ಜಗದ್ಗುರುಗಳ ಸಮ್ಮುಖದಲ್ಲಿ ಸ್ವಾಮೀಜಿ-ಭಕ್ತರ ಸಂಧಾನ: ಏನಿದು ಕುಂದಗೋಳ ಮಠದ ವಿವಾದ? – Kannada News | Kundgol Panchagrah Hiremath Property Dispute Resolved: Swamiji Agrees Not to Sell Land

ಹುಬ್ಬಳ್ಳಿ, ಮೇ 08: ಧಾರವಾಡ (dharwad) ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿರುವ ಪಂಚಗ್ರಹ ಹಿರೇಮಠ (Panchagrah Hiremath) ಐತಿಹಾಸಿಕ ಹಿನ್ನೆಲೆಯುಳ್ಳ ದೊಡ್ಡ ಮಠ. ಆದರೆ ಇದೇ ಮಠದ ಆಸ್ತಿ ವಿಚಾರ ಸ್ವಾಮೀಜಿ ಮತ್ತು ಭಕ್ತರ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು. ಮಠದ ಆಸ್ತಿಯನ್ನು ಸೈಟ್ ಮಾಡಿ ಮಾರಾಟ ಮಾಡಲು ಮುಂದಾದ ಸ್ವಾಮೀಜಿ ನಡೆಗೆ ಭಕ್ತರು ಅಸಮಾಧಾನ ಹೊರಹಾಕಿದ್ದರು. ಕಳೆದ ಒಂದು ತಿಂಗಳಿಂದ ನಡೆದಿದ್ದ ಮುಸುಕಿನ ಗುದ್ದಾಟಕ್ಕೆ ಇಂದು ಪಂಚಪೀಠದ ಸ್ವಾಮೀಜಿಗಳು ಭಕ್ತರ ಸಭೆ ನಡೆಸಿ ಸಮಸ್ಯೆಗೆ ತೆರೆ ಎಳೆಯುವ ಕೆಲಸ ಮಾಡಿದರು.

  • ಮಠದ ಆಸ್ತಿ ಮಾರಾಟಕ್ಕೆ ಯತ್ನಿಸಿದ ಸ್ವಾಮೀಜಿ: ಭಕ್ತರು ಆಕ್ಷೇಪ
  • ಪಂಚಪೀಠದ ಜಗದ್ಗುರುಗಳ ಮಧ್ಯಸ್ಥಿಕೆ: ವಿವಾದ ಇತ್ಯರ್ಥ
  • ಆಸ್ತಿ ಮಾರಾಟ ಮಾಡದಿರಲು ಸ್ವಾಮೀಜಿ ಒಪ್ಪಿಗೆ: ಭಕ್ತರಿಗೆ ಲಿಖಿತ ಭರವಸೆ

ಏನಿದು ವಿವಾದ?

ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿರುವ ಪಂಚಗ್ರಹ ಹಿರೇಮಠ, ಈ ಭಾಗದ ಸುಪ್ರಸಿದ್ಧ ಮಠ. ಮಠಕ್ಕೆ ಕುಂದಗೋಳ ಸೇರಿದಂತೆ ಜಿಲ್ಲೆಯಲ್ಲಿ ಸಾವಿರಾರು ಭಕ್ತರಿದ್ದಾರೆ. ಮಠ ಕೂಡ ಈ ಹಿಂದಿನಿಂದ ಸಾಮಾಜಿಕ, ಧಾರ್ಮಿಕ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಮಠಕ್ಕೆ ಬಂದ ಎಲ್ಲಾ ಪೀಠಾಧಿಪತಿಗಳು ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು. ಆದರೆ ಇದೇ ಮಠದ ಆಸ್ತಿ ವಿಚಾರ ಮಠದ ಪೀಠಾಧಿಪತಿ ಶಿಥಿಕಂಠೇಶ್ವರ ಸ್ವಾಮೀಜಿ ಮತ್ತು ಭಕ್ತರ ನಡುವಿನ ಗುದ್ದಾಟಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಹರಿಹರದ ಪಂಚಮಸಾಲಿ ಮಠದ ಆವರಣದಲ್ಲಿ ನಿಷೇಧಾಜ್ಞೆ ಜಾರಿ, ಗೇಟ್ ಬಂದ್

ಕುಂದಗೋಳ ಪಟ್ಟಣದ ಹೊರವಲಯದಲ್ಲಿರುವ ಮಠದ 53 ಎಕರೆ ಆಸ್ತಿಯನ್ನು ಮಠದ ಸ್ವಾಮೀಜಿ ಎನ್​​ಎ ಮಾಡಿಸಿ, ಸೈಟ್ ಮಾಡಿ ಮಾರಾಟ ಮಾಡಲು ಮುಂದಾಗಿದ್ದರು. ಈ ವಿಚಾರ ಮಠದ ಕೆಲ ಭಕ್ತರಿಗೆ ಗೊತ್ತಾಗುತ್ತಿದ್ದಂತೆ, ಸ್ವಾಮೀಜಿ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮಠದ ಆಸ್ತಿ ಕೇವಲ ಸ್ವಾಮೀಜಿಗಳಿಗೆ ಸೇರಿದ್ದಲ್ಲ. ಅದು ಮಠಕ್ಕೆ ಭಕ್ತರು ನೀಡಿದ ಆಸ್ತಿ. ಈ ಆಸ್ತಿಯನ್ನು ಸ್ವಾಮೀಜಿಯವರು ಸೈಟ್ ಮಾಡಿ ಮಾರಾಟ ಮಾಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸ್ವತಃ ಧಾರವಾಡ ಜಿಲ್ಲಾಧಿಕಾರಿಗಳಿಗೆ ಭೇಟಿ ಮಾಡಿ ಈ ಬಗ್ಗೆ ಮನವಿ ಕೂಡ ನೀಡಿದ್ದಾರೆ.

ಕೆಲ ಭಕ್ತರ ಆಕ್ಷೇಪಕ್ಕೆ ಸ್ವಾಮೀಜಿ ತಿರುಗೇಟು ನೀಡಿದ್ದರು. ತಮ್ಮ ಮಠ ವಂಶಪಾರಂಪರೆ ಹೊಂದಿರುವ ಮಠ. ಮಠದ ಆಸ್ತಿ ಪಿತ್ರಾರ್ಜಿತ ಆಸ್ತಿಯಾಗಿದ್ದು, ಅದರ ಮೇಲೆ ಭಕ್ತರಿಗೆ ಯಾವುದೇ ಅಧಿಕಾರವಿಲ್ಲ. ಇನ್ನು ಮಠದ ಅಭಿವೃದ್ದಿಗಾಗಿ ಹಣದ ಅವಶ್ಯಕತೆ ಇರುವುದರಿಂದ ಸೈಟ್ ಮಾಡಿ ಕೆಲ ಜಾಗವನ್ನು ಮಾರಾಟ ಮಾಡಲಾಗುತ್ತಿದೆ ಅಂತ ಹೇಳಿದ್ದರು. ಹೀಗಾಗಿ ಕೆಲ ಭಕ್ತರು ಕಾಶಿ ಜಗದ್ಗುರುಗಳ ಗಮನಕ್ಕೆ ತಂದಿದ್ದರು. ಪಂಚಗ್ರಹ ಹಿರೇಮಠ, ಕಾಶಿ ಜಗದ್ಗುರುಗಳ ಖಾಸಾ ಮಠವಾಗಿದ್ದರಿಂದ ಕಾಶಿ ಜಗದ್ಗುರುಗಳಿಗೆ ಪಂಚಗ್ರಹ ಹಿರೇಮಠದ ಸ್ವಾಮೀಜಿ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕುಂದಗೋಳ ಪಟ್ಟಣದ ಪಂಚಗ್ರಹ ಹಿರೇಮಠದಲ್ಲಿ ಕಾಶಿ ಜಗದ್ಗುರುಗಳು, ರಂಬಾಪುರಿ ಪೀಠದ ಜಗದ್ಗುರುಗಳು ಭಕ್ತರು ಹಾಗೂ ಸ್ವಾಮೀಜಿ ಜೊತೆಗೆ ಸಭೆ ಮಾಡಿದರು.

