ಸ್ಲೋವಾಕಿಯಾದಲ್ಲಿ 11 ಒಪ್ಪಂದಗಳಿಗೆ ಪ್ರಧಾನಿ ಮೋದಿ ಸಹಿ; 3 ಪ್ರಮುಖ ಘೋಷಣೆಗಳೇನು? – Kannada News | PM Modi unveils expanded India Slovakia partnership Signs 11 Agreements

ನವದೆಹಲಿ, ಜೂನ್ 15: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi Slovakia Visit) ಸ್ಲೋವಾಕಿಯಾಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಎರಡೂ ದೇಶಗಳು ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಎತ್ತರಕ್ಕೆ ಏರಿಸಿದವು. ಉಭಯ ದೇಶಗಳ ಪ್ರಧಾನಿಗಳು 11 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ ಮತ್ತು ಮೂರು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಅದರಲ್ಲಿ ಅತ್ಯಂತ ಮಹತ್ವದ ನಿರ್ಧಾರವೆಂದರೆ ಎರಡೂ ದೇಶಗಳ ಸಂಬಂಧಗಳನ್ನು ಸಮಗ್ರ ಪಾಲುದಾರಿಕೆಗೆ ಏರಿಸುವುದು. ಎರಡೂ ದೇಶಗಳ ನಡುವಿನ ಮಾತುಕತೆಯ ನಂತರ ಬ್ರಾಟಿಸ್ಲಾವಾದಲ್ಲಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಫಿಕೊ ಅವರ ಆತ್ಮೀಯ ಸ್ವಾಗತಕ್ಕೆ ಧನ್ಯವಾದ ಅರ್ಪಿಸಿದರು ಮತ್ತು ಅವರನ್ನು ಭಾರತದ ಆಪ್ತ ಸ್ನೇಹಿತ ಎಂದು ಬಣ್ಣಿಸಿದರು.

ಭಾರತ ಮತ್ತು ಸ್ಲೋವಾಕಿಯಾ ನಡುವಿನ ಬಾಂಧವ್ಯವು ಪರಸ್ಪರ ನಂಬಿಕೆ ಮತ್ತು ಸಮಾನ ಮೌಲ್ಯಗಳ ಮೇಲೆ ನಿಂತಿದೆ. ಇಂದಿನ ನಮ್ಮ ಮಾತುಕತೆಯು ಕೇವಲ ಸೌಹಾರ್ದ ಭೇಟಿಯಲ್ಲ, ಇದು ಭವಿಷ್ಯದ ದಿಕ್ಸೂಚಿಯಾಗಿದೆ. ನಾವು ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ್ದೇವೆ, ಆದರೆ ಈಗ ನಮ್ಮ ಆಕಾಂಕ್ಷೆಗಳು ಮತ್ತಷ್ಟು ದೊಡ್ಡದಾಗಿವೆ ಎಂದು ಮೋದಿ ಹೇಳಿದರು. ಸ್ಲೋವಾಕಿಯಾ ರಾಜಧಾನಿ ಬ್ರಾಟಿಸ್ಲಾವಾದಲ್ಲಿ ನಡೆದ ಉನ್ನತ ಮಟ್ಟದ ನಿಯೋಗದ ಸಭೆಯ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಕ್ಷಣೆ, ಹಸಿರು ಇಂಧನ ಮತ್ತು ಮುಕ್ತ ವ್ಯಾಪಾರ ಸೇರಿದಂತೆ ಹಲವು ವಲಯಗಳಲ್ಲಿ ಭಾರತ ಮತ್ತು ಸ್ಲೋವಾಕಿಯಾ ನಡುವಿನ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ಅನಾವರಣಗೊಳಿಸಿದರು.

ಇದನ್ನೂ ಓದಿ: ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಭಾರತದ ಸ್ವಾಗತ; ಪಶ್ಚಿಮ ಏಷ್ಯಾದಲ್ಲಿ ಶಾಂತಿಗೆ ಕರೆ ನೀಡಿದ ಮೋದಿ

ಈ ಭೇಟಿಯ ಮಹತ್ವವನ್ನು ಒತ್ತಿ ಹೇಳುತ್ತಾ, ಪ್ರಧಾನಿ ಮೋದಿ ಅವರು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಯೋಜನೆಗಳನ್ನು ಪ್ರಕಟಿಸಿದರು. “ಇದು ಸ್ಲೋವಾಕಿಯಾಕ್ಕೆ ಭಾರತೀಯ ಪ್ರಧಾನಿಯೊಬ್ಬರು ನೀಡುತ್ತಿರುವ ಮೊದಲ ಭೇಟಿ. ಈ ಐತಿಹಾಸಿಕ ಸಂದರ್ಭದಲ್ಲಿ ನಮ್ಮ ಸಂಬಂಧವನ್ನು ಸಮಗ್ರ ಪಾಲುದಾರಿಕೆಗೆ ಏರಿಸಲು ನಾವು ನಿರ್ಧರಿಸಿದ್ದೇವೆ. ಇದು ನಮ್ಮ ನಂಬಿಕೆ, ಆದ್ಯತೆಗಳು ಮತ್ತು ಭವಿಷ್ಯವನ್ನು ಸಂಕೇತಿಸುತ್ತದೆ” ಎಂದು ಅವರು ಹೇಳಿದರು.

ಪ್ರಮುಖ ಒಪ್ಪಂದಗಳು ಮತ್ತು ನಿರ್ಧಾರಗಳು:

  • ಕಾರ್ಮಿಕ ವಲಸೆಯನ್ನು ಉತ್ತೇಜಿಸಲು ಭಾರತ ಮತ್ತು ಸ್ಲೋವಾಕಿಯಾ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
  • ರಕ್ಷಣಾ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸಲು ಉದ್ದೇಶ ಪತ್ರ (LoI) ಗೆ ಸಹಿ ಹಾಕಲಾಯಿತು.
  • ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಪಾಲುದಾರಿಕೆಯನ್ನು ಬಲಪಡಿಸಲು ಒಪ್ಪಂದಕ್ಕೆ ಬರಲಾಯಿತು.
  • ಉನ್ನತ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಸಹಕಾರವನ್ನು ಹೆಚ್ಚಿಸಲು ಒಪ್ಪಂದಕ್ಕೆ ಸಹಿ ಹಾಕಲಾಯಿತು.
  • ಚಲನಚಿತ್ರ, ದೂರದರ್ಶನ ಮತ್ತು ಇತರ ಸೃಜನಶೀಲ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಶ್ರವ್ಯ-ದೃಶ್ಯ ಸೃಷ್ಟಿಯ ಕುರಿತು ಒಪ್ಪಂದಕ್ಕೆ ಬರಲಾಯಿತು.
  • ಸ್ಲೋವಾಕಿಯಾದ ಕೊಸಿಸ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕೃತಕ ಬುದ್ಧಿಮತ್ತೆಯ ಕುರಿತು ಮೊದಲ ಐಸಿಸಿಆರ್ ಚೇರ್ ಅನ್ನು ಸ್ಥಾಪಿಸಲು ನಿರ್ಧರಿಸಲಾಯಿತು.
  • ಕ್ವಾಂಟಮ್ ಸಂವಹನ ಮತ್ತು ನಿರ್ಣಾಯಕ ಮೂಲಸೌಕರ್ಯ ರಕ್ಷಣೆ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸುವ ಬಗ್ಗೆ ಒಪ್ಪಂದವಾಯಿತು.
  • ಪುಣೆಯ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ, ಆಯುಷ್ ಸಚಿವಾಲಯ ಮತ್ತು ಸ್ಲೋವಾಕಿಯಾದ ಹೆಲ್ತ್ ಸ್ಪಾ ಪಿಯಸ್ಟನಿ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
  • ಐಐಟಿ ದೆಹಲಿ ಮತ್ತು ಸ್ಲೋವಾಕ್ ತಾಂತ್ರಿಕ ವಿಶ್ವವಿದ್ಯಾಲಯವು ವಿದ್ಯಾರ್ಥಿ ವಿನಿಮಯ, ವಿದ್ಯಾರ್ಥಿವೇತನಗಳು ಮತ್ತು ಜಂಟಿ ಸಂಶೋಧನಾ ಕಾರ್ಯಕ್ರಮಗಳ ಕುರಿತು ಒಪ್ಪಂದಕ್ಕೆ ಸಹಿ ಹಾಕಿದವು.
  • ಎರಡೂ ದೇಶಗಳ ಪ್ರವಾಸ ನಿರ್ವಾಹಕ ಸಂಸ್ಥೆಗಳ ನಡುವೆ ಪ್ರವಾಸೋದ್ಯಮ ಸಹಕಾರವನ್ನು ಉತ್ತೇಜಿಸಲು ಒಪ್ಪಂದಕ್ಕೆ ಬರಲಾಯಿತು.
  • ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ (INSA) ಮತ್ತು ಸ್ಲೋವಾಕ್ ಅಕಾಡೆಮಿ ಆಫ್ ಸೈನ್ಸಸ್ (SAS) ನಡುವೆ ವೈಜ್ಞಾನಿಕ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಇದನ್ನೂ ಓದಿ: Video: ಸ್ಲೋವಾಕಿಯಾದಲ್ಲಿ ಬ್ರೆಡ್ ಮತ್ತು ಉಪ್ಪಿನೊಂದಿಗೆ ಪ್ರಧಾನಿ ಮೋದಿಗೆ ಸ್ವಾಗತ

