T20 World Cup 2026: ಫೈನಲ್​ನಲ್ಲಿ ಯಾರೇ ಗೆದ್ದರೂ ಹೊಸ ಇತಿಹಾಸ ಸೃಷ್ಟಿ

Source link

“ಸರ್ವೋಚ್ಚ ನಾಯಕ ಯಾರೇ ಆಗಲಿ ಜೀವಂತ ಬಿಡುವುದಿಲ್ಲ” : ಇರಾನ್​​​ಗೆ ಎಚ್ಚರಿಕೆ ನೀಡಿದ ಇಸ್ರೇಲ್

ಟೆಹ್ರಾನ್, ಮಾ.8: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಈಗ ಅಂತಿಮ ಹಂತಕ್ಕೆ ತಲುಪಿದಂತಿದೆ. ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ (Supreme Leader) ಯಾರೇ ಆಗಲಿ, ಅವರನ್ನು ಹುಡುಕಿ ಹುಡುಕಿ ಹತ್ಯೆ ಮಾಡುವುದಾಗಿ ಇಸ್ರೇಲ್ ಅತ್ಯಂತ ಖಡಕ್ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೆ, ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗುವವರನ್ನೂ ಬಿಡುವುದಿಲ್ಲ ಎಂದು ಇಸ್ರೇಲ್ ಗುಡುಗಿದೆ.

ಇರಾನ್‌ನಲ್ಲಿ ಸುಪ್ರೀಂ ಲೀಡರ್ ಹುದ್ದೆಗೆ ಯಾರೇ ಆಯ್ಕೆಯಾದರೂ ಅವರನ್ನು ಇಸ್ರೇಲ್ ಸುಮ್ಮನೆ ಬಿಡುವುದಿಲ್ಲ. ಇಸ್ರೇಲ್ ರಕ್ಷಣಾ ಪಡೆಗಳು ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಿವೆ ಎಂಬ ಸಂದೇಶ ರವಾನೆಯಾಗಿದೆ. ಕೇವಲ ನಾಯಕನನ್ನಷ್ಟೇ ಅಲ್ಲ, ಇರಾನ್‌ನ ಅತ್ಯುನ್ನತ ಮಂಡಳಿಯಲ್ಲಿ ಸುಪ್ರೀಂ ಲೀಡರ್ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಸದಸ್ಯರನ್ನೂ ಇಸ್ರೇಲ್ ಹೊಡೆದು ಹಾಕುವುದಾಗಿ ಎಚ್ಚರಿಸಿದೆ.

ಇದನ್ನೂ ಓದಿ: ಟ್ರಂಪ್ ಮಗನ ಜತೆಗೆ ಉತ್ತರ ಕೊರಿಯಾ ಅಧ್ಯಕ್ಷನ ಮಗಳ ಮದುವೆ ಫಿಕ್ಸ್​​​? ಫೋಟೋ ವೈರಲ್

ಇತ್ತೀಚಿನ ವರ್ಷಗಳಲ್ಲಿ ಇರಾನ್ ಬೆಂಬಲಿತ ಸಂಘಟನೆಗಳ ದಾಳಿ ಮತ್ತು ಇರಾನ್‌ನ ಪರಮಾಣು ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಇಸ್ರೇಲ್ ಈ ಕಠಿಣ ನಿರ್ಧಾರಕ್ಕೆ ಬಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. “ಯಾರೇ ಲೀಡರ್ ಆಗಲಿ, ನಾವು ಅವರನ್ನು ಬಿಡುವುದಿಲ್ಲ. ಹುಡುಕಿ ಹುಡುಕಿ ಹೊಡೆಯುತ್ತೇವೆ” ಎಂಬ ಇಸ್ರೇಲ್‌ನ ಮಾತುಗಳು ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿವೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಫೈನಲ್​ನಲ್ಲಿ ಟಾಸ್ ಸೋತ ಭಾರತ; ಪ್ರಶಸ್ತಿ ಪಂದ್ಯಕ್ಕೆ ಪ್ಲೇಯಿಂಗ್ 11 ಹೀಗಿದೆ

ಹಾಲಿ ಚಾಂಪಿಯನ್ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಟಿ20 ವಿಶ್ವಕಪ್ ಫೈನಲ್ (T20 World Cup Final) ಪಂದ್ಯ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಟಿ20 ವಿಶ್ವಕಪ್ ಫೈನಲ್‌ನಲ್ಲಿ ಈ ಎರಡೂ ತಂಡಗಳು ಪರಸ್ಪರ ಎದುರಾಗುತ್ತಿರುವುದು ಇದೇ ಮೊದಲು. ಎರಡು ಬಾರಿಯ ಚಾಂಪಿಯನ್ ಭಾರತ ನಾಲ್ಕನೇ ಫೈನಲ್ ತಲುಪಿದ್ದು, ಮೂರನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ನೋಡುತ್ತಿದ್ದರೆ, ಇತ್ತ ನ್ಯೂಜಿಲೆಂಡ್ ಎರಡನೇ ಬಾರಿಗೆ ಫೈನಲ್‌ಗೆ ತಲುಪಿದ್ದು, ಮೊದಲ ಟ್ರೋಫಿಯನ್ನು ಎದುರು ನೋಡುತ್ತಿದೆ.

ಟಾಸ್ ಗೆದ್ದ ನ್ಯೂಜಿಲೆಂಡ್

ಭಾರತದ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಭಾರತ ಮೊದಲು ಬ್ಯಾಟಿಂಗ್ ಮಾಡುತ್ತಿದೆ, ಕಿವೀಸ್ ತಂಡದ ಪ್ಲೇಯಿಂಗ್ 11 ನಲ್ಲಿ ಒಂದು ಬದಲಾವಣೆ ಮಾಡಿದ್ದು, ಸ್ಪಿನ್ನರ್ ಕೋಲ್ ಮೆಕ್‌ಕೊಂಚಿ ಬದಲಿಗೆ ಜಾಕೋಬ್ ಡಫಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇತ್ತ ಟಾಸ್ ಗೆದ್ದಿದ್ದರೆ, ಮೊದಲು ಬ್ಯಾಟಿಂಗ್ ಮಾಡುವುದಾಗಿ ಹೇಳಿರುವ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದಿದ್ದಾರೆ.

ಮುಖಾಮುಖಿ ದಾಖಲೆ

ಭಾರತ ಮತ್ತು ನ್ಯೂಜಿಲೆಂಡ್ ಇಲ್ಲಿಯವರೆಗೆ 30 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿವೆ. ಈ ಪಂದ್ಯಗಳಲ್ಲಿ ಭಾರತ 18 ಪಂದ್ಯಗಳನ್ನು ಗೆದ್ದಿದ್ದರೆ, ನ್ಯೂಜಿಲೆಂಡ್ 11 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಟೈ ಆಗಿದೆ. ಸೂಪರ್ ಓವರ್‌ಗಳಲ್ಲಿ ಭಾರತ ಎರಡು ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಮಳೆಯಿಂದಾಗಿ ಟೈ ಆಗಿದೆ. ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಆಡಿದ 16 ಪಂದ್ಯಗಳಲ್ಲಿ ಭಾರತ 11 ರಲ್ಲಿ ಗೆದ್ದಿದೆ.

ಐಸಿಸಿ ಫೈನಲ್ ಮುಖಾಮುಖಿ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಐಸಿಸಿ ಫೈನಲ್ ಇದಾಗಿದೆ. ಆರು ವರ್ಷಗಳ ಅಂತರದ ನಂತರ ಉಭಯ ತಂಡಗಳ ನಡುವೆ ನಡೆಯುತ್ತಿರುವ ಮೂರನೇ ಐಸಿಸಿ ಫೈನಲ್ ಇದು. ಇದಲ್ಲದೆ ಭಾರತ ಮತ್ತು ನ್ಯೂಜಿಲೆಂಡ್ ಮೂರು ಸ್ವರೂಪಗಳಲ್ಲಿ ಐಸಿಸಿ ಫೈನಲ್ ಆಡಿದ ಮೊದಲ ತಂಡಗಳಾಗಿವೆ. 2026 ರ ಟಿ20 ವಿಶ್ವಕಪ್ ಫೈನಲ್‌ಗೂ ಮೊದಲು, ಭಾರತ ಮತ್ತು ನ್ಯೂಜಿಲೆಂಡ್ 2021 ರ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು 2025 ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗಳಲ್ಲಿ ಮುಖಾಮುಖಿಯಾಗಿದ್ದವು.

IND vs NZ, T20 WC Final Live Score: ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ

ಉಭಯ ತಂಡಗಳು

ಭಾರತದ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್, ಅರ್ಶ್ದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.

