All posts by nagaraj11081993

ನಾವು ಭಾರತವನ್ನು ಸೋಲಿಸಿದ್ದೇವೆ: ಪಾಕ್ ಆಟಗಾರನ ತಿರುಗೇಟು! – Kannada News | We beat India in the World Cup: Shadab Khan

T20 World Cup 2026: ಟಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ್ ತಂಡದ ಪರಾಜಯ ಮುಂದುವರೆದಿದೆ. ಈ ಪರಾಜಯದ ಬೆನ್ನಲ್ಲೇ ಪಾಕ್ ತಂಡದ ಪ್ರದರ್ಶನದ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಅದರಲ್ಲೂ ಬಾಸಿತ್ ಅಲಿ, ಶಾಹಿದ್ ಅಫ್ರಿದಿ, ಮೊಹಮ್ಮದ್ ಯೂಸುಫ್ ಸೇರಿದಂತೆ ಕೆಲ ಮಾಜಿ ಆಟಗಾರರು ಹಿರಿಯ ಆಟಗಾರರನ್ನು ಗುರಿಯಾಗಿಸಿ ಹೇಳಿಕೆ ನೀಡಿದ್ದರು. ಇದೀಗ ಈ ಹೇಳಿಕೆಗಳಿಗೆ ಪಾಕ್ ಆಲ್​ರೌಂಡರ್ ಶಾದಾಬ್ ಖಾನ್ ತಿರುಗೇಟು ನೀಡಿದ್ದಾರೆ.

ನಮೀಬಿಯ ವಿರುದ್ಧದ ಪಂದ್ಯದ ಬಳಿಕ ಸುದ್ದಿಗೋಷ್ಠಿ ಮಾತನಾಡಿದ ಶಾದಾಬ್ ಖಾನ್, ನೀವು ಶ್ರೇಷ್ಠ ಆಟಗಾರರೇ ಇರಬಹುದು. ಆದರೆ ನಿಮ್ಮ ಕಾಲದಲ್ಲಿ ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ ಎಂಬುದು ನೆನಪಿರಲಿ. ಆದರೆ ನಾವು ಭಾರತ ತಂಡವನ್ನು ಸೋಲಿಸಿದ್ದೇವೆ. ಈ ವಿಷಯ ಕೂಡ ನಿಮಗೆ ನೆನಪಲ್ಲಿರಬೇಕು ಎಂದಿದ್ದಾರೆ.

2021ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ್ ತಂಡ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಇದು ವಿಶ್ವಕಪ್ ಇತಿಹಾಸದಲ್ಲಿ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಸಿಕ್ಕ ಏಕೈಕ ಜಯವಾಗಿದೆ. ಈ ವೇಳೆ ಶಾದಾಬ್ ಖಾನ್ ಕೂಡ ಪಾಕ್ ತಂಡದಲ್ಲಿದ್ದರು. ಇದನ್ನೇ ಪ್ರಸ್ತಾಪಿಸಿ ಇದೀಗ ಪಾಕ್ ಆಲ್​ರೌಂಡರ್ ಟೀಕಿಸಿದ ಮಾಜಿ ಆಟಗಾರರಿಗೆ ತಿರುಗೇಟು ನೀಡಿದ್ದಾರೆ.

ಶಾದಾಬ್ ಹೇಳಿಕೆಗೆ ಆಕ್ರೋಶ:

ಶಾದಾಬ್ ಖಾನ್ ಅವರ ಈ ಹೇಳಿಕೆಗೆ ಮಾಜಿ ಕ್ರಿಕೆಟಿಗ ಬಾಸಿತ್ ಅಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾದಾಬ್  ಅವರ ಈ ಹೇಳಿಕೆಯು ಅವರ ಮಾವನಿಗೆ ಮಾಡಿದ ಅವಮಾನ. ಏಕೆಂದರೆ ಅವರು ಮಾವ ಪಾಕಿಸ್ತಾನ್ ತಂಡದ ದಂತಕಥೆ. ಇದೀಗ ನಿಮ್ಮಿಂದ ಆಗದಿರುವುದನ್ನು ನಾವು ಮಾಡಿ ತೋರಿಸಿದ್ದೇವೆ ಅಂದಿರುವುದು ಸಕ್ಲೇನ್​ ಮುಷ್ತಾಕ್​ಗೆ ಮಾಡಿದ ಅವಮಾನವೆಂದು ಪರಿಗಣಿಸಬಹುದು ಎಂದು ಬಾಸಿತ್ ಅಲಿ ಹೇಳಿದ್ದಾರೆ.

ಪಾಕಿಸ್ತಾನದ ಮಾಜಿ ಸ್ಪಿನ್ ಲೆಜೆಂಡ್ ಸಕ್ಲೇನ್ ಮುಷ್ತಾಕ್ ಅವರ ಪುತ್ರಿಯನ್ನು ಶಾದಾಬ್ ಖಾನ್ ಮದುವೆಯಾಗಿದ್ದಾರೆ. ಇದೀಗ ವಿಶ್ವಕಪ್​ನಲ್ಲಿ ನಾವು ಮಾತ್ರ ಭಾರತದ ವಿರುದ್ಧ ಗೆದ್ದಿರುವುದು ಅಂದಿರುವುದು ಶಾದಾಬ್ ಮಾವನಿಗೆ ಮಾಡಿದಂತಹ ಅತೀ ದೊಡ್ಡ ಅವಮಾನ.

ಇದನ್ನೂ ಓದಿ: T20 World Cup 2028: ಮುಂದಿನ ಟಿ20 ವಿಶ್ವಕಪ್​ಗೆ 12 ತಂಡಗಳು ಆಯ್ಕೆ

ಶಾದಾಬ್ ಹೇಳಿಕೆಯನ್ನು ತೆಗೆದುಕೊಂಡರೆ, ಸಕ್ಲೇನ್ ಮ್ಯಾಚ್ ವಿನ್ನರ್ ಆಗಿರಲಿಲ್ಲವೇ? ಶಾದಾಬ್ ಖಾನ್​ನಂತ 10 ಬೌಲರ್​ಗಳಿಗೆ ಒಬ್ಬ ಸಕ್ಲೇನ್ ಸಮ. ಇದಾಗ್ಯೂ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ರೀತಿಯ ಹೇಳಿಕೆಗಳ ಬದಲಿಗೆ ಮೈದಾನದಲ್ಲಿ ನಿಮ್ಮ ಪ್ರದರ್ಶನ ತೋರಿಸಿ ಎಂದು ಬಾಸಿತ್ ಅಲಿ ಆಕ್ರೋಶ ಹೊರಹಾಕಿದ್ದಾರೆ.

Source link

ನಂದಿನಿ ಉತ್ಪನ್ನ ತಿಂದರೆ ಕ್ಯಾನ್ಸರ್‌ ಬರುತ್ತಾ? ಅಂತೆ-ಕಂತೆಗಳಿಗೆ ಕೆಎಂಎಫ್‌ ಎಂಡಿ ಸ್ಪಷ್ಟನೆ – Kannada News | Do Nandini Products Cause Cancer; KMF Debunks Cancer Claims as Fake News

ಕೆಎಂಎಫ್‌ ಉತ್ಪನ್ನಗಳುImage Credit source: deccanherald

ಬೆಂಗಳೂರು, ಫೆಬ್ರವರಿ 19: ಕೆಎಂಎಫ್​​ ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್. ಕೆಎಂಎಫ್​​​ ಉತ್ಪನ್ನಗಳು (KMF Products) ದೇಶ-ವಿದೇಶಗಳಿಗೆ ಸರಬರಾಜು ಆಗುತ್ತದೆ. ಇದೀಗ ಈ ಬ್ರ್ಯಾಂಡ್​​ ಮೇಲೆ ಕಿಡಿಗೇಡಿಗಳ ಕಣ್ಣು ಬಿದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಂದಿನ ಉತ್ಪನ್ನಗಳ ಬಗ್ಗೆ ಸುಳ್ಳು ಸುದ್ದಿ ಹರಿಬಿಡಲಾಗುತ್ತಿದೆ. ಆ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಲಾಗುತ್ತಿದೆ. ಹೀಗಾಗಿ ಕಿಡಿಗೇಡಿಗಳ ವಿರುದ್ಧ ಕಾನೂನು ಸಮರಕ್ಕೆ ಕೆಎಂಎಫ್​​ ಸಜ್ಜಾಗಿದ್ದು, ಸುಳ್ಳು ಸುದ್ದಿ ಹರಿಬಿಡುತ್ತಿರುವವರ ಮೇಲೆ ಕ್ರಿಮಿನಲ್ ಕೇಸ್​​ ದಾಖಲಿಸಲು ಮುಂದಾಗಿದೆ.

