Category Archives: Blog

Your blog category

ಶಿರಸಿ: 36 ವರ್ಷಗಳ ಬಳಿಕ 400 ಕೋಟಿ ರೂ. ಮೌಲ್ಯದ 379 ಎಕರೆ ಅರಣ್ಯ ಭೂಮಿ ವಶಕ್ಕೆ ಪಡೆಯಲು ಇಲಾಖೆ ಸಜ್ಜು – Kannada News | Sirsi Forest Land Recovery: Karnataka Forest Department to Reclaim Rs 400 Crore Worth 379 Acre Land After 36 Year Delay

ಅರಣ್ಯ ಭೂಮಿ (ಸಾಂದರ್ಭಿಕ ಚಿತ್ರ)Image Credit source: Getty Images

ಬೆಂಗಳೂರು, ಜೂನ್ 15: ರಾಜ್ಯ ರಾಜಕಾರಣ ಹಾಗೂ ಆಡಳಿತ ವಲಯದಲ್ಲಿ ದೀರ್ಘಕಾಲದ ಕಾನೂನು ಹೋರಾಟಕ್ಕೆ ಕಾರಣವಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅರಣ್ಯ ಭೂಮಿ ವಿವಾದ ಕೊನೆಗೂ ತೆರೆಬೀಳುವ ಹಂತಕ್ಕೆ ಬಂದಿದೆ. ಸುಮಾರು 36 ವರ್ಷಗಳ ಸುದೀರ್ಘ ವಿಳಂಬದ ನಂತರ, ಶಿರಸಿ ಮತ್ತು ಬನವಾಸಿ ಹೆದ್ದಾರಿ ಪಕ್ಕದಲ್ಲಿರುವ 400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 379 ಎಕರೆ ಅತ್ಯಂತ ಸೂಕ್ಷ್ಮ ಹಾಗೂ ಪವಿತ್ರ ಅರಣ್ಯ ಭೂಮಿಯನ್ನು ಮರಳಿ ವಶಕ್ಕೆ ಪಡೆಯಲು ಕರ್ನಾಟಕ ಅರಣ್ಯ ಇಲಾಖೆ ಸಂಪೂರ್ಣ ಸಜ್ಜಾಗಿರುವ ಬಗ್ಗೆ ವರದಿಯಾಗಿದೆ.

ಮುಖ್ಯಾಂಶಗಳು

  • 400 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿಗೆ ಮುಕ್ತಿ.
  • 36 ವರ್ಷಗಳ ದೀರ್ಘ ಕಾನೂನು ಸಮರಕ್ಕೆ ಅಂತ್ಯ.
  • ಆನೆಗಳ ಸಂಚಾರ ವಲಯದ ರಕ್ಷಣೆಗೆ ಇಲಾಖೆ ಕ್ರಮ.

ಶಿರಸಿ ಅರಣ್ಯ ಭೂಮಿ ವಿವಾದದ ಹಿನ್ನೆಲೆ

ಈ ಇಡೀ ವಿವಾದ ಶುರುವಾಗಿದ್ದು, 1969ರ ಕಾಲದಲ್ಲಿ. ಆಗಿನ ಮೈಸೂರು ಸರ್ಕಾರವು ಶಿರಸಿ ತಾಲೂಕಿನ ಮೂರು ಹಳ್ಳಿಗಳಲ್ಲಿ ಹರಡಿಕೊಂಡಿರುವ ಈ ಅರಣ್ಯ ಭೂಮಿಯನ್ನು ‘ಶ್ರೀ ಕಾಮಧೇನು ಸಹಕಾರಿ ಹಾಲು ಮತ್ತು ಹಣ್ಣು ಸಂಸ್ಕರಣಾ ಸಂಘ’ಕ್ಕೆ 30 ವರ್ಷಗಳ ಅವಧಿಗೆ ಲೀಸ್​ಗೆ (ಗುತ್ತಿಗೆ) ನೀಡಿತ್ತು. ಆದರೆ, 1976ರಲ್ಲಿ ಸರ್ಕಾರ ಮತ್ತೊಂದು ಆದೇಶ ಹೊರಡಿಸಿ ಈ ಗುತ್ತಿಗೆ ಅವಧಿಯನ್ನು 20 ವರ್ಷಗಳಿಗೆ ಕಡಿತಗೊಳಿಸಿತು. ಇದರನ್ವಯ ಈ ಗುತ್ತಿಗೆ ಅವಧಿಯು 1989ರಲ್ಲೇ ಅಧಿಕೃತವಾಗಿ ಮುಕ್ತಾಯಗೊಂಡಿತ್ತು. ಆದರೆ, ಪ್ರಭಾವಿ ಭೂಮಾಲೀಕರು ಹಾಗೂ ರಾಜಕೀಯ ಒತ್ತಡದ ಕಾರಣದಿಂದಾಗಿ ಇಲಾಖೆಗೆ ಈ ಭೂಮಿಯನ್ನು ವಶಕ್ಕೆ ಪಡೆಯಲು ಸಾಧ್ಯವಾಗಿರಲಿಲ್ಲ.

ಕಾನೂನು ಜಟಾಪಟಿ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯ

1980ರಲ್ಲಿ ಕೇಂದ್ರ ಸರ್ಕಾರ ‘ಅರಣ್ಯ ಸಂರಕ್ಷಣಾ ಕಾಯ್ದೆ’ಯನ್ನು ಜಾರಿಗೆ ತಂದಿದ್ದರಿಂದ, ಕೇಂದ್ರದ ಅನುಮತಿಯಿಲ್ಲದೆ ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗಳಿಗೆ ಬಳಸುವಂತಿರಲಿಲ್ಲ. ಈ ಹಿನ್ನೆಲೆಯಲ್ಲಿ 1993ರಲ್ಲಿ ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (DCF) ಜಾಗ ಖಾಲಿ ಮಾಡುವಂತೆ ಸಹಕಾರಿ ಸಂಘಕ್ಕೆ ನೋಟಿಸ್ ನೀಡಿದ್ದರು. ಆದರೆ, ಅಧಿಕಾರಿಗಳು ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 64A ಅಡಿಯಲ್ಲಿ ಕ್ರಮ ಕೈಗೊಳ್ಳುವ ಬದಲಿಗೆ ಕೇವಲ ಲೀಗಲ್ ನೋಟಿಸ್ ನೀಡಿದ್ದರಿಂದ, ಸಂಘವು ಸಿವಿಲ್ ನ್ಯಾಯಾಲಯ ಹಾಗೂ ಹೈಕೋರ್ಟ್ ಮೆಟ್ಟಿಲೇರಿ ದಶಕಗಳ ಕಾಲ ಕಾನೂನು ಹೋರಾಟ ಮುಂದುವರಿಯುವಂತೆ ಮಾಡಿತು. 2010 ರಿಂದ 2013ರ ನಡುವೆ ಲೀಸ್ ನವೀಕರಿಸದಿರಲು ಮತ್ತು 1.17 ಕೋಟಿ ರೂ. ಬಾಕಿ ಬಾಡಿಗೆಯೊಂದಿಗೆ ಭೂಮಿ ವಶಕ್ಕೆ ಪಡೆಯಲು ಸರ್ಕಾರ ಆದೇಶಿಸಿದರೂ ಅಧಿಕಾರಿಗಳ ಮೌನದಿಂದಾಗಿ ಫೈಲ್ ಧೂಳು ಹಿಡಿದಿತ್ತು ಎಂಬುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ.

