ಗೃಹಣಿಯರೇ… ಪಾತ್ರೆ ತೊಳೆಯುವ ಸ್ಪಾಂಜ್‌ಗಳನ್ನು ಎಷ್ಟು ಬಾರಿ ಬದಲಾಯಿಸಬೇಕು ತಿಳ್ಕೊಳ್ಳಿ – Kannada News | What happens if you use dishwashing sponge for a long time?

ಪ್ರತಿಯೊಬ್ಬರೂ ಅಡುಗೆ ಮನೆಯ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಪಾತ್ರೆ ತೊಳೆಯುವುದರಿಂದ ಹಿಡಿದು ಗ್ಯಾಸ್‌ ಸ್ಟೌವ್‌ ಕ್ಲೀನ್‌ ಮಾಡುವುದರವರೆಗೆ ಪ್ರತಿಯೊಂದರ ಸ್ವಚ್ಛತೆಯ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಆದ್ರೆ ಪಾತ್ರೆ ತೊಳೆಯಲು ಬಳಸುವ ಸ್ಪಾಂಜ್‌ಗಳ (sponges) ಬಗ್ಗೆ ಯಾರೂ ಸಹ ಗಮನಹರಿಸುವುದಿಲ್ಲ. ಒಂದೇ ಸ್ಪಾಂಜ್‌ ಅನ್ನು ತಿಂಗಳಾನುಗಟ್ಟಲೆ ಬಳಸುತ್ತಿರುತ್ತಾರೆ. ಈ ಒಂದು ಸಣ್ಣ ತಪ್ಪು ಸಹ ಕಾಯಿಲೆ ಹರಡಲು ಕಾರಣವಾಗಬಹುದು. ಹಾಗಿದ್ರೆ ಪಾತ್ರೆ ತೊಳೆಯಲು ಹೆಚ್ಚು ಸಮಯ ಒಂದೇ ಸ್ಪಾಂಜ್‌ ಅನ್ನು ಬಳಸುವುದರಿಂದ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ, ಸ್ಪಾಂಜ್‌, ಸ್ಕ್ರಬ್ಬರ್‌ಗಳನ್ನು ಎಷ್ಟು ದಿನಗಳಿಗೊಮ್ಮೆ ಬದಲಾಯಿಸಬೇಕು ಎಂಬುದನ್ನು ತಿಳಿಯಿರಿ.

ಪಾತ್ರೆ ತೊಳೆಯಲು ಒಂದೇ ಸ್ಪಾಂಜ್‌ ದೀರ್ಘಕಾಲ ಬಳಸುವುದು ಏಕೆ ಅಪಾಯಕಾರಿ?

ಪಾತ್ರೆ ತೊಳೆಯಲು ಬಳಸುವ ಸ್ಪಾಂಜ್‌ ಚಿಕ್ಕದಾಗಿ ಕಾಣಬಹುದು ಆದರೆ ಅದು ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳವಾಗಬಹುದು. ಹೌದು ಪಾತ್ರೆ ತೊಳೆಯುವ ಸ್ಪಂಜುಗಳು ಅಥವಾ ಸ್ಕ್ರಬ್ ಬ್ರಷ್‌ಗಳು ಹೆಚ್ಚಿನ ಸಮಯ ಒದ್ದೆಯಾಗಿರುತ್ತವೆ. ಅವುಗಳನ್ನು ದಿನಕ್ಕೆ 3 ರಿಂದ ನಾಲ್ಕು ಬಾರಿ ಬಳಸುವುದರಿಂದ, ಅವು ಒಣಗಲು ಅವಕಾಶ ಸಿಗುವುದಿಲ್ಲ, ಅಲ್ಲದೆ ಸ್ಪಂಜಿನ ಸಣ್ಣ ರಂಧ್ರಗಳಲ್ಲಿ ಆಹಾರದ ಕಣಗಳು ಹಿಡಿದಿಟ್ಟುಕೊಳ್ಳುತ್ತವೆ.  ಇದು ತೇವಾಂಶ ಮತ್ತು ಕೊಳಕು ಬ್ಯಾಕ್ಟೀರಿಯಾಗಳು ಬೆಳೆಯಲು ಸೂಕ್ತವಾದ ವಾತಾವರಣವನ್ನು ಸೃಷ್ಟಿಸುತ್ತದೆ. ನಂತರದಲ್ಲಿ ಅಪಾಯಕಾರಿ ಸೂಕ್ಷ್ಮಜೀವಿಗಳು ಬೆಳೆದು ರೋಗಗಳನ್ನು ಹರಡುತ್ತವೆ. ಕೊಳಕು ಸ್ಪಾಂಜ್‌ಗಳಲ್ಲಿ ಟಾಯ್ಲೆಟ್ ಸೀಟ್ ಗಿಂತ ಹೆಚ್ಚು ಬ್ಯಾಕ್ಟೀರಿಯಾಗಳು ಇರುತ್ತವಂತೆ. ಅದಕ್ಕಾಗಿ ಆಗಾಗ್ಗೆ ಸ್ಪಾಂಜ್‌ಗಳನ್ನು ಬದಲಾಯಿಸುತ್ತಿರಬೇಕು.

ಪಾತ್ರೆ ತೊಳೆಯಲು ಒಂದೇ ಸ್ಪಂಜನ್ನು ಬಳಸಿದರೆ ಏನಾಗುತ್ತದೆ?

ಸ್ಪಾಂಜ್‌ಗಳಲ್ಲಿರುವ ಬ್ಯಾಕ್ಟೀರಿಯಾಗಳು ಪಾತ್ರೆಗಳಿಗೆ ವರ್ಗಾಯಿಸಲ್ಪಟ್ಟು, ಇದು ಅತಿಸಾರ ಮತ್ತು ವಾಂತಿ, ತೀವ್ರ ಹೊಟ್ಟೆ ನೋವು ಮತ್ತು ಕರುಳಿನ ಸೋಂಕುಗಳಿಗೆ ಕಾರಣವಾಗಬಹುದು.  ಇನ್ನೂ ಈ ಬ್ಯಾಕ್ಟೀರಿಯಾಗಳು ಕೈಗಳ ಮೂಲಕ ದೇಹವನ್ನು ಪ್ರವೇಶಿಸಬಹುದು, ಇದು ಇಡೀ ಕುಟುಂಬಕ್ಕೆ ಅನಾರೋಗ್ಯವನ್ನುಂಟುಮಾಡುತ್ತದೆ.  ಅಲ್ಲದೆ ಒಂದೇ ಸ್ಪಾಂಜ್ ಅನ್ನು ದೀರ್ಘಕಾಲದವರೆಗೆ ಬದಲಾಯಿಸದಿದ್ದರೆ, ಅದು ಶಿಲೀಂಧ್ರವನ್ನು ಬೆಳೆಸಿಕೊಳ್ಳಬಹುದು ಮತ್ತು ಇದು ವಿಚಿತ್ರ ಮತ್ತು ಕೆಟ್ಟ ವಾಸನೆಯನ್ನು ಉಂಟು ಮಾಡುತ್ತದೆ.

ಇದನ್ನೂ ಓದಿ: ಕೊಳೆಗಟ್ಟಿದ ಗ್ಯಾಸ್‌ ಸ್ಟೌವ್‌ ಬರ್ನರ್‌ ಕ್ಲೀನ್‌ ಮಾಡಲು ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ

ಪಾತ್ರೆ ತೊಳೆಯುವ ಸ್ಪಾಂಜ್ ಅನ್ನು ಎಷ್ಟು ದಿನಗಳಿಗೊಮ್ಮೆ ಬದಲಾಯಿಸಬೇಕು?

ತಜ್ಞರು ಹೇಳುವಂತೆ ಪಾತ್ರೆ ತೊಳೆಯುವ ಸ್ಪಾಂಜ್ ಅನ್ನು ಪ್ರತಿ 7 ರಿಂದ 10 ದಿನಗಳಿಗೊಮ್ಮೆ ಬದಲಾಯಿಸಬೇಕು. ನೀವು ಪ್ರತಿದಿನ ಬಹಳಷ್ಟು ಪಾತ್ರೆಗಳನ್ನು ತೊಳೆಯುತ್ತಿದ್ದರೆ, ಪ್ರತಿ 7 ದಿನಗಳಿಗೊಮ್ಮೆ ಅದನ್ನು ಬದಲಾಯಿಸಬೇಕು. ನೀವು ಅದನ್ನು ವಿರಳವಾಗಿ ಬಳಸಿದರೂ ಸಹ, ಅದನ್ನು 2 ವಾರಗಳಿಗಿಂತ ಹೆಚ್ಚು ಕಾಲ ಇಟ್ಟುಕೊಳ್ಳಬೇಡಿ. ಹಳೆಯ ಸ್ಪಾಂಜ್ ಸ್ವಚ್ಛವಾಗಿ ಕಂಡರೂ ಸಹ, ಅದು ಬ್ಯಾಕ್ಟೀರಿಯಾಗಳ ಆಶ್ರಯತಾಣವಾಗಿರಬಹುದು. ಆದ್ದರಿಂದ 7 ರಿಂದ 10 ದಿನಗಳಿಗೊಮ್ಮೆ ಪಾತ್ರೆ ತೊಳೆಯುವ ಸ್ಪಾಂಜ್‌ ಬದಲಾಯಿಸಿ. ಸ್ಟೀಲ್ ಅಥವಾ ಸಿಲಿಕೋನ್ ಸ್ಕ್ರಬ್ಬರ್‌ಗಳು 1-2 ತಿಂಗಳುಗಳವರೆಗೆ ಬಾಳಿಕೆ ಬರಬಹುದು. ಸ್ಕ್ರಬ್ಬರ್ ವಾಸನೆ, ಬಿರುಕುಗಳು ಅಥವಾ ಬಣ್ಣ ಬದಲಾದರೆ, ಅದನ್ನು ತಕ್ಷಣ ಬದಲಾಯಿಸಿ.

