ಪ್ರವಾಸಿಗರೇ ಎಚ್ಚರ! ಗೋಕರ್ಣದ ಕುಡ್ಲೆ ಬೀಚ್ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ – Kannada News | Leopard Spotted on Kudle Beach Road in Gokarna: Panic Among Tourists and Locals

ಉತ್ತರ ಕನ್ನಡ, ಏಪ್ರಿಲ್ 28: ಇತ್ತೀಚೆಗೆ ರಾಜ್ಯದಲ್ಲಿ ವನ್ಯ ಜೀವಿಗಳ ಹಾವಳಿ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮನೆಮಾಡಿದೆ. ಕೆಲವೊಮ್ಮೆ ಮನೆಯೊಳಗೆ ಚಿರತೆ ಅಡಗಿ ಕುಳಿತ ಉದಾಹರಣೆಗಳೂ ಇವೆ. ಅಂತೆಯೇ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಗೋಕರ್ಣದ ಕುಡ್ಲೆ ಕಡಲ ತೀರದ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರು ಆತಂಕಕ್ಕೊಳಗಾಗಿದ್ದಾರೆ. ಕಾಡಿನಿಂದ ನಾಡಿನತ್ತ ಬರುತ್ತಿರುವ ಕಾಡುಪ್ರಾಣಿಗಳ ಹಾವಳಿಯಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೀಕ್ರೆಟ್ ಮೀಟಿಂಗ್​ನಲ್ಲೂ ಮನಬಿಚ್ಚಿ ಮಾತನಾಡದ ಸಿಎಂ ಸಿದ್ದರಾಮಯ್ಯ! ಆತಂಕಕ್ಕೆ ಒಳಗಾದ್ರಾ ಅಹಿಂದ ಸಚಿವರು? – Kannada News | Karnataka Congress Crisis: Siddaramaiah’s Silence Worries AHINDA Ministers; Satish Jarkiholi, Mahadevappa Rush to Delhi

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿಯಾದ ಸತೀಶ್ ಜಾರಕಿಹೊಳಿ ಮತ್ತು ಮಹದೇವಪ್ಪ Image Credit source: tv9

ಬೆಂಗಳೂರು, ಏಪ್ರಿಲ್ 28: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ನಾಯಕತ್ವ ಬದಲಾವಣೆಯ (Leadership Change) ಕೂಗು ಮತ್ತೆ ಜೋರಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿದ್ದು, ಈ ಬೆಳವಣಿಗೆಗಳ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೌನ ಈಗ ಅಹಿಂದ ಸಚಿವರ ನಿದ್ದೆಗೆಡಿಸಿದೆ. ಸತತ ಸಭೆಗಳ ನಂತರವೂ ಸಿಎಂ ಯಾವುದೇ ಸ್ಪಷ್ಟನೆ ನೀಡಿಲ್ಲ. ಅಲ್ಲದೆ, ಸಿಎಂ ಬಣದ ಸಚಿವರ ರಹಸ್ಯ ಸಭೆಯಲ್ಲಿ ಕೂಡ ಅವರು ಮುಕ್ತವಾಗಿ ಮಾತನಾಡಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿರುವ ಅಹಿಂದ (AHINDA Leaders) ಸಚಿವರು ಈಗ ಹೈಕಮಾಂಡ್ ಮೊರೆ ಹೋಗಿದ್ದಾರೆ.

ಸಿಎಂ ಸಿದ್ದರಾಮಯ್ಯ ಮೌನದ ರಹಸ್ಯವೇನು?

ಇತ್ತೀಚೆಗೆ ಸಚಿವ ಹೆಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ, ಡಾ. ಜಿ. ಪರಮೇಶ್ವರ್, ಜಮೀರ್ ಅಹ್ಮದ್ ಖಾನ್ ಮತ್ತು ಕೆ.ಎನ್. ರಾಜಣ್ಣ ಸೇರಿದಂತೆ ಪ್ರಮುಖ ಅಹಿಂದ ನಾಯಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದರು. ರಾಜ್ಯ ರಾಜಕಾರಣದ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಈ ನಾಯಕರು ಪ್ರಯತ್ನಿಸಿದರೂ, ಸಿಎಂ ಸಿದ್ದರಾಮಯ್ಯ ಮಾತ್ರ ಮನಬಿಚ್ಚಿ ಮಾತನಾಡದೆ ಮೌನಕ್ಕೆ ಶರಣಾಗಿದ್ದರು. ಸೀಕ್ರೆಟ್ ಮೀಟಿಂಗ್‌ನಲ್ಲೂ ಸಿಎಂ ಕಡೆಯಿಂದ ಯಾವುದೇ ಭರವಸೆ ಸಿಗದ ಕಾರಣ, ಸಿದ್ದರಾಮಯ್ಯ ಬಣದ ಸಚಿವರಿಗೆ ಒಳಗಿಂದೊಳಗೆ ಏನೋ ನಡೆಯುತ್ತಿದೆ ಎಂಬ ಅನುಮಾನ ಶುರುವಾಗಿದೆ.

ದೆಹಲಿಗೆ ಹಾರಿದ ಸತೀಶ್-ಮಹದೇವಪ್ಪ

ಸಿಎಂ ಮೌನದಿಂದ ಕಂಗೆಟ್ಟ ಸತೀಶ್ ಜಾರಕಿಹೊಳಿ ಮತ್ತು ಮಹದೇವಪ್ಪ ತುರ್ತಾಗಿ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸುರ್ಜೇವಾಲ ಅವರನ್ನು ಭೇಟಿಯಾಗಿದ್ದಾರೆ. ಒಂದು ವೇಳೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾದರೆ ಅಹಿಂದ ನಾಯಕರ ಭವಿಷ್ಯವೇನು? ತಮ್ಮ ಸ್ಥಾನಮಾನಗಳು ರಕ್ಷಣೆಯಾಗುತ್ತವೆಯೇ? ಎಂಬ ಬಗ್ಗೆ ಸ್ಪಷ್ಟತೆ ಕೇಳಿದ್ದಾರೆ ಎನ್ನಲಾಗಿದೆ. ವಿಶೇಷವೆಂದರೆ, ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ (KPCC President) ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಡಿಕೆಶಿಗೆ ನೀಡಿದಂತೆ ತಮಗೂ ಅಧಿಕಾರ ನೀಡಬೇಕು ಎಂಬ ಬೇಡಿಕೆಯನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ವಾಪಸಾಗ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಬಣ ದೆಹಲಿಗೆ! ಕಾಂಗ್ರೆಸ್​ನಲ್ಲಿ ಜೋರಾಯ್ತು ಡೆಲ್ಲಿ ಟೂರ್ ಪಾಲಿಟಿಕ್ಸ್

