ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸರಣಿ ಸ್ಫೋಟ; ಸಾವಿನ ಸಂಖ್ಯೆ 16ಕ್ಕೆ ಏರಿಕೆ – Kannada News | Tamil Nadu Virudhu Nagar cracker factor series blast, several die and many injured

ವಿರುದುನಗರ: ತಮಿಳುನಾಡಿನ ಪಟಾಕಿ ತಯಾರಿಕಾ ಹಬ್ ಎಂದೇ ಕರೆಯಲ್ಪಡುವ ವಿರುದುನಗರ ಜಿಲ್ಲೆಯಲ್ಲಿ ಇಂದು ಭಾನುವಾರ ಸರಣಿ ಸ್ಫೋಟ (cracker blast) ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಕಟ್ಟನಾರ್‌ಪಟ್ಟಿ (Kattanarpatti) ಎಂಬ ಗ್ರಾಮದಲ್ಲಿ ಈ ಘೋರ ದುರಂತ ಸಂಭವಿಸಿದೆ.

ಪಟಾಕಿ ಘಟಕದ ಒಳಗಿನ ರಾಸಾಯನಿಕ ಕೊಠಡಿಯಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಕಾರ್ಖಾನೆಯ ಇತರ ಭಾಗಗಳಿಗೆ ವ್ಯಾಪಿಸಿ, ನಾಲ್ಕೈದು ಭಾರಿ ಸ್ಫೋಟಗಳು ಸಂಭವಿಸಿವೆ. ಸ್ಫೋಟದ ತೀವ್ರತೆಗೆ ಕಾರ್ಖಾನೆಯ 10ಕ್ಕೂ ಹೆಚ್ಚು ಕೊಠಡಿಗಳು ಸಂಪೂರ್ಣವಾಗಿ ಧ್ವಂಸವಾಗಿವೆ.

ಘಟನೆಯಲ್ಲಿ ಇದುವರೆಗೆ 16 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಸುಮಾರು 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಕಾಶಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ನೋಯ್ಡಾ ಹಿಂಸಾಚಾರದ ಮಾಸ್ಟರ್​ಮೈಂಡ್ ಆದಿತ್ಯ ಆನಂದ್ ಅರೆಸ್ಟ್​

ಅಗ್ನಿಶಾಮಕ ದಳದ ಹಲವಾರು ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿವೆ. ಅವಶೇಷಗಳಡಿ ಯಾರಾದರೂ ಸಿಲುಕಿದ್ದಾರೆಯೇ ಎಂದು ಪತ್ತೆ ಹಚ್ಚಲು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಮುಖ್ಯಮಂತ್ರಿಗಳ ಸಾಂತ್ವನ ಮತ್ತು ಪರಿಹಾರ

ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರು ಘಟನೆಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

“ವಿರುದುನಗರ ಜಿಲ್ಲೆಯ ಕಟ್ಟನಾರ್‌ಪಟ್ಟಿಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದ ವಾರ್ತೆ ಕೇಳಿ ನನಗೆ ಅತೀವ ದುಃಖವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು,” ಎಂದು ಅವರು ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಕ್ಷಣವೇ ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿಕೊಳ್ಳಲು ಸಚಿವರಾದ ಕೆ.ಕೆ.ಎಸ್.ಎಸ್.ಆರ್ ರಾಮಚಂದ್ರನ್ ಮತ್ತು ತಂಗಂ ತೆನ್ನರಸು ಅವರನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಮೃತರ ಕುಟುಂಬಗಳಿಗೆ ತಲಾ 3 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ತಕ್ಷಣದ ಪರಿಹಾರವನ್ನು ಸರ್ಕಾರ ಘೋಷಿಸಿದೆ.

ಇದನ್ನೂ ಓದಿ: ನೇಪಾಳದಲ್ಲಿ ಮಿತಿ ಮೀರಿದ ಹಿಂಸಾಚಾರ; ಪ್ರತಿಭಟನಾಕಾರರಿಂದ ಮಾಜಿ ಪ್ರಧಾನಿಯ ಪತ್ನಿಯ ಸಜೀವ ದಹನ!

ಕಳೆದ ವಾರವಷ್ಟೇ (ಏಪ್ರಿಲ್ 13) ವಿರುದುನಗರ ಜಿಲ್ಲೆಯ ಸಾತ್ತೂರು ಸಮೀಪದ ಮತ್ತೊಂದು ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿತ್ತು. ಒಂದು ವಾರದ ಅಂತರದಲ್ಲಿ ಎರಡನೇ ದೊಡ್ಡ ದುರಂತ ಸಂಭವಿಸಿರುವುದು ಸ್ಥಳೀಯ ಕಾರ್ಮಿಕರಲ್ಲಿ ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸುರಕ್ಷತಾ ನಿಯಮಗಳ ಉಲ್ಲಂಘನೆಯೇ ಈ ಅವಘಡಗಳಿಗೆ ಪ್ರಮುಖ ಕಾರಣ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Shankha: ಮನೆಯಲ್ಲಿ ಶಂಖ ಇಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ – Kannada News | Shankha in Sanatana Dharma: Benefits and Rules for Placing Sacred Conch at Home

ಸನಾತನ ಧರ್ಮದಲ್ಲಿ ಶಂಖವನ್ನು ಅತ್ಯಂತ ಪವಿತ್ರ ಮತ್ತು ಮಂಗಳಕರ ವಸ್ತುವೆಂದು ಪೂಜಿಸಲಾಗುತ್ತದೆ. ಪುರಾಣಗಳ ಪ್ರಕಾರ, ಸಮುದ್ರ ಮಂಥನದ ಸಮಯದಲ್ಲಿ ಉದ್ಭವಿಸಿದ 14 ರತ್ನಗಳಲ್ಲಿ ಶಂಖವೂ ಒಂದು. ಇದು ಸಕಾರಾತ್ಮಕ ಶಕ್ತಿಯ ಮೂಲವಾಗಿದ್ದು, ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದುದಾಗಿದೆ. ಶತಮಾನಗಳಿಂದಲೂ ಪೂಜೆ, ಪುನಸ್ಕಾರ ಮತ್ತು ಆರತಿಗಳ ಸಮಯದಲ್ಲಿ ಶಂಖದ ಬಳಕೆ ಅವಿಭಾಜ್ಯ ಅಂಗವಾಗಿದೆ. ಮನೆಯಲ್ಲಿ ಶಂಖವಿದ್ದರೆ ನಕಾರಾತ್ಮಕ ಶಕ್ತಿಗಳು ದೂರವಾಗಿ, ಸುಖ-ಸಮೃದ್ಧಿ ನೆಲೆಸುತ್ತದೆ ಎಂಬ ಬಲವಾದ ನಂಬಿಕೆಯಿದೆ. ಆದರೆ, ಅದರ ಪೂರ್ಣ ಫಲ ಪಡೆಯಲು ಕೆಲವು ಶಾಸ್ತ್ರೋಕ್ತ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ.

