ಟೀಂ ಇಂಡಿಯಾ ಆಟಗಾರ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ರೋಹಿತ್ ಶರ್ಮ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರ ಬದಲಾವಣೆ. ಈ ಮೊದಲು ಅವರ ದೇಹದ ಕಾರಣಕ್ಕೆ ಟೀಕೆ ಮಾಡಲಾಗುತ್ತಿತ್ತು. ಅವರಿಗೆ ಹೊಟ್ಟೆ ಇದೆ, ವಡಾಪಾವ್ ತಿಂತಾರೆ ಎಂದೆಲ್ಲ ಟೀಕಿಸಲಾಗಿತ್ತು. ಆದರೆ, ಈಗ ಅವರ ದೇಹದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಫಿಟ್ನೆಸ್ಗೆ ತುಂಬಾನೇ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇದನ್ನು ನೋಡಿ ನೀತಾ ಅಂಬಾನಿ ಕೂಡ ಶಾಕ್ ಆಗಿದ್ದಾರೆ.
ಈಗಾಗಲೇ ಟೆಸ್ಟ್ ಹಾಗೂ ಟಿ20ಗೆ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ದಾರೆ. ಅವರು ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ. ಅವರು ಈಗ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸಿದಂತೆ ಕಾಣಿಸುತ್ತಿದೆ. ‘ನಿಮ್ಮನ್ನು ನೋಡಿದ್ರೆ ಯಂಗ್ ಬಾಯ್ ರೀತಿ ಕಾಣಿಸ್ತೀರಾ’ ಎಂದು ನೀತಾ ಹೇಳಿರುವ ವಿಡಿಯೋ ಗಮನ ಸೆಳೆದಿದೆ. ಐಪಿಎಲ್ ಆರಂಭದ ಸಂದರ್ಭದಲ್ಲಿ ರೋಹಿತ್ ಪ್ರ್ಯಾಕ್ಟಿಸ್ ನಡೆಸುತ್ತಿದ್ದಾರೆ.
ಭಾರತೀಯ ರೈಲ್ವೆ ನೇಮಕಾತಿಮಂಡಳಿಯು (RRB) ದೇಶದಾದ್ಯಂತ ಯುವಜನತೆಗೆ ದೊಡ್ಡ ಮಟ್ಟದ ಉದ್ಯೋಗಾವಕಾಶವನ್ನು ಕಲ್ಪಿಸಿದೆ. ರೈಲ್ವೆ ಇಲಾಖೆಯ ವಿವಿಧ ವಲಯಗಳಲ್ಲಿ ಖಾಲಿ ಇರುವ ಒಟ್ಟು 11,127 ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಈ ನೇಮಕಾತಿಯು ಬೆಂಗಳೂರು, ಸಿಕಂದರಾಬಾದ್, ಮುಂಬೈ, ಚೆನ್ನೈ ಸೇರಿದಂತೆ ದೇಶದ ಪ್ರಮುಖ 21 ರೈಲ್ವೆ ಮಂಡಳಿಗಳ ವ್ಯಾಪ್ತಿಯಲ್ಲಿ ನಡೆಯಲಿದ್ದು, ಬೃಹತ್ ಸಂಖ್ಯೆಯ ಹುದ್ದೆಗಳು ಲಭ್ಯವಿರುವುದು ವಿಶೇಷವಾಗಿದೆ.
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:
ಈ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ಇದರೊಂದಿಗೆ ಸಂಬಂಧಪಟ್ಟ ಟ್ರೇಡ್ಗಳಲ್ಲಿ ಐಟಿಐ (ITI) ಅಥವಾ ಡಿಪ್ಲೊಮಾ ವಿದ್ಯಾರ್ಹತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳ ವಯೋಮಿತಿಯನ್ನು ಜುಲೈ 1, 2026 ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷಗಳ ನಡುವೆ ನಿಗದಿಪಡಿಸಲಾಗಿದೆ. ಸರ್ಕಾರದ ನಿಯಮದಂತೆ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ.
ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು ಮೇ 15 ರಿಂದ ಆರಂಭವಾಗಲಿದ್ದು, ಆಸಕ್ತರು ಜೂನ್ 14 ರೊಳಗೆ ತಮ್ಮ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಆರಂಭಿಕ ವೇತನವು ತಿಂಗಳಿಗೆ ರೂ. 19,900 ರಿಂದ ಪ್ರಾರಂಭವಾಗಲಿದ್ದು, ಇದರೊಂದಿಗೆ ಕೇಂದ್ರ ಸರ್ಕಾರದ ಇತರೆ ಎಲ್ಲಾ ಭತ್ಯೆಗಳು ಮತ್ತು ಸೌಲಭ್ಯಗಳು ಆಯ್ಕೆಯಾದ ಸಿಬ್ಬಂದಿಗೆ ಲಭ್ಯವಿರಲಿವೆ.