ಕೊನೆಗೂ ಎಚ್ಚೆತ್ತುಕೊಂಡ ಇಲಾಖೆ ಜನವರಿ 2026ರಲ್ಲಿ ಸೆಕ್ಷನ್ 64A ಅಡಿಯಲ್ಲಿ ತೆರವು ನೋಟಿಸ್ ಜಾರಿ ಮಾಡಿತ್ತು. ಇದರ ವಿರುದ್ಧ ಸಂಘವು ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (CCF) ಟಿ. ಹೀರಾಲಾಲ್ ಅವರು ವಜಾಗೊಳಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಆದೇಶಗಳು ಹಾಗೂ ಬನವಾಸಿ ವಲಯ ಅರಣ್ಯಾಧಿಕಾರಿಗಳು ನೀಡಿರುವ ವರದಿಯನ್ನು ಉಲ್ಲೇಖಿಸಿರುವ ಅವರು, ಈ ಪ್ರದೇಶದಲ್ಲಿ ಆನೆಗಳು ಸೇರಿದಂತೆ ವನ್ಯಜೀವಿಗಳ ನಿಯಮಿತ ಸಂಚಾರವಿದ್ದು, ಇದು ಅತ್ಯಂತ ಪರಿಸರ ಸೂಕ್ಷ್ಮ ವಲಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ತಕ್ಷಣವೇ ಜಾಗ ಖಾಲಿ ಮಾಡುವಂತೆ ಮತ್ತು ಅಲ್ಲಿರುವ ಕಟ್ಟಡಗಳನ್ನು ಅವರದೇ ವೆಚ್ಚದಲ್ಲಿ ತೆರವುಗೊಳಿಸುವಂತೆ ಆದೇಶಿಸಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮಿ ಹಣದಿಂದ ಸರ್ಕಾರಿ ಶಾಲೆಯ ಅಡುಗೆ ಕೋಣೆ ನವೀಕರಣ!

ಈ ಕುರಿತು ಪ್ರತಿಕ್ರಿಯಿಸಿರುವ ಸಿರ್ಸಿ ಡಿಸಿಎಫ್ ಸಂದೀಪ್ ಸೂರ್ಯವಂಶಿ, ‘ಸಿಸಿಎಫ್ ಆದೇಶ ನಮಗೆ ತಲುಪಿದೆ. ಕಾನೂನಿನ ಪ್ರಕಾರ ನಿವಾಸಿಗಳಿಗೆ ನಿರ್ದಿಷ್ಟ ಸಮಯ ನೀಡಿ ಶೀಘ್ರದಲ್ಲೇ ಭೂಮಿಯನ್ನು ನಮ್ಮ ವಶಕ್ಕೆ ಪಡೆಯಲಿದ್ದೇವೆ’ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕ-ಇರಾನ್ ಯುದ್ಧ ಅಂತ್ಯ: ಕಚ್ಚಾ ತೈಲ ಬೆಲೆಯಲ್ಲಿ ಒಂದೇ ದಿನ ಭಾರಿ ಇಳಿಕೆ! ಪೆಟ್ರೋಲ್, ಡೀಸೆಲ್ ದರ ಕಡಿತ ನಿರೀಕ್ಷೆ – Kannada News | Global Crude Oil Prices Crash by 4 percent to 80 Dollar as US Iran Peace Deal Raises Hope for Cheaper Petrol and Diesel

ನವದೆಹಲಿ, ಜೂನ್ 15: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಗೆ ಬ್ರೇಕ್ ಬಿದ್ದ ಬೆನ್ನಲ್ಲೇ ಜಾಗತಿಕ ಕಚ್ಚಾ ತೈಲ ಬೆಲೆ ಗಣನೀಯವಾಗಿ ಕುಸಿತ ಕಂಡಿದೆ. ಯುದ್ಧ ವಿರಾಮದ ಘೋಷಣೆ ಮತ್ತು ಉಭಯ ದೇಶಗಳ ನಡುವೆ ಒಪ್ಪಂದದ ನಿರೀಕ್ಷೆಯಿಂದಾಗಿ ಬ್ರೆಂಟ್ ಕ್ರೂಡ್ ಬೆಲೆ ಒಂದೇ ದಿನದಲ್ಲಿ ಶೇಕಡಾ 4ರಷ್ಟು ಕುಸಿತ ಕಂಡು 80 ಡಾಲರ್​ಗೆ ಬಂದಿಳಿದಿದೆ. ಈ ಹಿಂದೆ ಯುದ್ಧದ ಭೀತಿಯಿಂದಾಗಿ ಕಚ್ಚಾ ತೈಲ ಬೆಲೆ ಗಗನಕ್ಕೇರಿ, ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಹಾಗೂ ಅಡುಗೆ ಅನಿಲದ ಬೆಲೆಯೂ ಏರಿಕೆಯಾಗಿ ಜನಸಾಮಾನ್ಯರು ಆತಂಕದಲ್ಲಿದ್ದರು. ಇದೀಗ ಹಾರ್ಮುಝ್ ಜಲಸಂಧಿ ಮುಕ್ತವಾಗಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದು, ಹಡಗುಗಳ ಸಂಚಾರ ಸುಗಮವಾಗಲಿದೆ.

ಜಾಗತಿಕ ಮಟ್ಟದಲ್ಲಿ ನಿರ್ಮಾಣವಾಗಿದ್ದ ಆರ್ಥಿಕ ತಲ್ಲಣ ಸದ್ಯಕ್ಕೆ ನಿವಾರಣೆಯಾಗುವ ಲಕ್ಷಣಗಳು ಗೋಚರಿಸಿದ್ದು, ಇಂಧನ ಬೆಲೆ ಇಳಿಕೆಯಾಗುವ ನಿರೀಕ್ಷೆ ದಟ್ಟವಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯ ನಿರೀಕ್ಷೆ ಮೂಡಿದೆ. ಇದು ವ್ಯಾಪಾರಸ್ಥರು, ವಾಹನ ಸವಾರರು ಮತ್ತು ಗೃಹ ಬಳಕೆಯ ಅನಿಲ ಬಳಸುವವರಿಗೆ ದೊಡ್ಡ ಮಟ್ಟದ ನೆಮ್ಮದಿ ನೀಡಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪಾಕ್ ಪಡೆಯನ್ನು ಮಕಾಡೆ ಮಲಗಿಸಿ ವಿಶ್ವ ದಾಖಲೆ ಬರೆದ ದೀಪ್ತಿ ಶರ್ಮಾ! – Kannada News | Deepti Sharma Makes History in Womens T20I

ಭಾರತದ ಸ್ಟಾರ್ ಆಲ್-ರೌಂಡರ್ ದೀಪ್ತಿ ಶರ್ಮಾ ಅಂತಾರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಜೂನ್ 14, 2026 ರಂದು ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಆರನೇ ಪಂದ್ಯದಲ್ಲಿ ದೀಪ್ತಿ ಸ್ಪಿನ್ ಮೋಡಿ ಮಾಡಿದ್ದರು. ಈ ಸ್ಪಿನ್ ಮೋಡಿಯೊಂದಿಗೆ ಪಾಕ್ ಪಡೆಯನ್ನು ಮಕಾಡೆ ಮಲಗಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ದೀಪ್ತಿ ವಿಶ್ವ ದಾಖಲೆ:

  • ಅತ್ಯಧಿಕ ವಿಕೆಟ್: ದೀಪ್ತಿ ಶರ್ಮಾ ಮಹಿಳಾ ಟಿ20 ಅಂತಾರಾಷ್ಟ್ರೀಯ (WT20I) ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
  • 166 ವಿಕೆಟ್​: 145ನೇ ಟಿ20 ಪಂದ್ಯವನ್ನಾಡಿದ ದೀಪ್ತಿ, ವೃತ್ತಿಜೀವನದ 166ನೇ ವಿಕೆಟ್ ಪಡೆಯುವ ಮೂಲಕ ಥಾಯ್ಲೆಂಡ್‌ನ ಸ್ಪಿನ್ನರ್ ಥಿಪಾಟ್ಚಾ ಪುತ್ತವಾಂಗ್ (165 ವಿಕೆಟ್) ಅವರ ಜಾಗತಿಕ ದಾಖಲೆಯನ್ನು ಮುರಿದಿದ್ದಾರೆ.
  • ವಿಶೇಷ ಸಾಧನೆ: ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಬೌಲರ್ ಒಬ್ಬರು ದಾಖಲಿಸಿದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ (5/10) ಇದಾಗಿದೆ.
  •  ಶ್ರೇಷ್ಠ ಪ್ರದರ್ಶನ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಕೇವಲ 10 ರನ್ ನೀಡಿ 5 ಪ್ರಮುಖ ವಿಕೆಟ್ ಕಸಿದುಕೊಂಡು ಭಾರತ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ.

ಟೀಮ್ ಇಂಡಿಯಾಗೆ ಭರ್ಜರಿ ಜಯ:

ಇಂಗ್ಲೆಂಡ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 44 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ 68 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಭಾರತ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 170 ರನ್ ಕಲೆಹಾಕಿತು.

171 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡಕ್ಕೆ ದೀಪ್ತಿ ಶರ್ಮಾ ಆಘಾತದ ಮೇಲೆ ಆಘಾತ ನೀಡಿದರು. ಪರಿಣಾಮ ಪಾಕ್ ಪಡೆ 17 ಓವರ್​ಗಳಲ್ಲಿ 106 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 64 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಇದನ್ನೂ ಓದಿ: 100 ಓವರ್​, 600 ಎಸೆತಗಳು: ವೈಭವ್ ಸೂರ್ಯವಂಶಿ ಸಿಕ್ರೇಟ್ ಬಹಿರಂಗ!

ಇನ್ನು ಈ ಪಂದ್ಯದಲ್ಲಿ 4 ಓವರ್​ಗಳನ್ನು ಎಸೆದ ದೀಪ್ತಿ ಶರ್ಮಾ ಕೇವಲ 10 ರನ್ ನೀಡಿ 5 ವಿಕೆಟ್ ಕಬಳಿಸಿದರು. ಈ ಭರ್ಜರಿ ಪ್ರದರ್ಶನದ ಫಲದೊಂದಿಗೆ ದೀಪ್ತಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

Source link

ಮೊದಲ ಬಾರಿಗೆ ಅವಳಿ ಮಕ್ಕಳ ಫೋಟೋ ಹಂಚಿಕೊಂಡ ರಾಮ್ ಚರಣ್-ಉಪಾಸನಾ – Kannada News | Ram Charan Upasana Share First Photo of Twin Babies Shivram and Anveera on Anniversary

ಟಾಲಿವುಡ್ ನಟ ರಾಮ್ ಚರಣ್ ಹಾಗೂ ಅವರ ಪತ್ನಿ ಉಪಾಸನಾ ಕೊನಿಡೇಲ ತಮ್ಮ 14ನೇ ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ. ಈ ವಿಶೇಷ ದಿನದ ಅಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಪರೂಪದ ಫ್ಯಾಮಿಲಿ ಫೋಟೋ ಒಂದನ್ನು ಹಂಚಿಕೊಂಡಿರುವ ದಂಪತಿ, ತಮ್ಮ ನವಜಾತ ಅವಳಿ ಮಕ್ಕಳಾದ ಶಿವ್​ರಾಮ್ ಮತ್ತು ಅನ್ವೀರಾ ದೇವಿ ಅವರ ಮೊದಲ ಝಲಕ್ ಅನ್ನು ಸಾರ್ವಜನಿಕವಾಗಿ ರಿವೀಲ್ ಮಾಡಿದ್ದಾರೆ.

ಈ ಮೊದಲು ರಾಮ್ ಚರಣ್-ಉಪಾಸನಾ ದಂಪತಿಗೆ ಕ್ಲಿನ್ ಕಾರ ಹೆಸರಿನ ಮಗಳಿದ್ದಳು. ಕಳೆದ ಜನವರಿ 31 ರಂದು ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಅವಳಿ ಮಕ್ಕಳಿಗೆ ಪೋಷಕರಾದರು. ಒಂದು ಗಂಡಾದರೆ, ಮತ್ತೊಂದು ಹೆಣ್ಣು. ಈಗ ದಂಪತಿ ಮಗುವಿನ ಫೋಟೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್ ಬಾಡಿಗಾರ್ಡ್ ಕೆವಿನ್ ಭರ್ಜರಿ ಕಸರತ್ತು; ವಿಡಿಯೋ ವೈರಲ್

ಭಾನುವಾರ ಇನ್‌ಸ್ಟಾಗ್ರಾಮ್‌ನಲ್ಲಿ ರಾಮ್ ಚರಣ್ ಮತ್ತು ಉಪಾಸನಾ ಜಂಟಿಯಾಗಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಮಕ್ಕಳ ಮುಖವನ್ನು ಪೂರ್ತಿಯಾಗಿ ತೋರಿಸುವ ಬದಲು, ಅವರು ವಿಭಿನ್ನವಾದ ಮತ್ತು ಅರ್ಥಪೂರ್ಣವಾದ ಫೋಟೋ ಒಂದನ್ನು ಅಪ್‌ಲೋಡ್ ಮಾಡಿದ್ದಾರೆ. ಈ ಫೋಟೋದಲ್ಲಿ ಅವರ ಹಿರಿಯ ಮಗಳು ಕ್ಲಿನ್ ಕಾರಾ ಹಾಗೂ ಈಗ ಜನಿಸಿರುವ ಅವಳಿ ಮಕ್ಕಳ ಪುಟ್ಟ ಪುಟ್ಟ ಕೈಗಳು ಮಾತ್ರ ಕಾಣಿಸುತ್ತಿವೆ. ಅವಳಿ ಮಕ್ಕಳ ಚಿತ್ರವನ್ನು ಈ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವುದು ಇದೇ ಮೊದಲು.

