Suryakumar Yadav: ನಮ್ಮ ಸೋಲಿಗೆ ಇಂದೊಂದೇ ಕಾರಣ! – Kannada News | Suryakumar yadav post match interview After RCB vs MI Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 54ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೋಲನುಭವಿಸಿದೆ. ರಾಯ್​ಪುರ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 167 ರನ್ ಕಲೆಹಾಕಿದ್ದರು. ಈ ಗುರಿಯನ್ನು ಆರ್​ಸಿಬಿ 20ನೇ ಓವರ್​ನ ಕೊನೆಯ ಎಸೆತದಲ್ಲಿ ಚೇಸ್ ಮಾಡಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ.

ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್,  ನಮ್ಮ ಸೋಲಿಗೆ ಬ್ಯಾಟಿಂಗ್ ವಿಭಾಗದ ಹಿನ್ನಡೆಯೇ ಮುಖ್ಯ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

“ನಮ್ಮ ಸ್ಕೋರ್‌ನಲ್ಲಿ 10 ರಿಂದ 15 ರನ್ ಕಡಿಮೆಯಾದವು ಎಂದು ನನಗೆ ಅನ್ನಿಸಿತು. ಸರಿಯಾದ ಸಮಯದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿದ್ದು ನಮಗೆ ಹೊಡೆತ ನೀಡಿತು. ಆದರೆ ನಮನ್ ಧೀರ್ ಮತ್ತು ತಿಲಕ್ ವರ್ಮಾ ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ಅವರು ಈ ಪಿಚ್‌ನಲ್ಲಿ ಆಡಿದ ರೀತಿ ನೋಡಿದರೆ, ಅವರು ಬೇರೆಯದೇ ಟ್ರ್ಯಾಕ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆನೋ ಎಂಬಂತಿತ್ತು,” ಎಂದು ಸೂರ್ಯಕುಮಾರ್ ಯಾದವ್ ಯುವ ಬ್ಯಾಟರ್‌ಗಳನ್ನು ಶ್ಲಾಘಿಸಿದರು.

ಇನ್ನು ಪಂದ್ಯದ ಕೊನೆಯ ಓವರ್‌ನಲ್ಲಿ 15 ರನ್‌ಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಯುವ ಆಲ್ ರೌಂಡರ್ ರಾಜ್ ಬಾವಾಗೆ ನೀಡಲಾಗಿತ್ತು. ಈ ಬಗ್ಗೆ ಮಾತನಾಡಿದ ಸೂರ್ಯ, “ರಾಜ್ ಕಳೆದ ವರ್ಷದಿಂದ ಮತ್ತು ಈ ಸೀಸನ್ ಪೂರ್ತಿ ಕೊನೆಯ ಓವರ್‌ಗಳ ಅಭ್ಯಾಸವನ್ನು ಚೆನ್ನಾಗಿ ಮಾಡಿದ್ದಾರೆ. ಅವರು ಈ ವರ್ಷ ಸಂಪೂರ್ಣ ಭಿನ್ನ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಕೊನೆಯ ಓವರ್‌ನಲ್ಲಿ ಅವರು ಗೆಲುವಿನ ಹತ್ತಿರ ತಂದಿದ್ದರು. ಅವರ ಶ್ರಮದ ಬಗ್ಗೆ ನಮಗೆ ಹೆಮ್ಮೆಯಿದೆ,” ಎಂದರು.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್​​ ವಿರುದ್ಧ ‘ಅಸಭ್ಯ’ವಾಗಿ ಸಂಭ್ರಮಿಸಿದ ಟಿಮ್ ಡೇವಿಡ್

ಇದೇ ವೇಳೆ ಪಂದ್ಯದ ನಡುವೆ ತಿಲಕ್ ವರ್ಮಾ ಮತ್ತು ನಮನ್ ಧೀರ್ ನಡುವೆ ಕ್ಯಾಚ್ ಪಡೆಯುವಾಗ ನಡೆದ ಗೊಂದಲದ ಬಗ್ಗೆ ಮಾತನಾಡಿದ ಸೂರ್ಯಕುಮಾರ್ ಯಾದವ್, “ಇವೆಲ್ಲ ಆಟದ ಭಾಗ. ಅಭ್ಯಾಸದ ಸಮಯದಲ್ಲಿ ನಾವು ಇವುಗಳ ಬಗ್ಗೆ ಗಮನ ಹರಿಸುತ್ತೇವೆ. ಆದರೆ ಅಂತಿಮವಾಗಿ ತಿಲಕ್ ಆ ಅದ್ಭುತ ಕ್ಯಾಚ್ ಹಿಡಿದ ರೀತಿ ಅವರ ವಿಶೇಷತೆಯನ್ನು ತೋರಿಸುತ್ತದೆ,” ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿರುವುದು ಮುಂಬೈ ಇಂಡಿಯನ್ಸ್​ ತಂಡಕ್ಕೆ ಹೊಸ ಅನುಭವ ಮತ್ತು ನುಂಗಲಾರದ ತುತ್ತಾಗಿದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಸೂರ್ಯಕುಮಾರ್, “ನಾವು ಈ ಸ್ಥಾನದಲ್ಲಿ ಇರಲು ಬಯಸುವುದಿಲ್ಲ. ಇದು ಜೀರ್ಣಿಸಿಕೊಳ್ಳಲು ಕಷ್ಟವಾದ ವಿಷಯ. ಆದರೆ ಈ ಸೀಸನ್ ನಮಗೆ ಸಾಕಷ್ಟು ಪಾಠಗಳನ್ನು ಕಲಿಸಿದೆ. ಕ್ರಿಕೆಟ್ ಮೇಲಿನ ಪ್ರೀತಿಗಾಗಿ ನಾವು ಮುಂದಿನ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತೇವೆ ಮತ್ತು ಮುಂದಿನ ವರ್ಷ ಬಲಿಷ್ಠವಾಗಿ ಹಿಂತಿರುಗುತ್ತೇವೆ,” ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು.