ಆಯ್ಕೆ ವಿಧಾನ ಮತ್ತು ಪರೀಕ್ಷೆ:
ಸಹಾಯಕ ಲೋಕೋ ಪೈಲಟ್ ಹುದ್ದೆಗೆ ಆಯ್ಕೆಯಾಗಲು ಅಭ್ಯರ್ಥಿಗಳು ವಿವಿಧ ಹಂತದ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಮೊದಲ ಮತ್ತು ಎರಡನೇ ಹಂತದ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಗಳು (CBT 1 & 2), ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್, ಮೂಲ ದಾಖಲೆಗಳ ಪರಿಶೀಲನೆ ಹಾಗೂ ಕಟ್ಟುನಿಟ್ಟಾದ ವೈದ್ಯಕೀಯ ಪರೀಕ್ಷೆಗಳು ಒಳಗೊಂಡಿರುತ್ತವೆ. ಈ ಎಲ್ಲಾ ಹಂತಗಳಲ್ಲಿ ಯಶಸ್ವಿಯಾದ ಅಭ್ಯರ್ಥಿಗಳನ್ನು ಅಂತಿಮವಾಗಿ ಹುದ್ದೆಗೆ ಪರಿಗಣಿಸಲಾಗುತ್ತದೆ. ಪರೀಕ್ಷಾ ಪಠ್ಯಕ್ರಮ ಮತ್ತು ಅರ್ಜಿ ಶುಲ್ಕದ ಬಗ್ಗೆ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಪೂರ್ಣ ಪ್ರಮಾಣದ ಅಧಿಸೂಚನೆಯಲ್ಲಿ ಪ್ರಕಟವಾಗಲಿದೆ.
ಬೆಂಗಳೂರು, (ಮಾರ್ಚ್ 27): ಕೇಂದ್ರ ಸರ್ಕಾರ ಪೆಟ್ರೋಲ್(Petrol) ಮತ್ತು ಡೀಸೆಲ್(Diesel) ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದು, ಇದರಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ಗೆ 3 ರೂಪಾಯಿ ಮತ್ತು ಡೀಸೆಲ್ ಸುಂಕ ಶೂನ್ಯಕ್ಕೆ ಇಳಿದಿದೆ. ಆದ್ರೆ, ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲೆಕ್ಷನ್ಗಾಗಿ ತೈಲ ಬೆಲೆಯ ಅಬಕಾರಿ ಸುಂಕ ಕಡಿಮೆ ಮಾಡಿದ್ದಾರೆ. ತೈಲ ಬೆಲೆ ಜಾಸ್ತಿ ಮಾಡಿಬಿಟ್ಟು ಕೇಂದ್ರ ನಮ್ಮನ್ನು ಕೊಲೆ ಮಾಡುತ್ತಿದೆ.ಕಂಪನಿಯವರು ಕೂಡ ಜಾಸ್ತಿ ಮಾಡಿದ್ದಾರೆ ಎಂದು ಕಿಡಿಕಾರಿದರು.
ವಿಯೆಟ್ನಾಂ, ಮಾರ್ಚ್ 27: ವಿಯೆಟ್ನಾಂನ ಬೃಹತ್ ವಸತಿ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿತ್ತು, ಎಲ್ಲರೂ ಭಯಭೀತರಾಗಿದ್ದರು. ಆದರೆ ಇಬ್ಬರು ಯುವಕರು ಇದ್ಯಾವುದನ್ನೂ ಲೆಕ್ಕಿಸದೆ ಸುತ್ತಿಗೆಯಿಂದ ಮೇಲ್ಛಾವಣಿ ಒಡೆದು ಅದರ ಮೂಲಕ ಹೋಗಿ ಏಳು ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ವಿಡಿಯೋದಲ್ಲಿ ಯುವಕರು ತಾರಸಿ ಮೇಲೆ ಹೋಗಿ ಛಾವಣಿಗೆ ಸುತ್ತಿಗೆಯಿಂದ ಪದೇ ಪದೇ ಹೊಡೆಯುತ್ತಿರುವುದನ್ನು ಕಾಣಬಹುದು.
ಬೆಂಗಳೂರು, ಮಾರ್ಚ್ 27: ಬೆಂಗಳೂರಿನಲ್ಲಿ (Bangalore) ಐಪಿಎಲ್ (IPL 2026) ಕ್ರೇಜ್ ಆರಂಭವಾಗುತ್ತಿದ್ದಂತೆಯೇ, ಇತ್ತ ವಿಧಾನಸೌಧದ ಒಳಗೂ ಟಿಕೆಟ್ ಕಿರಿಕ್ ಶುರುವಾಗಿದೆ. ‘ನಾವು ವಿಐಪಿಗಳು, ಸಾಮಾನ್ಯರಂತೆ ಕ್ಯೂನಲ್ಲಿ ನಿಂತು ಟಿಕೆಟ್ ಪಡೆಯಲು ಸಾಧ್ಯವಿಲ್ಲ. ಪ್ರತಿ ಶಾಸಕರಿಗೂ 5 ವಿಐಪಿ ಟಿಕೆಟ್ ನೀಡಬೇಕು’ ಎಂಬ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಹೇಳಿಕೆ ಈಗ ರಾಜ್ಯಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ವಿಜಯಾನಂದ ಕಾಶಪ್ಪನವರ್ ಹೇಳಿದ್ದೇನು?
ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ವಿಧಾನಸಭೆಯಲ್ಲಿ ಕೆಎಸ್ಸಿಎ (KSCA) ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಾವು ಜನಪ್ರತಿನಿಧಿಗಳು, ನಮಗೆ ಗೌರವ ಕೊಡಬೇಕು. ಕಳೆದ ಬಾರಿ ನಮ್ಮನ್ನು ಸಾಮಾನ್ಯ ಗ್ಯಾಲರಿಯಲ್ಲಿ ಕೂರಿಸಲಾಗಿತ್ತು. ಕೆಎಸ್ಸಿಎ ಸರ್ಕಾರದಿಂದ ಭದ್ರತೆ ಸೇರಿದಂತೆ ಎಲ್ಲಾ ಸೌಲಭ್ಯ ಪಡೆಯುತ್ತದೆ, ಆದರೆ ಶಾಸಕರಿಗೆ ಟಿಕೆಟ್ ನೀಡಲು ಹಿಂದೇಟು ಹಾಕುತ್ತಿದೆ. ಆನ್ಲೈನ್ನಲ್ಲಿ ಟಿಕೆಟ್ ಪಡೆಯುವುದು ಒಂದು ನಾಟಕ, ಅಲ್ಲಿ ಬ್ಲಾಕ್ ಮಾರ್ಕೆಟ್ ದಂಧೆ ನಡೆಯುತ್ತಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಕಾಶಪ್ಪನವರ್ ಬೇಡಿಕೆಗೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸಹ ದನಿಗೂಡಿಸಿದ್ದಾರೆ.
ವಿಧಾನಸೌಧದ ಘನತೆಗೆ ತಕ್ಕುದಲ್ಲ: ತೇಜಸ್ವಿ ಸೂರ್ಯ ಖಂಡನೆ
ಶಾಸಕರ ಈ ವಿಐಪಿ ಟಿಕೆಟ್ ಬೇಡಿಕೆಯನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕಟುವಾಗಿ ಟೀಕಿಸಿದ್ದಾರೆ. ಶಾಸಕರ ಈ ಬೇಡಿಕೆ ಅವರ ಆದ್ಯತೆಗಳು ಏನಾಗಿವೆ ಎಂಬುದನ್ನು ತೋರಿಸುತ್ತದೆ. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾದ ಸದನದಲ್ಲಿ ಐಪಿಎಲ್ ಟಿಕೆಟ್ಗಾಗಿ ಪಟ್ಟು ಹಿಡಿಯುವುದು ವಿಧಾನಸೌಧದ ಘನತೆಗೆ ತಕ್ಕುದಲ್ಲ. ಜನಸಾಮಾನ್ಯರು ಹಣ ನೀಡಿ ಟಿಕೆಟ್ ಖರೀದಿಸುವಾಗ ಶಾಸಕರಿಗೆ ಯಾಕೆ ಉಚಿತವಾಗಿ ನೀಡಬೇಕು? ಇದು ಅವರಲ್ಲಿರುವ ಅಹಂಕಾರದ ಪರಮಾವಧಿ ಎಂದು ಖಂಡಿಸಿದ್ದಾರೆ.
ತೇಜಸ್ವಿ ಸೂರ್ಯ ಎಕ್ಸ್ ಸಂದೇಶ
The MLA’s statement is wrong. And frankly, not surprising.
First, it exposes their priorities. At a time when real issues of the state demand attention, raising something like this in the Assembly is itself telling.
And if the Speaker chooses to act on it, it diminishes the… https://t.co/DY4FemIyjw
ಆದರೆ, ಈ ವಿಚಾರದಲ್ಲಿ ಶಾಸಕರ ಬೆಂಬಲಕ್ಕೆ ನಿಂತಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಶಾಸಕರು ಸರ್ಕಾರದ ವ್ಯವಸ್ಥೆಯ ಒಂದು ಭಾಗ. ಅವರಿಗೆ ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ನಾನು ಈ ಬಗ್ಗೆ ಕೆಎಸ್ಸಿಎ ಪದಾಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ, ತೇಜಸ್ವಿ ಸೂರ್ಯ ಅವರ ಟೀಕೆಗೆ ಪ್ರತಿಕ್ರಿಯಿಸಿ, ಸೂರ್ಯ ಮೊದಲು ಅವರ ಪಕ್ಷದ ಶಾಸಕರಿಗೆ ಬುದ್ಧಿ ಹೇಳಲಿ ಎಂದು ತಿರುಗೇಟು ನೀಡಿದ್ದಾರೆ.
ಈ ಬೆಳವಣಿಗೆಯ ಬೆನ್ನಲ್ಲೇ, ಶಾಸಕರಿಗೆ ಐಪಿಎಲ್ ವಿಐಪಿ ಟಿಕೆಟ್ ನೀಡುವ ನಿಟ್ಟಿನಲ್ಲಿ ಕೆಎಸ್ಸಿಎಗೆ ಸೂಚನೆ ನೀಡಿ ಕ್ರಮ ಕೈಗೊಳ್ಳುವಂತೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಮುಂಬೈ, ಮಾ.27: ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಐಪಿಎಲ್ 2026ರ ಸೀಸನ್ ಆರಂಭಕ್ಕೂ ಮುನ್ನ ಮುಂಬೈನ ವಾಂಖೆಡೆ ಸ್ಟೇಡಿಯಂನ ಮೈದಾನದ ಸಿಬ್ಬಂದಿಗೆ (Ground Staff) ಭರ್ಜರಿ ಉಡುಗೊರೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ನ (MCA) ಸುಮಾರು 10 ರಿಂದ 11 ಮೈದಾನದ ಸಿಬ್ಬಂದಿಗೆ ಹಾರ್ದಿಕ್ ತಲಾ 10 ಲಕ್ಷ ರೂ. ರೂಪಾಯಿಗಳ ಚೆಕ್ ನೀಡಿದ್ದಾರೆ.