ಸ್ಥಾಪನೆಗೆ ಸರಿಯಾದ ದಿಕ್ಕು ಮತ್ತು ವಿಧಾನ:

ವಾಸ್ತು ಶಾಸ್ತ್ರದ ಪ್ರಕಾರ, ಶಂಖವನ್ನು ಮನೆಯ ದೇವರ ಕೋಣೆಯಲ್ಲಿ ಅಥವಾ ಪ್ರಾರ್ಥನಾ ಸ್ಥಳದಲ್ಲಿ ಇಡುವುದು ಅತ್ಯಂತ ಸೂಕ್ತ. ಇದನ್ನು ಯಾವಾಗಲೂ ಈಶಾನ್ಯ, ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸಬೇಕು. ಈ ದಿಕ್ಕುಗಳು ದೈವಿಕ ಶಕ್ತಿಗೆ ಪೂರಕವಾಗಿದ್ದು, ಇಲ್ಲಿ ಶಂಖವನ್ನು ಪ್ರತಿಷ್ಠಾಪಿಸುವುದರಿಂದ ಮನೆಯಲ್ಲಿ ಧನಾತ್ಮಕ ಕಂಪನಗಳು ಹೆಚ್ಚಾಗುತ್ತವೆ. ಶಂಖವನ್ನು ಇರಿಸುವಾಗ ಅದನ್ನು ನೇರವಾಗಿ ನೆಲದ ಮೇಲೆ ಇಡದೆ, ಒಂದು ಸ್ವಚ್ಛವಾದ ರೇಷ್ಮೆ ಬಟ್ಟೆ ಅಥವಾ ಪೀಠದ ಮೇಲೆ ಇರಿಸುವುದು ಶಾಸ್ತ್ರಸಮ್ಮತವಾದ ಕ್ರಮವಾಗಿದೆ.

ಪಾಲಿಸಬೇಕಾದ ಪ್ರಮುಖ ನಿಯಮಗಳು:

ಶಂಖವನ್ನು ಕೇವಲ ಅಲಂಕಾರಿಕ ವಸ್ತುವಾಗಿ ಬಳಸದೆ, ಭಕ್ತಿಪೂರ್ವಕವಾಗಿ ಆರಾಧಿಸಬೇಕು. ಪೂಜೆಯಲ್ಲಿ ಮುಖ್ಯವಾಗಿ ಎರಡು ರೀತಿಯ ಶಂಖಗಳಿರುತ್ತವೆ: ಬಲಮುರಿ ಮತ್ತು ಎಡಮುರಿ. ಬಲಮುರಿ ಶಂಖವನ್ನು ಸಾಕ್ಷಾತ್ ಲಕ್ಷ್ಮಿ ದೇವಿಯ ಸ್ವರೂಪವೆಂದು ಪರಿಗಣಿಸಿ ಕೇವಲ ಪೂಜೆಗೆ ಮಾತ್ರ ಬಳಸಲಾಗುತ್ತದೆ. ಎಡಮುರಿ ಶಂಖವನ್ನು ಮಂಗಳಕರ ಶಬ್ದಕ್ಕಾಗಿ ಊದಲು ಬಳಸಲಾಗುತ್ತದೆ. ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಪೂಜೆಯ ನೀರು ತುಂಬಲು ಮತ್ತು ಊದಲು ಒಂದೇ ಶಂಖವನ್ನು ಬಳಸಬಾರದು; ಇವೆರಡಕ್ಕೂ ಪ್ರತ್ಯೇಕ ಶಂಖಗಳಿರುವುದು ಶ್ರೇಯಸ್ಕರ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ತಪ್ಪಿಸಬೇಕಾದ ಅಂಶಗಳು ಮತ್ತು ಎಚ್ಚರಿಕೆ:

ಶಂಖದ ವಿಚಾರದಲ್ಲಿ ಮಾಡುವ ಸಣ್ಣ ತಪ್ಪುಗಳು ಅಶುಭ ಫಲ ನೀಡಬಹುದು. ಶಂಖವನ್ನು ಎಂದಿಗೂ ಅಶುದ್ಧ ಅಥವಾ ಕೊಳಕು ಸ್ಥಳಗಳಲ್ಲಿ ಇರಿಸಬಾರದು. ಸೂರ್ಯಾಸ್ತದ ನಂತರ ಅಥವಾ ರಾತ್ರಿಯ ಸಮಯದಲ್ಲಿ ಶಂಖ ಊದುವುದನ್ನು ನಿಷೇಧಿಸಲಾಗಿದೆ; ಇದನ್ನು ಕೇವಲ ಮುಂಜಾನೆ ಮತ್ತು ಸಂಜೆಯ ಪೂಜೆಯ ಸಮಯದಲ್ಲಿ ಮಾತ್ರ ಬಳಸಬೇಕು. ಒಂದು ವೇಳೆ ಶಂಖವು ಭಿನ್ನವಾಗಿದ್ದರೆ ಅಥವಾ ಒಡೆದಿದ್ದರೆ ಅಂತಹ ಶಂಖವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು, ಏಕೆಂದರೆ ಅದು ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ.

ಶಂಖದಿಂದಾಗುವ ಅದ್ಭುತ ಪ್ರಯೋಜನಗಳು:

ಮನೆಯಲ್ಲಿ ನಿಯಮಬದ್ಧವಾಗಿ ಶಂಖವನ್ನು ಇಟ್ಟು ಪೂಜಿಸುವುದರಿಂದ ವಾತಾವರಣವು ಶುದ್ಧೀಕರಣಗೊಳ್ಳುತ್ತದೆ. ಶಂಖದ ಧ್ವನಿಯು ಪರಿಸರದಲ್ಲಿರುವ ಕ್ರಿಮಿಕೀಟಗಳನ್ನು ನಾಶಪಡಿಸುವುದಲ್ಲದೆ, ಮಾನಸಿಕ ಶಾಂತಿಯನ್ನು ನೀಡುತ್ತದೆ. ಇದು ಮನೆಯ ಸದಸ್ಯರಲ್ಲಿ ಸಕಾರಾತ್ಮಕ ಚಿಂತನೆಯನ್ನು ಮೂಡಿಸಿ, ಆರ್ಥಿಕ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ. ಧಾರ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಕೋನ ಎರಡರಲ್ಲೂ ಶಂಖದ ಉಪಸ್ಥಿತಿಯು ಮನೆಗೆ ಒಂದು ದೈವಿಕ ಕಳೆಯನ್ನು ತರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಡುಗೆ ಮನೆಯಿಂದ ಇರುವೆಗಳನ್ನು ತೊಡೆದುಹಾಕಲು ಈ ಮನೆಮದ್ದುಗಳು ಸಖತ್‌ ಪ್ರಯೋಜನಕಾರಿ – Kannada News | These home remedies are helpful in getting rid of ants from the kitchen

ಸೊಳ್ಳೆ, ಜಿರಳೆ, ಇಲಿಗಳ ಕಾಟ ಇರಿವಂತೆ ಬಹುತೇಕ ಹೆಚ್ಚಿನ ಮನೆಗಳಲ್ಲಿ ಇರುವೆಗಳ  (ants) ಕಾಟ ಕೂಡ ಇದ್ದೇ ಇರುತ್ತದೆ. ಅದರಲ್ಲೂ ಈ ಬೇಸಿಗೆಯ ಸಮಯದಲ್ಲಿ ಇರುವೆಗಳ ಓಡಾಟ ತೀರಾ ಹೆಚ್ಚಿರುತ್ತವೆ. ಇವು ಆರೋಗ್ಯಕ್ಕೆ ಅಂತಹ ಹೇಳಿಕೊಳ್ಳುವಂತಹ ಹಾನಿ ಮಾಡದೇ ಇದ್ದರೂ ಸಹ, ಮನೆಯೊಳಗೆ ಸೇರಿಕೊಂಡರೆ ಸಿಕ್ಕಾಪಟ್ಟೆ ಕಿರಿಕಿರಿಯನ್ನು ಉಂಟು ಮಾಡುತ್ತವೆ. ಆದ್ದರಿಂದ ಇವುಗಳನ್ನು ತೊಡೆದುಹಾಕಲು ಅನೇಕರು ಮಾರುಕಟ್ಟೆಯಲ್ಲಿ ಸಿಗುವಂತಹ ರಾಸಾಯನಿಕಯುಕ್ತ ವಸ್ತುಗಳನ್ನು ಬಳಕೆ ಮಾಡುತ್ತಾರೆ. ಆದರೆ ಈ ಉತ್ಪನ್ನಗಳು ಆರೋಗ್ಯಕ್ಕೆ ಹಾನಿ ಮಾಡುವ ಸಾಧ್ಯತೆ ಇರುತ್ತದೆ. ಹೀಗಿರುವಾಗ ಇರುವೆಗಳ ಕಾಟದಿಂದ ಮುಕ್ತಿ ಪಡೆಯಲು ಈ ಕೆಲವೊಂದು ಮನೆಮದ್ದುಗಳನ್ನು ಬಳಸುವುದು ಸೂಕ್ತ.