ಏತನ್ಮಧ್ಯೆ, ಕಾಂಗ್ರೆಸ್ ಹೈಕಮಾಂಡ್​ನಿಂದ ಡಿಕೆ ಶಿವಕುಮಾರ್​ಗೆ ಬಿಗ್ ಬರ್ತ್​ಡೇ ಗಿಫ್ಟ್ ಸಿಗಲಿದೆ ಎಂಬ ಊಹಾಪೋಹಗಳ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ ನೀಡಿರುವ ಪ್ರತಿಕ್ರಿಯೆ ಕೂಡ ಕುತೂಹಲಕ್ಕೆ ಕಾರಣವಾಗಿದೆ. ಇಷ್ಟು ದಿನ ‘‘ಸಿಎಂ ಬದಲಾವಣೆ ಇಲ್ಲ’’ ಎನ್ನುತ್ತಿದ್ದ ಪರಮೇಶ್ವರ್, ಈಗ ‘‘ಹೈಕಮಾಂಡ್ ನಿರ್ಧಾರವೇ ಅಂತಿಮ’’ ಎಂದಿರುವುದು ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ. ಮೇ 15ರ ಡಿಕೆಶಿ ಹುಟ್ಟುಹಬ್ಬದ ವೇಳೆಗೆ ಹೈಕಮಾಂಡ್ ಏನಾದರೂ ‘ಗಿಫ್ಟ್’ ನೀಡಲಿದೆಯೇ ಎಂಬ ಚರ್ಚೆ ಜೋರಾಗಿದ್ದು, ಅಸ್ತಿತ್ವ ಉಳಿಸಿಕೊಳ್ಳಲು ಅಹಿಂದ ನಾಯಕರು ಈಗಲೇ ದಾಳ ಉರುಳಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆ ದೇವಾಲಯಕ್ಕೆ ಭೇಟಿ ನೀಡಿದ ಮೇಲೆ ಜೀವನ ಬದಲಾಯ್ತು: ಶ್ರುತಿ ಹಾಸನ್ – Kannada News | Shruti Haasan talks about how a Temple visit changed her life

ಚಿತ್ರರಂಗದ (Movie Industry) ಬಹುತೇಕರು ದೇವರಿನಲ್ಲಿ ವಿಶ್ವಾಸ ಇರುವವರೇ ಆಗಿದ್ದಾರೆ. ಸಿನಿಮಾಗಳ ಶೂಟಿಂಗ್ ಆರಂಭವಾಗುವುದೇ ದೇವರ ಪೂಜೆ ಮೂಲಕ, ಮುಗಿಯುವುದು ಸಹ ಪೂಜೆಯ ಮೂಲಕವೇ. ಆದರೆ ನಟ-ನಟಿಯರ ಐಶಾರಾಮಿ ಜೀವನ ಶೈಲಿ, ಪಾರ್ಟಿಗಳು, ಅವರ ಉಡುಪುಗಳು ಇನ್ನಿತರೆಗಳನ್ನು ಗಮನಿಸುವ ಜನ ದೇವರಲ್ಲಿ ನಂಬಿಕೆ ಇಲ್ಲದವರು ಎಂದು ನಿರ್ಧರಿಸಿಬಿಡುತ್ತಾರೆ. ನಟಿ ಶ್ರುತಿ ಹಾಸನ್, ಪಾಶ್ಚಾತ್ಯ ಶೈಲಿಯ ಜೀವನ ನಿರ್ವಹಣೆ ಮಾಡುವ ನಟಿಯರಲ್ಲಿ ಒಬ್ಬರು. ಲಿವಿನ್ ರಿಲೇಶನ್ ಶಿಪ್, ಪದೇ ಪದೇ ಬದಲಾಗುವ ಬಾಯ್​ಫ್ರೆಂಡ್, ನೈಟ್ ಲೈಫ್, ಪಾರ್ಟಿಗಳು, ಕಾನ್ಸರ್ಟ್​​ಗಳು ಇನ್ನೂ ಹಲವು. ಆದರೆ ಅವರು ಅಪ್ಪಟ ದೈವ ಭಕ್ತೆ. ದೇವಾಲಯ ಒಂದಕ್ಕೆ ಹೋಗಿದ್ದಕ್ಕೆ ತಮ್ಮ ಜೀವನ ಬದಲಾಯ್ತು ಎಂದು ಅವರು ಖುದ್ದು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ನಟಿ ಶ್ರುತಿ ಹಾಸನ್ ಅವರು ತಮ್ಮ ಜೀವನದಲ್ಲಿ ಉಂಟಾದ ದೊಡ್ಡ ಬದಲಾವಣೆಯ ಬಗ್ಗೆ ಮಾತನಾಡಿದ್ದಾರೆ. ಜೀವನದಲ್ಲಿ ಖಿನ್ನತೆಗೆ ಒಳಗಾಗಿದ್ದರಂತೆ ಶ್ರುತಿ ಹಾಸನ್, ಜೀವನದಲ್ಲಿ ಯಾವುದೂ ಸರಿಯಾಗಿ ನಡೆಯುತ್ತಿಲ್ಲ, ಸೋಲುತ್ತಿದ್ದೇನೆ ಎಂದು ಅನಿಸಲು ಆರಂಭಿಸಿತ್ತಂತೆ. ಕಷ್ಟಗಳ ಮೇಲೆ ಕಷ್ಟಗಳು ಬರುತ್ತಿದ್ದವಂತೆ. ಆಗ ಗೆಳೆಯನೊಬ್ಬ ದೇವಾಲಯವೊಂದಕ್ಕೆ ಭೇಟಿ ನೀಡುವಂತೆ ಸಲಹೆ ನೀಡಿದನಂತೆ.

ಗೆಳೆಯನ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಶ್ರುತಿ ಹಾಸನ್, ಚೆನ್ನೈನ ವಾರಾಹಿ ಅಮ್ಮನ ಗುಡಿಗೆ ಭೇಟಿ ನೀಡಿದರು. ನಂತರ ತಮ್ಮ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗಳಾಗಿವೆ ಎಂದು ಅವರು ಹೇಳಿದ್ದಾರೆ. ‘ಅದು ತುಂಬಾ ಪುಟ್ಟ ದೇವಸ್ಥಾನ, ಅಲ್ಲಿ ಯಾವುದೇ ವಿಐಪಿ ಸಾಲುಗಳಿಲ್ಲ ಅಥವಾ ಅದ್ದೂರಿತನವಿಲ್ಲ. ಆದರೆ ಅಲ್ಲಿಗೆ ಹೋದಾಗ ನನಗೆ ಒಂದು ವಿಭಿನ್ನವಾದ ಶಕ್ತಿ ಮತ್ತು ಶಾಂತಿ ಸಿಕ್ಕಿತು’ ಎಂದು ಶ್ರುತಿ ವಿವರಿಸಿದ್ದಾರೆ. ‘ದೇವರೇ ನಮ್ಮನ್ನು ಆರಿಸಿಕೊಳ್ಳುತ್ತಾರೆ ಎಂಬುದನ್ನು ನಾನು ಅಲ್ಲಿಗೆ ಹೋದ ಮೇಲೆ ನಂಬಿದ್ದಾಗಿ ಅವರು ತಿಳಿಸಿದ್ದಾರೆ. ಆ ಭೇಟಿಯ ನಂತರ ಅವರ ಮನಸ್ಸಿನಲ್ಲಿದ್ದ ಭಯಗಳೆಲ್ಲಾ ದೂರವಾಗಿ, ಜೀವನದ ಬಗ್ಗೆ ಒಂದು ಸ್ಪಷ್ಟತೆ ಸಿಕ್ಕಿತಂತೆ. ಶ್ರುತಿ ಹಾಸನ್ ಅವರ ಈ ಆಧ್ಯಾತ್ಮಿಕ ಪಯಣದ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ:ರಾಮ್ ಚರಣ್ ಸಿನಿಮಾನಲ್ಲಿ ಶ್ರುತಿ ಹಾಸನ್ ಐಟಂ ಹಾಡು

