ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ – Kannada News | Request to organize Karnataka Rathna award giving ceremony for Vishnuvardhan

ಕನ್ನಡ ಚಿತ್ರರಂಗದ (Sandalwood) ಖ್ಯಾತ ನಟ, ದಿವಂಗತ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ಸರ್ಕಾರವು 2025 ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದೆ. ವಿಷ್ಣುವರ್ಧನ್ ಮತ್ತು ಬಿ ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ಈ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿತ್ತು. ಇದೀಗ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಮತ್ತು ಇತರೆ ಸದಸ್ಯರು ಫಿಲಂ ಚೇಂಬರ್​​ನ ನೂತನ ಅಧ್ಯಕ್ಷೆ ಜಯಮಾಲ ಅವರನ್ನು ಭೇಟಿಯಾಗಿ ಫಿಲಂ ಚೇಂಬರ್ ವತಿಯಿಂದ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಬೇಕೆಂದು ಒತ್ತಾಯಿಸಿದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Karnataka Budget 2026-27: ಅಧಿಕಾರ ಹಂಚಿಕೆ ಚರ್ಚೆ ಮಧ್ಯೆ ರಾಜ್ಯ ಬಜೆಟ್​​​ಗೆ ದಿನಾಂಕ ನಿಗದಿ – Kannada News | Karnataka Budget 2026 27: CM Siddaramaiah to Present on March 6; Session Till March 27

ಬೆಂಗಳೂರು, ಫೆಬ್ರವರಿ 12: ರಾಜ್ಯ ಕಾಂಗ್ರೆಸ್ ಅಂಗಳದಲ್ಲಿ ಕುರ್ಚಿ ಕಾಳಗ ಮಧ್ಯೆ ಇದೀಗ 2026-27ನೇ ಆರ್ಥಿಕ ವರ್ಷದ ಕರ್ನಾಟಕ ರಾಜ್ಯ ಬಜೆಟ್‌ (Karnataka Budget) ಮಂಡನೆಗೆ ಮುಹೂರ್ತ ಫಿಕ್ಸ್ ಆಗಿದೆ. ಮಾ.6ರಿಂದ ಮಾರ್ಚ್ 27ರವರೆಗೆ ಬಜೆಟ್ ಅಧಿವೇಶನ ನಡೆಯಲಿದ್ದು, ಮಾ.6ರಂದು ಸಿಎಂ‌ ಸಿದ್ದರಾಮಯ್ಯ (Siddaramaiah) ಬಜೆಟ್ ಮಂಡಿಸಲಿದ್ದಾರೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಮಾ.6ರಿಂದ ಮಾರ್ಚ್ 27ರವರೆಗೆ ಬಜೆಟ್ ಅಧಿವೇಶನ ನಡೆಯಲಿದ್ದು, ಅಧಿವೇಶನದ ಮೊದಲ ದಿನವಾದ ಮಾರ್ಚ್ 6ರಂದು ಸಿಎಂ ಹಾಗೂ ರಾಜ್ಯದ ಹಣಕಾಸು ಸಚಿವ ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್ ಅನ್ನು ಮಂಡಿಸಲಿದ್ದಾರೆ. ಆ ಮೂಲಕ ಅವರು ಹೆಚ್ಚು ಬಾರಿ ಬಜೆಟ್ ಮಂಡಿಸಿದ ನಾಯಕರ ಸಾಲಿನಲ್ಲಿ ಮತ್ತೊಮ್ಮೆ ಗುರುತಿಸಿಕೊಳ್ಳಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಟ್ವೀಟ್​

ಇನ್ನು ಅಧಿಕಾರ ಹಂಚಿಕೆ ವಿಚಾರ ಚರ್ಚೆ ಮಧ್ಯೆ 2026-27ನೇ ಸಾಲಿನ ಆಯವ್ಯಯದ ಪೂರ್ವಸಿದ್ಧತೆಯ ಹಿನ್ನೆಲೆಯಲ್ಲಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ, ವಿವಿಧ ಇಲಾಖೆಗಳೊಂದಿಗೆ ಸಮಾಲೋಚನೆ ಸಭೆಗಳನ್ನು ನಡೆಸುತ್ತಿದ್ದಾರೆ. ಹಣಕಾಸು ಪರಿಸ್ಥಿತಿ, ಯೋಜನೆಗಳ ಪ್ರಗತಿ ಹಾಗೂ ಜನಪರ ಕಾರ್ಯಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಇಂದು ಹಿಂದುಳಿದ ಜಾತಿ, ವರ್ಗ ಮತ್ತು ಸಮುದಾಯಗಳ ಸಭೆ ನಡೆಸಿ, ಅವರ ಬೇಡಿಕೆಗಳನ್ನು ಆಲಿಸಿದ್ದಾರೆ. ಮುಂಬರುವ ಬಜೆಟ್‌ನಲ್ಲಿ ಅವುಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದ್ದಾರೆ. ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ 230ಕ್ಕೂ ಅಧಿಕ ಜನರು ಸಭೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: 5 ವರ್ಷವೂ ನಾನೇ ಸಿಎಂ: ವಿರೋಧಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟಕ್ಕರ್​

ರಾಜ್ಯದ ಆರ್ಥಿಕ ಸ್ಥಿತಿ, ಅಭಿವೃದ್ಧಿ ಯೋಜನೆಗಳು ಹಾಗೂ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಒತ್ತು ನೀಡುವ ನಿರೀಕ್ಷೆ ಇರುವ ಈ ಬಜೆಟ್‌ ಕುರಿತು ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 9:28 pm, Thu, 12 February 26

Source link

ಬಾಂಗ್ಲಾದೇಶದ ಚುನಾವಣೆಯನ್ನು ರದ್ದುಗೊಳಿಸಿ; ಮಾಜಿ ಪ್ರಧಾನಿ ಶೇಖ್ ಹಸೀನಾ ಒತ್ತಾಯ – Kannada News | Former Bangladesh PM Sheikh Hasina urges to cancel Bangladesh election

