ಪಿಯುಸಿ ಹಾಗೂ ಸಿಇಟಿ ವಿದ್ಯಾರ್ಥಿಗಳಿಗೆ ಕೆಇಎ ಬಿಗ್ ರಿಲೀಫ್: ಇನ್ಮುಂದೆ ‘ಒಂದು ಅರ್ಜಿ, ಎರಡು ಪರೀಕ್ಷೆ’; ಸಾಲು ಸಾಲು ಎಡವಟ್ಟುಗಳಿಗೆ ಬ್ರೇಕ್ – Kannada News | KEA Streamlines UG CET and 2nd PU Application: New Integrated System Launched

ಬೆಂಗಳೂರು, ಜೂ.13: ದ್ವಿತೀಯ ಪಿಯುಸಿ ಹಾಗೂ ಸಿಇಟಿ (UG-CET) ಪರೀಕ್ಷೆ ಬರೆಯುವ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಹಿ ಸುದ್ದಿ ನೀಡಿದೆ. ಪ್ರತಿ ವರ್ಷ ಸಿಇಟಿ ಅರ್ಜಿ ಸಲ್ಲಿಕೆ ವೇಳೆ ಸರ್ವರ್ ಸಮಸ್ಯೆ, ತಪ್ಪು ಮಾಹಿತಿ ಸಲ್ಲಿಕೆಯಂತಹ ಸಾಲು ಸಾಲು ಅವಾಂತರಗಳಿಂದ ಕಂಗಾಲಾಗುತ್ತಿದ್ದ ವಿದ್ಯಾರ್ಥಿಗಳ ನೆರವಿಗೆ ಧಾವಿಸಿರುವ ಪ್ರಾಧಿಕಾರ, ಇನ್ಮುಂದೆ ಪಿಯುಸಿ ಹಾಗೂ ಸಿಇಟಿ ಎರಡಕ್ಕೂ ಸೇರಿ ‘ಒಂದೇ ಅರ್ಜಿ’ ಸಲ್ಲಿಸುವ ಕ್ರಾಂತಿಕಾರಿ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.

ವಿದ್ಯಾರ್ಥಿಗಳಿಗೆ ಸಿಇಟಿ ಬಗ್ಗೆ ಸಮಗ್ರ ಮಾಹಿತಿ ನೀಡಿ, ಸುಲಭವಾಗಿ ಅರ್ಜಿ ಸಲ್ಲಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಇಎ ಹಾಗೂ ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗಳು ಕೈಜೋಡಿಸಿವೆ. ಹೊಸ ನಿಯಮದ ಪ್ರಕಾರ, ವಿದ್ಯಾರ್ಥಿಗಳು ಮುಂಬರುವ ಶೈಕ್ಷಣಿಕ ಸಾಲಿನಿಂದ ಸಾಮಾನ್ಯ ಪ್ರವೇಶ ಪರೀಕ್ಷೆಗೆ (UG-CET) ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಬದಲಾಗಿ, ದ್ವಿತೀಯ ಪಿಯುಸಿ ಪ್ರವೇಶ ಪಡೆಯುವ ಸಂದರ್ಭದಲ್ಲೇ ನೀಡಲಾಗುವ ಅರ್ಜಿಯಲ್ಲಿ ‘ಸಿಇಟಿ ಆಯ್ಕೆ’ಯನ್ನು ನಮೂದಿಸಬಹುದು. ಅಲ್ಲಿಯೇ ನಿಗದಿತ ಶುಲ್ಕ ಪಾವತಿಸಿದ ಬಳಿಕ ನೇರವಾಗಿ ಪ್ರವೇಶಪತ್ರ ಪಡೆಯುವ ಸರಳ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.

ಸಾಮಾನ್ಯವಾಗಿ ದ್ವಿತೀಯ ಪಿಯುಸಿ ಪರೀಕ್ಷೆಯ ಸಿದ್ಧತೆಯ ಭರದಲ್ಲಿ ಮತ್ತು ತೀವ್ರ ಮಾನಸಿಕ ಒತ್ತಡದಲ್ಲಿರುವ ಕಾರಣ, ಬಹುತೇಕ ವಿದ್ಯಾರ್ಥಿಗಳು ಸಿಇಟಿಗೆ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಲು ವಿಫಲರಾಗುತ್ತಿದ್ದರು. ಸೈಬರ್ ಸೆಂಟರ್‌ಗಳ ಮೂಲಕ ಅರ್ಜಿ ಸಲ್ಲಿಸುವಾಗ ಹೆಸರು, ಜಾತಿ ಪ್ರಮಾಣಪತ್ರ, ಆರ್​ಡಿ ನಂಬರ್ ಸೇರಿದಂತೆ ಅನೇಕ ತಪ್ಪುಗಳನ್ನು ದಾಖಲಿಸಿ ಕೌನ್ಸಿಲಿಂಗ್ ವೇಳೆ ಪರದಾಡುತ್ತಿದ್ದರು.

ಆದರೆ, ವಿದ್ಯಾರ್ಥಿಗಳು ಪಿಯುಸಿಗೆ ದಾಖಲಾಗುವಾಗ ಕಾಲೇಜು ಪ್ರಾಂಶುಪಾಲರ ನೇರ ಉಸ್ತುವಾರಿಯಲ್ಲೇ ಕಂಪ್ಲೀಟ್ ಮಾಹಿತಿ ಹಾಗೂ ದಾಖಲೆಗಳನ್ನು ಸಲ್ಲಿಸುವುದರಿಂದ ಯಾವುದೇ ತಪ್ಪುಗಳಾಗುವ ಸಂಭವ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಪಿಯುಸಿ ಅರ್ಜಿಯನ್ನೇ ಸಿಇಟಿಗೂ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಸಮಯ ವ್ಯಯವಾಗುವುದು ತಪ್ಪಲಿದ್ದು, ಮಾನಸಿಕ ಒತ್ತಡವೂ ನಿವಾರಣೆಯಾಗಲಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಎಚ್. ಪ್ರಸನ್ನ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ನೀಟ್ ಮರುಪರೀಕ್ಷೆ ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಈ ವರ್ಷ ಮೆಡಿಕಲ್, ಡೆಂಟಲ್ ಕೋರ್ಸ್ ಶುಲ್ಕ ಹೆಚ್ಚಳವಿಲ್ಲ

ರಾಜ್ಯದಲ್ಲಿ ಸಿಇಟಿ ಪರೀಕ್ಷೆ ಬರೆಯುವ ಒಟ್ಟು ವಿದ್ಯಾರ್ಥಿಗಳಲ್ಲಿ ಶೇಕಡಾ 85 ಕ್ಕಿಂತ ಹೆಚ್ಚು ಆಕಾಂಕ್ಷಿಗಳು ರಾಜ್ಯ ಪಠ್ಯಕ್ರಮದ ಹಿನ್ನೆಲೆಯುಳ್ಳವರಾಗಿದ್ದಾರೆ. ಹೀಗಾಗಿ ಪದವಿಪೂರ್ವ ನಿರ್ದೇಶನಾಲಯದ ಸಹಯೋಗದಲ್ಲಿ ಸಿದ್ಧವಾಗುತ್ತಿರುವ ಈ ಹೊಸ ಸ್ವರೂಪದ ಸಂಯೋಜಿತ ಅರ್ಜಿ ವ್ಯವಸ್ಥೆಯು ಗ್ರಾಮೀಣ ಹಾಗೂ ನಗರ ಭಾಗದ ವಿದ್ಯಾರ್ಥಿಗಳಿಗೆ ವರದಾನವಾಗಲಿದ್ದು, ಈ ನೂತನ ಪ್ರಯೋಗವು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:56 am, Sat, 13 June 26

Source link

ಬಿಡದಿ ಟೌನ್‌ಶಿಪ್ ಯೋಜನೆ: ರೈತರ ಆಕ್ರೋಶಕ್ಕೆ ಜೆಡಿಎಸ್-ಬಿಜೆಪಿ ಬೆಂಬಲ, ಜೂನ್ 20ಕ್ಕೆ ಬೃಹತ್ ಪ್ರತಿಭಟನೆ – Kannada News | Bidadi Township Dispute: BJP JDS Back Farmers’ Outrage Against Land Acquisition; Mega Protest Scheduled for June 20

