ಪ್ಯಾಂಗಾಂಗ್, ಫೆಬ್ರವರಿ 26: ಹಿಮಗಟ್ಟಿರುವ ಪ್ಯಾಂಗಾಂಗ್ ತ್ಸೊ ಸರೋವರದಲ್ಲಿ ಮ್ಯಾರಥಾನ್ ಆಯೋಜಿಸಲಾಗಿತ್ತು. ಲಡಾಖ್ನ ಲೇಹ್ನಲ್ಲಿದೆ. ನೀರಿನ ಮೇಲ್ಮೈ ಸಂಪೂರ್ಣವಾಗಿ ಹಿಮದಿಂದ ಆವೃತವಾಗಿರುತ್ತದೆ, ಭಾರತದ ಲಡಾಖ್ನ ಪ್ಯಾಂಗಾಂಗ್ ಸರೋವರ ಮತ್ತು ಸಿಕ್ಕಿಂನ ತ್ಸೊಂಗೊ ಸರೋವರ ಎರಡರಲ್ಲೂ ಇದೇ ರೀತಿಯ ಅನುಭವ ಕಾಣಬಹುದು.ಇವು ನೀಲಿ ಅಥವಾ ಬಿಳಿ ಬಣ್ಣದ ಐಸ್ ಶೀಟ್ನಂತೆ ಕಾಣುತ್ತವೆ.ಟಿಬೆಟ್ನಂತಹ ಎತ್ತರದ ಪ್ರದೇಶಗಳಲ್ಲಿ ಇವು ಸಾಮಾನ್ಯವಾಗಿ ಕಂಡುಬರುತ್ತವೆ.ಈ ಸರೋವರಗಳ ಮೇಲೆ ನಡೆಯುವುದು, ಸ್ಕೇಟಿಂಗ್ ಮಾಡುವುದು ಸಾಹಸೀ ಪ್ರವಾಸಿಗರಿಗೆ ರೋಮಾಂಚನವನ್ನು ನೀಡುತ್ತದೆ.ಹಿಮಗಟ್ಟಿದ ಸರೋವರಗಳ ಮೇಲೆ ನಡೆಯುವಾಗ ಸುರಕ್ಷತೆಯ ಬಗ್ಗೆ ಎಚ್ಚರ ವಹಿಸುವುದು ಮುಖ್ಯ.
T20 World Cup 2026: ಟಿ20 ವಿಶ್ವಕಪ್ನ 48ನೇ ಪಂದ್ಯದಲ್ಲಿ ಭಾರತ ಮತ್ತು ಝಿಂಬಾಬ್ವೆ ತಂಡಗಳು ಮುಖಾಮುಖಿಯಾಗಲಿದೆ. ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಈ ಮ್ಯಾಚ್ನಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ತಂಡ ತನ್ನ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಬಹುದು. ಅದರಲ್ಲೂ ನೆಟ್ ರನ್ ರೇಟ್ ಹೆಚ್ಚಿಸಿಕೊಂಡರೆ ಮಾತ್ರ ಟೀಮ್ ಇಂಡಿಯಾದ ಸೆಮಿಫೈನಲ್ ಲೆಕ್ಕಾಚಾರ ಸರಳವಾಗಲಿದೆ. ಹಾಗಿದ್ರೆ ಝಿಂಬಾಬ್ವೆ ವಿರುದ್ಧ ಭಾರತ ತಂಡ ಎಷ್ಟು ರನ್ಗಳ ಅಂತರದಿಂದ ಗೆದ್ದರೆ ನೆಟ್ ರನ್ ರೇಟ್ ಪಾಸಿಟಿವ್ (+0.000 ಕ್ಕಿಂತ ಹೆಚ್ಚು) ಮಾಡಿಕೊಳ್ಳಬಹುದು ಎಂದು ನೋಡುವುದಾದರೆ…
ಮೊದಲು ಬ್ಯಾಟಿಂಗ್ ಮಾಡಿದರೆ:
ಝಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಿದರೆ ಕನಿಷ್ಠ 77 ರನ್ಗಳ ಅಂತರದಿಂದ ಜಯಗಳಿಸಬೇಕು. ಅಂದರೆ ಟೀಮ್ ಇಂಡಿಯಾ 200 ರನ್ಗಳಿಸಿದರೆ, ಝಿಂಬಾಬ್ವೆ ತಂಡವನ್ನು 123 ರನ್ ಅಥವಾ ಅದಕ್ಕಿಂತ ಕಡಿಮೆ ಮೊತ್ತಕ್ಕೆ ನಿಯಂತ್ರಿಸಬೇಕು.
ಭಾರತ ತಂಡವು ಮೊದಲು ಬ್ಯಾಟ್ ಮಾಡಿ 180 ರನ್ ಗಳಿಸಿದರೆ, ಝಿಂಬಾಬ್ವೆ ತಂಡವನ್ನು 103 ರನ್ ಅಥವಾ ಅದಕ್ಕಿಂತ ಕಡಿಮೆ ಮೊತ್ತಕ್ಕೆ ಕಟ್ಟಿಹಾಕಬೇಕು. ಅಂದರೆ ಟೀಮ್ ಇಂಡಿಯಾ ಕನಿಷ್ಠ 77 ರನ್ಗಳ ಅಂತರದಿಂದ ಗೆದ್ದರೆ ಮಾತ್ರ ನೆಟ್ ರನ್ ರೇಟ್ ಪಾಸಿಟಿವ್ ಆಗಲಿದೆ.
ಚೇಸಿಂಗ್ ಮಾಡಿದರೆ:
ಝಿಂಬಾಬ್ವೆ ತಂಡವು ಮೊದಲು ಬ್ಯಾಟ್ ಮಾಡಿ 150 ರನ್ಗಳ ಗುರಿ ನೀಡಿದರೆ, ಈ ಗುರಿಯನ್ನು ಟೀಮ್ ಇಂಡಿಯಾ 11 ಓವರ್ಗಳಲ್ಲಿ ಚೇಸ್ ಮಾಡಬೇಕು.
ಒಂದು ವೇಳೆ ನ್ಯೂಝಿಲೆಂಡ್ 180 ರನ್ಗಳಿಸಿದರೆ, ಭಾರತ ತಂಡವು 181 ರನ್ಗಳನ್ನು ಕೇವಲ 11.4 ಓವರ್ಗಳಲ್ಲಿ ಕಲೆಹಾಕಬೇಕು. ಅಂದರೆ 70 ಎಸೆತಗಳಲ್ಲಿ ಪಂದ್ಯವನ್ನು ಪೂರ್ಣಗೊಳಿಸಬೇಕು.
ಇನ್ನು ಝಿಂಬಾಬ್ವೆ ತಂಡವು 200 ರನ್ಗಳ ಗುರಿ ನೀಡಿದರೆ, ಟೀಮ್ ಇಂಡಿಯಾ ಈ ಮೊತ್ತವನ್ನು ಕೇವಲ 12 ಓವರ್ಗಳಲ್ಲಿ ಮುಟ್ಟಬೇಕು.