ನವದೆಹಲಿ, ಫೆಬ್ರವರಿ 12: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಬಾಂಗ್ಲಾದೇಶದ ಚುನಾವಣೆ ಬಗ್ಗೆ ತಮ್ಮ ಮೊದಲ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ. ಇಂದು ನಡೆದ ಚುನಾವಣೆಗಳು ಸಂವಿಧಾನಬಾಹಿರವಾಗಿದ್ದವು ಎಂದು ಆರೋಪಿಸಿದ ಮಾಜಿ ಪ್ರಧಾನಿ ಶೇಕ್ ಹಸೀನಾ “ಈ ಮತದಾರರಿಲ್ಲದ, ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ ಚುನಾವಣೆಯನ್ನು ರದ್ದುಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿ ಅಕ್ರಮಗಳಿವೆ ಎಂದು ಕೂಡ ಶೇಖ್ ಹಸೀನಾ ಆರೋಪಿಸಿದ್ದಾರೆ. “ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ ವಿಧಾನಗಳ ಮೂಲಕ ಅಧಿಕಾರ ವಹಿಸಿಕೊಂಡ ಮಹಮ್ಮದ್ ಯೂನಸ್ ಆಯೋಜಿಸಿದ ಇಂದಿನ ಚುನಾವಣೆಯು ಸಂವಿಧಾನಬಾಹಿರವಾಗಿದೆ. ಜನರ ಮತದಾನದ ಹಕ್ಕುಗಳು, ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಸಂವಿಧಾನವನ್ನು ಕಡೆಗಣಿಸಿ, ಅವಾಮಿ ಲೀಗ್ ಇಲ್ಲದೆ ಮತ್ತು ಮತದಾರರಿಲ್ಲದೆ ಚುನಾವಣೆಯನ್ನು ಏರ್ಪಡಿಸಲಾಗಿದೆ” ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:

ಸುಳ್ಳು ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು, ಎಲ್ಲಾ ರಾಜಕೀಯ ಕೈದಿಗಳು ಹಾಗೂ ಶಿಕ್ಷಕರು, ಪತ್ರಕರ್ತರು, ಬುದ್ಧಿಜೀವಿಗಳು ಮತ್ತು ವೃತ್ತಿಪರರನ್ನು ಬಿಡುಗಡೆ ಮಾಡಬೇಕು, ಅವಾಮಿ ಲೀಗ್‌ನ ಚಟುವಟಿಕೆಗಳ ಮೇಲೆ ವಿಧಿಸಲಾದ ಅಮಾನತು ತೆಗೆದುಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸರ್ಕಾರದ ಅಡಿಯಲ್ಲಿ ಮುಕ್ತ, ನ್ಯಾಯಯುತ ಮತ್ತು ಎಲ್ಲರನ್ನೂ ಒಳಗೊಂಡ ಚುನಾವಣೆಯನ್ನು ಏರ್ಪಡಿಸುವ ಮೂಲಕ ಜನರ ಮತದಾನದ ಹಕ್ಕುಗಳನ್ನು ಪುನಃಸ್ಥಾಪಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಬಾಂಗ್ಲಾದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಜನರ ಮತದಾನದ ಹಕ್ಕುಗಳು, ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಸಂವಿಧಾನವನ್ನು ಕಡೆಗಣಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವಾಮಿ ಲೀಗ್ ಬೆಂಬಲಿಗರು ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಿಕೊಂಡು ದಾಳಿಗಳು, ಬಂಧನಗಳು, ಬೆದರಿಕೆಗಳು ಮತ್ತು ಭಯದ ವಾತಾವರಣ ಕಂಡುಬಂದಿದೆ ಎಂದು ಶೇಖ್ ಹಸೀನಾ ಹೇಳಿದ್ದಾರೆ.

ಇದನ್ನೂ ಓದಿ: Bangladesh Elections 2026: ಬಾಂಗ್ಲಾದೇಶದಲ್ಲಿ ಇಂದು ಸಾರ್ವತ್ರಿಕ ಚುನಾವಣೆ, ಅವಾಮಿ ಲೀಗ್ ಸ್ಪರ್ಧೆಯಿಂದ ಹೊರಕ್ಕೆ

ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ತಾರಿಕ್ ರೆಹಮಾನ್ ಮುಂದಿನ ಸರ್ಕಾರವನ್ನು ರಚಿಸಲು ಪ್ರಮುಖ ಸ್ಪರ್ಧಿಯಾಗಿದ್ದಾರೆ. ಅವರು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರರಾಗಿದ್ದು, 17 ವರ್ಷಗಳ ಕಾಲ ಲಂಡನ್‌ನಲ್ಲಿದ್ದ ಅವರು ಕಳೆದ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳಿದರು. ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಪುನರ್ನಿರ್ಮಿಸಲು, ಕಾನೂನಿನ ನಿಯಮವನ್ನು ಪುನಃಸ್ಥಾಪಿಸಲು ಮತ್ತು ಹೆಣಗಾಡುತ್ತಿರುವ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ರೆಹಮಾನ್ ಪ್ರತಿಜ್ಞೆ ಮಾಡಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಬಾಲಿವುಡ್​ ಖಾನ್​​ಗಳ ಬುಡ ಅಲ್ಲಾಡಿಸುತ್ತಿರುವ ಮೂವರು ಸ್ಟಾರ್ ನಟರು – Kannada News | Ranbir, Ranveer and Vicky Kaushal giving tough fight to Bollywood Khans

ಬಾಲಿವುಡ್ (Bollywood) ಚಿತ್ರರಂಗದಲ್ಲಿ ಕಳೆದ ಮೂರು ದಶಕಗಳಿಂದ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ಅವರದ್ದೇ ಪಾರುಪತ್ಯ. ‘ದಿ ಥ್ರೀ ಖಾನ್ಸ್’ ಎಂದೇ ಅವರು ಖ್ಯಾತರು. ಆದರೆ ಸಮಯ ಬದಲಾಗುತ್ತಲೇ ಇರುತ್ತದೆ. ಇದೀಗ ಖಾನ್​​ಗಳ ಸ್ಥಾನವನ್ನು ಬೇರೆಯವರು ತುಂಬುವ ಸಮಯ ಸನಿಹ ಬಂದಂತೆ ತೋರುತ್ತಿದೆ. ಈಗಿನ ಕಾಲಘಟ್ಟದಲ್ಲಿ ಈ ‘ಮೂವರು ಖಾನ್’ಗಳ ಜನಪ್ರಿಯತೆಗೆ ಸರಿಸಮನಾಗಿ ಹೊಸ ತಲೆಮಾರಿನ ನಟರು ಬೆಳೆಯುತ್ತಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.