ಪಾತ್ರೆ ತೊಳೆಯುವ ಸ್ಪಾಂಜ್‌ಗಳನ್ನು ಸ್ವಚ್ಛವಾಗಿಡಲು ಸುಲಭ ಮಾರ್ಗಗಳು:

  • ಪ್ರತಿ 2-3 ದಿನಗಳಿಗೊಮ್ಮೆ ಸ್ಪಾಂಜ್ ಅನ್ನು ಬೆಚ್ಚಗಿನ ನೀರು ಮತ್ತು ವಿನೆಗರ್‌ನಲ್ಲಿ 5-10 ನಿಮಿಷಗಳ ಕಾಲ ನೆನೆಸಿಡಿ.
  • ಪ್ರತಿ ಬಾರಿ ಪಾತ್ರೆ ತೊಳೆದ ನಂತರ ಬಿಸಿ ನೀರು ಮತ್ತು ಸೋಪಿನಿಂದ ಸ್ಕ್ರಬ್ಬರ್ ಅನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ನಂತರ ಅದನ್ನು ಚೆನ್ನಾಗಿ ಹಿಸುಕಿ ಒಣಗಲು ಬಿಡಿ.
  • ಸ್ಪಾಂಜ್ ಅನ್ನು ಚೆನ್ನಾಗಿ ತೊಳೆದು ಒಣ ಸ್ಥಳದಲ್ಲಿ ಸಂಗ್ರಹಿಸಿ. ಸಿಲಿಕೋನ್ ಬ್ರಷ್‌ಗಳು ಮತ್ತು ಸ್ಟೀಲ್ ಸ್ಕ್ರಬ್ಬರ್‌ಗಳು ಸ್ಪಾಂಜ್‌ಗಳಿಗಿಂತ ಉತ್ತಮ ಆಯ್ಕೆಗಳಾಗಿವೆ. ಇವು ಹೆಚ್ಚು ಕಾಲ ಬಾಳಿಕೆ ಬರುತ್ತವೆ ಮತ್ತು ಸ್ವಚ್ಛಗೊಳಿಸಲು ಸುಲಭ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಮತ್ತೊಂದು ದರೋಡೆ: ಅಧಿಕಾರಿಗಳ ಸೋಗಿನಲ್ಲಿ ಬಂದು ಲಕ್ಷಾಂತರ ರೂ ಹೊತ್ತೊಯ್ದರು – Kannada News | Devanahalli Robbery: 9 Arrested for 24 Lakh Fraud Posing as Fake Anti Corruption Officials

ದೇವನಹಳ್ಳಿ ಪೊಲೀಸ್ ಠಾಣೆImage Credit source: tv9 kannada

ದೇವನಹಳ್ಳಿ, ಫೆಬ್ರವರಿ 23: ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ‌ ಅಧಿಕಾರಿಗಳ ಸೋಗಿನಲ್ಲಿ ಎಂಟ್ರಿಕೊಟ್ಟು 24 ಲಕ್ಷ ರೂ ಹಣವನ್ನ ದೋಚಿ (Robbery) ಎಸ್ಕೇಪ್ ಆಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದ ಪ್ರಸನ್ನಹಳ್ಳಿ ರಸ್ತೆಯಲ್ಲಿ ನಡೆದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿದಂತೆ 12 ಜನರ ಪೈಕಿ 09 ಆರೋಪಿಗಳನ್ನ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕೃಷ್ಣಕುಮಾರ್, ವೇಣುಗೋಪಾಲ್, ಸಂಪಂಗಿ ರಾಮ, ಅಹಮದ್, ನಾರಾಯಣಸ್ವಾಮಿ, ವೆಂಕಟೇಶ, ಮುರುಗೇಶನ್, ಶಿವ, ಲತೀಪ್ ಬಂಧಿತ ಆರೋಪಿಗಳು. ಬಂಧಿತರಿಂದ ಹಣವನ್ನು ಜಪ್ತಿ ಮಾಡಲಾಗಿದೆ.

ನಡೆದಿದ್ದೇನು? 

ಶಂಕರಪ್ಪ ಎಂಬುವವರಿಗೆ ಹಣ ತ್ರಿಬಲ್ ಮಾಡಿಕೊಡುವುದಾಗಿ ಹೇಳಿ ಎ1 ಆರೋಪಿ ಕೃಷ್ಣ ಕುಮಾರ್​​​ ಫೋನ್​ ಮಾಡಿ ಕರೆಸಿಕೊಂಡಿದ್ದಾನೆ. ಅದರಂತೆ ಶಂಕರಪ್ಪ ಚಿನ್ನಾಭರಣ ಅಡವಿಟ್ಟು 24 ಲಕ್ಷ ರೂ ಹಣವನ್ನು ತಂದಿದ್ದಾರೆ. ಇತ್ತ ಮೊದಲೇ ಮಾಡಿಕೊಂಡಿದ್ದ ಪ್ಲ್ಯಾನ್​​ನಂತೆ ಖಾಸಗಿ ಕಾರಿನಲ್ಲಿ ಕೃಷ್ಣ ಕುಮಾರ್ ಸಹಚರರು ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ‌ ಹೆಸರಿನಲ್ಲಿ ಖಾಸಗಿ‌ ಕಾರ್​​ಗೆ ಬೋರ್ಡ್ ಹಾಕಿಕೊಂಡು ಅಧಿಕಾರಿಗಳ ಸೋಗಿನಲ್ಲಿ ಬಂದು 24 ಲಕ್ಷ ರೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ದರೋಡೆ: ಫ್ಲಿಪ್‌ಕಾರ್ಟ್​​ನ ಲಕ್ಷಾಂತರ ರೂ ಮೌಲ್ಯದ ವಸ್ತುಗಳ ಕಳ್ಳತನ

ಹಣ ಎಗರಿಸಿದ ನಂತರ ಎ1 ಆರೋಪಿ ಕೃಷ್ಣಕುಮಾರ್​​ ಪೊಲೀಸ್ ಠಾಣೆಗೆ ಬಂದು ತಾನೇ ದೂರು ನೀಡಿದ್ದ. ಪೊಲೀಸರ ವಿಚಾರಣೆ ವೇಳೆ ದೂರು‌ ನೀಡಿದ್ದ ಆರೋಪಿಯೇ ದರೋಡೆಕೋರ ಎನ್ನುವುದು ಬಯಲಾಗಿದೆ. ಸದ್ಯ ದೇವನಹಳ್ಳಿ ಠಾಣೆ ಪೊಲೀಸರು 12 ಜನರಲ್ಲಿ 09 ಆರೋಪಿಗಳನ್ನ ಬಂಧಿಸಿದ್ದಾರೆ.

ಪ್ರತಿಷ್ಠಿತ ಕೆನರಾ ಬ್ಯಾಂಕ್​ನಲ್ಲಿ ಕಳ್ಳತನಕ್ಕೆ ಯತ್ನ

ಇನ್ನು ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಪ್ರತಿಷ್ಠಿತ ಕೆನರಾ ಬ್ಯಾಂಕ್​​ನಲ್ಲಿ ಬೆಳಗಿನ ಜಾವ 3ರ ಸುಮಾರಿಗೆ ಕಳ್ಳತನಕ್ಕೆ ಯತ್ನಿಸಿರುವಂತಹ ಘಟನೆ ನಡೆದಿದೆ. ಸೈರನ್ ಆಗುತ್ತಿದ್ದಂತೆ ಕಳ್ಳ ಓಡಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಶೇಷಾದ್ರಿಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: ದರೋಡೆ ಕೇಸ್​​ ಬೇಧಿಸಿದ ಬೆಂಗಳೂರು ಪೊಲೀಸ್​​: ಅಧಿಕಾರಿಗಳಿಗೆ 5 ಲಕ್ಷ ರೂ ಬಹುಮಾನ ಘೋಷಣೆ

ರಾತ್ರಿ ಬ್ಯಾಂಕ್ ಹಿಂಬದಿ ಇದ್ದ ಗ್ರಿಲ್ ಕಟ್ ಮಾಡಿ ಒಳ ನುಗ್ಗಿರುವ ಕಳ್ಳ, ಪೂರ್ತಿ ಬ್ಯಾಂಕ್ ಸರ್ಚ್ ಮಾಡಿದ್ದಾನೆ. ಸ್ಟ್ರಾಂಗ್ ರೂಮ್ ಹತ್ತಿರ ಹೋಗಿ ವೈರ್ ಕಟ್ ಮಾಡಿದ್ದು, ವೈರ್ ಕಟ್ ಮಾಡುತ್ತಿದಂತೆ ಸೈರನ್ ಆನ್ ಆಗಿದೆ. ಬಳಿಕ ಅಲ್ಲಿಂದ ಕಳ್ಳ ಓಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ವಿಡಿಯೋ ನೋಡಿ – Kannada News | Siddaramaiah And DK Shivakumar inaugurates MGNREGA Bachao Sangram at Chikkaballapur

ಚಿಕ್ಕಬಳ್ಳಾಪುರ, (ಫೆಬ್ರವರಿ 23): ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಅಗಲಗುರ್ಕಿ ಬಳಿ ಕಾಂಗ್ರೆಸ್​​ನ ಮನ್​ರೇಗಾ ಬಚಾವ್​ ಆಂದೋಲನ ಸಮಾವೇಶ ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ತಲೆ ಮೇಲೆ ಮಣ್ಣಿನ ಬುಟ್ಟಿ ಹೊತ್ತು ಸಮಾವೇಶಕ್ಕೆ ಚಾಲನೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ವೇದಿಕೆ ಮೇಲೆನೆ ಮಣ್ಣನ್ನು ತೋಡಿ ಪುಟ್ಟಿಗೆ ಹಾಕಿದ್ದು, ಇದನ್ನು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ತಲೆಗೆ ಟವೆಲ್ ಸುತ್ತಿಕೊಂಡು ಮಣ್ಣಿನ ಪುಟ್ಟಿ ಹೊತ್ತು ಕೇಂದ್ರ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನೀನು ಯಾವ ಕಾರಣಕ್ಕೂ ತಾಯಿ ಆಗಬಾರದು’: ಯುವತಿ ಖಾಸಗಿ ಅಂಗಕ್ಕೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಿದ ಯುವಕ – Kannada News | Gurugram: Student Brutally Attacked in Live in Relationship; Warning for Urban Couples

ಗುರುಗ್ರಾಮ, ಫೆ.23: ಹೆಣ್ಣು ಮತ್ತು ಗಂಡಿನ ಸಂಬಂಧ ದೈಹಿಕ ಸಂಬಂಧದಲ್ಲಿ ಮುಗಿಯುದಾದರೆ, ಆ ಸಂಬಂಧಗಳಿಗೆ ಬೆಲೆಯೇ ಇರುವುದಿಲ್ಲ. ದೆಹಲಿ, ಬೆಂಗಳೂರುನಂತಹ ಮಹಾನಗರಗಳಲ್ಲಿ ಯುವಕ-ಯುವತಿಯರು ಮನಸ್ಸಿನ ಸಂಬಂಧಕ್ಕಿಂತ ದೈಹಿಕ ಸಂಬಂಧಕ್ಕೆ ಬೆಲೆ ನೀಡುತ್ತಾರೆ ಎಂಬುದನ್ನು ಅನೇಕ ಘಟನೆಗಳು ವಿವರಿಸಿದೆ. ಅದಕ್ಕೆ ಸಾಕ್ಷಿ ಕೂಡ ಇದೆ. ಲಿವ್ ಇನ್ ರಿಲೇಶನ್​ಶಿಪ್​​​ ಮೂಲಕ ಗೆಳತನ ಬೆಳಸಿಕೊಂಡು ದೈಹಿಕ ಸಂಪರ್ಕದ ನಂತರ ಇಬ್ಬರ ನಡುವೆಯೂ ಹೊಂದಾಣಿಕೆಯೇ ಇರುವುದಿಲ್ಲ. ಕೊನೆಗೆ ಒಬ್ಬರ ಮೇಲೆ ಇನ್ನೊಬ್ಬ ದೂರಿಕೊಂಡ ಸಂದೇಹ ಪಡುತ್ತ, ಅಂತಿಮವಾಗಿ ಕೊಲೆಯಲ್ಲಿ ಅಂತ್ಯವಾಗುತ್ತದೆ. ಇದೀಗ ಇಂತಹದೇ ಘಟನೆಯೊಂದು ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಯುವತಿಯೊಬ್ಬಳ ಮೇಲೆ ನಡೆದ ಸರಣಿ ದೌರ್ಜನ್ಯದ ಅಘಾತಕಾರಿ ಕೃತ್ಯವೊಂದು ಬೆಳಕಿಗೆ ಬಂದಿದೆ. ತನ್ನ ಲಿವ್ ಇನ್ ರಿಲೇಶನ್​ಶಿಪ್​​ನಲ್ಲಿದ್ದ ಯುವತಿಯನ್ನು ಭೀಕರ ಹಲ್ಲೆ ಹಲ್ಲೆ ಮಾಡಿದ್ದಾನೆ.

