ಉಪ್ಪಿನಂಶವಿರುವ ಆಹಾರ ಸೇವನೆಯನ್ನು ಕಡಿಮೆ ಮಾಡಿದ್ರೆ ನಮ್ಮ ಕಿಡ್ನಿ ಆರೋಗ್ಯವಾಗಿರುತ್ತಾ?

ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡ ಅಂದರೆ ಕಿಡ್ನಿಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದು ಇದನ್ನು ತಡೆಗಟ್ಟಲು ಕೆಲವು ಆರೋಗ್ಯಕರ ಸಲಹೆಗಳನ್ನು ಅನುಸರಿಸುವುದು ಬಹಳ ಅನಿವಾರ್ಯವಾಗಿದೆ. ಅದಕ್ಕಾಗಿಯೇ ಟಿವಿ9 ಕನ್ನಡ ಈ ವಿಷಯಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿ ಪಡೆಯಲು ಬೆಂಗಳೂರು ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಸಲಹೆಗಾರರಾದ ಡಾ. ಮೊಹಮ್ಮದ್ ಯೂಸುಫ್ (Dr. Mohammad Yousuff) ಅವರನ್ನು ಸಂಪರ್ಕಿಸಿತ್ತು. ಈ ವಿಷಯದ ಕುರಿತಂತೆ ಅವರು ಹೆಚ್ಚಿನ ಮಾಹಿತಿ ನೀಡಿದ್ದು, ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಯಾವ ರೀತಿಯ ದಿನಚರಿಯನ್ನು ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ. ಅವರು ಹೇಳುವ ಪ್ರಕಾರ, ನಾವು ಸೇವನೆ ಮಾಡುವ ಆಹಾರ ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಆಹಾರ ಸಮತೋಲಿತವಾಗಿದ್ದಲ್ಲಿ ಅದರಲ್ಲಿಯೂ ಉಪ್ಪಿನಂಶ ಕಡಿಮೆ ಇರುವ ಆಹಾರ ಸೇವನೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಇದೆಲ್ಲದರ ಜೊತೆಗೆ ವೈದ್ಯರ ಅನುಮತಿ ಇಲ್ಲದೆಯೇ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದಲ್ಲ ಇದು ಕಿಡ್ನಿಗೆ ಹಾನಿ ಮಾಡುವ ಸಾಧ್ಯತೆ ಇರುತ್ತದೆ ಎಂದು ಹೇಳಿದ್ದಾರೆ. ಈ ಬಗೆಗಿನ ಮತ್ತಷ್ಟು ಮಾಹಿತಿ ಪಡೆಯಲು ಈ ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Source link

‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಇಲ್ಲಿದೆ ಮೇಕಿಂಗ್ ವಿಡಿಯೋ – Kannada News | Ram Charan starrer Peddi movie Shivarajkumar making video released by team

ನಟ ಶಿವರಾಜ್​ಕುಮಾರ್ ಅವರಿಗೆ ಕನ್ನಡ ಮಾತ್ರವಲ್ಲದೇ ಪರಭಾಷೆಯ ಚಿತ್ರರಂಗದಲ್ಲೂ ಬೇಡಿಕೆ ಇದೆ. ರಾಮ್ ಚರಣ್ ಅಭಿನಯದ ‘ಪೆದ್ದಿ’ (Peddi) ಸಿನಿಮಾದಲ್ಲಿ ಶಿವಣ್ಣ ಒಂದು ಪವರ್​ಫುಲ್ ಪಾತ್ರ ಮಾಡಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾ ಜೂನ್ 4ರಂದು ಬಿಡುಗಡೆ ಆಗಲಿದೆ. ಈಗ ಈ ಸಿನಿಮಾದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ ಆಗಿದೆ. ಮೇ 18ರಂದು ‘ಪೆದ್ದಿ’ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ. ಶಿವರಾಜ್​ಕುಮಾರ್ (Shivarajkumar) ಅವರ ಪಾತ್ರ ಹೇಗಿರಲಿದೆ ಎಂಬುದರ ಝಲಕ್ ತೋರಿಸಲು ಈ ಸಣ್ಣ ವಿಡಿಯೋ ತುಣುಕನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಮೇಕಿಂಗ್ ವಿಡಿಯೋದಲ್ಲಿ ಶಿವರಾಜ್​ಕುಮಾರ್, ರಾಮ್ ಚರಣ್ (Ram Charan) ಅವರು ಜೊತೆಯಾಗಿ ಕೆಲಸ ಮಾಡುತ್ತಿರುವುದು ಕಾಣಿಸಿದೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಫುಲ್ ಬಾಡಿ ಚೆಕ್‌ಅಪ್ ಯಾವಾಗ ಮಾಡಿಸಬೇಕು? ಯಾರಿಗೆ ಇದರ ಅಗತ್ಯ ಇದೆ ಗೊತ್ತಾ? – Kannada News | Full Body Checkup Frequency: How Often Do You Really Need One?

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚಾಗುತ್ತಿರುವ ಹಿನ್ನೆಲೆ ಫುಲ್ ಬಾಡಿ ಚೆಕ್‌ಅಪ್‌ಗಳ (Full Body Checkup) ಮಹತ್ವವೂ ಹೆಚ್ಚುತ್ತಿದೆ. ವ್ಯಸ್ತ ಜೀವನಶೈಲಿ, ಅಸಮರ್ಪಕ ಆಹಾರ ಪದ್ಧತಿ, ಒತ್ತಡ ಮತ್ತು ವ್ಯಾಯಾಮದ ಕೊರತೆಯಿಂದ ಹಲವು ರೀತಿಯ ಕಾಯಿಲೆಗಳು ನಿಧಾನವಾಗಿ ದೇಹದಲ್ಲಿ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಹೆಚ್ಚಿನ ಲಕ್ಷಣಗಳು ಕಾಣಿಸದೇ ಇರುವ ಕಾರಣ, ಹಲವರು ಸಮಸ್ಯೆಯನ್ನು ಗಮನಿಸದೇ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ದೇಹದ ಒಳಗಿನ ಬದಲಾವಣೆಗಳನ್ನು ಬೇಗ ಪತ್ತೆಹಚ್ಚಿ ಚಿಕಿತ್ಸೆ ಆರಂಭಿಸಲು ಸಾಧ್ಯವಾಗುತ್ತದೆ. ಜೊತೆಗೆ ಗಂಭೀರ ಆರೋಗ್ಯ ಸಮಸ್ಯೆಗಳು ಬರದಂತೆ ತಡೆಯಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಯಾವ ವಯಸ್ಸಿನಲ್ಲಿ ಫುಲ್ ಬಾಡಿ ಚೆಕ್‌ಅಪ್ ಮಾಡಿಸಿಕೊಳ್ಳಬೇಕು, ಯಾರಿಗೆ ಇದರ ಅವಶ್ಯಕತೆ ಹೆಚ್ಚಾಗಿರುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ವಯಸ್ಸಿನಲ್ಲಿ ಫುಲ್ ಬಾಡಿ ಚೆಕ್‌ಅಪ್ ಆರಂಭಿಸಬೇಕು?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ಸಾಮಾನ್ಯವಾಗಿ 25 ರಿಂದ 30 ವರ್ಷದ ನಂತರ ದೇಹದಲ್ಲಿ ಕೆಲವು ಬದಲಾವಣೆಗಳು ಕಾಣಿಸಿಕೊಳ್ಳಲು ಆರಂಭವಾಗುತ್ತವೆ. ಈ ವಯಸ್ಸಿನಲ್ಲಿ ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು, ಕಡಿಮೆ ದೈಹಿಕ ಚಟುವಟಿಕೆ ಮತ್ತು ಮಾನಸಿಕ ಒತ್ತಡ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ 30 ವರ್ಷದ ನಂತರ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. 40 ವರ್ಷದ ನಂತರ ಡಯಾಬಿಟೀಸ್, ರಕ್ತದೊತ್ತಡ, ಹೃದಯ ಸಂಬಂಧಿತ ಸಮಸ್ಯೆಗಳು ಮತ್ತು ಥೈರಾಯ್ಡ್ ಸಮಸ್ಯೆಗಳ ಅಪಾಯ ಹೆಚ್ಚಾಗುವ ಕಾರಣ ನಿಯಮಿತ ಚೆಕ್‌ಅಪ್ ಇನ್ನಷ್ಟು ಅಗತ್ಯವಾಗುತ್ತದೆ.

ಯಾರಿಗೆ ಫುಲ್ ಬಾಡಿ ಚೆಕ್‌ಅಪ್ ಅಗತ್ಯ?

