Category Archives: Blog

Your blog category

ಬೆಂಗಳೂರು: ಕದ್ದ ಗಡಿಯಾರದ ಫೋಟೋವನ್ನು ವಾಟ್ಸಾಪ್ ಸ್ಟೇಟಸ್ ಹಾಕಿ ಮಾಲೀಕನ ಕೈಗೆ ಸಿಕ್ಕಿಬಿದ್ದ ಮನೆಗೆಲಸದಾಕೆ – Kannada News | Bengaluru Maid Caught: Stolen Watch on WhatsApp Status Leads to Arrest

ಬೆಂಗಳೂರು ಜ.16: ಮನೆಯ ಯಜಮಾನನ ಬ್ರಾಂಡ್ ವಾಚ್ ಕದ್ದು, ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡ ಮನೆ ಕೆಲಸದಾಕೆ, ಇದೀಗ ಯಜಮಾನನ ಕೈಗೆ ಸಿಕ್ಕಿಬಿದ್ದಿದ್ದಾಳೆ. ಈ ಘಟನೆ ಬೆಂಗಳೂರಿನ ಸರ್ಜಾಪುರದಲ್ಲಿ (Bengaluru Maid Caught) ನಡೆದಿದೆ. ಬ್ರಾಂಡ್ ವಾಚ್ ಧರಿಸಿದ ಫೋಟೋವನ್ನು ವಾಟ್ಸಾಪ್ ಸ್ಟೇಟಸ್​​​​ನಲ್ಲಿ ಹಾಕಿಕೊಂಡಿರುವುದೇ, ಆಕೆ ಸಿಕ್ಕಿ ಬೀಳಲು ಕಾರಣವಾಗಿದೆ. ಪೊಲೀಸರು ಈ ಫೋಟೋವನ್ನು ಇಟ್ಟುಕೊಂಡು ಮನೆ ಕೆಲಸದಾಕೆಯನ್ನು ಪತ್ತೆ ಮಾಡಿದ್ದಾರೆ. ಆರೋಪಿಯನ್ನು ದೊಡ್ಡಕನ್ನನಹಳ್ಳಿ ನಿವಾಸಿ ಸೌಮ್ಯ (26) ಎಂದು ಗುರುತಿಸಲಾಗಿದೆ.

ಸರ್ಜಾಪುರ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಖಾಸಗಿ ಕಂಪನಿಯೊಂದರ ಹಿರಿಯ ಉತ್ಪನ್ನ ವ್ಯವಸ್ಥಾಪಕ ಆಗಿರುವ ರೋಹಿತ್ (39)ಅವರು ಜನವರಿ 5 ರಂದು ಈ ಬಗ್ಗೆ ದೂರು ನೀಡಿದ್ದಾರೆ. ಡಿಸೆಂಬರ್ 8, 2025 ರಂದು ಅವರ ಮನೆಯಿಂದ 42 ಗ್ರಾಂ ಚಿನ್ನದ ಮಂಗಳಸೂತ್ರ, ಒಂದು ಜೊತೆ ಕಿವಿಯೋಲೆಗಳು ಮತ್ತು ಮೈಕೆಲ್ ಕೋರ್ಸ್ ಬ್ರಾಂಡ್ ಗಡಿಯಾರ ಕಾಣೆಯಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ರೋಹಿತ್ ಅವರು ಸೌಮ್ಯ ಅನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆಕೆ ಇಲ್ಲ ನಾನು ಕದ್ದಿಲ್ಲ. ಈ ಬಗ್ಗೆ ನನಗೆ ಏನು ಗೊತ್ತಿಲ್ಲ, ನಾನು ಯಾವುದನ್ನು ಕದ್ದಿಲ್ಲ ಎಂದು ಹೇಳಿದ್ದಾಳೆ. ನಂತರ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದಳು. ಡಿಸೆಂಬರ್ 28 ರಂದು, ರೋಹಿತ್ ಆಕಸ್ಮಿಕವಾಗಿ ವಾಟ್ಸಾಪ್ ಪರಿಶೀಲಿಸುತ್ತಿದ್ದಾಗ, ಸೌಮ್ಯಾ ತನ್ನ ವಾಟ್ಸಾಪ್ ಸ್ಟೇಟಸ್​​​ನಲ್ಲಿ ಬ್ರಾಂಡ್ ವಾಚ್ ಧರಿಸಿದ ಫೋಟೋ ಹಾಕಿಕೊಂಡಿದ್ದಾಳೆ.

ಇದನ್ನೂ ಓದಿ: ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ವ್ಯಕ್ತಿ ಆತ್ಮಹತ್ಯೆ, ಕಾರಣ ಏನು ಗೊತ್ತಾ?

ರೋಹಿತ್​​ ಈ ಫೋಟೋದ ಬಗ್ಗೆ ತನ್ನ ಕುಟುಂಬದವರನ್ನು ಕೇಳಿದ್ದಾರೆ. ಈ ವೇಳೆ ಮನೆಯವರು ಹೌದು ಇದು ನಮ್ಮ ವಾಚ್ ಎಂದು ಹೇಳಿದ್ದಾರೆ. ನಂತರ ತನ್ನ ಮನೆಯಿಂದ ಕದ್ದ ಅದೇ ಗಡಿಯಾರ ಎಂದು ತಿಳಿದು. ಸೌಮ್ಯಾ ಹಾಕಿದ ವಾಟ್ಸಾಪ್ ಸ್ಟೇಟಸ್ ಸ್ಕ್ರೀನ್‌ಶಾಟ್‌ ತೆಗೆದು ಪೊಲೀಸರಿಗೆ ದೂರು ನೀಡಿದ್ದಾರೆ. ಜನವರಿ 8 ರಂದು ಸೌಮ್ಯಾಳನ್ನು ಬಂಧಿಸಲಾಯಿತು. ವಿಚಾರಣೆಯ ನಿಜ ಒಪ್ಪಿಕೊಂಡಿದ್ದಾಳೆ. ಕದ್ದ 4.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 20,000 ರೂ. ಮೌಲ್ಯದ ಗಡಿಯಾರವನ್ನು ವಶಪಡಿಸಿಕೊಳ್ಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:00 pm, Fri, 16 January 26

Source link

ಬಳ್ಳಾರಿ ಗಲಭೆ: ನಾಳೆ ನಡೆಯಲಿರುವ ಬಿಜೆಪಿ ಬೃಹತ್​ ಪ್ರತಿಭಟನೆ ರ‍್ಯಾಲಿ ಬಗ್ಗೆ ಎಸ್​​ಪಿ ಹೇಳಿದ್ದಿಷ್ಟು – Kannada News | Ballari SP Details Strict Security for BJP Protest Amidst Banner and Firing Tensions

ಬಳ್ಳಾರಿ, ಜನವರಿ 16: ಬ್ಯಾನರ್​​​ ವಿಚಾರಕ್ಕೆ ಗಲಭೆ ಮತ್ತು ಫೈರಿಂಗ್ ಪ್ರಕರಣ ಘಟನೆ ಖಂಡಿಸಿ ಜ 17ರಂದು ಬಳ್ಳಾರಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಈ ಬಗ್ಗೆ ಎಸ್​​ಪಿ ಸುಮನ್ ಡಿ.ಪನ್ನೇಕರ್​ ಪ್ರತಿಕ್ರಿಯಿಸಿದ್ದು, ಸಮಾವೇಶದಲ್ಲಿ 15-20 ಸಾವಿರ ಜನ ಭಾಗಿಯಾಗುವ ಸಾಧ್ಯತೆ ಇದೆ. ಭದ್ರತೆಗಾಗಿ ಬೇರೆ ಜಿಲ್ಲೆಗಳಿಂದ ಅಧಿಕಾರಿಗಳು, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇಬ್ಬರು ಎಸ್​ಪಿ, 7 ಹೆಚ್ಚವರಿ ಎಸ್​​​ಪಿ, 15 ಡಿವೈಎಸ್​ಪಿ, 55 ಸಿಪಿಐ, 122 ಪಿಎಸ್ಐ, 81 ಎಎಸ್ಐ, 1233 ಪೊಲೀಸ್ ಕಾನ್ಸ್​ಟೇಬಲ್, 171 ಮಹಿಳಾ ಪೊಲೀಸ್ ಸಿಬ್ಬಂದಿ, 500 ಹೋಮ್​ಗಾರ್ಡ್​ ಸಿಬ್ಬಂದಿ, 12 ಡಿಎಆರ್ ತುಕಡಿ, 17 ಕೆಎಸ್​ಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಈಗಾಗಲೇ ಸಮಾವೇಶದ ಆಯೋಜಕರಿಂದ ಮಾಹಿತಿ ಪಡೆದಿದ್ದೇವೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Startup India @10: ಸ್ಟಾರ್ಟಪ್ ಇಂಡಿಯಾಗೆ ದಶಕದ ಸಂಭ್ರಮ; ಸಾಧನೆ, ಮೈಲಿಗಲ್ಲುಗಳೇನು? ಇಲ್ಲಿದೆ ವಿವರ – Kannada News | Startup India’s 10 Year Journey: Fuelling India’s Entrepreneurial Growth & Vikasit Bharat

