ಗೃಹಲಕ್ಷ್ಮಿಯರಿಗೆ ಭರ್ಜರಿ ಶಾಕ್​​ ಕೊಟ್ಟ ಸರ್ಕಾರ: ರಾಜ್ಯಾದ್ಯಂತ ಒಟ್ಟು 3.89 ಲಕ್ಷ ಫಲಾನುಭವಿಗಳಿಗೆ ಕೊಕ್​​ – Kannada News | Major Jolt to Gruhalakshmi Beneficiaries: Karnataka Government Removes 3.89 Lakh Ineligible Women From the Scheme

ಬೆಂಗಳೂರು, ಜೂನ್​​ 15: ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿಗೆ ರಾಜ್ಯ ಸರ್ಕಾರ ಮೇಜರ್​​ ಸರ್ಜರಿ ಮಾಡಿದೆ. ಯೋಜನೆಯ ದುರುಪಯೋಗ ಕಂಡು ಬಂದಿರುವ ಹಿನ್ನೆಲೆ ಪರಿಷ್ಕರಣೆ ನಡೆದಿದ್ದು, ಫಲಾನುಭವಿಗಳು ಮರು ಅರ್ಜಿ ಸಲ್ಲಿಸಬೇಕೆಂದು ಸ್ವತಃ ಸಿಎಂ ಡಿ.ಕೆ. ಶಿವಕುಮಾರ್​​ ಅವರೇ ಈಗಾಗಲೇ ಮಾಹಿತಿ ನೀಡಿದ್ದಾರೆ. ಈಗಿರುವ ಮಾಹಿತಿಯ ಪ್ರಕಾರ 1.30 ಕೋಟಿ ಗೃಹಲಕ್ಷ್ಮಿಯರ ಪೈಕಿ 3.89 ಲಕ್ಷ ಫಲಾನುಭವಿಗಳಿಗೆ ಭರ್ಜರಿ ಶಾಕ್​​ ಕೊಟ್ಟಿದೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಹತ್ವದ ಪರಿಷ್ಕರಣೆ ಕೈಗೊಂಡಿದ್ದು, ನೋಂದಣಿಯಾಗಿದ್ದ 1.30 ಕೋಟಿ ಫಲಾನುಭವಿಗಳ ಪೈಕಿ 3.89 ಲಕ್ಷ ಮಂದಿಗೆ ಭಾರೀ ಆಘಾತ ಎದುರಾಗಿದೆ. ವಿವಿಧ ಇಲಾಖೆಗಳ ಮಾಹಿತಿಯನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿದ ಬಳಿಕ ಅನರ್ಹ ಫಲಾನುಭವಿಗಳನ್ನು ಗುರುತಿಸಿರುವ ಇಲಾಖೆ, ಅವರ ಖಾತೆಗಳಿಗೆ ಹಣ ವರ್ಗಾವಣೆ ಸ್ಥಗಿತಗೊಳಿಸಿದೆ. ಇಲಾಖೆಯ ಮಾಹಿತಿಯ ಪ್ರಕಾರ, ಆದಾಯ ತೆರಿಗೆ ಮತ್ತು GST ಪಾವತಿಸುವ 1.94 ಲಕ್ಷ ಮಂದಿಯನ್ನು ಯೋಜನೆಯಿಂದ ಹೊರಗಿಡಲಾಗಿದೆ. ಜೊತೆಗೆ, ಮೃತಪಟ್ಟ 1.95 ಲಕ್ಷ ಫಲಾನುಭವಿಗಳ ಹೆಸರಿನಲ್ಲಿದ್ದ ಖಾತೆಗಳಿಗೂ ಹಣ ಜಮೆಯಾಗುತ್ತಿರುವುದು ಪತ್ತೆಯಾಗಿದ್ದು, ಅಂತಹ ಖಾತೆಗಳಿಗೆ ಸಹ ಹಣ ವರ್ಗಾವಣೆ ಬಂದ್ ಮಾಡಲಾಗಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ; ಸೌಲಭ್ಯ ಪಡೆಯಲು ಹೊಸ ಮಾನದಂಡಗಳೇನು? ಇಲ್ಲಿದೆ ಮಾಹಿತಿ

ಅನರ್ಹ ಗೃಹಲಕ್ಷ್ಮಿಯರಿಗೆ ಶಾಕ್

ಜಿಲ್ಲೆ ಐಟಿ/ಜಿಎಸ್ಟಿ ಪಾವತಿದಾರರು ಮರಣ ಹೊಂದಿದವರು ಒಟ್ಟು
ಬೆಂಗಳೂರು ನಗರ 33,833 14,038 47,871
ಬೆಳಗಾವಿ 16,432 15,850 32,282
ದಕ್ಷಿಣ ಕನ್ನಡ 10,495 6,159 16,654
ಮೈಸೂರು 9,139 11,541 20,680
ತುಮಕೂರು 7,898 12,139 20,037
31 ಜಿಲ್ಲೆಗಳಿಂದ 1,94,560 1,95,224 3,89,784

ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಅನರ್ಹ ಫಲಾನುಭವಿಗಳ ಪೈಕಿ ಬೆಂಗಳೂರು ನಗರ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, 47,871 ಗೃಹಲಕ್ಷ್ಮಿಯರನ್ನ ಕೈಬಿಡಲಾಗಿದೆ. ತದನಂತರ ಬೆಳಗಾವಿ, ದಕ್ಷಿಣ ಕನ್ನಡ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳೂ ಅನರ್ಹರ ಪರಿಷ್ಕರಣೆಯಲ್ಲಿ ಅಗ್ರ 5ರಲ್ಲಿ ಸ್ಥಾನ ಪಡೆದಿವೆ.

ಪ್ರತಿ ತಿಂಗಳು ಸುಮಾರು 77 ಕೋಟಿ ರೂ. ಉಳಿತಾಯ

ಮಾರ್ಚ್ ತಿಂಗಳಲ್ಲೇ ಒಟ್ಟು 3.89 ಲಕ್ಷ ಅನರ್ಹ ಫಲಾನುಭವಿಗಳನ್ನು ಗುರುತಿಸಿರುವ ಇಲಾಖೆ, ವಿವಿಧ ಸರ್ಕಾರಿ ದತ್ತಾಂಶಗಳನ್ನು ಪರಸ್ಪರ ಹೊಂದಾಣಿಕೆ ಮಾಡಿ ಈ ಪರಿಷ್ಕರಣೆ ಕೈಗೊಂಡಿದೆ. ಅನರ್ಹರಿಗೆ ಹಣ ಪಾವತಿಯಾಗುವುದನ್ನು ತಡೆಯುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶೀಘ್ರದಲ್ಲೇ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆ ಜಾರಿಗೆ ತರಲೂ ಸಿದ್ಧತೆ ನಡೆಸಿದೆ. ಈ ಕ್ರಮದಿಂದ ತಾಂತ್ರಿಕ ಲೋಪಗಳು ಮತ್ತು ನಕಲಿ ಫಲಾನುಭವಿಗಳ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲಾಖೆಯ ಈ ಪರಿಷ್ಕರಣೆಯಿಂದ ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳು ಸುಮಾರು 77 ಕೋಟಿ ರೂ. ಉಳಿತಾಯವಾಗಲಿದೆ.

ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರು ಏರ್​ಪೋರ್ಟ್​ನಲ್ಲಿ ಕಸ್ಟಮ್ಸ್ ಭರ್ಜರಿ ಬೇಟೆ: 13.14 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ, 6 ಮಂದಿಯ ಬಂಧನ – Kannada News | Bengaluru Airport Drug Bust: Customs Seizes Rs 13.14 Crore Hydroponic Ganja from Bangkok Passengers; 6 Detained

13.14 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿImage Credit source: tv9

ಬೆಂಗಳೂರು, ಜೂನ್ 15: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬ್ಯಾಂಕಾಕ್‌ನಿಂದ ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದೆ. ಕಸ್ಟಮ್ಸ್ ಇಲಾಖೆಯ ತಪಾಸಣೆ ವೇಳೆ ಲಗೇಜ್ ಬ್ಯಾಗ್‌ನಲ್ಲಿ ಅಡಗಿಸಿಡಲಾಗಿದ್ದ ಒಟ್ಟು 38.34 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಜಾಲದಲ್ಲಿದ್ದ 6 ಮಂದಿ ಪ್ರಯಾಣಿಕರನ್ನು ಬಂಧಿಸಲಾಗಿದೆ.

ಮುಖ್ಯಾಂಶಗಳು

  • 13.14 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆ.
  • ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಅಕ್ರಮ ತೈಲ ಸಾಗಣೆ ಜಾಲ.
  • ಲಗೇಜ್ ಬ್ಯಾಗ್‌ಗಳಲ್ಲಿ ಅಡಗಿಸಿದ್ದ 6 ಮಂದಿ ಅರೆಸ್ಟ್.

ಮೊದಲ ಜಂಟಿ ಕಾರ್ಯಾಚರಣೆ ಜೂನ್ 11ರಂದು ಐವರ ಬಂಧನ

ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ನೀಡಿದ ಅಧಿಕೃತ ಮಾಹಿತಿಯ ಪ್ರಕಾರ, ಜೂನ್ 11, 2026ರಂದು ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿಳಿದ 5 ಜನ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಕಳ್ಳಸಾಗಣೆ ಬೆಳಕಿಗೆ ಬಂದಿದೆ. ಈ ಆರೋಪಿಗಳು ವಿಮಾನ ನಿಲ್ದಾಣದಲ್ಲಿ ತಪಾಸಣೆಯಿಂದ ಬಚಾವಾಗಲು ತಮ್ಮ ಚೆಕ್-ಇನ್ ಬ್ಯಾಗೇಜ್‌ಗಳ (Checked-in baggage) ಒಳಗೆ ಅತ್ಯಂತ ಚಾಣಾಕ್ಷತನದಿಂದ ಗಾಂಜಾವನ್ನು ಅಡಗಿಸಿಟ್ಟಿದ್ದರು. ಅಧಿಕಾರಿಗಳು ಬ್ಯಾಗ್‌ಗಳನ್ನು ಕೂಲಂಕಷವಾಗಿ ಸ್ಕ್ಯಾನ್ ಮಾಡಿದಾಗ ಒಟ್ಟು 24.8 ಕೆಜಿ ತೂಕದ ಅತ್ಯಾಧುನಿಕ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಇದರ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು 8.68 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಐದೂ ಜನರನ್ನು ತಕ್ಷಣವೇ ಬಂಧಿಸಲಾಗಿದೆ.

ಜೂನ್ 13ರಂದು ಮತ್ತೊಬ್ಬ ಅರೆಸ್ಟ್

ಜೂನ್ 13, 2026ರಂದು ಬ್ಯಾಂಕಾಕ್‌ನಿಂದಲೇ ಬಂದ ಮತ್ತೊಂದು ವಿಮಾನದ ಪ್ರಯಾಣಿಕನ ಮೇಲೆ ಕಸ್ಟಮ್ಸ್ ಕಣ್ಣಿಟ್ಟಿತ್ತು. ಬೆಂಗಳೂರಿಗೆ ಬಂದಿಳಿದ ಓರ್ವ ಶಂಕಿತ ಪ್ರಯಾಣಿಕನನ್ನು ತಡೆದು ಆತನ ಚೆಕ್-ಇನ್ ಬ್ಯಾಗ್ ಹಾಗೂ ಹ್ಯಾಂಡ್ ಲಗೇಜ್ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಮತ್ತೊಂದು ಶಾಕ್ ಕಾದಿತ್ತು. ಈತನ ಬ್ಯಾಗ್‌ನಲ್ಲೂ ಕೂಡ ವ್ಯಾಕ್ಯೂಮ್ ಪ್ಯಾಕ್ ಮಾಡಲಾಗಿದ್ದ 13.54 ಕೆಜಿ ಹೈಡ್ರೋಪೋನಿಕ್ ಗಾಂಜಾ ಸಿಕ್ಕಿಬಿದ್ದಿದೆ. ಇದರ ಒಟ್ಟು ಮೌಲ್ಯ 4.74 ಕೋಟಿ ರೂ. ಆಗಿದೆ.

NDPS ಕಾಯ್ದೆಯಡಿ ಮೊಕದ್ದಮೆ

ಈ ಎರಡೂ ಪ್ರತ್ಯೇಕ ಕಾರ್ಯಾಚರಣೆಗಳಿಂದ ಕಸ್ಟಮ್ಸ್ ಇಲಾಖೆಯು ಒಟ್ಟು 13.14 ಕೋಟಿ ರೂ. ಬೆಲೆಬಾಳುವ 38.34 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಕ್ಕೆ ಪಡೆದಂತಾಗಿದೆ. ಬಂಧಿತ 6 ಜನ ಆರೋಪಿಗಳ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಾದ ಎನ್‌ಡಿಪಿಎಸ್ (NDPS Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಅಂತರರಾಷ್ಟ್ರೀಯ ಡ್ರಗ್ಸ್ ಮಾಫಿಯಾದ ಹಿಂದೆ ಬೆಂಗಳೂರಿನಲ್ಲಿ ಯಾರ್ಯಾರು ಇದ್ದಾರೆ ಮತ್ತು ಈ ಮಾದಕ ವಸ್ತುವನ್ನು ನಗರದ ಯಾವ ಭಾಗಗಳಿಗೆ ಸರಬರಾಜು ಮಾಡಲು ತರಲಾಗುತ್ತಿತ್ತು ಎಂಬುದನ್ನು ತಿಳಿಯಲು ಕಸ್ಟಮ್ಸ್ ಅಧಿಕಾರಿಗಳು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐತಿಹಾಸಿಕ ಅಮೆರಿಕ-ಇರಾನ್ ಒಪ್ಪಂದದ ಬೆನ್ನಲ್ಲೇ ಹಾರ್ಮುಜ್ ಜಲಸಂಧಿ ಪುನಃ ತೆರೆಯಲು ದಿನಗಣನೆ – Kannada News | Hormuz Strait Reopens: US Iran Peace Deal Ends Blockade, Stabilizing Global Oil