2026ರ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಹಾರ್ದಿಕ್ ವಾಂಖೆಡೆಯಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದರು. ಈ ವೇಳೆ ಅವರು ಹಲವು ಬಾರಿ ತಡರಾತ್ರಿಯವರೆಗೆ ಅಭ್ಯಾಸ ನಡೆಸುತ್ತಿದ್ದರು. ಅಂತಹ ಸಮಯದಲ್ಲಿ ಮೈದಾನದ ಸಿಬ್ಬಂದಿ ಯಾವುದೇ ದೂರುಗಳಿಲ್ಲದೆ ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದರು.
ಆ ಸಮಯದಲ್ಲಿ ಹಾರ್ದಿಕ್, “ನಾನು ಇಲ್ಲಿಗೆ ಮುಂಬೈ ಇಂಡಿಯನ್ಸ್ ನಾಯಕನಾಗಿ ಮರಳಿದಾಗ ನಿಮ್ಮ ಈ ಕಠಿಣ ಶ್ರಮಕ್ಕೆ ಖಂಡಿತವಾಗಿ ಪ್ರತಿಫಲ ನೀಡುತ್ತೇನೆ” ಎಂದು ಭರವಸೆ ನೀಡಿದ್ದರು. ಐಪಿಎಲ್ ತರಬೇತಿ ಶಿಬಿರದ ವೇಳೆ ಅವರು ಆ ಭರವಸೆಯನ್ನು ಈಡೇರಿಸಿದ್ದಾರೆ.ಮೈದಾನದ ಸಿಬ್ಬಂದಿಯೊಂದಿಗೆ ಹಾರ್ದಿಕ್ ಚೆಕ್ ಹಂಚಿಕೊಳ್ಳುತ್ತಿರುವ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರ ಅಭಿಮಾನಿಗಳು “ದಿಲ್ದಾರ್ ಹಾರ್ದಿಕ್” ಎಂದು ಶ್ಲಾಘಿಸುತ್ತಿದ್ದಾರೆ. ವಿಶ್ವಕಪ್ ಅಭ್ಯಾಸದ ವೇಳೆ ಅವರು ತಡರಾತ್ರಿಯವರೆಗೂ ಬೆವರು ಹರಿಸುತ್ತಿದ್ದರು, ಆಗ ನಾವು ಅವರಿಗೆ ಸಾಥ್ ನೀಡಿದ್ದೆವು. ಆದರೆ ಐಪಿಎಲ್ ಸಮಯದಲ್ಲಿ ವಾಪಸ್ ಬಂದು ನಮಗೆ ಇಷ್ಟು ದೊಡ್ಡ ಮೊತ್ತದ ಚೆಕ್ ನೀಡುತ್ತಾರೆ ಎಂದು ನಾವು ಊಹಿಸಿರಲಿಲ್ಲ,” ಎಂದು ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಹಾರ್ದಿಕ್ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಸಹೋದರರು ತಮ್ಮ ಬಾಲ್ಯದ ಕೋಚ್ ಜಿತೇಂದ್ರ ಸಿಂಗ್ ಅವರಿಗೆ ಕಳೆದ ಕೆಲವು ವರ್ಷಗಳಲ್ಲಿ ಸುಮಾರು 70 ರಿಂದ 80 ಲಕ್ಷ ರೂ. ಹಣಕಾಸಿನ ನೆರವು ನೀಡಿದ್ದಾರೆ. ಹಾರ್ದಿಕ್ 2016ರಲ್ಲೇ ತಮ್ಮ ಕೋಚ್ಗೆ ಒಂದು ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಇತ್ತೀಚೆಗೆ (2024-25ರಲ್ಲಿ) ಕೃನಾಲ್ ಪಾಂಡ್ಯ ಕೂಡ ಅವರಿಗೆ ಮತ್ತೊಂದು ಕಾರು ಖರೀದಿಸಲು 19 ಲಕ್ಷ ರೂ. ನೀಡಿದ್ದಾರೆ. ಜಿತೇಂದ್ರ ಸಿಂಗ್ ಅವರ ಇಬ್ಬರು ಸಹೋದರಿಯರ ಮದುವೆಯ ಸಂಪೂರ್ಣ ವೆಚ್ಚವನ್ನು ಪಾಂಡ್ಯ ಸಹೋದರರೇ ಭರಿಸಿದ್ದಾರೆ. “ನಿಮ್ಮ ಸಹೋದರಿ ಎಂದರೆ ನನ್ನ ಸಹೋದರಿ ಇದ್ದಂತೆ” ಎಂದು ಹಾರ್ದಿಕ್ ಹೇಳಿದ್ದು ಅವರ ದೊಡ್ಡ ಗುಣವನ್ನು ತೋರಿಸುತ್ತದೆ.
