PM Internship Scheme: ಪಿಎಂ ಇಂಟರ್ನ್‌ಶಿಪ್ ಯೋಜನೆ ಆರಂಭ; ಯುವಜನತೆಗೆ ಉದ್ಯೋಗದ ತರಬೇತಿ ಜೊತೆಗೆ 9,000ರೂ. ಸ್ಟೈಫಂಡ್ – Kannada News | Pradhan Mantri Internship Yojana 2026: Apply Now for 9000 Stipend and Corporate Experience!

ಪಿಎಂ ಇಂಟರ್ನ್‌ಶಿಪ್ ಯೋಜನೆImage Credit source: Ai generated

ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ 2026’ ಅಡಿಯಲ್ಲಿ ದೇಶದ ಯುವಕ-ಯುವತಿಯರಿಗೆ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುವ ಸುವರ್ಣ ಅವಕಾಶ ಲಭ್ಯವಾಗಿದೆ. ಈ ಯೋಜನೆಯ ಪ್ರಮುಖ ಉದ್ದೇಶ ಉದ್ಯೋಗಾಕಾಂಕ್ಷಿಗಳಿಗೆ ಕೌಶಲ ಅಭಿವೃದ್ಧಿ ತರಬೇತಿಯನ್ನು ನೀಡುವುದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 9,000ರೂ. ಸ್ಟೈಫಂಡ್ ನೀಡಲಾಗುತ್ತದೆ. ಇದು ಒಟ್ಟು 12 ತಿಂಗಳ ಅವಧಿಯ ಇಂಟರ್ನ್‌ಶಿಪ್ ಆಗಿದ್ದು, ತರಬೇತಿ ಪಡೆಯುವವರು ದೇಶದ ಅಗ್ರಗಣ್ಯ 500 ಕಂಪನಿಗಳಲ್ಲಿ ಅನುಭವ ಪಡೆಯಲು ಅವಕಾಶವಿದೆ.

ಯಾರು ಅರ್ಜಿ ಸಲ್ಲಿಸಬಹುದು?

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 21 ರಿಂದ 24 ವರ್ಷ ವಯೋಮಿತಿಯವರಾಗಿರಬೇಕು. ಶೈಕ್ಷಣಿಕವಾಗಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಅಥವಾ ಯಾವುದೇ ಪದವಿಯನ್ನು ಪೂರ್ಣಗೊಳಿಸಿದವರು ಅರ್ಹರಾಗಿರುತ್ತಾರೆ. ಆದರೆ, ಐಐಟಿ, ಐಐಎಂ ಅಥವಾ ಸಿಎ ಅಂತಹ ಉನ್ನತ ಪದವಿ ಹೊಂದಿದವರಿಗೆ ಮತ್ತು ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಹೆಚ್ಚಿರುವವರಿಗೆ ಇದರಲ್ಲಿ ಅವಕಾಶವಿರುವುದಿಲ್ಲ. ಅಭ್ಯರ್ಥಿಗಳ ಕುಟುಂಬದಲ್ಲಿ ಯಾರಾದರೂ ಸರ್ಕಾರಿ ಉದ್ಯೋಗದಲ್ಲಿದ್ದರೂ ಸಹ ಅವರು ಈ ಯೋಜನೆಗೆ ಅರ್ಹರಲ್ಲ.

ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್‌ ನೇಮಕಾತಿ ಘೋಷಣೆ

ಅರ್ಜಿ ಸಲ್ಲಿಸುವ ವಿಧಾನ ಮತ್ತು ಆಯ್ಕೆ ಪ್ರಕ್ರಿಯೆ:

ಆಸಕ್ತರು ಅಧಿಕೃತ ವೆಬ್‌ಸೈಟ್ pminternship.mca.gov.in ಮೂಲಕ ಉಚಿತವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಮೇ 13ರೊಳಗೆ ಅರ್ಜಿ ಸಲ್ಲಿಸುವುದು ಕಡ್ಡಾಯ. ನೋಂದಣಿ ಸಮಯದಲ್ಲಿ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ವಿವರಗಳನ್ನು ನೀಡಿ, ತಮಗೆ ಇಷ್ಟವಾದ ಕ್ಷೇತ್ರ ಮತ್ತು ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಶೈಕ್ಷಣಿಕ ಮೆರಿಟ್ ಮತ್ತು ಕಂಪನಿಗಳ ಅವಶ್ಯಕತೆಗಳನ್ನು ಆಧರಿಸಿ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ತರಬೇತಿಯ ಕೊನೆಯಲ್ಲಿ ನೀಡಲಾಗುವ ಅನುಭವದ ಪ್ರಮಾಣಪತ್ರವು ಅಭ್ಯರ್ಥಿಗಳು ಭವಿಷ್ಯದಲ್ಲಿ ಖಾಸಗಿ ವಲಯದಲ್ಲಿ ಉತ್ತಮ ಉದ್ಯೋಗಗಳನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:13 pm, Sat, 9 May 26

Source link

ವಿಜಯ್ ಸಿಎಂ ಆಗುವುದು ಖಚಿತ; ಕೊನೆಗೂ ಟಿವಿಕೆಗೆ ವಿಸಿಕೆ, ಮುಸ್ಲಿಂ ಲೀಗ್ ಬೆಂಬಲ – Kannada News | Tamil Nadu government formation Vijay set to become CM as VCK and IUML extends support to TVK

ಚೆನ್ನೈ, ಮೇ 9: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಸರ್ಕಸ್ ಬಗೆಹರಿದಂತಾಗಿದೆ. ಸರ್ಕಾರ ರಚಿಸಲು ಟಿವಿಕೆಗೆ ವಿಸಿಕೆ ನಾಯಕ ತಿರುಮಾವಲವನ್ ಬೆಂಬಲ ಪತ್ರವನ್ನು ನೀಡಿದ್ದಾರೆ. ಹಾಗೇ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಕೂಡ ಬೇಷರತ್ತಾದ ಬೆಂಬಲ ನೀಡಲಿದೆ.

ಬೆಳಗ್ಗೆಯಿಂದ ಟಿವಿಕೆ ಮತ್ತು ವಿಸಿಕೆ ನಾಯಕರು ಪ್ರತ್ಯೇಕವಾಗಿ ತಮ್ಮ ಶಾಸಕರ ಜೊತೆ ಸಭೆ ನಡೆಸಿದ್ದರು. ವಿಸಿಕೆ ಟಿವಿಕೆಗೆ ಬೆಂಬಲ ನೀಡಿರುವುದರಿಂದಾಗಿ ವಿಜಯ್ ಮುಖ್ಯಮಂತ್ರಿಯಾಗುವುದು ಖಚಿತವಾಗಿದೆ. ಇಂದು ಸಂಜೆ 6 ಗಂಟೆಗೆ ಪತ್ರಿಕಾ ಹೇಳಿಕೆ ಪ್ರಕಟಿಸಲಾಗುವುದು. ಈಗಾಗಲೇ ಟಿವಿಕೆ ಕಾರ್ಯಕರ್ತರು ಸಂಭ್ರಮಾಚರಣೆ ಶುರು ಮಾಡಿದ್ದಾರೆ.