ಟೆಹ್ರಾನ್, ಜೂನ್ 15: ವಿಶ್ವದ ಅತಿ ದೊಡ್ಡ ಕಡಲ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದ್ದ ಅಮೆರಿಕ ಹಾಗೂ ಇರಾನ್ ನಡುವಿನ ತಿಂಗಳುಗಳ ಸಂಘರ್ಷಕ್ಕೆ ಕೊನೆಗೂ ಐತಿಹಾಸಿಕ ತಾರ್ಕಿಕ ಅಂತ್ಯ ಸಿಕ್ಕಿದೆ. ಉಭಯ ದೇಶಗಳು ಜಾಗತಿಕ ಶಾಂತಿ ಒಪ್ಪಂದದ ಅಂತಿಮ ಚೌಕಟ್ಟನ್ನು ಸಿದ್ಧಪಡಿಸಿದ್ದು, ಇದರ ಭಾಗವಾಗಿ ವಿಶ್ವದ ಅತ್ಯಂತ ನಿರ್ಣಾಯಕ ಜಲಮಾರ್ಗವಾದ ‘ಹಾರ್ಮುಜ್ ಜಲಸಂಧಿ’ (Hormuz Strait)ಶೀಘ್ರದಲ್ಲೇ ವಾಣಿಜ್ಯ ಮತ್ತು ತೈಲ ಹಡಗುಗಳ ಸಂಚಾರಕ್ಕೆ ಸಂಪೂರ್ಣ ಮುಕ್ತವಾಗಲಿದೆ. ವಿಶ್ವದ ಒಟ್ಟು ತೈಲ ಸಾಗಣೆಯ ಸರಿಸುಮಾರು ಶೇ. 20 ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ರಫ್ತಿನ ಬಹುಪಾಲು ಜವಾಬ್ದಾರಿ ಹೊತ್ತಿರುವ ಈ ಜಲಮಾರ್ಗವು ಪುನಃ ತೆರೆಯುತ್ತಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಅಮೆರಿಕದಿಂದ ನೌಕಾ ದಿಗ್ಬಂಧನ ತಕ್ಷಣ ವಾಪಸ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ ಮಾತುಕತೆ ಯಶಸ್ವಿಯಾಗಿದೆ ಎಂದು ಹೇಳುತ್ತಾ, ಜಾಗತಿಕ ಹಡಗು ಸಂಸ್ಥೆಗಳಿಗೆ ಸಂದೇಶ ನೀಡಿದ್ದಾರೆ. ಇಸ್ಲಾಮಿಕ್ ಗಣರಾಜ್ಯ ಇರಾನ್ ಜೊತೆಗಿನ ಒಪ್ಪಂದ ಈಗ ಪೂರ್ಣಗೊಂಡಿದೆ. ಹಾರ್ಮುಜ್ ಜಲಸಂಧಿಯನ್ನು ಯಾವುದೇ ಶುಲ್ಕವಿಲ್ಲದೆ ಮುಕ್ತಗೊಳಿಸಲು ಮತ್ತು ಅಮೆರಿಕ ವಿಧಿಸಿದ್ದ ನೌಕಾ ದಿಗ್ಬಂಧನವನ್ನು ತಕ್ಷಣವೇ ಹಿಂಪಡೆಯಲು ನಾನು ಸಂಪೂರ್ಣ ಅಧಿಕಾರ ನೀಡುತ್ತಿದ್ದೇನೆ ಎಂದು ಭರವಸೆ ನೀಡಿದ್ದಾರೆ.

ಜಲಸಂಧಿಯಲ್ಲಿ ವಾಣಿಜ್ಯ ಸಂಚಾರವು ಹಂತ-ಹಂತವಾಗಿ ಸಂಪೂರ್ಣ ಸಹಜ ಸ್ಥಿತಿಗೆ ಮರಳಲಿದೆ. ಜೂನ್ 19ರ ಶುಕ್ರವಾರ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಒಪ್ಪಂದಕ್ಕೆ ಅಧಿಕೃತ ಸಹಿ ಬಿದ್ದ ತಕ್ಷಣವೇ, ಮೊದಲ ಹಂತವಾಗಿ ಜಲಮಾರ್ಗದಲ್ಲಿ ಅಳವಡಿಸಲಾಗಿರುವ ಕಡಲ ಮೈನ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯಲಿದೆ.

ಇದಾದ ನಂತರ ಮೂಲಸೌಕರ್ಯ ದುರಸ್ತಿ ಮತ್ತು ಉನ್ನತ ಭದ್ರತಾ ವ್ಯವಸ್ಥೆಗಳನ್ನು ಖಾಲಿ ಮಾಡಲಾಗುವುದು. ಈ ವ್ಯವಸ್ಥಿತ ತ್ವರಿತ ಕ್ರಮಗಳು ಮುಂಬರುವ ದಿನಗಳಲ್ಲಿ ತೈಲ ಮತ್ತು ವಾಣಿಜ್ಯ ಹಡಗುಗಳು ಜಲಸಂಧಿಯ ಎರಡೂ ತುದಿಗಳಿಂದ ಅತ್ಯಂತ ಸುರಕ್ಷಿತವಾಗಿ ಚಲಿಸಲು ದಾರಿ ಮಾಡಿಕೊಡಲಿವೆ.

ಮತ್ತಷ್ಟು ಓದಿ: ಹಲವು ತಿಂಗಳ ಯುದ್ಧದ ಬಳಿಕ ಜಗತ್ತಿಗೆ ಶುಭ ಸುದ್ದಿ: ಅಮೆರಿಕ-ಇರಾನ್ ಶಾಂತಿ ಒಪ್ಪಂದ ಅಂತಿಮ, ಹೊರ್ಮುಝ್ ತೆರವು

ಅಮೆರಿಕವು ತನ್ನ ಭರವಸೆಯಂತೆ ಇರಾನ್ ಮೇಲಿನ ದಿಗ್ಬಂಧನಗಳನ್ನು ತೆಗೆದುಹಾಕುವ ಮತ್ತು ಸ್ಥಗಿತಗೊಂಡ ಇರಾನಿನ ಸ್ವತ್ತುಗಳನ್ನು ಬಿಡುಗಡೆ ಮಾಡುವ ಬದ್ಧತೆಗಳನ್ನು ಪೂರೈಸಿದ ತಕ್ಷಣವೇ, ಮುಂದಿನ ಪ್ರಕ್ರಿಯೆಗಳಿಗಾಗಿ 60 ದಿನಗಳ ರಚನಾತ್ಮಕ ಮಾತುಕತೆ ಅವಧಿ ಪ್ರಾರಂಭವಾಗಲಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ. ಇದು ಉಭಯ ದೇಶಗಳ ನಡುವೆ ದೀರ್ಘಕಾಲೀನ ನಂಬಿಕೆಯನ್ನು ಗಟ್ಟಿಗೊಳಿಸಲಿದೆ.

ಒಪ್ಪಂದದ ಪ್ರಮುಖ ಸಕಾರಾತ್ಮಕ ಅಂಶಗಳು
ಎರಡೂ ಕಡೆಯವರು  ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣ ಮತ್ತು ಶಾಶ್ವತವಾಗಿ ಕೊನೆಗೊಳಿಸಲು ಒಪ್ಪಿಕೊಂಡಿದ್ದಾರೆ. ಮಾತುಕತೆಯಲ್ಲಿದ್ದ ಅತ್ಯಂತ ಜಟಿಲವಾದ ಲೆಬನಾನ್‌ನ ಬಿಕ್ಕಟ್ಟಿನ ವಿಷಯವನ್ನೂ ಸಹ ಒಪ್ಪಂದದ ಚೌಕಟ್ಟಿನೊಳಗೆ ತಂದು ಯಶಸ್ವಿಯಾಗಿ ಬಗೆಹರಿಸಲಾಗಿದೆ. ಒಪ್ಪಂದದ ಯಶಸ್ವಿ ಅನುಷ್ಠಾನಕ್ಕಾಗಿ ಮಧ್ಯವರ್ತಿಗಳು ಮುಂದಿನ ದಿನಗಳಲ್ಲಿ ತಾಂತ್ರಿಕ ಚರ್ಚೆಗಳನ್ನು ನಡೆಸಲಿದ್ದು, ಜೂನ್ 19 ರಂದು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಅಧಿಕೃತ ಸಹಿ ಸಮಾರಂಭ ಜರುಗಲಿದೆ.