ಅಂದರೆ ಮೊದಲು ಬ್ಯಾಟ್ ಮಾಡಿದರೆ ಕನಿಷ್ಠ 77 ರನ್ಗಳ ಜಯ ಸಾಧಿಸಿದರೆ ಮಾತ್ರ ಟೀಮ್ ಇಂಡಿಯಾದ ನೆಟ್ ರನ್ ರೇಟ್ +0.000 ಕ್ಕಿಂತ ಹೆಚ್ಚು ಆಗಲಿದೆ. ಇನ್ನು ಚೇಸಿಂಗ್ ಮಾಡಿದರೆ ಅತೀ ಕಡಿಮೆ ಎಸೆತಗಳಲ್ಲಿ ಗುರಿ ಬೆನ್ನತ್ತಿದರೆ ಮಾತ್ರ ಪಾಸಿಟಿವ್ ನೆಟ್ ರನ್ ರೇಟ್ ಪಡೆದುಕೊಳ್ಳಬಹುದು.
ಹೀಗಾಗಿ ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುವುದು ಅನಿವಾರ್ಯ. ಏಕೆಂದರೆ ಬೃಹತ್ ಮೊತ್ತ ಪೇರಿಸಿದರೆ ಮಾತ್ರ 77 ರನ್ಗಳ ಅಂತರದಿಂದ ಗೆಲ್ಲಲು ಸಾಧ್ಯ. ಇನ್ನು ಅತೀ ಕಡಿಮೆ ಓವರ್ಗಳಲ್ಲಿ ಗುರಿ ತಲುಪಿದರೆ ಮಾತ್ರ +0.000 ಕ್ಕಿಂತ ಹೆಚ್ಚಿ ನೆಟ್ ರನ್ ರೇಟ್ ಪಡೆದುಕೊಳ್ಳಬಹುದು. ಹೀಗಾಗಿ ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ದಾಂಡಿಗರಿಂದ ಹೊಡಿಬಡಿ ಆಟವನ್ನು ನಿರೀಕ್ಷಿಸಬಹುದು.
ಸೆಮಿಫೈನಲ್ ಹಾದಿ:
ಭಾರತವು ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ಎರಡೂ ತಂಡಗಳ ವಿರುದ್ಧ ಗೆದ್ದರೆ 4 ಅಂಕಗಳನ್ನು ಪಡೆಯುತ್ತದೆ. ಅತ್ತ ಸೌತ್ ಆಫ್ರಿಕಾ ತನ್ನ ಉಳಿದ ಪಂದ್ಯಗಳನ್ನು ಗೆದ್ದರೆ, ಅಂದರೆ ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ವಿರುದ್ಧ ಗೆದ್ದರೆ ಟೀಮ್ ಇಂಡಿಯಾಗೆ ನೆಟ್ ರನ್ ರೇಟ್ ಆಧಾರದಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಎದುರಾಗುವುದಿಲ್ಲ.
ಒಂದು ವೇಳೆ ಇಂದಿನ ಮೊದಲ ಪಂದ್ಯದಲ್ಲಿ (3 ಗಂಟೆಗೆ) ವೆಸ್ಟ್ ಇಂಡೀಸ್ ತಂಡವು ಸೌತ್ ಆಫ್ರಿಕಾ ವಿರುದ್ಧ ಗೆದ್ದರೆ, ಟೀಮ್ ಇಂಡಿಯಾ ಝಿಂಬಾಬ್ವೆ ವಿರುದ್ಧ ಅಮೋಘ ಗೆಲುವು ದಾಖಲಿಸುವುದು ಅನಿವಾರ್ಯ. ಏಕೆಂದರೆ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದರೂ ನೆಟ್ ರನ್ ರೇಟ್ ಪರಿಗಣನೆಗೆ ಬರಲಿದೆ. ಹೀಗಾಗಿ ಝಿಂಬಾಬ್ವೆ ವಿರುದ್ಧದ ಪಂದ್ಯದ ಮೂಲಕವೇ ಟೀಮ್ ಇಂಡಿಯಾ ತನ್ನ ನೆಟ್ ರನ್ ರೇಟ್ ಅನ್ನು ಹೆಚ್ಚಿಸಿಕೊಳ್ಳಬೇಕಿದೆ.
ಕೀನ್ಯಾ, ಫೆಬ್ರವರಿ 26: ಕೀನ್ಯಾದ ಯುವ ನಾಯಕರೊಬ್ಬರು ಬಲಗೈಯಲ್ಲಿ ಭಗವದ್ಗೀತೆ(Bhagavad Gita) ಹಿಡಿದು ಪ್ರಮಾಣವಚನ ಸ್ವೀಕರಿಸಿರುವ ಫೋಟೊ ಎಲ್ಲೆಡೆ ವೈರಲ್ ಆಗಿದೆ. ಈ ಯುವ ನಾಯಕನ ಹೆಸರು ಕ್ಯಾಲೆಬ್. ಮೊಂಬಾಸಾದ ಕೌಂಟಿಯಲ್ಲಿರುವ ವಿಧಾನಸಭೆಯಲ್ಲಿ ಈ ಐತಿಹಾಸಿಕ ಘಟನೆ ನಡೆದಿದೆ. ಮೊಂಬಾಸಾ ಕೌಂಟಿಯ ಚಂಗಮ್ವೆ ಕ್ಷೇತ್ರವನ್ನು ಪ್ರತಿನಿಧಿಸುವ ಯುವ ಶಾಸಕ ಕ್ಯಾಲೆಬ್ ಪ್ರಮಾಣವಚನ ಸ್ವೀಕರಿಸಲು ಭಗವದ್ಗೀತೆಯೊಂದಿಗೆ ಬಂದಿದ್ದರು.
ಈ ಕುರಿತು ಇಸ್ಕಾನ್ನ ಓಂಕಾರ ಮುಕುಂದ ದಾಸ್ ಮಾತನಾಡಿ, ಈ ನಡೆ ನಾಟಕೀಯವಲ್ಲ, ಪ್ರಚಾರಕ್ಕೂ ಅಲ್ಲ ಆ ಭಾವ ಅವರ ಹೃದಯಲ್ಲಿ ಹುಟ್ಟಿಕೊಂಡಿರುವುದು, ಅದೇ ಸತ್ಯ, ಹಾಗೂ ಇದು ಉದ್ದೇಶ ಪೂರ್ವಕ ನಡೆ ಎಂದರು. ಸಾರ್ವಜನಿಕ ಹುದ್ದೆಯು ಹೆಚ್ಚಾಗಿ ಪ್ರಬಲ ಧಾರ್ಮಿಕ ಸಂಪ್ರದಾಯಗಳೊಂದಿಗೆ ಹೆಣೆದುಕೊಂಡಿರುವ ರಾಷ್ಟ್ರದಲ್ಲಿ, ಭಗವದ್ಗೀತೆಯ ಮೇಲೆ ಪ್ರಮಾಣ ಮಾಡುವ ಕ್ಯಾಲೆಬ್ ಅವರ ನಿರ್ಧಾರವು ಹೊಸ ಭರವಸೆಯನ್ನು ಹುಟ್ಟುಹಾಕಿದೆ.