ಭಾವನಾತ್ಮಕ ಸಾಲುಗಳು:

ಈ ಮುದ್ದಾದ ಫೋಟೋದೊಂದಿಗೆ ‘ಮನಸ್ಸು ತುಂಬಿ ಬಂದಿದೆ’ ಎಂದು ಬರೆದುಕೊಂಡು ಇನ್ಫಿನಿಟಿ ಎಮೋಜಿಯನ್ನು ಹಾಕಿದ್ದಾರೆ. ಈ ಪೋಸ್ಟ್ ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದ್ದು, ಮೆಗಾ ಫ್ಯಾಮಿಲಿಯ ಈ ಹೊಸ ಸದಸ್ಯರನ್ನು ನೋಡಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ ಮತ್ತು ದಂಪತಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಂಗೂ ಹಿಂಗೂ ಹೆಂಗೋ ಗೆದ್ದ ಆಸ್ಟ್ರೇಲಿಯಾ! – Kannada News | BAN vs AUS, 3rd ODI: Australia won by 1 wicket

ಬಾಂಗ್ಲಾದೇಶ್ ವಿರುದ್ಧ ಬ್ಯಾಕ್ ಟು ಬ್ಯಾಕ್ ಎರಡು ಏಕದಿನ ಪಂದ್ಯಗಳಲ್ಲಿ ಸೋಲನುಭವಿಸಿದ್ದ ಆಸ್ಟ್ರೇಲಿಯಾ ತಂಡ ಕೊನೆಗೂ ಒಂದು ಗೆಲುವು ದಾಖಲಿಸಿದೆ. ಅದು ಕೂಡ ಕೊನೆಯ ಓವರ್​ನಲ್ಲಿ ಕೇವಲ 1 ವಿಕೆಟ್​ನ ಅಂತರದಿಂದ. ಢಾಕಾದ ಶೇರೆ ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂತೊ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು 50 ಓವರ್​ಗಳಲ್ಲಿ ಕಲೆಹಾಕಿದ್ದು 274 ರನ್​ಗಳು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಪರ ಆರಂಭಿಕ ದಾಂಡಿಗ ಕೂಪರ್ ಕೊನೊಲಿ (149) ಭರ್ಜರಿ ಶತಕ ಸಿಡಿಸಿದರು. ಪರಿಣಾಮ ಆಸ್ಟ್ರೇಲಿಯಾ ತಂಡಕ್ಕೆ ಕೊನೆಯ 12 ಎಸೆತಗಳಲ್ಲಿ 5 ರನ್​ಗಳ ಅವಶ್ಯಕತೆಯಿತ್ತು.

ಈ ಹಂತದಲ್ಲಿ ದಾಳಿಗಿಳಿದ ಮುಸ್ತಫಿಝುರ್ ರೆಹಮಾನ್ ಆಸ್ಟ್ರೇಲಿಯಾದ 9ನೇ ವಿಕೆಟ್ ಕಬಳಿಸಿ ನೀಡಿದ್ದು ಕೇವಲ 2 ರನ್​ಗಳು ಮಾತ್ರ. ಪರಿಣಾಮ ಕೊನೆಯ ಓವರ್​ನಲ್ಲಿ ಆಸೀಸ್ ಪಡೆಗೆ 3 ರನ್​ಗಳ ಅವಶ್ಯಕತೆಯಿತ್ತು. ಇತ್ತ ಬಾಂಗ್ಲಾದೇಶ್ ತಂಡಕ್ಕೆ ಒಂದು ವಿಕೆಟ್​ನ ಅಗತ್ಯತೆ.

ಅದರಂತೆ 50ನೇ ಓವರ್​ ಎಸೆದ ತಸ್ಕಿನ್ ಅಹ್ಮದ್ ಕೇವಲ 1 ರನ್ ನೀಡಿದರು. ಎರಡನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. ಮೂರನೇ ಎಸೆತದಲ್ಲಿ ಆ್ಯಡಂ ಝಂಪಾ ಫೋರ್ ಬಾರಿಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡವು 49.3 ಓವರ್​ಗಳಲ್ಲಿ 9  ವಿಕೆಟ್​ ಕಳೆದುಕೊಂಡು 277 ರನ್​ಗಳಿಸಿ 1 ವಿಕೆಟ್​ನ ರೋಚಕ ಜಯ ಸಾಧಿಸಿದೆ.

ಈ ಸೋಲಿನ ಹೊರತಾಗಿಯೂ ಬಾಂಗ್ಲಾದೇಶ್ ತಂಡವು ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಿಂದ ಏಕದಿನ ಸರಣಿ ಗೆದ್ದುಕೊಂಡಿದೆ.

 

 

Source link

Video: ಸ್ಲೋವಾಕಿಯಾದಲ್ಲಿ ಬ್ರೆಡ್ ಮತ್ತು ಉಪ್ಪಿನೊಂದಿಗೆ ಪ್ರಧಾನಿ ಮೋದಿಗೆ ಸ್ವಾಗತ – Kannada News | Slovakia Extends Traditional Bread and Salt Welcome to PM Modi in Bratislava

ಸ್ಲೋವಾಕಿಯಾ, ಜೂನ್ 15: ಯುರೋಪ್ ರಾಷ್ಟ್ರಗಳ ಪ್ರವಾಸದ ಎರಡನೇ ಹಂತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಲೋವಾಕಿಯಾಕ್ಕೆ ಭೇಟಿ ನೀಡಿದ್ದು, ರಾಜಧಾನಿ ಬ್ರಾಟಿಸ್ಲಾವಾದಲ್ಲಿ ಅವರಿಗೆ ಅತ್ಯಂತ ಆತ್ಮೀಯ ಸ್ವಾಗತ ದೊರೆತಿದೆ. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿರುವ ಈ ಐತಿಹಾಸಿಕ ಭೇಟಿಯು, ಅಲ್ಲಿನ ಸ್ಥಳೀಯರ ಸಾಂಸ್ಕೃತಿಕ ಸೌಹಾರ್ದತೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರಿ ಗಮನ ಸೆಳೆದಿದೆ.

ಸ್ಲೋವಾಕ್ ಸಂಸ್ಕೃತಿಯ ಉನ್ನತ ಆತಿಥ್ಯಕ್ಕೆ ಅನುಗುಣವಾಗಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬ್ರಾಟಿಸ್ಲಾವಾದ ಹೋಟೆಲ್‌ಗೆ ಆಗಮಿಸುತ್ತಿದ್ದಂತೆ ‘ಬ್ರೆಡ್ ಮತ್ತು ಉಪ್ಪು’ (Bread and Salt) ನೀಡುವ ಮೂಲಕ ಬರಮಾಡಿಕೊಳ್ಳಲಾಯಿತು. ಸ್ಲೋವಾಕಿಯಾದಲ್ಲಿ ಈ ಸಂಪ್ರದಾಯವನ್ನು ಅತ್ಯುನ್ನತ ಗೌರವ, ಸದ್ಭಾವನೆ ಮತ್ತು ಹೃತ್ಪೂರ್ವಕ ಆತಿಥ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಿದೇಶಿ ಗಣ್ಯರಿಗೆ ನೀಡಲಾಗುವ ಈ ವಿಶೇಷ ಸ್ವಾಗತವು ಭಾರತದ ಮೇಲಿರುವ ಅವರ ಪ್ರೀತಿಯನ್ನು ಸಾಬೀತುಪಡಿಸಿದೆ.