ನ್ಯೂಜಿಲೆಂಡ್ ತಂಡ: ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಫಿನ್ ಅಲೆನ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಜಾಕೋಬ್ ಡಫಿ, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳೆಯರಲ್ಲಿ ಐರನ್ ಕೊರತೆ ಇದ್ದಾಗ ಪ್ರೆಗ್ನೆನ್ಸಿಗೆ ಪ್ಲಾನ್ ಮಾಡ್ಬಾರ್ದು ಯಾಕೆ?

ಗರ್ಭಧಾರಣೆ ಅಥವಾ ಪ್ರೆಗ್ನೆನ್ಸಿಗೆ (Pregnancy) ಪ್ಲಾನ್ ಮಾಡುವ ಮೊದಲು ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಸಂಪೂರ್ಣವಾಗಿ ಗಮನ ಹರಿಸುವುದು ಅತ್ಯಂತ ಅಗತ್ಯ. ದೇಹದಲ್ಲಿ ಯಾವುದೇ ಪೋಷಕಾಂಶಗಳ ಕೊರತೆ ಇದ್ದರೆ ಮೊದಲು ಅದನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ಅದರಲ್ಲಿಯೂ ದೇಹದಲ್ಲಿ ಐರನ್ (Iron) ಕೊರತೆ ಇದ್ದರೆ ಗರ್ಭಧಾರಣೆಗೂ ಮೊದಲು ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಆದರೆ ಹಲವು ಸಂದರ್ಭಗಳಲ್ಲಿ ಮಹಿಳೆಯರು ಈ ವಿಷಯಗಳ ಬಗ್ಗೆ ಗಮನಹರಿಸುವುದಿಲ್ಲ. ತಜ್ಞರ ಪ್ರಕಾರ, ಐರನ್ ಕೊರತೆ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾದರೆ ಐರನ್ ದೇಹಕ್ಕೆ ಯಾಕೆ ಮುಖ್ಯ? ಗರ್ಭಧಾರಣೆಯ ಸಮಯದಲ್ಲಿ ಐರನ್ ಕೊರತೆ ಯಾಕೆ ಅಪಾಯಕಾರಿ? ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಐರನ್ ದೇಹಕ್ಕೆ ಯಾಕೆ ಮುಖ್ಯ?

ಆರ್‌ಎಂಎಲ್ ಆಸ್ಪತ್ರೆಯ ಮಹಿಳಾ ರೋಗ ವಿಭಾಗದ ಡಾ. ಸಲೋನಿ ಚಡ್ಡಾ ಅವರು ಹೇಳುವ ಪ್ರಕಾರ, ದೇಹದಲ್ಲಿ ಐರನ್ ಕೊರತೆ ಇರುವುದು ಆರೋಗ್ಯಕ್ಕೆ ಒಳ್ಳೆಯ ಸೂಚನೆ ಅಲ್ಲ. ಐರನ್ ದೇಹದಲ್ಲಿ ಹೀಮೋಗ್ಲೋಬಿನ್ ಗೆ ಅಗತ್ಯವಾಗಿದೆ. ಐರನ್ ಕಡಿಮೆ ಇದ್ದರೆ ಹೀಮೋಗ್ಲೋಬಿನ್ ಮಟ್ಟವೂ ಕಡಿಮೆಯಾಗುತ್ತದೆ. ಹೀಮೋಗ್ಲೋಬಿನ್ ದೇಹದ ಎಲ್ಲಾ ಭಾಗಗಳಿಗೆ ರಕ್ತದ ಮೂಲಕ ಆಮ್ಲಜನಕವನ್ನು (ಆಕ್ಸಿಜನ್) ತಲುಪಿಸುವ ಪ್ರಮುಖ ಕೆಲಸ ಮಾಡುತ್ತದೆ. ಆದ್ದರಿಂದ ದೇಹದಲ್ಲಿ ಐರನ್ ಮಟ್ಟ ಸರಿಯಾಗಿರುವುದು ಬಹಳ ಮುಖ್ಯ.

ಗರ್ಭಧಾರಣೆಯ ಸಮಯದಲ್ಲಿ ಐರನ್ ಕೊರತೆ ಯಾಕೆ ಅಪಾಯಕಾರಿ?

ಡಾ. ಸಲೋನಿ ಅವರ ಪ್ರಕಾರ, ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಐರನ್ ಕೊರತೆ ಇದ್ದರೆ ಅದು ಮಗುವಿನ ಮೇಲೂ ಪರಿಣಾಮ ಬೀರುತ್ತದೆ. ಮಗು ಪ್ರೀಮ್ಯಾಚುರ್ ಆಗಿ ಜನಿಸುವ ಸಂಭವವಿರುತ್ತದೆ. ಮಗುವಿನ ತೂಕ ಸಾಮಾನ್ಯಕ್ಕಿಂತ ಕಡಿಮೆ ಇರಬಹುದು, ಡೆಲಿವರಿ ಸಮಯದಲ್ಲಿ ಹೆಚ್ಚು ರಕ್ತಸ್ರಾವ (ಬ್ಲೀಡಿಂಗ್) ಆಗುವ ಅಪಾಯವೂ ಹೆಚ್ಚಾಗಿರುತ್ತದೆ. ಗರ್ಭಧಾರಣೆಗೆ ಮೊದಲೇ ದೇಹದಲ್ಲಿ ಐರನ್ ಕೊರತೆ ಇದ್ದರೆ, ಗರ್ಭಧಾರಣೆಯ ಸಮಯದಲ್ಲಿ ಈ ಸಮಸ್ಯೆ ಇನ್ನಷ್ಟು ಗಂಭೀರವಾಗಬಹುದು.

ಇದನ್ನೂ ಓದಿ: ಪ್ರೆಗ್ನೆನ್ಸಿಯಲ್ಲಿ ಚಹಾ ಕುಡಿಯುವುದು ಸುರಕ್ಷಿತವೇ? ಇದು ಅಸಿಡಿಟಿ ಹೆಚ್ಚಿಸುತ್ತದೆಯೇ ತಿಳಿದುಕೊಳ್ಳಿ

ಮಹಿಳೆಯರಲ್ಲಿ ಐರನ್ ಕೊರತೆ ಉಂಟಾಗುವುದಕ್ಕೆ ಕಾರಣವೇನು?

ಸಾಮಾನ್ಯವಾಗಿ ಮಹಿಳೆಯರಲ್ಲಿ ಐರನ್ ಕೊರತೆ ಅಸಮತೋಲನ ಆಹಾರ ಪದ್ಧತಿ ಮತ್ತು ಪೋಷಕಾಂಶಗಳ ಕೊರತೆಯಿಂದ ಉಂಟಾಗುತ್ತದೆ. ಸರಿಯಾದ ಪೌಷ್ಟಿಕ ಆಹಾರ ಸೇವಿಸದಿದ್ದರೆ ಈ ಸಮಸ್ಯೆ ಕಾಣಿಸಬಹುದು. ಅದರಲ್ಲಿಯೂ ಐರನ್ ಕೊರತೆ ಕಂಡುಬರುವ ಮೊದಲು ಕೆಲವು ಸಾಮಾನ್ಯ ಲಕ್ಷಣಗಳು ಕಂಡುಬರುತ್ತದೆ. ಅದರಲ್ಲಿ ಹೆಚ್ಚು ದಣಿವಾಗುವುದು, ದೌರ್ಬಲ್ಯ, ತಲೆ ಸುತ್ತು, ಶಕ್ತಿಯ ಕೊರತೆಯಂತಹ ಲಕ್ಷಣಗಳು ಕಾಣಿಸಿಕೊಂಡರೆ ದೇಹದಲ್ಲಿ ಐರನ್ ಕೊರತೆ ಇರುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ವೈದ್ಯರು ರಕ್ತ ಪರೀಕ್ಷೆಯ ಮೂಲಕ ಐರನ್ ಮಟ್ಟವನ್ನು ಪರಿಶೀಲಿಸಿ, ಅಗತ್ಯವಿದ್ದರೆ ಆಹಾರದಲ್ಲಿ ಬದಲಾವಣೆ ಮತ್ತು ಔಷಧಿಗಳ ಮೂಲಕ ಈ ಸಮಸ್ಯೆಯನ್ನು ಸರಿಪಡಿಸಲು ಸಲಹೆ ನೀಡುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

“ನಮ್ಮನ್ನು ಮುಸ್ಲಿಂ, ಕ್ರಿಶ್ಚಿಯನ್ನರು ಸೋಲಿಸಿಲ್ಲ ಹಿಂದೂಗಳು ಸೋಲಿಸಿದ್ದು”: ಭಟ್ಕಳದಲ್ಲಿ ಅಬ್ಬರಿಸಿದ ಅನಂತಕುಮಾರ್ ಹೆಗಡೆ

