ಚಿತ್ತೂರು, ಮಾರ್ಚ್ 04: ಬೆಂಗಳೂರಿನಿಂದ ತಿರುಪತಿಗೆ ಹೊರಟಿದ್ದ ಕಾರು ಆಂಧ್ರದ ಚಿತ್ತೂರು ಬಳಿ ಅಪಘಾತ(Accident)ಕ್ಕೀಡಾಗಿದ್ದು, ಕರ್ನಾಟಕದ ಐವರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜಿತ್ತೂರು ಜಿಲ್ಲೆಯ ಪಲಮನೇರು ಬಳಿ ಈ ಘಟನೆ ವರದಿಯಾಗಿದೆ. ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಎಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ.
ಅತಿ ವೇಗದಲ್ಲಿ ಬಂದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ವಾಹನದಲ್ಲಿ ಸಿಲುಕಿದ್ದ ಶವಗಳನ್ನು ಹೊರತರುವುದು ಪೊಲೀಸರಿಗೆ ಕಷ್ಟಕರವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಪಲಮನೇರು ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಚಾಲಕ ನಿದ್ದೆ ಮಂಪರಿನಲ್ಲಿದ್ದನೋ ಅಥವಾ ಕಾರಿನ ವೇಗದಿಂದಾಗಿ ನಿಯಂತ್ರಣ ತಪ್ಪಿದ್ದನೋ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಬಲಿಪಶುವಿನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಸ್ಥಳೀಯರ ಮಾಹಿತಿಯ ಆಧಾರದ ಮೇಲೆ, ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿದ್ದಾರೆ. ಅವರ ವಿವರಗಳನ್ನು ಸಹ ಸಂಗ್ರಹಿಸಲಾಗುತ್ತಿದೆ. ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ (Toxic Movie) ಮಾರ್ಚ್ 19ರಂದು ರಿಲೀಸ್ ಆಗಬೇಕಿತ್ತು. ಆದರೆ, ಈಗ ಸಿನಿಮಾ ತಂಡ ಶಾಕಿಂಗ್ ಅಪ್ಡೇಟ್ ಕೊಟ್ಟಿದೆ. ಸಿನಿಮಾ ರಿಲೀಸ್ಗೆ ಕೆಲವೇ ದಿನ ಬಾಕಿ ಇರುವಾಗ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿಕೊಂಡಿದೆ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಹೊಸ ರಿಲೀಸ್ ದಿನಾಂಕವನ್ನು ಕೂಡ ಘೋಷಣೆ ಮಾಡಲಾಗಿದೆ. ಜೂನ್ 4ರಂದು ಸಿನಿಮಾ ರಿಲೀಸ್ ಆಗಲಿದೆ.
ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಭೀತಿ ನಿರ್ಮಾಣ ಆಗಿದೆ. ಈ ಬಿಕ್ಕಟ್ಟು ಸದ್ಯಕ್ಕಂತೂ ಪರಿಹಾರ ಆಗುವ ಲಕ್ಷಣ ಕಾಣಿಸುತ್ತಿಲ್ಲ. ಅಬುದಾಬಿ ಮೊದಲಾದ ಕಡೆಗಳಲ್ಲಿ ದಾಳಿ ಆಗುತ್ತಿದೆ. ಈ ಕಾರಣವನ್ನು ನೀಡಿ ಟಾಕ್ಸಿಕ್ ಮುಂದಕ್ಕೆ ಹಾಕಿರೋದಾಗಿ ತಂಡ ಮಾಹಿತಿ ಕೊಟ್ಟಿದೆ.
‘ಟಾಕ್ಸಿಕ್’ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿದ್ದವು. ಈ ಚಿತ್ರದ ಟ್ರೇಲರ್ ಮಾರ್ಚ್ 8ರಂದು ರಿಲೀಸ್ ಆಗಬೇಕಿತ್ತು. ಇದಕ್ಕೆ ಎಲ್ಲಾ ಸಿದ್ಧತೆಗಳು ಕೂಡ ನಡೆದಿದ್ದವು. ಆದರೆ, ಇಸ್ರೇಲ್-ಇರಾನ್ ಮಧ್ಯೆ ಸಮರ ನಡೆಯುತ್ತಿರುವುದರಿಂದ ಸಿನಿಮಾ ರಿಲೀಸ್ ವಿಳಂಬ ಆಗುತ್ತಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ.
ಗಲ್ಫ ರಾಷ್ಟ್ರಗಳಲ್ಲಿ ‘ಧುರಂಧರ್ 2’ ರಿಲೀಸ್ ಆಗುತ್ತಿಲ್ಲ. ಹೀಗಾಗಿ, ಈ ರಾಷ್ಟ್ರವನ್ನು ದೊಡ್ಡ ಮಾರುಕಟ್ಟೆ ಮಾಡಿಕೊಳ್ಳಬೇಕು ಎಂಬುದು ‘ಟಾಕ್ಸಿಕ್’ ಸಿನಿಮಾ ತಂಡದ ಪ್ಲ್ಯಾನ್ ಆಗಿತ್ತು. ಆದರೆ, ಇದು ಸಾಧ್ಯವಾಗುತ್ತಿಲ್ಲ. ಇದನ್ನು ತಂಡ ಗಮನದಲ್ಲಿ ಇಟ್ಟುಕೊಂಡಿದೆ.
‘ಟಾಕ್ಸಿಕ್’ ಸಿನಿಮಾ ಮುಂದಕ್ಕೆ ಹೋಗಲು ‘ಧುರಂಧರ್ 2’ ಕಾರಣ ಎಂಬ ಚರ್ಚೆ ಕೂಡ ನಡೆದಿದೆ. ಆದರೆ, ತಂಡ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ನಮ್ಮ ಪಾಲುದಾರರನ್ನು ಗಮನದಲ್ಲಿ ಇಟ್ಟುಕೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿಕೊಂಡಿದೆ.
‘ಟಾಕ್ಸಿಕ್’ ಸಿನಿಮಾನ ‘ಕೆವಿಎನ್’ ಸಂಸ್ಥೆ ನಿರ್ಮಾಣ ಮಾಡಿದೆ. ಈ ಚಿತ್ರಕ್ಕೆ ಯಶ್ ಕೂಡ ನಿರ್ಮಾಪಕ. ಗೀತು ಮೋಹನ್ ದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
T20 World Cup 2026: ಟಿ20 ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಇಂದು (ಮಾ.4) ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ಗೇರಲಿದೆ. ಹೀಗಾಗಿಯೇ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು. ಏಕೆಂದರೆ ಉಭಯ ತಂಡಗಳ ಈ ಹಿಂದಿನ ಮುಖಾಮುಖಿಯೇ ರೋಚಕತೆಯಿಂದೆ ಕೂಡಿದೆ.