ಟಿವಿಕೆ ನಾಯಕ ಅಧವ್ ಅರ್ಜುನ ಈ ಬಗ್ಗೆ ಮಾಹಿತಿ ನೀಡಿದ್ದು, ವಿಸಿಕೆ ವಿಜಯ್ ಅವರ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ. ಸರ್ಕಾರ ರಚನೆ ಕುರಿತು ವಿಸಿಕೆ ಬೆಂಬಲ ನೀಡುವ ಪತ್ರವನ್ನೂ ಟಿವಿಕೆಗೆ ನೀಡಿದೆ. ಇದಕ್ಕಾಗಿ ಟಿವಿಕೆ ನಾಯಕ ಕಾಂಗ್ರೆಸ್ ಮತ್ತು ಎಡ ಪಕ್ಷಗಳ ಬೆಂಬಲಕ್ಕಾಗಿ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಟಿವಿಕೆ 234 ಸದಸ್ಯರ ಸದನದಲ್ಲಿ 108 ಸ್ಥಾನಗಳನ್ನು ಗೆದ್ದಿತು. ಡಿಎಂಕೆ 59 ಸ್ಥಾನಗಳನ್ನು, ಎಐಎಡಿಎಂಕೆ 47, ಪಿಎಂಕೆ 4, ಐಯುಎಂಎಲ್ 2, ಸಿಪಿಐ 2 ಮತ್ತು ಸಿಪಿಐ(ಎಂ) 2 ಸ್ಥಾನಗಳನ್ನು ಗೆದ್ದರೆ, ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ತಲಾ ಒಂದು ಸ್ಥಾನವನ್ನು ಗೆದ್ದವು. ಕಾಂಗ್ರೆಸ್ ನಂತರ ಟಿವಿಕೆಗೆ ಬೆಂಬಲ ನೀಡಿತು. ಇದೀಗ ಸಿಪಿಎಂ, ಸಿಪಿಐ, ವಿಸಿಕೆ ಹಾಗೂ ಮುಸ್ಲಿಂ ಲೀಗ್ ಕೂಡ ಟಿವಿಕೆಗೆ ಬೆಂಬಲ ಘೋಷಿಸಿರುವುದರಿಂದ ಸರ್ಕಾರ ರಚನೆಗೆ ಬೇಕಾದ ಬಹುಮತ ಸಿಕ್ಕಂತಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:17 pm, Sat, 9 May 26

Source link

ಜೈಲಿನೊಳಗೊಂದು ಲವ್ ಸ್ಟೋರಿ! ಕೊಲೆ ಅಪರಾಧಿಯನ್ನು ಮದುವೆಯಾದ ಜೈಲು ಅಧಿಕಾರಿ – Kannada News | Madhya Pradesh jail officer falls in love with former murder convict in prison marries amid family opposition

ನವದೆಹಲಿ, ಮೇ 9: ಆತ ಕೊಲೆ ಮಾಡಿದ್ದ ಜೈಲು ಸೇರಿದ್ದ ಅಪರಾಧಿ. ಆಕೆ ಆ ಜೈಲಿನ ಅಧಿಕಾರಿ. ಅವರಿಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿತ್ತು ಎಂದರೆ ನೀವು ನಂಬಲು ಸಾಧ್ಯವೇ? ಆ ಅಪರಾಧಿಯ ಶಿಕ್ಷೆಯ ಅವಧಿ ಮುಗಿದ ಬಳಿಕ ಆಕೆ ಆತನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಾರೆ. ಅದಕ್ಕೆ ಆಕೆಯ ಮನೆಯವರು ಸುತಾರಾಂ ಒಪ್ಪಲಿಲ್ಲ. ಆದರೂ ಹಠ ಮಾಡಿ ಆತನನ್ನೇ ಮದುವೆಯಾಗಿದ್ದಾರೆ. ಆಕೆ ಮುಸ್ಲಿಂ ಮಹಿಳೆಯಾಗಿದ್ದರೆ ಆತ ಹಿಂದೂ. ಇದೀಗ ಆಕೆ ಹಿಂದೂ ಸಂಪ್ರದಾಯದಂತೆ ಅದ್ದೂರಿಯಾಗಿಯೇ ಆತನನ್ನು ಮದುವೆಯಾಗಿದ್ದಾರೆ.

ಸತ್ನಾ ಸೆಂಟ್ರಲ್ ಜೈಲಿನಲ್ಲಿದ್ದಾಗ ಆ ಕೈದಿ ಮತ್ತು ಮಹಿಳಾ ಜೈಲು ಅಧಿಕಾರಿ ನಡುವೆ ಪ್ರೀತಿ ಮೂಡಿತ್ತು. ಅದಾದ ನಂತರವೂ ಅವರು ಸಂಪರ್ಕದಲ್ಲಿದ್ದರು. ಇದೀಗ ಛತರ್ಪುರ ಜಿಲ್ಲೆಯಲ್ಲಿ ಅವರ ಮದುವೆ ನಡೆದಿದೆ. ಈ ವಿವಾಹ ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದಿದೆ. ಈ ಅಂತರ್ಧರ್ಮೀಯ ಸಮಾರಂಭವು ಮೇ 5ರಂದು ಛತರ್ಪುರ ಜಿಲ್ಲೆಯ ಲವ್ಕುಶ್ನಗರ ಪ್ರದೇಶದಲ್ಲಿ ನಡೆಯಿತು. ಸತ್ನಾ ಕೇಂದ್ರ ಜೈಲಿನಲ್ಲಿ ಸಹಾಯಕ ಸೂಪರಿಂಟೆಂಡೆಂಟ್ ಮತ್ತು ವಾರಂಟ್ ಇನ್-ಚಾರ್ಜ್ ಆಗಿ ಸೇವೆ ಸಲ್ಲಿಸಿದ ಫಿರೋಜಾ ಖಾಟೂನ್, ಜೈಲಿನೊಳಗೆ ತನ್ನ ಅಧಿಕೃತ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಕೊಲೆ ಅಪರಾಧಿಯಾಗಿದ್ದ ಧರ್ಮೇಂದ್ರ ಸಿಂಗ್ ಅವರನ್ನು ಮೊದಲು ಭೇಟಿಯಾಗಿದ್ದರು. ನಂತರ ಅವರಿಬ್ಬರೂ ಪ್ರೀತಿಸತೊಡಗಿದ್ದರು.

ಇದನ್ನೂ ಓದಿ: ರಾತ್ರಿ ಸಲ್ವಾರ್ ಧರಿಸಿ ರಸ್ತೆಯಲ್ಲಿ ನಿಂತಿದ್ದ ಮಹಿಳಾ ಐಪಿಎಸ್ ಅಧಿಕಾರಿಗೆ 40 ಪುರುಷರಿಂದ ಕಿರುಕುಳ!

