿ: ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ. ಭಾಗ್ಯರಾಜ್ ನಿಧನ; ಡಾ. ರಾಜ್ ರೀತಿ ನೇತ್ರದಾನ

ಭಾಗ್ಯರಾಜ್ ಅವರನ್ನು ‘ಸ್ಕ್ರೀನ್ ಪ್ಲೇ ಕಿಂಗ್’ ಎಂದೇ ಕರೆಯಲಾಗುತ್ತಿತ್ತು. 1979ರಲ್ಲಿ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಅದಾದ ನಂತರ ಹಲವು ಹಿಟ್ ಚಿತ್ರಗಳನ್ನು ನೀಡಿದರು. ಅವರ ಆಪ್ತ ಮತ್ತು ಖ್ಯಾತ ಚಿತ್ರ ನಿರ್ಮಾಪಕ ಭಾರತಿರಾಜ 17 ದಿನಗಳ ಹಿಂದೆ ನಿಧನರಾದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಹಿಳಾ ಟಿ20 ವಿಶ್ವಕಪ್​ ಸೆಮಿಫೈನಲ್ ವೇಳಾಪಟ್ಟಿ ಪ್ರಕಟ

Source link

ದಕ್ಷಿಣದ ಈ ನಟಿಯರಿಗೆ ಇದೆ ಅಪರೂಪದ ಕಾಯಿಲೆ; ಇಲ್ಲಿದೆ ಮಾಹಿತಿ – Kannada News | South Indian Celebs’ Brave Health Battles: Samantha, Kajal and More Inspire

ದಕ್ಷಿಣದ ಈ ನಟಿಯರಿಗೆ ಇದೆ ಅಪರೂಪದ ಕಾಯಿಲೆ; ಇಲ್ಲಿದೆ ಮಾಹಿತಿ

ಬೆಳ್ಳಿತೆರೆಯ ಮೇಲೆ ಸದಾ ಹಸನ್ಮುಖಿಯಾಗಿ, ರಂಜಿಸುವ ಸಿನಿಮಾ ತಾರೆಯರ ವೈಯಕ್ತಿಕ ಜೀವನದ ಹಿಂದೆ ಕಠಿಣ ಹೋರಾಟದ ಕಥೆಗಳಿರುತ್ತವೆ. ದಕ್ಷಿಣ ಭಾರತದ ಚಿತ್ರರಂಗದ ಈ ಐದು ಜನಪ್ರೀಯ ನಟಿಯರು ತಮಗಿರುವ ಅಪರೂಪದ ಹಾಗೂ ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದು, ಸವಾಲುಗಳ ನಡುವೆಯೂ ಧೈರ್ಯದಿಂದ ಮುನ್ನುಗ್ಗುತ್ತಿದ್ದಾರೆ. ಅವರ ಬಗ್ಗೆ ಇಲ್ಲಿದೆ ಮಾಹಿತಿ.

ಸಮಂತಾ ರುತ್ ಪ್ರಭು

ಸಮಂತಾ ಅವರು ‘ಮಯೋಸಿಟಿಸ್’ ಎಂಬ ಅಪರೂಪದ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದು ಮಾಂಸಖಂಡಗಳ ಉರಿಯೂತಕ್ಕೆ ಕಾರಣವಾಗುತ್ತದೆ. ತೀವ್ರ ಆರೋಗ್ಯ ಸಮಸ್ಯೆಯ ನಡುವೆಯೂ ಧೃತಿಗೆಡದ ಸಮಂತಾ, ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದುಕೊಂಡು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ.

ಕಾಜಲ್ ಅಗರ್ವಾಲ್

ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ತಮಗೆ ತಾತ್ಕಾಲಿಕ ಆಟೋಇಮ್ಯೂನ್ ಸಮಸ್ಯೆ ಇರುವುದಾಗಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೆ, ಐದನೇ ವಯಸ್ಸಿನಿಂದಲೇ ಬ್ರಾಂಕಿಯಲ್ ಆಸ್ತಮಾದಿಂದ ಬಳಲುತ್ತಿರುವ ಇವರು, ಸುದೀರ್ಘ ಕಾಲದಿಂದ ಕಟ್ಟುನಿಟ್ಟಿನ ಆಹಾರ ಪದ್ಧತಿ ಹಾಗೂ ಜೀವನಶೈಲಿಯನ್ನು ರೂಢಿಸಿಕೊಂಡು ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟಿದ್ದಾರೆ.

ಅನುಷ್ಕಾ ಶೆಟ್ಟಿ

‘ಬಾಹುಬಲಿ’ ಖ್ಯಾತಿಯ ಅನುಷ್ಕಾ ಶೆಟ್ಟಿ ಅವರು ‘ನಗು ರೋಗ’ ಎಂದೇ ಕರೆಯಲಾಗುವ ‘ಸ್ಯೂಡೋಬಲ್ಬರ್ ಅಫೆಕ್ಟ್’ (PBA) ಎಂಬ ಅಪರೂಪದ ನರರೋಗದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಸ್ಥಿತಿಯಲ್ಲಿ ಭಾವನೆಗಳ ಸಂಬಂಧವಿಲ್ಲದೆ ಹಠಾತ್ ಆಗಿ ನಿಯಂತ್ರಿಸಲಾಗದಂತೆ ನಗು ಅಥವಾ ಅಳು ಬರುತ್ತದೆ.

ವಿಶಾಲ್

ತಮಿಳು ನಟ ವಿಷ್ಣು ವಿಶಾಲ್ ಕಳೆದ ಮೂರ್ನಾಲ್ಕು ವರ್ಷಗಳಿಂದ ದೀರ್ಘಕಾಲದ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದ ಅವರು, ಪ್ರಸ್ತುತ ತಾವು ತೆಗೆದುಕೊಳ್ಳುತ್ತಿರುವ ಕಠಿಣ ಔಷಧಿಗಳ ಅಡ್ಡಪರಿಣಾಮಗಳಿಂದಾಗಿ ತಮ್ಮ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತಿವೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್