ಟಿ20 ವಿಶ್ವಕಪ್ನಲ್ಲಿ ಉಭಯ ತಂಡಗಳು ಒಟ್ಟು 5 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಎಲ್ಲಾ ಪಂದ್ಯಗಳಲ್ಲೂ ಸೌತ್ ಆಫ್ರಿಕಾ ತಂಡವೇ ಜಯ ಸಾಧಿಸಿದೆ. ಅಂದರೆ ಟಿ20 ವಿಶ್ವಕಪ್ನಲ್ಲಿ ಆಫ್ರಿಕಾ ಪಡೆ ವಿರುದ್ಧ ನ್ಯೂಝಿಲೆಂಡ್ ತಂಡ ಒಮ್ಮೆಯೂ ಗೆಲುವು ದಾಖಲಿಸಿಲ್ಲ.
ಐಸಿಸಿ ಟೂರ್ನಿಯ ನಾಕೌಟ್ ಪಂದ್ಯಗಳಲ್ಲಿ ನ್ಯೂಝಿಲೆಂಡ್ ವಿರುದ್ಧ ಸೌತ್ ಆಫ್ರಿಕಾ ತಂಡ ಕೂಡ ಗೆಲುವು ದಾಖಲಿಸಿಲ್ಲ. ಅಂದರೆ ಈ ಹಿಂದೆ ಐಸಿಸಿ ಟೂರ್ನಿಯ 3 ನಾಕೌಟ್ ಪಂದ್ಯಗಳಲ್ಲಿ ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಿವೆ. ಈ ವೇಳೆ ಮೂರು ಪಂದ್ಯಗಳಲ್ಲೂ ನ್ಯೂಝಿಲೆಂಡ್ ತಂಡವೇ ಜಯ ಸಾಧಿಸಿದೆ.
ಅಂದರೆ ಐಸಿಸಿ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಸೋಲುಣಿಸುವಲ್ಲಿ ನ್ಯೂಝಿಲೆಂಡ್ ತಂಡ ಯಶಸ್ವಿಯಾಗುತ್ತಾ ಬಂದಿದೆ. ಇದೀಗ ಇದೇ ಮೊದಲ ಬಾರಿಗೆ ಉಭಯ ತಂಡಗಳು ಟಿ20 ವಿಶ್ವಕಪ್ನ ನಾಕೌಟ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ.
ಅತ್ತ ಟಿ20 ವಿಶ್ವಕಪ್ನಲ್ಲಿ ನ್ಯೂಝಿಲೆಂಡ್ ವಿರುದ್ಧ ಸೌತ್ ಆಫ್ರಿಕಾ ತಂಡವು ಒಮ್ಮೆಯೂ ಸೋತಿಲ್ಲ. ಇತ್ತ ನ್ಯೂಝಿಲೆಂಡ್ ತಂಡವು ಸೌತ್ ಆಫ್ರಿಕಾ ವಿರುದ್ಧದ ಎಲ್ಲಾ ನಾಕೌಟ್ ಪಂದ್ಯಗಳನ್ನು ಗೆದ್ದ ಇತಿಹಾಸವಿದೆ. ಹೀಗಾಗಿಯೇ ಇಂದಿನ ಮ್ಯಾಚ್ನಲ್ಲಿ ಸೌತ್ ಆಫ್ರಿಕಾ ಹಾಗೂ ನ್ಯೂಝಿಲೆಂಡ್ ನಡುವಣ ಕದನವು ವಿಶೇಷ ಪಂದ್ಯವಾಗಿ ಮಾರ್ಪಟ್ಟಿದೆ.
ಏಕೆಂದರೆ ಈ ಬಾರಿ ಸೌತ್ ಆಫ್ರಿಕಾ ವಿರುದ್ಧ ನ್ಯೂಝಿಲೆಂಡ್ ತಂಡ ಗೆದ್ದರೆ, ಅದು ಟಿ20 ವಿಶ್ವಕಪ್ನಲ್ಲಿ ಆಫ್ರಿಕಾ ವಿರುದ್ಧದ ಕಿವೀಸ್ ಪಡೆಯ ಮೊದಲ ಜಯವಾಗಿರಲಿದೆ. ಇದೇ ವೇಳೆ ನ್ಯೂಝಿಲೆಂಡ್ ವಿರುದ್ಧ ಸೌತ್ ಆಫ್ರಿಕಾ ತಂಡ ಜಯ ಸಾಧಿಸಿದರೆ, ಅದು ನ್ಯೂಝಿಲೆಂಡ್ ವಿರುದ್ಧದ ಐಸಿಸಿ ನಾಕೌಟ್ ಪಂದ್ಯದಲ್ಲಿ ಆಫ್ರಿಕಾ ಪಡೆಯ ಮೊದಲ ಗೆಲುವುವಾಗಿರಲಿದೆ. ಹೀಗಾಗಿಯೇ ಇಂದಿನ ಪಂದ್ಯದಲ್ಲಿ ಉಭಯ ತಂಡಗಳಿಂದ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.
ಈ ಪೈಪೋಟಿಯಲ್ಲಿ ಗೆಲ್ಲುವ ಮೂಲಕ ಮಾರ್ಚ್ 8 ರಂದು ನಡೆಯಲಿರುವ ಟಿ20 ವಿಶ್ವಕಪ್ನ ಫೈನಲ್ಗೆ ಯಾವ ತಂಡ ಅರ್ಹತೆ ಪಡೆಯಲಿದೆ ಎಂಬುದನ್ನು ಕಾದು ನೋಡೋಣ.
ಸೌತ್ ಆಫ್ರಿಕಾ ಟಿ20 ತಂಡ: ಐಡೆನ್ ಮಾರ್ಕ್ರಾಮ್ (ನಾಯಕ), ಕ್ವಿಂಟನ್ ಡಿ ಕಾಕ್, ಟೋನಿ ಡಿ ಝೋರ್ಝಿ, ಡೆವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್, ಡೊನೊವನ್ ಫೆರೇರಾ, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಕ್ವೆನಾ ಮಫಕಾ, ಲುಂಗಿ ಎನ್ಗಿಡಿ, ಜೇಸನ್ ಸ್ಮಿತ್, ಜಾರ್ಜ್ ಲಿಂಡೆ, ಕಾರ್ಬಿನ್ ಬಾಷ್, ಅನ್ರಿಕ್ ನೋಕಿಯ.