ಕ್ಯಾಲೆಬ್ ಹರೇ ಕೃಷ್ಣ ಸಮುದಾಯದಲ್ಲಿರುವ ಭಕ್ತ, ಅವರ ಅಣ್ಣನ ಮೂಲಕ ಇಸ್ಕಾನ್ ಜತೆ ಸೇರಿಕೊಂಡರು. ಮೊಂಬಾಸಾದ ವಿದ್ಯಾರ್ಥಿಗಳಲ್ಲಿ ವೈಷ್ಣವ ಸಂಸ್ಕೃತಿಯನ್ನು ಹರಡಲು 2021 ರಲ್ಲಿ ಸ್ಥಾಪಿಸಲಾದ ವಿಶ್ವವಿದ್ಯಾಲಯ ಆಧಾರಿತ ಉಪಕ್ರಮವಾದ ದಿ ಬೆಟರ್ ಯು ಕ್ಲಬ್ನ ಅಧ್ಯಕ್ಷರಾಗಿ, ಕ್ಯಾಲೆಬ್ ಕ್ಲಬ್ ಅನ್ನು 180 ಸದಸ್ಯರನ್ನು ಬೆಳೆಸಲು ಸಹಾಯ ಮಾಡಿದ್ದಾರೆ.
ವಿಧಾನಸಭೆಯ ಸದಸ್ಯರ ಸಮ್ಮುಖದಲ್ಲಿ ಕ್ಯಾಲೆಬ್ ಅವರು ಭಗವದ್ಗೀತೆ ಆ್ಯಸ್ ಇಟ್ ಈಸ್ ಪುಸ್ತಕವನ್ನು ಎತ್ತಿ ಪ್ರಮಾಣ ವಚನ ಸ್ವೀಕರಿಸಿದರು. ಮೊಂಬಾಸಾ ಯುವ ಅಸೆಂಬ್ಲಿ ಕೀನ್ಯಾ ಯುವ ಅಸೆಂಬ್ಲಿ ಚೌಕಟ್ಟಿನಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಯುವ ನಾಯಕರಿಗೆ ಔಪಚಾರಿಕ ರಾಜಕೀಯಕ್ಕೆ ಮುಂಚೆ ಜವಾಬ್ದಾರಿಯನ್ನು ಅಭ್ಯಾಸ ಮಾಡುವ ವೇದಿಕೆಯಾಗಿದೆ.
ಈ ಮೊದಲು ಕೆನಡಾದ ವಿದೇಶಾಂಗ ಸಚಿವೆಯಾದ ಅನಿತಾ ಆನಂದ್ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದರು. ಇನ್ನು ಅಮೆರಿಕದಲ್ಲಿ ಕಾಶ್ ಪಟೇಲ್ ಎಫ್ಬಿಐ ಡೈರೆಕ್ಟರ್ ಆದ ಬಳಿಕ ಅವರೂ ಕೂಡ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದರು. ಇಂಡಿಯನ್ ಆಸ್ಟ್ರೇಲಿಯನ್ ಸಂಸದ ವರುಣ್ ಘೋಷ್ ಕೂಡ ಹೀಗೆಯೇ ಮಾಡಿದ್ದರು. ಆದರೆ ಅವರೆಲ್ಲರೂ ಮೂಲತಃ ಭಾರತೀಯರು.
ಜ್ಯೋತಿಷ್ಯ ಹಾಗೂ ಧಾರ್ಮಿಕ ನಂಬಿಕೆಗಳ ಪ್ರಕಾರ ಗ್ರಹಣಮತ್ತು ಅದರ ಸೂತಕ ಅವಧಿಯನ್ನು ಅಶುಭ ಸಮಯವೆಂದು ಪರಿಗಣಿಸಲಾಗುತ್ತದೆ. ಗ್ರಹಣದ ಸಮಯದಲ್ಲಿ ಪ್ರಕೃತಿಯಲ್ಲಿ ಸೂಕ್ಷ್ಮ ಶಕ್ತಿಗಳ ಚಲನವಲನ ಹೆಚ್ಚುತ್ತದೆ ಮತ್ತು ವಾತಾವರಣದಲ್ಲಿ ನಕಾರಾತ್ಮಕತೆ ಉಂಟಾಗುತ್ತದೆ ಎಂಬ ನಂಬಿಕೆ ಇದೆ. ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ 3ರಂದು ಫಾಲ್ಗುಣ ಮಾಸದ ಹುಣ್ಣಿಮೆಯಂದು ಸಂಭವಿಸಲಿದೆ. ಈ ಚಂದ್ರಗ್ರಹಣವು ಸಿಂಹ ರಾಶಿ ಮತ್ತು ಪೂರ್ವ ಫಾಲ್ಗುಣಿ ನಕ್ಷತ್ರದಲ್ಲಿ ಸಂಭವಿಸಲಿದೆ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ಹೇಳಿದ್ದಾರೆ.
ಈ ಬಾರಿ ಚಂದ್ರಗ್ರಹಣವು ಭಾರತದಲ್ಲಿಯೂ ಗೋಚರಿಸುವುದರಿಂದ, ಅದರ ಸೂತಕ ಅವಧಿ ಅನ್ವಯಿಸುತ್ತದೆ. ಶಾಸ್ತ್ರಗಳ ಪ್ರಕಾರ ಚಂದ್ರಗ್ರಹಣದ ಸೂತಕ ಅವಧಿ ಗ್ರಹಣ ಆರಂಭಕ್ಕೆ ಒಂಬತ್ತು ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಸೂತಕ ಅವಧಿಯಲ್ಲಿ ದೇವಾಲಯದ ಬಾಗಿಲುಗಳನ್ನು ಮುಚ್ಚುವುದು, ಪೂಜೆ–ಪಾಠಗಳನ್ನು ನಿಲ್ಲಿಸುವುದು ಮತ್ತು ಆಹಾರ ಸೇವನೆಯನ್ನು ತಡೆಯುವುದು ರೂಢಿಯಾಗಿದೆ. ಈ ಸಮಯದಲ್ಲಿ ಜಪ–ತಪ, ಮಂತ್ರಪಠಣ ಮಾಡುವುದು ಮಾತ್ರ ಶುಭಕರವೆಂದು ಹೇಳಲಾಗುತ್ತದೆ.
