ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ನಡುಗಿದ ಮಲೆನಾಡು: ಕುಸಿದ ಧರೆ, ರಸ್ತೆಗೆ ಉರುಳಿದ ಮರಗಳು – Kannada News | Chikkamagaluru malnad shivers as intermittent rain triggers landslides trees fall on roads

ಚಿಕ್ಕಮಗಳೂರು, ಆಗಸ್ಟ್​​ 10: ಮಳೆಯನಾಡು ಎಂದೇ ಪ್ರಸಿದ್ಧವಾಗಿರುವ ಕಾಫಿನಾಡು ಚಿಕ್ಕಮಗಳೂರು (chikkamagaluru) ಜಿಲ್ಲೆಯ ಮಲೆನಾಡು ಭಾಗದಲ್ಲಿ ಕೊಂಚ ವಿರಾಮ ನೀಡಿದ್ದ ಮಳೆ (Rain) ಮತ್ತೆ ತನ್ನ ಆರ್ಭಟವನ್ನು ಮುಂದುವರಿಸಿದೆ. ಕೊಪ್ಪ, ಶೃಂಗೇರಿ, ಕಳಸ ಹಾಗೂ ಮೂಡಿಗೆರೆ ತಾಲೂಕಿನ ಹಲವು ಭಾಗಗಳಲ್ಲಿ ರಣಮಳೆಯಾಗುತ್ತಿದ್ದು, ವಾಡಿಕೆ ಪ್ರಮಾಣದಷ್ಟು ಮಳೆಯಾಗದಿದ್ದರೂ ಬಿಟ್ಟು ಬಿಟ್ಟು ಸುರಿಯುತ್ತಿರುವ ನಿರಂತರ ಗಾಳಿ-ಮಳೆಯಿಂದಾಗಿ ಭೂಮಿಯ ತೇವಾಂಶ ಹೆಚ್ಚಾಗಿ ನಾನಾ ಅವಾಂತರಗಳು ಸಂಭವಿಸುತ್ತಿವೆ.

ಮಳೆಗೆ ಧರೆ ಕುಸಿತ: ಮನೆ ನುಗ್ಗಿದ ಮಣ್ಣು ಮಿಶ್ರಿತ ನೀರು

ಕೊಪ್ಪ ತಾಲೂಕಿನ ಅಂಬಳಿಕೆ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಗೆ ಪವನ್ ಎಂಬುವವರ ಮನೆಯ ಬಳಿ ಇರುವ ಧರೆ ಕುಸಿಯುತ್ತಿದೆ. ಧರೆ ಕುಸಿದು ಮನೆಯ ಹಿಂಭಾಗಕ್ಕೆ ಬಂದಿದ್ದು. ಮಳೆ ಹೆಚ್ಚಾದರೆ ಸಂಪೂರ್ಣ ಧರೆ ಕುಸಿಯುವ ಆತಂಕ ಎದುರಾಗಿದೆ. ಮನೆಯೊಳಗು ಮಣ್ಣು ಮಿಶ್ರಿತ ನೀರು ನುಗ್ಗಿದ್ದು, ಸದ್ಯ ಮನೆ ಖಾಲಿ ಮಾಡಿದ್ದಾರೆ. ಇನ್ನಷ್ಟು ಮಳೆಯಾದರೆ 100 ಅಡಿಗಳ ಎತ್ತರದಿಂದ ಧರೆ ಕುಸಿದು ಮನೆ ಮೇಲೆ ಬೀಳುವ ಆತಂಕ ಎದುರಾಗಿದೆ.

ಇದನ್ನೂ ಓದಿ: ಮಡಿಕೇರಿಯ ಸ್ಟೋನ್ ಹಿಲ್‌ನಲ್ಲಿ ಭೂಕುಸಿತ: ಪೊಲೀಸ್ ವಸತಿಗೃಹಗಳತ್ತ ಕೊಚ್ಚಿಬಂತು ನೂರಾರು ಟನ್ ಕಸದ ರಾಶಿ!

ಕಾಫಿನಾಡ ಮಲೆನಾಡು ಭಾಗದಲ್ಲಿ ಗಾಳಿ-ಮಳೆ ಅಬ್ಬರ ಮುಂದುವರೆದಿದ್ದು, ನಿರಂತರ ಮಳೆಗೆ ಭೂಮಿಯ ತೇವಾಂಶ ಹೆಚ್ಚಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ-ಪದೇ ಗುಡ್ಡ ಕುಸಿಯುತ್ತಿದೆ. ಶೃಂಗೇರಿ ತಾಲೂಕಿನ ಸುತ್ತಮುತ್ತ ನಿರಂತರ ಮಳೆಯಿಂದ ನಾನಾ ಅವಾಂತರಗಳು ಸೃಷ್ಠಿಯಾಗಿವೆ. ಶೃಂಗೇರಿ ತಾಲೂಕಿನ ಕಡೇಮನೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಬೃಹತ್ ಗುಡ್ಡ ಕುಸಿದಿದೆ.

ಶೃಂಗೇರಿ-ಮಂಗಳೂರು ಹೆದ್ದಾರಿ ನಡುವೆ ಸಂಚಾರಕ್ಕೆ ಅಡಚಣೆ!

ಗಾಳಿ-ಮಳೆ ಹೆಚ್ಚಾದಂತೆ ರಸ್ತೆ ಬದಿಯ ಗುಡ್ಡವು ಮರಗಳ ಸಮೇತ ಧರೆಗೆ ಉರುಳಿದ್ದು, ರಾಷ್ಟ್ರೀಯ ಹೆದ್ದಾರಿ 169ರ ಕಾರ್ಕಳ-ಮಂಗಳೂರು- ಶೃಂಗೇರಿ ನಡುವಿನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ರಸ್ತೆಗೆ ಬಿದ್ದಿರುವ ಭಾರೀ ಪ್ರಮಾಣದ ಮಣ್ಣು ಮತ್ತು ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಭರದಿಂದ ಸಾಗಿದೆ. ಆದರೆ, ಮಳೆಯಿಂದಾಗಿ ಸ್ವಲ್ಪ ಸ್ವಲ್ಪ ಮಣ್ಣು ಜಾರುತ್ತಿದ್ದು, ತೆರವು ಕಾರ್ಯ ಸವಾಲಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಪ್ರಯಾಣಿಸುವ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಮನವಿ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ಮಾರ್ಗದಲ್ಲಿ ಮಳೆ ಹೆಚ್ಚಾದಂತೆಲ್ಲ ಭೂಮಿಯ ತೇವಾಂಶ ಹೆಚ್ಚಾಗಿ ಧರೆ ಕುಸಿತ ಪ್ರಕರಣಗಳು ಹೆಚ್ಚಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಹುಟ್ಟಿಸಿದೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ತುಂಗಾ, ಭದ್ರಾ ಅಬ್ಬರಕ್ಕೆ ಹೊಲ-ಗದ್ದೆಗಳು ಜಲಾವೃತ

ಕೊಂಚ ವಿರಾಮ ನೀಡಿದ್ದ ಮಳೆ ಮತ್ತೆ ಮಲೆನಾಡು ಭಾಗದಲ್ಲಿ ಆರ್ಭಟ ಮುಂದುವರೆಸಿದೆ. ಕೊಪ್ಪ, ಶೃಂಗೇರಿ ಭಾಗದಲ್ಲಿ ಧರೆ ಕುಸಿಯುವ ಆತಂಕ ಸೃಷ್ಟಿಯಾಗಿದೆ. ವಾಡಿಕೆ ಪ್ರಮಾಣದಷ್ಟು ಮಳೆಯಾಗದೆ ಇದ್ದರು ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ಅನಾಹುತಗಳು‌ ಸಂಭವಿಸುತ್ತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಂಚದ ಕೆಳಗೆ ಈ ಕೆಲವು ವಸ್ತುಗಳನ್ನು ಇಡಲೇಬಾರದು; ಯಾಕೆ ಗೊತ್ತಾ? – Kannada News | These items should not be stored under the bed

ಹಾಸಿಗೆಯ (bed) ಕೆಳಗಿರುವ ಖಾಲಿ ಜಾಗವನ್ನು  ಯಾಕೆ ಸುಮ್ಮನೆ ಬಿಡೋದು ಎಂದು ಅನೇಕರು ಆ ಜಾಗದಲ್ಲಿ ಒಂದಷ್ಟು ವಸ್ತುಗಳನ್ನು  ಸಂಗ್ರಹಿಸಿಡಲು ಬಳಸುತ್ತಾರೆ. ಹೆಚ್ಚುವರಿ ಬೆಡ್‌ಶೀಟ್‌, ದಿಂಬು, ಬಟ್ಟೆಗಳು, ಪುಸ್ತಕಗಳು, ಆಟಿಕೆಗಳು ಮತ್ತು ರಟ್ಟಿನ ಪೆಟ್ಟಿಗೆಗಳಂತಹ ವಸ್ತುಗಳನ್ನು ಹೆಚ್ಚಾಗಿ ಮಂಚದ ಕೆಳಗೆಯೇ ಇಡಲಾಗುತ್ತದೆ. ಆದರೆ ಹೀಗೆ ವಸ್ತುಗಳನ್ನು ಸಂಗ್ರಹಿಸಿದಾಗ ಮಂಚದ ಕೆಳಗೆ ಧೂಳು, ತೇವಾಂಶ ಮತ್ತು ಜೇಡರ ಬಲೆಗಳು ಸಂಗ್ರಹವಾಗಬಹುದು. ಇದು ಕೀಟಗಳನ್ನು ಆಕರ್ಷಿಸುವುದಲ್ಲದೆ, ಈ ಧೂಳು, ತೇವಾಂಶ ಆರೋಗ್ಯದ ಮೇಲೂ ಋಣಾತ್ಮಕ ಪರಿಣಾಮವನ್ನು ಉಂಟು ಮಾಡಬಹುದು. ಆದ್ದರಿಂದ ಈ ಕೆಲವೊಂದು ವಸ್ತುಗಳನ್ನು ತಪ್ಪಿಯೂ ಬೆಡ್‌ ಕೆಳಗೆ ಸ್ಟೋರ್‌ ಮಾಡಲು ಹೋಗಬೇಡಿ.