ಇದು ಶುದ್ಧ ಸುಳ್ಳು ಎಂದ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ

ಕೆಎಂಎಫ್‌ ಉತ್ಪನ್ನ ತಿಂದರೆ ಕ್ಯಾನ್ಸರ್‌ ಬರುತ್ತೆ ಅಂತಾ ಡಾ.ಶರಣ್ಯ ಸಂತೋಷ್‌ ಎಂಬುವವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹೀಗಾಗಿ ಜನರಲ್ಲಿ ಆತಂಕ ಸೃಷ್ಟಿಸಲಾಗುತ್ತಿದೆ. ಇನ್ನು ಈ ಬಗ್ಗೆ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಮಾತನಾಡಿದ್ದು, ಇದು ಶುದ್ಧ ಸುಳ್ಳು ಕೆಎಂಎಫ್‌ ಉತ್ಪನ್ನ ನೈಸರ್ಗಿಕವಾಗಿ ತಯಾರಿಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Nandini Products: ಇನ್ಮುಂದೆ ಇಂದಿರಾ ಕ್ಯಾಂಟೀನ್​ಗಳಲ್ಲೂ ಸಿಗಲಿದೆ ನಂದಿನಿ ಉತ್ಪನ್ನ! ಜಿಬಿಎ ಹೊಸ ಪ್ಲಾನ್

ಇದುವರೆಗೂ ಕೆಎಂಎಫ್‌ ಉತ್ಪನ್ನಗಳ ಬಗ್ಗೆ ಯಾವುದೇ ದೂರು ಬಂದಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು. ಕೆಎಂಎಫ್‌ ಉತ್ಪನ್ನಗಳಿಗೆ ಯಾವುದೇ ಕೆಮಿಕಲ್ ಹಾಕಲ್ಲ. ಈಗಾಗಲೇ ಡಾ.ಶರಣ್ಯ ಸಂತೋಷ್‌ ವಿರುದ್ಧ ಕೇಸ್ ದಾಖಲಿಸಲಾಗಿದೆ. ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ, ಜನರ ದಿಕ್ಕು ತಪ್ಪಿಸುವ ಕೆಲಸಬೇಡ. ಕೆಎಂಎಫ್‌ ಉತ್ಪನ್ನಗಳ ಬಗ್ಗೆ ಇದೇ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದರೆ ಕ್ರಮಕೈಗೊಳ್ಳಲಾಗುತ್ತದೆ. ಕೆಎಂಎಫ್‌ ಉತ್ಪನ್ನಗಳು ತುಂಬಾ ಸೇಫ್‌, ಯಾವುದೇ ಭಯವಿಲ್ಲದೆ ಬಳಸುವಂತೆ ಗ್ರಾಹಕರಿಗೆ ಬಿ.ಶಿವಸ್ವಾಮಿ ಮನವಿ ಮಾಡಿದ್ದಾರೆ.

ಕೆಎಂಎಫ್​​ನ ಎಲ್ಲಾ ಉತ್ಪನ್ನಗಳು ಸೇಫ್​ ಎಂದ ಆರೋಗ್ಯ ಇಲಾಖೆ

ಇನ್ನು ಕೆಎಂಎಫ್ ಉತ್ಪನ್ನಗಳ ಬಗ್ಗೆ ಅಪಪ್ರಚಾರ ಹಿನ್ನೆಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಪರೀಕ್ಷೆ ಮಾಡಲಾಗಿದ್ದು, ಎಲ್ಲಾ ಉತ್ಪನ್ನಗಳು ಸೇಫ್​​ ಎಂಬ ವರದಿ ಬಂದಿದೆ. ಮೈಸೂರು ಪಾಕ್, ಮಿಲ್ಕ್ ಪೇಡಾ, ಪನ್ನೀರ್, ವೆನಿಲಾ ಮಿಲ್ಕ್ ಸೇಕ್​​ ಸೇರಿದಂತೆ ಎಲ್ಲಾ ಉತ್ಪನ್ನಗಳು ಸುರಕ್ಷಿತ ಎಂದು ಆರೋಗ್ಯ ಇಲಾಖೆ ವರದಿ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಭಾರತೀಯ ಸಿನಿಮಾ ಬಗ್ಗೆ ತನಗಿರುವ ಕನಸು ಹಂಚಿಕೊಂಡ ರಾಜಮೌಳಿ – Kannada News | SS Rajamouli shared his dream about Indian Cinema

ರಾಜಮೌಳಿ (Rajamouli) ಪ್ರಸ್ತುತ ಭಾರತೀಯ ಚಿತ್ರರಂಗದ ಟಾಪ್ ನಿರ್ದೇಶಕ. ಇತ್ತೀಚೆಗಿನ ವರ್ಷಗಳಲ್ಲಿ ಭಾರತದ ಸಿನಿಮಾಗಳಿಗೆ ವಿಶ್ವ ಮಟ್ಟದಲ್ಲಿ ಮಾರುಕಟ್ಟೆ, ಗೌರವ, ಪ್ರೇಕ್ಷಕರನ್ನು ತಂದುಕೊಟ್ಟ ಶ್ರೇಯ ಎಸ್​​ಎಸ್ ರಾಜಮೌಳಿ ಅವರಿಗೆ ಸಲ್ಲಬೇಕು. ಅವರ ನಿರ್ದೇಶನದ ‘ಆರ್​​ಆರ್​​ಆರ್’ ಸಿನಿಮಾ ವಿದೇಶಗಳಲ್ಲಿ ಬ್ಲಾಕ್ ಬಸ್ಟರ್ ಆಗಿದೆ. ಹಾಲಿವುಡ್​ನ ಕೆಲವು ಲಿಜೆಂಡರಿ ನಿರ್ದೇಶಕರುಗಳು ಸಹ ರಾಜಮೌಳಿಗೆ ಹಾಲಿವುಡ್ ಸಿನಿಮಾ ಮಾಡುವಂತೆ ಆಫರ್ ಮಾಡಿದ್ದರು. ಆದರೆ ನಯವಾಗಿ ಆಫರ್ ಅನ್ನು ನಿರಾಕರಿಸಿದ್ದಾರೆ ರಾಜಮೌಳಿ. ಆದರೆ ರಾಜಮೌಳಿ ಅವರಿಗೆ ಭಾರತೀಯ ಸಿನಿಮಾಗಳ ಬಗ್ಗೆ ಒಂದು ಕನಸಿದೆ. ಅದನ್ನು ಸಾಕಾರಗೊಳಿಸುವುದಕ್ಕಾಗಿ ಅವರು ಶ್ರಮಿಸುತ್ತಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಜಮೌಳಿ, ಭಾರತೀಯ ಚಿತ್ರರಂಗದ ಬಗ್ಗೆ ತಮಗಿರುವ ಕನಸಿನ ಬಗ್ಗೆ ಹೇಳಿಕೊಂಡಿದ್ದಾರೆ. ‘ನನಗೆ ಒಂದು ಆಸೆಯಿದೆ, ಭಾರತೀಯ ಸಿನಿಮಾಕ್ಕೆ ವಿಶ್ವದಾದ್ಯಂತ ಬೇಡಿಕೆ ರೂಪುಗೊಳ್ಳಬೇಕು ಎಂಬುದು ನನ್ನ ಆಸೆ. ಈಗ ಕೆ-ಪಾಪ್​​ಗೆ ಹೇಗೆ ವಿಶ್ವದಾದ್ಯಂತ ಬೇಡಿಕೆ ಇದೆಯೋ, ಜಪಾನಿನ ಅನಿಮೇಷನ್​​ಗೆ ಹೇಗೆ ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆಯೋ ಹಾಗೆಯೇ ಭಾರತೀಯ ಸಿನಿಮಾಕ್ಕೆ ವಿಶ್ವದಾದ್ಯಂತ ಅಭಿಮಾನಿಗಳು, ಬೇಡಿಕೆ ಮೂಡಬೇಕು ಎಂಬುದು ನನ್ನ ಬಯಕೆ’ ಎಂದಿದ್ದಾರೆ ರಾಜಮೌಳಿ.