ಇಂತಹ ಸಂದರ್ಭಗಳಲ್ಲಿ ಜನರಿಗೆ ಉದ್ಭವಿಸುವ ಪ್ರಮುಖ ಪ್ರಶ್ನೆ ಎಂದರೆ – ಗ್ರಹಣದ ಸಮಯದಲ್ಲಿ ಯಾರಾದರೂ ನಿಧನರಾದರೆ ಅಂತ್ಯಕ್ರಿಯೆ ನಡೆಸಬಹುದೇ? ಶಾಸ್ತ್ರಗಳ ಪ್ರಕಾರ ಗ್ರಹಣ ಅಥವಾ ಸೂತಕ ಅವಧಿಯಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ನಡೆಸುವ ವಿಧಿಗಳು ಆತ್ಮದ ಶಾಂತಿಯ ಪ್ರಯಾಣಕ್ಕೆ ಅಡ್ಡಿಯಾಗಬಹುದು ಮತ್ತು ಕುಟುಂಬದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ನಂಬಿಕೆ ಇದೆ.
ಆದ್ದರಿಂದ, ಗ್ರಹಣದ ಸಮಯದಲ್ಲಿ ಮರಣ ಸಂಭವಿಸಿದರೆ, ಮೃತದೇಹವನ್ನು ಯಥಾಶಕ್ತಿ ಸಂರಕ್ಷಿಸಿ ಗ್ರಹಣ ಸಂಪೂರ್ಣವಾಗಿ ಮುಗಿಯುವವರೆಗೆ ಕಾಯುವುದು ಉತ್ತಮವೆಂದು ಶಾಸ್ತ್ರಗಳು ಸೂಚಿಸುತ್ತವೆ. ಚಂದ್ರ ಅಥವಾ ಸೂರ್ಯಗ್ರಹಣ ಸಾಮಾನ್ಯವಾಗಿ ಕಡಿಮೆ ಅವಧಿಯದ್ದಾಗಿರುವುದರಿಂದ, ಆ ಸಮಯ ಮುಗಿದ ನಂತರ ಶುದ್ಧಿ ವಿಧಿಗಳನ್ನು ನೆರವೇರಿಸಿ ಅಂತ್ಯಕ್ರಿಯೆಗಳನ್ನು ಮಾಡುವುದು ಶುಭಕರವೆಂದು ಪರಿಗಣಿಸಲಾಗುತ್ತದೆ. ಸೂತಕ ಅವಧಿಯಲ್ಲಿಯೂ ಅಂತಿಮ ವಿಧಿಗಳನ್ನು ಸಾಧ್ಯವಾದಷ್ಟು ತಪ್ಪಿಸಲು ಸಲಹೆ ನೀಡಲಾಗಿದೆ.
ಒಟ್ಟಿನಲ್ಲಿ, ಗ್ರಹಣದ ಸಮಯದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಗ್ರಹಣ ಮುಗಿದ ಬಳಿಕ ಶುದ್ಧಿ ಆಚರಣೆಗಳನ್ನು ನೆರವೇರಿಸಿ ಕಾರ್ಯಗಳನ್ನು ಮುಂದುವರಿಸುವುದು ಶಾಸ್ತ್ರೋಕ್ತ ಕ್ರಮವೆಂದು ನಂಬಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಚಿಕ್ಕಬಳ್ಳಾಪುರ, ಫೆ.26: ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ಆತಂಕ ಎದುರಾಗಿದೆ. ಜಿಲ್ಲೆಯ 1,274 ಹಳ್ಳಿಗಳ ಪೈಕಿ ನೂರಾರು ಗ್ರಾಮಗಳಲ್ಲಿ ಕುಡಿಯುವ ನೀರು ಬಳಕೆಗೆ ಯೋಗ್ಯವಾಗಿಲ್ಲ ಎಂಬ ಆಘಾತಕಾರಿ ಮಾಹಿತಿ ಗುಣಮಟ್ಟ ಪರೀಕ್ಷಾ ವರದಿಯಿಂದ ಬಯಲಾಗಿದೆ. ನೀರಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಪ್ಲೋರೈಡ್ (Fluoride) ಮತ್ತು ನೈಟ್ರೇಟ್ (Nitrate) ಪತ್ತೆಯಾಗಿರುವುದು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಜಿಲ್ಲಾ ಆರೋಗ್ಯಾಧಿಕಾರಿ ಎಸ್.ಎಸ್. ಮಹೇಶಕುಮಾರ್ ನೀಡಿರುವ ಮಾಹಿತಿಯಂತೆ, ಅಶುದ್ಧ ನೀರಿನ ಸೇವನೆಯಿಂದ ಹಲ್ಲು ಮತ್ತು ಮೂಳೆಗಳ ಬೆಳವಣಿಗೆ ಕುಂಠಿತ, ಮೂಳೆ ಸವೆತ, ಅತಿಯಾದ ಸುಸ್ತು ಮತ್ತು ಎದೆಯುಸಿರು ಸಮಸ್ಯೆಯಾಗಿದೆ. ಕಿಡ್ನಿ (ಮೂತ್ರಪಿಂಡ) ಮತ್ತು ಲಿವರ್ (ಯಕೃತ್ತು) ಸಮಸ್ಯೆಗಳು ಹಾಗೂ ಬಹು ಅಂಗಾಂಗ ವೈಫಲ್ಯದ ಸಾಧ್ಯತೆ ಎಂದು ಹೇಳಿದ್ದಾರೆ.
ಕೇವಲ ನೀರಲ್ಲದೆ ತರಕಾರಿಗಳ ಮೂಲಕವೂ ಪ್ಲೋರೈಡ್ ಸೇರುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಯೂರಿನ್ ಪರೀಕ್ಷೆ ನಡೆಸಲಾಗುತ್ತಿದೆ. ಟಿವಿ9 ಗೆ ಮಾಹಿತಿ ನೀಡಿದ ಜಿ.ಪಂ. ಸಿ.ಇ.ಓ ಡಾ. ನವೀನ್ ವೈ ಭಟ್, ಅಶುದ್ಧ ನೀರನ್ನು ತಡೆಗಟ್ಟಲು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ್ದಾರೆ. ಒಟ್ಟು 1,274 ಹಳ್ಳಿಗಳ ಪೈಕಿ 1,175 ಗ್ರಾಮಗಳಲ್ಲಿ (ಶೇ. 92ರಷ್ಟು) ಘಟಕಗಳನ್ನು ಸ್ಥಾಪಿಸಲಾಗಿದೆ. ಜನರ ಅನುಕೂಲಕ್ಕಾಗಿ ಪ್ರತಿ ಎರಡು ಕಿಲೋಮೀಟರ್ಗೆ ಒಂದರಂತೆ ಶುದ್ಧ ನೀರಿನ ಘಟಕ ಅಳವಡಿಸಲಾಗಿದೆ. ಜಿಲ್ಲೆಯ 10 ಗ್ರಾಮಗಳಲ್ಲಿ (ಚಿಕ್ಕಬಳ್ಳಾಪುರ-3, ಗೌರಿಬಿದನೂರು-5, ಶಿಡ್ಲಘಟ್ಟ-2) ನೀರು ಅತ್ಯಂತ ಅಶುದ್ಧವಾಗಿದ್ದು, ಆಯಾ ಪಂಚಾಯಿತಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ನಿಮ್ಮ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನು ಮಾತ್ರ ಕುಡಿಯಲು ಬಳಸಿ. ಸುಸ್ತು ಅಥವಾ ಕೀಲು ನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಪ್ಲೊರೈಡ್ ಪ್ರಭಾವ ತಗ್ಗಿಸಲು ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರ ಸೇವಿಸಿ ಎಂದು ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.