ಶ್ರುತಿ ಹಾಸನ್ ಪ್ರಸ್ತುತ ಕೆಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನ ‘ಟ್ರೈನ್’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ತೆಲುಗಿನ ‘ಆಕಾಶಂ ಲೋ ಒಕ ತಾರ’ ಸಿನಿಮಾನಲ್ಲಿ ನಟಿಸುತ್ತದ್ದಾರೆ. ‘ಸಲಾರ್ 2’ ಸಿನಿಮಾನಲ್ಲೂ ಅವರೇ ನಾಯಕಿ. ಇತ್ತೀಚೆಗಷ್ಟೆ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಐಟಂ ಹಾಡಿನಲ್ಲಿ ನಟಿಸಲು ಒಪ್ಪಿಗೆ ನೀಡಿದ್ದಾರೆ. ಇವುಗಳ ಜೊತೆಗೆ ಹೊಸ ಆಲ್ಬಂ ಬಿಡುಗಡೆ ಮಾಡಲು ಸಹ ಅವರು ಸಜ್ಜಾಗುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

28 ವರ್ಷಗಳ ಬಳಿಕ ಒಂದಾಗುತ್ತಿರುವ ನಾಗಾರ್ಜುನ ಮತ್ತು ಟಬು – Kannada News | Akkineni Nagarjuna and Tabu acting together after 28 years

ನಾಗಾರ್ಜುನ (Nagarjuna) ಮತ್ತು ಟಬು ಅವರು ಚಿತ್ರರಂಗದ ಹಿರಿಯ ನಟರು. ಆದರೆ ದಶಕಗಳ ಹಿಂದೆ ಇವರಿಬ್ಬರದ್ದು ಬಲು ಹಾಟ್ ಫೇವರೇಟ್ ಜೋಡಿ. ಕೆಲವು ಬ್ಲಾಕ್ ಬಸ್ಟರ್ ರೊಮ್ಯಾಂಟಿಕ್ ಹಿಟ್ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆ ಸಮಯದಲ್ಲಿ ನಾಗಾರ್ಜುನ ಮತ್ತು ಟಬು ನಡುವೆ ತೆರೆಯಾಚೆಯೂ ರೊಮಾನ್ಸ್ ನಡೆದಿತ್ತು ಆ ಬಗ್ಗೆ ಸಾಕಷ್ಟು ಗುಲ್ಲೆದ್ದಿತ್ತು. ನಾಗಾರ್ಜುನ ಮತ್ತು ಟಬು ಮದುವೆ ಆಗಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಆದರೆ ಅದಾಗಲಿಲ್ಲ. ಆದರೆ ಇದೀಗ ಬರೋಬ್ಬರಿ 28 ವರ್ಷಗಳ ಬಳಿಕ ಈ ಜೋಡಿ ಮತ್ತೆ ತೆರೆಯ ಮೇಲೆ ಒಂದಾಗುತ್ತಿದೆ.

ನಾಗಾರ್ಜುನ ತಮ್ಮ 100ನೇ ಸಿನಿಮಾದ ಚಿತ್ರೀಕರಣದ ತಯಾರಿಯಲ್ಲಿದ್ದಾರೆ. ಈ ಸಿನಿಮಾವನ್ನು ಬಲು ಅದ್ಧೂರಿಯಾಗಿ ತೆರೆಯ ಮೇಲೆ ತರಲು ಸಕಲ ಪ್ರಯತ್ನಗಳನ್ನು ಖುದ್ದಾಗಿ ಮಾಡುತ್ತಿದ್ದಾರೆ. ಸಿನಿಮಾಕ್ಕೆ ‘ಕಿಂಗ್ 100’ ಎಂದು ಹೆಸರಿಡಲಾಗಿದ್ದು, ನಾಗಾರ್ಜುನ ಅಭಿಮಾನಿಗಳಿಗಾಗಿ ವಿಶೇಷವಾಗಿ ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದೆಯಂತೆ. ಇದೇ ಸಿನಿಮಾನಲ್ಲಿ ಟಬು ಮುಖ್ಯ ಪಾತ್ರದಲ್ಲಿ ನಟಿಸಲಿದ್ದು, ಬರೋಬ್ಬರಿ 28 ವರ್ಷಗಳ ಬಳಿಕ ಟಬು ಮತ್ತೊಮ್ಮೆ ನಾಗಾರ್ಜುನ ಜೊತೆಗೆ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

ಟಬು ಅವರು ಸಿನಿಮಾದ ಶೂಟಿಂಗ್ ಪ್ರಾರಂಭಿಸಿದ್ದು, ‘ಕಿಂಗ್ 100’ ಸಿನಿಮಾ ಸೆಟ್​ನ ಚಿತ್ರವನ್ನು ಟಬು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಟಬು ಮತ್ತು ನಾಗಾರ್ಜುನ ಜೋಡಿಗೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿ ವರ್ಗವೇ ಇದ್ದು, ಸಹಜವಾಗಿಯೇ ಅಭಿಮಾನಿಗಳು ಇಬ್ಬರನ್ನೂ ಮತ್ತೆ ತೆರೆಯ ಮೇಲೆ ನೋಡಲು ಕಾತರರಾಗಿದ್ದಾರೆ.

ಇದನ್ನೂ ಓದಿ;ನಾಗಾರ್ಜುನಗೆ ಮತ್ತೆ ಶಾಕ್ ಕೊಟ್ಟ ಸರ್ಕಾರ, ಸ್ಟುಡಿಯೋ ವಿರುದ್ಧ ತೆರಿಗೆ ವಂಚನೆ ಆರೋಪ

ನಾಗಾರ್ಜುನ ಅವರ 100ನೇ ಸಿನಿಮಾವನ್ನು ರಾ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾನಲ್ಲಿ ನಾಗಾರ್ಜುನ ಅವರನ್ನು ಭಿನ್ನ ಭಿನ್ನ ಲುಕ್​​ಗಳಲ್ಲಿ ತೋರಿಸಲಾಗುತ್ತದೆಯಂತೆ. ಇದಕ್ಕಾಗಿ ಡೀ ಏಜಿಂಗ್ ತಂತ್ರಜ್ಞಾನವನ್ನು ನಿರ್ದೇಶಕರು ಬಳಸಲಿದ್ದಾರೆ. ಸಿನಿಮಾವು ತಂದೆ ಮತ್ತು ಮಗಳ ನಡುವೆ ಬಾಂಧವ್ಯದ ಕತೆಯನ್ನು ಹೊಂದಿರಲಿದೆ. ಸಿನಿಮಾನಲ್ಲಿ ಟಬು ಅವರು ನಾಗಾರ್ಜುನ ಅವರಿಗೆ ಜೋಡಿಯಾಗಿ ನಟಿಸಲಿದ್ದಾರೆ.