ಮಠದ ಆಸ್ತಿ ಮಾರಾಟ ಮಾಡಲು ಅಲ್ಲ ಪೀಠಾಧಿಪತಿ ಮಾಡಿಲ್ಲ:  ಕಾಶಿ ಜಗದ್ಗುರುಗಳು

ಇಂದು ನಡೆದ ಸಭೆಯಲ್ಲಿ ಕುಂದಗೋಳ ತಾಲೂಕಿನ ಜನಪ್ರತಿನಿಧಿಗಳು, ಅನೇಕ ಮುಖಂಡರು ಹಾಗೂ ಶಿಥಿಕಂಠೇಶ್ವರ ಸ್ವಾಮೀಜಿ ಹಾಗೂ ಭಕ್ತರು ಭಾಗಿಯಾಗಿದ್ದರು. ಈ ಸಮಯದಲ್ಲಿ ಕಾಶಿ ಜಗದ್ಗುರುಗಳು, ಮಠಕ್ಕೆ ತಮ್ಮನ್ನು ಪೀಠಾಧಿಪತಿ ಮಾಡಿದ್ದು, ಮಠದ ಆಸ್ತಿ ಮಾರಾಟ ಮಾಡಲು ಅಲ್ಲ. ಮಠದ ಆಸ್ತಿ ಕಾಶಿ ಪೀಠಕ್ಕೆ ಸೇರಿದ್ದು, ಅದನ್ನು ನೋಡಿಕೊಂಡು ಹೋಗಲು ತಮ್ಮನ್ನು ಮಾತ್ರ ನಿಯೋಜನೆ ಮಾಡಿದೆ ಎಂದರು.

ಆಸ್ತಿ ಮಾರಾಟ ಮಾಡಲ್ಲವೆಂದ ಪಂಚಗ್ರಹ ಹಿರೇಮಠದ ಸ್ವಾಮೀಜಿ

ಇನ್ನು ಅನೇಕ ಮುಖಂಡರು, ಪಂಚಪೀಠದ ಜಗದ್ದುರುಗಳು ಕೈಗೊಳ್ಳುವ ನಿರ್ಣಯಕ್ಕೆ ಬದ್ಧ ಅಂತ ಹೇಳಿದರು. ಇದೇ ಸಮಯದಲ್ಲಿ ಮಾತನಾಡಿದ ಪಂಚಗ್ರಹ ಹಿರೇಮಠದ ಸ್ವಾಮೀಜಿ, ಇನ್ನು ಮುಂದೆ ಆಸ್ತಿ ಮಾರಾಟ ಮಾಡುವುದಿಲ್ಲ. ಪಂಚಪೀಠದ ಜಗದ್ಗುರುಗಳು ಹೇಳಿದಂತೆ ಕೇಳುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಂಚಮಸಾಲಿ ಪೀಠದ ‘ಲೆಕ್ಕಾ’ಚಾರ: 18 ವರ್ಷದ ಲೆಕ್ಕ ಕೊಟ್ಟ ಟ್ರಸ್ಟ್‌; ಕಳ್ಳಲೆಕ್ಕ ಎಂದ ಸ್ವಾಮೀಜಿ ಟೀಂ

ಕಳೆದ ಒಂದು ತಿಂಗಳಿಂದ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದ್ದ ಕುಂದಗೋಳ ಪಂಚಗ್ರಹ ಹಿರೇಮಠದ ಆಸ್ತಿ ವಿಚಾರಕ್ಕೆ ಇಂದು ಪಂಚಪೀಠದ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆರೆ ಎಳೆಯಲಾಗಿದೆ. ಸದ್ಯ ಪಂಚಗ್ರಹ ಹಿರೇಮಠದ ಸ್ವಾಮೀಜಿ ಇನ್ನು ಮುಂದೆ ಯಾವುದೇ ಆಸ್ತಿ ಮಾರಾಟ ಮಾಡುವುದಿಲ್ಲ ಎಂದು ಲಿಖಿತವಾಗಿ ಭಕ್ತರಿಗೆ ಬರೆದುಕೊಟ್ಟಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಈ ಮಾತು ಎಷ್ಟರಮಟ್ಟಿಗೆ ಪಾಲನೆಯಾಗುತ್ತದೆ ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಟಿವಿಕೆಗೆ ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ಕೊನೆ ಕ್ಷಣದಲ್ಲಿ ವಿಜಯ್​​ ಕೈ ಹಿಡಿದ ಪಕ್ಷಗಳಾವುವು? – Kannada News | TVK Crossed Magic number For Government Formation In Tamil Nadu, here Is Which party support To Vijay

ಚೆನ್ನೈ, (ಮೇ 08): ತಮಿಳುನಾಡಿನಲ್ಲಿ (Tamil Nadu) ಸರ್ಕಾರ ರಚಿಸಲು ಟಿವಿಕೆಗೆ (TVK) ಅಗತ್ಯವಾದ ಮ್ಯಾಜಿಕ್‌ ನಂಬರ್‌ (118) ಗಿಂತಲೂ ಹೆಚ್ಚಿನ ಸಂಖ್ಯೆ ಲಭಿಸಿದೆ. ಹೌದು…ಆರಂಭದಲ್ಲಿ 118 ಮ್ಯಾಜಿಕ್ ನಂಬರ್ ತೋರಿಸಲು ಹರಸಾಹಸಪಟ್ಟಿದ್ದ ಟಿವಿಕೆ ಮುಖ್ಯಸ್ಥ ವಿಜಯ್‌ ಗೆ ಬರೋಬ್ಬರಿ 121 ಶಾಸಕರ ಬೆಂಬಲ ದೊರೆತಿದೆ. ಇದರೊಂದಿಗೆ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾದಂತಾಗಿದೆ. ಕಾಂಗ್ರೆಸ್‌ ಬೆನ್ನಲ್ಲೇ ಎಡಪಕ್ಷಗಳು ಮತ್ತು ವಿಸಿಕೆ ಶಾಸಕರು ಟಿವಿಕೆಗೆ ಬೆಂಬಲ ಸೂಚಿಸಿದ್ದು, ಸದ್ಯದಲ್ಲೇ ವಿಜಯ್‌ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ.

ವಿಜಯ್ ಸರ್ಕಾರ ರಚನೆಗೆ ಕೊನೆ ಕ್ಷಣದಲ್ಲಿ ಬೆಂಬಲ ಘೋಷಿಸಿದ ಪಕ್ಷಗಳಾವುವು ಎನ್ನುವುದನ್ನು ನೋಡುವುದಾದರೆ, ಕಾಂಗ್ರೆಸ್ 5, ವಿಸಿಕೆ 2, ಸಿಪಿಐ 2, ಸಿಪಿಐಎಂ 2 ಮುಸ್ಲಿಂ ಲೀಗ್​​​ನ ಇಬ್ಬರು ಶಾಸಕರು ಬೆಂಬಲ ಘೋಷಿಸಿದ್ದಾರೆ. ಈ ಮೂಲಕ ಟಿವಿಕೆಯ 107 ಶಾಸಕರ ಜೊತೆಗೆ ಎಡಪಕ್ಷಗಳ ಬೆಂಬಲದೊದಿಗೆ ವಿಜಯ್ ಸರ್ಕಾರ ರಚನೆಗೆ ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚು ಅಂದರೆ 121 ಶಾಸಕರ ಬೆಂಬಲ ಸಿಕ್ಕಿದ್ದು, ಈ ಬೆಂಬಲ ಪತ್ರದೊಂದಿಗೆ ವಿಜಯ್ ಅವರು ಮತ್ತೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸಲಿದ್ದಾರೆ. ಇದರೊಂದಿಗೆ ಕಳೆದ ಮೂರು ದಿನಗಳಿಂದ ತಮಿಳುನಾಡಿನಲ್ಲಿ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಾಕ್ಕೆ ತೆರೆ ಬಿದ್ದಿದೆ.