ಈ ಐತಿಹಾಸಿಕ ಶಾಂತಿ ಒಪ್ಪಂದವು ಜಾಗತಿಕ ರಾಜತಾಂತ್ರಿಕತೆಗೆ ಸಿಕ್ಕ ದೊಡ್ಡ ಗೆಲುವಾಗಿದೆ. ಹಾರ್ಮುಜ್ ಜಲಸಂಧಿ ಪುನಾರಂಭಗೊಳ್ಳುತ್ತಿರುವುದರಿಂದ ಭಾರತ ಸೇರಿದಂತೆ ವಿಶ್ವದಾದ್ಯಂತ ಕಚ್ಚಾ ತೈಲ ಮತ್ತು ಅನಿಲದ ಬೆಲೆಗಳು ಗಣನೀಯವಾಗಿ ನಿಯಂತ್ರಣಕ್ಕೆ ಬರಲಿದ್ದು, ಜಾಗತಿಕ ಆರ್ಥಿಕತೆಗೆ ಭಾರಿ ದೊಡ್ಡ ಆಸರೆ ಸಿಕ್ಕಂತಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪರಿಷತ್​​ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿ: ರಾಜ್ಯದ ಕಾಂಗ್ರೆಸ್​​ ಶಾಸಕರು ನಾಳೆ ರೆಸಾರ್ಟ್​​ಗೆ – Kannada News | Resort Politics Returns to Karnataka: Congress Shifts MLAs to Bidadi Resort Amid Cross Voting Fears in MLC Polls

ಬೆಂಗಳೂರು, ಜೂನ್​​ 15: ಭಾರಿ ಕುತೂಹಲ ಮೂಡಿಸಿರುವ ವಿಧಾನ ಪರಿಷತ್​​ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಕರ್ನಾಟಕದಲ್ಲಿ ಮತ್ತೆ ರೆಸಾರ್ಟ್ ಪಾಲಿಟಿಕ್ಸ್ ಶುರುವಾಗಿದೆ. ಕಾಂಗ್ರೆಸ್ ಪಕ್ಷದ ಎಲ್ಲಾ​ ಶಾಸಕರು ನಾಳೆ ಬಿಡದಿಯ ವಂಡರ್​ಲಾ ರೆಸಾರ್ಟ್​​ಗೆ ಶಿಫ್ಟ್​​ ಆಗಲಿದ್ದು, ರೆಸಾರ್ಟ್​ನಲ್ಲಿ ಒಟ್ಟು 140 ರೂಂ ಬುಕ್ಕಿಂಗ್ ಆಗಿದೆ. ನಾಳೆ, ನಾಡಿದ್ದು ಇಲ್ಲಿಯೇ ಕಾಂಗ್ರೆಸ್​​ ಶಾಸಕರು ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.

ಮುಖ್ಯಾಂಶಗಳು

  • ಪರಿಷತ್​​ ಚುನಾವಣೆಯಲ್ಲಿ ಅಡ್ಡ ಮತದಾನದ ಭೀತಿ
  • ವಂಡರ್​ಲಾ ರೆಸಾರ್ಟ್​​ಗೆ ನಾಳೆ ಕಾಂಗ್ರೆಸ್​​ ಶಾಸಕರು ಶಿಫ್ಟ್​​
  • ನಾಳೆ, ನಾಡಿದ್ದು ಇಲ್ಲಿಯೇ ಕಾಂಗ್ರೆಸ್​​ ಶಾಸಕರ ವಾಸ್ತವ್ಯ

ಕಾಂಗ್ರೆಸ್​ನ 14 ಶಾಸಕರಿಗೆ ಜೆಡಿಎಸ್ ಸಂಪರ್ಕ ಮಾಡಿರುವ ಮಾಹಿತಿ ಹಿನ್ನೆಲೆ ಅಡ್ಡ ಮತದಾನದ ಭೀತಿ ಶುರುವಾಗಿರುವ ಹಿನ್ನೆಲೆ ರೆಸಾರ್ಟ್​​ಗೆ ಶಾಸಕರನ್ನು ಶಿಫ್ಟ್​​ ಮಾಡಲಾಗುತ್ತಿದೆ. ಪಕ್ಷೇತರ ಶಾಸಕರನ್ನು ಕೂಡ ಹೆಚ್​ಡಿಕೆ ಸಂಪರ್ಕ ಮಾಡಿದ್ದಾರೆಂಬ ಅನುಮಾನ ಹಿನ್ನೆಲೆ ಶಾಸಕರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಕಸರತ್ತು ಶುರುವಾಗಿದೆ. ಜೂ.18ರಂದು ತಂಡ ತಂಡವಾಗಿ ತೆರಳಲಿರುವ ಕಾಂಗ್ರೆಸ್​​ ಶಾಸಕರು, ನೇರವಾಗಿ ವಿಧಾನಸೌಧಕ್ಕೆ ಬಂದು ಮತದಾನ ಮಾಡಲಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳು ಸ್ಥಗಿತ ಅಂತೆ-ಕಂತೆಗಳಿಗೆ ತೆರೆ ಎಳೆದ ಡಿಕೆ ಶಿವಕುಮಾರ್, ಸಿಎಂ ಕೊಟ್ಟ ಸ್ಪಷ್ಟನೆಯಲ್ಲೇನಿದೆ?

ನಾಳೆ ಸಂಜೆ 6 ಗಂಟೆಗೆ ಶಾಸಕಾಂಗ ಪಕ್ಷದ ಸಭೆ

ಡಿ.ಕೆ.ಶಿವಕುಮಾರ್​ ಸಿಎಂ ಆದ ಬಳಿಕ ಮೊದಲ ಸಿಎಲ್​ಪಿ ಸಭೆ ನಾಳೆ ಸಂಜೆ 6 ಗಂಟೆಗೆ ಬಿಡದಿಯ ವಂಡರ್​ಲಾ ರೆಸಾರ್ಟ್​ನಲ್ಲಿಯೇ ನಡೆಯಲಿದೆ. ಸಿಎಲ್​ಪಿ ಸಭೆಯಲ್ಲಿ ಮತದಾನ ಪ್ರಕ್ರಿಯೆ ಬಗ್ಗೆ ಶಾಸಕರಿಗೆ ವಿವರವಾದ ತರಬೇತಿ ನಡೆಯಲಿದ್ದು, ಒಂದೇ ಒಂದು ಮತವೂ ತಪ್ಪಾಗದಂತೆ ಎಚ್ಚರ ವಹಿಸಿ ಟ್ರೈನಿಂಗ್​​ ತಯಾರಿ ನಡೆದಿದೆ. ಅಡ್ಡ ಮತದಾನ, ಮತಗಳ ಅಸಿಂಧು, ಯಾರಿಗೆ ಮತ ಹಾಕಬೇಕೆಂಬ ಗೊಂದಲಗಳನ್ನು ತಪ್ಪಿಸಲು ರೆಸಾರ್ಟ್ ಪಾಲಿಟಿಕ್ಸ್​​ಗೆ ಕಾಂಗ್ರೆಸ್​​ ಮುಂದಾಗಿರುವ ಮಾಹಿತಿ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶಿರಸಿ: 36 ವರ್ಷಗಳ ಬಳಿಕ 400 ಕೋಟಿ ರೂ. ಮೌಲ್ಯದ 379 ಎಕರೆ ಅರಣ್ಯ ಭೂಮಿ ವಶಕ್ಕೆ ಪಡೆಯಲು ಇಲಾಖೆ ಸಜ್ಜು – Kannada News | Sirsi Forest Land Recovery: Karnataka Forest Department to Reclaim Rs 400 Crore Worth 379 Acre Land After 36 Year Delay