2007ರಲ್ಲಿ ಚಾಂದಲಾ ನಗರ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಕೃಷ್ಣ ದತ್ ದೀಕ್ಷಿತ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮೇಂದ್ರ ಸಿಂಗ್ ಅವರಿಗೆ ಜೈಲು ಶಿಕ್ಷೆಯಾಗಿತ್ತು. ಧರ್ಮೇಂದ್ರ ಸಿಂಗ್ ಅವರ ಉತ್ತಮ ನಡವಳಿಕೆಯಿಂದಾಗಿ ಜೈಲಿನಲ್ಲಿ ನಂತರ ಕ್ಲೆರಿಕಲ್ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ ವೇಳೆ ಜೈಲಧಿಕಾರಿ ಜೊತೆ ಪ್ರೇಮಾಂಕುರವಾಗಿತ್ತು.

ಛತ್ತರ್‌ಪುರ ಜಿಲ್ಲೆಯ ಚಾಂದಲಾ ನಿವಾಸಿ ಧರ್ಮೇಂದ್ರ ಸಿಂಗ್ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಸುಮಾರು 14 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದರು. ಉತ್ತಮ ನಡವಳಿಕೆಯ ಆಧಾರದ ಮೇಲೆ ಸುಮಾರು 4 ವರ್ಷಗಳ ಹಿಂದೆ ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದ ನಂತರ, ಇಬ್ಬರೂ ಸಂಪರ್ಕದಲ್ಲಿದ್ದರು. ಜೈಲಧಿಕಾರಿಯ ಮನೆಯವರು ಈ ಮದುವೆಗೆ ಒಪ್ಪಲಿಲ್ಲ. ಮದುವೆಗೂ ಬರಲಿಲ್ಲ. ಹೀಗಾಗಿ, ಧರ್ಮೇಂದ್ರ ಸಿಂಗ್ ಅವರ ಸಂಪ್ರದಾಯದಂತೆ ಮದುವೆ ನಡೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:47 pm, Sat, 9 May 26

Source link

NMPA Recruitment 2026: ಮಂಗಳೂರು ಬಂದರಿನಲ್ಲಿ ಉದ್ಯೋಗಾವಕಾಶ; 2 ಲಕ್ಷ ರೂ. ಮಾಸಿಕ ವೇತನದ ಹುದ್ದೆಗೆ ಅರ್ಜಿ ಆಹ್ವಾನ! – Kannada News | NMPA Recruitment 2026: 12 Manager Posts at New Mangaluru Port Authority – Apply Now!

ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ ನೇಮಕಾತಿImage Credit source: Ai generated

ಮಂಗಳೂರಿನಲ್ಲಿ ಕೇಂದ್ರ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶವೊಂದು ಒದಗಿ ಬಂದಿದೆ. ಕೇಂದ್ರ ಸರ್ಕಾರದ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ (NMPA) ಇದೀಗ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 12 ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಕರ್ನಾಟಕದ ಬಂದರು ನಗರದಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಇದು ಅತ್ಯುತ್ತಮ ವೇದಿಕೆಯಾಗಿದೆ.

ಹುದ್ದೆಗಳ ವಿವರ ಮತ್ತು ವಿವಿಧ ವಿಭಾಗಗಳು:

ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಸಂಸ್ಥೆಯ ಪ್ರಮುಖ ಕಾರ್ಯಾಚರಣಾ ವಿಭಾಗಗಳಲ್ಲಿ ಚೀಫ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಹಾಗೂ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಮಾಹಿತಿ ತಂತ್ರಜ್ಞಾನ (ICT) ವಿಭಾಗದಲ್ಲಿ 4 ಹುದ್ದೆಗಳು, ಕಾರ್ಪೊರೇಟ್ ಲೀಗಲ್ ವಿಭಾಗದಲ್ಲಿ 3 ಹುದ್ದೆಗಳು, ಪರಿಸರ ಮತ್ತು ಸುರಕ್ಷತೆ ವಿಭಾಗದಲ್ಲಿ 2 ಹುದ್ದೆಗಳು ಹಾಗೂ ಬಿಸಿನೆಸ್ ಡೆವಲಪ್‌ಮೆಂಟ್ ಮತ್ತು ಟ್ರೇಡ್ ಪ್ರೊಮೋಷನ್ ವಿಭಾಗದಲ್ಲಿ 3 ಹುದ್ದೆಗಳು ಸೇರಿ ಒಟ್ಟು 12 ಅವಕಾಶಗಳು ಲಭ್ಯವಿವೆ.

ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್‌ ನೇಮಕಾತಿ ಘೋಷಣೆ

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ನೇಮಕಾತಿ ನಿಯಮದಂತೆ ಪ್ರತಿ ಹುದ್ದೆಗೂ ಪ್ರತ್ಯೇಕ ಶೈಕ್ಷಣಿಕ ಅರ್ಹತೆ ಮತ್ತು ಅನುಭವವನ್ನು ನಿಗದಿಪಡಿಸಲಾಗಿದೆ. ICT ವಿಭಾಗಕ್ಕೆ ಬಿ.ಇ/ಬಿ.ಟೆಕ್ ಪದವಿ, ಲೀಗಲ್ ವಿಭಾಗಕ್ಕೆ ಕಾನೂನು ಪದವಿ, ಪರಿಸರ ವಿಭಾಗಕ್ಕೆ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿಸಿನೆಸ್ ಡೆವಲಪ್‌ಮೆಂಟ್ ವಿಭಾಗಕ್ಕೆ ಎಂಬಿಎ ಪದವಿ ಕಡ್ಡಾಯವಾಗಿದೆ. ವಯೋಮಿತಿಯ ವಿಷಯದಲ್ಲಿ, ಚೀಫ್ ಮ್ಯಾನೇಜರ್‌ಗೆ ಗರಿಷ್ಠ 55 ವರ್ಷ, ಸೀನಿಯರ್ ಮ್ಯಾನೇಜರ್‌ಗೆ 45 ವರ್ಷ ಹಾಗೂ ಮ್ಯಾನೇಜರ್ ಹುದ್ದೆಗೆ 40 ವರ್ಷ ನಿಗದಿಪಡಿಸಲಾಗಿದ್ದು, ಮೀಸಲಾತಿ ವರ್ಗದವರಿಗೆ ಸರ್ಕಾರದ ನಿಯಮದಂತೆ ವಯೋ ಸಡಿಲಿಕೆ ಇರುತ್ತದೆ.