 

Video Source: ANI X Account

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಸಾಕಷ್ಟು ಭಿನ್ನವಾಗಿ ‘ಮೋಡ ಕವಿದ ವಾತಾವರಣ’ ಸಿನಿಮಾದ ಪ್ರಚಾರ ಮಾಡಿದ ಸಿಂಪಲ್ ಸುನಿ – Kannada News | Simple Suni Moda Kavida Vatavarana Movie deferent level of promotion

ಸಿಂಪಲ್ ಸುನಿ ಅವರು ಹೊಸ ಪ್ರತಿಭೆಗಳಿಗೆ ಹೆಚ್ಚು ಮಣೆ ಹಾಕುತ್ತಾರೆ. ಇದಕ್ಕೆ ಹೊಸ ಸೇರ್ಪಡೆ ‘ಮೋಡ ಕವಿದ ವಾತಾವರಣ’ ಸಿನಿಮಾ. ಈ ಚಿತ್ರದಲ್ಲಿ ಸುತನ್ ದಿಲೀಪ್, ಐಶ್ ಆರಾಧ್ಯ, ತೇಜಸ್ ರಾಜ್, ಸುಷ್ಮಾಶ್ರೀ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾದ ಟೀಸರ್ ಜೂನ್ 16ರಂದು ರಿಲೀಸ್ ಆಗಲಿದೆ. ಇದರ ಪ್ರೋಮೋನ ಸುನಿ ರಿಲೀಸ್ ಮಾಡಿದ್ದಾರೆ. ಈ ವಿಡಿಯೋ ಸಾಕಷ್ಟು ಗಮನ ಸೆಳೆಯುವ ರೀತಿಯಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

100 ಓವರ್​, 600 ಎಸೆತಗಳು: ವೈಭವ್ ಸೂರ್ಯವಂಶಿ ಸಿಕ್ರೇಟ್ ಬಹಿರಂಗ! – Kannada News | Coach Reveals Vaibhav Sooryavanshi’s Insane Childhood Routine

ವಿಶ್ವ ಕ್ರಿಕೆಟ್‌ನ ಹೊಸ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Sooryavanshi) ಯಶಸ್ಸಿನ  ಹಿಂದಿರುವ ರೋಚಕ ರಹಸ್ಯವನ್ನು ಅವರ ಬಾಲ್ಯದ ಕೋಚ್ ಮನೀಶ್ ಓಜಾ ಬಹಿರಂಗಪಡಿಸಿದ್ದಾರೆ. ಕೇವಲ 15ನೇ ವಯಸ್ಸಿಗೆ ವಿಶ್ವ ಕ್ರಿಕೆಟ್‌ನ ದೈತ್ಯ ಬೌಲರ್‌ಗಳನ್ನು ನಡುಗಿಸುತ್ತಿರುವ ಯುವ ದಾಂಡಿಗನ ಈ ಯಶಸ್ಸಿಗೆ ಕಾರಣ ಕಠಿಣ ಪರಿಶ್ರಮ. ಅದು ಅಂತಿಂಥ ಪರಿಶ್ರಮವಲ್ಲ ಎಂಬುದನ್ನೂ ಕೂಡ ಓಜಾ ಅಂಕಿ-ಸಂಖ್ಯೆಗಳ ಮೂಲಕ ತೆರೆದಿಟ್ಟಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 2026 ಸೀಸನ್‌ನಲ್ಲಿ 776 ರನ್ ಬಾರಿಸಿ ಅತ್ಯಂತ ಕಿರಿಯ ವಯಸ್ಸಿನ ಆರೆಂಜ್ ಕ್ಯಾಪ್ ಹಾಗೂ ಟೂರ್ನಿಯ ಮೂವಿಂಗ್ ಪ್ಲೇಯರ್ ಪ್ರಶಸ್ತಿ ಗೆದ್ದ ವೈಭವ್ ಸೂರ್ಯವಂಶಿ, ಸದ್ಯ ಇಂಗ್ಲೆಂಡ್ ಪ್ರವಾಸದ ಭಾರತ ಹಿರಿಯರ ಟಿ20 ತಂಡಕ್ಕೂ ಆಯ್ಕೆಯಾಗಿದ್ದಾರೆ. ಈ ಅಸಾಧಾರಣ ಯಶಸ್ಸಿಗೆ ವರ್ಷಗಳ ಕಾಲ ನಡೆದ “ಕಠಿಣ” ತರಬೇತಿಯೇ ಕಾರಣ ಎಂದು ಓಜಾ ಹೇಳಿದ್ದಾರೆ.

ವೈಭವ್ ಸೂರ್ಯವಂಶಿ ಪ್ರತಿ ದಿನ 8 ಗಂಟೆಗಳ ಕಾಲ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ. ಈ ವೇಳೆ ಬರೋಬ್ಬರಿ 100 ಓವರ್​ಗಳನ್ನು ಎದುರಿಸುತ್ತಿದ್ದ. ಅಂದರೆ ಬರೋಬ್ಬರಿ 600 ಎಸೆತಗಳು.

ಈ ಅಭ್ಯಾಸ ಇಂದು ನಿನ್ನೆ ಶುರುವಾಗಿದ್ದಲ್ಲ, ಕೇವಲ 10 ವರ್ಷದವರಾಗಿದ್ದಾಗಿನಿಂದಲೇ ವೈಭಯ್ ಇಂತಹದೊಂದು ಅತ್ಯಂತ ಕಠಿಣ ದಿನಚರಿಯನ್ನು ಪಾಲಿಸುತ್ತಿದ್ದ. ಅದರ ಫಲವೇ ಇದೀಗ ಅಬ್ಬರಿಸುತ್ತಿರುವುದು ಎಂದು ಮನೀಶ್ ಓಜಾ ತಿಳಿಸಿದ್ದಾರೆ. ವೈಭವ್ ಸೂರ್ಯವಂಶಿಯ ದಿನಚರಿ ಈ ಕೆಳಗಿನಂತಿದೆ…

  • ಪ್ರತಿ ದಿನ ಬೆಳಿಗ್ಗೆ 7:30 ಕ್ಕೆ ಆರಂಭವಾಗುತ್ತಿದ್ದ ನೆಟ್ ಪ್ರಾಕ್ಟೀಸ್, ಸಂಜೆ 4:00 ರವರೆಗೆ ಸಾಗುತ್ತಿತ್ತು.
  • ವೈಭವ್ ಪ್ರತಿದಿನ ಕನಿಷ್ಠ 100 ಓವರ್‌ಗಳಷ್ಟು (600ಕ್ಕೂ ಹೆಚ್ಚು ಎಸೆತಗಳು) ಬ್ಯಾಟಿಂಗ್ ಮಾಡುತ್ತಿದ್ದರು.