Source link

ಲೈವ್​​​ನಲ್ಲೇ ಕಣ್ಣೀರು ಹಾಕಿದ ಕಿಯಾರಾ ಅಡ್ವಾಣಿ – Kannada News | Kiara Advani Gets Emotional About Her Post Pregnancy Journey and the Importance of Self Love

ತಾಯಿಯಾದ ನಂತರದ ಜರ್ನಿ ಬಗ್ಗೆ ಕಿಯಾರಾ ರಾಜ್ ಶಮಾನಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ‘ನಾವು ಜೀವನಪೂರ್ತಿ ಇತರರಿಗಾಗಿ ಬದುಕುತ್ತೇವೆ, ಆದರೆ ನಮ್ಮೊಂದಿಗೆ ನಾವು ಹೊಂದಿರಬೇಕಾದ ಸಂಬಂಧವನ್ನು ಮರೆತುಬಿಡುತ್ತೇವೆ. ಈಗ ನಾನು ಅಂತಿಮವಾಗಿ ನನಗಾಗಿ ಸಮಯ ಮೀಸಲಿಡುವುದನ್ನು ಕಲಿಯುತ್ತಿದ್ದೇನೆ’ ಎಂದು ಕಿಯಾರಾ ಕಣ್ಣೀರು ಹಾಕಿದ್ದಾರೆ.  ಈ ಬದಲಾವಣೆಯು ಅವರ ಜೀವನದ ಅತ್ಯುತ್ತಮ ಅನುಭವಗಳಲ್ಲಿ ಒಂದೆಂದು ಅವರು ಹೇಳಿಕೊಂಡಿದ್ದಾರೆ. 2025ರ ಜುಲೈ 15ರಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದರು. ಸರಾಯ ಎಂದು ಮಗುವಿಗೆ ಹೆಸರು ಇಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಟಾಕ್ಸಿಕ್’ ಶೂಟಿಂಗ್ ವೇಳೆ ವ್ಯಾನ್ ಅಲ್ಲಿ ಕುಳಿತು ಹೊಟ್ಟೆಯಲ್ಲಿರೋ ಮಗು ಜೊತೆ ಮಾತನಾಡುತ್ತಿದ್ದ ಕಿಯಾರಾ – Kannada News | Kiara Advani’s Motherhood Journey: Filming ‘Toxic’ Pregnant, Emotional Battles and Sidharth’s Support

ಬಾಲಿವುಡ್ ಸುಂದರಿ ಕಿಯಾರಾ ಅಡ್ವಾಣಿ ಈಗ ಕೇವಲ ನಟಿಯಲ್ಲ, ಅವರು ತಾಯಿ ಕೂಡ ಹೌದು. ಕಳೆದ ವರ್ಷ ಜುಲೈನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಕಿಯಾರಾ ಬಣ್ಣದ ಲೋಕದಿಂದ ತುಸು ದೂರವಿದ್ದರು. ಇದೀಗ ತಾಯ್ತನದ ನಂತರದ ತಮ್ಮ ದೈಹಿಕ ಮತ್ತು ಮಾನಸಿಕ ಬದಲಾವಣೆಗಳ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅವರು, ಆ ನೋವು ಮತ್ತು ಸವಾಲುಗಳನ್ನು ನೆನೆದು ಸಂದರ್ಶನದ ವೇಳೆ ಕಣ್ಣೀರಿಟ್ಟಿದ್ದಾರೆ.

1. ಟಾಕ್ಸಿಕ್ ಶೂಟಿಂಗ್​​ನಲ್ಲಿ ಭಾಗಿ ಆಗಿದ್ದ ಕಿಯಾರಾ

2. ಪ್ರೆಗ್ನೆಂಟ್ ಆಗಿಯೇ ಶೂಟ್ ಮಾಡಿದ್ದ ಕಿಯಾರಾ

3. ಆ ದಿನಗಳನ್ನು ನೆನೆದ ನಟಿ 

ರಾಜ್ ಶಮಾನಿ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಕಿಯಾರಾ, ‘ತಾಯಿ ಆಗುವ ಮೊದಲು ಮತ್ತು ನಂತರದ ಬದುಕಿನಲ್ಲಿ ನಾನು ಸಂಪೂರ್ಣವಾಗಿ ಬೇರೆಯೇ ವ್ಯಕ್ತಿಯಾಗಿದ್ದೇನೆ. ಇದೊಂದು ದೊಡ್ಡ ಅಸ್ಮಿತತೆಯ ಬದಲಾವಣೆ. ಆರಂಭದಲ್ಲಿ ಈ ಬದಲಾವಣೆಯನ್ನು ಒಪ್ಪಿಕೊಳ್ಳುವುದು ನನಗೆ ಕಷ್ಟವಾಗಿತ್ತು’ ಎಂದು ಭಾವುಕರಾದರು. ಮಗು ಜನಿಸಿದ ನಂತರದ ಆರು ತಿಂಗಳು ತಮಗೆ ತಾವೇ ಸಮಯ ನೀಡಲು ಸಾಧ್ಯವಾಗದೆ ಅನುಭವಿಸಿದ ಮಾನಸಿಕ ತುಮುಲಗಳನ್ನು ಅವರು ಈ ವೇಳೆ ಬಿಚ್ಚಿಟ್ಟರು.

ಕಿಯಾರಾ ಅವರು ಗರ್ಭಿಣಿಯಾಗಿದ್ದ ಸಂದರ್ಭದಲ್ಲೇ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು ಎನ್ನುವುದು ವಿಶೇಷ. ಸುಮಾರು ಏಳು ತಿಂಗಳ ಗರ್ಭಿಣಿಯಾಗಿದ್ದಾಗಲೂ ಅವರು ಕಠಿಣ ಸಾಹಸ ದೃಶ್ಯಗಳಲ್ಲಿ ಭಾಗವಹಿಸಿದ್ದರು. ಈ ವಿಷಯ ಕೇವಲ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಮಾತ್ರ ತಿಳಿದಿತ್ತು. ‘ಶೂಟಿಂಗ್ ವೇಳೆ ವ್ಯಾನ್ ಒಳಗೆ ಹೋಗಿ ಹೊಟ್ಟೆಯಲ್ಲಿದ್ದ ಮಗುವಿನ ಜೊತೆ ಮಾತನಾಡುತ್ತಿದ್ದೆ. ಅಮ್ಮ ಕೇವಲ ನಟನೆ ಮಾಡುತ್ತಿದ್ದಾಳೆ ಮಗು, ಇದು ನಿಜವಲ್ಲ ಎಂದು ಮಗುವನ್ನು ಸಮಾಧಾನಪಡಿಸುತ್ತಿದ್ದೆ’ ಎಂದು ಆ ದಿನಗಳನ್ನು ನೆನೆದರು.

ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾದ ಬೋಲ್ಡ್ ದೃಶ್ಯಕ್ಕೆ ಕಿಯಾರಾ ಕಿರಿಕ್ ಇಲ್ಲ: ವದಂತಿಗಳಿಗೆ ತೆರೆ ಎಳೆದ ನಟಿ

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕಿಯಾರಾ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಜೊತೆಗಿನ ಆಪ್ತ ದೃಶ್ಯಗಳನ್ನು ಕತ್ತರಿಸುವಂತೆ ಕೇಳಿಕೊಂಡಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದರ ಬಗ್ಗೆ ಮಾತನಾಡಿದ ಅವರು, ‘ಇವೆಲ್ಲವೂ ಕೇವಲ ಅಸಂಬದ್ಧ ಮಾತುಗಳು’ ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ತಮ್ಮ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಅವರ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಕಿಯಾರಾ, ‘ಅವರು ಓರ್ವ ಜವಾಬ್ದಾರಿಯುತ ತಂದೆ. ಮಗುವಿನ ವಿಷಯದಲ್ಲಿ ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:48 am, Mon, 11 May 26

Source link

ಬೆಳಗಾವಿಯ ರೈತನ ಮಗ IFS ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ! – Kannada News | Belagavi Farmer’s Son Basavaraj Kempawad Secures AIR 1 in UPSC IFS Exam

ಬೆಳಗಾವಿಯ ರೈತನ ಮಗ IFS ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ!