ಮಮತಾ ಮೋಹನ್ ದಾಸ್

ಖ್ಯಾತ ನಟಿ ಹಾಗೂ ಗಾಯಕಿ ಮಮತಾ ಮೋಹನ್ ದಾಸ್ ಅವರು ಈಗಾಗಲೇ ಎರಡು ಬಾರಿ ಭೀಕರ ‘ಹಾಡ್ಕಿನ್ಸ್ ಲಿಂಫೋಮಾ’ (ಕ್ಯಾನ್ಸರ್) ರೋಗವನ್ನು ಗೆದ್ದು ಬಂದಿದ್ದಾರೆ. ಪ್ರಸ್ತುತ ಅವರು ಚರ್ಮದ ಬಣ್ಣವನ್ನು ಕಳೆದುಕೊಳ್ಳುವ ‘ವಿಟಲಿಗೋ’ (ತೊನ್ನು) ಎಂಬ ಚರ್ಮದ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಮುಂಗಾರು ಮಳೆಗೆ ಸುಧಾರಿಸಿದ ಗಾಳಿಯ ಗುಣಮಟ್ಟ, ಬೆಂಗಳೂರಿನಲ್ಲಿ ಮಾಲಿನ್ಯ ಇಳಿಕೆ! – Kannada News | Karnataka AQI Update June 29: Air Quality Improves Across Bengaluru and Major Cities

ಬೆಂಗಳೂರು, ಜೂನ್ 29: ರಾಜ್ಯದಲ್ಲಿ ಮುಂಗಾರು ಮಾರುತಗಳ ಪ್ರಭಾವ ಹೆಚ್ಚಾಗಿರುವುದರಿಂದ ಕರಾವಳಿ ಮತ್ತು ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಮಳೆ ಹಾಗೂ ಬಲವಾದ ಗಾಳಿಯ ಕಾರಣದಿಂದಾಗಿ ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದು, ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) ಉತ್ತಮ ಮಟ್ಟದಲ್ಲಿದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ವಾಯು ಗುಣಮಟ್ಟವು ಅತ್ಯಂತ ತೃಪ್ತಿಕರವಾಗಿದೆ. ಇಂದಿನ ಅಧಿಕೃತ ದಾಖಲಾತಿಗಳ ಪ್ರಕಾರ, ಬೆಂಗಳೂರಿನ ಸರಾಸರಿ AQI 18 ರಿಂದ 43 ರ ಆಸುಪಾಸಿನಲ್ಲಿದೆ. ಇದು ‘ಉತ್ತಮ’ ವಲಯಕ್ಕೆ ಸೇರುತ್ತದೆ. ಇತ್ತೀಚೆಗೆ ನಗರದಲ್ಲಿ ನಡೆದ ಬೃಹತ್ ಸಸಿ ನೆಡುವ ಅಭಿಯಾನ ಹಾಗೂ ಸತತವಾಗಿ ಬೀಸುತ್ತಿರುವ ತಂಪಾದ ಗಾಳಿಯಿಂದಾಗಿ ಗಾಳಿಯಲ್ಲಿನ ತೇವಾಂಶ ಹೆಚ್ಚಾಗಿ, ಧೂಳಿನ ಕಣಗಳು (PM2.5 ಮತ್ತು PM10) ಸಂಪೂರ್ಣ ನಿಯಂತ್ರಣಕ್ಕೆ ಬಂದಿವೆ.

ನಗರದ ಪ್ರಮುಖ ವಲಯಗಳ ಇಂದಿನ ಸ್ಥಿತಿ

  • ಬಿಟಿಎಂ ಲೇಔಟ್ ಮತ್ತು ಜಯನಗರ: 40-42 (ಸಾಧಾರಣ/ಉತ್ತಮ)
  • ಮೆಜೆಸ್ಟಿಕ್ ಮತ್ತು ರೈಲ್ವೆ ನಿಲ್ದಾಣ ಪರಿಸರ: 45 (ಸಾಧಾರಣ)
  • ವೈಟ್‌ಫೀಲ್ಡ್ ಹಾಗೂ ಎಲೆಕ್ಟ್ರಾನಿಕ್ ಸಿಟಿ: 35-38 (ಉತ್ತಮ)

ಬೆಂಗಳೂರಿನ ಇಂದಿನ ಪರಿಸರವು ಉಸಿರಾಟದ ತೊಂದರೆ ಇರುವವರಿಗೂ ಸಹ ಯಾವುದೇ ಆರೋಗ್ಯದ ಅಪಾಯವನ್ನು ಹೊಂದಿಲ್ಲ ಎಂದು ಹವಾಮಾನ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ಕರ್ನಾಟಕದ ಇತರೆ ಪ್ರಮುಖ ನಗರಗಳ AQI ಸ್ಥಿತಿ

ರಾಜ್ಯದ ಇತರೆ ಪ್ರಮುಖ ನಗರಗಳಲ್ಲೂ ಮುಂಗಾರು ಮಳೆಯ ಆರ್ಭಟ ಇರುವುದರಿಂದ ವಾಯು ಮಾಲಿನ್ಯದ ಮಟ್ಟ ತಗ್ಗಿದೆ. ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಶುದ್ಧ ಗಾಳಿ ದಾಖಲಾಗಿದೆ. ಕರಾವಳಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಮಂಗಳೂರಿನಲ್ಲಿ ಇಂದಿನ AQI 25 ಕ್ಕಿಂತ ಕಡಿಮೆ ದಾಖಲಾಗಿದ್ದು, ಅತ್ಯಂತ ಶುದ್ಧವಾದ ಗಾಳಿ ಇದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 30 ರಷ್ಟಿದೆ.

ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಭಾಗಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿರುವುದರಿಂದ ಧೂಳಿನ ಪ್ರಮಾಣ ಕಡಿಮೆಯಾಗಿದೆ. ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಇಂದಿನ AQI 45-50ರಷ್ಟಿದ್ದು, ಉತ್ತಮ ಸ್ಥಿತಿಯಲ್ಲಿದೆ. ಚಿಕ್ಕಬಳ್ಳಾಪುರ ಮತ್ತು ಯಾದಗಿರಿ ರಾಜ್ಯದ ಅತ್ಯಂತ ಸ್ವಚ್ಛ ಗಾಳಿಯಿರುವ ಜಿಲ್ಲೆಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದು, ಇಲ್ಲಿ ಮಾಲಿನ್ಯದ ಪ್ರಮಾಣ ಕೇವಲ 20-23ರಷ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪತ್ನಿ ಬಿಟ್ಟು ಹೋಗಿದ್ದಕ್ಕೆ ಇಡೀ ಪ್ರಪಂಚದ ಮೇಲೆ ಸೇಡು: ಮುಂಬೈನಲ್ಲಿ 15 ಸಾವಿರ ಜನರನ್ನು ಮುಗಿಸಲು ಇಲಿ ವಿಷದಿಂದಲೇ ಮಾತ್ರೆ ತಯಾರಿಸಿದ್ದ ಸೈಕೋ – Kannada News | Mumbai Mass Poisoning Foiled: 15,000 Targeted at Moharram, ATS Probes Links