ಮೊದಲು ಕೋಚ್ ಮನೀಶ್ ಓಜಾ, ಸ್ವತಃ 200 ರಿಂದ 300 ಥ್ರೋ-ಡೌನ್ ಎಸೆತಗಳನ್ನು ಹಾಕುತ್ತಿದ್ದರು. ಅವರು ಸುಸ್ತಾದಾಗ ಅಕಾಡೆಮಿಯ ಸಹಾಯಕ ಸಿಬ್ಬಂದಿ ಹಾಗೂ ನೆಟ್ ಬೌಲರ್‌ಗಳು ಗುಂಪು ಗುಂಪಾಗಿ ಬೌಲಿಂಗ್ ಮಾಡುತ್ತಿದ್ದರು. ಆದರೂ ವೈಭವ್ ಬ್ಯಾಟಿಂಗ್ ಹಸಿವು ತೀರುತ್ತಿರಲಿಲ್ಲ.

ಅಭ್ಯಾಸದ ವೇಳೆಯೇ ವೈಭವ್ ಸೂರ್ಯವಂಶಿ ಅವರ ಆಕ್ರಮಣಕಾರಿ ಪವರ್-ಹಿಟ್ಟಿಂಗ್ ಎಷ್ಟಿತ್ತೆಂದರೆ, ಯಾವುದೇ ಕ್ರಿಕೆಟ್ ಬ್ಯಾಟ್ ಒಂದು ತಿಂಗಳಿಗಿಂತ ಹೆಚ್ಚು ಕಾಲ ಉಳಿಯುತ್ತಿರಲಿಲ್ಲ.

ಕೇವಲ 11-12ನೇ ವಯಸ್ಸಿನಲ್ಲೇ ವೈಭವ್ ಅವರು ಗಂಟೆಗೆ 125-130 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಹಿರಿಯ ವೇಗದ ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸುತ್ತಿದ್ದರು. ಇವೆಲ್ಲದರ ಫಲವಾಗಿ ಇಂದು ವಿಶ್ವದ ಪ್ರಮುಖ ಬೌಲರ್​ಗಳನ್ನು ನಿರಾಯಾಸವಾಗಿ ಎದುರಿಸುತ್ತಿದ್ದಾರೆ ಎಂದು ಮನೀಶ್ ಓಜಾ ತಿಳಿಸಿದ್ದಾರೆ.

ಹೆತ್ತವರ ತ್ಯಾಗ!

ವೈಭವ್ ಸೂರ್ಯವಂಶಿ ಈ ಮಟ್ಟಕ್ಕೆ ಬೆಳೆಯಲು ಅವರ ಹೆತ್ತವರ ತ್ಯಾಗ ಅಪಾರವಾಗಿದೆ. ಬಿಹಾರದ ಸಮಸ್ತಿಪುರದ ತಾಜ್‌ಪುರ ಗ್ರಾಮದವರಾದ ಇವರು ವೈಭವ್ ಕ್ರಿಕೆಟ್‌ಗಾಗಿ ಪಾಟ್ನಾಗೆ ವಲಸೆ ಬಂದವರು.

ಮಗನಿಗೆ ಅಕಾಡೆಮಿಯಲ್ಲಿ ನೆಟ್ಸ್ ಬೌಲಿಂಗ್ ಮಾಡುವ ಬೌಲರ್‌ಗಳಿಗೂ ಸೇರಿಸಿ ದಿನಕ್ಕೆ 10-15 ಜನರಿಗೆ ಅಡುಗೆ ಮಾಡಲು ತಾಯಿ ಆರತಿ ಪ್ರತಿದಿನ ನಡುರಾತ್ರಿ 2:00 ಗಂಟೆಗೆ ಏಳುತ್ತಿದ್ದರು. ಮುಂಜಾನೆ 4:00 ಗಂಟೆಗೆ ಅಡುಗೆ ಮುಗಿಸಿ ಪಾಟ್ನಾ ಅಕಾಡೆಮಿಗೆ ಕರೆದೊಯ್ಯುತ್ತಿದ್ದರು.

ಕೃಷಿಕರಾಗಿದ್ದ ತಂದೆ ಸಂಜೀವ್ ಸೂರ್ಯವಂಶಿ,  ಮಗನ ಕ್ರಿಕೆಟ್ ಕಿಟ್, ತರಬೇತಿ ವೆಚ್ಚ ಹಾಗೂ ನೆಟ್ಸ್ ಬೌಲರ್‌ಗಳ ಊಟದ ಖರ್ಚನ್ನು ಸರಿದೂಗಿಸಲು ತಮ್ಮ ಜಮೀನನ್ನೇ ಮಾರಾಟ ಮಾಡಿದ್ದರು.

ಇದೀಗ ಐಪಿಎಲ್​​ ಮೂಲಕ ವೈಭವ್ ಸೂರ್ಯವಂಶಿ ಪೋಷಕರು ಕಳೆದುಕೊಂಡಿದ್ದೆಲ್ಲವನ್ನೂ ಮರಳಿ ಪಡೆಯುವ ಯತ್ನದಲ್ಲಿದ್ದಾರೆ. ಅಷ್ಟೇ ಅಲ್ಲದೆ ಪೋಷಕರಿಗಾಗಿ ಮತ್ತಷ್ಟು ಸಾಧನೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ಸ್ನಾಯು ಗ್ರಹಿಕೆ!

ವೈಭವ್ ಸೂರ್ಯವಂಶಿ ಆರು ವರ್ಷಗಳ ಕಾಲ ನಿರಂತರವಾಗಿ ಪ್ರತಿದಿನ 100 ಓವರ್‌ಗಳ ಕಾಲ ಬ್ಯಾಟಿಂಗ್ ಮಾಡಿದ್ದರಿಂದಲೇ ಅವರ ಸ್ನಾಯುಗಳ ಗ್ರಹಿಕೆ ಹಾಗೂ ಅದ್ಭುತ ಬ್ಯಾಟ್ ಸ್ವಿಂಗ್ ರೂಪುಗೊಂಡಿದೆ. ಇಲ್ಲಿ ಸ್ನಾಯು ಗ್ರಹಿಕೆ ಎಂದರೆ, ಒಂದು ಕೆಲಸವನ್ನು ಪದೇ ಪದೇ ಮಾಡಿ ರೂಢಿಸಿಕೊಂಡಾಗ, ದೇಹವು ಅದನ್ನು ಯೋಚಿಸದೆಯೇ ಸ್ವಯಂಚಾಲಿತವಾಗಿ ಮಾಡುವ ಶಕ್ತಿ.

ಇದನ್ನೂ ಓದಿ: ಸಿಕ್ಸ್ ಸಿಡಿಸಿಯೇ ಹೊಸ ಇತಿಹಾಸ ನಿರ್ಮಿಸಿದ ಸ್ಮೃತಿ ಮಂಧಾನ

ವೈಭವ್ ಸೂರ್ಯವಂಶಿ ನಿರಂತರವಾಗಿ 100 ಓವರ್​ಗಳ ಕಾಲ ಬ್ಯಾಟಿಂಗ್ ಅಭ್ಯಾಸ ಮಾಡಿರುವುದರಿಂದ ಅವರ ಸ್ನಾಯು ಗ್ರಹಿಕೆ ಬಲಗೊಂಡಿದೆ. ಇದರಿಂದ ಅವರ ಮೆದಳು ಯೋಚಿಸುವ ವೇಗದಲ್ಲೇ ಸ್ನಾಯುಗಳು ಕಾರ್ಯನಿರ್ವಹಿಸುತ್ತವೆ. ಇದರಿಂದಾಗಿಯೇ ಇಂದು ವೈಭವ್ ಸೂರ್ಯವಂಶಿಯ ಶಾಟ್​ಗಳನ್ನು ನೋಡಿ ಇಡೀ ಜಗತ್ತೇ ಆಶ್ಚರ್ಯಪಡುತ್ತಿದೆ ಎಂದು ಬಾಲ್ಯದ ಕೋಚ್ ಮನೀಶ್ ಓಜಾ ಹೇಳಿದ್ದಾರೆ.