ಇರುವೆಗಳ ಕಾಟದಿಂದ ಮುಕ್ತಿ ಪಡೆಯಲು ಈ ಮನೆಮದ್ದುಗಳ ಸಹಕಾರಿ:

ವಿನೆಗರ್‌ ಸ್ಪ್ರೇ:  ಇರುವೆಗಳನ್ನು ತೊಡೆದು ಹಾಕಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಪರಿಹಾರವೆಂದರೆ ವಿನೆಗರ್ ಸ್ಪ್ರೇ. ನೀರು ಮತ್ತು ಬಿಳಿ ವಿನೆಗರ್ ಅನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ ತಯಾರಿಸಿದ ದ್ರಾವಣವು ಇರುವೆಗಳನ್ನು ತಕ್ಷಣವೇ ಹಿಮ್ಮೆಟ್ಟಿಸುವಲ್ಲಿ ಪರಿಣಾಮಕಾರಿಯಾಗಿದೆ. ಇರುವೆಗಳಿರುವ ಜಾಗಕ್ಕೆ ವಿನೆಗರ್‌ ಸ್ಪ್ರೇ ಸಿಂಪಡಿಸಿ. ಹೆಚ್ಚುವರಿಯಾಗಿ, ಮನೆಯನ್ನು ಒರೆಸುವಾಗ ನೀರಿಗೆ ಸ್ವಲ್ಪ ವಿನೆಗರ್ ಸೇರಿಸುವುದರಿಂದ ಇರುವೆಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ವಿನೆಗರ್‌ನ ಬಲವಾದ ವಾಸನೆಯು ಇರುವೆಗಳ ಇಷ್ಟವಾಗುವುದಿಲ್ಲ. ಅವು ಅಲ್ಲಿಂದ ಓಡಿ ಹೋಗುತ್ತವೆ.

ಕರಿಮೆಣಸು: ಇರುವೆಗಳನ್ನು ಹಿಮ್ಮೆಟ್ಟಿಸಲು ಕರಿಮೆಣಸು ಕೂಡ ಒಂದು ಅತ್ಯುತ್ತಮ ಮನೆಮದ್ದು. ಇರುವೆಗಳು ಕಟುವಾದ ಮತ್ತು ಬಲವಾದ ವಾಸನೆಗಳಿಂದ ಆದಷ್ಟು ದೂರ ಓಡುತ್ತವೆ.  ಹೀರುವಾಗ ಅಡುಗೆಮನೆಯಲ್ಲಿ ಅಥವಾ ಮನೆಯ ಯಾವುದೇ ಮೂಲೆಯಲ್ಲಿ ಇರುವೆಗಳ ಹಿಂಡು ಇದ್ದರೆ, ಅಲ್ಲಿ ಕರಿಮೆಣಸಿನ ಪುಡಿಯನ್ನು ಸಿಂಪಡಿಸಿ.  ಇದರಿಂದ ಪರಿಣಾಮಕಾರಿಯಾಗಿ ಇರುವೆಗಳನ್ನು ತೊಡೆದುಹಾಕಬಹುದು.

ದಾಲ್ಚಿನ್ನಿ: ದಾಲ್ಚಿನ್ನಿ ಇರುವೆಗಳನ್ನು ಹಿಮ್ಮೆಟ್ಟಿಸಲು ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗಿದೆ. ಇರುವೆಗಳು ಇದರ ಬಲವಾದ ವಾಸನೆಯನ್ನು ಇಷ್ಟಪಡುವುದಿಲ್ಲ. ಹಾಗಾಗಿ ಇರುವೆಗಳು ಹೆಚ್ಚು ಕಾಣಿಸಿಕೊಳ್ಳುವ ಸ್ಥಳದಲ್ಲಿ ದಾಲ್ಚಿನ್ನಿ ಪುಡಿಯನ್ನು ಸಿಂಪಡಿಸಿ.  ಇಲ್ಲದಿದ್ದರೆ ಸಣ್ಣ ಹತ್ತಿಯ ತುಂಡುಗಳನ್ನು ದಾಲ್ಚಿನ್ನಿ ಎಣ್ಣೆಯಲ್ಲಿ ಅದ್ದಿ ಇರುವೆಗಳು ಓಡಾಡುವ ಪ್ರದೇಶಗಳಲ್ಲಿ ಇಡಬಹುದು. ಈ ಮನೆಮದ್ದು ಇರುವೆಗಳ ಕಾಟದಿಂದ ಮುಕ್ತಿ ಪಡೆಯಲು ತುಂಬಾ ಪರಿಣಾಮಕಾರಿ.

ಇದನ್ನೂ ಓದಿ: ಉರಿ ಬಿಸಿಲಿಗೆ ಮನೆಯಿಂದ ಹೊರಗೆ ಹೋಗುವಾಗ ಅಗತ್ಯವಾಗಿ ವಸ್ತುಗಳನ್ನು ನಿಮ್ಮೊಂದಿಗೆ ಒಯ್ಯಿರಿ

ನಿಂಬೆ ರಸ: ಬೇಸಿಗೆಯಲ್ಲಿ ಅಡುಗೆಮನೆಯಲ್ಲಿ ಅತಿಯಾಗಿ ಕಾಣಿಸಿಕೊಳ್ಳುವ ಇರುವೆಗಳನ್ನು ತೊಡೆದುಹಾಕಲು ನಿಂಬೆ ರಸವು ಅತ್ಯಂತ ಪರಿಣಾಮಕಾರಿ ಪರಿಹಾರಗಳಲ್ಲಿ ಒಂದಾಗಿದೆ. ನಿಂಬೆಹಣ್ಣಿನಲ್ಲಿರುವ ನೈಸರ್ಗಿಕ ಆಮ್ಲೀಯ ಗುಣಗಳು ಇರುವೆಗಳ ವಾಸನೆಯ ಪ್ರಜ್ಞೆಯನ್ನು ದುರ್ಬಲಗೊಳಿಸುತ್ತವೆ, ಅವು ಮತ್ತೆ ಆ ಕಡೆ ಬರದಂತೆ ತಡೆಯುತ್ತವೆ. ಇರುವೆಗಳು ಹೆಚ್ಚಾಗಿ ಬರುವ ಪ್ರದೇಶಗಳಲ್ಲಿ ನಿಂಬೆ ರಸವನ್ನು ಸಿಂಪಡಿಸಿ. ಇದಲ್ಲದೆ, ನಿಂಬೆ ಸಿಪ್ಪೆಗಳನ್ನು ಅಡುಗೆಮನೆಯ ಕ್ಯಾಬಿನೆಟ್‌ಗಳು, ಬಾಗಿಲುಗಳು ಅಥವಾ ಕಿಟಕಿಗಳ ಬಳಿ ಇಡುವುದರಿಂದ ಇರುವೆಗಳನ್ನು ದೂರವಿಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯೂಥ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹತ್ಯೆ ಹಿಂದೆ ಕೈ ನಾಯಕ ಕೈವಾಡ! – Kannada News | Anjuman islam trust President ismail tamatagar Name In Youth Congress Leader fairoz Murder at Dharwad

