ಮಲಯಾಳಂ ನಿರ್ದೇಶಕನ ಕಡೆ ವಾಲಿದ ಪ್ರಭಾಸ್, ಹೊಂಬಾಳೆಯದ್ದೇ ಪ್ಲ್ಯಾನ್

ಮಲಯಾಳಂ ನಿರ್ದೇಶಕನ ಕಡೆ ವಾಲಿದ ಪ್ರಭಾಸ್, ಹೊಂಬಾಳೆಯದ್ದೇ ಪ್ಲ್ಯಾನ್

ಪ್ರಭಾಸ್ (Prabhas), ಭಾರತದ ಟಾಪ್ ಪ್ಯಾನ್ ಇಂಡಿಯಾ ನಟ. ಆದರೆ ಇದೇ ಅವರಿಗೆ ಒಂದು ರೀತಿ ಶಾಪವೂ ಆದಂತಿದೆ. ಪ್ರಭಾಸ್​ ಸ್ವತಃ ರೊಮ್ಯಾಂಟಿಕ್, ಭಾವುಕ, ಸ್ಲೋ ಸಿನಿಮಾಗಳನ್ನು ಇಷ್ಟಪಡುವ ನಟ. ಆದರೆ ಸ್ಟಾರ್ ಆಗಿರುವ ಕಾರಣ ಅಭಿಮಾನಿಗಳಿಗೆ ಬೇಕಾದ ಮಾಸ್ ಮಸಾಲ ಪ್ಯಾಕೇಜ್ ಸಿನಿಮಾಗಳಲ್ಲಿ ಅವರು ನಟಿಸಲೇ ಬೇಕು. ಫೈಟ್ಸ್, ಡೈಲಾಗ್, ಹಾಡುಗಳು, ರೊಮ್ಯಾನ್ಸ್ ಇಲ್ಲದ ಪ್ರಭಾಸ್ ಸಿನಿಮಾಗಳನ್ನು ಚೆನ್ನಾಗಿದ್ದರೂ ಪ್ರೇಕ್ಷಕರು ಒಪ್ಪುವ ಸ್ಥಿತಿಯಲ್ಲಿಲ್ಲ. ‘ರಾಧೆ-ಶ್ಯಾಮ್’ ಇದಕ್ಕೆ ಉದಾಹರಣೆ. ಆದರೆ ಇದೀಗ ಪ್ರಭಾಸ್ ಮತ್ತೊಮ್ಮೆ ಧೈರ್ಯ ಮಾಡಿದ್ದು, ತಮ್ಮಿಷ್ಟದ ಕತೆಯುಳ್ಳ ಸಿನಿಮಾನಲ್ಲಿ ನಟಿಸುವ ಮನಸ್ಸು ಮಾಡಿದ್ದಾರೆ. ಇದರ ಹಿಂದಿರುವುದು ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್.

ಪ್ರಭಾಸ್ ಇತ್ತೀಚೆಗೆ ಮಲಯಾಳಂ ಸಿನಿಮಾ ನಿರ್ದೇಶಕರೊಬ್ಬರನ್ನು ಭೇಟಿ ಆಗಿದ್ದಾರೆ. ಇವರು ನಿರ್ದೇಶಿಸಿರುವುದು ಮೂರೇ ಸಿನಿಮಾ ಆದರೂ ಅದರಲ್ಲಿ ಎರಡು ಸಿನಿಮಾಗಳು ಇಡೀ ದೇಶದ ಸಿನಿಮಾ ಪ್ರೇಮಿಗಳ ಗಮನ ಸೆಳೆದಿವೆ. ಅದುವೇ ‘ಕಿಷ್ಕಿಂದ ಕಾಂಡಂ’ ಮತ್ತು ಕೆಲ ತಿಂಗಳ ಹಿಂದೆ ಬಿಡುಗಡೆ ಆದ ‘ಇಕೊ’. ಈ ಎರಡೂ ಅದ್ಭುತ ಸಿನಿಮಾಗಳ ನಿರ್ದೇಶಕರಾಗಿರುವ ದಿಂಜಿತ್ ಅಯ್ಯತಾನ್ ಅವರನ್ನು ಪ್ರಭಾಸ್ ಭೇಟಿ ಆಗಿದ್ದು, ಸಿನಿಮಾ ಕತೆಯೊಂದರ ಬಗ್ಗೆ ಇಬ್ಬರೂ ನಿರ್ದೇಶಕರು ಚರ್ಚೆ ನಡೆಸಿದ್ದಾರೆ.

ದಿಂಜಿತ್ ಅಯ್ಯತಾನ್ ಹಾಗೂ ಪ್ರಭಾಸ್ ಭೇಟಿಯ ಹಿಂದಿರುವುದು ಹೊಂಬಾಳೆ ಫಿಲಮ್ಸ್. ಈಗಾಗಲೇ ಪ್ರಭಾಸ್ ಜೊತೆಗೆ ಮೂರು ಸಿನಿಮಾಗಳ ಒಪ್ಪಂದ ಮಾಡಿಕೊಂಡಿರುವ ಹೊಂಬಾಳೆ ಫಿಲಮ್ಸ್, ದಿಂಜಿತ್ ಅಯ್ಯತಾನ್ ಅವರ ಬಳಿ ಇರುವ ಕತೆ ಪ್ರಭಾಸ್​​ಗೆ ಒಪ್ಪಬಹುದು ಎಂಬ ಯೋಜನೆಯೊಟ್ಟಿಗೆ ಇಬ್ಬರ ನಡುವೆ ಮೀಟಿಂಗ್ ಆಯೋಜನೆ ಮಾಡಿದೆ. ಈ ಸಭೆಯಿಂದ ಧನಾತ್ಮಕ ಫಲಿತಾಂಶ ಹೊರಬಿದ್ದಿದೆ ಎನ್ನಲಾಗುತ್ತಿದ್ದು, ಇದೇ ವರ್ಷದಲ್ಲಿ ಅಧಿಕೃತವಾಗಿ ಸಿನಿಮಾ ಘೋಷಣೆಯೂ ಆಗುವ ಸಾಧ್ಯತೆ ಇದೆ. ‘ಕಿಷ್ಕಿಂದ ಕಾಂಡಂ’, ‘ಇಕೊ’ ಅಂಥಹಾ ಮಾಸ್ಟರ್ ಕ್ಲಾಸ್ ಥ್ರಿಲ್ಲರ್ ಸಿನಿಮಾಗಳನ್ನು ನೀಡಿರುವ ದಿಂಜಿತ್ ಅಯ್ಯತಾನ್, ಪ್ರಭಾಸ್ ಅವರಿಗಾಗಿ ಅದೇ ಮಾದರಿಯ ಕತೆಯೊಂದನ್ನು ಹೆಣೆದಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ನೆಚ್ಚಿನ ನಿರ್ದೇಶಕನ ಬಗ್ಗೆ ಪ್ರಭಾಸ್ ಭರಪೂರ ಮೆಚ್ಚುಗೆ: ಯಾರು ಆ ನಿರ್ದೇಶಕ?

ಪ್ರಭಾಸ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಘು ಹನುಪುಡಿ ನಿರ್ದೇಶನದ ‘ಫೌಜಿ’ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಇತ್ತೀಚೆಗಷ್ಟೆ ಸಂದೀಪ್ ರೆಡ್ಡಿ ವಂಗಾ ಜೊತೆಗೆ ‘ಸ್ಪಿರಿಟ್’ ಸಿನಿಮಾದ ಚಿತ್ರೀಕರಣ ಶುರು ಮಾಡಿದ್ದಾರೆ. ಅತ್ತ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದ ಚಿತ್ರೀಕರಣವೂ ಪ್ರಾರಂಭವಾಗಿದೆ. ಇವುಗಳ ಬಳಿಕ ‘ಸಲಾರ್ 2’ ಶುರುವಾಗಲಿದೆ. ಅದಾದ ಬಳಿಕವಷ್ಟೆ ದಿಂಜಿತ್ ಅಯ್ಯತಾನ್ ಅವರೊಟ್ಟಿಗೆ ಸಿನಿಮಾ ಶುರುವಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮದುವೆ ಮಂಟಪದಲ್ಲೂ ಭಾರತದ ಟಿ20 ಕ್ರಿಕೆಟ್ ಗೆಲುವಿನ ಸಂಭ್ರಮ