ಭಟ್ಕಳ ಮಾ.8: ಲೋಕಸಭಾ ಚುನಾವಣೆಯ ಟಿಕೆಟ್ ಕೈತಪ್ಪಿದ ಬಳಿಕ ಸಾರ್ವಜನಿಕವಾಗಿ ಮೌನಕ್ಕೆ ಶರಣಾಗಿದ್ದ ಮಾಜಿ ಸಂಸದ ಅನಂತಕುಮಾರ್ ಹೆಗಡೆ, ಬರೋಬ್ಬರಿ ಎರಡು ವರ್ಷಗಳ ಬಳಿಕ ಇಂದು ಭಟ್ಕಳದ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡರು. ನಗರದ ಹಳೆ ಬಸ್ ನಿಲ್ದಾಣದ ಬಳಿ ನಡೆದ ‘ಹಿಂದೂ ಸಂಗಮ’ ಸಮಾವೇಶದಲ್ಲಿ ಭಾಗವಹಿಸಿ ಅವರು ತಮ್ಮ ಎಂದಿನ ಶೈಲಿಯಲ್ಲೇ ಘರ್ಜಿಸಿದ್ದಾರೆ. “90% ಋಷಿಗಳು ಬ್ರಾಹ್ಮಣರಲ್ಲ. ವಾಲ್ಮೀಕಿ, ವಿಶ್ವಾಮಿತ್ರ ಬ್ರಾಹ್ಮಣರಲ್ಲ. ಈ ದೇಶದಲ್ಲಿ ಜಾತಿಗೆ ಎಂದಿಗೂ ಬೆಲೆಯಿರಲಿಲ್ಲ, ಯೋಗ್ಯತೆಗೆ ಮಾತ್ರ ಬೆಲೆಯಿತ್ತು. ಇಂದು ಜಾತಿಗೆ ಬೆಲೆ ಕೊಟ್ಟಿದ್ದು ನಮ್ಮಂತಹ ಬುದ್ಧಿವಂತರು. ಇತಿಹಾಸ ಓದಿದರೆ ಸತ್ಯ ತಿಳಿಯುತ್ತದೆ” ಎಂದು ಅವರು ಹೇಳಿದರು.

“ಜಾತ್ಯತೀತತೆ ಎಂದರೆ ಅದು ಹಿಂದುತ್ವ. ಬೇರೆ ರಾಷ್ಟ್ರಗಳಿಂದ ಬಂದವರಿಗೆ ಮಸೀದಿ, ಚರ್ಚ್ ಕಟ್ಟಲು ಅವಕಾಶ ನೀಡಿದ್ದೇವೆ ಎಂದರೆ ನಮಗಿಂತ ದೊಡ್ಡ ಜಾತ್ಯತೀತರು ಯಾರಿದ್ದಾರೆ? ತಾಕತ್ತಿದ್ದರೆ ಬಾಂಗ್ಲಾದೇಶಕ್ಕೆ ಹೋಗಿ ಜಾತ್ಯತೀತತೆಯ ಪಾಠ ಮಾಡಿ” ಎಂದು ಸವಾಲು ಹಾಕಿದರು.

“ನಮ್ಮನ್ನು ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಸೋಲಿಸಿಲ್ಲ. ಹಿಂದೂಗಳನ್ನು ಸೋಲಿಸಿದ್ದು ನಮ್ಮವರೇ ಆದ ಜಯಚಂದ ಮತ್ತು ಮಲ್ಲಪ್ಪ ಶೆಟ್ಟಿಯಂತಹ ದ್ರೋಹಿಗಳು. ನಾವು ಒಂದಾಗದಿದ್ದರೆ ನಮ್ಮ ಪರಿಸ್ಥಿತಿ ‘ಗೋವಿಂದ ಗೋವಿಂದ’ ಆಗಲಿದೆ” ಎಂದು ಎಚ್ಚರಿಸಿದರು. “ಆರ್.ಎಸ್.ಎಸ್ ಮುಗಿಸುತ್ತೇವೆ ಎನ್ನುವವರು ಭ್ರಮೆಯಲ್ಲಿದ್ದಾರೆ. ಹುಲಿ-ಸಿಂಹವನ್ನು ಯಾರೂ ದೇವರಿಗೆ ಬಲಿ ಕೊಡಲ್ಲ, ಕುರಿಯನ್ನಷ್ಟೇ ಬಲಿ ಕೊಡೋದು. ನಮ್ಮ ಸಂಘಟನೆಯನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ” ಎಂದು ಗುಡುಗಿದರು.

ಇದನ್ನೂ ಓದಿ: ಮತ್ತೆ ಸಕ್ರಿಯ ರಾಜಕೀಯಕ್ಕೆ ಅನಂತ್ ಕುಮಾರ್ ಹೆಗಡೆ? ಹಿಂದೂ ಸಂಗಮದ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಜ್ಜು

“ಇಂದು ಆಫ್ರಿಕಾದಲ್ಲಿ ನಮಗಿಂತ ಸುಂದರವಾಗಿ ಗಣೇಶ ಹಬ್ಬ ಆಚರಿಸುತ್ತಾರೆ. ಚೀನಾದ ಗ್ರಾಮೀಣ ಪ್ರದೇಶಗಳಲ್ಲಿ ಭಾರತೀಯರಿಗೆ ಅಪಾರ ಗೌರವವಿದೆ. ಜಗತ್ತು ನಮ್ಮತ್ತ ನೋಡುತ್ತಿದೆ, ನಾವಿಂದು ಎದ್ದು ನಿಲ್ಲಬೇಕಿದೆ” ಎಂದರು. ಸುಮಾರು 3,000ಕ್ಕೂ ಹೆಚ್ಚು ಜನರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಭಟ್ಕಳ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶಿಕ್ಷಣ ಕೇವಲ ದುಡ್ಡು ಮಾಡುವುದಕ್ಕಷ್ಟೇ ಎಂಬಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಸಂಸ್ಕಾರಯುತ ಬದುಕಿಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

IND vs NZ: ತಂಡದಿಂದಲೇ ಹೊರಗಿದ್ದವ ಟೂರ್ನಮೆಂಟ್ ಆಟಗಾರ ಪ್ರಶಸ್ತಿ ಗೆದ್ದ; ಸಂಜು ಸೂಪರ್ ಸ್ಯಾಮ್ಸನ್

ಸಂಜು ಸ್ಯಾಮ್ಸನ್‌… ಸಾಮರ್ಥ್ಯ, ಧೃಡ ಸಂಕಲ್ಪ ಬಿಟ್ಟು ಕೊಡದ ಮನೋಭಾವ ಇದ್ದರೆ ಏನು ಬೇಕಾದರು ಸಾಧಿಸಬಹುದು ಎಂಬುದಕ್ಕೆ ತಕ್ಕ ಉದಾಹರಣೆ. ಟಿ20 ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳ ಮೊದಲು ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆಗಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದ ಸ್ಯಾಮ್ಸನ್‌, ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ತೋರಿದ ಕೆಟ್ಟ ಪ್ರದರ್ಶನದ ಪರಿಣಾಮವಾಗಿ ಟಿ20 ವಿಶ್ವಕಪ್ ತಂಡದಲ್ಲಿ ಎರಡನೇ ಆರಂಭಿಕ ಆಟಗಾರನಾಗಬೇಕಾಯಿತು. ಈ ಎಲ್ಲಾ ಅವಮಾನಗಳ ನಡುವೆಯೂ ಸಿಕ್ಕ ಅವಕಾಶವನ್ನು ದೋಚಿಕೊಂಡ ಸಂಜು ಸ್ಯಾಮ್ಸನ್‌ ಸತತ ಮೂರು ಪಂದ್ಯಗಳಲ್ಲಿ ಅರ್ಧಶತಕಳ ಗೆಲುವಿನ ಇನ್ನಿಂಗ್ಸ್ ಆಡಿದರು. ಇದಕ್ಕೆ ಉಡುಗೊರೆಯಾಗಿ ಸಂಜು ಸ್ಯಾಮ್ಸನ್​ಗೆ ಟೂರ್ನಮೆಂಟ್ ಆಟಗಾರ ಪ್ರಶಸ್ತಿಯೂ ಲಭಿಸಿತು.