ನವದೆಹಲಿ, ಜನವರಿ 16: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಹಳ ಮುತುವರ್ಜಿಯಿಂದ ಆರಂಭಿಸಿದ ಸ್ಟಾರ್ಟಪ್ ಇಂಡಿಯಾ ಯೋಜನೆಗೆ (Startup India Program) 10 ವರ್ಷದ ಸಂಭ್ರಮ ಇಂದು. 2016ರಲ್ಲಿ ದೇಶದ ಉದ್ದಿಮೆಗಾರಿಕೆಗೆ ಉತ್ತೇಜಿಸಲು ಸಣ್ಣದಾಗಿ ಶುರುವಾದ ಸ್ಟಾರ್ಟಪ್ ಇಂಡಿಯಾ ಇದೀಗ ಬಹಳ ವ್ಯಾಪಕವಾದ ಇಕೋಸಿಸ್ಟಂ ಆಗಿ ಬೆಳೆದಿದೆ. ವಿಕಸಿತ ಭಾರತ 2047ರ ಗುರಿ ತಲುಪಲು ದೇಶದ ಪ್ರಗತಿಯ ಎಂಜಿನ್ ಆಗಿ ಮಾರ್ಪಾಡುಗೊಂಡಿದೆ. ನಗರ ಮತ್ತು ಗ್ರಾಮೀಣ ಭಾಗಗಳ ನಡುವಿನ ಅಂತರವನ್ನು ತಗ್ಗಿಸುವ ಕೆಲಸ ಮಾಡಿದೆ. ಮಹಿಳೆಯರ ನೇತೃತ್ವದ ಸ್ಟಾರ್ಟಪ್​ಗಳಿಗೆ ಉತ್ತೇಜನ ಸಿಕ್ಕಿದೆ. ಸಮತೋಲಿತ ಸಮಾಜ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಇದು ಪುಷ್ಟಿ ಕೊಟ್ಟಿದೆ.

2025ರ ಡಿಸೆಂಬರ್​ನಲ್ಲಿ ಡಿಪಿಐಐಟಿ ಮಾನ್ಯತೆ ಪಡೆದಿರುವ ಎರಡು ಲಕ್ಷಕ್ಕೂ ಅಧಿಕ ಸ್ಟಾರ್ಟಪ್​ಗಳಿವೆ. ವಿಶ್ವದಲ್ಲೇ ಅತಿದೊಡ್ಡ ಸ್ಟಾರ್ಪಟ್ ಇಕೋಸಿಸ್ಟಂ ಹೊಂದಿದ ದೇಶಗಳಲ್ಲಿ ಭಾರತವೂ ಇದೆ. ಅರ್ಧದಷ್ಟು ಸ್ಟಾರ್ಟಪ್​ಗಳು ಎರಡನೇ ಮತ್ತು ಮೂರನೇ ಸ್ತರದ ನಗರಗಳಲ್ಲೇ ಹುಟ್ಟಿರುವುದು ವಿಶೇಷ. ಎಸ್​ವಿಇಪಿ, ಆಸ್ಪೈರ್, ಎಸ್​ಎಂಇಜಿಪಿ ಇತ್ಯಾದಿ ಯೋಜನೆಗಳು ಗ್ರಾಮೀಣ ಭಾಗದಲ್ಲಿ ಸಣ್ಣ ಉದ್ದಿಮೆಗಳ ಸ್ಥಾಪನೆಗೆ ಪ್ರೋತ್ಸಾಹ ಕೊಡುತ್ತಿರುವುದು ಗಮನಾರ್ಹ. ಸ್ಟಾರ್ಟಪ್ ಇಂಡಿಯಾ ಉಪಕ್ರಮದಡಿ ಹಲವಾರು ಯೋಜನೆಗಳು, ಸ್ಕೀಮ್​ಗಳನ್ನು ತರಲಾಗಿದೆ. ಅದರ ವಿವರ ಇಲ್ಲಿದೆ:

ಸ್ಟಾರ್ಟಪ್​ಗಳಿಗೆ ಫಂಡ್ (ಎಫ್​ಎಫ್​ಎಸ್): ಡಿಪಿಐಐಟಿ ಅಡಿಯಲ್ಲಿ ಫಂಡ್ ಆಫ್ ಫಂಡ್ಸ್ ಫಾರ್ ಸ್ಟಾರ್ಟಪ್ಸ್ ಸ್ಕೀಮ್ (FFS- Fund of Funds for Startups) ರಚಿಸಲಾಗಿದೆ. ಇದು ಸೆಬಿ ನೊಂದಾಯಿತ ಆಲ್ಟರ್ನೇಟಿವ್ ಇನ್ವೆಸ್ಟ್​ಮೆಂಟ್ ಫಂಡ್​ಗಳಿಗೆ ನೆರವು ನೀಡುತ್ತದೆ. ಈ 140ಕ್ಕೂ ಅಧಿಕ ಎಐಎಫ್​ಗಳು 1,370ಕ್ಕೂ ಅಧಿಕ ಸ್ಟಾರ್ಟಪ್​ಗಳಿಗೆ 25,500 ಕೋಟಿ ರೂಗೂ ಅಧಿಕ ಮೊತ್ತದ ಹೂಡಿಕೆಗಳನ್ನು ಮಾಡಿವೆ.

ಕ್ರೆಡಿಟ್ ಗ್ಯಾರಂಟೀ ಸ್ಕೀಮ್: ಈ ಸಿಜಿಎಸ್​​ಎಸ್ ಸ್ಕೀಮ್​ನಲ್ಲಿ (Credit Guarantee Scheme for Startups) 800 ಕೋಟಿ ರೂಗೂ ಹೆಚ್ಚು ಮೊತ್ತದಷ್ಟು 330ಕ್ಕೂ ಹೆಚ್ಚು ಸಾಲಗಳನ್ನು ವಿತರಿಸಲಾಗಿದೆ.

ಸೀಡ್ ಫಂಡ್ ಸ್ಕೀಮ್: ಸ್ಟಾರ್ಟಪ್​ಗಳ ಆರಂಭಿಕ ಹಂತದಲ್ಲಿ ಉತ್ತೇಜನ ನೀಡಲು ಈ ಸ್ಕೀಮ್ (SISFS- Startup India Seed Fund Scheme) ರಚಿಸಲಾಗಿದೆ. ಇನ್ಕುಬೇಟರ್​ಗಳ ಮೂಲಕ ಸ್ಟಾರ್ಟಪ್​ಗಳಿಗೆ ಸೀಡ್ ಫಂಡಿಂಗ್ ಕೊಡಲಾಗುತ್ತದೆ.

ಸ್ಟಾರ್ಟಪ್ ಇಂಡಿಯಾ ಹಬ್: ಸ್ಟಾರ್ಟಪ್ ಇಕೋಸಿಸ್ಟಂನ ಮುಖ್ಯ ಪಾತ್ರಧಾರಿಗಳಾದ ಹೂಡಿಕೆದಾರರು, ಮೆಂಟರ್​​ಗಳು, ಇನ್ಕುಬೇಟರ್​ಗಳು, ಉದ್ದಿಮೆದಾರರು ಎಲ್ಲರೂ ಒಂದೇ ಕಡೆ ಸಿಗುವಂತಾಗಲು ಒಂದು ಆನ್ಲೈನ್ ಪ್ಲಾಟ್​ಫಾರ್ಮ್ ರಚಿಸಲಾಗಿದೆ.