ಮೂವರು ಖಾನ್​​ಗಳಿಗೆ ಭಾರಿ ಪೈಪೋಟಿಯನ್ನು ನೀಡುತ್ತಿರುವ ಬಾಲಿವುಡ್ ನಟರೆಂದರೆ ರಣ್​​ಬೀರ್ ಕಪೂರ್, ವಿಕ್ಕಿ ಕೌಶಲ್ ಮತ್ತು ರಣ್ವೀರ್ ಸಿಂಗ್. ಈ ಮೂವರೂ ಸಹ ಕಳೆದ ಕೆಲ ವರ್ಷಗಳಲ್ಲಿ ಬಾಕ್ಸ್ ಆಫೀಸ್​​ನಲ್ಲಿ ಅಕ್ಷರಷಃ ಅಬ್ಬರಿಸುತ್ತಿದ್ದಾರೆ. ಈ ಬಗ್ಗೆ ಸ್ವತಃ ‘ಮಿಸ್ಟರ್ ಪರ್ಫೆಕ್ಟ್’ ಆಮಿರ್ ಖಾನ್ ಅವರು ಮುಕ್ತವಾಗಿ ಮಾತನಾಡಿದ್ದು, ರಣ್​​ಬೀರ್, ರಣ್ವೀರ್ ಮತ್ತು ವಿಕ್ಕಿ ಕೌಶಲ್​​ ಅವರ ಪ್ರತಿಭೆಯನ್ನು ಕೊಂಡಾಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಆಮಿರ್ ಖಾನ್, ರಣಬೀರ್ ಕಪೂರ್, ರಣವೀರ್ ಸಿಂಗ್ ಮತ್ತು ವಿಕ್ಕಿ ಕೌಶಲ್ ಅವರ ಅಭಿನಯ ಹಾಗೂ ಸಾಮರ್ಥ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ‘ಇಂದಿನ ಯುವ ನಟರು ಅತ್ಯಂತ ಪ್ರತಿಭಾವಂತರು. ಅವರು ಕೇವಲ ಸ್ಟಾರ್‌ಗಳಲ್ಲ, ಬದಲಿಗೆ ಅದ್ಭುತ ನಟರು’ ಎಂದಿದ್ದಾರೆ.

‘ಖಾನ್‌ಗಳ ಸ್ಥಾನವನ್ನು ಈ ಹೊಸಬರು ತುಂಬಬಲ್ಲರೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ಆಮೀರ್, ‘ಖಂಡಿತವಾಗಿಯೂ ಸಾಧ್ಯವಿದೆ. ರಣಬೀರ್ ಕಪೂರ್ ಈಗಾಗಲೇ ತಮ್ಮ ನಟನೆಯ ಮೂಲಕ ದೊಡ್ಡ ಮಟ್ಟದ ಹೆಸರು, ಪ್ರೇಕ್ಷಕರ ಮೇಲೆ ಪ್ರಭಾವ ಬೀರಿದ್ದಾರೆ. ರಣವೀರ್ ಸಿಂಗ್ ಅವರಲ್ಲಿರುವ ಎನರ್ಜಿ ಮತ್ತು ವಿಕ್ಕಿ ಕೌಶಲ್ ಅವರ ನಟನಾ ಕೌಶಲ ಅದ್ಭುತವಾಗಿದೆ. ಚಿತ್ರರಂಗದಲ್ಲಿ ಬದಲಾವಣೆ ಸಹಜ. ನಾವು (ಖಾನ್​​ಗಳು) ಸದಾಕಾಲ ಇಲ್ಲೇ ಇರುವುದಿಲ್ಲ. ನಮ್ಮ ನಂತರ ಈ ನಟರು ಉದ್ಯಮವನ್ನು ಮುನ್ನಡೆಸುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದ್ದಾರೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ದಕ್ಷಿಣದ ಆ ನಟ ನಟಿಯರನ್ನು ತೆರೆಮೇಲೂ ಕೀಳಾಗಿ ಕಾಣಲು ಇಷ್ಟಪಡಲ್ಲ; ಬಾಲಿವುಡ್ ನಟಿ