3 ಪ್ರಮುಖ ಘೋಷಣೆಗಳು:

  • ಭಾರತ ಮತ್ತು ಸ್ಲೋವಾಕಿಯಾ ತಮ್ಮ ಸಂಬಂಧಗಳನ್ನು ಸಮಗ್ರ ಪಾಲುದಾರಿಕೆಯಾಗಿ ಉನ್ನತೀಕರಿಸುವುದಾಗಿ ಘೋಷಿಸಲಾಯಿತು.
  • ಭಯೋತ್ಪಾದನೆಯನ್ನು ಎದುರಿಸುವಲ್ಲಿ ಸಹಕಾರವನ್ನು ಹೆಚ್ಚಿಸಲು ಭಯೋತ್ಪಾದನೆ ನಿಗ್ರಹದ ಕುರಿತು ಜಂಟಿ ಕಾರ್ಯಪಡೆಯನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಲಾಯಿತು.
  • ನಾಗರಿಕ ಸೇವೆಗಳು ಮತ್ತು ವೀಸಾ ಸಂಬಂಧಿತ ವಿಷಯಗಳಲ್ಲಿ ಸಹಕಾರಕ್ಕಾಗಿ ಕಾನ್ಸುಲರ್ ಮಾತುಕತೆಯನ್ನು ಪ್ರಾರಂಭಿಸಲು ನಿರ್ಧರಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:21 pm, Mon, 15 June 26

Source link

ಅನುಮಾನಾಸ್ಪದ ರೀತಿಯಲ್ಲಿ ‘ಮಜಾ ಭಾರತ’ ಹಾಸ್ಯ ಕಲಾವಿದ ಸಿದ್ದಾರ್ಥ ಪರಸನೂರು ನಿಧನ – Kannada News | Majaa Bharatha and Comedy Kiladigalu fame Siddartha Parasanura found dead suspiciously in Humnabad

ಕಿರುತೆರೆಯ ಕಾಮಿಡಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದ ಹಾಸ್ಯ ಕಲಾವಿದ ಸಿದ್ದಾರ್ಥ ಪರಸನೂರು (Siddartha Parasanura) ಅವರು ನಿಧನರಾಗಿದ್ದಾರೆ. ಅವರ ಅಭಿಮಾನಿಗಳಿಗೆ, ಆಪ್ತರಿಗೆ ಮತ್ತು ಕುಟುಂಬದವರಿಗೆ ಈ ಸಾವಿನ ಸುದ್ದಿ ತೀವ್ರ ಆಘಾತ ನೀಡಿದೆ. ಸಿದ್ದಾರ್ಥ ಅವರ ಸಾವಿನ ಬಗ್ಗೆ ಒಂದಷ್ಟು ಅನುಮಾನಗಳು ಮೂಡಿವೆ. ಅವರ ನಿಧನಕ್ಕೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ‘ಮಜಾ ಭಾರತ’ (Majaa Bharatha) ಮುಂತಾದ ಶೋಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಸಿದ್ದಾರ್ಥ ಪರಸನೂರು ಅವರು ಅನುಮಾನಾಸ್ಪದವಾಗಿ ನಿಧನರಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹುಮ್ನಾಬಾದ್ ಪಟ್ಟಣದ ಟೀಚರ್ ಕಾಲೋನಿಯಲ್ಲಿ ಸಿದ್ದಾರ್ಥ ಪರಸನೂರು ಅವರು ವಾಸಿಸುತ್ತಿದ್ದರು. ಮೂರು ದಿನದ ಹಿಂದೆ ಅವರು ಮೃತಪಟ್ಟಿರುವ ಸಾಧ್ಯತೆ ಇದೆ. ಈಗ ಅವರ ಮೃತದೇಹ ಪತ್ತೆ ಆಗಿದೆ. ಹುಮ್ನಾಬಾದ್ ಪಟ್ಟಣದ ಹೊರವಲಯದಲ್ಲಿನ ಖಾಲಿ‌ ಜಾಗದಲ್ಲಿ ಮೃತ ದೇಹ ಪತ್ತೆ ಆಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಸಿದ್ದಾರ್ಥ ಪರಸನೂರು ಅವರ ಮೃತ ದೇಹವನ್ನು ಗಮನಿಸಿದರೆ ಇದು ಸಹಜ ಸಾವಲ್ಲ ಎಂಬ ಅಭಿಪ್ರಾಯ ಮೇಲ್ನೋಟಕ್ಕೆ ಮೂಡುತ್ತದೆ. ಕರೆಂಟ್ ಹಿಡಿದು ಮೃತಪಟ್ಟಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹುಮ್ನಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನುಮಾನ ಬರುವ ರೀತಿಯಲ್ಲಿ ಶವ ಪತ್ತೆ ಆಗಿರುವುದರಿಂದ ಹುಮ್ನಾಬಾದ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ: ನಿಧನರಾಗಿ ಆರೇ ವರ್ಷಕ್ಕೆ ಸುಶಾಂತ್ ಸಿಂಗ್ ರಜಪೂತ್ ಯಾರಿಗೂ ನೆನಪಿಲ್ಲ; ಪುಣ್ಯತಿಥಿಗೆ ಬಾಲಿವುಡ್ ಮೌನ

ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಾದ ‘ಕಾಮಿಡಿ ಕಿಲಾಡಿಗಳು’ ಹಾಗೂ ‘ಮಜಾ ಭಾರತ’ ಶೋನಲ್ಲಿ ಸಿದ್ದಾರ್ಥ ಪರಸನೂರು ಭಾಗವಹಿಸಿದ್ದರು. ತಮ್ಮ ಅಭಿನಯದ ಮೂಲಕ ಅವರು ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದರು. ಈಗ ಅವರ ನಿಧನದಿಂದ ಅಭಿಮಾನಿಗಳು ಮತ್ತು ಆಪ್ತರಿಗೆ ನೋವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮದ್ಯ ಮಾರಾಟದಲ್ಲಿ ದಾಖಲೆ ಬರೆದ ಅಬಕಾರಿ ಇಲಾಖೆ: 30 ದಿನದಲ್ಲಿ ಸರ್ಕಾರಕ್ಕೆ ಬಂದ ಆದಾಯ ಎಷ್ಟು ಗೊತ್ತಾ? – Kannada News | Karnataka Liquor Sales Surge: Excise Revenue Reaches Record 3,509 Crore in May–June

ಬೆಂಗಳೂರು, ಜೂನ್​​ 15: ರಾಜ್ಯದಲ್ಲಿ ಕಳೆದ 30 ದಿನಗಳಲ್ಲಿ ಆಗಿರುವಷ್ಟು ಮದ್ಯದ (liquor) ಮಾರಾಟ ಈ ಹಿಂದೆ ಎಂದೂ ಆಗಿರಲಿಲ್ಲವಂತೆ. ಮೇ ಮತ್ತು ಜೂನ್ ತಿಂಗಳ ಮದ್ಯದ ವ್ಯಾಪಾರದಿಂದ ರಾಜ್ಯ ಸರ್ಕಾರಕ್ಕೆ ಬರೋಬ್ಬರಿ ಮೂರೂವರೆ ಸಾವಿರ ಕೋಟಿ ರೂಪಾಯಿಗೂ ಅಧಿಕ ಆದಾಯ ಹರಿದುಬಂದಿದೆ. ಹೊಸ ಅಬಕಾರಿ ನೀತಿ ಜಾರಿಗೆ ಬಂದ ಕೇವಲ ಒಂದೇ ತಿಂಗಳಲ್ಲಿ ಅಬಕಾರಿ ಇಲಾಖೆಯ (Excise Department) ಖಜಾನೆಗೆ ಕೋಟಿ ಕೋಟಿ ಹರಿದುಬಂದಿದೆ.

ಮುಖ್ಯಾಂಶಗಳು

  • ಮದ್ಯ ಮಾರಾಟದಲ್ಲಿ ಹಳೆ ದಾಖಲೆಗಳೆಲ್ಲ ಉಡೀಸ್​
  • ಹೊಸ ಅಬಕಾರಿ ನೀತಿಯಿಂದ ಹರಿದುಬಂತು ಕೋಟಿ ಕೋಟಿ ಹಣ
  • ಕೇವಲ 30 ದಿನದಲ್ಲಿ ಬರೋಬ್ಬರಿ 3,500 ಕೋಟಿ ಆದಾಯ!