ಇಲ್ಲಿದೆ ನೋಡಿ ಪೋಸ್ಟ್;
Hardik Pandya gave ₹10 lakh each to all the groundsmen at Wankhede Stadium because he had promised them they had helped him practice late at night during T20 World Cup. pic.twitter.com/KtGsLfgGcz
2021ರ ಕೋವಿಡ್-19 ಕಠಿಣ ಸಮಯದಲ್ಲೂ ಪಾಂಡ್ಯ ಕುಟುಂಬವು ದೇಶದ ಗ್ರಾಮೀಣ ಭಾಗಗಳಿಗೆ ನೆರವಾಗಲು 200 ಆಮ್ಲಜನಕ ಸಾಂದ್ರಕಗಳನ್ನು (Oxygen Concentrators) ದೇಣಿಗೆ ನೀಡಿದ್ದರು. ಗ್ರಾಮೀಣ ಪ್ರದೇಶದ ವೈದ್ಯಕೀಯ ಮೂಲಸೌಕರ್ಯಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಅವರು ಈ ನಿರ್ಧಾರ ಕೈಗೊಂಡಿದ್ದರು.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ನವದೆಹಲಿ, ಮಾರ್ಚ್ 27: ಪೆಟ್ರೋಲ್ ಮತ್ತು ಡೀಸಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಇಳಿಸಿದೆ. ಒಂದು ಲೀಟರ್ಗೆ ಬರೋಬ್ಬರಿ 10 ರೂಷ್ಟು ತಗ್ಗಿಸಲಾಗಿದೆ. ಇದರೊಂದಿಗೆ, ಪೆಟ್ರೋಲ್ (Petrol) ಮೇಲಿನ ಅಬಕಾರಿ ಸುಂಕವು (Excise Duty) 13 ರೂ ಇದ್ದದ್ದು 3 ರೂಗೆ ಇಳಿದಿದೆ. ಡೀಸಲ್ ಮೇಲಿನ ಅಬಕಾರಿ ಸುಂಕವು 10 ರೂ ಇದ್ದದ್ದು ಸೊನ್ನೆಗೆ ಇಳಿದಿದೆ. ಜಾಗತಿಕವಾಗಿ ಕಚ್ಛಾ ತೈಲ (Crude oil) ಬೆಲೆ ಸಿಕ್ಕಾಪಟ್ಟೆ ಏರಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.
ಪೆಟ್ರೋಲ್, ಡೀಸಲ್ ಬೆಲೆ ಕಡಿಮೆ ಆಗುವುದಿಲ್ಲವಾ?
ಜಾಗತಿಕ ಕಚ್ಛಾ ತೈಲ ಬೆಲೆ ಎರಡು ಪಟ್ಟು ಹೆಚ್ಚಾಗಿದೆ. ಇಷ್ಟೊತ್ತಿಗೆ ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಆಗಬೇಕಿತ್ತು. ಆದರೆ, ನಯಾರಾ ಎನರ್ಜಿ ಮಾತ್ರವೇ ಇವುಗಳ ಬೆಲೆ ಏರಿಸಿರುವುದು. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಬೆಲೆ ಏರಿಕೆ ಮಾಡಿಲ್ಲ. ಈ ಕಂಪನಿಗಳು ಸತತ ನಷ್ಟ ಅನುಭವಿಸುತ್ತಿವೆ. ಈ ತೈಲ ಬೆಲೆ ಹೆಚ್ಚಿನ ಮಟ್ಟದಲ್ಲೇ ಮುಂದುವರಿದರೆ ಇಂಡಿಯನ್ ಆಯಿಲ್, ಎಚ್ಪಿ, ಬಿಪಿ ಕೂಡ ಪೆಟ್ರೋಲ್, ಡೀಸಲ್ ಬೆಲೆ ಏರಿಸುವುದು ಅನಿವಾರ್ಯವಾಗಬಹುದು.
ಇದನ್ನು ತಪ್ಪಿಸಲು, ಅಂದರೆ, ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಾಗದಿರಲು ಸರ್ಕಾರ ಅಬಕಾರಿ ಸುಂಕ ಕಡಿಮೆಗೊಳಿಸಿದೆ. ಸುಂಕ ಕಡಿಮೆ ಮಾಡಿರುವುದರಿಂದ ಪೆಟ್ರೋಲ್, ಡೀಸಲ್ ಬೆಲೆ ಇಳಿಯುವುದಿಲ್ಲ. ಒಎಂಸಿಗಳಿಗೆ ನಷ್ಟದ ಹೊರೆ ಇಳಿಸಲು ಸಹಾಯವಾಲಿದೆ. ಜನಸಾಮಾನ್ಯರಿಗೆ ಪೆಟ್ರೋಲ್, ಡೀಸಲ್ ಎಂದಿನ ಬೆಲೆಗೆ ಸಿಗುವುದು ಮುಂದುವರಿಯಲಿದೆ.
ಸರ್ಕಾರವು ಅಬಕಾರಿ ಸುಂಕ ಕಡಿಮೆ ಮಾಡಿರುವುದು ತೈಲ ಮಾರುಕಟ್ಟೆ ಕಂಪನಿಗಳು ಮತ್ತು ಜನಸಾಮಾನ್ಯರು, ಈರ್ವರಿಗೂ ರಿಲೀಫ್ ಸಿಕ್ಕಂತಾಗುತ್ತದೆ. ಪೆಟ್ರೋಲಿಯಂ ಕಂಪನಿಗಳಿಗೆ ನಷ್ಟದ ಹೊರೆ ತಪ್ಪುತ್ತದೆ. ಜನಸಾಮಾನ್ಯರಿಗೆ ಬೆಲೆ ಏರಿಕೆಯಾಗುವುದು ತಪ್ಪುತ್ತದೆ.