ಕುಟುಂಬದಲ್ಲಿ ಡಯಾಬಿಟೀಸ್, ಹೈ ಬಿಪಿ, ಹೃದಯ ಕಾಯಿಲೆ ಅಥವಾ ಥೈರಾಯ್ಡ್ ಸಮಸ್ಯೆಗಳ ಇತಿಹಾಸ ಇರುವವರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಧೂಮಪಾನ, ಮದ್ಯಪಾನ ಮಾಡುವವರು ಹಾಗೂ ಹೆಚ್ಚು ಒತ್ತಡದ ಜೀವನಶೈಲಿ ಹೊಂದಿರುವವರಿಗೂ ಫುಲ್ ಬಾಡಿ ಚೆಕ್‌ಅಪ್ ಅಗತ್ಯವಾಗಿದೆ. ಇದರ ಜೊತೆಗೆ ಅತಿಯಾದ ತೂಕ, ಅಸಮತೋಲನ ಆಹಾರ ಮತ್ತು ವ್ಯಾಯಾಮದ ಕೊರತೆ ಇರುವವರು ಕೂಡ ಸಮಯಕ್ಕೊಮ್ಮೆ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು ಎಂದು ವೈದ್ಯರು ತಿಳಿಸಿದ್ದಾರೆ.

ಯಾವ ಲಕ್ಷಣಗಳು ಕಂಡುಬಂದರೆ ತಕ್ಷಣ ಪರೀಕ್ಷೆ ಮಾಡಿಸಬೇಕು?

ನಿರಂತರ ದೌರ್ಬಲ್ಯ, ತೂಕ ಏಕಾಏಕಿ ಕಡಿಮೆಯಾಗುವುದು ಅಥವಾ ಹೆಚ್ಚಾಗುವುದು, ಪದೇಪದೇ ತಲೆನೋವು, ನಿದ್ರೆ ಸಮಸ್ಯೆ, ಉಸಿರಾಟ ತೊಂದರೆ ಅಥವಾ ದೇಹದಲ್ಲಿ ಅಸಹಜ ಬದಲಾವಣೆಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡಬಾರದು. ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುವುದು, ಹಸಿವು ಕಡಿಮೆಯಾಗುವುದು ಅಥವಾ ದೇಹದಲ್ಲಿ ಶಕ್ತಿ ಕೊರತೆ ಕಂಡುಬಂದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಫುಲ್ ಬಾಡಿ ಚೆಕ್‌ಅಪ್ ಮಾಡಿಸಿಕೊಳ್ಳುವುದು ಅಗತ್ಯ ಎಂದು ತಜ್ಞರು ಹೇಳುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಈ ನಿಯಮವನ್ನು ಪಾಲಿಸಿದರೆ ಜೀವನದಲ್ಲಿ ಸಂತೋಷ, ಶಾಂತಿ ಸದಾ ಕಾಲ ಇರುತ್ತದೆ – Kannada News | Chanakya Niti: Follow these tips from Chanakya to make your life peaceful and happy

ಶಾಂತಿ, ಸಂತೋಷ (Happiness), ನೆಮ್ಮದಿ ಎನ್ನುವಂತಹದ್ದು ಹೊರಗಿನಿಂದ ಬರುವಂತಹದ್ದಲ್ಲ, ಅದನ್ನು ನಮ್ಮೊಳಗೆ ನಾವು ಕಂಡುಕೊಳ್ಳಬೇಕು. ಶಾಂತಿ ಮತ್ತು ನೆಮ್ಮದಿಯನ್ನು ದುಡ್ಡಿನಿಂದಲೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ಇದಲ್ಲದೆ ಜೀವನದಲ್ಲಿ ಮಾನಸಿಕ ನೆಮ್ಮದಿ, ಶಾಂತಿ ಇಲ್ಲ ಎಂದಾದರೆ ಬಾಳು ಕೂಡ ವ್ಯರ್ಥ. ಹೀಗಿರುವಾಗ ಸಂಘರ್ಷ, ಅನಗತ್ಯ ಮನಸ್ತಾಪಗಳನ್ನು ನಿವಾರಿಸಲು ಮತ್ತು ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಸದಾ ಕಾಲ ಇರುವಂತೆ ಮಾಡಲು ಸಲಹೆಗಳನ್ನು ನೀಡಿದ್ದಾರೆ. ನಿಮ್ಮ ಜೀವನವೂ ಸಂತೋಷದಿಂದ ಕೂಡಿರಲು  ಚಾಣಕ್ಯರ ಈ ಸಲಹೆಗಳನ್ನು ತಪ್ಪದೇ ಪಾಲಿಸಿ.

ಜೀವನದಲ್ಲಿ ಶಾಂತಿ, ನೆಮ್ಮದಿ ಕಂಡುಕೊಳ್ಳಲು ಏನು ಮಾಡಬೇಕು?

ಸಿಹಿ ಮಾತುಗಳನ್ನಾಡಿ: ಆಚಾರ್ಯ ಚಾಣಕ್ಯ ಹೇಳುವಂತೆ ವ್ಯಕ್ತಿಯ ಭಾಷೆ ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ತಮ್ಮ ಪ್ರೀತಿಪಾತ್ರರೊಂದಿಗೆ ಪ್ರೀತಿಯಿಂದ ಮತ್ತು ಗೌರವದಿಂದ ಮಾತನಾಡುವ ವ್ಯಕ್ತಿಗೆ ಎಂದಿಗೂ  ಯಾರೊಂದಿಗೂ ಮನಸ್ತಾಪಗಳಿರುವುದಿಲ್ಲ. ಅದೇ ವ್ಯಕ್ತಿಯ ಕಠಿಣ ಮಾತುಗಳು ಶಾಂತಿ, ನೆಮ್ಮದಿಯನ್ನು ಹಾಳು ಮಾಡಬಹುದು, ಸಂಬಂಧಗಳಲ್ಲಿಯೂ ಬಿರುಕುಗಳನ್ನು ಉಂಟುಮಾಡಬಹುದು. ಆದ್ದರಿಂದ, ಯಾವಗಲೂ ಒಳ್ಳೆಯ ಮಾತುಗಳನ್ನಾಡಿ.

ಹಿರಿಯರಿಗೆ ಗೌರವ ಕೊಡಿ: ಚಾಣಕ್ಯ ನೀತಿಯ ಪ್ರಕಾರ, ಹಿರಿಯರನ್ನು ಗೌರವಿಸುವ ಮತ್ತು ಅವರ ಸಲಹೆಯನ್ನು ಪಾಲಿಸುವ ಮನೆಗಳಲ್ಲಿ ಸಂತೋಷವು ಸದಾ ಕಾಲ ನೆಲೆಸುತ್ತದೆ. ಹಿರಿಯರ ಅನುಭವವು ಕುಟುಂಬಕ್ಕೆ ರಕ್ಷಣಾತ್ಮಕ ಕವಚವಾಗಿ ಕಾರ್ಯನಿರ್ವಹಿಸುತ್ತದೆ, ಹೀಗಿರುವಾಗ ಅವರ ಮಾತುಗಳನ್ನು ಪಾಲಿಸುವ ಮೂಲಕ ನೀವು ನೆಮ್ಮದಿಯ ಜೀವನವನ್ನು ನಡೆಸಬಹುದು.

ಸ್ವಚ್ಛತೆಯು ಬಗ್ಗೆ ಗಮನ ಇರಲಿ: ಆಚಾರ್ಯ ಚಾಣಕ್ಯರ ಪ್ರಕಾರ, ಸ್ವಚ್ಛತೆಯು ಮನಸ್ಸಿನ ಶಾಂತಿ ಮತ್ತು ಸಂಪತ್ತಿನ ದೇವತೆ ಲಕ್ಷ್ಮಿಗೆ ನೇರವಾಗಿ ಸಂಬಂಧಿಸಿದೆ. ಚಾಣಕ್ಯನ ಪ್ರಕಾರ, ಕೊಳಕು ರೋಗವನ್ನು ಆಹ್ವಾನಿಸುವುದಲ್ಲದೆ, ಮನೆಗೆ ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ. ಹಾಗಾಗಿ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡಿ. ಮನೆ ಕ್ಲೀನ್‌ ಆಗಿದ್ದರೆ ಮನಸ್ಸು ಕೂಡ ಶಾಂತಯುತವಾಗಿರುತ್ತದೆ.