Published On – 8:13 am, Mon, 15 June 26

Source link

ತಿಂಗಳಿನಿಂದ ಮುಖ್ಯ ರಸ್ತೆಯೇ ಬಂದ್​​: ಕಮರ್ಷಿಯಲ್ ಸ್ಟ್ರೀಟ್ ಬಳಿ ವಾಹನ ಸಂಚಾರವೇ ದುಸ್ತರ – Kannada News | Commercial Street Road Closure: Delayed Stormwater Drain Work Leaves Commuters and Locals Stranded for a Month

ರಾಜಕಾಲುವೆ ದುರಸ್ತಿ ಕಾಮಗಾರಿImage Credit source: Tv9 Kannada

ಬೆಂಗಳೂರು, ಜೂನ್​​ 15: ನಗರದ ಶಾಪಿಂಗ್ ಪ್ರಿಯರ ಹಾಟ್ ಸ್ಪಾಟ್ ಆಗಿರುವ ಕಮರ್ಷಿಯಲ್ ಸ್ಟ್ರೀಟ್ ಬಳಿ ವಾಹನ ಸಂಚಾರವೇ ದುಸ್ತರವಾಗಿದೆ. ರಾಜಕಾಲುವೆ ದುರಸ್ತಿ ಹಾಗೂ ಪೈಪ್ ಲೈನ್ ಕಾಮಗಾರಿಗಾಗಿ ಮುಖ್ಯರಸ್ತೆಯನ್ನೇ ಬಂದ್ ಮಾಡಿ ಬರೋಬ್ಬರಿ ಒಂದು ತಿಂಗಳುಗಳೇ ಕಳೆದಿದ್ದು, ನಿಧಾನಗತಿಯ ಕಾಮಗಾರಿಯಿಂದಾಗಿ ವಾಹನ ಸವಾರರು ಮತ್ತು ಸ್ಥಳೀಯರು ಹೈರಾಣಾಗುತ್ತಿದ್ದಾರೆ. ಫ್ರೆಜರ್ ಟೌನ್ ಕಡೆಗೆ ತೆರಳಲು ವಾಹನ ಸವಾರರಿಗೆ ಬಹಳ ಕಿರಿಕಿರಿ ಉಂಟಾಗುತ್ತಿದೆ. ಸೂಕ್ತ ಪರ್ಯಾಯ ಮಾರ್ಗವೂ ಇಲ್ಲದ ಕಾರಣ ಸಮಸ್ಯೆ ಹೆಚ್ಚಿದೆ.

ಎಂಜಿ ರಸ್ತೆ ಕಡೆಯಿಂದ ಫ್ರೆಜರ್ ಟೌನ್ ಕಡೆಗೆ ತೆರಳಲು ಇದುವೇ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಅಕ್ಕಪಕ್ಕದ ಪರ್ಯಾಯ ಮಾರ್ಗದ ರಸ್ತೆಗಳು ಕಿರಿದಾಗಿರುವ ಕಾರಣ ಸುಗಮ ಸಂಚಾರ ಕಷ್ಟಕರ. ಹೀಗಿದ್ದರೂ ಒಂದು ತಿಂಗಳಿನಿಂದ ರಸ್ತೆ ಬಂದ್​​ ಮಾಡಿ ನಡೆಸುತ್ತಿರುವ ಕಾಮಗಾರಿ ಮಾತ್ರ ಕುಂಟುತ್ತಲೇ ಸಾಗಿದೆ. ಯಾವಾಗ ಕಾಮಗಾರಿ ಮುಗಿಬಹುದೆಂಬ ಸ್ಪಷ್ಟತೆಯೂ ಇಲ್ಲದ ಕಾರಣ ಸ್ಥಳೀಯರೂ ಕೂಡ ಪರದಾಡುವಂತಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪುಡಿರೌಡಿಗಳ ಕಿರುಕುಳ ತಪ್ಪಿಸಲು ವ್ಯಾಪಾರಿಗಳು ಆಗ್ರಹ; ಜೂ.1ರಂದು ಬೇಕರಿ-ಕಾಂಡಿಮೆಂಟ್ಸ್ ಬಂದ್

ವಾಹನ ಸವಾರರ ಆಕ್ರೋಶ

ಕಾಮಗಾರಿ ವಿಳಂಬದಿಂದ ಸಂಚಾರವೇ ದುಸ್ಥರವಾಗಿದೆ ಎಂದು ವಾಹನ ಸವಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಪರ್ಯಾಯ ವ್ಯವಸ್ಥೆಯನ್ನಾದರೂ ಮಾಡಿಕೊಡಬೇಕು ಎಂಬ ಆಗ್ರಹಗಳು ಕೇಳಿಬಂದಿವೆ. ಕಾಮಗಾರಿ ಆರಂಭಿಸಿ 4 ತಿಂಗಳಾಗಿದ್ದರೆ ರಸ್ತೆ ಬಂದ್​​ ಮಾಡಿ ತಿಂಗಳು ಕಳೆದಿದೆ. ಇದರಿಂದಾಗಿ ಬಹಳ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳೂ ಅಲವತ್ತುಕೊಂಡಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಇತ್ತ ಗಮನಹರಿಸಿ ಶೀಘ್ರವೇ ಕಾಮಗಾರಿ ಮುಗಿಸುವ ಮೂಲಕ ಸಾರ್ವಜನಿಕರಿಗೆ ಉಂಟಾಗುತ್ತಿರುವ ಅನಾನುಕೂಲವನ್ನು ತಪ್ಪಿಸಬೇಕಿದೆ.

ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸತತ ಸೋಲುಗಳಿಂದ ಕಂಗೆಟ್ಟ ನಟಿ ಶ್ರೀಲೀಲಾ; ಬೇಕಿದೆ ದೊಡ್ಡ ಗೆಲುವು – Kannada News | Sreeleela’s Career Crisis: Box Office Failures and Comeback Challenge in Tollywood