ಇತ್ತೀಚೆಗೆ ಬಿಡುಗಡೆ ಆದ ‘ಡೀಮನ್ ಸ್ಲೇಯರ್’ ಸಿನಿಮಾವನ್ನು ಉದಾಹರಣೆಯಾಗಿ ನೀಡಿದ ರಾಜಮೌಳಿ, ‘ಇತ್ತೀಚೆಗೆ ‘ಡೀಮನ್ ಸ್ಲೇಯರ್’ ಅನಿಮೇಷನ್ ಸಿನಿಮಾ ಭಾರತದಲ್ಲಿ ಬಿಡುಗಡೆ ಆಯ್ತು. ಭಾರತದಲ್ಲಿಯೇ ಅನಿಮೇಷನ್ ಸಿನಿಮಾಕ್ಕೆ ಬೇಡಿಕೆ ಕಡಿಕೆ, ಅದನ್ನು ನೋಡುವವರ ಸಂಖ್ಯೆಯೂ ಕಡಿಮೆ ಆದರೆ ‘ಡೀಮನ್ ಸ್ಲೇಯರ್’ ಸಿನಿಮಾ ದೊಡ್ಡ ಹಿಟ್ ಆಯ್ತು. ಅದರಂತೆ ಭಾರತೀಯ ಸಿನಿಮಾಗಳು ತಮ್ಮ ಭಾವುಕ ಕತೆ, ಸಂಗೀತದಿಂದ ವಿಶ್ವದಾದ್ಯಂತ ಅಭಿಮಾನಕ್ಕೆ ಒಳಗಾಗಬೇಕು’ ಎಂದು ರಾಜಮೌಳಿ ಹೇಳಿದ್ದಾರೆ.

ಇದನ್ನೂ ಓದಿ:ಬ್ಲಾಕ್ ಬಸ್ಟರ್ ಸಿನಿಮಾಗಳ ನಿರ್ದೇಶಕ ರಾಜಮೌಳಿಗೆ ಇಷ್ಟವಾದ ಸಿನಿಮಾ ಯಾವುದು?

‘ಇಡೀ ವಿಶ್ವಕ್ಕೆ ಒಗ್ಗುವ ಕತೆ ಮಾಡಿ, ಅದರಲ್ಲಿ ನಿಜವಾದ ಭಾವುಕತೆಯನ್ನು ಹಿಡಿದಿಟ್ಟರೆ ಖಂಡಿತ ಎಲ್ಲ ಭಾಗದ ಜನರು ನೋಡುತ್ತಾರೆ, ಇಷ್ಟಪಡುತ್ತಾರೆ ಎಂಬುದು ನನ್ನ ನಂಬಿಕೆ. ಆದರೆ ನಂಬಿಕೆ ಬೇರೆ, ಆ ನಂಬಿಕೆ ನಿಜವಾಗುದು ಬೇರೆ. ಆದರೆ ‘ಆರ್​​ಆರ್​​ಆರ್’ ಸಿನಿಮಾನಲ್ಲಿ ಅದು ನಿಜವಾಯ್ತು. ನಾನು ಅಂದುಕೊಂಡ ಫಲವನ್ನು ಆ ಸಿನಿಮಾ ನೀಡಿತು’ ಎಂದಿದ್ದಾರೆ ರಾಜಮೌಳಿ.

ಇದೀಗ ‘ವಾರಣಾಸಿ’ ಹೆಸರಿನ ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡುತ್ತಿದ್ದು, ಸಿನಿಮಾನಲ್ಲಿ ಮಹೇಶ್ ಬಾಬು ನಾಯಕ, ಪ್ರಿಯಾಂಕಾ ಚೋಪ್ರಾ ನಾಯಕಿ. ಈ ಸಿನಿಮಾವನ್ನು ಹಾಲಿವುಡ್​ ಲೆವೆಲ್​​ನಲ್ಲಿ ರಾಜಮೌಳಿ ನಿರ್ದೇಶಿಸುತ್ತಿದ್ದಾರೆ. ಸಿನಿಮಾಕ್ಕೆ ಭಾರಿ ದೊಡ್ಡ ಬಜೆಟ್ ಹೂಡಿಕೆ ಮಾಡಲಾಗಿದೆ. ಸಿನಿಮಾದ ಬಿಡುಗಡೆ ಇನ್ನೂ ಒಂದು ವರ್ಷವಿದೆ. ಏಪ್ರಿಲ್ 07, 2027ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಾರಾಂತ್ಯಕ್ಕೆ ಜೀ5ನಲ್ಲಿ ನೋಡಿ ‘ರಾಕ್ಷಸ’; ಉತ್ತರ ಕರ್ನಾಟಕದ ಕಥೆಯಲ್ಲಿ ಕ್ರೈಮ್​ ಥ್ರಿಲ್ಲರ್ ಸರಣಿ – Kannada News | Rakshasa Web Series: Vijay Raghavendra’s Kannada Thriller on Zee5 North Karnataka Story

ಒಟಿಟಿ ವ್ಯಾಪ್ತಿ ತುಂಬಾನೇ ಹಿರಿದಾಗಿದೆ. ಸಾಕಷ್ಟು ಸಿನಿಮಾಗಳು, ಸರಣಿಗಳು ರಿಲೀಸ್ ಆಗುತ್ತಿವೆ. ಪರಭಾಷೆಗೆ ಹೋಲಿಕೆ ಮಾಡಿದರೆ ಕನ್ನಡದಲ್ಲಿ ವೆಬ್ ಸರಣಿಗಳ ಸಂಖ್ಯೆ ಕಡಿಮೆ. ಆದರೆ, ಜೀ5 ಹಲವು ವೆಬ್​ ಸೀರಿಸ್​​ಗಳನ್ನು ಕನ್ನಡಿಗರ ಮಡಿಲಿಗೆ ಹಾಕುತ್ತಾ ಇದೆ. ಈಗ ಉತ್ತರ ಕರ್ನಾಟಕ ಭಾಷೆಯಲ್ಲಿ ಸಿದ್ಧವಾದ ವೆಬ್ ಸೀರಿಸ್​​​ನ ವೀಕ್ಷಕರ ಮುಂದಿಡುತ್ತಿದೆ. ವೀಕೆಂಡ್​​​ನಲ್ಲಿ ಈ ಸರಣಿ ವೀಕ್ಷಣೆಗೆ ಒಂದೊಳ್ಳೆಯ ಆಯ್ಕೆ ಆಗಲಿದೆ. ಇದಕ್ಕಾಗಿ ವೀಕ್ಷಕರು ಕಾದಿದ್ದಾರೆ.

ವಿಜಯ್ ರಾಘವೇಂದ್ರ ಅವರು ಬಾಲ ಕಲಾವಿದನಾಗಿ, ಹೀರೋ ಆಗಿ ಮಿಂಚಿದ್ದಾರೆ. ಅವರ ವೃತ್ತಿ ಜೀವನದಲ್ಲಿ ಈವರೆಗೆ ಯಾವುದೇ ವೆಬ್ ಸರಣಿ ಮಾಡಿರಲಿಲ್ಲ. ‘ರಾಕ್ಷಸ’ ಅವರ ಮೊದಲ ವೆಬ್ ಸರಣಿ ಆಗಿದೆ. ಮಲಪ್ರಭಾ ನದಿ ತೀರದ ನಿಗೂಢ ಮೊಸಳೆ ದಾಳಿಗಳ ಸುತ್ತ ಈ ಕಥೆಯನ್ನು ಹೆಣೆಯಲಾಗಿದೆ. ಈ ಸರಣಿ ಸಾಕಷ್ಟು ಥ್ರಿಲ್ ನೀಡುವ ನಿರೀಕ್ಷೆ ಇದೆ.

ಈ ವೆಬ್ ಸರಣಿಯನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಅವರು ಉತ್ತರ ಕರ್ನಾಟಕ ಭಾಷೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಟ್ರೇಲರ್ ನೋಡಿದವರಿಗೆ ವಿಜಯ್ ರಾಘವೇಂದ್ರ ಹಾಗೂ ಮಯೂರಿ ಪಾತ್ರಕ್ಕೆ ಸರಿಯಾದ ಆಯ್ಕೆ ಎಂದು ಅನಿಸಿದೆ.

ಜೀ5 ಬಿಸ್ನೆಸ್ ಹೆಡ್ ದೀಪಕ್ ದೀಪಕ್ ಶ್ರೀರಾಮುಲು ಈ ಸರಣಿ ಬಗ್ಗೆ ಮಾಹಿತಿ ನೀಡಿದ್ದಾರೆ, ‘ವೆಬ್ ಸರಣಿ ಜರ್ನಿ ಶುರು ಮಾಡಿದಾಗ, ಶೃತಿ ನಾಯ್ಡು ‌ಪ್ರೊಡಕ್ಷನ್, ಪಿಆರ್ ಕೆ, ಕೆಆರ್​ಜಿ ಹಾಗೂ ತರುಣ್ ಸುಧೀರ್ ಅವರು ಸಾಥ್ ಕೊಟ್ಟಿದ್ದಾರೆ. ನಾವು ಕೇಳಿದಾಗ ಸಿರೀಸ್ ಮಾಡಲು ಮುಂದೆ ಬಂದರು. ಈ ಸರಣಿಯಲ್ಲಿ 22ರಿಂದ 25 ನಿಮಿಷದ ಏಳು ಎಪಿಸೋಡ್ ಇರಲಿವೆ ಎಂದಿದ್ದಾರೆ.