ಇದನ್ನೂ ನೋಡಿ: ತಮಿಳುನಾಡಿನಲ್ಲಿ TVK ಸರ್ಕಾರ ರಚನೆ ಬಹುತೇಕ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್

 

Source link

ಕಾಂಗ್ರೆಸ್ ಜೊತೆ ಕೂರುವುದಿಲ್ಲ, ಬೇರೆ ಆಸನ ನೀಡಿ; ಲೋಕಸಭಾ ಸ್ಪೀಕರ್​ಗೆ ಡಿಎಂಕೆ ಸಂಸದೆ ಕನಿಮೋಳಿ ಪತ್ರ – Kannada News | DMK MP Kanimozhi seeks separate seating in Lok Sabha after party officially ends alliance with Congress

ನವದೆಹಲಿ, ಮೇ 8: ತಮಿಳುನಾಡಿನಲ್ಲಿ 55 ವರ್ಷಗಳಿಂದ ಡಿಎಂಕೆ ಜೊತೆ ಮೈತ್ರಿಯಲ್ಲಿದ್ದ ಕಾಂಗ್ರೆಸ್ ಈ ಬಾರಿ ವಿಜಯ್ ಅವರ ಟಿವಿಕೆಗೆ (TVK) ಬೆಂಬಲ ಘೋಷಿಸಲು ತಮ್ಮ ದಶಕಗಳ ಮೈತ್ರಿಯನ್ನು ಮುರಿದುಕೊಂಡಿದೆ. ಇದು ಎರಡೂ ಪಕ್ಷಗಳ ನಾಯಕರ ಮೇಲೆ ಪರಿಣಾಮ ಬೀರಿದೆ. ಡಿಎಂಕೆ ಸಂಸದೆ ಕನಿಮೋಳಿ ಅವರು ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದಿದ್ದು, ನಮ್ಮ ಮೈತ್ರಿ ಮುರಿದುಬಿದ್ದಿರುವುದರಿಂದ ನಾವು (ಡಿಎಂಕೆ ಸಂಸದರು) ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದರ ಜೊತೆ ಕುಳಿತುಕೊಳ್ಳುವುದಿಲ್ಲ. ನಮಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಿ ಎಂದು ಕೋರಿದ್ದಾರೆ. ಈ ಪತ್ರವು ಕಾಂಗ್ರೆಸ್ ಜೊತೆಗಿನ ಡಿಎಂಕೆ (DMK) ಮೈತ್ರಿ ಅಂತ್ಯಗೊಂಡಿರುವುದನ್ನು ಮತ್ತು ಇಂಡಿಯ ಮೈತ್ರಿಕೂಟದಿಂದ ಡಿಎಂಕೆ ಹಿಂದೆ ಸರಿದಿರುವುದನ್ನು ಸೂಚಿಸುತ್ತದೆ.

ತಮಿಳುನಾಡಿನಾದ್ಯಂತ 234 ಕ್ಷೇತ್ರಗಳಿಗೆ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಇದಕ್ಕೆ ಮೇ 4ರಂದು ಮತ ಎಣಿಕೆ ನಡೆದಿದ್ದು, ತಮಿಳುನಾಡು ವಿಕ್ಟರಿ ಪಾರ್ಟಿ (ಟಿವಿಕೆ) 108 ಸ್ಥಾನಗಳನ್ನು, ಡಿಎಂಕೆ 59 ಸ್ಥಾನಗಳನ್ನು, ಎಐಎಡಿಎಂಕೆ 47 ಸ್ಥಾನಗಳನ್ನು, ಕಾಂಗ್ರೆಸ್ 5 ಸ್ಥಾನಗಳನ್ನು, ಪಿಎಂಕೆ 4 ಸ್ಥಾನಗಳನ್ನು, ಐಯುಎಂಎಲ್ 2 ಸ್ಥಾನಗಳನ್ನು, ಸಿಪಿಐ 2 ಸ್ಥಾನಗಳನ್ನು, ಸಿಪಿಐ (ಎಂ) 2 ಸ್ಥಾನಗಳನ್ನು ಮತ್ತು ವಿಸಿಕೆ 2 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ತಲಾ ಒಂದು ಸ್ಥಾನವನ್ನು ಗೆದ್ದಿವೆ. ತಮಿಳುನಾಡಿನಲ್ಲಿ ಸರ್ಕಾರ ರಚಿಸಲು 118 ಸ್ಥಾನಗಳು ಅಗತ್ಯವಿರುವುದರಿಂದ, ಟಿವಿಕೆ ಇತರೆ ಪಕ್ಷಗಳ ಬೆಂಬಲ ಕೋರಿತ್ತು. ಆಗ ಡಿಎಂಕೆ ಮೈತ್ರಿಕೂಟದಲ್ಲಿದ್ದ ಕಾಂಗ್ರೆಸ್ ತನ್ನ ಮೈತ್ರಿಯನ್ನು ಮುರಿದುಕೊಂಡು ಟಿವಿಕೆಗೆ 5 ಶಾಸಕರ ಬೆಂಬಲ ನೀಡಿತು. ಹೀಗಾಗಿ, ಡಿಎಂಕೆ ಸಂಸದೆ ಕನಿಮೋಳಿ ಕಾಂಗ್ರೆಸ್ ಸಂಸದರ ಜೊತೆ ಸಂಸತ್​​ನಲ್ಲಿ ಕುಳಿತುಕೊಳ್ಳುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ

ಲೋಕಸಭೆಯಲ್ಲಿ ಆಸನ ವ್ಯವಸ್ಥೆಯಲ್ಲಿ ಬದಲಾವಣೆ ಕೋರಿ ಡಿಎಂಕೆ ಸಂಸದೆ ಕನಿಮೋಳಿ ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ. “ಲೋಕಸಭೆಯಲ್ಲಿ ಡಿಎಂಕೆ ಸಂಸದರಿಗೆ ಆಸನ ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡುವಂತೆ ಗೌರವಯುತವಾಗಿ ವಿನಂತಿಸಲು ನಾನು ಈ ಪತ್ರ ಬರೆಯುತ್ತಿದ್ದೇನೆ. ಬದಲಾಗುತ್ತಿರುವ ರಾಜಕೀಯ ಸನ್ನಿವೇಶಗಳು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗಿನ ನಮ್ಮ ಮೈತ್ರಿಯ ಅಂತ್ಯವನ್ನು ಪರಿಗಣಿಸಿ, ನಮ್ಮ ಸಂಸದರು ಅವರ ಹತ್ತಿರದಲ್ಲಿ ನೀಡಲಾಗಿರುವ ಆಸನದಲ್ಲಿ ಕುಳಿತುಕೊಳ್ಳುವುದು ಸೂಕ್ತವಲ್ಲ. ಹೀಗಾಗಿ, ಬೇರೆ ಆಸನದ ವ್ಯವಸ್ಥೆ ಮಾಡಿ” ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಈಗ ಎಲ್ಲರ ಕಣ್ಣುಗಳು ಲೋಕಸಭಾ ಸ್ಪೀಕರ್ ಅವರ ನಿರ್ಧಾರದ ಮೇಲೆ ನೆಟ್ಟಿವೆ. ಅವರು ಈ ವಿನಂತಿಯನ್ನು ಅಂಗೀಕರಿಸಿದರೆ, ಸದನದ ಆಸನ ಪಟ್ಟಿಯಲ್ಲಿ ಬದಲಾವಣೆಯಾಗಲಿದೆ ಮತ್ತು ಡಿಎಂಕೆ ವಿರೋಧ ಪಕ್ಷದ ಪಾಳಯದಲ್ಲಿ ಸ್ವತಂತ್ರ ಬಣವಾಗಿ ಕಾಣಿಸಿಕೊಳ್ಳುತ್ತದೆ. ಈ ಬೆಳವಣಿಗೆಯು ವಿರೋಧ ಪಕ್ಷದ ಒಗ್ಗಟ್ಟಿನ ಭವಿಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಡಿಎಂಕೆ ಲೋಕಸಭೆಯಲ್ಲಿ 22 ಮತ್ತು ರಾಜ್ಯಸಭೆಯಲ್ಲಿ 8 ಸಂಸದರನ್ನು ಹೊಂದಿದೆ. ಇಂಡಿಯ ಮೈತ್ರಿಕೂಟವನ್ನು ತೊರೆಯುವ ಡಿಎಂಕೆ ನಿರ್ಧಾರವು ಈ ಮೈತ್ರಿಕೂಟಕ್ಕೆ ದೊಡ್ಡ ಹೊಡೆತ ನೀಡಲಿದೆ. ಇದು ಹಲವಾರು ಪ್ರಮುಖ ಮಸೂದೆಗಳ ಮೇಲಿನ ಮತದಾನದ ಮೇಲೂ ಪರಿಣಾಮ ಬೀರಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ನಟ ವಜ್ರಾಂಗ್ ಮಾತು – Kannada News | Actor Vajrang talks about Vijay’s popularity in Tamil Nadu

