Women Reservation Bill: ಗದ್ದಲದ ನಡುವೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಸೇರಿ 3 ಮಸೂದೆಗಳ ಮಂಡನೆ – Kannada News | Parliament Push: Bills on Women’s Quota and Delimitation Introduced in Lok Sabha

ನವದೆಹಲಿ, ಏಪ್ರಿಲ್ 16: ಲೋಕಸಭೆ(Lok Sabha)ಯಲ್ಲಿ ಗದ್ದಲದ ನಡುವೆಯೇ ಮಹಿಳಾ ಮೀಸಲಾತಿ ಹಾಗೂ ಗಡಿ ನಿರ್ಣಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ, 2026 ಮಂಡನೆಯಾಗಿದೆ.  ದೇಶದ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆಯ ಬಲವನ್ನು ಪ್ರಸ್ತುತ ಇರುವ 543 ರಿಂದ 850 ಸ್ಥಾನಗಳಿಗೆ ಹೆಚ್ಚಿಸುವ ಪ್ರಸ್ತಾವನೆ ಇದೆ. ಇದೇ ರೀತಿ ರಾಜ್ಯ ವಿಧಾನಸಭೆಗಳ ಸ್ಥಾನಗಳನ್ನೂ ವಿಸ್ತರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಕ್ಷೇತ್ರ ಪುನರ್ವಿಂಗಡಣೆಯ ನಂತರವಷ್ಟೇ ಇದು ಸಾಧ್ಯವಾಗಲಿದೆ.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದರು. ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಮಸೂದೆಯನ್ನು ವಿರೋಧಿಸಿದ್ದು, ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು

ಮಲ್ಲಿಕಾರ್ಜುನ ಖರ್ಗೆ ಬುಧವಾರದ ಸಭೆ ಬಳಿಕ ಮಾತನಾಡಿ, ನಾವೆಲ್ಲರೂ ಮಹಿಳಾ ಮೀಸಲಾತಿಯ ಪರವಾಗಿದ್ದೇವೆ. ಆದರೆ ಸರ್ಕಾರ ಇದನ್ನು ತರುತ್ತಿರುವ ವಿಧಾನ ರಾಜಕೀಯ ಪ್ರೇರಿತವಾಗಿದೆ. ಕ್ಷೇತ್ರ ಪುನರ್ವಿಂಗಡಣೆಯ ಹೆಸರಿನಲ್ಲಿ ಸರ್ಕಾರ ತಂತ್ರಗಳನ್ನು ಆಡುತ್ತಿದೆ,” ಎಂದು ನೇರವಾಗಿ ಆರೋಪಿಸಿದರು. ಸರ್ಕಾರವು ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಯ ನಂತರವೇ ಮೀಸಲಾತಿ ಜಾರಿಯಾಗಲಿದೆ ಎಂಬ ಷರತ್ತು ವಿಧಿಸಿದೆ. ಇದು ಮೀಸಲಾತಿಯನ್ನು ಇನ್ನಷ್ಟು ವಿಳಂಬ ಮಾಡುವ ತಂತ್ರ ಎಂಬುದು ವಿರೋಧ ಪಕ್ಷಗಳ ವಾದ.

2023ರಲ್ಲೇ ಸಂವಿಧಾನಕ್ಕೆ 334(A) ವಿಧಿಯನ್ನು ಸೇರಿಸಿ ಒಮ್ಮತ ಮೂಡಿಸಲಾಗಿತ್ತು. ಈಗಿನ ಲೋಕಸಭಾ ಚುನಾವಣೆಯಿಂದಲೇ ಇದನ್ನು ಜಾರಿಗೆ ತರಲು ಏನು ಅಡ್ಡಿ?” ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಪ್ರಶ್ನಿಸಿದ್ದರು.

ಮಹಿಳಾ ಮೀಸಲಾತಿ ಮಸೂದೆ
ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ‘ನಾರಿ ಶಕ್ತಿ ವಂದನ ಅಧಿನಿಯಮ’ವನ್ನು ತ್ವರಿತವಾಗಿ ಜಾರಿಗೆ ತರುವುದು ಸರ್ಕಾರದ ಗುರಿಯಾಗಿದೆ. ಆದರೆ, ಈ ಮೀಸಲಾತಿಯು ಕ್ಷೇತ್ರ ಪುನರ್ವಿಂಗಡಣೆಯ ಪ್ರಕ್ರಿಯೆಯೊಂದಿಗೆ ತಳುಕು ಹಾಕಿಕೊಂಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಮಂಗಳವಾರ ನಡೆದ ಮೈತ್ರಿಕೂಟದ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿರೋಧ ಪಕ್ಷಗಳ ನಿಲುವನ್ನು ಸ್ಪಷ್ಟಪಡಿಸಿದ್ದರು.

ಮತ್ತಷ್ಟು ಓದಿ: Explainer: ಸಂಸತ್​​ನಲ್ಲಿ ಅಂಗೀಕಾರವಾಗುತ್ತಾ ಮಹಿಳಾ ಮೀಸಲಾತಿ ಮಸೂದೆ? ಏನಿದರ ಮಹತ್ವ, ವಿಪಕ್ಷಗಳ ವಿರೋಧವೇಕೆ?

ಮಹಿಳಾ ಮೀಸಲಾತಿ ಮಸೂದೆಯು ಈ ಮಸೂದೆಯು ಲೋಕಸಭೆಯ ಬಲವನ್ನು ಪ್ರಸ್ತುತ 543 ರಿಂದ 850 ಸದಸ್ಯರಿಗೆ ಹೆಚ್ಚಿಸಲು ಪ್ರಸ್ತಾಪಿಸುತ್ತದೆ, ಇದರಲ್ಲಿ 815 ಸದಸ್ಯರು ರಾಜ್ಯಗಳಿಂದ ಮತ್ತು 35 ಸದಸ್ಯರು ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆಯಾಗುತ್ತಾರೆ. 2026 ರ ನಂತರ ಜನಗಣತಿಗಾಗಿ ಕಾಯದೆ, ಇತ್ತೀಚಿನ ಲಭ್ಯವಿರುವ ಜನಗಣತಿಯ ಆಧಾರದ ಮೇಲೆ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಂವಿಧಾನದ 81 ಮತ್ತು 82 ನೇ ವಿಧಿಗಳನ್ನು ಇದು ತಿದ್ದುಪಡಿ ಮಾಡುತ್ತದೆ. 2029 ರ ಚುನಾವಣೆಗಳಿಗೆ ಮೊದಲು ತಕ್ಷಣ ಜಾರಿಗೆ ಬರುವಂತೆ ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ 33% ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ.