ಇದನ್ನೂ ಓದಿ: ಈ ವಾರವೂ ಒಟಿಟಿಗೆ ಬಂದಿವೆ ಹಿಟ್ ಸಿನಿಮಾಗಳು: ಪಟ್ಟಿ ಇಲ್ಲಿದೆ

ನಿರ್ಮಾಪಕ ತರುಣ್ ಸುಧೀರ್ ಮಾತನಾಡಿ, ‘89 ಪಾತ್ರಗಳು ಈ ಸಿರೀಸ್​ ಅಲ್ಲಿ ಇವೆ. ‌ಅವರೆಲ್ಲವೂ ಉತ್ತರ ಕರ್ನಾಟಕ ಭಾಗದವರು. ಉತ್ತರ ಕರ್ನಾಟಕದ ಶೈಲಿಯಲ್ಲೇ ಸರಣಿ ಇದೆ ಎಂಬುದೇ ವಿಶೇಷ’ ಎಂದರು ಅವರು. ರಾಕ್ಷಸ, ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಮೊದಲ ವೆಬ್ ಸಿರೀಸ್. ಸೈಕಲಾಜಿಕಲ್ ಕ್ರೈಂ ಥ್ರಿಲ್ಲರ್ ಜಾನರ್ ಒಳಗೊಂಡಿರುವ ಸರಣಿಯಲ್ಲಿ ವಿಜಯ ರಾಘವೇಂದ್ರ,ಮಯೂರಿ, ಅವಿನಾಶ್, ಮಾಳವಿಕ, ಅಪ್ಪಣ್ಣ ಮತ್ತು ಅಭಿಜಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಕ್ಷಸ ವೆಬ್ ಸೀರಿಸ್‌ಗೆ ಸುಹಾನ್ ಪ್ರಸಾದ್ ಮತ್ತು ಅಪೂರ್ವ ಕಥೆ ಒದಗಿಸಿದ್ದಾರೆ. ಹಾಗೇ ಸುಹಾನ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೆಂಡತಿಯ ಮೂಳೆ ಮುರಿಯುವವರೆಗೂ, ಗಾಯ ಆಗುವವರೆಗೂ ಹೊಡೀಬಹುದು, ತಾಲಿಬಾನ್​​ನ ಭಯಾನಕ ಕಾನೂನಿಂದ ಬೆಚ್ಚಿಬಿದ್ದ ಮಹಿಳೆಯರು – Kannada News | Taliban’s New Criminal Code Legalizes Domestic Violence in Afghanistan: A Blow to Women’s Rights

ಅಫ್ಘಾನಿಸ್ತಾನImage Credit source: Observer Research Foundation

ತಾಲಿಬಾನ್, ಫೆಬ್ರವರಿ 19: ಅಫ್ಘಾನಿಸ್ತಾನದಲ್ಲಿ ಅಧಿಕಾರ ವಹಿಸಿಕೊಂಡಿರುವ ತಾಲಿಬಾನ್(Taliban), 90 ಪುಟಗಳ ಹೊಸ ‘ಕ್ರಿಮಿನಲ್ ಕೋಡ್’ ಅನ್ನು ಜಾರಿಗೆ ತಂದಿದೆ. ಈ ಹೊಸ ಕೋಡ್ ಮಹಿಳೆಯರು ಮತ್ತು ಮಕ್ಕಳ ಮೇಲಿನ ಕೌಟುಂಬಿಕ ಹಿಂಸಾಚಾರಕ್ಕೆ ಕಾನೂನು ಮಾನ್ಯತೆ ನೀಡುತ್ತದೆ. ತಾಲಿಬಾನ್ ಸರ್ವೋಚ್ಚ ನಾಯಕ ಹಿಬತುಲ್ಲಾ ಸಹಿ ಮಾಡಿದ ಈ ಕಾನೂನು, ಗಂಡಂದಿರು ತಮ್ಮ ಹೆಂಡತಿಯರು ಮತ್ತು ಮಕ್ಕಳನ್ನು ದೈಹಿಕವಾಗಿ ಶಿಕ್ಷಿಸಬಹುದು ಎಂದು ಹೇಳುತ್ತದೆ. ಮೂಳೆ ಮುರಿಯಬಾರದು, ಗಾಯಗಳಾಗಬಾರದು ಅಷ್ಟೇ. ಈ ಕಾನೂನು 2009 ರಲ್ಲಿ ಮಹಿಳೆಯರಿಗಾಗಿ ಜಾರಿಗೆ ತಂದ ಹಳೆಯ ರಕ್ಷಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ.

ಹೊಸ ಕಾನೂನಿನಡಿಯಲ್ಲಿ ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದ ನಿಬಂಧನೆಗಳು ಆಘಾತಕಾರಿ. ಗಂಡನು ತನ್ನ ಹೆಂಡತಿಯನ್ನು ಹೊಡೆದರೆ, ಅದು ಗಂಭೀರ ಗಾಯವನ್ನು ಉಂಟುಮಾಡಿದರೂ, ಅವನಿಗೆ ಗರಿಷ್ಠ 15 ದಿನಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಮಹಿಳೆ ದೂರು ದಾಖಲಿಸಲು ಬಯಸಿದರೆ, ಅವಳು ಸಂಪೂರ್ಣವಾಗಿ ಮುಸುಕು ಧರಿಸಿ ನ್ಯಾಯಾಧೀಶರ ಮುಂದೆ ಹಾಜರಾಗಬೇಕು. ಅವಳೊಂದಿಗೆ ಪುರುಷ ರಕ್ಷಕ ಕೂಡ ಇರಬೇಕು, ಹಿಂಸೆ ಮಾಡಿದ ಪತಿ ಇರಬೇಕು. ಗಂಡನ ಅನುಮತಿಯಿಲ್ಲದೆ ಸಂಬಂಧಿಕರನ್ನು ಭೇಟಿ ಮಾಡುವ ವಿವಾಹಿತ ಮಹಿಳೆ ಮೂರು ತಿಂಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

ತಾಲಿಬಾನ್ ಸಮಾಜವನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಿದ್ದಾರೆ ಮತ್ತು ಅದರ ಆಧಾರದ ಮೇಲೆ ಶಿಕ್ಷೆಗಳನ್ನು ನಿರ್ಧರಿಸಿದ್ದಾರೆ.

ಮತ್ತಷ್ಟು ಓದಿ: ಅಫ್ಘಾನಿಸ್ತಾನ: ಹೆಣ್ಣುಮಕ್ಕಳಿರುವ ವಸತಿ ಕಟ್ಟಡಗಳಲ್ಲಿ ಕಿಟಕಿಯೂ ಇರಬಾರದೆಂದು ತಾಲಿಬಾನ್ ಆದೇಶ

ಧಾರ್ಮಿಕ ವಿದ್ವಾಂಸರು: ಅವರಿಗೆ ಸಲಹೆ ಮಾತ್ರ ನೀಡಲಾಗುವುದು, ಶಿಕ್ಷೆಯಿಲ್ಲ.
ಎಲೈಟ್ ವರ್ಗ: ಅವರನ್ನು ಕರೆಸಿ ವಿವರಿಸಲಾಗುವುದು
ಮಧ್ಯಮ ವರ್ಗ: ಅವರಿಗೆ ಜೈಲು ಶಿಕ್ಷೆ ವಿಧಿಸಬಹುದು
ಕೆಳವರ್ಗ: ಇವರು ಜೈಲು ಶಿಕ್ಷೆ ಮತ್ತು ದೈಹಿಕ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ, ಉದಾಹರಣೆಗೆ ಚಾಟಿಯೇಟು. ಆಶ್ಚರ್ಯಕರವೆಂದರೆ, ಚಾಟಿಯೇಟು ಹೊಡೆಯುವಿಕೆಯನ್ನು ಜೈಲು ಅಧಿಕಾರಿಗಳು ನಿರ್ವಹಿಸುವುದಿಲ್ಲ, ಬದಲಾಗಿ ಧಾರ್ಮಿಕ ಮುಖಂಡರು ಮಾಡುತ್ತಾರೆ.