ಧಾರವಾಡ, (ಏಪ್ರಿಲ್ 19) : ಹಾಸ್ಮಿ ನಗರದಲ್ಲಿ ಏಪ್ರಿಲ್ 10ರ ರಾತ್ರಿ ನಡೆದಿದ್ದ ಹತ್ಯೆ ಇಡೀ ಧಾರವಾಡ (Dharwad) ಜಿಲ್ಲೆಯನ್ನೇ ಬೆಚ್ಚಿಬಿಳಿಸಿತ್ತು.ಇದೇ ಏಪ್ರಿಲ್ 24 ರಂದು ಹಸೆಮಣೆ ಏರಬೇಕಿದ್ದ ಯೂಥ್ ಕಾಂಗ್ರೆಸ್ (Youth Congress Leader) ರಾಜ್ಯ ಪ್ರಧಾನ ಕಾರ್ಯದರ್ಶಿ ಫೈರೋಜ್ ನನ್ನು (fairoz Murder Case) ಮನೆಗೆ ನುಗ್ಗಿ ಹತ್ಯೆ ಮಾಡಲಾಗಿತ್ತು. ಘಟನೆ ಸಂಬಂಧ ಪೊಲೀಸರು ಈಗಾಗಲೇ ಕೊಲೆಯಾದ 36 ಗಂಟೆಯಲ್ಲಿ 9 ಜನ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ನಂತರ ತನಿಖೆ ಮುಂದುವರೆಸಿದ ಪೊಲೀಸರಿಗೆ ಕೊಲೆಯ ಹಿಂದೆ ಹಲವು ಕೈಗಳ ಪಾತ್ರವಿರುದುವು ದೃಢವಾಗಿದ್ದು, ಕೆಲವರನ್ನು ಕರಸಿ ವಿಚಾರಣೆ ನಡೆಸಿದ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಆದ್ರೆ, ಇದೀಗ ಈ ಕೊಲೆ ಹಿಂದೆ ಕಾಂಗ್ರೆಸ್ ಮುಖಂಡನ ಕೈವಾಡ ಶಂಕೆ ವ್ಯಕ್ತವಾಗಿದೆ. ಹೌದು… ಕೈ ಮುಖಂಡ ಹಾಗೂ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಲಾಯಿಲ್ ತಮಟಗಾರ್ ( (ismail tamatgar) ಹೆಸರೂ ಕೇಳಿ ಬಂದಿದ್ದು, ಈತನ ಬಂಧನಕ್ಕೆ ಪೊಲೀಸರು ತಂಡಗಳು ಬಲೆ ಬೀಸಿವೆ.

ಕೊಲೆ ಪ್ರಕರಣದಲ್ಲಿ ಇಸ್ಮಾಯಿಲ್ ತಮಟಗಾರ್ ಪಾತ್ರವೂ ಇದೆ ಅನ್ನೋದಕ್ಕೆ ಹಲವಾರು ಆಡಿಯೋಗಳು ಸಾಕ್ಷಿಯಾಗಿವೆ ಎಂದು ಫೈರೋಜ್ ಕುಟುಂಬಸ್ಥರು ಆರೋಪಿಸಿದ್ದರು. ಅಲ್ಲದೇ ನೇರವಾಗಿ ಈ ಕೊಲೆಯ ಹಿಂದೆ ತಮಟಗಾರ್ ಇದ್ದಾನೆ ಅಂತಾನೂ ಹೇಳಿದ್ದರು. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರೋ ಪೊಲೀಸರು ಇಸ್ಮಾಯಿಲ್ ತಮಟಗಾರ್ ಗಾಗಿ ತಲಾಶ್ ನಡೆಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಯುವ ಮುಖಂಡನ ಹತ್ಯೆ: 24 ಗಂಟೆಯೊಳಗೇ ಹಂತಕರು ಅರೆಸ್ಟ್, ಕೊಲೆ ರಹಸ್ಯ ಬಯಲು

ಪ್ರಮುಖ ಆರೋಪಿ ವಿದೇಶಕ್ಕೆ ಪರಾರಿ?

ಈ ಪ್ರಕರಣ ಸಂಬಂಧ ಪೊಲೀಸರು, ಕೆಲವರನ್ನು ಕರಸಿ ವಿಚಾರಣೆ ನಡೆಸಿದ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಮೈನುದ್ದೀನ್, ಸಾಗರ್, ಅಲ್ಲಾವುದ್ದೀನ್ ಎಂಬುವರನ್ನ ಬಂಧಿಸಿದ್ದಾರೆ. ಇನ್ನು ಇದೀಗ ಈ ಪ್ರಕರಣದಲ್ಲಿ ಕೈ ಮುಖಂಡ ಹಾಗೂ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಲಾಯಿಲ್ ತಮಟಗಾರ್ ನ ಹೆಸರೂ ಕೇಳಿ ಬಂದಿದ್ದು, ಆತನ ಬಂಧನಕ್ಕೆ ಪೊಲೀಸರು ಸರ್ಚ್ ವಾರೆಂಟ್ ಹೊರಡಿಸಿದ್ದಾರೆ. ಆದ್ರೆ, ಇಸ್ಲಾಯಿಲ್ ತಮಟಗಾರ್ ವಿಶೇಶಕ್ಕೆ ಪರಾರಿಯಾಗಿವ ಶಂಕೆ ವ್ಯಕ್ತವಾಗಿದೆ.

ಇಸ್ಮಾಯಿಲ್ ಮನೆ ಹಾಗೂ ಅಂಜುಮನ್ ಸಂಸ್ಥೆಗೆ ಸರ್ಚ್ ವಾರಂಟ್ ನೀಡಿದ್ದಾರೆ. ಸದ್ಯ ನೆರೆಯ ಗೋವಾ, ಹೈದ್ರಾಬಾದ್, ಮುಂಬೈನಲ್ಲಿ ಇಸ್ಮಾಯಿಲ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದರೆ ಮನೆಗೆ ಸರ್ಚ್ ವಾರಂಟ್ ನೀಡುತ್ತಿದ್ದಂತೆಯೇ ಇಸ್ಮಾಯಿಲ್ ತಮಟಗಾರ್ ವಿದೇಶಕ್ಕೆ ಹಾರಿರುವ ಅನುಮಾನ ಮೂಡಿದೆ. ಸದ್ಯ ಪೊಲೀಸರು ವಿದೇಶಕ್ಕೂ ಒಂದು ತಂಡ ಕಳುಹಿಸಿ ಇಸ್ಮಾಯಿಲ್ ನನ್ನು ಬಂಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಫೈರೋಜ್ ಕೊಲೆ ಪ್ರಕರಣದ ತನಿಖೆ ಮುಂದುವರೆಸಿದಂತೆ ಆರೋಪಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಪೊಲೀಸರು ಪ್ರಕರಣದ ಪ್ರಮುಖ ಆರೋಪಿಗಾಗಿ ನಾಲ್ಕು ತಂಡ ರಚಿಸಿ ಹುಡುಕಾಟ ನಡೆಸಿದ್ದಾರೆ. ‌ಪ್ರಮುಖ ಆರೋಪಿ ಇಸ್ಮಾಯಿಲ್ ತಮಟಗಾರ್ ಬಂಧನದ ಬಳಿಕ ಕೊಲೆಯ ರಹಸ್ಯ ಬಯಲಾಗಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮೈಸೂರು: ಕಾವೇರಿ ನದಿಯಲ್ಲಿ 6 ಜನ‌ ಜಲಸಮಾಧಿ; ದರ್ಗಾಕ್ಕೆ ಬಂದವರು ದುರಂತ ಅಂತ್ಯ

ಮೈಸೂರು, ಏಪ್ರಿಲ್​ 19: ಕಾವೇರಿ ನದಿಯಲ್ಲಿ ಮುಳುಗಿ 6 ಜನ‌ ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆ K.R.ನಗರದ ಅರ್ಕೇಶ್ವರ ದೇಗುಲದ ಬಳಿ ನಡೆದಿದೆ. ಉರೂಸ್​ ಹಿನ್ನೆಲೆ 8 ಜನರ ತಂಡ ದರ್ಗಾಕ್ಕೆ ಬಂದಿದ್ದು, ಈ ವೇಳೆ ನದಿಗೆ ಈಜಲು ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ. ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದು, ಉಳಿದ 6 ಜನ ನೀರುಪಾಲಾಗಿದ್ದಾರೆ. ಸ್ಥಳಕ್ಕೆ ಕೆ.ಆರ್.ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾಸಿನ್(23), ಫಾತಿಮ್(30), ಹುಮಾಯೂನ್(7), ನೇಹಾನ್(19), ಅಲೀಂ(13) ಸೇರಿ 6 ಜನ ಸಾವನ್ನಪ್ಪಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​​ಡೇಟ್ ಆಗಲಿದೆ.

