ಲೆಬನಾನ್‌ನಿಂದ ಹಿಂದೆ ಸರಿಯಲ್ಲ; ಅಮೆರಿಕ-ಇರಾನ್ ಶಾಂತಿ ಒಪ್ಪಂದವನ್ನು ತಿರಸ್ಕರಿಸಿದ ಇಸ್ರೇಲ್ – Kannada News | Trump’s Agreement Does Not Bind Us; Israel Rejects US Iran Deal says won’t retreat from Lebanon

ಜೆರುಸಲೇಂ, ಜೂನ್ 15: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ಸಿದ್ಧವಾಗಿರುವ ಶಾಂತಿ ಒಪ್ಪಂದದ ಕುರಿತು ಇಸ್ರೇಲ್ ತನ್ನ ಮೊದಲ ಅಧಿಕೃತ ಮತ್ತು ಆಕ್ರೋಶದ ಪ್ರತಿಕ್ರಿಯೆಯನ್ನು ನೀಡಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಮಧ್ಯಸ್ಥಿಕೆಯಲ್ಲಿ ನಡೆದಿರುವ ಈ ಒಪ್ಪಂದವು ಇಸ್ರೇಲ್ ಅನ್ನು ಯಾವುದೇ ರೀತಿಯಲ್ಲೂ ಕಟ್ಟಿಹಾಕಲು ಸಾಧ್ಯವಿಲ್ಲ ಎಂದು ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಚಿವ ಇತಾಮರ್ ಬೆನ್-ಗ್ವಿರ್ ಸ್ಪಷ್ಟಪಡಿಸಿದ್ದಾರೆ.

ಜೂನ್ 19ರ ಶುಕ್ರವಾರದಂದು ಸ್ವಿಜರ್ಲೆಂಡ್‌ನಲ್ಲಿ ಅಧಿಕೃತವಾಗಿ ಸಹಿ ಆಗಲಿರುವ ಈ ಒಪ್ಪಂದವು, ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲೂ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಉಲ್ಲೇಖಿಸಿದೆ. ಆದರೆ, ಇಸ್ರೇಲ್ ಮಾತ್ರ ತನ್ನದೇ ಆದ ಸ್ವತಂತ್ರ ರಕ್ಷಣಾ ನೀತಿಯನ್ನು ಮುಂದುವರಿಸುವುದಾಗಿ ಹೇಳಿದೆ.

“ಟ್ರಂಪ್ ಅವರ ಒಪ್ಪಂದ ನಮಗೆ ಅನ್ವಯಿಸುವುದಿಲ್ಲ. ಇಸ್ರೇಲ್ ದೇಶವು ಅಮೆರಿಕದ ಅಧೀನದಲ್ಲಿಲ್ಲ. ನಮ್ಮದು ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರ! ನಮಗೆ ಅಮೆರಿಕದ ಮೇಲೆ ಅಪಾರ ಪ್ರೀತಿ ಇದೆ ಮತ್ತು ಅಧ್ಯಕ್ಷ ಟ್ರಂಪ್ ಅವರಿಗೆ ನಾವು ಕೃತಜ್ಞರಾಗಿದ್ದೇವೆ. ಹಾಗಂತ ಇಸ್ರೇಲ್ ದೇಶವೇನೂ ಯಾವುದೇ ದುರ್ಬಲ ದೇಶವಲ್ಲ” ಎಂದು ಇಸ್ರೇಲ್ ಭದ್ರತಾ ಸಚಿವ ಇತಾಮರ್ ಬೆನ್-ಗ್ವಿರ್ ಹೇಳಿದ್ದಾರೆ.

ಇದನ್ನೂ ಓದಿ: Video: ಅಮೆರಿಕ-ಇರಾನ್ ಶಾಂತಿ ಒಪ್ಪಂದ: 108 ದಿನಗಳ ಯುದ್ಧಕ್ಕೆ ತೆರೆ, ಪ್ರಮುಖ ಷರತ್ತುಗಳೇನು?

ವಿದೇಶಿ ಒತ್ತಡಗಳಿಗೆ ಮಣಿಯುವುದು ಇಸ್ರೇಲ್‌ನ ಭದ್ರತೆಗೆ ಮಾರಕ ಎಂಬುದನ್ನು ಇತಿಹಾಸ ಸಾಬೀತುಪಡಿಸಿದೆ ಎಂದು ಬೆನ್-ಗ್ವಿರ್ ವಾದಿಸಿದ್ದಾರೆ. “ಹಿಂದೆಲ್ಲಾ ನಾವು ಇಸ್ರೇಲ್‌ನ ಭದ್ರತೆಯನ್ನು ಪಣಕ್ಕಿಟ್ಟು ಅಂತಾರಾಷ್ಟ್ರೀಯ ಒತ್ತಡಗಳಿಗೆ ತಲೆಬಾಗಿದಾಗಲೆಲ್ಲಾ, ನಾವು ರಕ್ತದ ಮೂಲಕ ಭಾರಿ ಬೆಲೆ ತೆರಬೇಕಾಗಿ ಬಂದಿದೆ” ಎಂದ ಅವರು 2006ರ ಓಸ್ಲೋ ಒಪ್ಪಂದ ಮತ್ತು ಗಾಜಾದಲ್ಲಿ ಈ ಹಿಂದೆ ತೋರಿದ್ದ ಸಂಯಮವನ್ನು ಉದಾಹರಣೆಯಾಗಿ ನೀಡಿದ್ದಾರೆ.

ಲೆಬನಾನ್‌ನಲ್ಲಿ ಇರಾನ್ ಬೆಂಬಲಿತ ಹೆಜ್ಬುಲ್ಲಾ ಉಗ್ರಗಾಮಿ ಸಂಘಟನೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವವರೆಗೂ ಯಾವುದೇ ತರಹದ ರಾಜಿ ಮಾಡಿಕೊಳ್ಳುವುದಿಲ್ಲ. ಯುದ್ಧದ ಸಮಯದಲ್ಲಿ ವಶಪಡಿಸಿಕೊಂಡಿರುವ ಲೆಬನಾನ್ ಭೂಭಾಗದಿಂದ ಇಸ್ರೇಲಿ ಪಡೆಗಳು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಸ್ರೇಲ್‌ನ ಉತ್ತರದ ಗಡಿ ಗ್ರಾಮಗಳ ಬಳಿ ಮತ್ತೆ ಉಗ್ರರು ಬಂದು ನೆಲೆಸುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿರುವ ಸಚಿವರು, “ಲೆಬನಾನ್‌ನಿಂದ ಇಸ್ರೇಲ್ ಕಡೆಗೆ ಒಂದೇ ಒಂದು ಡ್ರೋನ್ ಅಥವಾ ಕ್ಷಿಪಣಿ ಹಾರಿಬಂದರೂ, ಅದಕ್ಕೆ ಪ್ರತಿಯಾಗಿ ಲೆಬನಾನ್‌ನ ರಾಜಧಾನಿ ಬೈರೂತ್‌ನ ಹೆಜ್ಬುಲ್ಲಾ ಭದ್ರಕೋಟೆಯಾದ ದಹಿಯಾ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಲಿದೆ. ಈ ಹಿಂದೆ ಇದ್ದ ಅದೇ ಆಕ್ರಮಣಕಾರಿ ಶೈಲಿಯನ್ನು ನಾವು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ” ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಭಾರತದ ಸ್ವಾಗತ; ಪಶ್ಚಿಮ ಏಷ್ಯಾದಲ್ಲಿ ಶಾಂತಿಗೆ ಕರೆ ನೀಡಿದ ಮೋದಿ

ಒಂದು ಕಡೆ ಪಾಕಿಸ್ತಾನ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ಅಮೆರಿಕ-ಇರಾನ್ ಒಪ್ಪಂದವು ಅಂತಿಮ ಹಂತ ತಲುಪಿದ್ದು, ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಹಾಗೂ ಇರಾನ್ ಮೇಲಿನ ಅಮೆರಿಕದ ನೌಕಾ ದಿಗ್ಬಂಧನವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಅಲ್ಲದೆ, ಇರಾನ್‌ನ ಪರಮಾಣು ಯೋಜನೆಯ ಬಗ್ಗೆ ಚರ್ಚಿಸಲು 60 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.