ಲೀಗ್ ಹಂತದಲ್ಲಿ 1 ಪಂದ್ಯ

ಟಿ20 ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ಗೆ ತಂಡದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಆದರೆ ಎರಡನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅನಾರೋಗ್ಯಕ್ಕೆ ತುತ್ತಾದ ಕಾರಣ ಸಂಜುಗೆ ಆಡುವ ಅವಕಾಶ ಸಿಕ್ಕಿತು. ನಮೀಬಿಯಾ ವಿರುದ್ಧದ ಲೀಗ್ ಪಂದ್ಯದಲ್ಲಿ 22 ರನ್ ಬಾರಿಸಿದ ಸಂಜುಗೆ ನಂತರ ಅವಕಾಶ ಸಿಗಲಿಲ್ಲ. ಆದರೆ ಅಭಿಷೇಕ್ ಶರ್ಮಾರ ಕಳಪೆ ಪ್ರದರ್ಶನ ಹಾಗೂ ರಿಂಕು ಸಿಂಗ್ ಅವರ ತಂದೆಯ ನಿಧನದಿಂದಾಗಿ ತಂಡದಲ್ಲಿ ಆಡುವ ಅವಕಾಶ ಪಡೆದುಕೊಂಡ ಸಂಜು ಆ ನಂತರ ನಿರ್ಮಿಸಿದ್ದು ಇತಿಹಾಸ.

ಹ್ಯಾಟ್ರಿಕ್ ಅರ್ಧಶತಕ

ಜಿಂಬಾಬ್ವೆ ವಿರುದ್ಧದ ಸೂಪರ್ 8 ಪಂದ್ಯದಲ್ಲಿ 24 ರನ್ ಬಾರಿಸಿದ ಸಂಜು ಮುಂದಿನ ಮೂರು ನಿರ್ಣಾಯಕ ಪಂದ್ಯಗಳಲ್ಲಿ ಭಾರತದ ಗೆಲುವಿನ ಹೀರೋ ಎನಿಸಿಕೊಂಡರು. ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಸೂಪರ್ 8 ಪಂದ್ಯದಲ್ಲಿ ಸ್ಮರಣೀಯ ಇನ್ನಿಂಗ್ಸ್ ಆಡಿದ ಸಂಜು ಆರಂಭಿಕನಾಗಿ ಬಂದು ಕೊನೆಯವರೆಗೂ ಅಜೇಯರಾಗಿ ಉಳಿದು 97 ರನ್ ಬಾರಿಸಿ ತಂಡವನ್ನು ಸೆಮಿಫೈನಲ್‌ಗೇರಿಸಿದ್ದರು. ನಂತರ ಸೆಮಿಫೈನಲ್​ನಲ್ಲೂ ಅಬ್ಬರಿಸಿದ ಸಂಜು ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ 89 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಇದೀಗ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲೂ ಸಂಜು ಬ್ಯಾಟ್​ನಿಂದ 89 ರನ್​ಗಳ ಇನ್ನಿಂಗ್ಸ್ ಮೂಡಿಬಂತು.

ಸ್ಯಾಮ್ಸನ್​ಗೆ ಟೂರ್ನಮೆಂಟ್ ಆಟಗಾರ ಪ್ರಶಸ್ತಿ

ಈ ವಿಶ್ವಕಪ್‌ನಲ್ಲಿ ಕೇವಲ ಐದು ಪಂದ್ಯಗಳಲ್ಲಿ ಆಡಲು ಅವಕಾಶ ಪಡೆದಿದ್ದ ಸಂಜು ಸ್ಯಾಮ್ಸನ್‌ 80.2 ಸರಾಸರಿಯಲ್ಲಿ 321 ರನ್ ಬಾರಿಸುವ ಮೂಲಕ ಒಂದು ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದರು. ಹಾಗೆಯೇ ಟಿ20 ವಿಶ್ವಕಪ್‌ನಲ್ಲಿ ಸ್ಯಾಮ್ಸನ್ 24 ಸಿಕ್ಸರ್‌ಗಳನ್ನು ಬಾರಿಸಿದರು. ಇದಲ್ಲದೆ ನಾಲ್ಕು ಪಂದ್ಯಗಳಲ್ಲಿ ಮೊದಲ ಓವರ್‌ನಲ್ಲಿ ಸಿಕ್ಸರ್‌ ಬಾರಿಸುವ ಮೂಲಕ ವಿಶ್ವ ದಾಖಲೆಯನ್ನು ಸೃಷ್ಟಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

ಬೆಂಗಳೂರು, ಮಾರ್ಚ್​ 08: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ (by-election) ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar)​ ಎರಡೂ  ಕ್ಷೇತ್ರಕ್ಕೆ 16-16 ನಾಯಕರನ್ನೊಳಗೊಂಡ ಉಸ್ತುವಾರಿ ಸಮಿತಿ ರಚನೆ ಮಾಡಿದ್ದಾರೆ. ಬಾಗಲಕೋಟೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತ್ ಕುಮಾರ್ ಮತ್ತು ದಾವಣಗೆರೆಗೆ ಕಾಱಧ್ಯಕ್ಷ ಮಂಜುನಾಥ್ ಭಂಡಾರಿ ಸಂಚಾಲಕರಾಗಿದ್ದಾರೆ.

ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ನಿಧನದಿಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಮತ್ತು ಮತ್ತೋರ್ವ ಮಾಜಿ ಸಚಿವ ವಿಎಸ್​​​ ಮೇಟಿ ನಿಧನದಿಂದ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ಕೂಡ ತೆರವಾಗಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಕ್ಷೇತ್ರಗಳಿಗೆ ಶೀಘ್ರದಲ್ಲೇ ಉಪಚುನಾವಣೆ ನಡೆಯುವ ಹಿನ್ನಲೆ ಇದೀಗ ಚುನಾವಣಾ ಸಿದ್ಧತೆಗಳನ್ನು ಕೈಗೊಳ್ಳಲು ಚುನಾವಣಾ ಆಯೋಗ ಉಸ್ತುವಾರಿ ಸಮಿತಿಯನ್ನು ನೇಮಕ ಮಾಡಿದೆ.

ದಾವಣಗೆರೆ ಉಪ ಚುನಾವಣೆ ಉಸ್ತುವಾರಿ ಸಮಿತಿ ಸದಸ್ಯರು

  • ಮಂಜುನಾಥ್ ಭಂಡಾರಿ, ಎಂ.ಎಲ್.ಸಿ/ಡಬ್ಲ್ಯೂ.ಪಿ, ಕೆ.ಪಿ.ಸಿ.ಸಿ – ಸಂಚಾಲಕ
  • ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ
  • ಸಚಿವ ಕೆ.ಎಚ್. ಮುನಿಯಪ್ಪ
  • ಸಚಿವ ಜಮೀರ್ ಅಹಮದ್ ಖಾನ್​​
  • ಸಚಿವ ಈಶ್ವರ್ ಖಂಡ್ರೆ
  • ಸಚಿವ ಕೃಷ್ಣ ಬೈರೇಗೌಡ
  • ಸಚಿವ ಶರಣಪ್ರಕಾಶ್ ಪಾಟೀಲ್​
  • ಸಚಿವ ಪ್ರಿಯಾಂಕ್ ಖರ್ಗೆ
  • ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​​
  • ಸಚಿವ ಸಂತೋಷ್ ಲಾಡ್​
  • ಸಚಿವ ಮಧು ಬಂಗಾರಪ್ಪ
  • ಸಲೀಂ ಅಹಮದ್, ಮುಖ್ಯ ಸಚೇತಕರು, ವಿಧಾನ ಪರಿಷತ್ತು
  • ತನ್ವೀರ್ ಸೇಠ್, ಶಾಸಕರು/ಡಬ್ಲ್ಯೂ.ಪಿ, ಕೆ.ಪಿ.ಸಿ.ಸಿ, ಮಾಜಿ ಸಚಿವ
  • ಮಾಜಿ ಎಂಎಲ್​ಸಿ ವಿ.ಆರ್. ಸುದರ್ಶನ್​
  • ಮಾಜಿ ಸಚಿವ ಎಚ್.ಎಂ. ರೇವಣ್ಣ
  • ಮಾಜಿ ಸಚಿವ ಎಚ್. ಆಂಜನೇಯ