ನವದೆಹಲಿ, ಫೆಬ್ರವರಿ 26: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಜನಪ್ರಿಯತೆ ವಿಶ್ವಾದ್ಯಂತ ಪ್ರತಿಧ್ವನಿಸುತ್ತಿದೆ. ಈಗ ಪ್ರಧಾನಿ ಮೋದಿ ಅವರ ಹೆಸರಿಗೆ ಮತ್ತೊಂದು ವಿಶಿಷ್ಟ ದಾಖಲೆ ಸೇರ್ಪಡೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ ವೇದಿಕೆ ಇನ್ಸ್ಟಾಗ್ರಾಂನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಗುರುವಾರ, ಪ್ರಧಾನಿ ನರೇಂದ್ರ ಮೋದಿ ಅವರು ಇನ್ಸ್ಟಾಗ್ರಾಮ್ನಲ್ಲಿ 100 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದುವ ಮೂಲಕ ಐತಿಹಾಸಿಕ ಮೈಲಿಗಲ್ಲನ್ನು ದಾಟಿದ ವಿಶ್ವದ ಮೊದಲ ನಾಯಕ ಮತ್ತು ರಾಜಕಾರಣಿಯಾಗಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೂಡ ಹಿಂದಿಕ್ಕಿ ಮಂದೆ ಸಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಮೆಟಾದ ವೇದಿಕೆಯಾದ ಇನ್ಸ್ಟಾಗ್ರಾಂ ಅಕೌಂಟ್ ತೆರೆದಿದ್ದರು. ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗಿಂತ ಎರಡು ಪಟ್ಟು ಹೆಚ್ಚು ಇನ್ಸ್ಟಾಗ್ರಾಂ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಪ್ರಧಾನಿ ಮೋದಿ ನಂತರ, ಡೊನಾಲ್ಡ್ ಟ್ರಂಪ್ 43.2 ಮಿಲಿಯನ್ ಫಾಲೋವರ್ಸ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ 15 ಮಿಲಿಯನ್ ಫಾಲೋವರ್ಸ್ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಬ್ರೆಜಿಲ್ ಅಧ್ಯಕ್ಷರು 14.4 ಮಿಲಿಯನ್ ಫಾಲೋವರ್ಸ್ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ ಮತ್ತು ಟರ್ಕಿಶ್ ಅಧ್ಯಕ್ಷ ತಯ್ಯಿಪ್ ಎರ್ಡೋಗನ್ 11.6 ಮಿಲಿಯನ್ ಫಾಲೋವರ್ಸ್ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಅಂತಿಮವಾಗಿ, ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮೈಲಿ 6.4 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
ಈ ದತ್ತಾಂಶವು ಪ್ರಧಾನಿ ಮೋದಿಯವರ ಜಾಗತಿಕ ವ್ಯಾಪ್ತಿ ಮತ್ತು ಪ್ರಪಂಚದಾದ್ಯಂತದ ಯುವಜನರಲ್ಲಿ ಅವರ ಜನಪ್ರಿಯತೆಯನ್ನು ತೋರಿಸುತ್ತದೆ. ಭಾರತದೊಳಗೆ ಸಹ, ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ನಾಯಕರ ನಡುವೆ ಫಾಲೋವರ್ಸ್ಗಳ ಸಂಖ್ಯೆಯಲ್ಲಿ ಗಮನಾರ್ಹ ವ್ಯತ್ಯಾಸವಿದೆ.
ಭಾರತವನ್ನೇ ಪರಿಗಣಿಸಿದರೆ, ಪ್ರಧಾನಿ ಮೋದಿ ನಂತರ ಇನ್ಸ್ಟಾಗ್ರಾಮ್ನಲ್ಲಿ ಅತಿ ಹೆಚ್ಚು ಫಾಲೋವರ್ಗಳನ್ನು ಹೊಂದಿರುವ ಎರಡನೇ ವ್ಯಕ್ತಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. 16.1 ಮಿಲಿಯನ್ ಫಾಲೋವರ್ಗಳನ್ನು ಹೊಂದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಧಾನಿ ಮೋದಿಗಿಂತ ಬಹಳ ಹಿಂದಿದ್ದಾರೆ.
ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸುಮಾರು 12.6 ಮಿಲಿಯನ್ ಫಾಲೋವರ್ಗಳನ್ನು ಹೊಂದಿರುವ ಮೂರನೇ ಸ್ಥಾನದಲ್ಲಿದ್ದಾರೆ.
Narendra Modi (50)
ಪ್ರಧಾನಿ ಮೋದಿ ಅವರು ಇಸ್ರೇಲ್ಗೆ ಎರಡು ದಿನಗಳ ಅಧಿಕೃತ ಭೇಟಿಯಲ್ಲಿದ್ದಾರೆ ಮತ್ತು ಬುಧವಾರ ಅವರಿಗೆ ಇಸ್ರೇಲಿ ಸಂಸತ್ತು ನೆಸ್ಸೆಟ್ನ ಅತ್ಯುನ್ನತ ಗೌರವವಾದ ಸ್ಪೀಕರ್ ಆಫ್ ದಿ ನೆಸ್ಸೆಟ್ ಪದಕವನ್ನು ಪ್ರದಾನ ಮಾಡಿದೆ.ಇಸ್ರೇಲ್ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣದ ನಂತರ ಪದಕವನ್ನು ಪ್ರದಾನ ಮಾಡಲಾಯಿತು.
ತಮ್ಮ ಭಾಷಣದ ನಂತರ, ಪ್ರಧಾನಿ ಮೋದಿ ಅವರು ಇಸ್ರೇಲ್ ಸಂಸತ್ತಿನ ಸದಸ್ಯರೊಂದಿಗೆ, ನೆಸ್ಸೆಟ್ ಜೊತೆ ಸಂವಾದ ನಡೆಸಿದರು.ಪ್ರಧಾನಿ ಮೋದಿ ಅವರು ತಮ್ಮ ಭಾಷಣದ ಸಮಯದಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ತಮ್ಮ ಭಾಷಣದಲ್ಲಿ, ಇಸ್ರೇಲ್ನ ಪರಿಶ್ರಮ, ಧೈರ್ಯ ಮತ್ತು ಸಾಧನೆಗಳನ್ನು ಭಾರತದಲ್ಲಿ ಬಹಳವಾಗಿ ಮೆಚ್ಚಲಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರಲ್ಲಿ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದ ವೈಭವ್ ಸೂರ್ಯವಂಶಿಗೆ (Vaibhav Suryavanshi) ಟಾಟಾ ಕಾರ್ ಲಭಿಸಿದೆ. ಐಪಿಎಲ್ನಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್ನೊಂದಿಗೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರನಿಗೆ ನೀಡಲಾಗುವ ಟಾಟಾ ಕರ್ವ್ ಕಾರು ಕಳೆದ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದ ಯುವ ದಾಂಡಿಗ ವೈಭವ್ ಸೂರ್ಯವಂಶಿ ಪಾಲಾಗಿತ್ತು.