ಇದೀಗ ತ್ರಿಪುರಾ ಮೂಲದ 19 ವರ್ಷದ ಬಿ.ಎಸ್ಸಿ ವಿದ್ಯಾರ್ಥಿನಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ತ್ರಿಪುರಾ ಮೂಲದ ಸಂತ್ರಸ್ತೆ ಗುರುಗ್ರಾಮದ ಸೆಕ್ಟರ್ 69 ರ ಪಿಜಿಯೊಂದರಲ್ಲಿ ವಾಸವಿದ್ದು, ಬಯೋಟೆಕ್ನಾಲಜಿ ಅಭ್ಯಾಸ ಮಾಡುತ್ತಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಆ್ಯಪ್ ಒಂದರ ಮೂಲಕ ದೆಹಲಿಯ ನರೇಲಾ ಮೂಲದ ಶಿವಂ ಎಂಬಾತನ ಪರಿಚಯವಾಗಿತ್ತು. ಮದುವೆಯ ಆಮಿಷವೊಡ್ಡಿದ ಶಿವಂ, ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಲ್ಲದೆ, ಗುರುಗ್ರಾಮದ ಫ್ಲಾಟ್ ಒಂದರಲ್ಲಿ ಆಕೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದನು.

ಇಬ್ಬರ ನಡುವೆ ಕೆಲವೊಂದು ವಿಚಾರವಾಗಿ ಸಂದೇಹಗಳು ಮೂಡಿದೆ. ಶಿವಂ, ಯುವತಿಯ ಮೇಲೆ ಸತತವಾಗಿ ದೈಹಿಕ ದೌರ್ಜನ್ಯ ಎಸಗುತ್ತಿದ್ದನು. ಆದರೆ ಕಳೆದ ಸೋಮವಾರ (ಫೆಬ್ರವರಿ 16) ಈ ಕ್ರೌರ್ಯ ಮಿತಿಮೀರಿತು. ಯುವತಿಯ ತಲೆಯನ್ನು ಗೋಡೆಗೆ ಜಜ್ಜಿ, ಸ್ಟೀಲ್ ಬಾಟಲಿ ಮತ್ತು ಮಣ್ಣಿನ ಮಡಕೆಯಿಂದ ಹಲ್ಲೆ ನಡೆಸಿದ್ದಾನೆ. ಯುವತಿಯ ಖಾಸಗಿ ಅಂಗಕ್ಕೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾನೆ. ಈ ಭೀಕರ ಕೃತ್ಯದ ವಿಡಿಯೋವನ್ನೂ ಸಹ ಆರೋಪಿ ಚಿತ್ರೀಕರಿಸಿದ್ದಾನೆ. ಯುವತಿಯ ಕಾಲುಗಳಿಗೆ ಚಾಕುವಿನಿಂದ ಇರಿದು, “ಇನ್ನು ಮುಂದೆ ನೀನು ತಾಯಿಯಾಗಲು ಅಥವಾ ನಡೆಯಲು ಸಾಧ್ಯವಾಗದಂತೆ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ.

ಇದನ್ನೂ ಓದಿ: ಮದುವೆ ಹಾಲ್​​​ನ ಶೌಚಾಲಯದ ಬಾಗಿಲಿನಲ್ಲಿ ಶಿವಾಜಿ ಮಹಾರಾಜ್, ಮಹಾರಾಣಿ ಪದ್ಮಿನಿ ಫೋಟೋ

ಎರಡು ದಿನಗಳ ಕಾಲ ಚಿತ್ರಹಿಂಸೆ ಅನುಭವಿಸಿದ ಯುವತಿ, ಫೆಬ್ರವರಿ 18 ರಂದು ಆರೋಪಿಯ ಫೋನಿನಿಂದಲೇ ತನ್ನ ತಾಯಿಗೆ ಕರೆ ಮಾಡಿ ಸ್ಥಳೀಯ ಭಾಷೆಯಲ್ಲಿ ವಿಷಯ ತಿಳಿಸಿದ್ದಾಳೆ. ಇದರಿಂದ ಆರೋಪಿಗೆ ವಿಷಯ ಅರ್ಥವಾಗಲಿಲ್ಲ. ತಕ್ಷಣವೇ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಯುವತಿಯನ್ನು ರಕ್ಷಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

​​​​​​​

Source link

ನೀಲಿ ಬಣ್ಣಕ್ಕೆ ತಿರುಗುವ ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ! – Kannada News | Think Twice Before Eating This Blue Staining Mushroom: It Can Induce Hallucinations

ಬೆಂಗಳೂರು, ಫೆಬ್ರವರಿ 23: ಲ್ಯಾನ್ಮಾವೋ ಏಷ್ಯಾಟಿಕಾ ಎಂಬ ಕುತೂಹಲಕಾರಿ ಅಣಬೆಯು ಚೀನಾದ ಯುನಾನ್ ಪ್ರಾಂತ್ಯದಲ್ಲಿ ಕಂಡುಬರುತ್ತದೆ. ಇದನ್ನು ಸರಿಯಾಗಿ ಬೇಯಿಸದೆ ಸೇವಿಸಿದರೆ ವಿಚಿತ್ರ ಭ್ರಮೆಗಳಿಗೆ ಒಳಗಾಗುವ ಸಾಧ್ಯತೆಯಿದೆ. ಈ ಅಣಬೆಯನ್ನು “ಜಿಯಾನ್ ಶೋ ಕ್ವಿಂಗ್” ಎಂದೂ ಕರೆಯುತ್ತಾರೆ. ಇದರರ್ಥ ಮುಟ್ಟಿದಾಗ ನೀಲಿ ಬಣ್ಣಕ್ಕೆ ತಿರುಗುವುದು. ಆಕ್ಸಿಡೀಕರಣ ಪ್ರಕ್ರಿಯೆಯಿಂದಾಗಿ ಕತ್ತರಿಸಿದಾಗ ಅಥವಾ ಒತ್ತಿದಾಗ ಇದು ಗಾಢ ನೀಲಿ ಬಣ್ಣಕ್ಕೆ ಇದು ತಿರುಗುತ್ತದೆ. ಲ್ಯಾನ್ಮಾವೋ ಏಷ್ಯಾಟಿಕಾ ತಿಂದವರು ತಮ್ಮ ಸುತ್ತಮುತ್ತಲಿನ ಜನರನ್ನು ಪುಟ್ಟ ಪುಟ್ಟದಾಗಿ ಕಾಣುವ “ಲಿಟಲ್ ಪೀಪಲ್ ಹ್ಯಾಲುಸಿನೇಷನ್” ಅಂದರೆ “ಆಲಿಸ್ ಇನ್ ವಂಡರ್ಲ್ಯಾಂಡ್ ಸಿಂಡ್ರೋಮ್” ನಂತಹ ಭ್ರಮೆಗಳಿಗೆ ಒಳಗಾಗುತ್ತಾರೆ. ಇದು ಸಾಮಾನ್ಯ ಮ್ಯಾಜಿಕ್ ಮಶ್ರೂಮ್‌ಗಳಲ್ಲಿರುವ ಸೈಲೋಸೈಬಿನ್ ಅಂಶವನ್ನು ಹೊಂದಿಲ್ಲ. ಇದರ ವಿಷಕಾರಿ ಅಂಶಗಳು ಮತ್ತು ಅವು ಭ್ರಮೆ ಹುಟ್ಟಿಸುವ ವಿಧಾನದ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಯುನಾನ್‌ನಲ್ಲಿ ಇದು ರುಚಿಕರ ಅಣಬೆ ಎಂದು ಪರಿಗಣಿಸಲಾಗಿದ್ದರೂ ಇದನ್ನು ಹೆಚ್ಚಿನ ತಾಪಮಾನದಲ್ಲಿ ಚೆನ್ನಾಗಿ ಬೇಯಿಸುವುದು ಕಡ್ಡಾಯ. ಸರಿಯಾಗಿ ಬೇಯಿಸಿದಾಗ ಮಾತ್ರ ಇದರ ವಿಷಕಾರಿ ಅಂಶಗಳು ನಾಶವಾಗಿ ತಿನ್ನಲು ಯೋಗ್ಯವಾಗುತ್ತದೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೆಂಪುಕೋಟೆಗೆ ಬಂತು ಖಲಿಸ್ತಾನಿ ಉಗ್ರರಿಂದ ಬಾಂಬ್ ಬೆದರಿಕೆ – Kannada News | Security Heightened in Delhi After Threat Call Targets Red Fort, Assembly

ನವದೆಹಲಿ, ಫೆಬ್ರವರಿ 23: ಕೆಂಪುಕೋಟೆ, ದೆಹಲಿ ಸಚಿವಾಲಯ ಹಾಗೂ ದೆಹಲಿ ವಿಧಾನಸಭೆಯಲ್ಲಿ ಬಾಂಬ್(Bomb) ಇಡುವುದಾಗಿ ಖಲಿಸ್ತಾನಿ ಉಗ್ರರು ಬೆದರಿಕೆ ಹಾಕಿದ್ದಾರೆ. ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದೆ. ದೆಹಲಿ ಪೊಲೀಸರು ಕೂಡಲೇ ಪ್ರತಿಕ್ರಿಯಿಸಿದ್ದು, ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಸಚಿವಾಲಯದಲ್ಲಿ ಸಂಪೂರ್ಣ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಈ ಇಮೇಲ್ ಖಲಿಸ್ತಾನಿ ಗುಂಪಿನ ಹೆಸರಿನಲ್ಲಿ ಬಂದಿದೆ ಎಂದು ವರದಿಯಾಗಿದೆ.

ಬೆದರಿಕೆಯ ಮೂಲವನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ. ಕೆಂಪು ಕೋಟೆ ಪ್ರದೇಶದ ಬಳಿ ಭಯೋತ್ಪಾದಕ ಬೆದರಿಕೆ ಇದೆ ಎಂಬ ಗುಪ್ತಚರ ವರದಿಗಳ ನಂತರ ದೆಹಲಿಯ ಅಧಿಕಾರಿಗಳು ನಗರದಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ. ದಾಳಿಯ ಭೀತಿಯ ನಡುವೆಯೂ, ಸ್ಥಳೀಯ ಪ್ರಸಿದ್ಧ ದೇವಾಲಯ ಸೇರಿದಂತೆ ಚಾಂದನಿ ಚೌಕ್‌ನಲ್ಲಿ ಭದ್ರತಾ ಪಡೆಗಳು ನಿಕಟವಾಗಿ ನಿಗಾ ವಹಿಸಿವೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೊಯ್ಬಾ ರಾಷ್ಟ್ರ ರಾಜಧಾನಿಯಲ್ಲಿ ಐಇಡಿ ದಾಳಿ ನಡೆಸಲು ಯೋಜನೆ ರೂಪಿಸುತ್ತಿರಬಹುದು ಎಂದು ಗುಪ್ತಚರ ಮೂಲಗಳು ಸೂಚಿಸಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ದೆಹಲಿಯಾದ್ಯಂತ ಪ್ರಮುಖ ಧಾರ್ಮಿಕ ಸ್ಥಳಗಳು ಮತ್ತು ಇತರ ಸೂಕ್ಷ್ಮ ಸ್ಥಳಗಳ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಪ್ರಮುಖ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಸಂಭಾವ್ಯ ಬೆದರಿಕೆಗಳ ಬಗ್ಗೆ ಅಧಿಕಾರಿಗಳು ಜಾಗರೂಕರಾಗಿರುವುದರಿಂದ, ವಿಶೇಷವಾಗಿ ಪ್ರಮುಖ ದೇವಾಲಯಗಳು ಮತ್ತು ಜನನಿಬಿಡ ಮಾರುಕಟ್ಟೆಗಳ ಬಳಿ ಕಣ್ಗಾವಲು ತೀವ್ರಗೊಳಿಸಲಾಗಿದೆ.

ಮತ್ತಷ್ಟು ಓದಿ: ಭಯಾನಕ ವಿಡಿಯೋ: ಮನೆಯ ತಾರಸಿಯಲ್ಲಿ ಬಾಂಬ್ ಸ್ಫೋಟ, ಮಹಿಳೆಯರು ಸೇರಿ ಎಲ್ಲರ ಬಟ್ಟೆಗೂ ತಗುಲಿದ ಬೆಂಕಿ

ಸಾರ್ವಜನಿಕರು ಜಾಗರೂಕರಾಗಿರಿ ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಯ ಬಗ್ಗೆ ವರದಿ ಮಾಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ನಿರ್ಣಾಯಕ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ನವೆಂಬರ್ 10 ರ ಸಂಜೆ, ಲಾಲ್ ಕ್ವಿಲಾ ಮೆಟ್ರೋ ನಿಲ್ದಾಣದ ಬಳಿ ನಿಧಾನವಾಗಿ ಚಲಿಸುತ್ತಿದ್ದ ಹುಂಡೈ ಐ20 ಕಾರಿನಲ್ಲಿ ಪ್ರಬಲವಾದ ಸ್ಫೋಟ ಸಂಭವಿಸಿ 15 ಜನರು ಸಾವನ್ನಪ್ಪಿದ್ದರು ಮತ್ತು ಅನೇಕರು ಗಾಯಗೊಂಡಿದ್ದರು. ಈ ಸ್ಫೋಟದ ಪರಿಣಾಮವಾಗಿ ಸುತ್ತಮುತ್ತಲಿನ ಹಲವಾರು ವಾಹನಗಳು ಸುಟ್ಟುಹೋದವು, ಇದರ ಪರಿಣಾಮವಾಗಿ ವ್ಯಾಪಕ ಹಾನಿ ಸಂಭವಿಸಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅವರು ರಶೀ, ಇವರು ವಿಜು: ರಶ್ಮಿಕಾ, ವಿಜಯ್ ದೇವರಕೊಂಡ ಪರಸ್ಪರ ಕರೆಯೋದು ಹೀಗೆ – Kannada News | Rashmika Mandanna Vijay Deverakonda call each other nickname Vijju and Rushie

ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ (Vijay Deverakonda) ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಉದಯಪುರದಲ್ಲಿ ಫೆಬ್ರವರಿ 26ರಂದು ಈ ಸೆಲೆಬ್ರಿಟಿ ಜೋಡಿಯ ಮದುವೆ ನಡೆಯಲಿದೆ. ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ದ ರಶ್ಮಿಕಾ (Rashmika Mandanna) ಮತ್ತು ವಿಜಯ್ ದೇವರಕೊಂಡ ಅವರು ಈ ಮೊದಲೇ ಹಲವು ಬಾರಿ ಸೂಚನೆ ನೀಡಿದ್ದರು. ನೇರವಾಗಿ ಪ್ರೀತಿಯನ್ನು ಒಪ್ಪಿಕೊಳ್ಳದೇ ಇದ್ದರೂ ಕೂಡ ಅವರ ವರ್ತನೆಯಲ್ಲಿ ಎಲ್ಲವೂ ಗೋಚರ ಆಗುತ್ತಿತ್ತು. ಪರಸ್ಪರ ಪ್ರೀತಿಯಿಂದ ಅಡ್ಡಹೆಸರು (Nickname) ಕರೆಯುತ್ತಿದ್ದಿದ್ದೇ ಈ ಮಾತಿಗೆ ಸಾಕ್ಷಿ.

ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಅವರನ್ನು ವಿಜು ಎಂದು ಕರೆಯುತ್ತಿದ್ದರು. ಅದೇ ರೀತಿ, ರಶ್ಮಿಕಾ ಮಂದಣ್ಣ ಅವರನ್ನು ವಿಜಯ್ ದೇವರಕೊಂಡ ಅವರು ರಶೀ ಎಂದು ಕರೆಯುತ್ತಿದ್ದರು. ಇದೆಲ್ಲ ಗುಟ್ಟಾಗಿ ನಡೆದಿದ್ದಲ್ಲ. ಸೋಶಿಯಲ್ ಮೀಡಿಯಾದಲ್ಲಿ ಕೂಡ ರಶ್ಮಿಕಾ ಮಂದಣ್ಣ ಅವರು ಪ್ರೀತಿಯಿಂದ ವಿಜು ಎಂದು ಕರೆದಿದ್ದರು. ಆಗಲೇ ಅಭಿಮಾನಿಗಳಿಗೆ ಎಲ್ಲವೂ ಖಚಿತ ಆಗಿತ್ತು.

ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ ಬಳಿಕ ರಶ್ಮಿಕಾ ಮಂದಣ್ಣ ಅವರು ತೆಲುಗು ಚಿತ್ರರಂಗಕ್ಕೆ ಹಾರಿದರು. ಅಲ್ಲಿ ಅವರಿಗೆ ವಿಜಯ್ ದೇವರಕೊಂಡ ಜೊತೆ ಆಪ್ತತೆ ಬೆಳೆಯಿತು. ಇಬ್ಬರು ಜೊತೆಯಾಗಿ ‘ಗೀತ ಗೋವಿಂದಂ’, ‘ಡಿಯರ್ ಕಾಮ್ರೇಡ್’ ಸಿನಿಮಾಗಳನ್ನು ಮಾಡಿದರು. ಆ ನಂತರ ಅವರು ಇನ್ನಷ್ಟು ಕ್ಲೋಸ್ ಆದರು. ಅವರಿಬ್ಬರ ನಡುವೆ ಪ್ರೀತಿ ಚಿಗುರಿತು.

2025ರ ಅಕ್ಟೋಬರ್​ ತಿಂಗಳಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಒಂದೇ ಒಂದು ಫೋಟೋ ಕೂಡ ಹೊರಬರಲಿಲ್ಲ. ಆ ನಂತರ ‘ದಿ ಗರ್ಲ್​ಫ್ರೆಂಡ್’ ಸಿನಿಮಾದ ಸಕ್ಸಸ್ ಮೀಟ್​​ನಲ್ಲಿ ರಶ್ಮಿಕಾ ಕೈಗೆ ವಿಜಯ್ ದೇವರಕೊಂಡ ಕಿಸ್ ಮಾಡಿದರು. ಆ ಮೂಲಕ ಅವರು ಪರೋಕ್ಷವಾಗಿ ತಮ್ಮ ಎಂಗೇಜ್​​ಮೆಂಟ್ ವಿಷಯವನ್ನು ಒಪ್ಪಿಕೊಂಡಂತೆ ಆಗಿತ್ತು.

ಇದನ್ನೂ ಓದಿ: ಮದುವೆಗೂ ಮುನ್ನ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಗಡಿಬಿಡಿ; ವಿಡಿಯೋ ವೈರಲ್

ಬಣ್ಣದ ಲೋಕದಲ್ಲಿ ಇಬ್ಬರಿಗೂ ಬೇಡಿಕೆ ಇದೆ. ಸಾಲು ಸಾಲು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ‘ರಣಬಾಲಿ’ ಸಿನಿಮಾದಲ್ಲಿ ಮತ್ತೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಒಟ್ಟಿಗೆ ಅಭಿನಯಿಸಲಿದ್ದಾರೆ. ಸದ್ಯಕ್ಕೆ ಮದುವೆ ಸಲುವಾಗಿ ಬ್ರೇಕ್ ಪಡೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಹುಲ್ ಗಾಂಧಿ ಇಂಡಿಯ ಬ್ಲಾಕ್ ನಾಯಕನ ಸ್ಥಾನದಿಂದ ಕೆಳಗಿಳಿಯಬೇಕು; ಮಣಿಶಂಕರ್ ಅಯ್ಯರ್ ಒತ್ತಾಯ – Kannada News | Mani Shankar Aiyar attack on Congress urges Rahul Gandhi to step down as INDIA bloc leader

ನವದೆಹಲಿ, ಫೆಬ್ರವರಿ 23: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಬಿಸಿ ತುಪ್ಪವಾಗಿದ್ದಾರೆ. ತಮ್ಮದೇ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಮಣಿಶಂಕರ್ ಅಯ್ಯರ್ ರಾಹುಲ್ ಗಾಂಧಿ (Rahul Gandhi) ಇಂಡಿಯ ಬ್ಲಾಕ್ ನಾಯಕ ಸ್ಥಾನದಿಂದ ಕೆಳಗಿಳಿಯಬೇಕೆಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಪ್ರಶ್ನಿಸಿದ್ದು, ಕಾಂಗ್ರೆಸ್ ನೇತೃತ್ವದ ಇಂಡಿಯ ಬ್ಲಾಕ್‌ನ ನಾಯಕ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಾಯಿಸಿದ್ದಾರೆ. ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಎಂ.ಕೆ. ಸ್ಟಾಲಿನ್ ಮತ್ತು ತೇಜಸ್ವಿ ಯಾದವ್ ಸೇರಿದಂತೆ ಹಲವಾರು ಪ್ರಮುಖ ವಿರೋಧ ಪಕ್ಷದ ನಾಯಕರು ರಾಹುಲ್ ಗಾಂಧಿಯ ಬದಲಾಗಿ ಇಂಡಿಯ ಬ್ಲಾಕ್ ನಾಯಕರಾಗಲು ಅರ್ಹತೆ ಹೊಂದಿದ್ದಾರೆ ಎಂದು ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷದ ಇತ್ತೀಚಿನ ಚುನಾವಣಾ ಹಿನ್ನಡೆಗಳ ಕಾರಣದಿಂದಾಗಿ ರಾಹುಲ್ ಗಾಂಧಿ ಬದಲು ಈ ನಾಯಕರು ಇಂಡಿಯ ಮೈತ್ರಿಕೂಟವನ್ನು ಬಲಪಡಿಸಲು ಮತ್ತು ಮುನ್ನಡೆಸಲು ಹೆಚ್ಚಿನ ಸಮಯವನ್ನು ಮೀಸಲಿಡುತ್ತಾರೆಂಬ ಭರವಸೆಯಿದೆ. ಹೀಗಾಗಿ, ಅವರ ಪೈಕಿ ಒಬ್ಬರು ಇಂಡಿಯ ಬ್ಲಾಕ್ ನಾಯಕರಾಗಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿಯ ಸಂಸತ್ ಸದಸ್ಯತ್ವ ರದ್ದುಗೊಳಿಸುವಂತೆ ಬಿಜೆಪಿ ಸಂಸದರ ಆಗ್ರಹ

“ನಾವು ಈಗ ತುಂಬಾ ಅಸಮರ್ಥರಾಗಿದ್ದೇವೆ. ನಾವು ಮಮತಾ ಬ್ಯಾನರ್ಜಿಯನ್ನು ದೂರವಿಟ್ಟಿದ್ದು ಕಾಂಗ್ರೆಸ್ ಅನ್ನು ದುರ್ಬಲಗೊಳಿಸಲು ಕಾರಣವಾಯಿತು. ಹೀಗಾಗಿ, ರಾಹುಲ್ ಗಾಂಧಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟು ಪ್ರಾದೇಶಿಕ ಪಕ್ಷದ ನಾಯಕರಾದ ಸ್ಟಾಲಿನ್, ಮಮತಾ ಬ್ಯಾನರ್ಜಿ, ಅಖಿಲೇಶ್, ತೇಜಸ್ವಿ ಅಥವಾ ಬೇರೆ ಯಾರಿಗಾದರೂ ಈ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅವಕಾಶ ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

ಹಾಗೇ, ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಅವರು ಭಾರತ ಬಣದ ಸಂಚಾಲಕರಾಗಲು “ಅತ್ಯುತ್ತಮ” ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. “2029ರ ಗುರಿಯನ್ನು ಹೊಂದಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಇಂಡಿಯ ಬಣವನ್ನು ಮುನ್ನಡೆಸಲು ಎಂ.ಕೆ ಸ್ಟಾಲಿನ್ ಅವರಿಗಿಂತ ಉತ್ತಮ ವ್ಯಕ್ತಿ ಯಾರೂ ಇಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Video: ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಭವಿಷ್ಯ

ಮಣಿಶಂಕರ್ ಅಯ್ಯರ್ ಕಾಂಗ್ರೆಸ್ ಬಗ್ಗೆ ಈ ರೀತಿಯ ನಿಲುವು ತಳೆದಿರುವುದು ಇದೇ ಮೊದಲಲ್ಲ. ಈ ಹಿಂದಿನ ಹೇಳಿಕೆಯಲ್ಲಿ, ಪಿಣರಾಯಿ ವಿಜಯನ್ ಅವರು ಕೇರಳದ ಮುಖ್ಯಮಂತ್ರಿಯಾಗಿ ತಮ್ಮ ಪಾತ್ರವನ್ನು ಉಳಿಸಿಕೊಳ್ಳಲು ಉತ್ತಮ ಸ್ಥಾನದಲ್ಲಿದ್ದಾರೆ ಎಂದು ಅಯ್ಯರ್ ಹೇಳಿದ್ದರು. ಕೇರಳ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗುತ್ತಿರುವಾಗ ಅವರು ನೀಡಿದ ಈ ಹೇಳಿಕೆ ಕಾಂಗ್ರೆಸ್ ಹೈಕಮಾಂಡ್​​ಗೆ ಮುಜುಗರ ತಂದಿತ್ತು.

ಮಣಿಶಂಕರ್ ಅಯ್ಯರ್ ಅವರ ಹೇಳಿಕೆಗಳಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದ್ದು, ಕಳೆದ ಕೆಲವು ವರ್ಷಗಳಿಂದ ಅವರಿಗೆ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ ಮತ್ತು ಅವರು ಸಂಪೂರ್ಣವಾಗಿ ತಮ್ಮ ವೈಯಕ್ತಿಕ ನಿಲುವನ್ನು ಮಾತ್ರ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 3:27 pm, Mon, 23 February 26

Source link

ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಇನ್ನಷ್ಟು ವಿಳಂಬ? ಕಾರಣ ಇಲ್ಲಿದೆ – Kannada News | Bengaluru–Chennai Expressway Opening Delayed to 2027; Only Eighty Percent Work Completed in Tamil Nadu Region

ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇImage Credit source: Google

ಬೆಂಗಳೂರು, ಫೆಬ್ರವರಿ 23: ಶೀಘ್ರದಲ್ಲಿಯೇ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಪ್ರಯಾಣಿಕರಿಗೆ, ನಿರಾಸೆ ಮೂಡಿಸುವ ಸುದ್ದಿಯೊಂದು ಹೊರಬಂದಿದೆ. ಈ ರಸ್ತೆಯಲ್ಲಿ ಸಂಚರಿಸಲು ಪ್ರಯಾಣಿಕರು 2027ರ ವರೆಗೂ ಕಾಯಬೇಕಾಗಬಹುದು ಎನ್ನಲಾಗಿದ್ದು, ಕೆಲವು ಅಡಚಣೆಗಳು ಕಾಮಗಾರಿಯ ವೇಗಕ್ಕೆ ಬ್ರೇಕ್​​ ಹಾಕಿದೆ. ಈ ಕಾರಿಡಾರ್ ಮೂರು ರಾಜ್ಯಗಳನ್ನು ಸಂಪರ್ಕಿಸುವುದರಿಂದ ಗಡಿ ದಾಟಿ ಸಮನ್ವಯ ಸಾಧಿಸುವುದು ಅಧಿಕಾರಿಗಳಿಗೆ ಸವಾಲಾಗುತ್ತಿದೆ. ವರದಿಗಳ ಪ್ರಕಾರ, 263 ಕಿಲೋ ಮೀಟರ್ ಉದ್ದದ ಈ ಕಾರಿಡಾರ್ ಯೋಜನೆಯಲ್ಲಿ ತಮಿಳುನಾಡು ಭಾಗದಲ್ಲೇ ಪ್ರಮುಖ ಅಡಚಣೆಗಳು ಎದುರಾಗಿವೆ ಎನ್ನಲಾಗಿದೆ.

ಸದ್ಯದ ಸ್ಥಿತಿಗತಿ ಏನು?

  • ಕರ್ನಾಟಕ ಭಾಗದಲ್ಲಿ ಶೇ.100ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಹೊಸಕೋಟೆಯಿಂದ ಕೆಜಿಎಫ್‌ವರೆಗೆ 72 ಕಿ.ಮೀ. ಸುಮಾರು ಒಂದು ವರ್ಷದಿಂದ ಸಂಚಾರಕ್ಕೆ ಮುಕ್ತವಾಗಿದೆ.
  • ಆಂಧ್ರ ಪ್ರದೇಶ ವ್ಯಾಪ್ತಿಯಲ್ಲಿ ಶೇ.92ರಷ್ಟು ಅಂದರೆ 85 ಕಿ.ಮೀ. ಉದ್ದದ ರಸ್ತೆಯ ಪೈಕಿ ಬಹುತೇಕ ಕಾಮಗಾರಿ ಕಂಪ್ಲೀಟ್​​ ಆಗಿದೆ.
  • ಆದರೆ ತಮಿಳುನಾಡು ಭಾಗದಲ್ಲಿಯೇ ಹೆಚ್ಚಿನ ಪ್ರಮಾಣದ ಕಾಮಗಾರಿ ಬಾಕಿ ಉಳಿದಿದೆ. ಶೇ.80ರಷ್ಟು ಮಾತ್ರ ಕೆಲಸ ಆಗಿದ್ದು, 106 ಕಿ.ಮೀ. ಉದ್ದದ ಈ ಭಾಗದಲ್ಲಿಯೇ ಇನ್ನೂ ಶೇ.20ರಷ್ಟು ಕಾಮಗಾರಿ ಆಗಬೇಕಿದೆ.

ಇದನ್ನೂ ಓದಿ:  ಮತ್ತಷ್ಟು ವಿಳಂಬವಾಗಲಿದೆ ಬೆಂಗಳೂರು ಚೆನ್ನೈ ಎಕ್ಸ್​ಪ್ರೆಸ್ ವೇ ಕಾಮಗಾರಿ

ವಿಳಂಬಕ್ಕೆ ಕಾರಣವೇನು?

ಮೊದಲಿನ ಯೋಜನೆಯ ಪ್ರಕಾರ 2024ರೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಅರಣ್ಯ ಅನುಮತಿಗಳನ್ನು ಪಡೆಯುವಲ್ಲಿ ವಿಳಂಬ, ಭೂಸ್ವಾಧೀನ ಸಮಸ್ಯೆಗಳು ಮತ್ತು ಹಣಕಾಸು ಸಂಕಷ್ಟ ಯೋಜನೆಗೆ ಹಿನ್ನೆಡೆ ಉಂಟು ಮಾಡಿವೆ. ತಮಿಳುನಾಡಿನ ಅರಕ್ಕೋಣಂ–ಕಾಂಚೀಪುರಂ ಭಾಗದ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ನಿಧಿ ಕೊರತೆ ಉಂಟಾಗಿ, 2025ರ ಮೇ ತಿಂಗಳಲ್ಲಿ ಕೆಲಸ ಸಂಪೂರ್ಣ ನಿಂತಿದೆ.

ಇನ್ನು ಇದು ಗ್ರೀನ್‌ಫೀಲ್ಡ್ (ಹೊಸ ಮಾರ್ಗ) ಯೋಜನೆಯಾಗಿರುವುದರಿಂದ, ಸಂಪೂರ್ಣ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡ ಬಳಿಕವೇ ಸಂಚಾರಕ್ಕೆ ಮುಕ್ತವಾಗಲು ಸಾಧ್ಯ. ಮಧ್ಯದಲ್ಲಿ 25 ಕಿ.ಮೀ. ಕಾಮಗಾರಿ ಬಾಕಿ ಇರುವಾಗ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲು ಬರಲ್ಲ. ಹೀಗಾಗಿ ಕುಂಟುತ್ತಾ ಕಾಮಗಾರಿ ಸಾಗಿರುವ ಹಿನ್ನೆಲೆ, ಕ್ರಮಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮುಂದಾಗಿರೋದಾಗಿ ಟೈಮ್ಸ್​​ ನೌ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಾಕು ಮಗ-ತಂಗಿಯಿಂದಲೇ ಮಹಿಳೆಯ ಹತ್ಯೆ: ಓರ್ವ ವ್ಯಕ್ತಿಯಿಂದ ಬಯಲಾಯ್ತು ಕೊಲೆ ರಹಸ್ಯ – Kannada News | Tumakuru: FDA Officer Jayalakshmi Murder case: Family Betrayal for Property Exposed

ತುಮಕೂರು, ಫೆಬ್ರವರಿ 23: ಅವರು ವಿದ್ಯಾವಂತರು. ತುರುವೇಕೆರೆ ಬಿಇಒ ಕಚೇರಿಯ ಎಫ್​ಡಿಎ (FDA) ಅಧಿಕಾರಿ. ನಿವೃತ್ತಿಗೆ ಇನ್ನು ಎರಡು ವರ್ಷ ಬಾಕಿ ಇತ್ತು. ಎಲ್ಲರ ಜೊತೆ ಖುಷಿ ಖುಷಿಯಾಗಿದ್ದು, ಅವರ ಆರೋಗ್ಯ ಸಹ ಚೆನ್ನಾಗಿಯೇ ಇತ್ತು. ಆದರೆ ಅದೊಂದು ದಿನ ರಾತ್ರಿ ಮಲಗಿದ ಅವರು ಮತ್ತೆ ಮೇಲೇಳಲೇ ಇಲ್ಲ. ಜೊತೆಗಿದ್ದ ಸಹೋದರಿ ಮತ್ತು ಸಾಕು ಮಗ ಹೃದಯಾಘಾತದಿಂದ ಸಾವನಪ್ಪಿದ್ದಾರೆಂದು ಕಣ್ಣೀರು ಹಾಕಿದ್ದರು. ಇಬ್ಬರ ಮಾತನ್ನು ನಂಬಿದ ಇಡಿ ಊರೇ ಅವರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿತ್ತು. ಇನ್ನೇನು ಮೃತದೇಹ ಮಣ್ಣಿ ಗಿಡುವ ಸಮಯ, ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಅದು ಅಸಹಜ ಸಾವಲ್ಲ ಬದಲಿಗೆ ಕೊಲೆ (murder) ಎನ್ನುವುದು ಬಯಲಾಗಿದೆ.