ಮುಂಬೈ, ಜೂ.29: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಇಡೀ ದೇಶವೇ ನಡುಗುವಂತಹ ಭೀಕರ ಹತ್ಯಾಕಾಂಡದ ಸಂಚೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಮುಂಬೈನ ಬೈಕುಲ್ಲಾ ಪ್ರದೇಶದಲ್ಲಿ ಶುಕ್ರವಾರ ನಡೆದ ಮೊಹರಂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕೋಟ್ಯಂತರ ಜನರ ಪೈಕಿ 15,000 ಜನರನ್ನು ವಿಷದ ಗುಳಿಗೆ ನೀಡಿ ಕೊಲ್ಲಲು ಸಂಚು ರೂಪಿಸಿದ್ದ 39 ವರ್ಷದ ಆರೋಪಿ ಫಯ್ಯಾಜ್ ಪ್ರೇಮ್‌ಜಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇಲಿಗಳನ್ನು ಕೊಲ್ಲಲು ಬಳಸುವ ತೀವ್ರ ವಿಷಕಾರಿ ರಾಸಾಯನಿಕದಿಂದ ಈತ ಮಾತ್ರೆಗಳನ್ನು ತಯಾರಿಸಿದ್ದಾಗಿ ತನಿಖೆಯ ವೇಳೆ ಬಯಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಪುಣೆಯ ವಿಮಾನ ನಗರದ ನಿವಾಸಿಯಾದ ಫಯ್ಯಾಜ್ ಪ್ರೇಮ್‌ಜಿ ಬಿಬಿಎ (BBA) ಪದವೀಧರನಾಗಿದ್ದು, ಆತನ ಮನೆಯ ಸುತ್ತಮುತ್ತ ಇದ್ದ ಅತಿಯಾದ ಇಲಿಗಳ ಕಾಟದಿಂದಲೇ ಈ ಪ್ಲಾನ್ ಹೊಳೆದಿದೆ. ಇಲಿಗಳನ್ನು ಸಾಯಿಸಲು ಬಳಸುವ ಜಿಂಕ್ ಫಾಸ್ಫೈಡ್ ಎಂಬ ತೀವ್ರ ವಿಷಕಾರಿ ಪುಡಿಯನ್ನು ಬಳಸಿ ಈತ ಕ್ಯಾಪ್ಸೂಲ್‌ಗಳನ್ನು ತಯಾರಿಸಿದ್ದ. ಈ ವಿಷದ ಪುಡಿ ಮಾನವ ದೇಹದ ಮೇಲೆ ಎಷ್ಟು ಪ್ರಮಾಣದಲ್ಲಿ ಮತ್ತು ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಈತ ಗೂಗಲ್ ಮತ್ತು ಎಐ ತಂತ್ರಜ್ಞಾನದ ಮೂಲಕ ವ್ಯಾಪಕವಾಗಿ ಸಂಶೋಧನೆ ನಡೆಸಿ, ಆನ್‌ಲೈನ್‌ನಲ್ಲಿ 50 ಕೆಜಿ ಜಿಂಕ್ ಫಾಸ್ಫೈಡ್ ಹಾಗೂ 30,000 ಖಾಲಿ ಕ್ಯಾಪ್ಸೂಲ್‌ಗಳನ್ನು ಆರ್ಡರ್ ಮಾಡಿದ್ದ.

ಶುಕ್ರವಾರ ಮುಂಬೈನ ಬೈಕುಲ್ಲಾದಲ್ಲಿ ಮೊಹರಂ ಮೆರವಣಿಗೆ ನಡೆಯುತ್ತಿದ್ದಾಗ, ಈತ ಜನರ ಬಳಿ ತೆರಳಿ ಇವು ದೇಹದ ನೋವು ನಿವಾರಕ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳೆಂದು ಸುಳ್ಳು ಹೇಳಿ ಹಂಚುತ್ತಿದ್ದ. ಈತನ ವಿಚಿತ್ರ ವರ್ತನೆಯನ್ನು ಗಮನಿಸಿದ ಅಲ್ಲಿನ ಕೆಲವು ಮಹಿಳಾ ಸ್ವಯಂಸೇವಕರು ತಕ್ಷಣವೇ ಈತನನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಾಗಲೇ ಈ ಮಾತ್ರೆಗಳನ್ನು ಸೇವಿಸಿದ್ದ ಹಲವು ಭಕ್ತರು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಬಂಧನದ ವೇಳೆ ಈತನ ಬಳಿ ಸುಮಾರು 15,000 ಜೀವಂತ ವಿಷದ ಮಾತ್ರೆಗಳು ಪತ್ತೆಯಾಗಿದ್ದು, ಇದನ್ನು ಪುಣ್ಯದ ಕೆಲಸ ಎಂದು ನಂಬಿಸಿ ಇತರರಿಂದಲೂ ಹಂಚಿಸಲು ಈತ ಪ್ರಯತ್ನಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಮನೆ ಶಿಫ್ಟ್ ಮಾಡಿದವರಿಗೆ ಬಿಗ್ ಶಾಕ್ ಕಾದಿದೆ; ನಾಳೆಯಿಂದ ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ ‘SIR’ ಮತದಾರರ ಪಟ್ಟಿ ಪರಿಷ್ಕರಣೆ

ಪತ್ನಿ ಬಿಟ್ಟು ಹೋಗಿದ್ದಕ್ಕೆ ಇಡೀ ಪ್ರಪಂಚದ ಮೇಲೆ ಸೇಡು:

ಆರೋಪಿ ಫಯ್ಯಾಜ್ ಪ್ರೇಮ್‌ಜಿ ಪುಣೆಯ ಕೊನಾರ್ಕ್ ನಗರ ಟೌನ್‌ಶಿಪ್‌ನ ರೋ ಹೌಸ್ ಸಂಖ್ಯೆ 25ರಲ್ಲಿ ವಾಸವಿದ್ದ ಹಾಗೂ ಆತನ ತಂದೆಯ ಪೇಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಎರಡು ವರ್ಷಗಳ ಹಿಂದೆ ಈತನ ಪತ್ನಿ ಈತನನ್ನು ತೊರೆದು ಹೋಗಿದ್ದರಿಂದ ಮಾನಸಿಕ ನಿಯಂತ್ರಣ ಕಳೆದುಕೊಂಡಿದ್ದ ಈತ, ಇಡೀ ಪ್ರಪಂಚದ ಮೇಲೆ ಸೇಡು ತೀರಿಸಿಕೊಳ್ಳಲು ಈ ಸಾಮೂಹಿಕ ಹತ್ಯೆಯ ಸ್ಕೆಚ್ ಹಾಕಿದ್ದ ಎಂದು ನೆರೆಹೊರೆಯವರು ಹಾಗೂ ಪೊಲೀಸರು ತಿಳಿಸಿದ್ದಾರೆ.

