ಕುಸಿದು ಬಿದ್ದ ಇರಾನ್ ಕರೆನ್ಸಿ; ಒಂದು ಕೋಟಿ ರಿಯಾಲ್ ಮುಖಬೆಲೆಯ ಕರೆನ್ಸಿ ನೋಟು ಬಿಡುಗಡೆ; ಇದರ ಮೌಲ್ಯ ಕೆಲವೇ ಡಾಲರ್ ಮಾತ್ರ

ಕುಸಿದು ಬಿದ್ದ ಇರಾನ್ ಕರೆನ್ಸಿ; ಒಂದು ಕೋಟಿ ರಿಯಾಲ್ ಮುಖಬೆಲೆಯ ಕರೆನ್ಸಿ ನೋಟು ಬಿಡುಗಡೆ; ಇದರ ಮೌಲ್ಯ ಕೆಲವೇ ಡಾಲರ್ ಮಾತ್ರ

ನವದೆಹಲಿ, ಮಾರ್ಚ್ 22: ಯುದ್ಧದಿಂದ ಜರ್ಝರಿತವಾಗಿರುವ ಇರಾನ್ ಇದೀಗ ಆರ್ಥಿಕವಾಗಿ ದುಸ್ತರ ಪರಿಸ್ಥಿತಿಗೆ ಸಿಲುಕಿದೆ. ಅಮೆರಿಕದ ಆರ್ಥಿಕ ದಿಗ್ಬಂಧನದ ಫಲವಾಗಿ ಇರಾನ್​ನ ರಿಯಾಲ್ ಕರೆನ್ಸಿಯ ಮೌಲ್ಯ (Irani Rial notes) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಣನೀಯವಾಗಿ ಕುಸಿದಿದೆ. ಈ ಮಧ್ಯೆ ಇರಾನ್ ದೇಶವು 10 ಮಿಲಿಯನ್ ರಿಯಾಲ್ ಬ್ಯಾಂಕ್ ನೋಟೊಂದನ್ನು ಬಿಡುಗಡೆ ಮಾಡಿದೆ. 10 ಮಿಲಿಯನ್ ಎಂದರೆ ಒಂದು ಕೋಟಿ ರಿಯಾಲ್ ಮುಖಬೆಲೆಯ ನೋಟು ಇದು.

ಈ ಒಂದು ಕೋಟಿ ರಿಯಾಲ್ ನೋಟಿನ ಮೌಲ್ಯ ಕೇವಲ 7 ಡಾಲರ್ ಮಾತ್ರ. ಭಾರತೀಯ ಕರೆನ್ಸಿಯಲ್ಲಿ ಇದರ ಮೌಲ್ಯ ಸುಮಾರು 650 ರುಪಾಯಿ ಮಾತ್ರ. ಅಷ್ಟು ಮಟ್ಟಿಗೆ ಇರಾನ್ ಕರೆನ್ಸಿಯ ಮೌಲ್ಯ ನಶಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಚೀನೀ ಯುವಾನ್ ಕರೆನ್ಸಿಗೆ ಬರೊಬ್ಬರಿ 2 ಲಕ್ಷ ಇರಾನೀ ರಿಯಾಲ್ ಸಿಗುತ್ತದೆ. ಒಂದು ಭಾರತೀಯ ರುಪಾಯಿಯ ಮೌಲ್ಯ ಸುಮಾರು 14,000 ರಿಯಾಲ್​ಗೆ ಸಮ ಎನಿಸುತ್ತದೆ.

ಇದನ್ನೂ ಓದಿ: ಹೋಟೆಲ್, ಮುಂಗಟ್ಟುಗಳಿಗೆ ನಿರಾಳ ಸುದ್ದಿ; ರಾಜ್ಯಗಳಿಗೆ ಕಮರ್ಷಿಯಲ್ ಎಲ್​ಪಿಜಿ ಪೂರೈಕೆ ಶೇ. 50ಕ್ಕೆ ಏರಿಕೆ

ಇರಾನ್​ನಲ್ಲಿ ಹಣದುಬ್ಬರ ಅತಿಯಾದ ಮಟ್ಟದಲ್ಲಿದೆ. ಶೇ. 50ಕ್ಕಿಂತಲೂ ಹೆಚ್ಚಿನ ಹಣದುಬ್ಬರ ದರ ಅಲ್ಲಿದೆ. ಅಂದರೆ, ವರ್ಷಕ್ಕೆ 50 ಪ್ರತಿಶತದಷ್ಟು ಬೆಲೆ ಏರಿಕೆ ಅಲ್ಲಿ ಆಗುತ್ತಿದೆ. ಹಣದ ಮೌಲ್ಯ ಕುಸಿಯುತ್ತಲೇ ಇದೆ. ಸಾಧಾರಣ ವಸ್ತುಗಳನ್ನು ಖರೀದಿಸಲೂ ಜನರು ಬಂಡಲ್​ಗಟ್ಟಲೆ ಹಣ ಕೊಡಬೇಕಾದ ಪರಿಸ್ಥಿತಿ ಇದೆ. ಹೀಗಾಗಿ, ಅಲ್ಲಿನ ಸರ್ಕಾರ ಒಂದು ಮಿಲಿಯನ್ ರಿಯಾಲ್ ಮುಖಬೆಲೆಯ ನೋಟುಗಳನ್ನು ಮುದ್ರಿಸಿದೆ.

ಜನರಿಂದ ಕ್ಯಾಷ್ ಶೇಖರಣೆ

ಯುದ್ಧದಿಂದ ಇರಾನ್​ನ ಬ್ಯಾಂಕಿಂಗ್ ಸಿಸ್ಟಂ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಗೆ ಧಕ್ಕೆಯಾಗುವ ಭಯವೂ ಇರಾನ್​ನ ಆಡಳಿತ ಮತ್ತು ಜನಸಾಮಾನ್ಯರಿಗೆ ಕಾಡುತ್ತಿದೆ. ಹೀಗಾಗಿ, ಬಹಳಷ್ಟು ಜನರು ನಗದು ಹಣವನ್ನು ಇಟ್ಟುಕೊಳ್ಳಲು ಮುಂದಾಗಿದ್ದಾರೆ. ಇದರ ಪರಿಣಾಮವಾಗಿ ಬ್ಯಾಂಕು ಹಾಗು ಎಟಿಎಂಗಳ ಮುಂದೆ ಜನರ ನೂಕುನುಗ್ಗಲು ಹೆಚ್ಚಾಗಿದೆ.

ಇದನ್ನೂ ಓದಿ: ಟಿಕೆಟ್ ದರ ಮಿತಿ ಕ್ರಮ ಹಿಂತೆಗೆತ, ಜೆಟ್ ಫುಯಲ್ ಬೆಲೆ ಹೆಚ್ಚಳ ಪರಿಣಾಮ ಏ. 1ರಿಂದ ವಿಮಾನ ಟಿಕೆಟ್ ದರ ಏರಿಕೆ?