ಕೊಲೆಯಾದ ಮಹಿಳೆ ಹೆಸರು ಜಯಲಕ್ಷ್ಮಿ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಜೋಗಿಪಾಳ್ಯ ನಿವಾಸಿ. ವೃತ್ತಿಯಲ್ಲಿ ತುರುವೇಕೆರೆ ಬಿಇಒ ಕಚೇರಿಯ ಎಫ್​ಡಿಎ ಅಧಿಕಾರಿ. ಸರ್ಕಾರಿ ಶಿಕ್ಷಕನಾಗಿದ್ದ ಪತಿ ಶ್ರೀನಿವಾಸ್ ಕಳೆದ 25 ವರ್ಷಗಳ ಹಿಂದೆ ನಿಧನ ಹೊಂದಿದ್ದು, ಆ ಬಳಿಕ ಅನುಕಂಪದ ಆಧಾರದ ಮೇಲೆ ಸಿಕ್ಕ ಕೆಲಸವದು. ಆರ್ಥಿಕವಾಗಿ ಚೆನ್ನಾಗಿದ್ದ ಇವರು ಫೆಬ್ರವರಿ 19ರ ರಾತ್ರಿ ಸಾವನಪ್ಪಿದ್ದಾರೆ.

ಇದನ್ನೂ ಓದಿ: Tumakuru: ಸಾಕು ಮಗ, ಸಹೋದರಿಯಿಂದಲೇ ಮಹಿಳೆಯ ಕೊಲೆ; ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರ!

ಗಂಡನ ನಿಧನದ ಬಳಿಕ ಒಂಟಿಯಾಗಿದ್ದ ಜಯಲಕ್ಷ್ಮಿ ಅವರಿಗೆ ಮಕ್ಕಳಿರಲಿಲ್ಲ. ಹೀಗಾಗಿ ತುಮಕೂರು ಪಟ್ಟಣದಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದ ತನ್ನ ತಂಗಿ ಅನುಸೂಯ ಮಗ ಚಂದ್ರಶೇಖರ್​​ನನ್ನೇ ದತ್ತು ಪಡೆದು ಸಾಕಿದ್ದರು. ಆತ ಸಹ ಚೆನ್ನಾಗಿ ಓದಿಕೊಂಡಿದ್ದ. ಬೆಳೆದು ದೊಡ್ಡವಾನದ ಆತ ಖಾಸಗಿ ಆಸ್ಪತ್ರೆಯ ಲ್ಯಾಬ್​ನಲ್ಲಿ ಕೆಲಸ ಮಾಡಿಕೊಂಡು ತುಮಕೂರಿನಲ್ಲಿ ವಾಸವಿದ್ದ. ಆದರೇ ಅದ್ಯಾಕೋ ಕಳೆದ ಎಂಟು ತಿಂಗಳ ಹಿಂದಷ್ಟೇ ತನ್ನ ತಾಯಿ ಅನುಸೂಯ ಜೊತೆ‌ ಸಾಕು ತಾಯಿ ಜಯಲಕ್ಷ್ಮಿಯ ಚಿಕ್ಕನಾಯಕನಹಳ್ಳಿ ಮನೆಗೆ ಬಂದು ವಾಸವಿದ್ದ. ಹೀಗೆ ಮೂವರು ವಾಸವಿದ್ದ ಜೋಗಿಪಾಳ್ಯದ ಮನೆಯಲ್ಲಿ ರಾತ್ರಿ ಎಲ್ಲರೊಟ್ಟಿಗೆ ಊಟ ಮಾಡಿದ್ದ ಜಯಲಕ್ಷ್ಮಿ ಬೆಳಗಾಗುವಷ್ಟರಲ್ಲಿ ಸಾವನಪ್ಪಿದ್ದರು.

ಶವ ಮಣ್ಣು ಮಾಡುವಷ್ಟರಲ್ಲೇ ಸ್ಫೋಟಕ ಟ್ವಿಸ್ಟ್

ಮಲಗಿದ್ದ ಜಾಗದಲ್ಲೇ ಜಯಲಕ್ಷ್ಮಿ ಕೊನೆಯುಸಿರು ಎಳೆದರೆ, ಮಗ ಹಾಗೂ ತಂಗಿ ಅನುಸೂಯ ಕಣ್ಣೀರು ಹಾಕಿದ್ದರು. ಸಂಬಂಧಿಕರಿಗೆ ಕರೆ ಮಾಡಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದಿದ್ದರು. ಜೊತೆಗೆ ಮೃತದೇಹ ಊರಿಗೆ ತರುವುದಾಗಿ, ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲು ಹೇಳಿದ್ದರು. ಹೀಗೆ ರಾತ್ರಿ ಮೃತಪಟ್ಟ ಜಯಲಕ್ಷ್ಮಿ ಶವ ಬೆಳಗಾಗುವಷ್ಟರಲ್ಲಿ ಕಂಟಲಕೆರೆ ಊರು ತಲುಪಿತ್ತು. ಅದಾಗಲೇ ವಿಚಾರ ಬಾಯಿಂದ ಬಾಯಿಗೆ ಎಂಬಂತೆ ಎಲ್ಲರಿಗೂ ತಲುಪಿತ್ತು. ಸಂಬಂಧಿಕರು ಸಹ ಕಂಟಲಕೆರೆಯ ನಿವಾಸದತ್ತು ಬಂದಿದ್ದರು. ಅಂತ್ಯಕ್ರಿಯೆಗೆ ಸಿದ್ಧತೆ ಸಹ ನಡೆದು ಮಣ್ಣು ಮಾಡುವ ಕಾರ್ಯಕ್ಕೆಂದು ಶವ ಜಮೀನಿನತ್ತ ತೆಗೆದುಕೊಂಡು ಹೊರಟಿದ್ದರು. ಆದರೆ ಈ ವೇಳೆ ಅಲ್ಲಿಗೆ ಎಂಟ್ರಿ ಕೊಟ್ಟ ಪೊಲೀಸರು ಅವರ ಸಾವಿನ ಸಂಗತಿಗೆ ಸ್ಫೋಟಕ ಟ್ವಿಸ್ಟ್ ಕೊಟ್ಟಿದ್ದರು. ಅಸಲಿಗೆ ಜಯಲಕ್ಷ್ಮಿ ಹೃದಯಾಘಾತದಿಂದ ಸಾವನಪ್ಪಿರಲಿಲ್ಲ, ಬದಲಾಗಿ ಅವರ ಕೊಲೆಯಾಗಿತ್ತು.

ಜಯಲಕ್ಷ್ಮಿ ಸಾವಿನ ಬಗ್ಗೆ ವ್ಯಕ್ತಿ ಅನುಮಾನ

ಜಯಲಕ್ಷ್ಮಿ ಸಾವಿನ ಪ್ರಕರಣದಲ್ಲಿ ತಿರುವು ಕೊಟ್ಟಿದ್ದು ಅದೊಬ್ಬ ವ್ಯಕ್ತಿಯ ದೂರು. ಅವರ ಸಾವಿನ ಸಂಗತಿ ಕೇಳಿ ಎಲ್ಲರಿಗಿಂತ ಆ ವ್ಯಕ್ತಿ ಅತಿಯಾಗಿ ಮರುಗಿದ್ದರು. ಜಯಲಕ್ಷ್ಮಿಗೆ ಜೀವಕ್ಕೆ ಜೀವವಾಗಿದ್ದ ವ್ಯಕ್ತಿ. ಜಯಲಕ್ಷ್ಮಿ ಎಂದರೇ ಆತನಿಗೆ ಎಲ್ಲಿಲ್ಲದ ಪ್ರೀತಿ. ಅಸಲಿಗೆ ಜಯಲಕ್ಷ್ಮಿಗೂ ಸಹ ಆತನ ಮೇಲೆ ಅದೇ ರೀತಿಯ ಭಾವನೆ. ಆತನ ಹೆಸರು ಶ್ರೀನಿವಾಸ್.

ಜಯಲಕ್ಷ್ಮಿ ಗಂಡ ಕಳೆದುಕೊಂಡ ಬಳಿಕ ಪರಿಚಯವಾಗಿದ್ದ ಶ್ರೀನಿವಾಸ್, ಆಕೆಗೆ ಆತ್ಮೀಯನಾಗಿದ್ದ. ಗಂಡನಂತೆ ಆಕೆಯ ಜೊತೆಗಿದ್ದರು ಸಹ ಮದುವೆಯಾಗಿರಲಿಲ್ಲ ಅಷ್ಟೇ. ಪೊಲೀಸ್ ಮಾಹಿತಿ ಪ್ರಕಾರ ಇಬ್ಬರಲ್ಲೂ ಅತಿಯಾದ ಪ್ರೀತಿ ಇತ್ತು. ಒಟ್ಟಿಗೆ ವಾಸ ಸಹ ಮಾಡುತಿದ್ದರು. ಇಷ್ಟು ಚೆನ್ನಾಗಿದ್ದ ಇಬ್ಬರು ಕಳೆದ ಕೆಲ ತಿಂಗಳಿಂದ ಪ್ರತ್ಯೇಕವಾಗಿ ವಾಸ ಮಾಡುತಿದ್ದರು. ಇದರ ನಡುವೆ ಜಯಲಕ್ಷ್ಮಿ ಸಾವು ಶ್ರೀನಿವಾಸ್​ಗೆ ಅನುಮಾನ ಮೂಡಿಸಿತ್ತು. ಹೀಗಾಗಿಯೇ ಆತ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ. ಜಯಲಕ್ಷ್ಮಿ ಸಾವಿನ ಬಗ್ಗೆ ಅನುಮಾನದ ದೂರು ನೀಡಿದ್ದ.