ಯಶ್ (Yash) ನಟಿಸಿರುವ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಮೂರು ವಾರಗಳಷ್ಟೆ ಬಾಕಿ ಇದೆ. ಸಿನಿಮಾದ ಪ್ರೀ ರಿಲೀಸ್ ಸೇಲ್ಸ್ ಬಹುತೇಕ ಪೂರ್ಣಗೊಂಡಿದ್ದು, ಸಿನಿಮಾದ ಪಾತ್ರಗಳ ಪೋಸ್ಟರ್, ಅದ್ಧೂರಿ ಟೀಸರ್ ಎಲ್ಲವೂ ಬಿಡುಗಡೆ ಆಗಿವೆ. ಇದೀಗ ಯಶ್ ಮತ್ತು ಇತರೆ ತಾರಾಗಣ ಪ್ರಚಾರಕ್ಕೆ ಅಖಾಡಕ್ಕೆ ಇಳಿಯಬೇಕಿದೆ. ಚಿತ್ರತಂಡ, ಸಿನಿಮಾದ ಬಗ್ಗೆ ಅಧಿಕೃತವಾಗಿ ಹೆಚ್ಚಿನ ಮಾಹಿತಿಗಳನ್ನು ಬಿಟ್ಟುಕೊಡುತ್ತಿಲ್ಲ ಇದೇ ಕಾರಣಕ್ಕೆ ಸಿನಿಮಾದ ಬಗ್ಗೆ ಹಲವು ರೀತಿಯ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದೀಗ ಸಿನಿಮಾದ ರನ್ಟೈಮ್ ಜೊತೆಗೆ ಮತ್ತೊಂದು ಸುದ್ದಿಯೂ ಸಹ ಸಖತ್ ವೈರಲ್ ಆಗುತ್ತಿದೆ.
‘ಟಾಕ್ಸಿಕ್’ ಸಿನಿಮಾ ಇನ್ನೂ ಸೆನ್ಸಾರ್ ಆಗಿಲ್ಲ. ಆದರೆ ಶೀಘ್ರವೇ ಸಿನಿಮಾ ಸೆನ್ಸಾರ್ ಆಗುವ ಸಾಧ್ಯತೆ ಇದೆ. ಏಕೆಂದರೆ ಈಗಾಗಲೇ ಸಿನಿಮಾದ ವಿರುದ್ಧ ಸೆನ್ಸಾರ್ ಮಂಡಳಿಗೆ ದೂರು ಹೋಗಿರುವುದರಿಂದ ಸಿನಿಮಾಕ್ಕೆ ಸೆನ್ಸಾರ್ ಸಮಸ್ಯೆ ಎದುರಾಗುವ ಸಾಧ್ಯತೆ ಇರುವ ಕಾರಣ, ಚಿತ್ರತಂಡವು ಯೋಜಿತ ಸಮಯಕ್ಕಿಂತಲೂ ಮುಂಚಿತವಾಗಿಯೇ ಸೆನ್ಸಾರ್ ಮಂಡಳಿಗೆ ಸಿನಿಮಾವನ್ನು ಕಳಿಸಲಿದೆ. ಬಹುಷಃ ಮುಂದಿನ ವಾರ ಸಿನಿಮಾಕ್ಕೆ ಸೆನ್ಸಾರ್ ಆಗುವ ಸಾಧ್ಯತೆ ಇದೆ.
ಆದರೆ ಆ ಒಳಗೆ ಸಿನಿಮಾದ ರನ್ಟೈಮ್ ಅಂದರೆ ಸಿನಿಮಾದ ಒಟ್ಟು ಅವಧಿ ಲೀಕ್ ಆಗಿದ್ದು, ‘ಟಾಕ್ಸಿಕ್’ ಸಿನಿಮಾದ ಒಟ್ಟು ರನ್ಟೈಮ್ ಕೇವಲ 2 ಗಂಟೆ 20 ನಿಮಿಷ ಎನ್ನಲಾಗುತ್ತಿದೆ. ಇದು ಕೆಲವು ಯಶ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರೆ ಇನ್ನು ಕೆಲವರಿಗೆ ಡಬಲ್ ಖುಷಿಯನ್ನು ಸಹ ತಂದಿದೆ. ಈಗೆಲ್ಲ ಸಿನಿಮಾಗಳು 3 ಗಂಟೆ ವರೆಗೆ ರನ್ಟೈಮ್ ಹೊಂದಿರುತ್ತವೆ, ಕೆಲ ಸಿನಿಮಾಗಳು ಮೂರು ಗಂಟೆಗೂ ಹೆಚ್ಚಿನ ರನ್ಟೈಮ್ ಅನ್ನು ಸಹ ಹೊಂದಿವೆ. ಆದರೆ ‘ಟಾಕ್ಸಿಕ್’ ಸಿನಿಮಾ ಬಹಳ ಕಡಿಮೆ ರನ್ಟೈಮ್ ಹೊಂದಿರುವುದು ಆಶ್ಚರ್ಯ ತಂದಿದೆ.
‘ಟಾಕ್ಸಿಕ್’ ಸಿನಿಮಾ ಸೀಕ್ವೆಲ್ನಲ್ಲಿ ಬಿಡುಗಡೆ ಆಗುತ್ತಿರುವ ಕಾರಣದಿಂದಾಗಿ ಸಿನಿಮಾದ ರನ್ಟೈಮ್ ಕಡಿಮೆ ಮಾಡಲಾಗಿದೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ‘ಟಾಕ್ಸಿಕ್’ ಸಿನಿಮಾ ಟೀಸರ್ ಸೀಕ್ವೆಲ್ನ ಬಗ್ಗೆ ಸಣ್ಣ ಸುಳಿವು ನೀಡಿದೆ. ‘ಟಾಕ್ಸಿಕ್’ ಸಿನಿಮಾ ಅಪ್ಪ-ಮಗನ ಕತೆ ಆಗಿರುವ ಕಾರಣ, ಮೊದಲ ಭಾಗದಲ್ಲಿ ರಾಯನ ಇತಿಹಾಸ, ಅವರ ಸಾಹಸಗಳನ್ನು ತೋರಿಸಿ, ಕ್ಲೈಮ್ಯಾಕ್ಸ್ನಲ್ಲಿ ಅವನ ಮಗ ಟಿಕೆಟ್ ಪಾತ್ರವನ್ನು ಇಂಟ್ರೊಡ್ಯೂಸ್ ಮಾಡಿಸುವ ಸಾಧ್ಯತೆ ಇದ್ದು, ಈ ಇಬ್ಬರ ನಡುವಿನ ಜಿದ್ದಾಜಿದ್ದಿನ ಕತೆಯನ್ನು ಎರಡನೇ ಭಾಗದಲ್ಲಿ ತೋರಿಸುವ ಯೋಜನೆ ಇದ್ದಂತಿದೆ.