ಅಂತಾರಾಷ್ಟ್ರೀಯ ನಿಷೇಧ ಕ್ರಮವು ಇರಾನ್ ಆರ್ಥಿಕತೆಯನ್ನು ಜರ್ಝರಿತಗೊಳಿಸಿದೆ. ಅಮೆರಿಕನ್ ಡಾಲರ್ ಬಳಕೆ ಅಸಾಧ್ಯವಾದ್ದರಿಂದ ಇರಾನ್​ಗೆ ಅಂತಾರಾಷ್ಟ್ರೀಯ ವ್ಯವಹಾರ ಕಷ್ಟವೆನಿಸಿದೆ. ಚೀನಾ ಜೊತೆ ಬಾರ್ಟರ್ ಸಿಸ್ಟಂ ರೀತಿ ಅದು ವ್ಯವಹರಿಸುತ್ತಿದೆ. ಚೀನಾಗೆ ತೈಲ ಪೂರೈಕೆಗೆ ಬದಲಾಗಿ, ಇರಾನ್​ನಲ್ಲಿ ಚೀನಾ ಬೇರೆ ಸೇವೆಗಳನ್ನು ಒದಗಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ತನ್ನ ಬಗ್ಗೆ ಹರಡಿದ್ದ ವದಂತಿಯ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ

ಮಡದಿ ಮಕ್ಕಳೊಂದಿಗೆ ಲಂಡನ್​ನಲ್ಲಿ ನೆಲೆಸಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಯಾವುದಾದರೂ ಸರಣಿಗಳಿದ್ದಾಗ ಮಾತ್ರ ಭಾರತಕ್ಕೆ ಬರುತ್ತಾರೆ. ಉಳಿದಂತೆ ಕೊಹ್ಲಿ ಲಂಡನ್​ನಲ್ಲಿಯೇ ಇರುತ್ತಾರೆ. ಇದೀಗ 2026 ರ ಐಪಿಎಲ್ ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಇದರ ಸಲುವಾಗಿ ವಿರಾಟ್ ಕೊಹ್ಲಿ ತಮ್ಮ ಮಡದಿ ಅನುಷ್ಕಾ ಶರ್ಮಾ ಅವರೊಂದಿಗೆ ಕೆಲವು ದಿನಗಳ ಹಿಂದೆ ಭಾರತಕ್ಕೆ ಬಂದಿಳಿದಿದ್ದರು. ಆ ಬಳಿಕ ಆರ್​ಸಿಬಿ ತಂಡವನ್ನು ಕೂಡಿಕೊಂಡಿರುವ ಕೊಹ್ಲಿ, ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇದೆಲ್ಲದರ ನಡುವೆ ವಿರಾಟ್ ಕೊಹ್ಲಿಗೆ ಸಂಬಂಧಿಸಿದ ವದಂತಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವದಂತಿ ಗಾಳಿಯಂತೆ ಹಬ್ಬುತ್ತಿರುವುದನ್ನು ಗಮನಿಸಿದ ಕೊಹ್ಲಿ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.

ವದಂತಿ ಬಗ್ಗೆ ಕೊಹ್ಲಿ ಸ್ಪಷ್ಟನೆ

ವಾಸ್ತವವಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವದಂತಿ ಏನೆಂದರೆ.. ವಿರಾಟ್ ಕೊಹ್ಲಿ ಭಾರತದಿಂದ ಲಂಡನ್‌ಗೆ ಪ್ರಯಾಣಿಸಲು ಆರ್‌ಸಿಬಿ ಆಡಳಿತ ಮಂಡಳಿಯಿಂದ ಚಾರ್ಟರ್ಡ್ ವಿಮಾನದ ಬೇಡಿಕೆ ಇಟ್ಟಿದ್ದಾರೆ. ಇದರ ಜೊತೆಗೆ ಆರ್‌ಸಿಬಿ ಪಂದ್ಯಗಳ ನಡುವೆ ಮೂರು ದಿನಗಳ ಅಂತರವಿದ್ದರೆ, ಆ ಚಾರ್ಟರ್ಡ್​ ವಿಮಾನದಲ್ಲಿ ಭಾರತದಿಂದ ಲಂಡನ್​ಗೆ ತೆರಳಿ, ಪಂದ್ಯದ ಹಿಂದಿನ ದಿನ ಲಂಡನ್​ನಿಂದ ಭಾರತಕ್ಕೆ ಹಿಂದಿರುಗಿ ತಂಡವನ್ನು ಕೂಡಿಕೊಳ್ಳುವ ಸಲುವಾಗಿ ಕೊಹ್ಲಿ ಈ ಬೇಡಿಕೆಯನ್ನು ಆರ್​​ಸಿಬಿ ಆಡಳಿತ ಮಂಡಳಿ ಮುಂದಿಟ್ಟಿದ್ದಾರೆ ಎಂಬುದಾಗಿತ್ತು.

ವದಂತಿಯನ್ನು ತಳ್ಳಿಹಾಕಿದ ಕೊಹ್ಲಿ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿಯನ್ನು ವಿರಾಟ್ ಕೊಹ್ಲಿ ನಿರಾಕರಿಸಿದ್ದು, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ವೈರಲ್ ಪೋಸ್ಟ್ ಅನ್ನು ಹಂಚಿಕೊಂಡು, ಎರಡು ನಗುವ ಎಮೋಜಿಗಳನ್ನು ಸೇರಿಸಿ ಪೋಸ್ಟ್ ಮಾಡಿದ್ದಾರೆ. ಇದರರ್ಥ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಸುದ್ದಿ ಶುದ್ಧ ಸುಳ್ಳು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂಬುದನ್ನು ಅರಿಯಬಹುದಾಗಿದೆ.

ಭರ್ಜರಿ ತಯಾರಿಯಲ್ಲಿ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಪ್ರಸ್ತುತ ಐಪಿಎಲ್ 2026 ಕ್ಕೆ ತಯಾರಿ ನಡೆಸುತ್ತಿದ್ದಾರೆ. ಅವರು ಕಳೆದ ವಾರವಷ್ಟೇ ಆರ್‌ಸಿಬಿ ಶಿಬಿರಕ್ಕೆ ಸೇರಿದ್ದರು. ಆರ್‌ಸಿಬಿ ತರಬೇತಿ ಶಿಬಿರದಲ್ಲಿ ವಿರಾಟ್ ಕೊಹ್ಲಿ ಅಭ್ಯಾಸ ಮಾಡುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿಯೂ ಹರಿದಾಡುತ್ತಿವೆ. ಕೆಲವು ವೀಡಿಯೊಗಳಲ್ಲಿ ವಿರಾಟ್ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವುದು ಕಂಡುಬಂದರೆ, ಇನ್ನು ಕೆಲವು ವೀಡಿಯೊಗಳಲ್ಲಿ ಅವರು ಆರ್‌ಸಿಬಿ ಆಟಗಾರರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿರುವುದು ಕಂಡುಬರುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾಕಿಸ್ತಾನದಲ್ಲೆಲ್ಲ ‘ಧುರಂಧರ್ 2’ನದ್ದೇ ಚರ್ಚೆ, ಬೇಡಿಕೆ ಏನು ಗೊತ್ತೆ?

ರಣ್ವೀರ್ ಸಿಂಗ್ (Ranveer Singh) ನಟಿಸಿರುವ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗಿ ಕೆಲವೇ ದಿನಗಳಾಗಿದ್ದು, ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭಾರತದ ಸೈನಿಕನೋರ್ವ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಉಗ್ರರ ಮಟ್ಟ ಹಾಕುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಕೆಲವು ನಿಜ ವ್ಯಕ್ತಿಗಳ ಕತೆಗಳನ್ನು ತೋರಿಸಲಾಗಿದೆ. ಅದರಲ್ಲೂ ಪಾಕಿಸ್ತಾನದ ರಹಾಮನ್ ಡಕೈತ್, ಎಸ್​​ಪಿ ಚೌಧರಿ ಅಸ್ಲಂ, ಇಲಿಯಾಸ್ ಕಶ್ಮೀರಿ ಇನ್ನೂ ಕೆಲವು ಅಕೀತ್ ಅಹ್ಮದ್ ಇನ್ನೂ ಕೆಲವು ನಿಜ ವ್ಯಕ್ತಿಗಳ ಪಾತ್ರಗಳನ್ನು ತೋರಿಸಲಾಗಿದೆ.

ಪಾಕಿಸ್ತಾನದಲ್ಲಿ ‘ಧುರಂಧರ್ 2’ ಸಿನಿಮಾ ಬ್ಯಾನ್ ಆಗಿದೆಯಾದರೂ ಪಾಕಿಸ್ತಾನದ ಜನ ಮುಗಿಬಿದ್ದು ‘ಧುರಂಧರ್ 2’ ಸಿನಿಮಾ ನೋಡುತ್ತಿದ್ದು, ಪ್ರಸ್ತುತ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಮಾರಾಟ ಆಗುತ್ತಿರುವ ಪೈರಸಿ ಸಿನಿಮಾ ಎಂದರೆ ಅದು ‘ಧುರಂಧರ್’ ಮತ್ತು ‘ಧುರಂಧರ್ 2’ ಆಗಿದೆ. ಸಾಮಾನ್ಯ ಜನರು ಮಾತ್ರವಲ್ಲ, ರಾಜಕಾರಣಿಗಳು ಸಹ ‘ಧುರಂಧರ್’ ಸಿನಿಮಾದ ಪೈರಸಿ ಕಾಪಿಗಳನ್ನು ನೋಡುತ್ತಿದ್ದಾರೆ.

‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾನಲ್ಲಿ ಬಹಳ ಪ್ರಮುಖ ಪಾತ್ರವೊಂದಿದೆ. ಸಿನಿಮಾನಲ್ಲಿ ಪಾತ್ರದ ಹೆಸರು ಜಮೀಲ್ ಜಮಾಲಿ, ಆದರೆ ಈ ಪಾತ್ರ ಪಾಕಿಸ್ತಾನದ ರಾಜಕಾರಣಿ ನಬೀಲ್ ಗೊಬಾಲ್ ಅವರನ್ನು ಆಧರಿಸಿದ ಪಾತ್ರವಾಗಿದೆ. ನಬೀಲ್ ಗೊಬಾಲ್ ಹಲವು ಕಡೆ ‘ಧುರಂಧರ್’ ಸಿನಿಮಾ ಬಗ್ಗೆ ಸಂದರ್ಶನಗಳನ್ನು ನೀಡಿದ್ದು, ‘ನನ್ನ ಪಾತ್ರವನ್ನು ಹಾಸ್ಯ ಪಾತ್ರಧಾರಿಯಂತೆ ತೋರಿಸಲಾಗಿದೆ’ ಎಂದು ಗೋಳು ತೋಡಿಕೊಂಡಿದ್ದಾರೆ. ಜೊತೆಗೆ ತಮ್ಮ ಹಾಗೂ ರಹಮಾನ್ ಡಕೈತ್ ನಡುವಿದ್ದ ಗೆಳೆತನದ ಬಗ್ಗೆಯೂ ಮಾತನಾಡಿದ್ದಾರೆ.

ಇದನ್ನೂ ಓದಿ:‘ನಾನು ಮೋದಿಯ ಹೆಮ್ಮೆಯ ಅಂಧಭಕ್ತೆ’: ‘ಧುರಂಧರ್ 2’ ನೋಡಿ ಹೇಳಿಕೆ ನೀಡಿದ ನಟಿ ರೇಣು ದೇಸಾಯಿ

ನಬೀಲ್ ಗೊಬಾಲ್ ಮಾತ್ರವೇ ಅಲ್ಲದೆ, ಪಾಕಿಸ್ತಾನದ ಇನ್ನೂ ಕೆಲ ರಾಜಕಾರಣಿಗಳು ‘ಧುರಂಧರ್’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ತಮ್ಮದೇ ಆದ ಅಭಿಪ್ರಾಯಗಳನ್ನು ಸಿನಿಮಾ ಬಗ್ಗೆ ನೀಡಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಪಾಕಿಸ್ತಾನದ ರಾಜಕಾರಣಿ ನಬೀಲ್ ಗೊಬಾಲ್, ‘ನಾವು (ಪಾಕಿಸ್ತಾನ) ಸಹ ಇದೇ ರೀತಿಯಾದ ಸಿನಿಮಾ ಒಂದನ್ನು ಮಾಡಿ, ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಬೇಕು’ ಎಂದು ಹಾಸ್ಯಾಸ್ಪದ ಹೇಳಿಕೆಯನ್ನು ನೀಡಿದ್ದಾರೆ.

‘ಧುರಂಧರ್’ ಮತ್ತು ಈಗ ‘ಧುರಂಧರ್ 2’ ಸಿನಿಮಾದ ಹಾಡುಗಳಂತೂ ಪಾಕಿಸ್ತಾನದಲ್ಲಿ ಭಾರಿ ವೈರಲ್ ಆಗಿವೆ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಮದುವೆಗಳಲ್ಲಿಯೂ ‘ಧುರಂಧರ್’ ಸಿನಿಮಾದ ಹಾಡುಗಳನ್ನು ಹಾಕಲಾಗುತ್ತಿದೆ. ಪಾಕಿಸ್ತಾನದಲ್ಲಿ ಪೈರಸಿ ಸಿಡಿ ಕ್ಯಾಸೆಟ್ ಮಾರಾಟ ಮಾಡುವವರಿಗಂತೂ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದಿಂದ ಭಾರಿ ಲಾಭವಾಗಿದೆ. ಅಂಗಡಿಗಳ ಮುಂದೆ ‘ಧುರಂಧರ್’ ಸಿನಿಮಾದ ಪೋಸ್ಟರ್​​ಗಳನ್ನು ಹಾಕಿಕೊಳ್ಳುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಫ್ಲೆಕ್ಸ್​, ಸೋಷಿಯಲ್ ಮೀಡಿಯಾನಲ್ಲಿ ಮಂಡ್ಯ ಎಸ್ಪಿ ಶೋಭಾರಾಣಿ ಹವಾ: ಎಲ್ಲಾ ಗೊಂದಗಳಿಗೆ ತೆರೆ

ಮಂಡ್ಯ, (ಮಾರ್ಚ್ 22): ಯುಗಾದಿ ಹಬ್ಬದ ಶುಭಾಶಯ ಕೋರಿ ಮಂಡ್ಯ ನಗರದಾದ್ಯಂತ ಎಸ್ಪಿ ಶೋಭಾರಾಣಿ  (mandya sp dr shobharani) ಅವರ ಫ್ಲೆಕ್ಸ್‌ಗಳನ್ನು‌ (Ugadi Flex) ಹಾಕಲಾಗಿದ್ದು . ಇದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.  ಇದರ ಬೆನ್ನಲ್ಲೇ ಎಚ್ಚೆತ್ತ ಐಪಿಎಸ್​ ಶೋಭಾರಾಣಿ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯಿಸಿದ್ದು,  ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಫ್ಲೆಕ್ಸ್ ಹಾಕುವುದು ಸರಿಯಲ್ಲ ಎಂದಿದ್ದಾರೆ. ಈ ರೀತಿ ಮಾಡಬೇಡಿ ಎಂದು ತಮ್ಮ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಹಬ್ಬಗಳ ಹಿನ್ನೆಲೆಯಲ್ಲಿ ಎಸ್‌ಪಿ ಶೋಭಾರಾಣಿ ಅವರ ಫೋಟೋ ಬಳಸಿ ಶುಭಾಶಯ ಕೋರುವ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಈ ಕುರಿತು ನಿನ್ನೆಯಷ್ಟೇ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿ ಸಾರ್ವಜನಿಕರ ಚರ್ಚೆಗೆ ಕಾರಣವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಅವರು ತಕ್ಷಣವೇ ಪ್ರತಿಕ್ರಿಯಿಸಿದ್ದು, ನನ್ನ ಭಾವಚಿತ್ರವನ್ನ ಬಳಸಿಕೊಂಡು ಯಾವುದೇ ಫ್ಲೆಕ್ಸ್‌ ಬ್ಯಾನರ್ ಹಾಗೂ ಪ್ರಚಾರ ಕಾರ್ಯಗಳನ್ನು ಬಳಸಬೇಡಿ. ಕಾನೂನು ಮತ್ತು ವೈಯಕ್ತಿಕ ಗೌರವ ಕಾಪಡೋದು ನನ್ನ ಕರ್ತವ್ಯವಾಗಿದೆ. ದಯವಿಟ್ಟು ನನ್ನ ಮನವಿಯನ್ನ ಗಂಭೀರವಾಗಿ ಪರಿಗಣಿಸಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದಾರೆ.