ವೇತನ ಶ್ರೇಣಿ ಮತ್ತು ಆಯ್ಕೆ ವಿಧಾನ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಮಾನದಂಡದಂತೆ ಅತ್ಯಂತ ಆಕರ್ಷಕ ವೇತನವನ್ನು ನಿಗದಿಪಡಿಸಲಾಗಿದೆ. ಚೀಫ್ ಮ್ಯಾನೇಜರ್ ಹುದ್ದೆಗೆ ಮಾಸಿಕ ಸುಮಾರು 2 ಲಕ್ಷ ರೂಪಾಯಿ, ಸೀನಿಯರ್ ಮ್ಯಾನೇಜರ್‌ಗೆ 1.60 ಲಕ್ಷ ರೂಪಾಯಿ ಹಾಗೂ ಮ್ಯಾನೇಜರ್ ಹುದ್ದೆಗೆ 1.20 ಲಕ್ಷ ರೂಪಾಯಿ ನಿಶ್ಚಿತ ವೇತನ ಸಿಗಲಿದೆ. ಆಯ್ಕೆ ಪ್ರಕ್ರಿಯೆಯು ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲು ಅರ್ಜಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ, ನಂತರ ಅರ್ಹ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಆಸಕ್ತರು NMPA ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಅಧಿಕೃತ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ: 

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಎಸ್​​ವೈ ಅಭಿಮಾನೋತ್ಸವ: ಯಡಿಯೂರಪ್ಪ ಬರ್ತಿದ್ದಂತೆ ಕಾರ್ಯಕರ್ತರಿಂದ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ – Kannada News | Chitradurga BSY Abhimanotsava: Watch How Yediyurappa Made a Grand Entry to the Stage

ಚಿತ್ರದುರ್ಗ, ಮೇ 09: 50 ವರ್ಷಗಳ ರಾಜಕೀಯ ಜೀವನ ಪೂರ್ಣವಾಗಿದ್ದರಿಂದ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಸಂಭ್ರಮದಲ್ಲಿದ್ದಾರೆ. ಇಂದು ಚಿತ್ರದುರ್ಗದಲ್ಲಿ ಬಿಎಸ್. ಯಡಿಯೂರಪ್ಪ ಅಭಿಮಾನೋತ್ಸವ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ವೇದಿಕೆಗೆ ಯಡಿಯೂರಪ್ಪ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಅವರ ಪರ ಘೋಷಣೆ ಕೂಗಿದರು. ಇನ್ನು ಇದೇ ವೇಳೆ ಯಡಿಯೂರಪ್ಪಗೆ ಸಂಸದ ಗೋವಿಂದ ಕಾರಜೋಳ ಶಾಲು ಹೊದಿಸಿ ಸ್ವಾಗತಿಸಿದರು. ಇತ್ತ ರಾಜಾಹುಲಿ ಕೂಡ ನೆರೆದಿದ್ದ ಜನರಿಗೆ ಕೈ ಮುಗಿಯುತ್ತಾ ಎಂಟ್ರಿ ಕೊಟ್ಟರು. ಕೇಂದ್ರ ಸಚಿವ ಅಮಿತ್ ಶಾ ಭಾಗಿಯಾಗಿದ್ದು, ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಯಿಂದಲೂ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದಾರೆ. ಇನ್ನೂ ಕಾರ್ಯಕ್ರಮಕ್ಕೆ ಬರುವ ಅಭಿಮಾನಿಗಳಿಗೆ ಉಪಹಾರ ವ್ಯವಸ್ಥೆ ಕೂಡ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

IPL 2026: ತನ್ನ 2ನೇ ತವರು ಮೈದಾನದಲ್ಲಿ ಚೊಚ್ಚಲ ಪಂದ್ಯವನ್ನಾಡಲಿದೆ ಆರ್​ಸಿಬಿ; ಎದುರಾಳಿ ಯಾರು? – Kannada News | IPL 2026: RCB vs MI Match 54 Preview – Revenge Battle in Raipur! Live Stream Details

ಐಪಿಎಲ್ 2026 (IPL 2026) ರ 54ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ (RCB vs MI) ನಡುವಿನ ಸೇಡಿನ ಸಮರಕ್ಕೆ ವೇದಿಕೆ ಸಜ್ಜಾಗಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಎರಡೂ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳಲು ಪ್ರಯತ್ನಿಸಲಿವೆ. ಈ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅತ್ಯುತ್ತಮ ಫಾರ್ಮ್‌ನಲ್ಲಿತ್ತು. ಆದರೆ ಕಳೆದೆರಡು ಪಂದ್ಯಗಳಲ್ಲಿ ತಂಡ ಲಯ ಕಳೆದುಕೊಂಡಿದೆ. ಹೀಗಾಗಿ ಮುಂಬೈ ವಿರುದ್ಧ ಸತತ ಎರಡನೇ ಪಂದ್ಯವನ್ನು ಗೆದ್ದು ಮತ್ತೆ ಗೆಲುವಿನ ಲಯಕ್ಕೆ ಮರಳಲು ಆರ್​ಸಿಬಿ ಪ್ರಯತ್ನಿಸಲಿದೆ. ಇತ್ತ ಮುಂಬೈ ಇಂಡಿಯನ್ಸ್ ಕೂಡ ರೋಹಿತ್ ಶರ್ಮಾ ಆಗಮನದಿಂದ ಬಲಿಷ್ಠವಾಗಿ ಕಾಣುತ್ತಿದ್ದು, ಗೆಲುವಿನ ಸರಣಿಯನ್ನು ಮುಂದುವರೆಸುವ ಇರಾದೆಯಲ್ಲಿದೆ.

2ನೇ ತವರು ನೆಲದಲ್ಲಿ ಆರ್​ಸಿಬಿ ಕಣಕ್ಕೆ

ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ಎರಡು ಮೈದಾನಗಳನ್ನು ತನ್ನ ತವರು ಮೈದಾನಗಳಾಗಿ ಆಯ್ಕೆ ಮಾಡಿಕೊಂಡಿದೆ. ಅದರಂತೆ ತನ್ನ ತವರು ನೆಲದ ಪಂದ್ಯಗಳಲ್ಲಿ ಮೊದಲ 5 ಪಂದ್ಯಗಳನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ್ದ ಆರ್​ಸಿಬಿ, ಇದೀಗ ತನ್ನ ಎರಡನೇ ತವರು ನೆಲವಾದ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಉಳಿದಿರುವ ಎರಡು ಪಂದ್ಯಗಳನ್ನು ಆಡಲಿದೆ.

ಆರ್​​ಸಿಬಿ ಹಾಗೂ ಮುಂಬೈ ನಡುವಿನ ಐಪಿಎಲ್ 2026 ರ 54ನೇ ಪಂದ್ಯ ಯಾವಾಗ ನಡೆಯಲಿದೆ?

ಆರ್​​ಸಿಬಿ ಹಾಗೂ ಮುಂಬೈ ನಡುವಿನ ಐಪಿಎಲ್ 2026 ರ 54ನೇ ಪಂದ್ಯ ಮೇ 10 ರ ಶನಿವಾರದಂದು ನಡೆಯಲಿದೆ.

ಆರ್​​ಸಿಬಿ ಹಾಗೂ ಮುಂಬೈ ನಡುವಿನ ಐಪಿಎಲ್ 2026 ರ 54ನೇ ಪಂದ್ಯ ಎಲ್ಲಿ ನಡೆಯಲಿದೆ?