ಉತ್ತರಕಾಶಿ, ಮಾರ್ಚ್ 10: ಉತ್ತರಕಾಶಿಯ ಮಂಡಿಯಾಸರಿ ಗ್ರಾಮದಲ್ಲಿ ನಡೆದ ಮದುವೆಯು ತನ್ನ ವಿಶೇಷತೆಗಳಿಂದ ಗಮನಸೆಳೆಯಿತು. ಮದುವೆಗೆ (Wedding) ಬಂದಿದ್ದ ಅತಿಥಿಗಳು ಮಂಟಪದಲ್ಲೇ ನ್ಯೂಜಿಲೆಂಡ್ ವಿರುದ್ಧ ಭಾರತದ T20 ಫೈನಲ್ ವಿಜಯವನ್ನು ಆಚರಿಸಿದರು. ಈ ಸಮಾರಂಭವು ಸಂತೋಷ, ದೇಶಭಕ್ತಿ ಮತ್ತು ಸಾಮಾಜಿಕ ಬದಲಾವಣೆಯನ್ನು ಪ್ರತಿಬಿಂಬಿಸಿತು. ಮದುವೆಗೆ ಬಂದಿದ್ದ ಅತಿಥಿಗಳು, ಕುಟುಂಬಸ್ಥರು ಮದುವೆಯನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಕ್ರಿಕೆಟ್ ಪಂದ್ಯವನ್ನೂ ಎಂಜಾಯ್ ಮಾಡಿದರು.

ಭಾನುವಾರ ನಡೆದ ಅಂಕಿತ್ ರಾವತ್ ಅವರ ವಿವಾಹವು ಕೇವಲ ಎರಡು ಕುಟುಂಬಗಳ ನಡುವಿನ ಸಂಭ್ರಮಕ್ಕಿಂತ ಹೆಚ್ಚಾಗಿತ್ತು. ಇದು ನ್ಯೂಜಿಲೆಂಡ್ ವಿರುದ್ಧದ T20 ಫೈನಲ್‌ನಲ್ಲಿ ಭಾರತದ ಅದ್ಭುತ ವಿಜಯದ ಸಂಭ್ರಮವಾಗಿ ಬದಲಾಯಿತು. ಮದುಮಗ ಅಂಕಿತ್ ರಾವತ್ ಅವರ ವಿವಾಹದ ವಿಧಿವಿಧಾನಗಳ ಸಮಯದಲ್ಲಿಯೂ ಅತಿಥಿಗಳು ಅಲ್ಲಿದ್ದ ದೊಡ್ಡ ಸ್ಕ್ರೀನ್​ನಲ್ಲಿ ಪಂದ್ಯವನ್ನು ನೋಡಿ ಎಂಜಾಯ್ ಮಾಡುತ್ತಿದ್ದರು.

ಇದನ್ನೂ ಓದಿ: ಆಹ್ವಾನ ಇಲ್ಲದೇ ಮದುವೆ, ರಿಸೆಪ್ಷನ್ ಊಟಕ್ಕೆ ಹೋಗಿ ಸಿಕ್ಕಿಬಿದ್ದರೆ ಶಿಕ್ಷೆ ಏನು ಗೊತ್ತೇ? ಕೇಳಿದ್ರೆ ಶಾಕ್ ಆಗ್ತೀರಿ!

ಈ ರೋಮಾಂಚಕ ಆಟವನ್ನು ವೀಕ್ಷಿಸಲು ಅತಿಥಿಗಳು, ಗ್ರಾಮಸ್ಥರು ಮತ್ತು ಕುಟುಂಬದ ಸದಸ್ಯರು ಸುತ್ತಲೂ ಸೇರಿದ್ದರು. ಕ್ರಿಕೆಟ್ ಪಂದ್ಯವು ಅಂತಿಮ ಹಂತ ತಲುಪುತ್ತಿದ್ದಂತೆ ಮದುವೆ ಮಂಟಪದಲ್ಲಿಯೂ ಉತ್ಸಾಹ ಹೆಚ್ಚಾಯಿತು. ಪಂದ್ಯದಲ್ಲಿ ಭಾರತ ಅಂತಿಮವಾಗಿ ಗೆಲುವು ಸಾಧಿಸಿದಾಗ, ಮದುವೆ ಮಂಟಪದಲ್ಲಿ ಸೇರಿದ್ದ ಜನರು ನೃತ್ಯ, ಹರ್ಷೋದ್ಗಾರ, ಮದುವೆ ಮತ್ತು ರಾಷ್ಟ್ರದ ವಿಜಯೋತ್ಸವ ಎರಡನ್ನೂ ಆಚರಿಸುವುದರೊಂದಿಗೆ ಮಂಟಪದಲ್ಲಿ ಸಂತೋಷ ಹೊರಚಿಮ್ಮಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಮಗುವಿನ ಮುಖ ನೋಡುವ ಮೊದಲೇ ಕಣ್ಮುಚ್ಚಿದ ಮಹಿಳೆ: ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು?

ಚಿತ್ರದುರ್ಗ, ಮಾರ್ಚ್​ 10: ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಮಹಿಳೆಯೋರ್ವರು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಹೆರಿಗೆ ವೇಳೆ ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷದಿಂದಾಗಿಯೇ  ಸಾವಾಗಿರೋದಾಗಿ ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಶಿಲ್ಪಾ(28) ಮೃತ ದುರ್ದೈವಿಯಾಗಿದ್ದು, ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐಸಿಯುಗೆ ದಾಖಲಿಸುವುದಾಗಿ ಹೇಳಿ ಶಿಲ್ಪಾರ ಮೃತದೇಹವನ್ನು ಶವಾಗಾರಕ್ಕೆ ಶಿಫ್ಟ್​​ ಮಾಡಲಾಗಿದೆ. ಮಗುವಿನ ಆರೋಗ್ಯದ ಮಾಹಿತಿ ಕೂಡ ತಮಗೆ ನೀಡಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಚಳ್ಳಕೆರೆ ತಾಲೂಕಿನ ಪರಶುರಾಂಪುರದ ಶಿಲ್ಪಾರನ್ನು ನಿನ್ನೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ತಡರಾತ್ರಿ ಹೆಣ್ಣು ಮಗುವಿಗೆ ಅವರು ಜನ್ಮ ನೀಡಿದ್ದರು. ಹೆರಿಗೆ ಬಳಿಕ ವೈದ್ಯರು ನಿರ್ಲಕ್ಷ ತೋರಿದ ಪರಿಣಾಮ ಶಿಲ್ಪಾಳ ಸಾವು ಸಂಭವಿಸಿದೆ. ಏಕಾಏಕಿ ಐಸಿಯುಗೆ ಶಿಫ್ಟ್ ಮಾಡಬೇಕೆಂದು ಹೇಳಿ ನೇರವಾಗಿ ಶವಾಗಾರಕ್ಕೆ ಶಿಫ್ಟ್ ಮಾಡಿದ್ದಾರೆ ಎಂಬುದು ಮೃತಳ ತಾಯಿ ದುರ್ಗಮ್ಮ ಅವರ ಆರೋಪ. ಇನ್ನು ವಿಷಯ ತಿಳಿಯುತ್ತಿದ್ದಂತೆ ಮೃತರ ಸಂಬಂಧಿಕರು ಆಸ್ಪತ್ರೆ ಬಳಿ ಜಮಾಯಿಸಿದ್ದು, ಜಿಲ್ಲಾಸ್ಪತ್ರೆಯ ಮುಖ್ಯಸ್ಥರಾದ ಡಾ.ರವೀಂದ್ರ ಸೇರಿ ಸಿಬ್ಬಂದಿಯನ್ನು ತರಾಟೆಗೆ ಪಡೆದಿದ್ದಾರೆ. ತಪ್ಪಿತಸ್ಥ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು, ದಲಿತಪರ ಸಂಘಟನೆಗಳ ಮುಖಂಡರು ಮೃತಳ ಸಂಬಂಧಿಕರಿಗೆ ಸಾಥ್ ನೀಡಿದ್ದಾರೆ.