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ವಿಧಾನಸಭೆ ಚುನಾವಣೆ ಗೆದ್ದಿದ್ದು, ಇದೀಗ ಮುಖ್ಯ ಮಂತ್ರಿ ಆಗಲಿದ್ದಾರೆ. ವಿಜಯ್ ಅವರು ಚುನಾವಣಾ ಕಣಕ್ಕೆ ಇಳಿಯುವ ಮೊದಲು ‘ಜನ ನಾಯಗನ್’ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾನಲ್ಲಿ ವಿಜಯ್ ಜೊತೆಗೆ ಕನ್ನಡದ ನಟ ವಜ್ರಾಂಗ್ ಸಹ ಪಾತ್ರವೊಂದರಲ್ಲಿ ನಟಿಸಿದ್ದರು. ವಿಜಯ್ ಅವರೊಟ್ಟಿಗೆ ಸುಮಾರು 21 ದಿನಗಳ ಕಾಲ ವಜ್ರಾಂಗ್ ಶೂಟಿಂಗ್​​ನಲ್ಲಿದ್ದರು. ಈ ವೇಳೆ ಸಾಕಷ್ಟು ಬಾರಿ ವಿಜಯ್ ಅವರೊಟ್ಟಿಗೆ ಸಂವಾದ ಮಾಡಿದ್ದಾಗಿ ಹೇಳಿರುವ ವಜ್ರಾಂಗ್, ಶೂಟಿಂಗ್ ಸೆಟ್​​ನಲ್ಲಿ ವಿಜಯ್ ಹೇಗಿರುತ್ತಿದ್ದರು. ತಮಿಳುನಾಡಿನಲ್ಲಿ ವಿಜಯ್ ಅವರ ಕ್ರೇಜ್ ಹೇಗಿದೆ ಇತ್ಯಾದಿ ವಿಷಯಗಳನ್ನು ಟಿವಿ9 ಜೊತೆಗೆ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಎಲ್ಲವೂ ಬಂದ್; ಬಿಸಿಸಿಐ ಎಚ್ಚೆರಿಕೆಯ ಬಳಿಕ ಎಚ್ಚೆತ್ತ ಫ್ರಾಂಚೈಸಿಗಳು – Kannada News | New BCCI Rules: IPL Teams Ban Player Vlogging and Enhance Security Measures

ತಂಡದ ಬಸ್​ಗಳಲ್ಲಿ ಹಾಗೂ ಡ್ರೆಸಿಂಗ್ ರೂಮ್​ಗಳಲ್ಲಿ ಅನಧಿಕೃತ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ದೂರನ್ನು ಬಿಸಿಸಿಐ (BCCI) ಗಂಭೀರವಾಗಿ ಪರಿಗಣಿಸಿ ಎಲ್ಲಾ ಫ್ರಾಂಚೈಸಿಗಳಿಗೆ ಖಡಕ್ ಸಂದೇಶ ಕಳುಹಿಸಿತ್ತು. ಇದರ ಜೊತೆಗೆ ತಂಡದ ಗೌಪತ್ಯೆಯನ್ನು ಕಾಪಾಡಿಕ್ಕೊಳ್ಳುವಂತೆ ಹಾಗೂ ಡ್ರೆಸಿಂಗ್ ರೂಮ್ ಸಂಭಾಷಣೆ ಹೊರಗೆ ಸೋರಿಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಕಟ್ಟಪ್ಪಣೆಯನ್ನು ಹೊರಡಿಸಿತ್ತು. ಇದೀಗ ಬಿಸಿಸಿಐ ಎಚ್ಚೆರಿಕೆಯ ಬಳಿಕ ಎಚ್ಚೆತ್ತುಕೊಂಡಿರುವ ಐಪಿಎಲ್ (IPL) ಫ್ರಾಂಚೈಸಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿವೆ. ಅದರಂತೆ ಆಟಗಾರರು ವ್ಲಾಗ್ ಮಾಡುವುದನ್ನು ನಿಷೇಧಿಸಿವೆ. ಹಾಗೆಯೆ ಕೆಲವು ಫ್ರಾಂಚೈಸಿಗಳು ಡ್ರೆಸಿಂಗ್ ರೂಮ್​ಗೆ ಅಪರಿಚಿತರ ಪ್ರವೇಶವನ್ನು ನಿಷೇಧಿಸಿವೆ ಎಂದು ವರದಿಯಾಗಿದೆ.

ವ್ಲಾಗ್ ಮಾಡುವುದಕ್ಕೆ ತಡೆ

ಇದರ ಪರಿಣಾಮವಾಗಿ ಪಂಜಾಬ್ ಕಿಂಗ್ಸ್ ತಂಡದ ಸ್ಟಾರ್ ಬೌಲರ್ ಅರ್ಷದೀಪ್ ಸಿಂಗ್​ ವ್ಲಾಗ್ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ವರದಿಯಾಗಿದೆ. ವಾಸ್ತವವಾಗಿ ಅರ್ಷದೀಪ್ ಪಂದ್ಯ ಮುಗಿದ ನಂತರ ತಂಡದ ಆಟಗಾರರೊಂದಿಗೆ ಸಂವಹನ ನಡೆಸುವುದು. ಹಾಗೆಯೇ ತಂಡದ ವಿಮಾನ ಪ್ರಯಾಣದಲ್ಲಿ, ತಂಡ ವಾಸ್ತವ್ಯ ಹೂಡಿರುವ ಹೋಟೆಲ್‌ಗಳಲ್ಲಿಯೂ ತಮಾಷದಾಯಕ ವೀಡಿಯೊಗಳನ್ನು ಚಿತ್ರೀಕರಿಸಿ ಅವುಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹರಿಬಿಡುತ್ತಿರುತ್ತಾರೆ.

ಅದರಂತೆ ಇತ್ತೀಚೆಗೆ ಪಂಜಾಬ್ ಕಿಂಗ್ಸ್‌ ತಂಡ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವ ವಿಡಿಯೋವನ್ನು ಅರ್ಷದೀಪ್ ಚಿತ್ರೀಕರಿಸಿದ್ದರು. ಈ ವಿಡಿಯೋದಲ್ಲಿ ಯುಜ್ವೇಂದ್ರ ಚಾಹಲ್ ವ್ಯಾಪಿಂಗ್ ಮಾಡುತ್ತಿರುವುದು ರೆಕಾರ್ಡ್​ ಆಗಿತ್ತು. ವೈರಲ್ ಆದ ಬಳಿಕ ಈ ವೀಡಿಯೊ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಹಾಗಾಗಿ ಅರ್ಷದೀಪ್​ಗೆ ವ್ಲಾಗ್ ಮಾಡದಂತೆ ಆದೇಶ ನೀಡಲಾಗಿದೆ ಎಂದು ವರದಿಯಾಗಿದೆ.

ಬಿಸಿಸಿಐ ಖಡಕ್ ಎಚ್ಚರಿಕೆ

ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕೂಡ, ಆಟಗಾರರ ಕುಟುಂಬ ಸದಸ್ಯರು ಮತ್ತು ಸಹಾಯಕ ಸಿಬ್ಬಂದಿಗಳು ತಂಡಕ್ಕೆ ಸಂಬಂಧಪಟ್ಟ ವೀಡಿಯೊಗಳನ್ನು ಪೋಸ್ಟ್ ಮಾಡುವುದನ್ನು ಸಹ ನಿಷೇಧಿಸಿದೆ. ಹನಿ ಟ್ರಾಪ್‌ಗಳ ಅಪಾಯದಿಂದಾಗಿ ಐಪಿಎಲ್‌ನಲ್ಲಿ ಆಟಗಾರರು, ಸಹಾಯಕ ಸಿಬ್ಬಂದಿ ಸದಸ್ಯರು ಮತ್ತು ತಂಡದ ಅಧಿಕಾರಿಗಳ ಹೋಟೆಲ್ ಕೋಣೆಗಳಿಗೆ ಅಪರಿಚಿತರು ಪ್ರವೇಶಿಸುವುದನ್ನು ಬಿಸಿಸಿಐ ನಿಷೇಧಿಸಿದೆ. ಇದರ ಜೊತೆಗೆ ತಂಡದ ಮಾಲೀಕರಿಗೂ ಬಿಸಿಸಿಐ ಸೂಕ್ಷ್ಮ ಎಚ್ಚರಿಕೆಗಳನ್ನು ನೀಡಿದೆ.