ಲಕ್ನೋ, ಮಾರ್ಚ್ 04: ಉತ್ತರ ಪ್ರದೇಶದ ಲಕ್ನೋದಲ್ಲಿರುವ ಬಿರಿಯಾನಿ ಅಂಗಡಿಯ ಫ್ರೀಜರ್ನಲ್ಲಿ 35 ವರ್ಷ ವ್ಯಕ್ತಿಯೊಬ್ಬರ ಶವ(Dead body)ಪತ್ತೆಯಾಗಿರುವ ಘಟನೆ ನಡೆದಿದೆ. ಬಕ್ಷಿ ಕಾ ತಾಲಾಬ್ ಪ್ರದೇಶದಲ್ಲಿರುವ ಅಂಡಗಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನ ವಿಜಯ್ ಪಾಲ್ ಎಂದು ಗುರುತಿಸಲಾಗಿದೆ. ಅವರು ಬಿಕೆಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಿಶನ್ಪುರ್ ಮಾಜ್ರಾ ನಿವಾಸಿಯಾಗಿದ್ದರು.
ಅಂಗಡಿ ಮಾಲೀಕರಾದ ಶನಿ ರಾವತ್ ಅವರ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಅಂಗಡಿಯು ಕಳೆದ ನಾಲ್ಕು ದಿನಗಳಿಂದ ಮುಚ್ಚಿತ್ತು. ರಾವತ್ ಭಾನುವಾರ ಬೆಳಗ್ಗೆ ಔಟ್ಲೆಟ್ ಅನ್ನು ಮತ್ತೆ ತೆರೆಯಲು ರಾವತ್ ಬಂದಾಗ, ಫ್ರೀಜರ್ ಒಳಗೆ ಶವವನ್ನು ಕಂಡು ಆಘಾತಕ್ಕೊಳಗಾದರು. ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಶವವನ್ನು ಫ್ರೀಜರ್ನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ದಿನಗೂಲಿ ಕೆಲಸಗಾರ ವಿಜಯ್ ಪಾಲ್ ಐದು ವರ್ಷಗಳ ಹಿಂದೆ ತನ್ನ ಹೆಂಡತಿಯಿಂದ ಬೇರ್ಪಟ್ಟ ನಂತರ ಒಂಟಿಯಾಗಿ ವಾಸಿಸುತ್ತಿದ್ದರು ಮತ್ತು ಮದ್ಯದ ಚಟಕ್ಕೆ ಒಳಗಾಗಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯಿಂದ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಎಡಿಸಿಪಿ (ಉತ್ತರ ವಲಯ) ರಿಷಭ್ ರನ್ವಾಲ್ ಹೇಳಿದ್ದಾರೆ.
ಮತ್ತೊಂದು ಘಟನೆ
ಕೊಡಲಿಯಿಂದ ತಂದೆಯನ್ನೇ ಕಡಿದು ಕೊಂದು, ಟ್ಯಾಂಕ್ಗೆ ಎಸೆದು ನೆಮ್ಮದಿಯಿಂದ ಕುಳಿತು ಬಿರಿಯಾನಿ ತಿಂದ ಮಗ
ಹೋಳಿ(Holi)ಯ ಹಬ್ಬದ ಅಂಗವಾಗಿ ನಡೆಸುವ ಹೋಳಿ ಕಾ ದಹನ್ ಹಬ್ಬದ ರಾತ್ರಿ ನಡೆದ ಕೌಟುಂಬಿಕ ಕಲಹ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಛತ್ತೀಸ್ಗಢದ ಅಂಬಿಕಾಪುರದಲ್ಲಿ ನಡೆದಿದೆ. ಅಲ್ಲಿ ವ್ಯಕ್ತಿಯೊಬ್ಬ ತಂದೆಯನ್ನು ಕೊಡಲಿಯಿಂದ ಕಡಿದು ಕೊಲೆ ಮಾಡಿ, ಮನೆಯ ಪಕ್ಕದಲ್ಲಿರುವ ನೀರಿನ ತೊಟ್ಟಿಯಲ್ಲಿ ಎಸೆದು ನಂತರ ಶಾಂತವಾಗಿ ಬಿರಿಯಾನಿ ತಿಂದು ಮಲಗಿದ್ದಾನೆ ಎನ್ನಲಾಗಿದೆ.
ಪೊಲೀಸರು ಅದೇ ರಾತ್ರಿ ಆರೋಪಿ ಮಗನನ್ನು ಬಂಧಿಸಿದ್ದಾರೆ.ಮೃತ ಪರಾಸ್ ಕರ್ಕೆಟ್ಟಾ ಬೇರೆ ಮನೆಯಲ್ಲಿ ವಾಸವಾಗಿದ್ದರು, ಅವರ ಮಗ ಪ್ರಭಾತ್ ಅಲಿಯಾಸ್ ಲೆಡಾ ಮನೆ ಕೆಲವೇ ಕೆಲವು ಮೀಟರ್ ದೂರದಲ್ಲಿತ್ತು. ಇಬ್ಬರ ಮನೆಗಳ ಮಧ್ಯೆ ಕೇವಲ ಎರಡು ಮನೆಗಳಿದ್ದವು.
ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಪ್ರಕಾರ, ಹೋಳಿಕಾ ದಹನ್ ದಿನ ರಾತ್ರಿ 11 ಗಂಟೆ ಸುಮಾರಿಗೆ ಪ್ರಭಾತ್ ಕುಡಿದ ಮತ್ತಿನಲ್ಲಿ ಮನೆಗೆ ಬಂದಿದ್ದ, ಅವರ ತಂದೆ ಬೈದಿದ್ದರು. ಬಳಿಕ ಇದು ತೀವ್ರ ವಾಗ್ವಾದಕ್ಕೆ ಕಾರಣವಾಯಿತು.