ಈ ಹಿಂದೆ ಸಿನಿರಂಗದಲ್ಲಿ ಖಾನ್‌ಗಳ ಚಿತ್ರಗಳು ಮಾತ್ರ ನೂರು-ನಾನೂರು ಕೋಟಿ ಗಳಿಸುತ್ತಿದ್ದವು. ಆದರೆ ಈಗ ರಣಬೀರ್ ಕಪೂರ್ ಅವರ ‘ಅನಿಮಲ್’ ನಂತಹ ಚಿತ್ರಗಳು ಸಾವಿರ ಕೋಟಿಯ ಗಡಿ ತಲುಪುತ್ತಿವೆ. ವಿಕ್ಕಿ ಕೌಶಲ್ ಅವರ ‘ಸ್ಯಾಮ್ ಬಹದ್ದೂರ್’ ಮತ್ತು ರಣವೀರ್ ಸಿಂಗ್ ಅವರ ವೈವಿಧ್ಯಮಯ ಪಾತ್ರಗಳು ಪ್ರೇಕ್ಷಕರ ಮನಗೆಲ್ಲುತ್ತಿವೆ. ಇದು ಬಾಲಿವುಡ್‌ನಲ್ಲಿ ಹೊಸ ಯುಗ ಆರಂಭವಾಗುತ್ತಿರುವುದರ ಮುನ್ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇತ್ತ ಖಾನ್​​ಗಳು ಅದರಲ್ಲೂ ಸಲ್ಮಾನ್ ಖಾನ್ ಮತ್ತು ಆಮಿರ್ ಖಾನ್ ಒಂದೇ ಒಂದು ಹಿಟ್ ನೀಡಲು ವರ್ಷಗಳಿಂದಲೂ ಒದ್ದಾಡುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಪ್ರತಿ ಸಿನಿಮಾ ಮೂಲಕ ಬಾಕ್ಸ್​ ಆಫೀನ್​​ ಅನ್ನು ನಡುಗಿಸುತ್ತಿದ್ದ ಸಲ್ಮಾನ್ ಖಾನ್​ ಈಗ ಒಂದೇ ಒಂದು ಹಿಟ್ ಸಿನಿಮಾಕ್ಕಾಗಿ ಪರದಾಡುತ್ತಿದ್ದಾರೆ. ಆಮಿರ್ ಖಾನ್​ ಸಹ ‘ದಂಗಲ್’ ಬಳಿಕ ದೊಡ್ಡ ಹಿಟ್ ನೋಡಿಯೇ ಇಲ್ಲ. ಶಾರುಖ್ ಖಾನ್ ಮಾತ್ರ ‘ಜವಾನ್’, ‘ಪಠಾಣ್’ ಸಿನಿಮಾಗಳ ಮೂಲಕ ದೊಡ್ಡ ಹಿಟ್ ನೀಡಿದರಾದರೂ ಅವರಿಗೂ ಮುಂದಿನ ದಿನಗಳು ಸುಲಭವಾಗಂತೂ ಇಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಬೆಂಗಳೂರಿನಲ್ಲೇ ನಡೆಯಲಿವೆ ಆರ್​ಸಿಬಿ ಪಂದ್ಯಗಳು; ಗ್ರೀನ್ ಸಿಗ್ನಲ್ ನೀಡಿದ ಸರ್ಕಾರ – Kannada News | Karnataka Govt Approves Chinnaswamy for RCB IPL 2026 Home Matches, Ends Dispute

2026 ರ ಐಪಿಎಲ್ ಮಾರ್ಚ್​ ಅಂತ್ಯದಲ್ಲಿ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತವರು ಪಂದ್ಯಗಳನ್ನು ಎಲ್ಲಿ ಆಡಲಿದೆ ಎಂಬುದು ಇದುವರೆಗು ಖಚಿತವಾಗಿರಲಿಲ್ಲ. ಇದಕ್ಕೆ ಕಾರಣ ಆರ್​ಸಿಬಿ ಫ್ರಾಂಚೈಸಿ ಹಾಗೂ ರಾಜ್ಯ ಸರ್ಕಾರದ ನಡುವಿನ ಮುಸುಕಿನ ಗುದ್ದಾಟ. ಇದೀಗ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಂಡಿರುವಂತೆ ಕಾಣುತ್ತಿದ್ದು, ಆರ್​ಸಿಬಿ ತಂಡ ತನ್ನ ತವರು ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ಇಂದು ನಡೆದ ಸಚಿವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಸರ್ಕಾರದ ಈ ನಿರ್ಧಾರ ಆರ್​ಸಿಬಿ ಅಭಿಮಾನಿಗಳನ್ನು ಸಂತಸದ ಅಲೆಯಲ್ಲಿ ಮಿಂದೇಳುವಂತೆ ಮಾಡಿದೆ.

Source link

‘ಟಾಕ್ಸಿಕ್’ಗಾಗಿ ಒಂದಾದ ‘ಕೆಜಿಎಫ್’ ಜೋಡಿ: ಉತ್ತರದ ಹಕ್ಕು ಭಾರಿ ಮೊತ್ತಕ್ಕೆ ಡೀಲ್ – Kannada News | Toxic movie North India distribution right sold to AA Films

ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಇದೀಗ ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ವಿತರಣೆ ಹಕ್ಕುಗಳ ಮಾರಾಟದಲ್ಲಿ ಸಿನಿಮಾದ ಸಹ ನಿರ್ಮಾಪಕ ಯಶ್ ಮತ್ತು ಮತ್ತೊಬ್ಬ ನಿರ್ಮಾಪಕ ಕೆವಿಎನ್ ಅವರು ತೊಡಗಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಆಂಧ್ರ ಮತ್ತು ತೆಲಂಗಾಣ ವಿತರಣೆ ಹಕ್ಕು ದಾಖಲೆಯ ಮೊತ್ತಕ್ಕೆ ಮಾರಾಟ ಆಗಿದೆ. ಇದೀಗ ಬಹು ಮುಖ್ಯವಾದ ಉತ್ತರ ಭಾರತದ ಹಕ್ಕು ಮಾರಾಟ ಪ್ರಕ್ರಿಯೆ ನಡೆದಿದ್ದು, ಯಶ್ ತಮ್ಮ ಹಳೆಯ ಗೆಳೆಯರೊಟ್ಟಿಗೆ ಮತ್ತೊಮ್ಮೆ ಕೈ ಜೋಡಿಸಿದ್ದಾರೆ.

‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾವನ್ನು ಉತ್ತರ ಭಾರತದಲ್ಲಿ ಅನಿಲ್ ತಡಾನಿ ಅವರ ‘ಎಎ ಫಿಲ್ಮ್ಸ್’ ಯಶಸ್ವಿಯಾಗಿ ವಿತರಣೆ ಮಾಡಿತ್ತು. ‘ಕೆಜಿಎಫ್’ ಸಿನಿಮಾ ಸರಣಿಯ ಯಶಸ್ವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು. ಇದೇ ಕಾರಣಕ್ಕೆ ಇದೀಗ ‘ಟಾಕ್ಸಿಕ್’ ಸಿನಿಮಾವನ್ನು ಸಹ ಎಎ ಫಿಲಮ್ಸ್ ಅವರಿಗೇ ನೀಡಿದ್ದಾರೆ ಯಶ್.