ಇದರ ಜತೆಗೆ ಆರೋಪಿ ಫಯ್ಯಾಜ್ ಕಳೆದ ಕೆಲವು ವರ್ಷಗಳಲ್ಲಿ ಸುಮಾರು 19 ಬಾರಿ ಇರಾನ್ ಮತ್ತು ಇರಾಕ್‌ ದೇಶಗಳಿಗೆ ಪ್ರವಾಸ ಮಾಡಿದ್ದು, ಕಳೆದ ವರ್ಷವಷ್ಟೇ ಅಲ್ಲಿ ಒಂದೆರಡು ತಿಂಗಳು ಕೆಲಸ ಮಾಡಿದ್ದ. ಆತನ ತಾಯಿ ಮತ್ತು ಸಹೋದರಿ ಇರಾನ್‌ನಲ್ಲಿ ವಾಸಿಸುತ್ತಿದ್ದಾರೆ. ಈತ ಕೇವಲ 19 ದಿನಗಳ ಅಂತರದಲ್ಲಿ ಮೂರು ಬಾರಿ ಇರಾನ್‌ಗೆ ಭೇಟಿ ನೀಡಿರುವುದು ಪತ್ತೆಯಾಗಿದ್ದು, ಈ ಘಟನೆಯ ಹಿಂದೆ ಯಾವುದೇ ಅಂತರರಾಷ್ಟ್ರೀಯ ಸಂಚು ಅಥವಾ ಉಗ್ರಗಾಮಿ ನಂಟು ಇದೆಯೇ ಎಂಬ ನಿಟ್ಟಿನಲ್ಲಿ ಎಟಿಎಸ್ (ATS) ಹಾಗೂ ತನಿಖಾಧಿಕಾರಿಗಳು ಆತನ ಬ್ಯಾಂಕ್ ಖಾತೆ ಹಾಗೂ ಕರೆಗಳ ವಿವರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಖ್ಯಾತ ಕಿರುತೆರೆ ಜೋಡಿಯ ದಾಂಪತ್ಯ ಜೀವನ ಅಂತ್ಯ; ರಿಯಾಲಿಟಿ ಶೋನಲ್ಲೇ ವಿಚ್ಛೇದನ ಘೋಷಿಸಿದ ನಟಿ – Kannada News | Gaurav Khanna and Akanksha Chamola Divorce: Lock Upp Revelation Shocks Fans

ಸೆಲೆಬ್ರಿಟಿ ಲೋಕದಲ್ಲಿ ಡಿವೋರ್ಸ್ ಸಾಮಾನ್ಯ ಎಂಬಂತಾಗಿದೆ. ಈಗ ಕಿರುತೆರೆ ಲೋಕದ ಪ್ರಸಿದ್ಧ ಜೋಡಿ ಗೌರವ್ ಖನ್ನಾ ಮತ್ತು ಆಕಾಂಕ್ಷಾ ಚಮೋಲಾ ತಮ್ಮ ದಾಂಪತ್ಯ ಜೀವನಕ್ಕೆ ಮುಕ್ತಾಯ ಹಾಡುತ್ತಿದ್ದಾರೆ. ಖ್ಯಾತ ರಿಯಾಲಿಟಿ ಶೋ ‘ಲಾಕ್ ಅಪ್ ಸೀಸನ್ 2’ ವೇದಿಕೆಯಲ್ಲಿ ಆಕಾಂಕ್ಷಾ ಈ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ.

ಲಾಕ್ ಅಪ್ ಶೋ ಜೂನ್ 27ರಂದು ನೆಟ್​ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ಪ್ರಸಾರ ಆರಂಭಿಸಿದೆ. ಮೊದಲ ಸಂಚಿಕೆಯಲ್ಲಿ ಆಕಾಂಕ್ಷಾ ತಮ್ಮ ವೈಯಕ್ತಿಕ ಜೀವನದ ರಹಸ್ಯವೊಂದನ್ನು ಬಿಚ್ಚಿಟ್ಟರು. ತಮಗೂ ಮತ್ತು ಗೌರವ್ ಖನ್ನಾಗೆ ವಿಚ್ಛೇದನವಾಗುತ್ತಿದೆ ಎಂದು ಅವರು ಹೇಳಿದರು. ಕಳೆದ ಒಂದು ವರ್ಷದಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರಂತೆ. ಈ ವಿಷಯವನ್ನು ಇಷ್ಟು ದಿನ ಗೌಪ್ಯವಾಗಿಡಲಾಗಿತ್ತು. ಈ ಸುದ್ದಿಯನ್ನು ಕೇಳಿ ಶೋ ನಿರೂಪಕರು ಮತ್ತು ಪ್ರೇಕ್ಷಕರು ದಿಗ್ಭ್ರಮೆಗೊಂಡರು.

ಪರಸ್ಪರ ಕಹಿ ಭಾವನೆ ಇಲ್ಲ

ನಮ್ಮಿಬ್ಬರ ಮಧ್ಯೆ ಯಾವುದೇ ದ್ವೇಷ ಅಥವಾ ಕಹಿ ಭಾವನೆ ಇಲ್ಲ ಎಂದು ಆಕಾಂಕ್ಷಾ ಸ್ಪಷ್ಟಪಡಿಸಿದ್ದಾರೆ. ನಾವು ಈಗಲೂ ಪರಸ್ಪರ ಮಾತನಾಡುತ್ತೇವೆ. ಆದರೆ ನಮ್ಮಿಬ್ಬರ ಯೋಚನೆಗಳು ಮತ್ತು ಭವಿಷ್ಯದ ಗುರಿಗಳು ವಿಭಿನ್ನವಾಗಿವೆ. ನಾವಿಬ್ಬರು ಜೊತೆಯಾಗಿ ಬಾಳಲು ಹೊಂದಾಣಿಕೆ ಆಗುತ್ತಿಲ್ಲ. ಹಾಗಾಗಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಮಕ್ಕಳ ವಿಚಾರದಲ್ಲಿ ಭಿನ್ನಾಭಿಪ್ರಾಯ