ರಾಜ್ಯಗಳ ಸ್ಟಾರ್ಟಪ್ ರ್ಯಾಂಕಿಂಗ್ ಫ್ರೇಮ್​ವರ್ಕ್: ಸ್ಟಾರ್ಟಪ್​ಗಳ ಆರಂಭ ಮತ್ತು ಬೆಳವಣಿಗೆಗೆ ಉತ್ತೇಜಿಸುವಂತಹ ಅತ್ಯುತ್ತಮ ನೀತಿ ಮತ್ತು ವಾತಾವರಣ ಹೊಂದಿರುವಂತಹ ರಾಜ್ಯಗಳನ್ನು ಗುರುತಿಸಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ.

ನ್ಯಾಷನಲ್ ಮೆಂಟರ್​ಶಿಪ್ ಪೋರ್ಟಲ್ (ಮಾರ್ಗ್): ಉದ್ದಿಮೆದಾರರಿಗೆ ಅನುಭವಿ ಮೆಂಟರ್​ಗಳನ್ನು (ಮಾರ್ಗದರ್ಶಕರು) ದೊರಕಿಸಿಕೊಡುವಂತಹ ಒಂದು ವ್ಯವಸ್ಥೆಯನ್ನು ಮಾರ್ಗ್ ಯೋಜನೆ ಮೂಲಕ ಮಾಡಲಾಗುತ್ತಿದೆ.

ಸ್ಟಾರ್ಟಪ್ ಇಂಡಿಯಾ ಇನ್ವೆಸ್ಟರ್ ಕನೆಕ್ಟ್ ಪೋರ್ಟಲ್: ಉದ್ದಿಮೆದಾರರು ಒಂದೇ ಅರ್ಜಿ ಮೂಲಕ ಹಲವು ಹೂಡಿಕೆದಾರರನ್ನು ತಲಪಲು ಅಥವಾ ಆಕರ್ಷಿಸಲು ವಿಶೇಷ ಡಿಜಿಟಲ್ ಪ್ಲಾಟ್​ಫಾರ್ಮ್ ರಚಿಸಲಾಗಿದೆ. ವೆಂಚರ್ ಕ್ಯಾಪಿಟಲ್ ಫಂಡ್​ಗಳು ಮತ್ತು ಹೂಡಿಕೆದಾರರನ್ನು ಈ ಪೋರ್ಟಲ್ ಮೂಲಕ ಸಂಪರ್ಕಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: G-RAM-G: ಜಿ ರಾಮ್‌ ಜಿ ಕಾಯ್ದೆ- ಮತ್ತಷ್ಟು ಉದ್ಯೋಗ, ಮತ್ತಷ್ಟು ಭದ್ರತೆ

ಸ್ಟಾರ್ಟಪ್ ಇಕೋಸಿಸ್ಟಂ ಗಟ್ಟಿಗೊಳಿಸಲು ವಿವಿಧ ಉಪಕ್ರಮಗಳು…

ಅಟಲ್ ಇನ್ನೋವೇಶನ್ ಮಿಷನ್: ಅಟಲ್ ಟಿಂಕರಿಂಗ್ ಲ್ಯಾಬ್, ಕಮ್ಯೂನಿಟಿ ಇನ್ನೋವೇಟರ್ ಫೆಲೋಶಿಪ್, ಯೂತ್ ಕೋ ಲ್ಯಾಬ್ ಪ್​ರೋಗ್ರಾಮ್, ಡೀಪ್​ಟೆಕ್ ರಿಯಾಕ್ಟರ್, ಲಿಪಿ ಇತ್ಯಾದಿ ವಿವಿಧ ಯೋಜನೆಗಳ್ನು ಈ ಮಿಷನ್​ನಲ್ಲಿ ಜಾರಿಗೊಳಿಸಲಾಗಿದೆ. ಹೊಸ ತಲೆಮಾರಿನ ತಂತ್ರಜ್ಞಾನಗಳಲ್ಲಿ ಯುವಕರು ನಾವೀನ್ಯತೆ ತೋರಲು ಉತ್ತೇಜಿಸುವುದು, ತಳಮಟ್ಟದಿಂದ ಉದ್ದಿಮೆಗಾರಿಕೆಗೆ ಪ್ರೋತ್ಸಾಹಿಸುವುದು ಇತ್ಯಾದಿ ಕೆಲಸಗಳನ್ನು ಈ ಮಿಷನ್​ನಲ್ಲಿ ಮಾಡಲಾಗುತ್ತಿದೆ.

ಜೆನೆಸಿಸ್ ಯೋಜನೆ: ಡೀಪ್ ಟೆಕ್ ಕ್ಷೇತ್ರದಲ್ಲಿ ಇನ್ನೋವೇಶನ್ ಅನ್ನು ಪ್ರೋತ್ಸಾಹಿಸಲು ಜನರೇಶನ್ ನೆಕ್ಸ್ಟ್ ಸಪೋರ್ಟ್ ಫಾರ್ ಇನ್ನೋವೇಟಿವ್ ಸ್ಟಾರ್ಟಪ್ಸ್ (ಜೆನೆಸಿಸ್) ಎನ್ನುವ ಒಂದು ಪ್ಲಾಟ್​​ಫಾರ್ಮ್ ರಚಿಸಲಾಗಿದೆ.

ಎಂಎಸ್​ಎಚ್ ಯೋಜನೆ: ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯದಡಿ ಸ್ಟಾರ್ಟಪ್ ಹಬ್ ಎನ್ನುವ ಉಪಕ್ರಮ 2016ರಲ್ಲಿ ಜಾರಿಯಾಗಿದೆ. ಸಚಿವಾಲಯದಿಂದ ಮಾನ್ಯತೆ ಪಡೆದ ಇನ್ಕುಬೇಶನ್ ಸೆಂಟರ್​ಗಳು, ಹೊಸ ತಂತ್ರಜ್ಞಾನಗಳ ಕೇಂದ್ರಗಳು ಮತ್ತಿತರ ಪ್ಲಾಟ್​ಫಾರ್ಮ್​ಗಳನ್ನು ಒಂದೇ ವೇದಿಕೆಯಲ್ಲಿ ಕಲೆಹಾಕಿ ತಂತ್ರಜ್ಞಾನ ಆಧಾರಿತವಾದ ಆರ್ಥಿಕ ಪ್ರಗತಿಗೆ ಉತ್ತೇಜಿಸುವುದು ಈ ಯೋಜನೆಯ ಉದ್ದೇಶ.

ಟೈಡ್ 2.0 ಸ್ಕೀಮ್: ಎಂಎಸ್​ಎಚ್ ರೀತಿಯಲ್ಲಿ ಇದೂ ಕೂಡ ಎಲೆಕ್ಟ್ರಾನಿಕ್ಸ್ ಸಚಿವಾಲಯದಿಂದ ನಡೆಸಲಾಗುತ್ತಿರುವ ಉಪಕ್ರಮವಾಗಿದೆ. ಎಐ, ಬ್ಲಾಕ್​ಚೇನ್, ರೋಬೋಟಿಕ್ಸ್, ಇಂಟರ್ನೆಟ್ ಆಫ್ ಥಿಂಗ್ಸ್ ಇತ್ಯಾದಿ ಉದಯೋನ್ಮುಖ ತಂತ್ರಜ್ಞಾನಗಳನ್ನು ಬಳಸುವ ಸ್ಟಾರ್ಟಪ್​ಗಳಿಗೆ ಉತ್ತೇಜಿಸುವುದು ಇದರ ಗುರಿ.

ನಿಧಿ ಸ್ಕೀಮ್: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ 2016ರಲ್ಲಿ ಆರಂಭ ಮಾಡಿರುವ ನ್ಯಾಷನಲ್ ಇನಿಶಿಯೇಟಿವ್ ಫಾರ್ ಡೆವಲಪಿಂಗ್ ಅಂಡ್ ಹಾರ್ನೆಸಿಂಗ್ ಇನ್ನೋವೇಶನ್ಸ್ (ನಿಧಿ) ಉಪಕ್ರಮ ಇದು. ಯಶಸ್ವಿ ಸ್ಟಾರ್ಟಪ್​ಗಳಿಗೆ ಉಪಯುಕ್ತ ಐಡಿಯಾಗಳು ಮತ್ತು ಇನ್ನೋವೇಶನ್​ಗಳನ್ನು ಬೆಳೆಸಲು ಇರುವ ಒಂದು ಪ್ಲಾಟ್​ಫಾರ್ಮ್ ಇದು. ಈ ಅದ್ಭುತ ಉಪಕ್ರಮದಿಂದ 1,100ಕ್ಕೂ ಅಧಿಕ ಐಟಿ ಪೇಟೆಂಟ್​ಗಳು ಸಿಕ್ಕಿವೆ. 12 ಸಾವಿರಕ್ಕೂ ಅಧಿಕ ಸ್ಟಾರ್ಟಪ್​ಗಳಿಗೆ ಬಲ ಸಿಕ್ಕಿದೆ. 1.3 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಗೆ ನೆರವಾಗಿದೆ.

ಗ್ರಾಮೀಣ ಉದ್ದಿಮೆಗಾರಿಕೆ ಯೋಜನೆ (ಎಸ್​ವಿಇಪಿ): ದೀನದಯಾಳ್ ಅಂತ್ಯೋದಯ ಯೋಜನೆ ನ್ಯಾಷನಲ್ ರೂರಲ್ ಲೈವ್​ಲಿಹುಡ್ ಮಿಷನ್ ಯೋಜನೆ ಅಡಿ ಸ್ಟಾರ್ಟಪ್ ವಿಲೇಜ್ ಆಂಟ್ರಪ್ರನ್ಯೂರ್​ಶಿಪ್ ಪ್ರೋಗ್ರಾಮ್ ಒಂದು ಉಪಯೋಜನೆಯಾಗಿದೆ. ಗ್ರಾಮೀಣ ಭಾಗದಲ್ಲಿ ಉದ್ದಿಮೆಗಾರಿಕೆಗೆ ಉತ್ತೇಜಿಸುವುದು ಇದರ ಉದ್ದೇಶ. ಹತ್ತಿರಹತ್ತಿರ 4 ಲಕ್ಷ ಉದ್ದಿಮೆಗಳಿಗೆ ಈ ಸ್ಕೀಮ್ ಮೂಲಕ ನೆರವಾಗಲಾಗಿದೆ.

ಆಸ್ಪೈರ್ ಯೋಜನೆ: ಎಂಎಸ್​ಎಂಇ ಸಚಿವಾಲಯ 2015ರಲ್ಲಿ ಆರಂಭಿಸಿದ ಇದು ಇನ್ನೋವೇಶನ್, ಗ್ರಾಮೀಣ ಕೈಗಾರಿಕೆ ಮತ್ತು ಉದ್ದಿಮೆಗಾರಿಕೆಗೆ ಉತ್ತೇಜಿಸುವ ಯೋಜನೆ ಎನಿಸಿದೆ. ಸಣ್ಣ ಉದ್ದಿಮೆಗಳಿಗೆ ಬೇಕಾದ ಕೌಶಲ್ಯ ಒದಗಿಸುವುದು, ಕೌಶಲ್ಯವಂತ ಕೆಲಸಗಾರರನ್ನು ಒದಗಿಸುವುದು, ತಂತ್ರಜ್ಞಾನ ಮತ್ತು ಹಣಕಾಸು ನೆರವು ನೀಡುವುದು ಇದರ ಉದ್ದೇಶ.

ಪಿಎಂಇಜಿಪಿ ಯೋಜನೆ: ಪಿಎಂ ರೋಜಗಾರ್ ಯೋಜನೆ ಮತ್ತು ಗ್ರಾಮೀಣ ಉದ್ಯೋಗಸೃಷ್ಟಿ ಯೋಜನೆ ಎರಡನ್ನೂ ಸೇರಿಸಿ ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯನ್ನು ರೂಪಿಸಲಾಗಿದೆ. ಎಂಎಸ್​ಎಂಇ ಸಚಿವಾಲಯದ ಅಡಿಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಸಮಿತಿ (ಕೆವಿಐಸಿ) ಮೂಲಕ ಈ ಸ್ಕೀಮ್ ಅನ್ನು ಜಾರಿಗೊಳಿಸಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದುಡ್ಡಿನ ಆಸೆಗೆ ಕಳ್ಳಾಟ ಆಡುತ್ತಿದ್ದ ಬೆಂಗಳೂರಿನ ಪಿಜಿ ಮಾಲೀಕರಿಗೆ ಶಾಕ್ ಕೊಟ್ಟ ಅಧಿಕಾರಿಗಳು – Kannada News | GBA Officer inspects 204 paying guest In Bengaluru today And 6 locked

ಬೆಂಗಳೂರು, (ಜನವರಿ 16): ಶುಚಿತ್ವದ ಕೊರತೆ, ಎಫ್‌ಎಸ್‌ಎಸ್‌ಎಐ ಮಾನದಂಡಗಳ ಉಲ್ಲಂಘನೆ, ಸುರಕ್ಷತಾ ಮಾರ್ಗಸೂಚಿಗಳ ಪಾಲಿಸದಿರುವುದು ಸೇರಿ ನಿಯಮಗಳನ್ನ ಪಾಲಿಸದ ಪಿಜಿಗಳ (paying guest )ವಿರುದ್ಧ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ಸಮರ ಸಾರಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಶಿವಾಜಿನಗರ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯಾಧಿಕಾರಿಗಳು ಪಿಜಿ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್‌ ನಿರ್ದೇಶನದ ಮೇರೆಗೆ 204 ಪೇಯಿಂಗ್‌ ಗೆಸ್ಟ್‌(ಪಿಜಿ)ಗಳನ್ನ ಪರಿಶೀಲನೆ ನಡೆಸಿರುವ ಅಧಿಕಾರಿಗಳು, ಲೋಪ ಕಂಡುಬಂದ ಹಿನ್ನೆಲೆ 6 ಪಿಜಿಗಳಿಗೆ ಬೀಗ ಜಡಿದಿದ್ದಾರೆ. ಹಾಗೇ ಜೊತೆಗೆ 1.96 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.

ನ್ಯೂನತೆ ಸರಿಪಡಿಸಿಕೊಳ್ಳಲು ಕಾಲಾವಕಾಶ

ಶುದ್ಧ ಕುಡಿಯುವ ನೀರು, ಶುಚಿತ್ವ, ಅಡುಗೆ ಕೋಣೆ ನೈರ್ಮಲ್ಯ, ಸುರಕ್ಷತೆ, ಉತ್ತಮ ಶೌಚಾಲಯ ವ್ಯವಸ್ಥೆ, ಅಗ್ನಿಶಾಮಕ ಸಾಧನ, ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಕೆ ಮತ್ತು FSSAIನ ಆಹಾರ ಸುರಕ್ಷತಾ ಪ್ರಮಾಣ ಪತ್ರ ಸೇರಿದಂತೆ ಮೂಲಭೂತ ಸೌಕರ್ಯಗಳು ಇರುವ ಒಟ್ಟು 204 ಪೇಯಿಂಗ್ ಗೆಸ್ಟ್ ವಸತಿ ಗೃಹ ಉದ್ದಿಮೆಗಳ ತಪಾಸಣೆ ನಡೆಸಿದ್ದಾರೆ. 7 ದಿನಗಳ ಒಳಗಾಗಿ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಕಾರ್ಯನಿರ್ವಹಣೆ ಮಾಡುವುದಕ್ಕೆ ಪಿಜಿ ಮಾಲೀಕರಿಗೆ ತಿಳುವಳಿಕೆ ಪತ್ರ ನೀಡಿ, ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ವೇಳೆ ಚಿಕ್ಕಪೇಟೆ ಮತ್ತು ಶಿವಾಜಿನಗರ ಆರೋಗ್ಯ ವೈದ್ಯಾಧಿಕಾರಿಗಳಿದ್ದರು.

ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ, ಈ ಎರಡು ದಿನ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಕರೆಂಟ್​​ ಇರುವುದಿಲ್ಲ

ಅನಧಿಕೃತ ಪಿಜಿಗಳ ಹಾವಳಿ

ಬೆಂಗಳೂರಿನಾದ್ಯಂತ ಸಾಕಷ್ಟು ಜೆಂಟ್ಸ್, ಗರ್ಲ್ಸ್ ಪಿಜಿಗಳು ಇದ್ದು. ರಾಜ್ಯದ ಬೇರೆ ಬೇರೆ ಭಾಗಗಳಿಂದ ನಗರಕ್ಕೆ ಬರುವ ಸಾವಿರಾರು ಜನರು ಪಿಜಿಗಳಲ್ಲಿ ವಾಸಿಸುತ್ತಿದ್ದಾರೆ. ಜನ ಹೆಚ್ಚಾದಂತೆ ಕಟ್ಟಡ ನಿಯಮ, ಸುರಕ್ಷತಾ ಮಾನದಂಡ ಉಲ್ಲಂಘಿಸಿ ಪಿಜಿಗಳನ್ನು ನಡೆಸಲಾಗುತ್ತಿದೆ. ಹೌದು.. ರಾಜಧಾನಿ ಬೆಂಗಳೂರಿನಲ್ಲಿ ಅಧಿಕೃತ ಪಿಜಿಗಳಿಗಿಂತ ಅನಧಿಕೃತ ಪಿಜಿಗಳ ಹಾವಳಿ ಹೆಚ್ಚಾಗಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಪರವಾನಗಿ ಪಡೆಯದೆ ಕಾರ್ಯಾಚರಿಸುತ್ತಿರುವ 165 ಪಿಜಿಗಳು ಪತ್ತೆಯಾಗಿದ್ದವು.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ನಿರಾತಂಕವಾಗಿ ಕಟ್ಟಡ ಬೈಲಾ, ಮಾರ್ಗಸೂಚಿ, ಪರವಾನಗಿ ನಿಯಮ ಉಲ್ಲಂಘನೆ, ಸುರಕ್ಷತಾ ಮಾನದಂಡಗಳನ್ನು ಅನುಸರಿಸದೇ ರಾಜಾರೋಷವಾಗಿ ಪಿಜಿಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಪಿಜಿಗಳ ಮೇಲೆ ಬೆಂಗಳೂರು ಪೂರ್ವ ನಗರ ಪಾಲಿಕೆ ಆರೋಗ್ಯ ಅಧಿಕಾರಿಗಳ ತಂಡ, ದಾಳಿ ನಡೆಸಿ ಬಿಸಿ ಮುಟ್ಟಿಸುವ ಕೆಲಸ ಮಾಡಿತ್ತು.

ಕಳೆದ ವರ್ಷದ ಆಗಸ್ಟ್‌ನಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ – 2020ರ ಕಾಯಿದೆಯಡಿ ಪಿಜಿಗಳಿಗೆ ಮಾರ್ಗಸೂಚಿ ಪ್ರಕಟಿಸಲಾಗಿತ್ತು. ಅಲ್ಲದೆ, ವಲಯ ಆರೋಗ್ಯಾಧಿಕಾರಿ, ಆರೋಗ್ಯ ವೈದ್ಯಾಧಿಕಾರಿಗಳು ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕರು ತಮ್ಮ – ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಪಿಜಿಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಆದರೂ, ಮಾರ್ಗಸೂಚಿ ಪಾಲನೆ ಮಾಡದ 187 ಪಿಜಿಗಳಿಗೆ ಬೀಗ ಜಡಿದಿದ್ದರು.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜನರೊಂದಿಗಿನ ಎನ್​ಡಿಎ ಬಾಂಧವ್ಯವನ್ನು ಸೂಚಿಸುತ್ತದೆ; ಬಿಎಂಸಿ ಚುನಾವಣೆಯ ಗೆಲುವಿಗೆ ಪ್ರಧಾನಿ ಮೋದಿ ಧನ್ಯವಾದ – Kannada News | Thank You Maharashtra PM Modi hails Mahayutis Big Win in Municipal Corporation elections

ನವದೆಹಲಿ, ಜನವರಿ 16: ಮಹಾರಾಷ್ಟ್ರದ (Maharashtra) ಪುರಸಭೆ ಚುನಾವಣೆಯಲ್ಲಿ ಎನ್‌ಡಿಎ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ (PM Modi) ಶ್ಲಾಘಿಸಿದ್ದಾರೆ. ಈ ಫಲಿತಾಂಶಗಳು ಎನ್​ಡಿಎ ಮೈತ್ರಿಕೂಟದ ಜನಪರ ಉತ್ತಮ ಆಡಳಿತಕ್ಕೆ ಹೆಚ್ಚುತ್ತಿರುವ ಸಾರ್ವಜನಿಕ ಬೆಂಬಲವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದ್ದಾರೆ. ಈ ಬಗ್ಗೆ ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಧನ್ಯವಾದಗಳು ಮಹಾರಾಷ್ಟ್ರ! ರಾಜ್ಯದ ಕ್ರಿಯಾಶೀಲ ಜನರು ಎನ್‌ಡಿಎಯ ಜನಪರ ಉತ್ತಮ ಆಡಳಿತದ ಕಾರ್ಯಸೂಚಿಯನ್ನು ಆಶೀರ್ವದಿಸಿದ್ದಾರೆ” ಎಂದು ಹೇಳಿದ್ದಾರೆ.

ಇನ್ನೊಂದು ಎಕ್ಸ್ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ ಜನರ ನಡುವೆ ದಣಿವರಿಯಿಲ್ಲದೆ ಕೆಲಸ ಮಾಡಿದ್ದಕ್ಕಾಗಿ ಎನ್‌ಡಿಎಯ ಕಾರ್ಯಕರ್ತರನ್ನು ಶ್ಲಾಘಿಸಿದ್ದಾರೆ. “ಕಾರ್ಯಕರ್ತರು ಎನ್‌ಡಿಎಯ ದೃಷ್ಟಿಕೋನವನ್ನು ಜನರಿಗೆ ಎತ್ತಿ ತೋರಿಸಿದರು ಮತ್ತು ವಿರೋಧ ಪಕ್ಷದ ಸುಳ್ಳುಗಳನ್ನು ಬಹಿರಂಗಪಡಿಸಿದರು. ಕಾರ್ಯಕರ್ತರಿಗೆ ನನ್ನ ಧನ್ಯವಾದಗಳು ಮತ್ತು ಶುಭಾಶಯಗಳು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಎಂಸಿ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ; ಭರ್ಜರಿ ಗೆಲುವಿನತ್ತ ಬಿಜೆಪಿ ಮೈತ್ರಿಕೂಟ; ಠಾಕ್ರೆ ಸಹೋದರರಿಗೆ ಹಿನ್ನಡೆ

ಮಹಾಯುತಿ ಮೈತ್ರಿ ಮಹಾರಾಷ್ಟ್ರದ ಪುರಸಭೆ ಚುನಾವಣೆಯಲ್ಲಿ ಭಾರೀ ಜಯ ಸಾಧಿಸಿದೆ. ಬಿಜೆಪಿ 2,869 ವಾರ್ಡ್‌ಗಳಲ್ಲಿ 1,300ಕ್ಕೂ ಹೆಚ್ಚು ವಾರ್ಡ್‌ಗಳನ್ನು ಗೆದ್ದು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನಂತರ ಏಕನಾಥ್ ಶಿಂಧೆ ಅವರ ಶಿವಸೇನೆ 360ಕ್ಕೂ ಹೆಚ್ಚು ವಾರ್ಡ್‌ಗಳನ್ನು ಗೆದ್ದಿತು. ಕಾಂಗ್ರೆಸ್ ಕೂಡ ಅಚ್ಚರಿ ಮೂಡಿಸಿ 300ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಶಿವಸೇನೆ (ಯುಬಿಟಿ) ಸುಮಾರು 160 ವಾರ್ಡ್‌ಗಳನ್ನು ಗೆದ್ದಿತು ಮತ್ತು ಪ್ರತ್ಯೇಕವಾಗಿ ಸ್ಪರ್ಧಿಸಿದ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) 150ಕ್ಕೂ ಹೆಚ್ಚು ವಾರ್ಡ್‌ಗಳನ್ನು ಗೆದ್ದಿತು. ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಸಹ 90ಕ್ಕೂ ಹೆಚ್ಚು ವಾರ್ಡ್‌ಗಳನ್ನು ಗೆದ್ದಿತು. ಶರದ್ ಪವಾರ್ ಅವರ ಎನ್‌ಸಿಪಿ (ಎಸ್‌ಪಿ) 28 ವಾರ್ಡ್‌ಗಳನ್ನು ಗೆದ್ದಿತು. ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಸಹ ಸುಮಾರು 18 ವಾರ್ಡ್‌ಗಳನ್ನು ಗೆದ್ದಿತು. ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ್ ಆಘಾಡಿ (ವಿಬಿಎ) 14 ವಾರ್ಡ್‌ಗಳನ್ನು ಗೆದ್ದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BBL: ಸಿಂಗಲ್ ಬೇಡ ವಾಪಸ್ ಹೋಗು; ಬಾಬರ್ ಆಝಂಗೆ ಇದೆಂಥಾ ಅವಮಾನ! ವಿಡಿಯೋ – Kannada News | Babar Azam Humiliated by Steve Smith in BBL: Single Denied Sparks Controversy

ಕೆಲವೇ ಕೆಲವು ದಿನಗಳ ಹಿಂದೆ ಬಿಗ್ ಬ್ಯಾಷ್ ಲೀಗ್​ನಲ್ಲಿ ಪಾಕಿಸ್ತಾನದ ಮಾಜಿ ನಾಯಕ ಮೊಹಮ್ಮದ್ ರಿಜ್ವಾನ್ ಅವರನ್ನು ಅವರ ಆಮೆಗತಿಯ ಬ್ಯಾಟಿಂಗ್​ನಿಂದಾಗಿ ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿ ಡಗೌಟ್​ಗೆ ವಾಪಸ್ ಕರೆಸಿಕೊಳ್ಳಲಾಗಿತ್ತು. ಇದು ಪಾಕ್ ನಾಯಕನಿಗೆ ಸಾರ್ವಕನಿಕವಾಗಿ ಸಾಕಷ್ಟು ಮುಜುಗರ ತಂದಿತ್ತು. ಇದೀಗ ಅದೇ ರೀತಿಯ ಅವಮಾನ ಪಾಕಿಸ್ತಾನದ ಮತ್ತೊಬ್ಬ ಮಾಜಿ ನಾಯಕ ಬಾಬರ್ ಆಝಂ ಬ್ಯಾಟಿಂಗ್‌ ವಿಚಾರದಲ್ಲಿ ನಡೆದಿದೆ. ಬ್ಯಾಟಿಂಗ್‌ ವೇಳೆ ಹೆಚ್ಚು ಬಾಲ್​ಗಳನ್ನು ಡಾಟ್ ಮಾಡಿ ಓವರ್​ನ ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳಲು ಪ್ರಯತ್ನಿಸಿದ ಬಾಬರ್​ಗೆ ಸಿಂಗಲ್ ತೆಗೆದುಕೊಳ್ಳಲು ನಿರಾಕರಿಸಿ ಸ್ಟೀವ್ ಸ್ಮಿತ್ ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ. ಸ್ವತಃ ಬಾಬರ್ ಅವರೇ ತನಗಾದ ಅವಮಾನದಿಂದ ಮೈದಾನದಲ್ಲೇ ಅಸಮಾಧಾನಗೊಂಡ ಘಟನೆಯೂ ನಡೆದಿದೆ.

2025-26ರ ಬಿಗ್ ಬ್ಯಾಷ್ ಲೀಗ್‌ನ 37ನೇ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ಮತ್ತು ಸಿಡ್ನಿ ಥಂಡರ್ ಮುಖಾಮುಖಿಯಾಗಿದ್ದವು. ಪಂದ್ಯದ ಸಮಯದಲ್ಲಿ, ಸ್ಟೀವ್ ಸ್ಮಿತ್ 11ನೇ ಓವರ್‌ನ ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳಲು ನಿರಾಕರಿಸಿದರು. ಇದು ಸ್ಟ್ರೈಕ್​ನಲ್ಲಿದ್ದ ಬ್ಯಾಟ್ಸ್‌ಮನ್ ಬಾಬರ್ ಆಝಂ ಅವರನ್ನು ಕೆರಳಿಸಿತು. ಈ ಘಟನೆಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಸಿಡ್ನಿ ಸಿಕ್ಸರ್ಸ್ ತಂಡದ ಪರ ಸ್ಟೀವ್ ಸ್ಮಿತ್ ಸ್ಫೋಟಕವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಇತ್ತ ಇದಕ್ಕೆ ತದ್ವಿರುದ್ಧವಾಗಿ ಬಾಬರ್ ಅವರ ಸ್ಟ್ರೈಕ್ ರೇಟ್ ಅವರಿಗಿಂತ ಗಮನಾರ್ಹವಾಗಿ ಕಡಿಮೆಯಾಗಿತ್ತು. ಆ ಓವರ್‌ನಲ್ಲಿ ಬಾಬರ್ ಸತತ ಮೂರು ಡಾಟ್ ಬಾಲ್‌ಗಳನ್ನು ಎದುರಿಸಿ, ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳಲು ಯತ್ನಿಸಿದರು. ಆದರೆ ಸ್ಮಿತ್ ರನ್ ತೆಗೆದುಕೊಳ್ಳಲು ನಿರಾಕರಿಸಿದರು. ಇದು ಬಾಬರ್ ಅಸಮಾಧಾನಗೊಳ್ಳುವಂತೆ ಮಾಡಿತು.

ಸ್ಟೀವ್ ಸ್ಮಿತ್ ಅವರ ನಿರ್ಧಾರಕ್ಕೆ ಪವರ್ ಸರ್ಜ್ ನಿಯಮವೇ ಕಾರಣ. ಪವರ್ ಸರ್ಜ್ ಎಂಬುದು ಬಿಬಿಎಲ್‌ನಲ್ಲಿನ ನಿಯಮವಾಗಿದ್ದು, ಆರಂಭಿಕ ನಾಲ್ಕು ಓವರ್‌ಗಳ ಪವರ್‌ಪ್ಲೇ ನಂತರ, ಬ್ಯಾಟಿಂಗ್ ತಂಡವು ಇನ್ನಿಂಗ್ಸ್‌ನ 11 ನೇ ಓವರ್‌ನ ನಂತರ ಯಾವುದೇ ಸಮಯದಲ್ಲಿ ಮತ್ತೊಂದು ಎರಡು ಓವರ್‌ಗಳ ಪವರ್‌ಪ್ಲೇ ಅನ್ನು ಆಯ್ಕೆ ಮಾಡಬಹುದು. ಈ ನಿಯಮದ ಪ್ರಕಾರ ಕೇವಲ ಇಬ್ಬರು ಫೀಲ್ಡರ್‌ಗಳನ್ನು 30-ಗಜ ವೃತ್ತದ ಹೊರಗೆ ಇರಿಸಲಾಗುತ್ತದೆ. ಹೀಗಾಗಿ ಇದರ ಲಾಭ ಪಡೆಯಲು ಸ್ಟೀವ್ ಸ್ಮಿತ್ ಬಯಸಿದ್ದರು. ಅದರಂತೆ ಇನ್ನಿಂಗ್ಸ್‌ನ 12 ನೇ ಓವರ್‌ನಲ್ಲಿ ಸ್ಮಿತ್ 30 ರನ್ ಗಳಿಸಿದರು. ಆದರೆ ಸ್ಮಿತ್ ಮಾಡಿದ್ದು ಮಾತ್ರ ಬಾಬರ್ ಅವರನ್ನು ಕೋಪಗೊಳಿಸಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒತ್ತಡದಿಂದ ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಯಾಗುತ್ತೆ ಗೊತ್ತಾ? ತಿಳಿದ್ರೆ ಶಾಕ್ ಆಗ್ತೀರಾ! – Kannada News | Stress: The Silent Health Threat

ಒತ್ತಡ (Stress) ಇಲ್ಲದ ವ್ಯಕ್ತಿ ಇರಲು ಸಾಧ್ಯವೇ… ಎಂಬ ಪ್ರಶ್ನೆಗೆ ಸಹಜವಾಗಿ ಇಲ್ಲ ಎಂಬ ಉತ್ತರವೇ ಬರುತ್ತೆ. ಹಣಕಾಸಿನ ತೊಂದರೆ, ಕಚೇರಿ ಕೆಲಸ, ಕುಟುಂಬದ ಜವಾಬ್ದಾರಿ ಹೀಗೆ ನಾನಾ ರೀತಿಯ ಕಾರಣಗಳು ವ್ಯಕ್ತಿಯನ್ನು ಒಳಗಿನಿಂದ ಹಿಂಡಿ ಹಿಪ್ಪೆ ಮಾಡಿಬಿಡಬಹುದು, ಆದರೆ ನಿಮಗೆ ಗೊತ್ತಾ… ನಿಮಗೆ ತಿಳಿದೋ ತಿಳಿಯದೆಯೋ ಅನುಭವಿಸುವ ಒತ್ತಡ ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗುತ್ತದೆ. ಹೌದು, ಅತಿಯಾಗಿ ಯೋಚಿಸುವುದರಿಂದ ಕೂದಲು ಉದುರುವಿಕೆಯಿಂದ ಹಿಡಿದು ಹೃದಯ ಸಂಬಂಧಿ ಕಾಯಿಲೆಗಳವರೆಗೆ ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಷ್ಟೇ ಅಲ್ಲ, ಒತ್ತಡಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ನಮ್ಮ ದೇಹದಲ್ಲಿ ‘ಕಾರ್ಟಿಸೋಲ್’ ನಂತಹ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇವು ವಿಷಕ್ಕಿಂತಲೂ ಅಪಾಯಕಾರಿಯಾಗಿದ್ದು ಹೃದಯ, ಮೆದುಳು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತವೆ. ಈ ರೀತಿ ಆರೋಗ್ಯಕ್ಕೆ ಹಾನಿ ಮಾಡಬಹುದಾದ ಒತ್ತಡದಿಂದ ದೇಹದಲ್ಲಿ ಏನೆಲ್ಲಾ ಆಗುತ್ತದೆ, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಾರ್ಮೋನುಗಳ ಅಸಮತೋಲನ: ಒತ್ತಡ ಹೆಚ್ಚಾದಾಗ, ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ಹಾರ್ಮೋನುಗಳು ಅತಿಯಾಗಿ ಬಿಡುಗಡೆಯಾಗುತ್ತವೆ. ಇದು ರಕ್ತದೊತ್ತಡವನ್ನು (ಬಿಪಿ) ಹೆಚ್ಚಿಸುತ್ತದೆ ಮತ್ತು ಹೃದಯದ ಮೇಲೆ ಒತ್ತಡವನ್ನುಂಟು ಮಾಡುತ್ತದೆ.

ಜೀರ್ಣಕಾರಿ ಸಮಸ್ಯೆಗಳು: ಉದ್ವೇಗವು ಆಮ್ಲೀಯತೆ, ಮಲಬದ್ಧತೆಗೆ ಕಾರಣವಾಗಬಹುದು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ನಿಧಾನಗೊಳಿಸುತ್ತದೆ. ಕೆಲವರಲ್ಲಿ ಹಸಿವು ಕಡಿಮೆಯಾಗುತ್ತದೆ, ಇನ್ನು ಕೆಲವರು ಅತಿಯಾಗಿ ತಿಂದು ಬೊಜ್ಜನ್ನು ಹೆಚ್ಚಿಸಿಕೊಳ್ಳುತ್ತಾರೆ.

ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ: ನಿರಂತರ ಒತ್ತಡ ದೇಹದ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ, ಶೀತ, ಜ್ವರ ಮತ್ತು ಸೋಂಕುಗಳು ಆಗಾಗ ಕಂಡುಬರುತ್ತದೆ.

ಪುರುಷರು ಮತ್ತು ಮಹಿಳೆಯರ ಸಮಸ್ಯೆಗಳು: ಮಹಿಳೆಯರು ಮುಟ್ಟಿನ ಸಮಸ್ಯೆ ಮತ್ತು ಪುರುಷರಲ್ಲಿ ಹಾರ್ಮೋನುಗಳ ಅಸಮತೋಲನವಾಗಬಹುದು. ಇದು ಬಂಜೆತನಕ್ಕೂ ಕಾರಣವಾಗಬಹುದು.

ಮೆದುಳಿನ ಮೇಲೆ ಪರಿಣಾಮ: ಸ್ಮರಣಶಕ್ತಿ ನಷ್ಟ, ಏಕಾಗ್ರತೆಯ ಕೊರತೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥತೆ ಉಂಟಾಗಬಹುದು.

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಈ 5 ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ ಒತ್ತಡದಿಂದ ಮುಕ್ತರಾಗಿ

ಒತ್ತಡವನ್ನು ತಡೆಗಟ್ಟಲು ಸಲಹೆಗಳು?

  • ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ ಅಥವಾ ಯೋಗ ಮಾಡಿ.
  • ಪ್ರತಿದಿನ 7- 8 ಗಂಟೆ ಚೆನ್ನಾಗಿ ನಿದ್ರೆ ಮಾಡಿ.
  • ಸಕಾರಾತ್ಮಕ ಮನಸ್ಥಿತಿಯನ್ನು ಅಳವಡಿಸಿಕೊಳ್ಳಿ. ಅಗತ್ಯವಿದ್ದರೆ, ಚಿಕಿತ್ಸಕರಿಂದ ಸಲಹೆ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗಾರ್ಕರ್​ಗೆ ಚುನಾವಣೆಯಲ್ಲಿ ಗೆಲುವು – Kannada News | Jalna Civic Election Shock: Gauri Lankesh Murder Case Accused Shrikant Secures Independent Victory

ಮುಂಬೈ, ಜನವರಿ 16: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಲ್ನಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಫಲಿತಾಂಶ ಘೋಷಣೆಯಾದ ಕೂಡಲೇ ಬೆಂಬಲಿಗರೊಂದಿಗೆ ಸಂಭ್ರಮಾಚರಣೆ ನಡೆಸಿದ್ದಾರೆ. 2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನ ಅವರ ಮನೆಯ ಹೊರಗೆ ಗೌರಿ ಲಂಕೇಶ್ ಅವರ​ ಹತ್ಯೆ ನಡೆದಿತ್ತು.

ಪಂಗಾರ್ಕರ್ ಅವರನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ಹೆಸರಿಸಲಾಯಿತು. ಸೆಪ್ಟೆಂಬರ್ 4, 2024 ರಂದು ಕರ್ನಾಟಕ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗಾರ್ಕರ್, ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 13 ರಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಶ್ರೀಕಾಂತ್ ಪಂಗಾರ್ಕರ್ ಅವರು ನೃತ್ಯ ಮಾಡುತ್ತಾ ಮತ್ತು ಡ್ರಮ್ಸ್ ಬಾರಿಸುತ್ತಾ ಹೂವುಗಳನ್ನು ಎಸೆಯುವ ಮೂಲಕ ಸಂಭ್ರಮಿಸಿದ್ದು ಪಿಟಿಐ ಈ ವಿಡಿಯೋ ಹಂಚಿಕೊಂಡಿದೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯು ವಾರ್ಡ್‌ನಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಜನವರಿ 15 ರಂದು ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಳು ನಡೆದಿದ್ದವು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗಿಲ್ಲಿ ನಟನ ಹುಟ್ಟೂರಲ್ಲಿ ಬ್ಯಾನರ್, ಕಟೌಟ್: ಹಳ್ಳಿ ಮಂದಿ ಖುಷಿ ನೋಡಿ.. – Kannada News | Gilli Nata native Dadadapura Celebrates ahead of Bigg Boss Kannada Season 12 Finale

‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ (Bigg Boss Kannada Season 12 Finale) ತಲುಪಿರುವ ಗಿಲ್ಲಿ ಪರವಾಗಿ ರಾಜ್ಯಾದ್ಯಂತ ಅಭಿಮಾನಿಗಳು ಪ್ರಚಾರ ಮಾಡುತ್ತಿದ್ದಾರೆ. ಗಿಲ್ಲಿ ಅವರ ಹುಟ್ಟೂರಿನಲ್ಲಿ ಜನರು ದೊಡ್ಡ ದೊಡ್ಡ ಬ್ಯಾನರ್, ಕಟೌಟ್ ಹಾಕಿ ಸಂಭ್ರಮಿಸುತ್ತಿದ್ದಾರೆ. ಹೌದು, ಗಿಲ್ಲಿ ಅವರ ಊರು ದಡದಪುರದಲ್ಲಿ (Dadadapura) ಗ್ರಾಮಸ್ಥರ ಸಂಭ್ರಮ ಜೋರಾಗಿದೆ. ‘ವೋಟ್ ಫಾರ್ ಗಿಲ್ಲಿ’ ಎಂದು ಘೋಷಣೆ ಕೂಗಲಾಗುತ್ತಿದೆ. ಕಾಮಿಡಿ ಮೂಲಕ ಗಿಲ್ಲಿ ನಟ (Gilli Nata) ಅವರು ಎಲ್ಲರನ್ನು ಮನರಂಜಿಸಿದ್ದಾರೆ. ಅವರೇ ಈ ಬಾರಿ ಬಿಗ್ ಬಾಸ್ ಟ್ರೋಫಿ ಗೆಲ್ಲುತ್ತಾರೆ ಎಂಬ ಅಭಿಪ್ರಾಯ ಜನರಿಗೆ ಇದೆ. ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ, ಅಶ್ವಿನಿ ಗೌಡ, ಧ್ರುವಂತ್, ಮ್ಯೂಟೆಂಟ್ ರಘು ಕೂಡ ಬಿಗ್ ಬಾಸ್ ಫಿನಾಲೆ ಕಣದಲ್ಲಿ ಇದ್ದಾರೆ. ಜನವರಿ 18ರಂದು ಬಿಗ್ ಬಾಸ್ ಬಾಸ್ ಫಿನಾಲೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶುಂಠಿ, ಈರುಳ್ಳಿ, ಬೆಳ್ಳುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಸೂಕ್ತವೇ? – Kannada News | Is it right or wrong to store ginger, onions, and garlic in the refrigerator

ಬೆಳ್ಳುಳ್ಳಿ, ಶುಂಠಿ ಮತ್ತು ಈರುಳ್ಳಿ ದೈನಂದಿನ ಅಡುಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರತಿಯೊಬ್ಬರೂ ಸಹ ಈ ಮೂರು ವಸ್ತುಗಳನ್ನು ಅಡುಗೆಯಲ್ಲಿ ಬಳಸುತ್ತಾರೆ. ಹಾಗಾಗಿ ಒಮ್ಮೆಲೇ ಹೆಚ್ಚಿನ ಪ್ರಮಾಣದಲ್ಲಿ ಇವುಗಳನ್ನು ಮಾರುಕಟ್ಟೆಯಿಂದ ತಂದು ಅನೇಕರು ಫ್ರಿಡ್ಜ್‌ನಲ್ಲಿ (refrigerator) ಸ್ಟೋರ್‌ ಮಾಡಿ ಇಡುತ್ತಾರೆ. ಇತರೆ ತರಕಾರಿಯಂತೆ ಶುಂಠಿ, ಬೆಳ್ಳುಳ್ಳಿ ಮತ್ತು  ಈರುಳ್ಳಿಯನ್ನು ರೆಫ್ರಿಜರೇಟರ್‌ನಲ್ಲಿ ಇಡಬಾರದಂತೆ ಜೊತೆಗೆ ಇವುಗಳನ್ನು ಫ್ರಿಡ್ಜ್‌ನಲ್ಲಿ ಇಡುವ ಯಾವುದೇ ಅವಶ್ಯಕತೆಯೂ ಇಲ್ಲ ಏಕೆಂದರೆ ಇವು ಮೂರು ಒಣ ಪದಾರ್ಥಗಳಾಗಿದ್ದು, ಅವು ಬಹಳ ಕಡಿಮೆ ನೀರನ್ನು ಹೊಂದಿರುತ್ತವೆ ಹಾಗಾಗಿ ಅವು ಬಹು ಬೇಗನೆ ಹಾಳಾಗುವುದಿಲ್ಲ.  ಹಾಗಾದ್ರೆ ಇವುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಏನಾಗುತ್ತದೆ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಿ.

ಈರುಳ್ಳಿ, ಬೆಳ್ಳುಳ್ಳಿ, ಶುಂಠಿಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಸೂಕ್ತವೇ?

ಬೆಳ್ಳುಳ್ಳಿ, ಶುಂಠಿ ಮತ್ತು ಈರುಳ್ಳಿಗಳನ್ನು ರೆಫ್ರಿಜರೇಟರ್‌ನಲ್ಲಿ ಇರಿಸಿದಾಗ, ಫ್ರಿಡ್ಜ್‌ನ ತಂಪಾದ ಮತ್ತು ಆರ್ದ್ರ ಗಾಳಿಯು ಈ ಪದಾರ್ಥದೊಳಗೆ ತೇವಾಂಶವನ್ನು ಸೆಳೆಯುತ್ತದೆ. ಈ ವಸ್ತುಗಳು ತೇವಾಂಶಕ್ಕೆ ಒಡ್ಡಿಕೊಂಡಾಗ ಹೈಡ್ರೇಟ್ ಆಗಲು ಪ್ರಾರಂಭಿಸುತ್ತವೆ, ಇದು ಅವುಗಳ ಕೊಳೆಯುವಿಕೆಯನ್ನು ವೇಗಗೊಳಿಸುತ್ತದೆ. ಇದರ ಜೊತೆಗೆ, ರೆಫ್ರಿಜರೇಟರ್‌ನಲ್ಲಿರುವ ಆರ್ದ್ರ ಗಾಳಿಯು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಗೆ ಸಂತಾನೋತ್ಪತ್ತಿ ಮಾಡಲು ಉತ್ತಮ ಜಗವಾಗಿದೆ. ಅದಕ್ಕಾಗಿಯೇ ಕೆಲವೊಮ್ಮೆ ರೆಫ್ರಿಜರೇಟರ್‌ನಲ್ಲಿ ಇರಿಸಲಾದ ಬೆಳ್ಳುಳ್ಳಿ, ಶುಂಠಿ ಮತ್ತು ಈರುಳ್ಳಿ ಬೇಗನೇ  ಹಾಳಾಗುತ್ತವೆ. ಬ್ಯಾಕ್ಟೀರಿಯಾ ಅಂಟಿಕೊಂಡ ಪದಾರ್ಥಗಳನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದಲೂ ಸೂಕ್ತವಲ್ಲ.

ಇದನ್ನೂ ಓದಿ: ಮನೆಯಲ್ಲಿ ಹಲ್ಲಿಗಳಿದ್ದರೆ ತುಂಬಾ ಒಳ್ಳೆಯದಂತೆ; ಯಾಕೆ ಗೊತ್ತಾ ?

ಬೆಳ್ಳುಳ್ಳಿ, ಶುಂಠಿ ಮತ್ತು ಈರುಳ್ಳಿಯನ್ನು ಎಲ್ಲಿ ಮತ್ತು ಹೇಗೆ ಸಂಗ್ರಹಿಸಬೇಕು?

ಈ ವಸ್ತುಗಳನ್ನು ತೆರೆದ, ಒಣ ಮತ್ತು ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಸಂಗ್ರಹಿಸುವುದು ಉತ್ತಮ. ಅವುಗಳನ್ನು ಬುಟ್ಟಿ ಅಥವಾ ಜಾಲರಿಯ ಪೆಟ್ಟಿಗೆಯಲ್ಲಿ ಇಡುವುದರಿಂದ, ಅವುಗಳಲ್ಲಿ ತೇವಾಂಶ ಸಂಗ್ರಹವಾಗುವುದಿಲ್ಲ ಮತ್ತು ಅವು ದೀರ್ಘಕಾಲ ಸುರಕ್ಷಿತವಾಗಿ ಉಳಿಯುತ್ತವೆ. ಹಾಗೆ ಮಾಡುವುದರಿಂದ, ಅವುಗಳ ಹಾಳಾಗುವ ಸಾಧ್ಯತೆ ಕಡಿಮೆಯಾಗುತ್ತದೆ ಜೊತೆಗೆ ರುಚಿ ಮತ್ತು ಗುಣಮಟ್ಟ ಕೂಡ ಹಾಳಾಗುವುದಿಲ್ಲ.

ಈ ಪದಾರ್ಥಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಯಾವುದೇ ವಿಷಕಾರಿ ರಾಸಾಯನಿಕಗಳು ಉತ್ಪತ್ತಿಯಾಗುವುದಿಲ್ಲ, ಆದರೆ ತಪ್ಪಾಗಿ ಸಂಗ್ರಹಿಸುವುದರಿಂದ ಅವು ಬೇಗನೆ ಹಾಳಾಗುವ ಅಪಾಯ ಹೆಚ್ಚು. ಆದ್ದರಿಂದ ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಕೋಣೆಯ ಉಷ್ಣಾಂಶದಲ್ಲಿ ಸಂಗ್ರಹಿಸಿಡುವುದು ಸೂಕ್ತ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link