ನಾಗಾರ್ಜುನ ಮತ್ತು ಟಬು ಈ ವರೆಗೆ ಮೂರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಮೊದಲಿಗೆ ‘ಸಿಸಿಂದ್ರಿ’ ಸಿನಿಮಾನಲ್ಲಿ ಈ ಇಬ್ಬರೂ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಬಳಿಕ ಬ್ಲಾಕ್ ಬಸ್ಟರ್ ಸಿನಿಮಾ ‘ನಿನ್ನೆ ಪೆಳ್ಳಾಡತಾ’ ಆ ಬಳಿಕ ‘ಆವಿಡ ಮಾ ಆವಿಡೇ’ ಸಿನಿಮಾನಲ್ಲಿ ನಟಿಸಿದ್ದರು. 1998 ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಈಗ 28 ವರ್ಷಗಳ ಬಳಿಕ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಆರೆಂಜ್ ಕ್ಯಾಪ್ ಹೋರಾಟಕ್ಕಿಳಿದ ಕಿಂಗ್ ಕೊಹ್ಲಿ: ಭುವನೇಶ್ವರ್​ಗೆ ಸಿಕ್ಕಿತು ಪರ್ಪಲ್ ಕ್ಯಾಪ್ – Kannada News | Virat Kohli enters the Orange Cap fight Bhuvneshwar gets the Purple Cap

ಬೆಂಗಳೂರು (ಏ. 28): ಐಪಿಎಲ್ 2026 ರಲ್ಲಿ ಸದ್ಯ ಆರೆಂಜ್ ಮತ್ತು ಪರ್ಪಲ್ ಕ್ಯಾಪ್‌ಗಳ ನಡುವೆ ಕಠಿಣ ಸ್ಪರ್ಧೆ ಏರ್ಪಟ್ಟಿದೆ. ಸೋಮವಾರ, ಆರ್‌ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಅವರ ತವರು ಅಂಗಳದಲ್ಲೇ ಸೋಲಿಸುವ ಮೂಲಕ ಗಮನಾರ್ಹ ಪ್ರದರ್ಶನ ನೀಡಿತು. ವಿರಾಟ್ ಕೊಹ್ಲಿ (Virat Kohli) ಅಜೇಯ 23 ರನ್​ಗಳ ಇನ್ನಿಂಗ್ಸ್ ಆಡಿದರು. ಇದರ ಜೊತೆಗೆ ಕಿಂಗ್ ಕೊಹ್ಲಿ ಸದ್ಯ ಆರೆಂಜ್ ಕ್ಯಾಪ್ ರೇಸ್‌ನ ಹೋರಾಟಕ್ಕೆ ಇಳಿದಿದ್ದಾರೆ. ಅತ್ತ ಆರ್​ಸಿಬಿಯ ಸ್ಟಾರ್ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಅಗ್ರ ಸ್ಥಾನವನ್ನು ತಲುಪಿದ್ದಾರೆ.

ಈ ವರ್ಷದ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಸನ್‌ರೈಸರ್ಸ್ ಹೈದರಾಬಾದ್‌ನ ಅಭಿಷೇಕ್ ಶರ್ಮಾ. ಅವರು ಎಂಟು ಪಂದ್ಯಗಳಲ್ಲಿ 380 ರನ್ ಗಳಿಸಿದ್ದಾರೆ. ಅವರು ಇಲ್ಲಿಯವರೆಗೆ ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಗಳಿಸಿದ್ದಾರೆ. ಕೆಎಲ್ ರಾಹುಲ್ ಪ್ರಸ್ತುತ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಎಂಟು ಪಂದ್ಯಗಳಲ್ಲಿ 358 ರನ್ ಗಳಿಸಿದ್ದಾರೆ. ಅವರು ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೈಭವ್ ಸೂರ್ಯವಂಶಿ ಮೂರನೇ ಸ್ಥಾನ-ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನ

ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಬಗ್ಗೆ ಹೇಳುವುದಾದರೆ, ಅವರು 8 ಪಂದ್ಯಗಳಲ್ಲಿ 357 ರನ್ ಗಳಿಸಿದ್ದಾರೆ. ವೈಭವ್ ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ಮಧ್ಯೆ ವಿರಾಟ್ ಕೊಹ್ಲಿ 4 ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅವರು ಎಂಟು ಪಂದ್ಯಗಳಲ್ಲಿ 351 ರನ್ ಗಳಿಸಿದ್ದಾರೆ. ಕೊಹ್ಲಿ ಅವರ ಹೆಸರಿನಲ್ಲಿ ಒಂದು ಶತಕವಿಲ್ಲ, ಆದರೆ ಅವರು ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಅತ್ಯಂತ ಕಡಿಮೆ ಟಾರ್ಗೆಟ್ ಪಂದ್ಯದಲ್ಲಿ, ಕೊಹ್ಲಿ 15 ಎಸೆತಗಳಲ್ಲಿ 23 ರನ್ ಗಳಿಸಿದರು. ಟಾರ್ಗೆಟ್ ರನ್‌ಗಳು ಕಡಿಮೆಯಿದ್ದ ಕಾರಣ ಕೊಹ್ಲಿಗೆ ಹೆಚ್ಚು ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಕೊಹ್ಲಿ ಒಂದು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿ ಅಜೇಯರಾಗಿ ಉಳಿದರು.

DC vs RCB: ಜಾಕೋಬ್ ಬೆಥೆಲ್‌ ಸಿಡಿಸಿದ 104 ಮೀಟರ್ ಸಿಕ್ಸ್ ಕಂಡು ಶಾಕ್ ಆದ ಕೊಹ್ಲಿ: ವಿಡಿಯೋ ನೋಡಿ

ಭುವನೇಶ್ವರ್ ಕುಮಾರ್​ಗೆ ಪರ್ಪಲ್ ಕ್ಯಾಪ್

ಪರ್ಪಲ್ ಕ್ಯಾಪ್ ವಿಚಾರಕ್ಕೆ ಬಂದರೆ, ಇಲ್ಲಿ ಆಸಕ್ತಿದಾಯಕ ಸ್ಪರ್ಧೆ ನಡೆಯುತ್ತಿದೆ. ಆರ್‌ಸಿಬಿಯ ಭುವನೇಶ್ವರ್ ಕುಮಾರ್, ಸಿಎಸ್‌ಕೆಯ ಅನ್ಶುಲ್ ಕಾಂಬೋಜ್ ಮತ್ತು ಎಸ್‌ಆರ್‌ಹೆಚ್‌ನ ಇಶಾನ್ ಮಾಲಿಂಗ ಸಮಾನ ವಿಕೆಟ್‌ಗಳನ್ನು ಹೊಂದಿದ್ದಾರೆ. ಮೂವರೂ ಈಗ 14 ವಿಕೆಟ್‌ಗಳನ್ನು ಪಡೆದಿದ್ದಾರೆ, ಆದರೆ ಭುವನೇಶ್ವರ್ ಕುಮಾರ್ ಅವರ ಉತ್ತಮ ಎಕಾನಮಿ ರೇಟ್‌ನಿಂದಾಗಿ ಪ್ರಸ್ತುತ ಪರ್ಪಲ್ ಕ್ಯಾಪ್ ಅನ್ನು ಹೊಂದಿದ್ದಾರೆ. ಅನ್ಶುಲ್ ಕಾಂಬೋಜ್ ಎರಡನೇ ಸ್ಥಾನದಲ್ಲಿದ್ದರೆ, ಇಶಾನ್ ಮಾಲಿಂಗ ಮೂರನೇ ಸ್ಥಾನದಲ್ಲಿದ್ದಾರೆ. ಜೋಫ್ರಾ ಆರ್ಚರ್, ಪ್ರಿನ್ಸ್ ಯಾದವ್ ಮತ್ತು ಕಗಿಸೊ ರಬಾಡ ತಲಾ 13 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಬೌಲರ್‌ಗಳಲ್ಲಿ ಯಾರಾದರು ಒಬ್ಬರು ಶೀಘ್ರದಲ್ಲೇ ಪರ್ಪಲ್ ಕ್ಯಾಪ್ ಗೆಲ್ಲಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:16 am, Tue, 28 April 26