ಗೌರವ್ ಮತ್ತು ಆಕಾಂಕ್ಷಾ 2016ರ ನವೆಂಬರ್ 24ರಂದು ವಿವಾಹವಾಗಿದ್ದರು. ಈ ಹಿಂದೆ ಬಿಗ್ ಬಾಸ್ 19 ಶೋನಲ್ಲಿ ಗೌರವ್ ವಿನ್ನರ್ ಆಗಿ ಹೊರಹೊಮ್ಮಿದ್ದರು. ಆ ಶೋನ ಕೌಟುಂಬಿಕ ವಾರದಲ್ಲಿ ಆಕಾಂಕ್ಷಾ ಭಾಗವಹಿಸಿದ್ದರು. ಬಿಗ್ ಬಾಸ್ ಮನೆಯಲ್ಲಿದ್ದಾಗ ಗೌರವ್ ಮಕ್ಕಳ ವಿಚಾರದ ಬಗ್ಗೆ ಮಾತನಾಡಿದ್ದರು. ತಮಗೆ ಮಗು ಬೇಕು ಎಂಬ ಆಸೆ ಇದೆ ಎಂದಿದ್ದರು. ಆದರೆ ಪತ್ನಿ ಆಕಾಂಕ್ಷಾಗೆ ಮಗು ಬೇಡ ಎಂಬ ನಿಲುವಿದೆ ಎಂದು ಗೌರವ್ ಹೇಳಿದ್ದರು. ತಮಗೆ ತಾಯಿಯಾಗುವ ಇಷ್ಟ ಇಲ್ಲ ಎಂದು ಆಕಾಂಕ್ಷಾ ಕೂಡ ಈ ಹಿಂದೆ ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಇದು ಅವರ ವೈಯಕ್ತಿಕ ನಿರ್ಧಾರವಾಗಿತ್ತು.

ಇದನ್ನೂ ಓದಿ: ಸಿಕ್ಕಾಪಟ್ಟೆ ಬೋಲ್ಡ್​ ಅವತಾರದಲ್ಲಿ ಆಕಾಂಕ್ಷಾ ಶರ್ಮಾ

ವದಂತಿಗಳನ್ನು ನಿರಾಕರಿಸಿದ್ದ ನಟಿ

ಕಳೆದ ಜನವರಿ ತಿಂಗಳಿನಲ್ಲಿ ಇವರಿಬ್ಬರ ವಿಚ್ಛೇದನದ ವದಂತಿಗಳು ಹಬ್ಬಿದ್ದವು. ಆದರೆ ಆಗ ಆಕಾಂಕ್ಷಾ ಇದನ್ನು ಸುಳ್ಳು ಎಂದು ತಳ್ಳಿಹಾಕಿದ್ದರು. ನಮ್ಮ ಸಂಸಾರದಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದರು. ಆದರೆ ಈಗ ರಿಯಾಲಿಟಿ ಶೋ ವೇದಿಕೆಯಲ್ಲಿ ಅವರೇ ಅಧಿಕೃತವಾಗಿ ವಿಚ್ಛೇದನದ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟೀಮ್ ಇಂಡಿಯಾದ ಸೋಲಿಗೆ ಇದುವೇ ಕಾರಣ! – Kannada News | Why did India lose against Ireland?

ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲನುಭವಿಸಿದೆ. ಮೊದಲ ಮ್ಯಾಚ್​ನಲ್ಲಿ 34 ರನ್​ಗಳಿಂದ ಸೋತಿದ್ದ ಭಾರತ ತಂಡ ದ್ವಿತೀಯ ಪಂದ್ಯದಲ್ಲಿ 1 ರನ್​​ನಿಂದ ಸೋಲೊಪ್ಪಿಕೊಂಡಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಐರ್ಲೆಂಡ್ ವಿರುದ್ಧ ಸರಣಿ ಸೋತಿದೆ. ಈ ಸೋಲಿನ ಬಗ್ಗೆ ಟೀಮ್ ಇಂಡಿಯಾದ ಪ್ರದರ್ಶನದ ಬಗ್ಗೆ ಕಟು ಟೀಕೆಗಳು ವ್ಯಕ್ತವಾಗುತ್ತಿದೆ.  ಇಲ್ಲಿ ಟೀಮ್ ಇಂಡಿಯಾದ ಈ ಆಘಾತಕಾರಿ ವೈಫಲ್ಯಕ್ಕೆ ಕಾರಣವಾದ ಪ್ರಮುಖ ಅಂಶಗಳನ್ನು ನೋಡುವುದಾದರೆ…

ಐಪಿಎಲ್ ಗುಂಗು:

ಭಾರತದ ಫ್ಲಾಟ್ ಮತ್ತು ಬ್ಯಾಟಿಂಗ್ ಸ್ನೇಹಿ ಪಿಚ್‌ಗಳಲ್ಲಿ ಆಡಿ ಬಂದಿದ್ದ ಟೀಮ್ ಇಂಡಿಯಾ ಆಟಗಾರರಿಗೆ, ಬೆಲ್‌ಫಾಸ್ಟ್‌ನ ಮಂದಗತಿಯ ಮತ್ತು ಅನಿರೀಕ್ಷಿತ ಬೌನ್ಸ್ ಹೊಂದಿದ್ದ ಪಿಚ್ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚೆಂಡು ನಿಧಾನವಾಗಿ ಬ್ಯಾಟ್‌ಗೆ ಬರುತ್ತಿದ್ದರಿಂದ ಭಾರತದ ಪ್ರಮುಖ ಆಟಗಾರರು ರನ್ ಗಳಿಸಲು ತಿಣುಕಾಡಿದರು.

ಈ ಪಿಚ್‌ನ ಅತ್ಯಂತ ಅಪಾಯಕಾರಿ ಗುಣವೆಂದರೆ ಅದು ‘ಟೂ-ಪೇಸ್ಡ್’ ಆಗಿತ್ತು. ಅಂದರೆ, ಬೌಲರ್ ಎಸೆದ ಎಲ್ಲಾ ಚೆಂಡುಗಳು ಒಂದೇ ವೇಗದಲ್ಲಿ ಬ್ಯಾಟ್‌ಗೆ ಬರುತ್ತಿರಲಿಲ್ಲ. ಕೆಲವೊಮ್ಮೆ ಚೆಂಡು ನಿರೀಕ್ಷೆಗಿಂತ ವೇಗವಾಗಿ ಬಂದರೆ, ಇನ್ನು ಕೆಲವು ಎಸೆತಗಳು ಪಿಚ್‌ಗೆ ಬಿದ್ದ ನಂತರ ಅತ್ಯಂತ ನಿಧಾನವಾಗಿ  ಬ್ಯಾಟರ್‌ ಕಡೆಗೆ ಬರುತ್ತಿದ್ದವು.