ರಾಮನಗರ, ಜೂನ್ 13: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ವಿಪಕ್ಷಗಳ ನಡುವೆ ಜಟಾಪಟಿ ಆರಂಭವಾಗಿದೆ. ರೈತರ ತೀವ್ರ ವಿರೋಧದ ನಡುವೆಯೂ, ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕಾಗಿ 516 ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಯೋಜನೆಗೆ ಸುಮಾರು 18,133 ಕೋಟಿ ರೂ. ವೆಚ್ಚವಾಗುವ ಅಂದಾಜಿದೆ. ಭೂಮಾಲೀಕರಿಗೆ ನಗದು ಪರಿಹಾರ ಅಥವಾ ಅಭಿವೃದ್ಧಿಪಡಿಸಿದ ನಿವೇಶನ ನೀಡುವ ಯೋಜನೆಯಿದೆ. ಆದರೆ, ಈ ಭೂಸ್ವಾಧೀನ ಪ್ರಕ್ರಿಯೆಗೆ ರೈತರು ತಮ್ಮ ಸಮ್ಮತಿ ನೀಡಿಲ್ಲ. ರೈತರ ಒಪ್ಪಿಗೆ ಇಲ್ಲದೆ ಭೂಸ್ವಾಧೀನ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿರುವ ವಿರೋಧ ಪಕ್ಷಗಳು, ಇದು ರೈತ ವಿರೋಧಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿವೆ. ರೈತರ ಹೋರಾಟಕ್ಕೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ದನಿಗೂಡಿಸಿದ್ದು, ಸರ್ಕಾರದ ಕ್ರಮವನ್ನು ದಬ್ಬಾಳಿಕೆ ಎಂದು ಕರೆದಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಕೂಡ ರೈತರ ಹೋರಾಟಕ್ಕೆ ಬೆಂಬಲ ಘೋಷಿಸಿವೆ.

ಸರ್ಕಾರ ಭೂಸ್ವಾಧೀನ ನಿರ್ಧಾರದ ವಿರುದ್ಧ ಜೂನ್ 20ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ. ಈ ಹೋರಾಟದಲ್ಲಿ ಏಳರಿಂದ ಎಂಟು ಜಿಲ್ಲೆಗಳ ರೈತರು ಭಾಗವಹಿಸುವ ನಿರೀಕ್ಷೆಯಿದೆ. ಬಿಡದಿ ಟೌನ್‌ಶಿಪ್ ಅನ್ನು ಗ್ರೇಟರ್ ಬೆಂಗಳೂರು ಟೌನ್‌ಶಿಪ್ ಎಂದು ಸಹ ಉಲ್ಲೇಖಿಸಲಾಗುತ್ತಿದ್ದು, ಇದು ಈಗ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಘರ್ಷಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಜನಿಕಾಂತ್‌ ಅವರ ಈ ಚಿತ್ರದಿಂದ ಸ್ಫೂರ್ತಿ ಪಡೆದಿದೆ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ – Kannada News | Samantha’s ‘Maa Inti Bangaram’: Basha Inspired Action Comedy Releasing June 19

ಟಾಲಿವುಡ್ ಸ್ಟಾರ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅಭಿನಯದ ಮುಂಬರುವ ಆ್ಯಕ್ಷನ್ ಕಾಮಿಡಿ ಸಿನಿಮಾ ‘ಮಾ ಇಂಟಿ ಬಂಗಾರಂ’ ಸದ್ಯ ಭಾರಿ ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ಕನ್ನಡದ ಹೀರೋ ದಿಗಂತ್ ಕೂಡ ನಟಿಸಿದ್ದಾರೆ. ಇದರ ನಡುವೆ ಚಿತ್ರದ ಕಥೆಯ ಬಗ್ಗೆ ಪ್ರಮುಖ ರಹಸ್ಯವೊಂದನ್ನು ನಿರ್ದೇಶಕಿ ನಂದಿನಿ ರೆಡ್ಡಿ ಬಿಚ್ಚಿಟ್ಟಿದ್ದಾರೆ. ಈ ಚಿತ್ರದ ಕಥೆಯು ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ‘ಬಾಷಾ’ ಸಿನಿಮಾದಿಂದ ಸ್ಫೂರ್ತಿ ಪಡೆದಿದೆ ಎಂದು ಅವರು ಹೇಳಿದ್ದಾರೆ.

ಮಾಧ್ಯಮವೊಂದರ ಜೊತೆ ಮಾತನಾಡಿರುವ ನಿರ್ದೇಶಕಿ ನಂದಿನಿ ರೆಡ್ಡಿ, ‘ಮಾ ಇಂಟಿ ಬಂಗಾರಂ ಸಿನಿಮಾ ಬಾಷಾ ರೀತಿಯ ಕಥೆಯನ್ನು ಹೊಂದಿದೆ. ಬಾಷಾ ಚಿತ್ರದಲ್ಲಿ ನಾಯಕನಿಗೆ ಒಂದು ಫ್ಲ್ಯಾಶ್‌ಬ್ಯಾಕ್ (ರಹಸ್ಯ ಹಿನ್ನೆಲೆ) ಇರುವಂತೆ, ಇಲ್ಲೂ ಕೂಡ ಮುಖ್ಯ ಪಾತ್ರಕ್ಕೆ ಒಂದು ದೊಡ್ಡ ಹಿನ್ನೆಲೆ ಇರುತ್ತದೆ. ಆದರೆ, ನಾವು ಆ ಟೆಂಪ್ಲೇಟ್‌ಗೆ ಸಣ್ಣದೊಂದು ಟ್ವಿಸ್ಟ್ ಕೊಟ್ಟಿದ್ದೇವೆ. ಓರ್ವ ಮಹಿಳೆ ಆ ಜಾಗದಲ್ಲಿದ್ದರೆ ಕಥೆ ಹೇಗೆ ಸಾಗುತ್ತದೆ ಎಂಬುದನ್ನು ಕೌತುಕವಾಗಿ ತೋರಿಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಾಯಿ ಪಲ್ಲವಿ ಮಾಡಬೇಕಿದ್ದ ಪಾತ್ರ ಸಮಂತಾ ಪಾಲಾಗಿದ್ದು ಹೇಗೆ?

ಇತ್ತೀಚೆಗೆ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡು ಆಸಕ್ತಿದಾಯಕ ವಿಷಯವೊಂದನ್ನು ಹಂಚಿಕೊಂಡಿದ್ದರು. ನಿರ್ದೇಶಕಿ ನಂದಿನಿ ರೆಡ್ಡಿ ಅವರು ಮೊದಲು ಈ ಚಿತ್ರದ ಕಥೆಯನ್ನು ಸಾಯಿ ಪಲ್ಲವಿ ಮನಸ್ಸಿನಲ್ಲಿಟ್ಟುಕೊಂಡು ಬರೆದಿದ್ದರಂತೆ. ಆದರೆ, ಸಾಯಿ ಪಲ್ಲವಿ ಬೇರೆ ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರಿಂದ ಈ ಚಿತ್ರ ಮಾಡಲು ಸಾಧ್ಯವಾಗಲಿಲ್ಲ. ಆ ಬಳಿಕ ಚಿತ್ರಕಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಸಮಂತಾ ಅವರಿಗೆ ಸೂಟ್ ಆಗುವಂತೆ ಸಿದ್ಧಪಡಿಸಲಾಯಿತಂತೆ.

ಇದನ್ನೂ ಓದಿ: ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್ 

ಕನ್ನಡದವರಾದ ನಟ ದಿಗಂತ್ , ಗುಲ್ಶನ್ ದೇವಯ್ಯ ನಟಿಸಿದ್ದಾರೆ, ಗೌತಮಿ, ಶ್ರೀಮುಖಿ, ಆನಂದ್, ಲಕ್ಷ್ಮಿ, ಶ್ರೀನಿವಾಸ್ ಗವಿರೆಡ್ಡಿ ಮತ್ತು ಮಂಜುಷಾ ಪೋಷಕ ಪಾತ್ರಗಳಲ್ಲಿದ್ದಾರೆ. ಸಮಂತಾ ಅವರ ಸ್ವಂತ ನಿರ್ಮಾಣ ಸಂಸ್ಥೆಯಾದ ‘ಟ್ರಾಲಿಲಾ ಮೂವಿಂಗ್ ಪಿಕ್ಚರ್ಸ್’ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿದೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘ಯು/ಎ’ ಸರ್ಟಿಫಿಕೇಟ್ ಸಿಕ್ಕಿದ್ದು, ಚಿತ್ರದ ರನ್‌ಟೈಮ್ 2 ಗಂಟೆ, 34 ನಿಮಿಷ ಇರಲಿದೆ. ಜೂನ್ 19ರಂದು ಸಿನಿಮಾ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Shani Sade Sati: 2027ರಲ್ಲಿ ಶನಿ ರಾಶಿ ಪರಿವರ್ತನೆ; ಈ ರಾಶಿಗಳ ಕಷ್ಟಕ್ಕೆ ಬೀಳಲಿದೆ ಪೂರ್ಣವಿರಾಮ! – Kannada News | Shani Sade Sati End 2027: Relief for Zodiac Signs from Dhaiya Troubles!