Source link

ರಿಯಾಲಿಟಿ ಶೋ ಸ್ಪರ್ಧಿ ಮೇಲೆ ಹಲ್ಲೆ; ಕಣ್ಣು ಊದೋಯ್ತು, ಹಲ್ಲು ಮುರಿದೋಯ್ತು – Kannada News | Splitsvilla Preet Singh Assaulted in Mumbai: Shares Horrific Experience, Broken Tooth

‘ಸ್ಪ್ಲಿಟ್ಸ್‌ವಿಲ್ಲಾ ಸೀಸನ್ 16’ ರಿಯಾಲಿಟಿ ಶೋ ಸ್ಪರ್ಧಿ ಪ್ರೀತ್ ಸಿಂಗ್ ಪ್ರಸ್ತುತ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ, ನಟಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ತಮಗೆ ಸಂಭವಿಸಿದ ಆಘಾತಕಾರಿ ಘಟನೆಯ ಬಗ್ಗೆ ಹೇಳಿದ್ದಾರೆ. ನಟಿಯ ಹಲ್ಲುಗಳು ಮುರಿದಿವೆ. ಅವರ ಮುಖಕ್ಕೂ ಗಾಯವಾಗಿದೆ. ಪ್ರಸ್ತುತ, ನಟಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ಮಾತ್ರವಲ್ಲದೆ, ವೀಡಿಯೊವನ್ನು ನೋಡಿದ ನಂತರ ಅನೇಕ ಜನರು ಕೋಪವನ್ನು ವ್ಯಕ್ತಪಡಿಸಿದ್ದಾರೆ.

ಪ್ರೀತ್ ಸಿಂಗ್ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರ ಮುಖ ತೀವ್ರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿ ಕಾಣುತ್ತಿದೆ. ವೀಡಿಯೊವನ್ನು ಪೋಸ್ಟ್ ಮಾಡುತ್ತಾ ಪ್ರೀತ್, ‘ಒಂದು ಎಚ್ಚರಿಕೆ. ಹುಡುಗಿಯರಿಗೆ ಸುರಕ್ಷಿತವಲ್ಲದ ನಗರಗಳಲ್ಲಿ ಮುಂಬೈ ಒಂದಾಗಿದೆ ಎಂದು ನಾನು ಕೇಳಿದ್ದೆ. ಆದರೆ ನಾನು ಇದನ್ನು ಅನುಭವಿಸುತ್ತೇನೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ನಾನು ಇದನ್ನು ಬರೆಯುವಾಗಲೂ ನನ್ನ ದೇಹವು ನಡುಗುತ್ತಿದೆ. ನನ್ನ ಕಣ್ಣುಗಳು ಊದಿಕೊಂಡಿವೆ, ನನ್ನ ಮುಖಕ್ಕೆ ಗಾಯಗಳಾಗಿವೆ ಮತ್ತು ನನಗೆ ಏನಾಯಿತು ಎಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ’ ಎಂದು ಹೇಳಿದ್ದಾರೆ.

‘ನಾನು ನನ್ನ ಸ್ನೇಹಿತೆಯೊಂದಿಗೆ ಕ್ಲಬ್‌ನಲ್ಲಿ ಆರಾಮವಾಗಿ ಕುಳಿತಿದ್ದೆ. ಇದ್ದಕ್ಕಿದ್ದಂತೆ ಒಬ್ಬ ಹುಡುಗಿ ಒಳಗೆ ಬಂದು ನಮ್ಮನ್ನು ಹೇಗೆ ಒಳಗೆ ಬಿಡಲಾಗಿದೆ ಎಂದು ಜೋರಾಗಿ ಕೂಗಲು ಪ್ರಾರಂಭಿಸಿದಳು. ಆರಂಭದಲ್ಲಿ ಇದು ಕೇವಲ ಒಂದು ಸಣ್ಣ ಜಗಳವಾಗಿತ್ತು. ಆದರೆ ನಂತರ ಅವಳ ಸ್ನೇಹಿತರೊಬ್ಬರು ಮಧ್ಯಪ್ರವೇಶಿಸಿ ನಮ್ಮ ಮೇಲೆ ಹಲ್ಲೆ ಮಾಡಿದಾಗ ವಿಷಯ ಗಂಭೀರವಾಯಿತು’ ಎಂದು ಪ್ರೀತ್ ಹೇಳಿದ್ದಾರೆ.

ಇದನ್ನೂ ಓದಿ: ಹೊಸ ರಿಯಾಲಿಟಿ ಶೋ ಒಪ್ಪಿಕೊಂಡ ನಯನಾ ನಾಗರಾಜ್

‘ಅವನು ನನಗೆ ತುಂಬಾ ಹೊಡೆದಿದ್ದರಿಂದ ನನ್ನ ಒಂದು ಹಲ್ಲು ಮುರಿದುಕೊಂಡೆ. ಇತರರು ಸಹಾಯಕ್ಕೆ ಬರುವವರೆಗೂ ಹೊಡೆಯುವುದು ಮುಂದುವರೆಯಿತು. ನಂತರ ಆ ಹುಡುಗಿ ತನ್ನನ್ನು ತಾನು ಪ್ರಭಾವಿ ಎಂದು ಕರೆದುಕೊಳ್ಳುತ್ತಿದ್ದಾಳೆಂದು ನನಗೆ ತಿಳಿಯಿತು. ನನಗೆ ಇನ್ನೂ ಆಘಾತವಾಗಿದೆ, ಇದೆಲ್ಲ ಹೇಗೆ ಸಂಭವಿಸಿತು… ನಿಜವಾಗಿಯೂ ಅವರು ಯಾರು’ ಎಂದು ಪ್ರೀತ್ ಕೇಳಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅನೇಕರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Sahavasa Dosha: ಒಬ್ಬ ವ್ಯಕ್ತಿಯ ಜೀವನದ ಮೇಲೆ ಸಹವಾಸ ದೋಷದ ಪ್ರಭಾವ ಹೇಗಿರಲಿದೆ? – Kannada News | The Profound Impact of Company: Understanding Sahavasa Dosha and Its Influence on Life

ಸಹವಾಸ ದೋಷಗಳು ಒಬ್ಬ ವ್ಯಕ್ತಿಯ ಜೀವನವನ್ನು ಹಾಳು ಮಾಡುತ್ತವೆಯೇ ಅಥವಾ ಶ್ರೇಯಸ್ಸು, ವೃದ್ಧಿಯನ್ನು ನೀಡುತ್ತವೆಯೇ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಏಳಿಗೆ ಇರಬಹುದು, ಅವನತಿ ಇರಬಹುದು. ಇವೆಲ್ಲವೂ ಕೂಡ ಸಹವಾಸಗಳ ಪ್ರಭಾವದಿಂದಲೇ ಉಂಟಾಗುತ್ತವೆ. ಆ ಸಹವಾಸ ಉತ್ತಮವಾಗಿದೆಯೇ ಅಥವಾ ಕೆಟ್ಟದಾಗಿದೆಯೇ ಎಂಬುದು ಫಲಿತಾಂಶ ಬಂದಾಗ ಮಾತ್ರ ಗೊತ್ತಾಗುತ್ತದೆ.