ಬೆಳಗಾವಿ, ಮೇ 11: ಜಿಲ್ಲೆಯ ಅಥಣಿ ತಾಲ್ಲೂಕಿನ ಸವದಿ ಗ್ರಾಮದಲ್ಲಿ ರೈತನ ಮಗನಾದ ಬಸವರಾಜ್ ಧರೇಪ್ಪ ಕೆಂಪವಾಡ UPSC ನಡೆಸಿದ ಭಾರತೀಯ ಅರಣ್ಯ ಸೇವೆ (IFS) ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ಸ್ಥಾನ ಪಡೆದಿದ್ದು, ಇಡೀ ರಾಜ್ಯಕ್ಕೆ, ವಿಶೇಕ್ಷವಾಗಿ ಬೆಳಗಾವಿ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಶುಕ್ರವಾರ ಪ್ರಕಟವಾದ ಫಲಿತಾಂಶದಲ್ಲಿ ಬಸವರಾಜ್ ಈ ಮಹೋನ್ನತ ಸಾಧನೆ ಮಾಡಿದ್ದಾರೆ. ಒಬ್ಬ ಸಾಮಾನ್ಯ ರೈತನ ಮಗನಾಗಿ, ಗ್ರಾಮೀಣ ಹಿನ್ನೆಲೆಯಿಂದ ಬಂದು ಈ ಸಾಧನೆ ಮಾಡಿರುವುದು ಇಂದು ಸಾವಿರಾರು ಯುವಕರಿಗೆ ಸ್ಫೂರ್ತಿಯಾಗಿದೆ. ಮಗನ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ಸವದಿ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿದ್ದು, ಗ್ರಾಮಸ್ಥರು ಹಾಗೂ ಸಂಬಂಧಿಕರು ಬಸವರಾಜ್ ಅವರ ಮನೆಗೆ ಧಾವಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಮುಖ್ಯಾಂಶಗಳು

  • ಅಥಣಿ ತಾಲ್ಲೂಕಿನ ರೈತನ ಮಗ ಐಎಫ್‌ಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ.
  •  ಯಾವುದೇ ಕೋಚಿಂಗ್ ಪಡೆಯದೆ ಎರಡನೇ ಪ್ರಯತ್ನದಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬಸವರಾಜ್.
  •  ಬಡತನ ಮೀರಿ ಓದಿದ ಪ್ರತಿಭೆಯಿಂದ ನಾಡಿಗೆ ಸಂದ ಗೌರವ.

ಪರಿಶ್ರಮದ ಹಾದಿ

ಬಸವರಾಜ್ ತನ್ನ ಪ್ರಾಥಮಿಕ ಶಿಕ್ಷಣ ಸವದಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪೂರೈಸಿದ್ದು, ಬಳಿಕ ಅಥಣಿಯಲ್ಲಿ ಮುಂದಿನ ವಿದ್ಯಾಭ್ಯಾಸ ಮುಗಿಸಿದ್ದ. ಶಿರಸಿಯಲ್ಲಿ ಪದವಿ ಮುಗಿಸಿ, ಯುಪಿಎಸ್​ಸಿ ಕನಸು ಹೊತ್ತು ಬೆಂಗಳೂರಿಗೆ ತೆರಳಿದ್ದ. ವಿಶೇಷವೆಂದರೆ, ಯಾವುದೇ ಪ್ರತಿಷ್ಠಿತ ಕೋಚಿಂಗ್ ಸೆಂಟರ್‌ಗಳ ನೆರವಿಲ್ಲದೆ, ಸ್ವಂತ ಪರಿಶ್ರಮದಿಂದ ಬಸವರಾಜ್ ತನ್ನ ಎರಡನೇ ಪ್ರಯತ್ನದಲ್ಲೇ ಅಖಿಲ ಭಾರತ ಮಟ್ಟದ ಅಗ್ರಸ್ಥಾನಕ್ಕೇರಿದ್ದಾನೆ.

ಗುರಿ ತಲುಪಲು ಛಲವಿದ್ದರೆ ಬಡತನ ಅಡ್ಡಿಯಾಗದು

ಈ ಕುರಿತು ಸಂತಸ ಹಂಚಿಕೊಂಡ ಬಸವರಾಜ್, ನಾನು ಗ್ರಾಮೀಣ ಭಾಗದವನು. ಮೊರಾರ್ಜಿ ಶಾಲೆಯಲ್ಲಿ ಓದಿದವನು. ಗುರಿ ತಲುಪುವ ಛಲವಿದ್ದರೆ ಬಡತನ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ನನ್ನ ಸಾಧನೆಯೇ ಸಾಕ್ಷಿ. ಈ ಹಂತ ತಲುಪಿದ್ದು ನನಗೆ ಅಪಾರ ಹೆಮ್ಮೆ ತಂದಿದೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾನೆ.

ತಂದೆ ಧರೇಪ್ಪ ಕೆಂಪವಾಡ ಮಾತನಾಡಿ, ನಾವು ಸಣ್ಣ ರೈತ ಕುಟುಂಬದವರು. ಆರ್ಥಿಕ ಮುಗ್ಗಟ್ಟಿದ್ದರೂ ಮಕ್ಕಳ ಶಿಕ್ಷಣಕ್ಕೆ ಎಂದೂ ಕೊರತೆ ಮಾಡಲಿಲ್ಲ. ಗುತ್ತಿಗೆ ಆಧಾರದ ಮೇಲೆ ಜಮೀನು ಪಡೆದು ಕಷ್ಟಪಟ್ಟು ಮಗನನ್ನು ಓದಿಸಿದೆ. ಇಂದು ಅವನ ಸಾಧನೆಯಿಂದ ನಮ್ಮ ಬದುಕು ಸಾರ್ಥಕವಾಯಿತು” ಎಂದು ಭಾವುಕರಾಗಿ ನುಡಿದಿದ್ದಾರೆ. ರೈತ ಕುಟುಂಬದ ಕುಡಿಯೊಬ್ಬ ಈ ಮಟ್ಟಕ್ಕೆ ಬೆಳೆದದ್ದು ಕೇವಲ ಸವದಿ ಗ್ರಾಮಕ್ಕೆ ಮಾತ್ರವಲ್ಲದೆ ಇಡೀ ನಾಡಿಗೆ ಹೆಮ್ಮೆಯ ವಿಷಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಂಬೈ ಇಂಡಿಯನ್ಸ್​​ಗೆ ಮಧ್ಯ ಬೆರಳು ತೋರಿಸಿದ ಟಿಮ್ ಡೇವಿಡ್ – Kannada News | RCB vs MI: Tim David shows middle finger

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 54ನೇ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಟಿಮ್ ಡೇವಿಡ್ ಅಶ್ಲೀಲವಾಗಿ ಸಂಭ್ರಮಿಸಿದ್ದಾರೆ. ಅದು ಸಹ ಮುಂಬೈ ಇಂಡಿಯನ್ಸ್ ತಂಡವನ್ನು ಗುರಿಯಾಗಿಸಿಕೊಂಡು. ರಾಯ್​ಪುರ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 167 ರನ್​ ಕಲೆಹಾಕಿದ್ದರು.