ಈ ಹೊಸ ಕಾನೂನು ಅಫ್ಘಾನಿಸ್ತಾನದ ಜನರನ್ನು ಆವರಿಸಿಕೊಂಡಿದ್ದು, ಅದರ ಬಗ್ಗೆ ಚರ್ಚಿಸುವುದನ್ನೂ ಅಪರಾಧವೆಂದು ಪರಿಗಣಿಸಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ತಾಲಿಬಾನ್ ಮಹಿಳೆಯರ ಶಿಕ್ಷಣ ಮತ್ತು ಉದ್ಯೋಗದ ಮೇಲೆ ನಿರ್ಬಂಧಗಳನ್ನು ವಿಧಿಸಿತ್ತು, ಆದರೆ ಈ ಹೊಸ ಕ್ರಿಮಿನಲ್ ಕಾನೂನು ಅವರ ವೈಯಕ್ತಿಕ ಭದ್ರತೆಯನ್ನು ಮತ್ತಷ್ಟು ಕುಗ್ಗಿಸುತ್ತದೆ. ಅಂತರರಾಷ್ಟ್ರೀಯ ಒತ್ತಡದ ಹೊರತಾಗಿಯೂ, ಈ ಕಾನೂನಿನ ಬಗ್ಗೆ ತಾಲಿಬಾನ್ ಇನ್ನೂ ತಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ.

ಗಂಡನ ದೌರ್ಜನ್ಯ ವಿವರಿಸಲು ಪತ್ನಿ ನ್ಯಾಯಾಲಯಕ್ಕೆ ಬಂದರೆ ತನ್ನ ಗಾಯಗಳನ್ನು ತೋರಿಸಬೇಕು, ಆದರೆ ಇದೇ ದೇಶದಲ್ಲಿ ಮಹಿಳೆ ನ್ಯಾಯಾಧೀಶರ ಮುಂದೆ ಸಂಪೂರ್ಣವಾಗಿ ಬಟ್ಟೆ ಮುಚ್ಚಿಕೊಳ್ಳಬೇಕಾಗುತ್ತದೆ. ತಾನು ಅನುಭವಿಸಿದ ದೌರ್ಜನ್ಯದ ಬಗ್ಗೆ ದೂರು ನೀಡಲು ಮಹಿಳೆ ನ್ಯಾಯಾಲಯಕ್ಕೆ ಹೋಗಲು ಬಯಸಿದರೆ, ಅವಳು ಒಬ್ಬಂಟಿಯಾಗಿ ಹೋಗಲು ಸಾಧ್ಯವಿಲ್ಲ. ಕಾನೂನಿನ ಪ್ರಕಾರ, ಅವಳು ತನ್ನ ಪತಿ ಹಾಗೂ ಪುರುಷ ಸಂಬಂಧಿಯೊಂದಿಗೆ ಹೋಗಬೇಕು. ಈಗ ಪ್ರಶ್ನೆ ಉದ್ಭವಿಸುವುದೇನೆಂದರೆ ಅವಳನ್ನು ಹೊಡೆದ ಪತಿ ತನ್ನ ವಿರುದ್ಧ ಸಾಕ್ಷಿ ಹೇಳಲು ಅವಳನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಾನೆಯೇ? ಎಂಬುದು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವೈದ್ಯರ ಎಡವಟ್ಟು: ಹಲ್ಲು ನೋವು ಎಂದು ಆಸ್ಪತ್ರೆಗೆ ಹೋದ ಮಹಿಳೆ ಕೋಮಾಕ್ಕೆ – Kannada News | Anesthesia Mishap: Kalaburagi Woman in Coma After Tooth Pain Treatment

ಕಲಬುರಗಿ ಫೆ.19: ಹಲ್ಲು ನೋವಿನ ಸಮಸ್ಯೆಯೆಂದು ಆಸ್ಪತ್ರೆಗೆ ಹೋದ ಮಹಿಳೆಯೊಬ್ಬರು ಇಂದು ಸಾವಿನೊಂದಿಗೆ ಹೋರಾಡುತ್ತಿದ್ದಾರೆ. ಅನೆಸ್ತೇಶಿಯಾ (Anesthesia) ಇಂಜೆಕ್ಷನ್ ನೀಡಿದ ಕೆಲವೇ ಸಮಯದಲ್ಲಿ ಮಹಿಳೆ ಕೋಮಾಗೆ ಜಾರಿದ್ದು, ಕುಟುಂಬಸ್ಥರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ನಿವಾಸಿ ನಾಜಿಯಾ ಬೇಗಂ ಅವರು ತೀವ್ರ ಹಲ್ಲು ನೋವಿನಿಂದ ಬಳಲುತ್ತಿದ್ದರು. ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಚಿಕಿತ್ಸೆಯ ಭಾಗವಾಗಿ ವೈದ್ಯರು ಅರಿವಳಿಕೆ ಇಂಜೆಕ್ಷನ್ ನೀಡಿದ್ದರು. ಆದರೆ, ಇಂಜೆಕ್ಷನ್ ನೀಡಿದ ಕೆಲವೇ ನಿಮಿಷಗಳಲ್ಲಿ ನಾಜಿಯಾ ಅವರು ಪ್ರಜ್ಞೆ ತಪ್ಪಿ ಕೋಮಾಕ್ಕೆ ಹೋಗಿದ್ದಾರೆ.

ವೈದ್ಯರು ನಾಜಿಯಾ ಅವರಿಗೆ ಅತಿಯಾದ ಪ್ರಮಾಣದ ಅನೆಸ್ತೇಶಿಯಾ ನೀಡಿದ್ದೇ ಈ ಸ್ಥಿತಿಗೆ ಕಾರಣ ಎಂದು ಕುಟುಂಬಸ್ಥರು ದೂರಿದ್ದಾರೆ. ಕಳೆದ 40 ದಿನಗಳಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಈಗ ಗುಣಮುಖವಾಗುವ ಮೊದಲೇ “ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ” ಎಂದು ವೈದ್ಯರು ಸೂಚಿಸುತ್ತಿದ್ದಾರೆ. ಬಡ ಕುಟುಂಬದವರಾದ ನಾಜಿಯಾ ಅವರ ಮನೆಯವರು ಈಗ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಹಣವಿಲ್ಲದೆ ಕಣ್ಣೀರು ಹಾಕುತ್ತಿದ್ದಾರೆ.

ಕುಟುಂಬಸ್ಥರ ಆರೋಪವನ್ನು ಬಸವೇಶ್ವರ ಆಸ್ಪತ್ರೆಯ ವೈದ್ಯರು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. “ಮಹಿಳೆ ಕೋಮಾಗೆ ಹೋಗಲು ಅನೆಸ್ತೇಶಿಯಾ ಕಾರಣವಲ್ಲ, ಇದು ಬೇರೆ ಯಾವುದೋ ವೈದ್ಯಕೀಯ ಕಾರಣದಿಂದ ಸಂಭವಿಸಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಅರಿವಳಿಕೆ ನೀಡುವ ಮೊದಲು ರೋಗಿಯ ಇತಿಹಾಸ ಮತ್ತು ಅಲರ್ಜಿಗಳನ್ನು ಪರೀಕ್ಷಿಸಬೇಕಾಗುತ್ತದೆ. ಇನ್ನು ಇಂಜೆಕ್ಷನ್ ನೀಡಿದಾಗ ಮದ್ದಿಗೆ ದೇಹವು ತೀವ್ರ ಪ್ರತಿಕ್ರಿಯೆ ನೀಡುತ್ತದೆ. ಇದರಿಂದ ಮೆದುಳಿಗೆ ಆಮ್ಲಜನಕದ ಸರಬರಾಜು ಕಡಿಮೆಯಾಗುವುದು. ಹೃದಯ ಬಡಿತದಲ್ಲಿ ಏರಿಳಿತ ಉಂಟಾಗಿ ರಕ್ತದೊತ್ತಡ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಒಕ್ಕಲಿಗರಿಗೆ ಅವಕಾಶ ಸಿಕ್ಕಿದೆ, ದಲಿತರು, ಅಲ್ಪಸಂಖ್ಯಾತರಿಗೆ ಯಾಕೆ ಮುಖ್ಯಮಂತ್ರಿ ಸ್ಥಾನ ನೀಡಬಾರದು: ಕೆ.ಎನ್. ರಾಜಣ್ಣ