ಡಿಲಿಮಿಟೇಶನ್ ಮಸೂದೆ
ಡಿಲಿಮಿಟೇಶನ್ ಮಸೂದೆ, 2026( ಗಡಿ ನಿರ್ಣಯ) ಹಳೆಯ ಡಿಲಿಮಿಟೇಶನ್ ಕಾಯ್ದೆ, 2002 ಅನ್ನು ರದ್ದುಗೊಳಿಸುತ್ತದೆ ಮತ್ತು ಬದಲಾಯಿಸುತ್ತದೆ. ಈ ಮಸೂದೆಯು ಹೊಸ ಡಿಲಿಮಿಟೇಶನ್ ಆಯೋಗವನ್ನು ಸ್ಥಾಪಿಸಲು ಅವಕಾಶ ನೀಡುತ್ತದೆ. ಈ ಆಯೋಗವು ಕ್ಷೇತ್ರಗಳ ಗಡಿಗಳನ್ನು ಮರು ವ್ಯಾಖ್ಯಾನಿಸುತ್ತದೆ ಮತ್ತು ಇತ್ತೀಚಿನ ಜನಗಣತಿ ದತ್ತಾಂಶವನ್ನು ಆಧರಿಸಿ (2011) ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಸ್ಥಾನಗಳನ್ನು ಹಂಚುತ್ತದೆ.

ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ, 2026
ಈ ಮಸೂದೆಯು ರಾಜ್ಯಗಳ ಶಾಸಕಾಂಗ ಸಭೆಗಳಲ್ಲಿ ಹಾಗೂ ದೆಹಲಿ, ಜಮ್ಮು ಮತ್ತು ಕಾಶ್ಮೀರ ಮತ್ತು ಪುದುಚೇರಿಯಂತಹ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಜಾರಿಗೆ ತರಲು ದಾರಿ ಮಾಡಿಕೊಡುತ್ತದೆ. ಈ ಮೂರು ಮಸೂದೆಗಳನ್ನು ಪ್ರಾಥಮಿಕವಾಗಿ ಮಹಿಳಾ ಮೀಸಲಾತಿಯ ಅನುಷ್ಠಾನವನ್ನು ತ್ವರಿತಗೊಳಿಸಲು ಮತ್ತು ದೇಶದ ಚುನಾವಣಾ ರಚನೆಯಲ್ಲಿ ವ್ಯಾಪಕ ಬದಲಾವಣೆಗಳನ್ನು ಮಾಡಲು ಪರಿಚಯಿಸಲಾಗುತ್ತಿದೆ.

ಸಂಸತ್ತಿನ ಅಧಿವೇಶನದಲ್ಲಿ ಈ ವಿಷಯದ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿರೋಧ ಪಕ್ಷಗಳು ನಿರ್ಧರಿಸಿವೆ. ಮೋದಿ ಸರ್ಕಾರವು ವಿರೋಧ ಪಕ್ಷಗಳನ್ನು ನಿಗ್ರಹಿಸಲು ಮತ್ತು ಚುನಾವಣಾ ಲಾಭ ಪಡೆಯಲು ಈ ರೀತಿ ವರ್ತಿಸುತ್ತಿದೆ. ನಾವು ಸಂಸತ್ತಿನ ಒಳಗೆ ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದು ನಾಯಕರು ಘೋಷಿಸಿದ್ದಾರೆ.

ಮಹಿಳೆಯರಿಗೆ ಅಧಿಕಾರ ನೀಡುವ ಮಸೂದೆಯ ಆಶಯಕ್ಕೆ ಎಲ್ಲರೂ ಸಹಮತ ಸೂಚಿಸಿದ್ದರೂ, ಅದು ಜಾರಿಯಾಗುವ ‘ಸಮಯ’ ಮತ್ತು ‘ವಿಧಾನ’ ಈಗ ದೊಡ್ಡ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಸರ್ಕಾರವು ತನ್ನ ಷರತ್ತುಗಳನ್ನು ಸಡಿಲಿಸುತ್ತದೆಯೇ ಅಥವಾ ಸಂಸತ್ತಿನಲ್ಲಿ ಸಂಘರ್ಷ ಮುಂದುವರೆಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:43 am, Thu, 16 April 26

Source link

ಒಟಿಟಿಗೆ ಬಂದೇ ಬಿಡ್ತು ಪವನ್ ಕಲ್ಯಾಣ್-ಶ್ರೀಲೀಲಾ ಸಿನಿಮಾ – Kannada News | Pawan Kalyan starrer Ustaad Bhagat Singh movie released on Netlix