ಈ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ತಂಡಕ್ಕೆ ಗೆಲ್ಲಲು ಕೊನೆಯ ಓವರ್​ನಲ್ಲಿ 15 ರನ್​ಗಳು ಬೇಕಿತ್ತು. ಅದರಂತೆ ಅಂತಿಮ ಎಸೆತದಲ್ಲಿ 2 ರನ್​ಗಳ ಅವಶ್ಯಕತೆ ಙಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಾಸಿಖ್ ದಾರ್ ರೋಚಕ ಗೆಲುವು ತಂದು ಕೊಟ್ಟಿದ್ದರು. ಇತ್ತ ಆರ್​ಸಿಬಿ ಗೆಲ್ಲುತ್ತಿದ್ದಂತೆ ಡಗೌಟ್​ನಲ್ಲಿದ್ದ ಟಿಮ್ ಡೇವಿಡ್ ಮುಂಬೈ ಇಂಡಿಯನ್ಸ್​ ತಂಡವನ್ನು ಗುರಿಯಾಗಿಸಿ ಮಧ್ಯ ಬೆರಳು ತೋರಿಸಿ ಅಸಭ್ಯವಾಗಿ ಸಂಭ್ರಮಿಸಿದ್ದಾರೆ.

ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಟಿಮ್ ಡೇವಿಡ್ ವಿರುದ್ಧ ಮ್ಯಾಚ್ ರೆಫರಿ ಕ್ರಮ ಜರುಗಿಸುವ ಸಾಧ್ಯತೆಯಿದೆ. ಏಕೆಂದರೆ ಕ್ರಿಕೆಟ್ ಆಟದಲ್ಲಿ ಇಂತಹ ಸನ್ನೆಗಳನ್ನು ಮಾಡುವುದು ‘ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್’ (ICC) ನ ನೀತಿ ಸಂಹಿತೆಯ ಅಡಿಯಲ್ಲಿ ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ.

ಈ ಅಪರಾಧದ ಪ್ರಕಾರ: ಮಧ್ಯದ ಬೆರಳು ತೋರಿಸುವುದು ಅಸಭ್ಯ, ಆಕ್ಷೇಪಾರ್ಹ ಮತ್ತು ಅವಮಾನಕರ ಸನ್ನೆಗಳ ವರ್ಗಕ್ಕೆ ಸೇರುತ್ತದೆ. ಇದು ಸಾಮಾನ್ಯವಾಗಿ ಐಸಿಸಿ ನೀತಿ ಸಂಹಿತೆಯ ಹಂತ 1 (Level 1) ಅಥವಾ ಹಂತ 2 (Level 2) ಉಲ್ಲಂಘನೆಯಾಗಿದೆ.

    • ದಂಡ ಮತ್ತು ಶಿಕ್ಷೆ: ಇಂತಹ ವರ್ತನೆ ತೋರಿದ ಆಟಗಾರರಿಗೆ ಮ್ಯಾಚ್ ರೆಫರಿಗಳು ಅವರ ಪಂದ್ಯದ ಸಂಭಾವನೆಯಲ್ಲಿ  ಶೇ. 50 ರಿಂದ ಶೇ. 100 ರಷ್ಟು ದಂಡ ವಿಧಿಸಬಹುದು. ಜೊತೆಗೆ, ಅವರ ಖಾತೆಗೆ ಡೆಮೆರಿಟ್ ಅಂಕಗಳನ್ನು ಸೇರಿಸಲಾಗುತ್ತದೆ. ಪದೇ ಪದೇ ಇಂತಹ ತಪ್ಪುಗಳನ್ನು ಮಾಡಿದರೆ ಪಂದ್ಯಗಳಿಂದ ನಿಷೇಧವನ್ನು ಎದುರಿಸಬೇಕಾಗುತ್ತದೆ.
    • ಪೂರ್ವ ನಿದರ್ಶನಗಳು:  2012ರಲ್ಲಿ ಸಿಡ್ನಿ ಕ್ರೀಡಾಂಗಣದಲ್ಲಿ ಅಭಿಮಾನಿಗಳತ್ತ ಮಧ್ಯದ ಬೆರಳು ತೋರಿಸಿದ್ದಕ್ಕಾಗಿ ಕೊಹ್ಲಿ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ. 50 ರಷ್ಟು ದಂಡ ವಿಧಿಸಲಾಗಿತ್ತು.
    • ಇತ್ತೀಚಿನ ವಿವಾದಗಳು: ಟ್ರಾವಿಸ್ ಹೆಡ್ ಮತ್ತು ಗೌತಮ್ ಗಂಭೀರ್ ಅವರಂತಹ ಆಟಗಾರರು ಕೂಡ ಇಂತಹ ಸನ್ನೆಗಳ ಕಾರಣದಿಂದ ಟೀಕೆಗೆ ಗುರಿಯಾಗಿದ್ದಾರೆ.
    • ಕ್ರಿಕೆಟ್‌ನ ಆತ್ಮಾಭಿಮಾನ: ಕ್ರಿಕೆಟ್ ಅನ್ನು ‘ಸಂಭಾವಿತರ ಆಟ’ಎಂದು ಕರೆಯಲಾಗುತ್ತದೆ. ಯಾವುದೇ ಆಟಗಾರ ಮೈದಾನದಲ್ಲಿ ಎದುರಾಳಿ ಆಟಗಾರರನ್ನಾಗಲಿ ಅಥವಾ ಪ್ರೇಕ್ಷಕರನ್ನಾಗಲಿ ಅವಮಾನಿಸುವಂತಹ ವರ್ತನೆ ಮಾಡಬಾರದು ಎಂಬುದು ಇಲ್ಲಿನ ಪ್ರಮುಖ ನಿಯಮ.

ಆದರೆ ಇದೀಗ ಗೆಲುವಿನ ಬೆನ್ನಲ್ಲೇ ಮೈಮರೆಯುವ ಮೂಲಕ ಟಿಮ್ ಡೇವಿಡ್ ಅಸಭ್ಯವಾಗಿ ವರ್ತಿಸಿದ್ದಾರೆ. ಹೀಗಾಗಿ ಅವರಿಗೆ ಪಂದ್ಯ ಶುಲ್ಕದ ಶೇ 50 ರಷ್ಟು ಅಥವಾ ಶೇ 100 ರಷ್ಟು ದಂಡ ವಿಧಿಸುವ ಸಾಧ್ಯತೆ ಇದೆ.