ಇದನ್ನೂ ಓದಿ: ನಿಮ್ಮ ವೈಯಕ್ತಿಕ ವಿಚಾರಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು ಸರಿಯಲ್ಲ

ನಿಮ್ಮ ಕೋಪವನ್ನು ಯಾವಾಗಲೂ ನಿಯಂತ್ರಿಸಿ: ಶಾಸ್ತ್ರಗಳ ಪ್ರಕಾರ, ಕೋಪವು ವ್ಯಕ್ತಿಯ ದೊಡ್ಡ ಶತ್ರುವಾಗಿದ್ದು, ಅದು ಆತನ ಬುದ್ಧಿವಂತಿಕೆಯನ್ನು ನಾಶಪಡಿಸುತ್ತದೆ. ಆದ್ದರಿಂದ ಎಂತಹದ್ದೇ ಕಠಿಣ ಸಂದರ್ಭ ಎದುರಾದರೂ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಸಮತೋಲಿತ ಭಾವನೆಗಳು ಸಂತೋಷದ ಮನೆಯ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಯಾವುದರಲ್ಲೂ ಅತಿಯಾಸೆ ಬೇಡ:  ಸಂತೃಪ್ತಿಯೇ ಅತಿ ದೊಡ್ಡ ಸಂಪತ್ತು, ಯಾವುದರಲ್ಲೂ ಅತಿಯಾಸೆ ಇರಬಾರದು. ಚಾಣಕ್ಯರು ಹೇಳುವಂತೆ ಅತಿಯಾದ ದುರಾಸೆ ಮತ್ತು ಇತರರೊಂದಿಗೆ ನಮ್ಮನ್ನು ನಾವು  ಹೋಲಿಕೆ ಮಾಡಿಕೊಳ್ಳುವುದು ಅಶಾಂತಿ, ಅತೃಪ್ತಿ, ನೆಮ್ಮದಿ ಕೆಡಲು ಮೂಲ ಕಾರಣ. ಹಾಗಾಗಿ ಯಾವುದರ ಬಗ್ಗೆಯೂ ಅತಿಯಾಸೆ ಪಡದೆ ಇರುವುದರಲ್ಲಿ ತೃಪ್ತಿ ಪಡಿ, ಇದು ಖಂಡಿತವಾಗಿಯೂ ಖುಷಿಯನ್ನು ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಮತ್ತೆರೆಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ, ಯಾವುವು-ಏಕೆ? – Kannada News | Two More Assembly constituency By Elections in Karnataka, Here Is hiriyur And Dharwad Ticket aspirants details

ಬೆಂಗಳೂರು, (ಮೇ 14): ಕಳೆದು ತಿಂಗಳು ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ (Assembly By Elections) ಕಾಂಗ್ರೆಸ್ (Congress) ಗೆಲುವು ಸಾಧಿಸಿದೆ. ಹೌದು…ಕಾಂಗ್ರೆಸ್​​ ಶಾಸರಾಗಿದ್ದ ಎಚ್​​​ವೈ ಮೇಟಿ ನಿಧನದಿಂದ ಬಾಗಲಕೋಟೆ (Bagalkot) ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಇನ್ನೊಂದೆಡೆ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ದಾವಣಗೆರೆ ದಕ್ಷಿಣ (Davanagere South) ಕ್ಷೇತ್ರಕ್ಕೆ ಬೈ ಎಲೆಕ್ಷನ್ ನಡೆದಿದ್ದು, ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತೆರೆಡು ವಿಧಾನಸಭಾ ಕ್ಷೇತ್ರಗಳಿ ಉಪಚುನಾವಣೆ ಎದುರಾಗಿದೆ. ಹೌದು…ಧಾರವಾಡ ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಎದುರಾಗಿದ್ದು, ದಿನಾಂಕ ಘೋಷಣೆ ಮೊದಲೇ ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

  • ಕರ್ನಾಟಕದಲ್ಲಿ ಮತ್ತೆರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ
  • ಹಿರಿಯೂರು ಹಾಗೂ ಧಾನವಾದ ವಿಧಾನಸಭಾ ಕ್ಷೇತ್ರಗಳಿಗೆ ಬೈ ಎಲೆಕ್ಷನ್
  • ಡಿ ಸುಧಾಕರ್ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಖಾಲಿಯಾಗಿರುವ ಹಿರಿಯೂರು ವಿಧಾನಸಭಾ ಕ್ಷೇತ್ರ
  • ವಿನಯ್ ಕುಲಕರ್ಣಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರಿಂದ ಧಾರವಾಡ ಕ್ಷೇತ್ರ ಖಾಲಿ

ಸಚಿವ ಸುಧಾಕರ್ ನಿಧನದಿಂದ ಹಿರಿಯೂರು ಕ್ಷೇತ್ರ ಖಾಲಿ

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಚಿವ ಡಿ. ಸುಧಾಕರ್ ಅವರು ಮೊನ್ನೇ ಅಷ್ಟೇ ನಿಧನರಾಗಿದ್ದಾರೆ. ಇದರಿಂದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರ ಖಾಲಿಯಾಗಿದ್ದು, ಇದಕ್ಕೆ ಉಪಚುನಾವಣೆ ನಡೆಯಬೇಕಿದೆ. 2023ರಲ್ಲಿ ಕಾಂಗ್ರೆಸ್​​ನಿಂದ ಸ್ಪರ್ಧಿಸಿ ಗೆದ್ದಿದ್ದ ಸುಧಾಕರ್ ಅವರು ಸಿದ್ದರಾಮ್ಯಯ ಸಂಪುಟದಲ್ಲಿ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದರು. ಆದ್ರೆ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸುಧಾಕರ್ ಅವರು ಚಿಕಿತ್ಸೆ ಫಲಿಸದೇ ಮೇ 11ರಂದು ನಿಧನರಾಗಿದ್ದು, ಇದೀಗ ಹಿರಿಯೂರ ಕ್ಷೇತ್ರ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅನರ್ಹ: ವಿಧಾನಸಭೆ ಕಾರ್ಯದರ್ಶಿ ಮಹತ್ವದ ಆದೇಶ

ಶಾಸಕ ಸ್ಥಾನ ಕಳೆದುಕೊಂಡ ವಿನಯ್ ಕುಲಕರ್ಣಿ

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್​ ಶಾಸಕ ವಿನಯ ಕುಲಕರ್ಣಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಇದರಿಂದ ಅವರು ಶಾಸಕ ಸ್ಥಾನ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರವಾಡ ವಿಧಾನಸಭಾ ಕ್ಷೇತ್ರ ತೆರವಾಗಿದ್ದು, ಇದಕ್ಕೆ ಉಪಚುನಾವಣೆ ನಡೆಯಬೇಕಿದೆ. ಇದರಿಂದ ಧಾರವಾಡ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ವಿಚಾರವಾಗಿ ಅನೇಕ ಆಕಾಂಕ್ಷಿಗಳು ಎದ್ದು ಕೂತಿದ್ದಾರೆ. ಅದರಲ್ಲೂ ಬಿಜೆಪಿಯಲ್ಲಿಯೇ ಹಲವಾರು ಆಕಾಂಕ್ಷಿಗಳು ಉಪ ಚುನಾವಣೆಗಾಗಿ ಸಿದ್ಧತೆ ಆರಂಭಿಸಿದ್ದಾರೆ.

ಧಾರವಾಡ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಯಾರಿಗೆ?

ಬಿಜೆಪಿ ಮುಖಂಡ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ವಿನಯ ಕುಲಕರ್ಣಿ ಶಾಸಕ ಸ್ಥಾನದಿಂದ ಅನರ್ಹಗೊಳ್ಳುತ್ತಿದ್ದಂತೆಯೇ ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯ ಸುದ್ದಿ ಕಾವು ಪಡೆದುಕೊಂಡಿದೆ. ಕಾಂಗ್ರೆಸ್- ಬಿಜೆಪಿ ಅಭ್ಯರ್ಥಿ ಯಾರೆಂಬ ಚರ್ಚೆಗಳು ಜೋರಾಗಿವೆ. ಇನ್ನೊಂದೆಡೆ ಉಭಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ವರಿಷ್ಠರ ಗಮನ ಸೆಳೆಯುವ ಪ್ರಯತ್ನದಲ್ಲಿದ್ದರೆ ಮತ್ತೊಂದೆಡೆ ಇಂಥವರೇ ಅಭ್ಯರ್ಥಿಯಾಗಲಿ ಎಂಬ ಅಭಿಪ್ರಾಯವನ್ನು ಕಾರ್ಯಕರ್ತರ ಪಡೆ ವ್ಯಕ್ತಪಡಿಸುತ್ತಿದೆ.