ಇರಾನ್ ಯುದ್ಧ ಶುರುವಾಗುವ ಮುನ್ನ ತೈಲ ಬೆಲೆ ಒಂದು ಬ್ಯಾರಲ್ಗೆ 60 ಡಾಲರ್ನಷ್ಟು ಇತ್ತು. ಈಗ ಅದು 100 ಡಾಲರ್, 120 ಡಾಲರ್ ದಾಟಿ ಹೋಗಿದೆ. ಹಾರ್ಮುಜ್ ಜಲಸಂಧಿಯಿಂದ ತೈಲ ಟ್ಯಾಂಕರ್ಗಳು ಹೊರಬರಲು ತಡೆ ಇರುವುದರಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ. ಪರಿಣಾಮವಾಗಿ ತೈಲ ಬೆಲೆ ಗಣನೀಯವಾಗಿ ಏರುತ್ತಿದೆ.
ಕೊಪ್ಪಳ, ಮಾರ್ಚ್ 27: ಅಕ್ರಮ ಹಣ ವ್ಯವಹಾರ ನಡೆಸಿದ ಆರೋಪದ ಹಿನ್ನೆಲೆ ಅಮಾನತುಗೊಂಡಿದ್ದ ಕೊಪ್ಪಳ (Koppal) ನಗರಸಭೆಯ ಜೂನಿಯರ್ ಇಂಜಿನಿಯರ್ ಸೋಮಲಿಂಗಪ್ಪ ಪ್ರಕರಣದಲ್ಲಿ ಹೊಸ ತಿರುವು ಎದುರಾಗಿದೆ. ಪೌರಾಡಳಿತ ಇಲಾಖೆ ಕೇವಲ 10 ದಿನಗಳಲ್ಲೇ ಅಮಾನತು ಆದೇಶವನ್ನು ಹಿಂಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ನೂರಾರು ಕಾಮಗಾರಿಗಳಲ್ಲಿ ಲೋಪ
ಸೋಮಲಿಂಗಪ್ಪ ವಿರುದ್ಧ ಸುಮಾರು 10 ಕೋಟಿ ರೂಪಾಯಿ ಅಕ್ರಮ ಆರೋಪ ಕೇಳಿಬಂದಿತ್ತು. 2023-24 ಹಾಗೂ 2024-25ನೇ ಸಾಲಿನ ಸುಮಾರು 336 ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವುದು ಲೋಕಾಯುಕ್ತ ತನಿಖೆಯಲ್ಲಿ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಇದೇ ಮಾರ್ಚ್ 16ರಂದು ಪೌರಾಡಳಿತ ಇಲಾಖೆ ಅವರನ್ನು ಅಮಾನತು ಮಾಡಿತ್ತು.
ಹೈ ಕೋರ್ಟ್ ತಡೆಯಾಜ್ಞೆ
ಆದರೆ, ಅಮಾನತು ಆದೇಶದ ವಿರುದ್ಧ ಸೋಮಲಿಂಗಪ್ಪ ಧಾರವಾಡ ಹೈಕೋರ್ಟ್ನಲ್ಲಿ ತಡೆಯಾಜ್ಞೆ ಪಡೆದುಕೊಂಡಿದ್ದಾರೆ. ನ್ಯಾಯಾಲಯದಿಂದ ತಾತ್ಕಾಲಿಕ ತಡೆ ಸಿಕ್ಕ ಹಿನ್ನೆಲೆ, ವಿಚಾರಣೆ ಪೂರ್ಣಗೊಳ್ಳುವವರೆಗೆ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ ಎಂದು ಇಲಾಖೆ ತಿಳಿಸಿದೆ. ಇದರಿಂದ ಕೇವಲ 10 ದಿನಗಳೊಳಗೆ ಅಮಾನತು ವಾಪಸ್ ಪಡೆದಿರುವ ಕ್ರಮ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಲೋಕಾಯುಕ್ತ ತನಿಖೆಯಲ್ಲಿ ಗಂಭೀರ ಅಕ್ರಮಗಳು ಬಹಿರಂಗವಾಗಿದ್ದರೂ, ತ್ವರಿತವಾಗಿ ಆದೇಶ ಹಿಂಪಡೆಯಲ್ಪಟ್ಟಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಪ್ರಕರಣದಲ್ಲಿ ಮುಂದಿನ ನ್ಯಾಯಾಲಯದ ತೀರ್ಪು ಹಾಗೂ ತನಿಖೆಯ ಫಲಿತಾಂಶವೇ ಸತ್ಯಾಂಶವನ್ನು ಬಹಿರಂಗಪಡಿಸುವುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸ್ಟಾರ್ ಟಾಲಿವುಡ್ ನಟ ರಾಮ್ ಚರಣ್ (Ram Charan) ಅವರ 41ನೇ ಹುಟ್ಟುಹಬ್ಬ ಇಂದು. ‘ಆರ್ಆರ್ಆರ್’ ಸಿನಿಮಾದ ಬಳಿಕ ಅವರ ಯಾವ ಸಿನಿಮಾವೂ ಹಿಟ್ ಆಗಿಲ್ಲ. ‘ಆರ್ಆರ್ಆರ್’ ಸಿನಿಮಾದ ಬಳಿಕ ‘ಆಚಾರ್ಯ’ ಮತ್ತು ‘ಗೇಮ್ ಚೇಂಜರ್’ ಸಿನಿಮಾಗಳಲ್ಲಿ ರಾಮ್ ಚರಣ್ ನಟಿಸಿದ್ದು, ಎರಡೂ ಸಿನಿಮಾಗಳು ದೊಡ್ಡ ಹಿಟ್ ಆಗಿವೆ. ಇದೀಗ ಅವರು ‘ಪೆದ್ದಿ’ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಟೀಸರ್ ಇಂದು (ಮಾರ್ಚ್ 27)ಕ್ಕೆ ಬಿಡುಗಡೆ ಆಗಿದೆ. ಸಿನಿಮಾದ ಈ ಹಿಂದಿನ ಕೆಲ ಟೀಸರ್ಗಳಲ್ಲಿ ಕ್ರಿಕೆಟರ್ ಆಗಿದ್ದ ರಾಮ್ ಚರಣ್ ಈಗ ಪೈಲ್ವಾನ್ ಆಗಿದ್ದಾರೆ.