ಆದರೆ ಐಪಿಎಲ್‌ನ  ಫ್ಲಾಟ್ ಪಿಚ್‌ಗಳ ಗುಂಗಿನಲ್ಲೇ ಇದ್ದ ಭಾರತೀಯ ಬ್ಯಾಟರ್‌ಗಳು, ಐರ್ಲೆಂಡ್‌ನ ಮಂದಗತಿಯ ಪಿಚ್‌ನಲ್ಲಿ ಕ್ರೀಸ್‌ನಲ್ಲಿ ಸೆಟ್ ಆಗಲು ಸಮಯ ತೆಗೆದುಕೊಳ್ಳಲೇ ಇಲ್ಲ. ಪಿಚ್ ಹೇಗಿದೆ ಎಂದು ಅರಿಯುವ ಮುನ್ನವೇ ಮೊದಲ ಓವರ್‌ನಿಂದಲೇ ದೊಡ್ಡ ಶಾಟ್‌ಗಳನ್ನು ಹೊಡೆಯಲು ಮುಂದಾಗಿದ್ದರು. ಇದಕ್ಕೆ ಸಾಕ್ಷಿ ಎರಡನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಮೊದಲ ಓವರ್‌ನಲ್ಲೇ ಶೂನ್ಯಕ್ಕೆ ಔಟಾಗಿದ್ದು.

ಮೈದಾನದ ಪರಿಸ್ಥಿತಿ:

ಭಾರತೀಯ ಬ್ಯಾಟರ್‌ಗಳು ಐರ್ಲೆಂಡ್‌ನ ಮೈದಾನದ ಆಯಾಮಗಳು ಮತ್ತು ಹವಾಮಾನಕ್ಕೆ ಹೊಂದಿಕೊಳ್ಳಲು ವಿಫಲರಾದರು ಎಂದು ಸ್ವತಃ ಅಭಿಷೇಕ್ ಶರ್ಮಾ ಒಪ್ಪಿಕೊಂಡಿದ್ದಾರೆ. ಬೆಲ್‌ಫಾಸ್ಟ್ ಮೈದಾನದ ಸ್ಕ್ವೇರ್ ಬೌಂಡರಿಗಳು ದೊಡ್ಡದಾಗಿದ್ದವು ಮತ್ತು ಗಾಳಿ ಜೋರಾಗಿತ್ತು. ಐರ್ಲೆಂಡ್ ಬೌಲರ್‌ಗಳು ಭಾರತೀಯರನ್ನು ನೇರವಾಗಿ ಹೊಡೆಯಲು ಬಿಡದೆ, ಸೈಡ್ ಬೌಂಡರಿ ಕಡೆ ಆಡುವಂತೆ ಬೌಲಿಂಗ್ ಮಾಡಿದರು. ಇದರಿಂದಾಗಿ ಭಾರತದ ಬಹುತೇಕ ಬ್ಯಾಟರ್‌ಗಳು ಬೌಂಡರಿ ಲೈನ್‌ನಲ್ಲಿ ಕ್ಯಾಚ್ ನೀಡಿ ಔಟಾದರು.

ತಂತ್ರಗಾರಿಕೆಯ ತಪ್ಪುಗಳು:

ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಮತ್ತು ಮ್ಯಾನೇಜ್‌ಮೆಂಟ್ ತೆಗೆದುಕೊಂಡ ಕೆಲವು ನಿರ್ಧಾರಗಳು ತೀವ್ರ ಟೀಕೆಗೆ ಗುರಿಯಾಗಿವೆ. ಮೊದಲ ಪಂದ್ಯದಲ್ಲಿ 51 ರನ್‌ಗಳಿಗೆ 4 ವಿಕೆಟ್ ಪಡೆದು ಐರ್ಲೆಂಡ್ ಅನ್ನು ಕಟ್ಟಿಹಾಕಿದ್ದಾಗ, ವೇಗಿ ಪ್ರಸಿದ್ಧ್ ಕೃಷ್ಣ ಅವರ ದುಬಾರಿ ಓವರ್‌ಗಳಿಂದಾಗಿ ಐರ್ಲೆಂಡ್ 180 ರನ್ ದಾಟಲು ಸಾಧ್ಯವಾಯಿತು.

ಮತ್ತೊಂದೆಡೆ ಐಪಿಎಲ್‌ನಲ್ಲಿ 776 ರನ್ ಸಿಡಿಸಿ ಫಾರ್ಮ್‌ನಲ್ಲಿದ್ದ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರನ್ನು ಬೆಂಚ್ ಕಾಯಿಸಿದ್ದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.

ಅಂದರೆ ಇನ್​ ಫಾರ್ಮ್​ನಲ್ಲಿರುವ ಆಟಗಾರರನ್ನು ಕಣಕ್ಕಿಳಿಸದೇ ಟೀಮ್ ಇಂಡಿಯಾ ತಪ್ಪು ಮಾಡಿರುವುದು ಸ್ಪಷ್ಟ. ಅದರಲ್ಲೂ ಟಿ20 ಕ್ರಿಕೆಟ್​ನಲ್ಲಿ ಕಳಪೆ ದಾಖಲೆ ಹೊಂದಿರುವ ಪ್ರಸಿದ್ಧ್ ಕೃಷ್ಣ ಅವರನ್ನು ಯಾವ ಮಾನದಂಡದ ಮೇಲೆ ಗಂಭೀರ್ ಟೀಮ್ ಇಂಡಿಯಾಗೆ ಆಯ್ಕೆ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಪ್ರಶ್ನೆಗಳೆದ್ದಿವೆ. ಇದರ ಜೊತೆಗೆ ಔಟ್ ಫಾರ್ಮ್​ನಲ್ಲಿರುವ ಅಕ್ಷರ್ ಪಟೇಲ್ ಹೇಗೆ ಆಡುವ ಬಳಗಕ್ಕೆ ಆಯ್ಕೆಯಾಗಿದ್ದಾರೆ ಎಂಬುದೇ ಅಚ್ಚರಿ.