Source link

ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕೆಗಳಿಗೆ ಇರಾನ್​ನ ‘ಸೊಳ್ಳೆ ಪಡೆಗಳ’ ಕಾಟ – Kannada News | Irans mosquito fleet becomes big threat to us navy in hormuz strait

ಟೆಹರಾನ್, ಏಪ್ರಿಲ್ 19: ಜಗತ್ತಿನ ಶೇ. 20 ತೈಲ ಸಾಗಣೆಯಾಗುವ ಹಾರ್ಮುಜ್ ಜಲಸಂಧಿಯಲ್ಲಿ (hormuz strait) ಅಮೆರಿಕ ಹಾಗೂ ಇರಾನ್ ಮಧ್ಯೆ ತಡೆಗಾಗಿ ಜಂಗೀಕುಸ್ತಿ ನಡೆದಿದೆ. ನೀವು ಪಟ್ಟುಹಾಕಿದರೆ ನಾ ಪಟ್ಟು ಹಾಕುತ್ತೇನೆ ಎಂಬಂತಾಗಿದೆ. ಅಮೆರಿಕದ ನೌಕಾಪಡೆಯು ಈ ಹಾರ್ಮುಜ್ ಜಲಸಂಧಿಗೆ ದಿಗ್ಬಂಧನ ಹಾಕಿದ ಬಳಿಕ ತನ್ನ ಮುಷ್ಟಿಯನ್ನು ಸಡಿಲಿಸಿದ್ದ ಇರಾನ್ ಇದೀಗ ಮತ್ತೊಮ್ಮೆ ತಡೆ ಹಾಕಿದೆ. ಜಲಸಂಧಿಯಲ್ಲಿ ಇರುವ ಅಮೆರಿಕನ್ ನೌಕೆಗಳಿಗೆ ಈಗ ಇರಾನ್​ನ ‘ಸೊಳ್ಳೆ ಪಡೆ’ಗಳ (Iran’s mosquito fleet) ಕಾಟ ಶುರುವಾಗಿದೆ. ಈ ಸಣ್ಣ ಸಣ್ಣ ದೋಣಿಗಳ ಉಪಟಳಕ್ಕೆ ಅಮೆರಿಕದವರು ಹೈರಾಣಾಗಿ ಹೋಗುತ್ತಿದ್ದಾರೆ.

ಹಾರ್ಮುಜ್ ಜಲಸಂಧಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅಮೆರಿಕದ ಪ್ರಯತ್ನ ಪದೇ ಪದೇ ವಿಫಲವಾಗುತ್ತಿದೆ. ಇರಾನ್​ನ ದೊಡ್ಡ ಹಡಗುಗಳನ್ನು ಹೊಡೆದುಹಾಕುವ ಅಮೆರಿಕಕ್ಕೆ ಈ ಸಣ್ಣ ದೋಣಿಗಳು ಬಹಳ ಅಪಾಯಕಾರಿ ಎನಿಸಿವೆ.

ಇದನ್ನೂ ಓದಿ: ‘ನಮ್ಮ ಪರಮಾಣು ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ’: ಇರಾನ್ ಅಧ್ಯಕ್ಷರ ಗುಡುಗು

ಇರಾನ್​ನ ಸೊಳ್ಳೆ ಪಡೆ ದೋಣಿಗಳು ಯಾಕೆ ಅಪಾಯಕಾರಿ?

ವಿಹಾರಕ್ಕೆಂದು ಬಳಸಲಾಗುವ ದೋಣಿಗಳನ್ನೇ ಇರಾನ್ ಮಾರ್ಪಡಿಸಿಕೊಂಡು ಸಂಗ್ರಾಮಕ್ಕೆ ಬಳಸುತ್ತಿದೆ. ಈ ದೋಣಿಗಳಿಗೆ ರಾಕೆಟ್ ಚಾಲಿತ ಗ್ರೆನೇಡ್ ಬಾಂಬುಗಳನ್ನು ಉಡಾಯಿಸುವ ವ್ಯವಸ್ಥೆ ಮಾಡಲಾಗಿರುತ್ತದೆ. ಇನ್ನೂ ಹಲವು ದೋಣಿಗಳಲ್ಲಿ ಮೆಷೀನ್ ಗನ್​ಗಳಿರುತ್ತವೆ. ಇವು ಬಹಳ ವೇಗವಾಗಿ ಸಾಗಿ ಹೋಗಬಲ್ಲುವು. 100 ನಾಟ್​ವರೆಗಿನ ವೇಗ ಅಥವಾ ಗಂಟೆಗೆ 185 ಕಿಮೀವರೆಗಿನ ವೇಗದಲ್ಲಿ ಇವು ಓಡಬಲ್ಲುವು.

ಇರಾನ್​ನ ಸರ್ವೋಚ್ಚ ನಾಯಕರ ವೈಯಕ್ತಿಕ ಸೈನ್ಯ ಪಡೆಯಾದ ಇಸ್ಲಾಮಿಕ್ ರೆವಲ್ಯೂಶನರಿ ಗಾರ್ಡ್ ಕಾರ್ಪ್ಸ್ ಈ ದೋಣಿ ಪಡೆಗಳನ್ನು ನಿಭಾಯಿಸುತ್ತದೆ. ಈ ಸೇನೆ ಅಸಾಂಪ್ರದಾಯಿಕ ಯುದ್ಧ ಕಲೆಗಳನ್ನು ಕರಗತ ಮಾಡಿಕೊಂಡಿದೆ. ಅದರ ವಿವಿಧ ರಣತಂತ್ರಗಳಲ್ಲಿ ಈ ಸೊಳ್ಳೆ ದೋಣಿ ತಂತ್ರವೂ ಇದೆ.

ಇದನ್ನೂ ಓದಿ: ಜಾಗತಿಕ ರಾಜಕೀಯದಲ್ಲಿ ಸಂಚಲನ, ಟ್ರಂಪ್ ಮತ್ತು ಪಾಕ್ ಸೇನಾ ಮುಖ್ಯಸ್ಥರ ‘ದೋಸ್ತಿ’ ಮೇಲೆ ಅಮೆರಿಕ ಗುಪ್ತಚರ ಇಲಾಖೆ ಕಣ್ಣು