ಕೆಜಿಎಫ್ ಚಾಪ್ಟರ್ 1 ಮತ್ತು 2 ಚಿತ್ರಗಳನ್ನು ಉತ್ತರ ಭಾರತ ಮತ್ತು ನೇಪಾಳದ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟಕ್ಕೆ ಕೊಂಡೊಯ್ದ ಹೆಗ್ಗಳಿಕೆ ಅನಿಲ್ ತಡಾನಿ ಅವರದ್ದು. ಈಗ ‘ಟಾಕ್ಸಿಕ್’ ಚಿತ್ರದ ವಿತರಣೆಯನ್ನು ಸಹ ಅವರೇ ವಹಿಸಿಕೊಂಡಿರುವುದರಿಂದ, ಉತ್ತರ ಭಾರತದಲ್ಲಿ ಈ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗುವುದು ಪಕ್ಕಾ ಎನ್ನಲಾಗುತ್ತಿದೆ. ಈ ಮೂಲಕ ಯಶ್ ಮತ್ತು ಅನಿಲ್ ತಡಾನಿ ಜೋಡಿ ಹ್ಯಾಟ್ರಿಕ್ ಯಶಸ್ಸಿನ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ:ಯಶ್, ರಣ್​​ಬೀರ್ ನಟನೆಯ ‘ರಾಮಾಯಣ’ಕ್ಕೆ ಯುವ ಸ್ಟಾರ್ ಎಂಟ್ರಿ

ಉತ್ತರ ಭಾರತ ಮತ್ತು ನೇಪಾಳದಲ್ಲಿ ‘ಟಾಕ್ಸಿಕ್’ ಸಿನಿಮಾವನ್ನು ಎಎ ಫಿಲ್ಮ್ಸ್ ನ ಅನಿಲ್ ತಡಾನಿ ಮಾಡಲಿದ್ದಾರೆ. ತೆಲುಗು ರಾಜ್ಯಗಳಾದ ಆಂಧ್ರ ಮತ್ತು ತೆಲಂಗಾಣದಲ್ಲಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ನ ದಿಲ್ ರಾಜು ವಿತರಣೆ ಮಾಡಲಿದ್ದಾರೆ. ಇನ್ನು ವಿದೇಶದ ವಿತರಣೆ ಹಕ್ಕನ್ನು ಫಾರ್ಸ್ ಫಿಲ್ಮ್ಸ್ ಗೆ ಮಾರಾಟ ಮಾಡಲಾಗಿದೆ. ಮೂರು ಕಡೆಯು ದಾಖಲೆಯ ಮೊತ್ತಕ್ಕೆ ಸಿನಿಮಾದ ವಿತರಣೆ ಹಕ್ಕುಗಳನ್ನು ಮಾರಾಟ ಮಾಡಲಾಗಿದೆ ಎನ್ನಲಾಗುತ್ತಿದೆ.

‘ಟಾಕ್ಸಿಕ್’ ಸಿನಿಮಾವು ಮಾರ್ಚ್ 19 ರಂದು ಬಿಡುಗಡೆ ಆಗಲಿದೆ. ಅದೇ ದಿನ ‘ಧುರಂಧರ್ 2’ ಸಿನಿಮಾ ಸಹ ಬಿಡುಗಡೆ ಆಗಲಿದೆ. ಹಾಗಿದ್ದರೂ ಸಹ ಉತ್ತರ ಭಾರತದ ವಿತರಣೆ ಹಕ್ಕುಗಳು ದೊಡ್ಡ ಮೊತ್ತಕ್ಕೆ ಮಾರಾಟ ಆಗಿರುವುದು ವಿತರಕರಿಗೆ ‘ಟಾಕ್ಸಿಕ್’ ಮೇಲಿರುವ ನಂಬಿಕೆಯನ್ನು ತೋರಿಸುತ್ತಿದೆ. ಗೀತು ಮೋಹನ್​ದಾಸ್ ನಿರ್ದೇಶನ ಮಾಡಿರುವ ಯಶ್ ಜೊತೆಗೆ ಈ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ಕನ್ನಡಿಗರಿಗೆ ಪ್ರಿಯರಾದ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಳ್ಳುತ್ತಿರುವ ಈ ಸಿನಿಮಾ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ತೆರೆಕಾಣಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:53 pm, Thu, 12 February 26

Source link

ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು: ಎಕ್ಸ್ ಕ್ಲೂಸಿವ್​ ದೃಶ್ಯ

ಬೆಂಗಳೂರು, ಫೆಬ್ರವರಿ 12: ಬಿಕ್ಲು ಶಿವ ಮರ್ಡರ್‌ ಕೇಸ್‌ನ ಬಲೆಯಲ್ಲಿ ಸಿಲುಕಿದ್ದ ಶಾಸಕ ಭೈರತಿ ಬಸವರಾಜ್ ಲಾಕ್ ಆಗಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ನಿರಾಕರಣೆಯಾಗ್ತಿದ್ದಂತೆ ಬೇರೆ ದಾರಿಯಿಲ್ಲದೇ ಶರಣಾಗಲು ಬರ್ತಿದ್ದ ಬಿಜೆಪಿ ಶಾಸಕನನ್ನ ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ವಶಕ್ಕೆ ಪಡೆಯಲಾಗಿದೆ. ಸದ್ಯ ದೇವನಹಳ್ಳಿ ಪೊಲೀಸರು ಭೈರತಿ ಬಸವರಾಜ್​ರನ್ನು ಸಿಐಡಿ ಕಚೇರಿಗೆ ಕರೆದುಕೊಂಡು ಬಂದಿದ್ದು, ಅರೆಸ್ಟ್​ ಪ್ರಕ್ರಿಯೆಗಳು ನಡೆದಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಮಕ್ಕಳು ಮೊಬೈಲ್, ಟಿವಿ ಮುಂದೆ ಕುಳಿತುಕೊಳ್ಳುವುದನ್ನು ತಡೆಯಲು ಈ ರೀತಿ ಮಾಡಿ – Kannada News | Phone Addiction: How Screen Time Affects Development