ಆದರೆ, ಇರಾನ್ ತನ್ನ ಯುರೇನಿಯಂ ದಾಸ್ತಾನನ್ನು ತನ್ನ ಬಳಿಯೇ ಇಟ್ಟುಕೊಳ್ಳಲು ಹಠ ಹಿಡಿದಿದೆ, ಅಮೆರಿಕ ಅದನ್ನು ತೆಗೆದುಹಾಕಲು ಒತ್ತಾಯಿಸುತ್ತಿದೆ. ಇದರ ನಡುವೆ, ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಪರಮ ಮಿತ್ರ ರಾಷ್ಟ್ರವಾಗಿರುವ ಇಸ್ರೇಲ್ ಈ ಒಪ್ಪಂದವನ್ನು ಬಹಿರಂಗವಾಗಿಯೇ ತಿರಸ್ಕರಿಸಿರುವುದರಿಂದ, ಈ ಶಾಂತಿ ಒಪ್ಪಂದವು ಇಸ್ರೇಲ್ ಮತ್ತು ಹೆಜ್ಬುಲ್ಲಾ ನಡುವಿನ ಯುದ್ಧವನ್ನು ನಿಲ್ಲಿಸುವಲ್ಲಿ ಎಷ್ಟು ಯಶಸ್ವಿಯಾಗಲಿದೆ ಎಂಬ ದೊಡ್ಡ ಪ್ರಶ್ನೆ ಎದುರಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಹಗಲು ದರೋಡೆ: ಬೀದರ್​ನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಕೆಂಪು ಕಲ್ಲು ಗಣಿಗಾರಿಕೆ – Kannada News | Red Stone Scandal: Illegal Mining Runs Unchecked Across Border District

ಕೆಂಪು ಕಲ್ಲು ಗಣಿಗಾರಿಕೆImage Credit source: tv9 kannada

ಬೀದರ್​​, ಜೂನ್​​ 15: ಎರಡು ರಾಜ್ಯದ ಗಡಿ ಹಂಚಿಕೊಂಡಿರುವ ಜಿಲ್ಲೆಯಲ್ಲಿ ಅಕ್ರಮವಾಗಿ ಕೆಂಪು ಕಲ್ಲು ಗಣಿಗಾರಿಕೆ (illegal mining) ಅವ್ಯಾಹತವಾಗಿ ನಡೆಯುತ್ತಿದೆ. ಬೀದರ್‌ (bidar) ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ 40ಕ್ಕೂ ಹೆಚ್ಚು ಸ್ಥಳದಲ್ಲಿ  ಭೂಮಿಯ ಒಡಲನ್ನ ಬಗೆದು ಕೆಂಪು ಕಲ್ಲು ತೆಗೆಯಲಾಗುತ್ತಿದೆ. ಇಷ್ಟೇಲ್ಲಾ ನಡೆಯುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾತ್ರ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಮುಖ್ಯಾಂಶಗಳು

  • ಬೀದರ್‌ನಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಹೆಚ್ಚಳ
  • ಮೌನಕ್ಕೆ ಶರಣಾದ ಅಧಿಕಾರಿಗಳು
  • ಕಾನೂನು ಗಾಳಿಗೆ ತೂರಿ ರಸ್ತೆ ಪಕ್ಕದಲ್ಲೇ ನಡೆಯುತ್ತಿದೆ ಗಣಿಗಾರಿಕೆ

ಬೀದರ್, ಭಾಲ್ಕಿ ತಾಲೂಕಿನಲ್ಲಿಯೇ ಅತೀ ಹೆಚ್ಚು ಗಣಿಗಾರಿಕೆ

ಗಡಿ ಜಿಲ್ಲೆ ಬೀದರ್​ನಲ್ಲಿ ಕೆಂಪು ಕಲ್ಲು ಕೊರೆಯುವ ಧಂದೆ ಜೋರಾಗಿದ್ದು, ಹಾಡಹಗಲೇ ಗಣಿಗಾರಿಕೆ ಮಾಡಲಾಗುತ್ತಿದೆ. ಬೀದರ್ ಹಾಗೂ ಭಾಲ್ಕಿ ತಾಲೂಕಿನಲ್ಲಿಯೇ ಅತೀ ಹೆಚ್ಚು ಗಣಿಗಾರಿಕೆ ನಡೆಯುತ್ತಿದ್ದು, ಈ  ಬಗ್ಗೆ ಯಾರೂ ಕೂಡ ಚಕಾರ ಎತ್ತುತ್ತಿಲ್ಲ. ಬೀದರ್ ತಾಲೂಕಿನ ಸಿರ್ಸಿ, ಔರಾದ್, ಚಟ್ನಳ್ಳಿ, ಅಣದೂರು ವಾಡಿ, ಸಗೋಳ್ಳಗಿ ತಾಂಡಾ ಹಾಗೂ ಭಾಲ್ಕಿ ತಾಲೂಕಿನ ಖಾನಾಪುರ ಸುತ್ತಮುತ್ತ ಭಾರೀ ಪ್ರಮಾಣದಲ್ಲಿ ಕೆಂಪು ಕಲ್ಲು ಕೊರೆಯುವ ಕೆಲಸ ನಡೆಯುತ್ತಿದೆ. ದೊಡ್ಡ ದೊಡ್ಡ ಮಿಷನ್​​ಗಳನ್ನ ಬಳಸಿಕೊಂಡು ಭೂಮಿಯ ಒಡಲಿನಿಂದ ಕಲ್ಲನ್ನ ಹೆಕ್ಕಿ ತೆಗೆಯುತ್ತಿದ್ದಾರೆ.

ಇದನ್ನೂ ಓದಿ: ಜನರ ಬದುಕಿಗೆ ಮಾರಕವಾದ ಗಣಿಗಾರಿಕೆ ಧೂಳು: ಸರ್ಕಾರ ಸೈಲೆಂಟ್, ಸಿಡಿದೆದ್ದ ರೈತಸಂಘ

ಪೋಲೀಸರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಈ ವಿಚಾರಗೊತ್ತಿದ್ದರು ಕಂಡು ಕಾಣದವರಂತೆ ಕುಳಿತಿದ್ದಾರೆ. ಸರಕಾರದ ನೀತಿ ನಿಯಮಗಳನ್ನ ಗಾಳಿಗೆ ತೂರಿ ಅಕ್ರಮವಾಗಿ ಕಲ್ಲು ಕೊರೆಯುವ ದಂಧೆಯನ್ನ ಯಾರ ಅಂಜಿಕೆ, ಅಳುಕ್ಕಿಲ್ಲದೇ ನಡೆಸಲಾಗುತ್ತಿದೆ. ಗ್ರಾಮದ ಅಕ್ಕಪಕ್ಕದಲ್ಲಿ ಫಲವತ್ತಾದ ಜಮೀನುಗಳಲ್ಲಿ ಅಕ್ರಮ ದಂಧೆ ನಡೆಯುತ್ತಿದ್ದರು ಅಧಿಕಾರಿಗಳು ಮಾತ್ರ ಸುಮ್ಮನೆ ಕುಳಿತ್ತಿದ್ದಾರೆ.

ಒಂದು ಕಲ್ಲಿಗೆ 25 ರೂ. ಮಾರಾಟ

ಜಿಲ್ಲೆಯಲ್ಲಿ ಕಳೆದ ಹತ್ತಾರು ವರ್ಷದಿಂದ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕೆಲವು ರೈತರಿಂದ ಜಮೀನನ್ನ ಖರೀದಿಸಿ ಅಲ್ಲಿಯೂ ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ. ಇನ್ನು ಕೆಲವು ರೈತರು ತಮ್ಮ ಹೊಲದಲ್ಲಿಯೇ ಕಲ್ಲು ಕೊರೆಯುವವರನ್ನ ಕರೆದುಕೊಂಡು ಬಂದು ಕಲ್ಲು ತೆಗೆದು 25 ರೂ.ಗೆ ಒಂದರಂತೆ ಮಾರಾಟ ಮಾಡುತ್ತಿದ್ದಾರೆ. ಗಣಿಗಾರಿಕೆ ಮಾಡುವವರು ಅಕ್ಕಪಕ್ಕದ ಪೊಲೀಸ್ ಠಾಣಾ ಅಧಿಕಾರಿಗಳಿಗೆ ತಿಂಗಳಿಗೆ ಹಣ ಕೊಟ್ಟು ಗಣಿಗಾರಿಕೆ ನಡೆಯುವ ಸ್ಥಳಕ್ಕೆ ಭೇಟಿ ನೀಡದಂತೆ ಮಾಡಿದ್ದಾರೆ ಎಂಬುವುದು ಇಲ್ಲಿನ ಜನರ ಮಾತು.