ಗುರೂಜಿಯವರು ಹೇಳಯವಂತೆ, “ಸಹವಾಸ ದೋಷದಿಂದ ಸನ್ಯಾಸಿಯೂ ಕೆಟ್ಟ” ಎಂಬ ಗಾದೆಯೇ ಸಹವಾಸದ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತದೆ. ನಾವು ಯಾರ ಜೊತೆ ಇರುತ್ತೇವೆ ಎಂಬುದು ಬಹಳ ಮುಖ್ಯ. ನಿಮ್ಮ ಸ್ನೇಹಿತರ ಹೆಸರನ್ನು ಹೇಳಿ ನಿಮ್ಮ ವ್ಯಕ್ತಿತ್ವವನ್ನು ಹೇಳಬಹುದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ನಮ್ಮ ಬಾಲ್ಯಾವಸ್ಥೆ, ಯೌವನಾವಸ್ಥೆ, ಪ್ರೌಢಾವಸ್ಥೆ ಮತ್ತು ವೃದ್ಧಾವಸ್ಥೆಗಳು ಮತ್ತೆ ಮರಳಿ ಬರುವುದಿಲ್ಲ. ಈ ಜೀವನದ ಪ್ರತಿಯೊಂದು ಹಂತದಲ್ಲಿಯೂ ನಮ್ಮ ಅಭಿವೃದ್ಧಿ ಮತ್ತು ಶ್ರೇಯಸ್ಸಿಗೆ ಯಾರಾದರೂ ಒಬ್ಬರ ಬೆಂಬಲ ಬೇಕೇ ಬೇಕು. ಈ ಬೆಂಬಲ ನೀಡುವ ಸಹವಾಸಗಳು ಒಳ್ಳೆಯದಾಗಿರಬೇಕು. ಕೇವಲ ಬಾಯಿ ಮಾತಿನಲ್ಲಿ ಒಳ್ಳೆಯದಾಗುತ್ತೆ ಎಂದು ಹೇಳುವವರನ್ನು ನಂಬಲು ಸಾಧ್ಯವಿಲ್ಲ.

ಸಹವಾಸಗಳು ನಮ್ಮ ಜೀವನದ ಮೇಲೆ, ನಮ್ಮ ವ್ಯಕ್ತಿತ್ವದ ಮೇಲೆ, ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಅವರ ಆಲೋಚನಾ ಶಕ್ತಿ, ಸಾಮಾಜಿಕ ಕಳಕಳಿ, ಮತ್ತು ಮನಸ್ಸಿನ ಭಾವನೆಗಳು ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಇದಕ್ಕೆ ಒಂದು ಪ್ರಸಿದ್ಧ ಉದಾಹರಣೆ ಎರಡು ಗಿಳಿಗಳ ಕಥೆ. ಒಬ್ಬ ಋಷಿಯ ಬಳಿ ಬೆಳೆದ ಗಿಳಿಯು ಆಶ್ರಮಕ್ಕೆ ಬಂದವರನ್ನು “ಬನ್ನಿ, ಕಾಲು ತೊಳೆದುಕೊಳ್ಳಿ, ನೀರು ಬೇಕಾ?” ಎಂದು ಸತ್ಕರಿಸಿದರೆ, ಕಳ್ಳನ ಬಳಿ ಬೆಳೆದ ಗಿಳಿಯು “ಅವರನ್ನು ಹಿಡಿದುಕೊಳ್ಳಿ, ಅವರ ಬಳಿ ಬಂಗಾರವಿದೆ” ಎಂದು ಹೇಳುತ್ತದೆ. ಇಲ್ಲಿ ಕಳ್ಳನ ಸಹವಾಸದಿಂದ ಆ ಗಿಳಿಗೆ ಕೆಟ್ಟ ಬುದ್ಧಿ ಬಂದರೆ, ಋಷಿಯ ಸಹವಾಸದಿಂದ ಈ ಗಿಳಿಗೆ ಸದ್ಬುದ್ಧಿ ಬರುತ್ತದೆ.

ಇತಿಹಾಸ ಮತ್ತು ಪುರಾಣಗಳಲ್ಲೂ ಇದಕ್ಕೆ ಅನೇಕ ಉದಾಹರಣೆಗಳಿವೆ. ಮಹಾಭಾರತದಲ್ಲಿ ಭೀಷ್ಮನು ಶರಶಯ್ಯೆಯಲ್ಲಿ ಇರುವಾಗ, ದ್ರೌಪದಿ “ನೀವು ಮಹಾನ್ ಜ್ಞಾನಿ, ಧರ್ಮನಿಷ್ಠರು. ಆದರೂ ನನ್ನ ವಸ್ತ್ರಾಪಹರಣದ ಸಮಯದಲ್ಲಿ ಯಾಕೆ ತಡೆಯಲಿಲ್ಲ?” ಎಂದು ಕೇಳಿದಾಗ, ಭೀಷ್ಮ “ನಾನು ದುರ್ಯೋಧನನ ಆಹಾರ ತಿನ್ನುತ್ತಿದ್ದೆ, ಅವನ ಸಹವಾಸದಲ್ಲಿದ್ದೆ. ಅದಕ್ಕೆ ಆ ಬುದ್ಧಿ ನನಗಿತ್ತು ತಾಯಿ” ಎಂದು ಹೇಳುತ್ತಾನೆ.

ಇದೇ ರೀತಿ, ಬಿಳಿ ಬಟ್ಟೆಯ ಮೇಲೆ ಒಂದು ಕಪ್ಪು ಚುಕ್ಕೆ ಹಾಕಿದಾಗ ಇಡೀ ಬಟ್ಟೆ ಹೇಗೆ ವಿಕಾರವಾಗಿ ಕಾಣಿಸುತ್ತದೆಯೋ, ಹಾಗೆಯೇ ನಮ್ಮ ಜೀವನದಲ್ಲಿ ಕೆಟ್ಟ ಸಹವಾಸಗಳು ನಮ್ಮನ್ನು ಹಾಳುಮಾಡಬಹುದು. ಒಳ್ಳೆಯ ಸಹವಾಸಗಳು ನಮ್ಮನ್ನು ಉತ್ತಮ ವ್ಯಾಪಾರಿಯನ್ನಾಗಿ, ಜ್ಞಾನಿಯನ್ನಾಗಿ, ರಾಜಕೀಯ ವ್ಯಕ್ತಿಯನ್ನಾಗಿ, ಅಥವಾ ಸಮಾಜದಲ್ಲಿ ಗುರುತರವಾದ ವ್ಯಕ್ತಿಯನ್ನಾಗಿ ಮಾಡುತ್ತವೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಕೆಟ್ಟ ಜನರ ಸಹವಾಸ ಮಾಡುವುದರಿಂದ ತಾತ್ಕಾಲಿಕ ಆನಂದ ಮತ್ತು ಸಂತೋಷ ಸಿಗಬಹುದು, ಆದರೆ ಶಾಶ್ವತವಾಗಿ ಕಂಟಕ ತಪ್ಪಿದ್ದಲ್ಲ. ಅದೇ ಒಳ್ಳೆಯ ಜನರ ಸಹವಾಸ ಮಾಡಿದರೆ, ತತ್ಕಾಲದಲ್ಲಿ ಕಹಿಯೆನಿಸಿದರೂ, ಶಾಶ್ವತವಾಗಿ ಸುಖ ಸಿಗುತ್ತದೆ. ಅದಕ್ಕೆ ದೊಡ್ಡವರು “ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ” ಎಂದು ಹೇಳುತ್ತಾರೆ. ನಿಮ್ಮ ಹಣಕ್ಕಾಗಿ, ಜ್ಞಾನಕ್ಕಾಗಿ, ಆಸ್ತಿಗಾಗಿ ನಿಮ್ಮನ್ನು ಹಾಳುಮಾಡಲು ಪ್ರಯತ್ನಿಸುವ ಕೆಲವು ದುಷ್ಟ ಜನರ ಸಹವಾಸದಿಂದ ದೂರವಿರಿ.