ಇದನ್ನೂ ಓದಿ: ಅನ್ಯಕೋಮಿನ ಯುವಕನಿಂದ ಚಾಕು ಇರಿತ; ಸಿಡಿದೆದ್ದ ಹಿಂದೂ ಸಂಘಟನೆಗಳು, ಚಿತ್ರದುರ್ಗ ರಣಾಂಗಣ

ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಮುಖ್ಯಸ್ಥ ಡಾ.ರವೀಂದ್ರ, ಶಿಲ್ಪಾ ಅವರನ್ನು ತಡವಾಗಿ ಹೆರಿಗೆಗೆ ಕರೆತಂದಿದ್ದಾರೆ. ಹೆರಿಗೆ ವೇಳೆ‌ ಉಸಿರಾಟ ತೊಂದರೆಯಿಂದ ಅವರು ಮೃತಪಟ್ಟಿದ್ದು, ಹೃದಯ ಸಂಬಂಧಿ ಸಮಸ್ಯೆ ಬಗ್ಗೆ ಪರಿಶೀಲಿಬೇಕಿದೆ. ಶಿಲ್ಪಾ ಅವರಿಗೆ ಹೆಣ್ಣು ಮಗು ಜನಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಹೀಗಿದ್ದರೂ ವೈದ್ಯರ ವಿರುದ್ಧ ಶಿಲ್ಪಾ ಸಂಬಂಧಿಕರ ಆರೋಪ ಹಿನ್ನೆಲೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಕೋಟೆನಾಡು ಚಿತ್ರದುರ್ಗದ ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಒಂದಲ್ಲ ಒಂದು ದೂರು ಕೇಳಿ ಬರುತ್ತಲೇ ಇರುವ ನಡುವೆಯೇ ನಡೆದ ಬಾಣಂತಿಯ ಸಾವು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಪತ್ರೆಯ ವ್ಯವಸ್ಥೆ ಸುಧಾರಿಸಿ ಜನರ ಪ್ರಾಣ ರಕ್ಷಣೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಣ್ಣಿನ ರಾಜನಿಗೆ ಇದೆಂಥಾ ಸ್ಥಿತಿ: ಭಾರೀ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ಆಘಾತ

ರಾಮನಗರ, ಮಾರ್ಚ್​ 10: ಮಾವು (Mango Crop) ಬೆಂಗಳೂರು ದಕ್ಷಿಣ ಜಿಲ್ಲೆಯ ರೈತರ ಪ್ರಮುಖ ಬೆಳೆ. ರಾಜ್ಯದಲ್ಲಿಯೇ ಮಾವು ಬೆಳೆಗೆ ಎರಡನೇ ಸ್ಥಾನದಲ್ಲಿದೆ. ಈ ಬಾರಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿ ಜಿಲ್ಲೆಯ ರೈತರಿದ್ದರು. ಆದರೆ ಹವಮಾನ ವೈಪರೀತ್ಯದಿಂದಾಗಿ ಮಾವು ಬೆಳೆ ರೈತರಿಗೆ ಕೈಕೊಟ್ಟಿದೆ. ಹೀಗಾಗಿ ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರಮುಖ ತೋಟಗಾರಿಕಾ ಬೆಳೆಯಾದ ಮಾವು ಸದ್ಯ ರೈತರಿಗೆ ಕೈಕೊಟ್ಟಿದೆ. ಅಂದಹಾಗೆ ಈ ಬಾರಿ ಜಿಲ್ಲೆಯಾದ್ಯಂತ ಮಾವಿನ ಮರಗಳಲ್ಲಿ ವ್ಯಾಪಕವಾಗಿ ಹೂ ಬಿಟ್ಟಿತ್ತು. ಹೀಗಾಗಿ ಜಿಲ್ಲೆಯ ಮಾವು ಬೆಳೆಗಾರರು ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿ ಇದ್ದರು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಹೂ ಹಾಳಾಗಿ ಕಾಯಿ ಕಟ್ಟಿಲ್ಲ. ಸರಿಯಾದ ಇಬ್ಬನಿ ಬೀಳದೆ, ಮಳೆ ಕೂಡ ಬಾರದೇ ಮರಗಳಲ್ಲಿ ಕಾಯಿ ಕಟ್ಟಿಲ್ಲ. ಅರ್ಧದಷ್ಟು ಬೆಳೆಕೂಡ ಕೈಕೊಟ್ಟಿದೆ.

ಇದನ್ನೂ ಓದಿ: ಬಡವರ ಬಾದಾಮಿ ಬೆಳೆದ ರೈತರಿಗೀಗ ಸಂಕಷ್ಟ: ದಲ್ಲಾಳಿ-ಕಮಿಷನ್ ಏಜೆಂಟ್ ಮೋಸದಿಂದ ಕಂಗಾಲು

ಬೆಂಗಳೂರು ದಕ್ಷಿಣ ಜಿಲ್ಲೆಯಾದ್ಯಂತ 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯನ್ನ ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಮಾವು ಬೆಳೆಯಲ್ಲಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಜಿಲ್ಲೆಯ ರಾಮನಗರ, ಕನಕಪುರ, ಚನ್ನಪಟ್ಟಣ ಹಾಗೂ ಮಾಗಡಿ ತಾಲ್ಲೂಕುಗಳಲ್ಲಿ ರೈತರು ಮಾವು ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಬಾದಾಮಿ, ಸೇಂದೂರ, ನೀಲಂ, ಮಲ್ಲಿಕಾ, ಮಲಗೋಬ ಸೇರಿದಂತೆ ಮೊದಲಾದ ತಳಿಯನ್ನ ಬೆಳೆಯಲಾಗುತ್ತದೆ.

ಪ್ರಾರಂಭದಲ್ಲಿ ತೋಟಗಳಲ್ಲಿ ಶೇ 50ರಷ್ಟು‌ ಹೂ ಮರದಲ್ಲಿ ಕಚ್ಚಿತ್ತು. ಮತ್ತಷ್ಟು ಹೂವು ಬಂದು ಬೆಳೆ ಚೆನ್ನಾಗಿ ಬರಬಹುದು ಎಂದು ರೈತರು ನಿರೀಕ್ಷೆಯಲ್ಲಿ ಇದ್ದರು. ಆದರೆ ರೈತರ ನಿರೀಕ್ಷೆ ಹುಸಿಯಾಗಿದೆ. ಇನ್ನು ಕೆಲ ದಲ್ಲಾಳಿಗಳು ಈಗಾಗಲೇ ತೋಟಗಳಿಗೆ ಭೇಟಿ ನೀಡಿ ಮುಂಗಡವಾಗಿಯೇ ಹಣ ಕೊಟ್ಟು ಮಾವು ಖರೀದಿಸಲು ಮುಂದಾಗಿದ್ದರು. ಜಿಲ್ಲೆಯ ಮಾವು ಅತೀ ಬೇಗ ರಾಜ್ಯದ ಮಾರುಕಟ್ಟೆಗೆ ಲಗ್ಗೆ ಇಡುತ್ತದೆ. ಕಳೆದ ಬಾರಿ 1.8 ಲಕ್ಷ ಟನ್ ಮಾವು ಜಿಲ್ಲೆಯಾದ್ಯಂತ ಬಂದಿತ್ತು. ಈ ಬಾರಿ ಎರಡು ಲಕ್ಷ ಟನ್ ಮಾವು ಬರುವ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆಯಂತೆ ಬೆಳೆ ಬಂದಿಲ್ಲ.