ಅಕ್ರಮ ಗಣಿಗಾರಿಯಿಂದ ಪರಿಸರ ಹಾಳು

ಅಷ್ಟಕ್ಕೂ ಯಾರಾದರು ಅಧಿಕಾರಿಗಳು ಗಣಿ ಬಂದ್ ಮಾಡುವಂತೆ ಒತ್ತಡ ಹಾಕಿದರೆ ಒಂದೆರಡು ದಿನ ಬಂದ್ ಮಾಡಿ ಮತ್ತೆ ಆರಂಭಿಸುತ್ತಾರೆ. ಹೀಗಾಗಿ ಪೊಲೀಸರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಪೊಲ್ಯೂಷನ್ ಕಂಟ್ರೋಲ್ ಬೋರ್ಟ್​​ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ಜೊತೆಗೆ ಇಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಯಿಂದ ಪರಿಸರ ಹಾಳಾಗುತ್ತಿದ್ದು, ಈ ಬಗ್ಗೆ ಮಾತ್ರ ಯಾರೊಬ್ಬರು ತುಟಿಕ್ ಪಿಟಿಕ್ ಅನ್ನುತ್ತಿಲ್ಲ. ಫಲವತ್ತಾದ ಜಮೀನಿನಲ್ಲಿ ಯಾವುದೆ ರೀತಿಯ ಗಣಿಗಾರಿಕೆ ಮಾಡಬಾರದು, ಊರು ಪ್ರವಾಸಿ ಸ್ಥಳ ಹಾಗೂ ರಸ್ತೆಯ ಅಕ್ಕಪಕ್ಕದಲ್ಲಿ ಗಣಿಗಾರಿಕೆ ಮಾಡಲೇಬಾರದು ಎನ್ನುವುದು ಸಹ ಕಾನೂನಿನಲ್ಲಿದೆ. ಆದರೆ ಸರಕಾರ ನಿಯಮಗಳನ್ನ ಉಲ್ಲಂಘಿಸಿ ಈ ದಂಧೆ ಮಾಡುತ್ತಿದ್ದಾರೆಂದು ಜನರ ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: ಜನಾರ್ದನ ರೆಡ್ಡಿಗೆ ಮತ್ತೆ ‘ಗಣಿ’ ಉರುಳು? ಮಾಜಿ ಸಚಿವನಿಂದ 884 ಕೋಟಿ ನಷ್ಟ ವಸೂಲಿ?

ಬೀದರ್ ಜಿಲ್ಲೆ ಗಡಿನಾಡು ಆಗಿದ್ದರಿಂದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ. ಆದ್ದರಿಂದಲೇ ಇಂತಹ ಅಕ್ರಮ ದಂಧೆಗಳು ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಬಳ್ಳಾರಿ ಜಿಲ್ಲೆಗಾದ ಪರಿಸ್ಥಿತಿ ಬೀದರ್ ಜಿಲ್ಲೆಗೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪೋಕ್ಸೋ ಆರೋಪಿ ಜಾನಿ ಮಾಸ್ಟರ್ ಜತೆ ನಂಟು; ಅನಿರುದ್ಧ್ ರವಿಚಂದರ್ ವಿರುದ್ಧ ಜನಾಕ್ರೋಶ – Kannada News | Anirudh Ravichander faces backlash after collaboration with Jani Master for Aravindh song

ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ಅನಿರುದ್ಧ್ ರವಿಚಂದರ್ (Anirudh Ravichander) ಅವರು ತಮ್ಮ ಹೊಸ ಸ್ವತಂತ್ರ ಆಲ್ಬಂ ಸಾಂಗ್ ‘ಅರವಿಂದ್’ ಬಿಡುಗಡೆಯಾದ ಬೆನ್ನಲ್ಲೇ ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ಪೋಕ್ಸೋ (POCSO) ಕಾಯ್ದೆಯಡಿ ಬಂಧನಕ್ಕೊಳಗಾಗಿ, ಸದ್ಯ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಿರುವ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ (Jani Master) ಅವರೊಂದಿಗೆ ಅನಿರುದ್ಧ್ ಕೈಜೋಡಿಸಿರುವುದು ಈ ಆಕ್ರೋಶಕ್ಕೆ ಕಾರಣವಾಗಿದೆ.

‘ಅರವಿಂದ್’ ಹಾಡು ಅನಿರುದ್ಧ್ ರವಿಚಂದರ್ ಅವರ ಸ್ವಂತ ಮ್ಯೂಸಿಕ್ ಲೇಬಲ್ ಆದ ‘ಆಲ್ಬುಕರ್ಕ್ ರೆಕಾರ್ಡ್ಸ್’ ಮತ್ತು ‘ಯೂನಿವರ್ಸಲ್ ಮ್ಯೂಸಿಕ್ ಇಂಡಿಯಾ’ ಪಾಲುದಾರಿಕೆಯಲ್ಲಿ ಬಿಡುಗಡೆಯಾದ ಮೊದಲ ಪಾಪ್ ಹಾಡಾಗಿದೆ. 2023ರ ಸೂಪರ್ ಹಿಟ್ ‘ಜೈಲರ್’ ಚಿತ್ರದ ‘ಹುಕುಂ’ ಹಾಡಿನ ಖ್ಯಾತಿಯ ಸಾಹಿತಿ ಸೂಪರ್ ಸುಬು ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ತಮಿಳು ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಹಾಡು ಬಿಡುಗಡೆಯಾಗಿದೆ.

ಚಿತ್ರರಂಗದಲ್ಲಿ ಇಷ್ಟೊಂದು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದರೂ ಸಹ, ಪ್ರಭಾವಿ ವ್ಯಕ್ತಿಗಳು ಯಾವುದೇ ವೃತ್ತಿಪರ ಪರಿಣಾಮಗಳನ್ನು ಎದುರಿಸದೇ ದೊಡ್ಡ ಪ್ರಾಜೆಕ್ಟ್‌ಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ಪ್ರವೃತ್ತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ನೆಟ್ಟಿಗರೊಬ್ಬರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ‘ಇದು ರೀಲ್ಸ್ ಮಾಡಲು ಸಿದ್ಧಪಡಿಸಿದ ಕೇವಲ ಸಾಧಾರಣ ಹಾಡು. ಇಂತಹ ಹಾಡಿಗೆ ಪೋಕ್ಸೋ ಆರೋಪಿ ಜಾನಿಗೆ ಅವಕಾಶ ನೀಡುವ ಮೂಲಕ ಅವನನ್ನು ಬೆಂಬಲಿಸಿರುವುದು ನಿಜಕ್ಕೂ ಅಸಹ್ಯಕರ ಮತ್ತು ನಾಚಿಕೆಗೇಡು’ ಎಂದು ಆಕ್ರೋಶ ಹೊರಹಾಕಿದ್ದಾರೆ.

‘ಪೋಕ್ಸೋ ಆರೋಪಿ ಜಾನಿ ನೃತ್ಯ ನಿರ್ದೇಶನ ಮಾಡಿರುವ ಹಾಡೇ? ನಾನು ಈ ಹಾಡನ್ನು ಎಂದಿಗೂ ಕೇಳುವುದಿಲ್ಲ, ಪ್ರೋತ್ಸಾಹಿಸುವುದೂ ಇಲ್ಲ. ಅನಿರುದ್ಧ್ ಕಡೆಯಿಂದ ಇಂತಹ ಕೆಟ್ಟ ನಿರ್ಧಾರ ನಿರೀಕ್ಷಿಸಿರಲಿಲ್ಲ’ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ‘ಇದು ನಿಮ್ಮದೇ ಸ್ವಂತ ಲೇಬಲ್ ಆಗಿರುವುದರಿಂದ ಯಾರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂಬ ಸಂಪೂರ್ಣ ಹಕ್ಕು ನಿಮ್ಮದೇ ಆಗಿತ್ತು. ಹೀಗಿರುವಾಗ ಪೋಕ್ಸೋ ಆರೋಪಿಗೆ ಕೆಲಸ ನೀಡುವ ಅಗತ್ಯವಿರಲಿಲ್ಲ. ಅನಿರುದ್ಧ್ ಅವರಿಂದ ಇದು ತೀವ್ರ ನಿರಾಶೆ ಉಂಟುಮಾಡಿದೆ’ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪೋಕ್ಸೋ ಕಾಯ್ದೆ ಅಡಿ ಕೇಸ್ ಹಿನ್ನೆಲೆ; ಜಾನಿ ಮಾಸ್ಟರ್​ಗೆ ಘೋಷಿಸಿದ್ದ ರಾಷ್ಟ್ರಪ್ರಶಸ್ತಿ ರದ್ದು  

ಜಾನಿ ಮಾಸ್ಟರ್ ಅವರನ್ನು ದೊಡ್ಡ ಪ್ರಾಜೆಕ್ಟ್‌ಗಳಿಗೆ ಬಳಸಿಕೊಳ್ಳುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ನಟನೆಯ ‘ಪೆದ್ದಿ’ ಚಿತ್ರದ ‘ಚಿಕಿರಿ ಚಿಕಿರಿ’ ಮತ್ತು ‘ರೈ ರೈ ರಾ ರಾ’ ಹಾಡುಗಳಿಗೆ ಜಾನಿ ಮಾಸ್ಟರ್ ಅವರನ್ನು ನೃತ್ಯ ನಿರ್ದೇಶಕರನ್ನಾಗಿ ನೇಮಿಸಿಕೊಂಡಿದ್ದಕ್ಕೂ ಚಿತ್ರರಂಗ ಮತ್ತು ಸಾಮಾಜಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು.