ಮಕ್ಕಳಿಗೆ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಮೊಬೈಲ್ (Phone Addiction) ಕೊಡುವುದರಿಂದ ಅವರ ಮಾನಸಿಕ ಹಾಗೂ ಶಾರೀರಿಕ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಅದರಲ್ಲಿಯೂ ಕೆಲ ಮಕ್ಕಳು ಈ ಮೊಬೈಲ್‌ಗಳಿಗೆ ಎಷ್ಟು ಅಡಿಕ್ಟ್ ಆಗಿಬಿಬಿಟ್ಟಿದ್ದಾರೆ ಎಂದರೆ ತಾಯಿ, ತಂದೆಗೂ ಸಮಯ ಕೊಡುತ್ತಿಲ್ಲ. ಮೊಬೈಲ್ ಕಸಿದರೆ ಕೋಪ, ಅಸಹನೆ ಹಾಗೂ ಮಾನಸಿಕ ಒತ್ತಡ ತೋರಿಸುತ್ತಿದ್ದಾರೆ. ಈ ಮೊಬೈಲ್ ಫೋನ್ ಮತ್ತು ಟಿವಿ ಮಕ್ಕಳಿಂದ ಬಾಲ್ಯವನ್ನೇ ಕಸಿದುಕೊಳ್ಳುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಈಗಿನ ಮಕ್ಕಳು ಹೊರಗೆ ಆಟವಾಡುವ ಬದಲು, ಟಿವಿ ನೋಡುತ್ತಾ, ಫೋನ್‌ ಬಳಸುತ್ತಾ ಸಮಯ ಕಳೆಯುತ್ತಾರೆ. ಇದು ಅವರ ಮಾನಸಿಕ (Mental Health) ಮತ್ತು ದೈಹಿಕ ಬೆಳವಣಿಗೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ಹಾಗಾದರೆ ಈ ಸಮಸ್ಯೆಯನ್ನು ತಡೆಯುವುದು ಹೇಗೆ, ಈ ಬಗ್ಗೆ ವೈದ್ಯರ ಅಭಿಪ್ರಾಯವೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನ್ಯೂರೋ ಕೇರ್ ಸೆಂಟರ್‌ನ ಡಾ. ಜೋಲಿ ಜೈನ್ ಗುಪ್ತಾ ಹೇಳುವ ಪ್ರಕಾರ, ಸಾಮಾನ್ಯವಾಗಿ ಈಗಿನ ತಾಯಿ, ತಂದೆ ಮಕ್ಕಳಿಗೆ ಸಾಕಷ್ಟು ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಮಕ್ಕಳನ್ನು ಶಾಂತವಾಗಿರಿಸಲು ಮೊಬೈಲ್ ಅಥವಾ ಟಿವಿ ಮುಂದೆ ಕೂರಿಸುತ್ತಾರೆ. ಇದರಿಂದ ಮಕ್ಕಳ ಮಾನಸಿಕ ಸಮತೋಲನ ಹದಗೆಡುತ್ತದೆ. ಅಷ್ಟು ಮಾತ್ರವಲ್ಲ, ಸಾಮಾಜಿಕ ಮತ್ತು ದೈಹಿಕ ಬೆಳವಣಿಗೆ ಕೂಡ ಕುಂಠಿತವಾಗಬಹುದು. ಆಟ, ಕ್ರೀಡೆಗಳಂತಹ ಸ್ವಾಭಾವಿಕ ಚಟುವಟಿಕೆ ಕೂಡ ಕಡಿಮೆಯಾಗುತ್ತಿವೆ. ಹಾಗಾಗಿ ಮಕ್ಕಳ ಜೊತೆಗೆ ಪೋಷಕರಾದವರು ತಮಗೆ ತಾವೇ ಕಟ್ಟುನಿಟ್ಟಿನ ಬೆಲಿ ಹಾಕಿಕೊಂಡು ಕೆಲವು ಸಲಹೆಗಳನ್ನು ಪಾಲಿಸುವುದು ಉತ್ತಮ.

ಇದನ್ನೂ ಓದಿ: 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಮಾನಸಿಕ ಕಾಯಿಲೆ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು?

ಮಕ್ಕಳಿಗೆ ಕಟ್ಟುನಿಟ್ಟಿನ ಸಲಹೆ:

2 ವರ್ಷದವರೆಗಿನ ಮಕ್ಕಳನ್ನು ಪೂರ್ಣವಾಗಿ ಮೊಬೈಲ್‌ನಿಂದ ದೂರವಿಡಬೇಕು. ವೀಡಿಯೋ ಕಾಲ್ ಕೂಡ ಮಾಡಿಸಬಾರದು. ಈ ವಯಸ್ಸಿನಲ್ಲಿ ಸ್ಕ್ರೀನ್ ಬಳಕೆ ಮೆದುಳಿನ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. 2 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಸ್ಕ್ರೀನ್ ಟೈಮ್ ಬಹಳ ಕಡಿಮೆ ಇರಬೇಕು. ಓದಿಗಾಗಿ ಬಳಸಿದರೂ ದಿನಕ್ಕೆ 15 ನಿಮಿಷಕ್ಕಿಂತ ಹೆಚ್ಚು ಕೊಡಬಾರದು. ಗೇಮ್‌, ವೀಡಿಯೊ ಮತ್ತು ರೀಲ್ಸ್‌ಗಳಿಂದ ದೂರವಿಡಬೇಕು. ಇದೆಲ್ಲದರ ಜೊತೆಗೆ ಮೊಬೈಲ್ ಬಳಸುವ ಸಮಯವನ್ನು ನಿಗದಿಪಡಿಸಬೇಕು.