ಒಂದು ಆಶ್ರಮಕ್ಕೆ ಹೋಗಿ ಸ್ವಲ್ಪ ಹೊತ್ತು ಕುಳಿತುಕೊಂಡಾಗ ಸಿಗುವ ಆನಂದ, ಒಬ್ಬ ಸ್ವಾಮೀಜಿ, ಮಠಾಧೀಶ, ಜ್ಞಾನಿ, ಅಥವಾ ಗುರುಗಳ ಬಳಿ ಹೋದಾಗ ಐದು ನಿಮಿಷ ಕಳೆದರೂ ನಮ್ಮ ದೇಹಕ್ಕೆ ಧನಾತ್ಮಕ ಶಕ್ತಿ ಬರುತ್ತದೆ. ಸಹವಾಸ ದೋಷವು ಜೀವನವನ್ನು ಹಾಳು ಮಾಡುವುದರ ಜೊತೆಗೆ ಶುಭವನ್ನು ಕೂಡ ಮಾಡುತ್ತದೆ. ಇದನ್ನು ನಾವು ಅರಿತುಕೊಂಡಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್: ಪಿಂಕ್ ಲೈನ್ ಹಳಿ ಮೇಲೆ ಆರ್‌ಡಿಎಸ್‌ಒ ಪರೀಕ್ಷೆ ಆರಂಭ! – Kannada News | Namma Metro Pink Line Update: RDSO Testing Begins on Kalena Agrahara Tavarekere Stretch

ಪಿಂಕ್ ಲೈನ್ ಹಳಿ ಮೇಲೆ ಆರ್‌ಡಿಎಸ್‌ಒ ಪರೀಕ್ಷೆ ಆರಂಭ!
Image Credit source: MediaForge AI

ಬೆಂಗಳೂರು, ಏಪ್ರಿಲ್ 28: ರಾಜಧಾನಿಯ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ಸಜ್ಜಾಗುತ್ತಿರುವ ನಮ್ಮ ಮೆಟ್ರೋದ ‘ಪಿಂಕ್ ಲೈನ್’ (Pink Line) ಯೋಜನೆಯಲ್ಲಿ ಮಹತ್ವದ ಮೈಲಿಗಲ್ಲು ತಲುಪಲಾಗಿದೆ. ಇಂದಿನಿಂದ (ಏ.28) ಸಂಶೋಧನಾ ವಿನ್ಯಾಸಗಳು ಮತ್ತು ಗುಣಮಟ್ಟ ಸಂಸ್ಥೆಯ (RDSO) ತಜ್ಞರು ಈ ಮಾರ್ಗದಲ್ಲಿ ತಾಂತ್ರಿಕ ಪರೀಕ್ಷೆಗಳನ್ನು ಆರಂಭಿಸಲಿದ್ದು, ಮೇ 12ರವರೆಗೆ ತಪಾಸಣೆ ಮುಂದುವರಿಯಲಿದೆ.

ವೇಗ ಪರೀಕ್ಷೆ

ಬಿಎಂಆರ್‌ಸಿಎಲ್ (BMRCL) ಮೂಲಗಳ ಪ್ರಕಾರ, ಆರ್‌ಡಿಎಸ್‌ಒ ತಂಡವು ಈ ಪರೀಕ್ಷಾ ದತ್ತಾಂಶಗಳನ್ನು ವಿಶ್ಲೇಷಿಸಿ ಮಧ್ಯಂತರ ವೇಗ ಪ್ರಮಾಣಪತ್ರವನ್ನು (Interim Speed Certification) ನೀಡಲಿದೆ. ಇದಾದ ನಂತರ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ (CRS) ತಪಾಸಣೆ ನಡೆಯಲಿದ್ದು, ಅವರ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಲಾಗುತ್ತದೆ. ತಾಂತ್ರಿಕ ಅನುಮೋದನೆ ಪಡೆದ ನಂತರವಷ್ಟೇ ರೈಲು ಸಂಚಾರಕ್ಕೆ ಮುಕ್ತವಾಗಲಿದೆ. ಈ ಸಂಪೂರ್ಣ ಪ್ರಕ್ರಿಯೆಗೆ ಕನಿಷ್ಠ ಎರಡರಿಂದ ಮೂರು ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಯೋಜನೆಯ ಪ್ರಗತಿ

ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗಿನ 7 ಕಿ.ಮೀ ಎತ್ತರಿಸಿದ ಮಾರ್ಗಕ್ಕಾಗಿ ಈಗಾಗಲೇ 5 ರೈಲುಗಳು ಬಂದಿವೆ. ಡೈರಿ ಸರ್ಕಲ್‌ನಿಂದ ನಾಗವಾರದವರೆಗಿನ ಸುರಂಗ ಮಾರ್ಗ ಸೇರಿದಂತೆ ಒಟ್ಟು 21 ಕಿ.ಮೀ ಉದ್ದದ ಈ ಕಾರಿಡಾರ್ ವರ್ಷಾಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮತ್ತೊಂದೆಡೆ, ‘ಹಳದಿ ಲೈನ್’ (Yellow Line) ಮಾರ್ಗಕ್ಕೆ ಟೀಟಾಘರ್ ರೈಲ್ ಸಿಸ್ಟಮ್ಸ್‌ನಿಂದ 10ನೇ ರೈಲು ಸೆಟ್ ಸೋಮವಾರ ಬಂದಿಳಿದಿದೆ. ಇದರಿಂದ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರ ನಡುವಿನ ಸಂಚಾರ ಇನ್ನಷ್ಟು ಸುಗಮವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗ್ಯಾಂಗ್​ಟಕ್​​ನಲ್ಲಿ ಮಕ್ಕಳೊಂದಿಗೆ ಫುಟ್​ಬಾಲ್ ಆಡಿದ ಪ್ರಧಾನಿ ಮೋದಿ – Kannada News | Narendra Modi Shares Football Moments with Youth in Gangtok