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನ ಸಾಡೇಸಾತಿ (Sadhe Sati) ಅವಧಿಯನ್ನು ಅತ್ಯಂತ ಕಠಿಣ ಪರಿಶ್ರಮ, ಹೋರಾಟ ಮತ್ತು ಪರೀಕ್ಷೆಯ ಸಮಯ ಎಂದು ಪರಿಗಣಿಸಲಾಗುತ್ತದೆ. ಆದರೆ, ಪ್ರಸಿದ್ಧ ಜ್ಯೋತಿಷಿ ಚಂದ್ರೇಶ್ ಶರ್ಮಾ ಅವರ ಪ್ರಕಾರ, ಮುಂಬರುವ ಗ್ರಹಗಳ ರಾಶಿ ಪರಿವರ್ತನೆಯು ಕೆಲವು ಅದೃಷ್ಟದ ರಾಶಿಗಳಿಗೆ ಎಲ್ಲಾ ಕಷ್ಟಗಳ ಅಂತ್ಯ ಮತ್ತು ಹೊಸ ಶುಭ ಆರಂಭದ ಸಂಕೇತವನ್ನು ನೀಡುತ್ತಿದೆ.

ಶನಿ ಸಾಡೇಸಾತಿ ಮತ್ತು ಧೈಯಾದ ಅಂತ್ಯ ಎಂದರೆ ಜೀವನದಲ್ಲಿ ನಡೆಯುತ್ತಿರುವ ಕಠಿಣ ಹೋರಾಟಗಳು, ಮಾನಸಿಕ ಒತ್ತಡ ಮತ್ತು ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಸಿಗಲಿದೆ ಎಂದರ್ಥ. ಗ್ರಹಗಳ ಈ ಬದಲಾವಣೆಯಿಂದಾಗಿ ಬಾಧಿತ ರಾಶಿಯವರಿಗೆ ಸ್ಥಗಿತಗೊಂಡ ಕೆಲಸಗಳಲ್ಲಿ ಯಶಸ್ಸು, ಸಮಾಜದಲ್ಲಿ ಗೌರವ-ಪ್ರತಿಷ್ಠೆ ಮತ್ತು ಮಾನಸಿಕ ಶಾಂತಿ ಲಭಿಸುತ್ತದೆ. ಇದು ಜೀವನವನ್ನು ಮತ್ತೆ ಸುಸ್ಥಿತಿಗೆ ತಂದುಕೊಂಡು ಹೊಸ ಆರಂಭ ಮಾಡಲು ಸೂಕ್ತ ಸಮಯವಾಗಿದೆ.

2027ರಲ್ಲಿ ಮೇಷ ರಾಶಿಗೆ ಶನಿ ಪ್ರವೇಶ; ಯಾರಿಗೆ ಸಿಗಲಿದೆ ಮುಕ್ತಿ?

ನ್ಯಾಯ ಮತ್ತು ಕರ್ಮದ ದೇವನಾದ ಶನಿ ದೇವನು 2027ರಲ್ಲಿ ಮಂಗಳನ ಒಡೆತನದ ಮೇಷ ರಾಶಿಗೆ ಗೋಚರಿಸಲಿದ್ದಾನೆ (Shani Gochar 2027). ಇದರಿಂದಾಗಿ ಪ್ರಸ್ತುತ ಶನಿಯ ಕಠಿಣ ಪ್ರಭಾವವನ್ನು ಎದುರಿಸುತ್ತಿರುವ ಕೆಲವು ರಾಶಿಗಳಿಗೆ ದೊಡ್ಡ ರಿಲೀಫ್ ಸಿಗಲಿದೆ. ಪ್ರಸ್ತುತ ಕುಂಭ, ಮೀನ ಮತ್ತು ಮೇಷ ರಾಶಿಗಳ ಮೇಲೆ ಶನಿಯ ಸಾಡೇಸಾತಿಯ ಪ್ರಭಾವವಿದೆ. ಇದರೊಂದಿಗೆ ಧನು ರಾಶಿಯವರ ಮೇಲೆ ಶನಿಯ ಧೈಯಾ (ಕಂಟಕ ಶನಿ) ಮತ್ತು ಸಿಂಹ ರಾಶಿಯವರ ಮೇಲೆ ಅಷ್ಟಮ ಶನಿಯ ಧೈಯಾ ನಡೆಯುತ್ತಿದೆ.

ಆದರೆ, 2027ರಲ್ಲಿ ಶನಿ ದೇವನು ಮೇಷ ರಾಶಿಗೆ ಪ್ರವೇಶಿಸುತ್ತಿದ್ದಂತೆ, ಈ ಮೂರು ರಾಶಿಗಳವರು ಶನಿಯ ಭಾರಿ ಪ್ರಭಾವದಿಂದ ಸಂಪೂರ್ಣವಾಗಿ ಮುಕ್ತಿ ಪಡೆಯಲಿದ್ದಾರೆ. ಶನಿಯು ರಾಶಿ ಬದಲಾಯಿಸುತ್ತಿದ್ದಂತೆ ಕುಂಭ ರಾಶಿಯವರ ಸಾಡೇಸಾತಿ ಅವಧಿಯು ಸಂಪೂರ್ಣವಾಗಿ ಕೊನೆಗೊಳ್ಳಲಿದೆ. ಧನು ರಾಶಿಯ ಜಾತಕದವರಿಗೆ ಕಂಟಕ ಶನಿಯ ಧೈಯಾದಿಂದ ದೊಡ್ಡ ಮಟ್ಟದ ಪರಿಹಾರ ಸಿಗಲಿದೆ. ಸಿಂಹ ರಾಶಿಯವರ ಮೇಲೆ ನಡೆಯುತ್ತಿರುವ ಅಷ್ಟಮ ಶನಿಯ ಧೈಯಾ ಕೊನೆಗೊಳ್ಳಲಿದೆ.

ಈ ರಾಶಿಗಳ ಮೇಲಿನ ಶನಿಯ ಭಾರಿ ಪ್ರಭಾವ ದೂರವಾಗುತ್ತಿದ್ದಂತೆ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಪ್ರಾರಂಭವಾಗುತ್ತವೆ. ವೃತ್ತಿಜೀವನದಲ್ಲಿದ್ದ ಅಡೆತಡೆಗಳು ನಿವಾರಣೆಯಾಗುತ್ತವೆ, ಆರೋಗ್ಯ ಸುಧಾರಿಸುತ್ತದೆ ಮತ್ತು ದೀರ್ಘಕಾಲದಿಂದ ಸಿಲುಕಿಕೊಂಡಿದ್ದ ಹಣ ಕೈ ಸೇರುವ ಯೋಗಗಳು ನಿರ್ಮಾಣವಾಗುತ್ತವೆ.

ಇದನ್ನೂ ಓದಿ: ಶನಿಯ ಮನೆಯಲ್ಲಿ ರಾಹುವಿನ ನಕ್ಷತ್ರದಲ್ಲಿಯೇ ರಾಹುವಿನ ಸಂಚಾರ .. ಆಗಲಿದೆ ಅನೇಕ ಚಮತ್ಕಾರ…

ಮೇಷ ರಾಶಿಯವರು ಏನು ಮಾಡಬೇಕು?

ಮಂಗಳ ಗ್ರಹವು ಮೇಷ ರಾಶಿಯ ಅಧಿಪತಿಯಾಗಿದೆ. ಮಂಗಳ ಮತ್ತು ಶನಿಯ ಈ ಯುತಿಯು (ಸಂಯೋಗ) ಹಲವು ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ತರಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಅವಧಿಯಲ್ಲಿ ಮೇಷ ರಾಶಿಯ ಜಾತಕದವರು ತಮ್ಮ ಇಷ್ಟ ದೇವತೆ, ಭಗವಾನ್ ಹನುಮಂತ, ಕಾರ್ತಿಕೇಯ (ಸುಬ್ರಹ್ಮಣ್ಯ) ಮತ್ತು ಸೂರ್ಯ ದೇವನನ್ನು ವಿಶೇಷವಾಗಿ ಪೂಜಿಸಬೇಕು. ಈ ದೇವತೆಗಳ ಆರಾಧನೆಯು ಮೇಷ ರಾಶಿಯವರಿಗೆ ರಕ್ಷಣೆ ನೀಡುತ್ತದೆ.