ಒತ್ತಡ ನಿಭಾಯಿಸುವಲ್ಲಿ ವಿಫಲ:

ಎರಡೂ ಪಂದ್ಯಗಳ ಚೇಸಿಂಗ್ ವೇಳೆ ಆರಂಭಿಕ ವಿಕೆಟ್‌ಗಳು ಬಿದ್ದ ತಕ್ಷಣ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ತೀವ್ರ ಒತ್ತಡಕ್ಕೆ ಒಳಗಾದರು. ಸ್ಟ್ರೈಕ್ ರೊಟೇಟ್ ಮಾಡುವ ಬದಲು ಸತತ ಡಾಟ್ ಬಾಲ್‌ಗಳನ್ನು ಆಡಿ ಒತ್ತಡವನ್ನು ಹೆಚ್ಚಿಸಿಕೊಂಡರು. ಎರಡನೇ ಪಂದ್ಯದಲ್ಲಿ ಕೇವಲ 155 ರನ್‌ಗಳ ಸುಲಭ ಗುರಿ ಇದ್ದರೂ, ಕೊನೆಯ ಓವರ್‌ಗಳಲ್ಲಿ ಆತುರಪಟ್ಟು ವಿಕೆಟ್ ಕಳೆದುಕೊಂಡು ಕೇವಲ 1 ರನ್‌ನಿಂದ ಪಂದ್ಯ ಸೋತಿದ್ದು ಆಟಗಾರರ ಮಾನಸಿಕ ವೈಫಲ್ಯವನ್ನು ತೋರಿಸುತ್ತದೆ.

ಇದನ್ನೂ ಓದಿ: ಸಿರಾಜ್​ರನ್ನು ಕೈ ಬಿಟ್ಟಿದ್ದೇಕೆ? ಟೀಮ್ ಇಂಡಿಯಾ ಮಾಜಿ ಆಟಗಾರನ ಪ್ರಶ್ನೆ

ಒಟ್ಟಾರೆಯಾಗಿ ಹೇಳುವುದಾದರೆ, ಬೆಲ್‌ಫಾಸ್ಟ್‌ನ ಈ ಪರಾಜಯವು ಟೀಮ್ ಇಂಡಿಯಾ ಪಾಲಿಗೆ ಒಂದು ಕಠಿಣ ಎಚ್ಚರಿಕೆಯ ಗಂಟೆಯಾಗಿದೆ. ಕೇವಲ ಐಪಿಎಲ್ ತರಹದ ಫ್ಲಾಟ್ ಪಿಚ್‌ಗಳ ಬ್ಯಾಟಿಂಗ್ ಶೈಲಿಯನ್ನು ನೆಚ್ಚಿಕೊಳ್ಳದೆ, ವಿದೇಶಿ ಮಣ್ಣಿನ ಕಠಿಣ ಹವಾಮಾನ ಮತ್ತು ಅನಿರೀಕ್ಷಿತ ಪಿಚ್‌ಗಳಿಗೆ ತಕ್ಕಂತೆ ತಾಂತ್ರಿಕವಾಗಿ ಹೊಂದಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಈ ಸರಣಿ ಭಾರತಕ್ಕೆ ನೆನಪಿಸಿದೆ.

Source link

Karnataka Weather Forecast: ಕರಾವಳಿಯಲ್ಲಿ ಭಾರಿ ಮಳೆ; ಯೆಲ್ಲೋ ಅಲರ್ಟ್​ ಘೋಷಣೆ – Kannada News | Karnataka Weather Forecast: Yellow Alert Issued for Coastal Districts; Rain Alert in Bengaluru, North Interior

ಕರಾವಳಿ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ

ಬೆಂಗಳೂರು, ಜೂನ್ 29: ಮುಂದಿನ ಕೆಲವು ದಿನಗಳ ಕಾಲ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (Weather)  ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ಕರಾವಳಿ ಪ್ರದೇಶಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹವಾಮಾನ ಇಲಾಖೆಯು ಜಾಗರೂಕತೆ ವಹಿಸುವಂತೆ ಹೇಳಿದೆ.

ಕರಾವಳಿ ತೀರದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದು ಅಥವಾ ಎರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ನಿರಂತರ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

ಉತ್ತರ ಒಳನಾಡಿನಲ್ಲಿ ಗುಡುಗು ಸಹಿತ ಮಳೆ

ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಮಳೆಯೊಂದಿಗೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಲವಾದ ಬಿರುಗಾಳಿ ಹಾಗೂ ಗುಡುಗು ಮಿಂಚಿನ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರು ಮರಗಳ ಅಥವಾ ಹಳೆಯ ಕಟ್ಟಡಗಳ ಆಶ್ರಯ ಪಡೆಯದಂತೆ ಸೂಚಿಸಲಾಗಿದೆ.

ಸಾಧಾರಣ ಮಳೆ ಮುನ್ಸೂಚನೆ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಇಲ್ಲಿಯೂ ಸಹ ಮಳೆಯ ಜೊತೆಗೆ 30-40 ಕಿ.ಮೀ ವೇಗದ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ಮಳೆಯಾಗುವ ಸಾಧ್ಯತೆಯಿದೆ.

ಮುಂದಿನ ದಿನಗಳಲ್ಲಿ ಮುಂಗಾರು ಮತ್ತಷ್ಟು ತೀವ್ರಗೊಳ್ಳಲಿದ್ದು, ಜೂನ್ ಅಂತ್ಯ ಹಾಗೂ ಜುಲೈ ಆರಂಭದ ದಿನಗಳಲ್ಲಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದಯವಿಟ್ಟು ಇದನ್ನು ಇಲ್ಲಿಯೇ ನಿಲ್ಲಿಸಿ’; ಕೈ ಮುಗಿದು ಕೇಳಿಕೊಂಡ ಕೃಷಿ ತಾಪಂಡ – Kannada News | Krishi Thapanda’s Emotional Plea: Ask to Stop Speculation on Vyshak’s Death

ನಟಿ ಕೃಷಿ ತಾಪಂಡ ಅವರ ಆಪ್ತ ಗೆಳೆಯ ವೈಶಾಕ್ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ವಾಸವಿದ್ದ ಫ್ಲ್ಯಾಟ್ ಅಲ್ಲೇ ಅವರು ನಿಧನ ಹೊಂದಿದ್ದು ಶಾಕಿಂಗ್ ಎನಿಸಿದೆ. ಈ ಬಗ್ಗೆ ಕೃಷಿ ತಾಪಂಡ ಅವರು (Krishi Tapanda) ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ತಮ್ಮ ಇನ್​​ಸ್ಟಾಗ್ರಾಮ್ ಖಾತೆಯಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಮನದ ಆಳದ ನೋವು ಹಾಗೂ ಸಾರ್ವಜನಿಕ ವಲಯದ ಒತ್ತಡದ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದಾರೆ.