ನವದೆಹಲಿ, ಏಪ್ರಿಲ್ 28: ಪಶ್ಚಿಮ ಬಂಗಾಳದಲ್ಲಿ ಪ್ರಚಾರ ಮುಗಿಸಿ ಪ್ರಧಾನಿ ನರೇಂದ್ರ ಮೋದಿ(Narendra Modi) ಸಿಕ್ಕಿಂಗೆ ಆಗಮಿಸಿದ್ದಾರೆ. ಗ್ಯಾಂಗ್​ಟಕ್​ನಲ್ಲಿ ಮಕ್ಕಳೊಂದಿಗೆ ಫುಟ್​ಬಾಲ್ ಆಡಿರುವ ಫೋಟೊಗಳನ್ನು ಖುದ್ದಾಗಿ ಪ್ರಧಾನಿಯವರೇ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಗ್ಯಾಂಗ್ಟಕ್‌ನಲ್ಲಿ ಒಂದು ಸುಂದರವಾದ ಬೆಳಗ್ಗೆಯಲ್ಲಿ ನನ್ನ ಯುವ ಸ್ನೇಹಿತರೊಂದಿಗೆ ಫುಟ್ಬಾಲ್ ಆಡುವುದಕ್ಕಿಂತ ಖುಷಿ ಬೇರೇನೂ ಇಲ್ಲ ಎಂದು ಬರೆದುಕೊಂಡಿದ್ದಾರೆ. 4,000 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಲಾಗುವುದು.

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಸಿಕ್ಕಿಂ ಪ್ರವಾಸದಲ್ಲಿದ್ದಾರೆ. ಅಲ್ಲಿ ಅವರು ರಾಜ್ಯದ 50ನೇ ಸಂಸ್ಥಾಪನಾ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಮತ್ತು 4,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮತ್ತು ಸಿಕ್ಕಿಂನಲ್ಲಿ ಫುಟ್ಬಾಲ್ ಬಹಳ ಜನಪ್ರಿಯವಾಗಿದೆ . ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ, ಭಾರತದಲ್ಲಿ ಕ್ಲಬ್ ಫುಟ್ಬಾಲ್‌ಗೆ ಪ್ರಮುಖ ಕೇಂದ್ರವಾಗಿದೆ. ಗ್ರಾಮೀಣ ಮಟ್ಟದಲ್ಲಿಯೂ ಫುಟ್ಬಾಲ್ ಕ್ಲಬ್‌ಗಳು ಅಸ್ತಿತ್ವದಲ್ಲಿವೆ. ತಮ್ಮ ಭೇಟಿಯ ಮೊದಲ ದಿನವಾದ ಸೋಮವಾರ, ಪ್ರಧಾನಿ ನರೇಂದ್ರ ಮೋದಿ ಗ್ಯಾಂಗ್ಟಕ್‌ನಲ್ಲಿ ಮೆಗಾ ರೋಡ್ ಶೋ ನಡೆಸಿದರು ಪ್ರಧಾನಿ ಮೋದಿ ಅವರನ್ನು ನೋಡಲು ದೊಡ್ಡ ಜನಸಮೂಹ ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿತ್ತು.

ಮತ್ತಷ್ಟು ಓದಿ: ಮೊದಲ ಹಂತದ ಚುನಾವಣೆ ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ

ಯಾಂಗಾಂಗ್‌ನಲ್ಲಿರುವ ಸಿಕ್ಕಿಂ ವಿಶ್ವವಿದ್ಯಾಲಯದ ಕ್ಯಾಂಪಸ್, ಚಾಕುಂಗ್‌ನಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಶ್ರೇಷ್ಠತಾ ವಿಶ್ವವಿದ್ಯಾಲಯದ ಆಡಳಿತ ಬ್ಲಾಕ್, ಸೋಚೆಗ್ಯಾಂಗ್‌ನಲ್ಲಿರುವ ಹೆಲೆನ್ ಲೆಪ್ಚಾ ವೈದ್ಯಕೀಯ ಕಾಲೇಜು ಮತ್ತು ಗ್ಯಾಲ್ಶಿಂಗ್ ಜಿಲ್ಲೆಯ ಡೆಂಟಮ್ ವೃತ್ತಿಪರ ಕಾಲೇಜುಗಳನ್ನು ಉದ್ಘಾಟಿಸಲಿದ್ದಾರೆ.

ಹೆಚ್ಚುವರಿಯಾಗಿ, 160 ಶಾಲೆಗಳಲ್ಲಿ ಐಟಿ ಆಧಾರಿತ ಮೂಲಸೌಕರ್ಯ ಯೋಜನೆಗಳನ್ನು ಪ್ರಾರಂಭಿಸಲಾಗುವುದು. ಸಂಪರ್ಕವನ್ನು ಹೆಚ್ಚಿಸಲು, ಪ್ರಧಾನಿ ಮೋದಿ ಅವರು ಸಿರ್ವಾನಿ ಮತ್ತು ಲೋವರ್ ಸ್ಯಾಮ್‌ಡಾಂಗ್‌ನಲ್ಲಿ ತೀಸ್ತಾ ನದಿಗೆ ಅಡ್ಡಲಾಗಿ ಎರಡು ಡಬಲ್-ಲೇನ್ ಉಕ್ಕಿನ ಕಮಾನು ಸೇತುವೆಗಳಿಗೆ ಅಡಿಪಾಯ ಹಾಕಲಿದ್ದಾರೆ ಮತ್ತು ಬರ್ಡ್‌ಹ್ಯಾಂಗ್‌ನಿಂದ ಕಿಚುಡುಮ್ರಾ ಮೂಲಕ ನಾಮ್ಚಿಯ ರಸ್ತೆಯನ್ನು ಉದ್ಘಾಟಿಸಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಚಿತ್ರದುರ್ಗ: 44 ಪ್ರಯಾಣಿಕರಿದ್ದ ಸಾರಿಗೆ ಬಸ್ ಪಲ್ಟಿ, ತಪ್ಪಿದ ಭಾರಿ ದುರಂತ – Kannada News | KKRTC Bus Overturns Near Challakere in Chitradurga: 44 Passengers Narrowly Escape Major Accident

ಚಿತ್ರದುರ್ಗ, ಏಪ್ರಿಲ್ 28: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಬಳಿ ಮಂಗಳವಾರ ಬೆಳಗ್ಗೆ ಕಲ್ಯಾಣ ಕರ್ನಾಟಕ ಸಾರಿಗೆ (ಕೆಕೆಆರ್‌ಟಿಸಿ) ಬಸ್ ಪಲ್ಟಿಯಾಗಿದೆ. ಬಸ್‌ನಲ್ಲಿ 44 ಮಂದಿ ಪ್ರಯಾಣಿಸುತ್ತಿದ್ದರು. ಬಳ್ಳಾರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಸಾರಿಗೆ ಬಸ್ ಪಲ್ಟಿಯಾಗಿದ್ದು, ದೊಡ್ಡ ದುರಂತವೊಂದು ಅದೃಷ್ಟವಶಾತ್ ತಪ್ಪಿದೆ. ಅಪಘಾತದಲ್ಲಿ ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಾಹಿತಿ ಪ್ರಕಾರ, ಐವರು ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯು ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬಸ್ ಅಪಘಾತಕ್ಕೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version