ಕಾಂಗ್ರೆಸ್ ಪಕ್ಷವು ವಿನಯ ಕುಲಕರ್ಣಿ ಅವರಿಗೆ ಹೈಕೋರ್ಟ್ನಲ್ಲಿ ತಡೆಯಾಜ್ಞೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದೆ. ಹೀಗಾಗಿ ಚುನಾವಣೆ ತಯಾರಿ ಚರ್ಚೆ ಅಲ್ಲಿ ಅಷ್ಟೊಂದು ಬಿರುಸುಗೊಂಡಿಲ್ಲ. ಇನ್ನು ಅಭ್ಯರ್ಥಿ ಬಗ್ಗೆ ಚರ್ಚೆಗಳಿಲ್ಲ. ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್, ಶಾಸಕ ಜನಾರ್ಧನ ರೆಡ್ಡಿ ಅವರಂತೆ ವಿನಯ ಕುಲಕರ್ಣಿ ಅವರಿಗೂ ಕೆಳಹಂತದ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ನಲ್ಲಿ ತಡೆಯಾಜ್ಞೆ ಸಿಗಲಿದೆ. ಹೀಗಾಗಿ ಉಪಚುನಾವಣೆ ಬಗ್ಗೆ ಹೆಚ್ಚು ಚರ್ಚೆ ಬೇಡ ಎಂಬ ಲೆಕ್ಕದಲ್ಲಿ ಕೈ ನಾಯಕರಿದ್ದಾರೆ. ಇದರ ಹೊರತಾಗಿಯೂ ಚುನಾವಣೆ ಎದುರಿಸುವುದು ಅನಿವಾರ್ಯವಾದಲ್ಲಿ ಯಾರಿಗೆ ಟಿಕೆಟ್ ಕೊಡಬಹುದು ಎಂಬ ಕುತೂಹಲವಂತೂ ಎಲ್ಲರಲ್ಲೂ ಇದೆ. ಸದ್ಯದ ಮಾಹಿತಿ ಪ್ರಕಾರ ಮಾಜಿ ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕೆಂಬ ಇಂಗಿತ ಕೆಲ ನಾಯಕರದ್ದಾಗಿದೆ. ಇದರ ಹೊರತಾಗಿ ವಿನಯ ಕುಟುಂಬಕ್ಕೆ ಟಿಕೆಟ್ ಬೇಡವೆಂಬ ಅಭಿಪ್ರಾಯ ಬಂದಲ್ಲಿ ಯಾರು ಸೂಕ್ತ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಸಿಗುತ್ತಿಲ್ಲ. ಸ್ಥಳೀಯ ಮಟ್ಟದಲ್ಲಿ ತವನಪ್ಪ ಅಷ್ಟಗಿ ಅವರ ಹೆಸರಿದೆಯಾದರೂ ಅವರು ಈಗಷ್ಟೆ ಪಕ್ಷಕ್ಕೆ ಬಂದವರು ಎಂಬ ಅಪಸ್ವರ ಏಳಬಹುದು. ಹೀಗಾಗಿ ಕೊನೆಯದಾಗಿ ವಿನಯ ಅವರ ಪತ್ನಿ ಶಿವಲೀಲಾ ಅವರ ಹೆಸರೇ ಅಂತಿಮವಾಗಬಹುದು.

ಬಿಜೆಪಿ ಟಿಕೆಟ್ ಯಾರಿಗೆ?

ಬಿಜೆಪಿ ವಲಯದಲ್ಲಿ ಮಾತ್ರ ಉಪಚುನಾವಣೆ ಪಕ್ಕಾ ಎಂಬ ಲೆಕ್ಕದಲ್ಲಿಯೇ ಮುಂದಡಿ ಇಟ್ಟಿದೆ. ಈಗಾಗಲೇ ಗ್ರಾಮೀಣ ಕ್ಷೇತ್ರದ 234 ಬೂತ್‌ಗಳ ಅಧ್ಯಕ್ಷರು, ಪ್ರಮುಖರ ಅಭ್ಯಾಸವರ್ಗವನ್ನು ಮುಗಿಸಿದ್ದು, ಉಪಚುನಾವಣೆ ಗೆಲ್ಲಲು ಏನೇನು ರಣತಂತ್ರ ಹೆಣೆಯಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುವ ಜತೆಗೆ ಅಭಿಪ್ರಾಯಗಳನ್ನೂ ಪಡೆಯುತ್ತಿದೆ. ಉಪಚುನಾವಣೆಗೆ ಬಿಜೆಪಿ ಹುರಿಯಾಳು ಯಾರು ಎಂಬುದರ ಮೇಲೆ ಈಗಾಗಲೇ ಪಕ್ಷದ ಆಂತರಿಕ ವಲಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆದಿವೆ. ಮಾಜಿ ಶಾಸಕ ಅಮೃತ ದೇಸಾಯಿ ಅವರಿಗೆ ಪುನಃ ಟಿಕೆಟ್ ಸಿಗಲಿದೆ ಎಂಬ ಲೆಕ್ಕಾಚಾರದಲ್ಲಿ ಹಲವರು ಇದ್ದಾರೆ. ಆದರೆ, ಇವರಿಗೆ ಪೈಪೋಟಿ ಎಂಬಂತೆ ಕೆಲವರು ತಮಗೂ ಒಂದು ಅವಕಾಶ ಕೊಡಿ ಎಂಬ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ. ಪ್ರಮುಖವಾಗಿ ಸಾಮಾಜಿಕ ಹೋರಾಟಗಾರ ಮಂಜುನಾಥ ಮಕ್ಕಳಗೇರಿ, ಮಾಜಿ ಶಾಸಕಿ ಸೀಮಾ ಮಸೂತಿ, ಮಾಜಿ ಮಹಾಪೌರ ಈರೇಶ ಅಂಚಟಗೇರಿ ಇವರಲ್ಲಿ ಒಬ್ಬರಿಗೆ ಟಿಕೆಟ್ ಸಿಗಬಹುದು ಎನ್ನಲಾಗುತ್ತಿದೆ.

ಈ ಮಧ್ಯೆ ಸವಿತಾ ಅಮರಶೆಟ್ಟಿಗೆ ಒಂದು ಅವಕಾಶ ಸಿಕ್ಕರೆ ಒಳಿತು ಎಂಬ ಮಾತುಗಳೊಂದಿಗೆ ಯೋಗೀಶಗೌಡ ಗೌಡರ ಪ್ರಕರಣದಲ್ಲಿ ಕಾನೂನು ಹೋರಾಟದ ನೇತೃತ್ವ ವಹಿಸಿದ್ದ ಬಸವರಾಜ ಕೊರವರ ಅಭ್ಯರ್ಥಿಯಾದರೆ ಉತ್ತಮ ಎಂಬ ಅಭಿಪ್ರಾಯಗಳೂ ಕೇಳಿ ಬರುತ್ತಿವೆ. ಅಚ್ಚರಿ ಎಂದರೆ ಆಕಾಂಕ್ಷಿಗಳೆಲ್ಲರೂ ತಮಗೆ ಟಿಕೆಟ್ ಸಿಕ್ಕರೆ ಗೆದ್ದು ಬರೋದು ಖಚಿತ ಅನ್ನೋ ಲೆಕ್ಕಾಚಾರದಲ್ಲಿದ್ದಾರೆ.

ಒಟ್ಟಿನಲ್ಲಿ ಖಾಲಿಯಾಗಿರುವ ಎರಡು ಕ್ಷೇತ್ರಗಳು ಕಾಂಗ್ರೆಸ್​​ ಪಾಲಿನವು. ಹೀಗಾಗಿ ಉಪಚುನಾವಣೆಯಲ್ಲಿ ಯಾರಿಗೆ ಒಲಿಯುತ್ತೆ ಜಯ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಯಾರೂ ನಿನ್ನನ್ನು ಗಮನಿಸಲಿಲ್ಲ’ ಎಂದು ಟ್ರೋಲ್ ಮಾಡಿದವರಿಗೆ ಆಲಿಯಾ ಭಟ್ ಖಡಕ್ ಉತ್ತರ – Kannada News | Alia Bhatt gives savage reply to Troll over Cannes 2026 red carpet look

ಬಾಲಿವುಡ್ ನಟಿ ಆಲಿಯಾ ಭಟ್ 2026ರ ಕಾನ್ ಚಲನಚಿತ್ರೋತ್ಸವದಲ್ಲಿ (Cannes Film Festival) ರೆಡ್ ಕಾರ್ಪೆಟ್ ಮೇಲೆ ಮಿಂಚಿದ್ದಾರೆ. ಅವರ ಫ್ಯಾಶನ್ ಆಯ್ಕೆಗಳು ಅಭಿಮಾನಿಗಳ ಮನಗೆದ್ದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅವರನ್ನು ಟ್ರೋಲ್ ಮಾಡಲು ಪ್ರಯತ್ನಿಸಿದ್ದಾರೆ. ಈ ಬಾರಿ ಅಂತಾರಾಷ್ಟ್ರೀಯ ಫೋಟೋಗ್ರಾಫರ್‌ಗಳು ಆಲಿಯಾರನ್ನು ನಿರ್ಲಕ್ಷಿಸಿದರು ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಈ ಟ್ರೋಲ್‌ಗಳಿಗೆ ಆಲಿಯಾ ಭಟ್ (Alia Bhatt) ನೀಡಿರುವ ತಕ್ಕ ಉತ್ತರ ಈಗ ವೈರಲ್ ಆಗಿದೆ.