ಇದನ್ನೂ ಓದಿ: ಬರದ ನಾಡಲ್ಲಿ ಬಂಗಾರದ ಬೆಳೆ ಬೆಳೆದ ಯುವ ರೈತ: ಮೂರುವರೆ ಎಕರೆ ಜಮೀನಿನಲ್ಲಿ ಲಕ್ಷಾಂತರ ರೂ ಲಾಭ

ಒಟ್ಟಾರೆ ಕಳೆದ ಬಾರಿ ಉತ್ತಮ ಬೆಳೆ ಬಂದಿದ್ದರು, ಸರಿಯಾದ ಬೆಲೆ ಸಿಗದ ಕಾರಣ ಮಾವು ಬೆಳೆಗಾರರು ಸಾಕಷ್ಟು ಸಂಕಷ್ಟ ಎದುರಿಸಿದ್ದರು. ಆದರೆ ಈ ಬಾರಿ ಬೆಳೆಯೇ ಸರಿಯಾಗಿ ಬಾರದೇ ಮತ್ತೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.‌

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ಆರ್ಥಿಕ ಪ್ರಗತಿ ಮತ್ತು ಆಕಸ್ಮಿಕ ಧನಯೋಗ

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ ಬಸವರಾಜ ಗುರೂಜಿಯವರು 2026ರ ಪರಾಭವನಾಮ ಸಂವತ್ಸರದ ಯುಗಾದಿ ವರ್ಷದ ಧನುಸ್ಸು ರಾಶಿಯ ಫಲಾಫಲಗಳನ್ನು ವಿವರಿಸಿದ್ದಾರೆ. ಈ ರಾಶಿಯವರಿಗೆ ಗುರು ಏಳರಿಂದ ಎಂಟರಲ್ಲಿ, ಶನಿ ನಾಲ್ಕನೇ ಮನೆಯಲ್ಲಿ, ರಾಹು ಮೂರರಿಂದ ಎರಡರಲ್ಲಿ ಹಾಗೂ ಕೇತು ಒಂಬತ್ತರಿಂದ ಎಂಟನೇ ಮನೆಯಲ್ಲಿ ಸಂಚಾರ ಮಾಡಲಿದೆ.

ಧನುಸ್ಸು ರಾಶಿಯವರಿಗೆ ಭಯಪಡಬೇಕಾದ ಅಗತ್ಯವಿಲ್ಲ. 2026ರಲ್ಲಿ ಆದಾಯವು ಹೆಚ್ಚಿದ್ದು (14 ಪಟ್ಟು) ಖರ್ಚು ಕಡಿಮೆಯಿರಲಿದೆ. ಆರೋಗ್ಯ ಚೆನ್ನಾಗಿರಲಿದ್ದು, ಸುಖ-ದುಃಖಗಳು 8:3 ಅನುಪಾತದಲ್ಲಿ ಇರಲಿವೆ. ಆರ್ಥಿಕ ಪ್ರಗತಿ ಕಂಡುಬಂದರೂ, ಸಂಬಂಧಗಳ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಕೀರ್ತಿ, ಪ್ರತಿಷ್ಠೆ ಮತ್ತು ಆಕಸ್ಮಿಕ ಧನಯೋಗ ಪ್ರಾಪ್ತಿಯಾಗಲಿದೆ. ವ್ಯಾಪಾರ, ವ್ಯವಹಾರಗಳು ಉತ್ತಮವಾಗಿದ್ದು, ಪ್ರಯಾಣಗಳಿಂದ ಶುಭವಾಗಲಿದೆ. ಮಕ್ಕಳಿಂದ ಸಂತಸ, ಹಳೆಯ ಬಾಕಿ ವಸೂಲಿ ಮತ್ತು ಅಧಿಕಾರಿಗಳ ಸಹಕಾರ ಇರಲಿದೆ. ಗುರುವಾರ ಮತ್ತು ಭಾನುವಾರ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಈ ರಾಶಿಯವರಿಗೆ ಒಟ್ಟು ಶೇ.65 ಶುಭ ಫಲಗಳು ದೊರೆಯಲಿವೆ. ಗಣೇಶನ ಆರಾಧನೆ ಮತ್ತು ದಾನ ಧರ್ಮಗಳು ಶುಭಪ್ರದವಾಗಿವೆ.

ಇದನ್ನೂ ಓದಿ: ಯುಗಾದಿ ಬಳಿಕ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಲ್​ಪಿಜಿ ಬಿಕ್ಕಟ್ಟು ಎದುರಿಸಲು ಹರ್ದೀಪ್ ಪುರಿ ಮತ್ತು ಜೈಶಂಕರ್ ಜೊತೆ ಪ್ರಧಾನಿ ಮೋದಿ ಸಭೆ

ನವದೆಹಲಿ, ಮಾರ್ಚ್ 10: ಇರಾನ್ ಯುದ್ಧದಿಂದ ತೈಲ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯ ಆಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಪರಿಸ್ಥಿತಿ ಅವಲೋಕಿಸಲು, ಅದರಲ್ಲೂ ಎಲ್​ಪಿಜಿ ಸರಬರಾಜು ಸ್ಥಿತಿ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಮಂಗಳವಾರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಜೊತೆ ಸಭೆ ನಡೆಸಿದರು. ಭಾರತದಲ್ಲಿ ಎಲ್​ಪಿಜಿ ಸರಬರಾಜು ಸರಿಯಾದ ರೀತಿಯಲ್ಲಿ ಇರುವುದನ್ನು ಖಾತ್ರಿಪಡಿಸಲು ಸರ್ಕಾರ ಸಾಧ್ಯವಾದ ಕ್ರಮಗಳನ್ನು ಕೈಗೊಳ್ಳುತ್ತಿದೆ.

ದೇಶೀಯ ಇಂಧನ ಮಾರುಕಟ್ಟೆಯನ್ನು ರಕ್ಷಿಸಲು ಸರ್ಕಾರ ಇಂದು ಅಗತ್ಯ ಸರಕುಗಳ ಕಾಯ್ದೆಯನ್ನು ಸಕ್ರಿಯಗೊಳಿಸಿದೆ. ಎಲ್​ಪಿಜಿ ಉತ್ಪಾದನೆ ಹೆಚ್ಚಿಸಲು ಹಾಗೂ ಹೈಡ್ರೋಕಾರ್ಬನ್​ಗಳನ್ನು ಎಲ್​ಪಿಜಿ ಸಂಗ್ರಹಕ್ಕೆ ಸೇರಿಸುವಂತೆ ದೇಶದಲ್ಲಿರುವ ರಿಫೈನರಿಗಳು ಹಾಗೂ ಪೆಟ್ರೋಕೆಮಿಕನ್ ಘಟಕಗಳಿಗೆ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ: ಸಿಲಿಂಡರ್ ಬುಕಿಂಗ್​​​ನಲ್ಲಿ ಮಹತ್ವದ ಬದಲಾವಣೆ

ಎಲ್​ಪಿಜಿ ಸರಬರಾಜು ಕುಂಠಿತವಾಗದಂತೆ ಎಚ್ಚರವಹಿಸಲು ನೈಸರ್ಗಿಕ ಅನಿಲವನ್ನು ಸಮರ್ಪಕವಾಗಿ ಬಳಸುವಂತಹ ವ್ಯವಸ್ಥೆಯನ್ನು ಎಸೆನ್ಷಿಯಲ್ ಕಮಾಡಿಟೀಸ್ ಆ್ಯಕ್ಟ್ ಮೂಲಕ ಮಾಡಲಾಗುತ್ತಿದೆ. ಪರಿಷ್ಕೃತ ಮಾರ್ಗಸೂಚಿ ಪ್ರಕಾರ ಗೃಹಬಳಕೆಯ ಪಿಎನ್​ಜಿ (ಕೊಳವೆ ಅನಿಲ) ಮತ್ತು ವಾಹನ ಬಳಕೆಯ ಸಿಎನ್​ಜಿ ಅನಿಲಗಳ ಸರಬರಾಜು ನೂರಕ್ಕೆ ನೂರು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಇತರ ಸರಕುಗಳಾದರೆ ಕಳೆದ ಆರು ತಿಂಗಳ ಸರಾಸರಿ ಬಳಕೆಯ ಆಧಾರದ ಮೇಲೆ ಸರಬರಾಜು ಮಿತಿ ಹಾಕಲಾಗುತ್ತದೆ.

ಇಂಡಿಯನ್ ಆಯಿಲ್, ಹೆಚ್​ಪಿ, ಬಿಪಿ ಇತ್ಯಾದಿ ಒಎಂಸಿಗಳು ಎಲ್​ಪಿಜಿ ಉತ್ಪಾದನೆ ಪ್ರಮಾಣ ಹೆಚ್ಚಿಸಿವೆ.