ಪ್ರಕರಣದ ಹಿನ್ನೆಲೆ: 2020ರಲ್ಲಿ ಮುಂಬೈ ಪ್ರವಾಸದ ಸಂದರ್ಭದಲ್ಲಿ ಜಾನಿ ಮಾಸ್ಟರ್ ಅವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರ ಮಾಜಿ ಮಹಿಳಾ ಸಹಾಯಕಿಯೊಬ್ಬರು ಆರೋಪಿಸಿದ್ದರು. ಅಲ್ಲದೆ ಈ ವಿಷಯವನ್ನು ಮುಚ್ಚಿಡಲು ಹಲವು ವರ್ಷಗಳಿಂದ ತಮಗೆ ಬೆದರಿಕೆ ಹಾಗೂ ಕಿರುಕುಳ ನೀಡಲಾಗುತ್ತಿದೆ ಎಂದೂ ದೂರಿದ್ದರು. ಘಟನೆ ನಡೆದ ಸಂದರ್ಭದಲ್ಲಿ ದೂರುದಾರೆ ಅಪ್ರಾಪ್ತೆಯಾಗಿದ್ದರಿಂದ, ಪೊಲೀಸರು ಜಾನಿ ಮಾಸ್ಟರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಭಾರತದ ಸ್ವಾಗತ; ಪಶ್ಚಿಮ ಏಷ್ಯಾದಲ್ಲಿ ಶಾಂತಿಗೆ ಕರೆ ನೀಡಿದ ಮೋದಿ – Kannada News | PM Narendra Modi welcomes US Iran peace deal hopeful of restoration of peace and stability in West Asia

ನವದೆಹಲಿ, ಜೂನ್ 15: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿದ್ದ ಯುದ್ಧದ ವಾತಾವರಣವನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಮಹತ್ವದ ಶಾಂತಿ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಧಿಕೃತವಾಗಿ ಸ್ವಾಗತಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ ಜಾಗತಿಕ ಸ್ಥಿರತೆಗಾಗಿ ಈ ಒಪ್ಪಂದದ ಅಗತ್ಯವನ್ನು ಒತ್ತಿಹೇಳಿದ್ದಾರೆ.

“ಪಶ್ಚಿಮ ಏಷ್ಯಾದ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಒಪ್ಪಂದವನ್ನು ನಾನು ಸ್ವಾಗತಿಸುತ್ತೇನೆ. ಈ ಯುದ್ಧವು ಜಗತ್ತಿನಾದ್ಯಂತ ತೀವ್ರ ಆರ್ಥಿಕ ಸಂಕಷ್ಟವನ್ನು ಸೃಷ್ಟಿಸಿತ್ತು. ಹಲವು ದೇಶಗಳಲ್ಲಿ ಅಮಾಯಕರು ಜೀವ ಕಳೆದುಕೊಳ್ಳುವಂತೆ ಮಾಡಿತ್ತು. ಈ ಒಪ್ಪಂದದ ಅನುಷ್ಠಾನವು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸಲು ನೆರವಾಗುತ್ತದೆ ಹಾಗೂ ಮುಕ್ತ ಕಡಲ ಸಂಚಾರ ಮತ್ತು ಮುಕ್ತ ವ್ಯಾಪಾರವನ್ನು ಖಚಿತಪಡಿಸುತ್ತದೆ ಎಂದು ಭಾರತ ಆಶಿಸುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಉಳಿದಿರುವ ಇತರ ಪ್ರಮುಖ ವಿಷಯಗಳ ಬಗ್ಗೆಯೂ ಶೀಘ್ರದಲ್ಲೇ ಮಾತುಕತೆಗಳು ನಡೆದು, ಉಭಯ ದೇಶಗಳ ನಡುವೆ ದೀರ್ಘಕಾಲೀನ ಸುಸ್ಥಿರ ಅಂತಿಮ ಒಪ್ಪಂದ ಏರ್ಪಡಲಿ ಎಂದು ಭಾರತ ಎದುರು ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಭಾರತೀಯ ಕಾಲಮಾನದ ಪ್ರಕಾರ ಇಂದು (ಸೋಮವಾರ) ಮುಂಜಾನೆ ಅಮೆರಿಕ ಮತ್ತು ಇರಾನ್ ನಡುವಿನ ಈ ಐತಿಹಾಸಿಕ ರಾಜತಾಂತ್ರಿಕ ಯಶಸ್ಸನ್ನು ಪ್ರಕಟಿಸಲಾಯಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ವೇದಿಕೆಯಲ್ಲಿ “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಜೊತೆಗಿನ ಒಪ್ಪಂದ ಈಗ ಪೂರ್ಣಗೊಂಡಿದೆ. ಜಗತ್ತಿನ ಹಡಗುಗಳೇ, ನಿಮ್ಮ ಇಂಜಿನ್ ಸ್ಟಾರ್ಟ್ ಮಾಡಿ, ತೈಲವು ಮುಕ್ತವಾಗಿ ಹರಿಯಲಿ!” ಎಂದು ಬರೆಯುವ ಮೂಲಕ ಇರಾನ್ ಮೇಲಿನ ನೌಕಾ ದಿಗ್ಬಂಧನವನ್ನು ಹಿಂಪಡೆಯಲು ಅನುಮೋದನೆ ನೀಡಿರುವುದನ್ನು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: Video: ಅಮೆರಿಕ-ಇರಾನ್ ಶಾಂತಿ ಒಪ್ಪಂದ: 108 ದಿನಗಳ ಯುದ್ಧಕ್ಕೆ ತೆರೆ, ಪ್ರಮುಖ ಷರತ್ತುಗಳೇನು?

ಅಮೆರಿಕ ಮತ್ತು ಇರಾನ್ ನಡುವೆ ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಈ ಬಗ್ಗೆ ಮೊದಲು ಮಾಹಿತಿ ನೀಡಿ, “ಲೆಬನಾನ್ ಒಳಗೊಂಡಂತೆ ಎಲ್ಲಾ ರಂಗಗಳಲ್ಲೂ ತಕ್ಷಣದಿಂದಲೇ ಜಾರಿಗೆ ಬರುವಂತೆ ಶಾಶ್ವತವಾಗಿ ಮಿಲಿಟರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಎರಡೂ ಕಡೆಯವರು ಒಪ್ಪಿದ್ದಾರೆ” ಎಂದು ತಿಳಿಸಿದ್ದಾರೆ. ಕತಾರ್ ಸಹ ಈ ಶಾಂತಿ ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಇರಾನ್‌ನ ಕಾನೂನು ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ಉಪ ವಿದೇಶಾಂಗ ಸಚಿವ ಕಾಜೆಮ್ ಘರೀಬಾಬಾದಿ ನೀಡಿರುವ ಮಾಹಿತಿ ಪ್ರಕಾರ, ಜೂನ್ 19ರ ಶುಕ್ರವಾರದಂದು ಸ್ವಿಜರ್ಲೆಂಡ್‌ನಲ್ಲಿ (ಜಿನೀವಾ) ಅಧಿಕೃತ ಸಹಿ ಸಮಾರಂಭ ನಡೆಯಲಿದೆ. ಅಮೆರಿಕ ತನ್ನ ಕದನ ವಿರಾಮದ ಭರವಸೆಗಳನ್ನು ಈಡೇರಿಸಿ, ಇರಾನ್ ಮೇಲಿನ ದಿಗ್ಬಂಧನಗಳನ್ನು ತೆರವುಗೊಳಿಸಿ, ಮುಟ್ಟುಗೋಲು ಹಾಕಿಕೊಂಡಿರುವ ಇರಾನ್ ಆಸ್ತಿಗಳನ್ನು ಬಿಡುಗಡೆ ಮಾಡಿದ ಬಳಿಕವಷ್ಟೇ ಅಂತಿಮ ಒಪ್ಪಂದಕ್ಕಾಗಿ 60 ದಿನಗಳ ಕಾಲಾವಧಿಯ ಮಾತುಕತೆಗೆ ಇರಾನ್ ಒಪ್ಪಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಸಮಾರಂಭದಲ್ಲಿ ಅಮೆರಿಕದ ಪರವಾಗಿ ಉಪ ಅಧ್ಯಕ್ಷ ಜೆ.ಡಿ. ವ್ಯಾನ್ಸ್ ಅಥವಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಖುದ್ದಾಗಿ ಭಾಗವಹಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಇರಾನ್ ಜತೆ ಶಾಂತಿ ಒಪ್ಪಂದ ಮಾಡಿಕೊಂಡ ಟ್ರಂಪ್ ಹೇಳಿದ್ದೇನು?