ಇನ್ನು ನಾಜಿಯಾ ಬೇಗಂ ಅವರ ಕುಟುಂಬಸ್ಥರು ವೈದ್ಯರ ವಿರುದ್ಧ ವೈದ್ಯಕೀಯ ನಿರ್ಲಕ್ಷ್ಯ ಅಡಿಯಲ್ಲಿ ದೂರು ನೀಡಲು ಮುಂದಾಗಿದ್ದಾರೆ. ಆದರೆ ಆದರೆ, ದೂರು ನೀಡುವ ಮೊದಲು ಆಸ್ಪತ್ರೆಯವರು ನೀಡುತ್ತಿರುವ “ಉಚಿತ ಚಿಕಿತ್ಸೆ”ಯನ್ನು ನಿಲ್ಲಿಸಿದರೆ ಮುಂದೇನು ಎಂಬ ಭಯವೂ ಕುಟುಂಬದವರನ್ನು ಕಾಡುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:38 pm, Thu, 19 February 26

Source link

ಸಚಿವ ಮಲ್ಲಿಕಾರ್ಜುನ್ ರಾಜೀನಾಮೆ ಪ್ರಸ್ತಾಪ: ಪುತ್ರನಿಗೆ ಬೈ ಎಲೆಕ್ಷನ್ ಟಿಕೆಟ್‌ಗಾಗಿ ರಾಜಕೀಯ ದಾಳ? – Kannada News | Minister SS Mallikarjuns Resignation Offer Sparks Davangere By Election Ticket Controversy

ಬೆಂಗಳೂರು, ಫೆಬ್ರವರಿ 19: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ತಮ್ಮನ್ನು ಸಚಿವ ಸ್ಥಾನದಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದಾರೆ. ವ್ಯವಹಾರಿಕ ಒತ್ತಡ ಮತ್ತು ಕ್ಷೇತ್ರದ ಕೆಲಸಗಳ ಕಾರಣ ನೀಡಿ, ಕಳೆದ ವಾರವೇ ಸಿಎಂ ಎದುರು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರಂತೆ. ಈ ಬೆಳವಣಿಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ.  ಸಾಮಾನ್ಯವಾಗಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಯುವ ಸಂದರ್ಭದಲ್ಲಿ, ಹಾಲಿ ಸಚಿವರೊಬ್ಬರು ರಾಜೀನಾಮೆ ನೀಡಲು ಮುಂದಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಇದು ತಮ್ಮ ಪುತ್ರನಿಗೆ ಉಪಚುನಾವಣೆಯಲ್ಲಿ ಟಿಕೆಟ್ ಪಡೆಯುವ ಉದ್ದೇಶದಿಂದ ಮಲ್ಲಿಕಾರ್ಜುನ್ ಅವರು ನಡೆಸಿದ ರಾಜಕೀಯ ತಂತ್ರಗಾರಿಕೆ ಇರಬಹುದೇ ಎಂಬ ಲೆಕ್ಕಾಚಾರವೂ ಶುರುವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಈ ಒಂದು ತಪ್ಪು ಸರಿಪಡಿಸದಿದ್ದರೆ ಟೀಮ್ ಇಂಡಿಯಾಗೆ ಅಪಾಯ ಕಟ್ಟಿಟ್ಟ ಬುತ್ತಿ! – Kannada News | Team India have dropped 9 catches so far in this T20 World Cup 2026

T20 World Cup 2026: ಕ್ಯಾಚಸ್ ವಿನ್ ಮ್ಯಾಚಸ್ ಎಂಬುದು ಕ್ರಿಕೆಟ್‌ನ ಅತ್ಯಂತ ಜನಪ್ರಿಯ ನಾಣ್ಣುಡಿ. ಫೀಲ್ಡಿಂಗ್ ಪಂದ್ಯದ ಫಲಿತಾಂಶವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದನ್ನು ಇದು ಒತ್ತಿಹೇಳುತ್ತದೆ. ಈ ಹೇಳಿಕೆ ಟೀಮ್ ಇಂಡಿಯಾಗೆ ಅನ್ವಯಿಸಲಿದೆಯಾ ಎಂದು ಕೇಳಿದ್ರೆ ಸದ್ಯದ ಮಟ್ಟಿಗೆ ಇಲ್ಲ ಎನ್ನಬಹುದು. ಏಕೆಂದರೆ ಕಳೆದ ನಾಲ್ಕು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಆಟಗಾರರು ಕೈ ಬಿಟ್ಟಿರುವುದು ಬರೋಬ್ಬರಿ 9 ಕ್ಯಾಚ್​ಗಳನ್ನು. ಇದಾಗ್ಯೂ ಭಾರತ ತಂಡ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಆದರೆ ಮುಂದಿನ ಸುತ್ತಿನಲ್ಲೂ ಇದೇ ತಪ್ಪು ಮಾಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಏಕೆಂದರೆ ಮೊದಲ ಸುತ್ತಿನಲ್ಲಿ ಟೀಮ್ ಇಂಡಿಯಾ ಯಾವುದೇ ಬಲಿಷ್ಠ ತಂಡವನ್ನು ಎದುರಿಸಿರಲಿಲ್ಲ. ಆದರೆ ದ್ವಿತೀಯ ಸುತ್ತಿನಲ್ಲಿ ಭಾರತದ ಎದುರಾಳಿಗಳು ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ.

ಅದರಲ್ಲೂ ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಆಟಗಾರರಿಗೆ ಜೀವದಾನ ನೀಡಿದ್ರೆ ಇಡೀ ಪಂದ್ಯದ ಚಿತ್ರಣ ಬದಲಿಸಬಲ್ಲರು. ಹೀಗಾಗಿ ಸೂಪರ್-8 ಸುತ್ತಿನ ಪಂದ್ಯಕ್ಕೂ ಟೀಮ್ ಇಂಡಿಯಾ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಿರುವುದು ಅನಿವಾರ್ಯ.

ಈ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ ಟೀಮ್ ಇಂಡಿಯಾಗೆ ಅಪಾಯ ತಪ್ಪಿದ್ದಲ್ಲ. ಏಕೆಂದರೆ ಕಳೆದ ಪಂದ್ಯವೊಂದರಲ್ಲೇ ಟೀಮ್ ಇಂಡಿಯಾ ಆಟಗಾರರು ಕೈ ಬಿಟ್ಟಿರುವುದು ಬರೋಬ್ಬರಿ 4 ಕ್ಯಾಚ್​ಗಳನ್ನು ಎಂಬುದು ಇಲ್ಲಿ ಉಲ್ಲೇಖಾರ್ಹ. ಅದು ಸಹ ನೆದರ್​ಲೆಂಡ್ಸ್​ ವಿರುದ್ಧ.

ಅಂದರೆ ಯಾವುದೇ ಒತ್ತಡ ಇಲ್ಲದಿದ್ದರೂ ಟೀಮ್ ಇಂಡಿಯಾ ಆಟಗಾರರು ಕಳಪೆ ಫೀಲ್ಡಿಂಗ್​ ಪ್ರದರ್ಶಿಸುತ್ತಿದ್ದಾರೆ. ಭಾರತೀಯ ಫೀಲ್ಡರ್​ಗಳ ವೀಕ್​ನೆಸ್​ನೊಂದಿಗೆ ಎದುರಾಳಿ ಬ್ಯಾಟರ್​ಗಳು ರನ್​ಗಳಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹೀಗಾಗಿ ಮುಂದಿನ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಫೀಲ್ಡಿಂಗ್​ನತ್ತ ಹೆಚ್ಚಿನ ಗಮನ ಹರಿಸುವುದು ಅನಿವಾರ್ಯ. ಅದರಲ್ಲೂ ಕ್ಯಾಚಿಂಗ್ ಅಭ್ಯಾಸದಲ್ಲಿ ಹೆಚ್ಚಿನ ಹೊತ್ತು ತೊಡಗಿಸಿಕೊಳ್ಳಬೇಕಿದೆ.