‘ಜಾಗತಿಕ ರಾಜಕೀಯ ಪ್ರಕ್ಷುಬ್ದತೆಯಿಂದಾಗಿ ತೈಲ ಮತ್ತು ಪೂರೈಕೆಯಲ್ಲಿ ವ್ಯತ್ಯಯ ಆಗಿರುವ ಹಿನ್ನೆಲೆಯಲ್ಲಿ ದೇಶೀಯ ಗ್ರಾಹಕರಿಗೆ ಎಲ್​ಪಿಜಿ ಲಭ್ಯತೆಯನ್ನು ಖಚಿತಪಡಿಸಲು ಉತ್ಪಾದನೆ ಹೆಚ್ಚಳಕ್ಕೆ ಸರ್ಕಾರ ಕ್ರಮ ತೆಗೆದುಕೊಂಡಿದೆ’ ಎಂದು ತೈಲ ಮಾರುಕಟ್ಟೆ ಕಂಪನಿಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಇದನ್ನೂ ಓದಿ: ವಾಹನ ಸವಾರರಿಗೆ ಗುಡ್​​ ನ್ಯೂಸ್​​ ನೀಡಿದ ಕೇಂದ್ರ: ಪೆಟ್ರೋಲ್, ಡೀಸೆಲ್ ದರ ಏರಿಕೆ ಬಗ್ಗೆ ಆತಂಕ ಬೇಡ

ಜಗತ್ತಿನ ಅರ್ಧಕ್ಕಿಂತ ಹೆಚ್ಚು ತೈಲ ಪೂರೈಕೆ ಮಾಡುವ ಪಶ್ಚಿಮ ಏಷ್ಯಾ ಭಾಗದಲ್ಲಿ ಭೀಕರ ಯುದ್ಧ ನಡೆಯುತ್ತಿದೆ. ಇದರಿಂದ ತೈಲ ಉತ್ಪಾದನೆ ನಿಂತು ಹೋಗಿರುವುದು ಮಾತ್ರವಲ್ಲ, ತೈಲ ಸಾಗಣೆಯೂ ಸ್ಥಗಿತಗೊಂಡಿದೆ. ಗಲ್ಫ್ ಪ್ರದೇಶದಿಂದ ತೈಲ ಸಾಗಣೆಯ ಹಾದಿಯಲ್ಲಿರುವ ಹಾರ್ಮುಜ್ ಜಲಸಂಧಿ ಸದ್ಯ ಬಹುತೇಕ ತಡೆ ಹೊಂದಿದೆ. ಇದರಿಂದಾಗಿ ಗಲ್ಫ್​ನಿಂದ ಯಾವ ತೈಲವೂ ಹೊರಬರಲು ಆಗುತ್ತಿಲ್ಲ. ಭಾರತದಲ್ಲಿ ಕಚ್ಚಾ ತೈಲದ ಸಂಗ್ರಹ ಉತ್ತಮ ಪ್ರಮಾಣದಲ್ಲಿದೆಯಾರೂ, ಎಲ್​ಪಿಜಿ, ಎಲ್​ಎನ್​ಜಿ ಇತ್ಯಾದಿ ಅನಿಲಗಳ ಕೊರತೆ ಎದುರಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗುಲಬರ್ಗಾ ವಿವಿ ಭೂಮಿ ಮೇಲೆ ಸರ್ಕಾರದ ಕೆಂಗಣ್ಣು: 18 ಇಲಾಖೆಗಳಿಂದ 300 ಎಕರೆ ನೀಡುವಂತೆ ಮನವಿ

ಕಲಬುರಗಿ, ಮಾರ್ಚ್​ 10: ಕಲ್ಯಾಣ‌ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗಲಿ ಅಂತ ನೂರಾರು ಎಕರೆಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ (Gulbarga University) ಸ್ಥಾಪನೆಯಾಗಿದೆ. ಆದರೆ ಇದೀಗ ಅದೇ ನೂರಾರು ಎಕರೆ ಜಮೀನಿನ ಮೇಲೆ ವಿವಿಧ ಸರ್ಕಾರಿ ಇಲಾಖೆಗಳ ಕಣ್ಣು ಬಿದಿದೆ‌. ವಿವಿಯ ಜಾಗದಲ್ಲೇ ಬಸ್ ನಿಲ್ದಾಣ, ಕ್ರಿಕೆಟ್ ಕ್ರಿಡಾಂಗಣ ಸೇರಿದಂತೆ ಹಲವು ಇಲಾಖೆಗಳು ಜಮೀನು ಕೇಳಿವೆ. ಇದು ವಿವಿ ಹಾಗೂ ರಾಜ್ಯ ಸರ್ಕಾರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.

ವಿಶ್ವವಿದ್ಯಾಲಯದ ಭೂಮಿ ಮೇಲೆ ಸರ್ಕಾರದ ಕೆಂಗಣ್ಣು

ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗಬೇಕು ಅಂತಾ, ರಾಜ್ಯ ಸರ್ಕಾರ 1989ರಲ್ಲಿ ಕಲಬುರಗಿ ಹೊರವಲಯದ ಸೇಡಂ ರಸ್ತೆಯಲ್ಲಿ 794 ಎಕರೆ ಪ್ರದೇಶದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಆರಂಭಿಸಿತ್ತು. ಏಷ್ಯಾದಲ್ಲೇ ಅತೀ ದೊಡ್ಡ ಕ್ಯಾಂಪಸ್ ಎನ್ನೋ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅದಾದ ಬಳಿಕ ಅದೇ ವಿಶ್ವವಿದ್ಯಾಲಯದ ಭೂಮಿ ಮೇಲೆ ಸರ್ಕಾರದ ಕೆಂಗಣ್ಣು ಬಿಳುತ್ತಲೇ ಇದೆ.‌ ಈಗಾಗಲೇ ಇಎಸ್​ಐ ಆಸ್ಪತ್ರೆಗಾಗಿ 150 ಎಕರೆ ಜಮೀನನ್ನ ಸರ್ಕಾರ ತೆಗೆದುಕೊಂಡಿದೆ. ಅದಾದ ಬಳಿಕ ಇದೀಗ ಮತ್ತೆ ವಿವಿಧ ಇಲಾಖೆಗಳ ಕಣ್ಣು ಬಿದ್ದಿದೆ.

ಇದನ್ನೂ ಓದಿ: Anganwadi Recruitment 2026: ಕಲಬುರಗಿ ಅಂಗನವಾಡಿ ನೇಮಕಾತಿ; 412 ಹುದ್ದೆಗಳಿಗೆ ಅರ್ಜಿ ಆಹ್ವಾನ, 10th ಪಾಸಾಗಿದ್ರೆ ಸಾಕು!

ಇನ್ನುಳಿದ ಜಮೀನಿನ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ, ಕೆಕೆಆರ್​ಡಿ ಕೇಂದ್ರ ಕಚೇರಿ ಸ್ಥಾಪನೆಗಾಗಿ 20 ಎಕರೆ, ಏಮ್ಸ್ ಆಸ್ಪತ್ರೆಗೆ 150 ಎಕರೆ ಅಗ್ನಿಶಾಮಕ ಹಾಗೂ ಸ್ಯಾಟ್ ಲೈಟ್ ಬಸ್ ನಿಲ್ದಾಣಕ್ಕಾಗಿ 8 ಎಕರೆ ಜಮೀನು ನೀಡುವಂತೆ ಒಟ್ಟು 18 ಸರ್ಕಾರಿ ಇಲಾಖೆಗಳು 374 ಎಕರೆ ಜಮೀನು ನೀಡುವಂತೆ ಗುಲಬರ್ಗಾ ವಿವಿಗೆ ಆಯಾ ಇಲಾಖೆ ಮುಖ್ಯಸ್ಥರು ಪತ್ರ ಬರೆದಿದ್ದಾರೆ. ಇದು ಇದೀಗ ವಿಶ್ವವಿದ್ಯಾಲಯಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ. ಏಕೆಂದರೆ ಈಗಾಗಲೇ ಶೈಕ್ಷಣಿಕವಾಗಿ ಬೀದರ್ ಹಾಗೂ ರಾಯಚೂರು ಹೊಸ ವಿಶ್ವವಿದ್ಯಾಲಯವಾಗಿದ್ದು, ವಿದ್ಯಾರ್ಥಿಗಳಿಲ್ಲದೇ ಬಣಗುಡುತ್ತಿದೆ. ಹೀಗಿರುವಾಗ ವಿಶಾಲವಾದ ಕ್ಯಾಂಪಸ್ ಮೇಲೂ ಕಣ್ಣು ಬಿದ್ದಿರುವುದು ವಿಶ್ವವಿದ್ಯಾಲಯವನ್ನ ಚಿಂತೆಗಿಡು ಮಾಡಿದೆ.