ಕಳೆದ ಫೆಬ್ರವರಿಯಲ್ಲಿ ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯ ನಂತರ ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದರು. ಇದರಿಂದಾಗಿ ಕಳೆದ 3 ತಿಂಗಳಿನಿಂದ ಈ ಭಾಗದಲ್ಲಿ ಭೀಕರ ಯುದ್ಧ ನಡೆದು ಸಾವಿರಾರು ಜನರು ಮೃತಪಟ್ಟಿದ್ದರು. ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ‘ಹಾರ್ಮುಜ್ ಜಲಸಂಧಿ’ ಬಂದ್ ಆಗಿದ್ದರಿಂದ ಕಚ್ಚಾ ತೈಲದ ಬೆಲೆ ಗಗನಕ್ಕೇರಿತ್ತು. ಆದರೆ, ಈ ಶಾಂತಿ ಒಪ್ಪಂದದ ಸುದ್ದಿ ಹೊರಬೀಳುತ್ತಿದ್ದಂತೆಯೇ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಸಕಾರಾತ್ಮಕ ಬದಲಾವಣೆಗಳಾಗಿವೆ.

ಈ ಶಾಂತಿ ಒಪ್ಪಂದದ ಸುದ್ದಿ ಹೊರಬಿದ್ದ ಬಳಿಕ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ಬರೋಬ್ಬರಿ 3.45 ಡಾಲರ್ ಕುಸಿದು 83.89 ಡಾಲರ್‌ಗೆ ತಲುಪಿದೆ. ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಉತ್ಸಾಹ ಹೆಚ್ಚಾಗಿದ್ದು, ಸೆನ್ಸೆಕ್ಸ್ ಒಂದೇ ದಿನ 1,100ಕ್ಕೂ ಹೆಚ್ಚು ಅಂಕಗಳ ಏರಿಕೆ ಕಂಡು 76,648.74 ರಲ್ಲಿ ವಹಿವಾಟು ಆರಂಭಿಸಿದರೆ, ನಿಫ್ಟಿ 335 ಅಂಕಗಳ ಜಿಗಿತ ಕಂಡು 23,956.40ಕ್ಕೆ ತಲುಪಿದೆ. ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 58 ಪೈಸೆ ಜಿಗಿತ ಕಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಜಮೀರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು: ಪಾದರಾಯನಪುರದಲ್ಲಿ ಹೈಡ್ರಾಮಾ

ಬೆಂಗಳೂರು, (ಜೂನ್ 15): ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ (BZ Zameer ahmed khan) ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮುಸ್ಲಿಂ ಸಮುದಾಯ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುತ್ತಿವೆ. ಅದಂತೆ ಇಂದು (ಜೂನ್ 15) ಬೆಂಗಳೂರಿನ ಪಾದರಾಯನಪುರದಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು, ವಿಧಾನಸೌಧಕ್ಕೆ ತೆರಳಲು ಮುಂದಾಗಿದ್ದಾರೆ. ಇದಕ್ಕೆ ಪೊಲೀಸರು ತಡೆ ಹಿಡಿದಿದ್ದರಿಂದ ಭಾರೀ ಹೈಡ್ರಾಮಾವೇ ಆಗಿದೆ. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಬಳಿಕ ಅಲರ್ಟ್ ಆದ ಪೊಲೀಸರು, ಜಮೀರ್ ಅಹಮ್ಮದ್ ಖಾನ್ ಬೆಂಬಲಿಗರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Source link

ಬಾಂಗ್ಲಾದೇಶ್ ಆಟಗಾರನಿಗೆ ಬೈಕ್ ಗಿಫ್ಟ್ ನೀಡಿದ ಕೂಪರ್ ಕೊನೊಲಿ! – Kannada News | Cooper Connolly Gifts Award E Bike to Cramped Litton Das

ಕ್ರಿಕೆಟ್ ಮೈದಾನದಲ್ಲಿ ಕೇವಲ ರನ್‌ಗಳು ಮತ್ತು ವಿಕೆಟ್‌ಗಳು ಮಾತ್ರವಲ್ಲ, ಅದರಾಚೆಗಿನ ಮಾನವೀಯತೆ ಮತ್ತು ಕ್ರೀಡಾ ಸ್ಫೂರ್ತಿಯೂ ಅಭಿಮಾನಿಗಳ ಹೃದಯ ಗೆಲ್ಲುತ್ತದೆ. ಇದಕ್ಕೆ ಸಾಕ್ಷಿ ಬಾಂಗ್ಲಾದೇಶ್ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ. ಏಕೆಂದರೆ ಆಸ್ಟ್ರೇಲಿಯಾದ ಯುವ ಆರಂಭಿಕ ಆಟಗಾರ ಕೂಪರ್ ಕೊನೊಲಿ ತಮ್ಮ ಅದ್ಭುತ ಆಟ ಹಾಗೂ ಅದಕ್ಕಿಂತ ಮಿಗಿಲಾದ ಔದಾರ್ಯದ ಮೂಲಕ ಇಡೀ ಕ್ರಿಕೆಟ್ ಲೋಕದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸೂಪರ್ ಕೊನೊಲಿ:

ಮೀರ್‌ಪುರದಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಆಸ್ಟ್ರೇಲಿಯಾ ತಂಡ ರೋಚಕ ಜಯ ಸಾಧಿಸಿತು. ಈ ಸರಣಿಯ ಮೊದಲೆರಡು ಪಂದ್ಯಗಳನ್ನು ಸೋತಿದ್ದ ಆಸೀಸ್ ತಂಡಕ್ಕೆ ಕೊನೆಯ ಮ್ಯಾಚ್​ನಲ್ಲಿ ಬಾಂಗ್ಲಾದೇಶ್ 275 ರನ್​ಗಳ ಗುರಿ ನೀಡಿದ್ದರು.

ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಕೂಪರ್ ಕೊನೊಲಿ ಉತ್ತಮ ಆರಂಭ ಒದಗಿಸಿದ್ದರು. ಅಲ್ಲದೆ ಜವಾಬ್ದಾರಿಯುತ ಇನಿಂಗ್ಸ್​ ಆಡಿದ ಕೊನೊಲಿ 134 ಎಸೆತಗಳಲ್ಲಿ 149 ರನ್‌ಗಳ ಭರ್ಜರಿ ಶತಕ ಸಿಡಿಸಿ ಆಸ್ಟ್ರೇಲಿಯಾ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ 49.3 ಓವರ್​ಗಳಲ್ಲಿ 277 ರನ್​ ಗಳಿಸಿ 1 ವಿಕೆಟ್​ನ ರೋಚಕ ಜಯ ಸಾಧಿಸಿತು.

ಈ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಕಾರಣ ಕೂಪರ್ ಕೊನೊಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು. ಆದರೆ ಈ ಪ್ರಶಸ್ತಿಯನ್ನು ಕೊನೊಲಿ ಬಾಂಗ್ಲಾದೇಶ್ ಆಟಗಾರನಿಗೆ ನೀಡಿದ್ದಾರೆ.