ಬುಧವಾರ (ಮೇ 13) ಆಲಿಯಾ ಭಟ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಈ ಪೋಸ್ಟ್‌ಗೆ ಕಮೆಂಟ್ ಮಾಡಿದ ನೆಟ್ಟಿಗನೊಬ್ಬ, ‘ಅಯ್ಯೋ ಪಾಪ, ಯಾರೂ ನಿನ್ನನ್ನು ಅಲ್ಲಿ ಗಮನಿಸಲಿಲ್ಲ’ ಎಂದು ಹೀಯಾಳಿಸಿ ನಗುವಿನ ಎಮೋಜಿ ಹಾಕಿದ್ದ. ಆಲಿಯಾ ಅವರ ಕಣ್ಣಿಗೆ ಈ ಕಮೆಂಟ್ ಬಿದ್ದಿದೆ. ಅದಕ್ಕೆ ಅವರು ಉತ್ತರಿಸಿದ್ದಾರೆ.

ಹೀಯಾಳಿಸಿದ್ದಕ್ಕೆ ಕಿಂಚಿತ್ತೂ ಕೋಪಗೊಳ್ಳದೇ, ಶಾಂತವಾಗಿ ಉತ್ತರಿಸಿದ ಆಲಿಯಾ, ‘ಯಾಕೆ ಅಯ್ಯೋ ಅಂತೀರಿ? ನೀವು ನನ್ನನ್ನು ಗಮನಿಸಿದಿರಲ್ಲ’ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಆಲಿಯಾರ ಈ ಸ್ಮಾರ್ಟ್ ಉತ್ತರಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ‘ಕ್ವೀನ್ ಎಂದರೆ ಹೀಗಿರಬೇಕು’, ‘ಮಾತು ಮತ್ತು ಲುಕ್ ಎರಡರಿಂದಲೂ ನೀವು ಉತ್ತರ ಕೊಟ್ಟಿದ್ದೀರಿ’ ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಆಲಿಯಾರನ್ನು ಟ್ರೋಲ್ ಮಾಡುತ್ತಿರುವುದನ್ನು ಕಂಡು ನಟ ಅಲಿ ಗೋನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಮ್ಮ ದೇಶದವರೇ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವಾಗ, ಅವರಿಗೆ ಬೆಂಬಲ ನೀಡುವ ಬದಲು ಕಾಲೆಳೆಯುವುದು ವಿಷಾದನೀಯ. ಆಲಿಯಾ ಭಟ್ ಇಂದು ಅನೇಕರು ಕನಸು ಕಾಣುವ ಮಟ್ಟಕ್ಕೆ ಬೆಳೆದಿದ್ದಾರೆ. ಭಾರತವನ್ನು ಜಾಗತಿಕ ವೇದಿಕೆಯಲ್ಲಿ ಹೆಮ್ಮೆಯಿಂದ ಪ್ರತಿನಿಧಿಸುತ್ತಿರುವವರನ್ನು ನಾವು ಸಂಭ್ರಮಿಸಬೇಕು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಆಲಿಯಾಗೆ ನೀತಾ ಅಂಬಾನಿಯಿಂದ ಅವಮಾನ ಆಗಿದ್ದು ನಿಜವೇ? ಇಲ್ಲಿದೆ ಅಸಲಿ ವಿಡಿಯೋ

2025ರಲ್ಲಿ ಮೊದಲ ಬಾರಿಗೆ ಕಾನ್ ಚಲನಚಿತ್ರೋತ್ಸವಕ್ಕೆ ಪಾದಾರ್ಪಣೆ ಮಾಡಿದ್ದ ಆಲಿಯಾ ಭಟ್, ಈ ವರ್ಷ ಎರಡನೇ ಬಾರಿಗೆ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಪ್ರಿಯಾಂಕಾ ಚೋಪ್ರಾ, ಕರಣ್ ಜೋಹರ್ ಮತ್ತು ಶೋಭಿತಾ ಧುಲಿಪಾಲ ಸೇರಿದಂತೆ ಹಲವು ತಾರೆಯರು ಆಲಿಯಾ ಅವರ ಫ್ಯಾಶನ್ ಸೆನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

PBKS vs MI: 7ನೇ ಕ್ಯಾಚ್ ಬಿಟ್ಟ ನಮನ್; ಹೀಗಾದ್ರೆ ಮುಂಬೈ ಗೆಲ್ಲುವುದಾದರೂ ಹೇಗೆ? – Kannada News | IPL 2026: Mumbai Indians’ Poor Fielding and Naman Dhir’s Dropped Catches Costly

ಐಪಿಎಲ್ 2026 (IPL 2026) ರಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ತಂಡಕ್ಕೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ತಂಡದಲ್ಲಿ ಘಟನಾಘಟಿ ಆಟಗಾರರೇ ಇದ್ದರೂ ಗೆಲುವು ಮಾತ್ರ ಮರಿಚಿಕೆಯಾಗಿಯೇ ಉಳಿಯಿತು. ಈ ಆವೃತ್ತಿಯಲ್ಲಿ ತಂಡದ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಕೂಡ ಕಳಪೆಯಾಗಿತ್ತು. ಇದರ ಜೊತೆಗೆ ಫಿಲ್ಡಿಂಗ್ ಕೂಡ ಅತ್ಯಂತ ಕಳಪೆಯಾಗಿತ್ತು. ಹೀಗಾಗಿಯೇ ಮುಂಬೈ ಇಂಡಿಯನ್ಸ್​ಗೆ ಗೆಲುವುಗಿಂತ ಸೋಲೆ ಹೆಚ್ಚು ಎದುರಾಯಿತು. ಇದಕ್ಕೆ ಉದಾಹರಣೆಯಾಗಿ ಇಂದು ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ 58 ನೇ ಪಂದ್ಯದಲ್ಲೂ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ, ಸ್ಲಿಪ್​ನಲ್ಲಿ ನಿಂತಿದ್ದ ನಮನ್ ಧೀರ್, ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಸರಳ ಕ್ಯಾಚ್ ಕೈಬಿಟ್ಟರು. ನಮನ್ ಧೀರ್ (Naman Dhir) ಇಡೀ ಆವೃತ್ತಿಯಲ್ಲಿ ಅತ್ಯಂತ ಕಳಪೆ ಫೀಲ್ಡಿಂಗ್‌ ಮೂಲಕ ಮುಂಬೈ ಇಂಡಿಯನ್ಸ್‌ ತಂಡಕ್ಕೆ ದೊಡ್ಡ ತಲೆನೋವಾಗಿದ್ದಾರೆ.

ಸುಲಭವಾದ ಕ್ಯಾಚ್ ಬಿಟ್ಟ ನಮನ್

ಪಂಜಾಬ್ ವಿರುದ್ಧದ ಪಂದ್ಯದ ಎರಡನೇ ಓವರ್‌ನಲ್ಲಿಯೇ ನಮನ್ ಧೀರ್ ಸುಲಭ ಕ್ಯಾಚ್ ಕೈಚೆಲ್ಲಿದರು. ಜಸ್ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ಪ್ರಭ್ಸಿಮ್ರಾನ್ ಸಿಂಗ್ ಸ್ಲಿಪ್‌ನಲ್ಲಿ ಸುಲಭ ಕ್ಯಾಚ್ ನೀಡಿದ್ದರು. ಆದರೆ ಅಲ್ಲಿ ನಿಂತಿದ್ದ ನಮನ್ ಧೀರ್ ಅದನ್ನು ಹಿಡಿಯಲು ವಿಫಲರಾದರು. ಇತ್ತ ಜಸ್ಪ್ರೀತ್ ಬುಮ್ರಾ ಕೂಡ ನಮನ್ ಅವರ ಕಳಪೆ ಫೀಲ್ಡಿಂಗ್​ನಿಂದ ನಿರಾಶೆಗೊಂಡಂತೆ ಕಂಡುಬಂದರು.  ಈ ಜೀವದಾನದ ಲಾಭ ಪಡೆದ ಪ್ರಭ್ಸಿಮ್ರಾನ್ 57 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.