ಮಂಚದ ಕೆಳಗೆ ಯಾವೆಲ್ಲಾ ವಸ್ತುಗಳನ್ನು ಸಂಗ್ರಹಿಸಿಡಬಾರದು?

ಹಾಸಿಗೆಯ ಕೆಳಗೆ ತೇವಾಂಶವಿದ್ದರೆ, ಅದರ ಕಾರಣದಿಂದಾಗಿ ಕೆಲವು ವಸ್ತುಗಳು ಕೊಳೆಯಬಹುದು, ಇದರಿಂದ ಕೆಟ್ಟ ವಾಸನೆ, ಬ್ಯಾಕ್ಟೀರಿಯಾ ಬೆಳೆಯಬಹುದು. ಈ ಅಂಶಗಳು ಮನೆಯ ನೈರ್ಮಲ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಲ್ಲದೆ, ಅಲರ್ಜಿಗಳು ಮತ್ತು ಉಸಿರಾಟದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಹಾಸಿಗೆಯ ಕೆಳಗಿರುವ ಜಾಗವನ್ನು ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ನೀವು ಅಲ್ಲಿ ಏನು ಸಂಗ್ರಹಿಸುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿರುವುದು ಮುಖ್ಯ.

ಕಾರ್ಡ್‌ಬೋರ್ಡ್ ಪೆಟ್ಟಿಗೆಗಳು: ಅನೇಕ ಜನರು ಬೆಡ್‌ಶೀಟ್‌, ಹಳೆಯ ಬಟ್ಟೆಗಳನ್ನೆಲ್ಲಾ ಕಾರ್ಡ್‌ಬೋರ್ಡ್‌ಗಳಲ್ಲಿ ಸಂಗ್ರಹಿಸಿ, ಅದನ್ನು ಮಂಚದ ಕೆಳಗೆ ಇಟ್ಟುಬಿಡುತ್ತಾರೆ. ಈ ಕಾರ್ಡ್‌ಬೋರ್ಡ್ ತೇವಾಂಶವನ್ನು ಸುಲಭವಾಗಿ ಹೀರಿಕೊಳ್ಳುವ ಕಾರಣ, ಇದು ಪೆಟ್ಟಿಗೆಗಳು ಮೃದುವಾಗಲು, ಅಚ್ಚು ಬೆಳೆಯಲು ಮತ್ತು ವಾಸನೆ ಉಂಟಾಗಲು ಕಾರಣವಾಗಬಹುದು. ಅಲ್ಲದೆ ಜಿರಳೆಗಳಂತಹ ಸಣ್ಣ ಕೀಟಗಳು ಸಹ ಕಾರ್ಡ್‌ಬೋರ್ಡ್‌ ಪೆಟ್ಟಿಗೆಯೊಳಗೆ ಅಡಗಿಕೊಳ್ಳಬಹುದು. ಆದ್ದರಿಂದ, ಸ್ಟೋರೆಜ್‌ಗಾಗಿ ಪ್ಲಾಸ್ಟಿಕ್ ಪೆಟ್ಟಿಗೆಗಳನ್ನು ಬಳಸುವುದು ಉತ್ತಮ.

ಬಟ್ಟೆಗಳು ಮತ್ತು ದಿಂಬುಗಳು:  ಕಂಬಳಿ, ದಿಂಬುಗಳನ್ನು ಹಾಗೆಯೇ ಹಾಸಿಗೆಯ ಕೆಳಗೆ ಇಟ್ಟಯ ಬಿಡುವುದು ಸೂಕ್ತವಲ್ಲ. ಇದು ಧೂಳು, ತೇವಾಂಶ ಸಂಗ್ರಹವಾಗಲು ಕಾರಣವಾಗಬಹುದು. ಆದ್ದರಿಂದ ಇವುಗಳನ್ನು ಗಾಳಿಯಾಡದ ಚೀಲಗಳಲ್ಲಿ ಹಾಕಿ ಸಂಗ್ರಹಿಸಿಡುವುದು ಸೂಕ್ತ.

ಪಾದರಕ್ಷೆಗಳು ಮತ್ತು ಕ್ರೀಡಾ ಸಾಮಗ್ರಿಗಳು:   ಚಪ್ಪಲಿಗಳು, ಬೂಟುಗಳು ಮತ್ತು ಕ್ರೀಡಾ ಸಾಮಗ್ರಿಗಳು ಕೊಳಕು, ಧೂಳು, ತೇವಾಂಶ ಮತ್ತು ಬ್ಯಾಕ್ಟೀರಿಯಾಗಳನ್ನು ಸಂಗ್ರಹಿಸಬಹುದು. ಅವುಗಳನ್ನು ಹಾಸಿಗೆಯ ಕೆಳಗೆ ಸಂಗ್ರಹಿಸುವುದರಿಂದ ಕೆಟ್ಟ ವಾಸನೆ ಬರುವುದಲ್ಲದೆ, ಕೋಣೆಯ ಸ್ವಚ್ಛತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಶೂಗಳು ಮತ್ತು ಚಪ್ಪಲಿಗಳನ್ನು ಪ್ರತ್ಯೇಕ ಶೂ ರ್ಯಾಕ್‌ನಲ್ಲಿ ಸಂಗ್ರಹಿಸುವುದು ಉತ್ತಮ.

ಇದನ್ನೂ ಓದಿ: ಮನೆ ಕ್ಲೀನ್‌ ಮಾಡೋದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಖತ್‌ ಪ್ರಯೋಜನಕಾರಿಯಂತೆ

ಪ್ರಮುಖ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳು: ಆಧಾರ್ ಕಾರ್ಡ್‌ಗಳು, ಪಾಸ್‌ಪೋರ್ಟ್‌ಗಳು ಸೇರಿದಂತೆ ಪ್ರಮುಖ ಪತ್ರಗಳು, ಲ್ಯಾಪ್‌ಟಾಪ್‌ಗಳು ಮತ್ತು ಕ್ಯಾಮೆರಾಗಳಂತಹ ಎಲೆಕ್ಟ್ರಾನಿಕ್‌  ವಸ್ತುಗಳನ್ನು ಹಾಸಿಗೆಯ ಕೆಳಗೆ ಇಡುವುದು ಸೂಕ್ತವಲ್ಲ. ತೇವಾಂಶ ಮತ್ತು ಧೂಳಿಗೆ ಒಡ್ಡಿಕೊಳ್ಳುವುದರಿಂದ ಅವು ಹಾನಿಗೊಳಗಾಗಬಹುದು.

ಆಹಾರ ಮತ್ತು ಪಾನೀಯಗಳು: ತಿಂಡಿ ಪ್ಯಾಕೆಟ್‌ಗಳು ಮತ್ತು ಸಾಕುಪ್ರಾಣಿಗಳ ಆಹಾರವನ್ನು ಎಂದಿಗೂ ಹಾಸಿಗೆಯ ಕೆಳಗೆ ಸಂಗ್ರಹಿಸಬಾರದು. ಅವುಗಳ ವಾಸನೆಯು ಇರುವೆಗಳು, ಇಲಿಗಳು ಮತ್ತು ಜಿರಳೆಗಳಂತಹ ಕೀಟಗಳನ್ನು ಆಕರ್ಷಿಸುತ್ತದೆ. ಆಹಾರವನ್ನು ಯಾವಾಗಲೂ ಅಡುಗೆಮನೆ ಅಥವಾ ಪ್ಯಾಂಟ್ರಿಯಲ್ಲಿ ಗಾಳಿಯಾಡದ ಪಾತ್ರೆಗಳಲ್ಲಿ ಸಂಗ್ರಹಿಸಬೇಕು.