ರಾಜ್ಯದಲ್ಲಿ ಕಳೆದ 30 ದಿನದಲ್ಲಿ ದಾಖಲೆಯ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ಹೊಸ ಮದ್ಯ ತೆರಿಗೆಯಿಂದ ಅಬಕಾರಿ ಇಲಾಖೆಗೆ ದಾಖಲೆಯ ಆದಾಯ ಹರಿದು ಬಂದಿದೆ. ಮೇ ದಿಂದ ಜೂನ್​ ತಿಂಗಳ ಅವಧಿಯಲ್ಲಿ ವ್ಯಾಪಾರದಿಂದ ಹಳೆಯ ಎಲ್ಲಾ ದಾಖಲೆಗಳನ್ನು ಅಬಕಾರಿ ಇಲಾಖೆ ಮುರಿದು ಹಾಕಿದೆ. ಇದರಿಂದ ಒಂದೇ ತಿಂಗಳಲ್ಲಿ ಮೂರುವರೆ ಸಾವಿರ ಕೋಟಿ ರೂ ವ್ಯಾಪಾರವಾಗಿದೆ. ಈ ಹಿನ್ನೆಲೆ ಬಾರ್ ಆ್ಯಂಡ್​ ರೆಸ್ಟೋರೆಂಟ್ ಮಾಲೀಕರಿಗೂ ಭರ್ಜರಿ ಆದಾಯ ಆಗುತ್ತಿದೆ.

ಮದ್ಯ ಮಾರಾಟಗಾರರು ಹೇಳುವುದೇನು?

ಆಲ್ಕೋಹಾಲ್ ಇನ್ ಬೆವರೇಜ್ ಅಂಶವನ್ನು ಆಧರಿಸಿ ಮದ್ಯಕ್ಕೆ ತೆರಿಗೆ ವಿಧಿಸುವ ಹೊಸ ಅಬಕಾರಿ ನೀತಿಯು ದಾಖಲೆಯ ಆರಂಭವನ್ನು ನೀಡಿದ್ದು, ಇದು ಜಾರಿಗೆ ಬಂದ ಕೇವಲ ಒಂದು ತಿಂಗಳೊಳಗೆ 3,509 ಕೋಟಿ ರೂ ಆದಾಯ ಗಳಿಸಿದೆ. ಈ ಬಗ್ಗೆ ಮಾತನಾಡಿದ ಮದ್ಯ ಮಾರಾಟಗಾರ ಗಿರೀಶ್​​​, 30 ದಿನದಲ್ಲಿ 20% ರಷ್ಟು ವ್ಯಾಪಾರ ಹೆಚ್ಚಾಗಿದೆ ಎಂದಿದ್ದಾರೆ.

ಕಳೆದ ವರ್ಷಕ್ಕಿಂತ ಶೇಕಡಾ 60 ರಷ್ಟು ಹೆಚ್ಚಳ

ಇನ್ನು ಹೊಸ ತೆರಿಗೆ ವ್ಯವಸ್ಥೆಯಡಿಯಲ್ಲಿ ಕಡಿಮೆ ಬೆಲೆಯ ಮದ್ಯದ ಬ್ರಾಂಡ್‌ಗಳ ಬೆಲೆ ಏರಿಕೆಯಾಗಿದ್ದರೂ ಸಹ, ಮದ್ಯದ ಮಾರಾಟಕ್ಕೆ ಯಾವುದೇ ಬ್ರೇಕ್ ಬಿದ್ದಿಲ್ಲ. ವಿಶೇಷವಾಗಿ ಈ ಬಾರಿ ಬಿಯರ್ ಭಾರಿ ಪ್ರಮಾಣದಲ್ಲಿ ಮಾರಾಟವಾಗಿದೆ. ಕಳೆದ ವರ್ಷ ಮೇ 11 ರಿಂದ ಜೂನ್ 11ರ ಅವಧಿಗೆ ಹೋಲಿಸಿದರೆ, ಈ ವರ್ಷ ಇದೇ ಅವಧಿಯಲ್ಲಿ ಬಿಯರ್ ಮಾರಾಟ ಶೇಕಡಾ 59.4 ರಷ್ಟು ಹೆಚ್ಚಾಗಿದ್ದು, ಬರೋಬ್ಬರಿ 403.1 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಇತ್ತ ಐಎಂಎಲ್ ಮದ್ಯದ ಮಾರಾಟ ಕೂಡ ಹೆಚ್ಚಾಗಿದ್ದು, 443.5 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3,022 ಕೋಟಿ ರೂ ವ್ಯಾಪಾರವಾಗಿದ್ದರೆ, ಈ ವರ್ಷ ಅದು 3,509 ಕೋಟಿ ರೂ.ಗೆ ಜಂಪ್ ಆಗಿದೆ.

ಇದನ್ನೂ ಓದಿ: ಪ್ರೀಮಿಯಂ ಮದ್ಯ, ಬಿಯರ್ ದರ ಇಳಿಕೆಯಾದ್ರೂ ಹಳೆ ದರದಲ್ಲೇ ಸೇಲ್: ಮದ್ಯ ಮಾರಾಟಗಾರರ ವಿರುದ್ಧ ಎಣ್ಣೆ ಪ್ರಿಯರ ಆಕ್ರೋಶ

ಒಟ್ಟಿನಲ್ಲಿ ಮೇ- ಜೂನ್​ ತಿಂಗಳಲ್ಲಿ ರಾಜ್ಯದಲ್ಲಿ ವಿಪರೀತ ಬಿಸಿಲು ಇದ್ದ ಕಾರಣವೋ ಅಥವಾ ಯುದ್ಧದಿಂದ ಸರಿಯಾಗಿ ಕೆಲಸ ಕಾರ್ಯಗಳಿಲ್ಲದೆಯೇ ಗೊತ್ತಿಲ್ಲ. ಆದರೆ ಮದ್ಯಪ್ರಿಯರು ಮಾತ್ರ ಮುಗಿಬಿದ್ದು ಎಣ್ಣೆ ಖರೀದಿಸಿರುವುದು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

2028ರ ಎಲೆಕ್ಷನ್ ಗೆಲ್ಲಲು ಜೋಶಿಗೆ ಬಿಜೆಪಿ ಸಾರಥ್ಯ? ಇದಕ್ಕೆ ಅವರು ಹೇಳಿದ್ದೇನು? – Kannada News | Pralhad Joshi Reacts about His Name For Karnataka BJP President Post

ಬೆಂಗಳೂರು, (ಜೂನ್ 15): ಕೆಲ ತಿಂಗಳುಗಳಿಂದ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು ಬದಲಾವಣೆ ಮಾಡುತ್ತಾರೆಂಬ ಚರ್ಚೆಗಳು ನಡೆಯುತ್ತಲೇ ಇವೆ. ನಿತಿನ್ ನಬಿನ್ ಅವರು ಬಿಜೆಪಿಯ ರಾಷ್ಟ್ರಾಧ್ಯಕ್ಷರಾದ ಬಳಿಕ ನಾಲ್ಕು ರಾಜ್ಯಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಲಾಗಿತ್ತು. ಆದರೆ, ಕರ್ನಾಟದ ವಿಚಾರದಲ್ಲಿ ತನ್ನ ಸಸ್ಪೆನ್ಸ್’ ಅನ್ನು ಮುಂದುವರಿಸಿತ್ತು. ಆದ್ರೆ, ನಿತಿನ್ ನಬಿನ್ ಅವರು ರಾಜ್ಯಕ್ಕೆ ಬಂದು ಹೋದ ಬಳಿಕ ಮತ್ತೆ ರಾಜ್ಯಾಧ್ಯಕ್ಷರ ಬದಲಾವಣೆ ನಡೆಯಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಹಾಗೂ ವಿ ಸೋಮಣ್ಣ ಹೆಸರುಗಳು ಕೇಳಿರುತ್ತಿವೆ. ಇನ್ನು ಈ ಬಗ್ಗೆ ಟಿವಿ9 ಸಂದರ್ಶನದಲ್ಲಿ ಸ್ವತಃ ಪ್ರಲ್ಹಾದ್ ಜೋಶಿ ಅವರೇ ಮಾತನಾಡಿದ್ದು, ಏನೆಲ್ಲಾ ಹೇಳಿದ್ದಾರೆ ಕೇಳಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಾಲು ನೋವಿಗೆ ಐಸ್ ವಾಟರ್ ಬಾಟಲ್ ರೋಲಿಂಗ್; ಇದು ನಿಜವಾಗಿಯೂ ಪರಿಹಾರ ನೀಡುತ್ತಾ? – Kannada News | Foot Pain Relief at Home: How Ice Bottle Rolling Works