Source link

9 ವರ್ಷಗಳ ಬಳಿಕ ಚೀನಾಕ್ಕೆ ಅಮೆರಿಕ ಅಧ್ಯಕ್ಷರ ಭೇಟಿ: ಟ್ರಂಪ್-ಕ್ಸಿ ಜಿನ್‌ಪಿಂಗ್ ಮಹತ್ವದ ಮಾತುಕತೆ! – Kannada News | US China Summit: Trump & Xi Jinping Discuss Trade, Taiwan and Middle East Crisis

ಬೀಜಿಂಗ್, ಮೇ.11: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆಹ್ವಾನದ ಮೇರೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೇ 13 ರಿಂದ 15 ರವರೆಗೆ ಚೀನಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಸೋಮವಾರ ಪ್ರಕಟಿಸಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಅಮೆರಿಕ ಅಧ್ಯಕ್ಷರೊಬ್ಬರು ಚೀನಾಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.

ಈ ಭೇಟಿಯು ಅತ್ಯಂತ ನಿರ್ಣಾಯಕ ಸಮಯದಲ್ಲಿ ನಡೆಯುತ್ತಿದೆ. ಪ್ರಸ್ತುತ ಅಮೆರಿಕ-ಇಸ್ರೇಲ್-ಇರಾನ್ ನಡುವೆ ಸುದೀರ್ಘ ಯುದ್ಧ ನಡೆಯುತ್ತಿದ್ದು, ಹಾರ್ಮುಜ್ ಜಲಸಂಧಿಯ ದಿಗ್ಬಂಧನದಿಂದಾಗಿ ಜಾಗತಿಕ ಇಂಧನ ಬಿಕ್ಕಟ್ಟು ಎದುರಾಗಿದೆ. ಇದರೊಂದಿಗೆ ತೈವಾನ್ ವಿಚಾರವಾಗಿ ಅಮೆರಿಕ ಮತ್ತು ಚೀನಾ ನಡುವೆ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.

ಬುಧವಾರದಂದು ಟ್ರಂಪ್ ಬೀಜಿಂಗ್ ತಲುಪಲಿದ್ದಾರೆ. ಗುರುವಾರ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಸಭೆ, ಸ್ವಾಗತ ಸಮಾರಂಭ ಮತ್ತು ‘ಟೆಂಪಲ್ ಆಫ್ ಹೆವನ್’ ಭೇಟಿ ಇರಲಿದೆ. ನಂತರ ಸರ್ಕಾರಿ ಔತಣಕೂಟ ನಡೆಯಲಿದೆ. ಶುಕ್ರವಾರದಂದು ಉಭಯ ನಾಯಕರು ಕಾರ್ಯನಿರತ ಮಧ್ಯಾಹ್ನದ ಊಟ ಮತ್ತು ಚಹಾ ಕೂಟದಲ್ಲಿ ಮತ್ತೊಮ್ಮೆ ಮಾತುಕತೆ ನಡೆಸಲಿದ್ದಾರೆ.

ಇದನ್ನೂ ಓದಿ: ಅಮೆರಿಕಕ್ಕೆ ಇರಾನ್‌ನಿಂದ ‘ಸರ್ಪ್ರೈಸ್ ಅಟ್ಯಾಕ್’ ಎಚ್ಚರಿಕೆ: ಹಾರ್ಮುಜ್ ಜಲಸಂಧಿಯಲ್ಲಿ ಹೆಚ್ಚಿದ ಉದ್ವಿಗ್ನತೆ

ಟ್ರಂಪ್ ಭೇಟಿಗೂ ಮುನ್ನ, ಮೇ 12 ಮತ್ತು 13 ರಂದು ದಕ್ಷಿಣ ಕೊರಿಯಾದಲ್ಲಿ ಚೀನಾದ ಉಪ-ಪ್ರೀಮಿಯರ್ ಹೆ ಲಿಫೆಂಗ್ ಮತ್ತು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ನಡುವೆ ಅಂತಿಮ ಹಂತದ ವ್ಯಾಪಾರ ಮಾತುಕತೆ ನಡೆಯಲಿದೆ. ಅಮೆರಿಕ ವಿಧಿಸಿರುವ ಸುಂಕಗಳ (Tariffs) ಕುರಿತು ಈ ಭೇಟಿಯಲ್ಲಿ ಒಂದು ಪ್ರಮುಖ ವ್ಯಾಪಾರ ಒಪ್ಪಂದವಾಗುವ ನಿರೀಕ್ಷೆಯಿದೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:32 am, Mon, 11 May 26

Source link

ವಿಜಯ್ ಪ್ರಮಾಣವಚನ ಸ್ವೀಕರಿಸುವಾಗ ಭಾವುಕರಾದ ತ್ರಿಷಾ ಕೃಷ್ಣನ್ – Kannada News | Thalapathy Vijay CM: Trisha Krishnan’s Emotional Presence at Oath Ceremony Goes Viral

ತಮಿಳುನಾಡಿನಲ್ಲಿ ಪ್ರಮುಖ ರಾಜಕೀಯ ಬದಲಾವಣೆ ಆಗಿದೆ. ನಟ ವಿಜಯ್ ದಳಪತಿ ನೇರವಾಗಿ ರಾಜಕೀಯ ಪ್ರವೇಶಿಸಿದರು ಮತ್ತು ಅವರ ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಭರ್ಜರಿ ಗೆಲುವು ಸಾಧಿಸಿತು. ದಳಪತಿ ವಿಜಯ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ದೇಶದ ಕಣ್ಣುಗಳು ಈ ಪ್ರಮಾಣ ವಚನ ಸಮಾರಂಭದ ಮೇಲೆ ಇದ್ದವು. ವೇದಿಕೆ ಮೇಲೆ ವಿಜಯ್ ಪ್ರಮಾಣ ವಚನ ಸ್ವೀಕರಿಸುವಾಗ ತ್ರಿಷಾ ಭಾವುಕರಾದರು.

ವಿಜಯ್ ದಳಪತಿ ಅವರ ಗೆಳತಿ ಎಂದು ಹೇಳಲಾಗುವ ತ್ರಿಶಾ ಕೃಷ್ಣನ್ ಪ್ರಮಾಣವಚನ ಸಮಾರಂಭದಲ್ಲಿ ಹಾಜರಿದ್ದರು. ವಿಜಯ್ ಮತ್ತು ಅವರ ಪತ್ನಿಯ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಹೀಗಾಗಿ, ಅವರ ಪತ್ನಿ ಮತ್ತು ಮಕ್ಕಳು ಪ್ರಮಾಣವಚನ ಸಮಾರಂಭಕ್ಕೆ ಬಂದಿರಲಿಲ್ಲ. ಆದರೆ, ಅವರ ವೃತ್ತಿ ಜೀವನದಲ್ಲಿ ಪ್ರತಿ ಹಂತದಲ್ಲೂ ಜೊತೆ ಇದ್ದ ತ್ರಿಶಾ ಕೃಷ್ಣನ್ ಉಪಸ್ಥಿತರಿದ್ದರು. ಈಗ, ಪ್ರಮಾಣವಚನ ಸಮಾರಂಭದ ವೇಳೆ ಅವರು ನಡೆದುಕೊಂಡ ರೀತಿ ಚರ್ಚೆಗೆ ಬಂದಿದೆ.