ಮಂಡ್ಯ ರಸ್ತೆ ತುಂಬೆಲ್ಲಾ ಶೋಭರಾಣಿ ಬ್ಯಾನರ್

ಸಕ್ಕರೆ ನಾಡು ಮಂಡ್ಯದಲ್ಲಿ ರಾಜಕಾರಣಿಗಳ ನಡುವಿನ ಫ್ಲೆಕ್ಸ್ ವಾರ್ ಹೊಸದೇನಲ್ಲ. ಆದರೆ, ಈಗ ಮಂಡ್ಯದ ಬೀದಿಗಳಲ್ಲಿ ಜನಪ್ರತಿನಿಧಿಗಳಿಗಿಂತಲೂ ಹೆಚ್ಚಾಗಿ ಐಪಿಎಸ್ ಅಧಿಕಾರಿಯೊಬ್ಬರ ಭಾವಚಿತ್ರವಿರುವ ಫ್ಲೆಕ್ಸ್ ಫೋಟೋಗಳು ರಾರಾಜಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ವಿ.ಜೆ. ಶೋಭರಾಣಿ ಅವರ ಈ ‘ಫ್ಲೆಕ್ಸ್ ಪ್ರೀತಿ’ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿತ್ತು.

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಂಡ್ಯ ನಗರದ ಪ್ರಮುಖ ವೃತ್ತಗಳು, ಹೆದ್ದಾರಿ ಬದಿ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಎಸ್ಪಿಯವರಿಗೆ ಹಬ್ಬದ ಶುಭಾಶಯ ಕೋರಿ ಬೃಹತ್ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ವಿಶೇಷವೆಂದರೆ, ಈ ಫ್ಲೆಕ್ಸ್‌ಗಳಲ್ಲಿ ಕೇವಲ ಎಸ್ಪಿಯವರ ಫೋಟೋ ಮಾತ್ರವಲ್ಲದೆ, ಮಂಜುನಾಥ್ ಗೌಡ, ಶಿವಾನಂದ್ ಮತ್ತು ಪಾಪಣ್ಣ ಎಂಬುವವರ ಭಾವಚಿತ್ರಗಳೂ ಕಾಣಿಸಿಕೊಂಡಿವೆ. ಈ ಹಿಂದೆ ಶೋಭರಾಣಿ ಅವರು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲು ಬಂದಾಗಲೂ ಸಹ ಇದೇ ರೀತಿ ನಗರದಾದ್ಯಂತ ಫ್ಲೆಕ್ಸ್ ಹಾಕಿ ಸ್ವಾಗತ ಕೋರಲಾಗಿತ್ತು.

ನಾನಾ ರೀತಿಯ ಚರ್ಚೆ

ಶೋಭರಾಣಿಯವರ ಪ್ಲೆಕ್ಸ್, ಬ್ಯಾನರ್​ ಬಗ್ಗೆ ಜಿಲ್ಲೆಯಲ್ಲಿ ಪರ ವಿರೋಧದ ಚರ್ಚೆಗಳು ಆಗುತ್ತಿದ್ದು,
ಮಂಡ್ಯದ ಜನರು ಇಂತಹದ್ದನ್ನು ಈ ಹಿಂದೆ ನೋಡಿಲ್ಲ. ಅಧಿಕಾರಿಗಳು ಜನಸ್ನೇಹಿಯಾಗಿರುವುದು ಸ್ವಾಗತಾರ್ಹ, ಆದರೆ ಫ್ಲೆಕ್ಸ್ ಮೂಲಕ ಅತಿರಂಜಿತವಾಗಿ ಬಿಂಬಿಸಿಕೊಳ್ಳುವುದು ಬೇಕಿತ್ತೇ ಎಂಬುದು ಕೆಲವರ ವಾದ. ಸಾಮಾಜಿಕ ಜಾಲತಾಣಗಳಲ್ಲೂ ಈ ಫೋಟೋಗಳು ವೈರಲ್ ಆಗುತ್ತಿದ್ದು, ಅಧಿಕಾರಿಯೊಬ್ಬರು ಈ ಮಟ್ಟಿಗೆ ಫ್ಲೆಕ್ಸ್‌ಗಳಲ್ಲಿ ಕಾಣಿಸಿಕೊಳ್ಳುವುದು ರಾಜಕೀಯ ಪ್ರಭಾವದ ಮುನ್ಸೂಚನೆಯೇ ಎನ್ನುವ ಮಾತುಗಳು ಸಹ ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಅವರು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗಾಂಜಾ ಅಮಲು: ಸಿನಿಮೀಯ ರೀತಿಯಲ್ಲಿ ಅಪಹರಿಸಿ ಸ್ನೇಹಿತನನ್ನೇ ಕೊಂದು ಶವ ಸುಟ್ಟ ದುಷ್ಟರು

ಹಾಸನ, ಮಾರ್ಚ್​​ 22: ಗಾಂಜಾ ಅಮಲಿನಲ್ಲಿ ಸ್ನೇಹಿತನನ್ನೇ ಸ್ನೇಹಿತರ ಗ್ಯಾಂಗ್​​ ಕೊಂದು (kill) ಶವ ಸುಟ್ಟು ಹಾಕಿರುವಂತಹ ಘಟನೆ ಹಾಸನ ತಾಲೂಕಿನ ನಿಟ್ಟೂರು ಬಳಿಯ ಹಂಗರಹಳ್ಳಿಯ ತೋಟದ ಮನೆಯಲ್ಲಿ ನಡೆದಿದೆ. ಅರಸೀಕೆರೆ ತಾಲೂಕಿನ ಕಾಡಯ್ಯನಕೊಪ್ಪಲು ನಿವಾಸಿ ವರುಣ್(22) ಕೊಲೆಯಾದ ಯುವಕ. ಹಣಕಾಸು ವಿಚಾರದಲ್ಲಿ ಕರೆದೊಯ್ದು ಹಲ್ಲೆ ಮಾಡಲಾಗಿದೆ. ಶಶಾಂಕ್, ಸತೀಶ್, ಕಿರಣ್, ಅಭಿ, ಜೀವನ್, ಚೇತನ್, ಪೃಥ್ವಿಕ್​​, ಗಜ ಅಲಿಯಾಸ್ ಪ್ರಜ್ವಲ್ ವಿರುದ್ಧ ಕೊಲೆ ಆರೋಪದಡಿ ಮೊಕದ್ದಮೆ ದಾಖಲಾಗಿದೆ.

ನಡೆದಿದ್ದೇನು?

ಮಾರ್ಚ್ 10ರಿಂದ ವರುಣ್ ಕಾಣೆಯಾಗಿದ್ದಾನೆ. ಹಣಕಾಸು ವಿಚಾರದಲ್ಲಿ ವರುಣ್, ಸ್ನೇಹಿತ ಲೋಹಿತ್​ನನ್ನು ಸ್ನೇಹಿತರ ಗ್ಯಾಂಗ್ ಅಪಹರಿಸಿದೆ. ಹಂಗರಹಳ್ಳಿಯ ತೋಟದ ಮನೆಯಲ್ಲಿ ಇಬ್ಬರನ್ನು ಕೂಡಿಹಾಕಿದೆ. ಹಲ್ಲೆಗೊಳಗಾಗಿದ್ದ ಲೋಹಿತ್ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದಿದ್ದ. ವರುಣ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಂದಿದ್ದಾರೆ. ನಂತರ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಜೇನುಕಲ್ಲು ಸಿದ್ದೇಶ್ವರಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ವರುಣ್ ಶವವನ್ನು ಸಂಪೂರ್ಣ ಸುಟ್ಟು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಯುವಕನ ಬರ್ಬರ ಕೊಲೆ; ಹತ್ಯೆಯಾದವನ ಮೇಲಿವೆ 10ಕ್ಕೂ ಹೆಚ್ಚು ಕೇಸ್​ಗಳು!