IPL 2026: ಉಚಿತ ಟಿಕೆಟ್​ಗಳ ಬೇಡಿಕೆಯಿಂದಲೇ ಫೈನಲ್ ಪಂದ್ಯ ಶಿಫ್ಟ್; ಬಿಸಿಸಿಐ ಸ್ಪಷ್ಟನೆ

ಅದರಂತೆ ಐಪಿಎಲ್ ಫ್ರಾಂಚೈಸ್ ಮಾಲೀಕರು ಮತ್ತು ಅವರ ಪ್ರತಿನಿಧಿಗಳು ಪಂದ್ಯಗಳ ಸಮಯದಲ್ಲಿ ಡಗೌಟ್, ಡ್ರೆಸ್ಸಿಂಗ್ ರೂಮ್ ಅಥವಾ ಮೈದಾನದಲ್ಲಿ ಆಟಗಾರರು ಅಥವಾ ತಂಡದ ಅಧಿಕಾರಿಗಳೊಂದಿಗೆ ಸಂವಹನ ನಡೆಸುವುದನ್ನು ಅಥವಾ ದೈಹಿಕವಾಗಿ ಸಮೀಪಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಎಲ್ಲಾ ಮಾಲೀಕರು ಪ್ರೋಟೋಕಾಲ್ ಅನ್ನು ಪಾಲಿಸಬೇಕು. ಈ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vastu Shastra: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ಚಿನ್ನದ ಆಭರಣ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ – Kannada News | Why Gold Doesn’t Stay: Vastu and Astrology Remedies for Financial Stability at Home

ಚಿನ್ನವನ್ನು ಕೇವಲ ಆಭರಣವಾಗಿ ಮಾತ್ರವಲ್ಲದೆ, ಕಷ್ಟಕಾಲದ ಭದ್ರತೆಯಾಗಿ ಅಥವಾ ಒಂದು ಅಮೂಲ್ಯ ಆಸ್ತಿಯಾಗಿ ಭಾರತೀಯರು ಕಾಣುತ್ತಾರೆ. ಆದರೆ, ಅನೇಕ ಮನೆಗಳಲ್ಲಿ ಎಷ್ಟು ಚಿನ್ನ ಖರೀದಿಸಿದರೂ ಅದು ಕೈಯಲ್ಲಿ ನಿಲ್ಲುವುದಿಲ್ಲ; ಯಾವುದೋ ಒಂದು ಕಾರಣಕ್ಕೆ ಅದು ಮಾರಾಟವಾಗುತ್ತದೆ ಅಥವಾ ಕಳೆದುಹೋಗುತ್ತದೆ. ಇದಕ್ಕೆ ವಾಸ್ತು ದೋಷ ಮತ್ತು ಜ್ಯೋತಿಷ್ಯದ ಕಾರಣಗಳಿರಬಹುದು ಎಂದು ತಜ್ಞರು ಹೇಳುತ್ತಾರೆ. ನಿಮ್ಮ ಮನೆಯಲ್ಲಿ ಚಿನ್ನ ಸ್ಥಿರವಾಗಿ ನಿಲ್ಲದಿರಲು ಇರುವ ಪ್ರಮುಖ ಕಾರಣಗಳು ಮತ್ತು ಪರಿಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ.

ಅಶುಚಿತ್ವ ಮತ್ತು ನಕಾರಾತ್ಮಕ ಶಕ್ತಿ:

ವಾಸ್ತು ಶಾಸ್ತ್ರದ ಪ್ರಕಾರ, ಚಿನ್ನವನ್ನು ಸಂಪತ್ತು, ಸಮೃದ್ಧಿ ಮತ್ತು ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯು ಸ್ವಚ್ಛತೆ ಇರುವಲ್ಲಿ ಮಾತ್ರ ನೆಲೆಸುತ್ತಾಳೆ. ನಿರಂತರವಾಗಿ ಅಸ್ತವ್ಯಸ್ತವಾಗಿರುವ ವಸ್ತುಗಳು, ಮುರಿದ ಪಾತ್ರೆಗಳು, ಜೇಡರ ಬಲೆ ಅಥವಾ ಕಸ ತುಂಬಿರುವ ಮನೆಗಳಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿರುತ್ತದೆ. ಅಂತಹ ಮನೆಗಳಲ್ಲಿ ಆರ್ಥಿಕ ಏರಿಳಿತಗಳು ಉಂಟಾಗುತ್ತವೆ ಮತ್ತು ಲಕ್ಷ್ಮಿಯ ಸ್ವರೂಪವಾದ ಚಿನ್ನವು ಮನೆಯಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ.

ತಪ್ಪು ದಿಕ್ಕಿನಲ್ಲಿ ಚಿನ್ನವನ್ನು ಇಡುವುದು:

ವಾಸ್ತುವಿನಲ್ಲಿ ದಿಕ್ಕಿನ ಪಾತ್ರ ಬಹಳ ದೊಡ್ಡದು. ಚಿನ್ನ ಮತ್ತು ಬೆಳ್ಳಿಯನ್ನು ಇಡುವಾಗ ದಿಕ್ಕಿನ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ದಕ್ಷಿಣ ಅಥವಾ ಆಗ್ನೇಯ (South-East) ದಿಕ್ಕನ್ನು ಅಗ್ನಿ ಮೂಲೆಯೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಚಿನ್ನವನ್ನು ಇಡುವುದರಿಂದ ಅದು ‘ಕಳೆದುಹೋಗುವ’ ಅಥವಾ ‘ಖರ್ಚಾಗುವ’ ಸಾಧ್ಯತೆ ಹೆಚ್ಚು. ಆದ್ದರಿಂದ ಚಿನ್ನದಂತಹ ಬೆಲೆಬಾಳುವ ವಸ್ತುಗಳನ್ನು ಇಡಲು ನೈಋತ್ಯ (South-West) ದಿಕ್ಕು ಅತ್ಯಂತ ಶ್ರೇಷ್ಠ. ಇಲ್ಲಿ ಇರಿಸಲಾದ ಆಸ್ತಿ ಅಥವಾ ಸಂಪತ್ತು ಸ್ಥಿರವಾಗಿ ಬೆಳೆಯುತ್ತದೆ.

ಸಾಲದ ಮೂಲದಿಂದ ಖರೀದಿಸಿದ ಚಿನ್ನ:

ಶಾಸ್ತ್ರಗಳ ಪ್ರಕಾರ, ಅತಿಯಾದ ಸಾಲ ಮಾಡಿ ತಂದ ಹಣದಿಂದ ಚಿನ್ನವನ್ನು ಖರೀದಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇಂತಹ ಚಿನ್ನವು ಮನೆಯಲ್ಲಿ ನಕಾರಾತ್ಮಕತೆಯನ್ನು ತರುತ್ತದೆ ಮತ್ತು ಯಾವುದೋ ಒಂದು ಹಣಕಾಸಿನ ಮುಗ್ಗಟ್ಟಿನಿಂದಾಗಿ ಅದು ಬೇಗನೆ ಮನೆಯಿಂದ ಹೊರಹೋಗುವಂತಾಗುತ್ತದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಜ್ಯೋತಿಷ್ಯದ ಪ್ರಭಾವ:

ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು (Jupiter) ಚಿನ್ನಕ್ಕೆ ಕಾರಕನಾದರೆ, ಶುಕ್ರ (Venus) ಐಶ್ವರ್ಯ ಮತ್ತು ಆಭರಣಗಳ ಕಾರಕ. ನಿಮ್ಮ ಜಾತಕದಲ್ಲಿ ಈ ಎರಡು ಗ್ರಹಗಳು ದುರ್ಬಲವಾಗಿದ್ದರೆ, ಚಿನ್ನವು ನಿಮ್ಮ ಕೈಯಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ. ಪದೇ ಪದೇ ಆಭರಣಗಳು ಒಡೆಯುವುದು ಅಥವಾ ಕಳೆದುಹೋಗುವುದು ಜಾತಕದಲ್ಲಿನ ಇಂತಹ ದೋಷಗಳ ಲಕ್ಷಣವಾಗಿರಬಹುದು.