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ, ಐಸ್ ನೀರಿನಿಂದ ತುಂಬಿದ ಬಾಟಲಿಯನ್ನು ಕಾಲಿನ ಕೆಳಗೆ ಇಟ್ಟು ರೋಲ್ ಮಾಡಿದರೆ ಕಾಲು ನೋವು ಅಥವಾ ಪಾದದ ನೋವು (Foot Pain) ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ವೈದ್ಯರು ಹೇಳುವ ಪ್ರಕಾರ, ಇದು “ಕೋಲ್ಡ್ ಥೆರಪಿ” ಮತ್ತು ಮಸಾಜ್‌, ಎರಡರ ಸಂಯೋಜನೆಯಂತೆ ಕೆಲಸ ಮಾಡುತ್ತದೆ. ಐಸ್‌ನ ತಂಪು ಕಾಲಿಗೆ ತಾಗಿದಾಗ ಆ ಭಾಗದ ರಕ್ತನಾಳಗಳು ತಾತ್ಕಾಲಿಕವಾಗಿ ಸಂಕೋಚಗೊಳ್ಳುತ್ತವೆ. ಇದರಿಂದ ಊತ ಮತ್ತು ಉರಿಯೂತ ಕಡಿಮೆಯಾಗಲು ಸಹಾಯವಾಗುತ್ತದೆ. ಜೊತೆಗೆ ತಂಪಿನಿಂದ ನರಗಳು ಸ್ವಲ್ಪ ಕೂಲ್ ಆಗುವುದರಿಂದ ನೋವಿನ ಸಂದೇಶಗಳು ಮೆದುಳಿಗೆ ಕಡಿಮೆ ಪ್ರಮಾಣದಲ್ಲಿ ಸಾಗುತ್ತವೆ. ಪರಿಣಾಮವಾಗಿ ತಕ್ಷಣದ ಆರಾಮ ಸಿಗಬಹುದು. ಆದರೆ ಯಾವ ರೀತಿ ನೋವಿದ್ದವರಿಗೆ ಉಪಯುಕ್ತ, ಎಲ್ಲರೂ ಬಳಸಬಹುದೇ, ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವಿಶೇಷವಾಗಿ ಪ್ಲಾಂಟರ್ ಫ್ಯಾಸಿಯಾಟಿಸ್ (Plantar Fasciitis) ಅಥವಾ ಪಾದದ ತಳಭಾಗದ ನೋವಿನಿಂದ ಬಳಲುವವರಿಗೆ ಈ ವಿಧಾನ ಉಪಯುಕ್ತವಾಗಬಹುದು. ಬಾಟಲಿಯ ಗೋಲಾದ ಆಕಾರವು ಪಾದದ ಸ್ನಾಯುಗಳನ್ನು ಮೃದುವಾಗಿ ಸ್ಟ್ರೆಚ್ ಮಾಡುವಲ್ಲಿ ಸಹಕಾರಿ. ದಿನಪೂರ್ತಿ ನಿಂತು ಕೆಲಸ ಮಾಡುವವರು ಅಥವಾ ಹೆಚ್ಚು ನಡೆಯುವವರಿಗೂ ಇದು ಸ್ವಲ್ಪ ಮಟ್ಟಿನ ಪರಿಹಾರ ನೀಡಬಹುದು.

ಯಾರಿಗೆ ಅಪಾಯಕಾರಿ?

ಈ ವಿಧಾನ ಬಳಸುವಾಗ ಕೆಲವು ಮುನ್ನೆಚ್ಚರಿಕೆಗಳು ಅಗತ್ಯ. ಐಸ್ ಬಾಟಲಿಯನ್ನು ನೇರವಾಗಿ ಚರ್ಮದ ಮೇಲೆ ರೋಲ್ ಮಾಡಿದರೆ “ಫ್ರಾಸ್ಟ್ ಬೈಟ್” ಅಥವಾ ಚರ್ಮ ಹಾನಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಸಾಕ್ಸ್ ಧರಿಸುವುದು ಅಥವಾ ಬಾಟಲಿಗೆ ಸಣ್ಣ ಬಟ್ಟೆ ಸುತ್ತುವುದು ಉತ್ತಮ. ಒಂದೇ ಬಾರಿ 10 ರಿಂದ 15 ನಿಮಿಷಕ್ಕಿಂತ ಹೆಚ್ಚು ಕಾಲ ಈ ವಿಧಾನವನ್ನು ಬಳಸಬಾರದು. ಮಧುಮೇಹ, ನರಗಳ ದುರ್ಬಲತೆ ಅಥವಾ ರಕ್ತಪ್ರಸರಣ ಸಮಸ್ಯೆ (Peripheral Artery Disease) ಇರುವವರು ವೈದ್ಯರ ಸಲಹೆಯಿಲ್ಲದೆ ಇದನ್ನು ಪ್ರಯತ್ನಿಸಬಾರದು. ಏಕೆಂದರೆ ಇವರಿಗೆ ತಂಪಿನ ಪರಿಣಾಮ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಒಟ್ಟಾರೆ, ಐಸ್ ವಾಟರ್ ಬಾಟಲ್ ರೋಲಿಂಗ್ ಸಾಮಾನ್ಯ ಕಾಲು ನೋವು ಮತ್ತು ದಣಿವಿಗೆ ತಾತ್ಕಾಲಿಕ ಪರಿಹಾರ ನೀಡುವ ಸರಳ ವಿಧಾನವಾಗಿದೆ. ಆದರೆ ನೋವು ಹಲವು ದಿನಗಳವರೆಗೆ ಮುಂದುವರಿದರೆ ಅಥವಾ ತೀವ್ರವಾಗಿದ್ದರೆ, ಫಿಸಿಯೋಥೆರಪಿಸ್ಟ್ ಸಂಪರ್ಕಿಸುವುದು ಅತ್ಯಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾಜಿ ಸೈನಿಕನ ಮರ್ಡರ್ ಮಿಸ್ಟ್ರಿ: FSL​​ ವರದಿಯನ್ನೇ ತಿರುಚಿದ್ರು, ಸುಪನಾತಿ ಸುಮಾಳ ಅಸಲಿಯತ್ತು ಬಯಲು – Kannada News | Belagavi: Wife, Lover Kill Ex Serviceman for 2 Cr Insurance; FSL Bribed

ಬೆಳಗಾವಿ, ಜೂನ್​​ 15: ನಗರದಲ್ಲಿ ಕ್ರೈಂ, ತ್ರಿಲ್ಲರ್ ವೆಬ್ ಸೀರಿಸ್ ಮೀರಿಸುವಂತಹ ಭೀಕರ ಕೊಲೆಯೊಂದು (kill) ನಡೆದಿದೆ. ಇಲ್ಲಿ ಅಧಿಕಾರಿಗಳೇ ಎಫ್ಎಸ್ಎಲ್ ವರದಿಯನ್ನ ತಿರುಚಿ ಕೇಸ್ ಮುಚ್ಚಿ ಹಾಕುವ ಯತ್ನ ನಡೆಸಿದ್ದು, ತನಿಖೆಯಲ್ಲಿ ಬಯಲಾಗಿದೆ. ಅಷ್ಟಕ್ಕೂ 2 ಕೋಟಿ ರೂ ವಿಮೆ ಹಣಕ್ಕಾಗಿ ಪತಿಗೆ ಚಟ್ಟ ಕಟ್ಟಿದ ಪತ್ನಿ (Wife) ಹಾಗೂ ಆಕೆಯ ಪ್ರಿಯಕರ ಮಾಡಿದ ಕತರ್ನಾಕ್ ಐಡಿಯಾಗಳು ಎಂತಹದ್ದು? ಇರದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ, ಹಣಕ್ಕಾಗಿ ಹೇಗೆಲ್ಲಾ ಬಳಕೆ ಮಾಡಿಕೊಂಡರು ಎಂಬುವುದನ್ನು ತಿಳಿದರೆ ನಿಜಕ್ಕೂ ಶಾಕ್​ ಆಗುತ್ತೀರಾ.

ಮುಖ್ಯಾಂಶಗಳು

  • ವಿಮೆ ಹಣಕ್ಕಾಗಿ ಪತ್ನಿ-ಪ್ರಿಯಕರನ ಕರಾಳ ಸಂಚು
  • ಆಸ್ಪತ್ರೆಯಲ್ಲೇ ಪತಿಗೆ ವಿಷಹಾಕಿದ ಪತ್ನಿ
  • ಒಟ್ಟು 80 ಜನರ ಬಂಧನ

2 ಕೋಟಿ ರೂ ವಿಮೆ ಹಣಕ್ಕಾಗಿ ಪ್ರಿಯಕರನೊಂದಿಗೆ ಪತಿಗೆ ಪತ್ನಿ ಚಟ್ಟ ಕಟ್ಟಿದ ಪ್ರಕರಣ ಸದ್ಯ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ. 35 ವರ್ಷದ ಸುಮಾ ಪತಿ ಕೊಲೆ ಪ್ರಕರಣದಲ್ಲಿ ಜೈಲು ಪಾಲು ಆಗಿದ್ದಾಳೆ. ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ನಿವಾಸಿಯಾಗಿರುವ ಈಕೆ 20 ವರ್ಷಗಳ ಹಿಂದೆ ಸಂದೀಪ ಮಂಜರಗಿ ಜೊತೆಗೆ ಮದುವೆಯಾಗಿತ್ತು. ಪತಿ 17 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಮೂರು ವರ್ಷದ ಹಿಂದೆ ನಿವೃತ್ತಿಯಾಗಿ ಊರಿಗೆ ವಾಪಸ್ ಬಂದಿದ್ದರು. ಹೀಗೆ ಬಂದ ವ್ಯಕ್ತಿ ಅಲ್ಲಿ ಇಲ್ಲಿ ಓಡಾಡಿಕೊಂಡು ಇದ್ದ, ಚೆನ್ನಾಗಿ ಕುಡಿಯೋದು, ಹೋಟೆಲ್ ಸೇರಿದಂತೆ ಅಲ್ಲಿ ಇಲ್ಲಿ ತಿಂದು ಜಾಲಿಯಾಗಿದ್ದ.