ಇತ್ತ ಮಾರ್ಚ್ 15ರಂದು ಪುತ್ರ ನಾಪತ್ತೆ ಬಗ್ಗೆ ತಾಯಿ ಕಲಾವತಿ ದೂರು ನೀಡಿದ್ದು, ನಾಪತ್ತೆ ಕೇಸ್ ದಾಖಲಿಸಿಕೊಂಡು ಗಂಡಸಿ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು. ಪೊಲೀಸರ ತನಿಖೆ ವೇಳೆ ವರುಣ್ ಕೊಲೆಯಾಗಿರುವ ವಿಚಾರ ಇದೀಗ ಬಹಿರಂಗವಾಗಿದೆ.

ಇದನ್ನೂ ಓದಿ: ಸಮಾಜ ಕಲ್ಯಾಣ ಜಲಾಖೆ ಸಹಾಯಕ ನಿರ್ದೇಶಕ ಕಚೇರಿಯಲ್ಲೇ ನೇಣಿಗೆ ಶರಣು! ಸಾವಿಗೂ ಮುನ್ನ ಮಾಡಿದ ವೀಡಿಯೋದಲ್ಲೇನಿದೆ ಗೊತ್ತಾ?

ಸಿನಿಮೀಯ ರೀತಿಯಲ್ಲಿ ಅಪಹರಿಸಿ ಹಲ್ಲೆ ನಡೆಸಿ ಹತ್ಯೆಗೈದಿದ್ದ ಸ್ನೇಹಿತರ ವಿರುದ್ಧ ಮಾ.19ರಂದು ಹಾಸನ ತಾಲೂಕಿನ ದುದ್ದ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ವರುಣ್ ಅಪಹರಣ ಮತ್ತು ಹತ್ಯೆ ಪ್ರಕರಣದ ತನಿಖೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬರೋಬ್ಬರಿ 21 ಸಿಕ್ಸ್..! 69 ಎಸೆತಗಳಲ್ಲಿ 195 ರನ್ ಚಚ್ಚಿದ ಆರ್​ಸಿಬಿ ಕೈಬಿಟ್ಟ ಸ್ವಸ್ತಿಕ್ ಚಿಕಾರ

ಕೆಲವೇ ತಿಂಗಳ ಹಿಂದೆ ನಡೆದಿದ್ದ ಐಪಿಎಲ್ ಮಿನಿ ಹರಾಜಿನಲ್ಲಿ ಯಾವ ತಂಡಕ್ಕೂ ಬೇಡವಾಗಿದ್ದ ಯುವ ಬ್ಯಾಟ್ಸ್‌ಮನ್ ಇದೀಗ ದೇಶಿ ಲೀಗ್​ನಲ್ಲಿ ಸಿಡಿಲಬ್ಬರದ ಇನ್ನಿಂಗ್ಸ್ ಆಡುವ ಮೂಲಕ ತನ್ನನ್ನು ತಿರಸ್ಕರಿಸಿದ ಎಲ್ಲಾ ಫ್ರಾಂಚೈಸಿಗಳಿಗೆ ಸರಿಯಾದ ತಿರುಗೇಟು ನೀಡಿದ್ದಾನೆ. ಅದರಲ್ಲೂ ತಂಡಕ್ಕೆ ಸೇರಿಸಿಕೊಂಡು ಒಂದೇ ಒಂದು ಪಂದ್ಯದಲ್ಲಿ ಆಡಲು ಅವಕಾಶ ಕೊಡದ ಆರ್​ಸಿಬಿ ತಂಡಕ್ಕೆ ತೀವ್ರ ಮುಖಭಂಗವಾದ್ದಂತ್ತಾಗಿದೆ. ಅಷ್ಟಕ್ಕೂ ನಾವು ಇಷ್ಟೆಲ್ಲ ಮಾತನಾಡುವ ಆಟಗಾರ ಯಾರೆಂದರೆ, ಉತ್ತರ ಪ್ರದೇಶ ಮೂಲದ ಸ್ವಸ್ತಿಕ್ ಚಿಕಾರ.

ಯಾವ ಐಪಿಎಲ್ ತಂಡಕ್ಕೂ ಬೇಡವಾದ ಸ್ವಸ್ತಿಕ್ ಚಿಕಾರ ಪ್ರಸ್ತುತ ಅಯೋಧ್ಯಾ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಮಾರ್ಚ್ 22 ರಂದು ನಡೆದ ಪಂದ್ಯದಲ್ಲಿ ಗೋಮತಿ ಥಂಡರ್ ಪರ ಆಡುತ್ತಿರುವ ಸ್ವಸ್ತಿಕ್ ಚಿಕಾರ ಬಿರುಗಾಳಿಯ ಶತಕ ಸಿಡಿಸಿದರು. ಹಿಂಡನ್ ಟೈಟಾನ್ಸ್ ತಂಡದ ವಿರುದ್ಧ ನಡೆದ ಈ ಪಂದ್ಯದಲ್ಲಿ ಗೋಮತಿ ಥಂಡರ್ ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ತಂಡದ ಪರ ಬ್ಯಾಟಿಂಗ್‌ ಆರಂಭಿಸಿದ ಸ್ವಸ್ತಿಕ್ ಚಿಕಾರ ಮತ್ತು ಪ್ರಿಯಾಂಶು ಪಾಂಡೆ ಕೊನೆಯವರೆಗೂ ಅಜೇಯರಾಗಿ ಉಳಿದು ತಂಡವನ್ನು 307 ರನ್​ಗಳ ದಾಖಲೆಯ ಮೊತ್ತ ಪೇರಿಸಿದರು. ಈ ಇಬ್ಬರೂ ಶತಕದ ಇನ್ನಿಂಗ್ಸ್ ಕೂಡ ಆಡಿದರು.

21 ಸಿಕ್ಸರ್‌, 195 ರನ್ ಬಾರಿಸಿದ ಸ್ವಸ್ತಿಕ್

ಮೊದಲು ಬ್ಯಾಟಿಂಗ್ ಮಾಡಿದ ಗೋಮ್ತಿ ಥಂಡರ್ 20 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 307 ರನ್ ಗಳಿಸಿತು. ತಂಡದ ಪರ ಪ್ರಿಯಾಂಶು ಪಾಂಡೆ 54 ಎಸೆತಗಳಲ್ಲಿ 100 ರನ್ ಗಳಿಸಿ ಅಜೇಯರಾಗಿ ಉಳಿದರೆ, ಸ್ವಸ್ತಿಕ್ ಚಿಕಾರ 69 ಎಸೆತಗಳಲ್ಲಿ 195 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಸ್ವಸ್ತಿಕ್ ಚಿಕಾರ ಅವರ ಈ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 21 ಸಿಕ್ಸರ್‌ಗಳು ಸೇರಿದ್ದವು. ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ಟಿ20 ಕ್ರಿಕೆಟ್‌ನಲ್ಲಿ ಇದುವರೆಗೆ ಯಾವುದೇ ಬ್ಯಾಟ್ಸ್‌ಮನ್ 195 ರನ್ ಗಳಿಸಿರಲಿಲ್ಲ. ಆದರೀಗ ಆ ದಾಖಲೆ ಸ್ವಸ್ತಿಕ್ ಪಾಲಾಗಿದೆ.

308 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಹಿಂದನ್ ಟೈಟಾನ್ಸ್ ತಂಡ 180 ರನ್‌ ಕಲೆಹಾಕಲಷ್ಟೇ ಶಕ್ತವಾಗಿ ಪಂದ್ಯವನ್ನು 89 ರನ್‌ಗಳಿಂದ ಸೋತಿತು. ಸರಳವಾಗಿ ಹೇಳುವುದಾದರೆ, ಸ್ವಸ್ತಿಕ್ ಚಿಕಾರ ಕಲೆಹಾಕಿದ 195 ರನ್​ಗಳನ್ನು ಕಲೆಹಾಕುವುದಕ್ಕೂ ಹಿಂದನ್ ಟೈಟಾನ್ಸ್‌ ತಂಡಕ್ಕೆ ಸಾಧ್ಯವಾಗಲಿಲ್ಲ.