ಶನಿ ದೋಷ ನಿವಾರಣೆಗೆ ಸರಳ ಪರಿಹಾರಗಳು:

ಯಾರ ಜಾತಕದಲ್ಲಿ ಶನಿ ಸಾಡೇಸಾತಿ, ಧೈಯಾ ಅಥವಾ ಶನಿ ಮಹಾದಶೆ ನಡೆಯುತ್ತಿದೆಯೋ, ಅವರು ಈ ಸರಳ ಕ್ರಮಗಳನ್ನು ಅನುಸರಿಸಬಹುದು. ಕಪ್ಪು ಬಣ್ಣದ ವಸ್ತ್ರಗಳನ್ನು ಧರಿಸುವುದು ಅಥವಾ ದಾನ ಮಾಡುವುದು ಒಳ್ಳೆಯದು. ಇದಲ್ಲದೇ ದಿನನಿತ್ಯ ನಿಯಮಿತವಾಗಿ ಹನುಮಾನ್ ಚಾಲೀಸಾ ಪಠಿಸುವುದರಿಂದ ರಾಹು, ಕೇತು ಮತ್ತು ಶನಿಯ ನಕಾರಾತ್ಮಕ ಪ್ರಭಾವಗಳು ಗಣನೀಯವಾಗಿ ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ಮುಂಗಾರು ಮಳೆಯ ಅಬ್ಬರಕ್ಕೆ ಕೆರೆಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ – Kannada News | Bengaluru Rain Update: Heavy Monsoon Rains Lash City; Electronic City and Silk Board Roads Waterlogged

ಬೆಂಗಳೂರು, ಜೂನ್ 13: ಬೆಂಗಳೂರಿನಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಶುಕ್ರವಾರ ತಡರಾತ್ರಿ ಸುರಿದ ಭಾರಿ ಮಳೆಗೆ ನಗರದ ಹಲವೆಡೆ ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಂಡಿದೆ. ರಾತ್ರಿಯಿಡೀ ಸುರಿದ ಮಳೆಯಿಂದಾಗಿ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ತೀವ್ರ ಸಂಕಷ್ಟ ಎದುರಿಸುವಂತಾಯಿತು. ನಗರದ ಪ್ರಮುಖ ಭಾಗಗಳಾದ ಶಾಂತಿನಗರ, ಕಂಟೋನ್ಮೆಂಟ್, ವಸಂತನಗರ, ಸದಾಶಿವನಗರ, ಶೇಷಾದ್ರಿಪುರಂ, ಮಲ್ಲೇಶ್ವರಂ, ಮತ್ತಿಕೆರೆ, ದೊಮ್ಮಲೂರು, ಇಂದಿರಾನಗರ, ಹೆಬ್ಬಾಳ, ಕುಮಾರಸ್ವಾಮಿ ಲೇಔಟ್ ಹಾಗೂ ಉತ್ತರಹಳ್ಳಿ ಸೇರಿದಂತೆ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಮಳೆಯ ಅಬ್ಬರಕ್ಕೆ ತಗ್ಗು ಪ್ರದೇಶದ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯುಂಟಾಯಿತು.

ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ ರಸ್ತೆ, ಹೊಸೂರು ರಸ್ತೆ ಹಾಗೂ ಸಿಲ್ಕ್ ಬೋರ್ಡ್ ವ್ಯಾಪ್ತಿಯಲ್ಲಿ ಮಳೆ ನೀರು ರಸ್ತೆಯ ಮೇಲೆ ಹರಿದಿದ್ದರಿಂದ ವಾಹನ ಸವಾರರು ಪರದಾಡಿದರು. ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಮಂಡಿಯುದ್ದ ನೀರು ನಿಂತಿದ್ದರಿಂದ ಸವಾರರು ವಾಹನಗಳನ್ನು ತಳ್ಳಿಕೊಂಡು ಹೋಗುವ ದೃಶ್ಯಗಳು ಕಂಡುಬಂದವು. ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮುಂದಿನ ಐದು ದಿನಗಳ ಕಾಲ ರಾಜ್ಯಾದ್ಯಂತ ಮಳೆ ಮುಂದುವರಿಯಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ‘ಯಲ್ಲೋ ಅಲರ್ಟ್’ ಘೋಷಿಸಿದೆ. ಇನ್ನು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Zodiac Signs: ಬೇರೆಯವರ ಮನಸ್ಸನ್ನು ಸುಲಭವಾಗಿ ಓದಬಲ್ಲರು ಈ ಮೂರು ರಾಶಿಯವರು; ಭವಿಷ್ಯದ ಮುನ್ಸೂಚನೆ ನೀಡುವ ಶಕ್ತಿ ಇವರಿಗಿದೆ! – Kannada News | Astrology: The 3 Most Spiritual Zodiac Signs with Divine Intuition and Foresight

ಬೇರೆಯವರ ಮನಸ್ಸನ್ನು ಸುಲಭವಾಗಿ ಓದಬಲ್ಲರು ಈ ಮೂರು ರಾಶಿಯವರುImage Credit source: Pinterest

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 12ರಾಶಿಗಳಲ್ಲಿ ಪ್ರತಿಯೊಂದು ರಾಶಿಯು ತನ್ನದೇ ಆದ ವಿಶಿಷ್ಟ ಗುಣಲಕ್ಷಣಗಳು ಮತ್ತು ಶಕ್ತಿಗಳನ್ನು ಹೊಂದಿದೆ. ಆದಾಗ್ಯೂ, ಕೆಲವು ರಾಶಿಗಳ ಜನರು ಸಾಮಾನ್ಯ ಮಿತಿಗಳನ್ನು ಮೀರಿ, ಆಳವಾದ ಆಲೋಚನೆಗಳು, ಬಲವಾದ ಆಂತರಿಕ ಭಾವನೆಗಳು ಮತ್ತು ದೈವಿಕ ಭಾವನೆಗಳೊಂದಿಗೆ ಬದುಕುತ್ತಾರೆ. ಇವರನ್ನು ಆಧ್ಯಾತ್ಮಿಕವಾಗಿ ಅತ್ಯಂತ ಶಕ್ತಿಶಾಲಿಗಳು ಎಂದು ಪರಿಗಣಿಸಲಾಗುತ್ತದೆ. ಅಂತಹ ಜನರು ಇತರರ ಭಾವನೆಗಳು ಮತ್ತು ಆಂತರಿಕ ಆಲೋಚನೆಗಳನ್ನು ಸುಲಭವಾಗಿ ಗ್ರಹಿಸುವ (Intuition Power) ಅಪೂರ್ವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇದಲ್ಲದೆ, ಭವಿಷ್ಯದ ಘಟನೆಗಳನ್ನು ಮುಂಚಿತವಾಗಿಯೇ ಊಹಿಸುವ ಶಕ್ತಿಯೂ ಇವರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಜ್ಯೋತಿಷ್ಯ ಜಗತ್ತಿನಲ್ಲಿ ವಿಶೇಷ ಸ್ಥಾನವನ್ನು ಗಳಿಸಿರುವ ಅಂತಹ 3 ಪ್ರಮುಖ ರಾಶಿಗಳ ವಿವರ ಇಲ್ಲಿದೆ:

ಮೀನ ರಾಶಿ (Pisces):

ಮೀನ ರಾಶಿಯಡಿಯಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿ ಬಹಳ ಸೂಕ್ಷ್ಮ ಮನಸ್ಸಿನವರು. ಅವರು ಸ್ವಪ್ನಶೀಲ ಸ್ವಭಾವ ಮತ್ತು ಬಲವಾದ ಕಲ್ಪನಾ ಶಕ್ತಿಯನ್ನು ಹೊಂದಿರುತ್ತಾರೆ. ಯಾರಾದರೂ ಏನನ್ನಾದರೂ ಹೇಳುವ ಮುನ್ನವೇ ಅವರ ಮನಸ್ಸಿನಲ್ಲಿ ಏನಿದೆ ಮತ್ತು ಅವರು ಏನು ಯೋಚಿಸುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುವ ಅದ್ಭುತ ಶಕ್ತಿ ಇವರಿಗಿದೆ. ಮೀನ ರಾಶಿಯವರು ಸಾಮಾನ್ಯವಾಗಿ ಏಕಾಂಗಿಯಾಗಿ ಸಮಯ ಕಳೆಯಲು ಇಷ್ಟಪಡುತ್ತಾರೆ. ಈ ಸಮಯದಲ್ಲಿ ಅವರು ತಮ್ಮ ಆಂತರಿಕ ಆತ್ಮದೊಂದಿಗೆ ಸಂವಹನ ನಡೆಸುತ್ತಾರೆ. ಪ್ರಕೃತಿಯ ಸೌಂದರ್ಯ, ಶಾಂತಿಯುತ ಸಂಗೀತ ಮತ್ತು ಧ್ಯಾನದಂತಹ ವಿಷಯಗಳು ಇವರನ್ನು ಆಕರ್ಷಿಸುತ್ತವೆ. ಆಧ್ಯಾತ್ಮಿಕ ಮಾರ್ಗದಲ್ಲಿ ಉನ್ನತ ಸ್ಥಾನ ತಲುಪುವ ಇವರು, ದೈವಿಕ ಶಕ್ತಿಗಳಿಗೆ ಅತ್ಯಂತ ಹತ್ತಿರವಾಗಿದ್ದಾರೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಶನಿಯ ಮನೆಯಲ್ಲಿ ರಾಹುವಿನ ನಕ್ಷತ್ರದಲ್ಲಿಯೇ ರಾಹುವಿನ ಸಂಚಾರ .. ಆಗಲಿದೆ ಅನೇಕ ಚಮತ್ಕಾರ…