ಆರ್​​ಸಿಬಿ ಹಾಗೂ ಮುಂಬೈ ನಡುವಿನ ಐಪಿಎಲ್ 2026 ರ 54ನೇ ಪಂದ್ಯ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

ಆರ್​​ಸಿಬಿ ಹಾಗೂ ಮುಂಬೈ ನಡುವಿನ ಐಪಿಎಲ್ 2026 ರ 54ನೇ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಆರ್​​ಸಿಬಿ ಹಾಗೂ ಮುಂಬೈ ನಡುವಿನ ಐಪಿಎಲ್ 2026 ರ 54ನೇ ಪಂದ್ಯ ಸಂಜೆ 7:30 ಕ್ಕೆ ಪ್ರಾರಂಭವಾಗಲಿದೆ. ರಾಯ್‌ಪುರ ಪಿಚ್ ಬ್ಯಾಟಿಂಗ್ ಸ್ನೇಹಿ ಎಂದು ಪರಿಗಣಿಸಲಾಗಿದ್ದು, ಹೆಚ್ಚಿನ ಸ್ಕೋರ್‌ ದಾಖಲಾಗುವ ಸಾಧ್ಯತೆ ಇದೆ. ಆದಾಗ್ಯೂ, ಪಂದ್ಯ ಮುಂದುವರೆದಂತೆ, ಸ್ಪಿನ್ನರ್​ಗಳು ಸಹ ಪ್ರಮುಖ ಪಾತ್ರ ವಹಿಸಬಹುದು.

ಆರ್​​ಸಿಬಿ ಹಾಗೂ ಮುಂಬೈ ನಡುವಿನ ಐಪಿಎಲ್ 2026 ರ 54ನೇ ಪಂದ್ಯವನ್ನು ಎಲ್ಲಿ ವೀಕ್ಷಿಸಬೇಕು?

ಆರ್​​ಸಿಬಿ ಹಾಗೂ ಮುಂಬೈ ನಡುವಿನ ಐಪಿಎಲ್ 2026 ರ 54ನೇ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಪಂದ್ಯವನ್ನು ವೀಕ್ಷಿಸಲು ಇಷ್ಟಪಡುವ ವೀಕ್ಷಕರಿಗೆ, ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.

GT vs RCB: ಅಂಪೈರ್​ಯಿಂದ ಆರ್​​ಸಿಬಿಗೆ ಮಹಾಮೋಸ; ಸಿಡಿದೆದ್ದ ಕೊಹ್ಲಿ

ಉಭಯ ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಟಿಮ್ ಡೇವಿಡ್, ಜಾಕೋಬ್ ಬೆಥೆಲ್, ರೊಮಾರಿಯೊ ಶೆಫರ್ಡ್, ಜೋಶ್ ಹ್ಯಾಜಲ್‌ವುಡ್, ನುವಾನ್ ತುಷಾರ, ದೇವದತ್ ಪಡಿಕ್ಕಲ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ರಸಿಖ್ ದಾರ್, ಭುವನೇಶ್ವರ್ ಕುಮಾರ್, ಜೋರ್ಡಾನ್ ಕಾಕ್ಸ್, ವೆಂಕಟ್ ಸಿಂಗ್, ಸುಯಶ್ ಲ್ಯೂನ್ ಕಾಕ್ಸ್, ವೆಂಕಟ್ ಸಿಂಗ್ ಶರ್ಮಾ, ಭುವನೇಶ್ವರ್ ಕುಮಾರ್ ಕಾನಿಷ್ಕ್ ಚೌಹಾಣ್, ಅಭಿನಂದನ್ ಸಿಂಗ್, ಮಂಗೇಶ್ ಯಾದವ್, ಫಿಲ್ ಸಾಲ್ಟ್, ಸಾತ್ವಿಕ್ ದೇಸ್ವಾಲ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ.

ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಡ್ಯಾನಿಶ್ ಮಾಲೆವಾರ್, ರಾಬಿನ್ ಮಿಂಜ್ (ವಿಕೆಟ್ ಕೀಪರ್), ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್), ಶೆರ್ಫೇನ್ ರುದರ್‌ಫೋರ್ಡ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಅಥರ್ವ ಅಂಕೋಲೆಕರ್, ರಾಜ್ ಬಾವಾ, ಕಾರ್ಬಿನ್ ಬಾಷ್, ವಿಲ್ ಜ್ಯಾಕ್ಸ್, ಮಯಾಂಕ್ ರಾವತ್, ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ಶಾರ್ದೂಲ್ ಠಾಕೂರ್, ತಿಲಕ್ ವರ್ಮಾ, ಅಶ್ವಿನಿ ಕುಮಾರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ದೀಪಕ್ ಚಾಹರ್, ಎಎಮ್ ಗಜನ್‌ಫರ್, ಮಯಾಂಕ್ ಮಾರ್ಕಾಂಡೆ, ಮೊಹಮ್ಮದ್ ಶರ್ಮಾರ್, ಮೊಹಮ್ಮದ್ ಇಜ್ಮಾರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:05 pm, Sat, 9 May 26

Source link

ಬಜೆಟ್ 1400 ಕೋಟಿ, ಗಳಿಸಿದ್ದು 6 ಕೋಟಿ, ಐತಿಹಾಸಿಕ ನಷ್ಟ ಕಂಡ ಸಿನಿಮಾ – Kannada News | 1400 crore budget movie Desert Warrior collects only 6 crore at box office

ಸಿನಿಮಾಗಳು (Cinema) ನಷ್ಟ ಅನುಭವಿಸುವುದು ಸಾಮಾನ್ಯ. ನಿರ್ಮಾಣವಾದ ಸಿನಿಮಾಗಳಲ್ಲಿ 50% ಸಿನಿಮಾಗಳು ಬಂಡವಾಳದ ಅರ್ಧದಷ್ಟು ಸಹ ಗಳಿಕೆ ಮಾಡುವುದಿಲ್ಲ. ಆದರೆ ದೊಡ್ಡ ಬಜೆಟ್​​ನ ಸಿನಿಮಾಗಳು ಸೋಲುವುದು ತುಸು ವಿರಳ. ಹಾಗೆ ಸೋಲುವ ಸಿನಿಮಾಗಳು ಸಹ ಕನಿಷ್ಟ 50 ರಿಂದ 70% ಹಣವನ್ನಾದರೂ ಗಳಿಕೆ ಮಾಡುತ್ತವೆ. ಆದರೆ ಇಲ್ಲೊಂದು ಸಿನಿಮಾಕ್ಕೆ ಬರೋಬ್ಬರಿ 1400 ಕೋಟಿ ಬಜೆಟ್ ಹೂಡಿಕೆ ಮಾಡಲಾಗಿತ್ತು. ಆದರೆ ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡಿದ್ದು ಕೇವಲ 6 ಕೋಟಿ ರೂಪಾಯಿ!