ಇದರ ಹೊರತಾಗಿ  ಶಾಸ್ತ್ರಗಳ ಪ್ರಕಾರ ಮುರಿದ ಪ್ರತಿಮೆಗಳು, ಒಡೆದ ಗಾಜು, ಕೊಳಕು ಬಟ್ಟೆಗಳು, ಪೊರಕೆ, ಎಲೆಕ್ಟ್ರಾನಿಕ್‌ ಉಪಕರಣ, ಆಭರಣಗಳು, ಹಣ, ಭೂ ಪತ್ರಗಳು, ಶೈಕ್ಷಣಿಕ ದಾಖಲೆಗಳು ಇತ್ಯಾದಿಗಳನ್ನು ಹಾಸಿಗೆಯ ಕೆಳಗೆ ಇಡುವುದರಿಂದ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಸಾಧನೆ ಮಾಡಿದ ಮೊದಲ ಆಸೀಸ್ ಕ್ರಿಕೆಟಿಗ ಮಿಚೆಲ್ ಮಾರ್ಷ್​ – Kannada News | The Hundred: Mitchell Marsh Achieves 7000 T20 Runs, Becomes Top Scorer and Aussie Record Breaker

ಮಿಚೆಲ್ ಮಾರ್ಷ್​ಗಿಂತ ಮೊದಲು, ಟಿಮ್ ಡೇವಿಡ್ 2022 ರಲ್ಲಿ ಆಡಿದ 68 ಇನ್ನಿಂಗ್ಸ್‌ಗಳಲ್ಲಿ 27.67 ಸರಾಸರಿಯಲ್ಲಿ 1,461 ರನ್ ಗಳಿಸಿದ್ದರು. ಇದೀಗ ಮಾರ್ಷ್ 35 ಪಂದ್ಯಗಳಲ್ಲಿ 44.17 ಸರಾಸರಿಯಲ್ಲಿ 1502 ರನ್ ಗಳಿಸಿದ್ದಾರೆ. 160 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿರುವ ಮಾರ್ಷ್​ ಇಲ್ಲಿಯವರೆಗೆ ಎರಡು ಶತಕಗಳು ಮತ್ತು 11 ಅರ್ಧಶತಕಗಳನ್ನು ಬಾರಿಸಿದ್ದಾರೆ.

Source link

ಕ್ರೆಡಿಟ್ ಸ್ಕೋರ್ ಕಡಿಮೆಯಿದ್ರೂ ನೀವು ಬ್ಯಾಂಕ್‌ನಿಂದ ಹೀಗೆ ಸಾಲ ಪಡೆಯಿರಿ – Kannada News | Credit Scores: Will the bank grant a loan even if the credit score is low?

ಕ್ರೆಡಿಟ್‌ ಸ್ಕೋರ್‌Image Credit source: Illustration by Thomas Fuller/SOPA Images/LightRocket via Getty Images

ಆರ್ಥಿಕ ಸಮಸ್ಯೆ ಎದುರಾದಾಗ ಬ್ಯಾಂಕ್ (Bank Loan) ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುತ್ತೇವೆ. ಆದರೆ ಸಾಲ ಪಡೆಯುವ ಮುಂಚೆ ಕಡಿಮೆ ಬಡ್ಡಿದರದಲ್ಲಿ ಎಲ್ಲಿ ಸಾಲ ಸಿಗುತ್ತದೆ ಎಂದು ನೋಡುತ್ತೇವೆ. ಅದೇ ರೀತಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಕೂಡ ಸಾಲ ಪಡೆಯುವ ವ್ಯಕ್ತಿಯ ಸಿಬಿಲ್ ಸ್ಕೋರ್ (CIBIL Score) ಎಷ್ಟಿದೆ ಎಂದು ಪರಿಶೀಲಿಸುತ್ತದೆ. ಸಿಬಿಲ್ ಸ್ಕೋರ್ 750 ಕ್ಕಿಂತ ಹೆಚ್ಚಿದ್ದರೆ ಬ್ಯಾಂಕ್ ಸಾಲವನ್ನು ಸುಲಭವಾಗಿ ನೀಡುತ್ತವೆ. ಆದರೆ ಕ್ರೆಡಿಟ್ ಸ್ಕೋರ್ ಇಲ್ಲದೇನೆ ಸುಲಭವಾಗಿ ಸಾಲ ಪಡೆಯಬಹುದು. ಇದಕ್ಕೆ ನಿಮ್ಮ ಬಳಿ ಉತ್ತಮ ಆದಾಯವಿರಬೇಕು, ಜತೆಗೆ ಸ್ಥಿರ ಠೇವಣಿ, ಚಿನ್ನ ಅಡಮಾನ, ಆದಾಯ ಆಧಾರಿತ ಸಾಲ ಹಾಗೂ ಆಸ್ತಿ ದಾಖಲೆಗಳನ್ನು ಬ್ಯಾಂಕ್‌ನಲ್ಲಿ ಇಟ್ಟು ಸಾಲ ಪಡೆಯಬಹುದು.

ಕ್ರೆಡಿಟ್‌ ಸ್ಕೋರ್‌ ಕಡಿಮೆಯಿದ್ರೂ ಬ್ಯಾಂಕ್‌ನಲ್ಲಿ ಸಾಲ ಪಡೆಯುವುದು ಹೇಗೆ?

ಎಫ್‌ಡಿ ಮೇಲಿನ ಸಾಲ: ನಿಮ್ಮ ಹೆಸರಿನಲ್ಲಿರುವ ಫಿಕ್ಸೆಡ್ ಡೆಪಾಸಿಟ್ ಮೇಲೆ ಸಾಲ ಪಡೆಯಲು ಅವಕಾಶವಿದೆ. ಈ ಸಾಲಕ್ಕೆ ಯಾವುದೇ ಕ್ರೆಡಿಟ್ ಸ್ಕೋರ್ ಅವಶ್ಯಕತೆ ಇರುವುದಿಲ್ಲ.

ಆಸ್ತಿ ದಾಖಲೆ ಮೇಲಿನ ಸಾಲ: ಮನೆ ಅಥವಾ ಕೃಷಿ ಭೂಮಿಯ ದಾಖಲೆಗಳನ್ನು ಭದ್ರತೆಯಾಗಿಟ್ಟು ಬ್ಯಾಂಕಿನಿಂದ ಸಾಲ ಪಡೆಯಬಹುದು.

ಚಿನ್ನದ ಸಾಲ: ಚಿನ್ನದ ಆಭರಣಗಳನ್ನು ಅಡವಿಟ್ಟು ಸುಲಭವಾಗಿ ಸಾಲ ಪಡೆಯಬಹುದು. ಈ ಸಾಲಕ್ಕೆ ಯಾವುದೇ ಕ್ರೆಡಿಟ್ ಕಾರ್ಡ್ ಅವಶ್ಯಕತೆ ಇರುವುದಿಲ್ಲ.

ಆದಾಯದ ಮೇಲಿನ ಸಾಲ: ನಿಮ್ಮ ತಿಂಗಳ ಸಂಬಳದ ಆದಾಯದ ಮೇಲೆ ಸಾಲ ಪಡೆಯಲು ಅವಕಾಶವಿದೆ. ಇದಕ್ಕೆ ನಿಮ್ಮ ಸ್ಯಾಲರಿ ಸ್ಲಿಪ್, ಆರು ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್‌ ಅಥವಾ ಐಟಿಆರ್ ಬ್ಯಾಂಕ್‌ಗೆ ನೀಡುವುದು ಕಡ್ಡಾಯ.

ಖಾತರಿದಾರರು: ನೀವು ಅತ್ಯುತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ವ್ಯಕ್ತಿಯನ್ನು ಖಾತರಿದಾರರಾಗಿ ಸೇರಿಸಿ ಅದರ ಮುಖೇನ ಸಾಲ ಪಡೆಯಬಹುದು. ಬ್ಯಾಂಕ್ ಸಾಲ ನೀಡುವಾಗ ನಿಮ್ಮ ಕ್ರೆಡಿಟ್ ಸ್ಕೋರ್ ಬದಲು ಖಾತರಿದಾರರ ಕ್ರೆಡಿಟ್ ಸ್ಕೋರ್ ಪರಿಶೀಲಿಸುತ್ತವೆ.

ಇದನ್ನೂ ಓದಿ: ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ಬ್ಯಾಂಕ್ ಅಕೌಂಟ್ ತೆರೆಯಲು ಅವಕಾಶವಿದೆ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಕ್ರೆಡಿಟ್ ಸ್ಕೋರ್ ಕಡಿಮೆಯಿದ್ರೂ ಬ್ಯಾಂಕ್‌ನಿಂದ ಸಾಲ ಪಡೆಯುವುದು ಹೇಗೆ?

ಉತ್ತರ: ಸ್ಥಿರ ಠೇವಣಿ, ಚಿನ್ನ ಅಡಮಾನ, ಆದಾಯ, ಆಸ್ತಿ ದಾಖಲೆಗಳನ್ನು ಬ್ಯಾಂಕ್‌ನಲ್ಲಿ ಇಟ್ಟು ಸಾಲ ಪಡೆಯಬಹುದು.

ಪ್ರಶ್ನೆ: ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗ್ಬೇಕು ಅಂತಾದ್ರೆ ಸಿಬಿಲ್ ಸ್ಕೋರ್ ಎಷ್ಟಿರಬೇಕು?

ಉತ್ತರ: ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗ್ಬೇಕು ಅಂದ್ರೆ ಸಿಬಿಲ್ ಸ್ಕೋರ್ 750 ಕ್ಕಿಂತ ಹೆಚ್ಚಿರಬೇಕು.

ಪ್ರಶ್ನೆ: ಬ್ಯಾಂಕ್ ಸಾಲ ಪಡೆಯಲು ಸಿಬಿಲ್ ಸ್ಕೋರ್ ಯಾಕೆ ಮುಖ್ಯ?