ವೃಶ್ಚಿಕ ರಾಶಿ (Scorpio):

ವೃಶ್ಚಿಕ ರಾಶಿಯವರು ಜನ್ಮಜಾತವಾಗಿ ರಹಸ್ಯ ಸ್ವಭಾವದವರು. ಇವರ ಆಳವಾದ ಆಲೋಚನೆಗಳು, ಶಾಂತ ಅಭ್ಯಾಸಗಳು ಮತ್ತು ಸೂಕ್ಷ್ಮ ವಿಷಯಗಳನ್ನು ಗಮನಿಸುವ ಸಾಮರ್ಥ್ಯವು ಇವರನ್ನು ಇತರರಿಗಿಂತ ವಿಭಿನ್ನವಾಗಿಸುತ್ತದೆ. ಇವರು ಜೀವನದ ಕಾಣದ ಮತ್ತು ನಿಗೂಢ ಅಂಶಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಜೀವನ, ಸಾವು, ಆತ್ಮ ಮತ್ತು ಪುನರ್ಜನ್ಮದಂತಹ ತಾತ್ವಿಕ ವಿಷಯಗಳ ಬಗ್ಗೆ ಇವರು ಹೆಚ್ಚಾಗಿ ಯೋಚಿಸುತ್ತಾರೆ. ವೃಶ್ಚಿಕ ರಾಶಿಯವರು ತಮ್ಮ ಭಾವನೆಗಳನ್ನು ಸುಲಭವಾಗಿ ಹೊರಹಾಕುವುದಿಲ್ಲ, ಆದರೆ ಜನರ ನಿಜವಾದ ಸ್ವರೂಪ ಮತ್ತು ಆಂತರಿಕ ಉದ್ದೇಶಗಳನ್ನು ಕ್ಷಣಾರ್ಧದಲ್ಲಿ ಗುರುತಿಸುತ್ತಾರೆ. ನೋವಿನಲ್ಲಿರುವವರಿಗೆ ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡುವ ಇವರ ವಿಶ್ಲೇಷಣಾತ್ಮಕ ಸಾಮರ್ಥ್ಯವು ಇವರನ್ನು ಅತ್ಯುತ್ತಮ ಆಧ್ಯಾತ್ಮಿಕ ಮಾರ್ಗದರ್ಶಕರನ್ನಾಗಿ ಮಾಡುತ್ತದೆ.

ಧನು ರಾಶಿ (Sagittarius):

ಧನು ರಾಶಿಯವರು ಸ್ವಾತಂತ್ರ್ಯ ಮತ್ತು ಜ್ಞಾನವನ್ನು ಅತಿಯಾಗಿ ಪ್ರೀತಿಸುವವರು. ನಿರಂತರವಾಗಿ ಹೊಸ ವಿಷಯಗಳನ್ನು ಕಲಿಯಲು, ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಇವರು ಬಯಸುತ್ತಾರೆ. ತತ್ವಶಾಸ್ತ್ರ, ಧಾರ್ಮಿಕ ನಂಬಿಕೆಗಳು ಮತ್ತು ಆಧ್ಯಾತ್ಮಿಕ ಸಿದ್ಧಾಂತಗಳ ಬಗ್ಗೆ ಆಳವಾಗಿ ಯೋಚಿಸುವುದು ಇವರ ಹವ್ಯಾಸ. ಪ್ರಕೃತಿಯೊಂದಿಗೆ ಸಮಯ ಕಳೆಯುವುದು ಇವರಿಗೆ ಅಪಾರ ಮನಸ್ಸಿನ ಶಾಂತಿಯನ್ನು ನೀಡುತ್ತದೆ. ಪ್ರಕೃತಿಯೊಂದಿಗಿನ ಗಾಢ ಸಂಪರ್ಕವು ಇವರಿಗೆ ಬಲವಾದ ಆಂತರಿಕ ಶಕ್ತಿಯನ್ನು ನೀಡುತ್ತದೆ. ಕೆಲವು ಸಂದರ್ಭಗಳಲ್ಲಿ ಇವರಿಗೆ ಭವಿಷ್ಯದ ಬಗ್ಗೆ ಸ್ಪಷ್ಟವಾದ ಮುನ್ಸೂಚನೆಗಳು ಲಭ್ಯವಾಗುತ್ತವೆ ಎಂದು ನಂಬಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮೀನ, ವೃಶ್ಚಿಕ ಮತ್ತು ಧನು ರಾಶಿಗಳು ಕೇವಲ ಜ್ಯೋತಿಷ್ಯ ಸಂಕೇತಗಳಲ್ಲ; ಅವು ಮಾನವ ಅನುಭವದ ಆಳವಾದ ಆಧ್ಯಾತ್ಮಿಕ ಅಂಶಗಳನ್ನು ಪ್ರತಿಬಿಂಬಿಸುವ ಕನ್ನಡಿಗಳು. ಇವರಲ್ಲಿರುವ ದೈವಿಕ ಒಳನೋಟ ಮತ್ತು ವಿಶಿಷ್ಟ ಗುಣಗಳು ಇವರನ್ನು ಆಧ್ಯಾತ್ಮಿಕ ಪ್ರಪಂಚದ ಉನ್ನತ ಸ್ಥಾನದಲ್ಲಿ ನಿಲ್ಲಿಸುತ್ತವೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಮುಂಗಾರು ಮಳೆ ಕೊರತೆ: ಕಾವೇರಿ ಒಡಲು ಖಾಲಿ, ಕೃಷ್ಣಾ ಕೊಳ್ಳದಲ್ಲೂ ಆತಂಕ, ಬರಿದಾಗುತ್ತಿವೆ ಪ್ರಮುಖ ಜಲಾಶಯಗಳು – Kannada News | Karnataka Water Crisis 2026: KRS and Kabini Dams Reach Dead Storage as Deficit Monsoon Hits Cauvery and Krishna Basins

ಬೆಂಗಳೂರು, ಜೂನ್ 13: ರಾಜ್ಯಕ್ಕೆ ಮುಂಗಾರು ಮಳೆಯ (Monsoon Rain) ಆಗಮನವಾಗಿದ್ದರೂ ಕಾವೇರಿ ಮತ್ತು ಕೃಷ್ಣಾ ನದಿ ಜಲಾನಯನ ಪ್ರದೇಶಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ. ಕಾವೇರಿ ಕೊಳ್ಳದ ಜೀವನಾಡಿಗಳಾದ ಕೆಆರ್​ಎಸ್, ಕಬಿನಿ, ಹೇಮಾವತಿ ಹಾಗೂ ಉತ್ತರ ಕರ್ನಾಟಕದ ಪ್ರಮುಖ ಜಲಾಶಯವಾದ ಆಲಮಟ್ಟಿಯಲ್ಲೂ ನೀರಿನ ಸಂಗ್ರಹ ಗಣನೀಯವಾಗಿ ಕುಸಿದಿದೆ. ಜೂನ್ ಎರಡನೇ ವಾರ ಕಳೆದರೂ ಸಮರ್ಪಕ ಮಳೆಯಾಗದ ಕಾರಣ ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಭೀತಿ ಎದುರಾಗಿದ್ದು, ರೈತ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.

ಮುಖ್ಯಾಂಶಗಳು

  • ಕೆಆರ್‌ಎಸ್‌ನಲ್ಲಿ ಕೇವಲ 6 ಟಿಎಂಸಿ ಬಳಸಬಹುದಾದ ನೀರು ಲಭ್ಯ.
  • ಕಬಿನಿ ಜಲಾಶಯದ ಲೈವ್ ಸ್ಟೋರೇಜ್ ಸಾಮರ್ಥ್ಯ ಶೂನ್ಯ.
  • ಮಳೆ ಕೊರತೆಯಿಂದ ಬಿತ್ತನೆ ಕಾರ್ಯ ಸಂಪೂರ್ಣ ವಿಳಂಬ.

ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಆತಂಕಕಾರಿ ಪರಿಸ್ಥಿತಿ

ಕೆಆರ್​ಎಸ್ ಜಲಾಶಯ ನೀರಿನ ಮಟ್ಟ

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟ ಸದ್ಯ 81.36 ಅಡಿಗೆ (ಗರಿಷ್ಠ 124.80 ಅಡಿ) ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 108.64 ಅಡಿ ನೀರಿದ್ದು, ಜೂನ್‌ನಲ್ಲೇ ಬಾಗಿನ ಅರ್ಪಿಸಲಾಗಿತ್ತು. ಸದ್ಯ ಡ್ಯಾಂನಲ್ಲಿರುವ 11.399 ಟಿಎಂಸಿ ನೀರಿನಲ್ಲಿ 5 ಟಿಎಂಸಿ ಡೆಡ್ ಸ್ಟೋರೇಜ್ ಆಗಿದ್ದು, ಬಳಕೆಗೆ ಸಿಗುವುದು ಕೇವಲ 6 ಟಿಎಂಸಿ ಮಾತ್ರ! ಸದ್ಯ ಒಳಹರಿವು ಕೇವಲ 581 ಕ್ಯೂಸೆಕ್ ಇದೆ. ಕಳೆದ ವರ್ಷ ತಮಿಳುನಾಡಿಗೆ ಹೆಚ್ಚುವರಿಯಾಗಿ 30 ಟಿಎಂಸಿ ನೀರು ಹರಿಸಲಾಗಿತ್ತು, ಆದರೆ ಈ ಬಾರಿ ನಿಗದಿತ 9 ಟಿಎಂಸಿ ನೀರು ಕೊಡುವುದೂ ಅಸಾಧ್ಯವಾಗಿದೆ.

ಕೆಆರ್​ಎಸ್ ಡ್ಯಾಂ ಬ್ಯಾಕ್​ವಾಟರ್ ಪ್ರದೇಶ ಬರಿದಾಗಿರುವುದು

ಕಬಿನಿ ಜಲಾಶಯ ನೀರಿನ ಮಟ್ಟ

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ಸ್ಥಿತಿ ಮತ್ತಷ್ಟು ಶೋಚನೀಯವಾಗಿದ್ದು, ನೀರಿನ ಮಟ್ಟ 52.16 ಅಡಿಗೆ (ಗರಿಷ್ಠ 84 ಅಡಿ) ಕುಸಿದಿದೆ. ಪ್ರಸ್ತುತ ಕೇವಲ 4.68 ಟಿಎಂಸಿ ನೀರು ಮಾತ್ರ ಸಂಗ್ರಹವಿದ್ದು, ಬಳಸಬಹುದಾದ (Live Storage) ನೀರಿನ ಪ್ರಮಾಣ ಸಂಪೂರ್ಣ ಶೂನ್ಯವಾಗಿದೆ! ಕಳೆದ ವರ್ಷ ಇಲ್ಲಿ 15.89 ಟಿಎಂಸಿ ನೀರಿತ್ತು. ಸದ್ಯ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಬಿಡುಗಡೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ಹೇಮಾವತಿ ಜಲಾಶಯ ನೀರಿನ ಮಟ್ಟ

ಹಾಸನ ಜಿಲ್ಲೆಯ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದ ಒಡಲು ಕೂಡ ಬರಿದಾಗುತ್ತಿದೆ. 37.103 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ ಕೇವಲ 14.586 ಟಿಎಂಸಿ ನೀರಿದ್ದು, ಬಳಕೆಗೆ ಯೋಗ್ಯವಿರುವುದು 10.214 ಟಿಎಂಸಿ ಮಾತ್ರ. ಮೂಡಿಗೆರೆ, ಸಕಲೇಶಪುರ ಭಾಗದಲ್ಲಿ ಮಳೆಯಾಗದಿದ್ದರೆ ಹಾಸನ ಮಾತ್ರವಲ್ಲದೆ ಮಂಡ್ಯ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳ ಕೃಷಿಗೆ ಭಾರಿ ಹೊಡೆತ ಬೀಳಲಿದೆ.

ಉತ್ತರ ಕರ್ನಾಟಕದಲ್ಲೂ ಆತಂಕ

ಉತ್ತರ ಕರ್ನಾಟಕದ ಭಾಗದಲ್ಲೂ ಮುಂಗಾರು ಕೈಕೊಟ್ಟಿದ್ದು, ಕೃಷ್ಣಾ ನದಿಯ ಉಗಮಸ್ಥಳವಾದ ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಮಳೆ ಕೊರತೆಯಾಗಿದೆ. ಇದರ ನೇರ ಪರಿಣಾಮ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ಮೇಲೆ ಬಿದ್ದಿದ್ದು, ಸದ್ಯ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಶೂನ್ಯವಾಗಿದೆ. ಪ್ರಸ್ತುತ ಆಲಮಟ್ಟಿ ಡ್ಯಾಂನ ನೀರಿನ ಮಟ್ಟ 508.26 ಮೀಟರ್ ಇದ್ದು, ಕಳೆದ ವರ್ಷ 514.72 ಮೀಟರ್ ದಾಖಲಾಗಿತ್ತು. ಮಳೆ ಕೊರತೆ ಹೀಗೆಯೇ ಮುಂದುವರಿದರೆ ವಿಜಯಪುರ ಸೇರಿದಂತೆ ಹಲವು ಪ್ರಮುಖ ನಗರಗಳ ಕುಡಿಯುವ ನೀರಿಗೆ ತೀವ್ರ ಸಂಕಷ್ಟ ಎದುರಾಗಲಿದೆ.

ಇದನ್ನೂ ಓದಿ: ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ

ಕುಂಠಿತಗೊಂಡ ಮುಂಗಾರು ಬಿತ್ತನೆ ಕಾರ್ಯ

ಮಳೆ ಕೊರತೆಯಿಂದಾಗಿ ರಾಜ್ಯಾದ್ಯಂತ ಕೃಷಿ ಚಟುವಟಿಕೆಗಳು ಸಂಪೂರ್ಣ ವಿಳಂಬವಾಗಿವೆ. ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ 2.07 ಲಕ್ಷ ಹೆಕ್ಟೇರ್ ಕೃಷಿ ಗುರಿ ಹೊಂದಲಾಗಿತ್ತಾದರೂ, ಕೇವಲ 11.138 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಇತ್ತ ವಿಜಯಪುರ ಜಿಲ್ಲೆಯಲ್ಲೂ 7.75 ಲಕ್ಷ ಹೆಕ್ಟೇರ್ ಮುಂಗಾರು ಬಿತ್ತನೆ ಗುರಿಯ ಪೈಕಿ ಪ್ರಸ್ತುತ ಬಿತ್ತನೆ ಪ್ರಮಾಣ ಭಾರಿ ಕುಸಿತ ಕಂಡಿದೆ. ಕಳೆದ ವರ್ಷ ಜೂನ್ ಆರಂಭದಲ್ಲೇ ಭರ್ಜರಿ ಬಿತ್ತನೆ ಕಾರ್ಯ ನಡೆದಿತ್ತು. ಆದರೆ ಈ ಬಾರಿ ಜಲಾಶಯಗಳು ಬರಿದಾಗುತ್ತಿರುವುದು ಮತ್ತು ಮುಂಗಾರು ಮಳೆ ಕೈಕೊಟ್ಟಿರುವುದು ಅನ್ನದಾತರನ್ನು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ.

ಮಾಹಿತಿ: ದಿಲೀಪ್ ಸಿಪಿ, ಅಶೋಕ್ ಯಡಹಳ್ಳಿ, ರಾಮ್, ಮಂಜುನಾಥ್ ಕೆಬಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರ ಖತಂ!: ಹೆಣ್ಣುಮಕ್ಕಳ ಕೊಲೆಗೆ ಸೇನೆ ಮೂಲಕ ಭೀಕರ ಪ್ರತಿಕಾರ ತೀರಿಸಿಕೊಂಡ ಅಮೆರಿಕ ಅಧ್ಯಕ್ಷ ಟ್ರಂಪ್ – Kannada News | US Military Kills Tren De Aragua Chief Niño Guerrero; Trump Blasts Biden’s Border Policy