ಈ ಆವೃತ್ತಿಯಲ್ಲಿ ನಮನ್ ಧೀರ್ ಒಟ್ಟು ಏಳು ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ. ಈ ಮೂಲಕ ಇಡೀ ಆವೃತ್ತಿಯಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈಚೆಲ್ಲಿದ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ನಮನ್ ಈ ಹಿಂದೆ ಹಲವಾರು ಪಂದ್ಯಗಳಲ್ಲಿ ಇದೇ ರೀತಿಯ ಕಳಪೆ ಫೀಲ್ಡಿಂಗ್ ಮಾಡಿ ತಂಡಕ್ಕೆ ಹೊರಯಾಗಿದ್ದಾರೆ. ನಮನ್ ಮಾತ್ರವಲ್ಲ, ಈ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್‌ನ ಫೀಲ್ಡಿಂಗ್ ಸರಾಸರಿಯಾಗಿತ್ತು. ಹಲವಾರು ಆಟಗಾರರು ಕ್ಯಾಚ್‌ಗಳನ್ನು ಬಿಡುವುದರ ಜೊತೆಗೆ ಹೆಚ್ಚುವರಿ ರನ್​ಗೆ ಅವಕಾಶ ಮಾಡಿಕೊಟ್ಟರು. ಇದು ಪಂದ್ಯದ ಫಲಿತಾಂಶಗಳ ಮೇಲೆ ನೇರವಾಗಿ ಪರಿಣಾಮ ಬೀರಿತು. ಪ್ಲೇಆಫ್ ಸ್ಪರ್ಧೆಯಿಂದ ಈಗಾಗಲೇ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್‌ಗೆ ತಂಡದ ಫೀಲ್ಡಿಂಗ್ ಸುಧಾರಿಸುವುದು ಈಗ ಪ್ರಮುಖ ಸವಾಲಾಗಿದೆ.

PBKS vs MI IPL 2026 Live Score: ಪಂಜಾಬ್ 4ನೇ ವಿಕೆಟ್ ಪತನ

ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನ

ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಇಲ್ಲಿಯವರೆಗೆ ಒಟ್ಟು 11 ಕ್ಯಾಚ್‌ಗಳನ್ನು ಕೈಬಿಟ್ಟಿದೆ. ಆಡಿದ 11 ಪಂದ್ಯಗಳಲ್ಲಿ ಕೇವಲ ಮೂರನ್ನು ಮಾತ್ರ ಗೆದ್ದಿದೆ, ಇದರ ಪರಿಣಾಮವಾಗಿ ಪ್ಲೇಆಫ್ ಸ್ಪರ್ಧೆಯಿಂದ ಬೇಗನೆ ಹೊರಬಿದ್ದಿದೆ. ಆದ್ದರಿಂದ, ಮುಂದಿನ ಸೀಸನ್​ಗೂ ಮೊದಲು ತಂಡವು ಬಲವಾದ ಪುನರಾಗಮನ ಮಾಡಲು ತಮ್ಮ ಫೀಲ್ಡಿಂಗ್‌ನಲ್ಲಿ ಗಮನಾರ್ಹವಾಗಿ ಕೆಲಸ ಮಾಡಬೇಕಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೆಪೋಟಿಸಂ ಇರೋದು ನಿಜ, ಅದರಿಂದಲೇ ನನಗೆ ಕೆಲಸ ಸಿಗುತ್ತಿದೆ: ಆಮಿರ್ ಖಾನ್ ಮಗನ ನೇರ ಮಾತು – Kannada News | Ek Din actor Junaid Khan open statement on Nepotism and Aamir Khan legacy

ಬಾಲಿವುಡ್‌ನಲ್ಲಿ ನೆಪೋಟಿಸಂ (Nepotism) ಎಂಬ ಪದದ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಲೇ ಇರುತ್ತದೆ. ನೆಪೋಟಿಸಂ ಇದೆ ಎಂಬುದನ್ನು ಹಲವು ಸ್ಟಾರ್ ಕಿಡ್​ಗಳು ಒಪ್ಪುವುದಿಲ್ಲ. ಆದರೆ, ಸೂಪರ್ ಸ್ಟಾರ್ ಆಮಿರ್ ಖಾನ್ (Aamir Khan) ಅವರ ಪುತ್ರ ಜುನೈದ್ ಖಾನ್ ಈ ಬಗ್ಗೆ ಯಾವುದೇ ಮುಚ್ಚುಮರೆಯಿಲ್ಲದೆ ಮಾತನಾಡಿದ್ದಾರೆ. ತಮಗೆ ಚಿತ್ರರಂಗದಲ್ಲಿ ಸಿಗುತ್ತಿರುವ ಅವಕಾಶಗಳ ಹಿಂದೆ ತಮ್ಮ ತಂದೆಯ ಹೆಸರಿದೆ ಎಂಬ ವಾಸ್ತವವನ್ನು ಜುನೈದ್ ಖಾನ್ (Junaid Khan) ಅವರು ಒಪ್ಪಿಕೊಂಡಿದ್ದಾರೆ. ನೆಪೋಟಿಸಂ ಬಗ್ಗೆ ಅವರು ನೇರವಾಗಿ ತಮ್ಮ ಅನಿಸಿಕೆ ತಿಳಿಸಿದ್ದಾರೆ.

ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ ಜುನೈದ್ ಖಾನ್, ‘ನೆಪೋಟಿಸಂ ಎಂಬ ಪದ ಕೇಳಿದರೆ ನನಗೆ ಕಿರಿಕಿರಿಯಾಗುವುದಿಲ್ಲ. ಏಕೆಂದರೆ ಅದು ನಿಜ. ನಾನು ಆಮಿರ್ ಖಾನ್ ಮಗ ಎನ್ನುವ ಕಾರಣಕ್ಕಾಗಿಯೇ ನನಗೆ ಸಾಕಷ್ಟು ಕೆಲಸಗಳು ಸಿಗುತ್ತಿವೆ’ ಎಂದು ಹೇಳಿದ್ದಾರೆ. ಸತತ ಸೋಲುಗಳ ನಂತರವೂ ಅವಕಾಶ ಸಿಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಹಾಸ್ಯಮಯವಾಗಿ ಉತ್ತರಿಸಿದ ಅವರು, “ಸತತ ಎರಡು ಫ್ಲಾಪ್‌ಗಳ ನಂತರವೂ ನನಗೆ ಕೆಲಸ ಸಿಗುತ್ತಿದೆ. ಮೊದಲು ಕೆಲಸ ಮಾಡಲು ಬಿಡಿ’ ಎಂದಿದ್ದಾರೆ.

ನಿರ್ಮಾಪಕರು ನಟರನ್ನು ಆಯ್ಕೆ ಮಾಡುವಾಗ ಕೇವಲ ಪ್ರತಿಭೆಯನ್ನಷ್ಟೇ ನೋಡುವುದಿಲ್ಲ, ಬದಲಾಗಿ ಆ ನಟನಿಗೆ ಮಾರುಕಟ್ಟೆಯಲ್ಲಿ ಎಷ್ಟು ಬೇಡಿಕೆಯಿದೆ ಎಂಬುದನ್ನು ನೋಡುತ್ತಾರೆ ಎಂದು ಜುನೈದ್ ಅಭಿಪ್ರಾಯಪಟ್ಟಿದ್ದಾರೆ. ‘ನಿರ್ಮಾಪಕರು ಸಿನಿಮಾ ಮಾರಾಟ ಮಾಡಬೇಕಿರುತ್ತದೆ. ಹಾಗಾಗಿ ಅವರು ಮಾರಾಟವಾಗುವ ಮುಖಗಳನ್ನೇ ಹುಡುಕುತ್ತಾರೆ. ಇಲ್ಲಿ ಪಾತ್ರಕ್ಕೆ ಯಾರು ಸೂಕ್ತ ಎನ್ನುವುದಕ್ಕಿಂತ, ಯಾರಿಂದ ಸಿನಿಮಾ ಚೆನ್ನಾಗಿ ಬಿಸಿನೆಸ್ ಮಾಡುತ್ತದೆ ಎಂಬುದು ಮುಖ್ಯವಾಗುತ್ತದೆ. ಇದು ಕೇವಲ ಇನ್ಸೈಡರ್ ಮತ್ತು ಔಟ್‌ಸೈಡರ್ ನಡುವಿನ ಹೋರಾಟವಲ್ಲ. ಬದಲಾಗಿ ಸರಿಯಾದ ಪಾತ್ರಕ್ಕೆ ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡುವುದು ಮುಖ್ಯ’ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ಮಗನ ಸಿನಿಮಾ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ ಆಮಿರ್ ಖಾನ್; ವಿಡಿಯೋ ವೈರಲ್