ಇನ್ನು 18 ಇಲಾಖೆಗಳು ವಿವಿಯ 374 ಎಕರೆ ಜಮೀನಿಗಾಗಿ ಪ್ರಸ್ತಾವನ್ನೆಯನ್ನು ಈ ಹಿಂದೆ 2024ರ ಜೂನ್​ನಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿಸಲಾಗಿದೆ. ವಿವಿ ಜಮೀನಿನನ್ನ ಬೇರೆ ಇಲಾಖೆಗಳಿಗೆ ಕೊಡುವುದರಿಂದ ವಿವಿಯಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆಯಾಗುತ್ತದೆ ಹಾಗೂ ಈ ಇಲಾಖೆಗಳಿಗೆ ಜಮೀನು ಕೊಡುವುದರಿಂದ ವಿವಿ ಕ್ಯಾಂಪಸ್​ನ ಇಡೀ ಪರಿಸರ ಸಹ ಹಾಳಾಗುವುದರಿಂದ ಒಂದು ಎಕರೆ ಜಮೀನು ಕೊಡದಿರಲು ನಿರ್ಧರಿಸಲಾಗಿತ್ತು.

ಇನ್ನು ಸಿಂಡಿಕೇಟ್​ ಸಭೆಯ ನಿರ್ಣಯದ ಬಳಿಕ ಸಹ ಸಚಿವರ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ. ಹೀಗಾಗಿ ಇತ್ತೀಚೆಗೆ ವಿವಿ ಸಿಂಡಿಕೇಟ್ ಸಭೆ ನಡೆಸಿದ್ದರು ಸಹ ಜಮೀನು ನೀಡುವ ಬಗ್ಗೆ ಯಾವುದೇ ನಿರ್ಧಾರ ಕೈಗೋಳ್ಳದೇ ಸಭೆ ಮುಕ್ತಾಯಗೊಳಿಸಿದ್ದಾರೆ. ಸರ್ಕಾರಿ ಕಚೇರಿಗಳು ಬೇಕಾದರೆ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿ. ಇಲ್ಲ ರೈತರಿಂದ ಜಮೀನು ಖರೀದಿಸಿ ಸರ್ಕಾರಿ ಕಚೇರಿಗಳು ಸ್ಥಾಪಿಸಲಿ. ವಿಶ್ವವಿದ್ಯಾಲಯಲಯದ ಜಮೀನು ಏಕೆ ಬೇಕು ಅಂತ ಹಲವು ಶಿಕ್ಷಣ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಿಷ್ಟು 

ಈ ಮಧ್ಯೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿವಿ ಜಮೀನು ಬೇರೆ ಉದ್ದೇಶಕ್ಕೆ ಬಳುಸುತ್ತಿಲ್ಲ. ಸಾರ್ವಜನಿಕರು ಹಾಗೂ ಬೇರೆ ರೀತಿಯ ಶೈಕ್ಷಣಿಕ ಚಟವಟಿಕೆಗೆ ಕೇಳಿದರೆ ತಪ್ಪೇನು ಎನ್ನುತ್ತಿದ್ದಾರೆ.

ಇದನ್ನೂ ಓದಿ: ಕಲಬರ್ಗಿಯ ಫಿಸಿಯೋಥೆರಪಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿಮೌಲ್ಯ, ಮಾನವೀಯ ಮೌಲ್ಯ ಬೋಧಿಸಿದ ಮುನಾವರ್ ಜಮಾ

ಇನ್ನು ದುರಂತ ಅಂದರೆ ವಿಶ್ವವಿದ್ಯಾಲಯಕ್ಕೆ ಜಮೀನು ನೀಡಿದ ರೈತರೇ ಹೆಚ್ಷುವರಿ ಪರಿಹಾರಕ್ಕಾಗಿ ನ್ಯಾಯಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಅದೇ ಜಮೀನು ಪಡೆಯಲು ಸರ್ಕಾರದ ವಿವಿಧ ಇಲಾಖೆಗಳು ನಾ ಮುಂದು, ತಾ ಮುಂದು ಅಂತಾ ರೇಸಿಗೆ ಬಿದಿದ್ದಾರೆ. ಹೀಗಾಗಿ ಸರ್ಕಾರ ಹಾಗೂ ವಿವಿ ಸಿಂಡಿಕೇಟ್ ಮುಂದಿನ ದಿನಗಳಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಕಾದುನೋಡಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

25 ದಿನ ಪೂರೈಸಿ ಸೂಪರ್ ಹಿಟ್ ಎನಿಸಿಕೊಂಡ ‘ರಕ್ಕಸಪುರದೋಳ್’ ಸಿನಿಮಾ

ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ ‘ರಕ್ಕಸಪುರದೋಳ್’ (Raj B Shetty) ಸಿನಿಮಾವನ್ನು ಜನರು ಮೆಚ್ಚಿಕೊಂಡಿದ್ದಾರೆ. ಫೆಬ್ರವರಿ 6ರಂದು ಬಿಡುಗಡೆ ಆಗಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ. ಅಲ್ಲದೇ, ಸುಮಾರು ಕಡೆಗಳಲ್ಲಿ 50ನೇ ದಿನದತ್ತ ಮುನ್ನುಗುತ್ತಿದೆ. ಆ ಮೂಲಕ 2026ರ ಮೊದಲ‌ ಸೂಪರ್ ಹಿಟ್ ಕನ್ನಡ ಸಿನಿಮಾ ಖ್ಯಾತಿಗೆ ‘ರಕ್ಕಸಪುರದೋಳ್’ ಪಾತ್ರವಾಗಿದೆ. ಈ ಸಿನಿಮಾದಿಂದ ನಟ ರಾಜ್ ಬಿ. ಶೆಟ್ಟಿ (Rakkasapuradhol) ಅವರ ಖಾತೆಗೆ ಇನ್ನೊಂದು ಹಿಟ್ ಸೇರ್ಪಡೆ ಆದಂತಾಗಿದೆ.

ರವಿ ಸಾರಂಗ ನಿರ್ದೇಶನದ ಹಾಗೂ ಸಾಹಸ ನಿರ್ದೇಶಕ ರವಿವರ್ಮಾ ಚೊಚ್ಚಲ ನಿರ್ಮಾಣದ ‘ರಕ್ಕಸಪುರದೋಳ್’ ಸಿನಿಮಾದ ಕ್ಲೈಮ್ಯಾಕ್ಸ್ ನೋಡಿ ಜನರು ಭೇಷ್ ಎಂದಿದ್ದಾರೆ. ಸಾಲು ಸಾಲು‌ ಸಿನಿಮಾಗಳು ಬಿಡುಗಡೆ ಆದರೂ ಕೂಡ ‘ರಕ್ಕಸಪುರದೋಳ್’ ಚಿತ್ರದ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ರಾಜ್ಯಾದ್ಯಂತ ಮಲ್ಟಿಪ್ಲೆಕ್ಸ್​ಗಳಲ್ಲಿ ವಾರಾಂತ್ಯದಲ್ಲಿ ಹೌಸ್ ಫುಲ್ ಪ್ರದರ್ಶನಗಳು ಕಾಣುತ್ತಿರುವುದು ವಿಶೇಷ.

ಈ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ, ಅನಿರುದ್ಧ್ ಭಟ್, ಅರ್ಚನಾ ಕೊಟ್ಟಿಗೆ, ಸ್ವಾತಿಷ್ಟ ಕೃಷ್ಣ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಸಿನಿಮಾದ ಕಥೆ ಮತ್ತು ಪಾತ್ರಗಳನ್ನು ಜನರು ಇಷ್ಟಪಟ್ಟಿದ್ದಾರೆ. ವಿಶೇಷವಾಗಿ ವಿಲನ್ ಪಾತ್ರ ಮಾಡಿರುವ ಅನಿರುದ್ಧ್ ಭಟ್ ಅವರಿಗೆ ಭಾರಿ ಮೆಚ್ಚುಗೆ ಸಿಕ್ಕಿದೆ. ಹಲವು ಚಿತ್ರಮಂದಿರಗಳಿಗೆ ಅವರು ಭೇಟಿ ನೀಡಿದ್ದಾರೆ.