ಬಾಗಲಕೋಟೆ ಉಪ ಚುನಾವಣೆ ಉಸ್ತುವಾರಿ ಸಮಿತಿ ಸದಸ್ಯರು

  • ವಸಂತ ಕುಮಾರ್, ಎಂ.ಎಲ್.ಸಿ/ಡಬ್ಲ್ಯೂ.ಪಿ, ಕೆ.ಪಿ.ಸಿ.ಸಿ – ಸಂಚಾಲಕರು
  • ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ
  • ಸಚಿವ ಸತೀಶ್ ಜಾರಕಿಹೊಳಿ
  • ಸಚಿವ ಎಂ ಬಿ ಪಾಟೀಲ್​​
  • ಸಚಿವ ಶಿವಾನಂದ ಪಾಟೀಲ್​​
  • ಸಚಿವ ಶಿವರಾಜ್ ತಂಗಡಗಿ
  • ಸಚಿವ ಶರಣಬಸಪ್ಪ ದರ್ಶನಾಪುರ
  • ಸಚಿವ ಬೈರತಿ ಸುರೇಶ್​​
  • ಸಚಿವ ರಹೀಮ್ ಖಾನ್​
  • ಶಾಸಕ ಸಿ.ಎಸ್. ನಾಡಗೌಡ
  • ಮಾಜಿ ಸಚಿವ ರಾಜಶೇಖರ್ ಪಾಟೀಲ್​​
  • ಶಾಸಕ ವಿಜಯಾನಂದ ಕಾಶಪ್ಪನವರ್​
  • ಎಂಎಲ್​ಸಿ ಎಫ್.ಎಚ್. ಜಕ್ಕಪ್ಪನವರ್​​
  • ಎಂಎಲ್​ಸಿ ಬಸನಗೌಡ ಬಾದರ್ಲಿ
  • ಮಾಜಿ ಎಂಎಲ್​ಸಿ ಸೋಮಣ್ಣ ಬೇವಿನಮರದ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs NZ: ಟಿ20 ವಿಶ್ವಕಪ್‌ ಗೆದ್ದು ಇತಿಹಾಸವನ್ನೇ ಬುಡಮೇಲು ಮಾಡಿದ ಟೀಂ ಇಂಡಿಯಾ

2026 ರ ಟಿ20 ವಿಶ್ವಕಪ್‌ (T20 World Cup 2026) ಫೈನಲ್​ನಲ್ಲಿ ಆತಿಥೇಯ ಟೀಂ ಇಂಡಿಯಾ, ನ್ಯೂಜಿಲೆಂಡ್ (India vs New Zealand) ತಂಡವನ್ನು 96 ರನ್‌ಗಳಿಂದ ಸೋಲಿಸಿ ದಾಖಲೆಯ ಮೂರನೇ ಬಾರಿಗೆ ಟ್ರೋಫಿ ಎತ್ತಿಹಿಡಿಯಿತು. ಇದು ಭಾರತಕ್ಕೆ ಸತತ ಎರಡನೇ ಟಿ20 ವಿಶ್ವಕಪ್ ಟ್ರೋಫಿಯೂ ಆಗಿದೆ. 2024 ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಚಾಂಪಿಯನ್ ಆಗಿದ್ದ ಭಾರತ, ಇದೀಗ ಸೂರ್ಯಕುಮಾರ್ ನಾಯಕತ್ವದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಇದು ಮಾತ್ರವಲ್ಲದೆ ಈ ಫೈನಲ್ ಗೆಲ್ಲುವ ಮೂಲಕ ಟೀಂ ಇಂಡಿಯಾ (Team India) ಟಿ20 ವಿಶ್ವಕಪ್ ಇತಿಹಾಸದಲ್ಲಿ ಹಿಂದೆಂದೂ ನೋಡಿರದ ಸಾಧನೆಯನ್ನು ಮಾಡಿ ತೋರಿಸಿದೆ.

ಸತತ 2ನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ

ಇದುವರೆಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ, ಯಾವುದೇ ಹಾಲಿ ಚಾಂಪಿಯನ್ ತಂಡಕ್ಕೆ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ 2026 ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಆ ಸಾಧನೆಯನ್ನು ಮಾಡಿದೆ. ಭಾರತವು ಈಗ ಸತತ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ಮೊದಲ ದೇಶವಾಗಿದೆ.

ಚಾಂಪಿಯನ್ ಆದ ಮೊದಲ ಆತಿಥೇಯ ತಂಡ

ಆತಿಥೇಯ ತಂಡವಾಗಿ ಭಾರತ ಮತ್ತೊಂದು ಸಾಧನೆ ಮಾಡಿದೆ. ಇಲ್ಲಿಯವರೆಗೆ, ಯಾವುದೇ ಆತಿಥೇಯ ತಂಡವು ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿರಲಿಲ್ಲ. ಇದೀಗ ಟೀಂ ಇಂಡಿಯಾ ಆ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ.

ಟಿ20 ವಿಶ್ವಕಪ್‌ನಲ್ಲಿ ಕಿವೀಸ್ ವಿರುದ್ಧ ಮೊದಲ ಜಯ

ಭಾರತ ತಂಡವು ಟಿ20 ವಿಶ್ವಕಪ್‌ ಇತಿಹಾಸದಲ್ಲಿ ನ್ಯೂಜಿಲೆಂಡ್ ವಿರುದ್ಧ ಎಂದಿಗೂ ಜಯ ಸಾಧಿಸಿರಲಿಲ್ಲ. ಆದರೀಗ 2026 ರ ಟಿ20 ವಿಶ್ವಕಪ್ ಫೈನಲ್​ನಲ್ಲಿ ಕಿವೀಸ್ ವಿರುದ್ಧ ಗೆಲ್ಲುವ ಮೂಲಕ ಭಾರತ ಆ ಸೋಲಿನ ಸರಣಿಯನ್ನು ಮುರಿದಿದೆ. ಇದು ಉಭಯ ತಂಡಗಳ ನಡುವಿನ ನಾಲ್ಕನೇ ಟಿ20 ವಿಶ್ವಕಪ್ ಮುಖಾಮುಖಿಯಾಗಿದ್ದು, ಇದರಲ್ಲಿ ಭಾರತ ಜಯಗಳಿಸಿದೆ. ಇದಕ್ಕೂ ಮೊದಲು, ನ್ಯೂಜಿಲೆಂಡ್ 2007, 2016 ಮತ್ತು 2021 ರ ಮುಖಾಮುಖಿಗಳಲ್ಲಿ ಭಾರತವನ್ನು ಮಣಿಸಿತ್ತು.

IND vs NZ: ವಿಶ್ವ ವಿಜೇತ ಭಾರತಕ್ಕೆ ದಾಖಲೆಯ ಮೂರನೇ ಟಿ20 ವಿಶ್ವಕಪ್ ಕಿರೀಟ

ಟಿ20 ಸ್ವರೂಪದಲ್ಲಿ ಕಿವೀಸ್ ವಿಫಲ

ವಾಸ್ತವವಾಗಿ ಏಕದಿನ ಹಾಗೂ ಟೆಸ್ಟ್ ಮಾದರಿಯಲ್ಲಿ ಭಾರತವನ್ನು ಸೋಲಿಸುವ ಮೂಲಕ ನ್ಯೂಜಿಲೆಂಡ್ ತನ್ನ ಮೊದಲ ಎರಡು ಐಸಿಸಿ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಆದರೆ ಟಿ20 ಮಾದರಿಯಲ್ಲಿ ಅದನ್ನು ಮಾಡಲು ಕಿವೀಸ್ ಸಾಧ್ಯವಾಗಲಿಲ್ಲ. 2000 ರಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ಭಾರತವನ್ನು ಸೋಲಿಸಿದ್ದ ಕಿವೀಸ್ ಟ್ರೋಫಿ ಎತ್ತಿಹಿಡಿದಿತ್ತು. ಹಾಗೆಯೇ 2021 ರ ಟೆಸ್ಟ್ ಚಾಂಪಿಯನ್‌ಶಿಪ್​ ಫೈನಲ್​ನಲ್ಲಿ ಭಾರತವನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಗಿತ್ತು. ಆದರೆ 2026 ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಕ್ರಿಕೆಟ್‌ನ ಮತ್ತೊಂದು ಸ್ವರೂಪದಲ್ಲಿ ಕಿವೀಸ್ ಮೇಲುಗೈ ಸಾಧಿಸದಂತೆ ಮಾಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ವಿಶ್ವ ವಿಜೇತ ಭಾರತಕ್ಕೆ ದಾಖಲೆಯ ಮೂರನೇ ಟಿ20 ವಿಶ್ವಕಪ್ ಕಿರೀಟ