ಈಗ ಬಿಡುಗಡೆ ಆಗಿರುವ ‘ಪೆದ್ದಿ’ಯ ಟೀಸರ್ನಲ್ಲಿ ರಾಮ್ ಚರಣ್ ‘ಪೆದ್ದಿ ಪೆಹಲ್ವಾನ್’ ಆಗಿ ಕಾಣಿಸಿಕೊಂಡಿದ್ದಾರೆ. ಪೈಲ್ವಾನ್ ರೀತಿ ಹುರಿಗಟ್ಟಿದ ದೇಹಹೊಂದಿ ಸಖತ್ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ನಲ್ಲಿ ಅವರು ಧಾನ್ಯದ ಚೀಲಗಳನ್ನು ಎತ್ತಿ ಬಿಸಾಡುತ್ತಾ ದೈಹಿಕ ಶಕ್ತಿ ಪ್ರದರ್ಶಿಸುತ್ತಿದ್ದಾರೆ. ಕುಸ್ತಿ ಅಖಾಡದಲ್ಲೂ ಮಿಂಚಿದ್ದಾರೆ. ಆಂಜನೇಯನ ಗದೆಯಂಥಹಾ ವಸ್ತುವನ್ನು ತಿರುಗಿಸುತ್ತಾ ತಮ್ಮ ಭುಜಬಲ ಸಹ ಪ್ರದರ್ಶಿಸಿದ್ದಾರೆ. ಅಖಾಡದಲ್ಲಿ ಕುಸ್ತಿ ಸಹ ಮಾಡಿದ್ದಾರೆ.
ಈ ಹಿಂದೆ ಬಿಡುಗಡೆ ಆಗಿದ್ದ ‘ಪೆದ್ದಿ’ ಸಿನಿಮಾದ ಕೆಲವು ಟೀಸರ್, ಹಾಡುಗಳಲ್ಲಿ ರಾಮ್ ಚರಣ್ ಪಾತ್ರವನ್ನು ಹಳ್ಳಿಯ ಕ್ರಿಕೆಟರ್ ಪಾತ್ರವನ್ನಾಗಿ ತೋರಿಸಲಾಗಿತ್ತು. ಸದಾ ಬ್ಯಾಟು ಹಿಡಿದುಕೊಂಡೆ ಓಡಾಡುವ ಯುವಕನ ರೀತಿ ತೋರಿಸಲಾಗಿತ್ತು. ಆದರೆ ಈಗ ಪೈಲ್ವಾನ್ ರೀತಿ ತೋರಿಸಲಾಗಿದೆ. ಇದು ಅಭಿಮಾನಿಗಳ ಅನುಮಾನಕ್ಕೆ ಕಾರಣವಾಗಿದ್ದು, ‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್ ಅವರದ್ದು ದ್ವಿಪಾತ್ರವಾ? ಅಥವಾ ತಂದೆ-ಮಗನ ಪಾತ್ರವನ್ನು ರಾಮ್ ಚರಣ್ ನಿಭಾಯಿಸಿದ್ದಾರಾ ಎಂಬ ಅನುಮಾನ ಮೂಡುತ್ತಿದೆ.