ಉತ್ತರ: ಬ್ಯಾಂಕ್‌ಗಳು ನಿಮಗೆ ಸಾಲ ಅಥವಾ ಕ್ರೆಡಿಟ್ ಕಾರ್ಡ್ ನೀಡಬೇಕೇ ಎಂಬುವುದನ್ನು ನಿರ್ಧರಿಸಲು ಸಿಬಿಲ್ ಸ್ಕೋರ್ ಮುಖ್ಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಮುಂದುವರಿದ ಮಳೆಯ ಕೊರತೆ: ಶೇ.21ರಷ್ಟು ಕಡಿಮೆ ಸುರಿದ ವರ್ಷಧಾರೆ – Kannada News | Karnataka Monsoon Deficit Persists: State Records 21 Percent Rainfall Shortfall; Bengaluru and Malnad Severely Hit

ಬೆಂಗಳೂರು, ಆಗಸ್ಟ್​​ 10: ಕಳೆದ ಒಂದು ವಾರದಿಂದ ಕರ್ನಾಟಕದ ಕೆಲವೆಡೆ ಭಾರಿ ಮಳೆಯಾಗುತ್ತಿದ್ದರೂ ರಾಜ್ಯದ ಮಳೆ ಕೊರತೆ ಮಾತ್ರ ಕಡಿಮೆಯಾಗಿಲ್ಲ. ಜೂನ್‌ 1ರಿಂದ ಆರಂಭವಾದ ಮುಂಗಾರು ಅವಧಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಬೆಂಗಳೂರು ನಗರ ಜಿಲ್ಲೆ ಅತ್ಯಂತ ಹೆಚ್ಚು ಮಳೆ ಕೊರತೆ ಎದುರಿಸುತ್ತಿರುವ ಜಿಲ್ಲೆಗಳ ಪೈಕಿ ಒಂದಾಗಿದ್ದು, ಶೇ.34ರಷ್ಟು ಕೊರತೆ ದಾಖಲಾಗಿದೆ. ಆಗಸ್ಟ್‌ 9ರವರೆಗೆ ಜಿಲ್ಲೆಯಲ್ಲಿ 127 ಮಿ.ಮೀ ಮಳೆಯಾಗಿದ್ದು, ಈ ಅವಧಿಯಲ್ಲಿ ವಾಡಿಕೆಯಂತೆ 197 ಮಿ.ಮೀ ಮಳೆಯಾಗಬೇಕಿತ್ತು.

ರಾಜ್ಯದಲ್ಲಿ ಶೇ.21ರಷ್ಟು ಮಳೆ ಕೊರತೆ

ವಿಜಯನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ವಾಡಿಕೆ ಮಳೆಯ ಅರ್ಧಕ್ಕಿಂತಲೂ ಕಡಿಮೆ ಮಳೆಯಾಗಿದೆ. ವಿಜಯನಗರದಲ್ಲಿ ಶೇ.58 ಮತ್ತು ಮೈಸೂರಿನಲ್ಲಿ ಶೇ.51ರಷ್ಟು ಮಳೆ ಕೊರತೆ ದಾಖಲಾಗಿದೆ. ಚಾಮರಾಜನಗರದಲ್ಲಿ ಶೇ.47, ಕೋಲಾರದಲ್ಲಿ ಶೇ.42 ಹಾಗೂ ಬಳ್ಳಾರಿಯಲ್ಲಿ ಶೇ.41ರಷ್ಟು ಮಳೆ ಕೊರತೆ ದಾಖಲಾಗಿದ್ದು, ಈ ಜಿಲ್ಲೆಗಳೂ ತೀವ್ರ ಮಳೆ ಕೊರತೆ ಎದುರಿಸುತ್ತಿವೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಶೇ.21ರಷ್ಟು ಮಳೆ ಕೊರತೆ ಇದೆ. ರಾಜ್ಯವು 656.7 ಮಿ.ಮೀ ವಾಡಿಕೆ ಮಳೆಯ ಎದುರು 517.8 ಮಿ.ಮೀ ಮಳೆಯನ್ನು ಮಾತ್ರ ಪಡೆದಿದೆ. ಮುಂಗಾರು ಆರಂಭವಾದಾಗಿನಿಂದ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಮಳೆ ಕೊರತೆ ದಾಖಲಾಗಿದೆ. ಆದರೆ, ಈ ಮಳೆಯಿಂದ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ ಕೊಂಚ ಏರಿಕೆಯಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಅಬ್ಬರಿಸಿದ ವರುಣ: ಕೆರೆಗಳಂತಾದ ರಸ್ತೆಗಳು; ಸವಾರರು ಪರದಾಟ

ಮಲೆನಾಡಿನಲ್ಲೂ ಪರಿಸ್ಥಿತಿ ಕಳವಳಕಾರಿ

ರಾಜ್ಯದ ಪ್ರಮುಖ ನದಿಗಳ ಜಲಾನಯನ ಪ್ರದೇಶಗಳಾಗಿರುವ ಮಲೆನಾಡು ಜಿಲ್ಲೆಗಳಲ್ಲೂ ಪರಿಸ್ಥಿತಿ ಕಳವಳಕಾರಿಯಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಸುಮಾರು ಶೇ.31ರಿಂದ 34ರಷ್ಟು ಕಡಿಮೆ ಮಳೆಯಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶವಸಂಸ್ಕಾರದ ಬಟ್ಟೆ ಜೊತೆಯಲ್ಲೇ ಪ್ರಯಾಣ ಮಾಡುವ ಗಾಯಕ ಲಕ್ಕಿ ಅಲಿ; ಕಾರಣ ಏನು? – Kannada News | Lucky Ali Reveals he carries Ihram Burial Cloth while travelling says prepared for death

ಪ್ರಸಿದ್ಧ ಗಾಯಕ ಲಕ್ಕಿ ಅಲಿ (Lucky Ali) ಅವರು ಇತ್ತೀಚೆಗೆ ನಡೆದ ತಮ್ಮ ಸಂಗೀತ ಕಾರ್ಯಕ್ರಮವೊಂದರಲ್ಲಿ ಸಾವಿನ ಕುರಿತು ಭಾವುಕರಾಗಿ ಮಾತನಾಡುವ ಮೂಲಕ ಅಭಿಮಾನಿಗಳ ಕಣ್ಣಾಲಿಗಳನ್ನು ತೇವಗೊಳಿಸಿದ್ದಾರೆ. ತಮ್ಮ ಸಂಗೀತದ ಮೂಲಕ ದಶಕಗಳಿಂದ ಶ್ರೋತೃಗಳ ಮನಗೆದ್ದಿರುವ 67 ವರ್ಷದ ಅವರು, ಅನಿವಾರ್ಯವಾದ ಸಾವಿಗೆ ತಾವು ಸದಾ ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ತಾವು ಪ್ರಯಾಣಿಸುವಾಗಲೆಲ್ಲಾ ಶವಸಂಸ್ಕಾರಕ್ಕೆ ಬಳಸುವ ಬಟ್ಟೆಯನ್ನು (Ihram) ಜೊತೆಯಲ್ಲೇ ಕೊಂಡೊಯ್ಯುವುದಾಗಿ ಬಹಿರಂಗಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಅಭಿಮಾನಿಗಳು ತೋರಿಸಿದ ಅಪಾರ ಪ್ರೀತಿ ಮತ್ತು ಬೆಂಬಲಕ್ಕೆ ಸ್ಪಂದಿಸುತ್ತಾ ಲಕ್ಕಿ ಅಲಿ ಅವರು ಈ ಮಾತುಗಳನ್ನಾಡಿದ್ದಾರೆ. ಅವರ ಈ ಭಾವುಕ ಮಾತುಗಳು ಹಾಗೂ ಗಾಯನವು ನೆರೆದಿದ್ದ ಹಲವರನ್ನು ಭಾವುಕರನ್ನಾಗಿಸಿತು. ಸೋಶಿಯಲ್ ಮೀಡಿಯಾದಲ್ಲಿ ಅವರ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಸಭಿಕರೊಂದಿಗೆ ಸಂವಾದ ನಡೆಸುವಾಗ ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಈ ಲೋಕವನ್ನು ತೊರೆಯಲೇಬೇಕು ಎಂದು ಲಕ್ಕಿ ಅಲಿ ಹೇಳಿದರು. ತಾವು ಅಭಿಮಾನಿಗಳನ್ನು ತಮ್ಮ ಸಾವಿಗೆ ಸಿದ್ಧಪಡಿಸುತ್ತಿಲ್ಲ, ಬದಲಾಗಿ ವೈಯಕ್ತಿಕವಾಗಿ ಆ ಆಲೋಚನೆಯೊಂದಿಗೆ ಶಾಂತಿಯುತವಾಗಿ ಹೊಂದಿಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

‘ನನಗೆ ಗೊತ್ತು, ನಾನು ಕೂಡ ನಿಮ್ಮನ್ನೆಲ್ಲ ಪ್ರೀತಿಸುತ್ತೇನೆ. ಒಂದಲ್ಲ ಒಂದು ದಿನ ನಾವೆಲ್ಲರೂ ಹೋಗಲೇಬೇಕು. ನಾನು ನಿಮ್ಮನ್ನು ಅದಕ್ಕೆ ಸಿದ್ಧಪಡಿಸುತ್ತಿಲ್ಲ, ಆದರೆ ನಾನು ನಿಜವಾಗಿಯೂ ಸಿದ್ಧನಾಗಿದ್ದೇನೆ. ನಾನು ಎಲ್ಲೇ ಪ್ರಯಾಣಿಸಿದರೂ, ನನ್ನ ಶವದ ಬಟ್ಟೆ ಜೊತೆಯಲ್ಲೇ ಇಟ್ಟುಕೊಂಡು ಪ್ರಯಾಣಿಸುತ್ತೇನೆ. ನಾನು ಎಲ್ಲೇ ಮರಣ ಹೊಂದಿದರೂ, ನನ್ನನ್ನು ಅಲ್ಲಿಂದಲೇ ಕಳುಹಿಸಿಕೊಡಿ’ ಎಂದು ಅವರು ಹೇಳಿದರು.

ಲಕ್ಕಿ ಅಲಿ ಅವರ ಈ ಹೇಳಿಕೆಯು ಅಲ್ಲಿದ್ದ ಅಭಿಮಾನಿಗಳನ್ನು ತೀವ್ರ ಭಾವುಕರನ್ನಾಗಿಸಿತು. ಲೈವ್ ಸಂಗೀತ ಕಾರ್ಯಕ್ರಮದಲ್ಲಿದ್ದ ಅಭಿಮಾನಿಯೊಬ್ಬರು ಕಳೆದ ಮೂರು ದಶಕಗಳಿಂದ ಲಕ್ಕಿ ಅಲಿ ಅವರ ಸಂಗೀತವನ್ನು ಆಲಿಸುತ್ತಿರುವುದನ್ನು ನೆನಪಿಸಿಕೊಂಡು, ‘ಈಗ 30 ವರ್ಷಗಳಾಗಿವೆ, ನಾನು ಲಕ್ಕಿ ಅವರ ಸಂಗೀತವನ್ನು ಎಂದಿಗೂ ಕೈಬಿಟ್ಟಿಲ್ಲ’ ಎಂದು ಹೇಳಿದರು.

ಲಕ್ಕಿ ಅಲಿ ಅವರು ಈ ಕಾನ್ಸರ್ಟ್‌ನ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಂತರ, ಅವರ ಅಭಿಮಾನಿಗಳು ಕಮೆಂಟ್ ಸೆಕ್ಷನ್‌ನಲ್ಲಿ ಪ್ರೀತಿ ಮತ್ತು ಕಾಳಜಿ ಭರಿತ ಕಮೆಂಟ್​ಗಳನ್ನು ಮಾಡಿದ್ದಾರೆ. ಅಭಿಮಾನಿಯೊಬ್ಬರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾ, ‘ನಾನು ಈ ಸತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತೇನೆ. ನನಗೆ ಇಂದಿಗೂ ಇದು 90ರ ದಶಕದ ಕೊನೆಯ ವರ್ಷಗಳು ಎನಿಸುತ್ತಿದೆ. ನನ್ನ ಮನಸ್ಸು ಅಲ್ಲೇ ಉಳಿದುಹೋಗಿದೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರೋಹಿಣಿ ಸಿಂಧೂರಿ ಅತ್ತೆಯಿಂದ ಗಾಯಕ ಲಕ್ಕಿ ಅಲಿ ವಿರುದ್ಧ ದೂರು, ಪ್ರಕರಣ ರದ್ದು ಮಾಡಿದ ಹೈಕೋರ್ಟ್

ಮತ್ತೊಬ್ಬ ಅಭಿಮಾನಿ, ‘ಇಹ್ರಾಮ್ (ಶವ ಸಂಸ್ಕಾರದ ಬಟ್ಟೆ) ಜೊತೆಗೆ ಪ್ರಯಾಣಿಸುವುದು ನಿಮ್ಮ ಹೃದಯದಲ್ಲಿರುವ ನಂಬಿಕೆಯನ್ನು ತೋರಿಸುತ್ತದೆ. ಅಲ್ಲಾಹನು ನಿಮಗೆ ದೀರ್ಘ, ಆರೋಗ್ಯಕರ ಜೀವನವನ್ನು ಕರುಣಿಸಲಿ’ ಎಂದು ಕಾಮೆಂಟ್ ಮಾಡಿದ್ದಾರೆ. ತಮ್ಮ ವಿಶಿಷ್ಟ ಕಂಠಸಿರಿ ಮತ್ತು ಇಂಡಿಪೆಂಡೆಂಟ್ ಮ್ಯೂಸಿಕ್ ಮೂಲಕ ಹೆಸರುವಾಸಿಯಾದ ಲಕ್ಕಿ ಅಲಿ ಅವರು 1990ರ ದಶಕದಲ್ಲಿ ಅತ್ಯಂತ ಜನಪ್ರಿಯರಾದರು. ತದನಂತರ ಅವರು ‘ಕಹೋ ನಾ… ಪ್ಯಾರ್ ಹೈ’, ‘ಯುವಾ’, ‘ಬಚ್ನಾ ಏ ಹಸೀನೋ’, ‘ಅಂಜಾನಾ ಅಂಜಾನಿ’, ‘ತಮಾಷಾ’ ಸೇರಿದಂತೆ ಹಲವು ಬಾಲಿವುಡ್ ಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿ ಕಂಠದಾನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಕ್ಕಳು ಊಟ ಮಾಡಲ್ಲ ಅಂತ ಟೆನ್ಶನ್ ಮಾಡ್ಕೋಬೇಡಿ! ಡಾ. ಮುರಳೀಧರ ಬಲ್ಲಾಳ್ ನೀಡಿರುವ ಸರಳ ಸಲಹೆ ಅನುಸರಿಸಿ – Kannada News | 2 5 Year Old Child Not Eating Properly? Dr. Muralidhar Ballal Shares Parenting Tips

2-5 Year Old Child Not Eating Properly? Dr. Muralidhar Ballal Shares Parenting TipsImage Credit source: Getty Images

ಎರಡರಿಂದ ಐದು ವರ್ಷದ ಒಳಗಿನ ಮಕ್ಕಳಿದ್ದಲ್ಲಿ ಅವರಿಗೆ ಊಟ ಮಾಡಿಸುವುದು ಒಂದು ದೊಡ್ಡ ಸಾಹಸವೇ ಸೈ. ಮಕ್ಕಳು ಊಟ ಮಾಡಲಿಕ್ಕೆ ತೀರಾ ರಗಳೆ ಮಾಡುವಂತದ್ದು ಅಥವಾ ಆಹಾರವನ್ನು ಬಾಯಲ್ಲಿ ತುಂಬಾ ಹೊತ್ತು ಇಟ್ಟುಕೊಂಡು, ಜಗಿಯದೆ ಬಾಯಲ್ಲಿಟ್ಟುಕೊಂಡು ಮತ್ತೆ, ಪೋಷಕರು ಫೋರ್ಸ್ ಮಾಡಿದ ನಂತರ ಜಗಿದು ನುಂಗುವಂತದ್ದು. ಅಥವಾ ಆಹಾರವನ್ನು ತಂದ ಕೂಡಲೇ ಓಡಿಹೋಗುವಂತದ್ದು. ಅವರ ಹಿಂದೆ ಪೋಷಕರು ನಡೆದಾಡಿಕೊಂಡು, ಊಟ ಮಾಡಿಸುವಂತದ್ದನ್ನು ಪಿಕ್ಕಿ ಈಟಿಂಗ್ ಎಂದು ಹೇಳಲಾಗುತ್ತದೆ. ಈ ರೀತಿ ಆಯ್ದ ಆಹಾರ ಸೇವನೆ ಮಾಡುವುದನ್ನು ಕಡಿಮೆ ಮಾಡಲು ಜೊತೆಗೆ ಆರೋಗ್ಯಕರ ಆಹಾರ ಸೇವನೆ ಮಾಡುವುದನ್ನು ಹೆಚ್ಚಿಸಲು ಉಡುಪಿಯ ಎಸ್ ಡಿ ಎಮ್ ಆಯುರ್ವೇದ ಫಾರ್ಮಸಿಯ ಜನರಲ್ ಮ್ಯಾನೇಜರ್ ಡಾ. ಮುರಳೀಧರ ಬಲ್ಲಾಳ್ ಅವರು ಕೆಲವು ಸರಳ ಸಲಹೆಗಳನ್ನು ನೀಡಿದ್ದು, ಮಕ್ಕಳು ಬಿಸ್ಕತ್ತುಗಳು, ಚಾಕೊಲೇಟುಗಳು, ಮ್ಯಾಗಿ, ಪಾಸ್ತಾಗಳನ್ನು ಯಥೇಚ್ಛವಾಗಿ ಸೇವನೆ ಮಾಡುವುದನ್ನು ಕಡಿಮೆ ಮಾಡುವುದು ಮತ್ತು ಆರೋಗ್ಯಕರ ಆಹಾರವನ್ನು ಮಕ್ಕಳಿಗೆ ಇಷ್ಟವಾಗುವಂತೆ ಸೇವನೆ ಮಾಡುವುದರ ಬಗ್ಗೆ ಮಾತನಾಡಿದ್ದಾರೆ. ಈ ಬಗೆಗಿನ ಮತ್ತಷ್ಟು ಮಾಹಿತಿ ಪಡೆಯಲು ಈ ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ

Published On – 6:22 pm, Mon, 10 August 26

Source link

IND vs SL: ಮೊದಲ ಟೆಸ್ಟ್ ನಡೆಯುವ ಗಾಲೆ ಮೈದಾನದಲ್ಲಿ ಭಾರತದ ಪ್ರದರ್ಶನ ಹೇಗಿದೆ? – Kannada News | India vs Sri Lanka 2026 Test Series – Team India’s Galle Record Analysis

ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯು ಆಗಸ್ಟ್ 15, 2026 ರಿಂದ ಪ್ರಾರಂಭವಾಗಲಿದೆ. ಈ ಸರಣಿಯ ಮೊದಲ ಟೆಸ್ಟ್ ಪಂದ್ಯವು ಗಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ (Galle International Cricket Stadium) ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ ರೇಸ್​ನಲ್ಲಿ ಉಳಿಯಬೇಕೆಂದರೆ ಈ ಸರಣಿಯು ಎರಡೂ ತಂಡಗಳಿಗೆ ಬಹಳ ಮುಖ್ಯವಾಗಿದೆ. ಈ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ತಂಡವು ಟಾಪ್ -4 ಗೆ ಪ್ರವೇಶಿಸುವ ಸಾಧ್ಯತೆಯಿದೆ. ಹೀಗಾಗಿ ಟೀಂ ಇಂಡಿಯಾ ಈ ಸರಣಿಯನ್ನು ಗೆಲುವಿನೊಂದಿಗೆ ಆರಂಭಿಸಲು ನೋಡುತ್ತಿದೆ. ಆದರೆ ಅದಕ್ಕೂ ಮೊದಲು ಮೊದಲ ಟೆಸ್ಟ್ ಪಂದ್ಯ ನಡೆಯಲಿರುವ ಗಾಲೆ ಮೈದಾನದಲ್ಲಿ ಭಾರತದ ಪ್ರದರ್ಶನ ಹೇಗಿದೆ ಎಂಬುದನ್ನು ನೋಡೋಣ.

ಮುಖಾಮುಖಿ ದಾಖಲೆ ಹೇಗಿದೆ?

ಶ್ರೀಲಂಕಾ ವಿರುದ್ಧ ಭಾರತ ಅದ್ಭುತ ಟೆಸ್ಟ್ ದಾಖಲೆಯನ್ನು ಹೊಂದಿದೆ. 1982 ಮತ್ತು 2022 ರ ನಡುವೆ, ಎರಡೂ ದೇಶಗಳು 46 ಪಂದ್ಯಗಳನ್ನು ಆಡಿವೆ. ಇದರಲ್ಲಿ ಭಾರತ 22 ಗೆದ್ದು 7 ಪಂದ್ಯಗಳಲ್ಲಿ ಸೋತಿದೆ. ಉಳಿದಂತೆ 17 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಇನ್ನು ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ಭಾರತ 11 ವರ್ಷಗಳಿಂದ ಅಜೇಯವಾಗಿದ್ದು ಕೊನೆಯ ಬಾರಿಗೆ 2015 ರಲ್ಲಿ 63 ರನ್‌ಗಳಿಂದ ಸೋತಿತ್ತು.

ಈ ಪಂದ್ಯವನ್ನು ಆಗಸ್ಟ್ 15 ರಂದು ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಪಂದ್ಯ ನಡೆಯುವ ಗಾಲೆಯಲ್ಲಿಯೇ ಆಡಲಾಗಿತ್ತು. ಆ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಕೂಡ ಆಡಿದ್ದರಾದರೂ ಆ ಪಂದ್ಯದಲ್ಲಿ ಅವರ ಪ್ರದರ್ಶನ ಉತ್ತಮವಾಗಿರಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ 7 ರನ್‌ಗಳಿಗೆ ಸುಸ್ತಾಗಿದ್ದ ರಾಹುಲ್ ಎರಡನೇ ಇನ್ನಿಂಗ್ಸ್‌ನಲ್ಲಿ 4 ರನ್‌ಗಳಿಗೆ ಔಟಾಗಿದ್ದರು. ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದರು.

IND vs SL: 16 ವರ್ಷಗಳ ಬಳಿಕ ಈತನಿಲ್ಲದೆ ಟೆಸ್ಟ್ ಆಡಲಿದೆ ಟೀಂ ಇಂಡಿಯಾ

2015 ರ ನಂತರ ಭಾರತದ ಪ್ರಾಬಲ್ಯ

ಈ ಪಂದ್ಯದ ನಂತರ, ಭಾರತ ಮತ್ತು ಶ್ರೀಲಂಕಾ 10 ಪಂದ್ಯಗಳನ್ನು ಆಡಿವೆ. ಭಾರತ 8 ಪಂದ್ಯಗಳನ್ನು ಗೆದ್ದು 2 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಒಂದು ಪಂದ್ಯವನ್ನು ಗಾಲೆಯಲ್ಲಿಯೂ ಆಡಲಾಗಿದ್ದು, 2017 ರಲ್ಲಿ ಭಾರತ 304 ರನ್‌ಗಳಿಂದ ಗೆದ್ದಿದೆ. ಭಾರತ ಗಾಲೆಯಲ್ಲಿ 5 ಪಂದ್ಯಗಳನ್ನು ಆಡಿದ್ದು, 2 ರಲ್ಲಿ ಗೆದ್ದಿದ್ದು, 3 ರಲ್ಲಿ ಸೋತಿದೆ. ಭಾರತ 2001, 2010 ಮತ್ತು 2015 ರಲ್ಲಿ ಗಾಲೆಯಲ್ಲಿ ಸೋತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:13 pm, Mon, 10 August 26

Source link

ಅಮೆರಿಕಕ್ಕೆ ಓದಲು ಹೋದವರಲ್ಲಿ ಶೇ. 81 ಮಂದಿ ತಾಯ್ನಾಡಿಗೆ ಬರಲು ಪ್ಲಾನ್; ಏನು ಕಾರಣ? – Kannada News | Most Indian students studying abroad plans to comeback home after studies, says Oxford International’s survey

ಹಾರ್ವರ್ಡ್ ವಿವಿ ಕ್ಯಾಂಪಸ್Image Credit source: Getty Images

ವಾಷಿಂಗ್ಟನ್, ಆಗಸ್ಟ್ 10: ವಿದೇಶಗಳಿಗೆ ವ್ಯಾಸಂಗಕ್ಕೆ ಹೋಗಿರುವ ಭಾರತೀಯ ವಿದ್ಯಾರ್ಥಿಗಳ ಆದ್ಯತೆಗಳಲ್ಲಿ ಭಾರೀ ಬದಲಾವಣೆ ಕಂಡು ಬಂದಿದೆ. ಇತ್ತೀಚಿನ ವರದಿಯೊಂದರ ಪ್ರಕಾರ, ವಿದೇಶಗಳಲ್ಲಿರುವ ಶೇ. 81ರಷ್ಟು ಭಾರತೀಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಗಿದ ನಂತರ ಭಾರತಕ್ಕೇ ಮರಳಲು ನಿರ್ಧರಿಸಿದ್ದಾರೆ. ಆಕ್ಸ್​ಫರ್ಡ್ ಇಂಟರ್ನ್ಯಾಷನಲ್​ನ ಸ್ಟುಡೆಂಟ್ ಗ್ಲೋಬಲ್ ಮೊಬಿಲಿಟಿ ಇಂಡೆಕ್ಸ್ (Oxford International third Student Global Mobility Index) ಈ ಸಮೀಕ್ಷೆಯನ್ನು ನಡೆಸಿ ವರದಿ ಬಿಡುಗಡೆ ಮಾಡಿದೆ.

ಅಮೆರಿಕಕ್ಕೆ ಹೋಗಿ ಓದು ಮುಗಿಸಿದ ಬಳಿಕ ಒಂದೆರಡು ವರ್ಷ ಐಚ್ಛಿಕವಾದ ಪ್ರಾಕ್ಟಿಕಲ್ ಟ್ರೈನಿಂಗ್ (OPT) ಅವಕಾಶ ಬಳಸಿಕೊಂಡು, ಆ ಅವಧಿಯಲ್ಲಿ ಎಚ್1ಬಿ ವೀಸಾ ಗಿಟ್ಟಿಸಲು ಯತ್ನಿಸುವುದು, ಅದು ಯಶಸ್ವಿಯಾದಲ್ಲಿ ಕೆಲಸಕ್ಕೆ ಸೇರಿ ವೃತ್ತಿಜೀವನ ಆರಂಭಿಸುವುದು, ನಂತರ ಸಾಧ್ಯವಾದರೆ ಅಲ್ಲಿಯೇ ಸೆಟಲ್ ಆಗುವುದು, ಇವಿಷ್ಟೂ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳ ಪೂರ್ವಭಾವಿ ಪ್ಲಾನ್ ಆಗಿರುತ್ತದೆ. ಈಗ ಹೆಚ್ಚಿನ ಭಾರತೀಯ ಯುವಜನರು ಅಮೆರಿಕದಿಂದ ವಾಪಸ್ ಬರಲು ಹಾತೊರೆಯುತ್ತಿರುವುದು ಯಾಕೆ?

ಅಮೆರಿಕ (US) ಸರ್ಕಾರವು ವಿದೇಶಿ ವಿದ್ಯಾರ್ಥಿಗಳು ಮತ್ತು ಕೌಶಲಯುಕ್ತ ಉದ್ಯೋಗಿಗಳ ಮೇಲಿನ ವೀಸಾ ಹಾಗೂ ಇಮಿಗ್ರೇಷನ್ (ವಲಸೆ) ನಿಯಮಗಳನ್ನು ತೀವ್ರವಾಗಿ ಕಠಿಣಗೊಳಿಸಿರುವುದೇ ಈ ಮಹತ್ವದ ಬದಲಾವಣೆಗೆ ಪ್ರಮುಖ ಕಾರಣವಾಗಿದೆ ಎಂದು ಆಕ್ಸ್​ಫರ್ಡ್ ವರದಿಯು ಹೇಳಿದೆ. ಭಾರತೀಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಹೆಚ್ಚಾಗಿ ಹೋಗುವುದು ಅಮೆರಿಕಕ್ಕೆ. ಹೀಗಾಗಿ, ಅಮೆರಿಕದಲ್ಲಿ ಬದಲಾಗುತ್ತಿರುವ ನೀತಿಗಳು ಭಾರತೀಯ ವಿದ್ಯಾರ್ಥಿಗಳ ಆದ್ಯತೆಗಳನ್ನು ಬದಲಿಸಿರಬಹುದು.

