Category Archives: Blog

Your blog category

ಮಳೆ ಅಬ್ಬರಕ್ಕೆ ಬೆಸ್ಕಾಂಗೆ ಲಕ್ಷಾಂತರ ರೂ. ಹಾನಿ: ವಿದ್ಯುತ್ ಕಂಬಗಳು, ಮರ ಬಿದ್ದಿದ್ದೆಷ್ಟು? – Kannada News | Bescom losses RS 87.32 Lakh for pre monsoon rain In Bengaluru On April 29

ಬೆಂಗಳೂರು, (ಏಪ್ರಿಲ್ 30): ಉದ್ಯಾನ ನಗರಿ ಬೆಂಗಳೂರಿನಲ್ಲಿ (Bengaluru)  ನಿನ್ನೆ (ಏಪ್ರಿಲ್ 29) ಒಂದೆರಡು ಗಂಟೆಗಳ ಕಾಲ ಸುರಿದ ಬಿರುಗಾಳಿ ಮಳೆಗೆ 25 ವರ್ಷಗಳ ದಾಖಲೆ ಮುರಿದಿದೆ. ಏಪ್ರಿಲ್ ತಿಂಗಳಲ್ಲಿ ಗರಿಷ್ಠ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. 2001ರ ಏಪ್ರಿಲ್ 19ರಂದು ನಗರದಲ್ಲಿ 108.6 ಮಿಲಿ ಮೀಟರ್ ಮಳೆಯಾಗಿತ್ತು. ಆದ್ರೆ, 2026ರ ಏಪ್ರಿಲ್ 29ರಂದು ಬುಧವಾರ ಸುರಿದ ಮಳೆಯು 111.5 ಮಿಲಿ ಮೀಟರ್ ಆಗಿದೆ. ಈ ಮೂಲಕ 25 ವರ್ಷಗಳ ಬಳಿಕ ಏಪ್ರಿಲ್​ನಲ್ಲಿ ಸುರಿದ ದಾಖಲೆಯ ವರ್ಷಧಾರೆಯಾಗಿದೆ.  ಇದರಿಂದ ನಗರದಲ್ಲಿ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗಿದ್ದು, ಒಂದೇ ಮಳೆಗೆ ಬೆಸ್ಕಾಂಗೆ (Bescom) 87.32 ಲಕ್ಷ ರೂ. ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಬೆಸ್ಕಾಂಗೆ 87.32 ಲಕ್ಷ ರೂ. ಹಾನಿ

ಏಪ್ರಿಲ್ 29ರ ಸಂಜೆ ಸುರಿದ ಗಾಳಿಸಹಿತ ಭಾರೀ ಮಳೆಗೆ ಬೆಸ್ಕಾಂಗೆ ಭಾರೀ ನಷ್ಟವಾಗಿದೆ. ಮರ, ಮರದ ರೆಂಬೆ ಕೊಂಬೆಗಳು ವಿದ್ಯುತ್ ತಂತಿ ಹಾಗೂ ಕಂಬಗಳ ಮೇಲೆ ಉರುಳಿ ಬರೋಬ್ಬರಿ 87.32 ಲಕ್ಷ ರೂಪಾಯಿನಷ್ಟು ಹಾನಿಯಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 186 ವಿದ್ಯುತ್ ಕಂಬಗಳು, 38 ಟ್ರಾನ್ಸ್ ಫಾರ್ಮರ್ಸ್, 0.9 ಕಿಮೀ ಉದ್ದದ ವಿದ್ಯುತ್ ತಂತಿಗಳು ಹಾನಿಯಾಗಿದ್ದು, ಬೆಂಗಳೂರು ನಗರ ವ್ಯಾಪ್ತಿಯಲ್ಲೇ 50.52 ಲಕ್ಷ ರೂಪಾಯಿ ನಷ್ಟವಾಗಿದೆ. ಇದೀಗ ಸಮರ್ಪಕ ವಿದ್ಯುತ್ ವ್ಯವಸ್ಥೆ ಮರುಸ್ಥಾಪಿಸಲು ಬೆಸ್ಕಾಂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮಳೆ ಅಬ್ಬರ: ಅವಾಂತರಗಳ ಬೆನ್ನಲ್ಲೇ ಅಗತ್ಯ ಕ್ರಮಕ್ಕೆ ಮುಂದಾದ ಜಿಬಿಎ

ಮಳೆಗೆ ಬೆಂಗಳೂರಿನಲ್ಲಿ ಅಸ್ತವ್ಯಸ್ತ

ಬುಧವಾರ ಸಂಜೆ ಸುರಿದ ಬಿರುಗಾಳಿ ಸಮೇತ ಆಲಿಕಲ್ಲು ಮಳೆಗೆ ರಾಜಧಾನಿ ತತ್ತರಿಸಿದೆ. ಸುಮಾರು ಒಂದೂವರೆ ಗಂಟೆಯ ಮಳೆಯಿಂದಾಗಿ 10 ಮಂದಿ ಸಾವನ್ನಪ್ಪಿದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೋರು ಗಾಳಿ-ಮಳೆ ಪರಿಣಾಮ ನಿನ್ನೆಯಿಂದ ಇಂದು ಬೆಳಗ್ಗೆ 9.15ರೊಳಗೆ ಜಿಬಿಎ ವ್ಯಾಪ್ತಿಯಲ್ಲಿ 226 ಮರಗಳು ಧರಾಶಾಹಿಯಾಗಿವೆ. 623 ಮರದ ಕೊಂಬೆಗಳು ಉರುಳಿ ಬಿದ್ದಿವೆ. ಬೃಹದಾಕಾರದ ಮರ ಹಾಗೂ ಅದರ ಕೊಂಬೆಗಳು ಏಕಾಏಕಿ ಬಿದ್ದಿದ್ದರಿಂದ ಅವುಗಳ ಕೆಳಗೆ ನಿಲ್ಲಿಸಿದ್ದ ಹಾಗೂ ಚಲಿಸುತ್ತಿದ್ದ ವಾಹನಗಳು ಹಾನಿಗೊಳಗಾಗಿದ್ದು, ಮಳೆ ನೀರಿನ ರಭಸಕ್ಕೆ ರಸ್ತೆ ಇಕ್ಕೆಲ್ಲಗಳಲ್ಲಿ ನೀರು ತುಂಬಿಕೊಂಡು ಸಂಚಾರ ಅಸ್ತವ್ಯಸ್ತವಾಗಿದೆ.

ಯಾವ ಪಾಲಿಕೆಯಲ್ಲಿ ಎಷ್ಟೆಷ್ಟು ಮರಗಳು ಬಿದ್ದಿವೆ?

ಐದು ಪಾಲಿಕೆಗಳ ಪೈಕಿ ಬೆಂಗಳೂರು ಪಶ್ಚಿಮ ವಿಭಾಗ ಪಾಲಿಕೆಯಲ್ಲಿ 101 ಮರಗಳು ಉರುಳಿಬಿದ್ದರೆ, 313 ಕಡೆಗಳಲ್ಲಿ ಮರದ ಕೊಂಬೆಗಳು ನೆಲಕ್ಕೆ ಮುಖಮಾಡಿವೆ. ಬೆಂಗಳೂರು ಕೇಂದ್ರ ಪಾಲಿಕೆಯಲ್ಲಿ 70 ಕಡೆ ಮರಗಳು ಬಿದ್ದರೆ, 131 ಕಡೆಗಳಲ್ಲಿ ಕೊಂಬೆಗಳು ಉರುಳಿವೆ. ಬೆಂಗಳೂರು ದಕ್ಷಿಣದಲ್ಲಿ 26 ಮರಗಳು ಹಾಗೂ 95 ಕಡೆಗಳಲ್ಲಿ ಕೊಂಬೆಗಳು ಉರುಳಿಬಿದ್ದಿವೆ. ಒಟ್ಟಾರೆ 226 ಕಡೆಗಳಲ್ಲಿ ಮರಗಳು ಬಿದ್ದ ಪೈಕಿ, 138 ಕಡೆಗಳಲ್ಲಿ ಅವುಗಳನ್ನು ತೆರವುಗೊಳಿಸಿದರೆ, 623 ಮರದ ಕೊಂಬೆ ಬಿದ್ದ ಪೈಕಿ 308 ಕಡೆಗಳಲ್ಲಿ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಂಟ್ರೋಲ್ ರೂಮ್​​ಗಳಿಗೆ ದೂರು

ಪಂಚ ಪಾಲಿಕೆಗಳ ಕಂಟ್ರೋಲ್ ರೂಮ್​​ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರಿಂದ ಮರ ಹಾಗೂ ವಿದ್ಯುತ್ ಕಂಬಗಳು ಬಿದ್ದಿರುವ ಬಗ್ಗೆ ದೂರುಗಳು ಬಂದರೆ, 68 ಕರೆಗಳು ಜಲಾವೃತವಾಗಿರುವ ಸಂಬಂಧ ದೂರುಗಳು ಬಂದಿವೆ ಎಂದು ಜಿಬಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವರದಿ: ಲಕ್ಷ್ಮೀನರಸಿಂಹ ಟಿವಿ9,ಬೆಂಗಳೂರು

Published On – 8:27 pm, Thu, 30 April 26

Source link

ಅತಿಥಿಗಳ ನಡುವೆ ಕೂಲರ್​​ಗಾಗಿ ಜಗಳ; ಸಾವಿನ ಮನೆಯಾದ ಮದುವೆಮನೆ – Kannada News | Uttar Pradesh Wedding guests fight over air cooler 1 dead 4 injured in Azamgarh

ನವದೆಹಲಿ, ಏಪ್ರಿಲ್ 30: ಉತ್ತರ ಪ್ರದೇಶದ (Uttar Pradesh) ಅಜಮ್‌ಗಢದಲ್ಲಿ ಮದುವೆಯೊಂದು ದುರಂತವಾಗಿ ಬದಲಾಗಿದೆ. ಮದುವೆಯ ಪಾರ್ಟಿಯಲ್ಲಿ ನಡೆದ ಘರ್ಷಣೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಮತ್ತು 4 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಗಳವಾರ ರಾತ್ರಿ ಜಿಯಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಇಂದಿರಾ ನಗರದ ಪ್ರದೇಶದಲ್ಲಿ ಮದುವೆ (Wedding) ನಡೆಯುತ್ತಿತ್ತು. ವಧು-ವರರ ಕುಟುಂಬದ ನಡುವೆ ಕ್ಷುಲ್ಲಕ ವಿಷಯಕ್ಕೆ ವಿವಾದ ಪ್ರಾರಂಭವಾಯಿತು.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ವರನ ಕಡೆಯ ಕೆಲವರು ಮತ್ತು ವಧುವಿನ ಕಡೆಯ ಕೆಲವರು ಡೆಸರ್ಟ್ ಕೂಲರ್ ತಮ್ಮ ಕಡೆಗೆ ತಿರುಗಬೇಕು ಎಂದು ವಾದ ಮಾಡತೊಡಗಿದರು. ಸೆಖೆ ಜಾಸ್ತಿ ಇದ್ದುದರಿಂದ ತಮ್ಮ ಕಡೆ ಕೂಲರ್ ಇಡಬೇಕೆಂದು ಜಗಳವಾಡಿದರು. ಈ ಜಗಳ ಕ್ರಮೇಣ ತಾರಕಕ್ಕೇರಿತು. 26 ವರ್ಷದ ಅಮೀರ್ ಚಂದ್ರ ಸಹಾನಿ ಎಂಬ ವ್ಯಕ್ತಿ ಘರ್ಷಣೆಯ ಸಮಯದಲ್ಲಿ ಸಾವನ್ನಪ್ಪಿದರು. ಗಂಭೀರವಾಗಿ ಗಾಯಗೊಂಡ ಇತರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ 4 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯ ಗರ್ಭಪಾತದ ಕಾನೂನು ಬದಲಾಯಿಸಿ; ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ಅಜಮ್‌ಗಢ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಘರ್ಷಣೆಯಲ್ಲಿ ಭಾಗಿಯಾಗಿದ್ದ ಕೆಲವು ಜನರನ್ನು ಅವರು ಬಂಧಿಸಿದ್ದಾರೆ. ಮೃತರ ತಂದೆ ಕೂಡ ಎಫ್‌ಐಆರ್ ದಾಖಲಿಸಿದ್ದಾರೆ. ಈ ವಿಷಯದಲ್ಲಿ ತನಿಖೆ ನಡೆಯುತ್ತಿದೆ. ಆ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ, ಘರ್ಷಣೆ ನಡೆದ ಪ್ರದೇಶದಲ್ಲಿ ಭಾರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ಮದುವೆಯ ಡಿಜೆ ಸೌಂಡ್​​ನಿಂದ 140 ಕೋಳಿಗಳಿಗೆ ಹೃದಯಾಘಾತ!

ಅಮೀರ್ ಚಂದ್ರ ಸಹಾನಿ ಸ್ಥಳದಲ್ಲೇ ಸಾವನ್ನಪ್ಪಿದರೆ, ವರನ ಕಡೆಯವರಾದ ರಾಜ್‌ಕುಮಾರ್ ಸಹಾನಿ, ಅಭಿಲಾಷ್ ಸಹಾನಿ ಮತ್ತು ಸಾಹಿಲ್ ಯಾದವ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

GT vs RCB: 4,4,4,4,4.. ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಕೊಹ್ಲಿ – Kannada News | IPL 2026: Virat Kohli’s Explosive Start vs GT; 5 Fours in Rabada Over for RCB

ಐಪಿಎಲ್ 2026 ರ 42ನೇ ಪಂದ್ಯವು ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಲೀಗ್​ನಲ್ಲಿ ಉಭಯ ತಂಡಗಳ ಎರಡನೇ ಮುಖಾಮುಖಿ ಇದಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿಗೆ ಮೊದಲ ಎರಡು ಓವರ್​​ಗಳಲ್ಲಿ ಸ್ಫೋಟಕ ಆರಂಭ ಸಿಕ್ಕಿತು. ಅದರಲ್ಲೂ ರಬಾಡ ಬೌಲ್ ಮಾಡಿದ 2ನೇ ಓವರ್​ನಲ್ಲಿ ವಿರಾಟ್ ಕೊಹ್ಲಿ ಬೌಂಡರಿಗಳ ಮಳೆಗರೆದರು.

ಈ ಪಂದ್ಯದಲ್ಲಿ ಆರ್​ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ಬೆಥೆಲ್ ಇನ್ನಿಂಗ್ಸ್ ಆರಂಭಿಸಿದರು. ಗುಜರಾತ್ ಪರ ಸಿರಾಜ್ ಎಸೆದ ಮೊದಲ ಓವರ್​ನಲ್ಲಿ 1 ಬೌಂಡರಿ ಸಹಿತ 6 ರನ್​ಗಳು ಬಂದವು. ಎರಡನೇ ಓವರ್​ನಲ್ಲಿ ಸ್ಟ್ರೇಕ್​ಗೆ ಬಂದ ವಿರಾಟ್ ಕೊಹ್ಲಿ, ರಬಾಡ ಬೌಲ್ ಮಾಡಿದ ಎರಡನೇ ಓವರ್​ನ ಮೊದಲ ಐದು ಎಸೆತಗಳಲ್ಲಿ ಸತತ ಐದು ಬೌಂಡರಿಗಳನ್ನು ಬಾರಿಸಿದರು. ಈ ಮೂಲಕ ಸತತ 5 ಎಸೆತಗಳಲ್ಲಿ ಐದು ಬೌಂಡರಿಗಳನ್ನು ಬಾರಿಸಿದ ಕೆಲವೇ ಕೆಲವು ಆಟಗಾರರ ಪಟ್ಟಿಗೆ ಕೊಹ್ಲಿಯೂ ಸೇರಿಕೊಂಡರು.

ಆದಾಗ್ಯೂ ಈ ಪಂದ್ಯದಲ್ಲಿ ಕೊಹ್ಲಿಗೆ ಹೆಚ್ಚಿನದನ್ನು ಮಾಡಲು ಸಾಧ್ಯವಾಗಲಿಲ್ಲ. ರಬಾಡ ಬೌಲ್ ಮಾಡಿದ ಇನ್ನಿಂಗ್ಸ್​ನ 4ನೇ ಓವರ್​ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಕೊಹ್ಲಿ 13 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 28 ರನ್ ಬಾರಿಸಿ ಔಟಾದರು.

Source link

ಬೆಂಗಳೂರು ಮಳೆ ಅಬ್ಬರ: ಅವಾಂತರಗಳ ಬೆನ್ನಲ್ಲೇ ಅಗತ್ಯ ಕ್ರಮಕ್ಕೆ ಮುಂದಾದ ಜಿಬಿಎ – Kannada News | Bengaluru Monsoon Preparedness: GBA’s Proactive Steps for Rain Management and Flood Prevention

ಬೆಂಗಳೂರು, ಏಪ್ರಿಲ್​ 30: ನಗರದಲ್ಲಿ ನಿನ್ನೆ ಸಂಜೆ ಸುರಿದ ಆಲಿಕಲ್ಲು ಸಹಿತ ಧಾರಾಕಾರ ಮಳೆ (Rain) ನಗರದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮಳೆಯ ಆರ್ಭಟಕ್ಕೆ ಹಲವು ಜನರು ಬಲಿಯಾಗಿದ್ದು, ಎಲ್ಲೆಡೆ  ಅವಾಂತರಗಳು ಸಂಭವಿಸಿವೆ. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA), ಮುಂಬರುವ ದಿನಗಳಲ್ಲಿ ಮಳೆಯ ಅನಾಹುತಗಳನ್ನು ತಡೆಗಟ್ಟಲು ಯುದ್ಧೋಪಾದಿಯಲ್ಲಿ ಸಿದ್ಧತೆಯನ್ನು ನಡೆಸಿದೆ.

ಮುನ್ನೆಚ್ಚರಿಕೆ ಕ್ರಮಗಳಿಗೆ ಜಿಬಿಎ ಸಜ್ಜು

  • ಪ್ರಾಥಮಿಕ ಮತ್ತು ದ್ವಿತೀಯ ಹಂತದ ಮಳೆ ನೀರುಗಾಲುವೆಗಳ ಡೀಸಿಲ್ಡಿಂಗ್ ಹಾಗೂ ಪುನಚೇತನ ಕಾರ್ಯಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳುವುದು.
  • ವಿಶ್ವ ಬ್ಯಾಂಕ್ ನೆರವಿನ 173 ಕಿ.ಮೀ ಹೊಸ ಮಳೆ ನೀರುಗಾಲುವೆ ತಡೆಗೋಡೆ ಕೆಲಸಗಳು ಮತ್ತು 83 ಕಿ.ಮೀ ಮೇಲ್ದರ್ಜೇಗೇರಿಸುವ ಕಾಮಗಾರಿಗಳು ಪ್ರಗತಿಯಲ್ಲಿದೆ.
  • ಎನ್.ಡಿ.ಎಂ.ಎಫ್ ಅನುದಾನದಲ್ಲಿ 31 ಅವಶ್ಯಕ ಸ್ಥಳಗಳಲ್ಲಿ ಕಲ್ವರ್ಟ್‌ಳ ನಿರ್ಮಾಣ.
  • ಕೆರೆಗಳಲ್ಲಿ ನೀರು ನಿಯಂತ್ರಿಸಲು 127 ಕಡೆ ಸ್ಫೂಯೀಸ್ ಗೇಟ್‌ಗಳ ಅಳವಡಿಕೆ.
  • ಹೆಚ್ಚುವರಿ ಪಕ್ಕದ ಚರಂಡಿಗಳು ಹಾಗೂ ಕ್ರಾಸ್-ಡ್ರೈನೇಜ್ ಕಾಮಗಾರಿಗಳನ್ನು ನಿರ್ಮಿಸುವುದು.
  • ಪ್ರಮುಖ ಪ್ರದೇಶಗಳಲ್ಲಿ ಗ್ರೇಟೆಡ್ ಇನ್‌ಲೆಟ್‌ಗಳು ಮತ್ತು ಸಿಲ್ಟ್ ಟ್ರ್ಯಾಪ್‌ಗಳನ್ನು ಅಳವಡಿಸುವುದು.
  • ಮುಂಗಾರು ಪೂರ್ವ ಡೀಸಿಲ್ಟಂಗ್ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವುದು.
  • ಅತಿಸೂಕ್ಷ್ಮ ಪ್ರದೇಶಗಳಲ್ಲಿ ತಂಡಗಳ ನಿಯೋಜಿಸುವುದು.

ಮಳೆಯಿಂದ ಹಾನಿಯಾದ ವಿವರ 

ಇನ್ನು ಜಿಬಿಎ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಸುರಿದ ಆಲಿಕಲ್ಲು ಸಹಿತ ಭಾರೀ ಗಾಳಿ ಮಳೆಯ ಮತ್ತು ಹಾನಿಯ ಮಾಹಿತಿಯನ್ನು ಜಿಬಿಎ ನೀಡಿದೆ.

  • ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಕಾಟನ್‌ಪೇಟೆ, ಬಿನ್ನಿಪೇಟೆ, ಸಂಪಂಗಿರಾಮನಗರ, ಶಿವಾಜಿನಗರ ಹಾಗೂ ಸುಭಾಷ್ ನಗರ ವಾರ್ಡ್‌ಗಳಲ್ಲಿ 92.00 ಮಿ.ಮೀ ಮಳೆ ದಾಖಲಾಗಿದೆ.
  • ಬೆಂಗಳೂರು ಉತ್ತರ ನಗರ ಪಾಲಿಕೆಯ ಕೆಲವು ಪ್ರದೇಶಗಳಲ್ಲಿ ಕನಿಷ್ಠ 15.00 ಮಿ.ಮೀ ಮಳೆ, ಒಟ್ಟಾರೆ ಸರಾಸರಿ 55.00 ಮಿ.ಮೀ ಮಳೆ ಸುರಿದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆಯಿಂದ ಅವಾಂತರ ಬೆನ್ನಲ್ಲೇ ಸರ್ಕಾರ ಅಲರ್ಟ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

  • ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಒಟ್ಟು 226 ಮರಗಳು ಧರೆಗುರುಳಿವೆ. 623 ಕೊಂಬೆಗಳು ಮುರಿದು ಬಿದ್ದಿವೆ.
  • ನಗರ ಪಾಲಿಕೆಗಳ ವತಿಯಿಂದ 30 ತಂಡಗಳು ಹಾಗೂ ನಾಲ್ಕು ಕ್ರೇನ್‌ಗಳನ್ನು ತೆರವು ಕಾರ್ಯಕ್ಕಾಗಿ ನಿಯೋಜಿಸಲಾಗಿದ್ದು, ಅಗ್ನಿಶಾಮಕ ಇಲಾಖೆಯಿಂದ 15 ತಂಡಗಳು, ಎಸ್‌.ಡಿ.ಆರ್‌.ಎಫ್​ನಿಂದ 4 ತಂಡಗಳು ಹಾಗೂ ಹೆಚ್ಚುವರಿಯಾಗಿ 10 ಖಾಸಗಿ ತಂಡಗಳನ್ನು ಬಾಡಿಗೆ ಆಧಾರದಲ್ಲಿ ನಿಯೋಜಿಸಲಾಗಿದೆ.
  • ಧರೆಗುರುಳಿದ ಮರಗಳು ಹಾಗೂ ರೆಂಬೆಗಳ ಪೈಕಿ ಮಧ್ಯಾಹ್ನ 12:30ರ ವೇಳೆಗೆ 150 ಮರಗಳು ಹಾಗೂ 384 ರೆಂಬೆಗಳನ್ನು ತೆರವುಗೊಳಿಸಲಾಗಿದ್ದು, ಉಳಿದ ತೆರವು ಕಾರ್ಯ ಸಕ್ರಿಯವಾಗಿ ಮುಂದುವರಿದಿದೆ.
  • ನಗರದಾದ್ಯಂತ 62ಕ್ಕೂ ಹೆಚ್ಚು ಪ್ರದೇಶಗಳಲ್ಲಿ ರಸ್ತೆಗಳಲ್ಲಿ ನೀರು ನಿಂತಿರುವ ಕುರಿತು ಸಾರ್ವಜನಿಕರಿಂದ ಮಾಹಿತಿ ಬಂದಿದೆ.
  • 3 ಕಡೆ ಗೋಡೆ ಕುಸಿತ, 105 ಕಡೆ ಮನೆಗಳಿಗೆ ನೀರು ನುಗ್ಗಿರುವುದು ಹಾಗೂ 1 ಕಡೆ ಮೂಲಸೌಕರ್ಯ ಹಾನಿ ಆಗಿದೆ.
  • ಕೆ.ಆರ್ ವೃತ್ತ, ಮಡಿವಾಳ, ಸ್ಯಾಂಕಿ ರಸ್ತೆ, ಜಯದೇವ, ಯಮಲೂರು, ಶಂಕರನಾಗ್, ಟ್ಯಾನರಿ ರಸ್ತೆ ಹಾಗೂ ನಾಯಂಡಹಳ್ಳಿ ಕೆಳಸೇತುವೆ ಪ್ರದೇಶಗಳಲ್ಲಿ ನೀರು ತುಂಬಿದ್ದು, ಅಗತ್ಯವಿರುವ ಸ್ಥಳಗಳಲ್ಲಿ ಪಂಪ್‌ಗಳನ್ನು ಅಳವಡಿಸಿ ನೀರು ತೆರವು ಕಾರ್ಯಕೈಗೊಳ್ಳಲಾಗಿದೆ.
  • ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿತದಿಂದ 7 ಮಂದಿ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಲಾಗಿದೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಪಾಲಿಕೆಯಿಂದಲೇ ಭರಿಸಲಾಗುವುದು. ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಬನ್ನೇರುಘಟ್ಟ ರಸ್ತೆಯ ವೇಗಾ ಸಿಟಿ ಮಾಲ್ ಸಮೀಪ ಮಳೆಯ ವೇಳೆ ವಿದ್ಯುತ್ ತಂತಿ ತಗುಲಿ ಜೆ.ಡಿ. ಮರ ಕೊಳಗೇರಿ ನಿವಾಸಿ 35 ವರ್ಷದ ರಘು ಮೃತಪಟ್ಟಿದ್ದು, ಅವರ ಕುಟುಂಬಕ್ಕೂ 5 ಲಕ್ಷ ರೂ ಪರಿಹಾರ ಘೋಷಿಸಲಾಗಿದೆ.

ಇದನ್ನೂ ಓದಿ: ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಳಪೆ ಕಾಮಗಾರಿ ಬಟಾಬಯಲು

  • ಮಳೆಯ ಪರಿಣಾಮ 186 ಕಡೆ ವಿದ್ಯುತ್ ಕಂಬಗಳು ಹಾಗೂ 36 ಕಡೆ ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೊಳಗಾಗಿ ವಿದ್ಯುತ್ ಸರಬರಾಜು ಅಸ್ತವ್ಯಸ್ತವಾಗಿದೆ. ಬೆಸ್ಕಾಂ ಇಲಾಖೆಯಿಂದ ಈಗಾಗಲೇ 112 ವಿದ್ಯುತ್ ಕಂಬಗಳು ಹಾಗೂ 18 ಟ್ರಾನ್ಸ್‌ಫಾರ್ಮರ್‌ಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ – Kannada News | A husband surrenders to police after killed wife In Mysuru

ಮೈಸೂರು, (ಏಪ್ರಿಲ್ 30): ಸಣ್ಣ ಕಾರಣಕ್ಕೆ ಶುರುವಾದ ಕೌಟುಂಬಿಕ ಕಲಹವೊಂದು ಕೊಲೆಯಲ್ಲಿ (Murder) ಅಂತ್ಯವಾಗಿರುವ ಭೀಕರ ಘಟನೆ ಮೈಸೂರಿನ (Mysuru) ಹಳೆ ಕೆಸರೆ ಗ್ರಾಮದಲ್ಲಿ ನಡೆದಿದೆ. ಕೆಲಸ ಮುಗಿಸಿ ಮನೆಗೆ ತಡವಾಗಿ ಬರುತ್ತಿದ್ದಾಳೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಪತಿ ಮಹೇಶ್‌ ಪತ್ನಿ ಪುಷ್ಪಾ(26) ಅವರನ್ನು ಕೊಡಲಿಯಿಂದ ಹೊಡೆದು ನಂತರ ದಿಂಬಿನಿಂದ ಉಸಿರುಗಟ್ಟಿಸಿ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ಪತಿ ಮಹೇಶ್​, ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಮೈಸೂರಿನಲ್ಲಿ ದೇವರಾಜ ಅರಸು ರಸ್ತೆಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪುಷ್ಪಾ,
ಪ್ರತಿದಿನವೂ ಕೆಲಸದಿಂದ ಮನೆಗೆ ತಡವಾಗಿ ಬರುತ್ತಿದ್ದಳು. ಇದರಿಂದ ಪತ್ನಿ ಮೇಲೆ ಅನುಮಾನ ಪಡುತ್ತಿದ್ದ ಪತಿ ಮಹೇಶ್​, ಇದೇ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದ. ಇದೇ ಜಗಳ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಳಪೆ ಕಾಮಗಾರಿ ಬಟಾಬಯಲು – Kannada News | Bangaluru Rain Havoc: Footpath Collapses, Exposing Shoddy GBA Work

ಬೆಂಗಳೂರು, ಏಪ್ರಿಲ್​ 30: ನಗರದಲ್ಲಿ ನಿನ್ನೆ ಸಂಜೆ ಸುರಿದ ಭಾರಿ ಮಳೆಯಿಂದ ಸಾಕಷ್ಟು ಅವಾಂತರಗಳು ಸಂಭವಿಸಿವೆ. ಧಾರಾಕಾರ ಮಳೆಗೆ ಜಿಬಿಎ ಕಳಪೆ ಕಾಮಗಾರಿ ಬಟಾಬಯಲಾಗಿದೆ. ಅದರಲ್ಲೂ ರಾಜ್ಯದ ಆಡಳಿತ ಕೇಂದ್ರವಾಗಿರುವ ವಿಧಾನಸೌಧದ ಸಮೀಪವಿರುವ ಎಂ.ಎಸ್. ಬಿಲ್ಡಿಂಗ್ ಮುಂಭಾಗದ ಫುಟ್‌ಪಾತ್ ಕುಸಿಬಿದ್ದು ಅವಾಂತರ ಸೃಷ್ಟಿಯಾಗಿದೆ. ಕೇವಲ 1 ಗಂಟೆ ಸುರಿದ ಭಾರಿ ಮಳೆಗೆ ಫುಟ್​ಪಾತ್ ಕುಸಿದುಹೋಗಿದೆ. ಪ್ರತಿನಿತ್ಯ ವಿದ್ಯಾರ್ಥಿಗಳು, ಸಾರ್ವಜನಿಕರು ನಡೆದಾಡುವ ಫುಟ್​ಪಾತ್ ಬಲಿಗಾಗಿ ಕಾದುಕುಳಿತಂತಿದೆ. ಹೀಗಾಗಿ ಜನರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು ಘಟನೆಯಲ್ಲಿ ವಿಧಾನಸೌಧ ಪೊಲೀಸ್ ಠಾಣೆಯ ಮುಂಭಾಗ ಫುಟ್‌ಪಾತ್ ಪಕ್ಕ ನಿಲ್ಲಿಸಿದ್ದ ಪೊಲೀಸ್ ಜೀಪ್ ಒಂದು ಭಾಗಶಃ ಹಳ್ಳಕ್ಕೆ ಹೊರಳಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

‘ಕೆಡಿ’ ಸಿನಿಮಾ: ನಿರ್ದೇಶಕ ಪ್ರೇಮ್​​ ಕಾಲಿಗೆ ನಮಸ್ಕರಿಸಿದ ಧ್ರುವ ಸರ್ಜಾ – Kannada News | Dhruva Sarja touched director Prem’s feet and took his blessings

ಧ್ರುವ ಸರ್ಜಾ (Dhruva Sarja) ನಟಿಸಿ, ಪ್ರೇಮ್ ನಿರ್ದೇಶನ ಮಾಡಿರುವ ‘ಕೆಡಿ’ ಸಿನಿಮಾ ಇಂದು (ಏಪ್ರಿಲ್ 30) ಬಿಡುಗಡೆ ಆಗಿದೆ. ಸಿನಿಮಾಕ್ಕೆ ಮೊದಲ ದಿನ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿದೆ. ಸಿನಿಮಾನಲ್ಲಿ ನಟ ಧ್ರುವ ಸರ್ಜಾ ಅವರ ಅಭಿನಯಕ್ಕೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಮೊದಲ ಶೋ ಬಳಿಕ ಮಾತನಾಡಿದ ಧ್ರುವ ಸರ್ಜಾ, ‘ಒಳ್ಳೆಯ ನಿರ್ದೇಶಕ, ಒಳ್ಳೆಯ ಗುರುವಿನ ಕೈಗೆ ನಟ ಸಿಕ್ಕಾಗ ಏನಾಗುತ್ತದೆ ಎಂಬುದಕ್ಕೆ ಈ ಸಿನಿಮಾ ಉದಾಹರಣೆ’ ಎಂದರಲ್ಲದೆ, ಪ್ರೇಮ್ ತಮ್ಮ ಗುರು ಇದ್ದಂತೆ ಎಂದು ಹೇಳಿ ಮಾಧ್ಯಮಗಳೆದುರು ಅವರ ಕಾಲಿಗೆ ನಮಸ್ಕರಿಸಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

200 ಕೋಟಿ ರೂ. ಗಳಿಸಿದ ‘ಭೂತ್ ಬಂಗ್ಲ’ ಹಿಟ್ ಅಥವಾ ಫ್ಲಾಪ್? ಬಜೆಟ್ ಲೆಕ್ಕಾಚಾರ ಇಲ್ಲಿದೆ – Kannada News | Akshay Kumar Bhooth Bangla movie Box Office Collection Rs 200 Crore milestone

ಖ್ಯಾತ ನಟ ಅಕ್ಷಯ್ ಕುಮಾರ್ (Akshay Kumar) ಅವರಿಗೆ ಈ ವರ್ಷ ಅದೃಷ್ಟ ಒಲಿದು ಬಂದಂತಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಅವರಿಗೆ ಈಗ ‘ಭೂತ್ ಬಂಗ್ಲ’ (Bhooth Bangla) ಸಿನಿಮಾ ಕೈ ಹಿಡಿದಿದೆ. ಏಪ್ರಿಲ್ 17ರಂದು ತೆರೆಕಂಡ ಈ ಹಾರರ್-ಕಾಮಿಡಿ ಸಿನಿಮಾ, ಕೇವಲ 13 ದಿನಗಳಲ್ಲಿ ವಿಶ್ವಾದ್ಯಂತ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಅಬ್ಬರಿಸುತ್ತಿದೆ. ಅಕ್ಷಯ್ ಕುಮಾರ್ ಅವರ ವೃತ್ತಿಜೀವನದಲ್ಲಿ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ 12ನೇ ಸಿನಿಮಾ ಇದಾಗಿದೆ.

ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಸ್ಥಿರವಾಗಿ ಮುನ್ನುಗ್ಗುತ್ತಿದೆ. ಕಳೆದ 13 ದಿನಗಳಲ್ಲಿ ಈ ಚಿತ್ರ ಭಾರತದಲ್ಲಿ 124.50 ಕೋಟಿ ರೂಪಾಯಿ ನೆಟ್ ಕಲೆಕ್ಷನ್ (147.90 ಕೋಟಿ ಗ್ರಾಸ್) ಮಾಡಿದೆ. ಮೊದಲ ವಾರಾಂತ್ಯದಲ್ಲಿ 58 ಕೋಟಿ ರೂಪಾಯಿ ಗಳಿಸಿದ್ದ ಈ ಸಿನಿಮಾ, ಎರಡನೇ ವಾರಾಂತ್ಯದಲ್ಲೂ 27 ಕೋಟಿ ರೂಪಾಯಿ ಲೂಟಿ ಮಾಡುವಲ್ಲಿ ಯಶಸ್ವಿಯಾಗಿದೆ. ವಿದೇಶಿ ಮಾರುಕಟ್ಟೆಯಲ್ಲಿ ಸುಮಾರು 5.6 ಮಿಲಿಯನ್ ಡಾಲರ್ (ಅಂದಾಜು 46 ಕೋಟಿ ರೂಪಾಯಿ) ಗಳಿಸುವ ಮೂಲಕ ಒಟ್ಟಾರೆ ಮೊತ್ತ 200 ಕೋಟಿ ರೂಪಾಯಿಯ ಗಡಿ ದಾಟಿದೆ.

ಟ್ರೆಡ್ ರಿಪೋರ್ಟ್‌ಗಳ ಪ್ರಕಾರ, ‘ಭೂತ್ ಬಂಗ್ಲ’ ಚಿತ್ರದ ನಿರ್ಮಾಣ ವೆಚ್ಚ ಸುಮಾರು 100 ಕೋಟಿ ರೂಪಾಯಿ ಮಾತ್ರ. ಪ್ರಚಾರ ಮತ್ತು ಮಾರ್ಕೆಟಿಂಗ್ ವೆಚ್ಚ ಸೇರಿ ಒಟ್ಟು 120 ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಸಿನಿಮಾ ಲಾಭದ ಹಾದಿಗೆ ಬರಲು 120 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಬೇಕಿತ್ತು. ಚಿತ್ರವು 12ನೇ ದಿನವೇ ಈ ಮೈಲಿಗಲ್ಲನ್ನು ದಾಟಿದ್ದು, ಈಗ ಅಧಿಕೃತವಾಗಿ ಹಿಟ್ ಪಟ್ಟಿಗೆ ಸೇರಿದೆ. ಚಿತ್ರದ ಅಂತಿಮ ಪ್ರದರ್ಶನದ ವೇಳೆಗೆ ಭಾರತದಲ್ಲಿ 150 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.

ಈವರೆಗಿನ ಭಾರತದ ಹಾರರ್-ಕಾಮಿಡಿ ಸಿನಿಮಾಗಳ ಪಟ್ಟಿಯಲ್ಲಿ ‘ಭೂತ್ ಬಂಗ್ಲ’ ಈಗ 5ನೇ ಸ್ಥಾನಕ್ಕೇರಿದೆ. ‘ಸ್ತ್ರೀ 2’ (875 ಕೋಟಿ), ‘ಭೂಲ್ ಭುಲಯ್ಯ 3’ (424 ಕೋಟಿ), ‘ಭೂಲ್ ಭುಲಯ್ಯ 2’ (266 ಕೋಟಿ) ‘ದಿ ರಾಜಾ ಸಾಬ್’ (208 ಕೋಟಿ) ‘ಭೂತ್ ಬಂಗ್ಲ’ (200 ಕೋಟಿ) ಸಿನಿಮಾಗಳು ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಇದನ್ನೂ ಓದಿ: ‘ನನಗೆ ಆ ರೀತಿ ಮೀಸೆ ಬರಲ್ಲ’: ನೇರವಾಗಿ ಒಪ್ಪಿಕೊಂಡು ಜನರ ಕ್ಷಮೆ ಕೇಳಿದ ಅಕ್ಷಯ್ ಕುಮಾರ್

ಪ್ರಭಾಸ್ ನಟನೆಯ ‘ದ ರಾಜಾ ಸಾಬ್’ ಚಿತ್ರದ ದಾಖಲೆಯನ್ನು ಈ ವಾರಾಂತ್ಯದಲ್ಲಿ ‘ಭೂತ್ ಬಂಗ್ಲ’ ಮುರಿಯುವ ಸಾಧ್ಯತೆ ದಟ್ಟವಾಗಿದೆ. ಆದರೆ, ‘ದ ಡೆವಿಲ್ ವೇರ್ಸ್ ಪ್ರಾಡಾ 2’ ಮತ್ತು ‘ರಾಜಾ ಶಿವಾಜಿ’ ಅಂತಹ ಹೊಸ ಸಿನಿಮಾಗಳ ಪೈಪೋಟಿಯ ನಡುವೆ ‘ಭೂತ್ ಬಂಗ್ಲ’ ಹೇಗೆ ಪ್ರದರ್ಶನ ಕಾಣಲಿದೆ ಎಂಬುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎಕ್ಸಿಟ್ ಪೋಲ್‌ ಬಿಜೆಪಿ ಕಚೇರಿಯಿಂದ ಬಂದಿವೆ, ಬಂಗಾಳದಲ್ಲಿ ಮತ್ತೆ ನಾವೇ ಸರ್ಕಾರ ರಚಿಸುತ್ತೇವೆ; ಮಮತಾ ಬ್ಯಾನರ್ಜಿ ವಿಶ್ವಾಸ – Kannada News | Exit polls rigged Mamata Banerjee claims TMC will win over 226 seats in West Bengal Assembly elections

ಕೊಲ್ಕತ್ತಾ, ಏಪ್ರಿಲ್ 30: ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ನಿರ್ಣಾಯಕ ಗೆಲುವಿನ ಹಾದಿಯಲ್ಲಿದೆ ಎಂದು ಹೇಳಿದ್ದಾರೆ. ಚುನಾವಣೆಯ ಫಲಿತಾಂಶವು ಈಗಾಗಲೇ ತಮ್ಮ ಪಕ್ಷದ ಪರವಾಗಿ ಸ್ಪಷ್ಟವಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಗೆ ತಮ್ಮ ವಿಶ್ವಾಸವನ್ನು ಬಲಪಡಿಸುತ್ತಾ, “ನಾವು 226ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ” ಎಂದು ಅವರು ಹೇಳಿದ್ದಾರೆ.

“ಎಕ್ಸಿಟ್ ಪೋಲ್‌ಗಳು ಬಿಜೆಪಿ ಕಚೇರಿಯಿಂದ ಬಂದಿವೆ. ಅದರಲ್ಲಿ ಹೇಳಿರುವ ಸಂಖ್ಯೆಗಳು ಕಟ್ಟುಕಥೆಯಾಗಿದ್ದು, ಟಿಎಂಸಿ ಕಾರ್ಯಕರ್ತರನ್ನು ನಿರಾಶೆಗೊಳಿಸುವ ಉದ್ದೇಶವನ್ನು ಹೊಂದಿವೆ” ಎಂದು ಮಮತಾ ಬ್ಯಾನರ್ಜಿ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ತಮ್ಮ ಕ್ಷೇತ್ರವಾದ ಭವಾನಿಪುರದಲ್ಲಿ ಇಡೀ ರಾತ್ರಿ ದಾಳಿಗಳನ್ನು ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: West Bengal Election Exit Poll Results 2026: ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಭಾರೀ ಹಿನ್ನಡೆ; ಬಿಜೆಪಿಗೆ 146-175 ಸ್ಥಾನಗಳ ನಿರೀಕ್ಷೆ

“ಬಿಜೆಪಿ ಅಂತಿಮ ಆಟವಾಡಿದೆ. ನಿಜವಾದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದರೆ ಷೇರು ಮಾರುಕಟ್ಟೆಗಳು ಉರುಳುತ್ತಿದ್ದವು. ಜನರು ಒಟ್ಟಾಗಿರಬೇಕು. ಮತ ಎಣಿಕೆಯ ಮೇಲೆ ನಿಗಾ ಇಡಬೇಕು. ರಾತ್ರಿಯಿಡೀ ಎಚ್ಚರವಾಗಿರಿ” ಎಂದು ಅವರು ಹೇಳಿದ್ದಾರೆ.
“ಬಿಜೆಪಿ ಅಂತಿಮ ಆಟ ಆಡಿದೆ. ನಿಜವಾದ ಅಂಕಿ-ಅಂಶಗಳು ಬಿಡುಗಡೆಯಾದರೆ ಷೇರು ಮಾರುಕಟ್ಟೆಗಳು ಕುಸಿಯುತ್ತಿದ್ದವು. ಜನರು ಒಟ್ಟಾಗಿ ಉಳಿಯಬೇಕು ಮತ್ತು ಎಣಿಕೆಯ ಮೇಲೆ ನಿಗಾ ಇಡಬೇಕು” ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ:  ತಮಿಳುನಾಡಿನಲ್ಲಿ ನಡೆಯಲಿಲ್ಲ ಬಿಜೆಪಿ ಕಮಾಲ್; ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ

2026ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಪಶ್ಚಿಮ ಬಂಗಾಳವನ್ನು ಗೆಲ್ಲುತ್ತದೆ ಎಂದು ಮತದಾನೋತ್ತರ ಸಮೀಕ್ಷೆಗಳು ಅಂದಾಜಿಸಿವೆ. ಚಾಣಕ್ಯ ಸ್ಟ್ರಾಟಜೀಸ್‌ನ ನಿರ್ಗಮನ ಸಮೀಕ್ಷೆಯು ಬಿಜೆಪಿ 150-160 ವಿಧಾನಸಭಾ ಸ್ಥಾನಗಳನ್ನು ಮತ್ತು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯದ ಒಟ್ಟು 294 ವಿಧಾನಸಭಾ ಸ್ಥಾನಗಳಲ್ಲಿ 130-140 ಸ್ಥಾನಗಳನ್ನು ಗಳಿಸುತ್ತದೆ ಎಂದು ಅಂದಾಜಿಸಿದೆ. ಮ್ಯಾಟ್ರಿಜ್ ನಡೆಸಿದ ಸಮೀಕ್ಷೆಯ ಪ್ರಕಾರ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 146-161 ಸ್ಥಾನಗಳೊಂದಿಗೆ ಗೆಲ್ಲಲಿದೆ, ಟಿಎಂಸಿ 125ರಿಂದ 140 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಕ್ಕರೆ ಡಬ್ಬಕ್ಕೆ ಇರುವೆಗಳು ಮುತ್ತಿಕೊಳ್ಳದಂತೆ ನೋಡಿಕೊಳ್ಳಲು ಈ ಒಂದು ಸಲಹೆಯನ್ನು ಪಾಲಿಸಿ – Kannada News | Follow this tip to keep ants out of your sugar container

ಸಿಹಿ ಪದಾರ್ಥಗಳು ಇರುವಲ್ಲಿ, ಇರುವೆಗಳು (ants) ಸುಳಿದಾಡುವುದು ಸರ್ವೆ ಸಾಮಾನ್ಯ. ಅದರಲ್ಲೂ ಅಡುಗೆ ಮನೆಯಲ್ಲಿ ಇಟ್ಟಿರುವಂತಹ ಸಕ್ಕರೆ ಡಬ್ಬಿಗಳು ಇರುವೆಗಳು ಬಹು ಬೇಗನೇ ಆಕರ್ಷಿಸುತ್ತವೆ. ಹೌದು ಸಕ್ಕರೆ ಡಬ್ಬಿಯನ್ನು ಎಷ್ಟೇ ಬಿಗಿಯಾಗಿ ಮುಚ್ಚಿದರೂ ಸಹ ಇರುವೆಗಳು ಸಕ್ಕರೆ ಡಬ್ಬಿಯನ್ನು ಮುತ್ತಿಕೊಳ್ಳುತ್ತವೆ.  ಇದರಿಂದ ಸಕ್ಕರೆಯೂ ಹಾಳಾದಂತಾಗುತ್ತದೆ, ಪದೇ ಪದೇ ಡಬ್ಬವನ್ನು ಕೂಡ ಸ್ವಚ್ಛಗೊಳಿಸುತ್ತಿರಬೇಕಾಗುತ್ತದೆ. ಹೀಗಿರುವಾಗ ಈ ಒಂದು ವಸ್ತುವನ್ನು ಸಣ್ಣ ಚೀಲದಲ್ಲಿಟ್ಟು ಸಕ್ಕರೆ ಡಬ್ಬದೊಳಗೆ ಇಡುವುದರಿಂದ, ಇರುವೆಗಳು ಆ ಕಡೆ ಬಾರದಂತೆ ನೋಡಿಕೊಳ್ಳಬಹುದು. ಹಾಗಿದ್ರೆ ಯಾವ ವಸ್ತುವನ್ನು ಸಕ್ಕರೆ ಡಬ್ಬದೊಳಗೆ ಇಡಬೇಕು ಎಂಬುದನ್ನು ನೋಡೋಣ ಬನ್ನಿ.

ಸಕ್ಕರೆ ಡಬ್ಬದೊಳಗೆ ಇರುವೆಗಳು ಪ್ರವೇಶಿಸದಂತೆ ನೋಡಿಕೊಳ್ಳಲು ಏನು ಮಾಡಬೇಕು?

ಇರುವೆಗಳನ್ನು ಸಕ್ಕರೆಯಿಂದ ದೂರವಿಡಲು, ನೀವು ಸಕ್ಕರೆ ಡಬ್ಬಿಯಲ್ಲಿ ಲವಂಗದ ಪ್ಯಾಕೆಟ್ ಅನ್ನು ಇಡಬಹುದು. ಲವಂಗದ ಬಲವಾದ ನೈಸರ್ಗಿಕ ಸುವಾಸನೆ ಮತ್ತು ಅದರಲ್ಲಿರುವ ಎಣ್ಣೆಯನ್ನು ಇರುವೆಗಳು ಇಷ್ಟಪಡುವುದಿಲ್ಲ. ನೀವು ನೇರವಾಗಿ ಸಕ್ಕರೆ ಡಬ್ಬಿಯಲ್ಲಿ ಲವಂಗವನ್ನು ಹಾಕಲು ಬಯಸದಿದ್ದರೆ, ನೀವು 8 ರಿಂದ 10 ಲವಂಗವನ್ನು ಒಂದು ಸಣ್ಣ ಪ್ಯಾಕೆಟ್‌ನಲ್ಲಿಟ್ಟು  ಡಬ್ಬಿಯ ಮೂಲೆಯಲ್ಲಿ ಇಡಬಹುದು. ಇದರಿಂದ ಇರುವೆಗಳು ಸಕ್ಕರೆ ಡಬ್ಬದ ಬಳಿ ಸುಳಿಯುವುದೇ ಇಲ್ಲ.

ಇರುವೆಗಳನ್ನು ಓಡಿಸಲು ಲವಂಗ ಹೇಗೆ ಸಹಾಯ ಮಾಡುತ್ತದೆ?

ಲವಂಗವು ಯುಜೆನಾಲ್ ಎಂಬ ನೈಸರ್ಗಿಕ ಅಂಶವನ್ನು ಹೊಂದಿರುತ್ತದೆ, ಇದು ತುಂಬಾ ಬಲವಾದ ಸುವಾಸನೆಯನ್ನು ಹೊಂದಿದ್ದು, ಈ ಸುವಾಸನೆಯು ಮನುಷ್ಯರಿಗೆ ಆಹ್ಲಾದಕರವಾಗಿರಬಹುದು, ಆದರೆ ಇರುವೆಗಳು ಮತ್ತು  ಸಣ್ಣ ಕೀಟಗಳಿಗೆ ಇಷ್ಟವಾಗುವುದಿಲ್ಲ. ಇರುವೆಗಳು ತಮ್ಮ ದಾರಿಯನ್ನು ಕಂಡುಕೊಳ್ಳಲು ಪರಿಮಳದ ಸೂಚನೆಗಳನ್ನು ಬಳಸುತ್ತವೆ. ಆದರೆ ಲವಂಗದ ಬಲವಾದ ಪರಿಮಳಯುಕ್ತ ವಾಸನೆ ಇರುವೆಗಳ ತಮ್ಮ ದಾರಿ ಮತ್ತು ದಿಕ್ಕನ್ನು ಕಂಡುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ. ಅದಕ್ಕಾಗಿಯೇ ಇರುವೆಗಳು ಲವಂಗ ಮತ್ತು ದಾಲ್ಚಿನ್ನಿಯಂತಹ ವಸ್ತುಗಳಿರುವತ್ತ ಸುಳಿಯುವುದಿಲ್ಲ.

ಇದನ್ನೂ ಓದಿ: ಮನೆಯಲ್ಲಿ ಒಂದು ಸಸಿ ನೆಟ್ಟರೆ ಹಲ್ಲಿಗಳ ಕಾಟದಿಂದ ಶಾಶ್ವತವಾಗಿ ಮುಕ್ತಿ ಪಡೆಯಬಹುದು

ಇರುವೆಗಳನ್ನು ಓಡಿಸಲು ಬೇರೆ ಯಾವ ವಸ್ತುಗಳು ಸಹಾಯ ಮಾಡಬಹುದು?

ನಿಮ್ಮ ಬಳಿ ಲವಂಗವಿಲ್ಲದಿದ್ದರೆ, ದಾಲ್ಚಿನ್ನಿ ತುಂಡುಗಳು ಸಹ ಉತ್ತಮ ಆಯ್ಕೆಯಾಗಿದೆ. ಅಂತಹ ವಸ್ತುಗಳನ್ನು ಸಕ್ಕರೆ ಡಬ್ಬಿಯಲ್ಲಿ ಸಂಗ್ರಹಿಸುವಾಗ ವಿಶೇಷ ಕಾಳಜಿ ವಹಿಸುವುದು ಮುಖ್ಯ. ಸಕ್ಕರೆಗೆ ಏನೂ ಬರದಂತೆ ಅವುಗಳನ್ನು ಚೀಲದಲ್ಲಿ ಇಡುವುದು ಉತ್ತಮ. ನೀವು ಡಬ್ಬಿಯನ್ನು ತೆರೆದಿಟ್ಟರೆ ಇರುವೆಗಳು ಮತ್ತೆ ಮುತ್ತಿಕೊಳ್ಳುತ್ತವೆ. ಹಾಗಾಗಿ ಯಾವಾಗಲೂ ಬಿಗಿಯಾಗಿ ಮುಚ್ಚಿಡಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link