ವಾಷಿಂಗ್ಟನ್, ಜೂ.13: ಜಗತ್ತಿನ ಅತ್ಯಂತ ಕ್ರೂರ ಮತ್ತು ರಕ್ತಪಿಪಾಸು ಭಯೋತ್ಪಾದಕ ಸಂಘಟನೆಗಳಲ್ಲಿ ಒಂದಾದ ‘ಟ್ರೆನ್ ಡಿ ಅರಾಗುವಾ’ (Tren De Aragua) ಗ್ಯಾಂಗ್‌ನ ಮುಖ್ಯಸ್ಥ ‘ನಿನೋ ಗೆರೆರೊ’ (Niño Guerrero) ಅಮೆರಿಕ ಮಿಲಿಟರಿಯ ಭೀಕರ ದಾಳಿಗೆ ಹತನಾಗಿದ್ದಾನೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇರ ಆದೇಶದ ಮೇರೆಗೆ ಯುಎಸ್ ಸೌದರ್ನ್ ಕಮಾಂಡ್ (United States Southern Command) ನಡೆಸಿದ ಅತ್ಯಂತ ವೇಗದ ವೈಮಾನಿಕ ದಾಳಿಯಲ್ಲಿ (Kinetic Strike) ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ ಎಂದು ಟ್ರಂಪ್ ತಮ್ಮ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸುದೀರ್ಘ ಪೋಸ್ಟ್ ಬರೆದಿರುವ ಡೊನಾಲ್ಡ್ ಟ್ರಂಪ್, ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ನೀತಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ನಾನು ಎರಡನೇ ಬಾರಿಗೆ ಅಧಿಕಾರಕ್ಕೆ ಬರುವ ಮುನ್ನ, ಜೋ ಬೈಡನ್ ಅವರು ಅಮೆರಿಕದ ದಕ್ಷಿಣ ಗಡಿಯನ್ನು ಮುಕ್ತವಾಗಿ ಬಿಟ್ಟು ಲಕ್ಷಾಂತರ ಅಕ್ರಮ ಕ್ರಿಮಿನಲ್‌ಗಳು ದೇಶದೊಳಗೆ ನುಗ್ಗಲು ಅವಕಾಶ ಮಾಡಿಕೊಟ್ಟಿದ್ದರು. ಈ ವಿದೇಶಿ ಕ್ರಿಮಿನಲ್ ಸೈನ್ಯವು ಅಮೆರಿಕದ ನಾಗರಿಕರ ಮೇಲೆ ಅತ್ಯಾಚಾರ, ದೌರ್ಜನ್ಯ ಮತ್ತು ಕೊಲೆಗಳನ್ನು ಮಾಡಲು ಬೈಡನ್ ಸರ್ಕಾರವೇ ಪರೋಕ್ಷವಾಗಿ ಕಾರಣವಾಗಿತ್ತು” ಎಂದು ಟ್ರಂಪ್ ಕಿಡಿಕಾರಿದ್ದಾರೆ.

“ನನ್ನ ಚುನಾವಣಾ ಪ್ರಚಾರದ ಸಮಯದಲ್ಲಿ, ಈ ರಾಕ್ಷಸರನ್ನು ನಮ್ಮ ದೇಶದಿಂದ ಓಡಿಸುವುದಾಗಿ ಮತ್ತು ಇವರಿಂದ ಕೊಲೆಯಾದ ಅಮಾಯಕ ಅಮೆರಿಕನ್ನರ ಕುಟುಂಬಗಳಿಗೆ ನ್ಯಾಯ ಒದಗಿಸುವುದಾಗಿ ನಾನು ವಾಗ್ದಾನ ಮಾಡಿದ್ದೆ. 12 ವರ್ಷದ ಬಾಲಕಿ ಜೊಸೆಲಿನ್ ನುಂಗರಾಯ್, 22 ವರ್ಷದ ಯುವತಿ ಲೇಕನ್ ರೈಲಿ ಸೇರಿದಂತೆ ಹತ್ಯೆಯಾದ ನೂರಾರು ಸುಂದರ ಆತ್ಮಗಳ ಪರವಾಗಿ ಅಮೆರಿಕ ಮಿಲಿಟರಿ ಇಂದು ಪ್ರತಿಕಾರ ತೀರಿಸಿಕೊಂಡಿದೆ. ಅವರ ಕುಟುಂಬಗಳಿಗೆ ಹಾಗೂ ಪ್ರೀತಿಪಾತ್ರರಿಗೆ ನ್ಯಾಯ ಸಿಕ್ಕಿದೆ” ಎಂದು ಟ್ರಂಪ್ ಹೇಳಿದ್ದಾರೆ.

ತಮ್ಮ ಆಡಳಿತದ ಆರಂಭದಲ್ಲೇ ‘ಟ್ರೆನ್ ಡಿ ಅರಾಗುವಾ’ ಗ್ಯಾಂಗ್ ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ್ದನ್ನು ನೆನಪಿಸಿಕೊಂಡ ಟ್ರಂಪ್, ಈ ಕಾರ್ಯಾಚರಣೆಯನ್ನು ವೆನೆಜುವೆಲಾ ಸರ್ಕಾರದೊಂದಿಗೆ ನಿಕಟವಾಗಿ ಸಂಯೋಜಿಸಿ ಯಶಸ್ವಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹಾರ್ಮುಜ್‌ನಿಂದ ಹೊರಟ ಭಾರತೀಯ ಹಡಗುಗಳ ಮೇಲೆ ಇರಾನ್​ನಿಂದ ಡ್ರೋನ್ ದಾಳಿ; ಟ್ರಂಪ್ ಆರೋಪ

“ನಮ್ಮ ಮಿತ್ರರಾಷ್ಟ್ರವಾದ ವೆನೆಜುವೆಲಾ ಸರ್ಕಾರದೊಂದಿಗೆ ನಾವು ಉತ್ತಮವಾಗಿ ಕೆಲಸ ಮಾಡುತ್ತಿದ್ದೇವೆ. ಇದರ ಪರಿಣಾಮವಾಗಿ, ಟ್ರೆನ್ ಡಿ ಅರಾಗುವಾ ಭಯೋತ್ಪಾದಕರಿಗೆ ಈಗ ವೆನೆಜುವೆಲಾದಲ್ಲಾಗಲಿ ಅಥವಾ ಜಗತ್ತಿನ ಬೇರೆಲ್ಲೂ ಸುರಕ್ಷಿತ ಆಶ್ರಯ ತಾಣಗಳಿಲ್ಲ. ಇಂತಹ ಕ್ರೂರ ಕೊಲೆಗಡುಕರು ಮತ್ತು ಡ್ರಗ್ ಮಾಫಿಯಾ ಕಿಂಗ್‌ಗಳನ್ನು ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಲ್ಲಾದರೂ ಹುಡುಕಿ ನರಕದ ಆಳಕ್ಕೆ ತಳ್ಳಲು ಅಮೆರಿಕ ಸದಾ ಸಿದ್ಧವಿದೆ” ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

7 ಭರ್ಜರಿ ದಾಖಲೆಗಳನ್ನು ಬದಿಗಿಟ್ಟು ನಿವೃತ್ತಿ ಘೋಷಿಸಿದ ಕೇನ್ ವಿಲಿಯಮ್ಸನ್!

Source link

Karnavedha Samskara: ಗಂಡು ಮಕ್ಕಳಿಗೆ ಕಿವಿ ಚುಚ್ಚಲೇಬೇಕು ಏಕೆ ಗೊತ್ತಾ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Beyond Fashion: Understanding Karnavedha Samskara and Its Benefits for Boys

ಗಂಡು ಮಕ್ಕಳಿಗೆ ಕರ್ಣವೇದ ಸಂಸ್ಕಾರImage Credit source: Pinterest

ಹಿಂದೂ ಸನಾತನ ಸಂಪ್ರದಾಯದಲ್ಲಿ, ಅನೇಕ ಸಂಸ್ಕಾರಗಳು ವ್ಯಕ್ತಿಯ ಜೀವನದ ವಿವಿಧ ಹಂತಗಳಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅವುಗಳಲ್ಲಿ ಕರ್ಣವೇದ ಸಂಸ್ಕಾರ ಅಥವಾ ಕಿವಿ ಚುಚ್ಚಿಸುವುದು ಒಂದು ಪ್ರಮುಖ ವಿಧಿಯಾಗಿದೆ. ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಮಾತ್ರವಲ್ಲದೆ, ಗಂಡು ಮಕ್ಕಳಿಗೂ ಕಿವಿ ಚುಚ್ಚಿಸುವ ಪದ್ಧತಿ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ. ಇದು ಕೇವಲ ಅಲಂಕಾರಿಕ ಅಥವಾ ಆಧುನಿಕ ಫ್ಯಾಷನ್ ಆಗಿರದೆ, ಆಳವಾದ ಆಧ್ಯಾತ್ಮಿಕ, ವೈಜ್ಞಾನಿಕ ಮತ್ತು ಶೈಕ್ಷಣಿಕ ಮಹತ್ವವನ್ನು ಹೊಂದಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಕರ್ಣವೇದ ಸಂಸ್ಕಾರ ಎಂದರೇನು?