ಹಾಗೆಯೇ, ಇರಾನ್​ನ ಸೊಳ್ಳೆ ಪಡೆಗಳಲ್ಲಿ ಸಣ್ಣ ಸಬ್​ಮರೈನ್​ಗಳು ಹಾಗೂ ಡ್ರೋನ್​ಗಳೂ ಇವೆ. ಇವುಗಳನ್ನು ಟ್ರ್ಯಾಕ್ ಮಾಡುವುದು ಅಷ್ಟು ಸುಲಭವಲ್ಲ. ಸೆಟಿಲೈಟ್​ಗಳ ಕಣ್ಣಿಗೆ ಇವು ಅಷ್ಟು ಸುಲಭಕ್ಕೆ ಬೀಳುವುದಿಲ್ಲ. ಇರಾನ್​ನ ಸೊಳ್ಳಿ ಪಡೆಯಲ್ಲಿ ಈ ಸಣ್ಣ ಸಣ್ಣ ದೋಣಿಗಳು, ಪುಟ್ಟ ಸಬ್​ಮರೈನ್​ಗಳು, ಡ್ರೋನ್​ಗಳು, ಮಿಸೈಲ್​ಗಳು ಮೊದಲಾದವು ಇವೆ. ಬಹಳ ಕ್ಷಿಪ್ರವಾಗಿ ಸಾಗಿ ಹಡಗುಗಳ ಮೇಲೆ ಆಕ್ರಮಣ ಮಾಡಿ, ಅಷ್ಟೇ ಬೇಗವಾಗಿ ಇವು ವಾಪಸ್ ಹೋಗಬಲ್ಲುವು. ಹೀಗಾಗಿ, ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕಾಪಡೆಗೆ ಇರಾನ್​ನ ಸೊಳ್ಳೆ ಪಡೆ ಮಗ್ಗುಲಮುಳ್ಳಾಗಿ ಪರಿಣಮಿಸಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Agriculture Jobs 2026: ಕರ್ನಾಟಕ ಕೃಷಿ ಇಲಾಖೆಯಲ್ಲಿ ಉದ್ಯೋಗಾವಕಾಶ; 890 ಕೃಷಿ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ – Kannada News | Karnataka Agriculture Jobs 2026: 890 AO/AAO Posts by KSDA KEA Apply Now!

ಕರ್ನಾಟಕ ರಾಜ್ಯ ಕೃಷಿ ಇಲಾಖೆಯು (KSDA) ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಹಮ್ಮಿಕೊಂಡಿದೆ. ಒಟ್ಟು 890 ಕೃಷಿ ಅಧಿಕಾರಿ (AO) ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ಪದವಿ ಪಡೆದ ಹಾಗೂ ಕರ್ನಾಟಕ ಸರ್ಕಾರದಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಉದ್ಯೋಗಾಕಾಂಕ್ಷಿಗಳು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತರು ಮೇ 10ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ:

ಈ ನೇಮಕಾತಿಯಲ್ಲಿ ಒಟ್ಟು 890 ಹುದ್ದೆಗಳಿದ್ದು, ಇವುಗಳಲ್ಲಿ ಕೃಷಿ ಅಧಿಕಾರಿ (AO) ಹುದ್ದೆಗಳು ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳು ಸೇರಿವೆ. ಈ ಹುದ್ದೆಗಳನ್ನು ಕಲ್ಯಾಣ ಕರ್ನಾಟಕ (KK) ಮತ್ತು ಉಳಿಕೆ ಮೂಲ ವೃಂದ (RPC) ಎಂದು ವಿಂಗಡಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 69,250 ರಿಂದ ರೂ. 1,34,200 ರವರೆಗಿನ ಅತ್ಯುತ್ತಮ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದ್ದು, ರಾಜ್ಯದಾದ್ಯಂತ ವಿವಿಧ ಕೃಷಿ ಕೇಂದ್ರಗಳಲ್ಲಿ ಕೆಲಸ ಮಾಡುವ ಅವಕಾಶ ದೊರೆಯಲಿದೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಕೃಷಿ (B.Sc Agriculture), ಬಿ.ಟೆಕ್ ಬಯೋಟೆಕ್ ಅಥವಾ ಕೃಷಿ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿರಬೇಕು. ವಯೋಮಿತಿಯನ್ನು ಕನಿಷ್ಠ 21 ವರ್ಷ ಮತ್ತು ಗರಿಷ್ಠ 40 ವರ್ಷಗಳವರೆಗೆ ನಿಗದಿಪಡಿಸಲಾಗಿದೆ. ನಿಯಮದಂತೆ ಎಸ್‌ಸಿ/ಎಸ್‌ಟಿ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲ ಮತ್ತು ವಿಧವೆಯರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ:

ಅರ್ಜಿ ಸಲ್ಲಿಸಲು ಸಾಮಾನ್ಯ ಮತ್ತು ಒಬಿಸಿ ವರ್ಗದವರಿಗೆ ರೂ. 750, ಎಸ್‌ಸಿ/ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ. 500 ಹಾಗೂ ಮಾಜಿ ಸೈನಿಕರಿಗೆ ರೂ. 250 ಶುಲ್ಕ ನಿಗದಿಪಡಿಸಲಾಗಿದೆ. ಆಯ್ಕೆ ಪ್ರಕ್ರಿಯೆಯು ಪ್ರಮುಖವಾಗಿ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲನೆಯದಾಗಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಮತ್ತು ಎರಡನೆಯದಾಗಿ ಆಫ್‌ಲೈನ್ OMR ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅರ್ಹರನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ಕ್ರಮ:

ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಪೂರ್ಣವಾಗಿ ಓದಿ ಅರ್ಹತೆಯನ್ನು ಖಚಿತಪಡಿಸಿಕೊಳ್ಳಬೇಕು. ನಂತರ ಆನ್‌ಲೈನ್‌ನಲ್ಲಿ ಅಗತ್ಯ ದಾಖಲೆಗಳಾದ ಶೈಕ್ಷಣಿಕ ಪ್ರಮಾಣಪತ್ರಗಳು, ವಯಸ್ಸಿನ ಪುರಾವೆ ಮತ್ತು ಇತ್ತೀಚಿನ ಫೋಟೋಗಳೊಂದಿಗೆ ವಿವರಗಳನ್ನು ಭರ್ತಿ ಮಾಡಬೇಕು. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಿ, ಅರ್ಜಿಯನ್ನು ಸಲ್ಲಿಸಿದ (Submit) ನಂತರ ಅದರ ಪ್ರತಿಯನ್ನು ತೆಗೆದಿಟ್ಟುಕೊಳ್ಳುವುದು ಅತ್ಯಗತ್ಯ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:50 pm, Sun, 19 April 26

Source link

ದೆಹಲಿಗೆ ಹೋಗುವ ಮುನ್ನ ಡಿಕೆಶಿ ವಿಶೇಷ ಪೂಜೆ: ಪ್ರಾರ್ಥನೆಯ ರಹಸ್ಯ ಬಹಿರಂಗಪಡಿಸಿದ ಸ್ವಾಮೀಜಿ – Kannada News | Karnataka leadership change Row: DCM DK Shivakumar Talks after Special Pooja in Mukti Mandir at Gadag

ಗದಗ, (ಏಪ್ರಿಲ್ 19): ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆ ಮುಗಿಯುತ್ತಿದ್ದಂತೆಯೆ ಕರ್ನಾಟಕ ಕಾಂಗ್ರೆಸ್​​​ನಲ್ಲಿ (karnataka Congress) ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಒಂದೆಡೆ ಮುಸ್ಲಿಂ ನಾಯಕರ ಅಸಮಾಧಾನ, ಇನ್ನೊಂದೆಡೆ ಸಂಪುಟ ಪುನಾರಚನೆ ಕೂಗು, ಮತ್ತೊಂದೆಡೆ ಇದೀಗ ನಾಯಕತ್ವ ಬದಲಾವಣೆ ಮತ್ತೆ ಮುನ್ನಲೆಗೆ ಬಂದಿದೆ. ಹೌದು….ಸಿಎಂ ಕುರ್ಚಿಗೆ ಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಲಿದ್ದಾರೆ. ಆದ್ರೆ, ಅದಕ್ಕೂ ಮುನ್ನ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿಮಂದಿರದ ವೀರಗಂಗಾಧರ ಜಗದ್ಗುರುಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಸಿಎಂ ಸ್ಥಾನದ ಬಗ್ಗೆ ವಿಶೇಷ ಪ್ರಾರ್ಥನೆ ಮಾಡಿಕೊಂಡಿದ್ದಾರೆಂದು ವಿಮಲ ರೇಣುಕಾಮುನಿ ಶಿವಾಚಾರ್ಯರು ತಿಳಿಸಿದ್ದಾರೆ.