ತಾಯಿ, ತಂದೆ ಈ ಸಲಹೆಗಳನ್ನು ಪಾಲಿಸಬೇಕು:

  • ಪ್ರತಿದಿನ ಆದಷ್ಟು ಮಕ್ಕಳೊಂದಿಗೆ ಸಮಯ ಕಳೆಯಿರಿ.
  • ಹೊರಾಂಗಣ ಆಟಗಳನ್ನು ಆಡುವುದಕ್ಕೆ ಪ್ರೋತ್ಸಾಹ ನೀಡಿ.
  • ಮನೆಯಲ್ಲಿ “ನೋ- ಫೋನ್ ಟೈಮ್” ನಿಗದಿಪಡಿಸಿ.
  • ನೀವು ಸಹ ಸ್ಕ್ರೀನ್ ಬಳಕೆಯನ್ನು ಕಡಿಮೆ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಶಾ ಫೌಂಡೇಷನ್​​ನಲ್ಲಿ ಸದ್ಗುರು ಜೊತೆ ಶಿವರಾತ್ರಿ ಆಚರಿಸಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ – Kannada News | Mahashivratri 2026 Defence Minister Rajnath Singh to be Chief guest at Sadhgurus Isha Foundation grand event

ಕೊಯಮತ್ತೂರು, ಫೆಬ್ರವರಿ 12: ಈ ವರ್ಷ ಫೆಬ್ರವರಿ 15ರಂದು ಮಹಾ ಶಿವರಾತ್ರಿ (Maha Shivaratri 2026) ನಡೆಯಲಿದೆ. ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ನಡೆಯುವ ಈ ಬಾರಿಯ ಉತ್ಸವದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸಂಸದೀಯ ವ್ಯವಹಾರಗಳ ಸಚಿವ ಎಲ್. ಮುರುಗನ್ ಮತ್ತು ಇತರ ಗಣ್ಯರು ಕೂಡ ಪಾಲ್ಗೊಳ್ಳಲಿದ್ದಾರೆ. ಮಹಾ ಶಿವರಾತ್ರಿ ಉತ್ಸವವು ಫೆ. 15ರಂದು ಸಂಜೆ 6 ಗಂಟೆಯಿಂದ ಮರುದಿನ ಬೆಳಿಗ್ಗೆ 6 ಗಂಟೆಯವರೆಗೆ ನಡೆಯಲಿದೆ. ಈ ವೇಳೆ ಧ್ಯಾನ, ಮಂತ್ರ ಪಠಣ, ಯೋಗೇಶ್ವರಲಿಂಗ ಮಹಾ ಅಭಿಷೇಕ ಮತ್ತು ಅತ್ಯುತ್ತಮ ಕಲಾವಿದರಿಂದ ಸಂಗೀತ ಪ್ರದರ್ಶನಗಳು ನಡೆಯಲಿವೆ.

ಈ ಮಹಾ ಶಿವರಾತ್ರಿ ಉತ್ಸವದ ಕುರಿತು ಇಂದು ಕೊಯಮತ್ತೂರು ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ದಕ್ಷಿಣ ಕೈಲಾಯ ಭಕ್ತಿ ಪೆರವೈ ಸ್ವಯಂಸೇವಕ ರವೀಂದ್ರನ್ ಮತ್ತು ಸ್ವಯಂಸೇವಕ ಸರವಣನ್ ಭಾಗವಹಿಸಿ ಮಾತನಾಡಿದರು. “32ನೇ ಮಹಾ ಶಿವರಾತ್ರಿ ಹಬ್ಬವನ್ನು ಫೆ. 15ರಂದು ಇಶಾ ಯೋಗ ಕೇಂದ್ರದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಪ್ರಮುಖ ವ್ಯಕ್ತಿಗಳು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಲಕ್ಷಾಂತರ ಜನರು ಸಹ ಇದರಲ್ಲಿ ಭಾಗವಹಿಸಲಿದ್ದಾರೆ” ಎಂದು ಅವರು ಹೇಳಿದರು.


ಇದನ್ನೂ ಓದಿ: Maha Shivratri: ಇಶಾ ಫೌಂಡೇಶನ್‌ನಲ್ಲಿ ಸದ್ಗುರು ಜೊತೆ ಶಿವರಾತ್ರಿಯಲ್ಲಿ ಅಮಿತ್ ಶಾ ಭಾಗಿ

“ಇದಲ್ಲದೆ, ಈ ವರ್ಷ ಮೊದಲ ಬಾರಿಗೆ, ಸದ್ಗುರು ಆದಿಯೋಗಿ ಈ ಹಿಂದೆ ಸ್ಥಾಪಿಸಲಾದ ಯೋಗೇಶ್ವರ ಲಿಂಗಕ್ಕೆ ಮಹಾ ಅಭಿಷೇಕದ ಆಧ್ಯಾತ್ಮಿಕ ಕಾರ್ಯವನ್ನು ಮಾಡಲಿದ್ದಾರೆ” ಎಂದು ಅವರು ತಿಳಿಸಿದರು.

ಇಶಾದಲ್ಲಿ ನಡೆಯುವ ಮಹಾ ಶಿವರಾತ್ರಿ ಉತ್ಸವವನ್ನು ತಮಿಳುನಾಡಿನ 60 ಸ್ಥಳಗಳು ಮತ್ತು ಕೇರಳದ 29 ದೇವಾಲಯಗಳು ಸೇರಿದಂತೆ ಭಾರತದಾದ್ಯಂತ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ನೇರ ಪ್ರಸಾರ ಮಾಡಲಾಗುವುದು. ಹಾಗೇ, ಇಶಾ ಫೌಂಡೇಷನ್​ನ ಯೂಟ್ಯೂಬ್ ಚಾನೆಲ್​ನಲ್ಲಿ ಕೂಡ ಇದರ ನೇರ ಪ್ರಸಾರ ಇರಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಊಟಕ್ಕೆ ಬಂದವರನ್ನು ಜೈಲಿಗೆ ಕಳಿಸುವ ಟಾಲಿವುಡ್ ನಟ ಧರ್ಮ ಮಹೇಶ್: ಏನಿದು ಕಥೆ? – Kannada News | Telugu actor Dharma Mahesh introduces Jismat Jail Mandi in Bengaluru