ಪವನ್ ಕಲ್ಯಾಣ್ (Pawan Kalyan) ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಿತ್ತು. ‘ಧುರಂಧರ್ 2’ ಸಿನಿಮಾ ಹಾಗೂ ‘ಉಸ್ತಾದ್ ಭಗತ್ ಸಿಂಗ್’ ಎರಡೂ ಒಟ್ಟಿಗೆ ಬಿಡುಗಡೆ ಆಗಿತ್ತು. ಇದೇ ಕಾರಣಕ್ಕೆ ಸಿನಿಮಾಕ್ಕೆ ಬಾಕ್ಸ್ ಆಫೀಸ್​​ನಲ್ಲಿ ತುಸು ಹಿನ್ನಡೆ ಆಯ್ತು. ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಗಳಿಕೆ ಮಾಡಲಿಲ್ಲ. ಆದರೆ ಪವನ್ ಅಭಿಮಾನಿಗಳು ಪ್ರತಿಬಾರಿಯಂತೆ ಈ ಬಾರಿಯೂ ಸಿನಿಮಾವನ್ನು ಸಂಪೂರ್ಣವಾಗಿ ಸೋಲಲು ಬಿಡಲಿಲ್ಲ. ದೊಡ್ಡ ಮಟ್ಟದ ಗಳಿಕೆ ಅಲ್ಲದಿದ್ದರೂ ಲಾಭದಲ್ಲಿಯೇ ಇದೆ ಸಿನಿಮಾ. ಆದರೆ ಚಿತ್ರಮಂದಿರದಲ್ಲಿ ‘ಧುರಂಧರ್ 2’ ಅಲೆಯಿಂದ ಸಮಸ್ಯೆ ಎದುರಿಸಿದ ಈ ಸಿನಿಮಾ ಇದೀಗ ಒಟಿಟಿಗೆ ಬಂದಿದೆ.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಇದೀಗ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ. ಶ್ರೀಲೀಲಾ ಮತ್ತು ರಾಶಿ ಖನ್ನಾ ಅವರುಗಳು ನಾಯಕಿಯರಾಗಿ ನಟಿಸಿರುವ ಸಿನಿಮಾನಲ್ಲಿ ಆರ್ ಪಾರ್ತಿಬನ್, ಕೆಎಸ್ ರವಿಕುಮಾರ್, ನವಾಬ್ ಶಾ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆದಾಗ, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಅವರ ಕುಟುಂಬದವರು ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸಿದ್ದರು. ಇದೀಗ ಒಟಿಟಿಗೆ ಸಿನಿಮಾ ಬಂದಿದ್ದು, ಒಟಿಟಿಯಲ್ಲಿ ಸಿನಿಮಾ ಹಿಟ್ ಆಗುವ ನಿರೀಕ್ಷೆ ಚಿತ್ರತಂಡದ್ದು.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾನಲ್ಲಿ ಪವನ್ ಅವರ ಕೆಲವು ವಿಂಟೇಜ್ ಹಾಡುಗಳನ್ನು ನಿರ್ದೇಶಕ ಹರೀಶ್ ಶಂಕರ್ ಬಳಸಿಕೊಂಡಿದ್ದರು. ಅದು ಪವನ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿತ್ತು. ಅಲ್ಲದೆ, ಪವನ ಅವರ ಹಳೆಯ ಸಿನಿಮಾದ ರೆಫರೆನ್ಸ್​​ಗಳನ್ನು ಸಾಕಷ್ಟು ಈ ಸಿನಿಮಾನಲ್ಲಿ ಬಳಸಲಾಗಿದೆ. ಒಟ್ಟಾರೆಯಾಗಿ ಪವನ್ ಅಭಿಮಾನಿಗಳಿಗಾಗಿಯೆಂದೇ ಸಿನಿಮಾವನ್ನು ಪ್ಯಾಕೇಜ್ ಮಾಡಿ ಕೊಟ್ಟಿದ್ದರು ಹರೀಶ್ ಶಂಕರ್.

ಇದನ್ನೂ ಓದಿ:‘ಜೈಲರ್ 2’ ಸಿನಿಮಾದಲ್ಲಿ ಪವನ್ ಕಲ್ಯಾಣ್? ಶಾರುಖ್ ಮಾಡಬೇಕಿದ್ದ ಪಾತ್ರ ಈಗ ಪವರ್ ಸ್ಟಾರ್ ಪಾಲು

ಉಸ್ತಾದ್ ಭಗತ್ ಸಿಂಗ್, ಸಿನಿಮಾವನ್ನು ಪವನ್ ಕಲ್ಯಾಣ್ ಅವರು ವರ್ಷಗಳ ಹಿಂದೆ ಒಪ್ಪಿಕೊಂಡಿದ್ದರು. ಆದರೆ ಆಂಧ್ರ ಚುನಾವಣಾ ಪ್ರಚಾರಕ್ಕೆ ಧುಮುಕಿದ ಕಾರಣ ಸಿನಿಮಾದ ಚಿತ್ರೀಕರಣ ನಿಂತು ಹೋಗಿತ್ತು. ಇದೀಗ ಕೆಲ ವರ್ಷಗಳ ಬಳಿಕ ಸಿನಿಮಾದ ಚಿತ್ರೀಕರಣವನ್ನು ಪವನ್ ಮುಗಿಸಿ ಬಳಿಕ ಬಿಡುಗಡೆ ಮಾಡಲಾಯ್ತು. ಇದೀಗ ಪವನ್ ಕಲ್ಯಾಣ್ ಅವರು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ‘ಓಜಿ 2’ ಸಿನಿಮಾನಲ್ಲಿ ನಟಿಸಲಿದ್ದು, ಸಿನಿಮಾವನ್ನು ಸುರೇಂಧರ್ ರೆಡ್ಡಿ ನಿರ್ದೇಶನ ಮಾಡಲಿದ್ದು, ಈ ಹಿಂದೆ ‘ಕಿಕ್’, ‘ರೇಸು ಗುರ್ರಂ’, ‘ಊಸರವಳ್ಳಿ’ ಅಂಥಹಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಇವರು ನಿರ್ದೇಶಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

CSK ಅಂಪೈರ್​ಗಳೊಂದಿಗೆ ಫಿಕ್ಸಿಂಗ್​ ಮಾಡ್ತಿದ್ರು: ಗಂಭೀರ ಆರೋಪ – Kannada News | Lalit Modi’s Umpire Fixing Allegation Against CSK

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​​ನ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ಫ್ರಾಂಚೈಸಿ ವಿರುದ್ಧದ ಗಂಭೀರ ಆರೋಪವೊಂದು ಮತ್ತೆ ಮುನ್ನಲೆಗೆ ಬಂದಿದೆ. ಅದು ಸಹ ಪಂದ್ಯ ಗೆಲ್ಲಲು ಅಂಪೈರ್​​​ಗಳನ್ನ ಫಿಕ್ಸ್​ ಮಾಡುತ್ತಿದ್ದರು ಎಂಬ ಪ್ರಬಲ ಅಪಾದನೆಯೊಂದಿಗೆ. ಈ ಆರೋಪ ಮಾಡಿದ್ದು ಮತ್ಯಾರೂ ಅಲ್ಲ, ಐಪಿಎಲ್​​ನ ಮಾಜಿ ಅಧ್ಯಕ್ಷ ಲಲಿತ್ ಮೋದಿ.