ಕೋಪದ ಭರದಲ್ಲಿ ಪ್ರಭಾತ್ ಮನೆಯೊಳಗೆ ಇಟ್ಟಿದ್ದ ಕೊಡಲಿಯನ್ನು ಎತ್ತಿಕೊಂಡು ತಂದೆಯ ತಲೆಗೆ ಹಲವು ಬಾರಿ ಹೊಡೆದಿದ್ದಾನೆ. ಪರಾಸ್ಗೆ ತೀವ್ರ ಗಾಯಗಳಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಲೆ ಮಾಡಿದ ನಂತರ ಆರೋಪಿಯು ಶವವನ್ನು ಎಳೆದುಕೊಂಡು ಹೋಗಿ ಮನೆಯ ಪಕ್ಕದಲ್ಲಿರುವ ಸಣ್ಣ ನೀರಿನ ಟ್ಯಾಂಕ್ಗೆ ಎಸೆದಿದ್ದಾನೆ ಎಂದು ಹೇಳಲಾಗಿದೆ. ಶವವನ್ನು ವಿಲೇವಾರಿ ಮಾಡಿದ ನಂತರ ಹತ್ತಿರದ ಅಂಗಡಿಗೆ ಹೋಗಿ ಬಿರಿಯಾನಿ ಕೊಂಡು ಮನೆಗೆ ಬಂದು ತಿಂದು ಕಂಬಳಿ ಹೊದ್ದು ನೆಮ್ಮದಿಯಿಂದ ನಿದ್ರಿಸಿದ್ದಾನೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ರಾಷ್ಟ್ರೀಯ ಸುರಕ್ಷತಾ ದಿನImage Credit source: vecteezy
ಅಪಘಾತಗಳು ಯಾವಾಗ ಬೇಕಾದರೂ ಮತ್ತು ಎಲ್ಲಿ ಬೇಕಾದರೂ ಸಂಭವಿಸಬಹುದು, ಆದರೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಅಥವಾ ಸಂಭವನೀಯ ಅಪಘಾತಗಳ ಬಗ್ಗೆ ತಿಳಿದಿರುವುದರಿಂದ ಅವುಗಳನ್ನು ತಪ್ಪಿಸಬಹುದು. ಬೆಂಕಿ ಅವಘಡಗಳು, ಕೈಗಾರಿಕಾ ಅಪಘಾತಗಳು, ರಸ್ತೆ ಅಪಘಾತಗಳು ಸೇರಿದಂತೆ ವಿವಿಧ ಅಪಘಾತಗಳನ್ನು ತಡೆಗಟ್ಟಲು ಸುರಕ್ಷತಾ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಅಪಘಾತಗಳನ್ನು ತಪ್ಪಿಸಲು ಜನರು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವಂತೆ ಸುರಕ್ಷತೆಯ (Safety) ಬಗ್ಗೆ ಮಾಹಿತಿ ಮತ್ತು ಜಾಗೃತಿ ಮೂಡಿಸಲು ಪ್ರತಿವರ್ಷ ಮಾರ್ಚ್ 4 ರಂದು ಭಾರತದಲ್ಲಿ ರಾಷ್ಟ್ರೀಯ ಸುರಕ್ಷತಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
ರಾಷ್ಟ್ರೀಯ ಸುರಕ್ಷತಾ ದಿನದ ಇತಿಹಾಸವೇನು?
ಸುರಕ್ಷತಾ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವುದು ಹಾಗೂ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಕುರಿತು ಅರಿವು ಮೂಡಿಸುವ ಸಲುವಾಗಿ ಭಾರತ ಸರ್ಕಾರದ ಕಾರ್ಮಿಕ ಸಚಿವಾಲಯವು ರಾಷ್ಟ್ರೀಯ ಸುರಕ್ಷತಾ ಮಂಡಳಿಯನ್ನು ಸ್ಥಾಪಿಸಿತು. ರಸ್ತೆ ಸುರಕ್ಷತೆ, ಕೆಲಸದ ಸ್ಥಳದಲ್ಲಿನ ಸುರಕ್ಷತೆ, ಮಾನವ ಆರೋಗ್ಯ ಮತ್ತು ಪರಿಸರ ಸುರಕ್ಷತೆಯ ಕುರಿತು ಅರಿವು ಮೂಡಿಸುವ ಈ ಮಂಡಳಿಯ ಗುರಿಯಾಗಿದೆ. ಈ ರಾಷ್ಟ್ರೀಯ ಸುರಕ್ಷತಾ ಮಂಡಳಿ ಪ್ರಾರಂಭವಾದ ಸವಿನೆನಪಿಗಾಗಿ ಮಾರ್ಚ್ 4 ರಂದು ರಾಷ್ಟ್ರೀಯ ಸುರಕ್ಷತಾ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ. ಮೊದಲ ರಾಷ್ಟ್ರೀಯ ಸುರಕ್ಷತಾ ದಿನವನ್ನು 1972 ರಲ್ಲಿ ಆಚರಿಸಲಾಯಿತು. ಕೈಗಾರಿಕಾ ಅಪಘಾತಗಳನ್ನು ತಡೆಗಟ್ಟಲು ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ಅಲ್ಲದೆ ಪ್ರತಿವರ್ಷವು ಮಾರ್ಚ್ 6ರಿಂದ 10ರ ವರೆಗೆ ರಾಷ್ಟ್ರದಾದ್ಯಂತ ರಾಷ್ಟ್ರೀಯ ಸುರಕ್ಷತಾ ಸಪ್ತಾಹವನ್ನು ಆಚರಿಸಲಾಗುತ್ತದೆ.
ರಾಷ್ಟ್ರೀಯ ಭದ್ರತಾ ದಿನದ ಉದ್ದೇಶವೇನು?
ಸುರಕ್ಷತೆಯ ಮಹತ್ವವನ್ನು ಉತ್ತೇಜಿಸಲು ಮತ್ತು ಸುರಕ್ಷತಾ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 4 ರಂದು ರಾಷ್ಟ್ರೀಯ ಸುರಕ್ಷತಾ ದಿನವನ್ನು ಆಚರಿಸಲಾಗುತ್ತದೆ. ಜನರು ಕೆಲಸದ ಸ್ಥಳಗಳಲ್ಲಿ, ತಮ್ಮ ಮನೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತಾ ಪ್ರೋಟೋಕಾಲ್ಗಳನ್ನು ಅನುಸರಿಸಲು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ. ಈ ದಿನ ಸುರಕ್ಷತಾ ರ್ಯಾಲಿಗಳು, ಸುರಕ್ಷತಾ ತರಬೇತಿ, ಜಾಗೃತಿ ಅಭಿಯಾನಗಳು ಮತ್ತು ಕೆಲಸದ ಸ್ಥಳದಲ್ಲಿ ಸುರಕ್ಷತಾ ಪ್ರಮಾಣಪತ್ರಗಳ ವಿತರಣೆಯಂತಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಎಲ್ಲಾ ವಲಯಗಳಲ್ಲಿ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅಪಘಾತಗಳನ್ನು ಕಡಿಮೆ ಮಾಡುವುದು ರಾಷ್ಟ್ರೀಯ ಸುರಕ್ಷತಾ ದಿನದ ಉದ್ದೇಶವಾಗಿದೆ.
ಕೈಗಾರಿಕಾ ಅಪಘಾತಗಳನ್ನು ಕಡಿಮೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ದಿನವು ಕಾರ್ಮಿಕರು ಮತ್ತು ಉದ್ಯೋಗಿಗಳ ಜೀವಗಳನ್ನು ರಕ್ಷಿಸಲು ಕಾರ್ಖಾನೆಗಳು, ನಿರ್ಮಾಣ ಸ್ಥಳಗಳು ಮತ್ತು ಇತರ ಕೆಲಸದ ಸ್ಥಳಗಳಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಕಾರ್ಮಿಕರಿಗೆ ನೆನಪಿಸುತ್ತದೆ.