ಮೈದಾನದಲ್ಲಿ ಕಾಡಿದ ದೈಹಿಕ ಬಳಲಿಕೆ:

ಮೀರ್‌ಪುರದ ತೀವ್ರ ಶಾಖ ಮತ್ತು ಹವಾವೇಗದ ನಡುವೆ ಸುದೀರ್ಘ ಬ್ಯಾಟಿಂಗ್ ಮಾಡಿದ ಕೂಪರ್ ಕೊನೊಲಿ ತೀವ್ರವಾದ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಮತ್ತೊಂದೆಡೆ, ಬಾಂಗ್ಲಾದೇಶದ ಅನುಭವಿ ಬ್ಯಾಟರ್ ಲಿಟ್ಟನ್ ದಾಸ್ ಕೂಡ ಬ್ಯಾಟಿಂಗ್ ವೇಳೆ ಇದೇ ರೀತಿಯ ತೀವ್ರ ದೈಹಿಕ ಬಳಲಿಕೆಯಿಂದ ಬಳಲುತ್ತಿದ್ದರು. ಇದಾಗ್ಯೂ ಬ್ಯಾಟಿಂಗ್ ಮುಂದುವರೆಸಿದ್ದ ದಾಸ್ 78 ಎಸೆತಗಳಲ್ಲಿ ಅಜೇಯ 58 ರನ್ ಬಾರಿಸಿದ್ದರು.

ಇನ್ನು ಬ್ಯಾಟಿಂಗ್ ಮುಗಿದ ನಂತರ ಲಿಟ್ಟನ್ ದಾಸ್‌ಗೆ ಸರಿಯಾಗಿ ನಡೆಯಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಅವರು ವಿಕೆಟ್ ಕೀಪಿಂಗ್ ಮಾಡಿರಲಿಲ್ಲ. ಲಿಟ್ಟನ್ ದಾಸ್ ಬದಲಿಗೆ ನೂರುಲ್ ಹಸನ್ ಗ್ಲೌಸ್ ತೊಟ್ಟು ಕಣಕ್ಕಿಳಿದಿದ್ದರು.

ಕರಗಿದ ಕೂಪರ್ ಮನಸ್ಸು:

ಈ ಮ್ಯಾಚ್​ನಲ್ಲಿ ಪಂದ್ಯ ಪುರುಷ ಪ್ರಶಸ್ತಿ ಗೆದ್ದ ಕೂಪರ್ ಕೊನೊಲಿಗೆ  ಪ್ರಾಯೋಜಕರಿಂದ ಒಂದು ಹೊಚ್ಚ ಹೊಸ ‘Vmoto’ ಇ-ಬೈಕ್ ಅನ್ನು ಉಡುಗೊರೆಯಾಗಿ ನೀಡಲಾಯಿತು. ಆದರೆ, ಪ್ರಶಸ್ತಿ ಪ್ರದಾನ ಸಮಾರಂಭ ಮುಗಿದ ತಕ್ಷಣ, ಕೊನೊಲಿ, ಆ ಬೈಕ್​ನ ಕೀಲಿಯನ್ನು ನೇರವಾಗಿ ಬಾಂಗ್ಲಾದೇಶದ ಲಿಟ್ಟನ್ ದಾಸ್ ಕೈಗಿಟ್ಟರು. ಈ ಮೂಲಕ ತನಗೆ ಸಿಕ್ಕ ಇ-ಬೈಕ್ ಅನ್ನು ಆಸ್ಟ್ರೇಲಿಯನ್ ಆಟಗಾರ ಲಿಟ್ಟನ್ ದಾಸ್​ಗೆ ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ: 420ರ ಸ್ಟ್ರೈಕ್​ ರೇಟ್​ನಲ್ಲಿ ಅಬ್ಬರಿಸಿ ಪಂದ್ಯ ಗೆಲ್ಲಿಸಿದ ಜೇಸನ್ ಹೋಲ್ಡರ್

ಇದೀಗ ಕೂಪರ್ ಕೊನೊಲಿಯ ಈ ಹೃದಯಸ್ಪರ್ಶಿ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, “ಕ್ರಿಕೆಟ್ ಅನ್ನು ಜೆಂಟಲ್‌ಮನ್ ಗೇಮ್ ಎಂದು ಕರೆಯುವುದಕ್ಕೆ ಇಂತಹ ಆಟಗಾರರೇ ಕಾರಣ” ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

Source link

ತಾನೊಂದು ಬಗೆದರೆ, ದೈವವೊಂದು ಬಗೆಯಿತು: ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ ಯುವಕ – Kannada News | Kumta Beach Tragedy: Youth Drowns at Kadle Beach While Filming Reel

ಕಾರವಾರ, ಜೂನ್​ 15: ರೀಲ್ಸ್ (Reels) ಮಾಡಲು ಹೋಗಿ ಓರ್ವ ಯುವಕ ಸಮುದ್ರಪಾಲಾಗಿರುವಂತಹ (death) ಘಟನೆ ಉತ್ತರ ಕನ್ನಡ ಜಿಲ್ಲೆಯ (uttara kannada) ಕುಮಟಾ ತಾಲೂಕಿನ ಕಡ್ಲೆ ಕಡಲ ತೀರದಲ್ಲಿ ನಡೆದಿದೆ. ಮಹಾರಾಷ್ಟ್ರದ ಪುಣೆ ಮೂಲದ ಜೀವನ್ ಭಟ್ಟರಾಯಿ(26) ನೀರುಪಾಲಾದ ಯುವಕ. ಕರಾವಳಿ ಕಾವಲುಪಡೆ ಮತ್ತು ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆದಿದೆ. ಸದ್ಯ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

  • ಕಡ್ಲೆ ಬೀಚ್‌ನಲ್ಲಿ ರೀಲ್ಸ್ ವಿಡಿಯೋ ಮಾಡುವಾಗ ಯುವಕ ಸಮುದ್ರಪಾಲು
  • ಕರಾವಳಿ ಕಾವಲುಪಡೆ, ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ
  • ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ನಡೆದಿದ್ದೇನು?

ಜೀವನ್​ ಭಟ್ಟರಾಯಿ ತನ್ನ ಐದು ಜನ ಸ್ನೇಹಿತರೊಂದಿಗೆ ಕುಮಟಾ ಭಾಗಕ್ಕೆ ಪ್ರವಾಸ ಬಂದಿದ್ದ. ಖಾಸಗಿ ರೆಸಾರ್ಟ್​ನಲ್ಲಿ ಮೂರು ದಿನದಿಂದ ತಂಗಿದ್ದರು. ರೀಲ್ಸ್ ಮಾಡಲು ಸ್ನೇಹಿತರು ಸಮುದ್ರಕ್ಕಿಳಿದಿದ್ದಾರೆ. ರೀಲ್ಸ್ ಮಾಡಿ ಸ್ನೇಹಿತರು ಹಿಂತಿರುಗಿದ್ದಾರೆ. ಆದರೆ ಜೀವನ್ ಸಮುದ್ರದಲ್ಲಿ​​ ಆಟವಾಡುತ್ತಿದ್ದ. ಆತ ಬರುತ್ತಾನೆ ಅಂತ ಸ್ನೇಹಿತರು ಮುಂದೆ ಹೋಗಿದ್ದಾರೆ. ಆದರೆ ಅಷ್ಟರಲ್ಲಿ ಜೀವನ್​​ ಸಮುದ್ರದ ಅಲೆಗೆ ಕೊಚ್ಚಿ ಹೋಗಿದ್ದಾನೆ. ಸದ್ಯ ಸ್ಥಳಕ್ಕೆ ಪಿಎಸ್​ಐ ಖಾದರ್ ಬಾಷಾ ಭೇಟಿ ನೀಡಿ ಪರಿಶೀಲನೆ‌ ಮಾಡಿದ್ದಾರೆ.