ಪಂದ್ಯವಾರು ಕೈಬಿಟ್ಟ ಕ್ಯಾಚ್‌ಗಳ ವಿವರ:

  • ಪಾಕಿಸ್ತಾನ್ ವಿರುದ್ಧ: ಕುಲದೀಪ್ ಯಾದವ್ 18ನೇ ಓವರ್‌ನಲ್ಲಿ ಸುಲಭ ಕ್ಯಾಚ್ ಬಿಟ್ಟರು. ಇದರಿಂದ ಹಾರ್ದಿಕ್ ಪಾಂಡ್ಯ ಅಸಮಾಧಾನಗೊಂಡಿದ್ದರು. ಅದೇ ಓವರ್‌ನಲ್ಲಿ ತಿಲಕ್ ವರ್ಮಾ ಕೂಡ ಕ್ಯಾಚ್ ಕೈಚೆಲ್ಲಿದ್ದರು.
  • ನೆದರ್​ಲೆಂಡ್ಸ್ ವಿರುದ್ಧ: ಸೂರ್ಯಕುಮಾರ್ ಮತ್ತು ರಿಂಕು ಸಿಂಗ್ ನೆದರ್​ಲೆಂಡ್ಸ್ ವಿರುದ್ಧ ಕ್ಯಾಚ್ ಹಿಡಿಯುವ ಭರದಲ್ಲಿ ಡಿಕ್ಕಿಯಾಗಿದ್ದರು. ಇದಾಗ್ಯೂ ಇಬ್ಬರು ಚೆಂಡು ಹಿಡಿದಿರಲಿಲ್ಲ. ಇನ್ನು ಇದೇ ಪಂದ್ಯದಲ್ಲಿ ತಿಲಕ್ ವರ್ಮಾ ಕೂಡ ಡೀಪ್ ಕವರ್‌ನಲ್ಲಿ ಮತ್ತೊಂದು ಕ್ಯಾಚ್ ಬಿಟ್ಟಿದ್ದರು. ಹಾಗೆಯೇ ಬುಮ್ರಾ ಬೌಲಿಂಗ್‌ನಲ್ಲಿ ಅಭಿಷೇಕ್ ಶರ್ಮಾ  ಕ್ಯಾಚ್  ಕೈಚೆಲ್ಲಿದ್ದರು. ಇದರ ಜೊತೆಗೆ ವಾಷಿಂಗ್ಟನ್ ಸುಂದರ್ ಕೂಡ ಒಂದು ಕ್ಯಾಚ್ ಹಿಡಿಯುವಲ್ಲಿ ವಿಫಲರಾಗಿದ್ದರು.
  • ಯುಎಸ್​ಎ ವಿರುದ್ಧ: ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಯುಎಸ್ಎ ವಿರುದ್ಧದ ಪಂದ್ಯದಲ್ಲಿ ಕ್ಯಾಚ್​ಗಳನ್ನು ಕೈಚೆಲ್ಲಿದ್ದರು.

ಇದನ್ನೂ ಓದಿ: T20 World Cup 2028: ಮುಂದಿನ ಟಿ20 ವಿಶ್ವಕಪ್​ಗೆ 12 ತಂಡಗಳು ಆಯ್ಕೆ

ಹೀಗೆ ಟೀಮ್ ಇಂಡಿಯಾ ಆಟಗಾರರು ಕಳೆದ ನಾಲ್ಕು ಪಂದ್ಯಗಳಲ್ಲಿ ಒಟ್ಟು 9 ಕ್ಯಾಚ್​ಗಳನ್ನು ಕೈಚೆಲ್ಲಿದ್ದಾರೆ. ವಿಶೇಷ ಎಂದರೆ ಐರ್ಲೆಂಡ್ (10) ತಂಡವನ್ನು ಹೊರತುಪಡಿಸಿದರೆ ಈ ಬಾರಿ ಅತೀ ಹೆಚ್ಚು ಕ್ಯಾಚ್ ಕೈಚೆಲ್ಲಿರುವುದು ಟೀಮ್ ಇಂಡಿಯಾ. ಹೀಗಾಗಿಯೇ ಸೂಪರ್-8 ಪಂದ್ಯಗಳಿಗೂ ಮುನ್ನ ಭಾರತೀಯ ಆಟಗಾರರು ಈ ತಪ್ಪನ್ನು ಸರಿಪಡಿಸಿಕೊಳ್ಳಲೇಬೇಕು. ಏಕೆಂದರೆ ಕ್ಯಾಚಸ್ ವಿನ್ ಮ್ಯಾಚಸ್.

Source link

ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ವಿಶೇಷ ಭತ್ಯೆ ನೀಡಿ: ಸಿಎಂಗೆ ಕಾಂಗ್ರೆಸ್​​ ಶಾಸಕ ರಂಗನಾಥ್ ಪತ್ರ – Kannada News | Kunigal MLA Ranganath Seeks Special Status, Incentives for Girls Marrying Farmers

ಸಿಎಂಗೆ ಶಾಸಕ ಡಾ. ಹೆಚ್​​. ಡಿ. ರಂಗನಾಥ್ ಪತ್ರImage Credit source: Tv9 Kannada

ತುಮಕೂರು, ಫೆಬ್ರವರಿ 19: ಇತ್ತೀಚಿಗೆ ಹುಡುಗರಿಗೆ ಮದುವೆ ಆಗಲು ಹುಡುಗಿಯರು ಸಿಗುವುದೇ ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ರೈತರು, ಹಳ್ಳಿಯಲ್ಲಿ ಇರುವವರು ಎಂದರಂತೂ ಮುಗೀತು. ಹೆಣ್ಣು ಕೊಡಲು ಮುಂದೆ ಬರುವವರೇ ಇಲ್ಲ ಎನ್ನುವ ಹಂತಕ್ಕೆ ಸಮಾಜ ತಲುಪಿದೆ. ಈ ನಡುವೆ ಕುಣಿಗಲ್​​ ಕ್ಷೇತ್ರದ ಕಾಂಗ್ರೆಸ್​​ ಶಾಸಕ ಡಾ. ಹೆಚ್​​. ಡಿ. ರಂಗನಾಥ್ ಅವರು ಸಿಎಂ ಸಿದ್ದರಾಮಯ್ಯನವರಿಗೆ ಬರೆದಿರುವ ಪತ್ರವೊಂದು ಭಾರಿ ವೈರಲ್​​ ಆಗಿದೆ.

ರಂಗನಾಥ್​​ ಬರೆದಿರುವ ಪತ್ರದಲ್ಲೇನಿದೆ?

ಸಿಎಂಗೆ ವಿಭಿನ್ನ ಪತ್ರ ಬರೆದು ಗಮನ ಸೆಳೆದ ಶಾಸಕ ಡಾ.ರಂಗನಾಥ್, ಕೃಷಿಯಲ್ಲಿ ತೊಡಗಿರುವ ತಾಲೂಕಿನ ಗಂಡು ಮಕ್ಕಳನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಮುಂಬರುವ ಅಧಿವೇಶನದಲ್ಲಿ ವಿಶೇಷ ಭತ್ಯೆ ಹಾಗೂ ಸ್ಥಾನಮಾನ ಘೋಷಿಸುವಂತೆ ಆಗ್ರಹಿಸಿದ್ದಾರೆ. ನನ್ನ ಮತ ಕ್ಷೇತ್ರ ಕುಣಿಗಲ್ ತಾಲ್ಲೂಕು ಗ್ರಾಮೀಣ ಪ್ರದೇಶವಾಗಿದ್ದು, ವ್ಯವಸಾಯ ಅವಲಂಭನೆ ಹೆಚ್ಚಿದೆ. ಹೀಗಾಗಿ ಗ್ರಾಮಗಳಲ್ಲಿ ಹೆಚ್ಚಿನ ಯುವಕರು ವಾಸವಿದ್ದು, ಅವರು ವ್ಯವಸಾಯ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಇವರನ್ನು ಮದುವೆ ಆಗಲು ಹೆಣ್ಣು ಮಕ್ಕಳು ನಿರಾಕರಿಸುತ್ತಿದ್ದು, ಮೂವತ್ತು ವರ್ಷ ದಾಟಿದರೂ ಅವರ ವಿವಾಹ ನಡೆಯುತ್ತಿಲ್ಲ. ಹೀಗಾಗಿ ಅವರು ತೊಂದರೆಗೆ ಸಿಲುಕಿದ್ದು,  ವ್ಯವಸಾಯ ಮಾಡಿಕೊಂಡಿರುವವರನ್ನು ಮದುವೆ ಆಗುವ ಹೆಣ್ಣು ಮಕ್ಕಳಿಗೆ ಮುಂಬರುವ ಅಧಿವೇಶನದಲ್ಲಿ ವಿಶೇಷ ಭತ್ಯೆ, ವಿಶೇಷ ಸ್ಥಾನಮಾನವನ್ನು ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮದುವೆಗೆ ಬಂದ ಮಹಿಳೆ ನಾಪತ್ತೆ ಕೇಸ್​​; ಪತಿ ಸ್ನೇಹಿತನ ಮನೆಯಲ್ಲಿ ಮಹಿಳೆ ಸಿಕ್ಕಿಬಿದ್ದಿದ್ದೇಗೆ?