ಮನೆಯಲ್ಲಿ ಚಿನ್ನ ಸ್ಥಿರವಾಗಿರಲು ಕೆಲವು ಸರಳ ಕ್ರಮಗಳು:

ವಾರಕ್ಕೊಮ್ಮೆ ಶುಕ್ರವಾರ ಲಕ್ಷ್ಮಿ ದೇವಿಯನ್ನು ಪೂಜಿಸಿ, ಆಭರಣಗಳಿಗೆ ಧೂಪ ತೋರಿಸುವುದರಿಂದ ಸಮೃದ್ಧಿ ಹೆಚ್ಚುತ್ತದೆ. ಮನೆಯ ಈಶಾನ್ಯ ಮೂಲೆಯನ್ನು ಸದಾ ಸ್ವಚ್ಛವಾಗಿಡಿ, ಇದು ದೈವಿಕ ಶಕ್ತಿಯ ಕೇಂದ್ರವಾಗಿದೆ. ಚಿನ್ನವನ್ನು ಯಾವಾಗಲೂ ಒಂದು ಕೆಂಪು ಬಣ್ಣದ ರೇಷ್ಮೆ ಬಟ್ಟೆಯಲ್ಲಿ ಸುತ್ತಿ ಸುರಕ್ಷಿತವಾಗಿಡುವುದು ಶುಭ ಫಲ ನೀಡುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡಿನಲ್ಲಿ TVK ಸರ್ಕಾರ ರಚನೆ ಬಹುತೇಕ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್ – Kannada News | Tamil Nadu Politics Row: Vijay’s TVK secures magic number 118 as VCK and Left come on board

ಚೆನ್ನೈ, (ಮೇ 8): ತಮಿಳುನಾಡು (Tamil Nadu) ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಶುರುವಾದ ರಾಜಕೀಯ ಹೈಡ್ರಾಮಾ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಸರ್ಕಾರ ರಚಿಸಲು ಟಿವಿಕೆಗೆ ಅಗತ್ಯವಾದ ಮ್ಯಾಜಿಕ್‌ ನಂಬರ್‌ 118 ಲಭಿಸಿದೆ. ಹೀಗಾಗಿ ವಿಜಯ್ ಸರ್ಕಾರ ಅಸ್ತಿತ್ವಕ್ಕೆ ಬರುವುದು ನಿಶ್ಚಿತವಾಗಿದೆ. ಹೌದು.. ವಿಜಯ್ ಅವರು ತಮ್ಮ 107 ಸ್ಥಾನಗಳ ಜೊತೆಗೆ ಕಾಂಗ್ರೆಸ್​​ನ 5, ವಿಸಿಕೆ 2, ಸಿಪಿಐ 2, ಸಿಪಿಐ(ಎಂ) 2 ಸ್ಥಾನ ಸೇರಿ 118 ಸ್ಥಾನವನ್ನು ಹೊಂದಿಸುವಲ್ಲಿ ಯಶಸ್ವಿಯಾಗಿದ್ದು, ಸದ್ಯದಲ್ಲೇ ವಿಜಯ್‌ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ.

ತಮಿಳಿಗ ವೆಟ್ರಿ ಕಳಗಂ ಪಕ್ಷ ಸರ್ಕಾರ ರಚನೆಗೆ ಎಡಪಕ್ಷಗಳ ಬೆಂಬಲ ಘೋಷಿಸಿವೆ. ಸಿಪಿಐ, ಸಿಪಿಐ(ಎಂ) ತಲಾ 2 ಕ್ಷೇತ್ರದಲ್ಲಿ ಗೆದ್ದಿದ್ದು, ಟಿವಿಕೆಗೆ ಬೆಂಬಲ ಘೋಷಿಸಿ ರಾಜ್ಯಪಾಲರಿಗೆ ಪತ್ರ ಬರೆದಿವೆ. ಇದರ ಬೆನ್ನಲ್ಲೇ ವಿಜಯ್ ರಾಜ್ಯಪಾಲರಿಗೆ ಪತ್ರ ಬರೆದಿದ್ದು, ತಮಗೆ 121 ಶಾಸಕರ ಬೆಂಬಲವಿದೆ . ಟಿವಿಕೆಗೆ ಕಾಂಗ್ರೆಸ್, ಮುಸ್ಲಿಂ ಲೀಗ್​, ಸಿಪಿಐ, ಸಿಪಿಐ(ಎಂ)ನಿಂದಲೂ ಬೆಂಬಲವಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಇನ್ಮುಂದೆ ವಿಜಯ್ ‘ಸರ್ಕಾರ್’; ಕೊನೆಗೂ ಟಿವಿಕೆಗೆ ಸಿಕ್ಕಿತು ಮ್ಯಾಜಿಕ್ ನಂಬರ್

Source link

TV9 Kannada News Live: ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ರಚಿಸುವುದು ನಿಶ್ಚಿತ; ಜಿಬಿಎ ಚುನಾವಣೆಗೆ ಮುಹೂರ್ತ ಫಿಕ್ಸ್? – Kannada News | TV9 Kannada News Live: Vijay’s TVK Set to Form Government in Tamil Nadu, Karnataka GBA Election likely soon

ಬೆಂಗಳೂರು, ಮೇ 08: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಶಕೆಯನ್ನು ಬರೆಯಲು ಹೊರಟಿರುವ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಇದೀಗ ಸರ್ಕಾರ ರಚನೆಯ ಹಾದಿ ಸುಗಮವಾಗಿದೆ. ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ತಲುಪಲು ಎಡಪಕ್ಷಗಳು ಮತ್ತು ಮೈತ್ರಿ ಪಕ್ಷಗಳು ವಿಜಯ್​​ಗೆ ಸಾಥ್ ನೀಡಿವೆ. ಆ ಮೂಲಕ ಅಗತ್ಯ ಶಾಸಕರ ಬೆಂಬಲ ಗಳಿಸಿರುವ ವಿಜಯ್, ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಇದೀಗ ನಿಶ್ಚಿತವಾಗಿದೆ.

ಮುಖ್ಯಾಂಶಗಳು

  • ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ರಚನೆಯ ಹಾದಿ ಸುಗಮ
  • ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಬಗ್ಗೆ ಸಂತೋಷ್ ಪೋಸ್ಟ್​​
  • ಜಿಬಿಎ ಚುನಾವಣೆಗೆ ಮುಹೂರ್ತ ಫಿಕ್ಸ್?

ತಮಿಳುನಾಡಿನ ಒಟ್ಟು 234 ವಿಧಾನಸಭಾ ಕ್ಷೇತ್ರಗಳ ಪೈಕಿ 108 ಸ್ಥಾನಗಳಲ್ಲಿ ಈಗಾಲೇ ವಿಜಯ್ ದೊಡ್ಡ ಮಟ್ಟದ ಯಶಸ್ಸು ಸಾಧಿಸಿದ್ದಾರೆ. ಪೆರಂಬೂರ್‌ ಹಾಗೂ ತಿರುಚ್ಚಿ ಪೂರ್ವ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ವಿಜಯ್ ಎರಡೂ ಕಡೆ ಜಯಗಳಿಸಿದ್ದು, ಶಾಸಕರ ಎಣಿಕೆಯ ನಿಯಮದಂತೆ ಸದ್ಯಕ್ಕೆ ಅವರ ಪಕ್ಷದ ಬಲ 107ಕ್ಕೆ ಸ್ಥಿರವಾಗಿದೆ.

ಇದನ್ನೂ ಓದಿ: ವಿಜಯ್​ಗಿರೋ ಆಯ್ಕೆಗಳ ಬಗ್ಗೆ ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಸೂರಜ್ ಹೆಗ್ಡೆ ಹೇಳಿದ್ದಿಷ್ಟು

ಸಿಪಿಐ ಪಕ್ಷವು ಟಿವಿಕೆಗೆ ಬೇಷರತ್ ಬೆಂಬಲ ಘೋಷಿಸಿದ್ದು, ಇದರೊಂದಿಗೆ ಸಿಪಿಐ(ಎಂ) ಹಾಗೂ ವಿಸಿಕೆ ಪಕ್ಷಗಳು ಸಹ ವಿಜಯ್ ಬೆನ್ನಿಗೆ ನಿಂತಿವೆ. ಪ್ರಸ್ತುತ ಟಿವಿಕೆಯ 107 ಸ್ಥಾನಗಳೊಂದಿಗೆ ಕಾಂಗ್ರೆಸ್‌ನ 5, ವಿಸಿಕೆಯ 2, ಸಿಪಿಐನ 2 ಹಾಗೂ ಸಿಪಿಐ(ಎಂ)ನ 2 ಸ್ಥಾನಗಳು ಸೇರಿದಂತೆ ಒಟ್ಟು ಬಲ 118ಕ್ಕೆ ಏರಿದೆ ಆಗಿದೆ.

ತಮಿಳುನಾಡು ಸರ್ಕಾರ ರಚನೆ ಕುರಿತು ಬಿಎಲ್​​ ಸಂತೋಷ್ ಮಾರ್ಮಿಕ ಪೋಸ್ಟ್

ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆಯ ಕಸರತ್ತು ಗರಿಗೆದರಿರುವ ಬೆನ್ನಲ್ಲೇ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್​​ ಸಂತೋಷ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: TV9 Kannada News Live: ರಾಜ್ಯದಲ್ಲಿ SIR ವಿರೋಧಿ ಸಂಘಟನೆಗಳ ಜೊತೆ ಸಿಎಂ ಮೀಟಿಂಗ್‌! ಇಲ್ಲಿದೆ ಈ ಹೊತ್ತಿನ ಪ್ರಮುಖ ಸುದ್ದಿಗಳು

ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿರುವ ಅವರು, “ತಮಿಳುನಾಡಿನಲ್ಲಿ ಅಂತಿಮವಾಗಿ ಯಾರು ಸರ್ಕಾರ ರಚಿಸುತ್ತಾರೆ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ. ಆದರೆ ಒಂದು ವಿಷಯ ಮಾತ್ರ ಖಚಿತ, ಈ ಎಲ್ಲಾ ಬೆಳವಣಿಗೆಗಳ ಕೊನೆಯಲ್ಲಿ ಕಾಂಗ್ರೆಸ್ ಪಕ್ಷವು ಮುಖಕ್ಕೆ ಮೊಟ್ಟೆ ಹೊಡೆಸಿಕೊಳ್ಳುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ,” ಎಂದಿದ್ದಾರೆ.