ಅರಣ್ಯ ಭೂಮಿ (ಸಾಂದರ್ಭಿಕ ಚಿತ್ರ)Image Credit source: Getty Images

ಬೆಂಗಳೂರು, ಜೂನ್ 15: ರಾಜ್ಯ ರಾಜಕಾರಣ ಹಾಗೂ ಆಡಳಿತ ವಲಯದಲ್ಲಿ ದೀರ್ಘಕಾಲದ ಕಾನೂನು ಹೋರಾಟಕ್ಕೆ ಕಾರಣವಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅರಣ್ಯ ಭೂಮಿ ವಿವಾದ ಕೊನೆಗೂ ತೆರೆಬೀಳುವ ಹಂತಕ್ಕೆ ಬಂದಿದೆ. ಸುಮಾರು 36 ವರ್ಷಗಳ ಸುದೀರ್ಘ ವಿಳಂಬದ ನಂತರ, ಶಿರಸಿ ಮತ್ತು ಬನವಾಸಿ ಹೆದ್ದಾರಿ ಪಕ್ಕದಲ್ಲಿರುವ 400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 379 ಎಕರೆ ಅತ್ಯಂತ ಸೂಕ್ಷ್ಮ ಹಾಗೂ ಪವಿತ್ರ ಅರಣ್ಯ ಭೂಮಿಯನ್ನು ಮರಳಿ ವಶಕ್ಕೆ ಪಡೆಯಲು ಕರ್ನಾಟಕ ಅರಣ್ಯ ಇಲಾಖೆ ಸಂಪೂರ್ಣ ಸಜ್ಜಾಗಿರುವ ಬಗ್ಗೆ ವರದಿಯಾಗಿದೆ.

ಮುಖ್ಯಾಂಶಗಳು

  • 400 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿಗೆ ಮುಕ್ತಿ.
  • 36 ವರ್ಷಗಳ ದೀರ್ಘ ಕಾನೂನು ಸಮರಕ್ಕೆ ಅಂತ್ಯ.
  • ಆನೆಗಳ ಸಂಚಾರ ವಲಯದ ರಕ್ಷಣೆಗೆ ಇಲಾಖೆ ಕ್ರಮ.

ಶಿರಸಿ ಅರಣ್ಯ ಭೂಮಿ ವಿವಾದದ ಹಿನ್ನೆಲೆ

ಈ ಇಡೀ ವಿವಾದ ಶುರುವಾಗಿದ್ದು, 1969ರ ಕಾಲದಲ್ಲಿ. ಆಗಿನ ಮೈಸೂರು ಸರ್ಕಾರವು ಶಿರಸಿ ತಾಲೂಕಿನ ಮೂರು ಹಳ್ಳಿಗಳಲ್ಲಿ ಹರಡಿಕೊಂಡಿರುವ ಈ ಅರಣ್ಯ ಭೂಮಿಯನ್ನು ‘ಶ್ರೀ ಕಾಮಧೇನು ಸಹಕಾರಿ ಹಾಲು ಮತ್ತು ಹಣ್ಣು ಸಂಸ್ಕರಣಾ ಸಂಘ’ಕ್ಕೆ 30 ವರ್ಷಗಳ ಅವಧಿಗೆ ಲೀಸ್​ಗೆ (ಗುತ್ತಿಗೆ) ನೀಡಿತ್ತು. ಆದರೆ, 1976ರಲ್ಲಿ ಸರ್ಕಾರ ಮತ್ತೊಂದು ಆದೇಶ ಹೊರಡಿಸಿ ಈ ಗುತ್ತಿಗೆ ಅವಧಿಯನ್ನು 20 ವರ್ಷಗಳಿಗೆ ಕಡಿತಗೊಳಿಸಿತು. ಇದರನ್ವಯ ಈ ಗುತ್ತಿಗೆ ಅವಧಿಯು 1989ರಲ್ಲೇ ಅಧಿಕೃತವಾಗಿ ಮುಕ್ತಾಯಗೊಂಡಿತ್ತು. ಆದರೆ, ಪ್ರಭಾವಿ ಭೂಮಾಲೀಕರು ಹಾಗೂ ರಾಜಕೀಯ ಒತ್ತಡದ ಕಾರಣದಿಂದಾಗಿ ಇಲಾಖೆಗೆ ಈ ಭೂಮಿಯನ್ನು ವಶಕ್ಕೆ ಪಡೆಯಲು ಸಾಧ್ಯವಾಗಿರಲಿಲ್ಲ.

ಕಾನೂನು ಜಟಾಪಟಿ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯ

1980ರಲ್ಲಿ ಕೇಂದ್ರ ಸರ್ಕಾರ ‘ಅರಣ್ಯ ಸಂರಕ್ಷಣಾ ಕಾಯ್ದೆ’ಯನ್ನು ಜಾರಿಗೆ ತಂದಿದ್ದರಿಂದ, ಕೇಂದ್ರದ ಅನುಮತಿಯಿಲ್ಲದೆ ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗಳಿಗೆ ಬಳಸುವಂತಿರಲಿಲ್ಲ. ಈ ಹಿನ್ನೆಲೆಯಲ್ಲಿ 1993ರಲ್ಲಿ ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (DCF) ಜಾಗ ಖಾಲಿ ಮಾಡುವಂತೆ ಸಹಕಾರಿ ಸಂಘಕ್ಕೆ ನೋಟಿಸ್ ನೀಡಿದ್ದರು. ಆದರೆ, ಅಧಿಕಾರಿಗಳು ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 64A ಅಡಿಯಲ್ಲಿ ಕ್ರಮ ಕೈಗೊಳ್ಳುವ ಬದಲಿಗೆ ಕೇವಲ ಲೀಗಲ್ ನೋಟಿಸ್ ನೀಡಿದ್ದರಿಂದ, ಸಂಘವು ಸಿವಿಲ್ ನ್ಯಾಯಾಲಯ ಹಾಗೂ ಹೈಕೋರ್ಟ್ ಮೆಟ್ಟಿಲೇರಿ ದಶಕಗಳ ಕಾಲ ಕಾನೂನು ಹೋರಾಟ ಮುಂದುವರಿಯುವಂತೆ ಮಾಡಿತು. 2010 ರಿಂದ 2013ರ ನಡುವೆ ಲೀಸ್ ನವೀಕರಿಸದಿರಲು ಮತ್ತು 1.17 ಕೋಟಿ ರೂ. ಬಾಕಿ ಬಾಡಿಗೆಯೊಂದಿಗೆ ಭೂಮಿ ವಶಕ್ಕೆ ಪಡೆಯಲು ಸರ್ಕಾರ ಆದೇಶಿಸಿದರೂ ಅಧಿಕಾರಿಗಳ ಮೌನದಿಂದಾಗಿ ಫೈಲ್ ಧೂಳು ಹಿಡಿದಿತ್ತು ಎಂಬುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ.