ಈ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿ ಆಗಿದ್ದು ಅಚ್ಚಿಯಮ್ಮ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ದಿವ್ಯೇಂದು ಶರ್ಮಾ, ಜಗಪತಿ ಬಾಬು ಮತ್ತು ಬೋಮನ್ ಇರಾನಿ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬುಚ್ಚಿ ಬಾಬು ಸನಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಹಿಂದೆ ಅವರು ‘ಉಪ್ಪೆನ’ ಹೆಸರಿನ ಸಿನಿಮಾ ನಿರ್ದೇಶಿಸಿ ಯಶಸ್ಸು ಕಂಡಿದ್ದರು. ಆಸ್ಕರ್ ವಿಜೇತ ಎಆರ್ ರೆಹಮಾನ್ ಅವರು ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ವೃದ್ಧಿ ಸಿನಿಮಾಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ. ಈ ಚಿತ್ರವು ಏಪ್ರಿಲ್ 30, 2026 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಕನ್ನಡ ಚಿತ್ರರಂಗವನ್ನು ಅನೇಕ ಕಡೆಗಳಲ್ಲಿ ಕಡೆಗಣಿಸುವ ಕೆಲಸ ಆಗುತ್ತಲೇ ಬರುತ್ತಿದೆ. ಈ ಮೊದಲು ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂದ ನಟರನ್ನು ಕಡೆಗಣಿಸಿದ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಈಗ ಫಿಲ್ಮ್ಫೇರ್ (Filma Fare) ಅದೇ ತಪ್ಪನ್ನು ಮಾಡಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕನ್ನಡ ಚಿತ್ರರಂಗವನ್ನು ಕಡೆಗಣಿಸಿದ್ದು ಎಷ್ಟು ಸರಿ ಎಂಬ ಚರ್ಚೆ ಶುರುವಾಗಿದೆ. ತಪ್ಪನ್ನು ತಿದ್ದುಕೊಂಡು ಅವರು ಕ್ಷಮೆ ಕೇಳಬೇಕು ಎಂಬ ಆಗ್ರಹಕೂಡ ವ್ಯಕ್ತವಾಗಿದೆ.
ಫಿಲ್ಮ್ ಫೇರ್ ಅವಾರ್ಡ್ ಆರಂಭ ಆಗಿದ್ದು 1954ರಲ್ಲಿ. ಹಿಂದಿ ಸಿನಿಮಾ ರಂಗದ ಕಲಾವಿದರು ಹಾಗೂ ತಂತ್ರಜ್ಞರನ್ನು ಗೌರವಿಸುವ ಉದ್ದೇಶದಿಂದ ಇದನ್ನು ಮಾಡಲಾಯಿತು. ಆ ಬಳಿಕ 1964ರಲ್ಲಿ ‘ಫಿಲ್ಮ್ ಫೇರ್ ಸೌತ್’ ಅವಾರ್ಡ್ ಕಾರ್ಯಕ್ರಮ ಆರಂಭಿಸಲಾಯಿತು. ಈಗ ಫಿಲ್ಮ್ ಫೇರ್ ಮ್ಯಾಗಜಿನ್ ಫೋಟೋಶೂಟ್ ಮಾಡಿಸಲಾಗಿದೆ. ಇದರಲ್ಲಿ ಕನ್ನಡ ಚಿತ್ರರಂಗದವರನ್ನು ಕಡೆಗಣಿಸಲಾಗಿದೆ.
ಫಿಲ್ಮ್ಫೇರ್ ಮ್ಯಾಗಜಿನ್ ಮುಖಪುಟ ರಿವೀಲ್ ಮಾಡಲಾಗಿದೆ. ಇದರಲ್ಲಿ ತಮಿಳಿನಿಂದ ಶಿವಕಾರ್ತಿಕೇಯ, ಅರವಿಂದ್ ಸ್ವಾಮಿ, ಮಲಯಾಳಂನಿಂದ ಮಮ್ಮೂಟ್ಟಿ, ತೆಲುಗಿನಿಂದ ಅಲ್ಲು ಅರ್ಜುನ್ ಇದ್ದಾರೆ. ದಕ್ಷಿಣದ ನಟಿಯರಾದ ಭಾವನಾ, ಕಾಜಲ್ ಅಗರ್ವಾಲ್, ಸಾಯಿ ಪಲ್ಲವಿ ಪೋಸ್ಟರ್ನಲ್ಲಿದ್ದಾರೆ. ಆದರೆ ಎಲ್ಲಿಯೂ ಕನ್ನಡದ ಕಲಾವಿದರಿಲ್ಲ.
Icons, trailblazers & legends!
Meet our March cover stars: Mammootty, Allu Arjun, Arvind Swamy, Sivakarthikeyan, Sai Pallavi, Bhavana, and Kajal Aggarwal, defining star power and cinematic glory at the 70th Filmfare Awards South with Kerala Tourism.
ಯಶ್ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಕಿಚ್ಚ ಸುದೀಪ್ ಪರಿಚಯ ಇಡೀ ದೇಶದವರಿಗೆ ಇದೆ. ‘ಕಾಂತಾರ’ ಮೂಲಕ ರಿಷಬ್ ಶೆಟ್ಟಿ ಅವರು ದೊಡ್ಡ ಹೆಸರು ಮಾಡಿದ್ದಾರೆ. ಶಿವರಾಜ್ಕುಮಾರ್ ಅತ್ಯಂತ ಹಿರಿಯ ನಟರು. ರುಕ್ಮಿಣಿ ವಸಂತ್ ಕೂಡ ಅಪಾರ ಜನಪ್ರಿಯತೆ ಪಡೆದಿದ್ದಾರೆ. ಇವರ ಪೈಕಿ ಯಾರಾದರೂ ಒಬ್ಬರಾದರೂ ಮ್ಯಾಗಜಿನ್ ಶೂಟ್ನಲ್ಲಿ ಇರಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.