ಇದನ್ನೂ ಓದಿ: ಮಗಳ PPF ಹಣ ಹಿಂಪಡೆದ ತಂದೆ: ಬಡ್ಡಿ ಸಮೇತ ಮರಳಿಸಲು ಕೋರ್ಟ್ ಆದೇಶ; ಏನಿವೆ ಪಿಪಿಎಫ್ ನಿಯಮಗಳು?

‘ಆಕ್ಸ್‌ಫರ್ಡ್ ಇಂಟರ್‌ನ್ಯಾಷನಲ್’ ವರದಿಯ ಮುಖ್ಯಾಂಶಗಳು

ಆಕ್ಸ್‌ಫರ್ಡ್ ಇಂಟರ್‌ನ್ಯಾಷನಲ್ ಪ್ರಕಟಿಸಿರುವ 3ನೇ ‘ಸ್ಟೂಡೆಂಟ್ ಗ್ಲೋಬಲ್ ಮೊಬಿಲಿಟಿ ಇಂಡೆಕ್ಸ್’ (SGMI) ಸಮೀಕ್ಷೆಯು ಈ ಕೆಳಗಿನ ಅಂಶಗಳನ್ನು ಗಮನಿಸಿದೆ:

  • ಸ್ವದೇಶಕ್ಕೆ ವಾಪಸ್: ವಿದೇಶಗಳಲ್ಲಿ ಓದಲು ಬಯಸುವ ಪ್ರತಿ 5 ಭಾರತೀಯ ವಿದ್ಯಾರ್ಥಿಗಳಲ್ಲಿ 4 ಜನರು (ಶೇ. 81) ಶಿಕ್ಷಣ ಪೂರ್ಣಗೊಂಡ ಬಳಿಕ ಭಾರತಕ್ಕೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
  • ಬದಲಾದ ಉದ್ದೇಶ: ಹಿಂದೆ ವಿದೇಶಿ ಶಿಕ್ಷಣ ಎಂದರೆ ಅಲ್ಲೇ ಖಾಯಂ ಆಗಿ ನೆಲೆಸುವ (Permanent Residency) ಉದ್ದೇಶವಿರುತ್ತಿತ್ತು. ಆದರೆ ಈಗ ಜಾಗತಿಕ ಅನುಭವ, ಕೌಶಲ ಮತ್ತು ವಿದೇಶಿ ಪದವಿ ಪಡೆಯುವುದಷ್ಟೇ ಮುಖ್ಯ ಗುರಿಯಾಗಿದೆ.
  • ಸ್ವತಂತ್ರ ನಿರ್ಧಾರ: ಶಿಕ್ಷಣಕ್ಕಾಗಿ ಅರ್ಜಿ ಸಲ್ಲಿಸುವವರಲ್ಲಿ ಸ್ವಯಂ ಪ್ರೇರಿತ ನಿರ್ಧಾರ ಕೈಗೊಳ್ಳುವವರ ಸಂಖ್ಯೆ ಶೇ. 29 ರಿಂದ ಶೇ. 49ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: UPI ಮೇಲಿನ MDR; ಶೇಕಡಾವಾರು ಆಧಾರಿತವಾಗಿ ಶುಲ್ಕ ಬೇಡ, ಗರಿಷ್ಠ ಮಿತಿ ಇರಲಿ: ದೀಪಕ್ ಶೆಣೈ

ಅಮೆರಿಕದಲ್ಲಿ ಬದಲಾದ ಕಠಿಣ ನಿಯಮಗಳು

ಕಳೆದ ಕೆಲವು ತಿಂಗಳುಗಳಿಂದ ಅಮೆರಿಕ ಸರ್ಕಾರವು ಜಾರಿಗೆ ತಂದಿರುವ ಕಠಿಣ ನಿಯಮಗಳು ಭಾರತೀಯ ವಿದ್ಯಾರ್ಥಿಗಳ ಮೇಲಿನ ಸಾಂಪ್ರದಾಯಿಕ ‘ವ್ಯಾಸಂಗ-ಉದ್ಯೋಗ-ನೆಲೆಸುವಿಕೆ’ ಸರಣಿಯನ್ನು ಕಷ್ಟಕರವಾಗಿಸಿವೆ:

  • 4 ವರ್ಷಗಳ ಗರಿಷ್ಠ ಮಿತಿ: ದಶಕಗಳಿಂದ ಜಾರಿಯಲ್ಲಿದ್ದ “ಡ್ಯುರೇಷನ್ ಆಫ್ ಸ್ಟೇಟಸ್” ನಿಯಮವನ್ನು ರದ್ದುಗೊಳಿಸಲಾಗಿದ್ದು, ಇನ್ಮುಂದೆ ವಿದ್ಯಾರ್ಥಿಗಳು ಗರಿಷ್ಠ 4 ವರ್ಷ ಮಾತ್ರ ಅಮೆರಿಕದಲ್ಲಿ ಉಳಿಯಬಹುದು. ಕೋರ್ಸ್ ವಿಸ್ತರಿಸಬೇಕಾದರೆ ಅಧಿಕೃತ ಅನುಮತಿ ಪಡೆಯುವುದು ಕಡ್ಡಾಯ.
  • SEVIS ಮತ್ತು ವೀಸಾ ರದ್ದತಿ: ಯಾವುದೇ ಸ್ಪಷ್ಟ ಕಾರಣ ನೀಡದೆ ಸಾವಿರಾರು ವಿದ್ಯಾರ್ಥಿಗಳ ‘SEVIS’ (ವಿದ್ಯಾರ್ಥಿ ಮಾಹಿತಿ ವ್ಯವಸ್ಥೆ) ದಾಖಲೆಗಳನ್ನು ರದ್ದುಗೊಳಿಸಲಾಗಿದೆ. 2025-26ರಲ್ಲಿ ಸಾವಿರಾರು ವಿದ್ಯಾರ್ಥಿ ವೀಸಾಗಳನ್ನು ಹಿಂಪಡೆಯಲಾಗಿದೆ.
  • ಸೋಷಿಯಲ್ ಮೀಡಿಯಾ ತಪಾಸಣೆ: ವೀಸಾ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಬಹಿರಂಗಪಡಿಸುವುದು ಕಡ್ಡಾಯಗೊಳಿಸಲಾಗಿದೆ.
  • ವಿಶ್ವವಿದ್ಯಾಲಯಗಳಿಗೆ ಶೇ. 15 ಕ್ಯಾಪಿಂಗ್: ಯುಎಸ್ ವಿಶ್ವವಿದ್ಯಾಲಯಗಳಲ್ಲಿ ಒಟ್ಟು ವಿದೇಶಿ ವಿದ್ಯಾರ್ಥಿಗಳ ಮಿತಿ ಶೇ. 15 ಮತ್ತು ಯಾವುದೇ ಒಂದೇ ದೇಶದ ವಿದ್ಯಾರ್ಥಿಗಳು ಶೇ. 5 ಕ್ಕಿಂತ ಹೆಚ್ಚಿರಬಾರದು ಎಂಬ ನಿಯಮ ತರಲಾಗಿದೆ. ಇದು ದೊಡ್ಡ ಸಂಖ್ಯೆಯಲ್ಲಿ ತೆರಳುವ ಭಾರತೀಯರಿಗೆ ಹೊಡೆತ ನೀಡಿದೆ.
  • H-1B ವೀಸಾ ಮತ್ತು OPT ಅನಿಶ್ಚಿತತೆ: H-1B ವೀಸಾ ಅರ್ಜಿಗಳಿಗೆ ಕಠಿಣ ಶುಲ್ಕ ಮತ್ತು ಕೊಡುಕೊಳ್ಳುವಿಕೆ ನಿಯಮ ತರಲಾಗಿದ್ದು, ಕೋರ್ಸ್ ಮುಗಿದ ನಂತರ ಸಿಗುವ OPT (Optional Practical Training) ಕೆಲಸದ ಅವಧಿಯ ಮೇಲೆಯೂ ಕತ್ತಿ ತೂಗುತ್ತಿದೆ.