ಕೊನೆಗೂ ಎಚ್ಚೆತ್ತುಕೊಂಡ ಇಲಾಖೆ ಜನವರಿ 2026ರಲ್ಲಿ ಸೆಕ್ಷನ್ 64A ಅಡಿಯಲ್ಲಿ ತೆರವು ನೋಟಿಸ್ ಜಾರಿ ಮಾಡಿತ್ತು. ಇದರ ವಿರುದ್ಧ ಸಂಘವು ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (CCF) ಟಿ. ಹೀರಾಲಾಲ್ ಅವರು ವಜಾಗೊಳಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಆದೇಶಗಳು ಹಾಗೂ ಬನವಾಸಿ ವಲಯ ಅರಣ್ಯಾಧಿಕಾರಿಗಳು ನೀಡಿರುವ ವರದಿಯನ್ನು ಉಲ್ಲೇಖಿಸಿರುವ ಅವರು, ಈ ಪ್ರದೇಶದಲ್ಲಿ ಆನೆಗಳು ಸೇರಿದಂತೆ ವನ್ಯಜೀವಿಗಳ ನಿಯಮಿತ ಸಂಚಾರವಿದ್ದು, ಇದು ಅತ್ಯಂತ ಪರಿಸರ ಸೂಕ್ಷ್ಮ ವಲಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ತಕ್ಷಣವೇ ಜಾಗ ಖಾಲಿ ಮಾಡುವಂತೆ ಮತ್ತು ಅಲ್ಲಿರುವ ಕಟ್ಟಡಗಳನ್ನು ಅವರದೇ ವೆಚ್ಚದಲ್ಲಿ ತೆರವುಗೊಳಿಸುವಂತೆ ಆದೇಶಿಸಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮಿ ಹಣದಿಂದ ಸರ್ಕಾರಿ ಶಾಲೆಯ ಅಡುಗೆ ಕೋಣೆ ನವೀಕರಣ!

ಈ ಕುರಿತು ಪ್ರತಿಕ್ರಿಯಿಸಿರುವ ಸಿರ್ಸಿ ಡಿಸಿಎಫ್ ಸಂದೀಪ್ ಸೂರ್ಯವಂಶಿ, ‘ಸಿಸಿಎಫ್ ಆದೇಶ ನಮಗೆ ತಲುಪಿದೆ. ಕಾನೂನಿನ ಪ್ರಕಾರ ನಿವಾಸಿಗಳಿಗೆ ನಿರ್ದಿಷ್ಟ ಸಮಯ ನೀಡಿ ಶೀಘ್ರದಲ್ಲೇ ಭೂಮಿಯನ್ನು ನಮ್ಮ ವಶಕ್ಕೆ ಪಡೆಯಲಿದ್ದೇವೆ’ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕ-ಇರಾನ್ ಯುದ್ಧ ಅಂತ್ಯ: ಕಚ್ಚಾ ತೈಲ ಬೆಲೆಯಲ್ಲಿ ಒಂದೇ ದಿನ ಭಾರಿ ಇಳಿಕೆ! ಪೆಟ್ರೋಲ್, ಡೀಸೆಲ್ ದರ ಕಡಿತ ನಿರೀಕ್ಷೆ – Kannada News | Global Crude Oil Prices Crash by 4 percent to 80 Dollar as US Iran Peace Deal Raises Hope for Cheaper Petrol and Diesel

ನವದೆಹಲಿ, ಜೂನ್ 15: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಗೆ ಬ್ರೇಕ್ ಬಿದ್ದ ಬೆನ್ನಲ್ಲೇ ಜಾಗತಿಕ ಕಚ್ಚಾ ತೈಲ ಬೆಲೆ ಗಣನೀಯವಾಗಿ ಕುಸಿತ ಕಂಡಿದೆ. ಯುದ್ಧ ವಿರಾಮದ ಘೋಷಣೆ ಮತ್ತು ಉಭಯ ದೇಶಗಳ ನಡುವೆ ಒಪ್ಪಂದದ ನಿರೀಕ್ಷೆಯಿಂದಾಗಿ ಬ್ರೆಂಟ್ ಕ್ರೂಡ್ ಬೆಲೆ ಒಂದೇ ದಿನದಲ್ಲಿ ಶೇಕಡಾ 4ರಷ್ಟು ಕುಸಿತ ಕಂಡು 80 ಡಾಲರ್​ಗೆ ಬಂದಿಳಿದಿದೆ. ಈ ಹಿಂದೆ ಯುದ್ಧದ ಭೀತಿಯಿಂದಾಗಿ ಕಚ್ಚಾ ತೈಲ ಬೆಲೆ ಗಗನಕ್ಕೇರಿ, ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಹಾಗೂ ಅಡುಗೆ ಅನಿಲದ ಬೆಲೆಯೂ ಏರಿಕೆಯಾಗಿ ಜನಸಾಮಾನ್ಯರು ಆತಂಕದಲ್ಲಿದ್ದರು. ಇದೀಗ ಹಾರ್ಮುಝ್ ಜಲಸಂಧಿ ಮುಕ್ತವಾಗಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದು, ಹಡಗುಗಳ ಸಂಚಾರ ಸುಗಮವಾಗಲಿದೆ.

ಜಾಗತಿಕ ಮಟ್ಟದಲ್ಲಿ ನಿರ್ಮಾಣವಾಗಿದ್ದ ಆರ್ಥಿಕ ತಲ್ಲಣ ಸದ್ಯಕ್ಕೆ ನಿವಾರಣೆಯಾಗುವ ಲಕ್ಷಣಗಳು ಗೋಚರಿಸಿದ್ದು, ಇಂಧನ ಬೆಲೆ ಇಳಿಕೆಯಾಗುವ ನಿರೀಕ್ಷೆ ದಟ್ಟವಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯ ನಿರೀಕ್ಷೆ ಮೂಡಿದೆ. ಇದು ವ್ಯಾಪಾರಸ್ಥರು, ವಾಹನ ಸವಾರರು ಮತ್ತು ಗೃಹ ಬಳಕೆಯ ಅನಿಲ ಬಳಸುವವರಿಗೆ ದೊಡ್ಡ ಮಟ್ಟದ ನೆಮ್ಮದಿ ನೀಡಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪಾಕ್ ಪಡೆಯನ್ನು ಮಕಾಡೆ ಮಲಗಿಸಿ ವಿಶ್ವ ದಾಖಲೆ ಬರೆದ ದೀಪ್ತಿ ಶರ್ಮಾ! – Kannada News | Deepti Sharma Makes History in Womens T20I