‘ಇಂತಹದ್ದೊಂದು ಬರಹವನ್ನು ಬರೆಯಬೇಕಾಗಿ ಬರುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ನನಗೆ ಈ ಸಮಯದಲ್ಲಿ ಯಾವುದೇ ಸಾರ್ವಜನಿಕ ಹೇಳಿಕೆ ನೀಡುವ ಮಾನಸಿಕ ಶಕ್ತಿ ಇಲ್ಲದಿದ್ದರೂ, ಸುತ್ತಲೂ ಕೇಳಿಬರುತ್ತಿರುವ ನಿರಂತರ ಊಹಾಪೋಹಗಳು ಮತ್ತು ಪ್ರಶ್ನೆಗಳಿಂದಾಗಿ ಈ ಸ್ಪಷ್ಟನೆ ನೀಡುತ್ತಿದ್ದೇನೆ. ನನಗೆ ಅತ್ಯಂತ ಆಪ್ತರಾಗಿದ್ದ, ನನ್ನನ್ನು ರಕ್ಷಿಸುತ್ತಿದ್ದ ವ್ಯಕ್ತಿಯನ್ನು ಕಳೆದುಕೊಂಡ ನೋವಿನಲ್ಲಿ ನಾನಿದ್ದೇನೆ. ಈ ನಷ್ಟದಿಂದ ಹೊರಬರಲು ನನಗೆ ಸಾಧ್ಯವಾಗುತ್ತಿಲ್ಲ’ ಎಂದು ಅವರು ಬೇಸರ ಹೊರಹಾಕಿದ್ದಾರೆ.

ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ‘ಅವರ ಕುಟುಂಬ ಮತ್ತು ಆಪ್ತರು ಈ ದೊಡ್ಡ ನಷ್ಟವನ್ನು ಅರಗಿಸಿಕೊಳ್ಳಲು ಹೆಣಗಾಡುತ್ತಿರುವಾಗ, ನಿರಂತರವಾಗಿ ಕಥೆಗಳನ್ನು ಸೃಷ್ಟಿಸಲಾಗುತ್ತಿದೆ. ಕೆಲವು ಮಾಧ್ಯಮಗಳು ಗೌರವಯುತವಾಗಿ ನಡೆದುಕೊಂಡರೆ, ಇನ್ನು ಕೆಲವು ಕೇವಲ ರಿಯಾಕ್ಷನ್‌ಗಾಗಿ ಒತ್ತಾಯಿಸುತ್ತಿವೆ. ನೀವು ಹೇಗಿದ್ದೀರಾ ಎಂದು ಕೇಳುವ ಬದಲು ನಿಮ್ಮ ರಿಯಾಕ್ಷನ್ ಏನು ಎಂದು ಕೇಳುತ್ತಿದ್ದಾರೆ’ ಎಂದಿದ್ದಾರೆ ಕೃಷಿ.

ವೈಶಾಕ್ ಸಾವಿನ ಸುತ್ತ ನಡೆಯುತ್ತಿರುವ ಅನಗತ್ಯ ಚರ್ಚೆಗಳನ್ನು ನಿಲ್ಲಿಸುವಂತೆ ಕೃಷಿ ಕೈಮುಗಿದು ಬೇಡಿಕೊಂಡಿದ್ದಾರೆ. ‘ಇಲ್ಲಿ ಒಂದು ಕುಟುಂಬ ತನ್ನ ಮಗನನ್ನು ಕಳೆದುಕೊಂಡಿದೆ. ಸ್ನೇಹಿತರು ತಮ್ಮ ಆಪ್ತನನ್ನು ಕಳೆದುಕೊಂಡಿದ್ದಾರೆ. ಪ್ರತಿಯೊಂದು ಅನಗತ್ಯ ಪ್ರಶ್ನೆ, ಊಹೆ ಮತ್ತು ವದಂತಿಗಳು ಇಲ್ಲಿ ಉಳಿದು ನೋವು ಅನುಭವಿಸುತ್ತಿರುವವರ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ನಮಗೆ ಶಾಂತಿಯಿಂದ ದುಃಖಿಸಲು ಬಿಡಿ’ ಎಂದು ಅವರು ವಿನಂತಿಸಿದ್ದಾರೆ.

‘ಯಾವುದೇ ಸತ್ಯ ತಿಳಿಯದೆ ಕೇವಲ ಉತ್ತರಗಳಿಗಾಗಿ ಹುಡುಕುತ್ತಿರುವವರಿಗೆ ಸಂದೇಶ ನೀಡಿರುವ ಅವರು, ಮತ್ತೊಂದೆಡೆ ತಮಗೆ ಸಂದೇಶ ಹಾಗೂ ಪ್ರಾರ್ಥನೆಗಳ ಮೂಲಕ ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ‘ಸದ್ಯಕ್ಕೆ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಉತ್ತರಿಸುವ ಶಕ್ತಿ ನನಗಿಲ್ಲ. ಆದರೆ ನಿಮ್ಮ ಪ್ರೀತಿ ಮತ್ತು ಕಾಳಜಿಗೆ ನಾನು ಚಿರಋಣಿ’ ಎಂದಿದ್ದಾರೆ.

ಇದನ್ನೂ ಓದಿ: ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಖ್ ಸಾವು, ಆಪ್ತ ಗೆಳೆಯ ಹೇಳಿದ್ದೇನು?

ತಮ್ಮ ಕೊನೆಯ ಪೋಸ್ಟ್‌ನಲ್ಲಿ ಅತ್ಯಂತ ಮಾರ್ಮಿಕವಾಗಿ ಬರೆದುಕೊಂಡಿರುವ ಕೃಷಿ ತಾಪಂಡ, ‘ಯಾರಿಗಾದರೂ ಬದುಕಲು ಕಾರಣ ನೀಡಲು ಸಾಧ್ಯವಾಗದಿದ್ದರೆ, ಕನಿಷ್ಠ ಅವರು ಭರವಸೆ ಕಳೆದುಕೊಳ್ಳುವಂತೆ ಮಾಡಬೇಡಿ. ದಯವಿಟ್ಟು ಎಲ್ಲರೂ ದಯೆ ಮತ್ತು ಕರುಣೆಯನ್ನು ಆಯ್ಕೆ ಮಾಡಿಕೊಳ್ಳಿ. ದಯವಿಟ್ಟು ಇದನ್ನು ಇಷ್ಟಕ್ಕೇ ನಿಲ್ಲಿಸಿ’ ಎಂದು ಕೈಮುಗಿದು ಪ್ರಾರ್ಥಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:04 am, Mon, 29 June 26

Source link

Exit mobile version