ಪತಿ ಸ್ನೇಹಿತನೊಂದಿಗೆ ಪತ್ನಿ ಅನೈತಿಕ ಸಂಬಂಧ: ಕೊಲೆಗೆ ಪ್ಲ್ಯಾನ್​​

ಇದೇ ಹೊತ್ತಲ್ಲಿ ಘೋಡಗೇರಿಯಲ್ಲಿ ಎಗ್ ರೈಸ್ ಅಂಗಡಿ ನಡೆಸುತ್ತಿದ್ದ ಪುಂಡಲೀಕ ಡೊಂಗರ್ ಪರಿಚಯ ಆಗಿದ್ದ. ಈತನ ಅಂಗಡಿಗೆ ಹೋಗುತ್ತಿದ್ದ ಸಂದೀಪ್ ಅಲ್ಲಿ ಖಾಲಿ ಕುಡುವ ಬದಲು ಇಬ್ಬರು ಸೇರಿಕೊಂಡು ಹಿಡಕಲ್ ಡ್ಯಾಂ ಬಳಿಯಲ್ಲಿ ಹೋಟೆಲವೊಂದನ್ನು ಇಟ್ಟುಕೊಳ್ಳುವ ತೀರ್ಮಾನ ಮಾಡಿದ್ದರು. ಹೀಗೆ ಹೋಟೆಲ್ ಆರಂಭವಾದ ಕೆಲ ದಿನಗಳಲ್ಲಿಯೇ ನಿವೃತ್ತ ಸೈನಿಕ ಸಂದೀಪ ಪತ್ನಿ ಸುಮಾ ಹಾಗೂ ಪುಂಡಲೀಕ ನಡುವೆ ಸ್ನೇಹ ಬೆಳೆದಿತ್ತು. ಈ ಸ್ನೇಹ ಕೆಲದಿನಗಳಲ್ಲಿಯೇ ಅನೈತಿಕ ಸಂಬಂಧವಾಗಿ ಮಾರ್ಪಾಡಾಗಿತ್ತು. ಇದಕ್ಕೆ ಅಡ್ಡಿಯಾಗಿದ್ದ ಪತಿ ಸಂದೀಪ್ ಮುಗಿಸಲು ಸುಮಾ ಹಾಗೂ ಪ್ರಿಯಕರ ಪುಂಡಲೀಕ ಇಬ್ಬರು ಸೇರಿ ತೀರ್ಮಾನಿಸಿದ್ದಾರೆ. ಅದಕ್ಕಾಗಿ ಅವಕಾಶಕ್ಕಾಗಿ ಕಾಯುತ್ತಿದ್ದರು. ಆತ ಸತ್ತರೆ ಎರಡು ಕೋಟಿ ರೂ ವಿಮೆ ಹಣ ಬರುತ್ತೆ, ಅದನ್ನ ತೆಗೆದುಕೊಂಡು ಆರಾಮವಾಗಿ ಇರಬಹುದು ಎಂದು ಪ್ಲ್ಯಾನ್​​ ಮಾಡಿದ್ದರು.

ಇದನ್ನೂ ಓದಿ: ಮಾಜಿ ಸೈನಿಕನ ಸಾವಿಗೆ ಟ್ವಿಸ್ಟ್​: 2 ಕೋಟಿ ಹಣಕ್ಕಾಗಿ ಚಟ್ಟ, FSL ವರದಿಯನ್ನೇ ಬದಲಿಸಿದ್ದ ಖತರ್ನಾಕ್ ಗ್ಯಾಂಗ್

ಮಾರ್ಚ್ 13ರಂದು ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂದೀಪ್​​ ಮಂಜರಗಿಗೆ ರಸ್ತೆ ಅಪಘಾತವಾಗಿತ್ತು. ಅಪಘಾತವಾದ ಬಳಿಕ ಸ್ಥಳೀಯರು ಹುಕ್ಕೇರಿಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಸ್ಥಳಕ್ಕೆ ಹೋದ ಪತ್ನಿ ಸುಮಾ ತನ್ನ ಗಂಡನಿಗೆ ಹೆಚ್ಚಿನ ಚಿಕಿತ್ಸೆ ಬೇಕು ಅಂತಾ ಹುಕ್ಕೇರಿ ಅಲ್ಲಿಂದ ಘಟಪ್ರಭಾ ಜೆಜೆ ಕೋ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಿಸುತ್ತಾಳೆ. ಅಲ್ಲಿಯೇ ಪತಿಗೆ ಚಟ್ಟ ಕಟ್ಟಲು ಮಾಸ್ಟರ್ ಪ್ಲ್ಯಾನ್ ಮಾಡುತ್ತಾಳೆ. ಸಣ್ಣಪುಟ್ಟ ಗಾಯಗೊಂಡಿದ್ದ ವ್ಯಕ್ತಿಯನ್ನ ಸ್ಪೇಷಲ್ ವಾರ್ಡ್​ಗೆ ಶಿಫ್ಟ್ ಮಾಡಲಾಗುತ್ತದೆ. ಬಳಿಕ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ ಪುಂಡಲೀಕನ ಸಂಬಂಧಿ ರಾಹುಲ್ ಜೋಗಿ ಎಂಬಾತನ ಜೊತೆಗೆ ಚರ್ಚೆ ನಡೆಸುತ್ತಾರೆ. ಈ ವೇಳೆ ರಾಹುಲ್ ಸಲೈನ್‌ ಬಾಟಲ್​​ನಲ್ಲಿ ವಿಷ ಹಾಕಿ ಅಂತಾ ಹೇಳುತ್ತಾನೆ. ಅದರಂತೆ ಮಾರ್ಚ್ 14ರಂದು ಒಂದು ಬಾರಿ ತಿಗಣೆ ಎಣ್ಣೆ ಹಾಗೂ ಇಲಿ ಪಾಷಾಣ ಹಾಕುತ್ತಾರೆ ಆದರೆ ಅದು ವರ್ಕೌಟ್ ಆಗಲ್ಲ.

ತಿಗಣೆ ಔಷಧ ಹಾಕಿ ಕೊಲೆ

ಮಾರನೇ ದಿನ ಹೊರಗಿಂದ ಸಲೈನ್‌ ಬಾಟಲ್ ತಂದು ಅದರಲ್ಲಿ ಈ ಬಾರಿ ಬರೀ ತಿಗಣೆ ಔಷಧ ಹಾಕಿ ಕೊಲೆ ಮಾಡುತ್ತಾರೆ. ಆತ ಸಾವನ್ನಪ್ಪಿದ ಬಳಿಕ ಹಾರ್ಟ್ ಅಟ್ಯಾಕ್​​ ಆಗಿ ಸಾವನ್ನಪ್ಪಿರುವಂತೆ ಬಿಂಬಿಸುತ್ತಾರೆ. ಇದೇ ವೇಳೆ ಠಾಣೆಗೆ ಬಂದಿದ್ದ ಯಮಕನಮರಡಿ ಪೊಲೀಸರಿಗೂ ಸುಳ್ಳು ಹೇಳುತ್ತಾರೆ. ಆದರೆ ಅಂದು ಪೊಲೀಸರು ಬಿಮ್ಸ್ ಆಸ್ಪತ್ರೆಗೆ ಈತನ ಶವವನ್ನ ಮರಣೋತ್ತರ ಪರೀಕ್ಷೆ ಮಾಡುತ್ತಾರೆ. ಇನ್ನೇನು ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್​ಎಸ್​ಎಲ್​ ವರದಿ ಕೈ ಸೇರಬೇಕುನ್ನುಷ್ಟರಲ್ಲಿ ಆರೋಪಿ ಸುಮಾಗೆ ಭಯ ಶುರುವಾಗುತ್ತದೆ.