ಇದೇ ಕಾರಣಕ್ಕೆ ‘ಟಾಕ್ಸಿಕ್’ ಸಿನಿಮಾದ ರನ್ಟೈಮ್ ಕಡಿಮೆ ಮಾಡಿ ಎರಡೂ ಕತೆಯನ್ನು ನಿರ್ದೇಶಕರು ಎರಡು ಭಾಗಗಳಿಗೆ ವಿಸ್ತರಿಸಿದಂತಿದ್ದಾರೆ. ಅಲ್ಲದೆ, ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್ಗಾಗಿ ಸುಮಾರು ಮೂರು ವರ್ಷಕ್ಕೂ ಹೆಚ್ಚು ಅವಧಿಯನ್ನು ಖರ್ಚು ಮಾಡಲಾಗಿದ್ದು, ಈ ಅವಧಿಯನ್ನು ಕೇವಲ 2:20 ನಿಮಿಷದ ಸಿನಿಮಾ ಮಾತ್ರವನ್ನೇ ಚಿತ್ರೀಕರಿಸಲಾಗಿದೆ ಎಂದರೆ ನಂಬಲು ತುಸು ಕಷ್ಟವೇ. ‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್ದಾಸ್ ನಿರ್ದೇಶಿಸಿದ್ದು, ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.
ಚಿಕ್ಕಮಗಳೂರು, ಫೆಬ್ರವರಿ 26: ಹಾಸನ ಜಿಲ್ಲೆಯ ಬೇಲೂರು ಮತ್ತು ಸಕಲೇಶಪುರ ಭಾಗದಿಂದ ಕಾಫಿನಾಡು ಚಿಕ್ಕಮಗಳೂರು (Chikkamagaluru) ಜಿಲ್ಲೆಗೆ ಕಾಡಾನೆಗಳ ದೊಡ್ಡ ಗುಂಪು ಎಂಟ್ರಿ ನೀಡಿದ್ದು, ಜನರಲ್ಲಿ ಭೀತಿ ಮೂಡಿಸಿದೆ. ‘ಬೀಟಮ್ಮ’ ಮತ್ತು ‘ಭುವನೇಶ್ವರಿ’ ಗ್ಯಾಂಗ್ಗಳಾಗಿ ಗುರುತಿಸಲ್ಪಟ್ಟಿರುವ ಈ ಹಿಂಡುಗಳು ಬೇಲೂರು ಮಾರ್ಗವಾಗಿ ಜಿಲ್ಲೆಗೆ ಪ್ರವೇಶಿಸಿವೆ. ಭೀಮಾ ನೇತೃತ್ವದಲ್ಲಿ ಸುಮಾರು 25 ಕಾಡಾನೆಗಳ ಗುಂಪು ಚಿಕ್ಕಮಗಳೂರು ಕಡೆಗೆ ಬಂದಿದ್ದು, ಒಟ್ಟಾರೆ 45 ಕಾಡಾನೆಗಳೊಂದಿಗೆ ಬಂದಿದ್ದ ಬೀಟಮ್ಮ ಗ್ಯಾಂಗ್, ನಂತರ 20 ಕಾಡಾನೆಗಳೊಂದಿಗೆ ಬೇಲೂರು ಕಡೆಗೆ ಹಿಂತಿರುಗಿವೆಯೆಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಆದರೆ, ಮೂಡಿಗೆರೆ–ಬೇಲೂರು ಗಡಿ ಭಾಗದ ತೋಟ ಪ್ರದೇಶಗಳಲ್ಲಿ ಬೀಟಮ್ಮ ಮತ್ತು ಇನ್ನೂ 20 ಕಾಡಾನೆಗಳು ಬೀಡುಬಿಟ್ಟಿರುವುದರಿಂದ ಆತಂಕ ಮುಂದುವರಿದಿದೆ.
ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿ ವ್ಯಾಪ್ತಿಯಲ್ಲಿ 22 ಕಾಡಾನೆಗಳ ಹಿಂಡು ಸಂಚರಿಸುತ್ತಿದ್ದು, ಕಸ್ಕೆಬೈಲು ಗುಡ್ಡದಲ್ಲಿ ತಂಗಿವೆ. ಬಾರದಹಳ್ಳಿ ಗ್ರಾಮದಲ್ಲಿ ಸಲಗ ಓಡಾಟ ನಡೆಸಿದ ಘಟನೆ ಕೂಡ ದಾಖಲಾಗಿದೆ. ಇದೇ ವೇಳೆ, ಎರಡು ಕಾಡಾನೆಗಳು ಚಿಕ್ಕಮಗಳೂರು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸಿರುವುದು ಜನರನ್ನು ಆತಂಕಕ್ಕೆ ಈಡುಮಾಡಿದೆ.
ಇಲ್ಲಿದೆ ಕಾಡಾನೆಗಳು ನಾಡಿಗೆ ಲಗ್ಗೆ ಇಟ್ಟ ವಿಡಿಯೋ
ಬಾರದಹಳ್ಳಿ, ಚಟ್ಟನಹಳ್ಳಿ, ಕಲ್ಲು ಗುಡ್ಡ, ವಾಟೆಗಂಡಿ, ಹುಲಿಹಂಡ್ಲು ಸೇರಿದಂತೆ ಹಲವಾರು ಗ್ರಾಮಗಳ ಸುತ್ತಮುತ್ತ ಕಾಡಾನೆಗಳ ಸಂಚಾರ ಹೆಚ್ಚಾಗಿದೆ. ಗೋಣಿಬೀಡು ವ್ಯಾಪ್ತಿಯಲ್ಲಿ ಒಟ್ಟು 33 ಕಾಡಾನೆಗಳು ಕಾಣಿಸಿಕೊಂಡಿದ್ದು, ಸ್ಥಳೀಯರು ರಾತ್ರಿ ವೇಳೆ ಹೊರಗೆ ಸಂಚರಿಸಲು ಹೆದರುತ್ತಿದ್ದಾರೆ.
ಅರಣ್ಯ ಇಲಾಖೆ ಹೈ ಅಲರ್ಟ್: ಕಾರ್ಮಿಕರಿಗೆ ಎಚ್ಚರಿಕೆ
ಅರಣ್ಯ ಇಲಾಖೆಯ ಅಧಿಕಾರಿಗಳು ಮೂಡಿಗೆರೆ ಮತ್ತು ಚಿಕ್ಕಮಗಳೂರು ವಲಯದಲ್ಲಿ ಅಲರ್ಟ್ ಘೋಷಿಸಿದ್ದು, ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳದಂತೆ ತಾತ್ಕಾಲಿಕ ಸೂಚನೆ ನೀಡಿದ್ದಾರೆ. ಜನರು ಎಚ್ಚರಿಕೆಯಿಂದಿರಬೇಕು, ಗುಂಪುಗಳಲ್ಲಿ ಮಾತ್ರ ಸಂಚರಿಸಬೇಕು ಹಾಗೂ ಕಾಡಾನೆಗಳು ಕಂಡುಬಂದರೆ ತಕ್ಷಣ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಕಾಫಿನಾಡಿನಲ್ಲಿ ಮರುಕಳಿಸುತ್ತಿರುವ ಕಾಡಾನೆಗಳ ಹಾವಳಿ ರೈತರು ಹಾಗೂ ತೋಟಗಾರರಿಗೆ ತಲೆನೋವಾಗಿದ್ದು, ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.