Source link

ಯೋಗೀಶ್ ಗೌಡ ಕೊಲೆ ಪ್ರಕರಣ: ಸ್ಫೋಟಕ ಹೇಳಿಕೆ ಕೊಟ್ಟ ಮಾಫಿ ಸಾಕ್ಷಿ – Kannada News | Yogesh Gowda Murder Case: Basavaraj Muttagi Seeks Divine Strength Post Conviction Verdict.

ಧಾರವಾಡ, ಏಪ್ರಿಲ್​​ 16: ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ದೋಷಿ ಎಂದು ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ, ಪ್ರಕರಣದ ಮಾಫಿ ಸಾಕ್ಷಿ ಬಸವರಾಜ ಮುತ್ತಗಿ ಅವರು ಧಾರವಾಡ ನಗರದ ಕೆಸಿಡಿ ವೃತ್ತದಲ್ಲಿರುವ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸಿಆರ್‌ಪಿಎಫ್ ಭದ್ರತೆಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ಮುತ್ತಗಿ, ಇಲ್ಲಿ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಹೋರಾಟಕ್ಕೆ ಹೆಚ್ಚಿನ ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಿಜವಾದ ಹೋರಾಟ ಈಗ ಪ್ರಾರಂಭವಾಗಲಿದೆ. ಯೋಗೀಶ್ ಗೌಡರ ಹತ್ಯೆ ನಡೆದಾಗ ತಾನು ಕೂಡ ಪಿತೂರಿಯ ಭಾಗವಾಗಿದ್ದೆ ಎಂಬ ಪಾಪಪ್ರಜ್ಞೆ ತನಗೆ ಕಾಡುತ್ತಿತ್ತು ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಹುಲಿರಾಯನ ಖಡಕ್ ಲುಕ್​​​ಗೆ ಪ್ರವಾಸಿಗರು ಫಿದಾ: ತಣಿಗೆಬೈಲ್ ಅರಣ್ಯದಲ್ಲಿ ವ್ಯಾಘ್ರನ ‘ಫೋಟೋ ಶೂಟ್’!

ಚಿಕ್ಕಮಗಳೂರು, ಏ.16: ಕಾಫಿನಾಡು ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣವಾದ ಕೆಮ್ಮಣ್ಣುಗುಂಡಿ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರಿಗೆ ಅದೃಷ್ಟವಶಾತ್ ವ್ಯಾಘ್ರ ದರ್ಶನವಾಗಿದೆ. ಅಭಯಾರಣ್ಯದ ಅಂಚಿನ ರಸ್ತೆಯಲ್ಲೇ ಹುಲಿಯೊಂದು ರಾಜಗಾಂಭೀರ್ಯದಿಂದ ಕುಳಿತಿದ್ದ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪದ ತಣಿಗೆಬೈಲ್ ಅರಣ್ಯ ವಲಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪ್ರವಾಸಿಗರು ವಾಹನದಲ್ಲಿ ತೆರಳುತ್ತಿದ್ದಾಗ ಅರಣ್ಯದ ಅಂಚಿನಲ್ಲಿ ಹುಲಿಯೊಂದು ಯಾವುದೇ ಅಂಜಿಕೆಯಿಲ್ಲದೆ ಆರಾಮವಾಗಿ ಕುಳಿತಿರುವುದು ಕಂಡುಬಂದಿದೆ. ವಿಡಿಯೋ ಚಿತ್ರೀಕರಿಸುತ್ತಿದ್ದ ಪ್ರವಾಸಿಗರಿಗೂ ಹುಲಿ ದಿಟ್ಟವಾಗಿ ‘ಲುಕ್’ ಕೊಟ್ಟಿದೆ. ಅರಣ್ಯದಲ್ಲಿ ಸಫಾರಿ ಹೋದರೂ ಕಾಣದ ವ್ಯಾಘ್ರ, ಇಂದು ರಸ್ತೆ ಬದಿಯಲ್ಲೇ ಕಾಣಿಸಿಕೊಂಡಿದ್ದರಿಂದ ಪ್ರವಾಸಿಗರು ಪುಳಕಿತರಾಗಿದ್ದಾರೆ. ಹುಲಿಯು ಕೆಲಕಾಲ ಅಲ್ಲೇ ಕುಳಿತು, ನಂತರ ನಿಧಾನವಾಗಿ ಕಾಡಿನೊಳಗೆ ಮರೆಯಾಗಿದೆ. ಈ ಭಾಗದಲ್ಲಿ ಹುಲಿಗಳ ಸಂಚಾರವಿರುವುದು ದೃಢಪಟ್ಟಿದ್ದು, ಕೆಮ್ಮಣ್ಣುಗುಂಡಿ ಮತ್ತು ತಣಿಗೆಬೈಲ್ ಮಾರ್ಗದಲ್ಲಿ ಸಂಚರಿಸುವ ಪ್ರವಾಸಿಗರು ವಾಹನಗಳಿಂದ ಕೆಳಗಿಳಿಯಬಾರದು ಮತ್ತು ಕಾಡುಪ್ರಾಣಿಗಳಿಗೆ ತೊಂದರೆ ನೀಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Live: ನಾಪತ್ತೆ ಆಗಿದ್ದ ದರ್ಶನ್ ಮಾಜಿ ಮ್ಯಾನೇಜರ್ ದಿಢೀರ್ ಸುದ್ದಿಗೋಷ್ಠಿ – Kannada News | Darshan Former Manager Mallikarjuna Press Meet