ವಾಸ್ತವವಾಗಿ 2025 ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸ್ವಸ್ತಿಕ್ ಚಿಕಾರ ಅವರನ್ನು ಮೂಲ ಬೆಲೆಗೆ ತಂಡಕ್ಕೆ ಸೇರಿಸಿಕೊಂಡಿತ್ತು. ಆದಾಗ್ಯೂ ಅವರಿಗೆ ಕಳೆದ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಗಲಿಲ್ಲ. ಆದಾಗ್ಯೂ ಸ್ವಸ್ತಿಕ್, ಸದಾ ವಿರಾಟ್ ಕೊಹ್ಲಿ ಹಿಂದೆ ಸುತ್ತುವುದರಿಂದಲೇ ಸಾಕಷ್ಟು ಸುದ್ದಿಯಾಗಿದ್ದರು. ಐಪಿಎಲ್ ಮುಗಿದ ಬಳಿಕ 2026 ರ ಮಿನಿ ಹರಾಜಿಗೂ ಮುನ್ನ ಚಿಕಾರ ಅವರನ್ನು ಆರ್​ಸಿಬಿ ಫ್ರಾಂಚೈಸಿ ಬಿಡುಗಡೆ ಮಾಡಿತ್ತು. ಇತ್ತ ಹರಾಜಿನಲ್ಲೂ ಯಾವ ತಂಡವೂ ಅವರನ್ನು ಖರೀದಿಸಿರಲಿಲ್ಲ.

Source link

ಅನಿಷ್ಟ ಪದ್ಧತಿ ಜೀವಂತ: ದೇವಸ್ಥಾನದ ಕಟ್ಟೆ ಮೇಲೆ ಕೂತಿದ್ದಕ್ಕೆ ಡಿ ದರ್ಜೆ ನೌಕರ ಸೇರಿ ಮರ್ತೋವನ ಮೇಲೆ ಹಲ್ಲೆ

ಯಾದಗಿರಿ, ಮಾರ್ಚ್​ 22: ಎಐ ತಂತ್ರಜ್ಞಾನದ ಜಮಾನಾದಲ್ಲಿ ಸಮಾಜದಲ್ಲಿ ಇನ್ನೂ ಅನಿಷ್ಟ ಪದ್ದತಿ ಜೀವಂತವಾಗಿದೆ. ಇತ್ತೀಚೆಗೆ ಯಾದಗಿರಿ ಜಿಲ್ಲೆಯಲ್ಲಿ ಸ್ವಸಮಾಜದವರೇ ತಮ್ಮದೇ ಸಮಾಜದ 12 ಕುಟುಂಬಗಳನ್ನ ಬಹಿಷ್ಕಾರ ಹಾಕಿದ್ದರು. ಇದೀಗ ಮತ್ತೊಂದು ಘಟನೆ ನಡೆದಿದೆ. ದೇವಸ್ಥಾನದ ಕಟ್ಟೆಯ ಮೇಲೆ ಕೂತಿದ್ದಕ್ಕೆ ಇಬ್ಬರು ದಲಿತ (Dalits) ಯುವಕರ ಮೇಲೆ ಸವರ್ಣೀಯರ ಗುಂಪಿನಿಂದ ಹಲ್ಲೆ ಮಾಡಿರುವಂತಹ ಘಟನೆ ಗುರುಮಠಕಲ್ ತಾಲೂಕಿನ ಯಂಪಾಡ ಗ್ರಾಮದಲ್ಲಿ ನಡೆದಿದೆ.

ನಡೆದಿದ್ದೇನು?

ಅನೀಲ್​ ಕುಮಾರ್ ಹಾಗೂ ಸಿದ್ದಲಿಂಗಪ್ಪ ಎನ್ನುವವರು ಸಂಬಂಧಿಕರ ಮಗನ ಜವಳ ಕಾರ್ಯಕ್ರಮಕ್ಕೆ ತೆರಳಿದ್ದರು. ಬಿಸಿಲು ಹಿನ್ನೆಲೆ ನೆರಳಿನ ಆಶ್ರಯಕ್ಕಾಗಿ ಗುರುಮಠಕಲ್ ತಾಲೂಕಿನ ಯಂಪಾಡ ಗ್ರಾಮದಲ್ಲಿರುವ ಆಂಜನೇಯ ದೇಗುಲ ಮುಂಭಾಗದ ಕಟ್ಟೆಯ ಮೇಲೆ ಕೂತಿದ್ದರು.

ಇದನ್ನೂ ಓದಿ: ಯಾದಗಿರಿಯಲ್ಲಿ ಅನಿಷ್ಟ ಪದ್ಧತಿ ಇನ್ನೂ ಜೀವಂತ: ಮಾತು ಕೇಳಲಿಲ್ಲವೆಂದು ದಲಿತರಿಗೆ ಬಹಿಷ್ಕಾರ ಹಾಕಿದ ಸವರ್ಣೀಯರು

ಈ ವೇಳೆ ದೇವಸ್ಥಾನದ ಅರ್ಚಕ ಅನಂತಪ್ಪನಿಂದ ಹಲ್ಲೆ ಹಾಗೂ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ಅರ್ಚಕ ಅನಂತಪ್ಪನ ಜೊತೆ ಸವರ್ಣೀಯರ ಗುಂಪು ಕೂಡ ಕೈಜೋಡಿಸಿದೆ. ಘಟನೆಯಲ್ಲಿ ಯುವಕರಿಗೆ ಗಾಯಗಳಾಗಿದ್ದು, ಯಾದಗಿರಿಯ ಯಿಮ್ಸ್ ಆಸ್ಪತ್ರೆಗೆ ದಾಖಲಿಸಿ ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ. ಹಲ್ಲೆಗೊಳಾದ ಅನೀಲ್​ ಕುಮಾರ್​​ ಸಮಾಜ ಕಲ್ಯಾಣ ಇಲಾಖೆ ಡಿ ದರ್ಜೆ ನೌಕರ. ಸದ್ಯ ದೇವಸ್ಥಾನದ ಅರ್ಚಕ ಅನಂತಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

12 ಕುಟುಂಬಗಳಿಗೆ ಬಹಿಷ್ಕಾರದ ಶಿಕ್ಷೆ

ಇನ್ನು ಇತ್ತೀಚೆಗೆ ಶಹಾಪುರ ನಗರದ ಸ್ವಕುಳಿಸಾಳಿ ಸಮುದಾಯದ 12 ಕುಟುಂಬಗಳು ತಮ್ಮದೇ ಸಮುದಾಯದ ಮುಖಂಡರಿಂದ ಕಳೆದ 8 ವರ್ಷಗಳಿಂದ ಸಾಮಾಜಿಕ ಬಹಿಷ್ಕಾರದ ಶಿಕ್ಷೆಯನ್ನ ಅನುಭವಿಸುತ್ತಿದ್ದರು. ಎಂಟು ವರ್ಷಗಳ ಹಿಂದೆ ಒಟ್ಟು 20 ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿತ್ತು. ಆದರೆ ಸಮುದಾಯದ ಮುಖಂಡರಿಗೆ ಹೆದರಿಕೊಂಡು 8 ಕುಟುಂಬಗಳು ದಂಡ ಕಟ್ಟುವ ಮೂಲಕ ತಪ್ಪಾಗಿದೆ ಅಂತ ಸಮುದಾಯಕ್ಕೆ ವಾಪಸ್ ಆಗಿದ್ದರು. ಆದರೆ ಇನ್ನು 12 ಕುಟುಂಬಗಳು ಯಾವುದೇ ತಪ್ಪು ಮಾಡದಿದ್ದರು ದಂಡ ಏಕೆ ಕಟ್ಟಬೇಕು ಅಂತ ಹೋರಾಟ ನಡೆಸಿದ್ದರು. ಬಹಿಷ್ಕಾರಕ್ಕೆ ಒಳಗಾದ 12 ಕುಟುಂಬದಲ್ಲಿ ಮದುವೆಯಾಗಬೇಕು ಅಂದರೆ ಹೆಣ್ಣು ಸಿಗ್ತಾಯಿಲ್ಲ. ಹೆಣ್ಣು ಕೊಡಲು ಬಂದವರಿಗೆ ಬಹಿಷ್ಕಾರಗೊಂಡಿದ್ದಾರೆ ಹೆಣ್ಣು ಕೊಡಬೇಡಿ ಅಂತ ಹೇಳಿ ವಾಪಸ್ ಕಳುಹಿಸುತ್ತಿದ್ದಾರಂತೆ.