ದಶಕಗಳ ಕಾಲ ಬೆಳ್ಳಿತೆರೆಯ ಮೇಲೆ ವಿಜಯ್ ಅವರೊಂದಿಗೆ ಯಶಸ್ವಿ ಜೋಡಿಯಾಗಿ ತ್ರಿಷಾ ಗುರುತಿಸಿಕೊಂಡಿದ್ದಾರೆ. ತಮ್ಮ ಆಪ್ತ ಸ್ನೇಹಿತ ಮತ್ತು ಸಹೋದ್ಯೋಗಿ ರಾಜ್ಯದ ಅತ್ಯುನ್ನತ ಸ್ಥಾನಕ್ಕೇರುತ್ತಿರುವುದನ್ನು ಕಂಡು ಅವರ ಕಣ್ಣಾಲಿಗಳು ತೇವವಾಗಿದ್ದವು. ವಿಜಯ್ ಅವರು ಪ್ರಮಾಣವಚನ ಮುಗಿಸಿ ಜನರತ್ತ ಕೈಬೀಸಿದಾಗ, ತ್ರಿಷಾ ಅವರು ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ತಮ್ಮ ಸಂತಸ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸಿದರು. ಅವರು ಮಾತನಾಡುವಾಗ ತ್ರಿಷಾ ಭಾವುಕರಾಗಿದ್ದರು.

ಇದನ್ನೂ ಓದಿ: ವಿಜಯ್ ಪ್ರಮಾಣವಚನವನ್ನು ನೋಡಿ ‘ಬಾಹುಬಲಿ’ ದೃಶ್ಯ ನೆನೆದ ಫ್ಯಾನ್ಸ್

ಈ ಕ್ಷಣವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ವೃತ್ತಿಪರ ಸಂಬಂಧವನ್ನೂ ಮೀರಿ ಒಬ್ಬ ಸ್ನೇಹಿತನ ಯಶಸ್ಸಿಗೆ ಮಿಡಿಯುವ ಅವರ ಮನಸ್ಸನ್ನು ಅಭಿಮಾನಿಗಳು ಶ್ಲಾಘಿಸಿದ್ದಾರೆ. ಪದಗ್ರಹಣದ ಗಂಭೀರತೆಯ ನಡುವೆ, ಈ ಮಾನವೀಯ ಭಾವನೆಯು ಸಮಾರಂಭದ ಒಂದು ವಿಶೇಷ ಆಕರ್ಷಣೆಯಾಗಿ ಉಳಿಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಈ ಗೆಲುವಿಗೆ ನಾವು ಅರ್ಹರಲ್ಲ: ರಜತ್ ಪಾಟಿದಾರ್ ಅಚ್ಚರಿಯ ಹೇಳಿಕೆ! – Kannada News | Rajat patidar post match interview after RCB vs MI Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ ಜಯ ಸಾಧಿಸಿದೆ. ರಾಯ್​ಪುರ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 167 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ತಂಡವು 20ನೇ ಓವರ್​ನ ಕೊನೆಯ ಎಸೆತದಲ್ಲಿ 2 ರನ್​ ಬಾರಿಸಿ 2 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿತು.

ಈ ಗೆಲುವಿನ ಬಳಿಕ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್, ಈ ಗೆಲುವಿಗೆ ನಾವು ಅರ್ಹರಲ್ಲ ಎಂದೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಆರ್​ಸಿಬಿ ನಾಯಕ, “ಇವತ್ತಿನ ಪಂದ್ಯ ಬಹಳ ರೋಚಕವಾಗಿತ್ತು. ತಂಡದ ಪರವಾಗಿ ಅದ್ಭುತವಾಗಿ ಆಡಿದ ಕೃಣಾಲ್ ಪಾಂಡ್ಯ ಅವರೇ ನಿಜವಾದ ಮ್ಯಾನ್ ಆಫ್ ದಿ ಮ್ಯಾಚ್. ತಂಡದ ಪ್ಲ್ಯಾನ್ ಪ್ರಕಾರ ಅವರಿಗೆ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಲಾಗಿತ್ತು. ಆ ಜವಾಬ್ದಾರಿಯನ್ನು ಅವರು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಎಂದು ” ಎಂದು ರಜತ್ ಪಾಟಿದಾರ್ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಭೂವನೇಶ್ವರ್ ಕುಮಾರ್ ಅದ್ಭುತ ಬೌಲಿಂಗ್ ಮಾಡಿದ್ದರು. ಈ ಬಗ್ಗೆ ಮಾತನಾಡಿದ ರಜತ್,  “ಭುವಿ ಅವರ ಬೌಲಿಂಗ್ ನಿಯಂತ್ರಣ ನಂಬಲಸಾಧ್ಯ. ಪಿಚ್ ಎರಡು ರೀತಿಯಲ್ಲಿ ವರ್ತಿಸುತ್ತಿದ್ದರೂ ಅವರು ಚೆಂಡನ್ನು ಬಳಸಿದ ರೀತಿ ಅದ್ಭುತವಾಗಿತ್ತು. ಇಂತಹ ಪಿಚ್‌ನಲ್ಲಿ ಅವರನ್ನು ಎದುರಿಸುವುದು ಯಾವುದೇ ಬ್ಯಾಟರ್‌ಗೆ ಕಷ್ಟದ ಕೆಲಸ,” ಎಂದು ಮೆಚ್ಚುಗೆ ಸೂಚಿಸಿದರು.

 ಗೆಲುವಿಗೆ ನಾವು ಅರ್ಹವಲ್ಲ!

ಇನ್ನು ಈ ಪಂದ್ಯ ಗೆದ್ದರೂ ಸಹ ರಜತ್ ಪಾಟಿದಾರ್ ತಮ್ಮ ಬ್ಯಾಟರ್‌ಗಳ ಮೇಲೆ ತೀವ್ರ ಅಸಮಾಧಾನ ಹೊರಹಾಕಿದರು. “ಬೌಲರ್‌ಗಳು ಎದುರಾಳಿಗಳನ್ನು 166 ರನ್‌ಗಳಿಗೆ ಕಟ್ಟಿಹಾಕುವ ಮೂಲಕ ಅದ್ಭುತ ಕೆಲಸ ಮಾಡಿದ್ದರು. ನಮ್ಮಲ್ಲಿರುವಂತಹ ಪ್ರತಿಭಾವಂತ ಬ್ಯಾಟಿಂಗ್ ಪಡೆಯು ಈ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಬೇಕಿತ್ತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಗೆದ್ದಿರಬಹುದು. ಆದರೆ ಆಡಿದ ರೀತಿಗೆ ನಾವು ಈ ಗೆಲುವಿಗೆ ಅರ್ಹರಲ್ಲ. ಪರಿಸ್ಥಿತಿ ಯಾವುದೇ ಇರಲಿ, ಇಂತಹ ಮೊತ್ತವನ್ನು ನಾವು ಸುಲಭವಾಗಿ ಚೇಸ್ ಮಾಡಬೇಕಿತ್ತು,” ಎಂದರು.