ತಾನು ಹಾಗೂ ಪುಂಡಲೀಕ ಸೇರಿ ಪತಿಯನ್ನು ಕೊಲೆ ಮಾಡಿರುವ ಬಗ್ಗೆ ತಾಯಿ ಬಳಿ ಎಲ್ಲಾ ವಿಚಾರವನ್ನು ಹೇಳಿದ್ದಾಳೆ. ತಾಯಿಗೆ ಪರಿಚಯವಿದ್ದ ಆರ್​ಎಂಪಿ ವೈದ್ಯ ಬಸವರಾಜ್ ಭಸ್ಮೆ ಎಂಬ ವ್ಯಕ್ತಿಯ ಮೂಲಕ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಫ್​ಡಿಎ ಅಶೋಕ್​​ ಗುಜನಾಳ್ ಸಂಪರ್ಕ ಮಾಡುತ್ತಾರೆ. ಅಲ್ಲಿಂದ ಎಫ್​ಎಸ್​ಎಲ್​ ಕಚೇರಿಯ ಸಿಫಾಯಿ ಅಪ್ಪಸಾಬ್ ನಾಯಿಕೋಡಿ ಪರಿಚಯ ಮಾಡಿಕೊಂಡು ಬಳಿಕ ಲ್ಯಾಬ್ ಸಹಾಯಕ ಚನಯ್ಯ, ಬಳಿಕ ಸೀನಿಯರ್ ಆಫೀಸರ್ ನಾಗರಾಜ್​ಗೆ ಹಣದ ಆಮಿಷವೊಡ್ಡಿ ಕೊಲೆಯನ್ನ ಹೃದಯಾಘಾತ ಎಂದು ತಿದ್ದುಪಡಿ ಮಾಡಲು ಹೇಳಿದ್ದಾರೆ. ಇದಕ್ಕಾಗಿ ಮೂರು ಲಕ್ಷಕ್ಕಿಂತ ಅಧಿಕ ಹಣ ಕೊಡುವುದಾಗಿ ಹೇಳಿದ್ದಾರೆ. ಹಣದ ಆಸೆಗೆ ಬಿದ್ದ ಎಫ್ಎಸ್ಎಲ್ ಅಧಿಕಾರಿಗಳು ಕೊಲೆಯನ್ನ ಹಾರ್ಟ್ ಅಟ್ಯಾಕ್ ಎಂದು ವರದಿ ನೀಡುತ್ತಾರೆ. ಆಗ ಪೊಲೀಸರು ಕೂಡ ಸರಿ ಇದೆ ಎಂದುಕೊಂಡು ಶವವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದು, ಬಳಿಕ ಅಂತ್ಯಸಂಸ್ಕಾರ ಮಾಡುತ್ತಾರೆ.

ಸ್ಟೇಟಸ್​ನಿಂದ ಕೊಲೆ ರಹಸ್ಯ ಬಯಲು

ಕೊಲೆ ಕೇಸ್ ಮುಚ್ಚಿ ಹೋದ ಬಳಿಕ 2 ಕೋಟಿ ರೂ ವಿಮೆ ಹಣ ಹಂಚಿಕೆ ಸಂಬಂಧ ಸುಮಾ ಹಾಗೂ ಪುಂಡಲೀಕ ನಡುವೆ ಗಲಾಟೆ ಶುರುವಾಗಿದೆ. ಇಬ್ಬರ ನಡುವೆ ಪರಸ್ಪರ ವೈಮನಸ್ಸು ಉಂಟಾಗಿದೆ. ಈ ವೇಳೆ ಸಂದೀಪ್​ ಸಾವನ್ನಪ್ಪಿದ್ದು, ಹಾರ್ಟ್​ ಅಟ್ಯಾಕ್​ನಿಂದ ಅಲ್ಲಾ, ಕೊಲೆ ಅಂತಾ ಹೇಳಿ ಸ್ಟೇಟಸ್ ಹಾಕುತ್ತಾನೆ. ಇದನ್ನ ನೋಡಿದ ಪೊಲೀಸರು ಕೂಡಲೇ ಆತನನ್ನ ಕರೆದು ವಿಚಾರಣೆ ಮಾಡುತ್ತಾರೆ. ಈ ವೇಳೆ ಕೊಲೆ ರಹಸ್ಯ ಬಾಯಿ ಬಿಟ್ಟಿದ್ದಾನೆ.

80 ಜನರ ಬಂಧನ

ಆಗ ಎಫ್ಎಸ್ಎಲ್​ ವರದಿ ಪಡೆದು ಬೆಂಗಳೂರಿನ ಲ್ಯಾಬ್​​ಗೆ ಪೊಲೀಸರು ಕಳುಹಿಸಿದ್ದಾರೆ. ಅಲ್ಲಿ ವಿಷದಿಂದ ಆತ ಸಾವನ್ನಪ್ಪಿರುವುದಾಗಿ ವರದಿ ಬರುತ್ತೆ. ಇದರ ಆಧಾರದ ಮೇಲೆ ತನಿಖೆ ಶುರು ಮಾಡಿದ ಪೊಲೀಸರು ಪತ್ನಿ ಸುಮಾ, ಪ್ರಿಯಕರ ಪುಂಡಲೀಕ, ವರದಿ ತಿರುಚಿದ ಎಫ್ಎಸ್ಎಲ್ ಸೈಂಟಿಫಿಕ್ ಆಫೀಸರ್ ನಾಗರಾಜ್ ಸೇರಿ 80 ಜನರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಒಟ್ಟಿನಲ್ಲಿ ಕೇಸ್​ನಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು ತನಿಖೆ ನಡೆಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದೀದಿ ಕೋಟೆಯನ್ನು ಬಿಜೆಪಿ ಛಿದ್ರಗೊಳಿಸಿದ್ದು ಹೇಗೆ? ಪಶ್ಚಿಮ ಬಂಗಾಳದ ಚುನಾವಣೆ ತಯಾರಿ ಬಗ್ಗೆ ಪ್ರಲ್ಹಾದ್ ಜೋಶಿ ಮಾತು – Kannada News | Union Minister Pralhad Joshi on West Bengal Election Victory in TV9 Podcast 

ಬೆಂಗಳೂರು, ಜೂನ್ 15: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಟಿವಿ9 ಜೊತೆಗಿನ ಮಾತುಕತೆಯಲ್ಲಿ ಪಶ್ಚಿಮ ಬಂಗಾಳ ಚುನಾವಣೆ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷದ ಅಭೂತಪೂರ್ವ ಗೆಲುವಿನ ಕುರಿತು ಮಾತನಾಡಿದ ಪ್ರಲ್ಹಾದ್ ಜೋಶಿ, ಚುನಾವಣಾ ಆಯೋಗವು ಶಾಂತಿಯುತ ಮತದಾನಕ್ಕೆ ಅವಕಾಶ ಕಲ್ಪಿಸಿದ್ದೇ ಪ್ರಮುಖ ಕಾರಣ ಎಂದರು. ಟಿಎಂಸಿ ಸರ್ಕಾರದ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ, ಕಟ್-ಮನಿ, ಗೂಂಡಾಗಿರಿ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದಿಂದ ಜನರು ಬೇಸತ್ತಿದ್ದರು. ಅಮಿತ್ ಶಾ ಕೇಂದ್ರ ಅರೆಸೇನಾ ಪಡೆಗಳನ್ನು ಅಲ್ಲಿಯೇ ಉಳಿಸುವುದಾಗಿ ಭರವಸೆ ನೀಡಿದ ನಂತರ ಜನರು ನಿರ್ಭಯವಾಗಿ ಮತ ಚಲಾಯಿಸಿದರು. ಇದೀಗ ಟಿಎಂಸಿ ತೊರೆಯುತ್ತಿರುವವರು ಲೂಟಿ ಮಾಡಲು ಅವಕಾಶವಿಲ್ಲದ ಕಾರಣ ಪಕ್ಷ ಬಿಟ್ಟು ಹೋಗುತ್ತಿದ್ದಾರೆ ಎಂದು ಪ್ರಲ್ಹಾದ್ ಜೋಶಿ ವಿಶ್ಲೇಷಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಧಿಸಿದ ಭರ್ಜರಿ ಗೆಲುವಿನ ಕುರಿತು ಮಾತನಾಡಿದ ಪ್ರಲ್ಹಾದ್ ಜೋಶಿ, ಈ ಬಾರಿಯ ಚುನಾವಣೆಯಲ್ಲಿ ಹಿಂಸಾಚಾರಕ್ಕೆ ಅವಕಾಶ ನೀಡದ ಚುನಾವಣಾ ಆಯೋಗಕ್ಕೆ ಧನ್ಯವಾದ ಸಲ್ಲಿಸಿದರು. “ಜನರು ಟಿಎಂಸಿ ಸರ್ಕಾರದ ಕಟ್-ಮನಿ, ಭ್ರಷ್ಟಾಚಾರ ಮತ್ತು ಗೂಂಡಾಗಿರಿಯಿಂದ ಸಂಪೂರ್ಣವಾಗಿ ಬೇಸತ್ತಿದ್ದರು. ಟಿಎಂಸಿ ಆಡಳಿತದಲ್ಲಿ ಯಾವುದೇ ನಿರ್ಮಾಣಕ್ಕೆ, ಪ್ಲಾಟ್ ಖರೀದಿಗೆ ಅಥವಾ ವಾಹನ ಖರೀದಿಗೂ ಕೂಡ ಟಿಎಂಸಿ ಕಚೇರಿ ಅಥವಾ ಗೂಂಡಾಗಳ ಅನುಮತಿ ಪಡೆಯಬೇಕಿತ್ತು. ಅಮಿತ್ ಶಾ ಕೇಂದ್ರ ಅರೆಸೇನಾ ಪಡೆಗಳನ್ನು 3 ತಿಂಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಉಳಿಸುವುದಾಗಿ ಭರವಸೆ ನೀಡಿದ ನಂತರ, ಜನರು ನಿರ್ಭಯವಾಗಿ ಮತ ಚಲಾಯಿಸಲು ಸಾಧ್ಯವಾಯಿತು. ಇದರಿಂದ ಟಿಎಂಸಿ ಸರ್ಕಾರದ ವಿರುದ್ಧ ಜನ ತಮ್ಮ ಕೋಪವನ್ನು ಮತದಾನದ ಮೂಲಕ ವ್ಯಕ್ತಪಡಿಸಿದರು” ಎಂದು ಹೇಳಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Source link