ಜಿಬಿಎ ಚುನಾವಣೆಗೆ ಮುಹೂರ್ತ ಫಿಕ್ಸ್: ಜೂನ್ 14 ರಿಂದ 24ರ ನಡುವೆ ಬೆಂಗಳೂರಿನಲ್ಲಿ ಮತದಾನ?

ಬಹು ನಿರೀಕ್ಷಿತ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಕೊನೆಗೂ ಮುಹೂರ್ತ ನಿಗದಿಯಾಗುವ ಲಕ್ಷಣಗಳು ಗೋಚರಿಸಿದ್ದು, ಜೂನ್ 14 ರಿಂದ ಜೂನ್ 24ರ ನಡುವೆ ಮತದಾನ ನಡೆಯುವ ಸಾಧ್ಯತೆಯಿದೆ. ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಂಗ್ರೇಶಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಿತು. ಜೂನ್ 30ರ ಒಳಗಾಗಿ ಚುನಾವಣೆ ಪ್ರಕ್ರಿಯೆ ಮುಗಿಸಿ ವರದಿ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಆಯೋಗವು ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಮಳೆಗಾಲ ಮತ್ತು ಶಾಲಾ-ಕಾಲೇಜುಗಳ ಆರಂಭದ ಸಮಯವನ್ನು ಗಮನದಲ್ಲಿಟ್ಟುಕೊಂಡು ಅಂತಿಮ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:06 pm, Fri, 8 May 26

Source link

ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್; ಬೆಂಗಳೂರಿನಲ್ಲಿ ಎಐ ಹ್ಯಾಕಥಾನ್ ಶೋಕೇಸ್ – Kannada News | NHA, IndiaAI Mission and IISc Bengaluru convene AB PM JAY Auto Adjudication Hackathon Showcase

ಬೆಂಗಳೂರು, ಮೇ 08, 2026: ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA), ಇಂಡಿಯಾ ಎಐ ಮಿಷನ್ (IndiaAI Mission) ಮತ್ತು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಜಂಟಿಯಾಗಿ ‘AB PM-JAY ಆಟೋ-ಅಡ್ಜುಡಿಕೇಶನ್ ಹ್ಯಾಕಥಾನ್ ಶೋಕೇಸ್ 2026’ ಅನ್ನು (Auto Adjudication Hackathon Showcase) ಆಯೋಜಿಸಿವೆ. ಬೆಂಗಳೂರಿನ ಐಐಎಸ್​ಸಿ ಕ್ಯಾಂಪಸ್​ನಲ್ಲಿರುವ ರಾಮ ರಾವ್ ಆಡಿಟೋರಿಯಂನಲ್ಲಿ ನಡೆಯುತ್ತಿರುವ ಈ ಎರಡು ದಿನದ ಕಾರ್ಯಕ್ರಮದ ಪ್ರಮುಖ ಉದ್ದೇಶ ಆರೋಗ್ಯ ವಿಮೆಯ ಕ್ಲೈಮ್‌ಗಳನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಅಳವಡಿಸುವುದಾಗಿದೆ.

ಹ್ಯಾಕಥಾನ್‌ನಲ್ಲಿ ಭಾಗವಹಿಸಿದ್ದ ಸಂಶೋಧಕರು ಮತ್ತು ನವೋದ್ಯಮಗಳು ವೈದ್ಯಕೀಯ ದಾಖಲೆಗಳ ವಿಶ್ಲೇಷಣೆ, ರೇಡಿಯಾಲಜಿ ಆಧಾರಿತ ಕಾಯಿಲೆ ಪತ್ತೆ ಮತ್ತು ಡೀಪ್​ಫೇಕ್​ಗಳನ್ನು (Deepfakes) ಗುರುತಿಸಲು AI ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಪ್ರದರ್ಶಿಸಿದರು. ಈ ಮೂರು ಸಮಸ್ಯೆಗಳಿಗೆ ಎಐ ಪರಿಹಾರಗಳನ್ನು ಹುಡುಕಲು ನಡೆಸಲಾದ ಹ್ಯಾಕಥಾನ್​ನಲ್ಲಿ ವಿಜೇತರಾದ ತಂಡಗಳು ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸಿದವು.

ಇದನ್ನೂ ಓದಿ: ಗೂಗಲ್​ಗೆ ಆರಂಭದಲ್ಲೇ ಫಂಡಿಂಗ್ ನೀಡಿದ್ದ ರಾಮ್ ಶ್ರೀರಾಮ್; ಭಾರತದ ಈ ಕಂಪನಿಯತ್ತ ಈಗ ಅವರ ಚಿತ್ತ

ಪ್ರಸ್ತುತ ಆಯುಷ್ಮಾನ್ ಭಾರತ್ ಯೋಜನೆಯಡಿ ಪ್ರತಿದಿನ ಸುಮಾರು 50,000 ಕ್ಲೈಮ್‌ಗಳು ಸಲ್ಲಿಕೆಯಾಗುತ್ತಿವೆ. ಇವುಗಳನ್ನು ಮನುಷ್ಯರೇ ಮ್ಯಾನುಯಲ್ ಆಗಿ ಪರಿಶೀಲಿಸುವುದಕ್ಕೆ ಹೆಚ್ಚಿನ ಸಮಯ ತಗುಲುತ್ತಿದೆ. AI ಬಳಕೆಯಿಂದ ಈ ಪ್ರಕ್ರಿಯೆಯು ಸ್ವಯಂಚಾಲಿತವಾಗಿ (Auto-Adjudication) ಮತ್ತು ಅತ್ಯಂತ ವೇಗವಾಗಿ ನಡೆಯಲಿದೆ.

AI ತಂತ್ರಜ್ಞಾನವು ಕ್ಲೈಮ್‌ಗಳಲ್ಲಿ ನಡೆಯಬಹುದಾದ ವಂಚನೆಗಳನ್ನು ಪತ್ತೆ ಹಚ್ಚಲು ಮತ್ತು ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸಹಾಯ ಮಾಡುತ್ತದೆ. ಇದರಿಂದ ರೋಗಿಗಳಿಗೆ ಮತ್ತು ಆಸ್ಪತ್ರೆಗಳಿಗೆ ಹಣ ಪಾವತಿಯಾಗುವ ಸಮಯ ಉಳಿತಾಯವಾಗುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಅಧಿಕಾರಿಗಳು, ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ತಂತ್ರಜ್ಞಾನ ಆಧಾರಿತ ಆರೋಗ್ಯ ಸೇವೆಯನ್ನು ನೀಡಲು ಭಾರತ ಬದ್ಧವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಪರಿಸರಸ್ನೇಹಿ ಯೋಜನೆಗಳಿಗೆ ಆಪಲ್ ಭರ್ಜರಿ ಹೂಡಿಕೆ; ಸ್ವಚ್ಛ ಇಂಧನ, ಪ್ಲಾಸ್ಟಿಕ್ ನಿವಾರಣೆ, ತ್ಯಾಜ್ಯ ನಿರ್ವಹಣೆ ಇತ್ಯಾದಿ ಉಪಕ್ರಮಗಳ ಘೋಷಣೆ

ಈ ಕಾರ್ಯಕ್ರಮವು ಭಾರತದ ಡಿಜಿಟಲ್ ಆರೋಗ್ಯ ವ್ಯವಸ್ಥೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವತ್ತ ಮಹತ್ವದ ಹೆಜ್ಜೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Astrology: ಈ ಸಮಸ್ಯೆಗಳಿಂದ ನೀವು ಬಳಲುತ್ತಿದ್ದರೆ ಜಾತಕದಲ್ಲಿ ಸೂರ್ಯ ದುರ್ಬಲ ಸ್ಥಾನದಲ್ಲಿದ್ದಾನೆ ಎಂದರ್ಥ – Kannada News | Weak Sun in Astrology: Symptoms and Remedies for Sun Affliction in Kundali