ರೈತಾಪಿ ಕುಟುಂಬಗಳ ಹುಡುಗರಿಗೆ ಮದುವೆಗೆ ಹುಡುಗಿ ಸಿಗದ ವಿಚಾರವನ್ನು ಈ ಹಿಂದೆ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅವರೂ ಪ್ರಸ್ತಾಪಿಸಿ ಗಮನ ಸೆಳೆದಿದ್ದರು. ರೈತರು ಮತ್ತು ಕೃಷಿ ಕಾರ್ಮಿಕರ ಮಕ್ಕಳನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ 10 ಲಕ್ಷ ಠೇವಣಿ ಇಡುವ ಯೋಜನೆಯನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದ್ದರು. ಹುಡುಗಿಯರು ಹೆಚ್ಚಾಗಿ ಸರ್ಕಾರಿ ನೌಕರರು, ಸಿಟಿಗಳಲ್ಲಿರುವ ಗಂಡು ಮಕ್ಕಳೇ ಬೇಕು ಎನ್ನುತ್ತಿದ್ದಾರೆ. ಹೀಗಾಗಿ ಹಳ್ಳಿಗಳಲ್ಲಿ ರೈತರು, ಕೃಷಿ ಕಾರ್ಮಿಕರು, ಕೂಲಿಕಾರ್ಮಿಕರ ಮಕ್ಕಳನ್ನು ಮದುವೆ ಆಗಲು ಯಾರೂ ಒಪ್ಪದ ಕಾರಣ ಸರ್ಕಾರ ಹೊಸ ಯೋಜನೆ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:05 pm, Thu, 19 February 26

Source link

ಸಿನಿಮಾ ಆಗಲಿದೆ ಆಪರೇಷನ್ ಸಿಂಧೂರ್: ನಿರ್ದೇಶಕ ಯಾರು? – Kannada News | Operation Sindhur is likely to became movie, Vivek Agnihotri directing it

ಭಾರತೀಯ ಸೇನೆಯ ವೀರತೆ, ಶೂರತೆ ಕುರಿತಾಗಿ ಬಾಲಿವುಡ್​ನಲ್ಲಿ ಹಲವಾರು ಸಿನಿಮಾಗಳು (Cinema) ಈ ವರೆಗೆ ಬಂದಿವೆ. ಈಗಲೂ ಬರುತ್ತಿವೆ. ಉರಿ ದಾಳಿಯ ಪ್ರತಿಯಾಗಿ ಮಾಡಲಾದ ಸರ್ಜಿಕಲ್ ಸ್ಟೈಕ್ ಅನ್ನು ಆಧರಿಸಿ ‘ಉರಿ’ ಹೆಸರಿನ ಸಿನಿಮಾ ಬಂದಿತ್ತು. ಇದೀಗ ಉಗ್ರರ ಪೆಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ಮಾಡಿದ ಆಪರೇಷನ್ ಸಿಂಧೂರ್ ಕುರಿತಾದ ಸಿನಿಮಾ ಬರಲಿದೆ. ಇದಕ್ಕಾಗಿ ತಯಾರಿ ಆರಂಭವಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’, ‘ದಿ ವ್ಯಾಕ್ಸಿನ್ ವಾರ್’ ಮತ್ತು ‘ದಿ ಬೆಂಗಾಲ್ ಫೈಲ್ಸ್’ ನಂತಹ ಸಿನಿಮಾಗಳನ್ನು ಮಾಡಿರುವ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇದೀಗ ಆಪರೇಷನ್ ಸಿಂಧೂರ್ ಅನ್ನು ತೆರೆಗೆ ತರಲು ಸಜ್ಜಾಗಿದ್ದಾರೆ.

2025ರ ಏಪ್ರಿಲ್ 22 ರಂದು ಜಮ್ಮು ಕಾಶ್ಮೀರದ ಪೆಹಲ್ಗಾಮ್​​ನಲ್ಲಿ ದಾಳಿ ಮಾಡಿದ್ದ ಉಗ್ರರು 26 ಮಂದಿ ಪ್ರವಾಸಿಗರನ್ನು ಕೊಂದಿದ್ದರು. ಅದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಟಾರ್ಗೆಟೆಡ್ ಅಟ್ಯಾಕ್ ಅನ್ನು ಮಾಡಿತ್ತು. ಇದಕ್ಕೆ ಆಪರೇಷನ್ ಸಿಂಧೂರ್ ಎಂದು ಹೆಸರಿಡಲಾಗಿತ್ತು. ಈ ದಾಳಿಯಲ್ಲಿ ಪಾಕಿಸ್ತಾನದ ಹಲವು ಉಗ್ರ ನೆಲೆಗಳು ಈ ದಾಳಿಯಲ್ಲಿ ಧ್ವಂಸವಾದವು ಎನ್ನಲಾಗಿದೆ. ಇದೇ ಆಪರೇಷನ್ ಸಿಂಧೂರ್ ಅನ್ನು ಇರಿಸಿಕೊಂಡು ಸಿನಿಮಾ ಮಾಡಲಾಗುತ್ತಿದೆ.

ಆಪರೇಷನ್ ಸಿಂಧೂರ್ ಕುರಿತಾದ ಸಿನಿಮಾಕ್ಕೆ ಅದೇ ಹೆಸರನ್ನೇ ಇಡಲಾಗಿದ್ದು, ಸಿನಿಮಾ ಕುರಿತಾಗಿ ಕೆಲಸ ಮಾಡಲು ವಿವೇಕ್ ಅಗ್ನಿಹೋತ್ರಿ ಆರಂಭಿಸಿದ್ದಾರಂತೆ. ಆಪರೇಷನ್ ಸಿಂಧೂರದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ತೊಡಗಿಸಿಕೊಂಡಿದ್ದ ಹಿರಿಯ ಸೈನ್ಯಾಧಿಕಾರಿಗಳನ್ನು ವಿವೆಕ್ ಅಗ್ನಿಹೋತ್ರಿ ಭೇಟಿ ಮಾಡಿದ್ದು ಆಪರೇಷನ್ ಸಿಂಧೂರ ಕುರಿತು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಬಾಲಿವುಡ್​​ನಲ್ಲಿ ಪಿಆರ್​ ತಂತ್ರ ಹೇಗೆ ನಡೆಯುತ್ತೆ ನೋಡಿ; ಎಕ್ಸ್​​ಪೋಸ್ ಮಾಡಿದ ಫ್ಯಾನ್ಸ್

ಸದ್ಯಕ್ಕೆ ಸಿನಿಮಾದ ಚಿತ್ರಕತೆಗಾಗಿ ಸರಕು ಕಲೆಹಾಕುವ ಕಾರ್ಯ ಚಾಲ್ತಿಯಲ್ಲಿದ್ದು, ಸಿನಿಮಾನಲ್ಲಿ ನಟಿಸಲಿರುವ ಕಲಾವಿದರ ಆಯ್ಕೆ ಇನ್ನಿತರೆಗಳು ಇನ್ನೂ ಅಂತಿಮವಾಗಬೇಕಿದೆ. ತಮ್ಮ ಹೊಸ ಸಿನಿಮಾದ ಬಗ್ಗೆ ಮಾತನಾಡಿರುವ ವಿವೇಕ್ ಅಗ್ನಿಹೋತ್ರಿ, ‘ಇದು ಕೇವಲ ಒಂದು ಸಿನಿಮಾವಲ್ಲ, ಇದು ಭಾರತದ ಅನ್-ಸಂಗ್ ವಾರಿಯರ್ಸ್‌ಗೆ ಸಲ್ಲಿಸುವ ಗೌರವ’ ಎಂದಿದ್ದಾರೆ.

ವಿವೇಕ್ ಅಗ್ನಿಹೋತ್ರಿ ತಮ್ಮನ್ನು ತಾವು ರಾಷ್ಟ್ರೀಯವಾದಿ ನಿರ್ದೇಶಕ ಎಂದು ಕರೆದುಕೊಂಡಿದ್ದು, ಈ ಹಿಂದೆ ಅವರು ನಿರ್ದೇಶಿಸಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಭಾರಿ ಯಶಸ್ವಿ ಆಗುವ ಜೊತೆಗೆ ವಿವಾದವನ್ನೂ ಸಹ ಹುಟ್ಟು ಹಾಕಿತ್ತು. ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾಕ್ಕೂ ಅದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆಡಳಿತ ಪಕ್ಷದ ಪರವಾದ ಸಿನಿಮಾಗಳನ್ನು ಮಾಡುತ್ತಾರೆ ಎಂಬ ಟೀಕೆ ವಿವೇಕ್ ಅವರ ಮೇಲಿದ್ದು, ಇದೀಗ ಅವರು ಸೈನ್ಯ ನಿರ್ದಿಷ್ಟ ಆಪರೇಷನ್ ಬಗ್ಗೆ ಸಿನಿಮಾ ಮಾಡಲು ಮುಂದಾಗಿರುವುದು ಕುತೂಹಲ ಮೂಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link