ಸೌದಿ ಅರೇಬಿಯಾದ ಅತ್ಯಂತ ದುಬಾರಿ ಐತಿಹಾಸಿಕ ಸಾಹಸಮಯ ಚಿತ್ರ ‘ಡೆಸರ್ಟ್ ವಾರಿಯರ್’ ಇತ್ತೀಚಿನ ಚಿತ್ರರಂಗದ ಇತಿಹಾಸದಲ್ಲೇ ಅತಿದೊಡ್ಡ ಬಾಕ್ಸ್ ಆಫೀಸ್ ಸೋಲು ಕಂಡ ಸಿನಿಮಾ ಎನಿಸಿಕೊಂಡಿದೆ. ವರದಿಗಳ ಪ್ರಕಾರ ಸುಮಾರು 1,400 ಕೋಟಿ ($150 ಮಿಲಿಯನ್) ಭಾರಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರವು ವಿಶ್ವಾದ್ಯಂತ ಗಳಿಸಿದ್ದು ಕೇವಲ 6 ಕೋಟಿ ರೂಪಾಯಿ ಮಾತ್ರ.

ರೂಪರ್ಟ್ ವ್ಯಾಟ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಸಿದ್ಧ ಹಾಲಿವುಡ್​ ನಟರಾದ ಆಂಥೋನಿ ಮ್ಯಾಕಿ ಮತ್ತು ಬೆನ್ ಕಿಂಗ್ಸ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸೌದಿ ಅರೇಬಿಯಾದ ಮನರಂಜನಾ ಕ್ಷೇತ್ರವನ್ನು ಹಾಲಿವುಡ್ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಸೌದಿ ಹಣಕಾಸಿನ ನೆರವಿನೊಂದಿಗೆ ಈ ಚಿತ್ರವನ್ನು ನಿರ್ಮಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಪ್ರೇಕ್ಷಕರು ಈ ಸಿನಿಮಾವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ‘ಅವೇಂಜರ್ಸ್’, ‘ಕ್ಯಾಪ್ಟನ್ ಅಮೆರಿಕ’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿರುವ ಆಂಥೋನಿ ಮ್ಯಾಜಿ ಮತ್ತು ಬೆನ್ ಕಿಂಗ್ಸ್ಲಿ ಇದ್ದಾಗಿಯೂ ಸಿನಿಮಾ ಧಾರುಣ ಸೋಲು ಕಂಡಿದೆ.

ಇದನ್ನೂ ಓದಿ:‘ಜೇಡರ ಬಲೆ’ ಸಿನಿಮಾ ಕತೆ ಕೇಳಿ ಬಿದ್ದು-ಬಿದ್ದು ನಕ್ಕಿದ್ದ ಅಣ್ಣಾವ್ರು: ಕಾರಣವೇನು?

ವಿಮರ್ಶಕರು ಈ ಚಿತ್ರದ ದುರ್ಬಲ ಕಥೆ, ಗೊಂದಲಮಯ ಚಿತ್ರಕಥೆ ಮತ್ತು ಭಾವನಾತ್ಮಕತೆಯ ಕೊರತೆಯನ್ನು ಕಟುವಾಗಿ ಟೀಕಿಸಿದ್ದಾರೆ. ಉತ್ತರ ಅಮೆರಿಕಾದ 1,000 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದರೂ ಸಹ, ಪ್ರತಿ ಪರದೆಯ ಮೇಲೆ ಸರಾಸರಿ 500 ಡಾಲರ್‌ಗಿಂತ ಕಡಿಮೆ ಹಣವನ್ನು ಮಾತ್ರ ಇದು ಸಂಗ್ರಹಿಸಿದೆ. ಚಿತ್ರದ ಸೋಲಿಗೆ ಕೇವಲ ಕಥೆಯಲ್ಲದೆ, ನಿರ್ಮಾಣದ ಸಮಯದಲ್ಲಿ ಎದುರಾದ ಸಮಸ್ಯೆಗಳು, ಸೃಜನಾತ್ಮಕ ಭಿನ್ನಾಭಿಪ್ರಾಯಗಳು, ಬಿಡುಗಡೆಯ ವಿಳಂಬ ಮತ್ತು ಕಳಪೆ ಪ್ರಚಾರವೂ ಪ್ರಮುಖ ಕಾರಣಗಳೆಂದು ವಿಶ್ಲೇಷಿಸಲಾಗಿದೆ. ಕೇವಲ ದೊಡ್ಡ ಬಜೆಟ್ ಮತ್ತು ಸ್ಟಾರ್ ನಟರು ಇದ್ದರೆ ಸಿನಿಮಾ ಗೆಲ್ಲುವುದಿಲ್ಲ ಎಂಬುದಕ್ಕೆ ‘ಡೆಸರ್ಟ್ ವಾರಿಯರ್’ ಚಿತ್ರವು ಉದಾಹರಣೆಯಾಗಿದಿದೆ.

ಏಪ್ರಿಲ್ 24 ರಂದು ಬಿಡುಗಡೆ ಆಗಿದ್ದ ಈ ಸಿನಿಮಾವನ್ನು ಖ್ಯಾತ ನಿರ್ಮಾಪಕ ಜೆರೆಮಿ ಬೋಲ್ಟ್ ನಿರ್ಮಾಣ ಮಾಡಿದ್ದರು. ಇದೇ ನಿರ್ಮಾಪಕರು ಈ ಹಿಂದೆ, ‘ಡೆತ್ ರೇಸ್’, ‘ರೆಸಿಡೆನ್ಷಿಯನ್ ಇವಿಲ್’, ‘ದಿ ಡಾರ್ಕ್’, ‘ಮಾನ್​​ಸ್ಟರ್ ಹಂಟ್’ ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಆದರೆ ಈಗ ಈ ಒಂದು ಸಿನಿಮಾದಿಂದಾಗಿ ಜೀವಮಾನದ ನಷ್ಟವನ್ನು ಅನುಭವಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಲಾರಿಗೆ ಕಾರು ಡಿಕ್ಕಿ: ಜವರಾಯನ ಅಟ್ಟಹಾಸಕ್ಕೆ ಕುಣಿಗಲ್​​ ಬಳಿ ದಾರಿಯಲ್ಲೇ ಪ್ರಾಣಬಿಟ್ಟ ನಾಲ್ವರು

ತುಮಕೂರು, ಮೇ 09: ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆಲ್ಟೋ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ನಡೆದಿದೆ. ಗೊಬ್ಬರ ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಆಲ್ಟೋ ಕಾರು ಛಿದ್ರ ಛಿದ್ರವಾಗಿದ್ದು, ಕಾರು ಚಾಲಕ ಸೇರಿದಂತೆ ಮಂಡ್ಯ ಮೂಲದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಕುಮಾರಸ್ವಾಮಿ, ಗಾಯತ್ರಿ ಸೇರಿದಂತೆ ನಾಲ್ವರು ದುರ್ಮರಣ ಹೊಂದಿದ್ದು, ಘಟನಾ ಸ್ಥಳಕ್ಕೆ ಕುಣಿಗಲ್ ಠಾಣೆ ಪೊಲೀಸರ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ)