ಈ ಬಗ್ಗೆ ಮುಕ್ತಿಮಂದಿರದ ವಿಮಲ ರೇಣುಕಾಮುನಿ ಶಿವಾಚಾರ್ಯರ ಮಾಧ್ಯಮಗಳಿಗೆ ಮಾತನಾಡಿದ್ದು,
ಸಿಎಂ ಸ್ಥಾನದ ಬಗ್ಗೆ ಸಂಕಲ್ಪ ಮಾಡಿ ಡಿಕೆ ಶಿವಕುಮಾರ್ ಅವರು ಪೂಜೆ ಮಾಡಿದ್ದಾರೆ. ಹಾಗೇ ಅವರಿಗೆ ಬಂದಿರುವ ಕಷ್ಟ ನಷ್ಟಗಳು ದೂರ ಆಗಲೆಂದು ಪ್ರಾರ್ಥಿಸಿದ್ದು, ವೀರಗಂಗಾಧರ ಗುರುಗಳು ಡಿ.ಕೆ.ಶಿವಕುಮಾರ್​ಗೆ ಆಶೀರ್ವಾದ ಮಾಡಲಿ ಎಂದಿದ್ದಾರೆ.

ಇದನ್ನೂ ನೋಡಿ: ಸಚಿವ ಜಮೀರ್ ಮತ್ತೆ ಜೆಡಿಎಸ್​​​​ ಸೇರ್ತಾರೆ ಎನ್ನುವ ಚರ್ಚೆ ಬಗ್ಗೆ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ

ಇನ್ನು ಈ ಬಗ್ಗೆ ಸ್ವತಃ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ನಾನು ಏನೂ ಮಾತನಾಡುವುದಿಲ್ಲ, ಕಾಲವೇ ಉತ್ತರ ಕೊಡುತ್ತದೆ. ವಿಶೇಷವಾದ ಪವಿತ್ರ ಸ್ಥಳ, ವೀರಗಂಗಾಧರ ಶ್ರೀಗಳ‌ ಲಿಂಗೈಕ್ಯರಾದ ಸ್ಥಳ. ಇಡೀ ಪ್ರಪಂಚ ಮಾನವ ಧರ್ಮದ ಮೇಲೆ ನಿಂತಿದೆ. ಬಿಡುವು ಸಿಕ್ಕಾಗ ಪುಸ್ತಕ ಬರೆದು ಸಮಾಜಕ್ಕೆ ತಿಳಿಸುತ್ತೇನೆ. ಈ ಮಠದ ಆಶೀರ್ವಾದ ಪಡೆದಿದ್ದೇನೆ, ದೊಡ್ಡ ಶಕ್ತಿ ಬಂದಿದೆ. ಯಾರೂ ಧರ್ಮ ಬೇಡ ಎನ್ನಲ್ಲ, ಅವರವರ ಧರ್ಮ ಕಾಪಾಡುತ್ತಾರೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೆಸಿಬಿಯಿಂದ ಕಟ್ಟಡಗಳ ನೆಲಸಮ: ಕರಾವಳಿಯಲ್ಲಿ ಬುಲ್ಡೋಜರ್ ಬಾಬಾ ಆದ ಕಾಂಗ್ರೆಸ್ ಶಾಸಕ – Kannada News | Puttur MLA Ashok Rai Faces FIR: Unauthorized Demolition by JCB in Mangaluru

ಖಾಸಗಿ ಕಟ್ಟಡ ನೆಲಸಮ ಮಾಡಿದ ಅಶೋಕ್ ರೈImage Credit source: tv9 kannada

ಮಂಗಳೂರು, ಏಪ್ರಿಲ್​ 19: ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ (Ashok Rai)​​ ಸ್ವತಃ ಜೆಸಿಬಿ ಚಲಾಯಿಸಿ ಖಾಸಗಿ ಕಟ್ಟಡವನ್ನು ಅನಧಿಕೃತವಾಗಿ ನೆಲಸಮಗೊಳಿಸಿರುವ (Demolition) ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸುಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಖಾಸಗಿ ಜಾಗದಲ್ಲಿ ನಡೆದಿದೆ. ಸದ್ಯ ಶಾಸಕರ ಈ ನಡೆ ಕಾನೂನು ಸಂಘರ್ಷಕ್ಕೆ ನಾಂದಿ ಹಾಡಿದೆ. ಪುತ್ತೂರು ಠಾಣೆಗೆ ದೇಗುಲ ಆಡಳಿತ ಮಂಡಳಿ ಹಾಗೂ ಶಾಸಕರ ವಿರುದ್ಧ ಕೋರ್ಟ್​ ರಿಸೀವರ್ ದೂರು ನೀಡಿದ್ದಾರೆ.

ಘಟನೆ ಹಿನ್ನೆಲೆ

ಜಿಲ್ಲೆಯ ಪುತ್ತೂರಿನ ಸುಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಖಾಸಗಿ ಜಾಗವಿದೆ. ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ದೈವ-ದೇವರ ಸಮಾಗಮದ ಆಚರಣೆಗೆ ಸುಮಾರು 30 ಸಾವಿರಕ್ಕೂ ಹೆಚ್ಚು ಭಕ್ತರು ಸೇರುತ್ತಾರೆ. ಈ ಆಚರಣೆಗೆ ಜಾಗದ ಅಭಾವವಿದೆ ಎಂಬ ಕಾರಣ ನೀಡಿ, ಶಾಸಕ ಅಶೋಕ್ ರೈ ಅವರು ಜೆಸಿಬಿ ಮೂಲಕ ಅಲ್ಲಿನ ಖಾಸಗಿ ಕಟ್ಟಡಗಳನ್ನು ನೆಲಸಮಗೊಳಿಸಿದ್ದಾರೆ.

ಇದನ್ನೂ ಓದಿ: ಕೋಳಿ‌ ಕಾಳಗಕ್ಕೆ ಪೊಲೀಸ ‌ನಿರ್ಬಂಧ: ತಾವೇ ಮುಂದೆ ನಿಂತು ಕೋಳಿ‌ ಅಂಕ ಮಾಡಿಸಿದ ಕಾಂಗ್ರೆಸ್​ ಶಾಸಕ

ಇನ್ನು ಕಟ್ಟಡ ನೆಲಸಮ ಮಾಡಲು ಕೋರ್ಟ್ ಅನುಮತಿ ಇದೆ ಎಂದು ಹೇಳಿದ್ದಾರೆ. ಆದರೆ ಕಟ್ಟಡ ನೆಲಸಮ ಮಾಡಲು ಕೋರ್ಟ್​ನಿಂದ ಯಾವುದೇ ಆದೇಶ ಮಾಡಿರಲಿಲ್ಲ. ಹೀಗಾಗಿ ಇದು ಸದ್ಯ ವಿವಾದಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಜಾಗವನ್ನ ರಿಸೀವರ್ ಸುಪರ್ದಿಗೆ ನೀಡಿದ ಕೋರ್ಟ್ 

ಖಾಸಗಿ ಜಾಗದ ಮಾಲೀಕರ ನಡುವೆ ಆಸ್ತಿಯ ವಿಭಜನೆಗೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದೆ. ಈ ಕಾರಣದಿಂದ ನ್ಯಾಯಾಲಯವು ಡಾ. ಕೇದಿಗೆ ಅರವಿಂದ ರಾವ್ ಅವರನ್ನು ಕೋರ್ಟ್ ರಿಸೀವರ್ ಆಗಿ ನೇಮಿಸಿ, ಜಾಗವನ್ನು ಅವರ ಸುಪರ್ದಿಗೆ ನೀಡಿತ್ತು. ಕೋರ್ಟ್ ಸುಪರ್ದಿಯಲ್ಲಿರುವ ಜಾಗದಲ್ಲಿ ಕಾನೂನು ಬಾಹಿರವಾಗಿ ಪ್ರವೇಶಿಸಿ ಕಟ್ಟಡ ಧ್ವಂಸಗೊಳಿಸಿರುವುದು ಇದೀಗ ವಿವಾದಕ್ಕೆ ಎಡೆಮಾಡಿ ಕೊಟ್ಟಿದೆ.