ನಟನೆ ಮಾತ್ರವಲ್ಲೇ ಸಿನಿಮಾದ ಸಂಗೀತ, ಛಾಯಾಗ್ರಹಣಕ್ಕೂ ಜನರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಕನ್ನಡ ಹಾಗೂ ಇತರೆ ಭಾಷೆಯ ಹಲವು ಹೊಸ ಸಿನಿಮಾಗಳ ನಡುವೆ ‘ರಕ್ಕಸಪುರದೋಳ್’ ಚಿತ್ರ ಟಫ್ ಪೈಪೋಟಿ ನೀಡಿದೆ. ಈ ಕಾಲದಲ್ಲಿ ಯಾವುದೇ ಸಿನಿಮಾ ಎರಡು ವಾರ ಪೂರೈಸುವುದೇ ಕಷ್ಟ ಎಂಬಂತಿದೆ. ಹಾಗಿರುವಾಗ ‘ರಕ್ಕಸಪುರದೋಳ್’ ಸಿನಿಮಾ 50ನೇ ದಿನದತ್ತ ಮುನ್ನುಗ್ಗುತ್ತಿದೆ.

ಇದನ್ನೂ ಓದಿ: ‘ರಕ್ಕಸಪುರದೋಳ್’ ವಿಲನ್ ಅನಿರುದ್ಧ್ ಭಟ್ ಬಗ್ಗೆ ಇಂಟರೆಸ್ಟಿಂಗ್ ವಿಷಯಗಳು

‘ರಕ್ಕಸಪುರದೋಳ್’ ಸಿನಿಮಾದ ಗೆಲುವಿನಿಂದ ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ಸಿಕ್ಕಂತಾಗಿದೆ. ಹಾಕಿದ ಬಂಡವಾಳಕ್ಕಿಂತ ದುಪ್ಪಟ್ಟು ಕಲೆಕ್ಷನ್ ಆಗಿದೆ ಎಂಬ ಮಾಹಿತಿ ಸಿಕ್ಕಿದೆ. ಶೀಘ್ರದಲ್ಲೇ ಚಿತ್ರತಂಡದವರು ಸಕ್ಸಸ್ ಮೀಟ್ ಮಾಡಲಿದ್ದಾರೆ. ಆಗ ಬಾಕ್ಸ್ ಆಫೀಸ್ ಲೆಕ್ಕದ ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಗತ್ಯ ಸರಕುಗಳ ಕಾಯ್ದೆ ಎಂದರೇನು? ಎಲ್​ಪಿಜಿ, ಪೈಪ್ಡ್ ಗ್ಯಾಸ್, ಸಿಎನ್​ಜಿ ಸರಬರಾಜು ಖಾತ್ರಿಪಡಿಸಲು ಸರ್ಕಾರದ ಸೂತ್ರವೇನು? ಇಲ್ಲಿದೆ ಡೀಟೇಲ್ಸ್

ನವದೆಹಲಿ, ಮಾರ್ಚ್ 10: ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ತೈಲ ಮತ್ತು ಅನಿಲ ಬಿಕ್ಕಟ್ಟು ಪರಿಸ್ಥಿತಿ ಉದ್ಭವವಾಗಿದೆ. ಭಾರತಕ್ಕೂ ಇದರ ಬಿಸಿ ತಟ್ಟಿದೆ. ಪೆಟ್ರೋಲ್ ಮತ್ತು ಡೀಸಲ್ ಜೊತೆಗೆ ಅನಿಲದ ಅಭಾವ ಭಾರತಕ್ಕೆ ತಾಕತೊಡಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಅಗತ್ಯ ಸರಕುಗಳ ಕಾಯ್ದೆಯನ್ನು ಸಕ್ರಿಯಗೊಳಿಸಿದೆ. ಎಲ್​ಪಿಜಿ ಮತ್ತು ನ್ಯಾಚುರಲ್ ಗ್ಯಾಸ್ ಬಳಸುವವರ ಪೈಕಿ ಆದ್ಯತೆ ಮೇರೆಗೆ ಹಂಚಿಕೆ ಮಾಡಲು ಸರ್ಕಾರ ಕ್ರಮ ತೆಗೆದುಕೊಂಡಿದೆ.

ಗೃಹ ಬಳಕೆ ಮತ್ತು ವಾಹನಗಳಿಗೆ ಬೇಕಿರುವ ಎಲ್​ಪಿಜಿ, ಪಿಎನ್​ಜಿ ಮತ್ತು ಸಿಎನ್​ಜಿ ಗ್ಯಾಸ್​ಗಳ ಪೂರೈಕೆಯನ್ನು ಖಚಿತಪಡಿಸುವುದಕ್ಕೆ ಮೊದಲ ಆದ್ಯತೆ ಇರುತ್ತದೆ. ಉದ್ಯಮಗಳು, ರಸಗೊಬ್ಬರ ಕಾರ್ಖಾನೆಗಳಿಗೆ ಬೇಕಾದ ನೈಸರ್ಗಿಕ ಅನಿಲದ ಸರಬರಾಜಿಗೆ ನಂತರದ ಆದ್ಯತೆ ಇರುತ್ತದೆ.

ಇದನ್ನೂ ಓದಿ: ಎಲ್​ಪಿಜಿ ಬಿಕ್ಕಟ್ಟು ಎದುರಿಸಲು ಹರ್ದೀಪ್ ಪುರಿ ಮತ್ತು ಜೈಶಂಕರ್ ಜೊತೆ ಪ್ರಧಾನಿ ಮೋದಿ ಸಭೆ

ಭಾರತಕ್ಕೆ ಬೇಕಾದ ಶೇ. 30ರಷ್ಟು ನೈಸರ್ಗಿಕ ಅನಿಲವು ಹಾರ್ಮುಜ್ ಮಾರ್ಗದಿಂದ ಪೂರೈಕೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನೈಸರ್ಗಿಕ ಅನಿಲದ ಬಳಕೆಗೆ ಆದ್ಯತೆಗಳನ್ನು ನಿಗದಿ ಮಾಡಲಾಗಿದೆ. ಹಾರ್ಮುಜ್​ನಿಂದ ಪೂರೈಕೆ ಸ್ಥಗಿತಗೊಂಡಿದ್ದರಿಂದ ಇತರ ಮಾರ್ಗಗಳ ಮೂಲಕ ಭಾರತವು ನೈಸರ್ಗಿಕ ಅನಿಲವನ್ನು ಖರೀದಿಸುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಹೇಳಿದೆ.

ನೈಸರ್ಗಿಕ ಅನಿಲ ಪೂರೈಕೆಯ ಆದ್ಯತೆಗಳಿವು…

  • ಮನೆಗಳಿಗೆ ಕೊಳವೆ ಗ್ಯಾಸ್ ಸರಬರಾಜು ನೂರಕ್ಕೆ ನೂರು.
  • ವಾಹನಗಳಿಗೆ ಸಿಎನ್​ಜಿ ಗ್ಯಾಸ್ ಸರಬರಾಜು ನೂರಕ್ಕೆ ನೂರು.
  • ನ್ಯಾಚುರಲ್ ಗ್ಯಾಸ್ ಗ್ರಿಡ್​ಗೆ ಕನೆಕ್ಟ್ ಆಗಿರುವ ಚಹಾ ಉದ್ಯಮ, ಮ್ಯಾನುಫ್ಯಾಕ್ಚರಿಂಗ್, ಕೈಗಾರಿಕಾ ಗ್ರಾಹಕರಿಗೆ ಹಿಂದಿನ ಆರು ತಿಂಗಳ ಸರಾಸರಿ ಸರಬರಾಜಿನ ಶೇ 80ರಷ್ಟನ್ನು ಈಗ ಪೂರೈಸಲಾಗುವುದು.
  • ಕೈಗಾರಿಕೆ ಮತ್ತು ಕಮರ್ಷಿಯಲ್ ನ್ಯಾಚುರಲ್ ಗ್ಯಾಸ್ ಬಳಕೆದಾರರಿಗೆ ಹಿಂದಿನ ಆರು ತಿಂಗಳ ಸರಾಸರಿ ಸರಬರಾಜಿನ ಶೇ. 80ರಷ್ಟನ್ನು ಪೂರೈಸಲಾಗುವುದು.
  • ರಸಗೊಬ್ಬರ ಘಟಕಗಳಿಗೆ ಆರು ತಿಂಗಳ ಸರಾಸರಿ ಸರಬರಾಜಿನ ಶೇ. 70ರಷ್ಟನ್ನು ಪೂರೈಸಲಾಗುವುದು.