ಯಾವುದೇ ವಲಯದಲ್ಲಿ ಕೆಲಸ ಮಾಡುವ ನಾಗರಿಕರ ಸುರಕ್ಷತೆಯ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಸುರಕ್ಷತಾ ಸಪ್ತಾಹವನ್ನು ಸಹ ಆಚರಿಸಲಾಗುತ್ತದೆ. ಈ ಸಮಯದಲ್ಲಿ, ಪ್ರತಿಯೊಂದು ವಲಯದ ಕಾರ್ಮಿಕರಿಗೆ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮತ್ತು ಕೈಗಾರಿಕಾ ಅಪಘಾತಗಳನ್ನು ತಪ್ಪಿಸುವ ಮಾರ್ಗಗಳು ಮತ್ತು ಅವುಗಳಿಂದ ಉಂಟಾಗುವ ಹಾನಿಯ ಬಗ್ಗೆ ತಿಳಿಸಲಾಗುತ್ತದೆ. ಇದಕ್ಕಾಗಿ, ಅನೇಕ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಮಂತ್ರಗಳು ಆಧ್ಯಾತ್ಮಿಕ ಅಭ್ಯಾಸದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿವೆ. “ಮನನಾ ತ್ರಾಯತೇ ಇತಿ ಮಂತ್ರಃ” ಎಂಬುದು ಮಂತ್ರದ ಮೂಲಭೂತ ವ್ಯಾಖ್ಯಾನವಾಗಿದೆ, ಅಂದರೆ ಮನಸ್ಸಿನಿಂದ ಧ್ಯಾನಿಸುವುದರಿಂದ ನಮ್ಮನ್ನು ರಕ್ಷಿಸುವ ಶಕ್ತಿ. ಮಂತ್ರಗಳ ಪಠಣೆಯು ವ್ಯಕ್ತಿಯಲ್ಲಿ ನಂಬಿಕೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ಭಕ್ತ ಮತ್ತು ಭಗವಂತನ ನಡುವೆ ಗಾಢವಾದ, ಉತ್ತಮ ಸಂಬಂಧವನ್ನು ಏರ್ಪಡಿಸುತ್ತದೆ. ಆದರೆ, ಈ ಮಂತ್ರಗಳು ಶುಭ ಮತ್ತು ಅಶುಭ ಎರಡೂ ಪರಿಣಾಮಗಳನ್ನು ಉಂಟುಮಾಡಬಲ್ಲವು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.
ಗುರೂಜಿಯವರು ಹೇಳುವಂತೆ, ಮಂತ್ರಗಳನ್ನು ಯಾವುದೇ ಸಮಯದಲ್ಲಿ ಅಥವಾ ಎಲ್ಲಿ ಬೇಕಾದರೂ ಪಠಿಸಬಾರದು. ಅವುಗಳ ಜಪಕ್ಕೆ ಸೂಕ್ತವಾದ ಕಾಲವಿದೆ. ಬ್ರಾಹ್ಮೀ ಮುಹೂರ್ತ, ಅಭಿಜಿನ್ ಮುಹೂರ್ತ ಮತ್ತು ಸಂಧ್ಯಾಕಾಲದಲ್ಲಿ ಬರುವ ಗೋದೋಳಿ ಮುಹೂರ್ತದಂತಹ ಮಂಗಳಕರ ಸಮಯಗಳಲ್ಲಿ ಮಂತ್ರಗಳನ್ನು ಪಠಿಸುವುದು ಅತ್ಯಂತ ಶುಭಕರ ಎಂದು ಹೇಳಲಾಗುತ್ತದೆ. ಸರಿಯಾದ ಸಮಯದಲ್ಲಿ ಮತ್ತು ಸದುದ್ದೇಶದಿಂದ ಪಠಿಸಿದಾಗ ಮಂತ್ರಗಳು ಹೆಚ್ಚಿನ ಶಕ್ತಿಯನ್ನು ನೀಡುತ್ತವೆ. ಉದಾಹರಣೆಗೆ, ವಿದ್ಯಾರ್ಥಿಗೆ ನಂಬಿಕೆಯ ಮಂತ್ರ ಉತ್ತಮ ಫಲಿತಾಂಶಗಳನ್ನು ನೀಡಿದರೆ, ರೈತರಿಗೆ ಸಮೃದ್ಧ ಬೆಳೆಗಳನ್ನು ತರುತ್ತದೆ. ಉದ್ಯೋಗಸ್ಥರಿಗೆ, ಇದು ವೃತ್ತಿ ಪ್ರಗತಿಗೆ ಸಹಕಾರಿಯಾಗಿದೆ.
ಆದರೆ, ಮಂತ್ರಗಳ ದುರುಪಯೋಗವು ಅಶುಭ ಫಲಿತಾಂಶಗಳಿಗೆ ಕಾರಣವಾಗಬಹುದು. ವಿಶೇಷವಾಗಿ, ತಾಂತ್ರಿಕ ಮಂತ್ರಗಳನ್ನು ಬೇರೆಯವರಿಗೆ ಕೆಟ್ಟದನ್ನು ಬಯಸಲು ಅಥವಾ ನಾಶ ಮಾಡಲು ಬಳಸಿದಾಗ, ಅವು ಜಪಿಸುವ ವ್ಯಕ್ತಿಗೇ ತೊಂದರೆಯನ್ನುಂಟುಮಾಡಬಹುದು. ಸರಿಯಾದ ಗುರುಗಳ ಮಾರ್ಗದರ್ಶನವಿಲ್ಲದೆ ಕೇವಲ ಪುಸ್ತಕಗಳನ್ನು ಓದಿ ಇಂತಹ ಮಂತ್ರಗಳನ್ನು ಪ್ರಯೋಗಿಸಲು ಪ್ರಯತ್ನಿಸಿದರೆ, ಅವು ದೇಹವನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅನೇಕರು ಇಂತಹ ಮಾರ್ಗದರ್ಶನವಿಲ್ಲದ ಪ್ರಯೋಗಗಳಿಂದ ತಮ್ಮನ್ನೇ ನಾಶಪಡಿಸಿಕೊಂಡಿರುವ ಉದಾಹರಣೆಗಳಿವೆ. ಸಣ್ಣ ಮಂತ್ರವಾಗಲಿ, ದೊಡ್ಡ ಮಂತ್ರವಾಗಲಿ, ಅದನ್ನು ಸದುದ್ದೇಶದಿಂದ ಮತ್ತು ಸೂಕ್ತ ಕಾಲದಲ್ಲಿ ಪಠಿಸಿದರೆ ಅದು ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ತಾಂತ್ರಿಕ ಮಂತ್ರಗಳನ್ನು ನೇರವಾಗಿ ಮುಟ್ಟಿ ಜಪಿಸುವುದು ಅಪಾಯಕಾರಿ.