ದೂರು ಹಿನ್ನಲೆ ತನಿಖೆ ಕೈಗೊಂಡ ಪೊಲೀಸರಿಗೆ ಮೃತ ಜಯಲಕ್ಷ್ಮಿ ಸಹೋದರಿ ಅನುಸೂಯ ಹಾಗೂ ಸಾಕು ಮಗ ಚಂದ್ರಶೇಖರ್ ಕಳ್ಳಾಟ ಬಯಲಾಗಿದೆ. ಎಲ್ಲರ ಮುಂದೆ ಇಬ್ಬರು ಹಾಕಿದ‌‌ ಮೊಸಳೆ ಕಣ್ಣೀರಿನ ಹಿಂದಿನ ಸತ್ಯ ಪತ್ತೆಯಾಗಿದೆ. ಅನುಸೂಯ ತನ್ನ ಒಡಹುಟ್ಟಿದ ಅಕ್ಕನನ್ನು ತಾನು ಜನ್ಮ ನೀಡಿದ ಮಗನೊಂದಿಗೆ ಸೇರಿ ಕೊಲೆ ಮಾಡಿ ಬಿಟ್ಟಿದ್ದಳು. ಮಾಡಿದ ಕೊಲೆ ಮುಚ್ಚಿ ಹಾಕಲು ಹೃದಯಾಘಾತದ ಕಥೆ ಕಟ್ಟಿದ್ದಳು. ಆ ಕಥೆ ಮುಚ್ಚಿ ಹಾಕಲು ತರಾತುರಿಯಲ್ಲಿ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದಳು. ಈ ಎಲ್ಲಾ ವಿಚಾರ ತಿಳಿದ ಪೊಲೀಸರು ಕೂಡಲೇ ಇಬ್ಬರನ್ನು ಬಂಧಿಸಿ ತನಿಖೆ ಆರಂಭಿಸಿದ್ದರು. ಆಗಲೇ ಬಯಲಾಗಿದ್ದು ಜಯಲಕ್ಷ್ಮಿ ಸಾವಿನ ಹಿಂದಿನ ಸ್ಫೋಟಕ ಸಂಗತಿ.

ಶ್ರೀನಿವಾಸ್ ಪರಿಚಯ: ಒಂದೇ ಮನೆಯಲ್ಲಿ ವಾಸ

ಜಯಲಕ್ಷ್ಮಿಗೆ ಆಗಿನ್ನು ವಯಸ್ಸು 22. ಕುಟುಂಬ ನಿಶ್ಚಿಸಿದಂತೆ ಸರ್ಕಾರಿ ನೌಕರ ಶ್ರೀನಿವಾಸ್ ಎಂಬಾತನ ಜೊತೆ ಮದುವೆಯಾಗಿತ್ತು. ದುರಂತ ಅಂದರೆ ಮದುವೆಯಾದ 3 ವರ್ಷಕ್ಕೆ ಆತ ಸಾವನಪ್ಪಿದ್ದ. ಆತನ ಸಾವಿನ ಬಳಿಕ ಜಯಲಕ್ಷ್ಮಿ ಒಂಟಿಯಾಗಿದ್ದರು. ಗಂಡನ ಸರ್ಕಾರಿ ಕೆಲಸ ಅನುಕಂಪದ ಆಧಾರದಲ್ಲಿ ಜಯಲಕ್ಷ್ಮಿಗೆ ಸಿಕ್ಕಿತ್ತು. ಆಗ ಅವರಿಗೆ 25 ವರ್ಷ. ಒಂದು ಕಡೆ ಗಂಡನನ್ನು ಕಳೆದುಕೊಂಡ ವಿಧವೆ, ಈ ನಡುವೆ ಅನುಕಂಪದ ಸರ್ಕಾರಿ ಉದ್ಯೋಗ ಅವರ ಜೀವನ ಬದಲಿಸಿತ್ತು. ಚಿಕ್ಕವಯಸ್ಸಿಗೆ ಒಂಟಿಯಾಗಿದ್ದ ಅವರಿಗೆ ಅದೇಗೋ ಅದೇ ಊರಿನ ಕೇಬಲ್ ವ್ಯವಹಾರ ಮಾಡುತಿದ್ದ ಶ್ರೀನಿವಾಸ್ ಎಂಬುವವರ ಪರಿಚಯವಾಗಿದೆ. ಆರಂಭದಲ್ಲಿ ಸಿಕ್ಕಾಗ ಮಾತನಾಡುತ್ತಿದ್ದ ಇಬ್ಬರು ನಂತರದಲ್ಲಿ ಮಾತಾಡಲೆಂದೇ ಸುತಿದ್ದರು. ಪರಿಚಯ ಗೆಳೆತನವಾಗಿ ಬಹುಬೇಗ ಪ್ರೀತಿಗೆ ಬದಲಾಗಿತ್ತು.  ನಂತರದಲ್ಲಿ ಇಬ್ಬರು ಸಹ ಒಟ್ಟಿಗೆ ಒಂದೇ ಮನೆಯಲ್ಲಿ ವಾಸ ಮಾಡುತಿದ್ದರಾದರೂ ಸಹ ಮದುವೆಯಾಗಿರಲಿಲ್ಲ.

ಸರ್ಕಾರಿ ನೌಕರಿಯಲ್ಲಿದ್ದ ಜಯಲಕ್ಷ್ಮಿ ಎಲ್ಲವನ್ನು ನೋಡಿಕೊಳ್ಳುತಿದ್ದರು. ಒಂಟಿಯಾಗಿದ್ದ ಅವರಿಗೆ ಶ್ರೀನಿವಾಸನ ಸಂಗತಿ ಜೀವನ ದಿನ ದೂಡುವಂತೆ ಮಾಡಿತ್ತಾದರೂ ಅವರಿಗೆ ಮಕ್ಕಳಿರಲಿಲ್ಲ. ಹೀಗಾಗಿಯೇ ಜಯಲಕ್ಷ್ಮಿ ತುಮಕೂರಿನಲ್ಲಿ ವಾಸವಿದ್ದ ತನ್ನ ತಂಗಿ ಅನುಸೂಯಳ ಮಗ ಚಂದ್ರಶೇಖರ್ ನನ್ನು ದತ್ತು ಪಡೆದಿದ್ದಳು. ಚಂದ್ರಶೇಖರ್ ಸಹ ಓದಿನಲ್ಲಿ ಮುಂದಿದ್ದ. ಇನ್ನು ಅನುಸೂಯಾಳಿಗೆ ಕೌಟುಂಬಿಕ ಸಮಸ್ಯೆ ಇತ್ತು. ಗಂಡನಿಂದ ದೂರದ ಅವರು ಖಾಸಗಿ ಆಸ್ಪತ್ರೆಯ ನರ್ಸ್ ಆಗಿ ಕೆಲಸ ಮಾಡುತಿದ್ದರು. ಹೀಗಾಗಿ ತಂಗಿಯ ಮಗನ ದತ್ತು ಪಡೆದ ಜಯಲಕ್ಷ್ಮಿ ಆತನ ಆರ್ಥಿಕ ವೆಚ್ಚವನ್ನು ನೋಡಿಕೊಂಡಿದ್ದರು. ನಂತರದಲ್ಲಿ ಬೆಳೆದು ದೊಡ್ಡವನಾದ ಆತ ಖಾಸಗಿ ಆಸ್ಪತ್ರೆಯ ಲ್ಯಾಬ್​ನಲ್ಲಿ ಕೆಲಸಕ್ಕೆ ಸೇರಿದ್ದ.

ಶ್ರೀನಿವಾಸ್ ಕಂಡು ಕೆಂಡ

ಇತ್ತ ಎಲ್ಲವೂ ಚೆನ್ನಾಗಿತ್ತು ಅನ್ನುವಾಗಲೇ ಜಯಲಕ್ಷ್ಮಿ ಬದುಕಿನಲ್ಲಿ ವಿಧಿಯಾಟ ಎಲ್ಲವನ್ನೂ ಬದಲಾಯಿಸ ತೊಡಗಿತ್ತು. ಜಯಲಕ್ಷ್ಮಿ 58ನೇ ವಯಸ್ಸಿಗೆ ಕಾಲಿಟ್ಟ ಬಳಿಕ ನಿವೃತ್ತಿಯ ಸಮಯಕ್ಕೆ ಕೆಲವೇ ವರ್ಷ ಬಾಕಿ ಇತ್ತು. ಈ ನಡುವೆ ತುಮಕೂರಿನಲ್ಲಿ ವಾಸವಿದ್ದ ಅನುಸೂಯ ಹಾಗೂ ಮಗ ಚಂದ್ರಶೇಖರ್ ಕೆಲಸ ಬಿಟ್ಟಿದ್ದರು. ಬಳಿಕ ನೇರವಾಗಿ ಚಿಕ್ಕನಾಯಕನಹಳ್ಳಿಯ ಜಯಲಕ್ಷ್ಮಿ ಮನೆಗೆ ಬಂದವರೇ ಅಲ್ಲಿಯೇ ಸೆಟಲ್ ಆಗಿ ಬಿಟ್ಟರು. ಆದರೆ ಜಯಲಕ್ಷ್ಮಿ ಮನೆಯಲ್ಲಿ ಅದಾಗಲೇ ಶ್ರೀನಿವಾಸ್ ವಾಸವಿದ್ದ. ಆತನನ್ನು ಕಂಡು ಕಣ್ಣು ಕೆಂಡ ಮಾಡಿಕೊಂಡಿದ್ದ ಇಬ್ಬರು ಒಳಗೊಳಗೆ ಕತ್ತಿ ಮಸೆದಿದ್ದರು. ಅದರಂತೆ ಬಂದ ಎರಡು ತಿಂಗಳಿಗೆ ಶ್ರೀನಿವಾಸ್ ಮನೆ ಬಿಡುವಂತೆ ಮಾಡಿದ್ದರು. ಹೀಗೆ ಮನೆಯಿಂದ ಹೊರಟ ಶ್ರೀನಿವಾಸ್ ವಿಚಾರದಲ್ಲಿ ಜಯಲಕ್ಷ್ಮಿ ಬೇಸರಗೊಂಡಿದ್ದರು. ಇದೇ ವಿಚಾರವಾಗಿ ಸಾಕು ಮಗ ಚಂದ್ರಶೇಖರ್, ತಂಗಿ ಅನುಸೂಯ ಜೊತೆ ಮನೆಯಲ್ಲಿ ಹಲವು ಬಾರಿ ಚರ್ಚೆ ನಡೆದಿದೆ. ಹೀಗೆ ನಡೆದ ಮಾತಿನ ನಡುವೆ ತಾನು ಕಟ್ಟಿಸಿದ್ದ ಸ್ವಂತ ಮನೆಯನ್ನೇ ಜಯಲಕ್ಷ್ಮಿ ಬಿಡಲು ಸಿದ್ಧವಾಗಿದ್ದರು. ಅಷ್ಟೇ ಅಲ್ಲದೇ ಶ್ರೀನಿವಾಸ್ ಜೊತೆ ಮತ್ತೊಂದು ಮನೆ ಮಾಡಿಕೊಂಡು ವಾಸ ಮಾಡಲು ನಿರ್ಧರಿಸಿದ್ದರು.

ತಾನು ಸಂಪಾದಿಸಿದ್ದ ಮನೆ ಬಿಡಲು ಮುಂದಾದ ಜಯಲಕ್ಷ್ಮಿ ತುರುವೇಕೆರೆಯಲ್ಲಿ ಶ್ರೀನಿವಾಸ್ ಜೊತೆ ವಾಸಿಸೊದಕ್ಕೆ ಬಾಡಿಗೆ ಮನೆ ಮಾಡಲು ಮುಂದಾಗಿದ್ದರು. ಅದಕ್ಕಾಗಿ ಮನೆಯೊಂದನ್ನು ನೋಡಿದ್ದ ಅವರು ಅಡ್ವಾನ್ಸ್ ಸಹ ನೀಡಿದ್ದರು. ಅವರು ಸಹ ಶಿಫ್ಟ್ ಆಗಲು ತಯಾರಿ ನಡೆಸಿದ್ದರು. ಮತ್ತೊಂದು ಕಡೆ ಶ್ರೀನಿವಾಸ್, ಜಯಲಕ್ಷ್ಮಿ ಜೊತೆ ಬದುಕು ಸಾಗಿಸಲು ಕಾಯುತಿದ್ದ. ಈ ನಡುವೆ ಜಯಲಕ್ಷ್ಮಿ ಕೊಲೆಯಾಗಿದೆ.