ಶಾರ್ಟ್​ ಸರ್ಕ್ಯೂಟ್​ನಿಂದ ಗುಡಿಸಲಿಗೆ ಬೆಂಕಿ ತಗುಲಿ ವೃದ್ಧ ಸಾವು

ಶಾರ್ಟ್​ ಸರ್ಕ್ಯೂಟ್​ನಿಂದ ಗುಡಿಸಲಿಗೆ ಬೆಂಕಿ ತಗುಲಿ ವೃದ್ಧ ಸಾವನ್ನಪ್ಪಿರುವಂತಹ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಶೃಂಗಾರಬಾಗು ತಾಂಡಾದಲ್ಲಿ ನಡೆದಿದೆ. ರೆಕ್ಯಾನಾಯ್ಕ್ (65) ಮೃತ ವ್ಯಕ್ತಿ. ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಧರ್ಮಸ್ಥಳ ಪ್ರವಾಸ ಮುಗಿಸಿ ಬರುವಾಗ ದುರಂತ: ಹೇಮಾವತಿ ಹಿನ್ನೀರಿನಲ್ಲಿ ಮೂವರು ಯುವಕರು ಜಲಸಮಾಧಿ

ಇಂದು ಬೆಳಗ್ಗೆ ಶಾರ್ಟ್​ ಸರ್ಕ್ಯೂಟ್​ನಿಂದ ಗುಡಿಸಲಿಗೆ ಬೆಂಕಿ ತಗುಲಿದೆ. ಈ ವೇಳೆ ರೆಕ್ಯಾನಾಯ್ಕ್ ಗುಡಿಸಲಿನಲ್ಲೇ ಮಲಗಿದ್ದರು. ಸುಟ್ಟಗಾಯಗಳಿಂದ ನರಳಾಡುತ್ತಿದ್ದ ರೆಕ್ಯಾನಾಯ್ಕ್​​ನನ್ನು ಬಸವಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಜಿಬಿಎ ಕಸದ ವಾಹನ ಹರಿದು ವ್ಯಕ್ತಿ ಸಾವು

ಜಿಬಿಎ ಕಸದ ವಾಹನ ಹರಿದು ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಮೈಸೂರು ರಸ್ತೆಯ ಸಿರ್ಸಿ ಸರ್ಕಲ್ ಬಳಿ ನಡೆದಿದೆ. ಆಯತಪ್ಪಿ ಬೈಕ್​ನಿಂದ ಕೆಳಗೆ ಬಿದಿದ್ದ 35 ವರ್ಷದ ವ್ಯಕ್ತಿ ಮೇಲೆ ಜಿಬಿಎ ಕಸದ ಲಾರಿ ಹರಿದಿದ್ದು, ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಸವಾರ ತಮಿಳುನಾಡು ನೋಂದಣಿ ಸಂಖ್ಯೆಯ ಬೈಕ್‌ ಚಲಾಯಿಸುತ್ತಿದ್ದರು. ಸ್ಥಳಕ್ಕೆ ಚಾಮರಾಜಪೇಟೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಫ್ರಿಡ್ಜ್‌ನಲ್ಲಿದ್ದ ಮೊಸರನ್ನು ಕದ್ದು ತಿಂದ ಪುಟಾಣಿ, ವೈರಲ್‌ ಆಯ್ತು ದೃಶ್ಯ – Kannada News | A little girl put her mouth on a packet of yogurt in the fridge

ಈಗಿನ ಕಾಲದ ಮಕ್ಕಳು ಪುಟಾಣಿಗಳು (little kids) ತುಂಬಾನೇ ಜಾಣರು. ಅಷ್ಟೇ ತುಂಟರು ಕೂಡ. ಅಷ್ಟೇ ಅಲ್ಲ, ಹೆತ್ತವರ ಮಾತನ್ನು ಕೇಳುವುದೇ ಇಲ್ಲ, ಮಕ್ಕಳ ಮುಂದೆ ಏನಾದರೂ ಹೇಳಿದರೆ ಸಾಕು, ಪ್ರಶ್ನೆಯ ಮೇಲೆ ಪ್ರಶ್ನೆ ಕೇಳುತ್ತಾರೆ. ಎಲ್ಲರನ್ನು ಯಾಮಾರಿಸಿ ಬಿಡುತ್ತಾರೆ. ಇದೀಗ ಪುಟಾಣಿಯೊಂದು ಹೀಗೆಯೇ ಮಾಡಿದೆ. ಫ್ರಿಡ್ಜ್ ನಲ್ಲಿಟ್ಟಿದ್ದ ಮೊಸರಿನ ಪ್ಯಾಕೆಟ್ ಗೆ ಬಾಯಿ ಹಾಕಿದೆ. ಆ ಬಳಿಕ ಮುಗ್ಧತೆಯ ನೋಟ ಬೀರಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

ಅಮೇಜಿಂಗ್ ಆರ್ಟ್ (Amazing_art) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟ್ಟ ಹುಡುಗಿಯ ತುಂಟಾಟವನ್ನು ಕಾಣಬಹುದು. ಈ ಪುಟ್ಟ ಹುಡುಗಿಯೊಬ್ಬಳು ಯಾರಿಗೂ ಗೊತ್ತಾಗದಂತೆ ಫ್ರಿಡ್ಜ್ ನಲ್ಲಿಟ್ಟಿದ್ದ ಮೊಸರಿನ ಪ್ಯಾಕೆಟ್ ಗೆ ಬಾಯಿ ಹಾಕಿದೆ. ಮೊಸರನ್ನು ತಿನ್ನುವಿದರಲ್ಲಿ ಬ್ಯುಸಿಯಾಗಿರುವುದನ್ನು ಕಾಣಬಹುದು. ಈ ದೃಶ್ಯವನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಮೆಲ್ಲನೆ ಹಿಂದೆ ತಿರುಗಿ ನೋಡುತ್ತಾ ಮುಗ್ಧಯಂತೆ ಕ್ಯಾಮೆರಾಗೆ ಪೋಸ್ ಕೊಟ್ಟಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಗೋಲ್ಗಪ್ಪಾ ವಿಭಿನ್ನವಾಗಿ ತಿನ್ಬಹುದೆಂದು ತೋರಿಸಿಕೊಟ್ಟ ಪುಟಾಣಿ

ಈ ವಿಡಿಯೋ ಅರವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮಹಾ ಕಳ್ಳಿ ಎಂದರೆ ಮತ್ತೊಬ್ಬರು ತುಂಬಾನೇ ಮುದ್ದಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಮ್ಮ ಮನೆಯಲ್ಲಿರುವ ಪುಟಾಣಿ ಹೀಗೆಯೇ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

5 ತಿಂಗಳಲ್ಲಿ 3 ಮದುವೆಯಾಗಿ ವಂಚಿಸಿದ ಕಿಲಾಡಿ ಮಹಿಳೆ, ದೇವಸ್ಥಾನಕ್ಕೆ ಹೋದ್ರೆ ವಾಪಸ್ ಬರ್ತಿರ್ಲಿಲ್ಲ – Kannada News | Himachal Marriage Fraud: Woman Cheats 3 Men in 5 Months, Police Issue Warning

ಹಮೀರ್​ಪುರ, ಜೂನ್ 15: ಐದು ತಿಂಗಳಲ್ಲಿ ಮೂರು ಮದುವೆ(Marriage)ಯಾಗಿ ಮಹಿಳೆಯೊಬ್ಬಳು ಪರಾರಿಯಾಗಿರುವ ಘಟನೆ ಹಿಮಾಚಲ ಪ್ರದೇಶದ ಹಮೀರ್​ಪುರದಲ್ಲಿ ನಡೆದಿದೆ. ಶೀತಲ್ ಎಂಬ ಮಹಿಳೆ ಕೇವಲ ಐದು ತಿಂಗಳೊಳಗೆ ಮೂವರು ವ್ಯಕ್ತಿಗಳನ್ನು ಮದುವೆಯಾಗಿ, ಸುಳ್ಳು ನೆಪಗಳನ್ನು ಹೇಳಿ ಪರಾರಿಯಾಗಿದ್ದಾಳೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಸಾರ್ವಜನಿಕರ ಹಿತದೃಷ್ಟಿಯಿಂದ ಪೊಲೀಸರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

ಸಂತ್ರಸ್ತ ಕುಟುಂಬಗಳು ನೀಡಿದ ಅಧಿಕೃತ ದೂರಿನ ಮೇರೆಗೆ ಸಂಬಂಧಿತ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದ್ದು, ಇಡೀ ಜಾಲವನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ. ಮಹಿಳೆಯು ಜನವರಿಯಲ್ಲಿ ಬಿಲಾಸ್‌ಪುರದ ಜೆಜ್ವಿನ್, ಫೆಬ್ರವರಿಯಲ್ಲಿ ಹಮೀರ್‌ಪುರದ ಗಲೋಡ್ ಮತ್ತು ಮೇ ತಿಂಗಳಲ್ಲಿ ಬಲ್ಹಸಿನಾ ಪ್ರದೇಶದಲ್ಲಿ ಮದುವೆಯಾಗಿದ್ದಳು. ಮದುವೆಯಾದ ಕೆಲವೇ ದಿನಗಳಲ್ಲಿ ದೇವಸ್ಥಾನಕ್ಕೆ ಹೋಗುವ ನೆಪ ಅಥವಾ ಸಂಬಂಧಿಕರ ಮರಣದ ಸುಳ್ಳು ಕಾರಣ ನೀಡಿ ಈಕೆ ನಾಪತ್ತೆಯಾಗುತ್ತಿದ್ದಳು.