Source link

CIL Recruitment 2026: ಕೋಲ್ ಇಂಡಿಯಾ ಲಿಮಿಟೆಡ್​​ನಲ್ಲಿ 276 ಹುದ್ದೆಗಳಿಗೆ ನೇಮಕಾತಿ; ತರಬೇತಿ ಅವಧಿಯಲ್ಲೇ ತಿಂಗಳಿಗೆ 60,000 ರೂ. ವೇತನ – Kannada News | CIL Management Trainee Recruitment 2026: 276 Posts, No Exam via GATE 2025

ಕೋಲ್ ಇಂಡಿಯಾ ಲಿಮಿಟೆಡ್Image Credit source: Ai generated

ಕೋಲ್ಕತ್ತಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಭಾರತ ಸರ್ಕಾರದ ಸಾರ್ವಜನಿಕ ವಲಯದ ಉದ್ದಿಮೆಯಾದ ಕೋಲ್ ಇಂಡಿಯಾ ಲಿಮಿಟೆಡ್ (CIL), ಗಣಿ ಇಲಾಖೆಯಲ್ಲಿ ಖಾಲಿ ಇರುವ ಮ್ಯಾನೇಜ್ಮೆಂಟ್ ಟ್ರೈನಿ (Management Trainee) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 276 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ವಿಶೇಷವೆಂದರೆ ಈ ಹುದ್ದೆಗಳಿಗೆ ಯಾವುದೇ ಪ್ರತ್ಯೇಕ ಲಿಖಿತ ಪರೀಕ್ಷೆ ಇರುವುದಿಲ್ಲ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಮ್ಯಾನೇಜ್ಮೆಂಟ್ ಟ್ರೈನಿ (ಗಣಿ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೈನಿಂಗ್ ಎಂಜಿನಿಯರಿಂಗ್‌ನಲ್ಲಿ ಬಿಇ ಅಥವಾ ಬಿಟೆಕ್ (BE/B.Tech) ಪದವಿ ಪೂರ್ಣಗೊಳಿಸಿರಬೇಕು. ಅಂಕಗಳ ವಿಷಯಕ್ಕೆ ಬಂದರೆ, ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳು ಕನಿಷ್ಠ ಶೇ. 60 ಅಂಕಗಳನ್ನು ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಶೇ. 55 ಅಂಕಗಳನ್ನು ಪಡೆದಿರಬೇಕು. ವಯೋಮಿತಿಗೆ ಸಂಬಂಧಿಸಿದಂತೆ, ಏಪ್ರಿಲ್ 30, 2026 ಕ್ಕೆ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ವಯಸ್ಸಾಗಿರಬೇಕು. ಸರ್ಕಾರದ ನಿಯಮದಂತೆ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್‌ ನೇಮಕಾತಿ ಘೋಷಣೆ

ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಶುಲ್ಕ:

ಈ ನೇಮಕಾತಿಯ ಪ್ರಮುಖ ಮಾನದಂಡವೆಂದರೆ ಗೇಟ್ (GATE) 2025 ಪರೀಕ್ಷೆಯ ಅಂಕಗಳು. ಅಭ್ಯರ್ಥಿಗಳು ಗೇಟ್ 2025 ರಲ್ಲಿ ಅರ್ಹತೆ ಪಡೆದಿರುವುದು ಕಡ್ಡಾಯವಾಗಿದ್ದು, ಆ ಅಂಕಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಅಂತಿಮವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಶುಲ್ಕದ ವಿಷಯದಲ್ಲಿ, ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು 1,180 ರೂ. ಪಾವತಿಸಬೇಕಾಗುತ್ತದೆ. ಆದರೆ, ಎಸ್‌ಸಿ, ಎಸ್‌ಟಿ ಮತ್ತು ಕೋಲ್ ಇಂಡಿಯಾದ ಹಾಲಿ ಉದ್ಯೋಗಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ವೇತನ ಶ್ರೇಣಿ ಮತ್ತು ಪ್ರಮುಖ ದಿನಾಂಕಗಳು:

ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು 60,000 ರೂ. ವೇತನ ನೀಡಲಾಗುತ್ತದೆ. ಯಶಸ್ವಿಯಾಗಿ ತರಬೇತಿ ಪೂರ್ಣಗೊಂಡ ನಂತರ, ಹುದ್ದೆಯ ಜವಾಬ್ದಾರಿಗೆ ಅನುಗುಣವಾಗಿ ಮಾಸಿಕ ವೇತನವು ಗರಿಷ್ಠ 1,80,000 ರೂ. ಗಳವರೆಗೆ ಇರಲಿದೆ. ನಿನ್ನೆಯಿಂದ(ಮೇ 08) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕೋಲ್ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:08 pm, Sat, 9 May 26

Source link

ಮಲ್ಟಿ ಟ್ರ್ಯಾಕಿಂಗ್ ರೈಲ್ವೆ ಯೋಜನೆಗೆ ಕೇಂದ್ರ ಒಪ್ಪಿಗೆ: ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಬಂಪರ್ ಕೊಡುಗೆ – Kannada News | Modi Cabinet Approves 3 Multi Tracking Railway Projects Covering 6 States Including Karnataka

ಬೆಂಗಳೂರು, ಮೇ 09: ಕರ್ನಾಟಕ ಸೇರಿದಂತೆ ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ 19 ಜಿಲ್ಲೆಗಳನ್ನು ಒಳಗೊಂಡ ಮೂರು ಮಲ್ಟಿ ಟ್ರ್ಯಾಕಿಂಗ್ ರೈಲ್ವೆ ಯೋಜನೆಗೆ ಕೇಂದ್ರ ಸಚಿವ ಸಂಪುಟ (Cabinet) ಅನುಮೋದನೆ ನೀಡಿದೆ. ಆ ಮೂಲಕ ಪ್ರಸ್ತುತವಿರುವ ಭಾರತೀಯ ರೈಲ್ವೆ (Indian Railways) ಜಾಲಕ್ಕೆ ಸುಮಾರು 901 ಕಿ.ಮೀ ಸೇರ್ಪಡೆಗೊಳ್ಳಲಿದೆ. ಯೋಜನೆಯ ಒಟ್ಟು ಅಂದಾಜು ವೆಚ್ಚ 23,437 ಕೋಟಿ ರೂ.ಗಳಾಗಿದ್ದು, 2030-31ನೇ ಸಾಲಿನ ವೇಳೆಗೆ ಪೂರ್ಣಗೊಳ್ಳುವ ಗುರಿ ಹೊಂದಲಾಗಿದೆ.