ಕಾಡಾನೆಗಳ ಆತಂಕ ಹೆಚ್ಚಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ತಾಲೂಕಿನ ಒಟ್ಟು 12 ಗ್ರಾಮಗಳಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಏತನ್ಮಧ್ಯೆ, ಕಾಡಾನೆ ದಾಳಿಗಳಿಗೆ ಒಂದೇ ವಾರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಹುಬ್ಬಳ್ಳಿಯ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಆಟಗಾರರ ನಡುವೆ ಅಹಿತಕರ ಘಟನೆ ನಡೆದಿದೆ. ಕರ್ನಾಟಕ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಜಮ್ಮು-ಕಾಶ್ಮೀರ ಪರ ನಾಯಕ ಪರಸ್ ಡೋಗ್ರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಅದರಂತೆ 2ನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರೆಸಿದ್ದ ಪರಸ್ ಹಾಗೂ ಕರ್ನಾಟಕ ಆಟಗಾರ ಕೆವಿ ಅನೀಶ್ ನಡುವೆ ವಾಗ್ವಾದ ನಡೆದಿದೆ.
ಈ ವಾಗ್ವಾದವು ತಾರಕ್ಕೇರುತ್ತಿದ್ದಂತೆ ಪರಸ್ ಡೋಗ್ರಾ ಕೆವಿ ಅನೀಶ್ ತಲೆಗೆ ಹೆಲ್ಮೆಟ್ನಿಂದ ಡಿಚ್ಚಿ ಹೊಡೆದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸ್ಲೆಡ್ಜಿಂಗ್ ಅಥವಾ ಮೌಖಿಕ ನಿಂದನೆ ಎಂದು ವರದಿಯಾಗಿದೆ.
ಸಿಲ್ಲಿ ಪಾಯಿಂಟ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅನೀಶ್ ಅವರು ಡೋಗ್ರಾ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರಶ್ನಿಸಿದ್ದರು. “ನೀವು 10,000 ರನ್ ಹೇಗೆ ಗಳಿಸಿದಿರಿ? ನಿಮಗೆ ಬ್ಯಾಟ್ ಕೂಡ ಹಿಡಿಯಲೂ ಕೂಡ ಬರುವುದಿಲ್ಲ” ಎಂಬಂತಹ ವೈಯಕ್ತಿಕ ಟೀಕೆಗಳು ಮತ್ತು ಅವಾಚ್ಯ ಶಬ್ದಗಳ ಬಳಕೆಯು ಡೋಗ್ರಾ ಅವರ ಆಕ್ರೋಶಕ್ಕೆ ಕಾರಣವಾಯಿತು.
ಈ ಸ್ಲೆಡ್ಜಿಂಗ್ ಬೆನ್ನಲ್ಲೇ ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್ನಲ್ಲಿ ಬೌಂಡರಿ ಬಾರಿಸಿದ ಡ್ರೋಗ್ರಾ ನೇರವಾಗಿ ಅನೀಶ್ ಅವರ ಬಳಿ ಹೋಗಿ ಮಾತಿನ ಚಕಮಕಿ ನಡೆಸಿದರು. ಈ ವಾಗ್ವಾದವು ತಾರಕ್ಕೇರುತ್ತಿದ್ದಂತೆ ತಮ್ಮ ಹೆಲ್ಮೆಟ್ನಿಂದ ಅನೀಶ್ ಅವರ ತಲೆಗೆ ಗುದ್ದಿದ್ದಾರೆ.
ತಕ್ಷಣವೇ ಮೈದಾನದಲ್ಲಿದ್ದ ಅಂಪೈರ್ಗಳು ಮತ್ತು ಕರ್ನಾಟಕದ ಹಿರಿಯ ಆಟಗಾರರಾದ ಮಾಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಇದೀಗ ಈ ಅಶಿಸ್ತಿನ ವರ್ತನೆಗಾಗಿ ಬಿಸಿಸಿಐ ಪರಸ್ ಡೋಗ್ರಾ ಅವರಿಗೆ ಪಂದ್ಯದ ಸಂಭಾವನೆಯ ಶೇ. 50 ರಷ್ಟು ದಂಡ ವಿಧಿಸಿದೆ. ಅಲ್ಲದೆ ಎರಡು ಡಿಮೆರಿಟ್ ಅಂಕಗಳನ್ನು ನೀಡಿದೆ.
ಇದೀಗ ರಣಜಿ ಟೂರ್ನಿ ಇತಿಹಾಸದಲ್ಲೇ 10 ಸಾವಿರಕ್ಕೂ ಅಧಿಕ ರನ್ಗಳಿಸಿದ ಆಟಗಾರನ ಸಾಮರ್ಥ್ಯವನ್ನು ಪ್ರಶ್ನಿಸಿ ನಿಂದಿಸಿರುವ ಕೆವಿ ಅನೀಶ್ ಅವರ ನಡೆಯ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಏಕೆಂದರೆ ರಣಜಿ ಟೂರ್ನಿ ಇತಿಹಾಸದಲ್ಲಿ 10 ಸಾವಿರಕ್ಕೂ ಅಧಿಕ ರನ್ ಕಲೆಹಾಕಿರುವುದು ಕೇವಲ ಇಬ್ಬರು ಬ್ಯಾಟರ್ಗಳು ಮಾತ್ರ. ಈ ಸಾಧನೆ ಮಾಡಿದ ಮೊದಲ ದಾಂಡಿಗ ವಾಸಿಂ ಜಾಫರ್ (12,038). ಇದಾದ ಬಳಿಕ ಈ ಸಾಧನೆ ಮಾಡಿದ 2ನೇ ಬ್ಯಾಟರ್ ಪರಸ್ ಡೋಗ್ರಾ.
ಇಂತಹ ಸಾಧನೆ ಮಾಡಿದ ಆಟಗಾರನನ್ನು “ನೀವು 10,000 ರನ್ ಹೇಗೆ ಗಳಿಸಿದಿರಿ? ನಿಮಗೆ ಬ್ಯಾಟ್ ಕೂಡ ಹಿಡಿಯಲೂ ಕೂಡ ಬರುವುದಿಲ್ಲ” ಎಂದು ಅನೀಶ್ ನೇರವಾಗಿ ನಿಂದನೆ ಮಾಡಿರುವುದು ಎಷ್ಟು ಸರಿ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.