ಭಾರತದ ಸ್ಟಾರ್ ಆಲ್-ರೌಂಡರ್ ದೀಪ್ತಿ ಶರ್ಮಾ ಅಂತಾರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಜೂನ್ 14, 2026 ರಂದು ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಆರನೇ ಪಂದ್ಯದಲ್ಲಿ ದೀಪ್ತಿ ಸ್ಪಿನ್ ಮೋಡಿ ಮಾಡಿದ್ದರು. ಈ ಸ್ಪಿನ್ ಮೋಡಿಯೊಂದಿಗೆ ಪಾಕ್ ಪಡೆಯನ್ನು ಮಕಾಡೆ ಮಲಗಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ದೀಪ್ತಿ ವಿಶ್ವ ದಾಖಲೆ:

  • ಅತ್ಯಧಿಕ ವಿಕೆಟ್: ದೀಪ್ತಿ ಶರ್ಮಾ ಮಹಿಳಾ ಟಿ20 ಅಂತಾರಾಷ್ಟ್ರೀಯ (WT20I) ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
  • 166 ವಿಕೆಟ್​: 145ನೇ ಟಿ20 ಪಂದ್ಯವನ್ನಾಡಿದ ದೀಪ್ತಿ, ವೃತ್ತಿಜೀವನದ 166ನೇ ವಿಕೆಟ್ ಪಡೆಯುವ ಮೂಲಕ ಥಾಯ್ಲೆಂಡ್‌ನ ಸ್ಪಿನ್ನರ್ ಥಿಪಾಟ್ಚಾ ಪುತ್ತವಾಂಗ್ (165 ವಿಕೆಟ್) ಅವರ ಜಾಗತಿಕ ದಾಖಲೆಯನ್ನು ಮುರಿದಿದ್ದಾರೆ.
  • ವಿಶೇಷ ಸಾಧನೆ: ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಬೌಲರ್ ಒಬ್ಬರು ದಾಖಲಿಸಿದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ (5/10) ಇದಾಗಿದೆ.
  •  ಶ್ರೇಷ್ಠ ಪ್ರದರ್ಶನ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಕೇವಲ 10 ರನ್ ನೀಡಿ 5 ಪ್ರಮುಖ ವಿಕೆಟ್ ಕಸಿದುಕೊಂಡು ಭಾರತ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ.

ಟೀಮ್ ಇಂಡಿಯಾಗೆ ಭರ್ಜರಿ ಜಯ:

ಇಂಗ್ಲೆಂಡ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 44 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ 68 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಭಾರತ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 170 ರನ್ ಕಲೆಹಾಕಿತು.

171 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡಕ್ಕೆ ದೀಪ್ತಿ ಶರ್ಮಾ ಆಘಾತದ ಮೇಲೆ ಆಘಾತ ನೀಡಿದರು. ಪರಿಣಾಮ ಪಾಕ್ ಪಡೆ 17 ಓವರ್​ಗಳಲ್ಲಿ 106 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 64 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಇದನ್ನೂ ಓದಿ: 100 ಓವರ್​, 600 ಎಸೆತಗಳು: ವೈಭವ್ ಸೂರ್ಯವಂಶಿ ಸಿಕ್ರೇಟ್ ಬಹಿರಂಗ!

ಇನ್ನು ಈ ಪಂದ್ಯದಲ್ಲಿ 4 ಓವರ್​ಗಳನ್ನು ಎಸೆದ ದೀಪ್ತಿ ಶರ್ಮಾ ಕೇವಲ 10 ರನ್ ನೀಡಿ 5 ವಿಕೆಟ್ ಕಬಳಿಸಿದರು. ಈ ಭರ್ಜರಿ ಪ್ರದರ್ಶನದ ಫಲದೊಂದಿಗೆ ದೀಪ್ತಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

Source link

ಮೊದಲ ಬಾರಿಗೆ ಅವಳಿ ಮಕ್ಕಳ ಫೋಟೋ ಹಂಚಿಕೊಂಡ ರಾಮ್ ಚರಣ್-ಉಪಾಸನಾ – Kannada News | Ram Charan Upasana Share First Photo of Twin Babies Shivram and Anveera on Anniversary

ಟಾಲಿವುಡ್ ನಟ ರಾಮ್ ಚರಣ್ ಹಾಗೂ ಅವರ ಪತ್ನಿ ಉಪಾಸನಾ ಕೊನಿಡೇಲ ತಮ್ಮ 14ನೇ ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ. ಈ ವಿಶೇಷ ದಿನದ ಅಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಪರೂಪದ ಫ್ಯಾಮಿಲಿ ಫೋಟೋ ಒಂದನ್ನು ಹಂಚಿಕೊಂಡಿರುವ ದಂಪತಿ, ತಮ್ಮ ನವಜಾತ ಅವಳಿ ಮಕ್ಕಳಾದ ಶಿವ್​ರಾಮ್ ಮತ್ತು ಅನ್ವೀರಾ ದೇವಿ ಅವರ ಮೊದಲ ಝಲಕ್ ಅನ್ನು ಸಾರ್ವಜನಿಕವಾಗಿ ರಿವೀಲ್ ಮಾಡಿದ್ದಾರೆ.

ಈ ಮೊದಲು ರಾಮ್ ಚರಣ್-ಉಪಾಸನಾ ದಂಪತಿಗೆ ಕ್ಲಿನ್ ಕಾರ ಹೆಸರಿನ ಮಗಳಿದ್ದಳು. ಕಳೆದ ಜನವರಿ 31 ರಂದು ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಅವಳಿ ಮಕ್ಕಳಿಗೆ ಪೋಷಕರಾದರು. ಒಂದು ಗಂಡಾದರೆ, ಮತ್ತೊಂದು ಹೆಣ್ಣು. ಈಗ ದಂಪತಿ ಮಗುವಿನ ಫೋಟೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್ ಬಾಡಿಗಾರ್ಡ್ ಕೆವಿನ್ ಭರ್ಜರಿ ಕಸರತ್ತು; ವಿಡಿಯೋ ವೈರಲ್

ಭಾನುವಾರ ಇನ್‌ಸ್ಟಾಗ್ರಾಮ್‌ನಲ್ಲಿ ರಾಮ್ ಚರಣ್ ಮತ್ತು ಉಪಾಸನಾ ಜಂಟಿಯಾಗಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಮಕ್ಕಳ ಮುಖವನ್ನು ಪೂರ್ತಿಯಾಗಿ ತೋರಿಸುವ ಬದಲು, ಅವರು ವಿಭಿನ್ನವಾದ ಮತ್ತು ಅರ್ಥಪೂರ್ಣವಾದ ಫೋಟೋ ಒಂದನ್ನು ಅಪ್‌ಲೋಡ್ ಮಾಡಿದ್ದಾರೆ. ಈ ಫೋಟೋದಲ್ಲಿ ಅವರ ಹಿರಿಯ ಮಗಳು ಕ್ಲಿನ್ ಕಾರಾ ಹಾಗೂ ಈಗ ಜನಿಸಿರುವ ಅವಳಿ ಮಕ್ಕಳ ಪುಟ್ಟ ಪುಟ್ಟ ಕೈಗಳು ಮಾತ್ರ ಕಾಣಿಸುತ್ತಿವೆ. ಅವಳಿ ಮಕ್ಕಳ ಚಿತ್ರವನ್ನು ಈ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವುದು ಇದೇ ಮೊದಲು.

ಭಾವನಾತ್ಮಕ ಸಾಲುಗಳು:

ಈ ಮುದ್ದಾದ ಫೋಟೋದೊಂದಿಗೆ ‘ಮನಸ್ಸು ತುಂಬಿ ಬಂದಿದೆ’ ಎಂದು ಬರೆದುಕೊಂಡು ಇನ್ಫಿನಿಟಿ ಎಮೋಜಿಯನ್ನು ಹಾಕಿದ್ದಾರೆ. ಈ ಪೋಸ್ಟ್ ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದ್ದು, ಮೆಗಾ ಫ್ಯಾಮಿಲಿಯ ಈ ಹೊಸ ಸದಸ್ಯರನ್ನು ನೋಡಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ ಮತ್ತು ದಂಪತಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಂಗೂ ಹಿಂಗೂ ಹೆಂಗೋ ಗೆದ್ದ ಆಸ್ಟ್ರೇಲಿಯಾ! – Kannada News | BAN vs AUS, 3rd ODI: Australia won by 1 wicket

ಬಾಂಗ್ಲಾದೇಶ್ ವಿರುದ್ಧ ಬ್ಯಾಕ್ ಟು ಬ್ಯಾಕ್ ಎರಡು ಏಕದಿನ ಪಂದ್ಯಗಳಲ್ಲಿ ಸೋಲನುಭವಿಸಿದ್ದ ಆಸ್ಟ್ರೇಲಿಯಾ ತಂಡ ಕೊನೆಗೂ ಒಂದು ಗೆಲುವು ದಾಖಲಿಸಿದೆ. ಅದು ಕೂಡ ಕೊನೆಯ ಓವರ್​ನಲ್ಲಿ ಕೇವಲ 1 ವಿಕೆಟ್​ನ ಅಂತರದಿಂದ. ಢಾಕಾದ ಶೇರೆ ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂತೊ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು 50 ಓವರ್​ಗಳಲ್ಲಿ ಕಲೆಹಾಕಿದ್ದು 274 ರನ್​ಗಳು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಪರ ಆರಂಭಿಕ ದಾಂಡಿಗ ಕೂಪರ್ ಕೊನೊಲಿ (149) ಭರ್ಜರಿ ಶತಕ ಸಿಡಿಸಿದರು. ಪರಿಣಾಮ ಆಸ್ಟ್ರೇಲಿಯಾ ತಂಡಕ್ಕೆ ಕೊನೆಯ 12 ಎಸೆತಗಳಲ್ಲಿ 5 ರನ್​ಗಳ ಅವಶ್ಯಕತೆಯಿತ್ತು.

ಈ ಹಂತದಲ್ಲಿ ದಾಳಿಗಿಳಿದ ಮುಸ್ತಫಿಝುರ್ ರೆಹಮಾನ್ ಆಸ್ಟ್ರೇಲಿಯಾದ 9ನೇ ವಿಕೆಟ್ ಕಬಳಿಸಿ ನೀಡಿದ್ದು ಕೇವಲ 2 ರನ್​ಗಳು ಮಾತ್ರ. ಪರಿಣಾಮ ಕೊನೆಯ ಓವರ್​ನಲ್ಲಿ ಆಸೀಸ್ ಪಡೆಗೆ 3 ರನ್​ಗಳ ಅವಶ್ಯಕತೆಯಿತ್ತು. ಇತ್ತ ಬಾಂಗ್ಲಾದೇಶ್ ತಂಡಕ್ಕೆ ಒಂದು ವಿಕೆಟ್​ನ ಅಗತ್ಯತೆ.

ಅದರಂತೆ 50ನೇ ಓವರ್​ ಎಸೆದ ತಸ್ಕಿನ್ ಅಹ್ಮದ್ ಕೇವಲ 1 ರನ್ ನೀಡಿದರು. ಎರಡನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. ಮೂರನೇ ಎಸೆತದಲ್ಲಿ ಆ್ಯಡಂ ಝಂಪಾ ಫೋರ್ ಬಾರಿಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡವು 49.3 ಓವರ್​ಗಳಲ್ಲಿ 9  ವಿಕೆಟ್​ ಕಳೆದುಕೊಂಡು 277 ರನ್​ಗಳಿಸಿ 1 ವಿಕೆಟ್​ನ ರೋಚಕ ಜಯ ಸಾಧಿಸಿದೆ.

ಈ ಸೋಲಿನ ಹೊರತಾಗಿಯೂ ಬಾಂಗ್ಲಾದೇಶ್ ತಂಡವು ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಿಂದ ಏಕದಿನ ಸರಣಿ ಗೆದ್ದುಕೊಂಡಿದೆ.

 

 

Source link

Video: ಸ್ಲೋವಾಕಿಯಾದಲ್ಲಿ ಬ್ರೆಡ್ ಮತ್ತು ಉಪ್ಪಿನೊಂದಿಗೆ ಪ್ರಧಾನಿ ಮೋದಿಗೆ ಸ್ವಾಗತ – Kannada News | Slovakia Extends Traditional Bread and Salt Welcome to PM Modi in Bratislava

ಸ್ಲೋವಾಕಿಯಾ, ಜೂನ್ 15: ಯುರೋಪ್ ರಾಷ್ಟ್ರಗಳ ಪ್ರವಾಸದ ಎರಡನೇ ಹಂತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಲೋವಾಕಿಯಾಕ್ಕೆ ಭೇಟಿ ನೀಡಿದ್ದು, ರಾಜಧಾನಿ ಬ್ರಾಟಿಸ್ಲಾವಾದಲ್ಲಿ ಅವರಿಗೆ ಅತ್ಯಂತ ಆತ್ಮೀಯ ಸ್ವಾಗತ ದೊರೆತಿದೆ. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿರುವ ಈ ಐತಿಹಾಸಿಕ ಭೇಟಿಯು, ಅಲ್ಲಿನ ಸ್ಥಳೀಯರ ಸಾಂಸ್ಕೃತಿಕ ಸೌಹಾರ್ದತೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರಿ ಗಮನ ಸೆಳೆದಿದೆ.

ಸ್ಲೋವಾಕ್ ಸಂಸ್ಕೃತಿಯ ಉನ್ನತ ಆತಿಥ್ಯಕ್ಕೆ ಅನುಗುಣವಾಗಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬ್ರಾಟಿಸ್ಲಾವಾದ ಹೋಟೆಲ್‌ಗೆ ಆಗಮಿಸುತ್ತಿದ್ದಂತೆ ‘ಬ್ರೆಡ್ ಮತ್ತು ಉಪ್ಪು’ (Bread and Salt) ನೀಡುವ ಮೂಲಕ ಬರಮಾಡಿಕೊಳ್ಳಲಾಯಿತು. ಸ್ಲೋವಾಕಿಯಾದಲ್ಲಿ ಈ ಸಂಪ್ರದಾಯವನ್ನು ಅತ್ಯುನ್ನತ ಗೌರವ, ಸದ್ಭಾವನೆ ಮತ್ತು ಹೃತ್ಪೂರ್ವಕ ಆತಿಥ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಿದೇಶಿ ಗಣ್ಯರಿಗೆ ನೀಡಲಾಗುವ ಈ ವಿಶೇಷ ಸ್ವಾಗತವು ಭಾರತದ ಮೇಲಿರುವ ಅವರ ಪ್ರೀತಿಯನ್ನು ಸಾಬೀತುಪಡಿಸಿದೆ.

 

Video Source: ANI X Account

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Exit mobile version