ದರ್ಶನ್ ಮ್ಯಾಜೇರ್ ಆಗಿದ್ದ ಮಲ್ಲಿಕಾರ್ಜುನ ಅವರು ಹಲವು ವರ್ಷಗಳ ಕಾಲ ತಲೆಮರಿಸಿಕೊಂಡಿದ್ದರು. ಅವರ ಕಾಣೆ ಆದ ಪ್ರಕರಣದಲ್ಲಿ ತನಿಖೆ ನಡೆಯಬೇಕು ಎಂದೆಲ್ಲ ಆಗ್ರಹ ಕೇಳಿ ಬಂದವು. ಈಗ ಮಲ್ಲಿಕಾರ್ಜುನ್ ಮರಳಿದ್ದು ತಮ್ಮ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದ್ದಾರೆ. ಆ ಸಂದರ್ಭದ ಲೈವ್ ವಿಡಿಯೋ ಇಲ್ಲಿದೆ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎಲ್‌ಪಿಜಿ ಕೊರತೆ, ದರ ಏರಿಕೆಗೆ ಸೆಡ್ಡು: ಹೋಟೆಲ್ ಕಸ ನೀಡಿ ಬಯೋಗ್ಯಾಸ್ ಪಡೆಯಲು ಮುಂದಾದ ಬೆಂಗಳೂರಿನ ಹೋಟೆಲ್‌ಗಳು! – Kannada News | Bengaluru Hotels to Ditch LPG for Bio Gas: Innovative ‘Waste for Gas’ Model to Beat Rising Fuel Prices

ಬೆಂಗಳೂರು, ಏಪ್ರಿಲ್ 16: ಜಾಗತಿಕ ಯುದ್ಧದ ಸನ್ನಿವೇಶ ಮತ್ತು ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಲಭ್ಯತೆ, ದರ ಅನಿಶ್ಚಿತತೆಯಿಂದ ಕಂಗಾಲಾಗಿರುವ ಬೆಂಗಳೂರಿನ ಹೋಟೆಲ್ ಮಾಲೀಕರು ಈಗ ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಸಂಪೂರ್ಣವಾಗಿ ಎಲ್‌ಪಿಜಿ ಗ್ಯಾಸ್ ಅವಲಂಬನೆಯನ್ನು ಕೈಬಿಟ್ಟು, ‘ಕಸದಿಂದ ರಸ’ ಎಂಬ ಪರಿಕಲ್ಪನೆಯಡಿ ಬಯೋಗ್ಯಾಸ್ (Bio-Gas) ಬಳಕೆಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಬೆಂಗಳೂರಿನ ಅನೇಕ ಹೋಟೆಲ್ ಮಾಲೀಕರು ಆ ನಿಟ್ಟಿನಲ್ಲಿ ಇದೀಗ ಕಾರ್ಯಪ್ರವೃತ್ತರಾಗಿದ್ದಾರೆ.

ಕಸ ನೀಡಿ ಗ್ಯಾಸ್ ಪಡೆಯುವ ಯೋಜನೆ

ಬೆಂಗಳೂರಿನ ಹೋಟೆಲ್‌ಗಳಿಂದ ಪ್ರತಿದಿನ ಟನ್ ಗಟ್ಟಲೆ ಹಸಿ ಕಸ ಉತ್ಪತ್ತಿಯಾಗುತ್ತದೆ. ಈ ಕಸವನ್ನು ಎಲ್ಲೋ ಸುರಿಯುವ ಬದಲು ಅಥವಾ ಡಂಪಿಂಗ್ ಯಾರ್ಡ್‌ಗಳಿಗೆ ನೀಡುವ ಬದಲು, ಬಯೋಗ್ಯಾಸ್ ಉತ್ಪಾದನಾ ಕಂಪನಿಗಳಿಗೆ ನೀಡಲು ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. ತಾವು ನೀಡುವ ಕಸಕ್ಕೆ ಪ್ರತಿಯಾಗಿ ಆ ಕಂಪನಿಗಳು ಉತ್ಪಾದಿಸುವ ಬಯೋಗ್ಯಾಸ್ ಸಿಲಿಂಡರ್ ಅಥವಾ ಪಿಎನ್‌ಜಿ (PNG) ಸಂಪರ್ಕವನ್ನು ಪಡೆಯುವ ಒಪ್ಪಂದಕ್ಕೆ ಹೋಟೆಲ್ ಮಾಲೀಕರು ಮುಂದಾಗಿದ್ದಾರೆ.

ಮಾಲೀಕರ ಸಂಘದ ಚರ್ಚೆ

ಈಗಾಗಲೇ ಬೆಂಗಳೂರು ಹೋಟೆಲ್ ಮಾಲೀಕರ ಸಂಘವು ಬಯೋಗ್ಯಾಸ್ ತಯಾರಿಕಾ ಘಟಕಗಳ ಸ್ಥಾಪನೆ ಮತ್ತು ಕೆಲವು ಖಾಸಗಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಕುರಿತು ಗಂಭೀರ ಚರ್ಚೆ ನಡೆಸಿದೆ. ಎಲ್‌ಪಿಜಿ ಸಮಸ್ಯೆ ಉಲ್ಬಣಿಸಿರುವುದರಿಂದ ಹೋಟೆಲ್ ಉದ್ಯಮವನ್ನು ಉಳಿಸಿಕೊಳ್ಳಲು ಈ ಪರಿಸರ ಸ್ನೇಹಿ ಮತ್ತು ಆರ್ಥಿಕವಾಗಿ ಲಾಭದಾಯಕವಾದ ಹೊಸ ಪ್ಲಾನ್ ರೂಪಿಸಲಾಗಿದೆ. ಇದರೊಂದಿಗೆ ಹೆಚ್ಚಿನ ಹೋಟೆಲ್‌ಗಳು ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಕನೆಕ್ಷನ್ ಪಡೆಯಲು ಸಹ ಆಸಕ್ತಿ ತೋರಿವೆ.