2024 ರ ಟಿ20 ವಿಶ್ವಕಪ್ ಫೈನಲ್​ನಲ್ಲಿ (T20 World Cup) ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾವನ್ನು ಮಣಿಸಿ ಎರಡನೇ ಬಾರಿಗೆ ಟಿ20 ವಿಶ್ವಕಪ್ ಹಿಡಿದು ಇಲ್ಲಿಗೆ 617 ದಿನಗಳು ಕಳೆದಿವೆ. ಇದೀಗ ಈ 617 ದಿನಗಳ ನಂತರ ಹಾಲಿ ಚಾಂಪಿಯನ್ ಟೀಂ ಇಂಡಿಯಾ (Team India) ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಹಮದಾಬಾದ್​ನ ಮೋದಿ ಮೈದಾನದಲ್ಲಿ ನಡೆದ 2026 ರ ಟಿ20 ವಿಶ್ವಕಪ್ ಫೈನಲ್​ನಲ್ಲಿ ನ್ಯೂಜಿಲೆಂಡ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿದ ಟೀಂ ಇಂಡಿಯಾ (India vs New Zealand) ತನ್ನ ಮೂರನೇ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತು. ವಾಸ್ತವವಾಗಿ ಈ ಆವೃತ್ತಿಯಲ್ಲಿ ಉಭಯ ತಂಡಗಳು ಅದ್ಭುತ ಪ್ರದರ್ಶನ ನೀಡಿ ಫೈನಲ್​ಗೇರಿದ್ದವು. ಹೀಗಾಗಿ ಈ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿತ್ತು. ಇದಕ್ಕೆ ಕಾರಣವೂ ಇತ್ತು. ಅದೇನೆಂದರೆ ಟಿ20 ವಿಶ್ವಕಪ್‌ ಇತಿಹಾಸದಲ್ಲಿ ಟೀಂ ಇಂಡಿಯಾ, ಕಿವೀಸ್ ವಿರುದ್ಧ ಗೆದ್ದೇ ಇರಲಿಲ್ಲ. ಹೀಗಾಗಿ ಅದೊಂದು ಭಯದೊಂದಿಗೆ ಅಖಾಡಕ್ಕಿಳಿದಿದ್ದ ಟೀಂ ಇಂಡಿಯಾ ಪಂದ್ಯದ ಆರಂಭದಿಂದಲೇ ಕಿವೀಸ್ ಮೇಲೆ ಸವಾರಿ ಮಾಡಿತು. ಇದರ ಪರಿಣಾಮವಾಗಿ ಭಾರತದ ಮುಂದೆ ಮಂಡಿಯೂರಿದ ಕಿವೀಸ್, ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ವಿರುದ್ಧ ಮೊದಲ ಸೋಲು ಅನುಭವಿಸುವುದರ ಜೊತೆಗೆ ಚಾಂಪಿಯನ್ ಪಟ್ಟದಿಂದಲೂ ವಂಚಿತವಾಯಿತು.

ಭಾರತಕ್ಕೆ ಸ್ಫೋಟಕ ಆರಂಭ

ಮೋದಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ರನ್​ ಮಳೆಯೇ ಹರಿಯಿತು. ಕಿವೀಸ್ ಬೌಲರ್​ಗಳನ್ನು ಮೊದಲ ಓವರ್​ನಿಂದಲೇ ತರಾಟೆಗೆ ತೆಗೆದುಕೊಂಡ ಟೀಂ ಇಂಡಿಯಾ ಬ್ಯಾಟರ್​ಗಳು ಆರಂಭದಲೇ ಕಿವೀಸ್ ಪಡೆಯನ್ನು ಪಂದ್ಯದಿಂದ ಹೊರಹಾಕಿದರು. ಉಳಿದ ಕೆಲಸವನ್ನು ತಂಡದ ಬೌಲರ್​ಗಳು ಮಾಡಿ ಮೂಗಿಸಿದರು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಿತು. ಇಡೀ ವಿಶ್ವಕಪ್‌ನಲ್ಲಿ ರನ್ ಬರ ಎದುರಿಸಿದ್ದ ಅಭಿಷೇಕ್ ಶರ್ಮಾ ಕೊನೆಗೂ ಲಯ ಕಂಡುಕೊಳ್ಳುವುದರೊಂದಿಗೆ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಸಂಜು ಹ್ಯಾಟ್ರಿಕ್ ಅರ್ಧಶತಕ

ಇತ್ತ ಎಂದಿನಂತೆ ತನ್ನ ಅಮೋಘ ಫಾರ್ಮ್ ಮುಂದುವರೆಸಿದ ಸಂಜು ಸ್ಯಾಮ್ಸನ್, ಸತತ ಮೂರನೇ ಪಂದ್ಯದಲ್ಲಿ ಅರ್ಧಶತಕ ಪೂರೈಸುವುದರ ಮೂಲಕ ಹ್ಯಾಟ್ರಿಕ್ ಅರ್ಧಶತಕ ದಾಖಲಿಸಿದರು. ಈ ಜೋಡಿಯ ಅಬ್ಬರದಿಂದಾಗಿ ಟೀಂ ಇಂಡಿಯಾ ಮೊದಲ ವಿಕೆಟ್​ಗೆ 98 ರನ್ ಕಲೆಹಾಕಿತು. ಇದಕ್ಕೆ ತೆಗೆದುಕೊಂಡಿದ್ದು ಕೇವಲ 43 ಎಸೆತಗಳು ಮಾತ್ರ. 52 ರನ್ ಬಾರಿಸಿದ ಅಭಿಷೇಕ್ ಶರ್ಮಾ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದುಬಿತ್ತು. ಆನಂತರ ಬಂದ ಇಶಾನ್ ಕಿಶನ್, ಸಂಜು ಸ್ಯಾಮ್ಸನ್‌ ಜೊತೆಗೂಡಿ ರನ್ ವೇಗವನ್ನು ಮತ್ತಷ್ಟು ಹೆಚ್ಚಿಸಿದರು. ಇವರಿಬ್ಬರು ಶತಕದ ಜೊತೆಯಾಟವನ್ನು ಹಂಚಿಕೊಳ್ಳುವ ಮೂಲಕ ತಂಡವನ್ನು 200 ರನ್​ಗಳ ಗಡಿ ದಾಟಿಸಿದರು.

ದಾಖಲೆಯ 255 ರನ್​ಗಳ ಗುರಿ

ಕೇವಲ 15.1 ಓವರ್​ಗಳಲ್ಲಿ ತಂಡವನ್ನು 200 ರನ್​ಗಳ ಗಡಿ ದಾಟಿಸಿದ ಈ ಜೋಡಿ ಸ್ಯಾಮ್ಸನ್‌ ವಿಕೆಟ್ ಪತನದೊಂದಿಗೆ ಬೇರ್ಪಟ್ಟಿತು. ಸತತ ಮೂರನೇ ಪಂದ್ಯದಲ್ಲೂ ಶತಕ ವಂಚಿತರಾದ ಸಂಜು ಸ್ಯಾಮ್ಸನ್ 89 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಸಂಜು ಬೆನ್ನಲ್ಲೇ ಇಶಾನ್ ಕಿಶನ್ ಕೂಡ 54 ರನ್​​ಗಳಿಗೆ ಪೆವಿಲಿಯನ್‌ ಸೇರಿಕೊಂಡರು. ನಾಯಕ ಸೂರ್ಯಕುಮಾರ್ ಯಾದವ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಜಿಮ್ಮಿ ನಿಶಮ್ ಎಸೆದ ಈ ಓವರ್​ನಲ್ಲಿ ಭಾರತ ಪ್ರಮುಖ 3 ವಿಕೆಟ್​ಗಳನ್ನು ಕಳೆದುಕೊಂಡಿತು. ಆದ್ದರಿಂದ ತಂಡದ ರನ್ ವೇಗಕ್ಕೆ ಬ್ರೇಕ್ ಬಿದ್ದಿತು. ಆದಾಗ್ಯೂ ಕೊನೆಯ ಓವರ್​ನಲ್ಲಿ ಶಿವಂ ದುಬೆ (26 ರನ್) ಅಬ್ಬರಿಸುವ ಮೂಲಕ ತಂಡವನ್ನು 255 ರನ್​ಗಳಿಗೆ ಕೊಂಡೊಯ್ದರು.

ಆರಂಭದಲ್ಲೇ ಸೋಲೊಪ್ಪಿಕೊಂಡ ಕಿವೀಸ್

ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್​ಗೆ ಮೊದಲ ಓವರ್​ನಲ್ಲೇ ಆಘಾತ ಎದುರಾಗುವುದರಲಿತ್ತು. ಆದರೆ ಶಿವಂ ದುಬೆ, ಫಿಲ್ ಆಲೆನ್ ಅವರ ಸುಲಭ ಕ್ಯಾಚ್ ಕೈಚೆಲಿದರು. ಸೆಮಿಫೈನಲ್‌ನಲ್ಲಿ ದಾಖಲೆಯ ಶತಕ ಬಾರಿಸಿದ್ದ ಆಲೆನ್ ಕ್ಯಾಚ್ ಬಿಟ್ಟಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿತು. ಇದಕ್ಕೆ ಪೂರಕವಾಗಿ ಸೈಫರ್ಟ್​ ಮುಂದಿನ ಓವರ್​ನಲ್ಲಿ ಬರೋಬ್ಬರಿ 21 ರನ್ ಬಾರಿಸಿದರು. ಇದು ತಂಡವನ್ನು ಒತ್ತಡಕ್ಕೆ ತಳ್ಳಿದಂತೆ ಕಾಣುತ್ತಿತ್ತು. ಆದರೆ ಮೂರನೇ ಓವರ್​ನಲ್ಲಿ ದಾಳಿಗಿಳಿದ ಅಕ್ಷರ್ ಆಲೆನ್ ಇನ್ನಿಂಗ್ಸ್​ಗೆ ಅಂತ್ಯ ಹಾಡಿದರು. ನಂತರ ಬಂದ ರಚಿನ್ ರವೀಂದ್ರಗೆ ಜಸ್ಪ್ರೀತ್ ಬುಮ್ರಾ ಮೊದಲ ಎಸೆತದಲ್ಲೇ ಪೆವಿಲಿಯನ್‌ ದಾರಿ ತೋರಿಸಿದರು. ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಫಿಲಿಫ್ಸ್ ಆಟವೂ 5 ರನ್​ಗಳಿಗೆ ಅಂತ್ಯವಾಯಿತು. ಹೀಗಾಗಿ ಕಿವೀಸ್ 47 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡಿತು.