ಮುಖ್ಯಾಂಶಗಳು

  • ಮಲ್ಟಿ ಟ್ರ್ಯಾಕಿಂಗ್ ರೈಲ್ವೆ ಯೋಜನೆಗಳಿಗೆ ಕೇಂದ್ರ ಅನುಮೋದನೆ
  • ಗುಂತಕಲ್ ಟು ವಾಡಿ ಮಾರ್ಗ ಕರ್ನಾಟಕಕ್ಕೆ ಸಂಪರ್ಕ ಸೇತುವೆ
  • ಗ್ರಾಮೀಣ ಅಭಿವೃದ್ಧಿ ಮತ್ತು ಆರ್ಥಿಕತೆಗೆ ಉತ್ತೇಜನ

ಮೇ 5ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ, ರೈಲ್ವೆ ಸಚಿವಾಲಯದ ಮೂರು ಪ್ರಮುಖ ರೈಲ್ವೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಅವುಗಳೆಂದರೆ ನಾಗ್ಡಾ – ಮಥುರಾ 3ನೇ ಮತ್ತು 4ನೇ ಮಾರ್ಗ, ಗುಂತಕಲ್ – ವಾಡಿ 3ನೇ ಮತ್ತು 4ನೇ ಮಾರ್ಗ ಮತ್ತು ಬುರ್ಹ್ವಾಲ್ – ಸೀತಾಪುರ 3ನೇ ಮತ್ತು 4ನೇ ಮಾರ್ಗ. ಈ ಮೂರು ಮಾರ್ಗಗಳ ಯೋಜನೆಯಿಂದ ರೈಲು ಸಂಚಾರ ದಟ್ಟಣೆ ಕಡಿಮೆಯಾಗಿ ಸರಕು ಮತ್ತು ಪ್ರಯಾಣಿಕ ರೈಲುಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.

ಗುಂತಕಲ್–ವಾಡಿ ಮಾರ್ಗ: ಕರ್ನಾಟಕಕ್ಕೆ ಸಂಪರ್ಕ

ಗುಂತಕಲ್–ವಾಡಿ ಮಾರ್ಗವು ದಕ್ಷಿಣ ಭಾರತವನ್ನು ಮಧ್ಯ ಹಾಗೂ ಪಶ್ಚಿಮ ಭಾರತಕ್ಕೆ ಸಂಪರ್ಕಿಸುವ ಸುಮಾರು 230 ಕಿ.ಮೀ. ಉದ್ದದ ಪ್ರಮುಖ ವಿದ್ಯುದ್ದೀಕೃತ ದ್ವಿಪಥ ಮಾರ್ಗವಾಗಿದೆ. ಗುಂತಕಲ್, ಗೂಟಿ, ಡೋನ್ ಮತ್ತು ವಾಡಿ ಈ ಮಾರ್ಗಕ್ಕೆ ನೇರವಾಗಿ ಸಂಪರ್ಕಿಸುವ ಪ್ರಮುಖ ಜಂಕ್ಷನ್​ಗಳಾಗಿವೆ. ಈ ಮಾರ್ಗವು ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳ ವ್ಯಾಪ್ತಿಯಲ್ಲಿ ಹಾದುಹೋಗುತ್ತದೆ.

ಪ್ರಮುಖ ನಿಲ್ದಾಣ

ಗುಂತಕಲ್ ಟು ವಾಡಿ ಮಾರ್ಗವು ಬೆಂಗಳೂರು ಕಡೆಗಿನ ಸಂಚಾರಕ್ಕೆ ಪ್ರಮುಖ ಜಂಕ್ಷನ್ ಆಗಿದೆ. ಈ ಮಾರ್ಗ ಡೋನ್, ಗುಂತಕಲ್​​ ಮತ್ತು ನಂದ್ಯಾಲ ಜಂಕ್ಷನ್​​​ನನ್ನು ಸಂಪರ್ಕಿಸುತ್ತದೆ. ವಾಡಿ ಜಂಕ್ಷನ್ ಈ ಮಾರ್ಗದ ಅಂತಿಮ ನಿಲ್ದಾಣವಾಗಿದ್ದು, ಹೈದರಾಬಾದ್, ಬೆಂಗಳೂರು ಮತ್ತು ಪುಣೆಗೆ ಸಂಪರ್ಕ ಕಲ್ಪಿಸುತ್ತದೆ. ಆದೋನಿ, ರಾಯಚೂರು, ಮಂತ್ರಾಲಯಂ ರಸ್ತೆ ಮತ್ತು ಯಾದಗಿರಿ ಈ ಮಾರ್ಗದ ಪ್ರಮುಖ ನಿಲ್ದಾಣಗಳಾಗಿವೆ.

ಇದನ್ನೂ ಓದಿ: ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡ ಕಡೆಗಣನೆ: ರಾಜ್ಯಾದ್ಯಂತ ರೈಲು ಸಂಚಾರ ಬಂದ್ ಮಾಡುವ ಎಚ್ಚರಿಕೆ ನೀಡಿದ ಕರವೇ

ಗಣಿಗಾರಿಕೆ ವಲಯದಿಂದ ಬರುವ ಭಾರಿ ಸರಕು ಸಾಗಣೆ ಮತ್ತು ಹೆಚ್ಚುತ್ತಿರುವ ಪ್ರಯಾಣಿಕರ ಒತ್ತಡವನ್ನು ನಿಭಾಯಿಸಲು, ಈ ಮಾರ್ಗದಲ್ಲಿ 3ನೇ ಮತ್ತು 4ನೇ ರೈಲ್ವೆ ಹಳಿ ನಿರ್ಮಿಸುವ ಪ್ರಸ್ತಾವಿತ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯು ಪೂರ್ಣಗೊಂಡಲ್ಲಿ ರೈಲು ಸಂಚಾರದ ವೇಗ ಮತ್ತು ಸಾಮರ್ಥ್ಯ ಮತ್ತಷ್ಟು ಹೆಚ್ಚಾಗಲಿದೆ.

ಮಲ್ಟಿ-ಟ್ರ್ಯಾಕಿಂಗ್ ಯೋಜನೆಯಿಂದ 4,161 ಹಳ್ಳಿಗಳಿಗೆ ಸಂಪರ್ಕ ಭಾಗ್ಯ

ಪ್ರಸ್ತಾವಿತ ಮಲ್ಟಿ-ಟ್ರ್ಯಾಕಿಂಗ್ ಯೋಜನೆಯು ಸುಮಾರು 83 ಲಕ್ಷ ಜನಸಂಖ್ಯೆ ಹೊಂದಿರುವ 4,161 ಹಳ್ಳಿಗಳಿಗೆ ರೈಲ್ವೆ ಸಂಪರ್ಕವನ್ನು ಕಲ್ಪಿಸಲಿದೆ. ಈ ಯೋಜನೆಯಿಂದ ಗ್ರಾಮೀಣ ಭಾಗದ ಜನರಿಗೆ ಉತ್ತಮ ಸಾರಿಗೆ ಸೌಲಭ್ಯ ದೊರೆಯಲಿದ್ದು, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಉತ್ತೇಜನ ಸಿಗುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version