ಇದನ್ನೂ ಓದಿ: ಕನಸ್ಸಿನಲ್ಲಿ ಕಾಡಿದ ಆಂಜನೇಯ್ಯ: ಕ್ರಿಶ್ಚಿಯನ್ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಘರ್ ವಾಪಸಿ ಮಾಡಿದ ಕುಟುಂಬ

ಜೀಹ್ವಶ್ವರ ದೇವರ ಹೆಸರಲ್ಲಿ ಕಲ್ಯಾಣ ಮಂಟಪ ಹಾಗೂ ಕಲ್ಯಾಣ ಮಂಟಪಕ್ಕೆ ಹೊಂದಿಕೊಂಡು 18 ವಾಣಿಜ್ಯ ಮಳಿಗೆಗಳಿವೆ. ಈ ಕಲ್ಯಾಣ ಮಂಟಪ ಹಾಗೂ ಮಳಿಗೆಗಳಿಂದ ವಾರ್ಷಿಕ ಲಕ್ಷಾಂತರ ರೂ. ಆದಾಯ ಬರುತ್ತದೆ. ಈ ಬಗ್ಗೆ ಸಮುದಾಯದ ಮುಖಂಡರಿಗೆ ಲೆಕ್ಕ ಕೇಳಿದ್ದಾರೆ. ಆ ಕಾರಣಕ್ಕೆ ಬಹಿಷ್ಕಾರ ಹಾಕಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

High Court Recruitment 2026: ಕರ್ನಾಟಕ ಹೈಕೋರ್ಟ್ ನೇಮಕಾತಿ; 70 ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವೃತ್ತಿಜೀವನವನ್ನು ಆರಂಭಿಸಲು ಬಯಸುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶವೊಂದು ಒದಗಿಬಂದಿದೆ. ಕರ್ನಾಟಕ ಹೈಕೋರ್ಟ್ ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ 70 ಸಹಾಯಕ ನ್ಯಾಯಾಲಯ ಕಾರ್ಯದರ್ಶಿ (Assistant Court Secretary) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏಪ್ರಿಲ್ 15ರೊಳಗೆ ಆನ್‌ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸುವುದು ಅಗತ್ಯ.

ಆಕರ್ಷಕ ವೇತನ ಶ್ರೇಣಿ:

ಈ ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 70 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಇದರಲ್ಲಿ ಆರ್‌ಪಿಸಿ (RPC) ವಿಭಾಗಕ್ಕೆ 59 ಹುದ್ದೆಗಳು ಹಾಗೂ ಕೆಕೆಆರ್ (KKR) ವಿಭಾಗಕ್ಕೆ 11 ಹುದ್ದೆಗಳನ್ನು ಮೀಸಲಿಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಅವಕಾಶವಿದ್ದು, ಮಾಸಿಕ ರೂ. 44,900 ರಿಂದ 1,42,400/- ವರೆಗಿನ ಆಕರ್ಷಕ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ (Law Degree), ವಿಜ್ಞಾನ, ಕಲೆ, ವಾಣಿಜ್ಯ, ಬಿಬಿಎ (BBA), ಕಂಪ್ಯೂಟರ್ ಅಪ್ಲಿಕೇಶನ್ ಅಥವಾ ಎಂಬಿಎ (MBA) ಪದವಿಯನ್ನು ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷಗಳಾಗಿರಬೇಕು ಮತ್ತು ಗರಿಷ್ಠ 40 ವರ್ಷ ಮೀರಿರಬಾರದು. ಸರ್ಕಾರದ ನಿಯಮಾನುಸಾರ ಎಸ್‌ಸಿ/ಎಸ್‌ಟಿ/ಪ್ರವರ್ಗ-I ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ (2A/2B/3A/3B) ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ.

ಇದನ್ನೂ ಓದಿ: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​​ನಲ್ಲಿ ಉದ್ಯೋಗವಕಾಶ; ಪದವೀಧರರಿಗೆ ಸುವರ್ಣವಕಾಶ

ಅರ್ಜಿ ಶುಲ್ಕದ ವಿವರ:

ಈ ನೇಮಕಾತಿಗೆ ಸಂಬಂಧಿಸಿದಂತೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಿಗೆ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗಿದೆ:

  • ಪೂರ್ವಭಾವಿ ಪರೀಕ್ಷೆ: ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ. 500/-, ಹಾಗೂ ಎಸ್‌ಸಿ/ಎಸ್‌ಟಿ/ಪ್ರವರ್ಗ-I/ಅಂಗವಿಕಲ ಅಭ್ಯರ್ಥಿಗಳಿಗೆ 250 ರೂ.
  • ಮುಖ್ಯ ಪರೀಕ್ಷೆ: ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ. 1,500/-, ಹಾಗೂ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ರೂ. 750/- ಇರಲಿದೆ. ಶುಲ್ಕವನ್ನು ಆನ್‌ಲೈನ್ ಮೋಡ್ ಮೂಲಕ ಪಾವತಿಸಬೇಕಾಗುತ್ತದೆ.

ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನ:

ಅಭ್ಯರ್ಥಿಗಳನ್ನು ಪೂರ್ವಭಾವಿ ಪರೀಕ್ಷೆ, ಮುಖ್ಯ ಲಿಖಿತ ಪರೀಕ್ಷೆ, ಸ್ಟೆನೋಗ್ರಫಿ ಪರೀಕ್ಷೆ ಹಾಗೂ ಅಂತಿಮವಾಗಿ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಸಕ್ತರು ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಧಿಸೂಚನೆಯನ್ನು ಪೂರ್ಣವಾಗಿ ಓದಿ ನಂತರ ಅಗತ್ಯ ದಾಖಲೆಗಳಾದ ಐಡಿ ಪ್ರೂಫ್, ಶೈಕ್ಷಣಿಕ ಪ್ರಮಾಣಪತ್ರಗಳು ಮತ್ತು ಭಾವಚಿತ್ರವನ್ನು ಅಪ್‌ಲೋಡ್ ಮಾಡುವ ಮೂಲಕ ಫಾರ್ಮ್ ಭರ್ತಿ ಮಾಡಬೇಕು.

ಹೆಚ್ಚಿನ ಮಾಹಿತಿಗಾಗಿ ಈ ಪಿಡಿಎಫ್​​ ಡೌನ್ ಲೋಡ್​ ಮಾಡಿಕೊಳ್ಳಿ:Karnataka-High-Court-Recruitment-2026-Apply-for-70-Assistant-Court-Secretary-Posts-Notification