IND vs NZ: 18 ಎಸೆತಗಳಲ್ಲಿ ಅರ್ಧಶತಕ; ಫೈನಲ್‌ನಲ್ಲಿ ವಿಶ್ವ ದಾಖಲೆ ಬರೆದ ಅಭಿಷೇಕ್ ಶರ್ಮಾ

ಬೂಮ್ ಬೂಮ್ ಬುಮ್ರಾ ಮ್ಯಾಜಿಕ್

ತಂಡದ ಪರ ಏಕಾಂಗಿ ಹೋರಾಟ ನೀಡಿದ ಆರಂಭಿಕ ಟಿಮ್ ಸೈಫರ್ಟ್​ 26 ಎಸೆತಗಳಲ್ಲಿ 52 ರನ್ ಬಾರಿಸಿ ಏಕಾಂಗಿ ಹೋರಾಟ ನೀಡಿದರು. ಆದರೆ ಅವರು ಕೂಡ ವರುಣ್ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಕಿಶನ್​ಗೆ ಕ್ಯಾಚಿತ್ತು ಔಟಾದರು. ಸೈಫರ್ಟ್​ ಔಟಾಗುತ್ತಿದ್ದಂತೆ ಕಿವೀಸ್ ಸೋಲು ಖಚಿತವಾಯಿತು. ಅದರಂತೆ ಆ ಬಳಿಕ ಬಂದ ಕಿವೀಸ್ ಬ್ಯಾಟರ್​ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರಿಕೊಂಡರು. ಒಂದು ತುದಿಯಲ್ಲಿ ಹೋರಾಟ ನೀಡಲು ಯತ್ನಿಸಿದ ನಾಯಕ ಸ್ಯಾಂಟ್ನರ್ 43 ರನ್​ಗಳ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಕಿವೀಸ್ 159 ರನ್​ಗಳಿಸಲಷ್ಟೇ ಶಕ್ತವಾಗಿ 96 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

March 8-14 Career Horoscope: ಈ ರಾಶಿಯವರ ವೃತ್ತಿಜೀವನದಲ್ಲಿ ಸ್ಥಿರತೆ; ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ

ಮಾರ್ಚ್ 08ರಿಂದ 14 ರವರೆಗೆ ಎರಡನೇ ವಾರ. ಈ ವಾರದಲ್ಲಿ ಕಠಿಣ ಶ್ರಮ, ಸಮಯಪ್ರಜ್ಞೆ, ವರ್ಗಾವಣೆ, ಗೌರವ, ಭೋಗ, ಪ್ರಯಾಣ ಎಲ್ಲವೂ ಉದ್ಯೋಗ ಸಂಬಂಧವಾಗಿ ಹೆಚ್ಚು ಅನುಭವಕ್ಕೆ ಬರಲಿದೆ. ಎಲ್ಲವನ್ನೂ ಸ್ವೀಕರಿಸಿ ನೆಮ್ಮದಿಯಿಂದ ಬಾಳಬೇಕಾದುದು ಕರ್ತವ್ಯ ಕೂಡ ಆಗಿರುತ್ತದೆ.

ಮೇಷ: ​ನಿಮ್ಮ ದಶಮ ಸ್ಥಾನದ ಅಧಿಪತಿ ಶನಿ. ಶನಿಯು ಲಾಭ ಸ್ಥಾನದಲ್ಲಿರುವುದರಿಂದ ವೃತ್ತಿಜೀವನದಲ್ಲಿ ಸ್ಥಿರತೆ ಇರಲಿದೆ. ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದೆ. ಹಳೆಯ ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ಸಮಯವಿದು. ಉದ್ಯೋಗ ಬದಲಾವಣೆಗೆ ಯೋಚಿಸುತ್ತಿದ್ದರೆ ಉತ್ತಮ ಅವಕಾಶಗಳು ಹುಡುಕಿ ಬರಲಿವೆ.

ವೃಷಭ: ​ನಿಮ್ಮ ದಶಮ ಸ್ಥಾನದ ಅಧಿಪತಿ ಶನಿ. ಭಾಗ್ಯ ಸ್ಥಾನದಲ್ಲಿ ಶನಿಯ ಸಂಚಾರವು ವೃತ್ತಿಯಲ್ಲಿ ಸ್ವಲ್ಪ ವಿಳಂಬ ತಂದರೂ ಯಶಸ್ಸು ಖಚಿತ. ವಿದೇಶಿ ಸಂಬಂಧಿತ ಉದ್ಯೋಗಗಳಲ್ಲಿ ಲಾಭವಾಗಲಿದೆ. ನಿಮ್ಮ ಶಿಸ್ತು ಮತ್ತು ಸಮಯಪ್ರಜ್ಞೆ ಕಚೇರಿಯಲ್ಲಿ ಎಲ್ಲರ ಗಮನ ಸೆಳೆಯಲಿದೆ. ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಸಿದ್ಧರಾಗಿರಿ, ಇದು ಭವಿಷ್ಯದ ಪ್ರಗತಿಗೆ ದಾರಿಯಾಗಲಿದೆ.

ಮಿಥುನ: ​ನಿಮ್ಮ ದಶಮ ಸ್ಥಾನದ ಅಧಿಪತಿ ಗುರು. ಗುರುವು ಲಾಭ ಸ್ಥಾನದಲ್ಲಿ ಸಂಚರಿಸುತ್ತಿರುವುದರಿಂದ ವೃತ್ತಿಯಲ್ಲಿ ಧನಲಾಭ ಹೆಚ್ಚಲಿದೆ. ವ್ಯಾಪಾರಸ್ಥರಿಗೆ ಹೊಸ ಹೂಡಿಕೆಗಳು ಲಾಭದಾಯಕವಾಗಿರಲಿವೆ. ಉದ್ಯೋಗದಲ್ಲಿ ಬಡ್ತಿ ಅಥವಾ ವರ್ಗಾವಣೆಯ ಸಾಧ್ಯತೆಯಿದೆ. ಸಹೋದ್ಯೋಗಿಗಳ ಸಹಕಾರದಿಂದ ಕ್ಲಿಷ್ಟಕರ ಕೆಲಸಗಳನ್ನು ಸುಲಭವಾಗಿ ಮುಗಿಸುವಿರಿ. ಗೌರವ-ಪ್ರತಿಷ್ಠೆಗಳು ಹೆಚ್ಚಾಗಲಿವೆ.

ಕರ್ಕಾಟಕ: ​ನಿಮ್ಮ ದಶಮ ಸ್ಥಾನದ ಅಧಿಪತಿ ಮಂಗಳ. ಮಂಗಳನು ಭಾಗ್ಯ ಸ್ಥಾನದಲ್ಲಿ ಶುಕ್ರನೊಂದಿಗೆ ಇರುವುದರಿಂದ ವೃತ್ತಿಯಲ್ಲಿ ಸೃಜನಶೀಲತೆ ಹೆಚ್ಚಲಿದೆ. ಕಲೆ, ಮಾಧ್ಯಮ ಅಥವಾ ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಅದ್ಭುತ ಅವಕಾಶಗಳು ಸಿಗಲಿವೆ. ಕೋಪವನ್ನು ನಿಯಂತ್ರಿಸಿದರೆ ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೇರಬಹುದು. ಹಠಾತ್ ಧನಲಾಭದ ಯೋಗವಿದೆ, ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ.