ಜಾಗತಿಕ ಯುದ್ಧದ ಸನ್ನಿವೇಶಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಅನಿಲದ ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರಿವೆ. ಭಾರತವು ಅಡುಗೆ ಅನಿಲದ ಅವಶ್ಯಕತೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ಆಮದನ್ನು ಅವಲಂಬಿಸಿರುವುದರಿಂದ, ಅಂತರಾಷ್ಟ್ರೀಯ ದರ ಏರಿಕೆಯು ನೇರವಾಗಿ ಬೆಂಗಳೂರಿನ ವಾಣಿಜ್ಯ ಹೋಟೆಲ್ ಉದ್ಯಮದ ಮೇಲೆ ತಟ್ಟಿದೆ. ಮತ್ತೊಂದೆಡೆ, ಕಳೆದ ಕೆಲವು ವರ್ಷಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಗಳು ಅಸ್ಥಿರವಾಗಿದ್ದು, ಆಗಾಗ್ಗೆ ಏರಿಕೆಯಾಗುತ್ತಿರುವುದು ಹೋಟೆಲ್ ಮಾಲೀಕರ ಲಾಭಾಂಶವನ್ನು ಕಸಿದುಕೊಳ್ಳುತ್ತಿದೆ. ಪೂರೈಕೆ ಸರಪಳಿಯಲ್ಲಿನ ವ್ಯತ್ಯಯದಿಂದಾಗಿ ಸಕಾಲಕ್ಕೆ ಸಿಲಿಂಡರ್ ಲಭ್ಯವಾಗದಂತಾಗಿ ಹೋಟೆಲ್‌ಗಳ ದೈನಂದಿನ ಕಾರ್ಯಚಟುವಟಿಕೆಗೂ ಅಡ್ಡಿಯುಂಟುಮಾಡಿದೆ.

ಇದನ್ನೂ ಓದಿ: ಹೋಟೆಲ್ ಬಿಲ್‌ನಲ್ಲಿ ಗ್ಯಾಸ್ ಶುಲ್ಕ, ಎಲ್‌ಪಿಜಿ ಫೀಸ್ ಹಾಕುವಂತಿಲ್ಲ: ಬೆಂಗಳೂರಿನ ಹೋಟೆಲ್‌ಗಳಿಗೆ ಸಿಸಿಪಿಎ ಖಡಕ್​ ಸೂಚನೆ!

ಬೆಂಗಳೂರಿನಂತಹ ಮಹಾನಗರಗಳಲ್ಲಿ ಹೋಟೆಲ್‌ಗಳು ದಿನದ 15-18 ಗಂಟೆಗಳ ಕಾಲ ಸತತವಾಗಿ ಇಂಧನ ಬಳಸುವುದರಿಂದ, ಎಲ್‌ಪಿಜಿ ಮೇಲಿನ ಅವಲಂಬನೆಯು ವೆಚ್ಚದಾಯಕವಾಗಿದೆ. ಈ ಸಮಸ್ಯೆಯನ್ನು ನೀಗಿಸಲು ಹೋಟೆಲ್ ಮಾಲೀಕರು ಪರ್ಯಾಯ ಇಂಧನದ ಹುಡುಕಾಟದಲ್ಲಿದ್ದರು. ಇದೀಗ ಬಯೋಗ್ಯಾಸ್ ಮತ್ತು ಪಿಎನ್‌ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್) ಬಳಕೆಯಿಂದ ಇಂಧನ ವೆಚ್ಚವನ್ನು ಶೇ 20 ರಿಂದ 30 ರಷ್ಟು ಉಳಿತಾಯ ಮಾಡಲು ಸಾಧ್ಯವಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ, ನಗರದಲ್ಲಿ ಉತ್ಪತ್ತಿಯಾಗುವ ಬೃಹತ್ ಪ್ರಮಾಣದ ಹಸಿ ಕಸದ ವಿಲೇವಾರಿಗೆ ಹೋಟೆಲ್‌ಗಳೇ ಹಣ ನೀಡುವ ಬದಲು, ಅದೇ ಕಸದಿಂದ ಇಂಧನ ಪಡೆಯುವುದು ಆರ್ಥಿಕವಾಗಿ ಮತ್ತು ಪರಿಸರ ಸ್ನೇಹಿಯಾಗಿ ಅತ್ಯಂತ ಲಾಭದಾಯಕವಾಗಿ ಪರಿಣಮಿಸಲಿದೆ ಎಂದು ಭಾವಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ಪ್ರಿಯಕರನಿಗೆ ಗಿಫ್ಟ್ ಕೊಡಲು 2ಲಕ್ಷ ರೂ. ಮೌಲ್ಯದ ವಾಚ್ ಕದ್ದ ಯುವತಿ ಅರೆಸ್ಟ್! – Kannada News | Hyderabad Watch Theft: Girlfriend Steals Rs 2 Lakh Tissot for Boyfriend, Arrested

ಹೈದರಾಬಾದ್: ಪ್ರೀತಿಗಾಗಿ ಏನನ್ನಾದರೂ ಮಾಡಲು ಸಿದ್ಧ ಎನ್ನುವ ಮಾತಿದೆ, ಆದರೆ ಇಲ್ಲೊಬ್ಬಳು ಯುವತಿ ತನ್ನ ಪ್ರಿಯಕರನಿಗೆ ದುಬಾರಿ ಉಡುಗೊರೆ ನೀಡಲು ಹೋಗಿ ಅರೆಸ್ಟ್ ಆಗಿದ್ದಾಳೆ. ನಗರದ ಜುಬಿಲಿ ಹಿಲ್ಸ್‌ನಲ್ಲಿರುವ ಐಷಾರಾಮಿ ಶೋರೂಮ್‌ನಿಂದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ವಾಚ್‌ಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ 26 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆರೋಪಿ ಯುವತಿ ಜುಬಿಲಿ ಹಿಲ್ಸ್‌ನಲ್ಲಿರುವ ಪ್ರತಿಷ್ಠಿತ ವಾಚ್ ಶೋರೂಮ್‌ಗೆ ಗ್ರಾಹಕಿಯಂತೆ ಎಂಟ್ರಿ ಕೊಟ್ಟಿದ್ದಾಳೆ. ತನಗೆ ಒಳ್ಳೆಯ ವಾಚ್‌ಗಳನ್ನು ತೋರಿಸುವಂತೆ ಸಿಬ್ಬಂದಿಯನ್ನು ಕೇಳಿದ್ದಾಳೆ. ಸಿಬ್ಬಂದಿ ವಿವಿಧ ಮಾದರಿಗಳನ್ನು ತೋರಿಸುತ್ತಿದ್ದಾಗ, ಯಾರಿಗೂ ಸಂಶಯ ಬರದಂತೆ ಸುಮಾರು ತಲಾ 1 ಲಕ್ಷ ರೂಪಾಯಿ ಮೌಲ್ಯದ ಎರಡು ‘ಟಿಸ್ಸೋಟ್’ (Tissot) ವಾಚ್‌ಗಳನ್ನು ಸದ್ದಿಲ್ಲದೆ ತನ್ನ ಬ್ಯಾಗ್‌ನಲ್ಲಿ ಅಡಗಿಸಿಟ್ಟುಕೊಂಡಿದ್ದಾಳೆ. ನಂತರ ಏನೂ ತಿಳಿಯದವಳಂತೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ.