ಮಂತ್ರದ ಪರಿಣಾಮಕಾರಿತ್ವದಲ್ಲಿ ಅದರ ಉಚ್ಚಾರಣೆ ಮತ್ತು ಧ್ವನಿ ಕೂಡಾ ಮುಖ್ಯ ಪಾತ್ರ ವಹಿಸುತ್ತವೆ. ಓಂಕಾರವು ಇಡೀ ಬ್ರಹ್ಮಾಂಡದ ಮೂಲ ಮಂತ್ರವಾಗಿದೆ. ಗಾಯತ್ರೀ ಮಂತ್ರ, ಮೃತ್ಯುಂಜಯ ಮಂತ್ರ, ವಿಷ್ಣು ಸ್ತೋತ್ರಗಳಂತಹ ಮಂತ್ರಗಳು ಧನಾತ್ಮಕ ಶಕ್ತಿಯನ್ನು ನೀಡಿ ಶುಭವನ್ನು ಉಂಟುಮಾಡುತ್ತವೆ. ಸಂಪೂರ್ಣ ಫಲಕ್ಕಾಗಿ, ಮಂತ್ರಗಳನ್ನು ನಂಬಿಕೆಯಿಂದ ಮತ್ತು ಗುರುಗಳ ಮುಖೇನ ದೀಕ್ಷೆ ಪಡೆದು ಜಪಿಸಬೇಕು. ಇದು ಹೆಚ್ಚಿನ ಶಕ್ತಿಯನ್ನು ನೀಡಿ ಉತ್ತಮ ಸ್ಥಿತಿಗೆ ಕೊಂಡೊಯ್ಯುತ್ತದೆ.
ದೇವಸ್ಥಾನದಲ್ಲಿ, ನಿಮ್ಮ ದೇವರ ಕೋಣೆಯಲ್ಲಿ, ಅಥವಾ ವಿಶೇಷ ವೃಕ್ಷಗಳ ಕೆಳಗೆ, ಉತ್ತಮ ಸ್ಥಳಗಳಲ್ಲಿ ಏಕಾಂತವಾಗಿ ಕುಳಿತು ಮಂತ್ರಗಳನ್ನು ಜಪಿಸುವುದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಮಂತ್ರಗಳನ್ನು ಸದುದ್ದೇಶದಿಂದ, ಉತ್ತಮ ಮನಸ್ಸಿನಿಂದ ಮತ್ತು ಧನಾತ್ಮಕ ಚಿಂತನೆಯೊಂದಿಗೆ ಬಳಸಿದಾಗ ಅವು ಅಧಿಕ ಫಲಗಳನ್ನು ನೀಡುತ್ತವೆ. ಕೆಟ್ಟ ಉದ್ದೇಶಗಳಿಂದ, ಕೆಟ್ಟ ಮಂತ್ರಗಳನ್ನು ದುರ್ಬಳಕೆ ಮಾಡಲು ಪ್ರಯತ್ನಿಸಿದಾಗ, ಅದು ನ್ಯೂಟನ್ನ ಮೂರನೇ ನಿಯಮದಂತೆ, ಕ್ರಿಯೆಗೆ ಸಮಾನ ಮತ್ತು ವಿರುದ್ಧ ಪ್ರತಿಕ್ರಿಯೆ ಇದ್ದಂತೆ, ಪಠಿಸುವವರಿಗೇ ಹಾನಿ ಮಾಡಬಹುದು ಎಂದು ಗುರೂಜಿ ಎಚ್ಚರಿಕೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 04: ನಭೋಮಂಡಲದಲ್ಲಿ ಅಪರೂಪದ ಖಗೋಳ ಕೌತುಕವಾಗಿ ರಕ್ತ ಚಂದ್ರಗ್ರಹಣ (Lunar Eclipse)ನಿನ್ನೆ ಸ್ಪಷ್ಟವಾಗಿ ಗೋಚರಿಸಿದೆ. ಭೂಮಿಯ ನೆರಳು ಚಂದ್ರನ ಮೇಲೆ ಸಂಪೂರ್ಣವಾಗಿ ಆವರಿಸಿದ ಪರಿಣಾಮ, ಬೆಳ್ಳಗೆ ಹೊಳೆಯುತ್ತಿದ್ದ ಚಂದ್ರನು ತಾಮ್ರದ ಕೆಂಪು ಬಣ್ಣದಲ್ಲಿ ಕಂಗೊಳಿಸಿದ್ದ. ಮಧ್ಯಾಹ್ನ 3 ಗಂಟೆ 13 ನಿಮಿಷಕ್ಕೆ ಆರಂಭವಾದ ವರ್ಷದ ಮೊದಲ ಕೇತುಗ್ರಸ್ತ ಚಂದ್ರಗ್ರಹಣ ಸಂಜೆ 6 ಗಂಟೆ 47 ನಿಮಿಷಕ್ಕೆ ಮೋಕ್ಷವಾಯಿತು. ಭಾರತಕ್ಕಿಂತ ಹೆಚ್ಚಾಗಿ ಅಮೆರಿಕದ ಕ್ಯಾಲಿಫೋರ್ನಿಯಾ, ಲಾಸ್ ಏಂಜೆಲಸ್ ಹಾಗೂ ಮೆಕ್ಸಿಕೋ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬ್ಲಡ್ ಮೂನ್ ಸ್ಪಷ್ಟವಾಗಿ ಕಾಣಿಸಿಕೊಂಡಿತು.
ಗ್ರಹಣದ ಹಿನ್ನಲೆಯಲ್ಲಿ ರಾಜ್ಯದ ಅನೇಕ ದೇವಾಲಯಗಳು ತಾತ್ಕಾಲಿಕವಾಗಿ ಬಂದ್ ಆಗಿದ್ದವು. ಗ್ರಹಣ ಮೋಕ್ಷವಾಗುತ್ತಿದ್ದಂತೆ ದೇವಾಲಯಗಳಲ್ಲಿ ಶುದ್ಧೀಕರಣ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಜರುಗಿವೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿರುವ ಮಹಾಬಲೇಶ್ವರ ದೇವಾಲಯದಲ್ಲಿ ಶುಚಿತ್ವ ಕಾರ್ಯ ನಡೆಸಿ ಮಹಾಪೂಜೆ ನೆರವೇರಿಸಲಾಯಿತು. ಬೆಳಗಾವಿಯ ಕಪಿಲೇಶ್ವರ ದೇಗುಲದಲ್ಲಿ ಗಂಗಾಜಲ ಮತ್ತು ಗೋಮೂತ್ರದಿಂದ ಶುದ್ಧೀಕರಣ ಮಾಡಿ ಕ್ಷೀರಾಭಿಷೇಕ ಹಾಗೂ ಮಹಾಮಂಗಳಾರತಿ ನಡೆಯಿತು.
ಯಾವೆಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ?