​ಸಿಂಹ: ​ನಿಮ್ಮ ದಶಮ ಸ್ಥಾನದ ಅಧಿಪತಿ ಶುಕ್ರ. ಶುಕ್ರನು ಸಪ್ತಮ ಸ್ಥಾನದಲ್ಲಿರುವುದರಿಂದ ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚಿನ ಲಾಭವಾಗಲಿದೆ. ಸ್ತ್ರೀ ವರ್ಗದ ಸಹಕಾರದಿಂದ ವೃತ್ತಿಯಲ್ಲಿ ಪ್ರಗತಿ ಕಾಣುವಿರಿ. ಐಷಾರಾಮಿ ವಸ್ತುಗಳ ವ್ಯಾಪಾರಸ್ಥರಿಗೆ ಈ ವಾರ ಲಾಭದಾಯಕ. ಕೆಲಸದ ಸ್ಥಳದಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಮನ್ನಣೆ ಸಿಗಲಿದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಇದು ಶುಭ ಸಮಯ.

ಕನ್ಯಾ: ​ನಿಮ್ಮ ದಶಮ ಸ್ಥಾನದ ಅಧಿಪತಿ ಬುಧ. ಬುಧನು ಷಷ್ಠ ಸ್ಥಾನದಲ್ಲಿರುವುದರಿಂದ ವೃತ್ತಿಯಲ್ಲಿ ಸ್ಪರ್ಧೆ ಹೆಚ್ಚಿರಲಿದೆ. ಗುಪ್ತ ಶತ್ರುಗಳ ಬಗ್ಗೆ ಎಚ್ಚರಿಕೆ ಇರಲಿ. ವಾದ-ವಿವಾದಗಳಿಂದ ದೂರವಿರುವುದು ಒಳಿತು. ಲೆಕ್ಕಪತ್ರ ಮತ್ತು ಸಂವಹನ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಕೆಲಸದ ಒತ್ತಡವಿರಲಿದೆ. ಯೋಜಿತವಾಗಿ ಕೆಲಸ ಮಾಡಿದರೆ ಯಶಸ್ಸು ನಿಮ್ಮದಾಗಲಿದೆ. ಆರೋಗ್ಯದ ಕಡೆಗೂ ಗಮನವಿರಲಿ.

ತುಲಾ: ​ನಿಮ್ಮ ದಶಮ ಸ್ಥಾನದ ಅಧಿಪತಿ ಚಂದ್ರ. ಚಂದ್ರನ ವೇಗದ ಸಂಚಾರವು ವೃತ್ತಿಯಲ್ಲಿ ಅಸ್ಥಿರತೆ ತರಬಹುದು, ಆದರೆ ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ನೀಡಲಿದೆ. ಮಾನಸಿಕವಾಗಿ ದೃಢವಾಗಿರುವುದು ಮುಖ್ಯ. ಹಾಲಿನ ಉತ್ಪನ್ನ ಅಥವಾ ದ್ರವ ರೂಪದ ವ್ಯಾಪಾರ ಮಾಡುವವರಿಗೆ ಲಾಭದಾಯಕ ವಾರ. ಕೆಲಸದ ಸ್ಥಳದಲ್ಲಿ ಭಾವನಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳಬೇಡಿ, ಬುದ್ಧಿವಂತಿಕೆಯಿಂದ ಕಾರ್ಯನಿರ್ವಹಿಸಿ.

ವೃಶ್ಚಿಕ: ​ನಿಮ್ಮ ದಶಮ ಸ್ಥಾನದ ಅಧಿಪತಿ ಸೂರ್ಯ. ಸೂರ್ಯನು ಸುಖ ಸ್ಥಾನದಲ್ಲಿರುವುದರಿಂದ ಸರ್ಕಾರಿ ಕೆಲಸಗಳಲ್ಲಿ ಲಾಭವಾಗಲಿದೆ. ರಾಜಕೀಯ ವ್ಯಕ್ತಿಗಳಿಗೆ ಅಥವಾ ಸಮಾಜ ಸೇವಕರಿಗೆ ಉತ್ತಮ ಸಮಯ. ವೃತ್ತಿಯಲ್ಲಿ ಅಧಿಕಾರ ಪ್ರಾಪ್ತಿಯಾಗುವ ಲಕ್ಷಣಗಳಿವೆ. ತಂದೆಯ ಮಾರ್ಗದರ್ಶನದಿಂದ ವೃತ್ತಿಯಲ್ಲಿರುವ ಗೊಂದಲಗಳು ಬಗೆಹರಿಯಲಿವೆ. ಸ್ಥಿರಾಸ್ತಿ ವ್ಯವಹಾರದಲ್ಲಿ ತೊಡಗಿರುವವರಿಗೆ ಉತ್ತಮ ಆದಾಯ ಸಿಗಲಿದೆ.

ಧನು: ​ನಿಮ್ಮ ದಶಮ ಸ್ಥಾನದ ಅಧಿಪತಿ ಬುಧ. ಬುಧನು ತೃತೀಯ ಸ್ಥಾನದಲ್ಲಿರುವುದರಿಂದ ಸಂವಹನ ಕಲೆ ಮತ್ತು ಬರವಣಿಗೆಯಿಂದ ಲಾಭವಾಗಲಿದೆ. ಸಣ್ಣ ಪ್ರಯಾಣಗಳು ವೃತ್ತಿಗೆ ಪೂರಕವಾಗಿರಲಿವೆ. ಹೊಸ ತಂತ್ರಜ್ಞಾನ ಕಲಿಕೆಗೆ ಇದು ಸೂಕ್ತ ಕಾಲ. ಕಿರಿಯ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ವ್ಯಾಪಾರ ವಿಸ್ತರಣೆಗೆ ನೀವು ಮಾಡುವ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ.

ಮಕರ: ​ನಿಮ್ಮ ದಶಮ ಸ್ಥಾನದ ಅಧಿಪತಿ ಶುಕ್ರ. ಶುಕ್ರನು ಎರಡನೇ ಮನೆಯಲ್ಲಿರುವುದರಿಂದ ವೃತ್ತಿಯಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಮಾತಿನ ಚತುರತೆಯಿಂದ ಕೆಲಸಗಳನ್ನು ಸಾಧಿಸಿಕೊಳ್ಳುವಿರಿ. ಬ್ಯಾಂಕಿಂಗ್ ಅಥವಾ ಹಣಕಾಸು ಕ್ಷೇತ್ರದಲ್ಲಿರುವವರಿಗೆ ಬಡ್ತಿಯ ಯೋಗವಿದೆ. ಕುಟುಂಬದ ವ್ಯಾಪಾರದಲ್ಲಿ ತೊಡಗಿರುವವರಿಗೆ ಲಾಭ ದ್ವಿಗುಣವಾಗಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ.

​ಕುಂಭ: ​ನಿಮ್ಮ ದಶಮ ಸ್ಥಾನದ ಅಧಿಪತಿ ಮಂಗಳ. ಮಂಗಳನು ಲಗ್ನದಲ್ಲಿರುವುದರಿಂದ ವೃತ್ತಿಯಲ್ಲಿ ಅತಿಯಾದ ಆತ್ಮವಿಶ್ವಾಸ ಮತ್ತು ಆತುರ ಬೇಡ. ಶಿಸ್ತಿನಿಂದ ಕೆಲಸ ಮಾಡಿದರೆ ಯಶಸ್ಸು ಸಿಗಲಿದೆ. ರಕ್ಷಣಾ ಪಡೆ ಅಥವಾ ಇಂಜಿನಿಯರಿಂಗ್ ಕ್ಷೇತ್ರದಲ್ಲಿರುವವರಿಗೆ ವಿಶೇಷ ಮನ್ನಣೆ ಸಿಗಲಿದೆ. ಸ್ವಂತ ಉದ್ಯೋಗ ಆರಂಭಿಸಲು ಬಯಸುವವರಿಗೆ ಸಮಯ ಪೂರಕವಾಗಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.

ಮೀನ: ​ನಿಮ್ಮ ದಶಮ ಸ್ಥಾನದ ಅಧಿಪತಿ ಗುರು. ಗುರುವು ದ್ವಿತೀಯ ಸ್ಥಾನದಲ್ಲಿರುವುದರಿಂದ ವಾಣಿಜ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಉತ್ತಮ ಫಲಿತಾಂಶ ಸಿಗಲಿದೆ. ವೃತ್ತಿಯಲ್ಲಿ ಹಿರಿಯರ ಸಲಹೆಗಳು ವರದಾನವಾಗಲಿವೆ. ಹಣಕಾಸಿನ ಹರಿವು ಸುಗಮವಾಗಿರಲಿದೆ. ದೂರದ ಊರಿನಿಂದ ಕೆಲಸದ ಆಫರ್ ಬರಬಹುದು. ನಿಮ್ಮ ದಕ್ಷತೆಯಿಂದ ವೃತ್ತಿಯಲ್ಲಿ ವಿಶೇಷ ಸ್ಥಾನಮಾನ ಗಳಿಸುವಿರಿ.

ಲೋಹಿತ ಹೆಬ್ಬಾರ್ – 8762924271

Source link

Exit mobile version