ಜುನೈದ್ ಖಾನ್ 2024ರಲ್ಲಿ ನೆಟ್‌ಫ್ಲಿಕ್ಸ್‌ನ ‘ಮಹಾರಾಜ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ಖುಷಿ ಕಪೂರ್ ಜೊತೆ ‘ಲವ್ಯಾಪ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದರಾದರೂ ಅದು ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಈ ವರ್ಷ ಮೇ 1ರಂದು ಬಿಡುಗಡೆಯಾದ ಅವರ ‘ಏಕ್ ದಿನ್’ ಚಿತ್ರ ಕೂಡ ಮಿಶ್ರ ಪ್ರತಿಕ್ರಿಯೆ ಪಡೆದಿದ್ದು, ಕಲೆಕ್ಷನ್ ವಿಚಾರದಲ್ಲಿ ಹಿನ್ನಡೆ ಅನುಭವಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಕ್ಕಳು ಪ್ರೊಸೆಸ್ಡ್ ಫುಡ್ ಇಷ್ಟಪಟ್ಟು ತಿನ್ನುತ್ತಾರೆ ಎಂದು ಕೊಡುವುದಕ್ಕಿಂತ ಮುಂಚೆ ಈ ವಿಷಯ ತಿಳಿದುಕೊಳ್ಳಿ – Kannada News | Can Packaged Foods Trigger Asthma? Link Between UPFs and Lung Health

ಇತ್ತೀಚಿನ ದಿನಗಳಲ್ಲಿ ಮಕ್ಕಳ ಆಹಾರ ಪದ್ಧತಿಯಲ್ಲಿ ಅಲ್ಟ್ರಾ ಪ್ರೊಸೆಸ್ಡ್ ಫುಡ್ (Ultra Processed Food) ಬಳಕೆ ಹೆಚ್ಚಾಗುತ್ತಿರುವುದು ಆರೋಗ್ಯ ತಜ್ಞರಲ್ಲಿ ಆತಂಕ ಮೂಡಿಸಿದೆ. ಚಿಪ್ಸ್, ಪ್ಯಾಕೆಟ್ ಸ್ನ್ಯಾಕ್ಸ್, ಇನ್‌ಸ್ಟಂಟ್ ನೂಡಲ್ಸ್, ಬರ್ಗರ್, ಪಿಜ್ಜಾ ಮತ್ತು ಸಿಹಿಯಾಗಿರುವ ಪ್ರೊಸೆಸ್ಡ್ ಆಹಾರಗಳನ್ನು ಹೆಚ್ಚೆಚ್ಚು ಸೇವಿಸುವ ಮಕ್ಕಳಲ್ಲಿ ಅಸ್ತಮಾ (Asthma) ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು ಎಂದು ಸಂಶೋಧನೆ ತಿಳಿಸಿದೆ. ಅಲ್ಟ್ರಾ ಪ್ರೊಸೆಸ್ಡ್ ಫುಡ್ ಏಕೆ ಅಪಾಯಕಾರಿ, ಇದಕ್ಕೂ ಅಸ್ತಮಾಗೆ ಇರುವ ಸಂಬಂಧವೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಅಲ್ಟ್ರಾ ಪ್ರೊಸೆಸ್ಡ್ ಫುಡ್ ಏಕೆ ಅಪಾಯಕಾರಿ?

ಸಂಶೋಧಕರ ಪ್ರಕಾರ, ಅಲ್ಟ್ರಾ ಪ್ರೊಸೆಸ್ಡ್ ಫುಡ್ ಕೇವಲ ಹೊಟ್ಟೆಯ ಆರೋಗ್ಯವನ್ನು ಹಾಳು ಮಾಡುವುದಷ್ಟೇ ಅಲ್ಲ, ಬದಲಾಗಿ ದೇಹದ ‘ಗಟ್ ಮೈಕ್ರೋಬಯೋಮ್’ ಮೇಲೂ ದುಷ್ಪರಿಣಾಮ ಬೀರುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಕುಂದುತ್ತದೆ ಮತ್ತು ದೇಹದಲ್ಲಿ ಆಕ್ಸಿಡೇಟಿವ್ ಸ್ಟ್ರೆಸ್ ಹೆಚ್ಚಾಗುತ್ತದೆ. ಇದರ ಪರಿಣಾಮ ಶ್ವಾಸಕೋಶಗಳ ಮೇಲೂ ಬಿದ್ದು ಅಸ್ತಮಾ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಇಂತಹ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳು, ಪ್ರಿಸರ್ವೇಟಿವ್ಸ್, ಕೃತಕ ಫ್ಲೇವರ್‌ಗಳು ಮತ್ತು ನಾನಾ ರೀತಿಯ ಪದಾರ್ಥಗಳನ್ನು ಬಳಸಲಾಗುತ್ತದೆ. ಇವು ಮಕ್ಕಳ ದೇಹದ ಬೆಳವಣಿಗೆಗೆ ಹಾನಿಕಾರಕವಾಗಬಹುದು. ಜೊತೆಗೆ ಹೊಟ್ಟೆ ಸಂಬಂಧಿತ ಸಮಸ್ಯೆಗಳು, ಜೀರ್ಣಕ್ರಿಯೆ ತೊಂದರೆ ಹಾಗೂ ದೀರ್ಘಾವಧಿಯಲ್ಲಿ ಕ್ಯಾನ್ಸರ್ ಅಪಾಯವೂ ಹೆಚ್ಚಾಗಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಇದನ್ನೂ ಓದಿ: ಅಸ್ತಮಾ ರೋಗಿಗಳೇ ಹವಾಮಾನ ಬದಲಾವಣೆಯಿಂದ ಸಮಸ್ಯೆಗಳಾಗುತ್ತಿದ್ಯಾ? ಹಾಗಿದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಿ

ಮಕ್ಕಳ ಆಹಾರದಲ್ಲಿ ಯಾವ ಬದಲಾವಣೆ ಅಗತ್ಯ?

ಆರೋಗ್ಯ ತಜ್ಞರ ಪ್ರಕಾರ ಮಕ್ಕಳಿಗೆ ತಾಜಾ ಹಣ್ಣು, ತರಕಾರಿ, ಮನೆಯಲ್ಲೇ ತಯಾರಿಸಿದ ಆಹಾರ, ಬೇಳೆ, ಹಾಲು ಮತ್ತು ಪ್ರೋಟೀನ್‌ಯುಕ್ತ ಆಹಾರ ನೀಡುವುದು ಉತ್ತಮ. ಜೊತೆಗೆ ಸಂಪೂರ್ಣ ಧಾನ್ಯಗಳನ್ನು ಬಳಸಿ ತಯಾರಿಸಿದ ಆಹಾರ ಹಾಗೂ ಕಡಿಮೆ ಸಕ್ಕರೆ ಇರುವ ಪದಾರ್ಥಗಳನ್ನು ಸೇವಿಸಲು ಉತ್ತೇಜಿಸಬೇಕು. ಪ್ಯಾಕೆಟ್ ಆಹಾರ ಮತ್ತು ಜಂಕ್ ಫುಡ್ ಬಳಕೆಯನ್ನು ಕಡಿಮೆ ಮಾಡುವುದು ಮಕ್ಕಳ ಆರೋಗ್ಯ ಕಾಪಾಡಲು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tv9 Kannada News Live: ಕರ್ನಾಟಕದಲ್ಲಿ ಹಿಜಾಬ್ ಕಿಚ್ಚು, ಮೇ 17ರವರೆಗೆ ಮಳೆ, 2 ದಿನ ವರ್ಕ್ ಫ್ರಂ ಹೋಂ ಘೋಷಿಸಿದ ಸರ್ಕಾರ – Kannada News | TV9 Kannada News Live: Karnataka Hijab Controversy, Rain Alert Till May 17, Delhi Govt Announces 2 Day Work From Home

ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada

ಬೆಂಗಳೂರು, ಮೇ 14: ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಹಿಜಾಬ್ ದಂಗಲ್ (hijab controversy) ಇದೀಗ ಕರ್ನಾಟಕದಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಶಾಲಾ, ಕಾಲೇಜುಗಳಲ್ಲಿ ಹಿಜಾಬ್​ ಧರಿಸಲು ಅವಕಾಶ ನೀಡಲಾಗಿದ್ದು, ಆ ಮೂಲಕ ಬಿಜೆಪಿ (bjp) ಕಾಲದ ಸಮವಸ್ತ್ರ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಇನ್ನು ಈ ಹಿಜಾಬ್ ನಿಷೇಧ ತೆರವು ಆದೇಶಕ್ಕೆ ಬಿಜೆಪಿ ನಾಯಕರು ನಿಗಿನಿಗಿ ಎನ್ನುತ್ತಿದ್ದರೆ, ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು ಪೋಷಕರ ವಲಯದಲ್ಲಿ ಕೂಡ ಈ ಬಗ್ಗೆ ವಿರೋಧ ಕೇಳಿ ಬಂದಿದೆ.