ಎಲ್ಲಾ ಮೂರು ಘಟನೆಗಳಲ್ಲೂ ಒಂದೇ ರೀತಿಯ ಮಾದರಿ ಇರುವುದರಿಂದ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಪ್ರಕರಣದ ಬೆನ್ನಲ್ಲೇ, ಸಾರ್ವಜನಿಕರನ್ನು ವಂಚಕರಿಂದ ರಕ್ಷಿಸಲು ಪೊಲೀಸ್ ಇಲಾಖೆಯು ವಿಶೇಷ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಮತ್ತಷ್ಟು ಓದಿ: ಮದುವೆ ಆಗೋದಾಗಿ ನಂಬಿಸಿ ಯುವಕನಿಗೆ 35 ಲಕ್ಷ ರೂ ವಂಚಿಸಿದ ಯುವತಿ

ಮದುವೆಗಳನ್ನು ಏರ್ಪಡಿಸುವ ಮುನ್ನ ವಧು ಅಥವಾ ವರನ ಕುಟುಂಬದ ಹಿನ್ನೆಲೆಯನ್ನು ಸ್ಥಳೀಯ ಮಟ್ಟದಲ್ಲಿ ಸಂಪೂರ್ಣವಾಗಿ ತನಿಖೆ ಮಾಡಿಕೊಳ್ಳಬೇಕು.ಮದುವೆಯ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ನಡವಳಿಕೆ ಅಥವಾ ಯಾವುದೇ ದಾಖಲೆಗಳ ಬಗ್ಗೆ ಸಣ್ಣ ಅನುಮಾನ ಬಂದರೂ ತಕ್ಷಣವೇ ಸ್ಥಳೀಯ ಆಡಳಿತ ಅಥವಾ ಪೊಲೀಸರಿಗೆ ವರದಿ ಮಾಡಲು ತಿಳಿಸಲಾಗಿದೆ.

ಈ ಘಟನೆಯು ಸಮಾಜದಲ್ಲಿ ಒಂದು ಹೊಸ ಧನಾತ್ಮಕ ಜಾಗೃತಿಗೆ ಕಾರಣವಾಗಿದೆ. ಹಮೀರ್‌ಪುರ ಮತ್ತು ಬಿಲಾಸ್‌ಪುರ ಜಿಲ್ಲೆಗಳ ಜನರು ಈಗ ಮದುವೆಗಳನ್ನು ನಿಶ್ಚಯಿಸುವ ಮುನ್ನ ವಂಚನೆಗೆ ಒಳಗಾಗದಂತೆ ತಡೆಯಲು ಸ್ಥಳೀಯ ಅಧಿಕಾರಿಗಳು ಹಾಗೂ ಪಂಚಾಯತ್ ಮಟ್ಟದಲ್ಲಿ ಆಗಾಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಇದು ಮುಂಬರುವ ದಿನಗಳಲ್ಲಿ ಇಂತಹ ವಂಚಕ ಗ್ಯಾಂಗ್‌ಗಳ ಆಟಕ್ಕೆ ಶಾಶ್ವತ ಬ್ರೇಕ್ ಹಾಕಲು ನೆರವಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IND A vs SL A: ಶ್ರೀಲಂಕಾ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದ ಟೀಮ್ ಇಂಡಿಯಾ – Kannada News | Sri Lanka A vs India A: Team India All Out For 265 Runs

ಭಾರತ, ಶ್ರೀಲಂಕಾ, ಅಫ್ಘಾನಿಸ್ತಾನ್ ಎ ತಂಡಗಳ ನಡುವಣ ತ್ರಿಕೋನ ಸರಣಿಯ 4ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡವು 265 ರನ್​​ಗಳಿಸಿದೆ.  ದಂಬುಲ್ಲಾದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಎ ತಂಡದ ನಾಯಕ ಸಹನ್ ಅರಾಚ್ಚಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಗಿತ್ತು.

ಆರಂಭಿಕರಾದ ವೈಭವ್ ಸೂರ್ಯವಂಶಿ (21) ಹಾಗೂ ಪ್ರಭ್​ಸಿಮ್ರಾನ್ ಸಿಂಗ್ (11) ಬೇಗನೆ ಔಟಾಗಿದ್ದರು. ಈ ಹಂತದಲ್ಲಿ ಜೊತೆಗೂಡಿದ ರುತುರಾಜ್ ಗಾಯಕ್ವಾಡ್ (37) ಹಾಗೂ ತಿಲಕ್ ವರ್ಮಾ (23) ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಆದರೆ ಆ ಬಳಿಕ ಬಂದ ಆಯುಷ್ ಬದೋನಿ ಕೇವಲ 15 ರನ್​ಗಳಿಸಿ ಔಟಾದರೆ, ನಿಶಾಂತ್ ಸಿಂಧು 6 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ ಕಣಕ್ಕಿಳಿದ ಸೂರ್ಯಾಂಶ್ ಶೆಡ್ಗೆ 66 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 77 ರನ್ ಬಾರಿಸಿದರು.

ಮತ್ತೊಂದೆಡೆ ಉತ್ತಮ ಸಾಥ್ ನೀಡಿದ ವಿಪ್ರಾಜ್ ನಿಗಮ್ 49 ಎಸೆತಗಳಲ್ಲಿ 6 ಫೋರ್​ಗಳೊಂದಿಗೆ 51 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಭಾರತ ಎ ತಂಡ 49.2 ಓವರ್​ಗಳಲ್ಲಿ 265 ರನ್​ ಬಾರಿಸಿ ಆಲೌಟ್ ಆಗಿದೆ.

ಇದೀಗ 266 ರನ್​ಗಳ ಗುರಿ ಬೆನ್ನತ್ತಲಾರಂಭಿಸಿರುವ ಶ್ರೀಲಂಕಾ ತಂಡವು 5 ಓವರ್​ಗಳ ಮುಕ್ತಾಯದ ವೇಳೆಗೆ ಯಾವುದೇ ವಿಕೆಟ್ ನಷ್ಟವಿಲ್ಲದೆ 45 ರನ್ ಕಲೆಹಾಕಿದೆ.

ಶ್ರೀಲಂಕಾ ಎ ಪ್ಲೇಯಿಂಗ್ 11: ನಿರೋಷನ್ ಡಿಕ್ವೆಲ್ಲಾ (ವಿಕೆಟ್ ಕೀಪರ್) , ಅವಿಷ್ಕಾ ಫೆರ್ನಾಂಡೊ , ವಿಷೇನ್ ಹಾಲಂಬಗೆ , ಸದೀರ ಸಮರವಿಕ್ರಮ , ಅಹಾನ್ ವಿಕ್ರಮಸಿಂಘೆ , ಸಹನ್ ಅರಚ್ಚಿಗೆ (ನಾಯಕ) , ವನುಜಾ ಸಹನ್ , ವಿಜಯಕಾಂತ್ ವಿಯಸ್ಕಾಂತ್ , ಕುಗಥಾಸ್ ಮಥುಲನ್ , ಮೊಹಮ್ಮದ್ ಶಿರಾಜ್ , ಚಾಮಿಕಾ ಗುಣಶೇಖರ.

ಇದನ್ನೂ ಓದಿ: ಮೊದಲ ಪಂದ್ಯದಲ್ಲೇ 7 ಗೋಲು ಬಾರಿಸಿ ವಿಶ್ವ ದಾಖಲೆ ಬರೆದ ಜರ್ಮನಿ!

ಭಾರತ ಎ ಪ್ಲೇಯಿಂಗ್ 11: ಪ್ರಭ್​ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್ ), ವೈಭವ್ ಸೂರ್ಯವಂಶಿ , ರುತುರಾಜ್ ಗಾಯಕ್ವಾಡ್ , ತಿಲಕ್ ವರ್ಮಾ (ನಾಯಕ) , ಆಯುಷ್ ಬದೋನಿ , ಸೂರ್ಯಾಂಶ್ ಶೆಡ್ಗೆ , ನಿಶಾಂತ್ ಸಿಂಧು , ಅನುಕೂಲ್ ರಾಯ್ , ಅರ್ಷದ್ ಖಾನ್ , ವಿಪ್ರಾಜ್ ನಿಗಮ್ , ಯಶ್ ಠಾಕೂರ್.

Source link

Exit mobile version