ಇದನ್ನೂ ಓದಿ: ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ: ಸಿಲಿಂಡರ್ ಬುಕಿಂಗ್​​​ನಲ್ಲಿ ಮಹತ್ವದ ಬದಲಾವಣೆ

ದೇಶೀಯವಾಗಿ ಎಲ್​ಪಿಜಿ ಉತ್ಪಾದನೆ ಹೆಚ್ಚಿಸಲು ಸರ್ಕಾರವು ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಘಟಕಗಳಿಗೆ ನಿರ್ದೇಶನ ನೀಡಿದೆ. ಪ್ರೊಪೇನ್, ಬುಟೇನ್​ನಂತಹ ಹೈಡ್ರೋಕಾರ್ಬನ್ ಸ್ಟ್ರೀಮ್​ಗಳನ್ನು ಕೈಗಾರಿಕೆಗಳಿಗೆ ನೀಡುವ ಬದಲು ಎಲ್​ಪಿಜಿ ಸಂಗ್ರಹಕ್ಕೆ ತಲುಪಿಸುವಂತೆಯೂ ನಿರ್ದೇಶನ ಕೊಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಟೀಂ ಇಂಡಿಯಾ ವೇಗಿ ಅರ್ಷದೀಪ್​ ಸಿಂಗ್​ಗೆ ಬಿಗ್ ಶಾಕ್ ನೀಡಿದ ಐಸಿಸಿ

ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕ್ರೀಡಾಸ್ಫೂರ್ತಿ ಮರೆತು ವರ್ತಿಸಿದ್ದ ಟೀಂ ಇಂಡಿಯಾ ವೇಗಿ ಅರ್ಷದೀಪ್ ಸಿಂಗ್ ಮೇಲೆ ಇದೀಗ ಐಸಿಸಿ ಕ್ರಮಕೈಗೊಂಡಿದೆ. ನ್ಯೂಜಿಲೆಂಡ್ ಇನ್ನಿಂಗ್ಸ್ ವೇಳೆ ಸ್ಟ್ರೈಕ್​ನಲ್ಲಿದ್ದ ಡ್ಯಾರೆಲ್ ಮಿಚೆಲ್ ಮೇಲೆ ಬಾಲ್ ಎಸೆದು ಆಕ್ರಮಣಕಾರಿಯಾಗಿ ವರ್ತಿಸಿದ್ದ ಅರ್ಷದೀಪ್​ಗೆ ಐಸಿಸಿ ಪಂದ್ಯ ಶುಲ್ಕದ ಶೇಕಡಾ 15 ರಷ್ಟು ವೇತನವನ್ನು ದಂಡವಾಗಿ ವಿಧಿಸಿದೆ. ಹೀಗಾಗಿ ಟಿ20 ವಿಶ್ವಕಪ್ ಗೆದ್ದ ಖುಷಿಯಲ್ಲಿದ್ದ ಅರ್ಷದೀಪ್ ಸಿಂಗ್ ಐಸಿಸಿಯಿಂದ ದಂಡನೆಗೆ ಒಳಗಾಗಿ ತಲೆತಗ್ಗಿಸಬೇಕಾಗಿದೆ.

ಫೈನಲ್ ವೇಳೆ ನಡೆದಿದ್ದೇನು?

ವಾಸ್ತವವಾಗಿ ನ್ಯೂಜಿಲೆಂಡ್ ಇನ್ನಿಂಗ್ಸ್‌ನ 11 ನೇ ಓವರ್‌ನಲ್ಲಿ ಮಿಚೆಲ್, ಅರ್ಷದೀಪ್ ಸಿಂಗ್ ಅವರ ಓವರ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಎರಡು ಸಿಕ್ಸರ್‌ಗಳನ್ನು ಹೊಡೆಸಿಕೊಂಡ ನಂತರ ಅರ್ಷದೀಪ್ ಕೊಂಚ ತಾಳ್ಮೆ ಕಳೆದುಕೊಂಡವರಂತೆ ವರ್ತಿಸಿದರು. ಅರ್ಷದೀಪ್ ಅವರ ಐದನೇ ಎಸೆತದಲ್ಲಿ, ಡ್ಯಾರಿಲ್ ಮಿಚೆಲ್ ಶಾಟ್ ಆಡಲು ಪ್ರಯತ್ನಿಸಿದರು, ಆದರೆ ಚೆಂಡು ನೇರವಾಗಿ ಅರ್ಷದೀಪ್‌ ಕಡೆಗೆ ಹೋಯಿತು. ನಂತರ ಅರ್ಷದೀಪ್ ಚೆಂಡನ್ನು ಹಿಡಿದು ಡ್ಯಾರಿಲ್ ಮಿಚೆಲ್ ಕಡೆಗೆ ಎಸೆದರು. ರಬಸವಾಗಿ ಬಂದ ಚೆಂಡು ಬ್ಯಾಟರ್ ಮಿಚೆಲ್​ಗೆ ಬಡಿಯಿತು.

ಇದರಿಂದ ತುಂಬಾ ಕೋಪಗೊಂಡ ಮಿಚೆಲ್ ಜೋರಾಗಿ ಏನನ್ನೋ ಹೇಳುತ್ತಾ ಅರ್ಷದೀಪ್ ಬಳಿಕ ಬರಲು ಪ್ರಾರಂಭಿಸಿದರು. ಆದರೆ ಅರ್ಷದೀಪ್ ತಾನು ಎಸಗಿದ ಕೃತ್ಯಕ್ಕೆ ಮಿಚೆಲ್ ಬಳಿ ಕ್ಷಮೆಯನ್ನು ಕೇಳದೆ ಮತ್ತೆ ಬೌಲಿಂಗ್ ಮಾಡುವತ್ತ ಗಮನ ಹರಿಸಿದರು. ಇತ್ತ ಮಿಚೆಲ್ ಆಕ್ರೋಶವನ್ನು ಗಮನಿಸಿದ ಸೂರ್ಯಕುಮಾರ್ ಯಾದವ್, ಅವರ ಬಳಿಗೆ ಬಂದು ಸಾಂತ್ವನ ಹೇಳಲು ಪ್ರಯತ್ನಿಸಿದರು. ಹಾಗೆಯೇ ಅಂಪೈರ್, ಅರ್ಷದೀಪ್ ಅವರನ್ನು ಕರೆದು ಹಾಗೆ ಮಾಡದಂತೆ ಸಲಹೆ ನೀಡಿದರು. ಕೊನೆಗೆ ಅರ್ಷದೀಪ್ ತನ್ನ ತಪ್ಪನ್ನು ಒಪ್ಪಿಕೊಂಡು ಮಿಚೆಲ್ ಬಳಿ ಕ್ಷಮೆಯಾಚಿಸಿದ್ದರು.

ದಂಡದ ಜೊತೆಗೆ ಡಿಮೆರಿಟ್ ಪಾಯಿಂಟ್

ಇದೀಗ ಆಟದ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದ ಅರ್ಷದೀಪ್ ಸಿಂಗ್‌ಗೆ ಪಂದ್ಯ ಶುಲ್ಕದ ಶೇಕಡಾ 15 ರಷ್ಟು ದಂಡ ವಿಧಿಸಿದೆ. ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ ಅರ್ಷದೀಪ್ ಈ ಶಿಕ್ಷೆಗೆ ಗುರಿಯಾಗಿದ್ದಾರೆ. ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಅನುಚಿತ ಮತ್ತು/ಅಥವಾ ಅಪಾಯಕಾರಿ ರೀತಿಯಲ್ಲಿ ಚೆಂಡನ್ನು (ಅಥವಾ ಯಾವುದೇ ಇತರ ಕ್ರಿಕೆಟ್ ವಸ್ತು) ಆಟಗಾರನ ಕಡೆಗೆ ಎಸೆಯುವುದಕ್ಕೆ ಸಂಬಂಧಿಸಿದ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.9 ಅನ್ನು ಉಲ್ಲಂಘಿಸಿರುವ ಅರ್ಷದೀಪ್​ಗೆ ದಂಡದ ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ನೀಡಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version