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್

ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಚಿತ್ರಕಥೆಗಾರ ಸಲೀಂ ಖಾನ್ (Salim Khan) ಅವರು ಶನಿವಾರ (ಮಾರ್ಚ್ 21) ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈದ್ (Eid 2026) ಹಬ್ಬದ ಸಂದರ್ಭದಲ್ಲಿ ಮುಂಬೈನ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಎದುರು ಜಮಾಯಿಸಿದ್ದ ಅಭಿಮಾನಿಗಳಿಗೆ ಪುತ್ರ ಸಲ್ಮಾನ್ ಖಾನ್ (Salman Khan) ಅವರೊಂದಿಗೆ ಸೇರಿ ಅವರು ಶುಭಾಶಯ ಕೋರಿದರು. ತಂದೆ-ಮಗನ ಈ ಜೋಡಿಯ ಜೊತೆಗೆ ಸಲ್ಮಾನ್ ತಾಯಿ ಸಲ್ಮಾ ಖಾನ್, ಸಹೋದರರಾದ ಅರ್ಬಾಜ್ ಖಾನ್, ಸೊಹೈಲ್ ಖಾನ್, ಸಹೋದರಿಯರಾದ ಅಲ್ವಿರಾ ಖಾನ್ ಅಗ್ನಿಹೋತ್ರಿ ಮತ್ತು ಅರ್ಪಿತಾ ಖಾನ್ ಶರ್ಮಾ ಸೇರಿದಂತೆ ಕುಟುಂಬದ ಇತರ ಸದಸ್ಯರು ಉಪಸ್ಥಿತರಿದ್ದರು. ‘ಈದ್ ಮುಬಾರಕ್. ನಿಮ್ಮೆಲ್ಲರ ಹಾರೈಕೆಗಳಿಗೆ ಧನ್ಯವಾದಗಳು. ತಂದೆ ಮನೆಗೆ ಮರಳಿದ್ದಾರೆ, ಎಲ್ಲರಿಗೂ ಧನ್ಯವಾದಗಳು’ ಎಂಬ ಕ್ಯಾಪ್ಷನ್ ಜೊತೆ ಸಲ್ಮಾನ್ ಖಾನ್ ಅವರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರೀತಿಸಿದವನನ್ನು ನಂಬಿ ಮದುವೆಯಾಗಿ ಬಂದಿದ್ದ ಮಹಿಳೆ ನಾಲ್ಕೇ ತಿಂಗಳಲ್ಲಿ ಪತಿ ಕೈಯಿಂದಲೇ ಹೆಣವಾದ್ಲು

ಗುರುಗ್ರಾಮ, ಮಾರ್ಚ್​ 22: ಪ್ರೀತಿಸಿ ನಾಲ್ಕು ತಿಂಗಳ ಹಿಂದೆ ಮದುವೆ(Marriage)ಯಾಗಿದ್ದ ವ್ಯಕ್ತಿ ವರದಕ್ಷಿಣೆಗಾಗಿ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ರೇಡಿಯಾಲಜಿಸ್ಟ್ ಆಗಿರುವ ಅರುಣ್ ಶರ್ಮಾ ಮತ್ತು ನರ್ಸ್ ಆಗಿರುವ ಕಾಜಲ್ ಗುರುಗ್ರಾಮ್‌ನ ನರ್ಸಿಂಗ್ ಹೋಂನಲ್ಲಿ ಸಹೋದ್ಯೋಗಿಗಳಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು. ದೀರ್ಘಕಾಲ ಒಟ್ಟಿಗೆ ಕೆಲಸ ಮಾಡಿದ ಅವರ ಬಾಂಧವ್ಯ ಸ್ನೇಹವಾಗಿ ಬದಲಾಗಿತ್ತು ಮತ್ತು ಅವರಿಗೆ ತಿಳಿಯದೇ ಪ್ರೀತಿಯಲ್ಲಿ ಬಿದ್ದಿದ್ದರು.

ಅವರು ಒಂದು ಹೆಜ್ಜೆ ಮುಂದಿಟ್ಟು ಕಳೆದ ನವೆಂಬರ್‌ನಲ್ಲಿ ವಿವಾಹವಾದರು, ಒಟ್ಟಿಗೆ ಅವರ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಿದರು. ಆದರೆ, ಆ ಸಂಬಂಧವು ನಾಲ್ಕು ತಿಂಗಳೊಳಗೆ ದುರಂತ ಅಂತ್ಯಗೊಂಡಿತು, ಅರುಣ್ ವರದಕ್ಷಿಣೆಗಾಗಿ ಆಕೆಯ ಕೊಲೆಯನ್ನೇ ಮಾಡಿದ್ದಾನೆ.

ಮದುವೆಯಾದ ಕೂಡಲೇ, ಅರುಣ್ ತನ್ನ ಹೆಂಡತಿಯ ಮೇಲೆ ಕ್ಷುಲ್ಲಕ ವಿಷಯಗಳಿಗೆ ದೈಹಿಕವಾಗಿ ಹಲ್ಲೆ ಮಾಡಲು ಶುರುಮಾಡಿದ್ದ ಎಂದು ಕಾಜಲ್ ಸಹೋದರ ಹೇಳಿದ್ದಾರೆ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಮತ್ತು ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ಓದಿ: ಮದುವೆ ಮನೆಗಳೇ ಈತನ ಟಾರ್ಗೆಟ್: ಕುಖ್ಯಾತ ಕಳ್ಳ ಪಲ್ಸರ್ ಬಾಬು ಅರೆಸ್ಟ್; 42 ಲಕ್ಷ ರೂ.ಗೂ ಅಧಿಕ ಮೌಲ್ಯದ ಸ್ವತ್ತು ವಶ!

ಮಾರ್ಚ್ 4 ರ ಹೋಳಿ ಹಬ್ಬದಂದು, ದಂಪತಿ ಗುರುಗ್ರಾಮ್‌ನ ಗರ್ಹಿ ಹರ್ಸಾರು ಎಂಬಲ್ಲಿ ಕಾಜಲ್ ಅವರ ಕುಟುಂಬದೊಂದಿಗೆ ಸ್ವಲ್ಪ ದಿನ ಇರಬೇಕೆಂದು ಬಂದಿದ್ದರು. ಸುಮಾರು ಎರಡು ವಾರಗಳ ನಂತರ, ಮಾರ್ಚ್ 17 ರಂದು, ಅರುಣ್, ಕಾಜಲ್ ಅವರನ್ನು ದೈಹಿಕವಾಗಿ ಹಲ್ಲೆ ಮಾಡಿದ್ದ.
ಮರುದಿನ ಬೆಳಗ್ಗೆ, ಅರುಣ್ ಕಾಜಲ್ ಅವರನ್ನು ಕೆಳಗಡೆಗೆ ಕರೆದೊಯ್ದಿದ್ದ ಆಗ ಇಬ್ಬರ ನಡುವೆ ಜಗಳ ನಡೆದಿತ್ತು. ಸ್ವಲ್ಪ ಸಮಯದ ನಂತರ, ಕಾಜಲ್ ಪ್ರಜ್ಞೆ ತಪ್ಪಿ ಬಿದ್ದಿದ್ದಳು, ಮೂಗಿನಿಂದ ರಕ್ತಸ್ರಾವವಾಗುತ್ತಿತ್ತು, ಕುಟುಂಬವು ಕಾಜಲ್ ಳನ್ನು ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗೆ, ತುಂಬಾ ತಡವಾಗಿತ್ತು, ಆಕೆ ಕೊನೆಯುಸಿರೆಳೆದಿದ್ದಳು.

ಕಾಜಲ್ ಅವರ ಕುಟುಂಬವು ಶೌಚಾಲಯದಲ್ಲಿ ಸಿರಿಂಜ್ ಸಿಕ್ಕಿದೆ ಎಂದು ಹೇಳಿಕೊಂಡಿದ್ದು, ಅರುಣ್ ಆಕೆಗೆ ವಿಷ ಪೂರಿತ ಚುಚ್ಚುಮದ್ದು ನೀಡಿದ್ದಾನೆ ಎಂದು ಅವರು ಶಂಕಿಸಿದ್ದಾರೆ. ಪೊಲೀಸರ ವಿಚಾರಣೆಯ ಸಮಯದಲ್ಲಿ, ಅರುಣ್ ಕಾಜಲ್‌ಗೆ ವಿಷಕಾರಿ ಇಂಜೆಕ್ಷನ್ ನೀಡಿದ್ದರಿಂದ ಆಕೆಯ ಸಾವು ಸಂಭವಿಸಿದೆ ಎಂದು ಒಪ್ಪಿಕೊಂಡಿದ್ದಾನೆ.

ಉತ್ತರ ಪ್ರದೇಶದ ಗಾಜಿಯಾಬಾದ್‌ನ ಬೆಹ್ತಾ ಹಾಜಿಪುರದ ನಿವಾಸಿ ಅರುಣ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
ಅರುಣ್‌ನನ್ನು ರೈಲ್ವೆ ನಿಲ್ದಾಣದಿಂದ ಬಂಧಿಸಲಾಗಿದ್ದು, ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗುತ್ತದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version