ಅಮೆರಿಕ ವಿಧಿಸಿರುವ ಈ ನಿರ್ಬಂಧಗಳಿಂದಾಗಿ ಭಾರತೀಯ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ F-1 ವೀಸಾಗಳ ಸಂಖ್ಯೆಯಲ್ಲಿ ಶೇಕಡಾ 60 ರಿಂದ 69 ರಷ್ಟು ಭಾರಿ ಕುಸಿತ ಕಂಡಿದೆ. ಅಮೆರಿಕದಲ್ಲಿ ಸದ್ಯ 3.72 ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳಿದ್ದು, ಹೊಸ ನಿಯಮಗಳಿಂದಾಗಿ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ಭಾರತದಲ್ಲಿಯೇ ಉದ್ಯೋಗ ಕಂಡುಕೊಳ್ಳಲು ಮನಸ್ಸು ಮಾಡುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಷ್ಯಾದ ತೈಲ ಕೇಂದ್ರದ ಮೇಲೆ ಉಕ್ರೇನ್ ಡ್ರೋನ್ ದಾಳಿ; ಮಗು ಸೇರಿ 13 ಜನ ಸಾವು – Kannada News | Ukraine drone attack kills 13 people including Child in Russias Nizhnekamsk oil hub

ಮೊಸ್ಕೋ, ಆಗಸ್ಟ್ 10: ರಷ್ಯಾದ ತಾತರ್‌ಸ್ತಾನ್ (Tatarstan) ಪ್ರದೇಶದ ನಿಜ್ನೆಕಾಮ್ಸ್ಕ್ ನಗರದ ಮೇಲೆ ಇಂದು ಉಕ್ರೇನ್ (Ukraine) ನಡೆಸಿದ ಡ್ರೋನ್ ದಾಳಿಯಲ್ಲಿ ಮಗು ಸೇರಿದಂತೆ 13 ಜನರು ಮೃತಪಟ್ಟಿದ್ದು, 75 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ರಷ್ಯಾದ (Russia) ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯ ಕುರಿತು ಉಕ್ರೇನ್ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಶುರುವಾದ ಈ 4 ವರ್ಷಗಳಲ್ಲಿ ರಷ್ಯಾದ ಮೇಲೆ ಉಕ್ರೇನ್ ನಡೆಸಿದ ಅತಿ ಭೀಕರ ದಾಳಿ ಇದು ಎನ್ನಲಾಗುತ್ತಿದೆ.

ತೈಲ ಸಂಸ್ಕರಣಾಗಾರಗಳು ಸೇರಿದಂತೆ ರಷ್ಯಾದ ಒಳಗಿರುವ ಪ್ರಮುಖ ಗುರಿಗಳ ಮೇಲೆ ಉಕ್ರೇನ್ ನಡೆಸುತ್ತಿರುವ ದೀರ್ಘ ಶ್ರೇಣಿಯ ಡ್ರೋನ್ ದಾಳಿಗಳ ಸರಣಿಯಲ್ಲಿ ಇದು ಅತ್ಯಂತ ಭೀಕರ ದಾಳಿಯಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಸಂಧಾನಕ್ಕೆ ಒಪ್ಪಿಸಲು ಮತ್ತು 4 ವರ್ಷಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಈ ಯುದ್ಧವನ್ನು ಅಂತ್ಯಗೊಳಿಸಲು ಈ ಮಾದರಿಯ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.

ಈ ವರ್ಷ ಎರಡೂ ದೇಶಗಳು ದೀರ್ಘ ಶ್ರೇಣಿಯ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ತೀವ್ರಗೊಳಿಸಿದ್ದು, ನಾಗರಿಕರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಉಕ್ರೇನ್ ಬಳಿ ಕಪ್ಪು ಸಮುದ್ರದ ಬಂದರಿನಲ್ಲಿ ದಾಳಿ; ಹಡಗಿನಲ್ಲಿ ಸಿಲುಕಿದ 13 ಭಾರತೀಯ ನಾವಿಕರು

ನಿಜ್ನೆಕಾಮ್ಸ್ಕ್ ಮೇಲಿನ ದಾಳಿಯಲ್ಲಿ ಈವರೆಗೆ 13 ಜನರು ಮೃತಪಟ್ಟಿರುವುದನ್ನು ಪ್ರಾದೇಶಿಕ ಪತ್ರಿಕಾ ಕಚೇರಿ ಇಂದು ಪತ್ರಿಕಾ ಪ್ರಕಟಣೆಯಲ್ಲಿ ದೃಢಪಡಿಸಿದೆ. ಈ ಘಟನೆಯಲ್ಲಿ 75ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರಲ್ಲಿ 21 ಜನರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.

ತೈಲ ಸಮೃದ್ಧ ಪ್ರದೇಶಕ್ಕೆ ಹೊಡೆತ:

ರಷ್ಯಾದ ತಾತರ್‌ಸ್ತಾನ್ ಪ್ರಾಂತ್ಯವು ಅಪಾರ ಇಂಧನ ಸಂಪನ್ಮೂಲಗಳನ್ನು ಹೊಂದಿದ್ದು, ಬೃಹತ್ ತೈಲ ಸಂಸ್ಕರಣಾಗಾರಗಳಿಗೆ ಹೆಸರುವಾಸಿಯಾಗಿದೆ. ರಷ್ಯಾದ ಆರ್ಥಿಕತೆಗೆ ಹೊಡೆತ ನೀಡಲು ಉಕ್ರೇನ್ ನಿರಂತರವಾಗಿ ಈ ಭಾಗದ ಮೇಲೆಯೇ ಪ್ರತೀಕಾರದ ದಾಳಿಗಳನ್ನು ನಡೆಸುತ್ತಿದೆ.

ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತೀಯರ ಸಾವು, ನಾಪತ್ತೆ: ಬಾಧಿತ ಕುಟುಂಬಗಳ ನೆರವಿಗೆ ನೋಡಲ್ ಅಧಿಕಾರಿ ನೇಮಕಕ್ಕೆ ಸುಪ್ರೀಂ ಆದೇಶ

ಇತ್ತೀಚಿನ ತಿಂಗಳುಗಳಲ್ಲಿ ಉಕ್ರೇನ್ ಪ್ರತಿದಿನವೂ ರಷ್ಯಾದ ತೈಲ ಸ್ಥಾವರಗಳ ಮೇಲೆ ಸುಧಾರಿತ ಡ್ರೋನ್‌ಗಳ ಮೂಲಕ ದಾಳಿ ನಡೆಸುತ್ತಿದೆ. ಈ ದಾಳಿಗಳಿಂದಾಗಿ ರಷ್ಯಾದಲ್ಲಿ ಇಂಧನ ಕೊರತೆ ಉಂಟಾಗಿದ್ದು, ತೈಲ ಸಂಸ್ಕರಣಾ ಸಾಮರ್ಥ್ಯ ಕ್ಷೀಣಿಸಿದೆ. ಉಕ್ರೇನ್ ಗಡಿಯಿಂದ ಸುಮಾರು 1,200 ಕಿಲೋಮೀಟರ್ ದೂರದಲ್ಲಿರುವ ನಿಜ್ನೆಕಾಮ್ಸ್ಕ್ ನಗರವು ಸುಮಾರು 2.4 ಲಕ್ಷ ಜನಸಂಖ್ಯೆಯನ್ನು ಹೊಂದಿದೆ.

ಉಕ್ರೇನ್ ಸ್ವದೇಶಿ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಿದ ದೀರ್ಘ ಶ್ರೇಣಿಯ ಡ್ರೋನ್‌ಗಳು ಈಗ ರಷ್ಯಾದ ಗಡಿಯಿಂದ 2,000 ಕಿ.ಮೀ. ದೂರದಲ್ಲಿರುವ ಸೈಬೀರಿಯಾ ಪ್ರದೇಶದವರೆಗೂ ತಲುಪುತ್ತಿವೆ. ನಾವು ರಷ್ಯಾದ ಪ್ರತಿಯೊಂದು ದಾಳಿಗೂ ಸೂಕ್ತವಾದ ಪ್ರತ್ಯುತ್ತರ ನೀಡುತ್ತಿದ್ದೇವೆ. ರಷ್ಯಾ ಆರಂಭಿಸಿದ ಈ ಯುದ್ಧದ ಬಿಸಿ ಈಗ ಅವರ ಮನೆಗಳಿಗೇ ತಟ್ಟುತ್ತಿದೆ” ಎಂದು ಝೆಲೆನ್ಸ್ಕಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇನ್ನೊಂದೆಡೆ, ರಷ್ಯಾ ಕೂಡ ಉಕ್ರೇನ್ ನಗರಗಳ ಮೇಲೆ ಕ್ಷಿಪಣಿಗಳು, ಗ್ಲೈಡ್ ಬಾಂಬ್‌ಗಳು ಮತ್ತು ಡ್ರೋನ್‌ಗಳ ಮೂಲಕ ನಿರಂತರ ವಾಯು ದಾಳಿಗಳನ್ನು ಮುಂದುವರಿಸಿದೆ. ಮಧ್ಯ ಉಕ್ರೇನ್‌ನ ಡ್ನಿಪ್ರೊ ಪ್ರದೇಶದಲ್ಲಿದ್ದ ವಿಶ್ವ ಆರೋಗ್ಯ ಸಂಸ್ಥೆಯ (WHO) ಉಗ್ರಾಣದ ಮೇಲೆ ರಷ್ಯಾ 24 ಗಂಟೆಗಳಲ್ಲಿ 2 ಬಾರಿ ದಾಳಿ ನಡೆಸಿದ್ದು, ಗಡಿ ಭಾಗದ ಆಸ್ಪತ್ರೆಗಳಿಗೆ ಸರಬರಾಜು ಮಾಡಲು ಇರಿಸಲಾಗಿದ್ದ 4.1 ಕೋಟಿ ರೂ. ಮೌಲ್ಯದ ತುರ್ತು ವೈದ್ಯಕೀಯ ಸಾಮಗ್ರಿಗಳು ಭಸ್ಮವಾಗಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Exit mobile version