ಸಿಸಿಟಿವಿಯಲ್ಲಿ ಯುವತಿಯ ಕೈಚಳಕ ಬಯಲು:

ವಾಚ್‌ಗಳು ನಾಪತ್ತೆಯಾಗಿರುವುದು ಗಮನಕ್ಕೆ ಬರುತ್ತಿದ್ದಂತೆ ಶೋರೂಮ್ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಯುವತಿಯ ಕೈಚಳಕ ಬಯಲಾಗಿದೆ. ತಕ್ಷಣವೇ ಜುಬಿಲಿ ಹಿಲ್ಸ್ ಪೊಲೀಸರಿಗೆ ದೂರು ನೀಡಲಾಗಿದ್ದು, ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಆಕೆ ಬಂದಿದ್ದ ಕಾರಿನ ನಂಬರ್ ಪ್ಲೇಟ್ ಆಧರಿಸಿ ತನಿಖೆ ಚುರುಕುಗೊಳಿಸಿದರು.

ಮತ್ತಷ್ಟು ಓದಿ: Video: ಮಹಾರಾಷ್ಟ್ರ ಪೊಲೀಸ್ ಪಡೆಗೆ ಸೇರ್ಪಡೆಯಾದ ಖುಷಿ, ತಂದೆಯನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ ಮಗಳು

ಖಮ್ಮಂನಲ್ಲಿ ಸಿಕ್ಕಿಬಿದ್ದ ಪ್ರೇಮಿಗಳು:

ಆರೋಪಿ ಯುವತಿ ಖಮ್ಮಂ ಜಿಲ್ಲೆಯಲ್ಲಿದ್ದಾಳೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಲ್ಲಿಗೆ ತೆರಳಿದ ಪೊಲೀಸ್ ತಂಡ ಯುವತಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತನ್ನ ಪ್ರಿಯಕರನಿಗೆ ದುಬಾರಿ ಉಡುಗೊರೆ ನೀಡುವ ಸಲುವಾಗಿಯೇ ಆಕೆ ಈ ಕಳ್ಳತನ ಎಸಗಿದ್ದಾಳೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದು, ಕಳ್ಳತನದ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:19 am, Thu, 16 April 26

Source link

ದಾಖಲೆ ಬರೆಯಲು ‘ಧುರಂಧರ್ 2’ ಚಿತ್ರಕ್ಕೆ ಬೇಕಿರೋದು ಎಷ್ಟು ಕೋಟಿ ರೂಪಾಯಿ? – Kannada News | Dhurandhar 2 Box Office: How much to beat Pushpa 2 record? Ranveer Singh film collection nearing milestone

ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ನಾಲ್ಕು ವಾರಗಳನ್ನು ಪೂರ್ಣಗೊಳಿಸಿದೆ. ಈ ಚಿತ್ರ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾ ಹಲವು ದೇಶಗಳಲ್ಲಿ ಬ್ಯಾನ್ ಆಗಿದೆ. ಆದಾಗ್ಯೂ ಸಿನಿಮಾದ ಕಲೆಕ್ಷನ್ ಜೋರಾಗಿಯೇ ಇದೆ. ಭಾರತದಲ್ಲಿ ದಾಖಲೆಯ ಗಳಿಕೆ ಮಾಡಲು ಸಿನಿಮಾಗೆ ಬೇಕಿರುವುದು ಇನ್ನು ಕೆಲವೇ ಕೋಟಿ ರೂಪಾಯಿ ಮಾತ್ರ.

‘ಧುರಂಧರ್ 2’ ಸಿನಿಮಾ ರಿಲೀಸ್ ಆಗಿದ್ದು ಮಾರ್ಚ್ 19ರಂದು. ಅಂದಿನಿಂದ ಇಂದಿನವರೆಗೂ ಸಿನಿಮಾ ಅಬ್ಬರಿಸುತ್ತಲೇ ಇದೆ. ವಾರಾಂತ್ಯದಲ್ಲಿ ಚಿತ್ರ ದಾಖಲೆಯ ಕಲೆಕ್ಷನ್ ಮಾಡಿದೆ. ಈ ಸಿನಿಮಾದ ಭಾರತದ ನೆಟ್ ಕಲೆಕ್ಷನ್ 1,099 ರೂಪಾಯಿ ಆಗಿದೆ. ಈ ಚಿತ್ರದ ಭಾರತದ ಗ್ರಾಸ್ ಕಲೆಕ್ಷನ್ 1,316 ರೂಪಾಯಿ ಆಗಿದೆ. ಈ ಚಿತ್ರದ ವಿದೇಶದಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ವಿಶ್ವಾದ್ಯಂತ 1,733 ಕೋಟಿ ರೂಪಾಯಿ ಬಾಚಿಕೊಂಡಿದೆ.