ಇದನ್ನೂ ಓದಿ: RCB ಗೆಲುವಿನ ಬೆನ್ನಲ್ಲೇ ಐಪಿಎಲ್​​ನಿಂದ 2 ತಂಡಗಳು ಔಟ್!

ಅಂದರೆ ಅದ್ಭುತ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದರೂ ಸುಲಭ ಗುರಿಯನ್ನು ಕೊನೆಯ ಎಸೆತದಲ್ಲಿ ಚೇಸ್ ಮಾಡಿ ಗೆದ್ದಿರುವುದು ನಮ್ಮ ಬ್ಯಾಟಿಂಗ್ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಹೀಗಾಗಿ ಈ ಪಂದ್ಯವನ್ನು ನಾವು ಗೆದ್ದರೂ, ನಾವು ಆಡಿದ ರೀತಿಗೆ ಈ ಗೆಲುವಿಗೆ ನಾವು ಅರ್ಹರಲ್ಲ ಎಂಬುದನ್ನು ರಜತ್ ಪಾಟಿದಾರ್ ಎಂದು ರಜತ್ ಪಾಟಿದಾರ್ ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆಯಾಗಿ, ರಜತ್ ಪಾಟಿದಾರ್ ಅವರ ಈ ನೇರ ನುಡಿಗಳು ತಂಡದಲ್ಲಿನ ಆತ್ಮಾವಲೋಕನದ ಅಗತ್ಯತೆಯನ್ನು ಎತ್ತಿ ತೋರಿಸಿವೆ. ಗೆಲುವಿನ ಸಂಭ್ರಮದ ನಡುವೆಯೂ ತಪ್ಪುಗಳನ್ನು ತಿದ್ದಿಕೊಳ್ಳುವ ಅವರ ಈ ನಡೆ ಮುಂಬರುವ ಪಂದ್ಯಗಳಲ್ಲಿ ತಂಡಕ್ಕೆ ಹೇಗೆ ಸಹಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Published On – 7:55 am, Mon, 11 May 26

Source link

ವಿಜಯ್ ಪ್ರಮಾಣವಚನವನ್ನು ನೋಡಿ ‘ಬಾಹುಬಲಿ’ ದೃಶ್ಯ ನೆನೆದ ಫ್ಯಾನ್ಸ್ – Kannada News | Thalapathy Vijay’s CM Oath: A Bahubali Moment for Tamil Nadu Politics

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಕೆಲವು ದೃಶ್ಯಗಳು ಕೇವಲ ಸಿನಿಮಾ ಆಗಿ ಉಳಿಯದೆ, ಜನರ ಭಾವನೆಯಾಗಿ ಬದಲಾಗುತ್ತವೆ. ಅಂತಹ ಒಂದು ದೃಶ್ಯ ‘ಬಾಹುಬಲಿ’ ಚಿತ್ರದಲ್ಲಿ ಮಹೇಂದ್ರ ಬಾಹುಬಲಿ ಪಟ್ಟಾಭಿಷೇಕ ಮಾಡಿಕೊಳ್ಳುವ ಕ್ಷಣ. ಇಂದು ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಅವರು ‘ತಮಿಳಗ ವೆಟ್ರಿ ಕಳಗಂ’ (TVK) ಮೂಲಕ ರಾಜಕೀಯಕ್ಕೆ ಅಡಿಯಿಟ್ಟು ಸಿಎಂ ಆಗಿದ್ದಾರೆ. ಅವರು ಪ್ರಮಾಣ ವಚನ ದೃಶ್ಯವನ್ನು ಅನೇಕರು ಬಾಹುಬಲಿ ದೃಶ್ಯಕ್ಕೆ ಹೋಲಿಕೆ ಮಾಡಿದ್ದಾರೆ.

ಮೇ 10ರಂದು ನಡೆದ ಸಮಾರಂಭದಲ್ಲಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅತ್ಯಂತ ಗಂಭೀರ ಹಾಗೂ ಔಪಚಾರಿಕವಾಗಿ ನಡೆದ ಈ ಕಾರ್ಯಕ್ರಮದಲ್ಲಿ, ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿದರು. ನೆರೆದಿದ್ದ ಅಪಾರ ಜನಸ್ತೋಮವು ಈ ಘಟನೆಗೆ ಸಾಕ್ಷಿಯಾಯಿತು. ವಿಜಯ್ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಅಲ್ಲಿ ನೆರೆದಿದ್ದ ಲಕ್ಷಾಂತರ ಬೆಂಬಲಿಗರು ಹರ್ಷೋದ್ಗಾರ ವ್ಯಕ್ತಪಡಿಸಿದರು.

ಬಾಹುಬಲಿ ಚಿತ್ರದಲ್ಲಿ ರಾಜಮೌಳಿಯವರು ತೋರಿಸಿದಂತೆ, ಮಹೇಂದ್ರ ಬಾಹುಬಲಿ ಪ್ರಮಾಣವಚನ ಸ್ವೀಕರಿಸುವಾಗ ಇಡೀ ಸಾಮ್ರಾಜ್ಯದ ಜನತೆ “ಬಾಹುಬಲಿ… ಬಾಹುಬಲಿ…” ಎಂದು ಕೂಗುವ ಘೋಷಣೆ ಭೂಮಿಯನ್ನು ನಡುಗಿಸುತ್ತದೆ. ಅದೇ ರೀತಿ, ವಿಜಯ್ ಅವರು ‘ನಾನು ಸಿ ವಿಜಯ್ ಜೋಸೆಫ್’ ಎಂದು ಹೇಳುವಾಗ ಅಭಿಮಾನಿ ಸಾಗರ ಜೋರಾಗಿ ಕೂಗಿದೆ. ಎರಡನ್ನೂ ಈಗ ಹೋಲಿಕೆ ಮಾಡುತ್ತಿದ್ದಾರೆ. ಸಿನಿಮಾ ತೆರೆಯ ಮೇಲೆ ಜನನಾಯಕನಾಗಿ ಮೆರೆದ ವಿಜಯ್, ಈಗ ನಿಜ ಜೀವನದಲ್ಲಿ ಜನರ ಧ್ವನಿಯಾಗಲು ಹೊರಟಿರುವುದು ಈ ಹೋಲಿಕೆಗೆ ಮುಖ್ಯ ಕಾರಣ.