ರೇಣುಕಾಸ್ವಾಮಿ ಕೇಸ್: ಪ್ರತಿ ದಿನ ವಿಚಾರಣೆಗೆ ಕೋರ್ಟ್ ಸೂಚನೆ; ದರ್ಶನ್ ಪರ ವಕೀಲರ ಮನವಿ ತಿರಸ್ಕಾರ – Kannada News | Renukaswamy Case Darshan Court Hearing Daily Witness Examination updates

ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಮತ್ತು ಗ್ಯಾಂಗ್ ಒಳಗೊಂಡಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯು ವೇಗ ಪಡೆದುಕೊಂಡಿದೆ. ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಇಂದು (ಜೂನ್ 15) ಸಾಕ್ಷ್ಯ ವಿಚಾರಣೆ ಮುಂದುವರಿದಿದ್ದು, ಹಲವು ಪ್ರಮುಖ ಬೆಳವಣಿಗೆಗಳು ಸಂಭವಿಸಿವೆ. ಇಂದು ನ್ಯಾಯಾಲಯದಲ್ಲಿ ಪ್ರಕರಣದ 13ನೇ ಸಾಕ್ಷಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಯಿತು. ಇದೇ ವೇಳೆ, ಸಾಕ್ಷಿಗಳ ಪಾಟೀಸವಾಲು ನಡೆಸುವುದನ್ನು ಮುಂದೂಡಬೇಕೆಂದು ಆರೋಪಿಗಳ ಪರ ವಕೀಲರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ತಿರಸ್ಕರಿಸಿದರು.

ಸುಪ್ರೀಂಕೋರ್ಟ್ ಈಗಾಗಲೇ ಈ ಪ್ರಕರಣದ ತ್ವರಿತ ವಿಚಾರಣೆಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಯಾವುದೇ ವಿಳಂಬಕ್ಕೆ ಆಸ್ಪದ ನೀಡದಂತೆ ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಪ್ರಸನ್ನಕುಮಾರ್ ಅವರು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಪ್ರತಿದಿನ ಸಾಕ್ಷ್ಯ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದರು.

ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಇನ್ಮುಂದೆ ಪ್ರತಿ ವಾರದಲ್ಲಿ 4ರಿಂದ 5 ದಿನಗಳ ಕಾಲ ಸಾಕ್ಷ್ಯ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಅಲ್ಲದೇ, ತ್ವರಿತ ವಿಚಾರಣೆಗೆ ಪೂರಕವಾಗಿ ಸಹಕರಿಸುವಂತೆ ಎರಡೂ ಕಡೆಯ ವಕೀಲರಿಗೆ ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, ಆದಷ್ಟು ಬೇಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ತೀರ್ಪು ಬರಬಹುದು ಎಂಬ ನಿರೀಕ್ಷೆ ಮೂಡಿದೆ.

ಇದೇ ಸಂದರ್ಭದಲ್ಲಿ, ನಟ ದರ್ಶನ್ ಸೇರಿದಂತೆ ಉಳಿದ ಆರೋಪಿಗಳನ್ನು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರುಪಡಿಸಬೇಕು ಎಂದು ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಗೆ ಪ್ರಾಸಿಕ್ಯೂಷನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸದ್ಯಕ್ಕೆ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದ್ದು, ನಾಳೆ (ಜೂನ್ 16) ಇನ್ನಿಬ್ಬರು ಸಾಕ್ಷಿಗಳಿಗೆ ಸಮನ್ಸ್ ಜಾರಿಗೊಳಿಸಿ ವಿಚಾರಣೆ ನಡೆಸಲು ನ್ಯಾಯಾಲಯ ನಿರ್ಧರಿಸಿದೆ.

ಇದನ್ನೂ ಓದಿ: ಜೈಲಿನಲ್ಲಿ ನಟ ದರ್ಶನ್ ಮೌನ; ಆತ್ಮಚರಿತ್ರೆ ಬರೆಯಲು ಆರಂಭಿಸಿದ ಪವಿತ್ರಾ ಗೌಡ

ದರ್ಶನ್ ಅವರು ಜಾಮೀನು ಪಡೆಯಲು ಮಾಡಿದ ಎಲ್ಲ ಪ್ರಯತ್ನಗಳು ವಿಫಲ ಆಗಿವೆ. ವಿಚಾರಣೆ ವಿಳಂಬ ಆಗುತ್ತಿರುವುದರಿಂದ ವೃತ್ತಿಜೀವನಕ್ಕೆ ತೊಂದರೆ ಆಗಿದೆ ಎಂದು ಅವರು ಸುಪ್ರೀಂ ಕೋರ್ಟ್​​ನ ಮೊರೆ ಹೋಗಿದ್ದರು. ಆದರೆ ಅಲ್ಲಿ ಅವರ ಜಾಮೀನು ಅರ್ಜಿ ವಜಾಗೊಂಡಿತು. ಹಾಗಾಗಿ ಇನ್ನಷ್ಟು ತಿಂಗಳ ಕಾಲ ಅವರು ಜೈಲುವಾಸ ಅನುಭವಿಸುವುದು ಅನಿವಾರ್ಯ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಮನೆ ಹೊರಗೆ ಟಿಎಂಸಿ ಶಾಸಕ ಕುನಾಲ್ ಘೋಷ್ ಮೇಲೆ ಮೊಟ್ಟೆ ದಾಳಿ – Kannada News | Egg thrown at TMC leader Kunal Ghosh outside the Mamata Banerjee House in Kolkata

ಕೊಲ್ಕತ್ತಾ, ಜೂನ್ 15: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ನಾಯಕರಿಗೆ ಸಾರ್ವಜನಿಕ ವಲಯದಲ್ಲಿ ‘ಮೊಟ್ಟೆ ದಾಳಿ’ಯ ಭೀತಿ ಎದುರಾಗಿದೆ. ಇಂದು ಸಂಜೆ ಟಿಎಂಸಿ ಪ್ರಮುಖ ವಕ್ತಾರ ಮತ್ತು ಶಾಸಕ ಕುನಾಲ್ ಘೋಷ್ ಅವರು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಅವರ ಕಾಳೀಘಾಟ್ ನಿವಾಸದಿಂದ ಹೊರಬರುತ್ತಿದ್ದಂತೆ ಅವರ ಮೇಲೆ ವ್ಯಕ್ತಿಯೊಬ್ಬ ಮೊಟ್ಟೆ ಎಸೆದಿದ್ದಾನೆ. ಮಾಧ್ಯಮಗಳೊಂದಿಗೆ ಮಾತನಾಡಲು ಕುನಾಲ್ ಘೋಷ್ ಅವರು ಮಮತಾ ಬ್ಯಾನರ್ಜಿ ಅವರ ನಿವಾಸದ ಹೊರಗೆ ನಿಂತಿದ್ದಾಗ ಈ ಘಟನೆ ಸಂಭವಿಸಿದೆ. ಇಂದು ಸಂಜೆ ಸುಮಾರು 6.30ರ ಸುಮಾರಿಗೆ ಕುನಾಲ್ ಘೋಷ್ ಮಮತಾ ಬ್ಯಾನರ್ಜಿ ಅವರ ಮನೆಯಿಂದ ಹೊರಬಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಕಪ್ಪು ಶರ್ಟ್ ಧರಿಸಿದ್ದ ಯುವಕನೊಬ್ಬ ಅತ್ಯಂತ ಹತ್ತಿರದಿಂದ ಕುನಾಲ್ ಘೋಷ್ ಅವರ ತಲೆಗೆ ಗುರಿಯಾಗಿಸಿ ಮೊಟ್ಟೆಯೊಂದನ್ನು ಎಸೆದಿದ್ದಾನೆ.