ಕರ್ಣವೇದ ಸಂಸ್ಕಾರವು ಪುಟ್ಟ ಮಕ್ಕಳ ಕಿವಿಯನ್ನು ಚುಚ್ಚುವ ಒಂದು ಧಾರ್ಮಿಕ ವಿಧಿಯಾಗಿದೆ. ಇದು ಹಿಂದೂ ಧರ್ಮದ ಷೋಡಶ ಸಂಸ್ಕಾರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಸಾಮಾನ್ಯವಾಗಿ, ಉಪನಯನದ ಸಮಯದಲ್ಲಿ ಅಥವಾ 21 ವರ್ಷ ವಯಸ್ಸಿನೊಳಗೆ ಈ ಸಂಸ್ಕಾರವನ್ನು ಮಾಡಿಸುವುದು ರೂಢಿಯಲ್ಲಿದೆ. ಇದು ಆಧ್ಯಾತ್ಮಿಕ ನಂಬಿಕೆಯ ಭಾಗವಾಗಿದ್ದು, ಪ್ರಾಚೀನ ಕಾಲದಿಂದಲೂ ಆಚರಿಸಿಕೊಂಡು ಬರಲಾಗಿದೆ.

ಆಧ್ಯಾತ್ಮಿಕ ಮಹತ್ವ:

ಕಿವಿ ಚುಚ್ಚಿಸುವುದಕ್ಕೆ ಹಲವು ಆಧ್ಯಾತ್ಮಿಕ ಕಾರಣಗಳಿವೆ. ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ, ಅವರ ದೇಹದ ಸುತ್ತ ಋಣಾತ್ಮಕ ಶಕ್ತಿಗಳು ಆವರಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ನಂಬಲಾಗಿದೆ. ಕಿವಿ ಚುಚ್ಚಿಸುವುದರಿಂದ ದೇಹವು ಭಿನ್ನವಾಗುತ್ತದೆ. ಅಂದರೆ, ದೇಹದಲ್ಲಿ ಸಣ್ಣ ಗಾಯವಾಗಿರುವುದರಿಂದ, ಅದು ಕೆಟ್ಟ ಶಕ್ತಿಗಳ ಪ್ರಭಾವದಿಂದ ದೂರವಿರುತ್ತದೆ. ಒಂದು ಕಥೆಯ ಪ್ರಕಾರ, ಕಾಡಿನಲ್ಲಿ ರಾಜನೊಬ್ಬನ ಬೆರಳು ಕಟ್ ಆಗಿದ್ದ ಕಾರಣ, ಕಾಡಿನ ಜನರು ಆತನನ್ನು ದೇವಿಗೆ ಬಲಿ ನೀಡಲು ಅನರ್ಹ ಎಂದು ಹಿಂದಕ್ಕೆ ಕಳುಹಿಸುತ್ತಾರೆ. ಇದೇ ರೀತಿ, ದೇಹದಲ್ಲಿನ ಭಿನ್ನತೆ ಕೆಟ್ಟ ಶಕ್ತಿಗಳ ಆವಾಹನೆಯನ್ನು ತಡೆಯುತ್ತದೆ ಎಂದು ನಂಬಲಾಗಿದೆ. ನಿರ್ದಿಷ್ಟವಾಗಿ, ರಾಹು-ಕೇತುಗಳಂತಹ ಗ್ರಹಗಳ ನಕಾರಾತ್ಮಕ ಪ್ರಭಾವಗಳನ್ನು ಕಡಿಮೆ ಮಾಡಲು ಇದು ಸಹಕಾರಿ ಎಂದು ಹೇಳಲಾಗುತ್ತದೆ. ಒಂದು ಕಿವಿಗೆ ಬದಲಾಗಿ ಎರಡೂ ಕಿವಿಗಳನ್ನು ಚುಚ್ಚಿಸುವುದು ಹೆಚ್ಚು ಶುಭಕರ ಎಂದು ಹೇಳಲಾಗುತ್ತದೆ.

ಶೈಕ್ಷಣಿಕ ಮತ್ತು ವೈಜ್ಞಾನಿಕ ಪ್ರಯೋಜನಗಳು:

ಕರ್ಣವೇದ ಸಂಸ್ಕಾರವು ಮಕ್ಕಳ ಬೌದ್ಧಿಕ ಬೆಳವಣಿಗೆಗೂ ಸಹಕಾರಿಯಾಗಿದೆ. ಕಿವಿ ಚುಚ್ಚಿಸುವುದರಿಂದ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುತ್ತದೆ. ಮೆಮೊರಿ ಪವರ್ ಹೆಚ್ಚುತ್ತದೆ, ಏಕಾಗ್ರತೆ ವೃದ್ಧಿಸುತ್ತದೆ, ತಾಳ್ಮೆ ಮತ್ತು ಸಹನೆ ಹೆಚ್ಚಾಗುತ್ತದೆ. ಇದು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಡೆಯುತ್ತದೆ ಮತ್ತು ಯೋಚನಾ ಶಕ್ತಿಯನ್ನು ಸುಧಾರಿಸುತ್ತದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಇದಕ್ಕೆ ವೈಜ್ಞಾನಿಕ ಆಧಾರವೂ ಇದೆ. ಆಯುರ್ವೇದದಲ್ಲಿ, ಕಿವಿಯ ನರಬಿಂದುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಕಿವಿಯಲ್ಲಿರುವ ಕೆಲವು ನರಬಿಂದುಗಳು ಮೆದುಳಿಗೆ ನೇರವಾಗಿ ಸಂಪರ್ಕ ಹೊಂದಿವೆ. ಕಿವಿ ಚುಚ್ಚಿದಾಗ ಈ ನರಬಿಂದುಗಳು ಸಕ್ರಿಯಗೊಳ್ಳುತ್ತವೆ ಎಂದು ನಂಬಲಾಗಿದೆ. ಇದು ಮಿದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಸ್ಮರಣ ಶಕ್ತಿ ಮತ್ತು ಏಕಾಗ್ರತೆಗೆ ಸಹಾಯ ಮಾಡುತ್ತದೆ. ಆಯುರ್ವೇದವು ಶರೀರಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಕಿವಿಯ ಮೇಲೆ ಚಿಕಿತ್ಸೆಯನ್ನು ಸೂಚಿಸುತ್ತದೆ.

ಯಾವ ವಯಸ್ಸಿನಲ್ಲಿ ಸೂಕ್ತ?

ಈ ಸಂಸ್ಕಾರಕ್ಕೆ ವಯಸ್ಸಿನ ಮಿತಿಯಿದ್ದರೂ, ಸಾಮಾನ್ಯವಾಗಿ ಪ್ರೌಢಾವಸ್ಥೆಗೆ ಬರುವ ಮೊದಲು ಅಂದರೆ 21 ವರ್ಷದ ಒಳಗಡೆ ಕಿವಿ ಚುಚ್ಚಿಸುವುದು ಸೂಕ್ತ ಎಂದು ಪರಿಗಣಿಸಲಾಗುತ್ತದೆ. ಈ ವಯಸ್ಸಿನಲ್ಲಿ ಮಕ್ಕಳು ಇನ್ನೂ ಬೆಳೆಯುತ್ತಿರುವುದರಿಂದ, ಯಾವುದೇ ಕೆಟ್ಟ ಶಕ್ತಿಗಳು ಅವರ ಮೇಲೆ ಆವಾಹನೆ ಆಗುವುದಿಲ್ಲ ಮತ್ತು ಕೆಟ್ಟ ಪ್ರಭಾವ ಬೀರುವುದಿಲ್ಲ ಎಂದು ನಂಬಲಾಗಿದೆ. ಮಗು ಮಂಕಾಗಿದೆ, ಓದುವುದಿಲ್ಲ ಅಥವಾ ಜ್ಞಾಪಕಶಕ್ತಿ ಕಡಿಮೆಯಾಗಿದೆ ಎಂದು ಪೋಷಕರು ಚಿಂತಿಸಿದಾಗ, ಈ ಸಾಂಪ್ರದಾಯಿಕ ಪದ್ಧತಿಯು ಉತ್ತಮ ಪರಿಹಾರ ನೀಡುತ್ತದೆ ಎಂದು ಕೆಲವರು ನಂಬುತ್ತಾರೆ.

ಕೊನೆಯದಾಗಿ, ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಕೇವಲ ಒಂದು ಪದ್ಧತಿಯಲ್ಲ. ಇದು ಸಾಂಪ್ರದಾಯಿಕವಾಗಿ, ಆಧ್ಯಾತ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ ಹಲವು ಶುಭ ಫಲಗಳನ್ನು ನೀಡುತ್ತದೆ ಎಂದು ಹಿಂದೂ ನಂಬಿಕೆಗಳು ಮತ್ತು ಆಯುರ್ವೇದದ ತತ್ವಗಳು ಹೇಳುತ್ತವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:30 am, Sat, 13 June 26

Source link

Exit mobile version