ಕಲಬುರಗಿಯ ಶರಣ ಬಸವೇಶ್ವರ ದೇವಸ್ಥಾನದಲ್ಲೂ ಸ್ವಚ್ಛತಾ ಕಾರ್ಯದ ನಂತರ ಪೂಜಾ ವಿಧಿವಿಧಾನಗಳು ನಡೆದವು. ಶಿವಮೊಗ್ಗದ ಜೆಪಿಎನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ದೇಗುಲದಲ್ಲಿ ಗ್ರಹಣಮೋಕ್ಷದ ಬಳಿಕ ಅಭಿಷೇಕ ಮತ್ತು ಗ್ರಹಣ ಶಾಂತಿ ಹೋಮ ನೆರವೇರಿಸಲಾಯಿತು. ದಾವಣಗೆರೆಯ ದುರ್ಗಾಂಬಿಕಾ ದೇವಾಲಯದಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆಗಳು ಜರುಗಿದವು.
ಮೈಸೂರಿನ ದೇವರಾಜ ಮೊಹಲ್ಲಾದ ಅಮೃತೇಶ್ವರ ದೇವಾಲಯದಲ್ಲಿ ಶುದ್ಧೀಕರಣ ಮಾಡಿ ಗ್ರಹಣದೋಷ ಹೋಮ ನಡೆಸಲಾಯಿತು. ಹಾಸನದ ಪ್ರಸನ್ನ ಗಣಪತಿ ದೇವಾಲಯದಲ್ಲಿ ನವಗ್ರಹ ಶಾಂತಿ ಹಾಗೂ ಜಪತಪ ಹೋಮಗಳು ನೆರವೇರಿದವು. ಕೊಪ್ಪಳದ ಹುಲಿಗೆಮ್ಮ ದೇವಾಲಯದಲ್ಲೂ ವಿಶೇಷ ಅಲಂಕಾರ ಮತ್ತು ಪೂಜಾ ಕೈಂಕರ್ಯಗಳು ನಡೆದವು.
ಬೆಂಗಳೂರಿನ ಐತಿಹಾಸಿಕ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಗ್ರಹಣದ ವೇಳೆ ಯಜ್ಞಕಾರ್ಯಗಳು ನೆರವೇರಿದ್ದು, ಮೋಕ್ಷದ ಬಳಿಕ ಶಿವಲಿಂಗಕ್ಕೆ ವಿಶೇಷ ಅಭಿಷೇಕ ಮಾಡಲಾಯಿತು. ಗುಟ್ಟಹಳ್ಳಿಯ ಬಂಡೆ ಮಹಾಂಕಾಳಿ ದೇವಾಲಯದಲ್ಲಿ ಚಂದ್ರ ಹಾಗೂ ಕೇತು ಶಾಂತಿ ಹೋಮ, ಪೂರ್ಣಾಹುತಿ ಮತ್ತು ಕಳಸಾಭಿಷೇಕ ನೆರವೇರಿಸಲಾಯಿತು. ಸಾವಿರಾರು ಭಕ್ತರು ದರ್ಶನ ಪಡೆದರು. ಒಟ್ಟಾರೆ, ಗ್ರಹಣದ ನಂತರ ಎಲ್ಲಾ ಪ್ರಮುಖ ದೇವಾಲಯಗಳು ಪುನಃ ಭಕ್ತರಿಗೆ ತೆರೆಯಲ್ಪಟ್ಟಿದ್ದು, ಬೆಳಗ್ಗಿನಿಂದಲೇ ಶುದ್ಧೀಕರಣ ಮತ್ತು ಪೂಜಾ ಕಾರ್ಯಗಳು ಭಕ್ತಿಭಾವದಿಂದ ನಡೆಯುತ್ತಿವೆ.
ದುಬೈ, ಮಾರ್ಚ್ 04: ದುಬೈನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಮೇಲೆ ಇರಾನ್ನ ಡ್ರೋನ್ ದಾಳಿ ನಡೆಸಿದೆ. ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಟೆಹ್ರಾನ್ ಅಮೆರಿಕದ ಮಿಲಿಟರಿ ನೆಲೆಗಳು ಮತ್ತು ಪ್ರದೇಶದಾದ್ಯಂತದ ಇತರ ಇಸ್ರೇಲಿ ಸ್ವತ್ತುಗಳನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ನಡೆಸಿದೆ. ಅದಕ್ಕೂ ಮುನ್ನ ಇಸ್ರೇಲ್-ಅಮೆರಿಕ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿಯನ್ನು ಹತ್ಯೆ ಮಾಡಲಾಗಿತ್ತು, ಅದಾದ ಬಳಿಕ ಸಂಘರ್ಷ ಮತ್ತಷ್ಟು ಹೆಚ್ಚಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಘಟನೆಯನ್ನು ದೃಢಪಡಿಸಿದರು. ಮಂಗಳವಾರ ಬೆಳಗಿನ ಜಾವ ರಿಯಾದ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ಎರಡು ಡ್ರೋನ್ಗಳು ಡಿಕ್ಕಿ ಹೊಡೆದಿದ್ದು, ಸಣ್ಣ ಪ್ರಮಾಣದ ಬೆಂಕಿ ಹೊತ್ತಿಕೊಂಡಿತ್ತು. ಸೋಮವಾರ ಕುವೈತ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಕಟ್ಟಡದಿಂದ ಹೊಗೆ ಕಂಡುಬಂದಿತ್ತು.
ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಓಪನ್ 2026 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಲಕ್ಷ್ಯ ಸೇನ್ ಅಮೋಘ ಪ್ರದರ್ಶನ ನೀಡಿದ್ದಾರೆ. ಮೊದಲ ಸುತ್ತಿನಲ್ಲೇ ವಿಶ್ವದ ನಂ.1 ಆಟಗಾರ ಮತ್ತು ಹಾಲಿ ಚಾಂಪಿಯನ್ ಚೀನಾದ ಶಿ ಯು ಕಿ ಅವರನ್ನು ಸೋಲಿಸಿ ದೊಡ್ಡ ಸಂಚಲನ ಮೂಡಿಸಿದ್ದಾರೆ.
ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದ ಮೊದಲ ಸೆಟ್ ಅನ್ನು 23–21 ಅಂತರದಿಂದ ಗೆದ್ದುಕೊಂಡಿದ್ದರು. ಇದಾಗ್ಯೂ ದ್ವಿತೀಯ ಸೆಟ್ನಲ್ಲಿ ಕಂಬ್ಯಾಕ್ ಮಾಡಿದ ಶಿ ಯು ಕಿ 19–21 ಅಂತರದಿಂದ ಗೆಲ್ಲುವಲ್ಲಿ ಯಶಸ್ವಿಯಾದರು.