ರಾಜ್ಯದಲ್ಲಿ ತಣ್ಣಾಗಿದ್ದ ಹಿಜಾಬ್ ಕಿಚ್ಚು ಮತ್ತೆ ಸ್ಫೋಟಗೊಂಡಿದೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರವೇ ರಾಜ್ಯಕ್ಕೆ ಬೆಂಕಿ ಹಚ್ಚುತ್ತಿದೆ. ಶಾಲೆಗಳಲ್ಲಿ ಘರ್ಷಣೆಗಳಾದರೆ ಸರ್ಕಾರವೇ ಹೊಣೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಮರ್ಥನೆ

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರು ಸಿಎಂ ಸಿದ್ದರಾಮಯ್ಯ, ಇದು ಕೇವಲ ಹಿಜಾಬ್‌ಗೆ ಮಾತ್ರ ಸೀಮಿತವಲ್ಲ. ಜನಿವಾರ, ರುದ್ರಾಕ್ಷಿ, ಶಿವದಾರದಂತಹ ಸಾಂಪ್ರದಾಯಿಕ ಧಾರ್ಮಿಕ ಚಿಹ್ನೆಗಳನ್ನು ಧರಿಸಲು ಸಹ ಮುಕ್ತ ಅವಕಾಶವಿದೆ ಎಂದಿದ್ದಾರೆ. ಆ ಮೂಲಕ ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ 2022ರಲ್ಲಿ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿರುವ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ

ಭಾರತೀಯ ಚುನಾವಣಾ ಆಯೋಗವು ಕರ್ನಾಟಕ ಸೇರಿದಂತೆ ದೇಶದ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision – SIR) ಕಾರ್ಯಕ್ರಮದ ಮೂರನೇ ಹಂತವನ್ನು ಘೋಷಿಸಿದೆ. ಜನಗಣತಿಯ ಮನೆ ಪಟ್ಟಿಯ ಕಾರ್ಯದೊಂದಿಗೆ ಸಮನ್ವಯ ಸಾಧಿಸುವ ಉದ್ದೇಶದಿಂದ ಈ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ಈ ಹಂತದಲ್ಲಿ ಸುಮಾರು 3.94 ಲಕ್ಷ ಬೂತ್ ಮಟ್ಟದ ಅಧಿಕಾರಿಗಳು ಅಂದಾಜು 36.73 ಕೋಟಿ ಮತದಾರರ ಮನೆಬಾಗಿಲಿಗೆ ತೆರಳಿ ಮಾಹಿತಿ ಪರಿಶೀಲಿಸಲಿದ್ದಾರೆ. ಕರ್ನಾಟಕವೊಂದರಲ್ಲೇ ಸುಮಾರು 59,050 ಬಿಎಲ್‌ಒಗಳು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದು, ಮತದಾರರ ಪಟ್ಟಿಯ ಪಾರದರ್ಶಕತೆಗಾಗಿ ರಾಜಕೀಯ ಪಕ್ಷಗಳ ಏಜೆಂಟ್‌ಗಳೂ ಸಹಕರಿಸಲಿದ್ದಾರೆ. ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರವನ್ನು ಹೊರತುಪಡಿಸಿ ಇಡೀ ದೇಶವನ್ನು ಈ ಹಂತವು ಒಳಗೊಳ್ಳಲಿದೆ.

ದೆಹಲಿ ಸರ್ಕಾರದ ದಿಟ್ಟ ಹೆಜ್ಜೆ: ವಾರದಲ್ಲಿ 2 ದಿನ ‘ವರ್ಕ್ ಫ್ರಮ್ ಹೋಮ್’, ‘ನೋ ಕಾರ್ ಡೇ’ ಜಾರಿ

ಪರಿಸರ ಮಾಲಿನ್ಯ ನಿಯಂತ್ರಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಕರೆಗೆ ಓಗೊಟ್ಟಿರುವ ದೆಹಲಿ ಸರ್ಕಾರವು ಮಹತ್ವದ ಕ್ರಮಗಳನ್ನು ಘೋಷಿಸಿದೆ. ರಾಜಧಾನಿಯಲ್ಲಿ ವಾಹನ ದಟ್ಟಣೆ ಮತ್ತು ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ವಾರದಲ್ಲಿ ಎರಡು ದಿನಗಳ ಕಾಲ ‘ವರ್ಕ್ ಫ್ರಮ್ ಹೋಮ್’ ಸೌಲಭ್ಯವನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಇದರೊಂದಿಗೆ ಕಚೇರಿಗಳಲ್ಲಿ ಆನ್‌ಲೈನ್ ಮೀಟಿಂಗ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಲಾಗಿದೆ.

ಇನ್ನೂ ಓದಿ: Tv9 Kannada News Live: ಹೇಳಿದಂತೆ ಗುಡ್​​ನ್ಯೂಸ್​​ ಕೊಟ್ಟ ಡಿಕೆಶಿ, ಕೇರಳದಲ್ಲಿ ಕಾಂಗ್ರೆಸ್​​ಗೆ ಕಸಿವಿಸಿ; ಈ ಹೊತ್ತಿನ ಟಾಪ್​​ 5 ಸುದ್ದಿಗಳು ಇಲ್ಲಿವೆ

ಮಾಲಿನ್ಯದ ಮಟ್ಟವನ್ನು ತಗ್ಗಿಸುವ ಉದ್ದೇಶದಿಂದ ವಾರದಲ್ಲಿ ಒಂದು ದಿನವನ್ನು ‘ನೋ ಕಾರ್ ಡೇ’ ಎಂದು ಆಚರಿಸಲು ನಿರ್ಧರಿಸಲಾಗಿದ್ದು, ಅಂದು ಸಾರ್ವಜನಿಕರು ಮತ್ತು ಅಧಿಕಾರಿಗಳು ಖಾಸಗಿ ಕಾರುಗಳ ಬದಲಿಗೆ ಸಾರ್ವಜನಿಕ ಸಾರಿಗೆ ಅಥವಾ ಸೈಕಲ್ ಬಳಸುವಂತೆ ಉತ್ತೇಜಿಸಲಾಗುತ್ತಿದೆ. ಪ್ರಧಾನಿಯವರ ನನ್ನ ಭಾರತ, ನನ್ನ ಕೊಡುಗೆ ಅಭಿಯಾನದ ಭಾಗವಾಗಿ ಈ ಯೋಜನೆಗಳನ್ನು ರೂಪಿಸಲಾಗಿದೆ.

ಮೇ 15ರಿಂದ ಮೂರು ದಿನಗಳ ಕಾಲ ವರುಣನ ಆರ್ಭಟ ಸಾಧ್ಯತೆ

ಮೇ 15ರಿಂದ ಮೇ 17ರವರೆಗೆ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದಾಗಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯ ಅಬ್ಬರ ಹೆಚ್ಚಿರಲಿದ್ದು, ನಗರದ ಹಲವೆಡೆ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಸಾಧಾರಣದಿಂದ ಮಳೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ವರುಣನ ಅಬ್ಬರ: ವಿಮಾನಗಳನ್ನ ಇಳಿಯಲು ಬಿಡದೇ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ

ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿಯೂ ಮಳೆ ಮುನ್ಸೂಚನೆ ನೀಡಲಾಗಿದ್ದು, ತಗ್ಗು ಪ್ರದೇಶಗಳಲ್ಲಿರುವ ಜನರು ಹಾಗೂ ವಾಹನ ಸವಾರರು ಜಾಗರೂಕತೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಇನ್ನು ಮಳೆ ಜೊತೆಗೆ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು ತಿಳಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On – 8:21 pm, Thu, 14 May 26

Source link

Exit mobile version