ಇದನ್ನೂ ಓದಿ: ಕಪ್ಪು ಕೋಟು ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದೇಕೆ ದಳಪತಿ ವಿಜಯ್

ಬಾಹುಬಲಿಗೆ ಜನರ ಮೇಲಿದ್ದ ಪ್ರೀತಿ ಮತ್ತು ವಿಜಯ್ ಅವರಿಗೆ ತಮ್ಮ ಅಭಿಮಾನಿಗಳ (ತಮಿಳು ಜನತೆ) ಮೇಲಿರುವ ಕಳಕಳಿ ಒಂದೇ ತೆರನಾದ ಭಾವನೆಯನ್ನು ಮೂಡಿಸುತ್ತದೆ ಎಂದು ಅನೇಕರು ಹೇಳಿದ್ದಾರೆ. ವಿಜಯ್ ಅವರ ರಾಜಕೀಯ ಜರ್ನಿಯನ್ನು ಅನೇಕರು ಯಾವ ಚಿತ್ರಕ್ಕೂ ಕಡಿಮೆ ಇಲ್ಲ ಎಂದಿದ್ದಾರೆ. ‘ಮಹೇಂದ್ರ ಬಾಹುಬಲಿಯ ಆಗಮನ ಹೇಗೆ ಮಾಹಿಷ್ಮತಿ ಸಾಮ್ರಾಜ್ಯಕ್ಕೆ ಹೊಸ ಭರವಸೆ ನೀಡಿತೋ, ಅದೇ ರೀತಿ ವಿಜಯ್ ಅವರ ರಾಜಕೀಯ ಪ್ರವೇಶ ತಮಿಳುನಾಡಿನ ರಾಜಕಾರಣದಲ್ಲಿ ಹೊಸ ಬದಲಾವಣೆಯ ಗಾಳಿ ಬೀಸಲಿದೆ’ ಎಂದು ಅಭಿಮಾನಿಗಳು ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಮ್ಮನ ಪ್ರೀತಿಗೆ ಅಣ್ಣನಿಗೆ ಶಿಕ್ಷೆ! ಪ್ರಿಯಕರನ ಅಣ್ಣನನ್ನೇ ಕಿಡ್ನಾಪ್ ಮಾಡಿ ಕೈಕಾಲು ಕಟ್ಟಿ ಥಳಿಸಿದ ಹುಡುಗಿಯ ಕಡೆಯವರು – Kannada News | Byadarahalli Abduction: Priest Brutally Beaten Over Brother’s Elopement

ಬೆಂಗಳೂರು, ಮೇ.11: ತಮ್ಮ ಮಾಡಿದ ತಪ್ಪಿಗೆ ಅಣ್ಣ ಶಿಕ್ಷೆ ಅನುಭವಿಸಿರುವ ಅವಮಾನಿಯ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಪ್ರೀತಿ ಮಾಡಿದ ತಮ್ಮನ ತಪ್ಪಿಗೆ ಅಣ್ಣನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಿಯಕರನ ಅಣ್ಣನನ್ನೇ ಕಿಡ್ನಾಪ್ ಮಾಡಿ, ಕೈಕಾಲು ಕಟ್ಟಿ ಹಾಕಿ ದೌರ್ಜನ್ಯ ನಡೆಸಿರುವ ವೀಡಿಯೋ ಈಗ ಆತಂಕ ಸೃಷ್ಟಿಸಿದೆ.

ಬ್ಯಾಡರಹಳ್ಳಿಯ ಶಿವಕುಮಾರ್ ಎಂಬಾತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಇವರ ಪ್ರೀತಿಗೆ ಯುವತಿಯ ಮನೆಯವರಿಂದ ತೀವ್ರ ವಿರೋಧವಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರೂ ಇತ್ತೀಚೆಗೆ ಮನೆ ಬಿಟ್ಟು ಓಡಿ ಹೋಗಿದ್ದರು. ಇದರಿಂದ ಕೆರಳಿದ ಯುವತಿಯ ತಂದೆ ಬಸವರಾಜ್ ಮತ್ತು ಅವರ ಸಂಬಂಧಿಕರು, ಶಿವಕುಮಾರ್ ಸಿಗದಿದ್ದಕ್ಕೆ ಆತನ ಅಣ್ಣ ಕೊಟ್ರೇಶ್ ಎಂಬಾತನ ಮೇಲೆ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದರು.

ಕೊಟ್ರೇಶ್ ಬ್ಯಾಡರಹಳ್ಳಿಯ ದೇವಸ್ಥಾನವೊಂದರಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. “ಪೊಲೀಸ್ ಸ್ಟೇಷನ್‌ಗೆ ಹೋಗೋಣ ಬಾ” ಎಂದು ನಂಬಿಸಿ ಆರೋಪಿಗಳು ಕೊಟ್ರೇಶ್‌ನನ್ನು ಕಾರಿನಲ್ಲಿ ಅಪಹರಿಸಿದ್ದಾರೆ. ಅಜ್ಞಾತ ಸ್ಥಳಕ್ಕೆ ಕರೆದೊಯ್ದು, ಕೊಟ್ರೇಶ್‌ನ ಕೈಕಾಲುಗಳನ್ನು ಕಟ್ಟಿ ಹಾಕಿ ಮನಬಂದಂತೆ ಥಳಿಸಿದ್ದಾರೆ.

ಇದನ್ನೂ ಓದಿ: ಉದ್ಯೋಗಿಗಳೋ ಅಥವಾ ರೋಬೋಟ್‌ಗಳೋ?: ಕಂಪನಿಯ ವಿಚಿತ್ರ ನಿಯಮಕ್ಕೆ ‘ನೋ’ ಎಂದ ಯುವತಿ

ಹಲ್ಲೆ ನಡೆಸುವಾಗ ಆರೋಪಿಗಳು ವೀಡಿಯೋ ರೆಕಾರ್ಡ್ ಮಾಡಿದ್ದಾರೆ. “ಶಿವು ಎಲ್ಲೇ ಇದ್ದರೂ ಹುಡುಗಿಯನ್ನು ತಂದು ಒಪ್ಪಿಸು” ಎಂದು ಕೊಟ್ರೇಶ್ ಕೈಯಲ್ಲಿ ಹೇಳಿಸಿ, ಆ ವೀಡಿಯೋವನ್ನು ಅವರ ಸಂಬಂಧಿಕರಿಗೆ ಕಳುಹಿಸಿ ಬೆದರಿಕೆ ಹಾಕಿದ್ದಾರೆ. ವೀಡಿಯೋದಲ್ಲಿ ಕೊಟ್ರೇಶ್ ಜೀವಕ್ಕಾಗಿ ಅಂಗಲಾಚುತ್ತಿರುವುದು ಕಂಡುಬಂದಿದೆ. ವೀಡಿಯೋ ಬೆನ್ನಲ್ಲೇ ಕೊಟ್ರೇಶ್ ಸಂಬಂಧಿಕರು ಬ್ಯಾಡರಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಯಾವಗಾ ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ಮಾಡಲು ಶುರು ಮಾಡಿದದ್ದಾರೆ ಎಂದು ಆರೋಪಿಗಳಿಗೆ ಗೊತ್ತಾಯಿತಿ ತಕ್ಷಣ ಕೊಟ್ರೇಶ್‌ನನ್ನು ಬಿಟ್ಟು ಪರಾರಿಯಾಗಿದ್ದಾರೆ. ಇದೀಗ ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version