ಇನ್ನು ನಿರ್ಣಾಯಕವಾಗಿದ್ದ ಮೂರನೇ ಸೆಟ್ನಲ್ಲಿ ಮತ್ತೊಮ್ಮೆ ಲಯಕ್ಕೆ ಮರಳಿದ ಲಕ್ಷ್ಯ ಸೇನ್ 21–17 ಅಂತರದಿಂದ ಶಿ ಯು ಕಿಗೆ ಸೋಲುಣಿಸಿದರು. ಈ ಮೂಲಕ 78 ನಿಮಿಷಗಳ ಕಾಲ ನಡೆದ ಈ ಪಂದ್ಯವನ್ನು ಭಾರತೀಯ ತಾರೆ 23–21, 19–21, 21–17 ಸೆಟ್ಗಳಿಂದ ಗೆದ್ದುಕೊಂಡರು.
ವಿಶೇಷ ಎಂದರೆ ಬಿಡಬ್ಲ್ಯೂಎಫ್ (BWF) ವರ್ಲ್ಡ್ ಟೂರ್ನಲ್ಲಿ ವಿಶ್ವದ ನಂ.1 ಆಟಗಾರನ ವಿರುದ್ಧ ಲಕ್ಷ್ಯ ಸೇನ್ ಸಾಧಿಸಿದ ಮೊದಲ ವೈಯಕ್ತಿಕ ಜಯ ಇದಾಗಿದೆ. ಈ ಗೆಲುವಿನೊಂದಿಗೆ ಲಕ್ಷ್ಯ ಸೇನ್ ಪ್ರೀ-ಕ್ವಾರ್ಟರ್ ಫೈನಲ್ (ರೌಂಡ್ ಆಫ್ 16) ಪ್ರವೇಶಿಸಿದ್ದಾರೆ.
ಮಾರ್ಚ್ 5 ರಂದು ನಡೆಯಲಿರುವ ಮುಂದಿನ ಪಂದ್ಯದಲ್ಲಿ ಅವರು ಹಾಂಗ್ ಕಾಂಗ್ನ ಎನ್ಜಿ ಕಾ ಲಾಂಗ್ ಆಂಗಸ್ ಅವರನ್ನು ಎದುರಿಸಲಿದ್ದಾರೆ.
ತೆಲಂಗಾಣ, ಮಾರ್ಚ್ 04: ತೆಲಂಗಾಣದ ಮೆಹಬೂಬ್ನಗರದಲ್ಲಿರುವ ಸರ್ಕಾರಿ ಆಸ್ಪತ್ರೆ(Hospital)ಯ ಶವಾಗಾರದೊಳಗೆ ಬೀದಿ ನಾಯಿಯೊಂದು ವ್ಯಕ್ತಿಯೊಬ್ಬರ ಶವವನ್ನು ಕಚ್ಚಿ ವಿರೂಪಗೊಳಿಸಿರುವ ಘಟನೆ ನಡೆದಿದೆ. ಜಡ್ಚೆರ್ಲಾ ಪಟ್ಟಣದ ಏರಿಯಾ ಆಸ್ಪತ್ರೆಯಲ್ಲಿ ವರದಿಯಾದ ಈ ಘಟನೆಯು ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿನ ಭದ್ರತಾ ಲೋಪಗಳು ಮತ್ತು ಮೂಲಸೌಕರ್ಯ ಕೊರತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.
ಮೃತರನ್ನು ಜಡ್ಚೆರ್ಲಾ ಪಟ್ಟಣದ ನಿವಾಸಿ 32 ವರ್ಷದ ಪೋಲ್ ಭೀಮೇಶ್ವರ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಅವರು ಕೊಳದಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿತ್ತು.
ಫ್ರೀಜರ್ ಕೆಟ್ಟು ಹೋಗಿದ್ದ ಕಾರಣ ಶವವನ್ನು ಶವಾಗಾರದ ಮಹಡಿಯಲ್ಲಿ ಇರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶವವು ಊದಿಕೊಂಡಿದ್ದು, ಲಭ್ಯವಿರುವ ಶೇಖರಣಾ ಘಟಕದೊಳಗೆ ಇಡಲು ಸಾಧ್ಯವಿಲ್ಲ ಎಂದು ಪೊಲೀಸರು ಸೂಚಿಸಿದರು.ಶವಾಗಾರವನ್ನು ವಾರ್ಡ್ ಬಾಯ್ ಲಾಕ್ ಮಾಡಿದ್ದಾನೆ, ಆದರೆ ಬೀದಿ ನಾಯಿ ಹೇಗೋ ಕೋಣೆಗೆ ಪ್ರವೇಶ ಪಡೆದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ. ಸ್ವಲ್ಪ ಸಮಯದ ನಂತರ, ವಾರ್ಡ್ ಬಾಯ್ ಒಳಗೆ ನಾಯಿ ಇರುವುದನ್ನು ಗಮನಿಸಿ ಅದನ್ನು ಓಡಿಸಿದ್ದಾನೆ.
ಆದರೆ, ಆ ಹೊತ್ತಿಗೆ ನಾಯಿ ದೇಹದ ಒಂದು ಭಾಗವನ್ನು ವಿರೂಪಗೊಳಿಸಿತ್ತು ಎನ್ನಲಾಗಿದೆ. ಘಟನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ತೆಲಂಗಾಣ ಆರೋಗ್ಯ ಸಚಿವ ಸಿ ದಾಮೋದರ್ ರಾಜನರಸಿಂಹ, ತನಿಖೆ ನಡೆಸುವಂತೆ ರಾಜ್ಯ ವೈದ್ಯ ವಿಧಾನ ಪರಿಷತ್ ಆಯುಕ್ತ ಅಜಯ್ ಕುಮಾರ್ ಅವರಿಗೆ ನಿರ್ದೇಶನ ನೀಡಿದ್ದಾರೆ.ಹಿರಿಯ ಅಧಿಕಾರಿ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ, ದುಃಖಿತ ಕುಟುಂಬ, ಪೊಲೀಸ್ ಸಿಬ್ಬಂದಿ, ವೈದ್ಯರು, ಆಸ್ಪತ್ರೆ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ್ದಾರೆ.
ಅಮಾನತುಗೊಂಡವರಲ್ಲಿ ಆಸ್ಪತ್ರೆಯ ಸೂಪರಿಂಟೆಂಡೆಂಟ್, ಕರ್ತವ್ಯದಲ್ಲಿರುವ ವೈದ್ಯಕೀಯ ಅಧಿಕಾರಿ, ಶವಾಗಾರದ ಸಹಾಯಕ ಸಿಬ್ಬಂದಿ ಸೇರಿದ್ದಾರೆ.ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಭದ್ರತೆಯನ್ನು ಬಲಪಡಿಸಲು ಮತ್ತು ಶವಾಗಾರದ ಮೂಲಸೌಕರ್ಯವನ್ನು ಸುಧಾರಿಸಲು ಸರಿಪಡಿಸುವ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಅಜಯ್ ಕುಮಾರ್ ಭರವಸೆ ನೀಡಿದರು.