ಇದನ್ನೂ ಓದಿ: ರಸ್ತೆ ಗುಂಡಿ ಕಂಡು ಶಾಸಕ ಅಶೋಕ್ ಕುಮಾರ್ ರೈ ಗರಂ: ನಗರಸಭೆ ಕಮಿಷನರ್​​ಗೆ ಖಡಕ್​ ಎಚ್ಚರಿಕೆ

ಈ ಘಟನೆಗೆ ಸಂಬಂಧಿಸಿದಂತೆ ಕೋರ್ಟ್ ರಿಸೀವರ್ ಡಾ. ಕೇದಿಗೆ ಅರವಿಂದ ರಾವ್ ಪುತ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಯ ಮೋಕ್ತೇಸರಾದ ಈಶ್ವರ ಭಟ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಶಾಸಕರ ವಿರುದ್ಧ ಕ್ರಮಕ್ಕೆ ಮನವಿ

ಇನ್ನು ಘಟನಾ ಸ್ಥಳದಲ್ಲಿ ಸ್ವತಃ ಶಾಸಕರೇ ಭಾಗಿಯಾಗಿರುವುದರಿಂದ, ಎಫ್‌ಐಆರ್‌ನಲ್ಲಿ ಶಾಸಕ ಅಶೋಕ್ ರೈ ಅವರ ಹೆಸರನ್ನು ಸೇರಿಸಿಕೊಳ್ಳಲು ಪೊಲೀಸ್ ಇಲಾಖೆಯು ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:22 pm, Sun, 19 April 26

Source link

KSFES Recruitment 2026: KSFES ನೇಮಕಾತಿ; 1828 ಅಗ್ನಿಶಾಮಕ ಹುದ್ದೆಗಳ ಬೃಹತ್ ಅಧಿಸೂಚನೆ! – Kannada News | Ksfes recruitment 2026 1828 fire operator and driver jobs in karnataka

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು (KSFES) ಶೀಘ್ರದಲ್ಲೇ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲಿದೆ. ಒಟ್ಟು 1,828 ಹುದ್ದೆಗಳಿಗೆ ಅಧಿಸೂಚನೆ ಹೊರಬೀಳಲಿದ್ದು, ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ಇದು ಉತ್ತಮ ಅವಕಾಶವಾಗಿದೆ. ವಿಶೇಷವೆಂದರೆ, ಇಲಾಖೆಯು ಅಗ್ನಿಶಾಮಕ ಸಿಬ್ಬಂದಿ, ಚಾಲಕ ಮತ್ತು ತಂತ್ರಜ್ಞ ಹುದ್ದೆಗಳನ್ನು ವಿಲೀನಗೊಳಿಸಿ ‘ಅಗ್ನಿಶಾಮಕ ನಿರ್ವಾಹಕ’ ಎಂಬ ಹೊಸ ಶ್ರೇಣಿಯನ್ನು ಸೃಷ್ಟಿಸಿದೆ.

ಹುದ್ದೆಗಳ ವಿವರ ಮತ್ತು ವೇತನ:

ಈ ನೇಮಕಾತಿಯಲ್ಲಿ ಅಗ್ನಿಶಾಮಕ ಸಿಬ್ಬಂದಿಗೆ ಅತಿ ಹೆಚ್ಚು ಅಂದರೆ 1,502 ಸ್ಥಾನಗಳನ್ನು ಮೀಸಲಿಡಲಾಗಿದೆ. ಉಳಿದಂತೆ 294 ಎಂಜಿನ್ ಚಾಲಕರು ಮತ್ತು 32 ಚಾಲಕ ತಂತ್ರಜ್ಞ ಹುದ್ದೆಗಳು ಭರ್ತಿಯಾಗಲಿವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 37,500 ರಿಂದ ರೂ. 83,700 ರವರೆಗಿನ ಆಕರ್ಷಕ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಕರ್ನಾಟಕದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಈ ಉದ್ಯೋಗಿಗಳು ಕರ್ತವ್ಯ ನಿರ್ವಹಿಸಬೇಕಾಗುತ್ತದೆ.

ಅರ್ಹತೆ ಮತ್ತು ವಯೋಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ 10ನೇ ತರಗತಿ, ಪಿಯುಸಿ ಅಥವಾ ರಸಾಯನಶಾಸ್ತ್ರ ವಿಷಯದಲ್ಲಿ ವಿಜ್ಞಾನ ಪದವಿಯನ್ನು ಪೂರ್ಣಗೊಳಿಸಿರಬೇಕು. ವಯೋಮಿತಿಯನ್ನು 18 ರಿಂದ 38 ವರ್ಷಗಳವರೆಗೆ ನಿಗದಿಪಡಿಸಲಾಗಿದೆ. ಸರ್ಕಾರಿ ನಿಯಮದಂತೆ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ. ಸಾಮಾನ್ಯ ವರ್ಗದವರಿಗೆ ರೂ. 250 ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ರೂ. 100 ಅರ್ಜಿ ಶುಲ್ಕವಿರುತ್ತದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ದೈಹಿಕ ಸಾಮರ್ಥ್ಯ ಮತ್ತು ಆಯ್ಕೆ ಪ್ರಕ್ರಿಯೆ:

ಅಗ್ನಿಶಾಮಕ ದಳದ ಕೆಲಸಕ್ಕೆ ದೈಹಿಕ ಸದೃಢತೆ ಅತ್ಯಗತ್ಯ. ಆದ್ದರಿಂದ ಕನಿಷ್ಠ 168 ಸೆಂ.ಮೀ ಎತ್ತರ, 50 ಕೆ.ಜಿ ತೂಕ ಮತ್ತು ಎದೆಯ ಅಳತೆ 81-86 ಸೆಂ.ಮೀ ಇರುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳನ್ನು ಮೊದಲು ಲಿಖಿತ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅದರಲ್ಲಿ ಉತ್ತೀರ್ಣರಾದವರಿಗೆ ದೈಹಿಕ ಸಹಿಷ್ಣುತೆ ಮತ್ತು ಸಾಮರ್ಥ್ಯ ಪರೀಕ್ಷೆಗಳನ್ನು (PST/PET) ನಡೆಸಿ ಅಂತಿಮವಾಗಿ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಅಧಿಕೃತ ಅಧಿಸೂಚನೆ ಪ್ರಕಟವಾದ ನಂತರ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಭರ್ತಿ ಮಾಡುವ ಮೊದಲು ಸರಿಯಾದ ಇಮೇಲ್ ಐಡಿ, ಫೋನ್ ಸಂಖ್ಯೆ ಮತ್ತು ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಮುಖ್ಯ. ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ, ಶುಲ್ಕ ಪಾವತಿಸಿದ ನಂತರ ಅರ್ಜಿಯನ್ನು ಸಲ್ಲಿಸಿ ಅದರ ಪ್ರತಿಯನ್ನು ಮುಂದಿನ ದಾಖಲಾತಿಗಳಿಗಾಗಿ ತೆಗೆದಿಟ್ಟುಕೊಳ್ಳಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version