ತೆಲುಗು ಚಿತ್ರರಂಗದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಅಪಾರ ಜನಪ್ರಿಯತೆ ಮತ್ತು ಕ್ರೇಜ್ ಗಳಿಸಿಕೊಂಡ ನಟಿ ಶ್ರೀಲೀಲಾ ಪ್ರಸ್ತುತ ಕಠಿಣ ಹಂತವನ್ನು ಎದುರಿಸುತ್ತಿದ್ದಾರೆ. ‘ಪೆಲ್ಲಿ ಸಂದಡಿ’ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದ ಈ ಕರಾವಳಿ ಬೆಡಗಿ, ತನ್ನ ಮೊದಲ ಚಿತ್ರದಲ್ಲೇ ಪ್ರೇಕ್ಷಕರ ಮನಗೆದ್ದಿದ್ದರು. ಅದಾದ ನಂತರ ಮಾಸ್ ಮಹಾರಾಜ ರವಿತೇಜ ಜೊತೆ ನಟಿಸಿದ ‘ಧಮಾಕಾ’ ಚಿತ್ರವು ಬ್ಲಾಕ್‌ಬಸ್ಟರ್ ಹಿಟ್ ಆಗುವ ಮೂಲಕ ಶ್ರೀಲೀಲಾ ಅವರ ಸ್ಟಾರ್‌ಡಮ್ ಅನ್ನು ರಾತ್ರೋರಾತ್ರಿ ಹೆಚ್ಚಿಸಿತು. ಇವರ ಅದ್ಭುತ ನೃತ್ಯ, ಸೌಂದರ್ಯ ಮತ್ತು ನಟನೆಗೆ ಫಿದಾ ಆದ ನಿರ್ಮಾಪಕರು ಸಾಲು ಸಾಲು ಆಫರ್‌ಗಳನ್ನು ನೀಡ ತೊಡಗಿದರು. ಇದರ ಬೆನ್ನಲ್ಲೇ ನಂದಮೂರಿ ಬಾಲಕೃಷ್ಣ ಅವರ ‘ಭಗವಂತ ಕೇಸರಿ’ ಚಿತ್ರದಲ್ಲೂ ಒಂದು ಪ್ರಮುಖ ಪಾತ್ರ ಮಾಡಿ ಯಶಸ್ಸು ಪಡೆದರು.

ಆದರೆ, ಈ ಆರಂಭಿಕ ಯಶಸ್ಸು ಬಹಳ ದಿನಗಳ ಕಾಲ ಉಳಿಯಲಿಲ್ಲ. ಒಂದೆಡೆ ಸ್ಟಾರ್ ಹೀರೊಗಳು ಹಾಗೂ ಇನ್ನೊಂದೆಡೆ ಯುವ ನಟರ ಸಿನಿಮಾಗಳಲ್ಲಿ ಸತತವಾಗಿ ಬ್ಯುಸಿಯಾಗಿದ್ದ ಶ್ರೀಲೀಲಾಗೆ ಇತ್ತೀಚಿನ ದಿನಗಳಲ್ಲಿ ಅದೃಷ್ಟ ಕೈಕೊಟ್ಟಿದೆ. ಅವರು ನಟಿಸಿದ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸಾಲು ಸಾಲು ಸೋಲನ್ನು ಕಾಣುತ್ತಿವೆ. ಟಾಲಿವುಡ್‌ನಲ್ಲಿ ಹಿಟ್ ಕೊಡುವ ಪ್ರಯತ್ನದ ನಡುವೆಯೇ ತಮಿಳು ಚಿತ್ರರಂಗಕ್ಕೂ ಕಾಲಿಟ್ಟ ಇವರು, ಶಿವಕಾರ್ತಿಕೇಯನ್ ನಾಯಕರಾಗಿದ್ದ ‘ಪರಾಶಕ್ತಿ’ ಚಿತ್ರದ ಮೂಲಕ ಕಾಲಿವುಡ್ ಪ್ರವೇಶಿಸಿದರು. ಆದರೆ ಭಾರಿ ನಿರೀಕ್ಷೆ ಮೂಡಿಸಿದ್ದ ಆ ಚಿತ್ರವೂ ಸಹ ವಿಫಲವಾಯಿತು. ಇನ್ನು ಇತ್ತೀಚೆಗೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಕಾಂಬಿನೇಷನ್‌ನಲ್ಲಿ ಮೂಡಿಬಂದ ‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ಮೇಲಂತೂ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು, ಆದರೆ ದುರದೃಷ್ಟವಶಾತ್ ಈ ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತು.

ತೆಲುಗಿನಲ್ಲಿ ಇದುವರೆಗೆ ಸುಮಾರು ಹತ್ತು ಚಿತ್ರಗಳಲ್ಲಿ ನಟಿಸಿರುವ ಶ್ರೀಲೀಲಾಗೆ ಕೈಹಿಡಿದಿದ್ದು ಕೇವಲ ‘ಧಮಾಕಾ’ ಮತ್ತು ‘ಭಗವಂತ ಕೇಸರಿ’ ಚಿತ್ರಗಳು ಮಾತ್ರ. ಈ ಸತತ ಸೋಲುಗಳ ಪರಿಣಾಮವಾಗಿ ಈಗ ಶ್ರೀಲೀಲಾಗೆ ಚಿತ್ರರಂಗದಲ್ಲಿ ಹೊಸ ಅವಕಾಶಗಳು ಮತ್ತು ಆಫರ್‌ಗಳು ಗಣನೀಯವಾಗಿ ಕಡಿಮೆಯಾಗಿವೆ. ಸಾಲು ಸಾಲು ಫ್ಲಾಪ್‌ಗಳಿಂದ ಕಂಗೆಟ್ಟಿರುವ ಈ ನಟಿಗೆ ಚಿತ್ರರಂಗದಲ್ಲಿ ತನ್ನ ಸ್ಥಾನವನ್ನು ಗಟ್ಟಿಯಾಗಿ ಉಳಿಸಿಕೊಳ್ಳಲು ಸದ್ಯ ಒಂದು ದೊಡ್ಡ ಬ್ರೇಕ್ ಅಥವಾ ಬ್ಲಾಕ್‌ಬಸ್ಟರ್ ಯಶಸ್ಸಿನ ತುರ್ತು ಅಗತ್ಯವಿದೆ. ಸದ್ಯಕ್ಕೆ ಕೈಯಲ್ಲಿ ದೊಡ್ಡ ಸಿನಿಮಾಗಳಿಲ್ಲದ ಕಾರಣ ಅವರು ಸರಿಯಾದ ಕಥೆ ಮತ್ತು ಬ್ರೇಕ್‌ಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: ಪ್ರಕೃತಿ ಮಧ್ಯೆ ಕಳೆದು ಹೋದ ಕನ್ನಡದ ನಟಿ ಶ್ರೀಲೀಲಾ

ಸಿನಿಮಾಗಳಲ್ಲಿ ಅವಕಾಶಗಳು ತಗ್ಗಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಶ್ರೀಲೀಲಾ ಅವರ ಕ್ರೇಜ್ ಕಮ್ಮಿಯಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಸಕ್ರಿಯರಾಗಿರುವ ಇವರು, ತಮ್ಮ ಹೊಸ ಹೊಸ ಗ್ಲಾಮರಸ್ ಫೋಟೋ ಶೂಟ್‌ಗಳು ಮತ್ತು ವೀಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಶ್ರೀಲೀಲಾ ಅವರ ಈ ಕ್ಯೂಟ್ ಲುಕ್ಸ್‌ಗೆ ಯುವ ವೀಕ್ಷಕರು ಫಿದಾ ಆಗುತ್ತಿದ್ದು, ಸಾಮಾಜಿಕ ಜಾಲತಾಣಗಳ ಮೂಲಕವೇ ಅವರು ಪ್ರೇಕ್ಷಕರಿಗೆ ಹತ್ತಿರವಾಗುಳಿಯುವ ಪ್ರಯತ್ನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link