Video:ಮಗಳು ಕಾಣೆಯಾಗಿದ್ದಾಳೆ ಸ್ವಾಮಿ ಹುಡುಕಿಕೊಡಿ ಅಂದ್ರೆ, ಗಾಡೀಲಿ ಡೀಸೆಲ್​ ಇಲ್ಲ ಹಣ ಕೊಡಿ ಎಂದ ಪೊಲೀಸ್ ಇನ್​ಸ್ಪೆಕ್ಟರ್ – Kannada News | Viral Video Puts Nagpur Police Under Scrutiny in Missing Girl Case

ನಾಗ್ಪುರ, ಮೇ 21: ಮಹಾರಾಷ್ಟ್ರದ ನಾಗ್ಪುರದಲ್ಲಿ ಇಡೀ ಪೊಲೀಸ್ ವ್ಯವಸ್ಥೆಯೇ ತಲೆತಗ್ಗಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಪಂಚಪಾವೋಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರದಿಂದ ಅಪ್ರಾಪ್ತ ಬಾಲಕಿಯೊಬ್ಬಳು ಕಾಣೆಯಾಗಿದ್ದಳು. ಗಾಬರಿಗೊಂಡ ಕುಟುಂಬಸ್ಥರು ತಕ್ಷಣವೇ ದೂರು ನೀಡಲು ಠಾಣೆಗೆ ಓಡಿ ಬಂದಾಗ, ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಬಾಬುರಾವ್ ರಾವತ್ ಅವರು, ನಮ್ಮ ವಾಹನದಲ್ಲಿ ಡೀಸೆಲ್ ಇಲ್ಲ, ನಿಮ್ಮ ಮಗಳನ್ನು ಹುಡುಕಬೇಕಾದರೆ ಇಂಧನಕ್ಕೆ ಹಣ ಕೊಡಿ ಎಂದು ಉಡಾಫೆಯಾಗಿ ಹೇಳಿದ್ದಾರೆ.

ಈ ದಿಗ್ಭ್ರಮೆಗೊಳಿಸುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಯಿತು. ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ಈ ವಿಡಿಯೋವನ್ನು ಹಂಚಿಕೊಂಡು, ಇದು ವ್ಯವಸ್ಥೆಯ ಕುಸಿತ. ಗೃಹ ಸಚಿವರ ತವರು ಜಿಲ್ಲೆಯಲ್ಲೇ ಇಂತಹ ಪರಿಸ್ಥಿತಿ ಇರುವುದೇ? ಎಂದು ಮಹಾರಾಷ್ಟ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಪ್ರಚಾರಕ್ಕೆ ಕೋಟಿ ಕೋಟಿ ಖರ್ಚು ಮಾಡುವ ಸರ್ಕಾರ, ತುರ್ತು ಸೇವೆಗಳಿಗೆ ಇಂಧನ ನೀಡುತ್ತಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಈ ಘಟನೆ ತೀವ್ರ ರಾಜಕೀಯ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಹಿರಿಯ ಅಧಿಕಾರಿಗಳು, ಬೇಜವಾಬ್ದಾರಿ ತೋರಿದ ಇನ್ಸ್‌ಪೆಕ್ಟರ್ ಬಾಬುರಾವ್ ರಾವತ್ ಅವರನ್ನು ತಕ್ಷಣವೇ ಕಂಟ್ರೋಲ್ ರೂಮ್‌ಗೆ ವರ್ಗಾಯಿಸಿ ತನಿಖೆಗೆ ಆದೇಶಿಸಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಪೊಲೀಸ್ ಅಧಿಕಾರಿಗೆ ಹಣ ಕೊಡುತ್ತಿರುವುದನ್ನು ಕಾಣಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *