ಬೆಂಗಳೂರಿನಲ್ಲಿ ಒಂದೇ ಒಂದು ಮಳೆಗೆ ತುಂಬಿ ಹರಿಯುತ್ತಿರೋ ಹಳ್ಳ ಕೊಳ್ಳಗಳು! – Kannada News | Bangalore Rain Update: Heavy Rainfall Triggers Waterlogging and Traffic Jams across Silicon City

ಬೆಂಗಳೂರು, ಜೂನ್ 14: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿದಿದ್ದು, ಬೆಂಗಳೂರಿನಲ್ಲಿಯೂ ವರುಣನ ಅಬ್ಬರ ಮುಂದುವರಿದಿದೆ. ಶಾಂತಿನಗರ, ವಿಧಾನಸೌಧ, ಶಿವಾಜಿನಗರ, ಕೋರಮಂಗಲ, ರಿಚ್ಮಂಡ್ ಸರ್ಕಲ್ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಕೆಲವೇ ನಿಮಿಷಗಳ ಧಾರಾಕಾರ ಮಳೆಯಿಂದ ರಸ್ತೆಗಳು ಮಿನಿ ಹೊಳೆಗಳಾಗಿ ಮಾರ್ಪಟ್ಟಿದ್ದು, ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ಹವಾಮಾನ ಇಲಾಖೆಯು ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಂಡ್ಯದಲ್ಲಿ ಮುನಿಸು ಮರೆತ ಮೈತ್ರಿ ನಾಯಕರು: ಒಂದೇ ವೇದಿಕೆ ಹಂಚಿಕೊಂಡ BJP-JDS ಮುಖಂಡರು – Kannada News | Narayana Gowda and Kumaraswamy Unite in Mandya for Modis 12 Year Administration Commemoration

ಮಂಡ್ಯ, ಜೂನ್​​ 14: ಮಂಡ್ಯದ ಜೆಡಿಎಸ್​​-ಬಿಜೆಪಿ ನಾಯಕರು ಮುನಿಸು ಮರೆತು ಪ್ರಧಾನಿ ನರೇಂದ್ರ ಮೋದಿ 12 ವರ್ಷ ಸುಧೀರ್ಘ ಆಡಳಿತ ಸ್ಮರಣೆ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮಂಡ್ಯದ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಉಭಯ ಪಕ್ಷಗಳ ಮುಖಂಡರು ವೇದಿಕೆ ಹಂಚಿಕೊಂಡಿರೋದು ಕಂಡುಬಂದಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರ ಸಂಬಂಧ ಬಿಜೆಪಿ – ಜೆಡಿಎಸ್ ಮುಖಂಡರು ಇತ್ತೀಚೆಗಷ್ಟೇ ಪರಸ್ಪರ ವಾಗ್ದಾಳಿ ನಡೆಸಿದ್ದರು. ಮೈತ್ರಿಯೇ ಬೇಡ ಎಂದು ಬಿಜೆಪಿ ನಾಯಕರಿಗೂ ದೂರು ನೀಡಲಾಗಿತ್ತು. ಹೀಗಿದ್ದರೂ ಅವೆಲ್ಲವನ್ನು ಮರೆತು ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ‌ ಕುಳಿತ ಕುಮಾರಸ್ವಾಮಿ ಮತ್ತು ನಾರಾಯಣಗೌಡ ಖುಷಿಯಿಂದಲೇ ಮಾತುಕತೆ ನಡೆಸಿರೋದು ಕಂಡುಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಟ ಸಲ್ಮಾನ್ ಖಾನ್ ಹೊಸ ಲುಕ್ ವೈರಲ್: ‘ತೇರೆ ನಾಮ್ 2’ ಬರುತ್ತಿದೆ ಎಂದ ಅಭಿಮಾನಿಗಳು – Kannada News | Salman Khan New Look at Lagaan 25 years celebration Fans recall Tere Naam movie

ಭಾರತೀಯ ಚಿತ್ರರಂಗದ ಮಹತ್ವದ ಸಿನಿಮಾಗಳಲ್ಲಿ ಒಂದಾದ, ಆಮಿರ್ ಖಾನ್ ನಟನೆಯ ‘ಲಗಾನ್’ (Lagaan) ಸಿನಿಮಾ ಬಿಡುಗಡೆಯಾಗಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಅದ್ಧೂರಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ವಿಶೇಷ ಸಂಭ್ರಮಾಚರಣೆಗೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan), ಆಮಿರ್ ಖಾನ್ ಹಾಗೂ ಕರೀನಾ ಕಪೂರ್ ಖಾನ್ ಸೇರಿದಂತೆ ಹಲವು ತಾರೆಯರು ಸಾಕ್ಷಿಯಾಗಿದ್ದರು. ವೇದಿಕೆ ಮೇಲೆ ಸಲ್ಮಾನ್ ಮತ್ತು ಆಮಿರ್ ಒಟ್ಟಿಗೆ ಕಾಣಿಸಿಕೊಂಡಿದ್ದನ್ನು ನೋಡಿ ಅಭಿಮಾನಿಗಳು ಸಖತ್ ಖುಷಿಯಾದರು. ಹಾಗಿದ್ದರೂ ಎಲ್ಲರ ಕಣ್ಣು ನೆಟ್ಟಿದ್ದು ಮಾತ್ರ ಸಲ್ಲು ಭಾಯ್ ಅವರ ಹೊಚ್ಚ ಹೊಸ ಲುಕ್ ಮೇಲೆ!

ಹೌದು, ಸಲ್ಮಾನ್ ಖಾನ್ ಸಂಪೂರ್ಣವಾಗಿ ವಿಭಿನ್ನ ಹಾಗೂ ರಗಡ್ ಮೇಕ್ ಓವರ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ನೀಟಾಗಿ ಟ್ರಿಮ್ ಮಾಡಿದ ಗಡ್ಡ ಮತ್ತು ಶಾರ್ಟ್ ಬಝ್-ಕಟ್ ಹೇರ್‌ಸ್ಟೈಲ್‌ನಲ್ಲಿ ಸಲ್ಮಾನ್ ಸಖತ್ ಫಿಟ್ ಹಾಗೂ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ವಿಡಿಯೋ ವೈರಲ್ ಆಗಿದೆ.

ಸಲ್ಮಾನ್ ಖಾನ್ ಅವರ ಈ ಹೊಸ ಅವತಾರ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳು ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಸಲ್ಮಾನ್ ಅವರ ಬ್ಲಾಕ್‌ಬಸ್ಟರ್ ‘ತೇರೆ ನಾಮ್’ ಸಿನಿಮಾದ ‘ರಾಧೆ’ ಪಾತ್ರವನ್ನು ಅಭಿಮಾನಿಗಳು ಈ ನೆನಪಿಸಿಕೊಳ್ಳುತ್ತಿದ್ದಾರೆ. ‘ಭಾಯ್ ನಿಜವಾದ ತೇರೆ ನಾಮ್ ಕ್ಯಾರೆಕ್ಟರ್ ತರಹ ಕಾಣುತ್ತಿದ್ದಾರೆ’, ‘ರಾಧೆ ಕಮ್‌ಬ್ಯಾಕ್ 2027’, ‘ರಿಯಲ್ ಲೈಫ್‌ನಲ್ಲಿ ತೇರೆ ನಾಮ್ 2 ರಿಲೀಸ್ ಆಗುತ್ತಿದೆ’ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ವೈರಲ್ ವಿಡಿಯೋ:

ಇನ್ನೂ ಕೆಲವರು ಸಲ್ಮಾನ್ ಖಾನ್ ಅವರ ರಗಡ್ ಲುಕ್ ನೋಡಿ ‘ಗ್ಯಾಂಗ್‌ಸ್ಟರ್ ಸಲ್ಲು’ ಮತ್ತು ‘ಬಾಪ್ ಆಫ್ ಬಾಲಿವುಡ್’ ಎಂದು ಹೊಗಳುತ್ತಿದ್ದಾರೆ. ಇದರ ಮಧ್ಯೆ ಕೆಲವರು ತಮಾಷೆಯಾಗಿ ‘ಐಶ್ವರ್ಯಾ ರೈ ಅವರು ಭಾಯ್‌ಜಾನ್ ಅವರನ್ನು ಹುಚ್ಚರನ್ನಾಗಿ ಮಾಡಿಬಿಟ್ಟಿದ್ದಾರೆ’ ಎಂದು ಕಮೆಂಟ್ ಮಾಡುವ ಮೂಲಕ ಹಳೆಯ ನೆನಪನ್ನು ಕೆದಕಿದ್ದಾರೆ. ಸದ್ಯಕ್ಕೆ ಈ ಲುಕ್​ಗೆ ಕಾರಣ ಏನು ಎಂಬುದು ಗೌಪ್ಯವಾಗಿದೆ.

ಇದನ್ನೂ ಓದಿ: ‘ಕಾಲಾ ಹಿರಣ್’ ಚಿತ್ರತಂಡಕ್ಕೆ ದೆಹಲಿ ಹೈಕೋರ್ಟ್ ನೋಟಿಸ್: ಬಿಡುಗಡೆಗೆ ತಡೆ ಕೋರಿದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಈ ಹೊಸ ಲುಕ್ ಅನ್ನು ತಮ್ಮ ಮುಂಬರುವ ಚಿತ್ರಕ್ಕಾಗಿ ಮಾಡಿಕೊಂಡಿದ್ದಾರೆ ಎಂದು ಊಹಿಸಲಾಗುತ್ತಿದೆ. ಕಳೆದ ತಿಂಗಳಷ್ಟೇ ಸಲ್ಮಾನ್ ಖಾನ್ ಅವರು ನಿರ್ದೇಶಕ ವಂಶಿ ಪೈಡಿಪಲ್ಲಿ ಅವರೊಂದಿಗೆ ಹೊಸ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿದ್ದರು. ಸದ್ಯಕ್ಕೆ ‘SVC63’ ಎಂದು ಕರೆಯಲಾಗುತ್ತಿರುವ ಈ ಬಿಗ್ ಬಜೆಟ್ ಚಿತ್ರವನ್ನು ಖ್ಯಾತ ನಿರ್ಮಾಣ ಸಂಸ್ಥೆ ‘ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್’ ನಿರ್ಮಿಸುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹ್ಯಾಂಡ್​ಶೇಕ್ ಮಾಡ್ತೀರಾ?… “ನಾವಿಲ್ಲಿ ಬಂದಿರುವುದು ಕ್ರಿಕೆಟ್ ಆಡಲು ಮಾತ್ರ!” – Kannada News | IND vs PAK: Harmanpreet Blunts Pakistan Handshake Row

ಮಹಿಳಾ ಟಿ20 ವಿಶ್ವಕಪ್​ನ (Women’s T20 World Cup 2026) ಆರನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ಇಂದು (ಜೂ.14) ನಡೆಯಲಿರುವ ಈ ಪಂದ್ಯದ ವೇಳೆ ಉಭಯ ತಂಡಗಳ ಆಟಗಾರ್ತಿಯರು ‘ಹ್ಯಾಂಡ್‌ಶೇಕ್’ ಮಾಡಲಿದ್ದಾರೆಯೇ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಯನ್ನು ಟೀಮ್ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಅವರ ಮುಂದಿಡಲಾಗಿದೆ.

ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿರುವ ಹರ್ಮನ್​ಪ್ರೀತ್ ಕೌರ್​ಗೆ, “ಭಾರತ ತಂಡವು ಪಾಕಿಸ್ತಾನ್ ಆಟಗಾರ್ತಿಯರೊಂದಿಗೆ ಪಂದ್ಯದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಹಸ್ತಲಾಘವ ಮಾಡಲಿದೆಯೇ?” ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಖಡಕ್ ಆಗಿ ಉತ್ತರಿಸಿದ ಹರ್ಮನ್‌ಪ್ರೀತ್ ಕೌರ್…

“ನೋಡಿ, ನಾವಿಲ್ಲಿ ಬಂದಿರುವುದು ಕ್ರಿಕೆಟ್ ಆಡಲು. ನಾವು ಕೇವಲ ಕ್ರಿಕೆಟ್ ಬಗ್ಗೆ ಮಾತ್ರ ಮಾತನಾಡುತ್ತೇವೆ. ಕ್ರಿಕೆಟ್ ಹೊರತುಪಡಿಸಿ ನಾವು ಬೇರೆ ಯಾವುದರ ಬಗ್ಗೆಯೂ ಯೋಚಿಸುವುದಿಲ್ಲ, ಮಾತನಾಡುವುದೂ ಇಲ್ಲ. ಮೊದಲ ದಿನದಿಂದಲೂ ಕ್ರಿಕೆಟ್ ನಮ್ಮ ಕನಸಾಗಿದೆ. ಮುಂದಿನ ಪಂದ್ಯವನ್ನು ನಾವು ಕೇವಲ ಮತ್ತೊಂದು ಸಾಮಾನ್ಯ ಪಂದ್ಯದಂತೆ ನೋಡುತ್ತಿದ್ದೇವೆ ಮತ್ತು ನಮ್ಮ ಗಮನವೆಲ್ಲಾ ಆಟದ ಮೇಲಷ್ಟೇ ಇದೆ.” ಎಂದಿದ್ದಾರೆ.

ಏನಿದು ‘ನೋ-ಹ್ಯಾಂಡ್‌ಶೇಕ್’ ವಿವಾದ?

ಕಳೆದ ಕೆಲವು ಸಮಯದಿಂದ ಭಾರತೀಯ ಕ್ರಿಕೆಟ್ ತಂಡಗಳು ಪಾಕಿಸ್ತಾನ್ ಆಟಗಾರರಿಗೆ ಹಸ್ತಲಾಘವ ನೀಡದಿರುವ ನೀತಿಯನ್ನು ಅನುಸರಿಸುತ್ತಾ ಬಂದಿವೆ. ಇದಕ್ಕೆ ಮುಖ್ಯ ಕಾರಣ ಪಹಲ್ಗಾಮ್​ನಲ್ಲಿ ಪಾಕ್ ಭಯೋತ್ಪಾದಕರು ನಡೆಸಿದ ದಾಳಿ. ಈ ದಾಳಿಯನ್ನು ಖಂಡಿಸಿ ಹಾಗೂ ಸೈನಿಕರಿಗೆ ಬೆಂಬಲ ವ್ಯಕ್ತಪಡಿಸಿ ಭಾರತೀಯ ಆಟಗಾರರು ಹಾಗೂ ಆಟಗಾರ್ತಿಯರು ಪಾಕಿಸ್ತಾನ್ ಪ್ಲೇಯರ್ಸ್ ಜೊತೆ ಶೇಕ್ ಹ್ಯಾಂಡ್ ಮಾಡುತ್ತಿಲ್ಲ.

  • ಆರಂಭ: ಏಷ್ಯಾ ಕಪ್ 2025 ರ ವೇಳೆ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ಪಾಕಿಸ್ತಾನ್ ವಿರುದ್ಧದ ಪಂದ್ಯದ ಬಳಿಕ ಶೇಕ್ ಹ್ಯಾಂಡ್ ಮಾಡದೆ ಮೈದಾನ ತೊರೆದಾಗ ಈ ವಿವಾದ ಮುಂಚೂಣಿಗೆ ಬಂದಿತ್ತು.
  • ಮುಂದುವರಿಕೆ: ಇದೇ ನೀತಿಯನ್ನು ಅಂಡರ್-19 ವಿಶ್ವಕಪ್ ಹಾಗೂ ಮಹಿಳಾ ಏಕದಿನ ವಿಶ್ವಕಪ್‌ಗಳಲ್ಲೂ ಭಾರತೀಯ ತಂಡಗಳು ಮುಂದುವರಿಸಿದ್ದವು.
  • ಹಿಂದಿನ ಘಟನೆ: ಏಕದಿನ ವಿಶ್ವಕಪ್​ ಸಂದರ್ಭದಲ್ಲಿ ಹರ್ಮನ್‌ಪ್ರೀತ್ ಕೌರ್ ಮತ್ತು ಪಾಕ್ ನಾಯಕಿ ಫಾತಿಮಾ ಸನಾ ಟಾಸ್ ವೇಳೆ ಹಸ್ತಲಾಘವ ಮಾಡದೆ ಕೇವಲ ನಮಸ್ಕಾರ ಮಾಡುವ ಮೂಲಕ ಈ ನೀತಿಯನ್ನು ಮುಂದುವರೆಸಿದ್ದರು.

ಇದನ್ನೂ ಓದಿ: ಮುಂಬೈ ಟಿ20 ಲೀಗ್ ಫೈನಲ್​ನಲ್ಲಿ ಆಟಗಾರರ ನಡುವೆ ನೂಕಾಟ, ತಳ್ಳಾಟ, ಕಿತ್ತಾಟ!

ಟೀಮ್ ಇಂಡಿಯಾ  ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್ ಅವರು ಈಗ ನೀಡಿರುವ ಹೇಳಿಕೆಯನ್ನು ಗಮನಿಸಿದರೆ, ಈ ಬಾರಿಯ ವಿಶ್ವಕಪ್‌ನಲ್ಲೂ ಭಾರತ ತಂಡವು ಅದೇ ಹಳೆಯ ‘ನೋ-ಹ್ಯಾಂಡ್‌ಶೇಕ್’ ಸಂಪ್ರದಾಯವನ್ನು ಮುಂದುವರಿಸುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಭಾರತೀಯ ಆಟಗಾರ್ತಿಯರು ಶೇಕ್ ಹ್ಯಾಂಡ್ ನೀಡುವ ಸಾಧ್ಯತೆಯಿಲ್ಲ ಎಂದೇ ಹೇಳಬಹುದು.

Source link

ವಿಶ್ವದಲ್ಲೇ ಅತಿದೊಡ್ಡ ರಸ್ತೆ ಜಾಲ ಹೊಂದಿದ ದೇಶವೆಂಬ ದಾಖಲೆ ಭಾರತಕ್ಕೆ – Kannada News | India infrastructure boom largest road network

ನವದೆಹಲಿ, ಜೂನ್ 14: ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಬಹಳ ವೇಗದಲ್ಲಿ ಸಾಗುತ್ತಿರುವ ಭಾರತ, ಇದೀಗ ರಸ್ತೆ ಜಾಲದ ಗಾತ್ರದಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕಾವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ. ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (CIA) ಬಿಡುಗಡೆ ಮಾಡಿದೆ ಎನ್ನಲಾದ ಹೊಸ ಅಂಕಿ-ಅಂಶಗಳ ಪ್ರಕಾರ, ಜಗತ್ತಿನಲ್ಲೇ ಅತಿಹೆಚ್ಚು ರಸ್ತೆ ಸಂಪರ್ಕ (Road network) ಹೊಂದಿರುವ ದೇಶವಾಗಿ ಭಾರತ ಹೊರಹೊಮ್ಮಿದೆ. ವಿಕಿಪೀಡಿಯಾದಲ್ಲಿ ಪ್ರಕಟವಾಗಿರುವ ಪಟ್ಟಿಯ ಪ್ರಕಾರ, ಭಾರತದಲ್ಲಿ 67 ಲಕ್ಷಕ್ಕೂ ಅಧಿಕ ಕಿ.ಮೀಯಷ್ಟು ರಸ್ತೆ ಸಂಪರ್ಕ ಇದೆ. ಅಮೆರಿಕ, ಚೀನಾಗಿಂತಲೂ ಹೆಚ್ಚು ರಸ್ತೆಗಳು ಭಾರತದಲ್ಲಿ ಇವೆ.

ಅತಿಹೆಚ್ಚು ರಸ್ತೆ ಸಂಪರ್ಕ ಹೊಂದಿರುವ ದೇಶಗಳ ಟಾಪ್-10 ಪಟ್ಟಿ

  1. ಭಾರತ: 67 ಲಕ್ಷ ಕಿ.ಮೀ
  2. ಅಮೆರಿಕಾ: 66 ಲಕ್ಷ ಕಿ.ಮೀ
  3. ಚೀನಾ: 55 ಲಕ್ಷ ಕಿ.ಮೀ
  4. ಬ್ರಜಿಲ್: 20 ಲಕ್ಷ ಕಿಮೀ
  5. ರಷ್ಯಾ: 15 ಲಕ್ಷ ಕಿಮೀ
  6. ಜಪಾನ್: 12 ಲಕ್ಷ ಕಿಮೀ
  7. ಫ್ರಾನ್ಸ್: 10 ಲಕ್ಷ ಕಿಮೀ
  8. ಕೆನಡಾ: 10 ಲಕ್ಷ ಕಿಮೀ
  9. ಆಸ್ಟ್ರೇಲಿಯಾ: 9.7 ಲಕ್ಷ ಕಿಮೀ
  10. ಮೆಕ್ಸಿಕೋ: 8.36 ಲಕ್ಷ ಕಿಮೀ

ಇದನ್ನೂ ಓದಿ: ಎಚ್​ಎಎಲ್​ಗೆಯೇ ಚಳ್ಳೆಹಣ್ಣು ತಿನಿಸಲು ಯತ್ನಿಸಿದ ಹೈದರಾಬಾದ್ ಕಂಪನಿ; ತೇಜಸ್ ಯುದ್ಧವಿಮಾನದ ಬಿಡಿಭಾಗ ಪೂರೈಕೆಯಲ್ಲಿ ವಂಚನೆ; ದೂರು ದಾಖಲು

ಕೇವಲ ಒಟ್ಟು ರಸ್ತೆ ಉದ್ದವಷ್ಟೇ ಅಲ್ಲದೆ, ಭೌಗೋಳಿಕ ವಿಸ್ತೀರ್ಣಕ್ಕೆ ಹೋಲಿಸಿದರೆ ವಿಶ್ವದಲ್ಲೇ ಅತ್ಯಧಿಕ ರಸ್ತೆ ಸಾಂದ್ರತೆ (Road Density) ಹೊಂದಿರುವ ದೇಶಗಳ ಸಾಲಿನಲ್ಲಿ ಭಾರತವೂ ಇದೆ. ಪ್ರತೀ 100 ಚದರ ಕಿಮೀ ವಿಸ್ತೀರ್ಣದ ಪ್ರದೇಶದಲ್ಲಿ 204 ಕಿಮೀಯಷ್ಟು ರಸ್ತೆ ಹೊಂದಿದೆ ಭಾರತ. ಅಂದರೆ ಪ್ರತೀ ಚದರ ಕಿಮೀಗೆ 2 ಕಿಮೀ ರಸ್ತೆ ಹೊಂದಿದೆ. ರಸ್ತೆ ಸಾಂದ್ರತೆಯಲ್ಲಿಲ ಇಸ್ರೇಲ್, ಬೆಲ್ಜಿಯಂ, ನೆದರ್​ಲ್ಯಾಂಡ್ಸ್, ಜಪಾನ್ ಮೊದಲಾದ ದೇಶಗಳಿವೆ.

ಪ್ರತೀ ವರ್ಷ ಭಾರತದಲ್ಲಿ 7-10 ಸಾವಿರ ಕಿಮೀ ರಸ್ತೆ ನಿರ್ಮಾಣ?

ಭಾರತ ಸರ್ಕಾರವು ಸದ್ಯಕ್ಕೆ ವಾರ್ಷಿಕವಾಗಿ ಸುಮಾರು 7,000 ದಿಂದ 10,000 ಕಿಲೋಮೀಟರ್‌ಗಳಷ್ಟು ಹೆದ್ದಾರಿಗಳನ್ನು ಹೊಸದಾಗಿ ನಿರ್ಮಿಸುತ್ತಿದೆ. ಪ್ರತಿ ವರ್ಷ 10,000 ಕಿಲೋಮೀಟರ್ ರಸ್ತೆ ನಿರ್ಮಿಸುವುದು ಎಂದರೆ ಜಪಾನ್‌ನ ಟೋಕಿಯೋ ನಗರದಿಂದ ಇಂಗ್ಲೆಂಡ್‌ನ ಲಂಡನ್ ನಗರದವರೆಗೆ ಪ್ರತಿ ವರ್ಷ ಹೊಸದಾಗಿ ರಸ್ತೆ ನಿರ್ಮಿಸಿದಂತೆ! ಈ ಅಭೂತಪೂರ್ವ ವೇಗದಿಂದಾಗಿ, ಭಾರತವು ರಸ್ತೆ ಜಾಲದಲ್ಲಿ ತನ್ನ ಮುನ್ನಡೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.

ಅತಿಹೆಚ್ಚು ಡಾಂಬರು, ಕಾಂಕ್ರೀಟ್ ರಸ್ತೆಯಲ್ಲಿ ಚೀನಾ ಮುಂದೆ

ಭಾರತ ವಿಶ್ವದಲ್ಲೇ ಅತ್ಯಧಿಕ ರಸ್ತೆ ಸಂಪರ್ಕ ಹೊಂದಿದೆಯಾದರೂ ಡಾಂಬರು ಮತ್ತು ಸಿಮೆಂಟ್ ಹೊದಿಕೆಯ ರಸ್ತೆಯಲ್ಲಿ (Paved Roads) ಚೀನಾ ಮುಂದಿದೆ. ಭಾರತದಲ್ಲಿರುವ ಒಟ್ಟು ರಸ್ತೆಯಲ್ಲಿ ಕಚ್ಚಾ ರಸ್ತೆ ಶೇ. 33 ಇದೆ. ಅಂದರೆ, ಡಾಂಬರು ಇಲ್ಲದ, ಕಲ್ಲು ಮಣ್ಣುಗಳಿರುವ ರಸ್ತೆ ನೂರಕ್ಕೆ 33 ಇದೆ. ಚೀನಾದಲ್ಲಿ 55 ಲಕ್ಷ ಕಿಮೀ ಪೈಕಿ ಶೇ. 97ರಷ್ಟು ಡಾಂಬರು, ಸಿಮೆಂಟ್ ರಸ್ತೆಯೇ ಇದೆ. ಶೇ. 3 ರಸ್ತೆಗೆ ಮಾತ್ರ ಡಾಂಬರು ಹಾಕಲಾಗಿಲ್ಲ.

ಇದನ್ನೂ ಓದಿ: ಮೇ ತಿಂಗಳಲ್ಲಿ ಬೆಲೆ ಏರಿಕೆಗೆ ಇನ್ನಷ್ಟು ವೇಗ; ರೀಟೇಲ್ ಹಣದುಬ್ಬರ ಶೇ. 3.93 ದಾಖಲು

ಮೂಲಸೌಕರ್ಯ ಹೂಡಿಕೆಯಲ್ಲಿ ದುಪ್ಪಟ್ಟು ಏರಿಕೆ

2020 ರ ನಂತರದ ಅವಧಿಯಲ್ಲಿ ಭಾರತದ ಮೂಲಸೌಕರ್ಯ (Infra Boom) ವಲಯವು ಅತ್ಯಂತ ವೇಗವಾಗಿ ಬೆಳೆದಿತ್ತು. ಆದರೆ ಇಷ್ಟಕ್ಕೇ ನಿಲ್ಲದ ದೇಶದ ಅಭಿವೃದ್ಧಿ ರಥ, ಕಳೆದ 5 ವರ್ಷಗಳ ಹಿಂದಿನ ಹೂಡಿಕೆಗೆ ಹೋಲಿಸಿದರೆ ಪ್ರಸ್ತುತ ಮೂಲಸೌಕರ್ಯ ವಲಯದ ಮೇಲಿನ ಬಂಡವಾಳ ಹೂಡಿಕೆಯನ್ನು ಬರೋಬ್ಬರಿ ದುಪ್ಪಟ್ಟು (Double) ಮಾಡಿದೆ. ಸರ್ಕಾರದ ಈ ಬೃಹತ್ ಆರ್ಥಿಕ ಹೂಡಿಕೆಯೇ ಇಷ್ಟೊಂದು ಬೃಹತ್ ಪ್ರಮಾಣದ ರಸ್ತೆ ಕ್ರಾಂತಿಗೆ ಮುಖ್ಯ ಕಾರಣವಾಗಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

ಗಮನಿಸಿ, ರಸ್ತೆ ನಿರ್ಮಾಣ ಸಂಬಂಧ ಮೇಲೆ ತಿಳಿಸಿರುವ ಅಂಕಿ ಅಂಶಗಳನ್ನು ವಿಕಿಪೀಡಿಯಾದಿಂದ ತೆಗೆದುಕೊಳ್ಳಲಾಗಿದೆ. ಸಿಐಎಯಿಂದ ಬಿಡುಗಡೆಯಾಗಿರುವ ಮಾಹಿತಿ ಇದೆಂದು ವಿಕಿಪೀಡಿಯಾದಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ, ಸಿಐಎಯಿಂದ ಈ ಸಂಬಂಧ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಬಂಗೀ ಜಂಪ್ ವೇಳೆ ಹಗ್ಗ ಕಟ್ಟಲು ಮರೆತ ಟ್ರೈನರ್, ಯುವತಿ ಸಾವು – Kannada News | Adventure Turns Tragic as 21 Year Old Student Dies in 40 Metre Rope Jump Fall

ಸಾವೊ ಪಾಲೊ, ಜೂನ್ 14: ಬಂಗೀ ಜಂಪಿಂಗ್ ವೇಳೆ ತರಬೇತುದಾರ ಹಗ್ಗ ಕಟ್ಟುವುದನ್ನು ಮರೆತ ಪರಿಣಾಮ ಯುವತಿ ಆಳದ ಕಂದಕಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಬ್ರೆಜಿಲ್​ನ ಸಾವೊ ಪಾಲೊ ರಾಜ್ಯದ ಲಿಮೈರಾ ನಗರದಲ್ಲಿ ನಡೆದಿದೆ.

21 ವರ್ಷದ ಯುವತಿ ಮಾರಿಯಾ ಎಡ್ವರ್ಡಾ ಟ್ರೈನರ್ ಲೋಪದಿಂದಾಗಿ ಬಂಗೀ ಜಂಪ್ ಮಾಡುವಾಗ ಬಿದ್ದು ಮೃತಪಟ್ಟ ಬೆನ್ನಲ್ಲೇ ಬ್ರೆಜಿಲ್ ಮಿಲಿಟರಿ ಪೊಲೀಸರು ಅತ್ಯಂತ ಚುರುಕಿನ ಕಾರ್ಯಾಚರಣೆ ನಡೆಸಿದ್ದಾರೆ. ಘಟನಾ ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆಯೋಜಕರು ಮತ್ತು ಜವಾಬ್ದಾರರ ತಂಡವನ್ನು ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿ, ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಹಲವರನ್ನು ಬಂಧಿಸಲಾಗಿದ್ದು, ಲಿಮೆರಾ ಪೊಲೀಸ್ ಇಲಾಖೆಯು ತೀವ್ರ ವಿಚಾರಣೆ ನಡೆಸುತ್ತಿದೆ.

ಈ ಘಟನೆಯನ್ನು ಸ್ಥಳೀಯ ಆಡಳಿತವು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಸಾಹಸ ಕ್ರೀಡಾಕೂಟಗಳಲ್ಲಿ ಇನ್ಮುಂದೆ ಇಂತಹ ಯಾವುದೇ ಲೋಪಗಳು ನಡೆಯದಂತೆ ತಡೆಯಲು ತನಿಖಾ ಸಂಸ್ಥೆಗಳು ಕಟ್ಟುನಿಟ್ಟಿನ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಮರುರೂಪಿಸುತ್ತಿವೆ.

ಉಪಕರಣಗಳ ನಿರ್ವಹಣೆಗೆ ಯಾರು ಜವಾಬ್ದಾರರು ಮತ್ತು ನಿಗದಿತ ಸುರಕ್ಷತಾ ನಿಯಮಗಳನ್ನು ಏಕೆ ಉಲ್ಲಂಘಿಸಲಾಗಿದೆ ಎಂಬುದರ ಕುರಿತು ನಡೆಯುತ್ತಿರುವ ಈ ಆಳವಾದ ತನಿಖೆಯು, ಇಡೀ ಜಾಗತಿಕ ಸಾಹಸ ಪ್ರವಾಸೋದ್ಯಮದಲ್ಲಿ ತಂತ್ರಜ್ಞಾನ ಮತ್ತು ಮಾನವ ತಪಾಸಣೆಯನ್ನು ಕಡ್ಡಾಯಗೊಳಿಸಲು ಬಲವಾದ ಕಾನೂನು ಚೌಕಟ್ಟನ್ನು ಒದಗಿಸಲಿದೆ.

ವಿಡಿಯೋ

ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ರಕ್ಷಣಾ ಕಾರ್ಯಕರ್ತರು ಮತ್ತು ಅಗ್ನಿಶಾಮಕ ದಳದವರು ಒಟ್ಟಾಗಿ ಧಾವಿಸಿ ಯುವತಿಯನ್ನು ರಕ್ಷಿಸಲು ತಮ್ಮ ಗರಿಷ್ಠ ಪ್ರಯತ್ನಗಳನ್ನು ಮಾಡಿದರು. ಇತ್ತ ತೀವ್ರ ಆಘಾತದಿಂದ ಅಸ್ವಸ್ಥಗೊಂಡ ಆಕೆಯ ನಿಶ್ಚಿತ ವರನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ, ಅಗತ್ಯ ವೈದ್ಯಕೀಯ ಮತ್ತು ಮಾನಸಿಕ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:54 pm, Sun, 14 June 26

Source link

ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಯೋಜನೆಗೆ ಭರ್ಜರಿ ಸ್ಪಂದನೆ: ಆರಂಭದ ಎರಡು ದಿನಗಳಲ್ಲೇ 2.7 ಸಾವಿರಕ್ಕೂ ಹೆಚ್ಚು ಪಾಸ್ ವಿತರಣೆ! – Kannada News | Free Student Bus Pass Scheme: Over 2,700 Passes Issued in First Two Days in Karnataka

ಸಾಂದರ್ಭಿಕ ಚಿತ್ರImage Credit source: The Indian Express

ಬೆಂಗಳೂರು, ಜೂನ್ 14: ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ವಿಸ್ತರಿಸಿರುವ ಉಚಿತ ಬಸ್ ಪಾಸ್ (Student Bus Pass) ಯೋಜನೆಗೆ ಮೊದಲ ಎರಡು ದಿನಗಳಲ್ಲೇ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೂನ್ 11 ರಂದು ಸರ್ಕಾರ ಈ ಮಹತ್ವದ ಆದೇಶ ಹೊರಡಿಸಿದ ಬೆನ್ನಲ್ಲೇ, ಕೇವಲ ಎರಡು ದಿನಗಳಲ್ಲಿ ನಾಲ್ಕು ಸಾರಿಗೆ ನಿಗಮಗಳಿಂದ ಒಟ್ಟು 2,764 ಉಚಿತ ವಿದ್ಯಾರ್ಥಿ ಪಾಸ್‌ಗಳನ್ನು ವಿತರಿಸಲಾಗಿದೆ. ಯೋಜನೆ ಜಾರಿಯಾದ ಮೊದಲ ದಿನವಾದ ಶುಕ್ರವಾರ 821 ಪಾಸ್‌ಗಳು ಹಾಗೂ ಶನಿವಾರ 1,943 ಪಾಸ್‌ಗಳನ್ನು ವಿತರಿಸಲಾಗಿದೆ.

ಮುಖ್ಯಾಂಶಗಳು

  • ಉಚಿತ ಬಸ್ ಪಾಸ್ ಯೋಜನೆಗೆ ಆರಂಭದ ಎರಡು ದಿನಗಳಲ್ಲೇ ಭರ್ಜರಿ ಸ್ಪಂದನೆ ಸಿಕ್ಕಿದೆ.
  • ನಾಲ್ಕು ಸಾರಿಗೆ ನಿಗಮಗಳಿಂದ ಒಟ್ಟು 2,764 ವಿದ್ಯಾರ್ಥಿ ಪಾಸ್‌ಗಳನ್ನು ವಿತರಣೆ ಮಾಡಲಾಗಿದೆ.
  • ಈ ಉಚಿತ ಯೋಜನೆಯಿಂದ ಸರ್ಕಾರಕ್ಕೆ ವಾರ್ಷಿಕ 286 ಕೋಟಿ ರೂಪಾಯಿ ವೆಚ್ಚವಾಗಲಿದೆ.

ಯಾವ ನಿಗಮದಿಂದ ಎಷ್ಟು ಪಾಸ್ ವಿತರಣೆ?

  • ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC): 995 ಪಾಸ್‌ಗಳು
  • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC): 860 ಪಾಸ್‌ಗಳು
  • ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC): 641 ಪಾಸ್‌ಗಳು
  • ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC): 268 ಪಾಸ್‌ಗಳು

ಗಡಿಭಾಗದ ವಿದ್ಯಾರ್ಥಿಗಳಿಗೂ ಪಾಸ್ ಲಭ್ಯ

ಈ ಯೋಜನೆಯು ಕರ್ನಾಟಕದ ಗಡಿಭಾಗದಲ್ಲಿ ವಾಸಿಸುತ್ತಾ ನೆರೆರಾಜ್ಯಗಳ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಹಾಗೂ ನೆರೆರಾಜ್ಯಗಳ ಗಡಿಭಾಗದಿಂದ ಬಂದು ಕರ್ನಾಟಕದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೂ ಅನ್ವಯಿಸಲಿದೆ. ಈ ಉಚಿತ ಪಾಸ್ ಯೋಜನೆಗಾಗಿ ಸರ್ಕಾರಕ್ಕೆ ವಾರ್ಷಿಕ ಸುಮಾರು 286.08 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಅಪಘಾತ ಪರಿಹಾರ ನಿಧಿ ಮತ್ತು ಪ್ರೊಸೆಸಿಂಗ್ ಶುಲ್ಕಕ್ಕಾಗಿ ಹೆಚ್ಚುವರಿಯಾಗಿ 15 ಕೋಟಿ ರೂಪಾಯಿ ವೆಚ್ಚವಾಗಲಿದೆ.

ಇದನ್ನೂ ಓದಿ ಸೇವಾ ಸಿಂಧು ಪೋರ್ಟಲ್​ನಲ್ಲಿ ಉಚಿತ ಬಸ್ ಪಾಸ್​ಗೆ ಅರ್ಜಿ ಸಲ್ಲಿಸುವುದು ಹೇಗೆ? ಹಂತ ಹಂತದ ಮಾಹಿತಿ

ಈ ಹಿಂದೆ ವಿದ್ಯಾರ್ಥಿ ಪಾಸ್‌ಗಳ ವೆಚ್ಚವನ್ನು ಸರ್ಕಾರ, ಸಾರಿಗೆ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಜಂಟಿಯಾಗಿ ಭರಿಸಬೇಕಾಗಿತ್ತು. ಆದರೆ ಈಗ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ. ಅರ್ಹ ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜುಗಳ ಮೂಲಕ ಅಥವಾ ಯಾವುದೇ ಸ್ಥಳದಿಂದ ಸೇವಾ ಸಿಂಧು (Seva Sindhu) ಪೋರ್ಟಲ್ ಮೂಲಕ ಉಚಿತ ಪಾಸ್‌ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Optical Illusion: ನಿಮಗೊಂದು ಸವಾಲ್; ಈ ಚಿತ್ರದಲ್ಲಿರುವ ಕಳ್ಳ ಬೆಕ್ಕನ್ನು ಜಸ್ಟ್ 10 ಸೆಕೆಂಡುಗಳಲ್ಲಿ ಗುರುತಿಸಿ – Kannada News | Optical illusion: Spot the hidden cat in this picture within 10 seconds.

ನೀವು ಬುದ್ಧಿವಂತರೇ, ಹಾಗಾದ್ರೆ ಮೆದುಳು ಹಾಗೂ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಸಮಯ ಈಗ ಬಂದಿದೆ. ನೀವು ಈ ಹಿಂದೆ ಒಗಟಿನ ಚಿತ್ರಗಳನ್ನು ಬಿಡಿಸಲು ವಿಫಲ ಆಗಿದ್ದೀರಬಹುದು. ನಿಮ್ಮ ವೀಕ್ಷಣಾ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆಯ ಮಟ್ಟವನ್ನು ಪರೀಕ್ಷಿಸಲು ಹೆಚ್ಚಿನವರು ಈ ಆಪ್ಟಿಕಲ್‌ ಇಲ್ಯೂಷನ್‌ (optical illusion) ಚಿತ್ರ ನೋಡಿ. ಈ ಅಡುಗೆ ಮನೆಯಲ್ಲಿ ಅಡಗಿರುವ ಬೆಕ್ಕನ್ನು ಕಂಡು ಹಿಡಿಯುವ ಸವಾಲು ಇಲ್ಲಿದೆ. ಈ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳಿ.

ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ

ಫೈಂಡ್ ದಿ ಸ್ನೈಪರ್’ (/FindTheSniper) ಎಂಬ ಸಬ್‌ರೆಡಿಟ್‌ನಲ್ಲಿ ಈ ಆಪ್ಟಿಕಲ್ ಭ್ರಮೆಯುಳ್ಳ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಅಡುಗೆ ಮನೆಯ ನೋಟವನ್ನು ಕಾಣಬಹುದು. ಪಾತ್ರೆಗಳು, ಉಪಕರಣಗಳು ಹಾಗೂ ದಿನನಿತ್ಯದ ವಸ್ತುಗಳು ಅಸ್ತವ್ಯಸ್ತವಾಗಿರುವುದನ್ನು ನೋಡಬಹುದು. ಈ ಅಡುಗೆ ಮನೆಯಲ್ಲಿ ಬೆಕ್ಕಿನ ಮರಿ ಸ್ಪಷ್ಟವಾಗಿ ಕಾಣದಂತೆ ಅಡಗಿಕೊಂಡಿದೆ. ಹತ್ತು ಸೆಕೆಂಡುಗಳೊಳಗೆ ಈ ಬೆಕ್ಕನ್ನು ನಿಮ್ಮ ಕಣ್ಣಿಗೆ ಕಾಣಿಸಿದ್ರೆ ನೀವು ಜಾಣರು ಎಂದರ್ಥ.

ರೆಡ್ಡಿಟ್‌ ಪೋಸ್ಟ್‌ ಇಲ್ಲಿದೆ

Find the predator
by
u/Suspecious_Banana in
FindTheSniper

ಇದನ್ನೂ ಓದಿ: ನಿಮ್ಮದು ಹದ್ದಿನ ಕಣ್ಣಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಕಳ್ಳ ಬೆಕ್ಕನ್ನು ಗುರುತಿಸಬಲ್ಲಿರಾ

ಬೆಕ್ಕು ನಿಮ್ಮ ಕಣ್ಣಿಗೆ ಕಂಡಿತೇ?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಭ್ರಮೆಯನ್ನುಂಟು ಮಾಡುವುದು ಸಹಜ. ಬೆಕ್ಕು ತನ್ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಾಗವಾಗಿ ಬೆರೆತುಹೋಗಿದ್ದು, ಹೆಚ್ಚಿನವರಿಗೆ ಈ ಕಳ್ಳ ಬೆಕ್ಕನ್ನು ಕಂಡು ಹಿಡಿಯಲು ಸಾಧ್ಯವಿಲ್ಲ. ಅತ್ಯುತ್ತಮ ವೀಕ್ಷಣಾ ಕೌಶಲ್ಯ ಹೊಂದಿರುವ ಜನರು ಮಾತ್ರ 10 ಸೆಕೆಂಡುಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಬೆಕ್ಕನ್ನು ಗುರುತಿಸಬಹುದು. ಈ ಚಿತ್ರದಲ್ಲಿ ಡಿಶ್‌ವಾಶರ್‌ ಮೇಲಿರುವ ಚೀಲದೊಳಗೆ ಸದ್ದಿಲ್ಲದೆ ವಿಶ್ರಾಂತಿ ಪಡೆಯುತ್ತಿದೆ. ಈ ಕಳ್ಳ ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸಿತು ಎಂದು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:17 am, Sun, 14 June 26

Source link

Bank Recruitment 2026: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಸುವರ್ಣವಕಾಶ; ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | Punjab and Sind Bank Recruitment: AI/Tech Manager Vacancies, Apply Online Now!

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನೇಮಕಾತಿ Image Credit source: Pinterest

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ ಇಲ್ಲಿದೆ. ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆದ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ (PSB), ಕೃತಕ ಬುದ್ಧಿಮತ್ತೆ (AI) ಸಂಬಂಧಿತ ತಾಂತ್ರಿಕ ವಿಭಾಗಗಳಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ವ್ಯವಸ್ಥಾಪಕ ಮಟ್ಟದ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.

ಲಭ್ಯವಿರುವ ಹುದ್ದೆಗಳ ವಿವರಗಳು:

ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು ವಿವಿಧ ಹಂತದ ವ್ಯವಸ್ಥಾಪಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ 4 ಮ್ಯಾನೇಜರ್ ಹುದ್ದೆಗಳು, 3 ಹಿರಿಯ ವ್ಯವಸ್ಥಾಪಕ ಹುದ್ದೆಗಳು ಹಾಗೂ 1 ಮುಖ್ಯ ವ್ಯವಸ್ಥಾಪಕ ಹುದ್ದೆ ಲಭ್ಯವಿದೆ. ಕೃತಕ ಬುದ್ಧಿಮತ್ತೆ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಕೆಲಸದ ಅನುಭವ ಹೊಂದಿರುವ ಎಂಜಿನಿಯರಿಂಗ್ ಪದವೀಧರರಿಗೆ ಬ್ಯಾಂಕಿಂಗ್ ವಲಯದ ಉನ್ನತ ಮಟ್ಟದ ಅಧಿಕಾರಿಯಾಗಲು ಇದೊಂದು ಅತ್ಯುತ್ತಮ ಮತ್ತು ಅಪರೂಪದ ಅವಕಾಶವಾಗಿದೆ.

ಶೈಕ್ಷಣಿಕ ಅರ್ಹತೆ ಮತ್ತು ಅನುಭವ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ತಾಂತ್ರಿಕ ವಿಭಾಗದಲ್ಲಿ ಬಿ.ಇ ಅಥವಾ ಬಿ.ಟೆಕ್ ಮತ್ತು ಎಂ.ಇ ಅಥವಾ ಎಂ.ಟೆಕ್ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಇದರೊಂದಿಗೆ ಅಧಿಸೂಚನೆಯಲ್ಲಿ ಸೂಚಿಸಿರುವಂತೆ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ನಿರ್ದಿಷ್ಟ ಕೆಲಸದ ಅನುಭವವನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ. ಅಭ್ಯರ್ಥಿಗಳು ಆಯ್ಕೆ ಮಾಡಿಕೊಳ್ಳುವ ಹುದ್ದೆಗೆ ಅನುಗುಣವಾಗಿ ಈ ಅನುಭವದ ಅವಧಿ ಮತ್ತು ಅರ್ಹತೆಗಳು ಬದಲಾಗುತ್ತವೆ.

ವಯೋಮಿತಿ ಮತ್ತು ಸಡಿಲಿಕೆಯ ನಿಯಮಗಳು:

ಜೂನ್ 1, 2026 ರ ಅನ್ವಯ ಅಭ್ಯರ್ಥಿಗಳ ಕನಿಷ್ಠ ವಯಸ್ಸು 31 ವರ್ಷ ಮತ್ತು ಗರಿಷ್ಠ ವಯಸ್ಸು 45 ವರ್ಷಗಳ ಒಳಗಿರಬೇಕು. ಸರ್ಕಾರದ ನಿಯಮಾವಳಿಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. ಇದರಲ್ಲಿ ಎಸ್‌ಸಿ ಮತ್ತು ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ (ಬಿಸಿ) ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳು, ರಕ್ಷಣಾ ಇಲಾಖೆಯ ಮಾಜಿ ಸೈನಿಕರಿಗೆ 5 ವರ್ಷಗಳು ಹಾಗೂ ಅಂಗವಿಕಲ ವರ್ಗದ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಅರ್ಜಿ ಸಲ್ಲಿಕೆ ಮತ್ತು ಆಯ್ಕೆ ವಿಧಾನ:

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಪಂಜಾಬ್ ಮತ್ತು ಸಿಂಧ್ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜೂನ್ 28 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಲು ಸೂಚಿಸಲಾಗಿದೆ. ಅಭ್ಯರ್ಥಿಗಳ ಅಂತಿಮ ಆಯ್ಕೆಯನ್ನು ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಮಾಡಲಾಗುತ್ತದೆ. ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ, ವೃತ್ತಿಪರ ಅನುಭವ ಮತ್ತು ಪರೀಕ್ಷೆಗಳಲ್ಲಿ ತೋರಿದ ಒಟ್ಟಾರೆ ಕಾರ್ಯಕ್ಷಮತೆಯ ಆಧಾರದ ಮೇಲೆ ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಿ ಆಕರ್ಷಕ ವೇತನದೊಂದಿಗೆ ಹುದ್ದೆ ನೀಡಲಾಗುತ್ತದೆ.

ಲಿಖಿತ ಪರೀಕ್ಷೆಯ ವಿವರವಾದ ಪಠ್ಯಕ್ರಮ:

ಈ ನೇಮಕಾತಿಯ ಲಿಖಿತ ಪರೀಕ್ಷೆಯು ಒಟ್ಟು 105 ನಿಮಿಷಗಳ ಕಾಲ ನಡೆಯಲಿದ್ದು, 100 ಅಂಕಗಳ 100 ಬಹು ಆಯ್ಕೆಯ (MCQ) ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದರಲ್ಲಿ ಅಭ್ಯರ್ಥಿಗಳ ಸಾಮರ್ಥ್ಯವನ್ನು ಮೂರು ವಿಭಾಗಗಳಲ್ಲಿ ಪರೀಕ್ಷಿಸಲಾಗುತ್ತದೆ. ಇಂಗ್ಲಿಷ್ ಭಾಷಾ ಜ್ಞಾನಕ್ಕೆ ಸಂಬಂಧಿಸಿದಂತೆ 20 ಅಂಕಗಳಿಗೆ 20 ಪ್ರಶ್ನೆಗಳನ್ನು ಮತ್ತು ಸಾಮಾನ್ಯ ಜಾಗೃತಿ (ಜನರಲ್ ಅವೇರ್ನೆಸ್) ವಿಷಯದಿಂದ 20 ಅಂಕಗಳಿಗೆ 20 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇನ್ನುಳಿದಂತೆ ಅತ್ಯಂತ ಪ್ರಮುಖವಾದ ಅಭ್ಯರ್ಥಿಯ ವೃತ್ತಿಪರ ಜ್ಞಾನ ಅಂದರೆ ಕೃತಕ ಬುದ್ಧಿಮತ್ತೆ ಮತ್ತು ತಾಂತ್ರಿಕ ವಿಭಾಗಕ್ಕೆ ಸಂಬಂಧಿಸಿದ ವಿಷಯದಿಂದ 60 ಅಂಕಗಳಿಗೆ 60 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ಉನ್ನತ ಮಟ್ಟದ ಉದ್ಯೋಗವನ್ನು ಬಯಸುವವರು ಈ ಪರೀಕ್ಷಾ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ಮುಂಚಿತವಾಗಿಯೇ ಸಿದ್ಧತೆ ನಡೆಸುವುದು ಸೂಕ್ತ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಇತಿಹಾಸ ಸೃಷ್ಟಿಸಿದ ಡೆಹ್ರಾಡೂನ್ ಐಎಂಎ: ಮೊದಲ ಬಾರಿಗೆ ಭಾರತೀಯ ಸೇನೆಗೆ ಅಧಿಕಾರಿಗಳಾಗಿ 9 ಮಹಿಳಾ ಕೆಡೆಟ್​ಗಳ ಸೇರ್ಪಡೆ – Kannada News | Historic IMA Dehradun: First Batch of 9 Women Cadets Joins Indian Army

ರಾಷ್ಟ್ರಪತಿ ದ್ರೌಪದಿ ಮುರ್ಮುImage Credit source: PTI

ಡೆಹ್ರಾಡೂನ್, ಜೂನ್ 14: ಭಾರತೀಯ ರಕ್ಷಣಾ ವಲಯದ ಇತಿಹಾಸದಲ್ಲೇ ಶನಿವಾರ ಅತ್ಯಂತ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮಹತ್ವದ ಮೈಲಿಗಲ್ಲೊಂದನ್ನು ಸ್ಥಾಪಿಸಲಾಗಿದೆ. ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿರುವ ಪ್ರತಿಷ್ಠಿತ ಭಾರತೀಯ ಮಿಲಿಟರಿ ಅಕಾಡೆಮಿ (IMA) ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಕೆಡೆಟ್‌ಗಳ ಬ್ಯಾಚ್‌ಗೆ ತರಬೇತಿ ನೀಡಿ, ಒಂಬತ್ತು ಮಹಿಳೆಯರನ್ನು ಭಾರತೀಯ ಸೇನೆಗೆ ಅಧಿಕಾರಿಗಳನ್ನಾಗಿ ಉಡುಗೊರೆ ನೀಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿ, ಕೆಡೆಟ್‌ಗಳ ಆಕರ್ಷಕ ಮೆರವಣಿಗೆಯ ಗೌರವ ವಂದನೆಯನ್ನು ಸ್ವೀಕರಿಸಿದರು.

1932ರಲ್ಲಿ ಐಎಂಎ ಅಸ್ತಿತ್ವಕ್ಕೆ ಬಂದಿತ್ತು. ಅಂದಿನಿಂದಲೂ ಪುರುಷ ಅಧಿಕಾರಿಗಳು ತರಬೇತಿ ಪಡೆಯುತ್ತಿದ್ದರು. ಇದೇ ಮೊದಲ ಬಾರಿ ಮಹಿಳಾ ಸೇನಾಧಿಕಾರಿಗಳು ತರಬೇತಿ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ  ರಾಷ್ಟ್ರಪತಿ ಮುರ್ಮು,  ಐಎಂಎಯಿಂದ ಮಹಿಳಾ ಕೆಡೆಟ್‌ಗಳು ಉತ್ತೀರ್ಣರಾಗುತ್ತಿರುವುದು ಕೇವಲ ರಕ್ಷಣಾ ಪಡೆಗಳ ಸಾಧನೆಯಷ್ಟೇ ಅಲ್ಲ, ಇದು ಭಾರತದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯ ಬದಲಾಗುತ್ತಿರುವ ಹೆಮ್ಮೆಯ ಚಿತ್ರಣವಾಗಿದೆ ಎಂದು ಶ್ಲಾಘಿಸಿದರು. ಅಲ್ಲದೆ, ಹೊಸ ಅಧಿಕಾರಿಗಳು 1.4 ಶತಕೋಟಿ ಭಾರತೀಯರ ನಂಬಿಕೆಯ ರಕ್ಷಕರಾಗಿದ್ದಾರೆ ಎಂದು ನೆನಪಿಸಿದರು.

ಸೇನೆಗೆ ಸೇರ್ಪಡೆಯಾದ ಒಂಬತ್ತು ಮಹಿಳಾ ಅಧಿಕಾರಿಗಳಲ್ಲಿ ಹರಿಯಾಣದ ಸೋನಿಪತ್ ಜಿಲ್ಲೆಯ ಶೀತಲ್ ಮತ್ತು ಶಾನನ್ ಢಾಕಾ ಅವರ ಯಶೋಗಾಥೆ ಇಡೀ ದೇಶಕ್ಕೆ ಮಾದರಿಯಾಗಿದೆ. ಶೀತಲ್ ಅವರು ತಮ್ಮ ಇಡೀ ಜಿಲ್ಲೆಯಲ್ಲೇ ಮೊದಲ ಮಹಿಳಾ ಮಿಲಿಟರಿ ಅಧಿಕಾರಿಯಾಗುವ ಮೂಲಕ ಇತಿಹಾಸ ಬರೆದಿದ್ದಾರೆ. ಉದ್ಯಮಿ ಅಶೋಕ್ ಕುಮಾರ್ ಹಾಗೂ ಗೃಹಿಣಿ ಮುಖೇಶ್ ದೇವಿ ಅವರ ಪುತ್ರಿಯಾದ ಶೀತಲ್, ತಾವು ಸೇನೆಗೆ ಸೇರುವ ನಿರ್ಧಾರ ಮಾಡಿದಾಗ ಸಮಾಜದಲ್ಲಿ ತಮ್ಮನ್ನು ಕೆಣಕಿದ ಮತ್ತು ಸಂಶಯದಿಂದ ನೋಡಿದ ಎಲ್ಲ ಟೀಕಾಕಾರರಿಗೂ ಅವರು ಉತ್ತರ ನೀಡಿದ್ದಾರೆ.

ಮತ್ತಷ್ಟು ಓದಿ:  ಭಯೋತ್ಪಾದನೆ ನಿಲ್ಲಿಸದಿದ್ದರೆ ಇತಿಹಾಸ, ಭೂಪಟದಿಂದ ಪಾಕಿಸ್ತಾನ ಮರೆಯಾಗಲಿದೆ: ಭಾರತೀಯ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!

ಈ ಬಾರಿಯ ಭವ್ಯ ಪರೇಡ್‌ನಲ್ಲಿ ಒಟ್ಟು 515 ಕೆಡೆಟ್‌ಗಳು ಯಶಸ್ವಿಯಾಗಿ ಉತ್ತೀರ್ಣರಾಗಿ ಸೇನೆಗೆ ಸೇರ್ಪಡೆಗೊಂಡಿದ್ದಾರೆ. ಇದರಲ್ಲಿ ನಿಯಮಿತ ಕೋರ್ಸ್, ತಾಂತ್ರಿಕ ಪ್ರವೇಶ ಯೋಜನೆ (TES) ಮತ್ತು ತಾಂತ್ರಿಕ ಪದವಿ ಕೋರ್ಸ್‌ಗಳ ಭಾರತೀಯ ಯುವಕರ ಜೊತೆಗೆ, ಭಾರತದ ಸ್ನೇಹ ರಾಷ್ಟ್ರಗಳಾದ ವಿವಿಧ ವಿದೇಶಗಳ 34 ಕೆಡೆಟ್‌ಗಳು ಸಹ ಪದವಿ ಪಡೆದರು. ಇದು ವಿಶ್ವಸಂಸ್ಥೆ ಮತ್ತು ಜಾಗತಿಕ ಮಟ್ಟದಲ್ಲಿ ಭಾರತ ಹೊಂದಿರುವ ಶಾಂತಿ ಹಾಗೂ ರಕ್ಷಣಾ ಬದ್ಧತೆಗೆ ಸಾಕ್ಷಿಯಾಗಿದೆ.

ಐಎಂಎ ಮೈದಾನದಲ್ಲಿ ನಡೆದ ಈ ಅದ್ಭುತ ಸಮಾರಂಭದಲ್ಲಿ ಉತ್ತರಾಖಂಡದ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಗುರ್ಮೀತ್ ಸಿಂಗ್ ಮತ್ತು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಹಲವು ಉನ್ನತ ಸೇನಾ ಅಧಿಕಾರಿಗಳು ಉಪಸ್ಥಿತರಿದ್ದು, ಹೊಸ ಅಧಿಕಾರಿಗಳನ್ನು ಪ್ರೋತ್ಸಾಹಿಸಿದರು.

ಶತಮಾನದ ಇತಿಹಾಸವಿರುವ ಐಎಂಎನ ಈ ಹೆಜ್ಜೆಯು ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಭಾರತೀಯ ಸೇನೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಲು ಮತ್ತು ದೇಶದ ಸಾರ್ವಭೌಮತ್ವವನ್ನು ಕಾಪಾಡಲು ಗಡಿಯ ಮುಂಚೂಣಿಯಲ್ಲಿ ನಿಲ್ಲಲು ಒಂದು ಹೊಸ ದಿಕ್ಸೂಚಿಯಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version