ಈ ಘಟನೆಯಿಂದ ತೀವ್ರ ಆಕ್ರೋಶಗೊಂಡ ಶಾಸಕ ಕುನಾಲ್ ಘೋಷ್, ಇದು ಸಾರ್ವಜನಿಕರ ಸ್ವಾಭಾವಿಕ ಆಕ್ರೋಶವಲ್ಲ, ಬದಲಿಗೆ ವ್ಯವಸ್ಥಿತವಾಗಿ ಯೋಜಿಸಲಾದ ‘ಗೂಂಡಾಗಿರಿ’ ಎಂದು ಕರೆದಿದ್ದಾರೆ. ಇತ್ತೀಚೆಗಷ್ಟೇ ಸೋನಾರ್‌ಪುರದಲ್ಲಿ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆಯೂ ಸ್ಥಳೀಯರು ಮೊಟ್ಟೆ ಮತ್ತು ಕಲ್ಲುಗಳನ್ನು ಎಸೆದಿದ್ದರು. ಇದಲ್ಲದೆ ಬಿಧಾ‌ನನಗರದ ಮಾಜಿ ಮೇಯರ್ ಸಬ್ಯಸಾಚಿ ದತ್ತಾ, ಟಿಎಂಸಿ ನಾಯಕರಾದ ಜಯಪ್ರಕಾಶ್ ಮುಜುಂದಾರ್ ಮತ್ತು ಬಾಪ್ಪಾದಿತ್ಯ ದಾಸ್‌ಗುಪ್ತಾ ಸೇರಿದಂತೆ ಹಲವು ನಾಯಕರು ಇತ್ತೀಚೆಗೆ ಸಾರ್ವಜನಿಕವಾಗಿ ಅಥವಾ ಪೊಲೀಸ್ ವಶದಲ್ಲಿದ್ದಾಗ ಇಂತಹದೇ ಮೊಟ್ಟೆ ದಾಳಿಯನ್ನು ಎದುರಿಸಿದ್ದಾರೆ.

(Video Source: ANI)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಲೆನೋವಿನ ಜೊತೆಗೆ ಈ ಲಕ್ಷಣ ಕಂಡುಬಂದ್ರೆ ನಿರ್ಲಕ್ಷ್ಯ ಮಾಡಬೇಡಿ! ಇದು ಜೀವಕ್ಕೆ ಅಪಾಯಕಾರಿಯಾಗಬಹುದು – Kannada News | Dangerous Headache Symptoms Explained By Experts

ಇತ್ತೀಚಿನ ದಿನಗಳಲ್ಲಿ ತಲೆನೋವು (Headache) ಸಾಮಾನ್ಯ ಸಮಸ್ಯೆಯಾಗಿದೆ. ಒತ್ತಡ, ನಿದ್ರಾಹೀನತೆ, ದಣಿವು ಅಥವಾ ಹೆಚ್ಚು ಸಮಯ ಮೊಬೈಲ್ ಬಳಸುವುದರಿಂದ ಹಲವರಿಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ಬಹುತೇಕರು ಪೇನ್‌ಕಿಲ್ಲರ್ ತೆಗೆದುಕೊಂಡು ಸಮಸ್ಯೆಯನ್ನು ತಾತ್ಕಾಲಿಕವಾಗಿ ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಆದರೆ ಪ್ರತಿಯೊಂದು ತಲೆನೋವೂ ಸಾಮಾನ್ಯವಲ್ಲ. ಕೆಲವೊಮ್ಮೆ ಇದು ಗಂಭೀರ ಮೆದುಳಿನ ಸಮಸ್ಯೆಗಳ ಮುನ್ನೆಚ್ಚರಿಕೆಯೂ ಆಗಿರಬಹುದು. ಹೌದು ಆರೋಗ್ಯ ತಜ್ಞರು ಹೇಳುವ ಪ್ರಕಾರ, ಕೆಲವು ಲಕ್ಷಣಗಳು ಉಪಾಯದ ಎಚ್ಚರಿಕೆಯ ಸೂಚನೆಯಾಗಿರಬಹುದು. ಹಾಗಾದರೆ ತಲೆನೋವಿನ ಜೊತೆಗೆ ಯಾವ ರೀತಿ ಲಕ್ಷಣ ಕಂಡುಬಂದರೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ತೀವ್ರ ತಲೆನೋವು ಬಂದರೆ ಹೆಚ್ಚಿನ ಎಚ್ಚರ ವಹಿಸಿ

ಹಠಾತ್‌ ಆಗಿ ಜೀವನದಲ್ಲಿ ಎಂದಿಗೂ ಅನುಭವಿಸದಷ್ಟು ತೀವ್ರವಾದ ತಲೆನೋವು ಕೆಲವೇ ಕ್ಷಣಗಳಲ್ಲಿ ಹೆಚ್ಚಾದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು. ಇದು ಮೆದುಳಿನ ರಕ್ತನಾಳ ಸಿಡಿತ ಅಥವಾ ಒಳ ರಕ್ತಸ್ರಾವದ ಸೂಚನೆಯಾಗಿರಬಹುದು.

ಜ್ವರ ಮತ್ತು ಕುತ್ತಿಗೆ ಬಿಗಿತ

ತಲೆನೋವಿನ ಜೊತೆಗೆ ಜ್ವರ, ಕುತ್ತಿಗೆಯ ಆಸುಪಾಸಿನಲ್ಲಿ ಗಟ್ಟಿಯಾದಂತೆ ಅನಿಸುವುದು ಅಥವಾ ಗಡ್ಡವನ್ನು ಎದೆಗೆ ತಾಗಿಸಲು ಕಷ್ಟವಾಗುವುದು ಕಂಡುಬಂದರೆ ಅದು ಮೆನಿಂಜೈಟಿಸ್‌ ಎಂಬ ಮೆದುಳಿನ ಸೋಂಕಿನ ಲಕ್ಷಣವಾಗಿರಬಹುದು. ಇಂತಹ ಸಂದರ್ಭಗಳಲ್ಲಿ ತಕ್ಷಣ ಚಿಕಿತ್ಸೆ ಅಗತ್ಯ.

ಇದನ್ನೂ ಓದಿ: ತಕ್ಷಣ ಬರುವ ತೀವ್ರ ತಲೆನೋವು ಮತ್ತು ಆತಂಕ ಮೆದುಳಿನ ಅಸ್ವಸ್ಥತೆಯ ಲಕ್ಷಣವೇ?

ದೃಷ್ಟಿ ಮಂಕಾಗುವುದು ಮತ್ತು ವಾಂತಿ

ತಲೆನೋವಿನೊಂದಿಗೆ ಬೇರೆ ವಸ್ತುಗಳು ಎರಡೆರಡು ಬಾರಿ ಕಾಣುವುದು, ದೃಷ್ಟಿ ಮಂಕಾಗುವುದು ಅಥವಾ ಹಠಾತ್‌ ವಾಂತಿ ಆಗುವುದು ಮೆದುಳಿನ ಒಳ ಒತ್ತಡ ಹೆಚ್ಚಿದ ಸೂಚನೆಯಾಗಿರಬಹುದು. ಇದನ್ನು ಲಘುವಾಗಿ ತೆಗೆದುಕೊಳ್ಳಬಾರದು.

ದೇಹದ ಒಂದು ಭಾಗ ದುರ್ಬಲವಾಗುವುದು

ಮಾತನಾಡಲು ತೊಂದರೆ, ತಲೆ ಸುತ್ತುವುದು, ಸಮತೋಲನ ಕಳೆದುಕೊಳ್ಳುವುದು ಅಥವಾ ಕೈ, ಕಾಲು, ಮುಖದ ಒಂದು ಭಾಗ ಮಂಕಾಗುವುದು ಬ್ರೇನ್‌ ಸ್ಟ್ರೋಕ್‌ನ ಪ್ರಮುಖ ಲಕ್ಷಣಗಳು. ಇಂತಹ ಸಮಸ್ಯೆಗಳು ಕಂಡರೆ ತಕ್ಷಣ ಆಸ್ಪತ್ರೆಗೆ ಹೋಗಬೇಕು.

50 ವರ್ಷ ಮೇಲ್ಪಟ್ಟವರು ಹೆಚ್ಚು ಎಚ್ಚರವಹಿಸಬೇಕು

ಸಾಮಾನ್ಯವಾಗಿ 50 ವರ್ಷಗಳ ನಂತರ ಹೊಸ ರೀತಿಯ ತಲೆನೋವು ಆರಂಭವಾದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ವಿಶೇಷವಾಗಿ ಕ್ಯಾನ್ಸರ್ ಅಥವಾ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ತಲೆನೋವನ್ನು ಗಂಭೀರವಾಗಿ ಪರಿಶೀಲಿಸಲಾಗುತ್ತದೆ.

ಹಾಗಾಗಿ ಸಾಮಾನ್ಯ ಮೈಗ್ರೇನ್ ಮತ್ತು ಅಪಾಯಕಾರಿ ತಲೆನೋವಿನ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಬಹಳ ಮುಖ್ಯ. ತಲೆನೋವಿನ ಜೊತೆಗೆ ಮೇಲಿನ ಯಾವುದೇ ಲಕ್ಷಣಗಳು ಕಂಡುಬಂದರೆ ಸ್ವಯಂ ಔಷಧಿ ಸೇವಿಸದೇ ತಕ್ಷಣ ನ್ಯೂರಾಲಜಿಸ್ಟ್‌ರನ್ನು ಸಂಪರ್ಕಿಸುವುದು ಸುರಕ್ಷಿತ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version