ಜಾತಕದಲ್ಲಿ ಸೂರ್ಯ ದುರ್ಬಲImage Credit source: Pinterest

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನನ್ನು ‘ಗ್ರಹಗಳ ರಾಜ’ ಎಂದು ಕರೆಯಲಾಗುತ್ತದೆ. ಸೂರ್ಯನು ಕೇವಲ ಬೆಳಕಿನ ಮೂಲವಲ್ಲ, ಬದಲಿಗೆ ವ್ಯಕ್ತಿಯ ಶಕ್ತಿ, ಗೌರವ, ಯಶಸ್ಸು ಮತ್ತು ಆತ್ಮವಿಶ್ವಾಸದ ಸಂಕೇತ. ಜಾತಕದಲ್ಲಿ ಸೂರ್ಯನು ಬಲಿಷ್ಠನಾಗಿದ್ದರೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಸಿಗುತ್ತದೆ. ಆದರೆ, ಅದೇ ಸೂರ್ಯನು ದುರ್ಬಲ ಅಥವಾ ನೀಚ ಸ್ಥಾನದಲ್ಲಿದ್ದರೆ ಜೀವನದ ಮೇಲೆ ಗಂಭೀರ ಪರಿಣಾಮ ಬೀರಬಹುದು. ನಿಮ್ಮ ಜಾತಕದಲ್ಲಿ ಸೂರ್ಯ ದುರ್ಬಲನಾಗಿದ್ದಾನೆ ಎಂದು ತಿಳಿಯುವುದು ಹೇಗೆ? ಅದರ ಲಕ್ಷಣಗಳು ಮತ್ತು ಪರಿಹಾರಗಳ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ.

ಸೂರ್ಯ ದುರ್ಬಲ ಸ್ಥಾನದಲ್ಲಿದ್ದರೆ ತಿಳಿಯುವುದು ಹೇಗೆ?

ಆತ್ಮವಿಶ್ವಾಸದ ಕುಸಿತ:

ಸೂರ್ಯನು ಆತ್ಮಬಲದ ಕಾರಕ. ಸೂರ್ಯ ದುರ್ಬಲನಾಗಿದ್ದರೆ ವ್ಯಕ್ತಿಯಲ್ಲಿ ವಿಪರೀತ ಭಯ ಮತ್ತು ಕೀಳರಿಮೆ ಕಾಡುತ್ತದೆ. ಸಣ್ಣ ನಿರ್ಧಾರ ತೆಗೆದುಕೊಳ್ಳಲು ಕೂಡ ಇತರರ ಮೇಲೆ ಅವಲಂಬಿತರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು.

ಆರೋಗ್ಯ ಸಮಸ್ಯೆಗಳು (ಮೂಳೆ ಮತ್ತು ಕಣ್ಣು):

ದೈಹಿಕವಾಗಿ ಸೂರ್ಯನು ಕಣ್ಣಿನ ದೃಷ್ಟಿ ಮತ್ತು ಮೂಳೆಗಳಿಗೆ ಸಂಬಂಧಿಸಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ದೃಷ್ಟಿ ದೋಷ ಕಾಣಿಸಿಕೊಳ್ಳುವುದು ಅಥವಾ ಪದೇ ಪದೇ ಕೀಲು ನೋವು ಅನುಭವಿಸುವುದು ಸೂರ್ಯನ ದೋಷದ ಲಕ್ಷಣಗಳಾಗಿವೆ.

ತಂದೆಯೊಂದಿಗೆ ಭಿನ್ನಾಭಿಪ್ರಾಯ:

ಜ್ಯೋತಿಷ್ಯದ ಪ್ರಕಾರ ಸೂರ್ಯನು ಪಿತೃತ್ವದ ಸಂಕೇತ. ಜಾತಕದಲ್ಲಿ ಸೂರ್ಯ ಸರಿಯಾದ ಸ್ಥಾನದಲ್ಲಿಲ್ಲದಿದ್ದರೆ ತಂದೆಯೊಂದಿಗೆ ಸೈದ್ಧಾಂತಿಕ ಸಂಘರ್ಷ ಉಂಟಾಗಬಹುದು ಅಥವಾ ತಂದೆಯ ಆರೋಗ್ಯದಲ್ಲಿ ಏರುಪೇರಾಗಬಹುದು.

ಗೌರವಕ್ಕೆ ಚ್ಯುತಿ:

ನೀವು ಎಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಸಮಾಜದಲ್ಲಿ ಅಥವಾ ಕಚೇರಿಯಲ್ಲಿ ನಿಮಗೆ ಸಲ್ಲಬೇಕಾದ ಗೌರವ ಸಿಗುತ್ತಿಲ್ಲವೇ? ಕಾರಣವಿಲ್ಲದೆ ಕಳಂಕ ಅಥವಾ ಅಪಪ್ರಚಾರ ಎದುರಿಸುತ್ತಿದ್ದರೆ ಅದಕ್ಕೆ ಸೂರ್ಯ ದುರ್ಬಲ ಸ್ಥಾನದಲ್ಲಿರುವುದೇ ಕಾರಣವಿರಬಹುದು.

ವೃತ್ತಿ ಬದುಕಿನಲ್ಲಿ ಹಿನ್ನಡೆ:

ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಅಥವಾ ಉದ್ಯೋಗದಲ್ಲಿ ಬಡ್ತಿ ನಿರೀಕ್ಷಿಸುತ್ತಿರುವವರಿಗೆ ಸೂರ್ಯನ ಬಲ ಬಹಳ ಮುಖ್ಯ. ದುರ್ಬಲ ಸೂರ್ಯನು ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡುತ್ತದೆ ಮತ್ತು ವೃತ್ತಿಜೀವನದಲ್ಲಿ ಅಡೆತಡೆಗಳನ್ನು ತರುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಮಾನಸಿಕ ಅಶಾಂತಿ:

ಸೂರ್ಯನ ಪ್ರಭಾವ ಕಡಿಮೆಯಾದಾಗ ವ್ಯಕ್ತಿಯು ಸಂಕುಚಿತ ಮನೋಭಾವ ಬೆಳೆಸಿಕೊಳ್ಳಬಹುದು. ಇದು ಅತಿಯಾದ ಖಿನ್ನತೆ ಮತ್ತು ಮಾನಸಿಕ ಒತ್ತಡಕ್ಕೆ ದಾರಿ ಮಾಡಿಕೊಡುತ್ತದೆ.

ಜಾತಕದಲ್ಲಿ ಸೂರ್ಯನ ಬಲ ಹೆಚ್ಚಿಸಲು ಸರಳ ಪರಿಹಾರಗಳು:

ನಿಮ್ಮ ಜೀವನದಲ್ಲಿ ಈ ಮೇಲಿನ ಸಮಸ್ಯೆಗಳಿದ್ದರೆ ಸೂರ್ಯನನ್ನು ಪ್ರಸನ್ನಗೊಳಿಸಲು ಈ ಕ್ರಮಗಳನ್ನು ಅನುಸರಿಸಿ:

  • ಅರ್ಘ್ಯ ಅರ್ಪಣೆ: ಪ್ರತಿದಿನ ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ತಾಮ್ರದ ಪಾತ್ರೆಯಿಂದ ಸೂರ್ಯನಿಗೆ ನೀರನ್ನು ಅರ್ಪಿಸಿ.
  • ಮಂತ್ರ ಪಠನೆ: ಪ್ರತಿನಿತ್ಯ 108 ಬಾರಿ “ಓಂ ಘೃಣಿ ಸೂರ್ಯಾಯ ನಮಃ” ಎಂಬ ಮಂತ್ರವನ್ನು ಪಠಿಸುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.
  • ದಾನದ ಮಹತ್ವ: ಭಾನುವಾರದಂದು ಬೆಲ್ಲ, ಗೋಧಿ, ತಾಮ್ರ ಅಥವಾ ಕೆಂಪು ಬಟ್ಟೆಯನ್ನು ದಾನ ಮಾಡುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ.
  • ಭಾನುವಾರ ಉಪವಾಸ: ಸೂರ್ಯ ದೇವರ ಪ್ರೀತ್ಯರ್ಥ ಭಾನುವಾರದಂದು ಉಪವಾಸ ಆಚರಿಸಿ ಮತ್ತು ಸೂರ್ಯ ನಮಸ್ಕಾರ ಮಾಡುವುದರಿಂದ ಆರೋಗ್ಯ ಮತ್ತು ಯಶಸ್ಸು ಲಭಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version