ತೆಲುಗು ಚಿತ್ರರಂಗದ ನಟ ಧರ್ಮ ಮಹೇಶ್ (Dharma Mahesh) ಅವರು ‘ಸಿಂಧೂರಂ’, ‘ಡ್ರಿಂಕರ್ ಸಾಯಿ’ ಮುಂತಾದ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಸಿನಿಮಾದ ಜೊತೆಗೆ ಉದ್ಯಮದಲ್ಲೂ ಅವರು ಆಸಕ್ತಿ ಹೊಂದಿದ್ದಾರೆ. ‘ಜಿಸ್ಮತ್’ ಹೆಸರಿನ ರೆಸ್ಟೋರೆಂಟ್ (Restaurant) ನಡೆಸುವ ಅವರು ಹೊಸ ರೀತಿಯ ಪ್ರಯೋಗದ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಬೆಂಗಳೂರಿನಲ್ಲಿ ಕೂಡ ಧರ್ಮ ಮಹೇಶ್ ಒಡೆತನದ ‘ಜಿಸ್ಮತ್ ಜೈಲ್ ಮಂಡಿ’ (Jismat Jail Mandi) ರೆಸ್ಟೋರೆಂಟ್ ಇದೆ. ಇಲ್ಲಿಗೆ ಬಂದವರು ಜೈಲಿಗೆ ಹೋಗುವುದು ಗ್ಯಾರಂಟಿ!

ಅಸಲಿ ವಿಷಯ ಏನೆಂದರೆ, ಧರ್ಮ ಮಹೇಶ್ ಅವರು ನಡೆಸುತ್ತಿರುವ ಈ ರೆಸ್ಟೋರೆಂಟ್ ಥೀಮ್ ಈ ರೀತಿ ಆಗಿದೆ. ಸಂಪೂರ್ಣ ಜೈಲಿನ ರೀತಿಯಲ್ಲಿ ಈ ರೆಸ್ಟೋರೆಂಟ್ ವಿನ್ಯಾಸಗೊಂಡಿದೆ. ಇಲ್ಲಿಗೆ ಊಟಕ್ಕೆ ಬಂದವರನ್ನು ಜೈಲಿನ ಸೆಲ್​​ನಲ್ಲಿ ಕೂರಿಸಿ ಬಗೆಬಗೆಯ ನಾನ್-ವೆಜ್ ಊಟ ಬಡಿಸಲಾಗುತ್ತದೆ. ರೆಸ್ಟೋರೆಂಟ್ ಸಿಬ್ಬಂದಿ ಕೂಡ ಕೈದಿಗಳ ರೀತಿಯಲ್ಲಿ ಡ್ರೆಸ್ ಮಾಡಿಕೊಂಡಿರುತ್ತಾರೆ!

ಇಂಥ ವಿಭಿನ್ನ ಥೀಮ್ ಪರಿಚಯಿಸಿದ ಕಾರಣಕ್ಕೆ ನಟ ಧರ್ಮ ಮಹೇಶ್ ಅವರ ‘ಜಿಸ್ಮತ್ ಜೈಲ್ ಮಂಡಿ’ ಬೆಂಗಳೂರಿಗರ ಗಮನ ಸೆಳೆಯುತ್ತಿದೆ. ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ‘ಜಿಸ್ಮತ್ ಜೈಲ್ ಮಂಡಿ’ ಹೊಸ ಖಾತೆ ಇತ್ತೀಚೆಗೆ ಆರಂಭ ಆಯಿತು. ಈ ಸಂಭ್ರಮದಲ್ಲಿ ಧರ್ಮ ಮಹೇಶ್ ಭಾಗಿ ಆಗಿದ್ದರು.

ಈ ಮೊದಲು ಗುಂಟೂರು ಮತ್ತು ಹೈದರಾಬಾದ್​​ನಲ್ಲಿ ಮಾತ್ರ ‘ಜಿಸ್ಮತ್ ಜೈಲ್ ಮಂಡಿ’ ಇತ್ತು. ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮಾತ್ರವಲ್ಲದೇ ಬೇರೆ ರಾಜ್ಯಗಳ ಜನರಿಗೆ ಜೈಲೂಟದ ರುಚಿ ತೋರಿಸುವ ಸಲುವಾಗಿ ಧರ್ಮ ಮಹೇಶ್ ಅವರು ಬೇರೆ ಬೇರೆ ನಗರಗಳಲ್ಲಿ ಖಾತೆ ಆರಂಭಿಸುತ್ತಿದ್ದಾರೆ. ಅದರ ಮೊದಲ ಹೆಜ್ಜೆ ಎಂಬಂತೆ ಬೆಂಗಳೂರಿನಲ್ಲಿ ಶುರು ಮಾಡಿದ್ದಾರೆ.

ಇದನ್ನೂ ಓದಿ: ಈ ರೆಸ್ಟೋರೆಂಟ್​​ಗೆ ಹೋದರೆ ನಿಮ್ಮ ಮೊಬೈಲ್ ಬುಟ್ಟಿಗೆ ಹಾಕಬೇಕು!

ಧರ್ಮ ಮಹೇಶ್ ಅವರಿಗೆ ಬೆಂಗಳೂರಿನ ಬಗ್ಗೆ ವಿಶೇಷ ಪ್ರೀತಿ ಇದೆ. ಆ ಬಗ್ಗೆ ಅವರು ಮಾತನಾಡಿದ್ದಾರೆ. ‘ನನ್ನ ಹೃದಯದಲ್ಲಿ ಈ ಊರಿಗೆ ವಿಶೇಷ ಸ್ಥಾನ ಇದೆ. 8ನೇ ತರಗತಿಯಲ್ಲಿ ಓದುತ್ತಿದ್ದಾಗ ನಾನು ನೋಡಿದ ಮೊದಲ ಮೆಟ್ರೋಪಾಲಿಟನ್ ಸಿಟಿ ಎಂದರೆ ಅದು ಬೆಂಗಳೂರು. ಆ ನೆನಪು ನನ್ನ ಮನಸ್ಸಿನಲ್ಲಿ ಹಸಿರಾಗಿದೆ’ ಎಂದು ಧರ್ಮ ಮಹೇಶ್ ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version