ಭಾರತದ ಗಲ್ಲಾ ಪೆಟ್ಟಿಗೆಯಲ್ಲಿ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಚಿತ್ರವನ್ನು ಬೀಟ್ ಮಾಡಲು ಸಿನಿಮಾಗೆ ಇನ್ನು ಬೇಕಿರೋದು 135 ಕೋಟಿ ರೂಪಾಯಿ ಮಾತ್ರ. ಸಿನಿಮಾ ‘ಪುಷ್ಪ 2’ ದಾಖಲೆಯನ್ನು ಮುರಿಯುತ್ತದೆಯೇ ಎಂಬುದು ಸದ್ಯದ ಪ್ರಶ್ನೆ. ವಿಶ್ವ ಬಾಕ್ಸ್ ಆಫೀಸ್​​ ಕಲೆಕ್ಷನ್ ಅಲ್ಲಿ ‘ಪುಷ್ಪ 2’ ಚಿತ್ರವನ್ನು ‘ಧುರಂಧರ್ 2’ ಸದ್ಯದಲ್ಲೇ ಬೀಟ್ ಮಾಡಲಿದೆ. ಇದಕ್ಕೆ ಬೇಕಿರೋದು ಬೆರಳೆಣಿಕೆ ಕೋಟಿಗಳು ಮಾತ್ರ.

ಇದನ್ನೂ ಓದಿ: ‘ಧುರಂಧರ್ 2’ ಕಲೆಕ್ಷನ್: ‘ಪುಷ್ಪ 2’, ‘ಬಾಹುಬಲಿ 2’ ದಾಖಲೆ ಮುರಿಯಲು ಇನ್ನೆಷ್ಟು ಕೋಟಿ ಬಾಕಿ

‘ಧುರಂಧರ್ 2’ ಸಿನಿಮಾ ಚಿತ್ರವನ್ನು ಸದ್ಯಕ್ಕಂತೂ ಒಟಿಟಿಗೆ ತರುವ ಆಲೋಚನೆ ಇಲ್ಲ ಎಂದು ಹೇಳಲಾಗುತ್ತಾ ಇದೆ. ಇದಕ್ಕೆ ಕಾರಣವೂ ಇದೆ. ಸಾಮಾನ್ಯವಾಗಿ ಸಿನಿಮಾಗಳು 50 ದಿನಕ್ಕೆಲ್ಲ ಒಟಿಟಿಗೆ ಬರುತ್ತವೆ. ಆದರೆ, ‘ಧುರಂಧರ್ 2’ ಬಳಿ ಹೆಚ್ಚಿನ ಶಕ್ತಿ ಇರುವುದರಿಂದ ಸಿನಿಮಾ 2 ತಿಂಗಳು ಥಿಯೇಟರ್​​​ನಲ್ಲಿ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ದುರಂತ; ಕಾವಾಡಿಗನ ಮೇಲೆ ದಾಳಿ ಮಾಡಿದ ಸಾಕಾನೆ ‘ಸುಗ್ರೀವ’! – Kannada News | Bikkodu Tragedy: Tamed Elephant ‘Sugreeva’ Severely Injures Mahout Raju in Hassan

ಹಾಸನ, ಏ.16: ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯ ನಡುವೆಯೇ ಭೀಕರ ದುರಂತವೊಂದು ಸಂಭವಿಸಿದೆ. ಕಾರ್ಯಾಚರಣೆಗೆಂದು ಕರೆತರಲಾಗಿದ್ದ ಸಾಕಾನೆ ‘ಸುಗ್ರೀವ’, ತನ್ನದೇ ಕಾವಾಡಿಗನ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ. ಇಂದು (ಏಪ್ರಿಲ್ 16, 2026) ಬೆಳಿಗ್ಗೆ ಬಿಕ್ಕೋಡು ಗ್ರಾಮದ ತಾತ್ಕಾಲಿಕ ಆನೆ ಶಿಬಿರದಲ್ಲಿ ಆನೆಗಳಿಗೆ ಆಹಾರ ನೀಡುವ ವೇಳೆ ಈ ಘಟನೆ ನಡೆದಿದೆ. ಕಾವಾಡಿಗ ರಾಜು ಅವರು ಸುಗ್ರೀವನಿಗೆ ಆಹಾರ ನೀಡಲು ಹೋದಾಗ, ಆನೆಯು ದಿಢೀರನೆ ಆಕ್ರೋಶಗೊಂಡು ತನ್ನ ದಂತದಿಂದ ರಾಜು ಅವರಿಗೆ ಇರಿದಿದೆ. ಈ ಭಾಗದಲ್ಲಿ ಆತಂಕ ಸೃಷ್ಟಿಸಿದ್ದ ‘ನರಹಂತಕ ಒಂಟಿಕೋರೆ’ ಕಾಡಾನೆಯನ್ನು ಸೆರೆಹಿಡಿಯಲು ಸುಗ್ರೀವ ಸೇರಿದಂತೆ ಹಲವು ಸಾಕಾನೆಗಳನ್ನು ಕರೆತರಲಾಗಿತ್ತು. ನಿನ್ನೆ ಈ ಕಾಡಾನೆಯನ್ನು ಸೆರೆಹಿಡಿಯಲಾಗಿತ್ತಾದರೂ, ಅದು ಮತ್ತೆ ತಪ್ಪಿಸಿಕೊಂಡು ಹೋಗಿತ್ತು. ಇಂದು ಪುನಃ ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿದ್ದಾಗ ಈ ಅನಾಹುತ ಸಂಭವಿಸಿದೆ. ಆನೆ ದಾಳಿಯಿಂದ ರಾಜು ಅವರಿಗೆ ತೀವ್ರವಾದ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಹಾಸನದ ಹಿಮ್ಸ್ (HIMS) ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.ಒಂದೆಡೆ ನರಹಂತಕ ಕಾಡಾನೆ ತಪ್ಪಿಸಿಕೊಂಡು ಆತಂಕ ಮೂಡಿಸಿದ್ದರೆ, ಮತ್ತೊಂದೆಡೆ ಪಳಗಿಸಿದ ಸಾಕಾನೆಯೇ ಮಾವುತರು/ಕಾವಾಡಿಗರ ಮೇಲೆ ತಿರುಗಿಬಿದ್ದಿರುವುದು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version