ಅತ್ತ ಕೆಲಸ ಬಿಟ್ಟು ಜಯಲಕ್ಷ್ಮಿ ಮನೆಗೆ ಬಂದ ಅನುಸೂಯ ಹಾಗೂ ಚಂದ್ರಶೇಖರ್ ತಲೆಯಲ್ಲಿದ್ದ ಯೋಚನೆಗಳೇ ಬೇರೆಯಾಗಿದ್ದವು. ಕೈ ತುಂಬ ಸಂಬಳ ಇದ್ದ ಜಯಲಕ್ಷ್ಮಿ ಹೇಗಿದ್ದರೂ ಒಂಟಿ. ತನ್ನ ಮಗನನ್ನೇ ದತ್ತು ಪಡೆದಿದ್ದಾಳೆ. ಹೀಗಾಗಿ ಆಕೆಯ ಸಂಪತ್ತೆಲ್ಲಾ ನಮ್ಮದೇ ಎಂದು ಮನೆಗೆ ಬಂದು ಸೆಟಲ್ ಆಗಿ ಬಿಟ್ಟಿದ್ದರು. ಆದರೆ ಈ ನಡುವೆ ಆಕೆಯ ಜೊತೆಗಿದ್ದ ಶ್ರೀನಿವಾಸ್ ಇವರ ಯೋಚನೆಗಳಿಗೆ ಗೊಂದಲ ಸೃಷ್ಟಿಸಿದ್ದ. ಎಲ್ಲವನ್ನು ಬಿಟ್ಟು ಜಯಲಕ್ಷ್ಮಿ ಆತನ ಜೊತೆ ಹೊಗಲು ನಿರ್ಧರಿಸಿದ್ದರು. ನಾವು ನಂಬಿದ ಜಯಲಕ್ಷ್ಮಿ ಎಲ್ಲಿ ನಮ್ಮನ್ನು ಬಿಟ್ಟು ಹೊಗುತ್ತಾಳೋ ಎಂಬ ಯೋಚನೆಯಲ್ಲಿದ್ದ ಅನುಸೂಯ ಹಾಗೂ ಚಂದ್ರಶೇಖರ್​ಗೆ ಮುಂದೊಂದು ದಿನ ಆರ್ಥಿಕವಾಗಿ ಸಂಕಷ್ಟ ಎದುರಾಗುವ ಆತಂಕ ಮೂಡಿತ್ತು. ಹೀಗಾಗಿಯೇ ಇಬ್ಬರು ಸೇರೆ ಅದೊಂದು ಪ್ಲ್ಯಾನ್ ರೆಡಿ ಮಾಡಿದ್ದಾರೆ.

ಸರ್ಕಾರಿ ಕೆಲಸಕ್ಕಾಗಿ ಕೊಲೆ 

ಜಯಲಕ್ಷ್ಮಿ ಹೇಗೊ ನಿವೃತ್ತಿ ಹಂತದಲ್ಲಿದ್ದಾರೆ. ಆಕೆಗೆ ಲಕ್ಷ ಲಕ್ಷ ಹಣ ಬರುತ್ತದೆ. ಎಲ್ಲವೂ ನಮ್ಮದೇ ಅಂದುಕೊಂಡಿದ್ದ ಅನುಸೂಯ ಹಾಗೂ ಚಂದ್ರಶೇಖರ್​ಗೆ, ಶ್ರೀನಿವಾಸ್ ವಿಚಾರ ತಲೆಗೆ ಹುಳ ಬಿಟ್ಟಿತ್ತು. ಹೀಗಾಗಿಯೇ ಜೊತೆಗಿದ್ದ ಜಯಲಕ್ಷ್ಮಿ ಮುಗಿಸುವುದಕ್ಕೆ ಮುಂದಾದ ಇಬ್ಬರಲ್ಲಿ ಹೊಸ ಲೆಕ್ಕಾಚಾರ ಶುರುವಾಗಿತ್ತು. ಅಸಲಿಗೆ ಜಯಲಕ್ಷ್ಮಿ ಸರ್ಕಾರಿ ನೌಕರಸ್ಥೆ. ಅವರ ಅಸಹಜ ಸಾವಿನಿಂದ ಮೃತಪಟ್ಟರೆ ಸರ್ಕಾರಿ ನೌಕರಿ ಅನುಕಂಪದಲ್ಲಿ ಸಂಬಂಧಿಕರಿಗೆ ಸಿಗಲಿದೆ. ಹಾಗೆ ಯೋಚನೆ ಮಾಡಿದರೇ ಅದು ದತ್ತು ಮಗ ಚಂದ್ರಶೇಖರ್​ನಿಗೆ ಬರಲಿದೆ. ಆದರೆ ಕೊಲೆ ಎಂದು ಗೊತ್ತಾದರೆ ಅದೂ ಸಹ ಕೈತಪ್ಪುತ್ತದೆ ಎಂದು ಯೋಚಿಸಿದವರೇ ಮಾಸ್ಟರ್ ಪ್ಲ್ಯಾನ್ ಮಾಡಿದ್ದರು. ಅದಾಗಲೇ ಮನೆ ಬಿಡಲು ನಿರ್ಧರಿಸಿದ್ದ ಜಯಲಕ್ಷ್ಮಿಯನ್ನ ಮುಗಿಸುವುದಕ್ಕೆ ಸಿದ್ದರಾದ ಅನುಸೂಯ ಹಾಗೂ ಚಂದ್ರಶೇಖರ್ ಇದೇ ಫೆಬ್ರವರಿ 19ರಂದು ರಾತ್ರಿ ತಂತ್ರ ಎಣೆದಿದ್ದರು.

ಇದನ್ನೂ ಓದಿ: ಬಿಹಾರದಲ್ಲಿ ಕರ್ನಾಟಕದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಕೇಸ್​​ಗೆ ಟ್ವಿಸ್ಟ್​​: ಮೃತರ ಸಂಬಂಧಿ ಹೇಳಿದ್ದೇನು?

ಅವತ್ತಿನ ರಾತ್ರಿ ಊಟ ಮಾಡಿ ಮಲಗಿದ್ದ ಜಯಲಕ್ಷ್ಮಿ ಬಳಿ ಬಂದ ಇಬ್ಬರು ಆಕೆಯ ಮುಖಕ್ಕೆ ದಿಂಬಿಟ್ಟು ಉಸಿರುಗಟ್ಟಿಸಿ ಕೊಲೆಗೈದಿದ್ದರು. ಬಳಿಕ ರಾತ್ರೋರಾತ್ರಿಯೇ ಸಹೋದರ ರವೀಶ್​ ಸೇರಿದಂತೆ ಹಲವರಿಗೆ ಕರೆ ಮಾಡಿ ಕಥೆ ಕಟ್ಟಿದ್ದರು. ಜಯಲಕ್ಷ್ಮಿಗೆ ಹೃದಯಾಘಾತವಾಗಿದೆ. ಮನೆಯಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದರು. ಮಧ್ಯರಾತ್ರಿ ಜಯಲಕ್ಷ್ಮಿ ಹತ್ಯೆಗೈದ ಇಬ್ಬರು ಬೆಳಗಾಗುವಷ್ಟರಲ್ಲೇ ಮೃತದೇಹವನ್ನು ಕಂಟಲಗೆರೆಗೆ ಸಾಗಿಸಿದ್ದರು. ಅಲ್ಲಿ ಕಾರ್ಯಕ್ಕೂ ಸಹ ಸಿದ್ಧಗೊಳಿಸಿದ್ದರು. ಎಲ್ಲವೂ ಅಂದುಕೊಂಡಂತಾಗಿದೆ ಎಂದು ಹೊರಗೆ ಮೊಸಳೆ ಕಣ್ಣೀರು ಹಾಕುತ್ತ ನಾಟಕವಾಡಿದ್ದ ಇಬ್ಬರ ಸ್ಟೋರಿಗೆ ಶ್ರೀನಿವಾಸ್ ಬ್ರೇಕ್ ಹಾಕಿದ್ದ.

ಅನುಸೂಯ, ಚಂದ್ರಶೇಖರ್​​ ಬಂಧನ

ಜಯಲಕ್ಷ್ಮಿಯನ್ನು ಎಲ್ಲರಿಗಿಂತ ಹೆಚ್ಚಾಗಿ ಬಲ್ಲವನಾಗಿದ್ದ ಶ್ರೀನಿವಾಸ್​ಗೆ ಮನೆಯೊಳಗಿದ್ದ ಸಮಸ್ಯೆಗಳು ಸಹ ಅರಿವಿಗಿತ್ತು. ಯಾವಾಗ ಅವರ ಮೃತಪಟ್ಟಿದ್ದಾಳೆಂಬ ಸುದ್ದಿ ಬಂತೋ ಆತ ಅನುಮಾನಗೊಂಡಿದ್ದ. ಕೂಡಲೇ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದ. ಆತನ ಮಾಹಿತಿ ಆಧರಿಸಿ ಬಂದ ಚಿಕ್ಕನಾಯಕನಹಳ್ಳಿ ಪೊಲೀಸರಿಗೆ ಕೊಲೆಯ ಸಂಗತಿ ಬಯಲಾಗಿದೆ. ಕೂಡಲೇ ಇಬ್ಬರನ್ನು ಬಂಧಿಸಿದ್ದಾರೆ. ಆದರೆ ಇಲ್ಲಿ ಜಯಲಕ್ಷ್ಮಿ ಮಾಡಿದ ತಪ್ಪಾದರೂ ಏನು, ಕಷ್ಟದಲ್ಲಿದ್ದ ಸಹೋದರಿಗೆ ಆರ್ಥಿಕವಾಗಿ ಹೆಗಲು ಕೊಟ್ಟಿದ್ದು ತಪ್ಪಾ? ಆಕೆಯ ಮಗನಿಗೆ ಶಿಕ್ಷಣ ನೀಡಿದ್ದು ತಪ್ಪಾ? ಎಲ್ಲವನ್ನೂ ಕೊಟ್ಟ ಜಯಲಕ್ಷ್ಮಿ ಅಕ್ಷರಶಃ ಅನುಸೂಯಗೆ ಚಿನ್ನದ ಮೊಟ್ಟೆ ಇಡುವ ಕೊಳಿಯಂತಾಗಿದ್ದರು. ಆದರೆ ಅತಿಯಾಸೆಗೆ ಬಿದ್ದ ಅನುಸೂಯ ಜಯಲಕ್ಷ್ಮಿ ಕೊಂದಿದ್ದರು. ಮತ್ತೊಂದೆಡೆ ಇನ್ನು 22 ವರ್ಷದ ಯುವಕ ಚಂದ್ರಶೇಖರ್ ಸಹ ಕೊಲೆ ಆರೋಪಿಯಾಗಿದ್ದಾನೆ. ಆದರೆ ಇದೀಗ ಮಾಡಿದ್ದುಣ್ಣೋ ಮಾರಾಯ ಎಂಬಂತೆ ಜೈಲು ಸೇರಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version